ಬೇಟೆ

ದೀರ್ಘಕಾಲದ ಅಜ್ಞಾತ ವಾಸದ ನಂತರ ಝಕಿಯ್ಯಾ ಮತ್ತೆ ಆ ಬೀದಿಯಲ್ಲಿ ಕಾಣಿಸಿಕೊಂಡಳು. ಈ ಬಾರಿ ಅವಳ ಕೈಯಲ್ಲಿ ಹಸುಗೂಸಿತ್ತು. ನಿಜ ಹೇಳಬೇಕೆಂದರೆ, ಅವಳು ಇಲ್ಲಿಂದ ಕಣ್ಮರೆಯಾದದ್ದಾಗಲೀ, ಈಗ ಮತ್ತೆ ಪ್ರತ್ಯಕ್ಷವಾದದ್ದಾಗಲಿ ಯಾರ ಗಮನಕ್ಕೂ ಬಿದ್ದಿಲ್ಲ. ಮೊದಲೇ ಲಾಚಾರಾಗಿದ್ದ ಅವಳು ಈಗ ಇನ್ನಷ್ಟು ಲಾಚಾರಾಗಿದ್ದಳು. ಮುಖದ ಸೌಂದರ್ಯ ಕೈಕೊಟ್ಟಿತ್ತು. ಎಂದೋ ಬಿಟ್ಟಗಲಿದ್ದ ಯೌವ್ವನದ ಒಂದೆರಡು ಕುರುಹುಗಳಷ್ಟೇ ಬಾಕಿ ಉಳಿದಿತ್ತು.
ಅಗಸಳಾಗಿದ್ದ ಅವಳ ತಾಯಿ ಸತ್ತ ನಂತರ ಅವಳು ಕೆಲಸಕ್ಕೆ ಹೋಗುತ್ತಿದ್ದ ಮೂರು ಮನೆಗಳ ಪಕ್ಕ ನಿಂತು ಅವುಗಳನ್ನೇ ನೋಡತೊಡಗಿದಳು. ಕ್ರಮೇಣ ಎರಡು ಮನೆಗಳು ಅವಳ ನೋಟದ ಪರಿಧಿಯಿಂದ ಹೊರಬಿದ್ದು ಒಂದು ಮನೆಯಷ್ಟೇ ಉಳಿಯಿತು. ಅದು ಊರುಗೋಲು ಹಾಗೂ ಕೊಡೆಗಳ ವ್ಯಾಪಾರಿ ಉಸ್ಮಾನ್ ಧಣಿಯ ಮನೆ.
ಝಕಿಯ್ಯಾ ಬಡವಳಾಗಿದ್ದಳು. ಜೀವನಾಧಾರಕ್ಕಾಗಿ ಅವಳು ತುರ್ಕಿ ಕಲ್ಲು ಸಕ್ಕರೆ, ಜೀರಿಗೆ ಮಿಠಾಯಿಗಳಂತಹ ಮಕ್ಕಳ ಸಿಹಿ ತಿನಿಸುಗಳನ್ನು ಮಾರಾಟ ಮಾಡುವ ಕೆಲಸಕ್ಕೆ ಸೇರಿಕೊಂಡಳು. ಒಂದು ಕೈಯಲ್ಲಿ ಸಿಹಿ ತಿನಿಸುಗಳ ಪ್ಯಾಕೇಟುಗಳಿದ್ದ ಡಬ್ಬ ಹಾಗೂ ಇನ್ನೊಂದು ಕೈಯಲ್ಲಿ ತನ್ನ ಹಸುಗೂಸನ್ನು ಎತ್ತಿ ಅಳೆಯುತ್ತಿದ್ದಳು. ಹೆಚ್ಚಾಗಿ ಅವಳು ಉಸ್ಮಾನ್ ಧಣಿಯ ಅಂಗಡಿಯ ಅಕ್ಕಪಕ್ಕದಲ್ಲೇ ಓಡಾಡುತ್ತಿದ್ದಳು. ಉಸ್ಮಾನ್ ಧಣಿ ತನ್ನ ದನಿ ಕೇಳುವಂತೆ, ತನ್ನನ್ನು ಗಮನಿಸುವಂತೆ ಮಾಡಲು ಅವಳು ಶತ ಪ್ರಯತ್ನ ಮಾಡುತ್ತಿದ್ದಳು. ಆದರೆ, ಉಸ್ಮಾನ್ ಅವಳನ್ನು ಕಂಡರೂ ಕಾಣದವನಂತೆ ನಟಿಸುತ್ತಿದ್ದನು.
ಎಷ್ಟು ದಿನ ಅಂತ ನಟಿಸಲು ಸಾಧ್ಯ? ಒಂದು ದಿನ ಅವನ ಸಹನೆಯ ಕಟ್ಟೆಯೊಡೆಯಿತು. ಸುತ್ತಮುತ್ತಲು ಯಾರೂ ಇಲ್ಲದ ವೇಳೆ ನೋಡಿ ಝಕಿಯ್ಯಾಳನ್ನು ಪಕ್ಕಕ್ಕೆ ಕರೆದನು.
ಝಕಿಯ್ಯಾ ಆತನನ್ನು ನೋಡಲು ಇಷ್ಟವಿಲ್ಲದವಳಂತೆ ಅನಾಸಕ್ತಿಯ ನೋಟ ಬೀರಿದಳು.
ಉಸ್ಮಾನ್ ಆಕೆಯನ್ನು ಓಲೈಸುವ ಶತ ಪ್ರಯತ್ನಕ್ಕೆ ಮನಸಿನಲ್ಲೇ ಸಿದ್ಧವಾಗುತ್ತಿದ್ದನು.
”ಹೇಗಿರುವೆ ಝಕಿಯ್ಯಾ?”
“ದೇವರ ದಯೆ. ಹೀಗಿದ್ದೇನೆ” ಝಕಿಯ್ಯಾಳ ದನಿ ಕರ್ಕಶವಾಗಿತ್ತು.
“ನಿನಗೇನಾದರು ಬೇಕೇ?”
”ಮೂರೊತ್ತಿನ ಅನ್ನವನ್ನು ದೇವರು ಕೊಡುತ್ತಾನೆ. ಆದರೆ, ಈ ಮಗುವಿಗಂತ ದೇವರು ನಿಗದಿಪಡಿಸಿದ ಹಕ್ಕು ಸಿಗಲೇಬೇಕು”
“ಯಾಕೆ ಸುಮ್ಮನೆ ಸುತ್ತು‌ ಬಳಸು ಮಾತು. ನಿನಗೇನು ಬೇಕು ನೇರವಾಗಿ ಹೇಳು”
“ನನಗೇನು ಬೇಕೆಂದೇ ನಾನು ಹೇಳಿದ್ದು. ಅದನ್ನು ಅರ್ಥ ಮಾಡಿಕೊಳ್ಳುವ ಸದ್ಬುದ್ಧಿ‌ ದೇವರು ನಿಮಗೆ ನೀಡಲಿ”
ಝಕಿಯ್ಯಾಳ ಒರಟು ಮಾತುಗಳನ್ನು ಕೇಳಿ ಉಸ್ಮಾನ್ ನ ಸಿಟ್ಟು ನೆತ್ತಿಗೇರಿತು.
“ನಿನ್ನ ಒಗಟಿನಂತಹ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಪುರುಸೊತ್ತು ನನಗಿಲ್ಲ ತೊಲಗು ಇಲ್ಲಿಂದ. ಅರ್ಹತೆಯಿಲ್ಲದವರನ್ನು ತಲೆಯ ಮೇಲೆ ಕೂರಿಸಿದರೆ ಹೀಗೆಯೇ ಆಗುವುದು” ಎಂದು ಕುದಿಯುತ್ತಾ ಅಂಗಡಿಯೊಳಗೆ ಹೊಕ್ಕನು.
ಆದರೆ, ಝಕಿಯ್ಯಾ ಅವನ ಮಾತಿಗೆ ಸೊಪ್ಪು ಹಾಕದೆ, ಅವನ ಅಂಗಡಿಯ ಸುತ್ತಮುತ್ತ ಓಡಾಡುತ್ತಾ ವ್ಯಾಪಾರ ಮಾಡುತ್ತಿದ್ದಳು. ಆದರೆ, ಆಕೆಯ ಗಮನವಿಡೀ ಉಸ್ಮಾನ್ ಧಣಿಯ ಅಂಗಡಿಯ ಮೇಲೆಯೇ ಇತ್ತು. ತನ್ನ ನಿರ್ಧಾರದಿಂದ‌ ಹಿಂದಕ್ಕೆ ಸರಿಯುವ ಯಾವ ಸೂಚನೆಯೂ ಅವಳಲ್ಲಿ ಕಂಡು ಬರುತ್ತಿರಲಿಲ್ಲ. ಉಸ್ಮಾನ್ ಧಣಿಗೆ ತಲೆ ಚಿಟ್ಟು ಹಿಡಿಯತೊಡಗಿತು. ಅಂಗಡಿ ಮೇಲೆ ಗಮನವಿಡುವುದೂ ಕಷ್ಟವಾಯಿತು. ಆತ ನಿಂತಲ್ಲೇ ಚಡಪಡಿಸತೊಡಗಿದನು.
‘ಎಂತಹ ಅವಸ್ಥೆ! ಏಕಾಗ್ರತೆಯಿಂದ ಕೆಲಸ ಮಾಡುವುದೂ ಸಾಧ್ಯವಾಗುತ್ತಿಲ್ಲವಲ್ಲ’ ಎಂದು ಗೊಣಗತೊಡಗಿದನು.
ಸಮಾಧಾನದಿಂದ ಮನೆಗೆ ಹೋಗಿ ಹೆಂಡತಿ ಮಕ್ಕಳನ್ನು ಮಾತನಾಡಿಸಲಾಗದ ದುಃಸ್ಥಿತಿ ಅವನನ್ನು ಕಾಡಿತು. ತಾನು ಹಾಗೂ ಕುಟುಂಬ ಯಾವುದೋ ಜಿನ್ನಿನ(ಯಕ್ಷಿ) ಮಾಯಾವಿ ಹಿಡಿತಕ್ಕೆ ಸಿಕ್ಕಿ ಹಾಕಿಕೊಂಡಿರಬೇಕು ಎಂದು ತನ್ನ ದುರಿತಕ್ಕೆ ಕಾರಣಗಳನ್ನು ಹುಡುಕತೊಡಗಿದನು.
ಒಂದು ದಿನ ಅವನು ಅಂಗಡಿ‌ ಮುಚ್ಚಿ ಮನೆಗೆ ಹೊರಡುವ ವೇಳೆ ಝಕಿಯ್ಯಾಳನ್ನು ಕಂಡು;
“ನೋಡು, ನನ್ನ ಸಹನೆಗೊಂದು ಮಿತಿ ಇದೆ. ನೀನು ಹೀಗೆಯೇ ಮುಂದುವರಿದರೆ ನಿನ್ನನ್ನು ಕೊಂದು ನಿನ್ನ ದೇಹವನ್ನು ನಾಯಿನರಿಗಳಿಗೆ ಹಾಕುತ್ತೇನೆ” ಎಂದನು. ಆಗ ಅವನ ದನಿ‌ ಸಿಟ್ಟಿನಲ್ಲಿ ನಡುಗುತ್ತಿದ್ದುದನ್ನು ಝಕಿಯ್ಯಾ ಗಮನಿಸಿದಳು.
ಆದರೆ, ಅವಳು ಯಾವುದೇ ಭಯವನ್ನು ತೋರ್ಪಡಿಸದೆ ಮಗುವನ್ನು ಹೆಗಲ‌ ಮೇಲೆ ಮಲಗಿಸಿ ಲಾಲಿ ಹಾಡತೊಡಗಿದಳು.
ಉಸ್ಮಾನ್ ಗೆ ತನ್ನ ಬೆದರಿಕೆಗಳಿಂದ ಯಾವುದೇ ಪ್ರಯೋಜನವಿಲ್ಲವೆನಿಸಿತು. ಇವಳು ಹೀಗೆ ತನ್ನ ಅಂಗಡಿಯ ಮುಂದೆ ಎಳೆಗೂಸಿನೊಂದಿಗೆ ಓಡಾಡುತ್ತಿರುವುದನ್ನು ಜನರು ಗಮನಿಸುತ್ತಿರಬಹುದು ಎಂದು ಅವನಿಗೆ ಆತಂಕವಾಯಿತು. ಅವನು ಸಪ್ಪೆ ಮೋರೆಯೊಂದಿಗೆ ತನ್ನ ಗೆಳೆಯನೂ ಆಗಿದ್ದ ಊರ ಮುಖಂಡನ ಬಳಿಗೆ ಹೋದನು‌. ಅವನೊಂದಿಗೆ ತನ್ನ ನಿದ್ದೆ ಗೆಡಿಸುತ್ತಿರುವ ಗುಟ್ಟನ್ನು ಬಿಚ್ಚಿಟ್ಟನು.
“ಸುಮ್ಮನೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾಳೆ. ನನ್ನ ಬಗ್ಗೆ ಅಪಪ್ರಚಾರ ಮಾಡುವುದು ಅವಳ ಉದ್ದೇಶವಾಗಿರಬಹುದು”
ಊರ ಮುಖಂಡ ಸಂಶಯ ಎತ್ತದಿದ್ದರೂ, ಅಲ್ಪ ಹೊತ್ತು ಉಸ್ಮಾನ್ ನ ಮುಖವನ್ನೇ ನೋಡುತ್ತಾ ಕುಳಿತನು.
‘ನೋಡು ಉಸ್ಮಾನ್, ಆ ಯುವತಿ ಹೇಳುತ್ತಿರುವುದರಲ್ಲಿ ಸತ್ಯವಿರುವುದಾದರೆ ಅದನ್ನು ಒಪ್ಪಿಕೊಂಡು ನ್ಯಾಯಯುತವಾಗಿ ನಡೆಯುವುದು ಒಳ್ಳೆಯದಲ್ಲವೇ”
“ಇಲ್ಲ, ಇಲ್ಲ, ಅವಳು ಹೇಳುತ್ತಿರುವುದು ಶುದ್ಧ ಸುಳ್ಳು” ಉಸ್ಮಾನ್ ಪೇಚಿಗೆ ಸಿಕ್ಕವನಂತೆ ಹೇಳಿದನು.
“ಆದರೆ, ಅವಳು ನಿಮ್ಮ ಮೇಲೆ ಗಂಭೀರ ಆರೋಪ ಮಾಡಿ, ಪೇಚಿಗೆ ಸಿಲುಕಿಸುವ ಸಾಧ್ಯತೆ ಇದೆ. ಜನರು ಅದನ್ನು ಸುಲಭವಾಗಿ ನಂಬುತ್ತಾರೆ”
“ಹಾಗಾಗಲು ತಾವು ಬಿಡಬಾರದು”
ಊರ ಮುಖಂಡ ಸ್ವಲ್ಪ ಹೊತ್ತು ಆಲೋಚಿಸಿ, “ಹಾಗಾದರೆ ಒಂದು ಕೆಲಸ ಮಾಡೋಣ, ನಾನು ಅವಳ‌ ಬಳಿಗೆ ಹೋಗಿ ನೀನು ಈ ಊರು‌ ಬಿಟ್ಟು ಹೋದರೆ ನಿನಗೆ ತಿಂಗಳಿಗೆ ಇಂತಿಷ್ಟು ಹಣ ಕೊಡುವುದಾಗಿ ಹೇಳುತ್ತೇನೆ. ಆ ಹಣವನ್ನು ನೀನು ದಾನ ಮಾಡುತ್ತಿದ್ದೇನೆ ಅಂದುಕೊಂಡರೆ ಸಾಕು”
“ಸರಿ ನೀನು ಹೇಳಿದಂತೆಯೇ ಮಾಡುತ್ತೇನೆ. ಆ ಪೀಡೆ ಇಲ್ಲಿಂದ ತೊಲಗಿದರೆ ಸಾಕು” ಎಂದು ಉಸ್ಮಾನ್ ಧಣಿ ನಿಟ್ಟುಸಿರು ಬಿಟ್ಟನು.
ಮರುದಿನ ಊರ ಮುಖಂಡ ಝಕಿಯ್ಯಾಳನ್ನು ತನ್ನ ಬಳಿ ಕರೆಸಿಕೊಂಡು;
“ನಿನ್ನ ಸಮಸ್ಯೆಗೆ ನಾನು ಪರಿಹಾರ ಹೇಳುತ್ತೇನೆ” ಎಂದು ಹೇಳಿ, ಮೊದಲೇ ಯೋಚಿಸಿದ್ದ ಪರಿಹಾರವನ್ನು ಹೇಳಿದನು.
“ಇನ್ನೊಂದು ಊರಲ್ಲಿ ಗೌರವಯುತವಾಗಿ ನಿನಗೆ ಬದುಕಬಹುದು. ಆ ಬೀದಿಯ ಶೈಖ್ ರೊಂದಿಗೆ ಮಾತನಾಡುತ್ತೇನೆ”
ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. ಚಿಂತೆ, ಭಾವನೆಗಳ ಭಾರವನ್ನು ಪ್ರಕಟಿಸುತ್ತಿದ್ದ ಮೌನ ಅವರನ್ನು ಸುತ್ತುವರಿಯಿತು‌.
ತಾನು ನಿರೀಕ್ಷಿಸಿದ ಉತ್ತರ ಸಿಗುವುದಿಲ್ಲವೆಂದು ಊರ ಮುಖಂಡನಿಗೆ ಸ್ಪಷ್ಟವಾಯಿತು.
”ನಾನು ಹೇಳಿದ್ದು ಕೇಳಿಸಲಿಲ್ಲವೇ?”
“ಕೇಳಿಸಿತು. ಬೇರೆ ಊರು, ಶೈಖ್ ಅಂತ ಏನೇನೋ ಹೇಳಿದ್ರಲ್ಲ. ಆದರೆ, ನಾನಂತೂ ಈ ಊರು ಬಿಟ್ಟು ಹೋಗಲಾರೆ”
ಅವಳ ಉಕ್ಕಿನ ನಿರ್ಧಾರಕ್ಕೆ ಊರ ಮುಖಂಡ ತಬ್ಬಿಬ್ಬಾದನು.
ಆತ ಹಲ್ಲು ಕಡಿದು “ನಿನಗೆ ಹುಚ್ಚು” ಎಂದನು.
“ಇದು ಉಸ್ಮಾನ್ ಧಣಿಯ ಮಗು. ಆದ್ದರಿಂದ‌ ನಿಮ್ಮ ಭಿಕ್ಷೆಯ ಹಣ ನನಗೆ ಬೇಕಿಲ್ಲ”
“ಮತ್ತಿನ್ನೇನು ಬೇಕು‌ ನಿನಗೆ”
“ಆತನ ಕಣ್ಣ ಮುಂದೆಯೇ ಈ ಮಗು ಬೆಳೆಯಬೇಕು. ತಾನು ಮಾಡಿದ ಅಪರಾಧ ಪ್ರತೀ ಕ್ಷಣವೂ ಆತನಿಗೆ ನೆನಪಾಗುತ್ತಿರಬೇಕು” ಎಂದು ಝಕಿಯ್ಯಾ ತನ್ನ ವ್ಯಾಪಾರದ ಕಡೆಗೆ ತಿರುಗಿದಳು.
ಝಕಿಯ್ಯಾಳ ದಿನಚರಿ ಬದಲಾಗಲಿಲ್ಲ. ಮಗುವನ್ನು ಎತ್ತಿಕೊಂಡು‌ ನಿತ್ಯವೂ ಉಸ್ಮಾನ್ ಧಣಿಯ ಅಂಗಡಿಯ ಸುತ್ತಮುತ್ತಲೇ ಓಡಾಡಿಕೊಂಡಿರುತ್ತಿದ್ದಳು. ತನ್ನ ವ್ಯಾಪಾರಕ್ಕೆ ಆ ಅಂಗಡಿಯ ಪರಿಸರವನ್ನೇ ಅವಳು ಖಾಯಂ ನೆಲೆಯನ್ನಾಗಿ‌ ಮಾಡಿಕೊಂಡಿದ್ದಳು‌.
ಅವಳನ್ನು ನೋಡುವಾಗಲೆಲ್ಲಾ ಉಸ್ಮಾನ್ ಧಣಿಗೆ ಬೆಂಕಿ ಉಂಡೆ ಗಂಟಲಲ್ಲಿ ಸಿಕ್ಕಿಕೊಂಡ ಅನುಭವವಾಗುತ್ತಿತ್ತು. ತಲೆ ಜುಮ್ ಎನ್ನುತ್ತಿತ್ತು.‌ ಚಿಂತೆಯ ಭಾರಕ್ಕೆ ಆತ ಕುಸಿದೇ ಹೋಗುತ್ತಿದ್ದನು. ಇದೇ ಮೊದಲ ಬಾರಿಗೆ ಆತ ಕೊಲೆ ಮಾಡುವ ಕುರಿತೂ ಯೋಚಿಸಿದನು.
ಆದರೆ, ಅ ದಿನ ಆತನಿಗೆ ಇದ್ದಕ್ಕಿದ್ದಂತೆ ಅದೇನಾಯಿತೋ. ಅಂಗಡಿ ಕೆಲಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಅವಸರವಸರವಾಗಿ ಊರ ಮುಖಂಡನ ಬಳಿಗೆ ದೌಡಾಯಿಸಿದನು.
“ಆಕೆಯನ್ನು ನಾನು ಮದುವೆಯಾಗುವೆ. ಮಗುವನ್ನು ನನ್ನ ರಕ್ತವೆಂದು ಒಪ್ಪಿಕೊಳ್ಳುವೆ. ಆದರೆ, ಒಂದು‌ ನಿಬಂಧನೆ, ಆಕೆ ಈ ಊರು ಬಿಟ್ಟು ಬೇರೆ ಊರಿಗೆ ಹೋಗಬೇಕು. ಇಷ್ಟು ಹೇಳಿ ಈಗಲೇ ಆಕೆಯನ್ನು ನೀವು ಒಪ್ಪಿಸಬೇಕು” ಎಂದು ಅಕ್ಷರಶಃ ಅಂಗಲಾಚತೊಡಗಿದನು.
ಉಸ್ಮಾನ್ ನ ಮಾತುಗಳನ್ನು ಕೇಳಿದ ಊರ ಮುಖಂಡ;
“ಉಕ್ಕಿನ ನಿರ್ಧಾರದ ಹೆಣ್ಣವಳು. ಅಂದುಕೊಂಡದ್ದನ್ನು ಮಾಡಿಯೇ ತೀರುವೆ ಎಂಬ ಛಲದೊಂದಿಗೆ ತಿರುಗಿ ಬಂದಿದ್ದಾಳೆ. ಇನ್ನು ಮಾತನಾಡಿ ಪ್ರಯೋಜನವಿಲ್ಲ” ಎಂದು ಕಡ್ಡಿಮುರಿದಂತೆ ಹೇಳಿದನು.

ಮೂಲ: ನಜೀಬ್ ಮಹ್ಫೂಸ್
ಅನುವಾದ: ಸ್ವಾಲಿಹ್‌ ತೋಡಾರ್‌


ನಜೀಬ್ ಮೆಹ್ಫೂಸ್

ನೋಡಲು ನಮ್ಮ ಮಾಸ್ತಿ ವೆಂಕಟೇಶ್ ಅಯ್ಯಂಗಾರರಂತೆ ಕಾಣಿಸುವ ನಜೀಬ್ ಮೆಹ್ಫೂಝ್ ಅಪ್ಪಟ ಅರಬ್ ಪ್ರತಿಭೆ. ಅರಬ್ ಸಾಹಿತ್ಯದಲ್ಲಿ ಇವರು ಕುತ್ ಬ್ ಮಿನಾರ್. ಮೂಲತಃ ಕಾದಂಬರಿಕಾರರಾದ ಇವರು ಸಾಕಷ್ಟು ಕಥೆಗಳನ್ನೂ ಬರೆದಿದ್ದಾರೆ. 1988ರಲ್ಲಿ ಸಾಹಿತ್ಯಕ್ಕಾಗಿ ನೋಬೆಲ್ ಗೌರವ ಪಡೆದಿರುವ ಇವರು ಮೂವತ್ತೈದು ಕಾದಂಬರಿ, ಇಪ್ಪತ್ತು ಸಣ್ಣಕಥೆಗಳ ಸಂಕಲನ, ಹದಿನೇಳು ನಾಟಕ ಸಂಕಲನ, ಇಪ್ಪತ್ತಾರು ಚಿತ್ರಕಥೆ ಮೊದಲಾದವುಗಳನ್ನು ರಚಿಸಿದ್ದಾರೆ. 1956-57ರ ಕಾಲಾವಧಿಯಲ್ಲಿ ಪ್ರಕಟಗೊಂಡಿರುವ Cairo trilogy ಇವರ ಮಾಸ್ಟರ್ ಪೀಸ್ ಕೃತಿ ಎಂದು ಪರಿಗಣಿತವಾಗಿದೆ. ಇವರ ಬಹುತೇಕ ಕೃತಿಗಳು‌ ಕ್ರಿಟಿಕಲ್ ರಿಯಲಿಸ್ಟಿಕ್ ಮಾದರಿಯಲ್ಲಿ ಕೈರೋ‌ ನಗರದ ಬೀದಿಗಳ ಕಥೆಗಳನ್ನು ಹೇಳುತ್ತವೆ. ಅರುವತ್ತರ ದಶಕದ ನಂತರ ಇವರು ಸಿಂಬಾಲಿಕ್, ಅಸ್ತಿತ್ವವಾದ ಮಾದರಿಯ ರಚನೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಾರೆ‌. ಇವರ ಕೆಲವೊಂದು ಮುಕ್ತ ಬರವಣಿಗೆಗಳು ತೀವ್ರ ಟೀಕೆಗಳನ್ನೂ ಎದುರಿಸಿದ್ದಿದೆ. ಪರಿಣಾಮ 1994ರಲ್ಲಿ ಇವರ ಕೊಲೆ ಯತ್ನವೂ ನಡೆಯಿತು. 2006ರ ಆಗಸ್ಟ್ 30ರಂದು ನಜೀಬ್ ಮೆಹ್ಫೂಝ್ ಇಹಲೋಕ ತ್ಯಜಿಸಿದರು.

ಈ ಕಥೆಯನ್ನು ಇವರ ಮರಣಾನಂತರ ಪ್ರಕಟವಾದ whispers of stars ಕೃತಿಯಿಂದ ಆಯ್ದುಕೊಳ್ಳಲಾಗಿದೆ.

ಭಾರತದ ಇತಿಹಾಸವನ್ನು ರೂಪಿಸಿದ ಎರಡು ಭಾಷೆಗಳು

ಪಾಶ್ಚಿಮಾತ್ಯ ನಾಗರಿಕತೆ, ದಾರುಲ್-ಇಸ್ಲಾಮ್ (ಇಸ್ಲಾಮಿನ ವಾಸಸ್ಥಾನ), ಕ್ರಿಶ್ಚಿಯನ್ ಡೋಮ್, ಮಾತೃಭೂಮಿ, ಮುಕ್ತ ಜಗತ್ತು, ಪ್ರಾಮಿಸ್ಡ್ ಲ್ಯಾಂಡ್, ಮೂರನೇ ಪ್ರಪಂಚ, ಮಧ್ಯ ಸಾಮ್ರಾಜ್ಯ ಮುಂತಾದವುಗಳು ಸಾಂಸ್ಕೃತಿಕ ಚಹರೆ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಕೆಲ ಪ್ರದೇಶಗಳನ್ನು ಗುರುತಿಸಲು ಜನರೇ ಕೊಟ್ಟು ಕೊಂಡಿರುವ ಹೆಸರುಗಳಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ನಿರ್ದಿಷ್ಟ ಭೌಗೋಳಿಕ‌ ಪ್ರದೇಶಕ್ಕೆ ಈ ರೀತಿ ಹೆಸರಿಸುವುದು ಅದರ ಮೇಲೆ ಹೇರಲಾಗುತ್ತಿರುವ ಸಾಂಸ್ಕೃತಿಕ ದಬ್ಬಾಳಿಕೆಯೇ ಎನ್ನುವ ಚರ್ಚೆ ಮುನ್ನಲೆಗೆ ಬಂದಿದೆ. ಈ ಬಗ್ಗೆ ಅನೇಕ ಸಂಶೋಧನೆಗಳನ್ನು ಕೈಗೊಂಡಿರುವ ಸಂಸ್ಕೃತ ತಜ್ಞ ಮತ್ತು ಇತಿಹಾಸಕಾರ ಶೆಲ್ಡನ್ ಪೊಲಾಕ್ (Sheldon Pollock) ಸಾಂಸ್ಕೃತಿಕ ಹೆಸರಿರುವ ಸ್ಥಳಗಳ ಬಗ್ಗೆ ವಿಭಿನ್ನವಾದ ಚಿಂತನೆಯನ್ನು ವ್ಯಕ್ತಪಡಿಸುತ್ತಾ, ನಾಲ್ಕನೇ ಶತಮಾನ ಮತ್ತು ಹದಿನಾಲ್ಕನೆಯ ಶತಮಾನಗಳ ನಡುವೆ ದಕ್ಷಿಣ ಏಶ್ಯದ ವಿಶಾಲವಾದ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿಯ ಪ್ರಸರಣವನ್ನು ಉಲ್ಲೇಖಿಸುತ್ತಾ ‘ಸಂಸ್ಕೃತ ಕಾಸ್ಮೊಪೊಲಿಸ್’ ಎಂಬ ಪದವನ್ನು ಸೃಷ್ಟಿಸಿದರು. ಅಫ್ಘಾನಿಸ್ತಾನದ ಕಂದಹಾರ್ (ಗಾಂಧಾರ) ಮತ್ತು ಆಗ್ನೇಯ ಏಶ್ಯದ ಸಿಂಗಾಪುರ (ಸಿಂಘಾಪುರ) ನಡುವಿನ ಸಾಂಸ್ಕೃತಿಕವಾಗಿ ಅಂತರ್ಸಂಪರ್ಕ ಹೊಂದಿರುವ ಸ್ಥಳಗಳು‌ ಕೇವಲ‌ ಸಂಸ್ಕೃತ ಹೆಸರುಗಳನ್ನು ಮಾತ್ರ ಹೊಂದಿವೆ ಎಂದು ಅವರು ಗುರುತಿಸುತ್ತಾರೆ.

ಪೊಲಾಕ್ ಅವರ ಪ್ರಕಾರ ಸಂಸ್ಕೃತವೆಂದರೆ‌ ಒಂದು ಧರ್ಮವಲ್ಲ, ಬದಲಾಗಿ ನಾಲ್ಕನೇ ಮತ್ತು ಹದಿನಾಲ್ಕನೇ ಶತಮಾನಗಳ‌ ಮಧ್ಯೆ ಮೇಲಿನ‌ ಪ್ರದೇಶಗಳಲ್ಲಿ ಪುಸ್ತಕಗಳ ಮೂಲಕ ಹರಡಿದ ಭಾಷೆಯಾಗಿದೆ. ಸಂಸ್ಕೃತವೂ ಸಹ ಇತರ ಕೆಲವು ಭಾಷೆಯಂತೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣಿಸಿದ ಭಾಷೆಯಾಗಿದೆ. ಅದು ಒಂದು ನಿರ್ದಿಷ್ಟ ಸ್ಥಳದ ಭಾಷೆ ಅಲ್ಲ. ಅಥವಾ ಅದನ್ನು ನಿರ್ದಿಷ್ಟ ಜನಾಂಗದ ಜೊತೆ, ಭಾಷಾ ಗುಂಪಿನೊಂದಿಗೆ ಅಥವಾ ನಿರ್ದಿಷ್ಟ ಪ್ರದೇಶದೊಂದಿಗೆ ಗುರುತಿಸಲಾಗಿಲ್ಲ. ಸಂಸ್ಕೃತವು ಪ್ರಾಕೃತಿಕವಾಗಿಯೇ ‘ಕ್ರೌರ್ಜಿಯಾನ್’ ಆಗಿರಬಹುದು ಎನ್ನುವ ಪೊಲಾಕ್ ಅದನ್ನು “ಮನುಷ್ಯರ ಜಗತ್ತಿನಲ್ಲಿರುವ ದೇವರುಗಳ ಭಾಷೆ” ಎನ್ನುತ್ತಾರೆ. ಸಂಸ್ಕೃತದಲ್ಲಿ ರಚಿಸಲ್ಪಟ್ಟ ಕೃತಿಗಳು ವ್ಯಾಕರಣ ನಿಯಮಗಳು, ರಾಜನೀತಿ, ವಾಸ್ತು ಶಿಲ್ಪ, ಬದುಕಿನ ಗುರಿಗಳು, ಸಮಾಜದ ನಿಯಂತ್ರಣ, ಶಕ್ತಿ ಮತ್ತು ಅಧಿಕಾರದ ಸ್ವಾಧೀನತೆ ಹೀಗೆ ಮಾನವ ಬದುಕಿನ ಪ್ರತಿಯೊಂದು ಮಜಲುಗಳ ಬಗ್ಗೆಯೂ ಮಾತಾಡುತ್ತವೆ. ಈ ಕೃತಿಗಳ ವ್ಯಾಪಕ ಪ್ರಸರಣೆ ಮತ್ತು ಅದನ್ನು ಪ್ರಚಾರ ಮಾಡಿದ ಜನಾಂಗವು ಒಂದೇ ರೀತಿಯ ಸೌಂದರ್ಯ ಶಾಸ್ತ್ರ, ಕಲಿಕೆ, ರಾಜಕಾರಣ, ಸಾಮಾಜಿಕ ಸಂರಚನೆ ಹುಟ್ಟಿಕೊಳ್ಳಲು ಕಾರಣವಾಯಿತು. ಅಂತಹ ಪಠ್ಯಗಳು ಪ್ರಸಾರವಾಗುತ್ತಿದ್ದ ಮತ್ತು ಪ್ರಮಾಣವಾಗಿ ಪರಿಗಣಿಸಲಾಗುತ್ತಿದ್ದ ಸಂಸ್ಕೃತ ಜಗತ್ತು ಮೂಲಭೂತವಾಗಿ ನೈತಿಕ ಮತ್ತು ಸಾಮಾಜಿಕ ಕ್ರಮವನ್ನು ವ್ಯಾಖ್ಯಾನಿಸುವ ಮತ್ತು ಸಂರಕ್ಷಿಸುವ ವಿಚಾರದಲ್ಲಿ ಹೆಚ್ಚು ಶ್ರದ್ಧೆ ವಹಿಸಿತ್ತು.

ಅಲ್ಲದೆ ಈ ಸಾಂಸ್ಕೃತಿಕ ಸಂರಚನೆಯನ್ನು ಏಶ್ಯದಲ್ಲಿ ಶಸ್ತ್ರಾಸ್ತ್ರಗಳ ಬಲದಿಂದ ವಿಸ್ತರಿಸಲಾಗಿಲ್ಲ, ಮತ್ತು ಇದಕ್ಕೆ ಯಾವುದೇ ಆಡಳಿತಾತ್ಮಕ ಮತ್ತು ಬಲವಾದ ಗಡಿಗಳಿಲ್ಲ ಎನ್ನುವುದು ಗಮನಾರ್ಹ. ಈ ಪಲ್ಲಟವನ್ನು ಅಲೆಕ್ಸಾಂಡರ್‌ನ ಮಹಾವಿಜಯದ ನಂತರದ ಮೆಡಿಟರೇನಿಯನ್ ಬೇಸಿನ್ ಮತ್ತು ಮಧ್ಯ ಪ್ರಾಚ್ಯಕ್ಕೆ ಹೋಲಿಸಬಹುದು. ಅದೂ ಸಹ ರಾಜಕೀಯ ಗಡಿರೇಖೆಯಿಲ್ಲದ ಸಾಂಸ್ಕೃತಿಕ ವಲಯವಾಗಿದ್ದು, ಇದರಲ್ಲಿ ಅನೇಕ ಜನಾಂಗ ಮತ್ತು ಧಾರ್ಮಿಕ ಹಿನ್ನೆಲೆಗಳು ಗ್ರೀಕ್ ಭಾಷೆ, ಶಿಲ್ಪ, ನಾಟಕ, ತಿನಿಸು, ವಾಸ್ತುಶಿಲ್ಪ ಮತ್ತು ಮುಂತಾದವುಗಳನ್ನು ಸುಲಭವಾಗಿ ತಮ್ಮದಾಗಿಸಿಕೊಂಡಿದ್ದವು., ನಾವು ಈ ರೀತಿಯ “ಕಾಸ್ಮೊಪೊಲಿಸ್” ಕಲ್ಪನೆಯನ್ನು ಇತರ ಯಾವುದೇ ಕ್ಲಾಸಿಕಲ್ ಸಾಮ್ರಾಜ್ಯದ ಕೇಂದ್ರೀಕೃತ ಆಡಳಿತ ರಚನೆಯೊಂದಿಗೆ, ನಾಗರಿಕರು ಮತ್ತು ನಾಗರಿಕರಲ್ಲದವರ ನಡುವಿನ ಚೂಪಾದ ವ್ಯತ್ಯಾಸ ಮತ್ತು ಬಲ ಉಳ್ಳವರು ಅಬಲರ ಮೇಲೆ ನಡೆಸುವ ದೌರ್ಜನ್ಯದ ಜೊತೆ ಹೋಲಿಸಬಹುದು.

ಪೊಲಾಕ್ ವಿವರಿಸುವ ಸಂಸ್ಕೃತ ಜಗತ್ತು ದಕ್ಷಿಣ ಏಶ್ಯದ ಇತಿಹಾಸದಲ್ಲಿ ಈ ರೀತಿಯ ಸಂರಚನೆ ಹೊಂದಿದ ಏಕೈಕ ಭಾಷಾ ಪ್ರಪಂಚ. ಹನ್ನೊಂದನೇ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಪರ್ಶಿಯನೇಟ್‌ ಜಗತ್ತು ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಏಶ್ಯವನ್ನು ಆಲಿಂಗನ ಮಾಡಿತ್ತು. ಪರ್ಷಿಯನ್‌ ಮತ್ತು ಸಂಸ್ಕೃತ ಎರಡೂ ಭಾಷೆಗಳಿಗೆ ಒಂದು ರೀತಿ ಸ್ಥಳಗಳ ಮಿತಿಯನ್ನು ಮೀರಿದ ಗುಣವಿದೆ. ಎರಡೂ ಭಾಷೆಯನ್ನು ಬಳಕೆ ಮಾಡುವವರಿಗೆ ಸಮಾಜ ಒಂದು ಗಣ್ಯ ಸ್ಥಾನಮಾನವನ್ನು ನೀಡಿತ್ತು. ಎರಡೂ ಭಾಷೆಗಳು ಧಾರ್ಮಿಕ ಸಂಪ್ರದಾಯಗಳು, ವಿಧಿ ವಿಧಾನಗಳನ್ನು ನಿರೂಪಿಸುವ ಕೃತಿಗಳನ್ನು ಹೊಂದಿವೆ ಹಾಗೂ ಎರಡೂ ಭಾಷೆ ಆಡಳಿತದ ರೂಪು ರೇಷೆಗಳನ್ನು ಒದಗಿಸಿಕೊಟ್ಟ ಭಾಷೆಗಳಾಗಿವೆ. ಈ ಬಗ್ಗೆ ಮಾತನಾಡುವ ರಿಚರ್ಡ್ ಎಮ್ ಈಟನ್ ಅವರ India in the Persianate Age: 1000-1765 ಎನ್ನುವ ಪುಸ್ತಕವು ಕ್ರಿ.ಶ 1000 ಮತ್ತು 1800 ರ ನಡುವಿನ ಭಾರತದ ಇತಿಹಾಸವನ್ನು ಸಂಸ್ಕೃತ ಮತ್ತು ಪರ್ಶಿಯನ್ ಲೋಕಗಳ ನಡುವಿನ ದೀರ್ಘಕಾಲದ ಮತ್ತು ಬಹುಮುಖಿ ಸಂವಹನಗಳ‌ ಮೂಲಕ ಅರ್ಥೈಸಿಕೊಳ್ಳಬಹುದು ಎನ್ನುತ್ತದೆ.

ಆದರೆ, ಪರ್ಶಿಯನ್ ಪ್ರಪಂಚವೆಂದರೆ ನಿಖರವಾಗಿ ಏನು ಮತ್ತು ಅದು ಹೇಗೆ ವಿಕಸನಗೊಂಡಿತು? ಏಳನೇ ಶತಮಾನದಲ್ಲಿ ಇರಾನಿನ ಮೇಲೆ ಅರಬ್ ಜಗತ್ತು ಸಾಧಿಸಿದ ವಿಜಯದ ಹಲವಾರು ವರ್ಷಗಳ ನಂತರ ಹಲವಾರು ಪರ್ಶಿಯನ್ ಭಾಷಿಕರು, ಅದರಲ್ಲೂ ಮುಖ್ಯವಾಗಿ ಶ್ರೀಮಂತರು ಇಸ್ಲಾಮಿನ ಪೂರ್ವದ ಪರ್ಶಿಯನ್ ನಾಗರಿಕತೆ ಮತ್ತೆ ಚೇತರಿಸಿಕೊಳ್ಳುವಂತೆ ನೋಡಿಕೊಂಡರು. ಈ ಐತಿಹಾಸಿಕ ಚಳವಳಿಯ ಭಾಷಾ ಆಯಾಮವು ಇರಾನಿನ ಸಾಸಾನಿಯನ್ ಅವಧಿಯ (AD 224-651) ಸ್ಥಳೀಯ ಮತ್ತು ಅರಬ್ ವಿಜಯದ ಸಂದರ್ಭದಲ್ಲಿ ಇರಾನಿಗೆ ಕಾಲಿಟ್ಟ ಅರೆಬಿಕ್ ಭಾಷೆಯ ಸಂಯೋಗದೊಂದಿಗೆ ಹೊಸ ಪರ್ಶಿಯನ್ ಭಾಷೆಯ ಹುಟ್ಟಿಗೆ ಕಾರಣವಾಯಿತು. ಈ ಹೊಸ ಭಾಷೆ ಮೊದಲು ಆಡುಮಾತಿನ ರೂಪದಲ್ಲಿ ಇರಾನ್ ಪ್ರಸ್ಥಭೂಮಿಯ ಉದ್ದಕ್ಕೆ ಮತ್ತು ಮಧ್ಯ ಏಶ್ಯದಲ್ಲಿ ಮೂಲೆಮೂಲೆಗಳಲ್ಲಿ ಕಾಣಿಸಿಕೊಂಡಿತು. ಪರಿಷ್ಕರಿಸಲಾದ ಅರಬ್ ಲಿಪಿಯನ್ನು ಬಳಸಿಕೊಂಡು ಪರ್ಶಿಯನ್ ಬರಹಗಾರರು ಇಂದಿನ ಈಶಾನ್ಯ ಇರಾನ್, ಪಶ್ಚಿಮ ಅಫ್ಘಾನಿಸ್ತಾನ ಮತ್ತು ಮಧ್ಯ ಏಶ್ಯದಲ್ಲಿ ಅರಬ್ ಇಸ್ಲಾಮ್ ಮತ್ತು ಇಸ್ಲಾಮಿನ ಆಗಮನಕ್ಕಿಂತ ಮೊದಲಿನ ಸಾಂಸ್ಕೃತಿಕ ಪರಂಪರೆಯನ್ನು ಹೆಚ್ಚು ಹೆಚ್ಚು ಪ್ರಚಾರಕ್ಕೆ ತಂದರು.

ಆರಂಭದಲ್ಲಿ, ಈ ಬೆಳವಣಿಗೆಗಳು ಮಧ್ಯ ಏಶ್ಯದಲ್ಲಿ (819-999) ಸಮನಿದ್ ರಾಜರ ಆಸ್ಥಾನದಿಂದ ಉತ್ತೇಜಿಸಲ್ಪಟ್ಟವು ಮತ್ತು ಪ್ರೋತ್ಸಾಹಿಸಲ್ಪಟ್ಟವು. ಬುಖಾರಾ (ಇಂದಿನ ದಕ್ಷಿಣ ಉಜ್ಬೇಕಿಸ್ತಾನ್‌ನಲ್ಲಿ) ಕೇಂದ್ರೀಕೃತವಾಗಿ ಮನ್ನಡೆಯುತ್ತಿದ್ದ ಸಮನಿದ್ ಸಾಮ್ರಾಜ್ಯವು ಇರಾನ್ ಪ್ರಸ್ಥಭೂಮಿಯನ್ನು ಪಶ್ಚಿಮಕ್ಕೆ ಮೆಡಿಟರೇನಿಯನ್, ದಕ್ಷಿಣಕ್ಕೆ ಭಾರತ ಮತ್ತು ಸಿಲ್ಕ್ ರೋಡ್ ಮೂಲಕ ಪೂರ್ವಕ್ಕೆ ಚೀನಾದೊಂದಿಗೆ ಸಂಪರ್ಕಿಸುವ ಪ್ರಮುಖ ವ್ಯಾಪಾರ ಮಾರ್ಗಗಳನ್ನು ವ್ಯಾಪಿಸಿತ್ತು. ಅರೆಬಿಕ್ ಮತ್ತು ಟರ್ಕಿಶ್ ಎರಡನ್ನೂ ಸಾಮಾನ್ಯವಾಗಿ ಅಲ್ಲಿ ಬಳಸಲಾಗುತ್ತಿದ್ದುದರಿಂದ ಹನ್ನೊಂದನೇ ಶತಮಾನದವರೆಗೆ ಇದು ಬಹುಭಾಷಿಕ ಪ್ರದೇಶವಾಗಿತ್ತು. ಆದರೆ ʼಹೊಸ ಪರ್ಶಿಯನ್ʼ ( ಇನ್ನು ಪರ್ಶಿಯನ್ ಎಂದು ಬಳಸಲಾಗಲಿದೆ) ಆ ಪ್ರದೇಶದ ಸ್ಥಳೀಯ ಇರಾನಿನ ಭಾಷೆಗಳು ಮತ್ತು ಉಪಭಾಷೆಗಳ ಸ್ಥಾನದಲ್ಲಿ ನಿಂತುಕೊಂಡು ವಿಭಿನ್ನ ಭಾಷಿಕರ ನಡುವಿನ ಸಾಮಾನ್ಯ ಸಂವಹನದ ಭಾಷೆಯಾಗಿ (lingua franca) ಮಾರ್ಪಟ್ಟಿತು.

ಸಂಸ್ಕೃತ ಪಠ್ಯಗಳಂತೆಯೇ, ಹನ್ನೊಂದನೇ ಶತಮಾನದಿಂದ ಪರ್ಶಿಯನ್ ಭಾಷೆಯಲ್ಲಿ ಕಾಲ್ಪನಿಕ ಸಾಹಿತ್ಯದ ದೊಡ್ಡ ಸಂಗ್ರಹವು ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಏಶ್ಯದ ಮೂಲಕ ವ್ಯಾಪಕವಾಗಿ ಹರಡಲು ಪ್ರಾರಂಭಿಸಿತು. ಇರಾನ್‌ನಲ್ಲಿ ಫಿರ್ದೌಸಿ (ಡಿ. 1020), ಜಾರ್ಜಿಯಾದಲ್ಲಿ ನಿಝಾಮಿ (ಡಿ. 1209), ಭಾರತದಲ್ಲಿ ಅಮೀರ್ ಖುಸ್ರು (ಡಿ. 1325) ಮತ್ತು ಅಫ್ಘಾನಿಸ್ತಾನದಲ್ಲಿ ಜಾಮಿ (ಡಿ. 1492) ಮುಂತಾದ ದಿಗ್ಗಜರು ಬರೆದ ಐತಿಹಾಸಿಕ ಅಲೆಕ್ಸಾಂಡರ್ ಆಧಾರಿತ ಮಹಾಕಾವ್ಯಗಳು ಇದಕ್ಕೊಂದು ಉದಾಹರಣೆಯಾಗಿದೆ. ಒಂದು ದೊಡ್ಡ‌ ಭೌಗೋಳಿಕ ಅಂತರದಲ್ಲಿ ಇವು ರಚಿಸಲ್ಪಟ್ಟಿದ್ದರೂ ಮತ್ತು ಇವೆಲ್ಲವುಗಳಿಗೆ ಅನೇಕ ದೇಶೀಯ ಆಯಾಮಗಳಿದ್ದರೂ ಸಹ ಒಂದು ವಿಶಾಲವಾದ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿ ಅಲೆಕ್ಸಾಂಡರ್ ನ ಬಗೆಗೆ ಒಂದು ಕಲ್ಪನೆ ಹುಟ್ಟಲು ಮತ್ತು ಕಾಸ್ಮೋಪಾಲಿಟನ್ ಸಂಸ್ಕೃತಿ ಬೆಳೆಯಲು ಕಾರಣವಾಯಿತು. ಇಂತಹ ಸಾಹಿತ್ಯ ಕೃತಿಗಳು ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಏಶ್ಯದಾದ್ಯಂತ ‘ಪರ್ಶಿಯಾನೇಟ್ ಪ್ರಪಂಚ’ ವನ್ನು ಜೋಡಿಸಲು ಸಹಾಯ ಮಾಡಿತು. ಆದರೆ ಸಂಸ್ಕೃತ ಕೃತಿಗಳಂತೆಯೇ ಪರ್ಶಿಯನ್ ಸಾಹಿತ್ಯವು ಯಾವುದೇ ಭೌಗೋಳಿಕ ಅಥವಾ ರಾಜಕೀಯ ಕೇಂದ್ರವನ್ನು ಹೊಂದಿರಲಿಲ್ಲ, ವಿಶೇಷವಾಗಿ ಹದಿಮೂರನೇ ಶತಮಾನದ ನಂತರ ಮಂಗೋಲ್ ಆಕ್ರಮಣಕಾರರು ಮಧ್ಯ ಏಶ್ಯ ಮತ್ತು ಉತ್ತರ ಇರಾನ್‌ಗಳನ್ನು ಆಕ್ರಮಿಸಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿದ ನಂತರ.

ಆ ಹಂತದಿಂದ, ಕಾಕಸಸ್ ಅಥವಾ ಭಾರತದಂತಹ ದೂರದ ಪ್ರದೇಶಗಳಲ್ಲಿನ ಜನರು ಪರ್ಶಿಯನ್ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಓದಿ, ಬರೆಯುವುದನ್ನು ಮಾಡುತ್ತಿದ್ದರೂ ತಮ್ಮ ದೈನಂದಿನ ಬಳಕೆಗಾಗಿ ಸ್ಥಳೀಯ ಭಾಷೆಗಳ ಮೇಲೆಯೇ ಅವಲಂಬಿತರಾಗಿದ್ದಿರಬಹುದು. ಹದಿನಾಲ್ಕನೆಯ ಶತಮಾನದ ವೇಳೆಗೆ ಪರ್ಶಿಯನ್ ಒಂದು ರೋಮಾಂಚಕ ಮತ್ತು ಪ್ರತಿಷ್ಠಿತ ಸಾಹಿತ್ಯಿಕ ಭಾಷೆಯಾಗಿ ಮಾರ್ಪಟ್ಟಿತು, ಆಡಳಿತದಲ್ಲಿ ಮತ್ತು ಅಂತರ-ಪ್ರಾದೇಶಿಕ ರಾಜತಾಂತ್ರಿಕತೆಗೆ ಪ್ರಮುಖ ಸಂಪರ್ಕ ಭಾಷೆಯಾಗಿ ಬಳಕೆಯಾಗಲಾರಂಭಿಸಿತು. ಮಂಗೋಲ್ ಪ್ರಾಬಲ್ಯದ ಚೀನಾದಲ್ಲಿ, ಇದು ಒಂದು ಭಾಷೆಯಾಗಿ ಮಾತ್ರವಲ್ಲದೆ ಅಧಿಕೃತ ವಿದೇಶಿ ಭಾಷೆಯಾಗಿಯೂ ಕಾರ್ಯನಿರ್ವಹಿಸಿತು. ವೆನೆಶಿಯನ್ ವ್ಯಾಪಾರಿ ಮಾರ್ಕೊ ಪೊಲೊ (ಡಿ. 1324) ಮುಖ್ಯವಾಗಿ ಚೀನಾದಲ್ಲಿ ಪರ್ಶಿಯನ್ ಭಾಷೆಯನ್ನು ಬಳಸಿದರು. ಸಿಲ್ಕ್ ರೋಡ್‌ನಲ್ಲಿ ತಾನು ನಡೆಸಿದ ಪ್ರಯಾಣದ ಉದ್ದಕ್ಕೂ ಪರ್ಶಿಯನ್ ಭಾಷೆಯನ್ನೇ ಆತ ಬಳಸಿದ್ದರು. ಹದಿನಾಲ್ಕನೇ ಶತಮಾನದದಲ್ಲಿ ಅದೇ ಪ್ಯಾನ್-ಏಶ್ಯನ್ ಸರ್ಕ್ಯೂಟ್‌ಗಳಲ್ಲಿ ಪ್ರಯಾಣಿಸಿದ ಅವರ ಸಮಕಾಲೀನ ಮತ್ತು ವಿಶ್ವ ಸಂಚಾರಿ ಇಬ್ನ್ ಬತೂತ (ಡಿ. 1377) ಸಹ ಸಂವಹನಕ್ಕಾಗಿ ಪರ್ಶಿಯನ್ ಭಾಷೆಯನ್ನೇ ಬಳಸಿದರು.

ಹನ್ನೆರಡನೆಯ ಶತಮಾನದ ಅಂತ್ಯದ ವೇಳೆಗೆ ಭಾರತದ ಬದಲಾದ ರಾಜಕೀಯ ಕ್ರಮವನ್ನು ಅರ್ಥಮಾಡಿಕೊಳ್ಳುವಲ್ಲಿ ಪರ್ಶಿಯನ್ ಬರಹಗಾರರು ಅಧಿಕಾರ ಮತ್ತು ಅಧಿಕಾರದ ವಕ್ತಾರರ ಬಗ್ಗೆ ಬರೆದಿರುವ ವಿಚಾರಗಳು ಮಹತ್ವವನ್ನು ಪಡೆಯುತ್ತದೆ. ಪರ್ಶಿಯಾ ಭಾಷೆಯ ಸಾಹಿತ್ಯ ಮತ್ತು ಆಡಳಿತದಲ್ಲಿನ ಬಳಕೆಯನ್ನು ಪೋಷಿಸಿರುವ ಅದೇ ಸಾಂಸ್ಕೃತಿಕ ಪರಿಸರವು ‘ಯುನಿವರ್ಸಲ್ ದೊರೆ’ ಅಥವಾ ‘ಸುಲ್ತಾನ್’ ಎಂಬ ನಿರ್ದಿಷ್ಟ ಪರಿಕಲ್ಪನೆಯನ್ನೂ ರೂಪಿಸಿತು. ಸುಲ್ತಾನ್‌ ಎನ್ನುವ ಬಿರುದು ಪರ್ಶಿಯನೇಟ್ ಜಗತ್ತಿನಲ್ಲಿ ಜೀವಿಸುವ ಎಲ್ಲಾ ಜನರಿಗೂ ಅಚ್ಚುಮೆಚ್ಚಾಗಿ ಮಾರ್ಪಟ್ಟಿತ್ತು. ಸುಲ್ತಾನ್ ಅನಿಸಿಕೊಂಡವರು ಎಲ್ಲಾ ಜನಾಂಗೀಯ ಗುಂಪುಗಳು ಮತ್ತು ಧಾರ್ಮಿಕ ಸಮುದಾಯಗಳ ಮೇಲೆ ರಾಜಕೀಯ ಅಧಿಪತ್ಯವನ್ನೂ ಸ್ಥಾಪಿಸಿದರು. ಪರಮಾಧಿಕಾರ ಹಾಗೂ ರಾಜಕೀಯ ನಿಷ್ಠೆಯ ದ್ಯೋತಕವಾಗಿ ಈ ಪದ ಬದಲಾಯಿತು.

ಹತ್ತನೆಯ ಮತ್ತು ಹನ್ನೊಂದನೇ ಶತಮಾನಗಳಲ್ಲಿನ ಸುಲ್ತಾನ್ ಎಂಬ ಪರಿಕಲ್ಪನೆಯು ನಿರ್ದಿಷ್ಟವಾಗಿ ಎರಡು ಅಂಶಗಳಿಂದ ಉಂಟಾಗುತ್ತದೆ:
1.ಮಧ್ಯ ಏಶ್ಯ ಸಹಿತವಿರುವ ಪೌರಾತ್ಯ ಇಸ್ಲಾಮಿಕ್‌ ಜಗತ್ತಿನ ಆಡಳಿತದ ಚುಕ್ಕಾಣಿ ಹಿಡಿದಿದ್ದ ಬಾಗ್ದಾದ್‌ ಕೇಂದ್ರೀಕೃತವಾದ ಅಬ್ಬಾಸಿದ್ ಖಿಲಾಫತಿನ ಕುಸಿತ

  1. ಪೂರ್ವ ಏಶ್ಯದಿಂದ ನಗರೀಕೃತ ಮಧ್ಯ ಏಶ್ಯ ಮತ್ತು‌ ಇರಾನ್‌ಗೆ ನುಸುಳಿ ಬಂದ ಪ್ರಬಲ‌ ಟರ್ಕಿಶ್ ಜನರ ವಲಸೆ.
    ಈ ಹೊಸ ರಾಜಕೀಯವನ್ನು ಸರಿದೂಗಿಸಲು, ನೈಋತ್ಯ ಏಶ್ಯದಲ್ಲಿ ರಾಜಕೀಯ ಚಿಂತನೆಯು ತೀವ್ರವಾದ ಪರಿಷ್ಕರಣೆಗೆ ಒಳಗಾಯಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಆಧ್ಯಾತ್ಮಿಕ ಮತ್ತು ರಾಜಕೀಯ ಪ್ರಾಧಿಕಾರವು ಪ್ರತ್ಯೇಕ ಘಟಕಗಳಾಗಿ ವಿಭಜಿಸಲ್ಪಟ್ಟು ಖಲೀಫರು ಧಾರ್ಮಿಕ‌ ನಾಯಕರಾಗಿ ಮತ್ತು ಸುಲ್ತಾನರು ಆಡಳಿತ ಸೂತ್ರವನ್ನು ಕೈಗೆತ್ತಿಕೊಳ್ಳುವಂತಾಯಿತು. ಆಧ್ಯಾತ್ಮಿಕ ವಿಚಾರಗಳಲ್ಲಿ ಖಲೀಫರ ಪ್ರಾಧಿಕಾರವನ್ನು ಅಂಗೀಕರಿಸುವ ಯಾವುದೇ ಸರಕಾರ ಕಾನೂನಾತ್ಮಕವಾಗಿ ಸಿಂಧುತ್ವವನ್ನು ಪಡೆಯುತ್ತದೆ ಎಂದು ಘೋಷಿಸಿದ ಆ ಕಾಲದ ಪ್ರಸಿದ್ಧ ಧಾರ್ಮಿಕ ವಿದ್ವಾಂಸ ಇಮಾಂ ಗಝ್ಝಾಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಖಲೀಫರು ಕೂಡಾ ತಿರುಗಿ ಅನ್ಯೋನ್ಯತೆಯನ್ನು ಉಳಿಸಲು ತಾವೇ ನೇಮಕ ಮಾಡಿದವರೆಂಬ ಕಲ್ಪನೆಯಲ್ಲಿ ಸುಲ್ತಾನರುಗಳ ಧಾರ್ಮಿಕೇತರ ಆಡಳಿತವನ್ನು ಒಪ್ಪಿಕೊಂಡರು.

ಹನ್ನೆರಡನೆಯ ಶತಮಾನದ ಆರಂಭದಲ್ಲಿ ಇತಿಹಾಸಕಾರ ಇಬ್ನ್ ಬಲ್ಖಿಯು ದಾಖಲಿಸಿದಂತೆ ಪ್ರತಿಯೊಬ್ಬ ರಾಜನೂ ತನ್ನ ಉತ್ತರಾಧಿಕಾರಿಗೆ ‘ಸೈನ್ಯವಿಲ್ಲದೆ ರಾಜ್ಯವಿಲ್ಲ, ಸಂಪತ್ತಿಲ್ಲದ ಸೈನ್ಯವಿಲ್ಲ, ಭೌತಿಕ ಸಮೃದ್ಧಿಯಿಲ್ಲದೆ ಸಂಪತ್ತಿಲ್ಲ ಮತ್ತು ನ್ಯಾಯವಿಲ್ಲದೆ ಭೌತಿಕ ಸಮೃದ್ಧಿ ಇಲ್ಲ’ ಎಂಬ ಸೂತ್ರವನ್ನು ಕಲಿಸುತ್ತಿದ್ದರು.

ಇಬ್ನ್ ಬಲ್ಖಿಯಂತಹ ಪರ್ಶಿಯನ್ ವಿದ್ವಾಂಸರು ಇಸ್ಲಾಮ್ ಅಥವಾ ಯಾವುದೇ ಇತರ ಧಾರ್ಮಿಕ ಸಂಪ್ರದಾಯಗಳಿಗೆ ಸುಲ್ತಾನರ ಅಧಿಕಾರವನ್ನು ಕಟ್ಟಿ ಹಾಕಲು ಪ್ರಯತ್ನಿಸಿಲ್ಲ. ಅವರನ್ನು ಒಗ್ಗೂಡಿಸಿದ ಘಟಕ ‘ನ್ಯಾಯ’ ವಲ್ಲದೆ ಬೇರೇನೂ ಅಲ್ಲ. ಯುರೋಪ್‌ನಲ್ಲಿ ಚರ್ಚ್ ಮತ್ತು ಆಡಳಿತವನ್ನು ಬೇರ್ಪಡಿಸುವುದರ ಬಗ್ಗೆ ಯೋಚಿಸುವುದಕ್ಕಿಂತ ಮೊದಲೇ, ಅಂದರೆ ಹನ್ನೊಂದನೇ ಮತ್ತು ಹನ್ನೆರಡನೆಯ ಶತಮಾನದಲ್ಲೇ ಇರಾನ್ ಮತ್ತು ಮಧ್ಯ ಏಶ್ಯದ ಬುದ್ಧಿಜೀವಿಗಳು ಅದನ್ನು ಜಾರಿಗೆ ತಂದಿದ್ದರು. ಆಡಳಿತದ ಇಂತಹ ಜಾತ್ಯತೀತ ಪರಿಕಲ್ಪನೆಯು ಭಾರತದಂತಹ ಜನಾಂಗೀಯವಾಗಿ ವೈವಿಧ್ಯಮಯ ಪ್ರದೇಶಗಳಲ್ಲಿ ತಮ್ಮನ್ನು ಸುಲ್ತಾನರನ್ನಾಗಿ ಮಾಡಿಕೊಳ್ಳುವ ಆಡಳಿತಗಾರರ ಮೇಲೆ ದೂರಗಾಮಿ ಆದರೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಾಸ್ತವವಾಗಿ, ಭಾರತವನ್ನು ತಲುಪುವ ಹೊತ್ತಿಗೆ, ‘ಸುಲ್ತಾನ್’ ಎಂಬ ಪದವು ಜನಾಂಗೀಯತೆ ಅಥವಾ ಧರ್ಮದಿಂದ ಎಷ್ಟು ಬೇರ್ಪಟ್ಟಿದೆ ಎಂದರೆ, ಹಿಂದೂ ಆಡಳಿತಗಾರರೂ‌ ಆ ಪದವಿಯನ್ನು ಬಳಸಲು ಆರಂಭಿಸಿದ್ದರು. 1347ರಲ್ಲಿ ದಖ್ಖನ್ ಭೂಭಾಗವನ್ನು ಆಳುತ್ತಿದ್ದ ವಿಜಯನಗರ ಸಾಮ್ರಾಜ್ಯದ ದೊರೆ ಮಾರಪ್ಪ ʼಭಾರತೀಯ ದೊರೆಗಳ ಸುಲ್ತಾನʼ ಎಂದು ಸ್ವಯಂ ಘೋಷಿಸಿಕೊಂಡಿದ್ದ.

ವಿಸ್ತರಿಸುತ್ತಿರುವ ಪರ್ಶಿಯನೇಟ್ ಜಗತ್ತಿನಲ್ಲಿ ಭಾರತವೂ ಸೇರಿ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾರ್ವತ್ರಿಕ ನ್ಯಾಯದ ತತ್ವವನ್ನು ಅಳವಡಿಸಿಕೊಂಡಿತು. ಧಾರ್ಮಿಕವಾಗಿ, ಭಾಷಿಕವಾಗಿ ಮತ್ತು ಸಾಮಾಜಿಕವಾಗಿ ವೈವಿಧ್ಯಮಯವಾಗಿರುವ ಉತ್ತರ ಭಾರತದ ಸಮಾಜವನ್ನು ಆಳಲು ಇಂತಹ ಅಂತರ್ಗತ ರಾಜಕೀಯ ಸಿದ್ಧಾಂತದ ಅಗತ್ಯವೂ ಇತ್ತು‌. ‘ಧರ್ಮ’ದ ಬದಲು ‘ನ್ಯಾಯ’ವೇ ಸಮರ್ಪಕ ಆಡಳಿತದ ಸೂತ್ರವಾಗಿ ಸ್ವೀಕಾರ ಮಾಡಿದ್ದರಿಂದ ಆಡಳಿತಗಾರನ ಸ್ವಂತ ಧರ್ಮ ಲೆಕ್ಕಕ್ಕೆ ಬಾರದೆ ಪರ್ಶಿಯನೀಕೃತ ರಾಜ್ಯಗಳು ಭಾರತದಾದ್ಯಂತ ಪ್ರವರ್ಧಮಾನಕ್ಕೆ ಬರಲು ಅವಕಾಶ ಮಾಡಿಕೊಟ್ಟಿತು. ದೆಹಲಿ ಸುಲ್ತಾನೇಟ್‌ನ ಇತಿಹಾಸಗಾರನಾಗಿದ್ದ ಝಿಯಾವುದ್ದೀನ್‌ ಬರನಿ “ನ್ಯಾಯಪರನಾಗಿರುವ ಮುಸ್ಲಿಮೇತರ ಆಡಳಿತಗಾರನ ಕೆಳಗೆ ಯಾವುದೇ ದೇಶ ಅಭಿವೃದ್ದಿ ಹೊಂದಲು ಸಾಧ್ಯವಿದೆ. ಆದರೆ, ಅನ್ಯಾಯ ಮಾಡುವ ಮುಸ್ಲಿಮ್ ಆಡಳಿತಗಾರ ಆಳುವ ದೇಶ ಒಮ್ಮೆಯೂ ಪ್ರವರ್ಧಮಾನಕ್ಕೆ ಬರದು” ಎಂದು ಹೇಳಿದ್ದು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕಿದೆ.

ಪರ್ಶಿಯನ್ ಪ್ರಪಂಚದ ಬಗ್ಗೆ ಬಹುಶಃ ಅತ್ಯಂತ ಗಮನಾರ್ಹವಾದ ಸಂಗತಿಯೆಂದರೆ, ದೆಹಲಿ ಸುಲ್ತಾನೇಟ್‌ನಂತಹ ಪರ್ಶಿಯನ್ ರಾಜ್ಯಗಳ ಆಡಳಿತದಲ್ಲಿರುವ ಭಾರತೀಯ ಪ್ರಾಂತ್ಯಗಳಲ್ಲಿ ಮಾತ್ರವಲ್ಲದೆ ಅಂತಹ ರಾಜ್ಯಗಳ ಆಚೆಗೆ ಇರುವ ಪ್ರದೇಶಗಳಿಗೂ ಅದರ ಪ್ರಮುಖ ಆಲೋಚನೆಗಳು ಎಷ್ಟು ಸುಲಭವಾಗಿ ಹರಡಿವೆ ಎಂಬುದು. ನ್ಯಾಯ ಮತ್ತು ಆರ್ಥಿಕತೆ, ನೈತಿಕತೆ ಮತ್ತು ರಾಜಕೀಯವನ್ನು ಸಂಪರ್ಕಿಸುವ ಪರಿಕಲ್ಪನೆಯ ಪರ್ಶಿಯನ್ ಸಿದ್ಧಾಂತವು ಕೆಲವು ಹಿಂದೂ‌ ರಾಜರಿರುವ ಆಡಳಿತ ಪ್ರದೇಶಗಳನ್ನೂ ಆಕರ್ಷಿಸಿತ್ತು. ಹನ್ನೆರಡನೆಯ ಅಥವಾ ಹದಿಮೂರನೆಯ ಶತಮಾನದಲ್ಲಿ ತೆಲುಗು ಕವಿ ಬದ್ದೇನಾ, ವಾರಂಗಲ್‌ನಲ್ಲಿರುವ ಕಾಕತೀಯ ಆಸ್ಥಾನದಲ್ಲಿದ್ದುಕೊಂಡು
“ಸಂಪತ್ತನ್ನು ಸಂಪಾದಿಸಲು: ಜನರನ್ನು ಸಮೃದ್ಧಿಗೊಳಿಸು. ಜನರ ಏಳಿಗೆಗೆ: ನ್ಯಾಯವೇ ಸಾಧನ.
ಓ ಕೀರ್ತಿ ನಾರಾಯಣ! ನ್ಯಾಯವು ರಾಜರ ಖಜಾನೆ ಎಂದು ಅವರು ಹೇಳುತ್ತಾರೆ” ಎಂದು ಬರೆದಿದ್ದರು.

ಸಂಪತ್ತು, ಸಮೃದ್ಧಿ ಮತ್ತು ನ್ಯಾಯವನ್ನು ಪರಸ್ಪರ ಸಂಪರ್ಕಿಸುವ ಇಬ್ನ್ ಬಲ್ಖಿಯ ಬರಹವನ್ನೇ ಇದು ಹೋಲುತ್ತದೆ. ಅಲ್ಲದೆ, ಪರ್ಶಿಯನ್ ರಾಜಕೀಯ ಚಿಂತನೆಯ ಕೇಂದ್ರವಾದ ನ್ಯಾಯದ ಕಲ್ಪನೆಯನ್ನು ಬದ್ದೇನಾ ಮುಕ್ತವಾಗಿ ಎರವಲು ಪಡೆದರು ಮತ್ತು ಹೊರಗಿನಿಂದ ಹೇರಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬದ್ದೇನಾ ಅವರು ದೆಹಲಿ ಸುಲ್ತಾನರಿಂದ ಬಹಳ ದೂರದಲ್ಲಿದ್ದರೂ ಸಹ, ರಾಜಕೀಯ ಮತ್ತು ನೈತಿಕ ಕ್ರಮದ ಪರ್ಶಿಯನ್ ದೃಷ್ಟಿಕೋನವನ್ನು ಹರಳುಗೊಳಿಸಿದ್ದರು ಎನ್ನಬಹುದು.

ಹದಿಮೂರನೇ ಶತಮಾನದ ಉತ್ತರ ಭಾರತವನ್ನು ಟರ್ಕಿಯು ವಶಪಡಿಸಿಕೊಂಡ ನಂತರ ರಾಜಕೀಯ ಸಿದ್ಧಾಂತದ ಹೊರತಾಗಿಯೂ ಪರ್ಶಿಯನ್ ಸಂಸ್ಕೃತಿಯ ಇತರ ಅಂಶಗಳು ದಕ್ಷಿಣ ಏಶ್ಯದಾದ್ಯಂತ ಹರಡಿತು. ಇದರಲ್ಲಿ ವಾಸ್ತುಶಿಲ್ಪ, ಉಡುಗೆ, ಸಂಗೀತ, ಪಾಕಪದ್ಧತಿ ಮತ್ತು ವಿಶೇಷವಾಗಿ ಪರ್ಶಿಯನ್ ಶಬ್ದಕೋಶಗಳು ಸೇರಿವೆ. ಪರ್ಶಿಯನ್ ಅಕ್ಷರಗಳ ಭೌಗೋಳಿಕ ವ್ಯಾಪ್ತಿಯು ವಿಸ್ತರಿಸಿದಂತೆ, ನಿಘಂಟುಗಳ ರಚನೆಯೂ ವಿಸ್ತರಿಸಿತು. ಅದರ ಸಂಕಲನಕಾರರು ಪರ್ಶಿಯನ್ ಮಾತಾಡುವ ಪ್ರಪಂಚದ ವಿವಿಧ ಭಾಗಗಳಲ್ಲಿ ರಚಿಸಲಾದ ಸಾಹಿತ್ಯವನ್ನು ಪರಸ್ಪರ ಗ್ರಾಹ್ಯವಾಗುವಂತೆ ಮಾಡಲು ಪ್ರಯತ್ನಿಸಿದರು. ಹತ್ತೊಂಬತ್ತನೇ ಶತಮಾನದ ವೇಳೆಗೆ, ಇರಾನ್‌ಗಿಂತಲೂ ಹೆಚ್ಚಿನ ಪರ್ಶಿಯನ್ ಭಾಷೆಯ ನಿಘಂಟುಗಳು ಭಾರತದಲ್ಲಿ ರಚಿಸಲ್ಪಟ್ಟವು ಎಂಬ ಐತಿಹಾಸಿಕ ಸತ್ಯವು, ಭಾರತವು ಪರ್ಶಿಯನ್ ಜಗತ್ತನ್ನು ಯಾವ ಪ್ರಮಾಣದಲ್ಲಿ ಒಳಗೊಂಡಿತು ಎಂಬುದನ್ನು ಸೂಚಿಸುತ್ತದೆ. ಹದಿನಾಲ್ಕನೆಯ ಶತಮಾನದ ವೇಳೆಗೆ ಪರ್ಶಿಯನ್ ದಕ್ಷಿಣ ಏಶ್ಯದಾದ್ಯಂತ ವ್ಯಾಪಕವಾಗಿ ಬಳಸಲಾಗುವ ಆಡಳಿತ ಭಾಷೆಯಾಯಿತು. ದೆಹಲಿ ಸುಲ್ತಾನರು ಮತ್ತು ಅದರ ಉತ್ತರಾಧಿಕಾರಿಗಳು ಮತ್ತು ಆ ನಂತರ ಮೊಘಲರು (1526-1858) ನ್ಯಾಯಾಂಗ ಮತ್ತು ಆಡಳಿತ ಭಾಷೆಯಾಗಿ ಪರ್ಶಿಯನ್ ಭಾಷೆಯನ್ನೇ ಬಳಸಿದರು. ಇದರ ಪರಿಣಾಮವಾಗಿ, ದಕ್ಷಿಣ ಏಶ್ಯದ ಹಲವು ಪ್ರಮುಖ ಪ್ರಾದೇಶಿಕ ಭಾಷೆಗಳ ಶಬ್ದಕೋಶದಲ್ಲಿ ಪರ್ಶಿಯನ್ ಪದಗಳ ವ್ಯಾಪಕವಾಗಿ ನುಸುಳಿತು.

ಇವೆಲ್ಲವೂ ನಮ್ಮನ್ನು periodizationಗೆ ಹಿಂತಿರುಗಿಸುತ್ತದೆ. ಭಾರತದ ಇತ್ತೀಚಿನ ತಲೆಮಾರಿನ ಇತಿಹಾಸಕಾರರು ಹಳೆಯ ತ್ರಿಪಕ್ಷೀಯ ಹಿಂದೂ-ಮುಸ್ಲಿಮ್-ಬ್ರಿಟಿಷ್ ಕಲ್ಪನೆಯನ್ನು ತ್ಯಜಿಸಿ ಪ್ರಾಚೀನ-ಮಧ್ಯಕಾಲೀನ-ಆಧುನಿಕ ಎಂಬ ಕಲ್ಪನೆಗೆ ಹಿಂದಿರುಗಿದ್ದಾರೆ. ‘ಮಧ್ಯಕಾಲೀನ ಎಂಬ ಪದಕ್ಕೆ ಪರ್ಯಾಯ ಪದ ನೀಡುವ ಬದಲು ಇತಿಹಾಸಕಾರರು 1000-1800 ಅವಧಿಯ ಸಂಪೂರ್ಣ ಅಥವಾ ಭಾಗವನ್ನು ಒಳಗೊಂಡಿರುವ ಉತ್ತಮ ಗುಣಮಟ್ಟದ ಪ್ರಾದೇಶಿಕ ಅಧ್ಯಯನಗಳನ್ನು ಬಂಗಾಳ, ಗುಜರಾತ್, ಮಲಬಾರ್, ಒರಿಸ್ಸಾ, ಪಂಜಾಬ್, ಡೆಕ್ಕನ್ ಪ್ರಸ್ಥಭೂಮಿ, ದೆಹಲಿ ಪ್ರದೇಶ, ತಮಿಳು ದೇಶ ಮುಂತಾದ ಪ್ರದೇಶಗಳ ಮೇಲೆ ಕೈಗೊಂಡಿದ್ದಾರೆ. ಪರಿಣಾಮವಾಗಿ ಈ ಅಧ್ಯಯನದ ಫಲಿತಾಂಶವನ್ನು ಇಡೀ ಭಾರತಕ್ಕೆ ಅನ್ವಯಿಸಿದಾಗ ‘ಮಧ್ಯಕಾಲೀನ’ ಎಂಬ ಪದವು ಅಪ್ರಸಕ್ತವಾದಂತೆ ಅನಿಸುತ್ತದೆ. ಇತಿಹಾಸಕಾರ ದಾವೂದ್ ಅಲಿ ಹೇಳುವಂತೆ “ಮಧ್ಯಯುಗ ಎನ್ನುವ ಪರಿಕಲ್ಪನೆ ಬಹುತೇಕ ರಾಷ್ಟ್ರೀಯ ಇತಿಹಾಸಶಾಸ್ತ್ರಗಳಲ್ಲಿ ಯಾವುದೇ ನಿರ್ಣಾಯಕ ಅಂಶಗಳಿಲ್ಲದ ವರ್ಗವಾಗಿ ಕ್ರಮೇಣ ಮಾರ್ಪಟ್ಟಿದೆ ಮತ್ತು ಪ್ರಾದೇಶಿಕ ಪ್ರತ್ಯೇಕತೆಗಳ ಒಂದು ರೀತಿಯ ಕ್ಯಾಕೊಫೋನಿ ರೀತಿ ವರ್ತಿಸಿದೆ. ಹೊಸ ಅಶ್ವದಳದ ಆಗಮನ ಆಗುವವರೆಗೆ ಇದು ಮುಂದುವರಿಯಲಿದೆ”.
ಅಲಿಯವರ “ಅಶ್ವದಳ” ಎಂಬ ಪರಿಕಲ್ಪನೆಯನ್ನು ಒಂದು ಹೊಸ ಸೈದ್ಧಾಂತಿಕ ಹ್ಯಾಂಡಲ್‌ ಆಗಿ ಅರ್ಥೈಸಬಹುದು. ಈ ಪರಿಕಲ್ಪನೆಯು ಧಾರ್ಮಿಕವಾಗಿ ವ್ಯಾಖ್ಯಾನಿಸಲಾದ ಮುಸ್ಲಿಮ್ ಯುಗ ಎಂಬ ಅರ್ಥವನ್ನು ಹೊರತುಪಡಿಸಿದ ಬೇರೆಯೇ ಅರ್ಥವನ್ನು ‘ಮಧ್ಯಕಾಲೀನ’ ಎಂಬ ಪದಕ್ಕೆ ನೀಡಬಲ್ಲದು.

ಅಂತಹ ಸೈದ್ಧಾಂತಿಕ ಚೀಲವೊಂದು ಈಗಾಗಲೇ ಚಾಲ್ತಿಯಲ್ಲಿದೆ ಎನ್ನುವುದು ನನ್ನ ವಾದ. ಸಾಂಪ್ರದಾಯಿಕವಾಗಿ ‘ಮಧ್ಯಕಾಲೀನ’ ಎಂದು ಲೇಬಲ್ ಮಾಡಲಾದ ಭಾರತದ ಇತಿಹಾಸದ ಅವಧಿಯು ಪರ್ಶಿಯನೇಟ್ ಸಂಸ್ಕೃತಿ ಬಹುತೇಕ ಎಲ್ಲಾ ಭಾರತೀಯ ಉಪಖಂಡದಾದ್ಯಂತ ಪ್ರಸರಣಗೊಂಡು ಅದರ ಸಂಸ್ಕೃತ ಪ್ರತಿರೂಪದೊಂದಿಗಿನ ಸಂಪರ್ಕ ಸಾಧಿಸಿದ ಕಾಲಸಂಧಿಯೊಂದಿಗೆ ತಾಳೆಯಾಗುತ್ತಿದೆ. ಈ ಪರ್ಶಿಯನ್ ಮತ್ತು ಸಂಸ್ಕೃತ ಪ್ರಪಂಚದ ನಡುವಿನ ಮುಖಾಮುಖಿ ಅತ್ಯಂತ ಶ್ರೀಮಂತ ಮತ್ತು ಅಷ್ಟೇ ಸಂಕೀರ್ಣವಾಗಿದೆ.

( ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್‌ ಉತ್ತರ ಅಮೆರಿಕಾದಲ್ಲಿ ಪ್ರಕಟಿಸಿದ ರಿಚರ್ಡ್ ಎಂ. ಈಟನ್ ಅವರ from India in the Persianate Age: 1000-1765 ರ ಆಯ್ದ ಭಾಗ)

ಅನುವಾದ: ಫಾತಿಮಾ ರಲಿಯಾ ಹೆಜಮಾಡಿ

ಮುಸ್ಲಿಮ್ ತತ್ವಜ್ಞಾನಿಗಳು

ಇಬ್ನು ಸೀನಾ (ಅವಿಸೆನ್ನಾ)

ಭಾಗ – 1


ಅವಿಸೆನ್ನಾರ ಪೂರ್ವಿಕರು

ಸಾಂಪ್ರದಾಯಿಕ ಇಸ್ಲಾಮಿಕ್ ವಲಯಗಳಲ್ಲಿ ಕಾಣಿಸಿಕೊಂಡ ಮೊದಲ ದಾರ್ಶನಿಕ ಪರ್ಷಿಯಾದ ‘ಇರಾನ್‌ಶಹ್ರಿ’ ಎಂದು ಹೇಳಲಾಗುತ್ತದೆ. ಅವರು ತತ್ವಶಾಸ್ತ್ರವನ್ನು ಪೂರ್ವಕ್ಕೆ ತರಲು ಪ್ರಯತ್ನಿಸಿದರು; ಪೂರ್ವವನ್ನು ಅಲ್-ಫಾರಾಬಿಯಿಂದ ಸುಹ್ರವರ್ದಿಯವರೆಗಿನ ಆನಂತರದ ಅನೇಕ ತತ್ವಜ್ಞಾನಿಗಳು ತತ್ವಚಿಂತನೆಯ ಉಗಮಸ್ಥಾನವೆಂದು ಪರಿಗಣಿಸಿದ್ದಾರೆ. ದುರದೃಷ್ಟವಶಾತ್ ಅವರನ್ನು ‘ಮುಸ್ಲಿಂ ತತ್ವಶಾಸ್ತ್ರದ ಸ್ಥಾಪಕ’ ಎಂದು ಸಾಬೀತುಪಡಿಸಲು ಅರ್ಹವಾದ ಯಾವುದೇ ಗ್ರಂಥರಚನೆಗಳೂ ಸಿಗದಿರುವುದರಿಂದ ಇಂದು ಅವರ ಹೆಸರು ಮಾತ್ರ ಉಳಿದಿದೆ. ಬದಲಾಗಿ, ‘ಮಶ್ಶಾಯಿ ತತ್ವಶಾಸ್ತ್ರ’ ಎಂಬ ಹೆಸರಿನ ಒಂದು ಪರಿವ್ರಾಜಕ  ತತ್ವಚಿಂತನೆಯು (Peripatetic) ಪಾಶ್ಚಾತ್ಯ ದೇಶಗಳಲ್ಲಿ ಇಸ್ಲಾಮಿಕ್ ತತ್ವಶಾಸ್ತ್ರ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇಸ್ಲಾಮಿಕ್ ಜಗತ್ತಿನಲ್ಲಿ ಅದು ಅಳಿದುಳಿದ ಕೆಲವೇ ಕೆಲವು ಸೈದ್ಧಾಂತಿಕ ವಿಭಾಗಗಳಲ್ಲಿ ಒಂದಷ್ಟೇ. ಅರಬ್ಬರ ತತ್ವಜ್ಞಾನಿ ಎಂದು ಖ್ಯಾತರಾದ ‘ಅಬೂ ಯೂಸುಫ್ ಯಾಖೂಬ್ ಅಲ್ ಕಿಂದಿ’ ಯನ್ನು ಆ ಪಂಥದ ಸ್ಥಾಪಕರು ಎಂದು ಕರೆಯಲಾಗುತ್ತದೆ.

ಅಲ್-ಕಿಂದಿಯನ್ನು ಅಂತಹ ತತ್ವಜ್ಞಾನಿ ವಿಭಾಗಗಳ ಸ್ಥಾಪಕ ಎಂದು ಪರಿಗಣಿಸುವುದರಲ್ಲಿ ಹುರುಳಿದೆ. ಯಾಕೆಂದರೆ, ಅದರಲ್ಲಿ ಅಲೆಕ್ಸಾಂಡ್ರಿಯನ್ ವ್ಯಾಖ್ಯಾನಕಾರರಿಂದ ವಿಶ್ಲೇಷಿಸಲ್ಪಟ್ಟ -ವಿಶೇಷತಃ ಅಲೆಕ್ಸಾಂಡರ್ ಆಫ್ರೋಡಿಸಿಯಾಸ್ ಹಾಗೂ ಥೆಮಿಸ್ಟಿಯಾಸ್ ಅವರಿಂದ- ಅರಿಸ್ಟಾಟಲಿಯನ್ ಸಿದ್ಧಾಂತವು ನಿಯೋಪ್ಲಾಟೋನಿಸಂನೊಂದಿಗೆ ಸಂಯೋಜಿಸಲ್ಪಟ್ಟು ಮುಂದೆ ಅದು ಅರಿಸ್ಟಾಟಲ್‌ನ ತತ್ವಗಳ ಅನುವಾದಗಳ ಮೂಲಕ, ‘ಥಿಯಾಲಜಿ ಆಫ್ ಅರಿಸ್ಟಾಟಲ್‌’ ಹೆಸರಿನಲ್ಲಿ ‘ಸ್ಯೂಡೋ ಅರಿಸ್ಟಾಟಲಿಯನ್’ ತತ್ವಗಳನ್ನು ಹೊಂದಿರುವ ‘ಲಿಬರ್ ಡಿ ಕೋಸಿಸ್’ ನ ಮೂಲಕ, ಪ್ರೊಕ್ಲಸ್‌ನ ‘ಎಲಿಮೆಂಟ್ಸ್ ಆಫ್ ಥಿಯಾಲಜಿ’ ಯ ಸಾರಾಂಶದ ರೂಪದಲ್ಲಿ ಮುಸ್ಲಿಮರ ಬಳಿಗೆ ತಲುಪುತ್ತದೆ. ಈ ವಿಭಾಗಗಳಲ್ಲಿ ವಿಜ್ಞಾನವನ್ನು ತತ್ವಶಾಸ್ತ್ರದೊಂದಿಗೆ ಸಂಯೋಜಿಸಲಾಗಿದೆ ಮತ್ತು ಇನ್ನೊಂದು ಅರ್ಥದಲ್ಲಿ ತತ್ವಶಾಸ್ತ್ರವು ವಿಜ್ಞಾನಗಳ ವರ್ಗೀಕರಣದೊಂದಿಗೆ ಪ್ರಾರಂಭವಾದಂತೆಯೇ ವಾಸ್ತವವಾಗಿ ಅದರ ಒಂದು ಶಾಖೆ ಎಂದು ಪರಿಗಣಿಸಲಾಗಿದೆ. ಅಲ್-ಕಿಂದಿಯಂತೆಯೇ ಈ ಪಂಥದ ಮಹಾನ್ ವ್ಯಕ್ತಿಗಳು ತತ್ವಜ್ಞಾನಿಗಳಾಗಿರುವ ಜೊತೆಜೊತೆಗೆ ವಿಜ್ಞಾನಿಗಳೂ ಆಗಿದ್ದರು. ಆದಾಗ್ಯೂ ಕೆಲವೊಮ್ಮೆ ಅಬು ಸುಲೈಮಾನ್ ಅಲ್-ಸಿಜಿಸ್ತಾನಿಯವರಂತೆ, ತತ್ವಶಾಸ್ತ್ರವು ವಿಜ್ಞಾನದ ಮೇಲೆ ಪ್ರಾಬಲ್ಯ ಹೊಂದಿದವರು ಆ ಪೈಕಿಯಲ್ಲಿದ್ದರು. ಅಥವಾ ಅಲ್-ಬೆರೂನಿಯವರಂತೆ, ತತ್ವಶಾಸ್ತ್ರಕ್ಕಿಂತ ವಿಜ್ಞಾನದಲ್ಲಿ ಮೇಲುಗೈ ಸಾಧಿಸಿದವರೂ ಇದ್ದರು.

ಈ ತತ್ವಜ್ಞಾನಿ-ವಿಜ್ಞಾನಿಗಳ ಪಂಥದ ಸ್ಥಾಪಕರಾದ ಅಲ್-ಕಿಂದಿ, ಹಿ.185/801 ರ ಸುಮಾರಿಗೆ ಬಸ್ರಾ ಪಟ್ಟಣದ ಕಿಂದಾ ಬುಡಕಟ್ಟಿನ ಶ್ರೀಮಂತ ಅರಬ್ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಕೂಫಾದ ಗವರ್ನರ್ ಆಗಿದ್ದರು. ಮೊದಲು ಬಸರಾದಲ್ಲಿ ಹಾಗೂ ನಂತರ ಅಬ್ಬಾಸಿದ್ ಖಲೀಫರ ಅಡಿಯಲ್ಲಿ ಬೃಹತ್ ವಿಜ್ಞಾನ ಕೇಂದ್ರವಾಗಿ ಹೊರಹೊಮ್ಮಿದ ಬಾಗ್ದಾದ್‌ನಲ್ಲಿ ಅವರು ಅತ್ಯುತ್ತಮ ಶಿಕ್ಷಣವನ್ನು ಪಡೆದರು. ಶೀಘ್ರದಲ್ಲೇ ತತ್ವಶಾಸ್ತ್ರ ಮತ್ತು ವಿಜ್ಞಾನಗಳನ್ನು ಕರಗತ ಮಾಡಿಕೊಂಡ ಅವರು ನಂತರ ಅರೇಬಿಕ್ ಭಾಷೆಯಲ್ಲಿ ಅವುಗಳೆಲ್ಲ ಸುಲಭವಾಗಿ ಲಭ್ಯವಾಗುವಂತೆ ಮಾಡಿದರು ಮತ್ತು ಅವುಗಳನ್ನು ಇಸ್ಲಾಮಿಕ್ ದೃಷ್ಟಿಕೋನಕ್ಕೆ ತಕ್ಕಂತೆ ಪೋಣಿಸಲು ಪ್ರಯತ್ನಿಸಿದರು. ಕಲಿಕೆಯ ವಿವಿಧ ಕ್ಷೇತ್ರಗಳಲ್ಲಿನ ಅವರ ಸಾಮರ್ಥ್ಯವು ಅವರನ್ನು ಖಲೀಫರಾದ ಅಲ್-ಮಾಮೂನ್ ಮತ್ತು ಅಲ್-ಮುಅ್‌ತಸಿಮ್ ಅವರ ಆಸ್ಥಾನದಲ್ಲಿ ಮೆಚ್ಚುಗೆ ಪಡೆಯುವಂತೆ ಮಾಡಿತು. ಖಲೀಫಾರ ಮಗನ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಅವರು ತನ್ನ ಕಾಲದ ತತ್ವಜ್ಞಾನಿಗಳಿಗೆ ಮತ್ತು ಸಂತರಿಗೆ ಕೈಗೆಟುಕದ ನಿಧಿಯಂತಿದ್ದ ನ್ಯಾಯಾಲಯದ ಉನ್ನತ ಸ್ಥಾನವನ್ನೂ ಅಲಂಕರಿಸಿದ್ದರು. ಆದರೆ ಅಲ್-ಕಿಂದಿಯ ಈ ಉನ್ನತ ಸ್ಥಾನಮಾನ ಮತ್ತು ನ್ಯಾಯಾಲಯದ ಸಾಮೀಪ್ಯವು ಹೆಚ್ಚು ದಿನ ಉಳಿಯಲಿಲ್ಲ. ಬದುಕಿನ ಅಂತ್ಯದ ವೇಳೆಗೆ, ಖಲೀಫಾ ಅಲ್ ಮುತವಕ್ಕಿಲ್ ಆಳ್ವಿಕೆಯಲ್ಲಿ, ಅವರು ತೀವ್ರ ಅವಮಾನಕ್ಕೆ ಗುರಿಯಾಗಿ ಹಿ. 252/866 ರ ಸುಮಾರಿಗೆ ನಿಗೂಢವಾಗಿ ಸಾವನ್ನಪ್ಪಿದರು.

ಅಲ್-ಕಿಂದಿಯ ಹೆಸರು ಇಸ್ಲಾಮಿನ ಚರಿತ್ರೆಯಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದರೂ, ಮೂವತ್ತು ವರ್ಷಗಳ ಹಿಂದೆ ಇಸ್ತಾಂಬುಲ್‌ನಲ್ಲಿ ಅವರ ಹೆಚ್ಚಿನ ಸಂಖ್ಯೆಯ ಕೃತಿಗಳನ್ನು ಶೋಧಿಸುವವರೆಗೆ ಅರೇಬಿಕ್‌ನಲ್ಲಿ ಅವರ ಕೆಲವು ಗ್ರಂಥಗಳಷ್ಟೇ ಬೆಳಕಿಗೆ ಬಂದಿದ್ದವು. ಆ ನಂತರ ವಿದ್ವಾಂಸರು ಅವರ ಆಲೋಚನೆಗಳನ್ನು ಅವರ ಸ್ವಂತ ಮಾತುಗಳಿಂದ ನೇರವಾಗಿ ಅಧ್ಯಯನ ಮಾಡಲು ಅನುವು ಮಾಡಿಕೊಟ್ಟರು. ಉಳಿದಿರುವ ಅವರ ನಲವತ್ತು ಅಥವಾ ಐವತ್ತು ಗ್ರಂಥಗಳು ಅವರ ಅಗಾಧವಾದ ಸಾಹಿತ್ಯ ರಾಶಿಯ ಒಂದು ಸಣ್ಣ ಅಂಶವಷ್ಟೇ. ಕೇವಲ ಅವರ ಕೃತಿಗಳ ಶೀರ್ಷಿಕೆಗಳನ್ನು ಗಮನಿಸಿದರೆ ಅವರು ಅದೆಷ್ಟೋ ಅಮೂಲ್ಯ ಗ್ರಂಥಗಳನ್ನು ಬರೆದಿರಬೇಕೆಂದು ತೋರುತ್ತದೆ. ಇಬ್ನ್‌ ಅಲ್-ನದೀಮ್ ಅವರ ‘ಫಿಹ್ರಿಸ್ತ್’ ನಲ್ಲಿ ಅಲ್-ಕಿಂದಿಯವರ ಸುಮಾರು ಇನ್ನೂರ ನಲವತ್ತರಷ್ಟು ಕೃತಿಗಳನ್ನು ಉಲ್ಲೇಖಿಸಲಾಗಿದೆ. ಈಗ ಉಳಿದುಕೊಂಡಿರುವ ಕೃತಿಗಳಲ್ಲಿ ಮೆಟಾಫಿಸಿಕ್ಸ್ (ತತ್ವ ಮೀಮಾಂಸೆ), ತತ್ವಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ಕೃತಿಗಳು, ವಿಜ್ಞಾನಗಳ ವರ್ಗೀಕರಣ, ಅರಿಸ್ಟಾಟಲ್‌‌ನ ಕೃತಿಗಳ ಕುರಿತ ವಿಶ್ಲೇಷಣೆಗಳೆಲ್ಲ ಸೇರಿವೆ. ಬುದ್ಧಿಶಕ್ತಿಯ ಕುರಿತಾದ ಅವರ ಒಂದು ಪ್ರಸಿದ್ಧ ಗ್ರಂಥವು ಪಾಶ್ಚಿಮಾತ್ಯ ದೇಶಗಳಲ್ಲಿ ‘ಡಿ ಇಂಟೆಲೆಕ್ಟು’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಅವಿಸೆನ್ನಾರಂತಹ ನಂತರದ ತತ್ವಜ್ಞಾನಿಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿದ ಕೃತಿಯದು. ಅಳಿದುಳಿದ ಅವರ ಕೆಲವು ರಚನೆಗಳಲ್ಲಿ ಅಬ್ಬಾಸಿದ್ ಸಾಮ್ರಾಜ್ಯದ ಅವಧಿಯ ಕುರಿತು ಅವರು ಪ್ರವಚಿಸಿದ ಭವಿಷ್ಯವಾಣಿ, ನೈಸರ್ಗಿಕ ಹಾಗೂ ಗಣಿತ ವಿಜ್ಞಾನಗಳ ಮೇಲೆ ಮಾಡಿರುವ ವಿವಿಧ ಸಂಶೋಧನೆಗಳೂ ಸೇರಿವೆ.

ಅಲ್-ಕಿಂದಿಯ ಖ್ಯಾತಿಯು ಪಾಶ್ಚಿಮಾತ್ಯ ದೇಶಗಳಲ್ಲಿ ಅವರ ಕೆಲವು ತಾತ್ವಿಕ ಮತ್ತು ವೈಜ್ಞಾನಿಕ ಪ್ರಬಂಧಗಳ ಅನುವಾದದ (ಲ್ಯಾಟಿನ್) ಮೂಲಕ ಹರಡಿತು. ಪಶ್ಚಿಮದಲ್ಲಿ ಪ್ರಸಿದ್ಧರಾದ ಮುಸ್ಲಿಂ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಅವರು ವಿಶೇಷತಃ ಜ್ಯೋತಿಷ್ಯ ಶಾಸ್ತ್ರದಲ್ಲಿ ನಿರ್ವಿವಾದವಾಗಿ ಅತ್ಯಂತ ಹೆಚ್ಚು ಗೌರವಿಸಲ್ಪಟ್ಟವರು. ಜ್ಯೋತಿಷ್ಯದ ಒಂಬತ್ತು ನ್ಯಾಯಾಧೀಶರಲ್ಲಿ ಒಬ್ಬರೆಂದು ಅವರನ್ನು ಅನೇಕರು ಪರಿಗಣಿಸಿದ್ದಾರೆ. ಮಧ್ಯಕಾಲೀನ ಅವಧಿಯಲ್ಲಿ ಅವರ ಖ್ಯಾತಿಯು ಎಷ್ಟು ವ್ಯಾಪಕವಾಗಿತ್ತೆಂದರೆ ಅದು ಒಂದು ಮಹಾ ನವೋತ್ಥಾನದತ್ತ (Renaissance) ಕೊಂಡೊಯ್ದಿತು. ಕಾರ್ಡನಸ್‌ನಂತಹ ಪ್ರಸಿದ್ಧ ಬರಹಗಾರರು ಅಲ್-ಕಿಂದಿಯನ್ನು ಮಾನವ ಇತಿಹಾಸದ ಹನ್ನೆರಡು ಅತ್ಯಂತ ಪ್ರಭಾವಶಾಲಿ ಮತ್ತು ಪ್ರಮುಖ ಬೌದ್ಧಿಕ ವ್ಯಕ್ತಿಗಳಲ್ಲಿ ಒಬ್ಬರಾಗಿ ಕಂಡುಕೊಂಡಿದ್ದಾರೆ.

ಅಲ್-ಕಿಂದಿಯಲ್ಲಿ ನಂತರದ ತತ್ವಜ್ಞಾನಿ-ವಿಜ್ಞಾನಿಗಳೊಂದಿಗೆ ಸಂಬಂಧಿಸಿದ ಹೆಚ್ಚಿನ ಲಕ್ಷಣಗಳು ಆಗಲೇ ಸ್ಪಷ್ಟವಾಗಿದ್ದವು. ತರ್ಕಶಾಸ್ತ್ರ, ನೈಸರ್ಗಿಕ ವಿಜ್ಞಾನ, ವೈದ್ಯಕೀಯ ವಿಜ್ಞಾನ ಮತ್ತು ಸಂಗೀತ, ಹಾಗೆಯೇ ದೇವತಾಶಾಸ್ತ್ರ ಮತ್ತು ಆಧ್ಯಾತ್ಮಿಕ ಶಾಸ್ತ್ರಗಳಲ್ಲಿ ಸಾರ್ವತ್ರಿಕ ಆಸಕ್ತಿಯ ವ್ಯಕ್ತಿಯಾಗಿದ್ದ ಅಲ್-ಕಿಂದಿ ಧರ್ಮನಿಷ್ಠ ಮುಸಲ್ಮಾನರಾಗಿಯೂ ಜೀವಿಸಿ ತೋರಿಸಿದರು. ಅದೇ ಸಮಯದಲ್ಲಿ ಅವರು ಎಲ್ಲ ಮೂಲಗಳಲ್ಲಿ ಸತ್ಯವನ್ನು ಶೋಧಿಸುತ್ತಲೂ ಇದ್ದರು. ಮೆಟಾಫಿಸಿಕ್ಸ್ ಕುರಿತಾದ ಅವರ ಪ್ರಬಂಧಗಳಲ್ಲಿ ಅವರೇ ಹೇಳುವಂತೆ, “ಸತ್ಯವನ್ನು ಒಪ್ಪಿಕೊಳ್ಳಲು ಮತ್ತು ಯಾವುದೇ ಮೂಲದಿಂದ ಬಂದಿದ್ದರೂ ಅದನ್ನು ಸಮಾನಮನಸ್ಕತೆಯಿಂದ ಸ್ವೀಕರಿಸಲು ಸಂಕೋಚಪಡಬಾರದು. ಒಂದು ವೇಳೆ ಅದು ಹಿಂದಿನ ತಲೆಮಾರುಗಳಿಂದ ಬಂದಿರಬಹುದು, ಅಥವಾ ವಿದೇಶೀಯರಿಂದ ನಮ್ಮ ಬಳಿಗೆ ಬಂದಿರಬಹುದು. ಸತ್ಯಶೋಧಕನಿಗೆ ಸತ್ಯಕ್ಕಿಂತ ಮೌಲ್ಯಯುತವಾದುದು ಯಾವುದೂ ಇಲ್ಲ; ಅವನ ಮಟ್ಟಿಗೆ ಅದೆಂದಿಗೂ ಅಗ್ಗವಾಗದು. ಅವನನ್ನು ಅದು ಅವಮಾನಕ್ಕೀಡಾಗಿಸದು, ಬದಲಾಗಿ ಅವನಿಗೆ ಅದು ಅಪಾರ ಗೌರವವನ್ನು ತಂದುಕೊಡುತ್ತದೆ.”

ಆದರೆ ಅಲ್-ಕಿಂದಿಯಲ್ಲಿ ಕೆಲವು ವಿಶಿಷ್ಟ ಲಕ್ಷಣಗಳೂ ಇದ್ದವು. ತತ್ವಶಾಸ್ತ್ರದಲ್ಲಿ ಅವರು ಅಲ್-ಫಾರಾಬಿ ಅಳವಡಿಸಿಕೊಂಡ ಅಲೆಕ್ಸಾಂಡ್ರಿಯನ್ ವಿಚಾರಧಾರೆಗಿಂತ ವಿಭಿನ್ನವಾಗಿ ನಿಯೋಪ್ಲಾಟೋನಿಸಂನ ಅಥೇನಿಯನ್ ಧಾರೆಗೆ ಹತ್ತಿರವಾಗಿದ್ದರು. ಅಥೇನಿಯನ್ ನಿಯೋಪ್ಲಾಟೋನಿಸ್ಟಾಗಿರುವ ಪ್ರೋಕ್ಲಸ್ ಬಳಸಿದಂತಹ ಕಾಲ್ಪನಿಕ ಮತ್ತು ವಿಘಟನಾತ್ಮಕ ತರ್ಕಕ್ರಮಗಳಿಗೆ ಅವರು ಆದ್ಯತೆ ನೀಡಿದರು. ಅಲ್ ಕಿಂದಿಯ ಈ ನಿಲುವನ್ನು ಅರಿಸ್ಟಾಟಲ್‌ ಸಿದ್ಧಾಂತಗಳಿಗೆ ಹೆಚ್ಚು ನಿಕಟವಾಗಿದ್ದ ಅಲ್-ಫರಾಬಿಯವರು ಟೀಕಿಸಿದರು. ಮಾತ್ರವಲ್ಲದೆ ಈ ರೀತಿಯ ಕ್ರಮವನ್ನು ಅವರು ದುರ್ಬಲವೆಂದು ಅಭಿಪ್ರಾಯಪಡುತ್ತಾರೆ. ಅಲ್-ಕಿಂದಿಯು ಅತೀಂದ್ರಿಯ ವಿಜ್ಞಾನದಲ್ಲಿ ವಿಶೇಷ ಆಸಕ್ತಿಯನ್ನು ಪ್ರದರ್ಶಿಸಿದರು. ಅವರ ನಂತರದ ಬಹುತೇಕ ತತ್ವಜ್ಞಾನಿ-ವಿಜ್ಞಾನಿಗಳಲ್ಲಿ ಆ ರೀತಿಯ ಆಸಕ್ತಿ ಕಂಡುಬರುವುದಿಲ್ಲ.

ಅಲ್ ಕಿಂದಿಯ ಧಾರ್ಮಿಕ ನಿಲುವಿನ ಬಗ್ಗೆ ಕೇಳಿದರೆ ಅವರು ಮುಅ್‌ತಝಿಲೀ ವಿಭಾಗದತ್ತ ಒಲವನ್ನು ಹೊಂದಿದ್ದರೆನ್ನಬಹುದು. ಅದಕ್ಕೆ ಅವರು ತಾತ್ವಿಕ ತಳಹದಿಯನ್ನು ಒದಗಿಸಲು ಮತ್ತು ತತ್ವಶಾಸ್ತ್ರ ಹಾಗೂ ಧರ್ಮ ಅಥವಾ ನಂಬಿಕೆ ಹಾಗೂ ಕಾರಣಗಳ ನಡುವಿನ ಸಂಬಂಧವನ್ನು ನಿರೂಪಿಸಲು ಪ್ರಯತ್ನಿಸಿದರು. ಅದು ಅಲ್-ಫಾರಾಬಿ ಮತ್ತು ಅವಿಸೆನ್ನಾರ ಚಿಂತನೆಗಳಲ್ಲಿ ಕಂಡುಬರುವುದಿಲ್ಲ.
ಅಲ್-ಕಿಂದಿಯ ಪ್ರಕಾರ ಎರಡು ವಿಧದ ಜ್ಞಾನಗಳಿವೆ. ಒಂದು ದೈವಿಕ ಜ್ಞಾನ (ಇಲ್ಮುಲ್ ಇಲಾಹಿ), ಇದು ದೇವರಿಂದ ಪ್ರವಾದಿಗಳಿಗೆ ಸಿಗುವಂಥದ್ದು. ಎರಡನೆಯದು ಮಾನವ ಜ್ಞಾನ (ಇಲ್ಮುಲ್ ಇನ್ಸಾನಿ), ಇವುಗಳ ಅತ್ಯುನ್ನತ ರೂಪ ತತ್ವಶಾಸ್ತ್ರವಾಗಿದೆ. ಮೊದಲನೆಯದು ಎರಡನೆಯದಕ್ಕಿಂತ ಶ್ರೇಷ್ಟವಾಗಿದೆ. ಏಕೆಂದರೆ ಅದು ಮಾನವ ಜ್ಞಾನವು ತನ್ನ ಸ್ವಇಚ್ಛೆಯಿಂದ ಎಂದಿಗೂ ತಲುಪಲು ಸಾಧ್ಯವಾಗದ ಸತ್ಯಗಳನ್ನು ಒಳಗೊಂಡಿದೆ. ಆದ್ದರಿಂದ, ‘ಎಕ್ಸ್-ನಿಹಿಲೋ ಸಿದ್ಧಾಂತ’ ದಂತಹ ದೈವಿಕ ಸತ್ಯಗಳನ್ನು ಅಥವಾ ದೇಹಗಳ ಪುನರ್ಜನ್ಮದ ವಿಷಯಗಳನ್ನು ತತ್ತ್ವಶಾಸ್ತ್ರದಿಂದ ನಿಖರವಾಗಿ ವಿಶ್ಲೇಷಿಸಲಾಗದಿದ್ದರೂ ಅಥವಾ ಅವುಗಳು ಅದಕ್ಕೆ ವಿರುದ್ಧವಾಗಿದ್ದರೂ ಕೂಡ ಒಪ್ಪಿಕೊಳ್ಳಬೇಕಾಗುತ್ತದೆ. ತತ್ವಶಾಸ್ತ್ರ ಮತ್ತು ವಿಜ್ಞಾನಗಳು ಹೀಗೆ ದೈವಿಕ ಸಂದೇಶಗಳಿಗೆ ಅಧೀನವಾಗಿವೆ ಮತ್ತು ಅಲ್-ಕಿಂದಿಯು ಬುದ್ಧಿಜೀವಿಗಳ ಪೀಳಿಗೆಯ ಮತ್ತು ಸ್ವರ್ಗಗಳ ಕುರಿತ ನಿಯೋಪ್ಲಾಟೋನಿಕ್ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳುವಲ್ಲಿ ಯಾವುದೇ ಅಸಾಂಗತ್ಯವನ್ನು ಕಾಣುವುದಿಲ್ಲ. ಆದರೆ ಅದೇವೇಳೆ, ಎಕ್ಸ್-ನಿಹಿಲೋ ಸಿದ್ಧಾಂತಗಳು ಮತ್ತು ಅಸ್ತಿತ್ವದ ವಿಷಯಗಳು ದೇವನ ನಿಯಮದ ಮೇಲೆ ಅವಲಂಬಿತವಾಗಿವೆ ಎಂದು ಅವರು ಪ್ರತಿಪಾದಿಸುತ್ತಾರೆ.

ಹೆಲೆನಿಸ್ಟಿಕ್ ಮೂಲದ ವಿಷಯಗಳು ಮತ್ತು ಕಲ್ಪನೆಗಳನ್ನು ಇಸ್ಲಾಮಿಕ್ ಹಿನ್ನೆಲೆಯಲ್ಲಿ ಆಲೋಚಿಸುವ ಮತ್ತು ಹೊಸ ಭಾಷೆಯಲ್ಲಿ ಧ್ಯಾನಿಸುವ ಶೈಲಿಯು ಅಲ್-ಕಿಂದಿಯೊಂದಿಗೆ ಪ್ರಾರಂಭವಾಗುತ್ತದೆ. ಪ್ಲೇಟೋ ಮತ್ತು ಅರಿಸ್ಟಾಟಲ್, ನಿಯೋಪ್ಲಾಟೋನಿಸ್ಟ್‌ಗಳು ಮತ್ತು ಸ್ಟೊಯಿಕ್‌ಗಳು, ಹರ್ಮೆಟಿಸ್ಟ್‌ಗಳು ಮತ್ತು ಪೈಥಾಗೊರಿಯನ್ನರು, ಪ್ರಾಚೀನ ವೈದ್ಯರುಗಳು ಮತ್ತು ಗಣಿತಶಾಸ್ತ್ರಜ್ಞರು; ಅಲ್-ಕಿಂದಿಯೊಂದಿಗೆ ಅಸ್ತಿತ್ವಕ್ಕೆ ಬರುವ ಈ ಹೊಸ ಶಾಖೆಯ ರಚನೆಯಲ್ಲಿ ಕೆಲವು ಅಂಶಗಳನ್ನು ಕೊಡುಗೆ ನೀಡಿದ್ದಾರೆ. ಈ ಶಾಖೆಯು, ತಾನು ವ್ಯವಹರಿಸುವ ವಿಭಾಗಗಳ ಆಂತರಿಕವಾದ ಸ್ಥಿರತೆ ಮತ್ತು ತಾರ್ಕಿಕ ಬೇಡಿಕೆಗಳಿಗೆ ನಿಷ್ಠವಾಗಿರುವಂತೆಯೇ, ಹೊಸ ಇಸ್ಲಾಮಿಕ್ ಸಮುದಾಯದ ಕೆಲವು ನಿರ್ದಿಷ್ಟ ಘಟಕಗಳ ಬೌದ್ಧಿಕ ಮತ್ತು ಮಾನಸಿಕ ಅಗತ್ಯಗಳೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುವ ಅಂಶಗಳನ್ನೂ ಕೂಡ ಸಮೀಕರಿಸುತ್ತದೆ. ಆ ಮೂಲಕ ಅದು ಒಂದು ಬೌದ್ಧಿಕ ದೃಷ್ಟಿಕೋನವನ್ನು ಸೃಷ್ಟಿಸುತ್ತದೆ. ಅದು ಕೇವಲ ಅರಿತುಕೊಂಡಿರಬೇಕಾದ ಸಾಧ್ಯತೆಗಳಿಗೆ ಮಾತ್ರವಲ್ಲದೆ ಪೂರೈಸಿರಬೇಕಾದ ಅಗತ್ಯಗಳಿಗೂ ಅನುರೂಪವಾಗಿದೆ. ಅಂದರೆ ಜಾಗತಿಕವಾಗಿ ಇಸ್ಲಾಮಿನ ಒಟ್ಟು ದೃಷ್ಟಿಕೋನದೊಳಗೆ ರಚನೆಯಾಗಿರಬೇಕಾದ ಒಂದು ದೃಷ್ಟಿಕೋನ ಅದು.

ಅಲ್-ಕಿಂದಿಯ ನಂತರ, ವಿಜ್ಞಾನ ಮತ್ತು ಕಲೆಗಳ ಬಹುತೇಕ ಪ್ರತಿಯೊಂದು ಶಾಖೆಗಳಲ್ಲಿ, ಅಂತೆಯೇ ತತ್ವಶಾಸ್ತ್ರ ಮತ್ತು ದೇವತಾಶಾಸ್ತ್ರದಲ್ಲಿ ಸಾಮಾನ್ಯ ಆಸಕ್ತಿಯನ್ನು ಹೊಂದಿರುವ ಅನೇಕ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ. ಅವರು ನವೋದಯ ಕಾಲದ ವಿಜ್ಞಾನಿ ಮತ್ತು ತತ್ವಜ್ಞಾನಿಗಳ ಸಾಮಾನ್ಯ ಆಸಕ್ತಿಗಳನ್ನು ಕಲೆ ಮತ್ತು ವಿಜ್ಞಾನಗಳಲ್ಲಿ, ಅದರಲ್ಲೂ ವಿಶೇಷತಃ ಧಾರ್ಮಿಕವಾಗಿ ಮಧ್ಯಕಾಲೀನ ದೇವತಾಶಾಸ್ತ್ರಜ್ಞ ಮತ್ತು ತತ್ವಜ್ಞಾನಿಗಳ ಆಸಕ್ತಿಯೊಂದಿಗೆ ಜೋಡಿಸುತ್ತಾರೆ. ಅವರು ತತ್ವಶಾಸ್ತ್ರ ಮತ್ತು ವಿಜ್ಞಾನಗಳನ್ನು ಅದರ ಔನ್ನತ್ಯದತ್ತ ಬೆಳೆಸುತ್ತಿರುವಾಗಲೇ, ಇಸ್ಲಾಮಿನಲ್ಲಿ ತಮ್ಮ ಕಾರ್ಯಕಾರಣ ಅಗತ್ಯಗಳನ್ನು ಪೂರೈಸಿಕೊಳ್ಳುವವರಾಗಿದ್ದರು. ಪಾಶ್ಚಿಮಾತ್ಯ ಜಗತ್ತಿನಲ್ಲಿ ಮಧ್ಯಯುಗದ ನಂತರ ಸಂಭವಿಸಿದಂತಹ ಧರ್ಮ ಮತ್ತು ವಿಜ್ಞಾನದ ನಡುವಿನ ಆ ಘರ್ಷಣೆಯು ಅವರಲ್ಲಿ ನಡೆಯಲಿಲ್ಲ. ಅಲ್-ಕಿಂದಿಯು ಇಸ್ಲಾಮಿಕ್ ಜಗತ್ತಿನ ಈ ಹೊಸದಾದ ತತ್ವಜ್ಞಾನಿ-ವಿಜ್ಞಾನಿಗಳ ವಿಭಾಗದ ಮೊದಲ ಉದಾಹರಣೆಯಾಗಿದ್ದಾರೆ. ಅವರು ತನ್ನ ದೃಷ್ಟಿಕೋನವನ್ನು ವಿಶ್ವದಾದ್ಯಂತ ಪಸರಿಸಿದ ತನ್ನ ನಂತರದ ಚಿಂತಕರಿಗೆ ಮಾದರಿಯಾಗಿ ಅನೇಕ ರೀತಿಯಲ್ಲಿ ಕಾರ್ಯನಿರ್ವಹಿಸಿದರು.

‘ಅಲ್ ಮಸಾಲಿಕ್ ವಲ್-ಮಮಾಲಿಕ್’

ಅಲ್-ಕಿಂದಿಯ ತಕ್ಷಣದ ವಿದ್ಯಾರ್ಥಿಗಳಲ್ಲಿ ಅತ್ಯಂತ ಪ್ರಸಿದ್ಧರಾದವರು ಅಹ್ಮದ್ ಇಬ್ನ್ ತಯ್ಯಿಬ್ ಅಲ್-ಸರಖ್ಸಿ, ಖಲೀಫಾ ಅಲ್ ಮೂತದಿದ್‌ನ ಶಿಯಾ ಬೋಧಕರಾಗಿದ್ದವರು. ಮುಂದೆ ಅವರು ಖಲೀಫಾರ ರಹಸ್ಯಗಳನ್ನು ಬಹಿರಂಗಪಡಿಸಿದರೆಂಬ ಕಾರಣದಿಂದ ಅವಕೃಪೆಗೊಳಗಾಗಿ ನಂತರದ ಅನೇಕ ಅಧಿಕಾರಿಗಳ ಹಾಗೆ ಪ್ರವಾದಿತ್ವವನ್ನು ನಿಷೇಧಿಸಿ ಕುಖ್ಯಾತರಾದವರು.
ಅಲ್-ಕಿಂದಿಯ ವಿದ್ಯಾರ್ಥಿಗಳ ಪೈಕಿ ಅಬೂ ಮಾಶರ್ ಅಲ್ ಬಲ್ಖಿ – ಮಧ್ಯಕಾಲೀನ ಯೂರೋಪಿನಲ್ಲಿ ಅಲ್ಬಮಾಸರ್ ಎಂದು ಕರೆಯಲ್ಪಡುವ ಪ್ರಸಿದ್ಧ ಜ್ಯೋತಿಷ್ಶಾಸ್ತ್ರಜ್ಞ – ಅವರನ್ನು ಮತ್ತು ‘ಸುವರುಲ್ ಅಕಾಲೀಮ್’ (ದಿ ಫಿಗರ್ ಆಫ್ ದಿ ಕ್ಲೈಮ್ಸ್ – ಹವಾಗುಣಗಳ ನಕಾಶೆ), ‘ಅಲ್ ಮಸಾಲಿಕ್ ವಲ್-ಮಮಾಲಿಕ್’ (ಮಾರ್ಗಗಳು ಮತ್ತು ಸಾಮ್ರಾಜ್ಯಗಳು) ಎಂಬ ಗ್ರಂಥಗಳ ಕರ್ತೃ ಅಬೂ ಝೈದ್ ಅಲ್-ಬಲ್ಖಿ ಅವರನ್ನೂ ಉಲ್ಲೇಖಿಸಬಹುದು. ಅವುಗಳು ಭೂಗೋಳಶಾಸ್ತ್ರದ ಅತ್ಯಂತ ಪ್ರಮುಖ ಆರಂಭಿಕ ಕೃತಿಗಳು. ಅವರ ನಂತರ ಬಂದ ವಿಜ್ಞಾನಿಗಳಾದ ಅಲ್ ಇಸ್ತಖ್ರಿ ಮತ್ತು ಇಬ್ನ್ ಹವ್ಕಲ್ ರ ಪ್ರಸಿದ್ಧ ಗ್ರಂಥಗಳಿಗೆ ಪ್ರಸ್ತುತ ಕೃತಿಗಳು ಮೂಲವಾಗಿವೆ. ಅಲ್-ಕಿಂದಿಯನ್ನು ತತ್ವಜ್ಞಾನಿ-ವಿಜ್ಞಾನಿಯಾಗಿ ತನ್ನ ನಿಜವಾದ ಉತ್ತರಾಧಿಕಾರಿಯಾಗಿರುವ ಅಬೂ ನಸ್ರ್ ಅಲ್-ಫಾರಾಬಿಯಿಂದ ಬೇರ್ಪಡಿಸುವ ತಾತ್ಕಾಲಿಕ ಕೊಲ್ಲಿಯನ್ನು ಸಂಪರ್ಕಿಸುವ ಮೂಲಕ ಇವರೆಲ್ಲರೂ – ನಿರ್ದಿಷ್ಟವಾಗಿ ವಿಜ್ಞಾನದ ವಿಭಾಗಗಳಲ್ಲಿ – ಅಲ್ ಕಿಂದಿಯ ಪ್ರಭಾವವನ್ನು ಪ್ರಚಾರ ಮಾಡಿದರು.

ಲ್ಯಾಟಿನ್‌ ನಲ್ಲಿ ‘ಅಲ್ಫರಾಬಿಯಸ್’, ನಂತರದ ಮುಸ್ಲಿಂ ವಿದ್ವಾಂಸರ ನಡುವೆ ‘ಎರಡನೇ ಶಿಕ್ಷಕ’ (ಅಲ್-ಮುಅಲ್ಲಿಮುಸ್ಸಾನಿ) ಎಂದು ಪ್ರಸಿದ್ಧರಾದ ಅಬೂ ನಸ್ರ್ ಅಲ್ ಫಾರಾಬಿ, ಹಿಜರಿ 257/870 ರ ಸುಮಾರಿಗೆ ಖುರಾಸಾನ್ ಪ್ರಾಂತ್ಯದ ಫಾರಾಬ್‌ನ ವಾಸಿಜ್‌ನಲ್ಲಿ ಜನಿಸಿದರು. ಯೌವನದಲ್ಲಿ ಮತ್ತಾ ಇಬ್ನ್ ಯೂನಸ್‌ ರ ಬಳಿ ತರ್ಕಶಾಸ್ತ್ರ ಮತ್ತು ತತ್ವಶಾಸ್ತ್ರವನ್ನು ಅಧ್ಯಯನ ಮಾಡಲು ಬಾಗ್ದಾದ್‌ಗೆ ಪ್ರಯಾಣಿಸಿದ ಅಲ್ ಫಾರಾಬಿ, ಮುಂದೆ ಹರ್ರಾನ್‌ ನಲ್ಲಿ ಯುಹನ್ನಾ ಇಬ್ನ್ ಹೈಲಾನ್‌ ರ ವಿದ್ಯಾರ್ಥಿಯಾದರು. ಪ್ರಾರಂಭದಿಂದಲೂ ತೀಕ್ಷ್ಣವಾದ ಬುದ್ಧಿವಂತಿಕೆಯನ್ನು ಹೊಂದಿದ್ದ ಅಲ್ ಫಾರಾಬಿಯು ತಾನು ಕಲಿಯುವ ಪ್ರತಿಯೊಂದು ವಿಷಯದಲ್ಲಿ ವಿಶೇಷ ಸಾಮರ್ಥ್ಯವನ್ನು ಕರಗತ ಮಾಡಿಕೊಳ್ಳುವ ಅನುಗ್ರಹೀತ ವ್ಯಕ್ತಿಯಾಗಿದ್ದರು. ದಾರ್ಶನಿಕ ಮತ್ತು ವಿಜ್ಞಾನಿಯಾಗಿ ಪ್ರಸಿದ್ಧಿಯನ್ನು ಪಡೆದು ಬಾಗ್ದಾದ್‌ಗೆ ಹಿಂದಿರುಗಿದ ನಂತರ ಅಲ್ಲಿ ಪ್ರಸಿದ್ಧ ಕ್ರಿಶ್ಚಿಯನ್ ತತ್ವಜ್ಞಾನಿ ಯಹ್ಯಾ ಇಬ್ನ್ ಅದಿಯ್ಯ್ ಸೇರಿದಂತೆ ಒಂದಷ್ಟು ಶಿಷ್ಯರ ಗುಂಪು ಅವರ ಸುತ್ತ ಒಟ್ಟುಗೂಡಿತು. ಅಲ್-ಫಾರಾಬಿ ಬಾಗ್ದಾದ್‌ನಲ್ಲಿ ಹೆಚ್ಚು ಕಾಲ ನಿಲ್ಲದೆ ಹಿ. 330/941 ರಲ್ಲಿ ಅಲೆಪ್ಪೊದಲ್ಲಿನ ಸೈಫ್ ಅಲ್-ದವ್ಲಾ ಅಲ್-ಹಮ್ದಾನಿ ಅವರ ಆಸ್ಥಾನಕ್ಕೆ ಭೇಟಿನೀಡಿ ಅಲ್ಲೇ ನೆಲೆಸಿ ಸುಮಾರು 339/950 ರಲ್ಲಿ ಅಲ್ಲೇ ವಿಧಿವಶರಾದರು.

ಅಲ್-ಫಾರಾಬಿಯನ್ನು ಅರಿಸ್ಟಾಟಲ್‌ನ ಶ್ರೇಷ್ಠ ವ್ಯಾಖ್ಯಾನಕಾರ ಮತ್ತು ಅನುಯಾಯಿ ಎಂದು ಪರಿಗಣಿಸಲಾಗಿದೆ. ಅರಿಸ್ಟಾಟಲ್ ನ ಕೆಟಗರೀಸ್ (ವರ್ಗಗಳು), ಹರ್ಮೆನ್ಯೂಟಿಕ್ಸ್, ಪ್ರಿಯರ್ ಎಂಡ್ ಪೋಸ್ಟೀರಿಯರ್ ಅನಾಲಿಟಿಕ್ಸ್ (ಪೂರ್ವಾಪರ ವಿಶ್ಲೇಷಣೆಗಳು), ಸೋಫಿಸ್ಟಿಕ್ಸ್, ರಿಟೋರಿಕ್ ಎಂಡ್ ಪೊಯೆಟಿಕ್ಸ್ (ವಾಕ್ಚಾತುರ್ಯ ಮತ್ತು ಕಾವ್ಯಶಾಸ್ತ್ರ), ಹಾಗೆಯೇ ತರ್ಕಶಾಸ್ತ್ರದಲ್ಲಿ ಪೋರ್ಫಿರಿಯ ಪ್ರವೇಶಿಕೆ ಮತ್ತು ಅರಿಸ್ಟಾಟಲ್‌ನ ನಿಕೋಮಿಷಿಯನ್ ನೀತಿಶಾಸ್ತ್ರ, ಭೌತಶಾಸ್ತ್ರ, ಡಿ ಕೆಲೊ ಮತ್ತು ಹವಾಮಾನಶಾಸ್ತ್ರದ ಮೇಲೆ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಮೆಟಾಫಿಸಿಕ್ಸ್‌ನ ಮೇಲೂ ವ್ಯಾಖ್ಯಾನವನ್ನು ರಚಿಸಿದರು. ಇದು ಸ್ವಯಂ ಅಲ್-ಫಾರಾಬಿಯವರ ಮೆಟಾಫಿಸಿಕಲ್ ಮತ್ತು ಆಂಟೋಲಾಜಿಕಲ್ ಬಗೆಗಿನ ಪ್ರಶ್ನೆಗಳ ನಿರೂಪಣೆಯ ಪ್ರಾಮುಖ್ಯತೆಯ ಜೊತೆಗೆ, ಅರಿಸ್ಟಾಟಲಿಯನ್ ಮೆಟಾಫಿಸಿಕ್ಸ್‌ನ ಕುರಿತಾದ ಅವಿಸೆನ್ನಾ ಅವರ ತಿಳುವಳಿಕೆಯನ್ನೂ ನೇರವಾಗಿ ಹೊಂದಿದೆ.
ತರ್ಕಶಾಸ್ತ್ರದಲ್ಲಿ, ವಿಶೇಷವಾಗಿ, ಅಲ್ ಫಾರಾಬಿಯ ಕೆಲಸಗಳು ನಿರ್ದಿಷ್ಟವಾಗಿ ಗಮನಾರ್ಹವಾದವುಗಳು. ಯಾಕೆಂದರೆ, ಅದರಲ್ಲಿ ಅರಿಸ್ಟಾಟಲ್‌ನ ತರ್ಕವನ್ನು ಅತ್ಯಂತ ಸೂಕ್ತವಾದ ಮತ್ತು ನಿಖರವಾದ ಅರೇಬಿಕ್ ಪರಿಭಾಷೆಯಲ್ಲಿ ವ್ಯಕ್ತಪಡಿಸಲಾಗಿದೆ. ಇದು ಮುಂದೆ ಇಸ್ಲಾಮಿಕ್ ಅಧ್ಯಯನದ ಎಲ್ಲಾ ಶಾಖೆಗಳ ಪರಂಪರೆಯಾಗಿ ಮಾರ್ಪಟ್ಟಿತು.

(ಮುಂದುವರೆಯುತ್ತದೆ)

ಮೂಲ: ಹುಸೈನ್‌ ನಸ್ರ್‌
ಅನುವಾದ: ಡಾ. ಸಿ ಯಂ ಹನೀಫ್ ಬೆಳ್ಳಾರೆ

ಮುಸ್ಲಿಮರ ಆರೋಗ್ಯ ಮತ್ತು ಇಸ್ಲಾಮೋಫೋಬಿಯಾ

ರಂಝಾನ್ ಎಂದರೆ ಮುಸ್ಲಿಮ್ ಪ್ರಪಂಚಕ್ಕೆ ಶಾಂತಿ, ಆಧ್ಯಾತ್ಮಿಕ ಸಂಭ್ರಮ ಮತ್ತು ಭರವಸೆಯ ತಿಂಗಳು. ಆದರೆ ಭಾರತೀಯ ಮುಸ್ಲಿಮರ ಈ ಬಾರಿಯ ಇಡೀ ರಂಝಾನ್ ಒಂದು ವಿಷಣ್ಣತೆಯಲ್ಲೇ ಕಳೆದುಹೋಯಿತು. ವರ್ಷದ ಆರಂಭದಿಂದಲೇ ದೇಶದಲ್ಲಿ ಇಸ್ಲಾಮೋಫೋಬಿಕ್ ಘಟನೆಗಳಲ್ಲಿ ಭಯಾನಕ ಹೆಚ್ಚಳ ಕಂಡಿದೆ. ‘ಡೀಲ್ ಆಫ್ ದಿ ಡೇ’ ಎಂದು ಪ್ರಖ್ಯಾತ ಮುಸ್ಲಿಮ್ ಮಹಿಳೆಯರನ್ನು ಹರಾಜು ಹಾಕಿದ ‘ಬುಲ್ಲಿ ಬಾಯ್’ ಅಪ್ಲಿಕೇಶನ್ ನಿಂದ ಹಿಡಿದು, ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಹಿಂದೂ ಸ್ವಾಮಿಗಳು ನೀಡಿದ ಬಹಿರಂಗ ಕರೆ, ಹಲವು ರಾಜ್ಯಗಳಲ್ಲಿ ರಾಮನವಮಿ ಸಂದರ್ಭದಲ್ಲಿ ಮುಸ್ಲಿಮ್ ಮನೆಗಳು ಮತ್ತು ಮಸೀದಿಗಳ ಮೇಲೆ ನಡೆದ ಅಪ್ರಚೋದಕ ಹಿಂಸಾತ್ಮಕ ದಾಳಿಗಳೆಲ್ಲವೂ ಇಡೀ ದೇಶದ ಮುಸ್ಲಿಮರಲ್ಲಿ‌ ಒಂದು ವಿವರಿಸಲಾಗದ ಕಳವಳಕ್ಕೆ ಕಾರಣವಾಗಿತ್ತು.

ಇಸ್ಲಾಮೋಫೋಬಿಯಾವು ಈ ದೇಶದಲ್ಲಿ ಈಗ  ಮುಸ್ಲಿಮರ ಜೀವನದ ದೈನಂದಿನ ಭಾಗವಾಗಿ ಬಿಟ್ಟಿದೆ. ಏಕೆಂದರೆ ನಾವು ಇಲ್ಲಿ ವಿನಾಕಾರಣ ಹತ್ಯೆಗೀಡಾಗುತ್ತೇವೆ, ಟೀಕೆಗೊಳಗಾಗುತ್ತೇವೆ, ಅನ್ಯಾಯವಾಗಿ ಸೆರೆವಾಸಕ್ಕೆ ಒಳಗಾಗುತ್ತೇವೆ ಮತ್ತು ನಮ್ಮೊಂದಿಗೆ ಕ್ರೂರವಾಗಿ ವರ್ತಿಸಲಾಗುತ್ತದೆ. ನಾವು  ಕೆಲಸದ ಸ್ಥಳಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಬೀದಿಗಳಲ್ಲಿ ಮತ್ತು ನಮ್ಮ ಆರಾಧನಾ ಸ್ಥಳಗಳಲ್ಲಿ ಹಿಂಸೆಯ ಬೆದರಿಕೆಯನ್ನು ಎದುರಿಸುತ್ತೇವೆ. ನಾವು ಪ್ರತ್ಯಕ್ಷವಾಗಿ ಹಿಂಸೆಗೆ ಒಳಗಾಗುತ್ತಿದ್ದೇವೆ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಅದಕ್ಕೆ ಸಾಕ್ಷಿಯಾಗುತ್ತಿದ್ದೇವೆ.

ಮತ್ತೊಂದೆಡೆ ಧಾರ್ಮಿಕ ತಾರತಮ್ಯವು ಲಕ್ಷಾಂತರ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದು ಇಡೀ ಸಮುದಾಯವನ್ನು ಆರೋಗ್ಯ ಬಿಕ್ಕಟ್ಟಿಗೆ ತಳ್ಳುತ್ತದೆ.  ಅನಿಯಂತ್ರಿತವಾಗಿ ಹಬ್ಬುತ್ತಿರುವ ಇಸ್ಲಾಮೋಫೋಬಿಯಾವು ಪ್ರಪಂಚದಾದ್ಯಂತದ ಮುಸ್ಲಿಮ್ ಸಮುದಾಯಗಳನ್ನು ಆಳವಾದ ಮಾನಸಿಕ ಆಘಾತಕ್ಕೆ ಒಳಗಾಗಿಸಿದೆ. ಈ ರೀತಿಯ ಆಘಾತಕ್ಕೆ ಒಂದು ದೊಡ್ಡ ಐತಿಹ್ಯವೇ ಇದೆ, ಮತ್ತಿದು ಒಂದು ವ್ಯವಸ್ಥಿತ ತಂತ್ರದ ಫಲ. ಅಷ್ಟು ಮಾತ್ರವಲ್ಲದೆ ಆಘಾತವು ಒಂದು ತಲೆಮಾರಿಗೆ ಮುಗಿದು ಹೋಗದೆ ತಲೆಮಾರಿನಿಂದ ತಲೆಮಾರಿಗೆ ಒಂದು ವಜ್ಜೆಯಂತೆ ಸಾಗುತ್ತದೆ ಎಂಬುದು ದೊಡ್ಡ ದುರಂತ. ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಇಂತಹ ವ್ಯವಸ್ಥಿತ ಆಘಾತ ಉಂಟುಮಾಡುವ ಪರಿಣಾಮಗಳೇನು ಮತ್ತು ಅದರಿಂದ ನಾವು ಹೇಗೆ ಹೊರಬರಬಹುದು? ಎಂಬುವುದನ್ನು ನಾವೀಗ ಅವಶ್ಯಕವಾಗಿ ಚಿಂತಿಸಲೇಬೇಕಾಗಿದೆ.

ವ್ಯವಸ್ಥಿತ ದಬ್ಬಾಳಿಕೆ, ಮುಖ್ಯವಾಹಿನಿಯಿಂದ ದೂರವಿಡುವುದು ಮತ್ತು ತಾರತಮ್ಯದಂತಹ ಇಸ್ಲಾಮೋಫೋಬಿಕ್ ನಡವಳಿಕೆಗಳು ಒಂದು ಪ್ರದೇಶದ ಅಲ್ಪಸಂಖ್ಯಾತರಲ್ಲಿ ಖಿನ್ನತೆ, ಆತ್ಮಹತ್ಯೆ, ಆತಂಕ, ಕಿರಿಕಿರಿ, ಕಳಪೆ ಏಕಾಗ್ರತೆ, ಹೈಪರ್ವಿಜಿಲೆನ್ಸ್, ಕಡಿಮೆ ಸ್ವಾಭಿಮಾನ ಮತ್ತು ನಕಾರಾತ್ಮಕ ಸ್ವಾಭಿಮಾನದಂತಹ ಋಣಾತ್ಮಕ ಆರೋಗ್ಯ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ವ್ಯವಸ್ಥಿತ ಆಘಾತವು PTSD ಅಥವಾ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್‌ನೊಂದಿಗೆ ಸಾಮತ್ಯೆಯನ್ನು ಹೊಂದಿದೆ. ಆದರೆ ಪ್ರಸ್ತುತ ನಾವು ಅನುಭವಿಸುತ್ತಿರುವ ತಾರತಮ್ಯವು‌ ನಿರಂತರ ಮತ್ತು ವ್ಯಾಪಕವಾಗಿರುವುದರಿಂದ ಮುಸ್ಲಿಮರ ಮಾನಸಿಕ ಆರೋಗ್ಯದ ಮೇಲೆ ಅದು ಬೀರುತ್ತಿರುವ ಪರಿಣಾಮವನ್ನು ವಿವರಿಸಲು ಈ ಪದವು ಸಾಕಾಗುವುದಿಲ್ಲ.

ವ್ಯವಸ್ಥೆಯೇ ಹುಟ್ಟು ಹಾಕಿರುವ ಈ ಆಘಾತವು ನಮ್ಮ ನರಮಂಡಲದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಅಪಾಯಕಾರಿ ಸಂದರ್ಭಗಳಲ್ಲಿ ಹೋರಾಡಲು ಅಥವಾ ಪಲಾಯನ ಮಾಡಲು ನಮ್ಮ ದೇಹವು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್‌ನಂತಹ ಕೆಲವು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ (ಸಾಮಾನ್ಯವಾಗಿ ಒತ್ತಡದ ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ). ಈ ರಾಸಾಯನಿಕಗಳು ನಮ್ಮ ದೇಹದಲ್ಲಿ ಸಣ್ಣ ಸಣ್ಣ ಸ್ಫೋಟಗಳಲ್ಲಿ ಬಿಡುಗಡೆಯಾಗಬೇಕು. ಇದರಿಂದ ನಾವು ಅಪಾಯದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.  ವ್ಯವಸ್ಥಿತ ಆಘಾತದ ಸಂದರ್ಭದಲ್ಲಿ, ದೀರ್ಘಕಾಲದವರೆಗೆ ಅಪಾಯದಿಂದ ಯಾವುದೇ ವಿರಾಮ ಇಲ್ಲದೇ ಇದ್ದಾಗ ಏನಾಗುತ್ತದೆ?  ದೀರ್ಘಾವಧಿಯ ಒತ್ತಡದ ಪ್ರತಿಕ್ರಿಯೆಯು ಅಧಿಕ ರಕ್ತದೊತ್ತಡ, ಹೃದ್ರೋಗ, ನಿದ್ರಾಹೀನತೆ, ನಿದ್ರಾ ಭಂಗಗಳು, ಖಿನ್ನತೆ, ಆತಂಕ ಮತ್ತು ಋಣಾತ್ಮಕ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕಾರಣವಾಗಬಹುದು.

ಜೆನ್ನಿಫರ್ ಫ್ರೈಡ್

ಆಘಾತಕಾರಿ ಅನುಭವವನ್ನು ಇನ್ನಷ್ಟು ಹದಗೆಡಿಸುವ ಸಾಂಸ್ಥಿಕ ಕ್ರಿಯೆ ಅಥವಾ ನಿಷ್ಕ್ರಿಯತೆಯನ್ನು ವಿವರಿಸಲು 2008 ರಲ್ಲಿ, ಒರೆಗಾನ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಜೆನ್ನಿಫರ್ ಫ್ರೈಡ್ ಅವರು “ಸಾಂಸ್ಥಿಕ ದ್ರೋಹ” ಎಂಬ ಪದವನ್ನು ಸೃಷ್ಟಿಸಿದರು. ನಮ್ಮ ಸುರಕ್ಷತೆ ಮತ್ತು ಯೋಗಕ್ಷೇಮವನ್ನು (ಶಾಲೆಗಳು, ಕಾಲೇಜುಗಳು, ನ್ಯಾಯಾಲಯಗಳು, ಸರ್ಕಾರಗಳು) ರಕ್ಷಿಸಲು ರಚಿಸಲಾದ ವಿಶ್ವಾಸಾರ್ಹ ಸಂಸ್ಥೆಗಳೇ ಹಿಂಸಾಚಾರ ಮತ್ತು ತಾರತಮ್ಯವನ್ನು ಎಸಗುತ್ತಿರುವುದರಿಂದ ಈ ದೇಶದ ಮುಸ್ಲಿಮ್ ಸಮುದಾಯದ ತಲ್ಲಣಗಳನ್ನು ಸೂಕ್ತವಾಗಿ ವಿವರಿಸಲು ಸಾಧ್ಯವಿರುವುದು ಬಹುಶಃ ಇದೊಂದೇ ಪದಕ್ಕೆ. ಯಾಕೆಂದರೆ ಇಲ್ಲಿನ‌ ಮುಸ್ಲಿಂ ಸಮುದಾಯಕ್ಕೆ ಇಂತಹ ಆಘಾತಕಾರಿ ಅನುಭವಗಳು ಪದೇಪದೇ ಸಂಭವಿಸುತ್ತಲೇ ಇರುವುದಷ್ಟೇ ಅಲ್ಲದೆ ಇದಕ್ಕೆ ಯಾವುದೇ ಪರಿಹಾರಗಳು ಕಂಡುಬರುತ್ತಿಲ್ಲ.

ವ್ಯವಸ್ಥಿತ ಅಥವಾ ಸಾಂಸ್ಥಿಕ ಆಘಾತ ಎಂಬುವುದು ಚಾರಿತ್ರಿಕ‌ವಾದದ್ದು ಮತ್ತು ಪೀಳಿಗೆಯಿಂದ ಪೀಳಿಗೆಗೆ ಹರಡುವಂಥದ್ದು. ಇತ್ತೀಚಿನ ಅಧ್ಯಯನಗಳು ಇಂತಹ ಆಘಾತದ ಪರಿಣಾಮಗಳು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಹರಡಬಹುದು ಎಂದೇ ಹೇಳಿದೆ.  ಆಘಾತದ ಪರಿಣಾಮಗಳಿಗೆ ನೇರವಾಗಿ ಒಡ್ಡಿಕೊಂಡವರು ಮಾತ್ರವಲ್ಲದೆ ಭವಿಷ್ಯದ ಪೀಳಿಗೆಯವರೂ ಇದರ ದೂರಗಾಮಿ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂಬುವುದನ್ನು ಇದು ಸೂಚಿಸುತ್ತದೆ. ಉದಾಹರಣೆಗೆ, ಮುಸ್ಲಿಮರ ಬಗ್ಗೆ ಪ್ರಚಾರ ಮಾಡಲಾದ ನಕಾರಾತ್ಮಕ ಸ್ಟೀರಿಯೊಟೈಪ್‌ಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಆಂತರಿಕವಾಗಿಯೇ ರವಾನಿಸಲ್ಪಡಬಹುದು. ಇದು ಅಂತಿಮವಾಗಿ ಸ್ವಾಭಿಮಾನದ ಕೊರತೆಯಂತೆ ಅಥವಾ ದುರ್ಬಲ‌ ಮಾನಸಿಕ ಸ್ಥಿತಿಯಂತೆ ಪ್ರಕಟಗೊಳ್ಳಬಹುದು. ಹಲವು ವೈಜ್ಞಾನಿಕ ಸಂಶೋಧನೆಗಳು ಮುಂದಿನ ಪೀಳಿಗೆಯ ಮುಸ್ಲಿಮ್ ಸಮುದಾಯದ ಸಂಸ್ಕೃತಿ ಮತ್ತು ಜೀವಶಾಸ್ತ್ರವನ್ನು ಸಾಮೂಹಿಕ ನೋವು ಹೇಗೆ ರೂಪಿಸುತ್ತದೆ ಎಂಬುದರ ಕುರಿತು ಪ್ರಬಲವಾದ ವಾದಗಳನ್ನು ಪ್ರಸ್ತುತಪಡಿಸಿದೆ.

ಜೊತೆಗೆ ಈ ಸಂಶೋಧನೆಗಳು ಆಘಾತವನ್ನು ತಲೆಮಾರುಗಳವರೆಗೆ ರವಾನಿಸಬಹುದಾದರೆ, ಆಶಾವಾದಗಳಂತಹ ಸಕಾರಾತ್ಮಕ ಚಿಂತನೆಗಳೂ ಸಹ ‘ಇಂಟರ್ ಜನರೇಶನಲ್’ ಆಗಿ ಪ್ರವಹಿಸಬಹುದು ಎಂಬ ಭರವಸೆಯನ್ನೂ ನೀಡುತ್ತವೆ.

ಸಾಮೂಹಿಕ ಚಿಕಿತ್ಸೆ ಮತ್ತು ಸಾಧ್ಯತೆಗಳು
ಮುಸ್ಲಿಮ್ ಬದುಕನ್ನು ಅಮಾನವೀಯಗೊಳಿಸಿರುವ  ವ್ಯವಸ್ಥೆಯಲ್ಲಿ, ಚಿಕಿತ್ಸೆಯು ಸುಲಭವಲ್ಲ ಮತ್ತು ತನ್ನದೇ ಆದ ಸವಾಲುಗಳೊಂದಿಗೆ ಬರುತ್ತದೆ. ಆದರೆ ನಾವು, ಆಘಾತದಿಂದ ಗುಣವಾಗಲು ಮಾತ್ರವಲ್ಲದೆ ಆಳವಾದ ಭಾವನಾತ್ಮಕ ಮತ್ತು ಸಾಮೂಹಿಕ ರೂಪಾಂತರಕ್ಕೆ ಅವಕಾಶಗಳನ್ನು ಹುಡುಕಲೇಬೇಕಾಗಿದೆ. ಇದನ್ನು ಮಾಡಲು ಯಾವುದೇ ನಿಶ್ಚಿತ  ಮಾರ್ಗವಿಲ್ಲ, ಆದರೆ ಇಲ್ಲಿ ಕೆಲವು ಸಲಹೆಗಳನ್ನು ಚರ್ಚಿಸಲಾಗಿದೆ:

  1. ಮಾನಸಿಕ ಆಘಾತದ ಪ್ರಭಾವವನ್ನು ಕುಗ್ಗಿಸದಿರುವುದು: ತನಗೆ ಅಥವಾ ತನ್ನ ಸಮಾಜಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂಬಂತೆ ವರ್ತಿಸಿ ಅದರ ಪ್ರಭಾವವನ್ನು ತಗ್ಗಿಸಲು ಯತ್ನಿಸುವುದನ್ನು ನಿಲ್ಲಿಸಿ ನಮ್ಮ ಮೇಲಾಗುತ್ತಿರುವ ವ್ಯವಸ್ಥಿತ ಹಿಂಸಾಚಾರದಿಂದ ನಾವು ಕೆಲವು ರೀತಿಯಲ್ಲಿ ಪ್ರಭಾವಿತರಾಗಿದ್ದೇವೆ ಎಂಬುವುದನ್ನು ಮೊದಲು ಒಪ್ಪಿಕೊಳ್ಳಬೇಕು. ನಾವು ಬಲಶಾಲಿಗಳು ಮತ್ತು ಸ್ಥಿರವಾಗಿದ್ದೇವೆ ಎನ್ನುವುದು ನಿಜವೇ ಆಗಿದ್ದರೂ ಸಹ ನಾವು ಕೂಡ ಮನುಷ್ಯರೇ, ಮತ್ತು ಮನುಷ್ಯರಲ್ಲಿರುವ ಎಲ್ಲಾ ಸಹಜ ದುರ್ಬಲತೆ ನಮ್ಮಲ್ಲೂ ಇದೆ. ಅದನ್ನು ಹಾಗೆಯೇ ಒಪ್ಪಿಕೊಳ್ಳುವುದು ನಮಗೆ ಚಿಕಿತ್ಸಾತ್ಮಕವಾಗಿ ಮುಂದುವರಿಯಲು ಸಹಾಯ ಮಾಡುತ್ತದೆ.
  2. ಆಘಾತಕಾರಿ ಪ್ರತಿಕ್ರಿಯೆಗಳನ್ನು ಗುರುತಿಸುವುದು: ಮಿನಿಯಾಪೋಲಿಸ್ ಮೂಲದ ಚಿಕಿತ್ಸಕ ಮತ್ತು ಮಾನಸಿಕ ಆಘಾತ ತಜ್ಞ ರೆಸ್ಮಾ ಮನಕೆನ್, ವ್ಯವಸ್ಥಿತ ಮಾನಸಿಕ ಆಘಾತದ ಬಗ್ಗೆ ವಿವರಿಸುತ್ತಾ “ವ್ಯಕ್ತಿಯಲ್ಲಿ ಡಿಕಾಂಟೆಕ್ಚುವಲೈಸ್ ಮಾಡಿದ ಆಘಾತವು ವ್ಯಕ್ತಿತ್ವದಂತೆ ಕಾಣುತ್ತದೆ. ಒಂದು ಕುಟುಂಬದಲ್ಲಿ ಉಂಟಾದ ಆಘಾತವು ಕುಟುಂಬದ ಲಕ್ಷಣಗಳಂತೆ ಕಾಣುತ್ತದೆ. ಜನರಲ್ಲಿನ ಆಘಾತವು ಸಂಸ್ಕೃತಿಯಂತೆ ಕಾಣುತ್ತದೆ” ಎಂದು ಹೇಳುತ್ತಾರೆ. ಉದಾಹರಣೆಗೆ, ನಮ್ಮನ್ನು ಅನುಪಯುಕ್ತ ಎಂದು ಪರಿಗಣಿಸುವವರಿಗೆ ನಮ್ಮ ಮಹತ್ವವನ್ನು ಸಾಬೀತುಪಡಿಸಲು ಕೆಲವೊಮ್ಮೆ ನಾವು ವಿಪರೀತವಾಗಿ ಕೆಲಸದಲ್ಲಿ ಮುಳುಗುತ್ತೇವೆ. ಹಾಗೆಯೇ ಒಂದು ಸಮುದಾಯವಾಗಿ, ನಾವು ಹೆಚ್ಚು ಭಯ, ತಲ್ಲಣ, ಅಥವಾ ವೇದನೆಯನ್ನು ಅನುಭವಿಸಬಹುದು. ಆದರೆ ಇದು ಕಾಲ ಮತ್ತು ತಲೆಮಾರುಗಳ ಮೇಲೆ ಸಂದರ್ಭೋಚಿತವಾಗಿ ಮಾರ್ಪಾಡಾಗಿರುವುದರಿಂದ ಅದನ್ನು ಇಂಟರ್ಜೆನೆರೇಶನಲ್ ಆಘಾತ ಎಂದು ಗುರುತಿಸಲು ವಿಫಲರಾಗುತ್ತೇವೆ. ಹೀಲಿಂಗ್‌ನ ಎರಡನೇ ಭಾಗವು ನಮಗಾಗಿರುವ ಆಘಾತಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದನ್ನು ಗುರುತಿಸುವುದೇ ಆಗಿದೆ.
  3. ಸಮುದಾಯದೊಳಗಡೆ ಸುರಕ್ಷತೆ ಮತ್ತು ಬೆಂಬಲವನ್ನು ಕಂಡುಕೊಳ್ಳುವುದು. ನಾವು ಸಂಪರ್ಕ, ಭದ್ರತೆ ಮತ್ತು ಒಗ್ಗಟ್ಟಿನ ಮಾನಸಿಕ ಅಗತ್ಯವನ್ನು ಹೊಂದಿದ್ದೇವೆ. ನಮ್ಮ‌ ದಿನನಿತ್ಯದ ಆಗುಹೋಗುಗಳಿಗೆ ಸಮಾಜವನ್ನು ಅವಲಂಬಿಸಬೇಕಾಗಿರುವುದರಿಂದ   ‘ನೀವು ನಮಗೆ ಸೇರಿದವರಲ್ಲ’ ಅಥವಾ ‘ನೀವು ವಿಭಿನ್ನವಾಗಿರುವುದರಿಂದ ನೀವು ಸ್ವೀಕಾರಾರ್ಹವಲ್ಲ’ ಎಂಬಂಥ ಸೂಚ್ಯ ಮತ್ತು ಸ್ಪಷ್ಟ ಸಂದೇಶಗಳನ್ನು ಸ್ವೀಕರಿಸಿದಾಗ ಈ ಪ್ರಮುಖವಾದ ಮಾನಸಿಕ ಅಗತ್ಯವನ್ನೇ ನಿರ್ಬಂಧಿಸಿದಂತಾಗುತ್ತದೆ.  ಇಸ್ಲಾಮೋಫೋಬಿಯಾವು ಒಬ್ಬರ ಅಸ್ಮಿತೆಯ ಪ್ರಮುಖ ಭಾಗವನ್ನು ಆಕ್ರಮಿಸುವುದರಿಂದ, ಧಾರ್ಮಿಕ ಗುರುತಿಸುವಿಕೆಗಳನ್ನು ತ್ಯಜಿಸುವ ಅಥವಾ ನಿಮ್ಮ ನಂಬಿಕೆಯೊಂದಿಗೆ ಸಂಕೀರ್ಣವಾದ ಸಂಬಂಧವನ್ನು ಹೊಂದುವುದು ಅನಿವಾರ್ಯವಾಗುತ್ತದೆ. ಉದಾಹರಣೆಗೆ; ಹಿಜಾಬ್ ಅನ್ನು ಧರಿಸುವ ಯುವತಿಯರು ಅದರ ಬಗ್ಗೆ ಸಂಕೀರ್ಣವಾದ ಭಾವನೆಗಳನ್ನು ಬೆಳೆಸಿಕೊಳ್ಳಬಹುದು. ಏಕೆಂದರೆ ಇದು ಇಸ್ಲಾಂನಲ್ಲಿ ಅತ್ಯಗತ್ಯ ಆಚರಣೆಯಾಗಿದೆ. ಆದರೆ ಧಾರ್ಮಿಕ ಗುರುತಿಸುವಿಕೆಯೂ ಸಹ ಸ್ಪಷ್ಟವಾದ ತಾರತಮ್ಯ ಅಥವಾ ಹಿಂಸೆಯನ್ನು ಆಹ್ವಾನಿಸಿದರೆ ಅದರ ಬಗ್ಗೆ ಸಹಜವಾಗಿಯೇ ಸಂಕೀರ್ಣವಾದ ಭಾವನೆ ಬರುತ್ತದೆ.

ಇದರಿಂದ ಹೊರಬರಲು, ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳುವ ಮತ್ತು ಬೆಂಬಲಿಸುವ ಸಮುದಾಯದ ಕಡೆಗೆ ತಿರುಗುವುದು ನಿರ್ಣಾಯಕವಾಗಿದೆ. ಇದು ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬ ಅಥವಾ ಇತರ ಸಮುದಾಯದ ಸದಸ್ಯರ ಗುಂಪಾಗಿರಬಹುದು.  ನಿಮ್ಮ ನೋವು ಹಂಚಿಕೊಳ್ಳುವ, ಕೇಳುವ ಮತ್ತು ಸಾಕ್ಷಿಯಾಗುವ ಪ್ರೀತಿಯ ಸಮುದಾಯದ ಉಪಸ್ಥಿತಿಯು ನಮ್ಮ ನರಮಂಡಲದಲ್ಲಿ ಅದ್ಭುತಗಳನ್ನು ಮಾಡಬಹುದು. ಮೆದುಳಿನಲ್ಲಿ ಇದು ಸುರಕ್ಷತೆ ಮತ್ತು ಘನತೆಯನ್ನು ಸೌಮ್ಯವಾಗಿ ಆದರೆ ಶಕ್ತಿಯುತವಾಗಿ ಪುನಃಸ್ಥಾಪನೆ ಮಾಡಬಹುದು.

  1. ವೃತ್ತಿಪರ ಸಹಾಯವನ್ನು ಪಡೆಯುವುದು: ಮಾನಸಿಕ ಆರೋಗ್ಯ ವೃತ್ತಿಪರರಿಂದ ಸಹಾಯವನ್ನು ಪಡೆಯುವುದು ಕೂಡ ವ್ಯವಸ್ಥಿತ ಆಘಾತದಿಂದ ಗುಣವಾಗಲು ಒಂದು ಮಾರ್ಗವಾಗಿದೆ. ಆದರೆ, ಈ ಮಾರ್ಗವು ಭಾರತದ ಹೆಚ್ಚಿನ ಅಲ್ಪಸಂಖ್ಯಾತ ಗುಂಪುಗಳು ಈ ಸೌಲಭ್ಯವನ್ನು ಪಡೆದುಕೊಳ್ಳುವಷ್ಟು ಶಕ್ತವಾಗಿಲ್ಲ. ಮೇಲಾಗಿ ಮುಖ್ಯವಾಹಿನಿಯ ಮಾನಸಿಕ ಆರೋಗ್ಯ ಕ್ಷೇತ್ರವು ಸಾಮಾಜಿಕವಾಗಿ ಸಂಬಂಧಿಸಿದ ಆಘಾತವನ್ನು ಆಘಾತ ಎಂದು ಗುರುತಿಸುವಲ್ಲೇ ವಿಫಲವಾಗಿದೆ.

ಹೆಚ್ಚಿನ ಮುಖ್ಯವಾಹಿನಿಯ ಆಘಾತದ ಚಿಕಿತ್ಸೆಯು ವ್ಯಕ್ತಿಯನ್ನು ನಿಭಾಯಿಸುವುದರ ಮೇಲೆಯೇ ಹೆಚ್ಚಾಗಿ ಕೇಂದ್ರೀಕರಿಸುತ್ತದೆ. ಮಾನಸಿಕ ಚಿಕಿತ್ಸೆಯಲ್ಲಿ ನಿಭಾಯಿಸುವಿಕೆ ಒಂದು ಮಹತ್ವದ ಮತ್ತು ಅಗತ್ಯವಾದ ಸಾಧನವಾಗಿದ್ದರೂ, ವ್ಯವಸ್ಥೆಯಿಂದಾದ ಆಘಾತವನ್ನು ಗುಣಪಡಿಸಲು ಇದು ಸಾಕಾಗುವುದಿಲ್ಲ. ಸಾಮಾನ್ಯವಾಗಿ, ಚಿಕಿತ್ಸಕರು ತಮ್ಮ ರೋಗಿಗಳಿಗೆ ಸಾಮಾಜಿಕ ಮಾಧ್ಯಮದಿಂದ ಸ್ವಿಚ್ ಆಫ್ ಮಾಡಲು, ಸುದ್ದಿ ನೋಡುವುದನ್ನು ಮಿತಿಗೊಳಿಸಲು ಅಥವಾ ರಾಜಕೀಯವಾಗಿ ತೊಡಗಿಸಿಕೊಳ್ಳದಿರಲು ಸಲಹೆ ನೀಡುತ್ತಾರೆ. ಆದರೆ ಸಾಮಾಜಿಕ ಘಟನೆಗಳು ಒಬ್ಬರು ‘ಸ್ವಿಚ್ ಆಫ್’ ಮಾಡಿಡಬಹುದಾದ ಘಟನೆಗಳಲ್ಲ, ನಾವು ಪ್ರತಿದಿನ ವಾಸಿಸುವ ಮತ್ತು ಅನುಭವಿಸುವ ವಾಸ್ತವ. ಇದೇ ಕಾರಣಕ್ಕಾಗಿ ಹೆಚ್ಚಿನ ಅಲ್ಪಸಂಖ್ಯಾತ ಗುಂಪುಗಳ ರೋಗಿಗಳು ಮಾನಸಿಕ ಚಿಕಿತ್ಸೆಗಾಗಿ ತಮ್ಮ ಜನಾಂಗ, ಧಾರ್ಮಿಕ ಗುರುತಿನ ಚಿಕಿತ್ಸಕರಿಗೇ ಆದ್ಯತೆ ನೀಡುತ್ತಾರೆ.

ಜನಾಂಗೀಯ ಮತ್ತು ಜನಾಂಗೀಯ ಹಿಂಸಾಚಾರದ ಬಗ್ಗೆ ಮುಕ್ತ ಚರ್ಚೆಗಳು ಚಿಕಿತ್ಸಕ ಮತ್ತು ರೋಗಿಯ ನಡುವೆ ನಡೆದರೆ ನಂಬಿಕೆಯ ವಾತಾವರಣವನ್ನು ಬೆಳೆಸಬಹುದು ಮತ್ತು ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಫಲಿತಾಂಶಗಳನ್ನು ಉಂಟುಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ. ಹೆಚ್ಚು ಪ್ರಗತಿಪರವಾದ ಚಿಕಿತ್ಸೆ ಅಥವಾ ಪ್ರತಿರೋಧದ ಮೇಲೆ ಹೆಚ್ಚು ಕೇಂದ್ರೀಕರಿಸುವ ಚಿಕಿತ್ಸೆಗಳು ಅಲ್ಪಸಂಖ್ಯಾತ ಗುಂಪುಗಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ.  ಯಾಕೆಂದರೆ, ಈ ಚಿಕಿತ್ಸೆಯು ದಬ್ಬಾಳಿಕೆಗೆ ನೈಸರ್ಗಿಕ ಪ್ರತಿಕ್ರಿಯೆಯಾಗಿ ಕೋಪ ಮತ್ತು ಉದ್ವೇಗಗಳನ್ನು ನೋಡುತ್ತದೆ ಮತ್ತು ಅದನ್ನು ಎಂದೂ ಅಪರಾಧೀಕರಿಸುವುದಿಲ್ಲ. ವೈದ್ಯಕೀಯ ಮನಶ್ಶಾಸ್ತ್ರಜ್ಞ ಮತ್ತು ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ ಥೀಮಾ ಬ್ರ್ಯಾಂಟ್ ಅವರ ಪ್ರಕಾರ, ಅಂತಹ ಚಿಕಿತ್ಸೆಗಳು “ನನ್ನ ಮತ್ತು ನನ್ನ ಸಮುದಾಯದ ಬಗ್ಗೆ ಈ ನಕಾರಾತ್ಮಕ ನಂಬಿಕೆಗಳನ್ನು ಸಾಮಾನ್ಯೀಕರಣಗೊಳಿಸದಿರುವಂತೆ ನಾನು ಹೇಗೆ ಹೋರಾಡುತ್ತೇನೆ?” ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತದೆ. “ನನ್ನ ಧ್ವನಿಯನ್ನು ಕೇಳಲು ಮತ್ತು ನನ್ನ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ನಾನು ನನ್ನ ಏಜೆನ್ಸಿಯನ್ನು ಹೇಗೆ ಬಳಸಬಹುದು? ನಾನು ಏನನ್ನು ಅನುಭವಿಸುತ್ತಿದ್ದೇನೆ ಎಂಬುದರ ಬಗ್ಗೆ  ಸಹಾನುಭೂತಿ ಮತ್ತು ಬೆಂಬಲವನ್ನು ಹೇಗೆ ಬೆಳೆಸಿಕೊಳ್ಳಬಹುದು?” ಎಂಬ ಪ್ರಶ್ನೆಗೂ ಉತ್ತರ ದೊರಕಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಹೆಚ್ಚಿನ ದಿನಗಳಲ್ಲಿ, ನಮಗೆ ಆಘಾತವನ್ನುಂಟುಮಾಡುವ ವ್ಯವಸ್ಥೆಯಲ್ಲಿ ಚಿಕಿತ್ಸೆಯು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ನಮ್ಮ ನೋವನ್ನು ವ್ಯಕ್ತಪಡಿಸಲು ಮತ್ತು ಹಂಚಿಕೊಳ್ಳಲು ಒಂದು ಸಮರ್ಪಕ ಭಾಷೆಯನ್ನು ಹೊಂದಿರುವುದು ಅತ್ಯಂತ ಅವಶ್ಯಕ. ಅತ್ಯಂತ ಭಯಾನಕ ಸ್ಥಿತಿಯಲ್ಲೂ ಚೆನ್ನಾಗಿಯೇ ಬದುಕಿದ ನಮ್ಮ ಪೂರ್ವಜರ ಬುದ್ಧಿವಂತಿಕೆಯಿಂದಲೂ ನಾವು ನೆರವು ಪಡೆದುಕೊಳ್ಳಬಹುದು. ನನ್ನ ಸ್ನೇಹಿತ ಐಮನ್ ನಂಬಿರುವಂತೆ, ನಿಮ್ಮದೇ ಆದ ಪರಿಹಾರವನ್ನು ಹುಡುಕಲು ಹೆಣಗಾಡುತ್ತಿದ್ದರೆ ಹಿಂದಿನ ಮತ್ತು ಈಗಿನ ಕ್ರಾಂತಿಕಾರಿಗಳ ಬರಹಗಳು, ಕವಿತೆಗಳು ಮತ್ತು ವರ್ಣಚಿತ್ರಗಳಿಂದ ಭರವಸೆಯನ್ನು ಎರವಲು ಪಡೆಯಿರಿ. ಎರಿಕ್ ಫ್ರೈಡ್ ಅವರ ‘Repeal’ ಎನ್ನುವ ಪದ್ಯದ ಆಯ್ದ ಈ ಸಾಲುಗಳಿಂದ ನಾನು ಭರವಸೆಯನ್ನು ಎರವಲು ಪಡೆದಂತೆ;

ಬಹುಶಃ ದುಃಖದ
ಬಗ್ಗೆ ಮಾತನಾಡಲು
ಸಾಧ್ಯವಾಗುತ್ತದೆ
ಪದಗಳಲ್ಲಿ
ನಿಜವಾದ ಪದಗಳಲ್ಲಿ
ಅರ್ಥಪೂರ್ಣವಾಗಿ ಮತ್ತು
ದುಃಖಕ್ಕೆ ಸಂಬಧಪಟ್ಟ ಪದಗಳಲ್ಲಿ

ಯಾವುದೋ ಒಂದು
ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ
ಅಥವಾ ಅದು
ಬೇರೆ ಯಾರಿಗೋ
ಅರ್ಥವಾಗಲೂಬಹುದು
ಅಥವಾ ಯಾರೋ ಅರ್ಥಮಾಡಿಕೊಳ್ಳಬಹುದು

ಮತ್ತು ಸುಮ್ಮನೆ ಅಳಲೂ
ಸಾಧ್ಯವಾಗಬಹುದು
ಒಂದು ಆತ್ಯಂತಿಕ ಸಂತೋಷದಂತೆ

ಲೇಖಕಿ- ಅಹ್ಲಾ ಮಾತ್ರ
(ಲೇಖಕರು ಕೇರಳದ ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞರು)

ಅನುವಾದ- ಫಾತಿಮಾ ರಲಿಯಾ ಹೆಜಮಾಡಿ
ಕೃಪೆ- ನ್ಯೂಸ್ ಮಿನಿಟ್

‘ಮೆಶಾಹಿರುನ್ನಿಸಾ’ – ಮುಸ್ಲಿಂ ಜಗತ್ತಿನ ವಿಖ್ಯಾತ ಮಹಿಳೆಯರು

ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಮಾಜವಾದಿ ಚಳವಳಿಯ ಫಲವಾಗಿ ಮಾರ್ಚ್ 8 ಅನ್ನು ಅಂತರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಲಾಯಿತು. ಅಂತರಾಷ್ಟ್ರೀಯ ವರ್ಕಿಂಗ್ ವಿಮೆನ್ಸ್ ದಿನವೆಂದು ಅಂಗೀಕರಿಸಲ್ಪಟ್ಟಿದ್ದ ಈ ದಿನವನ್ನು 1967ರಲ್ಲಿ ಸೋವಿಯತ್ ರಷ್ಯಾದ ನೆರವಿನಿಂದ ಸ್ತ್ರೀವಾದಿ ಆಂದೋಲನವು ಮಹಿಳಾ ದಿನವಾಗಿ ಹಮ್ಮಿಕೊಂಡು 1975 ರಲ್ಲಿ ವಿಶ್ವಸಂಸ್ಥೆಯ ಮಾನ್ಯತೆಯೊಂದಿಗೆ ಮಾರ್ಚ್ 8 ಅನ್ನು ಅಂತರಾಷ್ಟ್ರೀಯ ಮಹಿಳಾ ದಿನವಾಗಿ ಅಧಿಕೃತವಾಗಿ ಆಚರಿಸಿತು.

ಮಹಿಳಾ ಚಳವಳಿಯ ಇತಿಹಾಸವು ರಾಜಕೀಯದಿಂದ ಹಿಡಿದು ಕಲೆಗಳವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಸುಸ್ಪಷ್ಟಗೊಂಡ ಪರಿಣಾಮ ಇಸ್ಲಾಂ ಮತ್ತು ಮಹಿಳೆಯರು ಎಂಬ ಚರ್ಚೆಗಳೂ ಮುನ್ನೆಲೆಗೆ ಬರತೊಡಗಿದವು. ಕಲಾ ಸಾಂಸ್ಕೃತಿಕ ವಲಯದಲ್ಲಿ ಹೆಚ್ಚು ಅಧ್ಯಯನಕ್ಕೀಡಾದ ವಿಷಯಗಳಲ್ಲೊಂದಾಗಿದೆ ಇದು. ಇಸ್ಲಾಮಿಕ್ ಇತಿಹಾಸದ ವಿಶೇಷವಾಗಿ ಒಟ್ಟೋಮನ್ ಯುಗದ ಪ್ರಸಿದ್ಧ ಮಹಿಳೆಯರ ಕುರಿತಾದ ಕಾದಂಬರಿಗಳು, ಚಲನಚಿತ್ರಗಳು ಮತ್ತು ಸರಣಿಗಳು ಗಮನಾರ್ಹವಾಗಿ ಹೊರಹೊಮ್ಮತೊಡಗಿದವು. ಪ್ರವಾದಿಯವರ ಅನುಯಾಯಿಗಳಲ್ಲಿ ಗೌರವಾನ್ವಿತ ಅನೇಕ ಮಹಿಳಾ ಮಾದರಿಗಳನ್ನು ನಮಗೆ ದರ್ಶಿಸಬಹುದು. ಪ್ರವಾದಿಯವರನ್ನು ಜೀವಿತಾವಧಿಯಲ್ಲಿ ನೋಡಿ, ಪ್ರವಾದಿಯವರು ಬೋಧಿಸಿದ ತತ್ವಗಳನ್ನು ಅನುಸರಿಸಿದ ಮುಸ್ಲಿಂ ವಿಶ್ವಾಸಿಗಳನ್ನು ಸ್ವಹಾಬಿಗಳು ಅಥವಾ ಅನುಯಾಯಿಗಳು ಎಂದು ಕರೆಯಲಾಗುತ್ತದೆ. ಕೆಲ ಅರಬ್ ಚಲನಚಿತ್ರಗಳು ಈ ಮಹಿಳೆಯರ ಜೀವನ ಮತ್ತು ಇತಿಹಾಸಗಳ ಮೇಲೆ ಬೆಳಕು ಚೆಲ್ಲುತ್ತವೆ.

ಒಟ್ಟೋಮನ್ ಸಾಹಿತ್ಯ ರಚನೆಗಳನ್ನು ಪರಿಶೀಲಿಸಿದರೆ ‘ಮೆಶಾಹಿರುನ್ನಿಸಾ’ (Meshahirun-nisa) ಎಂಬ ಜೀವನದರ್ಶನ ಗ್ರಂಥವು ವಿಭಿನ್ನವಾಗಿ ನಿಲ್ಲುವ ಒಂದು ಮೇರು ಅಧ್ಯಾಯ. ಪ್ರಖ್ಯಾತ ಮಹಿಳೆಯರು ಎಂದು ಅರ್ಥವಿರುವ ಮೆಶಾಹಿರುನ್ನಿಸಾ ಎಂಬ ಕೃತಿಯು ಇಸ್ಲಾಮಿಕ್ ವಿದ್ವಾಂಸರು ವಿಶ್ಲೇಷಿಸಿದ ಮಹಿಳಾ ಪ್ರಮುಖರ ಜೀವನ ಚರಿತ್ರೆಗಳನ್ನು ಒಳಗೊಂಡಿದೆ. ಪ್ರಸ್ತುತ ಮಹತ್ ಕೃತಿ ಹಾಗೂ ಒಟ್ಟೋಮನ್ ಸಾಹಿತ್ಯದ ಪ್ರಸಿದ್ಧ ಮಹಿಳೆಯರ ಕುರಿತ ಅವಲೋಕನವೇ ಈ ಲೇಖನದ ವಸ್ತು.

ಮಹಿಳೆಯರು ಪ್ರಧಾನ ಕಥಾಪಾತ್ರಗಳಾಗುವ ಪ್ರಾರಂಭಿಕ ರಚನೆಗಳು

ಇಸ್ಲಾಮಿಕ್ ಇತಿಹಾಸ ರಚನೆಯಲ್ಲಿ ಒಂದೇ ಜ್ಞಾನ ಶಾಖೆಯನ್ನು ನಿರ್ವಹಿಸಿ, ಒಂದೇ ಕೆಲಸದಲ್ಲಿದ್ದು, ಒಂದು ಪ್ರದೇಶ ಅಥವಾ ಒಂದೇ ಕಾಲಘಟ್ಟದಲ್ಲಿ ಬದುಕಿದವರ ಜೀವನ ಚರಿತ್ರೆಗಳ ಕುರಿತಾದ ಗ್ರಂಥಗಳು ‘ತ್ವಬಖಾತ್’ ಎಂಬ ವಿಭಾಗದಲ್ಲಿ ಗುರುತಿಸಲ್ಪಡುತ್ತದೆ. ಈ ಗ್ರಂಥಗಳು ಸರಣಿ ತಲೆಮಾರುಗಳಿಂದ ಕಾಲಕ್ರಮಗಳಿಗೆ ಅನುಸಾರವಾಗಿ ವಿಶೇಷವಾಗಿ ವಿದ್ವಾಂಸರು, ಕಲಾವಿದೆಯರು, ಕವಯಿತ್ರಿಯರು ಸಹಿತ ಪ್ರಸಕ್ತವಾದ ಸಾವಿರಾರು ಮಹನೀಯರ ಜೀವನ ಚರಿತ್ರೆಗಳನ್ನು ನಮಗೆ ಪರಿಚಯಿಸುತ್ತದೆ. ಈ ಗ್ರಂಥದ ಮೂಲಕವೇ ನಾವು ಪ್ರಖ್ಯಾತ ಮಹಿಳೆಯರ ಕುರಿತು ಮೊದಲ ಬಾರಿಗೆ ಓದಿ ತಿಳಿಯಬಹುದು.

ಇಸ್ಲಾಮಿಕ್ ಜಗತ್ತಿಗೆ ವಿಶಿಷ್ಟವಾದ ಈ ರಚನೆಗಳು ಆರಂಭ ಕಾಲದ ಮುಸಲ್ಮಾನರ ಬಗ್ಗೆ ಬರೆಯತೊಡಗಿದಾಗ ಒಂದನೇ ಶತಮಾನದ ಇಸ್ಲಾಮಿನ ಬೆಳವಣಿಗೆಯ ಜೊತೆಗೆ ಇದೂ ಕೂಡ ವಿಕಸನಗೊಂಡಿತು. ಆಳವಾಗಿ ಬೇರೂರಿದ್ದ ರಚನಾ ಪರಂಪರೆಯಾಗಿದ್ದರೂ ಇದರಲ್ಲಿ ಮಹಿಳೆಯರಿಗೆ ಮಾತ್ರವಾಗಿ ಪ್ರತ್ಯೇಕ ಪುಸ್ತಕಗಳು ಬರೆಯಲ್ಪಡಲೇ ಇಲ್ಲ. ಸೆಕ್ಸಿಸ್ಟ್ ದೃಷ್ಟಿಕೋನದಿಂದಾಗಿ ಇಂತಹ ಪರಿಸ್ಥಿತಿ ಉದ್ಭವಿಸಿತೆಂದು ಟೀಕಿಸಲ್ಪಟ್ಟಿದ್ದರೂ ವಸ್ತುಸ್ಥಿತಿ ಬೇರೆಯೇ ಇದೆ. ಇಸ್ಲಾಮಿನ ಸುನ್ನೀ ಚಿಂತನಾಧಾರೆಯಲ್ಲಿ ಪ್ರವಾದಿಯವರ ಅನುಯಾಯಿಗಳನ್ನು ಯಾವುದೇ ಬೇಧವಿಲ್ಲದೆ ಶ್ರೇಷ್ಟರೆಂದು ಕೊಂಡಾಡಲಾಗುತ್ತಿದೆ. ಕೆಲವು ಪುಸ್ತಕಗಳಲ್ಲಿ ಮಹಿಳೆಯರ ಜೀವನ ಚರಿತ್ರೆಗಳು ಒಂದು ಪ್ರತ್ಯೇಕ ಸಂಪುಟವಾಗಿ ಹಾಗೂ ಕೆಲವೆಡೆಗಳಲ್ಲಿ ಮಹಿಳೆಯರ ಕುರಿತಾದ ಮಾಹಿತಿಗಳು ಪ್ರತ್ಯೇಕ ವಿಭಾಗವಾಗಿ ಸಂಗ್ರಹಿಸಿರುವುದನ್ನು ಕಾಣಬಹುದು.

ಬಹುಮುಖ ವಿದ್ವಾಂಸ

ಹತ್ತೊಂಬತ್ತನೇ ಶತಮಾನದ ಹೊತ್ತಿಗೆ ಬರಹ ಪ್ರಕಾರಗಳು ಬದಲಾಗಲಾರಂಭಿಸಿದವು. ಹಾಜೆ ಮುಹಮ್ಮದ್ ಝಿಹ್ನಿ ಎಫಂದಿ ತನ್ನ ‘ಮೆಶಾಹಿರುನ್ನಿಸಾ’ ಎಂಬ ಹೆಸರಿನಲ್ಲಿ ಮಹಿಳಾ ಜೀವನ ಚರಿತ್ರೆಗಳ ಮೇಲೆ ಪ್ರಥಮವಾಗಿ ಘನವೆತ್ತ ಹಾಗೂ ಸಮಗ್ರವಾದ ಗ್ರಂಥವನ್ನು ಬರೆದರು. ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಹೊಂದಿದ್ದರಿಂದ ಅವರು ಈಜಿಪ್ಟಿನ ಅಲೆಕ್ಸಾಂಡ್ರಿಯಾ ಹಾಗೂ ಇಸ್ತಾಂಬುಲ್‌ನ ನುರಿತ ಅಧ್ಯಾಪಕರಿಂದ ಶಿಕ್ಷಣವನ್ನು ಪಡೆದಿದ್ದರು. ಒಟ್ಟೋಮನ್ ಸಾಮ್ರಾಜ್ಯದ ಮೊದಲ ಅಧಿಕೃತ ಮುದ್ರಣಾಲಯವಾದ ‘ಮತ್ಬ- ಇ- ಅಮೀರ್’ ನಲ್ಲಿ ಕ್ಲರ್ಕ್ ಮತ್ತು ಪ್ರೂಫ್ ರೀಡರ್ ಆಗಿ ಹತ್ತು ವರ್ಷಗಳ ಕಾಲ ಕೆಲಸ ನಿರ್ವಹಿಸಿದ ಬಳಿಕ ಅವರು ಪ್ರಾಧ್ಯಾಪಕ ಹುದ್ದೆಗೆ ನಿಯೋಜಿತರಾದರು.

ಅಂದು ಫ್ರೆಂಚ್ ಭಾಷೆಯಲ್ಲಿ ‘ಗಲಟ್ಟಸಾರೆ ಮಕ್ತಬೀ ಸುಲ್ತಾನಿ (ಗಲಟ್ಟಸಾರೆ ಇಂಪೀರಿಯಲ್ ಹೈಸ್ಕೂಲ್), ಲೈಸೀ ಇಂಪೀರಿಯಲ್ ಒಟ್ಟೋಮನ್ ಡಿ ಗಲಟ್ಟ-ಸೆರ’ ಎಂಬಿತ್ಯಾದಿ ಹೆಸರುಗಳಲ್ಲಿ ಗುರುತಿಸಲ್ಪಟ್ಟಿದ್ದ ಗಲಟ್ಟಸಾರೆ ಹೈಸ್ಕೂಲ್‌ಗಳಲ್ಲಿ ಝಿಹ್ನಿ ಎಫಂದಿ ಅರಬಿ ಭಾಷೆ ಹಾಗೂ ಧಾರ್ಮಿಕ ವಿಷಯಗಳ ಬೋಧಕರಾಗಿದ್ದರು. ಆ ಕಾಲದಲ್ಲಿಯೇ ಅವರು ಶಿಕ್ಷಣ ಸಚಿವಾಲಯಕ್ಕೆ ಸಂಬಂಧಿಸಿದ ಹಲವು ಆಯೋಗಗಳ ಅಧ್ಯಕ್ಷರಾಗಿಯೂ ಹಾಗೂ ಪಠ್ಯಪುಸ್ತಕಗಳ ರಚನಾ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ವ್ಯಾಕರಣ, ಧಾರ್ಮಿಕ ಜ್ಞಾನ, ಇತಿಹಾಸ, ಸಾಹಿತ್ಯ ಹೀಗೆ ಜ್ಞಾನದ ವಿವಿಧ ವಿಭಾಗಗಳಲ್ಲಿ ಹಲವು ಕೃತಿಗಳನ್ನು ರಚಿಸಿದ ಝಿಹ್ನಿ ಎಫಂದಿ ಓರ್ವ ಬಹುಮುಖ ವಿದ್ವಾಂಸ.

ಸರ್ಕಾರದಿಂದ ಗಮನಾರ್ಹವಾದ ಪದಕಗಳನ್ನು ಪಡೆದು ಪುರಸ್ಕ್ರತಗೊಂಡ ಅವರು ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಗಳಿಸಿದರು. ಕೆಲವು ಗ್ರಂಥಗಳನ್ನು 1889 ರ ಸೆಪ್ಟೆಂಬರ್ ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ಸಭೆ ಸೇರಿದ ಇಂಟರ್ ನ್ಯಾಷನಲ್ ಕಾಂಗ್ರೆಸ್ ಆಫ್ ಓರಿಯಂಟಲಿಸ್ಟ್‌ಗೆ ಕಳುಹಿಸಲಾಯಿತು. ಅವರ ಕೃತಿಗಳ ವೈಜ್ಞಾನಿಕತೆ ಹಾಗೂ ಬೋಧನಾ ಶೈಲಿ, ಅರೇಬಿಕ್ ಭಾಷೆಯಲ್ಲಿನ ಅವರ ಸೇವಾ ಮನೋಭಾವಗಳೆಲ್ಲ ಜಗತ್ತಿನ ಗಮನ ಸೆಳೆದವು. ಕಾಂಗ್ರೆಸ್‌ನ ಶಿಫಾರಸ್ಸಿನ ಮೇರೆಗೆ ಅಂದಿನ ಅಧಿಕೃತ ವಿಶ್ವಸಂಸ್ಥೆಯಾಗಿದ್ದ ಸ್ವೀಡನ್- ನಾರ್ವೆ ಒಕ್ಕೂಟವು ಅವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿತು. ಈ ಪದಕವನ್ನು ಗಲಟ್ಟಸಾರೆ ಹೈಸ್ಕೂಲ್ ಮ್ಯೂಸಿಯಂನಲ್ಲಿ ಇಂದಿಗೂ ಸಂರಕ್ಷಿಸಿಡಲಾಗಿದೆ.

ಹೆಣ್ಣು ಮಕ್ಕಳ ಗುರು

ಓರಿಯಂಟಲ್ ಸಾಹಿತ್ಯದಲ್ಲಿ ‘ಇಲ್ಮಿಹಾಲ್’ (ಇಸ್ಲಾಮಿಕ್ ನಂಬಿಕೆ, ಆರಾಧನೆ, ನೈತಿಕತೆ ಎಂಬಿತ್ಯಾದಿಗಳ ಸಂಕ್ಷಿಪ್ತ ಕೈಪಿಡಿ) ಎಂದು ಕರೆಯಲ್ಪಡುವ ಧರ್ಮ ಗ್ರಂಥಗಳನ್ನು ಮಹಿಳೆಯರಿಗೆ ಸೀಮಿತವಾದ ಅವತರಣಿಕೆಯನ್ನೂ ಅವರು ಸಿದ್ಧಗೊಳಿಸಿದರು. ಅದಕ್ಕಿಂತ ಮೊದಲು ತಥಾಕಥಿತ ಕೃತಿಗಳು ಲಭ್ಯವಿದ್ದರೂ ‘ಹನಿಂಲಾಲ್ ಇಲ್ಮಿಹಾಲ್’ (ಮಹಿಳೆಯರ ಇಲ್ಮಿಹಾಲ್) ‘ಕಿಸ್ ಲಾರ್ ಹೊಚಾಸಿ’ (ಹೆಣ್ಣು ಮಕ್ಕಳ ಗುರು) ಎಂಬ ಹೆಸರಿನಲ್ಲಿ ಅವರು ಪ್ರಕಟಿಸಿದ ಪುಸ್ತಕಗಳು ಎಲ್ಲರಿಂದಲೂ ಪ್ರಶಂಸಿತಗೊಂಡಿತಲ್ಲದೆ ಪಠ್ಯ ಪುಸ್ತಕವಾಗಿಯೂ ಬಳಸಲ್ಪಟ್ಟಿತು. ಪ್ರಾಯಮಿತಿಯನ್ನು ಪರಿಗಣಿಸಿ ಅದರ ವಿವಿಧ ಆವೃತ್ತಿಗಳನ್ನು ಹೊರತರಲಾಯಿತು. ಆದ್ದರಿಂದಲೇ ಝಿಹ್ನಿ ಎಫಂದಿಯವರನ್ನು ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿರುವ ಪ್ರಮುಖ ವ್ಯಕ್ತಿಯೆಂದು ಗುರುತಿಸಲಾಗಿದೆ. ಈ ಹಿಂದೆ ಉಲ್ಲೇಖಿಸಿದ 1878 ರಲ್ಲಿ ಪ್ರಕಟವಾದ ‘ಮೆಶಾಹಿರುನ್ನಿಸಾ’ ಎಂಬ ಕೃತಿಯು ಮಹಿಳೆಯರಿಗೆ ಸಂಬಂಧಿಸಿದ ಅವರ ಮೇರು ಕೃತಿಯಾಗಿದೆ.

ಎರಡು ಸಂಪುಟಗಳಿರುವ ಪ್ರಸ್ತುತ ಕೃತಿಯು ಇಸ್ಲಾಮಿಕ್ ಇತಿಹಾಸದ ವಿಜ್ಞಾನ, ಕಲೆ, ಸಾಹಿತ್ಯ, ರಾಜಕೀಯ ವಲಯಗಳಲ್ಲಿ ವಿಖ್ಯಾತರಾದ ಸುಮಾರು 1165 ಮಹಿಳೆಯರ ಜೀವನ ಚರಿತ್ರೆಗಳನ್ನು ಸಂಗ್ರಹಿಸುತ್ತದೆ. ಅನೇಕ ಮಹಿಳೆಯರ, ವಿಶೇಷತಃ ಸೂಫಿಗಳು, ಶಿಕ್ಷಕರು, ಕವಿಗಳು, ಗಾಯಕರ ವಿಭಿನ್ನ ಗುಣಗಳು ಮತ್ತು ನೈಸರ್ಗಿಕ ಸ್ವಭಾವ ಸವಿಶೇಷತೆಗಳನ್ನು ಅದು ವರ್ಣಿಸುತ್ತದೆ. ‘ಚಾರಿತ್ರಿಕ ಮಹಿಳೆಯರು’, ‘ತಖ್ವಾದಿಂದ (ಸೃಷ್ಟಿಕರ್ತನ ಕುರಿತು ಅರಿವು, ಪ್ರಜ್ಞೆ ಹೊಂದುವಿಕೆ) ಹೆಸರುವಾಸಿಯಾದ ಮಹಿಳಾ ವಕೀಲರು’, ‘ಭಾಷಣ ಕಲೆ ಹಾಗೂ ಪ್ರಬೋಧನಾ ಕ್ಷೇತ್ರದಲ್ಲಿ ಪ್ರಸಿದ್ಧರಾದ ಮಹಿಳೆಯರು’, ‘ಸಾಹಿತ್ಯ ಹಾಗೂ ಕ್ಯಾಲಿಗ್ರಫಿಯಲ್ಲಿ ಸಾಮರ್ಥ್ಯವನ್ನು ಸಾಬೀತುಪಡಿಸಿದ ಮಹಿಳೆಯರು’ ಹೀಗೇ ಹಲವು ಅಧ್ಯಾಯಗಳಿವೆ. ಪ್ರಸಿದ್ಧ ವಚನಗಳ ಮೂಲ ಎಂದು ತಿಳಿದಿದ್ದವರನ್ನೂ ಒಂದು ಪ್ರತ್ಯೇಕ ಅಧ್ಯಾಯದಲ್ಲಿ ಸೇರಿಸಲಾಗಿದೆ. ಮಹಿಳಾ ಆಡಳಿತಗಾರರು, ವೈದ್ಯರುಗಳ ಜೀವನ ಚರಿತ್ರೆಗಳನ್ನೂ ವಿಶೇಷವಾಗಿ ದಾಖಲಿಸಲಾಗಿದೆ.

ಮೂರು ಗುರಿಗಳನ್ನು ಆಧರಿಸಿ ಎಫಂದಿಯವರು ಈ ಕೃತಿಯನ್ನು ರಚಿಸಿದ್ದಾರೆ. ಅದರಲ್ಲಿ ಮೊದಲನೆಯದ್ದು; ಸಾಹಿತ್ಯ, ಸಾಮಾಜಿಕ, ವೈಜ್ಞಾನಿಕ ವೃತ್ತಿ ವಲಯಗಳಲ್ಲಿ ಶ್ರೇಷ್ಟ ಕೊಡುಗೆಗಳನ್ನು ನೀಡಿದ ಮಹಿಳೆಯರನ್ನು ಅವರ ಸಾಧನೆಗೆ ಅನುಗುಣವಾಗಿ ಪರಿಚಯಿಸುವುದು. ತನ್ಮೂಲಕ ವಿದ್ಯಾರ್ಥಿಗಳಾದ ಹೆಣ್ಣು ಮಕ್ಕಳಿಗೆ ತಮ್ಮ ಪ್ರತಿಭೆ, ಸಾಮರ್ಥ್ಯದ ಮೇಲೆ ಭರವಸೆ ಮೂಡಿಸಿ ಹುರಿದುಂಬಿಸುವುದು.

ಎರಡನೆಯ ಗುರಿ ಉನ್ನತ ಧಾರ್ಮಿಕ ಪ್ರಜ್ಞೆಯುಳ್ಳ ಮಹಿಳೆಯರ ಮಹಿಮೆಗಳನ್ನು ಪರಿಚಯಿಸುವುದು. ಧಾರ್ಮಿಕತೆಯಲ್ಲಿ ಉತ್ತುಂಗದಲ್ಲಿರುವ ಮಹಿಳೆಯರನ್ನು ಮಾದರಿಗಳಾಗಿ ಸ್ವೀಕರಿಸಲು ಸಾಧಿಸುವುದು. ಕೃತಿ ರಚನೆಯ ಮೂರನೆಯ ಗುರಿಯು ಇತಿಹಾಸ, ಧರ್ಮ ಮತ್ತು ಕಲಾ ಕ್ಷೇತ್ರಗಳ ಕುರಿತು ಓದುಗರಿಗೆ ಜಾಗೃತಿ ಮೂಡಿಸುವುದು.

ಯಾರಿಗೆ ಅನುಗುಣವಾಗಿ? ಯಾವುದನ್ನು ಆಧರಿಸಿ?

ಝಿಹ್ನಿ ಎಫಂದಿಯವರ ಪ್ರಕಾರ ಇಸ್ಲಾಂ ಅನ್ನು ಖುರ್‌ಆನ್ ಮಾತ್ರ ಮಾನದಂಡಗೊಳಿಸಿ ಮನದಟ್ಟು ಮಾಡುವುದು ನಮ್ಮನ್ನು ತಪ್ಪುಕಲ್ಪನೆಗಳಿಗೆ ತಳ್ಳಬಹುದು. ಪ್ರವಾದಿ ಮುಹಮ್ಮದರ ಬದುಕು ಪವಿತ್ರ ಖುರ್‌ಆನಿನ ಸಾಕ್ಷಾತ್ಕಾರವಾಗಿತ್ತು. ಇಸ್ಲಾಮನ್ನು ಸಂಪೂರ್ಣವಾಗಿ ಅರಿಯಬೇಕಾದರೆ ಪ್ರವಾದಿಯವರ ಜೀವನ ಹಾಗೂ ಖುರ್‌ಆನನ್ನು ಸ್ಪಷ್ಟವಾಗಿ ಕಲಿಯುವುದು ಮಾತ್ರವಲ್ಲದೆ ಆಯಾ ಕಾಲದ ಪರಿಸ್ಥಿತಿಗೆ ತಕ್ಕಂತೆ ಜನರು ಮತ್ತು ಘಟನೆಗಳನ್ನು ವಿಶ್ಲೇಷಿಸುವುದು ಅಗತ್ಯ.

ಇಸ್ಲಾಂನಲ್ಲಿ ತಖ್ವಾದ ಆಧಾರದಲ್ಲಿ ಶ್ರೇಷ್ಠತೆಯನ್ನು ನಿರ್ಧರಿಸಲಾಗುತ್ತದೆಯೇ ಹೊರತು ಲಿಂಗದ ಆಧಾರದಲ್ಲಿ ಅಲ್ಲ. ‘ವಖಾ’ ಎಂಬ ಪದದಿಂದ ತಖ್ವಾ ಎಂಬ ಪದವು ಉದ್ಭವಿಸಿದೆ. ಪಾಪ ಕೃತ್ಯಗಳಿಂದ ಸ್ವಶರೀರವನ್ನು ಸಂರಕ್ಷಿಸಿ ಕೆಟ್ಟ ನಡವಳಿಕೆಗಳನ್ನು ತ್ಯಜಿಸಿ ಪೂರ್ಣ ಧಾರ್ಮಿಕ ಪ್ರಜ್ಞೆಯೊಂದಿಗೆ ಬದುಕುವುದೇ ‘ತಖ್ವಾ’. ಆದುದರಿಂದಲೇ ವಿಶ್ವಾಸಿಗಳ ಆಚರಣೆಗಳ ಆರಾಧನಾ ಕರ್ಮಗಳಿಗೆ ಅನುಸಾರವಾಗಿ ಮೇಲು-ಕೀಳು ಎಂಬುದನ್ನು ನಿರ್ಧರಿಸಲಾಗುತ್ತದೆ. ಮಹಿಳೆ ಮತ್ತು ಪುರುಷ ಪರಸ್ಪರ ನ್ಯೂನತೆಗಳನ್ನು ನೀಗಿಸಬೇಕಾದವರು ಹಾಗೂ ಬೇರ್ಪಡಿಸಲು ಸಾಧ್ಯವಿಲ್ಲದ ಒಂದು ವಸ್ತುವಿನ ಎರಡು ಮುಖಗಳಂತೆ ಬದುಕಬೇಕಾದವರು. ಈ ದೃಷ್ಟಿಕೋನವನ್ನಾಧರಿಸಿ ಮೆಶಾಹಿರುನ್ನಿಸಾ ರಚಿತವಾಗಿದೆ.

ಲಕ್ಷಾಂತರ ಪುರುಷರಿಗಿಂತ ಉತ್ತಮರು

ಈ ಪುಸ್ತಕದಲ್ಲಿನ ಮಹಿಳೆಯರ ಪಟ್ಟಿಯನ್ನು ಗಮನಿಸಿದರೆ ಪ್ರಾರಂಭದಲ್ಲಿ ಪ್ರವಾದಿ ಪತ್ನಿಯರು ಎಂಬ ನೆಲೆಯಲ್ಲಿ ಪ್ರಸಿದ್ಧರಾದ ಮಹಿಳೆಯರ ಕುರಿತು ಕಾಣಬಹುದು. ನಂತರ ಪ್ರವಾದಿ ಪುತ್ರಿಯರು ಹಾಗೂ ಸಂಬಂಧಿಗಳಾದ ಇತರ ಮಹಿಳೆಯರ ಜೀವನ ಚರಿತ್ರೆಗಳನ್ನು ಬರೆಯಲಾಗಿದೆ. ಮುಂದಿನ ಅಧ್ಯಾಯವು ಪ್ರವಾದಿಯವರ ಕಾಲದಲ್ಲಿ ಬದುಕಿದ್ದ ಹಾಗೂ ಅದಕ್ಕಿಂತ ಮುಂಚೆಯೇ ತೀರಿ ಹೋಗಿದ್ದರೂ ಪ್ರವಾದಿಯವರಿಂದ ಪ್ರಶಂಸಿಸಲ್ಪಟ್ಟಿದ್ದ ಪ್ರಖ್ಯಾತರನ್ನು ಪರಿಚಯಿಸುತ್ತದೆ. ಅವರ ಕುರಿತು ವಿವಿಧ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ‘ಮುಸ್ಲಿಂ ಆದ ಕಾರಣದಿಂದ ದೌರ್ಜನ್ಯಕ್ಕೀಡಾದ ಮಹಿಳೆಯರು, ಖುರ್‌ಆನಿನಲ್ಲಿ ಹೆಸರಿಸಲ್ಪಟ್ಟ ಮಹಿಳೆಯರು’ ಎಂಬ ಅಧ್ಯಾಯಗಳು ಅವುಗಳಲ್ಲಿ ಕೆಲವು ಉದಾಹರಣೆಗಳು. ಇಂದಿನ ಇಸ್ಲಾಮೋಫೋಬಿಯ ಟೀಕೆಗಳ ಮುಂದೆ ಇಂತಹ ಜೀವನ ಚರಿತ್ರೆಗಳ ಉದಾಹರಣೆಗಳು ಅತ್ಯಂತ ಆಸಕ್ತಿದಾಯಕವಾಗಿದೆ.

ಮುಹಮ್ಮದ್ ಝಿಹ್ನಿ ಎಫಂದಿ ಅದರ ಪ್ರಥಮ ಅಧ್ಯಾಯದ ತಲೆಬರಹದಲ್ಲಿ ಪ್ರತಿಪಾದಿಸಿದಂತೆ ‘ಉಮ್ಮಹಾತುಲ್ ಮುಅ‍್‌ಮಿನೀನ್’ (ಸತ್ಯವಿಶ್ವಾಸಿಗಳ ಮಹಾಮಾತೆಯರು) ಎಂಬ ಹೆಸರಿನಲ್ಲಿ ಪ್ರಸಿದ್ಧರಾದ ಪ್ರವಾದಿ ಪತ್ನಿಯರು ಲಕ್ಷಾಂತರ ಪುರುಷರಿಗಿಂತ ಉತ್ತಮರಾಗಿದ್ದಾರೆ. ಪುಸ್ತಕದ ವಿಖ್ಯಾತ ಮಹಿಳೆಯರ ಹೆಸರುಗಳನ್ನು ಪರಿಶೀಲಿಸಿದರೆ ಅದರಲ್ಲಿ ಅನೇಕರಿಗೂ ಪ್ರವಾದಿ ಪತ್ನಿಯರ ಹಾಗೂ ಪುತ್ರಿಯರ ಹೆಸರುಗಳಿರುವುದನ್ನು ಗಮನಿಸಬಹುದು.

ವಿಶೇಷ ತಲೆಬರಹವೊಂದರ ಕೆಳಗೆ ವಿವರಿಸಲಾದ ಹನ್ನೆರಡನೇ ಶತಮಾನದ ಫಾತಿಮಾ ಅಲ್‌-ಫಖೀಹ ಎಂಬ ವಿದ್ವಾಂಸೆ ವನಿತೆಯ ಬದುಕು ಬಹಳ ಕೌತುಕಭರಿತವಾಗಿದೆ. ಪ್ರಸಿದ್ಧ ಮುಸ್ಲಿಂ ನ್ಯಾಯವಾದಿ ಅಲಾವುದ್ದೀನ್ ಸಮರ್ಖಂದಿಯವರ ಮಗಳಾದ ಫಾತಿಮಾ ತಂದೆಯಂತೆಯೇ ಕಾನೂನು ವಿಭಾಗದಲ್ಲಿ ತನ್ನ ಪ್ರತಿಭೆಯನ್ನು ಸಾಬೀತು ಪಡಿಸಿದ್ದರು. ಅಲಾವುದ್ದೀನ್ ಸಮರ್ಖಂದಿ ಪ್ರತಿಯೊಂದು ವಿಷಯದಲ್ಲೂ ಮಗಳ ನಿಲುವನ್ನು ಕೇಳಿದ ನಂತರವೇ ತೀರ್ಮಾನಕ್ಕೆ ಬರುತ್ತಿದ್ದರು. ಧಾರ್ಮಿಕ ನೀತಿ ನಿಯಮಗಳಲ್ಲಿ ಅತೀವ ಜಾಗರೂಕಳಾಗಿದ್ದ ಫಾತಿಮಾಳಿಗೆ ಮದುವೆ ಪ್ರಾಯ ತಲುಪಿದಾಗ ಹಲವು ವಿವಾಹ ಪ್ರಸ್ತಾಪಗಳು ಬಂದರೂ ಫಾತಿಮಾ ಅವರ ಮುಂದೆ ನಿಬಂಧನೆಯಿಟ್ಟದ್ದು ತನ್ನ ತಂದೆಯ ಗ್ರಂಥಕ್ಕೆ ಅತ್ಯುತ್ತಮ Scholia (ಶರಹ್, ವಿವರಣೆ) ರಚಿಸಬೇಕೆಂದಾಗಿತ್ತು.

ಒಂದು ಪುಸ್ತಕ ಪ್ರತಿಪಾದಿಸುವ ವಿಷಯದ ಮೇಲೆ ಆ ಪುಸ್ತಕ ಬರೆದವನ ತಿಳುವಳಿಕೆಯನ್ನೂ ಪಾಂಡಿತ್ಯದ ಆಳವನ್ನೂ ವಿವರಿಸುವ ವ್ಯಾಖ್ಯಾನವನ್ನು ಸ್ಕೋಲಿಯಾ ಎಂದು ಹೇಳುತ್ತಾರೆ. ಆಸ್ತಿ ಅಂತಸ್ತನ್ನು ಪರಿಗಣಿಸದೆ, ಅಜ್ಞಾನಿಗಳನ್ನು ಅವಗಣಿಸಿಯೂ ಸೂಕ್ತ ವರನನ್ನು ಆಯ್ಕೆ ಮಾಡುವಲ್ಲಿ ಈ ಮೂಲಕ ಫಾತಿಮಾ ಯಶಸ್ವಿಯಾದರು. ಫಾತಿಮಾರ ನಿಬಂಧನೆಯನ್ನು ಸವಾಲಾಗಿ ಸ್ವೀಕರಿಸಿದ ಅನೇಕ ಯುವ ವಿದ್ವಾಂಸರು ಸ್ಪರ್ಧೆಗಿಳಿದವರಂತೆ ಹಲವು ವ್ಯಾಖ್ಯಾನಗಳನ್ನು ಬರೆದು ಕಳುಹಿಸಿದರು. ಆದರೆ ಅದ್ಯಾವುದೂ ಫಾತಿಮಾ ಹಾಗೂ ಅವರ ತಂದೆಗೆ ಮೆಚ್ಚುಗೆಯಾಗಲಿಲ್ಲ. ಕೆಲವು ದಿನಗಳ ನಂತರ ಅಲಾವುದ್ದೀನ್ ಸಮರ್ಖಂದಿಯ ಶಿಷ್ಯನೇ ಆದ ಅಲಾವುದ್ದೀನ್ ಅಲ್ ಕಾಸಾನಿ ಬರೆದ ವ್ಯಾಖ್ಯಾನ ಗ್ರಂಥವು ಇಬ್ಬರಿಂದಲೂ ಮೆಚ್ಚುಗೆ ಪಡೆಯಿತು. ಫಾತಿಮಾ ಹಾಗೂ ಅಲ್ ಕಾಸಾನೀ ವಿವಾಹಿತರಾದರು. ಮಾವನಂತೆಯೇ ಅಲ್ ಕಾಸಾನಿಯೂ ತನ್ನ ಪ್ರತಿ ನಿರ್ಧಾರಗಳಲ್ಲಿ ಪತ್ನಿ ಫಾತಿಮಾರ ನಿಲುವನ್ನು ಕೇಳಿ ಪಡೆಯುತ್ತಿದ್ದರು. ಅವರ ಅನುಮೋದನೆಯಿಲ್ಲದೆ ಯಾವುದನ್ನೂ ಪ್ರಕಟಿಸುತ್ತಿರಲಿಲ್ಲ.

ಫಾತಿಮಾ ಹಾಗೂ ಅವರಂತಹ ಅನೇಕ ಮಹಿಳೆಯರ ವಿಸ್ಮಯ ಬದುಕಿನ ಮೇಲೆ ಬೆಳಕು ಚೆಲ್ಲಿದ ಮೆಶಾಹಿರುನ್ನಿಸಾ ಕೃತಿಯು ಇಸ್ಲಾಮಿಕ್ ಜಗತ್ತಿನಲ್ಲಿ ಬಹಳ ಪ್ರಭಾವವನ್ನು ಬೀರಿತು. ಲೇಖಕ ಮುಹಮ್ಮದ್ ಹಸನ್ ಹಾನ್ ಇದನ್ನು ಪರ್ಶಿಯನ್ ಭಾಷೆಗೆ ಅನುವಾದಿಸಿ ಟೆಹ್ರಾನಿನಲ್ಲಿ ಪ್ರಕಟಿಸಿದ್ದಾರೆ.

ಮೂಲ~ ಡಾ: ಅಲೀ ತುಫೆಕ್ಚಿ
ಅನುವಾದ~ ಶಂಸ್ ಗಡಿಯಾರ್

‘ಕ್ಯಾಲೆಂಡರ್ ಬಾವಾ’ – ತೋಪ್ಪಿಲ್ ಮುಹಮ್ಮದ್ ಮೀರಾನ್ ಸಣ್ಣಕತೆ

[ತೋಪ್ಪಿಲ್ ಮುಹಮ್ಮದ್ ಮೀರಾನ್(1944–2019)

ಆರು ಕಾದಂಬರಿಗಳನ್ನು ಹಲವು ಸಣ್ಣಕತೆಗಳನ್ನೂ ಬರೆದಿದ್ದಾರೆ. 1997 ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತನ್ನ ‘ಸೈವು ನರಕ್ಕಾಲಿ’ ಕೃತಿಗಾಗಿ ಪಡೆದಿದ್ದಾರೆ. ‘ತಮಿಳುನಾಡು ಕಲೈ ಇಳಕ್ಕಿಯ ಪೆರುಮಂತ್ರಮ್ ಅವಾರ್ಡ್’ ಹಾಗೂ ‘ಇಳಕ್ಕಿಯ ಚಿಂತನೈ ಅವಾರ್ಡ್’ ಸೇರಿದಂತೆ ಇತರ ಅನೇಕ ಪ್ರಶಸ್ತಿಗಳನ್ನೂ ಅವರು ಗಳಿಸಿದ್ದಾರೆ. ಮಲಯಾಳಂ ಭಾಷೆಯ ಹೆಸರಾಂತ ಸಾಹಿತಿ ವೈಕಮ್ ಮುಹಮ್ಮದ್ ಬಶೀರ್ ಅವರ ಬಯಾಗ್ರಫಿಯನ್ನು ತಮಿಳು ಭಾಷೆಗೆ ಭಾಷಾಂತರಿಸಿದ್ದಾರೆ. ತಮ್ಮ ಬರವಣಿಗೆಗಳಲ್ಲಿ ಮನುಷ್ಯ ಮನುಷ್ಯನ ಜೊತೆಗೆ ಏನು ಮಾಡುತ್ತಿರುವನು ಮತ್ತು ಮಾನವನು ಪ್ರಕೃತಿಯ ಜೊತೆಗೆ ಯಾವ ರೀತಿ ವರ್ತಿಸುತ್ತಿದ್ದಾನೆ ಎಂಬುದರ ಬಗ್ಗೆ ವಿಷಾದದಿಂದ ದಾಖಲಿಸಿದ್ದಾರೆ. ಸೃಷ್ಟಿಗಳಲ್ಲೇ ಅತ್ಯಂತ ಶ್ರೇಷ್ಟನಾಗಿರುವ ಮಾನವನು ಧರ್ಮ, ಜಾತಿ ಹಾಗೂ ಲಿಂಗ ತಾರತಮ್ಯ ಭಾವನೆಯಿಂದ ಮಾಡುವ ಕೃತ್ಯಗಳನ್ನು ನೋಡಿ ಅವರು ನೊಂದುಕೊಂಡಿದ್ದಾರೆ. ಅವರು ನೈಜ ಮಾನವರ ಬಗ್ಗೆ ಬರೆದಿದ್ದಾರೆ. ಅವರ ಬರಹಗಳು ಅಪಾರ ಸಹಾನುಭೂತಿ, ಉತ್ಕಟ ಮಾನವೀಯತೆ ಹಾಗೂ ದೃಢವಾದ ಭರವಸೆಯನ್ನು ಹೊಂದಿವೆ.]

‘ಆನ ಪಾರೈ’ ಅಥವಾ ಆನೆಕಲ್ಲು ಎಂಬ ಬೃಹದಾಕಾರದ ಬಂಡೆಗಲ್ಲೊಂದು ಪಟ್ಟಣದ ದಕ್ಷಿಣ ದಿಕ್ಕಿನಲ್ಲಿದೆ. ಮುಸ್ಲಿಮರ ಪವಿತ್ರ ರಂಜಾನ್ ಉಪವಾಸದ ಆರಂಭದ ಬಾಲಚಂದ್ರನನ್ನು ಮತ್ತು ಕೊನೆಯ ದಿನದ ‘ಪೆರುನ್ನಾಳ್’ (ಈದ್) ನ ಚಂದ್ರನನ್ನೂ ನೋಡಬೇಕೆಂದರೆ ನೀವು ಈ ಆನೆಪಾರೈಯನ್ನು ಹತ್ತಬೇಕು. ಮೋಡವಿಲ್ಲದ ರಾತ್ರಿಯಲ್ಲಿ ಬಾಲಚಂದ್ರನು ಬಾಗಿರುವ ದಾರದಂತೆ ಆಕಾಶಕ್ಕೆ ಅಂಟಿಕೊಂಡಿರುತ್ತಾನೆ. ರಂಜಾನ್ ಆರಂಭದ ‘ನೋಂಬು’ (ಉಪವಾಸ) ಶುರುವಾಗಿದ್ದನ್ನು ಖಚಿತಪಡಿಸಲು ಜನರು ‘ಚಂದ್ರ ದರ್ಶನವಾಯಿತೆ’ ಎಂದು ಕೇಳುತ್ತ ಲಗುಬಗೆಯಿಂದ ಅತ್ತಿಂದಿತ್ತ ಓಡಾಡುತ್ತಿರುತ್ತಾರೆ.

ರಂಜಾನಿನ ಚಂದ್ರದರ್ಶನಕ್ಕೆ ಹಾಗೂ ಪೆರುನ್ನಾಳ್ ನ ಹಬ್ಬದ ಸಂಭ್ರಮದಂದು ನಾವೂ ಬಂಡೆಗಲ್ಲನ್ನು ಹತ್ತುತ್ತಿದ್ದೆವು. ನಾವೂ ನಿಂತುಕೊಂಡು ಬಾಲಚಂದಿರನನ್ನು ನೋಡಲು ತವಕಿಸುತ್ತಿದ್ದೆವು. ಚಂದ್ರನ ಮೊದಲ ನೋಟವನ್ನು ಸೆರೆಹಿಡಿಯಲು ನಮ್ಮ ಕಣ್ಣುಗಳು ಬಲೆ ಬೀಸುತ್ತಿದ್ದವು. ಆದರೆ, ಅದು ಗೋಚರಿಸಿದ ಕೆಲವೇ ಕೆಲವು ಕ್ಷಣಗಳೊಳಗೆ ಮಾಯವಾಗುತ್ತಿತ್ತು. ಶುಭ್ರ ನೀಲಾಕಾಶಕ್ಕೆ ಎಲ್ಲಾದರೂ ಕೊಂಚ ಮೋಡ ಆವರಿಸಿಬಿಟ್ಟಿತೆಂದರೆ ನಾವೆಲ್ಲ ಸಿಟ್ಟಿನಿಂದ ಹುಚ್ಚೆದ್ದು ಬಿಡುತ್ತಿದ್ದೆವು. ನಾವು ಅದಕ್ಕೆ ಮನಸಾರೆ ಹಿಡಿಶಾಪ ಹಾಕುತ್ತಿದ್ದೆವು. ಹಠದಿಂದ ಅಲ್ಲೇ ನಿಂತು ಮೋಡ ಮರೆಯಾಗುವವರೆಗೂ ಕಾಯುತ್ತಿದ್ದೆವು. ಮೋಡ ಮರೆಯಾದರೆ ಮಾತ್ರ ನಾವು ಪೆರುನ್ನಾಳ್ ಆಚರಿಸಬಹುದಿತ್ತು ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಹಾಗಿದ್ದರೆ ಮಾತ್ರ ನಾವು ಹೊಸ ಬಟ್ಟೆಗಳನ್ನು ಧರಿಸಿ ಕಿವಿಯೊಳಗೆ ಅತ್ತರಿನ (ಸುಗಂಧ ದ್ರವ್ಯ) ಪುಟ್ಟ ಹತ್ತಿಯುಂಡೆಗಳನ್ನು ತುರುಕಿ ನಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ರಂಜಾನ್ ಉಡುಗೊರೆಗಳನ್ನು ಕೇಳಬಹುದಿತ್ತು. ಬಿಳಿ ಬಣ್ಣದ ಪುಟ್ಟ ಚಂದ್ರನನ್ನು ಕ್ಷಣಮಾತ್ರಕ್ಕೆ ಕಂಡಕೂಡಲೇ ಆನಪಾರೈ ನಿಂದ ಜಿಗಿಯುತ್ತ ಇಳಿಯುತ್ತಲೇ ಜೋರಾಗಿ ಕಿರಿಚುತ್ತಿದ್ದೆವು.
‘ಏನ್ರೋ ನಿಜವಾಗ್ಲೂ ಚಂದ್ರನನ್ನು ನೋಡಿದಿರೇನು?’ ಎಂದು ನಮ್ಮ ಸಂಭ್ರಮದಲ್ಲಿ ಜೊತೆಯಾಗುತ್ತ ನಾವು ಮಕ್ಕಳು ಹೇಳುವುದು ನಿಜವೋ ಸುಳ್ಳೋ ಎಂದು ಒಬ್ಬರು ಪರಾಂಬರಿಸುತ್ತಿದ್ದರು. ಅವರೇ ‘ಕ್ಯಾಲೆಂಡರ್ ಬಾವಾ’. ಅವರು ಎಂದಿಗೂ ಸುಳ್ಳನ್ನು ಹೇಳಿರಲಿಲ್ಲ. ಕಂಡದ್ದನ್ನು ಕಂಡಹಾಗೆ ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಹೇಳುತ್ತಿದ್ದ ಪ್ರಾಮಾಣಿಕ ವ್ಯಕ್ತಿ ಅವರು. ಅವರೇನಾದರೂ ಒಂದನ್ನು ಹೇಳಿದರೆ, ಅದನ್ನು ಸಾಬೀತುಪಡಿಸಲು ಮತ್ತೆ ಸಾಕ್ಷಿಯ ಅಗತ್ಯ ಬೀಳುತ್ತಿರಲಿಲ್ಲ.

‘ಓಹ್, ನಿಜವಾಗ್ಲೂ ನಾನು ಕಂಡೆ’ ಹೀಗೆಂದು ಬಾವಾ ಹೇಳಿದರೆ ‘ನೋಡಿದ್ದೀರ?’ ಊರಿನ ಮುಖ್ಯಸ್ಥ ಖಚಿತಪಡಿಸಿಕೊಳ್ಳಲೆಂಬಂತೆ ಕೇಳುತ್ತಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ‘ನಾನು ಕಣ್ಣಾರೆ ಕಂಡೆ’ ಎಂದು ಬಾವಾ ನುಡಿಯುತ್ತಿದ್ದರು. ಪ್ರತಿ ವರ್ಷವೂ ಅದೇ ಪ್ರಶ್ನೆ ಅದೇ ಉತ್ತರ ಮುಂದುವರಿಯುತ್ತಿತ್ತು.

ನಗಾರಿ ಬಾರಿಸಿ ಡಂಗುರ ಸಾರಿದ ತಕ್ಷಣ ಮಸೀದಿಯ ಧ್ವನಿವರ್ಧಕದಲ್ಲಿ ಪೆರುನ್ನಾಳಿನ ಅಧಿಕೃತ ಘೋಷಣೆಯನ್ನು ಹೊರಡಿಸಲಾಗುತ್ತಿತ್ತು. ನಮ್ಮ ಹಳ್ಳಿಯಲ್ಲಿ ನಾವು ಕ್ಯಾಲೆಂಡರ್ ನೋಡುತ್ತಿರಲಿಲ್ಲ. ‘ಬಾವಾ’ ನಮ್ಮ ಪಾಲಿನ ಕ್ಯಾಲೆಂಡರಾಗಿದ್ದರು. ಹಳ್ಳಿಯ ಮುಖ್ಯಸ್ಥರೇ ಖುದ್ದು ಬಾವಾರಿಗೆ ಹೊಸ ಬಟ್ಟೆಗಳನ್ನು ಹಬ್ಬಕ್ಕೆಂದು ಕೊಡುತ್ತಿದ್ದರು. ಬಾವಾರಿಗೆ ಹೆಂಡತಿ ಮಕ್ಕಳು ಯಾರೂ ಇರಲಿಲ್ಲ. ಅದೊಂದು
ಧೋತಿ ಮತ್ತು ಟವೆಲ್ ಸೆಟ್. ಜೊತೆಗೆ ಮಸೀದಿಯನ್ನು ಸ್ವಚ್ಛವಾಗಿಡುವ ಸೇವೆಯನ್ನು ಸ್ವಯಂಸ್ಪೂರ್ತಿಯಿಂದ ಮಾಡಲು ಶುರುಮಾಡಿದಂದಿನಿಂದ ಊರವರಿಂದ ದೈನಂದಿನ ಎರಡು ಹೊತ್ತು ಊಟವನ್ನು ಅವರು ಪುಕ್ಕಟೆಯಾಗಿ ಪಡೆಯುತ್ತಿದ್ದರು. ಬೂದುಬಣ್ಣದ ಮಾಸಲು ಗಡ್ಡ, ಕೆಂಪನೆಯ ದುಂಡಗಿನ ಟೋಪಿ, ಸೊಂಟಕ್ಕೆ ಸುತ್ತಿದ ಕಣಕಾಲುಗಳ ತನಕ ಇಳಿಯಬಿಟ್ಟ ಧೋತಿ ಮತ್ತು ಮೊಣಕಾಲುಗಳವರೆಗೆ ಇಳಿಯಬಿಟ್ಟ ತುಂಬಾ ಸಡಿಲವಾದ ಅಂಗಿ – ಇವಿಷ್ಟು ಬಾವಾ ಅವರ ಕುರಿತ ಸಣ್ಣ ವ್ಯಕ್ತಿಚಿತ್ರ.

ಅದ್ರಾಬು, ಸುಲ್ತಾನ್, ಹಮೀದು ಮತ್ತು ಉಳಿದ ನಾವೆಲ್ಲರೂ ಚಂದ್ರನನ್ನು ನೋಡುವ ಸಲುವಾಗಿ ಆನೆಕಲ್ಲನ್ನು ಹತ್ತಿದೆವು. ಎಂದಿನಂತೆ, ಕ್ಯಾಲೆಂಡರ್ ಬಾವಾ ಅವರೂ ಸಾಕ್ಷಿಯಾಗಿ ನಮ್ಮ ಜೊತೆ ಸೇರಿಕೊಂಡರು. ಮದುವೆಯಾಗಿ ತಿರುವನಂತಪುರಂ ಗೆ ಹೋಗಿರುವ ನನ್ನ ಅಕ್ಕ ಅಲ್ಲಿ ನಾಳೆ ಪೆರುನ್ನಾಳ್ ಎಂದು ಉಮ್ಮ(ತಾಯಿ) ಗೆ ಹೇಳಿದಳು. ಅವಳ ಮಾತು ಕೇಳಿ ಉಮ್ಮ ಒಟ್ಟಪ್ಪಮ್, ಪಾಲಡೈ ಹಾಗೂ ಕಿಣ್ಣತ್ತಪ್ಪಮ್ ನಂತಹ ರುಚಿರುಚಿಯಾದ ತಿಂಡಿಗಳನ್ನು ಮಾಡಲು ಅಕ್ಕಿಯನ್ನು ನೀರಿನಲ್ಲಿ ನೆನೆಯಲು ಹಾಕಿದರು. ಕೈಮಣಿ ಸುಂದರಮ್ ನ ಉಡುಗೊರೆಯೆಂದರೆ ಎರಡು ಹುಂಜಗಳು. ಅವುಗಳನ್ನು ಹಗ್ಗಗಳಿಂದ ಬೇಲಿಗೆ ಕಟ್ಟಲಾಗಿತ್ತು. ಅವು ನೆಲಕ್ಕೆ ಕುಕ್ಕಿ ಕಾಳುಗಳನ್ನು ಹೆಕ್ಕುತ್ತಿದ್ದವು. ಅವು ನಾಳೆ ಅಡುಗೆಕೋಣೆಯ ಒಂದು ಪಾತ್ರೆಯಲ್ಲಿ ಘಮಘಮದ ಸಾರಿನೊಳಗಿರುವುದನ್ನು ನಾನು ಈಗಲೇ ಊಹಿಸಬಲ್ಲೆ. ಇದೆಲ್ಲದರ ಜೊತೆಗೆ ತುಪ್ಪ ಹಾಕಿದ ಅನ್ನ ಮತ್ತಿತರ ರುಚಿಯಾದ ತಿಂಡಿಗಳೂ ಇರಬಹುದು.
ಅಲ್ಲಾಹ್! ನಾಳೆ ಪೆರುನ್ನಾಳ್ ಹಬ್ಬವಾಗಲಿ. ಹಬ್ಬಕ್ಕೆ ಸಿಗುವ ಉಡುಗೊರೆಗಳಲ್ಲಿ ಒಂದು ರೂಪಾಯಿಯನ್ನು ನಾನು ನಿನಗೆ ಹರಕೆ ಹೊರುತ್ತೇನೆ.

ಸುಲ್ತಾನನ ಮನೆಯಲ್ಲಿ ಹಬ್ಬಕ್ಕಾಗಿ ಓರಟ್ಟಿ (ಚಪ್ಪಟೆ ರೊಟ್ಟಿ) ಗಳನ್ನು ಮಾಡಲು ಅಕ್ಕಿಹಿಟ್ಟನ್ನು ಬೆರೆಸುತ್ತಿದ್ದರು. ಹಮೀದನ ಅಪ್ಪ ಒಂದು ಮೇಕೆಯನ್ನು ತಂದು ಬೇಲಿಗೆ ಕಟ್ಟಿದ್ದರು.
ನಾವೆಲ್ಲರೂ ಆನೆಕಲ್ಲಿನ ಮೇಲೆ ಕ್ಯಾಲೆಂಡರ್ ಬಾವಾ ಜೊತೆಗಿದ್ದೆವು. ಆಕಾಶವು ಮೋಡಗಳಿಲ್ಲದೆ ಚೆನ್ನಾಗಿ ತೊಳೆದಿಟ್ಟಂತೆ ಶುಭ್ರವಾಗಿತ್ತು. ಕ್ಯಾಲೆಂಡರ್ ಬಾವಾ ಅವರ ಗಡ್ಡದ ಮೇಲಿನ, ತುಟಿಗಳ ಸ್ವಲ್ಪ ಕೆಳಗಿನ ಕೂದಲು ಬೀಡಿಯ ಕಲೆಗಳಿಂದ ಕಂದು ಬಣ್ಣಕ್ಕೆ ತಿರುಗಿತ್ತು. ಅವರು ಮೂಗಿನಿಂದ ಹೊಗೆ ಹೊರಹಾಕಿ ನಮ್ಮನ್ನು ಅಚ್ಚರಿಗೊಳಿಸುತ್ತಿದ್ದರು. ಕುಮಾರಿ ಮಕ್ಕಳ್ ಬೀಡಿಗಳು ಮತ್ತು ಎಲಿ-ಮಾರ್ಕ್ ಬೆಂಕಿಪೊಟ್ಟಣವನ್ನು ನಾವು ಅವರ ಅಂಗಿ ಜೇಬಿಗೆ ತುರುಕಿದರೆ ಮಾರ್ಗಶಿರ ಮಾಸದ ಚಳಿಯಲ್ಲಿ ನಡುಗುತ್ತಿದ್ದ ಕ್ಯಾಲೆಂಡರ್ ಬಾವಾರಿಗೆ ಹೇಳಲಾಗದಷ್ಟು ಖುಷಿ. ಅರಬ್ಬೀ ಸಮುದ್ರದತ್ತಣಿಂದ ಬೀಸಿ ಬರುವ ಸಂಜೆಯ ತಂಗಾಳಿ ತೇವಮಯವಾಗಿತ್ತು. ಸೂರ್ಯನು ಸಮುದ್ರದಲ್ಲಿ ಮುಳುಗಿದಾಗ, ನಮ್ಮ ಕಣ್ಣುಗಳು ಆಕಾಶದತ್ತ ನೆಟ್ಟವು.

‘ಯಾಕೆ ಈ ಬೀಡಿಗಳು?’

‘ಚಳಿ ಅಲ್ವಾ’

‘ಹೌದು, ತುಂಬಾ ಚಳಿ’

‘ಬಾವಾ, ನಮ್ಮ ಉಮ್ಮ ಅಕ್ಕಿಯನ್ನು ನೆನೆಯಲು ಹಾಕಿದ್ದಾರೆ’ ಬಾವಾ ಅದ್ರಾಬುವಿನ ಮಾತುಗಳಿಗೆ ಕಿವಿಗೊಡಲಿಲ್ಲ.

‘ನನ್ನ ಉಮ್ಮ ಹಿಟ್ಟನ್ನು ರುಬ್ಬುತ್ತಿದ್ದಾರೆ’ ಸುಲ್ತಾನ ಹೇಳಿದ.

ಬಾವಾ ಅವರ ಕ್ಯಾಲೆಂಡರ್ ಕಣ್ಣುಗಳು ಮೋಡರಹಿತವಾದ ನೀಲಿ ಆಕಾಶದತ್ತ ನೋಡುತ್ತಿದ್ದವು.
‘ಬಾವಾ, ಚಂದ್ರ ಕಂಡನೇ?’ ಹುಡುಗರಲ್ಲೊಬ್ಬ ಕೇಳಿದನು.

ಪೆರುನ್ನಾಳಿಗಾಗಿ ವಿಶೇಷವಾಗಿ ಮಸೀದಿಯ ಮಿನಾರದ ಮೇಲೆ ಕಟ್ಟಿರುವ ಧ್ವನಿವರ್ಧಕದಿಂದ ಉಪವಾಸ ತೊರೆಯುವ ಹೊತ್ತಿನ ಪ್ರಾರ್ಥನೆಯ ಶಬ್ದಗಳು ಕೇಳಿಸಲಾರಂಭಿಸಿದವು. ಬಾವಾ ಒಂದು ಬೀಡಿಯನ್ನೆಳೆದು ಉಪವಾಸ ತೊರೆದರು.

‘ಅಲ್ನೋಡಿ, ಮೋಡ. ನೋಡಿ.. ನೋಡಿ.. ಒಂದು ನೂಲಿನ ಹಾಗೆ ಏನೋ ಕಾಣ್ತಿದೆಯಲ್ಲಾ..’

ಬಾವಾ ಮೌನವಾಗಿದ್ದರು. ಅವರು ಆಕಾಶಕ್ಕೆ ನೆಟ್ಟ ತನ್ನ ಕಣ್ಣನ್ನು ಕೀಳಲಿಲ್ಲ. ಅಲ್ಲೆಲ್ಲೂ ಮೋಡವಿದ್ದಂತೆ ಕಾಣಲಿಲ್ಲ. ನಾಳೆ ಪೆರುನ್ನಾಳ್ ಆಗುವ ಸಾಧ್ಯತೆ ಇಲ್ಲ ಎಂದು ಬಾವಾ ಮನದಲ್ಲೇ ಅಂದುಕೊಂಡಿರಬೇಕು.

‘ನಾವೆಲ್ಲ ನೋಡಿದೆವು, ಬಾವಾ. ನೀವು ನೋಡಿಲ್ಲವೆ?’

ಬಾವಾ ಮಾತಿಗಾಗಿ ತಡಕಾಡಿದರು.
ಬಹುಶಃ ವಯಸ್ಸಾದ ಕಾರಣದಿಂದ ನನ್ನ ದೃಷ್ಟಿ ಮಂಜಾಗಿರಬಹುದು. ಈ ಮಕ್ಕಳೆಲ್ಲ ಅವರಿಗೆ ಚಂದ್ರ ಕಂಡನೆಂದು ಹೇಳುತ್ತಿದ್ದಾರಲ್ಲ. ಇವರೆಲ್ಲ ಒಳ್ಳೆಯ ಹುಡುಗರು. ಈಗಿನ ಕಾಲದಲ್ಲಿ ನನ್ನ ಕಣ್ಣುಗಳು ಹೆಚ್ಚಿನ ವೇಳೆ ತೇವಗೊಂಡಿರುತ್ತವೆ; ಬಹುಶಃ ದೃಷ್ಟಿ ಕ್ಷೀಣಿಸಿರುವುದರ ಲಕ್ಷಣ ಇರಬಹುದು ಅದು. ನಾನು ಕಣ್ಣಾರೆ ಕಾಣದೆ ಚಂದ್ರದರ್ಶನವಾಯಿತೆಂದು ಹೇಗೆ ಹೇಳಲಿ? ಈ ಎಲ್ಲ ಮಕ್ಕಳೂ ಚಂದ್ರನನ್ನು ಕಂಡೆವೆಂದು ಹೇಳುವಾಗ ನಾನು ಅದನ್ನು ತಳ್ಳಿಹಾಕುವುದಾದರೂ ಹೇಗೆ? ಮುಖ್ಯಸ್ಥನಿಗೆ ನಾನು ಏನೆಂದು ಉತ್ತರ ಕೊಡಲಿ?

ಬಾವಾ ಗೊಂದಲಕ್ಕೊಳಗಾದರು. ಇಷ್ಟರತನಕ ಅವರು ಸುಳ್ಳು ಹೇಳಿರಲಿಲ್ಲ. ಅವರ ಕಣ್ಣುಗಳು ಮಂಜಾಗಿರುವ ವಿಷಯವು ಊರಿನವರಿಗೇನಾದರೂ ತಿಳಿದರೆ ಊರವರೆಲ್ಲ ಸೇರಿ ಅವರನ್ನು ಒದ್ದು ಓಡಿಸುವರು. ‘ಕ್ಯಾಲೆಂಡರ್’ ಎಂಬ ಕಾರಣಕ್ಕಾಗಿ ಮಾತ್ರ ಅವರು ಊರವರ ಗೌರವಕ್ಕೆ ಪಾತ್ರರಾಗಿದ್ದರು. ಹುಡುಗರು ಹೇಳಿದಂತೆ ಆ ಮೋಡವು ಚಂದ್ರನನ್ನು ಮರೆಮಾಡಿರಬಹುದು. ಬಾವಾ ತನ್ನ ನೀರಿಳಿಯುತ್ತಿದ್ದ ಕಣ್ಣುಗಳನ್ನು ಒರೆಸಿಕೊಳ್ಳುತ್ತಿರುವಾಗಲೇ ಮೋಡ ಬಂದು ಅರ್ಧಚಂದ್ರವನ್ನು ಮರೆಮಾಚಿರಬಹುದು.

ಸಂದೇಹಗಳು ತನ್ನ ಮನಸ್ಸನ್ನು ಆವರಿಸಿದವು. ಹರಿತವಾದ ಚಾಕುಗಳನ್ನು ಕಂಡ ಎಳೆಮೇಕೆಗಳು ನಾಳೆ ತಮ್ಮ ಕತ್ತು ಕುಯ್ದು, ಚರ್ಮ ಸುಲಿದು, ಪ್ರಾಣ ಕಳೆದುಕೊಳ್ಳಲಿದ್ದೇವೆ ಎಂದು ತಿಳಿದು ಜೋರಾಗಿ ಅರಚಲಾರಂಭಿಸಿದವು. ಆ ಸದ್ದು ಪಟ್ಟಣದ ಪಶ್ಚಿಮ ಭಾಗದಲ್ಲಿ, ಆನೆಕಲ್ಲಿನ ತಪ್ಪಲಲ್ಲಿ ಕಂಪನವನ್ನು ಉಂಟುಮಾಡಿತು.

ಬಂಡೆಗಲ್ಲಿನ ಮೇಲೆ ನಿಂತುಕೊಂಡು ಪಟ್ಟಣದ ಸಂಭ್ರಮವನ್ನೆಲ್ಲ ನೋಡಬಹುದಿತ್ತು, ಜೊತೆಗೆ ಮಕ್ಕಳ ಸಡಗರವನ್ನೂ.
ನಾನು ಚಂದ್ರನನ್ನು ನೋಡಲಿಲ್ಲ ಎಂದು ಹೇಳಿದರೆ ಇಡೀ ಊರು ದುಃಖದಲ್ಲಿ ಮುಳುಗುತ್ತದೆ. ಈ ಸಂಭ್ರಮ, ಈ ಸಡಗರ ಎಲ್ಲ ಕೊನೆಯಾಗುತ್ತದೆ. ಪಟಾಕಿಗಳನ್ನು ಸಿಡಿಸಿ ಸಂತೋಷದಿಂದ ಓಡಾಡುತ್ತಿರುವ ಮಕ್ಕಳೆಲ್ಲ ಆ ಸುದ್ದಿ ಕೇಳಿದರೆ ಬಸಳೆಯ ಕಾಂಡಗಳಂತೆ ಮುದುಡಿ ಬೀಳುತ್ತಾರೆ. ಈ ಬಡಜನರು ಕಷ್ಟಪಟ್ಟು ನೆನೆಸಿಟ್ಟ ಅಕ್ಕಿ, ರುಬ್ಬಿರುವ ಹಿಟ್ಟುಗಳೆಲ್ಲ..

ಹೊಳೆಯುವ ಹರಿತವಾದ ಚಾಕುಗಳನ್ನು ನೋಡಿ ಸಾವಿನ ಭಯದಿಂದ ಅದಾಗಲೇ ನಡುಗುತ್ತಿದ್ದ ಆ ಮೇಕೆಮರಿಗಳ ಭೀತಿಯನ್ನು ಮುಂದೂಡುವುದು ಅತ್ಯಂತ ಕ್ರೌರ್ಯದ ಕೃತ್ಯವೇ ಸರಿ. ಈ ಪವಿತ್ರ ದಿನದಲ್ಲಿ ಅವುಗಳಿಗೆ ಸಹಾನುಭೂತಿ ತೋರಿಸಲು.. ಅವುಗಳ ಭಯ ಮತ್ತು ಸಂಕಟವನ್ನು ಒಂದು ದಿನ ಕಡಿಮೆ ಮಾಡಲು.. ‘ಚಂದ್ರ ಕಾಣಿಸಿಕೊಂಡನೆ?’ ಅದ್ರಾಬು ಕೂಗಿದನು. ಸುಲ್ತಾನ್ ಮತ್ತು ಹಮೀದು ಆತನಿಗೆ ದನಿಗೂಡಿಸಿದರು. ಕ್ಯಾಲೆಂಡರ್ ಬಾವಾ ಕೈಗಳನ್ನು ಹಿಂದಕ್ಕೆ ಕಟ್ಟಿ ಅವರ ಹಿಂದೆಯೇ ನಡೆದರು, ಗ್ರಾಮದ ಮುಖ್ಯಸ್ಥರು ಮಸೀದಿಯಲ್ಲಿ ಅವರಿಗಾಗಿ ಕಾಯುತ್ತಿದ್ದರು.

‘ಚಂದ್ರನನ್ನು ನೋಡಿದಿರಾ?’

‘ಹೌದು, ನಾನು ಕಣ್ಣಾರೆ ಕಂಡೆ’ ಎಂದು ಹೇಳಲೇ ಅಥವಾ ‘ನಾನು ನೋಡಲಿಲ್ಲ’ ಎಂದು ಹೇಳಲೆ?
ಆ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಅವರ ಕಣ್ಣುಗಳು ತೇವಗೊಂಡವು.

‘ಏನು ಹೇಳುತ್ತೀರಿ ಬಾವಾ?’

‘ನನ್ನ ದೃಷ್ಟಿ ಚೆನ್ನಾಗಿಲ್ಲ’

ಆತ ಈಗ ಜನರಿಗೆ ಬೇಡವಾದ ಮೂಲೆಗುಂಪಾಗಿರುವ ಹಳೆಯದಾದ ಕ್ಯಾಲೆಂಡರ್.

ಊರಿನ ಮುಖ್ಯಸ್ಥರು ನಗಾರಿ ಬಾರಿಸಿ ಧ್ವನಿವರ್ಧಕದಲ್ಲಿ ತಕ್ಬೀರ್ (ಅಲ್ಲಾಹು ಅಕ್ಬರ್ ಎಂಬ ಘೋಷಣೆ) ಕೂಗಿ ಪೆರುನ್ನಾಳ್ ಅನ್ನು ಘೋಷಿಸಲು ಆದೇಶ ನೀಡಿದರು. ಮಕ್ಕಳ ಪಾಲಿಗೆ ಅದು ಹೊಸ ಕ್ಯಾಲೆಂಡರ್.

ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್..

ಫ್ರಂಟ್‌ಲೈನ್ ಇಂಗ್ಲಿಷ್ ಮ್ಯಾಗಜೀನ್ ನಲ್ಲಿ ಪ್ರಕಟವಾದ ಈ ಕತೆಯನ್ನು ಕನ್ನಡಕ್ಕೆ ಅನುವಾದಿಸಿದವರು – ಡಾ. ಸಿ ಯಂ ಹನೀಫ್ ಬೆಳ್ಳಾರೆ

ರಾಷ್ಟ್ರೀಯತೆಯ ಹುಸಿ ದುರಭಿಮಾನದ ಪೊಳ್ಳು ಕಥೆಗಳು: ಎರಿಕ್ ಹಾಬ್ಸ್ ಬಾಮ್ ಕೃತಿ ವಿಮರ್ಶೆ

“ಎರಿಕ್ ಹಾಬ್ಸ್ ಬಾಮ್ ರಾಷ್ಟ್ರೀಯತೆಯನ್ನು ಇಷ್ಟಪಟ್ಟಿರಲಿಲ್ಲ” ಎಂದು ವಿವರಿಸುತ್ತಾರೆ ಡೊನಾಲ್ಡ್ ಸಾಸೂನ್. ರಾಷ್ಟ್ರೀಯತೆಯ ಬಗ್ಗೆ ಇತ್ತೀಚೆಗೆ ಪ್ರಕಟವಾದ ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರರಾದ ಹಾಬ್ಸ್ ಬಾಮ್ ಬರೆದ ಪ್ರಬಂಧಗಳ ಸಮಾಹಾರಕ್ಕೆ ಮುನ್ನುಡಿ ಬರೆಯುತ್ತಾ ಅವರು ಹೀಗೆ ನುಡಿದಿದ್ದಾರೆ.

ರಾಷ್ಟ್ರವಾದ ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಲು ಮತ್ತು ವಿಶ್ಲೇಷಿಸಲು ಸಾಕಷ್ಟು ಸಮಯವನ್ನು ಹಾಬ್ಸ್ ಬಾಮ್ ವ್ಯಯಿಸಿದ್ದರು. ಹಿಂದಿನ ಮತ್ತು ಸದ್ಯದ ಸಮಾಜಗಳಲ್ಲಿ ಅದರ ಅರ್ಥ ಮತ್ತು ಪ್ರಭಾವ ಹೇಗಿತ್ತೆಂಬ ವಿವರಗಳನ್ನು ಅನ್ವೇಷಿಸಲು ಅವರು ಪ್ರಯತ್ನಿಸಿದರು. ಅಂತಿಮವಾಗಿ, “ರಾಷ್ಟ್ರಗಳು ಮತ್ತು ರಾಷ್ಟ್ರೀಯತೆಯ ಇತಿಹಾಸವನ್ನು ಕಲಿಯುವ ಯಾವುದೇ ಗಂಭೀರ ಇತಿಹಾಸಕಾರರು ರಾಜಕೀಯ ರಾಷ್ಟ್ರೀಯವಾದದ ವಕ್ತಾರರಾಗಲು ಸಾಧ್ಯವಿಲ್ಲ” ಎಂಬ ತೀರ್ಮಾನಕ್ಕೆ ಅವರು ಬಂದರು.

1990 ರಲ್ಲಿ ಪ್ರಥಮವಾಗಿ ಪ್ರಕಟವಾದ ಸಣ್ಣ ಆದರೆ ಆಳ ಒಳನೋಟವುಳ್ಳ “1780 ರ ನಂತರದ ರಾಷ್ಟ್ರ ಮತ್ತು ರಾಷ್ಟ್ರೀಯವಾದ” ಎಂಬ ಕೃತಿಯಲ್ಲಿ ಹಾಬ್ಸ್ ಬಾಮ್ ರವರ ಈ ಒಳನೋಟ ಪ್ರಕಟವಾಗಿದೆ. ಸಾಸೂನ್ ಹೇಳಿರುವುದು ಅರ್ಥ ಆಗದವರು ಇದನ್ನೆಲ್ಲಾ ಗಮನಿಸಬೇಕಿದೆ. “ರಾಷ್ಟ್ರೀಯತೆಯ ಕುರಿತು” ಎಂಬ ಸರಳ ಶೀರ್ಷಿಕೆಯನ್ನು ಹೊಂದಿರುವ ಈ ಹೊಸ ಪ್ರಬಂಧಗಳ ಸಂಗ್ರಹ ಹಲವಾರು ಬರಹಗಳು, ಉಪನ್ಯಾಸಗಳು, ಪುಸ್ತಕ ವಿಮರ್ಶೆಗಳು ಮತ್ತು ಇತರ ಪುಸ್ತಕಗಳಿಂದ ಆಯ್ದ ಉಲ್ಲೇಖಗಳನ್ನು ಒಳಗೊಂಡ ಸಮಗ್ರ ಸಂಪುಟ ಎಂದು ಹೇಳಬಹುದು. “ರಾಷ್ಟ್ರಗಳು ಮತ್ತು ರಾಷ್ಟ್ರೀಯತೆ” ಕೃತಿ ಹತ್ತೊಂಬತ್ತನೇ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿದ್ದ ರಾಷ್ಟ್ರೀಯವಾದದ ಕಲ್ಪನೆ ಮತ್ತು ಅದರ ರಾಜಕೀಯ ಅಭಿವ್ಯಕ್ತಿಗಳ ವ್ಯವಸ್ಥಿತ ಅಧ್ಯಯನವಾಗಿದ್ದರೆ, ʼಆನ್ ನ್ಯಾಶನಲಿಸಂʼ ಕೃತಿಯು ವೈವಿಧ್ಯಮಯ ಮತ್ತು ಪ್ರಾಯಶಃ ಹೆಚ್ಚು ವೈಯಕ್ತಿಕ ಹಾಗೂ ಊಹಾತ್ಮಕ ವಿಷಯಗಳನ್ನು ಚರ್ಚಿಸುತ್ತದೆ. ಆದಾಗ್ಯೂ, ಅತೀಂದ್ರಿಯ ರಾಜಕೀಯದ ಒಂದು ವಿಧಾನ ಎಂಬ ನೆಲೆಯಲ್ಲಿನ ಅದರ ಸಾಮರ್ಥ್ಯದ ಬಗ್ಗೆ ಅವರ ಬಲವಾದ ಪೂರ್ವ ನಿಶ್ಚಯಗಳು ಸ್ಥಿರವಾಗಿ ನಿಂತಿರುವುದು ಕಂಡುಬರುತ್ತದೆ.

ಎರಿಕ್ ಹಾಬ್ಸ್ ಬಾಮ್

ಈ ಪೂರ್ವ ನಿಶ್ಚಯಗಳನ್ನು ಅರ್ಥಮಾಡಿಕೊಳ್ಳಲು ಇತಿಹಾಸಕಾರ ಹಾಗೂ ರಾಜಕೀಯ ಚಿಂತಕ ಎಂಬ ನೆಲೆಯಲ್ಲಿನ ಹಾಬ್ಸ್ ಬಾಮ್ ವೃತ್ತಿಜೀವನದ ಕಡೆಗೆ ಕಣ್ಣು ಹಾಯಿಸಿದರೆ ಸಾಕು. 1917 ರಲ್ಲಿ ಪೋಲಿಷ್ ಮತ್ತು ಆಸ್ಟ್ರಿಯನ್ ಮೂಲದ ಯಹೂದಿ ಪೋಷಕರಿಗೆ ಜನಿಸಿದ ಅವರು 1933 ರಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಾಗ ರಾಷ್ಟ್ರೀಯತೆಯ ದಬ್ಬಾಳಿಕೆಯನ್ನು ನೇರವಾಗಿ ಅನುಭವಿಸಿದರು ಮತ್ತು ಅವರ ಕುಟುಂಬ ಬರ್ಲಿನ್ ನಿಂದ ಲಂಡನಿಗೆ ತೆರಳಬೇಕಾಯಿತು. ಅವರ ಎಡಪಂಥೀಯ ಒಲವು ವೃತ್ತಿಜೀವನದ ಬೆಳವಣಿಗೆಯ ಮೇಲೆ ಪರಿಣಾಮ ಬೀರಿತು. ಅವರ ಶೈಕ್ಷಣಿಕ ಮತ್ತು ರಾಜಕೀಯ ಚಟುವಟಿಕೆಗಳ ಮೇಲೆ ನಿಗಾ ಇಡಲು MI5 ಅವರ ಹೆಸರಿನಲ್ಲಿ ಒಂದು ವೈಯಕ್ತಿಕ ಫೈಲನ್ನೇ ತೆರೆದಿತ್ತು. ಇಪ್ಪತ್ತನೇ ಶತಮಾನದ ಅಗ್ರಗಣ್ಯ ಇತಿಹಾಸಕಾರರಲ್ಲಿ ಒಬ್ಬರೆಂಬ ಖ್ಯಾತಿ ಅವರಿಗೆ ಸಿಕ್ಕಿದ್ದರೂ ಕೇಂಬ್ರಿಡ್ಜ್ ಅಲ್ಲಿ ಉಪನ್ಯಾಸ ನೀಡದಂತೆ ತಡೆದು ಅವಕಾಶ ನಿರಾಕರಿಸಲಾಯಿತು. ಆದರೆ ಫ್ರೆಂಚ್ ಕ್ರಾಂತಿ ಮತ್ತು ಮೊದಲನೆಯ ಮಹಾಯುದ್ಧದ ನಡುವಿನ ಅವಧಿಯ ಇತಿಹಾಸದ ಬಗ್ಗೆ ಪಟ್ಟುಬಿಡದೆ ನಡೆಸಿದ ಅನ್ವೇಷಣೆಗಳು ಅವರನ್ನು ರಾಷ್ಟ್ರ ಕಲ್ಪನೆಯ ಸಮಯಾತೀತತೆಯನ್ನು ತೀವ್ರವಾಗಿ ಅನುಮಾನಿಸುವಂತೆ ಮಾಡಿತು ಮತ್ತು ರಾಷ್ಟ್ರವಾದದ ಆವಿಷ್ಕಾರ ಹತ್ತೊಂಬತ್ತನೆಯ ಶತಮಾನದ ನಂತರದ ಅತ್ಯಂತ ಜನಪ್ರಿಯ ರಾಜಕೀಯ ಸಂಪ್ರದಾಯ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿತು. ಭಾಷೆ ಅಥವಾ ಜನಾಂಗೀಯತೆ ಮುಂತಾದ ಯಾವುದೇ ನಿಯತಾಂಕಗಳನ್ನು ರಾಷ್ಟ್ರೀಯತೆಯ ಸ್ಥಿರ, ನಿರ್ವಿವಾದ ಮತ್ತು ಪೌರಾಣಿಕವಲ್ಲದ ತಾರ್ಕಿಕತೆಯಾಗಿ ಮತ್ತು ಪವಿತ್ರತೆಯನ್ನು ಪ್ರಕಟಿಸುವ ‘-ism’ ಗಳಾಗಿ ಸ್ವೀಕರಿಸಲು ಅವರು ಸಿದ್ಧರಿರಲಿಲ್ಲ.
ಪ್ರಸ್ತುತ ಸಂಪುಟದಿಂದ ಸ್ಪಷ್ಟವಾಗುವಂತೆ, ತಮ್ಮ ಸಹ ನಾಗರಿಕರ ರಕ್ತವನ್ನು ತನ್ನ ಹೆಸರಿನಲ್ಲಿ ಬೇಟೆಯಾಡಲು ಅನುವಾಗುವ ರೀತಿಯಲ್ಲಿ ಲಕ್ಷಾಂತರ ಜನರ ಮೇಲೆ ರಾಷ್ಟ್ರೀಯವಾದ ಹೊಂದಿರುವ ಅಪಾಯಕಾರಿ ಪ್ರಭಾವವನ್ನು ಗುರುತಿಸಲು ಕೂಡಾ ಅವರಿಗೆ ಸಾಧ್ಯವಾಗಿತ್ತು. ಹತ್ತೊಂಬತ್ತನೇ ಶತಮಾನದಲ್ಲಿ ರಾಷ್ಟ್ರವಾದ ಗಳಿಸಲು ಪ್ರಾರಂಭಿಸಿದ ಅತೀಂದ್ರಿಯ, ಶಾಶ್ವತ ಹಾಗೂ ವಾಸ್ತವಿಕವಲ್ಲದ ಸ್ವರೂಪವೇ ವಿರೋಧಿಗಳಿಗೆ ದಿಗಿಲು ಹುಟ್ಟಲು ಮತ್ತು ಅದು ಎಲ್ಲಾ ತರದ ವೈಚಾರಿಕ ಸೆಳೆತಗಳಿಗೂ ಹೊಂದುವಂತಾಗಲು ಕಾರಣವಾಗಿದೆ ಎಂದು ಅವರು ಮನಗಾಣಿಸುತ್ತಾರೆ. ಫಾಲ್ಸಿಫಿಕೇಶನ್ ತತ್ವ ಹಾಗೂ ಪುರಾವೆಗಳಲ್ಲಿ ಮಾತ್ರ ನಂಬಿ ವಾಸ್ತವೀಕರಿಸಲು ಸಾಧ್ಯವಿಲ್ಲದ್ದನ್ನು ತಳ್ಳಿ ಹಾಕುವ ಜಾಯಮಾನದ ಇತಿಹಾಸಕಾರರಾಗಿಯೂ ಅವರು ಸದ್ರಿ ವಿಶ್ಲೇಷಣೆ ನಡೆಸುತ್ತಿದ್ದಾರೆನ್ನುವುದು ಗಮನಾರ್ಹ.

ಪ್ರಸ್ತುತ ಸಂಪುಟದಲ್ಲಿನ ಪ್ರಬಂಧಗಳನ್ನು ಎರಡು ವಿಭಾಗಗಳಲ್ಲಾಗಿ ಸಂಕಲಿಸಲಾಗಿದೆ. ಒಂದನೆಯದ್ದು “ಇತಿಹಾಸದಲ್ಲಿ ರಾಷ್ಟ್ರೀಯತೆ” ಮತ್ತು ಎರಡನೆಯದ್ದು”ರಾಷ್ಟ್ರೀಯತೆಯ ಅಪಾಯಗಳು.” ಮೊದಲ ವಿಭಾಗದಲ್ಲಿ, ಹಾಬ್ಸ್‌ ಬಾಮ್ ರವರ ಅತ್ಯಂತ ಪ್ರಸಿದ್ಧ ಕೃತಿಗಳಾದ‌ ʼದಿ ಏಜ್ ಆಫ್ ರೆವಲ್ಯೂಷನ್ʼ, ʼದಿ ಏಜ್ ಆಫ್ ಕ್ಯಾಪಿಟಲ್ʼ ಮತ್ತು ʼದಿ ಏಜ್ ಆಫ್ ಎಂಪೈರಿʼನ ಸಂಪಾದಿತ ಸಂಪುಟ ಹಾಗೂ ʼದಿ ಇನ್ವೆನ್ಶನ್ ಆಫ್ ಟ್ರೆಡಿಶನ್ʼನ ಬಹುತೇಕ ಆಯ್ದ ಭಾಗಗಳಿವೆ. ಸಾಮ್ರಾಜ್ಯದ ಭೌಗೋಳಿಕ ವಿಸ್ತರಣೆಯ ತರ್ಕದ ಜಾಗದಲ್ಲಿ ಜನಾಂಗೀಯ-ಭಾಷಾ ವ್ಯತ್ಯಾಸಗಳನ್ನು ರಾಜಕೀಯ ಅಸ್ಮಿತೆಯ ರಚನೆ ಮತ್ತು ಸಾಕ್ಷಾತ್ಕಾರದ ಆಧಾರವಾಗಿ ತೆಗೆದುಕೊಳ್ಳುವ ನೇಷನ್-ಸ್ಟೇಟುಗಳು ಬಂದ “ದೀರ್ಘ ಹತ್ತೊಂಬತ್ತನೇ ಶತಮಾನದ” ಯುಗಗಳ ಬಗೆಗಿನ ಮೊದಲ ಭಾಗ ವಿವರಿಸುತ್ತದೆ. ʼದ ಇನ್ವೆನ್ಶನ್ ಆಫ್ ಟ್ರಡೀಶನ್ʼ ಕೃತಿಯ ಆಯ್ದ ಭಾಗಗಳು ಕೆಲವು ಸಾಂಕೇತಿಕ ಕ್ರಿಯೆಗಳ ಆಚರಣೆಗಳು ಸೈದ್ಧಾಂತಿಕ ಕಾಲ್ಪನಿಕತೆಯ ಶಕ್ತಿಯನ್ನು ಹೇಗೆ ಬಲಪಡಿಸುತ್ತದೆ ಎಂದು ವಿವರಿಸುತ್ತದೆ. ಜತೆಜತೆಗೆ, ಅದು ಹೇಗೆ ಸಮಾನವಾದ ಮೌಲ್ಯಗಳು, ಆಚರಣೆಗಳು ಮತ್ತು ದ್ವೇಷಗಳು ಇರುವ ಮಿಥ್ಯಾಜಗತ್ತನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಮಹತ್ವಪೂರ್ಣವಾಗಿ ಸಾಬೀತುಪಡಿಸುತ್ತಿದೆ. ಎರಡನೆಯ ವಿಭಾಗವು ರಾಷ್ಟ್ರೀಯತೆಯೊಂದಿಗೆ ವ್ಯವಹರಿಸುವ ಪುಸ್ತಕಗಳ ಕೆಲವು ವಿಮರ್ಶೆಗಳನ್ನು ಹೊಂದಿದೆ ಮತ್ತು ಎಂಭತ್ತರ ಫಾಕ್ಲ್ಯಾಂಡ್ ಯುದ್ಧದಂತಹ ಸ್ಥಳೀಯ ವಿಷಯಗಳ ಕುರಿತ ವ್ಯಾಖ್ಯಾನಗಳನ್ನು ಹೊಂದಿದೆ. ಸೋವಿಯತ್ ಒಕ್ಕೂಟದ ಪತನದ ನಂತರ ಯುರೋಪಿನಲ್ಲಿ ಉಂಟಾಗಲಿರುವ ಉಗ್ರಗಾಮಿ ರಾಷ್ಟ್ರೀಯತೆಯ ಉಗಮದ ಕುರಿತ ಭಯ ಹುಟ್ಟಿಸುವ ಹಾಗೂ ಬೇಸರದಿಂದ ತುಂಬಿದ ಎಚ್ಚರಿಕೆಯ ಮಾತು ಈ ಬರಹಗಳಲ್ಲಿ (ಮೊದಲ ವಿಭಾಗದಲ್ಲಿಯೂ ಸಹ) ಪುನರಾವರ್ತಿತವಾದ ಆಶಯ. ಹಾಬ್ಸ್ ಬಾಮ್ ತನ್ನ ಭವಿಷ್ಯವಾಣಿಗಳು ನಿಜವಾಗುತ್ತಿರುವುದನ್ನು ಮತ್ತು ಜನಪ್ರಿಯ ರಾಷ್ಟ್ರೀಯತೆಯ ಹೊಸ ಅಲೆಯು ಇಡೀ ಜಗತ್ತನ್ನು ಆವರಿಸುವುದನ್ನು ನೋಡುತ್ತಾ 2012 ರವರೆಗೆ ಬದುಕಿದ್ದರು.

ಯುಗಗಳ ಬಗೆಗಿನ ಸರಣಿಯ ಕೊನೆಯ ಪುಸ್ತಕವಾದ “ ದಿ ಏಜ್ ಆಫ್ ಎಕ್ಸ್ಟ್ರೀಮ್ಸ್”ನಲ್ಲಿ ಅವರು ಪ್ರತಿಪಾದಿಸಿದ ಹಾಗೆ, ಎರಡು ಮಹಾಯುದ್ಧಗಳ ನಡುವಿನ ಭಯಾನಕ ಸಮಯವನ್ನು ಹೋಲುವ ರೀತಿಯಲ್ಲಿ ರಾಷ್ಟ್ರೀಯತೆಯ ಹೆಸರಿನಲ್ಲಿ ಉಗ್ರತೆ ಮೆರೆಯುವ ರಾಜಕೀಯ ಇಚ್ಛಾಶಕ್ತಿಯ ಬಲವರ್ಧನೆ ನಡೆಯುತ್ತಿರುವ ಈ ಕಾಲದಲ್ಲಿ ಹಾಬ್ಸ್ ಬಾಮ್‌ ರವರ ರಾಷ್ಟ್ರೀಯತೆಯ ಕುರಿತಾದ ಆಶಯಗಳು ದಿನದಿಂದ ದಿನಕ್ಕೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ ಎಂದು ಬೇರೆ ಹೇಳಬೇಕಾಗಿಲ್ಲ. ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪ್ರದಾಯಗಳ ಆವಿಷ್ಕಾರ ಮತ್ತು ವಿಮರ್ಶೆಯ ನಿರಾಕರಣೆ ನಮ್ಮ ಮೇಲೆ ಬಲವಂತವಾಗಿ ಹೇರಲಾಗುತ್ತಿರುವ, ಜನಾದೇಶಗಳ ಹೆಸರಿನಲ್ಲಿ ಸಾಮೂಹಿಕ ಭೂತಕಾಲವನ್ನು ಪೌರಾಣಿಕಗೊಳಿಸುವ ಪ್ರಯತ್ನಗಳು ಪ್ರಶ್ನೆಗೆ ಒಳಪಡದಿರುವ, ರಾಷ್ಟ್ರಾಭಿಮಾನದ ಸಂಕೇತಗಳು ಐತಿಹಾಸಿಕ ಸತ್ಯಾಸತ್ಯತೆ ಪರೀಕ್ಷಣೆಯ ಹಂಗಿಲ್ಲದೆ ವಿರಾಜಮಾನವಾಗುತ್ತಿರುವ ಈ ಅತಿರೇಕದ ಯುಗದಲ್ಲಿ, “ರಾಷ್ಟ್ರೀಯತೆಯು ಒಂದು ಐತಿಹಾಸಿಕ ವಿದ್ಯಮಾನವಾಗಿದ್ದು ನಿಕಟಪೂರ್ವ ಭೂತಕಾಲದ ಉತ್ಪನ್ನವಷ್ಟೆ. ಸ್ವತಃ ಬದಲಾವಣೆಗೆ ಒಳಪಡುತ್ತಿರುವ ಇದು ಅನಿರ್ದಿಷ್ಟವಾಗಿ ಮುಂದುವರಿಯುವ ಸಾಧ್ಯತೆಯಿಲ್ಲ” ಎಂದು ನಮ್ಮನ್ನು ನಾವೇ ನೆನಪಿಸಿಕೊಳ್ಳಬೇಕಾಗಿದೆ. ಸುಳ್ಳು ದುರಭಿಮಾನ ಮತ್ತು ಕಠಿಣ ನೀತಿಕಥೆಗಳಿಂದ ಪ್ರಯೋಜನ ಪಡೆಯುವ ಶಕ್ತಿಗಳನ್ನು ನಿಷ್ಠುರವಾಗಿ ಬಹಿರಂಗಪಡಿಸುವ ಈ ಸಮಯೋಚಿತ ಸಂಪುಟವನ್ನು ಸಂಪಾದಿಸಿದ ಡೊನಾಲ್ಡ್ ಸಾಸೂನ್ ರವರಿಗೆ ಖಂಡಿತಾ ಕೃತಜ್ಞತೆಗಳು ಸಲ್ಲಬೇಕು. ಅದೇ ವೇಳೆ, ದ್ವೇಷಪೂರಿತ ಪ್ರಚಾರಗಳಿಗೆ ಒಳಗಾಗುವ ಜನಸಾಮಾನ್ಯರ ದುರದೃಷ್ಟಕರ ಪರಿಸ್ಥಿತಿಗಳನ್ನು ಕೂಡಾ ಗಮನದಲ್ಲಿಟ್ಟುಕೊಳ್ಳಬೇಕು.

-ಇಮಾನ್ ಮಿತ್ರ
ಕನ್ನಡಕ್ಕೆ: ನಝೀರ್ ಅಬ್ಬಾಸ್

(ಲೇಖಕರು ದೆಹಲಿಯ ಪ್ರತಿಷ್ಠಿತ ಶಿವನಾಡಾರ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.)

Dr. Iman Mitra
Assistant Professor
Department of History and Archaeology
School of Humanities and Social Sciences (SHSS)
Shiv Nadar University

ಇಸ್ಲಾಮಿಕ್ ನಾಗರಿಕತೆಯ ಅನನ್ಯ ಕೃತಿಗಳು ಮತ್ತು ರಚನಾ ಪರಂಪರೆ

ಜಾಗತಿಕವಾಗಿ ಪಠ್ಯ ರೂಪದಲ್ಲಿರುವ ಹಲವು ಕೃತಿಗಳು ಮನುಷ್ಯರ ವಿಭಿನ್ನವಾದ ದೃಷ್ಟಿಕೋನಗಳನ್ನು, ಜೀವನಶೈಲಿಗಳನ್ನು ಮತ್ತು ವೈಜ್ಞಾನಿಕ ಕ್ಷೇತ್ರಗಳನ್ನು ಪ್ರತಿಫಲಿಸುತ್ತದೆ. ಆಧುನಿಕ ಪ್ರಕಟಣೆಗಳ ಆಗಮನಕ್ಕಿಂತ ಮೊದಲು ಧಾರಾಳ ಪುಸ್ತಕಗಳನ್ನು ರಚಿಸುವುದು ಹಾಗೂ ಅವುಗಳನ್ನು ಮತ್ತೆ ನಕಲು ಮಾಡಿಡುವ ರೀತಿಯಿತ್ತು. ಅಂತಹ ಹಲವು ರಚನೆಗಳು ಇಂದಿಗೂ ಲಭ್ಯವಿದೆ.

ಇಸ್ಲಾಮಿಕ್ ಸಂಸ್ಕೃತಿ, ನಾಗರಿಕತೆ ಮತ್ತು ಪರಂಪರಾಗತ ರಚನಾ ರೂಪಗಳಾದ ಶರಹ್ (Scholia, ವಿವರಣೆ)ಗಳು ಹಾಗೂ ಹಾಶಿಯಾ (Footnote, ಟಿಪ್ಪಣಿ)ಗಳ ಮೂಲಕ ಮುಂದಿನ ತಲೆಮಾರಿಗಾಗಿ ಮೂಲಗ್ರಂಥಗಳನ್ನು (ಮತ್ನ್‌ಗಳು) ಸಂರಕ್ಷಿಸಲ್ಪಟ್ಟಿದೆ.

ʼಮತ್ನ್‌ಗಳುʼ ಅಂದರೆ ಪ್ರತ್ಯೇಕ ವಿಷಯಗಳಲ್ಲಾಗಿ ಬರೆಯಲ್ಪಟ್ಟಿರುವ ಸರಳ ರಚನೆಗಳಾಗಿವೆ. (ಹಿಂದಿನ ಕಾಲದ) ವಿದ್ಯಾರ್ಥಿಗಳು ಅವುಗಳನ್ನು ಕಂಠಪಾಠ ಮಾಡುತ್ತಾ ಅಧ್ಯಯನಗೈಯುವುದು ರೂಢಿಯಾಗಿತ್ತು. ಮತ್ನ್‌ಗಳು ಅದರಲ್ಲಿ ಪ್ರತಿಪಾದಿಸುವ ವಿಷಯಗಳ ಮೇಲೆ ಸಾಮಾನ್ಯ ತಿಳುವಳಿಕೆಯನ್ನು ನೀಡುತ್ತದೆ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದ ವಿಭಿನ್ನ ನಿಲುವು, ವಾದ, ವಿಶಾಲ ದೃಷ್ಟಿಕೋನಗಳು ಅದರಲ್ಲಿ ಇರುವುದಿಲ್ಲ.

ಶರಹ್ ಎಂಬ ಅರಬಿ ಪದಕ್ಕೆ ʼವಿಭಜಿಸುವುದು, ಪ್ರತ್ಯೇಕಿಸುವುದುʼ ಎಂಬರ್ಥವಿದೆ. ಮತ್ನ್‌ಗಳಲ್ಲಿ ವಿವರಿಸಲ್ಪಡದ ವಿಷಯಗಳ ಮೇಲೆ ಶರಹ್ ಸ್ಪಷ್ಟತೆಯನ್ನು ನೀಡುತ್ತದೆ. ಅದೇ ರೀತಿ ಹಾಶಿಯಗಳು ಶರಹಿನಲ್ಲಿ ಪ್ರತಿಪಾದಿಸುವ ವಿಷಯಗಳ ಮೇಲೆ ಸವಿವರ ಮಾಹಿತಿಗಳನ್ನು ನೀಡುವುದರೊಂದಿಗೆ ವಿಷಯದ ಕುರಿತು ಆಳ ಅರಿವಿನತ್ತ ಕೊಂಡೊಯ್ಯುತ್ತದೆ. ಅಂತಹ ವಿವರಣಾತ್ಮಕ ಗ್ರಂಥಗಳು ಅಸಮರ್ಪಕವೆಂಬ ಭಾವನೆಯಿದ್ದರೆ ಅಥವಾ ವಿಭಿನ್ನವಾದ ವಿವರಣೆಗಳು ಲಭ್ಯವಾದಲ್ಲಿ ಅದೇ ಪಠ್ಯಗಳಿಗೆ ಹೊಸ ಶರಹ್ ಮತ್ತು ಹಾಶಿಯಾಗಳನ್ನು ಬರೆಯಲಾಗುತ್ತಿತ್ತು. ಹೀಗೇ ಅನೇಕ ಗ್ರಂಥಗಳು ಇಸ್ಲಾಮಿಕ್ ವೈಜ್ಞಾನಿಕ ವಲಯದಲ್ಲಿ ರಚನೆಗೊಂಡವು. ಮೂರ್ನಾಲ್ಕು ಶತಮಾನಗಳ ಹಿಂದೆ ಬರೆಯಲ್ಪಟ್ಟ ಇಸ್ಲಾಮಿಕ್ ನಾಗರಿಕತೆಯ ಹಲವು ರಚನೆಗಳು ಇಂದಿಗೂ ಲಭ್ಯವಿರುವುದು ಭಾರೀ ವಿಶೇಷತೆಯಾಗಿದೆ.

2012ರಲ್ಲಿ ‘ಹಾಶಿಯಗಳು ಹಾಗೂ ಬೌದ್ಧಿಕ ಚರಿತ್ರೆಗಳು’ ಎಂಬ ಶೀರ್ಷಿಕೆಯಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಆಯೋಜಿಸಿದ ಕಾನ್ಫರೆನ್ಸ್‌ನಲ್ಲಿ ಶರಹುಗಳ ಹಾಗೂ ಹಾಶಿಯಾಗಳ ಪರಂಪರೆಯ ಕುರಿತು ಗಮನಾರ್ಹ ಚರ್ಚೆ ನಡೆಯಿತು.

ಇಸ್ಲಾಮಿಕ್ ನಾಗರಿಕತೆಯಲ್ಲಿ ಬರೆಯಲ್ಪಟ್ಟ ಕೃತಿಗಳ ಪೈಕಿ ಹತ್ತು ದಶಲಕ್ಷ ಕೃತಿಗಳು ಇಂದು ಲಭ್ಯವಿದೆ ಎಂದು ಕಾನ್ಫರೆನ್ಸ್‌ನಲ್ಲಿ ಮಂಡಿಸಲ್ಪಟ್ಟ ಪ್ರಬಂಧಗಳು ಹೇಳುತ್ತವೆ. ಅವುಗಳ ಪೈಕಿ ಕೇವಲ ಶೇಕಡಾ ಹತ್ತರಷ್ಟು ಗ್ರಂಥಗಳನ್ನು ಮಾತ್ರ ಸದ್ಯ ಅಧ್ಯಯನ ಮಾಡಲಾಗುತ್ತಿದೆ ಎಂದೂ ಚಿಂತಕರು ಅಭಿಪ್ರಾಯ ಪಡುತ್ತಾರೆ.

ಹಾರ್ವರ್ಡ್ ಯುನಿವರ್ಸಿಟಿಯ ಅರಬ್-ಇಸ್ಲಾಮಿಕ್ ಬೌದ್ಧಿಕ ಇತಿಹಾಸ ವಿಭಾಗದ ಪ್ರೊಫೆಸರ್ ಆದ ಖಾಲಿದ್ ಅಲ್ ರುಹೈಬಿಯವರು (Khalid al Rouheyb) ಈ ಬಗೆಗಿನ ಸಮಗ್ರ ಅಧ್ಯಯನ ಮಾಡಿದ್ದಾರೆ. ʼIslamic intellectual history in the seventeenth century: Scholarly currents in the ottoman empire and the Magrib’ ಎಂಬ ತನ್ನ ಪುಸ್ತಕದಲ್ಲಿ ಒಟ್ಟೋಮನ್ ಆಡಳಿತಾವಧಿಯಲ್ಲಿ ರಚಿಸಲ್ಪಟ್ಟ ಧಾರಾಳ ಗ್ರಂಥಗಳ ವೈಜ್ಞಾನಿಕ ವಾತಾವರಣದ ಅಸ್ತಿತ್ವವನ್ನು ನಿರೂಪಿಸುತ್ತಾರೆ.

ಇಸ್ಲಾಮಿಕ್ ಸಂಸ್ಕೃತಿ ಮತ್ತು ನಾಗರಿಕತೆಗೆ ಸಂಬಂಧಿಸಿದ ಇಂತಹ ಸಾವಿರಾರು ಕೃತಿಗಳ ಪೈಕಿ ಅನೇಕ ಕೃತಿಗಳು ಭೌಗೋಳಿಕ ವ್ಯಾಪ್ತಿ ಮತ್ತು ಶತಮಾನಗಳನ್ನು ಮೀರಿ ನಿಲ್ಲುತ್ತದೆ. ಅವುಗಳ ಪೈಕಿ ಸುದೀರ್ಘ ಕಾಲ ಮುಸ್ಲಿಂ ಸಮುದಾಯವನ್ನು ಪ್ರಭಾವಿಸಿದ ಹಾಗೂ ಅವರ ಹೃದಯವನ್ನು ಬೆಳಗಿಸಿದ ಕೆಲವು ಕೃತಿಗಳ ಕುರಿತು ಅರಿಯೋಣ.

ಆಧ್ಯಾತ್ಮಿಕ ಆನಂದದ ರಹಸ್ಯ

ಸೂಫೀ ಕೃತಿಗಳಲ್ಲಿ ಅಧಿಕವೂ ಪ್ರಸಿದ್ಧಿಗೊಂಡಿರುವುದು ಅದರ ಕರ್ತೃ‌ಗಳು ಅಳವಡಿಸಿದ್ದ ಆಧ್ಯಾತ್ಮಿಕ ಜೀವನಶೈಲಿಯಿಂದಾಗಿದೆ. ಅಂತಹ ಸೂಫಿಗಳು ಸಂಗಮಿಸಿದಾಗ ನಡೆಯುವ ಗ್ರಂಥಗಳಾಧಾರಿತ ಚರ್ಚೆಗಳು ಇಸ್ಲಾಮಿಕ್ ವೈಜ್ಞಾನಿಕ ಕ್ಷೇತ್ರದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಮತ್ತು ದರ್ವೇಶ್‌ಗಳು ಎಲ್ಲಾ ಸಂದರ್ಭಗಳಲ್ಲೂ ವಿವಿಧ ಗ್ರಂಥಗಳನ್ನು ಓದುವುದರೊಂದಿಗೆ ಅದನ್ನು ಅಧ್ಯಯನಗೈಯುತ್ತಿದ್ದರು.

ಪ್ರಧಾನ ಸೂಫೀ ರಚನೆಗಳು ವಿಶ್ವಾಸಿಗಳನ್ನು ಕೇವಲ ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಭೌತಿಕವಾಗಿಯೂ ಪೋಷಿಸುತ್ತವೆ ಎಂಬುವುದು ಅಲ್ಲಗಳೆಯಲಾಗದ ವಾಸ್ತವ. ಪರ್ಷಿಯನ್ ತತ್ವಚಿಂತಕರಾದ ಅಬೂ ಹಾಮಿದ್ ಮುಹಮ್ಮದ್ ಅಲ್-ಗಝ್ಝಾಲಿಯವರ ಗ್ರಂಥಗಳು ಭೌತಶಾಸ್ತ್ರದ ಹಲವು ತರ್ಕಗಳಿಗೆ ದಿಕ್ಕು ತೋರಿಸುತ್ತದೆ.

1058ರಲ್ಲಿ ಇರಾನಿನ ಖುರಾಸಾನ್ ಪಟ್ಟಣದ ತೂಸ್ ಎಂಬಲ್ಲಿ ಜನಿಸಿದ ಇಮಾಂ ಗಝ್ಝಾಲಿಯ ಕೃತಿಗಳು ವಿಜ್ಞಾನ ಕ್ಷೇತ್ರಕ್ಕೆ ಲಗ್ಗೆಯಿಟ್ಟು ಅನೇಕ ಚರ್ಚೆಗಳತ್ತ ಬೆಳಕು ಚೆಲ್ಲಿತು. ಮಹಾನುಭಾವರ ದಾರ್ಶನಿಕ ಕ್ರಾಂತಿಯು ಅವರನ್ನು ಹುಜ್ಜತುಲ್ ಇಸ್ಲಾಂ ( The proof of Islam) ಎಂಬ ಅನ್ವರ್ಥನಾಮದಿಂದ ಖ್ಯಾತಿಗೊಳಿಸಿತು. ಪಶ್ಚಿಮ ಏಷ್ಯಾದ ಮಾಂಗೋಲಿಯನ್ ಅತಿಕ್ರಮಣದಿಂದಾಗಿ ಇಮಾಮರ ಹಲವು ಕೃತಿಗಳು ನಾಶಗೊಂಡರೂ ಸಂಶೋಧಕರನೇಕರು ಅವರ ಕೃತಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಲು ನಿರಂತರವಾಗಿ ಶ್ರಮಿಸಿದ್ದರು. ಫ್ರೆಂಚ್ ಓರಿಯಂಟಲಿಸ್ಟ್ ಆದ ಮೌರಿಸ್ ಬೌಗ್ಯೂಸ್ ಸುಮಾರು 404 ರಷ್ಟು ಗಝಾಲಿಯನ್ ರಚನೆಗಳನ್ನು ಉಲ್ಲೇಖಿಸುತ್ತಾರೆ.

ಸಾವಿರ ವರ್ಷಗಳಿಂದೀಚೆಗೆ ಓದಲ್ಪಡುತ್ತಿರುವ ಹಾಗೂ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿರುವ ‘ಇಹ್ಯಾ ಉಲೂಮುದ್ದೀನ್’ ಇಮಾಂ ಗಝ್ಝಾಲಿಯವರ ಪ್ರಮುಖ ಕೃತಿಗಳಲ್ಲೊಂದು. ಇಸ್ಲಾಮಿಕ್ ಜ್ಞಾನ ಜಗತ್ತಿನ ಮಹತ್ವದ ರಚನೆಗಳಲ್ಲೊಂದಾದ ಪ್ರಸ್ತುತ ಗ್ರಂಥವು ನಾಲ್ಕು ಸಂಪುಟಗಳಲ್ಲಾಗಿ ಪ್ರಕಟಗೊಂಡಿದೆ.

ಹೆಚ್ಚಿನ ಜನರನ್ನು ತಲುಪಿಸುವ ಸಲುವಾಗಿ ʼಇಹ್ಯಾ ಉಲೂಮುದ್ದೀನ್‌ʼನ ಪರ್ಷಿಯನ್ ಭಾಷಾಂತರವನ್ನು ಸ್ವತಃ ಇಮಾಮರೇ ರಚಿಸಿದ್ದಾರೆ. ವಿವಿಧ ಭಾಷೆಗಳಿಗೆ ತರ್ಜುಮೆಗೈಯಲ್ಪಟ್ಟು ಇಂದು ಜಾಗತಿಕ ಮಟ್ಟದಲ್ಲಿ ಅಸಂಖ್ಯಾತ ಓದುಗರನ್ನು ಹೊಂದಿರುವ ಅಲ್‌ಕೀಮಿಯಾಉಸ್ಸಆದಃ (The alchemy of happiness) ಇಮಾಂ ಗಝ್ಝಾಲಿಯವರ ಮತ್ತೊಂದು ಮಹತ್ವದ ಕೃತಿ.

ಇಮಾಂ ಗಝ್ಝಾಲಿಯವರ ರಚನೆಗಳು ಹೊರಹೊಮ್ಮಿದ್ದು ಆಫ್ರಿಕಾ, ಭಾರತ, ಕಾಕಸ್, ಅರಬ್ ರಾಷ್ಟ್ರಗಳ ಸಹಿತ ಮುಸ್ಲಿಂ ಭೂಪ್ರದೇಶಗಳಲ್ಲಿರುವ ಪ್ರಮುಖ ಗ್ರಂಥಾಲಯಗಳಿಂದ. ಗಝ್ಝಾಲಿಯನ್ ಕೃತಿಗಳಿಗೆ ಸಂಬಂಧಿಸಿದಂತೆ ವಿವಿಧ ಅಧ್ಯಯನಗಳು, ಸಂಶೋಧನೆಗಳು ನಡೆದಿವೆ. ಶತಮಾನಗಳು ಕಳೆದರೂ ಗಝ್ಝಾಲಿಯವರ ಕೃತಿಗಳು ಇಂದಿಗೂ ಕಳೆಗುಂದದೆ ಹೊಳೆಯುತ್ತಿದೆ.

ಉತ್ಕೃಷ್ಟ ರಚನೆ

ಇಮಾಂ ಗಝ್ಝಾಲಿಯ ಕಾಲಾನಂತರ ಸುಮಾರು ಎರಡು ಶತಮಾನಗಳ ನಂತರ ಜನಿಸಿದ ಮೌಲಾನ ಜಲಾಲುದ್ದೀನ್ ರೂಮಿ ಅವರ ಬರೆಹಗಳು ತಸವ್ವುಫ್ ವಿಭಾಗದಲ್ಲಿ ಮತ್ತೆ ಪ್ರಸಿದ್ಧಿ ಪಡೆದ ಕೃತಿಗಳು. ಆರು ಸಂಪುಟಗಳಿರುವ ಮಸ್ನವಿ ರೂಮಿಯ ಅತ್ಯಂತ ಪ್ರಮುಖ ರಚನೆ. ರೂಮಿಯ ರಚನೆಗ ಇಮಾಂ ಗಝ್ಝಾಲಿಯವರ ರಚನಾಶೈಲಿಗಿಂತ ತೀರಾ ಭಿನ್ನವಾಗಿ ಕಾವ್ಯಾತ್ಮಕ ರೂಪದಲ್ಲಿದೆ. ರೂಮಿಯ ಕೃತಿಗಳನೇಕವೂ ಒಟ್ಟೋಮನ್ ಯುಗದ ಮೇರು ಕೃತಿಗಳಾಗಿ ಪರಿಗಣಿಸಲ್ಪಡುತ್ತದೆ.

ರಚನೆ ಪರ್ಷಿಯನ್ ಭಾಷೆಯಲ್ಲಾಗಿದ್ದರೂ ರೂಮೀ ಗ್ರಂಥಗಳು ಆನಾಟೋಲಿಯಾದಂತಹ ತುರ್ಕಿಶ್ ಪ್ರದೇಶಗಳಲ್ಲೂ ಬಹಳ ಅಂಗೀಕಾರ ಪಡೆಯಿತು. ರೂಮಿಯ ಮಸ್ನವಿ ರಮಳಾನ್ ಹಾಗೂ ಇತರ ಪುಣ್ಯ ದಿನ ರಾತ್ರಿಗಳಲ್ಲಿ ಪಾರಾಯಣಗೈಯಲ್ಪಡುತ್ತಿದೆ. ತುರ್ಕಿಶ್ ಭಾಷೆಯಲ್ಲಿ ಮಸ್ನವಿ ಧಾರಾಳ ಪರಿಭಾಷೆಗಳನ್ನು ಹೊಂದಿದೆ‌. ಅವುಗಳಲ್ಲಿ ಅಧಿಕವೂ ಪದ್ಯ ರೂಪದಲ್ಲಿಯೇ ಭಾಷಾಂತರಗೊಂಡಿದೆ.

ನಖ್ಶಬಂಧಿ ತ್ವರೀಕತಿನ ಶೈಖ್ ಹಾಗೂ ಸೂಫೀಯೂ ಆದ ಶಾಹ್ ಗುಲಾಂ ಅಲೀ ದಹ್ಲವಿಯವರು ರೂಮಿಯ ಮಸ್ನವಿಯನ್ನು ಆಲಿಸುವುದು ಮತ್ತು ಪಾರಾಯಣಗೈಯುವುದನ್ನು ರೂಢಿಗೊಳಿಸಿದ್ದರು. “ಖುರ್‌ಆನ್ ಹಾಗೂ ಹದೀಸುಗಳ ಬಳಿಕ ಅತ್ಯಂತ ಉತ್ಕೃಷ್ಟ ರಚನೆಯೆಂದರೆ ಅದು ಮೌಲಾನಾ ಜಲಾಲುದ್ದೀನ್ ರೂಮಿಯ ಮಸ್ನವಿ.” ಎಂದು ಅವರು ಮಸ್ನವಿ ಕುರಿತು ಅಭಿಪ್ರಾಯ ಪಡುತ್ತಾರೆ.

ಅದ್ವಿತೀಯ ಗ್ರಂಥ

ಅತ್ತ ಅನಾಟೋಲಿಯಾದಲ್ಲಿ ವಾಸಿಸಿದ್ದ ಓರ್ವ ಸೂಫಿಯ ಗ್ರಂಥ ಭಾರತದಲ್ಲಿ ಪ್ರಭಾವ ಬೀರಿದಾಗ ಇತ್ತ ಭಾರತೀಯ ಸೂಫಿಯೊಬ್ಬರ ಕೃತಿ ಅನಾಟೋಲಿಯಾದಲ್ಲೂ ಖ್ಯಾತಿ ಪಡೆಯಿತು. ಹದಿನಾರನೇ ಶತಮಾನದಲ್ಲಿ ಜೀವಿಸಿ ʼಇಮಾಂ ರಬ್ಬಾನೀʼ ಎಂಬ ಅಪರನಾಮ ಗಳಿಸಿದ್ದ ಸೂಫೀ ಅಹ್ಮದ್ ಅಲ್ ಫಾರೂಖ್ ಅಲ್- ಸರ್‌ಹಿಂದೀ (ರ) ಅವರ ʼಮಕ್ತೂಬಾತ್ʼ ಎಂಬ ಕೃತಿ ಅದು.

‘ಮಕ್ತೂಬಾತೇ ಇಮಾಂ ರಬ್ಬಾನೀʼ ಇಮಾಂ ರಬ್ಬಾನೀ ಬರೆದ ಪತ್ರಗಳ ಸಮಗ್ರ ಸಂಗ್ರಹ. ಹಿಜ್ರಃ ಎರಡನೇ ಶತಮಾನದಲ್ಲಿ ಇಸ್ಲಾಮಿಕ್ ಜ್ಞಾನ ವಲಯಗಳನ್ನು ಸಮೃದ್ಧಗೊಳಿಸುವುದರಲ್ಲಿ ಮಹಾನುಭಾವರು ನಡೆಸಿದ ಸಂಶೋಧನೆ ಮತ್ತು ರಚನೆಗಳು ಅವರಿಗೆ ʼಮುಜದ್ದಿದ್ʼ ಎಂಬ ವಿಶಿಷ್ಟ ಪದವಿಯನ್ನೂ ಪ್ರದಾನಿಸಿತು. ಮೂರು ಸಂಪುಟಗಳಲ್ಲಾಗಿ ಪ್ರಸ್ತುತ ಗ್ರಂಥ ಪ್ರಸಿದ್ಧಿ ಪಡೆದಿದೆ.

ಇಮಾಂ ರಬ್ಬಾನಿ ತನ್ನ ಶಿಷ್ಯಂದಿರಿಗೆ ಕಳುಹಿಸಿದ್ದ ಪತ್ರಗಳು ಸರ್ವಾಂಗೀಕೃತವೂ ಸಾರ್ವಕಾಲಿಕವೂ ಆದ ಅತ್ಯಮೂಲ್ಯ ರಚನೆಗಳಾಗಿತ್ತು. ಪರ್ಷಿಯನ್ ಭಾಷೆಯಲ್ಲಿ ಬರೆಯಲ್ಪಟ್ಟ ಈ ಪತ್ರಗಳು ಒಂದು ಕೃತಿಯಾಗಿ ಕ್ರೋಢೀಕರಿಸಲ್ಪಟ್ಟು ಇಸ್ಲಾಮಿಕ ಬೌದ್ಧಿಕ ವ್ಯವಹಾರ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರವನ್ನೂ ಪಡೆಯಿತು. ಮಹಾನುಭಾವರು ಮರಣಿಸಿ ಐದು ಶತಮಾನಗಳು ಕಳೆದ ನಂತರವೂ ಮಕ್ತೂಬಾತಿಗೆ ಲಭಿಸುತ್ತಿರುವ ಪುರಸ್ಕಾರ ಅದರ ಸ್ವೀಕೃತಿಯ ಸ್ಪಷ್ಟ ನಿದರ್ಶನವಾಗಿದೆ.

ಸೂಫಿಸಂ ಹಾಗೂ ಇಸ್ಲಾಮಿಕ್ ನೀತಿ ನ್ಯಾಯ ವ್ಯವಸ್ಥೆಗಳ ಬಗ್ಗೆ ಸಮಗ್ರವಾದ ತಿಳುವಳಿಕೆ ನೀಡುವ ಅದ್ವಿತೀಯ ಗ್ರಂಥವಾಗಿದೆ ಇಮಾಂ ರಬ್ಬಾನಿಯ ಮಕ್ತೂಬಾತ್ ಎಂದು ಅನಾಟೋಲಿಯಾದ ಸುನ್ನೀ ವಿದ್ವಾಂಸರಲ್ಲಿ ಪ್ರಮುಖರಾಗಿದ್ದ ಅಬ್ದುಲ್ ಹಕೀಂ ಅರ್ವಾದೀ ಪ್ರತಿಪಾದಿಸಿದ್ದರು. ಇಮಾಂ ರಬ್ಬಾನಿಯವರನ್ನು ಅವರ ಸಮಕಾಲೀನ ವಿದ್ವಾಂಸರು ಸಿಲಃ(ಒಗ್ಗೂಡಿಸುವವರು) ಎಂಬ ಹೆಸರಿನಿಂದ ಕರೆಯುತ್ತಿದ್ದರು. ಇಮಾಂ ರಬ್ಬಾನಿಯವರ ಪ್ರಕಾರ ಲೌಕಿಕತೆ, ಆಧ್ಯಾತ್ಮಿಕತೆ, ಇಸ್ಲಾಮಿಕ್ ಶಿಷ್ಟಾಚಾರ, ಸೂಫಿಸಂ, ಹೃದಯ, ಮನಸ್ಸು ಎಲ್ಲವೂ ಒಂದು ಪಕ್ಷಿಯ ಎರಡು ರೆಕ್ಕೆಗಳಂತೆ ಜೊತೆಯಾಗಿ ಕಾರ್ಯನಿರ್ವಹಿಸಬೇಕಾದ ವಿಚಾರವಾಗಿದೆ.

ಮೂಲ: ಡಾ ಅಲಿ ತುಫೆಕ್ಚಿ
ಅನುವಾದ: ಶಂಸ್ ಗಡಿಯಾರ್

ಬಾಹ್ಯಾಕಾಶ ಚಲನೆ ಹಾಗೂ ಆಧುನಿಕ ಮುಸ್ಲಿಮರ ದೃಷ್ಟಿಕೋನಗಳು

ಸರಿಸುಮಾರು ಸಾವಿರ ವರ್ಷಗಳ ಹಿಂದೆ ಮುಸ್ಲಿಂ ಚಿಂತಕರು, ವಿದ್ವಾಂಸರು ವೈಜ್ಞಾನಿಕ ಅಧ್ಯಯನದ ಸುವರ್ಣ ಯುಗಕ್ಕೆ ಮುಹೂರ್ತವಿಟ್ಟಿದ್ದಾರೆ. ಅವರು ಗ್ರೀಕ್, ಸಂಸ್ಕೃತ ಭಾಷೆಗಳಲ್ಲಿದ್ದ ಖಗೋಳಶಾಸ್ತ್ರದ ಕೃತಿಗಳನ್ನು ಅರೇಬಿಕ್ ಭಾಷೆಗೆ ತರ್ಜುಮೆ ಮಾಡಿ ಹೊಸ ಜಗತ್ತನ್ನು ತೆರೆದರು. ಆಕಾಶ ಲೋಕಗಳ ನಿಗೂಢತೆಗಳ ಬಗ್ಗೆ ಅಧ್ಯಯನ ಮಾಡಲು ಈ ಗ್ರಂಥಗಳು ಹಸಿರು ನಿಶಾನೆ ತೋರಿಸಿದ್ದೇ ಅಲ್ಲದೆ ಅವರದ್ದೇ ಆದ ಅಧ್ಯಯನದ ಹೊಸ ರೂಪು ರೇಷೆಗೆ ಮೇಲ್ಪಂಕ್ತಿ ಹಾಕಲು ಇದು ನಿಮಿತ್ತವಾಯಿತು. ಅವರು ಸೂರ್ಯ ಮತ್ತು ಚಂದ್ರನ ಚಲನೆ ನಿಖರವಾಗಿ ದಾಖಲಿಸಿ, ಭೂಮಿಯಿಂದ ನೋಡಬಹುದಾದ ಇತರ ಗೋಳಗಳ ವ್ಯಾಸ (Diameter) ಲೆಕ್ಕಹಾಕಿ, ಭೂಮಿಯಲ್ಲಿ ಅದರ ಸ್ಪಷ್ಟ ಸ್ಥಾನಗಳನ್ನು ಅರ್ಥೈಸಿದರು.

ಎಂಟನೇ ಶತಮಾನದಲ್ಲಿ ಆರಂಭಗೊಂಡು ಸುಮಾರು ಹದಿನಾಲ್ಕನೇ ಶತಮಾನದವರೆಗೆ ಮುಂದುವರಿದ ಇಸ್ಲಾಮಿಕ್ ಸುವರ್ಣ ಯುಗದ ಕುರಿತಾಗಿದೆ ಮೇಲಿನ ವಿವರಣೆ. ಆದರೆ ಈ ಮಧ್ಯಕಾಲೀನ ಸಾಧನೆಗಳ ಬಗೆಗಿನ ಚರ್ಚೆಗಳ ತೆರೆಯ ಮರೆಯಲ್ಲಿ ಪಶ್ಚಿಮೇಷ್ಯಾದಂತಹ ಪ್ರದೇಶಗಳ ಆಧುನಿಕ ಮುಸ್ಲಿಮರು ಪ್ರಸ್ತುತ ಈ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಮುನ್ನಡೆಗಳು ಕಾಣದಂತಾಗಿವೆ. ಸೌರವ್ಯೂಹದ ಆಚೆಗಿನ ಗ್ರಹಗಳನ್ನು ಕಂಡುಹಿಡಿಯಲು ಜಗತ್ತಿನಾದ್ಯಂತ 2010 ರಲ್ಲಿ ಖತರ್ ನಡೆಸಿದ ‘Qatar Exoplanet Survey’ ಸಮೀಕ್ಷೆ ಇದಕ್ಕೊಂದು ತಾಜಾ ಉದಾಹರಣೆ.

‘ಇತರರಿಗೆ ಹೋಲಿಸಿದರೆ ಅರಬ್ ಲೋಕದ ವಿಜ್ಞಾನಿಗಳ ಪರಿಚಯ ಹೆಚ್ಚಿನವರಿಗೆ ಇಲ್ಲ. ಹೆಚ್ಚಿನವರಿಗೆ ಅರಬಿ ಹೆಸರಿನ ಉಗ್ರಗಾಮಿಗಳನ್ನು ತಿಳಿದಿದೆ. ಒಮ್ಮೆಯೂ ಅರಬ್ ವಿಜ್ಞಾನಿಗಳ ಹೆಸರುಗಳನ್ನು ಅವರು ಕೇಳುತ್ತಲೇ ಇಲ್ಲ. ಇಂತಹಾ ತಪ್ಪುಧೋರಣೆಯ ಹಿನ್ನೆಲೆಯಲ್ಲಿ ಅರಬ್ ಉಗ್ರಗಾಮಿಗಳ ಕುರಿತು ಬಂದಿರುವ ಹೇರಳ ಪುಸ್ತಕಗಳ ಪ್ರಭಾವ ಇರಬಹುದು!’ ಎಂದು ಖತಾರಿನ ವರ್ಜೀನಿಯಾ ಕಾಮನ್ ವೆಲ್ತ್ ಯುನಿವರ್ಸಿಟಿಯ ಸಹ ಪ್ರಾಧ್ಯಾಪಕರಾದ ಮಥಿಯಾಸ್ ಡೆಟರ್ಮನ್ ಅಭಿಪ್ರಾಯ ಪಡುತ್ತಾರೆ. Space science and Arab world: Astronaut’s, observatories and Nationalism in the Middle East ಎಂಬ ತನ್ನ ನೂತನ ಪುಸ್ತಕದಲ್ಲಿ ಮಥಿಯಾಸ್ ಡೆಟರ್ಮನ್ ಈ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತಾರೆ. ಈ ಕ್ಷೇತ್ರದ ವಿವಿಧ ವಿಜ್ಞಾನಿಗಳ ಸಾಧನೆಗಳ ಬಗ್ಗೆ ಪುಸ್ತಕ ಪರಿಶೀಲನೆ ಮಾಡಿದೆ. ಅವರ ಯೋಜನೆಯಲ್ಲಿ 1800 ರಲ್ಲಿ ಸ್ಥಾಪಿಸಿದ ಮೊದಲ ಬಾಹ್ಯಾಕಾಶ ವೀಕ್ಷಣಾಲಯದಿಂದ ಹಿಡಿದು 2020 ರಲ್ಲಿ ನಡೆದ ಮಂಗಳ ಗ್ರಹದ ಸಂಶೋಧನೆ ಸಹಿತ ಎಲ್ಲವನ್ನೂ ಒಳಗೊಂಡಿದೆ.

ಮರೀನಾ ಕೋರನ್: ಸುವರ್ಣ ಯುಗವನ್ನು ಬದಿಗಿಟ್ಟು, ಪಶ್ಚಿಮೇಷ್ಯದ ಆಧುನಿಕ ಬಾಹ್ಯಾಕಾಶ ಪರಿವೀಕ್ಷಣೆ ಬಗೆಗಿನ ಅನ್ವೇಷಣೆಗಳತ್ತ ಗಮನ ಹರಿಸುವ ನಿರ್ಧಾರಕ್ಕೆ ತಾವು ಬಂದದ್ದು ಯಾಕೆ?

ಮಥಿಯಾಸ್ ಡೆಟರ್ಮನ್: “೧೮೦೦ ರ ಶತಮಾನದ ನಂತರ ಅರಬ್ ಲೋಕದಲ್ಲಿ ನಡೆಯುತ್ತಿರುವ ಬಾಹ್ಯಾಕಾಶ ಅನ್ವೇಷಣೆಗಳ ಬಗೆಗಿನ ಅಧ್ಯಯನಗಳು ಅಷ್ಟೇನೂ ನಡೆದಿಲ್ಲ. ವಿಶೇಷವಾಗಿ, ಮಧ್ಯಯುಗದ ಅರಬ್, ಮುಸ್ಲಿಂ ವೈಜ್ಞಾನಿಕ ಪ್ರಗತಿಯ ಸಂಶೋಧನೆಗೆ ಹೋಲಿಸಿದಾಗ ಬೆರಳೆಣಿಕೆಯಷ್ಟು ಬಾಹ್ಯಾಕಾಶ ಪರಿಶೋಧನೆಗಳ ಅಧ್ಯಯನ ಮಾತ್ರ ನಡೆದಿರುವುದು! ವಿಜ್ಞಾನವು ಇತಿಹಾಸದೊಂದಿಗೆ ಮುಂದಡಿಯಿಡುತ್ತಿದ್ದು ಇತಿಹಾಸದ ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ಅರಬ್ ಲೋಕಕ್ಕೆ ಏನನ್ನಾದರೂ ಮಾಡಲು ಸಾಧ್ಯವಾಗಿದೆ ಎಂಬ ನಂಬಿಕೆ ಸಾಮಾನ್ಯವಾಗಿ ಬೀಡುಬಿಟ್ಟಿದೆ ಸಾವಿರಗಟ್ಟಲೆ ವರ್ಷಗಳ ಹಿಂದೆ ವಿಜ್ಞಾನವು, ಪುರಾತನ ಬ್ಯಾಬಿಲೋನಿಯಾ ಸಮುದಾಯದೊಂದಿಗೆ ಜನ್ಮತಾಳಿತೆಂದೂ, ಅದರ ಸಣ್ಣ ಭಾಗ ಪುರಾತನ ಚೀನೀಯರೊಂದಿಗೂ, ಮುಂದುವರಿದು ರೋಮ್, ಗ್ರೀಕ್ ಸಂಸ್ಕೃತಿಗೆ ಹಸ್ತಾಂತರವಾಗಿ ಬಳಿಕ ಅರಬಿಯನ್ನರಿಗೆ ತಲುಪಿ ಅವರದನ್ನು ಸಂರಕ್ಷಿಸಿ, ಅದನ್ನು ತಮ್ಮದೇ ಆದ ರೀತಿಯಲ್ಲಿ ಅಭಿವೃದ್ಧಿ ಪಡಿಸಿದರು. ಬಳಿಕ ಯುರೋಪಿಗೆ ಹಸ್ತಾಂತರಿಸಲಾಯಿತು. ಯುರೋಪ್ ನವೋತ್ಥಾನದ ಮೂಲಕ ಅಂತಿಮವಾಗಿ ವಿಜ್ಞಾನ ಇಂದಿನ ಕೇಂದ್ರವಾದ ಅಮೇರಿಕಾಕೆ ತಲುಪಿತು ಎಂಬ ರೀತಿಯಲ್ಲಿ ನೆರೆಟಿವ್ ಇದೆ.

ನಮ್ಮಲ್ಲಿ ಪ್ರಾಚೀನ ಗ್ರೀಕ್, ಪರ್ಷಿಯನ್ ಗ್ರಂಥಗಳ ಸಂರಕ್ಷಿಸುವಿಕೆಯಲ್ಲೂ, ಅನುವಾದ ಮಾಡುವುದರಲ್ಲೂ ಮಧ್ಯಕಾಲೀನ ಅರಬ್ ಮುಸ್ಲಿಂ ಚಿಂತಕರ ಪಾತ್ರ ವಿವರಿಸುವ ಸಾಕಷ್ಟು ಪುಸ್ತಕಗಳಿವೆ. ಮಾತ್ರವಲ್ಲದೇ ಆಧುನಿಕ ಯುರೋಪಿಗೆ ಜ್ಞಾನ ಹಸ್ತಾಂತರದ ಇತಿಹಾಸ ಅಧ್ಯಯನ ಮಾಡಲು ಹಲವು ಸ್ಕಾಲರ್ಶಿಪ್ಗಳು ನಮ್ಮ ಮುಂದಿದೆ. ಈ ನಸಂಕಥನದ ಪ್ರಕಾರ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಶೇಷತಃ ಯುರೋಪಿನಲ್ಲಿ ಐಸಾಕ್ ನ್ಯೂಟನ್, ಗೆಲಿಲಿಯೋರಂತಹ ಘಟಾನುಘಟಿ ವಿಜ್ಞಾನಿಗಳ ಕಾಲದಲ್ಲಿ ವೈಜ್ಞಾನಿಕ ಕ್ರಾಂತಿಗಳು ನಡೆಯುತ್ತಾ ಇರುವಾಗಲೇ ಅರಬ್ ಮುಸ್ಲಿಂ ಲೋಕದಲ್ಲಿ ಚಾಲ್ತಿಯಲ್ಲಿದ್ದ ಸುವರ್ಣ ಯುಗಕ್ಕೆ ಕೊನೆಗಾಣುತ್ತದೆ. ಈ ಸಂಕಥನ ಪ್ರಶ್ನಾರ್ಹ.

“ಈ ಸಂಕಥನ ಪ್ರಶ್ನಾರ್ಹ ಎಂದು ತಾವು ಸೂಚಿಸಲು ಕಾರಣ?”

ಇದು ಪಾಶ್ಚಾತ್ಯ ಜಗತ್ತಿನಲ್ಲಿ ಮಾತ್ರ ನೆಲೆಯೂರಿರುವ ದೃಷ್ಟಿಕೋನವಲ್ಲ. ಅರಬ್ ಜಗತ್ತಿನಲ್ಲಿ ಕೂಡಾ ಇಂತದೆ ದೃಷ್ಟಿಕೋನ ಚಾಲ್ತಿಯಲ್ಲಿದೆ. ಅರಬ್ ಮುಸ್ಲಿಂ ಲೋಕದಲ್ಲಿ ಸಾವಿರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ವಿಜ್ಞಾನದೊಂದಿಗೆ ಬಗ್ಗೆ ಜಾಸ್ತಿ ನೊಸ್ಟಾಲ್ಜಿಕ್ ಆಗಿ ಅನುಸಂಧಾನ ನಡೆಸುವುದು ಸ್ವಲ್ಪ ಅಪಾಯಕಾರಿ. ಅದು ಪ್ರಗತಿಗಾಮಿತನ ಬೆಳೆಸಲು ಮಾತ್ರ ಉಪಯುಕ್ತ. ‘ಸಾವಿರ ವರ್ಷಗಳ ಹಿಂದಿನ ಸುವರ್ಣ ಯುಗದಲ್ಲಿ ನಮ್ಮ ವಿಜ್ಞಾನ ವಿಶ್ವದಲ್ಲೇ ಪರಿಣಾಮಕಾರಿಯಾಗಿತ್ತು ಹಾಗೂ ಸಾರ್ವಭೌಮತೆಯನ್ನು ಪಡೆದಿತ್ತು. ಮತ್ತೆ ದಾರಿ ತಪ್ಪಿದ್ದು ಎಲ್ಲಿ ? ಬಹುಶಃ ನಾವು ಶತಮಾನಗಳ ಹಿಂದಿನ ಇಸ್ಲಾಮ್ ಹೇಗಿತ್ತೋ ಅಲ್ಲಿಗೆ ಮರಳಬೇಕಿದೆ. ಇದಲ್ಲದೆ ಸಾವಿರ ವರ್ಷಗಳ ಹಿಂದಿನ ಸಾಮಾಜಿಕ- ಸಾಂಸ್ಕೃತಿಕ ವಿಚಾರಗಳಿಗೂ ಕೂಡಾ! ಇಂತಹ ಚಿಂತನೆ ಅಪಾಯಕಾರಿಯಾದ ಮೂಲಭೂತವಾದಕ್ಕೋ ಸಲಫಿಸಮ್ಗೋ ಕೊಂಡೊಯ್ಯಲು ಕಾರಣವಾಗುತ್ತದೆ.

ನಾನು ಇಂದು ಜಗತ್ತಿನಲ್ಲಿರುವ ಅರಬ್ ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು, ಗಗನಯಾತ್ರಿಗರ ಬಗ್ಗೆ ಸಮೀಕ್ಷೆ ನಡೆಸಲು ಪ್ರಯತ್ನಿಸುತ್ತಿದ್ದೇನೆ. ಅರೇಬಿಕ್ ಭೂಪ್ರದೇಶಗಳಾದ್ಯಂತ ಯುನಿವರ್ಸಿಟಿಗಳು ಹಾಗೂ ಸಂಶೋಧನಾ ಕೇಂದ್ರಗಳಿವೆ. ಆದರೆ ಅಲ್ಲಿ ನಡೆಯುತ್ತಿರುವ ಸಂಶೋಧನೆ, ಅಧ್ಯಯನ ಯಾವುದೂ ನಮ್ಮ ಕಿವಿಗೆ ಮುತುತ್ತಿಲ್ಲ! ಬಹುಶಃ ಅರಬ್ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿರುವ ಬೆರಳೆಣಿಕೆಯಷ್ಟು ಸುಶಿಕ್ಷಿತರಿಗೆ ಮಾತ್ರ ಮಧ್ಯಕಾಲೀನ ಮುಸ್ಲಿಮ್ ವಿದ್ವಾಂಸರ ಪರಿಚಯ ಇರಬಲ್ಲದು. ನನ್ನ ಪ್ರಕಾರ ಕೆಲವೇ ಕೆಲವು ಜನರಿಗೆ ಮಾತ್ರ ಅರಬ್ ಗಗನಯಾತ್ರಿಗಳ ಬಗ್ಗೆ ತಿಳಿದಿರುವುದು. ಇತರರಿಗೆ ಹೋಲಿಸಿದರೆ ಅರಬ್ ಜಗತ್ತಿನ ವಿಜ್ಞಾನಿಗಳ ಅರಿವು ತುಂಬಾನೇ ಕಡಿಮೆ.”

ಮಧ್ಯಕಾಲೀನ ಪೂರ್ವಿಕರ ಬಗ್ಗೆ ಆಧುನಿಕ ಖಗೋಳಶಾಸ್ತ್ರಜ್ಞರ ಅಭಿಪ್ರಾಯವೇನು?


ಮೊದಲನೆಯದಾಗಿ ಸುವರ್ಣ ಯುಗವು ಅವರ ಪರಂಪರೆಯ ಪ್ರಧಾನ ಅಂಗ. ಭಾರೀ ದುಬಾರಿಯಾದ ಖಗೋಳಶಾಸ್ತ್ರದ ಅಧ್ಯಯನಗಳಿಗೆ ಹಣ ಮಂಜೂರು ಮಾಡುವಂತೆ ಸರ್ಕಾರವನ್ನು ಮನವೊಲಿಸಲು ಈ ಪರಂಪರೆಯನ್ನು ಉಪಯೋಗಿಸಬಹುದು. ಓರ್ವ ಗಗನಯಾತ್ರಿಯನ್ನು (astronaut) ಬಾಹ್ಯಾಕಾಶಕ್ಕೆ ಕಳುಹಿಸುವುದು, ಅದಕ್ಕಾಗಿ ರಾಕೆಟ್ ನಿರ್ಮಾಣ, ದೊಡ್ಡ ಟೆಲಿಸ್ಕೋಪ್ಗಳ ನಿರ್ವಹಣೆ ಎಲ್ಲಾ ದುಬಾರಿ ಯೋಜನೆಗಳಾಗಿವೆ. ಆದ್ದರಿಂದ ಮಿಲಿಟರಿ , ಶಾಲೆ, ಆಸ್ಪತ್ರೆಗಳಿಗಿಂತ ಹೊಸ ಬಾಹ್ಯಾಕಾಶ ದೂರದರ್ಶಕಗಳ ಮೂಲಕ ಪರಿಶೋಧನೆ ಮಾಡಲು ಶತಕೋಟಿ ಡಾಲರುಗಳಷ್ಟು ಖರ್ಚು ಮಾಡಬೇಕಾಗುತ್ತದೆ.

ಮಧ್ಯಕಾಲೀನ ವಿದ್ವಾಂಸರ ಹೆಸರಿನ ಬೀದಿಗಳು ಇಂದಿಗೂ ಅಲ್ಲಿ ಅಸ್ತಿತ್ವದಲ್ಲಿದೆ. ಮಧ್ಯಕಾಲೀನ ಪರ್ಷಿಯನ್ ವೈದ್ಯ ಹಾಗೂ ಬರಹಗಾರನಾದ ಇಬ್ನು ಸೀನಾರ (Avisenna) ಹೆಸರಿನ ಪಟ್ಟಣಗಳಿವೆ. ನಾನು ವಾಸಿಸುವ ದೋಹಾದಲ್ಲಿರುವ ಔಷಧಾಲಯಗಳು ಇಬ್ನಾ ಸೀನಾರ ನಾಮದಿಂದ ಸುಪ್ರಸಿದ್ಧ. ಇಂಗ್ಲೆಂಡ್ ಹಾಗೂ ಕೇಂಬ್ರಿಡ್ಜ್ನಂತೆ ಸೈನ್ಸ್ ಹಾಗೂ ಟೆಕ್ನಾಲಜಿ ಉದ್ಯಾನವನಗಳನ್ನು ಇಂದು ಕತಾರ್ ಹೊಂದಿದೆ. ಅಮೇರಿಕನ್ ಯುನಿವರ್ಸಿಟಿಯನ್ನು ಸುತ್ತುವರಿದ ಹಬ್ಬಿನ ಹಾಗೆ ಇರುವ ನಿರ್ಮಾಣವಾಗಿದೆ ಇದು. ಹೃದ್ಯವಾಗಿ ಗೋಚರಿಸುವ ಈ ಹಬ್ಬುಗಳನ್ನು ಉಕ್ಕು ಮತ್ತು ಗಾಜಿನಿಂದ ನಿರ್ಮಿಸಲಾಗಿದೆ. ಇದರೊಳಗಿರುವ ಪ್ರತೀ ಮೀಟಿಂಗ್ ರೂಮಿಗೆ ಅರೇಬ್ಯನ್ ಮುಸ್ಲಿಂ ವಿದ್ವಾಂಸರ ನಾಮವನ್ನು ಇಡಲಾಗಿದೆ. ಈ ಸುವರ್ಣ ಯುಗದ ಸ್ಮರಣೆ, ಐತಿಹ್ಯ, ಪರಂಪರೆಗಳೆಲ್ಲವೂ ಆಧುನಿಕ ವಿಜ್ಞಾನದ ಒಂದು ಸುಪ್ರಧಾನ ಸಾನಿಧ್ಯ.

ನಿಮ್ಮ ಅಭಿಪ್ರಾಯ ಪ್ರಕಾರ ಮಧ್ಯಪ್ರಾಚ್ಯದಲ್ಲಿನ ಬಾಹ್ಯಾಕಾಶ ವಿಜ್ಞಾನದ ಆಧುನಿಕ ಇತಿಹಾಸ ಎಲ್ಲಿಂದ ಪ್ರಾರಂಭವಾಗುತ್ತದೆ..!?

ಆಧುನಿಕ ಇತಿಹಾಸವು ಹತ್ತೊಂಬತ್ತನೇ ಶತಮಾನದಿಂದ ಪ್ರಾರಂಭವಾಯಿತು. ಬಹುಶಃ ಪ್ರಪಂಚದ ಹೀಲಿಯೋ ಸೆಂಟ್ರಿಕ್ ದೃಷ್ಟಿಕೋನ ಆರಂಭಗೊಳ್ಳುವ ಸಮಯ. ಆ ಸಂದರ್ಭದಲ್ಲಿ ಸೌರವ್ಯೂಹ ಹಾಗೂ ಹಲವು ಗ್ರಹಗಳ ಕುರಿತು ಹಲವಾರು ಸಂಶೋಧನಾ ಪ್ರಬಂಧಗಳನ್ನು ಅರಬಿ ಭಾಷೆಗೆ ಅನುವಾದಿಸಿಲಾಗಿತ್ತು. ಅದೇ ವೇಳೆ ಆಧುನಿಕ ಟೆಲಿಸ್ಕೋಪ್ಗಳನ್ನು ಉಪಯೋಗಿಸಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ೧೮೭೦ ರ ದಶಕದಲ್ಲಿ ಸಿರಿಯನ್ ಪ್ರೊಟೆಸ್ಟೆಂಟ್ ಕಾಲೇಜಿನಲ್ಲಿ ಸ್ಥಾಪಿಸಲಾದ ವೀಕ್ಷಣಾಲಯವು ಇದಕ್ಕೆ ತಾಜಾ ಉದಾಹರಣೆ. ನಂತರ ಈ ಸಂಸ್ಥೆಗೆ ಅಮೇರಿಕಾ ಯುನಿವರ್ಸಿಟಿ ಆಫ್ ಬೈರೂತ್ ಎಂದು ಮರು ನಾಮಕರಣ ಮಾಡಲಾಯಿತು. 1880 ರಲ್ಲಿ ಈಜಿಪ್ಟ್ ಸರ್ಕಾರ ಮತ್ತು ಬ್ರಿಟಿಷ್ ವಸಾಹತುಶಾಹಿ ಸರ್ಕಾರವು ಈಜಿಪ್ಟಿನಲ್ಲಿ ನಿರ್ಮಿಸಿದ ಸಂಶೋಧನಾ ಕೇಂದ್ರಗಳು ಕೂಡಾ ಈ ಇತಿಹಾಸದ ಭಾಗ.

ಮುಂದಿನ ಶತಮಾನಕ್ಕೆ ಪ್ರವೇಶಿಸುವುದಾದರೆ ನೀವಲ್ಲಿ ಈಜಿಪ್ಶ್ಯ ನ್ ಸೈಂಟಿಸ್ಟ್ ಫಾರೂಖ್ ಅಲ್-ಬಾಸ್ ಬಗ್ಗೆ ಬರೆದಿದ್ದೀರಿ. 1970ರ ವೇಳೆಗೆ ಈಜಿಪ್ಟಿನ ಅಧ್ಯಕ್ಷರ ಸಲಹೆಗಾರನಾಗಿಯೂ ವಾಷಿಂಗ್ಟನ್ ಡಿ.ಸಿ.ಯ Smithsonian National Air and Space Museum ಡೈರೆಕ್ಟರಾಗಿ ಅವರು ಒಟ್ಟೊಟ್ಟಿಗೆ ಸೇವೆ ಸಲ್ಲಿಸಿದರು. ಈ ಎರಡು ಜಗತ್ತನ್ನು ಏಕಕಾಲಕ್ಕೆ ನಿರ್ವಹಿಸಲು ಅವರಿಗೆ ಸಾಧ್ಯವಾದದ್ದು ಹೇಗೆ?

ಬಹುಶಃ ಅರೇಬಿಯಾದ ಗಗನಯಾತ್ರಿಗಳ ಪೈಕಿ ಅತ್ಯಂತ ಸುಪ್ರಸಿದ್ಧ ನಾಮ ಫಾರೂಖ್ ಅಲ್-ಬಾಸ್ ಅವರದ್ದು. ಆರಂಭದಲ್ಲಿ ಅವರು ಗಗನಯಾತ್ರಿಯಾಗಿರಲಿಲ್ಲ. ಈಜಿಪ್ಟ್ ಮತ್ತು ಅಮೇರಿಕಾದಲ್ಲಿ ಜಿಯೋಲಜಿಯ ತರಬೇತಿಯನ್ನಾಗಿತ್ತು ಅವರು ಪೂರ್ಣಗೊಳಿಸಿದ್ದು. ಆದ್ದರಿಂದ ಅವರಿಗೆ ಎರಡೂ ರಾಷ್ಟ್ರಗಳಲ್ಲಿರುವ ಶೈಕ್ಷಣಿಕ ವ್ಯವಸ್ಥೆಯ ಕುರಿತಾದ ಮೂಲಭೂತ ಅರಿವು ಇತ್ತು. ಅಮೇರಿಕಾದಿಂದ ಪಿ.ಎಚ್.ಡಿ ಮತ್ತು ಜರ್ಮನಿಯಿಂದ ಪೋಸ್ಟ್ ಡಾಕ್ಟರಲ್ ಪದವಿ ಪ್ರಾಪ್ತಿಯಾದ ಬಳಿಕ ಅಮೇರಿಕನ್ ಪತ್ನಿಯೊಂದಿಗೆ ಈಜಿಪ್ಟಿನಲ್ಲಿ ನೆಲೆಸುವ ನಿರ್ಧಾರದಿಂದ ಈಜಿಪ್ಟಿಗೆ ಮರಳಿದರು. ಆದರೆ ದುರದೃಷ್ಟವಶಾತ್ ತನ್ನ ದೊಡ್ಡ ಯೋಜನೆಗಳಿಗೆ ಮತ್ತು ಚಿಂತನೆಗಳಿಗೆ ತನ್ನ ರಾಷ್ಟ್ರ ಅವಕಾಶ ನೀಡದು ಎಂದು ಅವರಿಗೆ ಖಾತ್ರಿಯಾಯಿತು.ಬಳಿಕ ಅಮೇರಿಕಾಗೆ ಯಾತ್ರೆಯಾಗಿ ಅಪೋಲೋ ಬಾಹ್ಯಾಕಾಶ ಯೋಜನೆಯ ಭಾಗವಾದರು.ಆ ಸಮಯದಲ್ಲಿ ಅಪೋಲೋ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಗೆ ಚಂದ್ರನ ಮೇಲ್ಮೈಯ ಬಗ್ಗೆ ಮತ್ತು ನಿಖರವಾದ ಲ್ಯಾಂಡಿಂಗ್ ತಾಣಗಳ ಬಗ್ಗೆ ಅಧ್ಯಯನ ಮಾಡಲು ಉತ್ತಮ ಜಿಯೋಲಜಿಸ್ಟ್ ಒಬ್ಬರು ಬೇಕಾಗಿತ್ತು.

ಅಲ್-ಬಾಸ್ ಇತರೆ ಅರಬಿಗಳಂತೆ ತಾರತಮ್ಯಕ್ಕೆ ಒಳಗಾದರು. ಧೃತಿಗೆಡದ ಬಾಸ್ ರವರಿಗೆ ಯಾವುದೂ ಕೂಡಾ ಅಡಚಣೆಯಾಗಲಿಲ್ಲ. ಮಾತ್ರವಲ್ಲದೆ ತನ್ನ ಕೆಲಸ ಹಾಗೂ ಧ್ಯೇಯವನ್ನು ಮುಂದಿಟ್ಟು ಕಠಿಣ ಪ್ರಯತ್ನ ಮಾಡಿದರು. ಬಳಿಕ ಅಪೋಲೋ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಲ್ಲಿನ ಚಂದ್ರನ ಮೇಲ್ಮೈ ಬಗೆಗಿನ ಅಧ್ಯಯನದಲ್ಲಿ ಖ್ಯಾತಿ ಪಡೆದರು. ಚಂದ್ರನ ಮೇಲಿನ ಗಗನಯಾತ್ರಿಗಳ ಮುಖ್ಯ ತರಬೇತುದಾರರಾದರು.

ಇದೇ ಅಲ್ಲವೇ ಸೌದಿ ಅರೇಬಿಯಾದ ಮೊದಲ ಗಗನಯಾತ್ರಿ ಸುಲ್ತಾನ್ ಬಿನ್ ಸಲ್ಮಾನ್ ರವರ ವಿಚಾರದಲ್ಲೂ ನಡೆದಿದ್ದು. ಅವರು ಬಾಹ್ಯಾಕಾಶ ಯಾನಕ್ಕೆ ಸಿದ್ಧವಾಗುತ್ತಿದ್ದಂತೆ ಹೂಸ್ಟನಿನ ಬಳಿಯಿರುವ ಮುಖ್ಯ ಅರಬ್ ತೈಲ ಕಂಪನಿಯಾದ Aramcoದಿಂದ ನಾಸಾ ಜನರನ್ನು ತಲುಪಿಸಿತು. ಸೌದಿಯ ಸಂಸ್ಕೃತಿಯ ಕುರಿತು ನಾಸಾದ ಜನರಿಗೆ ಒಂದು ದಿನದ ‘ಕ್ರಾಶ್ ಕೋರ್ಸ್’ ನೀಡಲೋಸ್ಕರವಾಗಿತ್ತು ಈ ಶಿಬಿರ. ಇದು ಅಗತ್ಯವೆಂದು ನಾಸಾದ ಮುಖ್ಯ ಅಧಿಕಾರಿಗಳು ತೀರ್ಮಾನಿಸಿದ್ದು ಯಾಕೆ?


ಒಬ್ಬ ಸಾಧಾರಣ ಅಮೇರಿಕನ್ ಪ್ರಜೆಗೆ ಸಂಬಂಧಿಸಿದಂತೆ ಅಥವಾ ಆ ಬಾಹ್ಯಾಕಾಶ ಯೋಜನೆ ಭಾಗಿಯಾಗಿರುವ ಅಮೇರಿಕನ್ ಗಗನಯಾತ್ರಿಯೊಬ್ಬನಿಗೆ ಅರೇಬಿಕ್ ಸಂಸ್ಕೃತಿಯ ಬಗ್ಗೆ ದೊಡ್ಡ ಮಟ್ಟದ ಜ್ಞಾನ ಇರಬೇಕೆಂದಿಲ್ಲ! ಇದ್ದರೂ ಪಾಶ್ಚಿಮಾತ್ಯ ಜನರಿಗೆ ಅರಬಿಗಳ ಬಗ್ಗೆ ಓರಿಯಂಟಲಿಸ್ಟ್ ಮಿಥ್ ಗಳು ಕಟ್ಟಿಕೊಟ್ಟ ಅಪಾಯಕಾರಿ ವಿಷಯಗಳೊಂದಿಗಾಗಿತ್ತು ಸಂಬಂಧ. ಅವರಿಗೆ ಸೌದಿ ಅರೇಬಿಯಾ ಎಂದು ಕೇಳಿದಾಗ ಮನಸ್ಸಿಗೆ ಮೊದಲು ನೆನಪಾಗುವುದು ಲಾರೆನ್ಸ್ ಆಫ್ ಅರೇಬಿಯಾ, ಒಂಟೆಗಳು, ಮರುಭೂಮಿಗಳು, ಸುಲ್ತಾನರು, ಶೇಖರು ಮತ್ತು ರಾಜಕುಮಾರರು. ಅರೇಬಿಯಾದ ಗಗನಯಾತ್ರಿಗಳನ್ನು ರೂಪಿಸುವುದು ಏನೆಂದು ಹೆಚ್ಚಿನ ಅಮೇರಿಕನ್ನರಿಗೆ ತಿಳಿದಿಲ್ಲ. ಇದಲ್ಲದೆ, ಅವರು ಯಾವ ರೀತಿಯ ವ್ಯಕ್ತಿ, ಸ್ಪೇಸ್ ಪ್ರೊಜಕ್ಟಿನ ಸದಸ್ಯರು ಎಂಬ ನೆಲೆಯಲ್ಲಿ ಯಾವ ರೀತಿ ಅವರೊಂದಿಗೆ ಸಂವಹನ ನಡೆಸಬೇಕು ಅಥವಾ ವರ್ತಿಸಬೇಕೆಂದು ತಿಳಿದಿಲ್ಲ. ಬಹುಶಃ ನಾಸಾ ಅಧಿಕಾರಿಗಳು ಇಂತಹಾ ಸಾಂಸ್ಕೃತಿಕ ತಪ್ಪುಗ್ರಹಿಕೆಯಿಂದ ಗೊಂದಲಕ್ಕೆ ಈಡಾಗಿದ್ದಾರೆ.

ವಾಸ್ತವದಲ್ಲಿ ಅಂದು ಇತರೆ ಅರಬ್ ಗಣ್ಯ ವ್ಯಕ್ತಿಗಳಂತೆ ಅವರು ಕೂಡಾ ಅಮೇರಿಕನ್ ಸಂಸ್ಕೃತಿಗೆ ರೂಪಾಂತರಗೊಂಡಿದ್ದರು. ಅವರು ಅಮೇರಿಕಾದಲ್ಲೇ ಶಿಕ್ಷಣ ಪೂರ್ತಿಗೊಳಿಸಿದ್ದರು. ಅಲ್ಲಿ ವಾಸಿಸುತ್ತಿದ್ದ ಫ್ರೆಂಚ್ ಗಗನಯಾತ್ರಿಗಳಿಗಿಂತ ಅಮೇರಿಕನ್ ಸಂಸ್ಕೃತಿಯ ಬಗ್ಗೆ ಅವರಿಗೆ ಹೆಚ್ಚಿನ ಅರಿವು ಇತ್ತು. ಇದಲ್ಲದೆ ಇಂಗ್ಲಿಷ್ ಮಾತಾಡುವುದರಲ್ಲೂ ಅವರು ಹೆಚ್ಚು ಪ್ರಾವೀಣ್ಯತೆ ಪಡೆದಿದ್ದರು. ಅದಾಗ್ಯೂ ನಾಸಾ ಅಧಿಕಾರಿಗಳಿಗೆ ಫ್ರೆಂಚ್ ಗಗನಯಾತ್ರಿಗಳ ಬಗ್ಗೆ ಸಾಂಸ್ಕೃತಿಕ ತಪ್ಪು ಕಲ್ಪನೆ ಕಡಿಮೆ ಇತ್ತು.

ಪ್ರಾಣಾಪಾಯ ಸಾಧ್ಯತೆ ಹೆಚ್ಚಾಗಿ ಇರುವುದರಿಂದ 2014 ರಲ್ಲಿ ಇಸ್ಲಾಮಿಕ್ ವಿದ್ವಾಂಸರು ಒನ್ ವೇ ಮಂಗಳಯಾನದ ವಿರುದ್ಧ ಫತ್ವಾ ಹೊರಡಿಸಿದ್ದರೆಂದು ತಾವು ಈ ಮೊದಲು ಸೂಚಿಸಿದ್ದೀರಿ. ‘ಈ ದೌತ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುವುದರಿಂದ ಪರಲೋಕದಲ್ಲಿ ಆತ್ಮಹತ್ಯೆ ಮಾಡಿದ ಶಿಕ್ಷೆಗೆ ಗುರಿಯಾಗಬಹುದು’ ಎಂದಾಗಿತ್ತು ಫತ್ವ. ಒಬ್ಬರ ಜೀವ ತೆಗೆಯುವುದು ದೊಡ್ಡ ಪಾಪವೆಂದು ಪರಿಗಣಿಸುವ ಇಸ್ಲಾಮಿಕ್ ಸಾಂಪ್ರದಾಯಿಕ ಮೌಲ್ಯಗಳನ್ನು ಅತ್ಯಂತ ಅಪಾಯಕಾರಿ ಖಗೋಳ ಸಂಶೋಧನೆಯೊಂದಿಗೆ ಹೇಗೆ ಹೊಂದಾಣಿಕೆ ಮಾಡಬಹುದು..!?

ಮನುಷ್ಯ ಜೀವನದ ಬಗ್ಗೆ ಅಭ್ಯಸಿಸುವ ಆಧುನಿಕ ಬಯೋ ಎಥಿಕ್ಸ್ (Bio Ethics) ಅರಬ್ ಜಗತ್ತಿನಲ್ಲಿ ವಿಕಸನಗೊಳ್ಳುತ್ತಿದೆ. ಇಂತಹ ಫತ್ವಾಗಳನ್ನು ಹೊರಡಿಸಿದವರ ಪಾಲಿಗೆ ಆತ್ಮಹತ್ಯೆ ಎನ್ನುವುದು ಒಂದು ದೊಡ್ಡ ಸಮಸ್ಯೆ. ಮಾನವ ಜೀವವನ್ನು ಗೌರವಿಸುವ ಯಾವುದೇ ಧರ್ಮಕ್ಕೂ ಇದು ಸಮಾನ. ಇದು ಇಸ್ಲಾಮಿನಲ್ಲಿ ಮಾತ್ರ ಇರುವ ಸಮಸ್ಯೆ ಅಲ್ಲ.

ಇದು ಮಂಗಳಯಾನ ದೌತ್ಯದಿಂದ ಮುಸ್ಲಿಂ ರಾಷ್ಟ್ರಗಳನ್ನು ಹಿಂದೆ ಸರಿಯಲು ಪ್ರೇರೇಪಿಸಿಲ್ಲ ಎನ್ನುತ್ತೀರಾ?
ಈ ಯೋಜನೆಗಳ ಹಿನ್ನೆಲೆಯಲ್ಲಿ ಯುಎಇಗೆ ಹಲವಾರು ರಾಷ್ಟ್ರೀಯ, ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳು ಇವೆ. ಬಹುಶಃ ಪಶ್ಚಿಮೇಷ್ಯಾದ ರಾಷ್ಟ್ರಗಳ ಪೈಕಿ ಯುಎಇ ಮಂಗಳದ ದೌತ್ಯವನ್ನು ಸ್ವಲ್ಪ ಹೆಚ್ಚು ಮಹತ್ವಾಕಾಂಕ್ಷೆ ಇಟ್ಟುಕೊಂಡಿದೆ. ಅವರು ೨೦೨೦ರ ವೇಳೆಗೆ ಮಂಗಳ ಗ್ರಹದ ವಾತಾವರಣವನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ನೌಕೆ ಉಡಾಯಿಸಲು ಸಿದ್ಧತೆ ನಡೆಸಿದ್ದಾರೆ. ಈ ಬಾಹ್ಯಾಕಾಶ ನೌಕೆ ೨೦೨೧ ರಲ್ಲಿ ಮಂಗಳ ಗ್ರಹ ತಲುಪುವ ನಿರೀಕ್ಷೆಯಿದೆ. ಯುಎಇ ಯ ಗೋಲ್ಡನ್ ಜ್ಯುಬಿಲಿ ನಡೆಯುವ ಸಮಯವೂ ಹೌದು!.

ಇದಲ್ಲದೆ ಯುಎಇ ನೂರು ವರ್ಷಗಳ ಕಾಲಾವಧಿಯಲ್ಲಿ, ೨೧೧೭ ಆಗುವ ಹೊತ್ತಿಗೆ ಮಂಗಳ ಗ್ರಹದಲ್ಲಿ ಬೃಹತ್ ನಗರವನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿದೆ. ಯೋಜನೆ ಪ್ರಥಮ ಹಂತದಲ್ಲಿದೆ. ಮಂಗಳ ಗ್ರಹದಲ್ಲಿ ಒಂದು ನಗರ ಸ್ಥಾಪಿಸಲು ಬಯಸಿದರೆ ನೀವು ಒಂದಲ್ಲ ಒಂದು ರೀತಿಯಲ್ಲಿ ಬಹಳಷ್ಟು ಜೀವ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಯೋಜನೆ ಮತ್ತು ಚಟುವಟಿಕೆಗಳ ಬಗ್ಗೆ ಮುಸ್ಲಿಂ ವಿದ್ವಾಂಸರೆಡೆಯಲ್ಲಿ ಭಿನ್ನಾಭಿಪ್ರಾಯ ಮೂಡುವುದು ಖಂಡಿತಾ. ಆದರೆ ಇಂತಹಾ ಆಕಾಂಕ್ಷೆ ಮತ್ತು ಯೋಜನೆ ಮುಂದೆ ಸಾಗುವುದಂತೂ ವಾಸ್ತವ..!

ಮೂಲ: ಮರೀನಾ ಕೋರಿನ್
ಅನು: ಅಶ್ರಫ್ ನಾವೂರು

ಪರಂಪರಾಗತ ಮತ್ತು ಬೌದ್ಧಿಕ ವಿಜ್ಞಾನ;ಇಸ್ಲಾಮಿ ಸಾರಸ್ವತ ಲೋಕದ ಅನನ್ಯತೆ

ಇಸ್ಲಾಮೀ ವೈಜ್ಞಾನಿಕ ಪರಂಪರೆಯಲ್ಲಿ ಎರಡು ಬಗೆಯ ಧಾರೆಗಳು ಕಂಡುಬರುತ್ತವೆ; ಒಂದು ಪರಂಪರಾಗತ ವಿಜ್ಞಾನ(Transmitted knowledge), ಮತ್ತೊಂದು ಬೌದ್ದಿಕ ವಿಜ್ಞಾನ(intellectual knowledge).ಮೊದಲನೆಯದರ ವೈಶಿಷ್ಟೈತೆಯೇನೆಂದರೆ ಅದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹಸ್ತಾಂತರ ಮಾಡಲಾಗುತ್ತದೆ. ಹಾಗಾಗಿಯೇ ಅದನ್ನು ಕಲಿಯಲು ಯಾರನ್ನಾದರೂ ಅನುಗಮಿಸುವುದು ಅನಿವಾರ್ಯ. ತದ್ವಿರುದ್ದವೆಂಬಂತೆ, ಬೌದ್ದಿಕ ವಿಜ್ಞಾನ ತಲೆಮಾರಿನಿಂದ ತಲೆಮಾರಿಗೆ ಸಾಗಿಸಲಾಗುವುದಿಲ್ಲ. ಮಾರ್ಗದರ್ಶನಕ್ಕಾಗಿ ಅಧ್ಯಾಪಕರನ್ನು ಆಶ್ರಯಿಸಬೇಕಾಗಿ ಬರಬಹುದು,ಅಷ್ಟೆ. ಪ್ರಸ್ತುತ ಜ್ಞಾನವನ್ನು ಕರಗತ ಮಾಡಲಿರುವ ಏಕೈಕ ಮಾರ್ಗ, ಬದ್ದಿಮತ್ತೆಗೆ ತರಬೇತಿ ನೀಡುವ ಮೂಲಕ ಆತ್ಮಶೋಧನೆ ಮಾಡಿ ತನ್ನೊಳಗೇ ಅವನ್ನು ಕಂಡರಿಸುವುದು. ಈ ಕೈಂಕರ್ಯ ಮಾಡದವನು ಎಲ್ಲಾ ವಿಚಾರಗಳಲ್ಲೂ ಇತರರನ್ನು ಆತು ಕೊಳ್ಳಬೇಕಾಗಿ ಬರುತ್ತದೆ.

ಪರಂಪರಾಗತವಾಗಿ ದೊರಕುವ ಜ್ಞಾನ ಧಾರೆಗಳಿಗೆ ಉದಾಹರಣೆ ಕಾನೂನು,ಇತಿಹಾಸ,ಭಾಷೆ ಇತ್ಯಾದಿ. ಎಲ್ಲಾ ಗುಣಗಳಲ್ಲಿ ಹೊಂದಿಕೆಯಿಲ್ಲದಿದ್ದರೂ ಗಣಿತವನ್ನು ಬೌದ್ದಿಕ ಜ್ಞಾನ ಪರಂಪರೆಯ ಉದಾಹರಣೆಯಾಗಿ ಹೇಳಬಹುದು. ʼಎರಡು ಕೂಡಿಸು ಎರಡು ಸಮ ನಾಲ್ಕು. ಕಾರಣ ಟೀಚರ್‌ ಹಾಗೆ ಹೇಳಿದ್ದಾರೆʼ ಎನ್ನುವುದು ಅಸಂಬದ್ದ. ಗಣಿತಾತ್ಮಕ ಸರಿ ತಪ್ಪುಗಳನ್ನು ಪರಸಹಾಯವಿಲ್ಲದೆ ಬುದ್ದಿ ತಾನೇ ಕಂಡು ಕೊಂಡುಕೊಳ್ಳುತ್ತದೆ.ಮೊದಲನಯದ್ದು ಮೌಖಿಕ ಪರಂಪರೆಯನ್ನು ಆಧರಿಸಿಕೊಂಡಿವೆ. ಎಲ್ಲಾ ಸಂಸ್ಕೃತಿ ಮತ್ತು ಧರ್ಮ ಪರಂರಯಲ್ಲಿ ಪ್ರಸ್ತುತ ಬಗೆಯ ಜ್ಞಾನಧಾರೆ ಇರುವುದಾಗಿ ಕಾಣಬಹುದು. ಬೌದ್ದ ಧರ್ಮದಲ್ಲಿ ಜ್ಞಾನೋದಯವೆಂಬುದು ಎಲ್ಲಾತರದ ಸಾಮಾನ್ಯ ಅರಿವುಗಳಿಗೆ ಅತೀತವಾದುದು. ಆದರೆ ಅದು ಕೈಗೆಟುಕುವುದಕ್ಕಿಂತ ಮುನ್ನ ಗುರುಪರಂಪರೆ ಮುಖಾಂತರ ಜ್ಞಾನವನ್ನು ಸ್ವೀಕಾರ ಮಾಡಿಯೇ ಬೇಕು. ಮುಸ್ಲಿಮರಿಗೆ ನಮಾಝಿನ ಕುರಿತ ಅರಿವು ದೊರಕಬೇಕಾದರೆ ವಿದ್ವಾಂಸರನ್ನು ಸಮೀಪಿಸಬೇಕಾಗುತ್ತದೆ. ದೇವರು ತಮ್ಮಿಂದೇನುಬಯಸುತ್ತಾನೆಂದು ತಿಳಿಯಲು ದಿವ್ಯಜ್ಞಾನ ತಲೆಮಾರಿಂದ ತಲೆಮಾರಿಗೆ ಸಾಗುತ್ತಲೇ ಬರಬೇಕು. ಭಾಷೆ,ಸಂಸ್ಕೃತಿ,ಪ್ರಪಂಚ ಜ್ಞಾನ ಮುಂತಾಗಿ ನಮಗೆ ಗೊತ್ತಿದೆಯೆಂದು ಭಾಸವಾಗುವ ಎಲ್ಲವೂ ಪರಂಪರಾಗತವಾಗಿಯೇ ನಮಗೆ ಲಭಿಸಿದ್ದು. ತದ್ವಿರುದ್ದವಂಬಂತೆ, ನಮ್ಮ ಆತ್ಮದಾಳದಲ್ಲಿ ಸಂಪೂರ್ಣ ಖಚಿತತೆಯೊಂದಿಗೆ ನಾವೇ ಅರಿದುಕೊಳ್ಳುವುದಾಗಿದೆ ವೈಚಾರಿಕ ಜ್ಞಾನವಂಬುದು. ಆದರೆ ಅಂತ ಅರಿವು ಕಡಿಮೆ.

ಇಸ್ಲಾಮೀ ನಾಗರಿಕತೆಯನ್ನು ತೆಗೆದುನೋಡುವಾಗ ಎರಡು ಬಗೆಯ ಅಧ್ಯಯನ ಕ್ಷೇತ್ರದೊಳಗೆ ವೈಚಾರಿಕ ಜ್ಞಾನದ ಅನ್ವೇಷಣೆ ನಡೆದಿರುವುದಾಗಿ ಕಂಡುಬರುತ್ತದೆ. ಸುಲಭವಾಗಿ ಅರ್ಥ ಮಾಡುವುದಕ್ಕೋಸ್ಕರ ಅವನ್ನು ಸೂಫಿಸಂ ಮತ್ತು ಫಿಲಾಸಫಿ ಅಂತ ಕರೆಯಬಹುದು. ಗ್ರೀಕರು ಮುಂದಿಟ್ಟ ತಾರ್ಕಿಕ ಮತ್ತು ವೈಚಾರಿಕ ವಿಧಾನಗಳನ್ನು ಅವಲಂಬಿಸಿ ಫಿಲಾಸಫಿಯನ್ನು ಬೆಳಸಲಾಗಿದೆ. ಸೂಫಿಸಂ ಪ್ರವಾದಿ ಮುಹಮ್ಮದ್(ಸ) ರಿಂದ ಪಡೆದ ಧ್ಯಾನಾತ್ಮಕ ಪರಿಕರಗಳನ್ನು ಒಳಗೊಂಡಿದೆ. ಹದಿಮೂರು ಶತಮಾನದಿಂದೀಚೆಗೆ ಉಭಯ ಕ್ಷೇತ್ರಗಳು ಪರಸ್ಪರ ಕೊಡುಕೊಳ್ಳುವಿಕೆಯ ಮುಖಾಂತರ ವಿಕಾಸಗೊಂಡಿದೆ.

ಆತ್ಮಜ್ಞಾನದ ಹೊರತಾಗಿ ವಸ್ತುಗಳ ಅರ್ಥಗಳನ್ನು ಗ್ರಹಿಸುವುದು ಅಸಾಧ್ಯ ಎಂಬ ತತ್ವ ಮುಂದಿಡುವ ಮೂಲಕ ಫಿಲಾಸಫಿ ಮತ್ತು ಸೂಫಿಸಂ ಪರಂಪರಾಗತ ಜ್ಞಾನಶಾಸ್ತ್ರಗಳಿಂದ ಸಂಪೂರ್ಣ ಭಿನ್ನವಾಗಿದೆ. ಖಂಡಿತವಾಗಿಯೂ, ವಿಶ್ವದ ಕುರಿತು ಕಲಿಯುವುದು ವಿದ್ಯಮಾನಗಳ ಬಗ್ಗೆ ಗ್ರಹಿಸುವ ಉದ್ದೇಶದಿಂದ. ಆದರೆ, ಗ್ರಹಿಕೆ ಎಂಬುವುದು ಆತ್ಮದ ಒಂದು ಗುಣವಾದ್ದರಿಂದ ಮೊದಲು ಅದನ್ನು ಅರಿಯುವುದು ಮುಖ್ಯವಾಗುತ್ತದೆ. ವೈಚಾರಿಕ ವಿಧಾನದ ವಕ್ತಾರರು ಅಲ್ಲಾಹನ ದೃಷ್ಟಾಂತಗಳ ಹಿನ್ನಲೆಯಲ್ಲಿ ಅರ್ಥಗಳನ್ನು ಕಂಡರಿಸುತ್ತಾರೆ. ಅಂದರೆ, ಜಗತ್ತಿನ ವಿದ್ಯಮಾನಗಳೆಲ್ಲ ನೈಜ ಮೂಲಾರ್ಥಗಳೆಡೆಗೆ ಬೊಟ್ಟು ಮಾಡುತ್ತದೆ, ಈ ಮೂಲಾರ್ಥಗಳು ಆತ್ಮವನ್ನು ಅರಿಯುವ ಮೂಲಕ ಮಾತ್ರವಾಗಿದೆ ಪ್ರಾಪ್ತವಾಗುವುದು.

ಸ್ಥೂಲನೋಟದಲ್ಲಿ ಬೌದ್ಧಿಕ ಪರಂಪರೆಯನ್ನು ವಿಶ್ಲೇಷಿಸುವಾಗ, ಆಧುನಿಕ ವಿಜ್ಞಾನಗಳಿಗೆ ಅತಿಮುಖ್ಯವಾಗಿರುವ ವ್ಯಕ್ತಿ (Subject) ಮತ್ತು ವಸ್ತು (Object) ಗಳ ನಡುವಿನ ವ್ಯತ್ಯಾಸ ಕಾಣುವಿಕೆಯನ್ನು ಅದು ಒಪ್ಪುವುದಿಲ್ಲವೆಂದು ನಿಚ್ಚಳವಾಗುತ್ತದೆ. ನಾಲ್ಕು ಮೂಲ ವಿಷಯಗಳನ್ನಾಗಿದೆ ಪ್ರಸ್ತುತ ಪರಂಪರೆ ಗಣನೆಗೆ ತೆಗೆದುಕೊಂಡಿರುವುದು; ದೇವ, ವಿಶ್ವ, ಮನುಷ್ಯಾತ್ಮ ಮತ್ತು ಅಂತರ್ವ್ಯಕ್ತೀಯ ಸಂಬಂಧಗಳು. ಮೊದಲ ಮೂರು ಸಂಗತಿಗಳು ವಾಸ್ತವಿಕತೆಯ ಮೂಲಘಟಕಗಳಾಗಿವೆ ಮತ್ತು ಈ ಮೂರು ಸಂಗತಿಗಳಿಂದ ಸಿಕ್ಕಿದ ಒಳನೋಟಗಳನ್ನು ನಾಲ್ಕನೆಯದು ಮಾನವನ ಚಟುವಟಿಕೆಗಳಿಗೆ ಅನ್ವಯಗೊಳಿಸುತ್ತದೆ.ಈ ವಿಚಾರಗಳನ್ನು ಪರಂಪರಾಗತ ಜ್ಞಾನಗಳ ಅಧಿಕೃತ ಮೂಲಗಳಾದ ಖುರಾನ್‌ ಮತ್ತು ಹದೀಸ್‌ ನ ಮೂಲಕ ತಿಳಿಯಬಹುದು. ಆದರೆ, ಇವುಗಳ ಕುರಿತು ತನ್ನೊಳಗೇ ಅರಿತುಕೊಳ್ಳುವುದು ಹಾಗೂ ಆತ್ಮ ಸಾಕ್ಷಾತ್ಕಾರ ಪಡೆಯುವುದು ಬೇರೇನೇ. ಬೌದ್ಧಿಕ ಪರಂಪರೆಯಲ್ಲಿ ಪರಂಪರಾಗತ ಜ್ಞಾನ ಸಂಪ್ರದಾಯದ ಪಾತ್ರವೇನೆಂದರೆ, ಅದು ಸಾಧಕನು ಆತ್ಮ ಸಾಕ್ಷಾತ್ಕಾರಗೊಳಿಸಬೇಕಾದ ಸಂಗತಿಗಳೆಡೆಗೆ ಮಾರ್ಗಸೂಚಕಗಳನ್ನು ಒದಗಿಸುತ್ತದೆ.

ಪ್ರಾಯಶಃ ಪರಂಪರಾಗತ ಮತ್ತು ಬೌದ್ಧಿಕ ಜ್ಞಾನದ ವ್ಯತ್ಯಾಸ ಮನಗಾಣಲು ಸೂಕ್ತ ಮಾರ್ಗ ಯಾವುದೆಂದರೆ, ಜ್ಞಾನ ಸಂಪಾದನೆಯ ಮೂಲಭೂತ ಮಾರ್ಗಗಳನ್ನು ಸೂಚಿಸುವ ತಖ್ಲೀದ್‌ (ಅನುಕರಣೆ, ಅಧಿಕೃತಮೂಲಗಳನ್ನು ಒಪ್ಪುವುದು) ಮತ್ತು ತಹ್ಖೀಖ್‌ (ದೃಢಪಡಿಸುವಿಕೆ, ಆತ್ಮಸಾಕ್ಷಾತ್ಕಾರ) ಎಂಬೀ ಸಂಜ್ಞೆಗಳನ್ನು ಅರ್ಥೈಸುವುದು. ಯಾವುದೇ ಧರ್ಮ, ಸಮಾಜ ಅಥವಾ ಒಕ್ಕೂಟದಲ್ಲಿ ಸೇರಲು ಇಚ್ಛಿಸುವ ಒಬ್ಬನಿಗೆ, ಮೊದಲೇ ಅದರಲ್ಲಿ ಸದಸ್ಯರಾಗಿರುವವರಿಂದ ಅನೇಕ ವಿಚಾರಗಳನ್ನು ಕಲಿಯಬೇಕಾಗುತ್ತದೆ ಮತ್ತು ಪ್ರಸ್ತುತ ಕಲಿಕೆ ʼಅನುಕರಣೆʼ ಎಂಬ ವಿಧಾನದ ಮೂಲಕ ಮಾತ್ರ ಸಾಧ್ಯ. ಭಾಷೆ, ಸಂಸ್ಕೃತಿ, ಧರ್ಮ, ಕಾನೂನು, ಆಚಾರಗಳು ಮುಂತಾಗಿ ಎಲ್ಲವನ್ನೂ ನಾವು ಕಲಿಯುವುದು ಅನುಕರಣೆಯಿಂದಲೇ ಆಗಿದೆ. ಇಸ್ಲಾಮಿನಲ್ಲಿ ಇಂತಹ ಪರಂರಪರಾಗತ ಜ್ಞಾನಗಳ ಸಂರಕ್ಷಣೆ ಮಾಡುವವರನ್ನು ʼಉಲಮಾʼ ಅಥವಾ ಪರಂಪರೆಯ ವಕ್ತಾರರೆಂದು ಕರೆಯಲಾಗುತ್ತದೆ.

ಪರಂರಾಗತ ಜ್ಞಾನದಲ್ಲಿ ʼಏಕೆʼ ಎಂಬ ಪ್ರಶ್ನೆಗೆ ಜಾಗವೇ ಇಲ್ಲ. ಇಂತ ಇಂತ ನಂಬಿಕೆ ತಾಳುವುದೇಕೆ ಅಥವಾ ಇಂತಹ ಆಚಾರಗಳನ್ನು ಮಾಡುವುದೇಕೆ ಎಂದು ಓರ್ವ ಉಲಮಾರನ್ನು ಪ್ರಶ್ನಿಸಿದರೆ, ಸರಳ ಉತ್ತರ ʼ ದೇವರು ಹಾಗೆ ಹೇಳಿದ್ದಾನೆʼ ಎಂದಾಗಿರುತ್ತದೆ. ಅಂದರೆ, ಖುರಾನ್‌ ಮತ್ತು ಹದೀಸಿನ ಅಧಿಕೃತತೆಯ ಮೇಲೆ ಅವುಗಳನ್ನು ಅಂಗೀಕರಿಸಲಾಗಿದೆ ಎಂದರ್ಥ. ಹೀಗೆಯೇ, ಪೋಷಕರು ತಮ್ಮ ಮಕ್ಕಳ ಭಾಷೆಯನ್ನು ಅಧಿಕೃತ ಮೂಲಗಳ ಆಧಾರದಲ್ಲಿ ತಿದ್ದುಪಡಿ ಮಾಡುತ್ತಿರುತ್ತಾರೆ.

ಬೌದ್ಧಿಕ ವಿಜ್ಞಾನ ಸಂಪೂರ್ಣ ಭಿನ್ನವಾಗಿದೆ. ಒಬ್ಬ ಅದನ್ನು ವಾಚಿಕ ಮೂಲಗಳ ಆಧಾರದಲ್ಲಿ ಸ್ವೀಕರಿಸುವುದಾದರೆ, ಅದನ್ನು ಅರ್ಥ ಮಾಡಿಲ್ಲ ಎಂದರ್ಥ. ಅಧಿಕೃತ ಮೌಖಿಕ ಮೂಲಗಳ ಮೇಲೆ ಆಧಾರಿತಗೊಂಡ ವಿಜ್ಞಾನವಲ್ಲ ಗಣಿತವೆಂಬುದು. ಹೊರತು, ಪ್ರಜ್ಞಾಪೂರ್ವಕವಾಗಿ ತನ್ನೊಳಗೆ ಅದನ್ನು ಕಂಡರಿಸಿಕೊಳ್ಳಬೇಕಾಗುತ್ತದೆ. ಗಣಿತವನ್ನು ಕಲಿಯುವಾಗ ಅಧ್ಯಾಪಕನ್ನು ಅನುಕರಿಸುವ ಬದಲು ʼಏಕೆʼ ಎಂಬ ಪ್ರಶ್ನೆಗೆ ವಿದ್ಯಾರ್ಥಿಗಳು ಉತ್ತರ ಕಂಡುಕೊಳ್ಳುತ್ತಾರೆ. ಪ್ರಾರಂಭದ ಹಂತದಲ್ಲಿರುವ ವಿದ್ಯಾರ್ಥಿಗೆ ಮಾತ್ರ ಬೌದ್ಧಿಕ ಜ್ಞಾನಗಳಲ್ಲಿ ಅನುಕರಣೆ ಮಾಡಬಹುದು. ಪಾರಂಪರಿಕ ಜ್ಞಾನಗಳಲ್ಲಿ ಖುರಾನ್‌ ಮತ್ತು ಹದೀಸನ್ನು ಅನುಕರಿಸುವುದೇ ಸರಿಯಾದ ದಾರಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ಎರಡು ತರದ ಜ್ಞಾನಗಳಿವೆ, ಎರಡಕ್ಕೂ ಅದರದ್ದೇ ವಿಧಾನಗಳಿವೆ. ತಖ್ಲೀದ್‌ ಅಥವಾ ಅನುಕರಣೆ ಪಾರಂಪರಿಕ ಜ್ಞಾನಕ್ಕೆ ಸೂಕ್ತವಾಗಿದೆ ಮತ್ತು ಬೌದ್ಧಿಕ ಜ್ಞಾನಕ್ಕೆ ತಹ್ಖೀಖ್‌ ಯಾ ಆತ್ಮ ಸಾಕ್ಷಾತ್ಕಾರ ಎಂಬ ವಿಧಾನವನ್ನು ಅನ್ವಯಗೊಳಿಸಬೇಕಾಗಿದೆ.

ʼತಖ್ಲೀದ್‌ʼ ಎಂಬ ಪರಿಭಾಷೆ ಹಲವಾರು ನವ ಮುಸ್ಲಿಂ ಚಿಂತಕರ ಕಂಗೆಡಿಸಿದೆ. ಮುಸ್ಲಿಂ ಸಮಾಜದ ದೌರ್ಬಲ್ಯವಾಗಿ ಅದನ್ನು ಕಾಣುವವರಿದ್ದಾರೆ. ಇವರು ಹೇಳುವಂತ ತಖ್ಲೀದ್‌, ನಾನು ವಿವರಿಸಿದ ತಹ್ಖೀಖ್‌ ಗೆ ವಿರುದ್ದವಾಗಿ ನಿಲ್ಲುವ ಸಂಜ್ಞೆಯಲ್ಲ, ಹೊರತು ಇಜ್ತಿಹಾದ್‌ ನ ಎದುರಲ್ಲಿ ಬಳಸುವ ಪದವಾಗಿದೆ. ಫಿಕ್ಹ್‌ ಎಂಬುವುದು ಪರಂರಾಗತ ಶಾಸ್ತ್ರಗಳ ಗುಂಪಿನಲ್ಲಿ ಸೇರುವುದರಿಂದ, ಅದರಲ್ಲಿ ಅನನ್ಯ ನಿಪುಣತೆ ಪಡೆದ ಮುಜ್ತಹಿದ್‌ (ಕರ್ಮಶಾಸ್ತ್ರ ಸಂಶೋಧಕ) ಗಳನ್ನು ಅನುಕರಣೆ ಮಾಡುವುದು ಅನಿವಾರ್ಯವಾಗುತ್ತದೆ. ನಾನು ಪ್ರಸ್ತಾಪಿಸಿದ್ದು, ಬೌದ್ಧಿಕ ವಿಜ್ಞಾನಗಳಲ್ಲಿ ತಖ್ಲೀದ್‌ ಸಲ್ಲದು ಎಂದಾಗಿದೆ. ಇವೆರಡರ ನಡುವಿನ ಸ್ಪಷ್ಟ ವ್ಯತ್ಯಾಸ ತಿಳಿದಿರುವುದರಿಂದಲೇ, ಮುಸ್ಲಿಂ ವಿದ್ವಾಂಸರು ದೇವರಲ್ಲಿರುವ ನಂಬಿಕೆಗೆ ವೈಚಾರಿಕ ಅಡಿಪಾಯ ಅಗತ್ಯ ಎಂಬ ನಿಲುವನ್ನು ತಾಳಿದ್ದಾರೆ. ಅಂದರೆ, ಪೋಷಕರು ಹೇಳಿದ ಕಾರಣದಿಂದ ದೇವರಲ್ಲಿ ನಂಬಿದ್ದೇನೆ ಎಂದು ಒಬ್ಬಾತ ಹೇಳುವುದಾದರೆ ಆತನ ವಿಶ್ವಾಸ ಸರಿಯಾಗಿಲ್ಲ ಎಂದಾಗಿದೆ ವಿದ್ವಾಂಸರ ಅಂಬೋಣ. ಆತನ ನಂಬಿಕೆಗೆ ಸಾಕ್ಷ್ಯ ಪ್ರಮಾಣಗಳು ಬೇಕಾಗುತ್ತದೆ.

ಉಭಯ ಜ್ಞಾನಧಾರೆಗಳ ನಡುವೆ ಸೈದ್ಧಾಂತಿಕ ನೆಲೆಗಟ್ಟಲ್ಲಿ ವಿವೇಚನೆ ಸಾಧ್ಯವಾದರೂ, ಪ್ರಾಯೋಗಿಕತೆಯ ನೆಲೆಗೆ ಬರುವಾಗ ಎರಡೂ ಪರಸ್ಪರ ತಳುಕು ಹಾಕಿಕೊಂಡಿರುವುದನ್ನು ಮನಗಾಣಬಹುದು. ಇತಿಹಾಸದುದ್ದಕ್ಕೂ ಬೌದ್ಧಿಕ ವಿಜ್ಞಾನ, ಪಾರಂಪರಿಕ ವಿಜ್ಞಾನವನ್ನು ಆತುಕೊಂಡೇ ಬೆಳೆದಿದೆ. ಧರ್ಮಗ್ರಂಥಗಳ ಸಮಂಜಸ ಗ್ರಹಿಕೆಗೆ ವೈಚಾರಿಕ ವಿಧಾನಗಳನ್ನು ಅವಲಂಬಿಸಲಾಗಿದೆ. ಯಾವುದೇ ಧರ್ಮ ಕಾಲದ ಪ್ರವಾಹದಲ್ಲಿ ಅಚಂಚಲವಾಗಿ ಉಳಿಯಬೇಕಾದರೆ ಪಾರಂಪರಿಕ ಹಾಗೂ ಬೌದ್ಧಿಕ ಎರಡೂ ಬಗೆಯ ವಿಜ್ಞಾನ ಅತ್ಯಗತ್ಯ. ಆದರೆ, ಎರಡೂ ಈಗ ಉಳಿವಿನ ಅಂಚಿನಲ್ಲಿದೆ ಎಂಬುವುದು ಖೇದಕರ.

ಇಲ್ಲಿ ಮಹತ್ವದ ಸಂಗತಿಯೇನೆಂದರೆ, ಸಕ್ರಿಯವಾದ ಬೌದ್ಧಿಕ ಪರಂಪರೆಯಿಲ್ಲದೆ ಧರ್ಮಕ್ಕೆ ಉಳಿಗಾಲವಿಲ್ಲ. ಜನರು ಏಕೆ ಆಲೋಚಿಸುತ್ತಾರೆ? ಯೋಚನೆ ರಹಿತವಾಗಿ ಏಕೆ ಏನನ್ನೂ ಒಪ್ಪುವುದಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನೇ ಮುಂದಿಟ್ಟರೆ ಈ ವಿಚಾರ ಸ್ಪಷ್ಟವಾಗುತ್ತದೆ. ಇಸ್ಲಾಮೀ ದೃಷ್ಟಿಕೋನದಲ್ಲಿ ಉತ್ತರ ಬಹಳ ಸರಳ. ಮನುಷ್ಯರು ವಿವೇಕ ಹೊಂದಿದ ಯೋಚಿಸುವ ಜೀವಿಗಳಾದ್ದರಿಂದ ಖಂಡಿತವಾಗಿಯೂ ಚಿಂತನೆ ಮಾಡಬೇಕಾಗಿದೆ. ದೇವರು ಬುದ್ದಿ ಮತ್ತು ಮನಸ್ಸನ್ನು ನೀಡಿರುವಾಗಿ ಜನರಿಗೆ ಯೋಚಿಸದೆ ಉಪಾಯವಿಲ್ಲ. ಜತೆಗೆ, ಖುರ್‌ ಆನಿನ ಉದ್ದಕ್ಕೂ ಹಲವಾರು ಸೂಕ್ತಗಳಲ್ಲಿ ಚಿಂತನೆ ನಡೆಸಲು ಮತ್ತು ತಮ್ಮ ವಿವೇಕಶಕ್ತಿಯನ್ನು ಬಳಸಲು ಜನರಿಗೆ ಆಜ್ಞಾಪಿಸಲಾಗಿದೆ.

ಇಸ್ಲಾಮೀ ಚಿಂತನೆಗೆ ಕೆಲವೊಂದು ಮೂಲಭೂತ ತತ್ವಗಳನ್ನು ಪೂರ್ವಭಾವಿಯಾಗಿ ಪರಿಗಣಿಸಲಾಗಿದೆ. ಆ ಪೈಕಿ ʼತೌಹೀದ್‌ʼ (ದೇವರ ಏಕತ್ವದ ತತ್ವ) ಮುಂಚೂಣಿಯಲ್ಲಿ ನಿಲ್ಲುತ್ತದೆ. ಸಮಕಾಲೀನ ಪರಿಸ್ಥಿತಿಯನ್ನು ಪ್ರಸ್ತುತ ತತ್ವದ ಮೇಲೆ ಚಿಂತನೆ ನಡೆಸುವಾಗ, ಆಧುನಿಕತೆಯು ಎಷ್ಟೊಂದು ಅಪಾಯಗಳನ್ನು ಒಡ್ಡುತ್ತಿವೆಯೆಂದು ಮನಗಾಣಬಹುದು. ತೌಹೀದಿಗೆ ಸಂಪೂರ್ಣ ವಿರುದ್ಧವಾದ ಶಿರ್ಕ್‌ (ದೇವತ್ವದಲ್ಲಿ ಭಾಗಿದಾರಿಕೆ) ನ ಗುಣಗಳನ್ನಾಗಿದೆ ಆಧುನಿಕತೆ ಪ್ರಚುರಪಡಿಸುತ್ತಿರುವುದು. ಶಿರ್ಕ್‌ ಎಂಬ ಪದ ಬಹಳ ಗಂಭಿರವಾದ್ದರಿಂದ, ಪ್ರತಿಯಾಗಿ ʼತಕ್ಸೀರ್‌ʼ ಎಂಬ ಪದವನ್ನು ಇಲ್ಲಿ ಬಳಸುತ್ತೇನೆ. ತೌಹೀದ್‌ ಎಂಬುವುದು ದೇವರು ಏಕನೆಂದು ದೃಢಪಡಿಸುವುದಾದರೆ, ತಕ್ಸೀರ್‌ (ಶಿರ್ಕ್‌ ಎನ್ನುವುದೇ ಸೂಕ್ತ ಪದ, ಸದ್ಯ ತಕ್ಸೀರ್‌ ಎಂದು ಬಳಸುತ್ತೇನೆ) ಎಂದರೆ ಅನೇಕ ದೇವರಿದ್ದಾರೆಂದು ದೃಢೀಕರಿಸುವುದು.

ನವಯುಗದ ಚಿಂತನೆ ಒಂದು ಕೇಂದ್ರ, ಒಂದು ದಿಕ್ಕು, ಒಂದು ಉದ್ದೇಶ ಇವೆಲ್ಲವನ್ನು ಕಳಕೊಂಡಿದೆ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ, ʼಏಕದೇವʼ ನ ನಷ್ಟವಾಗಿದೆ. ದೇವರು ಬದುಕಿಗೊಂದು ಅರ್ಥ ನೀಡುವ, ಕಾರ್ಯಗಳಿಗೆ ಕೇಂದ್ರೀಕರಣ ಒದಗಿಸುವ ಅಸ್ತಿತ್ವ. ಆಧುನಿಕ ಜಗತ್ತು ಅರ್ಥಗಳನ್ನು, ದಿಕ್ಕುಗಳನ್ನು ಬಹು ʼದೇವರುʼಗಳಿಂದ ಪಡೆಯುತ್ತಿದೆ. ನಿರಂತರ ಸಾಗುತ್ತಿರುವ ತಕ್ಸೀರನ್ನು ಬಿರುಸುಗೊಳಿಸುವ ಕೈಂಕರ್ಯದಿಂದ, ದೇವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿಯೊಬ್ಬರೂ ಅವರವರಿಗೆ ಅಪ್ಯಾಯಮಾನವಾದ ದೇವರನ್ನು ಪೂಜಿಸುತ್ತಿದ್ದಾರೆ.

ತಕ್ಸೀರ್‌ ನ ಸ್ಪಷ್ಟ ಚಿತ್ರಣ ಸಿಗಬೇಕಾದರೆ, ಇತಿಹಾಸದಲ್ಲಿ ಜರುಗಿದ ಇಸ್ಲಾಮೀ ಮತ್ತು ಐರೋಪ್ಯ ಚಿಂತನೆಗಳ ಗತಿಸ್ಥಿತಿಯನ್ನು ತುಲನೆ ಮಾಡಿ ನೋಡಿದರಾಯಿತು. ಇತ್ತೀಚಿನ ವರೆಗೂ, ಇಸ್ಲಾಮೀ ಚಿಂತನೆ , ಪರಸ್ಪರ ಸಾಮರಸ್ಯ, ಏಕೀಕರಣ, ಸಮನ್ವಯ, ಐಕಮತ್ಯ ಎಂಬಿತ್ಯಾದಿ ಗುಣಗಳಿಂದ ಕೂಡಿತ್ತು. ಹಲವಾರು ಜ್ಞಾನಸಂಹಿತೆಗಳ ಪರಿಣತರಾಗಿದ್ದರು ಮುಸ್ಲಿಂ ವಿದ್ವಾಂಸರು. ಆದರೆ,ಅವೆಲ್ಲವನ್ನು ತೌಹೀದ್‌ ಎಂಬ ಏಕಮರದ ವಿಭಿನ್ನ ಟಿಸಿಲುಗಳಾಗಿ ಕಂಡಿದ್ದರು. ಖಗೋಳಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ನಡುವೆ, ಭೌತಶಾಸ್ತ್ರ ಮತ್ತು ನೀತಿಶಾಸ್ತ್ರದ ನಡುವೆ, ಗಣಿತ ಮತ್ತು ಕಾನೂನು ಸಂಹಿತೆಯ ನಡುವೆ ಹೀಗೆ ಯಾವುದೇ ಶಾಸ್ತ್ರಗಳ ನಡುವೆ ಸಂಘರ್ಷಗಳಿರಲಿಲ್ಲ. ಒಂದೇ ತತ್ವದ ಅಡಿಯಲ್ಲಿ ಎಲ್ಲವೂ ಕಾರ್ಯಾಚರಿಸುತ್ತಿದ್ದವು.

ತದ್ವಿರುದ್ಧವಾದ ಧೋರಣೆಯಾಗಿದೆ ಐರೋಪ್ಯ ನಾಗರಿಕತೆಯಲ್ಲಿ ಕಂಡುಬರುವುದು.ಮಧ್ಯಕಾಲ ಯುರೋಪಿನಲ್ಲಿ ಏಕೀಕೃತ ಚಿಂತನಾ ವಿಧಾನಕ್ಕೆ ಹೆಚ್ಚಿನ ಮಹತ್ವ ನೀಡಲ್ಪಟ್ಟಿದ್ದರೂ, ತರುವಾಯ ಅದು ಅಳಿದು ಹೋಯಿತು. ಈಗಿನ ದಿನಗಳಲ್ಲಿ, ಪ್ರತಿಯೊಬ್ಬರೂ ಕೆಲವು ಸೂಕ್ಷ್ಮ ಅಧ್ಯಯನ ಕ್ಷೇತ್ರದಲ್ಲಿ ನಿಪುಣರಾಗಿತ್ತಾರೆ, ಆ ಮೂಲಕ ಮಾಹಿತಿಗಳು ಪ್ರವಾಹದೋಪಾದಿಯಲ್ಲಿ ಹೆಚ್ಚುತ್ತಿದೆ. ಪರಿಣಾಮವಾಗಿ, ಪರಸ್ಪರ ಅರ್ಥೈಸುವಿಕೆಯ ರಾಹಿತ್ಯ ಮತ್ತು ಸಾರ್ವತ್ರಿಕವಾದ ಅಸಾಮರಸ್ಯ ಎಂಬೀ ಸಮಸ್ಯೆಗಳು ಸಾರಸ್ವತ ಲೋಕವನ್ನು ಅತಿಯಾಗಿ ಕಾಡುತ್ತಿದೆ. ಒಂದು ಏಕಗ್ರಹಿಕಾ ಪ್ರವೃತ್ತಿಯನ್ನು ಸ್ಥಾಪಿಸುವುದು ಅಸಾಧ್ಯವಾಗಿದೆ.

ಅಸಂಖ್ಯೆ ದೇವರುಗಳಾಗಿದೆ ತಕ್ಸೀರ್‌ ನ ಜಗತ್ತಿನಲ್ಲಿರುವುದು. ಅವುಗಳ ಪೈಕಿ ಕೆಲವೊಂದನ್ನು ಹೆಸರಿಸುವುದಾದರೆ, ಸಮಕಾಲೀನ ಜಗತ್ತನ್ನು ನಿರ್ಣಯಿಸುವ ವಿಚಾರಧಾರೆಗಳನ್ನು ಹೇಳುವುದು ಸೂಕ್ತವೆನಿಸುತ್ತದೆ: ಸ್ವಾತಂತ್ಯ್ರ, ಲಿಂಗ ಸಮಾನತೆ, ವಿಕಾಸವಾದ, ಪ್ರಗತಿ, ವಿಜ್ಞಾನ, ರಾಷ್ಟೀಯತೆ, ಸಮಾಜವಾದ, ಭೌತವಾದ ಇತ್ಯಾದಿ. ಇನ್ನು ಗುರುತಿಸಲಾಗದ ಕೆಲವೊಂದಿದೆ. ಅವು ಅತ್ಯಂತ ಅಪಾಯಕಾರಿ ದೇವಗಳು.ನಮ್ಮೆಡೆಯಲ್ಲಿ ನಿರಂತರ ಗಿರಿಗೀಟು ಹೊಡೆಯುವ ನೀರಸ ಪದಗಳಲ್ಲದೆ ಬೇರೇನೂ ಅಲ್ಲ ಅವು: ಅಭಿವೃದ್ಧಿ, ಮಾಹಿತಿ, ಉತ್ಪಾದನೆ, ಕ್ಷೇಮ, ಯೋಜನೆ, ಅನುಭೋಗ, ಸಂಪನ್ಮೂಲ, ವ್ಯವಸ್ಥೆ, ಸೇವೆ ಇತ್ಯಾದಿ.

ಪ್ರಸ್ತುತ ಪದಗಳು ದೇವರ ಪಾತ್ರವನ್ನು ವಹಿಸುತ್ತಿದೆಯೆಂದು ನಂಬಲಾಗದವರು, Uwe Poerksen ರವರ ʼPlastic Wordsʼ ಪುಸ್ತಕವನ್ನೊಮ್ಮೆ ಓದುವುದು ಒಳ್ಳೆಯದು. ಪಾರ್ಕಸನ್‌ ವಿವರಣೆ ಪ್ರಕಾರ, ಎರಡನೇ ಜಾಗತಿಕ ಯುದ್ಧದ ಬಳಿಕ ಪ್ರಾಬಲ್ಯಕ್ಕೆ ಬಂದ ಆಧುನಿಕ ಭಾಷಾ ಸಂಪ್ರದಾಯ, ಜಗತ್ತು ಇಷ್ಟರವರೆಗೆ ಕಂಡಿಲ್ಲದ ಅತ್ಯಂತ ವಿನಾಶಕಾರಕ ʼನಿರಂಕುಶ ಪ್ರಭುʼ ಪದಗಳನ್ನಾಗಿದೆ ಸೃಷ್ಟಿಸಿರುವುದು. ಪಾರ್ಕಸನ್‌ ಥಿಯಾಲಜಿಯಲ್ಲಿ ಆಸಕ್ತಿಯಿಲ್ಲದ ಕೇವಲ ಭಾಷಾತಜ್ಞನಾದ್ದರಿಂದ ಅವುಗಳನ್ನು ʼದೇವರುʼ ಎನ್ನದೆ, “ನಿರಂಕುಶ ಪ್ರಭುಗಳುʼ ಎಂದು ಕರೆದಿದ್ದಾರೆ. ಒಂದರ್ಥದಲ್ಲಿ ಇದು ಖುರಾನಿನ ʼಜಬ್ಬಾರ್‌ʼ ಎಂಬ ದೇವನಾಮದ ಸರಿಯಾದ ಅನುವಾದ. ಈ ನಾಮ ದೇವರಿಗೆ ಅನ್ವಯಿಸುವಾಗ ಅದರರ್ಥ ಸೃಷ್ಟಿಗಳ ಮೇಲೆ ಆತನಿಗೆ ಸಂಪೂರ್ಣ ನಿಯಂತ್ರಣಾಧಿಕಾರವಿದೆ ಎಂದಾಗುತ್ತದೆ. ನಿರಂಕುಶ ಪ್ರಭುತ್ವ ಅಥವಾ ಪರಮಾಧಿಕಾರ ಸೃಷ್ಟಿಗಳಿಗೆ ಆರೋಪಿಸುವಾಗ, ಅದು ದೇವರ ಪರಮಶಕ್ತಿಯನ್ನು ಪ್ರಶ್ನಿಸಿದಂತಾಗುತ್ತದೆ. ಈ ಪ್ಲಾಸ್ಟಿಕ್‌ ಪದಗಳು ಕೆಲಕಾಲ ಜನರನ್ನಾಳುತ್ತಾ ಬೇರೆ ಪದಗಳಿಗೆ ವೇದಿಕೆ ಬಿಟ್ಟು ಕೊಟ್ಟು ಮಾಯವಾಗುತ್ತದೆ. ವ್ಯಕ್ತವಾದ ಒಂದು ಡೆಫಿನಿಷನ್‌ ಹೇಳಲು ಸಾಧ್ಯವಾಗದಿದ್ದರೂ ಇವುಗಳ ಪ್ರಭಾವ ಅಪಾರ. ಈ ಪದಗಳನ್ನು ಪೂಜಿಸಲು ಜನರು ಹೆಮ್ಮೆಪಡುತ್ತಾರೆ ಮತ್ತು ಇವುಗಳ ಉರುಹೊಡೆಯವಿಕೆ ಜ್ಞಾನೋದಯದ ಸಂಕೇತವಾಗಿ ಪರಿಗಣಿಸಲ್ಪಡುತ್ತದೆ. ಇಂತಹ ಗುಪ್ತ ಅಪಾಯಗಳನ್ನು ಮನಗಾಣಲು ನಮಗೆ ಇಸ್ಲಾಮೀ ವೈಚಾರಿಕ ಚಿಂತನೆ ಉಪಯುಕ್ತವಾಗುತ್ತದೆ.

ವಿಲ್ಯಂ ಸಿ ಚಿಟ್ಟಿಕ್‌
ಭಾಷಾಂತರ: ಎಂ.ಎಂ.ಸುರೈಜಿ

1 3 4 5 6 7 14