ಜಿದ್ದಾ : ಯಾತ್ರಿಕರಿಂದ ನಿರ್ಮಿತವಾದ ಜಾಗತಿಕ ನಗರ

ಜನರಿಂದ ತುಂಬಿ ತುಳುಕುತ್ತಿರುವ
ಬಾಬೆಲ್‌ನ ಮೋಡಿಯೇ
ಓ ಜನರೇ..
ಮೆಕ್ಕಾದ ಬಾಗಿಲೇ

ಖಂಡಿತವಾಗಿಯೂ
ಜಿದ್ದಾವೇ ಮೊದಲು
ಜಿದ್ದಾವೇ ಕೊನೆಯೂ

ತಲಾಲ್  ಹಂಝರ ‘ಜಿದ್ದಾ ಗೈರ್’ ಎಂಬ ಕವಿತೆಯ ಆಯ್ದ ಸಾಲುಗಳಿವು. ಜಿದ್ದಾ ನಗರವು ಕೈರೋ,ಬೈರೂತ್, ಕಾಸಾಬ್ಲಾಂಕಾ ಹಾಗೂ ಇನ್ನಿತರ ಅರಬ್ ನಗರಗಳಿಗಿಂತ ಶ್ರೇಷ್ಠವೆಂಬುದು ಕವಿಯ ಅಭಿಮತ. ಜಿದ್ದಾ ವಿಭಿನ್ನವಾದ  ನಗರವೆಂದು ತಬೂಕ್ ನಿವಾಸಿಯಾದ ಕವಿ ಸೇರಿದಂತೆ ಮೂಲನಿವಾಸಿಗಳು ಹಾಗೂ ಇನ್ನಿತರರು ಅಭಿಪ್ರಾಯಪಡುತ್ತಾರೆ. ಆದರೆ ಇದಕ್ಕೆ ಇವರೆಲ್ಲರೂ  ಹೇಳುವ  ಕಾರಣಗಳೂ  ವಿಭಿನ್ನವಾಗಿವೆ. ಸೌದಿ ಟೂರಿಸಂ ಏಜೆನ್ಸಿ ಒದಗಿಸುವ ಶಾಂತಿಯುತವಾದ ಜೀವನಶೈಲಿ, ಜಿದ್ದಾ ಸಮ್ಮರ್ ಫೆಸ್ಟಿವಲ್ ಇವೆಲ್ಲವೂ ಜಿದ್ದಾ ನಗರವನ್ನು ಭಿನ್ನವಾಗಿಸುತ್ತದೆ. ತುಲನಾತ್ಮಕವಾಗಿ, ಇತರ ಅರೇಬಿಯನ್ ನಗರಗಳಿಗಿಂತ ಜಿದ್ದಾ ನಗರದಲ್ಲಿ ನಗರ ಯೋಜನೆಯ ಕೊರತೆಗಳು ಎದ್ದು ಕಾಣುತ್ತವೆ.

ಜಿದ್ದಾ ನಗರದ ಕುರಿತು ನನ್ನ ವ್ಯಕ್ತಿಗತ ನಿಲುವನ್ನು ರೂಪಿಸುವಲ್ಲಿ, 2000 ಇಸವಿಯಲ್ಲಿ ಪ್ರಥಮ ಬಾರಿಗೆ ಜಿದ್ದಾಗೆ ಭೇಟಿ ಕೊಟ್ಟಾಗ ಅನುಭವಕ್ಕೆ ಬಂದ ಜಿದ್ದಾದ ವೈವಿಧ್ಯತೆಯು ಮುಖ್ಯ ಕಾರಣವಾಗಿದೆ. ಸುಮಾರು ನಾಲ್ಕು ದಶಲಕ್ಷದಷ್ಟು ಜನಸಂಖ್ಯೆಯಿರುವ ಜಿದ್ದಾ ನಗರ ನೆಲೆನಿಂತಿರುವುದು, ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾವನ್ನು ಒಳಗೊಂಡಿರುವ ಹಿಜಾಝ್ ಪ್ರಾಂತ್ಯದಲ್ಲಾಗಿದೆ. ಸೌದಿ ಅರೇಬಿಯಾದ ಆಧುನೀಕರಣಗೊಂಡ ಇನ್ನಿತರ ನಗರಗಳಿಗೆ ಅಪವಾದವೆಂಬಂತೆ ಜಿದ್ದಾ ಇಂದಿಗೂ ಪುರಾತನ ಗರಿಮೆಯೊಂದಿಗೆ ನೆಲೆನಿಂತಿದೆ. ಲಾಗಾಯ್ತಿನಿಂದಲೂ ಓಲ್ಡ್ ಮಾರ್ಕೆಟ್ ಸ್ಟ್ರೀಟ್ (ಸೂಕ್) ನಗರದ ಪ್ರಧಾನ ಜವಳಿ ಕೇಂದ್ರ. ಪೂರ್ವಜರ ಸಿರಿತನದ ದ್ಯೋತಕವೆಂಬಂತೆ, ಹವಳ ನಿರ್ಮಿತ ಕಟ್ಟಡ ಸಮುಚ್ಚಯಗಳು ಹಾಗೂ ಅವುಗಳಲ್ಲಿನ ಸಂಕೀರ್ಣವಾದ ಕೆತ್ತನೆಗಳನ್ನು ಇಂದಿಗೂ ಕಾಣಬಹುದು. ಓಲ್ಡ್ ಸಿಟಿ, ಮಾಲ್, ಬೀಚ್ ಹಾಗೂ ನಗರದ ಇತರ ಮೂಲೆಗಳಲ್ಲೂ ಅತ್ಯಧಿಕ ಸಂಖ್ಯೆಯಲ್ಲಿ ಜಗತ್ತಿನ ನಾನಾ ಕಡೆಗಳಲ್ಲಿನ  ಜನರನ್ನು  ದರ್ಶಿಸಬಹುದು. ಹಜ್ಜ್ ವೇಳೆಗಳಲ್ಲಿ  ಈ  ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆಯುಂಟಾಗುತ್ತದೆ.

“ಕೆಂಪು ಸಮುದ್ರದ  ಮದುಮಗಳು” ಎಂದು ಮೂಲನಿವಾಸಿಗಳು ಹೆಸರೆತ್ತಿ ಕರೆಯುವ ಜಿದ್ದಾ ನಗರವು ಹಲವಾರು ಬದಲಾವಣೆಗಳನ್ನು ಕಂಡಿದೆ. ಆದರೂ 1814ರಲ್ಲಿ ಜಿದ್ದಾಗೆ ಭೇಟಿ ಕೊಟ್ಟ ಲೂಯಿಸ್ ಬರ್ಕ್ ಹಾರ್ಟರ ಯಾತ್ರಾ ಕಥನದಲ್ಲಿರುವ ಜಿದ್ದಾ ನಗರವನ್ನು 21ನೇ ಶತಮಾನದ ತಲಾಲ್ ಹಂಝರ ಕವನದಲ್ಲೂ ಕಾಣಬಹುದು. ವಂಶನಾಶ ಉಂಟಾಗುವ ಮತ್ತು ಗುಳೆ ಹೊರಡುವ ಮೂಲಕ ಮೂಲನಿವಾಸಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯುಂಟಾಯಿತು.ಆದ್ದರಿಂದಲೇ ಪ್ರವಾದಿ ಕುಟುಂಬ ಪರಂಪರೆಯವರನ್ನು ಹೊರತುಪಡಿಸಿದರೆ ನಗರದ ಬಹುತೇಕರು ಜಗತ್ತಿನ ನಾನಾ ಕಡೆಗಳಿಂದ ವಲಸೆ ಬಂದ ವಿದೇಶಿಗಳು ಹಾಗೂ ಅವರ ಮಕ್ಕಳಾಗಿರುತ್ತಾರೆ ಎಂದು ಲೂಯಿಸ್ ಬರ್ಕ್ ಹಾರ್ಟರು ಸ್ಪಷ್ಟಪಡಿಸುತ್ತಾರೆ. ಹಳ್ರಮಿಗಳು, ಯಮನಿಗರು, ಭಾರತೀಯರು, ಉತ್ತರ ಆಫ್ರಿಕ ಮೂಲದವರು, ಮಿಸ್ರ್ ಮತ್ತು ಸಿರಿಯನ್ ವಂಶಜರು, ಉಸ್ಮಾನಿಯ್ಯ ಖಿಲಾಫತ್ ಅಧೀನದ  ಯುರೋಪ್, ಅನಾಟೋಲಿಯ, ಹೀಗೆ ಜಗತ್ತಿನ ವಿವಿಧ  ದಿಕ್ಕಿನಲ್ಲಿರುವವರನ್ನು ತಾನು ಜಿದ್ದಾದಲ್ಲಿ ಕಂಡಿರುವುದಾಗಿ ಇವರು ತಿಳಿಸಿದ್ದಾರೆ. ಭಾರತೀಯರನ್ನು ಹೊರತುಪಡಿಸಿ ಉಳಿದೆಲ್ಲ ಜನಸಮೂಹಗಳ ವಸ್ತ್ರಧಾರಣೆ ಮತ್ತು ಜೀವನಶೈಲಿಯಲ್ಲಿ ಅರಬ್ ಸ್ವಾಧೀನವು ಎದ್ದು ಕಂಡುಬರುತ್ತದೆ. ಜಿದ್ದಾದ ಜನರಲ್ಲಿನ ವೈವಿಧ್ಯತೆಯು ಹೊಸದೇನಲ್ಲ. ತಲಾಂತರಗಳಿಂದಲೂ ಜಿದ್ದಾ ನಗರವು ವೈವಿಧ್ಯತೆಯನ್ನು ಕಾಪಿಟ್ಟು ಕೊಂಡಿದೆ. ಇಲ್ಲಿನ ಪುರಾತನ ಮನೆತನದ ಹೆಸರುಗಳು ಈ ನಿಟ್ಟಿನಲ್ಲಿ ಬಹಳ ಗಮನಾರ್ಹವಾಗಿದೆ.  ಅವುಗಳ ಪೈಕಿ ಬಗ್ದಾದಿ, ಇಸ್ಫಹಾನಿ, ಬುಖಾರಿ, ತಕ್ರೂನಿ ಎಂಬೀ ಹೆಸರುಗಳು  ಸದ್ಯದ ಇರಾಕ್, ಇರಾನ್, ಉಝ್ಬೆಕಿಸ್ಥಾನ್, ಪಶ್ಚಿಮ  ಆಫ್ರಿಕದ ತೀರ ಪ್ರದೇಶಗಳತ್ತ ಮತ್ತು ಬಾಖಶೈನ್  ಯಮನಿನ ಹಳರಮೌತಿನತ್ತ  ಬೊಟ್ಟು ಮಾಡುತ್ತಿವೆ. ಮುಹರಂ ತಿಂಗಳಲ್ಲಿ ಆಯೋಜಿಸಲ್ಪಡುವ ಆಧ್ಯಾತ್ಮಿಕ ಸಂಗಮಗಳಿಗೆ ಮಕ್ಕಾದತ್ತ ತೆರಳಲು ಜಿದ್ದಾ ದಾರಿಯಾಗಿರುವುದೇ ಇಲ್ಲಿನ ಜನರ ವೈವಿಧ್ಯತೆಗೆ ಪ್ರಧಾನ ಕಾರಣ ಎನ್ನುತ್ತಾರೆ ಲೂಯಿಸ್ ಬರ್ಕ್ ಹಾರ್ಟ್. 19ನೇ ಶತಮಾನದಲ್ಲಿ ಉದ್ಯೋಗ ಅರಸಿ ಬಂದವರು, ವ್ಯಾಪಾರಿಗಳು, ಈಜಿಪ್ಟ್ ಸೇನೆ ಇವೆಲ್ಲಕ್ಕೂ ಹೆಚ್ಚಾಗಿ ಉಸ್ಮಾನಿಯ ಸಾಮ್ರಾಜ್ಯವು  ನಗರದ ವಿದೇಶಿಯರ ಸಂಖ್ಯೆ ಏರಿಕೆಯಾಗಲು ಹೇತುವಾದವು.

ಯಾತ್ರಿಕರ ತಂಗುದಾಣವೆಂಬಂತೆ, ಜಿದ್ದಾ ಹಿಂದೂ ಮಹಾಸಾಗರ ಮತ್ತು ಮೆಡಿಟೇರೇನಿಯನ್ ಸಮುದ್ರಗಳ ನಡುವಿನ  ಉಗ್ರಾಣವೆಂಬುವುದು ಜಿದ್ದಾದ  ಜನತೆಯ  ವೈವಿಧ್ಯತೆಯ ಪ್ರಧಾನ ಕಾರಣಗಳಲ್ಲೊಂದಾಗಿದೆ. 19ನೇ ಶತಮಾನದಲ್ಲಿ ಜಿದ್ದಾದ ಜನಸಂಖ್ಯೆ ಕೇವಲ ಹತ್ತು ಅಥವಾ ಇಪ್ಪತ್ತು ಸಾವಿರದಷ್ಟಿತ್ತು. ಹಜ್ಜ್ ವೇಳೆಯಲ್ಲಿ ಈ ಸಂಖ್ಯೆಯು ದುಪ್ಪಟ್ಟಾಗುತ್ತಿತ್ತು. ಹವಾಮಾನ ಬದಲಾವಣೆಯನ್ನು ಪರಿಗಣಿಸಿ ಕಡಲ ಮಾರ್ಗವಾಗಿ ಯಾತ್ರೆ ಹೊರಡುತ್ತಿದ್ದ ಯಾತ್ರಿಕರು, ಹಜ್ಜ್ ಗಾಗಿ ಹೊರಡುವಾಗ ಮತ್ತು ಮರಳುವಾಗ ಮಕ್ಕಾ, ಮದೀನಾ, ಜಿದ್ದಾಗಳಲ್ಲಿ ತಂಗುತ್ತಿದ್ದರು. 1870 ಮತ್ತು 80ಗಳಲ್ಲಿಯೂ ಈ ಪ್ರಕ್ರಿಯೆ ಮುಂದುವರಿಯಿತು. ಆದ್ದರಿಂದಲೇ ಜಿದ್ದಾಗೆ ಹೊರಟವರಲ್ಲಿ ತೀರ್ಥ ಯಾತ್ರಿಕರನ್ನು ಮತ್ತು ಉದ್ಯೋಗ ಅರಸಿ ಬಂದವರನ್ನು  ಬೇರ್ಪಡಿಸುವುದು ಕಷ್ಟ ಸಾಧ್ಯವಾಗಿತ್ತು. ಹಜ್ ಮುಗಿಸಿ ಮರಳುವ ಹೊತ್ತಿಗೆ ಜಿದ್ದಾದಲ್ಲಿ ತನ್ನ ವ್ಯಾಪಾರಗಳಲ್ಲಿ ತೊಡಗಿ ಖಾಯಂ ಆಗಿ ವಾಸ್ತವ್ಯ ಹೂಡಿದವರೂ, ಕೆಲಸದ ನಿಮಿತ್ತ ಜಿದ್ದಾ ತಲುಪಿ ಅನನುಕೂಲತೆಗಳ ಕಾರಣ ಸ್ವದೇಶಕ್ಕೆ ಮರಳಿದವರೂ ಇದ್ದಾರೆ. ಜಿದ್ದಾ ನಗರದ ಪ್ರಮುಖ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದದ್ದು ಹಜ್ಜ್  ವೇಳೆಯಲ್ಲಾಗಿತ್ತು. ತೀರ್ಥ  ಯಾತ್ರೆಗೆ ಹೊರಟವರ ಹಡಗುಗಳಲ್ಲಿ ವ್ಯಾಪಾರ ಸರಕುಗಳೂ ಜೊತೆಗಿರುತ್ತಿದ್ದವು. ಹೀಗೆ  ಹಜ್ಜ್ ಮೂಲಕ ವ್ಯಾಪಾರಗಳು ಚಾಲ್ತಿಗೆ ಬಂದವು. 1840ರಲ್ಲಿ ಉಸ್ಮಾನಿಯಾ ಸಾಮ್ರಾಜ್ಯದ ಸ್ವತಂತ್ರ ಗವರ್ನರ್ ಆಗಿದ್ದ ಮುಹಮ್ಮದ್ ಅಲಿ ಜಿದ್ದಾ ನಗರದ ಅಧಿಕಾರವನ್ನು ಇಸ್ತಾಂಬುಲ್ ಕೇಂದ್ರ ಆಡಳಿತಗಾರರಿಗೆ  ಮರಳಿ ಹಸ್ತಾಂತರಿಸಬೇಕಾಯಿತು. 1838ರಲ್ಲಿ ಪ್ರಾರಂಭಿಸಿದ  ಅಭಿವೃದ್ಧಿ ಯೋಜನೆಗಳು ಜಿದ್ದಾದ ಮೇಲೆ ಬಲುದೊಡ್ಡ ಪರಿಣಾಮ ಬೀರಿತು. 1840ರಲ್ಲಿ ಹಾಯಿ ದೋಣಿಗಳ ಬಳಕೆ, ತಂತ್ರಜ್ಞಾನ ಮತ್ತು ಭೌಗೋಳಿಕ ಕ್ಷೇತ್ರಗಳಲ್ಲಿ ಉಂಟಾದ  ಸಕಾರಾತ್ಮಕ ಬದಲಾವಣೆಗಳು ಜಿದ್ದಾದ ಆರ್ಥಿಕತೆಯನ್ನು ಸುಸ್ಥಿರಗೊಳಿಸಿತು. 1947 ಇಸವಿಯಲ್ಲಿ ಸಿಟಿ ವಾಲ್ ಧ್ವಂಸಗೊಂಡ ಪರಿಣಾಮವಾಗಿ ಹೊರಗಿನ ವ್ಯಾಪಾರಿಗಳೊಂದಿಗೆ ಸೂಕಿಗೆ ಸುಲಭ ಸಂಪರ್ಕ ಸಾಧ್ಯವಾಯಿತು. ವಿಶ್ವ ಮಹಾಯುದ್ಧ ಕಾರಣ ಸ್ಥಗಿತಗೊಂಡಿದ್ದ ಸೌದಿ ಅರೇಬಿಯದ ಎಣ್ಣೆ ಉತ್ಪಾದನೆ 1950ರಲ್ಲಿ ಪುನರಾರಂಭಿಸಲಾಯಿತು. ವಲಸಿಗರಾದ  ಗ್ರಾಮೀಣರು ನಗರ ಪ್ರದೇಶಗಳತ್ತ ತೆರಳಿದರು. ನಗರ ನಿವಾಸಿಗಳ ಬಾಹುಳ್ಯ ಮತ್ತು ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ದೇಶಗಳ ನಾಗರಿಕರಾದ ಕಾರಣ ಅಂದಿನ ಜಿದ್ದಾ ವೈವಿಧ್ಯಮಯವಾಗಿತ್ತು. 1950ರಲ್ಲಿ ವಿಮಾನ ಯಾನ ಪ್ರಾರಂಭವಾದಂದಿನಿಂದ ಹಜ್ಜ್ ಯಾತ್ರಿಕರ ಪೈಕಿ ಜಿದ್ದಾದಲ್ಲಿ ತಂಗುವ ಜನರ ಸಂಖ್ಯೆಯಲ್ಲಿ ಇಳಿಕೆ ಉಂಟಾಯಿತು. 1981ರಲ್ಲಿ ಮಕ್ಕಾದಲ್ಲಿ ವಿಮಾನ ನಿಲ್ದಾಣ ಪ್ರಾರಂಭವಾದ ಬಳಿಕ ಜಿದ್ದಾದ ಪ್ರಾಮುಖ್ಯತೆಯು ಕುಂಠಿತವಾಯಿತು.

ಜಿದ್ದಾದ  ಬಹುತ್ವ, ಪ್ರಾದೇಶಿಕ  ದೃಷ್ಟಿಕೋನ

ಜಿದ್ದಾದ ಸ್ಥಳೀಯ ನಿವಾಸಿಗಳು ಅನ್ಯದೇಶಿಯರು ಎಂದು ಕಡೆಗಣಿಸಲ್ಪಟ್ಟವರಲ್ಲ. ಬದಲಾಗಿ ಅವರು ಕೂಡ ಜಿದ್ದಾದ ಅವಿಭಾಜ್ಯ ಅಂಗವೇ ಆಗಿದ್ದಾರೆ. ಪ್ರತಿವರ್ಷದ ಕರ್ಮಗಳು ಜಿದ್ದಾದ‌ ಭಾಗವಾಗಿದೆ. ಜಿದ್ದಾದ ಲಿಖಿತ ಮತ್ತು ಮೌಖಿಕ ಚರಿತ್ರೆಗಳಲ್ಲಿ ಹಾಗೂ  ಇನ್ನಿತರ ಸಾಹಿತ್ಯ ಗ್ರಂಥಗಳಲ್ಲಿಯೂ ಹಜ್ಜ್ ಮತ್ತು ಯಾತ್ರಿಕರಾದ ವಿದೇಶಗಳೊಂದಿಗಿನ ಅತಿಥಿ ಸತ್ಕಾರ ಗಳ ಬಗೆಗಿನ ಪ್ರಾದೇಶಿಕ ಸಂಕಲ್ಪಗಳ ಕುರಿತಾದ ವಿವರಣೆಗಳಿವೆ.

ಇಲಾಹೀ  ಅತಿಥಿಗಳು  ಮತ್ತು ಅತಿಥಿ ಸತ್ಕಾರ

ಜಿದ್ದಾದ ಮೌಖಿಕ ಚರಿತ್ರೆಗಳ ಪ್ರಧಾನ ಪ್ರತಿಪಾದನೆ ಹಜ್ಜ್ ಯಾತ್ರಿಕರಿಗೆ ನೀಡುವ ಸತ್ಕಾರಗಳ ಕುರಿತಾಗಿದೆ. ಆರ್ಥಿಕವಾಗಿಯೂ ದೈಹಿಕವಾಗಿಯೂ ಕ್ಷಮತೆಯಿರುವ ವಿಶ್ವಾಸಿ ಕಡ್ಡಾಯವಾಗಿ ನಿರ್ವಹಿಸಬೇಕಾದ ಪುಣ್ಯ ಕರ್ಮವಾಗಿದೆ ಹಜ್ಜ್. ಆ ಪುಣ್ಯ ಕರ್ಮ ನಿರ್ವಹಣೆಗಾಗಿ ಆಗಮಿಸುವ ಹಜ್ಜಾಜ್‌ ಗಳು ಅಲ್ಲಾಹನ ಅತಿಥಿಗಳು ಎಂದಾಗಿದೆ ಆತಿಥೇಯರಾದ ಅರೇಬಿಯನ್ನರ ನಂಬಿಕೆ. ಮಕ್ಕಾದ ಸಮೀಪವಿರುವ ಕಾರಣ ಅಲ್ಲಾಹನ ಅತಿಥಿಗಳನ್ನು ಸತ್ಕರಿಸುವ ಮಹತ್ಕಾರ್ಯವು ಜಿದ್ದಾದ  ನಿವಾಸಿಗಳಿಗೂ ಒದಗಿ ಬಂತು.

ಹಜ್ಜ್ ಗಾಗಿ ಆಗಮಿಸುವವರನ್ನು ಬರಮಾಡಿಕೊಳ್ಳುವ ಸಲುವಾಗಿ ನಗರದ ಮೂಲಭೂತ ಸೌಕರ್ಯಗಳಲ್ಲಿ ಪ್ರಗತಿಯುಂಟಾಯಿತು. ಸರಕಾರ ಸುರಕ್ಷತೆ ಮತ್ತು ಆಹಾರವನ್ನು ಒದಗಿಸಿದರೆ, ವಸತಿ ಮತ್ತು ಯಾತ್ರಾ ಸೌಲಭ್ಯಗಳನ್ನು ದೊರಕಿಸುವ ಜವಾಬ್ದಾರಿಯು ಸ್ಥಳೀಯರದ್ದಾಗಿತ್ತು. ಅವರು ಸ್ವಂತ ಮನೆಗಳನ್ನು ಬಾಡಿಗೆಗೆ ನೀಡಿದರು. ಆಧುನಿಕ ಕಾಲದಲ್ಲಿ ಹಜ್ಜ್ ನ  ಕಾರ್ಯನಿರ್ವಹಣೆಯು ಸೌದಿ ಅರೇಬಿಯದ ಸರಕಾರಕ್ಕೆ ಬಹಳ ಗರ್ವದ ಸಂಗತಿ. 1986ರಲ್ಲಿ “ಎರಡು  ಹರಮ್‌ ಗಳ ಪರಿಚಾರಕ” ನೆಂಬ  ಪಟ್ಟವನ್ನು  ಸೌದಿ ಆಡಳಿತಗಾರರು ಸ್ವೀಕರಿಸಿರುವುದು ಈ ನಿಟ್ಟಿನಲ್ಲಿ ಮಹತ್ವಪೂರ್ಣವಾಗಿದೆ. ಉಸ್ಮಾನಿಯ ಖಿಲಾಫತ್ ಕಾಲದಲ್ಲಿ, ಅಲ್ಪಕಾಲದ ಶರೀಫಿಯನ್ ಆಡಳಿತ ಕಾಲದಲ್ಲಿ ಮತ್ತು ಸೌದಿ ಅರೇಬಿಯದ ಪ್ರಥಮ ರಾಜರಾದ ಅಬ್ದುಲ್ ಅಝೀಝ್ ಆಲು ಸಊದರ  ಹಜ್ ಯಾತ್ರಿಕರ ಅಗತ್ಯ ನಿರ್ವಹಣೆಯು ಉತ್ತಮ ಆಡಳಿತದ ಸಂಕೇತವಾಗಿತ್ತು. ಅರೇಬಿಯದ ಆರ್ಥಿಕತೆಯ ಬೆನ್ನೆಲುಬಾದ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಲ್ಲದ ಕಾಲದಲ್ಲಿ, ಹಜ್ ಯಾತ್ರಿಕರಿಗೆ ಇರುವ ಸೌಲಭ್ಯಗಳನ್ನು ಸ್ಥಳೀಯ ನಿವಾಸಿಗಳು ಒದಗಿಸುತ್ತಿದ್ದರು.

ಅತಿಥಿ ಸತ್ಕಾರ ಅರಬ್ ಮುಸ್ಲಿಮ್ ಸಂಸ್ಕೃತಿಯ ಭಾಗವಾಗಿದೆ.1777ರಲ್ಲಿ ಕ್ರಿಸ್ಟಿಯನ್ ಹೀರ್ಶ್ ಫೀಲ್ಡ್  ಪ್ರಕಟಿಸಿದ ಅತಿಥಿ ಸತ್ಕಾರದ ಕುರಿತಾದ ಕಿರು ಲೇಖನವೊಂದರಲ್ಲಿ “ಅತಿಥಿ ಸತ್ಕಾರವೆಂಬುದು ಸಾರ್ವಲೌಕಿಕವಾದ ಸತ್ಕರ್ಮವೆಂದು ಹಾಗೂ ಮಧ್ಯೆಷ್ಯಾದಲ್ಲಿ  (ಬರಹಗಾರರ ಪ್ರಕಾರ ಅರಬ್, ತುರ್ಕಿ, ಪರ್ಷಿಯನ್) ಈ ಕರ್ಮವು ಬಹಳ  ಗಾಢವಾಗಿದೆ ಮತ್ತು ವ್ಯಾಪಕವಾಗಿದೆ ಎಂದು ಹೀರ್ಶ್ಫೀಲ್ಡ್ ಅಭಿಪ್ರಾಯಪಡುತ್ತಾರೆ. ಕಾಲ ಕ್ರಮೇಣ  ಅತಿಥಿ ಸತ್ಕಾರವೆಂಬ ಸಂಕಲ್ಪ ಮತ್ತು ಅದರ  ರೀತಿಗಳಲ್ಲಿ  ಬದಲಾವಣೆ ಉಂಟಾಗಿವೆ. ಪರಂಪರಾಗತ ಅತಿಥಿ ಸತ್ಕಾರವು ಬದವೀ ಸಂಕಲ್ಪದ  “ನಂಬಿಕೆ, ಸಂರಕ್ಷಣೆ, ಗೌರವ” ಎಂಬೀ ರೂಪಕಗಳು  ಒಟ್ಟುಸೇರಿದವುಗಳಾಗಿದ್ದವು.

ಹರಮ್ ಗಳಂತೆಯೇ  ಅರಬ್ ದೇಶಗಳಲ್ಲಿರುವ ಪವಿತ್ರ ಸ್ಥಳಗಳು ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ಜನರಿಗೆ ಸೇರಬಹುದಾದ ಸುರಕ್ಷಿತ ತಾಣಗಳಾಗಿವೆ. ಇಸ್ಲಾಮಿನ ಆಗಮನ ಪೂರ್ವದಲ್ಲೂ ಮಕ್ಕ ಪವಿತ್ರ ಕೇಂದ್ರವಾಗಿತ್ತು. ಮಕ್ಕ ಹೊರತಾದ ಇನ್ನಿತರ ಸ್ಥಳಗಳಲ್ಲಿ ಆತಿಥೇಯರಾದ ಸ್ಥಳೀಯರ ಪಾಲನೆಯಲ್ಲಾಗಿತ್ತು ಸಂದರ್ಶಕರ ವಾಸ್ತವ್ಯ. ಸ್ವದೇಶಿಯರು ಅತಿಥಿಗಳನ್ನು ಅಪರಿಚಿತರೆಂದು ಕಡೆಗಣಿಸದೆ ಅವರಿಗಾಗಿ ತಮ್ಮ ಸ್ವಗೃಹಗಳನ್ನು ತೆರೆದಿಡುತ್ತಿದ್ದರು. ಅತಿಥಿ ಸತ್ಕಾರ ಧಾರ್ಮಿಕ ಹಕ್ಕು ಎಂಬ ನಿಟ್ಟಿನಲ್ಲೂ ಪ್ರಾಮುಖ್ಯತೆಯನ್ನು ಪಡೆಯಿತು. ಈ ಮೂಲಕ ಯಹೂದರು ಮತ್ತು ಕ್ರೈಸ್ತರಿಂದ ಬಳುವಳಿಯಾಗಿ ಬಂದ ಅತಿಥಿ ಸತ್ಕಾರದ  ಸಂಕಲ್ಪಗಳನ್ನು ಇನ್ನಷ್ಟು ಸುದೃಢಗೊಳಿಸುವಲ್ಲಿ ಇಸ್ಲಾಮ್ ಯಶಸ್ವಿಯಾಯಿತು.

ಈ ಧಾರ್ಮಿಕ ಹಕ್ಕು ಅತಿಥಿ ಮತ್ತು ಆತಿಥೇಯರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಿತು. ಸ್ವಗೃಹಗಳಿಗೆ ಅಪರಿಚಿತರನ್ನು ಬರಮಾಡಿಕೊಳ್ಳುವ ಉದಾತ್ತ ಪ್ರಕ್ರಿಯೆಯನ್ನು ಇನ್ನಿತರ ಧರ್ಮಗಳಲ್ಲೂ  ದರ್ಶಿಸಬಹುದು  ಮತ್ತು ಇದು ಸ್ವತಃ ರೂಪುಗೊಳ್ಳುವ ಸರ್ವ ರಾಷ್ಟ್ರೀಯತೆ (voluntaristic cosmopolitanism) ಎಂದು ಶೆಲ್ಡನ್ ಪೊಲ್ಲಾಕ್ ವ್ಯಕ್ತಪಡಿಸಿದ್ದಾರೆ. ಪ್ರಾಯೋಗಿಕ ನೈತಿಕತೆ ಎಂಬ ನಿಟ್ಟಿನಲ್ಲಿ ಧರ್ಮಗಳು ಅತಿಥಿ ಸತ್ಕಾರವನ್ನು ಹುರಿದುಂಬಿಸಿದರೂ ಪ್ರಾಥಮಿಕವಾಗಿ ಈ ಸತ್ಕರ್ಮವು ಮಾನವೀಯ ಮೌಲ್ಯಗಳ ಭಾಗವಾಗಿರಬೇಕು, ಮತ್ತು ಅತಿಥಿ ಸತ್ಕಾರವು ಮಾನವ ಹೃದಯಗಳಲ್ಲಿ ದೈವಿಕತೆಯನ್ನು ಜೀವಂತವಾಗಿರಿಸಿದೆ ಎನ್ನುತ್ತಾರೆ ಮೋನ ಸಿದ್ಧಿಕಿ. ಯಾತ್ರಿಕರು ಜಿದ್ದಾದಲ್ಲಿ ತಂಗುವಾಗ ಕರ್ಮಗಳಿಗೆ ಧರಿಸಬೇಕಾದ ಧಿರಿಸನ್ನೇ ಧರಿಸುತ್ತಿದ್ದರು. ಮಕ್ಕಾಗೆ ತೆರಳುವಾಗ ಜಿದ್ದಾ ನಿವಾಸಿಗಳು ಕೂಡ ಅವರಿಗೆ ಜೊತೆಯಾಗುತ್ತಿದ್ದರು.

ಯಾತ್ರಿಕರ ಜೊತೆಗಿನ ಈ ಸಂಬಂಧವು ಅರಬರ ವೈವಾಹಿಕ ಸಂಬಂಧಗಳಲ್ಲೂ ಪರಿಣಾಮ ಬೀರಿದೆ. ಇತರ ಗೋತ್ರಗಳಲ್ಲಿರುವವರೊಂದಿಗೆ ವೈವಾಹಿಕ  ಸಂಬಂಧ ಸಾಧ್ಯವಾಗಿದ್ದರೂ ಇತರ ಕುಟುಂಬದವರೊಂದಿಗಿನ ಸಂಬಂಧವು ಜಾರಿಯಲ್ಲಿತ್ತು. ಜಿದ್ದಾ ನಿವಾಸಿಗಳು ವಲಸಿಗರೊಂದಿಗೆ ವೈವಾಹಿಕ ಸಂಬಂಧ ಇಟ್ಟುಕೊಂಡಿರುವುದನ್ನು  ಚರಿತ್ರೆಗಳಲ್ಲಿ ದಾಖಲಾಗಿವೆ. ಒಟ್ಟಿನಲ್ಲಿ ಲೂಯಿಸ್ ಬರ್ಕ್ ಹಾರ್ಟ್ ಪ್ರತಿಪಾದಿಸಿದ ಜಿದ್ದಾ ಜನರ ನಡುವಿನ  ಕೊಡು ಕೊಳ್ಳುವಿಕೆ ಕೇವಲ ಭಾಷೆ ಮತ್ತು ವೇಷಗಳಿಗೆ ಸೀಮಿತವಾಗಿರಲಿಲ್ಲ.

ಮೂಲ: ಉಲ್ರೈಕ್ ಫ್ರೈಟಾಗ್
ಅನು: ಆಶಿಕ್ ಅಲಿ ಕೈಕಂಬ

Leave a Reply

*