ವಿಸ್ಮೃತಿಗೆ ಸರಿದ ಸ್ಪೇನಿನ ಮುಸ್ಲಿಮರು

ನಾಗರಿಕತೆಗೆ ಕಲಾತ್ಮಕ ಮತ್ತು ಬೌದ್ಧಿಕವಾದ ಕೊಡುಗೆಗಳನ್ನು ನೀಡುವ ಮೂಲಕ ಮುಸ್ಲಿಂ ಸ್ಪೇನಿನ ಹೆಸರು ಚರಿತ್ರೆಯಲ್ಲಿ ಹಚ್ಚ ಹಸುರಾಗಿದೆ. ಕ್ರಿ.ಶ. 1492ರಲ್ಲಿ ಗ್ರನಡಾದ ಕೊನೆಯ ಮುಸ್ಲಿಂ ಸಾಮ್ರಾಜ್ಯದ ಪತನದ ನಂತರದ ಮುಸ್ಲಿಂ ಸ್ಪೇನ್‌ನ ಕೊನೆಯ ಶತಮಾನದ ಬಗ್ಗೆ ಬಹುಶಃ ಯಾರೂ ತಿಳಿದಿರಲಾರರು.

ಕ್ರಿ.ಶ. 1232 ರಲ್ಲಿ ಅಸ್ತಿತ್ವಕ್ಕೆ ಬಂದ ನಸ್ರಿದ್ ಸಾಮ್ರಾಜ್ಯವು ಕ್ರಿ.ಶ. 1492 ರಲ್ಲಿ ಕಿಂಗ್ ಫರ್ಡಿನ್ಯಾಂಡ್ ಮತ್ತು ಕ್ವೀನ್ ಇಸಬೆಲ್ಲ ನೇತೃತ್ವದ ಕ್ಯಾಥೊಲಿಕ್ ಕ್ರೈಸ್ತರ ದಾಳಿಗೆ ತುತ್ತಾಗಿ ಸ್ವಾಧೀನ ಕಳೆದುಕೊಂಡಿತು. ನಂತರ ರಾಜನ ಆಜ್ಞೆಯಂತೆ ಐಬೀರಿಯನ್ ಪರ್ಯಾಯ ದ್ವೀಪದಿಂದ ಯಹೂದಿಗಳನ್ನು ಸಂಪೂರ್ಣವಾಗಿ ಹೊರದೂಡಲಾಯಿತು. ಆಟೋಮನ್ ಬಾಯಝೀದರು ನೌಕಾ ಸೇನೆಯನ್ನು ಕಳುಹಿಸಿ ಯಹೂದಿಗಳನ್ನು ತಮ್ಮ ಸಾಮ್ರಾಜ್ಯಕ್ಕೆ ಕರೆತಂದು ಪೌರತ್ವವನ್ನು ನೀಡಿದರು. ಸಾವಿರಾರು ಮುಸ್ಲಿಮರು ಆಶ್ರಯತಾಣಗಳನ್ನು ಅರಸುತ್ತಾ ಮೆಡಿಟರೇನಿಯನ್ ಹಾಗೂ ಇತರ ಪ್ರದೇಶಗಳತ್ತ ಗುಳೆ ಹೊರಟರು. ಕ್ರಿ.ಶ. 1492 ರಲ್ಲಿ ಐದು ಲಕ್ಷಗಳಷ್ಟು ಇದ್ದ ಮುಸ್ಲಿಮರಲ್ಲಿ ಸುಮಾರು ಎರಡು ಲಕ್ಷ ಜನರು ಆಫ್ರಿಕಾದತ್ತ ವಲಸೆ ಹೋದರು.

ಆರಂಭದಲ್ಲಿ ಮುಸ್ಲಿಮರು ಕ್ರೈಸ್ತರ ಆಡಳಿತದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಮಹತ್ವದ ಪಾತ್ರ ಹೊಂದಿದ್ದರು. ನಂತರ ಈ ಪ್ರಕ್ರಿಯೆಯಲ್ಲಿ ಬದಲಾವಣೆ ಬಂತು. ಕ್ಯಾಥೊಲಿಕ್ ಚರ್ಚ್‌ಗಳು ಎಲ್ಲಾ ಮುಸ್ಲಿಮರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಶುರು ಮಾಡಿದವು. ಆದ್ದರಿಂದ ಮುಸ್ಲಿಮರು ಅಲ್ಲಿ ಅತಂತ್ರರಾದರು. ಸ್ಪಾನಿಷ್ ಸರಕಾರವು ಹಣದ ಆಮಿಷ ಒಡ್ಡಿ ಮುಸ್ಲಿಮರನ್ನು ಮತಾಂತರಿಸುವ ಮೊದಲ ಪ್ರಯತ್ನ ಮಾಡಿತು. ಮತಾಂತರಗೊಂಡ ಜನರಿಗೆ ಅಪಾರ ಪ್ರಮಾಣದ ಧನ-ಕನಕ, ಭೂಮಿ ನೀಡಿ ಉಪಚರಿಸಲಾಯಿತು. ಮತಾಂತರಗೊಂಡ ಜನರು ಅವುಗಳನ್ನು ಸ್ವೀಕರಿಸಿ ಪುನಃ ಇಸ್ಲಾಂ ಧರ್ಮಕ್ಕೆ ಮರಳಿದ್ದರಿಂದ ಈ ಪ್ರಯತ್ನವು ವಿಫಲವಾಯಿತು ಎಂದೇ ಹೇಳಬಹುದು.

ಕ್ರಿ.ಶ 15ನೆಯ ಶತಮಾನದ ಅಂತ್ಯದ ವೇಳೆಗೆ ಸ್ಪೇನ್‌ನ ಮುಸ್ಲಿಮರು ಇಸ್ಲಾಂ ಧರ್ಮದ ಕಡೆಗೆ ಉತ್ಸಾಹ ತೋರಿದರು. ಹಾಗೂ ಸಂಪತ್ತಿಗಿಂತ ತಮ್ಮ ನಂಬಿಕೆಗಳಿಗೆ ಬದ್ಧರಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಈ ವಿಚಾರ ಸ್ಪಾನಿಷ್ ಸರಕಾರವು ಹೊಸ ಕಠಿಣ ಕ್ರಮ ಕೈಗೊಳ್ಳುವಂತೆ ಮಾಡಿತು. ಕ್ರಿ.ಶ. 1499 ರಲ್ಲಿ ಬಲವಂತದ ಮತಾಂತರವನ್ನು ತ್ವರಿತವಾಗಿ ಜಾರಿಗೊಳಿಸಲು ಫ್ರಾನ್ಸಿಸ್ಕೋ ಜೆಮೆನಝ್ ಡಿ ಸಿಸ್ನೆರೋಸ್ ಎಂಬ ಕ್ಯಾಥೊಲಿಕ್ ಕಾರ್ಡಿನಲ್‌ನನ್ನು ಸ್ಪೇನಿಗೆ ಕರೆತರಲಾಯಿತು. “ಅನ್ಯಧರ್ಮೀಯರನ್ನು ಮೋಕ್ಷದ ದಾರಿಗೆ ಆಕರ್ಷಿಸಲು ಸಾಧ್ಯವಾಗದೇ ಹೋದರೆ ಅವರನ್ನು ಬಲವಂತವಾಗಿ ಕರೆತರಬೇಕು” ಎಂದು ಆತ ಆಜ್ಞೆ ಇತ್ತನು. ಕಾರ್ಡಿನಲ್ ಫ್ರಾನ್ಸಿಸ್ಕೋ ಸ್ಪೇನಿನ ಮುಸ್ಲಿಮರ ಸಕಲ ಕುರುಹುಗಳನ್ನು ಅಳಿಸುವ ದೃಢ ನಿಶ್ಚಯ ಮಾಡಿದನು. ಕ್ರಿ.ಶ. 1501 ಅಕ್ಟೋಬರ್ ತಿಂಗಳಲ್ಲಿ ಅರೇಬಿಕ್ ಧಾರ್ಮಿಕ ಗ್ರಂಥಗಳನ್ನು ಸುಡಲು ಆತ ರಾಜಕೀಯ ಅನುಮೋದನೆ ಪಡೆದನು. ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಮುಸ್ಲಿಮರನ್ನು ಜೈಲಿಗೆ ಕಳುಹಿಸಲಾಯಿತು. ಅವರಿಗೆ ಚಿತ್ರಹಿಂಸೆ ನೀಡಲಾಯಿತು. ಮತ್ತು ಮತಾಂತರಗೊಳ್ಳಲು ಮನವೊಲಿಸುವ ಸಲುವಾಗಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಕ್ರಿ.ಶ. 1499ರ ಡಿಸೆಂಬರ್ 18-25 ರ ನಡುವೆ ಸುಮಾರು 3000 ಮುಸ್ಲಿಮರಿಗೆ ದೀಕ್ಷಾಸ್ನಾನ (Baptism) ಮಾಡಿಸಿ ಮತಾಂತರಿಸಲಾಯಿತು.

This image has an empty alt attribute; its file name is islamic-spain-c-1024x683.jpg

ಕಿರುಕುಳ ಮತ್ತು ದಬ್ಬಾಳಿಕೆ ಮೂಲಕ ಸ್ಪಾನಿಷ್ ಸರಕಾರವು ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ಮಾಡಿತು. ಅದು ದಂಗೆಗೆ ಕಾರಣವಾಗುತ್ತಿತ್ತು. ದಂಗೆಯನ್ನು ಹಿಂಸಾತ್ಮಕವಾಗಿ ನಿಗ್ರಹಿಸಲು ಸೇನೆಯನ್ನು ಬಳಸಲಾಗುತ್ತಿತ್ತು. ಗ್ರನಡಾದ ಮುಸ್ಲಿಮರು ಬೀದಿಗಳಲ್ಲಿ ಪ್ರತಿಭಟಿಸಿದರು. ಡಿ ಸಿಸ್ನೆರೋಸ್‌ನ ನಿರಂಕುಶ ಪ್ರಭುತ್ವವನ್ನು ವಿರೋಧಿಸಿದರು. ಆತನನ್ನು ಪದಚ್ಯುತಗೊಳಿಸುವ ಬೆದರಿಕೆಯನ್ನು ಒಡ್ಡಿದರು. ಈ ಬಂಡಾಯವನ್ನು ಹತ್ತಿಕ್ಕಲು ಮುಸ್ಲಿಮರ ಬಾಹುಳ್ಯವಿರುವ ನಗರಗಳಿಗೆ ಸೇನೆಯನ್ನು ನುಗ್ಗಿಸಲಾಯಿತು. ಅಲ್ಲಿ ಸೇನೆಯು ನರಮೇಧವನ್ನು ನಡೆಸಿತು. ಮತ್ತು ಅಲ್ಲಿನ ಜನರನ್ನು ಸಾಮೂಹಿಕವಾಗಿ ಮತಾಂತರಿಸಲಾಯಿತು.

ಕ್ರಿ.ಶ. 1502 ಫೆಬ್ರವರಿ 12 ರಂದು ಕ್ಯಾಥಲಿಕನ್ನರು ಕ್ಯಾಸ್ಟಲ್ ಮತ್ತು ಲಿಯೋನ್ ಪ್ರಾಂತ್ಯದ ಮುಸ್ಲಿಮರ ವಿರುದ್ಧ ಮತಾಂತರ ಇಲ್ಲವೇ ಗಡಿಪಾರಿನ ಆದೇಶವನ್ನು ಶಾಸನದ ಮೂಲಕ ಹೊರಡಿಸಿದರು. ಶಾಸನದ ಮೂಲಕ ಇಸ್ಲಾಂ ಧರ್ಮವನ್ನು ಕಾನೂನು ಬಾಹಿರಗೊಳಿಸಲಾಯಿತು. ಶಾಸನದ ಪ್ರಕಾರ 14 ವರ್ಷದ ಕೆಳಗಿನ ಬಾಲಕರು 12 ವರ್ಷದ ಕೆಳಗಿನ ಬಾಲಕಿಯರು ಆಧ್ಯಾತ್ಮಿಕ ಮೋಕ್ಷ (Spiritual Salvation) ಹೊಂದುವ ಅವಕಾಶದಿಂದ ವಂಚಿತರಾಗಬೇಕಾಯಿತು. ಶಾಸನದ ಪ್ರತಿಯು ಮತಾಂತರಕ್ಕಿಂತ ಗಡಿಪಾರಿಗೆ ಒತ್ತು ನೀಡಿತು. ವಾಸ್ತವದಲ್ಲಿ ಕ್ಯಾಸ್ಟಿಲಿಯನ್ ಪ್ರಾಧಿಕಾರವು ಮತಾಂತರಕ್ಕೆ ಪ್ರಾಧಾನ್ಯತೆ ನೀಡಿತು. ಅರಗಾನ್ ಮತ್ತು ವೇಲೆನ್ಸಿಯಾ ಪ್ರಾಂತ್ಯದ ಮುದೈಹರ್ (Mudejars) ಗಳು ಒತ್ತಾಯಪೂರ್ವಕ ಮತಾಂತರಕ್ಕೆ ಒಳಗಾಗದೆ ಉಳಿದಿದ್ದರಿಂದ ಆ ಪ್ರಾಂತ್ಯಗಳಿಗೆ ವಲಸೆ ಹೋಗದಂತೆ ತಡೆಯಲಾಯಿತು. ಉತ್ತರ ಆಫ್ರಿಕಾ, ಆಟೋಮನ್ ಸಾಮ್ರಾಜ್ಯದಂತಹ ಸಾಗರೋತ್ತರ ದೇಶಗಳಿಗೂ ವಲಸೆಯನ್ನು ತಡೆದರು. ಕೊನೆಗೆ ಉಳಿದ ಒಂದು ದಾರಿ ಅಂದರೆ ಅಟ್ಲಾಂಟಿಕ್ ಬಂದರಿನ ಮೂಲಕ ಸಾಗುವುದು. ಅದು ದುರ್ಗಮ ಮತ್ತು ಪ್ರಯಾಸದ ದಾರಿಯಾಗಿದ್ದರಿಂದ ಹಲವರು ಹಿಂಜರಿದರು.

ಕ್ರಿ.ಶ. 1526ರಲ್ಲಿ ಅರಗಾನ್ ಮತ್ತು ವೆಲೆನ್ಸಿಯಾ ಗಳಲ್ಲೂ ಮತಾಂತರದ ಕಾನೂನನ್ನು ಜಾರಿಗೆ ತರಲಾಯಿತು. ಬಹುತೇಕ ಮುಸಲ್ಮಾನರು ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಆದರೆ ಅವರು ರಹಸ್ಯವಾಗಿ ಮುಸ್ಲಿಮರ ಆಚಾರಗಳನ್ನು ಪಾಲಿಸುತ್ತಿದ್ದರು. ಈ ಒಂದು ಸಮುದಾಯವನ್ನು ‘ಮೋರಿಸ್ಕೋಸ್’ (Moriscos) ಗಳೆಂದು ಕರೆಯಲಾಗುತ್ತದೆ.

ರಹಸ್ಯವಾಗಿ ಇಸ್ಲಾಂ ಧರ್ಮೀಯರಾಗಿದ್ದವರನ್ನು ನಿಯಂತ್ರಿಸಲು ನಂತರದ ದಿನಗಳಲ್ಲಿ ದಮನಕಾರಿ ಧೋರಣೆಯನ್ನು ಸ್ಪಾನಿಷ್ ಸರಕಾರವು ತಳೆಯಿತು. ಇಸ್ಲಾಮಿಕ್ ನಂಬಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು. ಇಸ್ಲಾಮಿಕ್ ಕರ್ಮಶಾಸ್ತ್ರದ ಪ್ರಕಾರ ನಡೆಸುವ ಪ್ರಾಣಿವಧೆ (ಹಲಾಲ್) ಯನ್ನು ಕ್ರಿ.ಶ. 1511 ರಲ್ಲಿ ಕಾನೂನು ಬಾಹಿರಗೊಳಿಸಲಾಯಿತು. ಕ್ರಿ.ಶ. 1523 ರಲ್ಲಿ ಖುರ್‌ಆನ್ ಪಠಣ ಮತ್ತು ಇಸ್ಲಾಮಿಕ್ ವಸ್ತ್ರಧಾರಣೆಯನ್ನು ನಿಷೇಧಿಸಲಾಯಿತು. ಕ್ರಿ.ಶ. 1526 ರಲ್ಲಿ ವಿಶೇಷ ದಿನಗಳಲ್ಲಿನ ಸ್ನಾನ ಮತ್ತು ಅರೆಬಿಕ್ ಭಾಷೆಯ ಓದು ಮತ್ತು ಬರಹದ ಮೇಲೂ ನಿರ್ಬಂಧ ಹೇರಲಾಯಿತು. ಸೈನಿಕರು ಯಾವುದೇ ಹೊತ್ತಿನಲ್ಲಿ ಹತ್ತಿಳಿಯಲು ಅನುವಾಗುವಂತೆ ಶಂಕಿತ ಮುಸ್ಲಿಮರ ಮನೆಯ ಬಾಗಿಲನ್ನು ಸದಾ ತೆರೆದಿಡಬೇಕೆಂದು ಆದೇಶಿಸಲಾಯಿತು. ಇಸ್ಲಾಂ ಧರ್ಮವನ್ನು ಅನುಸರಿಸಿ ತಪ್ಪಿತಸ್ಥನೆಂದು ರುಜುವಾತು ಆದರೆ ನಿರ್ದಯವಾಗಿ ಕೊಲ್ಲಲಾಗುತ್ತಿತ್ತು. ಇದೊಂದು ಧಾರ್ಮಿಕ ಭಯೋತ್ಪಾದನೆಯೆಂದೇ ಹೇಳಬಹುದು. ಮೋರಿಸ್ಕೋಸ್‌ಗಳ ಸಂಸ್ಕೃತಿ ಮತ್ತು ಪರಂಪರೆಯ ಮೇಲಿನ ನಿರಂತರ ದಾಳಿಯು ಅವರನ್ನು ಭೂಗತರಾಗುವಂತೆ ಮಾಡಿತು. ಹಾಗೂ ತಮ್ಮ ನಂಬಿಕೆಗಳಲ್ಲಿ ಅಚಲವಾಗುವಂತೆ ಮಾಡಿತು.

ತೀವ್ರವಾದ ನಿರ್ಬಂಧ ಮತ್ತು ದಾಳಿಗಳ ನಡುವೆಯೂ ಸುಮಾರು ನೂರು ವರ್ಷಗಳಷ್ಟು ಕಾಲ ಮೋರಿಸ್ಕೋಸ್‌ಗಳು ತಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಅಚಲರಾಗಿದ್ದರು. ಈ ಸಂದರ್ಭದಲ್ಲಿ ಹಲವಾರು ಇಸ್ಲಾಮಿಕ್ ಕೃತಿಗಳೂ ರಚಿಸಲ್ಪಟ್ಟವು. ಈ ಬೆಳವಣಿಗೆಯನ್ನು ಹೇಗೆ ನಿಯಂತ್ರಿಸಬೇಕೆಂಬ ನಿಟ್ಟಿನಲ್ಲಿ ಕ್ರೈಸ್ತರ ಸಭೆಗಳಲ್ಲಿ ಚರ್ಚೆಗಳು ನಡೆದವು. ಕೆಲವರು ಸೌಜನ್ಯಯುತವಾಗಿ ಕಾರ್ಯಾಚರಣೆ ನಡೆಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಕೆಲವರು ಮೂಲೋತ್ಪಾಟನೆಯೇ ಪರಿಹಾರ ಎಂದು ವಾದಿಸಿದರು. ಕ್ರೈಸ್ತರೇ ಈ ಭೂಮಿಯ ವಾರಸುದಾರರು ಎಂಬುದು ಅವರ ಧೋರಣೆಯಾಗಿತ್ತು.

ಕೊನೆಗೂ, ಮೋರಿಸ್ಕೋಸ್‌ಗಳನ್ನು ಹೊರಹಾಕಬೇಕೆಂಬ ಅಭಿಪ್ರಾಯಕ್ಕೆ ಬಲ ಬಂದು, ಕ್ರಿ.ಶ. 1609 ರ ಎಪ್ರಿಲ್‌ನಲ್ಲಿ ಮೂರನೇ ಫಿಲಿಪ್ ರಾಜನು ಸ್ಪೇನಿನಲ್ಲಿದ್ದ ಎಲ್ಲಾ ಮೋರಿಸ್ಕೋಸ್‌ಗಳನ್ನು ಗಡೀಪಾರು ಮಾಡಲು ಆದೇಶವಿತ್ತನು. ಅವರ ಮೇಲೆ ಧರ್ಮದ್ರೋಹ ಮತ್ತು ದೇಶದ್ರೋಹದ ಆರೋಪ ಹೊರಿಸಲಾಯಿತು. ತಮ್ಮ ನಾಡಿನ ಭದ್ರತೆಯ ಕಾರಣ ಈ ಆದೇಶ ಹೊರಡಿಸಿದ್ದೇವೆ ಎಂದು ರಾಜನು ಸಾರಿದನು. ಸಾಮಗ್ರಿಗಳನ್ನು ಶೇಖರಿಸಲು ಮತ್ತು ಉತ್ತರ ಆಫ್ರಿಕಾ ಮತ್ತು ಯುರೋಪ್ ಕಡೆಗಿನ ಹಡಗನ್ನು ಗೊತ್ತುಪಡಿಸಲು ಕೇವಲ ಮೂರು ದಿನಗಳ ಕಾಲಾವಕಾಶ ನೀಡಲಾಯಿತು.

ಸ್ಪಾನಿಷ್ ಕಡಲತೀರವನ್ನು ತಲುಪುವ ಮುನ್ನವೇ ಹಲವಾರು ಮೋರಿಸ್ಕೋಗಳನ್ನು ಸೈನಿಕರು ಮತ್ತು ಕ್ರೈಸ್ತರು ದರೋಡೆಗೈದು ಕೊಂದು ಹಾಕಿದರು. ಹಡಗಿನಲ್ಲಿ ಹೊರಟ ಯಾತ್ರಿಕರಿಗೆ ತಮ್ಮ ಖರ್ಚನ್ನು ತಾವೇ ಭರಿಸಬೇಕಾಗಿತ್ತು. ನಾವಿಕರು ಆ ಯಾತ್ರಿಕರನ್ನು ಲೂಟಿ ಮಾಡಿದರು. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು. ಕೆಲವರನ್ನು ಕೊಲೆಗೈದರು. ಕೆಲದಿನಗಳಲ್ಲೇ ಫಿಲಿಪ್ ರಾಜನು ಸಂಪುಟ ಸಭೆಯಲ್ಲಿ ಗಡಿಪಾರಿನ ಆಜ್ಞೆಯನ್ನು ಕ್ಯಾಸ್ಟಲ್, ಅಂದಲೂಸಿಯ ಮತ್ತು ಅರಗಾನಿಗೂ ವಿಸ್ತರಿಸಿದನು. ಐದು ವರ್ಷಗಳಲ್ಲಿ ಸುಮಾರು 3 ಲಕ್ಷ (ಒಟ್ಟು ಜನಸಂಖ್ಯೆಯ 5%) ಮುಸ್ಲಿಮರನ್ನು ಹೆಂಗಸರು, ಮಕ್ಕಳು ಎಂಬ ಬೇಧವಿಲ್ಲದೆ ಹೊರದಬ್ಬಲಾಯಿತು. ಕ್ರಿ.ಶ‌ 1614 ರಲ್ಲಿ ಸ್ಪೇನ್ ಸರಕಾರವು ಮೋರಿಸ್ಕೋಗಳ ಸಾಮೂಹಿಕ ಹತ್ಯಾಕಾಂಡ ನಡೆಸಿತು. ಡಾಮಿಯನ್ ಫೊನ್ಸೇಕ (Damian Fonseca) ಎಂಬ ಡೊಮಿನಿಕನ್ ಪಾದ್ರಿಯು ಇದನ್ನು ‘ಒಪ್ಪಿಗೆಯ ಹತ್ಯಾಕಾಂಡ’ ಎಂದು ಕರೆದನು.

ಗಡಿಪಾರಿನ ನಂತರ ಹಲವಾರು ಮೋರಿಸ್ಕೋಗಳು ಮರಳಿ ಸ್ಪೇನ್‌ಗೆ ಮರಳುವ ವಿಫಲ ಯತ್ನ ನಡೆಸಿದರು. ಅವರನ್ನು ಥಳಿಸಿ ಓಡಿಸಲಾಯಿತು. ಕೆಲವರು ಉತ್ತರ ಆಫ್ರಿಕಾದಲ್ಲಿ ಆಶ್ರಯ ಕಂಡುಕೊಂಡರು. ಅಲ್ಲಿ ಅವರು ಅಂದಲೂಸಿಯನ್ ಅಸ್ಮಿತೆಯನ್ನು ಜೀವಂತವಾಗಿಸಿ, ಅಲ್ಲಿನ ಜನರೊಂದಿಗೆ ಬೆರೆತರು. ಡೀಗೋ ಲೂಯಿಸ್ ಮೋರ್ಲೆಮ್ ಎಂಬ ಮೋರಿಸ್ಕೋ ಓರ್ವನು ತನ್ನ ಮಾಜಿ ದೊರೆಗೆ ಬರೆದ ಪತ್ರದಲ್ಲಿ ” ಸ್ವಂತ ನಾಡನ್ನು ಕಳೆದುಕೊಂಡ ನಾವು ಕಣ್ಣೀರಿನಲ್ಲೇ ಕಳೆದಿದ್ದೇವೆ. ನಮ್ಮನ್ನು ನೀವು ಗಲ್ಲಿಗೇರಿಸುವುದಾದರೂ ಸರಿ, ನಾವು ಆ ಮಣ್ಣಿಗೆ ಕಾಲಿಡುತ್ತೇವೆ” ಎಂದು ಬರೆದಿದ್ದನು.

ಟ್ಯುನೀಶಿಯಾ ಪ್ರಾಂತ್ಯದ ಆಟೋಮನ್ ಪ್ರಾಧಿಕಾರವು ಅವರನ್ನು ಬರಮಾಡಿಕೊಂಡಿತು. ಸುಮಾರು 80 ಸಾವಿರದಷ್ಟು ಮೋರಿಸ್ಕೋಗಳು ಟ್ಯುನೀಶಿಯಾಗೆ ವಲಸೆ ಹೋದರು. ಸಿದಿ ಬುಲ್ಗೇಝ್ ಎಂಬ ಅಲ್ಲಿನ ಗವರ್ನರ್ ಅವರಿಗೆ ಬೇಕಾದ ವಲಸೆ ಸೌಲಭ್ಯಗಳನ್ನು ಒದಗಿಸಿದನು. ಮಸೀದಿ ಹಾಗೂ ಇನ್ನಿತರ ಧಾರ್ಮಿಕ ಸಂಸ್ಥೆಗಳನ್ನು ತಾತ್ಕಾಲಿಕ ಆಶ್ರಯತಾಣವಾಗಿ ಮಾರ್ಪಡಿಸಿದನು. ಯಾವುದೇ ಸರಂಜಾಮುಗಳಿಲ್ಲದೆ ಬರಿಗೈನಲ್ಲಿ ಬಂದ ವಲಸಿಗರಿಗೆ ಮೊದಲ ಒಂದು ವರ್ಷಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡಲಾಯಿತು. ಹಲವು ತಿಂಗಳುಗಳ ಕಾಲ ಅವರಿಗೆ ಬೇಕಾದ ಬಟ್ಟೆ-ಬರೆ ಮತ್ತು ಆಹಾರವನ್ನು ಕೂಡ ನೀಡಲಾಯಿತು.

ಉತ್ತರ ಆಫ್ರಿಕಾದಲ್ಲಿ ನೆಲೆ ಕಂಡುಕೊಂಡ ಮೋರಿಸ್ಕೋಗಳ ಮೂಲಕ ಹಳೆಯ ಮುಸ್ಲಿಂ ಸ್ಪೇನಿನ ಗತ ವೈಭವವು ಜೀವಂತವಾಗಿದೆ. ಐಬೀರಿಯನ್ ಪರ್ಯಾಯ ದ್ವೀಪದ ಶ್ರೀಮಂತ ಚರಿತ್ರೆಯನ್ನು ಅವರು ಇಂದಿಗೂ ಪ್ರಸ್ತುತ ಪಡಿಸಿದ್ದಾರೆ. ಅವರ ದುರಂತಮಯ ಗಡಿಪಾರು ಇಂದಿಗೂ ಯುರೋಪ್ ಕಂಡ ಅತಿ ದೊಡ್ಡ ಹತ್ಯಾಕಾಂಡವಾಗಿ ಗುರುತಿಸಲ್ಪಡುತ್ತಿದೆ.

ಮೂಲ: ಫಿರಾಸ್ ಅಲ್ ಖತೀಬ್
ಅನು: ಮುಹಮ್ಮದ್ ಶಮೀರ್ ಪೆರುವಾಜೆ

ಜಿದ್ದಾ : ಯಾತ್ರಿಕರಿಂದ ನಿರ್ಮಿತವಾದ ಜಾಗತಿಕ ನಗರ

ಜನರಿಂದ ತುಂಬಿ ತುಳುಕುತ್ತಿರುವ
ಬಾಬೆಲ್‌ನ ಮೋಡಿಯೇ
ಓ ಜನರೇ..
ಮೆಕ್ಕಾದ ಬಾಗಿಲೇ

ಖಂಡಿತವಾಗಿಯೂ
ಜಿದ್ದಾವೇ ಮೊದಲು
ಜಿದ್ದಾವೇ ಕೊನೆಯೂ

ತಲಾಲ್  ಹಂಝರ ‘ಜಿದ್ದಾ ಗೈರ್’ ಎಂಬ ಕವಿತೆಯ ಆಯ್ದ ಸಾಲುಗಳಿವು. ಜಿದ್ದಾ ನಗರವು ಕೈರೋ,ಬೈರೂತ್, ಕಾಸಾಬ್ಲಾಂಕಾ ಹಾಗೂ ಇನ್ನಿತರ ಅರಬ್ ನಗರಗಳಿಗಿಂತ ಶ್ರೇಷ್ಠವೆಂಬುದು ಕವಿಯ ಅಭಿಮತ. ಜಿದ್ದಾ ವಿಭಿನ್ನವಾದ  ನಗರವೆಂದು ತಬೂಕ್ ನಿವಾಸಿಯಾದ ಕವಿ ಸೇರಿದಂತೆ ಮೂಲನಿವಾಸಿಗಳು ಹಾಗೂ ಇನ್ನಿತರರು ಅಭಿಪ್ರಾಯಪಡುತ್ತಾರೆ. ಆದರೆ ಇದಕ್ಕೆ ಇವರೆಲ್ಲರೂ  ಹೇಳುವ  ಕಾರಣಗಳೂ  ವಿಭಿನ್ನವಾಗಿವೆ. ಸೌದಿ ಟೂರಿಸಂ ಏಜೆನ್ಸಿ ಒದಗಿಸುವ ಶಾಂತಿಯುತವಾದ ಜೀವನಶೈಲಿ, ಜಿದ್ದಾ ಸಮ್ಮರ್ ಫೆಸ್ಟಿವಲ್ ಇವೆಲ್ಲವೂ ಜಿದ್ದಾ ನಗರವನ್ನು ಭಿನ್ನವಾಗಿಸುತ್ತದೆ. ತುಲನಾತ್ಮಕವಾಗಿ, ಇತರ ಅರೇಬಿಯನ್ ನಗರಗಳಿಗಿಂತ ಜಿದ್ದಾ ನಗರದಲ್ಲಿ ನಗರ ಯೋಜನೆಯ ಕೊರತೆಗಳು ಎದ್ದು ಕಾಣುತ್ತವೆ.

ಜಿದ್ದಾ ನಗರದ ಕುರಿತು ನನ್ನ ವ್ಯಕ್ತಿಗತ ನಿಲುವನ್ನು ರೂಪಿಸುವಲ್ಲಿ, 2000 ಇಸವಿಯಲ್ಲಿ ಪ್ರಥಮ ಬಾರಿಗೆ ಜಿದ್ದಾಗೆ ಭೇಟಿ ಕೊಟ್ಟಾಗ ಅನುಭವಕ್ಕೆ ಬಂದ ಜಿದ್ದಾದ ವೈವಿಧ್ಯತೆಯು ಮುಖ್ಯ ಕಾರಣವಾಗಿದೆ. ಸುಮಾರು ನಾಲ್ಕು ದಶಲಕ್ಷದಷ್ಟು ಜನಸಂಖ್ಯೆಯಿರುವ ಜಿದ್ದಾ ನಗರ ನೆಲೆನಿಂತಿರುವುದು, ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾವನ್ನು ಒಳಗೊಂಡಿರುವ ಹಿಜಾಝ್ ಪ್ರಾಂತ್ಯದಲ್ಲಾಗಿದೆ. ಸೌದಿ ಅರೇಬಿಯಾದ ಆಧುನೀಕರಣಗೊಂಡ ಇನ್ನಿತರ ನಗರಗಳಿಗೆ ಅಪವಾದವೆಂಬಂತೆ ಜಿದ್ದಾ ಇಂದಿಗೂ ಪುರಾತನ ಗರಿಮೆಯೊಂದಿಗೆ ನೆಲೆನಿಂತಿದೆ. ಲಾಗಾಯ್ತಿನಿಂದಲೂ ಓಲ್ಡ್ ಮಾರ್ಕೆಟ್ ಸ್ಟ್ರೀಟ್ (ಸೂಕ್) ನಗರದ ಪ್ರಧಾನ ಜವಳಿ ಕೇಂದ್ರ. ಪೂರ್ವಜರ ಸಿರಿತನದ ದ್ಯೋತಕವೆಂಬಂತೆ, ಹವಳ ನಿರ್ಮಿತ ಕಟ್ಟಡ ಸಮುಚ್ಚಯಗಳು ಹಾಗೂ ಅವುಗಳಲ್ಲಿನ ಸಂಕೀರ್ಣವಾದ ಕೆತ್ತನೆಗಳನ್ನು ಇಂದಿಗೂ ಕಾಣಬಹುದು. ಓಲ್ಡ್ ಸಿಟಿ, ಮಾಲ್, ಬೀಚ್ ಹಾಗೂ ನಗರದ ಇತರ ಮೂಲೆಗಳಲ್ಲೂ ಅತ್ಯಧಿಕ ಸಂಖ್ಯೆಯಲ್ಲಿ ಜಗತ್ತಿನ ನಾನಾ ಕಡೆಗಳಲ್ಲಿನ  ಜನರನ್ನು  ದರ್ಶಿಸಬಹುದು. ಹಜ್ಜ್ ವೇಳೆಗಳಲ್ಲಿ  ಈ  ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆಯುಂಟಾಗುತ್ತದೆ.

“ಕೆಂಪು ಸಮುದ್ರದ  ಮದುಮಗಳು” ಎಂದು ಮೂಲನಿವಾಸಿಗಳು ಹೆಸರೆತ್ತಿ ಕರೆಯುವ ಜಿದ್ದಾ ನಗರವು ಹಲವಾರು ಬದಲಾವಣೆಗಳನ್ನು ಕಂಡಿದೆ. ಆದರೂ 1814ರಲ್ಲಿ ಜಿದ್ದಾಗೆ ಭೇಟಿ ಕೊಟ್ಟ ಲೂಯಿಸ್ ಬರ್ಕ್ ಹಾರ್ಟರ ಯಾತ್ರಾ ಕಥನದಲ್ಲಿರುವ ಜಿದ್ದಾ ನಗರವನ್ನು 21ನೇ ಶತಮಾನದ ತಲಾಲ್ ಹಂಝರ ಕವನದಲ್ಲೂ ಕಾಣಬಹುದು. ವಂಶನಾಶ ಉಂಟಾಗುವ ಮತ್ತು ಗುಳೆ ಹೊರಡುವ ಮೂಲಕ ಮೂಲನಿವಾಸಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯುಂಟಾಯಿತು.ಆದ್ದರಿಂದಲೇ ಪ್ರವಾದಿ ಕುಟುಂಬ ಪರಂಪರೆಯವರನ್ನು ಹೊರತುಪಡಿಸಿದರೆ ನಗರದ ಬಹುತೇಕರು ಜಗತ್ತಿನ ನಾನಾ ಕಡೆಗಳಿಂದ ವಲಸೆ ಬಂದ ವಿದೇಶಿಗಳು ಹಾಗೂ ಅವರ ಮಕ್ಕಳಾಗಿರುತ್ತಾರೆ ಎಂದು ಲೂಯಿಸ್ ಬರ್ಕ್ ಹಾರ್ಟರು ಸ್ಪಷ್ಟಪಡಿಸುತ್ತಾರೆ. ಹಳ್ರಮಿಗಳು, ಯಮನಿಗರು, ಭಾರತೀಯರು, ಉತ್ತರ ಆಫ್ರಿಕ ಮೂಲದವರು, ಮಿಸ್ರ್ ಮತ್ತು ಸಿರಿಯನ್ ವಂಶಜರು, ಉಸ್ಮಾನಿಯ್ಯ ಖಿಲಾಫತ್ ಅಧೀನದ  ಯುರೋಪ್, ಅನಾಟೋಲಿಯ, ಹೀಗೆ ಜಗತ್ತಿನ ವಿವಿಧ  ದಿಕ್ಕಿನಲ್ಲಿರುವವರನ್ನು ತಾನು ಜಿದ್ದಾದಲ್ಲಿ ಕಂಡಿರುವುದಾಗಿ ಇವರು ತಿಳಿಸಿದ್ದಾರೆ. ಭಾರತೀಯರನ್ನು ಹೊರತುಪಡಿಸಿ ಉಳಿದೆಲ್ಲ ಜನಸಮೂಹಗಳ ವಸ್ತ್ರಧಾರಣೆ ಮತ್ತು ಜೀವನಶೈಲಿಯಲ್ಲಿ ಅರಬ್ ಸ್ವಾಧೀನವು ಎದ್ದು ಕಂಡುಬರುತ್ತದೆ. ಜಿದ್ದಾದ ಜನರಲ್ಲಿನ ವೈವಿಧ್ಯತೆಯು ಹೊಸದೇನಲ್ಲ. ತಲಾಂತರಗಳಿಂದಲೂ ಜಿದ್ದಾ ನಗರವು ವೈವಿಧ್ಯತೆಯನ್ನು ಕಾಪಿಟ್ಟು ಕೊಂಡಿದೆ. ಇಲ್ಲಿನ ಪುರಾತನ ಮನೆತನದ ಹೆಸರುಗಳು ಈ ನಿಟ್ಟಿನಲ್ಲಿ ಬಹಳ ಗಮನಾರ್ಹವಾಗಿದೆ.  ಅವುಗಳ ಪೈಕಿ ಬಗ್ದಾದಿ, ಇಸ್ಫಹಾನಿ, ಬುಖಾರಿ, ತಕ್ರೂನಿ ಎಂಬೀ ಹೆಸರುಗಳು  ಸದ್ಯದ ಇರಾಕ್, ಇರಾನ್, ಉಝ್ಬೆಕಿಸ್ಥಾನ್, ಪಶ್ಚಿಮ  ಆಫ್ರಿಕದ ತೀರ ಪ್ರದೇಶಗಳತ್ತ ಮತ್ತು ಬಾಖಶೈನ್  ಯಮನಿನ ಹಳರಮೌತಿನತ್ತ  ಬೊಟ್ಟು ಮಾಡುತ್ತಿವೆ. ಮುಹರಂ ತಿಂಗಳಲ್ಲಿ ಆಯೋಜಿಸಲ್ಪಡುವ ಆಧ್ಯಾತ್ಮಿಕ ಸಂಗಮಗಳಿಗೆ ಮಕ್ಕಾದತ್ತ ತೆರಳಲು ಜಿದ್ದಾ ದಾರಿಯಾಗಿರುವುದೇ ಇಲ್ಲಿನ ಜನರ ವೈವಿಧ್ಯತೆಗೆ ಪ್ರಧಾನ ಕಾರಣ ಎನ್ನುತ್ತಾರೆ ಲೂಯಿಸ್ ಬರ್ಕ್ ಹಾರ್ಟ್. 19ನೇ ಶತಮಾನದಲ್ಲಿ ಉದ್ಯೋಗ ಅರಸಿ ಬಂದವರು, ವ್ಯಾಪಾರಿಗಳು, ಈಜಿಪ್ಟ್ ಸೇನೆ ಇವೆಲ್ಲಕ್ಕೂ ಹೆಚ್ಚಾಗಿ ಉಸ್ಮಾನಿಯ ಸಾಮ್ರಾಜ್ಯವು  ನಗರದ ವಿದೇಶಿಯರ ಸಂಖ್ಯೆ ಏರಿಕೆಯಾಗಲು ಹೇತುವಾದವು.

ಯಾತ್ರಿಕರ ತಂಗುದಾಣವೆಂಬಂತೆ, ಜಿದ್ದಾ ಹಿಂದೂ ಮಹಾಸಾಗರ ಮತ್ತು ಮೆಡಿಟೇರೇನಿಯನ್ ಸಮುದ್ರಗಳ ನಡುವಿನ  ಉಗ್ರಾಣವೆಂಬುವುದು ಜಿದ್ದಾದ  ಜನತೆಯ  ವೈವಿಧ್ಯತೆಯ ಪ್ರಧಾನ ಕಾರಣಗಳಲ್ಲೊಂದಾಗಿದೆ. 19ನೇ ಶತಮಾನದಲ್ಲಿ ಜಿದ್ದಾದ ಜನಸಂಖ್ಯೆ ಕೇವಲ ಹತ್ತು ಅಥವಾ ಇಪ್ಪತ್ತು ಸಾವಿರದಷ್ಟಿತ್ತು. ಹಜ್ಜ್ ವೇಳೆಯಲ್ಲಿ ಈ ಸಂಖ್ಯೆಯು ದುಪ್ಪಟ್ಟಾಗುತ್ತಿತ್ತು. ಹವಾಮಾನ ಬದಲಾವಣೆಯನ್ನು ಪರಿಗಣಿಸಿ ಕಡಲ ಮಾರ್ಗವಾಗಿ ಯಾತ್ರೆ ಹೊರಡುತ್ತಿದ್ದ ಯಾತ್ರಿಕರು, ಹಜ್ಜ್ ಗಾಗಿ ಹೊರಡುವಾಗ ಮತ್ತು ಮರಳುವಾಗ ಮಕ್ಕಾ, ಮದೀನಾ, ಜಿದ್ದಾಗಳಲ್ಲಿ ತಂಗುತ್ತಿದ್ದರು. 1870 ಮತ್ತು 80ಗಳಲ್ಲಿಯೂ ಈ ಪ್ರಕ್ರಿಯೆ ಮುಂದುವರಿಯಿತು. ಆದ್ದರಿಂದಲೇ ಜಿದ್ದಾಗೆ ಹೊರಟವರಲ್ಲಿ ತೀರ್ಥ ಯಾತ್ರಿಕರನ್ನು ಮತ್ತು ಉದ್ಯೋಗ ಅರಸಿ ಬಂದವರನ್ನು  ಬೇರ್ಪಡಿಸುವುದು ಕಷ್ಟ ಸಾಧ್ಯವಾಗಿತ್ತು. ಹಜ್ ಮುಗಿಸಿ ಮರಳುವ ಹೊತ್ತಿಗೆ ಜಿದ್ದಾದಲ್ಲಿ ತನ್ನ ವ್ಯಾಪಾರಗಳಲ್ಲಿ ತೊಡಗಿ ಖಾಯಂ ಆಗಿ ವಾಸ್ತವ್ಯ ಹೂಡಿದವರೂ, ಕೆಲಸದ ನಿಮಿತ್ತ ಜಿದ್ದಾ ತಲುಪಿ ಅನನುಕೂಲತೆಗಳ ಕಾರಣ ಸ್ವದೇಶಕ್ಕೆ ಮರಳಿದವರೂ ಇದ್ದಾರೆ. ಜಿದ್ದಾ ನಗರದ ಪ್ರಮುಖ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದದ್ದು ಹಜ್ಜ್  ವೇಳೆಯಲ್ಲಾಗಿತ್ತು. ತೀರ್ಥ  ಯಾತ್ರೆಗೆ ಹೊರಟವರ ಹಡಗುಗಳಲ್ಲಿ ವ್ಯಾಪಾರ ಸರಕುಗಳೂ ಜೊತೆಗಿರುತ್ತಿದ್ದವು. ಹೀಗೆ  ಹಜ್ಜ್ ಮೂಲಕ ವ್ಯಾಪಾರಗಳು ಚಾಲ್ತಿಗೆ ಬಂದವು. 1840ರಲ್ಲಿ ಉಸ್ಮಾನಿಯಾ ಸಾಮ್ರಾಜ್ಯದ ಸ್ವತಂತ್ರ ಗವರ್ನರ್ ಆಗಿದ್ದ ಮುಹಮ್ಮದ್ ಅಲಿ ಜಿದ್ದಾ ನಗರದ ಅಧಿಕಾರವನ್ನು ಇಸ್ತಾಂಬುಲ್ ಕೇಂದ್ರ ಆಡಳಿತಗಾರರಿಗೆ  ಮರಳಿ ಹಸ್ತಾಂತರಿಸಬೇಕಾಯಿತು. 1838ರಲ್ಲಿ ಪ್ರಾರಂಭಿಸಿದ  ಅಭಿವೃದ್ಧಿ ಯೋಜನೆಗಳು ಜಿದ್ದಾದ ಮೇಲೆ ಬಲುದೊಡ್ಡ ಪರಿಣಾಮ ಬೀರಿತು. 1840ರಲ್ಲಿ ಹಾಯಿ ದೋಣಿಗಳ ಬಳಕೆ, ತಂತ್ರಜ್ಞಾನ ಮತ್ತು ಭೌಗೋಳಿಕ ಕ್ಷೇತ್ರಗಳಲ್ಲಿ ಉಂಟಾದ  ಸಕಾರಾತ್ಮಕ ಬದಲಾವಣೆಗಳು ಜಿದ್ದಾದ ಆರ್ಥಿಕತೆಯನ್ನು ಸುಸ್ಥಿರಗೊಳಿಸಿತು. 1947 ಇಸವಿಯಲ್ಲಿ ಸಿಟಿ ವಾಲ್ ಧ್ವಂಸಗೊಂಡ ಪರಿಣಾಮವಾಗಿ ಹೊರಗಿನ ವ್ಯಾಪಾರಿಗಳೊಂದಿಗೆ ಸೂಕಿಗೆ ಸುಲಭ ಸಂಪರ್ಕ ಸಾಧ್ಯವಾಯಿತು. ವಿಶ್ವ ಮಹಾಯುದ್ಧ ಕಾರಣ ಸ್ಥಗಿತಗೊಂಡಿದ್ದ ಸೌದಿ ಅರೇಬಿಯದ ಎಣ್ಣೆ ಉತ್ಪಾದನೆ 1950ರಲ್ಲಿ ಪುನರಾರಂಭಿಸಲಾಯಿತು. ವಲಸಿಗರಾದ  ಗ್ರಾಮೀಣರು ನಗರ ಪ್ರದೇಶಗಳತ್ತ ತೆರಳಿದರು. ನಗರ ನಿವಾಸಿಗಳ ಬಾಹುಳ್ಯ ಮತ್ತು ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ದೇಶಗಳ ನಾಗರಿಕರಾದ ಕಾರಣ ಅಂದಿನ ಜಿದ್ದಾ ವೈವಿಧ್ಯಮಯವಾಗಿತ್ತು. 1950ರಲ್ಲಿ ವಿಮಾನ ಯಾನ ಪ್ರಾರಂಭವಾದಂದಿನಿಂದ ಹಜ್ಜ್ ಯಾತ್ರಿಕರ ಪೈಕಿ ಜಿದ್ದಾದಲ್ಲಿ ತಂಗುವ ಜನರ ಸಂಖ್ಯೆಯಲ್ಲಿ ಇಳಿಕೆ ಉಂಟಾಯಿತು. 1981ರಲ್ಲಿ ಮಕ್ಕಾದಲ್ಲಿ ವಿಮಾನ ನಿಲ್ದಾಣ ಪ್ರಾರಂಭವಾದ ಬಳಿಕ ಜಿದ್ದಾದ ಪ್ರಾಮುಖ್ಯತೆಯು ಕುಂಠಿತವಾಯಿತು.

ಜಿದ್ದಾದ  ಬಹುತ್ವ, ಪ್ರಾದೇಶಿಕ  ದೃಷ್ಟಿಕೋನ

ಜಿದ್ದಾದ ಸ್ಥಳೀಯ ನಿವಾಸಿಗಳು ಅನ್ಯದೇಶಿಯರು ಎಂದು ಕಡೆಗಣಿಸಲ್ಪಟ್ಟವರಲ್ಲ. ಬದಲಾಗಿ ಅವರು ಕೂಡ ಜಿದ್ದಾದ ಅವಿಭಾಜ್ಯ ಅಂಗವೇ ಆಗಿದ್ದಾರೆ. ಪ್ರತಿವರ್ಷದ ಕರ್ಮಗಳು ಜಿದ್ದಾದ‌ ಭಾಗವಾಗಿದೆ. ಜಿದ್ದಾದ ಲಿಖಿತ ಮತ್ತು ಮೌಖಿಕ ಚರಿತ್ರೆಗಳಲ್ಲಿ ಹಾಗೂ  ಇನ್ನಿತರ ಸಾಹಿತ್ಯ ಗ್ರಂಥಗಳಲ್ಲಿಯೂ ಹಜ್ಜ್ ಮತ್ತು ಯಾತ್ರಿಕರಾದ ವಿದೇಶಗಳೊಂದಿಗಿನ ಅತಿಥಿ ಸತ್ಕಾರ ಗಳ ಬಗೆಗಿನ ಪ್ರಾದೇಶಿಕ ಸಂಕಲ್ಪಗಳ ಕುರಿತಾದ ವಿವರಣೆಗಳಿವೆ.

ಇಲಾಹೀ  ಅತಿಥಿಗಳು  ಮತ್ತು ಅತಿಥಿ ಸತ್ಕಾರ

ಜಿದ್ದಾದ ಮೌಖಿಕ ಚರಿತ್ರೆಗಳ ಪ್ರಧಾನ ಪ್ರತಿಪಾದನೆ ಹಜ್ಜ್ ಯಾತ್ರಿಕರಿಗೆ ನೀಡುವ ಸತ್ಕಾರಗಳ ಕುರಿತಾಗಿದೆ. ಆರ್ಥಿಕವಾಗಿಯೂ ದೈಹಿಕವಾಗಿಯೂ ಕ್ಷಮತೆಯಿರುವ ವಿಶ್ವಾಸಿ ಕಡ್ಡಾಯವಾಗಿ ನಿರ್ವಹಿಸಬೇಕಾದ ಪುಣ್ಯ ಕರ್ಮವಾಗಿದೆ ಹಜ್ಜ್. ಆ ಪುಣ್ಯ ಕರ್ಮ ನಿರ್ವಹಣೆಗಾಗಿ ಆಗಮಿಸುವ ಹಜ್ಜಾಜ್‌ ಗಳು ಅಲ್ಲಾಹನ ಅತಿಥಿಗಳು ಎಂದಾಗಿದೆ ಆತಿಥೇಯರಾದ ಅರೇಬಿಯನ್ನರ ನಂಬಿಕೆ. ಮಕ್ಕಾದ ಸಮೀಪವಿರುವ ಕಾರಣ ಅಲ್ಲಾಹನ ಅತಿಥಿಗಳನ್ನು ಸತ್ಕರಿಸುವ ಮಹತ್ಕಾರ್ಯವು ಜಿದ್ದಾದ  ನಿವಾಸಿಗಳಿಗೂ ಒದಗಿ ಬಂತು.

ಹಜ್ಜ್ ಗಾಗಿ ಆಗಮಿಸುವವರನ್ನು ಬರಮಾಡಿಕೊಳ್ಳುವ ಸಲುವಾಗಿ ನಗರದ ಮೂಲಭೂತ ಸೌಕರ್ಯಗಳಲ್ಲಿ ಪ್ರಗತಿಯುಂಟಾಯಿತು. ಸರಕಾರ ಸುರಕ್ಷತೆ ಮತ್ತು ಆಹಾರವನ್ನು ಒದಗಿಸಿದರೆ, ವಸತಿ ಮತ್ತು ಯಾತ್ರಾ ಸೌಲಭ್ಯಗಳನ್ನು ದೊರಕಿಸುವ ಜವಾಬ್ದಾರಿಯು ಸ್ಥಳೀಯರದ್ದಾಗಿತ್ತು. ಅವರು ಸ್ವಂತ ಮನೆಗಳನ್ನು ಬಾಡಿಗೆಗೆ ನೀಡಿದರು. ಆಧುನಿಕ ಕಾಲದಲ್ಲಿ ಹಜ್ಜ್ ನ  ಕಾರ್ಯನಿರ್ವಹಣೆಯು ಸೌದಿ ಅರೇಬಿಯದ ಸರಕಾರಕ್ಕೆ ಬಹಳ ಗರ್ವದ ಸಂಗತಿ. 1986ರಲ್ಲಿ “ಎರಡು  ಹರಮ್‌ ಗಳ ಪರಿಚಾರಕ” ನೆಂಬ  ಪಟ್ಟವನ್ನು  ಸೌದಿ ಆಡಳಿತಗಾರರು ಸ್ವೀಕರಿಸಿರುವುದು ಈ ನಿಟ್ಟಿನಲ್ಲಿ ಮಹತ್ವಪೂರ್ಣವಾಗಿದೆ. ಉಸ್ಮಾನಿಯ ಖಿಲಾಫತ್ ಕಾಲದಲ್ಲಿ, ಅಲ್ಪಕಾಲದ ಶರೀಫಿಯನ್ ಆಡಳಿತ ಕಾಲದಲ್ಲಿ ಮತ್ತು ಸೌದಿ ಅರೇಬಿಯದ ಪ್ರಥಮ ರಾಜರಾದ ಅಬ್ದುಲ್ ಅಝೀಝ್ ಆಲು ಸಊದರ  ಹಜ್ ಯಾತ್ರಿಕರ ಅಗತ್ಯ ನಿರ್ವಹಣೆಯು ಉತ್ತಮ ಆಡಳಿತದ ಸಂಕೇತವಾಗಿತ್ತು. ಅರೇಬಿಯದ ಆರ್ಥಿಕತೆಯ ಬೆನ್ನೆಲುಬಾದ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಲ್ಲದ ಕಾಲದಲ್ಲಿ, ಹಜ್ ಯಾತ್ರಿಕರಿಗೆ ಇರುವ ಸೌಲಭ್ಯಗಳನ್ನು ಸ್ಥಳೀಯ ನಿವಾಸಿಗಳು ಒದಗಿಸುತ್ತಿದ್ದರು.

ಅತಿಥಿ ಸತ್ಕಾರ ಅರಬ್ ಮುಸ್ಲಿಮ್ ಸಂಸ್ಕೃತಿಯ ಭಾಗವಾಗಿದೆ.1777ರಲ್ಲಿ ಕ್ರಿಸ್ಟಿಯನ್ ಹೀರ್ಶ್ ಫೀಲ್ಡ್  ಪ್ರಕಟಿಸಿದ ಅತಿಥಿ ಸತ್ಕಾರದ ಕುರಿತಾದ ಕಿರು ಲೇಖನವೊಂದರಲ್ಲಿ “ಅತಿಥಿ ಸತ್ಕಾರವೆಂಬುದು ಸಾರ್ವಲೌಕಿಕವಾದ ಸತ್ಕರ್ಮವೆಂದು ಹಾಗೂ ಮಧ್ಯೆಷ್ಯಾದಲ್ಲಿ  (ಬರಹಗಾರರ ಪ್ರಕಾರ ಅರಬ್, ತುರ್ಕಿ, ಪರ್ಷಿಯನ್) ಈ ಕರ್ಮವು ಬಹಳ  ಗಾಢವಾಗಿದೆ ಮತ್ತು ವ್ಯಾಪಕವಾಗಿದೆ ಎಂದು ಹೀರ್ಶ್ಫೀಲ್ಡ್ ಅಭಿಪ್ರಾಯಪಡುತ್ತಾರೆ. ಕಾಲ ಕ್ರಮೇಣ  ಅತಿಥಿ ಸತ್ಕಾರವೆಂಬ ಸಂಕಲ್ಪ ಮತ್ತು ಅದರ  ರೀತಿಗಳಲ್ಲಿ  ಬದಲಾವಣೆ ಉಂಟಾಗಿವೆ. ಪರಂಪರಾಗತ ಅತಿಥಿ ಸತ್ಕಾರವು ಬದವೀ ಸಂಕಲ್ಪದ  “ನಂಬಿಕೆ, ಸಂರಕ್ಷಣೆ, ಗೌರವ” ಎಂಬೀ ರೂಪಕಗಳು  ಒಟ್ಟುಸೇರಿದವುಗಳಾಗಿದ್ದವು.

ಹರಮ್ ಗಳಂತೆಯೇ  ಅರಬ್ ದೇಶಗಳಲ್ಲಿರುವ ಪವಿತ್ರ ಸ್ಥಳಗಳು ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ಜನರಿಗೆ ಸೇರಬಹುದಾದ ಸುರಕ್ಷಿತ ತಾಣಗಳಾಗಿವೆ. ಇಸ್ಲಾಮಿನ ಆಗಮನ ಪೂರ್ವದಲ್ಲೂ ಮಕ್ಕ ಪವಿತ್ರ ಕೇಂದ್ರವಾಗಿತ್ತು. ಮಕ್ಕ ಹೊರತಾದ ಇನ್ನಿತರ ಸ್ಥಳಗಳಲ್ಲಿ ಆತಿಥೇಯರಾದ ಸ್ಥಳೀಯರ ಪಾಲನೆಯಲ್ಲಾಗಿತ್ತು ಸಂದರ್ಶಕರ ವಾಸ್ತವ್ಯ. ಸ್ವದೇಶಿಯರು ಅತಿಥಿಗಳನ್ನು ಅಪರಿಚಿತರೆಂದು ಕಡೆಗಣಿಸದೆ ಅವರಿಗಾಗಿ ತಮ್ಮ ಸ್ವಗೃಹಗಳನ್ನು ತೆರೆದಿಡುತ್ತಿದ್ದರು. ಅತಿಥಿ ಸತ್ಕಾರ ಧಾರ್ಮಿಕ ಹಕ್ಕು ಎಂಬ ನಿಟ್ಟಿನಲ್ಲೂ ಪ್ರಾಮುಖ್ಯತೆಯನ್ನು ಪಡೆಯಿತು. ಈ ಮೂಲಕ ಯಹೂದರು ಮತ್ತು ಕ್ರೈಸ್ತರಿಂದ ಬಳುವಳಿಯಾಗಿ ಬಂದ ಅತಿಥಿ ಸತ್ಕಾರದ  ಸಂಕಲ್ಪಗಳನ್ನು ಇನ್ನಷ್ಟು ಸುದೃಢಗೊಳಿಸುವಲ್ಲಿ ಇಸ್ಲಾಮ್ ಯಶಸ್ವಿಯಾಯಿತು.

ಈ ಧಾರ್ಮಿಕ ಹಕ್ಕು ಅತಿಥಿ ಮತ್ತು ಆತಿಥೇಯರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಿತು. ಸ್ವಗೃಹಗಳಿಗೆ ಅಪರಿಚಿತರನ್ನು ಬರಮಾಡಿಕೊಳ್ಳುವ ಉದಾತ್ತ ಪ್ರಕ್ರಿಯೆಯನ್ನು ಇನ್ನಿತರ ಧರ್ಮಗಳಲ್ಲೂ  ದರ್ಶಿಸಬಹುದು  ಮತ್ತು ಇದು ಸ್ವತಃ ರೂಪುಗೊಳ್ಳುವ ಸರ್ವ ರಾಷ್ಟ್ರೀಯತೆ (voluntaristic cosmopolitanism) ಎಂದು ಶೆಲ್ಡನ್ ಪೊಲ್ಲಾಕ್ ವ್ಯಕ್ತಪಡಿಸಿದ್ದಾರೆ. ಪ್ರಾಯೋಗಿಕ ನೈತಿಕತೆ ಎಂಬ ನಿಟ್ಟಿನಲ್ಲಿ ಧರ್ಮಗಳು ಅತಿಥಿ ಸತ್ಕಾರವನ್ನು ಹುರಿದುಂಬಿಸಿದರೂ ಪ್ರಾಥಮಿಕವಾಗಿ ಈ ಸತ್ಕರ್ಮವು ಮಾನವೀಯ ಮೌಲ್ಯಗಳ ಭಾಗವಾಗಿರಬೇಕು, ಮತ್ತು ಅತಿಥಿ ಸತ್ಕಾರವು ಮಾನವ ಹೃದಯಗಳಲ್ಲಿ ದೈವಿಕತೆಯನ್ನು ಜೀವಂತವಾಗಿರಿಸಿದೆ ಎನ್ನುತ್ತಾರೆ ಮೋನ ಸಿದ್ಧಿಕಿ. ಯಾತ್ರಿಕರು ಜಿದ್ದಾದಲ್ಲಿ ತಂಗುವಾಗ ಕರ್ಮಗಳಿಗೆ ಧರಿಸಬೇಕಾದ ಧಿರಿಸನ್ನೇ ಧರಿಸುತ್ತಿದ್ದರು. ಮಕ್ಕಾಗೆ ತೆರಳುವಾಗ ಜಿದ್ದಾ ನಿವಾಸಿಗಳು ಕೂಡ ಅವರಿಗೆ ಜೊತೆಯಾಗುತ್ತಿದ್ದರು.

ಯಾತ್ರಿಕರ ಜೊತೆಗಿನ ಈ ಸಂಬಂಧವು ಅರಬರ ವೈವಾಹಿಕ ಸಂಬಂಧಗಳಲ್ಲೂ ಪರಿಣಾಮ ಬೀರಿದೆ. ಇತರ ಗೋತ್ರಗಳಲ್ಲಿರುವವರೊಂದಿಗೆ ವೈವಾಹಿಕ  ಸಂಬಂಧ ಸಾಧ್ಯವಾಗಿದ್ದರೂ ಇತರ ಕುಟುಂಬದವರೊಂದಿಗಿನ ಸಂಬಂಧವು ಜಾರಿಯಲ್ಲಿತ್ತು. ಜಿದ್ದಾ ನಿವಾಸಿಗಳು ವಲಸಿಗರೊಂದಿಗೆ ವೈವಾಹಿಕ ಸಂಬಂಧ ಇಟ್ಟುಕೊಂಡಿರುವುದನ್ನು  ಚರಿತ್ರೆಗಳಲ್ಲಿ ದಾಖಲಾಗಿವೆ. ಒಟ್ಟಿನಲ್ಲಿ ಲೂಯಿಸ್ ಬರ್ಕ್ ಹಾರ್ಟ್ ಪ್ರತಿಪಾದಿಸಿದ ಜಿದ್ದಾ ಜನರ ನಡುವಿನ  ಕೊಡು ಕೊಳ್ಳುವಿಕೆ ಕೇವಲ ಭಾಷೆ ಮತ್ತು ವೇಷಗಳಿಗೆ ಸೀಮಿತವಾಗಿರಲಿಲ್ಲ.

ಮೂಲ: ಉಲ್ರೈಕ್ ಫ್ರೈಟಾಗ್
ಅನು: ಆಶಿಕ್ ಅಲಿ ಕೈಕಂಬ

ಅಲ್‌ ಬಿರೂನಿ ಕಂಡ ಭಾರತ

ಭಾರತದ ಇತಿಹಾಸ, ಸಂಸ್ಕೃತಿ, ಸಂಪ್ರದಾಯ ವಿವಿಧ ಜ್ಞಾನ ಶಾಖೆಗಳಾಗಿ ವಿಕಸನಗೊಳ್ಳುವುದಕ್ಕಿಂತ 1,000 ವರ್ಷಗಳ ಮೊದಲು, ವೈಜ್ಞಾನಿಕ ಕ್ಷೇತ್ರದಲ್ಲಿ ನಿರತರಾಗಿದ್ದ ಅಲ್ ಬಿರೂನಿಯ ವಿದ್ವತ್ ಕೊಡುಗೆ ಮತ್ತು ಅವರ ಕಿತಾಬುಲ್ ಹಿಂದ್ (ಹಿಂದುಸ್ಥಾನದ ಪುಸ್ತಕ) ಎಂಬ ಗ್ರಂಥದ ಅನುಸಂಧಾನವನ್ನು ಈ ಬರಹ ನಡೆಸುತ್ತದೆ. 19ನೇ ಶತಮಾನದಲ್ಲಿ ಜೀವಿಸಿದ್ದ ಮ್ಯಾಕ್ಸ್ ಮುಲ್ಲರ್, ಅಲ್ಬರ್ಟ್ ವೆಬರ್ ಮೊದಲಾದ ಒರಿಯಂಟಲಿಸ್ಟ್‌ಗಳು ಇಂಡೋಲಜಿ ಸಂಬಂಧಿಸಿ ಅಧ್ಯಯನ ನಡೆಸುವುದಕ್ಕಿಂತ ಮೊದಲು ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ, 11ನೇ ಶತಮಾನದಲ್ಲಿ ಜೀವಿಸಿದ್ದ ಅಲ್ ಬಿರೂನಿಯ ಅಗಾಧ ಪಾಂಡಿತ್ಯವನ್ನು ಈ ಬರಹ ಶ್ರುತಪಡಿಸುತ್ತದೆ.

ಅಲ್ ಬಿರೂನಿ ಎಂದು ಪ್ರಸಿದ್ಧರಾದ ಅಬೂ ರೈಹಾನ್ ಇಬ್ನು ಅಹ್ಮದ್ ಅಲ್ ಬಿರೂನಿ ಜಗತ್ತಿಗೆ ಮಹತ್ತರ ವಿದ್ವತ್ ಕಾಣ್ಕೆಗಳನ್ನು ಕೊಟ್ಟ ವಿಶ್ವ ಶ್ರೇಷ್ಟ ವಿದ್ವಾಂಸರಲ್ಲಿ ಒಬ್ಬರು. ಭೌಗೋಳಿಕ ವಿಜ್ಞಾನ, ಭೌತವಿಜ್ಞಾನ, ಖಗೋಳ ಶಾಸ್ತ್ರ, ಪರಿಸರ ಅಧ್ಯಯನ, ಗಣಿತ, ರಸಾಯನಶಾಸ್ತ್ರ, ಕರ್ಮಶಾಸ್ತ್ರ ಮೊದಲಾದ ಶಿಸ್ತುಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅಲ್ ಬಿರೂನಿ ಜ್ಞಾನ ಸಂಪಾದನೆಗಾಗಿ ವಿಶ್ವದುದ್ದಕ್ಕೂ ಸಂಚರಿಸಿದ ಸಾಹಸಿ ಯಾತ್ರಿಕ. ಬದುಕಿನ ಬಹುಪಾಲು ಕಾಲವನ್ನು ಅಧ್ಯಯನ ಮತ್ತು ವಿದ್ವತ್ ಸೇವೆಯಲ್ಲಿ ಕಳೆದ ಮಹಾನ್ ಚೇತನ. ಅವರ ಅನೂಹ್ಯ ಪ್ರತಿಭೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿದ್ದಿರಲಿಲ್ಲ. ಮನುಷ್ಯನ ಬೌದ್ಧಿಕ ಪ್ರಜ್ಞೆಯನ್ನು ವಿವೇಕಪೂರ್ಣವಾಗಿ ಅಭ್ಯಸಿಸುವ ಅಪೂರ್ವ ಸಾಮರ್ಥ್ಯವನ್ನು ಅವರು ಹೊಂದಿದ್ದರು. ತತ್ವಜ್ಞಾನಿ, ವೈದ್ಯ, ಇತಿಹಾಸಜ್ಞ, ಸಾಹಿತಿ, ಹೀಗೆ ಬಹುಮುಖ ಪ್ರತಿಭೆಯಾಗಿದ್ದರು ಅಲ್ ಬಿರೂನಿ.

ಸಾವಿರ ವರ್ಷಗಳ ಹಿಂದೆ ಇಂದಿನ ಉಜ್ಬೇಕಿಸ್ತಾನದ ಕೀವಾ ನಗರದ ಸಮೀಪವಿರುವ ಖವಾರಜ್ಮ್‌ನಲ್ಲಿ ಜನಿಸಿ ಅಲ್ಲೇ ಬೆಳೆದರು. ಅಲ್ಲಿಂದ ವಿಶ್ವ ಸಂಚಾರವನ್ನು ಕೈಗೊಂಡರು. ಅವರ ವಿಶ್ವ ಯಾತ್ರೆಗಳು ಆರ್ಥಿಕ ಅಥವಾ ವಾಣಿಜ್ಯ ಉದ್ದೇಶದ್ದಾಗಿರಲಿಲ್ಲ. ವಿವಿಧ ಪ್ರದೇಶಗಳ ಜನ, ಸಂಸ್ಕೃತಿ, ಭಾಷೆ, ವೇಷ, ಅಲ್ಲಿನ ಜ್ಞಾನವನ್ನು ಕರಗತ ಮಾಡಿಕೊಳ್ಳುವುದಕ್ಕಾಗಿ ಅಲೆದಾಡಿದರು. ಕ್ರಿ.ಶ 973 ರಿಂದ 1050 ರ ವರೆಗೆ 77 ವರ್ಷಗಳ ಕಾಲ ಅಲ್ ಬಿರೂನಿ ಬದುಕಿದರು.

ಜ್ಞಾನದ ಹಲವು ಶಾಖೆಗಳ ಪಿತಾಮಹನೆಂದು ಎನಿಸಲ್ಪಟ್ಟ ಅಲ್ ಬಿರೂನಿ ಇಸ್ಲಾಮಿನ ಸುವರ್ಣ ಯುಗದಲ್ಲಿ ಬದುಕಿದ್ದ ವಿದ್ವಾಂಸ. ಇಂಡೋಲಜಿ, ತೌಲನಿಕ ಧಾರ್ಮಿಕಾಧ್ಯಯನ, ಜಿಯೊಡಸಿ, ಮಾನವ ಶಾಸ್ತ್ರ ಮೊದಲಾದ ಶಾಖೆಗಳ ಪಿತಾಮಹನೆಂದು ಅವರನ್ನು ಪರಿಗಣಿಸಲಾಗಿದೆ. ಕ್ರಿ.ಶ 11 ನೇ ಶತಮಾನದಲ್ಲಿ ಕೀವಾ ನಗರದಲ್ಲಿ ನಡೆದ ರಾಜಕೀಯ ಕ್ರಾಂತಿಯ ಸಂದರ್ಭದಲ್ಲಾಗಿತ್ತು ಅವರು ತಮ್ಮ ತಾಯಿ ನೆಲವನ್ನು ತೊರೆದು ವಿಶ್ವ ಸಂಚಾರ ಆರಂಭಿಸಿದ್ದು. ಸಂಶೋಧನೆ, ಅಧ್ಯಯನದ ಅದಮ್ಯ ಉದ್ದೇಶವನ್ನು ಅವರು ಹೊಂದಿದ್ದರು. ವಿವಿಧ ಸಂಸ್ಕೃತಿಗಳ ಜನರ ಸಂಪರ್ಕದಿಂದಾಗಿ ಅವರ ಜ್ಞಾನ ವಿಸ್ತರಿಸಿತು. ಹಲವು ಭಾಷೆಗಳನ್ನು ಕಲಿತುಕೊಂಡರು. ಕಾಶ್ಮೀರದಿಂದ ಕೇರಳದವರೆಗೆ, ದಕ್ಷಿಣ ಭಾರತದ ಹಲವೆಡೆಗಳಲ್ಲಿ ಸಂಚರಿಸಿ ಭಾರತೀಯ ಜ್ಞಾನ ಪರಂಪರೆ, ಸಂಸ್ಕೃತಿಗಳ ಬಗ್ಗೆ ಕರಾರುವಾಕ್ಕಾಗಿ ತನ್ನ ಅರಬಿ ಗ್ರಂಥದಲ್ಲಿ ಅವರು ಬರೆದರು. ‘ಅಲ್ ಬಿರೂನಿ ಕಂಡ ಇಂಡಿಯಾ’ ಅಥವಾ ʼಕಿತಾಬುಲ್ ಹಿಂದ್ʼ ಸಾವಿರ ವರ್ಷಗಳ ಹಿಂದಿನ ಗ್ರಂಥವಾದರೂ ವಿಶಿಷ್ಟ ರಚನಾತ್ಮಕ ವಿನ್ಯಾಸವನ್ನು ಹೊಂದಿದೆ‌. ವಿಧಾನಶಾಸ್ತ್ರದ ನೆಲೆಗಟ್ಟಿನಲ್ಲಿ ನೋಡಿದರೆ ಆಧುನಿಕ ಮಾದರಿಯ ಅಕಾಡಮಿಕ್ ಗ್ರಂಥಗಳ ಜೊತೆ ಹೋಲಿಸಬಹುದಾದ ಈ ಗ್ರಂಥ, ಆ ಕಾಲದ ವಿದ್ವಾಂಸರ ವಿಶ್ಲೇಷಣಾ ಕೌಶಲ ಮತ್ತು ಪಾಂಡಿತ್ಯಪೂರ್ಣ ಸಂಶೋಧನೆಯ ಹೊಳಹುಗಳನ್ನು ತೆರೆದಿಡುತ್ತದೆ.

ಭೌಗೋಳಿಕತೆ ಮತ್ತು ಸಂಸ್ಕೃತಿಯೊಂದಿಗಿನ ಇತಿಹಾಸದ ಸಂಬಂಧವನ್ನು ಅಲ್ ಬಿರೂನಿ ಖಚಿತವಾಗಿ ಗುರುತಿಸಿದ್ದರು. ಅವರ ವಿಶ್ವ ಸಂಚಾರದಲ್ಲಿ ಆ ಕಾಲದ ಪ್ರಮುಖ ಜ್ಞಾನ ಸಂಗ್ರಹಗಳನ್ನು ಹೊಂದಿದ್ದ ಗ್ರೀಕ್ ಜ್ಞಾನ ಪರಂಪರೆ ಮತ್ತು ಸಂಸ್ಕೃತಿಯನ್ನು ಅಭ್ಯಸಿಸಲು ಗ್ರೀಕ್ ಭಾಷೆಯನ್ನು ಕಲಿತು, ವಿವಿಧ ಜ್ಞಾನ ಶಾಖೆಗಳ ಆಳ- ಅಗಲವನ್ನು ಕಂಡುಕೊಂಡರು. ಗಣಿತ, ರಾಜ್ಯಶಾಸ್ತ್ರ, ಕಾಲ ಗಣನೆ, ರಸಾಯನಶಾಸ್ತ್ರ, ಪರಿಸರ ಶಾಸ್ತ್ರ, ಇತಿಹಾಸ ಮೊದಲಾದ ಶಿಸ್ತುಗಳಲ್ಲಿ ಅಸಾಮಾನ್ಯ ಬೌದ್ಧಿಕ ಉತ್ಕೃಷ್ಟತೆಯನ್ನು ಸಾಧಿಸಿದರು. ಗ್ರೀಕ್‌ನಿಂದ ಅನೇಕ ಗ್ರಂಥಗಳನ್ನು ಅರಬಿಗೆ ಅನುವಾದಿಸಿದರು. ವೈಜ್ಞಾನಿಕ ಪುನರುತ್ಥಾನಕ್ಕೆ ನೇತೃತ್ವ ವಹಿಸಿದ್ದ ಅಬ್ಬಾಸಿದ್ ಖಿಲಾಫತ್‌ನ ಸುವರ್ಣ ಯುಗದಲ್ಲಿ, ಇಸ್ಲಾಮಿಕ್ ಆಡಳಿತ ಅಧ್ಯಯನ, ಸಂಶೋಧನೆಗಳಿಗೆ ವಿಪುಲ ಅವಕಾಶಗಳನ್ನು ಒದಗಿಸುತ್ತಿದ್ದ ಕಾಲದಲ್ಲಿ ಅಲ್ ಬಿರೂನಿಗೆ ಅನುಕೂಲಕರ ವಾತಾವರಣವಿತ್ತು. ಪೂರ್ವಿಕ ಮತ್ತು ಸಮಕಾಲೀನ ವಿದ್ವಾಂಸರ ಅಧ್ಯಯನ, ಸಂಶೋಧನೆಗಳು ಅಲ್ ಬಿರೂನಿಯನ್ನು ಆಮೂಲಾಗ್ರವಾಗಿ ಪ್ರಭಾವಿಸಿತ್ತು.

ಭಾರತೀಯ ಸಂಸ್ಕೃತಿ, ಇತಿಹಾಸ, ವಿದ್ವತ್ ಪರಂಪರೆ, ಮಾನವಶಾಸ್ತ್ರ ಅಧ್ಯಯನದ ಉದ್ದೇಶದಿಂದ ಅವರು ಭಾರತ ಪ್ರವಾಸ ಕೈಗೊಂಡಿದ್ದರು. ಭಾರತದ ಹಲವೆಡೆ ಸಂಚರಿಸಿ ಘಜ್ನಾದಲ್ಲಿ ತಂಗಿದ್ದ ಸಂದರ್ಭದಲ್ಲಿ ಅಲ್ಲಿನ ಸಂಸ್ಕೃತ ವಿದ್ವಾಂಸರಿಂದ ಸಂಸ್ಕೃತ ಭಾಷೆ ಕಲಿತು ಭಾರತದ ವಿದ್ವತ್ ಲೋಕವನ್ನು ಪ್ರವೇಶಿಸಿದ್ದರಿಂದ ವೇದ, ಪುರಾಣ ತತ್ವಚಿಂತನೆಗಳಲ್ಲಿ ಅಗಾಧ ತಿಳುವಳಿಕೆ ಪಡೆಯಲು ಸಾಧ್ಯವಾಯಿತು. ಘಜ್ನಾದಲ್ಲಿ ವಾಸವಾಗಿದ್ದಾಗ ಇಡೀ‌ ಭಾರತವನ್ನು ಸುತ್ತುವ ಸಾಹಸಿಕ ಯೋಚನೆಯೊಂದು ಅವರಿಗೆ ಹೊಳೆಯಿತು.

ಇದಕ್ಕಾಗಿ ಅವರು ಅನೇಕ ದುರಿತಗಳನ್ನು ಎದುರಿಸಬೇಕಾಗಿ ಬಂದರೂ ಭಾರತೀಯ ಸಂಸ್ಕೃತಿ, ಇತಿಹಾಸ, ತತ್ವ ಶಾಸ್ತ್ರ, ವಿದ್ವತ್ ಸಂಪತ್ತನ್ನು ಸಂಪಾದಿಸುವ ತನ್ನ ಯೋಜನೆಗಳೊಂದಿಗೆ ಮುಂದುವರಿದರು. 1017 ಮತ್ತು 1037 ರ ನಡುವಿನ ಕಾಲಾವಧಿಯಲ್ಲಿ ಅಲ್ ಬಿರೂನಿಯ ಭಾರತ ಸಂಚಾರ ನಡೆದಿದೆ ಎಂದು ಅನೇಕ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯವನ್ನು ಒಪ್ಪುವುದಾದರೆ, ಇದು ಇಪ್ಪತ್ತು ವರ್ಷಗಳ ತ್ಯಾಗಪೂರ್ಣವಾದ ವಿದ್ವತ್ ತಪಸ್ಸು ಎನ್ನುವುದನ್ನು ನಾವು ಕಂಡುಕೊಳ್ಳಬಹುದು. ಭಾರತದ ಇತಿಹಾಸ, ಸಂಸ್ಕೃತಿ, ವಿದ್ವತ್ ಪರಂಪರೆಯನ್ನು ಅಭ್ಯಸಿಸಲು 13 ವರ್ಷಗಳ ಅನ್ವೇಷಣಾ ಯಾತ್ರೆಯನ್ನು ವಿನಿಯೋಗಿಸಿದರು ಎಂದು ಕಿತಾಬುಲ್ ಹಿಂದ್ ಅನುವಾದಕರು ಪ್ರಸ್ತಾಪಿಸುತ್ತಾರೆ. ಅಬ್ಬಾಸಿದ್ ಆಡಳಿತದ ಪ್ರೋತ್ಸಾಹದೊಂದಿಗೆ ಆರಂಭಿಸಿದ ಜಗತ್ತಿನ ವಿವಿಧೆಡೆಯ ಸಾಂಸ್ಕೃತಿಕ ಅಧ್ಯಯನ, ವಿದ್ವತ್ ಪೂರ್ಣ ಸಂಶೋಧನೆಗಳಿಗೆ ಅಲ್ ಬಿರೂನಿ ವಹಿಸಿದ್ದ ವಿದ್ವತ್ ದೌತ್ಯ ಮಹತ್ವದ್ದಾಗಿತ್ತು. ಪೌರಸ್ತ್ಯ ಅಧ್ಯಯನ ಶಾಖೆ ಒರಿಯಂಟಲಿಸಂ ಎಂಬ ಜ್ಞಾನ ಕ್ಷೇತ್ರ ವಸಾಹತುಶಾಹಿಯ ಅಂಗವಾಗಿ ಹುಟ್ಟುವ ಶತಮಾನಗಳ ಮೊದಲೇ ಅಲ್ ಬಿರೂನಿ ತತ್ವಶಾಸ್ತ್ರ, ಸಂಸ್ಕೃತಿ, ವಿದ್ವತ್ ಪರಂಪರೆಯನ್ನು ಹುಡುಕುತ್ತಾ ಭಾರತದುದ್ದಕ್ಕೂ ಅಲೆದಾಡಿದರು. ಅಲ್ ಬಿರೂನಿಯಂಥವರ ವಿದ್ವತ್ ಸೇವೆ ಒಂದು ವರ್ಗಾವಣಾ ಪಕ್ರಿಯೆಯಾಗಬಲ್ಲದು ಎನ್ನುವುದು ಮುಖ್ಯವಾಗುತ್ತದೆ. ಆ ಕಾಲವು, ಇಸ್ಲಾಮಿಕ್ ನಾಗರಿಕತೆ ಮತ್ತು ಸಂಸ್ಕೃತಿ, ವಿಶ್ವ ಸಂಸ್ಕೃತಿಗಳೊಂದಿಗೆ ಸಂಗ್ರಹವಾಗಿದ್ದ ವಿದ್ವತ್ ಸಂಪತ್ತನ್ನು ಸಂಯೋಜಿಸಿ, ಪರಿಷ್ಕರಿಸಿ ಮನಷ್ಯ ಕುಲಕ್ಕೆ ವರ್ಗಾಯಿಸುತ್ತಿದ್ದ ವಿಶಿಷ್ಟ ಸಂದರ್ಭವಾಗಿತ್ತು. ನಿಶ್ಚಯವಾಗಿಯೂ ಪೌರಸ್ತ್ಯ ಅಧ್ಯಯನ ಶಾಖೆಗಳನ್ನು ರೂಪಿಸುವುದರಲ್ಲಿ ಮತ್ತು ಪ್ರೇರೇಪಿಸುವುದರಲ್ಲಿ ಇಂತಹ ವಿದ್ವತ್‌ಪೂರ್ಣ ಕಾರ್ಯಗಳು ಸಮೃದ್ಧವಾದ ಪಾತ್ರ ವಹಿಸಿವೆ ಎನ್ನುವುದು ಸ್ಪಷ್ಟವಾಗುತ್ತದೆ. ಉತ್ತರ ಭಾರತದ ಪ್ರಮುಖ ಸ್ಥಳಗಳನ್ನು ಸಂದರ್ಶಿಸಿ, ಕಾಶ್ಮೀರಕ್ಕೆ ಭೇಟಿ ಮಾಡಿದಾಗ ಅಲ್ಲಿ‌ನ ಟಿಬೆಟಿಯನ್ನರ ಸಂಪ್ರದಾಯ, ಸಂಸ್ಕೃತಿ ಕಂಡು ಆಕರ್ಷಿತರಾಗಿ ಸೂಕ್ಷ್ಮವಾಗಿ ಅಭ್ಯಸಿಸಿದ ನಂತರ ಟಿಬೆಟಿಯನ್ ಸಂಸ್ಕೃತಿಯ ಕುರಿತಾಗಿ ಗ್ರಂಥವನ್ನು ಬರೆದರು. ಕಾಶ್ಮೀರದ ಕುರಿತಾಗಿಯೂ ಇಂತಹದ್ದೇ ಗ್ರಂಥವೊಂದನ್ನು ಬರೆದಿದ್ದಾರೆ. ಭಾರತೀಯ ಪುರಾಣ ಮತ್ತು ವೈದ್ಯಶಾಸ್ತ್ರದ ಗ್ರಂಥಗಳನ್ನು ಅರಬಿಗೆ ಅನುವಾದಿಸಿದ್ದಾರೆ.

ಅಲ್ ಬಿರೂನಿ ಕ್ರಿ.ಶ 1025 ರಲ್ಲಿ ತಮಿಳುನಾಡಿನ ನಾಗಪಟ್ಟಣದಿಂದ ಕೇರಳಕ್ಕೆ ಬಂದದ್ದಾಗಿ ಇತಿಹಾಸದಲ್ಲಿ ದಾಖಲಾಗಿದೆ. ಒಂದು ವರ್ಷ ಏಳು ತಿಂಗಳು ಕೇರಳದಲ್ಲಿ ಇದ್ದು ಅಲ್ಲಿಂದ ಸಿಂಧ್‌ಗೆ ತೆರಳಿದ್ದಾಗಿ ಸ್ವತಃ ಅಲ್ ಬಿರೂನಿಯೇ ಉಲ್ಲೇಖಿಸಿದ್ದಾರೆ. ಚೀನಾಗೆ ಹೊರಡುವ ದಾರಿಯ ಮಧ್ಯೆ ಕ್ಯಾಲಿಕಟ್‌ನಲ್ಲಿ ಇಳಿದು ಕೆಲ ದಿನಗಳ ಕಾಲ ತಂಗಿದ್ದರೆಂದು ದಾಖಲೆಗಳು ಸ್ಪಷ್ಟಪಡಿಸುತ್ತವೆ. ಅವರ ಮೊದಲ ಭೇಟಿ, ಕ್ರಿ.ಶ 1025 ರಿಂದ 1027 ವರೆಗಿನ ಅವಧಿಯಲ್ಲಿ ಎಂದು ಬಹುತೇಕ ಖಚಿತವಾಗಿದೆ. ಈ ಅವಧಿಯಲ್ಲಿ ಕೇರಳದಲ್ಲಿ ಕಂಡ ದೃಶ್ಯಗಳನ್ನು ಅವರು ತನ್ನ ಗ್ರಂಥದಲ್ಲಿ ದಾಖಲಿಸಿದ್ದಾರೆ. ಕೇರಳಕ್ಕೆ ಬಂದಿದ್ದ ಅರಬಿಗಳ ಕುರಿತು ಮತ್ತು ಇಸ್ಲಾಮ್ ಧರ್ಮ ಪ್ರಚಾರದ ಕುರಿತೂ ತಪ್ಪು ಧೋರಣೆಗಳನ್ನು ಸೃಷ್ಟಿಸಿ, ಚೆರುಮಾನ್ ಪೆರುಮಾಲ್‌ರ ಮಕ್ಕಾ ಯಾತ್ರೆ ಮತ್ತು ಮುಸ್ಲಿಮರ ವಾಸವನ್ನು 12 ನೇ ಶತಮಾನಕ್ಕೆ ಮುಂದೂಡುತ್ತಿರುವ ಇಂದಿನ ಪ್ರಮುಖ ಇತಿಹಾಸಕಾರರನ್ನು ಕಣ್ಣು ತೆರೆಸಲು ಅಲ್ ಬಿರೂನಿಯ ಸಾಕ್ಷ್ಯಗಳಿಗೆ ಸಾಧ್ಯವಾಗುತ್ತವೆ. ಪ್ರಸ್ತುತ ವಿವರಗಳಲ್ಲಿನ ಕೇರಳ ಇತಿಹಾಸಕ್ಕೆ ಸಂಬಂಧಿಸಿದ ನಿರ್ಣಾಯಕ ಅಂಶಗಳನ್ನು ಅನುವಾದಕರು ಪ್ರಸ್ತಾವನೆಯಲ್ಲಿ ಹೀಗೆ ಚರ್ಚಿಸುತ್ತಾರೆ:

ಮಲಬಾರ್‌ನ ವ್ಯಾಪಾರದ ಖ್ಯಾತಿ ವಿದೇಶದಲ್ಲಿ ಅಲೆಯೆಬ್ಬಿಸಿದ 11 ನೇ ಶತಮಾನದಲ್ಲಾಗಿತ್ತು ಅಲ್ ಬಿರೂನಿಯ ಕೇರಳ ಭೇಟಿ. ಅವರು ಕೇರಳದ ಐದು ಪ್ರಮುಖ ಪಟ್ಟಣಗಳಲ್ಲಿ ತಂಗಿದ್ದರು ಮತ್ತು ಏಳು ರಾಜರೊಂದಿಗೆ ಸಂಭಾಷಣೆ ನಡೆಸಿದ್ದರು. ಕೊಲ್ಲಂ ಮತ್ತು ಕೋಝಿಕೋಡ್‌ನ ರಾಜರುಗಳು ಅವರಿಗೆ ಅತ್ಯಮೂಲ್ಯ ಉಡುಗೊರೆಗಳನ್ನು ನೀಡಿದ್ದರು. ಕೇರಳದ ಕೃಷಿ ಪದ್ಧತಿ, ವ್ಯವಸಾಯ ಸಂಪ್ರದಾಯದ ಕುರಿತು ಸೂಕ್ಷ್ಮವಾಗಿ ಅಧ್ಯಯನ ಮಾಡಿ ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ.

ಕೊಲ್ಲಂ ಮತ್ತು ಚಾಲಿಯಮ್‌ನಲ್ಲಿ ಅರೆಬಿಕ್ ವೈದ್ಯಕೀಯ ತಜ್ಞರು ಚಿಕಿತ್ಸಾ ಕೇಂದ್ರಗಳನ್ನು ತೆರೆದು ಕೇರಳೀಯರಿಗೆ ಅರೆಬಿಕ್ ವೈದ್ಯಶಾಸ್ತ್ರ ಕಲಿಸಿದ್ದರು ಮತ್ತು ಕೇರಳದಲ್ಲಿ ಜನಜನಿತವಾಗಿದ್ದ ವೈದ್ಯಕೀಯ ಪದ್ಧತಿಯನ್ನು ಅವರು ಕಲಿತರೆಂದು ಅಲ್ ಬಿರೂನಿ ಹೇಳುತ್ತಾರೆ. ಕೇರಳದ ಪ್ರಮುಖ ಉದ್ಯಮಿಗಳಿಗೆ ಮೂರು‌, ನಾಲ್ಕು ಭಾಷೆಗಳು ತಿಳಿದಿದ್ದವು. ಅವರು ವಿದೇಶಿ ಭಾಷಾ ಪ್ರಯೋಗಗಳನ್ನು ತಮ್ಮ ಭಾಷೆಗಳಲ್ಲಿ ಬಳಸುತ್ತಿದ್ದರು ಎಂದು ಅಲ್ ಬಿರೂನಿ ದಾಖಸಿದ್ದಾರೆ. ವಿವಿಧ ಧರ್ಮಗಳ, ಸಂಸ್ಕೃತಿಯ ಜನರು ಸಹಬಾಳ್ವೆಯಿಂದ ಬದುಕುವುದನ್ನು ಕೇರಳದಲ್ಲಿ ಕಂಡಿದ್ದೇನೆ ಎಂದು ವಿವರಿಸಿದ್ದಾರೆ. ಮಲಬಾರ್‌ನ ಕೆಲವು‌ ಭಾಗಗಳಲ್ಲಿ ಅರಬ್ ಕಾಲನಿಗಳಿದ್ದವು. ಸ್ಥಳೀಯ ಆಡಳಿತಗಾರರು ಅರಬಿ ವ್ಯಾಪಾರಿಗಳಿಗೆ ಸಹಾಯ ಮಾಡುತ್ತಿದ್ದರು ಎಂದು ವಿವರಿಸಿದ್ದಾರೆ.

ಕೇರಳದ ಐತಿಹಾಸಿಕ ಅಧ್ಯಯನಕ್ಕೆ ನೆರವಾಗುವ ಮಾಹಿತಿಗಳನ್ನು ಅಲ್ ಬಿರೂನಿಯ ಅಧ್ಯಯನ ನೀಡುತ್ತದೆ. ಅರಬಿಗಳಿಗೆ ಇತರ ಏಶ್ಯನ್ ಸಮೂಹದೊಂದಿಗೆ ಇದ್ದ ಸಾಗರೋತ್ತರ ವ್ಯಾಪಾರ ಸಂಬಂಧಗಳ ಬಗ್ಗೆ ಹೊಸ ಮಾದರಿಯ ಅಧ್ಯಯನಗಳಿಗೆ ಅನೂಹ್ಯ ಒಳನೋಟಗಳನ್ನು ಅಲ್ ಬಿರೂನಿಯ ಗ್ರಂಥಗಳು ನೀಡುತ್ತವೆ. ವಿವಿಧ ವಿಷಯಗಳ 180 ಗ್ರಂಥಗಳನ್ನು ಅಲ್ ಬಿರೂನಿ ರಚಿಸಿದ್ದಾರೆ. ಇವುಗಳಲ್ಲಿ ಅನೇಕ ಗ್ರಂಥಗಳು ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿ ಅನುವಾದ ಕಂಡಿದೆ.

ಅಲ್ ಬಿರೂನಿಯ ಸಂಶೋಧನಾ ವಿಧಾನ ವಸ್ತುನಿಷ್ಠವಾಗಿತ್ತೆಂದು ಈ ಗ್ರಂಥವನ್ನು ಓದುವವರಿಗೆ ವೇದ್ಯವಾಗುತ್ತದೆ. ಇಂದಿನ ಅಧಿಕೃತ ಸಂಶೋಧನೆಗಳಲ್ಲಿ ಕಾಣಸಿಗುವ ಬದ್ಧತೆ, ಪ್ರಾಮಾಣಿಕತೆ, ನಿರಪೇಕ್ಷತೆ ಸಾವಿರ ವರ್ಷಗಳಿಗಿಂತ ಮೊದಲು ರಚಿಸಲ್ಪಟ್ಟ ಗ್ರಂಥದುದ್ದಕ್ಕೂ ನಮ್ಮ ಅನುಭವಕ್ಕೆ ದಕ್ಕುತ್ತದೆ. ಭಾರತೀಯ ಸಂಸ್ಕೃತಿ ಮತ್ತು ಜ್ಞಾನದ ಅಧ್ಯಯನ ಕೈಗೊಂಡು ಅದನ್ನು ವಸ್ತುನಿಷ್ಠವಾಗಿ ದಾಖಲಿಸಲು ಮತ್ತು ತನ್ನ ಧಾರ್ಮಿಕ ವಿಶ್ವಾಸ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡೇ ಅದರ ಪ್ರತಿನಿಧಿಯಾಗಲು ಅಲ್ ಬಿರೂನಿಗೆ ಸಾಧ್ಯವಾಯಿತು. ಆದ್ದರಿಂದಲೇ ಅಲ್ ಬಿರೂನಿಯ ಜೀವನ ಚರಿತ್ರೆಕಾರ ಜಾರ್ಜ್ ಸಾಲ್ಟರ್ ʼಭಾರತೀಯ ಸಂಸ್ಕೃತಿಯ ಶ್ರೇಷ್ಠ ಸಂದೇಶವಾಹಕರಾಗಿ ಅಲ್ ಬಿರೂನಿ ಸ್ವದೇಶಕ್ಕೆ ಹಿಂದಿರುಗಿದ್ದರುʼ ಎಂದು ಉಲ್ಲೇಖಿಸಿರುವುದು.

ಅಲ್ ಬಿರೂನಿ ಕಂಡ ಭಾರತ ಎಂಬ ಕೃತಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ 30 ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಭಾರತೀಯ ಜ್ಞಾನ ಪರಂಪರೆಯ ಅಧ್ಯಯನಕ್ಕೆ ಒಬ್ಬ ಸಂಶೋಧಕ ಎದುರಿಸಬೇಕಾದ ಸವಾಲುಗಳ ಅವಲೋಕನ ನಡೆಸಲಾಗಿದೆ. ನಂತರ ದೇವ ವಿಶ್ವಾಸ ಇಂದ್ರೀಯ ಗೋಚರ ಮತ್ತು ಅಗೋಚರವಾದದ್ದರ ಮೇಲೆ ಭಾರತೀಯರ ನಂಬಿಕೆ, ಆತ್ಮ ಮತ್ತು ಜಡ ದೇಹದ ನಡುವಿನ ಸಂಬಂಧ, ಅವತಾರ ಸಿದ್ಧಾಂತ, ಲೌಕಿಕ ಬಂಧನದಿಂದ ಮೋಕ್ಷ, ವರ್ಗ ಮತ್ತು ಜಾತಿಗಳು, ವೇದ, ಪುರಾಣಗಳು ಮೊದಲಾಗಿ ವೃತ್ತ, ವ್ಯಾಕರಣಗಳಿಗೆ ಸಂಬಂಧಿಸಿದ ವಿಶ್ಲೇಷಣೆಗಳು, ಇತರ ಶಾಸ್ತ್ರಗಳ ಗ್ರಂಥ ಪರಿಚಯ, ಹಲವು ಜ್ಞಾನ ಶಾಖೆಗಳ ಕುರಿತಾಗಿ ಚರ್ಚಿಸುತ್ತದೆ.

ಎರಡನೇ ಭಾಗದಲ್ಲಿ 50 ಅಧ್ಯಾಯಗಳಿವೆ. ದೇಶಗಳ ನಡುವಿನ ಅಂತರ, ಜಗತ್ತಿನ ಮುಂದುವರಿಯುವಿಕೆ, ಕಾಲ, ಅದರ ಉದ್ಭವ ಹಾಗೂ ಅಂತ್ಯ ಮತ್ತು ಆ ಬಗೆಗಿನ ಇತರ ಭಾರತೀಯ ಸಿದ್ಧಾಂತಗಳು,ಭಾರತೀಯ ಐತಿಹಾಸಿಕ ಕಾಲಘಟ್ಟ, ಖಗೋಳಶಾಸ್ತ್ರ ಸಂಬಂಧಿಸಿದ ಕೆಲವು ವಿವರಗಳು, ಬ್ರಾಹ್ಮಣರ ವಿಶೇಷತೆಗಳು, ಅವರ ಕರ್ತವ್ಯಗಳು, ಬ್ರಾಹ್ಮಣೇತರ ಜಾತಿಗಳು, ಅವರ ಆಚರಣೆಗಳು, ತ್ಯಾಗ-ಬಲಿದಾನ, ತೀರ್ಥಯಾತ್ರೆಗಳು, ಧರ್ಮ, ಆಸ್ತಿ ಪಾಲುಗಾರಿಕಾ ವಿಧಾನ, ಸಮ್ಮತ ಮತ್ತು ನಿಷೇಧಿತ ಆಹಾರ ಪದ್ಧತಿ, ವ್ಯವಹಾರಿಕ ಪದ್ಧತಿ, ವಾರಸುದಾರಿಕೆ, ವ್ರತ ಮತ್ತು ಅದರ ವಿಧಗಳು, ಯೋಗ ವಿವರಣೆ, ಖಗೋಳಶಾಸ್ತ್ರ ಲೆಕ್ಕಾಚಾರ ವಿಧಾನಗಳು, ಅದರ ಕೆಲವು ಮೂಲಭೂತ ತತ್ವಗಳು, ಮೊದಲಾದ ಶೀರ್ಷಿಕೆಗಳಲ್ಲಿ ಭಾರತೀಯ ಸಂಸ್ಕೃತಿ, ವಿಶ್ವಾಸ-ಆಚಾರಗಳು, ಚಿಂತನಾಕ್ರಮ ಅಲ್ ಬಿರೂನಿ‌ ಈ ಕೃತಿಯಲ್ಲಿ ವಿಷದಪಡಿಸುತ್ತಾರೆ. ಕ್ರಮಬದ್ಧವಾಗಿರದೇ ಇದ್ದ ವಿದ್ವತ್ ಸ್ವರೂಪ, ಆಚರಣಾ ಕ್ರಮ, ವಿಶ್ವಾಸ, ಸಾಂಸ್ಕೃತಿಕ ಮೌಲ್ಯಗಳನ್ನು ವಿವಿಧ ಶೀರ್ಷಿಕೆಗಳಲ್ಲಿ ವಿಶ್ಲೇಷಿಸಲು ಪ್ರಯತ್ನಿಸುವ ಈ ಕೃತಿಯು ಆ ಕಾಲಕ್ಕೆ ಭಾರತೀಯ ಸಂಸ್ಕೃತಿಯ ಬಗ್ಗೆ ನಿಖರವಾದ ಕೆಲವು ಸಾಮಾನ್ಯ ತಿಳುವಳಿಕೆಗಳನ್ನು ಮನದಟ್ಟು ಮಾಡಿಸಲು ಶಕ್ಯವಾಗುತ್ತದೆ.

ಮಲಯಾಳಂ ಮೂಲ: ಝೈನುದ್ದೀನ್ ಮಂಡಲಂಕುನ್ನು
ಅನುವಾದ: ಝೈನ್ ಮುಈನಿ‌ ಇನೋಳಿ

ಒಂದು ಸಮುದ್ರ ಮತ್ತು ನಾಲ್ಕು ಕಾದಂಬರಿಕಾರರು: ಹಿಂದೂ ಮಹಾಸಾಗರದ ಸಾಹಿತ್ಯ ವಿಶ್ವವನ್ನು ಮರುರೂಪಿಸುವ ಬಗೆ

ಕಾದಂಬರಿಗಳು ಜಗತ್ತನ್ನು ನಿರ್ಮಿಸುತ್ತದೆ. ಅವು ಒಂದು ಜಾಗದ ಮನೋಚಿತ್ರ ಮತ್ತು ಕಾಲ್ಪನಿಕ ತಿಳುವಳಿಕೆಯನ್ನು ರಚಿಸುತ್ತದೆ. ಅದೇ ರೀತಿ, ಕಾದಂಬರಿಗಳು ನಿರ್ಮಿಸುವ ಪ್ರಪಂಚಗಳ ಭಾವವು ಭೂಪಟಗಳ ಹಾಗೆ ಓದುಗರು ವಿಶ್ವವನ್ನು ದರ್ಶಿಸುವ ಪರಿಯನ್ನು ರೂಪಿಸುತ್ತದೆ.

ವಸಾಹತೋತ್ತರ ಸಾಹಿತ್ಯದ ಆರಂಭಕಾಲದಲ್ಲಿ ಕಾದಂಬರಿಯ ಲೋಕವು ಒಂದು ರಾಷ್ಟ್ರವೇ ಆಗಿತ್ತು. ಆದರೆ ಅದೇ ಕಾಲದ ನಂತರದ ಕಾದಂಬರಿಗಳು ಸಾಮಾನ್ಯವಾಗಿ ಒಂದು ರಾಷ್ಟ್ರೀಯ ಗಡಿಯೊಳಗೆ ರೂಪುಗೊಳ್ಳುತ್ತಿತ್ತು ಮತ್ತು ಕೆಲವು ರೀತಿಯಲ್ಲಿ ರಾಷ್ಟ್ರೀಯ ಪ್ರಶ್ನೆಗಳಿಗೂ ಸಂಬಂಧಪಡುತ್ತಿತ್ತು. ಕೆಲವೊಮ್ಮೆ ಕಾದಂಬರಿಯ ಸಂಪೂರ್ಣ ಕಥೆಯು ಒಂದು ದೇಶದ ಅನ್ಯೋಕ್ತಿಯಾಗಿ(allegory) ಸ್ವೀಕರಿಸಲಾಗುತ್ತಿತ್ತು. ಇದು ವಸಾಹತು ವಿರೋಧಿ ರಾಷ್ಟ್ರೀಯತೆಯ ಬೆಂಬಲಕ್ಕೆ ಮುಖ್ಯವಾಗಿದ್ದರೂ ಅದರ ಭೊಕೇಂದ್ರಿತ ಮತ್ತು ಆಂತರಿಕ ಗಮನ ಸ್ವಭಾವವು ಒಂದು ಮಿತಿಯಾಗಿ ವರ್ತಿಸುತ್ತದೆ.

ನನ್ನ ಹೊಸ ಕೃತಿ ‘writing ocean worlds’, ಹಳ್ಳಿ ಅಥವಾ ರಾಷ್ಟ್ರಗಳನ್ನು ಬಿಟ್ಟು ಹಿಂದೂ ಮಹಾಸಾಗರವನ್ನು ಕೇಂದ್ರೀಕರಿಸುವ ಮೂಲಕ ಕಾದಂಬರಿಗಳ ಮತ್ತೊಂದು ರೀತಿಯ ಪ್ರಪಂಚವನ್ನು ಅನ್ವೇಷಿಸುತ್ತದೆ. ಪ್ರಸ್ತುತ ಪುಸ್ತಕವು, ಹಿಂದೂ ಮಹಾಸಾಗರವನ್ನು ಸುತ್ತುವರಿದ ಕಥೆಗಳನ್ನೊಳಗೊಂಡ ಕೆಲವು ಕಾದಂಬರಿಗಳನ್ನು ಪರಿಚಯಿಸುತ್ತದೆ. ಇದು ಕಾದಂಬರಿಕಾರರಾದ ಅಮಿತಾವ್ ಘೋಷ್, ಅಬ್ದುಲ್ ರಝಾಕ್ ಗುರ್ನಾ, ಲಿಂಡ್ಸೆ ಕಾಲೆನ್ ಹಾಗೂ ಜೋಸೆಫ್ ಕಾನ್ರಾಡ್ ಅವರನ್ನು ಕೇಂದ್ರೀಕರಿಸಿದೆ.

ಈ ನಾಲ್ಕು ಲೇಖಕರೂ ತಮ್ಮ ಬಹುತೇಕ ಕಾದಂಬರಿಗಳಲ್ಲಿ ಹಿಂದೂ ಮಹಾಸಾಗರದ ಪ್ರಪಂಚವನ್ನು ಕೇಂದ್ರೀಕರಿಸುವ ಮೂಲಕ ಗಮನಾರ್ಹರು. ಅವರ ಪೈಕಿ ಪ್ರತಿಯೊಬ್ಬರೂ ಹಿಂದೂ ಮಹಾ ಸಾಗರದ ಪ್ರಮುಖ ಪ್ರದೇಶಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಘೋಷ್ ಮತ್ತು ಗುರ್ನಾ ಅನುಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳನ್ನು ಕೇಂದ್ರೀಕರಿಸಿದ್ದು ಕಾಲೆನ್‌ ರವರು ದ್ವೀಪಗಳನ್ನು ಹಾಗೂ ಕಾನ್ರಾಡ್‌ರವರು ಸಾಮ್ರಾಜ್ಯಶಾಹಿಯರ ಹೊರಗಿನ ನೋಟವನ್ನು ಚಿತ್ರಿಸಿದ್ದಾರೆ.ಮೂಲತಃ ಭಾರತ ಮತ್ತು ಯು.ಎಸ್ ನಡುವೆ ನೆಲೆಗೊಳ್ಳುವ ಬರಹಗಾರರಾದ ಘೋಷ್ ರವರ ಕೃತಿಯು ಹಿಂದೂ ಮಹಾಸಾಗರದ ಐತಿಹಾಸಿಕ ಕಾದಂಬರಿಯನ್ನು ಒಳಗೊಂಡಿದೆ. ಝಾಂಝಿಬಾರಿನ ಗುರ್ನಾ 2021ರಲ್ಲಿ ಸಾಹಿತ್ಯಕ್ಕೆ ನೋಬೆಲ್ ಪುರಸ್ಕೃತ ಕಾದಂಬರಿಕಾರರು. ಕಾಲೆನ್ ಮಾರಿಷಸ್ ಮೂಲದ ಲೇಖಕ ಮತ್ತು ಹೋರಾಟಗಾರ ಮತ್ತು ಜೋಸೆಫ್ ಕಾನ್ರಾಡ್ ಇಂಗ್ಲಿಷ್ ಸಾಹಿತ್ಯಲೋಕದ ಪ್ರಮುಖ ಧ್ವನಿ.

ಇವರ ಕೃತಿಗಳು ಚಲನೆ, ಗಡಿ ದಾಟುವಿಕೆ ಮತ್ತು ದಕ್ಷಿಣ-ದಕ್ಷಿಣಗಳ ನಡುವಿನ ಪರಸ್ಪರ ಅಂತರ್ಸಂಬಂಧಗಳಿಂದ ತುಂಬಿರುವ ಹೊರಜಗತ್ತಿಗೆ ಕಣ್ಣು ಹಾಯಿಸಿರುವ ಜಗತ್ತನ್ನು ಅನಾವರಣಗೊಳಿಸಿದೆ. ವಸಾಹತುಶಾಹಿ ಒಲವುಳ್ಳ ಕಾನ್ರಾಡರಿಂದ ಬಹುದೊಡ್ಡ ಬಂಡವಾಳಶಾಹಿ ವಿರೋಧಿ ಹೋರಾಟಗಾರ ಕಾಲೆನ್‌ವರೆಗೆ ಇವರು ಬಹಳ ಭಿನ್ನಭಿನ್ನರಾಗಿದ್ದರೂ ಭಾಷೆ, ಚಿತ್ರ ಮತ್ತು ರೂಪಕಗಳ ಮೂಲಕ ಜತೆಯಾಗಿ ಹಿಂದೂ ಮಹಾಸಾಗರ ಪ್ರಪಂಚದ ಪ್ರವಿಶಾಲವಾದ ಪರಿಕಲ್ಪನೆಯನ್ನು ರಚಿಸುತ್ತಾರೆ. ಪರಸ್ಪರ ಒಳಸಂಪರ್ಕ ಹೊಂದಿರುವ ಜಾಗತಿಕ ದಕ್ಷಿಣ ಅಥವಾ ಗ್ಲೋಬಲ್‌ ಸೌತ್‌ನಲ್ಲಿ ಕೇಂದ್ರೀಕೃತವಾಗಿದ್ದುಕೊಂಡು ಓದುಗರ ಮನಸ್ಸಿನಲ್ಲಿ ಒಡಮೂಡಿರುವ ಜಗತ್ತಿನ ಕಲ್ಪನೆಯನ್ನು ಮರುರೂಪಿಸುವ ಶಕ್ತಿ ಅದಕ್ಕಿದೆ.

ಕೀನ್ಯಾ ಕಾದಂಬರಿಕಾರರಾದ ಯವೂನ್ ಅದಿಯಾಂಬೊ ಒವೂರ್ ಹೇಳಿದಂತೆ, ಪ್ರಪಂಚದೊಂದಿಗಿನ ಆಫ್ರಿಕಾದ ಅಂತರ್ಸಂಪರ್ಕದ ಆಖ್ಯಾನಗಳು “ನಮ್ಮ ಸ್ವಾತಂತ್ರ್ಯಾನಂತರದ ವಸಾಹತೋತ್ತರ ಕಲ್ಪನೆಯಲ್ಲಿ ಕಳೆದುಹೋದಂತಿದೆ”. ಆಫ್ರಿಕಾದ ಬಹುತೇಕ ಭಾಗವು ಸಮುದ್ರದಡಿಯಲ್ಲಡಗಿದೆ ಎಂದವರು ಹೇಳುತ್ತಾರೆ.

ಕಳೆದು ಹೋದ ಆಫ್ರಿಕಾವನ್ನು ಹುದುಗಿಸಿಕೊಂಡ ಕಾದಂಬರಿಯ ಪ್ರಪಂಚಕ್ಕೆ ಧುಮುಕಲು ಓದುಗರನ್ನು ಪ್ರಚೋದಿಸುವ ಗುರಿಯನ್ನು ನನ್ನ ಕೃತಿಯು ಹೊಂದಿದೆ.

ಹಿಂದೂ ಮಹಾಸಾಗರದ ಸಂಬಂಧ
ಪೂರ್ವ ಆಫ್ರಿಕಾ, ಅರಬ್ ಕರಾವಳಿಗಳು, ದಕ್ಷಿಣ ಮತ್ತು ಪೂರ್ವ ಏಷ್ಯಾ ತೀರಗಳ ನಡುವಿನ ಬಹುಕಾಲದ ಸಂಬಂಧಗಳನ್ನು ಸೂಚಿಸಲು ಬಳಸುವ ಪದವೇ ಹಿಂದೂ ಮಹಾಸಾಗರ ಪ್ರಪಂಚ. ಹಿಂದೂ ಮಹಾಸಾಗರದ ಭೌಗೋಳಿಕತೆ ಪ್ರಸ್ತುತ ಸಂಪರ್ಕವನ್ನು ಸಾಧ್ಯವಾಗುವಂತೆ ಮಾಡಿದೆ.

ಇತಿಹಾಸದುದ್ದಕ್ಕೂ ಸಮುದ್ರದಾರಿಯಲ್ಲಿನ ಪ್ರಯಾಣ ಭೂಮಾರ್ಗಕ್ಕಿಂತ ಬಹಳ ಸುಲಭವಾಗಿತ್ತು. ಆದ್ದರಿಂದಲೇ ಬಹಳ ದೂರದಲ್ಲಿರುವ ಬಂದರು ನಗರಗಳು ಹೊರಗಿನ ಹೆಚ್ಚು ಹತ್ತಿರದ ನಗರಗಳಿಗಿಂತ ಸುಲಭವಾಗಿ ಪರಸ್ಪರ ಸಂಪರ್ಕವನ್ನು ಹೊಂದಿದ್ದವು. ನಾವಿಂದು ಜಾಗತೀಕರಣವೆಂದು ಕರೆಯುತ್ತಿರುವ ಕಲ್ಪನೆಯು ಮೊದಲಿಗೆ ಪ್ರತ್ಯಕ್ಷವಾದದ್ದು ಹಿಂದೂ ಮಹಾಸಾಗರದಲ್ಲೆಂದು ಐತಿಹಾಸಿಕ ಮತ್ತು ಪುರಾತತ್ತ್ವ ಪುರಾವೆಗಳು ಸೂಚಿಸುತ್ತದೆ. ನನ್ನ ಪುಸ್ತಕದಲ್ಲಿ ಪರಾಮರ್ಶಿಸಿದ ಕಾದಂಬರಿಗಳಿಂದ ರೂಪಿಸಲ್ಪಟ್ಟ ಅಂತರ್ಸಂಪರ್ಕಿತ ಸಮುದ್ರಲೊಕವೂ ಇದುವೇ.

ಎಂ ಜಿ ವಾಸ್ಸಂಜಿ, ಮೈಕಲ್ ಆನ್ಡಾಟ್ಜೆ, ರೊಮೆಶ್ ಗುಣಸೇಖರ ಮತ್ತು ಇತರರ ಕೃತಿಗಳನ್ನು ಒಳಗೊಂಡಿರುವ ಹಿಂದೂ ಮಹಾಸಾಗರದ ಇಂಗ್ಲಿಷ್ ಕಾದಂಬರಿಯು ಸಣ್ಣದಾದರೂ ಸಮೃದ್ಧವಾದ ವಸ್ತುಗಳನ್ನು ಹೊಂದಿದೆ.

ಘೋಷ್, ಗುರ್ನಾ, ಕಾಲೆನ್ ಮತ್ತು ಕಾನ್ರಾಡ್ ಭೌಗೋಳಿಕತೆ ಮತ್ತು ಇತಿಹಾಸದ ಕುರುಹುಗಳನ್ನು ಬಹಳ ವಿಭಿನ್ನವಾಗಿ ಬಳಸಿದ್ದಾರೆ. ಕ್ರಿಶ್ಚಿಯನ್ ಮತ್ತು ಬಿಳಿಯ ಹಿನ್ನೆಲೆಯನ್ನು ಬಳಸುವ ಯುರೋಪ್ ಅಥವಾ ಯುಎಸ್‌ನಲ್ಲಿ ಹೆಚ್ಚಾಗಿ ಕೇಂದ್ರೀಕೃತಗೊಂಡಿರುವ ಹಾಗೂ ಪ್ಯಾರಿಸ್ ಮತ್ತು ನ್ಯೂಯಾರ್ಕ್‌ನಂತಹ ಸ್ಥಳಗಳನ್ನು ಉಲ್ಲೇಖಿಸುವ ಇಂಗ್ಲಿಷ್ ಕಾಲ್ಪನಿಕ ಕಥೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿದ್ಯಮಾನಗಳಲ್ಲ ಇಲ್ಲಿನ ಹೈಲೈಟ್. ಬದಲಾಗಿ ಈ ಕೃತಿಯಲ್ಲಿ ಪರಿಶೀಲಿಸಲಾದ ಕಾದಂಬರಿಗಳು ವಿಶಾಲವಾದ ಇಸ್ಲಾಮಿಕ್ ಪ್ರಪಂಚವನ್ನು ಹೈಲೈಟ್ ಮಾಡುತ್ತದೆ, ವರ್ಣ ಆಧಾರಿತ ಕಥಾಪಾತ್ರಗಳನ್ನು ಒಳಗೊಳ್ಳುತ್ತದೆ ಮತ್ತು ಮಲಿಂಡಿ, ಮೊಂಬಾಸಾ, ಏಡೆನ್, ಜಾವಾ ಹಾಗೂ ಬಾಂಬೆ ಬಂದರುಗಳನ್ನು ಕೇಂದ್ರೀಕರಿಸುತ್ತದೆ.

ಉದಾಹರಣೆಗೆ, ‘ಬೈ ದಿ ಸೀ’ ಎಂಬ ಗೂರ್ನಾರವರ ಕಾದಂಬರಿಯಲ್ಲಿ ಝಾಂಝಿಬಾರಿನ ಅಧ್ಯಾಪಕನೊಬ್ಬ ತನ್ನ ವಿಧ್ಯಾರ್ಥಿಗಳಿಗೆ ವಿಶ್ವದಲ್ಲಿ ತಮಗಿರುವ ಸ್ಥಾನವನ್ನು ತೋರಿಸುತ್ತಾ ಆಫ್ರಿಕಾದ ಪೂರ್ವ ಕರಾವಳಿಯ ಸುತ್ತ ದೀರ್ಘವಾದ ಗೆರೆಯನ್ನೆಳೆದು ಬಳಿಕ ಭಾರತವನ್ನು ಸುತ್ತಿ ಮಲಾಯ್ ಮತ್ತು ಇಂಡೊನೇಷಿಯನ್ ದ್ವೀಪಸಮೂಹಗಳ ಮೂಲಕ ಚೀನಾದಲ್ಲಿ ನಿಲ್ಲಿಸುತ್ತಾನೆ. ಬಳಿಕ ಝಾಂಝಿಬಾರ್ ಮೇಲೆ ಸುತ್ತಿ ಪೂರ್ವಕ್ಕೆ ಸಮುದ್ರದತ್ತ ಕೈ ತೋರಿಸಿ ಇದೇ ಈಗ ನಾವಿರುವ ಜಾಗವೆಂದು ಹೇಳುತ್ತಾನೆ. ಆಗ ತರಗತಿಯ ಹೊರಗಿನ ದೃಶ್ಯವನ್ನು ಹೀಗೆ ಚಿತ್ರಿಸಲಾಗಿದೆ:

“ಹಡಗುಗಳ ಗುಂಪುಗಳು ಹಲಗೆಗಳಂತೆ ಮಲಗಿವೆ. ಅವುಗಳೆಡೆಯಿರುವ ಸಮುದ್ರವು, ಅವುಗಳ ತ್ಯಾಜ್ಯದ ನುಣುಪುಗಳಿಂದ ಹೊಳೆಯುತ್ತಿದೆ. ವ್ಯಾಪಾರ ಮಾಡುತ್ತಾ, ಜಗಳವಾಡುತ್ತಾ, ರಾತ್ರಿಯಲ್ಲಿ ಜನರಿಲ್ಲದೆಡೆ ಜತೆಗೂಡಿ ಹಾಡುತ್ತಾ ಚಹಾ ಕುದಿಸುವ ಸೊಮಾಲಿಗಳು ಅಥವಾ ಸುರಿ ಅರಬರು ಅಥವಾ ಸಿಂಧಿಗಳಿಂದ ಬೀದಿಗಳು ತುಂಬಿತುಳುಕಿದೆ.”

ಪ್ರಪಂಚದಲ್ಲಿನ ಭೌಗೋಳಿಕ ಸ್ಥಾನ ಬಗೆಗಿನ ಹಿಗ್ಗಿಸಲಾದ ಸಂವೇದನೆಯನ್ನು ಒದಗಿಸುವ ದಕ್ಷಿಣದ ಕಾಸ್ಮೊಪಾಲಿಟನ್ ಸಂಸ್ಕೃತಿಯ ದಟ್ಟವಾದ ಕಲ್ಪನೆ ಮತ್ತು ಒಂದು ಸಮೃದ್ಧ ಸಂವೇದನಾಶೀಲ ಚಿತ್ರವನ್ನು ಇದು ಬಿಡಿಸಿಕೊಡುತ್ತದೆ.

ಆಫ್ರಿಕಾ ಪ್ರಾತಿನಿಧ್ಯ
ಈ ಪುನಃಸೃಷ್ಟಿ ಆಫ್ರಿಕಾದ ಪ್ರಾತಿನಿಧ್ಯವನ್ನು ಬಹಿರಂಗಪಡಿಸುವಲ್ಲಿ ವಿಶೇಷವಾದ ಶಕ್ತಿಯನ್ನು ಪಡೆದಿದೆ. ಕಾದಂಬರಿಯಲ್ಲಿರುವ ನಾವಿಕರು, ಪ್ರಯಾಣಿಕರೆಲ್ಲರೂ ಯುರೋಪಿಗರಲ್ಲ. ಅನ್ವೇಷಕರನ್ನು ಸ್ವೀಕರಿಸುವ ಗೋಜಿಗೆ ಹೋಗದೆ ಕಳುಹಿಸುವಲ್ಲಿ ಮಾತ್ರ ಗಮನ ಹರಿಸುವ ಜಲಭಯ ಹೊಂದಿರುವ ಖಂಡವಾಗಿ ಆಫ್ರಿಕಾವನ್ನು ಚಿತ್ರಿಸಲೂ ಇಲ್ಲ. ಭಾರತೀಯರು ಹಾಗೂ ಅರಬರ ಹಾಗೆ ಆಫ್ರಿಕನ್ನರೂ ಇಲ್ಲಿ ವ್ಯಾಪಾರಿಗಳು, ನಖೋಡಗಳು (ಧೋ ಹಡಗಿನ ಕಪ್ತಾನರು), ಊರುಬಿಟ್ಟವರು, ಖಳನಾಯಕರು, ಹೋರಾಟಗಾರರು, ಧರ್ಮಪ್ರವರ್ತಕರು ಮುಂತಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಇದರರ್ಥ ಹಿಂದೂ ಮಹಾಸಾಗರ ಆಫ್ರಿಕಾವು ಅತಿರಂಜಿತವಾಗಿ ಬಣ್ಣಿಸಲ್ಪಟ್ಟಿದೆಯೆಂದಲ್ಲ. ಇಲ್ಲಿ ವಲಸೆ ಬಲವಂತವಾಗಿ ಹೇರಲಾಗಿದೆ. ಪ್ರಯಾಣವನ್ನು ಸಾಹಸ ಎಂಬ ರೀತಿಯಲ್ಲಿ ಚಿತ್ರಿಸದೆ ತ್ಯಾಗದ ಚಿಹ್ನೆಯಾಗಿ ಚಿತ್ರೀಕರಿಸಲಾಗಿದೆ. ಮಹಿಳೆಯರ ಸ್ವಾತಂತ್ರ್ಯವು ಮರೀಚಿಕೆಯಾಗಿದೆ ಹಾಗೂ ಗುಲಾಮಗಿರಿ ರಾರಾಜಿಸುತ್ತಿದೆ. ಅಂದರೆ, ಹಿಂದೂ ಮಹಾಸಾಗರ ಪ್ರಪಂಚದ ಆಫ್ರಿಕನ್ ಭಾಗವು ಅದರ ಸುದೀರ್ಘ, ಸಮೃದ್ಧ ಇತಿಹಾಸದ ಮೂಲಕ ವಿಶಾಲ ಜಗತ್ತಿನಲ್ಲಿ ಸಕ್ರಿಯವಾದ ಪಾತ್ರವನ್ನು ವಹಿಸುತ್ತದೆ.‌

ಮೂಲ ಲೇಖಕರು: ಚಾರ್ನೆ ಲಾವೆರಿ
ಕನ್ನಡಕ್ಕೆ: ತ್ವಾಹಿರ್‌ ಸಿದ್ದೀಖ್

ಕೃಪೆ: https://theconversation.com/four-novelists-one-ocean-how-indian-ocean-literature-can-remap-the-world-184080

‘ಅರಬ್ಬಿ ಕಡಲಿನ ರಾಜಕುಮಾರಿʼ ಕೊಚ್ಚಿಯ ಸೂಫಿ ಜಾಡು

ಕೊಚ್ಚಿ ನಗರದ ಸಾಂಸ್ಕೃತಿಕ ಅರಿವೆಯನ್ನು ಇಸ್ಲಾಮ್‌ ನ ಸೌಂದರ್ಯದಿಂದ ಸೊಗಸಾಗಿ ಹೆಣೆಯಲಾಗಿದೆ. ‘ಅರಬ್ಬಿ ಕಡಲಿನ ರಾಜಕುಮಾರಿ’ ಎಂದೇ ಪ್ರಸಿದ್ಧಗೊಂಡಿರುವ ಕೊಚ್ಚಿ ಕೇರಳದಲ್ಲಿ ಅತೀ ಹೆಚ್ಚು ಭೇಟಿ ನೀಡುವ ಜನಪ್ರಿಯ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಆದರೆ, ಕೊಚ್ಚಿಯ ಮೇಲಿನ ಇಸ್ಲಾಮಿಕ್‌ ಪ್ರಭಾವದ ಬಗೆಗೆ ಗಂಭೀರವಾದ ಅಧ್ಯಯನಗಳು ನಡೆದೇ ಇಲ್ಲ ಎನ್ನಬಹುದು.1

ಅದಾಗ್ಯೂ, ಕೊಚ್ಚಿಯ ಇಸ್ಲಾಮಿಕ್ ಸೌಂದರ್ಯವು ಮಬ್ಬಿನಲ್ಲಿ ಮರೆಯಾಗಿದ್ದರೂ ಸಹ ಅದು ಗಮನಾರ್ಹ ಮತ್ತು ಗಂಭೀರ ಚರ್ಚೆಗೆ ಅರ್ಹವಾಗಿದೆ. ಕೊಚ್ಚಿಯ ಇಸ್ಲಾಮ್‌ ತನ್ನ ವಿಶಿಷ್ಟವಾದ ಸ್ಥಳೀಯ ಗುಣಗಳಿಂದ ವಿಶೇಷವಾಗಿದೆ. ಒಂದು ಕಾಲದ ಅತ್ಯಂತ ಲವಲವಿಕೆಯ ವ್ಯಾಪಾರಿ ಬಂದರಿನಲ್ಲಿ ಬದುಕಿದ ಸೂಫಿಗಳಿಂದ ಸಂಪನ್ನವಾಗಿದೆ. ಆದರೆ, ಈ ಅಂಶವು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದೆ. ವಿದ್ವಾಂಸರು ಹಾಗೂ ಸೂಫಿಗಳು ಬಿಟ್ಟುಹೋದ ಕುರುಹುಗಳ ಮೂಲಕ ಕೊಚ್ಚಿಯ ಇಸ್ಲಾಮಿಕ್‌ ಸಂಸ್ಕೃತಿಯನ್ನು ಅನ್ವೇಷಿಸಲು ಹಾಗೂ ವಿಶ್ಲೇಷಿಸಲು ಈ ಲೇಖನವು ಪ್ರಯತ್ನಿಸುತ್ತದೆ. ಕೊಚ್ಚಿಯ ಹಳೆಯ ಕಾಲದ ಮರದ ಮಸೀದಿಗಳ ನಡುವೆ ನಡೆದಾಡುವುದು, ಹಳೆಯ ಕಾಲದ ಇಸ್ಲಾಮಿಕ್‌ ಸಂಪ್ರದಾಯಗಳು ಮತ್ತು ವೈಭವಗಳ ಗತನೆನಪುಗಳನ್ನು ಕಾಣಿಸಿಕೊಡುತ್ತದೆ. ಹಾಗೂ ಇಲ್ಲಿನ ಕಡಲ ಕಿನಾರೆಯಲ್ಲಿ, ಕಿರಿದಾದ ಬೀದಿಯಲ್ಲಿ ಅಲೆದಾಡಿದ ಸೂಫಿ, ಸಂತರ ಕಾಲವನ್ನು ನೆನಪಿಸುತ್ತದೆ.

ಕೊಚ್ಚಿಯ ಬೀದಿಗಳು ಯಹೂದ್ಯರು, ಕ್ರಿಸ್ತಿಯನ್ನರು ಮತ್ತು ಮುಸ್ಲಿಮರ ವಾಸಸ್ಥಾನಗಳಾಗಿದ್ದವು. ಇಂದು, ಅದರ ಜನಸಂಖ್ಯೆಯು 42 ವೈವಿಧ್ಯಮಯ ಸಮುದಾಯಗಳಿಗೆ ಹಂಚಲ್ಪಟ್ಟಿದೆ ಎಂದು ಅಂದಾಜಿಸಲಾಗಿದೆ, ಅದರಲ್ಲಿ ಕಾಲು ಭಾಗವೂ ಮುಸ್ಲಿಮರದ್ದು. ನಗರವು ಯಹೂದಿ ವಸಾಹತುಶಾಹಿಗಳಿಗೆ ಮಾತ್ರ ಹೆಸರುವಾಸಿಯಾಗಿದ್ದು, ಅದರ ಶ್ರೀಮಂತ ಮುಸ್ಲಿಮ್ ಪರಂಪರೆಯು ಮರೆಯಲ್ಲಿಯೇ ಉಳಿದಿದೆ2. ಇಸ್ಲಾಮಿಕ್ ಪ್ರಭಾವದ ಮತ್ತೊಂದು ನಗರವಾದ ಕ್ಯಾಲಿಕಟ್‌ ನಂತೆ ಕೊಚ್ಚಿ ಎಂದಿಗೂ ಹೆಚ್ಚು ಪ್ರಭಾವಶಾಲಿ ವಾಣಿಜ್ಯ ಕೇಂದ್ರವಾಗಿರದಿದ್ದ ಕಾರಣ ಅದರ ಪರಂಪರೆಯು ಸ್ವಲ್ಪಮಟ್ಟಿಗೆ ಮರೆಯಾಗಿದೆ ಎಂದು ಹಲವರು ಸೂಚಿಸಿದ್ದಾರೆ3.

ಕೊಚ್ಚಿಯ ಕುರಿತಾದ ಲಿಖಿತ ದಾಖಲೆಯನ್ನು ಹಲವಾರು ಇತಿಹಾಸಕಾರರು, ಸಮುದ್ರಯಾನಿಗಳು ದಾಖಲಿಸಿದ್ದಾರೆ. ಖ್ಯಾತ ಲೋಕ ಸಂಚಾರಿ ಇಬ್ನ್‌ ಬತೂತ (Ibn Battuta) ತಮ್ಮ ರಿಹ್ಲಾದಲ್ಲಿ (Rihla) ಹೀಗೆ ದಾಖಲಿಸುತ್ತಾರೆ:

“ಜಲಮಾರ್ಗವಾಗಲಿ ಅಥವಾ ನೆಲದ ಮೂಲಕವಾಗಲಿ ಕಿಲೋನ್‌ (ಕೊಲ್ಲಂ- Quilon) ನಿಂದ ಕ್ಯಾಲಿಕಟ್‌ಗೆ ತಲುಪುವ ಪ್ರಯಾಣಕ್ಕೆ ಸುಮಾರು ಹತ್ತು ದಿನಗಳು ಬೇಕಾಗುತ್ತದೆ. ನಾನು ಜಲಮಾರ್ಗವನ್ನು ಆಯ್ದುಕೊಂಡೆ. ಹಾಗೂ ನನ್ನ ಸರಂಜಾಮುಗಳನ್ನು ಹಿಡಿದುಕೊಳ್ಳಲು ಓರ್ವ ಮುಸಲ್ಮಾನನನ್ನು ನೇಮಿಸಿಕೊಂಡೆ. ನೀರಿನಲ್ಲಿ ಪ್ರಯಾಣಿಸುವವರು ಮುಸ್ಸಂಜೆಯ ವೇಳೆ ಕರಾವಳಿಯ ಹಳ್ಳಿಗಳ ದಡಕ್ಕೆ ಬಂದು ಮರುದಿನ ಬೆಳಗ್ಗೆ ತಮ್ಮ ಪ್ರಯಾಣವನ್ನು ಮುಂದುವರಿಸುವುದು ಸಾಮಾನ್ಯ, ನಾವೂ ಹಾಗೆಯೇ ಮಾಡಿದ್ದೇವೆ. ನನ್ನ ಸೇವಕನು ದೋಣಿಯಲ್ಲಿದ್ದ ಒಬ್ಬನೇ ಮುಸ್ಲಿಮನಾಗಿದ್ದ. ಆದರೆ, ಆತ ಪ್ರತೀ ಬಾರಿ ದೋಣಿ ತೀರ ತಲುಪಿದಾಗಲೂ ಅವಿಶ್ವಾಸಿಗಳೊಂದಿಗೆ ಸೇರಿ ಶೇಂದಿ ಕುಡಿದು, ನನ್ನ ಕುರಿತು ಗೊಣಗುತ್ತಿದ್ದ. ಇದು ನನ್ನನ್ನು ಚಿಂತೆಗೀಡು ಮಾಡಿತ್ತು. ಐದನೇ ದಿನ, ನಾವು ಬೆಟ್ಟದ ಮೇಲಿರುವ ಕುಂಞಿ ಕಾರಿಯನ್ನು (Kunji Karī) ಯನ್ನು ತಲುಪಿದೆವು. ಅಲ್ಲಿನ ಜನ, ಕ್ವಿಲೋನ್ ರಾಜನಿಗೆ ಗೌರವವನ್ನು ಸಲ್ಲಿಸುವ, ತಮ್ಮದೇ ಸಾಮುದಾಯಿಕ ನಾಯಕನನ್ನು ಹೊಂದಿರುವ ಯಹೂದಿಗಳು. “

ಚೆಂಬಿಟ್ಟ ಮಸೀದಿ (Chembitta Mosque)

Chembitta Mosque

ಚೆಂಬಿಟ್ಟಾ ಮಸೀದಿ, ಸ್ಥಳೀಯವಾಗಿ ಇದು ಚೆಂಬಿಟ್ಟಾ ಪಳ್ಳಿ ಅಥವಾ ಕಾಪರ್‌ ಮಾಸ್ಕ್‌ (ತಾಮ್ರದ ಮಸೀದಿ) ಎಂದು ಕರೆಯಲ್ಪಡುತ್ತದೆ, ಕೊಚ್ಚಿಯ ಇಸ್ಲಾಮಿಕ್‌ ಪರಂಪರೆಗೆ ಇದೊಂದು ಉತ್ತಮ ಉದಾಹರಣೆ. ಇದನ್ನು ಮಾನ್ಸೂನ್‌ ಮಸೀದಿಯೆಂದೂ ಕರೆಯಲಾಗುತ್ತದೆ. ಮಲಬಾರ್ ಕರಾವಳಿಗೆ ನಿರ್ದಿಷ್ಟವಾದ ವಾಸ್ತುಶಿಲ್ಪದ ಶೈಲಿ ಹೊಂದಿರುವ ಇದು ಕೊಚ್ಚಿಯ ಅತ್ಯಂತ ಪ್ರಮುಖ ಮಸೀದಿ. ಶಾಫಿ ಜಾಮಿ ಅಥವಾ ಶಾಫಿ ಮಸೀದಿ ಎಂದೂ ಇದನ್ನು ಗುರುತಿಸಲಾಗುತ್ತದೆ.

ಈ ಮಸೀದಿ ಕಟ್ಟಡವು ಮರದ ರಚನೆಯನ್ನು ಹೊಂದಿದ್ದು, ಪ್ರಾರ್ಥನಾ ಸಭಾಂಗಣಕ್ಕೆ ಪ್ರವೇಶಿಸುವ ಪೂರ್ವ ಭಾಗದಲ್ಲಿ ಸ್ತಂಭಾಕಾರದ ಪ್ರವೇಶ ದ್ವಾರ ಇದೆ. ಹೊರ ಗೋಡೆಗಳು ಕಲ್ಲುಗಳಿಂದ ಕಟ್ಟಲ್ಪಟ್ಟಿದ್ದು, ಬಾಗಿಲ ಮೇಲೆ, ಮಸೀದಿ ಪ್ರವೇಶಿಸುವಾಗಿನ ಶಿಷ್ಟಾಚಾರದ ಬಗ್ಗೆ ಹದೀಸುಗಳ ಉಲ್ಲೇಖವನ್ನು ಅರೆಬಿಕ್‌ ಮತ್ತು ಹಳೆ ತಮಿಳಿನಲ್ಲಿ ಕೆತ್ತಲಾಗಿದೆ. ಈ ಶಾಸನಗಳನ್ನು ಹಿಜರಿ 926 (ಕ್ರಿಸ್ತ ಶಕ 1519) ಕ್ಕೂ ಹಿಂದೆ ಕೆತ್ತಲ್ಪಟ್ಟಿದೆ.

ಎಲ್ಲಾ ಮಾನ್ಸೂನ್‌ ಮಸೀದಿಗಳಂತೆ ಇದನ್ನೂ ಆದಷ್ಟು ಸೂರ್ಯ ರಶ್ಮಿ ಒಳಬರದಂತೆ ಕಟ್ಟಲಾಗಿದೆ. ಇಂತಹ ರಚನೆಯಲ್ಲಿ ಕತ್ತಲು ಏಕಾಗ್ರತೆ ನಷ್ಟವಾಗದಿರಲು, ಹೆಚ್ಚಿನ ಖುಷೂ (ನಮ್ರತೆ ಮತ್ತು ನೆಮ್ಮದಿ) ಮತ್ತು ತಖ್ವಾ (ದೇವರ ಪ್ರಜ್ಞೆ) ಹೃದಯದಲ್ಲಿ ಹೊರಹೊಮ್ಮಲು ಸಹಾಯ ಮಾಡುತ್ತದೆ, ಅದಕ್ಕಾಗಿಯೇ ಸೂರ್ಯನ ಬೆಳಕು ಒಳಬರದಂತಹ ವಿನ್ಯಾಸದಲ್ಲಿ ಮಸೀದಿಯನ್ನು ಕಟ್ಟಲಾಗಿದೆ. ಖಲ್ವಾ (ಏಕಾಂತ) ದ ಇಸ್ಲಾಮಿಕ್ ಆಚರಣೆಗೆ ಅನುಗುಣವಾಗಿ ಇದನ್ನು ನೋಡಬಹುದು.

ಸೂಫಿಗಳು ಮತ್ತು ಮುಸ್ಲಿಮ್ ಕೊಚ್ಚಿಯ ನಿರ್ಮಾಣ

ಮಸೀದಿ ಸ್ಥಾಪಿಸುವಲ್ಲಿ ಮಾತ್ರವಲ್ಲದೆ ಚಲನಶೀಲ (vibrant) ಮುಸ್ಲಿಮ್ ಸಮುದಾಯವನ್ನು ನಿರ್ಮಿಸುವಲ್ಲಿಯೂ ಕೊಡುಗೆ ನೀಡಿದ ಹಲವಾರು ಸೂಫಿಗಳ ಮಖ್ ಬರ (ಸಮಾಧಿ) ಗಳು ಮಸೀದಿ ಸಂಕೀರ್ಣದ ಸುತ್ತಲೂ ಕಾಣಸಿಗುತ್ತವೆ. ಸಯ್ಯಿದ್ ಇಸ್ಮಾಯಿಲ್ ಬುಖಾರಿ ಮತ್ತು ಅವರ ಪುತ್ರ ಸಯ್ಯಿದ್ ಫಕ್ರುದ್ದೀನ್ ಬುಖಾರಿ ಅವರು ತಮ್ಮ ವಿಶ್ವಾಸ ಮತ್ತು ಬೋಧನೆಗಳಲ್ಲಿ ಮಾದರಿಯಾಗಿ ಮುಸ್ಲಿಮ್ ಕೊಚ್ಚಿಯನ್ನು ಸಮೃದ್ಧವಾಗಿಸಲು ಸಹಾಯ ಮಾಡಿದರು. ಅವರ ಮಖ್ ಬರವೂ ಮಸೀದಿಯ ಸಮೀಪದಲ್ಲಿದೆ. ಸ್ಥಳೀಯರು ಪದೇ ಪದೇ ಭೇಟಿ ನೀಡುವ ಮಖ್ ಬರಗಳಲ್ಲಿ ಇದೂ ಒಂದು.

ಶೇಖ್ ಇಸ್ಮಾಯಿಲ್ ಬುಖಾರಿ ಅವರು ‘ಬುಖಾರಿ ಸೈಯದ್ʼ ಪರಂಪರೆಯಲ್ಲಿ ಮೊದಲಿಗರಾದ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಬುಖಾರಿ ಅವರ ಏಕೈಕ ಪುತ್ರರಾಗಿದ್ದರು (ಪ್ರವಾದಿ ಮುಹಮ್ಮದ್ ﷺ ವಂಶದ ಸಂತ ಜಲಾಲುದ್ದೀನ್ ‘ಸುರ್ಖ್-ಪೋಶ್ʼ ಬುಖಾರಿ ಅವರು ಬುಖಾರಾ ಅಥವಾ ಆಧುನಿಕ ಉಜ್ಬೇಕಿಸ್ತಾನ್ ನಿಂದ ಕ್ರಿ.ಶ 1521/ಹಿಜರಿ 928 ರಲ್ಲಿ ಕೇರಳಕ್ಕೆ ಬಂದರು). ತನ್ನ ಅಧ್ಯಯನದ ನಂತರ, ಸೈಯದ್ ಇಸ್ಮಾಯಿಲ್ ಅವರು ಉತ್ತರ ಕೇರಳದ ತಮ್ಮ ತವರು ವಾಲಪಟ್ಟಣದಿಂದ (ಆ ಕಾಲದಲ್ಲಿ ಕೆಲವೇ ಮುಸ್ಲಿಮರು ವಾಸಿಸುತ್ತಿದ್ದ) ಕೊಚ್ಚಿಗೆ ಪ್ರಯಾಣ ಬೆಳೆಸಿದರು. ವಿದ್ವಾಂಸರಾದ ಅವರು ಅಲ್ಲಿ ಇಸ್ಲಾಮ್ ಧರ್ಮವನ್ನು ಪ್ರಚಾರ ಮಾಡಿದರು. ಅವರ ಮೂವರು ಪುತ್ರರಾದ ಸಯ್ಯಿದ್ ಅಹ್ಮದ್ ಬುಖಾರಿ, ಸಯ್ಯಿದ್ ಮುಹಮ್ಮದ್ ಬುಖಾರಿ ಮತ್ತು ಸಯ್ಯಿದ್ ಬಾ ಫಕ್ರುದ್ದೀನ್ ಬುಖಾರಿ ಅವರು ಕೂಡಾ ʼಮುಸ್ಲಿಮ್ ಕೊಚ್ಚಿʼಯ ನಿರ್ಮಾಣಕ್ಕೆ ಕೊಡುಗೆ ನೀಡಿದ ಮಹಾನ್ ವಿದ್ವಾಂಸರು ಮತ್ತು ಸೂಫಿಗಳು. ಕೇರಳದ ಸಾದಾತ್ (ಪ್ರವಾದಿ ವಂಶಸ್ಥರು/ಸಯ್ಯಿದರ) ವಂಶಾವಳಿಯು ಸಯ್ಯಿದ್ ಫಕ್ರುದ್ದೀನ್ ಅವರಿಂದ ಪ್ರಾರಂಭವಾಗುತ್ತದೆ.

ಶೇಖ್ ಮಖ್ದುಮ್
ವಿದ್ವಾಂಸ ಶೇಖ್ ಮಖ್ದುಮ್ ಅವರನ್ನು ಮುಸ್ಲಿಮ್ ಕೊಚ್ಚಿಯ ವಾಸ್ತುಶಿಲ್ಪಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಮೂಲತಃ ಯೆಮೆನ್‌ ನವರಾದ ಶೇಖ್ ಝೈನುದ್ದೀನ್ ಅಲ್-ಮಖ್ದುಮ್ ಅಲ್ ಮಬಾರಿ (1465- 1522) ಅವರು ಹದಿನೈದನೇ ಶತಮಾನದ ಆರಂಭದಲ್ಲಿ ತಮಿಳುನಾಡಿನ ನಾಗೂರಿಗೆ ಮೊದಲು ಬಂದರು. ನಂತರ, ಅಲ್ಲಿಂದ ಕೊಚ್ಚಿಗೆ ತೆರಳಿದರು. ಕೊಚ್ಚಿಯಲ್ಲಿ ಧಾರ್ಮಿಕ ಗುರುಗಳಾಗಿ ಮತ್ತು ಆಧ್ಯಾತ್ಮಿಕ ನಾಯಕರಾಗಿ ಸೇವೆ ಸಲ್ಲಿಸಿದ ಅವರ ಮುಖಾಂತರ ಹಲವಾರು ಸ್ಥಳೀಯ ಜನರು ಇಸ್ಲಾಮಿಗೆ ಪರಿವರ್ತನೆಯಾದರು. ಝೈನುದ್ದೀನ್ ಅಲ್ ಮಖ್ದೂಮ್ ಅವರು ಚೆಂಬಿಟ್ಟ ಮಸೀದಿ ಆವರಣದಲ್ಲಿರುವ ಮೂಲ ಜಾಮಿ (ಮಸೀದಿ) ಯ ಸ್ಥಾಪಕರು ಎಂದು ಹೇಳಲಾಗುತ್ತದೆ. ಅಲ್ಲದೆ, ಮಖ್ದೂಮ್‌ ಅವರು ಮಲಬಾರ್ ಕರಾವಳಿಯಲ್ಲಿ ಪೋರ್ಚುಗೀಸ್ ವಸಾಹತುಶಾಹಿಯ ಬಗ್ಗೆ ಮೊದಲ ದಾಖಲೆಯನ್ನು ಬರೆದ ಇತಿಹಾಸಕಾರರೂ ಹೌದು.

ಇಬ್ರಾಹಿಂ ಮತ್ತು ಅಲಿ ಇಬ್ಬರು ಪುತ್ರರು ಝೈನುದ್ದೀನ್‌ ಅಲ್‌ ಮಖ್ದೂಮ್‌ ರಿಗೆ ಇದ್ದರು. ಮಖ್ದೂಮ್‌ ಅವರ ಮರಣದ ನಂತರ ಅವರನ್ನು ಕೊಚ್ಚಿಯಲ್ಲೇ ದಫನಗೊಳಿಸಲಾಯಿತು. ಮಖ್ದೂಮ್‌ ವಫಾತ್‌ ಬಳಿಕ ಓರ್ವ ಪುತ್ರ ಅಲಿ ಅವರು ಕೊಚ್ಚಿಯ ಖಾಝಿಯಾಗಿಯೇ ಉಳಿದರೆ, ಇನ್ನೋರ್ವ ಪುತ್ರ ಇಬ್ರಾಹಿಂ ಪೊನ್ನಾನಿಗೆ ತೆರಳಿ ಅಲ್ಲಿ ಖಾಝಿಯಾಗಿದ್ದರು4. ಸಯ್ಯಿದ್ ಬಾ ಫಕ್ರುದ್ದೀನ್‌ ಅವರು ಶೈಖ್‌ ಝೈನುದ್ದೀನ್‌ ಮಖ್ದೂಮ್‌ ಅವರ ಆಧ್ಯಾತ್ಮಿಕ (ಮುರ್ಷಿದ್/ಮುರಬ್ಬಿ) ಗುರುವಾಗಿದ್ದರು.

ಮುರೀದ್-ಮುರಬ್ಬಿ (ಆಧ್ಯಾತ್ಮಿಕ ಗುರು-ಶಿಷ್ಯ) ಸಂಬಂಧವು ಕೇರಳೀಯ ಇಸ್ಲಾಮಿನ ಪ್ರಮುಖ ಅಡಿಪಾಯ ಕಲ್ಲುಗಳಲ್ಲಿ ಒಂದಾಗಿದ್ದು, ಕೊಚ್ಚಿಯಲ್ಲಿಯೇ ಇದರ ಬೀಜಗಳು ಮೊಳಕೆಯೊಡೆದವು. ಉದಾಹರಣೆಗೆ, ಮಲಬಾರ್‌ನ ಮೆಕ್ಕಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದಕ್ಷಿಣ ಭಾರತದ ಆರಂಭಿಕ ಮುಸ್ಲಿಮ್ ವಸಾಹತುಗಳಲ್ಲಿ ಒಂದಾದ ಪೊನ್ನಾನಿ, ಮನ್ ರೂಮ್ ಕುಟುಂಬದ ವಿದ್ವಾಂಸರ ಅಡಿಯಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳು ಪ್ರಯಾಣಿಸುವ ಪ್ರದೇಶದಲ್ಲಿ ಮಹತ್ವದ ಕಲಿಕೆಯ ಕೇಂದ್ರವೆಂದು ಪರಿಗಣಿಸಲಾಗಿದೆ. ಈ ವಿದ್ವಾಂಸ ಕುಟುಂಬದ ಬೇರುಗಳನ್ನು ಕೊಚ್ಚಿಯ ಶೇಖ್ ಮಖ್ದುಮ್‌ ರಲ್ಲಿ ಗುರುತಿಸಬಹುದು.

ಕೊಚ್ಚಿಯ ಬುಖಾರಿ ಸಾದತ್ ಹೊರತುಪಡಿಸಿಯೂ, ನಗರಕ್ಕೆ ಸಂಬಂಧಿಸಿ ಇತರ ಕೆಲವು ಸಯ್ಯಿದ್ ಕುಟುಂಬಗಳು ಇವೆ, ಉದಾಹರಣೆಗೆ ಐದಾರಸ್, ಜಮಲುಲ್ಲೈಲ್, ಬಾಫಖೀ ಮತ್ತು ಜೀಲಾನಿ ಕುಟುಂಬಗಳು. ಸಯ್ಯಿದ್ ಅಬ್ದುರಹ್ಮಾನ್ ಅಲ್-ಐದ್ರೋಸ್ ಅವರನ್ನು ಕೊಚ್ಚಿಯ ಶ್ರೇಷ್ಠ ಸೂಫಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಥಕ್ಯಾ ಮಸೀದಿಯ ಆವರಣದಲ್ಲಿ ಅವರ ಮಖಬರ ಇದೆ.

ಇವೆಲ್ಲವೂ ಕೇರಳೀಯ ಮತ್ತು ದಕ್ಷಿಣ ಭಾರತದ ಇತಿಹಾಸದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ತಯಾರಿಕೆಯಲ್ಲಿ ಕೊಚ್ಚಿಯ ಅವಿಭಾಜ್ಯ ಸ್ಥಾನವನ್ನು ಸೂಚಿಸುತ್ತದೆ. ಈಗಿನ ಕೊಚ್ಚಿಯು ಕಾಸ್ಮೋಪಾಲಿಟನ್ ಆಗಿರುವುದರಿಂದ5, ಆಫ್ರಿಕಾ, ಯುರೋಪ್ ಮತ್ತು ಮಧ್ಯಪ್ರಾಚ್ಯದಿಂದ ವ್ಯಾಪಾರಿಗಳು ಮತ್ತು ವಿದ್ವಾಂಸರನ್ನು ಆಕರ್ಷಿಸುತ್ತದೆ. ಈ ಹಿನ್ನೆಲೆಯಲ್ಲಿ ಕೊಚ್ಚಿಯು ಜಾಗತಿಕ ಇಸ್ಲಾಮಿಕ್ ಇತಿಹಾಸದಲ್ಲಿಯೂ ಮಹತ್ವದ್ದಾಗಿದೆ ಎಂದು ಗಮನಿಸಬೇಕಾದ ಅನಿವಾರ್ಯತೆ ಇದೆ.

“ಕೊಚ್ಚಿಯನ್ನು ಸುಂದರವಾದ ಮತ್ತು ಗಮನಾರ್ಹವಾದ ನೆಲವನ್ನಾಗಿ ಮಾಡಿದ ಈ ಸೂಫಿಗಳನ್ನು ನೆನಪಿಸಿಕೊಳ್ಳಬೇಕು ಹಾಗೂ ಅವರನ್ನು ನಗರದ ಸ್ಥಾಪಕರು ಎಂದು ಪರಿಗಣಿಸಬೇಕು, ಅವರು ಈ ನಗರದ ವಾಸ್ತುಶಿಲ್ಪಿಗಳು.” ಎಂದು ಸ್ಥಳೀಯರೊಬ್ಬರು ನನ್ನಲ್ಲಿ ಹೇಳಿದ್ದರು. ಪಶ್ಚಿಮ ಆಫ್ರಿಕಾದಲ್ಲಿ ಉಸ್ಮಾನ್ ಡ್ಯಾನ್ ಫೋಡಿಯೊ, ಹಿಂದೂಸ್ತಾನ್‌ನಲ್ಲಿ ಮುಈನುದ್ದೀನ್ ಚಿಶ್ತಿ ಮತ್ತು ಅನಟೋಲಿಯಾದಲ್ಲಿ ಯೂನುಸ್ ಎಮ್ರೆ ತಮ್ಮ ನೆಲವನ್ನು ಪಾಂಡಿತ್ಯ ಮತ್ತು ಸೂಫಿಸಮ್ಮಿನ ಕೇಂದ್ರಗಳಾಗಿ ಪರಿವರ್ತಿಸಿದಂತೆಯೇ, ಕೊಚ್ಚಿಯ ಸೂಫಿಗಳೂ ಸಹ ಮಾಡಿದರು. ಕಲಾತ್ಮಕವಾಗಿ ಸಮ್ಮೋಹನಗೊಳಿಸುವ ಈ ನಗರದಲ್ಲಿನ ಮುಸುಕನ್ನು ಸ್ವಲ್ಪ ಮಟ್ಟಿಗೆ ಸರಿಸಿದರೆ ನಗರದಲ್ಲಿರುವ ಸೂಫಿಗಳ ಪ್ರಭಾವವು ಇನ್ನೂ ಗೋಚರಿಸುತ್ತದೆ.

ಮೂಲ ಲೇಖಕ: ಮುಹಮ್ಮದ್‌ ಎ ತ್ವಾಹಿರ್‌
ಅನುವಾದ: ಫೈಝ್‌


Footnotes:

1Shokoohy, Mehrdad. “The Town of Cochin and Its Muslim Heritage on the Malabar Coast, South India.” Journal of the Royal Asiatic Society, vol. 8, no. 3, 1998, pp. 351–94. JSTOR, http://www.jstor.org/stable/25183570. Accessed 5 Sep. 2022.

Ibid.

3 Ibid.

Shokoohy, Mehrdad, 1998.

5 Pearson, MN and Mahmūd Kūria, Malabar in the Indian Ocean : Cosmopolitanism in a Maritime Historical Region (Oxford University Press, First edition., 2018)

ಇಸ್ಲಾಮಿಕ್ ಜ್ಯಾಮಿತಿ ರಚನೆ: ಕಲೆ ಮತ್ತು ಚರಿತ್ರೆ

‘ಎಲ್ಲವನ್ನೂ ಬಹಳ ಸೂತ್ರಬದ್ಧವಾಗಿ ನಿರ್ಮಿಸುವುದು ಅಲ್ಲಾಹನ ಕಲಾತ್ಮಕತೆಯಾಗಿರುತ್ತದೆ’ (ಪವಿತ್ರ ಖುರ್‌ಆನ್ 27:88).
ಈ ಒಂದು ಸಣ್ಣ ಲೇಖನದಲ್ಲಿ ನಾನು ಇಸ್ಲಾಮಿಕ್ ಕಲೆಯ ಆಧ್ಯಾತ್ಮಿಕ ಸ್ವರೂಪ, ಇತಿಹಾಸ ಮತ್ತು ಅದು ಇಸ್ಲಾಮಿಕ್ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದೇನೆ. ಪ್ರಕೃತಿಯತ್ತ ನಾವು ಕಣ್ಣು ಹಾಯಿಸಿದಾಗ ಆಕಾಶಕಾಯಗಳ ಸಮತೋಲನ, ಸಸ್ಯ ಮತ್ತು ಪ್ರಾಣಿಗಳ ಆಕೃತಿಗಳಲ್ಲಿ, ಭೂಮಿಯ ರಚನೆಯಲ್ಲಿ ಹಾಗೂ ಜೀವಕೋಶಗಳ ಆಕಾರದಲ್ಲಿ ಅಲ್ಲಾಹನ ಸಂಪೂರ್ಣ ಸೃಷ್ಟಿವೈಭವದ ಪ್ರತಿಬಿಂಬವನ್ನು ನೋಡಲು ಸಾಧ್ಯವಾಗುತ್ತದೆ.

‘ISLAMIC HISTORY’ ಎಂಬ ಕೃತಿಯ ಲೇಖಕ ಸ್ವಾಹಿಕ್ ಒಮರ್ ಬರೆಯುತ್ತಾರೆ; ಪ್ರವಾದಿ(ಸ) ರವರು ಹೇಳಿದರು; “ಅಲ್ಲಾಹನು ಸುಂದರನು ಹಾಗೂ ಅವನು ಸೌಂದರ್ಯವನ್ನು ಪ್ರೀತಿಸುತ್ತಾನೆ”. ಆದ್ದರಿಂದಲೇ ಅವನ ಎಲ್ಲ ಸೃಷ್ಟಿಗಳನ್ನು ಅತ್ಯುನ್ನತ ಸ್ವರ್ಗೀಯ ವೈಭವದಿಂದ ಮತ್ತು ಕ್ರಮೀಕರಣದಿಂದ ಯಾರಿಂದಲೂ ಅನುಕರಿಸಲಾಗದ ರೀತಿಯಲ್ಲಿ  ಸೃಷ್ಟಿಸಲಾಗಿದೆ. ಸೂಫಿ ಚಿಂತನೆಯ ಸೌಂದರ್ಯಮೀಮಾಂಸೆಯನ್ನು ಸಂಶೋಧಿಸಿದ ಇಬ್ನ್ ಅರಬಿಯವರ ಪ್ರಕಾರ, ‘ದೇವರನ್ನು ಸುಂದರ ಎಂದು ಬಣ್ಣಿಸುವ ಮತ್ತು ತನ್ನನ್ನು ತಾನು ಪ್ರೇಮದ ಸೌಂದರ್ಯ ಎಂದು ವಿಶ್ಲೇಷಿಸುವ ದೈವಿಕ ಸೌಂದರ್ಯವು ಎಲ್ಲದರಲ್ಲೂ ನೆಲೆಸುತ್ತದೆ. ಸೌಂದರ್ಯವನ್ನು ಹೊರತುಪಡಿಸಿ ಬೇರೆ ಯಾವುದೂ ಶಾಶ್ವತವಲ್ಲ. ಏಕೆಂದರೆ ಈ ಬ್ರಹ್ಮಾಂಡವನ್ನು ಅವನ ಅನಂತ ಸೌಂದರ್ಯದ ಪ್ರತಿಚ್ಛಾಯೆಯೆಂಬಂತೆ ರಚಿಸಲಾಗಿದೆ. ಆದ್ದರಿಂದ ಈ ವಿಶ್ವ ಮತ್ತು ಅದರ ವಸ್ತುಗಳು ಹಾಗೂ ಘಟಕಗಳು ಸೇರಿದಂತೆ ಎಲ್ಲವೂ ಸುಂದರವಾಗಿದೆ.

ಈ ಆಯತ್‌ನ ವ್ಯಾಪ್ತಿಯಲ್ಲಿ  ಇಸ್ಲಾಮಿನ ಕಲೆ ಮತ್ತು  ವಾಸ್ತುಶಿಲ್ಪಗಳು ಕೂಡಾ ಸೇರುತ್ತದೆ ಎಂಬುದು ಗಮನಾರ್ಹ. ಫೆಲೆಸ್ತೀನಿನ ಜೆರೂಸಲೇಮಿನ Dome of rock ನೋಡಿದರೆ ಆ ಕುರಿತು ನಮಗೆ ಮನವರಿಕೆಯಾಗುತ್ತದೆ. ಇದನ್ನು ಅಷ್ಟಭುಜಾಕೃತಿಯ ತಳಹದಿಯ ಮೇಲೆ ನಿರ್ಮಿಸಲಾಗಿದೆ. ಅದರ ಮೇಲೆ ವೃತ್ತಾಕಾರದ ಗುಮ್ಮಟವಿದೆ. ವಾಸ್ತುಶಿಲ್ಪದಲ್ಲಿ ಅಗಾಧ ಪ್ರಮಾಣದ ಪ್ರಾವೀಣ್ಯತೆ ಹೊಂದಿದ್ದ ಕಾರಣದಿಂದಲೇ ಅದನ್ನು ಪ್ರಜ್ಞಾಪೂರ್ವಕವಾಗಿ ನಿರ್ಮಿಸಲಾಗಿದೆ. ಅಂತ್ಯದಿನದಂದು 8 ದೇವಚರರು ಸಿಂಹಾಸನವನ್ನು ಹೊತ್ತಿರುತ್ತಾರೆ ಎಂಬ ಖುರ್‌ಆನ್ ಸೂಕ್ತವನ್ನು ಇದು ಪ್ರತಿಬಿಂಬಿಸುತ್ತದೆ.

ಇಸ್ಲಾಂ ಮತ್ತು ವಿಗ್ರಹಾರಾಧನೆ ವಿರೋಧ

ಇಸ್ಲಾಮಿಕ್ ಅನಿಕೋನಿಸಮ್(aniconism) ಎಂಬ ಕಲ್ಪನೆ – ಮಾನವ ಆಕೃತಿಗಳನ್ನು ಬಳಸಿ ಪ್ರತಿಮೆಗಳನ್ನು ನಿರ್ಮಾಣದ ನಿಷೇಧ – “ಜೀವಜಾಲಗಳ ರೂಪ ವಿನ್ಯಾಸ ಮತ್ತು ಸೃಷ್ಟಿಕ್ರಿಯೆಯು ದೇವರ ವಿಶೇಷ ಹಕ್ಕು” ಎಂಬ ನಂಬಿಕೆಯ ಮೇಲೆ ನಿಂತಿದೆ. ಈ ಕಾರಣಕ್ಕಾಗಿ, ಮುಸ್ಲಿಮ್ ಕುಶಲಕರ್ಮಿಗಳು ಮತ್ತು ಕಲಾವಿದರು ಗಣಿತ ಮತ್ತು ಕಲೆಯ ಅಂಶಗಳನ್ನು ಪುನರಾವರ್ತಿತ ಜ್ಯಾಮಿತೀಯ (Geometrical) ರೂಪಗಳಾಗಿ ಬೆರೆಸುವ ಮೂಲಕ ತಮ್ಮದೇ ಆದ ಒಂದು ಸೌಂದರ್ಯಶಾಸ್ತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಉತ್ತರ ಆಫ್ರಿಕಾದ ಕುಶಲಕರ್ಮಿಗಳು ಇದನ್ನು ಝೆಲ್ಲಿಜ್ (zellij) ಎಂದು ಕರೆಯುತ್ತಾರೆ. ಈ ವಿಶಿಷ್ಟವಾದ ಶೈಲಿಯನ್ನು ಸಂರಚಿಸಲು ಮುಸ್ಲಿಮ್ ಗಣಿತಶಾಸ್ತ್ರಜ್ಞರು ಮತ್ತು ಖಗೋಳಶಾಸ್ತ್ರಜ್ಞರ ಗಣನೀಯವಾದ ಕೊಡುಗೆಗಳು ಅನಿವಾರ್ಯವಾಗಿದ್ದವು. ಇಬ್ನು ಸೀನಾ ಅವರ ಕಾಲದಲ್ಲಿ ಇದನ್ನು ಗಣಿತಶಾಸ್ತ್ರ ಎಂದೇ ಕರೆಯಲಾಗುತ್ತಿತ್ತು. ಪ್ರಾಚೀನ ಮಸೀದಿಗಳಾದ ಡೆಮಾಸ್ಕಸಿನ ಗ್ರೇಟ್ ಮಸೀದಿ, ಗ್ರಾನಡಾದ ಅಲ್ ಹಮ್ರ, ಕಸಬ್ಲಾಂಕಾದ ಹಸನ್ ಮಸೀದಿ ಮತ್ತು ಇರಾನಿನ ಇಸ್ಪಹಾನಿನಲ್ಲಿರುವ ಷಾ  ಮಸೀದಿ ಇತ್ಯಾದಿ ಪ್ರಾಚೀನ ಮಸೀದಿಗಳು ಮತ್ತು ಇನ್ನಿತರ ಸ್ಥಳಗಳಲ್ಲಿ ಇಂತಹ ಮಾದರಿಗಳನ್ನು ಕಾಣಬಹುದು. ಆ ಕಾಲದಲ್ಲಿ ಆಕರ್ಷಕವಾದ ಬಣ್ಣಗಳಾಗಲಿ, ವೈವಿಧ್ಯಮಯವಾದ ವಿಧಗಳಾಗಲಿ ಇರಲಿಲ್ಲ. ಖುರ್‌ಆನ್ ಮತ್ತು ಹದೀಸ್ ಗಳಲ್ಲಿ ವಿವರಿಸಿದಂತೆ ಅರಮನೆಗಳು, ಹಣ್ಣಿನ ಮರಗಳು, ಖರ್ಜೂರದ ಮರಗಳನ್ನೊಳಗೊಂಡ ಉದ್ಯಾನವನಗಳನ್ನು ಹೊಂದಿರುವ ಸ್ವರ್ಗ ಸಮಾನವಾದ ಅಲಂಕಾರವನ್ನು ಉಲ್ಲೇಖಿಸಲಾದ ಈ ಮೊಸಾಯಿಕ್ (mosaic) ಚಿತ್ರಗಳು ಖಲೀಫರುಗಳ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ.

zellij

ಝೆಲ್ಲಿಜ್ (zellij)

ಮೊರೊಕೊ ದೇಶದ ಆಕೃತಿಗಳಾದ ಚೌಕಗಳು, ತ್ರಿಕೋನಗಳು, ನಕ್ಷತ್ರಗಳು, ವಜ್ರಗಳು, ಮತ್ತು ಬಹುಭುಜಾಕೃತಿಗಳ ವ್ಯವಸ್ಥಿತ ಮತ್ತು ನಿಖರವಾದ ಮೊಸಾಯಿಕ್ ಗಳನ್ನು ರೂಪಿಸುವ Tail work ನ ಒಂದು ಮೂರಿಷ್ ಕಲಾ ಪ್ರಕಾರವನ್ನು ‘ಝೆಲ್ಲಿಜ್’ ಎನ್ನಲಾಗುತ್ತದೆ. ಇಂತಹ ಮೊಸಾಯಿಕ್ಸ್ ಗಳು ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಗೆ ಅನುಕೂಲವಾದ ವಾತಾವರಣವನ್ನು ಸೃಷ್ಟಿಸಲು ಸಹಕಾರಿಯಾಗುತ್ತದೆ.

ಝೆಲ್ಲಿಜ್ ನ ಒಂದು ಹೃಸ್ವ ಚರಿತ್ರೆ

ಹತ್ತನೇ ಶತಮಾನದಲ್ಲಿ ಚಾಲನೆಯಲ್ಲಿದ್ದ ರೋಮನ್ ಮತ್ತು ಬೈಝಂಟೈನ್ ಮೊಸಾಯಿಕ್ ಗಳಿಂದ ಸ್ಪೂರ್ತಿ ಪಡೆದಿದೆ ಎನ್ನಲಾಗುವ ‘ಮೊರೋಕ್ಕೋ ಟೈಲ್’ ಇದೇ ಶತಮಾನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತದೆ. ಉಜ್ವಲವಾದ ಬಣ್ಣಗಳು ಅಥವಾ ಆಯ್ಕೆ ಮಾಡುವಂತಹ ವಿಶೇಷ ವೈವಿಧ್ಯತೆಯೋ ಇರಲಿಲ್ಲ. ಬಿಳಿ ಅಥವಾ ಬೂದು ಬಣ್ಣಗಳನ್ನು ನೋಡಿ ನೀವು ಮಾರುಕಟ್ಟೆಗೆ ಬರುತ್ತೀರೆಂದರೆ ನಿಮಗೆ ಅದೃಷ್ಟ ಖುಲಾಯಿಸಬಹುದು ಎಂಬ ಸ್ಥಿತಿ ಆಗಿನ ಕಾಲದಲ್ಲಿತ್ತು.

ನಂತರ 11ನೇ ಶತಮಾನದಲ್ಲಿ ನಕ್ಷತ್ರಾಕಾರದ ಜ್ಯಾಮಿತಿ ರಚನೆಗಳು ರೂಪುಗೊಂಡವು. ಅಸುಲೇಜೋನ ಕಾಲದಲ್ಲಿ (ಹಿಸ್ಪಾನಿಕ್- ಮೊರೆಸ್ಕ್ ಕಾಲಘಟ್ಟ) ಮೋರೋಕೋ(ವಾಯುವ್ಯ ಆಫ್ರಿಕಾ),ಅಲ್ ಅಂದಲೂಸ್ (ಈಗಿನ ಸ್ಪೇನ್) ಎಂಬಿತ್ಯಾದಿ ನಗರಗಳಲ್ಲಿ ಝೆಲ್ಲಿಜ್ ಕಲೆಯು (art of zellij) ಬಹಳ ಜನಪ್ರಿಯವಾಗಿತ್ತು. ಕಾಲ ಉರುಳಿದಂತೆ ಝೆಲ್ಲಿಜ್ ತಂತ್ರಜ್ಞಾನವು ಅಭಿವೃದ್ಧಿಹೊಂದಿತು. 14ನೇ ಶತಮಾನದಲ್ಲಿ ನಾಸರಿ ಮತ್ತು ಮರೀನಿ ರಾಜವಂಶವು ಹಸಿರು, ನೀಲಿ ಮತ್ತು ಹಳದಿ ಬಣ್ಣಗಳ ಮೊರೊಕೊ ಹೆಂಚುಗಳನ್ನು ಒಟ್ಟುಗೂಡಿಸಿ ಈ ಕಲೆಯನ್ನು ಆಶ್ರಯಿಸಲು ಪ್ರಾರಂಭಿಸಿದರು. ಅನೇಕ ಜನರು ಜ್ಯಾಮಿತೀಯ ರಚನೆಗಳನ್ನು ಪವಿತ್ರ ಅಥವಾ ಧಾರ್ಮಿಕ ಕಲೆ ಎಂಬಂತೆ ನೋಡತೊಡಗಿದರು. ಕ್ರಿಸ್ತಪೂರ್ವ 375 ರಲ್ಲಿ ಪ್ಲೇಟೋ ರಿಪಬ್ಲಿಕ್ ನಲ್ಲಿ,”ಜ್ಯಾಮಿತಿಯೇ ಅಸ್ತಿತ್ವದ ಕುರಿತ ಜ್ಞಾನವಾಗಿದೆ” ಎಂದು ಬರೆದನು.

ಇಸ್ಲಾಮಿನ ಕಲೆಯ ಶಕ್ತಿ ಮತ್ತು ಪ್ರಭಾವವನ್ನು ಸೂಚಿಸುವ ಈ ಉಲ್ಲೇಖದೊಂದಿಗೆ ನಾನು ಮುಕ್ತಾಯಗೊಳಿಸುತ್ತೇನೆ. “ಪ್ರೇಮವು ಯಾವಾಗಲೂ ಸೌಂದರ್ಯದೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧವನ್ನು ಹೊಂದಿದೆ. ಮಸೀದಿಗಳು ಮತ್ತು ಅಧ್ಯಯನ ಶಾಲೆಗಳನ್ನು ಸುಂದರಗೊಳಿಸುವಾಗ ನಾವು ಅದರತ್ತ ಆಕರ್ಷಿತರಾಗುತ್ತೇವೆ. ಮಾತು ಸೊಗಸಾಗುವಾಗ ನಾವು ಅದರತ್ತ ಆಕರ್ಷಿತರಾಗುತ್ತೇವೆ. ಸೌಂದರ್ಯವು ಪ್ರೇಮವನ್ನು ಪ್ರಚೋದಿಸುತ್ತದೆ. ಪ್ರೇಮವು ನಮ್ಮ ಆತ್ಮವನ್ನು ಚಲನಶೀಲವಾಗಿಸುತ್ತದೆ”.

ಮೂಲ: ನಶ್‌ವ ಅಖ್ತರ್
ಕನ್ನಡಕ್ಕೆ: ಮುಹಮ್ಮದ್ ಯಾಸೀನ್ ಸಿದ್ದಾಪುರ

ಅಲ್- ಖೈರುವಾನ್: ಆಫ್ರಿಕಾದ ಪ್ರಥಮ ಇಸ್ಲಾಮಿಕ್ ನಗರ

ಅಲ್- ಮಗ್‍ರಿಬ್, ಅಲ್- ಅದ್‍ನಾ, ಇಫ್ರೀಖಿಯ್ಯಾ ಎಂಬಿತ್ಯಾದಿ ನಾಮಗಳಿಂದ ಹೆಸರುವಾಸಿಯಾಗಿದ್ದ ಉತ್ತರ ಆಫ್ರಿಕಾದ ಭಾಗಗಳನ್ನು ವಶಪಡಿಸಿಕೊಳ್ಳಲು ಅರಬ್- ಮುಸ್ಲಿಮರಿಗೆ ಅರ್ಧ ಶತಮಾನಗಳೇ ಹಿಡಿಯಿತು.

‘ಕಾರ್ತೇಜ್’ ( carthage ) ಭದ್ರಕೋಟೆಯನ್ನಾಗಿಸಿ ಕಾರ್ಯ ನಿರ್ವಹಿಸುತ್ತಿದ್ದ ‘ಬೈಸಾಂಟಿಯಾ’ ಕರಾವಳಿಯಲ್ಲಿಯೂ ತನ್ನ ಅಧಿಕಾರ ಹಸ್ತ ಚಾಚಿತ್ತು. ಒಳನಾಡಿನ ಓಯಸಿಸ್‍ಗಳು ಬೆರ್-ಬೆರ್ ಬುಡಕಟ್ಟುಗಳ ( Berber Tribes ) ಹಿಡಿತದಲ್ಲಿತ್ತು. ಪೈಗಂಬರ್ (ಸ.ಅ)ರವರ ವಿಯೋಗದ ಹನ್ನೊಂದು ವರ್ಷಗಳ ನಂತರ ಅಂದರೆ ಸುಮಾರು CE 643 ರಲ್ಲಿ ಅಲೆಕ್ಸಾಂಡ್ರಿಯಾ ವಶಪಡಿಸಿಕೊಳ್ಳಲು ಕಳುಹಿಸಲ್ಪಟ್ಟ ಅರಬ್ ಜನರಲ್ ಅಂರುಬ್ನ್ ಆಸ್ವ್ ತದನಂತರದ ದಂಡಯಾತ್ರೆಗಳಲ್ಲಿ ಪಶ್ಚಿಮದ ಕಡೆಗೇ ಮುಖಮಾಡಿದರು. ಅಳಿಯ ‘ಉಖ್‍ಬತುಬ್ನ್ ನಾಫಿ’ಯೂ ಯಾತ್ರೆಯಲ್ಲಿ ಜೊತೆಗೂಡಿದರು. ಅರೇಬಿಕ್ ಐತಿಹ್ಯಗಳ ಪ್ರಕಾರ ಇಬ್ನ್ ಆಸ್ವ್ ತನ್ನ ಸಹೋದರಿ ಪುತ್ರ ನಾಫಿಯನ್ನು ಮಧ್ಯ-ಲಿಬಿಯಾದ ಒಂದು ಮಿಲಿಟರಿ ದಾಳಿಗಾಗಿ ಹುರಿದುಂಬಿಸಿ ಕಳುಹಿಸಿದರು. ಕರಾವಳಿಯ ಬಂದರುಗಳು ಅಥವಾ ಯಾವುದೇ ನಗರಗಳನ್ನು ವಶಪಡಿಸಿಕೊಳ್ಳುವಲ್ಲಿ ಅರಬ್ ಸೈನ್ಯವು ವಿಫಲವಾದರೂ ಇಬ್ನ್ ನಾಫಿಯ ಅನುಭವಗಳು ಮೌಲ್ಯಯುತವೆಂದು ಪರಿಗಣಿಸಲ್ಪಟ್ಟಿತು.

ಸುಮಾರು ಎರಡು ದಶಕಗಳ ನಂತರ (೨೭ ವರ್ಷಗಳ ನಂತರ), ಡಮಸ್ಕಸ್‌ ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿದ್ದ ‘ಖಿಲಾಫತ್’ ಉತ್ತರ ಆಫ್ರಿಕಾದ ತನ್ನ ಸೇನಾ-ಕಾರ್ಯಾಚರಣೆಯನ್ನು ಪುನರಾರಂಭಿಸಲು ನಿರ್ಧರಿಸಿತು.

ಒಂದು ಶಾಶ್ವತ ಸೈನಿಕ ನೆಲೆಯ ನಿರ್ಮಾಣವು ಅವರ ಮುಂದಿನ ಗುರಿಗಳಲ್ಲೊಂದಾಯಿತು. ನಿರ್ಮಾಣ ಪ್ರವೃತ್ತಿಯ ಕೆಲಸದ ಪೂರ್ಣ ಜವಾಬ್ದಾರಿಯನ್ನು ಖಲೀಫ ‘ಮುಆವಿಯಾ’ ಇಬ್ನ್‌ ನಾಫಿಯವರಿಗೆ ವಹಿಸುವುದರೊಂದಿಗೆ, ಬೈಸಾಂಟಿಯನ್‌ ಸೈನ್ಯದಿಂದ ಅರಬಿಗಳ ಮೇಲೆ ನಿರಂತರ ಸಂಘಟಿತ ದಾಳಿಯೆಸಗುತ್ತಿದ್ದ ಬೆರ್-ಬೆರ್‌ ಬುಡಕಟ್ಟು ಜನರು ನೆಲೆಯೂರಿದ್ದ ಗುಡ್ಡಗಾಡು ಪ್ರದೇಶಗಳಿಂದ ಸುರಕ್ಷಿತ ಅಂತರ ಹೊಂದಿದ ಒಳನಾಡಿನ ಬಯಲು ಪ್ರದೇಶಗಳನ್ನಾಗಿತ್ತು ಇಬ್ನ್‌ ನಾಫಿ ಆಯ್ಕೆ ಮಾಡಿದ್ದು. ಫಾರ್ಸಿಯಿಂದ ಅರಬೀಕರಿಸಿದ caravan ಎಂಬ ಅರ್ಥ ಸಿಗುವ ಪ್ರಸ್ತುತ ‘ಮಿಲಿಟರಿ ಶಿಬಿರ’ (garrison camp) ಎಂಬ ಪದಬಳಕೆಗೆ ಸಾಮ್ಯತೆ ಹೊಂದಿರುವ ಅಲ್‌-ಖೈರುವಾನ್‌ ಎಂದಾಗಿತ್ತು ಇಬ್ನ್‌ ನಾಫಿ ಆ ಪ್ರದೇಶವನ್ನು ಗುರುತಿಸಿದ್ದು. ಗತ ಕಾಲಗಳಲ್ಲಿ ರೋಮನ್ನರು ಮತ್ತು ಬೈಜಾಂಟಿಯನ್ನರು ವಾಸಿಸುತ್ತಿದ್ದ ಈ ಪ್ರದೇಶವು ಕಾಲದ ಮರೆಯಲ್ಲಿ ಸಿಲುಕಿ ನಾಶವಾಯಿತು ಎಂದು ‘ಆರಂಭಿಕ ಅರಬ್ ಇತಿಹಾಸಕಾರರು’ ಅಭಿಪ್ರಾಯ ಪಡುತ್ತಾರೆ.

ಖೈರುವಾನಿನಲ್ಲಿ ಬೃಹತ್ ಮಸೀದಿ ( The Great mosque of khairuvan) ಮತ್ತು ಸವಿಸ್ತಾರವಾದ ಸರಕಾರಿ ಭವನವನ್ನು ನಿರ್ಮಿಸಿದ 12 ವರ್ಷಗಳ ನಂತರವಾಗಿತ್ತು ಇಬ್ನ್ ನಾಫಿಯ ಅರಬ್ ಸೈನ್ಯ ಪಶ್ಚಿಮದ ಕಡೆ ಚಲಿಸಲಾರಂಭಿಸುವುದು. ಕೆಲವು ಮೂಲಗಳು ಅವರು ಮೊರೋಕ್ಕನ್ ಕರಾವಳಿಯನ್ನು ಸಹ ತಲುಪಿದ್ದರು ಎಂದು ಸೂಚಿಸುತ್ತದೆ. ಖೈರುವಾನ್ ಮೇಲಿನ ಬೆರ್-ಬೆರ್ ಪ್ರತಿಸ್ಪರ್ಧಿಗಳ ದಾಳಿಯಲ್ಲಿ ಇಬ್ನ್ ನಾಫಿ ವಧಿಸಲ್ಪಟ್ಟರೂ, ಅವರ ಆ ಅನಿರೀಕ್ಷಿತ ಗೆಲುವು ಅರಬ್ ಮುಸ್ಲಿಮರ ಅಧಿಕಾರ ವಿಸ್ತರಣೆಯನ್ನು ಕಲ್ಪಿಸಿಕೊಂಡಿದ್ದ ಭಾವೀ ನಾಯಕರುಗಳಿಗೆ ಉಪಯುಕ್ತವಾಯಿತು. ಅನಂತರದ ಖೈರುವಾನ್ ಮುಖ್ಯ ಆಡಳಿತ ಕಛೇರಿಯು ಉತ್ತರಾಫ್ರಿಕ ಮತ್ತು ಯುರೋಪಿಗಿರುವ ನಿರ್ಣಾಯಕ ಸಭೆಯ ಸ್ಥಳವಾಗಿ ಮಾರ್ಪಟ್ಟಿತ್ತು. ಇಸ್ಲಾಮಿನ ಆಗಮನ ಮತ್ತು ತದನಂತರದ ಸಾಂಸ್ಕೃತಿಕ ಪ್ರಭಾವವು ಈ ಹಿಂದಿನ ಎಲ್ಲಾ ಸಂಸ್ಕೃತಿಗಳನ್ನು ಬೆರಗುಗೊಳಿಸಿತು. ‘ವೆನ್ಡಾಲ್ (vendal)’ ಆಡಳಿತಗಾರರ ಕೈಯಲ್ಲಿ ‘ಅಲ್ ಅಂದ್‌ಲೂಸ್’ ಆಗಿ ಮಾರ್ಪಟ್ಟ ‘ಐಬೀರಿಯಾ’ದ ಜೊತೆಗೆ ದಕ್ಷಿಣ ಮೆಡಿಟರೇನಿಯನ್ ಕರಾವಳಿಗೂ , ಸೆನಗಲ್ ನದಿ ‘ಜಲಾನಯನ’ ಪ್ರದೇಶದ ದಕ್ಷಿಣಕ್ಕೆ ಅಟ್ಲಾಂಟಿಕ್ ಕರಾವಳಿಯ ಉದ್ದಕ್ಕೂ ಸಹರಾ ಮರುಭೂಮಿಯ ಓಯಸಿಸ್‌ಗಳಿಗೂ ನೈಜರ್ ನದಿಯ ಸಮೀಪ ಪಟ್ಟಣಗಳಿಗೂ ಅರಬ್ ಪ್ರಭಾವ ವ್ಯಾಪಿಸಲು ಪ್ರಾರಂಭವಾಯಿತು.

“ತೀವ್ರ ಪ್ರತಿಕೂಲ ವಾತಾವರಣದಲ್ಲಾಗಿತ್ತು ಖೈರುವಾನ್ ರೂಪುಗೊಳ್ಳುವುದು. ಹಲವಾರು ರಾಜಮನೆತನಗಳು ಅದನ್ನು ತಮ್ಮ ತೆಕ್ಕೆಗೆ ಪಡೆಯಲು ಬಯಸಿದವು ಮತ್ತು ಅದಕ್ಕಾಗಿ ಪರಸ್ಪರ ಸ್ಪರ್ಧಿಸಿದವು.” ಎಂದು ‘Khairouan Association to safeguard the city’ ಯ ಅಧ್ಯಕ್ಷರೂ, ಸ್ಥಳೀಯ ಇತಿಹಾಸಕಾರರೂ ಆದ ‘ಮುರಾದ್ ರಹ್ಮಾನ್’ ಹೇಳುತ್ತಾರೆ. ಪ್ರಸ್ತುತ ಈ ಸಂಸ್ಥೆಯ ಮೂಲಕ 1988 ರ ಯುನೆಸ್ಕೋ ವಿಶ್ವ ಪರಂಪರೆಯ ತಾಣ (unesco World Heritage site) ದ ಪಟ್ಟಿಯಲ್ಲಿ ಖೈರುವಾನ್ ಹೆಸರನ್ನು ಕಾಯ್ದುಕೊಳ್ಳಲು ಸಾಧ್ಯವಾಯಿತು ಎಂದವರು ಸಂತೋಷ ಪಡುತ್ತಾರೆ.

ಮೂಲತಃ ಇವರು, ಇಬ್ನ್ ನಾಫಿಯ ಆಗಮನದೊಂದಿಗೆ ಖೈರುವಾನ್ ತಲುಪಿದ ಪುರಾತನ ‘ಖೈಸ್’ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರ ಪೂರ್ವಜರಲ್ಲಿ ಹದಿನಾಲ್ಕನೇ ಶತಮಾನದ ಆರಂಭದಲ್ಲಿ ಜೀವಿಸಿದ್ದ ಅಬೂ ಅಬ್ದುರಹ್ಮಾನ್ ರಮ್ಮಾಹ್ ಅಲ್ ಖೈಸ್ ಪಟ್ಟಣದ ಮುಖ್ಯ ಕರ್ಮಶಾಸ್ತ್ರ ಪಂಡಿತರು ಮತ್ತು ಮಸೀದಿಯ ಇಮಾಮ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ನು ನಾಫಿ ನಿರ್ಮಿಸಿದ ಆಡಳಿತಾಧಿಕಾರಿಗಳ ವಸತಿನಿಲಯವು ಅಧಿಕ ಸಮಯ ಉಳಿಯಲಿಲ್ಲ. ಆದರೆ ಬಲ ಮತ್ತು ಭವ್ಯತೆಯಿಂದ ಕೂಡಿದ ಗತಕಾಲದ ನಗರ ನಿರ್ಮಾಣ ದೃಷ್ಟಿಯಿಂದ ಈ ಮಸ್ಜಿದ್ ನಿರ್ಮಿತವಾಗಿದೆ ಎಂದು ಮುರಾದ್ ರಹ್ಮಾನ್ ವಿವರಿಸುತ್ತಾರೆ. ಉತ್ತರ ಆಫ್ರಿಕಾದಲ್ಲೇ ಅತ್ಯಂತ ಪ್ರಾಚೀನ ಮಸೀದಿಯಾಗಿದೆ ಇದು. ಆಗಾಗ್ಗೆ ಪುನರ್ ನಿರ್ಮಿಸಲ್ಪಟ್ಟ ಮತ್ತು ನವೀಕರಿಸಲಾದ ಈ ಮಸ್ಜಿದ್ ಬಹುತೇಕ ಸಂಪೂರ್ಣವಾಗಿ ಆವಿಷ್ಕರಿಸಲ್ಪಡುವುದು ಸುಮಾರು 19 ನೇ ಶತಮಾನದಲ್ಲಿ ಖೈರುವಾನ್ ನಗರದ ಪ್ರಭಾವ ವಲಯದ ನೀಲನಕ್ಷೆಯನ್ನು ಇನ್ನಷ್ಟು ವಿಸ್ತರಿಸಿದ ‘ಅಗ್ಲಬಿ’ (Aghlabids) ಗಳ ಕಾಲದಲ್ಲಾಗಿತ್ತು.

ಅರಬ್ ಭೂವಿಜ್ಞಾನಿಯಾಗಿದ್ದ ಅಲ್- ಮುಖದ್ದಸಿ ಶತಮಾನದ ಕೊನೆಯಲ್ಲಿ ಈ ರೀತಿ ಬರೆಯುತ್ತಾರೆ – ”ನಿಶಾಪುರಿಗಿಂತಲೂ ಆಕರ್ಷಣೀಯವೂ, ಡಮಸ್ಕಸ್‌ಗಿಂತಲೂ ಸಮೃದ್ಧಿಯುತವೂ, ಅಫ್ಸಹಾನಿಗಿಂತಲೂ ಪ್ರಶಂಸನಾರ್ಹವಾಗಿದೆ ಖೈರುವಾನ್”. ಸ್ವತಃ ವಿಮರ್ಶಕರೂ ಆದ ಅವರು ಹೇಳುತ್ತಾರೆ “ಇಲ್ಲಿಯ ನೀರು ಅಷ್ಟು ಶುದ್ಧವಲ್ಲದ ಕಾರಣ ಮಳೆನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸುತ್ತಾರೆ. ಸಮಕಾಲೀನ ಇಸ್ಲಾಮಿಕ್ ನಗರಗಳಲ್ಲಿ ಆಚರಣೆಯಲ್ಲಿದ್ದ ನೀರಾವರಿಗಿಂತ ಮುಂಚೂಣಿಯಲ್ಲಿದ್ದ ನೀರಾವರಿ ಯೋಜನೆಯ ಕುರಿತು ಅಲ್ ಮುಖದ್ದಿಸಿ ಈ ರೀತಿ ಉಲ್ಲೇಖಿಸುತ್ತಾರೆ. ಶತಮಾನಗಳ ಹಿಂದೆಯೇ ಅಗ್ಲಬಿಗಳು ಖೈರುವಾನ್ ನಗರದ ಹೊರವಲಯದಲ್ಲಿ ಐವತ್ತಕ್ಕೂ ಮಿಕ್ಕ ವೃತ್ತಾಕಾರದ ಕೊಳಗಳನ್ನು ನಿರ್ಮಿಸಿ, ಮಳೆ ನೀರು ಮತ್ತು (ವಾದಿ) ಯ ಮೂಲಕ ಅದನ್ನು ತುಂಬಿಸುವ ಯೋಜನೆಯನ್ನು ಮಾಡಿದ್ದರು. ಅಂದಾಜು 120 ಮೀಟರ್ ವ್ಯಾಸ ಮತ್ತು ಐದು ಮೀಟರಿನಷ್ಟು ಆಳವಿರುವುದಾಗಿತ್ತು ಅವುಗಳಲ್ಲಿ ಅತ್ಯಂತ ದೊಡ್ಡ ಕೊಳಗಳು. ಅದರ ಮಧ್ಯಭಾಗಗಳಲ್ಲಿ ರಾಜ ಕುಟುಂಬಗಳು ಮತ್ತು ಅಧಿಕಾರಿಗಳು ವಿಶ್ರಾಂತಿ ಪಡೆಯಲು ಅಷ್ಟಭುಜಾಕೃತಿಯ ಗೋಪುರ ನಿರ್ಮಿಸಲಾಗಿತ್ತು. ಇಂದು ನಾಲ್ಕು ‘ನೀರು ತೊಟ್ಟಿಲು’ಗಳು (cistern) ಒಳಗೊಂಡಿರುವ ನಗರವು ಒಂದು ಸಾರ್ವಜನಿಕ ಉದ್ಯಾನವನ ಮತ್ತು ಐತಿಹಾಸಿಕ ಮಹತ್ವದ ಸ್ಥಳವೂ ಆಗಿದೆ “.

ಟುನೀಷಿಯಾದ ‘National Heritage Institute ‘ ಇದರ ಮಹಾ ನಿರ್ದೇಶಕರಾಗಿರುವ ‘ಫೌಝೀ ಮಹ್ ಫೂಲ್ ‘ (Faouzi mahfoudh) ಅಭಿಪ್ರಾಯಪಡುತ್ತಾರೆ ‘ಖೈರುವಾನ್ ಉದ್ವಿಗ್ನ ಕಾಲದಲ್ಲಿ ರೂಪುಗೊಂಡ ನಗರವಾದರೂ ಧರ್ಮ, ವಿಜ್ಞಾನ, ನಿಯಮ ಸಂಹಿತೆ, ವಾಸ್ತುಶೈಲಿ ಇತ್ಯಾದಿ ವಿಚಾರಗಳಲ್ಲಿ ಉತ್ತರ ಆಫ್ರಿಕಾದ ಪ್ರಥಮ ಸಾಂಸ್ಕೃತಿಕ ಕೇಂದ್ರವಾಗಿ ನೆಲೆಗೊಳ್ಳುತ್ತದೆ. ಎಂಟನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಖೈರುವಾನ್ ವಿಶ್ವವಿದ್ಯಾಲಯವಾಗಿವೆ ಉತ್ತರಾಫ್ರಿಕದ ಪ್ರಥಮ ಮಹಾವಿದ್ಯಾಲಯ. ಚರಿತ್ರೆಯ ಪುಟಗಳಲ್ಲಿ ಅಧಿಕೃತವಾಗಿ ಹೆಸರಿಸಲ್ಪಡದಿದ್ದರೂ ಆಫ್ರಿಕಾದ ಅವಿಶ್ರಾಂತ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಉನ್ನತ ವಿದ್ಯಾಸಂಸ್ಥೆಯಾಗಿರುವ University of Al-qarawiyyun ನಿರ್ಮಾಣಕ್ಕೆ ಪ್ರೇರಣೆಯಾದದ್ದು ಇದೇ ವಿಶ್ವವಿದ್ಯಾಲಯ ಆಗಿತ್ತು. ಇದರ ನಿರ್ಮಾತೃ ಫಾತಿಮಾ ಅಲ್ ಫಿಹ್ರಿ ಕೌಟುಂಬಿಕ ಸರಣಿಗೂ ಒಳಪಡುತ್ತಾರೆ. ಆಫ್ರಿಕಾದ ಪೂರ್ವ ಭಾಗವಾದ ಈಜಿಪ್ಟ್ ನಲ್ಲಿ ಕ್ರಿ.ಶ 970 ರ ಸುಮಾರಿಗೆ ಫಾತಿಮೀ ಆಡಳಿತಗಾರರು ನಿರ್ಮಿಸಿದ University of Al – qarawiyyin ಸ್ಥಾಪಿತ ಪ್ರೇರಣಾ ಶಕ್ತಿ ಖೈರುವಾನ್ ಯುನಿವರ್ಸಿಟಿ ಆಗಿತ್ತು. ಬಗ್ದಾದಿನ ಮಾದರಿಯ ಮಲ್ಟೀ ಡಿಸ್ಪನ್ಸರೀ ‘ಬೈತುಲ್ ಹಿಕ್ಮ’ ಜ್ಞಾನ ನಗರಿಯೂ ಒಂಭತ್ತನೆಯ ಶತಮಾನದ ಹೊತ್ತಿಗೆ ಖೈರುವಾನ್ ನಗರದಲ್ಲಿತ್ತು ಎಂಬ ಸತ್ಯದ ಕಡೆಗೆ ಚರಿತ್ರೆಯ ಪುಟಗಳು ಬೆಳಕು ಚೆಲ್ಲುತ್ತದೆ.

ಹದಿನಾರನೆಯ ಶತಮಾನದ ನಗರದ ತನ್ನ ಅನುಭವಗಳ ಬಗ್ಗೆ ಸ್ಪ್ಯಾನಿಷ್ ಇತಿಹಾಸಕಾರ ಲೂಯಿಸ್ ಡೆಲ್ ಮರ್‌ಮೆಲ್ (Luis del marmal caruajal ) ಈ ರೀತಿ ಬರೆಯುತ್ತಾರೆ: ಫ್ರೆಂಚರು ಪ್ಯಾರಿಸ್ಸಿಗೆ, ಸ್ಪೈ ನ್ ನಾಗರಿಕರು ಸಲಾಮಾನ್‌ಗೆ ಹೋಗುವ ರೀತಿ ಆಫ್ರಿಕಾದ ಎಲ್ಲೆಡೆಯಿಂದ ಜನರು ಖೈರುವಾನ್ ವಿಶ್ವವಿದ್ಯಾಲಯದ ಕಡೆಗೆ ಧಾವಿಸತೊಡಗಿದರು.

ಒಂದು ಕಾಲದಲ್ಲಿ ಆಫ್ರಿಕಾದ ಹಿರಿಯ ಲೇಖಕರು ಮತ್ತು ವೈದ್ಯರುಗಳು ನಾವು- ಅಲ್ಲಿಯ ವಿದ್ಯಾರ್ಥಿಗಳು ಎಂದು ಸ್ವತಃ ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ಮುಂದುವರಿದು ಮಹ್ಫೂಳ್ ಹೇಳುತ್ತಾರೆ: ಈ ಸರ್ವ ಸಂಪನ್ನ ವಿನಿಮಯವು ಕೇವಲ ಅರಬ್ ಇಸ್ಲಾಮಿಕ್ ಜಗತ್ತಿಗೆ ಸೀಮಿತವಾಗಿರಲಿಲ್ಲ. ಬದಲಿಗೆ ಯುರೋಪಿಯನ್ನರೊಂದಿಗೂ ಅಸ್ತಿತ್ವದಲ್ಲಿತ್ತು.

ಈ ನಗರದ ಶೈಕ್ಷಣಿಕ ಅಭಿವೃದ್ಧಿ ಮತ್ತು ಕಲಾತ್ಮಕ ಪ್ರಭಾವವನ್ನು ಉತ್ತೇಜಿಸುವಲ್ಲಿ ವಾಣಿಜ್ಯವು ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ. ಸಂಸ್ಕೃತಿಗಳು ಮತ್ತು ಧರ್ಮಾಚರಣೆಗಳ ಪ್ರಯೋಗಶಾಲೆಯಾಗಿತ್ತು ಖೈರುವಾನ್. ಪಶ್ಚಿಮದ ಕಡೆಯಿಂದ ಬೆರ್‌ ಬೆರ್, ಪೂರ್ವದ ಅರಬಿಗಳು ಕ್ರೈಸ್ತರು ಮತ್ತು ಯಹೂದಿಗಳು ಮೊದಲಾದವರಿಗೆ ನಗರವು ಸಾಂಸ್ಕೃತಿಕ ಅಂಶಗಳ ಸಂಗಮ ಸ್ಥಳವಾಗಿತ್ತು. ಖುರೈಶ್, ರಾಬಿಯಾ, ಮುಲರ್, ಕಹ್‌ತಾನ್ ವಂಶಜರಾದ ಅರಬಿಗಳ, ಖುರಾಸಾನಿನ ಪರ್ಶಿಯನ್ನರ ಮತ್ತು ರೋಮಿನ ಬೆರ್‌ಬೆರುಗಳ ಖೈರುವಾನಿನೊಂದಿಗಿರುವ ವಾಣಿಜ್ಯ ವಿನಿಮಯ ಉಪಸ್ಥಿತಿಯ ಕುರಿತು ಅರಬ್ ಇತಿಹಾಸಕಾರ ಅಲ್ ಯಾಖೂಬೀ ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಈ ರೀತಿ ದಾಖಲಿಸಿದ್ದಾರೆ.

ಖೈರುವಾನಿನಲ್ಲಿ ವಿಜ್ಞಾನ ಕ್ಷೇತ್ರವು ಹೊಂದಿದ್ದ ಪ್ರಾಮುಖ್ಯತೆಯನ್ನು ಪರಿಗಣಿಸಿದಾಗ ಸಾಕಷ್ಟು ಉದಾಹರಣೆಗಳನ್ನು ಕಾಣಬಹುದು. ಮಹ್‌ಫೂಳ್ ಬರೆಯುತ್ತಾರೆ: ಅವುಗಳ ಪೈಕಿ ವಿಶಿಷ್ಟವಾದ ಎರಡು ಉದಾಹರಣೆಗಳನ್ನು ಉಲ್ಲೇಖಿಸೋಣ. ಹತ್ತನೆಯ ಶತಮಾನದ ಪ್ರಮುಖ ವೈದ್ಯ ಮತ್ತು ಫಾರ್ಮಸಿಸ್ಟ ರಾಗಿದ್ದ ‘ಇಬ್ನುಲ್ ಜಸ್ಸಾರ್’ (Ibn al-jazzar) ಸಾಲೇರ್‌ನೋ (Salerno) ಮತ್ತು ಮೋನ್ಟ್‌ಪೇಲಿಯರ್ (Montpellier) ವಿಶ್ವವಿದ್ಯಾಲಯಗಳ ಮೂಲಕ ಯುರೋಪಿನಾದ್ಯಂತ ವೈದ್ಯಶಾಸ್ತ್ರದ ತೀವ್ರ ಪ್ರಗತಿಗೆ ಕಾರಣನಾದ ‘ಕಾನ್ಸ್ಟೈನ್ಟೈನ್’ (Constantine the African) ಎಂಬುವವರಾಗಿದ್ದರು. ಕಾನ್ಸ್ಟನ್ಟೈನ್ ಎಂಬ ಕ್ರೈಸ್ತ ಧರ್ಮದ ವಿಶ್ವಾಸಿ ಇಟಲಿಯ ಪ್ರಸಿದ್ಧ ‘ಮೋಂಡಿಕೆಸ್ಸಿನೋ’ (Montecassino Abbey) ಸನ್ಯಾಸಿ ಮಠದಲ್ಲಿ ವೈದ್ಯಶಾಸ್ತ್ರದ ಅಧ್ಯಾಪಕನಾಗುವುದಕ್ಕಿಂತಲೂ ಪೂರ್ವ ಕಾಲದಲ್ಲಿ ಖೈರುವಾನ್ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಿದ್ದರು ಎಂದು ನಂಬಲಾಗಿದೆ. ಅಲ್ಲಿ ಅವರು ಸ್ವತಃ ತನ್ಮೂಲಕ ವಿರಚಿತಗೊಂಡ ಅರಬಿಕ್ ಗ್ರಂಥಗಳನ್ನು ಭಾಷಾಂತರಿಸಲು ತಮ್ಮ ಎಲ್ಲಾ ಶಕ್ತಿಯನ್ನು ಬಳಸಿದ ಕಾರಣ ‘ಪಶ್ಚಿಮದಲ್ಲಿ ಪೂರ್ವ ಭಾಗದ ಮಹಾ ಗುರು’ ಎಂದು ಜನರಿಂದ ಕರೆಯಿಸಲ್ಪಟ್ಟರು. ಪೂರ್ವ ಭಾಗದಲ್ಲಿ ಸುಮಾರು ಒಂದೂವರೆ ಶತಮಾನಗಳ ಕಾಲ ಸಿಸಿಲಿ (siaions) ಗಳು, ಟೋಲಿಡೋ (toledons) ಗಳು, ವೆನೇಷ್ಯಗಳೂ (venetians) ವೈಜ್ಞಾನಿಕ ವೈದ್ಯಕೀಯ ಪಠ್ಯಗಳ ವ್ಯವಸ್ಥಿತ ಅನುವಾದಗಳಲ್ಲಿ ಪ್ರಬುದ್ಧರಾಗುವವರೆಗೆ ಕಾನ್ಸ್ಟನ್ಟೈನಿನ ಅನುವಾದಗಳಿಗೆ ಮೌಲಿಕವಾದ ಪರಿಗಣನೆ ಇತ್ತು.

ಇಂತಹ ವಿಶೇಷತೆಗಳನ್ನು ಹೊಂದಿರುವುದರಿಂದಲೇ ಆಧುನಿಕ ಇತಿಹಾಸಕಾರರು ಮತ್ತು ಭೂ ವಿಜ್ಞಾನಿಗಳ ಪಾಲಿಗೆ ಖೈರುವಾನ್ ಸಮಾನ ಪ್ರಮುಖ ತಾಣವಾಗಿದೆ. ಇದು ಇಸ್ಲಾಂ ಧರ್ಮದ ನಾಲ್ಕನೇ ಪವಿತ್ರ ನಗರವಾಗಿದೆ ಎಂದೂ ಕೆಲವರು ವಾದಿಸುತ್ತಾರೆ . ಹಲವಾರು ಪೀಳಿಗೆಯ ಪಯಣದ ಗುರಿಯೂ ಇದೇ ಆಗಿತ್ತು. ಪ್ರಯಾಣಿಕರ ದಾಖಲೆಗಳು ವಿವಿಧ ಯುಗಗಳಲ್ಲಿನ ನಗರದ ಬದಲಾದ ಚಿತ್ರಣಗಳು, ಅದರ ನಾಗರಿಕ ಮತ್ತು ಸಾಮಾಜಿಕ ಸಮೃದ್ಧಿಯ ಎತ್ತರಗಳು, ತದನಂತರ ಎದುರಿಸಬೇಕಾಗಿ ಬಂದ ಏರಿಳಿತಗಳ ಬಗ್ಗೆಯೂ ಚರಿತ್ರೆಯ ಪುಟಗಳು ಉಲ್ಲೇಖಿಸುತ್ತದೆ. ‘ಜನರಲ್ ಡಿಸ್ಕ್ರಿಪ್ಶನ್ಸ್ ಆಫ್ ಆಫ್ರಿಕಾ ‘ ಎಂಬ ಪುಸ್ತಕದ ಲೇಖಕರೂ, ಹದಿನಾರನೆಯ ಶತಮಾನದ ಪ್ರಸಿದ್ಧ ರಾಜತಂತ್ರಜ್ಞರೂ ಆದ ಲಿಯೋ ಆಫ್ರಿಕಾನಲ್ ಎಂಬ ನಾಮದಲ್ಲಿ ಚಿರಪರಿಚಿತರಾಗಿದ್ದ ಹಸ್ಸಾನ್ ಅಲ್ ವಸ್ಸಾನ್ (hassan al vazzan ) ತಮ್ಮ ಗ್ರಂಥದಲ್ಲಿ ಖೈರುವಾನಿನ ಚೇತರಿಕೆಯ ಕುರಿತು ಈ ರೀತಿ ಉಲ್ಲೇಖಿಸುತ್ತಾರೆ: “ದುಃಖಕರವಾದರೂ ನಗರದಲ್ಲಿ ಇಂದು ಬಹುತೇಕ ಜನಜೀವನವು ಪುನರ್ – ಪ್ರಾರಂಭವಾಗಿದೆ. ಪ್ರಸ್ತುತ ಬಡ ಕರಕುಶಲಕರ್ಮಿಗಳು ಮಾತ್ರ ಅಲ್ಲಿ ಕಾಣಸಿಗುತ್ತಾರೆ. ಅವರಲ್ಲಿ ಹೆಚ್ಚಿನವರು ಆಡು ಮತ್ತು ಕುರಿಗಳ ಚರ್ಮ ಒಣಗಿಸಿ ಉತ್ಪಾದನಾ ಯೋಗ್ಯವನ್ನಾಗಿ ಮಾಡಿ ಯುರೋಪಿಯನ್ ಬಟ್ಟೆಗಳು ಲಭ್ಯವಿಲ್ಲದ ನೊಮೀಡಿಯಾದಂತಹ ಪ್ರದೇಶಗಳಲ್ಲಿ ಚರ್ಮದ ವಸ್ತುಗಳನ್ನು ಮಾರಾಟ ಮಾಡುವವರಾಗಿದ್ದರು. ಇದು ಅವರ ದಿನದ ಮೂರು ಹೊತ್ತಿನ ಆಹಾರಕ್ಕಿರುವ ದಾರಿಯೇ ಹೊರತು ಜೀವನ ಪೂರ್ತಿಯಲ್ಲ”.

ಹತ್ತನೆಯ ಶತಮಾನದ ಆದಿ ಕಾಲದಿಂದಲೂ ಖೈರುವಾನ್ ನಗರದ ಉನ್ನತಿಯ ಪ್ರಭೆಯನ್ನು ಮಂದಗೊಳಿಸುತ್ತಾ ಟ್ಯೂನಿಶ್, ಮರಾಖೇಷ್, ಫೆಝ್, ತ್ಲೆಂಸರ್ ಮೊದಲಾದ ನಗರಗಳು ಬಲಾಢ್ಯಗೊಳ್ಳಲು ಪ್ರಾರಂಭವಾಯಿತು. ಜನಾಂಗೀಯ ಘರ್ಷಣೆಗಳು ಸಹ ವಿನಾಶಕಾರಿಯಾಗಿ ಸಂಭವಿಸಿತು. ಖೈರುವಾನ್‌ ಜನಸಂಖ್ಯಾ ನಿಬಿಢತೆಯು ಕ್ಷೀಣಿಸುತ್ತಿರುವ ಹೊರತಾಗಿಯೂ ಸ್ವತಃ ತೀರ್ಥ ಯಾತ್ರಾ ಕೇಂದ್ರವಾಗಿ ತನ್ನ ಪ್ರಾಮುಖ್ಯತೆಯನ್ನು ಕಾಪಾಡುವಲ್ಲಿ ಸಫಲವಾಯಿತು. ಹತ್ತನೆಯ ಶತಮಾನದ ಕೊನೆಯಲ್ಲಿ ಪ್ರಬಲ ಫಾತಿಮೀ ಆಡಳಿತಗಾರರು ಖೈರುವಾನಿನಿಂದ ನೈಲ್ ನದಿ ದಂಡೆಯ ‘ಅಲ್-ಖಾಹಿರ’ (ಕೈರೋ) ನಗರಕ್ಕೆ ತಮ್ಮ ರಾಜಧಾನಿಯನ್ನು ಬದಲಾಯಿಸಿದರು. ನಗರದ ಆರ್ಥಿಕ ಮತ್ತು ರಾಜಕೀಯ ಹಿನ್ನಡೆಯ ನೋವಿನ ಜೊತೆಗೆಯೇ ಕೆಲವು ದಶಕಗಳ ನಂತರ ‘ಪ್ಲೇಗ್’ ಹಾವಳಿಯೂ ಹರಡಿತು. ‘ಬಾನಿ ಹಿಲಾಲ್’ ಬುಡಕಟ್ಟು ನಗರದ ಮೇಲೆ ಆಕ್ರಮಣ ಶುರುಮಾಡಿದ 1045 ರಲ್ಲಿ ಒಂದು ಸಮಸ್ಯೆ ಉದ್ಭವಿಸುತ್ತದೆ ಮತ್ತು ನಗರ ಪ್ರದೇಶವು ಒಂದು ವಿಶಾಲವಾದ ಗ್ರಾಮೀಣ ಆರ್ಥಿಕತೆಗೆ ಮರಳುತ್ತದೆ. ಮುರಾದ್ ರಹ್ಮಾನ್ ವಿವರಿಸುತ್ತಾರೆ: “ತನ್ನ ಗತಕಾಲದ ವೈಭವವನ್ನು ಸಂಪೂರ್ಣವಾಗಿ ಮರಳಿ ಪಡೆಯಲು ಸಾಧ್ಯವಾಗದಿದ್ದರೂ, ಉತ್ತರ ಆಫ್ರಿಕಾ ಮತ್ತು ಯುರೋಪನ್ನು ಸಂಪೂರ್ಣ ರೂಪಿಸುವಲ್ಲಿ ಶ್ರಮಿಸಿದ್ದು ಅದರ ಪರಂಪರೆಯಾಗಿದೆ.” ಪಾಶ್ಚಾತ್ಯ ಇಸ್ಲಾಮಿಕ್ ಪ್ರಪಂಚದ ಬೌದ್ಧಿಕ ಆಳವು ಪ್ರಾರಂಭವಾದದ್ದು ಇಲ್ಲಿಂದಲೇ. ಇಂದಿನ ಉತ್ತರ ಆಫ್ರಿಕದಾದ್ಯಂತ ಅವರ ದೈನಂದಿನ ಬದುಕಿನ ಇಸ್ಲಾಮಿಕ್ ನಿಯಮ ಸಂಹಿತೆಯ ಅನ್ವಯಿಕತೆಯಲ್ಲಿ ಈ ನೈಜತೆಯನ್ನು ಕಾಣಬಹುದು. ಇಸ್ಲಾಮಿನ ನಾಲ್ಕು ಪ್ರಮುಖ ಮದ್ಸ್ ಹಬ್‌ಗಳಲ್ಲಿ ಒಂದೂ, ಉತ್ತರ ಆಫ್ರಿಕಾದಲ್ಲಿ ಹೆಚ್ಚು ಜನಮನ್ನಣೆ ಗಳಿಸಿ ಪ್ರಚಲಿತದಲ್ಲಿರುವ ‘ಮಾಲಿಕೀ’ ಸಿದ್ಧಾಂತವು ವಿಕಸನಗೊಂಡದ್ದು ಖೈರುವಾನ್ ನಗರದಿಂದಲೇ ಆಗಿತ್ತು.

ವಾಸ್ತುಶಿಲ್ಪ ಕ್ಷೇತ್ರದಲ್ಲಿ ವಿವಿಧ ಸ್ಥಳಗಳಲ್ಲಿ ಇಂದು ಕಂಡುಬರುವ ಪ್ರಭಾವಕ್ಕೆ ಖೈರುವಾನಿನ ‘ದಿ ಗ್ರೇಟ್ ಮಸ್ಜಿದ್’ ಸಾಕ್ಷಿಯಾಗಿದೆ. ಅದರ ಸರಳವಾದ ಆಯತಾಕಾರದ ಗೋಪುರಗಳು, ನಂತರದ ಕಾಲಾವಧಿಯ ಪೂರ್ವ ಭಾಗದ ರಾಜಧಾನಿಗಳ ಗಗನಚುಂಬಿ ಕಟ್ಟಡಗಳಿಗಿಂತ ಬಲವಾದ ವ್ಯತಿರಿಕ್ತತೆಯನ್ನು ನಿರ್ವಹಿಸುವುದಾಗಿದೆ. ಪಶ್ಚಿಮ ಮತ್ತು ಉತ್ತರದ ಪ್ರಸಿದ್ಧ ವಿನ್ಯಾಸಕಾರರನ್ನು ಪ್ರಭಾವಿಸಿದ ಮಾದರಿಯಾಗಿತ್ತು ಖೈರುವಾನಿನ ನಗರ ನಿರ್ಮಾಣ ಶೈಲಿ. ಮೂರು ಚೌಕಾಕಾರದ ಸ್ತಂಭಗಳ ಮೇಲೆ ನಿರ್ಮಿತವಾದ ವಿಶಾಲ ಗೋಪುರಗಳು ಹೊಂದಿರುವ ಖೈರುವಾನಿನ ಮಿನಾರಗಳು, ಪ್ರಸ್ತುತ ‘ಕ್ಯಾಥೆಡ್ರಲ್’ ಗೋಪುರಗಳಿಂದಾವೃತವಾದ ಕೊರೊಡೋವಾ ಮತ್ತು ಸ್ಪೈನ್ ನಗರಗಳ ಹದಿನೊಂದನೇ ಶತಮಾನದ ಮಸ್ಜಿದ್‌ಗಳ ಮೇಲೆ ನಿರ್ಮಿಸಲಾಗಿದ್ದ ಗೋಪುರಗಳೊಂದಿಗೆ ಹೆಚ್ಚಿನ ಸಾಮ್ಯತೆಗಳಿವೆ. ಪಶ್ಚಿಮ ಟ್ಯುನೀಶಿಯಾದ ಬಹುತೇಕ ಎಲ್ಲಾ ಗೋಪುರಗಳು ಇಂದು ಚೌಕಾಕೃತಿಯನ್ನು ಹೊಂದಿದೆ. ಗ್ರೇಟ್ ಮಸ್ಜಿದ್ ಮೇಲಿನ ಮೂವತ್ತೆರಡು ಮೀಟರ್ ಉದ್ದದ ಸುಂದರ ವಾಸ್ತುಶೈಲಿಯನ್ನು ಹೊಂದಿದ ಗೋಪುರವಾಗಿದೆ ಖೈರುವಾನಿನ ಅತಿ ಎತ್ತರದ ಕಟ್ಟಡ. ಪ್ರಾಚೀನ ಪ್ರಯಾಣಿಕರಿಗೆಂಬಂತೆ, ಸಾಲು- ಸಾಲಾಗಿ ನಿಂತ ಅಂಗಡಿ ಮುಗ್ಗಟ್ಟುಗಳು ಮತ್ತು ಜನನಿಬಿಡವಾದ ಪುಣ್ಯಕ್ಷೇತ್ರಗಳ ಮಧ್ಯೆ ಅವ್ಯಕ್ತವಾದ ದಿಗಂತದಲ್ಲಿ ಚಿತ್ರಿಸಿದ ಈ ಭವ್ಯವಾದ ಪರಂಪರೆಯ ಗಾಂಭೀರ್ಯತೆ ಚಿಹ್ನೆಗಳು ಇಂದಿಗೂ ಗೋಚರಿಸುತ್ತವೆ. ನಗರಕ್ಕೆ ಹತ್ತಿರವಾದಷ್ಟು ಮನೆ ಬಾಗಿಲುಗಳು, ಅಂಗಡಿ ಮುಗ್ಗಟ್ಟುಗಳು, ಕೃಷಿಯೋಗ್ಯ ಭೂಮಿಗಳು, ಬಂಜರು ಭೂಮಿಗಳು ಇವೆಲ್ಲದರ ಮಧ್ಯೆ ಮರುಭೂಮಿಯ ದಾರಿದೀಪವಾಗಿ ಈ ಗೋಪುರವು ನೆಲೆ ನಿಂತಿದೆ.

ಆರಾಧನಾ ಸಮಯಗಳ ನಡುವೆ ಮಸ್ಜಿದ್ ಬಳಿ ತಲುಪುವ ಯಾತ್ರಿಕರು ಫೋಟೊಗಳನ್ನು ತೆಗೆಯುತ್ತಾ ಅಲ್ಲಿ ಸಮಯ ಕಳೆಯುತ್ತಾರೆ. ವಿಶ್ವಾಸಿಗಳು ಮುಂದಿನ ಪ್ರಾರ್ಥನೆಗೆ ಹಿಂದಿರುಗುವ ವೇಳೆ ದೃಶ್ಯ ಶಾಂತವಾಗಿರುತ್ತದೆ. ಒಟ್ಟು ಮೂವತ್ತಾರು ಕಟ್ಟಡಗಳನ್ನು ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರಿಸಿದ ‘ಯುನೆಸ್ಕೊ’ ಅವುಗಳನ್ನು ಉತ್ತರ ಆಫ್ರಿಕಾದ ಇಸ್ಲಾಂ ಧರ್ಮದ ಪ್ರಾರಂಭಿಕ ಶತಮಾನದ ನಾಗರಿಕತೆಯ ಅಸಾಧಾರಣ ಸಾಕ್ಷಿಗಳೆಂದು ಪರಿಗಣಿಸಿದೆ. ಇಂತಹ ಬಿರುದುಗಳು ಮತ್ತು ದೀರ್ಘಕಾಲೀನ ಪ್ರಭಾವ ಶಕ್ತಿಯ ಹೊರತಾಗಿಯೂ, ಟ್ಯುನೀಶಿಯಾದ ಕಡಲತೀರದ ರೆಸಾರ್ಟುಗಳಲ್ಲಿ ಇಂದು ವಿರಾಮಕ್ಕಾಗಿ ತಲುಪುವವರಿಗಿಂತಲೂ ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯ ಪ್ರವಾಸಿಗರು ನಗರಕ್ಕೆ ಸಂದರ್ಶನಕ್ಕಾಗಿ ತಲುಪುತ್ತಾರೆ ಎಂದು ಮುರಾದ್ ರಹ್ಮಾನ್ ವಿಷಾದಿಸುತ್ತಾರೆ.

ಮೂಲ: Ana M. Carreno leyva
ಅನುವಾದ: ಅಬ್ದುಸ್ಸಲಾಂ ಮಿತ್ತರಾಜೆ, ಸಾಲೆತ್ತೂರು

ನೂಬಿಯನ್ ದರ್ವೇಶಿಯ ಅಂತರ್ದೃಷ್ಟಿ

1976ರ ಬೇಸಿಗೆಯಲ್ಲಿ ನಾನು ಕೈರೋ ತಲುಪಿದ ಕೂಡಲೇ ಸೌದಿ ಅರೇಬಿಯಾ ಗೆ ವೀಸಾ ಪಡೆಯುವ ಶ್ರಮ ನಡೆಸಿದೆನು. ಉದ್ಯಾನ ನಗರಿಯ ಒಂದು ವಿಶಾಲವಾದ ಕಟ್ಟಡ ಸಂಕೀರ್ಣದಲ್ಲಿ ಅಂದು ಸೌದಿಯ ಕಾನ್ಸುಲೇಟ್ ಜನರಲ್ ಕಾರ್ಯಾಚರಿಸುತ್ತಿತ್ತು. ಸೌದಿಯಲ್ಲಿ ತೈಲ ನಿಕ್ಷೇಪಗಳನ್ನು ಕಂಡು ಹಿಡಿಯಲಾದ ಆ ಸಂದರ್ಭದಲ್ಲಿ ಉದ್ಯೋಗ, ಹಜ್-ಉಮ್ರಾಗಳ ವೀಸಾ ಪಡೆಯಲು ಸಾವಿರಾರು ಜನರು ಎಂಬೆಸಿಗೆ ಮುತ್ತಿಗೆ ಹಾಕಿದ್ದರು.
ಜನರ ರೋಷವು ಹೆಚ್ಚುತ್ತಲೇ ಇತ್ತು. ಗೇಟಿನ ಬಳಿ ಕಾಂಪೌಂಡ್‌ನ ಹೊರಗೂ ಒಳಗೂ ಜನ ಜಮಾಯಿಸಿದ್ದರು. ಬಿಳಿ ಸಮವಸ್ತ್ರ ಮತ್ತು ಕಪ್ಪು ಟೋಪಿ ಧರಿಸಿದ್ದ ಈಜಿಪ್ಟ್‌ ಪೊಲೀಸರು ಕೈಯಲ್ಲಿ ಬೆಲ್ಟ್‌ಗಳನ್ನು ಹಿಡಿದು ಜನರ ಬಳಿ ಬರುತ್ತಿದ್ದರು. ಜನರ ರೋಷಾಗ್ನಿ ಮತ್ತು ಬೆವರ ಹನಿಯ ವಾಸನೆಯು ನಗರವನ್ನೇ ವ್ಯಾಪಿಸಿತ್ತು. ಗತ್ಯಂತರವಿಲ್ಲದೆ ಗೇಟಿನ ಮೂಲಕ ಒಳಹೋದ ನನಗೆ ದಾಖಲೆಗಳನ್ನು ಸಲ್ಲಿಸುವ ಕಿಟಕಿಯವರೆಗೂ ಉದ್ದವಾಗಿದ್ದ ಸರತಿಯ ಸಾಲು ಕಂಡಿತು. ಕೊನೆಯಿಲ್ಲದ ಆ ಕ್ಯೂನಲ್ಲಿ ನಾನು ಸಿಲುಕಿಕೊಂಡಿದ್ದೆ. ಸದ್ಯಕ್ಕಂತೂ ಆ ಕ್ಯೂ ಮುಗಿಯುವಂತೆ ಇರಲಿಲ್ಲ. ಜನರು ಬಂದು ಆ ಸರತಿಯಲ್ಲಿ ತಮ್ಮನ್ನು ತೂರಿಸಿಕೊಳ್ಳುತ್ತಿದ್ದರು. ಯಾರೊಂದಿಗೂ ವಾಗ್ವಾದಕ್ಕಿಳಿಯದೆ ತಾಳ್ಮೆಯಿಂದ ಆ ಸರತಿಯ ಕೊನೆಯಲ್ಲಿ ನನ್ನ ಸರದಿಗಾಗಿ ಕಾಯುತ್ತಾ ನಿಂತೆನು. ತಾಳ್ಮೆಯು ನನ್ನಲ್ಲಿದ್ದ ದೊಡ್ಡ ಗುಣವೇನೂ ಆಗಿರಲಿಲ್ಲ. ಆದರೆ ಗತ್ಯಂತರವಿಲ್ಲದೆ ಆ ಸರತಿಯಲ್ಲಿ ನಿಂತಿದ್ದೆ. ಕೆಟ್ಟ ಗಳಿಗೆಯನ್ನು ಅಲ್ಲಾಹನ ಸ್ಮರಣೆಯ ಮೂಲಕ ಧನ್ಯಗೊಳಿಸಿ, ಸಮಯದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ನಾನು ಅರಿತೆನು. ಸಾವಿರ ಸಲ ಪ್ರವಾದಿಯವರ ಮೇಲೆ ಸ್ವಲಾತ್ ಹೇಳಲು ತೀರ್ಮಾನಿಸಿದೆನು. ಮುಖದಲ್ಲಿ ನದಿಯ ಬೆವರ ಹನಿ ಹರಿಯುತ್ತಿತ್ತು. ಅಲ್ಲಿ ಉಸಿರಾಡುವಾಗ ವಾಕರಿಕೆ ಉಂಟಾಗುತ್ತಿತ್ತು. ನಬಿಯವರ ಮೇಲೆ ಸ್ವಲಾತ್ ಹೇಳುತ್ತಿದ್ದ ನನ್ನನ್ನು ಸರತಿಯ ಸಾಲು ನಾನರಿಯದೆ ಮುಂದಕ್ಕೆ ತಳ್ಳುತ್ತಿತ್ತು.

ಕ್ಯೂನ ಮುಂದಿನ ಸಾಲು ತಲಯಪಿದಾಗ 990 ಬಾರಿ ಸ್ವಲಾತ್ ಹೇಳಿ ಮುಗಿಸಿದ್ದೆ. ನನ್ನ ಆತಂಕ ಮತ್ತು ನಿರಾಶೆ ಕೊಂಚ ಕಡಿಮೆಯಾಗಿತ್ತು ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಾನು ದಾಖಲೆಗಳನ್ನು ಕಿಟಕಿ ಮೂಲಕ ಇಟ್ಟೆನು. ಹಾಗೂ ಆನಂದದಿಂದ ಕಾನ್ಸುಲೇಟ್ ನ ಕಾಂಪೌಂಡ್ ಹೊರಗೆ ಬಂದೆನು. ಅಲ್ಲಿದ ಸೈಯ್ಯಿದ ಝೈನಬ (ರ) ಮಸೀದಿ ಗೆ ಟ್ಯಾಕ್ಸಿ ಹಿಡಿದೆನು. ಆ ಮಸೀದಿಯ ವಠಾರದಲ್ಲಿ ಪ್ರವಾದಿಯವರ ಮೊಮ್ಮಗಳು ಝೈನಬ್ ಅವರ ಮಝಾರ್ ಇದೆ. ಟ್ಯಾಕ್ಸಿ ಪ್ರಯಾಣದ ಮಧ್ಯೆ ಸಾವಿರ ಸ್ವಲಾತ್ ಪೂರೈಸಿದೆನು. ಡ್ರೈವರ್‌ಗೆ ಹಣ ಪಾವತಿಸಿ, ಮಸೀದಿಗೆ ನಡೆದೆನು‌. ಝೈನಬ್ (ರ) ಅವರ ಮಝಾರ್ ಬಳಿ ತಲುಪಿದಾಗ ಬಿಳಿ ಬಟ್ಟೆ ಮತ್ತು ಬಣ್ಣ ಬಣ್ಣದ ಶಿರವಸ್ತ್ರ ಧರಿಸಿದ್ದ ಓರ್ವ ನೂಬಿಯನ್ ದರ್ವೇಶಿಯೋರ್ವರು ಕುಳಿತಿದ್ದರು. ಏನೋ ಚಿಂತನೆಯಲ್ಲಿ ಮುಳುಗಿದಂತೆ ತಲೆ ತಗ್ಗಿಸಿ ಕುಳಿತಿದ್ದರು. ಆತ ಏನನ್ನೋ ಅರಿತವರಂತೆ ಒಂದು ಕ್ಷಣ ನನ್ನ ಮುಖವನ್ನು ದಿಟ್ಟಿಸಿ ನೋಡಿ, ಜೋರಾಗಿ ‘ಅಲ್ಲಾಹ್, ಅಲ್ಲಾಹ್’ ಎಂದು ಕೂಗಿದರು. ನನ್ನ ಹೃದಯದಲ್ಲಿ ಅಡಗಿದ್ದ ಏನೋ ಒಂದನ್ನು ಸಂಗ್ರಹಿಸುವ ರೀತಿಯಲ್ಲಿ ಅವರು ತಮ್ಮ ಕೈಗಳ ಮೂಲಕ ನನ್ನನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅವರ ಮುಖವು ಹೊಳೆಯುತ್ತಿತ್ತು. ನಾನು ನನ್ನ ತಲೆಯಾಡಿಸಿದೆನು. ಅವರು ಭಾವಪರವಶರಾಗಿ ಮಂದಹಾಸ ಬೀರಿದರು. ನಂತರ ಅವರು ದ್ಸಿಕ್ರ್‌ನಲ್ಲಿ ತಲ್ಲೀನರಾದರು.

ಒಂದು ವಾರದ ಬಳಿಕ ನಾನು ಸಯ್ಯಿದ ಝೈನಬ ಅವರ ಮಝಾರ್‌ಗೆ ತೆರಳಿದೆನು. ಆದಿನ ನಾನು ಸೌದಿ ಕಾನ್ಸುಲೇಟ್‌ನಲ್ಲಿದ್ದ ಕಾರಣ ದ್ಸಿಕ್ರ್-ಸ್ವಲಾತ್‌ನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮಝಾರ್‌ನ ಬಳಿ ನೂಬಿಯನ್ ದರ್ವೇಶಿಯನ್ನು ನೋಡಿದೆ. ಅವರ ಬಳಿ ಹೋಗಿ ಹತ್ತಿರದಲ್ಲಿ ಕುಳಿತೆನು. ಒಂದು ವಾರದ ಹಿಂದಿನ ಪರಿಚಯ ಇರಬಹುದು ಎಂದು ಭಾವಿಸಿದ್ದೆ. ಆದರೆ ಅವರಿಗೆ ಅದರ ಪರಿವೆಯೇ ಇರಲಿಲ್ಲ. ಅವರು ನನ್ನನ್ನು ನಿರ್ಲಕ್ಷಿಸಿ ದರು. ನಾನು ಅವರ ಗಮನವನ್ನು ನನ್ನತ್ತ ಸೆಳೆಯಲು ಕಸರತ್ತು ನಡೆಸಿದೆನು. ಅಪರಿಚಿತರಂತೆ ನನ್ನ ಕಡೆ ನೋಟವನ್ನು ಬೀರಿ, ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡರು. ಕಳೆದ ವಾರ ಅವರು ನನ್ನನ್ನು ವೈಯಕ್ತಿಕ ನೆಲೆಯಲ್ಲಿ ಗುರುತಿಸಿರಲಿಲ್ಲ ಎಂಬುದು ದಿಟವಾಯಿತು. ಅವರ‌ ಅಂತರ್ದೃಷ್ಟಿಯ ಮೂಲಕ ನಾನು ಹೇಳಿದ್ದ ಸ್ವಲಾತ್‌ಗಳನ್ನು ಅವರು ಕಂಡಿದ್ದಾಗಿರಬಹುದು. ಅಲ್ಲಾಹನೇ ಬಲ್ಲ!

ಮೈಕಲ್ ಸುಗಿಚ್ ಅವರು ಓರ್ವ ಇಂಗ್ಲಿಷ್ ಬರಹಗಾರ. ಮುಸ್ಲಿಂ ಜಗತ್ತಿನ ಬಗ್ಗೆ ಆಳ ಜ್ಞಾನವನ್ನು ಹೊಂದಿರುವವರು. ಈ ಅನುವಾದಿತ ಲೇಖನವನ್ನು ಅವರ Signs of Horizans ಎಂಬ ಪುಸ್ತಕದಿಂದ ಆಯ್ಕೆ ಮಾಡಲಾಗಿದೆ.

-ಮೈಕಲ್ ಸುಗಿಚ್
ಕನ್ನಡಕ್ಕೆ: ಮುಹಮ್ಮದ್ ಶಮೀರ್ ಪೆರುವಾಜೆ

ಮುಸ್ಲಿಂ ಸಾಮ್ರಾಜ್ಯದಲ್ಲಿ ವಕ್ಫ್‌: ಉದ್ದೇಶ ಮತ್ತು ಹಿನ್ನೆಲೆ

ಪ್ರವಾದಿಯವರ ಕಾಲದ ಸರಿಸುಮಾರು ಎರಡು ಶತಮಾನಗಳ ನಂತರ, ಒಂಬತ್ತನೇ ಶತಮಾನದ ವೇಳೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ದತ್ತಿ ಸಂಸ್ಥೆಗಳ, ಧಾರ್ಮಿಕ ದತ್ತಿಗಳ(ಅವ್ಕಾಫ್/ವಕ್ಫ್) ಹರಡುವಿಕೆ ವ್ಯಾಪಕಗೊಂಡವು. ನಂತರದ ಸಹಸ್ರಮಾನದತ್ತ ಗಮನಿಸಿದರೆ ಮುಸ್ಲಿಂ ಸಮುದಾಯವು ವಾಸಿಸುತ್ತಿದ್ದ ಭೂ ಪ್ರದೇಶಗಳ ಬೆಳವಣಿಗೆಯನ್ನು ಅವಲೋಕಿಸುವ ಅಧ್ಯಯನಗಳಲ್ಲಿ ‘ವಕ್ಫ್’ ಎಂಬುವುದು ಅವಿಭಾಜ್ಯ ಪರಿಕಲ್ಪನೆಯಾಗಿ ಕಾಣಬಹುದು.

ಅಂದಾಜು ಪ್ರಕಾರ, ಹತ್ತೊಂಬತ್ತನೇ ಶತಮಾನದ ಪ್ರಾರಂಭ ಘಟ್ಟದ ಕೃಷಿಯೋಗ್ಯ ಸ್ಥಳಗಳಲ್ಲಿ ಆಧುನಿಕ ತುರ್ಕಿಯ ಮುಕ್ಕಾಲು ಭಾಗ, ಈಜಿಪ್ಟಿನ ಐದರಲ್ಲೊಂದು ಭಾಗ, ಇರಾನಿನ ಏಳನೇ ಒಂದು ಭಾಗ, ಅಲ್ಜೀರಿಯಾದ ಅರ್ಧದಷ್ಟು ಹಾಗೂ, ಗ್ರೀಸ್- ಟುನಿಷ್ಯಾ ರಾಷ್ಟ್ರಗಳ ಮೂರನೇ ಒಂದು ಭಾಗದಷ್ಟು ಭೂಮಿಗಳೂ ಧಾರ್ಮಿಕ ದತ್ತಿ(ವಕ್ಫ್) ಪ್ರದೇಶಗಳಾಗಿದ್ದವು.

ಪ್ರಸ್ತುತ ಶತಮಾನದ ಒಟ್ಟೋಮನ್ ಸಾಮ್ರಾಜ್ಯದ ವಾರ್ಷಿಕ ಆದಾಯದ ಮೂರನೇ ಒಂದು ಭಾಗವು ಇಪ್ಪತ್ತು ಸಾವಿರದಷ್ಟು ಇದ್ದ ವಕ್ಫ್ ಪ್ರದೇಶಗಳ ಆದಾಯವೇ ಆಗಿತ್ತು. ಇಸ್ಲಾಮ್‌ ಮಾಡಿರುವ ಇಂತಹ ದತ್ತಿ ದಾನಗಳ ಸಾಂಸ್ಥೀಕರಣವು ನಗರಾಭಿವೃದ್ಧಿ ಯೋಜನೆಗಳು, ಸಾಮಾಜಿಕ ಕಲ್ಯಾಣ ಕಾರ್ಯಗಳು, ಧಾರ್ಮಿಕ ಆಚರಣೆಗಳು ಮತ್ತು ಅವುಗಳ ಪ್ರಯೋಗ, ಕಲೆ, ಮಾರುಕಟ್ಟೆಗಳ ಹಾಗೂ ಆರ್ಥಿಕ ಶಕ್ತಿ ಕೇಂದ್ರಗಳ ರಚನೆ ಮತ್ತು ದೃಢತೆ, ರಾಜಕೀಯ ಸ್ಥಿರತೆ ಹೀಗೇ ಹತ್ತು ಹಲವು ಕ್ಷೇತ್ರಗಳಲ್ಲಿ ದೊಡ್ಡ ಪ್ರಭಾವ ಬೀರಿತು.

ಇಸ್ಲಾಮಿನ ವೈವಿಧ್ಯಮಯ ಸಂಸ್ಕೃತಿಗಳ ಅಭಿವ್ಯಕ್ತಿಗಳ ಮೂಲಾಧಾರವಾಗಿ ವಕ್ಫ್ ಸಂಸ್ಥೆಗಳು ಕಾರ್ಯ ನಿರ್ವಹಿಸಿದವು ಎಂದು ನಿಸ್ಸಂಶಯ ಹೇಳಬಹುದು. ಅಧಿಕಾರ ಕೇಂದ್ರಗಳ ಹಸ್ತಕ್ಷೇಪವಿಲ್ಲದೇ ಪ್ರಜೆಗಳ ಅಗತ್ಯಗಳನ್ನು ಪೂರೈಸಲು ವಕ್ಫ್ ದಾನಗಳ ಮೂಲಕ ಸಾಧ್ಯವಾದವು. ಇಸ್ಲಾಮಿಕ್ ನಾಗರಿಕತೆಯ ಈ ‘ಅಡಿಗಲ್ಲು’ ಹತ್ತೊಂಬತ್ತನೇ ಶತಮಾನದ ಮಧ್ಯದಲ್ಲಿ ಹೊಸದಾಗಿ ರೂಪುಗೊಂಡ ರಾಜ್ಯ- ರಾಷ್ಟ್ರಗಳ (Nation states) ದುರುದ್ದೇಶಪೂರಿತ ಪ್ರಕ್ರಿಯೆಗಳಿಗೆ ಸಿಲುಕಿ ಪತನಗೊಳ್ಳತೊಡಗಿತು. ಒಂದು ಅದ್ವಿತೀಯ ಇಸ್ಲಾಮಿಕ್ ಸಂಸ್ಥೆಯಾಗಿದ್ದ ವಕ್ಫ್ ಅವನತಿಯ ಹಾದಿ ಹಿಡಿದ ಪರಿಣಾಮ ಪಾಶ್ಚಾತ್ಯೀಕರಣ ಹಾಗೂ ಅನರ್ಥ ಸುಧಾರಣೆಗಳು ವೇಗ ಪಡೆಯಿತು ಎಂಬುವುದು ಐತಿಹಾಸಿಕ ಸತ್ಯ.

ವಖ್ಫ್ ಒಂದು ಸಾಮಾಜಿಕ ಚಳುವಳಿಯಾಗಿ ರೂಪುಗೊಂಡದ್ದರ ಹಿಂದೆ ಮುಸ್ಲಿಂ ಸಮುದಾಯದಲ್ಲಿ ಸರ್ವ ಸಾಮಾನ್ಯವಾದ ಎರಡು ವಿಭಿನ್ನ ಆಚರಣೆಗಳ ಹಿನ್ನೆಲೆ ಇದೆ. ಧಾನ ಧರ್ಮಗಳಿಗೆ ಒತ್ತು ನೀಡಿ ನಿರ್ಗತಿಕರಿಗೆ ನೆರವಾಗುವುದನ್ನು ಬದುಕಿನ ಕೇಂದ್ರ ಬಿಂದುವಾಗಿ ಪರಿಗಣಿಸುವ ಇಸ್ಲಾಮಿನ ನೀತಿ ಬೋಧನೆ ಮತ್ತು ಧರ್ಮಶಾಸ್ತ್ರ ಒಂದು ಹಿನ್ನೆಲೆಯಾದರೆ, ಮರಣವೆಂಬ ವಾಸ್ತವಿಕತೆಯ ಕಾನೂನಾತ್ಮಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಎದುರಿಸುವಲ್ಲಿ ಬೇಕಾಗುವ ಪೂರ್ವ ಸಿದ್ಧತೆಗಳ ಭಾಗವಾದ ಉಯಿಲು ಮತ್ತು ಉತ್ತರಾಧಿಕಾರ ವಿಚಾರಗಳು ಮತ್ತೊಂದು ಹಿನ್ನೆಲೆ.

ಪರಸ್ಪರ ಪ್ರೀತಿಸುವುದನ್ನು ಜೀವನದ ಪ್ರಧಾನ ಕಾರ್ಯವಾಗಿ ಪರಿಗಣಿಸುವಾಗ ಜನನದಿಂದಲೇ ಮಸಲ್ಮಾನನ ಪ್ರತಿಯೊಂದು ನಿಮಿಷವನ್ನೂ ಧನ್ಯಗೊಳಿಸುವುದರಲ್ಲಿ ಧಾನ ಧರ್ಮಗಳಿಗೆ ನಿರ್ದಿಷ್ಟ ಸ್ಥಾನವಿದೆ. ಆತನ ದೇಹದ ಎಲ್ಲಾ ಕೀಲುಗಳಿಗೂ ದಾನ ಧರ್ಮಗಳ ನೆರವೇರಿಸಬೇಕೆಂದು ಪರಿಗಣಿಸಲಾಗಿದೆ.

ಪ್ರವಾದಿಯವರು ಹೇಳುತ್ತಾರೆ “ಪ್ರತಿ ದಿನವೂ ಮನುಷ್ಯನ ಕೀಲುಗಳು ಅದರ ದಾನವನ್ನು ನಿರ್ವಹಿಸಬೇಕು. ಇಬ್ಬರ ಮಧ್ಯೆ ನ್ಯಾಯಯುತವಾಗಿ ವರ್ತಿಸುವುದು, ಒಬ್ಬಾತನಿಗೆ ಆತನ ವಾಹನವನ್ನು ಚಲಾಯಿಸಲು ಹಾಗೂ ಭಾರವನ್ನು ಎತ್ತಲು ನೆರವಾಗುವುದು, ಒಳಿತಿನ ಮಾತು, ದಾರಿಯಲ್ಲಿನ ತೊಡಕುಗಳನ್ನು ನೀಗಿಸುವುದು, ಎಲ್ಲವೂ ನೀನು ನಿರ್ವಹಿಸುವ ದಾನಗಳಾಗಿವೆ”.

ದಯೆಯ ಮಾತುಗಳು, ಕೈ ಹಿಡಿದು ರಸ್ತೆ ದಾಟಿಸುವುದು, ದಾರಿಯನ್ನು ಕಸ ಕಡ್ಡಿಗಳಿಂದ ಮುಕ್ತಗೊಳಿಸುವುದು, ಸಂಗಾತಿಯೊಂದಿಗೆ ಪ್ರೀತಿ ತೋರುವುದು, ನಿರ್ಗತಿಕರ ಹೊಟ್ಟೆ ತಣಿಸುವುದು, ಅನ್ಯಾಯದ ವಿರುದ್ಧ ದನಿಯೆತ್ತುವುದು ಹೀಗೇ ಅಲ್ಲಾಹನ ಸಂಪ್ರೀತಿ ಬಯಸಿ ನಿರ್ವಹಿಸುವ ಎಲ್ಲವನ್ನೂ ದಾನದ ವಿವಿಧ ರೂಪಗಳೆಂದು ಇಸ್ಲಾಂ ಹೇಳುತ್ತದೆ.

ಹಿರಿ- ಕಿರಿದಾದ ಪರೋಪಕಾರ ಕರ್ಮಗಳಿಂದ ಮುಸಲ್ಮಾನನ ದೈನಂದಿನ ಬದುಕು ಧನ್ಯಗೊಳಿಸಬೇಕೆಂದು ಇಸ್ಲಾಂ ನಿರ್ದೇಶಿಸುತ್ತದೆ. ದಾನಗೈಯುವುದಕ್ಕೆ ಬಹಳ ಪ್ರಾಮುಖ್ಯತೆಯಿರುವ ವಿಶೇಷ ದಿನಗಳು ಮತ್ತು ತಿಂಗಳುಗಳನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಪ್ರತ್ಯೇಕವಾಗಿ ಗುರುತಿಸಿಡಲಾಗುತ್ತದೆ. ಮುಸ್ಲಿಮರು ವಾರಕ್ಕೊಮ್ಮೆ ಪ್ರಾರ್ಥನೆಗಾಗಿ ಸಂಗಮಿಸುವ ಶುಕ್ರವಾರ (ಜುಮುಅಃ) ದಿನವು ದಾನಗಳಿಗೆ ಶ್ರೇಷ್ಠತೆಯಿರುವ ಪುಣ್ಯ ದಿನವಾಗಿದೆ. ಜುಮಾ ನಮಾಝಿನ ನಂತರ ನಿರ್ಗತಿಕರು ಮತ್ತು ಅತಿಥಿಗಳಿಗೆ ಅನ್ನ ನೀಡುವ ಸಂಪ್ರದಾಯವು ಮುಸ್ಲಿಂ ಮನೆಗಳಲ್ಲಿವೆ. ಹಿಜರಿ ವರ್ಷಾರಂಭದ ಮುಹರ್ರಂ ಹತ್ತರ ತನಕವಿರುವ ದಿನಗಳು, ಪ್ರವಾದಿ ಜನನವನ್ನು ಆಚರಿಸಲ್ಪಡುವ ರಬೀಉಲ್ ಅವ್ವಲ್, ಪವಿತ್ರ ರಜಬ್ ತಿಂಗಳು, ಬರಾಅತ್ ರಾತ್ರಿ, ವ್ರತಾಚರಣೆಯ ರಮಳಾನ್, ಎರಡು ಈದ್ ದಿನಗಳು, ಹೀಗೇ ಈ ಕಾರ್ಯವು ನಿಖರವಾದ ಕ್ರಮೀಕರಣವನ್ನು ಹೊಂದಿದೆ. ವಿಶ್ವಾಸಿಗಳು ಪ್ರಸ್ತುತ ಶ್ರೇಷ್ಠ ದಿನಗಳಲ್ಲಿ ಪ್ರಾರ್ಥನಾ ನಿರತರಾಗುತ್ತಾ, ಅಲ್ಲಾಹನು ತಮ್ಮ ಪಾಪಗಳನ್ನು ಮನ್ನಿಸುತ್ತಾನೆ ಎಂಬ ಅಚಲ ನಂಬಿಕೆಯೊಂದಿಗೆ ಧಾರಾಳವಾಗಿ ದಾನ ಧರ್ಮಗಳಲ್ಲಿ ತೊಡಗುತ್ತಾರೆ.

ಒಂದು ಮಗು ಹುಟ್ಟಿ ಏಳು ದಿನಗಳ ಬಳಿಕ ಸೃಷ್ಟಿಕರ್ತನಿಗೆ ಕೃತಜ್ಞತೆಯೆಂಬಂತೆ ‘ಅಖೀಖತ್’ ಎಂಬ ಹೆಸರಿನಲ್ಲಿ ಮಾಂಸ ವಿತರಣೆ ನಡೆಸಲಾಗುತ್ತದೆ. ಜೀವನದ ಪ್ರಥಮ ಘಳಿಗೆಯಿಂದಲೇ ಪರೋಪಕಾರ ಪೃವೃತ್ತಿಗಳನ್ನು ಬಹಳ ಪ್ರಾಧಾನ್ಯತೆಯಿಂದ ಗಣಿಸುತ್ತಾ, ಸಣ್ಣ ಪ್ರಾಯದಿಂದಲೇ ಕಾರುಣ್ಯ ಕಾರ್ಯಗಳನ್ನು ಬದುಕಿನಲ್ಲಿ ಅಳವಡಿಸುವಂತೆ ಉತ್ತೇಜಿಸುವ ಇಸ್ಲಾಮಿನ ಉದಾತ್ತ ಸಂದೇಶವನ್ನು ಇಲ್ಲಿ ನಮಗೆ ಕಾಣಬಹುದು.

ಇಸ್ಲಾಮಿಕ್ ಸಾಮಾಜಿಕ ಆಂದೋಲನ(ವಖ್ಫ್) ಆವಿರ್ಭಾವದ ಹಿನ್ನೆಲೆಯ ಎರಡನೇ ಕಾರಣ ಮರಣ ಹಾಗೂ ಮರಣಾನಂತರದ ಪರಲೋಕ ಮೋಕ್ಷವೆಂಬ ನಂಬಿಕೆಯ ಮೇಲೆ ಅವಲಂಬಿತವಾಗಿದೆ. ಇಸ್ಲಾಮಿಕ್ ನಿಯಮ ಪ್ರಕಾರವಿರುವ ಉಯಿಲು(ವಸಿಯ್ಯತ್), ವಾರಸುದಾರಿಕೆ(ಮೀರಾಸ್) ಎಂಬಿವುಗಳ ಪ್ರಾಯೋಗಿಕತೆಯು ಬಹಳ ಜಟಿಲ. ಅದಾಗ್ಯೂ ಒಬ್ಬನ ಮರಣದ ತರುವಾಯ ಆತನ ಸಂಬಂಧಿಕರ ಅಥವಾ ಊರ ವಿದ್ವಾಂಸರ ಮೂಲಕ ಅವುಗಳು ಸರಿಯಾಗಿ ನಿರ್ವಹಿಸಲ್ಪಡುತ್ತದೆ. ಒಬ್ಬಾತನ ಉಯಿಲು ಪತ್ರವು ಆತನ ಆಸ್ತಿಯ ಮೂರನೇ ಒಂದಂಶವನ್ನು ಮೀರಬಾರದು. ಈ ನಿರ್ಬಂಧ ಮರಣಶಯ್ಯೆಯಲ್ಲಿ ಆತನ ಆಸ್ತಿಯ ದೊಡ್ಡ ಪಾಲು ವಾರಸುದಾರರ ಕೈಯಿಂದ ತಪ್ಪಿ ಅನರ್ಹರ ವಶವಾಗುವುದನ್ನು ತಡೆಯುತ್ತದೆ.

ಇಸ್ಲಾಮಿನ ವಾರೀಸುದಾರಿಕೆಯ ಕಾನೂನಿನ ನಿಯಂತ್ರಿತವಾದ ಉಯಿಲು ಆಧಾರಿತ ಸಾಮಾನ್ಯ ದಾನಕ್ಕಿಂತ ವಿಭಿನ್ನವಾದ ಯಾವುದೇ ನಿಯಂತ್ರಣಗಳಿಲ್ಲದೆ ದಾನಿಯ ಪಾರತ್ರಿಕ ಜೀವನದಲ್ಲಿ ನಿರಂತರ ಪ್ರಯೋಜನ ನೀಡುವ ಹಾಗೂ ಇಹದಲ್ಲಿ ಸದಾ ಚಾಲನೆಯಲ್ಲಿರುವ ದಾನದ ಪ್ರಕಾರವನ್ನು ಆವಿಷ್ಕಾರ ಮಾಡುವಲ್ಲಿ ಎದುರಿಸಿದ ಸವಾಲುಗಳು ‘ವಖ್ಫ್’ ಎಂಬ ವಿಶಿಷ್ಟ ವ್ಯವಸ್ಥೆಯ ರಚನೆಗೆ ಕಾರಣವಾಯಿತು. ಹಿಂದಿನ ಕಾಲಕ್ಕಿಂತ ಭಿನ್ನವಾಗಿ ಕಾಲಕ್ರಮೇಣ ನಿಶ್ಶರ್ತ ದೇಣಿಗೆ (ಸ್ವದಖ) ಹಾಗೂ ವಿಶೇಷ ಗುರಿಯೊಂದಿಗಿನ ದೇಣಿಗೆಗಳನ್ನು (ವಖ್ಫ್) ಪ್ರತ್ಯೇಕಿಸಿ ಪ್ರಬಲವಾದ ರೀತಿಯಲ್ಲಿ ಪ್ರಾಯೋಗಿಕಗೊಳಿಸಲಾಯಿತು. ಆಧುನಿಕ ಕಾಲದಲ್ಲಿ ವಖ್ಫ್ ಎಂಬ ಮಾನವ ಸೇವಾ ಸಂಸ್ಥೆಯು ವಸಾಹತುಶಾಹಿ ದಾಳಿಗಳಿಂದ ಹಾಗೂ ಸ್ವಂತ ನೆಲದಲ್ಲಿ ಯುರೋಪ್ಯನ್ ಜ್ಞಾನೋದಯ ಪರಿಕಲ್ಪನೆಗಳನ್ನು ಜಾರಿಗೊಳಿಸಲು ಪ್ರಯತ್ನಿಸುವ ಸ್ವಯಂಘೋಷಿತ ಮುಸ್ಲಿಂ ಸುಧಾರಕರಿಂದಾಗಿ ವಿನಾಶದಂಚಿಗೆ ತಲುಪಿರುವುದು ಅತ್ಯಂತ ವಿಷಾದನೀಯ.

(ಮುಂದುವರಿಯುವುದು)

ಮೂಲ: ಖಲೀಲ್ ಅಬ್ದುರ್ರಶೀದ್
ಅನುವಾದ: ಶಂಸ್ ಗಡಿಯಾರ್

1 2 3 4 5 6 14