ಇಬ್ನು ಅರಬಿ ಸೂಫಿ ದರ್ಶನದಲ್ಲಿ ಮುಹಮ್ಮದೀ ಮೂಲಸ್ವರೂಪ

ಶ್ರೇಷ್ಠ ಸೂಫಿ ದಾರ್ಶನಿಕ ಇಬ್ನು ಅರಬಿ ರವರ ಫುಸೂಸುಲ್ ಹಿಕಮ್ ನಲ್ಲಿ ಪ್ರವಾದಿ ಮುಹಮ್ಮದ್ (ಸ) ರ ಕುರಿತು ಬರೆದ ಅಧ್ಯಾಯವೊಂದರ ಮೇಲೆ ದಾವೂದ್ ಅಲ್ ಖೈಸರಿ ನೀಡಿದ ವ್ಯಾಖ್ಯಾನದ ಆಧಾರದಲ್ಲಿ ಪ್ರಸ್ತುತ ಪ್ರಬಂಧ ಬರೆಯಲಾಗಿದೆ.ವಿಶ್ವವಿಜ್ಞಾನದಲ್ಲಿ ಮುಹಮ್ಮದೀ ಮೂಲ ಸ್ವರೂಪವೆಂಬ ತತ್ವ ಮೀಮಾಂಸಕ ಪರಿಕಲ್ಪನೆಯ ಮಹತ್ವವನ್ನಾಗಿದೆ ವ್ಯಾಖ್ಯಾನಕಾರರು ಚರ್ಚೆ ಮಾಡಿರುವುದು. ಪ್ರವಾದಿ (ಸ) ಅಸ್ತಿತ್ವದಲ್ಲಿ ಅತ್ಯಂತ ಪರಿಪೂರ್ಣ ವ್ಯಕ್ತಿಯೆಂಬ ನಿಟ್ಟಿನಲ್ಲಿ ಏಕತ್ವದ ಚೈತನ್ಯ ಹೊಂದಿದ್ದಾರೆ ಎಂಬ ವಿವರಣೆಯೊಂದಿಗೆ ಇಬ್ನು ಅರಬಿ ತನ್ನ ಅಧ್ಯಾಯವನ್ನು ಆರಂಭಿಸಿದ್ದಾರೆ. ಸೃಷ್ಠಿ ಕ್ರಿಯೆಯ ಆರಂಭ ಮತ್ತು ಕೊನೆ ಎರಡೂ ಪ್ರವಾದಿವರ್ಯರ ಮೂಲಕವೇ ಆಗಿದೆ. ಆದಂ (ಅ) ಮಣ್ಣು ಮತ್ತು ನೀರಿನ ನಡುವಿನ ಅವಸ್ಥೆಯಲ್ಲಿದ್ದಾಗಲೆ ನಾನು ಪ್ರವಾದಿಯಾಗಿದ್ದೆ ಎಂಬ ಹದೀಸ್ ಇಲ್ಲಿ ಸ್ಮರಣೀಯವಾಗಿದೆ.

“ಇಡೀ ಮನುಷ್ಯ ಸಂಕುಲದ ಪೈಕಿ ಅತ್ಯಂತ ಪರಿಪೂರ್ಣತೆ ಹೊಂದಿರುವ ಅಸ್ತಿತ್ವವಾಗಿರುವುದರಿಂದ ಪ್ರವಾದಿ (ಸ) ಏಕತ್ವದ ಅನುಪಮ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಸೃಷ್ಟಿ ಪ್ರಕ್ರಿಯೆ ಅವರಿಂದಲೇ ಆರಂಭವಾಗುತ್ತದೆ ಹಾಗೂ ಅವರಲ್ಲೇ ಕೊನೆಗೊಳ್ಳುತ್ತದೆ. ಕಾರಣ, ಆದಮ್ (ಅ) ಮಣ್ಣು ಮತ್ತು ನೀರಿನ ನಡುವಣ ಸ್ಥಿತಿಯಲ್ಲಿದ್ದಾಗಲೇ ಪುಣ್ಯರು ಪ್ರವಾದಿಯಾಗಿದ್ದರು. ತರುವಾಯ ಭೌತಲೋಕಕ್ಕಿಳಿದಾಗ ಪ್ರವಾದಿ ಸರಣಿಯ ಮುದ್ರೆಯಾಗಿ ಆಗತರಾದರು.”

ಖೈಸರಿಯವರ ವ್ಯಾಖ್ಯಾನ ಇಲ್ಲಿ ಮುಖ್ಯವಾಗುತ್ತದೆ. ಏಕತ್ವದ ಅನುಪಮ ಪದವಿಯನ್ನು ನೆಬಿಯವರು ಪಡೆಯಲು ಕಾರಣವೇನೆಂಬ ಕುತೂಹಲ ತಣಿಸಲು ವಿವರಣೆಯೊಂದನ್ನು ನೀಡುತ್ತಾರೆ:

” ‘ದೈವಿಕ ಸಮಗ್ರತೆ’ (ಅಲ್ ಜಾಮಿಇಯ್ಯ ಇಲಾಹಿಯ್ಯ) ಎಂಬ ಆಧ್ಯಾತ್ಮಿಕ ಸ್ಥಾನಕ್ಕೆ ಪ್ರವೇಶ ಸಿಕ್ಕ ಏಕಮಾತ್ರ ವ್ಯಕ್ತಿ ಪ್ರವಾದಿ ಯಾಗಿರುವುದರಿಂದಲೇ ಅವರಿಗೆ ಅನನ್ಯ ಏಕತ್ವದ ಗುಣ ದೊರಕಿದೆ. ಪ್ರಸ್ತುತ ಸ್ಥಾನದ ಮೇಲೆ ‘ಅದ್ಸಾತುಲ್ ಅಹದಿಯ್ಯ’ ಎಂಬ ದರ್ಜೆ ಮಾತ್ರ ಉಳಿದಿರುವುದು. ಅಲ್ಲಾಹನ ಗುಣ ಮತ್ತು ನಾಮಗಳ ಪೈಕಿ ಅತ್ಯಂತ ಶ್ರೇಷ್ಠ ಹಾಗೂ ಸಮಗ್ರತೆ ಹೊಂದಿರುವ ‘ಅಲ್ಲಾಹ್’ ಎಂಬ ನಾಮವು ಅಭಿವ್ಯಕ್ತಗೊಳ್ಳುವ ಕೇಂದ್ರವಾಗಿದೆ ‘ದೈವಿಕ ಸಮಗ್ರತೆ’ ಎಂಬ ಪದವಿ “

ದೇವರ ಸರ್ವ ನಾಮಗಳನ್ನು ಒಗ್ಗೂಡಿಸುವ ಅಲ್ಲಾಹ್‌ ಎಂಬ ನಾಮವನ್ನು ಪ್ರವಾದಿ (ಸ) ಸ್ವೀಕರಿಸುವ ಕಾರಣದಿಂದಾಗಿಯೇ, “ದೈವಿಕ ಸಮಗ್ರತೆ” ಎಂಬ ಪದವಿಯಲ್ಲಿ ಪ್ರವಾದಿ (ಸ) ದೇವರ ಸರ್ವ ನಾಮಗಳನ್ನು ಸ್ವೀಕರಿಸುವ ಬಟ್ಟಲಾಗಿ ನೆಲೆನಿಲ್ಲುತ್ತಾರೆ. ಹಾಗೆ, ಏಕತ್ವದ ಗುಣ ಹೊಂದಿದ ಏಕಮಾತ್ರ ಸೃಷ್ಟಿಯಾಗಿ ಪರಿಗಣಿಸಲ್ಪಡುತ್ತಾರೆ. ಕಾರಣ, ಅಲ್ಲಾಹ್‌ ಎಂಬ ನಾಮವನ್ನು – ಇದು ಸರ್ವ ಸಮಗ್ರವಾದ ನಾಮ ಹಾಗೂ ಅನನ್ಯ ನಾಮವೂ ಕೂಡ (ಅಲ್‌ ಇಸ್ಮುಲ್‌ ಮುಫ್ರದ್)‌ – ಸಮರ್ಪಕವಾಗಿ ಮೂರ್ತೀಕರಿಸಿದ, ಅಭಿವ್ಯಕ್ತಗೊಳಿಸಿದ ಸಾಟಿಯಿಲ್ಲದ ಸೃಷ್ಟಿಯಾಗಿದ್ದಾರೆ. ಜಗತ್ತಿನಲ್ಲಿರುವ ಅಸ್ತಿತ್ವಗಳೆಲ್ಲ ಉಂಟಾದದ್ದು ದೇವರ ಸ್ವಯಂ ಅಭಿವ್ಯಕ್ತಿಗಳ ಮೂಲಕ. ಅಂದರೆ, ದೇವರ ಗುಣ ನಾಮಗಳ ಪ್ರಕಟ ರೂಪವಾಗಿದೆ ಸೃಷ್ಟಿ ಪ್ರಪಂಚ. ಈ ಸೃಷ್ಟಿ ಪ್ರಪಂಚದಲ್ಲಿ ಪ್ರವಾದಿವರ್ಯರ ಸ್ಥಾನ ಅತ್ಯಂತ ಉನ್ನತ ಮಟ್ಟದಲ್ಲಾಗಿದೆ. ಆದ್ದರಿಂದ, ದೇವರ ಸ್ವಾಭಿವ್ಯಕ್ತಗಳ ಶ್ರೇಣಿಯಲ್ಲಿ ಪ್ರಥಮ ಸ್ಥಾನ ಪಡೆದಿರುವುದರಿಂದ ಅವರಲ್ಲಿ ಅಲ್ಲಾಹನ ಸರ್ವ ಗುಣ ನಾಮಗಳು ಪ್ರಕಟಗೊಂಡಿದೆಯೆಂದು ಮನಗಾಣಬಹುದು. ಇಬ್ನು ಅರಬಿಯವರ ಪ್ರಸ್ತುತ ವಿವರಣೆಯನ್ನು ಸ್ಪಷ್ಟಪಡಿಸಲು ಖೈಸರಿಯವರು “ ಮೊಟ್ಟ ಮೊದಲು ಅಲ್ಲಾಹು ಸೃಷ್ಟಿಸಿದ್ದು ನನ್ನ ಪ್ರಕಾಶವಾಗಿದೆ “ ಎಂಬ ಪ್ರಸಿದ್ದ ಹದೀಸನ್ನು ತರುತ್ತಾರೆ:

“ ವಸ್ತುಗಳ ಪೈಕಿ ಮೊಟ್ಟ ಮೊದಲಾಗಿ ಅಲ್ಲಾಹನ ಪವಿತ್ರ ಪ್ರಸರಣದಿಂದ ಹೊರಬಂದದ್ದು ಪ್ರವಾದಿವರ್ಯರ ಮೂಲಸ್ವರೂಪವಾಗಿದೆ. “ ಅಲ್ಲಾಹು ಸೃಷ್ಟಿಸಿದ ಮೊದಲ ವಸ್ತು ನನ್ನ ಪ್ರಕಾಶವಾಗಿತ್ತು “ ಎಂಬ ಹದೀಸ್‌ ಇದರೆಡೆಗೇ ಬೊಟ್ಟು ಮಾಡುತ್ತದೆ.”

ಪ್ರಸ್ತುತ ಪ್ರಕಾಶವನ್ನೇ ಆಗಿದೆ, ಇಬ್ನು ಅರಬಿ ಸೇರಿದಂತೆ ಸೂಫಿಗಳಾದಿ “ ಮುಹಮ್ಮದೀ ಮೂಲಸ್ವರೂಪ (ಹಕೀಕತ್‌ ಮುಹಮ್ಮದಿಯ್ಯ)” ಎಂದು ಕರೆದಿರುವುದು. ಅಲ್ಲಾಹನ ಸಕಲ ಅಭಿವ್ಯಕ್ತಿಗಳ ಕೇಂದ್ರವಾಗಿದೆ ಇದು. ಸೃಷ್ಟಿ ಪ್ರಪಂಚದ ಆರಂಭವೂ ಕೊನೆಯೂ ಇಲ್ಲೇ ಆಗಿದೆ. ಖೈಸರಿ ಪ್ರಕಾರ, ನೂರ್‌ ಮುಹಮ್ಮದೀ ಅನ್ನು “ ಪ್ರಥಮ ವಿವೇಕ “ (ಅಲ್‌ ಅಖ್ಲ್‌ ಅವ್ವಲ್)‌ ಎಂದೂ ಸಂಬೋಧಿಸಲಾಗಿದೆ. ಇಬ್ನು ಅರಬಿ ಮತ್ತು ಪೂರ್ವ ವಿದ್ವಾಂಸನೇಕರು ಮುಹಮ್ಮದೀ ಮೂಲಸ್ವರೂಪವನ್ನು “ ಪ್ರಥಮ ವಿವೇಕ “ ( First Intellect) ದೊಂದಿಗೆ ಸಮೀಕರಿಸಿದ್ದು ಬಹಳ ಕುತೂಹಲಕಾರಿಯಾಗಿದೆ. ಕಾರಣ, ಪುರಾತನ ಗ್ರೀಕ್‌ ಹಾಗೂ ನಿಯೋಪ್ಲಾಟೋನಿಕ್‌ ಮುಸ್ಲಿಂ ತತ್ವಜ್ಞಾನ ಪರಂಪರೆಯಲ್ಲಿ ಢಾಳಾಗಿ ಚರ್ಚೆಗೀಡಾದ ಪರಿಭಾವನೆಯಾಗಿದೆ ಪ್ರಥಮ ವಿವೇಕ ಎಂಬುವುದು. ಫಾರಾಬಿ ಮತ್ತು ಇಬ್ನುಸೀನ ಮುಂತಾದ ಗ್ರೀಕ್‌ ಪ್ರಭಾವಿತ ಮುಸ್ಲಿಂ ತತ್ವಜ್ಞರ ವಿಶ್ಲೇಷಣೆ ಪ್ರಕಾರ, ದೈವೇಚ್ಛೆಯಿಂದ ಪ್ರಪ್ರಥವಾಗಿ ಅಸ್ತಿತ್ವಕ್ಕೆ ಬಂದ ವಸ್ತುವಾಗಿದೆ ಪ್ರಥಮ ವಿವೇಕ ಎಂಬುದು. ಆ ಮೂಲಕ ಬಹುತ್ವದ ಲೋಕ ಇರವನ್ನು ಪಡೆಯಲು ಅನುವು ಮಾಡಿಕೊಡಲಾಯಿತು. ಖೈಸರಿ ಪ್ರಸ್ತುತ ನಿಯೋಪ್ಲಾಟೋನಿಕ್‌ ವಿಚಾರಗಳನ್ನು ಪೂರ್ತಿಯಾಗಿ ಒಪ್ಪದಿದ್ದರೂ, “ಪ್ರಥಮ ವಿವೇಕ” ಪ್ರವಾದಿಯಲ್ಲದೆ ಬೇರೇನೂ ಅಲ್ಲ ಎಂಬ ನಿಲುವಲ್ಲಿ ದೃಢರಾಗಿದ್ದಾರೆ.

ಇಸ್ಲಾಮೀ ಆಧ್ಯಾತ್ಮ ತತ್ವಗಳ ಪೈಕಿ ಅತ್ಯಂತ ಮಹತ್ವಪೂರ್ಣವಾದದ್ದಾಗಿದೆ ಮುಹಮ್ಮದೀ ಮೂಲಸ್ವರೂಪ (ಹಕೀಕತ್ ಮುಹಮ್ಮದಿಯ್ಯ) ಎನ್ನುವುದು. ಮೊಟ್ಟ ಮೊದಲು ಸೃಷ್ಟಿಯಾದದ್ದು ನೆಬಿಯವರ ಬೆಳಕಾಗಿತ್ತು ಎಂಬುವುದು ಇದರ ತಾತ್ಪರ್ಯ. ಖುರಾನ್ ಮತ್ತು ಹದೀಸುಗಳ ಆಧಾರದಲ್ಲಿ ಸೂಫಿಗಳು ಪ್ರಸ್ತುತ ಪರಿಕಲ್ಪನೆಯನ್ನು ಬೆಳೆಸಿದ್ದಾರೆ. ಅಲ್ಲಾಹನು ಖುರಾನಿನಲ್ಲಿ ಹಲವು ಕಡೆ ಪ್ರವಾದಿ (ಸ) ರನ್ನು ಬೆಳಕು ಎಂಬುದಾಗಿ ಸಂಬೋಧಿಸಿದ್ದಾನೆ. ಹಾಗೂ “ ಸರ್ವ ಲೋಕಕ್ಕೂ ಕರುಣಾಮಯಿಯಾಗಿ ತಮ್ಮನ್ನು ನೇಮಕಗೊಳಿಸಲಾಗಿದೆ” ಎನ್ನುವ ಪ್ರಸಿದ್ದ ಸೂಕ್ತವೂ ಕೂಡ ಪ್ರಸ್ತುತ ಸಿದ್ದಾಂತಕ್ಕೆ ಪುಷ್ಟಿ ನೀಡುತ್ತದೆ. ಕಾರಣ, ಪ್ರಪಂಚದ ಪ್ರತಿಯೊಂದು ವಸ್ತುವಿಗೂ ನೆಬಿ (ಸ) ಅನುಗ್ರಹ ದಾಯಕರು ಎನ್ನಲಾಗಿದೆ. ಯಾವುದೇ ವಸ್ತುವಿಗೆ ಮೊಟ್ಟ ಮೊದಲು ಸಿಗುವ ಅನುಗ್ರಹ ಅದರ ಅಸ್ತಿತ್ವವೇ ಆಗಿದೆ. ಹಾಗಿರುವಾಗ ಪ್ರತಿಯೊಂದರ ಅಸ್ತಿತ್ವದ ಪೂರ್ವದಲ್ಲಿ ಪ್ರಸ್ತುತ ಅನುಗ್ರಹ ನೀಡುವ ನೆಬಿ (ಸ) ಅಸ್ತಿತ್ವದಲ್ಲಿರಬೇಕು. ಆದ್ದರಿಂದ ಎಲ್ಲಕ್ಕಿಂತ ಮುನ್ನ ಅವರು ಇರಬೇಕು. ಇದನ್ನೇ ನೂರ್ ಮುಹಮ್ಮದೀ ಅಂತ ಕರೆದಿರುವುದು.

ಇಲ್ಲಿ ಗಮನೀಯ ಅಂಶವೇನೆಂದರೆ, ನೂರ್ ಮುಹಮ್ಮದಿಯ್ಯದಲ್ಲಿರುವ ನೂರ್ ಎಂಬುವುದು ನೆಬಿಯವರ ಹಕೀಕತಿಗೆ ಇರುವ ನಾಮವಾಗಿದೆಯೇ ಹೊರತು ಸಾಮಾನ್ಯ ನಾವು ಅರ್ಥೈಸುವ ಬೆಳಕು ಎಂಬ ಅರ್ಥವನ್ನು ಹೊಂದಿಲ್ಲ. ಹಕೀಕತ್ ಮುಹಮ್ಮದಿಯ್ಯಗೆ “ಬೆಳಕು” ಎಂಬ ಹೆಸರು ಸಿಗಲು ಕಾರಣ, ಎಲ್ಲ ವಸ್ತುಗಳು ಇರದಿರುವಿಕೆಯೆಂಬ ಕತ್ತಲಿನಿಂದ ಇರವು ಎಂಬ ಬೆಳಕಿಗೆ ಬರುವುದು ಮುಹಮ್ಮದೀ ನೈಜಸ್ವರೂಪದ ಮೂಲಕ. ಅಲ್ಲಾಹನ ದ್ಸಾತ್(ಸತ್ತು ಅಥವ ಅಸ್ತಿತ್ವದ ಯಥಾರ್ಥತೆ) ಅರಿಯುವುದು ಹೇಗೆ ಅಸಾಧ್ಯವೋ ಹಾಗೇ ನೆಬಿಯವರ ಮೂಲಸ್ವರೂಪವನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ನಮ್ಮ ಸಾಮರ್ಥ್ಯಕ್ಕೆ ನಿಲುಕದಂತದ್ದು. ಎಂದಲೇ ಇದನ್ನು ಸೂಫಿಗಳು ಅತೀಂದ್ರಿಯ ಲೋಕದ ಅತ್ಯಂತ ನಿಗೂಢ ವಿಚಾರವೆಂದು ಬಣ್ಣಿಸಿದ್ದಾರೆ. ಆದರೆ, ಅದರ ಕೆಲವೊಂದು ಗುಣಲಕ್ಷಣಗಳ ಕುರಿತು ವಿಶದವಾಗಿ ಮಾತನಾಡಿದ್ದಾರೆ.

ಮುಖ್ಯವಾಗಿ, ನೂರ್ ಮುಹಮ್ಮದೀ ಪ್ರಪಂಚದ ಎಲ್ಲ ವಸ್ತುಗಳ ಮೂಲಸತ್ವವಾಗಿದೆ. ಗ್ರೀಕ್ ದಾರ್ಶನಿಕ ಅರಿಸ್ಟಾಟಲನ ತತ್ವ ಮೀಮಾಂಸೆಯಲ್ಲಿ ಬರುವ ಹೈಲ್ (ಹಯೂಲ ಎಂದು ಅರಬಿಕ್ ರೂಪಾಂತರ) ಪರಿಕಲ್ಪನೆಯೊಂದಿದೆ. ವಸ್ತುಗಳೆಲ್ಲ ಮೂಲದ್ರವ್ಯ ಮತ್ತು ರೂಪಗಳ ಸಂಯೋಜನೆಯೆಂದೂ ಹಾಗೂ ಹೈಲ್ ಎಂದು ಹೆಸರಿಸಲಾದ ಮೂಲದ್ರವ್ಯವು ಎಲ್ಲದರಲ್ಲಿ ಸಮಾನವಾಗಿರುತ್ತದೆಯೆಂಬುದು ಆತನ ಸಿದ್ದಾಂತ. ಇದರ ಪ್ರಕಾರ ಎಲ್ಲ ವಸ್ತುಗಳ ಮೂಲ ಸತ್ವವೊಂದೇ.ರೂಪಗಳನ್ನು ಪಡೆಯುವಾಗ ಅವು ಭಿನ್ನವಾಗುತ್ತದೆ. ಪ್ರಸ್ತುತ ವಿಚಾರವನ್ನು ಸುಸಮಂಜಸವಾಗಿ ಸೂಫಿಗಳು ತಮ್ಮ ಮೆಟಾಫಿಸಿಕ್ಸ್ನಲ್ಲಿ ಸಂಯೋಜಿಸಿದ್ದು ವಿಶೇಷ. ಈ ನಿಟ್ಟಿನಲ್ಲಿ ಸೂಫಿಗಳು ಮುಹಮ್ಮದೀಯ ಮೂಲಸ್ವರೂಪವನ್ನು ಪ್ರಪ್ರಥಮ ಸತ್ವವೆಂದೂ, ಎಲ್ಲದರ ಹಯೂಲ ಎಂದು ಕರೆದಿದ್ದಾರೆ ಹಾಗೂ ಅದು ಎಲ್ಲ ವಸ್ತುಗಳಲ್ಲೂ ಅಡಕಗೊಂಡಿದೆ ಎಂದು ಸಿದ್ದಾಂತಿಸುತ್ತಾರೆ (ಅದ್ವೈತಾದಿ ಸಿದ್ದಾಂತಗಳು ಸಾರುವ ದೇವರ ಸರ್ವವ್ಯಾಪಕತೆಯನ್ನು ಪ್ರಸ್ತುತ ಚಿಂತನೆಯ ಆಧಾರದಲ್ಲಿ ಅರ್ಥೈಸಬಹುದೆಂದು ತೋರುತ್ತದೆ. ಅಂದರೆ ನಿಜವಾಗಿ ದೇವರಲ್ಲ ಸರ್ವವ್ಯಾಪಿಯಾದವನು.ಹೊರತು ಆತನ ಅಭಿವ್ಯಕ್ತ ರೂಪೀ ಬೆಳಕಾದ ನೂರ್ ಮುಹಮ್ಮದೀ ಆಗಿದೆ ಸರ್ವಾಂತಾರ್ಯಾಮಿಯಾಗಿರುವುದು). ಅತೀಂದ್ರಿಯ ಲೋಕದ ಅನಿಶ್ಚಿತ ಸ್ಥಿತಿಯಿಂದ ಮೊದಲು ನಿಶ್ಚಿತಗೊಂಡ ಅಸ್ತಿತ್ವ ಹಾಗೂ ಸೃಷ್ಠಿವೃತ್ತದ ಕೇಂದ್ರ ಎಂಬಿತ್ಯಾದಿ ರೂಪದಲ್ಲೂ ಅದು ಬಣ್ಣಿಸಲ್ಪಟ್ಟಿದೆ.

ಮುಹಮ್ಮದೀ ಹಕೀಕತ್ತಿನ ಮತ್ತೊಂದು ಮುಖ್ಯ ವರ್ಣನೆ ಏನೆಂದರೆ, ಅದು ಸಮಸ್ತ ಸೃಷ್ಟಿಯ ಕನ್ನಡಿಯಾಗಿದೆ ಎಂಬುದು. ಆಕೃತಿಗಳು ಪೂರ್ಣವಾಗಿ ಆವರಿಸಿ ಪ್ರತಿಬಿಂಬಿತಗೊಳ್ಳುವಾಗ ಕನ್ನಡಿ ಹೇಗೆ ಅವ್ಯಕ್ತಗೊಳ್ಳುವುದೋ ಹಾಗೆಯೇ ಸಕಲ ಸೃಷ್ಠಿಗಳು ಪ್ರತಿಬಿಂಬಿತಗೊಂಡು ಹಕೀಕತ್ ಮುಹಮ್ಮದಿಯ್ಯ ಸಂಪೂರ್ಣ ಅವ್ಯಕ್ತವಾಗಿದೆ. ಅನಿವಾರ್ಯ ಅಸ್ತಿತ್ವವನ್ನು ಹೊಂದಿದ ಅಲ್ಲಾಹು ಹಾಗೂ ಸಾಪೇಕ್ಷ ಅಸ್ತಿತ್ವ ಹೊಂದಿದ ಸೃಷ್ಟಿಗಳು ಹೀಗೆ ಪರಸ್ಪರ ಸಂಪೂರ್ಣ ಭಿನ್ನವಾದ ಉಭಯ ಪ್ರಪಂಚಗಳೆರೆಡರ ಸ್ವಭಾವ ವೈಶಿಷ್ಟ್ಯತೆಗಳನ್ನು ಮೇಳೈಸಿದೆ ಎಂಬ ನಿಟ್ಟಿನಲ್ಲಿ ಮುಹಮ್ಮದಿಯ್ಯ ಮೂಲಸತ್ತುವನ್ನು ಪ್ರಪಂಚದ್ವಯಗಳ ಕನ್ನಡಿಯೆಂದೂ ಸಮುದ್ರದ್ವಯಗಳ (ಮೂಲಭೂತ ಅಸ್ತಿತ್ವ ಮತ್ತು ಸಾಪೇಕ್ಷ ಅಸ್ತಿತ್ವ ಎಂಬೀ ಎರಡು ಸಮುದ್ರಗಳು) ಸಂಗಮವೆಂದೂ ಕರೆಯಲಾಗಿದೆ. ಜತೆಗೆ, ಅದು ಅನಿವಾರ್ಯ ಅಸ್ತಿತ್ವ (necessary existence) ಹಾಗೂ ಸಾಧ್ಯತಾ ಅಸ್ತಿತ್ವ (contingent existence ಅಂದರೆ ಇರುವಿಕೆ ಮತ್ತು ಇಲ್ಲದಿರುವಿಕೆ ಎರಡರ ಅಗತ್ಯತೆ ಇಲ್ಲದ ಅಸ್ತಿತ್ವಗಳು) ಗಳ ನಡುವಿನ ಮಾಧ್ಯಮಿಕ (ಬರ್ಝಖ್) ಲೋಕವಾಗಿದೆ. ಆದ್ದರಿಂದ, ಅಂತ ಮತ್ತು ಅನಂತವನ್ನು(finite and infinite) ಅದು ಜೋಡಿಸುತ್ತದೆ. ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವಿನ ಮುಖ್ಯ ಪರದೆ ( ಹಿಜಾಬ್) ಎಂಬ ನಿಟ್ಟಿನಲ್ಲಿ ಸೃಷ್ಟಿಗಳ ಪೈಕಿ ಯಾರಿಗಾದರೂ ಅಲ್ಲಾಹುವನ್ನು ಸೇರಬೇಕಿದ್ದರೆ ನೆಬಿ (ಸ) ಯವರ ಮುಖಾಂತರ ಮಾತ್ರ ಸಾಧ್ಯ. ಹದೀಸೊಂದರಲ್ಲಿ ಹೀಗಿದೆ: “ಅಲ್ಲಾಹುವಿನ ಪರದೆ ಪ್ರಕಾಶವಾಗಿದೆ. ಅದನ್ನು ಸರಿಸಿದರೆ ಆತನ ಪ್ರಖರ ಕಿರಣಗಳು ನೋಡುವವರನ್ನು ಸುಟ್ಟು ಕರಕಲ ಮಾಡಿಬಿಡುವುದು”. ಈ ಹದೀಸಿನಲ್ಲಿ ಬಂದ ಪ್ರಕಾಶವೆಂಬ ಪರದೆಯನ್ನು ಮುಹಮ್ಮದೀ ಮೂಲರೂಪವೆಂದು ವ್ಯಾಖ್ಯಾನಿಸಲಾಗಿದೆ.

ಜಡಜಗತ್ತಿಗೆ ಬರುವಾಗ ಇದ್ದ ಅದೇ ಆಕೃತಿಯಲ್ಲೇ ಆಗಿತ್ತು ನೆಬಿಯವರ ಚೈತನ್ಯ ರೂಪಿಯಾದ ಮುಹಮ್ಮದೀ ಪ್ರಭೆಯನ್ನು ಅಲ್ಲಾಹನು ಸೃಷ್ಟಿ ಮಾಡಿದ್ದು. ದೇಶಕಾಲಾತೀತವಾಗಿ ಎಲ್ಲಾ ತರದ ಪ್ರಪಂಚಗಳಾಚೆಯಾಗಿದೆ ಅದರ ಸ್ಥಾನವಿರುವುದು. ಅಲ್ಲಾಹುವನ್ನು ಮುಹಮಮ್ಮದೀ ಹಕೀತತ್ತಿನಿಂದಲೇ ತಿಳಿಯಬೇಕು ಎಂದಿರುವಾಗ, ಅಧ್ಯಾತ್ಮದ ಹಾದಿಯಲ್ಲಿ ಸಾಗುವ ಸಾಧಕರ ಆತ್ಯಂತಿಕ ಗುರಿಯೂ ಅದೇ ಆಗಿರುತ್ತದೆ. ಸೂಫಿಗಳ ಅನುಭಾವಿಕ ಗಾನಗಳಲ್ಲಿ ಬರುವ ಸುರಪಾನ,ಲೈಲಾ, ಸ್ವರ್ಗೋದ್ಯಾನ ಎಂಬಿತ್ಯಾದಿ ಪದಗುಚ್ಛಗಳು ಅದರೆಡೆಗೇ ಬೊಟ್ಟುಮಾಡುವುದು.

ದೇವರ ಪವಿತ್ರ ಅಸ್ತಿತ್ವ ಖಂಡಿತವಾಗಿಯೂ ಬಹುತ್ವ ತುಂಬಿದ ಸೃಷ್ಟಿಗಳಾದ್ಯಂತ ನೇರವಾಗಿ ಅಭಿವ್ಯಕ್ತಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ ಒಂದು ಮಾಧ್ಯಮ ಅನಿವಾರ್ಯವಾಗುತ್ತದೆ. ಪ್ರವಾದಿವರ್ಯರೇ ಆಗಿದ್ದಾರೆ ಆ ಮಾಧ್ಯಮ. ಒಟ್ಟಾರೆ, ಪ್ರವಾದಿ (ಸ) ಉತ್ತರರದಾಯಿತ್ವ ಅತ್ಯಂತ ಮಹತ್ವಕಾರಿಯಾದದ್ದು. ದೇವರ ಸರ್ವ ನಾಮಗಳನ್ನು ತನ್ನ ಸ್ವರೂಪ ಹಾಗೂ ಕರ್ಮಗಳ ಮೂಲಕ ಪ್ರಕಟಪಡಿಸುತ್ತಾರೆ ಹಾಗೂ ಜಗತ್ತಿನಾದ್ಯಂತ ದೈವಿಕ ನಾಮಗಳನ್ನು ಪಸರಿಸುವ ಮಾಧ್ಯಮವಾಗಿಯೂ ಕಾರ್ಯಾಚರಿಸುತ್ತಾರೆ. ಪ್ರಸ್ತುತ ವಿಶ್ಲೇಷಣೆಯ ಆಧಾರದಲ್ಲೇ, “ ನೀವು ಇಲ್ಲದಿದ್ದರೆ, ಜಗತ್ತನ್ನೇ ನಾನು ಸೃಷ್ಟಿಸುತ್ತಿರಲಿಲ್ಲ “ ಎಂಬ ಹದೀಸ್‌ ಖುದ್ಸಿಯನ್ನು ಅರ್ಥ ಮಾಡಬೇಕಾಗಿದೆ.

ಮುಂದೆ ಖೈಸರಿಯವರು “ದೈವಿಕ ದರ್ಜೆಗಳು” (ಅದ್ದರಜಾತುಲ್‌ ಇಲಾಹಿಯ್ಯ) ಎಂಬ ವಿಶ್ವವೈಜ್ಞಾನಿಕ ಪರಿಕಲ್ಪನೆಯನ್ನು ಚರ್ಚೆಗೆ ಎಳೆಯುತ್ತಾರೆ.ಇಬ್ನು ಅರಬಿಯವರ ಕೆಳಗಿನ ಪ್ರಸ್ತಾವನೆಯ ಸಂದರ್ಭವಾಗಿದೆ ಈ ಚರ್ಚೆಯ ಹಿನ್ನಲೆ:

“ ಖುರ್‌ ಆನಿನಲ್ಲಿ ಅಲ್ಲಾಹು ತನ್ನನ್ನು ʼದರ್ಜೆಗಳನ್ನು ಏರಿಸುವವನು ಹಾಗೂ ಸಿಂಹಾಸನದ ಮಾಲಿಕ ʼ ಎಂದು ವಿಶೇಷಿಸಿದ್ದಾನೆ. ಅರ್ಶಿನ ಮೇಲೆ ತನ್ನ ಪರಿಪೂರ್ಣ ಕರುಣಾಮಯಿ (ಅರ್ರಹ್ಮಾನ್)‌ ಎಂಬ ನಾಮದೊಂದಿಗೆ ಆಸೀನನಾಗಿದ್ದಾನೆ. ಆದ್ದರಿಂದಲೇ, ʼ ನನ್ನ ಕರುಣೆ ಸಕಲ ವಸ್ತುಗಳನ್ನು ಆಚ್ಛಾದಿಸಿದೆʼ ಎಂದು ಅಲ್ಲಾಹು ಹೇಳಿದಂತೆಯೇ ಅರ್ಶ್‌ ಅಥವಾ ಸಿಂಹಾಸನದ ಕೆಳಗೆ ಆತನ ಕರುಣೆಯನ್ನು ಪಡೆಯದ ಯಾವ ವಸ್ತುವೂ ಇರಲಾರದು. ಪ್ರಸ್ತುತ ಅರ್ಶಿನ ಮೂಲಕ ಲೋಕವಿಡೀ ಕರುಣೆಯ ಪ್ರಸರಣವನ್ನು (ಸರಯಾನು ರ್ರಹ್ಮ) ಸ್ವೀಕರಿಸುತ್ತದೆ”

ಖೈಸರಿ ಪ್ರಕಾರ, ದೈವಿಕತೆಯ ಈ ದರ್ಜೆಗಳಿಂದ ʼಪ್ರಥಮ ವಿವೇಕʼ ಅಸ್ತಿತ್ವಕ್ಕೆ ಬಂತು ಹಾಗೂ ಅದರಿಂದ ʼವಿಶ್ವಾತ್ಮ ʼ ಇರವನ್ನು ಪಡೆಯಿತು. ಪ್ರಸ್ತುತ ವಿಶ್ವಾತ್ಮ ದಿಂದ ಎಲ್ಲಾ ಬಗೆಯ ವೈಚಾರಿಕ ಆತ್ಮಗಳು, ಭೌತ ವಸ್ತುಗಳು ಹಾಗೂ ಒಟ್ಟಾರೆ ಜಗತ್ತು ಅಸ್ತಿತ್ವವನ್ನು ಕಂಡಿತು. ಆಕಾಶ ಮತ್ತು ಭೂಮಿಯ ಮೂಲ ಪದಾರ್ಥಗಳಿಂದ ʼಕುರ್ಸ್‌ʼ ಕೂಡ ಸೃಷ್ಟಿಸಲ್ಪಟ್ಟಿತು. ಸೃಷ್ಟಿಯ ಈ ಪ್ರಕ್ರಿಯೆಯ ವಿವರಣೆ, ಮಾಧ್ಯಮಿಕ ಜಗತ್ತು ಯಾ ಭಾವನಾತ್ಮಕ ಜಗತ್ತು (ಮಲಕೂತ್‌) ಮತ್ತು ಇಂದ್ರಿಯಗೋಚರ (ಮುಲ್ಕ್)‌ ಜಗತ್ತಿನ ಕುರಿತು ಹೆಚ್ಚು ಸ್ಪಷ್ಟತೆಯನ್ನು ನೀಡುತ್ತದೆ. ಇಬ್ನು ಅರಬಿಯವರ ಅರ್ಶಿನಿಂದ ಸಕಲ ಸೃಷ್ಟಿಗಳಿಗೆ ಕರುಣೆಯ ವಿತರಣೆಯಾಗುತ್ತದೆ ಎಂಬ ವಿಶ್ಲೇಷಣೆಯ ಆಧಾರದಲ್ಲಿ ಖೈಸರಿಯವರು ನೀಡುವ ವ್ಯಾಖ್ಯಾನ ಆಸಕ್ತಿದಾಯಕವಾಗಿದೆ. ಅವರ ಅಭಿಪ್ರಾಯದಲ್ಲಿ, ಎರಡು ಬಗೆಯ ಅರ್ಶ್‌ ಇದೆ; ಆಧ್ಯಾತ್ಮಿಕ ಮತ್ತು ಭೌತಿಕ. ಇವೆರಡರ ಪೈಕಿ, ಆಧ್ಯಾತ್ಮಿಕ ಅರ್ಶನ್ನು ಮುಹಮ್ಮದೀ ಮೂಲಸ್ವರೂಪದೊಂದಿಗೆ ಸಮೀಕರಿಸುತ್ತಾರೆ. ʼಸಂಪೂರ್ಣ ದಯಾಮಯಿʼ ಎಂಬ ನಾಮ ಅರ್ಶಿನ ಮೇಲೆ ನೆಲೆನಿಂತಿದೆ ಎಂಬುವುದು ಇಬ್ನು ಅರಬಿಯವರ ಅಂಬೋಣ. ಹಾಗಾದರೆ, ಪ್ರಸ್ತುತ ನಾಮಕ್ಕೂ ಮುಹಮ್ಮದೀ ನೈಜಸ್ವರೂಪಕ್ಕೂ ಏನು ಸಂಬಂಧ?. ಈ ಪ್ರಶ್ನೆಗೂ ಸುಸಂಬದ್ದ ಉತ್ತರವನ್ನಾಗಿದೆ ಖೈಸರಿ ನೀಡುವುದು:

“ ವಸ್ತು ಪ್ರಪಂಚಕ್ಕೆ ಇಳಿಯುವ ಮೂಲಕವಾಗಿದೆ ಕರುಣೆಯ ಸೂಕ್ತ ವಿತರಣೆ ಸಾಧ್ಯವಾಗುವುದು. ಆದ್ದರಿಂದ, ದೇವರ ಸರ್ವ ಅಭಿವ್ಯಕ್ತಿಗಳ ಕೇಂದ್ರವಾಗಿರುವ ಮುಹಮ್ಮದೀ ಮೂಲಸ್ವರೂಪವು ಅರ್ಶಿನ ಮೇಲೆ ಸ್ಥಾಪಿತವಾಗಿದೆ. ಆ ಮೂಲಕ ಅದರ ಕರುಣೆ ಜಗದಗಲ ವ್ಯಾಪಿಸುತ್ತದೆ ಮತ್ತು ಸೃಷ್ಟಿ ಪ್ರಪಂಚನ್ನಿಡೀ ಆವರಿಸುತ್ತದೆ. ಇದನ್ನೇ ಅಲ್ಲಾಹು ಹೇಳಿದ್ದು; ನಿಮ್ಮನ್ನು ಇಡೀ ಜಗತ್ತಿಗೆ ನಾವು ಕರುಣೆಯಾಗಿ ನೇಮಕಗೊಳಿಸಿದ್ದೇವೆ”

ಸ್ಪಷ್ಟವಾಗಿ ಹೇಳುವುದಾದರೆ, ಮುಹಮ್ಮದೀ ಚೈತನ್ಯವು (ಹಕೀಕತ್‌ ಮುಹಮ್ಮದಿಯ್ಯ) ದೈವಿಕ ಮೂಲದಿಂದ ಮೊಟ್ಟ ಮೊದಲನೆಯದಾಗಿ ಉದಯಗೊಂಡ ಅಸ್ತಿತ್ವ ಎಂಬ ನಿಟ್ಟಿನಲ್ಲಿ, ಅಲ್ಲಾಹನ ಎಲ್ಲಾ ನಾಮಗಳನ್ನು ಸ್ವೀಕರಿಸುವ ಹಾಗೂ ಪ್ರಕಟಪಡಿಸುವ ಸೃಷ್ಟಿಯಾಗಿದೆ. ಅರ್ರಹ್ಮಾನ್‌ ಎಮಬುವುದೂ ಕೂಡ ಅಲ್ಲಾಹನ ನಾಮವೇ. ಪರಮ ಕರುಣಾಮಯಿ ಎಂಬ ನಾಮದ ಸ್ವೀಕಾರ ಕೇಂದ್ರವೆಂಬ ನೆಲೆಯಲ್ಲಿ, ಆಧ್ಯಾತ್ಮಿಕ ಅರ್ಶ್‌ ಅಥವಾ ಮುಹಮ್ಮದೀ ಮೂಲಸ್ವರೂಪ ಭೌತಿಕ ಅರ್ಶಿನ ಮೇಲೆ ಆಸೀನನಾಗಿ ಜಗದಗಲ ಕರುಣೆಯ ಪ್ರಸರಣವನ್ನು ಮಾಡುತ್ತಿದೆ. ಒಟ್ಟಾರೆ, ವಿಶ್ವ ವಿಜ್ಞಾನದಲ್ಲಿ ಮುಹಮ್ಮದೀ ಸ್ವರೂಪದ ಸ್ಥಾನವನ್ನು ಇಬ್ನು ಅರಬಿಯವರ ಒಳನೋಟದ ಆಧಾರದಲ್ಲಿ ದಾವೂದುಲ್ ಖೈಸರಿಯವರು ಹಲವು ಬಗೆಯಲ್ಲಿ ವಿವರಿಸಿದ್ದಾರೆ.

ಮುಹಮ್ಮದ್ ರುಸ್ತುಂ
ಅನು : ಎಂ.ಎಂ. ಸುರೈಜಿ

ಹಳದಿ ಬಣ್ಣವುಳ್ಳ ಸೌತ್ ಆಫ್ರಿಕಾದ ಗ್ರಂಥಗಳು

ಡಚ್ಚರು ವರ್ಣಭೇದ ನೀತಿಯ ಅಂಗವಾಗಿ ‘ಕರಿಯರು’ ಎಂದು ಮುದ್ರೆಯೊತ್ತಿ ಹದಿನೇಳು, ಹದಿನೆಂಟನೇ ಶತಮಾನದಲ್ಲಿ ಮುಸ್ಲಿಮರನ್ನು ಆಗ್ನೇಯ ಏಷ್ಯಾ ಹಾಗೂ ಆಫ್ರಿಕಾದ ವಿವಿಧ ಭಾಗಗಳಿಂದ ಗುಲಾಮರಾಗಿಯೂ ರಾಜಕೀಯ ಖೈದಿಗಳಾಗಿಯೂ ಕೇಪ್‌‌ ಪಟ್ಟಣಕ್ಕೆ ಕರೆತಂದರು. ‘ಕೇಪ್ ಮಲಾಯ್’ ಮುಸ್ಲಿಮರು ಸಾಂಪ್ರದಾಯಿಕ ಸೊತ್ತಾಗಿ ಧಾರ್ಮಿಕ ಗ್ರಂಥಗಳಿಗೆ ಕಣ್ಣಾಡಿಸುವುದು ವಾಡಿಕೆ. ಹತ್ತೊಂಬತ್ತನೆ ಶತಮಾನದ ಪೂರ್ವಾರ್ಧದಲ್ಲಿ ಭಾರತದಿಂದಲೂ ಬೆರಳೆಣಿಕೆಯಷ್ಟು ಮುಸ್ಲಿಂ ವ್ಯಾಪಾರಿಗಳು ಕೇಪ್‌ಗೆ ಹೋಗಿದ್ದರು. 2014 ರ ಜನಗಣತಿ ಪ್ರಕಾರ ಅವರ ಜನಸಂಖ್ಯೆಯು ಪಶ್ಚಿಮ ಕೇಪ್‌ನ ಒಟ್ಟು ಜನಸಂಖ್ಯೆಯ ಕೇವಲ 7.5%ರಷ್ಟು ಮಾತ್ರ. 1838 ರಲ್ಲಿ ಗುಲಾಮಗಿರಿ ಅಧಿಕೃತವಾಗಿ ಕೊನೆಗೊಂಡರೂ ಜನರನ್ನು ಜನಾಂಗಿಯವಾಗಿ ಬೇರ್ಪಡಿಸುವ 1948 ರ ವರ್ಣಭೇದ ನೀತಿಯು ಬಂದ ಮೇಲೆ ಬಿಳಿಯರ ಅಧೀನದಲ್ಲಿ ಕೇಪ್ ಮುಸ್ಲಿಮರು ಜೀವಿಸಬೇಕು ಎಂಬ ನಿಯಮವೊಂದಿತ್ತು. ಧರ್ಮವು ಆ ಜನರನ್ನು ಪರಸ್ಪರ ಕೊಂಡಿಯಾಗಿ ಬೆಸೆಯಿತು ಅನ್ನಬಹುದು. ಫ್ಯಾಮಿಲಿ ಮೀಟ್‌ಗಳಲ್ಲಿಯೂ ಇತರ ಕೂಟಗಳಲ್ಲಿಯೂ ಧಾರ್ಮಿಕ ಅಧ್ಯಾಪಕರೋ ಕುಟುಂಬದ ಹಿರಿಯ ಸದಸ್ಯರೋ ಗ್ರಂಥಗಳ ಕೆಲ ಭಾಗಗಳನ್ನು ಬರೆದು, ಆ ಭಾಗವನ್ನು ಓದಿ ಕೇಳಿಸುತ್ತಿದ್ದರು. ಅವರು ಮಂಡಿಸುತ್ತಿರುವ ವಿಷಯ ಖುರ್‌ಆನಿನ ಅಧ್ಯಾಯಗಳು ಹಾಗೂ ಸುವಿಶೇಷ ವಾರ್ತೆಗಳಾಗಿತ್ತು.

ವರ್ಣಭೇದ ನೀತಿಯ ಅಂತ್ಯದ ತರುವಾಯ ಕೇಪ್ ಮುಸ್ಲಿಮರು ಇತಿಹಾಸ ಸವಿಯಲು, ಬರೆಯಲು ಮುಹೂರ್ತವಿಟ್ಟರು. ಈ ಕರಾಳ ದಿನಗಳ ಬಳಿಕ ಗ್ರಂಥಗಳ ಒಡನಾಟ ದಿನೇ ಹೆಚ್ಚುತ್ತಾ ಹೋದವು. “ನನ್ನೊಂದಿಗೆ ಅನೇಕ ಕಿತಾಬುಗಳು, ಮಣ್ಣಿನ ಪಾತ್ರೆಗಳಿವೆ..” ಎಂದು ಸಾಂಪ್ರದಾಯಿಕವಾಗಿ ಕಿತಾಬುಗಳನ್ನು ಸಂರಕ್ಷಿಸುವ ಅಬ್‌ದಿಯ್ಯ ನಮ್ಮೊಂದಿಗೆ ಹಂಚಿಕೊಂಡರು. ಕಳೆದ ಅಕ್ಟೋಬರ್ ತಿಂಗಳು ‘ಐತಿಹಾಸಿಕ ದಿನ’ವಾದ್ದರಿಂದ ಅಬ್‌ದಿಯ್ಯಾರ ಮನೆಯ ಸುತ್ತ-ಮುತ್ತಲೂ ಜನ ಸೇರಿದ್ದರು. “ನಾನು ಈ ಮನೆಯಲ್ಲಿ ಜನಿಸಿದೆ, ಇದೇ ಮನೆಯಲ್ಲಿ ಮರಣ ಹೊಂದುವೆನು, ಇನ್ಶಾ ಅಲ್ಲಾಹ್” ಕಿತಾಬುಗಳ ಕುರಿತು ಕೇಳುವ ಮೊದಲೇ ಅಬ್‌ದಿಯ್ಯಾ ಮುಂದುವರಿಸಿದರು! ವಾಸ್ತವದಲ್ಲಿ ಈ ಮನೆಯ ಐತಿಹ್ಯಗಳಿಗೆ ಅಬ್‌ದಿಯ್ಯಾಕ್ಕಿಂತಲೂ ಪ್ರಾಯವಿದೆ. ಕಿತಾಬುಗಳೊಂದಿಗೆ ನಿಕಟ ಸಂಪರ್ಕವೂ ಇದೆ. ಅವರ ತಂದೆ ಇಮಾಂ ಶೈಖ್ ಮುಹಮ್ಮದ್ ಖೈರ್ ಇಸ್ಹಾಖ್ ಖುರ್‌ಆನ್ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮನೆಯ ಅಂಗಳದಲ್ಲಿ ಮದ್ರಸಾ ಪ್ರಾರಂಭಿಸಿದ್ದರು. ಅವರು ಹುಡುಗರಿಗೂ, ಅಬ್‌ದಿಯ್ಯಾರ ತಾಯಿ ಹುಡುಗಿಯರಿಗೂ ಕಲಿಸುತ್ತಿದ್ದರು. ನಂತರ ಅಬ್‌ದಿಯ್ಯಾರ ಪತಿ ಸುಲೈಮಾನ್ ಕೂಡಾ ಮದ್ರಸಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅಬ್‌ದಿಯ್ಯಾರ ಸಹೋದರಿಯರ ಪೈಕಿ ಮದ್ರಸಾದ ಅಧ್ಯಾಪಕಿಯಾಗಿ ಅವಳು ಮಾತ್ರ ಇದ್ದಳು.

ಅಬ್‌ದಿಯ್ಯಾರ ಚಿಂತನೆಗಳು ಜನನಿಬಿಡವಾದ ಆ ಪೌರಾಣಿಕ ಕಾಲದ ನೆನಪುಗಳಿಗೆ ಹೊತ್ತೊಯ್ದವು. ಪ್ರಾತಃಕಾಲದ ತರಗತಿಗಳು ಶಿಶುವಿಹಾರದ ಬಗ್ಗೆ ಕನವರಿಸಿಸುತ್ತಿದ್ದವು. ಆ ಸಮಯದಲ್ಲಿ ಅರಬಿ ಅಕ್ಷರ ಹಾಗೂ ಕೆಲ ಮೂಲಪದವನ್ನು ಪರಿಚಯಿಸಲಾಗುತ್ತಿತ್ತು. ಮಧ್ಯಾಹ್ನದ ತರಗತಿ, ಪಾರಾಯಣಕ್ಕೆ ಸಂಬಂಧಿಸಿದ ನಿಯಮಾವಳಿಗಳ ಪಠಣಕ್ಕಾಗಿ ಶೆಡ್ಯೂಲ್ ಮಾಡಿದ್ದರು. ಸಂಧ್ಯಾ ವೇಳೆ ಯುವಕ ಯುವತಿಯರ ಆಳ- ಗಂಭೀರ ಚರ್ಚೆಗಳನ್ನು ಏರ್ಪಾಡು ಮಾಡಲಾಗುತ್ತಿತ್ತು. “ಒಟ್ಟಿಗೆ ಅಧ್ಯಯನ ನಡೆಸುವುದರಿಂದ ಗಹನವಾದ ವಿಷಯಗಳು ವೇದ್ಯವಾಗುತ್ತಿತ್ತು..” ಎಂಬುದು ಅವರ ಅನಿಸಿಕೆ. ಎಲ್ಲಾ ವಿದ್ಯಾರ್ಥಿಗಳ ಬಳಿ ಪಠ್ಯ ಬರೆದಿಟ್ಟು ಸಂರಕ್ಷಿಸಲು ಕಿತಾಬುಗಳಿದ್ದವು. ಪಠ್ಯ ಭಾಗಗಳನ್ನು ನಕಲಿಸಿ ಬರೆಯಲು ಉಪಯೋಗಿಸುವ ಪುಸ್ತಕಗಳಿಗೂ ‘ಕಿತಾಬ್’ ಎಂದು ವಿಶೇಷವಾಗಿ ಕರೆಯುತ್ತಿದ್ದರು. ಇಂದೂ ಕೂಡ ಅಬ್‌ದಿಯ್ಯಾ ಖುರ್‌ಆನ್ ಮನಮೋಹಕರವಾಗಿ ಪಠಿಸುತ್ತಾರೆ. ನಮ್ಮ ಒತ್ತಾಯದ ಮೇರೆಗೆ ಅಬ್‌ದಿಯ್ಯಾ ಕಿತಾಬುಗಳು ಸಂರಕ್ಷಿಸಿದ ಮನೆಯ ಒಳಭಾಗಕ್ಕೆ ಕರೆದೊಯ್ದರು. ಹಳೆ ಕಾಲದ ಮೂಲ ಬಣ್ಣ ಮರೆಯಾದ, ಅವರ ತಂದೆಯ ಎರಡು ಕೈಬರಹದ ಪ್ರತಿ ಜೋಡಿಸಿಟ್ಟಿದ್ದರು. ಧಾರ್ಮಿಕ ಅಧ್ಯಾಪಕರ ಅಕ್ಷರಗಳಲ್ಲಿ ಪಡಿಮೂಡಿದ ಆ ಕಿತಾಬುಗಳು ಕೇವಲ ನಕಲಿಸಿ ಬರೆದ ಪ್ರತಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಅದರಲ್ಲೊಂದು ಕಿತಾಬ್ ‘ಜಾವಿ’ (ಅರೇಬಿಕ್ ಲಿಪಿ ಉಪಯೋಗಿಸುವ ಮೊದಲು ಆಗ್ನೇಯ ಏಷ್ಯ ಭಾಷೆ) ಭಾಷೆಯಲ್ಲಿ ವಿರಚಿತವಾಗಿದ್ದವು. ಎರಡನೇ ಕಿತಾಬ್ ಆಫ್ರಿಕನ್ ಅರೇಬಿಕ್ ಭಾಷೆಯಲ್ಲಿತ್ತು. ‘ವರ್ಷ-1871’ ಎಂದು ಲಗತ್ತಿಸಿದ/ಸೂಚನೆಯಿರುವ ಅಪೂರ್ವ ಸಂಗ್ರಹವಾದ ಈ ಕಿತಾಬ್‌ಗಳು ನೋಡುಗರನ್ನು ಆಕರ್ಷಿಸುವುದಂತೂ ಗ್ಯಾರಂಟಿ.

ಡಚ್‌ನಿಂದ ದಕ್ಷಿಣ ಆಫ್ರಿಕಾದ 11 ಅಧಿಕೃತ ಭಾಷೆಗಳಲ್ಲಿ ಒಂದಾದ ‘ಆಫ್ರಿಕಾನ್ಸ್’ ರೂಪ ತಾಳಿದವು. 1814 ರಲ್ಲಿ ಡಚ್ಚರು ಕೇಪ್‌ಟೌನ್ (Cape Town) ಅನ್ನು ಬ್ರಿಟಿಷರಿಗೆ ಬಿಟ್ಟು ಕೊಡುವ ಮುಂಚೆ Dutch East India Company ಅಲ್ಲಿ ವಸಾಹತು ಆಳ್ವಿಕೆ ನಡೆಸುತ್ತಿದ್ದವು. ಇದಲ್ಲದೆ ಮಲಾಯ್, ಇಂಗ್ಲೀಷ್, ಪೋರ್ಚುಗೀಸ್ ಮತ್ತು ಸ್ಥಳೀಯ ಖೋಯಿ ಭಾಷೆಗಳೂ ಆಫ್ರಿಕನ್ಸ್‌ರನ್ನು ಸ್ವಾಧೀನಿಸಿತು. 1820 ರಲ್ಲಿ ಆಫ್ರಿಕನ್ಸ್‌ನಲ್ಲಿ ಬರಹ ಪ್ರಾರಂಭಿಸಿದರು ಎಂದು ಉಲ್ಲೇಖಿಸಲಾಗಿದೆ. ಕಿತಾಬಿನ ಪ್ರಧಾನ ಭಾಗಗಳನ್ನು ಬರೆದು ಸಂರಕ್ಷಿಸಿಡಲು ಅರೇಬಿಕ್ ಲಿಪಿ ಉಪಯೋಗಿಸಿ ಕಾರ್ಯ ಪ್ರವೃತ್ತರಾದರು. 1950 ರ ದಶಕದಲ್ಲಿ ಅರೆಬಿಕ್ ಲಿಪಿ ಬಳಸಿ ಬರೆಯಲ್ಪಟ್ಟ ಆಫ್ರಿಕನ್ ಮಾತುಗಳೊಂದಿಗೆ ಲಿಖಿತ ಪದಗಳನ್ನು ಕಂಡುಹಿಡಿದ ಡಚ್ ಭಾಷಾ ಶಾಸ್ತ್ರಜ್ಞ ಆಡ್ರಿಯನ್ಸ್ ವ್ಯಾನ್ ಸೆಲ್ಮಾಸನ್ ‘ಆಫ್ರಿಕನ್ ಅರೇಬಿಕ್’ ಎಂಬ ಪದ ಮೊದಲನೆಯದಾಗಿ ಪ್ರಯೋಗಿಸಿದರು. ಖ್ಯಾತ ವಿದ್ವಾಂಸ ಅಬೂಬಕರ್ ಎಫಂದೀರವರ ಆಫ್ರಿಕನ್ ಅರೇಬಿಕ್‌ ಭಾಷೆಯ ಅತ್ಯಂತ ಹಳೆಯ ಕೃತಿ ‘ಧಾರ್ಮಿಕ ವ್ಯಾಖ್ಯಾನ’ (Beyan al-Din) ಎಂದು ಪರಿಗಣಿಸಲಾಗಿದೆ. ಹಲವಾರು ಆಫ್ರಿಕನ್-ಅರೇಬಿಕ್ ಗ್ರಂಥಗಳಿದ್ದರೂ ಆಫ್ರಿಕನ್ ಅರೇಬಿಕ್‌ನ ಪರಿಣಾಮಕಾರಿ ಬಳಕೆಯು ಗ್ರಾಮಾಂತರದಲ್ಲಿ ವಿರಚಿತವಾದ ಕಿತಾಬ್‌ಗಳಲ್ಲಿ ಕಂಡುಬರುತ್ತದೆ ಎಂದು ಭಾಷಾಶಾಸ್ತ್ರಜ್ಞರ ನಿಲುವು. ಹೊರತಾಗಿ ಅಧಿಕೃತ ಭಾಷೆಯಾಗಿ ಸ್ಥಾನಮಾನ ನೀಡದ ಕಾರಣ 1925 ರವರೆಗೆ ಅಲ್ಲಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗಲಿಲ್ಲ. ಕೆಲ ಅಪೂರ್ವ ಚರ್ಚೆಗಳ ಬಳಿಕ ಅಬ್‌ದಿಯ್ಯಾ ನಮಗೆ ಆಫ್ರಿಕನ್ ಅರೇಬಿಕ್ ಭಾಷೆಯ ಕಿತಾಬ್ ಓದಿ ಕೇಳಿಸುವೆ ಎಂದು ತಿಳಿಸಿ, ಕನ್ನಡಕ ಧರಿಸಿ ಓದಲು ಶುರುವಿಟ್ಟಾಗ ಭಾವನಾತ್ಮಕವಾಗಿ ಸೂಚಿಸಿದರು. “ಇಲ್ಲ, ನನಗದು ಸಾಧ್ಯವಿಲ್ಲ. ಓದಿ ಬಹಳ ಸಮಯವಾಯಿತು. ಎಲ್ಲವೂ ಕಳೆದುಹೋಗಿವೆ..!” ಇದೊಂದು ಧೃಢವಿಶ್ವಾಸವೆಂದು ನಾವು ಭಾವಿಸಿದೆವು. ತನ್ನ ಪತಿಯ ಸ್ಮರಣಾರ್ಥ ಅವರು ರಚಿಸಿದ ಒಂದು ಕವಿತೆ ಹೇಳಿಕೊಡುವ ಮೂಲಕ ನಮ್ಮ ದಾಹ ತೀರಿಸುವ ಸಲುವಾಗಿ ನೀರುಣಿಸಿ ಶ್ರಮಪಟ್ಟರು.

ಅಬ್‌ದಿಯ್ಯಾರ ಕುಟುಂಬ ಪರಂಪರೆ ಇಂಡೋನೇಷ್ಯಾದ ದ್ವೀಪ ಸಮೂಹದಲ್ಲಿರುವ ಸುಗಂಧ ದ್ರವ್ಯದ ‘ವ್ಯಾಪಾರ ಕೇಂದ್ರ’ ಟಿಡೋರ್‌ನ (Tidore) ಇಮಾಂ ಅಬ್ದುಲ್ಲಾಹ್ ಖಾದ್‌ರಿಯ್ಯ್‌ಗೆ ಮುಟ್ಟುತ್ತದೆ. ಬ್ರಿಟಿಷರಿಗೆ ಸಹಾಯ ಮಾಡಿದ ಎಂಬ ನೆಪವೊಡ್ಡಿ 1780 ರಲ್ಲಿ ಡಚ್ಚರು ಖೈದಿಯಾಗಿ ಕೇಪ್ ಟೌನ್‌ಗೆ ಕರೆದೊಯ್ದರು. ನೆಲ್ಸನ್ ಮಂಡೇಲಾ ಹದಿನೆಂಟು ವರ್ಷ ಜೈಲು ಶಿಕ್ಷೆ ಅನುಭವಿಸಿದ ರೋಬನ್ ದ್ವೀಪದ (Robben Island) ಜೈಲಿನಲ್ಲಿ ಅವರಿಗೆ ಹತ್ತು ವರ್ಷದ ಶಿಕ್ಷೆ ವಿಧಿಸಲಾಯಿತು. ಅಲ್ಲಿ ಖುರ್‌ಆನಿನ ಅನೇಕ ಕೈಬರಹದ ಪ್ರತಿ ಅವರು ಬರೆದರು. ಜೈಲಿನಿಂದ ಬಿಡುಗಡೆಯಾದ ಕೂಡಲೇ ಆಫ್ರಿಕಾದ ಮೊದಲ ಮಸೀದಿ ‘ಅವ್ವಲ್ ಮೋಸ್ಕ್’ಗೆ ಶಿಲಾನ್ಯಾಸ ನೆರವೇರಿಸಿದರು.

ಅಬ್‌ದಿಯ್ಯಾರೊಂದಿಗಿನ ಸಂಭಾಷಣೆಯ ಬಳಿಕ ಅವರ ಅಕ್ಕ-ಪಕ್ಕದವರೊಂದಿಗೆ ನಾನು ಸಂವಾದಿಸಿದೆ. ಕಿತಾಬಿನ ಕುರಿತು ಕೇಳಿದಾಗಲೆಲ್ಲ ಅವರ ನೀಡಿದ ಮಾಹಿತಿಯಿಂದ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ವೇದ್ಯವಾಯಿತು. ಅದರಲ್ಲಿ ಒಂದು ಕುಟುಂಬ ಪ್ರಸಿದ್ಧ ಪಂಡಿತ ಅಶ್‌ಮಾತ್ ಡೇವಿಡ್‌ರ ಮನೆಗೆ ಕರೆದುಕೊಂಡು ಹೋದರು. ಅವರು ತನ್ನ ಜೀವನದ ಸಿಂಹಭಾಗ ಆಫ್ರಿಕನ್ ಅರೇಬಿಕ್ ಪಠಿಸಲು ಮೀಸಲಿಟ್ಟವರು. 1998 ರಲ್ಲಿ ತನ್ನ 59 ನೇ ವಯಸ್ಸಿನಲ್ಲಿ ನಿಧನರಾದಾಗ ಕಿತಾಬುಗಳ ನಿಗೂಢ ರಹಸ್ಯ ವರ್ಧಿಸಿದವು. ಅವರು ವಾಸಿಸುತ್ತಿದ್ದ ಮನೆ ಇಂದು ವಿದೇಶಿ ವಿದ್ಯಾರ್ಥಿಯರು ಬಾಡಿಗೆ ಪಡೆದಿದ್ದಾರೆ. ಅವರು ಯಾರು! ಅವರ ಕಿತಾಬುಗಳು ಎಲ್ಲಿವೆ..!? ಎಂದು ಯಾರಿಗೂ ಖಂಡಿತಾ ತಿಳಿದಿಲ್ಲ. ಕೆಲವರು ಅವರ ಸಹೋದರಿಯನ್ನೂ ಇನ್ನು ಕೆಲವರು ಎರಡನೇ ಪತ್ನಿಯನ್ನು ಸಂಪರ್ಕಿಸಲು ಸೂಚಿಸಿದರು. ದುರದೃಷ್ಟವಶಾತ್ ಎಲ್ಲವೂ ವಿಫಲವಾಯಿತು. ಅಬ್‌ದಿಯ್ಯಾರ ಪರಂಪರೆಯ ಉಳಿದ ಭಾಗಗಳಿರುವಂತೆ ಆಫ್ರಿಕನ್ ಅರೇಬಿಕ್ ಭಾಷೆಯ ಪರಿಜ್ಞಾನ ಹೊಂದಿರುವವರು ಭಾರೀ ವಿರಳ!

ಮೂಲ- ಆಲಿಯಾ ಯೂನಿಸ್
ಅನು- ಅಶ್ರಫ್ ನಾವೂರು

ವಿಜ್ಞಾನದ ಮೂಲಕ ಸತ್ಯವನ್ನರಿಯಲು ಸಾಧ್ಯವೆ?

ಆಶಯ, ಸಿದ್ಧಾಂತ, ವಿಚಾರ, ವಿಧಾನಗಳನ್ನು ಅಳೆಯುವ ಮೀಟುಗೋಲಾಗಿ ಇಂದು ‘ವೈಜ್ಞಾನಿಕತೆ’ ಮಾರ್ಪಟ್ಟಿದೆ. ವೈಜ್ಞಾನಿಕ ಎಂಬ ವಿಶೇಷಣ ಇಂದು ಯಥೇಚ್ಛವಾಗಿ ಈ ನಿಟ್ಟಿನಲ್ಲಿ ಚಾಲ್ತಿಯಲ್ಲಿದೆ. ಅವೈಜ್ಞಾನಿಕವೆಂಬ ಹಣೆಪಟ್ಟಿಯಿಂದ ಹೊರಬರಲು ವಿಜ್ಞಾನದ ವಿಷಯಗಳಿಗೆ ಕಿಂಚಿತ್ ಸಂಬಂಧವಿಲ್ಲದ ಸಂಗತಿಗಳನ್ನೂ‘ವೈಜ್ಞಾನಿಕ’ಗೊಳಿಸಲು ತಿಪ್ಪರಲಾಗ ಹಾಕುತ್ತಿದ್ದಾರೆ. ಒಂದು ಆಶಯವನ್ನು ಗೇಲಿ ಮಾಡಲು ಸುಲಭವಾಗಿ ಪ್ರಯೋಗಿಸಬಹುದಾದ ನುಡಿಗಟ್ಟಾಗಿ ಇಂದು ಈ ಅರಿಮೆಪದ ಬಳಕೆಯಲ್ಲಿದೆ. ವಿಜ್ಞಾನದ ವೃತ್ತದಿಂದ ಹೊರಗಿರುವ, ವಿಜ್ಞಾನದ ಬೌಂಡರಿ ಕೊನೆಗೊಳ್ಳುವಲ್ಲಿ ಆರಂಭವಾಗುವ ಧಾರ್ಮಿಕ ವಿಚಾರಗಳು ಹಾಗೂ ಅತಿಭೌತಶಾಸ್ತ್ರೀಯ (metaphysical) ಸಂಗತಿಗಳಲ್ಲಿ ಕೂಡಾ ವೈಜ್ಞಾನಿಕ-ಅವೈಜ್ಞಾನಿಕ ವಿಂಗಡನೆ ತಂದು ಹಂಸ ಕ್ಷೀರ ನ್ಯಾಯ ಜಾರಿ ಮಾಡುತ್ತಿರುವುದಂತೂ ಸೋಜಿಗವೇ. ಖುರ್‌ಆನಿನಲ್ಲಿ ʼಬಿಗ್‌ ಬ್ಯಾಂಗ್‌ ಥಿಯರಿʼ ಯನ್ನು ತೋರಿಸಿಕೊಡಲು ಕೆಲವು ಪ್ರಬುದ್ಧರು ಈಗಲೂ ಕೂಡಾ ಮುಂದೆ ಬರುತ್ತಿರುವುದು ಈ ‘ವೈಜ್ಞಾನಿಕ ಪ್ರಜ್ಞೆ’ಯೊಳಗೆ ಬಂಧಿಯಾದುದರಿಂದಲೇ. ಹಿಂದೂ, ಕ್ರಿಶ್ಚಿಯನ್‌ ವೇದಗ್ರಂಥಗಳಲ್ಲಿ ಕೂಡಾ ಈ ರೀತಿಯ ಹುಡುಕಾಟ ನಡೆದಿದೆ. ವೈಜ್ಞಾನಿಕ ವಿಧಾನದಿಂದ ಎಲ್ಲಾ ತರದ ಅರಿವುಗಳನ್ನು ಪಡೆಯಲು ಸಾಧ್ಯ ಎಂದು ಎಲ್ಲರೂ ನಂಬಿದ್ದಾರೆ. ನಾವು ಧರ್ಮಭೀರು ಆದರೆ ವೈಜ್ಞಾನಿಕ ನಿಕಷಕ್ಕೊಡ್ಡಿ ಮಾತ್ರವೇ ಅದರ ನಂಬಿಕೆ ಆಚಾರಗಳನ್ನು ಸ್ವೀಕರಿಸಬಲ್ಲೆವು ಅನ್ನುವುದು ಒಂಥರಾ ಕೀಳರಿಮೆ, ಹಿಪಾಕ್ರಸಿಯ ದ್ಯೋತಕ. ಮಿಕ್ಕ ಜನರೂ ಬಹಳ ಕ್ಯಾಷ್ಯುವಲ್ ಆಗಿ ಇಂತಹ ವಿಚಿತ್ರ ವಿಂಗಡನೆಗಳನ್ನು ಮಾಡುತ್ತಿರುವುದು, ತೀರ್ಪುಗಳನ್ನು ನೀಡುತ್ತಿರುವುದು ಯುಗದ ಟ್ರೆಂಡ್‍ಗಳಿಗೆ ಜೋತುಬಿದ್ದೆ ಹೊರತು ಸುಚಿಂತಿತವಾದ ಆಲೋಚನೆಗಳ, ಸಮಗ್ರವಾದ ಅಧ್ಯಯನಗಳ ಫಲಶೃತಿಯಲ್ಲ.

ಧರ್ಮದ ವಿಚಾರಧಾರೆಗಳು ವಿಜ್ಞಾನದ ಆವಿಷ್ಕಾರ, ಕಂಡುಹಿಡಿತಗಳಿಗೆ ಅನುಗುಣವಾಗಿ ಮೂಡಿಬರಬೇಕು, ವೈಜ್ಞಾನಿಕ ತಥ್ಯಗಳಿಗೆ ‘ವಿರುದ್ಧ’ವಾಗಿ ಧರ್ಮದಲ್ಲಿ ಏನಾದರೂ ಇದ್ದರೆ ಅದನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಕೆಲವರು ವಾದಿಸುತ್ತಾರೆ. ಅಂತಹ ಸಾಧ್ಯತೆಗಳು ಇಲ್ಲದ ಧಾರ್ಮಿಕ ನಿಲುವುಗಳನ್ನು ತಳ್ಳಿ ಹಾಕಬೇಕು ಎಂಬುದು ಅವರ ಅಂಬೋಣ. ಹೀಗೆ ವಾದಿಸುವವರು ತಮ್ಮ ವಾದಕ್ಕೆ ತಳಹದಿಯಾಗಿ ‘ಸತ್ಯ ಅಸತ್ಯಗಳನ್ನು ಪ್ರತ್ಯೇಕಿಸಲು ವಿಜ್ಞಾನವೊಂದೆ ಮಾರ್ಗ’ ಎಂಬ ತಪ್ಪಾದ ಪ್ರಿಮೈಸನ್ನು ಅರಿತೋ ಅರಿಯದೆಯೋ ಇಟ್ಟು ಕೊಂಡಿರುತ್ತಾರೆ. ವಿಜ್ಞಾನಿಗಳ ಮಾತ್ರವಲ್ಲ ಧರ್ಮ ವಿಶ್ವಾಸಿಗಳ ಕಡೆಯಿಂದ ಕೂಡಾ ಈ ಪ್ರಮಾದ ಉಂಟಾಗುತ್ತಿದ್ದು ಸದ್ರಿ ಸುಪ್ತ ಪ್ರಿಮೈಸ್ ವಿಜ್ಞಾನದ ತಳಹದಿಯಾದ ‘ವೈಜ್ಞಾನಿಕ ವಿಧಾನ’ದ ಸ್ವೀಕಾರಾರ್ಹತೆಗೂ ಸವಾಲೊಡ್ಡುತ್ತದೆ ಎಂಬುದನ್ನು ಅವರು ಅರ್ಥ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಜ್ಞಾನ, ವೈಜ್ಞಾನಿಕತೆ ಮುಂತಾದ ಅರಿಮೆಪದಗಳ ವ್ಯಾಖ್ಯೆ, ಅದರ ತಾತ್ವಿಕ ಆಯಾಮಗಳು ಹಾಗೂ ಇತಿಮಿತಿಗಳು ಮುಂತಾದ ವಿಷಯಗಳ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ.

ಅಕಾಡೆಮಿಕ್ ಪ್ರೆಸ್ ಪ್ರಕಟಿಸಿದ Science and Technology Dictionary ಯ ಪ್ರಕಾರ ವಿಜ್ಞಾನಕ್ಕೆ ಎರಡು ಅರ್ಥವಿದೆ. ಒಂದನೆಯ ಅರ್ಥದ ಪ್ರಕಾರ ವಿಜ್ಞಾನ ಭೌತಿಕ ವಿದ್ಯಮಾನಗಳನ್ನು ವ್ಯವಸ್ಥಿತವಾದ ವೀಕ್ಷಣೆ ಪರೀಕ್ಷಣೆಗಳಿಗೆ ಒಳಪಡಿಸಿ ಅದರ ವಾಸ್ತವಗಳನ್ನು ಹೊರಗೆಡಹಿ ಅವುಗಳ ತಳಹದಿಯಲ್ಲಿ ನೈಸರ್ಗಿಕ ನಿಯಮಗಳನ್ನು ಮತ್ತು ತತ್ವಗಳನ್ನು ರೂಪಿಸುವ ಪ್ರಕ್ರಿಯೆಯಾದರೆ ಮತ್ತೊಂದು ವಿವರಣೆಯ ಪ್ರಕಾರ ಈ ಪ್ರಕ್ರಿಯೆಯ ಫಲಶೃತಿಯಾದ ತಿಳಿವುಗಳ ಸಮಾಹಾರ. ಎರಡು ನಿರ್ವಚನದ ಪ್ರಕಾರವೂ ವಿಜ್ಞಾನದ ಚರ್ಚಾವಸ್ತು ವಾಸ್ತವ ಜಗತ್ತಿನ ಗೋಚರ ಆಯಾಮಗಳು ಮಾತ್ರವೆಂಬುದು ಸ್ಪಷ್ಟ. ಗೋಚರ ಜಗತ್ತಿನ ಚಮತ್ಕಾರಗಳು ಹುಲು ಮಾನವನ ಬೆರಗಿಗೆ ಹಬ್ಬ ನೀಡಿ ಅವನ ಜಿಜ್ಞಾಸೆಯನ್ನು ಬಡಿದೆಬ್ಬಿಸಿದೆ. ಜಗತ್ತಿನ ರಹಸ್ಯಗಳನ್ನು ಬೇಧಿಸಿ ಅದನ್ನು ತನ್ನ ಅಭೀಪ್ಸೆಯಂತೆ ಪುನರ್ರಚಿಸಲು ಮಾನವ ಶತಾಯಗತಾಯ ಪ್ರಯತ್ನ ಮಾಡಿದ್ದಾನೆ. ಈ ಪ್ರಯತ್ನದಲ್ಲಿ ಹಲವಾರು ಕಡೆ ವಿಜಯದ ನಗೆ ಬೀರಿದ್ದರೂ ಕೆಲವೆಡೆ ಎಲ್ಲೆ ಮೀರಿ ಎಡವಿ ಬಿದ್ದಿದ್ದಾನೆ. ಅದಾಗ್ಯೂ, ವಿಜ್ಞಾನ ನಮ್ಮ ಜೀವನದಲ್ಲಿ ಹಲವಾರು ಸೌಕರ್ಯ ಸವಲತ್ತನ್ನು ಒದಗಿಸಿತ್ತಿರುವ ಮಹತ್ವಪೂರ್ಣ ಅನುಗ್ರಹವೇ ಎಂಬುದನ್ನು ಅಲ್ಲಗೆಳೆಯುವುದಿಲ್ಲ.

ಆಧುನಿಕ ವಿಜ್ಞಾನ ಎನ್ನುವುದು ಇತ್ತೀಚೆಗಿನ ವಿದ್ಯಮಾನ. ಪ್ರಪಂಚದ ಕುರಿತು ಹಿಂದಿನಿಂದಲೇ ಅಧ್ಯಯನಗಳು ನಡೆಯುತ್ತಿತ್ತು. ಆದರೆ ಅದನ್ನು ಇಂದಿನ ವಿಜ್ಞಾನದ ನೆಲೆಯಲ್ಲಿ ಗ್ರಹಿಸಲು ಸಾಧ್ಯವಲ್ಲ. ಇಂದಿನ ಪರಿಭಾಷೆಯಲ್ಲಿ ಫಿಝಿಕ್ಸ್‌ ಅಥವಾ ಭೌತವಿಜ್ಞಾನ ಎನ್ನುವುದು ಭೌತಿಕ ಯಾ ನಿರ್ಜೀವ ವಸ್ತುಗಳ ಕುರಿತ ಅಧ್ಯಯನವನ್ನು. ಜೀವವಿರುವ ವಸ್ತುಗಳ ಕುರಿತ ಶಿಸ್ತನ್ನು ಬಯೋಲಜಿ ಎಂದು ಕರೆಯಲಾಗುತ್ತದೆ. ಈ ವಿಂಗಡನೆಯನ್ನು ಸಾರ್ವತ್ರಿಕ ಮತ್ತು ಸ್ವೀಕಾರಯೋಗ್ಯ ಎನ್ನಲು ಬರದು. ಇಸ್ಲಾಮಿನಲ್ಲಂತೂ ಈ ವಿಭಜನೆ ಅಪೂರ್ಣ. ಒಂಟೆಗಳನ್ನು ಮತ್ತು ಆಕಾಶ ಭೂಮಿಗಳನ್ನು ಒಂದೇ ವಿವರಣೆಯೊಳಗೆ ತಂದಿರುವುದನ್ನು ನಮಗೆ ಖುರ್‌ಆನಿನಲ್ಲಿ ಕಾಣಲು ಸಾಧ್ಯ. ಅಲ್ಲಾಹನು ಹಯ್ಯುಲ್‌ ಖಯ್ಯೂಮ್‌ ಅಥವಾ ಎಂದೆಂದಿಗೂ ಜೀವಿಸುವವನಾಗಿದ್ದಾನೆ ಎಂದಿದೆ ಖುರ್‌ಆನ್.‌ ಆದರೆ ಅವನನ್ನು ಬಯೋಲಜಿಕಲ್‌ ಎಂದೆನ್ನಲು ಸಾಧ್ಯವೇ? ಜೀವದ ಬಯೋಲಜಿಕಲ್‌ ವ್ಯಾಖ್ಯೆ ಹೊಸತು ಆಗಿದ್ದು ಅದು ಆಧುನಿಕ ವಿಜ್ಞಾನದ ತಳಹದಿ ಕೂಡಾ ಹೌದು. ನಮಗೆ ಅದರಾಚೆಗೆ ಚಿಂತಿಸಬೇಕಾದ ಅಗತ್ಯ ಬರುತ್ತದೆ. ಅದೇ ವೇಳೆ, ಫಿಝಿಕ್ಸಿನ(ಇಲ್ಮ್ ಅಲ್ ತ್ವಬೀಇಯ್ಯ್) ಸಾಂಪ್ರದಾಯಿಕ ವ್ಯಾಖ್ಯೆಯಲ್ಲಿ ಬಯೋಲಜಿ, ಕೆಮಿಸ್ಟ್ರಿ, ಫಿಝಿಕ್ಸ್‌ ಎಲ್ಲವೂ ಒಳಪಡುತ್ತದೆ. ಸೃಷ್ಟಿಗಳ ಲಕ್ಷಣಗಳ ಬಗ್ಗೆ ಕಲಿಯುವ ವಿಜ್ಞಾನ ಎಂಬ ಮನಗಾಣಿಕೆ ಅದರ ಹಿಂದಿದೆ. ಒಟ್ಟಾರೆಯಾಗಿ ಸಮಕಾಲೀನ ವಿಜ್ಞಾನದ ಪಂಚಾಂಗ ಆಗಿರುವ ಹೊಸ ವಿಂಗಡನೆ ಈಗ್ಗೆ ಚಾಲ್ತಿಗೆ ಬಂದದ್ದು ಎಂದು ತಿಳಿಯಬಹುದು.

ವಿಜ್ಞಾನ ಅರಿವುಗಳನ್ನು ಉತ್ಪಾದಿಸುವುದು ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು. ಒಂದು ನಿಶ್ಚಿತ ಗುಂಪಿನ ಕೆಲವು ಸದಸ್ಯರನ್ನು ಸ್ಯಾಂಪ್ಲಿಂಗ್ ನಿಯಮಗಳ ಪ್ರಕಾರ ಆಯ್ದು ಅವುಗಳ ವರ್ತನೆಗಳನ್ನು ಅವಲೋಕಿಸಿ, ಕಾರಣಗಳನ್ನು ಹುಡುಕಿ, ತಾಳೆ ಮಾಡಿ ಒಂದು ನಿಗಮನಕ್ಕೆ ಬರಲಾಗುತ್ತದೆ. ಹೀಗೆ ಕೆಲವೇ ಕೆಲವು ಸದಸ್ಯರಲ್ಲಿ ಪ್ರಯೋಗ ಮಾಡಿದಾಗ ದೊರೆಯುವ ನಿಗಮನವನ್ನು ಇಡೀ ಗುಂಪಿಗೇ ಅನ್ವಯಿಸಲಾಗುತ್ತದೆ. ಇದಾಗಿದೆ ವೈಜ್ಞಾನಿಕ ವಿಧಾನದ ಯಕಃಶ್ಚಿತ್ ಚಿತ್ರಣ. ಕುದಿಯಲು ಇಟ್ಟ ಅಕ್ಕಿಯಿಂದ ಅಲ್ಪವನ್ನು ತೆಗೆದು ಪರಿಶೋಧಿಸಿ ಪಾತ್ರೆಯಲ್ಲಿನ ಎಲ್ಲ ಅಕ್ಕಿ ಅನ್ನವಾಗಿದೆಯೆಂದು ಸಾಧಾರಣ ನಾವು ನಿರ್ಣಯಿಸುತ್ತೇವಲ್ಲಾ, ವೈಜ್ಞಾನಿಕ ವಿಧಾನವೂ ಹಾಗೇನೆ. ಇಂತಹ ತೀರ್ಪುಗಳು ಬಹ್ವಂಶ ಸರಿಯಾಗಬಹುದಾದರೂ ತಪ್ಪಾಗುವ ಸಾಧ್ಯತೆಗಳು ಇಲ್ಲದಿಲ್ಲ.

ವೈಜ್ಞಾನಿಕ ವಿಧಾನಕ್ಕೆ ಆತ್ಯಂತಿಕವಾಗಿ ನಾಲ್ಕು ವಿಶೇಷತೆಗಳಿವೆ. ಒಂದನೆಯದಾಗಿ ಅದು ಗೋಚರ ಪ್ರಾಕೃತಿಕ ವಿಷಯಗಳಲ್ಲಿ ಮಾತ್ರ ಗಮನ ಕೇಂದ್ರೀಕರಿಸುತ್ತದೆ. ಆದುದರಿಂದಲೇ ಈ ಜೀವನದ ಉದ್ದೇಶವೇನು ಅದರ ಅರ್ಥವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಅದಕ್ಕೆ ಉತ್ತರಿಸಲು ಸಾಧ್ಯವಿಲ್ಲ. ಎರಡನೆಯದಾಗಿ, ಭೌತಿಕ ಜಗತ್ತನ್ನು ವಿವರಿಸುವುದು ಮಾತ್ರವೆ ಅದರ ಗುರಿ. ಮೂರನೆಯದಾಗಿ, ಪರೀಕ್ಷಣಾಯೋಗ್ಯವಾದ ಆಶಯಗಳನ್ನು ಮಾತ್ರವೇ ಅದು ಸ್ವೀಕರಿಸುವುದು. ನಾಲ್ಕನೆಯದಾಗಿ, ಪರೀಕ್ಷಣಾಯೋಗ್ಯವಾದವುಗಳನ್ನು ಪರೀಕ್ಷಿಸಿ ದೊರೆಯುವ ಆಶಯಗಳೆ ಅದರ ಪುರಾವೆಗಳು.

ಜ್ಞಾನಶಾಸ್ತ್ರಜ್ಞರು (epistemologists) ಇಂತಹ ಸಂಶೋಧನೆಗಳನ್ನು ಅನುಗಮನ (induction)ವಿಭಾಗದಲ್ಲಿ ಒಳಪಡಿಸಿದ್ದಾರೆ. ಗುಂಪಿನ ಸರ್ವರಿಗೂ ಅನ್ವಯವಾಗುವ ಸಾರ್ವತ್ರಿಕ ನಿಯಮಗಳನ್ನು ಅದರ ಸದಸ್ಯರಿಗೂ ಅನ್ವಯಗೊಳಿಸುವ ನಿಗಮನ (deduction) ವಿಧಾನಕ್ಕೆ ವಿಭಿನ್ನವಾಗಿ ವೈಜ್ಞಾನಿಕ ವಿಧಾನ ಅಥವಾ ಸೈಂಟಿಫಿಕ್ ಮೆಥಡ್ ಕೇವಲ ಅನುಮಾನವನ್ನಷ್ಟೇ(inference) ಉತ್ಪಾದಿಸಬಲ್ಲುದು, ಖಚಿತತೆಯನ್ನಲ್ಲ(certainty). ಆದುದರಿಂದಲೇ 18 ನೆಯ ಶತಮಾನದ ಪ್ರಮುಖ ತತ್ವಜ್ಞಾನಿ ಡೇವಿಡ್ ಹ್ಯೂಂ ತನ್ನ ಸುಪ್ರಸಿದ್ಧ ಗ್ರಂಥ “An Enquiry concerning Human Understanding”” ನಲ್ಲಿ “ಒಂದು ವರ್ಗದ ನಿಗದಿತ ಸದಸ್ಯರನ್ನು ವೀಕ್ಷಿಸಿ ನಾವು ವೀಕ್ಷಿಸದೆ ಇರುವ ಅಸಂಖ್ಯ ಇತರ ಸದಸ್ಯರ ಕುರಿತು ತೀರ್ಪು ಹೊರಡಿಸುವುದು ನಮ್ಮ ಜ್ಞಾನೇಂದ್ರಿಯಗಳ ಅನುಭವದಿಂದ ಮತ್ತು ಜ್ಞಾಪಕಶಕ್ತಿಯ ದಾಖಲೆಗಳಿಂದ ಸರಿ ಎನ್ನಲು ಬರದು ಎಂದಿದ್ದಾರೆ”.

ಸರ್ವ ಜ್ಞಾನಗಳ ಅಳತೆಗೋಲಾಗಿ ಅನರ್ಹ ಪ್ರಚಾರ ಪಡೆದಿರುವ ವೈಜ್ಞಾನಿಕ ಅರಿವುಗಳ ಉತ್ಪತ್ತಿ ಎಲ್ಲಿಂದ ಎಂದು ಈ ಕಿರು ವಿವರಣೆಯಿಂದ ಅರ್ಥೈಸಿರಬಹುದು. ವೈಜ್ಞಾನಿಕ ವಿಧಾನದಿಂದ ವರ್ತಮಾನದ ಅವಸ್ಥೆಯನ್ನು ಅವಲೋಕಿಸಿ ಭವಿಷ್ಯದ ಬಗ್ಗೆ ಅನುಮಾನಿಸಲು ಸಾಧ್ಯವಿದ್ದು ಚರಿತ್ರೆಯ ಕುರಿತು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ವಿಕಾಸವಾದವನ್ನೆ ಅಂತಿಮಗೊಳಿಸಿ ಇತರ ಗ್ರಹಿಕೆಗಳನ್ನೆಲ್ಲಾ ಸಾರಸಗಟಾಗಿ ತಿರಸ್ಕರಿಸುವವರು ಇಂತಹ ಜ್ಞಾನಶಾಸ್ತ್ರೀಯ ಸೂಕ್ಷ್ಮಗಳ ಕುರಿತು ಆಲೋಚಿಸುವುದೇ ಇಲ್ಲ. ಎಲ್ಲವೂ ವೈಜ್ಞಾನಿಕವಾಗಿರಬೇಕೆಂಬ ವಾದ ವಿಜ್ಞಾನಕ್ಕಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಆ ವಾದ ಸಯನ್ಸ್ ಅಲ್ಲ, ಅಬೌದ್ಧಿಕ ಮತ್ತು ಅವೈಜ್ಞಾನಿಕ ತಳಹದಿಯಲ್ಲಿ ಮೊಳೆತ ಸಯಂಟಿಸಂ. ಗೋಚರ ಜಗತ್ತಿನಾಚೆಗೆ ಏನೂ ಇಲ್ಲ ಸಾರಿ ಬಿಡುವ ಭಂಡ ಧೈರ್ಯವದು. ಸೃಷ್ಟಿಕರ್ತನ ಇರುವಿಕೆಯನ್ನು ಜಾಣ್ಮೆಯಿಂದ ಅಲ್ಲಗೆಳೆಯಲು ಬಳಸಲಾಗುತ್ತಿರುವ ಅಸ್ತ್ರ. ಇದರಲ್ಲಿ ವೈಚಾರಿಕತೆಯ ಒಂದಂಶವೂ ಇಲ್ಲ. ಅದರದ್ದು ಒಂಥರಾ ಸ್ವಯಂ ಸೋಲಿಸುವ ಪ್ರಕ್ರಿಯೆ. ಸತ್ಯ ಶೋಧನೆಗೆ ವಿಜ್ಞಾನವೊಂದೆ ದಾರಿ ಎಂಬ ಸಯಂಟಿಸಂನ ಮೂಲಭೂತ ತತ್ವ ತಿರುಗಿ ಅದರ ಸತ್ಯತೆಯನ್ನೇ ಪ್ರಶ್ನಿಸುತ್ತದೆ. ಯಾಕೆಂದರೆ, ‘ವೈಜ್ಞಾನಿಕ ವಿಧಾನದಿಂದ ಮಾತ್ರ ಸತ್ಯ ದೊರೆಯುತ್ತದೆ’ ಎಂಬ ಸಯಂಟಿಸಂನ ಮೂಲಭೂತ ವಾದವನ್ನು ಕೂಡಾ ವೈಜ್ಞಾನಿಕವಾಗಿ ಸಾಬೀತು ಮಾಡಬೇಡವೇ? ಆದರೆ ಅದು ಸಾಧ್ಯವಿಲ್ಲ ಎಂಬುದು ಸರ್ವಾಂಗೀಕೃತ. ಆದುದರಿಂದಲೇ, ವಿಜ್ಞಾನ ಕೂಡಾ ಒಂದರ್ಥದಲ್ಲಿ ‘ಅವೈಜ್ಞಾನಿಕ’ ಎನ್ನಬೇಕಾಗುತ್ತದೆ. ಸಯಂಟಿಸಂ ಒಂಥರಾ ‘ವೈಜ್ಞಾನಿಕ ಮೂಲಭೂತವಾದ’ದ ಇಲ್ಲವೇ ‘ವಿಜ್ಞಾನಾಂಧತೆ’ಯ ರೀತಿ ವರ್ತಿಸುತ್ತದೆ ಎಂಬುದು ಅನುಭವವೇದ್ಯ. ಜ್ಞಾನದ ಇತರ ಮಜಲುಗಳನ್ನೆಲ್ಲಾ ಅದು ಅಲ್ಲಗೆಳೆಯುತ್ತದೆ. ಅದರ ಪ್ರಕಾರ ಗಣಿತದ ಸತ್ಯಗಳು, ತರ್ಕಗಳು, ಸೌಂದರ್ಯ ಮೀಮಾಂಸೆ ಇದ್ಯಾವುದರಲ್ಲಿಯೂ ಹುರುಳಿಲ್ಲ.

ವೈಜ್ಞಾನಿಕ ವಿಧಾನದ ಸಿಂಧುತ್ವದ ನಿರ್ಣಯ ಮಾಡಲು ವಿಜ್ಞಾನಕ್ಕೆ ಸಾಧ್ಯವಲ್ಲ; ಅದು ವಿಜ್ಞಾನಕ್ಕಿಂತಲೂ ಆಚೆಗಿನ ತತ್ವಜ್ಞಾನದ ಚರ್ಚಾವಸ್ತು. ಹಲವಾರು ವಿಜ್ಞಾನದ ತತ್ವಜ್ಞಾನಿಗಳು ಈ ಕುರಿತು ಚರ್ಚೆ ಮಾಡಿದ್ದಾರೆ. ವೈಜ್ಞಾನಿಕ ವಿಧಾನದ ಪರಿಮಿತಿಗಳತ್ತ ಬೆಳಕು ಚೆಲ್ಲಿದ್ದಾರೆ. ಕಾರ್ಲ್ ಪಾಪರ್, ಥೋಮಸ್ ಕುನ್, ಫೆಯರಾಬಾಂಡ್ ಈ ನಿಟ್ಟಿನಲ್ಲಿ ಪ್ರಮುಖರು. ಒಂದೇ ರೇಖೆಯಲ್ಲಿ ನಿರಂತರವಾಗಿ ಪ್ರಗತಿ ಹೊಂದುತ್ತಿರುವ ಜ್ಞಾನದ ಶಿಸ್ತು ಎಂಬ ಪರಿಪ್ರೇಕ್ಷ್ಯದಲ್ಲಿ ವಿಜ್ಞಾನವನ್ನು ನೋಡಲಾಗದು ಎಂದಿದ್ದಾರೆ ಥೋಮಸ್‌ ಕುನ್.‌ ಪ್ರಾಚೀನ ಈಜಿಪ್ತ್‌, ಗ್ರೀಕ್‌ ವಿಜ್ಞಾನದಿಂದ ಆರಂಭವಾಗಿ ರೇಖಾತ್ಮಕವಾಗಿ ಮುಂದುವರಿದು ಇಂದಿನ ಉಚ್ಪ್ರಾಯಕ್ಕೆ ತಲುಪಿತು ಎಂಬ ವಾದವನ್ನು ಅವರು ಪ್ರಶ್ನೆಗೊಳಪಡಿಸಿದ್ದಾರೆ. ವಿಜ್ಞಾನ ಎಂಬುದು ಇತಿಹಾಸ, ಭೌಗೋಳಿಕತೆ ಮತ್ತು ದಾರ್ಶನಿಕತೆಗೆ ಅತೀತವಾದ ಪೂರ್ಣ ಸ್ವತಂತ್ರ ಶಿಸ್ತು ಎಂದು ಹಲವರು ಭಾವಿಸಿರುವುದು ಸರಿಯಲ್ಲ. ವಿಜ್ಞಾನದ ಚಾರಿತ್ರಿಕ ಹರಿವನ್ನು ಪ್ಯಾರಡೈಮ್‌ಗಳ (paradigm) ನೆಲೆಗಟ್ಟಿನಲ್ಲಿ ಅವರು ಅರ್ಥೈಸಿದ್ದಾರೆ. ವಿಜ್ಞಾನದ ಮೂಲಭೂತ ನಿಲುವುಗಳಲ್ಲೆ ಪಲ್ಲಟ ಉಂಟಾದದ್ದು ನಮಗೆ ಕಾಣಬಹುದು. ಟಾಲೆಮಿ ಮತ್ತು ಅರಿಸ್ಟೋಟಲ್‌ರಂಥ ಪುರಾತನ ವಿಜ್ಞಾನಿಗಳ ಪ್ರಕಾರ ಈ ಪ್ರಪಂಚ ಭೂಕೇಂದ್ರಿತವಾಗಿತ್ತು. ಇದರ ಅನುರಣನೆಗಳನ್ನು ಅಂದಿನ ಕಲೆ ಮತ್ತು ತತ್ವಜ್ಞಾನದಲ್ಲಿ ಕಾಣಬಹುದಿತ್ತು. ನಂತರ ಬಂದ ಕೋಪರ್ನಿಕಸ್‌ ಮತ್ತು ಕೆಪ್ಲರ್‌ ಪ್ರಪಂಚವನ್ನು ಸೂರ್ಯಕೇಂದ್ರಿತ ಎಂದು ಸಾರಿ ಒಂದು ಪ್ಯಾರಡೈಮ್‌ ಪಲ್ಲಟವನ್ನು (paradigm shift) ತಂದರು. ಈಗ್ಗೆ ಎರಡು ಶತಮಾನಗಳ ಮುಂಚಿನವರೆಗೂ ether ಅಥವಾ ಈಥರನ್ನು ಒಂದು ವೈಜ್ಞಾನಿಕ ಪರಿಕಲ್ಪನೆಯಾಗಿ ಗಣಿಸಲಾಗಿತ್ತು. ಅದರ ತಳಹದಿಯಲ್ಲಿ ತಂತ್ರಜ್ಞಾನಗಳನ್ನು,ಸಿದ್ಧಾಂತಗಳನ್ನು ರೂಪಿಸಲಾಗುತ್ತಿತ್ತು. ಆದರೆ ಈವತ್ತು ಅದನ್ನು ವೈಜ್ಞಾನಿಕ ಎನ್ನಲು ಯಾರೂ ಮುಂದೆ ಬರಲಾರರು. ಕುನ್‌ ಈ ವಿಮರ್ಶೆಗಳನ್ನೆಲ್ಲಾ ನಡೆಸಿದ್ದು ಯೂರೋಕೇಂದ್ರಿತ ಲೋಕನೋಟದ ಒಳಗಡೆ ನಿಂತುಕೊಂಡೆ ಆಗಿತ್ತು ಎಂಬುದನ್ನು ಗಮನಿಸಲೇಬೇಕು. ಆಧುನಿಕ ವಿಜ್ಞಾನವನ್ನು ಸಂಪೂರ್ಣವಾಗಿ ಸ್ವೀಕರಿಸಿಕೊಂಡು ಕೂನ್ ಮಾಡಿದ ಅವಲೋಕನದ ಪ್ರಕಾರ ಕೂಡಾ ವಿಜ್ಞಾನ ಸಾರ್ವಲೌಕಿಕ ಮತ್ತು ಸಾರ್ವಕಾಲಿಕವಾಗಿದೆ ಎಂಬ ದೃಷಿಕೋನ ಹೊರಹೊಮ್ಮುತ್ತಿಲ್ಲ . ಮಾತ್ರವಲ್ಲ, ಅದರೊಳಗೆ ನಡೆಯುತ್ತಿರುವ ಮೂಲಭೂತ ಪಲ್ಲಟಗಳ ಕಡೆಗೆ ಕೂಡಾ ಅವು ಬೊಟ್ಟು ಮಾಡಿದೆ. ವಿಜ್ಞಾನದ ಎಲ್ಲಾ ಪ್ರಯೋಗಗಳು ಮತ್ತು ವೀಕ್ಷಣೆಗಳು ಪ್ರಚಲಿತವಾದ ಒಂದು ಥಿಯರಿಗೆ ಅನುಗುಣವಾಗಿ ಬೆಳೆಸಲಾಗುತ್ತಿದ್ದು ವಸ್ತುನಿಷ್ಠ ನೋಟ ಅವುಗಳಿಗೆ ಇರುವುದಿಲ್ಲ. ವಿಜ್ಞಾನಿಯ ಪೂರ್ವಗ್ರಹ, ಪೂರ್ವಾನುಭವ ಎಲ್ಲವೂ ವೀಕ್ಷಣೆಯ ರಿಸಲ್ಟ್ ನಲ್ಲಿ ಅದರದ್ದೇ ಆದ ಪ್ರಭಾವ ಬೀರುತ್ತದೆ. ಹೊಸ ಥಿಯರಿಯ ನಿರ್ಮಾಣ ಪ್ರಕ್ರಿಯೆಯಲ್ಲೂ ಈ ಕಪ್ಪು ರಂಧ್ರಗಳನ್ನು ಕಾಣಬಹುದು. ಆದುದರಿಂದಲೇ ವಿಜ್ಞಾನ ವ್ಯಕ್ತಿನಿಷ್ಠ ಎನ್ನುವುದೇ ಸೂಕ್ತ ಎಂದು ಕೂನ್ ರೊಂದಿಗೆ ದನಿಗೂಡಿಸಿದ್ದಾರೆ ಫೆಯರಾಬಾಂಡ್.

ಟ್ರೂತ್ ಹೇಗೆ ಕಂಡುಹಿಡಿಯಬಹುದು ಎಂಬುದಾಗಿದೆ ಮೂಲಭೂತ ಪ್ರಶ್ನೆ. ಆದರೆ, ವಿಜ್ಞಾನಕ್ಕೆ ಸತ್ಯ ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಸಾಕ್ಷಾತ್‌ ವಿಜ್ಞಾನಿಗಳೆ ಹೇಳುತ್ತಿದ್ದಾರೆ. ವಿಜ್ಞಾನಕ್ಕೆ ಟ್ರೂತ್‌ ವ್ಯಾಲ್ಯೂ ಇಲ್ಲ ಎಂದು ಅವರು ವಿವರಿಸುತ್ತಾರೆ. ಒಂದು ಪರಿಕಲ್ಪನೆ ವೈಜ್ಞಾನಿಕ ಎನಿಸಿಕೊಳ್ಳಬೇಕಾದರೆ ಅದಕ್ಕೆ ಫಾಲ್ಸಿಫಯೆಬಿಲಿಟಿ (falsifiability) ಇರಬೇಕು ಎಂದು ಹೇಳಿದ್ದಾರೆ ಕಾರ್ಲ್‌ ಪಾಪರ್‌. ಅಂದರೆ ಆ ಥಿಯರಿ ತಪ್ಪೆಂದು ಸಾಬೀತು ಮಾಡುವ ಸಂಭಾವ್ಯತೆ ಇರಬೇಕು. ಇದೇ ನೆಲೆಗಟ್ಟಿನಲ್ಲಿ ಮಾರ್ಕ್ಸಿಸಂ ಮತ್ತು ಫ್ರಾಯ್ಡಿನ ಸೈಕೋ ಅನಾಲಿಸಿಸ್‌ ವೈಜ್ಞಾನಿಕವಲ್ಲ ಎಂದು ತೀರ್ಪಿತ್ತಿದ್ದಾರೆ ಪಾಪರ್. ಆದರೆ ಒಂದು ಪರಿಕಲ್ಪನೆ ಫಾಲ್ಸಿಫಯೇಬಲ್‌ ಎನಿಸಿಕೊಂಡ ಕಾರಣ ಅದು ಸತ್ಯ ಆಗಲಾರದು ಎನ್ನುವುದು ಇಲ್ಲಿ ಗಮನಾರ್ಹ. ಆದುದರಿಂದಲೇ ವಿಜ್ಞಾನಕ್ಕೆ ಯಾವುದೇ ಥಿಯರಿಗಳನ್ನು ಸಾಬೀತು ಮಾಡಲು ಸಾಧ್ಯವಿಲ್ಲ, ಫಾಲ್ಸಿಫಯೇಬಲ್ ಥಿಯರಿಗಳನ್ನು ಪ್ರಶ್ನಿಸಲು ಮಾತ್ರವೇ ಅದರಿಂದ ಸಾಧ್ಯ. ಪ್ರಾಬ್ಲಂ ಆಫ್ ಇಂಡಕ್ಷನ್ ಒಮ್ಮೆಯೂ ಇತ್ಯರ್ಥಪಡಿಸಲು ಸಾಧ್ಯವಿಲ್ಲವೆಂದೂ ಅದು ಯಾವತ್ತೂ ವೈಜ್ಞಾನಿಕ ವಿಧಾನಕ್ಕೆ ಸವಾಲಾಗಿ ನಿಲ್ಲಲಿದೆಯೆಂದು ಪಾಪರ್ ಸಮರ್ಥಿಸಿದ್ದಾರೆ.

ಅಮೇರಿಕದ ಜೀವವಿಜ್ಞಾನಿ ರಾಬರ್ಟ್ ಶೆಲ್ಡ್ರೇಕ್ ಈ ಅಭಿಪ್ರಾಯಗಳನ್ನು ತನ್ನ ಅನುಭವದ ಆಧಾರದಲ್ಲಿ ಅನುಮೋದಿಸಿರುವುದು ನೋಡಿ,
“ವೈಜ್ಞಾನಿಕ ಅನ್ವೇಷಣೆ ನಡೆಸಿದ ಪ್ರತಿಯೊಬ್ಬನೂ ದೊರೆತ ದತ್ತಾಂಶಗಳು ಖಚಿತವಲ್ಲವೆಂದು ತಿಳಿದಿರುತ್ತಾನೆ. ವ್ಯಕ್ತಿಯ ವ್ಯಾಖ್ಯಾನಗಳು ಅದರ ಫಲಿತಾಂಶಗಳಲ್ಲಿ ಎಷ್ಟು ಪ್ರಭಾವ ಬೀರಿದೆ ಎಂಬುದನ್ನೂ, ರೀತಿವಿಜ್ಞಾನದ ಪರಿಮಿತಿಯನ್ನೂ ಅವನು ಅರಿತು ಬಿಟ್ಟಿರುತ್ತಾನೆ.”

ಒಟ್ಟಾರೆಯಾಗಿ ವಿಜ್ಞಾನ ಉತ್ಪಾದಿಸುವ ಎಲ್ಲಾ ಜ್ಞಾನಗಳು ನೂರು ಶೇಖಡಾ ಖಚಿತವೆಂದು ಕಣ್ಣುಮುಚ್ಚಿ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಮನಗಾಣಬಹುದು. ಅದಾಗ್ಯೂ, ಹಲವಾರು ಸಂಶೋಧನೆಗಳು, ವಿವಿಧ ಆಯಾಮಗಳಿಂದ ನಡೆಸಿ ದಿಟವಾದ ಕೆಲವು ಕಂಡುಹಿಡಿತಗಳು ಖಚಿತತೆಯನ್ನು ನೀಡಬಹುದಾದ ಸಾಧ್ಯತೆಯನ್ನು ಇದ್ಯಾವುದೂ ಅಲ್ಲಗೆಳೆಯುವುದಿಲ್ಲ.

ಆದರೆ, ಧರ್ಮದ ನಂಬಿಕೆ, ಆಚಾರ ವಿಚಾರಗಳು ತ್ರಿಕಾಲಜ್ಞಾನಿಯಿಂದ ದತ್ತವಾದದ್ದು/ಆಗಬೇಕಾದದ್ದು. ಅದು ತಪ್ಪಾಗಲು ಒಂದಿನಿತೂ ಸಾಧ್ಯತೆಗಳಿಲ್ಲ. ಧರ್ಮ ದೇವದತ್ತವಾದದ್ದು ಎಂದು ನಂಬುವವರಿಗೆ ಅದು ನೀಡುವ ಖಚಿತತೆಯನ್ನು ಅಲ್ಲಾಡಿಸಲು ಕೇವಲ ಅನುಮಾನಗಳ ಸಮಾಹಾರವಾದ ವಿಜ್ಞಾನದ ಆವಿಷ್ಕಾರಗಳಿಗೆ ಸಾಧ್ಯ ಆಗುವುದು ಹೇಗೆ?. ವಿಜ್ಞಾನ ಯಾವತ್ತೂ ಒಂದು ತೀರ್ಮಾನವನ್ನು ಕೊಡದು. ಅದರ ಬೆಳವಣಿಗೆಯ ರಹಸ್ಯ ಅಡಗಿರುವುದು ಹಳೆಯ ವಿಜ್ಞಾನವನ್ನು ಪ್ರಶ್ನಿಸುವುದರಲ್ಲಿಯೇ. ಅದು ನಿಂತ ನೀರಲ್ಲ, ಪರಿವರ್ತನೆಗೊಳ್ಳುತ್ತಲೆ ಇರುತ್ತದೆ. ಆದರೆ ದೇವವಚನಗಳು ಬದಲಾಗದು, ಅದು ಯಾವತ್ತೂ ಹಾಗೆಯೇ ಉಳಿಯುತ್ತದೆ. ಆಯಾ ಕಾಲದ ಜನರು ತಮಗೆ ದೊರಕಿದ ಜ್ಞಾನದಂತೆ ದೇವವಚನಗಳಲ್ಲಿನ ಭೌತಿಕ ಸತ್ಯಗಳನ್ನು ಅರ್ಥೈಸಲು/ವ್ಯಾಖ್ಯಾನಿಸಲು ಪ್ರಯತ್ನಿಸಬಹುದು. ಆದರೆ ಅದುವೆ ಅಂತಿಮವಲ್ಲ.

ವೈಜ್ಞಾನಿಕ ಅನ್ವೇಷಣೆಗಳನ್ನು ಮಾಡಲು ಖುರ್ಆನ್ ವಿವಿಧೆಡೆ ಆಹ್ವಾನ ನೀಡಿದೆ. ಪ್ರಪಂಚದ ಕಾರ್ಯನಿರ್ವಹಣೆಯ ರಹಸ್ಯಗಳನ್ನು ಬೇಧಿಸಲು ಬೋಧಿಸಿದೆ. ಆದುದರಿಂದಲೇ ಮುಸಲ್ಮಾನರು ವಿಜ್ಞಾನಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಲು ಪ್ರಯತ್ನಿಸಿದ್ದಾರೆ. ವಿಜ್ಞಾನದ ಬೆಳವಣಿಗೆಯಲ್ಲಿ ಮುಸ್ಲಿಮರ ಪಾತ್ರ ಅಭೂತಪೂರ್ವವಾದದ್ದು. ಪೂರ್ವ-ಪಶ್ಚಿಮಗಳ ಸಕಲ ವಿದ್ವಾಂಸರೂ ಅದನ್ನು ಅಂಗೀಕರಿಸಿದ್ದಾರೆ. ವಿಜ್ಞಾನದ ಇತಿಹಾಸಕಾರರ ಪ್ರಕಾರ ಮುಸ್ಲಿಮರಾಗಿದ್ದಾರೆ ವೈಜ್ಞಾನಿಕ ವಿಧಾನವನ್ನು ಬಳಸಿದ ಮೊದಲಿಗರು. ಇಬ್ನುಲ್ ಹೈತಂ ತಮ್ಮ ಬುಕ್ ಆಫ್ ಆಪ್ಟಿಕ್ಸ್ ನಲ್ಲಿ ದಾಖಲಿಸಿದ ಅರಿವುಗಳನ್ನು ಉತ್ಪಾದಿಸಿದ್ದು ಪ್ರಯೋಗಗಳನ್ನು ಮಾಡುವ ಮೂಲಕವಾಗಿತ್ತು. ವೈಜ್ಞಾನಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡವರಲ್ಲಿ ಧಾರ್ಮಿಕ ವಿದ್ವಾಂಸರು ಕೂಡಾ ಯಥೇಚ್ಛವಾಗಿದ್ದರು. ಲ್ಯಾಟಿನ್ ಭಾಷೆಯಲ್ಲಿ ‘ಅವೆರೋಸ್’ ಎಂದು ಕರೆಯಲ್ಪಡುವ ಇಬ್ನು ರುಶ್ದ್ ಎಂಬ ವಿಜ್ಞಾನಿ ಮಾಲಿಕಿ ಕರ್ಮಶಾಸ್ತ್ರಜ್ಞ ಕೂಡಾ ಆಗಿದ್ದರು. ಯುರೋಪಿಯನ್ ನವೋತ್ಥಾನಕ್ಕೆ ನಾಂದಿ ಹಾಡಿದ್ದು ಮುಸ್ಲಿಂ ಸ್ಪೈನ್ ಮಾಡಿದ ಸಾಧನೆಗಳಾಗಿವೆ ಎಂದು ಸಮರ್ಥಿಸಿದ್ದಾರೆ ಥೋಮಸ್ ಅರ್ನಾಲ್ಡ್ ತಮ್ಮ ‘ದ ಪ್ರೀಚಿಂಗ್ ಆಫ್ ಇಸ್ಲಾಂ’ ಕೃತಿಯಲ್ಲಿ:

“ಮುಸ್ಲಿಮ್ ಸ್ಪೈನ್ ಮಧ್ಯಕಾಲದ ಯುರೋಪಿನ ಚರಿತ್ರೆಯಲ್ಲಿ ಸುವರ್ಣ ಪುಟಗಳನ್ನು ಬರೆದಿದೆ. ಸ್ಪೈನಿನ ಪ್ರಾಂತ್ಯಗಳ ಮೂಲಕ ಹಾದು ಹೋಗಿ ಅದು ಇತರ ಯುರೋಪಿಯನ್ ರಾಷ್ಟ್ರಗಳಿಗೂ ಹರಿದಿದೆ. ಅಲ್ಲೆಲ್ಲಾ ನವ ಕಾವ್ಯಾತ್ಮಕತೆ ಮತ್ತು ಹೊಸ ಸಂಸ್ಕೃತಿಗಳು ಜನ್ಮ ತಾಳಿವೆ. ಕ್ರೈಸ್ತ ವಿದ್ವಾಂಸರಿಗೆ ಗ್ರೀಕ್ ತತ್ವಚಿಂತನೆ ದೊರಕಿದ್ದು ಇವರ ಮೂಲಕವಾಗಿತ್ತು. ಸ್ಪೈನಿನ ಪ್ರಚೋದನೆಯಾಗಿದೆ ‘ರಿನೈಸೆನ್ಸ್’ ಗೆ ಕಾರಣೀಭೂತವಾದದ್ದು.”

ಇಪ್ಪತ್ತೊಂದನೆಯ ಶತಮಾನದ ಕೆಲವು ವೈಜ್ಞಾನಿಕ ಆವಿಷ್ಕಾರಗಳು ಇಷ್ಟರವರೆಗೆ ಜತನದಿಂದ ಪಾಲಿಸಿಕೊಂಡು ಬಂದ ವೈಜ್ಞಾನಿಕ ಶಿಸ್ತನ್ನು ಮರು ನಿರ್ಮಾಣ ಮಾಡುವತ್ತ ವಿಜ್ಞಾನಿಗಳನ್ನು ಸಾಗಿಸುತ್ತಿದೆ. ಶತಮಾನಗಳಿಂದೀಚೆಗೆ ವಿಜ್ಞಾನ ಉತ್ತರ ಕಂಡುಕೊಳ್ಳಲು ಶ್ರಮಿಸುತ್ತಿರುವ ‘ಬಿಗ್ ಕ್ವಶ್ಚನ್’ಗಳು ಈಗಲೂ ಸವಾಲಾಗಿಯೇ ಉಳಿದಿದ್ದು ಕೆಲವರನ್ನಾದರೂ ಮರುಚಿಂತನೆಗೆ ಪ್ರೇರೇಪಿಸಿದೆ. ವಿಜ್ಞಾನವನ್ನು ಅರಿವಿನ ದೊಡ್ಡ ಪ್ರಾಧಿಕಾರವಾಗಿ ಉಳಿಸಲು ಬಯಸುವವರು ಮುಖ್ಯವಾಹಿನಿಯನ್ನು ಆಳುತ್ತಿರುವುದರಿಂದ ಇಂತಹ ಬ್ಲೈಂಡ್ ಸ್ಪಾಟ್‍ಗಳು ಚರ್ಚೆಯಾಗುತ್ತಿಲ್ಲ. ಅದಾಗ್ಯೂ ಕೆಲವು ನಿರಂಕುಶಮತಿ ವಿಜ್ಞಾನಿಗಳು ಇದರತ್ತ ಬೊಟ್ಟು ಮಾಡಿದ್ದಾರೆ. ರಾಬರ್ಟ್ ಶೆಲ್ಡ್ರಾಕ್ ಹೇಳುವುದು ನೋಡಿ:

“ವಿಜ್ಞಾನ ಮತ್ತು ತಂತ್ರಜ್ಞಾನ ಅಧಿಕಾರದ ತುತ್ತತುದಿಯಲ್ಲಿ ಕೂತಿರುವ, ಅದರ ದಿಗ್ವಿಜಯ ಪ್ರಶ್ನಾತೀತವಾಗಿ ಮುಂದುವರಿಯುತ್ತಿರುವ ಇಪ್ಪತ್ತೊಂದನೆಯ ಶತಮಾನದ ಎರಡನೆಯ ದಶಕದಲ್ಲಿ ಕೆಲವು ಅನಿರೀಕ್ಷಿತ ಸಮಸ್ಯೆಗಳು ವಿಜ್ಞಾನವನ್ನು ಒಳಗಿನಿಂದ ಕಾಡುತ್ತಿದೆ. ಹಲವಾರು ವಿಜ್ಞಾನಿಗಳು ಈ ಸಮಸ್ಯೆಗಳನ್ನು ಸಾಂಪ್ರದಾಯಿಕ ರೀತಿಯಲ್ಲೆ ಸಂಶೋಧಿಸಿ ಕೊನೆಗೊಂದು ದಿನ ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ, ನನ್ನಂತಹ ಕೆಲವು ಮಂದಿಯ ಪ್ರಕಾರ ಇದು ದೊಡ್ಡದೊಂದು ಬಿಕ್ಕಟ್ಟಿನ ಲಕ್ಷಣಗಳಾಗಿವೆ……….. ವಿಜ್ಞಾನವನ್ನು ಶತಮಾನಗಳಷ್ಟು ಹಳೆಯದಾದ ಪೂರ್ವಗ್ರಹಗಳು ಆಳುತ್ತಿದ್ದು ಅವು ಅದರ ಒಣಸಿದ್ಧಾಂತಗಳನ್ನು ಕಠಿಣಗೊಳಿಸಿದೆ”. (ದ ಸಯನ್ಸ್ ಡಿಲ್ಯೂಷನ್)

ಒಟ್ಟಾರೆಯಾಗಿ ಹೇಳುವುದಾದರೆ ಧರ್ಮ ಮತ್ತು ತತ್ವಗಳ ಕ್ಷೇತ್ರ ಯಾವುದು ವಿಜ್ಞಾನದ ಕ್ಷೇತ್ರ ಯಾವುದು ಎಂಬುದನ್ನು ಸರಿಯಾಗಿ ಅರ್ಥೈಸಿದರೆ ವೈಜ್ಞಾನಿಕ-ಧಾರ್ಮಿಕ ದ್ವಂದ್ವಗಳನ್ನು ಬಗೆಹರಿಸಿಕೊಳ್ಳಬಹುದು. ಅಲ್ಲದಿದ್ದರೆ ಸಮಕಾಲೀನ ಸಾರಸ್ವತ ಲೋಕದಲ್ಲಿ ನಾವಿಂದು ಅನುಭವಿಸುತ್ತಿರುವ ತಲ್ಲಣಗಳು ಹಾಗೆಯೇ ಮುಂದುವರಿಯಬಹುದು. ವೈಜ್ಞಾನಿಕ ಎನಿಸಿಕೊಳ್ಳಲು ವಿಶ್ವಾಸಿಗಳು ತಮ್ಮ ಖಚಿತವಾದ ಅತಿಭೌತಶಾಸ್ತ್ರೀಯ (metaphysical) ನಂಬಿಕೆಗಳನ್ನು ಹೊರಗೆಸೆಯುವ ಮುನ್ನ ಎರಡು ಬಾರಿ ಆಲೋಚಿಸುವುದು ಒಳಿತು.

ಪ್ರೊ: ತಫಸುಲ್‌ ಇಜಾಝ್‌, ನಝೀರ್‌ ಅಬ್ಬಾಸ್

ಶೂನ್ಯತೆಯ ಸುಗಂಧ: ಮರುಭೂಮಿಯ ಪರಿಮಳ ಹಾಗೂ ಸೂಫಿಗಳು

ಆಂಡ್ರ್ಯೂ ಹಾರ್ವಿ ತನ್ನ ‘ಪೆರ್ಫ್ಯೂಮ್ ಓಫ್ ದಿ ಡೆಸೆರ್ಟ್’ [ Perfume Of the desert] ಎಂಬ ಪುಸ್ತಕದಲ್ಲಿ ಒಂದು ಸೂಫೀ ಕಥೆಯನ್ನು ಬರೆಯುತ್ತಾರೆ. ಕಥೆ ಹೀಗಿದೆ…

ಒಂದು ಸಂಘ ಅರಬಿಗಳು ತನ್ನ ಅನುಯಾಯಿಗಳೊಂದಿಗೆ ಸವಾರಿ ಮಾಡುತ್ತಿದ್ದರು. ಗುರು ಧರ್ಮ ವಿಶ್ವಾಸಿಯೂ, ಮಹಾನ್ ವ್ಯಕ್ತಿಯೂ ಆಗಿದ್ದರು. ಅವರ ದೀರ್ಘ ಪ್ರಯಾಣವು ನಿರ್ಜನವಾದ ಹಳೇಯ ಕೋಟೆಯ ಬಳಿ ತಲುಪಿ, ಅಲ್ಲೇ ಠಿಕಾಣಿ ಹೂಡಿದರು.

ಕೋಟೆಯ ನಿರ್ಜನವಾದ ಕೋಣೆಗಳಿಗೆ ಹತ್ತಿ ಇಳಿದ ಯುವಕರು ಕಟ್ಟಡದ ನಿರ್ಮಾಣ ಸಂಯೋಜನೆಯ ಕುರಿತು ಅರಿಯಲು ಇಟ್ಟಿಗೆಗಳನ್ನು ತುಂಡರಿಸಿ ವಾಸನೆಯನ್ನು ನೋಡಿದರು. ಅವರಲ್ಲೊಬ್ಬ ವ್ಯಕ್ತಿ ಕರೆದು ಹೇಳಿದ; “ಈ ಮಣ್ಣಿನಲ್ಲಿ ಗುಲಾಬಿಯ ಹಾಗು ಕಿತ್ತಳೆಯ ಹೂವಿನ ಎಣ್ಣೆಯನ್ನು ಮಿಶ್ರಣ ಮಾಡಲಾಗಿದೆ”. ಮತ್ತೊಬ್ಬ ವ್ಯಕ್ತಿ ಉದ್ಗಾರದಿಂದ ಕರೆದು ಹೇಳಿದ; ನಾನಿಲ್ಲಿ ಜಾಸ್ಮೀನಿನ ಸುಗಂಧವನ್ನು ಘಮಿಸುತ್ತಿದ್ದೇನೆ. ಎಷ್ಟು ಸುಂದರವಿದು..!

ಗುರು ಏನೂ ಪ್ರತ್ಯುತ್ತರಿಸದೆ ದೂರದಿಂದ ಘಟನೆಯನ್ನು ಗಮನಿಸುತ್ತಿದ್ದರು. ಸಂಘದಿಂದ ಯುವಕನೊಬ್ಬ ಗುರುವಿನ ಬಳಿ ಬಂದು “ಪ್ರಿಯ ಗುರುವೇ…ತಮ್ಮ ಆಪ್ತ ಸುಗಂಧ ಯಾವುದು..?” ಎಂದು ಪ್ರಶ್ನಿಸಿದ. ಅವರು ಕಿರುನಗೆಯ ಬೀರಿ ನೇರ ಕೋಟೆಯ ಬಳಿ ತೆರಳಿ, ಮುರಿದು ಬಿದ್ದ ಒಂದು ಕಿಟಕಿಯ ಮೂಲಕ ಶೂನ್ಯ ಮರುಭೂಮಿಯ ಗಾಳಿಯಲ್ಲಿ ಕೈಯ್ಯ ತೇಲಾಡಿಸಿ, ಒಂದು ಹಿಡಿ ಗಾಳಿಯ ಕೈಯ್ಯಲ್ಲಾಗಿಸಿ ಮುಷ್ಟಿಹಿಡಿದರು.
ನಂತರ ಗುರುವು ತನ್ನ ಬಳಿ ಇದ್ದ ಯುವಕನೊಂದಿಗೆ ಹೇಳಿದರು; “ಇದರ ವಾಸನೆಯ ಘಮಿಸಿನೋಡು. ಜಗತ್ತಿನ ಅತೀ ಶ್ರೇಷ್ಠ ಕಂಪು ಮರುಭೂಮಿಯದ್ದು. ಕಾರಣ ಅದಕ್ಕೆ ವಾಸನೆಗಳಿಲ್ಲ, ಶೂನ್ಯತೆಯ ಸುಗಂಧವಾಗಿದೆ ಮರುಭೂಮಿಗಿರುವುದು”

ನಿಗೂಢತೆ ಹಾಗೂ ಸಂವೇದನೆಯ ಪರಿಮಳ

ವರ್ಷಗಳು ಹಲವು ಸವೆದ ನಂತರ ‘ಆಂಡ್ರ್ಯೂ ಹಾರ್ವಿ’ ತನ್ನ ಹಳೇಯ ಸೂಫೀ ಸ್ನೇಹಿತನ ಬಳಿ ಈ ಕಥೆಯ ಉದ್ದೇಶದ ಕುರಿತು ಕೇಳಿದರು. ಅವರು ಹೀಗೆ ವಿವರಿಸಿಕೊಟ್ಟರು; “ನನ್ನ ಪ್ರಕಾರ, ಸೂಫಿಗಳು, ಸೂಫಿಸಂತರ ಕುರಿತು ಚಿಂತಿಸುವಾಗೆಲ್ಲ ನಾನು ಮರುಭೂಮಿಯ ಕುರಿತು ಚಿಂತಿಸುವುದಿದೆ. ಅದರ ಸೌಂದರ್ಯ, ಭಯಾನಕತೆ, ಏಕಾಂತತೆ, ನಿಶ್ಯಬ್ಧತೆ ಇವೆಲ್ಲವೂ ನನ್ನ ಮನಸ್ಸಿಗೆ ಓಡೋಡಿ ಬರುತ್ತೆ. ಮರುಭೂಮಿಯಲ್ಲಿ ಹೇಗೆ ನಾವು ಸಂಪೂರ್ಣವಾಗಿ ಉನ್ಮೂಲನೆ ಮಾಡುವುದು, ನಮ್ಮ ಮೇಲ್ಭಾಗ ಹಾಗೂ ಸುತ್ತಮುತ್ತಲೂ ಇರುವ ವಸ್ತುಗಳ ಒಂದು ಭಾಗವಾಗುವುದು ಹೇಗೆ ಎಂದು ಚಿಂತಿಸುವುದಿದೆ. ನೀವು ಚಕ್ರವಾಳದ ಒಂದು ಭಾಗದಲ್ಲಿ ನಿಂತು ಶೂನ್ಯ, ನಿಶ್ಚಲವಾಗಿ ನಿಂತಿರುವ ಮರಳಿನ ಹಾಗೂ ಆಕಾಶದ ಭಾಗವಾಗಿ ಪ್ರತ್ಯೇಕವಾಗುವಂತಹ ಒಂದು ಅನುಭವವಿದು.”

“ಅಲ್ಲಾಹನ ಅಸ್ತಿತ್ವ ಹೊರತು ಎಲ್ಲವೂ ನಶಿಸುವುದು” ಎಂಬ ಖುರ್-ಆನಿನ ಸೂಕ್ತದ ಕುರಿತು ನಾನು ಆಲೋಚಿಸುವುದಿದೆ. ಈ ಮರುಭೂಮಿ ಅಲ್ಲಾಹನ ಅಸ್ತಿತ್ವದ ಪ್ರತೀಕ. ಮನುಷ್ಯ ಅವನ ಶೂನ್ಯತೆಯನ್ನು, ದೇವರ ಸಂಪೂರ್ಣವಾದ ಶೋಭೆಯನ್ನು ದರ್ಶಿಸುವ ಕನ್ನಡಿಯದು. ಮರುಭೂಮಿಯ ಕನ್ನಡಿಗೆ ಕಣ್ಣುನೆಟ್ಟು ಜೀವನವನ್ನು ಕಳೆಯುವವರು ಸೂಫಿಗಳು, ಅಲ್ಲದೆ ಈ ಮರುಭೂಮಿಯ ಮಹತ್ವ, ಪರಿಶುದ್ಧತೆಯನ್ನು ಸ್ವ-ಜೀವನದಲ್ಲಿ ಆವಾಹಿಸಿಕೊಂಡವರೇ ಸೂಫಿಗಳು.

ಶ್ರೇಷ್ಠ ಸೂಫೀ ತತ್ವಚಿಂತಕರಲ್ಲಿ ಹಾಗೂ ಕವಿಗಳಲ್ಲಿ, ‘ಜಗತ್ತಿನ ಅತೀ ಶ್ರೇಷ್ಠ ಸುಗಂಧ’ ಎಂದು ಕಥೆಯಲ್ಲಿ ಗುರು ಹೇಳಿದ ಸುಗಂಧವನ್ನು ನಮಗೆ ಅನುಭವಿಸಲು ಸಾಧ್ಯ. ಮರುಭೂಮಿಯ ಸುಗಂಧ, ಶೂನ್ಯತೆಯ ಸುಗಂಧ, ಶ್ರೇಷ್ಟ ಸಾನಿಧ್ಯದ ಉಲ್ಲಾಸಕರವಾದ ಗಂಧ, ನಿತ್ಯವೂ ಶೂನ್ಯತೆಯ, ಉನ್ಮಾದದ ವಾತಾವರಣ ಈ ಮರುಭೂಮಿಯದು.

ಆಂಡ್ರ್ಯೂ ಹಾರ್ವಿ

ಕಥೆಯಲ್ಲಿ ಬರುವ ಮುರಿದ ಕಟ್ಟಡ ಈ ಜಗತ್ತನ್ನು ಸೂಚಿಸುತ್ತದೆ. ಅದರಲ್ಲಿರುವ ಎಲ್ಲಾ ವಿನೋದ, ಬಯಕೆ, ಸಂಪ್ರದಾಯಗಳೆಲ್ಲವೂ ಸುರಭಿಯಾದ ಇಚ್ಛೆಗಳಿಂದಾಗಿದೆ ನಿರ್ಮಿಸಲ್ಪಟ್ಟಿರುವುದು.

ಟಿ.ಎಸ್ ಏಲಿಯಟ್ ಅವರ ಒಂದು ಗೆರೆ ನೆನಪಿಗೆ ಬರುತ್ತಿದೆ; ಒಬ್ಬ ವೃದ್ಧನ ಅಂಗಿಯ ಕೈಯ್ಯಲ್ಲಿರುವ ಬೂದಿ, ಒಣಗಿದ ಗುಲಾಬಿ ಹೂವಿನ ಬೂದಿಯಾಗಿದೆ.

ಜಗತ್ತಿನ ಎಲ್ಲಾ ಸಂತೋಷಗಳು ಎಷ್ಟು ಚಂದವಾದರೂ ಅವುಗಳು ಕಳೆದುಹೋಗುವಂತದ್ದು. ದೀರ್ಘ ಕಾಲ ಅದಕ್ಕೆ ನೆಲೆನಿಲ್ಲಲು ಸಾಧ್ಯವಿಲ್ಲ. ಆದರೆ ಅನಂತವಾದ ಗಂಧವು ಶೂನ್ಯತೆ ಹಾಗೂ ದೇವರದ್ದಾಗಿದೆ. ಆ ಸುಗಂಧವನ್ನು, ನಿಗೂಢತೆ, ಉಲ್ಲಾಸ, ಪರಮಾವಧಿಯ ಸಂತೋಷವನ್ನು ಅನುಭವಿಸುವುದಾಗಿದೆ ಸೂಫಿಗಳ ಲಕ್ಷ್ಯ. ಆ ಗಂಧ ತಮ್ಮ ಪ್ರಿಯನಲ್ಲಿ ಉನ್ಮಾದವುಂಟಾಗಿಸಿ, ಅವನಲ್ಲಿ ಲೀನವಾಗಿಸಲು ಅವರಿಗೆ ಅರಿವಿದೆ.

ಒಮ್ಮೆ ನೀವು ಆ ಸುಗಂಧವ ಅನುಭವಿಸಿದರೆ, ನಿಮ್ಮ ಜೀವನ ನಾಶವಾಗಿ ಹೋಗುವುದಂತೂ ಸತ್ಯ. ಅದರೊಂದಿಗೆ ನಿನಗೆ ಇನ್ನೆಂದೂ ಸುಗಂಧವ ಅನುಭವಿಸದೇ ಇರದಂತಾಗುವುದು. ನಿಮ್ಮ ಬಳಿ ಇರುವ ಉದ್ವೇಗ-ಉಮ್ಮಳಗಳು ಆ ವಾಸನೆಗೆ ಅಚಲವಾದ ಬಯಕೆಯಾಗಿ ಬಾಕಿಯಾಗುವುದು.

ಅಪೂರ್ವ ಸುಗಂಧ, ಮಧುರವಾದ ಲಹರಿ

ನಾನು ಮಳೆಯ ಕನಸು ಕಾಣುವೆ
ಮರುಭೂಮಿಯ ಮರಳಲ್ಲಿನ ಹೂದೋಟದ ಕುರಿತು
ಕನಸು ಕಾಣುವೆ

ನಾನು ಸುಮ್ಮನೆ ಎದ್ದು
ಸಮಯವು ನನ್ನ ಮುಂದೆಯೇ ಸಾಗುವಾಗ
ನಾನು ಪ್ರೀತಿಯ ಕುರಿತು ಕನಸು ಕಾಣುವೆ

ನಾನು ಅಗ್ನಿಜ್ವಾಲೆಯ ಕನಸು ಕಾಣುವೆ
ಆ ಕಣಸು ಒಮ್ಮೆಯೂ ಬಳಲದ
ಕುದುರೆಯೊಂದಿಗೆ ಬೇಡಿ ಹಾಕಿಸಿಕೊಂಡಿದೆ

ಆ ಅಗ್ನಿಜ್ವಾಲೆಯಲ್ಲಿ
ಅವರು ನೆರಳುಗಳು ಪುರುಷನ
ಮೋಹದ ಆಕೃತಿಯಂತೆ ನರ್ತಿಸುತ್ತಿದೆ

ಈ ಮರುಭೂಮಿಯ ಗುಲಾಬಿ ಹೂವು,
ಇಷ್ಟೂ ಮಧುರವುಳ್ಳ ಸುಗಂಧ ದ್ರವ್ಯಗಳೊಂದೂ
ನನ್ನ ಆಕರ್ಷಿಸಲಿಲ್ಲ

ನಾನು ಮಳೆಯ ಕನಸು ಕಾಣುವೆ
ನಿರ್ಜನ ಆಕಾಶಕ್ಕೆ ನಾನು
ನನ್ನ ಕಣ್ಣ ನೆಗೆಯಿಸುವೆ

ನಾನು ಕಣ್ಣ ಮುಚ್ಚುತ್ತಿರುವೆ
ಈ ಅಪೂರ್ವ ಸುಗಂಧ ದ್ರವ್ಯವೇ
ಅವರ ಪ್ರಣಯದ ಉನ್ಮಾದ

ಸುಂದರ ಮರುಭೂಮಿಯ ಗುಲಾಬಿ ಹೂ
ಈ ತೋಟದಲ್ಲಿನ ನೆನಪುಗಳು
ನಮ್ಮ ಭೇಟೆಯಾಡುತಿದೆ

ಈ ಮರುಭೂಮಿಯ ಕುಸುಮ
ಈ ಅಪೂರ್ವ ಸುಗಂಧವು ಪತನದ
ಸಿಹಿಯೇರುವ ಲಹರಿ.

ಮೂಲ: ಸ್ವಾದಿಖ್
ಭಾವಾನುವಾದ: ಸಲೀಂ ಇರುವಂಬಳ್ಳ

ದುಃಖಿತ ಕಿತ್ತಳೆ ಹಣ್ಣುಗಳ ನಾಡು

ಕಥೆ

ಜಾಫಾದಿಂದ ಅಕಾದ ಕಡೆಗೆ ಹೊರಟಾಗ ನನಗೇನೂ ಬೇಸರವಾಗಿರಲಿಲ್ಲ. ರಜಾ ದಿನಗಳಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗುತ್ತೇವಲ್ಲ; ಹಾಗೆಯೇ ಇದು ಕೂಡ ಎಂದು ಅನಿಸಿತ್ತು. ಆ ದಿನಗಳಲ್ಲಿ ಅಹಿತಕರ ಘಟನೆಗಳೇನೂ ಜರುಗಿರಲಿಲ್ಲ. ನಿಜ ಹೇಳಬೇಕೆಂದರೆ, ಇನ್ನು ಶಾಲೆಗೆ ಹೋಗಬೇಕಿಲ್ಲ ಎಂದೇ ನಾನು ಸಂತೋಷಪಟ್ಟಿದ್ದೆ. ಆದರೆ, ಈ ಎಲ್ಲಾ ಸಂತೋಷಕ್ಕೆ ಒಂದು ಕೆಟ್ಟ ಕೊನೆ ಎದುರಾಯಿತು. ಅಕಾ ಆಕ್ರಮಣಕ್ಕೊಳಗಾಗುತ್ತಿದ್ದಂತೆ ನಮ್ಮ ಬದುಕಿನ ದೆಸೆ ಬದಲಾಯಿತು. ಆ ರಾತ್ರಿ ನನಗೆ ಮತ್ತು ನಿನಗೆ ಬಹಳ ಕಠಿಣವಾಗಿತ್ತು. ಸ್ತ್ರೀಯರು ದೀರ್ಘ ಹೊತ್ತಿನವರೆಗೆ ಪ್ರಾರ್ಥಿಸುತ್ತಿದ್ದರು. ಪುರುಷರು ಸುದೀರ್ಘವಾದ ನಿಟ್ಟುಸಿರಿನೊಂದಿಗೆ ಆಳವಾದ ಮೌನಕ್ಕೆ ಜಾರಿದ್ದರು. ನನಗೆ, ನಿನಗೆ ಹಾಗೂ ನಮ್ಮ ವಯೋಮಾನದ ಮಕ್ಕಳಿಗೆ ಏನು ನಡೆಯುತ್ತಿದೆ ಎಂದೇ ಅರ್ಥವಾಗುತ್ತಿರಲಿಲ್ಲ. ಆ ರಾತ್ರಿ ನಾವು ನಮ್ಮದೇ ಆದ ಕಥೆಗಳನ್ನು ಹೆಣೆಯಲು ಆರಂಭಿಸಿದೆವು.


ನಮ್ಮನ್ನು ಬೆದರಿಸಿ, ಶಪಿಸಿ ಇಸ್ರೇಲ್ ಸೈನಿಕರು ಹೊರಟು ಹೋದರು. ಅವರ ಹಿಂದೆಯೇ ಒಂದು ದೊಡ್ಡ ವ್ಯಾನ್ ಬಂದು ನಿಂತಿತು. ಹಾಸಿಗೆ, ಕಂಬಳಿ, ತಲೆದಿಂಬುಗಳನ್ನು ಆ ವ್ಯಾನ್‌ಗೆ ತುಂಬಿಸಿದರು. ನಾನು ಹಳೆಯ ಆ ಮನೆಯ ಗೋಡೆಗೆ ಒರಗಿ ನಿಂತಿದ್ದೆ. ನಿನ್ನ ತಾಯಿಯನ್ನು ಆ ವ್ಯಾನ್‌ಗೆ ಹತ್ತಿಸುವುದನ್ನು ಕಂಡೆ. ಅವರ ಹಿಂದೆಯೇ ನಿನ್ನ ಚಿಕ್ಕಮ್ಮ, ಅವರ ನಂತರ ಮಕ್ಕಳು ಹೀಗೆ ಒಬ್ಬೊಬ್ಬರೇ ವ್ಯಾನ್ ಹತ್ತಿದರು. ನಿನ್ನ ತಂದೆ ನಿನ್ನನ್ನು ವ್ಯಾನ್‌ನಲ್ಲಿದ್ದ ಫರ್ನಿಚರ್‌ಗಳ ಮೇಲೆ ಎಸೆದರು. ನನ್ನನ್ನು ಎರಡು ಕೈಗಳಿಂದ ತಲೆಗೂ ಮೇಲೆ ಎತ್ತಿ ದೈತ್ಯಾಕಾರದ ಕಬ್ಬಿಣದ ಪೆಟ್ಟೆಗೆಯ ಮೇಲೆ ಎಸೆದರು. ವ್ಯಾನಿನೊಳಗೆ ನನ್ನ ಸಹೋದರ ರಿಯಾದ್ ನಿಶ್ಶಬ್ಧನಾಗಿ ಕುಳಿತಿದ್ದ. ನಾನು ಇನ್ನೇನು ಸರಿಯಾಗಿ ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ ವ್ಯಾನ್ ಮುಂದಕ್ಕೆ ಚಲಿಸಿತು.

ಅಕಾದ ದೃಶ್ಯಗಳು ಕಣ್ಮರೆಯಾದವು. ವ್ಯಾನ್ ರಅಸ್ ಅಲ್ ನಖುರ(ಲೆಬನಾನ್)ದ ಕಡೆಗೆ ದೌಡಾಯಿಸಿತು. ಆಕಾಶದಲ್ಲಿ ಕರಿಮೋಡಗಳು ಠಳಾಯಿಸಿದ್ದವು. ನನಗೆ ಜ್ವರದ ಅನುಭವವಾಗುತ್ತಿತ್ತು. ರಿಯಾದ್ ಕಾಲುಗಳನ್ನು ಮಡಚಿ, ಪೆಟ್ಟಿಗೆಯ ಮೇಲೆ ಶಾಂತವಾಗಿ ಕುಳಿತಿದ್ದ. ನಡು ನಡುವೆ ಆಕಾಶ ನೋಡುವ ಪ್ರಯತ್ನ ಮಾಡುತ್ತಿದ್ದ. ನಾನು ಮೌನವಾಗಿ ಕುಳಿತು ದಾರಿಯುದ್ದಕ್ಕೂ ನಮ್ಮನ್ನು ಎದುರುಗೊಳ್ಳುತ್ತಿದ್ದ ಕಿತ್ತಳೆ ಹಣ್ಣಿನ ತೋಟಗಳನ್ನು ನೋಡುತ್ತಿದ್ದೆ. ಎಲ್ಲರೂ ಭಯ, ನಿರೀಕ್ಷೆಗಳ ಸರಪಳಿಯಲ್ಲಿ ಬಂಧಿಯಾಗಿ ಒದ್ದಾಡುತ್ತಿದ್ದರು. ಕೆಸರುಗದ್ದೆಯಂತಿದ್ದ ರಸ್ತೆಯ ಮೇಲೆ ವ್ಯಾನ್ ಜಾರುತ್ತಾ ಓಡುತ್ತಿತ್ತು. ಗಳಿಗೆಗೊಮ್ಮೆ ಗುಂಡುಗಳ ಮೊರೆತ ಕಿವಿಗಪ್ಪಳಿಸುತ್ತಿತ್ತು; ನಮ್ಮನ್ನು ಬೀಳ್ಕೊಡುವಂತೆ! ರಅಸ್ ಅಲ್ ನಖೂರ ಕಣ್ಣಿಗೆ ಬಿದ್ದೊಡನೇ ಚಾಲಕ ವ್ಯಾನ್‌ ನಿಲ್ಲಿಸಿದ. ಸ್ತ್ರೀಯರು ತಮ್ಮ ಕೈಯಲ್ಲಿದ್ದ ವಸ್ತುಗಳೊಂದಿಗೆ ಕೆಳಗಿಳಿದರು. ಸ್ವಲ್ಪ ದೂರದಲ್ಲಿ ರೈತನೊಬ್ಬ ಬುಟ್ಟಿ ತುಂಬಾ ಕಿತ್ತಳೆ ಹಣ್ಣುಗಳನ್ನು ಹೇರಿಕೊಂಡು ಮಾರುತ್ತಿದ್ದ. ಅವನನ್ನು ಮುತ್ತಿಕೊಂಡ ಮಹಿಳಾಮಣಿಗಳು ತಮಗೆ ಬೇಕಾದಷ್ಟು ಹಣ್ಣುಗಳನ್ನು ಖರೀದಿಸಿದರು. ಆ ರೈತನು ಸ್ತ್ರೀ ಯರೊಂದಿಗೆ ಉದಾರವಾಗಿ ರ‍್ತಿಸುತ್ತಿದ್ದನು. ಆ ಕ್ಷಣದಲ್ಲಿ ಕಿತ್ತಳೆ ಹಣ್ಣುಗಳು ಎಷ್ಟು ಅಮೂಲ್ಯವೆಂದು ನನಗೆ ರ‍್ಥವಾಯಿತು. ದೊಡ್ಡದಾದ ಸುಂದರವಾದ ಆ ಕಿತ್ತಳೆ ಹಣ್ಣುಗಳು ನಮ್ಮ ಹೃದಯದೊಂದಿಗೆ ಸಂವಾದಿಸುತ್ತಿರುವಂತೆ ಭಾಸವಾಯಿತು. ಸ್ತ್ರೀಯರು ಕಿತ್ತಳೆ ಹಣ್ಣುಗಳೊಂದಿಗೆ ವ್ಯಾನ್‌ಗೆ ಮರಳಿದರು. ನಿನ್ನ ತಂದೆ ಚಾಲಕನ ಪಕ್ಕದಲ್ಲಿ ಕುಳಿತು, ಕೈಚಾಚಿದರು. ಯಾರೋ ಅವರಿಗೆ ಕಿತ್ತಳೆ ಹಣ್ಣು ಕೊಟ್ಟರು. ಸ್ವಲ್ಪ ಹೊತ್ತು ಅವರು ಅ ಹಣ್ಣನ್ನೇ ನೋಡಿದರು. ನಂತರ ಪುಟ್ಟ ಮಗುವಿನಂತೆ ಅಳತೊಡಗಿದರು. ವ್ಯಾನ್ ಅನ್ನು ರಅಸ್ ಅಲ್ ನಖೂರದಲ್ಲಿ ಇತರ ವಾಹನಗಳ ನಡುವೆ ನಿಲ್ಲಿಸಿದ್ದರು. ಪುರುಷರು ತಮ್ಮ ಬಳಿಯಿದ್ದ ಬಂದೂಕುಗಳನ್ನು ಪೊಲೀಸರಿಗೆ ನೀಡಿದರು. ಪೊಲೀಸರು ಬಂದೂಕುಗಳನ್ನು ಪಡೆದುಕೊಳ್ಳಲೆಂದೇ ಅಲ್ಲಿ ನಿಂತಿದ್ದರು. ನಮ್ಮ ಸರದಿ ಸಮೀಪಿಸುತ್ತಿದ್ದಂತೆ ಪೊಲೀಸರ ಮುಂದಿದ್ದ ಮೇಜು ಗನ್ನು, ಆಟೋಮ್ಯಾಟಿಕ್ ಗನ್ನುಗಳಿಂದ ತುಂಬಿ ಹೋಗಿತ್ತು. ಆ ಹೊತ್ತು ಲೆಬನಾನ್‌ಗೆ ಹೋಗಲು ಕಾದು ನಿಂತಿದ್ದ ವಾಹನಗಳು ಸಾಲಾಗಿ ನಿಂತಿರುವುದನ್ನು ನಾನು ಕಂಡೆ. ಕಿತ್ತಳೆ ಹಣ್ಣುಗಳ ಊರನ್ನು ತೊರೆದು ನಾವು ಇನ್ನೊಂದು ಊರಿಗೆ ಹೊರಟಿದ್ದೆವು.

ನಾನು ಜೋರಾಗಿ ಅತ್ತು ಗದ್ದಲ ಎಬ್ಬಿಸಿದೆ. ನಿನ್ನ ತಾಯಿ ಮೌನವಾಗಿ ಕುಳಿತು ಕಿತ್ತಳೆ ಹಣ್ಣುಗಳನ್ನು ನೋಡುತ್ತಿದ್ದರು. ನಿನ್ನ ತಂದೆಯ ಕಣ್ಣುಗಳಲ್ಲಿ ಇಸ್ರೇಲಿಗರಿಗಾಗಿ ತ್ಯಜಿಸಿ ಬಂದ ಕಿತ್ತಳೆ ಹಣ್ಣಿನ ತೋಟ ಪ್ರಕಾಶವಾಗಿ ಜ್ವಲಿಸುತ್ತಿತ್ತು. ತನ್ನ ಪ್ರತೀ ಮರಗಳೆಡೆಗಿನ ಬದ್ಧತೆ ಮತ್ತು ಪ್ರೀತಿ ಆ ಮುಖದ ಹೊಳಪಿನಲ್ಲಿ ಕಾಣಬಹುದಿತ್ತು. ತಪಾಸಣೆ ನಡೆಯುತ್ತಿದ್ದ ಸ್ಥಳದಲ್ಲಿ ಮುಖ್ಯ ಪೊಲೀಸ್ ಅಧಿಕಾರಿಯವರನ್ನು ಎದುರಿಸುವಾಗಲೂ ನಿನ್ನ ತಂದೆಗೆ ತನ್ನ ಕಣ್ಣಿಂದ ಹರಿಯುತ್ತಿದ್ದ ನೀರನ್ನು ತಡೆಯಲಾಗಲಿಲ್ಲ. ನಾವು ಝೈದಾ ತಲುಪಿದಾಗ ಮಧ್ಯಾಹ್ನವಾಗಿತ್ತು. ಅಲ್ಲಿಂದ ಮುಂದಕ್ಕೆ ನಾವು ನಿರಾಶ್ರಿತರಾಗಿ ಬದಲಾದೆವು. ಹಲವು ವ್ಯಕ್ತಿಗಳ ಹಾಗೂ ವಸ್ತುಗಳ ಭಾರ ಹೊತ್ತು ಪಳಗಿದ್ದ ಆ ರಸ್ತೆ ನಮ್ಮನ್ನೂ ಹೊತ್ತುಕೊಂಡಿತ್ತು. ನಿಜ ಹೇಳಬೇಕೆಂದರೆ, ಆ ಕ್ಷಣದಲ್ಲಿ ನಿನ್ನ ತಂದೆ ವಯಸ್ಸಾದವರಂತೆ ಕಾಣುತ್ತಿದ್ದರು. ಬಹುಶಃ ಅದು ಬಹಳ ದಿನಗಳಿಂದ ನಿದ್ರೆ ಮಾಡದ ಪರಿಣಾಮವಾಗಿರಬಹುದು. ವ್ಯಾನ್ ನಿಂದ ಇಳಿಸಿ ರಸ್ತೆಯ ಮೇಲಿಟ್ಟ ವಸ್ತುಗಳ ನಡುವೆ ಅವರು ಕ್ರುದ್ಧರಾಗಿ ನಿಂತಿದ್ದರು. ನಾನೇನಾದರು ಹೇಳಿದರೆ ನಿನ್ನ ತಂದೆ,ನಿನ್ನ ಅಪ್ಪ’ ಎಂದು ಬೊಬ್ಬೆ ಹೊಡೆಯುತ್ತಿದ್ದರೆಂದು ನನಗೆ ಖಚಿತವಾಗಿ ತಿಳಿದಿತ್ತು. ಅವರ ಮುಖದಲ್ಲಿ ಆ ಶಾಪವಾಕ್ಕುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ನಿರಾಶ್ರಿತರಾದ ನಾವು ರಸ್ತೆಯ ಮೇಲೆ ಸಾಮಾನುಗಳನ್ನು ಹೊತ್ತುಕೊಂಡು ಕುಳಿತಿದ್ದೆವು. ನಿರಾಶ್ರಿತರ ಸಮಸ್ಯೆಗಳನ್ನು ಪರಿಹರಿಸಲು ಯಾರೂ ಬರುವುದಿಲ್ಲ. ತಲೆಯ ಮೇಲಿನ ಸೂರನ್ನೊಳಗೊಂಡಂತೆ ಅವರು ತಮ್ಮ ಎಲ್ಲಾ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಬೇಕಷ್ಟೇ. ನೋವು ತಾಳಲಾಗದೆ ನನ್ನ ತಲೆ ಸಿಡಿಯತೊಡಗಿತು.
ಆ ರಾತ್ರಿ ಭಯಾನಕವಾಗಿತ್ತು. ಕಣ್ಣ ಮುಂದೆಯೇ ಇರುಳು ರಾತ್ರಿಯ ಛದ್ಮವೇಷ ತೊಟ್ಟು ಕುಣಿಯತೊಡಗಿತು. ನನ್ನ ಎದೆ ಬಡಿತವೋ ದ್ವಿಗುಣಗೊಳ್ಳುತ್ತಲೇ ಹೋಯಿತು. ರಾತ್ರಿಯಿಡೀ ರಸ್ತೆಯಲ್ಲೇ ಬಿದ್ದುಕೊಂಡಿರಬೇಕೆಂದು ನನಗಾಗಲೇ ಖಚಿತವಾಗಿತ್ತು. ನನ್ನೊಳಗೆ ದುಃಸ್ವಪ್ನಗಳು ತುಂಬಿಕೊಳ್ಳತೊಡಗಿದವು. ನನಗೆ ಸಮಾಧಾನ ಹೇಳುವವರು ಅಲ್ಲಿ ಯಾರೂ ಇರಲಿಲ್ಲ. ನಿನ್ನ ತಂದೆಯ ಉಕ್ಕಿನ ಮೌನ ನನ್ನನ್ನು ಭೀತಿಯ ಕೂಪಕ್ಕೆ ತಳ್ಳಿತು. ನಿನ್ನ ತಾಯಿಯ ಕೈಯಲ್ಲಿದ್ದ ಕಿತ್ತಳೆ ಹಣ್ಣು ನನ್ನ ಎದೆಯ ಬೆಂಕಿಗೆ ತುಪ್ಪ ಸುರಿಯಿತು. ಎಲ್ಲರೂ ನಿಶ್ಶಬ್ಧದ ಜೇಡರ ಬಲೆಯಲ್ಲಿ ಸಿಲುಕಿದ್ದರು. ನಿರೀಕ್ಷೆಯ ಕಣ್ಣುಗಳು ರಸ್ತೆಯನ್ನು ನೋಡುತ್ತಿದ್ದವು; ಯಾರಾದರು ಬರಬಹುದು, ತಮ್ಮ ಸಮಸ್ಯೆಯನ್ನು ಪರಿಹರಿಸಬಹುದು, ಸೂರು ಕೊಟ್ಟು ರಕ್ಷಿಸಬಹುದು ಎಂದು ಯೋಚಿಸುತ್ತಿದ್ದವು.
ಅಷ್ಟರಲ್ಲಿ ನಮ್ಮ ವಿಧಿಯೊಂದಿಗೆ ಒಬ್ಬರು ಅಲ್ಲಿಗೆ ಬಂದರು. ನಿನ್ನ ಚಿಕ್ಕಪ್ಪ. ಅವರು ಎರಡು ದಿನಗಳ ಮೊದಲೇ ಇಲ್ಲಿಗೆ ಬಂದಿದ್ದರು. ನಮ್ಮ ಹಣೆಬರಹ ಅವರ ಕೈಯಲ್ಲಿತ್ತು.


ನಿನ್ನ ಚಿಕ್ಕಪ್ಪ ಅಷ್ಟೇನೂ ದಯಾಳುವಾಗಿರಲಿಲ್ಲ. ರಸ್ತೆಯಲ್ಲಿ ಕಂಡಾಗಲೇ ಅವರ ದುಷ್ಟತನ ಅರಿವಿಗೆ ಬಂದಿತ್ತು. ಅವರು ಒಬ್ಬ ಯಹೂದಿಯ ಮನೆಗೆ ಹೋಗಿ, ಅಟ್ಟಹಾಸಗೈದರು; ತೊಲಗಿ ಇಲ್ಲಿಂದ, ನಿಮ್ಮ ವಸ್ತುಗಳನ್ನು ತೆಗೆದುಕೊಂಡ ಫೆಲೆಸ್ತೀನ್‌ಗೆ ಹೋಗಿ’. ಆದರೆ, ಅವರು ಫೆಲೆಸ್ತೀನ್‌ಗೆ ಹೋಗುವುದಿಲ್ಲವೆಂದು ಆತನಿಗೂ ತಿಳಿದಿತ್ತು. ನಿನ್ನ ಚಿಕ್ಕಪ್ಪನಿಗೆ ಅವರ ಮುಂದೆ ತನ್ನ ಸಿಟ್ಟು ಹಾಗೂ ಕ್ರೋಧವನ್ನು ತೋರಿಸುವ ಇರಾದೆಯಿತ್ತೆಂದು ತೋರುತ್ತದೆ. ಆ ಕುಟುಂಬ ತಮ್ಮ ಒಂದು ಕೋಣೆಯನ್ನು ನಮಗಾಗಿ ಬಿಟ್ಟು ಕೊಡಲು ಸಿದ್ಧವಾಯಿತು. ಬಳಿಕ ನಿನ್ನ ಚಿಕ್ಕಪ್ಪ ನಮ್ಮನ್ನು ಅಲ್ಲಿಗೆ ಕರೆದೊಯ್ದರು. ಅಲ್ಲಿ ನಿನ್ನ ಚಿಕ್ಕಪ್ಪನ ಕುಟುಂಬವೂ ಇತ್ತು. ನಾವು ಆ ಕೋಣೆಯ ನೆಲದ ಮೇಲೆ ಮಲಗಿದೆವು. ಸೈದಾದಿಂದ ನಾವು ಕೂಡಲೇ ಹೊರಡಬೇಕಾಯಿತು. ಕಾರಣ, ನಿನ್ನ ಚಿಕ್ಕಪ್ಪನ ಕೋಣೆಯಲ್ಲಿ ನಮ್ಮಲ್ಲಿ ರ‍್ಧದಷ್ಟು ಮಂದಿಗೆ ಕೂಡ ಇರಲು ಜಾಗವಿರಲಿಲ್ಲ. ಹೇಗೋ ಕಷ್ಟಪಟ್ಟು ನಾವಲ್ಲಿ ಮೂರು ದಿವಸವಿದ್ದೆವು. ನಿನ್ನ ತಾಯಿ ನಿನ್ನ ತಂದೆಯೊಂದಿಗೆ ಏನಾದರು ಕೆಲಸ ಹುಡುಕುವಂತೆ ಹೇಳಿದರು. ಇಲ್ಲದಿದ್ದರೆ ಕಿತ್ತಳೆ ಹಣ್ಣುಗಳನ್ನು ವಾಪಾಸು ಕೊಡುವಂತೆ ಹೇಳಿದರು. ಅದನ್ನು ಕೇಳಿ ನಿನ್ನ ತಂದೆಯ ಸ್ಥಿಮಿತ ತಪ್ಪಿತು. ಸಿಟ್ಟಿನಿಂದ ಅವರ ಧ್ವನಿ ನಡುಗುತ್ತಿತ್ತು. ಅಲ್ಲಿಗೆ ಒಂದು ಕೌಟುಂಬಿಕ ಸಮಸ್ಯೆಗೆ ನಾವು ಸಾಕ್ಷಿಯಾಗಬೇಕಾಯಿತು. ಕಿತ್ತಳೆಯ ನಾಡಿನಲ್ಲಿ ಹುತಾತ್ಮರ ಸಮಾಧಿಗಳ ನಡುವೆ ಪ್ರೀತಿ ವಿಶ್ವಾಸದಿಂದ ಕಳೆದಿದ್ದ ಕುಟುಂಬವೊಂದರಲ್ಲಿ ಸಮಸ್ಯೆಯ ಬೀಜ ಮೊಳಕೆಯೊಡೆಯಿತು. ನಿನ್ನ ತಂದೆ ಹಣ ಹೇಗೆ ಶೇಖರಿಸಿದರೋ ನನಗೆ ತಿಳಿದಿಲ್ಲ. ಆದರೆ, ನಿನ್ನ ತಾಯಿಯ ಆಭರಣಗಳನ್ನು ಮಾರಾಟ ಮಾಡಿರುವುದು ತಿಳಿದಿತ್ತು. ನಿನ್ನ ತಾಯಿ ಹೆಮ್ಮೆಯಿಂದ ತಲೆಯೆತ್ತಿ ತಿರುಗಲು ಅವರ ಆಭರಣಗಳನ್ನು ತೆಗೆದುಕೊಟ್ಟಿದ್ದರು. ಆದರೆ, ಆ ಆಭರಣದಿಂದ ಅಷ್ಟೊಂದು ಹಣ ಸಿಗಲು ಸಾಧ್ಯವಿಲ್ಲ. ಸಾಲವೇನಾದರು ಮಾಡಿರಬಹುದೇ? ನಮಗೆ ತಿಳಿಯದಂತೆ ಆಸ್ತಿ ಮಾರಿಬಿಟ್ಟರೆ? ಎಲ್ಲವೂ ನಿಗೂಢವಾಗಿತ್ತು. ಸೈದಾದ ಹೊರವಲಯದಲ್ಲಿ ಬಂಡೆಗಲ್ಲೊಂದರ ಮೇಲೆ ಕುಳಿತು ನಿನ್ನ ತಂದೆ ಮೊದಲ ಬಾರಿಗೆ ನಗುವುದನ್ನು ನಾನು ಕಂಡೆ. ಅವರು ಮೇ ೧೫ಕ್ಕೆ ಸೇನೆ ವಿಜಯೋತ್ಸವದೊಂದಿಗೆ ಹಿಂದಿರುಗುವುದನ್ನು ಕಾಯುತ್ತಿದ್ದರು. ಕಠೋರವಾದ ಕೆಲವು ದಿವಸಗಳ ನಂತರ ಮೇ ೧೫ ಬಂತು. ರಾತ್ರಿ ೧೨ಗಂಟೆಯ ಸುಮಾರಿಗೆ ಗಾಢ ನಿದ್ರೆಯಲ್ಲಿದ್ದ ನನ್ನನ್ನು ನಿನ್ನ ತಂದೆ ಒದ್ದು ಎಬ್ಬಿಸಿದರು. “ಏಳು, ಕಣ್ಣು ತೆರೆ. ಅರಬ್ ಸೈನ್ಯ ಫೆಲೆಸ್ತೀನ್‌ಗೆ ನುಗ್ಗುವುದನ್ನು ನೋಡು’ ಎಂದು ಅವರು ನನ್ನೊಂದಿಗೆ ಹೇಳಿದರು. ಅವರ ಧ್ವನಿ ಇತರರಲ್ಲಿ ನಿರೀಕ್ಷೆಯ ಹೊಂಗಿರಣಗಳನ್ನು ಮೂಡಿಸುವಂತಿತ್ತು. ಆ ಕಾಳ ರಾತ್ರಿಯಲ್ಲಿ ನಾವು ಹೊರಗಿಳಿದು ಕತ್ತಲ ಕೂಪದಲ್ಲಿ ಕಣ್ಮರೆಯಾಗಿದ್ದ ರ‍್ವತಗಳ ನಡುವೆ ಓಡತೊಡಗಿದೆವು. ರಸ್ತೆಗೆ ತಲುಪುವರೆಗೂ ಓಡಿದೆವು. ನಾವಿದ್ದ ಹಳ್ಳಿಯಿಂದ ರಸ್ತೆ ಬಹಳ ದೂರದಲ್ಲಿತ್ತು. ಮಕ್ಕಳು, ಯುವಕರು, ವಯಸ್ಕರು ಎಲ್ಲರೂ ಮರ‍್ಖರಂತೆ ರಸ್ತೆಗೆ ಓಡಿದೆವು. ವ್ಯಾನ್ ರಅï‌ಸ್ ಅಲ್ ನಖುರದ ಕಡೆಗೆ ಬಂತು. ದೂರದಿಂದ ಕಾರು, ಶಸ್ತ್ರಸಜ್ಜಿತ ವಾಹನಗಳು ಬರುತ್ತಿರುವುದು ಕಾಣುತ್ತಿತ್ತು. ಪ್ರಮುಖ ರಸ್ತೆಗೆ ಮುಟ್ಟುವಷ್ಟರಲ್ಲಿ ನಾವು ಚಳಿಯಿಂದ ನಡುಗುತ್ತಿದ್ದೆವು. ಹಲ್ಲುಗಳು ಕಟಕಟ ಕಡಿಯತೊಡಗಿತ್ತು. ಆದರೆ, ನಿನ್ನ ತಂದೆಯ ಸಂಭ್ರಮದ ಕೂಗು ನಮಗೆ ಎಲ್ಲವನ್ನೂ ಮರೆಯುವಂತೆ ಮಾಡಿದ್ದವು. ಅವರು ಸೈನಿಕರ ಕಾರುಗಳ ಕಡೆಗೆ ಪುಟ್ಟ ಮಗುವಿನಂತೆ ಓಡಿ; ಗಗ್ಗರ ಧ್ವನಿಯಲ್ಲಿ ಕೂಗಿ ಕರೆಯುತ್ತಿದ್ದರು. ನಾವು ಅವರನ್ನೇ ಅನುಸರಿಸಿದೆವು. ಮೆಚ್ಚುಗೆಗೆ ರ‍್ಹರಾಗಿದ್ದ ಕೆಲವು ಸೈನಿಕರು ನಮ್ಮನ್ನೇ ನೋಡುತ್ತಿದ್ದರು. ನಾವು ಏದುಸಿರು ಬಿಡುತ್ತಾ ಓಡುತ್ತಿದ್ದೆವು. ಆದರೆ, ನಿನ್ನ ತಂದೆ ತನಗೆ ೫೦ ರ‍್ಷ ಪ್ರಾಯವೆಂಬುದನ್ನು ಮರೆತು ಸೈನಿಕರ ಕಡೆಗೆ ಸಿಗರೇಟು ಎಸೆಯುತ್ತಾ ಓಡುತ್ತಿದ್ದರು. ಕುರಿಮರಿಗಳಂತೆ ನಾವು ನಿನ್ನ ತಂದೆಯನ್ನು ಹಿಂಬಾಲಿಸಿದೆವು. ಕಾರುಗಳ, ಶಸ್ತ್ರಸಜ್ಜಿತ ವಾಹನಗಳ ವಿಜಯ ಯಾತ್ರೆ ಬಹಳ ಬೇಗನೇ ಕೊನೆಗೊಂಡಿತು. ನಾವು ದಣಿದು ಮನೆಗೆ ಮರಳಿದೆವು. ನಿನ್ನ ತಂದೆ ಮೌನವಾಗಿದ್ದರು. ನಿಗೂಢ ಮೌನ. ಕಾರೊಂದರ ಹೆಡ್‌ಲೈಟ್ ಅವರ ಮುಖಕ್ಕೆ ಬಿದ್ದಾಗ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿರುವುದು ಕಾಣಿಸಿತು. ಆ ದಿನಗಳ ಬಳಿಕ ಬದುಕು ಹೇಗೋ ಸಾಗಿತು. ಘೋಷಣೆಗಳಿಂದ ನಾವು ಮರ‍್ಖರಾಗಿದ್ದೆವು. ಕ್ರೂರ ಸತ್ಯಗಳ ಮುಂದೆ ನಾವು ಸ್ತಬ್ಧರಾಗಿದ್ದೆವು. ಮುಖಗಳಿಗೆ ಕಾವಳ ಕವಿಯಿತು. ಮತ್ತೆಂದೂ ನಿನ್ನ ತಂದೆ ಫೆಲೆಸ್ತೀನ್ ಕುರಿತು ಮಾತನಾಡಲಿಲ್ಲ. ಕಿತ್ತಳೆ ಹಣ್ಣಿನ ತೋಟಗಳ ನಡುವೆ ಸಂತೋಷದಿಂದ ಕಳೆದ ದಿನಗಳನ್ನು ಅವರು ಮತ್ತೆ ನೆನಪಿಸಲೇ ಇಲ್ಲ. ತಮ್ಮ ಮನೆಯ ಬಗ್ಗೆಯೂ ಅವರು ಮಾತನಾಡಲಿಲ್ಲ. ನಾವು ಆ ದುರಂತದ ಕನ್ನಡಿಯಾಗಿ ಬದಲಾಗಿದ್ದೆವು. ಮುಂಜಾನೆ ನಮ್ಮನೆಲ್ಲಾ ಎಬ್ಬಿಸಿ ಅವರು ಕೂಗಿದರು;ಬೆಟ್ಟದ ಮೇಲೆ ಹೋಗಿರಿ, ಮಧ್ಯಾಹ್ನದ ಮೊದಲು ಯಾರೂ ಮರಳಬಾರದು’ ಬೆಳಿಗ್ಗಿನ ಉಪಹಾರ ಕೇಳದಿರಲು ಅವರು ಈ ಉಪಾಯ ಹೂಡಿದ್ದರು.

ಗಝಾನ್ ಕನಾಫಾನಿ


ದಿನದಿಂದ ದಿನಕ್ಕೆ ನಿನ್ನ ತಂದೆ ಕ್ರುದ್ಧರಾಗುತ್ತಾ ಹೋದರು. ಕ್ಷುಲ್ಲಕ ಸಂಗತಿಗಳಿಗೆ ಅಳತೆಮೀರಿ ಸಿಟ್ಟಿಗೇಳತೊಡಗಿದರು. ನನಗೀಗಲೂ ನೆನಪಿದೆ; ಮಕ್ಕಳಲ್ಲೊಬ್ಬರು ಏನೋ ಕೇಳಿದಾಗ ಆಘಾತಕ್ಕೊಳಗಾದವರಂತೆ, ಜಿಗಿದು ಎದ್ದರು. ನಂತರ ನಮ್ಮನ್ನು ದುರುಗುಟ್ಟಿ ನೋಡತೊಡಗಿದರು. ತಕ್ಷಣ ಅವರ ಮನಸಿಗೆ ಏನೋ ಹೊಳೆಯಿತು. ಮನಸಿನ ಗೊಂದಲಕ್ಕೆ ಪರಿಹಾರ ಲಭಿಸಿದಂತಿತ್ತು ಅವರ ಮುಖಭಾವ. ಸಮಸ್ಯೆಗಳು ಕೊನೆಗೊಂಡಂತೆ, ಅಂತಿಮ ತರ‍್ಪು ಪಡೆದಂತೆ, ಆಕಾಶ ಕರ‍್ಮೋಡಗಳಿಂದ ರಕ್ಷಣೆ ಹೊಂದಿ ತಿಳಿಯಾದಂತೆ ಅಸಂಬದ್ಧ ಮಾತುಗಳನ್ನಾಡತೊಡಗಿದರು. ನಂತರ ಏನನ್ನೋ ಹುಡುಕಲಾರಂಭಿಸಿದರು. ತಕ್ಷಣವೇ ನಾವು ಅಕಾದಿಂದ ತಂದಿದ್ದ ಪೆಟ್ಟಿಗೆಯೊಂದರ ಮೇಲೆ ಹಾರಿ ಕುಳಿತರು. ಅಪಸ್ಮಾರ ಬಾಧಿಸಿದವರಂತೆ ರ‍್ತಿಸಿ ಪೆಟ್ಟಿಗೆಯೊಳಗಿದ್ದ ವಸ್ತುಗಳನ್ನು ತೆಗೆದು ಹೊರಗೆಸೆಯತೊಡಗಿದರು. ನಿನ್ನ ತಂದೆ ಮುಂದೇನು ಮಾಡಲಿರುವರೆಂದು ನಿನ್ನ ತಾಯಿಗೆ ಮೊದಲೇ ತಿಳಿದಿತ್ತೋ ಏನೋ ಅವರು ಮಕ್ಕಳೊಂದಿಗೆ ಬೆಟ್ಟದ ಕಡೆಗೆ ಓಡಿ ಹೋಗುವಂತೆ ಹೇಳಿದರು. ಆದರೆ, ನಾವು ಮನೆಯ ಹೊರಗೆ ಕಿಟಕಿಯ ಬಳಿ ನಿಂತೆವು. ಕಿವಿಯನ್ನು ಗೋಡೆಗೆ ಆನಿಸಿ ಇಟ್ಟೆವು. ನಿನ್ನ ತಂದೆ ಪಿಶಾಚಿ ಬಾಧೆಗೆ ಒಳಗಾದವರಂತೆ; `ನಾನವರನ್ನು ಕೊಂದು ಹಾಕುತ್ತೇನೆ. ನನ್ನನ್ನೂ ಸಾಯಿಸುತ್ತೇನೆ. ಅವರನ್ನು ನನಗೆ ಕೊಲ್ಲಬೇಕು. ನಾನವರನ್ನು ಕೊಂದು ಹಾಕುತ್ತೇನೆ…’ ಎಂದು ಕಿರುಚುತ್ತಿದ್ದರು. ಬಾಗಿಲ ಸಂಧುಗಳಿಂದ ನಾವು ನೋಡುತ್ತಿದ್ದೆವು. ನಿನ್ನ ತಂದೆ ಗೋಡೆಗೆ ತಲೆ ಚಚ್ಚತೊಡಗಿದರು. ದರ‍್ಘ ಶ್ವಾಸವನ್ನು ಒಳಗೆಳೆಯುತ್ತಿದ್ದರು. ಕಟ ಕಟ ಹಲ್ಲು ಕಡಿಯುತ್ತಿದ್ದರು. ನಿನ್ನ ತಾಯಿ ಅಲ್ಪ ದೂರದಲ್ಲಿ ಭಯ ವಿಹ್ವಲರಾಗಿ ನಿಂತು ನೋಡುತ್ತಿದ್ದರು. ಏನು ನಡೆಯುತ್ತಿದೆ ಎಂದು ಮೊದಲು ನನಗೆ ರ‍್ಥವಾಗಲಿಲ್ಲ. ಅವರ ಪಕ್ಕದಲ್ಲಿ ಕಪ್ಪು ಪಿಸ್ತೂಲ್ ಬಿದ್ದಿರುವುದು ಕಂಡು ನನ್ನ ಮೆದುಳಿಗೆ ಭೀತಿಯ ಸಂದೇಶ ರವಾನೆಯಾಯಿತು. ನಾನು ಬೆಟ್ಟದ ಕಡೆಗೆ ಓಡಿದೆ. ಮನೆಯಿಂದ ರಕ್ಷಣೆ ಹೊಂದಲು ನಾನು ಬೆಟ್ಟದ ಕಡೆಗೆ ಓಡಿದ್ದೆ. ಮನೆಯಿಂದ ಎಷ್ಟು ದೂರ ಹೋಗುತ್ತೇನೋ ಬಾಲ್ಯದಿಂದ ಅಷ್ಟು ದೂರ ಹೋಗುವುದಾಗಿ ನನಗೆ ಅನಿಸುತ್ತಿತ್ತು. ಜೀವನ ಇನ್ನು ಮುಂದೆ ಈ ಹಿಂದಿನಂತಿರುವುದಿಲ್ಲ ಎಂದು ನನಗೆ ಖಚಿತವಾಗಿತ್ತು. ಮಾತ್ರವಲ್ಲದೆ, ಹಿಂದಿನಷ್ಟು ಸರಳವಾಗಿರುವುದಿಲ್ಲ, ಜೀವನ ಈಗಾಗಲೇ ನಿರೀಕ್ಷೆಯಿಂದ ಕಾಯುವ ಒಂದಾಗಿ ಉಳಿದಿಲ್ಲ. ತಲೆಗೆ ಬಂದೂಕು ಗುರಿಯಿಟ್ಟ ಸ್ಥಿತಿಗೆ ಬದುಕು ತಲುಪಿತ್ತು. ತಂದೆಯೊಬ್ಬನಿಗೆ ಮಕ್ಕಳಿಗೆ ಕೊಡಲೇನೂ ಇಲ್ಲದ ಅವಸ್ಥೆ. ಅಂದರೆ, ಇನ್ನು ಮುಂದೆ ನಮ್ಮ ಹಾದಿಯನ್ನು ನಾವೇ ಹುಡುಕಿಕೊಳ್ಳಬೇಕು. ನಮ್ಮ ರ‍್ತನೆ ಹೇಗಿರಬೇಕೆಂದು ಇನ್ನು ಯಾರೂ ಹೇಳಿಕೊಡುವುದಿಲ್ಲ. ಅಪ್ಪ, ಸಮಸ್ಯೆಗಳ ಬಗ್ಗೆ ಮಾತನಾಡುವಾಗ ಮೌನವಾಗಿ ಕುಳಿತುಕೊಳ್ಳಬೇಕು. ಎಷ್ಟೇ ಹಸಿವಾದರೂ ಆಹಾರ ಕೇಳಬಾರದು.ಬೆಟ್ಟದ ಕಡೆಗೆ ಓಡಿ, ಮಧ್ಯಾಹ್ನವಾಗದೆ ಹಿಂದಿರಗಬೇಡಿ’ ಎಂದರೆ ಅನುಸರಿಸಲೇಬೇಕು.
ಸಂಜೆ ಮನೆಯೊಳಗೆ ಇರುಳು ಆವರಿಸಿಕೊಳ್ಳುವಾಗ ನಿನ್ನ ತಂದೆ ಜ್ವರದಿಂದ ನಡುಗುತ್ತಾ ಮಲಗಿದ್ದರು. ನಿನ್ನ ಅಮ್ಮ ಕಣ್ಣೀರು ಹಾಕುತ್ತಾ ಅವರ ಪಕ್ಕದಲ್ಲಿ ಕುಳಿತಿದ್ದರು. ನಮ್ಮ ಕಣ್ಣುಗಳು ರಾತ್ರಿ ಬೆಕ್ಕಿನ ಕಣ್ಣುಗಳು ಹೊಳೆಯುವಂತೆ ಹೊಳೆಯುತ್ತಿತ್ತು. ನಮ್ಮ ತುಟಿಗಳು ಮೊಹರು ಬಿದ್ದು ಮುಚ್ಚಿದಂತಿತ್ತು. ಹಳೆಯ ಗಾಯಗಳ ಮೇಲಿನ ಹೊಲಿಗೆಯಂತೆ ಕಾಣಿಸುತ್ತಿತ್ತು.
ನಾವಿಲ್ಲಿ ತಟಸ್ಥರಾಗಿ ಬಾಲ್ಯದಿಂದ ಸಂಪರ‍್ಣವಾಗಿ ಕಳಚಿಕೊಂಡು, ಕಿತ್ತಳೆ ಹಣ್ಣುಗಳ ನೆಲದಿಂದ ದೂರವಾದೆವು. ಅಪರಿಚಿತರು ನೀರು ಹಾಕಿದರೆ ಕಿತ್ತಳೆ ಹಣ್ಣಿನ ಗಿಡಗಳು ಸಾಯುತ್ತವೆ ಎಂದು ವೃದ್ಧ ರೈತನೊಬ್ಬ ಹೇಳುತ್ತಿದ್ದ.
ನಿನ್ನ ತಂದೆ ಈಗಲೂ ರೋಗಗ್ರಸ್ತರಾಗಿ ಮಲಗಿದ್ದಾರೆ. ನಿನ್ನ ತಾಯಿಯ ಕಣ್ಣೀರು ಅಂದಿನಿಂದ ಬತ್ತಿಲ್ಲ. ನಾನು ಕೆಲವೊಮ್ಮೆ ಬಹಿಷ್ಕೃತನಂತೆ ಆ ಕೋಣೆಗೆ ಹೋಗುವುದಿತ್ತು. ಆಗ ನಿನ್ನ ತಂದೆಯ ಮುಖ ಸಿಟ್ಟಿನಿಂದ ವಿರ‍್ಣಗೊಳ್ಳುತ್ತಿತ್ತು. ಈಗಲೂ ಆ ಕಪ್ಪು ಪಿಸ್ತೂಲ್ ಮೇಜಿನ ಕೆಳಗಿನ ಡ್ರಾವರ್‌ನಲ್ಲಿದೆ. ಅದರ ಪಕ್ಕದಲ್ಲಿ ಒಂದು ಕಿತ್ತಳೆ ಹಣ್ಣು; ಸುಕ್ಕುಗಟ್ಟಿದ, ಒಣಗಿ ಸುರುಟಿದ ಕಿತ್ತಳೆ ಹಣ್ಣು.

ಅರಬಿಕ್ ಮೂಲ: ಗಝಾನ್ ಕನಾಫಾನಿ
ಕನ್ನಡಕ್ಕೆ: ಸ್ವಾಲಿಹ್ ತೋಡಾರ್

ಧರ್ಮ ಮತ್ತು ಪರಿಸರ ಸಂರಕ್ಷಣೆ: ಹುಸೈನ್ ನಸ್ರ್ ರವರ ಒಳನೋಟಗಳು

Bulletin of Atomic Scientist ಸಂಸ್ಥೆಯ ಪ್ರತಿನಿಧಿ ಎಲಿಜಬೆತ್ ಈವ್ಸ್ ಪ್ರಸಿದ್ಧ ಚಿಂತಕ ಮತ್ತು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ಅಧ್ಯಯನ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಸೈಯದ್ ಹುಸೈನ್ ನಸ್ರ್ ಅವರೊಂದಿಗೆ ಪರಿಸರದ ಬಗೆಗಿನ ಇಸ್ಲಾಮಿನ ದೃಷ್ಟಿಕೋನ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು…

ಹುಸೈನ್ ನಸ್ರ್ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ನಂತರ ತತ್ವಶಾಸ್ತ್ರದ ಕಡೆಗೆ ಹೊರಳಿದರು. 1960 ರಲ್ಲಿ ಪರಿಸರ ಸಮಸ್ಯೆಗಳ ಕುರಿತು ಬರೆಯಲು ಪ್ರಾರಂಭಿಸಿದರು. ಇಸ್ಲಾಮಿನ ಪವಿತ್ರ ಗ್ರಂಥ ಕುರ್ಆನ್, ಹದೀಸ್, ಪ್ರವಾದಿ ಮಹಮ್ಮದರ ವಚನಗಳ ಆಧಾರದ ಮೇಲೆ ಪ್ರಕೃತಿಯ ಸಂರಕ್ಷಣೆಯ ಅವಶ್ಯಕತೆಗಳ ಕುರಿತು ಅವರು ವಾದಿಸುತ್ತಾರೆ. ‘ಅಲ್ಲಾಹನು ಮನುಷ್ಯರನ್ನು ತನ್ನ ಪ್ರತಿನಿಧಿಗಳನ್ನಾಗಿ ನಿಯೋಗಿಸಿರುವನು. ಅಲ್ಲಾಹನು ಸರ್ವಸೃಷ್ಟಿಗಳ ರಕ್ಷಕನಾಗಿರುವನು’ ಇದು ಪರಿಸರದ ಬಗ್ಗೆ ಕುರ್ಆನಿನಲ್ಲಿರುವ ಹಲವು ಸೂಕ್ತಗಳಲ್ಲೊಂದು. ಮುಸ್ಲಿಂ ರಾಷ್ಟ್ರಗಳಲ್ಲಿ ಧಾರ್ಮಿಕ ಹಾಗೂ ರಾಜಕೀಯ ನಾಯಕರ ಬದಲು ಪರಿಸರ ಸಮಸ್ಯೆಗಳ ಕುರಿತು ಮಾತಾಡುತ್ತಿರುವುದು ಸಾಮಾನ್ಯ ಪ್ರಜೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಮಾತ್ರ ಎಂದು ನಸ್ರ್ ವಿಷಾದಿಸುತ್ತಾರೆ. ಸೌದಿ ಅರೇಬಿಯಾ ಯಾ ಕ್ಯಾಲಿಫೋರ್ನಿಯಾ ಎಲ್ಲೇ ಆದರೂ ಅಲ್ಲಿನ ಬರಡು ಹವೆಯೇ ಅಲ್ಲಿನ ಜನರ ಜಲ ಬಳಕೆಯ ಮನೋಭಾವವನ್ನು ನಿರ್ಧರಿಸುತ್ತದೆ ಎಂದು ಅವರು ಅಭಿಪ್ರಾಯಿಸುತ್ತಾರೆ. ಅವರ ಇತ್ತೀಚಿನ ವ್ಯಾಟಿಕನ್ ಪ್ರಯಾಣದ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಸರಿಸುಮಾರು 50 ವರ್ಷಗಳ ಹಿಂದೆ ಮುಸ್ಲಿಂ ತತ್ವಜ್ಞಾನಿ ಸೈಯ್ಯದ್ ಹುಸೈನ್ ನಸ್ರ್ The Encounter Of Man And Nature, The Spiritual Crisis Of Modern Man ಬರಹಗಳನ್ನು ಪ್ರಕಟಿಸಿದರು. ರೇಚಲ್ ಕಾರ್ಸನ್ ಹಾಗೂ ಇತಿಹಾಸಕಾರ ಲಿನ್ ವೈಟ್ ರಂತೆ ನಸ್ರ್ ಕೂಡ ಪ್ರಪಂಚದ ಮೇಲೆ ದುಷ್ಟ ಪರಿಣಾಮ ಬೀರಲಿರುವ ಪರಿಸರ ಬಿಕ್ಕಟ್ಟನ್ನು ಗುರುತಿಸಿದ್ದರು. ಅದರ ನಂತರ ಹತ್ತು ವರ್ಷಗಳ ಕಾಲ ಧರ್ಮ ವಿಜ್ಞಾನ, ಪರಿಸರ ಎಂಬೀ ವಿಷಯಗಳ ಬಗ್ಗೆ ಅಂದಾಜು 50 ರಷ್ಟು ಕೃತಿಗಳನ್ನು ಬರೆದಿದ್ದಾರೆ.

ತತ್ವಜ್ಞಾನದತ್ತ ಗಮನಹರಿಸುವ ಮೊದಲು ನಸ್ರ್ Massachusetts Institute Of Technology ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದಾರೆ. ಆ ಮೂಲಕ ಅಲ್ಲಿ ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆದ ಇರಾನಿನ ಪ್ರಥಮ ವಿದ್ಯಾರ್ಥಿಯೆಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಭೂವಿಜ್ಞಾನ ಮತ್ತು ಭೌತವಿಜ್ಞಾನದಲ್ಲಿ ಅವರು ಅಲ್ಲಿಂದಲೇ ಸ್ನಾತಕೋತ್ತರ ಪದವಿ ಪಡೆದರು ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಇತಿಹಾಸದಲ್ಲಿ ಡಾಕ್ಟರೇಟ್ ಪದವಿ ಪಡೆದು ತಮ್ಮ ತವರೂರು ಇರಾನಿಗೆ ಮರಳಿದರು. ಅಲ್ಲಿ ಅವರು ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಆರಂಭಿಸಿದರು. 1979 ರಲ್ಲಿ ನಡೆದ ಇಸ್ಲಾಂ ಕ್ರಾಂತಿಯ ಸಮಯದಲ್ಲಿ ನಸ್ರ್ ಇರಾಕಿನಿಂದ ಅಮೇರಿಕಾಗೆ ಹೋಗಬೇಕಾಗಿ ಬಂತು. ಪ್ರಸಕ್ತ ಮುಸ್ಲಿಂ – ಕ್ರಿಶ್ಚಿಯನ್ ಮಾತುಕತೆಗಳಿಗೆ ಆಧಾರವಾಗಿ ನಿಂತಿರುವ 2007 ರ ‘ನಾವು ಮತ್ತು ನೀವು ಹಂಚಿಕೊಳ್ಳುತ್ತಿರುವ ಸಮಾನ ವಚನಗಳು’ ಎಂಬ ಹೆಸರಿನಲ್ಲಿ ಕ್ರಿಶ್ಚಿಯನ್ ನಾಯಕರನ್ನು ಉದ್ದೇಶಿಸಿ ಬರೆದ ಪತ್ರಕ್ಕೆ ಸಹಿ ಮಾಡಿದ 138 ಮುಸ್ಲಿಂ ಚಿಂತಕರಲ್ಲಿ ಒಬ್ಬರಾಗಿದ್ದಾರೆ ನಸ್ರ್.

ಪ್ರಕೃತಿಯೊಂದಿಗೆ ಕಾಳಜಿಯಿಂದ ವರ್ತಿಸುವುದು ಮತ್ತು ಪ್ರಕೃತಿಯ ಬಗೆಗಿನ ಪವಿತ್ರ ಆತಂಕಗಳನ್ನು ಜೀವಂತವಾಗಿಡುವುದು ಜಾಗತಿಕ ಪರಿಸರ ನಾಶವನ್ನು ತಡೆಯುವುದಕ್ಕಿರುವ ಪರಿಹಾರವೆಂದು ನಸ್ರ್ ಬಲವಾಗಿ ನಂಬಿದ್ದಾರೆ. 2014 ರಲ್ಲಿ ನೀಡಿದ ಉಪನ್ಯಾಸದಲ್ಲಿ ನಸ್ರ್ ಅವರ ಮಾತಿನ ಸಾರ ಹೀಗಿತ್ತು : ‘ಇಸ್ಲಾಂ ಧರ್ಮ ಕೇವಲ ಮನುಷ್ಯರಿಗೆ ಮಾತ್ರವಲ್ಲ, ಇದು ಸಾರ್ವತ್ರಿಕ ವಾಸ್ತವ. ಎಲ್ಲಾ ಸೃಷ್ಟಿಗಳು ಇಸ್ಲಾಮಿನಲ್ಲಿ ಭಾಗವಹಿಸುತ್ತದೆ’.

ಈ ಸಂದರ್ಶನದಲ್ಲಿ ಪರಿಸರದ ಬಗ್ಗೆ ಕುರ್ಆನ್ ಏನು ಹೇಳುತ್ತದೆ ಮತ್ತು ಮುಸ್ಲಿಂ ದೇಶಗಳು ಹವಾಮಾನ ವೈಪರೀತ್ಯವನ್ನು ಯಾವ ಮನೋಭಾವದಿಂದ ಕಾಣುತ್ತಿದ್ದಾರೆ ಎಂಬ ವಿವರಗಳನ್ನು ನಸ್ರ್ ತೆರೆದಿಡುತ್ತಾರೆ.

ಎಲಿಜಬೆತ್ ಈವ್ಸ್ : ಪರಿಸರ ಮೇಲ್ವಿಚಾರಣೆಯ ಕುರಿತು ಇಸ್ಲಾಮಿನ ಪವಿತ್ರ ಗ್ರಂಥ ಕುರ್ಆನ್ ಏನು ಹೇಳುತ್ತದೆ ?

ನಸ್ರ್ : ಪ್ರಕೃತಿಯ ಕುರಿತಾಗಿರುವ ಅನೇಕ ಸೂಕ್ತಗಳು ಕುರ್ಆನಿನಲ್ಲಿವೆ. ಸೂರ್ಯ ಹಾಗೂ ಚಂದ್ರ ಸೃಷ್ಟಿಕರ್ತನ ಮುಂದೆ ಸಾಷ್ಟಾಂಗವೆರಗುತ್ತವೆ ಎನ್ನುತ್ತದೆ ಕುರ್ಆನ್. ಅಂದರೆ, ಪ್ರಪಂಚದಾದ್ಯಂತ ಧಾರ್ಮಿಕ ಪ್ರಜ್ಞೆ ಇದೆ ಎಂದರ್ಥ. ಕೆಲವು ಸಂದರ್ಭಗಳಲ್ಲಿ ಸೃಷ್ಟಿಕರ್ತನು ಆಲಿವ್, ಖರ್ಜೂರ ಹಣ್ಣುಗಳ ಮೇಲೆ ಆಣೆ ಮಾಡುತ್ತಾನೆ. ಪರ್ವತ, ನದಿ, ನಕ್ಷತ್ರಗಳೊಂದಿಗೂ ಸೃಷ್ಟಿಕರ್ತನು ಮಾತನಾಡುತ್ತಾನೆ.

ಜಗತ್ತಿನ ಸಮಕಾಲೀನ ಮುಸ್ಲಿಂ ಚಿಂತಕರು ಪರಿಸರಕ್ಕೆ ಸಂಬಂಧಿಸಿ ಉಲ್ಲೇಖಿಸುವ ‘ಸೃಷ್ಟಿಕರ್ತನು ಮನುಷ್ಯರನ್ನು ಭೂಮಿಯಲ್ಲಿ ತನ್ನ ಖಲೀಫನನ್ನಾಗಿ ನೇಮಿಸಿದ್ದಾನೆ’ ಎಂಬ ಕುರ್ಆನಿನ ಒಂದು ಸೂಕ್ತವನ್ನು ಗಹನವಾಗಿ ಪರಿಶೀಲಿಸೋಣ. ಖಲೀಫ ಎಂಬ ಪದದ ಅತ್ಯಂತ ಬಾಹ್ಯ ರಾಜಕೀಯ ಅರ್ಥ ‘ಇಸ್ಲಾಮಿಕ್ ದೇಶಗಳ ಆಡಳಿತಗಾರ ಎಂದಾಗಿದೆ. ಇದು ವಿವಿಧ ಅರ್ಥಗಳಲ್ಲೊಂದು. ‘ಇನ್ನೊಬ್ಬರ ಚಟುವಟಿಕೆಗಳನ್ನು ಕೈಗೊಳ್ಳುವವನು’ ಎಂದೂ ಈ ಪದಕ್ಕೆ ಮುಖ್ಯ ಅರ್ಥವಿದೆ. ಸೃಷ್ಟಿಕರ್ತನು ತನ್ನ ಸೃಷ್ಟಿಗಳ ರಕ್ಷಕನಾಗಿರುವನು. ಆದ್ದರಿಂದ ಮನುಷ್ಯನು ಸೃಷ್ಟಿಕರ್ತನ ಖಲೀಫ ಎಂಬ ನಿಟ್ಟಿನಲ್ಲಿ ಭೂಮಿಯ ಮೇಲೆ ಕೆಲಸ ನಿರ್ವಹಿಸಬೇಕಾಗಿದೆ. ಅದು ಮನುಷ್ಯನ ಜವಾಬ್ದಾರಿಯುತ ಕೆಲಸವಾದ್ದರಿಂದ ಅವನು ಸೃಷ್ಟಿಗಳ ರಕ್ಷಕನಾಗುತ್ತಾನೆ. ಪ್ರಾಣಿಗಳನ್ನು ಸಾಕುವ ವಿಧಾನ, ಮರಗಳನ್ನು ಕಡಿಯುವುದರ ಬಗ್ಗೆ, ನೀರನ್ನು ಉಪಯೋಗಿಸುವ ವಿಷಯಗಳನ್ನು ಚರ್ಚಿಸುವ ಹಲವಾರು ಪ್ರವಾದಿ ವಚನಗಳಿವೆ. ಹಣ್ಣು ನೀಡುವ ಮರಗಳನ್ನು ಕಡಿಯುವುದು ಇಸ್ಲಾಮಿನಲ್ಲಿ ನಿಷಿದ್ಧ. ವಿಶೇಷವಾಗಿ ಪರಿಸರಕ್ಕೆ ಸಂಬಂಧಿಸಿದ ಬಹಳಷ್ಟು ಪ್ರವಾದಿ ವಚನಗಳಿವೆ.

ಎಲಿಜಬೆತ್ ಈವ್ಸ್ : ಇತರ ಧರ್ಮಗಳಿಗೆ ಹೋಲಿಸಿದರೆ ಪರಿಸರದ ಬಗೆಗಿನ ಇಸ್ಲಾಮಿನ ದೃಷ್ಟಿಕೋನ ವಿಶಿಷ್ಟವಾಗಿದೆಯೇ? ಅಥವಾ ಇತರ ಏಕದೇವ ನಂಬಿಕೆಗಳೊಂದಿಗೆ ಸಾಮ್ಯತೆಯಿದೆಯೇ?

ನಸ್ರ್ : ಏಕದೇವ ವಿಶ್ವಾಸಿಗಳ ಇತರ ಗ್ರಂಥಗಳಿಗಿಂತ ಹೆಚ್ಚಾಗಿ ಪವಿತ್ರ ಕುರ್ಆನ್ ನೈಸರ್ಗಿಕ ಜಗತ್ತಿನ ಕುರಿತು ವಿವರಿಸಿದೆ. ಖಂಡಿತವಾಗಿಯೂ ಧರ್ಮಶಾಸ್ತ್ರೀಯವಾಗಿ ಈ ವಿಷಯದಲ್ಲಿ ಇಸ್ಲಾಂ ಹಾಗೂ ಇತರ ಧರ್ಮಗಳ ನಡುವೆ ಹಲವು ಸಾಮ್ಯತೆಗಳಿವೆ. ಎಲ್ಲಾ ಸೃಷ್ಟಿಗಳಿಗೆ ವಹ್ಯ್‌ ಅಥವಾ ದಿವ್ಯಬೋಧನೆಯನ್ನು ತಲುಪಿಸುವ ಕಾರ್ಯಗಳಲ್ಲಿ ಅಬ್ರಹಾಂ ಸಂಪ್ರದಾಯಗಳ ಪೈಕಿ ಇಸ್ಲಾಮಿಗೆ ವಿಶೇಷ ಸ್ಥಾನವಿದೆ. ‘ಬರಕತ್’ ಎಂಬ ಪರಿಕಲ್ಪನೆಯು ಪ್ರಧಾನವಾದದ್ದೂ ಅಲ್ಲಾಹನು ಅವನ ಸೃಷ್ಟಿಗಳಿಗೆ ನೀಡುವ ಅನುಗ್ರಹವೂ ಆಗಿದೆ. ಪ್ರಪಂಚದಾದ್ಯಂತ ಬರಕತ್ ಇದೆಯೆಂದು ಇಸ್ಲಾಮ್ ಶ್ರುತಪಡಿಸುತ್ತದೆ. ಕ್ರಿಶ್ಚಿಯನ್, ಹಿಂದೂ, ಯಹೂದಿ, ತಾವೋ ತತ್ವಗಳ ನೈಸರ್ಗಿಕ ಸಮೀಕರಣಗಳಲ್ಲಿ ಕಂಡು ಬರುವ ಸಮಾನತೆ ಇಸ್ಲಾಂ ಧರ್ಮದಲ್ಲೂ ಇದೆ.

ಎಲಿಜಬೆತ್ ಈವ್ಸ್ : ಪರಿಸರವಾದ ಸಮಕಾಲೀನ ಮುಸ್ಲಿಮರಿಗೆ ಒಂದು ಸಮಸ್ಯೆಯಾಗಿ ಪರಿಣಮಿಸಿದೆಯೆಂದು ಸಾಮಾನ್ಯೀಕರಿಸಲು ಹೇಗೆ ಸಾಧ್ಯ?

ನಸ್ರ್ : ಪಾಶ್ಚಾತ್ಯೇತರ ದೇಶಗಳು ದೀರ್ಘಕಾಲದವರೆಗೆ ಪರಿಸರವಾದವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕಾರಣ ಪಾಶ್ಚಾತ್ಯರು ತಮ್ಮನ್ನು ವಸಾಹತೀಕರಣಕ್ಕೆ ಗುರಿಯಾಗಿಸಿ ತಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಿ ಬಹಳ ಶ್ರೀಮಂತರಾಗಿದ್ದಾರೆಂದೂ, ಆದುದರಿಂದಲೇ ತಾವು ಪರಿಸರದ ಬಗ್ಗೆ ಗಮನಹರಿಸಬೇಕಾದ ಅಗತ್ಯ ಇಲ್ಲವೆಂಬುದು ಪಾಶ್ಚಾತ್ಯೇತರ ರಾಷ್ಟ್ರಗಳ ಅಂಬೋಣ. ಕೈಗಾರಿಕೀಕರಣದ ಮೂಲಕ ಶ್ರೀಮಂತರಾಗಲು ನಮಗಿರುವ ಅವಕಾಶವಾಗಿದೆ ಇದೆಂದು ಈಗ ಪಾಶ್ಚಾತ್ಯೇತರ ರಾಷ್ಟ್ರಗಳು ಹೇಳುತ್ತಿವೆ. ಪರಿಸರ ಸಂರಕ್ಷಣೆ ಎನ್ನುವುದು ಒಂದು ಪಾಶ್ಚಾತ್ಯ ಸಮಸ್ಯೆ ಎಂದು ಅವರು ವಾದಿಸುತ್ತಾರೆ. ಪರಿಸರ ನಾಶ ಮಾಡಿದ್ದು ಪಾಶ್ಚಾತ್ಯರು. ಅದನ್ನು ಸಂರಕ್ಷಿಸುವ ಕರ್ತವ್ಯ ಅವರದ್ದೇ, ಹೀಗೆ ಸಾಗುತ್ತದೆ ಅವರ ತರ್ಕ.

ಇದು ಕೆಲವು ದಶಕಗಳ ಹಿಂದಿನ ಮಾತು. ಮುಸ್ಲಿಮರಲ್ಲಿ ಮಾತ್ರವಲ್ಲ ಹಿಂದೂ, ಬೌದ್ಧ ಹಾಗೂ ಇತರ ಧರ್ಮಗಳವರಲ್ಲಿ ಕೂಡಾ ಇದೇ ರೀತಿಯ ಮನೋಭಾವವಿತ್ತು. ಕಮ್ಯುನಿಸಂನ ನೆಲೆಯಲ್ಲಿಯೂ ಪರಿಸರ ಬಿಕ್ಕಟ್ಟಿನ ಆಶಯವನ್ನು ಯಾರು ಕೂಡ ಒಪ್ಪಲಿಲ್ಲ. ಇದು ಬಂಡವಾಳ ಶಾಹಿಗಳ ಸಮಸ್ಯೆಯೆಂಬುದು ಕಮ್ಯೂನಿಸ್ಟ್ ದೇಶಗಳ ಊಹೆಯಾಗಿತ್ತು. ಸೋವಿಯಟ್ ಒಕ್ಕೂಟದ ಪತನದೊಂದಿಗೆ ಉಂಟಾದ ಭೀಕರ ಪರಿಸರ ವಿಪತ್ತುಗಳನ್ನು ನೋಡಿ ಅವರು ಸತ್ಯ ಮನಗಂಡರು. ಆ ವಿಷಯದ ಬಗ್ಗೆ ಹೆಚ್ಚಾಗಿ ಮಾತನಾಡಲು ಬಯಸುವುದಿಲ್ಲ.

ಹೆಚ್ಚಿನ ಇಸ್ಲಾಂ ದೇಶಗಳ ಸರ್ಕಾರದ ನೀತಿಗಳಲ್ಲಿ ಪರಿಸರದ ಕುರಿತಾದ ಕಾಳಜಿ ಕಾಣಲಾರಂಭಿಸಿದ್ದು ಇತ್ತೀಚಿನ ವಿದ್ಯಮಾನ. ಸರ್ಕಾರೇತರ ಸಂಸ್ಥೆಗಳು ಮತ್ತು ಖಾಸಗಿ ಗುಂಪುಗಳಾಗಿವೆ ಹಲವಾರು ರಾಷ್ಟ್ರಗಳಲ್ಲಿ ಪರಿಸರ ಸಂರಕ್ಷಣಾ ತಂಡಗಳನ್ನು ರಚಿಸುತ್ತಿರುವುದು. ಏಷ್ಯಾದಲ್ಲಿ ಪ್ರಥಮವಾಗಿ ರಾಷ್ಟ್ರೀಯೋದ್ಯಾನ ಸ್ಥಾಪನೆ ಮಾಡಿದ ದೇಶಗಳಲ್ಲಿ ಇರಾನ್ ಕೂಡ ಒಂದು. ಕ್ರಾಂತಿಗೂ ಮುನ್ನ ಇದು ಸ್ಥಾಪಿತವಾಗಿತ್ತು. ಅಲ್ಲಿ ವ್ಯಾಪಕವಾದ ಸರ್ಕಾರಿ ಭಾಗೀದಾರಿಕೆ ಇರದಿದ್ದರೂ ಅಪರೂಪದ ಸಂದರ್ಭಗಳಲ್ಲಿ ಸರ್ಕಾರ ಸಹಭಾಗಿತ್ವ ವಹಿಸುತ್ತಿತ್ತು.

ಹೆಚ್ಚಿನ ರಾಷ್ಟ್ರಗಳಲ್ಲಿ, ವಿಶೇಷವಾಗಿ ಮುಸ್ಲಿಂ ರಾಷ್ಟ್ರಗಳಲ್ಲಿ ಸಾರ್ವಜನಿಕರಿಗೆ ಪರಿಸರ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಇಲ್ಲ. ರಸ್ತೆಯಲ್ಲಿ ತ್ಯಾಜ್ಯ ಎಸೆಯುವುದು, ಮರಗಳನ್ನು ಕಡಿಯುವುದು; ಇದುವೆ ಅವರ ಪ್ರಕಾರ ಗಂಭೀರ ಪರಿಸರ ಸಮಸ್ಯೆಗಳು. ಗುರುತರವಾದ ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಪರಿಜ್ಞಾನವಿಲ್ಲ.

ಎಲಿಜಬೆತ್ ಈವ್ಸ್ : ಹವಾಮಾನ ಬದಲಾವಣೆ ಹಾಗೂ ಇತರ ಪರಿಸರ ಸಮಸ್ಯೆಗಳ ಕುರಿತು ಜಾಗತಿಕವಾಗಿ ಮಾತನಾಡುವ ಕೆಲವು ಮುಸ್ಲಿಂ ನಾಯಕರುಗಳ ಬಗ್ಗೆ ಏನೆನ್ನುತ್ತೀರಿ?

ನಸ್ರ್ : ಈ ಕಾಲದಲ್ಲಿ ಪರಿಸರ ಸಮಸ್ಯೆಗಳ ಸಂಬಂಧಿಸಿ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿದೆಯೆಂಬುದರಲ್ಲಿ ಸಂದೇಹವಿಲ್ಲ. ಸಿರಿಯಾದ ಗ್ರಾಂಡ್ ಮುಫ್ತಿ ಆಗಿದ್ದ ಶೈಖ್ ಅಹ್ಮದ್ ಕುಫ್ತಾರೊ, ಅವರ ದೇಶದಲ್ಲಿ ದುರಂತ ಸಂಭವಿಸುವ ಮುನ್ನವೇ ಅವರು ಇಹಲೋಕ ತ್ಯಜಿಸಿದರು, ಅವರು ಪರಿಸರ ಸಂಬಂಧಿ ವಿಷಯಗಳಲ್ಲಿ ಬಹಳ ಗಮನ ಸೆಳೆದ ವ್ಯಕ್ತಿ. ಕ್ರಿಶ್ಚಿಯನ್ ಹಾಗೂ ಯಹೂದಿಗಳೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದರು. ಆರ್ಥಡಾಕ್ಸ್ ಚರ್ಚಿನ ಪರಮೋನ್ನತ ಧರ್ಮಗುರು ಬಾರ್ತೋಲೇಮರಂತೆ (ಹಸಿರು ಕುಲಸಚಿವರೆಂದು ಪ್ರಸಿದ್ಧರಾದವರು) ಪ್ರಕೃತಿ ಹಾಗೂ ಪರಿಸರದೊಂದಿಗೆ ಅವರಿಗೆ ಬಹಳ ಆಸಕ್ತಿಯಿತ್ತು. ಇರಾನಿನ ಉಪಾಧ್ಯಕ್ಷೆ ಮಸೂಮೆ ಹೆಬ್ಟೆಕ್ಕರ್ ಪರಿಸರ ಸಂರಕ್ಷಣೆಗೆ ಶ್ರಮ ವಹಿಸುತ್ತಿದ್ದಾಳೆ. ಮಾತ್ರವಲ್ಲ ಫಝ್ಲುನ್ ಖಾಲಿದರ ( UK ಯಲ್ಲಿರುವ Islamic Foundation For Ecology And Environmental Sciences ನ ಸ್ಥಾಪಕ) ರೀತಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಪೈಕಿ ಹಲವು ವಿದ್ವಾಂಸರಿದ್ದಾರೆ. ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದ ನಾಯಕರು ಸದ್ಯ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ನಿರತರಾಗಿಲ್ಲ. ಮುಸ್ಲಿಂ ರಾಷ್ಟ್ರಗಳಲ್ಲಿ ಪರಿಸರ ಸಂಘಟನೆಗಳ ಕಾರ್ಯಕರ್ತರಾದ ವ್ಯಕ್ತಿಗಳು, ಪ್ರಾಚಾರ್ಯರು, ವಿದ್ವಾಂಸರು, ಕೆಲವು ಇಂಜಿನಿಯರ್‌ಗಳು ಮುಂತಾದವರಾಗಿದ್ದಾರೆ ಪರಿಸರ ಆಂದೋಲನಗಳನ್ನು ನಡೆಸಲು ಮುಂದೆ ಬರುತ್ತಿರುವುದು

ಎಲಿಜಬೆತ್ ಈವ್ಸ್ : ಕಥೋಲಿಕ್ ಪಂಥದವರ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರಬಲ್ಲ ಹವಾಮಾನ ವೈಪರೀತ್ಯವನ್ನು ಎದುರಿಸಲು ಪೋಪ್ ಮಾರ್ಗದರ್ಶನ ನೀಡುತ್ತಾರೆ. ಮುಸ್ಲಿಂ ನಾಯಕರು ಒಂದುಗೂಡಿ ಇಂತಹ ಪರಿಣಾಮ ಬೀರುವ ನಿರೀಕ್ಷೆ ಇದೆಯೇ?

ನಸ್ರ್ : ಮುಸ್ಲಿಂ ರಾಷ್ಟ್ರಗಳಲ್ಲಿ ಕಥೋಲಿಕ್ ಚರ್ಚ್‌ನಲ್ಲಿರುವಂತೆ ಯಾವುದೇ ಕೇಂದ್ರೀಕೃತ ಶ್ರೇಣಿಗಳಿಲ್ಲ. ಇಸ್ಲಾಮಿನಲ್ಲಿ ಕೆಲವು ವ್ಯಕ್ತಿಗಳ ಬರಹಗಳ ಮೂಲಕವಾಗಿದೆ ಎಲ್ಲವೂ ಘಟಿಸಿರುವುದು ಮತ್ತು ಘಟಿಸುತ್ತಿರುವುದು. ಈ ಕಾಲದಲ್ಲಿ ಇದರ ಕುರಿತು ಬರೆಯುತ್ತಿರುವ ಯುವ ಪೀಳಿಗೆಯಿದೆ. ಆದರೆ ಅವರು ರಾಜಕೀಯವಾಗಿ ಅಥವಾ ಇತರ ರೀತಿಯಲ್ಲಿ ಸಂಘಟಿತರಲ್ಲ.

ಎಲಿಜಬೆತ್ ಈವ್ಸ್ : ಮರುಭೂಮಿಯಂತಹ ಶುಷ್ಕವಾಗಿರುವ ವಾತಾವರಣದಲ್ಲಿ ಸ್ಥಾಪಿತವಾದ ಇಸ್ಲಾಂ ಧರ್ಮ ಪರಿಸರ ಮತ್ತು ಜಲ ಸಂರಕ್ಷಣೆಯ ವಿಚಾರದಲ್ಲಿ ಮುಸ್ಲಿಮರ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತದೆ?

ನಸ್ರ್ : ನೀರಿನ ಕುರಿತು ಪವಿತ್ರ ಕುರ್‌ಆನಿನಲ್ಲಿ ಕೆಲವು ಸೂಕ್ತಗಳಿವೆ. ನೀರಿನಿಂದಾಗಿದೆ ಸರ್ವ ಜೀವಜಾಲಗಳು ಬಂದಿರುವುದು. ಎಂದೆಂದಿಗೂ ಬಹಳ ಅಮೂಲ್ಯವಾದ ವಸ್ತುವಾಗಿದೆ ನೀರು. ನೀರಿನ ಸಂರಕ್ಷಣೆ ಇಸ್ಲಾಂ ನಾಗರಿಕತೆಯ ಅಪ್ರತಿಮ ಸಾಧನೆಗಳಲ್ಲೊಂದಾಗಿದೆ. ಖನಾತ್ ಸಂಪ್ರದಾಯದಲ್ಲಿ (ಪ್ರಾಚೀನ ನೀರು ಸರಬರಾಜು ವ್ಯವಸ್ಥೆ) ಮಣ್ಣಿನಡಿಯಲ್ಲಿ ನೀರು ಹರಿದು ಹೋಗುತ್ತಿತ್ತು. ಆದ್ದರಿಂದ ಕಣಿವೆಯಲ್ಲಿರುವ ಪಟ್ಟಣ ತಲುಪುವವರೆಗೂ ನೀರು ಆವಿಯಾಗುತ್ತಿರಲಿಲ್ಲ. ಇಸ್ಲಾಮಿಕ್ ನಾಗರಿಕತೆ ಈ ವಿಷಯದಲ್ಲಿ ಕೆಲವು ವಿಸ್ಮಯಕರ ತಂತ್ರಜ್ಞಾನಗಳ ಆವಿಷ್ಕಾರ ಮಾಡಿದೆ. ಕೊರತೆ ಇದ್ದುದರಿಂದ ಅವರಿಗೆ ನೀರು ಒಂದು ಪ್ರಮುಖ ಸರಕಾಗಿ ಮಾರ್ಪಟ್ಟಿತ್ತು.

ಪ್ರಪಂಚದಾದ್ಯಂತ ಮನೆಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಶೌಚಾಲಯಗಳಿದ್ದರೆ ವಿಶ್ವದ ನೀರಿನ ವ್ಯವಸ್ಥೆ ಕುಸಿಯುತ್ತದೆಯೆಂದು ದಿವಂಗತ ತತ್ವಜ್ಞಾನಿ ಇವಾನ್ ಇಲ್ಲಿಚ್ ಹೇಳಿದ್ದಾರೆ. ಆ ವ್ಯವಸ್ಥೆಯಲ್ಲಿ ನೀರು ಬಳಸುವಾಗ ಎಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದೀರಿ ಎಂಬ ಗೊಡವೆಯೇ ಇರುವುದಿಲ್ಲ. ಈ ರೀತಿಯ ಮನೋಭಾವ ಹಾಗೂ ಬಳಕೆಯ ಪದ್ಧತಿ ಸಾಂಪ್ರದಾಯಿಕ ಇಸ್ಲಾಂ ಸಂಸ್ಕೃತಿಯ ಮನಸ್ಥಿತಿಗೆ ಒಗ್ಗುವಂತದ್ದಲ್ಲ.
ದೀರ್ಘಕಾಲ ಬರಗಾಲವುಂಟಾದರೆ ನೀರು ಹಾಗೂ ಹುಲ್ಲಿನ ಬಗೆಗಿನ ಜನರ ಮನೋಭಾವವೇ ಬದಲಾವಣೆಯಾಗುತ್ತದೆ. ಮಾತ್ರವಲ್ಲ ನಮ್ಮಿಂದ ನೀರು ಪೋಲಾಗುವುದು ಕೂಡಾ ಕಡಿಮೆಯಾಗುತ್ತದೆ.

ಎಲಿಜಬೆತ್ ಈವ್ಸ್ : ಆಧುನಿಕ ಮುಸ್ಲಿಂ ರಾಷ್ಟ್ರಗಳು ಹವಾಮಾನ ವೈಪರೀತ್ಯವನ್ನು ನೋಡುವ ದೃಷ್ಟಿಕೋನದಲ್ಲಿ ಬಲವಾದ ವ್ಯತ್ಯಾಸಗಳು ಕಂಡು ಬರುತ್ತಿದೆ ಎಂದು ನಿಮಗನಿಸುತ್ತಿದೆಯೇ?

ನಸ್ರ್ : ಸ್ವಲ್ಪ ಮಟ್ಟಿಗೆ. ಉದಾಹರಣೆಗೆ ಪ್ರವಾಹ ಬರುವಾಗ ಬಾಂಗ್ಲಾದೇಶದವರು ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎಂದು ಹೇಳುತ್ತಾರೆ. ಅದೇವೇಳೆ, ಪಶ್ಚಿಮದ ದೇಶಗಳಲ್ಲಿ ವಿಜ್ಞಾನಿಗಳು ಸಮೇತ ಹಲವಾರು ಮಂದಿ ಹವಾಮಾನ ವೈಪರೀತ್ಯವನ್ನೆ ನಿರಾಕರಿಸುತ್ತಾರೆ.

ಇಸ್ಲಾಂ ರಾಷ್ಟ್ರಗಳ ಸರ್ಕಾರಗಳು ವೈಪರೀತ್ಯ ನಿರಾಕರಿಸುವವರನ್ನು ಬೆಂಬಲಿಸುವುದರೊಂದಿಗೆ ಅವರ ಸಹಾಯವನ್ನೂ ಪಡೆದುಕೊಳ್ಳುತ್ತಿದೆ. ತಮ್ಮ ತಮ್ಮ ದೇಶಗಳ ಆರ್ಥಿಕ ಯೋಜನೆಗೆ ಧಕ್ಕೆ ತರುವಂತಹ ಯಾವುದೇ ಕ್ರಮವನ್ನು ಕೈಗೊಳ್ಳದಿರಲು ಕಾರಣವೆಂಬಂತೆ ಈ ಸಂದೇಹವನ್ನು ಅವರು ಬಳಸುತ್ತಿದ್ದಾರೆ.

ಸೌದಿ ಅರೇಬಿಯಾದಂತಹ ತೈಲೋತ್ಪಾದಕ ದೇಶಗಳು ಖಂಡಿತ ಪರಿಸರ ವಿಷಯಗಳ ಕುರಿತು ಚಿಂತಿಸಲು ಕೂಡ ಬಯಸಲಾರರು. ವಿಪರ್ಯಾಸವೆಂದರೆ ಸೌದಿ ಅರೇಬಿಯಾದಲ್ಲೂ ಮಹಿಳೆಯರು ಮುನ್ನಡೆಸುವ ಆಸಕ್ತಿದಾಯಕ ಪರಿಸರ ಚಳುವಳಿ ಒಂದು ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲೇಖನಗಳನ್ನು ಬರೆಯುವ, ಕೃತಿಗಳನ್ನು ರಚಿಸುವ ಹಾಗೂ ಪರಿಸರ, ಮರ, ನೀರಿನ ಸಂರಕ್ಷಣೆ ಕುರಿತು ಪ್ರಶ್ನೆಗಳನ್ನು ಕೇಳುವ, ಮಾತನಾಡುವ ಅದರ ಬಗ್ಗೆ ಪುಸ್ತಕಗಳನ್ನು ಬರೆಯುವ ಅನೇಕ ಮಹಿಳೆಯರು ಸೌದಿ ಅರೇಬಿಯಾದಲ್ಲಿದ್ದಾರೆ. ಇದು ಹೆಚ್ಚಿನ ಪ್ರಭಾವ ಬೀರುತ್ತದೆ ಎಂದೆನ್ನಲು ಬರದಿದ್ದರೂ ಸ್ವಲ್ಪ ಮಟ್ಟಿನ ಪ್ರಭಾವ ಬೀರಿದೆ.

ಎಲಿಜಬೆತ್ ಈವ್ಸ್ : ಪರಿಸರ ಸಮಸ್ಯೆಗಳ ಕುರಿತು ಇಸ್ಲಾಮಿಕ್ ಸಮಾಜ ಹಾಗೂ ಇತರ ವಿಶ್ವಾಸಿಗಳ ನಡುವೆ ಪರಸ್ಪರ ಸಹಕಾರ ಸಾಧ್ಯವಾಗಿದೆಯೇ?

ನಸ್ರ್ : ಎಲ್ಲರನ್ನು ಬಾಧಿಸುವ ಪರಿಸರ ಸಂಬಂಧಿ ಚಟುವಟಿಕೆಗಳಲ್ಲಿ ಕ್ರಿಶ್ಚಿಯನ್ ಹಾಗೂ ಯಹೂದಿಗಳೊಂದಿಗೆ ಅನೇಕ ಮುಸ್ಲಿಮರು ಸಾಥ್‌ ನೀಡಿದ್ದಾರೆ. ಇಸ್ಲಾಮಿನ ಪ್ರತಿನಿಧಿಯಾಗಿ ಒಂದು ಗುಂಪಿನ ಮುಂದಾಳತ್ವ ವಹಿಸಿಕೊಂಡು ನಾನು ನವೆಂಬರ್ ನಲ್ಲಿ ವ್ಯಾಟಿಕನ್‌ಗೆ ಹೋಗಿದ್ದೆ. ಧಾರ್ಮಿಕ ಸಾಮರಸ್ಯದ ಬಗ್ಗೆ ಕಾರ್ಡಿನಾಲ್ (ಜಿನ್ ಲೂಯಿಸ್)ರೊಂದಿಗೆ ನಾವು ಸಭೆ ನಡೆಸಿದೆವು. ಸಾಮಾಜಿಕ ಪ್ರಾಧಾನ್ಯತೆ ಇರುವ ಪರಿಸರ ಸಂಬಂಧಿ ವಿಷಯಗಳಲ್ಲಿ ಮುಸ್ಲಿಂ ಹಾಗೂ ಕಥೋಲಿಕರ ನಡುವೆ ಪರಸ್ಪರ ಸಹಕಾರ ಸಾಧ್ಯಗೊಳಿಸುವ ವಿಚಾರ ನಾವು ಸಭೆಯಲ್ಲಿ ಚರ್ಚಿಸಿದ ವಿಷಯಗಳಲ್ಲೊಂದು. ಸೈಬೀರಿಯಾದ ನದಿಯೊಂದರ ದಿಕ್ಕನ್ನೆ ಬದಲಿಸಬೇಕು ಎನ್ನುವಂಥಾ ಬದಲಾವಣೆಗಳಲ್ಲಾ ನನ್ನ ಮಾತಿನ ತಾತ್ಪರ್ಯ. ಎರಡು ಧರ್ಮಗಳಿರುವ ದೇಶಗಳಲ್ಲಿ ಪ್ರಚಲಿತ ಅಸ್ತಿತ್ವದಲ್ಲಿರುವ ಪರಿಸರ ಸಮಸ್ಯೆಗಳ ವಿಷಯದಲ್ಲಿ ಉತ್ತಮ ತೀರ್ಮಾನ ಬರಬೇಕು ಎಂಬುದಾಗಿದೆ ನನ್ನ ಉದ್ದೇಶ.

ಎಲಿಜಬೆತ್ ಈವ್ಸ್: ‘A Common Word’ಎಂಬ ಪ್ರಮಾಣದ ಬಗ್ಗೆ ಹೆಚ್ಚಿನ ವಿವರ ನೀಡಬಹುದೇ?

ನಸ್ರ್ : ಬೆನಡಿಕ್ಟ್ ಹದಿನಾರನೆಯವ ಪೋಪ್ ಆಗಿ ನಿಯೋಜಿತರಾದಾಗ ಜರ್ಮನಿಯಲ್ಲಿ ಅವರೊಂದು ಭಾಷಣ ಮಾಡಿದರು. ಬೈಝಾಂತಿಯನ್ ಚಕ್ರವರ್ತಿ ಇಸ್ಲಾಮನ್ನು ಕೀಳು ಮಟ್ಟದಲ್ಲಿ ಟೀಕಿಸಿದನ್ನು ಉಲ್ಲೇಖಿಸಿ‌ ಅವರು ಮಾತನಾಡಿದರು. ಈ ವಿಚಾರ ಮುಸ್ಲಿಂ ರಾಷ್ಟ್ರಗಳಲ್ಲಿ ಕೋಲಾಹಲ ಸೃಷ್ಟಿಸಿತು. ನಂತರ ನಡೆದ ಗಲಭೆಗಳಲ್ಲಿ ಕೆಲವರು ಕೊಲ್ಲಲ್ಪಟ್ಟರು. ಆದರೆ ಕಥೋಲಿಕರ ಯಾ ಇತರರ ಮೇಲೆ ಆಕ್ರಮಣ ಮಾಡುವ ಬದಲು ಬಹಳಷ್ಟು ಜನರು ನನ್ನನ್ನು ಸಂಪರ್ಕಿಸಿದರು. ಕ್ರಿಶ್ಚಿಯನ್ ಹಾಗೂ ಮುಸ್ಲಿಮರು ಹಂಚಿಕೊಳ್ಳುವ ಸಮಾನ ನಿಲುವುಗಳನ್ನು ವಿವರಿಸಲೋಸುಗ 138 ಮುಸ್ಲಿಂ ನಾಯಕರು ‘A Common Word’ ಎಂಬ ಹೆಸರಿನಲ್ಲಿ ಒಂದು ದಾಖಲೆ ಪತ್ರ ರಚಿಸಲು ನಿರ್ಧರಿಸಿದರು. ಕಥೋಲಿಕ್, ಪ್ರೊಟಸ್ಟಂಟ್, ಆರ್ಥಡಾಕ್ಸ್ ಹಾಗೂ ಇತರ ಎಲ್ಲಾ ಕ್ರಿಶ್ಚಿಯನ್ ಸಮುದಾಯಗಳಿಗೆ ಈ ದಾಖಲೆ ಪತ್ರಗಳನ್ನು ಕಳುಹಿಸಲಾಯಿತು.

ಆದರೆ ಕಥೋಲಿಕರನ್ನು ಹೊರತು ಪಡಿಸಿ ಉಳಿದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೊನೆಗೆ ಕಥೋಲಿಕರ ಪ್ರತಿಕ್ರಿಯೆಯೂ ಬಂತು. ಸಂಭಾಷಣೆ ಆರಂಭಿಸಿದ್ದು ನಾವೆ. ಬಳಿಕ ಪ್ರಖ್ಯಾತ ಮುಸ್ಲಿಂ ವಿದ್ವಾಂಸರು ಹಾಗೂ ಕಾರ್ಡಿನಲ್ ಗಳು, ಮೋನ್‌ಸೈನರ್‌ ಗಳು ಮತ್ತು ಬೆನಡಿಕ್ಟ್ ಪೋಪ್ ರವರ ನಾಯಕತ್ವದಲ್ಲಿ ವ್ಯಾಟಿಕನಿನಲ್ಲಿ ಹಲವಾರು ಸಭೆಗಳು ನಡೆಯಿತು. ನಾನು ಮುಸ್ಲಿಮರ ಪರವಾಗಿ ಮಾತನಾಡಿದೆ.
ಬಳಿಕ ಪೋಪ್ ಫ್ರಾನ್ಸಿಸ್ ಪೋಪ್ ಆಗಿ ನಿಯೋಜಿತರಾದಾಗ ಈ ಪ್ರಕ್ರಿಯೆಗಳಿಗೆ ಮತ್ತೆ ಚಾಲನೆ ನೀಡಿದರು. ಕಳೆದ ನವೆಂಬರಿನಲ್ಲಿ ನಾವು ಮತ್ತೆ ರೋಮಿಗೆ ಹೋದೆವು. ಮುಸ್ಲಿಮರ ನಿಯೋಗವನ್ನು ಎರಡನೇ ಬಾರಿ ನಾನು ಮುನ್ನಡೆಸಿದೆನು. ಕಥೋಲಿಕ್ ನಿಯೋಗವನ್ನು ಕಾರ್ಡಿನಾಲ್‌ ತೌರಾನ್ ಮುನ್ನಡೆಸಿದರು. ನಾವು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದೆವು. ಪರಿಸರಕ್ಕೆ ಸಂಬಂಧಿಸಿದ ವಿಷಯವಾಗಿತ್ತು ಈ ಬಾರಿಯ ಪ್ರಮುಖ ಚರ್ಚೆಗಳಲ್ಲೊಂದು.

ಎಲಿಜಬೆತ್ ಈವ್ಸ್ : ಚಿಕ್ಕ ವಯಸ್ಸಿನಲ್ಲ್ಲಿ ವಿಜ್ಞಾನದ ಅಧ್ಯಯನ ಮಾಡಿದ ನೀವು ಬಳಿಕ ಧಾರ್ಮಿಕ ಹಾಗೂ ತತ್ವವಿಜ್ಞಾನದತ್ತ ಶ್ರದ್ಧೆ ಹೊರಳಿಸಿದ್ದೀರಿ. ಈ ರೀತಿಯ ಬದಲಾವಣೆಗೆ ಪ್ರೇರಣೆ ?

ನಸ್ರ್ : ನಾನು ಅಮೇರಿಕದ ಖಾಸಗಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವಾಗ ಗಣಿತ ಹಾಗೂ ಭೌತಶಾಸ್ತ್ರದಲ್ಲಿ ತುಂಬಾ ಮುಂದಿದ್ದೆ. ಆದ್ದರಿಂದ ನಾನು ಎಂಐಟಿಗೆ ಹೋದೆ. ಎಲ್ಲರೂ ಭೌತಶಾಸ್ತ್ರವನ್ನು ಅಧ್ಯಯನ ಮಾಡಲು ಹೇಳಿದರು. ಭೌತಶಾಸ್ತ್ರ ಅಧ್ಯಯನ ಮಾಡುವಾಗ ವಾಸ್ತವದ ಸ್ವಭಾವವನ್ನು (ಕನಿಷ್ಠ ದೈಹಿಕ ವಾಸ್ತವವನ್ನಾದರೂ) ಕಂಡುಕೊಳ್ಳಲು ಸಾಧ್ಯ ಎಂದು ಭಾವಿಸಿದ್ದೆ. ಆದರೆ ಆಧುನಿಕ ಭೌತಶಾಸ್ತ್ರ ವಸ್ತುವಿನ ಸ್ವರೂಪದೊಂದಿಗೆ ವ್ಯವಹರಿಸುವುದಿಲ್ಲ. ಮಾತ್ರವಲ್ಲ ಅದು ಗಣಿತದ ರಚನೆಯೊಂದಿಗೆ ಮಾತ್ರ ಸಂಬಂಧಿಸಿದ್ದೆಂದು ನಾನು ಶೀಘ್ರವೆ ಅರಿತುಕೊಂಡೆ. ಸತ್ಯ ತಿಳಿದ ತಕ್ಷಣ ಅದನ್ನು ಅಲ್ಲಿಗೆ ಕೊನೆಗೊಳಿಸಿ ವಿಜ್ಞಾನದಿಂದ ಹಿಂದೆ ಸರಿದೆ. ನಂತರ ಈ ಪ್ರಶ್ನೆಯ ಕುರಿತು ನಾನು ಅನ್ವೇಷಣೆ ನಡೆಸಲಾರಂಭಿಸಿದೆ. ವಿಜ್ಞಾನದ ಆಧುನಿಕ ತತ್ವಶಾಸ್ತ್ರದಲ್ಲಿ ಸತ್ಯಕ್ಕೆ ಯಾವುದೇ ಅರ್ಥವಿಲ್ಲ. ಇದು ಈಗ ಚಲಾವಣೆ ಇಲ್ಲದ ವಿಭಾಗ. ಇದು ನನ್ನಲ್ಲಿ ಆಳವಾದ ಆಧ್ಯಾತ್ಮಿಕ ಹಾಗೂ ತಾತ್ವಿಕ ಬಿಕ್ಕಟ್ಟನ್ನು ಸೃಷ್ಟಿಸಿತು. ಎಂಐಟಿ ಯಲ್ಲಿ ಅಧ್ಯಯನ ಮಾಡುವುದರ ನಡುವೆ ನಾನು ಪಾಶ್ಚಾತ್ಯ ತತ್ವಶಾಸ್ತ್ರ, ಪೌರಾತ್ಯ ತತ್ವಶಾಸ್ತ್ರ ಹಾಗೂ ಆಧ್ಯಾತ್ಮಿಕತೆಯ ಕುರಿತು ಓದುತ್ತಿದ್ದೆ. ಅಂತಿಮವಾಗಿ ನಾನು ಭೌತಶಾಸ್ತ್ರಜ್ಞನಾಗುವುದಿಲ್ಲವೆಂದು ತೀರ್ಮಾನಿಸಿದೆ. ತತ್ವಶಾಸ್ತ್ರ ಹಾಗೂ ವಿಜ್ಞಾನ, ಇತಿಹಾಸ ಅಧ್ಯಯನದೆಡೆಗೆ ಹೊರಳಿದೆ. ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನ ಯಾಕೆ ಅಭಿವೃದ್ಧಿ ಹೊಂದಿದೆಯೆಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ.

ಅನುವಾದ : ಮುಹಮ್ಮದ್ ಅಸ್ಲಂ ಅಲ್ ಮುಈನಿ

ಹೌಸ್ ಆಫ್ ವಿಸ್ಡಮ್ ಮತ್ತು ಆಧುನಿಕ ಗಣಿತ ವಿಜ್ಞಾನ

ಹೌಸ್ ಆಫ್ ವಿಸ್ಡಮ್ ಇತ್ತೆಂದು ನಂಬಲು ಕೆಲವರಿಗೆ ಈಗ ಯಾಕೋ ಒಂಥರಾ ಹಿಂಜರಿಕೆ. ನಮ್ಮನ್ನು ನಂಬುವಂತೆ ಮಾಡಲಾಗಿದೆಯೇ ಎಂಬ ಸಂದೇಹ. 13ನೇ ಶತಮಾನದಲ್ಲಿ ನಾಶವಾದ ಈ ಪ್ರಾಚೀನ ಗ್ರಂಥಾಲಯದ ಯಾವುದೇ ಕುರುಹುಗಳು ಉಳಿದಿಲ್ಲ, ಆದ್ದರಿಂದ ಅದು ಎಲ್ಲಿದೆ ಅಥವಾ ಅದು ಹೇಗಿತ್ತು ಎಂದು ನಮಗೆ ಖಚಿತವಾಗಿ ಹೇಳಲಾಗುವುದಿಲ್ಲ.

‌ಆದರೆ ಈ ಪ್ರತಿಷ್ಠಿತ ಅಕಾಡೆಮಿ ವಾಸ್ತವವಾಗಿ ಇಸ್ಲಾಮಿಕ್ ಸುವರ್ಣ ಯುಗದಲ್ಲಿ ಬಗ್ದಾದಿನ ಪ್ರಮುಖ ಬೌದ್ಧಿಕ ಶಕ್ತಿ ಕೇಂದ್ರವಾಗಿತ್ತು, ಮತ್ತು ಸಾಮಾನ್ಯ ಶೂನ್ಯದಿಂದ ಹಿಡಿದು ಈಗಿನ ಆಧುನಿಕ ಅರಬಿಕ್ ಅಂಕಿಗಳ ವರೆಗಿನ ಪರಿಕಲ್ಪನೆಗಳ ಜನ್ಮಸ್ಥಾನವವೂ ಆಗಿತ್ತು.

‌8 ನೇ ಶತಮಾನದ ಖಲೀಫಾ ಹಾರೂನ್ ಅಲ್-ರಶೀದ್ ಅವರ ಖಾಸಗಿ ಸಂಗ್ರಹವಾಗಿ ಸ್ಥಾಪನೆಯಾದ ನಂತರ ಸುಮಾರು 30 ವರ್ಷಗಳ ನಂತರ ಸಾರ್ವಜನಿಕ ಅಕಾಡೆಮಿಯಾಗಿ ಪರಿವರ್ತನೆಗೊಂಡ ಹೌಸ್ ಆಫ್ ವಿಸ್ಡಮ್ ಪ್ರಪಂಚದಾದ್ಯಂತದ ವಿಜ್ಞಾನಿಗಳನ್ನು ಬಾಗ್ದಾದ್ ಕಡೆಗೆ ಸೆಳೆದಿರುವ ಹಾಗೆ ತೋರುತ್ತದೆ. ಬಗ್ದಾದಿನ ಬೌದ್ಧಿಕ ಕುತೂಹಲ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಈ ಸೆಳೆತಕ್ಕೆ ಕಾರಣವಾದವು(ಮುಸ್ಲಿಂ, ಯಹೂದಿ ಮತ್ತು ಕ್ರಿಶ್ಚಿಯನ್ ವಿದ್ವಾಂಸರಿಗೆ ಅಲ್ಲಿ ಅಧ್ಯಯನ ಮಾಡಲು ಅವಕಾಶವಿತ್ತು).


‌ಗಣಿತ, ಖಗೋಳವಿಜ್ಞಾನ, ವೈದ್ಯಕೀಯ, ರಸಾಯನಶಾಸ್ತ್ರ, ಭೂವಿಜ್ಞಾನ, ತತ್ವಶಾಸ್ತ್ರ, ಸಾಹಿತ್ಯ ಮತ್ತು ಕಲೆಗಳು – ಜೊತೆಗೆ ರಸವಿದ್ಯೆ ಮತ್ತು ಜ್ಯೋತಿಷ್ಯದಂತಹ ಕೆಲವು ನಂಬಲು ಬಾರದ ಶಿಸ್ತುಗಳು ಸೇರಿದಂತೆ ಮಾನವಿಕ ಮತ್ತು ನೈಸರ್ಗಿಕ ವಿಜ್ಞಾನಗಳ ಅಧ್ಯಯನದ ಅಪ್ರತಿಮ ಕೇಂದ್ರವಾಗಿ ಹೌಸ್ ಆಫ್ ವಿಸ್ಡಮ್ ಕಾಲಕ್ರಮೇಣ ಮಾರ್ಪಟ್ಟಿತು. ಗಾತ್ರದಲ್ಲಿ ಇದು ಇಂದಿನ ಲಂಡನ್ ನಲ್ಲಿರುವ ಬ್ರಿಟಿಷ್ ಲೈಬ್ರರಿ ಅಥವಾ ಪ್ಯಾರಿಸಿನ ಬಿಬ್ಲಿಯೋಥಿಕ್ ನ್ಯಾಷನಲ್ ನ ಗಾತ್ರಕ್ಕೆ ಸರಿಸಾಟಿಯಾಗಬಲ್ಲದು!.‌
1258 ರಲ್ಲಿ ಮಂಗೋಲಿಯನ್ನರು ಬಗ್ದಾದಿಗೆ ಮುತ್ತಿಗೆ ಹಾಕಿದಾಗ ಹೌಸ್ ಆಫ್ ವಿಸ್ಡಮ್ ಧ್ವಂಸಗೊಳಿಸಲಾಯಿತು(ದಂತಕಥೆಯ ಪ್ರಕಾರ, ಅನೇಕ ಹಸ್ತಪ್ರತಿಗಳನ್ನು ಟೈಗ್ರಿಸ್ ನದಿಗೆ ಎಸೆದುದರಿಂದ, ಅದರ ನೀರು ಶಾಯಿಯ ಕಪ್ಪು ಬಣ್ಣಕ್ಕೆ ತಿರುಗಿತು ಎನ್ನಲಾಗುತ್ತದೆ), ಆದರೆ ಅಲ್ಲಿ ಮಾಡಿದ ಆವಿಷ್ಕಾರಗಳು ಪ್ರಬಲವಾದ, ಅಮೂರ್ತ ಗಣಿತ ಭಾಷೆಯನ್ನು ಪರಿಚಯಿಸಿದವು. ನಂತರ ಅದನ್ನು ಇಸ್ಲಾಮಿಕ್ ಸಾಮ್ರಾಜ್ಯ, ಯುರೋಪ್ ಮತ್ತು ಅಂತಿಮವಾಗಿ ಇಡೀ ಪ್ರಪಂಚವೇ ಅಳವಡಿಸಿಕೊಂಡವು .

‌ಸರ್ರೆ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರಾಧ್ಯಾಪಕ ಜಿಮ್ ಅಲ್-ಖಲೀಲಿ ಹೇಳುತ್ತಾರೆ: “ನಮಗೆ ಹೌಸ್ ಆಫ್ ವಿಸ್ಡಮ್ ಅನ್ನು ಎಲ್ಲಿ ಅಥವಾ ಯಾವಾಗ ನಿರ್ಮಿಸಲಾಯಿತು ಎಂಬುದರ ನಿಖರವಾದ ವಿವರಗಳಲ್ಲ ಮುಖ್ಯ, ಬದಲಾಗಿ ವೈಜ್ಞಾನಿಕ ವಿಚಾರಗಳ ಇತಿಹಾಸ ಮತ್ತು ಅದರ ಪರಿಣಾಮವಾಗಿ ಅವು ಹೇಗೆ ಅಭಿವೃದ್ಧಿ ಹೊಂದಿದೆ ಎಂಬುದು ಹೆಚ್ಚು ಕುತೂಹಲಕಾರಿಯಾಗಿದೆ”.

ಫಿಬೊನಾಚಿ


‌ಹೌಸ್ ಆಫ್ ವಿಸ್ಡಮಿನ ಗಣಿತದ ಪರಂಪರೆಯನ್ನು ಪರಾಂಬರಿಸಲು ಭವಿಷ್ಯದ ಕಡೆಗೆ ಕಾಲದ ಮೂಲಕ ಹಿಂಪ್ರಯಾಣವನ್ನು ಮಾಡಬೇಕಿದೆ. ಇಟಾಲಿಯನ್ ನವೋದಯವು ಪರಾಕಾಷ್ಠೆಯಲ್ಲಿದ್ದ ನೂರಾರು ವರ್ಷಗಳವರೆಗೆ, ಒಂದು ಹೆಸರು ಯುರೋಪಿನಲ್ಲಿ ಗಣಿತಕ್ಕೆ ಸಮಾನಾರ್ಥಕವಾಗಿ ಬಳಸಲಾಗುತ್ತಿತ್ತು; ಅದುವೇ ಲಿಯೊನಾರ್ಡೊ ಡಾ ಪಿಸಾ, ಮರಣೋತ್ತರವಾಗಿ ಅವರು ಫಿಬೊನಾಚಿ ಎಂದು ಜನಜನಿತರಾಗಿದ್ದಾರೆ. 1170 ರಲ್ಲಿ ಪಿಸಾದಲ್ಲಿ ಜನಿಸಿದ ಈ ಇಟಾಲಿಯನ್ ಗಣಿತಜ್ಞ ಬುಗಿಯಾದಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡೆದರು , ಇದು ಆಫ್ರಿಕಾದ ಬಾರ್ಬರಿ ಕರಾವಳಿಯಲ್ಲಿ (ಉತ್ತರ ಆಫ್ರಿಕಾ) ಇರುವ ವ್ಯಾಪಾರ ಸಂಕೀರ್ಣ. ಇವರು ತನ್ನ 20ನೇ ಪ್ರಾಯದಲ್ಲಿ ಮಧ್ಯ ಪ್ರಾಚ್ಯಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ದೊರೆತ ಭಾರತದಿಂದ ಪರ್ಷಿಯಾದ ಮೂಲಕ ಪಶ್ಚಿಮಕ್ಕೆ ಬಂದ ವಿಚಾರಗಳಿಂದ ಆಕರ್ಷಿತರಾದರು. ಅವರು ಇಟಲಿಗೆ ಹಿಂದಿರುಗಿದಾಗ, ಫಿಬೊನಾಚಿ ಹಿಂದೂ-ಅರೇಬಿಕ್ ಸಂಖ್ಯಾ ವ್ಯವಸ್ಥೆಯನ್ನು ವಿವರಿಸಿದ ಮೊದಲ ಪಾಶ್ಚಾತ್ಯ ಕೃತಿಗಳಲ್ಲಿ ಒಂದಾದ ಲೈಬರ್ ಅಬ್ಬಾಚಿಯನ್ನು (liber abbaci) ಪ್ರಕಟಿಸಿದರು.

‌1202 ರಲ್ಲಿ ಲೈಬರ್ ಅಬ್ಬಾಚಿ ಮೊದಲ ಬಾರಿಗೆ ಕಾಣಿಸಿಕೊಂಡಾಗ, ಹಿಂದೂ-ಅರೇಬಿಕ್ ಅಂಕಿಗಳು ಕೆಲವೇ ಕೆಲವು ಬುದ್ಧಿಜೀವಿಗಳಿಗೆ ತಿಳಿದಿತ್ತು; ಯುರೋಪಿಯನ್ ವ್ಯಾಪಾರಿಗಳು ಮತ್ತು ವಿದ್ವಾಂಸರು ಇನ್ನೂ ರೋಮನ್ ಅಂಕಿಗಳಿಗೆ ಅಂಟಿಕೊಂಡಿದ್ದರು, ಇದರಿಂದ ಗುಣಾಕಾರ ಮತ್ತು ಭಾಗಕಾರ ಅತ್ಯಂತ ತೊಡಕಿನ ವಿಷಯ ವಾಗಿತ್ತು (LVII ನಿಂದ MXCI ಯನ್ನು ಗುಣಿಸಲು ಪ್ರಯತ್ನಿಸಿ!). ಫಿಬೊನಾಚಿಯ ಪುಸ್ತಕವು ಅಂಕಗಣಿತದ ಕಾರ್ಯಾಚರಣೆಗಳಲ್ಲಿ ಅಂಕಿಗಳ ಬಳಕೆಯನ್ನು ಪ್ರದರ್ಶಿಸಿತು – ಲಾಭಾಂಶ, ಹಣ ಬದಲಾವಣೆ, ತೂಕ ಪರಿವರ್ತನೆ, ವಿನಿಮಯ ಮತ್ತು ಬಡ್ಡಿ ಯಂತಹ ಪ್ರಾಯೋಗಿಕ ಸಮಸ್ಯೆಗಳಿಗೆ ಅನ್ವಯಿಸಬಹುದಾದ ತಂತ್ರಗಳನ್ನು ಇದು ಒಳಗೊಂಡಿತ್ತು.

‌”ಲೆಕ್ಕಾಚಾರದ ಕಲೆ, ಅದರ ಸೂಕ್ಷ್ಮತೆಗಳು ಮತ್ತು ಜಾಣ್ಮೆಗಳನ್ನು ತಿಳಿದುಕೊಳ್ಳಲು ಬಯಸುವವರು ಕೈ ಬೆರಳುಗಳೊಂದಿಗೆ ಲೆಕ್ಕ ಮಾಡಲು ತಿಳಿದಿರಬೇಕು” ಎಂದು ಫಿಬೊನಾಚಿ ತನ್ನ ವಿಶ್ವಕೋಶದ ಮೊದಲ ಅಧ್ಯಾಯದಲ್ಲಿ ಬರೆದಿದ್ದಾರೆ. ಮಕ್ಕಳು ಈಗ ಶಾಲೆಯಲ್ಲಿ ಕಲಿಯುವ ಅಂಕೆಗಳನ್ನು ಉಲ್ಲೇಖಿಸುತ್ತಾ “ಈ ಒಂಬತ್ತು ಅಂಕಿಗಳು ಮತ್ತು ಝೆಫಿರ್ ಎಂದು ಕರೆಯಲ್ಪಡುವ 0 ಚಿಹ್ನೆಯೊಂದಿಗೆ, ಯಾವುದೇ ಸಂಖ್ಯೆಯನ್ನಾಗಲಿ ಬರೆಯಬೇಕಿದೆ” ಎಂದು ಹೇಳುತ್ತಾರೆ. ಇದರಿಂದಾಗಿ ಗಣಿತವು ಎಲ್ಲರಿಗೂ ಬಳಸಬಹುದಾದ ರೂಪದಲ್ಲಿ ಲಭ್ಯವಾಗತೊಡಗಿತು.

‌ ಗಣಿತಜ್ಞನಾಗಿ ಫಿಬೊನಾಚಿಯ ಮಹಾನ್ ಪ್ರತಿಭೆ ಅವನ ಸೃಜನಶೀಲತೆ ಮಾತ್ರವಲ್ಲ, ಮುಸ್ಲಿಂ ವಿಜ್ಞಾನಿಗಳಿಗೆ ಶತಮಾನಗಳಿಂದ ತಿಳಿದಿರುವ ಲೆಕ್ಕಾಚಾರದ ಸೂತ್ರಗಳು,ಅವುಗಳ ದಶಮಾಂಶ ವ್ಯವಸ್ಥೆ, ಬೀಜಗಣಿತ ಮುಂತಾದವುಗಳ ಅನುಕೂಲತೆಗಳ ಬಗ್ಗೆ ಅವನಿಗಿದ್ದ ಆಳವಾದ ತಿಳುವಳಿಕೆ ಕೂಡಾ ಬಹಳ ಮೆಚ್ಚುವಂತದ್ದಾಗಿತ್ತು. ವಾಸ್ತವವಾಗಿ, ‘ಲೈಬರ್ ಅಬ್ಬಾಚಿ’ಯಲ್ಲಿ ಬಹುತೇಕ 9 ನೇ ಶತಮಾನದ ಗಣಿತಜ್ಞ ಅಲ್-ಖವಾರಿಜ್ಮಿಯ ಅಲ್ಗೊರಿಥಮನ್ನು ಅವಲಂಬಿಸಲಾಗಿದೆ . ಅವರ ಕ್ರಾಂತಿಕಾರಿ ಗ್ರಂಥವು ಮೊದಲ ಬಾರಿಗೆ ಚತುರ್ಭುಜದ ಸಮೀಕರಣಗಳನ್ನು ಪರಿಹರಿಸುವ ವ್ಯವಸ್ಥಿತ ಮಾರ್ಗವನ್ನು ಪ್ರಸ್ತುತಪಡಿಸಿತು. ಈ ಕ್ಷೇತ್ರದಲ್ಲಿ ಅವರು ನಡೆಸಿದ ಕಂಡುಹಿಡಿತಗಳ ಕಾರಣ, ಅಲ್-ಖವಾರಿಜ್ಮಿಯನ್ನು ಬೀಜಗಣಿತದ ಪಿತಾಮಹ ಎಂದು ಕರೆಯಲಾಗುತ್ತದೆ. ಅಲ್ ಜಿಬ್ರ ( ಬೀಜಗಣಿತ ) ವು ಅರೇಬಿಕ್ ಪದವಾದ ಅಲ್ ಜಬ್ರ್ ( ಮುರಿದ ಭಾಗಗಳನ್ನು ಪುನಃ ಸ್ಥಾಪಿಸುವುದು) ಎಂಬ ಪದದಿಂದ ಬಂದಿದೆ. ಮತ್ತು 821 ರಲ್ಲಿ ಅಲ್ ಖವಾರಿಜ್ಮಿಯನ್ನು ಖಗೋಳಶಾಸ್ತ್ರಜ್ಞನಾಗಿ ಮತ್ತು ಹೌಸ್ ಆಫ್ ವಿಸ್ಡಮಿನ ಮುಖ್ಯ ಗ್ರಂಥಪಾಲಕನಾಗಿ ನೇಮಿಸಲಾಗಿತ್ತು.

‌”ಅಲ್-ಖವಾರಿಜ್ಮಿಯ ಗ್ರಂಥವು ಮುಸ್ಲಿಂ ಜಗತ್ತಿಗೆ ದಶಮಾಂಶ ಸಂಖ್ಯೆಯ ವ್ಯವಸ್ಥೆಯನ್ನು ಪರಿಚಯಿಸಿತು ”ಎಂದು ಅಲ್-ಖಲೀಲಿ ವಿವರಿಸುತ್ತಾರೆ. “ಲಿಯೊನಾರ್ಡೊ ಡಾ ಪಿಸಾ ಅವರಂತಹ ಇತರರು ಇದನ್ನು ಯುರೋಪಿನಾದ್ಯಂತ ರವಾನಿಸಲು ಸಹಾಯ ಮಾಡಿದರು”.



‌ಆಧುನಿಕ ಗಣಿತದ ಮೇಲೆ ಫಿಬೊನಾಚಿಯ ಪರಿವರ್ತಕ ಪ್ರಭಾವವು ಬಹುಮಟ್ಟಿಗೆ ಅಲ್-ಖವಾರಿಜ್ಮಿಗೆ ಸೇರಬೇಕು. ಸುಮಾರು ನಾಲ್ಕು ಶತಮಾನಗಳ ಅಂತರ ಇರುವ ಇಬ್ಬರು ಪುರುಷರ ಮಧ್ಯೆ ಪ್ರಾಚೀನ ಗ್ರಂಥಾಲಯ ಅನುಸಂಧಾನ ಮಾಡಿಸಿತು. ಮಧ್ಯಯುಗದ ಅತ್ಯಂತ ಪ್ರಸಿದ್ಧ ಗಣಿತಜ್ಞನೊಬ್ಬ ಇಸ್ಲಾಮಿಕ್ ಸುವರ್ಣ ಯುಗದ ಅಪ್ರತಿಮ ಸಂಸ್ಥೆಯಲ್ಲಿ ಕೂತು ಕ್ರಾಂತಿ ಸಾಧಿಸಿದ ಮುಂಚೂಣಿ ಚಿಂತಕನ ವಿಚಾರಗಳನ್ನು ಆಶ್ರಯಿಸಿದರು.

‌ಹೌಸ್ ಆಫ್ ವಿಸ್ಡಮ್ ಬಗ್ಗೆ ಅಲ್ಪಸ್ವಲ್ಪ ತಿಳಿದಿರುವ ಕಾರಣ, ಇತಿಹಾಸಕಾರರು ಸಾಂದರ್ಭಿಕವಾಗಿ ಅದರ ವ್ಯಾಪ್ತಿ ಮತ್ತು ಉದ್ದೇಶವನ್ನು ಉತ್ಪ್ರೇಕ್ಷಿಸಲು ಪ್ರಚೋದಿ ಸಲ್ಪಡುತ್ತಿದ್ದಾರೆ. ಇದು ನಮ್ಮಲ್ಲಿ ಉಳಿದಿರುವ ಅಲ್ಪ ಪ್ರಮಾಣದ ಐತಿಹಾಸಿಕ ದಾಖಲೆಗಳೊಂದಿಗೆ ಪೂರಕವಾಗದ ರೂಪದಲ್ಲಿ ಈ ಹೌಸ್ ಆಫ್ ವಿಸ್ಡಮನ್ನು ಮಿಥ್ ಆಗಿ ಪರಿವರ್ತಿಸುವ ಹಾಗಿದೆ. “ಹೌಸ್ ಆಫ್ ವಿಸ್ಡಮ್ ಅನೇಕರ ದೃಷ್ಟಿಯಲ್ಲಿ ಇರುವ ಭವ್ಯತೆಯನ್ನು ಹೊಂದಿಲ್ಲ ಎಂದು ಕೆಲವರು ವಾದಿಸುತ್ತಾರೆ” ಎಂದು ಅಲ್-ಖಲೀಲಿ ಹೇಳುತ್ತಾರೆ. “ಆದರೆ ಅಲ್-ಖವಾರಿಜ್ಮಿಯಂಥಾ ಪುರುಷರ ಗಣಿತ, ಖಗೋಳವಿಜ್ಞಾನ ಮತ್ತು ಭೂವಿಜ್ಞಾನದೊಂದಿಗಿನ ಒಡನಾಟವು, ಹೌಸ್ ಆಫ್ ವಿಸ್ಡಮ್ ನಿಜವಾದ ಅಕಾಡೆಮಿಗೆ ಹತ್ತಿರವಾದದ್ದೇ ಹೊರತು ಅನುವಾದಿತ ಪುಸ್ತಕಗಳ ಭಂಡಾರವಲ್ಲ ಎಂಬುದಕ್ಕೆ ನನಗೆ ಬಲವಾದ ಸಾಕ್ಷಿಯಾಗಿದೆ”.

‌ಗ್ರಂಥಾಲಯದ ವಿದ್ವಾಂಸರು ಮತ್ತು ಭಾಷಾಂತರಕಾರರು ತಮ್ಮ ಕೆಲಸವನ್ನು ಓದುವ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಹೆಚ್ಚಿನ ಪ್ರಯತ್ನ ಪಡುತ್ತಿದ್ದರು. “ಹೌಸ್ ಆಫ್ ವಿಸ್ಡಮ್ ಮೂಲತಃ ತುಂಬಾ ಮಹತ್ವವುಳ್ಳದ್ದು. ಏಕೆಂದರೆ ಅದು ಅಲ್ಲಿನ ಅನುವಾದಗಳ ಮೂಲಕ ಅಂದರೆ ಗ್ರೀಕ್ ವಿಚಾರಗಳನ್ನು ಸ್ಥಳೀಯಭಾಷೆಗೆ ಭಾಷಾಂತರಿಸಿದ ಅರೇಬಿಕ್ ವಿದ್ವಾಂಸರ ಅನುವಾದಗಳಿಂದ ನಾವು ನಮ್ಮ ಗಣಿತದ ತಿಳುವಳಿಕೆಯ ತಳಪಾಯವನ್ನು ರೂಪಿಸಿದ್ದೇವೆ” ಎಂದು ಲಂಡನ್ ನಲ್ಲಿರುವ ಓಪನ್ ಯೂನಿವರ್ಸಿಟಿಯ ಗಣಿತ ಇತಿಹಾಸದ ಪ್ರಾಧ್ಯಾಪಕ ಜೂನ್ ಬ್ಯಾರೊ-ಗ್ರೀನ್ ಹೇಳುತ್ತಾರೆ. ಈ ಅರಮನೆ ಗ್ರಂಥಾಲಯವು ಹೇಗೆ ಹಿಂದಿನ ಕಾಲದಿಂದ ಬಂದ ಸಂಖ್ಯಾತ್ಮಕ ವಿಚಾರಗಳಿಗೆ ಒಂದು ಕಿಟಕಿಯಾಗಿತ್ತೋ ಅದೇ ರೀತಿ ವೈಜ್ಞಾನಿಕ ನವೀಕರಣಗಳ ಕೇಂದ್ರ ಕೂಡಾ ಆಗಿತ್ತು.

‌ನಮ್ಮ ದಶಮಾಂಶ ವ್ಯವಸ್ಥೆಯ, ನಾವು ಕಂಪ್ಯೂಟರ್‌ಗಳನ್ನು ಪ್ರೋಗ್ರಾಮ್ ಮಾಡುವ ಬೈನರಿ ಸಂಖ್ಯಾ ವ್ಯವಸ್ಥೆಯ, ರೋಮನ್ ಅಂಕಿಗಳ, ಪ್ರಾಚೀನ ಮೆಸೊಪೊಟೇಮಿಯನ್ನರು ಬಳಸಿದ ವ್ಯವಸ್ಥೆಗಳಿಗೆಲ್ಲಾ ಮುನ್ನ ಜನರು ಲೆಕ್ಕಾಚಾರಗಳನ್ನು ದಾಖಲಿಸಲು ಟ್ಯಾಲಿ ವ್ಯವಸ್ಥೆ ಉಪಯೋಗಿಸುತ್ತಿದ್ದರು. ಈ ವ್ಯವಸ್ಥೆಗಳು ನಮಗೆ ಅಚಿಂತ್ಯ ಮತ್ತು ಪ್ರಾಚೀನವಾಗಿ ಕಂಡರೂ , ವಿಭಿನ್ನ ಸಂಖ್ಯಾತ್ಮಕ ಪ್ರಾತಿನಿಧ್ಯಗಳು ನಮಗೆ ರಚನೆ, ಸಂಬಂಧಗಳು ಮತ್ತು ಅವುಗಳು ಹೊರಹೊಮ್ಮಿದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳ ಬಗ್ಗೆ ಅಮೂಲ್ಯವಾದ ವಿಷಯಗಳನ್ನು ಕಲಿಸಿಕೊಡಬಲ್ಲುದು.

‌ಸ್ಥಾನದ ಮೌಲ್ಯ ಮತ್ತು ಅಮೂರ್ತತೆಯ ಕಲ್ಪನೆಯನ್ನು ಅವರು ಬೆಂಬಲಿಸಿದರು. ಇದು ಸಂಖ್ಯೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. “ವಿಭಿನ್ನ ಸಂಖ್ಯಾ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿಜವಾದ ಮೌಲ್ಯವಿದೆ ಹಾಗೂ ಪಾಶ್ಚಾತ್ಯ ಮಾರ್ಗವು ಏಕೈಕ ಮಾರ್ಗವಲ್ಲ” ಎಂದು ಅವು ನಮಗೆ ತೋರಿಸಿಕೊಡುತ್ತವೆ”. ಎಂದು ಬ್ಯಾರೊ-ಗ್ರೀನ್ ಹೇಳುತ್ತಾರೆ.

‌ಒಬ್ಬ ಪ್ರಾಚೀನ ವ್ಯಾಪಾರಿ “ಎರಡು ಕುರಿ” ಗಳನ್ನು ಬರೆಯಲು ಬಯಸಿದಾಗ, ಅವನು ಎರಡು ಕುರಿಗಳ ಚಿತ್ರವನ್ನು ಜೇಡಿಮಣ್ಣಿನ ಹಲಗೆಯಲ್ಲಿ ಕೆತ್ತುತ್ತಾನೆ. ಅವನು “20 ಕುರಿಗಳು” ಎಂದು ಬರೆಯಲು ಬಯಸಿದರೆ ಅದು ನಡೆಯದು. ಚಿಹ್ನೆ -ಮೌಲ್ಯ ಸಂಕೇತವು ಒಂದು ವ್ಯವಸ್ಥೆಯಾಗಿದ್ದು, ಇದರಲ್ಲಿ ಒಂದು ಮೌಲ್ಯವನ್ನು ಗುರುತಿಸಲು ಸಂಖ್ಯಾ ಚಿಹ್ನೆಗಳನ್ನು ಒಟ್ಟಿಗೆ ಸೇರಿಸಲಾಗುತ್ತದೆ. ಈ ಸಂದರ್ಭದಲ್ಲಿ, ನಿಜವಾದ ಪ್ರಮಾಣವನ್ನು ಪ್ರತಿನಿಧಿಸಲು ಎರಡು ಕುರಿಗಳನ್ನು ಬಿಡಿಸಲಾಗಿದೆ.

‌ಚಿಹ್ನೆ-ಮೌಲ್ಯದ ಸಂಕೇತಗಳ ವ್ಯವಸ್ಥೆಯ ಉಳಿಕೆಯಾದ ರೋಮನ್ ಅಂಕಿಗಳು, ಸಂಖ್ಯೆಗಳನ್ನು ಪ್ರತಿನಿಧಿಸುವಲ್ಲಿ ಅಂಕೆಗಳ ಸ್ಥಾನವನ್ನು ಅವಲಂಬಿಸುವ ಅಲ್-ಖವಾರಿಜ್ಮಿ ವ್ಯವಸ್ಥೆಯನ್ನು ಪರಿಚಯಿಸಿದ ನಂತರವೂ ನೆಲೆ ನಿಂತಿತು. ಕೆತ್ತಲ್ಪಟ್ಟ ಅತ್ಯುನ್ನತ ಸ್ಮಾರಕಗಳಂತೆ, ರೋಮನ್ ಅಂಕಿಗಳು ಅವುಗಳಿಗೆ ಜನ್ಮ ನೀಡಿದ ಸಾಮ್ರಾಜ್ಯವನ್ನು ಮೀರಿ ಜೀವಿಸಿದವು. ಇದು ಕಾಕತಾಳೀಯವೋ, ಭಾವನಾತ್ಮಕವೊ ಅಥವಾ ಉದ್ದೇಶಪೂರ್ವಕವೋ ಎಂದು ಯಾರೂ ಖಚಿತವಾಗಿ ಹೇಳಲಾರರು.

‌ಈ ವರ್ಷ ಫಿಬೊನಾಚಿ ಹುಟ್ಟಿದ 850 ನೇ ವಾರ್ಷಿಕೋತ್ಸವ. ರೋಮನ್ ಅಂಕಿಗಳ ಪ್ರಯೋಗವನ್ನು ರದ್ದುಗೊಳಿಸಲು ಒತ್ತಾಯ ಮಾಡುವ ಕ್ಷಣಗಳೂ ಆಗಿರಬಹುದು. ಲಂಡನ್ ನ ಶಾಲಾ ತರಗತಿ ಕೋಣೆಗಳಲ್ಲಿ ಟೈಮ್ ಪೀಸ್ ಗಳನ್ನು ಬದಲಾಯಿಸಿ ಸುಲಭವಾಗಿ ಓದಬಲ್ಲ ಡಿಜಿಟಲ್ ಗಡಿಯಾರಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಅನಲಾಗ್ ಸಮಯವನ್ನು ಸರಿಯಾಗಿ ಹೇಳಲು ಬರದು. ವಿಶ್ವದ ಕೆಲವು ಪ್ರದೇಶಗಳಲ್ಲಿ, ಸರ್ಕಾರಗಳು ಅವುಗಳನ್ನು ರಸ್ತೆ ಚಿಹ್ನೆಗಳು ಮತ್ತು ಅಧಿಕೃತ ದಾಖಲೆಗಳಿಂದ ಕೈಬಿಟ್ಟರೆ, ಹಾಲಿವುಡ್ ರೋಮನ್ ಅಂಕಿಗಳನ್ನು ಶೀರ್ಷಿಕೆಗಳಲ್ಲಿ ಬಳಸುವುದು ನಿಲ್ಲಿಸಿದೆ. ಸೂಪರ್ಬೌಲ್ ತನ್ನ 50 ನೇ ಪಂದ್ಯದಲ್ಲಿ ಅಭಿಮಾನಿಗಳು ಗೊಂದಲಕ್ಕೂಳಗಾಗುತ್ತಾರೆ ಎಂದು ಆತಂಕ ಪಟ್ಟು ರೋಮನ್ ಅಂಕಿಗಳನ್ನು ಕೈ ಬಿಟ್ಟಿದೆ.

‌ಆದರೆ ರೋಮನ್ ಅಂಕಿಗಳಿಂದ ದೂರಸರಿಯುತ್ತಿರುವ ಜಾಗತಿಕ ಬದಲಾವಣೆಯು ಜೀವನದ ಇತರ ಮಜಲುಗಳಲ್ಲಿ ಹಾಸು ಹೊಕ್ಕಾಗುತ್ತಿರುವ ಗಣಿತ ನಿರಕ್ಷರತೆಯ ಕಡೆಗೆ ಬೊಟ್ಟು ಮಾಡುತ್ತದೆ. ಬಹುಶಃ ಹೆಚ್ಚು ಮುಖ್ಯವಾದುದು, ರೋಮನ್ ಅಂಕಿಗಳ ಇಲ್ಲವಾಗುವಿಕೆ ಗಣಿತದ ಬಗೆಗಿನ ಯಾವುದೇ ಚರ್ಚೆಯನ್ನು ನಿಯಂತ್ರಿಸುವ ರಾಜಕೀಯವನ್ನು ಬಹಿರಂಗಪಡಿಸುತ್ತದೆ.



‌”ನಾವು ಯಾರ ಕಥೆಗಳನ್ನು ಹೇಳಬೇಕು , ಯಾರ ಸಂಸ್ಕೃತಿಯನ್ನು ನಾವು ಪ್ರತಿಷ್ಟಿತಗೊಳಿಸಬೇಕು ಮತ್ತು ಯಾವ ರೀತಿಯ ಜ್ಞಾನವನ್ನು ನಾವು ಔಪಚಾರಿಕ ಕಲಿಕೆಯಲ್ಲಿ ಅಳವಡಿಸಿ ಅಮರಗೊಳಿಸಬೇಕು ಎಂಬ ಪ್ರಶ್ನೆ ನಮ್ಮ ಪಾಶ್ಚಿಮಾತ್ಯ ವಸಾಹತುಶಾಹಿ ಪರಂಪರೆಯಿಂದ ಅನಿವಾರ್ಯವಾಗಿ ಪ್ರಭಾವಿತವಾಗಿರುತ್ತದೆ” ಎಂದು ಕೇಂಬ್ರಿಡ್ಜ್ ಗಣಿತಶಾಸ್ತ್ರದ ಸಂಪಾದಕ ಮತ್ತು ಡೆವಲಪರ್ ಲೂಸಿ ರೈಕ್ರಾಫ್ಟ್-ಸ್ಮಿತ್ ಹೇಳುತ್ತಾರೆ. ಮಾಜಿ ಗಣಿತ ಶಿಕ್ಷಕಿ , ರೈಕ್ರಾಫ್ಟ್-ಸ್ಮಿತ್ ಈಗ ಗಣಿತ ಶಿಕ್ಷಣ ಕ್ಷೇತ್ರದ ಪ್ರಮುಖ ಧ್ವನಿಯಾಗಿದ್ದಾರೆ ಮತ್ತು ಜಗತ್ತಿನಾದ್ಯಂತದ ಪಠ್ಯಕ್ರಮದಲ್ಲಿನ ವ್ಯತ್ಯಾಸಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ವೇಲ್ಸ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಮ್ಮ ಶಿಕ್ಷಣ ವ್ಯವಸ್ಥೆಯ ಕಲಿಕಾ ಲಕ್ಷ್ಯಗಳ ಪೈಕಿ ರೋಮನ್ ಅಂಕಿಗಳ ಕಲಿಕೆಯನ್ನು ಒಳಗೊಳಿಸಿಲ್ಲ. ಅಮೇರಿಕಾ ಕೂಡಾ ಇದರ ಕಲಿಕೆ ಗುಣಮಟ್ಟತೆಯ ಅಗತ್ಯವಾಗಿ ಪರಿಗಣಿಸಿಲ್ಲ. ಆದರೆ ವಿದ್ಯಾರ್ಥಿಗಳು ನೂರರ ವರೆಗಿನ ರೋಮನ್ ಅಂಕಿಗಳನ್ನು ಓದಲು ಸಮರ್ಥರಾಗಿರಬೇಕು ಎಂದು ಇಂಗ್ಲೆಂಡ್ ಸ್ಪಷ್ಟವಾಗಿ ಹೇಳುತ್ತದೆ.

‌ನಮ್ಮಲ್ಲಿ ಹಲವರಿಗೆ MMXX ಎಂಬ ಪದದಲ್ಲಿ ವಿಶೇಷವಾದದ್ದೇನೂ ಕಾಣುವುದಿಲ್ಲ. (MMXX ಅಂದರೆ 2020 ). ಫಿಬೊನಾಚಿಯ ಹೆಸರಿನಲ್ಲಿ ಪ್ರಸಿದ್ಧವಾದ ಮಾದರಿಯನ್ನು ನೋಡಿ ನಮಗೆ ಫಿಬೋನಾಚಿಗೆ ಮಂಕಾದ ಮನ್ನಣೆ ಕೊಡಬಹುದು. ಒಂದರಿಂದ ಆರಂಭಗೊಂಡು ನಂತರ ಹಿಂದಿನ ಎರಡು ಸಂಖ್ಯೆಗಳ ಮೊತ್ತ ಬರುವ ರೀತಿಯಲ್ಲಿ ಪುನರಾವರ್ತನೆಗೊಳ್ಳುವ ಸಂಖ್ಯಾ ಪ್ರಗತಿಯೇ ಫಿಬೋನಚಿಯ ಮಾದರಿ.

‌ಫಿಬೊನಾಚಿಯ ಮಾದರಿ ನಿಸ್ಸಂಶಯವಾಗಿಯೂ ಗಮನಾರ್ಹ. ಇದು ಚಿಪ್ಪಿಗಳು ಮತ್ತು ಸಸ್ಯದ ಬಳ್ಳಿಯ ಕುಡಿಗಳು, ಸೂರ್ಯಕಾಂತಿ ಹೂವಿನ ತಲೆಯ ಸುರುಳಿಗಳು, ಪೈನ್ ಕೋನ್ ಗಳು,ಪ್ರಾಣಿಗಳ ಕೊಂಬುಗಳು ಮತ್ತು ಮರದ ರೆಂಬೆಯ ಮೇಲೆ ಎಲೆಗಳ ಮತ್ತು ಮೊಗ್ಗುಗಳ ಜೋಡಣೆ, ಹಾಗೆಯೇ ಡಿಜಿಟಲ್ ಕ್ಷೇತ್ರದಲ್ಲಿ (ಕಂಪ್ಯೂಟರ್ ವಿಜ್ಞಾನ ಮತ್ತು ಸೀಕ್ವೆನ್ಸಿಂಗ್ ) ಬೆರಗುಗೊಳಿಸುವ ಆವರ್ತನೆಗಳನ್ನು ತೋರಿಸುತ್ತದೆ. ಅವರ ಮಾದರಿಗಳು ಜನಪ್ರಿಯ ಸಂಸ್ಕೃತಿಯಲ್ಲೂ ಸ್ಥಾನ ಪಡೆದಿದೆ. ಸಾಹಿತ್ಯ, ಚಲನಚಿತ್ರ ಮತ್ತು ದೃಶ್ಯ ಕಲೆಗಳಲ್ಲಿ,ಹಾಡಿನ ಸಾಹಿತ್ಯ ಅಥವಾ ಆರ್ಕೆಸ್ಟ್ರಾ ಸ್ಕೋರ್ಗಳಲ್ಲಿ,ಪಲ್ಲವಿಗಳಲ್ಲಿ, ಮತ್ತು ವಾಸ್ತುಶಿಲ್ಪದಲ್ಲಿಯೂ ತನ್ನ ಛಾಪು ಮೂಡಿಸಿದೆ.

‌ಆದರೆ ಲಿಯೊನಾರ್ಡೊ ಡಾ ಪಿಸಾ ಅವರ ಜ್ವಲಂತವಾದ ಗಣಿತದ ಕೊಡುಗೆಗಳು ಶಾಲೆಗಳಲ್ಲಿ ಅಪರೂಪಕ್ಕೆ ಮಾತ್ರ ಕಲಿಸಲಾಗುತ್ತಿದೆ. ಇದರ ಕಥೆಯು ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಅರಮನೆಯ ಗ್ರಂಥಾಲಯದಲ್ಲಿ ಪ್ರಾರಂಭವಾಗುತ್ತಿದ್ದು ಆ ಸಮಯದಲ್ಲಿ ಪಾಶ್ಚಾತ್ಯ ಕ್ರೈಸ್ತಪ್ರಪಂಚದ ಬಹುಪಾಲು ಬೌದ್ಧಿಕ ಕತ್ತಲಿನಲ್ಲಿ ಮುಳುಗಿತ್ತು. ಇದು ಗಣಿತಶಾಸ್ತ್ರದ ಬಗ್ಗೆ ನಮ್ಮ ಯುರೋಕೇಂದ್ರಿತ ದೃಷ್ಟಿಕೋನವನ್ನು ಕಳಚಿ , ಇಸ್ಲಾಮಿಕ್ ಪ್ರಪಂಚದ ವೈಜ್ಞಾನಿಕ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಮತ್ತು ಬಹಳ ಹಿಂದಿನಿಂದಲೂ ಬಂದ ಸಂಖ್ಯಾತ್ಮಕ ಸಂಪತ್ತಿನ ನಿರಂತರ ಪ್ರಾಮುಖ್ಯತೆಗಾಗಿ ವಾದಿಸುವ ಕಥೆಯಾಗಿದೆ.

ಅಡ್ರಿಯೆನ್ ಬೆನ್ಹರ್ಡ್
ಕನ್ನಡಕ್ಕೆ: ಅಬ್ದುಲ್ ವಾಸಿಹ್ ಹನೀಫಿ

ಮದೀನಾ ಮತ್ತು ಏಥೆನ್ಸ್: ಕಳೆದು ಹೋದ ಭವ್ಯ ಪರಂಪರೆಯ ಪುನಶ್ಚೇತನ-2

ಭಾಗ – 2

ಇಸ್ಲಾಮಿಕ್ ಮತ್ತು ಪಾಶ್ಚಾತ್ಯ ಪರಂಪರೆ ಗಳೆರಡೂ ಕೂಡಾ ಉದಾರ ಕಲೆಗಳೊಂದಿಗೆ ಸಮಾನ ಬದ್ಧತೆಯನ್ನು ಹೊಂದಿತ್ತು. ಆದರೆ ಮುಸಲ್ಮಾನರು ಧಾರ್ಮಿಕ ವಿಷಯಗಳಿಗೆ ಹೆಚ್ಚು ಒತ್ತು ಕೊಡಲು ಆರಂಭಿಸುವುದರೊಂದಿಗೆ ಒಂದು ವ್ಯಕ್ತಿಯ ಪೂರ್ಣ ಪ್ರಮಾಣದ ಬೆಳವಣಿಗೆಗೆ ಅಗತ್ಯವಿರುವ ಉದಾರ ಕಲೆಗಳ ಅಧ್ಯಯನ ನೇಪಥ್ಯಕ್ಕೆ ಸರಿಯಿತು. ವ್ಯಾಕರಣದ ಕಲಿಕೆ ಸಾಹಿತ್ಯ ಮತ್ತು ಕಾವ್ಯ ಅಧ್ಯಯನವನ್ನು ಆಶ್ರಯಿಸಿತ್ತು. ಆದಾಗ್ಯೂ, ತರ್ಕವಿಜ್ಞಾನ ತನ್ನ ಕಳೆಯನ್ನು ಕಳೆದುಕೊಂಡಿತು . ತತ್ವವಿಜ್ಞಾನ, ದೇವವಿಜ್ಞಾನ ಮತ್ತು ವಿಮರ್ಶಾತ್ಮಕ ಚಿಂತನೆಯಲ್ಲಿ ಪಳಗಲು ಅತ್ಯಗತ್ಯ ಎಂದು ಸಾಂಪ್ರದಾಯಿಕವಾಗಿ ತಿಳಿಯಲಾಗಿದ್ದ ತರ್ಕ ವಿಜ್ಞಾನ ವನ್ನು ಕೈ ಬಿಟ್ಟದ್ದೇ ಇದಕ್ಕೆ ಕಾರಣ. ರೆಟರಿಕ್ ಕಲಿಕೆ ಉನ್ನತ ಹಂತಗಳ ಪಠ್ಯ ಕ್ರಮಗಳಲ್ಲಿ ಮುಂದುವರಿಯಿತು. ಆದರೆ ಕ್ವಾಡ್ರಿವಿಯಂ ಎಂಬ ದೈಶಿಕ ಕಲೆಗಳು ಮಾತ್ರ ಮೆಲ್ಲನೆ ಹಿಂಜರಿದು ಕೊನೆಗೆ ಧಾರ್ಮಿಕ ಶಿಕ್ಷಣ ವ್ಯವಸ್ಥೆಯಿಂದ ಮಾಯವಾಯಿತು.

ಇಬ್ನು ಖಲ್ದೂನ್ ಗುರುತಿಸಿರುವ ಈ ಶಿಥಿಲೀಕರಣ ಉಂಟಾದದ್ದು ಹೇಗೆ ಎನ್ನುವುದು ಮಾತ್ರ ವ್ಯಕ್ತವಲ್ಲ. ಆದರೆ ಜಾರ್ಜ್ ಮಕ್ದಿಸಿ ತಮ್ಮ Rise of Colleges: Institutions of Learning in Islam and the West ಎಂಬ ಗ್ರಂಥದಲ್ಲಿ ಈ ಕುರಿತು ಆಸಕ್ತಿಕರ ಸಿದ್ಧಾಂತವೊಂದನ್ನು ಮಂಡಿಸಿದ್ದಾರೆ. ಕ್ರೈಸ್ತ ತತ್ವ ಚಿಂತಕರ (christian scholastics) ಬಹುತೇಕ ಜ್ಞಾನ ಅನ್ವೇಷಣ ವಿಧಾನಗಳು ಹೊರಹೊಮ್ಮಿದ್ದು ಆ ಕಾಲದ ಚಲನಶೀಲ ಮುಸ್ಲಿಂ ತತ್ವ ಚಿಂತಕ ರೊಂದಿಗೆ ಅವರಿಗೆ ಉಂಟಾದ ನೇರ ಸಂಪರ್ಕದ ಫಲಶೃತಿಯಾಗಿದೆ ಎಂದು ಮಕ್ದಿಸಿ ಮೊದಲು ಧ್ವನಿಪೂರ್ಣವಾಗಿ ಸಮರ್ಥಿಸುತ್ತಾರೆ. ತರುವಾಯ “ಮಧ್ಯ ಯುಗಾನಂತರ ಮುಸ್ಲಿಮರು ಹಿಂದುಳಿದು ಕ್ರೈಸ್ತರು ಬೆಳೆಯಲು ಕಾರಣವೇನು” ಎಂಬ ಪ್ರಶ್ನೆಯನ್ನು ಎತ್ತುತ್ತಾರೆ.

” ಇದರ ಹಿಂದಿನ ಕಾರಣಗಳು ತುಂಬಾ ಇದೆ ಮತ್ತು ಸಂಕೀರ್ಣ ಕೂಡಾ ಆಗಿದೆ. ನನ್ನ ಅರಿವಿನ ಪ್ರಕಾರ ಇವುಗಳ ಪೈಕಿ ಅತ್ಯಂತ ಪ್ರಮುಖವಾದ ಅಂಶ ಈಯೆರಡು ನಾಗರಿಕತೆಗಳು ಆಸ್ತಿಗಳ ಶಾಶ್ವತತೆಗೆ ಕಂಡುಕೊಂಡ ಕಾನೂನಾತ್ಮಕ ವ್ಯವಸ್ಥೆಗಳಾಗಿವೆ. ವಕ್ಫ್ ಅಥವಾ ಚಾರಿಟೇಬಲ್ ಟ್ರಸ್ಟ್ ವ್ಯವಸ್ಥೆ ಮಾತ್ರವಾಗಿತ್ತು ಇಸ್ಲಾಮಿನಲ್ಲಿದ್ದದ್ದು. ಆದರೆ ಕ್ರೈಸ್ತ ನಾಗರಿಕತೆ ಹದಿನಾಲ್ಕನೆಯ ಶತಮಾನಕ್ಕೆ ಕಾಲಿಡುವಾಗ ಎರಡು ರೀತಿಯ ಶಾಶ್ವತತೆಯ ಮಾರ್ಗಗಳನ್ನು ರೂಪಿಸಿತ್ತು. ಚಾರಿಟೇಬಲ್ ಟ್ರಸ್ಟ್ ವ್ಯವಸ್ಥೆಯೊಂದಿಗೆ ಲಾಭ ದ್ವಿಗುಣಗೊಳಿಸುವ ಕಾರ್ಪೋರೇಶನ್ ಅಥವಾ ನಿಗಮ ವ್ಯವಸ್ಥೆ ಕೂಡಾ ಇತ್ತು. ಚಾರಿಟೇಬಲ್ ಟ್ರಸ್ಟ್ ಕೂಡಾ ಹೆಚ್ಚು ಕಡಿಮೆ ಕಾರ್ಪೊರೇಟ್ ಸ್ವಭಾವವನ್ನು ಹರಳುಗೊಳಿಸಿತ್ತು. ಶಾಶ್ವತತೆಯ ಇಸ್ಲಾಮಿಕ್ ವ್ಯವಸ್ಥೆ ನಿಶ್ಚಲವಾಗಿತ್ತು. ಅದೇ ವೇಳೆ ಕ್ರೈಸ್ತ ವ್ಯವಸ್ಥೆ ಚಲನಶೀಲವಾಗಿತ್ತು. ಅನಾಧೀನ ಸೊತ್ತುಗಳ ನಿರ್ಜೀವ ಕರಗಳ ಬಿಗಿಹಿಡಿತದಲ್ಲಿ ಇಸ್ಲಾಂ ನರಳಬೇಕಾಯಿತು. ಅತ್ತ ಕ್ರೈಸ್ತ ಜಗತ್ತು ವಕ್ಫ್ ವ್ಯವಸ್ಥೆಯ ಪೂರ್ಣ ಪ್ರಯೋಜನ ಪಡೆದಿದ್ದಲ್ಲದೆ ಇಂಥ ಶಾಶ್ವತ ಸೊತ್ತುಗಳನ್ನು ನಿಗಮಿತಗೊಳಿಸಿ ಅದನ್ನು ಮತ್ತಷ್ಟು ಚುರುಕುಗೊಳಿಸಿತು.
ಈಯೆರಡು ನಾಗರಿಕತೆಗಳ ಸಮಾನಾಂತರ ಹಾದಿಯಲ್ಲಿ ಮಾರ್ಗಬೇಧ ಉಂಟಾದದ್ದು ಹದಿಮೂರನೆಯ ಶತಮಾನದಲ್ಲಾಗಿತ್ತು. ಕ್ರೈಸ್ತ ಪಶ್ಚಿಮದಲ್ಲಿ ಕಾರ್ಪೋರೇಶನ್ ಗಳ ಬೃಹತ್ ಬೆಳವಣಿಗೆ ನಡೆದ ವರ್ಷವದು.”

ಮುಫ್ತಿ ಕಚೇರಿಯನ್ನು ವಶಪಡಿಸಿ ತನ್ನ ಸುಪರ್ದಿಗೆ ತಂದ ಸರ್ಕಾರದ ನಡೆ ಕೂಡಾ ಮತ್ತೊಂದು ಪ್ರಧಾನ ಕಾರಣ ಎನ್ನುತ್ತಾರೆ ಮಕ್ದಿಸಿ. ಮುಫ್ತಿಗಳು ಕಾನೂನು ಸಲಹೆ ಕೊಡುವ ಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದರು. ಪಶ್ಚಿಮದಲ್ಲಿ ಕಾರ್ಯಾಚರಿಸುತ್ತಿದ್ದ ಸಲಹೆಗಾರರ (jurisconsult) ಹಾಗೆ. ಹದಿಮೂರನೆಯ ಶತಮಾನದಲ್ಲಿ ಮುಸ್ಲಿಂ ಆಡಳಿತದ ಧೋರಣೆ ಬದಲಾಗುವ ಮೊದಲು ವಕೀಲರು ಸ್ವತಂತ್ರರಾಗಿದ್ದರು. ಕಕ್ಷಿದಾರರಿಂದ ಯಾ ಉಸ್ತುವಾರಿಗಳಿಂದ ಅವರು ಸಂಬಳ ಪಡೆಯುತ್ತಿದ್ದರು.

ಕೊನೆಯದಾಗಿ ಮಕ್ದಿಸಿ ಕೆಳಗಿನ ನಿಗಮನಕ್ಕೆ ಬರುತ್ತಾರೆ:

“ಧರ್ಮದಲ್ಲಿನ ತತ್ವಚಿಂತನಾಧಾರಿತ ವಿಧಾನ (scholastic method) ಬಲಹೀನವಾಯಿತು ಮತ್ತು ಕಡತದ ಅಭ್ಯಾಸವಾಗಿ ಸೀಮಿತಗೊಂಡಿತು. ಕ್ರಮೇಣ, ಶಿಕ್ಷಣ ಮತ್ತು ಸಾಂಪ್ರದಾಯಿಕತೆಯನ್ನು ನಿರ್ಣಯಿಸುವ ಪ್ರಕ್ರಿಯೆಯಲ್ಲಿನ ಚಲನಶೀಲ ಅಂಶವಾಗಿದ್ದ ಸದ್ರಿ ವಿಧಾನ ಕಣ್ಮರೆಯಾಯಿತು.

ಈ ವಿಧಾನ ತನ್ನ ನೈಜ ತವರೂರಲ್ಲಿ ಕಣ್ಮರೆಯಾಗಿ ಹಲವು ವರ್ಷ ಕಳೆದ ನಂತರವೂ ಪಶ್ಚಿಮದಲ್ಲಿ ಜೀವಂತಿಕೆಯೊಂದಿಗೆ ಚಲಾವಣೆಯಲ್ಲಿತ್ತು. ಹದಿನೈದನೆಯ ಶತಮಾನದ ಪುನರುದಯ ಕೂಡಾ ಪಶ್ಚಿಮದ ಶೈಕ್ಷಣಿಕ ಸಂಸ್ಥೆಗಳಲ್ಲಿ ರೂಢಿಯಲ್ಲಿದ್ದ ಈ ವಾಗ್ವಾದದ ವಿಧಾನವನ್ನು ಕೊನೆಗೊಳಿಸಲಿಲ್ಲ. ಅಮೇರಿಕನ್ ಕ್ರಾಂತಿ ನಡೆದು ವರುಷಗಳು ದಾಟಿದ ನಂತರವೂ ಈ ವಿಧಾನ ಅಲ್ಲಿನ ಕಾಲೇಜು-ವಿಶ್ವವಿದ್ಯಾನಿಲಯ ಗಳಲ್ಲಿ ಮುಂದುವರಿಯಿತು. ಮಧ್ಯಯುಗದಲ್ಲಿ ‘ಕೊಳ್ಳು’ವವರಾಗಿದ್ದ ಪಾಶ್ಚಾತ್ಯರು ಆಧುನಿಕ ಯುಗದಲ್ಲಿ ‘ಕೊಡು’ವವರಾಗಿ ಬೆಳೆದರು. ಇಸ್ಲಾಮಿಕ್ ಅಂಶಗಳು ತುಂಬಿ ನಿಂತಿದ್ದ ಯೂನಿವರ್ಸಿಟಿ ವ್ಯವಸ್ಥೆಯನ್ನು ಪಾಶ್ಚಾತ್ಯರು ಪಡೆದದ್ದು ಇಸ್ಲಾಮಿನಿಂದ ಎನ್ನುವುದನ್ನು ಮರೆತೇ ಬಿಟ್ಟಿರುವ ಮುಸ್ಲಿಂ ಜಗತ್ತಿಗೆ ಪಾಶ್ಚಾತ್ಯರು ‘ಕೊಡು’ವವರಾಗಿ ಮಾರ್ಪಟ್ಟಿದ್ದಾರೆ. ಆದುದರಿಂದಲೇ ಭೂತ ಮತ್ತು ವರ್ತಮಾನದಲ್ಲಿ ಪೂರ್ವ ಮತ್ತು ಪಶ್ಚಿಮ ಭೇಟಿ ಮಾಡಿರುವುದು ಮಾತ್ರವಲ್ಲ, ಪರಸ್ಪರ ವರ್ತಿಸಿದೆ, ಪ್ರತಿಕ್ರಿಯಿಸಿದೆ ಮತ್ತು ಸಂವಹನ ಕೂಡಾ ನಡೆಸಿದೆ. ಪರಸ್ಪರ ಅರ್ಥಮಾಡಿಕೊಂಡು ಮತ್ತು ಸದ್ಭಾವನೆ ಇಟ್ಟುಕೊಂಡು ಇದು ನಡೆದಿದ್ದು ಇದೇ ಹಾದಿಯಲ್ಲಿ ಭವಿಷ್ಯದ ಹಾದಿಯಲ್ಲಿ ಎರಡು ಕಡೆಗೂ ಪ್ರಯೋಜನಕಾರಿ ಆಗುವಂತೆ ಮುಂದುವರಿಯುವುದು ಉತ್ತಮ.”

ಏಥೆನ್ಸ್ ಮತ್ತು ಜೆರುಸಲೇಮ್ ನಡುವಿನ ಆಸಾಧಾರಣವಾದ ಸಮಾಗಮ ಎಂಬಂತೆ ಪಾಶ್ಚಾತ್ಯರು ಹೊಸತರಲ್ಲಿ ದಿವ್ಯಬೋಧನೆ ಮತ್ತು ಬುದ್ಧಿಯ ನಡುವೆ ಬೆಸುಗೆ ಸಾಧಿಸಿದರು. ಉತ್ಕ್ರಷ್ಟವಾದ ಕಲೆ, ಸಾಹಿತ್ಯ, ತತ್ವಚಿಂತನೆ ಮತ್ತು ಸಂಸ್ಥೆಗಳನ್ನು ಉತ್ಪಾದಿಸಿರುವ ಶ್ರೀಮಂತ ಕ್ಯಾಥಲಿಕ್ ಬೌದ್ಧಿಕ ಪರಂಪರೆಯಲ್ಲಿ ನಮಗಿದನ್ನು ನಿಚ್ಚಳವಾಗಿ ಕಾಣಬಹುದು. ಆಗಸ್ಟೈನ್ ರಚಿಸಿದ On Christian Doctrine ದಿವ್ಯವಚನಗಳನ್ನು ಚಲನಶೀಲಗೊಳಿಸುವ ಆಳವಾದ ಭಾಷಾಧ್ಯಯನಕ್ಕೆ ನಾಂದಿ ಹಾಡಿತು. ಅಭಿಜ್ಞ ಅಲಂಕಾರ ಶಾಸ್ತ್ರ ಪ್ರವೀಣರಾದ ಆಗಸ್ಟೈನ್ ಬರೆಹದ ಭಾಷೆ ಮತ್ತು ಮಾತಿನ ಭಾಷೆಯಲ್ಲಿನ ದ್ವಂದ್ವಾರ್ಥತೆ ಮತ್ತು ವಿಚಿತ್ರತೆ ಗಳನ್ನು ಚೆನ್ನಾಗಿ ಅರಿತಿದ್ದರು. ಪ್ಲೇಟೊರ ದೃಷ್ಟಿಕೋನದ ಮಹತ್ವ ಅವರು ಮನಗಂಡಿದ್ದರು. ಮುಕ್ತ ಇಚ್ಛೆ (free will), ನೀತಿ ಮತ್ತು ನಿಸರ್ಗ ಸಂಬಂಧಿಯಾದ ಕೆಡುಕುಗಳು, ಸರ್ಕಾರಗಳ ದಬ್ಬಾಳಿಕೆ ಮುಂತಾದ ಚಿರಕಾಲದ ತಾತ್ವಿಕ ಒಗಟುಗಳನ್ನು ಬಿಡಿಸುವಲ್ಲಿ ಅಸ್ತಿತ್ವದ ಅತಿಭೌತಶಾಸ್ತ್ರೀಯ(metaphysical) ಅನ್ವೇಷಣೆಯ ಅಗತ್ಯತೆಯನ್ನು ಆಗಸ್ಟೈನ್ ಅರ್ಥ ಮಾಡಿಕೊಂಡಿದ್ದರು. ಅರಿಸ್ಟಾಟಲರ ಚಿಂತನೆಯ ಮತ್ತು ವರ್ಗೀಕರಣದ ವಿಧಾನಗಳ ಆಳ ಅಧ್ಯಯನದಿಂದ ಸಹಜವಾಗಿ ಹೊರಹೊಮ್ಮವ ವ್ಯವಸ್ಥಿತ ತತ್ವಚಿಂತನೆ ಬಹಳ ಮೌಲ್ಯಯುತ ಎನ್ನುವ ವಿಚಾರವನ್ನು ತನ್ನ ಪೂರ್ವಿಕ ಗಝ್ಝಾಲಿಯವರ ಹಾಗೆ ಅಕ್ವಿನಾಸ್ ಕೂಡಾ ಗುರುತಿಸಿದ್ದರು. ಆದುದರಿಂದಲೇ, ವ್ಯತ್ಯಾಸ ತಿಳಿಯುವುದನ್ನು ಇಷ್ಟಪಡುವ ದೇವಶಾಸ್ತ್ರೀಯ ತತ್ವಚಿಂತಕರ (scholastic philosophers) ಒಲವಿಗೆ ತಕ್ಕಂತೆ ಗ್ರೀಕ್ ವ್ಯವಸ್ಥೆಯು ದೇವರು ಮತ್ತು ಸೃಷ್ಟಿಗಳ ನಡುವಿನ ನಿಖರವಾದ ಭಿನ್ನತೆಯ ವಿವರಣೆಯನ್ನು ಸಾಧ್ಯಗೊಳಿಸಿತು. ಇಂತಹಾ ಗುಣಾತ್ಮಕ ವಿಚಾರಗಳಲ್ಲಿ ಗಣಿತದ ಮೂಲಕ ನಿಷ್ಕೃಷ್ಟತೆ ಪಡೆಯುವುದು ಅಸಾಧ್ಯ ಎಂಬುದನ್ನು ಇಲ್ಲಿ ಗಮನಿಸಬೇಕು.

ಮುಸ್ಲಿಂ ಜಗತ್ತಿನಲ್ಲಿ ಏಥೆನ್ಸ್ ಗೆ ಹಿನ್ನಡೆ ಉಂಟಾಯಿತು. ಕಟ್ಟ ಕಡೆಯ ಗ್ರೀಕ್ ಅನುಯಾಯಿ ಎಂದು ಕರೆಯಲಾಗುವ ಇಬ್ನ್ ರುಶ್ದ್ ರವರ ಗ್ರಂಥಗಳು ಆಕ್ರಮಣಕ್ಕೆ ಈಡಾಯಿತು. ಅತ್ತ ಯುರೋಪಿಯನ್ನರು ತಮ್ಮ ಸೆಮಿಟಿಕ್ ಧರ್ಮದಲ್ಲಿ ಬೃಹತ್ ಗ್ರೀಕ್ ಸಚೇತನೀಕರಣವನ್ನು ತಂದರು. ಅದು ಕೂಡಾ ಅವರ ಎಡೆಯಲ್ಲಿ ಪಸರಿಸುತ್ತಿದ್ದ ಇಸ್ಲಾಮಿನ ಬೌದ್ಧಿಕ ಪರಂಪರೆಯ ಚುಂಗು ಹಿಡಿದು. ಹಾಗೆ, ಇಸ್ಲಾಮಿನ ಮೂಲಕ ಯುರೋಪ್ ಮತ್ತು ಏಥೆನ್ಸಿನ ಸಮಾಗಮ ನಡೆಯಿತು ಮತ್ತು ಪುನರ್ಜನ್ಮ ಪಡೆಯಿತು. ಹೌದು, ಅದುವೆ ಸುಪ್ರಸಿದ್ಧವಾದ ಯುರೋಪಿಯನ್ ರಿನೈಸೆನ್ಸ್. ಅದೇ ವೇಳೆ, ಮುಸ್ಲಿಂ ಜಗತ್ತಿನಲ್ಲಿ ಇಮಾಮ್ ಗಝ್ಝಾಲಿಯವರು ಗ್ರೀಕ್ ವಿಧಾನಗಳನ್ನು ಇಸ್ಲಾಮಿಕ್ ವಿದ್ವತ್ ಪರಂಪರೆಯಲ್ಲಿ ಅಳವಡಿಸಲು ಪ್ರಯತ್ನಿಸಿದ್ದಾಗಿಯೂ ಏಥೆನ್ಸ್ ಹೆಚ್ಚೆಚ್ಚು ತಿರಸ್ಕಾರಕ್ಕೆ ಒಳಗಾಯಿತು. ಶಿಯಾ ಪರಂಪರೆ ಮತ್ತು ಅತಿಭೌತಶಾಸ್ತ್ರೀಯ ಕಲಿಕೆ ನಡೆಯುತ್ತಿದ್ದ (ಮೆಟಫಿಸಿಕಲ್ ಸ್ಟಡೀಸ್) ಕೆಲವು ಸ್ಥಳಗಳನ್ನು ಹೊರತುಪಡಿಸಿದರೆ ಮುಸ್ಲಿಂ ಜಗತ್ತಿನಲ್ಲಿ ಗ್ರೀಕ್ ಚಿಂತನೆ ಸತ್ತೇ ಹೋದಂತಿತ್ತು.

ಮದೀನಾ ಮತ್ತು ಏಥೆನ್ಸ್ ನಡುವಿನ ವಿಚ್ಛೇದನ ಮುಸ್ಲಿಂ ನಾಗರಿಕತೆಯಲ್ಲಿ ಸಮಸ್ಯೆ ಉಂಟಾದದ್ದೆಲ್ಲಿ ಎಂಬುದನ್ನು ವಿವರಿಸುತ್ತದೆ. ಯುರೋಪಿಯನ್ನರು ಏಥೆನ್ಸನ್ನು ಮರುಶೋಧಿಸಿ ಅದನ್ನು ಜೆರುಸಲೇಮ್ ನೊಂದಿಗೆ ಸಂಶ್ಲೇಷಣೆಗೊಳಿಸುವ ಪ್ರಯತ್ನದಲ್ಲಿ ಮಾನವೇತಿಹಾಸದಲ್ಲೇ ಉತ್ಕೃಷ್ಟವಾದ ನಾಗರಿಕತೆಗೆ ಜನ್ಮ ನೀಡಿದರು. ಜ್ಞಾನಾನ್ವೇಷಣೆಯ ವಿಷಯದಲ್ಲಿ ಈ ನಾಗರಿಕತೆಯ ಪ್ರಯತ್ನ ಪ್ರಶಂಸನೀಯ. ಅದಾಗ್ಯೂ, ಜ್ಞಾನವನ್ನು ಅಧಿಕಾರದೊಂದಿಗೆ ಸಮೀಕರಿಸುವ ವಿಚಾರದಲ್ಲಿ ಅದು ಎಡವಿತು. ತನ್ನ ವಿಶ್ವಾಸದಲ್ಲಿ ಹುದುಗಿರುವ ಯುಕ್ತಿಬಾಹಿರ ಆಯಾಮಗಳ ಕಾರಣದಿಂದಾಗಿ ಯುರೋಪ್ ನಿಧಾನವಾಗಿ ದಿವ್ಯಬೋಧನೆಯನ್ನು ಕೈ ಬಿಟ್ಟಿತು,ಅದು ಕೂಡಾ ಸತ್ಯವನ್ನು ಇಂದ್ರಿಯಗೋಚರ ಆಯಾಮಗಳಿಗೆ ಪರಿಮಿತಗೊಳಿಸುವ ಸೀಮಿತ ಬುದ್ಧಿಯ ಪರವಾಗಿ. ಅಧಿಕಾರಕ್ಕಾಗಿ ಹಾಹಾಕಾರ ಮತ್ತು ನೈಸರ್ಗಿಕ ವಿನಾಶ ಯುರೋಪಿನ ನಾಗರಿಕ ಕಿಚ್ಚಾಗಿ ಮಾರ್ಪಟ್ಟಿತು. ಇದು ಅಣುಬಾಂಬ್, ಜಾಗತಿಕ ಮಲಿನೀಕರಣ ಮತ್ತು ಗ್ರಾಹಕಸಂಸ್ಕೃತಿಗೆ ಕಾರಣವಾಯಿತು. ಭ್ರಮೆಗಳನ್ನು ಅರಸುತ್ತಾ ಒಂದರಿಂದ ಮತ್ತೊಂದಕ್ಕೆ ಜಿಗಿಯುವ ಚಂಚಲ ತೀಟೆಯ ಬುದ್ಧಿಭ್ರಮಣೆಯಲ್ಲಿ ಬಂಧಿಯಾಗಿಸುವ ತಂತ್ರಜ್ಞಾನದ ಬಿಗಿ ಮುಷ್ಠಿಯಿಂದ ತಪ್ಪಿಸಿಕೊಳ್ಳಲಾಗದ ಕರಗಿದ ಜೀವನಶೈಲಿ ಕೂಡಾ ಇದರ ದುಷ್ಪರಿಣಾಮ. ಆದರೆ, ಮುಸ್ಲಿಮರು ಒಮ್ಮೆಯೂ ಮದೀನವನ್ನು ಕೈಬಿಡದೆ ಭೂಮಿ ಮೇಲಿನ ಕೊನೆಯ ದೇವಕೇಂದ್ರಿತ ನಾಗರಿಕತೆಯಾಗಿ ಉಳಿದರು. ಎಲ್ಲರ ಅಸೂಯೆಗೆ ಗುರಿಯಾಗಿದ್ದ ಭವ್ಯ ಮದೀನಾ – ಏಥೆನ್ಸ್ ಸಮಾಗಮ ಮಾತ್ರ ಕಳೆಗುಂದಿದ ನೆನಪಾಗಿ ಉಳಿದಿದೆ.

ಆದಿಕಾಲದಲ್ಲಿ ಕ್ರಿಯಾಶೀಲವಾಗಿದ್ದ ಮತ್ತು ಯುರೋಪನ್ನು ಬೌದ್ಧಿಕ ಆಲಸ್ಯದಿಂದ ಬಡಿದೆಬ್ಬಿಸಿ ಪೋಷಣೆ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಈ ಮದೀನಾ-ಏಥೆನ್ಸ್ ಸಂಬಂಧವನ್ನು ಮರುಸ್ಥಾಪನೆ ಮಾಡಬೇಕು. ಇಸ್ಲಾಮಿನ ಬೌದ್ಧಿಕ ಪರಂಪರೆಗೆ ಪುನಶ್ಚೇತನ ನೀಡಲು ಇದು ಅನಿವಾರ್ಯ. ಮಾನವಕುಲ ಎದುರಿಸುತ್ತಿರುವ ನಾಗರಿಕ ಬಿಕ್ಕಟ್ಟಿನ ಸವಾಲುಗಳಿಗೆ ಬಹಳ ಬುದ್ಧಿವಂತಿಕೆಯಿಂದ ಸ್ಪಂದಿಸಲು ಮುಸಲ್ಮಾನರನ್ನು ಇದು ಸಿದ್ಧಗೊಳಿಸಲಿದೆ. ಅಂದ ಹಾಗೆ ಈ ವಿಚ್ಛೇದಿತರ ಮರುಮದುವೆ ನಡೆಸುವುದಾದರೂ ಹೇಗೆ?

ಉದಾರ ಕಲೆಗಳು ಎಂದು ಪಶ್ಚಿಮದಲ್ಲಿ ಮತ್ತು ಸಮಗ್ರ ಅಧ್ಯಯನ (ಅಲ್-ದಿರಾಸಾತ್ ಅಲ್ ಜಾಮಿಅ) ಎಂದು ಇಸ್ಲಾಮಿಕ್ ಜಗತ್ತಿನಲ್ಲಿ ಕರೆಸಿಕೊಳ್ಳುವ ವಿಶಾಲತೆ ಆಧಾರಿತ ಸಮಗ್ರತಾ ದೃಷ್ಟಿಯ ಈ ಪರಂಪರೆಯನ್ನು ಮರುಸ್ಥಾಪಿಸುವ ಉದ್ದೇಶದೊಂದಿಗೆ ನಮ್ಮ ಝೈತೂನ ಕಾಲೇಜು ಮುಂದಡಿಯಿಡುತ್ತಿದೆ. ಉದಾರ ಕಲೆಗಳಲ್ಲಿ ಪಳಗಿದಾಗ ಅದೀಬ್ ಅಥವಾ ಅದರ ಇಂಗ್ಲಿಷ್ ಸಂವಾದಿಯಾದ erudite gentleman ಅಂದರೆ ವಿದ್ಯಾಸಂಪನ್ನ ಸಂಭಾವಿತ ಹುಟ್ಟುತ್ತಾನೆ.

ಪ್ರಾಚೀನ ಕಾಲದ ವಿದ್ವಾಂಸರು ಈ ಪ್ರಪಂಚವನ್ನು ಅರ್ಥೈಸಿದ್ದು ಗುರಿ ಇಲ್ಲದ ಕೇವಲ ಪದಾರ್ಥ ಎಂಬ ರೀತಿಯಲ್ಲಲ್ಲ. ಅವರು ಜಗತ್ತನ್ನು ಕಂಡದ್ದು ನಾಲ್ಕು ಕಾರಣಗಳ ಮೂಸೆಯಲ್ಲಿ; ಪದಾರ್ಥಿಕ ಅಥವಾ ಸಮವಾಯಿ ಕಾರಣ, ಸ್ವರೂಪ ಅಥವಾ ಅಸಮವಾಯಿ ಕಾರಣ, ನಿಮಿತ್ತ ಕಾರಣ ಮತ್ತು ಆತ್ಯಂತಿಕ ಕಾರಣ. ಇವುಗಳ ಪೈಕಿ ಕೊನೆಗೆ ಹೇಳಲಾದ ಲಕ್ಷ್ಯದ ಕಡೆಗೆ ಬೊಟ್ಟು ಮಾಡುವ ಕಾರಣವನ್ನು ಅನ್ವೇಷಣದ ಉನ್ನತ ಮಟ್ಟದಲ್ಲಿ ಇರಿಸಲಾಗಿತ್ತು. ಕೈಬಿಟ್ಟು ಹೋಗಿರುವ ಪರಂಪರೆಯನ್ನು ಮರುಸ್ಥಾಪಿಸುವ ನಮ್ಮ ಯತ್ನಗಳನ್ನು ನಾವು ಈ ದೃಷ್ಟಿಯಿಂದ ಪರಿಶೀಲಿಸಬೇಕಿದೆ. “ಶಿಕ್ಷಣದ ಗುರಿಯೇನು” ಎಂಬ ಪ್ರಶ್ನೆಗೆ ಉತ್ತರಿಸುವ ಆತ್ಯಂತಿಕ ಕಾರಣದಿಂದಲೇ ಆರಂಭಿಸೋಣ. ಗುರಿಸಾಧಿಸಲು ಮತ್ತು ಸತ್ಯವನ್ನು ಕಂಡುಹಿಡಿಯಲುವಿದ್ಯಾರ್ಥಿಗಳಿಗೆ ಸಹಾಯ ಮಾಡುವುದೆ ಇಸ್ಲಾಮಿನಲ್ಲಿ (ಅಂದ ಹಾಗೆ ಝೈತೂನದ್ದು ಕೂಡಾ) ಶಿಕ್ಷಣದ ಗುರಿ. ಇಸ್ಲಾಮಿನ ಜ್ಞಾನಮೀಮಾಂಸೆ ಚಿಂತನೆಯ ಮೂರು ನಿಯಾಮಗಳ ಮೇಲೆ ಬೇರೂರಿದೆ: law of identity (ಗುರುತಿನ ನಿಯಮ ಅಥವಾ ಒಂದು ವಸ್ತು ಅದೇ ವಸ್ತುವಿಗೆ ಅಭಿನ್ನವಲ್ಲ ಎನ್ನುವ ನಿಯಮ), law of excluded middle (ಪ್ರಸ್ತಾವನೆ ಮತ್ತು ಅದರ ನಿರಾಕರಣೆಯ ಪೈಕಿ ಒಂದು ಸತ್ಯವಾಗಿರಬೇಕು ಎನ್ನುವ ನಿಯಮ), law of non-contradiction (ವೈರುಧ್ಯಾತ್ಮಕ ಪ್ರಸ್ತಾವನೆಗಳು ಒಂದೇ ವೇಳೆ ಎರಡೂ ಕೂಡಾ ಸತ್ಯವಾಗದು ಎನ್ನುವ ನಿಯಮ). ಧಾರ್ಮಿಕ ವಿದ್ಯಾರ್ಥಿಗಳು ಇದನ್ನು ಕಲಿತಿರುತ್ತಾರೆ. ಮಧ್ಯ ಏಷ್ಯಾದಲ್ಲಿ ಹನ್ನೆರಡನೆಯ ಶತಮಾನದಲ್ಲಿ ರಚಿತವಾದ, ಇಸ್ಲಾಮಿನ ಇತಿಹಾಸದ ಸುಪ್ರಧಾನವಾದ ಶಿಸ್ತು ಆಗಿರುವ ವಿಶ್ವಾಸವಿಜ್ಞಾನವನ್ನು ಪ್ರತಿಪಾದಿಸುವ ಗ್ರಂಥವಾದ ʼನಸಫಿಯ್ಯʼದಲ್ಲಿ ಕರ್ತೃ ಇಮಾಂ ನಸಫಿ ಮತ್ತು ಗ್ರಂಥದ ವಿವರಣೆಗಾರ ಇಮಾಂ ತಫ್ತಾಝಾನಿ ಬರೆಯುವುದು ನೋಡಿ:

“ವಾಸ್ತವ (ಹಕ್ಕ್‌ ಅಥವಾ reality) ಎಂದರೆ ನಿಜಸ್ಥಿತಿಯೊಂದಿಗೆ ಹೊಂದಾಣಿಕೆ ಇರುವ ತೀರ್ಪು ಎಂದು ಸತ್ಯದ ವಕ್ತಾರರು ಪ್ರತಿಪಾದಿಸಿದ್ದಾರೆ. ಈ ಪದವನ್ನು ಸಾಮಾನ್ಯವಾಗಿ ಪ್ರಸ್ತಾವನೆಗಳಿಗೆ, ವಿಶ್ವಾಸಗಳಿಗೆ, ಧರ್ಮಗಳಿಗೆ ಮತ್ತು ಕರ್ಮದ ವಿವಿಧ ವಿಭಾಗಗಳಿಗೆ ಅವುಗಳು ಎಷ್ಟು ಪ್ರಮಾಣದಲ್ಲಿ ವಾಸ್ತವವನ್ನು ಒಳಗೊಂಡಿದೆ ಎಂಬುದನ್ನು ನೋಡಿಕೊಂಡು ಬಳಸಲಾಗುತ್ತದೆ. ಇದರ ವಿರುದ್ಧ ಪದ ಅವಾಸ್ತವ ಎನ್ನುವುದು. ಆದರೆ ಸತ್ಯ‌ (ಸಿದ್ಕ್ ಅಥವಾ truth) ಎಂಬ ಪದವನ್ನು ವ್ಯಾಪಕವಾಗಿ ಪ್ರಸ್ತಾವನೆಗಳ ಕುರಿತು ಉಪಯೋಗಿಸಲಾಗುತ್ತದೆ. ಅದರ ವಿರುದ್ಧ ಪದ ಸುಳ್ಳು (false) ಎಂದು. ಈ ಎರಡು ವ್ಯತ್ಯಾಸಗಳ ಜೋಡಿಗಳ ನಡುವಿನ ವ್ಯತ್ಯಾಸವನ್ನು ಕೆಳಕಾಣಿಸಿದ ಹಾಗೆ ತಿಳಿಯಬಹುದು. ವಾಸ್ತವದ ವಿಷಯದಲ್ಲಿ ನಿಜಸ್ಥಿತಿಯನ್ನು ಅವಲೋಕಿಸಿ ಮತ್ತು ಸತ್ಯದ ವಿಷಯದಲ್ಲಿ ತೀರ್ಪನ್ನು ಅವಲೋಕಿಸಿ ಹೊಂದಾಣಿಕೆಯನ್ನು ತೀರ್ಮಾನಿಸಲಾಗುತ್ತದೆ. “ತೀರ್ಪಿನ ಸತ್ಯತೆ” ಎಂದರೆ ತೀರ್ಪಿಗೆ ನಿಜಸ್ಥಿತಿಯೊಂದಿಗೆ ಇರುವ ಹೊಂದಿಕೆ ಎಂದೂ “ತೀರ್ಪಿನ ವಾಸ್ತವಿಕತೆ” ಎಂದರೆ ನಿಜಸ್ಥಿತಿಯೊಂದಿಗೆ ತೀರ್ಪಿಗೆ ಇರುವ ಹೊಂದಿಕೆ ಎಂದೂ ಅರ್ಥ ಮಾಡಲಾಗುತ್ತದೆ. ಒಂದು ವಸ್ತುವಿನ ನೈಜ ಸತ್ವ (essence) ಮತ್ತು ವಿಶೇಷ ಗುಣ (quiddity) ಸೇರಿದರೆ ಅದರ ಅಸ್ಮಿತೆ ಸಿಗುತ್ತದೆ. ಉದಾಹರಣೆಗೆ ಮನುಷ್ಯನ ಅಸ್ಮಿತೆ “ವಿಚಾರಶಕ್ತಿಯುಳ್ಳ ಮೃಗ” ಎಂದು(rational animal ಇಲ್ಲಿ ಮೃಗ essence ಮತ್ತು ವಿಚಾರಶಕ್ತಿ quiddity).”

ಮುಸಲ್ಮಾನರು ತಮ್ಮ ಪ್ರಮಾಣಕ ಪರಂಪರೆಯನುಸಾರ (normative tradition) ಕ್ಯಾಥಲಿಕರಿಗಿಂತ ಭಿನ್ನವಲ್ಲದ ಮಿತ ವಾಸ್ತವವಾದಕ್ಕೆ (moderate idealism) ಬದ್ಧರಾಗಿದ್ದಾರೆ ಎಂದು ಗೊತ್ತಾಯಿತು ಈ ನಿಲುವಿಗೆ ಸಾಥಿಯಾಗಿ ಅನಿಷೇಧ್ಯವಾದ ಅತೀಂದ್ರಿಯ ಆಯಾಮ ಕೂಡಾ ಇದ್ದು ಅದು ಪರಂಪರೆಯ ಮೇಲೆ ಗಾಢ ಪ್ರಭಾವ ಬೀರಿದೆ ಮತ್ತು ನ್ಯೂಟೋನಿಯನ್‌ ಮತ್ತು ಕ್ವಾಂಟಮ್‌ ಭೌತವಿಜ್ಞಾನಕ್ಕೆ ಸಂವಾದಿಯಾಗಿದೆ. ಅವು ಪರಸ್ಪರ ವಿಭಿನ್ನ ಎಂದು ಹೊರನೋಟಕ್ಕೆ ತೋರುತ್ತದೆಯಾದರೂ ಅವುಗಳು ಕಾರ್ಯನಿರ್ವಹಿಸುತ್ತಿರುವುದು ಬೇರೆಬೇರೆ ಸಮತಲಗಳಲ್ಲಿ. ಇದನ್ನೇ ಇಸ್ಲಾಮಿನ ಪರಂಪರೆಯಲ್ಲಿ “ಇರುವಿಕೆಯ ವಿವಿಧ ಹಂತಗಳು ಅಥವಾ ಮರಾತಿಬುಲ್‌ ವುಜೂದ್‌” ಎನ್ನಲಾಗುತ್ತದೆ. ಸತ್ಯವನ್ನು ಹುಡುಕಿ ಕಂಡುಹಿಡಿಯಬಹುದು, ಬೌದ್ಧಿಕವಾಗಿ ಸಮರ್ಥಿಸಬಹುದು ಮತ್ತು ಪವಿತ್ರಗೊಳಿಸಲಾದ ಆತ್ಮಗಳಲ್ಲಿ ಅದನ್ನು ವಾಸ್ತವಿಕವಾಗಿ ಸಾಕ್ಷಾತ್ಕರಿಸಿಕೊಳ್ಳಬಹುದು ಎಂದು ಮುಸಲ್ಮಾನರು ನಂಬುತ್ತಾರೆ. ಖಚಿತ ಜ್ಞಾನ (ಇಲ್ಮ್ ಅಲ್‌ ಯಖೀನ್)‌, ವಾಸ್ತವಿಕ ಖಾತರಿ (ಹಕ್ಕ್‌ ಅಲ್‌ ಯಖೀನ್)‌ ಮತ್ತು ಕೊನೆಯದಾಗಿ ಸಾಕ್ಷಾತ್‌ ಖಚಿತತೆ (ಅಯ್ನ್‌ ಅಲ್‌ ಯಖೀನ್) ಎಂದು ಅಸ್ತಿತ್ವದ ಈ ಮೂರು ಹಂತಗಳನ್ನು ಕರೆಯಲಾಗಿದೆ. ಬೆಂಕಿಯ ಬಗ್ಗೆ ಕೇಳುವುದು, ಬೆಂಕಿಯನ್ನು ನೋಡುವುದು ಮತ್ತು ಬೆಂಕಿಯಲ್ಲಿ ಬೇಯುವುದು; ಇಮಾಂ ಗಝ್ಝಾಲಿ ಆ ಹಂತಗಳಿಗೆ ಹೀಗೆ ಉದಾಹರಿಸಿದ್ದಾರೆ. ಸತ್ಯವನ್ನು ಕಂಡುಹಿಡಿಯಬಹುದು ಎಂದು ಕಲಿಸುವುದರೊಂದಿಗೆ ನನ್ನ ಅಭಿಪ್ರಾಯ ಸರಿಯೆಂದು ನಾನು ನಂಬುತ್ತೇನೆ, ಆದರೆ ತಪ್ಪಾಗಲು ಸಾಧ್ಯತೆ ಇದೆ ಎನ್ನುವ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಶಿಕ್ಷಣ ವ್ಯವಸ್ಥೆಗೆ ಸಾಧ್ಯವಾಗಲೇಬೇಕು. ಯಾಕೆಂದರೆ, ಬೌದ್ಧಿಕ ವಿನಯ ಎನ್ನುವುದು ಒಳಿತುಗಳ ಪೈಕಿ ಕೇಂದ್ರಸ್ಥಾನ ಪಡೆದಿದೆ. ಇದು ಮಾನವನ ಪ್ರಥಮ ಬಾಧ್ಯತೆಯಾಗಿದ್ದು ಇದರ ಹೊರತಾಗಿ ಜ್ಞಾನ ಅಗಮ್ಯ ಎಂದು ವಾದಿಸಿದ್ದಾರೆ ಇಮಾಂ ಅಲ್‌ ಜುನೈದ್.

ನೈತಿಕ ಮೌಲ್ಯಗಳಿಗೆ ಒಡ್ಡಿಕೊಳ್ಳುವುದು ಮತ್ತು ಒಗ್ಗಿಕೊಳ್ಳುವುದು ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಪ್ರಧಾನ ಅಂಶ. ಕ್ಯಾಥಲಿಕರು ಮತ್ತು ಆರ್ಥಡಾಕ್ಸ್‌ ಕ್ರಿಶ್ಚಿಯನ್ನರು ಎರವಲು ಪಡೆದುಕೊಂಡ ಹಾಗೆ ಮುಸಲ್ಮಾನರು ಕೂಡಾ ಅರಿಸ್ಟಾಟಲರ ಪ್ರಮುಖ ನೈತಿಕ ಶೀಲಗಳನ್ನು ಮತ್ತು ಬೌದ್ಧಿಕ ಮೌಲ್ಯಗಳನ್ನು ಸ್ವೀಕರಿಸಿದ್ದರು. ಸ್ಪಾನಿಷ್‌ ಮುಸ್ಲಿಂ ವಿದ್ವಾಂಸರಾದ ಖಾಝಿ ಅಬೂಬಕರ್‌ ತಮ್ಮ ʼರಿಹ್ಲʼ ಎನ್ನುವ ಗ್ರಂಥದಲ್ಲಿ ಬರೆಯುತ್ತಾರೆ,”ಧೈರ್ಯ, ಆತ್ಮಸಂಯಮ, ವಿವೇಕ ಮತ್ತು ನ್ಯಾಯ, ಈ ನಾಲ್ಕು ಸದ್ಗುಣಗಳು ನೈತಿಕ ಶೀಲಗಳ ಮೂಲ ಎನ್ನುವ ಸಂಗತಿಯನ್ನು ಬುದ್ಧಿಯ ವಕ್ತಾರರೆಲ್ಲಾ(ಧರ್ಮಗಳು ಬೇರೆ ಬೇರೆಯಾದರೂ) ಒಕ್ಕೊರಲಿನಿಂದ ಒಪ್ಪಿಕೊಳ್ಳುತ್ತಾರೆ.” ಕಲೆ, ಪ್ರಾಯೋಗಿಕ ಬುದ್ಧಿ, ಅಂತರ್ಬೋಧೆ, ವಿಜ್ಞಾನ ಮತ್ತು ತಾತ್ವಿಕ ಬುದ್ಧಿಯಂಥಾ ಬೌದ್ಧಿಕ ಸದ್ಗುಣಗಳನ್ನು ಕೂಡಾ ಬೆಳೆಸಲಾಗುತ್ತದೆ. ಅತ್ಯಂತ ಆಕರ್ಷಕ ರೀತಿಯಲ್ಲಿ ಕೃತಿರಚನೆ ಮಾಡುವ ಕಲೆಯನ್ನು ಅಲಂಕಾರಶಾಸ್ತ್ರದ ಅಧ್ಯಯನ ತೊಟ್ಟಿಕ್ಕಿಸುತ್ತದೆ. ಅತಿಭೌತಶಾಸ್ತ್ರ ಮತ್ತು ತರ್ಕವಿಜ್ಞಾನದ ಅಧ್ಯಯನ ಪ್ರಾಥಮಿಕ ಕಲಿಕಾ ಮೂಲ ತತ್ವಗಳನ್ನು ಹೃದಯಕ್ಕಿಳಿಸುತ್ತದೆ. ಗಣಿತ, ಖಗೋಳವಿಜ್ಞಾನ ಮತ್ತು ಇತರ ಶಿಸ್ತುಗಳ ಅಧ್ಯಯನದ ಮೂಲಕ ವಿಜ್ಞಾನವನ್ನು ಕಲಿಯಲಾಗುತ್ತದೆ. ಮೊದಲ ಮತ್ತು ಕೊನೆಯ ಕಾರಣಗಳನ್ನು ಚಿಂತನೆಯಿಂದ ಕಂಡುಕೊಳ್ಳುವ ಮೂಲಕ ವಿಶೇಷವಾಗಿ ತಾತ್ವಿಕ ಬುದ್ಧಿಯನ್ನು ಬೆಳೆಸಿಕೊಳ್ಳಲಾಗುತ್ತದೆ. ಕೊನೆಯದಾಗಿ ಇಸ್ಲಾಂ ಮುಂದಿಡುವ ಸತ್ಶೀಲಗಳು ಇಂತಿವೆ: ಭಯ, ಭರವಸೆ, ಕೃತಜ್ಞತಾಭಾವ, ತಾಳ್ಮೆ, ಪಶ್ಚಾತಾಪ, ಪರಿತ್ಯಾಗ, ನಂಬಿಕೆ, ಸಂತೃಪ್ತಿ ಮತ್ತು ಪ್ರೀತಿ ಸೇರಿ ಒಟ್ಟು ಒಂಭತ್ತು ಗುಣಗಳು.

ಉದ್ದೇಶಪೂರ್ವಕ ಇತರರನ್ನು ನೋಯಿಸದ ವ್ಯಕ್ತಿಯ ಸೃಷ್ಟಿಯಾಗಿರಬೇಕು ಭಕ್ತಿಯಲ್ಲಿ ಬೇರೂರಿದ ಉದಾರ ಶಿಕ್ಷಣದ ಫಲಶೃತಿ. “ಒಬ್ಬಾತನ ಕೈ ಮತ್ತು ನಾಲಗೆಯಿಂದ ಇತರರಿಗೆ ನೋವು ಉಂಟಾಗುತ್ತಿಲ್ಲ ಎಂದಾದರೆ ಅವನೆ ವಿಶ್ವಾಸಿ” ಎಂಬುವುದು ಪ್ರವಾದಿ ಉವಾಚ. ಇತರರಿಗೆ ಅವನೊಂದಿಗೆ ಸರಾಗವಾಗಿ ವ್ಯವಹರಿಸಲು ಸಾಧ್ಯ. ಆತ ವಿವಾದ ಮಾಡಲಾರ, ಅದೇ ವೇಳೆ ಸಾರ್ವಜನಿಕ ಹಿತಾಸಕ್ತಿಗೋಸ್ಕರ ವಿವಾದಿತ ನಿಲುವು ತಳೆಯಬೇಕಾಗಿ ಬಂದರೆ ಅದಕ್ಕೆ ಹೇಸಲಾರ. ಒಂದು ಕೊಠಡಿಯಲ್ಲಿರುವಾಗ ಎಲ್ಲರಂತೆ ತನ್ನನ್ನು ಕಾಣುವನು ಮತ್ತು ಅಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಲು ಬಯಸಲಾರನು. ಮಾತುಕತೆ ನಡೆಸುವಾಗ ಏಕಪಕ್ಷೀಯವಾಗಿ ವರ್ತಿಸಲಾರ. ಇತರರನ್ನು ಬೇಸ್ತು ಬೀಳಿಸುವಂತೆ ಮಾತನಾಡಲಾರ. ಚಾಡಿ ಮತ್ತು ಪರದೂಷಣೆಗಳನ್ನು ಕೇಳಲಾರ. ಇತರರ ಮಾತು ಕೃತಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಲು ಒಲವು ತೋರಿಸುವನು. ಇತರರ ಟೀಕೆ-ಟಿಪ್ಪಣಿಗಳಿಂದ ಒಳ್ಳೆಯ ಅರ್ಥಗಳನ್ನು ಪಡೆಯಲು ಶ್ರಮಿಸುವನು. ಆತ ಅಲ್ಪತನ ಮತ್ತು ಮುಂಗೋಪದಿಂದ ಮುಕ್ತನಾಗಿರುವನು. ಯಾರಾದರೂ ಹೀಯಾಳಿಸಿದರೆ ಅದರಿಂದ ಅವಮಾನಿತನಾಗಲಾರ. ಕುಹಕಗಳನ್ನು ಸಹಿಷ್ಣುತೆಯಿಂದ ಸ್ವೀಕರಿಸಬಲ್ಲ. ಇಹವನ್ನು ಒಂದು ಪರೀಕ್ಷೆಯಾಗಿ ಕಂಡು ಕಾಲದ ಬದಲಾವಣೆಗಳೊಂದಿಗೆ ಘನತೆ ಮತ್ತು ತ್ಯಾಗಮನಸ್ಥಿತಿಯೊಂದಿಗೆ ಅನುಸಂಧಾನ ನಡೆಸುವನು. ವಾಗ್ವಾದದ ವೇಳೆ ಅವನ ವಾದಗಳು ಚೂಪಾಗಿರುತ್ತದೆ ಮತ್ತು ಚರ್ಚೆಯಲ್ಲಿ ಭಾಗವಹಿಸುವ ಕಡಿಮೆ ವಿದ್ಯಾರ್ಹತೆ ಇರುವವರೊಂದಿಗೆ ಅತಿಯಾಗಿ ವರ್ತಿಸಲಾರ. ವಾದಗಳು ಸುಸ್ಪಷ್ಟವಾಗಿರುತ್ತವೆ ಮತ್ತು ಭಾವನಾತ್ಮಕತೆಗೆ ಬಲಿ ಬೀಳದೆ ವಿಚಾರಪೂರ್ಣವಾಗಿರುತ್ತದೆ. ಅಧ್ಯಾಪನೆಯ ವೇಳೆಯಲ್ಲಿ ಅಲ್ಲದೆ ಇತರರ ಭಾಷೆಯಲ್ಲಿ ಬರುವ ಪ್ರಮಾದಗಳನ್ನು ತಿದ್ದಲು ಹೋಗಲಾರ. ಕಾರ್ಯಾಚರಿಸುವ ಮುನ್ನ ಆಲೋಚಿಸುವನು ಮತ್ತು ಒಮ್ಮೆ ಕಾರ್ಯಾಚರಿಸಿದರೆ ನಿರ್ದಮವಾಗಿ ನಿಲ್ಲುವನು. ಇತರರ ಅಭಿಪ್ರಾಯ ಎಷ್ಟೇ ಅಸಂಬದ್ಧವಾಗಿದ್ದರೂ ಅವರನ್ನು ಆತ ಲೇವಡಿ ಮಾಡಲಾರ. ಅರಿವು ಮತ್ತು ಅರಿವಿನ ಪ್ರತಿನಿಧಿಗಳನ್ನು ಗೌರವಿಸುವನು. ಸೃಷ್ಟಿಯ ಸೌಂದರ್ಯ ಮತ್ತು ಗಾಂಭೀರ್ಯವನ್ನು ಸವಿಯುವನು. ಆನಂದದಾಯಕ ಜೀವನವನ್ನು ಒಂದು ಕರ್ತವ್ಯ ಮತ್ತು ಮನೋಭಾವವಾಗಿ ಕಾಣುವನು. ಧಾರ್ಮಿಕ ಸ್ವಾತಂತ್ರ್ಯವನ್ನು ತಾತ್ವಿಕವಾಗಿ ನಂಬುವನು. ಗೆಳೆಯರು ಮತ್ತು ಸಂಬಂಧಿಕರೊಂದಿಗೆ ಕರುಣೆ, ರಮ್ಯತೆ ಮತ್ತು ಕ್ಷಮಾಶೀಲತೆಯಿಂದ ವರ್ತಿಸುತ್ತಾನೆ. ಅಪರಿಚಿತರೊಂದಿಗೆ ಘನತೆ ಮತ್ತು ಗೌರವದಿಂದ ವರ್ತಿಸುತ್ತಾನೆ. ಶತ್ರುಗಳೊಂದಿಗೆ ಅವರು ಒಂದು ದಿನ ಗೆಳೆಯರಾಗುವ ಸಾಧ್ಯತೆ ಇದೆ ಎನ್ನುವ ಭಾವನೆಯೊಂದಿಗೆ ವರ್ತಿಸುತ್ತಾನೆ.

ಕಲಿಕಾ ವಿಷಯಗಳು ಮತ್ತು ಪರಿಕರಗಳನ್ನು ವಿವರಿಸುವ ಶಿಕ್ಷಣಕ್ರಮದ ಬೌದ್ಧಿಕ ಪದಾರ್ಥವಾದ ಪಠ್ಯಕ್ರಮವಾಗಿದೆ ಉದಾರ ಶಿಕ್ಷಣದ ಪದಾರ್ಥ ಕಾರಣ. ಉದಾಹರಣೆಗೆ ನಮ್ಮ ಝೈತೂನ ಕಾಲೇಜಿನಲ್ಲಿ ಪರಿಕರಗಳ ಕಲಿಕೆಗೆ ವಿಶೇಷ ಒತ್ತು ಕೊಡುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಮುಸ್ಲಿಂ ಶಿಕ್ಷಣ ವ್ಯವಸ್ಥೆಯ ಪಂಚಾಂಗವಾಗಿದ್ದ ವ್ಯಾಕರಣ ಕಲಿಕೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿದ್ದೇವೆ. ಅರಬಿಕ್‌ ಭಾಷೆಯ ಪ್ರಖರತೆ ಮತ್ತು ಕ್ಲಿಷ್ಟತೆಯಿಂದಾಗಿ ಗುರುತರ ಪ್ರಮಾದಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಉನ್ನತ ಮಟ್ಟದ ವ್ಯಾಕರಣ ಜ್ಞಾನ ಅನಿವಾರ್ಯ. ಅರಬಿ ಭಾಷೆಯ ಸ್ವಭಾವ, ಅದರ ವಾಕ್ಯ ರಚನೆಯಲ್ಲಿನ ದ್ರವತೆ, ಶಬ್ದವ್ಯುತ್ಪತ್ತಿಯಲ್ಲಿನ ಕ್ಲಿಷ್ಟತೆ ಮತ್ತು ಪ್ರವಿಶಾಲವಾದ ಪದ ಸಂಪದ ಇವೆಲ್ಲಾ ಇದಕ್ಕೆ ಕಾರಣವಾಗಿದೆ. ಆಧುನಿಕಪೂರ್ವ ವಿದ್ವಾಂಸರ ಪದಸಂಪತ್ತು ಅಪಾರವಾಗಿತ್ತು. ಅವರು ತಮ್ಮ ಸಂಪನ್ನವಾದ ಭಾಷೆಯನ್ನು ಬಹಳ ರಸಾಸ್ವಾದದೊಂದಿಗೆ ಬಳಸುತ್ತಿದ್ದರು. ಒಂದು ಅರಬಿಕ್‌ ಪದಕೋಶದಲ್ಲಿ ಸರಿಸುಮಾರು ಇಪ್ಪತ್ತು ಸಾವಿರ ಧಾತುಪದಗಳು ಇರುತ್ತವೆ. ಒಂದು ಧಾತುವಿನಿಂದ ಹಲವಾರು ಪದಗಳನ್ನು ಮತ್ತೆ ರೂಪಿಸಬಹುದು. ಧಾತುಗಳನ್ನು ಕಲಿಯುವುದು ಮತ್ತು ಅರ್ಥದ ವಿನ್ಯಾಸಗಳನ್ನು ಅರ್ಥ ಮಾಡುವುದು ಪ್ರಧಾನವಾಗಿತ್ತು. ಷೇಕ್ಸ್‌ಪಿಯರ್‌ ಇಪ್ಪತ್ತೆಂಟು ಸಾವಿರ ಪದಗಳನ್ನು ಬಳಸಿದ್ದಾರೆ. ಅದರಲ್ಲಿ ನಲವತ್ತು ಶೇಖಡಾ ಪದಗಳನ್ನು ಬಳಸಿದ್ದು ಒಮ್ಮೆ ಮಾತ್ರ. ಆದುದರಿಂದಲೇ, ಪದ ಸಂಪತ್ತನ್ನು ಕೈವಶಪಡಿಸುವುದು ಇಂಗ್ಲಿಷ್‌ ಮತ್ತು ಅರಬಿ ಭಾಷಾ ಕಲಿಕೆಯಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ.

ಉದಾರ ಕಲಾ ಕಲಿಕೆಯ ನಿಮಿತ್ತ ಕಾರಣ ಶಿಕ್ಷಣಶಾಸ್ತ್ರದ (pedagogy) ಕುರಿತಾದ ಕೆಲವು ಪ್ರಶ್ನೆಗಳನ್ನು ಒಳಗೊಂಡಿದೆ. ಜ್ಞಾನ ಬೋಧನೆ ಮಾಡುವುದು ಹೇಗೆ? ಬೋಧನೆಯ ಕಲೆ ಮತ್ತು ವಿಜ್ಞಾನಗಳು ಇದಕ್ಕೆ ಉತ್ತರ ನೀಡುತ್ತದೆ. ಬೋಧನೆ ಒಂದೋ ಅಗಮನಾತ್ಮಕ (inductive ನಿರ್ದಿಷ್ಟ ಅಂಗಗಳ ವಿವರಗಳಿಂದ ಸಾರ್ವತ್ರಿಕವಾದ ಜ್ಞಾನಕ್ಕೆ ಹೋಗುವ ಪ್ರಕ್ರಿಯೆ) ಇಲ್ಲವೇ ನಿಗಮನಾತ್ಮಕವಾಗಿರುತ್ತದೆ (deductive ಸಾರ್ವತ್ರಿಕ ನಿಯಮಗಳಿಂದ ನಿರ್ದಿಷ್ಟ ಅಂಗಗಳ ವಿವರವನ್ನು ಪಡೆಯುವ ಪ್ರಕ್ರಿಯೆ). ಬೋಧನೆ ಉಪದೇಶಾತ್ಮಕ(didactic) ಯಾ ಸಂವಾದಾತ್ಮಕ(dialectic) ಆಗಿರಬಹುದು. ಸಂವಾದಾತ್ಮಕ ವಿಧಾನವೆ ಉತ್ತಮ. ಝೈತೂನ ಕಾಲೇಜಿನಲ್ಲಿ ನಾವು ಬೋಧನೆಯಲ್ಲಿನ ಉಪದೇಶಾತ್ಮಕ ಅಂಶಗಳನ್ನು ಪುನರುಜ್ಜೀವಿಸಲು ಪ್ರಯತ್ನಿಸುತ್ತಿದ್ದೇವೆ. ಅದಾಗಿತ್ತು ಅರಬಿಕ್‌ ಮತ್ತು ಲ್ಯಾಟಿನ್‌ ಪರಂಪರೆಯ ದೇವಶಾಸ್ತ್ರೀಯ ತತ್ವಜ್ಞಾನಿಗಳ ಬೋಧನಾ ವಿಧಾನದ ವಿಶೇಷತೆ. ಅವರ ಪ್ರಕಾರ ಈ ವಿಧಾನ ಸಂವಾದಾತ್ಮಕ ವಿಧಾನಕ್ಕೆ ಪೂರ್ವಾಪೇಕ್ಷಿತವೆನಿಸಿತ್ತು. ಉಪದೇಶಾತ್ಮಕ ವಿಧಾನ ಚರ್ಚೆಗಳನ್ನು ಸಂಪನ್ನಗೊಳಿಸುತ್ತದೆಯಲ್ಲವೇ. ಕೆಲವು ಉದಾರ ಕಲಾ ಕಾಲೇಜುಗಳು ಈಗ ಉಪದೇಶಾತ್ಮಕ ವಿಧಾನದ ಬಳಕೆ ನಿಲ್ಲಿಸಿದ್ದು ಉತ್ಸಾಹ ಭರಿತ ಚರ್ಚೆಯಷ್ಟೇ ಪ್ರಾಧಾನ್ಯತೆ ಉಪನ್ಯಾಸಗಳಿಗೆ ನೀಡಬೇಕಿದೆ. ಉಪನ್ಯಾಸದಿಂದ ಮಾತ್ರ ಆಳವಾದ ಮತ್ತು ಪಕ್ವವಾದ ವೈಚಾರಿಕ ಪ್ರಕ್ರಿಯೆಗಳನ್ನು ಸೋದಾಹರಣವಾಗಿ ಮತ್ತು ನೇರವಾಗಿ ವಿದ್ಯಾರ್ಥಿಗಳ ಮನಸ್ಸಿಗಿಳಿಸಲು ಸಾಧ್ಯ. ಇದು ಘಟಿಸಬೇಕಾದರೆ ವಿದ್ಯಾರ್ಥಿಗಳು ಉಪನ್ಯಾಸಕರು ಹೇಳಿದ್ದನ್ನು ಮಾತ್ರ ಗಮನಿಸಿದರೆ ಸಾಲದು, ಅವರು ಅರ್ಥಗಳನ್ನು ಸನ್ನಿವೇಶಗಳಿಗನುಸಾರ ಯಾವ ರೀತಿ ಪೋಣಿಸಿದ್ದಾರೆ ಎಂಬುದನ್ನು ಕೂಡಾ ಗಮನಿಸಬೇಕಾದುದು ಬಹಳ ಅವಶ್ಯಕ.

ಪದಗಳನ್ನು ಕಲಾತ್ಮಕವಾಗಿ ಬಳಸಿ, ಬೌದ್ಧಿಕ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ಪೋಣಿಸಿ, ಪ್ರವಚನದಲ್ಲಿನ ಸ್ಪಷ್ಟತೆ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಂಡು ಉಪನ್ಯಾಸಕ ಆಶಯಗಳನ್ನು ಇತರರಿಗೆ ಅಭಿವ್ಯಕ್ತಿಸುತ್ತಾನೆ. ಆ ಮೂಲಕ ಪಠ್ಯದ ಹೂರಣ ಮತ್ತು ಚೇತನದಿಂದ ಉದ್ಭವಿಸುವ ಚಿಂತನಾ ವಿಧಾನವನ್ನು ಹಿಂಬಾಲಿಸಲು ಸ್ಫೂರ್ತಿಯಾಗುತ್ತಾನೆ. ಅದಕ್ಕೂ ಮಿಗಿಲಾಗಿ ಪಠ್ಯಗಳನ್ನು ಅದರ ಮೂಲಭಾಷೆಯಲ್ಲಿ ಓದುವಾಗ ಉಪನ್ಯಾಸಕರು ಅನಿವಾರ್ಯವಾಗಿ ಪಠ್ಯದ ಗಟ್ಟಿಯಾದ ಅಸ್ಥಿವಾರಕ್ಕೆ ಹತ್ತಿರಗೊಳಿಸುವ ಬೌದ್ಧಿಕ ಗುರುತ್ವಾಕರ್ಷಣೆಗೆ ಮರುಳಾಗುತ್ತಾರೆ. ಅರಬಿ ಶಬ್ದವ್ಯುತ್ಪತ್ತಿ ವಿಜ್ಞಾನದ ಶ್ರೀಮಂತಿಕೆ ಒಡಮೂಡಿಸಿದ ವ್ಯಾಕರಣ ಸಾಧ್ಯತೆಗಳು ಮತ್ತು ಅರ್ಥ ವೈವಿಧ್ಯತೆಗಳು ಇಲ್ಲಿ ಗಮನಾರ್ಹ. ಒಂದು ಅಧ್ಯಾಯ ಯಾ ಹಲವು ಅಧ್ಯಾಯಗಳ ನಡುವಿನ ಏಕತೆಯನ್ನು ಸಾಧಿಸಲು ಅತಿ ಅಗತ್ಯವಾದ ವಿವರಣಾ ಕೌಶಲ್ಯಗಳನ್ನು ಪ್ರಯೋಗಿಸಲು ಉಪನ್ಯಾಸಕ ಶುರು ಹಚ್ಚುತ್ತಾನೆ. ಈ ನಿಟ್ಟಿನಲ್ಲಿ ಆಲೋಚಿಸುವಾಗ ಉಪನ್ಯಾಸಕರನ್ನು ಜೀವಿಸುವ ವಿವರಣಾ ಗ್ರಂಥಗಳಾಗಿ ನೋಡಬೇಕಾಗುತ್ತದೆ. ಅವರನ್ನು ಹಿಂಬಾಲಿಸುವ ವಿದ್ಯಾರ್ಥಿಗಳನ್ನು ಸನಾತನವಾದ ವಿದ್ವತ್‌ ಕಲೆಯಲ್ಲಿನ ಸಹಯೋಗಿಗಳಾಗಿಯೂ.

ನಿಮಿತ್ತ ಕಾರಣದೊಂದಿಗೆ ಗಾಢವಾದ ನಂಟಿರುವ ಮತ್ತು ಆದರ್ಶಪ್ರಾಯ ಕಾರಣ ಎನ್ನಬಹುದಾದ ಸ್ವರೂಪ ಕಾರಣ ಶಿಕ್ಷಣ ವ್ಯವಸ್ಥೆಯ ಸತ್ವದ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಆದುದರಿಂದಲೇ, ಸ್ವರೂಪ ಕಾರಣ ಶಿಕ್ಷಣಶಾಸ್ತ್ರ ಮತ್ತು ಪಠ್ಯಕ್ರಮವನ್ನು ಒಳಗೊಳ್ಳುವುದನ್ನು ಕಾಣಬಹುದು. ವ್ಯಾಕರಣ, ತರ್ಕ ವಿಜ್ಞಾನ, ಮತ್ತು ಅಲಂಕಾರ ವಿಜ್ಞಾನದಂಥಾ ಭಾಷಾ ಕಲೆಗಳಿಂದ ಮಿಳಿತವಾಗಿರಬೇಕು ಪಠ್ಯಕ್ರಮ. ಭಾಷೆ ಬಹುಮುಖ ಅರ್ಥಗಳನ್ನು ಸ್ಫುರಿಸಬಲ್ಲದು ಎನ್ನುವ ಗ್ರಹಿಕೆಯೊಂದಿಗೆ ಪುಸ್ತಕಗಳೊಂದಿಗೆ ಅನುಸಂಧಾನ ನಡೆಸಬೇಕು. ಗ್ರಂಥಕರ್ತ ಉದ್ದೇಶಿಸಿದ ತಾತ್ಪರ್ಯವನ್ನು ಹುಡುಕಲು ವಿವರಣಾತ್ಮಕ ಪುಸ್ತಕಗಳಲ್ಲಿ ಪ್ರಯತ್ನಿಸಬೇಕು. ಅದೇ ವೇಳೆ ಸಾಹಿತ್ಯ ಮತ್ತು ಕಾವ್ಯಗಳು ಹೆಚ್ಚಿನ ಸ್ವಾತಂತ್ರ್ಯ ಓದುಗನಿಗೆ ನೀಡುತ್ತದೆ. ತರ್ಕ ವಿಜ್ಞಾನದಿಂದ ಪುಸ್ತಕದ ತಾರ್ಕಿಕ ಸಮರ್ಪಕತೆಯನ್ನು ಮತ್ತು ಅಲಂಕಾರ ವಿಜ್ಞಾನದಿಂದ ಕಲಾಕೃತಿಯ ಅರ್ಹತೆಯನ್ನು ನಿರ್ಧರಿಸಬಹುದು.

ಮನುಷ್ಯನಲ್ಲಿ ಸೌಂದರ್ಯ, ಸತ್ಯ ಮತ್ತು ಒಳಿತಿನೊಂದಿಗಿನ ಪ್ರೀತಿಯನ್ನು ಅಂಕುರಿಸುವಂತೆ ಮಾಡುವುದೆ ಶಿಕ್ಷಣದ ಗುರಿ. ಅಲ್ಲಾಹನ ಅಸ್ತಿತ್ವ ಮತ್ತು ಪೂರ್ವ ತೀರ್ಮಾನಗಳನ್ನು ಅಂಗೀಕರಿಸುವ ಗಾಢನಿಶ್ಚಯಗಳಾದ ಈಮಾನನ್ನು ಮುಸ್ಲಿಮರು ಹಿರಿಯ ಸತ್ಯವೆಂದು ಕರೆಯುತ್ತಾರೆ. ಇಸ್ಲಾಂ ಅಥವಾ ಭೂಮ್ಯಾಕಾಶಗಳಲ್ಲಿನ ದೇವೇಚ್ಛೆ ಮತ್ತು ಕ್ರಿಯೆಗಳಿಗಾಗಿನ ಸಮರ್ಪಣೆ ಮತ್ತು ತ್ಯಾಗವನ್ನು ಅವರು ಒಳಿತು ಎಂದು ಗ್ರಹಿಸುತ್ತಾರೆ. ಸೌಂದರ್ಯವನ್ನು ನಾವು ಇಹ್ಸಾನ್‌ ಎಂದು ಕರೆಯುತ್ತೇವೆ. ಸುಂದರಗೊಳಿಸು, ಸೌಂದರ್ಯವನ್ನು ಪ್ರತಿಫಲಿಸು ಮತ್ತು ಸೌಂದರ್ಯವನ್ನು ಗ್ರಹಿಸು ಎಂಬೀ ಅರ್ಥಗಳು ಭಾಷಾತ್ಮಕವಾಗಿ ಅದು ನೀಡುತ್ತದೆ. ಈ ಮೂರು ಗುರಿಗಳ ಪೈಕಿ ಪ್ರತಿಯೊಂದೂ ಸ್ವತಂತ್ರವಾದ ಕಲೆಗಳಲ್ಲಿ ಪ್ರತಿಫಲಿಸಿದೆ ನೋಡಿ. ವ್ಯಾಕರಣ ಎನ್ನುವುದು ಮನುಜನ ಉತ್ಕೃಷ್ಟವಾದ ಒಳಿತು ಆಗಿದೆ, ತರ್ಕ ವಿಜ್ಞಾನದಿಂದ ಸತ್ಯವನ್ನು ಕಂಡುಹಿಡಿಯಲು ಮತ್ತು ಅದರ ಅಭಾವದಲ್ಲಿ ಅಸತ್ಯವನ್ನು ಕಾಣಲು ಸಾಧ್ಯ ಮತ್ತು ತಾನು ಮಾಡುವ ಕೆಲಸಗಳಿಗೆಲ್ಲಾ ಸೌಂದರ್ಯ ಸ್ಪರ್ಶ ನೀಡಲು ಅಲಂಕಾರ ವಿಜ್ಞಾನ ಅನುವು ಮಾಡಿಕೊಡುತ್ತದೆ. ಈ ಕಲೆಗಳಲ್ಲಿ ಪ್ರಾವೀಣ್ಯತೆ ಪಡೆದುಕೊಂಡರೆ ಇಂದ್ರಿಯ ಜ್ಞಾನದ ಸಿಕ್ಕುಗಳಲ್ಲಿ ಸಿಕ್ಕಿಹಾಕಿಕೊಳ್ಳದೆ ಬುದ್ಧಿಯ ಬೆಳಕಿನಲ್ಲೆ ನಿರಂಕುಶ ವಾಸ್ತವವನ್ನು ಅರಗಿಸಿಕೊಳ್ಳಲು ಸಾಧ್ಯವಿದೆ. ಆ ಮೂಲಕ ನೈಜತೆಯ ಅನುಭವ ಉಂಟಾಗುತ್ತದೆ ಮತ್ತು ಶಾಂತಿ ಮತ್ತು ಗ್ರಹಿಕೆ ಪ್ರಾಪ್ತವಾಗುತ್ತದೆ.

ಶೈಖ್ ಹಂಝ ಯೂಸುಫ್
ಕನ್ನಡಕ್ಕೆ: ನಝೀರ್ ಅಬ್ಬಾಸ್

ಸಾವಿತ್ರಿ ಬಾಯಿ ಫುಲೆಯವರನ್ನು ನೆನಪಿಸುವ ದೇಶ ಫಾತಿಮಾ ಶೇಖ್‌ ರನ್ನು ಮರೆತಿದ್ದೇಕೆ?

ಪ್ರತಿ ವರ್ಷ ಜನವರಿ ೩ರಂದು ಭಾರತವು ಸಾವಿತ್ರಿ ಬಾಯಿ ಫುಲೆಯವರ ಜನ್ಮ ದಿನವನ್ನು ಆಚರಿಸುತ್ತದೆ. ಅವರು ಮೊದಲ ಭಾರತೀಯ ಮಹಿಳಾ ಶಿಕ್ಷಕಿಯಾಗಿದ್ದರು ಮತ್ತು ಬಾಲಕಿಯರಿಗಾಗಿ ಶಾಲೆಯನ್ನು ಪ್ರಾರಂಭಿಸಿದ ಮೊದಲಿಗೆಯೂ ಆಕೆಯೇ ಆಗಿದ್ದರು. ಈ ಸಾವಿತ್ರಿ ಬಾಯಿ ಫುಲೆ ಹಾಗೂ‌ ಅವರ ಪತಿ ಜ್ಯೋತಿ ರಾವ್ ಫುಲೆಯವರ ಜೊತೆಗೇ ನಿಂತ ಮಹಿಳೆಯೋರ್ವರಿದ್ದರು. ಅವರು ಭಿದೇವಾಡದ ಫುಲೆಯವರ ಶಾಲೆಯನ್ನು ಹೆಣ್ಣು ಮಕ್ಕಳಿಗೆ ಕಲಿಸುತ್ತಿದ್ದರು. ಮನೆಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನು ಸಾರುತ್ತಾ, ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಪ್ರೋತ್ಸಾಹಿಸುತ್ತಿದ್ದರು ಮತ್ತು ಶಾಲೆಯ ಆಡಳಿತಾತ್ಮಕ ವ್ಯವಸ್ಥೆಗಳನ್ನೂ ನೋಡಿಕೊಳ್ಳುತ್ತಿದ್ದರು. ಆಕೆಯ ಸಹಾಯವಿಲ್ಲದೇ ಆ ಬಾಲಕಿಯರ ಶಾಲೆಯ ಯೋಜನೆ ಒಂದು ಉತ್ತಮ ರೂಪ ಪಡೆದುಕೊಳ್ಳುತ್ತಲೇ ಇರಲಿಲ್ಲ. ಆಕೆಯೇ ಫಾತಿಮಾ ಶೈಕ್.‌ ಭಾರತದ ಇತಿಹಾಸವು ಸದ್ಯ ಆಕೆಯನ್ನೂ, ಆಕೆಯ ಕೊಡುಗೆಯನ್ನೂ ಚೌಕಟ್ಟಿನಿಂದ ಬದಿಗಿರಿಸಿದೆ.

ಈ ವರ್ಷವೂ ಟ್ವಿಟರ್‌ ನಲ್ಲಿ ಸಾವಿತ್ರಿ ಬಾಯಿ ಫುಲೆ ತಮ್ಮ ಜನ್ಮದಿನದಂದು ಟ್ರೆಂಡಿಂಗ್‌ ನಲ್ಲೇ ಇದ್ದರು. ಪ್ರಧಾನಿ ನರೇಂದ್ರ ಮೋದಿ ಆಕೆಯ ಕುರಿತಾದಂತೆ “ಸಾವಿತ್ರಿ ಬಾಯಿ ಫುಲೆ ಜಯಂತಿಯಂದು ನಾನು ಆಕೆಗೆ ನಮಿಸುತ್ತೇನೆ. ಆಕೆಯ ಜೀವನವು ಬಡವರನ್ನು ಮುನ್ನೆಲೆಗೆ ತರುವಲ್ಲಿ ಮತ್ತು ಬಡವರ ಅಭಿವೃದ್ಧಿಗೆ ಮೀಸಲಾಗಿತ್ತು” ಎಂದು ಬರೆದುಕೊಂಡಿದ್ದರು. ಪ್ರಧಾನಿಯ ಸಹೋದ್ಯೋಗಿಗಳು ಕೂಡಾ ಈ ಕುರಿತಾದಂತೆ ಬರೆದರು. ಕಳೆದ ವರ್ಷ ಗೂಗಲ್‌ ʼಡೂಡಲ್‌ʼ ಮೂಲಕ ಸಾವಿತ್ರಿ ಬಾಯಿ ಫುಲೆಗೆ ಗೌರವ ಸಲ್ಲಿಸಿತ್ತು. ಬ್ರಾಹ್ಮಣ ವಿರೋಧಿ ಲೇಖನಗಳನ್ನೇ ಫುಲೆ ಹೆಚ್ಚಾಗಿ ನರೆಯುತ್ತಿದ್ದರೂ ಆರೆಸ್ಸೆಸ್‌ ಕೂಡಾ ಆಕೆಯ ಮುಂದೆ ತಲೆಬಾಗಿತು. ಪುಣೆಯ ಯುನಿವರ್ಸಿಟಿಯು ಸಾವಿತ್ರಿ ಬಾಯಿ ಫುಲೆ ಯುನಿವರ್ಸಿಟಿ ಎಂದು ಮರುನಾಮಕರಣಗೊಂಡಿತು. ಮಹಾರಾಷ್ಟ್ರ ಸರಕಾರವು ಆಕೆಯ ಹೆಸರಿನಲ್ಲಿ ಪ್ರಶಸ್ತಿಗಳನ್ನೂ ಘೋಷಿಸಿತು. ಆಕೆಯ ಜೀವನದ ಕುರಿತಾದಂತೆ ಒಂದು ಟಿವಿ ಸೀರಿಯಲ್‌ ಕೂಡಾ ಪ್ರಸಾರವಾಗಿತ್ತು. ಇದು ಆಕೆಗೆ ಸಲ್ಲಬೇಕಾದದ್ದು ಮತ್ತು ಇತಿಹಾಸ ಆಕೆಗೆ ನ್ಯಾಯ ಸಲ್ಲಿಸುತ್ತಿದೆ.

ಫಾತಿಮಾ ಶೇಖ್‌ ರವರ ಜನ್ಮದಿನಾಂಕದ ಬಗ್ಗೆಯೇ ಹಲವಾರು ಗೊಂದಲಗಳು, ಮತ್ತು ಚರ್ಚೆಗಳಿವೆ. ಜನವರಿ ೯ರಂದು ಆಕೆಯ ಜನ್ಮದಿನ ಎಂಬುವುದು ಹಲವರ ಅಭಿಪ್ರಾಯ. ಆದರೂ ಆಕೆಯ ಜನ್ಮದಿನವನ್ನು ಏಕೆ ನೆನಪಿಸುತ್ತಿಲ್ಲ?

ಸಾವಿತ್ರಿ ಬಾಯಿ ಫುಲೆ ಹಾಗೂ ಜ್ಯೋತಿ ರಾವ್ ರನ್ನು ತಮ್ಮ ಪೂರ್ವಜರ ಮನೆಯನ್ನು ಬಿಟ್ಟು ತೆರಳುವಂತೆ ಜ್ಯೋತಿ ರಾವ್‌ ತಂದೆ ಆದೇಶಿಸಿದಾಗ ಮನೆಯಿಂದ ಹೊರ ಬಿದ್ದ ಇಬ್ಬರಿಗೆ ಆಸರೆಯಾಗಿದ್ದು ಫಾತಿಮಾ ಶೇಖ್‌ ಮತ್ತು ಆಕೆಯ ಸಹೋದರ ಉಸ್ಮಾನ್‌ ಶೇಖ್‌ ಆಗಿದ್ದರು. ಅದೇ ಕಟ್ಟಡದಲ್ಲಿ ಮುಂದೆ ಶಾಲೆಯನ್ನೂ ಪ್ರಾರಂಭ ಮಾಡಲಾಯಿತು. ಆ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದೆಂದರೆ ಅದೊಂದು ದೊಡ್ಡ ಕ್ರಾಂತಿಗೆ ಸಮಾನವಾಗಿತ್ತು. ಅಂಥಹಾ ಸಂದರ್ಭದಲ್ಲಿ ಫಾತಿಮಾ ಶೈಖ್‌ ರವರು ಶಾಲೆ ತೆರೆಯಲು ಅವಕಾಶ ನೀಡಿದ್ದು ನಿಜಕ್ಕೂ ಅತ್ಯುತ್ತಮ ವಿಚಾರವೇ ಸರಿ. ಆದರೂ ಇತಿಹಾಸಗಳಲ್ಲಿ ಫಾತಿಮಾ ಶೇಖ್‌ ಇಂದಿಗೂ ಕಣ್ಮರೆಯಾಗಿದ್ದಾರೆ.

ಸಾವಿತ್ರಿ ಬಾಯಿ ಫುಲೆಗೆ ಸುಲಭವಾಗಿ ಜಯ ದೊರಕಿತು ಎಂದು ಹೇಳಲು ಸಾಧ್ಯವಿಲ್ಲ. ಮುಖ್ಯವಾಹಿನಿಯ ಇತಿಹಾಸಕಾರರು ಆಕೆಯೊಂದಿಗೆ ಕ್ರೂರವಾಗಿಯೇ ವರ್ತಿಸಿದ್ದಾರೆ. ಭಾರತದ ಪುನರುಜ್ಜೀವನದ ಕುರಿತು ಉಲ್ಲೇಖಿಸುವಾಗ ಅವರು ರಾಜಾ ರಾಮ್‌ ಮೋಹನ್‌ ರಾಯ್‌, ಈಶ್ವರ ಚಂದ್ರ ವಿದ್ಯಾ ಸಾಗರ್‌, ಸ್ವಾಮಿ ದಯಾನಂದ, ಸ್ವಾಮಿ ವಿವೇಕಾನಂದ ಅಥವಾ ಮಹಾದೇವ ಗೋವಿಂದ್‌ ರಾನಡೆಯವರ ಕುರಿತು ಹೇಳುತ್ತಾರೆ. ಹಿಂದಿನ ಪಠ್ಯ ಪುಸ್ತಕಗಳಲ್ಲಿ ಸಾವಿತ್ರಿ ಬಾಯಿ ಫುಲೆಯ ಹೆಸರೇ ಇರಲಿಲ್ಲ. ದಶಮಾನಗಳ ಬಳಿಕ ದಲಿತ ಮತ್ತು ಬಹುಜನ ಕಾರ್ಯಕರ್ತರು ಆಕೆಯ ಬಗ್ಗೆ ಮಾತನಾಡಲು ಆರಂಭಿಸಿದ ಬಳಿಕವೇ ಪಠ್ಯಪುಸ್ತಕಗಳಲ್ಲಿ ಸಾವಿತ್ರಿ ಬಾಯಿ ಫುಲೆಯ ಪಾಠಗಳು ಅಚ್ಚಾಗತೊಡಗಿದ್ದು.

ಆದರೆ ಆ ಪ್ರಕ್ರಿಯೆಯು ಫಾತಿಮಾ ಶೇಖ್‌ ರವರನ್ನು ಹೊರಜಗತ್ತಿಗೆ ಪರಿಚಯಿಸುವಲ್ಲಿ ವಿಫಲವಾಯಿತು. ಓರ್ವ ಶೈಕ್ಷಣಿಕ ಮತ್ತು ಸಮಾಜ ಸುಧಾರಕಿಯಾಗಿ ಆಕೆಯ ಕೊಡುಗೆ ಫುಲೆಗಳಿಗಿಂತಲೂ ಕಡಿಮೆಯೇನಲ್ಲ. ಆಕೆ ಇವರಿಗಿಂತಲೂ ಹೆಚ್ಚು ತೊಂದರೆಗಳನ್ನು ಅನುಭವಿಸಿರಬಹುದು. ಆಕೆಯ ಸಾಧನೆಗಳನ್ನು ಕಡತಗಳಲ್ಲಿ ರಕ್ಷಿಸಿಡಲಾಗಿಲ್ಲ. ಅಂದಿನ ಪರಿಸ್ಥಿತಿಯಲ್ಲಿ ಮುಸಿಂ ಸಮುದಾಯದ ಮಹಿಳೆಯಾಗಿ ಹೆಣ್ಣುಮಕ್ಕಳ ಶಾಲೆ ತೆರೆಯುವಲ್ಲಿ ಆಕೆ ಅದೆಷ್ಟು ಕಷ್ಟ ಅನುಭವಿಸಿರಬಹುದು? ಕೆಲ ಬರಹಗಾರರು ಆ ಸಂದರ್ಭದಲ್ಲಿ ಆಕೆ ಹಿಂದೂ ಮತ್ತು ಮುಸ್ಲಿಂ ಸಮುದಾಯ ಎರಡರಿಂದಲೂ ವಿರೋಧ ಕಟ್ಟಿಕೊಳ್ಳಬೇಕಾಗಿ ಬಂತು ಎಂದು ಬರೆದಿದ್ದಾರೆ. ಈ ವೇಳೆ ಸಾವಿತ್ರಿ ಬಾಯಿ ಫುಲೆಯವರಯ ಬ್ರಾಹ್ಮಣರ ವಿರುದ್ಧ ಹೋರಾಡುತ್ತಿದ್ದರು. ದಲಿತರಿಗೂ ತಮ್ಮ ಶಾಲೆಯ ಬಾಗಿಲನ್ನು ತೆರೆಯುತ್ತಿದ್ದರು.

ಫಾತಿಮಾ ಶೇಖ್‌ ವಿಭಿನ್ನ ಪ್ರತಿಪಾದನೆಯನ್ನು ಹೊಂದಿದ್ದರು. ಬಾಲಕಿಯರ ಶಿಕ್ಷಣವನ್ನು ಇಸ್ಲಾಂ ಧರ್ಮ ವಿರೋಧಿಸುವುದಿಲ್ಲ. ಆದ್ದರಿಂದ ಆಕೆ ಫುಲೆಯವರೊಂದಿಗೆ ಸೇರಿಕೊಂಡು ಜಾತಿ ವಿರೋಧಿ ಯೋಜನೆಯ ಭಾಗವಾಗಿಬಿಟ್ಟರು ಮತ್ತು ಓರ್ವ ಕ್ರಾಂತಿಕಾರಿಯೂ ಆದರು. ಮುಸ್ಲಿಂ ಹೆಣ್ಣು ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಪರಿಚಯಿಸುವ ಫಾತಿಮಾರ ಪ್ರಯತ್ನಗಳು ಕೆಲ ಮುಸ್ಲಿಂ ವಿದ್ವಾಂಸರಿಗೂ ಹಿಡಿಸಿರಲಿಲ್ಲ ಎಂಬುವುದು ಸಾವಿತ್ರಿ ಬಾಯಿ ತಮ್ಮ ಪತಿಗೆ ಪತ್ರ ಬರೆಯುವಾಗ ಉಲ್ಲೇಖಿಸಿದ್ದರು. ಫಾತಿಮಾ ಶೇಖ್‌ ರ ಹಲವು ಕೊಡುಗೆಗಳ ಕುರಿತೂ ಅವರು ಬರೆದಿದ್ದು ಸದ್ಯ ಮಹಾರಾಷ್ಟ್ರದ ಉರ್ದು ಶಾಲೆಯ ಪಠ್ಯಪುಸ್ತಕದ ಭಾಗವಾಗಿದೆ.

ಫಾತಿಮಾ ಶೇಖ್‌ ತಮ್ಮ ಜೀವನ ಅಥವಾ ತಾವು ಮಾಡಿದ ಕಾರ್ಯದ ಕುರಿತು ಏನೂ ಬರೆದಿಟ್ಟಿಲ್ಲ. ಅದಕ್ಕಾಗಿಯೇ ಅವರ ಕುರಿತಾದಂತೆ ನಮಗೆ ಏನೂ ತಿಳಿಸಿಲ್ಲ. ಆದರೆ ಸಾವಿತ್ರಿ ಬಾಯಿ ಫುಲೆ ಹಾಗೂ ಅವರ ಪತಿ ಜ್ಯೋತಿ ರಾವ್‌ ಫುಲೆಯವರು ಬಹಳಷ್ಟು ಬರೆದಿದ್ದಾರೆ. ತಾವು ಬರೆಯುತ್ತಿದ್ದ ಪ್ರಬಂಧ, ನಾಟಕಗಳು, ಕವಿತೆಗಳಲ್ಲಿ ಅವರು ತಮ್ಮ ಜೀವನವನ್ನು ತೆರೆದಿಟ್ಟಿದ್ದಾರೆ. ಜಾತಿ ವ್ಯವಸ್ಥೆಯ ವಿರುದ್ಧ ಕೆಲಸ ಮಾಡಿದ್ದ ಫಾತಿಮಾ ಶೇಖ್‌ ರನ್ನು ಇತಿಹಾಸಕಾರರು ತಿರಸ್ಕರಿಸಿದ್ದರೂ ಕೂಡಾ ಅವರ ಕುರಿತಾದಂತೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ ಎನ್ನುವ ವಿಚಾರವನ್ನು ನಾವು ಒಪ್ಪಲೇಬೇಕು.


(ಲೇಖಕರು ಇಂಡಿಯಾ ಟುಡೇ ಹಿಂದಿ ಮ್ಯಾಗಜಿನ್ ಮಾಜಿ ಕಾರ್ಯನಿರ್ವಾಹಕ ಸಂಪಾದಕರಾಗಿದ್ದು ಮಾಧ್ಯಮ ಮತ್ತು ಸಮಾಜವಿಜ್ಞಾನ ವಿಭಾಗದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.)

ದಿಲೀಪ್ ಮಂಡಲ್
ಅನುವಾದ: ಮುಆದ್ ಜಿ ಎಂ

ಕೃಪೆ: The print Magazine

ಇಸ್ಲಾಮಿಕ್ ನಾಗರಿಕತೆ ಮತ್ತು ಕ್ಯಾಲಿಗ್ರಾಫಿ; ಒಂದು ಇಣುಕು ನೋಟ

ಕ್ಯಾಲಿಗ್ರಾಫಿಯನ್ನು ಕಲಾ ಪ್ರಕಾರವಾಗಿ ಅಭಿವೃದ್ಧಿಪಡಿಸುವುದು ಕೇವಲ ಇಸ್ಲಾಮಿಕ್ ಸಂಸ್ಕೃತಿಗೆ ಸೀಮಿತವಾಗಿರದೆ ಜಗತ್ತಿನಾದ್ಯಂತ ತನ್ನ ಕಬಂಧ ಬಾಹುಗಳನ್ನು ವ್ಯಾಪಿಸಿಕೊಂಡಿದೆ. ಚೈನೀಸ್, ಜಪಾನೀಸ್ ಕ್ಯಾಲಿಗ್ರಾಫಿ ಹಾಗೂ ವಾಯುವ್ಯ ಯುರೋಪಿನ ಕೆಲ್ಸ್‌ ಪುಸ್ತಕಗಳನ್ನು ಒಳಗೊಂಡಿರುವ ಬೈಬಲ್ ಕೂಡ ಕ್ಯಾಲಿಗ್ರಾಫಿ ಶೈಲಿಯಲ್ಲಿ ವಿರಚಿತವಾಗಿದೆ. ಆದಾಗ್ಯೂ, ಇಸ್ಲಾಮಿಕ್ ಜಗತ್ತಿನಲ್ಲಿ ಕ್ಯಾಲಿಗ್ರಾಫಿಯನ್ನು ದೊಡ್ಡ ಪ್ರಮಾಣದಲ್ಲಿ, ಆಶ್ಚರ್ಯಕರವಾಗಿ ವೈವಿಧ್ಯಮಯ ಮತ್ತು ಕಾಲ್ಪನಿಕ ರೀತಿಯಲ್ಲಿ ಬಳಸಲಾಗುತ್ತದೆ. ಇದು ಲಿಖಿತ ಪದವನ್ನು ಲೇಖನಿ ಮತ್ತು ಕಾಗದದ ಮಾಧ್ಯಮದ ಮೂಲಕ ಆಕರ್ಷಕವಾಗಿ ಚಿತ್ರಿಸಿ ಜನರ ಬೆರಗಿಗೆ ನಿಮಿತ್ತವಾಗುತ್ತದೆ. ಆದ್ದರಿಂದ ಕ್ಯಾಲಿಗ್ರಾಫಿ, ಇಸ್ಲಾಮಿಕ್ ಕಲೆಯ ನೈಜ ಮಾದರಿಯಾಗಿದೆ.

ಇಸ್ಲಾಮಿಕ್ ಕ್ಯಾಲಿಗ್ರಾಫಿಯ ಪ್ರತಿಭೆ ಅನಂತ ಸೃಜನಶೀಲತೆ ಮತ್ತು ಕೌಶಲ್ಯದಲ್ಲಿ ಮಾತ್ರವಲ್ಲ, ಪಠ್ಯವನ್ನು ತಲುಪಿಸುವ ಮತ್ತು ಔಪಚಾರಿಕ ಸೌಂದರ್ಯದ ಸಂಕೇತಗಳ ಮೂಲಕ ಅದರ ಅರ್ಥವನ್ನು ವ್ಯಕ್ತಪಡಿಸುವ ಕ್ಯಾಲಿಗ್ರಾಫರ್‍ಗಳ ಪ್ರತಿಭೆಯನ್ನು ಊಹಿಸಲು ಸಾಧ್ಯವಾಗುತ್ತದೆ.

ಅರೇಬಿಕ್ ಭಾಷೆ ಮತ್ತು ಕ್ಯಾಲಿಗ್ರಾಫಿಯ ಕಲೆ ಮುಸ್ಲಿಮರಿಂದ ಹೆಚ್ಚು ಗೌರವಿಸಲ್ಪಟ್ಟಿದೆ. ಏಕೆಂದರೆ ಏಳನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ ﷺ ರಿಗೆ ಬಹಿರಂಗಪಡಿಸಿದ ಖುರ್‍ಆನ್‍ನ ಭಾಷೆ ಅರೆಬಿಕ್ ಆಗಿತ್ತು. ಖುರ್‍ಆನ್‍ನಿನ ವಚನಗಳು ಮುಸ್ಲಿಮರಿಗೆ ಪವಿತ್ರವಾಗಿವೆ. ಇದಲ್ಲದೆ, ಸಾಮಾನ್ಯವಾಗಿ ಪುಸ್ತಕಗಳಿಗಿಂತ ಖುರ್‍ಆನ್‍ನ ಉನ್ನತ ಸ್ಥಾನಮಾನವು ಅದರ ಗೌರವಕ್ಕೆ ಕಾರಣವಾಗಿದೆ. ಆದಾಗ್ಯೂ, ಖುರ್‍ಆನ್‍ನ ಪಾವಿತ್ರ್ಯವು ಕ್ಯಾಲಿಗ್ರಾಫಿಯ ಮಹತ್ವವನ್ನು ಒತ್ತಿ ಹೇಳುತ್ತದೆ. ಆದರೆ ಆಂತರಿಕವಾಗಿ ಪರೀಕ್ಷಿಸಿದಾಗ ಯಾವುದೇ ಅರೇಬಿಕ್ ಕ್ಯಾಲಿಗ್ರಾಫಿ ಧಾರ್ಮಿಕವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ, ಕಲಾಕೃತಿಗಳ ಕ್ಯಾಲಿಗ್ರಾಫಿ ಶಾಸನಗಳು ಈ ಕೆಳಗಿನ ಪಠ್ಯಗಳನ್ನು ಒಳಗೊಂಡಿರುತ್ತವೆ:

  • ಖುರ್‍ಆನ್‍ನ ಮಾತುಗಳು
  • ಧಾರ್ಮಿಕ ವಾಕ್ಯಗಳು
  • ಕವಿತೆಗಳು
  • ಆಡಳಿತಾಧಿಗಾರ ಸ್ತುತಿಗಳು
  • ನಾಣ್ಣುಡಿಗಳು
    ಈ ಅಂಶಗಳನ್ನು ಎಲ್ಲಾ ರೀತಿಯ ಕ್ಯಾಲಿಗ್ರಾಫಿಯಲ್ಲಿ ಕಾಣಬಹುದು.

ಪ್ರವಾದಿ ಮುಹಮ್ಮದ್ ﷺ ರ ಕಾಲದಿಂದಲೂ ಅರೇಬಿಕ್ ಅತ್ಯುತ್ತಮ ವಿಶ್ವ ಭಾಷೆಯಾಗಿ ಮಾರ್ಪಟ್ಟಿದೆ. ಅರೇಬಿಕನ್ನು ಧರ್ಮ, ಸರ್ಕಾರ, ವಾಣಿಜ್ಯ, ಸಾಹಿತ್ಯ ಮತ್ತು ವಿಜ್ಞಾನದ ಭಾಷೆಯಾಗಿ ಬಳಸಲಾಗುತ್ತಿತ್ತು. ಕಾಲಾಂತರದಲ್ಲಿ ಅರೇಬಿಕ್ ಲಿಪಿಯನ್ನು ಕೆಲವು ಹೊಸ ಫಾಂಟ್‍ಗಳಿಗೆ ಸೇರಿಸಲಾಯಿತು ಜೊತೆಗೆ ಪರ್ಷಿಯನ್ ಮತ್ತು ಟರ್ಕಿಶ್‍ನಂತಹ ಇತರ ಭಾಷೆಗಳಲ್ಲಿ ಬರೆಯಲು ಬಳಸಲಾಗುತ್ತಿತ್ತು.

ಲಿಪಿಗಳನ್ನು ಹೇಗೆ ಅಭಿವೃದ್ಧಿಪಡಿಸಲಾಗಿದೆ:

ಅರೇಬಿಕ್‍ನ ಅನೇಕ ಸ್ಥಳೀಯ ಭಾಷೆಗಳು ಇಸ್ಲಾಮಿಕ್ ಪೂರ್ವದಲ್ಲಿ ಮಾತನಾಡುತ್ತಿದ್ದರೂ, ಕೆಲವೇ ಕೆಲವು ಬರೆಯಲ್ಪಟ್ಟವು. ಹೆಚ್ಚಿನ ಸಾಹಿತ್ಯ ಮೌಖಿಕವಾಗಿ ಪ್ರಸಾರವಾಯಿತು. ಪ್ರವಾದಿಯ ಮರಣದ ನಂತರ, ಖುರ್‍ಆನ್ ಬರೆಯುವವರೆಗೂ ಮೌಖಿಕವಾಗಿ ಉಳಿಯಿತು. ಇದಕ್ಕಾಗಿ ಅರೇಬಿಕ್ ಲಿಪಿಯನ್ನು ಆಧುನೀಕರಿಸಬೇಕಾಗಿತ್ತು. ಏಳನೇ ಶತಮಾನದ ಅಂತ್ಯದ ವೇಳೆಗೆ ಅರೇಬಿಕ್ ಲಿಪಿಯ ಮೂಲ ರೂಪವನ್ನು ಬಳಸಲಾಗುತ್ತಿತ್ತು. ಉದಾಹರಣೆಗೆ, ಕ್ರಿ.ಶ 691 ರಲ್ಲಿ ನಿರ್ಮಿಸಲಾದ ‘ಜೆರುಸಲೆಮ್ ಡೋಮ್ ಆಫ್ ದಿ ರಾಕ್’ ಅನ್ನು ತೆಗೆದುಕೊಳ್ಳಿ, ಇದು ಇಸ್ಲಾಮಿಕ್ ವಾಸ್ತುಶಿಲ್ಪದ ಉಳಿದಿರುವ ಮೊದಲ ಸ್ಮಾರಕವಾಗಿದೆ. ಪ್ರವಾದಿಯ ಉತ್ತರಾಧಿಕಾರಿಗಳಾದ ಖಲೀಫರು ಮುದ್ರಿಸಿದ ನಾಣ್ಯಗಳ ಮೇಲೆ ಹೊಸ ಬರವಣಿಗೆ ಕಾಣಿಸಿಕೊಂಡಿತು. ಇಸ್ಲಾಂ ಧರ್ಮದ ಏಕ ದೇವೋಪಾಸನೆಯನ್ನು ಘೋಷಿಸಲು ಖುರ್‍ಆನ್ ಪದ್ಯಗಳನ್ನು ಡೋಮ್ ಆಫ್ ದಿ ರಾಕ್ ಮತ್ತು ಆರಂಭಿಕ ಇಸ್ಲಾಮಿಕ್ ನಾಣ್ಯಗಳಲ್ಲಿ ಬಳಸಲಾಗಿದೆ.

ಮೊದಲ ಅಧಿಕೃತ ಕ್ಯಾಲಿಗ್ರಾಫಿ ಶೈಲಿಯನ್ನು ಇರಾಕ್‍ನ ಕೂಫಾ ನಗರದ ಗೌರವಾರ್ಥವಾಗಿ ‘ಕೂಫಿ ಶೈಲಿ’ ಎಂದು ಕರೆಯಲಾಗುತ್ತದೆ. ಇದನ್ನು ಆರಂಭಿಕ ಖುರ್‍ಆನ್ ಹಸ್ತಪ್ರತಿಗಳು ಮತ್ತು ಡೋಮ್ ಆಫ್ ರಾಕ್ ಸೇರಿದಂತೆ ಕೆತ್ತನೆಗಳಲ್ಲಿ ಬಳಸಲಾಗುತ್ತಿತ್ತು. ಈ ಹೊಸ ಕ್ಯಾಲಿಗ್ರಫಿ ಶೈಲಿಯು ಅನೇಕ ಸುಂದರವಾದ ರೂಪಾಂತರಗಳನ್ನು ಒಳಗೊಂಡಿದೆ, ಉದಾಹರಣೆಗೆ ಎಲೆಗಳಿರುವ ಕೂಫಿಕ್ (ಸುರುಳಿಯಾಕಾರದ ಎಲೆಯ ಆಕಾರದಲ್ಲಿ) ಮತ್ತು ಫ್ಲೋರೈಡೇಟೆಡ್ ಕೂಫಿಕ್ (ಹೂವುಗಳ ಆಕಾರದಲ್ಲಿ). ಈ ಎರಡನೆಯ ಕೂಫಿ ಕ್ಯಾಲಿಗ್ರಫಿ ಶೈಲಿಯನ್ನು ಖುರ್‍ಆನ್ ಹಸ್ತಪ್ರತಿಗಳು, ನಾಣ್ಯಗಳು, ವಾಸ್ತುಶಿಲ್ಪದ ಶಾಸನಗಳು ಮತ್ತು ಕುಂಬಾರಿಕೆಗಳು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಬಳಸಲಾಗುತ್ತದೆ.
ಎರಡನೇ ವಿಧದ ಕೂಫಿ ಕ್ಯಾಲಿಗ್ರಾಫಿ ಮಧ್ಯಪ್ರಾಚ್ಯದಲ್ಲಿ ಅಂದರೆ ಬಾಗ್ದಾದ್‍ನಲ್ಲಿ ಅಭಿವೃದ್ಧಿ ಹೊಂದುತ್ತಿರುವಾಗ, ಮುಸ್ಲಿಂ ಸ್ಪೇನ್ ಅಥವಾ ಮೊರಾಕೊದಲ್ಲಿ ಹೊಸ ಶೈಲಿಯು ಹೊರಹೊಮ್ಮುತ್ತದೆ. ಈ ಪಶ್ಚಿಮ ಪ್ರದೇಶದ ಅರೇಬಿಕ್ ಹೆಸರು ಅಲ್ ಮಗ್ರಿಬ್. ಆದ್ದರಿಂದ ಈ ಹೊಸ ಶೈಲಿಯ ಕ್ಯಾಲಿಗ್ರಫಿಯನ್ನು ‘ಮಗ್ರಿಬಿ’ ಎಂದು ಕರೆಯಲಾಯಿತು. ಈ ಕ್ಯಾಲಿಗ್ರಫಿ ಶೈಲಿಯನ್ನು ಇಂದಿಗೂ ಕೆಲವು ಕ್ಯಾಲಿಗ್ರಾಫಿ ಕಲಾವಿದರು ಬಳಸುತ್ತಾರೆ. ಪೂರ್ವ ಇಸ್ಲಾಮಿಕ್ ಜಗತ್ತಿನಲ್ಲಿ ಹದಿಮೂರನೆಯ ಶತಮಾನದ ಹೊತ್ತಿಗೆ ಕೂಫಿ ಶೈಲಿಗಳು ಹೆಚ್ಚಾಗಿ ಅಳಿದುಹೋಗಿದ್ದವು ಮತ್ತು ಅವುಗಳನ್ನು ಬಳಕೆಯಲ್ಲಿರುವ ಹೆಚ್ಚು ವೃತ್ತಾಕಾರದ ಶೈಲಿಗಳಿಂದ ಬದಲಾಯಿಸಲಾಯಿತು.

ಬಹುಶಃ ಹೊಸ ಶೈಲಿಗಳ ಬೆಳವಣಿಗೆಯಿಂದಾಗಿ ಪೂರ್ವದಲ್ಲಿ ಪ್ರಾಣಿಗಳ ಚರ್ಮಕ್ಕೆ ಬದಲಾಗಿ ಕಾಗದವನ್ನು ಬಳಸಲಾಗುತ್ತಿತ್ತು. ಆದ್ದರಿಂದ ಹಸ್ತಪ್ರತಿಗಳು ಮತ್ತು ದಾಖಲೆಗಳಿಗೆ ಪ್ಯಾಪಿರಸ್ ಮುಖ್ಯ ಮಾಧ್ಯಮವಾಯಿತು. ಕಾಗದದ ಮೇಲ್ಮೈಯನ್ನು (ಪಿಷ್ಟದಿಂದ ಮುಚ್ಚಲಾಗುತ್ತದೆ) ಅದು ತುಂಬಾ ನಯವಾದ ಮತ್ತು ಹೊಳೆಯುವವರೆಗೆ ಕಲ್ಲಿನಿಂದ ಲೇಪಿಸಲಾಗುತ್ತಿತ್ತು. ಇದು ಪೆನ್ನಿನ ಬಳಕೆಯನ್ನು ಹೆಚ್ಚು ಸುಲಭಗೊಳಿಸಿತು. (ಪೂರ್ವದ ಭಾಗಗಳಲ್ಲಿ (ಮಗ್ರಿಬ್) ಪ್ರಾಣಿಗಳ ಚರ್ಮಗಳ ಬಳಕೆ ದೀರ್ಘಕಾಲದವರೆಗೆ ಮುಂದುವರೆಯಿತು).

ಮತ್ತೊಂದು ಗಮನಾರ್ಹ ಅಂಶವೆಂದರೆ ಲೇಖನಿ. ಇದು ಬಿದಿರಿನಿಂದ ಮಾಡಲ್ಪಟ್ಟಿದೆ. ಬಿದಿರಿನ ತುದಿಯನ್ನು ಚಾಕುವಿನಿಂದ ಕತ್ತರಿಸುವ ಮೂಲಕ ಲೇಖನಿಯ ಮೊಳೆಯನ್ನು ತಯಾರಿಸಲಾಗುತ್ತದೆ. ಮೊಳೆ, ವಿಭಿನ್ನ ರೀತಿಯಲ್ಲಿ ಕತ್ತರಿಸುವುದು ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ. ಮೊಳೆಯನ್ನು ಓರೆಯಾದ ಕೋನದಲ್ಲಿ ಕತ್ತರಿಸಿದರೆ ವೃತ್ತದಲ್ಲಿ ಕ್ಯಾಲಿಗ್ರಾಫಿಯನ್ನು ಹೆಣೆಯಬಹುದು. ಈ ರಚನೆ ದಪ್ಪ ಹಾಗೂ ತೆಳ್ಳನೆಯ ಪಟ್ಟೆಗಳನ್ನು ರಚಿಸಲು ಸಹಾಯಕಾರಿ. ಕ್ಯಾಲಿಗ್ರಾಫಿ ಕಲೆಗೆ ವಿಶೇಷ ಸೊಬಗು ಮತ್ತು ವೈವಿಧ್ಯತೆಗೆ ಇದು ಅನುವು ಮಾಡಿಕೊಡುತ್ತದೆ. ಲೇಖನಿಯ ಅಗಲವೂ ಮುಖ್ಯವಾಗಿದೆ. ದೊಡ್ಡ ಅಕ್ಷರಗಳಿಗೆ ವಿಶಾಲವಾದ ಮೊಳೆಗಳು ಬೇಕಾಗುತ್ತವೆ. ಆದ್ದರಿಂದ ಉದ್ದೇಶಿಸಿದ ಸಾಲಿನ ಅಗಲಕ್ಕೆ ಮೊಳೆಯ ಅಗಲವು ಅತ್ಯಗತ್ಯ. ಒಟ್ಟಾರೆ ಒಂದು ನಿರ್ದಿಷ್ಟ ಅನುಪಾತದಲ್ಲಿ ಮುಂದುವರಿಯುತ್ತದೆ.

ಮೊಳೆಯ ಅಗಲವನ್ನು ಆಧರಿಸಿದ ಅನುಪಾತ ವ್ಯವಸ್ಥೆಯು ಪ್ರತ್ಯೇಕ ಅಕ್ಷರಗಳ ಆಕಾರಗಳನ್ನು ಮತ್ತು ಸತತವಾಗಿ ಅಕ್ಷರಗಳ ಸಾಪೇಕ್ಷ ಗಾತ್ರಗಳನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಅಕ್ಷರ ಅಲಿಫ್ ಒಂದೇ ಲಂಬ ರೇಖೆಯನ್ನು ಹೊಂದಿರುತ್ತದೆ. ಒಂದು ಶೈಲಿಯಲ್ಲಿ, ಇದು ಕೇವಲ ಮೂರು ಪಟ್ಟು ಅಗಲವಾಗಿರುತ್ತದೆ. ಮತ್ತೊಂದು ಶೈಲಿಯಲ್ಲಿ ಇದು ಏಳು ಪಟ್ಟು ಹೆಚ್ಚಾಗಿರುತ್ತದೆ. ಆದ್ದರಿಂದ ಎರಡನೇ ಶೈಲಿಯಲ್ಲಿ ಅಲಿಫ್ ಅಕ್ಷರ ಬಹಳ ಮುಖ್ಯವಾಗಿದೆ. ಈ ವ್ಯತ್ಯಾಸಗಳು ಅಕ್ಷರ ಸಂಭವಿಸಬಹುದಾದ ವಿಭಿನ್ನ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಎರಡು ಅಕ್ಷರಗಳ ನಡುವಿನ ಉದ್ದದಲ್ಲಿ ಸಾಮರಸ್ಯ ಇದೆ. ಇದು ಗಮನಾರ್ಹ. ಏಕೆಂದರೆ ಅರೇಬಿಕ್ ಲಿಪಿ ಯಾವಾಗಲೂ ಪರಸ್ಪರ ಸಂಬಂಧ ಹೊಂದಿದೆ. ಅಲ್ಲದೆ, ಅರೆಬಿಕ್ ಲಿಪಿ ಮುದ್ರಿತ ಇಂಗ್ಲಿಷ್‍‌ನಂತೆ ವಿಶೇಷವಲ್ಲ.

ಕ್ಯಾಲಿಗ್ರಫಿ ಶೈಲಿಯ ರಚನೆಯ ಮತ್ತೊಂದು ಮೂಲಭೂತ ಅಂಶವೆಂದರೆ ಬೇಸ್‍ಲೈನ್‍ನ ಸ್ವರೂಪ. ಅನೇಕ ಲಿಪಿಗಳಲ್ಲಿ ಅಕ್ಷರಗಳನ್ನು ಬರೆದ ಕಾಲ್ಪನಿಕ ರೇಖೆಯು ಸಮತಲವಾಗಿತ್ತು. ಪ್ರತಿಯೊಂದು ಹೊಸ ಅಕ್ಷರಗಳು ಬೇಸ್‍ಲೈನ್‍ಗಿಂತ ಮೇಲಕ್ಕೆ ಪ್ರಾರಂಭವಾಗುತ್ತವೆ ಮತ್ತು ನಂತರ ಅದನ್ನು ಪೂರೈಸಲು ಎಡಕ್ಕೆ ಇಳಿಯುತ್ತವೆ. ಅರೇಬಿಕ್ ಲಿಪಿ ಇಂಗ್ಲಿಷ್‍ಗೆ ವಿರುದ್ಧವಾಗಿ ಬಲದಿಂದ ಎಡಕ್ಕೆ ವಿಭಿನ್ನವಾಗಿ ಓದಲಾಗುತ್ತದೆ. ಈ ಸಾಲುಗಳನ್ನು ಮೂಲತಃ ಅಧಿಕೃತ ದಾಖಲೆಗಳಲ್ಲಿ ಭದ್ರತಾ ವೈಶಿಷ್ಟ್ಯವಾಗಿ ಪರಿಚಯಿಸಲಾಯಿತು. ಏಕೆಂದರೆ ಅನಧಿಕೃತ ಸೇರ್ಪಡೆಗಳನ್ನು ತಡೆಗಟ್ಟಲು ಸಾಲುಗಳನ್ನು ಒಟ್ಟಿಗೆ ಜೋಡಿಸಬಹುದು. ಈ ವಿಧಾನವನ್ನು ಪರಿಣಾಮಕಾರಿ ಎಂದು ಪರಿಗಣಿಸಲಾಗಿರುವುದರಿಂದ ಈ ವೈಶಿಷ್ಟ್ಯವನ್ನು ಇತರ ಸಂದರ್ಭಗಳಲ್ಲಿ ಬಳಸಲಾಗುತ್ತದೆ.

ಪರಿಕರಗಳು ಮತ್ತು ಬರೆಯುವ ವಿಧಾನಗಳು:
ವಿವಿಧ ಉಪಕರಣಗಳಿಂದ ಕ್ಯಾಲಿಗ್ರಾಫಿಯನ್ನು ಬಳಸಿ ಡಿಸೈನ್‍ಗಳನ್ನು ತಯಾರಿಸಲಾಗುತ್ತದೆ. ಕಾಗದದ ಮೇಲೆ ಪೆನ್ನಿನೊಂದಿಗೆ ಬರೆಯುವ ತಾಂತ್ರಿಕ ಪರಿಣಾಮಗಳು ಇತರ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ ಕ್ಯಾಲಿಗ್ರಫಿಯನ್ನು ಹೆಚ್ಚಾಗಿ ಬಳಸ ತೊಡಗುತ್ತಾರೆ.
ಉದಾಹರಣೆಗೆ, ದಪ್ಪದಿಂದ ತೆಳುವಾದ ರೇಖೆಯವರೆಗಿನ ಸುಂದರವಾದ ಶ್ರೇಣಿಯನ್ನು ಮತ್ತು ಚೌಕಾಕೃತಿಯಲ್ಲಿ ಮೊಳೆಯೊಂದಿಗೆ ಬರೆಯಲಾದ ಉತ್ತಮ ಹಸ್ತಾಕ್ಷರ ನೀವು ನೋಡಬಹುದು. ಕ್ಯಾಲಿಗ್ರಾಫಿ ಕಲಾವಿದರು ಪ್ರಮಾಣ ಫಲಕ ಅಥವಾ ಮಾದರಿ ತೂತು ತಗಡುಗಳಲ್ಲಿ ಬರೆಯುವ ಮೂಲಕ ಸಾಮಾನ್ಯವಾಗಿ ತಮ್ಮ ವಿನ್ಯಾಸಗಳನ್ನು ರಚಿಸುತ್ತಾರೆ.

ಪ್ರಾಣಿಗಳ ಚರ್ಮದ ಮೇಲೆ ಬರೆಯುವಿಕೆ:
ಕಾಗದದ ಆವಿಷ್ಕಾರದ ಮೊದಲು ಪ್ರಾಣಿಗಳ ಚರ್ಮದಲ್ಲಿ ಅತ್ಯುತ್ತಮ ಬರವಣಿಗೆಯನ್ನು ಲಿಖಿತಗೊಳಿಸಲಾಗುತ್ತಿತ್ತು. ಇದನ್ನು ಬರೆಯಲು ತಯಾರಿಸಿದ ಹಾಗೂ ಶುಚಿಗೊಳಿಸಿದ ಪ್ರಾಣಿಗಳ ಚರ್ಮದಿಂದ ನಿರ್ಮಿಸಲಾಗುತ್ತಿತ್ತು. ಶಾಯಿಯಿಂದ ತುಂಬಿದ ಬಿದಿರಿನ ಮೊಳೆಯನ್ನು ಲೇಖನಿಯಾಗಿ ಬಳಸಿ, ಸ್ವಲ್ಪ ಕೋನದಲ್ಲಿ ಕತ್ತರಿಸಿ ಬರವಣಿಗೆಯಲ್ಲಿ ಬಳಸುತ್ತಿದ್ದರು. ಪ್ರಾಣಿಗಳ ಚರ್ಮದಲ್ಲಿನ ಬರವಣಿಗೆಯಲ್ಲಿ ಅಳಿಸಬಹುದು ಅಥವಾ ಅದನ್ನು ಬದಲಾಯಿಸಬಹುದು ಎಂಬ ವಿಶಿಷ್ಟತೆಯನ್ನು ಮೇಳೈಸಿದೆ.

ಕಾಗದದ ಮೇಲೆ ಬರೆಯುವುದು:
ಕ್ಯಾಲಿಗ್ರಾಫಿಯನ್ನು ಲೇಖನಿ ಮತ್ತು ಶಾಯಿಯಿಂದ ಹೊಳಪು ಕಾಗದದ ಮೇಲೆ ಪಿಷ್ಟ ಮತ್ತು ಪಾಲಿಶ್‍ನೊಂದಿಗೆ ಬರೆಯಬಹುದು. ಇದು ಪಠ್ಯಕ್ಕೆ ಉತ್ತಮವಾದ ಹಾಗೂ ನಯವಾದ ಮೇಲ್ಮೈಯನ್ನು ನೀಡುತ್ತದೆ.

ಪಾತ್ರೆಗಳು:
ಕೆಳಗಿನ ಕ್ಯಾಲಿಗ್ರಾಫಿ ಶಾಸನವನ್ನು (ಸಸ್ಯ ವಿನ್ಯಾಸಗಳು) ಆಳವಾಗಿ ಕೆತ್ತಲಾಗಿದೆ. ಈ ವಿಧಾನವನ್ನು ಮಧ್ಯಪ್ರಾಚ್ಯದಲ್ಲಿ ಕ್ರಿ.ಶ 1350 ರಿಂದ 1600 ರ ಆರಂಭದವರೆಗೆ ಹೃಸ್ವ ಅವಧಿಗೆ ಮಾತ್ರ ಬಳಸಲಾಗುತ್ತಿತ್ತು.

ಮರದ ತುಂಡು:
ಮರದ ತುಂಡಿನ ಮೇಲೆ ಅಕ್ಷರಗಳನ್ನು ಕೆತ್ತಿ ನಂತರ ಬಣ್ಣ ಲೇಪಿಸುತ್ತಾರೆ. ಕೆಳಗಿನ ಚಿತ್ರದಲ್ಲಿ ಈಗ ಅಧಿಕ ಬಣ್ಣಗಳು ಕಾಣೆಯಾಗಿವೆ.
ಆದಾಗ್ಯೂ, ಕೆಲವು ಕುರುಹುಗಳು ಉಳಿದಿವೆ.

ಗ್ಲಾಸ್:
ಕೆಳಗೆ ಚಿತ್ರಿಸಿದ ಕಿಟಕಿಯನ್ನು ವಿವಿಧ ಬಣ್ಣಗಳ ಸಣ್ಣ ತುಂಡು ಗಾಜಿನಿಂದ ನಿರ್ಮಿಸಲಾಗಿದೆ. ಅವುಗಳನ್ನು ಪ್ಲ್ಯಾಸ್ಟರ್ ಮುಂತಾದ ಚೌಕಟ್ಟಿನೊಳಗಿನ ಮಾದರಿಗಳಲ್ಲಿ ಜೋಡಿಸಲಾಗುತ್ತದೆ.

ಬಟ್ಟೆಗಳು:
ಮುಸ್ಲಿಂ ಸ್ಪೇನ್‍ನ ರೇಷ್ಮೆ ನೇಕಾರರು ಅರೇಬಿಕ್ ಭಾಷೆಯಲ್ಲಿ ಬರೆದ ಬರವಣಿಗೆಗಳನ್ನು ನಿಖರವಾಗಿ ಬಟ್ಟೆಗಳಲ್ಲಿ ಲಿಖಿತಗೊಳಿಸುತ್ತಿದ್ದರು. ಈ ವಿನ್ಯಾಸಕ್ಕೆ ಹೆಚ್ಚಿನ ಗಮನ ನೀಡಬೇಕು. ‘ನಮ್ಮ ಸುಲ್ತಾನರ ವೈಭವ’ ಎಂಬ ನುಡಿಗಟ್ಟು ವಿನ್ಯಾಸದ ವಿಶಾಲ ಮುದ್ರೆಯೊಳಗೆ ಇದು ಪುನರಾವರ್ತನೆಯಾಗುತ್ತದೆ.

ಲೇಪಿತ ಗಾಜು:
ಬಿಸಿ ಗಾಜನ್ನು ಆಕಾರಕ್ಕೆ ರೂಪಾಂತರಗೊಳಿಸಿದ ತರುವಾಯ ತಣ್ಣಗಾಗಿಸುವ ಮೂಲಕ ದೀಪವನ್ನು ತಯಾರಿಸಲಾಗುತ್ತದೆ. ನಂತರ ದಂತಕವಚ ಬಣ್ಣಗಳು ಮತ್ತು ಚಿನ್ನದ ಲೇಪನವನ್ನು ಸೇರಿಸಲಾಗುತ್ತದೆ. ದಂತಕವಚವು ಬಣ್ಣ ಮತ್ತು ಗಾಜಿನ ಮಿಶ್ರಣವಾಗಿದೆ. ಅದನ್ನು ಕುಲುಮೆಯಲ್ಲಿ ಬಿಸಿ ಮಾಡಿದಾಗ, ದೀಪ ಕರಗಿ ಹೊಂದಿಕೊಳ್ಳುತ್ತದೆ. ಅಲಂಕೃತ ಗಾಜು ದಂತಕವಚದಿಂದ ಅಲಂಕರಿಸಲ್ಪಟ್ಟಿದೆ ಮತ್ತು ಕುಂಚಗಳಿಂದ ಗಿಲ್ಟ್ ಕೂಡ.

ಲೋಹದ ಕೆಲಸ:
ಲೋಹದ ಕೆಲಸಗಾರರು ಹಿತ್ತಾಳೆಯ ಮೇಲ್ಮೈಯ ಸಣ್ಣ ಭಾಗಗಳನ್ನು ತುಂಡರಿಸಿದ ನಂತರ ಅಲ್ಲಿ ಬೆಳ್ಳಿ ಹಾಗೂ ಚಿನ್ನವನ್ನು ತುಂಬಿಸುತ್ತಾರೆ. ಮೃದುವಾಗಿ ಕೆತ್ತಿದ ಲೋಹದ ಮೇಲ್ಮೈಯನ್ನು ತುಂಬಿಸಲು ಅವರು ಕಪ್ಪು ಫಿಲ್ಲರ್‌ ಅನ್ನು ಜೋಡಿಸುವ ಜೊತೆ ಇತರೆ ಉಪಕರಣಗಳಿಂದ ಸೌಂದರ್ಯವನ್ನು ವೃದ್ಧಿಸುತ್ತಾರೆ.

ಕ್ಯಾಲಿಗ್ರಾಫಿ ಅಲಂಕಾರಗಳು:
ಬಹಳ ಸೊಗಸಾಗಿ ಬರೆಯುವುದರೊಂದಿಗೆ ಕ್ಯಾಲಿಗ್ರಾಫಿಯ ಸೌಂದರ್ಯವನ್ನು ಹೆಚ್ಚಿಸಲು ವಿವಿಧ ಮಾರ್ಗಗಳಿವೆ. ಪ್ರಮುಖ ವಾಕ್ಯಗಳನ್ನು ಹಳದಿ ಬಣ್ಣದಲ್ಲೊ ಅಥವಾ ಕಪ್ಪು ಬಣ್ಣವನ್ನು ಹೊರತುಪಡಿಸಿ ಯಾವುದೇ ಬಣ್ಣದಲ್ಲಿ ಸೌಂದರ್ಯ ಪೂರ್ಣವಾಗಿ ಮಾಡಬಹುದು. ಅಕ್ಷರಗಳು ಹಾಗೂ ಪದಗಳನ್ನು ಬಿಡಿ ಬಿಡಿಯಾಗಿ ನಕಲಿಸಬಹುದು ಅಥವಾ ಜೋಡಿಸಿ ವಿನ್ಯಾಸಗೊಳಿಸಬಹುದು. ಕ್ಯಾಲಿಗ್ರಾಫರ್‍ಗಳು ವಿಭಿನ್ನ ಶೈಲಿಗಳು ಅಥವಾ ಪಠ್ಯದ ವರ್ಗಗಳಿಗೆ ವಿಭಿನ್ನ ಗಾತ್ರಗಳು, ಬಣ್ಣಗಳು ಮತ್ತು ಪಠ್ಯ ಶೈಲಿಗಳನ್ನು ಸಂಯೋಜಿಸುತ್ತಾರೆ. (ಆದರೆ ಅವರು ಯಾವಾಗಲೂ ಕ್ಯಾಲಿಗ್ರಾಫಿ ನಿಯಮಗಳನ್ನು ಅನುಸರಿಸುತ್ತಾರೆ)

ಅಲಂಕರಿಸಿದ ಫ್ರೇಮ್‌‌ಗಳು ಹಾಗೂ ಇನ್ನಿತರ ರೇಖೆಗಳ ಸ್ಪಷ್ಟತೆಗೆ ಅಡ್ಡಿಯಾಗುವುದಿಲ್ಲ. ಪಠ್ಯದ ವಿಷಯದಿಂದ ವಿಮುಖವಾಗುವುದಿಲ್ಲ. ಖುರ್‌ಆನ್ ದೈವೀ ವಾಕ್ಯವಾದ್ದರಿಂದ ಇದನ್ನು ಗಮನಿಸುವುದು ಬಹಳ ಮುಖ್ಯ.

ಕ್ಯಾಲಿಗ್ರಫಿ ಕಲಾವಿದರು:
ಇಸ್ಲಾಮಿಕ್ ಸಮಾಜದಲ್ಲಿ ವ್ಯಾಪಕವಾಗಿ ಗುರುತಿಸಿದ ಕಲಾವಿದರಲ್ಲಿ ಒಂದು ಗುಂಪು ಕ್ಯಾಲಿಗ್ರಾಫರ್‌ಗಳು. ಇಂದಿಗೂ ಇದು ಅನೇಕ ಸ್ಥಳಗಳಲ್ಲಿ ಮುಂದುವರಿದು ಪ್ರಖ್ಯಾತವಾಗಿದೆ. ಇದು ಅವರ ಸ್ಥಾನಮಾನ, ಭೋಧನೆಯ ಉತ್ಕೃಷ್ಟತೆ ಮತ್ತು ಕೆಲಸದ ಶ್ರೇಷ್ಠತೆಯನ್ನು ಆಧರಿಸಿದೆ. ಇದರ ಪರಿಣಾಮವಾಗಿ ಒಂದು ಸಾಹಿತ್ಯಿಕ ಸಂಪ್ರದಾಯವು ಅಭಿವೃದ್ಧಿಗೊಂಡಿತು. ಮಾತ್ರವಲ್ಲದೆ ಕ್ಯಾಲಿಗ್ರಫಿಯ ಇತಿಹಾಸ, ಅಧ್ಯಾಪನೆ, ಹಾಗೂ ಗುರು-ಶಿಷ್ಯರ ನಡುವಿನ ಪ್ರಸರಣ ಜಾಲವಾಗಿ ಕಲ್ಪಿಸಲಾಯಿತು. ಒಬ್ಬ ವಿದ್ಯಾರ್ಥಿಯು ತನ್ನ ಶಿಕ್ಷಕ ಒದಗಿಸಿದ ಮಾದರಿಗಳನ್ನು ನಕಲಿಸಲು, ಅಭ್ಯಾಸ ಮಾಡಲು ವರ್ಷಗಳೇ ತೆಗೆದುಕೊಳ್ಳಬಹುದು. ಅವನು/ಅವಳು ಈ ರೀತಿಯಾಗಿ ತತ್ವಗಳು ಮತ್ತು ನಿಯಮಗಳನ್ನು ಕಲಿತಾಗ ಮಾತ್ರ ಕ್ಯಾಲಿಗ್ರಾಫರ್ ಆಗಬಹುದು. ತರಬೇತಿ ಪಡೆದು ಕ್ಯಾಲಿಗ್ರಾಫಿಯಲ್ಲಿ ನಿಪುಣರಾದ ವ್ಯಕ್ತಿಗಳು ನವನವೀನ ರಚನೆಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ಕ್ಯಾಲಿಗ್ರಾಫಿ ಕಲಿಯುವುದು ಇತರ ಉದ್ಯೋಗಗಳಲ್ಲಿ ಕೌಶಲ್ಯ ಗಳಿಸುವಂತೆಯೇ ಇದೆ..

ಕ್ಯಾಲಿಗ್ರಫಿಯನ್ನು ಅಧ್ಯಯನ ಮಾಡಿದ ಅನೇಕರು ಹಸ್ತಪ್ರತಿಗಳ ಮೂಲಕ ಸಂಪಾದಿಸುವಷ್ಟು ವಯಸ್ಸಾದಾಗ ತಮ್ಮ ತರಬೇತಿಯನ್ನು ನಿಲ್ಲಿಸುತ್ತಾರೆ. ಹದಿನೆಂಟನೇ ಮತ್ತು ಇಪ್ಪತ್ತನೇ ಶತಮಾನಗಳ ನಡುವೆ ಇಸ್ಲಾಮಿಕ್ ಜಗತ್ತಿನಲ್ಲಿ ಮುದ್ರಣಾಲಯ ಕ್ರಮೇಣವಾಗಿ ಪ್ರಾರಂಭವಾದರೂ, ಹೆಚ್ಚಿನ ಪುಸ್ತಕಗಳು ಇಸ್ಲಾಮಿಕ್ ಅವಧಿಯಲ್ಲಿ ಕೈಯಿಂದಲೇ ತಯಾರಿಸಲ್ಪಟ್ಟವು. ಎಲ್ಲಾ ಬರಹಗಾರರು ಕ್ಯಾಲಿಗ್ರಾಫರ್‍ಗಳಾಗಿರಲಿಲ್ಲ. ಇದಲ್ಲದೆ, ಕೆಲವು ಜನರು ನಿಯಮಗಳನ್ನು ಪಾಲಿಸದೆ ಅನೇಕ ಪುಸ್ತಕಗಳನ್ನು ವೈಯಕ್ತಿಕ ಶೈಲಿಯಲ್ಲಿ ನಕಲಿಸಿ ಕ್ಯಾಲಿಗ್ರಾಫಿಗೆ ಕುಂದು ತಂದಿದ್ದಾರೆ. ಇನ್ನೂ ಕೆಲವರು ನಿಯಮ ಪಾಲಿಸಿ, ಉತ್ತಮ ಹಾಗೂ ಸ್ಪಷ್ಟವಾದ ಕೈ ಬರಹದಲ್ಲಿ ನಕಲಿಸಿದ ಪುಸ್ತಕವು ಅಮೂಲ್ಯ ಕೊಡುಗೆಯಾಗಿಸಿದ ಮಹಾತ್ಮರೂ ಇದ್ದಾರೆ. ಇತರರು ಸರ್ಕಾರಿ ಕಚೇರಿಯಲ್ಲಿ ಗುಮಾಸ್ತ ಹುದ್ದೆಯಂತಹ ನಿರ್ದಿಷ್ಟ ಉದ್ಯೋಗಗಳು ಪ್ರಾಪ್ತಿಯಾಗಲು ಕ್ಯಾಲಿಗ್ರಾಫಿಯನ್ನು ಅಧ್ಯಯನ ಮಾಡಿದರು ಹಾಗೂ ಆಡಳಿತಗಾರರ ಅಧಿಕೃತ ದಾಖಲೆಗಳನ್ನು ಕ್ಯಾಲಿಗ್ರಾಫಿಯ ವಿಭಿನ್ನ ಶೈಲಿಗಳನ್ನು ಬಳಸಿ ಅವರ ಮೆಚ್ಚುಗೆಗೆ ಪಾತ್ರರಾದರು. ಅಂತಹ ಕೆಲವು ಉದಾಹರಣೆಗಳು ಬಹಳ ಗಮನಾರ್ಹ. ಬರವಣೆಗೆಯ ಶ್ರೀಮಂತಿಕೆ ಹಾಗೂ ಸಂಕೀರ್ಣತೆ ಕ್ಯಾಲಿಗ್ರಾಫಿಯ ವೈಭವಕ್ಕೆ ಬೆಳಕು ಚೆಲ್ಲುತ್ತದೆ.

ಹೆಚ್ಚು ಪ್ರಾವೀಣ್ಯತೆ ಪಡೆದ ಕ್ಯಾಲಿಗ್ರಾಫರ್‍ಗಳು ಅತ್ಯಂತ ಸುಂದರವಾದ ಹಸ್ತಪ್ರತಿಗಳನ್ನು ತಯಾರಿಸಿದರು. ಅವರ ಬರಹಗಳು ಅಮೂಲ್ಯವಾದವು. ಅವರು ಸಾಮಾನ್ಯವಾಗಿ ಸಮಾಜದ ಶ್ರೀಮಂತ ಜನರಿಗೆ, ವಿಶೇಷವಾಗಿ ಸುಲ್ತಾನರು ಮತ್ತು ಇತರ ಆಡಳಿತಗಾರರಿಗಾಗಿ ಕೆಲಸ ಮಾಡಿದರು. ಆಡಳಿತಗಾರರ ಅರಮನೆಯ ಇಲಾಖೆಯಲ್ಲಿ ಪುಸ್ತಕ ತಯಾರಿಕೆ ಮತ್ತು ಸಂಬಂಧಿತ ಕೆಲಸಗಳಿಗಾಗಿ ಅತ್ಯುತ್ತಮ ಚಿತ್ರವನ್ನು ಹೆಚ್ಚಾಗಿ ಮೀಸಲಿಡಲಾಗಿತ್ತು. ಚಿತ್ರಕಲೆ ಪೂರ್ಣಗೊಂಡ ನಂತರ, ಅಲ್ಲಿ ಕೆಲಸ ಮಾಡಿದ ಇತರ ಕಲಾವಿದರು ಮತ್ತು ಕುಶಲಕರ್ಮಿಗಳು ತಮ್ಮ ಚಿತ್ರಿಸಿದ ಆಭರಣಗಳು ಮತ್ತು ಅತ್ಯುತ್ತಮ ಬೈಂಡಿಂಗ್ ಉಪಯೋಗಿಸಿ ಪುಸ್ತಕವನ್ನು ಸಂಪೂರ್ಣಗೊಳಿಸುತ್ತಿದ್ದರು.

ಇತರ ಮಾಧ್ಯಮಗಳಲ್ಲಿಯೂ ಕೃತಿಗಳನ್ನು ರಚಿಸಲು ತಜ್ಞ ಕ್ಯಾಲಿಗ್ರಾಫರ್‍ಗಳನ್ನು ನೇಮಿಸಲಾಯಿತು. ಹಸ್ತಪ್ರತಿಯಲ್ಲಿ ನಿರಂತರ ಪಠ್ಯವನ್ನು ನಕಲಿಸುವುದರಿಂದ ಇದೊಂದು ವಿಭಿನ್ನ ಕೆಲಸವಾಗಿತ್ತು. ಕ್ಯಾಲಿಗ್ರಾಫರ್‍ಗೆ ಲಭ್ಯವಿರುವ ಸ್ಥಳವು ಮನಸ್ಸಿನಲ್ಲಿ ತೃಪ್ತಿಕರವಾಗಿರಬೇಕು ಮತ್ತು ಆ ಜಾಗವನ್ನು ಸಮತೋಲಿತ ರೀತಿಯಲ್ಲಿ ತುಂಬಲು ವಿವಿಧ ಶೈಲಿಯ ಲಿಪಿ ನಿಯಮಗಳ ಪ್ರಕಾರ ಕೆಲಸ ಮಾಡಲು ಅಕ್ಷರಗಳನ್ನು ವಿನ್ಯಾಸಗೊಳಿಸಬೇಕಾಗಿತ್ತು. ನುರಿತ ಕ್ಯಾಲಿಗ್ರಾಫರ್‍ಗಳು ತಯಾರಿಸಿದ ಈ ವಿನ್ಯಾಸಗಳು ಮತ್ತು ಇತರ ಏಕ ಹಾಳೆಗಳನ್ನು ಸಂರಕ್ಷಿಸಲಾಗಿತ್ತು. ಅವುಗಳು ನಂತರದ ಪೀಳಿಗೆಗೆ ಉಪಯುಕ್ತವಾಯಿತು. ನಂತರದ ಕಾಲದಲ್ಲಿ, ಅವುಗಳನ್ನು ಆಲ್ಬಮ್‍ಗಳಾಗಿ ಸಂಗ್ರಹಿಸಲಾಯಿತು. ಪರಿಣಾಮವಾಗಿ, ಕ್ಯಾಲಿಗ್ರಾಫರ್‍ಗಳು ಆಲ್ಬಮ್‍ಗಳಲ್ಲಿ ಸೇರಿಸಲು ವಿಶೇಷ ಹಾಳೆಗಳನ್ನು ತಯಾರಿಸಲು ಪ್ರಾರಂಭಿಸಿದರು. ಚಿತ್ರಗಳ ಶೈಲಿಯಲ್ಲಿ ಕ್ಯಾಲಿಗ್ರಾಫಿಯನ್ನು ಹೆಚ್ಚಾಗಿ ಮನೆಗಳ ಗೋಡೆಗಳ ಮೇಲೆ ತೂಗಿಸಲಾಗುತ್ತಿತ್ತು. ಬೋಧನಾ ಶುಲ್ಕಗಳು ಮತ್ತು ಬರವಣಿಗೆಯ ಆಯೋಗಗಳು ಕೆಲವು ನುರಿತ ಕ್ಯಾಲಿಗ್ರಾಫರ್‍ಗಳು ಸ್ವತಂತ್ರವಾಗಿರಲು ಎಡೆ ಮಾಡಿಕೊಟ್ಟವು. ಆದ್ದರಿಂದ ಇಂದು, ಕೆಲವು ಕ್ಯಾಲಿಗ್ರಾಫರ್‍ಗಳು ಸಾಮಾನ್ಯವಾಗಿ ಸ್ವತಂತ್ರವಾಗಿ ಇರಲು ಬಯಸುತ್ತಾರೆ.

ಮೂಲ: ಜೋರ್ಡಾನ್ ಸುದರ್ಮನ್
ಅನುವಾದ: ಅಶ್ರಫ್ ನಾವೂರು

1 5 6 7 8 9 14