ಬದುಕಿನ ನಾಡಿಮಿಡಿತದಲ್ಲಿ ಕಾವ್ಯದ ಎದೆಬಡಿತ ಆಲಿಸಿದ ಕವಿ: ಮಹಮೂದ್ ದರ್ವೇಶ್

ಮಹಮೂದ್ ದರ್ವೇಶ್!
ಇತ್ತೀಚಿನ ದಿನಗಳಲ್ಲಿ ನನಗೆ ಓದಿನ ಸುಖ ದಯಪಾಲಿಸಿದ ಫೆಲೆಸ್ತೀನಿನ ಶಕ್ತಿಶಾಲಿ ಕವಿ. ಪತ್ರಿಕಾ ಕೆಲಸಗಳಲ್ಲಿ ಜಡ್ಡುಗಟ್ಟಿ, ದಿನ ನಿತ್ಯದ ಹೊರೆಯಿಂದ ಸಂವೇದನಾ ಶಕ್ತಿಯನ್ನೇ ಕಳೆದುಕೊಳ್ಳುವ ಹಂತಕ್ಕೆ ಮುಟ್ಟಿದ್ದ ನನ್ನನ್ನು ಹೃದಯ ಹಿಂಡಿ ಎಬ್ಬಿಸಿದ ಕವಿ ಮಹಮೂದ್ ದರ್ವೇಶ್. ನನ್ನ ಬದುಕಿನ ಯೋಗ್ಯತೆ ಇರುವುದು ನಾನು ಸಾಯುವಾಗ ನನ್ನ ತಾಯಿಯ ಕಣ್ಣಲ್ಲಿ ಸುರಿಯುವ ಕಣ್ಣೀರಿನಲ್ಲಿ’’ ಎನ್ನುವಂತಹ ಸಾಲುಗಳು ಯಾವ ಸತ್ತ ಹೃದಯವನ್ನು ತಾನೆ ಬಡಿದೆಬ್ಬಿಸಲಾರದು ಹೇಳಿ? ಇಲ್ಲಿ ತಾಯಿ ಎಂದರೆ ಮಾತೃಭೂಮಿ ಫೆಲೆಸ್ತೀನ್. ತನ್ನ ದೇಶವಾಸಿಗಳ ನಡುವೆ ತಾನೊಬ್ಬ ಯೋಗ್ಯ ವ್ಯಕ್ತಿಯಾಗಿ ಬಾಳಿಬದುಕಬೇಕೆಂಬ ಪ್ರಬಲ ಇಚ್ಛೆ ಈ ಕವಿಗಿದ್ದಿರಬೇಕು. ಅದಕ್ಕಾಗಿ ಆತ ತನ್ನ ತಾಯಿನಾಡನ್ನು ಶಕ್ತಿಮೀರಿ ಪ್ರೀತಿಸಿದ. ತಾಯಿನಾಡಿಗಾಗಿ ವಿಧವಿಧದ ಶಿಕ್ಷೆಗೊಳಗಾದ. ಹಲವಾರು ವರ್ಷ ಗೃಹಬಂಧನದಲ್ಲಿ ಕಳೆದ. ವರ್ಷಗಟ್ಟಲೆ ತಾನು ಪ್ರೀತಿಸುತ್ತಿದ್ದ ತನ್ನ ತಾಯಿನಾಡನ್ನು ಬಿಟ್ಟು ಯಾವುದೋ ಪರದೇಶದಲ್ಲಿ ಅಬ್ಬೇಪಾರಿಯಂತೆ ಬದುಕುವ ಕ್ರೂರಶಿಕ್ಷೆಗೊಳಗಾದಾಗಲೂ ಈ ಕವಿ ತನ್ನ ಜನರನ್ನು, ಅವರನ್ನೆಲ್ಲಾ ಹೊತ್ತುಕೊಂಡು ಪೋಷಿಸುತ್ತಿದ್ದ ತಾಯಿನಾಡನ್ನು ಎಂದೂ ಮರೆಯಲಿಲ್ಲ. ಅದು ಆತನ ಕಾವ್ಯದಲ್ಲಿ ಜೀವಂತವಾಗಿತ್ತು. ತನ್ನೊಳಗೆ ಯಾವುದು ಜೀವಂತವಾಗಿರುತ್ತೋ ಅದು ಕಾವ್ಯದಲ್ಲೂ ಜೀವಂತವಾಗಿರುತ್ತದೆ. ಹಾಗಿದ್ದಲ್ಲಿ ಮಾತ್ರ ಕಾವ್ಯವೊಂದು ಕಾವ್ಯಾಸಕ್ತರನ್ನು ಮುಟ್ಟಬಲ್ಲುದು.

ದರ್ವೇಶ್ ಕವಿಯ ಕಾವ್ಯದ ಎದೆಬಡಿತವೂ ಆತನ ಬದುಕಿನ ನಾಡಿಮಿಡಿತದಲ್ಲಿತ್ತು ಎಂದರೆ ಅತಿಶಯೋಕ್ತಿಯೇನಲ್ಲ. ಹಾಗೆ ನೋಡಿದರೆ ಈ ಕವಿಯ ಕಾವ್ಯದ ಜೀವಾಳ ಫೆಲೆಸ್ತೀನ್ ಎಂಬ ಹೋರಾಟ ಭೂಮಿ ಎನ್ನಬೇಕು. ತನ್ನ ಮಾತೃಭೂಮಿಯ ಸಮಸ್ತ ಚರಿತ್ರೆಯನ್ನೂ, ನೋವು ನಲಿವನ್ನು ಕೆಲವೇ ಪದಗಳಲ್ಲಿ ಹಿಡಿದು ಕಾವ್ಯಾಸ್ತಕರಿಗೆ ಅಷ್ಟೇ ತೀವ್ರತೆಯಿಂದ ದಾಟಿಸುವ ಸಾಮರ್ಥ್ಯ ಈ ಕವಿಗಿತ್ತು. ಈತನ ಯಾವ ಕವಿತೆಯೂ ಕಾವ್ಯಾಸಕ್ತರಿಂದ ತಿರಸ್ಕೃತವಾಗಿಲ್ಲ. ಓದುಗರನ್ನು ತಲ್ಲಣಿಸದ, ಅವರ ಸಂವೇದನಾ ಶಕ್ತಿಯನ್ನು ಎಚ್ಚರಿಸದ ಒಂದೇ ಒಂದು ತುಣುಕನ್ನೂ ಈ ಕವಿ ಬರೆದಿಲ್ಲ. ಈತ ಏನೇ ಬರೆದರೂ ಅದು ತನ್ನ ಮಾತೃಭೂಮಿಯ ಕುರಿತೇ ಆಗಿರುತ್ತದೆ. ಈತ ಕವಿಯಾಗಿ ಹುಟ್ಟಿರುವುದೇ ತನ್ನ ಮಾತೃಭೂಮಿಯ ಯಾತನೆಯ ಕೊರಳಿಗೆ ಧ್ವನಿಯಾಗಳೆಂದೇ ಇರಬೇಕು. ಆ ಧ್ವನಿ ಫೆಲೆಸ್ತೀನ್ ಎಂಬ ಹೋರಾಟ ಭೂಮಿಯ ನೋವನ್ನೂ, ಆ ನೋವೊಳಗೂ ಅದು ತನ್ನಷ್ಟಕ್ಕೆ ತಾನೇ ಉದ್ದೀಪಿಸುತ್ತಿದ್ದ ಅಪರಿಮಿತ ಶಕ್ತಿ ಸಂಚಯವನ್ನೂ ಜಗತ್ತಿಗೆ ಸಾರಿತು. ಕವಿಯ ಕಣ್ಣಿನಲ್ಲಿ ಫೆಲೆಸ್ತೀನ್ ಸ್ವಾತಂತ್ರ್ಯದ ಅಂತಿಮ ಭೂಮಿಯಾಗಿತ್ತು. ಅಂತಿಮ ಆವಾಸ ಸ್ಥಾನವಾಗಿತ್ತು. ಅಂತಿಮ ಮನೆಯಾಗಿತ್ತು. ಅದಿಲ್ಲದಿದ್ದರೆ ಈ ನಶ್ವರ ಜಗತ್ತಿನಲ್ಲಿ ತನಗೆ ಇನ್ನೊಂದಿಲ್ಲ ಎಂಬಂತೆ ಆರ್ತವಾಗಿ ಈ ಜಗತ್ತಿನ ಮುಂದೆ ಕವಿ ಹಾಡಿದ.

ಆದ್ದರಿಂದ ಈ ಕವಿ ಒಂದು ತುಂಡು ಬ್ರೆಡ್ಡಿನ ಕುರಿತು ಬರೆದರೂ ಅದು ಅಂತಿಮವಾಗಿ ತನ್ನ ಮಾತೃಭೂಮಿಯ ವಿವಿಧ ಹಸಿವನ್ನು (ಹೊಟ್ಟೆ ಹಸಿವು, ಸ್ವಾತಂತ್ರ್ಯದ ಹಸಿವು ಇತ್ಯಾದಿ) ಧ್ವನಿಸುತ್ತಿದ್ದುದು ಅಸಹಜವೇನಾಗಿರಲಿಲ್ಲ. ಆ ಹಸಿವು ಎಂದಾದರೂ ಒಮ್ಮೆ ತನ್ನ ಜನರಿಗೆ ದಕ್ಕುವ ವಾಸ್ತವ ಎಂಬ ಅರಿವು ಮತ್ತು ಭರವಸೆ ಈ ಕವಿಯದ್ದಾಗಿತ್ತು. ದರ್ವೇಶ್ ಕವಿ ಮೂಲತಃ ಜನಸಾಮಾನ್ಯರ ಕವಿ. ಜನಸಾಮಾನ್ಯರಿಗೆ ಅರ್ಥವಾಗದ ಒಂದೇ ಒಂದು ತುಣುಕನ್ನೂ ಈ ಕವಿ ರಚಿಸಿಲ್ಲ. ಜನರ ಭಾಷೆಯಲ್ಲಿ, ಅವರ ದಿನನಿತ್ಯ ಬಳಕೆಯ ವಸ್ತುಗಳನ್ನೇ ರೂಪಕವಾಗಿಟ್ಟುಕೊಂಡು ಬರೆವ ಈ ಕವಿ ಸಾಧಾರಣವಾದುದರಲ್ಲಿ ಅಸಾಧಾರಣತ್ವವನ್ನು ಕಂಡುಕೊಳ್ಳುತ್ತಿದ್ದ ಅಥವಾ ಸೃಷ್ಟಿಸುತ್ತಿದ್ದ ಪರಿ ಬೆರಗಿನದ್ದು. ಬ್ರೆಡ್ಡು, ಬೆಂಕಿ, ಕಾಫಿ, ಬಾಲ್ಯಕಾಲದ ನೆನಪುಗಳು ಇತ್ಯಾದಿ ಜನಸಾಮಾನ್ಯರ ಸಾಮಾನ್ಯ ಸಂಗತಿಗಳನ್ನು ರೂಪಕವಾಗಿಟ್ಟುಕೊಂಡು ರಚಿತವಾಗಿರುವ ದರ್ವೇಶ್ ಕಾವ್ಯಗಳು ಫೆಲೆಸ್ತೀನ್ ಎಂಬ ಪುಟ್ಟ ಲೋಕವನ್ನು ಅದರೆಲ್ಲಾ ಚೆಲುವಿನೊಂದಿಗೆ ಕಟ್ಟಿಕೊಡುತ್ತವೆ. ಮಿಸೆಲ್, ರಾಕೆಟ್, ಯುದ್ಧ ಟ್ಯಾಂಕ್‌ಗಳ ದುಸ್ವಪ್ನ ಜೊತೆಗೆ ದಿನಗಳನ್ನು ಎಣಿಸುವ ಅಲ್ಲಿಯ ನಾಗರಿಕರ ದಿನನಿತ್ಯದ ತಲ್ಲಣಗಳ ಬಗೆಗೆ ಅದ್ಭುತ ಒಳನೋಟ ಬೀರುತ್ತವೆ. ದರ್ವೇಶ್ ಕಾವ್ಯವನ್ನು ಅಭ್ಯಾಸ ಮಾಡುವ ಯಾರೇ ಆದರೂ ಫೆಲೆಸ್ತೀನಿನ ಸಂಕ್ಷಿಪ್ತ ಇತಿಹಾಸವನ್ನಾದರೂ ಅರಿತಿರಲೇಬೇಕು. ಇಲ್ಲದಿದ್ದರೆ ಆತನ ಕಾವ್ಯ ಅರ್ಥವಾಗುವುದು ಕಷ್ಟ.

ಆಧುನಿಕ ಫೆಲೆಸ್ತೀನಿನ ಪ್ರತಿಯೊಂದು ಎಪಿಸೋಡನ್ನೂ ಜೀವಂತವಾಗಿ ಬದುಕಿದ ದರ್ವೇಶ್ ಹುಟ್ಟಿದ್ದು, 1942ರಲ್ಲಿ ಪಶ್ಚಿಮ ಗಲಿಲಿಯದ ಅಲ್-ಬರ‍್ವೆ ಎಂಬಲ್ಲಿ. ಭೂಮಾಲಿಕ ಕುಟುಂಬದ ಸಲೀಮ್ ಮತ್ತು ಹೌರಿಯಾ ದರ್ವೇಶ್ ದಂಪತಿಗಳ ದ್ವಿತೀಯ ಪುತ್ರ ರಾಗಿರುವ ಮಹಮೂದ್ ದರ್ವೇಶ್ ಬಾಲ್ಯದಲ್ಲಿ ಅಜ್ಜನೊಂದಿಗೆ ಸೇರಿ ಬರವಣಿಗೆಯನ್ನು ಅಭ್ಯಾಸ ಮಾಡಿದರು. 1948ರಲ್ಲಿ ಜೂನ್ ತಿಂಗಳಲ್ಲಿ ಇಸ್ರೇಲ್ ಪಡೆಗಳು ಅಲ್ ಬರ‍್ವಾ ಪಟ್ಟಣದ ಮೇಲೆ ದಾಳಿ ನಡೆಸಿ, ಹಲವಾರು ನಾಗರಿಕರು ನಿರಾಶ್ರಿತರಾಗಿ ಲೆಬನಾನಿನ ಶಿಬಿರವೊಂದರಲ್ಲಿ ಆಶ್ರಯ ಪಡೆದರು. ಆ ನಿರಾಶ್ರಿತರಲ್ಲಿ ದರ್ವೇಶ್ ಕುಟುಂಬವೂ ಒಂದಾಗಿತ್ತು. ಮುಂದೆ 1949 ಇಸ್ರೇಲ್ ಲೆಬನಾನಿನ ಮೇಲೆ ಆಕ್ರಮಣಗೈದಾಗ ದರ್ವೇಶ್ ಕುಟುಂಬ ತಾಯಿ ನಾಡಿಗೆ ಮರಳಿತು. ಹಲವಾರು ವರ್ಷಗಳ ಕಾಲ ತನ್ನ ಯೌವ್ವನವನ್ನು ಇಸ್ರೇಲ್‌ನ ಕಪಿಮುಷ್ಠಿಯಲ್ಲಿದ್ದ ಫೆಲೆಸ್ತೀನಿನ ಅಕ್ರಾದಲ್ಲಿ ಕಳೆದ ಕವಿ ದರ್ವೇಶ್ ಹೈಸ್ಕೂಲ್ ಶಿಕ್ಷಣವನ್ನು ಕಫ್ರ್ ಯಾಸಿಫ್ ಎಂಬಲ್ಲಿ ಪೂರೈಸಿದರು. ನಂತರ ಹೈಫಾ ಪ್ರದೇಶಕ್ಕೆ ಸ್ಥಳಾಂತರಗೊಂಡರು. ನಿರಂತರವಾಗಿ ಅಲೆಮಾರಿ ಜೀವನವನ್ನು ನಡೆಸಿದ ಈ ಕವಿ ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲಿ ಪ್ರಥಮ ಕವನ ಸಂಕಲನ `ಅಸಫಿರ್ ಬಿಲ ಅಜ್ನಿಹಾ ಅಥವಾ `ರೆಕ್ಕೆಯಿಲ್ಲದ ಹಕ್ಕಿ’ಯನ್ನು ಪ್ರಕಟಿಸಿದರು. ಇವರ ಆರಂಭದ ಕವನಗಳು ಇಸ್ರೇಲ್ ಕಮ್ಯುನಿಸ್ಟ್ ಪಾರ್ಟಿಯ ನಿಯತಕಾಲಿಕ ಅಲ್ ಜದೀದ್‌ನಲ್ಲಿ ಪ್ರಕಟವಾಯಿತು. ನಂತರ ಅಲ್ ಜದೀದ್ ನಿಯತಕಾಲಿಕದ ಸಂಪಾದಕರಾದ ಇವರು, ಮುಂದೆ ಅಲ್ ಫಜಿರ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. 1965ರ ಮೇ ತಿಂಗಳಲ್ಲಿ ನಜರತ್ ಮೂವಿ ಹೌಸಲ್ಲಿ ದರ್ವೇಶ್ ವಾಚಿಸಿದಬಿತಾಕತ್ ಹುವಿಯ್ಯಾ’’ (ಐಡೆಂಟಿಟಿ ಕಾರ್ಡ್) ಕವನ ರಿಗೆ ಅರಬ್ ಜಗತ್ತಿನಾದ್ಯಂತ ಪ್ರಸಿದ್ಧಿ ತಂದುಕೊಟ್ಟಿತು. ಈ ಕವನದಲ್ಲಿ ಇಸ್ರೇಲ್ ಸೈನಿಕರ ಮುಂದೆ ತನ್ನ ಐಡೆಂಟಿಟಿಯನ್ನು ಹೇಳುತ್ತಾ ಹೋಗುವ ಕವಿ ಕವನವನ್ನು ಆರಂಭಿಸುವುದು, ಬರೆಯಿರಿ, ನಾನೊಬ್ಬ ಅರಬ್, ನನ್ನ ಐಡೆಂಟಿಟಿ ಕಾರ್ಡ್ ನಂಬರ್ ಐವತ್ತು ಸಾವಿರ, ನನಗೆ ಎಂಟು ಮಂದಿ ಮಕ್ಕಳಿದ್ದಾರೆ. ಈ ಬೇಸಿಗೆಯ ನಂತರ ಒಂಬತ್ತನೇ ಮಗನೂ ಹುಟ್ಟಬಹುದು, ನಿಮಗೆ ಸಿಟ್ಟೇ?’’ ಎಂದು ಕೇಳುತ್ತಾನೆ. ಕವನದುದ್ದಕ್ಕೂ ಕವಿ ತನ್ನ ಮೂಲಕ ತನ್ನ ಜನತೆಯನ್ನು ಪರಿಚಯಿಸುತ್ತಾ ಹೋಗುತ್ತಾನೆ.ಬಿಕ್ಷೆಗಾಗಿ ನಿಮ್ಮ ಬಾಗಿಲ ಮುಂದೆ ನಿಂತು ದೇಹಿ’’ ಎನ್ನದ ತನ್ನ ಜನರನ್ನು ಆತ್ಮಾಭಿಮಾನದಿಂದ ಪರಿಚಯಿಸುತ್ತಾನೆ.

ಯಾವುದೇ ಟೈಟಲ್‌ಗಳಿಲ್ಲದ ಒಬ್ಬ ಸಾಮಾನ್ಯ ಅರಬ್ ಪ್ರಜೆ ತಾನು ಎಂದು ಹೇಳುವ ಕವಿ, ತನ್ನ ಪೂರ್ವಜರ ಕಥೆ ಹೇಳುವ ಮೂಲಕ ಫೆಲೆಸ್ತೀನ್ ಎಂಬ ರಾಷ್ಟ್ರದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಾನೆ. ಹುಟ್ಟಾ ಅಸುಖಿಯೂ, ಬಡವನೂ ಆಗಿರುವ ತನ್ನ ಅಜ್ಜ ಓರ್ವ ರೈತನಾಗಿದ್ದು, ತನಗೆ ಹೇಗೆ ಓದುವುದು ಎಂಬುದನ್ನು ಕಲಿಸುವ ಮೊದಲೇ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿದ್ದಾನೆ ಎನ್ನುತ್ತಾನೆ. ತನ್ನ ಪೂವರ್ಜರ ಅಪೂರ್ವ ಸಂಪತ್ತನ್ನೂ, ಭೂಮಿಯನ್ನೂ, ತನ್ನ ಮಕ್ಕಳನ್ನು ಕಸಿದುಕೊಂಡಿರುವ ನೀವು ಈ ಕಲ್ಲುಗಳ ಹೊರತಾಗಿ ಬೇರೇನನ್ನೂ ಉಳಿಸಿಲ್ಲ’’ ಎಂದು ಹೇಳಿಕೊಳ್ಳುವ ಕವಿ ಆ ಕಲ್ಲುಗಳನ್ನೇ ಸ್ವಾತಂತ್ರ್ಯ ಹೋರಾಟದುದ್ದಕ್ಕೂ ತಮ್ಮ ಆಯುಧವನ್ನಾಗಿ ಬಳಸಿಕೊಂಡಿರುವ ಫೆಲೆಸ್ತೀನ್ ಪ್ರಜೆಗಳ ಯಶೋಗಾಥೆಯನ್ನು ಪರೋಕ್ಷವಾಗಿ ವಿವರಿಸುತ್ತಾನೆ. ಕವಿ ತನ್ನ ಐಡೆಂಟಿಟಿಯನ್ನು ಹೇಳುತ್ತಾ ಕವನವನ್ನು ಹೀಗೆ ಕೊನೆಗೊಳಿಸುತ್ತಾರೆ,ಆದ್ದರಿಂದ, ಮೊದಲ ಪುಟದ ಆರಂಭದಲ್ಲೇ ಬರೆಯಿರಿ, ನಾನು ಜನರನ್ನು ಧ್ವೇಷಿಸಲಾರೆ. ಅತಿಕ್ರಮಣ ಮಾಡಲಾರೆ. ಆದರೆ, ನಾನು ಹಸಿವಿನಿಂದ ನರಳಿದರೆ, ಆಕ್ರಮಣಕಾರರ ಮಾಂಸ ನನ್ನ ಆಹಾರವಾಗಬಹುದು, ಎಚ್ಚರವಿರಲಿ ಎಚ್ಚರವಿರಲಿ, ನನ್ನ ಹಸಿವು, ಸಿಟ್ಟಿನ ಬಗ್ಗೆ’’ ವಸಾಹತುಶಾಹಿ ಪ್ರಭೃತಿಗಳಿಗೆ ಇದು ತನ್ನ ಜನರ ಪರವಾಗಿ ಕವಿ ನೀಡುವ ಎಚ್ಚರಿಕೆ.


ದರ್ವೇಶ್ ಯುರೋಪಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಫೆಲೆಸ್ತೀನ್ ನಿರಾಶ್ರಿತರ ಜೊತೆಗೂಡಿ 1970ರಲ್ಲಿ ಹೆಚ್ಚಿನ ಓದಿಗಾಗಿ ಸೋವಿಯತ್ ರಷ್ಯಾದೆಡೆಗೆ ಪ್ರಯಾಣ ಬೆಳೆಸಿದರು. ತನ್ನ ಗುಪ್ತ ರಾಜಕೀಯ ಚಟುವಟಿಕೆಗಳಿಂದಾಗಿ ಇಸ್ರೇಲ್ ನೀಡಿದ್ದ ಎರಡನೇ ದರ್ಜೆಯ ಪೌರತ್ವವನ್ನೂ ಕಳೆದುಕೊಂಡು ಫೆಲೆಸ್ತೀನ್ ನಿರಾಶ್ರಿತರ ಬೆನ್ನು ಹಿಡಿದು ಈಜಿಪ್ಟ್, ಲೆಬನಾನ್, ಜೋರ್ಡನ್ ಇತ್ಯಾದಿ ಅರಬ್ ಜಗತ್ತನ್ನು ಅಂಡಲೆಯುತ್ತಾ ಅಪಾರ ಅನುಭವ ಕರಗತ ಮಾಡಿಕೊಂಡರು. ಸ್ವಂತ ಮನೆಯಿಂದ ಹೊರಹಾಕಲ್ಪಟ್ಟ ನಿರಾಶ್ರಿತ ಫೆಲೆಸ್ತೀನ್ ನಾಗರಿಕರ ಯಾತನೆಯನ್ನು ನೇರವಾಗಿ ಕಂಡುಕೊಂಡ ದರ್ವೇಶ್, ಕಾವ್ಯವನ್ನೇ ಖಡ್ಗವಾಗಿಸಿ ಫೆಲೆಸ್ತೀನಿನ ವಾಸ್ತವನ್ನು ಜಗತ್ತಿನ ಮುಂದಿಟ್ಟರು. 1973ರಲ್ಲಿ ಪಿಎಲ್‌ಒ ಸೇರಿದ ಇವರು ನೇರವಾಗಿಯೇ ಹೋರಾಟಕ್ಕೆ ಧುಮುಕಿ ಇಸ್ರೇಲ್‌ನ ಕೆಂಗಣ್ಣಿಗೆ ಗುರಿಯಾದರು. ಇದರ ಪರಿಣಾಮ ಫೆಲೆಸ್ತೀನ್ ಪ್ರವೇಶಿಸದಂತೆ ಇವರಿಗೆ ನಿರ್ಬಂಧ ವಿಧಿಸಲಾಯಿತು.
ದರ್ವೆಶ್ ಮೂವತ್ತಕ್ಕೂ ಹೆಚ್ಚು ಕವನ ಸಂಕಲನ ಮತ್ತು ಎಂಟು ಗದ್ಯ ಸಂಕಲಗಳನ್ನು ಪ್ರಕಟಿಸಿದ್ದಾರೆ.

1982ರ ಲೆಬನಾನಿನ ಮೇಲಿನ ಅಮಾನುಷ ದಾಳಿಯನ್ನು ದರ್ವೇಶ್ ನೇರವಾಗಿ ಕಂಡಿದ್ದರು. ಈ ಘಟನೆ ಅವರ ಜೀವನದ, ಕಾವ್ಯದ ಗತಿಯನ್ನೇ ಬದಲಾಯಿಸಿತ್ತು. ಲೆಬನಾನಿನ ಮೇಲೆ ಇಸ್ರೇಲ್ ನಡೆಸಿದ ಈ ಅಮಾನುಷ ದಾಳಿಯನ್ನು ಇತಿಹಾಸದ ಅತ್ಯಂತ ಪ್ರಮುಖ ಘಟನೆಯಾಗಿ ಇತಿಹಾಸಕಾರರು ಇಂದಿಗೂ ಗುರುತಿಸುತ್ತಾರೆ. ಆ ನಂತರ ಫೆಲೆಸ್ತೀನ್ ಪ್ರತಿರೋಧ ಪಡೆಯೊಂದಿಗೆ ಟ್ಯೂನಿಶೀಯಾಕ್ಕೆ ಪ್ರಯಾಣ ಬೆಳೆಸಿದ ದರ್ವೇಶ್ ಅಕ್ಷರಶಃ ಹೋರಾಟಗಾರನಂತೆಯೇ ಬದುಕಿದರು. ಗೊತ್ತು ಗುರಿ ಇಲ್ಲದಂತೆ ಜಗತ್ತಿನಾದ್ಯಂತ ಅಲೆದರು. ದರ್ವೇಶರ ಅತ್ಯುತ್ತಮ ಕಾವ್ಯಗಳೆಲ್ಲವೂ ಅವರು ತಾಯಿನಾಡಿನಿಂದ ಹೊರಗಡೆ ಗೊತ್ತುಗುರಿಯಿಲ್ಲದೆ ಅಲೆಯುತ್ತಿದ್ದಾಗಲೇ ಹುಟ್ಟಿಕೊಂಡಿರುವುದು ವಿಶೇಷ ಮತ್ತು ಆ ಕಾವ್ಯಗಳೆಲ್ಲವೂ ತನ್ನ ತಾಯಿನಾಡಿನ ಕುರಿತೇ ಇರುವುದು ಮತ್ತೊಂದು ವಿಶೇಷ. 1995ರಲ್ಲಿ ಫೆಲೆಸ್ತೀನ್ ಲಿಬರೇಷನ್ ಆರ್ಗನೈಶೇಷನ್ ಓಸ್ಲೋ ಒಪ್ಪಂದಕ್ಕೆ ಸಹಿ ಹಾಕಿದಾಗ ದರ್ವೇಶ್ ತಾಯಿ ನಾಡಿಗೆ ಹಿಂದಿರುಗಿದರು. ಮಾತೃಭೂಮಿಯಲ್ಲಿ ಸಹಜ ಜೀವನವನ್ನು ನಡೆಸುವ ಯತ್ನ ಮಾಡಿದರು. ಆದರೆ, ಇಸ್ರೇಲ್ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. 2002ರಲ್ಲಿ ರಾಮಲಲ್ಲಾದಲ್ಲಿ ಇಸ್ರೇಲ್ ನಡೆಸಿದ ಮಾನವ ಇತಿಹಾಸದ ಮತ್ತೊಂದು ಮಹಾ ದುರಂತಕ್ಕೆ ಅವರು ಸಾಕ್ಷಿಯಾದರು. ಈ ಘಟನೆ ಅವರ ಪ್ರಸಿದ್ಧ ಹಾಲತ್ ಹಿಶಾರ್’ ಕಾವ್ಯಸಂಕಲನದ ಉದಯಕ್ಕೆ ಕಾರಣವಾಯಿತು.

ಮಹಾ ಮಾನವತಾವಾದಿಯಾಗಿದ್ದ ದರ್ವೇಶ್ ಶತ್ರುಗಳನ್ನೂ ಸಹಾನುಭೂತಿಯಿಂದ ಕಾಣಬಲ್ಲವರಾಗಿದ್ದರು. ತನ್ನ ಮಾತೃಭೂಮಿಯ ದುರವಸ್ಥೆಗೆ ಕಾರಣಕರ್ತರಾಗಿದ್ದ ಇಸ್ರೇಲ್ ಎಂಬ ಪುಟ್ಟ ರಾಷ್ಟ್ರದ ನಾಗರಿಕರಾದ ಸಾಮಾನ್ಯ ಯಹೂದಿ ಗಳನ್ನು ಅವರೆಂದೂ ಧ್ವೇಷಿಸುತ್ತಿರಲಿಲ್ಲ. ಅವರ ವಿರೋಧವೇನಿದ್ದರೂ ವಸಾಹತುಶಾಹಿ ಶಕ್ತಿಗಳ ಪರದೆಯ ಹಿಂದೆ ನಿಂತು ಇಸ್ರೇಲ್ ಹೇರುತ್ತಿದ್ದ ನಿಯಮಗಳಿಗೆ, ಝಿಯೋನಿಸ್ಟ್ ಪಿತೂರಿಗಳಿಗೆದುರಾ ಗಿತ್ತು. ಎಷ್ಟೋ ಮಂದಿ ಯಹೂದಿಗಳೂ ಫೆಲೆಸ್ತೀನ್ ಪ್ರಜೆಗಳ ಕುರಿತು ಸಹಾನುಭೂತಿ ಹೊಂದಿರುವುದನ್ನು ಅವರು ಕಂಡುಕೊಂಡಿದ್ದರು. ಫೆಲೆಸ್ತೀನ್ ಎಂಬ ಸ್ವತಂತ್ರ ರಾಷ್ಟ್ರಕ್ಕಾಗಿ ಧ್ವನಿ ಎತ್ತುತ್ತಿದ್ದ ಯಹೂದಿಗಳೂ ಇದ್ದರೆಂಬುದನ್ನು ಅವರು ಅರಿತಿದ್ದರು. 1998ರಲ್ಲಿ ಹಾರ್ಟ್ ಸರ್ಜರಿಗೊಳಗಾದ ದರ್ವೇಶ್, ಅದೇ ಅನುಭವನ್ನಿಟ್ಟುಕೊಂಡುಜಿದಾರಿಯ್ಯಾ’ ಎಂಬ ಅದ್ಭುತ ಕಾವ್ಯ ಸಂಕಲನವನ್ನೇ ಹೊರತಂದರು.
2008ರಲ್ಲಿ ಮತ್ತೆ ಹೃದಯಾಘಾತಕ್ಕೊಳಗಾದ ಅವರು ಶಾಶ್ವತವಾಗಿ ಭೂಲೋಕಕ್ಕೆ ವಿದಾಯ ಹೇಳಿದರು.

ಸ್ವಾಲಿಹ್ ತೋಡಾರ್

ಫೆಲಸ್ತೀನ್, ಲೆಬನಾನ್: ನಿಜ ಬದುಕಿನ ಅನಾವರಣ

ಇಸ್ರೇಲ್ ದೇಶವು ಫೆಲಸ್ತೀನರ ಮೇಲೆ ನಡೆಸುವ ಕ್ರೂರತೆಯನ್ನು ಕಂಡಿಲ್ಲವೆಂದು ನಟಿಸುವುದೋ, ಅಡಗಿಸಿಡುವುದೋ ಮಾಡುವವರಿಗೆ ನೇರ ಸೂಚಕಾ ವಸ್ತುವೇ ಡಾ. ಆಂಗ್ ಸ್ವೀ ಛಾಯ್ ಅವರು ಬರೆದ ‘From Beirut to Jerusalem’. ಈ ಪುಸ್ತಕವನ್ನು ‘ಬೈರೂತಿನಿಂದ ಜೆರುಸಲಂಗೆ’ ಎಂಬ ಹೆಸರಿನಲ್ಲಿ ಫಕೀರ್ ಮುಹಮ್ಮದ್ ಕಟ್ಪಾಡಿಯವರು ಬಹಳ ಚಂದವಾಗಿ ಕನ್ನಡೀಕರಿಸಿದ್ದಾರೆ.
ಫೆಲಸ್ತೀನ್ ಕುರಿತ ಓದುವಿಕೆಯಲ್ಲಿ ಪ್ರಮುಖವಾದ ಗ್ರಂಥವಿದು. ತಿರಸ್ಕ್ರತವಾದ ಒಂದು ಜನತೆ ಅಸಾಹಯಕತೆಯ ನಡುವೆ ಸಿಲುಕಿ ಅನುಭವಿಸುವ ‘ನೋವಿನ ಅನುಭವ’ಗಳನ್ನು ಸಾಕ್ಷಿಯಾರಿಸಿ ಬರೆದ ಗ್ರಂಥವಿದು. ಪ್ರತಿಯೊಂದು ಗೆರೆಯಲ್ಲೂ ಫೆಲಸ್ತೀನಿನ ನೋವು ಎಷ್ಟು ತೀವ್ರತೆಯನ್ನು ನೀಡುತ್ತದೆಯೆಂದು ಓದುಗನಿಗೆ ಓದುತ್ತಾ ಹೋದಂತೆ ಮನದಟ್ಟಾಗುತ್ತದೆ.

“ಫೆಲಸ್ತೀನಿಯರಿಗೆ, ಫೆಲಸ್ತೀನನ್ನು ಪ್ರೀತಿಸುವವರಿಗೆ” ಎಂಬ ಮುನ್ನುಡಿಯೊಂದಿಗೆ ಪುಸ್ತಕದ ಆರಂಭ. ಮುನ್ನುಡಿಯಲ್ಲೇ ತಾನು ಯಾರೆಂದು ಸೂಚಿಸುತ್ತಾರೆ ಡಾ. ಆಂಗ್ ಸ್ವೀ ಛಾಯ್. ಅವರೊಬ್ಬ ವಿದ್ಯೆ ಕರಗತಗೊಳಿಸಲು ಹೋರಾಡಿದ ಒಂದು ತಾಯಿಯ ಮಗ. ಅಪ್ಪ ಹಾಗೂ ಅಮ್ಮನ ಜೀವನ ಸಾಹಸಿಕ ಹಾಗು ನೀತಿಯ ಸಲುವಾಗಿತ್ತು. ಜೈಲಿನಲ್ಲಾಗಿತ್ತು ಅವರು ವಿವಾಹಿತರಾಗುವುದು. ಬಾಲ್ಯದಲ್ಲೇ ಉತ್ಸಾಹ, ಹುರುಪಿನಿಂದ ಕಲಿತು ವೈದ್ಯಕೀಯ ಕೆಲಸಕ್ಕೆ ಸೇರಿಕೊಂಡರು. ವೈದ್ಯರಾದ ಬಳಿಕ ಛಾಯ್ ‘ಈ ವೃತ್ತಿ ನನಗೆ ಹಣ ಗಳಿಸುವುದರ ಬದಲು ಬಡ-ನಿರ್ಗತಿಕರನ್ನು ರಕ್ಷಿಸಲು ಇರುವುದೆಂದು ತೀರ್ಮಾನಿಸಿ, ಪುಸ್ತಕ ಅಧ್ಯಯನದತ್ತ ಕಾಲಿಟ್ಟರು.

1982 ಇಸವಿಯಲ್ಲಿ ಲಂಡನ್ನಿನ ವೈದ್ಯರಾಗಿ ಸೇವೆ ಸಲ್ಲಿಸುವಾಗ, ನಿರಂತರ ಯುದ್ಧ ನಡೆಯುವ ಲೆಬನಾನಿಗೆ ‘ಪರಿಣಿತ ವೈದ್ಯರು ಬೇಕೆಂಬ’ ಜಾಹಿರಾತು ಕಾಣುತ್ತದೆ. ಬಾಲ್ಯ ಕಾಲದಲ್ಲಿ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಉತ್ಸಾಹಿಯಾಗಿದ್ದರು ಛಾಯ್. ಛಾಯ್ ಬಿ.ಬಿ.ಸಿಯಲ್ಲಿ ವಾರ್ತೆ ಕೇಳುವಾಗ ಅಚ್ಚರಿಪಟ್ಟರು, ‘ಇಸ್ರೇಲರು ಸಾಮೂಹಿಕ ಕೋಲೆ ನಡೆಸುತ್ತಿರುವುದೋ..?’ ಎಂದು ಚಿಂತಿಸಿಯಾಗಿತ್ತು ಆಶ್ಚರ್ಯಚಕಿತರಾದದ್ದು. ಕಾರಣ ಇಸ್ರೇಲರ ಕುರಿತು ಕೇಳಿದ ಸ್ಪಷ್ಟೀಕರಣ ಹಾಗೆ ಆಗಿರಲಿಲ್ಲವಲ್ಲಾ ಎಂಬುವುದಾಗಿತ್ತು. ಆದರೂ ಹಾಸ್ಪಿಟಲ್ ಕೆಲಸ ಕೊನೆಗೊಳಿಸಿ ಬೈರೂತಿನತ್ತ ಹೊರಟುನಿಂತರು. ಜಗತ್ತಿನಲ್ಲಿನ ಹಲವು ಭಾಗಗಳಿಂದಿರುವ ನೂರರಷ್ಟು ಬರುವ ವೈದ್ಯರೊಂದಿಗೆಯಾಗಿತ್ತು ಯಾತ್ರೆ.

ಈ ಪುಸ್ತಕ ಐದು ಪ್ರಮುಖ ಅಧ್ಯಯನದ ಕ್ರಮೀಕರಣದೊಂದಿಗಿದೆ. ಹೃದಯ ಉದ್ವೇಗಗೊಳ್ಳುವ ನೋವಿನ ಅನುಭವವನ್ನು ಪ್ರತೀ ಅಧ್ಯಯನದಲ್ಲಿ ಕಾಣಲು ಸಾಧ್ಯ. ಬೈರೂತಿನ ಪ್ರಾಥಮಿಕ ಯಾತ್ರೆಯ ಅನುಭವವನ್ನು ಒಳಗೊಂಡ ಮೊದಲ ಅಧ್ಯಾಯವನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಯುದ್ಧದ ಭಯಾನಕತೆಯನ್ನು ವಿಭಿನ್ನವಾಗಿ ವಿವರಿಸುತ್ತಾರೆ; “ನಾವು ತಲುಪುವ ಹೊತ್ತಿಗೆ ವೈಮಾನಿಕ ಯುದ್ಧದ ತುಂಬ ಶೋಚನೀಯವಾದ ಹಂತವು ಮುಗಿದಿತ್ತು. ಬಾಂಬ್, ಶೆಲ್ಲ್’ಗಳು ಬಂದು ಬೀಳುವುದಿಲ್ಲವೆಂಬ ಸಂತೈಕೆಯಿದ್ದರೂ, ನಗರದಲ್ಲಿ ಕಂಡ ದೃಶ್ಯವು ಅದನ್ನ ಮರತು ಹೋಗುವಂತಾಗಿಸಿತು. ಬಾಂಬ್ ಮೂಲಕ ನೆಲಸಮವಾದ ಕಟ್ಟಡ, ಅವಶೇಷಗಳ ರಾಶಿ, ಬಿದ್ದು ನೇತಾಡುತಿರುವ ಕಟ್ಟಡ ಗೋಡೆಗಳು ನೋಡುವಾಗ ತಲೆಕೆಳಗಾಗಿದ ಅಡ್ಡ ಬಿದ್ದಂತೆ ಕಾಣುತ್ತಿತ್ತು. ನಾಶದ ಕೈಗಳಿಗೆ ಸಿಗದ ಬೈರೂತ್ ಇಂದೂ ಸುಂದರವಾಗಿದೆ.” ಎಂದು ಯುದ್ಧದ ಭಯಾನಕತೆಯ ಕುರಿತು ವಿವರಿಸುತ್ತಾರೆ. ವಿಶೇಷವಾದ ಪರಿಭಾಷಾ ಪ್ರಯೋಗದೊಂದಿಗೆ ಒಂದೊಂದೇ ಸ್ವಾನುಭವವನ್ನು ವಿವರಿಸುತ್ತಾ ಹೋಗುತ್ತದೆ ಈ ಪುಸ್ತಕ.

ಎಲ್ಲಾ ಆಸ್ಪತ್ರೆಗಳು ಇಸ್ರಾಯೀಲರ ಬಾಂಬ್ ದಾಳಿಯಿಂದ ಉರುಳಿ ಬಿದ್ದಿದೆ. ಔಷಧಿ, ಅತ್ಯವಶ್ಯಕ ವಸ್ತುಗಳೇನೂ ಇಲ್ಲ. ಅದರ ಮಧ್ಯೆ ಮಕ್ಕಳನ್ನು ಸಹ ಹೊರಗಡೆ ಕೊಂದು ಹಾಕುತ್ತಿದ್ದಾರೆ. ಈ ಖಿನ್ನತೆಯ ಮಧ್ಯೆ ನಿಲ್ಲುವಾಗಲೂ ಅಸ್ತಮಿಸದ ಕಿರಣಗಳನ್ನು ಅವರು ಮುಖದಲ್ಲಿ ಬಿರಿಯುವುದನ್ನು ಕಾಣುವುದೆಂದು ಲೇಖಕ ಛಾಯ್ ವಿವರಿಸುತ್ತಾರೆ. ಅದರೊಂದಿಗೆ ಮನುಷ್ಯತ್ವದ ಸರ್ವ ಮಜಲುಗಳನ್ನು ಲಂಘಿಸಿ ನಡೆಸುವ ಅಧಿಕಾರದ ಕುರಿತು ಪ್ರತಿಯೊಂದು ಅಧ್ಯಾಯವು ಚರ್ಚಿಸುತ್ತದೆ.

ಹೇಗೆ ಸ್ವಾತಂತ್ರಕ್ಕೆ ಬೇಕಿರುವ ಆವೇಶವನ್ನು ಪಡೆಯುವುದೆಂದು, ಇಸ್ರೇಲರ ಮಧ್ಯೆ ಜೀವಿಸುವ ಫೆಲಸ್ತೀನಿನ ಸಣ್ಣ ಮಕ್ಕಳು ನಿರಂತರವಾಗಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ ಎಂದು ಈಸಾ ಎಂಬ ಪುಟ್ಟ ಮಗುವಿನ ಅನುಭವದ ಮೂಲಕ ವಿವರಿಸಿಕೊಡುತ್ತಾರೆ. ಫೆಲಸ್ತೀನ್ ಕ್ರಿಶ್ಚಿಯನ್ ಬಂಧನದಲ್ಲಿದ್ದ ಮಗುವೇ ಈಸ. ತನ್ನ ಕಾಲು ನಷ್ಟಹೊಂದಿದಾಗಲೂ ಮಾತುಗಾರಿಕೆ ಫೆಲಸ್ತೀನಿನ ಸ್ವಾತಂತ್ರದ ಕುರಿತಾಗಿತ್ತು. ಆದರೆ ನಡೆದಾಡಲು ಸಾಧ್ಯವಿಲ್ಲದ ಈ ಮಗುವಿನ ಕುರಿತು ಮನಃವೇದನೆಗೊಳ್ಳುತ್ತಾರೆ. ಮಕ್ಕಳನ್ನು ಹೇಗೆ ಇಷ್ಟು ಭೀಕರತೆಯಿಂದ ಸಾಮೂಹಿಕವಾಗಿ ಕೊಲ್ಲುವುದು…? ಎಂದು ಆಂಗ್ ಖೇದಕರವಾಗಿ ಕೇಳುತ್ತಾರೆ.

ಒಂದು ಡೈರಿಯ ರೀತಿಯಲ್ಲಿ ಆಂಗ್ ತಾನು ಕಂಡ ಅನುಭವವನ್ನು ಈ ರೀತಿಯಾಗಿ ಪ್ರತಿಯೊಂದು ಅನುಭವ ಘಟನೆಯನ್ನು ವಿವರಿಸುತ್ತಾರೆ. ಇದು ಪ್ರತಿಯೊಬ್ಬನೂ ಓದಲೇಬೇಕಾದ ಕೃತಿ. ನಮ್ಮ ಕಾಲದ ಅಕ್ರಮ, ದುರಂತಗಳು ನಾವು ಅರಿಯದೇ ಹೋಗಬಾರದು. ಇಸ್ರಾಯೀಲರ ವಿರುದ್ಧ ಮಾನಸಿಕವಾಗಿ ಬೆಂಬಲ ನೀಡಲು ಈ ಕೃತಿ ಖಂಡಿತ ಪ್ರೇರಕವಾಗುವುದು.
ಅದಲ್ಲದೆ ಈಗಲೂ ಹಿಟ್ಲರ್ ಯಹೂದರೊಂದಿಗೆ ಮಾಡಿದ ಕ್ರೂರತೆ ಕುರಿತ ಅನುಭವಗಳು ಹಾಗೂ ಕಾದಂಬರಿಗಳು ಇಂಗ್ಲಿಷ್ ಸಾಹಿತ್ಯದಲ್ಲಿ ಮನಃಪೂರ್ವಕವಾಗಿ ಬಿಡಲಾಗುತ್ತಿದೆ. ಅದರೊಂದಿಗೆ ಯಹೂದರೊಂದಿಗಿರುವ ಸಹಾನುಭೂತಿ ಶಕ್ತವಾಗುತ್ತಿದೆ. ಹೀಗೆ ಲಭಿಸುವ ಬಲದಿಂದ ಅವರು ಅಂದು ಹಿಟ್ಲರ್ ಮಾಡಿದ ನೂರುಪಟ್ಟು ಅನೀತಿಯನ್ನು ಫೆಲಸ್ತೀನರೊಂದಿಗೆ ಮಾಡುತ್ತಿದ್ದಾರೆ…
ಹೀಗೆ ಲೇಖಕರು ಫೆಲಸ್ತೀನಿನ ಅನುಭವವನ್ನು ಪುಸ್ತಕದಂತ್ಯದವರೆಗೂ ವಿವರಿಸುತ್ತಾರೆ.
ಈ ವಿಷಯದಲ್ಲಿ ಹಲವು ಪುಸ್ತಕಗಳು ವಿಶ್ವದಾದ್ಯಂತ ರಚಿಸಲ್ಪಟ್ಟಿದೆ. ಅದು ಕನ್ನಡ ಭಾಷೆಗೆ ಬರಬೇಕಾದ ಅನಿವಾರ್ಯತೆಯಿದೆ.

ಈ ಪುಸ್ತಕವನ್ನು ಕೇರಳದ ‘Other Books’ ಪ್ರಕಾಶನ ಹೊರತಂದಿದೆ. ಅಲ್ಲದೆ ಸೂಫಿಸಂ, ಇತಿಹಾಸ, ದಲಿತ ಅಧ್ಯಯನ ಸೇರಿದಂತೆ ಹಲವು ವಿಷಯಗಳಲ್ಲಿ ಕನ್ನಡ, ಇಂಗ್ಲಿಷ್, ಮಲಯಾಳಂ ಭಾಷೆಯಲ್ಲಿ ಹಲವು ಉಪಯುಕ್ತ ಪುಸ್ತಕಗಳನ್ನ ಪ್ರಕಾಶನ ಮಾಡಿದ ಪ್ರಕಾಶನವಿದು.
~
ಫಕೀರ ಮುಹಮ್ಮದ್ ಕಟ್ಪಾಡಿಯವರು ತಮ್ಮ ಕನ್ನಡ ‍ಸಾಹಿತ್ಯದಲ್ಲಿ ವಿಶೇಷವಾಗಿ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯದ ಸಂಪ್ರದಾಯಗಳನ್ನು ಹಾಗು ನೋವು ನಲಿವುಗಳನ್ನು ನೈಜವಾಗಿ ವ್ಯಕ್ತಪಡಿಸಿದವರು. ಇವರ ಕಥೆಗಳು ಭಾರತ‍ದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಸೂಫೀ ಸಾಹಿತ್ಯದ ಮೂರು ಕೃತಿ; ಸೂಫಿ ಸಂತರು, ಸೂಫಿ ಮಹಿಳೆಯರು,ಉತ್ತರ ಕರ್ನಾಟಕದ ಸೂಫಿಸಂತರು. ಅಲ್ಲದೆ ಹಲವು ಕಥಾ ಸಂಕಲನಗಳನ್ನೂ ಅವರು ಪ್ರಕಟಿಸಿದ್ದಾರೆ.

-ಸಲೀಂ ಇರುವಂಬಳ್ಳ.

ಹೊಸ ಯುಗದ ರೂಮಿ ಓದು : ಕೋಲ್ಮನ್ ಬಾರ್ಕ್ಸ್ ಮತ್ತು ಜನಪ್ರಿಯ ಅನುವಾದದ ಸಮಸ್ಯೆಗಳು.

ತಿಂಗಳುಗಳ ಹಿಂದೆ ‘Boise public library’ಯು ಆಯೋಜಿಸಿದ್ದ ‘ರೂಮಿ ನೈಟ್’ ಎಂಬ ಕಾರ್ಯಕ್ರಮದ ಬಗ್ಗೆ ನಾವು ಮಾತನಾಡುತ್ತಿದ್ದೆವು. ನಾನು ಆ ಕಾರ್ಯಕ್ರಮಕ್ಕೆ ಹಾಜರಾಗದ ಬಗ್ಗೆ ನನ್ನಲ್ಲಿ ಗೆಳೆಯನ ತಾಯಿ ತನ್ನ ಅಸಮಾಧಾನವನ್ನು ತೋಡಿಕೊಂಡರು. ರೂಮಿಯ ಬಗ್ಗೆ ಮಾತನಾಡುತ್ತಾ ಆ ತಾಯಿ ಮತ್ತಷ್ಟು ಉಲ್ಲಸಿತರಾಗುತ್ತಿರುವುದನ್ನು ನಾನು ಗಮನಿಸಿದೆ.ಮೂಲತಃ ಇರಾನಿನವರಾಗಿದ್ದ ಆ ಕುಟುಂಬ ಇತ್ತೀಚಿಗೆ ಇದಾಹೋ ಪಟ್ಟಣದಲ್ಲಿ ವಾಸವಾಗಿದ್ದರು. ನಮ್ಮ ಚರ್ಚೆ ಮುಂದುವರಿಯುತ್ತಿರಬೇಕಾದರೆ ಯುವಕನೊಬ್ಬ ನಮ್ಮತ್ತ ನಡೆದುಬರುತ್ತಿರುವುದು ಕಾಣಿಸಿತು. ಆ ಯುವಕನನ್ನು ಕಂಡದ್ದೇ ಗೆಳೆಯನ ತಾಯಿ ಆತ ‘ರೂಮಿ ನೈಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವರ್ತಮಾನವನ್ನು ನಮ್ಮೊಂದಿಗೆ ಹಂಚಿಕೊಂಡರು. ಈ ಹೊಸತಲೆಮಾರಿನ ಯುವಕರೆಲ್ಲ ರೂಮಿಯನ್ನು ಓದಬಹುದೆಂದು ಅವರು ಊಹಿಸಿಯೂ ಇರಲಿಲ್ಲವೆನಿಸುತ್ತದೆ. ಆಕೆ ಮಾತು ಮುಂದುವರಿಸಿದರು.

“ಅವನ ಸೊಂಟದಲ್ಲಿ ಅಮೇರಿಕಾದ ‘Cow Boy’ಗಳ ಸೊಂಟಪಟ್ಟಿಯಂತಹ ದೊಡ್ಡದಾದ ಬೆಲ್ಟ್ ಇರುತ್ತಿತ್ತು. ರೂಮಿಯನ್ನು ಓದಲು ಪ್ರಾರಂಭಿಸಿದ ಬಳಿಕವಷ್ಟೇ ಅವರ ಬದುಕಿನಲ್ಲಿ ಬದಲಾವಣೆಗಳು ಪ್ರಾರಂಭಗೊಂಡದ್ದು”. ಆ ತಾಯಿಯ ಮಾತುಗಳು ನಮ್ಮ ಗಹನವಾದ ಚರ್ಚೆಯಿಂದ ಸರಿದು ಆ ಯುವಕನ ಬಗೆಗೆ ಮಾತ್ರ ಸೀಮಿತವಾಗತೊಡಗಿತ್ತು. ಒಬ್ಬ ಅತೀ ಸಾಮಾನ್ಯ ಯುವಕ ಅದರಲ್ಲೂ ಅಮೇರಿಕ್ಕನ್ನರು ರೂಮಿಯನ್ನು ಓದಲು ತೊಡಗಿದರೇ ..!ಅನ್ನುವ ಅಚ್ಚರಿಯಿಂದ ಮೆಲ್ಲಗೆ ಆ ತಾಯಿ ಹೊರಬರತೊಡಗಿದ್ದಳಷ್ಟೇ.

ಪಾಶ್ಚಿಮಾತ್ಯರೆಡೆಯಲ್ಲಿ ‘ರೂಮಿ’ ಎಂದೇ ಜನಪ್ರಿಯರಾದ ಮೌಲಾನ ಜಲಾಲುದ್ದೀನ್ ಬಲ್ಕಿಯವರನ್ನು ಅಮೇರಿಕನ್ನರು ಓದಬೇಕಾದರೆ ಅದೊಂದು ಅನುವಾದವಾಗಿರಬೇಕು ಮತ್ತು ಅದು ಕೋಲ್ಮನ್ ಬಾರ್ಕ್ಸ್ ಅವರದ್ದಾಗಿರುವ ಸಾಧ್ಯತೆಯೇ ಹೆಚ್ಚು. ಸಾಹಿತ್ಯ ಪುಸ್ತಕಗಳ ಭಾಷಾಂತರ ಕೃಷಿ ದೊಡ್ಡ ಪ್ರಮಾಣದಲ್ಲಿ ಇತ್ತೀಚೆಗೆ ನಡೆಯುತ್ತಿದೆಯಾದರೂ ಕೋಲ್ಮನ್ ಬಾರ್ಕ್ಸ್ ರವರಿಗೆ ದೊರೆತ ಮನ್ನಣೆ ಮತ್ತು ಸ್ವಾಗತ ಯಾರಿಗೂ ದೊರೆತಿಲ್ಲವೆಂದೇ ಹೇಳಬೇಕು. ಇದರ ಪರಿಣಾಮವೆಂಬಂತೆ ಹಲವಾರು ಗೋಷ್ಠಿಗಳು, ವಿಭಿನ್ನ ಕಾರ್ಯಕ್ರಮಗಳು ,ಇರಾನ್ ಮತ್ತು ಅಫ್ಘಾನ್ ದೇಶಗಳಿಗೆ ಔಪಚಾರಿಕವಾಗಿ ಭೇಟಿ ನೀಡುವ ಸೌಭಾಗ್ಯವೂ ಬಾರ್ಕ್ಸಿಗೆ ಒದಗಿಬಂತು. ವಿಶೇಷವಾಗಿ ಟೆಹ್ರಾನ್ ವಿಶ್ವವಿದ್ಯಾಲಯದಿಂದ ರೂಮಿ ಕವಿತೆಗಳ ಮೂವತ್ತು ವರ್ಷದ ಅಧ್ಯಯನಕ್ಕಾಗಿ ಗೌರವ ಡಾಕ್ಟರೇಟ್ ಪದವಿಯು ಮುಡಿಗೇರಿತು. ಜಾರ್ಜಿಯಾ ವಿಶ್ವವಿದ್ಯಾಲಯದ ಕುಲಪತಿಗಳಾದ ಬಾರ್ಕ್ಸರ ಜನಪ್ರಿಯತೆ ರೂಮಿಯ ತರ್ಜುಮೆಯಿಂದ ರಾತ್ರಿಬೆಳಗಾಗುವುದರಲ್ಲಿ ಜಗತ್ತಿನಾದ್ಯಂತ ವ್ಯಾಪಿಸಿತು.

ದೊಡ್ಡ ಮಟ್ಟದಲ್ಲಿ ಜನರೆಡೆಯಲ್ಲಿ ಒಪ್ಪಿಗೆಯನ್ನು ಪಡೆದ ಕೋಲ್ಮನ್ ಬಾರ್ಕ್ಸ್‌ರ ಕೃತಿಗಳು ಸಾಮಾನ್ಯ ಓದುಗರನ್ನು ಮೀರಿ ಅದಾಗಲೇ ಸಾಹಿತಿಗಳನ್ನೂ ತಲುಪತೊಡಗಿದ್ದವು. ಈ ಕಾರಣಕ್ಕಾಗಿಯೇ ಹತ್ತು ಸಾವಿರ ಪ್ರತಿಗಳೂ ಮಾರಟವಾಗದೆ ಮೂಲೆಸೇರುತ್ತಿದ್ದ ಇತರ ತರ್ಜುಮೆಗಳೆಡೆಯಲ್ಲಿ ಕೋಲ್ಮನ್ ಬಾರ್ಕ್ಸ್‌ರ ಕೃತಿಯು ಐದು ಲಕ್ಷ ಪ್ರತಿಗಳು ಮುದ್ರಣಗೊಂಡು, ಅದೇ ವೇಗದಲ್ಲಿ ಮಾರಾಟವೂ ಆಗಿ ಹೊಸ ಇತಿಹಾಸವನ್ನೇ ಬರೆಯಿತು. ಮಾತ್ರವಲ್ಲದೆ ರೂಮಿಯದ್ದೆಂದು ಹೇಳಲಾಗುವ ಅನೇಕ ‘ಸಾಲುಗಳು'(quotes) ಜಾಲತಾಣಗಳಲ್ಲಿ ಎಗ್ಗಿಲ್ಲದೆ ಹರಿದಾಡತೊಡಗಿದವು.

ಹೊಸ ತಲೆಮಾರಿನ ಓದುಗರ ಅಭಿರುಚಿಯನ್ನು ಪೂರೈಸುವ ರೀತಿಯ ತರ್ಜುಮೆಗಳಾಗಿದ್ದರೂ ರೂಮಿಯ ಮೂಲ ಕಾವ್ಯದ ಸತ್ವವು ನಷ್ಟಹೊಂದದ ತರ್ಜುಮೆಗಳಾಗಿದೆ ನನ್ನದು ಎಂದು ಕೋಲ್ಮನ್ ಬಾರ್ಕ್ಸ್ ಅಭಿಪ್ರಾಯ ಪಡುತ್ತಾರೆ. ಅದಾಗ್ಯೂ ಈ ಹೊಸತನ ಎಷ್ಟರಮಟ್ಟಿಗೆ ಮೌಲಾನ ರೂಮಿಯವರದ್ದು ಅನ್ನುವ ಅನುಮಾನದ ಕಿಡಿಯೊಂದು ಹಾಗೆಯೇ ಬಾಕಿಯಾಗುತ್ತದೆ.

1990ದಶಕ ಅಮೇರಿಕಾದಲ್ಲಿ ಅತೀ ಹೆಚ್ಚು ಓದಲ್ಪಡುವ ಕವಿಯಾಗಿ ರೂಮಿಯವರ ಕೃತಿಗಳು ಮುನ್ನಲೆಗೆ ಬಂದವು.ವಾಸ್ತವದಲ್ಲಿ ರೂಮಿಯವರ ಮೂಲ ಕವಿತೆಗಳ ಉದ್ದೇಶ,ಆಶಯ, ಒಳಾರ್ಥ ಇವುಗಳೊಂದಿಗೆ ಈ ತರ್ಜುಮೆಗಳಿಗೆ ಯಾವ ಸಂಬಂಧವೂ ಇರುತ್ತಿರಲಿಲ್ಲ. ಮುಖ್ಯವಾಹಿನಿಯ ಓದುಗರನ್ನು ಸೆಳೆಯಲೋಸುಗ ಮೂಲ ಕವಿತೆಗಳ ಆಶಯಗಳಿಗೆ ಧಕ್ಕೆ ಉಂಟುಮಾಡುವ ನಿರೂಪಣೆಗಳು ಧಾರಾಳವಾಗಿ ಅನುವಾದಗಳಲ್ಲಿ ನುಸುಳಿಕೊಂಡಿದ್ದವು. ನಿಖರವಾದ ಅನುವಾದಗಳಿಗೆ ಒತ್ತು ನೀಡುವುದನ್ನು ಕೋಲ್ಮನ್ ಬಾರ್ಕ್ಸ್‌ರು ಮರೆತೇ ಬಿಟ್ಟಿದ್ದರು.

ಅಮೆರಿಕಾದ ಸಾರ್ವಜನಿಕ ಪ್ರಜ್ಞೆಯು ಈ ಹಿನ್ನೆಲೆಯ ಅನುವಾದಗಳನ್ನೇ ಬಯಸಿದ್ದವು. ಇದು ನಿರಂತರ ಪ್ರಯತ್ನದ ಫಲಶ್ರುತಿಯಾದ ಆಧ್ಯಾತ್ಮಿಕತೆಯನ್ನು ಮೀರಿ ತಕ್ಷಣದ ಆಧ್ಯಾತ್ಮಿಕ ಸಮಾಧಾನವನ್ನು ಓದುಗರಿಗೆ ನೀಡತೊಡಗಿತ್ತು. ಬಾರ್ಕ್ಸ್‌ನ ಅನುವಾದಗಳು ಅಮೆರಿಕದ “ಆಧ್ಯಾತ್ಮಿಕ ಹಸಿವಿಗೆ” ತ್ವರಿತ ಆಧ್ಯಾತ್ಮಿಕ ಪರಿಹಾರವನ್ನು ನೀಡಿತ್ತು.ಆ ಕಾರಣಕ್ಕಾಗಿಯೇ ಅಮೇರಿಕಾದ ಜನತೆ ಈ ಸುಧಾರಿತ ಆಧ್ಯಾತ್ಮಿಕತೆಗೆ ಮಾರುಹೋದರು.ರೂಮಿಯ ಸಾಲುಗಳಲ್ಲಿ ಧಾರಾಳವಾಗಿದ್ದ ದೈವ ಭಕ್ತಿ ಮತ್ತು ಪರ್ಶಿಯನ್ ಸಾಹಿತ್ಯದ ಸೌಂದರ್ಯವು ಈ ಅನುವಾದಗಳಿಗೆ ಅನ್ಯವಾಗಿಯೇ ಉಳಿದುಬಿಟ್ಟವು.
2010 ರಲ್ಲಿ ಬಾರ್ಕ್ಸ್‌ರ ಅನುವಾದಗಳ ಬಗ್ಗೆ ವಿಮರ್ಶೆ ಬರೆದ ಅಬು ಅಲ್-ಫಝಲ್ ಹೊರ್ರಿ, ನಾವು ಬಾರ್ಕ್ಸ್‌ನ ಅನುವಾದಗಳನ್ನು “ರೂಪಾಂತರಗಳು” ಎಂದು ಮಾತ್ರವೇ ಕರೆಯಬೇಕೆಂದು ಸೂಚಿಸಿದರು.

ಶೈಕ್ಷಣಿಕ ಮಾನದಂಡಗಳನ್ನು ಆಧರಿಸಿ ನನ್ನ ಅನುವಾದಗಳನ್ನು ವಿಶ್ಲೇಷಣೆ ಮಾಡಬಾರದೆಂದು ಹೇಳಿಕೊಂಡ ಬಾರ್ಕ್ಸ್‌ರ ಬರಹಗಳನ್ನು ಶೈಕ್ಷಣಿಕವಾಗಿ ಎಷ್ಟು ಮಹತ್ವದ್ದು ಅನ್ನುವ ನಿಟ್ಟಿನಲ್ಲಿ ಟೀಕಿಸುವುದು ವ್ಯರ್ಥವಾಗುತ್ತದೆ.ಮಾತ್ರವಲ್ಲದೆ ‘Rumi: bridge to the soul’ ಎಂಬ ತನ್ನ ಕೃತಿಯ ಮುನ್ನುಡಿಯಲ್ಲಿ, ನನ್ನ ಅನುವಾದಗಳು ಶೈಕ್ಷಣಿಕ ಉದ್ದೇಶಗಳಿಗೆ ಬರೆಯಲ್ಪಟ್ಟದಲ್ಲ ಮತ್ತು ಅದು ಶೈಕ್ಷಣಿಕವಾಗಿ ಮೂಡಿಬಂದ ನಿರೂಪಣೆಗಳೂ ಅಲ್ಲ,ಬದಲಾಗಿ ಇವು ಅದನ್ನೆಲ್ಲಾ ಮೀರಿದ ಸ್ವತಂತ್ರ ನಿರೂಪಣೆಗಳಾಗಿದೆ ಎಂದರು.ಅದಾಗ್ಯೂ ಬಾರ್ಕ್ಸ್, ತನ್ನನ್ನು ಪುಸ್ತಕದ ಹೊರ ಕವಚದಲ್ಲಿ ‘ರೂಮಿಯನ್ನು ಅಮೇರಿಕಾಕ್ಕೆ ಪರಿಚಯಿಸಿದ ವ್ಯಕ್ತಿ’ ಎಂದು ಸ್ವತಃ ತಾನೇ ಪರಿಚಯಿಸಿಕೊಳ್ಳುವುದರ ಹಿಂದಿನ ಮರ್ಮವೇನೆಂದು ಅರ್ಥವಾಗುವುದಿಲ್ಲ.

ಹಲವು ಅನುವಾದಕರು ತಮ್ಮ ಕೃತಿಗಳ ಮುನ್ನುಡಿಯಲ್ಲಿ ಕೋಲ್ಮನ್ ಬಾರ್ಕ್ಸ್‌ರ ಬಗ್ಗೆ ಅಸಂತೃಪ್ತಿಯ ಹೇಳಿಕೆಗಳನ್ನು ‌ನೀಡಿದರಾದರೂ ಅದು ಚರ್ಚೆಗೆ ಗ್ರಾಸವಾಗಲೇ ಇಲ್ಲ.ಬಾರ್ಕ್ಸ್‌ರ ಕೃತಿಗಳು ತಲುಪಿದಂತೆ ಈ ವಿಮರ್ಶೆಗಳು, ಟೀಕೆಗಳು ಓದುಗರನ್ನು ತಲುಪುವಲ್ಲಿ ವಿಫಲಗೊಂಡಿತು.ಬೆರಳೆಣಿಕೆಯ ಒಂದಿಷ್ಟು ವಿಮರ್ಶೆಗಳು ಬಿಟ್ಟರೆ ಉಳಿದವುಗಳು ಸದ್ದಿಲ್ಲದೆ ಮಾಯವಾದವು.

ರೂಮಿಯ ಮೂಲ ಕವಿತೆಯ ಸಾಲುಗಳನ್ನು ಯಥಾವತ್ತಾಗಿ ಬಾರ್ಕ್ಸ್ ಅನುವಾದಿಸಲೇ ಇಲ್ಲ.ಆದರೂ ಈ ಹಿಂದೆ ಜನಪ್ರಿಯತೆ ಗಳಿಸಿದ್ದ ಹಾಫಿಝ್,ಉಮರ್ ಖಯ್ಯಾಮ್ ರಂತಹಾ ಶಾಸ್ತ್ರೀಯ ಪರ್ಶಿಯನ್ ಕಾವ್ಯಗಳ ಅನುವಾದಗಳಿಗೆ ಹೋಲಿಕೆ ಮಾಡಿದರೆ ಬಾರ್ಕ್ಸ್‌ರ ಅನುವಾದದಲ್ಲಿ ಕಂಡುಬಂದ ವಿಶೇಷ ಗುಣವೆಂದರೆ ಅದರ ಸರಳತೆ.ಸರಾಗವಾಗಿ ಓದಿಸಿಕೊಳ್ಳುವ ನವಿರಾದ ಭಾಷೆಯ ಸೊಬಗು.ಇತರ ಅನುವಾದಕರು ವೈಭವೀಕರಿಸಿ ಹೇಳ ಹೊರಟ ವಿಷಯಗಳನ್ನು ಬಾರ್ಕ್ಸ್ ಬಹಳ ಲಾಲಿತ್ಯದೊಂದಿಗೆ ತೆರೆದಿಟ್ಟರು.ಆದಾಗ್ಯೂ ಇದನ್ನೊಂದು ಉತೃಷ್ಟವಾದ ಅನುವಾದವೆನ್ನಲೂ ಆಗದ ಅನುವಾದದ ಅನುವಾದವೆಂದು ಮಾತ್ರವೇ ಕರೆಯಬಹುದು. ಪರ್ಶಿಯನ್ ಭಾಷೆ ಗೊತ್ತಿಲ್ಲದ ಬಾರ್ಕ್ಸ್ ಇಂಗ್ಲೀಷ್ ಭಾಷೆಗಳಲ್ಲಿ ಅದಾಗಲೇ ಪ್ರಕಟಗೊಂಡಿದ್ದ ಕವಿತೆಗಳಿಗೆ ತನ್ನತನವನ್ನು ಬೆರೆಸಿ ಓದುಗರ ಮುಂದಿಟ್ಟರು ಎನ್ನುವುದಾಗಿದೆ ಸತ್ಯ.

ಅಕಾಡೆಮಿಕ್ ಅನುವಾದಗಳ ಆಚೆಗೆ ಈ ರೀತಿ ಅನುವಾದಗಳ ಮೂಲಕ ಓದುಗರನ್ನು ತಲುಪುವುದು ಉತ್ತಮವೆಂದು ಕೊಲೊಮನ್ ಬಾರ್ಕ್ಸ್‌ ಅಭಿಪ್ರಯಿಸುತ್ತಾರೆ.ಜೊತೆಗೆ, ನಿಗೂಢಾರ್ಥವಿರುವ ಸಾಲುಗಳನ್ನು ಕೈ ಬಿಡುವುದು ಒಂದರ್ಥದಲ್ಲಿ ಜಾಣತನವೆನ್ನುವ ಬಾರ್ಕ್ಸ್ ಈ ಎಲ್ಲಾ ಸಮಸ್ಯಾತ್ಮಕ ಬರಹಗಳ ಹೊರತಾಗಿಯೂ,ರೂಮಿಯ ಹೆಸರಿನ ಲಾಭವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮುಂದುವರಿಸುತ್ತಾರೆ.

1976 ರ ಆಸುಪಾಸಿನಲ್ಲಾಗಿದೆ ಬಾರ್ಕ್ಸ್ ರೂಮಿಯ ಕಾವ್ಯಗಳೊಂದಿಗೆ ಆಪ್ತವಾಗಿ ವ್ಯವಹರಿಸಲು ಪ್ರಾರಂಭಿಸುವುದು.ರಾಬರ್ಟ್ ಬ್ಲೈ ಎಂಬ ಕವಿ ಮಿತ್ರರಾಗಿದ್ದಾರೆ ಬಾರ್ಕ್ಸ್‌ರವರಿಗೆ ರೂಮಿಯ ಕೃತಿಗಳ ಬಗ್ಗೆ ಪರಿಚಯಿಸುವುದು.ಆರ್ಥರ್ ಜಾನ್ ಆರ್ಬೆರ್ರಿಯ ಒಂದು ರೂಮಿ ಕವಿತೆಗಳ ತರ್ಜುಮೆಯನ್ನು ಹಸ್ತಾಂತರಿಸಿ, ‘ಈ ಕವಿತೆಗಳನ್ನು’ ಕಾರಾಗೃಹದಿಂದ ಬಿಡುಗಡೆಗೊಳಿಸಬೇಕೆಂದು’ ಬಾರ್ಕ್ಸ್‌ರವರಲ್ಲಿ ಅವರು ಕೇಳಿಕೊಳ್ಳುವುದು.ತೀರಾ ರೂಮಿಯ ಹೆಸರನ್ನೇ ಕೇಳಿರದ ಬಾರ್ಕ್ಸ್‌ರ ಮುಂದೆ ಹೊಸ ಅವಕಾಶಗಳ ದಾರಿಗಳನ್ನು ರಾಬರ್ಟ್ ಬ್ಲೈ ತೆರೆದಿಟ್ಟರು.ತನ್ನ ಎಂದಿನ ತರಗತಿಗಳ ಬಳಿಕ ಬಿಡುವು ಮಾಡಿಕೊಂಡ ಬಾರ್ಕ್ಸ್ ಆರ್ಬೇರ್ರಿಯ ತರ್ಜುಮೆಗಳನ್ನು ಶೃಂಗರಿಸಿ ಸೃಜನಶೀಲ ಭಾಷೆಗೆ ಅನುವಾದಿಸಲು ಅಂದಿನಿಂದಲೇ ಪ್ರಾರಂಭಿಸಿದರು.

ಬಾರ್ಕ್ಸ್ ವಿವರಿಸುವಂತೆ ಈ ಸಂದರ್ಭದಲ್ಲಾಗಿತ್ತು ಅವರ ಕನಸಿನಲ್ಲಿ ಸೂಫಿ ಸಂತರೋರ್ವರು ಪ್ರತ್ಯಕ್ಷಗೊಂಡು ತಾನು ಕೈಗೆತ್ತಿಕೊಂಡ ಈ ಅನುವಾದ ಯೋಜನೆಯನ್ನು ಶೀಘ್ರದಲ್ಲೇ ಪೂರ್ತಿಗೊಳಿಸಬೇಕಾಗಿ ವಿನಂತಿಸಿಕೊಳ್ಳುವುದು‌.ಸುಮಾರು ಎರಡು ವರ್ಷದ ಬಳಿಕ ತಾನು ಕನಸಿನಲ್ಲಿ ದರ್ಶಿಸಿದ ಅದೇ ಸೂಫಿವರ್ಯರನ್ನು ಬಾರ್ಕ್ಸ್ ಮುಖತಃ ಭೇಟಿಯಾದರು.ಫಿಲಡೆಲ್ಫಿಯಾದಲ್ಲಿ ವಾಸಿಸುತ್ತಿದ್ದ ಮೂಲತಃ ಶ್ರೀಲಂಕಾ ನಿವಾಸಿಯಾದ ಬಾವಾ ಮುಹಿಯದ್ದೀನ್ ಎಂಬವರಾಗಿದ್ದರು ಅವರು.ತನಗೆ ಸೂಫಿ ಅನುವಾದಗಳಿಗೆ ಸ್ಪೂರ್ತಿ ನೀಡಿದ ಬಹುಮುಖ್ಯ ವಿಷಯವಾಗಿತ್ತು ಇದೆಂದು ಸ್ವತಃ ಬಾರ್ಕ್ಸ್ ಹಂಚಿಕೊಂಡಿದ್ದಾರೆ.ಆ ಭೇಟಿಯ ನಂತರ, ಅವರು 1986 ರಿಂದ ಬಾವಾ ಮುಹಿಯದ್ದೀನ್ ಅವರ ಮರಣದ ವರೆಗೆ ವರ್ಷಕ್ಕೆ ಕನಿಷ್ಠ ಮೂರು ಅಥವಾ ನಾಲ್ಕು ಬಾರಿ ಭೇಟಿಯಾಗುತ್ತಿದ್ದರು. ಬಾರ್ಕ್ಸ್ ಮತ್ತು ಮುಹಿಯದ್ದೀನ್ ನಡುವೆ ಬೆಳೆದ ಈ ಸ್ನೇಹವನ್ನು ರೂಮಿ ಮತ್ತು ಶಮ್ಸ್ ತಬ್ರೇಝರ ಆತ್ಮೀಯ ಒಡನಾಟದೊಂದಿಗೆ ಸಮೀಕರಿಸುವ ಪ್ರಯತ್ನವನ್ನು ಕೆಲವರು ಮಾಡಿರುವುದು ಖೇದಕರ.

ನಂತರ ಅವರು ನ್ಯೂಯಾರ್ಕ್ ನಗರ ವಿಶ್ವವಿದ್ಯಾಲಯದ ಭಾಷಾ ವಿಭಾಗದ ಮುಖ್ಯಸ್ಥ ಜಾನ್ ಮೊಯ್ನ್ ಅವರೊಂದಿಗೆ ಕೆಲಕಾಲ ಕೆಲಸ ಮಾಡಿದರು.ಮೊಯ್ನ್ ಅವರ ಕೆಲವೊಂದು ಅಪ್ರಕಟಿತ ರೂಮಿ ಕವಿತೆಗಳನ್ನು ತನ್ನದೇ ಭಾಷೆಗೆ ಅನುವಾದಿಸುವುದು ಬಾರ್ಕ್ಸ್‌ರ ಪ್ರಧಾನ ಉದ್ದೇಶವಾಗಿತ್ತು.

ಲೇಗ್ ಎರಿಕ್ ಶ್ಮಿಡ್ ತನ್ನ ಅಮೇರಿಕಾದ ಆಧ್ಯಾತ್ಮಿಕ ಚರಿತ್ರೆಯನ್ನು ಹೇಳುವ ‘ರೆಸ್ಟ್ಲೆಸ್ ಸೋಲ್ಸ್’ ಕೃತಿಯಲ್ಲಿ ಬಾರ್ಕ್ಸ್‌ರ ನಿರೂಪಣೆಗಳನ್ನು ಪ್ರೊಟೆಸ್ಟಂಟ್ ಮತ್ತು ಅತೀಂದ್ರಿಯವಾದಿಗಳ ರೀತಿಯದ್ದಾಗಿದೆಯೆಂದು ಪರಿಚಯಿಸಿದ್ದು ಕಾಣಬಹುದು.
ಹತ್ತೊಂಬತ್ತನೆಯ ಶತಮಾನದ ಯಾವುದೇ ಕವಿಗಳಿಗಿಂತ ಹೆಚ್ಚು ಓದುಗರು ರೂಮಿಗೆ ಒಲಿದು ಬಂದಿರುವುದು ಬಾರ್ಕ್ಸ್‌ರ ತರ್ಜುಮೆಗಳಿಂದ ಮತ್ತು ನಿರೂಪಣೆಯಿಂದ ಮಾತ್ರವಾಗಿತ್ತೆಂದು ಎರಿಕ್ ಉಲ್ಲೇಖಿಸಿದ್ದು ಇಲ್ಲಿ ಗಮನಾರ್ಹ.

ಬಾರ್ಕ್ಸ್‌ರು ಹಲವು ಕವಿತೆಗಳನ್ನು ಗಮನಿಸಿದರೆ ಮೂಲ ಕವಿತೆಗಳಲ್ಲಿ ಹೇಳಲಾದ ಬಹುಮುಖ್ಯ ರೂಪಕಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟದ್ದು ಮನದಟ್ಟಾಗುತ್ತದೆ.ನಿರೂಪಣೆಯ ಶೈಲಿಯೂ ಪ್ರಮುಖ ಬದಲಾವಣೆಗಳಿಗೆ ಒಳಗಾಗಿರುವುದು ಗಮನಿಸಬಹುದು.ಇದಲ್ಲದೆ,ರೂಮಿಯ ಕವಿತೆಗಳಲ್ಲಿನ ಸಾಲುಗಳಿಗಿಂತ ಬಾರ್ಕ್ಸ್‌ರ ಸಾಲುಗಳು ಚಿಕ್ಕದಾಗಿಯೂ ಇದೆ.ಒಂದು ಸಣ್ಣ ಉದಾಹರಣೆಯನ್ನು ಗಮನಿಸಿ.

ರೂಮಿಯ ಹದಿನಾಲ್ಕು ಸಾಲುಗಳ ‘ಮಿಸ್ರಾಸ್‌’ನಲ್ಲಿ (ಕಾವ್ಯದ ಒಂದು ತುಣುಕು),ದೇವರ ಪರಿಕಲ್ಪನೆಯ ಮೂಲತತ್ವವನ್ನು ಪ್ರಶ್ನಿಸುವ ‘Howlessness’ ಎಂಬ ಸೂಕ್ತ ಪದದ ಬದಲಿಗೆ ‘How are you’ಎಂಬ ಸಾಮಾನ್ಯ ಪದವಾಗಿ ಸಂಪೂರ್ಣವಾಗಿ ಬದಲಿಸುವ ಮೂಲಕ ದೇವರ ಪರಿಕಲ್ಪನೆಯ ಮೂಲತತ್ವವನ್ನು ಪ್ರಶ್ನಿಸಿ,ಸೃಷ್ಟಿಕರ್ತನ ಗುಣಲಕ್ಷಣಗಳ ಶಾಶ್ವತತೆಗೆ ಸವಾಲೆಸೆಯುವ ಪ್ರಯತ್ನವನ್ನು ಬಾರ್ಕ್ಸ್ ಮಾಡುತ್ತಾರೆ.

ಮೇಲಿನವು ಋಣಾತ್ಮಕ ಅನುವಾದದ ಒಂದು ಸಣ್ಣ ರೂಪವಾಗಿದ್ದು,ಇದು ರೂಮಿಯ ಅನುವಾದಗಳಲ್ಲಿ, ನಿರೂಪಣೆಗಳಲ್ಲಿ ಪಾಶ್ಚಿಮಾತ್ಯರು ಸಾಮಾನ್ಯವಾಗಿ ಸ್ವೀಕರಿಸುವ ರೀತಿಯಾಗಿದೆ.ಹೀಗೆ ಬಾರ್ಕ್ಸ್‌ನಂತವರ ನಿರೂಪಣೆಗಳು ರೂಮಿ ಪ್ರತಿನಿಧಿಸುವ ಇಸ್ಲಾಮಿಕ್ ಚಿಂತನೆಯಿಂದ ರೂಮಿಯನ್ನು ನಿಧಾನವಾಗಿ ಹೊರಹಾಕುವ ಮತ್ತು ರೂಮಿಗೆ ಮಾತ್ರ ಇರಬಹುದಾದ ನಿರೂಪಣೆಯ ಸೌಂದರ್ಯವನ್ನು ನಾಶಪಡಿಸುವತ್ತ ತಲುಪಿಸಿಬಿಡುತ್ತದೆ.

ರೂಮಿ ಅವರ ನಿರೂಪಣೆಗಳನ್ನು ಶೈಕ್ಷಣಿಕ ದೃಷ್ಟಿಕೋನದಿಂದ ನೋಡಿದ್ದಕ್ಕಾಗಿ ಫ್ರಾಂಕ್ಲಿನ್ ಲೆವಿಸ್  ಅವರನ್ನು ವ್ಯಾಪಕವಾಗಿ ಟೀಕಿಸಲಾಗಿತ್ತು.ಆದಾಗ್ಯೂ, ಅವರು ತಮ್ಮ ‘,Swallowing the Sun’ ಎಂಬ ಕವಿತೆಯಲ್ಲಿ ಹೆಚ್ಚು ಸರಳವಾದ ಅನುವಾದಕ್ಕೆ ಮುಂದಾಗುತ್ತಾರೆ.ಈ ಅರ್ಥದಲ್ಲಿ,ಲೆವಿಸ್ ಕೆಲವೊಮ್ಮೆ ಬಾರ್ಕ್ಸ್‌ರ ಹೆಜ್ಜೆಗಳನ್ನು ಅನುಸರಿಸುತ್ತಿದ್ದರು.ಆದರೆ ಬಾರ್ಕ್ಸ್‌ ಮತ್ತು ಲೆವಿಸರ ನಡುವಿನ ಪ್ರಮುಖ ವ್ಯತ್ಯಾಸವೊಂದಿದೆ.ರೂಮಿಯ ಸಾಲುಗಳಿಗೆ ಅನುಗುಣವಾಗಿ ನಿಖರವಾದ ಅನುವಾದಗಳಿಗೆ ಅವರು ಹೆಚ್ಚಿನ ಆದ್ಯತೆಯನ್ನು ನೀಡಿದ್ದರು.ಅತ್ಯಂತ ಶ್ರೀಮಂತ ಮತ್ತು ಸ್ಪಷ್ಟವಾದ ಭಾಷೆ,ಹಾಗೆಯೇ ಅನೇಕ ಸಾಲುಗಳ ಅಡಿಟಿಪ್ಪಣಿಗಳು ಮತ್ತು ಅವುಗಳಲ್ಲಿನ ಕುರಾನಿನ ವಚನಗಳ ಉಲ್ಲೇಖ ಆ ಕವಿತೆಗಳ ಇಸ್ಲಾಮಿಕ್ ಮಹತ್ವವನ್ನು ಪರಿಗಣಿಸಿವೆ ಎಂಬುದನ್ನು ಸಾಬೀತುಪಡಿಸುತ್ತದೆ,ಆದರೆ ಬಾರ್ಕ್ಸ್‌ ಅವರ ಅನುವಾದಗಳು ಅಕ್ಷರಶಃ ಮೂಲತತ್ವವನ್ನು ಕಡೆಗಣಿಸಿ ಮಾಡಿದ್ದಾಗಿದ್ದವು.

ರೂಮಿ ಅನುವಾದಕರ ಅಥವಾ ಅನುವಾದಗಳ ಬಗ್ಗೆ ಇಲ್ಲಿ ವಿಶ್ಲೇಷಿಸುತ್ತಿರುವ ಉದ್ದೇಶ ಇದುವರೆಗೆ ನಡೆಸಲಾದ ತರ್ಜುಮೆಗಳನ್ನು ಸಾರಾಸಗಟಾಗಿ ಅಲ್ಲಗಳೆಯುವ ಉದ್ದೇಶಲ್ಲ.ಇದುವರೆಗೆ ಪ್ರಕಟಗೊಂಡ ಅನುವಾದಗಳಲ್ಲಿ ಯಾವುದೂ ಉತೃಷ್ಟವಾದ ನಿರೂಪಣೆಗಳೇ ಅಲ್ಲವೆಂದು ಸಾಬೀತು ಪಡಿಸುವುದೂ ಅಲ್ಲ.ಬದಲಾಗಿ,ಇದಾಹೊದಲ್ಲಿರುವ ನನ್ನ ಸ್ನೇಹಿತನ ತಾಯಿ ಹೇಳಿದಂತೆ,ಎರಡು ಭಾಷೆಗಳೂ ಚೆನ್ನಾಗಿ ಬಲ್ಲವರಿಗೆ ಉಂಟಾಗುವ ದ್ವಂದ್ವಗಳು ಹೇಗಿರಬಹುದು ಅನ್ನುವ ವಿವರಣೆಯಾಗಿದೆ.ಪರ್ಶಿಯನ್ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದಿರುವ,ಇಂಗ್ಲಿಷ್‌ನಲ್ಲಿ ಬರೆಯುವ ಒಬ್ಬ ಒಳ್ಳೆಯ ಕವಿ ಕೇವಲ ಸಾಲುಗಳನ್ನು ಶೃಂಗರಿಸುವುದನ್ನು ಮೀರಿ ರೂಮಿಯ ವಿಚಾರಗಳನ್ನು ಘಾಸಿಗೊಳಿಸದೆ ಕವಿತೆಗಳನ್ನು ಬರೆಯಬೇಕೆಂಬ ಬಯಕೆಯಿಂದ ಇವೆಲ್ಲವನ್ನೂ ಹೇಳಬೇಕಾಯಿತು.

ಇತರ ಅನುವಾದಕರಂತೆ,ಬಾರ್ಕ್ಸರೂ ಸರಳ ಅನುವಾದವನ್ನು ಮಾಡಿದರು,ಅದು ಅಮೆರಿಕದ ಮುಖ್ಯವಾಹಿನಿಯ ಓದುಗರಿಗೆ ಅರ್ಥವಾಗುವಂತಹದ್ದಾಗಿತ್ತು.ಕಾವ್ಯಾತ್ಮಕ ಅಭಿವ್ಯಕ್ತಿಯ ಶಕ್ತಿ ಯಾವತ್ತಿಗೂ ಎರಡು ಪಟ್ಟು ಹೆಚ್ಚು.ಹೊಸ ಚಿಂತನೆಯ ಬೆಳಕಿಂಡಿಗಳನ್ನು ತೆರೆಯಲು ಮತ್ತು ನಮ್ಮೆಲ್ಲರಲ್ಲೂ ಇರುವುದನ್ನು,ನಾವು ಗುರುತಿಸದ ಯಾವುದನ್ನಾದರೂ ನಮ್ಮ ಮುಂದೆ ತೆರೆದಿಡಲು ಕಾವ್ಯಗಳಿಗೆ ವಿಶೇಷವಾದ ಸಾಮರ್ಥ್ಯವಿದೆ ಎನ್ನುವುದು ಇಲ್ಲಿ ಮತ್ತೆಮತ್ತೆ ಸಾಬೀತಾಗುತ್ತದೆ.ಕಾವ್ಯಗಳ ಅನುವಾದಗಳು ತನ್ನ ಇತಿಮಿತಿಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡೇ ಹುಟ್ಟುತ್ತದೆ ಎನ್ನುವುದು ಸಾರ್ವಕಾಲಿಕ ಸತ್ಯವಾಗಿ ಉಳಿದುಬಿಡುತ್ತದೆ.

ಕನ್ನಡಕ್ಕೆ : ಝುಬೈರ್ ಹಿಮಮಿ ಪರಪ್ಪು

ಮೂಲ : ಕೇಟ್ ಥೋರ್ಟನ್
Masters candidate in Journalism and Near Eastern Studies at NYU focusing on 19th and 20th-century Persian poetry.

ವಿಶ್ವಾಸಿಗಳ ಮಹಾ ತಾಯಿಯೊಬ್ಬಳ ಕಥೆ

ಶಿಂಖೀತ್ ನಾಡು, ಅಥವಾ ಆಂಗ್ಲ ಭಾಷಿಕರು ಸಾಮಾನ್ಯವಾಗಿ ಕರೆಯುವ ಮೌರಿತಾನಿಯ ಎಂಬ ಊರು ಸಾತ್ವಿಕ ವಿದ್ವಾಂಸರ, ಸಚ್ಚರಿತ ಸೂಫಿಗಳ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಪಳಗಿದ ಅನೇಕ ಮಹಿಳಾಮಣಿಗಳ ಸಂಗಮ ಭೂಮಿ. ವಿದ್ವಾಂಸರ ಪ್ರಕಾರ, ಮೌರಿತಾನಿಯಾದ ಮಹಿಳೆಯರೂ ಕೂಡಾ ಅನೇಕ ಸಾಹಿತ್ಯ ಕೃತಿಗಳನ್ನು ಕಂಠಪಾಠ ಮಾಡುತ್ತಾರೆ. ಪದ್ಯ, ಗದ್ಯ, ಪ್ರವಾಸ ಕಥನ ಮುಂತಾದ ಪರಂಪರಾಗತ ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಮೌರಿತಾನಿಯಾದ ಮಹಿಳೆಯರು ಅಗಾಧ ಪಾಂಡಿತ್ಯವುಳ್ಳವರಾಗಿದ್ದಾರೆ.
ಮರ್ಯಂ ಬಿಂತ್ ಬ್ವೈಬಾ ಎಂಬವರು ಅವರಲ್ಲೊಬ್ಬರು. ಈಗ ನಾನು ಹೇಳ ಹೊರಟಿರುವುದು ಆ ತಾಯಿಯ ಬಗ್ಗೆ. ಪರಿಶುದ್ಧ ಖುರ್ ಆನ್ ಮತ್ತು ಮಾಲಿಕೀ ಕರ್ಮಶಾಸ್ತ್ರ ಧಾರೆಯ ಕೆಲವು ಪ್ರಧಾನ ಕೃತಿಗಳನ್ನು ಅವರು ಪೂರ್ತಿ ಕಂಠಪಾಠ ಮಾಡಿದ್ದಾರೆ.

ಶ್ರೇಷ್ಟ ವಿದ್ವಾಂಸರಾದ ಶೈಖ್ ಮುರಾಬಿತ್ ಅಲ್ ಹಾಜ್ಜರ ಧರ್ಮಪತ್ನಿಯಾದ ಇವರು ಅತಿಥಿಗಳನ್ನು ಅತ್ಯಂತ ಪ್ರೀತಿಪೂರ್ವಕವಾಗಿ ಬರಮಾಡುವ ಸ್ವಭಾವದವರು. ಸರಿಸುಮಾರು 35 ವರುಷಗಳ ಹಿಂದೆ ಮೌರಿತಾನಿಯಾದ ತುವಾಮಿರಃ ಸಮುದಾಯದ ಒಂದು ಸಣ್ಣ ಗುಡಿಸಲಿನಲ್ಲಾಗಿತ್ತು ಇವರೀರ್ವರನ್ನು ನಾನು ಮೊತ್ತ ಮೊದಲಾಗಿ ಭೇಟಿಯಾದದ್ದು.
ಈ ಭೇಟಿಗೆ ಕಾರಣವಾದ ಘಟನೆ ನಡೆದದ್ದು 1980ರಲ್ಲಿ. ಅದು ಅಬುದಾಬಿಯ ಒಂದು ಪುಸ್ತಕದಂಗಡಿಯಲ್ಲಿ ತಾಜಕಾನತ್ ಎಂಬ ಗೋತ್ರದ ಶೈಖ್ ಅಬ್ದುಲ್ಲಾ ಊದ್ ಸಿದ್ದೀಖ್ ರೊಂದಿಗಿನ ಭೇಟಿಯಾಗಿತ್ತು. ದಿರಃ ಎಂಬ ಸವಿಶೇಷವಾದ ಪಶ್ಚಿಮ ಆಫ್ರಿಕಾದ ದಿರಿಸನ್ನು ಧರಿಸಿ, ತಲೆಗೆ ಮುಂಡಾಸು ಹಾಕಿದ್ದರಿಂದ ಒಂದೇ ನೋಟಕ್ಕೆ ಇವರು ಆಫ್ರಿಕಾದವರೆಂದು ಸುಲಭದಲ್ಲಿ ಮನದಟ್ಟಾಯಿತು. ಅಂದಿನ ಕಾಲದಲ್ಲಿ ಗಲ್ಫ್ ನಾಡುಗಳಲ್ಲಿ ಆ ವೇಷವಿಧಾನ ಬಹಳ ಅಪರೂಪವಾಗಿತ್ತು. ಎರಡು ವರುಷಗಳ ಹಿಂದೆ ಮಾಲಿಯಲ್ಲಿ ತಂಗಿದ್ದ ವೇಳೆ ಆಫ್ರಿಕಾದ ವಿದ್ವಾಂಸರನ್ನು ಭೇಟಿ ಮಾಡಿದ್ದಂದೇ ಅವರೊಂದಿಗೆ ಸೇರಿ ಜ್ಞಾನಾರ್ಜನೆಗೈಯಬೇಕೆಂಬ ಮಹದಾಸೆ ನನ್ನೊಳಗೆ ಚಿಗುರೊಡೆದಿತ್ತು. ಆದ್ದರಿಂದ ನಾನು ಶೈಖ್ ಅವರ ಬಳಿ ಮಾಲಿಕೀ ಕರ್ಮಶಾಸ್ತ್ರ ಧಾರೆಯ ಕ್ಲಾಸಿಕಲ್ ಗ್ರಂಥಗಳನ್ನು ಪರಂಪರಾಗತ ಶೈಲಿಯಲ್ಲಿ ಪಾಠ ಹೇಳಿಕೊಡುವ ಯಾರನ್ನಾದರೂ ಪರಿಚಯವಿದೆಯೇ ಎಂದು ಕೆದಕಿದಾಗ, ಶೈಖ್ ಅವರು ತಾವೇ ಖುದ್ದಾಗಿ ಪಾಠ ಹೇಳಿಕೊಡುತ್ತಿರುವುದಾಗಿಯೂ, ದರ್ಸ್ ಕಲಿಯಲು ತಮ್ಮ ಮನೆಗೆ ಹೋಗುವುದಾದರೆ ನನಗೆ ಮುಕ್ತ ಅವಕಾಶವಿದೆಯೆಂದೂ ಹೇಳಿದರು. ಅಂದಿನಿಂದ ಅಧಿಕೃತವಾಗಿ ನನ್ನ ಧಾರ್ಮಿಕ ವಿಧ್ಯಾಭ್ಯಾಸದ ಪರ್ಯಟನೆ ಪ್ರಾರಂಭವಾಯಿತು ಎಂದು ಹೇಳಬಹುದು.

ಅಲ್ ಐನಿನ ಇಸ್ಲಾಮಿಕ್ ಇನ್ಸ್ಟಿಟ್ಯೂಟಿನ ಅಧ್ಯಯನದೊಂದಿಗೆ ಇತ್ತ ಶೈಖ್ ಅಬ್ದುಲ್ಲಾ ಊದ್ ಸಿದ್ದೀಖರ ದರ್ಸಿನಲ್ಲೂ ಜ್ಞಾನಾರ್ಜನೆ ಭರಪೂರವಾಗಿ ಸಾಗಿತು. ಮೌರಿತಾನಿಯಾದ ಗುರುಗಳಂತೆ ಪಾಠ ಭಾಗಗಳನ್ನು ಕಂಠಪಾಠ ಮಾಡಲು ಮತ್ತು ‘ಲೌಹ್’ ಎಂದು ಕರೆಯಲ್ಪಡುವ ಮರದ ಹಲಗೆಯಲ್ಲಿ ಬರೆಯಲು ಅವರು ಒತ್ತಡ ಹೇರುತ್ತಲಿರಲಿಲ್ಲ. ಆದುದರಿಂದ ನಾನು ಕಿತಾಬುಗಳನ್ನು ನೋಡಿಯೇ ಅಭ್ಯಸಿಸುತ್ತಿದ್ದೆ. ಹೀಗೆ ಕೆಲವು ವರ್ಷಗಳ ಕಾಲ ಶೈಖ್ ಅಬ್ದುಲ್ಲಾ ಊದ್ ಹಾಗೂ ಮತ್ತಿಬ್ಬರು ಮಾಲಿಕೀ ಕರ್ಮಶಾಸ್ತ್ರ ವಿದ್ವಾಂಸರಾದ ಶೈಖ್ ಶೈಬಾನಿ, ಶೈಖ್ ಬಯ್ಯಾಹ್ ಊದ್ ಸಾಲಿಕ್ ಎಂಬವರ ಗರಡಿಯಲ್ಲಿ ಪಳಗುತ್ತಿದ್ದ ಸಮಯ ನನ್ನ ವಿದ್ಯಾರ್ಥಿ ಜೀವನದಲ್ಲಿ ಮಹಾ ತಿರುವೊಂದು ಸಂಭವಿಸಿತು. ಮಸ್ತೂಮ ಗೋತ್ರದ ಇಲೆಕ್ಟ್ರಿಷ್ಯನ್ ಯಹ್ಯಾ ಉದ್ಘಾತಿಯ ಭೇಟಿಯಾಗಿತ್ತು ಅದಕ್ಕೆ ಮೂಲ ಕಾರಣ. ಅವರು ನನ್ನನ್ನು ಮೌರಿತಾನಿಯಾದ ನಿರ್ಜನವಾದ, ಹೊರಪ್ರಪಂಚದೊಂದಿಗೆ ಸಂಪರ್ಕವಿಲ್ಲದ ಕುಗ್ರಾಮವೊಂದರಲ್ಲಿ ವಾಸಿಸುತ್ತಿದ್ದ ಶ್ರೇಷ್ಟ ವಿದ್ವಾಂಸರಾದ ಮುರಾಬಿತ್ ಅಲ್ ಹಾಜ್ಜ್ ಅವರ ಬಳಿಗೆ ಕರೆದೊಯ್ದರು. ಅವರ ಸುಪುತ್ರ ಶೈಖ್ ಅಬ್ದುಲ್ ರಹಿಮಾನ್ ಈಗ ಎಮಿರೇಟ್ಸಿನಲ್ಲಿದ್ದಾರೆಂದು ಯಹ್ಯಾ ನನಗೆ ಮಾಹಿತಿ ಕೊಟ್ಟರು.
ತದನಂತರ, ಮಸ್ತೂಮ ಗೋತ್ರದ ನಾಯಕರಾದ ಶೈಖ್ ಬಯ್ಯಾಹ್ ರ ಮನೆಯಲ್ಲಿ ಶೈಖ್ ಅಬ್ದುಲ್ ರಹಿಮಾನ್ ರವರನ್ನು ಭೇಟಿ ಮಾಡಲು ಸಾಧ್ಯವಾಯಿತು. ಐಹಿಕ ಜೀವನದೊಂದಿಗಿನ ಜಿಗುಪ್ಸೆ ಅವರ ಮುಖದಲ್ಲಿ ಪ್ರಕಟವಾಗುತಿತ್ತು. ಈ ಐಹಿಕ ಬದುಕಿನ ಗೊಡವೆಯಿಂದ ದೂರವಾಗುವುದು ಮೌರಿತಾನಿಯಾದ ವಿದ್ವಾಂಸರ ವೈಶಿಷ್ಟತೆಗಳಲ್ಲೊಂದು. ಅವರ ಆಪ್ತಮಿತ್ರ ಶೈಖ್ ಹಾಮಿದ್ ರವರ ದರ್ಸಿನಲ್ಲಾಗಿತ್ತು ನನ್ನ ಮುಂದಿನ ವ್ಯಾಸಂಗ.
ಶೈಖ್ ಹಾಮಿದರು ಕಂಠಪಾಠ ಮಾಡುವುದರ ಪ್ರಾಧಾನ್ಯತೆಯ ಬಗ್ಗೆ ನನಗೆ ಮನವರಿಕೆ ಮಾಡಿಕೊಟ್ಟರು. ಕಂಠಪಾಠ ಮಾಡುವುದಲ್ಲದೆ ವಿದ್ಯೆ ಕರಗತವಾಗಲು ಬೇರೆ ದಾರಿಯಿಲ್ಲ ಎಂದು ಅವರು ಬಲವಾಗಿ ನಂಬಿದ್ದರು. ಮೌರಿತಾನಿಯನ್ನರು ವಿದ್ವಾಂಸರನ್ನು ‘ಹಗಲು ವಿದ್ವಾಂಸರು’ ಹಾಗೂ ‘ರಾತ್ರಿ ವಿದ್ವಾಂಸರೆಂ’ದು ವರ್ಗೀಕರಿಸುವ ಬಗ್ಗೆಯೂ ಹೇಳಿಕೊಟ್ಟರು. ಹಗಲು ವಿದ್ವಾಂಸರಿಗೆ ರಾತ್ರಿ ಹೊತ್ತು ಜ್ಞಾನಾರ್ಜನೆಗೈಯಲು ಪುಸ್ತಕ ಮತ್ತು ಬೆಳಕು ಅನಿವಾರ್ಯವಾಗಿತ್ತು. ಆದರೆ ‘ರಾತ್ರಿ ವಿದ್ವಾಂಸರಿಗೆ’ ರಾತ್ರಿ ಹೊತ್ತು ಬೆಳಕಿನ ಅಭಾವದಲ್ಲೂ ತಮ್ಮ ನೆನಪಿನ ಶಕ್ತಿಯಿಂದ ಜ್ಞಾನಾರ್ಜನೆ ಸಾಧ್ಯವಾಗುತಿತ್ತು. ಈ ರೀತಿ ಎಲ್ಲಾ ಕಿತಾಬುಗಳನ್ನು ಬಾಯಿಪಾಠ ಮಾಡುವ ಪರಿಪಾಠ ರೂಢಿಸಬೇಕೆಂದು ನನ್ನಲ್ಲಿ ಶೈಖರು ನಿರ್ದೇಶಿಸಿದರು.
ಆ ದಿನಗಳಲ್ಲಿ ಇಬ್ನು ಆಶಿರ್, ಅಲ್ ರಿಸಾಲ, ಅಖ್ರಾಬ್ ಅಲ್ ಮಸಾಲಿಕ್ ಮುಂತಾದ ಗ್ರಂಥಗಳನ್ನೆಲ್ಲಾ ನಾನು ಓದಿದ್ದೆ. ಅದಲ್ಲದೆ ಇನ್ಸ್ಟಿಟ್ಯೂಟಿನಲ್ಲಿ ‘ಅಲ್ ಫಿಖ್ಹ್ ಅಲ್ ಮಾಲಿಕೀ ಫೀ ತೌಬಹೀ ಅಲ್ ಜದೀದಿ’ನ ಮೊದಲ ಆವೃತ್ತಿಗಳನ್ನೂ ಓದಿದ್ದೆ. ಸುಡಾನಿನ ಪ್ರಮುಖ ಹದೀಸ್ ವಿದ್ವಾಂಸರಾದ ಶೈಖ್ ಅಹ್ಮದ್ ಬದವಿಯರಿಂದ ಹದೀಸ್ ಗ್ರಂಥಗಳನ್ನು ಕಲಿತಿದ್ದೆ. ಆದರೆ ಅಂದೆಂದೂ ನಾನು ಕಂಠಪಾಠ ಮಾಡುತ್ತಿರಲಿಲ್ಲ. ಇದನ್ನರಿತ ಶೈಖರು ಪ್ರಧಾನವಾದ ಕೆಲವು ಕಿತಾಬುಗಳನ್ನು ಪುನಃ ಓದಿಕೊಟ್ಟು ಕಂಠಪಾಠ ಮಾಡಲು ನಿರ್ದೇಶಿಸಿದರು.

ನಂತರ ಅಲ್ಲಿನ ಸ್ಥಳೀಯ ಮಸೀದಿಯೊಂದರಲ್ಲಿ ಇಮಾಂ ಆಗಿ ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಯಿತು. ಮಸೀದಿಗೆ ಬರುವವರ ಪೈಕಿ ಸಿಂಹಪಾಲು ಜನರು ಅಫ್ಘಾನಿಸ್ಥಾನದ ಕಾರ್ಮಿಕರಾಗಿದ್ದರು.
1984 ರಲ್ಲಾಗಿತ್ತು ಎಮಿರೇಟ್ಸ್ ನಿಂದ ಅಲ್ಜೀರಿಯಾದ ಮೂಲಕ ಮಾರಿತಾನಿಯಾಗೆ ನನ್ನ ಪ್ರಯಾಣ. ಪವಿತ್ರ ಖುರ್ ಆನ್ ಪೂರ್ತಿ ಕಂಠಪಾಠ ಮಾಡಬೇಕೆಂಬ ಅದಮ್ಯ ಬಯಕೆಯಾಗಿತ್ತು ಯಾತ್ರೆಯ ಪ್ರಧಾನ ಧ್ಯೇಯ. ಮಾರಿತಾನಿಯದಲ್ಲಿ ಬರಗಾಲವಿದೆಯೆಂದೂ ಅಲ್ಲಿನ ಬದುಕು ಸಹಿಸಲಸಾಧ್ಯವೆಂದೂ ನನ್ನ ಸ್ನೇಹಿತರು ಮುನ್ನೆಚ್ಚರಿಕೆ ಕೊಟ್ಟರೂ ನನ್ನ ದೃಡ ಸಂಕಲ್ಪ ಚಂಚಲಗೊಳ್ಳಲೇ ಇಲ್ಲ.
ಅಲ್ಜೀರಿಯಾದ ಸೀದಿ ವೋ ಝೈದರ ಮದ್ರಸಾದಲ್ಲಿ ಕೆಲವು ತಿಂಗಳುಗಳ ಕಾಲ ತಂಗಿದ ಬಳಿಕ ಅಲ್ಲಿಂದ ಟುನೀಷ್ಯಾಗೆ ತೆರಳಿ ಮಾರಿತಾನಿಯಾಗಿರುವ ವೀಸಾ ಗಿಟ್ಟಿಸಿಕೊಂಡು ವಿಮಾನ ಯಾನದ ಮೂಲಕ ನೇರವಾಗಿ ರಾಜಧಾನಿ ನಾಕ್ಚೋಟಿಗೆ ಬಂದಿಳಿದೆ.

ಮುರಾಬಿತುಲ್ ಹಾಜರನ್ನು ಭೇಟಿ ಮಾಡುವುದಾಗಿತ್ತು ಮುಂದಿನ ಗುರಿ. ನಾಕ್ಚೋಟ್ ಮರ‍್ಕೆಟಿನ ಒಂದು ಪುಟ್ಟ ಅಂಗಡಿಯಲ್ಲಿ ಮಸ್ತೂಮ ಗೋತ್ರದ ಅಬ್ದುಲ್ ಸಾಲಿಮರನ್ನು ಭೇಟಿ ಮಾಡಿದೆ. ಮುರಾಬಿತುಲ್ ಹಾಜರನ್ನು ಭೇಟಿ ಮಾಡಬೇಕೆಂಬ ಬಯಕೆಯನ್ನು ಅವರೊಂದಿಗೆ ಹಂಚಿದಾಗ ಅವರು ನನ್ನನ್ನು ಮುಖ್ತಾರುಲ್ ಹಬೀಬ್ ಎಂಬ ಮಸ್ತೂಮ ಗೋತ್ರದ ವಿದ್ವಾಂಸರ ಬಳಿಗೆ ಕರೆದೊಯ್ದರು. ತದನಂತರ ಮೌಲಾಯ್ ಅಲ್ ಮಖರಿ ಅಲ್ ಮಸ್ತೂಮರವರ ಮನೆಯಲ್ಲಾಗಿತ್ತು ನನ್ನ ವಾಸ್ತವ್ಯ. ಅತಿಥಿಗಳನ್ನು ಅತ್ಯಂತ ಪ್ರೀತಿಯಿಂದ ಸತ್ಕರಿಸುವ, ಎಲ್ಲರಿಂದಲೂ ಪ್ರೀತಿಗೆ ಭಾಜನರಾದ ವ್ಯಕ್ತಿತ್ವವಾಗಿತ್ತು ಅವರದ್ದು.

ಆ ಸಂದರ್ಭಕ್ಕೆ ಸರಿಯಾಗಿಯೇ ತನ್ನ ತಂದೆ ತಾಯಿಯನ್ನು ಭೇಟಿ ಮಾಡಲು ಶೈಖ್ ಅಬ್ದುಲ್ ರಹಿಮಾನ್ ಎಮಿರೇಟ್ಸಿನಿಂದ ಊರಿಗೆ ಬಂದಿದ್ದರು. ಅವರು ಮೌಲಾಯ್ ಅಲ್ ಮಖರಿಯನ್ನು ಭೇಟಿಯಾಗಲು ಬಂದರು. ನಂತರ ತುವಾಮಿರತ್ ನಲ್ಲಿರುವ ಅವರ ಕುಟುಂಬದವರ ಶಾಲೆಯನ್ನು ಸಂದರ್ಶಿಸಲು ತೀರ್ಮಾನಿಸಿ ಅದಕ್ಕೆ ಬೇಕಾಗಿರುವ ತಯಾರಿಯಲ್ಲಿ ತೊಡಗಿದೆವು. ಒಂಟೆಗಳು ಸಿಗದಿದ್ದರಿಂದ ಒಂದು ಟ್ರಕ್ಕಿನಲ್ಲಾಗಿತ್ತು ನಮ್ಮ ಪ್ರಯಾಣ.
ಎರಡು ದಿನಗಳ ದೀರ್ಘ ಪ್ರಯಾಣದ ನಂತರ ಗೆರು ಎಂಬ ನಗರಕ್ಕೆ ನಾವು ತಲುಪಿದೆವು. ಆ ಕಾಲಕ್ಕೆ ಅಲ್ಲಿ ಟೆಕ್ನಾಲಜಿಯ ಗಂಧಗಾಳಿ ಇನ್ನೂ ಸೋಕಿರಲಿಲ್ಲ. ಅಲ್ಲಿನ ಕಟ್ಟಡಗಳು ಸುಂದರವಾಗಿ ಮನಸೊರೆಗೈಯುವಂತಿತ್ತು. ಮಹ್ದ್ಸರ ಎಂದು ಕರೆಯಲ್ಪಡುವ ಏಳು ಮದರಸಗಳಲ್ಲಿ ಸರಿಸುಮಾರು ನೂರರಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಅಲ್ಲಿ ರಾತ್ರಿಯಾದರೆ ಕ್ಯಾಂಡಲ್ ಮತ್ತು ದೀಪಗಳ ಮೊರೆ ಹೋಗಬೇಕಾಗಿತ್ತು. ಖುರ್ ಆನ್ ಮತ್ತು ಇತರ ಗ್ರಂಥಗಳನ್ನು ಓದುವ ಸುಶ್ರಾವ್ಯ ಧ್ವನಿಯು ಅಲ್ಲೆಲ್ಲಾ ಮಾರ್ದನಿಸುತ್ತಿತ್ತು.
ಅಲ್ ಹಾಜರ ಸಂಬಂಧಿಯಾದ ಶೈಖ್ ಖಾತ್ರಿಯವರ ಮನೆಯಲ್ಲಾಗಿತ್ತು ನಮ್ಮ ವಾಸ್ತವ್ಯ. ಅಲ್ಲಿ ಸೀದಿ ಮನ್ನ ಎಂಬ ಸಾತ್ವಿಕ ಸೂಫಿ ವಿದ್ವಾಂಸರೊಬ್ಬರನ್ನು ಪರಿಚಯ ಮಾಡಿಕೊಂಡೆ. ಇಮಾಂ ಅಲ್ ಜಝರಿಯವರ ‘ಹಿಸ್ನ್ ಅಲ್ ಹಾಸಿನ್’ ಎಂಬ ಗ್ರಂಥವನ್ನು ಪೂರ್ತಿಯಾಗಿ ಅವರು ಕಂಠಪಾಠ ಮಾಡಿಕೊಂಡಿದ್ದರು. ತಮ್ಮ ಎಲ್ಲಾ ಪ್ರಾರ್ಥನೆಗಳಲ್ಲೂ ಸಮುದಾಯದ ಎಲ್ಲಾ ಜನರಿಗೂ ಬೇಕಾಗಿ ದುಆ ಮಾಡುತ್ತಿದ್ದರು. ಒಂದು ದಿನ ಸಂಜೆ ನಾವೆಲ್ಲರೂ ಹರಟೆ ಹೊಡೆಯುತ್ತಿದ್ದಾಗ ಅವರು ತನ್ನ ಅಂಗೈಯಲ್ಲಿ ಒಂದು ಹಿಡಿ ಮಣ್ಣನ್ನೆತ್ತಿ ಹೇಳಿದರು, “ಭೂಮಿಯಿಂದ ಎಂದೂ ದೂರ ಹೋಗಬಾರದು. ಕಾರಣ ಇದು ನಮ್ಮ ತಾಯಿಯಾಗಿದೆ. ಜೀವನದಲ್ಲಿ ನಾನೆಂದೂ ಯಾವುದರ ಬಗ್ಗೆಯೂ ವ್ಯಥೆ ಪಟ್ಟಿಲ್ಲ. ನನ್ನಲ್ಲಿಲ್ಲದ್ದನ್ನು ನಾನು ಆಗ್ರಹಿಸಿಯೂ ಇಲ್ಲ. ಆದರೆ ನಾನೊಬ್ಬ ಯುವಕನಾಗಬೇಕೆಂದು ಈಗ ಆಸೆಯಾಗುತ್ತಿದೆ. ಯಾಕೆಂದರೆ ಅಲ್ಲಾಹನ ಮಾರ್ಗದಲ್ಲಿ ವಿದ್ಯೆಯನ್ನರಸಿ ನಿಮ್ಮೊಂದಿಗಿನ ಪಯಣದಲ್ಲಿ ನನಗೂ ಸೇರಬಹುದು”. ಅರಿವಿನ ಬಗೆಗೆ ಅವರಿಗಿದ್ದ ದಾಹ ನನ್ನನ್ನು ಅಚ್ಚರಿಗೊಳಿಸಿತ್ತು.

ಕೆಲವು ದಿನಗಳ ನಂತರ ನಾವು ಕಾಮೂರಿಗೆ ಹೊರಟೆವು. ಮಧ್ಯರಾತ್ರಿಯಾದಾಗ ಗಲಗ ಎಂಬ ಕಣಿವೆ ಪ್ರದೇಶಕ್ಕೆ ಬಂದು ತಲುಪಿದೆವು. ಮರುದಿನ ಬೆಳ್ಳಂಬೆಳಗ್ಗೆ ತಿಂಡಿ ತಿಂದು ಮುರಾಬಿತುಲ್ ಹಾಜ್ ಹಾಗೂ ಅವರ ಸಂಗಡಿಗರು ವಾಸಿಸುವ ತುವಾಮಿರತ್ ಗೆ ಹೊರಟು ನಿಂತೆವು. ಹಾಗೆ ಪ್ರಕೃತಿ ರಮಣೀಯವಾದ ತುವಾಮಿರತ್ ಗೆ ಬಂದು ತಲುಪಿದೆವು. ಮುರಾಬಿತುಲ್ ಹಾಜರನ್ನು ಮುಖಃತ ಭೇಟಿ ಮಾಡಬೇಕೆಂಬ ಬಹುದಿನಗಳ ಕನಸು ಅಂದು ಸಾಕ್ಷಾತ್ಕಾರವಾಯಿತು.

ನನ್ನ ಜೀವನದಲ್ಲಿ ಅಷ್ಟೊಂದು ತೇಜಸ್ಸು ಭರಿತ ಮುಖವನ್ನು ನಾನು ನೋಡಿಯೇ ಇರಲಿಲ್ಲ. ಅವರು ನನ್ನನ್ನು ಒಳಗೆ ಆಹ್ವಾನಿಸಿ ತೋಳಲ್ಲಿ ಕೈಯಿಟ್ಟು ಹೃದ್ಯವಾಗಿ ಸ್ವೀಕರಿಸಿದರು. ನಂತರ ಅವರು ತಮ್ಮ ದರ್ಸ್ ಬೋಧನೆಯಲ್ಲಿ ತೊಡಗಿಕೊಂಡರು. ವಿದ್ಯಾರ್ಥಿಗಳಲ್ಲೊಬ್ಬರು ನನಗೆ ಕುಡಿಯಲು ನೀರು ತಂದುಕೊಟ್ಟರು.
ಮುರಾಬಿತುಲ್ ಹಾಜರು ಕೆಲವು ದಿನಗಳ ಕಾಲ ತಂಗಲು ನನ್ನನ್ನು ಅವರ ಮನೆಗೆ ಆಹ್ವಾನಿಸಿದರು. ನಾನಲ್ಲಿ ಅವರ ಧರ್ಮಪತ್ನಿ ಮರ್ಯಂ ಬಿನ್ತ್ ಬ್ವೈಬಾರನ್ನು ಪರಿಚಯ ಮಾಡಿಕೊಂಡೆ. ಅವರು ನನಗೆ ಬೇಕಾದ ಸಕಲ ಸೌಕರ್ಯಗಳನ್ನು ಮಾಡಿಕೊಟ್ಟರು. ನನ್ನ ಜೀವನದಲ್ಲಿ ಅವರಷ್ಟು ನಿಸ್ವಾರ್ಥ ಮಹಿಳೆಯನ್ನು ನಾನು ನೋಡಿಯೇ ಇರಲಿಲ್ಲ. ಮಿಕ್ಕ ದಿನಗಳಲ್ಲೂ ಬೆಳ್ಳಂಬೆಳಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಸಂದರ್ಶಕರಿಗೆ ಅವರು ಹಾಲು ಕಾಯಿಸಿ ಕೊಡುತ್ತಿದ್ದರು. ಚಿಕ್ಕಂದಿನಲ್ಲೇ ಅವರ ಜೊತೆಗಿದ್ದ ಖಬೂಲಃ ಎಂಬ ಮನೆಗೆಲಸದಾಕೆ ಅವರನ್ನು ಸಹಾಯ ಮಾಡುತ್ತಿದ್ದರು
ಮರ್ಯಮರ ಆತಿಥೇಯತ್ವವು ನನ್ನನ್ನು ವಿಸ್ಮಯಗೊಳಿಸಿತು. ಎಲ್ಲರೊಂದಿಗೆ ಮುಗುಳ್ನಗೆಯೊಂದಿಗೆಯಾಗಿತ್ತು ಅವರ ಒಡನಾಟ. ಒಮ್ಮೆ ಮೌರಿತಾನಿಯದೆಲ್ಲೆಡೆ ಹರಡಿದ ಮಲೇರಿಯಾ ಜ್ವರಕ್ಕೆ ತುತ್ತಾಗಿ ನಾನು ಹಾಸಿಗೆ ಹಿಡಿದಾಗ ಅವರು ಬಹಳ ಶ್ರದ್ಧೆ ಮತ್ತು ವಾತ್ಸಲ್ಯದಿಂದ ನನ್ನನ್ನು ಶುಶ್ರೂಷೆ ಮಾಡಿದರು. ಒಬ್ಬ ಮಗನೊಂದಿಗೆ ತೋರುವ ಪ್ರೀತಿಯಾಗಿತ್ತು ಅವರು ನನ್ನಲ್ಲಿ ತೋರಿದ್ದು. ನಾನು ತರಕಾರಿ ಮಾತ್ರ ತಿನ್ನುವವನು ಎಂದು ತಿಳಿಸಿದಾಗ ಎಲ್ಲಾ ದಿನ ಆಹಾರದ ಮೊದಲು ನನಗೆ ವಿಶೇಷವಾಗಿ ಕ್ಯಾರೆಟ್ ಮತ್ತು ಖರ್ಜೂರವನ್ನು ತಂದುಕೊಡುತ್ತಿದ್ದರು.
ಸದಾ ಸಮಯ ಏಕದೇವನ ಸ್ಮರಣೆಯಲ್ಲೇ ತನ್ಮಯರಾಗುವುದು ಅವರ ಪರಿಪಾಠವಾಗಿತ್ತು. ಅವರ ಪೂರ್ಣನಾಮ ಮರ್ಯಂ ಬಿಂತ್ ಮುಹಮ್ಮದ್ ಅಲ್ ಅಮೀನ್ ಉದ್ ಮುಹಮ್ಮದ್ ಅಹಮದ್ ಬ್ವಯ್ಬಾ. ಎಳೆಯ ವಯಸ್ಸಿನಲ್ಲೇ ಮುರಾಬಿತುಲ್ ಹಾಜರೊಂದಿಗೆ ಅವರ ವಿವಾಹ ನಡೆದಿತ್ತು. ತುವಾಮಿರತಿನ ಇಸ್ಲಾಮಿಕ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಅವರು ಸಲ್ಲಿಸಿದ ಸೇವೆ ಅನಿರ್ವಚನೀಯ. ಕಡುಬಡತನದಲ್ಲಾಗಿತ್ತು ಮರ್ಯಮರು ಬೆಳೆದು ಬಂದದ್ದು. ಅವರ ಬಾಲ್ಯಕಾಲದಲ್ಲಿ ಮೈಮುಚ್ಚಲು ತೆಳುವಾದ ಒಂದೇ ಒಂದು ಬಟ್ಟೆ ಮಾತ್ರ ಹೊಂದಿದ್ದರಂತೆ. ಅವರ ತಂದೆ ಮುಹಮ್ಮದ್ ಅಲ್ ಅಮೀನ್ ಲಮಾನ ಎಂಬ ಹೆಸರಿನಲ್ಲಿ ಪ್ರಸಿದ್ಧರಾಗಿದ್ದರು. ಮಹಾ ಜ್ಞಾನಿಯಾಗಿದ್ದ ಅವರ ಬಗ್ಗೆ ಮರ್ಯಮರು ಯಾವಾಗಲೂ ತುಂಬು ಮಾತುಗಳಲ್ಲಿ ಕೊಂಡಾಡುತ್ತಿದ್ದರು.
ಮರ್ಯಮರೊಂದಿಗಿನ ವಿವಾಹವಾದ ಬಳಿಕ ಮುರಾಬಿತುಲ್ ಹಾಜರ ತಂದೆ ಮರ್ಯಮರೊಂದಿಗೆ ಹೀಗೆ ಹೇಳಿದರು. “ನಿಮ್ಮ ಉಪಜೀವನ ಮಾರ್ಗಕ್ಕಾಗಿ ಒಳ್ಳೆಯ ಸಂಪಾದನೆ ಸಿಗುವ ಕೆಲಸದ ಬಗ್ಗೆ ಇನ್ನು ನೀನು ಚಿಂತಿಸಬೇಕಾಗಿದೆ”. ಇದಕ್ಕೆ ಅವರು ಕೊಟ್ಟ ಉತ್ತರ ಹೀಗಿದೆ. “ಜೀವನೋಪಾಯಕ್ಕಾಗಿ ಕೆಲಸ ಮಾಡಬೇಕಾದರೆ ನನ್ನ ಮುಂದೆ ಅಸಂಖ್ಯಾತ ಅವಕಾಶಗಳಿವೆ. ಆದರೆ ಅವುಗಳ ಬೆನ್ನಟ್ಟಿ ನಾನು ನನ್ನ ಆತ್ಮವನ್ನು ಮಲಿನಗೊಳಿಸಲು ಇಚ್ಛಿಸುವುದಿಲ್ಲ.
ಮುರಾಬಿತುಲ್ ಹಾಜರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ ಪ್ರಾರಂಭದ ದಿನಗಳಿಂದಲೇ ಮರ್ಯಮರು ಮುರಾಬಿತುಲ್ ಹಾಜರಿಂದ ಕಿತಾಬುಗಳನ್ನು ಅಭ್ಯಸಿಸತೊಡಗಿದರು. ಮಾಲಿಕೀ ಕರ್ಮಶಾಸ್ತ್ರದ ಪ್ರಧಾನ ಕಿತಾಬುಗಳೊಂದಿಗೆ ಪವಿತ್ರ ಖುರ್ ಆನ್ ನನ್ನೂ ಪೂರ್ತಿಯಾಗಿ ಕಂಠಪಾಠ ಮಾಡಿದರು. ಅದಲ್ಲದೆ ಇಮಾಂ ಅನ್ನವವಿಯವರ ಪ್ರಾರ್ಥನೆಗಳ ಕುರಿತು ಬರೆದ ‘ಅಲ್ ಅದ್ಸ್ ಕಾರ್’ ಎಂಬ ಪ್ರಸಿದ್ಧ ಗ್ರಂಥವನ್ನೂ ಕಂಠಪಾಠ ಮಾಡಿದರು. ಹೊಸದಾಗಿ ಬರುವ ವಿಧ್ಯಾರ್ಥಿಗಳೊಂದಿಗೆ ಮರ್ಯಮರು ಅವರ ಮನೆಯವರ ಬಗ್ಗೆ ಕುಶಲೋಪರಿ ಮಾಡುವುದನ್ನು ರೂಢಿಸಿಕೊಂಡಿದ್ದರು. ಮೌರಿತಾನಿಯದಲ್ಲಿ ವ್ಯಾಸಂಗ ಮಾಡಿದ ಎಲ್ಲರೂ ಅವರ ನೆನಪಿನಂಗಳದಲ್ಲಿ ಹಚ್ಚ ಹಸಿರಾಗಿದ್ದರು. ಸುಮಾರು ವರುಷಗಳ ನಂತರ ಭೇಟಿ ಮಾಡುವವರ ಹೆಸರನ್ನೂ ಸುಲಭವಾಗಿ ಗುರುತಿಸುತ್ತಿದ್ದರು. ನಾನು ಮೊದಲು ಅವರನ್ನು ಭೇಟಿ ಮಾಡಿದಾಗ ನನ್ನ ಕುಟುಂಬದ ಎಲ್ಲಾ ಸದಸ್ಯರ ಹೆಸರನ್ನು ಕೇಳಿ ಅರಿತಿದ್ದರು. ತದನಂತರ ಸುಮಾರು ವರ್ಷಗಳ ಬಳಿಕ ಮತ್ತೆ ಭೇಟಿ ನೀಡಿದಾಗ ಅವರ ಹೆಸರುಗಳನ್ನು ನೆನೆದು ಅವರ ಕುಶಲೋಪರಿ ಮಾಡಿದರು. ಕೇವಲ ಒಂದೇ ಬಾರಿ ಅವರ ಹೆಸರುಗಳನ್ನು ಹೇಳಿಕೊಟ್ಟಿದ್ದ ನಾನು ಮರ್ಯಮರ ಅಪಾರ ನೆನಪಿನ ಶಕ್ತಿಯನ್ನು ಕಂಡು ಸ್ಥಬ್ಧನಾಗಿ ಬಿಟ್ಟಿದ್ದೆ.


ಮರ್ಯಮರನ್ನು ಮುಖಃತವಾಗಿ ಭೇಟಿ ಮಾಡುವ ಒಂದು ವರುಷದ ಮುಂಚೆ 1983 ರಲ್ಲಿ ನಾನು ಅವರನ್ನು ಕನಸಿನಲ್ಲಿ ಕಂಡಿದ್ದೆ. ಮುರಾಬಿತುಲ್ ಹಾಜರೊಂದಿಗೆ ಅವರ ಬಿಡಾರದಲ್ಲಿ ಕುಳಿತು ಮಾತನಾಡುವ ವೇಳೆಯಲ್ಲಾಗಿತ್ತು ನಾನು ಅವರನ್ನು ಮೊತ್ತ ಮೊದಲ ಬಾರಿ ಕಂಡದ್ದು. ಕನಸಿನಲ್ಲಿ ಕಂಡ ಮಹಾತಾಯಿ ಇವರೇ ಎಂದು ಆಗ ನನಗೆ ಮನದಟ್ಟಾಯಿತು. ಪರಂಪರಾಗತ ವೇಷವಿಧಾನವನ್ನು ರೂಢಿಸಿದ್ದ ಅವರು, ತಮ್ಮ ಬದುಕಿನುದ್ದಕ್ಕೂ ಹಲವಾರು ಸಂಕಷ್ಟಗಳ ಒಡನಾಡಿಯಾಗಿದ್ದರೂ ಕೂಡಾ ಅರಳಿದ ಮೊಗದೊಂದಿಗೆ ಸದಾ ಉತ್ಸುಕರಾಗಿ ಇರುತ್ತಿದ್ದರು.
ಒಂದು ಬಾರಿಯಾದರೂ ಹಜ್ಜ್ ಯಾತ್ರೆ ನಿರ್ವಹಿಸಬೇಕೆಂಬ ಅದಮ್ಯ ಬಯಕೆ ಅವರಿಗಿತ್ತು. ಆದರೆ ತನ್ನ ಕುಟುಂಬದ ಮತ್ತು ವಿದ್ಯಾರ್ಥಿಗಳ ಜವಾಬ್ದಾರಿಯಲ್ಲಿ ಕಿಂಚಿತ್ತೂ ಚ್ಯುತಿ ಬರಬಾರದೆಂಬ ಬದ್ಧತೆಯು ಅವರಿಗಿತ್ತು. ಮುರಾಬಿತುಲ್ ಹಾಜರನ್ನು ಸಂದರ್ಶಿಸಲು ಬರುತ್ತಿದ್ದ ಅತಿಥಿಗಳೆಲ್ಲರನ್ನೂ ಹೃದ್ಯವಾಗಿ ಸತ್ಕರಿಸುತ್ತಿದ್ದರು. ಒಮ್ಮೆ ಮುರಾಬಿತುಲ್ ಹಾಜರನ್ನು ಕಾಣಲು ಬಂದ ವಿದ್ಯಾರ್ಥಿಗಳು ಅವರಲ್ಲಿ ದುಆ ಮಾಡಲು ಅಪೇಕ್ಷಿಸಿದಾಗ, “ನೀವು ಮರ್ಯರೊಂದಿಗೆ ಕೂಡಾ ಅಪೇಕ್ಷಿಸಿರಿ” ಎಂದು ವಿದ್ಯಾರ್ಥಿಗಳನ್ನು ಕೇಳಿಕೊಂಡರು. ಮರ್ಯಮರ ಪ್ರಾರ್ಥನೆಗೆ ಅಲ್ಲಾಹನ ಉತ್ತರವಿದೆಯೆಂದಾಗಿತ್ತು ಅವರ ಅಂಬೋಣ.
ಮರ್ಯಮರ ಮಗನು ಒಮ್ಮೆ ನನ್ನ ಬಳಿ ಹೇಳಿದ್ದು, “ಮರ್ಯಮರು ಅಪಾರ ಜ್ಞಾನವುಳ್ಳ ಎಲೆಮರೆಕಾಯಿ” ಎಂದಾಗಿತ್ತು. ಮರ್ಯಮರ ಸಹೋದರರೊಬ್ಬರ ಒಮ್ಮೆ ಹೀಗೆ ಹೇಳಿದರು “ಅವರು ನನಗೆ ತಾಯಿ ಸಮಾನ.ಅವರು ಎಲ್ಲಾ ಸತ್ಯ ವಿಶ್ವಾಸಿಗಳ ಮಹಾ ಮಾತೆ”

ಮೂಲ: ಶೈಖ್ ಹಂಝ ಯೂಸುಫ್
ಭಾಷಾಂತರ: ಹಸನ್ ಮುಈನುದ್ದೀನ್ ನೂರಾನಿ

ಜನಪ್ರಿಯತೆಯ ತೆವಲು : ಹೊಸತಲೆಮಾರಿಗೆ ಅಂಟಿಕೊಂಡ ಸೋಂಕು

ನಾವು ಈ ಸಾಲಿನ ಪವಿತ್ರ ರಂಝಾನ್ ತಿಂಗಳಿನಲ್ಲಿದ್ದೇವೆ. ಈ ರಂಝಾನ್ ನಮಗೆ ಆತ್ಮ ನಿಯಂತ್ರಣ ಹಾಗೂ ಕ್ಷಮೆಯ ಕುರಿತಾಗಿ ಹಲವು ರೀತಿಯಲ್ಲಿ ಬೋಧಿಸುತ್ತಿದೆ. ಹೀಗಾಗಿ ರಂಝಾನ್ ಎಂಬುವುದು ಕೇವಲ ಆಹಾರವನ್ನು ಬಿಟ್ಟು ಕೂರುವುದು ಮಾತ್ರವಲ್ಲದೆ ಒಂದು ರೀತಿಯ ಆತ್ಮಾವಲೋಕನ ಹಾಗೂ ಧ್ಯಾನವಾಗಿದೆ. ಸತ್ಯ ವಿಶ್ವಾಸಿಗಳನ್ನು ಆಂತರಿಕವಾಗಿ ಬಲಹೀನಗೊಳಿಸುವುದರ ಜೊತೆಗೆ ಬಾಹ್ಯ ಪ್ರಚೋದನೆಗಳಿಗೂ ಈ ಪವಿತ್ರ ಮಾಸ ತಡೆಯೊಡ್ಡಲಿದೆ. ಅಂದರೆ, ಈ ಮಾಹೆಯಲ್ಲಿ ಕೆಡುಕುಗಳು ಇಲಾಹನ ಬಂಧನದಲ್ಲಿರಲಿದೆ. ಇದು ಮನುಷ್ಯ ತನ್ನ ಯೋಚನೆಯನ್ನು ಸರಿ ದಾರಿಗೆ ಎಳೆಯಲು ಸೂಕ್ತ ಸಮಯವಾಗಿರಲಿದೆ.

ಜನರು ಇತರರಿಂದ ಹೊಗಳಿಸಿಕೊಳ್ಳಲು ಹಪಹಪಿಸುತ್ತಿರುವುದು ನನ್ನ ಪ್ರಕಾರ ಈ ತಲೆಮಾರಿಗೆ ಅಂಟಿಕೊಂಡಿರುವ ಮಾರಕ ಕಾಯಿಲೆಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಯನ್ನು ನಾವು ಹೆಚ್ಚೆಚ್ಚು ಕಾಣುತ್ತಿದ್ದೇವೆ. ತಮ್ಮೆಲ್ಲಾ ಯೋಚನೆಗಳನ್ನು ಈ ಒಂದಕ್ಕೇ ಕೇಂದ್ರೀಕರಿಸಿಕೊಂಡು, ಸಮಾಜದಲ್ಲಿ ತಾನೊಬ್ಬ ದೈವಿಕ ಶಕ್ತಿಯುಳ್ಳವನೆಂಬುವುದನ್ನು ಸಾಬೀತು ಪಡಿಸಲು ಇವರು ಹೆಣಗಾಡುತ್ತಿದ್ದಾರೆ. ಇಂಥವರು ಹೊಗಳಿಕೆಯಲ್ಲೇ ಆತ್ಮಸಂತೃಪ್ತಿ ಕಂಡುಕೊಳ್ಳುತ್ತಾರೆ. ಇದು ಬಹಳ ಅಪಾಯಕಾರಿ ಬೆಳವಣಿಗೆ.

ನಮ್ಮ ನಡುವೆ ವಿವಿಧ ರೀತಿಯ ಜನರಿದ್ದಾರೆ. ಮನುಷ್ಯ ಸಂಕುಲದ ವೈವಿಧ್ಯತೆಯನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ನಾವು ನಮ್ಮ ಗುಣನಡೆತೆಯನ್ನು ರೂಪಿಸಿಕೊಳ್ಳಬೇಕು. ಹೀಗಾಗಿ ನಾವು ನಮ್ಮ ಮಿತಿಯನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಹೊಗಳಿಕೆಯ ದಾಸರಾಗಬಾರದು. ಇಂಥಹ ವಿಷಯಗಳ ಕುರಿತು ಪ್ರಸ್ತಾಪಿಸುತ್ತಾ ಮೊಹಮ್ಮದ್ ﷺ ಅವರು ಹೇಳಿದ್ದು ಹೀಗೆ. “ನಾನು ಜನರ ಸ್ಥಿತಿಗತಿ ನೋಡಿಕೊಂಡು ಅವರೊಡನೆ ವ್ಯವಹರಿಸಲು ಆಜ್ಞಾಪಿಸಲ್ಪಟ್ಟವನಾಗಿದ್ದೇನೆ.” ಹೀಗಾಗಿ ಓರ್ವ ಸಾಮಾನ್ಯನ ಜೊತೆಗೆ ಹಾಗೂ ವಿದ್ವಾಂಸನ ಜೊತೆಗೆ ಸಮಾಲೋಚಿಸುವಾಗ ಅವರಿಬ್ಬರ ಜ್ಞಾನದ ನೆಲಗಟ್ಟಿನಲ್ಲಿ ಇಬ್ಬರಿಗೂ ಅನುಗುಣವಾಗುವಂತೆ ನಾವು ನಡೆದುಕೊಳ್ಳಬೇಕು. ತಮ್ಮೊಳಗಿನ ಪಾಂಡಿತ್ಯದ ತೋರಿಕೆಗಾಗಿ ಎಲ್ಲವನ್ನು ಎಲ್ಲರ ಮುಂದೆಯೂ ಉರು ಹೊಡೆಯಬಾರದು. ಇದು ಪ್ರಾಯೋಗಿಕವಾಗಿ ಓರ್ವನಿಗೆ ಇರಬೇಕಾದ ಸಾಮಾನ್ಯ ಜ್ಞಾನ. ಇದೆಲ್ಲವನ್ನು ಮರೆತು ಹೊಗಳಿಕೆಗಾಗಿ ನಾವು ಮಾಡುವ ಅರ್ಥಹೀನ ಕೆಲಸಗಳು ಒಳಿತನ ಮೌಲ್ಯಕ್ಕೆ ವಿರುದ್ಧವಾದಂತದ್ದು.

ಈ ಸಮೂಹ ನಮ್ಮ ಬಗ್ಗೆ ಏನು ಹೇಳುತ್ತಿದೆ, ನಮ್ಮ ಕುರಿತಾಗಿ ಏನು ಮಾತನಾಡುತ್ತಿದೆ ಎಂಬುವುದನ್ನೆಲ್ಲಾ ತಿಳಿದುಕೊಳ್ಳಲು ಹುಟ್ಟುವ ಉತ್ಸುಕತೆ ಈ ಆಧುನಿಕ ಜಗತ್ತಿನಲ್ಲಿ ಕಾಣಸಿಗುವ ಮಾರಕ ಕಾಯಿಲೆಗಳ ಪೈಕಿ ಇರುವಂತವು. ಇತ್ತೀಚಿನ ದಿನಗಳಲ್ಲಿ ನೀವೂ ಗಮನಿಸರಬಹುದು. ಲೈಕು, ಕಮೆಂಟುಗಳ ರಾಶಿಗಾಗಿ ಹದಿಹರೆಯದ ಯುವಕರು ಯೂಟ್ಯೂಬ್‍ಗಳಲ್ಲಿ ನಡೆಸುವ ಹೆಣಗಾಟವನ್ನು, ಅಲ್ಲಿ ಅವರಿಗೆ ಬರುವ ಲೈಕು ಕಮೆಂಟುಗಳೇ ಅವರು ಮನುಷ್ಯರಾಗಿ ಬದುಕುತ್ತಿದ್ದಾರೆ ಎಂಬುವುದಕ್ಕಿರುವ ಮಾನದಂಡ ಎಂದು ಅವರು ಭಾವಿಸಿದ್ದಾರೆ. ಒಂದು ಹಂತದ ಬಳಿಕ ಅಂಥಾ ಪ್ರಶಂಸೆಗಳು, ಹೊಗಳಿಕೆಗಳು ಅವರಿಗೆ ಸಿಗದೆ ಹೋದರೆ ಅವರು ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಇಂಥಾ ಬೆಳವಣಿಗೆಗಳು ಜೀವನ ಪ್ರೀತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಇಂಥಾ ವಿಷಯಗಳ ಕುರಿತು ಇಸ್ಲಾಂ ತಾಳ್ಮೆ ಮತ್ತು ನಮ್ರತೆಯನ್ನು ಕಾಯ್ದುಕೊಳ್ಳಲು ಹೇಳುತ್ತದೆ. ಇವುಗಳ ಕುರಿತು ಪೈಗಂಬರರು ಹೇಳುತ್ತಾರೆ “ಎಲ್ಲಾ ಧರ್ಮಗಳಿಗೂ ಅದರದ್ದೇ ಆದ ಗುಣ ವಿಶೇಷಗಳಿವೆ. ಆದರೆ ಇಸ್ಲಾಂ ಮುಂದಿಡುವ ಮೌಲ್ಯ ಲಜ್ಜೆ ಮತ್ತು ನಮ್ರತೆಯಾಗಿದೆ. ಸದ್ಯ ಯುವ ಸಮೂಹ ಅನುಸರಿಸಿಕೊಂಡು ಬರುತ್ತಿರುವ ಲೌಕಿಕ ಮೌಲ್ಯ ಹಾಗೂ ಮಹತ್ವಾಕಾಂಕ್ಷೆಗಳನ್ನು ಪ್ರವಾದಿಗಳು ಹದೀಸ್ ಮೂಲಕ ತೀವ್ರವಾಗಿ ಖಂಡಿಸಿದ್ದಾರೆ. “ತೋರಿಕೆ ಹಾಗೂ ಮಹತ್ವಾಕಾಂಕ್ಷೆಗಳ ಕುರಿತಾಗಿ ನನ್ನ ಸಮುದಾಯ ತಾಳಬಹುದಾದ ನಿಲುವುಗಳ ಬಗ್ಗೆ ನನ್ನಲ್ಲಿ ಭಯವಿದೆ” ಎಂದು ಇಬ್ನುಮಾಜ (ರ) ಅವರು ವರದಿ ಮಾಡಿದ ಹದೀಸ್‍ವೊಂದರಲ್ಲಿ ಪೈಗಂಬರರು ಹೇಳುತ್ತಾರೆ. ಈ ತೋರಿಕೆ ಎಂಬುವುದು ದೈವನಿಂದನೆ ಎಂದು ಪ್ರವಾದಿಗಳು ಬೋಧಿಸುತ್ತಾರೆ. ಯಾಕೆಂದರೆ, ಅವರು ಸರ್ವಶಕ್ತನಾದ ಅಲ್ಲಾಹನಿಂದ ಸಿಗಬೇಕಾದ ಮಾನ್ಯತೆಯನ್ನು ಅವನದ್ದೇ ಸೃಷ್ಟಿಗಳಿಂದ ಎದುರು ನೋಡುವವರಾಗಿದ್ದಾರೆ.

ಯಕಶ್ಚಿತ್,ನಮ್ಮ ಪೂರ್ವಜರೆಲ್ಲರೂ ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದರಿಂದ ಹಿಂದೆ ಸರಿಯುತ್ತಿದ್ದವರು. ಹೀಗಿದ್ದ ಪಂಡಿತರಲ್ಲೊಬ್ಬರಾಗಿದ್ದರು ಖಾಲಿದ್ ಬಿನ್ ಮಹ್ದಾನ್ (ರ). ಮುಹಮ್ಮದ್ ﷺ ಅವರ ಸುನ್ನತ್ತ್ ಅನ್ನು ಕಾಪಾಡುವ ನಿಟ್ಟಿನಲ್ಲಿ ಅದ್‍ಹಾಂ ಎಂಬ ಹದೀಸ್ ಪಂಡಿತ, ತನ್ನ ಪಾಂಡಿತ್ಯದಿಂದ ತನಗೆಲ್ಲಿ ಪ್ರಸಿದ್ಧಿ ಬಂದು ಬಿಡುತ್ತದೋ ಎಂಬ ಭಯದಿಂದ ಹದೀಸ್ ಕೂಟದಿಂದಲೇ ಎದ್ದು ನಡೆಯುತ್ತಿದ್ದರು.

ಇದೇ ವಿಷಯದ ಕುರಿತು ಮತ್ತೊಂದು ಘಟನೆ ನೆನಪಿಸಿಕೊಳ್ಳುವುದಾದರೆ, ಉಬಯ್ ಬಿನ್ ಕಅಬ್ (ರ) ಅವರು ಹೀಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಅಬ್ (ರ) ಅವರ ಅನುಯಾಯಿಗಳು ಅವರನ್ನು ಹಿಂಬಾಲಿಸುತ್ತಿದ್ದರು. ಇದನ್ನು ನೋಡಿದ ಉಮರ್ (ರ) ತನ್ನ ಕೈಯಲ್ಲಿದ್ದ ಕೋಲು ಉಬಯ್ ಬಿನ್ ಕಅಬ್ (ರ) ಅವರ ನೇರಕ್ಕೆ ಹಿಡಿದು ನಿಂತು ಬಿಟ್ಟರು. ತಮ್ಮ ನೇರಕ್ಕೆ ಕೋಲು ಹಿಡಿದು ನಿಂತಿರುವ ಉಮರ್ (ರ) ಅವರ ಬಳಿ ಏನಾಯ್ತು ತಂಙಳೇ ಎಂದು ಕಅಬ್ (ರ)ರವರು ಕೇಳಿದರು. ಇದಕ್ಕೆ ಉತ್ತರಿಸಿದ ಉಮರ್ (ರ), ಈ ರೀತಿಯ ನಡಿಗೆ ಅನುಯಾಯಿಗಳಿಗೆ ನ್ಯೂನ್ಯತೆಯೂ ಹಾಗೂ ಅದನ್ನು ನಾಯಕರಿಗೆ ಅಪಾಯವೂ ಆಗಿದೆ ಎಂದರು.

ನಮ್ಮ ಪೂರ್ವಜರು ಈ ರೀತಿಯಾದ ಶ್ರದ್ಧೆ ಮತ್ತು ಭಕ್ತಿಯಿಂದ, ತೋರಿಕೆ ಹಾಗೂ ಖ್ಯಾತಿಯ ಪೊರೆಯನ್ನು ಕಳಚಿ ಬಿಟ್ಟವರು ಎಂದು ನಾವುಗಳು ಅರ್ಥೈಸಿಕೊಳ್ಳಬೇಕು. ಯಾಕೆಂದರೆ, ಇಂಥಾ ಜನಪ್ರಿಯತೆಯ ತೆವಲು ಅವರನ್ನು ದೈವನಿಂದನೆಯೆಡೆಗೆ ಕೊಂಡೊಯ್ಯಲಿದೆ ಎಂದು ಅವರು ಭಾವಿಸಿದ್ದರು. ಹೀಗೆ ಮಾಡಿದವರಲ್ಲಿ ಕೆಲವರು ತಮ್ಮ ಪಾಂಡಿತ್ಯ ತೋರದಿರಲು ಹಲವು ದಾರಿಗಳನ್ನು ಕಂಡುಕೊಂಡಿದ್ದರು. ಎಲ್ಲಿಯವರೆಗೆ ಎಂದರೆ ನೀರಿಗೆ ಮದ್ಯಕ್ಕೆ ಹೋಲುವ ಕಲಬೆರಕೆಯನ್ನು ಮಿಶ್ರಣ ಮಾಡಿ ಜನರ ಮುಂದೆ ಕೂತು ಕುಡಿಯುತ್ತಿದ್ದರು. ಇದರಿಂದ ತಮ್ಮ ಮೇಲೆ ಜನರಿಗೆ ಅಭಿಮಾನ ಮೂಡದಿರಲಿ ಹಾಗೂ ಖ್ಯಾತಿ ದಕ್ಕದಿರಲಿ ಎಂದು ಈ ರೀತಿ ನಡೆದುಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಅವರು ತೋರಿಕೆ ಮತ್ತು ಪ್ರಸಿದ್ಧಿಯನ್ನು ವಿರೋಧಿಸುತ್ತಿದ್ದರು. ಆದರೆ ವಿದ್ವಾಂಸರ ಪ್ರಕಾರ, ಈ ರೀತಿಯಲ್ಲೂ ಖ್ಯಾತಿಯನ್ನು ತಿರಸ್ಕರಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪಂಡಿತರ ಈ ರೀತಿಯ ಗುಣ ನಡೆತೆಗಳು ಅನುಯಾಯಿಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ತಮ್ಮ ನಂಬಿಕೆಗಳು ಅನುಯಾಯಿಗಳ ಮೇಲೆ ನಕಾರಾತ್ಮಕ ರೀತಿಯಲ್ಲಿ ಪ್ರಭಾವ ಬೀರುವುದಿಲ್ಲವೆಂದಾದರೆ ಮಾತ್ರ ಇಂಥಾ ಕಠಿಣ ಆಚರಣೆಗಳಿಗೆ ಇಸ್ಲಾಂ ಸಮ್ಮತಿಸುತ್ತದೆ.

ಇದೇ ಮಾದರಿಯ ಮತ್ತೊಂದು ಘಟನೆಯನ್ನು ತಾರೀಖ್‍ನಿಂದ (ಇತಿಹಾಸದಿಂದ) ನೆನಪಿಸಿಕೊಳ್ಳುವುದಾದರೆ, ಒಟೋಮನ್ ಸಾಮ್ರಾಜ್ಯದ ಆದಿ ರಾಜಧಾನಿಯಾಗಿದ್ದ ಬುರ್ಸ ಎಂಬಲ್ಲಿನ ಮುಖ್ಯ ಮುಫ್ತಿ ಹಾಗೂ ಒಟೋಮನ್ ರಾಜರ ಆಡಳಿತ ಸಲಹೆಗಾರ ಮತ್ತು ಪ್ರಮುಖ ವ್ಯಕ್ತಿಗಳಲ್ಲೊಬ್ಬನಾಗಿದ್ದ ಅಝೀಜ್ ಮುಹಮ್ಮದ್ ಹುದೈ, ಆಧ್ಯಾತ್ಮಿಕವಾಗಿ ಓರ್ವ ಶೈಖ್ (ಹಿಂದಿನ ಅರಬ್ ಬುಡಕಟ್ಟು ಜನಾಂಗದ ನಾಯಕರನ್ನು ಶೈಖ್ ಎಂದು ಕರೆಯಲಾಗುತ್ತಿತ್ತು. ಈಗಲೂ ಅದೇ ಪದ ಚಾಲ್ತಿಯಲ್ಲಿದೆ. ಆದರೆ ಬುಡಕಟ್ಟು ಎಂಬ ಪ್ರಾತಿನಿಧ್ಯ ಆ ಪದ ಸದ್ಯಕ್ಕೆ ತೋರುವುದಿಲ್ಲ. ಆದರೆ ಇಲ್ಲಿ ಅಝೀಜ್ ಮುಹಮ್ಮದ್ ಹುದೈ ಹಿಂಬಾಲಿಸಿದ್ದು ಬುಡಕಟ್ಟು ಜನಾಂಗದ ನಾಯಕನ್ನು) ಅವರನ್ನು ಹಿಂಬಾಲಿಸಲು ತೀರ್ಮಾನಿಸುತ್ತಾನೆ. ಇದನ್ನು ಅರಿತ ಶೈಖ್, ತಲೆಗೆ ದೊಡ್ಡದಾದ ಪೇಟ, ವಿಶೇಷ ಬಟ್ಟೆಯನ್ನು ಧರಿಸಿ ರಾಜರೊಡನೆ ಅಹಂಕಾರದೊಂದಿಗೆ ತಿರುಗುತ್ತಿದ್ದ ಮುಫ್ತಿಯನ್ನು ಪರೀಕ್ಷಿಸಲು ತೀರ್ಮಾನಿಸಿದರು. ಮರುಕ್ಷಣವೇ ಮುಫ್ತಿಯನ್ನು ಕರೆದು, ನೀನು ನನ್ನ ಶಿಷ್ಯನಾಗ ಬಯಸುವೆಯಾದರೆ ನೀನು ಧರಿಸಿರುವ ಇದೇ ಬಟ್ಟೆಯಲ್ಲಿ ಮಾರುಕಟ್ಟೆಗೆ ತೆರಳಿ ಕರುಳು (ಮಾಂಸ ಎಂದು ಅರ್ಥೈಸಿಕೊಳ್ಳಬಹುದು) ವ್ಯಾಪಾರ ಮಾಡಬೇಕು ಎಂದು ಶೈಖ್ ಸವಾಲೊಡ್ಡಿದರು. ಅಷ್ಟೇ ಅಲ್ಲದೆ ಮಾಂಸ ಮಾರಟಗಾರ. ಮಾಂಸ ಮಾರಾಟಗಾರ ಎಂದು ಜೋರಾಗಿ ಕೂಗಿ ಹೇಳಬೇಕು ಎಂದರು. ಇದು ಕೇಳುತ್ತಿದ್ದಂತೆ ಮುಫ್ತಿ ಹೌಹಾರಿ ಹೋದರು. ಮುಫ್ತಿಯ ಅಹಂಕಾರ ಇಳಿಸಲು ಶೈಖ್ ನೀಡಿದ ಮೊದಲ ಪಾಠವಾಗಿತ್ತದು. ಇಷ್ಟಾದರೂ ಶೈಖ್ ಅವರ ಸವಾಲನ್ನು ಸ್ವೀಕರಿಸಿ ಹೇಳಿದಂತೆಯೇ ಮುಫ್ತಿ ಮಾಡಿದರು. ಈ ಘಟನೆ ಬಳಿಕ ಶೈಖ್ ಮುಫ್ತಿಯನ್ನು ಶಿಷ್ಯನೆಂದು ಮನಸಾರೆ ಒಪ್ಪಿಕೊಂಡರು. ಮುಫ್ತಿ ಶೈಖ್ ರಿಂದ ತಾಳ್ಮೆ ಮತ್ತು ಸಹಾನುಭೂತಿಯ ಪಾಠವನ್ನು ಕಲಿತುಕೊಂಡರು. ತದನಂತರದ ದಿನಗಳಲ್ಲಿ ಒಟೋಮನ್ ಸಾಮ್ರಾಜ್ಯದ ಪ್ರಧಾನಿಯಾಗಿದ್ದ ಅಝೀಜ್ ಮುಹಮ್ಮದ್ ಹುದೈ ಮುಫ್ತಿ ಜನರ ನಡುವೆ ಹೆಚ್ಚು ಸ್ವೀಕೃತಗೊಂಡ ವ್ಯಕ್ತಿತ್ವವಾಗಿ ರೂಪುಗೊಂಡರು.

ನಾವು ಮಾಡುವ ಕೆಲಸಗಳಿಂದ ನಾವು ಅಹಂಕಾರ ಪಟ್ಟುಕೊಳ್ಳಬಾರದು, ಗರ್ವ ಪಟ್ಟುಕೊಳ್ಳಬಾರದು. ಮುಹಮ್ಮದ್ ﷺ ಹೇಳುತ್ತಾರೆ, “ಯಾರಾದರು ಒಬ್ಬರು ನಿಮ್ಮೆಡೆಗೆ ಬೆರಳು ತೋರಿದರೆ ಸಾಕು ಅದೇ ನಿಮ್ಮಲ್ಲಿರುವ ದುಷ್ಟತನಕ್ಕಿರುವ ಸಾಕ್ಷ್ಯ.” ಹೀಗಾಗಿ ಈ ಪವಿತ್ರ ತಿಂಗಳಲ್ಲಿ ನಮ್ಮನ್ನು ಎಲ್ಲಾ ರೀತಿಯಾದ ಬಾಹ್ಯ ಪ್ರಚೋದನೆಗಳಿಂದ ಆ ಸೃಷ್ಟಿಕರ್ತನು ಕಾಪಾಡಲಿ. ನಮ್ಮ ಯೋಚನೆಗಳು ಹಾಗೂ ಹೃದಯಗಳು ಈ ಮೂಲಕ ಶುದ್ಧೀಕರಣಗೊಳ್ಳಲಿ.

(ಇದು ಶೈಖ್ ಅಬ್ದುಲ್ ಹಕೀಂ ಮುರಾದ್ ನಡೆಸಿಕೊಡುವ Ramdhan moment ಎಂಬ ಸರಣಿಯಲ್ಲಿ Seeking status ಎಂಬ ಒಕ್ಕಣೆಯಲ್ಲಿ ಮಾಡಿದ ಭಾಷಣದ ಲಿಖಿತ ರೂಪ)

ಕನ್ನಡಕ್ಕೆ : ಆಶಿಕ್ ಮುಲ್ಕಿ


SHYKH ABDUL HAKIM MURAD

Dean of Cambridge Muslim College in the United Kingdom, was educated at Cambridge, Al Azhar, and the Free University of Amsterdam. He is currently University Lecturer in Islamic Studies in the Faculty of Divinity at Cambridge University.

ಸವಾನಿಹ್ ಮತ್ತು ಇಂಡೋ ಪರ್ಷಿಯನ್‌ ಸೂಫಿಸಂ

ಸೂಫಿಸಂ ಕುರಿತ ಅತ್ಯಂತ ಹಳೆಯ ಪರ್ಷಿಯನ್‌ ರಚನೆಗಳಲ್ಲಿ ಅಹ್ಮದ್ ಅಲ್ ಗಝ್ಝಾಲಿಯವರ ‘ಸವಾನಿಹ್’ ಗ್ರಂಥವೂ ಒಂದು. ಇಸ್ಮಾಯೀಲ್ ಬಿನ್ ಮುಹಮ್ಮದ್ ಅಲ್ ಮುಸ್ತಂಲಿಯವರ ‘ಶರಹು ತಅರ್ರುಫ್ ಲಿ ಮದ್ಸ್ಹಬಿ ತಸವ್ವುಫ್’, ಅಲಿಯ್ಯ್ ಬಿನ್ ಉಸ್ಮಾನ್ ಅಲ್ ಹುಜ್‌ವೀರಿ ಯವರ ‘ಕಶ್ಫುಲ್ ಮಹ್ಜೂಬ್’ ನಂತಹ ಕೆಲವೇ ಕೆಲವು ಗ್ರಂಥಗಳಷ್ಟೇ ಆ ವಿಷಯದಲ್ಲಿ ಸವಾನಿಹ್ ಗೂ ಮುನ್ನ ವಿರಚಿತವಾದ ಗ್ರಂಥಗಳು. ಆದರೆ, ಈ ಗ್ರಂಥಗಳಿಗೂ ಮೊದಲೇ ಪರ್ಷಿಯನ್‌ ಭಾಷೆಯಲ್ಲಿ ಸೂಫಿಸಂ ವ್ಯಾಪಕವಾಗಿ ಚರ್ಚೆಗೊಳಪಟ್ಟಿತ್ತು ಎನ್ನುವುದಕ್ಕೆ ದಾಖಲೆಗಳಿವೆ. ಅಬೂ ಅಬ್ದುರ್ರಹ್ಮಾನ್ ಅಸ್ಸುಲಮೀ, ಅಬೂ ಸಈದ್ ಬಿನ್ ಅಬಿಲ್ ಖೈರ್, ಅಬುಲ್ ಖಾಸಿಂ ಅಲ್ ಖುಶೈರಿ ಮೊದಲಾದವರು ಅಹ್ಮದ್ ಅಲ್ ಗಝ್ಝಾಲಿಯವರಿಗೂ ಮೊದಲೇ ಅಪಾರ ಪ್ರಭಾವ ಬೀರಿದ್ದ ಪರ್ಷಿಯನ್ ಸೂಫೀ ವಿದ್ವಾಂಸರಾಗಿದ್ದರು. ಇಸ್ಲಾಮಿಕ್ ಕಾನೂನು, ದೇವತಾಶಾಸ್ತ್ರಗಳಂತೆಯೇ ಪ್ರಾರಂಭ ಕಾಲದಲ್ಲಿ ಸೂಫಿಸಂ ಕುರಿತ ರಚನೆಗಳೂ ಮುಖ್ಯವಾಗಿ ಅರಬಿ ಭಾಷೆಯಲ್ಲೇ ರಚಿತವಾಗುತ್ತಿದ್ದವು. ನಂತರದ ದಿನಗಳಲ್ಲಿ ಇಸ್ಲಾಮಿನ ಸೂಫೀ ಚಿಂತನೆಗಳ ನೈಸರ್ಗಿಕವಾದ ಕಾವ್ಯಶೈಲಿ ಮೂಲಕ ಬಳಿಕ ಪರ್ಷಿಯನ್‌ ಭಾಷೆಯಲ್ಲಿ ಇಂತಹ ಸಾಹಿತ್ಯ ಪ್ರಕಾರಗಳು ಅಧಿಕಾರ ಹಿಡಿದವು.

ಹಿಜರಿ ಆರನೇ ಶತಮಾನದ ಮೊದಲ ದಶಕದಲ್ಲಿ ರಚನೆಗೊಂಡ ಸವಾನಿಹ್ ಗ್ರಂಥವು ಪ್ರೇಮದ ಅತೀಂದ್ರಿಯ ಮಗ್ಗುಲುಗಳನ್ನು ಬಹು ವಿಸ್ತೃತವಾಗಿ ಚರ್ಚೆ ಮಾಡುವ; ಒಂದರ್ಥದಲ್ಲಿ ಇಸ್ಲಾಮಿಕ್ ಇತಿಹಾಸದಲ್ಲೇ ಪ್ರಥಮ ದಾಖಲೆಯೆನ್ನಬಹುದು. ಪ್ರೇಮವನ್ನು ಸರ್ವಸ್ವವೂ ಉದ್ಭವಿಸುವ ಆತ್ಯಂತಿಕ ಸತ್ಯ ಎಂದು ಸವಾನಿಹ್ ಬಣ್ಣಿಸುತ್ತದೆ. ಎಲ್ಲವೂ ಅಸ್ತಿತ್ವ ಸಿದ್ಧಿಸುವುದು ಪ್ರೇಮದಲ್ಲಿ ಬಂಧಿತರಾದವರೊಳಗಿನ ಸಂಕೀರ್ಣವಾದ ಸಂಬಂಧದ ಮೂಲಕವೆಂದೂ, ಪ್ರೇಮಿಗಳ ಆತ್ಮಗಳು ಪರಸ್ಪರ ಭೇಟಿಯಾಗುತ್ತವೆ ಎಂದೂ ಸವಾನಿಹ್ ಸ್ಪಷ್ಟಪಡಿಸುತ್ತದೆ.

ಈ ಕಾರಣದಿಂದಲೇ ಲಿಯೊನಾರ್ಡ್ ಲೆವಿಸನ್ ಸವಾನಿಹ್ ಅನ್ನು ‘ಸ್ಕೂಲ್ ಆಫ್ ಲವ್’ ನ ಪ್ರಥಮ ಗ್ರಂಥವಾಗಿ ಮತ್ತು ಪರ್ಷಿಯನ್ ಪ್ರೇಮಕಾವ್ಯ ಪರಂಪರೆಯ ಮೂಲವೆಂದೂ ಗುರುತಿಸುತ್ತಾರೆ. ಆದ್ದರಿಂದಲೇ, ಲಭ್ಯವಾದ ದಾಖಲೆಗಳ ಪ್ರಕಾರ ಅಹ್ಮದ್ ಅಲ್ ಗಝಾಲಿಯವರೇ ಪರ್ಷಿಯನ್ ಸೂಫಿ ಸಾಹಿತ್ಯದ ಮೂಲಪುರುಷ ಎನ್ನಬಹುದು.
ಸಾಹಿತ್ಯ ಕ್ಷೇತ್ರದ ಅಗಾಧ ಪಾಂಡಿತ್ಯದ ಜೊತೆಗೆ ಅಹ್ಮದ್ ಗಝ್ಝಾಲಿಯವರಿಗೆ ಅನೇಕ ಪ್ರಸಿದ್ಧ ಶಿಷ್ಯಂದಿರಿದ್ದರು. ಇರಾಕ್ ಮತ್ತು ಪಶ್ಚಿಮ ಪರ್ಷಿಯಾವನ್ನು ಆಳಿದ ಸಲ್ಜೂಖ್ ಚಕ್ರವರ್ತಿ ಮುಗೀಸುದ್ದೀನ್ ಮಹ್ಮೂದ್ ಮತ್ತು ಖುರಾಸಾನ್, ಉತ್ತರ ಪರ್ಷಿಯಾದ ಆಡಳಿತಗಾರ ಅವರ ಸಹೋದರ ಅಹ್ಮದ್ ಸಂಜರ್ ಮೊದಲಾದ ಪ್ರಮುಖ ವ್ಯಕ್ತಿತ್ವಗಳೂ ಸಹ ಅಹ್ಮದ್ ಗಝ್ಝಾಲಿಯವರ ಶಿಷ್ಯಂದಿರೇ ಆಗಿದ್ದಾರೆ. ಸೂಫೀ ಪರಂಪರೆಯಲ್ಲಿ ಬರುವ ‘ಶೈಖ್’ ಎಂಬ ಅವರ ಪದವಿಯೂ ಪ್ರಮುಖವಾದುದು. ಸೂಫೀ ಪರಂಪರೆಯ ಶ್ರೇಣಿಯಾಧಾರಿತ ಅಧ್ಯಯನದ ಪ್ರಕಾರ ಅಹ್ಮದ್ ಗಝ್ಝಾಲಿಯವರ ಪ್ರಮುಖ ಶಿಷ್ಯರಾಗಿದ್ದಾರೆ ಶೈಖ್ ದಿಯಾವುದ್ಧೀನ್ ಅಬೂ ನಜೀಬ್ ಅಸ್ಸುಹ್ರವರ್ದಿ. ಅವರೊಳಗಿನ ಒಡನಾಟವು ಎಷ್ಟರಮಟ್ಟಿಗೆ ಇತ್ತೆಂಬುದು ಸ್ಪಷ್ಟವಾಗಿಲ್ಲವಾದರೂ ಗಝಾಲಿ ಯವರು ಅವರನ್ನು ಪ್ರಶಂಸಿಸಿ ಇಸ್ಫಹಾನಿನಲ್ಲಿ ಜೊತೆಯಾಗಿ ಇದ್ದ ಸಮಯದಲ್ಲಿ ಅವರನ್ನು ಖಲೀಫರಾಗಿ ನೇಮಕ ಮಾಡಿದ್ದಕ್ಕೆ ಸಾಕ್ಷ್ಯಗಳಿವೆ

ಅಬೂ ನಜೀಬ್ ಸುಹ್ರವರ್ದಿಯವರ ಪ್ರಸಿದ್ಧ ಶಿಷ್ಯರೂ ಸುಹ್ರವರ್ದಿ ಸೂಫೀ ಪಂಥದ ಸ್ಥಾಪಕರೂ ‘ಅವಾರಿಫುಲ್ ಮಾರಿಫ್’ ಎಂಬ ಪ್ರಸಿದ್ಧ ಕೃತಿಯ ಗ್ರಂಥಕರ್ತರೂ ಆದ ಅಬೂ ಹಫ್ಸ್ ಉಮರ್ ಸುಹ್ರವರ್ದಿ ಯವರಿಂದ ಸ್ಥಾಪಿತಗೊಂಡು ಒಟ್ಟೋಮನ್ ಸಾಮ್ರಾಜ್ಯದಲ್ಲಿ ಹಬ್ಬಿ ಇಂದಿಗೂ ತುರ್ಕಿಯಲ್ಲಿ ಚಾಲ್ತಿಯಲ್ಲಿರುವ ಸೂಫಿ ಪಂಥವೇ ಝೈನಿಯ್ಯಾ ತ್ವರೀಕತ್. ಚಿಶ್ತಿಯ್ಯಾ, ನಕ್ಷ್ ಬಂದಿಯ್ಯಾ , ಖಾದಿರಿಯ್ಯಾ ಮುಂತಾದ ಸೂಫೀ ಪಂಥಗಳಂತೆಯೇ ಭಾರತ ಮತ್ತು ಪಾಕಿಸ್ತಾನದ ಚರಿತ್ರೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪಂಥವಾಗಿದೆ ಸುಹ್ರವರ್ದೀ ಪಂಥ. ಅರಬ್ ರಾಷ್ರ್ಟಗಳಲ್ಲಿ ಈ ಪಂಥವು ಸ್ವಾಭಾವಿಕವೆಂಬಂತೆ ನೇಪಥ್ಯಕ್ಕೆ ಸರಿದಿದೆಯಾದರೂ ಇರಾಕ್, ಸಿರಿಯಾ ದೇಶಗಳಲ್ಲಿ ಇಂದಿಗೂ ಜೀವಂತವಾಗಿದೆ. ಸೂಫೀ ಪರಂಪರೆಗಳ ಇತಿಹಾಸದಲ್ಲಿ ಪ್ರಸಿದ್ಧವಾದ ಮತ್ತೊಂದು ಹೆಸರೇ ಅಹ್ಮದ್ ಅಲ್ ಗಝ್ಝಾಲಿಯವರ ಮತ್ತೋರ್ವ ಶಿಷ್ಯರಾದ ಅಬುಲ್ ಫಳ್ ಲ್ ಅಲ್ ಬಗ್ದಾದಿ. ಶಾಹ್ ನಿ ಅಮತುಲ್ಲಾಹ್ ವಲಿ ಸ್ಥಾಪಿಸಿದ ನಿಅಮತುಲ್ಲಾಹಿ ಪಂಥದ ಒಂದು ವಿಭಾಗವು ಏಳು ಶಾಖೆಗಳಾಗಿ ಅಲ್ ಬಗ್ದಾದಿಯವರ ಮೂಲಕ ಹಾದು ಬರುತ್ತದೆ. ಆ ಶಾಖೆಯು ತುರ್ಕಿಯಲ್ಲಿ ಪ್ರಚಾರ ಪಡೆದು ಹತ್ತೊಂಬತ್ತನೆಯ ಮತ್ತು ಇಪ್ಪತ್ತನೆಯ ಶತಮಾನಗಳಲ್ಲಿ ಅಮೇರಿಕಾ, ಯುರೋಪ್ ಗಳಲ್ಲಿ ವ್ಯಾಪಿಸಿದ ಮುಸ್ಲಿಂ ಸಮೂಹದಲ್ಲಿ ವಿಶೇಷ ಮನ್ನಣೆ ಗಳಿಸಿದೆ. ಪರ್ಷಿಯನ್‌ ಸೂಫೀ ಗುರು ಜಲಾಲುದ್ದೀನ್ ರೂಮಿ ಅವರ ಮೌಲವಿ ಪಂಥಕ್ಕೆ ಶಂಸುದ್ದೀನ್ ಅಫ್ ಲಾಕ್ ತಮ್ಮ ‘ಮನಾಖಿಬುಲ್ ಆರಿಫೀನ್’ ಗ್ರಂಥದಲ್ಲಿ ಕೊಟ್ಟಿರುವ ಪರಂಪರೆಯಲ್ಲಿ ಅಹ್ಮದ್ ಅಲ್ ಗಝ್ಝಾಲಿಯವರನ್ನು ಅಹ್ಮದ್ ಖಾತಿಬಿ ಅಲ್ ಬಲ್ಕಿಯವರ ಗುರು ಎಂದು ಪ್ರಸ್ತಾಪಿಸಲಾಗಿದೆ. ತದನಂತರ ಮೌಲವಿ ಪಂಥದಲ್ಲಿ ಬಂದ ಅನುಯಾಯಿ ಸಮೂಹವು ಮೌಲಾನಾ ಜಲಾಲುದ್ದೀನ್ ರೂಮಿಯದ್ದೆಂದು ಹೇಳಲಾಗುವ ಉಕ್ತಿಯೊಂದರಿಂದ ಅಹ್ಮದ್ ಅಲ್ ಗಝಾಲಿಯವರ ಆಧ್ಯಾತ್ಮಿಕ ಲೋಕದ ಅಧಿಕೃತತೆಯನ್ನು ನಿರೂಪಿಸುತ್ತಾರೆ.

ಅಬ್ದುಲ್ಲಾ ಅನ್ಸಾರಿ, ಅಹ್ಮದ್ ಅಲ್ ಗಝಾಲಿ, ಅಹ್ಮದ್ ಸಮ್ಆನೀ, ಹಕೀಮ್ ಸನಾಈ, ಮಯ್ಬುದೀ, ಮೊದಲಾದವರು ಆ ಚಳುವಳಿಯ ವಕ್ತಾರರಲ್ಲಿ ಮೊದಲಿಗರು. ಇಂದಿಗೂ ಲಭ್ಯವಿರುವ ಸವಾನಿಹ್ ನ ಹಸ್ತಪ್ರತಿಗಳು ಭಾರತದಲ್ಲಿ ಸವಾನಿಹ್ ನ ಪರ್ಷಿಯನ್‌ ಭಾಷೆಯಲ್ಲಿರುವ ವ್ಯಾಖ್ಯಾನಗಳು ಅಹ್ಮದ್ ಅಲ್ ಗಝಾಲಿಯವರ ಸಾಹಿತ್ಯಿಕ ಪ್ರಭಾವವನ್ನು ಸ್ಪಷ್ಟಪಡಿಸುತ್ತದೆ. ‘ಪ್ರೇಮ ಮತ್ತು ಪ್ರೇಮಿಗಳ ನಡುವಿನ ಮಿಲನವೇ ಆಧ್ಯಾತ್ಮಿಕ ಯಾತ್ರೆಯ ಎಲ್ಲಾ ಹಂತಗಳೂ’ ಎಂಬ ಅವರ ಸಿದ್ಧಾಂತವು ನಂತರದ ಪರ್ಷಿಯನ್‌ ಸೂಫಿಸಂನ ಕೇಂದ್ರಬಿಂದುವಾಯಿತು. ಜೊತೆಗೆ, ಗದ್ಯ-ಪದ್ಯ ಸಮ್ಮಿಶ್ರ ಸುಂದರವಾಗಿ ಸಮನ್ವಯಗೊಳಿಸುವ ಆಖ್ಯಾನ ಶೈಲಿಯು ಮುಂದೆ ಬರೆಯಲ್ಪಟ್ಟ ಅನೇಕ ಸೂಫಿ ರಚನೆಗಳಲ್ಲಿ ಅನುಕರಣೀಯವಾಯಿತು. ನಂತರದ ಸೂಫಿ ರಚನೆಗಳಲ್ಲಿ ಅಲ್ ಗಝಾಲಿಯವರ ಶೈಲಿ ಮತ್ತು ಬೋಧನೆಗಳು ಬೀರಿದ ಪ್ರಭಾವಗಳನ್ನು ಲೆಕ್ಕಹಾಕುವಾಗ ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂಬುದು ಮನದಟ್ಟಾಗುತ್ತದೆ. ಪರ್ಷಿಯನ್‌ ಸೂಫಿ ಪರಂಪರೆಯ ಅಷ್ಟೂ ರಚನೆಗಳನ್ನು ಒಟ್ಟು ಮಾಡಿ ವಿಶ್ಲೇಷಣೆಗೊಳಪಡಿಸಿದರೆ ಮಾತ್ರವೇ ಅಂತಹ ಒಂದು ಅಧ್ಯಯನವು ಪೂರ್ಣಾರ್ಥದಲ್ಲಿ ಸಾಧ್ಯವಾಗಬಹುದಷ್ಟೆ.

ಅಹ್ಮದ್ ಅಲ್ ಗಝಾಲಿಯವರ ‘ರಿಸಾಲತುತ್ವೈರ್’ ಎಂಬ ರಚನೆಯೇ ಫರೀದುದ್ದೀನ್ ಅತ್ತಾರರ ಪ್ರಸಿದ್ಧ ಕೃತಿ ‘ಮಂತಿಖು ತ್ವೈರ್’ (ಪಕ್ಷಿ ಸಂಭಾಷಣೆ) ಗೆ ನೀಲನಕ್ಷೆ ಒದಗಿಸಿರುವುದು. ಪಕ್ಷಿಗಳ ಸಂಗಮದಿಂದ ಎರಡೂ ರಚನೆಗಳೂ ಶುರುವಾಗುತ್ತವೆ. ಅವರ ನಡುವೆ ಭಿನ್ನಾಭಿಪ್ರಾಯಗಳು ಇರುವಾಗಲೇ ಒಬ್ಬ ನಾಯಕನ ಅನಿವಾರ್ಯತೆಗೆ ಬಿದ್ದ ಅವರು ಒಗ್ಗಟ್ಟಾಗಿ ಅಂತಹ ಓರ್ವ ನೇತಾರನನನ್ನು ಹುಡುಕಿ ಹೊರಟುಬಿಡುತ್ತಾರೆ. ಕಾರಣ, ‘ರಿಸಾಲತುತ್ತೈರ್’ ನ ಪಕ್ಷಿಗಳ ಅಭಿಪ್ರಾಯದ ಪ್ರಕಾರ, ‘ಪರಾಕ್ರಮಿಯಾದ ಒಬ್ಬ ರಾಜನ ನೆರಳು ನಮ್ಮ ಮೇಲೆ ಇಲ್ಲದಿದ್ದರೆ ಶತ್ರುಗಳಿಂದ ನಾವು ಸುರಕ್ಷಿತರಾಗಿರಲಾರೆವು”. ಅನೇಕ ಸಮಸ್ಯೆಗಳನ್ನು ಎದುರಿಸಿದ ಆ ಪಯಣದ ಕೊನೆಯಲ್ಲಿ ಪಕ್ಷಿಗಳು ತಮ್ಮ ದೊರೆ ಸೀಮುರ್ಗ್ ನ್ನು ಭೇಟಿಯಾಗುವುದನ್ನೇ ಎರಡೂ ಕೃತಿಗಳೂ ವಿವರಿಸುತ್ತವೆಯಾದರೂ ಆಧ್ಯಾತ್ಮಿಕ ಪಯಣವೆನ್ನುವ ಹೊಳಹನ್ನು ಅತ್ತಾರರ ‘ಮಂತಿಖುತ್ತುಯೂರ್’ ಹೆಚ್ಚು ವಿಶದವಾಗಿ ಪ್ರಸ್ತುತಪಡಿಸುತ್ತದೆ.

ಸಯ್ಯಿದ್ ಹುಸೈನ್ ನಸ್ರ್ ಬರೆಯುತ್ತಾರೆ: “ಹಕ್ಕಿಗಳು ಕೊನೆಗೆ ರಾಜಸನ್ನಿಧಿಯಲ್ಲಿ ಪ್ರವೇಶಿಸಲು ಅರ್ಹತೆ ಗಿಟ್ಟಿಸುವ ಕ್ಲೇಶಗಳು ಎಂಬ ಗಝಾಲಿಯನ್ ಕಥಾವಸ್ತುವನ್ನೇ ಅವರು (ಅತ್ತಾರ್) ಉಪಯೋಗಿಸಿರುತ್ತಾರೆ. ಆದರೆ, ಅವರು ಉನ್ನತವಾದ ಹಂತಗಳ ಮೂಲಕ ಆ ಹಂತವನ್ನೂ ದಾಟಿ ಹೋಗುತ್ತಾರೆ. ಅಲ್ಲಿ ಅಹಂ ಶೂನ್ಯವಾಗಿ ಪರಮ ಅಸ್ತಿತ್ವವು ಎದ್ದೇಳುವ ಮೂಲಕ ಪ್ರತಿಯೊಂದು ಪಕ್ಷಿಗಳೂ ಸ್ವಯಂ ಗುರುತಿಸುವ ಹಂತಕ್ಕೆ ತಲುಪುತ್ತವೆ. ಇದನ್ನೇ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮಾತುಗಳಲ್ಲಿ ಹೇಳುವುದಾದರೆ, “ಸ್ವಂತವನ್ನು ಗುರುತಿಸಿದವನು ಅವನ ಪರಿಪಾಲಕನಾದ ದೇವನನ್ನೂ ಅರಿತನು”. ಸೀಮುರ್ಗ್ ನ್ನು ಹುಡುಕಿ ಹೊರಟ ಪ್ರಯಾಣದಲ್ಲಿ ಪಕ್ಷಿಗಳು ಅವಳ ಉಪಸ್ಥಿತಿಯ ಸೌಂದರ್ಯವನ್ನು ಮಾತ್ರವಲ್ಲ ಗುರುತಿಸಿರುವುದು. ಹೊರತು, ಸರ್ವ ಅಸ್ತಿತ್ವಗಳ ಸರ್ವಸ್ವವಾದ ಪರಮಸತ್ತೆಯಲ್ಲಿ ಸಂಪೂರ್ಣವಾಗಿ ಲೀನವಾಗಿ ಸ್ವಯಂ ಪ್ರತಿಬಿಂಬವನ್ನೇ ಅವರು ಕಂಡುಕೊಂಡರು.

ಜೋಸೆಫ್ ಲಂಬಾಡ್೯

ವಸಾಹತುಶಾಹಿ ಕಾಲದಲ್ಲೂ ಭಾರತದ ಅನಕ್ಷರಸ್ಥರಾದ ಮುಸ್ಲಿಮರ ವ್ಯವಹಾರ ಭಾಷೆಯು ಪರ್ಷಿಯನ್‌ ಆಗಿದ್ದ ಕಾರಣ ಪ್ರೇಮದ ಪರ್ಷಿಯನ್‌ ಪ್ರಭಾವಗಳ ವರ್ಚಸ್ಸನ್ನು ಭಾರತೀಯ ಉಪಖಂಡದಲ್ಲಿ ಆಳದಲ್ಲಿ ದರ್ಶಿಸಬಹುದು.
ಶೈಖ್ ನಿಝಾಮುದ್ದೀನ್ ಔಲಿಯಾ, ನಾಸಿರುದ್ದೀನ್ ಚಿರಾಗಿ ದೆಹಲಿ, ಬುರ್‌ಹಾನುದ್ದೀನ್ ಗರೀಬ್, ರುಕ್ನುದ್ದೀನ್ ಕಾಶಾನಿ, ಗೇಸೂದರಾಝ್ ಎಂಬವರು ಅಹ್ಮದ್ ಅಲ್ ಗಝಾಲಿಯವರೊಡನೆ ಮತ್ತು ಐನುಲ್ ಖುಳಾತ್ ರೊಡನೆ ಋಣಿಯಾಗಿದ್ದಾರೆ. ಗೇಸೂದರಾಝ್ ಅವರು ‘ಸವಾನಿಹ್’ ನ ಅಧ್ಯಾಪನೆ ನಡೆಸಿದ್ದಾಗಿ ಮತ್ತು ಅವರ ಕೃತಿ ‘ಹಾಸಾಇರುಲ್ ಖುದ್‌ಸ್’ ನಲ್ಲಿ ಸವಾನಿಹ್ ಜೊತೆಗಿನ ತುಲನಾತ್ಮಕ ಅಧ್ಯಯನ ನಡೆಸಿದ್ದಾಗಿಯೂ ದಾಖಲಾಗಿದೆ. ವಿದ್ವಾಂಸ, ಅನುಭಾವಿ ಕವಿ ಹಾಗೂ ಸಂಗೀತಜ್ಞರಾಗಿದ್ದ ಅಮೀರ್ ಖುಸ್ರೋರವರು ತಮ್ಮ ಕಾಲದ ಒಂಭತ್ತು ಸಾಹಿತ್ಯ ಶೈಲಿಗಳನ್ನು ಕ್ಯಾಟಲಾಗ್ ಮಾಡಿದಾಗ ಪ್ರಥಮ ಸ್ಥಾನ ನೀಡಿರುವುದು ಸೂಫಿ ಶೈಲಿಗಾಗಿತ್ತು. ಸೂಫಿ ಶೈಲಿಯನ್ನು ಅವರು ಎರಡು ವಿಭಿನ್ನ ರೀತಿಗಳೆಂದು ವಿಭಾಗಿಸಿದ್ದಾರೆ. ಒಂದನೆಯದು, ಬೇರೆಬೇರೆ ಸ್ಥಾನಗಳಲ್ಲಿರುವ ಸೂಫಿಗಳದ್ದು. ಎರಡನೆಯದು, ವಿಭಿನ್ನ ಅವಸ್ಥೆಯಲ್ಲಿರುವವರದ್ದು. ಉದಾಹರಣೆಯಾಗಿ ಅವರು ಮುಂದಿರಿಸುವುದು, ಅಲ್ ಗಝಾಲಿಯವರ ಮತ್ತು ಐನುಲ್ ಖುಳಾತ್ ಹಮದಾನಿ ಯವರ ರಚನೆಗಳನ್ನು. ಇವುಗಳಲ್ಲದೆ, ಮೊಘಲ್ ರಾಜನಾಗಿದ್ದ ದಾರಾಶಿಕೋ ತನ್ನ ಕೃತಿಯಾದ ‘ಹಖ್ ನುಮಾ’ ದ ಹೂರಣವು ‘ಸವಾನಿಹ್’, ಇಬ್ನ್ ಅರಬಿಯವರ ‘ಫುಸೂಸುಲ್ ಹಿಕಂ’, ‘ಫುತೂಹಾತುಲ್ ಮಕ್ಕಿಯ್ಯ’, ಇರಾಖಿಯವರ ‘ಲಮ‌ಆತ್’, ಜಾಮಿಯವರ ‘ಲವಾಮಿಅ್’, ‘ಲವಾಇಹ್’ ಎಂಬೀ ಗ್ರಂಥಗಳಿಂದ ಎಂದು ಪ್ರಸ್ತಾಪಿಸುತ್ತಾರೆ. ಅಂತಹ ರೆಫರೆನ್ಸ್ ಗಳು ಭಾರತೀಯ ಉಪಖಂಡದಲ್ಲಿ ಸವಾನಿಹ್ ನ ಉಪಸ್ಥಿತಿ ಮತ್ತು ಪ್ರಭಾವವನ್ನು ತೆರೆದು ತೋರಿಸುತ್ತದೆ. ಇನ್ನು ‘ಸವಾನಿಹ್’ ಗ್ರಂಥವು ಪರಿಗಣಿತವಾಗಿರುವಾಗಲೇ, ಭಾರತೀಯ ಸೂಫಿಸಂನ ವಿಚಾರಧಾರೆಗಳಲ್ಲಿ ಐನುಲ್ ಖುಳಾತ್ ರ ‘ತಂಹೀದಾತ್’ ಕೃತಿಯು ಹೆಚ್ಚು ಪ್ರಭಾವ ಬೀರಿದ್ದನ್ನೂ ಕಾಣಬಹುದಾಗಿದೆ.

ಮೂಲ : ಜೋಸೆಫ್ ಲಂಬಾಡ್೯
ಅನುವಾದ: ಅಬ್ದುರ್ರಹ್ಮಾನ್ ಮುಈನಿ ಕಕ್ಯಪದವು

ಕೋಮುವಾದಕ್ಕೆ ಸಾತ್ವಿಕ ಧರ್ಮ ಅಸ್ತ್ರವಾಗಲಿ: ಅನಂತಮೂರ್ತಿ


ಡಾ. ಯು. ಆರ್ ಅನಂತಮೂರ್ತಿ ಅವರು 2003 ರಲ್ಲಿ ಮಲಯಾಳಂನ ಪಾಠಭೇದಂ ಎಂಬ ಪತ್ರಿಕೆಗೆ ನೀಡಿದ ಸಂದರ್ಶನ


ಧರ್ಮವನ್ನು ನಾವು ಕೋಮುವಾದವನ್ನು ಸೋಲಿಸಲು ಬಳಸಿಕೊಳ್ಳಬೇಕು. ಯಾಕೆಂದರೆ, ಎಲ್ಲಾ ಧರ್ಮಗಳಲ್ಲೂ ಮನುಷ್ಯನನ್ನು ಪ್ರೀತಿಸುವ ಮಂತ್ರಗಳಿವೆ‌. ದೇವರನ್ನು ಪ್ರೀತಿಸುವ‌ ಮೂಲಕ ಮನುಷ್ಯರಿಗೆ ಪ್ರೀತಿಯ ಪ್ರಾಯೋಗಿಕ ತರಬೇತಿ ಸಿಗುತ್ತದೆ. ಈ ತರಬೇತಿಯನ್ನು ತನ್ನದಲ್ಲದ ಧರ್ಮದ ಅನುಯಾಯಿಯನ್ನು‌ ಪ್ರೀತಿಸಲು ಬಳಸಿಕೊಳ್ಳಲು ಸಾಧ್ಯವಾಗಬೇಕು. ಆದರೆ, ಸೆಕ್ಯೂಲರಿಸಂ ಧರ್ಮದ ಈ ಸಾಧ್ಯತೆಯನ್ನು ಪರಿಗಣಿಸಿದಂತೆ ಕಾಣುವುದಿಲ್ಲ. ಧರ್ಮವನ್ನು ನಿರಾಕರಿಸದೆಯೇ ಸ್ನೇಹವನ್ನು ಹಂಚುವ ಸಾಧ್ಯತೆಯನ್ನು ಜಾತ್ಯತೀತತೆಯು‌ ನಿರಾಕರಿಸುತ್ತದೆ.
ವಿವಿಧ ಧರ್ಮಗಳ‌ ಆಚಾರ ವಿಚಾರಗಳ ಕೊಡುಕೊಳೆಯ ಮೂಲಕ ಆರೋಗ್ಯಕರವಾದ ಧರ್ಮ ಚಿಂತನೆ ಹಾಗೂ ವಿಶ್ವ ಚಿಂತನೆ ನಡೆದಿರುವುದನ್ನು ಎಲ್ಲಾ ಪ್ರದೇಶಗಳಲ್ಲೂ ಕಾಣಬಹುದು. ಕರ್ನಾಟಕದಲ್ಲಿ‌ ಶಿಶುನಾಳ ಷರೀಫ ಎಂಬ ಒಬ್ಬ ಸಂತ ಕವಿಯಿದ್ದಾರೆ. ಷರೀಫ್ ಗೋವಿಂಧ ಭಟ್ಟ ಎಂಬ ಹಿಂದೂ ಗುರುವಿನ ಶಿಷ್ಯರಾಗಿದ್ದರು. ಕನ್ನಡ ಸಾಹಿತ್ಯದಲ್ಲಿ ಧರ್ಮ ಸಮನ್ವಯತೆಯ ಧಾರೆ ಹರಿಯಲು ಷರೀಫರ ಕವಿತೆಗಳು ಬಹಳ ದೊಡ್ಡ ಪಾತ್ರ ವಹಿಸಿದೆ. ಹಾಗೆಯೇ, ಬಿಜಾಪುರ/ ಬೀದರ್ ಗಳಲ್ಲಿ ಹಿಂದೂ ಮುಸ್ಲಿಮರ ನಡುವಿನ ಸಾಮರಸ್ಯ ಪ್ರಜ್ಞೆ ಹತ್ತೊಂಬತ್ತನೇ ಶತಮಾನದ ಕನ್ನಡ ಕವಿತೆಗಳ ನವೋದಯಕ್ಕೆ ಸಹಾಯಕವಾಯಿತು. ಅಲ್ಲಿ ಇಸ್ಲಾಮ್ ಹಾಗೂ ಶೈವ ಚಿಂತನಾ ಧಾರೆಗಳ ಸಂಕರದಿಂದ ಖಾದರ್ ಲಿಂಗ ಎಂಬ ಹೊಸ ಧಾರ್ಮಿಕ ಪಂಥವೇ ಹುಟ್ಟಿಕೊಂಡಿತು. ಹಿಂದೂ ಮುಸ್ಲಿಮ್ ಇಬ್ಬರಿಗೂ ಈ ಎರಡು ಧರ್ಮಗಳ ಸಂಕರ ಸ್ಥಿತಿಯನ್ನು ಒಳಗೊಳ್ಳಲು ಸಾಧ್ಯವಾಗಿತ್ತೆಂಬುದು ಬಹಳ ವಿಶೇಷವಾದ ಸಂಗತಿ.

ಆದರೆ, ಇನ್ನೊಂದು ದೇವರು ಎಂಬ ಚಿಂತನೆಯನ್ನು ಇಸ್ಲಾಮ್, ಕ್ರೈಸ್ತ ಹಾಗೂ ಯಹೂದಿಯರ ಸೆಮೆಟಿಕ್ ಧರ್ಮಗಳಿಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಧರ್ಮಗಳು ಏಕದೇವಾ ಸಿದ್ಧಾಂತವನ್ನು ನಂಬಿಕೊಂಡಂತಹವುಗಳು. ವೈಷ್ಣವರ ದೇವರು ಸಾಕಾರ, ಸಗುಣನಾದರೆ, ಇಸ್ಲಾಮ್, ಕ್ರೈಸ್ತರ ದೇವರು ನಿರಾಕಾರ ಹಾಗೂ ಸಗುಣ. ಭಾರತೀಯ ತತ್ವಶಾಸ್ತ್ರದಲ್ಲಿ‌ ನಿರಾಕಾರವೂ ನಿರ್ಗುಣವೂ ಆದ ದೇವರಿಗೆ ಸ್ಥಾನವಿದೆ. ಅದ್ವೈತ ಬಹುಮಟ್ಟಿಗೆ ಇದನ್ನೇ ಹೇಳುತ್ತದೆ. ಅಬುಲ್ ಕಲಾಂ ಆಝಾದರ ದೇವರ ಮೇಲಿನ ಚಿಂತನೆಯು ಅದ್ವೈತ ಕ್ಕೆ ಸಮೀಪದಲ್ಲಿದೆ. ಭಾರತೀಯ ಮನಸ್ಥಿತಿಯ ಜೊತೆಗೆ ಅರಬ್ ಮನಸ್ಥಿತಿಯನ್ನು ಜೋಡಿಸುವ ಕೆಲಸವನ್ನು ಆಝಾದ್ ಮಾಡಲು ಪ್ರಯತ್ನಿಸಿದರು. ಈ ಎರಡು ಸಾಮಾಜಿಕ‌ ವ್ಯವಸ್ಥೆಯಲ್ಲೂ ದೈವಿಕ ಪ್ರೇಮವೆಂಬುದು‌ ಬಹಳ‌ ಮುಖ್ಯ.
ಧರ್ಮದಿಂದ ಮಾತ್ರ ಮತೀಯತೆಯನ್ನು ಎದುರಿಸಬಹುದು ಎನ್ನಲು ಕಾರಣ ಅದರ ಸ್ನೇಹದ ಶಕ್ತಿ(potential)ಯ ಬಗೆಗಿನ ಅರಿವು. ಒಬ್ಬರ ದೈವಿಕ ಪ್ರೇಮ ಪ್ರಕಟಗೊಳ್ಳುವುದು ಇತರರ ಹಕ್ಕುಗಳನ್ನು ನಿರಾಕರಿಸುವ ಮೂಲಕವೇ? ಎಂಬ ಪ್ರಶ್ನೆ ಏಳಬಹುದು. ನನ್ನ ದೇವರು ನನ್ನ ಶತ್ರುಗಳ ರಕ್ತದಿಂದ‌ಲೇ ಸಂತೃಪ್ತನಾಗುವವನೇ? ಸೀರಿಯಲ್ ಕಿಲ್ಲರ್ ರಾಮನ್‌ ರಾಘವನ್ ದೇವರ ಹೆಸರಿನಲ್ಲಿ ಸರಣಿ‌ ಕೊಲೆಗಳನ್ನು‌ ನಡೆಸಿದನು. ಇಲ್ಲಿ ದೈವ ತೃಪ್ತಿ‌ ಅನ್ನೋದು‌ ವಿಕೃತವಾದ ಪರಿವೇಷವನ್ನು ಪಡೆದುಕೊಂಡಿದೆ. ಶಾಂತಿ ಸೌಹಾರ್ಧತೆಗೆ ಅವಕಾಶ ನೀಡದ ದೇವರ ಪ್ರೀತಿಯು ಮನುಷ್ಯರ ನಡುವಿನ ಸ್ನೇಹವನ್ನು‌ ನಿರಾಕರಿಸುತ್ತದೆ. ಆದ್ದರಿಂದ ಧರ್ಮ ಯುದ್ಧಗಳು‌ ಧರ್ಮದ‌ ರಾಜಕೀಯವನ್ನು ಬಹಳ ಬೇಗನೇ ಬಯಲು ಮಾಡಿಬಿಡುತ್ತದೆ. ಮುಹಮ್ಮದ್ ಪೈಗಂಬರರು ಜಿಹಾದ್‌ ಎಂಬ ಪರಿಕಲ್ಪನೆಯನ್ನು ಅನೇಕ‌ ಸತ್ವಶಾಲಿ ನಿಯಮಗಳ ಜೊತೆಗೆ ರೂಪಿಸಿಕೊಟ್ಟಿದ್ದಾರೆ. ಅದು‌ ವಿವಿಧ ಧರ್ಮಗಳ ನಡುವಿನ ಶಾಂತಿ‌ ಸೌಹಾರ್ಧತೆಗೆ ಸಂಬಂಧಿಸಿದಂತೆ ಈಗಲೂ ಪ್ರಸ್ತುತವಾದ ರಾಜಕೀಯ ಸಿದ್ಧಾಂತ. ಆದರೆ, ನಂತರದ ಕಾಲಘಟ್ಟದಲ್ಲಿ‌ ಬಂದ ಮುಸ್ಲಿಮ್ ರಾಜರುಗಳಿಗೆ ಪೈಗಂಬರರ ಒಳನೋಟ ಇರಲಿಲ್ಲ. ಇದು ತಾತ್ವಿಕತೆ ಮತ್ತು ಪ್ರಾಯೋಗಿಕತೆಯ ನಡುವಿನ‌ ವೈರುಧ್ಯ. ಆದ್ದರಿಂದ ಮುಸ್ಲಿಮರ ಪ್ರಮಾದಗಳನ್ನು ಪವಿತ್ರ ಕುರ್ ಆನಿನ ಮೂಲಕ ವಿಮರ್ಶೆಗೆ ಒಳಪಡಿಸಬಹುದು. ಬೈಬಲ್ ಮೂಲಕ ಕ್ರೈಸ್ತರನ್ನೂ, ಭಗವದ್ಗೀತೆ ಯ ಮೂಲಕ ಹಿಂದೂಗಳನ್ನೂ ವಿಮರ್ಶಿಸಬಹುದು. ಧರ್ಮಗ್ರಂಥಗಳು ಆಧ್ಯಾತ್ಮಿಕ ಉಪಾಸನೆಯ ಮಾರ್ಗವಷ್ಟೇ. ಅರವಿಂದ, ಜಿ.ಕೃಷ್ಣ, ಪರಮಹಂಸ, ರಮಣ ಮಹರ್ಷಿ ಮೊದಲಾದ ಗುರುಗಳು ಈ ಮಾರ್ಗದಲ್ಲಿ ಸಂಚರಿಸಿ ಆಧ್ಯಾತ್ಮಿಕ ಸಾಧನೆ ಮಾಡಿದವರು.

ಧರ್ಮದ ಆಧ್ಯಾತ್ಮಿಕ ಶೋಧನೆಯು ರಾಜಕೀಯ ಶೋಧನೆಯಾದಾಗ ಅದು ಶಿಥಿಲಗೊಳ್ಳುತ್ತದೆ. ತೊಗಾಡಿಯಗಳು ಸೃಷ್ಟಿಯಾಗೋದು ಹೀಗೆ. ಬಕೀಂ ಚಂದ್ರ ಚಟರ್ಜಿ ಕೃಷ್ಣನ ದ್ವಿ ವ್ಯಕ್ತಿತ್ವದ ಕುರಿತು ಮಾತನಾಡುತ್ತಾರೆ. ಒಂದು ಪ್ರೇಮದ ಉಪಾಸನೆಯಲ್ಲಿ ನಿರತನಾಗಿರುವ ಕೃಷ್ಣ, ಇನ್ನೊಂದು ಅಪ್ಪಟ ರಾಜಕಾರಣಿ ಕೃಷ್ಣ. ಎರಡನೇ ಕೃಷ್ಣ ಯುದ್ಧವನ್ನು ಗೆಲ್ಲಲು ಸರ್ವ ತಂತ್ರಗಳನ್ನು ಮಾಡುತ್ತಾನೆ. ಅಧರ್ಮ ಅವನಿಗೆ ತಪ್ಪೆನಿಸುವುದಿಲ್ಲ. ಕ್ಷತ್ರಿಯನ ಪರಮ ಧರ್ಮ ಯುದ್ಧವೆಂಬ ಮೌಲ್ಯದ ಹಿಂದೆ ಅಡಗಿ ಆತ ಇದೆಲ್ಲವನ್ನು ಮಾಡುತ್ತಾನೆ. ಆ ಮೂಲಕ ಕೃಷ್ಣ ತನ್ನ ದೈವಿಕ ಪ್ರತೀಕವನ್ನು ಕಳೆದುಕೊಂಡು ರಾಜಕಾರಣಿ ಕೃಷ್ಣನಾಗುತ್ತಾನೆ. ಬಾಲಗಂಗಾಧರ್ ತಿಲಕ್, ಮದನ್ ಮೋಹನ್ ಮೊದಲಾದವರು ಕೃಷ್ಣನಿಂದ ಈ ರಾಜಕೀಯ ಮೌಲ್ಯವನ್ನು ಕಲಿತವರು. ತೊಗಾಡಿಯ ಈ ರಾಜಕೀಯ ಮೌಲ್ಯದ ಅತ್ಯಂತ ಶಿಥಿಲಾವಸ್ಥೆ.
ಬಹುಶಃ ಮಹಾತ್ಮ ಗಾಂಧೀಜಿಯವರು ಈ ರಾಜಕೀಯದ ಅಪಾಯವನ್ನು ಅರಿತರೆಂದು ತೋರುತ್ತದೆ. ಆದ್ದರಿಂದ ತಿಲಕರ ಪ್ರಭಾವಕ್ಕೆ ಒಳಗಾಗುವುದನ್ನು ಗಾಂಧಿ ತಪ್ಪಿಸಿಕೊಂಡರು. ಅದರ ಜೊತೆಗೆ ಏಗುವ ಶಕ್ತಿ ತನಗಿಲ್ಲ ಎಂದು ಗಾಂಧೀಜಿಯವರು ನಂಬಿಕೊಂಡಿದ್ದರು. ಅವರು ಉದ್ದೇಶಪೂರ್ವಕವಾಗಿಯೇ ತಿಲಕರ ಅಂತರ ಕಾಯ್ದುಕೊಂಡಿದ್ದರು. ಮಾತ್ರವಲ್ಲದೆ, ಕೃಷ್ಣನನ್ನು ಒಳಗೊಳ್ಳಲು ಅವರು ಅವನ ಇನ್ನಿತರ ಸಾಧ್ಯತೆಗಳನ್ನು ಹುಡುಕಿಕೊಂಡರು. ಹಿಂದೂ ಧರ್ಮದ ವಿಶೇಷತೆ ಇದು. ಅಲ್ಲಿ ಒಂದಲ್ಲದಿದ್ದರೆ ಇನ್ನೊಂದು ದಾರಿ(option) ಯಿರುತ್ತದೆ. ಗಾಂಧಿ ಇದನ್ನು ತೋರಿಸಿಕೊಟ್ಟರು.


ಜಾಗತಿಕ ಸಂದರ್ಭದಲ್ಲಿ ಮುಸ್ಲಿಮರು ಅಮೆರಿಕದ ಸಾಮ್ರಾಜ್ಯಶಾಹಿತ್ವದ ವಿರುದ್ಧ ಹೋರಾಡುತ್ತಿದ್ದಾರೆ. ಈ ಹೋರಾಟಕ್ಕೆ ಧಾರ್ಮಿಕ ಆಯಾಮವೂ ಇದೆ. ಆದ್ದರಿಂದಲೇ ಅದು ಧರ್ಮ ಯುದ್ಧಗಳಾಗಿ‌ ಬಿಂಬಿಸಲ್ಪಡುತ್ತಿದೆ. ಒಂದು ಹಂತದವರೆಗೆ ಮುಸ್ಲಿಮರ ಈ ಹೋರಾಟ ನ್ಯಾಯಯುತವಾದುದೇ. ಮುಸ್ಲಿಮ್ ಉಮ್ಮತ್ ಎಂಬ ಸಾಮುದಾಯಿಕ ಪ್ರಜ್ಞೆಯು ಅವರಲ್ಲಿ ಒಗ್ಗಟ್ಟು ಮೂಡಿಸುತ್ತಿದೆ ಎನ್ನಬಹುದು. ಆದರೆ, ಭಾರತದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರು. ಆದ್ದರಿಂದ ಮುಸ್ಲಿಮ್ ಕೋಮುವಾದವನ್ನು ಹಿಂದೂ ಕೋಮುವಾದದಂತೆಯೇ ಅಪಾಯಕಾರಿ ಎಂಬ ರೀತಿಯಲ್ಲಿ ನೋಡಬೇಕಿಲ್ಲ. ಬಹುಸಂಖ್ಯಾತ ವರ್ಗಗಳು ಅವರೊಂದಿಗೆ ಸಹೃದಯತೆಯಿಂದ ವರ್ತಿಸಬೇಕು. ಮೀಸಲಾತಿ ಮೊದಲಾದ ಅವಕಾಶಗಳನ್ನು ಅವರಿಗೆ ನೀಡಿ, ಅವರನ್ನು ಮುಖ್ಯವಾಹಿನಿಗೆ ಕರೆ ತರಬೇಕು. ದೌರ್ಭಾಗ್ಯವಶಾತ್, ಹಲವು ಹಿಂದೂಗಳಿಗೆ ಈ ಯೋಚನೆಯಿಲ್ಲ. ನನ್ನ ಮಿತ್ರನೊಬ್ಬ ಹೇಳುತ್ತಿದ್ದ; ಬಾಬರೀ ಮಸೀದಿ ಧ್ವಂಸದ ಬಳಿಕ ಮುಸ್ಲಿಮರು ಶರಣಾಗತ ಮನಸ್ಥಿತಿಯಲ್ಲಿದ್ದಾರೆ. ಹಿಂದೂಗಳ ನಿರ್ದೇಶನಗಳನ್ನು ಪಾಲಿಸಿ ಜೀವನ ನಡೆಸಲು ಅವರು ಸಿದ್ಧರಿದ್ದಾರೆ. ಆದರೆ, ನೀವು ಜಾತ್ಯತೀತರು ಅವರಿಗೆ ಅತಿಯಾದ ಸಲುಗೆ ನೀಡಿ ಬೆಳೆಸುತ್ತಿದ್ದೀರಿ. ಆದರೆ, ನನ್ನ ಉತ್ತರ, ಹಿಂದುಗಳು ಮುಸ್ಲಿಮರಿಗೆ ಮುಖ್ಯವಾಹಿನಿಯಲ್ಲಿ ಹೆಚ್ಚಿನ ಸ್ಥಳಾವಕಾಶ ನೀಡಬೇಕು. ಮುಸ್ಲಿಮರು ಕೂಡ ಈ ಮನಸ್ಥಿತಿಯನ್ನು ಒಳಗೊಳ್ಳಬೇಕು. ಹಿಂದೂ ಕೋಮುವಾದಿಗಳು ತಮ್ಮ ವಿರುದ್ಧ ಧ್ವನಿಯೆತ್ತಲಾಗದ ರೀತಿಯಲ್ಲಿ ದೇಶಪ್ರೇಮವನ್ನು ಪ್ರಕಟಿಸಬೇಕು.


ದೇಶಪ್ರೇಮ ಮತ್ತು ರಾಷ್ಟ್ರೀಯತೆ ಎರಡು ಒಂದೇ ಅಲ್ಲ. ಅವೆರಡು ಬೇರೆ ಬೇರೆ. ದೌರ್ಭಾಗ್ಯವಶಾತ್, ಮುಸ್ಲಿಮರು ಕೇವಲ ದೇಶ ಪ್ರೇಮಿಗಳಾದರೆ ಸಾಲದು, ಅವರು ಹಿಂದೂ ರಾಷ್ಟ್ರೀಯತೆಯ ಭಾಗವಾಗಬೇಕು ಎಂದು ಹಿಂದುತ್ವವಾದಿಗಳು ಒತ್ತಾಯಿಸುತ್ತಿದ್ದಾರೆ. ಇನ್ನೊಂದು ಕಡೆ, ಸೆಕ್ಯೂಲಿಸ್ಟರು ಧರ್ಮದ ವಿವಿಧ ಸಾಧ್ಯತೆಗಳನ್ನು ಕಂಡುಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ರಾಜಕೀಯ ಹಿಂದುತ್ವ ಹಾಗೂ ರಾಜಕೀಯ ಇಸ್ಲಾಮ್ ಕೂಡ ಧರ್ಮದ ಈ ಸಾಧ್ಯತೆಗಳನ್ನು ನಿರಾಕರಿಸುತ್ತವೆ. ಪಾಶ್ಚಾತ್ಯ ಪರಿಕಲ್ಪನೆಯ ಜಾತ್ಯತೀತೆಯೂ ಸಹ ಇದನ್ನೇ ಮಾಡುತ್ತಿದೆ. ಧಾರ್ಮಿಕ ಸೌಹಾರ್ಧತೆ ಸ್ಥಾಪಿಸುವ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಹಿಂದೂ ಧರ್ಮದ ವಿವಿಧ ಸಾಧ್ಯತೆಗಳನ್ನು ಅನ್ವೇಷಿಸಿದರು.
ಗಾಂಧಿ ಒಂದು ನಿಯಮವಲ್ಲ; ಅಪವಾದ. ಪ್ರತಿಯೊಬ್ಬ ಹಿಂದುವು ಕೂಡ ಈ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹಿಂದೂ ಕೋಮುವಾದಿಗಳಿಗೆ ಆಧುನಿಕತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಅವರು ಆಧುನಿಕತೆಯ ಆಯುಧಗಳೊಂದಿಗೆ ಮುಸ್ಲಿಮ್ ಮೂಲಭೂತವಾದಿಗಳನ್ನು ಎದುರಿಸುತ್ತಿದ್ದಾರೆ. ಕ್ರೈಸ್ತ ಪ್ಯಾಸಿಷ್ಟರೂ ಕೂಡ ಇದನ್ನೇ ಮಾಡುತ್ತಿದ್ದಾರೆ. ಹಣ, ತಂತ್ರಜ್ಞಾನ ಎಲ್ಲವನ್ನೂ ಈ ಇಬ್ಬರೂ ಸಾದ್ಯಂತ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಬಡಪಾಯಿ ಮುಸ್ಲಿಮರ ಬಳಿ ಏನೂ ಇಲ್ಲ. ಮಧ್ಯಕಾಲದ ಮೌಲ್ಯಗಳು ಬಿಟ್ಟರೆ ಅವರ ಜೊತೆಗೆ‌‌ ಇನ್ನೇನೂ ಇಲ್ಲ. ಈ ಆಯುಧಗಳೊಂದಿಗೆ ಹೋರಾಡುತ್ತಿರುವ ಮುಸ್ಲಿಮ್ ಮೂಲಭೂತವಾದದ ದಯನೀಯ ಸ್ಥಿತಿಯನ್ನು ಇಂದು ನಾವು ಕಾಣುತ್ತಿದ್ದೇವೆ. ಈ ಮೂಲಭೂತವಾದವನ್ನು ಎದುರಿಸಲು ಹಿಂದೂ ಹೆಚ್ಚು ಆಧುನಿಕವೂ, ಪಾಶ್ಚಾತ್ಯವೂ ಆಗುತ್ತಿದ್ದಾನೆ.
ವಾಸ್ತವದಲ್ಲಿ ಜಾತ್ಯತೀತರು ಧರ್ಮದ ಶಕ್ತಿ ಮತ್ತು ಸಾಧ್ಯತೆಗಳನ್ನು ಅರಿಯುತ್ತಿಲ್ಲ. ಕರ್ನಾಟಕದಲ್ಲಿ ಕೋಮುಗಲಭೆಯಲ್ಲಿ‌ ಹಿಂದೂ‌ ಕೊಲೆಯಾದರೆ ಮುಂದಿನ ಚುನಾವಣೆಯಲ್ಲಿ‌ ಬಿಜೆಪಿಗೆ ಲಾಭವಾಗುತ್ತದೆ. ಮುಸ್ಲಿಮ್‌ ಕೊಲೆಯಾದರೆ ಕಾಂಗ್ರೆಸ್ ಗೆ ಲಾಭವಾಗುತ್ತದೆ. ಆದ್ದರಿಂದ ಹಿಂದೂಗಳ ಪಾರ್ಟಿಯಾದ ಬಿಜೆಪಿಗೆ ಬೇಕಿರುವುದು‌ ಹಿಂದೂಗಳ ಕೊಲೆ. ಜಾತ್ಯತೀತ ಪಕ್ಷಗಳಿಗೆ ಅಲ್ಪಸಂಖ್ಯಾತರ ಕೊಲೆ ಬೇಕಾಗಿದೆ. ಆ ಮೂಲಕ ತಮ್ಮದೇ ಆದ ವೋಟ್ ಬ್ಯಾಂಕ್ ಅನ್ನು ಅವರು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಇದನ್ನು ನಿಲ್ಲಿಸಬೇಕಾದರೆ ಧರ್ಮದ ತಾತ್ವಿಕತೆಯನ್ನು ಬಳಸಿಕೊಂಡು, ಕೋಮುವಾದವನ್ನು‌ ಎದುರಿಸಬೇಕು. ಮುಸ್ಲಿಮರ ನಿರಾಕರಣೆಗೆ ಒಳಗಾದ‌ ಜಾತ್ಯತೀತ‌ ಮುಸ್ಲಿಮ್ ಮುಖಂಡನಿಗೆ ಮುಸ್ಲಿಮರ ನಡುವೆ ಸೌಹಾರ್ಧತೆಯ ಸಂದೇಶವನ್ನು‌ ಬಿತ್ತಲು ಸಾಧ್ಯವಾಗುವುದಿಲ್ಲ. ಕರ್ನಾಟಕದಲ್ಲಿ ಇಬ್ಬರು ಜಾತ್ಯತೀತ ಮುಸ್ಲಿಮ್ ಮುಖಂಡರಿದ್ದರು. ಒಬ್ಬರು ಅಝೀಝ್ ಸೇಠ್, ಇನ್ನೊಬ್ಬರು ಅಬ್ದುಲ್ ನಝೀರ್ ಸಾಬ್. ಎರಡನೇಯವರು ಧರ್ಮದ‌ ಆಚಾರ‌ ವಿಚಾರಗಳಿಂದ ಅಂತರ ಕಾಯ್ದುಕೊಂಡಿದ್ದರು. ಪರಿಣಾಮ ಪ್ರಾಮಾಣಿಕ‌ ಜನ ಸೇವಕರಾದ‌ ನಝೀರ್ ಸಾಬ್ ರನ್ನು ಮುಸ್ಲಿಮರು‌ ಒಪ್ಪಿಕೊಳ್ಳಲಿಲ್ಲ. ಪಾಕಿಸ್ತಾನದ ಪರವಾಗಿದ್ದರೆಂಬ ಆರೋಪ ಹೊತ್ತು ಜೈಲಿಗೆ ಹೋಗಿ‌ ಬಂದಿದ್ದ ಅಝೀಝ್ ಸೇಠ್ ಮುಸ್ಲಿಮರ ಸಹಾನುಭೂತಿಗೆ ಪಾತ್ರರಾದರು. ಮುಸ್ಲಿಮರನ್ನು ಮುಖ್ಯವಾಹಿನಿಯ ಸಮೀಪಕ್ಕೆ ಕರೆ ತರಲು‌ ಇದು ಸಹಾಯಕವಾಯಿತು.
ಆದರೆ, ದೌರ್ಭಾಗ್ಯವಶಾತ್ ಮಾಧ್ಯಮಗಳು ಇದನ್ನೆಲ್ಲಾ ಗಮನಿಸುವುದಿಲ್ಲ. ಸಮಾಜದ ಶಾಂತಿ, ಒಳಿತುಗಳು ವರದಿಯಾಗುವುದಿಲ್ಲ. ಧರ್ಮದ ಪಾಸಿಟಿವ್ ಗುಣವನ್ನು ಬುದ್ಧಿಜೀವಿಗಳು ಹಾಗೂ ಮಾಧ್ಯಮ ಕಾಣುವುದಿಲ್ಲ ಎಂಬುದು ದುಃಖದ ಸಂಗತಿ. ಈ ವಿಚಾರಗಳನ್ನು ಅರಿತು ಹಿಂದೂ ಹಾಗೂ ಮುಸ್ಲಿಮರು ಪರಸ್ಪರ ಸಂವಾದಿಸಬೇಕು.‌ ಹಿಂದೂ ಮುಸ್ಲಿಮರು ಪರಸ್ಪರ ವೈಚಾರಿಕ ಸಂಘರ್ಷವಿಟ್ಟುಕೊಂಡೇ ಸ್ನೇಹಭಾವಗಳನ್ನು ಪ್ರಕಟಿಸಲು ಸಾಧ್ಯವಾಗಬೇಕು. ಈ ರೀತಿಯ ಒಗ್ಗಟ್ಟಿನ ಮೂಲಕ ಕೋಮುವಾದದ ವಿರುದ್ಧ ಹೋರಾಟ ಮಾಡಬೇಕೆಂಬುದು ನನ್ನ ಕನಸು.


ಸಂದರ್ಶನ ನಡೆಸಿದವರು: ಎಂ. ಗಂಗಾಧರನ್, ಸೆಬಾಸ್ಟಿಯನ್ ವಟ್ಟಮಟ್ಟಂ, ಕೆ.ಎಂ ನರೇಂದ್ರನ್, ಎಪಿ ಕುಂಞಾಮು. ಸ್ವಾಲಿಹ್ ತೋಡಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ.


ಎಂ. ಗಂಗಾಧರನ್

ಕೇರಳದ ಪ್ರಮುಖ ಇತಿಹಾಸ ತಜ್ಞರೂ ಸಾಂಸ್ಕೃತಿಕ ವಿಮರ್ಶಕರೂ ಗ್ರಂಥಕರ್ತರೂ ಆಗಿದ್ದಾರೆ. ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಮಲಬಾರ್ ದಂಗೆಯ ಬಗ್ಗೆ ಗಮನಾರ್ಹವಾದ ಅಧ್ಯಯನಗಳನ್ನು ನಡೆಸಿದ್ದಾರೆ.


ಸೆಬಾಸ್ಟಿಯನ್ ವಟ್ಟಮಟ್ಟಂ

ಕ್ಯಾಲಿಕಟ್ ವಿವಿಯ ಚಂಙನಾಶ್ಶೇರಿಯ ಎಸ್.ಬಿ ಕಾಲೇಜಿನಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸೆಬಾಸ್ಟಿಯನ್ ಅವರು
ವಿಮೋಚನಾ ದೇವತಾಶಾಸ್ತ್ರದ ಚಿಂತಕರೂ ಕವಿಯೂ ಆಗಿದ್ದಾರೆ. ಸಾಂಸ್ಕೃತಿಕ ಚರಿತ್ರೆ, ಭಾಷಾಶಾಸ್ತ್ರ, ಗಣಿತಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಲ್ಲಿ ಹಲವಾರು ಪುಸ್ತಕಗಳನ್ನು ರಚಿಸಿ, ಸಂಪಾದಿಸಿದ್ದಾರೆ. ಎಟ್ಟುಮಾನೂರು ಕಾವ್ಯ ವೇದಿಯ ಸಂಚಾಲಕರೂ, ಋತಂ ಮಾಸಿಕದ ಸಂಪಾದಕರೂ ಆಗಿದ್ದಾರೆ.


ಕೆ.ಎಂ. ನರೇಂದ್ರನ್

ಕೆ.ಎಂ. ನರೇಂದ್ರನ್ ನಿರೂಪಕರಾಗಿಯೂ ಕ್ರೀಡಾ ಬರಹಗಾರರಾಗಿಯೂ ಕೇರಳದಲ್ಲಿ ಪ್ರಸಿದ್ಧರು. ಆಲ್ ಇಂಡಿಯಾ ರೇಡಿಯೋದ ಪ್ರಸಾರ ಭಾರತಿಯ ಮುಖ್ಯಸ್ಥ ರು. ಸಾಹಿತ್ಯ ನಿರೂಪಣೆ, ಮಾಧ್ಯಮ ವಿಮರ್ಶೆ, ಸ್ಪೋರ್ಟ್ಸ್ ಜರ್ನಲಿಸಂ ಮೊದಲಾದ ಕ್ಷೇತ್ರಗಳಲ್ಲಿ ಖ್ಯಾತರು. ಹಲವು ಪುಸ್ತಕಗಳನ್ನು ರಚಿಸಿದ್ದಾರೆ.


ಎಪಿ ಕುಂಞಾಮು


ಬರಹಗಾರರು ಮತ್ತು ಅನುವಾದಕರು. ಕೆನರಾ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಭಗವಾನ್ ಗಿದ್ವಾನಿಯವರ The sword of Tippu Sulthan, ಕರೆನ್ ಆರ್ಮ್ ಸ್ಟ್ರಾಂಗ್ ಅವರ Muhammad: biography of prophet, ಅಸ್ಗರ್ ಅಲಿ ಇಂಜಿನಿಯರ್ ಅವರ Islam in contemporary world ಕೃತಿಗಳ ಮಲಯಾಳಂ ಅನುವಾದವು ಇವರ ಪ್ರಮುಖ ಕೊಡುಗೆ. ಮೂಲತಃ ಕೋಯಿಕ್ಕೋಡ್ ಜಿಲ್ಲೆಯವರು.

ಮನಮೋಹಕ ಶಾರ್ಜಾ ಪುಸ್ತಕ ಮೇಳ

ಒಬ್ಬ ಸಾಮಾನ್ಯವ್ಯಕ್ತಿ ಒಂದು ದೇಶದ ಸಾಂಸ್ಕೃತಿಕ ರಾಯಭಾರಿಯಾದ ಕಥೆಯಾಗಿದೆ ಇದು. ಸರಾಸರಿ ವ್ಯಕ್ತಿಯಾಗಿದ್ದುಕೊಂಡು ದೊಡ್ಡ ಕೆಲಸಗಳನ್ನು ಹೇಗೆ ಮಾಡಬೇಕು ಎಂಬುವುದಕ್ಕೆ ಅಸಲಿ ಪುರಾವೆ ಇವರ ಜೀವನ. ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸಂಘಟಕ ಮೋಹನ್ ಕುಮಾರರೊಂದಿಗೆ Thasrak.com ನ ಬರಹಗಾರರಾದ ರಾಜೇಶ್ ಚಿತ್ತಿರ ಮತ್ತು ಜೋಸ್ಲೆಟ್ ಜೋಸೆಫ್ ನಡೆಸಿದ ಸಂದರ್ಶನ.

ಮೂರೂವರೆ ದಶಕದ ಶಾರ್ಜಾ ಪುಸ್ತಕ ಮೇಳದ ಇತಿಹಾಸದೊಂದಿಗೆ ನೀವಿದ್ದೀರಿ. ಈಗ ಅದರ ಯಶಸ್ಸು ಎಲ್ಲಿಯವರೆಗೆ ತಲುಪಿ ನಿಂತಿದೆ?

ವಿಶ್ವದ ಅತಿದೊಡ್ಡ ಮೇಳವನ್ನಾಗಿಸುವುದಾಗಿದೆ ನಮ್ಮ ಗುರಿ. ಬಹುತೇಕ ನಾವು ಅದರ ಅಂಚಿನಲ್ಲಿದ್ದೇವೆ. ಫ್ರಾಂಕ್ ಫುರ್ಟ್ ಮೇಳ ಒಂದನೇ ಸ್ಥಾನದಲ್ಲಿದ್ದರೆ
ನಮ್ಮ ಪುಸ್ತಕ ಮೇಳ ಎರಡನೇ ಸ್ಥಾನದಲ್ಲಿದೆ.
ಆದರೆ ಫ್ರಾಂಕ್ ಫುರ್ಟ್ ಮೇಳವು ಪುಸ್ತಕ ವ್ಯಾಪಾರ ಮೇಳವಾಗಿದೆ. ಸಾರ್ವಜನಿಕ ಓದುಗರಿಗಾಗಿ ನಡೆಸುವ ಮೇಳದಲ್ಲಿ ನಾವೂ ಮುಂಚೂಣಿಯಲ್ಲಿದ್ದೇವೆ ಹಾಗೂ ಹತ್ತು ದಿನಗಳಲ್ಲಿ ಬರೋಬ್ಬರಿ ಎರಡು ಮಿಲಿಯನ್ ಸಾರ್ವಜನಿಕರು ಭೇಟಿ ನೀಡಿದ್ದಾರೆ. ಇಲ್ಲಿ ನಮಗೆ ಪುಸ್ತಕ ವಿತರಣೆ ಮಾಡುವವರಿಗಿಂತ ಪುಸ್ತಕ ಪ್ರಕಾಶಕರು ನೇರವಾಗಿ ಬರುವಂತೆ ಮಾಡಬೇಕಾಗಿದೆ. Oxford ಸೇರಿದಂತೆ ಹಲವಾರು ಪ್ರಕಾಶಕರು ತಮ್ಮ ಪುಸ್ತಕಗಳು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುವ ಫ್ರಾಂಕ್ ಫುರ್ಟ್ ನಂತಹ ಸ್ಥಳಗಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ. ನಾವು ಆ ಭಾವನೆಗಳನ್ನು ಬದಲಾಯಿಸುತ್ತಿದ್ದೇವೆ.

ಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯಗಳಿಗಾಗಿ ಲೋಕದಾದ್ಯಂತ ಯಾತ್ರೆ ಕೈಗೊಳ್ಳುವ ನಿಮಗೆ, ಪುಸ್ತಕಗಳ ಭವಿಷ್ಯದ ಬಗ್ಗೆ ಇರುವ ಅಭಿಪ್ರಾಯವೇನು?

ಪುಸ್ತಕಗಳು ಓದುವ ಹವ್ಯಾಸ ಕುಂಟುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಅದನ್ನು ನಿವಾರಿಸಲಿರುವ ಏಕೈಕ ಮಾರ್ಗ ಜನರನ್ನು ಓದುವಿಕೆಗೆ ಮರುಳಿಸುವುದಾಗಿದೆ. ಶಾರ್ಜಾ ಸುಲ್ತಾನರ ನೇತೃತ್ವದಲ್ಲಿ ಪ್ರಪಂಚದಾದ್ಯಂತ ಓದುವ ಸಂಸ್ಕೃತಿಯನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇವೆ.
ಶಾರ್ಜಾ ಪುಸ್ತಕ ಮೇಳ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶಾಲಾ ಮಕ್ಕಳಿಗಾಗಿ ಮಾತ್ರ ತೆರೆಯಲ್ಪಡುತ್ತಿದ್ದವು. ಅದರಂತೆ ಪ್ರತೀವರ್ಷ ಶಾರ್ಜಾ ಮಕ್ಕಳ ಪುಸ್ತಕ ಮೇಳವು ನಡೆಸಲ್ಪಡುತ್ತದೆ. ಆದರೆ ಬೊಲೋನ (bologna) ದಂತಹ ಮಕ್ಕಳ ಪುಸ್ತಕ ಮೇಳದಲ್ಲಿ ಮಕ್ಕಳಿಗೆ ಪ್ರವೇಶವಿಲ್ಲ ಎಂಬುವುದು ಆಶ್ಚರ್ಯಕರವಾದ ಸಂಗತಿಯಾಗಿದೆ. ಅದು ಕೇವಲ ವ್ಯಾಪಾರ ಮೇಳ.
ಓದುವಿಕೆಯನ್ನು ಪ್ರೋತ್ಸಾಹಿಸಲು ಶಾರ್ಜಾದ ಎಲ್ಲಾ ಸ್ಥಳೀಯ ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ. ಈ ಸಂಸ್ಕೃತಿಯನ್ನು ನೋಡಿ ಬೆಳೆಯುವ ಮಕ್ಕಳು ಓದುವ ಹವ್ಯಾಸ ವನ್ನು ಕೂಡಾ
ಅವರೊಂದಿಗೆ ಬೆಳೆಸುತ್ತಾರೆ ಎಂಬ ನಂಬಿಕೆ. ಪುಸ್ತಕಗಳನ್ನು ಓದುವ ಹವ್ಯಾಸವಿರುವ ಮಕ್ಕಳ ಕುರಿತು ಪೋಷಕರು ಚಿಂತಿಸಬೇಕಾಗಿಲ್ಲ. ಅವರಿಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಿ ಕೊಡುವ ಕೆಲಸ ಮಾತ್ರ ಮಾಡಿದರೆ ಸಾಕಾಗುತ್ತದೆ.

ಪ್ರಪಂಚದಾದ್ಯಂತ ನಡೆಯುವ ಪುಸ್ತಕ ಮೇಳಗಳನ್ನು ಗಮನಿಸಿದರೆ ಫ್ರಾಂಕ್ ಫುರ್ಟ್ ನಲ್ಲಿರುವ ಎಂಟನೇ ಹಾಲ್ ಭದ್ರತಾ ತಪಾಸಣೆಗಳ ಬಳಿಕ ಪ್ರವೇಶಿಸ ಬಹುದಾದ ಏಕೈಕ ಸ್ಥಳವಾಗಿತ್ತು. ಆದರೆ ಈ ವರ್ಷ ಇರಲಿಲ್ಲ. ಅಲ್ಲಿದ್ದವರನ್ನು ಇತರ ಸಭಾಂಗಣ ಗಳಿಗೆ ಸ್ಥಳಾಂತರಿಸಲಾಯಿತು. ಲಂಡನ್ ಮೇಳವನ್ನು ವಿಶಾಲವಾದ ಹಳೆಯ ಜಾಗದಿಂದ ಒಲಿಂಪಿಯಾದ ಸಣ್ಣ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ನಾಲ್ಕು ಸಭಾಂಗಣ ಗಳಲ್ಲಿ ಆಯೋಜಿಸಲ್ಪಡುತ್ತಿದ್ದ ಮಾಸ್ಕೋ ಪುಸ್ತಕ ಮೇಳ ವರ್ಷದಿಂದ ವರ್ಷಕ್ಕೆ ಒಂದೊಂದು ಕಡಿಮೆಯಾಗುತ್ತಾ ಈ ವರ್ಷ ಒಂದಕ್ಕೆ ಕುಗ್ಗಿದೆ. ಇವೆಲ್ಲವೂ ಪುಸ್ತಕ ಮೇಳಗಳ ಮೇಲಿರುವ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂಬುದಕ್ಕೆ ಸೂಚನೆಯಾಗಿದೆ. ಆದರೆ ಶಾರ್ಜಾ ಪುಸ್ತಕ ಮೇಳ ಇದಕ್ಕೆಲ್ಲ ವಿರುದ್ಧವಾಗಿ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದೆ. ಆರು ಸಭಾಂಗಣ ಗಳಲ್ಲಿ ನಡೆಯುತ್ತಿದ್ದ ಮೇಳ ಈ ವರ್ಷ ಏಳನೇ ಸಭಾಂಗಣ ಕ್ಕೆ ವಿಸ್ತಾರವಾಗಿದೆ. ಅಲ್ಲದೆ ೨೦೧೯ ಕ್ಕೆ ಶಾರ್ಜಾ ವಿಶ್ವ ಪುಸ್ತಕಗಳ ರಾಜಧಾನಿ ಆಗಲಿದೆ.

ಹೆಸರಿಗೆ ಪುಸ್ತಕ ಮೇಳವಾದರೂ, ಚಿತ್ರರಂಗದವರು ಸೇರಿದಂತೆ ಅನೇಕ ಸಾರ್ವಜನಿಕರು ಸೇರುವ ದೊಡ್ಡ ಹಬ್ಬವಲ್ಲವೇ ?

ಅದರಲ್ಲಿ ತಪ್ಪೇನಿದೆ?! ೧೦ ಜನರಲ್ಲಿ ಓದುವ ಹವ್ಯಾಸವನ್ನು ರೂಢಿ ಮಾಡಿಕೊಂಡವರು ಎಷ್ಟು ಜನ ಇರುತ್ತಾರೆ? ಕೇವಲ ಮೂರೋ ನಾಲ್ಕೋ ಅಥವಾ ಅದಕ್ಕಿಂತ ಕಡಿಮೆಯಿರುತ್ತಾರೆ. ಆ ೧೦ ಜನಕ್ಕೆ ಚಿತ್ರ ನಟ ಮೋಹನಲಾಲರನ್ನು ಚೆನ್ನಾಗಿ ಪರಿಚಯ ವಿರುತ್ತದೆ. ಆದರೆ ಬರಹಗಾರರಾದ ಎಂ.ಮುಕುಂದನವರನ್ನು ಕೆಲವೇ ಜನರಿಗೆ ಮಾತ್ರ ಪರಿಚಯ ಇರುತ್ತದೆ. ಇದೆಲ್ಲ ನಮ್ಮ ಭಾಷೆಗಳ ಮಿತಿಯನ್ನು ತೋರಿಸುತ್ತಿದೆ. ಅಮಿತಾಭ್ ಬಚ್ಚನ್ ವಿಶ್ವ ಪ್ರಸಿದ್ಧ ಆದರೆ ಮಹಾ ವಿದ್ವಾಂಸ ಮತ್ತು ಕವಿಯಾಗಿದ್ದ ಅವರ ತಂದೆ ಹರಿವಂಶ ರಾಯ್‌ ಬಚ್ಚನ್ ರವರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ?. ವಿಶ್ವದ ಎಲ್ಲೆಡೆ ಇರುವ ಪರಿಸ್ಥಿತಿ ಇದು. ಮಮ್ಮುಟ್ಟಿಯವರನ್ನು ಪುಸ್ತಕ ಮೇಳಕ್ಕೆ ಕರೆತಂದಾಗ ಯಾಕೆ ಎಂದು ಅನೇಕ ಜನರು ಪ್ರಶ್ನಿಸಿದ್ದರು. ಅವರನ್ನು ನೋಡಲು ಮಾತ್ರ ಬಂದವರಲ್ಲಿ ಮಮ್ಮುಟ್ಟಿಯವರು ಓದುವಿಕೆಯ ಬಗ್ಗೆ ಹೇಳುವ ಮಾತುಗಳಲ್ಲಿ ಆಕರ್ಷಿತರಾಗಿ ಓದಲು ಪ್ರಾರಂಭಿಸಿದರೆ ನಾವು ಪಡುವ ಶ್ರಮಕ್ಕೆ ದೊರಕುವ ಪ್ರೋತ್ಸಹವಲ್ಲವೇ?. ಅದೇ ರೀತಿ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ ಹಾಗೆ ನಡೆಯುವ ಒಂದು ದೊಡ್ಡ ವಿಭಾಗವಿದೆ. ನಾನು ಉಸ್ತಾದರಲ್ಲಿ ಪುಸ್ತಕ ಓದುವಿಕೆಯ ಬಗ್ಗೆ ಎರಡು ಮಾತನಾಡಬೇಕೆಂದು ಕೇಳಿಕೊಂಡೆ. ಅವರು ಅದರ ಮಹತ್ವವನ್ನು ಸರಳವಾಗಿ ಸ್ಪಷ್ಟವಾಗಿ ಹೇಳಿ ಬೋಧಿಸಿದರು. ಇವೆಲ್ಲವೂ ಓದುವಿಕೆಯನ್ನು ಪ್ರೋತ್ಸಾಹಿಸುವ ಒಂದೊಂದು ರೀತಿಗಳಾಗಿವೆ.

ಅಷ್ಟೊಂದು ಪುಸ್ತಕಗಳೊಂದಿಗೆ ಬೆರೆತ ನಿಮ್ಮ ಓದುವಿಕೆಯ ಶೈಲಿ ಹೇಗಾಗಿದೆ?

ಆಸಕ್ತಿ ಮತ್ತು ಜವಾಬ್ದಾರಿ ಒಂದುಗೂಡಿದ್ದಾಗಿದೆ ನನ್ನ ಜೀವನ. ಓದುವುದು ನನ್ನ ಕೆಲಸದ ಭಾಗ ಹಾಗೂ ಹವ್ಯಾಸ ಕೂಡ. ನಾನು ಆತ್ಮಚರಿತ್ರೆ, ಸ್ಪೂರ್ತಿದಾಯಕ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೇನೆ. ಕಥೆ ಕಾದಂಬರಿ ಮತ್ತು ಕವಿತೆಗಳನ್ನು ಓದುವುದು ವಿರಳ. ಕಾರಿನಲ್ಲಿ ಹಾಡಿನ ಬದಲಿಗೆ ಸ್ಟೀಫನ್ ಕೋವೆಯ ಸೆವೆನ್ ಹ್ಯಾಬಿಟ್ಸ್ ಪುಸ್ತಕದ ಆಡಿಯೋವನ್ನ ಕೇಳುವೆ. ರಿಚರ್ಡ್ ಟೆಂಪ್ಲರ್ ಇತ್ತೀಚೆಗೆ ಬರೆದ ದಿ ರೂಲ್ಸ್ ಆಫ್ ಲೈಫ್ ಓದಿದೆ. ರೂಲ್ಸ್ ಆಫ್ ಲವ್ ಸಹ ಅತ್ಯುತ್ತಮ ಪುಸ್ತಕವಾಗಿದೆ.

ಉದ್ಯೋಗ ಮತ್ತು ಆಸಕ್ತಿ ಎಂಬ ರೀತಿಯಲ್ಲಿ ಪುಸ್ತಕಗಳೊಂದಿಗೆ ಹೆಚ್ಚಾಗಿ ತೊಡಗಿಸಿಕೊಂಡಿದೀರಿ. ಹಾಗಾದರೆ ಜಗತ್ತಿನಲ್ಲಿ ಈ ಸಾಹಿತ್ಯದ ಅವಶ್ಯಕತೆ ಏನು?

ಅತ್ಯತ್ತಮ ಪುಸ್ತಕಗಳು ನಮಗೆ ಜೀವನದ ಬಗ್ಗೆ ಮತ್ತು ಪ್ರಪಂಚದ ಬಗ್ಗೆ ಸಾಕಷ್ಟು ಜ್ಞಾನವನ್ನು ನೀಡುತ್ತದೆ. ಜ್ಞಾನ ಒಬ್ಬ ವ್ಯಕ್ತಿಯನ್ನು,ವ್ಯಕ್ತಿತ್ವವನ್ನು ರೂಪಿಸುತ್ತದೆ. ಜ್ಞಾನ ಮಾತ್ರವಿದ್ದು ಯಾವ ಪ್ರಯೋಜನವೂ ಇಲ್ಲ. ಆ ಅರ್ಥದಲ್ಲಿ ಸಾಹಿತ್ಯಕೂಡ ನಿಷ್ಪ್ರಯೋಜಕ ಎಂದು ತೋರುತ್ತದೆ. ಆದರೆ ಪುಸ್ತಕಗಳಿಂದ ಮತ್ತು ಜೀವನಾನುಭವದಿಂದ ಪಡೆದ ಜ್ಞಾನ ನಾವು ರೂಢಿಗೆ ತರುವುದಿರಿಂದ ಮಾತ್ರ ಅದರ ಪ್ರಯೋಜನ ಬರುವುದು. ನಮ್ಮ ಜ್ಞಾನ ನಮಗೂ ಇತರರಿಗೂ ಉಪಯುಕ್ತವಾಗಬೇಕು ಹಾಗು ಅದನ್ನು ನೀಡಲು ನಾವು ಸಿದ್ಧರಿರಬೇಕು. ಇದು ನಾನು ಕಲಿತ ತತ್ವ. ಸಣ್ಣ ಪುಟ್ಟ ಕಾರ್ಯಗಳಲ್ಲಿ ಆನಂದವನ್ನು ಗಳಿಸಲು ಸಾಧ್ಯವಾಗಬೇಕು.

ಈ ಪುಸ್ತಕ ಜಗತ್ತಲ್ಲಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ?

ಯಾವ ಅನುಮಾನವಿಲ್ಲದೆ ಶಾರ್ಜಾ ಸುಲ್ತಾನ್ ಡಾ. ಸುಲ್ತಾನ್ ಬಿನ್ ಮೊಹಮ್ಮದ್ ಅಲ್ ಕಾಸಿಮ್ ಎಂದು ಹೇಳುವೆ. ಅವರಿಗೆ ಈಗ ೭೮ ವರ್ಷ ವಯಸ್ಸಾಗಿದೆ. ಆದರೆ ಅವರು ಜಗತ್ತಿನಲ್ಲಿ ನಡೆಯುವ ಎಲ್ಲ ಪುಸ್ತಕ ಮೇಳಗಳಲ್ಲಿ ಭಾಗವಹಿಸುವವರಾಗಿದ್ದಾರೆ. ಅರುವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಆ ಪುಸ್ತಕಗಳು ವಿಶ್ವದ ಎಲ್ಲಾ ಭಾಷೆಗಳಿಗೆ ಭಾಷಾಂತರಿಸಲಾಗಿದೆ. ಶಾರ್ಜಾ ಪುಸ್ತಕ ಮೇಳ ಆ ಒಬ್ಬ ವ್ಯಕ್ತಿಯ ಉತ್ಸಾಹದಿಂದ ಮಾತ್ರ ಹಾಗು ಮಿಲಿಯನ್ ದಿರ್ಹಮ್ ವೆಚ್ಚದಿಂದ
ನಡೆಸಲ್ಪಡುತ್ತಿದೆ. ಅವರ ನಿರ್ದೇಶನದೊಂದಿಗೆ ನಾವು ಕೆಲಸ ನಿರ್ವಹಿಸುತ್ತಿದ್ದೇವೆ.

ನಾನು ದೆಹಲಿಯಲ್ಲಿ ನಡೆದ ಪುಸ್ತಕ ಮೇಳದಲ್ಲಿ ಭಾಗವಹಿಸಿದೆ. ಅಲ್ಲಿ ಗಮನಿಸಿದ ವಿಷಯವೇನೆಂದರೆ ನಮ್ಮ ನಾಯಕರು ಹೊರಗಡೆ ನೆರೆದಿರುವ ನೂರಾರು ಮಾಧ್ಯಮಗಳ ಮುಂದೆ ಉದ್ಘಾಟಿಸಿ ಶೀಘ್ರವೇ ಹೊರಡುತ್ತಾರೆ. ಆದರೆ ಸುಲ್ತಾನ್ ಹಾಗಲ್ಲ! ಎರಡು ದಿನ ಮುಂಚಿತವಾಗಿ ಆಗಮಿಸಿ ಎಲ್ಲ ಸಿದ್ಧತೆಗಳಿಗೆ ನೇತೃತ್ವವನ್ನು ವಹಿಸುತ್ತಾರೆ. ಸ್ವಂತವಾಗಿ ಪ್ರಕಾಶನ ಕೇಂದ್ರವನ್ನು ಹೊಂದಿರುವ ವಿಶ್ವದ ಏಕೈಕ ಆಡಳಿತಗಾರ ಅವರಾಗಿದ್ದಾರೆ.
ಸುಲ್ತಾನ್ ಭಾರತದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಹಿಂದೆ ಅರಬ್ಬರನ್ನು ಕಡಲ್ಗಳ್ಳರೆಂದು ಕೀಳಾಗಿ ಗುರುತಿಸಲಾಗುತ್ತಿತ್ತು. ಈ ಅಪಪ್ರಚಾರವನ್ನು ಇಲ್ಲವಾಗಿಸಲು ಡಾ .ಸುಲ್ತಾನ್ ಚಿಕ್ಕವಯಸ್ಸಿನಲ್ಲೇ ಬಾಂಬೆ ವಿಶ್ವವಿದ್ಯಾಲಯದ ಆರ್ಕ್ಕಿ ವೈಸ್ನನ ದಾಖಲೆಗಳನ್ನು ಕಂಡುಹಿಡಿದು ಪ್ರಕಿಟಿಸಿದರು. ತನ್ನ ಮೊದಲ ಪುಸ್ತಕವಾದ “ದಿ ಮಿಥ್ ಆಫ್ ಅರಬ್ ಪೈರಸಿಯಲ್ಲಿ” ಅರಬರು ಸಮುದ್ರ ಮೂಲಕ ಭಾರತದೊಂದಿಗೆ ಉತ್ತಮ ವ್ಯಾಪಾರ ಸಂಬಂದ ಹೊಂದಿದ್ದರು ಎಂದು ಸಾಬೀತು ಪಡಿಸಿದರು. ಆ ಸಮಯದಲ್ಲಿ ತನಗೆ ಅಗತ್ಯ ನೆರವು ನೀಡಿದ ಬಾಂಬೆ ವಿಶ್ವವಿದ್ಯಾಲಯದ ಉಪಕುಲಪತಿ ಈಗ ಆಡಳಿತಗಾರರ ಕಚೇರಿಯ ಸಲಹೆಗಾರರಲ್ಲಿ ಒಬ್ಬರಾಗಿದ್ದಾರೆ.

ಶಾರ್ಜಾ ಸುಲ್ತಾನರ ಕೇರಳ ಭೇಟಿಯ ಹಿಂದಿನ ರೂವಾರಿ ನೀವಲ್ಲವೇ?

ಅದು ನನ್ನ ಕನಸಾಗಿತ್ತು. ನನಸು ಮಾಡಲು ಪ್ರಯತ್ನಿಸಿದೆ. ಒಬ್ಬ ಆಡಳಿತಗಾರ ಇನ್ನೊಂದು ರಾಷ್ಟ್ರಕ್ಕೆ ಭೇಟಿ ನೀಡುವುದು ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ (diplomatic ) ವಿಷಯವಾಗಿದೆ. ಅದು ಅಷ್ಟು ಸುಲಭದ ಮಾತಲ್ಲ. ನಾನು ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಓದಿದ್ದೇನೆ. ಶಾರ್ಜಾ ಸುಲ್ತಾನರನ್ನು ನನ್ನ ದೇಶಕ್ಕೆ ಕರೆತಂದು ಗೌರವಿಸುವುದು ನನ್ನ ಕನಸಾಗಿತ್ತು. ಅಂತಹ ಒಬ್ಬ ಮಹಾನ್ ವಿದ್ವಾಂಸ ಮತ್ತು ನಿಷ್ಠಾವಂತ ಆಡಳಿತಗಾರನನ್ನು ನಮ್ಮ ದೇಶ ಗೌರವಿಸುವುದರ ಬಗ್ಗೆ ಕನಸು ಕಾಣಬಹುದು. ಆದರೆ ನನ್ನಂತಹ ಸಾಮಾನ್ಯ ವ್ಯಕ್ತಿ ಅದನ್ನು ಕಾರ್ಯಗತಗೊಳಿಸ ಬಹುದೇ?! ಹೌದು ಸಾಧಿಸಬಹುದು!. ದಿಟ್ಟವಾದ ಒಳ್ಳೆಯ ನಿಯತಿನೊಂದಿಗೆ ಕನಸುಕಂಡರೆ ಅದು ನನಸಾಗುವುದಕ್ಕೆ ಎಲ್ಲ ಸಂದರ್ಭಗಳು ಅನುಕೂಲವಾಗ ಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಶಾರ್ಜಾ ಸುಲ್ತಾನರ ಕೇರಳ ಭೇಟಿ. ಸುಲ್ತಾನರನ್ನು ಕರತರಲು ನಾನು ಮೊದಲು ಮಾಡಿದ ಕಾರ್ಯವೇನಂದರೆ ಕ್ಯಾಲಿಕಟ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸಲೀಮರನ್ನು ಶಾರ್ಜಾ ಪುಸ್ತಕಮೇಳದಲ್ಲಿ ಮಾತನಾಡಲು ಆಹ್ವಾನಿಸಿದೆ. ಅವರು ಬಂದಾಗ ಶಾರ್ಜಾ ಸುಲ್ತಾನರ ಬಗ್ಗೆ ನಾನು ಮೊದಲೇ ಬರೆದು ತಯಾರಿಸಿದ ಲೇಖನವನ್ನು ಅವರ ಕೈಯ್ಯಲ್ಲಿ ಕೊಟ್ಟೆ. ಅನೇಕ ಪುಸ್ತಕಗನ್ನು ಬರೆದ ವ್ಯಕ್ತಿ ಅತ್ಯತ್ತಮ ಆಡಳಿತಗಾರ ಮಲಯಾಳಿ ಸೇರಿದಂತೆ ಭಾರತೀಯರಿಗೆ ಎಲ್ಲರೀತಿಯ ಆತಿಥ್ಯವನ್ನು ನೀಡುವ ವ್ಯಕ್ತಿ ಎಂಬ ಎಲ್ಲಾ ಅಂಶಗಳನ್ನು ಪರಿಗಣಿಸಿ ಅವರಿಗೆ ಗೌರವ ಡಿ.ಲಿಟ್ ನೀಡಬೇಕೆಂದು ನಾನು ಅವರಲ್ಲಿ ಒತ್ತಾಯಿಸಿದೆ. ಅವರು ಪ್ರಸ್ತುತ ೧೭ ಡಿ.ಲಿಟ್ ನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಗಣ್ಯ ವ್ಯಕ್ತಿಗಳಿಗೆ ಮಾತ್ರ ಅದು ನೀಡುವುದು. ಅದು ಇಲ್ಲದಿದ್ದರೆ ಇನ್ನಿತರ ವಿಶ್ವವಿದ್ಯಾಲಯಗಳಿಗೆ ನೀಡಲಾಗುವುದು. ಅದು ಇಲ್ಲದಿದ್ದರೆ ಭಾರತದ ಇನ್ನಿತರ ರಾಜ್ಯಗಳಿಂದ ಬಂದವರನ್ನು ಆಯ್ಕೆ ಮಾಡುವುದು ವಾಡಿಕೆ. ಇವೆಲ್ಲವನ್ನೂ ಮೀರಿಸಿ ಒಬ್ಬ ವಿದೇಶಿ ಆಡಳಿತಗಾರನಿಗೆ ಡಿ.ಲಿಟ್ ನೀಡಿ ಗೌರವಿಸಲು ನಮ್ಮ ವಿಶ್ವವಿದ್ಯಾಲಯ ನಿರ್ಧರಿಸಿತು. ಅದಕ್ಕೆ ಸಚಿವರಾಗಿದ್ದ ಡಾ ಎಂ ಕೆ ಮುನೀರ್ ಸಹಾಯನೀಡಿದರು.ಪ್ರಾಂಕ್ ಫರ್ಟ್ ಮೇಳದಲ್ಲಿ ಮುನೀರ್ ವರು ಶಾರ್ಜಾ ಸುಲ್ತಾನರ ಬಳಿ ಅಧಿಕೃತವಾಗಿ ತಂದೆ ತಿಳಿಸಿದರು. ಅದನ್ನು ಸ್ವೀಕರಿಸಲು ಕೇರಳಕ್ಕೆ ಬರುವೆ ಎಂಬ ಭರವಸೆ ಕೊಟ್ಟರು.

ಅಧ್ಯಕ್ಷರಾಗಿದ್ದ ಎಪಿ ಜೆ ಅಬ್ದುಲ್ ಕಲಾಮಾರನ್ನು ಶಾರ್ಜಾಗೆ ತಂದವರು ನೀವಲ್ಲವೇ ?

ಕಲಾಮರಿಗೂ ಶಾರ್ಜಾ ಸುಲ್ತಾನರಿಗೂ ಬಹಳಷ್ಟು ಸಾಮ್ಯತೆಗಳಿವೆ. ಇಬ್ಬರು ಉತ್ತಮ ಬರಹಗಾರರು ಮತ್ತು ಉತ್ತಮ ಆಡಳಿತಗಾರರಾಗಿದ್ದರು. ಆದ್ದರಿಂದ ಅವರಿಬ್ಬರು ಪರಸ್ಪರ ಭೇಟಿಯಾಗಲೆಂದು ನಾನು ಬಯಸಿದ್ದೆ. ಅದರಂತೆ ಅವರನ್ನು ಶಾರ್ಜಾ ಪುಸ್ತಕ ಮೇಳಕ್ಕೆ ಆಹ್ವಾನಿಸಲಾಯಿತು. ಎಲ್ಲ ಅಧಿಕೃತ ಕಾರ್ಯವಿಧಾನಗಳಿಗೆ ಅನುಸಾರವಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ ಕಲಾಮರನ್ನು ಸ್ವೀಕರಿಸಲು ಶಾರ್ಜಾ ಸಿದ್ದವಾಯಿತು. ಪುಸ್ತಕ ಮೇಳದ ಉದ್ಘಾಟನೆಯ ನಂತರ ಸುಲ್ತಾನರಿಗೆ ಆಹ್ವಾನಿಸಲಾದ ಅತಿಥಿಗಳೊಂದಿಗೆ ಔತಣಕೂಟಕ್ಕೆ ಭಾಗವಹಿಸ ಬೇಕಾಗಿತ್ತು. ಅದರಿಂದ ಕಲಾಂರೊಂದಿಗೆ ಅಧಿಕೃತ ಸಭೆ ನಡೆಸಲು ಕೇವಲ ೫ ನಿಮಿಷಗಳ ಕಾಲಾವಕಾಶ ಮಾತ್ರ ಸಿಕ್ಕಿತು. ಇಬ್ಬರು ಮಾತುಕತೆ ಪ್ರಾರಂಭಿಸಿದರು. ಪುಸ್ತಕಗಳು, ಯಾತ್ರೆಗಳು,ಭಾರತ ಮತ್ತು ಅರಬ್ ರಾಷ್ಟ್ರಗಳ ಸಂಬಂಧ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು. ಕೇವಲ ೫ ನಿಮಿಷ ಮಾತ್ರ ನಿಗದಿ ಪಡಿಸಿದ್ದ ವೇಳಾಪಟ್ಟಿ ೧ ಗಂಟೆ ಆದರೂ ಮುಗಿಯಲಿಲ್ಲ. ಈ ಇಬ್ಬರು ಆಡಳಿತಗಾರರು ಸ್ನೇಹಿತರಾಗುವುದಕ್ಕೆ ನಾನು ಸಾಕ್ಷಿಯಾದೆ. ನಂತರ ಅನೇಕ ಸ್ಥಳಗಳಲ್ಲಿ, ವೇದಿಕೆಗಳಲ್ಲಿ ಅಬ್ದುಲ್ ಕಲಾಮರು ಶಾರ್ಜಾ ಹಾಗೂ ಅಲ್ಲಿಯ ಪುಸ್ತಕ ಮೇಳಗಳ ಬಗ್ಗೆ ಮಾತನಾಡುತಿದ್ದರು. ಒಂದೊಂದು ಮನೆಗಳಲ್ಲಿ ಗ್ರಂಥಾಲಯಗಳು ಸ್ಥಾಪನೆ ಆಗ ಬೇಕು ಎಂಬ ನನ್ನ ಕನಸನ್ನು ನೆನಸಾಗಿಸಿದವರು ಶಾರ್ಜಾ ಸುಲ್ತಾನ್ ಎಂದು ಹೇಳುತ್ತಿದ್ದರು. ಆ ಭೇಟಿ ನನ್ನ ಕನಸುಗಳಲ್ಲಿ ಒಂದು ಕನದು ನನಸಾದ ಭೇಟಿಯಾಗಿತ್ತು.

ನಿಮ್ಮ ಮುಂದೆ ಉಳಿದಿರುವ ಕನಸುಗಳೇನು?

ಶಾರ್ಜಾ ಪುಸ್ತಕ ಮೇಳಯನ್ನು ವಿಶ್ವದ ಅತೀದೊಡ್ಡ ಅಂತಾರಾಷ್ಟ್ರೀಯ ಮೇಳವನ್ನಾಗಿಸುವುದು.

ನಿಮ್ಮ ಎಲ್ಲ ಕನಸುಗಳು ಸಾಧನಗಳಾಗಿವೆ, ಇಲ್ಲಿಯವರೆಗೆ ನಿಮ್ಮ ಜೀವನದಲ್ಲಿ ಮಾಡಿದ ದೊಡ್ಡ ಸಾಧನೆ ಯಾವುದು ?

ಸಂತೋಷಕರ ವಾದ ಜೀವನವೇ ದೊಡ್ಡ ಸಾಧನೆಯಾಗಿದೆ. ೬೨ ವರ್ಷ ವಯಸ್ಸಾಯಿತು. ಜೀವನದಲ್ಲಿ ಎಲ್ಲ ರೀತಿಯಲ್ಲೂ ಸಂತೃಪ್ತನಾಗಿದ್ದೇನೆ. ಯಾವುದಕ್ಕೂ ಅತಿಯಾಸೆ ಪಟ್ಟಿಲ್ಲ. ಮುಖದಲ್ಲಿ ಸದಾ ಸಮಯ ಮಂದಹಾಸವನ್ನಿಟ್ಟುಕೊಳ್ಳಲು ಸಾಧ್ಯವಾಗುತ್ತಿದೆ. ಆಫೀಸ್ ಅಲ್ಲಿ ಅರಬರು ಸಹ ಏನಾದರೂ ಖಿನ್ನತೆಗೆ ಅಥವಾ ಉದ್ವೇಗಕ್ಕೆ ಒಳಪಟ್ಟರೆ ನಿಮ್ಮ ಕಚೇರಿಗೆ ಬಂದು ಸ್ವಲ್ಪ ಸಮಯ ಕುಳಿತು ಸಂತೋಷದಿಂದ ಹೊರಡಬಹುದು ಎಂದು ಹೇಳುತ್ತಾರೆ ಇದಕ್ಕಿತ ಮಿಗಿಲಾಗಿ ಏನು ಬೇಕು?. ಶಾರ್ಜಾದ ಅತ್ಯುತ್ತಮ ಸರಕಾರಿ ನೌಕರ ಪ್ರಶಸ್ತಿ ಪಡೆದೆ. ಶ್ರೇಷ್ಠತೆಗಾಗಿ ೨೦೦ ಹೆಚ್ಚು ಮಾನ್ಯತೆಗಳನ್ನು ಪಡದೆ. ಸರಕಾರದ ಪ್ರತಿ ಕಾರ್ಯಕ್ರಮದ ಕೊನೆಗೆ ಉತ್ತಮ ಸಾಧನೆಗನ್ನು ಮಾಡಿದವರಿಗೆ ಸರಕಾರಿ ಗೌರವವನ್ನು ನೀಡಲಾಗುವುದು. ನನ್ನ ಹೆಸರು ಅವರ ಪೂರ್ವಯೋಜಿತ(default)ಪಟ್ಟಿಯಲ್ಲಿದೆ ಎಂದು ಅನಿಸುತ್ತಿದೆ.

ಫ್ಲಾಶ್ ಬ್ಯಾಕ್

೮೦ರ ದಶಕದ ಆರಂಭದಲ್ಲಿ ಮಧ್ಯಪ್ರಾಚ್ಯ ದೇಶಗಳು ಆಧುನಿಕತೆಯತ್ತ ಹೆಜ್ಜೆ ಹಾಕುತ್ತಿದ್ದ ಕಾಲ ಕಂಪ್ಯೂಟರ್ ಬಳಕೆ ಸಾಮಾನ್ಯ ಜನರಲ್ಲಿ ಹರಡಲು ಪ್ರಾರಂಭಿಸಿದ ಕಾಲ. ಸರಿಯಾಗಿ ಹೇಳುವುದಾದರೆ, ಲೆಕ್ಕಹಾಕಲು ಮಾತ್ರ ಉಪಯೋಗಿಸುತ್ತಿದ್ದ ಕಂಪ್ಯೂಟರ್ಗಳಲ್ಲಿ ಗೇಮ್ ಗಳನ್ನು ಸೇರಿಸುತ್ತಿದ್ದ ಕಾಲ. ಶಾರ್ಜಾದಲ್ಲಿ ಕಟ್ಟಡ ನಿರ್ಮಾಣ ಕಂಪನಿಯನ್ನು ನಡೆಸುತ್ತಿದ್ದ ಸಿರಿಯಾ ಮೂಲದ ಅಬ್ದುಲ್ ಸೈಯದ್ ಕಂಪ್ಯೂಟರ್ ಗೇಮಿಂಗ್ ಗಳನ್ನು ಸುಗಮಗೊಳಿಸುವ ಮತ್ತು ಹೊಸ ಉದ್ಯೋಗಗಳನ್ನು ಹುಡಕುವರಿಗೆ ಅದನ್ನು ಕಲಿಸುವ ಒಂದು ಕಂಪ್ಯೂಟರ್ ಸಂಸ್ಥೆಯನ್ನು ಪ್ರಾರಂಭಿಸುವುದರಿಂದ ಜೀವನದ ದಿಕ್ಕು ಬದಲಿಸಬಹುದು ಎಂದು ಕನಸು ಕಾಣುತ್ತಿದ್ದರು. ಅದರಂತೆ ಸೈಯದ್ ತೈವಾನಿಗೆ ಹೋಗಿ ೨೫ ಕಂಪ್ಯೂಟರ್ ಗಳನ್ನೂ ತಂದು ಯುನೆಸ್ಕೋ ಕಂಪ್ಯೂಟರ್ ಕನ್ಸಲ್ಟೆನ್ಸಿ ಎಂದು ಹೆಸರಿಟ್ಟರು. ಇದು UAE ಯಲ್ಲಿ ಮೊದಲ ಸಂಸ್ಥೆಯಾಗಿತ್ತು. ಅದೇ ಸಮಯ ಥಾಮಸ್ ವ್ಯಾನ್ ಪ್ಲೀಟ್ ಎಂಬ ಸ್ವೀಡಿಷ್ ಮೂಲದ ವ್ಯಕ್ತಿ ಇನ್ನೊಂದು ಕನಸಿನ ಹಿಂದೆ ಬಿದ್ದಿದ್ದ. ಕೊಲ್ಲಿ ರಾಷ್ಟ್ರಗಳು ಮನರಂಜನೆ ಮತ್ತು ಪ್ರವಾಸ ತಾಣಗಳ ಕೇಂದ್ರವಾಗುತ್ತಿದ್ದ ಆ ಸಮಯದಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಮೂಲ ಸೌಕರ್ಯಗಳನ್ನು ಹೊಂದಿರುವ ಶಾರ್ಜಾದಲ್ಲಿ ಅನೇಕ ಉದ್ಯೋಗಾವಕಾಶವಿದೆ ಎಂದು ತಿಳಿದುಕೊಂಡ. ಹೆಚ್ಚಿನ ಅನಿವಾಸಿಗಳು ಆಸ್ಟ್ರಿಯ ಮತ್ತು ಜರ್ಮನಿಯಂತಹ ದೇಶಗಳಿಂದ ಬರುವವರು ಆಗಿದ್ದರಿಂದ ಇಂಗ್ಲಿಷ್ ಚೆನ್ನಾಗಿ ತಿಳಿದಿರುವ ಒಬ್ಬ ವ್ಯಕ್ತಿಯನ್ನು ತನ್ನೊಂದಿಗೆ ಸೇರಿಸಿದರೆ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು ಎಂದು ಯೋಚಿಸಿದ. ಶಾರ್ಜಾ ಪ್ರವಾಸೋದ್ಯಮದ ಹಿರಿಯ ಅಧಿಕಾರಿಯಾಗಿದ್ದ ಥಾಮಸ್ ಅನೇಕ ಯೋಜನೆಗಳ ಬಗ್ಗೆ ಕನಸುಕಂಡರು. ಕಣ್ಣಾನೂರಿನ ಪೆರಿಂಗೋಮ್ ಸಹಕರಣ ಬ್ಯಾಂಕ್ ಉದ್ಯೋಗಿಯಾಗಿದ್ದ ತಂದೆಯ ಹೆಜ್ಜೆಗಳನ್ನು ಅನುಕರಿಸುತ್ತಿದ್ದ ಪಯ್ಯನೂರ್ ಕಾಲೇಜಿನಲ್ಲಿ ವಾಣಿಜ್ಯ ಅಧ್ಯಯನ ಮಾಡಿದ ಒಬ್ಬ ಯುವಕ ಇದ್ದರು. ಯುಎಇ ಯಲ್ಲಿ ಕೆಲಸಮಾಡುತ್ತಿದ್ದ ಅವರ ಚಿಕ್ಕಪ್ಪ ಬಾಲಕೃಷ್ಣನ್ ಅಲ್ಲಿಂದ ವೀಸಾ ಕಳುಹಿಸಿದರು. ಎಲ್ಲ ಮಲಯಾಳಿಗಳು ಕನಸುಕಾಣುವಂತೆ ಕೊಲ್ಲಿರಾಷ್ಟ್ರದ ಕನಸಿನೊಂದಿಗೆ ವಿಮಾನ ಹತ್ತಿದ ಮೋಹನ್ ಕುಮಾರ್ ಎಂಬ ಪೆರಿಂಗೋಮಿನ ಆ ಯುವಕ ಅಬ್ದುಲ್ ಸೈಯದ್ ಎಂಬ ಸಿರಿಯನ್ ವ್ಯಕ್ತಿಯನ್ನು, ಚಹಾ ತಯಾರಿಸುವ ಮಾಧವನ್ ಎಂಬವರನ್ನು ಮತ್ತು ಸ್ವೀಡನಿನ ಥಾಮಸ್ ವಾಂಪ್ಲಿಟ್ ಎಂಬ ವ್ಯಕ್ತಿಯೊಂದಿಗೆ ಯುಎಯಿನಲ್ಲಿ ಭೇಟಿಯಾದ ಕಥೆಯಾಗಿದೆ ನನ್ನ ಜೀವನದ ಯಶಸ್ಸಿನ ಸಾಕ್ಷಿ ಪತ್ರ. ಈಗ ಮೋಹನ್ ಕುಮಾರ್ ವಿಶ್ವದ ಅತಿಹೆಚ್ಚು ಜನರು ಒಂದುಗೂಡುವ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕಮೇಳದ ಚುಕ್ಕಾಣಿಹಿಡಿಯುತಿದ್ದಾರೆ ಹಾಗೂ ಶಾರ್ಜಾ ಸುಲ್ತಾನ್ ಮೊಹಮ್ಮದ್ ಅಲ್ ಖಾಸಿಮಿಯಾ ಆಪ್ತ ಮಿತ್ರಕೂಡ ಆಗಿದ್ದಾರೆ.

ಮೂರು ದಶಕಗಳ ಹಿಂದೆ ಯುಎಇಗೆ ಬರುವಾಗ ಅಲ್ಲಿಯ ಪರಿಸ್ಥಿತಿ ಹೇಗಿತ್ತು?

ದೊಡ್ಡ ಕನಸುಗಳನ್ನು ಕಟ್ಟಿ ಹೊಸದಾಗಿ ಬರುವವರನ್ನು ಮೊದಲ ನೋಟದಲ್ಲೇ ಈಗ ಕೊಲ್ಲಿ ರಾಷ್ಟ್ರಕ್ಕೆ ಬರುತ್ತಿದ್ದೀರ ಎಂಬ ಪ್ರಶ್ನೆಗಳೊಂದಿಗೆ ಜನರು ಸ್ವಾಗತಿಸುತ್ತಿದ್ದರು. ಕಟ್ಟಿದ ಕನಸನ್ನು ನನಸು ಮಾಡಲು ದಿಟ್ಟವಾದ ಮನಸ್ಸಿದ್ದರೆ ಸಾಕು .

ನಿಮ್ಮ ಜೀವನವನ್ನು ಇಲ್ಲಿ ಯಾವ ರೀತಿಯಲ್ಲಿ ಪ್ರಾರಂಭಿಸಿದ್ದೀರಿ?

ಯುನೆಸ್ಕೋ ಕನ್ಸಲ್ಟೆನ್ಸಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದೆ. ಕೇವಲ ೧೫ ದಿನ ಮಾತ್ರ ಅಲ್ಲಿ ಕೆಲಸದಲ್ಲಿದ್ದೆ. ಅಷ್ಟರಲ್ಲಿ ಅದರ ಮಾಲೀಕ ಅಬ್ದುಲ್ ಸೈಯದ್ ಕಂಪ್ಯೂಟರ್ ಸಂಸ್ಥೆಯನ್ನು ಪ್ರಾರಂಭಿಸಿದರು. ನನ್ನ ಕೆಲಸದ ವಿಧಾನಗಳನ್ನು ನೋಡಿ ನನ್ನನ್ನು ಅಲ್ಲಿಗೆ ವರ್ಗಾವಣೆ ಮಾಡಿದರು. ನನ್ನೊಂದಿಗೆ ಮ್ಯಾಥ್ಯೂ ಎಂಬ ಮಲಯಾಳಿ ಮತ್ತು ಇನ್ನೊಬ್ಬ ವ್ಯಕ್ತಿ ಇದ್ದ. ನಮಗೆ ತರಬೇತಿ ನೀಡಲು ಇರಾನಿನಿಂದ ಒಬ್ಬರನ್ನು ಕರೆತರಲು ನಿರ್ಧರಿಸಿದರು. ಹೊಸದಾಗಿ ಬಂದ ಪರವಾನಗಿ (licence) ಪಡೆದ ಕಂಪ್ಯೂಟರ್ ಆಟಗಳನ್ನು ವಿಸ್ತರಿಸಲು ವಿವಿಧ ಸ್ಥಳಗಳಿಗೆ ಈಮೈಲ್ ಗಳನ್ನೂ ಕಳುಹಿಸುವ ಕಾರ್ಯವನ್ನು ಕಾರ್ಯದರ್ಶಿಯಾಗಿದ್ದ ಮ್ಯಾಥ್ಯೂ ಅವರಿಗೆ ವಹಿಸಲಾಗಿತ್ತು. ಸೈಯೆದ್ ನೀಡಿದ ಕ್ಯಾಟಲಾಗ್ ಅನ್ನು ನೋಡಿ ಈ-ಮೇಲ್ ರವಾನಿಸಿದರು. ಅದರಲ್ಲಿ ಕೆಲವು ಇಸ್ರೇಲ್ ರಾಷ್ಟ್ರಕ್ಕೂ ರವಾನೆಯಾಯಿತು. ಅಂದು ಪ್ಯಾಲೆಸ್ಟೀನ್ ಇಸ್ರೇಲ್ ರಾಷ್ಟ್ರಗಳ ನಡುವೆ ಸಮಸ್ಯೆಗಳು ನಡೆಯುತ್ತಿದ್ದ ಸಮಯವಾಗಿತ್ತು.ಇಸ್ರೇಲ್ ರಾಷ್ರ್ಟವೊಂದಿಗೆ ಏನೋ ಸಂಬಂಧವಿದೆ ಎಂದು ಹೇಳಿ ಸಂಸ್ಥೆಯನ್ನು ಮುಚ್ಚಲು ಸರ್ಕಾರದ ಆದೇಶ ಬಂತು.


ನಂತರ ಮುಂದಿನ ಉದ್ಯೋಗವನ್ನು ಹುಡುಕಲಿಲ್ಲವೇ?

ಊರಲ್ಲಿ ಜಮೀನು,ಆಸ್ತಿ ಇರುವುದರಿಂದ ಕುಟುಂಬದ ಜವಾಬ್ದಾರಿ ನನ್ನ ಮೇಲೆ ಇರಲಿಲ್ಲ. ಆದರೆ ತನ್ನದೇ ಆದ ಜೀವನವನ್ನು ಕಟ್ಟಬೇಕು ಎಂಬ ಕನಸು ಇರುವುದರಿಂದ ಪಾರ್ಟ್ ಟೈಮಾಗಿ ಅನೇಕ ಸ್ಥಳಗಳಲ್ಲಿ ಅಕೌಂಟೆಂಟ್ ಆಗಿ ಕೆಲಸಮಾಡಿ ಉತ್ತಮ ರೀತಿಯಲ್ಲಿ ಹಣವನ್ನು ಪಡೆಯಲು ಪ್ರಾರಂಭಿಸಿದೆ. ಅಲ್ಲಿ ಲೆಕ್ಕ ಪರಿಶೋಧಕನಾಗಿ ಒಂದು ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಮಾಧವನ್ ಎಂಬವರಿದ್ದರು. ನನಗೆ ಚಹಾ ಮಾಡಿಕೊಡುತ್ತಿದ್ದರು. ಅವರೊಂದಿಗೆ ವಾಸವಿದ್ದ ಮಲಯಾಳಿ ಯುವಕರೊಬ್ಬರು ಶಾರ್ಜಾ ಪ್ರವಾಸೋದ್ಯಮದ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದರು. ಅವರ ಕಚೇರಿಯಲ್ಲಿ ಒಂದು ಉದ್ಯೋಗ ಖಾಲಿಯಿದೆ ಎಂದು ಮಾಧವನ್ ಹೇಳಿದರು. ಓಹ್! ಅದು ಸರಕಾರಿ ಕೆಲಸವಲ್ಲವೇ? ಅರಬರಿಗೆ ಮಾತ್ರವೆಂದು ಭಾವಿಸಿ ಅಲ್ಲಿಗೆ ಹೋಗಲೇ ಇಲ್ಲ. ಆದರೆ ಮಾಧವನ್ ಅವರು ಹಲವಾರು ಬಾರಿ ಒತ್ತಾಯಿಸಿದಾಗ ನಾನು ಅಲ್ಲಿಗೆ ಹೋದೆ. ಆ ಕಚೇರಿಯ ಉಸ್ತುವಾರಿಯಾಗಿದ್ದ ಥಾಮಸ್ ವ್ಯಾನ್ ಪ್ಲೀಟ್ ನನ್ನನ್ನು ಇಂಟರ್ವ್ಯೂ ಮಾಡಿದರು. ಸ್ವಂತ ಕೈಬರಹದಲ್ಲೇ ಬಯೋಡೇಟಾ ಬರೆದು ಕೊಡಬೇಕೆಂದು ಕೇಳಿದರು.ಇಂಗ್ಲಿಷ್ ಪತ್ರಿಕೆಗಳನ್ನು ಓದುವ ರೂಢಿ ಇರುವುದರಿಂದ ಅದು ಸುಲಭದ ಕೆಲಸವಾಗಿತ್ತು. ಟೆಲೆಕ್ಟ್ ಅನ್ನು ನಿರ್ವಹಿಸಲು ತಿಳಿದುಕೊಳ್ಳಬೇಕಾಗಿತ್ತು. ಅಲ್ಪಾವಧಿಯಲ್ಲಿ ಯುನಿಸ್ಕೋದಿಂದ ಕಲಿತಿದ್ದೆ. ನಂತರ ತಿಳಿಸುವೆ ಎಂದು ಹೇಳಿ ವಾಪಾಸ್ ಕಳುಹಿಸಿದರು. ಎರಡು ಮೂರು ದಿನಗಳ ನಂತರ ನನ್ನನ್ನು ಹುಡುಕಿ ಇಲೆಕ್ಟ್ರಾನಿಕ್ ಅಂಗಡಿಗೆ ಫೋನ್ ಬಂತು. ಆ ಕಾಲದಲ್ಲಿ ಮೊಬೈಲ್ ಬಳಕೆಯಲ್ಲಿ ಇಲ್ಲದ ಕಾರಣ ನಾನು ಅಂಗಡಿಯ ದೂರವಾಣಿ ಸಂಖ್ಯೆಯನ್ನು ನೀಡಿದ್ದೆ. ಮರುದಿನವೇ ನಾನು ಪ್ರವಾಸೋದ್ಯಮ ಕಚೇರಿಯಲ್ಲಿ ಹಾಜರಾದೆ. ಅವರು ವಿಷಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ನೇಮಕಾತಿಯ ಆದೇಶವನ್ನು ನೀಡಿದರು. ಅದು ಜೀವನದ ಹೊಸಯುಗದ ಆರಂಭವಾಗಿತ್ತು

ಅಲ್ಲಿ ನಿಮ್ಮ ಜೀವನಹೇಗಿತ್ತು ಮತ್ತು ಕೆಲಸ ಏನಾಗಿತ್ತು?

ಸಂಕ್ಷಿಪ್ತವಾಗಿ ಹೇಳಬೇಕಾದರೆ ಶಾರ್ಜಾ ಪ್ರವಾಸೋದ್ಯಮದ ಪ್ರಚಾರ(promotion). ಸಾಕಷ್ಟು ಜೀವನಾನುಭವ ಹೊಂದಿರುವ ಥೋಮಸ್ ರೊಂದಿಗೆ ಕೆಲಸಮಾಡಲು ಬಹಳ ಉತ್ಸಾಹವಾಗಿತ್ತು. ಒಂದು ವರ್ಷದವರೆಗೆ ಶಾರ್ಜಾ ಪ್ರವಾಸ ತಾಣಗಳ ಬಗ್ಗೆ ಕರಪತ್ರಗಳನ್ನು ತಯಾರುಮಾಡಿ ಅದಕ್ಕಾಗಿ ಚಿತ್ರಗಳನ್ನು ತೆಗೆದುಕೊಳ್ಳುವುದು ಹಾಗೂ ಪ್ರವಾಸಿಗರ ವೀಸಾ ಸಂಬಂಧ ಕಾರ್ಯಗಳನ್ನು ಸರಿಪಡಿಸಿಕೊಡುವುದು ಮತ್ತು ಅವರಿಗೆ ಬೇಕಾದ ವಸತಿಯ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿತ್ತು.

ಇಂದು ಪ್ರವಾಸೋದ್ಯಮದ ಆಕರ್ಷಕ ಕೇಂದ್ರ ದುಬೈ ಅಲ್ಲವೆ?

ಹೌದು. ಹೊರದೇಶಗಳಲ್ಲಿ ಗಲ್ಫ್ ಅಂದರೆ ದುಬೈ ಎಂಬ ಭಾವನೆ.ದುಬೈ ಅಭಿವೃದ್ಧಿ ಹೊಂದುತ್ತಾ ಇದೆ. ಹಿಂದೆ ನಾನು ಇಲ್ಲಿಗೆ ಬಂದ ಕಾಲದಲ್ಲಿ ಶಾರ್ಜಾದಿಂದ ದುಬೈಗೆ ಹೋಗುವ ರಸ್ತೆಗಳು ಮರುಭೂಮಿಗಳಿಂದ ಬೀಸುವ ಗಾಳಿಯ ರಭಸಕ್ಕೆ ಮರುಳುಗಳಿಂದ ಮುಚ್ಚಿರುತ್ತಿತ್ತು. ಕಾರಣ ಇವತ್ತು ನಾವು ಕಾಣುವಂತಹ ಕಟ್ಟಡಗಳು ರಸ್ತೆಗಳ ಎರಡು ಬದಿಗಳಲ್ಲಿ ಇರಲಿಲ್ಲ. ರಸ್ತೆಗಳಲ್ಲಿ ವಾಹನಗಳ ೨ ಚಕ್ರಗಳು ಮಾತ್ರ ಗೋಚರಿಸಿತಿತ್ತು. ಆಗ ಶಾರ್ಜಾ ಉತ್ತಮ ರಸ್ತೆ ಸೇತುವೆಗಳಿಂದ ಅಭಿವೃದ್ಧಿ ಹೊಂದಿತ್ತು. ದುಬೈ ನಿಧಾನವಾಗಿ ಅಭಿವೃದ್ದಿಯ ಹಾದಿ ಹಿಡಿಯಿತು. ಈಗ ವಿಶ್ವದ ಅತಿದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾ ದುಬೈಯಲ್ಲಿದೆ. ದುಬೈ ೨೦-೨೦ ಎಕ್ಸ್ಪೋ ಬರುವಹೊತ್ತಿಗೆ ಅಲ್ಲಿ ಬರುವ ಬದಲಾವಣೆಗಳು ಅನಿರೀಕ್ಷಿತವಾಗಿದೆ. ಅದಲ್ಲದೆ ದುಬೈ ಸೌತ್ ಎಂಬ ಹೊಸಾ ನಗರದ ನಿರ್ಮಾಣ ನಡಯುತ್ತಿದೆ.ಇವೆಲ್ಲವೂ ದೂರದೃಷ್ಟಿಯ ಆಡಳಿತಗಾರನ ಸಾಧನೆಗಳಾಗಿವೆ.
ಆರ್ಟಿಫಿಷಿಯಲ್ ಇಂಟಲಿಜೆಂಟ್ ಎಂಬ ಹೊಸ ತಂತ್ರಜ್ಞಾನಕ್ಕಾಗಿ ದುಬೈ ಸಚಿವರನ್ನು ನೇಮಿಸಿದೆ. ವಿಶ್ವದಲ್ಲಿ ಮೊದಲ ಬಾರಿಗೆ ಜನರ ಕ್ಷೇಮ, ಕುಟುಂಬಕಲ್ಯಾಣಕ್ಕಾಗಿ ಸಚಿವಸಂಪುಟವನ್ನು ರಚಿಸಲಾಗಿದೆ. ಶೈಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ದೇಶದ ಪ್ರತಿಯೊಬ್ಬ ಪ್ರಜೆಗಳ ಸಂತೋಷ ಮತ್ತು ಕ್ಷೇಮವನ್ನು ನೋಡಿಕೊಳ್ಳುವುದು ಒಬ್ಬ ದಿಟ್ಟ ಆಡಳಿತಗಾರನ ಜವಾಬ್ದಾರಿ ಎಂದು ಸಾರಿ ಹೇಳಿದ್ದಾರೆ. ಇತ್ತೀಚೆಗೆ ಅವರು ಬರೆದ ಪುಸ್ತಕ ರಿಫ್ಲೆಕ್ಷನ್ ಆನ್ ಹ್ಯಾಪಿನೆಸ್. ಅದರಲ್ಲಿ ದೇಶ ಹೇಗೆ ಮುನ್ನಡೆಸಬೇಕು ಮತ್ತು ಅಭಿವೃದ್ಧಿಯತ್ತ ಹೇಗೆ ಸಾಗಬೇಕು? ಇತ್ಯಾದಿ ವಿಷಯಗಳನ್ನು ಪ್ರತಿಪಾದಿಸಿದ್ದಾರೆ. ಅದಲ್ಲದೆ ಈ ಪುಸ್ತಕದ ಎಲ್ಲಾ ವಿಷಯಗಳು ಒಬ್ಬ ವ್ಯಕ್ತಿಯ ಯಶಸ್ವಿಗೆ ಅನ್ವಯಿಸಬಹುದಾಗಿದೆ. ಅದನ್ನು ಎಲ್ಲರೂ ಓದಬೇಕೆಂದು ನನ್ನ ಅಭಿಪ್ರಾಯ.

ಪ್ರವಾಸೋದ್ಯಮದಿಂದ ಪುಸ್ತಕ ಮೇಳದತ್ತ ನಿಮ್ಮ ದಿಕ್ಕನ್ನು ಹೇಗೆ ಬದಲಾಯಿಸಿದ್ದೀರಿ?

ಶಾರ್ಜಾದಲ್ಲಿ ಮೊದಲ ಪುಸ್ತಕ ಮೇಳ ಪ್ರಾರಂಭಿಸುವಾಗ ನನ್ನ ಕೆಲಸ ಪ್ರವಾಸೋದ್ಯಮದಲ್ಲಾಗಿತ್ತು. ಪ್ರಾರಂಭದಲ್ಲಿ ಈ ಮೇಳದ ಹೆಸರು ಶಾರ್ಜಾ ಇಸ್ಲಾಮಿಕ್ ಪುಸ್ತಕ ಮೇಳ ಎಂದಾಗಿತ್ತು. ಇದರ ನಿರ್ದೇಶಕ ಮುಹಮ್ಮದ್ ಬಿನ್ ಮೂಸ ಎಂಬವರಾಗಿದ್ದರು. ಪುಸ್ತಕ ಮೇಳ ಎಂಬ ಕಲ್ಪನೆಯನ್ನು ಮೊದಲು ರೂಪಿಸಿದವರು ಅವರೇ ಆಗಿದ್ದರು. ಪ್ಯಾಲೆಸ್ಟೀನಿಯನ್ ಪ್ರಜೆಯಾಗಿದ್ದ ಅವರು ಶಾರ್ಜಾ ಸುಲ್ತಾನರ ಶಾಲಾ ಶಿಕ್ಷಕರಾಗಿದ್ದರು. ಅವರ ಗೌರವ ಸಂಕೇತವಾಗಿ ಇವತ್ತಿಗೂ ಅವರಿಗೆ ಆಡಳಿತ ಕಚೇರಿಯಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ. ನನ್ನನ್ನೊಳಗೊಂಡ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಇಲಾಖೆಯಾಗಿತ್ತು ಪುಸ್ತಕ ಮೇಳವನ್ನು ಆಯೋಜಿಸಿದ್ದು. ಹಾಗಾಗಿ ನನಗೆ ಸಾಕಷ್ಟು ಕೆಲಸಗಳಿದ್ದವು. ನಂತರ ಸುಡಾನ್ ಮೂಲದ ಡಾ.ಯೂಸುಫ್ ಫಾಯದಾವಿ ಪುಸ್ತಕ ಮೇಳದ ಮುಖ್ಯಸ್ಥರಾದರು. ೨೫ ವರ್ಷಗಳ ಕಾಲ ಅವರು ನಿರ್ದೇಶಕರಾಗಿದ್ದರು. ಆ ಕಾಲದಲ್ಲಿ ಅರಬ್ ರಾಷ್ಟ್ರಗಳ ಪುಸ್ತಕಗಳನ್ನು ಮಾತ್ರ ಪ್ರದರ್ಶನಕ್ಕೆ ಇಟ್ಟಿದ್ದರು. ಪ್ರಾರಂಭದಿಂದಲೂ ನನ್ನ ಜವಾಬ್ದಾರಿ UAE ಯ ಹೊರಗಿನ ಅಂತಾರಾಷ್ಟ್ರೀಯ ಪುಸ್ತಕ ವಿಭಾಗದಲ್ಲಾಗಿತ್ತು. ನಂತರ ಪುಸ್ತಕ ಮೇಳದ ಪ್ರಾಧಿಕಾರದ ಅಧ್ಯಕ್ಷರಾಗಿ ಹಣಕಾಸು ನಿಯಂತ್ರಕರಾಗಿದ್ದ ಅಹ್ಮದ್ ಎಂಬ ಅರಬ್ ವ್ಯಕ್ತಿ ಆಯ್ಕೆಯಾದರು. ನಾವು ಒಟ್ಟಿಗೆ ಕೆಲಸ ಮಾಡಿದ್ದೆವು. ಅವರು ಆಯ್ಕೆಯಾದಾಗ ನನ್ನ ಕರ್ತವ್ಯಗಳು ಹೆಚ್ಚಾದವು. ಪುಸ್ತಕ ಮೇಳವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತರಲು ಹಲವು ರೀತಿಯ ಯೋಜನೆಗಳನ್ನು ಮುಂದಿಟ್ಟೆವು. ಹೇರಳವಾಗಿ ಭಾರತೀಯರನ್ನು ಹೊಂದಿರುವ ದೇಶದಲ್ಲಿ ಭಾರತೀಯರಿಗೆ ಪಥ್ಯವಾಗುವ ಹಲವು ವಿಧಾನಗಳನ್ನು ಪ್ರಾಬಲ್ಯಕ್ಕೆ ತಂದ ಕಾರಣ ಪುಸ್ತಕ ಮೇಳ ಯಶಸ್ಸನ್ನು ಕಂಡಿತು.ಇ ದು ೩೬ನೆ ಪುಸ್ತಕ ಮೇಳವಾಗಿತ್ತು . ಈ ಮೇಳದ ಪ್ರಾರಂಭದಿಂದಲೇ ನಾನು ಅದರ ಭಾಗವಾಗಿದ್ದೆ. ಈ ಕ್ರೆಡಿಟ್ ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ. ಶಾರ್ಜಾ ಸುಲ್ತಾನ್ ಮತ್ತು ನಾನು ಇದರ ಪ್ರಾರಂಭದಿಂದಲೇ ಇರುವವರು. ಅಲ್ಲದೆ ಈ ಪ್ರಾಧಿಕಾರ ಸಂಘಟನೆಯಲ್ಲಿ ಅರಬೇತರ ಏಕೈಕ ವ್ಯಕ್ತಿ ನಾನಾಗಿರುವೆನು.

ಈ ಎಲ್ಲ ಯಾತ್ರೆ ಕೆಲಸಗಳ ಮಧ್ಯೆ ನಿಮ್ಮ ಜೀವನ ಹೇಗೆ ಕ್ರಮಪಡಿಸುವಿರಿ ?

ಅನಿವಾಸಿ ಜೀವನವನ್ನು ಪ್ರಾರಂಭಿಸಿ ಈಗ ೩೭ ವರ್ಷಗಳು ಕಳೆದಿದೆ. ಜೀವನದಲ್ಲಿ ದೊಡ್ಡಬದಲಾವಣೆಗಳೇನು ಆಗಲಿಲ್ಲ. ಊರಲ್ಲಿ ಜಮೀನು ಆಸ್ತಿ ಇರುವುದರಿಂದ ಹಣಮಾಡುವ ದುರಾಸೆ ಏನೂ ಇರಲಿಲ್ಲ. ಈ ಉದ್ಯೋಗ ಉತ್ತಮ ಜೀವನ ಪರಿಸ್ಥಿಯನ್ನು ಸೃಷ್ಠಿಸಿದೆ. ಒಬ್ಬಳೇ ಮಗಳು ಅಶ್ವತಿ, ಅವಳ ಮದುವೆಯಾಗಿದೆ. ಅಳಿಯ ವಾಯುಸೇನೆಯಲ್ಲಿ ಕಮಾಂಡರ್ ಆಗಿ ಕೆಲಸಮಾಡುತ್ತಿದ್ದಾರೆ. ಅವರಿಬ್ಬರೂ ಬೆಂಗಳೂರಲ್ಲಿ ನೆಲೆಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಉಪಾಸನ ಮತ್ತು ಉಜ್ವಲ್. ಮಗಳು ಆಟವಾಡಿ ಬೆಳೆದ ಈ ಫ್ಲ್ಯಾಟನ್ನು ತೊರೆಯಲು ಸಾಧ್ಯವಾಗದ ಕಾರಣ ಕಳೆದ ೧೭ ವರ್ಷದಿಂದ ನಾನು ಹೆಂಡತಿ ಇಲ್ಲೇ ವಾಸವಿದ್ದೇವೆ.
ನಾನು ಬೆಳಿಗಿನ ಜಾವಾ ೪.೩೦ಕ್ಕೆ ಎದ್ದೇಳುವೆ. ಯೋಗ ಮತ್ತು ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತೇನೆ. ನಂತರ ಪುಸ್ತಕ ಓದುವೆ. ೧ ಗಂಟೆಗಳ ಕಾಲ ನಡೆಯಲು(walking ) ಹೋಗುವೆನು. ಪ್ರತಿದಿನ ದೀಪವನ್ನು ಹಚ್ಚಿ ೧೦ ನಿಮಿಷಗಳ ಕಾಲ ಪ್ರಾರ್ಥಿಸುವೆ. ಅದು ನನ್ನ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಹಿಂದಿನಿಂದಲೂ ಟಿ ಶರ್ಟ್ ಮತ್ತು ಕ್ರೀಡಾಬೂಟುಗಳನ್ನು ಧರಿಸುವುದು ರೂಡಿ. ದುಬಾರಿ ಕಾರು,ವಾಚುಗಳ ಅಗತ್ಯ ನನಗಿಲ್ಲ. ಸರಳ ಜೀವನವನ್ನು ಇಷ್ಟಪಡುತ್ತೇನೆ. ಮಿತವಾದ ಆಹಾರ. ಉಪ್ಪಿನಕಾಯಿ,ಸಕ್ಕರೆ ಮತ್ತು ಹಪ್ಪಳವನ್ನು ಸೇವಿಸುವುದಿಲ್ಲ. ಕೆಲಸದ ನಂತರ ಹೆಂಡತಿಯೊಂದಿಗೆ ಶಾಂತವಾದ ರಸ್ತೆಯಲ್ಲಿ ಹಾಡು ಕೇಳುತ್ತಾ ಕೆಲವೊಮ್ಮೆ ನಾವೇ ಹಾಡುತ್ತಾ, ಮಗಳ ಮೊಮ್ಮಕ್ಕಳ ಅಥವಾ ಕುಟುಂಬದವರ ಕಾರ್ಯಗಳನ್ನು ಹೇಳಿ ನಗರವನ್ನು ಸುತ್ತಿ ಕಾರನ್ನು ಚಲಾಯಿಸುತ್ತಾ ಮನೆಗೆ ಹಿಂತಿರುಗುತ್ತೇವೆ.


ಮೋಹನ್ ಕುಮಾರ್


ಶಾರ್ಜಾ ಸರಕಾರದ ಸಾಂಸ್ಕೃತಿಕ ಪ್ರತಿನಿಧಿ. ಶಾರ್ಜಾ ಅಂತರಾಷ್ಟ್ರೀಯ ಪುಸ್ತಕ ಮೇಳದ ರೂವಾರಿ. ಶಾರ್ಜಾ ಪುಸ್ತಕ ಪ್ರಾಧಿಕಾರ ಸಮಿತಿಯ ಅರಬ್ಬೇತರ ಏಕೈಕ ಮಲಯಾಳಿ ಸದಸ್ಯ. ಕಣ್ಣಾನೂರಿನ ಪೆರಿಂಗೋಮ್ ನಿವಾಸಿ.

ಅನು: ಎಂ.ಜೆ ಯಾಸೀನ್ ಸಿದ್ದಾಪುರ

ಜಿನ್ನ್ ಗಳ ನಗರ

ನನ್ನ ಜೀವನದಲ್ಲಿ ನಾನು ಮೊದಲ ಬಾರಿಗೆ ಓರ್ವ ಸೂಫಿಯನ್ನು ಭೇಟಿಯಾಗಿದ್ದು ಫಿರೋಝ್ ಶಾ ಕೋಟ್ಲಾದಲ್ಲಿ. ತೀಕ್ಷ್ಣ ಕಣ್ಣುಗಳು ಮತ್ತು ಮೈನಾದ ಗೂಡಿನಂತಿದ್ದ ಗಡ್ಡವನ್ನು ಇಳಿಬಿಟ್ಟಿದ್ದ ಅವರ ಹೆಸರು ಪೀರ್ ಸದ್ರುದ್ದೀನ್. ಅವರು ಕುಡಿಯಲು ಚಹಾ ಕೊಟ್ಟು, ಕಾರ್ಪೆಟ್ ಮೇಲೆ ನನ್ನನ್ನು ಕೂರಲು ಹೇಳಿ ಜಿನ್ನ್ ಗಳ ಬಗ್ಗೆ ಹೇಳಲು ಪ್ರಾರಂಭಿಸಿದರು.
ಹೊಸ ಜಗತ್ತಿನಲ್ಲಿ ಅಲ್ಲಾಹನು ಮಣ್ಣಿನಿಂದ ಮಾನವಕುಲವನ್ನು ಸೃಷ್ಟಿಸಿದಾಗ, ಇನ್ನೊಂದು ವರ್ಗವನ್ನೂ ಸಹ ಸೃಷ್ಟಿಸಿದ. ಎಲ್ಲ ವಿಷಯದಲ್ಲೂ ಮನುಷ್ಯರನ್ನೇ ಹೋಲುವ ಅವರನ್ನು ಬೆಂಕಿಯಿಂದ ಸೃಷ್ಟಿಸಲಾಗಿದೆ. ಜಿನ್ನ್‌ಗಳು ಎಂದರೆ ಆತ್ಮಗಳು. ಬರಿಗಣ್ಣಿಗೆ ಕಾಣದ ಒಂದು ವರ್ಗ. ಅವರನ್ನು ನೋಡಬೇಕಾದರೆ ಪ್ರಾರ್ಥನೆ ಮತ್ತು ವ್ರತಾನುಷ್ಠಾನ ಮಾಡಬೇಕು. ಪೀರ್ ಸದರುದ್ದೀನ್ ಅರೆನಗ್ನನಾಗಿ ಅನ್ನಾಹಾರವಿಲ್ಲದೆ ನಲವತ್ತೊಂದು ದಿನಗಳನ್ನು ಹಿಮಾಲಯದ ತಪ್ಪಲಲ್ಲಿ ಕಳೆದಿದ್ದರಂತೆ! ನಂತರದ ನಲವತ್ತೊಂದು ದಿನಗಳನ್ನು ಯಮುನಾ ನದಿಯಲ್ಲಿ ಕುತ್ತಿಗೆಯವರೆಗಿನ ನೀರಿನಲ್ಲೂ ಕಳೆದಿದ್ದರು.
ಒಂದು ರಾತ್ರಿ ಖಬರಸ್ಥಾನದಲ್ಲಿ ನಿದ್ದೆಗೆ ಜಾರಿದ್ದಾಗ ಅವರನ್ನು ನೋಡಲು ಜಿನ್ನ್ ಗಳ ರಾಜನ ಆಗಮನವಾಯಿತು. ನೋಡಲು ಕಪ್ಪು ಬಣ್ಣ ಹೊಂದಿದ್ದ, ಒಂದು ಮರದ ಎತ್ತರಕ್ಕೆ ಇದ್ದ ಆ ಜಿನ್ನ್ ಗೆ ಹಣೆಯ ಮಧ್ಯದಲ್ಲಿ ಒಂದು ಕಣ್ಣು ಇತ್ತು ಎಂದು ಪೀರ್ ವಿವರಿಸಿದರು. ‘ನಿನ್ನ ಬಯಕೆಗಳೇನು?’ ಎಂದು ಕೇಳಿದ. ಪ್ರತಿ ಬಾರಿಯೂ ನಾನು ನಿರಾಕರಿಸಿದೆ.
ನನಗೆ ಜಿನ್ನನ್ನು ತೋರಿಸುವಿರಾ? ಎಂದು ಅವರಿಗೆ ನಾನು ಕೇಳಿದೆನು.
‘ಖಂಡಿತ,’ ಎಂದು ಪೀರ್ ಉತ್ತರಿಸಿದರು. ‘ಆದರೆ ನೀನು ಓಡುವೆ’ ಎಂದರು.

ಆಗ ನನಗೆ ಕೇವಲ ಹದಿನೇಳು ವರ್ಷವಾಗಿತ್ತು. ಉತ್ತರ ಯಾರ್ಕ್‌ಷೈರ್ ನ ದೂರದ ಕಣಿವೆಯ ಒಂದು ಊರಿನಲ್ಲಿ ಹತ್ತು ವರ್ಷಗಳ ಶಿಕ್ಷಣ ಪಡೆದ ನಂತರ, ಇದ್ದಕ್ಕಿದ್ದಂತೆ ನನ್ನನ್ನು ನಾನು ದೆಹಲಿಯಲ್ಲಿ ಕಂಡುಕೊಂಡೆನು. ಪ್ರಾರಂಭದಲ್ಲಿ ಆ ಬೃಹನ್ನಗರವನ್ನು ಕಂಡು ಮೂಕವಿಸ್ಮಿತನಾಗಿದ್ದೆ. ಹಿಂದೆಂದಿಗೂ ಕಂಡಿದ್ದಕ್ಕಿಂತಲೂ ಸಂಪೂರ್ಣವಾಗಿ ಭಿನ್ನವಾಗಿತ್ತು. ಅಪಾರ ಸಂಪತ್ತು ಮತ್ತು ಅಷ್ಟೇ ಭಯಾನಕತೆಯನ್ನು ಮೈಗೂಡಿಸಿದ್ದ, ಚಕ್ರವ್ಯೂಹದಂತಿದ್ದ, ಅನೇಕ ಅರಮನೆ ಗೋಪುರಗಳಿದ್ದ, ತೆರೆದ ಚರಂಡಿಗಳ ಆಗರವಾಗಿದ್ದ, ತೀವ್ರ ಜನಸಂದಣಿಯ, ಗುಮ್ಮಟಗಳಿಂದ ತುಂಬಿದ್ದ, ಹೊಗೆಯುಕ್ತ ವಾತಾವರಣದ ನಗರವಾಗಿ ದೆಹಲಿಯನ್ನು ಮೊದಲಿಗೆ ನಾನು ಕಂಡೆ.
ಇಷ್ಟು ಮಾತ್ರವಲ್ಲದೇ, ದೆಹಲಿಯ ಇನ್ನೊಂದು ಮುಖವನ್ನು ಕೂಡ ನಾನು ಕಂಡೆ. ತಳಬುಡವಿಲ್ಲದ ಪುರಾವೆ ರಹಿತ ಕಥೆಗಳನ್ನು ದೆಹಲಿ ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿತ್ತು. ಕಥೆಗಳು ವಾಸ್ತವಕ್ಕಿಂತ ಬಲುದೂರ. ಗೆಳೆಯರು ಜನಪಥ್‌ನ ತಲೆಹಿಡುಕರ ಕುರಿತು ಗೋಳಿಡಬಹುದು. ಬೇಡವೇ ಬೇಡ ಎಂದು ಗೋವಾ ತೀರದೆಡೆ ಪ್ರವಾಸ ಹೊರಡಬಹುದು. ಆದರೆ, ನನಗಂತೂ ದೆಹಲಿ ಯಾವಾಗಲೂ ಗಾಢಮೋಹಿನಿಯಂತೆ ಕಾಡುವುದು. ನಾನು ಕಾಲಹರಣ ಮಾಡುತ್ತಿದ್ದ ಸಮಯದಲ್ಲಿಯೇ ನಗರದ ಉತ್ತರ ಭಾಗದಲ್ಲಿದ್ದ ನಿರಾಶ್ರಿತರ ನಿಲಯವೊಂದರಲ್ಲಿ ನನಗೆ ಕೆಲಸ ಸಿಕ್ಕಿತು.
ನಗರದ ಕೊಚ್ಚೆ ಗಳನ್ನೆಲ್ಲಾ ತಳ್ಳುವ ಕೊಳಚೆ ಗುಂಡಿಯಿದ್ದದ್ದು ನೋಡದೆ ಭಗಿನಿಯರು ನನಗೆ ಅದೇ ಕೊಠಡಿಯನ್ನು ಕೊಟ್ಟರು. ಅಲ್ಲಿಂದ ಬೆಳಗ್ಗೆದ್ದು ಹೊರ ನೋಡಿದರೆ ತಗಡಿನ ಆಗಸದ ಕೆಳಗೆ ಪೆಚ್ಚು ಮೋರೆ ಹಾಕಿಕೊಂಡು ಗಬ್ಬು ವಾಸನೆ ಬೀರುವ ಇಕ್ಕೆಲಗಳಲ್ಲಿ ಚಿಂದಿ ಆಯುವ ಮಂದಿಗಳನ್ನು ಕಾಣಬಹುದಿತ್ತು. ಚಿತ್ರದರ್ಶಕದಲ್ಲಿ ಮಿನುಗುವ ಗಾಜಿನ ತುಣುಕುಗಳ ಹಾಗೆ ಇರುವ ವಿನ್ಯಾಸಗಳನ್ನು ರೂಪಿಸುತ್ತಿದ್ದ ಬೇಸಗೆಯ ಬಟ್ಟೆಗಳ ಸುತ್ತ ರಣಹದ್ದುಗಳು ಹಾರುತ್ತಿದ್ದವು. ಅಂಗಣವನ್ನು ಗುಡಿಸಿದ ನಂತರ ಎಲ್ಲರೂ ಸುರಕ್ಷಿತವಾಗಿ ಮಲಗುವ ಮಧ್ಯಾಹ್ನ ಹೊತ್ತಲ್ಲಿ ನಾನು ಹೊರಗಿಳಿಯುತ್ತಿದ್ದೆ. ಹಳೆಯ ನಗರದ ಒಳ ಹೊಕ್ಕು ಸುತ್ತಾಡಲು ರಿಕ್ಷಾ ಹಿಡಿಯುತ್ತಿದ್ದೆ. ಕಿರಿದಾಗುತ್ತಾ ಬರುವ ಲಾಳಿಕೆಯಂತಹ ಗಲ್ಲಿಗಳ, ಕಿರುದಾರಿಗಳ, ಓಣಿಗಳ, ನಿಲುಕೊನೆಗಳ ಮೂಲಕ ಸಂಚರಿಸುವಾಗ ನನ್ನ ಹತ್ತಿರದಿಂದ ಸಾಗುವ ಮನೆಗಳು ನನ್ನನ್ನು ಆವರಿಸುವಂತೆ ಅನುಭವವಾಗುತ್ತಿತ್ತು.

ವಿಲಿಯಂ ಡಾರ್ಲಿಂಪ್ಲ್


ಬೇಸಿಗೆಯಲ್ಲಿ ದಟ್ಟಣೆ ಕಡಿಮೆ ಇರುವ ಲುಟೈನ್ಸ್ ನ ದೆಹಲಿಗೆ ನನ್ನ ಆದ್ಯತೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಗುಲ್ ಮೊಹರ್ ಗಳಿಂದ ತುಂಬಿದ ಬಂಗಲೆಗಳ ಎದುರು ಬೇರೂರಿರುವ ಬೇವು, ಹುಣಸೆ ಮರಗಳ ನೆರಳು ಪಡೆಯುತ್ತಾ ಸಾಗುತ್ತಿದ್ದೆ. ಎರಡೂ ದೆಹಲಿಗಳಲ್ಲು ಹಳೆಯ ಕಾಲದ ಅವಶೇಷಗಳು ನನ್ನನ್ನು ಆಕರ್ಷಿಸಿದವು. ಹೊಸ ಕಾಲೊನಿಗಳ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಲು ಯೋಜಕರು ಎಷ್ಟೇ ಪ್ರಯತ್ನಿಸಿದರೂ, ಮುರಿದು ಬಿದ್ದ ಸಮಾಧಿಗಳು, ಹಳೆಯ ಮಸೀದಿಗಳು, ಹಳೆಯ ಇಸ್ಲಾಮಿಕ್ ಕಾಲೇಜು/ ಮದ್ರಸಾಗಳು ಒಳನುಗ್ಗಿದಂತೆ ಕಾಣುತ್ತಿದ್ದವು. ಗಾಲ್ಫ್ ಕೋರ್ಸ್ ಗಳ ಮನೋಹರವಾದ ದೃಶ್ಯಗಳನ್ನು ಕೂಡ ಅವುಗಳು ಅಸ್ಪಷ್ಟವಾಗಿಸುತ್ತಿದ್ದವು.
ನವದೆಹಲಿಯು ಹೊಸ ನಗರವಲ್ಲ. ಅದರ ವಿಶಾಲವಾದ ರಸ್ತೆಗಳಲ್ಲಿ ಭಯಾನಕವಾದ ಸಮಾಧಿಗಳಿವೆ, ರಾಜವಂಶದ ಸ್ಮಶಾನಗಳೂ ಇವೆ. ದೆಹಲಿಯಲ್ಲಿ ಏಳು ಮೃತನಗರಗಳಿವೆ. ಸದ್ಯ ಇರುವುದು ಎಂಟನೇ ನಗರ ಎಂದು ಕೆಲವರು ಹೇಳುತ್ತಾರೆ. ಹದಿನೈದನೆಯದ್ದು ಎಂದು, ಇಪ್ಪತ್ತನೆಯದ್ದು ಎಂದೂ ಹೇಳುವವರಿದ್ದಾರೆ. ದೆಹಲಿಯು ಹಲವು ಬಾರಿ ಧ್ವಂಸಗೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ದೆಹಲಿಯ ಹಲವು ಕಡೆ ಹರಡಿಕೊಂಡಿರುವ ಮಾನವ ಅವಶೇಷಗಳು ದೆಹಲಿಯನ್ನು ವಿಶಿಷ್ಟವಾಗಿಸಿದೆ. ದೆಹಲಿಯ ಪ್ರತಿಯೊಂದು ಪ್ರದೇಶವೂ ವಿಭಿನ್ನ ಶತಮಾನ- ಸಹಸ್ರಮಾನದ ಅವಶೇಷಗಳನ್ನು ಉಳಿಸಿಕೊಂಡಿವೆ. 1980 ರ ದಶಕದಲ್ಲಿ ಮಾರುತಿ ಕಾರು ಮತ್ತು ಹೊಸ ವಸ್ತುಗಳೊಂದಿಗೆ ದೆಹಲಿಗೆ ವಲಸೆ ಬಂದ ಪಂಜಾಬಿಗರು ನಗರಕ್ಕೆ ಹೊಸ ಸ್ಪರ್ಷ ನೀಡಿದರು. ಲೋಧಿ ಗಾರ್ಡನ್ ನಲ್ಲಿ ಕಾಣಸಿಗುವ ಓರ್ವ ವೃದ್ಧ ಜನರಲ್ ನಿಮ್ಮನ್ನು ಅರ್ಧ ಶತಮಾನದ ಹಿಂದಿನ ದಿನಗಳಿಗೆ ಕೊಂಡೊಯ್ಯಬಲ್ಲ. ಆತನ ದಪ್ಪ ಮೀಸೆ ಮತ್ತುಲಿಂ ಹೀಲಿಂಗ್ ಕಾಮಿಡಿಯಂತಹ ಮಾತಿನ ಶೈಲಿಯನ್ನು ನೋಡಿದರೆ ಆತ ಇನ್ನೂ 1946 ರಲ್ಲಿ ಬದುಕುತ್ತಿದ್ದಾನೆ ಎಂದು ಅನ್ನಿಸಬಹುದು. ಆಸ್ಥಾನದಲ್ಲಿ ಮಾತನಾಡುವಂತಹ ಉರ್ದು ಭಾಷೆಯಲ್ಲಿ ಮಾತನಾಡುವ ಹಳೆಯ ದೆಹಲಿಯ ಖೋಜಾ (Eunuchs) ಗಳಿಗೆ ಹಳೆಯ ದೆಹಲಿಯ ಮೊಘಲ್ ಆಡಳಿತದ ಪ್ರಭಾವವು ಇನ್ನೂ ಆವರಿಸಿಕೊಂಡಿತ್ತು. ನಿಗಂಬೋಧ್ ಘಾಟ್ ನ ಸನ್ಯಾಸಿಗಳನ್ನು ನೋಡುವಾಗ ಪೌರಾಣಿಕ ಇಂದ್ರಪ್ರಸ್ಥದ ಕೆಲವೊಂದು ನೆನಪುಗಳು ಬರುತ್ತಿದ್ದವು.

ಎಲ್ಲಾ ವಯೋಮಾನದ ಜನರನ್ನೂ ದೆಹಲಿ ಜನತೆಯಲ್ಲಿ ಕಾಣಬಹುದು. ಹಲವು ಶತಮಾನಗಳ ಐತಿಹ್ಯಗಳು ಕೂಡ ಅಲ್ಲಿ ಅಸ್ತಿತ್ವದಲ್ಲಿವೆ. ವಿಭಿನ್ನ ಯುಗಗಳ ಮನೋಧರ್ಮಗಳು ಕೂಡ ಅಲ್ಲೇ ಹುಟ್ಟಿ, ಬೆಳೆದು ಮಣ್ಣಾದವು.
ದೆಹಲಿಯು ಪ್ರತಿ ಬಾರಿಯೂ ನಾಶದ ನಂತರ ತಲೆಯೆತ್ತುದ್ದಿದ್ದರ ಹಿಂದಿನ ರಹಸ್ಯವನ್ನು ಪೀರ್ ಸದರುದ್ದೀನರೊಂದಿಗಿನ ಭೇಟಿಯ ಎಷ್ಟೋ ತಿಂಗಳುಗಳ ನಂತರ ನಾನು ಅರ್ಥೈಸಿದೆನು. ದೆಹಲಿಯು ಜಿನ್ನ್’ಗಳ ನಗರ ಎಂದು ಪೀರ್ ಹೇಳುತ್ತಾರೆ. ಆಕ್ರಮಣಕಾರರಿಂದ ಹಲವು ಬಾರಿ ಧ್ವಂಸಗೊಂಡರೂ ದೆಹಲಿಯು ಪುನಃ ತಲೆಯೆತ್ತಿ ನಿಂತಿತು. ಬೆಂಕಿಯಿಂದ ಫೀನಿಕ್ಸ್ ಹಕ್ಕಿಯು ಎದ್ದು ಬರುವಂತೆ ಎದ್ದು ಬಂತು. ಹಿಂದುಗಳ ಪುನರ್ಜನ್ಮದ ನಂಬಿಕೆಯಂತೆ, ಆ ನಗರವು ಪ್ರತಿ ಸಲವೂ ಗತಿಸಿದ ಮೇಲೂ ಪುನರ್ಜನ್ಮ ಹೊಂದುತ್ತಿತ್ತು. ಶತಮಾನಗಳ ನಡುವೆ ಹೊಸ ಹೊಸ ರೂಪ ತಾಳುತ್ತಿತ್ತು. ಇದಕ್ಕೆ ಪ್ರಮುಖ ಕಾರಣ, ಸದರುದ್ದೀನರು ಹೇಳುವಂತೆ, ಇದು ಜಿನ್ನ್’ಗಳ ನಗರವಾಗಿರುವುದು. ಜಿನ್ನ್’ಗಳು ಆ ನಗರವನ್ನು ಇಷ್ಟಪಟ್ಟಿದ್ದರು. ಅದು ನಿರ್ಜನವಾಗಿರುವುದನ್ನು ನೋಡಲು ಅವರಿಗೆ ಸಾಧ್ಯವಾಗಲಿಲ್ಲ. ದೆಹಲಿಯ ಪ್ರತಿಯೊಂದು ಮನೆ, ಗಲ್ಲಿಯೂ ಜಿನ್ನ್’ಗಳ ವಾಸಸ್ಥಾನವಾಗಿದ್ದವು. ಅವುಗಳನ್ನು ನೋಡಲು ನಮಗೆ ಸಾಧ್ಯವಿಲ್ಲ. ಚೆನ್ನಾಗಿ ಗಮನಿಸಿದರೆ, ಏಕಾಗ್ರತೆ ಹೊಂದಿದ್ದರೆ ಅವರ ಸಾನಿಧ್ಯದ ಅನುಭವವುಂಟಾಗುವುದು. ನೀವು ಅದೃಷ್ಟವಂತರಾಗಿದ್ದರೆ ಅವರ ಮಾತುಗಳನ್ನು, ಉಸಿರಿನ ಏರಿಳಿತಗಳನ್ನು ಗ್ರಹಿಸಬಹುದು.

ಮೂಲ: ವಿಲಿಯಂ ಡಾರ್ಲಿಂಪ್ಲ್
ಕನ್ನಡಕ್ಕೆ: ಮುಹಮ್ಮದ್ ಶಮೀರ್, ಪೆರುವಾಜೆ

ಶರೀಅಃದ ಬಹುತ್ವದ ನೆಲೆಗಳು ಮತ್ತು ವಸಾಹುಶಾಹಿಗಳ ಕೋಡಿಫಿಕೇಶನ್

“ಅಬ್ಬಾಸೀ ಸಾಮ್ರಾಜ್ಯದ ಖಲೀಫಾ  ಅಬೂ ಜಅಫರುಲ್ ಮನ್ಸೂರ್ ರವರೊಂದಿಗೆ ಮಂತ್ರಿ ಇಬ್ನ್ ಅಲ್ ಮುಖಫ್ಫಅ ರವರು ಆಡಳಿತದಲ್ಲಿನ ಪಾರದರ್ಶಕತೆಯನ್ನು ಖಚಿತಪಡಿಸಲಿಕ್ಕಾಗಿ ಒಂದು ಸಲಹೆ ಕೊಡುತ್ತಾರೆ. ತಮ್ಮ ಆಡಳಿತದ ಅಡಿಯಲ್ಲಿ ನಡೆಯುವ ಶರೀಅತ್ ವ್ಯವಹಾರಗಳನ್ನು ಏಕರೂಪಗೊಳಿಸಿ ಒಂದು ನಾಗರಿಕ ಕಾನೂನು ಸಂಹಿತೆ ರೂಪೀಕರಿಸಬೇಕು ಎಂದಾಗಿತ್ತು ಮಂತ್ರಿಯ ಸಲಹೆ. ಆಡಳಿತ ಸುಧಾರಣೆಯನ್ನು ಬಯಸಿದ ಖಲೀಫಾ ಈ ಸಲಹೆಯನ್ನು ಗಂಭೀರವಾಗಿ ತೆಗೆದು ಕೊಳ್ಳುತ್ತಾರೆ. ಆ ಕಾಲದಲ್ಲಿ ಕಾನೂನು ವಿಚಾರಗಳನ್ನು  ನಿಖರವಾದ ರೀತಿಯಲ್ಲಿ ಕಲೆ ಹಾಕಲಾದ ಗ್ರಂಥ ಎಂಬ ನೆಲೆಯಲ್ಲಿ ಪ್ರಸಿದ್ಧವಾದ ‘ ಮುವತ್ತ ‘ ಗ್ರಂಥವನ್ನು ಅಧಿಕೃತ ಕಾನೂನು ಗ್ರಂಥವಾಗಿ ನಿರ್ಣಯಿಸಿ ರಾಜಾದೇಶ ಹೊರಡಿಸಲು ಖಲೀಫಾ ಚಿಂತನೆ ನಡೆಸುತ್ತಾರೆ. ಹಜ್ ವೇಳೆಯಲ್ಲಿ ಆ ಗ್ರಂಥದ ಕರ್ತೃ ಆಗಿರುವ ಇಮಾಮ್ ಮಾಲಿಕ್ ರನ್ನು ಭೇಟಿ ಮಾಡಿದ ಖಲೀಫಾ ಅವರ ಸಮಕ್ಷಮ ಸದ್ರಿ ಅಪೇಕ್ಷೆಯನ್ನು ಮುಂದಿಡುತ್ತಾರೆ. “ತಾವು ಬರೆದ ಈ ಗ್ರಂಥದ ನಕಲುಗಳನ್ನು ಎಲ್ಲಾ ನಗರ ಗಳಿಗೆ ಕಳುಹಿಸಿ ಕೊಟ್ಟು ಇನ್ನು ಮುಂದೆ ಈ ಪಠ್ಯವನ್ನು   ಆಧರಿಸಿ ಮಾತ್ರವೆ ಕಾನೂನು ನಿರ್ಣಯ ಕೈಗೊಳ್ಳಬೇಕು ಎಂಬ ಆದೇಶ ಕೊಡಲು ನಾನು ಬಯಸಿದ್ದೇನೆ. ತಾವು ಮದೀನಾದವರು. ಮದೀನಾದ ಜ್ಞಾನ ಅಧಿಕೃತ’. ಆದರೆ ಖಲೀಫಾರ ಈ ಅಪೇಕ್ಷೆಯನ್ನು ತಿರಸ್ಕರಿಸಿದ ಇಮಾಮರು ಈ ರೀತಿ ಪ್ರತಿಕ್ರಿಯಿಸುತ್ತಾರೆ: ”

ಅಮೀರುಲ್ ಮುಅಮಿನೀನ್, ನೀವು ಇದನ್ನು ಜಾರಿ ಮಾಡಬಾರದು. ಪ್ರತಿಯೊಂದು ಊರಿನವರಿಗೆ ವಿಭಿನ್ನ ಅಭಿಪ್ರಾಯಗಳು ದೊರಕಿವೆ. ಬೇರೆ ಬೇರೆ ಹದೀಸುಗಳನ್ನು ಅವರು ಕೇಳಿರುತ್ತಾರೆ. ಪೈಗಂಬರರ ಮತ್ತವರ ಸಂಗಡಿಗರ, ಅವರ ನಂತರದ ತಲೆಮಾರಿನ ವಿದ್ವಾಂಸರ ನಡುವೆ ಚಾಲ್ತಿಯಲ್ಲಿದ್ದ ವಿವಿಧ ರೀತಿಯ ಕಾನೂನು ಅಭಿಪ್ರಾಯಗಳ ಪೈಕಿ ತಮಗೆ ತಲುಪಿದ ಒಂದರಂತೆ ಅವರು ಜೀವಿಸುತ್ತಿದ್ದಾರೆ. ಅವರ ಅಭಿಪ್ರಾಯಗಳನ್ನು ರದ್ದು ಮಾಡುವುದು ತರವಲ್ಲ. ಜನರು ಅವರ ಅಭಿಪ್ರಾಯಗಳ ಪ್ರಕಾರ ಕಾರ್ಯವೆಸಗಲಿ. ಪ್ರತಿಯೊಂದು ಪ್ರದೇಶದವರು ಅವರಿಗೆ ಲಭಿಸಿದ ಕಾನೂನುಗಳನ್ನು ಸ್ವೀಕರಿಸಲಿ. ಅವರನ್ನು ಅವರ ಜಾಡಿಗೆ ಬಿಡುವುದು ಒಳ್ಳೆಯದು.”

(ಸಿಯರು ಅಅಲಾ ಮಿನ್ನುಬಲಾಅ, ಶಂಸುದ್ದೀನ್ ದ್ಸಹಬಿ)

ಇಸ್ಲಾಮಿಕ್ ಶರೀಅಃ ಹಾಗೂ ನಾಗರಿಕ ಸಮೂಹ:

ಇಸ್ಲಾಮಿನ ಶರೀಅಃ ಕಾನೂನು ವ್ಯವಸ್ಥೆಯನ್ನು ಏಕತಾನಗೊಳಿಸಲಿಕ್ಕಾಗಿನ ಆಡಳಿತ ವರ್ಗದ ಹಿತಾಸಕ್ತಿಯನ್ನು ತಡೆಯಬೇಕು. ಪ್ರತಿಯೊಂದು ಸಂದರ್ಭದಲ್ಲಿಯೂ ಕರ್ಮಶಾಸ್ತ್ರೀಯ ಸಮಸ್ಯೆಗಳಿಗೆ ಆಯಾ ಕಾಲದ ವಿದ್ವಾಂಸರು ಪರಿಹಾರಗಳನ್ನು  ನಿರ್ಣಯ ಮಾಡಿದರೆ ಸಾಕು. ಇದು ಇಸ್ಲಾಮಿ ಕಾನೂನು ವ್ಯವಸ್ಥೆಯ ವಿಶೇಷತೆ ಯಾಗಿದ್ದು, ಮುವತ್ತ ಗ್ರಂಥವನ್ನು ಏಕೈಕ ಕಾನೂನು ಗ್ರಂಥವಾಗಿ ಘೋಷಣೆ ಮಾಡಿದರೆ ಶರೀಅಃದ ಈ ವಿಶೇಷತೆಗೆ ಕಂಟಕ ಬರುತ್ತದೆ. ಖಲೀಫಾರವರ ಆದೇಶ ವನ್ನು ನಿರಾಕರಿಸಿದ ಇಮಾಮರ ನಡವಳಿಕೆಯ ಮರ್ಮ ಇದಾಗಿತ್ತು. ಈ ಸಂಭವಾನಂತರ ಹತ್ತೊಂಬತ್ತು ಶತಮಾನದ ವರೆಗೂ ‘ಇಸ್ಲಾಮಿಕ್‌ ಶರೀಅಃʼ ಎಂಬ ಹಸರಿನಲ್ಲಿ ಏಕೀಕೃತ ಕಾನೂನು ಪುಸ್ತಕ ಅಥವಾ ದಂಡಸಂಹಿತೆಯನ್ನು ಸ್ಥಾಪಿಸಲು ಯಾವೊಬ್ಬ ವಿದ್ವಾಂಸನೂ ಮುಂದೆ ಬಂದಿರಲಿಲ್ಲ. ಬದಲಾಗಿ ಶರೀಅಃ ಹಾದು ಬಂದದ್ದು ವಿವಿಧ ಗ್ರಂಥಗಳ ಮೂಲಕ. ಆಯಾ ಕಾಲದ ವಿದ್ವಾಂಸರು ಅದನ್ನು ಸಾಂದರ್ಭಿಕವಾಗಿ ವ್ಯಾಖ್ಯಾನಿಸುತ್ತಾ ಬಂದಿದ್ದರು. ಅಂತಲೇ ಷರಿಯಾ ಬಹಳ ಪ್ರಾಯೋಗಿಕತೆಯನ್ನು ಹೊಂದಿತ್ತು. ಶರೀಅಃ ನಾಗರಿಕ ಸಮಾಜದ ಸೇವೆ ಮಾಡುತ್ತಿದ್ದದ್ದು  ಈ ರೀತಿಯಲ್ಲಿ. 

ಶರೀಅಃದ ಈ ಉಜ್ವಲವಾದ ವೈವಿಧ್ಯತೆ ಹತ್ತೊಂಬತ್ತನೆಯ ಶತಮಾನದ ವಸಾಹತುಶಾಹಿಯ ಅಧಿಕಾರದ ಹಿತಾಸಕ್ತಿಗೆ ಸರಿ ಹೊಂದುತ್ತಿರಲಿಲ್ಲ. ವಸಾಹತುಶಾಹಿ ಆಡಳಿತ ರಚನೆಯ ಶೈಲಿಗೆ ಪೂರಕವಾಗಿ ಶರೀಅಃದ ವೈವಿಧ್ಯತೆ ಕೂಡಿ ಬರುತ್ತಿರಲಿಲ್ಲ ವಿಶೇಷತಃ ತಮ್ಮ ಕೇಂದ್ರೀಕೃತ ಅಧಿಕಾರದ ಅಡಿಯಲ್ಲಿ ಶರೀಅಃವನ್ನು ಹುದುಗಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಜೋಸೆಫ್‌ ಶಾಟ್‌, ಇಗ್ನಾಝ್‌ ಗೋಲ್ಡ್‌ಝಿಯರ್ ಮತ್ತು ಸ್ನೂಕ್‌ ಹಿರ್ಸ್ಟೂನ್‌ ಮುಸ್ಲಿಂ ರಾಜ್ಯಗಳ ವೈಸ್ರಾಯಿಗಳೊಂದಿಗೆ ಸೇರಿ ಇಸ್ಲಾಮಿನ ಶರೀಅಃ ಕರಾರುವಕ್ಕಾಗಿಲ್ಲ ಎಂದು ಹೇಳಿದ್ದು ಶರೀಅತ್ತಿನ ಈ ವಿಶೇಷತೆಯನ್ನು ಮನಗಂಡಿದ್ದರಿಂದ. ಇದೇ ಕಾರಣದಿಂದ ಶರೀಅಃದ ಸುಧಾರಣೆಗಾಗಿ ಅವರು ಕರೆ ಕೊಟ್ಟಿದ್ದರು. ಇತಿಹಾಸದಲ್ಲೆಲ್ಲೂ ಶರೀಅಃ ಆಡಳಿತದ ಅಣತಿಯಂತೆ‌ ನಿಂತದ್ದನ್ನು ಇಲ್ಲವೇ ಅಧಿಕಾರದ ಹಿತಾಸಕ್ತಿಗಳಿಗೆ ಮಣೆ ಹಾಕಿದ್ದನ್ನು ಕಾಣಲು ಸಾಧ್ಯವಿಲ್ಲ.  ಇದು ಶರೀಅಃ ಸುಪ್ರಧಾನವಾದ ವಿಶೇಷತೆ. ಶರೀಅಃ ಕಾನೂನುಗಳನ್ನು ರೂಪಿಸಿದ್ದು ಸ್ವತಂತ್ರವಾಗಿ ಕಾರ್ಯಾಚರಿಸುತ್ತಿದ್ದ ವಿದ್ವಾಂಸರ ಒಕ್ಕೂಟಗಳಾಗಿದ್ದವು. ಆದರೆ ಯುರೋಪಿನ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿತ್ತು. ಅಲ್ಲಿ ಕಾನೂನುಗಳು ಅಧಿಕಾರ ಪ್ರಯೋಗದ ಅಸ್ತ್ರಗಳಾಗಿದ್ದವು. ಆದುದರಿಂದಲೇ ಶಾಸನ ನಿರ್ಮಾಣ ಪ್ರಕ್ರಿಯೆಗಳು ಅಲ್ಲಿನ ಆಡಳಿತ ವ್ಯವಸ್ಥೆಯ ಪ್ರಕಾರ ಅಧಿಕಾರ ರಚನೆಯ ಭಾಗವಾಗಿ ಮಾತ್ರ ನಡೆಯುತ್ತಿತ್ತು.

ವಾಇಲ್‌ ಹಲ್ಲಾಖ್

ಅದೇವೇಳೆ, ಶರೀಅಃ ನಾಗರಿಕ ಸಮುದಾಯದಲ್ಲಿ ವಿಲೀನವಾಗಿತ್ತು. ನಾಗರಿಕ ಜೀವನದ ಪ್ರತಿಯೊಂದು ಮಜಲುಗಳಲ್ಲಿ ಕೂಡಾ ಅದು ಗಾಢ ಪ್ರಭಾವ ಬೀರುತ್ತಿತ್ತು. ಆದುದರಿಂದಲೇ, ನಾಗರಿಕ ಸಮಾಜದೊಂದಿಗೆ ವಿವಿಧ ರೂಪದಲ್ಲಿ ಸಂಬಂಧ ಹೊಂದಿದ್ದ ಶರೀಅಃ ಆಡಳಿತ ವರ್ಗಕ್ಕಿಂತ ಹೆಚ್ಚಾಗಿ ಜನಸಾಮಾನ್ಯರಿಗೆ ಹೆಚ್ಚು ನಿಕಟವಾಗಿತ್ತು. ಕೊಲಂಬಿಯ ಯುನಿವರ್ಸಿಟಿ ಉಪನ್ಯಾಸಕ ವಾಇಲ್‌ ಹಲ್ಲಾಖ್‌ ಇದನ್ನು ಬಹಳ ಮನೋಜ್ಞವಾಗಿ ವಿವರಿಸಿದ್ದಾರೆ:

“ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಮಾತ್ರ ಚಾಲ್ತಿಯಲ್ಲಿದ್ದ ವ್ಯವಸ್ಥೆಯಾಗಿರಲಿಲ್ಲ ಷರಿಯಾ.‌ ಸಮಾಜದ ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ, ಅನುಭಾವಿಕ ಆಯಾಮಗಳಲ್ಲೆಲ್ಲಾ ಅದರ ದಟ್ಟ ಪ್ರಭಾವವಿತ್ತು. ಆಧುನಿಕ ಕಾನೂನು ವ್ಯವಸ್ಥೆಗಿಂತ ಷರಿಯಾ ವಿಭಿನ್ನ ಎನಿಸಿಕೊಳ್ಳುವುದೇ ಇಲ್ಲಿ. ಯಾವ ಸಮಾಜದ ಸೇವೆಯನ್ನು ಮಾಡಲು ಉದ್ದೇಶಿಸಲಾಗಿದೆಯೋ ಆ ಸಮುದಾಯದಲ್ಲೆ ಷರಿಯಾ ರೂಪು ಪಡೆದು‌ ವಿಕಾಸ ಹೊಂದಿತ್ತು. ಎಂತಲೇ, ಸಾಮಾನ್ಯ ಪ್ರಜೆಗಳು ಕಾನೂನುಗಳ ಬಗ್ಗೆ ಪ್ರಜ್ಞಾವಂತರಾಗುತ್ತಿದ್ದರು. ಅವರ ನಿತ್ಯ ಬದುಕಿನ ಹರಿವಿನಲ್ಲಿ ಷರಿಯಾ ಸದಾ ಮಿಳಿತವಾಗಿರುತ್ತಿತ್ತು. ಫುಖಹಾ/ ಮುಫ್ತಿಗಳು ಷರಿಯಾದ ಜ್ಞಾನವನ್ನು ಜನಸಾಮಾನ್ಯರಿಗೆ ನಿರಂತರವಾಗಿ ನೀಡುತ್ತಾ ಬರುತ್ತಿದ್ದರು.”

(ವಾಟ್‌ ಈಸ್‌ ಶರೀಅ? ವಾಇಲ್‌ ಹಲ್ಲಾಖ್)  ‌

ವಸಾಹತೀಕರಣ ಕಾಲದ ಸಂಹಿತೆಗಳು ಮತ್ತು ಮುಕ್ತ ಕಾನೂನು ವ್ಯವಸ್ಥೆ:

ಫ್ರಾನ್ಝ್‌ ಕಾಫ್ಕ ಬರೆದ Before the law ಎಂಬ ಕಿರುಗತೆಯಲ್ಲಿ ಕಾನೂನು ವ್ಯವಸ್ಥೆಯನ್ನು ಜನಸಾಮಾನ್ಯರ ಕೈಗೆಟುಕದ ಅವರಿಂದ ಮಾರುದ್ದ ದೂರ ನಿಲ್ಲುವ ಒಂದು ಸಂಗತಿಯಾಗಿ ಕಥಿಸಲಾಗಿದೆ. ತನ್ನನ್ನು ಯಾವ ತಪ್ಪಿಗೋಸ್ಕರ ಶಿಕ್ಷೆಗೆ ವಿಧೇಯಗೊಳಿಸಲಾಗುತ್ತಿದೆ ಎಂದು ತಿಳಿಯದ ʼದಿ ಟ್ರಯಲ್‌ʼ ನ ಮುಖ್ಯ ಕಥಾಪಾತ್ರ ಮತ್ತು ಕಾನೂನು ಏನೆಂದು ಅರಿಯಲು ಕಾನೂನಿನ ಹೆಬ್ಬಾಗಿಲಿನ ಎದುರು ಮರಣದ ವರೆಗೂ ಕಾಯಬೇಕಾಗಿ ಬಂದ ʼಬಿಫೋರ್‌ ದ ಲಾʼ ದ ಕಥಾಪಾತ್ರ ನಮ್ಮ ಮುಂದಿಡುತ್ತಿರುವುದು ಸಮಾನವಾದ ತಲ್ಲಣವನ್ನೇ. ಈ ಸಮಸ್ಯೆ ತಲೆದೋರುವುದು ಆಧುನಿಕ ಕಾನೂನು ವ್ಯವಸ್ಥೆಗೆ ಜನತೆಗಿರುವ ಅಂತರದ ಕಾರಣದಿಂದ. ಸಮಾಜದೊಂದಿಗೆ ನಿರಂತರ ಬೆಸುಗೆಯಲ್ಲಿರುವ ಷರಿಯಾ ವ್ಯವಸ್ಥೆಯಲ್ಲಿ ಕಾಫ್ಕ ವಿವರಿಸಿದ ಸಾಮಾಜಿಕವಾದ ಅಂತರದ ಪ್ರಶ್ನೆ ಉದ್ಭವಿಸುವುದೇ ಇಲ್ಲ.

ಜನರನ್ನು ಆಳಲು ಮತ್ತು ಅವರ ಮೇಲೆ ನಿಯಂತ್ರಣ ಹೇರಲು ಬಳಸಲಾಗುವ ಅಸ್ತ್ರವಾಗಿ ಷರಿಯಾ ಎಂದೂ ಬಳಸಲ್ಪಟ್ಟಿರಲಿಲ್ಲ.  ಅದನ್ನು ಕಾಣಲಾಗುತ್ತಿದ್ದದ್ದು ಜನರು ಮತ್ತು ಕಾನೂನು ವ್ಯವಸ್ಥೆಯ ನಡುವಿನ ಸಾಮಾಜಿಕ, ವೈಯಕ್ತಿಕ ಸೇತುವೆಯೆಂಬ ನೆಲೆಯಲ್ಲಿ ಆಗಿತ್ತು.  ʼಸಾಮಾಜಿಕ ಅಂಗೀಕಾರವೆ ಕಾನೂನಿಗೆ ಅಧಿಕೃತತೆಯನ್ನು ನೀಡುತ್ತದೆʼ ಎಚ್‌ ಎಲ್‌ ಎ ಹಾರ್ಟ್‌ ರವರ ಕಾನೂನು ಪ್ರತ್ಯಕ್ಷವಾದಕ್ಕೆ ಪೂರಕವಾಗಿದೆ ಷರಿಯಾದ ರೀತಿರಿವಾಜುಗಳು. 

ಖಾಲಿದ್‌ ಅಬುಲ್‌ ಫದಲ್‌ ರವರು ಇದನ್ನೇ ಈ ರೀತಿ ಹೇಳಿದ್ದಾರೆ;

“ಮಾನವೀಯ ಒಳಿತು, ನೀತಿ ಪಾಲನೆ, ಸರಿ ತಪ್ಪುಗಳ ವಿವೇಚನೆಗಳಿಗಾಗಿ ನೆಲೆಗೊಳ್ಳಬೇಕು ಕಾನೂನುಗಳು. ಇದಾಗಿದೆ ಇಸ್ಲಾಮಿಕ್‌ ಕಾನೂನಿನ ತಳಹದಿ. ಸ್ಟೇಟ್ ನಿರ್ಮಿಸುವ ಶಾಸನಗಳ ಪ್ರಕಾರ ಕಾನೂನು ಜಾರಿ ಮಾಡುವ ಆಧುನಿಕ ಸೆಕ್ಯುಲರ್‌ ವ್ವವಸ್ಥೆಗಿಂತ ಭಿನ್ನವಾಗಿ ಇಸ್ಲಾಮಿಕ್‌ ವ್ಯವಸ್ಥೆ ನಡೆಯುತ್ತಿದ್ದದ್ದು ಕಾನೂನು ಪಠ್ಯಗಳಿಗೆ ವಿದ್ವಾಂಸರು ನೀಡುವ (ಸ್ವತಂತ್ರ) ವ್ಯಾಖ್ಯಾನಗಳ ಪ್ರಕಾರವಾಗಿತ್ತು. ಹೀಗೆ ನೀಡಲಾಗುತ್ತಿದ್ದ ಬೇರೆ ಬೇರೆ ಕಾನೂನು ಅಭಿಪ್ರಾಯಗಳು ಎಲ್ಲವೂ ವಿಭಿನ್ನ ರೀತಿಯ ಗ್ರಹಿಕೆಗಳಾಗಿದ್ದು ಏಕಕಾಲದಲ್ಲಿ ಅವೆಲ್ಲವೂ ಸರಿ ಆಗಿರುತ್ತದೆ. ಆದುದರಿಂದಲೇ ಅವುಗಳಲ್ಲಿ ಯಾವ ಅಭಿಪ್ರಾಯನ್ನು ಬೇಕಾದರೆ ಸ್ವೀಕರಿಸಬಹುದು ಎಂದಾಗಿತ್ತು ಅವರ (ಧಾರ್ಮಿಕ ವಿದ್ವಾಂಸರ) ನಿಲುವು. 

 (The Great theft, Khalid Abou al Fadl)

ಪಾಶ್ಚಾತ್ಯ ಕಾನೂನು ವ್ಯವಸ್ಥೆ ಚಾಲ್ತಿಯಲ್ಲಿ ಇದ್ದದ್ದು ಕೋಡ್ ಗಳ ರೂಪದಲ್ಲಿ. ಡಚ್ ನ್ಯಾಷನಲ್ ಕೋಡ್, ಬ್ರಿಟಿಷ್ ಪೆನಲ್ ಕೋಡ್, ನಪೋಲಿಯನ್ ಸಂಹಿತೆ ಇವು ಅಲ್ಲಿನ ಕೆಲವು ಸುಪ್ರಧಾನ ಕಾನೂನು ಸಂಹಿತೆಗಳಾಗಿದ್ದವು. ಈ ಕಾನೂನುಗಳನ್ನು  ನಿಗದಿತ ಪುಸ್ತಕಗಳಲ್ಲಿ ನಿಖರವಾಗಿ ದಾಖಲಿಸಲಾಗಿದ್ದು ಅದನ್ನು ಜಾರಿ ಮಾಡಲು ನಿರ್ದಿಷ್ಟ ಕಟ್ಟಡಗಳನ್ನು ನ್ಯಾಯಾಲಯ ಗಳಾಗಿ ಗೊತ್ತುಪಡಿಸಲಾಗಿತ್ತು. ಆದುದರಿಂದಲೇ ಅದು ಸಮುದಾಯದ ಒಳಗಿಂದ ಗಜ ದೂರ ಅಂತರದಲ್ಲಿ ಇರುತ್ತಿತ್ತು. ಅದೇವೇಳೆ ಇಸ್ಲಾಮಿಕ್ ನಾಗರಿಕತೆಯಲ್ಲಿ ಶರೀಅಃ ಜಾರಿ ಮಾಡಲು, ಸಮಸ್ಯೆ ಗಳನ್ನು ಇತ್ಯರ್ಥ ಪಡಿಸಲು, ಫಿರ್ಯಾದಿ ಗಳನ್ನು ಸಮರ್ಪಿಸಲು ನಿಗದಿತ ಸ್ಥಳಗಳು ಇದ್ದದ್ದಾಗಿ ಚರಿತ್ರೆಯಲ್ಲಿ ದಾಖಲಾಗಿಲ್ಲ. ಅದು ಎಲ್ಲಿ ಬೇಕಾದರೂ ನಡೆಯುತ್ತಿತ್ತು. ವಿದ್ವಾಂಸರ ಮನೆಯಲ್ಲಿ, ಫಿರ್ಯಾದಿದಾರನ ವಸತಿಯಲ್ಲಿ, ರಾಜನ ಸಮ್ಮುಖದಲ್ಲಿ, ಮಸೀದಿಗಳಲ್ಲಿ, ಪೇಟೆ ಗಳಲ್ಲೆಲ್ಲಾ ಶರೀಅಃ ಚರ್ಚೆಗಳು ನಡಯುತ್ತಿದ್ದವು. ಶರೀಅಃ ಕಾನೂನುಗಳು ಇವಿಷ್ಟು ಎಂದು ನಿರ್ದಿಷ್ಟ ವಾಗಿ ಬೊಟ್ಟು ಮಾಡಿ ತೋರಿಸಲು ತಕ್ಕುದಾದ ರೀತಿಯಲ್ಲಿ ಅದು ನಿಯಮಿತ ವಾಗಿರಲಿಲ್ಲ. ಯಾಕೆಂದರೆ, ಶರೀಅಃದಲ್ಲಿ ಪ್ರಧಾನ ವಾದದ್ದು ಕೋಡ್ ಗಳಾಗಿರಲಿಲ್ಲ. ಕಾನೂನು ಸುರಕ್ಷೆ ಗಾಗಿ ಮೊರೆಯಿಡುತ್ತಿರುವ ದೂರುದಾರ ಮತ್ತು ಅವನ ಪಾತಳಿ ಕೂಡಾ ಅಷ್ಟೇ ಪ್ರಧಾನ ವಾಗಿತ್ತು. ಆದುದರಿಂದಲೇ ಶರೀಅಃ ವ್ಯವಸ್ಥೆ ಒಂದು ರೀತಿಯ ಮುಕ್ತ ಕಾನೂನು ವ್ಯವಸ್ಥೆ ಯಾಗಿತ್ತು ಎಂದು ನಮಗೆ ಮನದಟ್ಟಾಗುತ್ತದೆ. ಇದರತ್ತ ಬೊಟ್ಟು ಮಾಡುತ್ತಾ ಅಮೇರಿಕನ್ ನ್ಯಾಯಾಧೀಶ ರೊಬ್ಬರು ಈ ರೀತಿ ಕುಹಕವಾಡಿದ್ದಾರೆ. ” ಬೇಕಾಬಿಟ್ಟಿ ನ್ಯಾಯ ಹೇಳಲು ಮರದಡಿಯಲ್ಲಿ ಕೂತು ಕೈಯಲ್ಲಿರುವ ಪುಸ್ತಕ ವನ್ನು ವ್ಯಾಖ್ಯಾನಿಸಿ ಕಾನೂನು ವಿವೇಚನೆ ಮಾಡುವ ಮುಸ್ಲಿಂ ಖಾಝಿಯಲ್ಲ ನಾನು.”

ಆಧುನಿಕತೆ ಮತ್ತು ಷರಿಯಾ: ಒಟ್ಟೋಮನ್ ಈಜಿಪ್ಟ್ ನಿಂದ ಆಂಗ್ಲೋ – ಮೊಹಮ್ಮದನ್ ಲಾ ತನಕ:

ಶರೀಅಃ ಕಾನೂನುಗಳನ್ನು  ಕೋಡ್ ಗಳಾಗಿ ಸಂಗ್ರಹ ಮಾಡುವ/ಕರೆ ಕೊಡುವ ಮೂಲಕ ಓರಿಯಂಟಲಿಸ್ಟ್ ಗಳು  ಮತ್ತು ಅವರ ವಸಾಹುಶಾಹಿ ಸರದಾರರು ಯುರೋಪಿಯನ್ ವ್ಯವಸ್ಥೆಗಳಿಂದ ಶರೀಅಃ ವ್ಯವಸ್ಥೆಯನ್ನು ಭಿನ್ನ ಗೊಳಿಸುವ ಮೇಲುದ್ಧರಿತ ವಿಶೇಷತೆ ಯನ್ನು ನುಚ್ಚು ನೂರು ಮಾಡುವ ಕೆಲಸ ಮಾಡಿದರು. ಹಲವು ಮುಸ್ಲಿಂ ರಾಷ್ಟ್ರ ಗಳಲ್ಲಿ ಚಾಲ್ತಿಯಲ್ಲಿದ್ದ ಶರೀಅಃ ವ್ಯವಸ್ಥೆ ಗಳನ್ನು ತಮ್ಮದೇ ಪಾಶ್ಚಾತ್ಯ ವ್ಯವಸ್ಥೆ ಯ ಮೂಗಿನ ನೇರಕ್ಕೆ ಪರಿವರ್ತಿಸಿ ಕೊಂಡರು. ಈ ರೀತಿಯಲ್ಲಿ ಶರೀಅಃ ಕಾನೂನಿನ ಕೋಡಿಫಿಕೇಶನ್ ಮೊದಲು ನಡೆದದ್ದು ಭಾರತದ ಬ್ರಿಟಿಷ್ ಶಾಹಿಯ ಆಧಿಪತ್ಯದಲ್ಲಿ. ಗವರ್ನರ್ ವಾರನ್ ಹೋಸ್ಟಿಂಗ್ ನ ಆದೇಶ ಪ್ರಕಾರ ಇಲ್ಲಿ ಒಂದು ಮಿಶ್ರ ಕಾನೂನು ವ್ಯವಸ್ಥೆಗೆ ಅಡಿಪಾಯ ಹಾಕಲಾಯಿತು. ಮುಸ್ಲಿಂ- ಹಿಂದೂ ಕಾನೂನುಗಳನ್ನು ಏಕೀಕೃತ ಕೋಡ್ ಗಳಾಗಿ ಮಾಡುವ ಕ್ರಮ ವನ್ನು ಬ್ರಿಟಿಷ್ ಕಂಪೆನಿ ಆರಂಭಿಸಿದ್ದು ಬ್ರಿಟಿಷ್ ಪೌರಾತ್ಯ ವಿದ್ವಾಂಸ ಸರ್ ವಿಲಿಯಂ ಜಾನ್ಸ್ ರ ಸಲಹೆಯ ಮೇರೆಗೆ. 

1791 ರಲ್ಲಿ ಚಾರ್ಲ್ಸ್ ಹ್ಯಾಮಿಲ್ಟನ್ ರವರು ಹನಫಿ ಮದ್ ಹಬಿನ ಮರ್ಗೀನಾನಿಯವರು ರಚಿಸಿದ ಕರ್ಮ ಶಾಸ್ತ್ರ ಗ್ರಂಥ ಹಿದಾಯ ವನ್ನು ಭಾಷಾಂತರ ಮಾಡಿದರು. 1792 ರಲ್ಲಿ ಪಿತ್ರಾರ್ಜಿತ ಆಸ್ತಿ ವಿಲೇವಾರಿ ಯನ್ನು ವಿವರಿಸುವ ಸಿರಾಜಿಯಾವನ್ನು ಕೂಡಾ ಅನುವಾದ ಮಾಡಲಾಯಿತು. 1865 ರಲ್ಲಿ ಫತಾವ ಆಲಂಗೀರಿಯ್ಯ ವನ್ನು ನೀಲ್ ಬೈಲಿ ಇಂಗ್ಲಿಷ್ ಗೆ ತಂದರು. ಈ ಮೂಲಕ 1860 ರಲ್ಲಿ “ಆಂಗ್ಲೋ ಮೂಹಮ್ಮದನ್ ಲಾ” ಜಾರಿಗೆ ಬಂತು. ಆದರೆ, ಆಂಗ್ಲೋ ಮೊಹಮ್ಮದನ್ ಲಾ ದಲ್ಲಿ ಮೊಹಮ್ಮದನ್ ಲಾ ಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಕಾನೂನು ಮೇಲುಗೈ ಸಾಧಿಸಿತ್ತು. ಆಮೇಲೆ, ಇದೇ ಕೋಡ್ 1937 ರಲ್ಲಿ “ಮುಸ್ಲಿಂ ಪರ್ಸನಲ್ ಲಾ ಅಪ್ಲಿಕೇಶನ್ ಆಕ್ಟ್” ಆಗಿ ವೈಯುಕ್ತಿಕ ಕಾನೂನು ಗಳಿಗೆ ಮಾತ್ರ ಅನ್ವಯ ಆಗುವಂತೆ ಜಾರಿಗೆ ಬಂತು. 

ಹತ್ತೊಂಬತ್ತನೆಯ ಶತಮಾನದ ಆಗಮನ ದೊಂದಿಗೆ ಯುರೋಪಿಯನ್ ಕಾನೂನು ವ್ಯವಸ್ಥೆ ಯ ಹಿಡಿತ ಮುಸ್ಲಿಂ ಜಗತ್ತಿನ ಆರ್ಥಿಕ ವಿನಿಮಯ ಮತ್ತು ದಂಡನಾ ಸಂಬಂಧಿ ಕಾನೂನು ಗಳಲ್ಲಿ ಆವರಿಸಿಯಾಗಿತ್ರು. ವಸಾಹತುಶಾಹಿಯ ಅಧಿಕಾರ ದರ್ಪ ಇದರ ಹಿಂದೆ ಕೆಲಸ ಮಾಡಿತ್ತು. ಹಾಗೇ ಮುಂದುವರಿದು ಶರೀಅಃ ಕಾನೂನು ಗಳನ್ನು ವೈಯುಕ್ತಿಕ ಮಜಲಿನಲ್ಲಿ ಮಾತ್ರ ಸೀಮಿತ ಗೊಳಿಸಲಾಯಿತು. ಈಜಿಪ್ಟ್ ನಲ್ಲಿ ಶರೀಅಃ ವನ್ನು ಕೋಡಿಫೈ ಮಾಡಲು 1880 ರಲ್ಲಿಯೇ ವಸಾಹುಶಾಹಿಗಳು ಆದೇಶ ಹೊರಡಿಸಿದ್ದರು. ಅದರನ್ವಯ ಕೆಲವು ಹನಫಿ ವಿದ್ವಾಂಸರು ಮತ್ತು ಅಲ್ಲಿನ ಅಧಿಕಾರಿಗಳು ಸೇರಿ ಹನಫಿ ಕಾನೂನು ಧಾರೆಯ ವೈಯುಕ್ತಿಕ ನಿಯಮಗಳನ್ನು ಕ್ರೋಡೀಕರಿಸಿ ಕೋಡ್ ಮಾಡಿದರು. ಮೊರೊಕ್ಕೊ ದಲ್ಲಿ ಆಡಳಿತ ನಡೆಸುತ್ತಿದ್ದ ಫ್ರೆಂಚ್ ವಸಾಹತುಶಾಹಿ 1930 ರಲ್ಲಿ ಶರೀಅಃ ಕೋಡ್ ನಿರ್ಮಾಣ ಮಾಡಿತ್ತು. 1873 ರಲ್ಲಿ ಶರೀಅಃ ಕಾನೂನುಗಳು ಮತ್ತು ಸ್ಥಳೀಯ ಆಚಾರಗಳನ್ನು ಸೇರಿಸಿ ರೂಪಿಸಿದ ಶರೀಅಃ ಸಂಹಿತೆ ಹೆಚ್ಚು ಹೋಲುತ್ತಿದ್ದದ್ದು ಡಚ್ ನ್ಯಾಷನಲ್ ಕೋಡ್ ನೊಂದಿಗಾಗಿತ್ತು. 

ವಸಾಹುಶಾಹಿ ಪ್ರಾಯೋಜಿತ ಕ್ರೋಢೀಕರಣ ಯೋಜನೆಗಳು ಶರೀಅಃ ವ್ಯವಸ್ಥೆಯ ರಕ್ತದಲ್ಲಿ ಹಾಸು ಹೊಕ್ಕಾಗಿದ್ದ ಬಹುತ್ವದ ನೆಲೆಗಳಿಗೆ ಅಗಾಧವಾದ ಪೆಟ್ಟು ಕೊಟ್ಟಿತು. ‘ವೈಯಕ್ತಿಕ ಶರೀಅಃ ಲಾ ಗಳು’ ಚಾಲ್ತಿಯಲ್ಲಿದ್ದ ಹಲವಾರು ಅಭಿಪ್ರಾಯ ಗಳ ಪೈಕಿ ಒಂದನ್ನು ಹೆಕ್ಕಿ ಕಾನೂನು ರೀತ್ಯಾ ಜಾರಿ ಮಾಡಿತು. ನಂತರ ಆ ಸಂಗ್ರಹವನ್ನು ಮಾತ್ರ ನೋಡಿ ಕಾನೂನು ತೀರ್ಪು ಕೊಡುವ ಪರಿಪಾಠ ಬೆಳೆಯಿತು. ಅನೇಕಾರು ಗ್ರಂಥಗಳನ್ನು ಪರಾಂಬರಿಸಿ ಸೂಕ್ಷ್ಮ ಅವಲೋಕನ ಮಾಡಿ ನಿರ್ವಹಿಸಲಾಗುತ್ತಿದ್ದ ಇಫ್ತಾ/ಖಳಾ* ಪ್ರಕ್ರಿಯೆಗಳು ಇದರೊಂದಿಗೆ ಒಂದೇ ಪುಸ್ತಕದಲ್ಲಿ ನೋಡಿ ತೀರ್ಮಾನಿಸಿ ಬಿಡುವಷ್ಟು ‘ ಸರಳ ‘ ವಾಯಿತು. ಶರೀಅಃ ನೇರವಾಗಿ ಸ್ಟೇಟಿನ ಕೈಕಳಗೆ  ಬರುವ ಸ್ಥಿತಿಯೂ ಸಂಜಾತ ವಾಯಿತು. ಈ ಪ್ರಕ್ರಿಯೆಗಳು ಶರೀಅಃದ ನೈಜತೆಯನ್ನು ನಿರಾಕರಿಸಿತು. ಅಷ್ಟೇ ಅಲ್ಲದೆ, ಧಾರ್ಮಿಕ, ಸಾಮಾಜಿಕ ಕಾನೂನಾತ್ಮಕ ಬಿಕ್ಕಟ್ಟು ಗಳನ್ನು ಹುಟ್ಟು ಹಾಕಿತು. ಶರೀಅಃ ಬಗ್ಗೆ ವ್ಯಾಪಕವಾದ ತಪ್ಪು ಧೋರಣೆ ಯನ್ನು ಹರಡಿತು. ಕ್ಯಾಲಿಫೋರ್ನಿಯಾ ವಿವಿಯ ಕಾನೂನು ವಿಭಾಗದ ಮುಖ್ಯಸ್ಥ ಮಾರ್ಕ್ ಫಾತಿ ಮಸೂದ್ ರವರ ಅಭಿಪ್ರಾಯ ದಂತೆ ಇಸ್ಲಾಮಿನ ಒಳಗಡೆ ಮೂಲಭೂತವಾದ ಬೆಳೆಯಲು ಮತ್ತು ಷರಿಯಾ ವ್ಯಾಪಕ ದುರುಪಯೋಗಕ್ಕೆ ಈಡಾಗಲು ಕಾರಣ ಈ ಪಾಶ್ಚಾತ್ಯ ಪ್ರಣೀತ ಶರೀಅಃ ವ್ಯವಸ್ಥೆಗಳೆ. ಸ್ಟೇಟಿನ ಆಧಿಪತ್ಯ ದ ಅಡಿಯಲ್ಲಿ ಶರೀಅಃವನ್ನು ತರುವ ಕೆಲಸಗಳನ್ನು ಇರಾನ್, ಸೌದಿ ಅರೇಬಿಯಾ, ಸೊಮಾಲಿಯಾ, ನೈಜೀರಿಯಾ ದಂತ ರಾಷ್ಟ್ರಗಳ ಮೂಲಭೂತ ವಾದಿಗಳು ಮಾಡುತ್ತಿದ್ದು ಇದು ವಸಾಹತುಶಾಹಿ ಹಿತಾಸಕ್ತಿಗಳ ಮತ್ತೊಂದು ಮುಖ ಮತ್ತು ಅದರ ಪರಿಣಾಮ ಕೂಡಾ ಹೌದು, ಮಸೂದ್ ಅಭಿಪ್ರಾಯಿಸುತ್ತಾರೆ. 

ಆಧುನಿಕ ಯುಗಾರಂಭ ಕಾಲದ ಒಟ್ಟೋಮನ್ ಈಜಿಪ್ಟ್ ಮತ್ತು ವಸಾಹತೋತ್ತರ ಈಜಿಪ್ಟ್ ನಲ್ಲಿ ಚಾಲ್ತಿಯಲ್ಲಿದ್ದ ಕಾನೂನು ವ್ಯವಸ್ಥೆಗಳ ನಡುವೆ ತೌಲನಿಕ ಅಧ್ಯಯನ ನಡೆಸಿದ ಆಮಿನ ಝಹ್ರಿ ಝಾಂಬೋಲ್ ವಸಾಹತುಶಾಹಿಗಳು ಕೋಡಿಫೈ ಮಾಡಿದ ಶರೀಅಃ ತಂದಿಟ್ಟ ಸಮಸ್ಯೆಗಳನ್ನು ಅನಾವರಣ ಮಾಡಿದ್ದಾರೆ.  ಒಟ್ಟೋಮನ್ ಈಜಿಪ್ಟ್ ನಲ್ಲಿ ಮಹಿಳೆಯರಿಗೆ ವಿವಾಹ ವಿಚ್ಚೇದನ ಪಡೆಯಲು ಇರುವ ದಾರಿಗಳು ಸುಲಭ ಸಾಧ್ಯವಾಗಿತ್ತು. ಶರೀಅಃದಲ್ಲಿ ಮನ್ನಣೆ ನೀಡಲಾಗಿರುವ ಹಲವಾರು ಅಭಿಪ್ರಾಯಗಳನ್ನು ಮಹಿಳೆಯರ ಒಳಿತನ್ನು ಬಯಸಿ ಜಾರಿ ಮಾಡಲು ಅಲ್ಲಿ ಕಾನೂನಾತ್ಮಕ ಅವಕಾಶ ಗಳಿದ್ದವು. ಅದರೆ ವಸಾಹತೋತ್ತರ ಈಜಿಪ್ಟ್ ನಲ್ಲಿ ವಿವಾಹ ವಿಚ್ಛೇದನ ಪಡೆಯಲು ಕ್ಲಿಷ್ಟಕರವಾದ  ಕಾನೂನು ಹಾದಿ ಹಿಡಿಯಬೇಕಾದ ರೀತಿಯಲ್ಲಿ ಸ್ಥಿತಿ ಬದಲಾವಣೆ ಉಂಟಾಗಿತ್ತು. ವಸಾಹತೋತ್ತರ ಕಾಲದಲ್ಲಿ ವಿಚ್ಛೇದನ ಪಡೆಯಲು ಪ್ರಬಲ ಪುರಾವೆಯನ್ನು ಹಾಜರು ಪಡಿಸ ಬೇಕಿತ್ತು ಯಾ ಸಾಕ್ಷಾತ್ ಪತಿಯೇ ಒಪ್ಪಬೇಕಿತ್ತು ಯಾ ಮಹಿಳೆ ಕಠಿಣವಾದ ದೌರ್ಜನ್ಯಗಳಿಗೆ ಈಡಾಗಿದ್ದಳೆಂದು ಸಾಬೀತು ಮಾಡಬೇಕಿತ್ತು. ಪ್ರಬಲ ಪುರಾವೆಗಳ ಅಭಾವದಲ್ಲಿ ವಿಚ್ಛೇದನ ದೊರಕುತ್ತಿರಲಿಲ್ಲ ಎಂದು ವಿವರಿಸುತ್ತಾರೆ ಝಾಂಬೋಲ್. ಲೈಂಗಿಕ ದೌರಜನ್ಯಗಳಿಗೆ ಈಡಾದ ಮಹಿಳೆಯರು ಒಟ್ಟೋಮನ್ ಈಜಿಪ್ಟ್ ನ ಶರೀಅಃ ವ್ಯವಸ್ಥೆಯಲ್ಲಿ ಪುನರ್ವಸತಿ ಪಡೆಯುತ್ತಿದ್ದರು ಹಾಗೂ ಅವರಿಗೆ ಪರಿಹಾರ ದೊರಕುತ್ತಿತ್ತು. ಅದರೆ, ವಸಾಹತೋತ್ತರ ವ್ಯವಸ್ಥೆಯಲ್ಲಿ ದೌರ್ಜನ್ಯ ಕ್ಕೀಡಾದ ಮಹಿಳೆಯೇ ಶಿಕ್ಷೆಗೆ ವಿಧೇಯ ವಾಗುವ ಇಲ್ಲವೇ ಕುಟುಂಬಿಕರಿಂದ ಹತ್ಯೆ ಗೀಡಾಗುವ ಸ್ಥಿತಿ ಉಂಟಾಗಿತ್ತು. ನ್ಯಾಯಾಲಯಗಳು ಕೂಡಾ ಅವರ ಸಹಾಯಕ್ಕಾಗಿ ಮುಂದೆ ಬರುತ್ತಿರಲಿಲ್ಲ ಎಂದು ಮತ್ತೊಂದು ಸಂಶೋಧಕ ಲಾಮಾ ಅಬೂ ಔದ ಹೇಳುತ್ತಾರೆ. ಅದೇ ರೀತಿ ಒಟ್ಟೋಮನ್ ಕಾಲದ ಈಜಿಪ್ಟ್ ನಲ್ಲಿ ಅಲ್ಪ ಸಂಖ್ಯಾತರ ಹಕ್ಕುಗಳು ಸಂರಕ್ಷಿತವಾಗಿತ್ತು ಆದರೆ ವಸಾಹತೋತ್ತರ ಈಜಿಪ್ತ್ ನಲ್ಲಿ ಅಲ್ಪಸಂಖ್ಯಾತರು ಶೋಷಣೆಗೆ ಈಡಾಗುತ್ತಿದ್ದರು ಎಂದು ‘ ರಿಲೇಜ್ಯಸ್ ಡಿಫರೆನ್ಸ್ ಇನ್ ದ ಸೆಕ್ಯುಲರ್ ಏಜ್’ ಎಂದ ಪುಸ್ತಕದಲ್ಲಿ ಸಬಾ ಮಹಮೂದ್ ವಿವರಿಸಿದ್ದಾ ರೆ.

ಫೂಕಾಲ್ಡಿಯನ್ ‘ ಕಾನೂನಿ’ನಾಚೆಗಿನ ಷರಿಯಾ ಸಾಧ್ಯತೆಗಳು: 

ಮಿಶೆಲ್ ಫೂಕೊರ ವೀಕ್ಷಣೆ ಯಂತೆ ‘ ಕಾನೂನುಗಳು ಅಧಿಕಾರದ ಅಸ್ತ್ರ ‘ ಗಳಾಗಿವೆ. ಕಾನೂನುಗಳು ಅದರ ಎಲ್ಲಾ ಸಂಸ್ಥೆ ಗಳನ್ನು  ಮತ್ತು ಪರಿಕರ ಗಳನ್ನು ಬಳಸಿಕೊಂಡು ಅಧಿಕಾರದ ಬಂಧಗಳನ್ನು ಸ್ಥಿರ ಪಡಿಸುತ್ತದೆ. ಕಾನೂನುಗಳು ಕೇವಲ ತತ್ವಗಳು ಯಾ ಸಲಹೆಗಳು ಮಾತ್ರವಲ್ಲ. ಬದಲಾಗಿ ಅದು ನಿರಂತರ ಬೆಳೆಯುತ್ತಿರುವ ಅಧಿಕಾರ ಪ್ರಯೋಗವಾಗಿದೆ ಎಂದು ವಾದ ಮಾಡುತ್ತಾರೆ ಫ್ರೆಂಚಿನ ಪ್ರಸಿದ್ಧ ತತ್ವಚಿಂತಕ ಫೂಕೋ. ಫೂಕೋ ವಾದಗಳ ಆಧಾರದಲ್ಲಿ ವಸಾಹುಶಾಹಿ ಗಳು ನಡೆಸಿದ ಶರೀಅಃ ಕೋಡಿ ಫಿಕೇಶನನ್ನು ವಿಶ್ಲೇಷಣೆ ಮಾಡುತ್ತಾ ಇಬ್ರಾಹಿಂ ಮೂಸಾ ಈ ರೀತಿ ಬರೆದಿದ್ದಾರೆ:

” ವಸಾಹತುಶಾಹಿ ತನ್ನ ಅಧಿಕಾರವನ್ನು ಜಾರಿ ಮಾಡುತ್ತಿದ್ದದ್ದು ಆರ್ಥಿಕ, ಸೈನಿಕ ಹಾಗೂ ರಾಜಕೀಯ ಶಕ್ತಿಯನ್ನು ಬಳಸಿ ಕೊಂಡು ಮಾತ್ರವಾಗಿರಲಿಲ್ಲ. ಅವರು ತಮ್ಮ ಕಾನೂನು ಜ್ಞಾನವನ್ನು ವಸಾಹತೀಕರಣಕ್ಕೆ ಬಲಿಯಾದ ಜನತೆಯ ಮೇಲೆ ಹೇರುತ್ತಿದ್ದರು. ಅದರ ದುಷ್ಪರಿಣಾಮ ವೆಂಬಂತೆ ಸ್ವಾತಂತ್ರ್ಯನಂತರವೂ ವಸಾಹತಿನ ಜನರು ವಸಾಹತುಶಾಹಿಯ ಕಾನೂನು ವ್ಯವಸ್ಥೆ ಯಲ್ಲೇ ಕಟ್ಟಿ ಹಾಕಲ್ಪಟ್ಟಿದ್ದಾರೆ.”

  • ” Colonialism and Islamic Law ” Ebrahim Moosa
Ebrahim Moosa

ಕೇಂದ್ರೀಕೃತವಾದ ಸ್ವಭಾವ ಇರುವ ಯುರೋಪಿಯನ್ ಕಾನೂನು ವುವಸ್ಥೆಗೆ ವಿಭಿನ್ನವಾಗಿ ಶರೀಅಃ ವ್ಯವಸ್ಥೆ . ಆದುದರಂದಲೇ, ಯೂರೋಪಿಯನ್ ಲೀಗಲ್ ಸಿದ್ಧಾಂತಗಳ ಆಧಾರದಲ್ಲಿ ಶರೀಅಃ ನಿಯಮಗಳನ್ನು ರೂಪಿಸುವುದು ಯಾ ಅರ್ಥೈಸುವುದು ಸಾಧ್ಯವಲ್ಲ. ಜಾಕ್ ದೆರಿದ ತನ್ನ ‘Forces of the law: Foundations of the authority’ ಎಂಬ ಗ್ರಂಥದಲ್ಲಿ ವಾಲ್ಟರ್ ಬೆಂಜಮಿನ್ ರನ್ನು ಉದ್ದರಿಸುತ್ತ ಹೇಳಿದ ಹಾಗೆ ‘ ಯುರೋಪಿಯನ್ ವ್ಯವಸ್ಥೆ ಯಲ್ಲಿ ಕಾನೂನುಗಳು ಲಾಗಾಯ್ತಿನಿಂದಲೂ  ಕಾನೂನು/ಸ್ಟೇಟ್ ನ ಅಸ್ತಿತ್ವಕ್ಕೆ ಬೇಕಾಗಿ ಮಾತ್ರ ಕಾರ್ಯ ವೆಸಗುತ್ತಿದೆ ‘. ತನ್ನ ಅಸ್ತಿತ್ವವೇ ಅದರ ಪ್ರಧಾನ ಉದ್ದೇಶ. ಆದುದರಿಂದಲೇ ಅದರ ದೌತ್ಯ ಸ್ಥಾಪಿತ ಅಧಿಕಾರವನ್ನು ಯಾವುದೇ ತೊಡಕುಗಳಿಲ್ಲದೆ ಕಾಪಿಡುವುದು. ಎಂತಲೇ ಆಧುನಿಕ ಕಾನೂನಿನ ತಳಹದಿ ಯಾವತ್ತೂ ಅಧಿಕಾರವೇ. ಅದರೆ ಇದಕ್ಕೆ ತದ್ವಿರುದ್ದವಾಗಿ ಷರಿಯಾದ ಉದ್ದೇಶ ಪ್ರಜೆಗಳ ಧಾರ್ಮಿಕ ಬೆಳವಣಿಗೆ ಮತ್ತು ಅವರ ಹಕ್ಕುಗಳ ಸಂರಕ್ಷಣೆ. ಅಧಿಕಾರ ವಿಕೇಂದ್ರಿಕರಣ ಎನ್ನುವುದು ಅದರ ಮೂಲಭೂತ ಸ್ವಭಾವ. ಷರಿಯಾ ಒಮ್ಮೆಯೂ ಆಧುನಿಕ ಕಾನೂನು ವ್ಯವಸ್ಥೆಯ ತರ ಬೆಳವಣಿಗೆ ನಿಂತ ಹರಿಯದ ನೀರಲ್ಲ. ಅದು ಹೊರಗಡೆ ಇರುವ ಸಮಾಜ ದೊಂದಿಗೆ ಸತತವಾದ ಕೊಡುಕೊಳೆಯಲ್ಲಿ ಭಾಗಿಯಾಗಿ ನಿರಂತರ ‘ ಆಗುವಿಕೆಗೆ (becoming)’ ಒಳಗಾಗುತ್ತಿರುತ್ತದೆ. ತನ್ನೊಂದಿಗೆ ತನ್ನ ಸಮಾಜವನ್ನು ನವೀಕರಿಸುತ್ತಾ ಸಾಗುತ್ತದೆ.

ಮಲಯಾಳ ಮೂಲ: ಮುಹಮ್ಮದ್‌ ಕೋಮತ್‌

ಕನ್ನಡಕ್ಕೆ: ನಝೀರ್‌ ಅಬ್ಬಾಸ್      

1 7 8 9 10 11 14