ಅನಲ್‌ ಹಖ್

ಅನಲ್ ಹಖ್ ಎಂದು ಸಾಧಾರಣವಾಗಿ ಹೇಳುತ್ತಾ ಓಡಾಡುತ್ತಿದ್ದ ಮನ್ಸೂರ್ ಅಲ್ ಹಲ್ಲಾಜ್ ರನ್ನು ಸರ್ಕಾರ, ಸರ್ಕಾರಕ್ಕೆ ಸೇರಿದ್ದ ಮತ ಪಂಡಿತರು ಕೊಂದು ಕತ್ತು ಸೀಳಿ ನಜ್ಜುಗುಜ್ಜು ಮಾಡಿ ದಹಿಸಿ ಯೂಫ್ರಟಿಸ್‌ ನದಿಗೆಸೆದಾಗ ಕ್ಷೋಭೆಗೊಳಗಾದ ಮಹಾ ಸಮುದ್ರದಂತೆ ಯೂಫ್ರಟಿಸ್‌ ಅನಲ್ ಹಖ್! ಅನಲ್ ಹಖ್! ಎಂದು ಅತಿ ಗಂಭೀರತೆಯಿಂದ ಘರ್ಜಿಸಿತು ಎಂಬುದು ಐತಿಹ್ಯ. ಆ ಗರ್ಜನೆಯ ವಿಚಾರ ಅತಿಶಯೋಕ್ತಿಯಿಂದ ಕೂಡಿದ್ದಾದರೂ ಮನ್ಸೂರ್ ರ ಜೀವನ ಚರಿತ್ರೆ ಕ್ರೋಧ ಹುಟ್ಟಿಸುವಂತದ್ದೆ. ಇಂತಹ ಅನೇಕ ಘಟನೆಗಳು ಪ್ರತಿಯೊಂದು ಧರ್ಮದ ಹೆಸರಲ್ಲಿ ಲೋಕ ಚರಿತ್ರೆಯಲ್ಲಿದೆ. ಇದರಲ್ಲಿ ಮನ್ಸೂರರ ತಪ್ಪು ಏನು ಎಂದು ನೋಡಿದರೆ ಅವರು ಅನಲ್ ಹಖ್! ಅನಲ್ ಹಖ್! ಎಂದು ಹೇಳುತ್ತಿದ್ದರಂತೆ! ಅನಲ್ ಹಖ್ ಎಂಬುದರ ಅರ್ಥ ‘ನಾನು ಸತ್ಯ!’ ಎಂದಾಗಿದೆ. ಅಹಂ ಬ್ರಹ್ಮಾಸ್ಮಿ ಎಂದು. ದೇವರ ಪರ್ಯಾಯಗಳಲ್ಲಿ ಒಂದು. ಸಂಕ್ಷಿಪ್ತವಾಗಿ ಮನ್ಸೂರ್ ಹೇಳಿದರು; ಮನ್ಸೂರ್ ದೇವರೆಂದು.‌ ಹಾಗೆ ಸ್ಪಷ್ಟವಾಗಿ ಹೇಳಿದರೋ ಏನೋ. ಹೇಳಿದರೂ ಅದರಲ್ಲೇನಿದೆ ತಪ್ಪು? ಒಬ್ಬ ಹುಚ್ಚನ ವಚನಗಳು ಎಂದು ಬಿಟ್ಟು ಬಿಡಬಹುದಿತ್ತು.‌ ಆದರೆ, ಮನ್ಸೂರ್ ಹುಚ್ಚನಾಗಿರಲಿಲ್ಲ. ಆಧ್ಯಾತ್ಮಿಕವಾದಿಯಾದ ಓರ್ವ ಸೂಫಿ. ಮಹಾ ಸಮುದ್ರದ ಒಂದು ಹನಿ, “ನಾನು ಮಹಾ ಸಮುದ್ರ!” ಎಂದು ಹೇಳುವಂತೆಯೋ, ಮಹಾಶಿಲೆಯ ಒಂದು ಕಣ; ‘ನಾನು ಮಹಾಶಿಲೆ’ ಎಂದು ಹೇಳುವಂತೆಯೋ ಆಗಿರಬಹುದು ಮನ್ಸೂರ್ ಹೇಳಿದ್ದು. ಎಲ್ಲವೂ ಈಶ್ವರನ ಅಂಶವಾದುದರಿಂದ…
ಅದೇನಿದ್ದರೂ ರಕ್ತಸಿಕ್ತವಾದ ಆ ಘಟನೆ ಹೀಗಿದೆ…
ವಿಚಾರಗಳ ಬೆಳವಣಿಗೆಯಲ್ಲಿ ಕೋಪೋದ್ರಿಕ್ತರಾಗುವ ಕಾಲಘಟ್ಟ: ಹಿಜ್ರದ ನಂತರದ ನಾಲ್ಕನೇ ಶತಮಾನದ ಆರಂಭ. ಜ್ಞಾನಿಗಳು, ಮುನಿ ಪುಂಗವರು, ಕವಿಗಳು, ಕಲಾವಿದರು ಸ್ವೇಚ್ಛಾಧಿಪತ್ಯದ ಮುಂದೆ ವಿನೀತರಾಗಿ ನಿಂತಿದ್ದರು. ಕೇವಲ ಹೊಗಳುಭಟರು! ಪರ್ಷಿಯಾ ರಾಷ್ಟ್ರ ದ್ರಾಕ್ಷಾ ರಸದ ಮಾಧುರ್ಯದಲ್ಲೂ, ಪನ್ನೀರು ಸುಮಗಳ ಸೌರಭ್ಯದಲ್ಲೂ, ಸುಂದರಿಗಳ ಆಲಿಂಗನದಲ್ಲೂ ಮುಳುಗಿ ಹೋಗಿತ್ತು. ಆಗ ಮನ್ಸೂರ್ ಹಲ್ಲಾಜ್ ಸಂಜಾತರಾಗುತ್ತಾರೆ. ಅಂತಃಸತ್ವವಿಲ್ಲದ ಆರ್ಭಟಗಳಲ್ಲಿ ಲಯಿಸಿ ಹೋಗಿದ್ದ ರಾಜಧಾನಿಯಿಂದ ಬಹುದೂರವಿದ್ದ ಪುಟ್ಟ ಗ್ರಾಮವಾದ ‘ಬೈಸಾ’ದಲ್ಲಿ, ಅದರ ಪ್ರಶಾಂತತೆಯಲ್ಲಿ ಮನ್ಸೂರ್ ಹಲ್ಲಾಜ್ ಬೆಳೆದರು.
ಮನ್ಸೂರ್ ಹಲ್ಲಾಜ್…ವಿಚಾರಶೀಲನಾಗಿದ್ದ ಆ ಬಾಲಕ ಯುವತ್ವದ ಗಾಂಭೀರ್ಯವನ್ನು ತಲುಪಿದರು. ಸಮೀಪದ ಪಟ್ಟಣವಾದ ‘ತುಷ್ತಾರಿ’ಯದ ಮಹಾವಿದ್ಯಾಲಯ ಸೇರಿದರು. ಆಧ್ಯಾತ್ಮಿಕ, ಧರ್ಮ, ಸಮಾಜ, ಸಾಹಿತ್ಯ ಹೀಗೆ ಎಲ್ಲಾ ಕೋನಗಳಲ್ಲೂ ಅತ್ಯಮೂಲ್ಯ ಪಾಂಡಿತ್ಯ ಪಡೆದರು. ವಿದ್ವಾಂಸರಾದ ಮನ್ಸೂರ್ ಅಸಂತೃಪ್ತಿಯೊಂದಿಗೆ ಹೊರಗೆ ಬಂದರು.‌ ಅಜ್ಞಾತವಾದ ಒಂದು ತೊಳಲಾಟ, ಅರಿತದ್ದ್ಯಾವುದೂ ಅರಿಯಬೇಕಾದದ್ದಲ್ಲ; ತೀರದ ಆತ್ಮದಾಹ; ಅರಿಯುವ, ಹತ್ತಿರವಾಗುವ ತೀವ್ರ ವಾಂಛೆ. ದಾರಿ ನಿಶ್ಚಯವಿಲ್ಲದ ಇರುಳಲ್ಲಿ ಅಲೆದಾಟ. ದಿಗ್ಭ್ರಾಂತರಾಗಿ ಮನ್ಸೂರ್ ಶೋಧಿಸಿದರು; ಬೆಳಕಿನ ಒಂದು ಕಿರಣ, ಅದಕ್ಕಾಗಿ ಅಂಡಲೆದರು.‌ ಓರ್ವ ಫಕೀರನಂತೆ ವಿಷಾದದೊಂದಿಗೆ ಓಡಾಡಿದರು. ಹೀಗಿರಲು ಒಮ್ಮೆ ‘ಉಮರ್ ಇಬ್ನ್ ಉಸ್ಮಾನ್ ರನ್ನು ಭೇಟಿಯಾದರು. ಅವರ ಆಶ್ರಮ ಮರುಭೂಮಿಯ ಹರಿತ ಪ್ರದೇಶವೆಂದು ಮನ್ಸೂರ್ ಗೆ ತೋರಿತು.‌ ಗುರು ನವ್ಯಪಥವೊಂದನ್ನು ತೋರಿಸಿಕೊಟ್ಟರು: ಸೂಫಿಸಂ.
ಆಧ್ಯಾತ್ಮಿಕ ವಿಜ್ಞಾನದ ಉಜ್ವಲ ಪ್ರಭಾವ! ಅದರತ್ತ ಮನ್ಸೂರ್ ನಾಗಾಲೋಟವಿಟ್ಟರು. ಯುಗಗಳ ಉತ್ಕಂಠದೊಂದಿಗೆ, ಬಿರುಗಾಳಿಯ ಆವೇಗದಲ್ಲಿ, ಭೌತಿಕತೆಯ ಗಡಿ ದಾಟಿದರು.‌ ಅಕ್ಷಯವೂ, ಅನಶ್ವರೂ ಆದ ಮಹಾ ಬೆಳಕಿನಲ್ಲಿ ಮೇಘ ಬಿಂದುವಿನಂತೆ ಮನ್ಸೂರ್ ವಿಸ್ಮೃತರಾದರು. ಧ್ಯಾನ ಮಗ್ನರಾಗಿದ್ದ ಮನ್ಸೂರ್ ಆವೇಶ ಭರಿತರಾಗಿ ಕೂಗಿದರು: ‘ಅನಲ್ ಹಖ್! ಅನಲ್ ಹಖ್!
ಅನಶ್ವರವಾದ ಸತ್ಯ, ಸೃಷ್ಟಿಯೂ ಸೃಷ್ಟಿಕರ್ತನೂ ನಾನೇ! ನಾನೇ…
ಅನಶ್ವರವಾದ ಸತ್ಯ! ಆಶ್ರಮ ಒಂದು ಕ್ಷಣ ನಡುಗಿತು. ಗುರು ಶಿಷ್ಯರು ಬೆಚ್ಚಿದರು. ಎಂಥಾ ಘಟನೆ! ಶತಮಾನಗಳ ಮನುಷ್ಯ ವಿಶ್ವಾಸ. ಅದರ ಮೇಲ್ಛಾವಣಿಯನ್ನೇ ಧ್ವಂಸಗೊಳಿಸುವ ಭಯಂಕರ ಘೋಷಣೆ; ಅನಲ್ ಹಖ್…ಮನ್ಸೂರ್ ವಿಸ್ಮೃತ ಎಂದು ಅವರು ಸಮಾಧಾನಪಟ್ಟುಕೊಂಡರು. ಆದರೂ, ಕೊನೆಗೆ ಮಹಾಗುರು ಉಪದೇಶಿಸಿದರು:
“ಮನ್ಸೂರ್, ಇದು ಸರಿಯಲ್ಲ; ಏಕಭಾವದಲ್ಲಿ ಸೃಷ್ಟಿಯನ್ನು ಹಾಗೂ ಸೃಷ್ಟಿಕರ್ತನನ್ನು ಭಾವಿಸುವುದು ಸರಿಯಲ್ಲ. ಇದು ಸಾಮೂಹಿಕ ನಿಯಮಕ್ಕೆ ವಿರುದ್ಧವಾಗಿದೆ. ಶರೀಅತ್ ಉಲ್ಲಂಘಿಸಿದರೆ ಮರಣ ದಂಡನೆ ಎಂಬುದು ನಿಮಗೆ ತಿಳಿದಿದೆ ತಾನೇ?”
ಮರಣ ದಂಡನೆ!
ಮನ್ಸೂರ್ ಅವೆಲ್ಲವನ್ನು ಮರೆತು ಮತ್ತೆ ಮತ್ತೆ ಆವೇಶಭರಿತರಾಗುವುದು ವಾಡಿಕೆಯಾಯಿತು. ಸಾಮೂಹಿಕ ನಿಯಮ ಆಶ್ರಮವನ್ನು ನಾಶ ಮಾಡುತ್ತದೆ! ಭೀತಿಯಿಂದ ಗುರು ಮನ್ಸೂರರನ್ನು ಹೊರ ತಳ್ಳಿದರು. ಜನರು ಕುಹಕವಾಡಿದರು. ಸಾಂಕ್ರಾಮಿಕ ರೋಗ ಬಾಧಿತನೆನ್ನುವಂತೆ ಮನ್ಸೂರರನ್ನು ಕಲ್ಲೆಸೆದು ಓಡಿಸಿದರು. ಬಸರಿನಲ್ಲಿ ನಿಲ್ಲಲಾಗದ ಸ್ಥಿತಿ ಉದ್ಭವಿಸಿತು.‌ ಎಲ್ಲೂ ಆಶ್ರಯ ಸಿಗದೆ ಮನ್ಸೂರ್ ಮತ್ತೆ ಅಲೆಮಾರಿಯಾದರು. ಹಲವು ಯತಿ ವರ್ಯರ ಆಶ್ರಮಗಳನ್ನು ಹತ್ತಿಳಿದರು. ಕೊನೆಗೆ ಬಾಗ್ದಾದ್ ತಲುಪಿದರು. ಸುಪ್ರಸಿದ್ಧ ಸೂಫಿ, ಮಹಾ ವಿದ್ವಾಂಸರಾದ ಹಝ್ರತ್ ಜುನೈದ್ ಮಂದಸ್ಮಿತರಾಗಿ ಬಹಿಷ್ಕೃತರಾಗಿದ್ದ ಮನ್ಸೂರ್ ಗೆ ಅಭಯ ನೀಡಿದರು. ಆದರೆ, ಅಭಿಪ್ರಾಯಗಳನ್ನು ಒಳಗೆ ಇಟ್ಟುಕೊಳ್ಳಬೇಕೆಂಬ ಉಪದೇಶವನ್ನೂ ನೀಡಿದರು.
‘ಸ್ವಾತಂತ್ರ್ಯದ ಶುದ್ಧವಾಯು ಉಸಿರಾಡುವ ಒಂದಿಂಚು ಸ್ಥಳವೂ ಭೂಮಿಯಲ್ಲಿಲ್ಲವೇ?’ ಎಂದು ಮನ್ಸೂರ್ ಚಕಿತರಾದರು.‌ ಆದರೂ, ಅಲ್ಲಿಯೇ ವಾಸ ಹೂಡಿದರು. ಅಲ್ಲೂ ಅವರು ಆವೇಶಭರಿತರಾಗುವುದು ಸಾಮಾನ್ಯವಾಯಿತು. ಹಝ್ರತ್ ಜುನೈದ್ ನೋವಿನಿಂದ ಮತ್ತೊಂದು ಉಪದೇಶ ನೀಡಿದರು:
“ಮನ್ಸೂರ್! ಎಚ್ಚರಿಕೆಯಿಂದಿರಿ. ದುರಿತ ದಿನವೊಂದು ಹತ್ತಿರವಾಗುತ್ತಿದೆ. ನಿಮ್ಮ ಬಿಸಿರಕ್ತದಿಂದ ಯೂಫ್ರಟಿಸ್‌ ನದಿ ತೀರದ ಬಿಳಿ ಮರಳು ಕುಂಕುಮದಿಂದ ಅಲಂಕರಿಸಲ್ಪಡುವ ಅಂತಿಮ ದಿನ.‌ ಎಚ್ಚರವಾಗಿರಿ…”
“ಆ ಅಂತಿಮ ದಿನ!” ಮನ್ಸೂರ್ ಹೇಳಿದರು: ‘ಅದರಲ್ಲಿ‌ ನನಗೆ ಭಯವಿಲ್ಲ. ಆದರೆ, ಅಂದು ನೀವು ಈ ಮಹೋನ್ನತ ಪದವಿಯಿಂದ ಕೆಳಗಿಳಿಯುವಿರಿ. ಈ ಸನ್ಯಾಸಿ ಧಿರಿಸನ್ನು ಕಿತ್ತೆಸೆದು ತಾವು ಕೇವಲ ನ್ಯಾಯಾಧೀಶರಾಗುವಿರಿ. ತಾವು ಎಚ್ಚರವಾಗಿರಿ.‌ ಅನಲ್ ಹಖ್!”
ಚರಿತ್ರೆ ಹೀಗೆ ಮುಂದುವರಿಯುತ್ತದೆ.
ಘಟನಾತ್ಮಕವಾದ ಕಾಲದ ಪುಟಗಳು ಮತ್ತೆ ಮಗುಚಿದವು. ಮನ್ಸೂರ್ ಹೊರಗೆ ಬಂದರು.‌
ದೇವಾಲಯಗಳು, ಪೇಟೆ, ಮೈದಾನಗಳು ಮನ್ಸೂರರ ಆವೇಶಭರಿತ ಪ್ರಭಾಷಣಗಳಿಂದ ಪ್ರಸನ್ನಗೊಂಡಿತು. ನವೀನ ಆದರ್ಶ ಜನರನ್ನು ಹಠಾತ್ ಆಕರ್ಷಿಸಿತು. ಚಿಂತನಾ ಲೋಕದಲ್ಲಿ ಬಿರುಗಾಳಿ ಎದ್ದಿತು. ಅದರಲ್ಲಿ ಕ್ರಾಂತಿಯ ನಗಾರಿ ಶಬ್ಧ ಕೇಳಿಸಿತು. ಪಂಡಿತ ವರ್ಗ ದಿಗ್ಮೂಢರಾದರು. ಪ್ರಸಿದ್ಧಿಯ ತುತ್ತತುದಿಗೇರಿದ ಮನ್ಸೂರರ ಸುತ್ತ ಗೂಢಾಲೋಚನೆಯ ಕುಣಿಕೆಗಳು ಬಿಗಿದವು. ಧರ್ಮದ್ರೋಹಿ, ನಾಸ್ತಿಕ ಮೊದಲಾದ ವದಂತಿಗಳು ಹರಡಿದವು. ಮನ್ಸೂರರನ್ನು ವಧಿಸುವ ನಿಗೂಢ ಪ್ರಯತ್ನಗಳು ನಡೆದವು.‌ ಆ ಕಾಲದಲ್ಲಿ ಮನ್ಸೂರ್ ಪರ್ಯಟನೆ ಮಾಡಿದರು, ಗ್ರಂಥಗಳನ್ನು ಬರೆದರು. ಹಲವು ಸಂಕಟಗಳನ್ನು ಎದುರಿಸಿ ಐದು ವರ್ಷಗಳಲ್ಲಿ ನಲ್ವತ್ತೇಳು ಗ್ರಂಥಗಳನ್ನು ರಚಿಸಿದರು. ಆದರೆ, ಗ್ರಂಥಗಳ ಪ್ರಸರಣವನ್ನು ಸರಕಾರ ನಿಷೇಧಿಸಿದ ಕಾರಣ ಸಾರ್ವತ್ರಿಕ ಪ್ರಚಾರವೂ ಲಭಿಸಿತು.‌ ಕೆಲವು ಕವಿಗಳು, ಚಿಂತಕರು ಮನ್ಸೂರರನ್ನು ಹೊಗಳದಿರಲಿಲ್ಲ. ಮಹಾಕವಿ, ಅತುಲ್ಯ ತತ್ವಜ್ಞಾನಿ ಹೀಗೆ ಮನ್ಸೂರರ ಕೀರ್ತಿ ದೇಶವ್ಯಾಪಿಯಾಗಿ ಹರಡಿತು.‌ ಸುಲ್ತಾನನ ಬಲಹೀನ ಸರ್ಕಾರ ಇದರಿಂದ ಭೀತಿಗೊಂಡಿತು. ಜತೆಗೆ ಪುರೋಹಿತರ ವಿರೋಧವೂ ಬಲವಾಯಿತು.‌ ಹೀಗೆ ಅಧಿಕಾರ ಮತ್ತು ಆಚಾರ ಮನ್ಸೂರರ ವೈರಿಗಳಾಗಿ ಬದಲಾಯಿತು. ಅವರು ಮನ್ಸೂರರಿಗೆ ಸ್ಥಾನಮಾನಗಳ ವಾಗ್ದಾನ ಮಾಡಿದರು. ಪಂಡಿತ ವರ್ಗ ತಂತ್ರಪೂರ್ವಕ ಮನ್ಸೂರರಿಗೆ ವಾದ ಪ್ರತಿವಾದಕ್ಕೆ ಆಹ್ವಾನ ನೀಡಿತು.‌ ಬಾಗ್ದಾದಿನ ಪಂಡಿತ ವರ್ಗವನ್ನು ಅಭಿಸಂಭೋದನೆ ಮಾಡಿ ಮನ್ಸೂರ್ ಹೇಳಿದರು:
“ಮನ್ಸೂರನ ವಿಚಾರವನ್ನು ಕೋಟೆಯಲ್ಲಿ ಬಂಧಿಸಲು ಸಾಧ್ಯವಿಲ್ಲ.‌ ಅದು ವಿಶ್ವವ್ಯಾಪಿಯಾಗಿ, ಆಕಾಶವನ್ನು ಬೇಧಿಸಿ, ಲೋಕ ಲೋಕಗಳನ್ನು ದಾಟಿ ಹಾರಿ ಹೋಗುತ್ತದೆ. ನನ್ನ ಆದರ್ಶಗಳು, ನನ್ನ ವಿಶ್ವಾಸಗಳು ಯಾವುದೂ ನಿಮ್ಮ ಆಜ್ಞಾಪಾಲನೆಗೆ ನಿಲ್ಲುವಂತದ್ದಲ್ಲ.‌ ನನ್ನನ್ನು ನಿಮ್ಮ ಕೂಟಕ್ಕೆ ಸೇರಿಸಬೇಕೆಂದೇನಿಲ್ಲ”
ಸಾವಿರಾರು ಪಂಡಿತರ ರುಧಿರ ನಯನಗಳು ಮನ್ಸೂರರ ಕಡೆಗೆ ತಿರುಗಿದವು.‌ ಅದುಮಿಡಲಾಗದ ಸಿಟ್ಟಿನಿಂದ ಪಂಡಿತವರ್ಯರೊಬ್ಬರು ಸಭೆಯಲ್ಲಿ ಎದ್ದು ನಿಂತರು.‌ ಮನ್ಸೂರರನ್ನು ಕೆಳಗೆಳೆದು ಅತಿ ಕಠಿಣ ಪ್ರಹಾರ ನಡೆಸಿದರು. ಪ್ರಜ್ಞೆ ತಪ್ಪಿ ಬಿದ್ದಿದ್ದ ಮನ್ಸೂರರನ್ನು ಹದ್ದುಗಳಂತೆ ಸುತ್ತುವರಿದರು.‌ ಆಗಲೇ ಮತ ಪಂಡಿತರು ಒಕ್ಕೊರಲ ಅಭಿಪ್ರಾಯವಾಗಿ ಫತ್ವಾವೊಂದನ್ನು ಸಿದ್ಧಪಡಿಸಿದರು.‌
“ಮನ್ಸೂರ್, ಶರೀಅತ್ ಉಲ್ಲಂಘಿಸಿದ ಕಾಫರ್ ಆಗಿರುವರು. ತನ್ಮೂಲ ಮರಣ ದಂಡನೆಗೆ ಅರ್ಹರಾಗಿದ್ದಾರೆ…”
ಸಾವಿರಾರು ಪಂಡಿತರು ಯಾವುದೇ ವಿರೋಧವಿಲ್ಲದೆ ಅದರಲ್ಲಿ ಸಹಿ ಹಾಕಿದರು. ಬಾಗ್ದಾದಿನ ಮಂತ್ರಿಯಾಗಿದ್ದ ಹಮೀದ್ ಇಬ್ನ್ ಅಬ್ಬಾಸ್ ಆರೋಪಪಟ್ಟಿಗೆ ಸಹಮತ ವ್ಯಕ್ತಪಡಿಸಿದರು.‌ ಸುಲ್ತಾನ್ ಮುಖ್ತದಿರ್ ಬಿಲ್ಲಾ ಮಾತ್ರ ಅದಕ್ಕೆ ಸಹಿ ಹಾಕಲಿಲ್ಲ.‌ ಹಝ್ರತ್ ಜುನೈದ್ ಸಹಿ ಹಾಕದ ಪತ್ರಕ್ಕೆ ತಾನು ಸಹಿ ಹಾಕುವುದಿಲ್ಲವೆಂದು ಸುಲ್ತಾನ್ ಹಠ ಹಿಡಿದರು. ಹೀಗೆ ಪಂಡಿತರ ನಿಯೋಗ ಹಝ್ರತ್ ಜುನೈದ್ ರ ಆಶ್ರಮಕ್ಕೆ ಹೋಯಿತು.‌ ಆರು ಬಾರಿ ಅವರು ನಿರಾಶೆಯಿಂದ ಮರಳಿದರು. ಹೌದು ಅಥವಾ ಇಲ್ಲ ಎಂಬ ಖಚಿತವಾದ ಅಭಿಪ್ರಾಯ ಹೇಳುವಂತೆ ಖಲೀಫ ಆಗ್ರಹಿಸಿದರು. ಕ್ಲೇಶಭರಿತರಾದ ಅವರು ದರ್ವೇಶಿ ವೇಷಭೂಷಣಗಳನ್ನು ಕಿತ್ತೆಸೆದರು.‌ ನ್ಯಾಯಾಧೀಶನ ವೇಷ ತೊಟ್ಟರು. ಫತ್ವಾ ಪತ್ರಕ್ಕೆ ಸಹಿ ಹಾಕಿದರು.‌ ಅವರ ಕಣ್ಣುಗಳಲ್ಲಿ ಬಾಷ್ಪ ತುಂಬಿತು. ನಡುಗುವ ಕೈಗಳೊಂದಿಗೆ ಹಝ್ರತ್ ಜುನೈದ್ ಅದರಲ್ಲಿ ಬರೆದರು;
“ಸಾಮೂಹಿಕ ನಿಯಮದ ಅನುಸಾರ ಮನ್ಸೂರ್ ವಧೆ ಶಿಕ್ಷೆಗೆ ಅರ್ಹರು. ಆದರೆ, ಸತ್ಯವನ್ನು ಆಧಾರವಾಗಿಟ್ಟುಕೊಂಡರೆ ಎಲ್ಲವನ್ನು ಅರಿಯುವವನು ಲೋಕ ನಿಯಂತ್ರಕ ಮಾತ್ರ”
ಸಾಮೂಹಿಕ ನಿಯಮವಲ್ಲವೇ ಪ್ರಬಲ!
ಮನ್ಸೂರರ ಕೈಗೆ ಕೋಳ ಹಾಕಿ, ಭಟರ ಬೆಂಗಾವಲಿನಲ್ಲಿ ಯೂಫ್ರಟಿಸ್‌ ನದಿ ತೀರಕ್ಕೆ ಕರೆದೊಯ್ದರು. ಮರದ ಕುರ್ಚಿಯೊಂದಕ್ಕೆ ಅವರನ್ನು ಕಟ್ಟಿ ಹಾಕಿ ನಾನಾ ವಿಧದಲ್ಲಿ ಪೀಡಿಸಿದರು.‌ ಕೊನೆಗೆ ಅವರನ್ನು ಜೈಲಿಗಟ್ಟಿದರು. ಕಂಬಿಗಳ ಹಿಂದೆ ನಿಂತು ಮನ್ಸೂರ್ ಭಾಷಣ ಮಾಡುತ್ತಿದ್ದರು. ದಿನಗಳು ಕಳೆದಂತೆ ಜೈಲಿನ ಮುಂದೆ ಜನಸಾಗರವೇ ನೆರೆಯಲಾರಂಭಿಸಿತು. ಮನ್ಸೂರ್ ನಿರ್ದೋಷಿ ಎಂಬ ಕೆಲವು ಪ್ರಸ್ತಾವನೆಗಳು ಎಲ್ಲೆಲ್ಲೂ ಹರಿದಾಡಿತು. ಉಲಮಾಗಳು ಜೈಲಿಗೆ ಭೇಟಿ ನೀಡಿದರು. ಸುದ್ದಿ ತಿಳಿದ ಸುಲ್ತಾನ್ ಆಜ್ಞೆ ಹೊರಬಿತ್ತು:
“ಮನ್ಸೂರರನ್ನು ಇನ್ನು ಮುಂದೆಯೂ ಜೈಲಿನಲ್ಲಿಟ್ಟಿಕೊಂಡರೆ ರಾಷ್ಟ್ರದಲ್ಲಿ ಕ್ಷೋಭೆ ಉಂಟಾಗಬಹುದು. ಜನ ಕ್ಷೇಮಕ್ಕಾಗಿ ಅವರನ್ನು ವಧಿಸುವುದು ಅನಿವಾರ್ಯ. ಅನಲ್ ಹಖ್ ಎಂದು ಗದ್ದಲ ಎಬ್ಬಿಸಿದರೆ ಬೆನ್ನಿಗೆ ಛಡಿಯೇಟು ನೀಡಿರಿ. ಈ ದಿನವೇ ಅವರನ್ನು ವಧಿಸಬೇಕು…”
ಹಿಜ್ರ 304 ದ್ಸುಲ್ ಖಅದ್ 29…ಚರಿತ್ರೆ ಮಹಾಕಂಪನದೊಂದಿಗೆ ನೆನೆಯುವ ದಿನ.
ಅಂದು ಮನ್ಸೂರರನ್ನು ಹೊರಗೆ ಕರೆದುಕೊಂಡು ಬಂದರು.‌ ಕಿಕ್ಕಿರಿದು ನೆರೆದ ಜನಸಂದಣಿಯ ಮುಂದೆ ಮರಣ ಶಾಸನ ಓದಲಾಯಿತು. ಮನ್ಸೂರ್ ಮುಗುಳ್ನಕ್ಕರು. ಆಹ್ಲಾದಭರಿತರಾಗಿ ಅವರು ಕೂಗಿ ಹೇಳಿದರು:
‘ಅನಲ್ ಹಖ್! ಅನಲ್ ಹಖ್!’
ತಕ್ಷಣವೇ ಮುನ್ನೂರಕ್ಕೂ ಹೆಚ್ಚು ಛಡಿಯೇಟುಗಳು ಅವರ ಬೆನ್ನಿಗೆ ಬಿದ್ದವು. ಸುಡು ಬಿಸಿಲಲ್ಲಿ ಅವರನ್ನು ನಗ್ನಗೊಳಿಸಿ ನಿಲ್ಲಿಸಲಾಯಿತು. ಬೆನ್ನು ಇಂಚಿಂಚಾಗಿ ಊದಿಕೊಂಡು ಒಡೆದು ರಕ್ತ ಹರಿಯತೊಡಗಿತು. ಜನರ ಹೇಷಾರವ ಮುಗಿಲು ಮುಟ್ಟಿತು. ಮನ್ಸೂರರನ್ನು ಗಲ್ಲುಕಂಬದತ್ತ ಕರೆದೊಯ್ದರು.
“ಧೀರರಿಗೆ ಪಾಲಿಗೆ ಗಲ್ಲುಕಂಬದತ್ತ ಕರೆದೊಯ್ಯುವುದೆಂದರೆ ಸ್ವರ್ಗದ ಕವಾಟವನ್ನು ತೆರೆಯುವುದೆಂದರ್ಥ” ಮನ್ಸೂರ್ ಗಲ್ಲುಕಂಬವನ್ನು ಎದೆಗೆ ಅವುಚಿಕೊಂಡರು. ಕೊನೆಯ ಪ್ರಾರ್ಥನೆ ನಿರ್ವಹಿಸಿದರು. ಅಷ್ಟರಲ್ಲಿ ಕಲ್ಲುಗಳು ಬೀಸಿ ಬಂದು ಅವರ ದೇಹವನ್ನು ಹೊಕ್ಕವು. ಮನ್ಸೂರ್ ಮಂದಹಾಸ ಬೀರಿದರಷ್ಟೇ.‌
ಮತಾಂಧ ಜನರು ಗೊಣಗಿದರು:
“ಅವನ ಅಂಗಾಂಗಗಳನ್ನು ಛೇದಿಸಬೇಕು”
ಕೊಲೆಗಾರರು ಆಜ್ಞೆ ಅನುಸರಿಸಿದರು.
“ಭೌತಿಕವಾದ ನನ್ನ ಕೈಗಳನ್ನು ತುಂಡರಿಸುವುದು ಬಹಳ ಸುಲಭ” ಮನ್ಸೂರ್ ನುಡಿದರು.
ನಂತರ ಅವರ ಕಾಲುಗಳನ್ನು ಕತ್ತರಿಸಲಾಯಿತು. ನೆಲದ ಮೇಲೆ ನಿಂತಿದ್ದ ರಕ್ತಕ್ಕೆ ಮುಖ ಕೆಳಗಾಗಿ ಬಿದ್ದರು. ಹಂತಕರು ಅವರನ್ನು ಹಿಡಿದು‌ ನಿಲ್ಲಿಸಿದರು.
“ಬಿಳುಚಿದ ನನ್ನ ಮುಖವನ್ನು ಲೋಕ ನೋಡದಿರಲಿ.”
ನಿರ್ಭಯವಾದ ಆ ಎರಡು ಕಣ್ಣುಗಳು ಉಜ್ವಲವಾಗಿ ಪ್ರಕಾಶಿಸಿದವು. ತಕ್ಷಣವೇ ಆ ಕಣ್ಣುಗಳನ್ನು ಕೀಳಲಾಯಿತು.‌
ಜನಸ್ತೋಮ ಕೂಗಿತು:
“ಆ ಭ್ರಷ್ಟನ ನಾಲಗೆ ಕತ್ತರಿಸಿ!”
“ಅಲ್ಪ ಸಹನೆಯಿರಲಿ” ಮನ್ಸೂರ್ ಬೇಡಿದರು.
“ಕೊನೆಯದಾಗಿ ನನಗೆ ಹೇಳಲಿಕ್ಕಿದೆ…”
ಇಲ್ಲದ ಕಣ್ಣುಗಳಲ್ಲಿ ಆಕಾಶದ ಕಡೆಗೆ ನೋಡಿದರು. ಮನ್ಸೂರ್ ಕೊನೆಯದಾಗಿ ಪ್ರಾರ್ಥಿಸಿದರು.
“ನನ್ನ ಆಶೆಯ ಪರಮ ಲಕ್ಷ್ಯವೇ, ನನ್ನ ಹಿಂಸಿಸಿರುವವರ ಆನಂದ ಸೌಭಾಗ್ಯಗಳನ್ನು ಹಿಂಪಡೆಯದಿರು! ಅನಲ್ ಹಖ್”
ಅಷ್ಟರಲ್ಲಿ ಓರ್ವ ವೃದ್ಧ ಮಹಿಳೆ ಮುಂದೆ ಬಂದು; ಮನ್ಸೂರರ ನಾಲಗೆ ಹಿಡಿದು ಎಳೆದು ಕ್ಯಾಕರಿಸಿ ಮುಖಕ್ಕೆ ಉಗಿದರು. ನಂತರ ನಾಲಗೆ ಕತ್ತರಿಸಿದರು.
ಅಂತಿಮವಾಗಿ ಮನ್ಸೂರರ ಗಂಭೀರವಾದ ಶಿರಸ್ಸು ದೇಹದಿಂದ ಬೇರ್ಪಟ್ಟು, ರಕ್ತ ಮಿಶ್ರಿತ ಮಣ್ಣಿನ ಮೇಲೆ ಉರುಳಿಬಿತ್ತು. ಆದರೂ ಜನಸಾಮಾನ್ಯರ ಕ್ರೋಧ ಶಮನವಾಗಲಿಲ್ಲ.
ಐತಿಹ್ಯ ಹೀಗೆ ದಾಖಲಿಸುತ್ತದೆ:
“…ಅವರು ಮನ್‌ಸೂರನ್ನು ಸಾವಿರಾರು ತುಂಡುಗಳಾಗಿ ಕತ್ತರಿಸಿದರು. ಒಂದು ದೊಡ್ಡ ಚಿತೆಯನ್ನು ರಚಿಸಿ, ಎಲ್ಲವನ್ನೂ ಅದರಲ್ಲಿ ಎಸೆದು ಸುಟ್ಟುಹಾಕಿದರು. ಆ ಅಗ್ನಿಜ್ವಾಲೆಯನ್ನು ನೋಡುತ್ತ ಅವರು ಅಟ್ಟಹಾಸಗೈದರು. ಕೊನೆಗೆ ಆ ಭಸ್ಮವನ್ನು ನದಿಯಲ್ಲಿ ಚೆಲ್ಲಿದರು. ಹೀಗೆ ತಮ್ಮ ಮಹಾಕ್ರೋಧವನ್ನು ತಣಿಸಿಕೊಂಡರು.”
“ಆದರೆ!
ಅಷ್ಟರವರೆಗೆ ಶಾಂತವಾಗಿ ಹರಿಯುತ್ತಿದ್ದ ಯೂಫ್ರಟೀಸ್ ನದಿ ಏಕಾಏಕಿ ಅಶಾಂತಗೊಂಡು ರಕ್ತಮಯವಾಯಿತು. ಪ್ರಕೃತಿ ನಿಶ್ಚಲಗೊಂಡಿತು. ಅಷ್ಟರಲ್ಲಿ ಗರ್ಜನೆಯೊಂದಿಗೆ ಪರ್ವತಾಕಾರದ ಅಲೆಗಳು ಎದ್ದವು. ತೀವ್ರ ಕೋಪದಿಂದ ಉಕ್ಕಿದ ಮಹಾಸಮುದ್ರದಂತೆ, ಸಮಸ್ತ ಬ್ರಹ್ಮಾಂಡವನ್ನೇ ನಡುಗಿಸುವಷ್ಟು ಭಯಂಕರವಾಗಿ, ಅತ್ಯುದ್ರಿಕ್ತವಾಗಿ, ಅತ್ಯಂತ ಗಂಭೀರವಾಗಿ ಯೂಫ್ರಟೀಸ್ ಗರ್ಜಿಸಿತು:
“ಅನಲ್‌ ಹಖ್! ಅನಲ್‌ ಹಖ್!”

— ವೈಕಂ ಮುಹಮ್ಮದ್ ಬಶೀರ್
ಕನ್ನಡ : ಸ್ವಾಲಿಹ್ ತೋಡಾರ್


ಅನರ್ಘ್ಯ ನಿಮಿಷ

ನೀನು ನಾನು ಎಂಬ ವಾಸ್ತವದಿಂದ ಕೊನೆಗೆ ನೀನು ಮಾತ್ರ ಉಳಿಯಲಿರುವೆ.
ನೀನು ಮಾತ್ರ.
ಯಾತ್ರೆ ಹೊರಡುವ ಸಮಯ ಹತ್ತಿರವಾಗಿದೆ.
ಇನ್ನೇನು ಸುರಿಯಲಿರುವ ಕಾರ್ಮೋಡದಂತೆ ಈ ನೆನಪುಗಳು ಎದೆಯೊಡೆವ ವೇದನೆಯಾಗಿ ನಿಂತಿದೆ.
ಇದು ನನ್ನ ಮಿತ್ರರಿಗೆ ತಿಳಿದಿಲ್ಲ. ಅವರು ಹಿಂದಿನಂತೆಯೇ ನನ್ನ ಬಳಿ ಬರುತ್ತಾರೆ. ತಮಾಷೆ ಕಥೆಗಳನ್ನು ಹೇಳುವಂತೆ ಒತ್ತಾಯಿಸುತ್ತಾರೆ.
ಅವರಿಗಾಗಿ ಏನೇನೋ ಜೋಕುಗಳನ್ನು ಹೇಳುತ್ತೇನೆ. ಅವರೊಂದಿಗೆ ಸೇರಿ ನಗುತ್ತೇನೆ.‌ ನನ್ನ ನಗುವಿನೊಳಗಿನ ದುಃಖದ ಮೊರೆತ ಅವರಿಗೆ ಕೇಳಿಸುವುದಿಲ್ಲ.
ನಾನಿಲ್ಲಿ ಶೂನ್ಯದಲ್ಲಿ ಲಯಿಸಲಿದ್ದೇನೆ.
ಶೂನ್ಯದಲ್ಲಿ!
ಇದು ಅಪ್ರಧಾನವಾದ ಘಟನೆ ಅಥವಾ ಅತಿ ಪ್ರಧಾನವಾದುದೋ? ಏನೋ-ಆಯಿತು-ಅದಿಲ್ಲಿ ಮುಖ್ಯವೇ? ಏನೇ ಆಗಲಿ; ಈ ಎರಡರ‌ ನಡುವಿನ ಅನರ್ಘ್ಯ ನಿಮಿಷವೇ ನಾನು. ವರ್ತಮಾನ ಕಾಲದ ಅಂಚಿನಲ್ಲಿ ನಿಂತಿರುವ ಭೂತಕಾಲ.
ನಿನ್ನೆಗೆ ಸಂಪೂರ್ಣವಾಗಿ ಲಯಿಸಿ ಹೋಗಲಿರುವ ಇಂದು. ಯುಗಗಳು…ಮನ್ವಂತರಗಳು…ಅನಂತವಾದ…ಶಾಶ್ವತವಾದ ನಿನ್ನೆಗೆ!
ವಿದಾಯ ಹೇಳುತ್ತಿರುವೆ.
ಮುಗಿಯಿತು- ಇಲ್ಲ, ಇನ್ನೇನು ಮುಗಿಯಲಿದೆ.
ಮುಂದಿನ ಕ್ಷಣದಿಂದ ನಾನು ವಿಸ್ಮೃತಿಗೆ ಸೇರಿದ ಕೋಟ್ಯಂತರ ನಿನ್ನೆಗೆ!
ಪರಿಚಿತರಾದ ಹಲವರು ಹೊರಟು ಹೋಗಿದ್ದಾರೆ.
ಅವರು ಎಲ್ಲಿಗೆ ಹೋಗಿರಬಹುದು?
ನನಗೂ ಮೊದಲೇ ಹೋದ ಅನಂತಕೋಟಿ!
ನೆನಪುಗಳು ಅಕಾರಣ ಆರಂಭವನ್ನು ಸ್ಪರ್ಶಿಸುತ್ತಿದೆ.
ಆರಂಭ..!
ನಾನು ಅನಂತತೆಯ, ಅದ್ಭುತ ರಹಸ್ಯದ, ಅಜ್ಞಾತತೆಯ ಎಲ್ಲೆಯನ್ನು ಸೇರಿದಂತೆ! ಅದೋ ಒಂದು ಗರ್ಜನೆ, ನಾದಬ್ರಹ್ಮದ ಅನಂತವಾದ ವಿಭ್ರಮೆ!
ಗಮನಿಸುತ್ತಿದ್ದೀರಾ?
ಇಷ್ಟು ಕಾಲ ನೀನು ನನ್ನನ್ನು ಅಪಾರವಾದ ಕಾರುಣ್ಯದೊಂದಿಗೆ ಪ್ರೀತಿಸಿದೆ. ಸಹಿಸಿದೆ. ನನ್ನ ಕುರಿತು ನಿನಗೆಲ್ಲವೂ ತಿಳಿದಿದೆ. ಸೌಲಭ್ಯಾನುಸಾರ ಮುಂದೆಯೂ ಓದಬಹುದಾದ ಲಘುಗ್ರಂಥ ನಾನು!
ನೀನೀಗಲೂ ನನಗೆ ಮಹಾರಹಸ್ಯ!
ಕಾಲವಿಷ್ಟಾದರೂ ನಿನ್ನ ಕುರಿತು ಅರಿಯಲು ನನ್ನಿಂದ ಸಾಧ್ಯವಾಗಿಲ್ಲ. ಅರಿಯದೆಯೇ ನಿನ್ನನ್ನು ಪ್ರೀತಿಸಿದೆ. ಅರಿಯದೆಯೇ ನಿನ್ನನ್ನು ದ್ವೇಷಿಸಿದೆ. ತಿಳಿದೂ ನಿನ್ನನ್ನು ನೋಯಿಸಿದೆನೇ?
ಆದರೂ ಆದರೂ ನೀನು ನನ್ನ ಪ್ರೀತಿಸಿದೆ. ಸಹಿಸಿಕೊಂಡೆ. ನಿನ್ನೊಂದಿಗೆ ನಾನು ಹಲವು ರಹಸ್ಯಗಳನ್ನು ಹೇಳಿಕೊಂಡಿದ್ದೇನೆ. ನನ್ನೆಲ್ಲಾ ಪ್ರವೃತ್ತಿಗಳು ನಿನಗೆ ತಿಳಿದಿದೆ. ನನ್ನನ್ನು ನೀನು ಹಾಸ್ಯಾಸ್ಪದಗೊಳಿಸುವೆಯಾ?
ನಾನು ಹೊರಡುತ್ತಿದ್ದೇನೆ.
ನಿನ್ನನ್ನು ಪ್ರೀತಿಸುತ್ತಾ ಎಂಬುದು ತಿಳಿ.
ನೀನು ನಾನು ಪರಸ್ಪರ ಪರಿಚಯಿಸಿಕೊಂಡದ್ದು ಯಾವಾಗ? ಪರಿಚಯವಾಗಿದೆಯೇ? ನಾನು ಪ್ರಯತ್ನಿಸಿದೆ. ಕೊನೆಗೆ ಪ್ರೀತಿಸುವುದನ್ನಷ್ಟೇ ಕಲಿತೆ. ಇಲ್ಲ. ಸರಿಯಾಗಿ ಅರಿತುಕೊಂಡೇ ಇಲ್ಲ. ಅಜ್ಞಾನ. ಗಂಭೀರವಾಗಿ ಅರಿತಿಲ್ಲ.
ಬಂದಂತೆಯೇ ಒಂಟಿಯಾಗಿಯೇ ಹೋಗುತ್ತಿರುವೆ.
ಯಾತ್ರೆಯ ಸಮಯ ತೀರಾ ಹತ್ತಿರವಾಗುತ್ತಿದೆ‌.
ನೀನು ನಾನು ಎಂಬ ವಾಸ್ತವದಿಂದ ಕೊನೆಗೆ ನೀನು ಮಾತ್ರ ಉಳಿಯಲಿರುವೆ.
ನೀನು ಮಾತ್ರ!

– ವೈಕಂ ಮುಹಮ್ಮದ್ ಬಶೀರ್
ಕನ್ನಡ : ಸ್ವಾಲಿಹ್ ತೋಡಾರ್


ಹುಡುಕಾಟದ ಹಾದಿಯಲ್ಲಿ; ರೂಮಿ- ತಬ್ರೇಝ್ ಭೇಟಿ

ಮೌಲಾನಾ ಜಲಾಲುದ್ದೀನ್ ರೂಮಿ ಒಮ್ಮೆ ಕೆಲವು ಗ್ರಂಥಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದರು. ಆಗ ಬಹಳ ವಿಲಕ್ಷಣವಾದ ಮುಖಚಹರೆಯ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದರು. ರೂಮಿಯವರು ಅದು ಯಾರೋ ಸಾಮಾನ್ಯ ವ್ಯಕ್ತಿ ಎಂದು ತಿಳಿದು ಅವರತ್ತ ಗಮನವನ್ನು ಕೊಡದೆ ತಮ್ಮ ಅಧ್ಯಯನದಲ್ಲಿ ಮಗ್ನರಾಗಿದ್ದರು. ಆಗಂತುಕ ವ್ಯಕ್ತಿಯು ಮೌಲಾನಾ ರೂಮಿಯವರ ಮುಂದಿದ್ದ ಗ್ರಂಥರಾಶಿಯನ್ನು ನೋಡಿ, ‘ಐನ್ ಚೀಸ್ತ್’ – ಏನಿದು? ಎಂದು ಕೇಳಿದರು. ರೂಮಿಯವರು ಅವರನ್ನು ಆಪಾದಮಸ್ತಕವಾಗಿ ನೋಡುತ್ತ, ‘ಐನ್ ಆನ್ ಇಲ್ಮ್ ಅಸ್ತ್ ಕೆ ತೂ ನಮೀ ದಾನಮ್’- ಇದು ತಮಗೆ ತಿಳಿಯದ ಜ್ಞಾನ ಎಂದು ಹೇಳಿದರು. ಬಂದ ವ್ಯಕ್ತಿಯು ಈ ಉತ್ತರವನ್ನು ಕೇಳಿ ನಸುನಕ್ಕು ಸುಮ್ಮನಾದರು. ತುಸು ಹೊತ್ತಿನ ಬಳಿಕ ಮೌಲಾನಾ ರೂಮಿಯವರು ತಾವು ಅಧ್ಯಯನ ಮಾಡುತ್ತಿದ್ದ ಬೃಹತ್ ಗ್ರಂಥಗಳನ್ನು ಬಿಟ್ಟು ಯಾವುದೋ ಕಾರ್ಯದ ನಿಮಿತ್ತ ಹೊರಗೆ ಹೋದರು. ಆಗಂತುಕ ವ್ಯಕ್ತಿ ಅಲ್ಲಿದ್ದ ಅಮೂಲ್ಯ ಗ್ರಂಥಗಳನ್ನೆಲ್ಲ ಹತ್ತಿರದಲ್ಲೇ ಇದ್ದ ಕೊಳಕ್ಕೆ ಹಾಕಿಬಿಟ್ಟರು. ಆ ಬೆಲೆಬಾಳುವ ಗ್ರಂಥಗಳೆಲ್ಲ ನೀರಿನಲ್ಲಿ ಮುಳುಗಿದವು. ಸ್ವಲ್ಪ ಹೊತ್ತಿನ ನಂತರ ತಿರುಗಿ ಬಂದ ರೂಮಿಯವರು ತನ್ನ ಗ್ರಂಥಗಳು ಅವುಗಳನ್ನಿಟ್ಟಿದ್ದ ಸ್ಥಳದಲ್ಲಿ ಕಾಣದಿದ್ದನ್ನು ನೋಡಿ ‘ಇಲ್ಲಿದ್ದ ಗ್ರಂಥಗಳೆಲ್ಲಿ’ ಎಂದು ಕೇಳಿದರು. ಅವರು ಕೊಳದತ್ತ ಬೊಟ್ಟು ಮಾಡಿದರು. ಆ ಕಾಲದಲ್ಲಿ ಗ್ರಂಥಗಳನ್ನು ಕೈಯಾರೆ ಬರೆಯಲಾಗುತ್ತಿತ್ತು. ಸಾವಿರಾರು ಪುಟಗಳ ಒಂದು ಗ್ರಂಥವನ್ನು ರಚಿಸಬೇಕೆಂದರೆ ಬಹಳವೇ ಸಮಯ ಮತ್ತು ಶ್ರಮ ಬೇಕಾಗಿತ್ತು. ಅವುಗಳ ಮೇಲೆ ನೀರು ಬಿದ್ದರೆ ಅವು ಹಾಳಾಗುತ್ತಿದ್ದವು. ಹಾಗಿರುವಾಗ ಅಷ್ಟೊಂದು ಬೆಲೆಬಾಳುವ ಬೃಹತ್ ಪ್ರಮಾಣದ ಗ್ರಂಥಗಳನ್ನು ಹೀಗೆ ನೀರಿಗೆ ಹಾಕಿದ್ದನ್ನು ಕೇಳಿ ಅವುಗಳ ಬೆಲೆಯ ಬಗ್ಗೆ ಚೆನ್ನಾಗಿ ಅರಿವಿದ್ದ ರೂಮಿಯವರಿಗೆ ಸಹಿಸಲಾಗಲಿಲ್ಲ. ಈ ವಿಷಯವನ್ನು ಕೇಳುತ್ತಲೇ ಅವರು ಚೀರಿದರು; ‘ಛೇ, ಏನು ಮಾಡಿದಿರಿ? ಅವುಗಳ ಬೆಲೆಯೇನೆಂದು ನಿಮಗೆ ಗೊತ್ತೇನು? ಅಯ್ಯೋ.. ಎಷ್ಟು ಅಮೂಲ್ಯವಾದ ಪುಸ್ತಕಗಳು. ಛೇ, ಎಲ್ಲವೂ ಹಾಳಾಯಿತಲ್ಲ..’ ಎಂದು ಸಿಡಿಮಿಡಿಗೊಳ್ಳತೊಡಗಿದ ರೂಮಿಯವರನ್ನು ನೋಡಿ ಆ ವ್ಯಕ್ತಿಯು ನಗುತ್ತ, ‘ಅದಕ್ಯಾಕೆ ಈ ಥರ ಕೂಗುತ್ತೀರ? ಪುಸ್ತಕ ತಾನೆ, ನಾನು ಕೊಡುತ್ತೇನೆ’ ಎಂದು ಹೇಳುತ್ತ ನೀರಿಗೆ ಕೈಹಾಕಿ ಮುಳುಗಿದ್ದ ಅಷ್ಟೂ ಗ್ರಂಥಗಳನ್ನು ಮೇಲೆತ್ತಿ ಕೊಟ್ಟರು. ನೋಡುವುದೇನು! ಅವೆಲ್ಲ ಒಂದು ಸ್ವಲ್ಪವೂ ಒದ್ದೆಯಾಗದಂತೆ ಹಿಂದೆ ಹೇಗಿತ್ತೋ ಹಾಗೆಯೇ ಇದ್ದವು. ರೂಮಿಯವರು ಒಂದು ಕ್ಷಣ ದಂಗಾಗಿಬಿಟ್ಟರು. ಅವರಿಗರಿವಿಲ್ಲದೆ ಅವರ ಬಾಯಿಂದ ಉದ್ಗಾರವೊಂದು ಹೊರಬಿತ್ತು;

‘ಐನ್ ಚೀಸ್ತ್’- ಏನಿದು?! ಆಗ ಆ ವ್ಯಕ್ತಿಯು ಶಾಂತಚಿತ್ತರಾಗಿ, ‘ಐನ್ ಆನ್ ಇಲ್ಮ್ ಅಸ್ತ್ ಕೆ ತೂ ನಮೀ ದಾನಮ್’- ಇದು ತಮಗೆ ತಿಳಿಯದ ಜ್ಞಾನ ಎಂದು ಹೇಳಿ ಅಲ್ಲಿಂದ ಎಲ್ಲಿಗೋ ಹೊರಟರು.

ರೂಮಿಯವರ ತಲೆ ಗಿರ್ರನೆ ತಿರುಗತೊಡಗಿತು. ಅವರು ಆ ವ್ಯಕ್ತಿಯ ಹಿಂದೆ ಓಡಿ ಹೋಗಿ ಅವರ ಕಾಲಿಗೆ ಬಿದ್ದು, ‘ನನ್ನನ್ನು ಕ್ಷಮಿಸಿ’ ಎಂದು ಅತ್ತು ಗೋಗರೆದರು. ಬಂದ ವ್ಯಕ್ತಿಯು ಅಂದಿನ ಕಾಲದ ಪ್ರಸಿದ್ಧ ಸೂಫೀ ಗುರು ಹಝ್ರತ್ ಶಂಸ್ ತಬ್ರೀಝಿ ಅವರಾಗಿದ್ದರು! ಹಝ್ರತ್ ಶಮ್ಸ್ ತಬ್ರೀಝಿ ಅವರು ಮೌಲಾನಾ ರೂಮಿಯವರನ್ನು ತಬ್ಬಿಕೊಂಡು ತನ್ನ ಎದೆಗೊತ್ತುತ್ತ, ‘ಹೇ, ಜಲಾಲುದ್ದೀನ್! ಎಷ್ಟು ದಿನಗಳಿಂದ ನಿಮ್ಮನ್ನು ಹುಡುಕುತ್ತಿದ್ದೆ..’ ಎಂದು ಉದ್ಗರಿಸಿದರು.

ಈ ಇಡೀ ಘಟನೆಯನ್ನು ನೋಡುವಾಗ ರೂಮಿಯವರು ತಮ್ಮ ಮಸ್ನವಿಯಲ್ಲಿ ಹೇಳಿದ ಮಾತೊಂದು ಇಲ್ಲಿ ಪ್ರಸ್ತುತವೆನಿಸುತ್ತದೆ. ‘ನೀನು ಏನನ್ನು ಹುಡುಕುತ್ತಿದ್ದೀಯೊ, ಅದೇ ನೀನು. ನೀನು ಹುಡುಕುತ್ತಿರುವುದು ನಿನ್ನನ್ನು ಹುಡುಕುತ್ತಿದೆ’. ಜಗತ್ತಿನಾದ್ಯಂತ ಅನೇಕ ಸಂಸ್ಕೃತಿಗಳಲ್ಲಿ, ವಿವಿಧ ರೂಪಗಳಲ್ಲಿ ಈ ಮಾತು ವಿಶೇಷ ಸ್ಥಾನವನ್ನು ಹಿಡಿದಿದೆ. ಪರ್ಷಿಯನ್ ಭಾಷೆಯಲ್ಲಿರುವ ಮಸ್ನವಿಯಲ್ಲಿ ಅಕ್ಷರಶಃ ಇದೇ ಪದಗಳನ್ನು ಬಳಸಿ ಬರೆದ ಸಾಲುಗಳಿಲ್ಲ. ಆದರೆ ಸರಿಸುಮಾರು ಇದನ್ನೇ ಹೋಲುವ ಒಂದಷ್ಟು ದ್ವಿಪದಿಗಳಿವೆ. ಅವುಗಳನ್ನು ತರ್ಜುಮೆ ಮಾಡುವಾಗ ಸೃಷ್ಟಿಯಾದ ಮಾತುಗಳೇ ಮೇಲೆ ಹೇಳಿದ ಉಕ್ತಿಗಳು. ಒಂದು ರೀತಿಯಲ್ಲಿ ಮಸ್ನವಿಯ ಭಾವಾನುವಾದ ಎನ್ನಬಹುದು ಅದನ್ನು. ಮಸ್ನವಿಯಲ್ಲಿ ರೂಮಿಯವರು ಬಳಸಿದ ರೂಪಕಗಳನ್ನು ಕೈಬಿಟ್ಟು, ಒಂದು ಸಾರ್ವತ್ರಿಕ ಶೈಲಿಯ ವಾಕ್ಯರಚನೆ ಇವುಗಳಲ್ಲಿ ಕಾಣುತ್ತದೆ.

ಮಸ್ನವಿಯಲ್ಲಿ ಹೀಗಿದೆ;
‘ಹರ್ ಚೀಝ್ ಕೆ ದರ್ ಜುಸ್ತನ್ ಆನಿ ಆನಿ’ – ನೀವು ಬಯಸುವ ಎಲ್ಲವೂ ನಿಮ್ಮ ಬಳಿಯೇ ಇದೆ.
ಇದು ವಿಭಿನ್ನ ಅರ್ಥವನ್ನು ಹೊಂದಿದೆ. ಅಪಾರ ಶ್ರಮವಹಿಸಿ ಏನನ್ನೋ ಹುಡುಕುತ್ತಿರುತ್ತೇವೆ. ಆದರೆ, ಅದು ನಮ್ಮಲ್ಲೇ ಇತ್ತೆಂದರೆ ಹುಡುಕಲು ಹಾಕಿದ ಶ್ರಮ ವ್ಯರ್ಥವಾದಂತೆ. ಅದನ್ನು ಸೂಚಿಸುವ ಸಲುವಾಗಿ ರೂಮಿಯವರು ಹೀಗೆ ಹೇಳುತ್ತಾರೆ. ‘ನೀವು ಸರವನ್ನು ಕೊರಳಲ್ಲಿ ಧರಿಸಿ ಅದನ್ನು ಹುಡುಕುತ್ತ ಕೊಠಡಿಯಿಂದ ಕೊಠಡಿಗೆ ಅಲೆದಾಡುತ್ತಿರುವಿರಿ’. ನಿಧಿಯ ಕನಸು ಬಿದ್ದ ಯುವಕನ ಕತೆಯನ್ನು ಹೇಳುತ್ತ ರೂಮಿಯವರು ತನ್ನಲ್ಲೇ ಅಡಗಿರುವ ನಿಧಿಯನ್ನು ಹುಡುಕುವುದು ಬಿಟ್ಟು ಆತ ಯಾವುದೋ ದೂರದ ಊರಿನ ನಿಧಿಯ ಹಿಂದೆ ಹೋಗುವುದನ್ನು ಸೂಚ್ಯವಾಗಿ ಹೇಳುತ್ತಾರೆ. ನೀನೇ ಒಂದು ನಿಧಿ, ನಿನಗಿಂತ ಮಿಗಿಲಾದ ನಿಧಿ ಬೇರೊಂದಿಲ್ಲ ಎಂದು ಹೇಳಿದಂತಿದೆ ಅದು. ‘ನೀನು ಹುಡುಕಿದ ರತ್ನವು ಸಿಕ್ಕಿಬಿಟ್ಟರೆ ಆ ರತ್ನದೊಳಗೊಂದು ರತ್ನವನ್ನು ಹುಡುಕು’ ಎಂದು ಮತ್ತೊಂದು ಕಡೆ ರೂಮಿಯವರು ಎಚ್ಚರಿಸುತ್ತಾರೆ. ಹುಡುಕಾಟ ನಿರಂತರವಾಗಿರಬೇಕು ಎಂದರ್ಥ.

ಮಸ್ನವಿಯಲ್ಲಿ ಇದೇ ಅರ್ಥವಿರುವ ಇನ್ನೊಂದು ದ್ವಿಪದಿಯನ್ನು ನೋಡಿ;
‘ತಶ್ನೆಗಾನ್ ಗರ್ ಆಬ್ ಜೂಯಂದ್ ಅಝ್ ಜಹಾನ್
ಆಬ್ ಜೂಯದ್ ಹಮ್ ಬಹ ಆಲಮ್ ತಶ್ನೆಗಾನ್’ – ‘ಜಗತ್ತಿನಲ್ಲಿ ಬಾಯಾರಿದವರು ನೀರನ್ನು ಹುಡುಕುತ್ತಿದ್ದಾರೆ. ಆದರೆ ನೀರು ಬಾಯಾರಿದವರನ್ನು ಹುಡುಕುತ್ತಿದೆ’.


ಇಲ್ಲಿ ನೀರು ಮತ್ತು ಬಾಯಾರಿದವರ ಸ್ಥಾನದಲ್ಲಿ ನೀವು ದೇವರನ್ನು ಮತ್ತು ಮನುಷ್ಯರನ್ನು ಕಲ್ಪಿಸಿಕೊಳ್ಳಬಹುದು. ಪ್ರೇಮಿಗಳಿಬ್ಬರನ್ನು ಕಲ್ಪಿಸಿಕೊಳ್ಳಬಹುದು. ಅಥವಾ ತೀರಾ ಸಾಮಾನ್ಯವಾದ ಪದಾರ್ಥಗಳನ್ನೂ ಊಹಿಸಬಹುದು. ಮೇಲಿನ ದ್ವಿಪದಿ ಪ್ರೇಮಿಯ ತೀವ್ರ ಹುಡುಕಾಟ ಮತ್ತು ಪ್ರೇಮಿಯ ಆ ಹುಡುಕಾಟಕ್ಕೆ ಪ್ರತಿಯಾಗಿ ಸಿಗುವ ಸ್ಪಂದನೆಯ ರೋಚಕತೆಯನ್ನು ಅನಾವರಣ ಮಾಡುತ್ತದೆ. ನೀವು ಒಂದು ವಸ್ತುವನ್ನು ತೀವ್ರವಾಗಿ ಬಯಸುತ್ತಿರುವಂತೆ ಆ ವಸ್ತುವೂ ತಿರುಗಿ ನಿಮ್ಮನ್ನು ಅಷ್ಟೇ ತೀವ್ರವಾಗಿ ಬಯಸುತ್ತಿದೆ ಎಂಬುದು ಅಲ್ಲಿನ ಆಶಯ.

ಈ ರೀತಿಯ ಪ್ರತಿ ಹುಡುಕಾಟದ ಪ್ರಕ್ರಿಯೆಯು ಸೃಷ್ಟಿಶೀಲ ನಿಯಮ. ರೂಮಿಯವರ ಇದೇ ಉಕ್ತಿಯನ್ನು law of attraction – ಆಕರ್ಷಣಾ ತತ್ವದ ಮೂಲವೆಂದು ವಾದಿಸಿದವರೂ ಇದ್ದಾರೆ.
‘ನೀನು ಹುಡುಕುತ್ತಿರುವುದು ನಿನ್ನನ್ನು ಹುಡುಕುತ್ತಿದೆ’ ಎಂದು ಕೆಲವರು ಅದನ್ನು ತರ್ಜುಮೆ ಮಾಡಿದ್ದಾರೆ. ‘ಹುಡುಕು’ ಎಂಬುದು ಇಲ್ಲಿ ಪ್ರಮುಖ ಪದ. ಇಲ್ಲಿರುವ ಉಲ್ಲೇಖವು ತಾತ್ವಿಕವಾಗಿದೆ, ಅಕ್ಷರಾರ್ಥದಲ್ಲಿ ಅದನ್ನು ತೆಗೆದುಕೊಂಡರೂ ತಪ್ಪಿಲ್ಲ. ಇಲ್ಲಿನ ಆಲಂಕಾರಿಕ ಅಂಶಗಳು ಮುಖ್ಯವಾಗಿ ಇಡೀ ಜಗತ್ತಿನ ಗಮನ ಸೆಳೆಯಬಲ್ಲ ತಾತ್ವಿಕ ಚಿಂತನೆಗಳನ್ನು ಹೊಂದಿವೆ.
‘ಬಾಯಾರಿದವರು ನೀರನ್ನು ಹುಡುಕುವುದು ಮಾತ್ರವಲ್ಲ, ಬಾಯಾರಿದವರಿಗಾಗಿ ನೀರು ಕೂಡ ಹುಡುಕುತ್ತಿರುತ್ತದೆ’ ಎಂಬ ಈ ಉಕ್ತಿಯ ಅರ್ಥವನ್ನು ಗಣಿತದ ಸಮೀಕರಣದ ದೃಷ್ಟಿಕೋನದಿಂದಲೂ ನೋಡಬಹುದು. ಒಂದು ಸಮೀಕರಣಕ್ಕೆ ಎರಡು ಭಾಗಗಳಿರುತ್ತವೆ ಮತ್ತು ಎರಡೂ ಬದಿಗಳಲ್ಲಿ ಅದು ಸಮಾನವಾದ ಮೌಲ್ಯವನ್ನು ಹೊಂದಿರಬೇಕು. ಇದು ಸೂಕ್ಷ್ಮಾತಿಸೂಕ್ಷ್ಮ ಅಣುಗಳಿಂದ ಹಿಡಿದು ಅಖಿಲ ಬ್ರಹ್ಮಾಂಡದ ಸರ್ವ ವಸ್ತುಗಳಿಗೂ ಒಂದೇ ಬಗೆಯಲ್ಲಿ ಅನ್ವಯಿಸುವ ಪರಿಕಲ್ಪನೆ. ಪ್ರತಿಯೊಂದು ಅಣುವೂ ಇನ್ನೊಂದು ಅಣುವಿನ ಹುಡುಕಾಟದಲ್ಲಿರುತ್ತದೆ, ಅವುಗಳು ಪರಸ್ಪರ ಆಕರ್ಷಿತವಾಗುತ್ತವೆ ಮತ್ತು ಪರಿಸ್ಥಿತಿ ಹೊಂದಿಕೊಂಡಾಗ ಅವು ಒಂದಾಗುತ್ತವೆ.

ಈ ಜಗತ್ತಿನಲ್ಲಿ ನಾವು ಅನೇಕ ವಿಷಯಗಳಿಗಾಗಿ ಅನ್ವೇಷಣೆ ಮಾಡಬಹುದು, ಅದು ಪ್ರತಿಯಾಗಿ ನಮ್ಮ ಅನ್ವೇಷಣೆಯಲ್ಲಿರುತ್ತವೆ ಎನ್ನುವುದು ನಮ್ಮ ಮಟ್ಟಿಗೆ ನಿಗೂಢ.
ಮೇಲೆ ಹೇಳಿದ್ದು ಪ್ರಸ್ತುತ ದ್ವಿಪದಿಯ ಲೌಕಿಕ ಅರ್ಥಗಳನ್ನು. ರೂಮಿಯವರು ಬಹುಶಃ ಅದನ್ನು ಪಾರಮಾರ್ಥಿಕ ಅರ್ಥದಲ್ಲಿ ಹೇಳಿರಬಹುದು. ಸೃಷ್ಟಿಯ ಪ್ರೇಮಕ್ಕಿಂತಲೂ ಸೃಷ್ಟಿಕರ್ತನ ಪ್ರೇಮವೇ ಸೂಫಿಗಳ ಮುಖ್ಯ ವಸ್ತುವಾಗಿರುವಾಗ ರೂಮಿಯವರೂ ಅದರಿಂದ ಹೊರತೇನಲ್ಲ. ಸೃಷ್ಟಿಕರ್ತನ ಮೇಲಿನ ಪ್ರೇಮಕ್ಕೆ ಬಾಯಾರಿರುವ ಸೂಫಿಯ ಚಿತ್ರಣ ನಮ್ಮ ಮುಂದೆ ತೇಲಿ ಬರಬೇಕು. ಆ ಪ್ರೇಮದ ಪಾನೀಯವನ್ನು ಸವಿದ ಬಳಿಕ ಆತ ಹುಚ್ಚನಾಗುತ್ತಾನೆ. ಎಲ್ಲವನ್ನೂ ಮರೆತ ಹುಚ್ಚ. ಎಲ್ಲವನ್ನೂ ಎಂದರೆ ಎಲ್ಲವನ್ನೂ, ತನ್ನನ್ನೂ ಸೇರಿಸಿ. ತನ್ನನ್ನು ತಾನು ನಾಶಪಡಿಸುವ ಅನುಭಾವದ ಅಮೋಘ ಸ್ಥಿತಿ ಅದು. ಇದಕ್ಕೆ ಸೂಫೀ ಪರಿಭಾಷೆಯಲ್ಲಿ ‘ಫನಾ’ ಎನ್ನುತ್ತಾರೆ. ಈ ಸ್ಥಿತಿಗೆ ತಲಪಬೇಕಾದರೆ ಮೊದಲು ಹುಡುಕಬೇಕು. ಆ ಹುಡುಕಾಟದ ಮೊದಲ ಹಂತವೇ ತನ್ನನ್ನು ತಾನು ಅರಿಯುವುದು. ಸ್ವಂತದ ಬಗ್ಗೆ ಅರಿವಾದರೆ ಅದು ಸೃಷ್ಟಿಕರ್ತನ ಅರಿವಿನ ತನಕ ಅವನನ್ನು ತಲಪಿಸಿಬಿಡುತ್ತದೆ. ಸೂಫಿ ಸಂತ ಶೈಖ್ ಇಬ್ನ್ ಅರಬಿಯವರ ಪ್ರಸಿದ್ಧ ಮಾತೊಂದಿದೆ; ‘ಮನ್ ಅರಫ ನಫ್‌ಸಹೂ ಫಖದ್ ಅರಫ ರಬ್ಬಹು’ ~ ಯಾರು ತನ್ನ ಬಗ್ಗೆ ಅರಿಯುತ್ತಾನೊ ಅವನು ತನ್ನ ಪ್ರಭುವಿನ ಬಗ್ಗೆ ಅರಿತಿರುತ್ತಾನೆ. ತನ್ನನ್ನು ತಾನು ಅರಿಯುವುದೇ ತನ್ನ ಸೃಷ್ಟಿಕರ್ತನ ಬಗೆಗಿನ ಅರಿವಿನ ಮೂಲ.

ಬಾಯಾರಿದವರನ್ನು ನೀರು ಹುಡುಕುತ್ತಿದೆ ಎಂದರೆ ಆಧ್ಯಾತ್ಮಿಕ ಬಾಯಾರಿಕೆಯಿಂದ ಬಳಲುತ್ತಿರುವ ಸೂಫಿಯನ್ನು ದೈವಿಕ ಪ್ರೇಮದ ಸಾಕ್ಷಾತ್ಕಾರ ಎಂಬ ಪವಿತ್ರ ನೀರು ಕಾಯುತ್ತಿದೆ ಎಂದರ್ಥ. ರೂಮಿಯವರನ್ನು ತಬ್ರೀಝ್ ಹುಡುಕುತ್ತಿದ್ದದ್ದು ಆ ಅರ್ಥದಲ್ಲಿ. ತಬ್ರೀಝ್ ರಿಗೆ ಅನುಭವವಾದ ದೈವಿಕ ಪ್ರೇಮದ ಅನುಭವವನ್ನು ರೂಮಿಯವರಿಗೆ ದಾಟಿಸುವ ಅವಕಾಶ, ಅದನ್ನು ತಬ್ರೀಝ್ ಕಳೆದುಕೊಳ್ಳುವುದು ಸಾಧ್ಯವಿಲ್ಲ. ಆದರೆ, ಅಷ್ಟರ ತನಕ ರೂಮಿಯವರಿಗೆ ಇದರ ಬಗ್ಗೆಯೆಲ್ಲ ತಿಳಿದಿರಲಿಲ್ಲ. ಕೊನ್ಯಾದ ಮಸ್ಜಿದ್ ಒಂದರಲ್ಲಿ ಶಿಷ್ಯಂದಿರಿಗೆ ಪಾಠ ಹೇಳಿ ಕೊಡುತ್ತಿದ್ದ ರೂಮಿಯವರಿಗೆ ಬಹುಶಃ ಅಧ್ಯಾತ್ಮದ ತತ್ವಗಳ ಬಗ್ಗೆ ಚೆನ್ನಾಗಿ ಗೊತ್ತಿದ್ದಿರಬಹುದು. ಅದರ ಥಿಯರಿಗಳ ಬಗ್ಗೆ ಅವರು ಗಂಟೆಗಟ್ಟಲೆ ಪಾಠ ಮಾಡಿದ್ದಿರಬಹುದು. ಉಪನ್ಯಾಸಗಳನ್ನು ನೀಡಿದ್ದಿರಬಹುದು. ಆದರೆ, ತಬ್ರೀಝ್ ಅವರ ಅನುಭಾವದ ಮೋಡಿಗೊಳಗಾದಾಗ ಅವರಿಗೆ ತಾನು ಇಷ್ಟು ದಿನ ಯಾವುದಕ್ಕಾಗಿ ಬಾಯಾರಿದ್ದೆನೋ ಅದು ಸಿಕ್ಕಿತು ಎಂಬ ಭಾವ ಬಂದಿದ್ದಿರಬಹುದು. ಆದರೆ, ಈ ದ್ವಿಪದಿಗಳಲ್ಲಿ ಅದಕ್ಕಿಂತಲೂ ಶಂಸ್ ತಬ್ರೀಝ್ ತನಗಾಗಿ ಕಾಯುತ್ತಿದ್ದ ಅಂಶವನ್ನು ಒತ್ತಿ ಹೇಳುತ್ತ ‘ಹೇ, ಜಲಾಲುದ್ದೀನ್.. ನಿನಗಾಗಿ ಎಷ್ಟು ದಿನಗಳಿಂದ ಕಾಯುತ್ತಿದ್ದೆ’ ಎಂಬ ತಬ್ರೀಝರ ಮಾತಿನ ಮರ್ಮವನ್ನು ಸೂಚಿಸುತ್ತ, ‘ಬಾಯಾರಿದವರಿಗಾಗಿ ನೀರು ಕಾಯುತ್ತಿದೆ’ ಎಂದು ಹೇಳುತ್ತಾರೆ. ಈ ಅರ್ಥದಲ್ಲಿ ಬಾಯಾರಿಕೆ ಎಂದರೆ ಅದು. ಅಧ್ಯಾತ್ಮದ ಬಾಯಾರಿಕೆ.

‘ನೀವು ಹುಡುಕುತ್ತಿರುವುದು ನಿಮ್ಮನ್ನು ಹುಡುಕುತ್ತಿದೆ’ ಎಂಬುದನ್ನು ಹಲವು ವಿಧಗಳಲ್ಲಿ ಅರ್ಥೈಸಬಹುದು. ಅಧ್ಯಾತ್ಮದ ಕನ್ನಡಿಯ ಮೂಲಕ ಈ ಕಾವ್ಯಾತ್ಮಕ ಸಾಲುಗಳನ್ನು ನೋಡಿದರೆ, ಅದು ‘ನೀವು ಹುಡುಕುವ ಎಲ್ಲವೂ ಈಗಾಗಲೇ ನಿಮ್ಮೊಂದಿಗೆ ಇದೆ’ ಎಂಬ ಶ್ರೇಷ್ಠ ತತ್ವಕ್ಕೆ ನಮ್ಮನ್ನು ತಲಪಿಸುತ್ತದೆ. ಈ ವಾಕ್ಯವು ಪ್ರತಿಯೊಬ್ಬರಿಗೂ ವಿಭಿನ್ನ ರೂಪದಲ್ಲಿ ಅನ್ವಯಿಸಬಹುದು. ನೀವು ನಿಜವಾಗಿಯೂ ಏನನ್ನಾದರೂ ಬಯಸಿದರೆ, ಅದನ್ನು ನಿಮ್ಮ ದಾರಿಗೆ ತರಲು ಇಡೀ ವಿಶ್ವವು ಜೊತೆಸೇರಿ ಕೆಲಸ ಮಾಡುತ್ತದೆ ಎಂಬ ಸುಂದರ ತತ್ವವೂ ಇದೇ ತಳಹದಿಯಲ್ಲಿ ಉದ್ಭವಿಸಿದೆಯೆಂದು ಹೇಳಬಹುದು. ‘ದಿ ಆಲ್ಕೆಮಿಸ್ಟ್’ ಎಂಬ ಪ್ರಸಿದ್ಧ ನಾವೆಲ್ ನಲ್ಲಿ ಲೇಖಕ ಪಾವ್ಲೊ ಕೊಯ್ಲೊ ಹೇಳುವ ತತ್ವವೂ ಸರಿಸುಮಾರು ಹೀಗೆಯೇ ಇದೆ – ‘ನೀವು ಏನನ್ನಾದರೂ ಬಯಸಿದರೆ, ಅದನ್ನು ಸಾಧಿಸಲು ಇಡೀ ವಿಶ್ವವು ನಿಮಗೆ ಸಹಾಯ ಮಾಡುತ್ತದೆ’.

ಹುಡುಕುವುದೆಂದರೆ ಬಯಸುವುದೇ ಆಗಿದೆ. ನೂರಾರು ಮೈಲಿಗಳ ಪ್ರಯಾಣವು ಒಂದು ಹೆಜ್ಜೆಯಿಂದ ಶುರುವಾಗುವಂತೆ ಎಂತಹ ಕಠಿಣ ಸಾಧನೆಯಾದರೂ ಅದನ್ನು ಉತ್ಕಟವಾಗಿ ಬಯಸುವುದರೊಂದಿಗೆ ಅದರ ಪಯಣವು ಆರಂಭವಾಗುತ್ತದೆ. ಆ ಪಯಣದಲ್ಲಿ ಆತನ ಸಾಧನೆಗೆ ಪೂರಕವಾಗುವ ಎಲ್ಲವೂ ಆತನಿಗೆ ನಿಗೂಢವಾದ ರೀತಿಯಲ್ಲಿ ಸಹಾಯ ಮಾಡುತ್ತವೆ. ಜಗತ್ತಿನ ಎಲ್ಲವೂ ಹೀಗೆ ಪರಸ್ಪರ ಸಂಬಂಧವನ್ನು ಹೊಂದಿರುವುದನ್ನು ತಿಳಿದುಕೊಳ್ಳಬಹುದು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಇದು Theory of relativity – ಸಾಪೇಕ್ಷ ಸಿದ್ಧಾಂತದ ಇನ್ನೊಂದು ರೂಪವಷ್ಟೆ.

-ಡಾ. ಸಿ.ಎಂ. ಹನೀಫ್ ಅಮ್ಜದಿ


ಡಾ. ಸಿ.ಎಂ. ಹನೀಫ್ ಅಮ್ಜದಿ

ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿ

ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿಯ ಬಗ್ಗೆ, ಅದರ ಇತಿಹಾಸದ ಬಗ್ಗೆ ಮಿತ್ರರಾದ ಪುನೀತ್ ಅಪ್ಪು ಅವರು ಬಹಳಷ್ಟು ಬಾರಿ ಹೇಳಿದ್ದರು. ಮಲಬಾರ್ ಇತಿಹಾಸದ ಬಗ್ಗೆ ಅವರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಅವರ ಮಾತುಗಳನ್ನು ಕೇಳಿದಾಗಲೆಲ್ಲ ಒಮ್ಮೆ ಈ ಮಸೀದಿಗೆ ಭೇಟಿ ನೀಡಬೇಕೆಂದು ಅನಿಸುತ್ತಿತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಮೊನ್ನೆ ಕೋಯಿಕ್ಕೋಡ್ ಭೇಟಿಯ ಸಂದರ್ಭದಲ್ಲಿ ಪುನೀತ್ ಅಪ್ಪು ಹಾಗೂ ಇನ್ನಿತರ ಗೆಳೆಯರೊಂದಿಗೆ ಮಿಶ್ಕಾಲ್ ಮಸೀದಿಗೆ ಹೋಗಲು ಸಾಧ್ಯವಾಯಿತು.

ಮಸೀದಿಗಿಂತ ಮೊದಲು ನಾವು ನೋಡಿದ್ದು ಮಸೀದಿಯ ಮುಂಭಾಗದಲ್ಲಿರುವ ಕುಟ್ಟಿಚ್ಚಿರ ಕೆರೆಯನ್ನು. ಮಿಶ್ಕಾಲ್ ಮಸೀದಿ ನಿರ್ಮಾಣಕ್ಕೆ ಮಣ್ಣು ತೆಗೆದಾಗ ಅಲ್ಲೊಂದು ಸುಂದರವಾದ ಕೆರೆ ನಿರ್ಮಾಣವಾಗಿತ್ತು. ಅದುವೇ ಪ್ರಸಿದ್ಧ ಕುಟ್ಟಿಚ್ಚಿರ ಕೆರೆ. ನಾವು ಹೋದಾಗ ಅಲ್ಲಿ ವಿಪರೀತ ಉರಿ ಬಿಸಿಲಿತ್ತು. ಮಳೆಯ ನಿರೀಕ್ಷೆಯಲ್ಲಿದ್ದ ಗೆಳೆಯರಿಗೆ ನಿರಾಶೆಯಾಗಿತ್ತು.

ಕುಟ್ಟಿಚ್ಚಿರ ಕೆರೆ ವಿಶಾಲವಾಗಿತ್ತು. ಕೆರೆಯಲ್ಲಿ ಕೆಲವರು ಸ್ನಾನ ಮಾಡುತ್ತಿದ್ದರು. ಮಕ್ಕಳು ಈಜುತ್ತಾ, ಇತರರ ಮೇಲೆ ನೀರೆರೆಚುತ್ತಾ ಆಟವಾಡುತ್ತಿದ್ದರು. ಆದರೆ, ಕೆರೆಯ ನೀರು ಎಷ್ಟು ಕೊಳಕಾಗಿತ್ತು ಎಂದರೆ ನೀರಿಗೆ ಇಳಿಯಲು ನಮ್ಮಲ್ಲಿ ಯಾರಿಗೂ ಮನಸ್ಸಾಗಲಿಲ್ಲ. ಮೆಟ್ಟಿಲ ಮೇಲೆ ಕುಳಿತು ಕೆರೆಯ ನೀರಿಗೆ ಕಾಲುಗಳನ್ನು ಇಳಿಬಿಟ್ಟು ‘ಫಿಶ್ ಥೆರಪಿ’ ಮಾಡಿಸಿಕೊಳ್ಳುವ ಆಸೆಯಿದ್ದರೂ ನೀರನ್ನು ನೋಡಿದಾಗ ಯಾಕೋ ಬೇಡವೆನಿಸಿತು. ದಟ್ಟ ವಾಸನೆಗೆ ಮೂಗು ಮುಚ್ಚಿ ನಡೆಯಬೇಕಾದ ಪರಿಸ್ಥಿತಿಯಿತ್ತು. ಮೀನುಗಳು‌ ಸತ್ತು ಮೂಲೆಯಲ್ಲಿ ರಾಶಿಬಿದ್ದಿದ್ದವು.

ಜೊತೆಗಿದ್ದ ಗೆಳೆಯ ಮುನವ್ವರ್ ಜೋಗಿಬೆಟ್ಟು ಕೆರೆಯನ್ನು ನೋಡುತ್ತಾ ಆಳವಾದ ಯೋಚನೆಗೆ ಬಿದ್ದಿದ್ದರು. ಬಹುಶಃ ಕೆರೆಯ ಪರಿಸರವನ್ನಿಟ್ಟುಕೊಂಡು ಹೊಸ ಕಥೆ ಬರೆಯುವ ಕುರಿತು ಯೋಚಿಸುತ್ತಿದ್ದರೇನೋ? ಮಿತ್ರರಾದ ಯಂಶ ಬೇಂಗಿಲ ಮತ್ತು ಸಿನಾನ್ ಇಂದಬೆಟ್ಟು ಅವರು ಪುನೀತ್ ಅಪ್ಪುರವರನ್ನು ತಮ್ಮ ಶಾಶ್ವತ ಗೈಡ್ ಮಾಡಿಕೊಂಡಿದ್ದರು.‌ ನನಗಂತೂ ಸತ್ತ‌ ಮೀನುಗಳ ದಟ್ಟ ವಾಸನೆಯಿಂದ ಕೂಡಿದ್ದ ಆ ಕೆರೆಯನ್ನು ನೋಡುವುದೇ ಹಿಂಸೆಯೆನಿಸುತ್ತಿತ್ತು. ಭ್ರಷ್ಟಾಚಾರದಿಂದ ಕೊಳೆತು ಹೋಗಿರುವ ಇಂದಿನ ವ್ಯವಸ್ಥೆಗೆ ಆ ಕೆರೆ ರೂಪಕದಂತಿತ್ತು.‌

ಕೆರೆಯ ಸುತ್ತಲಿನ ಆವರಣದಲ್ಲಿ ಸಾಮೂದಿರಿ ರಾಜರ ಕಾಲದ ಮಲಬಾರ್ ಇತಿಹಾಸವನ್ನು ಕೆತ್ತಲಾಗಿದೆ. ಅರಬ್ ವ್ಯಾಪಾರಿಗಳ ಕೇರಳ ಪ್ರವೇಶ, ಪೋರ್ಚುಗೀಸ್ ನಾವಿಕರು, ಸಾಮೂದಿರಿ ರಾಜರು ಹಾಗೂ ಕುಂಞಾಲಿ ಮರಕ್ಕಾರ್ ಮೊದಲಾದವರ ಇತಿಹಾಸ, ಸುನ್ನತಿ, ಒಪ್ಪನಪ್ಪಾಟ್ಟ್ ಮೊದಲಾದ ಮಲಬಾರಿನ ಇಸ್ಲಾಮಿಕ್ ಸಂಸ್ಕೃತಿಯನ್ನು ಗೋಡೆಯ ಮೇಲಿನ ಕಲಾಕೃತಿಗಳಲ್ಲಿ ಸುಂದರವಾಗಿ ಕೆತ್ತಲಾಗಿದೆ. ಪುನೀತ್ ಅಪ್ಪು ಅವರು ಆ ಇತಿಹಾಸಗಳನ್ನು ವಿವರಿಸುತ್ತಲೇ ತಮ್ಮ ಮೊಬೈಲ್ ನಿಂದ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಇತಿಹಾಸ ಜ್ಞಾನ ಬೆರಗು ಹುಟ್ಟಿಸುತ್ತಿತ್ತು. ಅವರು ಜೊತೆಯಲ್ಲಿದ್ದುದರಿಂದ ನಮಗೆ ಪ್ರತ್ಯೇಕ ಗೈಡ್‌ನ ಅವಶ್ಯಕತೆ ಬೀಳಲಿಲ್ಲ. ವಕೀಲಿ ವೃತ್ತಿಯಲ್ಲಿರುವುದರಿಂದಲೋ ಏನೋ, ಮಾತುಗಾರಿಕೆ ಅವರಿಗೆ ಚೆನ್ನಾಗಿ ಒಲಿದಿದೆ.

ಬಿಸಿಲಿನ ಝಳ ಹೆಚ್ಚಾಗುತ್ತಲೇ ಹೋದಾಗ ನಾವು ಕೆರೆಯನ್ನು ಅದರ ಪಾಡಿಗೆ ಬಿಟ್ಟು ನೇರವಾಗಿ ಮಿಶ್ಕಾಲ್ ಮಸೀದಿಯ ಕಡೆಗೆ ಹೊರಟೆವು.

ಆಕಾಶಕ್ಕೆ ಕಲಶವಿಟ್ಟಂತಿದ್ದ ಮಿಶ್ಕಾಲ್ ಮಸೀದಿ ನಿರ್ಮಲವಾಗಿ ಕಾಣಿಸಿತು. ಮಸೀದಿಯ ಸುತ್ತಲೂ ಆವರಿಸಿದ್ದ ಮೌನ, ಅದರ ಪುರಾತನ ಸೌಂದರ್ಯ ನಮ್ಮಲ್ಲಿ ವಿಶಿಷ್ಟ ಭಾವನೆಗಳನ್ನು ಉದ್ದೀಪಿಸುತ್ತಿತ್ತು. ಮಸೀದಿಯಿಂದ ಕಣ್ಣು ಕೀಳುವುದೇ ಸಾಧ್ಯವಾಗುತ್ತಿರಲಿಲ್ಲ. ಅದರ ಸಹಜ ಸೌಂದರ್ಯಕ್ಕೆ‌ ನನ್ನ ಮನಸು ಮಾರು ಹೋಗಿತ್ತು.‌

ಮಸೀದಿಯ ಮುಖ್ಯದ್ವಾರದ ಮೂಲಕವೇ ನಾವು ಆವರಣಕ್ಕೆ ಪ್ರವೇಶಿಸಿದೆವು. ಸಾಲಾಗಿ ನಿಂತಿರುವ ನೀಲಿ ಬಣ್ಣದ ಹತ್ತಾರು ಕಮಾನುಗಳು ತಕ್ಷಣವೇ ನಮ್ಮ ಗಮನ ಸೆಳೆದವು. ಹಿಂದೂ–ಮುಸ್ಲಿಂ ವಾಸ್ತುಶಿಲ್ಪ ಶೈಲಿಗಳ ಸಂಗಮದಲ್ಲಿ ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.‌ ಈ ಮಸೀದಿಯನ್ನು ಕ್ರಿ.ಶ. 1340ರ ಸುಮಾರಿಗೆ ನಿರ್ಮಿಸಲಾಯಿತು. ಒಮ್ಮೆ ಸುಮಾರು ನಲವತ್ತು ಹಡಗುಗಳ ಮಾಲೀಕರಾಗಿದ್ದ ಯೆಮನ್ ಮೂಲದ ವ್ಯಾಪಾರಿ ನೆಖೂದ ಮಿಶ್ಕಾಲ್, ವ್ಯಾಪಾರಕ್ಕಾಗಿ ಪ್ರಸಿದ್ಧವಾಗಿದ್ದ ಕೋಯಿಕ್ಕೋಡಿಗೆ ಬಂದರು. ಅವರಿಗೆ ಅಲ್ಲಿ ದೂರದೂರಿನಿಂದ ಬರುವ ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಸೂಕ್ತ ತಾಣವೊಂದರ ಕೊರತೆ ಕಂಡುಬಂತು. ಕೂಡಲೇ ಅವರು ಪ್ರಯಾಣಿಕರು ತಂಗಲು ಹಾಗೂ ಆರಾಧನೆ ನಡೆಸಲು ಒಂದು ಕೇಂದ್ರವನ್ನು ನಿರ್ಮಿಸುವ ಸಂಕಲ್ಪ ಮಾಡಿದರು. ಅದಕ್ಕಾಗಿ ಸಾಮೂದಿರಿ ರಾಜರ ಬಳಿ ತೆರಳಿ ಜಾಗವನ್ನು ಕೋರಿದರು. ಮಾಪಿಳ್ಳ ಸಮುದಾಯದ ಮುಖಂಡರು ಹಾಗೂ ತೆಕ್ಕೆಪ್ಪುರದ ಕೋಯಮಾರರೊಂದಿಗೆ ಸಮಾಲೋಚನೆ ನಡೆಸಿದ ಸಾಮೂದಿರಿ ರಾಜರು ಕುಟ್ಟಿಚ್ಚಿರದಲ್ಲಿ ಜಾಗವನ್ನು ನೀಡಿದರು. ನೆಖೂದ ಮಿಶ್ಕಾಲ್ ಅಲ್ಲಿ ಮಸೀದಿಯನ್ನು ನಿರ್ಮಿಸಿದರು. ಅದುವೇ ಇಂದಿನ ಮಿಶ್ಕಾಲ್ ಮಸೀದಿ.

ಮಿಶ್ಕಾಲ್ ಮಸೀದಿ ಕೇರಳದ ಅತ್ಯಂತ ಪ್ರಾಚೀನ ಮತ್ತು ಐತಿಹಾಸಿಕ ಮಸೀದಿಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಮಸೀದಿಗಳಲ್ಲಿ ಕಾಣುವ ಎತ್ತರದ ಮಿನಾರಗಳು ಇಲ್ಲದಿರುವುದು ಇದರ ವಿಶೇಷತೆ. ಕೇರಳದ ಸಾಂಪ್ರದಾಯಿಕ ದೇವಾಲಯಗಳ ವಾಸ್ತುಶಿಲ್ಪದ ಪ್ರಭಾವ ಇದರ ನಿರ್ಮಾಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮರದ ಕೆತ್ತನೆಗಳು, ಇಳಿಜಾರು ಛಾವಣಿ ಮತ್ತು ಬಹುಮಹಡಿ ವಿನ್ಯಾಸವು ಇದನ್ನು ಭಾರತದ ಇಸ್ಲಾಮಿಕ್ ವಾಸ್ತುಶಿಲ್ಪದ ವಿಶಿಷ್ಟ ಮಾದರಿಯನ್ನಾಗಿ ಮಾಡಿದೆ.

ಮಸೀದಿಯ ಒಳಭಾಗದ ವಿನ್ಯಾಸವಂತೂ ಅದ್ಭುತವಾಗಿತ್ತು.‌ ನಾವು ಮಸೀದಿಯನ್ನು ನೋಡುತ್ತಿರಬೇಕಾದರೆ ಮುಕ್ರಿಕಾ ನಮ್ಮ‌ ಹಿಂದೆಯೇ ಬಂದರು.‌ ನಾವು ಅಲ್ಲಲ್ಲಿ‌ ನಿಂತು ಪೋಟೋ ತೆಗೆಸಿಕೊಳ್ಳುತ್ತಿದ್ದೆವು. ಪುನೀತ್ ಅಪ್ಪು ಅವರು ಗೈಡ್ ಸ್ಥಾನದಿಂದ‌ ಫೋಟೋಗ್ರಫಿಗೆ ಧುಮುಕಿದ್ದರು. ಛಾಯಾಗ್ರಹಣದ ಬಗ್ಗೆ ಅವರಿಗೆ ಅವರದೇ ಆದ ವಿಶಿಷ್ಟ ಜ್ಞಾನ ಹಾಗೂ ಕಲ್ಪನೆಗಳಿದ್ದವು.‌ ಯಂಶ ಬೇಂಗಿಲರಿಗೆ ಈಗಲೂ ಉಳಿದಿರುವ ಮಸೀದಿಯ ಸುಟ್ಟ ಭಾಗವನ್ನು ನೋಡುವ ತವಕ.‌ ಮುಕ್ರಿಕಾ ಗೈಡ್ ಆಗಿ ನಮ್ಮ ಜೊತೆಗೆ ನಿಂತರು.‌ ಪೋರ್ಚುಗೀಸರ ಕ್ರೌರ್ಯದ ಕುರುಹಾಗಿ ಆ ಸುಟ್ಟ ಬೀಮ್ ಇಂದಿಗೂ ಅಲ್ಲಿಯೇ ಉಳಿದಿದೆ.

ಅದರ ಇತಿಹಾಸ ಹೀಗಿದೆ; 1498ರ ಮೇ 20ರಂದು ಪೋರ್ಚುಗೀಸ್ ನಾವಿಕ ವಾಸ್ಕೋಡ ಗಾಮ ಕೋಯಿಕ್ಕೋಡ್ ಸಮೀಪದ ಕಾಪ್ಪಾಡ್ ಕರಾವಳಿಗೆ ತಲುಪಿದನು. ಯುರೋಪಿನಿಂದ ಭಾರತಕ್ಕೆ ಸಮುದ್ರಮಾರ್ಗವನ್ನು ಕಂಡುಹಿಡಿಯುವುದು ಅವನ ಪ್ರಮುಖ ಉದ್ದೇಶವಾಗಿತ್ತು. ಜೊತೆಗೆ ಅರಬ್ ವ್ಯಾಪಾರಿಗಳ ನಿಯಂತ್ರಣದಲ್ಲಿದ್ದ ಮಸಾಲೆ ವ್ಯಾಪಾರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಮತ್ತು ಹಿಂದೂ ಮಹಾಸಾಗರದಲ್ಲಿ ಪೋರ್ಚುಗೀಸ್ ಪ್ರಭುತ್ವ ಸ್ಥಾಪಿಸುವ ಉದ್ದೇಶವೂ ಅವರಿಗಿತ್ತು. ಆರಂಭದಲ್ಲಿ ಸಾಮೂದಿರಿಯೊಂದಿಗೆ ವ್ಯಾಪಾರ ಸಂಬಂಧ ಬೆಳೆಸಲು ಪ್ರಯತ್ನಿಸಿದರೂ, ನಂತರ ವ್ಯಾಪಾರ ಹಿತಾಸಕ್ತಿಗಳ ಸಂಘರ್ಷದಿಂದ ಪೋರ್ಚುಗೀಸರು ಮತ್ತು ಮಲಬಾರಿನ ಸ್ಥಳೀಯ ಶಕ್ತಿಗಳ ನಡುವೆ ಘರ್ಷಣೆಗಳು ಆರಂಭವಾದವು.

ಮಲಬಾರ್ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದ ಇತಿಹಾಸಕಾರ ಸೆಬಾಸ್ಟಿಯನ್ ಆರ್. ಪೆರಂಜೆ ಅವರ ಅಭಿಪ್ರಾಯದಂತೆ, ಮಲಬಾರಿನಲ್ಲಿ ಪೋರ್ಚುಗೀಸರ ಹೋರಾಟವು ಕೇವಲ ಧಾರ್ಮಿಕ ಸಂಘರ್ಷವಾಗಿರಲಿಲ್ಲ; ಅದು ಹಿಂದೂ ಮಹಾಸಾಗರದ ವ್ಯಾಪಾರ ಮಾರ್ಗಗಳು ಮತ್ತು ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣಕ್ಕಾಗಿ ನಡೆದ ರಾಜಕೀಯ ಹಾಗೂ ಆರ್ಥಿಕ ಪೈಪೋಟಿಯ ಭಾಗವಾಗಿತ್ತು. ಇದೇ ಕಾರಣದಿಂದ ಕೋಯಿಕ್ಕೋಡಿನ ಸಾಮೂದಿರಿಯೂ, ಅರಬ್–ಮಾಪಿಳ್ಳ ವ್ಯಾಪಾರಿಗಳೂ ಪೋರ್ಚುಗೀಸರ ಪ್ರಮುಖ ಎದುರಾಳಿಗಳಾಗಿ ಮಾರ್ಪಟ್ಟರು.

ಮಲಬಾರಿನ ಅರಬ್–ಮಾಪಿಳ್ಳ ವ್ಯಾಪಾರ ಜಾಲವನ್ನು ದುರ್ಬಲಗೊಳಿಸಿ, ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣವನ್ನು ತಮ್ಮ ಕೈಗೆ ಪಡೆಯುವುದು ಪೋರ್ಚುಗೀಸರ ಪ್ರಮುಖ ಗುರಿಯಾಗಿತ್ತು. ಇದರಿಂದ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳೊಂದಿಗೆ ಹಾಗೂ ಸಾಮೂದಿರಿಯ ಆಡಳಿತದೊಂದಿಗೆ ಸಂಘರ್ಷಗಳು ತೀವ್ರಗೊಂಡವು.

ಈ ಸಂಘರ್ಷಗಳ ನಡುವೆಯೇ, 1510ರ ಜನವರಿ 3ರಂದು (ರಂಝಾನ್ 22) ಅಫೊನ್ಸೊ ಡಿ ಅಲ್ಬುಕರ್ಕ್ ನೇತೃತ್ವದಲ್ಲಿ ಪೋರ್ಚುಗೀಸರು ಕುಟ್ಟಿಚ್ಚಿರದ ಮೇಲೆ ದಾಳಿ ನಡೆಸಿದರು. ಮಾಪಿಳ್ಳ ಸಮುದಾಯದ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದ ಮಿಶ್ಕಾಲ್ ಮಸೀದಿಯನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಿದರು. ಇದು ಕೇವಲ ಒಂದು ಕಟ್ಟಡದ ಮೇಲಿನ ದಾಳಿಯಾಗಿರಲಿಲ್ಲ; ಕೋಯಿಕ್ಕೋಡಿನ ಮುಸ್ಲಿಂ ವ್ಯಾಪಾರಿ ಸಮುದಾಯದ ಪ್ರಭಾವವನ್ನು ಕುಗ್ಗಿಸುವ ಮತ್ತು ಸ್ಥಳೀಯ ಜನರಲ್ಲಿ ಭಯ ಹುಟ್ಟಿಸುವ ರಾಜಕೀಯ ಸಂದೇಶವೂ ಅದರ ಹಿಂದೆ ಅಡಗಿತ್ತು ಎಂದು ಇತಿಹಾಸಕಾರರು ಸೂಚಿಸುತ್ತಾರೆ.

ಸಾಮೂದಿರಿಯ ಅಧೀನದಲ್ಲಿದ್ದ ಮುಸ್ಲಿಮರು ಮತ್ತು ನಾಯರ್‌ಗಳನ್ನು ಒಳಗೊಂಡ ಸೇನೆ ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸಿತು. ಹಿಂದೂಗಳಾಗಿದ್ದ ಸಾಮೂದಿರಿಗಳು ಮುಸ್ಲಿಮರ ಮಸೀದಿಯ ರಕ್ಷಣೆಗೆ ಸರ್ವ ಪ್ರಯತ್ನಗಳನ್ನು ಮಾಡಿದರು. ಆದರೆ, ಮಸೀದಿಯ ಹಲವು ಭಾಗಗಳು ಸುಟ್ಟು ಹೋದವು.‌

 ಕುಟ್ಟಿಚ್ಚಿರದ ಜನರಿಗೆ ಮರೆಯಲಾಗದ ಆ ಉಪವಾಸದ ದಿನಗಳ ಕರಾಳ ನೆನಪಿನ ಗುರುತುಗಳು ಇಂದಿಗೂ ಮಸೀದಿಯ ಮೇಲ್ಮಹಡಿಯ ಸ್ತಂಭಗಳಲ್ಲಿ ಕಾಣಿಸುತ್ತವೆ.

ವಸಾಹತುಶಾಹಿಯ ವಿರುದ್ಧ ಮಲಬಾರಿನ ಎರಡು ಪ್ರಬಲ ಸಮುದಾಯಗಳು ಒಂದಾಗಿ ಹೋರಾಡಿದ ಪರಿಣಾಮವಾಗಿಯೇ 1571ರಲ್ಲಿ ಚಾಲಿಯಂ ಕೋಟೆ ಸಾಮೂದಿರಿಯ ವಶಕ್ಕೆ ಬಂದಿತು. ಹಾನಿಗೊಂಡಿದ್ದ  ಮಿಶ್ಕಾಲ್ ಮಸೀದಿಯನ್ನು ಚಾಲಿಯಂ ಕೋಟೆಯ ಮರದ ಸಾಮಗ್ರಿಗಳಿಂದ ಸಾಮೂದಿರಿಗಳು ಪುನರ್‌ನಿರ್ಮಿಸಿ‌ಕೊಟ್ಟರು. ಹಿಂದೂ ಮುಸ್ಲಿಮರ ನಡುವೆ ಬಿರುಕು ಮೂಡಿಸಿ, ಹಿಂದೂ ಮಹಾಸಾಗರದ ವ್ಯಾಪಾರ ಮಾರ್ಗಗಳು ಮತ್ತು ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣವನ್ನು ಸುಲಭವಾಗಿ ಪಡೆದುಕೊಳ್ಳುವ ಪೋರ್ಚುಗೀಸರ ಹುನ್ನಾರಕ್ಕೆ ಸಾಮೂದಿರಿ ರಾಜರು ಹಾಗೂ ಕುಂಞಾಲಿ ಮರಕ್ಕಾರ್ ಯೋಧರು ಅಡ್ಡಿಯಾದರು. ಇವರಿಬ್ಬರ ನಡುವಿನ ಬಾಂಧವ್ಯ ಪೋರ್ಚುಗೀಸರ ಪಾಲಿಗೆ ದುಃಸ್ವಪ್ನವಾಗಿತ್ತು.

ವಿಶಾಲವಾದ ತೆರೆದ ಪ್ರದೇಶದಲ್ಲಿ ಎತ್ತರವಾಗಿ ನಿಂತಿರುವ ಮಿಶ್ಕಾಲ್ ಮಸೀದಿಯ ಅಡಿಪಾಯವನ್ನು ಚೌಕಾಕಾರದ ಕಲ್ಲುಗಳಿಂದ ನಿರ್ಮಿಸಲಾಗಿದೆ. ನಾಲ್ಕು ದಿಕ್ಕುಗಳಲ್ಲೂ ವರಾಂಡ ಹೊಂದಿರುವ ಅಪರೂಪದ ಮಸೀದಿಗಳಲ್ಲಿ ಇದೂ ಒಂದು. ನಾಲ್ಕು ಬದಿಗಳಲ್ಲೂ ಅರ್ಧವೃತ್ತಾಕಾರದ ಬಾಗಿಲುಗಳಿವೆ. ಸುತ್ತುಗೋಡೆಗಳು ಮತ್ತು ಮರದ ಕಂಬಗಳು ಮೇಲ್ಛಾವಣಿಯನ್ನು ತೂಗಿ ನಿಲ್ಲಿಸುತ್ತವೆ.

ನಾವು ಮಸೀದಿಯ ಪ್ರಾಂಗಣದಲ್ಲಿದ್ದ ಕೊಳದ ಹತ್ತಿರ ಹೋದೆವು.‌ ಕೊಳದ ನೀರು ತಣ್ಣಗಿತ್ತು. ಬಿಸಿಲಲ್ಲಿ ಬೆಂದು ಹೋಗಿದ್ದ ಮುಖಕ್ಕೆ ತಣ್ಣೀರು ಚಿಮುಕಿಸಿದಾಗ ಹೊಸ ಉತ್ಸಾಹ ಮೂಡಿತು.‌ ಕೊಳದ ಮೇಲೆ ಕಾಂಕ್ರೀಟ್ ದೋಣಿಯನ್ನು ನಿಲ್ಲಿಸಿದ್ದರು. ಅದರೊಳಗೆ ಕೋಲಿನ ಪ್ಲಾಸ್ಟಿಕ್ ಮಗ್ ಗಳನ್ನು ಕಟ್ಟಿಟ್ಟಿದ್ದರು. ಅದರಿಂದ ನೀರು ಬಾಚಿ ಕಾಲು ತೊಳೆದು,‌ ಮೆಟ್ಟಿಲು ಹತ್ತಿ ಮೇಲ್ಭಾಗಕ್ಕೆ ಹೋದೆವು. ಕೆಳಗಿನ ಅಂತಸ್ತು ಬಿಟ್ಟರೆ, ಮೇಲಿನ ಮೂರು ಅಂತಸ್ತನ್ನೂ ಸಂಪೂರ್ಣವಾಗಿ ಮರದಿಂದಲೇ ನಿರ್ಮಿಸಲಾಗಿತ್ತು.

ವಿಶಿಷ್ಟ ವಾಸ್ತುಶಿಲ್ಪವೇ ಮಿಶ್ಕಾಲ್ ಮಸೀದಿಯ ಸೌಂದರ್ಯವನ್ನು ಹೆಚ್ಚಿಸಿದೆ. ಗೋಡೆಗಳನ್ನು ದಪ್ಪದ ಕೆಂಪು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಸುಣ್ಣದ ಮಿಶ್ರಣವನ್ನು ಕಲ್ಲಿನ ಕೆಲಸಕ್ಕೂ ಲೇಪನಕ್ಕೂ ಬಳಸಲಾಗಿದೆ. ಇಳಿಜಾರು ಛಾವಣಿ ಮತ್ತೊಂದು ವಿಶೇಷತೆ. ಮರದ ಕಂಬಗಳನ್ನು ವಿಶೇಷ ರೀತಿಯಲ್ಲಿ ಜೋಡಿಸಿ, ಅದರ ಮೇಲೆ ಹಲಗೆಗಳನ್ನು ಅಳವಡಿಸಿ ಮಂಗಳೂರು ಹೆಂಚುಗಳನ್ನು ಹಾಸಲಾಗಿದೆ. ಈ ಹೆಂಚುಗಳನ್ನು ಸೂಕ್ಷ್ಮವಾಗಿ ಗಮನಿಸಿ ಪೋಟೋಗಳನ್ನು ತೆಗೆಯುತ್ತಿದ್ದ ಪುನೀತ್ ಅಪ್ಪು ಅವರು ಅದರ ಮೇಲಿದ್ದ ಇಸವಿ ಹಾಗೂ ಕಂಪನಿಯ ಹೆಸರುಗಳನ್ನು ನಮಗೆ ತೋರಿಸಿದರು.‌‌

ಮಸೀದಿಯ ಮೇಲಿನ ಮೂರು ಮಹಡಿಗಳನ್ನು ಸಂಪೂರ್ಣವಾಗಿ ಮರದಿಂದ ನಿರ್ಮಿಸಲಾಗಿದೆ. ಮಸೀದಿಯ ಒಳಗೆ ಮೇಲ್ಮಹಡಿಗಳನ್ನು ಸಂಪರ್ಕಿಸುವ ಎರಡು ತೇಗದ ಕಂಬಗಳಿವೆ. ಚೌಕಾಕಾರ ಮತ್ತು ಅಷ್ಟಕೋನಾಕಾರದ ವಿನ್ಯಾಸಗಳಲ್ಲಿ ಪರ್ಯಾಯವಾಗಿ ರೂಪುಗೊಂಡಿರುವ ಈ ಕಂಬಗಳಲ್ಲಿ ಕೆಳಗಿನಿಂದ ಮೇಲಿನವರೆಗೆ ಸುಂದರ ಕೆತ್ತನೆಗಳಿವೆ.

ಮೇಲ್ಮಡಿಯನ್ನು ನೋಡಿ ಕೆಳಗಿಳಿದ ನಮಗೆ ಮುಕ್ರಿಕಾ ಪಲ್ಲಕ್ಕಿಯನ್ನು ತೋರಿಸಿದರು.‌ ಹಿಂದೆ ಖಾಝಿಗಳು ಸಂಚರಿಸಲು ಬಳಸುತ್ತಿದ್ದ ಪಲ್ಲಕ್ಕಿಯದು. ಆ ಪಲ್ಲಕ್ಕಿಯನ್ನು ಹೊರಲು ಮೂವರು ಕೆಲಸಗಾರರು ಇರುತ್ತಿದ್ದರು. ಇಬ್ಬರು ಪಲ್ಲಕ್ಕಿಯನ್ನು ಹೊತ್ತುಕೊಂಡು ನಡೆಯುವಾಗ ಇನ್ನೊಬ್ಬ ಅವರಿಗೆ ಬದಲಿಯಾಗಿ ಅವರೊಂದಿಗೆ ನಡೆಯುತ್ತಿದ್ದನು ಎಂದು ಮುಕ್ರಿಕಾ‌ ಹೇಳಿದರು. ಪಲ್ಲಕ್ಕಿಯ ಮೇಲೆ‌ ಸುಂದರವಾದ ಚಿತ್ರಗಳನ್ನು ಬಿಡಿಸಿದ್ದರು.‌ ಅದರಲ್ಲೊಂದು ಚಿತ್ರ ನನ್ನ ಗಮನ ಸೆಳೆಯಿತು. ಅದೊಂದು ಹೂದಾ‌ನಿಯ ಚಿತ್ರ.‌‌ ಹೂದಾನಿಯಿಂದ ಮೂರು ಹೂವುಗಳು ಮತ್ತು ಸುರುಳಿ ಆಕಾರದ ಎಲೆಗಳು ಮೇಲಕ್ಕೆ ಚಾಚಿಕೊಂಡಿವೆ.

ಹೂದಾನಿಯ ಮಧ್ಯಭಾಗದಲ್ಲಿ ವೃತ್ತಾಕಾರದ ವಿನ್ಯಾಸ ಇದೆ.‌ ನಾಲ್ಕು ಮೂಲೆಗಳಲ್ಲೂ ಅರ್ಧ ಸೂರ್ಯ ಅಥವಾ ಕಮಲದ ದಳಗಳಂತಿರುವ ಆಲಂಕಾರಿಕ ಚಿತ್ತಾರವನ್ನು ಬಿಡಿಸಲಾಗಿದೆ.‌ ಚಿತ್ರವನ್ನು ಗಾಢ ಕಂದು ಬಣ್ಣದ ಮರದ ಫಲಕದ ಮೇಲೆ ಹಳದಿ, ಹಸಿರು ಮತ್ತು ಗುಲಾಬಿ ಬಣ್ಣಗಳಿಂದ ಚಿತ್ರಿಸಲಾಗಿದೆ. ನಾನು ಅದರ ಪೋಟೋಗಳನ್ನು‌ ಕ್ಲಿಕ್ಕಿಸಿದೆ.‌

 ಮುಅಝಿನ್ ನಮ್ಮನ್ನು ಮಸೀದಿಯ ಇನ್ನೊಂದು ಭಾಗಕ್ಕೆ ಕರೆದೊಯ್ದರು. ಅಲ್ಲಿ ಅನೇಕ ಐತಿಹಾಸಿಕ ವಸ್ತುಗಳು ಇದ್ದವು. ಕತ್ತಲಲ್ಲಿ ಹಳೆಯ ಅಲಮಾರವಿತ್ತು. ಅದರಲ್ಲಿ 600 ವರ್ಷಗಳಷ್ಟು ಹಳೆಯ ಗ್ರಂಥಗಳಿದ್ದವು. ಅಲಮಾರದಿಂದ ಒಂದು ಗ್ರಂಥವನ್ನು ತೆಗೆದು ಮುಕ್ರಿಕಾ ಇದು 600 ವರ್ಷಗಳಷ್ಟು ಹಳೆಯ, ಕೈಯಲ್ಲಿ ಬರೆದ ಗ್ರಂಥವೆಂದು ತೋರಿಸಿದರು.‌ ಯಾಕೋ ನಮಗೆ ನಂಬುವುದು ಕಷ್ಟವಾಯಿತು. ಮುನವ್ವರ್ ಅದರ ಮೇಲೆ ಮೊಬೈಲ್ ಟಾರ್ಚ್ ಲೈಟ್ ಹಾಕಿ ನೋಡಿ, ‘ಇಮಾಮ್ ಗಝ್ಝಾಲಿಯವರು ಬರೆದಿರುವ ‘ಇಹ್ಯಾ ಉಲೂಮುದ್ದೀನ್’ ಎಂದರು. 

ನಮ್ಮ ಮುಂದಿದ್ದ ಮೇಜಿನ ಮೇಲೆ ಒಂದು ತೆಂಗಿನ ಕಾಯಿಯನ್ನು ಇಟ್ಟಿದ್ದರು.‌ ಅದು ಸುಮಾರು ಇನ್ನೂರು ವರ್ಷಗಳಷ್ಟು ಹಳೆಯದ್ದೆಂದು ಮುಕ್ರಿಕಾ ಹೇಳಿದರು. ಅದನ್ನೂ ನಂಬಲು ನಮ್ಮಿಂದ ಸಾಧ್ಯವಾಗಲಿಲ್ಲ.‌ ಅಲ್ಲೇ ಕೆಳಗೆ ಬೆಂಚಿನ ಮೇಲೆ ಚಪ್ಪಲಿಗಳಿದ್ದವು. ಅವು ಯಾರದ್ದೆಂದು ಕೇಳಿದಾಗ ಸಾಮೂದಿರಿ ರಾಜರ ಕಾಲದದ್ದೆಂದು ಉತ್ತರ ಬಂತು.‌

ಕೋಣೆಯ ಒಂದು ಮೂಲೆಯಲ್ಲಿದ್ದ ನಗಾರಿಯೊಂದು ನಮ್ಮ ಗಮನ ಸೆಳೆಯಿತು. ಸ್ಥಳೀಯರು ಇದನ್ನು ‘ತಾಂಬಾರ್’ ಎನ್ನುತ್ತಾರಂತೆ. ಮೊದಲ ನೋಟಕ್ಕೆ ಅದೊಂದು ಬೃಹತ್ ಡೋಲಿನಂತೆ ಕಂಡರೂ, ಅದರ ಹಿಂದೆ ಒಂದು ಕಾಲಘಟ್ಟದ ಸಾಮಾಜಿಕ ಇತಿಹಾಸವೇ ಅಡಗಿದೆ ಎನಿಸಿತು. ವಿಶೇಷ ಸಂದರ್ಭಗಳಲ್ಲಿ ಚಂದ್ರ ದರ್ಶನವಾದ ಸುದ್ದಿ ಹಾಗೂ ಈದ್ ಹಬ್ಬದ ಘೋಷಣೆಯನ್ನು ಊರಿಗೆ ತಿಳಿಸಲು ಈ ತಾಂಬಾರ್ ಬಡಿಯುತ್ತಿದ್ದರು. ಆಧುನಿಕ ಸಂವಹನ ವ್ಯವಸ್ಥೆಗಳೇ ಇಲ್ಲದ ಕಾಲದಲ್ಲಿ ತಾಂಬಾರಿನ ಧ್ವನಿಯೇ ಕುಟ್ಟಿಚ್ಚಿರದ ಜನರಿಗೆ ಅಧಿಕೃತ ಸುದ್ದಿಯಾಗಿತ್ತು. ರಂಝಾನಿನ ಆರಂಭದ ಸಂತೋಷವೂ, ಈದ್ ಹಬ್ಬದ ಉಲ್ಲಾಸವೂ, ಅನೇಕ ಧಾರ್ಮಿಕ ಕಾರ್ಯಕ್ರಮಗಳ ಘೋಷಣೆಯೂ ಈ ತಾಂಬಾರದ ನಾದದೊಂದಿಗೆ ಜನರ ಬದುಕಿಗೆ ಪ್ರವೇಶಿಸುತ್ತಿದ್ದವು. ಆ ತಾಂಬಾರ್  ನಮ್ಮ ಮುಂದೆ ಮೌನವಾಗಿ ನಿಂತಿದ್ದರೂ, ಅದರ ಚರ್ಮದ ಮೇಲೆ ಮೂಡಿರುವ ಕಾಲದ ಗುರುತುಗಳು ಶತಮಾನಗಳ ಇತಿಹಾಸವನ್ನು ಹೇಳುತ್ತಿದ್ದವು. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಇಂದಿಗೂ ತಾಂಬಾರ್ ಬಡಿಯುವುದಾಗಿ ಮುಕ್ರಿಕಾ ಹೇಳಿ, ಅದಕ್ಕೆ ಬಡಿಯುವ ಕೋಲು ತೋರಿಸಿದರು. ಒಂದೆರೆಕ್ಷಣ ನಾವೂ ಬಡಿದು ಇತಿಹಾಸದ ಕೊಂಡಿಯನ್ನು ಸೇರಿಕೊಂಡೆವು.‌

ಆ ಕೋಣೆಯ ಇನ್ನೊಂದು ಕಡೆ ಒಂದು ಕನ್ನಡಿಯಿತ್ತು. ವೆಳಿಯಂಗೋಡು ಉಮರ್ ಖಾಝಿಯವರು ಆ ಕನ್ನಡಿ ಬಳಸುತ್ತಿದ್ದರಂತೆ.‌‌ ಅವರ ಕವಿತೆಯ ಸಾಲುಗಳನ್ನು ಬರೆದಿದ್ದ ಗೋಡೆಯ ಭಾಗವನ್ನು ವಿಶೇಷವಾಗಿ ಗುರುತಿಸಲಾಗಿದೆ. ಆ ಸಾಲುಗಳನ್ನು ಆನಂತರ ಬರೆಯಲಾಗಿದೆ ಎಂದು ಮುಕ್ರಿಕಾ ತಿಳಿಸಿದರು.‌

ನಂತರ ನಾವು ಕೆಳಗಿಳಿದು ಮಿಂಬರ್ ನೋಡಲು ಹೋದೆವು. ಇಡೀ ಮಸೀದಿ ಮೌನದಲ್ಲಿ ಅದ್ದಿ ತೆಗೆದಂತಿತ್ತು.‌ ಅಲ್ಲಲ್ಲಿ ಒಂದಿಬ್ಬರು ಹಿರಿಯರು ಬಿಟ್ಟರೆ ಮಸೀದಿಯಲ್ಲಿ ಯಾರೂ ಇರಲಿಲ್ಲ. ಆ ನಿಗೂಢ ಶಾಂತಿಯ ಆವರಣದೊಳಗೆ ಒಂದರೆಕ್ಷಣ ಹಾಗೆಯೇ ಇದ್ದು ಬಿಡೋಣ ಅನಿಸಿತು.‌

ಮಿಂಬರ್ ಗೆ ಆನಿಸಿ ಇಟ್ಟಿದ್ದ ಶುಕ್ರವಾರದ ಜುಮಾ ಖುತ್ಬಾ ಸಮಯದಲ್ಲಿ ಬಳಸುವ ಕತ್ತಿ ನಮ್ಮ‌ ಗಮನ ಸೆಳೆಯಿತು. ಟಿಪ್ಪು ಸುಲ್ತಾನ್ ಕಾಲದ ಹಿಡಿಯಿದ್ದ ಕತ್ತಿಯಾಗಿತ್ತು ಅದು. ಆದರೆ, ಆ ಕಾಲದ ಕತ್ತಿ ಈಗ ಅಲ್ಲಿಲ್ಲ, ಹಿಡಿ‌ ಮಾತ್ರ ಉಳಿದಿದೆ. ಹಳೆಯ ಹಿಡಿಗೆ ಈಗ ಹೊಸ ಕತ್ತಿ ಸೇರಿಕೊಂಡಿದೆ.

ಮಸೀದಿಯ ಒಳಗೆ ಹೋಗುವಾಗ ಕಾಲು ತೊಳೆದುಕೊಂಡೇ ಹೋಗಿದ್ದರೂ ಮೇಲ್ಭಾಗ ಸುತ್ತಾಡಿ ಬಂದಿದ್ದರಿಂದ ಪಾದಗಳಿಗೆ ಧೂಳು ಮೆತ್ತಿಕೊಂಡಿತ್ತು. ಅದೇ ಕಾಲಿನಲ್ಲಿ‌ ಮಿಂಬರ್ ತನಕ ಹೋಗಿದ್ದಕ್ಕೆ ಹಿರಿಯರೊಬ್ಬರಿಂದ ಸಹಸ್ರನಾಮಾರ್ಚನೆಯಾಯಿತು.‌ ಇನ್ನೊಂದಿಷ್ಟು ಹೊತ್ತು ಮಸೀದಿಯ ನಿರ್ಮಲ ವಾತಾವರಣದಲ್ಲಿ ಇದ್ದು ಬಿಡೋಣ ಅನಿಸಿದರೂ ಹಿರಿಯರ ವರ್ತನೆಯಿಂದ ಮನಸುಗೆಟ್ಟು ಹೊರಟು ಬಂದೆವು.‌ ಹಿಂದಿರುಗುವಾಗ ಗೇಟಿನ ಬಳಿ ಒಂದಿಷ್ಟು ಹೊತ್ತು ಮತ್ತೆ ಮಸೀದಿಯೆಡೆಗೆ ದೃಷ್ಟಿ ಹಾಯಿಸಿದೆವು. ಹದಿನಾಲ್ಕನೇ ಶತಮಾನ, ಸಾಮೂದಿರಿ ರಾಜರು,‌ ನಾಯರುಗಳು, ಅವರ ಜೊತೆಗೆ ಗಟ್ಟಿಯಾಗಿ ನಿಂತ ಮುಸ್ಲಿಮರು, ಅವರ ಸಾಂಸ್ಕೃತಿಕ ಬದುಕು, ಮರಕ್ಕಾರ್ ಗಳ ವೀರ ಪರಾಕ್ರಮ, ಕಡಲಾಳದ ವ್ಯಾಪಾರ ವಹಿವಾಟು, ಪೋರ್ಚುಗೀಸರ ವ್ಯಾಪಾರಿ ಕುಶಾಗ್ರತೆ, ಯುದ್ಧ ನೈಪುಣ್ಯ, ಕ್ರೌರ್ಯ, ಸಾಮೂದಿರಿ ರಾಜರ ಧಾರ್ಮಿಕ ಸಹಿಷ್ಣುತೆ ಮೊದಲಾದವುಗಳಿಗೆ ಪ್ರತೀಕವಾಗಿ ಕುಟ್ಟಿಚ್ಚಿರ ಮಸೀದಿ ತನ್ನ ಪುರಾತನ ಸೊಬಗನ್ನು ಪ್ರದರ್ಶಿಸುತ್ತಾ ಬಾನೆತ್ತರಕ್ಕೆ ತಲೆಯೆತ್ತಿ ನಿಂತಿತ್ತು. ಮಸೀದಿಯ ಮುಂದೆ ಗೆಳೆಯರೆಲ್ಲ ಒಟ್ಟಿಗೆ ನಿಂತು ಪೋಟೋ ತೆಗೆಸಿಕೊಂಡೆವು.‌ ಸೆಲ್ಫಿಗಳ ಮೇಲಾಟ ಜೋರಾಗಿತ್ತು.‌ ಆಕಾಶ ನೋಡಿದರೆ ಮಳೆ ಬರುವ ಸೂಚನೆಯಿತ್ತು.

ಮಸೀದಿಯ ಆವರಣದಿಂದ ಹೊರಗೆ ಬರುತ್ತಾ ಕುಟ್ಟಿಚ್ಚಿರ ಎಂಬ ಪುಟ್ಟ ಲೋಕವು ಮನಪಟಲದಲ್ಲಿ ಬಿಚ್ಚಿಕೊಳ್ಳಲಾರಂಭಿಸಿತು. ಕುಟ್ಟಿಚ್ಚಿರವು ಕೋಯಿಕ್ಕೋಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಈ ನೆಲವು ಕೇವಲ ಒಂದು ಪ್ರದೇಶವಲ್ಲ; ಅದು ಮಲಬಾರಿನ ಬಹುಸಂಸ್ಕೃತಿಯ ಪರಂಪರೆ, ಸಮುದಾಯಗಳ ಸಹಬಾಳ್ವೆ ಮತ್ತು ವಸಾಹತುಶಾಹಿಯ ವಿರುದ್ಧದ ಪ್ರತಿರೋಧದ ಜೀವಂತ ಸ್ಮಾರಕವಾಗಿದೆ. ಪ್ರಸ್ತುತ ಭಾರತದ ರಾಜಕಾರಣಕ್ಕೆ ಸಾಮೂದಿರಿ ದೊರೆಗಳು ಬಹುದೊಡ್ಡ ಸೌಹಾರ್ದ ಮಾದರಿಯನ್ನು ಬಿಟ್ಟು ಹೋಗಿದ್ದಾರೆನಿಸಿತು.‌

ಕೆರೆ ಮತ್ತು ಮಸೀದಿಯಲ್ಲಿ ಸುತ್ತಾಡಿ ಸುಸ್ತಾಗಿದ್ದ ನಾವು ಟೀ ಕುಡಿಯಲೆಂದು ಹೋಟೆಲ್ ಹುಡುಕುತ್ತಾ ಮತ್ತೆ ಕೆರೆಯ ದಾರಿಯಾಗಿ ನಡೆದೆವು.‌ ಕೆರೆಯ ಪಕ್ಕದ ಬಸ್ ನಿಲ್ದಾಣದಲ್ಲಿ ವಯಸ್ಸಾದವರು ಕೂತು ಹರಟೆ ಹೊಡೆಯುತ್ತಿದ್ದರು. ಆ ಕೆರೆ ಅವರ ದಿನಚರಿಯ ಭಾಗವಾಗಿರುವುದು ಅವರ ಹಾವಭಾವಗಳಿಂದಲೇ ತಿಳಿಯುತ್ತಿತ್ತು.‌ ಒಬ್ಬರು ಹರಟೆ ಹೊಡೆಯುತ್ತಲೇ ಸಣ್ಣಪುಟ್ಟ ತಿನಿಸುಗಳ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ ಎಂಬುದು ಕೋಯಿಕ್ಕೋಡಿನ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವುದಕ್ಕೆ ಸಾಕ್ಷಿ ಎಂಬಂತೆ ಅವರು ಕಂಡರು.‌ ಮತ್ತೆ ಕೆರೆಯ ಕಡೆಗೆ ನೋಡಿದರೆ ನೀರು ಹಕ್ಕಿಗಳು ಮೀನುಗಳನ್ನು ಹುಡುಕುತ್ತಾ ನೀರಿನಲ್ಲಿ ಮುಳುಗೇಳುತ್ತಿದ್ದವು. ಅವುಗಳ ಚಲನವಲನಗಳನ್ನು ಸೆರೆ ಹಿಡಿಯಲು ಹಲವು ಕ್ಯಾಮೆರಾಗಳು ಪ್ರಯತ್ನಿಸುತ್ತಿದ್ದವು. ಆದರೆ, ಜನರು ಕ್ಯಾಮೆರಾ ಹೊರ ತೆಗೆದರೆ‌ ಸಾಕು ಅವುಗಳು ಸರಕ್ಕಂತ ನೀರಿನಾಳಕ್ಕೆ ಮರೆಯಾಗಿ ಆಟವಾಡಿಸುತ್ತಿದ್ದವು.

ಕುಟ್ಟಿಚ್ಚಿದರಿಂದ ನಾವು ಕೋಯಿಕ್ಕೋಡ್ ನತ್ತ ಹೊರಟು ಬರುವಾಗ ನಮ್ಮ ಮನಸ್ಸುಗಳೂ ಆ ಹಕ್ಕಿಗಳಂತೆ ಇತಿಹಾಸ ಮತ್ತು ವರ್ತಮಾನದ ನಡುವೆ ಜೀಕಾಡುತ್ತಾ, ಹರಟೆ ಮತ್ತು ಹಾಸ್ಯಗಳ ಅಲೆಯಲ್ಲಿ ತೇಲುತ್ತಿದ್ದವು.

– ಸ್ವಾಲಿಹ್‌ ತೋಡಾರ್


ಈ ಅಧ್ಯಯನಗಳು ಭೂಮಿಗಿಳಿಯುವುದು ಯಾವಾಗ

Part – 2

ಪ್ರ: ಸಮಾಜ ವಿಜ್ಞಾನಗಳಲ್ಲಿನ ನಿಯಂತ್ರಣಗಳ ಬಗ್ಗೆ ಸಮಾಜದ ಒಟ್ಟು ಸ್ಥಿತಿಯ ಜತೆಜತೆಗೂ ಮಾತಾಡಬಹುದು. ಇಂದಿನ ನಮ್ಮ ಬದುಕಿನ ಪರಿಸ್ಥಿತಿ ತುಂಬಾ ಸ್ಪರ್ಧೆಯಿಂದ ಕೂಡಿದೆ. ಎಲ್ಲರೂ ತಮ್ಮ ಸ್ವಾತಂತ್ರ್ಯ, ಹಕ್ಕುಗಳು, ಸ್ಥಾನಮಾನ ಮತ್ತು ಬೆಂಬಲಕ್ಕಾಗಿ ಪರಸ್ಪರ ಸ್ಪರ್ಧಿಸುತ್ತಿದ್ದಾರೆ. ಪರಸ್ಪರ ಅರ್ಥಮಾಡಿಕೊಳ್ಳಲು, ಇತರರನ್ನು ಒಳಗೊಳ್ಳಲು, ತಾಳ್ಮೆ ತೋರಲು ಅಥವಾ ಕರುಣೆ ತೋರಲು ಇರುವ ಅವಕಾಶಗಳು ಕಡಿಮೆಯಾಗುತ್ತಿವೆ. ಕರುಣೆ ಮತ್ತು ಶಾಂತಿಯ ಭಾಷೆಯೇ ಕಣ್ಮರೆಯಾಗುತ್ತಿರುವಂತೆ ತೋರುತ್ತಿದೆ. ಸಾಮಾಜಿಕ ಸಂವಾದ ಹೆಚ್ಚು ನಿಯಂತ್ರಿತವಾಗುತ್ತಿರುವುದು ಕೂಡಾ ಇದೇ ಕಾರಣಕ್ಕಾಗಿರಬಹುದೇ?

ಸರುಕ್ಕೈ: ಹೌದು, ಪರಸ್ಪರ ಅರ್ಥಮಾಡಿಕೊಳ್ಳದ ಒಂದು ಸಂಕಷ್ಟಕರ ಸ್ಥಿತಿಯಲ್ಲಿ ನಾವಿದ್ದೇವೆ. ಅಧ್ಯಯನ ಶಿಸ್ತುಗಳ (disciplines) ಸ್ವಭಾವ ಇಲ್ಲೊಂದು ಮುಖ್ಯ ಸಮಸ್ಯೆ ಎನಿಸಿದೆ. ಈ ಶಿಸ್ತುಗಳ ಉದ್ದೇಶಿತ ವಸ್ತು ಯಾರು? ಉದಾಹರಣೆಗೆ, ಸಾಮಾಜಿಕ ಶಾಸ್ತ್ರಗಳು ಸಮಾಜದ ಒಂದು ಸಣ್ಣ ವಿಭಾಗವನ್ನೇ ಮುಖ್ಯವಾಗಿ ಅಧ್ಯಯನ ನಡೆಸುತ್ತವೆ. ಇತರ ಜ್ಞಾನ ಶಿಸ್ತುಗಳೊಂದಿಗೆ ಹೋಲಿಸಿದರೆ, ಸಾಮಾನ್ಯ ಜನರಿಗೆ ನೇರವಾಗಿ ಉಪಯೋಗವಾಗುವ ರೀತಿಯಲ್ಲಿ ಜ್ಞಾನವನ್ನು ರೂಪಿಸುವಲ್ಲಿ ಸಾಮಾಜಿಕ ಶಾಸ್ತ್ರಗಳು ಬಹಳಷ್ಟು ಹಿಂದುಳಿದಿವೆ. ಜಾತಿ, ಮತ, ಸಾಮಾಜಿಕ ಸಿದ್ಧಾಂತಗಳು ಮುಂತಾದ ವಿಷಯಗಳ ಬಗ್ಗೆ ಅಕಾಡೆಮಿಕ್ ಲೋಕದಲ್ಲಿ ಅನೇಕ ಬರಹಗಳು ಬಂದಿವೆ. ಆದರೆ, ನಾವು ಕಾಣುತ್ತಿರುವುದು ಸಾಮಾನ್ಯ ಜನರ ನಡುವೆ ಉಂಟಾಗುತ್ತಿರುವ ಸಾಮಾಜಿಕ ಸಂಘರ್ಷಗಳೇ. ಆ ವಿಷಯಗಳ ಅಧ್ಯಯನಗಳು ಬಹಳ ಉನ್ನತ ಮಟ್ಟದಲ್ಲಿ, ಅತೀ ಸಂಕೀರ್ಣವಾದ ಭಾಷೆಯಲ್ಲಿ ಮಾತ್ರ ವಿರಚಿತವಾಗುತ್ತಿವೆ. ಆ ಜ್ಞಾನ ಸಾಮಾನ್ಯ ಜನರಿಗೆ ಹೇಗೆ ತಲುಪುತ್ತದೆ ಎಂಬುದು ಮುಖ್ಯ ಪ್ರಶ್ನೆ. ಅದರ ಪ್ರಾಯೋಗಿಕತೆ ಹಾಗೂ ಹಸ್ತಾಂತರದ ಬಗ್ಗೆ ನೀವು ಪ್ರಶ್ನಿಸಬೇಕು.

ಕರುಣೆ, ಪರಸ್ಪರ ಗೌರವ, ಅಹಿಂಸೆ ಮುಂತಾದ ವಿಚಾರಗಳು ನಮ್ಮ ದೈನಂದಿನ ಜೀವನವನ್ನು ಹೇಗೆ ಪ್ರಭಾವಿಸಬಹುದು? ಸಾಮಾನ್ಯ ಜನರು ಅಂತಹ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವಂತಹ ವಾತಾವರಣ ನಿರ್ಮಿಸಲು ಸಾಮಾಜಿಕ ಶಾಸ್ತ್ರಗಳ ಜ್ಞಾನ ಸಹಾಯ ಮಾಡಬಹುದೇ? ಈ ಆಲೋಚನೆಗಳನ್ನು ಸಮಾಜ ವಿಜ್ಞಾನದ ತರಬೇತಿ ಪಡೆಯದವರಿಗೂ ತಾಂತ್ರಿಕ ಪದಗಳನ್ನು ತಿಳಿಯದವರಿಗೂ ತಲುಪಿಸುವುದು ಅತ್ಯಂತ ಮುಖ್ಯವಾಗಿದೆ. ಸಾಮಾನ್ಯ ಜನರಿಗಾಗಿ ಪ್ರಕಟವಾಗುವ ಮಾಸಪತ್ರಿಕೆಗಳು ಮತ್ತು ಇತರ ವೇದಿಕೆಗಳ ಮಹತ್ವ ಇಲ್ಲಿ ಬಹಳ ಹಿರಿದು. ಈ ವಿಷಯದಲ್ಲಿ ಕೇರಳ ಬಹಳ ಮುಂಚೂಣಿಯಲ್ಲಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲಿನ ಸಾರ್ವಜನಿಕ ಸಂವಾದದ ಗುಣಮಟ್ಟ ಉತ್ತಮವಾಗಿದೆ.

ಸಾಮಾಜಿಕ ಶಾಸ್ತ್ರಗಳಲ್ಲಿ ಹುಟ್ಟುವ ಆಲೋಚನೆಗಳನ್ನು ಸಮಾಜದ ಮಟ್ಟಕ್ಕೆ ಹೇಗೆ ತರುವುದು ಎಂಬುದೇ ದೊಡ್ಡ ಸವಾಲು. ಸಮಾಜವಿಜ್ಞಾನದ ಪ್ರತಿಯೊಂದು ಶಿಸ್ತು ಕೂಡಾ ಮಾನವ ಜೀವನದ ಅನೇಕ ಅಂಶಗಳ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ನಿರ್ಮಿಸಿದೆ. ಮಾನವಶಾಸ್ತ್ರ (Anthropology), ಸಮಾಜವಿಜ್ಞಾನ ಮತ್ತಿತರ ಆಧ್ಯಯನ ಶಿಸ್ತುಗಳು ‘ಇತರರನ್ನು’ ಅರ್ಥಮಾಡಿಕೊಳ್ಳಲು ಬಹಳ ಕಾಲ ಮತ್ತು ಪರಿಶ್ರಮವನ್ನು ವ್ಯಯಿಸಿವೆ. ವಿಭಿನ್ನ ಸಮಾಜಗಳ ನೈತಿಕ ರಚನೆ ಮತ್ತು ಒಳಗಿನ ತರ್ಕವನ್ನು ಅವು ಅಧ್ಯಯನ ಮಾಡುತ್ತವೆ. ಆದರೆ, ಆ ಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ದೊಡ್ಡ ಕೊರತೆ ಇದೆ ಎನ್ನುವುದು ನನ್ನ ಅನಿಸಿಕೆ. ಒಂದು ಸಮಾಜ ಮತ್ತೊಂದು ಸಮಾಜವನ್ನು ಹೆಚ್ಚು ಅರ್ಥಮಾಡಿಕೊಳ್ಳಲು, ಅದರ ಮೂಲಕ ಹೆಚ್ಚಿನ ಸಂವಾದ ಮತ್ತು ಕರುಣೆಗೆ ದಾರಿ ತೆರೆಯಲು ಈ ಜ್ಞಾನ ಸಹಾಯ ಮಾಡಬೇಕು. ಆದರೆ ಅಕಾಡೆಮಿಕ್ ಪುಸ್ತಕಗಳ ಬಹುಪಾಲು ಸಾಮಾನ್ಯ ಜನರ ಕೈಗೆ ತಲುಪುವುದೇ ಇಲ್ಲ.

ಇತಿಹಾಸ, ಮಾನವಶಾಸ್ತ್ರ, ಸಮಾಜವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅತ್ಯಂತ ಆಳವಾದ ಅಧ್ಯಯನಗಳು ನಡೆದಿವೆ. ಅವುಗಳೊಂದಿಗೆ ಜನರನ್ನು ಬೆಸೆಯುವುದು ಹೇಗೆನ್ನುವುದೇ ಪ್ರಶ್ನೆ. ಉದಾಹರಣೆಗೆ, ಲೈಲಾ ಅಬೂ-ಲುಘೋದ್ ಬರೆದಿರುವ ಮುಸ್ಲಿಮರು, ಬರ್ಬರ್ ಸಮುದಾಯಗಳು ಮತ್ತು ಜಾತಿಯ ಕುರಿತ ಪುಸ್ತಕವನ್ನು ಬೇಕಾದರೆ ನನಗೆ ಚರ್ಚಿಸಬಹುದು. ಅದನ್ನು ಓದಿದಾಗ ಸಮಾಜಗಳ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಅಕಾಡೆಮಿಕ್ ವಲಯದ ಹೊರಗಿನ ಜನರಿಗೆ ಇಂತಹ ಅಧ್ಯಯನಗಳು ಸುಲಭವಾಗಿ ಲಭ್ಯವಾಗುವುದಿಲ್ಲ. ಈ ರೀತಿಯ ಸಾಹಿತ್ಯ ಮತ್ತು ಅಧ್ಯಯನಗಳು ಸಮಾಜದ ಮಟ್ಟಕ್ಕೆ ಇಳಿದರೆ, ನಾವು ಪರಸ್ಪರ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯ ಇದೆ. ಮೊದಲನೆಯದಾಗಿ ಬೇಕಾಗಿರುವುದು ಕೂಡಾ ಈ ಅರ್ಥಮಾಡಿಕೊಳ್ಳುವಿಕೆ ಮತ್ತು ಹೊಸ ಆಲೋಚನೆಗಳನ್ನು ಸ್ವೀಕರಿಸುವ ಮನೋಭಾವ. ಹೀಗಾಗಿ, ಅಕಾಡೆಮಿಕ್ ಗ್ರಂಥಗಳಲ್ಲಿನ ಈ ಚಿಂತನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಸಾಧ್ಯವೇ ಎನ್ನುವ ಪ್ರಶ್ನೆ ನಿರ್ಣಾಯಕವಾದದ್ದು.

ನಾನು ಮೊದಲೇ ಹೇಳಿದಂತೆ, ಇತರ ಸಮಾಜಗಳು ಮತ್ತು ಸಮುದಾಯಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಅವರ ವೈವಿಧ್ಯಮಯ ಕಥೆಗಳು ಮತ್ತು ಪ್ರತಿನಿಧಿತ್ವಗಳನ್ನು ನಾವು ತಿಳಿದುಕೊಳ್ಳಬೇಕು. ನೀವು ಉಲ್ಲೇಖಿಸಿದ ಕರುಣೆ ಮತ್ತು ಕಾಳಜಿಯ ಕೊರತೆ ಅನೇಕ ಸಂದರ್ಭಗಳಲ್ಲಿ ಬರುತ್ತಿರುವುದು ಅಜ್ಞತೆಯಿಂದಾಗಿ. ಜನರ ನಡುವೆ ದ್ವೇಷ ಮತ್ತು ವೈಮನಸ್ಸನ್ನು ಬಿತ್ತಲು ಖಂಡಿತವಾಗಿಯೂ ಸಾಧ್ಯವಿದೆ. ಆದರೆ, ದ್ವೇಷ ಇಲ್ಲಿ ವ್ಯಾಪಕಗೊಂಡಿರುವುದು ತಿಳಿವಳಿಕೆಯ ಕೊರತೆಯಿಂದಲೇ. ಉದಾಹರಣೆಗೆ, ನಾನು ಹೇಳಿದಂತೆ ಬೆಂಗಳೂರಿನಲ್ಲಿ ವಿಭಿನ್ನ ಸಮುದಾಯಗಳ ಮಧ್ಯೆ ಅನೇಕ ಪೂರ್ವಗ್ರಹಗಳಿವೆ. ಮುಸ್ಲಿಮ್ ಸಮುದಾಯದ ಬಗ್ಗೆ ವ್ಯಾಪಕವಾದ ತಪ್ಪು ಕಲ್ಪನೆಗಳು ರೂಪುಗೊಂಡಿವೆ. “ನೀವು ಜೀವನದಲ್ಲಿ ಒಬ್ಬ ಮುಸ್ಲಿಮನನ್ನಾದರೂ ನೇರವಾಗಿ ಭೇಟಿ ಮಾಡಿದ್ದೀರಾ? ಅವರ ಮನೆಗೆ ಹೋಗಿದ್ದೀರಾ? ಅವರ ಜೊತೆ ಕೂತು ಮಾತನಾಡಿದ್ದೀರಾ?” ಎಂದೆಲ್ಲಾ ನಾನವರೊಂದಿಗೆ ಕೇಳುತ್ತಿರುತ್ತೇನೆ .ಮುಸ್ಲಿಮರೊಂದಿಗೆ ಅವರು ನೇರವಾಗಿ ಯಾವ ಸಂಪರ್ಕವನ್ನೂ ಹೊಂದಿಲ್ಲ ಎನ್ನುವುದೇ ನಿಜ. ಅವರ ಸಂಪೂರ್ಣ ದೃಷ್ಟಿಕೋನ ರೂಪುಗೊಂಡಿರುವುದು ಶುದ್ಧ ಅಜ್ಞಾನದಿಂದ. ಹಾಗಾಗಿ ಪರಸ್ಪರ ಅನುಸಂಧಾನ ಹಾಗೂ ಕಥಾವಿನಿಮಯಗಳ ಮಹತ್ವವನ್ನು ನಾನಿಲ್ಲಿ ಒತ್ತಿಹೇಳಲು ಬಯಸುತ್ತೇನೆ. ಬೆಂಗಳೂರಿನ ಹಿಂದೂ ಸಮುದಾಯಗಳೊಳಗೆ ಕೂಡಾ ದಲಿತರ ಬಗ್ಗೆ ಅನೇಕ ಕಪೋಲಕಲ್ಪಿತ ಕಲ್ಪನೆಗಳಿವೆ. ಆದರೆ, ಅವರಲ್ಲಿ ಹಲವರಿಗೆ ಒಂದೇ ಒಂದು ದಲಿತ ವ್ಯಕ್ತಿಯೊಂದಿಗೂ ಆಪ್ತ ಪರಿಚಯವಿಲ್ಲ. ಅವರ ಬದುಕು ಹೇಗಿದೆ ಎಂದು ತಿಳಿದಿಲ್ಲ. ಆದ್ದರಿಂದ, ತೆರೆದ ಮನಸ್ಸಿನಿಂದ ಮತ್ತೊಬ್ಬರ ಕಥೆಗಳನ್ನು ಕೇಳಲು ಸಿದ್ಧರಾದರೆ ಮಾತ್ರ ಸಂವಾದದ ದಾರಿ ತೆರೆಯಬಹುದೆನ್ನುವ ನಿರೀಕ್ಷೆ ನನ್ನದು.

ಪ್ರ: ವಿಭಿನ್ನ ಸಮುದಾಯಗಳು ತಮ್ಮನ್ನು ಹೇಗೆ ರೂಪಿಸಿಕೊಳ್ಳುತ್ತವೆ, ಅವರ ನಡೆ- ನುಡಿಗಳ ಹಿಂದಿನ ಪ್ರೇರಕಗಳು ಯಾವುವು ಎಂಬುದರ ಬಗೆಗಿನ ಅಜ್ಞಾನವೇ ಪರಸ್ಪರ ಪೂರ್ವಗ್ರಹಗಳು ರೂಪುಗೊಳ್ಳುವುದಕ್ಕೆ ಮೂಲಭೂತ ಕಾರಣ. ಇಂತಹ ವಿಚಾರಗಳನ್ನು ಇನ್ನಷ್ಟು ಜನರಿಗೆ ವಿನಿಮಯಗೊಳಿಸುವ ಉದ್ದೇಶದಿಂದಲೇ ನೀವು ಫಿಕ್ಷನ್ ಕ್ಷೇತ್ರದತ್ತ ತಿರುಗಿದ್ದೀರಾ?

ಸರುಕ್ಕೈ: ಹೌದು. 2018ರ ಸುಮಾರಿಗೆ ನಾನು National Institute of Advanced Studies (NIAS) ಮಣಿಪಾಲ ಹಾಗೂ ಇತರ ಹಲವು ಸಂಸ್ಥೆಗಳಲ್ಲಿ ಸಂಚರಿಸುತ್ತಿದ್ದೆ. ಆ ಸಂದರ್ಭದಲ್ಲಿ ದೇಶದ ರಾಜಕೀಯ ವಾತಾವರಣ ನನಗೆ ಉಪಟಳ ಎನಿಸಲು ಆರಂಭಿಸಿತ್ತು. ವಿಶೇಷವಾಗಿ, ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ತಪ್ಪು ಕಲ್ಪನೆಗಳು ಜನರಲ್ಲಿ ವೇಗವಾಗಿ ಹರಡುತ್ತಿದ್ದು, ದ್ವೇಷಪೂರ್ಣ ಮಾತುಗಳು ದೈನಂದಿನ ಜೀವನದ ಭಾಗವಾಗಿ ಬಿಟ್ಟಿತ್ತು. ದ್ವೇಷ ಹರಡುವಿಕೆ ಸಾಮಾನ್ಯವಾಗಿಬಿಟ್ಟಿತ್ತು. ಆ ಹೊತ್ತಿನಲ್ಲಿ ನಾನು ನನ್ನ ಗಮನವನ್ನು ಮಕ್ಕಳ ಕಡೆಗೆ ಕೇಂದ್ರೀಕರಿಸಲು ನಿರ್ಧರಿಸಿದೆ. 2018ರಲ್ಲೇ ಅನೌಪಚಾರಿಕವಾಗಿ ‘Barefoot Philosophers’ ಎಂಬ ಪ್ರಯತ್ನವನ್ನು ಆರಂಭಿಸಬೇಕೆಂದು ಯೋಚಿಸಿದೆ. ಮಕ್ಕಳಲ್ಲಿಯೇ ಅದಾಗಲೇ ಕೆಲವು ರೂಢಿಬದ್ಧ ಕಲ್ಪನೆಗಳು ಮತ್ತು ತಪ್ಪು ಧೋರಣೆಗಳು ಬೆಳೆದುಬರುತ್ತಿರುವುದನ್ನು ನಾನು ಗಮನಿಸಿದ್ದೆ. ಹಾಗಾಗಿ, ‘Philosophy for Children’ ಎಂಬ ಒಂದು ಯೋಜನೆ ಆರಂಭಿಸಿದೆ. ಅದು ನನಗೆ ಅದ್ಭುತ ಅನುಭವವನ್ನು ನೀಡಿತು. ಅದರ ಉದ್ದೇಶ ಕೇವಲ ತತ್ತ್ವಚಿಂತನೆ ಅಭ್ಯಾಸ ಮಾಡಿಸುವುದಾಗಿರಲಿಲ್ಲ; ಬದಲಾಗಿ ಲೋಕದ ಬಗ್ಗೆ ಒಂದು ವಿಶೇಷ ರೀತಿಯಲ್ಲಿ ಚಿಂತಿಸಲು ಮಕ್ಕಳನ್ನು ಪ್ರೇರೇಪಿಸುವುದಾಗಿತ್ತು. ಮುಂದುವರಿದು ‘Philosophy for Children’ ಎಂಬ ಪುಸ್ತಕವನ್ನು ಬರೆದೆ. ಆ ಕೃತಿ ಈಗ ಹಲವು ಭಾಷೆಗಳಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ತತ್ತ್ವಚಿಂತನೆಯ ಜಗತ್ತಿಗಾಗಲಿ ಅಥವಾ ಅಕಾಡೆಮಿಕ್ ವಲಯಕ್ಕಾಗಲಿ ಎಂದಿಗೂ ತಲುಪದ ಅನೇಕ ಜನರೊಂದಿಗೆ ಸಂವಹನ ಮಾಡಲು ಆ ಮೂಲಕ ಸಾಧ್ಯವಾಗಿದೆ.
ಮಕ್ಕಳೊಂದಿಗಿನ ಈ ಅನುಸಂಧಾನಗಳು ನಂತರ ‘The Social Life of Democracy’ ಎಂಬ ಪುಸ್ತಕ ರಚನೆಯತ್ತ ನನ್ನನ್ನು ಕರೆದೊಯ್ದವು. ವಿಶೇಷವಾಗಿ ‘ಸಾಮಾಜಿಕ ಪ್ರಜಾಸತ್ತೆ’ ಎಂಬ ಕಲ್ಪನೆ ನನ್ನನ್ನು ಆಕರ್ಷಿಸಿತು. ಸಾಮಾನ್ಯ ಜನರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವ, ಆಲೋಚನೆಗಳನ್ನು ತೆರೆದು ಹಿಡಿಯುವ ಒಂದು ಪುಸ್ತಕವಾಗಿತ್ತದು. ಫಿಕ್ಷನ್ ಬರೆಯಲು, ವಿಶೇಷವಾಗಿ ‘Following a Prayer’ ಎಂಬ ಕಾದಂಬರಿಯನ್ನು ಬರೆಯಲು ಆರಂಭಿಸಿದಾಗ, ನೇರವಾಗಿ ತತ್ತ್ವಶಾಸ್ತ್ರೀಯ ಪ್ರಶ್ನೆಗಳನ್ನು ಕೇಳಬೇಕೆಂಬ ಉದ್ದೇಶ ನನಗಿರಲಿಲ್ಲ. ‘ಪ್ರಾರ್ಥನೆ ಎಂದರೇನು? ಜನರು ಏಕೆ ಪ್ರಾರ್ಥಿಸುತ್ತಾರೆ?’ ನಾನು ಪ್ರಾರ್ಥಿಸುವಾಗ ಕೆಲವು ಪದಗಳನ್ನು ಉಚ್ಚರಿಸುತ್ತೇನೆ; ಆ ಪದಗಳಿಗೆ ಏನಾಗುತ್ತದೆ? ಅವು ಎಲ್ಲಿಗೆ ಹೋಗುತ್ತವೆ? ಎಂಬಂತಹ ಪ್ರಶ್ನೆಗಳು ದೀರ್ಘಕಾಲದಿಂದ ತತ್ತ್ವವಿಜ್ಞಾನ ಹಾಗೂ ಭಾಷಾತತ್ತ್ವದ ನೆಲೆಯಲ್ಲಿ ನನ್ನನ್ನು ಕಾಡುತ್ತಿದ್ದವು. ಮಕ್ಕಳೊಂದಿಗೆ ನಡೆದ ಸಂವಾದಗಳ ನಂತರ ‘Following a Prayer’ ಅನ್ನು ಬರೆಯುವಾಗ, ನಾನು ಈ ಪ್ರಶ್ನೆಯನ್ನು ಒಂದು ಮಗುವಿನ ದೃಷ್ಟಿಕೋನದಿಂದ ಪರಿಶೀಲಿಸಿದೆ.

ಪ್ರ: ಸಮಕಾಲೀನ ಜಾಗತಿಕ ಪರಿಸ್ಥಿತಿಯಲ್ಲಿ ಬಲಪಂಥೀಯ ಜನಪ್ರಿಯ (right- wing populist) ರಾಜಕೀಯದ ಬೆಳವಣಿಗೆ ಅನೇಕ ದೇಶಗಳಿಗೆ ವ್ಯಾಪಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಲ್ಲಿ ರಾಜಕೀಯ ಪ್ರಜಾಸತ್ತೆ ಒಂದರ್ಥದಲ್ಲಿ ದ್ವೇಷವನ್ನು ಪ್ರೋತ್ಸಾಹಿಸುತ್ತಿದೆ ಎಂಬ ಭಾವನೆ ಮೂಡುತ್ತದೆ. ಸಮುದಾಯಗಳ ನಡುವೆ ಹೆಚ್ಚು ದ್ವೇಷ ಹುಟ್ಟುಹಾಕುವವರು ಗೆಲ್ಲುವ ಸಾಧ್ಯತೆ ಹೆಚ್ಚುತ್ತಿದೆ. ರಾಜಕೀಯ ಪ್ರಜಾಸತ್ತೆ ದ್ವೇಷಕ್ಕೆ ಕುಮ್ಮಕ್ಕು ನೀಡುತ್ತದೆ ಎಂದು ಹೇಳಬೇಕಾದ ಪರಿಸ್ಥಿತಿ ಇದೆ. ಹೆಚ್ಚಿನ ದೇಶಗಳು ಕೂಡಾ ಇಂತಹ ನಿರಾಶಾದಾಯಕ ದಿಕ್ಕಿನತ್ತ ಸಾಗುತ್ತಿರುವಂತೆ ಕಾಣುತ್ತದೆ. ಇದಕ್ಕೆ ಪರಿಹಾರವೇನು?

ಸರುಕ್ಕೈ: ನಿಜವಾದ ಸಮಸ್ಯೆ ಇರುವುದು ‘ರಾಜಕೀಯ ಪ್ರಜಾಸತ್ತೆ’ಯಲ್ಲೇ? ಎನ್ನುವುದು ನನ್ನ ಪ್ರಶ್ನೆ. ಭಾರತದ ರಾಜಕೀಯ ಪ್ರಜಾಸತ್ತೆಯನ್ನೇ ಕೈಗೆತ್ತಿಕೊಳ್ಳೋಣ. ಅನೇಕ ರಾಜಕೀಯ ತತ್ತ್ವಚಿಂತಕರು ಸೂಚಿಸಿರುವ ಹಾಗೆ ವರ್ಣಾಶ್ರಮ ವ್ಯವಸ್ಥೆಯಡಿಯಲ್ಲಿ ಜೀವಿಸುತ್ತಿದ್ದ ಜನರಿಗೆ ಪ್ರಜಾಸತ್ತಾತ್ಮಕ ವ್ಯವಸ್ಥೆ ಹಕ್ಕುಗಳನ್ನು ನೀಡಿದೆ. ಆದರೆ ಪ್ರಸ್ತುತ ‘ಮೆಜಾರಿಟೇರಿಯನಿಸಂ’ (majoritarianism) ಎಂಬ ಸಮಸ್ಯೆಯೂ ಅದರೊಳಗೇ ಬೆಳೆಯುತ್ತಿದೆ. ಬಹುಮತ ಪಡೆಯುವುದೇ ಪ್ರಜಾಸತ್ತೆ ಎಂಬ ರೀತಿಯಲ್ಲಿ ಅರ್ಥ ಬದಲಾಗುತ್ತಿದೆ. ಇಲ್ಲಿ ಸಮಸ್ಯೆ ಇರುವುದು ರಾಜಕೀಯ ಪ್ರಜಾಸತ್ತೆಯನ್ನು ‘ಕಾರ್ಯಗತಗೊಳಿಸುವ ವ್ಯವಸ್ಥೆ’ಯಲ್ಲಿ (delivery mechanism). ಈ ವ್ಯವಸ್ಥೆ ಪ್ರಜಾಸತ್ತೆಯ ಮೂಲ ಗುರಿಯೊಂದಿಗೆ ನೇರವಾಗಿ ಹೊಂದಿಕೊಂಡಿರಬೇಕೆಂದಿಲ್ಲ.

ಮತದಾನ ಸೇರಿದಂತೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನೈತಿಕವಾಗಿ ಅಡಕವಾಗಿರುವ ಅಂಶವೇನು? ‘The Social Life of Democracy’ ಎಂಬ ಪುಸ್ತಕವನ್ನು ಬರೆಯುವಾಗ ಆರಂಭದಲ್ಲೇ ನಾನು ಕೇಳಿಕೊಂಡ ಪ್ರಶ್ನೆಯಿದು. ಮತದಾನದ ನೈತಿಕ ಆಯಾಮವೇನು (moral dimension)? ಎಂಬ ಚಿಂತನೆ ನನ್ನನ್ನು ಆ ಪ್ರಶ್ನೆಯತ್ತ ಕೊಂಡೊಯ್ದಿತ್ತು ‘ನಾವು ಏಕೆ ಮತ ಹಾಕುತ್ತೇವೆ? ಯಾರಿಗೆ ಮತ ಹಾಕುತ್ತೇವೆ?’ ಎಂಬ ಪ್ರಶ್ನೆಗಳ ಬಗ್ಗೆ ಬರೆಯಲು ಪ್ರಾರಂಭಿಸಿದ್ದು ಆಮೇಲೆ. ನಾನು ಮುಂದಿಟ್ಟ ವಾದ ಬಹಳ ಸರಳವಾದುದು. ‘ಸಾರ್ವಜನಿಕ’ (public) ಎಂಬ ಪದದ ಅರ್ಥವೇ ಇದು: ಸಾರ್ವಜನಿಕ ವಲಯದಲ್ಲಿ ನಮ್ಮೆಲ್ಲರಿಗೂ ಸಮಾನ ಪಾಲು ಇದೆ. ಅದು ನಮ್ಮೆಲ್ಲರಿಗೂ ಸೇರಿದ ಸಾಮೂಹಿಕ ಸ್ವತ್ತು. ಉದಾಹರಣೆಗೆ, ಐದು ಲಕ್ಷ ಜನರಿರುವ ಒಂದು ಸಮಾಜವನ್ನು ಕಲ್ಪಿಸಿಕೊಳ್ಳಿ. ಅದರಲ್ಲಿ ಒಂದು ಸಾರ್ವಜನಿಕ ಉದ್ಯಾನವನವಿದ್ದರೆ, ಆ ಐದು ಲಕ್ಷ ಜನರಿಗೂ ಆ ಉದ್ಯಾನವನದಲ್ಲಿ ಸಮಾನ ಪಾಲು ಇದೆ. ಆ ಉದ್ಯಾನವನ ನಮ್ಮೆಲ್ಲರಿಗೂ ಸೇರಿದೆ. ಎಲ್ಲರೂ ಒಟ್ಟಾಗಿ ನಿರ್ಧರಿಸದೆ ಅದನ್ನು ವೈಯಕ್ತಿಕವಾಗಿ ಮಾರಲು ಸಾಧ್ಯವಿಲ್ಲ.

ಹಾಗಾದರೆ, ನಾನು ಮತ ಚಲಾಯಿಸುವಾಗ ಮಾಡುತ್ತಿರುವುದಾದರೂ ಏನು? ಸಾರ್ವಜನಿಕ ಸಂಪತ್ತನ್ನು ನಿರ್ವಹಣೆ ಮಾಡಲು ಮತ್ತು ಕಾಪಾಡಲು ಒಬ್ಬರನ್ನು ಆಯ್ಕೆ ಮಾಡುತ್ತಿದ್ದೇನೆ. ಆ ಸಾರ್ವಜನಿಕ ವಲಯ ಅವನಿಗಷ್ಟೇ ಅಲ್ಲ, ನನಗೂ ಸೇರಿದ್ದು; ನಮ್ಮೆಲ್ಲರಿಗೂ ಸೇರಿದ್ದು. ಇಲ್ಲಿಯೇ ಮಹತ್ವದ ನೈತಿಕ ಪ್ರಶ್ನೆ ಉದ್ಭವಿಸುತ್ತದೆ. ಮತ ಚಲಾಯಿಸುವ ಮೂಲಕ ‘ನಮ್ಮೆಲ್ಲರಿಗೂ ಸೇರಿದ ಈ ಸಾರ್ವಜನಿಕ ವಲಯದ ರಕ್ಷಕನಾಗಿ (trustee) ನೀನು ಕಾರ್ಯನಿರ್ವಹಿಸಬೇಕು’ ಎಂದು ನನ್ನ ಅಭ್ಯರ್ಥಿಗೆ ನಾನು ಹೇಳುತ್ತೇನೆ. ಪ್ರಜಾಸತ್ತಾತ್ಮಕತೆಯ ವೈಫಲ್ಯ ಸ್ಪಷ್ಟವಾಗುವುದೇ ಇಲ್ಲಿ. ‘ಸಾರ್ವಜನಿಕ’ ಎಂಬ ಕಲ್ಪನೆ ನಾಶವಾಗುವ ಕ್ಷಣದಲ್ಲಿ ಪ್ರಜಾಸತ್ತೆ ಕುಸಿಯಲು ಆರಂಭಿಸುತ್ತದೆ. ‘ಸಾರ್ವಜನಿಕ’ದ ಸ್ವಭಾವ ಹಾಳಾದರೆ, ಅಲ್ಲಿ ಪ್ರಜಾಸತ್ತಾತ್ಮಕತೆ ವಿಫಲವಾಗಿದೆ ಎಂದರ್ಥ. ‘ಸಾರ್ವಜನಿಕ’ ಎನ್ನುವಾಗ ನಾನು ಉದ್ದೇಶಿಸುತ್ತಿರುವುದು ಕೇವಲ ವೈಯಕ್ತಿಕ ಅಥವ ಸಾಮಾಜಿಕ ಮಟ್ಟದಲ್ಲಿ ಮಾತ್ರವಲ್ಲ. ಎಲ್ಲಾ ಸಂಪನ್ಮೂಲಗಳಲ್ಲಿಯೂ ಸಾರ್ವಜನಿಕತೆ ಎಂದರೆ ನಮ್ಮೆಲ್ಲರಿಗೂ ಸೇರಿದ ಪಾಲು. ನಾವು ಒಟ್ಟಾಗಿ ಅನುಭವಿಸಿ ಕಾಪಾಡಿಕೊಳ್ಳಬೇಕಿರುವ ವಸ್ತು. ಈ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಿದಾಗ, ನೀರು, ಗಾಳಿ, ಭೂಮಿ, ಪ್ರಕೃತಿ ಸಂಪನ್ಮೂಲಗಳು, ನಮ್ಮೆಲ್ಲರಿಗೂ ಸೇರಿದ ಹಕ್ಕುಗಳು ಕಳೆದುಹೋಗುತ್ತವೆ. ಇದನ್ನು ಎಸಗುವವರು ಮುಖ್ಯವಾಗಿ ರಾಜಕೀಯ ನಾಯಕರು. ಏಕೆಂದರೆ, ಸಾರ್ವಜನಿಕ ವಲಯದ ವಿಶ್ವಾಸಾರ್ಹ ರಕ್ಷಕರಾಗಬೇಕಿರುವ ಅವರು ಅದರ ಮಾಲೀಕರಂತೆ ವರ್ತಿಸಲು ಆರಂಭಿಸುತ್ತಾರೆ. ಇದೇ ನಿಜವಾದ ಸಮಸ್ಯೆ.
ಆದ್ದರಿಂದ, ಇದು ಪ್ರಜಾಸತ್ತೆ ಎಂಬ ಕಲ್ಪನೆಯ ವೈಫಲ್ಯವಲ್ಲ ಎಂದು ದಿಟವಾಗಿ ಹೇಳಬಹುದು. ಇದು ಪ್ರಜಾಸತ್ತೆಯನ್ನು ಜಾರಿಗೆ ತರುವ ವ್ಯವಸ್ಥೆಯ ವೈಫಲ್ಯ. ಇಲ್ಲಿ ಹೊಣೆಗಾರಿಕೆಯನ್ನು (accountability) ಖಚಿತಪಡಿಸುವಲ್ಲಿ ದೊಡ್ಡ ಕೊರತೆ ಇದೆ. ಮತದಾನದ ಬಗೆಗಿನ ಜಾಗೃತಿಯ ಕೊರತೆ ಕೂಡಾ ಈ ಜಾರಿಗೊಳಿಸುವಿಕೆಯ ಸಮಸ್ಯೆಯೇ. ಇಲ್ಲಿ ‘ಶಿಕ್ಷಣ’ ಎಂಬ ಪದವನ್ನು ಬಳಸುವುವಾಗ ಸ್ವಲ್ಪ ಸೂಕ್ಷ್ಮವಾಗಿರಬೇಕದೆ. ಶಿಕ್ಷಣ ಎನ್ನುವಾಗ ನಾನು ಮುಂದಿಡುವ ತಾತ್ಪರ್ಯ ಅಕಾಡೆಮಿಕ್ ಪದವಿಗಳು ಅಥವಾ ಪ್ರಮಾಣಪತ್ರಗಳಲ್ಲ. ಬದಲಾಗಿ ಮತದಾರನಲ್ಲಿ ನಾವು ನಿರೀಕ್ಷಿಸಬೇಕಾದ ಕೆಲವು ಗುಣಗಳು. ಅಂದರೆ, ಮಾನವನಾಗಿ ಬದುಕುವುದರ ಅರ್ಥವೇನು ಎಂಬ ಅರಿವು, ‘ನಾನು ಏಕೆ ಮತ ಹಾಕುತ್ತಿದ್ದೇನೆ?’ ಎಂಬ ಸ್ಪಷ್ಟತೆ, ಮತ್ತು ಒಂದು ನೈತಿಕ- ಸಾಮಾಜಿಕ ಜಾಗೃತಿ. ಅಂತಹ ಜಾಗೃತಿ ಸಮಾಜದಲ್ಲಿ ವ್ಯಾಪಕವಾಗಿರಬೇಕಿತ್ತು. ಖಂಡಿತವಾಗಿಯೂ ಕೆಲವರು ಹಣಕ್ಕಾಗಿ ಮತ ಹಾಕಬಹುದು. ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಸಂಪೂರ್ಣ ಸಮಾಜದ ಬಗ್ಗೆ ನಿರಾಶರಾಗುವುದಕ್ಕಿಂತ, ಬಹುಸಂಖ್ಯೆಯ ಜನರು ಸಮಾಜವನ್ನು ಹೇಗೆ ನೋಡುತ್ತಾರೆ ಎಂಬುದೇ ಮುಖ್ಯ ಪ್ರಶ್ನೆ.
ಕೊನೆಯದಾಗಿ ನಾವು ಸಮಾಜವನ್ನು ಹೇಗೆ ನೋಡುತ್ತೇವೆಯೋ ಅದರ ಆಧಾರದ ಮೇಲೆಯೇ ಮತ ಹಾಕುತ್ತೇವೆಂದು ನಾನು ಹೇಳಲು ಬಯಸುತ್ತೇನೆ. ಮತದಾರರು ಅವರ ಅಭ್ಯರ್ಥಿಯನ್ನು ವೈಯಕ್ತಿಕವಾಗಿ ಪ್ರೀತಿಸಬೇಕೆಂದಿಲ್ಲ, ಅಥವಾ ಆರಾಧಿಸಬೇಕೆಂದಿಲ್ಲ. ‘ನನಗವರು ಇಷ್ಟ, ಹಾಗಾಗಿ ನಾನವರಿಗೆ ಮತ ಹಾಕುತ್ತೇನೆ’ ಎಂಬುದೇ ಮುಖ್ಯ ಕಾರಣವಾಗಿರುವುದಿಲ್ಲ. ಬದಲಾಗಿ, ಆ ಅಭ್ಯರ್ಥಿ ಸಮಾಜದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರತಿನಿಧಿಸುತ್ತಾರೆ ಎಂಬ ಕಾರಣಕ್ಕೇ ಮತದಾರರು ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ, ನಿಜವಾಗಿ ಬದಲಾಗಬೇಕಿರುವುದು ರಾಜಕಾರಣಿಗಳಿಗಿಂತ ಹೆಚ್ಚಾಗಿ ಸಮಾಜದ ಕುರಿತ ಮತದಾರರ ದೃಷ್ಟಿಕೋನವೇ ಆಗಿದೆ ಎನ್ನುವುದು ನನ್ನ ಅನಿಸಿಕೆ.

ಪ್ರ: ಸಾಮಾನ್ಯವಾಗಿ ಸಂಘರ್ಷಗಳು ಹುಟ್ಟುತ್ತಿರುವುದು ಕೂಡಾ ‘ಸಾರ್ವಜನಿಕ ವಲಯ’, ‘ಸಾರ್ವಜನಿಕ ಹಿತ’, ‘ನ್ಯಾಯಸಮ್ಮತ ಪಾಲು’ (fair share) ಮುಂತಾದ ವಿಚಾರಗಳ ಬಗ್ಗೆಯೇ. ವಿಭಿನ್ನ ರೂಪಗಳಲ್ಲಿರುವ ಅಲ್ಪಸಂಖ್ಯಾತ ರಾಜಕಾರಣ ‘ನಮಗೆ ನ್ಯಾಯವಾಗಿ ಸಿಗಬೇಕಾದ ಪಾಲು ಸಿಗುತ್ತಿಲ್ಲ’ ಎಂದು ಹೇಳುತ್ತದೆ. ಆ ನಿಟ್ಟಿನಲ್ಲಿ, ವಿಶೇಷವಾಗಿ ದೀರ್ಘಕಾಲದಿಂದ ದಮನಕ್ಕೊಳಗಾದ ಸಮುದಾಯಗಳಿಂದ ಮೂಡಿಬರುವಾಗ, ಅದೊಂದು ವಿಮೋಚನಾತ್ಮಕ (emancipatory) ಸಂವಾದವೂ ಹೌದು. ಆದರೆ ಇದೇ ವಾದವನ್ನು ಬಹುಸಂಖ್ಯಾತ ರಾಜಕಾರಣವೂ ಮುಂದಿಡುತ್ತಿರುವುದು ದೊಡ್ಡ ವಿರೋಧಾಭಾಸ. ಅವರು ಕೂಡಾ ‘ಸಂಪನ್ಮೂಲಗಳು ಪೂರ್ಣವಾಗಿ ನಮಗೇ ಬೇಕು’ ಎಂದು ಹೇಳುವುದಿಲ್ಲ. ಅವರ ವಾದವೂ ‘ನಮಗೆ ಸಿಗಬೇಕಾದುದು ಸಿಗುತ್ತಿಲ್ಲ’ ಎಂದೇ. ಮೇಲ್ನೋಟಕ್ಕೆ ಇದು ಸಂಪೂರ್ಣ ಪ್ರಜಾಸತ್ತಾತ್ಮಕ ವಾದದಂತೆ ಕಾಣುತ್ತದೆ. ಆದರೆ,ಇಂತಹ ಪ್ರಜಾಸತ್ತಾತ್ಮಕ ‘ಹಕ್ಕು’ ಆಧಾರಿತ ವಾದಗಳೇ ನಮ್ಮನ್ನು ಇಂದಿನ ಸಂಕಷ್ಟಕ್ಕೆ ತಳ್ಳಿವೆ. ಹಾಗಾದರೆ, ಈ ಗೊಂದಲದಿಂದ ಹೊರಬರುವ ದಾರಿ ಏನು? ಮತ್ತೊಬ್ಬರಿಗಾಗಿ ತ್ಯಾಗ ಮಾಡಲು ಸಿದ್ಧವಾಗಿರುವ ನೈತಿಕತೆಯ ಮೇಲೆ ಆಧಾರಿತವಾದ ಹೊಸ ರಾಜಕೀಯದ ಅಗತ್ಯವಿಲ್ಲವೇ? ಪ್ರಜಾಸತ್ತಾತ್ಮಕ ಸಂವಾದವೇ ಮೂಲಭೂತವಾಗಿ ವಿಕಲವಾಗಿರುವ ಈ ಹೊತ್ತಿನಲ್ಲಿ ಹೊಸ ನೈತಿಕ ಸಂವಾದಗಳು ತೆರೆಯಬೇಕಾದದು ಅಗತ್ಯವಲ್ಲವೇ?

ಸರುಕ್ಕೈ: ನಿಜ. ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಸಾಮಾಜಿಕ ಪ್ರಜಾಸತ್ತೆ’ (social democracy) ಎಂಬ ಕಲ್ಪನೆ ನನ್ನನ್ನು ಆಕರ್ಷಿಸಿದ್ದು ಇಂತಹ ಪ್ರಶ್ನೆಗಳನ್ನು ಎದುರಿಸಿದಾಗ. ನಾನು ‘The Social Life of Democracy’ ಎಂಬ ಪುಸ್ತಕವನ್ನು ಬರೆಯುವಾಗ ಅದರ ಆರಂಭದಲ್ಲೇ ಒಂದು ವಿಚಾರವನ್ನು ಸೂಚಿಸಿದ್ದೆ. ಅಂಬೇಡ್ಕರ್ ಹೀಗೆ ಹೇಳುತ್ತಾರೆ: ರಾಜಕೀಯ ಪ್ರಜಾಸತ್ತೆ ಅವಶ್ಯಕ. ಆದರೆ, ಸಮಾಜ ಪ್ರಜಾಸತ್ತಾತ್ಮಕವಲ್ಲದಿದ್ದರೆ ರಾಜಕೀಯ ಪ್ರಜಾಸತ್ತೆಗೆ ಅರ್ಥವೇ ಇರುವುದಿಲ್ಲ. ಅಂದರೆ, ನಾವು ಪ್ರಜಾಸತ್ತೆಯ ಆತ್ಮವನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಮತದಾನವೇ ಪ್ರಜಾಸತ್ತೆ ಎಂದುಕೊಳ್ಳುವುದು ತಪ್ಪು. ಸಮಾಜವೇ ಪ್ರಜಾಸತ್ತಾತ್ಮಕವಾಗಿರದಿದ್ದಲ್ಲಿ ಸರ್ಕಾರವನ್ನು ಮಾತ್ರ ‘ಪ್ರಜಾಸತ್ತಾತ್ಮಕ ಸರ್ಕಾರ’ ಎಂದು ಕರೆಯುವುದಕ್ಕೆ ಅರ್ಥವೇನು? ಇದು ‘ಒಂದು ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸಲು ಹೇಗೆ ಸಾಧ್ಯ’ ಎನ್ನುವ ಇನ್ನೊಂದು ಪ್ರಶ್ನೆಯನ್ನು ಹುಟ್ಟು ಹಾಕಿತು. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಕೇವಲ ‘ಯಾರು ಆಡಳಿತ ನಡೆಸುತ್ತಾರೆ?’ ಎಂಬ ಆಯ್ಕೆಯ ಪ್ರಶ್ನೆಗೆ ಸೀಮಿತವಾಗಿಲ್ಲ. ಬದಲಿಗೆ, ಆಡಳಿತ, ಹಂಚಿಕೆ ಮತ್ತು ವಿತರಣೆಯ ಯಾವ ವ್ಯವಸ್ಥೆಗಳು ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸುತ್ತವೆ ಎನ್ನುವುದೇ ಮುಖ್ಯ ಪ್ರಶ್ನೆ.
ಹಾಗಾದರೆ ಸಮಾಜ ಪ್ರಜಾಸತ್ತಾತ್ಮಕವಾಗಿದೆ ಎನ್ನುವುದರ ತಾತ್ಪರ್ಯವೇನು? ಪ್ರಜಾಸತ್ತೆಯನ್ನು ಹುಡುಕಬೇಕಾದದ್ದೆಲ್ಲಿ? ಒಂದು ಮನೆಯೊಳಗೆ ಪ್ರಜಾಸತ್ತೆ ಹೇಗೆ ವ್ಯಕ್ತವಾಗುತ್ತದೆ? ಒಂದು ಮಗು ತನ್ನ ಪೋಷಕರಿಗೆ ‘ನೀವು ನನ್ನೊಂದಿಗೆ ಪ್ರಜಾಸತ್ತಾತ್ಮಕವಾಗಿ ವರ್ತಿಸುತ್ತಿಲ್ಲ; ನನಗೆ ಚಾಕೊಲೇಟ್ ಬೇಕು, ನೀವು ಬಟ್ಟೆ ಮಾತ್ರ ಕೊಡುತ್ತೀರಿ’ ಎಂದು ಹೇಳಬಹುದೇ? ಅದು ಪ್ರಜಾಸತ್ತೆಯಲ್ಲ. ಅದು ಕೇವಲ ಆಯ್ಕೆಯ ಪ್ರಶ್ನೆ. ಹಾಗೆಯೇ, ಸಹಜವಾಗಿಯೇ ಶ್ರೇಣಿಕ್ರಮ (hierarchical) ಇರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ- ವಿದ್ಯಾರ್ಥಿ ಸಂಬಂಧಗಳಲ್ಲಿ ಪ್ರಜಾಸತ್ತೆ ಎಂದರೇನು? ‘ಈ ಪಾಠ ನನಗೆ ಇಷ್ಟವಿಲ್ಲ, ಆದ್ದರಿಂದ ನಾನು ಓದುವುದಿಲ್ಲ’ ಎಂದು ಹೇಳುವ ವಿದ್ಯಾರ್ಥಿಗಳನ್ನು ನಾನು ನೋಡಿದ್ದೇನೆ. ‘ಗಣಿತ ನನಗೆ ಇಷ್ಟವಿಲ್ಲ; ಅದನ್ನು ನನಗೆ ಕಲಿಸಬೇಡಿ’ ಎಂದೂ ಕೆಲವರು ಹೇಳುತ್ತಾರೆ. ಹಾಗಾದರೆ, ‘ನೀನು ಗಣಿತ ಓದಲೇಬೇಕು’ ಎಂದು ಹೇಳುವುದು ಪ್ರಜಾಸತ್ತೆಗೆ ವಿರುದ್ಧವೇ?
ಇಂತಹ ಪ್ರಶ್ನೆಗಳನ್ನು ನಾನು ಆ ಪುಸ್ತಕದಲ್ಲಿ ಪರಿಶೀಲಿಸಿದ್ದೇನೆ. ಮನೆಗಳಿಂದ ಆರಂಭಿಸಿ ಶಾಲೆಗಳು, ಕಾಲೇಜುಗಳು, ಕೆಲಸದ ಸ್ಥಳಗಳು, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಜಾಸತ್ತೆ ಹರಡದೆ ಕೇವಲ ರಾಜಕೀಯ ನಾಯಕರಿಂದ ಮಾತ್ರ ಪ್ರಜಾಸತ್ತಾತ್ಮಕ ವರ್ತನೆಯನ್ನು ನಿರೀಕ್ಷಿಸುವುದು ನ್ಯಾಯವೇ? ಸ್ವಾತಂತ್ರ್ಯ (liberty), ಸಮಾನತೆ (equality), ಮತ್ತು ಸಹೋದರತ್ವ (fraternity) ಪ್ರಜಾಸತ್ತೆಯ ಮೂರು ಮೂಲ ಮೌಲ್ಯಗಳಾಗಿವೆ ಎಂದು ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ಸ್ವಾತಂತ್ರ್ಯ ಮುಖ್ಯವಾಗಿ ವೈಯಕ್ತಿಕ ಹಕ್ಕುಗಳು ಮತ್ತು ಇಚ್ಛೆಯ ಆಯ್ಕೆಗಳಿಗೆ ಸಂಬಂಧಿಸಿದೆ. ಆದರೆ ಕೇವಲ ಸ್ವಾತಂತ್ರ್ಯ ಎನ್ನುವುದು ಸಮಾನತೆಗೆ ವಿರುದ್ಧವಾಗಬಲ್ಲದು. ‘ಮೆರಿಟ್ ವರ್ಸಸ್ ಮೀಸಲಾತಿ’ಯ ಬಗೆಗಿನ ಚರ್ಚೆಗಳು ಇದಕ್ಕೊಂದು ಉತ್ತಮ ಉದಾಹರಣೆ. ಸ್ವಾತಂತ್ರ್ಯವೂ ಬೇಕು, ಸಮಾನತೆಯೂ ಬೇಕು. ಆದರೆ ಅವೆರಡೂ ಪರಸ್ಪರ ಸಂಘರ್ಷಕ್ಕೊಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಅವೆರಡನ್ನೂ ಸಮತೋಲನದಲ್ಲಿಡುವ ಮತ್ತೊಂದು ಮೌಲ್ಯ ಅಗತ್ಯ. ಅದೇ ಅಂಬೇಡ್ಕರ್ ಹೇಳುವ “fraternity” — ಅಂದರೆ ಸಹೋದರತ್ವ. ಈ ಕಲ್ಪನೆಗೆ ಬೌದ್ಧ ಧರ್ಮದ ಮೈತ್ರಿ (maitri) ಪರಿಕಲ್ಪನೆಯಿಂದಲೂ ಅವರಿಗೆ ಪ್ರೇರಣೆ ದೊರಕಿತ್ತು. ಅಂಬೇಡ್ಕರ್ ಅವರ ಅಭಿಪ್ರಾಯದಲ್ಲಿ, ಸಹೋದರತ್ವವೇ ಪ್ರಜಾಸತ್ತೆಯನ್ನು ಜೀವಂತವಾಗಿರಿಸುವ ಅಂಶ.

ಈ ಚಿಂತನೆಗಳು ಅವರ ಸ್ವಂತ ಜೀವನಾನುಭವಗಳಿಂದಲೇ ಉದ್ಭವಿಸಿದ್ದವು. ದಲಿತ ಸಮುದಾಯ ಅನುಭವಿಸಿದ ನೋವು ಮತ್ತು ಅವಮಾನಗಳು ‘ಪ್ರಜಾಸತ್ತೆ ಎಂದರೇನು?’ ಎಂಬ ಪ್ರಶ್ನೆಯನ್ನು ಆಳವಾಗಿ ಸ್ಪರ್ಶಿಸುತ್ತವೆ. ಪ್ರಜಾಸತ್ತೆಯನ್ನು ತಿರಸ್ಕರಿಸದೆ, ಅದನ್ನು ವಿಮರ್ಶಿಸಿ ಪುನರ್ವ್ಯಾಖ್ಯಾನ ಮಾಡುವ ದಾರಿಗಳನ್ನು ತೆರೆಯಬೇಕಿದೆ. ‘ಜನತಂತ್ರಕ್ಕೆ ಪರ್ಯಾಯವೇನು?’ ಎಂಬ ಪ್ರಶ್ನೆಯೇ ಭಯಾನಕ. ಬಹುಸಂಖ್ಯಾತರ ಪ್ರಭುತ್ವ ನಮ್ಮನ್ನು ನೋಯಿಸುತ್ತಿದೆ. ಆದರೆ ಚುನಾವಣಾ ಪ್ರಜಾಸತ್ತೆ ಇಲ್ಲದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತೆಂದು ಕಲ್ಪಿಸುವುದೇ ಕಷ್ಟ. ಇತಿಹಾಸವು ಇಂತಹ ಅನೇಕ ಭೀಕರ ಉದಾಹರಣೆಗಳಿಂದ ತುಂಬಿದೆ. ಇಲ್ಲಿ ಕರುಣೆ, ಕಾಳಜಿ ಮತ್ತು ಸಹೋದರತ್ವ ಎಲ್ಲಿಂದ ಬೆಳೆಯಬೇಕು ಎಂಬ ಪ್ರಶ್ನೆಯತ್ತ ನಾವು ಮರಳಬೇಕಾಗಿ ಬರುತ್ತದೆ. ಅದು ಶಾಲೆಗಳಿಂದಲೇ ಆರಂಭವಾಗಬೇಕು. ಆದರೆ ಇಂದಿನ ಶಾಲಾ ಶಿಕ್ಷಣ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಒಂದು ತರಗತಿಯಲ್ಲಿ ಉಳಿಯಲು ಒಬ್ಬ ಮಗು ಮತ್ತೊಬ್ಬ ಮಗುವನ್ನು ಸೋಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಂತಹ ವಾತಾವರಣದಲ್ಲಿ ಕರುಣೆ, ಪರಿಗಣನೆ ಮತ್ತು ಸಹೋದರತ್ವ ಹೇಗೆ ಬೆಳೆದುಬರಲು ಸಾಧ್ಯ?

ಸಂದರ್ಶನ: ಮಶ್ಕೂರ್ ಖಲೀಲ್
ಕನ್ನಡಕ್ಕೆ: ನಝೀರ್ ಅಬ್ಬಾಸ್


Sundar Sarukkai is one of India’s leading contemporary philosophers and public intellectuals, known for his work in the philosophy of science and interdisciplinary studies. Trained in physics and philosophy, he earned his PhD from Purdue University, USA, and has held key academic positions including at the National Institute of Advanced Studies, Bengaluru, and as Founder-Director of the Manipal Centre for Philosophy and Humanities. He is the author of several influential books, including Translating the World, Philosophy of Symmetry, and What is Science?, and continues to actively promote philosophy through research, writing, and public engagement.

ಅನ್ನಾ ಮೇರಿ ಶಿಮ್ಮೆಲ್

ನನ್ನ ದಾಹವನ್ನು ತಣಿಸದಿರು ಪ್ರಿಯಾ
ದಾಹದಲ್ಲಿಯೇ ಬದುಕಗೊಡು

ಅದಮ್ಯವಾಗಿ ಪ್ರೀತಿಸಲು ಬಿಡು
ನಿದ್ದೆಯೇ ಬಾಗಿಲಿನಿಂದ ಓಡಿಹೋಗುವಂತೆ

ಓಡಿ ಹೋಗಲಿ ನಿದ್ದೆ
ನನ್ನ ಉರಿವ ಕಣ್ಣಾಲಿಗಳ ನೋಡಿ,

ಮುಳುಗಿಹೋಗುವೆ ನೀನು,
ಬಳಿ ಬಂದರೆ
ಕಣ್ಣೀರ ಸಾಗರವ ದಾಟಲೆಂದು,

ಉನ್ಮತ್ತನಾಗುವೆ ಅದರಿಂದ
ಗುಟುಕನೆತ್ತಿಕೊಂಡರೆ ಕುಡಿಯಲೆಂದು,

ಅಂದು ನೀ ನನ್ನ ಕಂಗಳಿಗೆ ಸುರಿದಿದ್ದ
ಆ ಅಮೃತ ಸುರಾಹಿಯಿಂದ,

ಒಂದೊಮ್ಮೆ ನಿನ್ನ ಭವ್ಯ ಸೌಂದರ್ಯವನ್ನು
ಕಣ್ದುಂಬಿಕೊಂಡಿದ್ದ ಕಂಗಳವು
ನಿನ್ನನ್ನೇ ಕನ್ನಡಿಯಂತೆ ಪ್ರತಿಫಲಿಸಿದ್ದ
ಕಣ್ಣೀರಿನ ಹನಿಗಳವು

ನನ್ನನ್ನು ದಾಹದಲ್ಲಿರಲು ಬಿಡು ಪ್ರಿಯಾ
ಪ್ರಾಂಜಲವ ದಯಪಾಲಿಸದಿರು ನನಗೆ
ನಾನು ದಾಹದಲ್ಲಿರುವುದೇ
ನೀನು ದಾಹದಲ್ಲಿರುವುದಕ್ಕೆ ಸಾಕ್ಷಿಯೆಂದು

ಅನ್ನಾ ಮೇರಿ ಶಿಮ್ಮೆಲ್
ಅನುವಾದ : ಪುನೀತ್ ಅಪ್ಪು

ಕಲೆಗಾರಿಕೆಯನ್ನು ವಿಸ್ತರಿಸಿದ ಕತೆಗಾರರು

ಕಥನ ಕಲೆಗಾರಿಕೆಯ ತಾತ್ವಿಕ ಸಾಧ್ಯತೆಗಳನ್ನು ವಿಸ್ತರಿಸಿದ ಅಮರೇಶ ನುಗಡೋಣಿ ಕನ್ನಡದ ಮಹತ್ವದ ಕತೆಗಾರರು. ಅವರ ಕಥನ ಮಾದರಿ ಕನ್ನಡದಲ್ಲಿಯೇ ವಿಶಿಷ್ಟವೆಂಬಂತೆ ರೂಪತಾಳಿದೆ. ಸಾಹಿತ್ಯ ಚಳುವಳಿಗಳು ಸ್ಥಗಿತಗೊಂಡ ಕಾಲದಲ್ಲಿ ಬದುಕನ್ನು ಭಿನ್ನ ನೋಟಗಳಿಂದ, ವಿಭಿನ್ನ ಆಶಯಗಳಿಂದ ವಿಸ್ತರಿಸಿದ ನುಗಡೋಣಿ ಅವರು ಕಥೆಗಳಲ್ಲಿ ತಿಳಿಯ ಹೇಳುವ ಕ್ರಮವೇ ವಿಶಿಷ್ಟ ತಮ್ಮ ಸೀಮೆಯ ಬದುಕಿನ ಅನುಭವಗಳನ್ನು ತೋರುಗಾಣಿಸುವ ರೀತಿಯೇ ಹೊಸದು. ಅವರ ಯಾವುದೇ ಪಾತ್ರಗಳು ಅಗಾಧವಾದ ಬದುಕಿನ ಹಿನ್ನೆಲೆಯಿಂದ ಕೂಡಿವೆ. ಕಥೆಗಳಲ್ಲಿ ಅಧಿಕಾರ ಮತ್ತು ಅಧೀನತೆಯ ನೆಲೆಗಳನ್ನು, ಜೀವನ ಕ್ರಮದಲ್ಲಾದ ಪಲ್ಲಟಗಳನ್ನು, ಹೊಸ ಕಾಲದ ಸ್ಥಿತ್ಯಂತರಗಳನ್ನು ದಾಖಲಿಸುವಲ್ಲಿ ಜನಪ್ರಿಯ ಮಾದರಿಯ ಕ್ರಮಗಳನ್ನು ಮೀರಿದ ಕಂಪನವಿಸ್ತಾರವಿದೆ.

ಈ ನೆಲದ ಅನುಭಾವ, ಬಾಳಿನ ಹಿರಿತನ, ಕರುಣೆ ಅಂತಃಕರಣಗಳನ್ನು ಜನಸಮುದಾಯಗಳ ನಿತ್ಯಬದುಕಿನ ಲಯಗಳಲ್ಲಿ ಅವರು ಕಾಣುತ್ತಾರೆ. ಸಾಮುದಾಯಿಕ ಅನುಭವಗಳ ಆದ್ರ್ರವಾದ ಚಹರೆಗಳನ್ನು ಸ್ಥಳೀಯ ಅನನ್ಯತೆಯಲ್ಲಿ ಗುರುತಿಸುತ್ತಾರೆ. ಅದಕ್ಕೆ ತಕ್ಕಹಾಗೆ ಭಾಷೆಯನ್ನು ಹದಗೊಳಿಸಿದ್ದಾರೆ. ಈ ಕಾರಣಕ್ಕೆ ಅವರ ಕಥೆಗಳಿಗೆ ಸೂಕ್ತತೆ ಮತ್ತು ಅಗಾಧತೆಯ ಛಾಯೆ ಇದೆ. ಅವರ ಗದ್ಯ ಕುವೆಂಪು ಅವರ ಗದ್ಯವನ್ನು ನೆನಪಿಸುತ್ತದೆ. ಕನ್ನಡ ಕಥಾಪರಂಪರೆಯ ಸಮಗ್ರ ತಿಳುವಳಿಕೆ ಅವರನ್ನು ಸಾಕಷ್ಟು ಮುಂದೆ ನಡೆಸಿದೆ. ಅವರ ‘ದಡ ಸೇರಿಸು ತಂದೆ’ ಸಂಕಲನದ ಕತೆಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಹೊತ್ತಿನಲ್ಲಿ ಅವರು ‘ಪ್ರಶಸ್ತಿಯು ಇಡೀ ಕನ್ನಡ ಕಥಾ ಸಾಹಿತ್ಯಕ್ಕೆ ಸಂದ ಗೌರವ’ ಎಂದಿರುವುದು ವಿಶೇಷವಾಗಿದೆ.

ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಪಾಠಗಳ ಮಧ್ಯೆಯೇ ನಲವತ್ತು ವರ್ಷಗಳಲ್ಲಿ ಅರವತ್ತಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದಾರೆ. ಅಧ್ಯಾಪಕರಾಗಿ ನಿವೃತ್ತಿ ಹೊಂದಿದ ನುಗಡೋಣಿ ಅವರು ಕಥನವನ್ನು ಬಹುದೀರ್ಘ ಕಾಲದವರೆಗೆ ಧ್ಯಾನಿಸಿದವರು. ಅವರು ಮನಸ್ಸಿನಲ್ಲಿ ವರ್ಷಾನುಗಟ್ಟಲೆ ಕಥೆಗಳನ್ನು ಬೆಳೆಸುತ್ತಾರೆ. ಸಾಕಷ್ಟು ಕಾಯ್ದು ಬರೆಯುತ್ತಾರೆ. ಅವರ ಮೊದಲ ಕಥಾ ಸಂಕಲನ ‘ಮಣ್ಣು ಸೇರಿತು ಬೀಜ’ ಪ್ರಕಟವಾದದ್ದು ೧೯೯೧ರಲ್ಲಿ. ನಂತರ ‘ತಮಂಧದ ಕೇಡು’ (೨೦೦೭), ‘ಸವಾರಿ’ (೨೦೦೭), ‘ಓಡಲ ಹಂಗು’ (೨೦೧೪), ‘ಚುಕ್ಕಿ ಮದುವೆ ಪ್ರಸಂಗ’ (೨೦೧೭), ‘ದಡ ಸೇರಿಸು ತಂದೆ’ (೨೦೧೯), ಸೇರಿ ಇದುವರೆಗೆ ಒಟ್ಟು ಆರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಬುತ್ತಿ’ (೨೦೧೭) ಎಂಬ ಬಾಲ್ಯದ ಅನುಭವ ಕಥನವನ್ನು, ‘ದಂದುಗ’ (೨೦೨೦), ‘ಗೌರಿಯರು’ (೨೦೨೨) ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ಈ ಬರಹಗಳಲ್ಲಿ ಮನುಷ್ಯನ ವಿಕಾಸ ಮತ್ತು ಅವನತಿಯ ಹಂತಗಳನ್ನು ಬದುಕಿನ ಸಮಗ್ರ ವ್ಯಾಪಾರದಿಂದ ಕಾಣುವ ಪ್ರಯತ್ನಗಳನ್ನು ಮಾಡುತ್ತಾರೆ. ಹೈದ್ರಾಬಾದ್ ಕರ್ನಾಟಕದ ಜನಬದುಕು ಇಲ್ಲಿನ ಕೊರತೆಗಳನ್ನೂ ಮೀರಿ ಜೀವನಪ್ರವಾಹದಲ್ಲಿ ಕೊಚ್ಚಿಹೋಗದೆ ಹೇಗೆ ದೃಢವಾಗಿ ನಿಂತಿದೆ ಎಂದು ದಾಖಲಿಸುತ್ತಾರೆ. ದಂದುಗ ಕಾದಂಬರಿಯು ಕೊರೋನಾ ಕಾಲದ ಅನುಭವಗಳನ್ನು ಚಿತ್ರಿಸಿದರೆ ಗೌರಿಯರು ಕಾದಂಬರಿ ಹೊಸಕಾಲದ ಮಹಿಳೆಯರ ಬದುಕು ಮತ್ತು ಸಾಧ್ಯತೆಗಳನ್ನು ಸ್ತ್ರೀವಾದಿ ನೆಲೆಯಿಂದ ತೀವ್ರವಾಗಿ ಮತ್ತು ಸೂಕ್ಷ್ಮವಾಗಿ ಚಿತ್ರಿಸುತ್ತದೆ.

ಅಮರೇಶ ನುಗಡೋಣಿ ಅವರು ಸಂಶೋಧಕರಾಗಿಯೂ ನಾಡಿನಾದ್ಯಂತ ಹೆಸರಾದವರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕನ್ನಡ ಸಂವೇದನೆಯನ್ನು ರೂಪಿಸಿದವರು. ತತ್ವಪದಗಳ ಸಾಂಸ್ಕೃತಿಕ ಅಧ್ಯಯನವಾದ ‘ನುಡಿವ ಬೆಡಗು’ (೧೯೯೯). ‘ತತ್ವಪದ ಸಾಹಿತ್ಯ ಅಧ್ಯಯನ’ (೨೦೧೪), ಸಾಹಿತ್ಯ ವಿಮರ್ಶೆಯ – ‘ಶ್ರೀಕೃಷ್ಣ ಆಲನಹಳ್ಳಿ’ (೧೯೯೫), ‘ನುಡಿವ ಪಾಡು’ (೨೦೧೧), ‘ನುಡಿ ದಂದುಗ’ (೨೦೧೪), ಹಾಗೆಯೇ ‘ರಾಯಚೂರು ಜಿಲ್ಲೆಯಲ್ಲಿ ಹೈ. ಕ. ವಿಮೋಚನಾ ಚಳುವಳಿ’ (೨೦೦೦), ‘ಹೈದ್ರಾಬಾದು ಕರ್ನಾಟಕ ಹಾಡು ಪಾಡು’ (೨೦೦೩), ‘ಸಣ್ಣಕತೆ : ಸಾಮಾಜಿಕ ವಾಸ್ತವ’ (೨೦೧೬), ಭಾರತೀಯ ಸಾಹಿತ್ಯ ನಿರ್ಮಾಪಕರ ಮಾಲೆಯಲ್ಲಿ ‘ಜೇಡರ ದಾಸಿಮಯ್ಯ’ (೨೦೧೮). ‘ವಚನಗಳ ಅನುಸಂಧಾನ’ (೨೦೨೧), ‘ಮಧ್ಯಕಾಲೀನ ಸಾಹಿತ್ಯ ಸಂಸ್ಕೃತಿ’ (೨೦೨೨) ಎನ್ನುವ ಪುಸ್ತಕಗಳು ಸಂಶೋಧನೆ ಮತ್ತು ವಿಮರ್ಶೆಯ ಭಾಗವಾಗಿ ಬೆಳಕು ಚೆಲ್ಲಿದ ವಿಶಿಷ್ಟ ಬರಹಗಳು.

೧೯೯೫ರಲ್ಲಿ ಹೈದರಾಬಾದ್ ಕರ್ನಾಟಕದ ಪ್ರಾತಿನಿಧಿಕ ಕಥಾಸಂಕಲನವಾದ ‘ಬಿಸಿಲ ಹನಿಗಳು’, ಕನ್ನಡ ಸಾಹಿತ್ಯ ಅಕಾಡೆಮಿಗೆ ‘ಸಣ್ಣಕತೆ:೧೯೯೭’, ಮಹಾಂತೇಶ ಮಸ್ಕಿ ಅವರೊಂದಿಗೆ ಜಂಬಣ್ಣ ಅಮರಚಿಂತ ಅವರ ಗೌರವ ಗ್ರಂಥವಾದ ‘ಅಮರಚಿಂತ’, ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಪುಟವಾದ ‘ಕಲ್ಯಾಣ ಕರ್ನಾಟಕ’, ಎಚ್.ಎಸ್. ರಾಘವೇಂದ್ರರಾವ್ ಅವರ ಸಾಹಿತ್ಯದ ಕುರಿತ ವಿಮರ್ಶಾ ಕೃತಿಯಾದ ‘ನುಡಿ ಬಾಗಿನ’ ದಂಡೆ ನಂದೀಶ್ವರ ಅವರೊಂದಿಗೆ ‘ಬಸವಣ್ಣ’ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ. ಹಾಗೆಯೇ ವಿವಿಧ ವಿಚಾರ ಸಂಕಿರಣಗಳನ್ನು ಏರ್ಪಡಿಸಿದ ನಿಮಿತ್ತ ಶೂನ್ಯಸಂಪಾದನೆಗಳು, ಬಸವಣ್ಣನ ವಚನಗಳು, ಅಲ್ಲಮಪ್ರಭು ವಚನಗಳು, ಹರಿಚಂದ್ರ ಚಾರಿತ್ಯ, ಜೈಮಿನಿ ಭಾರತ, ಗ್ರಾಮಾಯಣ ಕುರಿತ ‘ಸಾಂಸ್ಕೃತಿಕ ಮುಖಾಮುಖಿ’ಗಳ ಸಂಪಾದನೆಗಳನ್ನು ಅಷ್ಟೇ ಅಲ್ಲದೆ ‘ನಾನೇಕೆ ಬರೆಯುತ್ತೇನೆ?’, ‘ಕಥೆ ಹುಟ್ಟುವ ಪರಿ’. ‘ಪುರಂದರದಾಸರ ಸಾಹಿತ್ಯ ಅಧ್ಯಯನಗಳು’, ‘ದಿನಕರ ದೇಸಾಯಿ -೧೦೦. ‘ಸರ್ವಜ್ಞನ ತ್ರಿಪದಿಗಳು : ಅನುಸಂಧಾನದ ನೆಲೆಗಳು’, ಸಂಶೋಧನಾ ವೈಧಾನಿಕತೆಯ ಕುರಿತ ‘ಕನ್ನಡ ಸಂಶೋಧನೆಯ ವೈಧಾನಿಕತೆಗಳು’ ಪುಸ್ತಕಗಳನ್ನು ವಿಚಾರಸಂಕಿರಣಗಳಿಂದ ಸಂಪಾದಿಸಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗದಿಂದ ಪ್ರಕಟಿಸಿದ್ದಾರೆ.

ಅಷ್ಟೇ ಅಲ್ಲದೆ ನುಗಡೋಣಿ ಅವರ ಅನೇಕ ಕತೆಗಳು ರಂಗ ಪಠ್ಯಗಳಾಗಿ, ನಾಟಕಗಳಾಗಿ ಮತ್ತು ಸಿನಿಮಾಗಳಾಗಿ ರೂಪಾಂತರಗೊಂಡಿವೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕನಸೆಂಬೋ ಕುದುರೆಯನೇರಿ’ ‘ಸವಾರಿ’ ಕತೆಯನ್ನು ಆಧರಿಸಿದೆ. ಹಾಗೆಯೇ ‘ನೀರು ತಂದವರು’ (ನೀರು ತಂದವರು ಕತೆ), ‘ಆಲಿಂಡಿಯಾ ರೇಡಿಯೋ’ (ದೈವಕ್ಕೆ ಮೊದಲು ಶರಣೆಂಬೆವು ಕತೆ), ‘ವಾಘಚಿಪಾಣಿ’ (ಧರೆ ಉರಿದರೆ ಕತೆ) ಆಸಿಫ್ ಕ್ಷತ್ರಿಯ, ರಂಗಸ್ವಾಮಿ ಮತ್ತು ನಟೇಶ್ ಹೆಗಡೆ ಅವರ ನಿರ್ದೇಶನದಲ್ಲಿ ಸಿನಿಮಾಗಳಾಗಿ ಪ್ರಶಸ್ತಿಗಳನ್ನೂ ಪಡೆದಿವೆ.

ಮಮತೆ ವಾತ್ಸಲ್ಯಗಳಿಂದ ಒಡನಾಡುವ ಅಮರೇಶ ನುಗಡೋಣಿ ಅವರದು ಯಾವಾಗಲೂ ಬೆಳೆಯುವ ಜೀವನ್ಮುಖಿ ವ್ಯಕ್ತಿತ್ವ, ಬದುಕಿನ ಬಗೆಗೆ ಅವರಿಗಿರುವ ಜೀವನಾಸಕ್ತಿ ತೀವ್ರವಾದದ್ದು. ಜೊತೆಗೆ ಇದ್ದಷ್ಟು ಅಪ್ತವಾದ ಸೃಜನಶೀಲ ವಾತಾವರಣವನ್ನು ನಿರ್ಮಿಸುವವರು. ಮುಗ್ಧವಾಗಿಯೇ ತಮ್ಮಲ್ಲಿನ ಪ್ರಬುದ್ಧತೆಯನ್ನು ಕಾಪಿಟ್ಟುಕೊಂಡು ತಮ್ಮ ಸಾತ್ವಿಕ ಗುಣದಿಂದ ನಮ್ಮಲ್ಲಿ ಜೀವನಾಸಕ್ತಿಯನ್ನು ಎಚ್ಚರಿಸುವಂತೆ ಬೆರೆಯುತ್ತಾರೆ. ಅವರ ಬದುಕಿನ ವಿಸ್ತರಣೆಯಾಗಿ ಅವರ ಕತೆಗಳಿವೆ. ಅವರು ನಂಬಿದ ಮೌಲ್ಯಗಳು ಜೀವಪರ, ಅವರ ಬದುಕು ಮತ್ತು ಬರಹಗಳಲ್ಲಿ ವಚನ ಸಾಹಿತ್ಯ ಚಳವಳಿಯ ದಟ್ಟವಾದ ಪ್ರಭಾವವಿದೆ. ಅವರ ಮನಸ್ಸು ದಡಗಳಲ್ಲಿ ಬೆಳೆದು ನಿಂತ ಗಿಡಬಳ್ಳಿಗಳಿಗೆ ಸದಾ ನೀರೂಡುತ್ತ ಚಲಿಸುವ ನದಿಯ ಹಾಗೆ. ಹರಿಯುವ ನದಿಗೆ ಕತೆಗಳು ಹೆಚ್ಚು.

‘ತಮಂಧದ ಕೇಡು’, ‘ಸವಾರಿ’, ‘ಏ ದಿಲ್ ಮಾಂಗೆ ಮೋರ್’, ‘ಪರಿಣಾಮಿ’, ‘ಧರೆ ಉರಿದರೆ’, ‘ಧೈವಕ್ಕೆ ಮೊದಲು ಶರಣೆಂಬೆವು’, ಮೊದಲಾದ ಕತೆಗಳಿಂದ ಕನ್ನಡ ಕಥಾಜಗತ್ತಿನಲ್ಲಿ ಮಹತ್ವದ ಲೇಖಕನಾಗಿ ಉಳಿಯುವ ಅಮರೇಶ ನುಗಡೋಣಿ ಅವರು ಮಾಸ್ತಿ. ಅನಂತಮೂರ್ತಿ, ಯಶವಂತ ಚಿತ್ತಾಲ, ಲಂಕೇಶ್, ತೇಜಸ್ವಿ ಅವರ ಸ್ಥಾನವನ್ನು ತುಂಬಬಲ್ಲ ಶಕ್ತಿಶಾಲಿ ಕತೆಗಾರರಾಗಿ ನಿಲ್ಲುತ್ತಾರೆ. ಪ್ರಶಸ್ತಿ ಸಂಭ್ರಮದಲ್ಲಿ ಇರುವ ಕತೆಗಾರರಿಗೆ ಇದೊಂದು ಸಣ್ಣ ನುಡಿಗೌರವ. ಹೇಳಬೇಕಾದದ್ದು ಇನ್ನೂ ಉಳಿದಿದೆ.

-ಮಂಜುನಾಥ ಬಾದಾಮಿ


ಅಗ್ನಿದಿವ್ಯದ ಕವಿ ಬಶೀರ್ ಬದ್ರ್ !

ಅದು 1987ನೇ ಇಸವಿಯ ಏಪ್ರಿಲ್ ತಿಂಗಳು
ದೆಹಲಿಯಲ್ಲಿ ನಡೆಯುತ್ತಿದ್ದ ಮುಶಾಇರವೊಂದರಲ್ಲಿ ಕವಿ‌ಯೊಬ್ಬ ಸೌಹಾರ್ದತೆ ಮತ್ತೆ ಸಹೋದರತ್ವದ ಕುರಿತಾದ ಸುಂದರವಾದ ಹಾಗೂ ಎಂದಿನಂತೆಯೇ ಮೊನಚು ಮತ್ತು ತಿಳಿ ಹಾಸ್ಯದಿಂದ ಕೂಡಿದಂತಹ ಗಝಲಿನ ರದೀಫ್‌ಗಳನ್ನು ಒತ್ತಿ ಒತ್ತಿ ಹೇಳುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಿದ್ದ.

ಅದೇ ಹೊತ್ತಿನಲ್ಲಿ ಕವಿಯ ಹುಟ್ಟೂರಾದ ಮೀರತಿನಲ್ಲಿ ಕೋಮು ಗಲಭೆಯೊಂದು ದಿಢೀರನೆ ಸ್ಫೋಟಗೊಂಡಿತ್ತು. ಹಿಂದೂ ಮುಸ್ಲಿಮರಿಬ್ಬರು ಸೇರಿ ಹಲವಾರು ಮನೆಗಳನ್ನು ಸುಟ್ಟುಹಾಕಿದ್ದರು. ಅದರಲ್ಲಿ ಒಂದು ಮನೆ ಆ ಕವಿಯದಾಗಿತ್ತು. ಕೇವಲ ಕವಿಮನೆ ಮಾತ್ರವಲ್ಲ ಆ ಕವಿಯ ಗ್ರಂಥಾಲಯ, ಹಲವಾರು ಕವನ ಸಂಕಲನಗಳ ಹಸ್ತಪ್ರತಿಗಳು ಸುಟ್ಟುಕರಕಲಾಗಿದ್ದವು. ಮನೆಮಂದಿಯೆಲ್ಲ ಕೂದಲೆಳೆಯಲ್ಲಿ ಬದುಕುಳಿದಿದ್ದರು. ಆ ಕವಿ ಆತ ಬೇರಾರೂ ಅಲ್ಲ, ಗಝಲ್ ಸಾಮ್ರಾಟ ಬಷೀರ್ ಬದ್ರ್.

ಮರುದಿನ ಬೆಳಗಿನ ರೈಲಿಗೆ ಮೀರತಿಗೆ ಬಂದಿಳಿದ ಕವಿ ತಾನು ಗೆಳೆಯರೊಂದಿಗೆ ನಕ್ಕುನಲಿದಿದ್ದ ಗಲ್ಲಿಗಳಲ್ಲಿ ದ್ವೇಷದ ಹೆಬ್ಬಾವುಗಳು ಬುಸುಗುಟ್ಟುವುದನ್ನು ನೋಡಿದ. ತನ್ನವರೆನಿಸಿಕೊಂಡವರೇ ಬೆವರುಸುರಿಸಿ ಕಟ್ಟಿದ ತನ್ನ ಮನೆಗೆ, ರಕ್ತ ಹರಿಸಿ ಬರೆದಿದ್ದ ತನ್ನ ಕವಿತೆಗಳಿಗೆ, ಜೀವಮಾನದಲ್ಲಿ‌ ಕಾಪಿಟ್ಟ ಪುಸ್ತಕಗಳಿಗೆ ಬೆಂಕಿಯಿಟ್ಟದ್ದನ್ನು ನೋಡಿ ಕಣ್ಣೀರು ಹರಿಸಿದ.

ಬಡೇ ಶೌಕ್ ಸೇ ಮೇರಾ ಘರ್ ಜಲಾ
ಕೋಯೀ ಆಂಚ್ ತುಜ್ ಪೇ ನಾ ಆಯೇಗೀ..

ಸಂತೋಷದಿಂದ ನನ್ನ ಮನೆಯನ್ನು ಸುಟ್ಟುಹಾಕು
ನಿನಗೆ ಯಾವ ಕಳಂಕವೂ ತಟ್ಟದಿರಲೀ ಎಂದು ಉದ್ಗರಿಸಿದ.

ಸುಟ್ಟು ಕರಕಲಾದ ಮನೆಯ ಗೋಡೆಯ ಕೆಳಗೆ ಕುಳಿತು ಪುಸ್ತಕಗಳ ಬೀದಿಯನ್ನು ನೋಡುತ್ತಾ ಕವಿ ಯೋಚಿಸುತ್ತಿದ್ದ,
ಸುಟ್ಟು ಹೋದ ಮನೆಗಳನ್ನು ಮತ್ತೆ ಕಟ್ಟಬಹುದು, ದ್ವಂಸಗೊಂಡ ಊರು ಮತ್ತೆ ಸರಿಯಾಗಬಹುದು, ಮುರಿದ ಸೇತುವೆ ರಿಪೇರಿಯಾಗಬಹುದು ಆದರೆ… ಒಡೆದು ಹೋದ‌ ಮನಸ್ಸುಗಳು! ಹತ್ತಿ ಉರಿಯುವ ಬೆಂಕಿಯನ್ನು ನೀರಿನಿಂದ‌ ನಂದಿಸಬಹುದು ಆದರೆ ಎದೆಯಲ್ಲಿ ಧಗಧಗಿಸುತ್ತಿರುವ ಕೋಮು ದಳ್ಳುರಿಯನ್ನು ನಂದಿಸುವ ನೀರನ್ನು ಎಲ್ಲಿಂದ ತರಲಿ?? ಈ ಪಾರಿವಾಳಗಳ ಗೂಡಿನಲ್ಲಿ ವಿಷ ಸರ್ಪಗಳನ್ನು ಇಟ್ಟವರಾರು? ಕವಿ ದುಃಖದಿಂದ ಬಡಬಡಿಸಿದ

ಲೋಗ್ ಟೂಟ್ ಜಾತೇ ಹೈಂ
ಏಕ್ ಘರ್ ಬನಾನೆ ಮೆ
ತುಮ್ ತರಸ್ ನಹೀ ಕಾತೆ
ಬಸ್ತಿಯ ಜಲಾನೆ ಮೆ…

ಸೋತುಹೋಗುವರು ಒಂದು
ಮನೆ ಕಟ್ಟುವಷ್ಟರಲ್ಲೇ ಜನರು
ದಣಿಯಲಿಲ್ಲವಲ್ಲೋ ನೀನು
ಇಡೀ ಊರನ್ನೇ ಸುಟ್ಟರೂ !

ಪಾರಿವಾಳಗಳ ಅಸಹಾಯಕತೆಯಿದು
ಇದನ್ನೂ ಹೇಳಲಾರವು
ಯಾರು ಇರಿಸುತ್ತಿರುವರು ಸರ್ಪಗಳನ್ನು
ತಮ್ಮ ಗೂಡಿನಲ್ಲಿ !

ಸದ್ದು ಮಾಡುವ ಕಲ್ಲುಗಳನ್ನು
ಎದೆಯೆಂದು ತಿಳಿಯುವರು ಜನರು
ಜನುಮವೇ ಕಳೆದು ಹೋಗುವುದು
ಎದೆಯನ್ನು ಹೃದಯವನ್ನಾಗಿಸುವುದರಲ್ಲಿ !

ಜೀವಮಾನದ‌ ಸಂಪಾದನೆಯ ಜೊತೆಗೆ ಹಲವಾರು ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿಗಳನ್ನೂ ಕಳೆದುಕೊಂಡಿದ್ದ ಬಷೀರ್ ಬದ್ರ್ ತೀವ್ರ ಆಘಾತ‌ ಮತ್ತು ಖಿನ್ನತೆಗೆ ಒಳಗಾಗಿದ್ದರು. ಸ್ವಲ್ಪ ಕಾಲದವರೆಗೆ ಅವರ ಕುಟುಂಬ ಚಲನಚಿತ್ರ ಮತ್ತು ಸಂಗೀತ ನಿರ್ದೇಶಕ ವಿಶಾಲ್ ಭಾರಧ್ವಾಜ್ ಮನೆಯಲ್ಲಿ ಆಶ್ರಯಪಡೆಯಿತು. ಬಷೀರ್ ಬದ್ರ್ ಕವಿಯ ಅಪ್ಪಟ ಅಭಿಮಾನಿಯಾಗಿದ್ದ ವಿಶಾಲ್ ಭಾರಧ್ವಾಜ್ ಗೆ ಬಷೀರ್ ವೈಯ್ಯಕ್ತಿಕವಾಗಿ ಭೇಟಿಯಾಗುತ್ತಿದ್ದಾಗ ವಾಚಿಸುತ್ತಿದ್ದ ಅಸಂಖ್ಯಾತ ಗಝಲ್ ಗಳ ಮತ್ಲಾಗಳು , ತಖಲ್ಲುಸ್ ಗಳು ನೆನೆಪಿದ್ದವು. ಆ‌ ನೆನಪೇ ಬಷೀರ್ ಬದ್ರ್ ಶೇಕಡಾ ಅರುವತ್ತರಷ್ಟು ಗಝಲ್ ಗಳನ್ನು ಮತ್ತೆ ಕಟ್ಟಲು ಸಾಧ್ಯವಾಯಿತು. ಮಾನಸಿಕವಾಗಿ ನೊಂದುಹೋಗಿದ್ದ ಕವಿ ಮೀರತ್‌ನಿಂದ ಭೋಪಾಲ್‌ಗೆ ತಮ್ಮ ನೆಲೆಯನ್ನು ಬದಲಾಯಿಸಿದರು.‌

ಭಾರತದ ರಾಜಕೀಯ ನಾಯಕರು (ಪ್ರಧಾನಿ ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮುಂತಾದವರು) ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ರ‍್ಯಾಲಿಗಳಲ್ಲಿ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸಲು ಬಷೀರ್ ಬದ್ರ್ ಕವಿತೆಗಳನ್ನು ಬಳಸಿಕೊಂಡರು.‌ 2016 ರಲ್ಲಿ ರಾಹುಲ್ ಗಾಂಧಿ ಅವರು ನೋಟು ಅಮಾನ್ಯೀಕರಣದ (Demonetisation) ವಿರುದ್ಧ ಇದೇ “ಲೋಗ್ ಟೂಟ್ ಜಾತೇ ಹೈ…” ಗಝಲಿನ ಸಾಲುಗಳನ್ನು ಬಳಸಿದ್ದರು.

ಬಶೀರ್ ಬದ್ರ್ ಅವರು ಸಾಂಪ್ರದಾಯಿಕ ಉರ್ದು ಗಝಲ್‌ಗಳಿಗೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳವಾದ ಆದರೆ ಆಳವಾದ ಉರ್ದು ಮತ್ತು ಹಿಂದಿ ಮಿಶ್ರಿತ ಭಾಷೆಯನ್ನು ಅವರು ಬಳಸುತ್ತಿದ್ದರು. ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಅವರಿಗೆ ಪ್ರತಿಷ್ಠಿತ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಕೂಡ ಲಭಿಸಿತ್ತು .

ಇನ್ನು ಬದುಕು ಸಾಕು ಎನಿಸಿತ್ತೋ ಏನೋ ಒಂದು ದಿನ ಬಷೀರ್ ಸಾಬ್ ಹೀಗೆ ಬರೆದರು,

ವಿಲಕ್ಷಣ ಹಣತೆ ನಾನು
ಹಗಲಿರುಳೆನ್ನದೆ ಉರಿಯುತ್ತಲಿರುವೆ
ಆ ಗಾಳಿಗೆ ಆರಿಸಲು ಹೇಳಿ
ದಣಿದುಹೋಗಿರುವೆ ನಾನು !

ಧೂಳು ಮಾತ್ರವಲ್ಲ ಆದಿಮಕಾಲದ
ಹಳೆಯದಾರಿಯಾಗಿರುವೆ ನಾನು
ನಿನ್ನೆಯಷ್ಟೇ ಇಲ್ಲಿಂದ ಹಾದುಹೋಗಿದೆ
ಒಂದು ಕಾರವಾನು

ನಿದ್ದೆಗೆ ಜಾರಿದಾಗ ನಿಮ್ಮ ಕೈಗಳಿಂದ
ಮುಚ್ಚಿಬಿಡಿ ನನ್ನ ಕಣ್ಣುಗಳನ್ನು
ಓದುತ್ತಲೇ ನಿದ್ದೆಗೆ ಜಾರಿಬಿಡುವಂತಹಾ
ಒಂದು ಕಥೆಯಷ್ಟೆ ನಾನು !

ಕೋಮುದಳ್ಳುರಿಯಲ್ಲಿ ತನ್ನ ಬದುಕನ್ನೇ ಸುಟ್ಟುಕೊಂಡರೂ ಸದಾ ಸೌಹಾರ್ದ ಭಾರತದ ಕನಸನ್ನು ಬಡಬಡಿಸುತ್ತಿದ್ದ ಕವಿ ತಮ್ಮ ಬದುಕಿನ ಸಂದ್ಯಾಕಾಲದಲ್ಲಿ ಡಿಮೆಂಶಿಯಾ ಎಂಬ ಸ್ಮರಣರೋಗಕ್ಕೆ ತುತ್ತಾದರು ಮತ್ತು 2026 ಮೇ ತಿಂಗಳಿನ 28 ರ ಬಕ್ರೀದಿನ ಹಬ್ಬದ ಪವಿತ್ರ ಬಲಿದಾನದ ದಿನ ತಮ್ಮ 91 ನೇ ವಯಸ್ಸಿನಲ್ಲಿ ಭಾವಪ್ರಪಂಚಕ್ಕೆ ಕಾವ್ಯ ಬಲಿಯನ್ನು ನೀಡಿ ಹಸಿದಿರುವ ಸಹೃದಯರ ಹೃದಯೋದರಕ್ಕೆ ತಂಪನೆರೆದಿದ್ದ ಕವಿ ಶಾಶ್ವತ ನಿದ್ದೆಗೆ ಜಾರಿದರು.

ಕವಿ ಬಷೀರ್ ಬದ್ರ್ ಬಕ್ರೀದಿನ ಪವಿತ್ರ ಬಲಿದಾನದ ದಿನವೇ ಬದುಕಿನ‌ ಯಾತ್ರೆ ಮುಗಿಸಿದರು. ದೊರೆ ನಮ್ರೂದನು ಇಬ್ರಾಹಿಂರನ್ನು ಬೆಂಕಿಯಲ್ಲಿ ದೂಡಿ ಪರೀಕ್ಷಿಸಿದಂತೆ ಕವಿ ಬಷೀರ್ ಬರ್ದ್ ರನ್ನು ಕೂಡಾ ಭಾರತದ ಕೋಮು ದಳ್ಳುರಿಯು ಪರೀಕ್ಷಿಸಿತ್ತು. ಆದರೆ ಬಷೀರ್ ಬದ್ರ್ ಕೊನೆಯವರೆಗೂ ಕೋಮುವಾದದ ವಿರುದ್ಧ ಬರೆದರೇ ಹೊರತು ಕೋಮುವಾದಿಯಾಗಲಿಲ್ಲ. ಬದಲಿಗೆ ಕೋಮುದಳ್ಳುರಿಯಲ್ಲಿ ಉರಿದು‌ ಪುಟಗೊಂಡ ಅಗ್ನಿದಿವ್ಯದಂತೆ ಹೊರಹೊಮ್ಮಿದರು.

‘ಉಜಾಲೇ ಅಪನೀ ಯಾದೋಂ ಕೇ ಹಮಾರೇ ಸಾಥ್ ರಹನೇ ದೋ
ನ ಜಾನೇ ಕಿಸ್ ಗಲೀ ಮೇ ಜಿಂದಗೀ ಕೀ ಶಾಮ್ ಹೋ ಜಾಯೇ…’

ನನ್ನ ನೆನಪುಗಳ ಹಣತೆಯೊಂದು ನನ್ನ ಕೈಯ್ಯಲ್ಲಿ ಸದಾ ಇರಲಿ ಯಾವ ತಿರುವಿನಲ್ಲಿ ಬದುಕಿನ ಮುಸಂಜೆಯಾಗುವುದೋ ಯಾರು ಬಲ್ಲರು….. ತಮ್ಮ ನೆನಪುಗಳ ಹಣತೆಯೊಂದನ್ನು ಹಿಡಿದುಕೊಂಡು ಬಷೀರ್ ಸಾಬ್ ಹೊರಟೇಹೋದರು.‌

ಕವಿಗೆ ಸಾವಿಲ್ಲ ಆತನ ಕವಿತೆಗಳಲ್ಲಿ ಉಸಿರಾಡುತ್ತಾನೆ ಎಂಬುದು ಲೋಕೋಕ್ತಿಯಾಗಿರಬಹುದು ಆದರೆ ಕವಿಯ ಅಂತಿಮ ಯಾತ್ರೆಗೆ ಕೇವಲ ಇಪ್ಪತ್ತು ಜನರು ಮಾತ್ರ ಸೇರಿದ್ದರು ಎಂಬುದು ಕವಿತೆಗಳೇ ಶಾಶ್ವತ, ಎಲ್ಲಾ ಮನ್ನಣೆಗಳೂ ಕವಿತೆಗಳಿಗೆ ಮಾತ್ರ, ಕವಿಯು ನಿಮಿತ್ತ‌ ಮಾತ್ರ ಎಂಬ ಸುಡುವಾಸ್ತವವನ್ನು ಮತ್ತೆ ನೆನಪಿಸಿತು.


ನನಗೆ ಯಾವದೇ ಸಮಾಧಿಯ‌ ಅವಶ್ಯಕತೆಯಿಲ್ಲ, ಸಜ್ಜನರ ಹೃದಯವೇ ನನ್ನ ಸಮಾಧಿ ‘ ಎಂಬ ರೂಮಿಯ ವಾಕ್ಯದಂತೆ ಬಷೀರ್ ಬದ್ರರ ಗಝಲ್ಗಳು ಸಹೃದಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಲಿವೆ.‌

-ಪುನೀತ್ ಅಪ್ಪು
(ಲೇಖನದಲ್ಲಿ ಉಲ್ಲೇಖಿಸಲಾದ ಎಲ್ಲಾ ಕವಿತೆಗಳ ಕನ್ನಡ ಅನುವಾದಗಳು ಲೇಖಕರದ್ದು)

ಬಶೀರ್ ಬದ್ರ್ ಕವಿತೆಗಳು

ಸೋತುಹೋಗುವರು ಒಂದು
ಮನೆ ಕಟ್ಟುವಷ್ಟರಲ್ಲೇ ಜನರು
ದಣಿಯಲಿಲ್ಲವಲ್ಲೋ ನೀನು
ಇಡೀ ಊರನ್ನೇ ಸುಟ್ಟರೂ !

ಪಾರಿವಾಳಗಳ ಅಸಹಾಯಕತೆಯಿದು
ಇದನ್ನೂ ಹೇಳಲಾರವು
ಯಾರು ಇರಿಸುತ್ತಿರುವರು ಸರ್ಪಗಳನ್ನು
ತಮ್ಮ ಗೂಡಿನಲ್ಲಿ !

ಸದ್ದು ಮಾಡುವ ಕಲ್ಲುಗಳನ್ನು
ಎದೆಯೆಂದು ತಿಳಿಯುವರು ಜನರು
ಜನುಮವೇ ಕಳೆದು ಹೋಗುವುದು
ಎದೆಯನ್ನು ಹೃದಯವನ್ನಾಗಿಸುವುದರಲ್ಲಿ !


ವಿಲಕ್ಷಣ ಹಣತೆ ನಾನು
ಹಗಲಿರುಳೆನ್ನದೆ ಉರಿಯುತ್ತಲಿರುವೆ
ಆ ಗಾಳಿಗೆ ಆರಿಸಲು ಹೇಳಿ
ದಣಿದುಹೋಗಿರುವೆ ನಾನು

ಧೂಳು ಮಾತ್ರವಲ್ಲ ಆದಿಮಕಾಲದ ಹಳೆಯದಾರಿಯಾಗಿರುವೆ ನಾನು
ನಿನ್ನೆಯಷ್ಟೇ ಇಲ್ಲಿಂದ ಹಾದುಹೋಗಿದೆ
ಒಂದು ಕಾರವಾನು

ನಿದ್ದೆಗೆ ಜಾರಿದಾಗ ನಿಮ್ಮ ಕೈಗಳಿಂದ ಮುಚ್ಚಿಬಿಡಿ ನನ್ನ ಕಣ್ಣುಗಳನ್ನು
ಓದುತ್ತಲೇ ನಿದ್ದೆಗೆ ಜಾರಿಬಿಡುವಂತಹಾ
ಒಂದು ಕಥೆಯಷ್ಟೆ ನಾನು

ಉರ್ದು ಮೂಲ: ಬಶೀರ್ ಬದ್ರ್
ಕನ್ನಡಕ್ಕೆ ಪುನೀತ್ ಅಪ್ಪು




ಬನೀ ಆದಮ್

ಒಂದೇ ಜೀವರತ್ನದಿಂದ ಉದಿಸಿದವರು
ಒಂದು ದೇಹದ ಅಂಗಾಂಗಳಂತೆ
ಆದಮನ ಸಂತತಿ ನಾವು ಮನುಷ್ಯರೆಲ್ಲಾ

ಕಾಲಚಕ್ರದ ಹೊಡೆತಕ್ಕೆ ಸಿಲುಕಿ
ಒಂದು ಅಂಗವು ನರಳಿದಾಗಲೆಲ್ಲಾ
ಉಳಿದ ಅಂಗಗಳೂ ಸುಖದಿಂದಿರಲು ಸಾಧ್ಯವಿಲ್ಲ

ಪರರ ದುಃಖಕ್ಕೆ ನಿನ್ನ ಮನಸ್ಸು ಕರಗದಿದ್ದರೆ
ಮನುಷ್ಯ(ಆದಮಿ)ನೆಂದುಕೊಳ್ಳಲು ನಿನಗೆ ಯೋಗ್ಯತೆಯಿಲ್ಲ

– ಸಾದಿ ಶಿರಾಝಿ
ಅನುವಾದ : ಪುನೀತ್ ಅಪ್ಪು


ಇರಾನ್ ದೇಶ ಯುನೈಟೆಡ್ ನೇಷನ್ಸ್ ಗೆ ನೀಡಿದ ಕಾರ್ಪೆಟ್‌ನ ಜೊತೆಗೆ ಶಾದಿ ಶಿರಾಝಿಯ ವಿಶ್ವಮಾನವತೆಯನ್ನು ಸಾರುವ ಈ ‘ಬನೀ ಆದಮ್’ ಕವಿತೆಯ ಫಲಕವನ್ನೂ ಸ್ಥಾಪಿಸಲಾಗಿದೆ.

1 2 3 19