ಶಾಂತಿಯ ಭಂಜಕರು: ಫೆಲಸ್ತೀನಿನ ಕುರಿತು ಫ್ರೆಂಚ್ ದಾರ್ಶನಿಕ ಡೆಲೂಝ್

1978 ಎಪ್ರಿಲ್ 7ರ Le Monde ಎಂಬ ಫ್ರೆಂಚ್ ಪತ್ರಿಕೆಗೆ ಪ್ರಮುಖ ಸಮಕಾಲೀನ ತತ್ವ ಚಿಂತಕ ಗಿಲ್ಸ್ ಡೆಲೂಝ್ ಬರೆದ ಲೇಖನವಿದು. ಅವರ Two Regimes of Madness ಎಂಬ ಪುಸ್ತಕದಲ್ಲೂ ಇದನ್ನು ಸೇರಿಸಲಾಗಿದೆ)

ಸ್ವಂತವಾಗಿ ಒಂದು ರಾಷ್ಟ್ರವಿಲ್ಲದ ಫೇಲಸ್ತೀನಿಯರಿಗೆ ಶಾಂತಿ ಮಾತುಕತೆಗಳಲ್ಲಿ ಶುದ್ಧ ಪಾಲುದಾರಿಕೆ ವಹಿಸಲು ಸಾಧ್ಯವೇ? ಅವರ ರಾಷ್ಟ್ರವನ್ನೇ ಅವರಿಂದ ಕಸಿಯಲಾಗಿರುವಾಗ ಹೇಗೆ ಅವರನ್ನು ಸ್ವಂತ ರಾಷ್ಟ್ರವುಳ್ಳವರಾಗಿ ಪರಿಗಣಿಸಬಹುದು? ಬೇಷರತ್ತಾಗಿ ಶರಣಾಗುವುದಲ್ಲದೆ ಫೆಲಸ್ತೀನಿನ ಮುಂದೆ ಅನ್ಯ ಮಾರ್ಗವಿರಲಿಲ್ಲ. ಮರಣ ಮಾತ್ರವಾಗಿತ್ತು ಅವರ ಮುಂದಿದ್ದ ಏಕೈಕ ಮಾರ್ಗ. ಇಸ್ರೇಲ್-ಫೆಲಸ್ತೀನ್ ಸಂಘರ್ಷದಲ್ಲಿ ಇಸ್ರೇಲ್‌ನ ಆಕ್ರಮಣಗಳು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಕೂಡ ಅದು ನ್ಯಾಯಬದ್ಧ ಪ್ರತ್ಯಾಕ್ರಮಣವಾಗಿ ಮಾತ್ರ ಪರಿಗಣಿಸಲ್ಪಟ್ಟಿದೆ ಮತ್ತು ಫೆಲಸ್ತೀನಿನದ್ದು ನಿಸ್ಸಂದೇಹವಾಗಿ ಭಯೋತ್ಪಾದಕ ಕೃತ್ಯವೆಂದು ಪ್ರಚುರಪಡಿಸಲಾಗಿದೆ. ಒಬ್ಬ ಇಸ್ರೇಲ್ ಪೌರನ ಸಾವಿಗೆ ಸಿಗುವ ಪ್ರಾಮುಖ್ಯತೆ ಮತ್ತು ಸಂತಾಪ ಯಾವುದೇ ಫೆಲಸ್ತೀನಿಯನ ಸಾವಿಗೂ ಲಭಿಸುವುದಿಲ್ಲ.

ದಕ್ಷಿಣ ಲೆಬನಾನಿನಲ್ಲಿ 1969ರಿಂದ ಇಸ್ರೇಲ್ ಸೈನ್ಯವು ನಿರ್ದಯವಾಗಿ ಬಾಂಬ್ ಮಳೆ ಸುರಿಸುತ್ತಿದೆ. ಸಮೀಪ ಕಾಲದಲ್ಲಿ ನಾವು ನಡೆಸಿದ ದಾಳಿ ಟೆಲ್-ಅವೀವ್ ಭಯೋತ್ಪಾದಕ ಆಕ್ರಮಣ ವಿರುದ್ಧದ ಪ್ರತಿದಾಳಿ ಆಗಿರಲಿಲ್ಲವೆಂದು ಸ್ವತಃ ಇಸ್ರೇಲೇ ಒಪ್ಪಿಕೊಂಡಿದೆ. ಅದು ಇಸ್ರೇಲಿ‌ನ ನಿರ್ಣಯಾಧಿಕಾರದ ಉಸ್ತುವಾರಿಯಲ್ಲಿ ವ್ಯವಸ್ಥಿತವಾಗಿ ನಡೆಯುವ ಮಿಲಿಟರಿ ಆಕ್ರಮಣ ಸರಣಿಯ ಪರಾಕಾಷ್ಠೆಯಾಗಿತ್ತು. ಫೆಲಸ್ತೀನ್ ಸಮಸ್ಯೆಗೆ ‘ಅಂತಿಮ ಪರಿಹಾರ’ ಕಂಡುಕೊಳ್ಳಲು ಇತರ ರಾಷ್ಟ್ರಗಳಿಂದ ತಮ್ಮ ಪರವಾಗಿ ಒಕ್ಕೊರಲ ಬೆಂಬಲವನ್ನು ನಿರೀಕ್ಷಿಸಲು ಇಸ್ರೇಲ್‌‌ಗೆ ಸಾಧ್ಯವಿದೆ. ಕಾರಣ ಒಂದು ರಾಷ್ಟ್ರವಾಗಲೀ ಭೂಮಿಯಾಗಲೀ ಏನೂ ಇಲ್ಲದ ಫೆಲಸ್ತೀನಿಯರು ಆ ರಾಷ್ಟ್ರಗಳ ದೃಷ್ಟಿಯಲ್ಲಿ ‘ಶಾಂತಿಯ ಭಂಜಕರು’ (Spoilers of Peace) ಆಗಿದ್ದಾರೆ. ಕೆಲ ದೇಶಗಳಿಂದ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ಸಹಾಯಗಳು ಲಭಿಸಿದ್ದರೂ ಅದೆಲ್ಲವೂ ವ್ಯರ್ಥವಾಗಿತ್ತು. ನಾವು ಏಕಾಂಗಿಗಳೆಂದು ಫೆಲಸ್ತೀನಿಯರು ಹೇಳುವಾಗ ಅವರು ಅದರ ಕುರಿತು ಸ್ಪಷ್ಟವಾದ ನಿಲುವು ಮತ್ತು ಪ್ರಜ್ಞೆಯನ್ನು ಖಂಡಿತವಾಗಿಯೂ ಹೊಂದಿದ್ದಾರೆ.

ಒಂದು ರೀತಿಯಲ್ಲಿ ಸಣ್ಣ ಗೆಲುವನ್ನು ಪಡೆಯಲು ತಮ್ಮಿಂದ ಸಾಧ್ಯವಾಗಿದೆಯೆಂದು ಫೆಲಸ್ತೀನಿಯನ್ ಸಶಸ್ತ್ರ ಹೋರಾಟಗಾರರು ಹೇಳಿಕೊಳ್ಳುತ್ತಿದ್ದಾರೆ. ಇಸ್ರೇಲ್ ಆಕ್ರಮಣವನ್ನು ಮೆಟ್ಟಿ ನಿಂತ ರಕ್ಷಣಾ ಪಡೆಗಳು ಮಾತ್ರವಾಗಿತ್ತು ದಕ್ಷಿಣ ಲೆಬನಾನಿನಲ್ಲಿ ಬಾಕಿಯುಳಿದಿದ್ದು. ಇದ್ದ ಭೂಮಿಯನ್ನೂ ಕಳೆದುಕೊಂಡು ಬದುಕುವ ಫೆಲಸ್ತೀನಿಯನ್ ನಿರಾಶ್ರಿತರನ್ನು ಮತ್ತು ಲೆಬನೀಸ್ ಕೃಷಿಕರನ್ನಾಗಿದೆ ಇಸ್ರೇಲ್ ದಾಳಿ ಭೀಕರವಾಗಿ ಬೇಟೆಯಾಡಿದ್ದು. ಹಳ್ಳಿಗಳು ಮತ್ತು ನಗರಗಳನ್ನು ಧ್ವಂಸಗೈದಿದ್ದು, ಅಮಾಯಕ ನಾಗರಿಕರನ್ನು ಸಾಮೂಹಿಕ ಕಗ್ಗೊಲೆಗೈದಿದ್ದೆಲ್ಲವೂ ಧೃಢೀಕರಿಸಲ್ಪಟ್ಟ ಮಾಹಿತಿಗಳಾಗಿವೆ. ಕ್ಲಸ್ಟರ್ ಬಾಂಬುಗಳು ಪ್ರಯೋಗಿಸಲ್ಪಟ್ಟಿವೆಯೆಂದು ವಿವಿಧ ವರದಿಗಳು ಹೇಳುತ್ತಿದೆ. ಭಯೋತ್ಪಾದಕ ದಾಳಿಗಿಂತ ಯಾವುದೇ ಭಿನ್ನವಲ್ಲದ ಇಸ್ರೇಲ್ ಮಿಲಿಟರಿ ದಾಳಿಯಿಂದಾಗಿ ಗಟ್ಟಿಯಾದ ನೆಲೆಯಿಲ್ಲದೆ ಪದೇ ಪದೇ ಪಲಾಯನಗೈದು ಬದುಕುವ ದಯನೀಯ ಗತಿ ಲೆಬನಾನ್ ಜನತೆಯದ್ದು. ಕೊನೆಯದಾಗಿ ನಡೆದ ಆಕ್ರಮಣದಲ್ಲಿ 2 ಲಕ್ಷಕ್ಕೂ ಮಿಕ್ಕ ಜನರು ತಮ್ಮ ಮನೆ ಕಳೆದುಕೊಂಡು ನಿರಾಶ್ರಿತರಾಗಿ ಬೀದಿಗೆ ಬಂದಿದ್ದಾರೆ. 1948ರಲ್ಲಿ ಗಲೀಲಿಯಾ ಮತ್ತು ಇತರ ಹಲವೆಡೆಗಳಲ್ಲಿ ಫಲಪ್ರದವೆಂದು ಸಾಬೀತಾದ ತಂತ್ರವನ್ನಾಗಿದೆ ದಕ್ಷಿಣ ಲೆಬನಾನಿನಲ್ಲಿ ಇಸ್ರೇಲ್ ಈಗ ಪ್ರಯೋಗಿಸುತ್ತಿರುವುದು. ದಕ್ಷಿಣ ಲೆಬನಾನಿನ ‘ಫೇಲಸ್ತೀನೀಕರಣ’ವೆಂದು ಇದನ್ನು ಹೇಳಬಹುದು.

Gilles Deleuze

ಫೆಲಸ್ತೀನಿಯನ್ ಸಶಸ್ತ್ರ ಹೋರಾಟಗಾರರಲ್ಲಿ ಅಧಿಕವೂ ಈ ನಿರಾಶ್ರಿತರಾದ ಜನರಾಗಿದ್ದಾರೆ. ಗರಿಷ್ಠ ಸಂಖ್ಯೆಯಲ್ಲಿ ಜನರನ್ನು ನಿರಾಶ್ರಿತರನ್ನಾಗಿಸುವುದು ಮತ್ತು ಆ ಮೂಲಕ ಅವರನ್ನು ಭಯೋತ್ಪಾದಕರಾಗಿ ಚಿತ್ರೀಕರಿಸಿ ಪರಾಜಿತಗೊಳಿಸುವುದಾಗಿದೆ ಇಸ್ರೇಲಿನ ಗೂಢ ತಂತ್ರ.

ಬಹಳ ಸಂಕೀರ್ಣವೂ ದುರ್ಬಲವೂ ಆದ ಒಂದು ರಾಷ್ಟ್ರದಲ್ಲಿ ಇಸ್ರೇಲ್ ಸಾಮೂಹಿಕ ನರಮೇಧ ನಡೆಸುತ್ತಿದೆಯೆಂದು ನಾವು ಹೇಳುತ್ತಿರುವುದು ಲೆಬನಾನಿನೊಂದಿಗೆ ನಮಗಿರುವ ಬಾಂಧವ್ಯದ ದೆಸೆಯಿಂದ ಮಾತ್ರವಲ್ಲ. ಅದಕ್ಕೆ ಮತ್ತೊಂದು ಕಾರಣವೂ ಇದೆ. ಯುರೋಪ್ ಸಹಿತ ಮತ್ತಿತರೆಡೆ ಉಗ್ರವಾದದ ಸಮಸ್ಯೆಯನ್ನು ಭವಿಷ್ಯದಲ್ಲಿ ಹೇಗೆ ಎದುರಿಸಬಹುದೆಂಬ ವಿಷಯವನ್ನು ನಿರ್ಧರಿಸುವ ಒಂದು ಮಾದರಿಯಾಗಿದೆ ಇಸ್ರೇಲ್-ಫೆಲಸ್ತೀನ್ ಸಂಘರ್ಷ. ಹೆಚ್ಚೆಚ್ಚು ಜನರನ್ನು ಭಯೋತ್ಪಾದಕರಾಗಿ ಕಾಣುವ ಒಂದು ವರ್ಗೀಕರಣದತ್ತ ಜಗತ್ತಿನಾದ್ಯಂತವಿರುವ ರಾಷ್ಟ್ರಗಳ ಒಕ್ಕೂಟಗಳು ಮತ್ತು ಜಾಗತಿಕ ಪೋಲೀಸ್-ಕ್ರಿಮಿನಲ್ ವಿಚಾರಣಾ ಸಂಸ್ಥೆಗಳು ಸಾಗಬೇಕಾದ ಅನಿವಾರ್ಯತೆ ಕೊನೆಗೆ ಸೃಷ್ಟಿಯಾಗುತ್ತದೆ. ಭಯಾನಕವಾದ ಒಂದು ಭವಿಷ್ಯದ ಪ್ರಯೋಗಾಲಯವಾಗಿ ಸ್ಪೈನನ್ನು ಬದಲಾಯಿಸಿದ ಸ್ಪಾನಿಷ್ ಅಂತರ್ಯುದ್ಧಕ್ಕೆ ಸಮಾನವಾದ ಸನ್ನಿವೇಶವಾಗಿದೆ ಇದು.

ಸದ್ಯ ಇಸ್ರೇಲ್ ಒಂದು ಪ್ರಯೋಗ ನಡೆಸುತ್ತಿದೆ. ಒಮ್ಮೆ ಅದನ್ನು ಯಶಸ್ವಿಯಾಗಿ ಜಾರಿಗೊಳಿಸಿದರೆ ಇತರ ರಾಷ್ಟ್ರಗಳಿಗೂ ಅದರ ಅನುಕರಣೆ ಮಾಡಿ ಲಾಭ ಪಡೆಯಬಹುದು. ಅಂಥ ದಬ್ಬಾಳಿಕೆ ಮಾದರಿಯೊಂದನ್ನು ಇಸ್ರೇಲ್ ಇಂದು ಕಂಡು ಹಿಡಿದಿದೆ . ಇಸ್ರೇಲಿನ ಈ ರಾಜಕೀಯ ತಂತ್ರಕ್ಕೆ ಬಹಳ ಬಾಳಿಕೆ ಇದೆ. ತಮ್ಮನ್ನು ಖಂಡಿಸುವ ವಿಶ್ವಸಂಸ್ಥೆಯ ಠರಾವುಗಳು ವಾಸ್ತವದಲ್ಲಿ ತಮ್ಮ ಬೆನ್ನುತಟ್ಟುತ್ತಿದೆ ಎಂಬ ನಂಬಿಕೆ ಇಸ್ರೇಲಿಗಿದೆ. ಆಕ್ರಮಿತ ಪ್ರದೇಶಗಳನ್ನು ಬಿಟ್ಟು ಹೋಗಲು ನೀಡುವ ಆಹ್ವಾನಗಳನ್ನು ಅಲ್ಲಿ ವಸಾಹತು ಸ್ಥಾಪಿಸುವ ಹಕ್ಕುಗಳನ್ನಾಗಿ ಇಸ್ರೇಲ್ ಪರಿವರ್ತಿಸುತ್ತಿದೆ. ದಕ್ಷಿಣ ಲೆಬನಾನಿಗೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸುವುದನ್ನು ಒಂದು ಉತ್ತಮ ನಿರ್ಧಾರವಾಗಿ ಇಸ್ರೇಲ್ ಪರಿಗಣಿಸುತ್ತದೆ. ಇಸ್ರೇಲ್ ಸೈನ್ಯದ ಸ್ಥಾನದಲ್ಲಿ ಶಾಂತಿಪಾಲನಾ ಪಡೆಯು ಪ್ರಸ್ತುತ ಪ್ರದೇಶವನ್ನು ಪೋಲೀಸ್ ವಲಯ ಅಥವಾ ಭದ್ರತಾ ಮರುಭೂಮಿಯಾಗಿ ಮಾರ್ಪಡಿಸುತ್ತದೆ. ಅವರಿಗೆ ಬಹಳ ಆಸಕ್ತಿದಾಯಕ ದರೋಡೆಯಾಗಿದೆ ಈ ಸಂಘರ್ಷ. ಫೆಲಸ್ತೀನಿಯರನ್ನು ಶಾಂತಿ ಮಾತುಕತೆಗಳಲ್ಲಿ ‘ಶುದ್ಧ ಪಾಲುದಾರ’ ಎಂದು ಒಪ್ಪಿಕೊಳ್ಳಲು ಪ್ರಯತ್ನಿಸದೆ ಇಡೀ ಜಗತ್ತು ಈ ಸಂಘರ್ಷದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಖಂಡಿತವಾಗಿಯೂ ಅವರು ಯುದ್ಧದಲ್ಲಿದ್ದಾರೆ, ಅವರಿಗೂ ಇಷ್ಟವಿಲ್ಲದ ಯುದ್ದದಲ್ಲಿ.

ಅನುವಾದ- ಶಂಸ್ ಗಡಿಯಾರ್

ದಕ್ಷಿಣ ಭಾರತದ ಸೂಫಿ; ಖ್ವಾಜಾ ಬಂದೇ ನವಾಝ್

ಹದಿನೈದನೆಯ ಶತಮಾನದ ಮಹಾನ್ ಸೂಫಿ ಸಂತ, ತತ್ವಜ್ಞಾನಿ, ಕವಿ-ಲೇಖಕ ಬಂದೇ ನವಾಜ್ ಅವರ ಬದುಕು- ಸಾಹಿತ್ಯ ಕುರಿತು ಚರ್ಚಿಸುವ ಗ್ರಂಥವಿದು. ಕನ್ನಡ ಸಾಹಿತ್ಯ ಹಾಗೂ ಸೂಫಿ ಚಿಂತನೆ ಮತ್ತು ಕಾವ್ಯಗಳ ನಡುವಿನ ಸಖ್ಯವು ಅತ್ಯಂತ ಸಂಕೀರ್ಣವು ಶ್ರೀಮಂತವೂ ಆಗಿವೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಂಸ್ಕೃತಿಯೊಳಗೆ ಸೂಫೀ ಚಿಂತನೆಗಳು ನಿಧಾನವಾಗಿ ಒಳನುಸುಳುತ್ತಿವೆ. ವಿಶಿಷ್ಟವಾಗಿ ಸಂತರ ಸಂಸ್ಕೃತಿಯೊಂದು ಕನ್ನಡ ಭಾಷೆಯಲ್ಲಿ ಬೆಳೆಯುತ್ತಾ ಬರುತ್ತಿದೆ. ಸೂಫಿಗಳ ಕುರಿತಿರುವ ಪುಸ್ತಕಗಳು ಕನ್ನಡ ಭಾಷೆಯಲ್ಲಿ ಬೆರಳಣಿಕೆಯಷ್ಟು ಮಾತ್ರ ಕಾಣಲು ಸಾಧ್ಯ. ಇದಕ್ಕೆ ಇನ್ನೊಂದು ಗರಿಯನ್ನು ಸೇರಿಸುವಲ್ಲಿ ಲೇಖಕ ಬೋಡೆ ರಿಯಾಝ್ ಅಹ್ಮದ್ ತಿಮ್ಮಾಪುರಿಯವರು ಸಫಲರಾಗಿದ್ದಾರೆ.
ಲೇಖಕರು ಕೃತಿಯಲ್ಲಿ ಸೂಫಿ ಸಿದ್ಧಾಂತ, ಖಾದ್ರಿಯಾ, ಜುನೈದಿಯಾ, ಜಿಶ್ತಿಯಾ, ಸೂಫಿ ಪರಂಪರೆ, ಬಂದೇ ನವಾಜರ ಬದುಕು, ಬರಹ ಜೀವನ, ಸೂಫಿಗಳ ಆಚರಣೆಗಳು, ಬಹಮನಿ ಸುಲ್ತಾನ ಫಿರೋಜ್ ಷಾ ಮತ್ತು ಬಂದೇನವಾಜರ ಸಂಬಂಧ ಮುಂತಾದ ಮಹತ್ವದ ವಿಷಯಗಳನ್ನು ಚರ್ಚಿಸಿದ್ದಾರೆ. ಕೃತಿಯನ್ನು ವಿಭಾಗಗಳನ್ನಾಗಿಸಿ ಮೊದಲನೇ ಅಧ್ಯಾಯದಲ್ಲಿ ಸೂಫಿ ಅನುಭಾಗಳ ಕುರಿತು ಪರಿಚಯಿಸಿದ್ದಾರೆ. ಸೂಫಿ ಹಾಗೂ ತಸವ್ವುಫ್ ಇದರ ಉಗಮ, ವ್ಯಾಖ್ಯೆ, ಪರಿಭಾಷ ಹಾಗೂ ಸೂಫಿ ಚಿಂತನೆಗಳ ಕುರಿತು ಆಳ ಅಧ್ಯಯನವಿದೆ.

ಸೂಫಿಯನ್ನ ವ್ಯಾಖ್ಯಾನಿಸುತ್ತಾ “ಯಾರನ್ನು ಪ್ರೇಮವು ಪವಿತ್ರಗೊಳಿಸಿದೆ, ಅದು ಸ್ವಚ್ಛತಾ ವಸ್ತ್ರವಾಗಿದೆ. ಹಾಗು ಯಾರನ್ನು ಸಖನು ಪವಿತ್ರಗೊಳಿಸಿದ್ದಾನೆ ಅವನು ಸೂಫಿಯಾಗಿದ್ದಾನೆ.” ಈ ರೀತಿಯಾಗಿ ಪರಮಾತ್ಮನೊಂದಿಗೆ ಸ್ನೇಹ ಬೆಳೆಸಿ ಸಂಬಂಧವನ್ನು ಬೆಳೆಸಿ ಉಪವಾಸ ಕೂತು ನಿಜ ಜೀವನದ ಸಿಹಿಯನ್ನು ಪಡೆಯದೆ ಜೀವಿಸುವವರಾಗಿದ್ದಾರೆ ಸೂಫಿಗಳು ಎಂದು ವ್ಯಾಖ್ಯಾನಿಸುತ್ತಾರೆ. ಮೂಲವಾಗಿ ‘ಸೂಫಿ’ ಪದವು ಎಲ್ಲಿಂದ ಬಂತು ಎಂಬುದಕ್ಕೆ ನಿಖರವಾದ ಪುರಾವೆಗಳಿಲ್ಲ. ಪ್ರಮುಖರು ಹೇಳುವಂತೆ ‘ಸೂಫಿ’ ಎಂಬ ಪದವು ಮಕ್ಕಾ ಪಟ್ಟಣದಲ್ಲಿ ಮಸೀದಿ ಎದುರು ಕುಳಿತಿರುವ ದೈವಭಕ್ತ ಫಕೀರರೆಂದೂ, ಇನ್ನು ಕೆಲವರ ಪ್ರಕಾರ ಸುಫಾ ಅಂದರೆ ಪಂಕ್ತಿ ಅಥವಾ ಸಾಲು ಎಂದರ್ಥವಿದೆ. ಅದಲ್ಲದೆ ಇವರು ಹೊಂದಿದ ಜ್ಞಾನದಿಂದಾಗಿ ಇವರನ್ನು ಸೂಫಿ ಎಂದು ಕರೆಯಲಾಯಿತು ಎಂಬ ಐತಿಹ್ಯ ಕೂಡಾ ಇದೆ. ಹೀಗೆ ಸೂಫಿ ಉಗಮದ ಕುರಿತಿರುವ ಆಳ ಅಧ್ಯಯನವಿದೆ.

ಭಾರತದಲ್ಲಿ ಸೂಫಿ ದಾರ್ಶನಿಕತೆಯ ಆಗಮನ ಹಾಗು ಪ್ರಸಾರವು ಇತಿಹಾಸದ ಪ್ರಮುಖವಾದ ಅಂಶವಾಗಿತ್ತು. 13ನೇ ಶತಮಾನದಲ್ಲಿ ಆರಂಭವಾದ ಸೂಫಿಗಳ ಭಾರತ ಪ್ರವೇಶ ಕೇವಲ ಭೌತಿಕ ಲಾಭಕ್ಕಾಗಿರಲಿಲ್ಲ ಹೊರತು ಜಾತಿ, ಧರ್ಮ, ದೇಶಗಳ ಬೇಧಗಳನ್ನ ಮೀರಿ ಆಧ್ಯಾತ್ಮಿಕತೆಯನ್ನ ಮೈಗೂಡಿಸಿ ಸಾಮಾನ್ಯ ಜನಮನಸ್ಸುಗಳಿಗೆ ಪ್ರಚುರಪಡಿಸುವ ಉದ್ದೇಶದಿಂದಾಗಿತ್ತು. ಹೀಗೆ ಬಂದವರಲ್ಲಿ ಮಧ್ಯ ಏಷಿಯಾದಲ್ಲಿ ಜನಿಸಿದ ಖ್ವಾಜ ಮುಈನುದ್ದೀನ್ ಚಿಸ್ತಿ (1143–1236) ಪ್ರಮುಖರಾಗಿದ್ದರು. ಇವರು 1192 ರಲ್ಲಿ ದೆಹಲಿಗೆ ಆಗಮಿಸಿದಾಗ ಸುಲ್ತಾನ್ ಶಂಷುದ್ದೀನ್ ಅಲ್ತಮಿಷನು ಅಮೂಲ್ಯ ಕಾಣಿಕೆಗಳನ್ನ ನೀಡಿಯೂ ಗೌರವಿಸಿದ್ದರು. ಅದ್ವಿತೀಯ ಲೇಖಕರು ಕವಿಗಳಾಗಿರುವ ಇವರು ಫಾರ್ಸಿ ಭಾಷೆಯಲ್ಲಿ ಹತ್ತು ಸಾವಿರ ಕವನಗಳನ್ನು ರಚಿಸಿ ಕ್ರಿ.ಶ 1236 ರಲ್ಲಿ ನಿಧನ ಹೊಂದಿದರು.

ಆನಂತರ ‘ಸುಲ್ತಾನೆ ಹಿಂದ್’ ಎಂದು ಖ್ಯಾತರಾಗಿದ್ದ ಅಜ್ಮೀರಿನ ಮುಈನುದ್ದೀನ್ ಚಿಶ್ತಿ ದೆಹಲಿಯ ನಿಜಾಮುದ್ದೀನ್ ಔಲಿಯಾರ (1238 – 3 April 1325) ತರುವಾಯ ಅತ್ಯಂತ ಜನಪ್ರಿಯರಾದ ಇನ್ನೋರ್ವ ಸೂಫಿ ಹಜ್ರತ್ ಖಾಜಾ ಬಂದೇ ನವಾಝ್ ಗೇಸುದರಾಜರವರು. ಕ್ರಿ.ಶಕ 1321ನೇ ಇಸವಿಯಲ್ಲಿ ಜನಿಸಿ 1422 ನೇ ಇಸವಿಯಲ್ಲಿ ಮರಣಹೊಂದಿದ ಮಹಾನುಭಾವರಿಗೆ 103 ವರ್ಷದ ತುಂಬು ಪ್ರಾಯ. ಇವರು ಅರಬಿ, ಫಾರ್ಸಿ, ದಖನಿ ಮೂರು ಭಾಷೆಗಳಲ್ಲಿ ಸೇರಿ ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಸಯ್ಯದ್ ಮಹ್ಮದ್ ಹುಸೇನಿ ಗೇಸುದರಾಜ್ ಅವರ ಆಗಮನ ಕೇವಲ ಗುಲ್ಬರ್ಗಾಕೆ ಸೀಮಿತವಾಗಿರದೆ, ಇಡೀ ದಖ್ಖನಿನಲ್ಲಿ ಚಿಸ್ತಿಯಾ ಸೂಫಿ ಪರಂಪರೆಯ ಭದ್ರ ಬುನಾದಿಗೆ ನಾಂದಿಯಾಯಿತು.

ಯಾಕೆಂದರೆ ತಾತ್ವಿಕತೆಯ ಕಾರಣಕ್ಕಾಗಿ ಜಾಗತಿಕ ನಕಾಶೆಯಲ್ಲಿ ತನ್ನದೇ ಛಾಪು ಮೂಡಿಸಿದ ಬಂದೇ ನವಾಜ್ ರು ಕವಿ-ಲೇಖಕರಾಗಿ ಅದೇ ತಾತ್ವಿಕತೆಯನ್ನು ಬರಹದಲ್ಲಿ ತಂದವರು. ಬಂದೇ ನವಾಝರು ‘ಸಮಾ’ ಪ್ರೇಮಿಗಳಾಗಿದ್ದರು.
ದೈವಿಸಾನಿಧ್ಯಕ್ಕೆ ಕೊಂಡುಯ್ಯುವ ಸಮಾ ಗಳ ಕುರಿತು ಕೃತಿ ಪ್ರಸ್ತಾಪಿಸಿದೆ. ತುಘಲಕ್ ನ ಕಾಲದಲ್ಲಿ ಸೂಫಿಗಳು ಹಾಗೂ ಉಲೇಮಾಗಳ ಮಧ್ಯೆ ಸಮಾಗಳ ಕುರಿತು ನಡೆದ ಸಂಪೂರ್ಣ ಚಿತ್ರಣವು ಕೃತಿಯಲ್ಲಿದೆ.
ಸಮಾಗಳೆಂದರೆ ಸೂಫಿಗಳ ಹಾಗೂ ಅವರ ರಚನೆಗಳನ್ನು ಹಾಡುವ ‘ಅನುಭಾವ ಸಂಗೀತ ಗೋಷ್ಠಿ’ ಗಳೆಂದು ಕರೆಯಬಹುದು. ಅದಲ್ಲದೆ ಸಾಮಾನ್ಯ ಜನರಲ್ಲಿ ತಮ್ಮ ಸೂಫಿ ಸಂದೇಶದ ಪ್ರಚಾರಕ್ಕಾಗಿ ದಖ್ಖನಿ ಭಾಷೆ ಪ್ರಥಮವಾಗಿ ಸಾಹಿತ್ಯಿಕವಾಗಿ ಬಳಸಿದ ಕೀರ್ತಿ ಹಜ್ರತ್ ಖ್ವಾಜಾ ಬಂದೇ ನವಾಝರಿಗೆ ಸಲ್ಲುತ್ತದೆ. ಭಾರತೀಯ ಸಂಸ್ಕೃತಿ ಹಾಗೂ ಕಲೆಗೆ ಸಂಬಂಧಿಸಿದಂತೆ ಹಿಂದಿ ಭಾಷೆಯಲ್ಲಿ ಅಮೀರ್ ಖುಸ್ರೊ ಹಲವು ಕೃತಿ ರಚಣೆ ಮಾಡಿದ್ದರು. ಹಿಂದಿ ಭಾಷೆಯ ಬಗ್ಗೆ ಉತ್ತಮ ಹಿಡಿತ ಹೊಂದಿದ್ದ ಬಂದೇ ನವಾಜರು ತಮ್ಮ ಎಂಬತ್ತನೇ ವರ್ಷದಲ್ಲಿ ಗುಜರಾತ್ ಮಹಾರಾಷ್ಟ್ರದ ಮೂಲಕ ಗುಲ್ಬರ್ಗಾ ತಲುಪುವ ದಾರಿಯಲ್ಲಿ ಸಿಗುವ ಜನಸಾಮಾನ್ಯರೊಂದಿಗೆ ಬೆರೆತು ಅವರ ಆಡು ಭಾಷೆಯಾದ ದಖ್ಖನಿ ಉರ್ದು ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿ ಆ ಭಾಷೆಯ ಪ್ರಥಮ ಗದ್ಯ ಲೇಖಕರು ಹಾಗೂ ಕವಿಗಳು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.


ಬಂದೇ ನವಾಝರು ಉರ್ದು ಭಾಷೆಯಲ್ಲಿ ಬಿಡಿಗವನಗಳು, ಗಝಲ್, ರುಬಾಯಿಗಳನ್ನು ಬರೆದಿರುವರು. ಸರಳ ಉಪಮೆಗಳ ಪ್ರಮೇಯದಿಂದ ರುಬಾಯಿಗೆ ರಂಗು ನೀಡಿ ಬರೆದಿರುವುದು ವಿಶೇಷ
“ಪಾನಿ ಮೆ ನಮಕ್ ಡಾಲ್ ಮಜಾ ದೇಖ್ತಾ ದಿಸೇ
ಜಬ್ ಘುಲ್ಗಯಾ ನಮಕ್ ತೋ ನಮಕ್ ಬೋಲ್ನಾ ಕಿಸೇ,
ಯೂಂ ಖೋಯಿ ಖುದಿ ಅಪ್ನಿ ಖುದಾ ಸಾತ್ ಮಹ್ಮದ್,
ಆಬ್ ಘಲ್ ಗಯಿ ಖುದಿ ತೋ ಖುದಾಬನ್ ನಾಕೋಯಿ ದಸೇ.”
ಈ ರುಬಾಯಿಯಲ್ಲಿ ರಹಸ್ಯ ದೈವಿಸತ್ಯವನ್ನು ಹೀಗೆ ವಿವರಿಸುತ್ತಾರೆ
“ನೀರಿನಲ್ಲಿ ಉಪ್ಪನ್ನು ಹಾಕಿ ಅದನ್ನು ನೋಡಿದರೆ, ಉಪ್ಪು ನೀರಿನಲ್ಲಿ ಕರಗುತ್ತದೆ. ಈಗ ಉಪ್ಪಿನ ಅಸ್ತಿತ್ವ ಎಲ್ಲಿ ಹೋಯಿತು. ಅದೇ ರೀತಿ ದೈವಭಕ್ತನು ತನ್ನ ‘ಅಹಂ’ ಅನ್ನು ದೇವರ ಪ್ರಭೆಯಲ್ಲಿ ವಿಲೀನಗೊಳಿಸಿದಾಗ, ನಾವು ಯಾರನ್ನು ದೇವರೆಂದು ಕರೆಯಬೇಕು.”
ಇವುಗಳಲ್ಲದೆ ಪ್ರಸಿದ್ಧವಾದ ‘ಚಕ್ಕಿ ನಾಮ’ಗಳ ತುರ್ಜಮೆಗಳು ಕೂಡಾ ಇವೆ. ಇದರ ಒಂದು ಪ್ರತಿಯು ಹೈದರಾಬಾದಿನಲ್ಲಿ ಇಂದಿಗೂ ಕಾಣಲು ಸಾಧ್ಯ. ಗ್ರಾಮೀಣ ಮಹಿಳೆಯರು ಜೋಳ, ಗೋಧಿಯನ್ನು ಬೀಸುಗಲ್ಲಿನಲ್ಲಿ ಬೀಸುವಾಗ ಹಾಡುವ ಹಾಡುಗಳಾಗಿದೆ ಚಕ್ಕೀನಾಮ.
ದ್ವಿಪದಿಯಲ್ಲಿಯೂ ಸಹ ಹಲವು ಕವಿತಿಗಳನ್ನ ಖ್ವಾಜಾರವರು ಹಣೆದಿರುವರು. ಪ್ರೇಮ ವೃತ್ತಾಂತಗಳ ಕುರಿತು, ಪ್ರೇಮ ಅಸ್ತಿತ್ವಗಳ ಕುರಿತು ಕಟ್ಟಿದ ಕವನಗಳಂತೂ ಅದ್ಭುತ.

ಬಂದೇ ನವಾಝರ ತಾತ್ವಿಕತೆ ಮತ್ತು ಬರವಣಿಗೆಯ ಮಹತ್ವವನ್ನು ವಿವರಿಸುವ ಕನ್ನಡದ ಮೊದಲ ಪ್ರಮುಖ ಗ್ರಂಥ ಇದಾಗಿದೆ. ಅದೇ ಕಾರಣಕ್ಕಾಗಿ ಇದಕ್ಕೊಂದು ಸಾಹಿತ್ಯಕ-ಸಾಂಸ್ಕೃತಿಕ ಮಹತ್ವದ ಜೊತೆಗೆ ಐತಿಹಾಸಿಕ ಪ್ರಾಮುಖ್ಯತೆಯು ಇದೆ. ಕನ್ನಡಿಗರಿಗೆ ಬಂದೇ ನವಾಝರನ್ನು ಪರಿಚಯಿಸಿದ ಲೇಖಕರಿಗೆ ಅನಂತ ಧನ್ಯವಾದಗಳು.

-ಸಲೀಂ ಇರುವಂಬಳ್ಳ


ಬೋಡೆ ರಿಯಾಝ್ ಅಹ್ಮದ್

ಬೋಡೆ ರಿಯಾಝ್ ಅಹ್ಮದ್ ಮೂಲತಃ ಗುಲ್ಬರ್ಗದವರು. ವೃತ್ತಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ-ಕಾವ್ಯ ಪ್ರೇಮಿ. ಇವರು ಬಿ.ಎಸ್ಸಿ ಪದವೀಧರರು. ಸೂಫೀ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿರುವ ಪ್ರಮುಖ ಲೇಖಕರೂ ಹೌದು. ಲೇಖಕರ ತಂದೆಯವರು ಉರ್ದು ಕವಿಗಳಾಗಿದ್ದರು. ಗಿರಿನಾಡು ಸೂಫೀ ಪರಂಪರೆ, ಮನ್-ಲಗನ್, ಪ್ರೇಮ ಸೂಫಿ ಬಂದೇ ನವಾಝ್, ಇಂದ್ರಸಭಾ (ನಾಟಕ) ಪ್ರಕಟಿತ ನಾಲ್ಕು ಪ್ರಮುಖ ಕೃತಿಗಳು. ಅಲ್ಲದೇ ಇಂಗ್ಲೀಷ್, ಪರ್ಷಿಯನ್, ಉರ್ದು ಸಾಹಿತ್ಯದ ಮೇಲೆ ವಿಶೇಷವಾದ ಹಿಡಿತ ಇರುವ ಲೇಖಕರು ಆ ಭಾಷೆಗಳಿಂದ ಹಲವು ಕವಿತೆ, ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ.

ಅಲ್-ನಖ್ಬಾ : ಫೆಲೆಸ್ತೀನಿನ ಮರುಯಾತ್ರೆಯ ಕೀಲಿಕೈ

ಅಲ್ ನಖ್ಬಾ ಎಂಬ ಪದದ ಅರ್ಥ ‘ದುರಂತ’ ಎಂದು ಮಾತ್ರವಲ್ಲ. ಅರಬಿ ಒಂದು ಪದದಲ್ಲಿ ಅನೇಕ ಅರ್ಥಗಳನ್ನು ಹುಟ್ಟಿಸಬಲ್ಲ ಭಾಷೆ. ಮರುಭೂಮಿಯ ಅನಿರ್ವಚನೀಯ ಗುಣ ವೈರುಧ್ಯಗಳು, ಆಕಸ್ಮಿಕತೆ, ವ್ಯಾಕುಲತೆ, ಆಶಂಕೆ ಇವೆಲ್ಲಾ ಆ ಭಾಷೆಗೆ ಇನ್ನಿಲ್ಲದ ಪ್ರೇಮ ಮಾಧುರ್ಯವನ್ನೂ, ದಾರ್ಶನಿಕತೆಯನ್ನೂ ಕೊಡಮಾಡಿವೆ. ಒಂದು ಭಾಷೆ ಮನುಷ್ಯ ಬದುಕಿನಿಂದಲೇ ರೂಪುಗೊಂಡು ಸಮೃದ್ಧವಾಗುತ್ತವೆ.
2008 ರ ಮೇ ತಿಂಗಳ ಕೊನೆಯಲ್ಲಿ ನನಗೆ ಸಫಿಯಾಳ ಭೇಟಿಯಾಯಿತು. ಹುಸ್ಸಾದ ಪುಟ್ಟ ರೆಸ್ಟೊರೆಂಟಿನ ಏಕಾಂತತೆಯಲ್ಲಿ ಸಫಿಯಾಳ ಭೇಟಿಯಾಗದಿರುತ್ತಿದ್ದರೆ ನಾನು ಈ ಕತೆ ಬರೆಯುತ್ತಿರಲಿಲ್ಲ. ಈ ಕತೆಯನ್ನು ತಿಳಿಯಲು ಮತ್ತು ಪ್ರೀತಿಯ ಓದುಗರಲ್ಲಿ ಹಂಚಿಕೊಳ್ಳಲೂ ಆಗುತ್ತಿರಲಿಲ್ಲ.
ಆಕಾಶದಿಂದ ಸಾವಿರಾರು ಕೀಲಿಗಳು ಇಳಿದುಬರುವ ಚಿತ್ರವನ್ನು ಊಹಿಸುವಿರಾ? ತುಕ್ಕು ಹಿಡಿದ ಆ ಪ್ರತಿಯೊಂದು ಕೀಲಿಗಳು ಪ್ರತಿರೋಧದ ಸಂಕೇತಗಳಾಗಿಯೂ, ಆತ್ಮರಕ್ಷಣೆಯ ಆಯುಧಗಳಾಗಿಯೂ ಆ ಸಂಜೆಯಲ್ಲಿ ನನಗೆ ಕಂಡಿತು. ದಶಕಗಳಿಂದ ನಾನು ಕೇಳಿ ತಿಳಿದುಕೊಂಡಿದ್ದ ಫೆಲೆಸ್ತೀನ್ ಆ ಕ್ಷಣದಿಂದ ನನ್ನ ಮನಸ್ಸಿನಲ್ಲಿ ಮೂರ್ತವಾಗತೊಡಗಿತು.

ಮೂವತ್ತು ವರ್ಷಗಳ ಹಿಂದೆ ಅಲ್- ಕೊಬಾರಿನ ಲೆಬನಾನ್ ಕಾರ್ಮಿಕ ಶಿಬಿರದಲ್ಲಿ ಭಾಗವಹಿಸಿದ್ದೆ. ಸುರಕ್ಷಿತ ನೆಲಕ್ಕಾಗಿ ನಾಡು ತ್ಯಜಿಸಿ ಹಲವು ದಿನಗಳಿಂದ ಅಲೆಯುತ್ತಿದ್ದ ಪ್ಯಾಲಸ್ತೀನಿಯರು ಎಲ್ಲೋ ನನ್ನ ಸ್ನೇಹಿತರ ಬಳಗವನ್ನು ಸೇರಿದ್ದರು. ಆವತ್ತು ನನ್ನ ಮನಸ್ಸಿನಲ್ಲಿ ಫೆಲೆಸ್ತೀನ್ ಇಷ್ಟು ಆಳವಾಗಿ ಬೇರೂರಿರಲಿಲ್ಲವೆಂಬ ಅಪರಾಧಿ ಪ್ರಜ್ಞೆಯಿಂದ ಬರೆಯುತ್ತಿದ್ದೇನೆ. ವಾಸ್ತವವನ್ನು ವಾಸ್ತವಕ್ಕಿಂತ ಗಾಢವಾಗಿ ಅನುಭವಿಸಲು ಕಲೆಯ ಅಗತ್ಯವಿದೆಯೆಂದು ನನಗೀಗ ಹೇಳಬೇಕೆನಿಸುತ್ತದೆ. ಇದನ್ನು ಮುಂದೆ ವಿವರಿಸುವೆ. ಪ್ಯಾಲೆಸ್ತೀನಿಯರೊಂದಿಗೆ ರಾತ್ರಿ ಉಪಹಾರ ಸೇವಿಸುತ್ತಿದ್ದಾಗ ನನ್ನ ಮನಸ್ಸು ವಾಸ್ತವವನ್ನು ಸರಳೀಕರಣಗೊಳಿಸಲು ಪ್ರಯತ್ನಿಸುತಿತ್ತು. ಅವರು ಬೆಂಕಿಯ ಸುತ್ತ ಕೂತು ನಿಶಬ್ಧರಾಗಿ ತಿನ್ನುತ್ತಿದ್ದರು. ಭೂತಕಾಲದ ನೆನಪುಗಳ ಬಿಗಿ ಹಿಡಿತದಲ್ಲಿ ಬಂಧಿಗಳಾಗಿದ್ದ ಅವರು ತಮ್ಮ ದೇಶವನ್ನು ಸ್ಮರಿಸಿಕೊಳ್ಳುತ್ತಿದ್ದರು. ಅವರು ಚಿಕ್ಕಂದಿನಲ್ಲಿ ತಿಂದು ರೂಢಿಯಾಗಿದ್ದ ಆಹಾರ ಪೇಯಗಳನ್ನೇ ಸೇವಿಸುತ್ತಿದ್ದರು. ಕೆಲವೊಮ್ಮೆ ತಮ್ಮ ಜನಪದ ಹಾಡುಗಳನ್ನು ಹಾಡಲು ಪ್ರಯತ್ನಿಸಿ ಸಾಲುಗಳು ಸಿಗದೇ ಚಡಪಡಿಸುತ್ತಿದ್ದರು. ಅವರನ್ನು ನನಗೆ ನತದೃಷ್ಟ ಜನತೆಯಂತೆ ತೋರಿತು. ಅವರು ಹೋರಾಟದ ಹಕ್ಕನ್ನು ದಮನಿಸಲ್ಪಟ್ಟಿರುವ ಮುಗ್ಧ ಸಮುದಾಯವಾಗಿದ್ದರು.
ಹಳೆಯ ಒಡಂಬಡಿಕೆಯನ್ನು ಅವರು ಎಲ್ಲೋ ಕಳೆದುಕೊಂಡಿದ್ದರು. ನನ್ನ ಈ ಅಭಿಪ್ರಾಯಕ್ಕೆ ವಿಚಿತ್ರ ಕಾರಣಗಳಿವೆ. ಇದು ಈ ಬರಹಕ್ಕೆ ಸಂಬಂಧಿಸಿದ ಸಂಗತಿಯಲ್ಲದಿದ್ದರೂ ಹೇಳದಿರಲಾಗದು. ಅಂದು ಪತ್ರಿಕೆಗಳಲ್ಲಿ ಫೆಲೆಸ್ತೀನ್ ತುಂಬಿರುತಿತ್ತು. ಒಂದರ ಹಿಂದೆ ಒಂದು ಸುದ್ದಿಗಳು ಬರುತ್ತಲೇ ಇದ್ದುವು. ಇಲ್ಲೇ ಅನೇಕ ಸಮಸ್ಯೆಗಳು ಸೃಷ್ಟಿಯಾಗುತಿತ್ತು. ನಾವು ಹೆಚ್ಚೆಚ್ಚು ಓದುತ್ತಾ ಹೋದಂತೆ, ಮಾಹಿತಿ ಸಿಗುವುದು ಕಡಿಮೆಯಾಗುತ್ತಾ ಬರುತ್ತದೆ. ಮಾಹಿತಿಗಳು ಪರಸ್ಪರ ಒರೆಸಿಕೊಂಡು ಸವೆದುಹೋಗಿರುತ್ತವೆ. ಈ ಅನುಸಂಧಾನ ಎಷ್ಟು ಪ್ರಸ್ತುತವೆಂದು ನನಗೆ ತಿಳಿದಿಲ್ಲ.

ನಾನು ಮತ್ತೆ ಸಫಿಯಾಳ ವಿಷಯಕ್ಕೆ ಬರುತ್ತೇನೆ. ವರ್ತಮಾನ ಜಗತ್ತಿನ ಹೋರಾಟ, ಚಳುವಳಿಗಳನ್ನು ಕುರಿತು ಆಳವಾಗಿ ಪರಿಶೀಲಿಸುವಾಗ ಮಹಿಳೆಯರು ಅದರ ಮುಖ್ಯ ಪಾತ್ರ ವಹಿಸುವುದಾಗಿ ಕಾಣುತ್ತದೆ. (ಈ ಕತೆಯಲ್ಲಿ ಸಫಿಯಾ ಧೀರೆ ನಾಯಕಿ). ಮಹಿಳೆಯರಿಗೆ ಹೋಲಿಸಿದರೆ ಪುರುಷರಿಗೆ ಬದುಕುಳಿಯುವ ಬಗೆಗಿನ ಆತಂಕ ಕಡಿಮೆ. ಮಹಿಳೆಯರು ಬದುಕಿನ ಕ್ರಿಯಾಶೀಲತೆ ಮತ್ತು ನಿರಂತರತೆಯ ಪ್ರತೀಕವೆಂದು ನನಗೂ ನಿಮಗೂ ತಿಳಿದಿರುವ ವಿಚಾರ. ಅವರನ್ನು ಪ್ರೀತಿಸುವ ಮತ್ತು ಆದರಿಸುವ ಸಮಾಜಕ್ಕೆ ಶಾಶ್ವತ ಬದುಕು ಇರುತ್ತದೆಯೆಂದು ನಾನು ತಿಳಿದಿದ್ದೇನೆ. ಇದೇ ಕಾರಣದಿಂದಲೇ ಈ ಶತಮಾನದ ಮಹಿಳೆಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆಂದು ಮಾರ್ಕ್ವೆಝ್ ಹೇಳುತ್ತಾರೆ.

2008 ಮೇ ತಿಂಗಳ ಒಂದು ಸಿಹಿ‌ ಸಂಜೆ. ಇನ್ನೇನು ಬಿರುಗಾಳಿ ಬೀಸಲಿರುವ ಸೂಚನೆಯೆಂಬಂತೆ ಆಕಾಶ ದಟ್ಟ ಕಾರ್ಮೋಡಗಳಿಂದ ತುಂಬಿತ್ತು. ಆ ದಿನ ನಿರಂತರವಾಗಿ ಬಿರುಗಾಳಿ ‌ಬೀಸುತ್ತಲೂ, ಜೋರಾಗಿ ಮಳೆ ಸುರಿಯುತ್ತಲೂ ಇತ್ತು. ವಸಂತದ ಆಗಮನದ ಖುಷಿಯಲ್ಲಿ ಹೂ ಬಿಡುವ ಮರಗಳು ಹೂ ಉದುರಿಸಿ ನಗ್ನವಾಗಿ ನಿಂತಿದ್ದವು. ಆಕಾಶ ತಿಳಿಯಾದುದನ್ನು ಕಂಡು ನಾನು ಸವಾರಿ ಹೊರಟೆ. ಫೆಲೆಸ್ತೀನಿನ ಒಂದು ಪಾಕಶಾಲೆಯೊಳಗಿನ ತಂಪು ಹವೆಯಲ್ಲಿ ಏಕಾಂಗಿಯಾಗಿದ್ದೆ. ನಾವು ಅಮೇರಿಕನ್ ರೆಸ್ಟೊರೆಂಟ್‌ಗಳಲ್ಲಿ ಅನೇಕ ಬಾರಿ ಹೀಗೆ ಏಕಾಂಗಿತನ ಅನುಭವಿಸಿದ್ದೆವು. ಟೇಬಲ್ ಎದುರು ಕೂತು ತಿನ್ನುತ್ತಿದ್ದವರು ಏಳುವುದನ್ನೇ ಕಾದು, ಎದ್ದ ತಕ್ಷಣವೇ ಅಸಹನೆಯಿಂದ ಜಿಗಿದು ಕುರ್ಚಿ ನಮ್ಮದಾಗಿಸಿಕೊಳ್ಳುವ ಕಲೆ ನಮಗೆ ಕರಗತವಾಗಿತ್ತು.

ಆರ್ಡರ್ ಮಾಡಿ ಆಹಾರಕ್ಕಾಗಿ ಕಾಯುತ್ತಿರಬೇಕಾದರೆ, ಗಾಜಿನ ಬಾಗಿಲನ್ನು ಮೆಲ್ಲನೆ ಸರಿಸಿ ಒಳಗೆ ಇಣುಕಿತ್ತಿರುವ ಪುಟ್ಟ ಆಕೃತಿಯೊಂದು ಕಂಡಿತು. ಸಫಿಯಾ ಬಂದಿದ್ದಳು. ಗಾಜಿನ ಬಾಗಿಲು ಅರ್ಧ ತೆರೆದು ಆಕೆಯ ಮುಖ ಗೋಚರವಾಗುತ್ತಿದ್ದಂತೆ ನನ್ನ ಮನಸ್ಸು ನನಗರಿವಿಲ್ಲದೇ ತುಡಿಯತೊಡಗಿತು. ಆಕೆಯೊಬ್ಬಳು ಅರಬ್ ಸುಂದರಿ. ಅರ್ಧ ತೆರೆದ ಗಾಜಿನ ಬಾಗಿಲ ನಡುವೆ ಮೂಡಿದ ಮೋಹಕ ಮುಖ ಒಮ್ಮೆಯೂ ಮರೆಯಲಾಗದ ಮನೋಹರ ದೃಶ್ಯವಾಗಿತ್ತು. ಆಕೆ ಇಡೀ ಕೋಣೆಯನ್ನು ತನ್ನ ಕಣ್ಣಲ್ಲಿ ತುಂಬಿದಳು. ಖಾಲಿ ಬಿದ್ದಿದ್ದ ಟೇಬಲುಗಳನ್ನು ಉಪೇಕ್ಷಿಸಿ ನನ್ನತ್ತ ಧಾವಿಸಿದಳು. ನಮ್ರವಾಗಿ “ಇಲ್ಲಿ ಕುಳಿತುಕೊಳ್ಳಬಹುದೇ ?” ಎಂದಳು. ನಾನು ಮುಗುಳ್ನಕ್ಕು ಸಮ್ಮತಿ ಸೂಚಿಸಿದೆ. ಈ ಸಿಹಿ ಸಂಜೆಯಲ್ಲಿ ಸುಂದರಿಯೊಬ್ಬಳ ಜೊತೆ ಉಪಹಾರ ಸೇವಿಸುವ ಮಹಾಭಾಗ್ಯವನ್ನು ನಾನು ಯಾಕೆ ತಿರಸ್ಕರಿಸಲಿ.

ಆಕೆಗೆ ಏಕಾಂಗಿಯಾಗಿ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲವೆಂದೂ, ಉಪಹಾರ ಸೇವಿಸುವಾಗ ಯಾರೊಂದಿಗಾದರೂ ಮಾತಾನಾಡಲು ಬಯಸುತ್ತಾಳೆಂದೂ ನಾನು ಭಾವಿಸಿದೆ. ಇದು ಆಕೆ ತನ್ನನ್ನು ಜಗತ್ತಿಗೆ ಪರಿಚಯಿಸಿಕೊಳ್ಳುವ ಮತ್ತು ತನ್ನದೆಂಬ ಜಗತ್ತಿಲ್ಲದ ಆಕೆ ಜಗತ್ತನ್ನು ಹುಡುಕಿಕೊಳ್ಳುವ ಬಗೆಯಾಗಿರಬಹುದು. ಪರಿಚಯವಾಗುವುದಕ್ಕಿಂತ ಮುನ್ನ ಈ ರೀತಿಯಾಗಿ ಯೋಚಿಸುವ ಯಾವ ಹಕ್ಕೂ ನನಗಿಲ್ಲ. ಆದರೂ ಮನುಷ್ಯರ ಹೃದಯಗಳು ಅವರ ಮುಖದಲ್ಲಿ ಪ್ರಕಾಶಿಸುತ್ತವೆಯೆಂದು ನಾನು ನಂಬಿದ್ದೇನೆ. ಇದೇ ಕಾರಣಕ್ಕಾಗಿ ಅವರ ಕತೆಗಳನ್ನು ನನ್ನ ಕತೆಗಳಾಗಿ ಬರೆಯಬೇಕಾಗಿ ಬಂದಿದೆ.

ಒಬ್ಬ ಗಡ್ಡಧಾರಿಯನ್ನು ಭೇಟಿಯಾಗಲು ಸಿಕ್ಕಿದ್ದು ಆಕೆಗೆ ತೃಪ್ತಿಯಾಗಿರಬಹುದೆಂದು ನಾನು ಅಂದುಕೊಂಡೆ. ದೀರ್ಘ ನಿಟ್ಟುಸಿರಿನೊಂದಿಗೆ ಆಕೆ ಕುರ್ಚಿಯಲ್ಲಿ ಕುಳಿತಳು. ಕೈಯಲ್ಲಿದ್ದ ಉದ್ದನೆಯ ಕಾಗದದ ಕಟ್ಟನ್ನು ಟೇಬಲಿನ ಮೇಲಿಟ್ಟಳು. ನನಗೆ ಅದೇನೆಂದು ತಿಳಿಯುವ ಕುತೂಹಲವಿದ್ದಿದ್ದರೂ ನಾನು ತುಟಿ ಬಿಚ್ಚಲಿಲ್ಲ. ಆಕೆ ಮಡಿಲ ಮೇಲಿದ್ದ ಚೀಲದಿಂದ ಒಂದು ಪಾಕೇಟ್ ಪೇಪರ್, ಟವೆಲನ್ನು ಹೊರತೆಗೆದು ಕುತ್ತಿಗೆ, ಮುಖವನ್ನೆಲ್ಲಾ ಒರೆಸಿ ನನ್ನನ್ನು ವಿವರವಾಗಿ ನೋಡಿ ಮುಗುಳ್ನಕ್ಕಳು.
“ಭಾರತೀಯ ?”
“ಹೌದು. ಲೆಬನಾನ್ ?”
“ಅಲ್ಲ ಪ್ಯಾಲೆಸ್ಟೈನ್‌,”
ಆಕೆ ವಿಷದವಾಗಿ ಹೇಳತೊಡಗಿದಳು.
“ಒಬ್ಬ ಲೆಬನಾನಿಯೂ ಆ ಹೆಸರಿನಿಂದ ಕರೆಯಲು ಇಷ್ಟಪಡುವುದಿಲ್ಲ”. ಎಂದಳು.
ಅವರು ಲೆವೆಂಟ್‌ಗಳು. ಲೆವೆಂಟೈನ್ (Leventine). ಬೈಬಲ್‌ನಲ್ಲಿ ಉಲ್ಲೇಖಿಸಲಾದ ಲೆವೆಂಟೈನ್. ಶತಮಾನಗಳ ಕಾಲ ಆಳಿದ ಒಟ್ಟೋಮನ್ನರ ಆಡಳಿತ ಅವರನ್ನು ಲೆಬನಾನ್‌ಗಳನ್ನಾಗಿಸಿತು. ಅರೆ ! ಈಕೆ ನಾನು ಅಂದುಕೊಂಡಿರುವಂತೆ ಇಲ್ಲವಲ್ಲಾ ?.ಎಂದು ಅಚ್ಚರಿಯಾಯಿತು. ಇತಿಹಾಸದ ಆಳ-ಅಗಲದ ಜ್ಞಾನವಿಟ್ಟುಕೊಂಡೇ ನನ್ನ ಉಪಹಾರದ ಟೇಬಲ್ ಹಂಚಿಕೊಂಡಿದ್ದಳು. ಈ ಸಣ್ಣ ಮಾತುಕತೆಯ ನಡುವೆ ನಾವು ಎರಡು ಜಗತ್ತಿನಿಂದ ಒಂದೇ ಜಗತ್ತಿನಲ್ಲಿ ಬಂದು ನಿಂತಿದ್ದೆವು. ಆಕೆ ಇನ್ನೂ ತನ್ನ ಹೆಸರು ಹೇಳಿ ಪರಿಚಯಿಸಿಕೊಂಡಿರಲಿಲ್ಲ. ನಾನೂ ನನ್ನನ್ನು ಪರಿಚಯಿಸಿರಲಿಲ್ಲ.

ಓರೆನೋಟ ಬೀರುತ್ತಿದ್ದವಳು ತನ್ನ ಮೂಗಿನಿಂದ ಜಾರುತ್ತಿದ್ದ ಕನ್ನಡಕವನ್ನು ಬಲಗೈಯಿಂದ ಯಥಾ ಸ್ಥಳಕ್ಕೆ ತಂದು ಸರಿಪಡಿಸಿ ಕಿಸಕ್ಕನೆ ನಕ್ಕಳು. ನನಗೆ ಇಂತದ್ದೇ ಒಂದು ಚಿತ್ರ ಧುತ್ತನೇ ನೆನಪಿಗೆ ಬಂದಿತು. ಕೆಳಗೆ ಜಾರುವ ಕನ್ನಡಕವನ್ನು ಯಥಾ ಸ್ಥಳಕ್ಕೆ ತಂದು ಸರಿಪಡಿಸುವ ನನ್ನ ಮಗಳ ಚಿತ್ರ. ಇದರೊಂದಿಗೆ ಅಪರಿಚಿತತೆಯ ಎಲ್ಲಾ ಅದೃಶ್ಯ ಗೆರೆಗಳು ಕಣ್ಮರೆಯಾಯಿತು.

“ನಾನು ಸಫಿಯಾ. ಆಸ್ಮಿನ್ ವಿಶ್ವವಿದ್ಯಾಲಯದಲ್ಲಿ ಸೋಶಿಯಲ್ ಅಂತ್ರೋಪಾಲಜಿ ಕಲಿಯುತ್ತಿದ್ದೇನೆ. I am a victim of a forced exile. ನಾನು ದೇಶವಿಲ್ಲದವಳು. ದೇಶದಿಂದ ಬಲವಂತವಾಗಿ ಗಡಿಪಾರು ಮಾಡಲ್ಪಟ್ಟವಳು. ಯಾವುದೋ ದೇಶದಲ್ಲಿ ಅಲೆಯುತ್ತಿರುವ ತಾಯಿ, ತಂದೆ ಮತ್ತು ಒಡಹುಟ್ಟಿದವರನ್ನು ನೆನೆದು ವಿಲಾಪಿಸುವವಳು. ಇನ್ನು ಎಂದಾದರೂ ಅವರನ್ನು ಸೇರಬೇಕೆಂದು ತವಕಿಸುವವಳು.”

ಕೆಲವೇ ವಾಕ್ಯಗಳಲ್ಲಿ ಸಫಿಯಾ ಒಂದು ಜನತೆಯ ಇತಿಹಾಸ ಹೇಳಿ ಮುಗಿಸಿ ನನ್ನ ಮುಖಭಾವವನ್ನು ಅಳೆಯುತ್ತಾ ಕೂತಳು. ಆಕೆಯ ವರ್ತನೆ ಎಷ್ಟೊಂದು ಕುತೂಹಲಕಾರಿಯೆಂದು ಆಲೋಚಿಸುತ್ತಿದ್ದೆ. ಒಂದು ಹುಡುಗಿಗೆ ಇರಬೇಕಾದ ಮುಗ್ಧತೆಯಿಂದ ಆಕೆ ನಗುತ್ತಲೂ, ಏನು ಮಾಡಬೇಕೆಂದು ತೋಚದೆ ಕೈಗಳನ್ನು ಟೇಬಲ್ಲಿನ ಮೇಲಿಡುತ್ತಾ, ಬೆರಳುಗಳಿಂದ ಏನೇನೊ ಗೀಚುತ್ತಿದ್ದಳು. ಈ ನಡುವೆ ಆಕೆಯ ಮುಖ ಹಲವು ಬಾರಿ ನಿಷ್ಕಾರಣವಾಗಿ ಕೆಂಪೇರುತಿತ್ತು. ವೈಟರ್ ಅರ್ಡರ್ ಪಡೆಯಲು ಬಂದಾಗ ಆಕೆ ನಿಷ್ಕಳಂಕಳಾಗಿ ನನ್ನ ಮುಖ ನೋಡಿದಳು. ನಾನು ಆಗಲೇ ಆರ್ಡರ್ ಮಾಡಿಯಾಗಿತ್ತು. ನನಗೆ ಒಟ್ಟಿಗೆ ಕೂತು ತಿನ್ನಬಹುದೆಂದು ಅನ್ನಿಸಿತ್ತು. ಆದರೆ ಆಕೆಗೆ ಹಾಗೇ ಅನ್ನಿಸಿದೆಯೋ ಗೊತ್ತಾಗಿರಲಿಲ್ಲ. ನಾನಂತೂ ಒಟ್ಟಿಗೆ ತಿನ್ನಲು ತೀವ್ರವಾಗಿ ಆಸೆಪಟ್ಟೆ. ಆಕೆಯ ಮೇಲಿನ‌ ಸ್ನೇಹದಿಂದಲ್ಲ. ಆಕೆಯ ಸಂಕಟಗಳು ನನ್ನವೂ ಎನ್ನುವುದನ್ನು ಆಕೆಗೆ ಮನವರಿಕೆ ಮಾಡಿಕೊಡುವುದಕ್ಕಾಗಿತ್ತು. ನಾನು ಆರ್ಡರ್ ಮಾಡಿದ ಭಕ್ಷ್ಯಗಳು ಯಾವುದೆಂದು ಹೇಳಿದೆ. ತಮಗೆ ಇಷ್ಟವಿರುವ ಭಕ್ಷ್ಯಗಳನ್ನು ಆರ್ಡರ್ ಮಾಡಲು ವಿನಂತಿಸಿದೆ. ಒಟ್ಟಿಗೆ ಹಂಚಿಕೊಂಡು ತಿನ್ನೋಣವೇ ಎಂದೆ. ಆಕೆ ನಕ್ಕಳು. ವೈಟರ್ ಹೋದ ನಂತರ ಪಿಸುಮಾತಿನಲ್ಲಿ ” ಒಟ್ಟಿಗೆ ರೊಟ್ಟಿ ಹಂಚಿಕೊಂಡು ತಿನ್ನದೇ ಎಷ್ಟೋ ದಿನಗಳಾಗಿವೆ. ಮನುಷ್ಯರೊಂದಿಗೆ ರೊಟ್ಟಿ ಹಂಚಿಕೊಂಡಾಗ ಹೊಸ ಜಗತ್ತು ಸೃಷ್ಟಿಯಾಗುತ್ತದೆ. ಇಸ್ಲಾಂ ಹಂಚಿಕೊಂಡು ತಿನ್ನುವವರ ನಂಬಿಕೆಯ ಮೇಲೆ‌ ನಿಂತಿದೆ ಎಂದು ಮೌನಕ್ಕೆ ಜಾರಿ ಅನ್ಯಮನಸ್ಕಳಾದಳು. ಯಾವುದೋ ನೆನಪುಗಳಲ್ಲಿ ಆಕೆ ತನ್ನನ್ನು ಕಳೆದುಕೊಂಡಿದ್ದಳು. ನೆನಪಿನ ಲೋಕದಲ್ಲಿ ಮುಳುಗಿದ ಹೆಣ್ಣಿನ ಚಿತ್ರವೆ ಅತ್ಯಂತ ಕೌತುಕಮಯ ದೃಶ್ಯ ಎಂದು ನನಗೆ ಅನಿಸಲು ಶುರುವಾಯಿತು. ಇದ್ದಕ್ಕಿದ್ದಂತೆ ಆಕೆ ಯಾವುದೋ ತಪ್ಪು ಮಾಡಿದವಳಂತೆ ಎಚ್ಚೆತ್ತು ನನ್ನನ್ನು ನೋಡಿ ಮುಗುಳ್ನಕ್ಕಳು.

“ನನ್ನಮ್ಮನ ನೆನಪಿನ ಲೋಕಕ್ಕೆ ಲಗ್ಗೆಯಿಟ್ಟು ನಮ್ಮ ಮನೆ, ದೇಶವನ್ನೆಲ್ಲಾ ಕಂಡರಿತಿದ್ದೆ. ನನ್ನ ಪೀಳಿಗೆಯ ಎಲ್ಲಾ ಪ್ಯಾಲಸ್ತೀನಿಯರು ಅವರೆಂದಿಗೂ ಕಾಣದ ದೇಶವನ್ನು ಅನುಭವಗಮ್ಯವಾಗಿಸುವುದು ತಮ್ಮದಲ್ಲದ ನೆನಪುಗಳಿಂದಾಗಿರಬಹುದು. ಅಮ್ಮನ ದಿನಚರಿ ಡೈರಿಯಿಂದ ನಾನು ಅಮ್ಮನನ್ನು ಅರ್ಥಮಾಡಿಕೊಂಡಿದ್ದೆ. ಚಿಕ್ಕಂದಿನಿಂದಲ್ಲಿ ಸುರಕ್ಷಿತ ನೆಲಕ್ಕಾಗಿ ಅಲೆಯುತ್ತಿದ್ದಾಗ ಅಮ್ಮ ಆ ಡೈರಿಯನ್ನು ನನಗೆ ಹಸ್ತಾಂತರಿಸಿದ್ದರು. ಫೆಲೆಸ್ತೀನಿನ ಹಳ್ಳಿಯೊಂದರ ದಾಳಿಂಬೆ ತೋಟದ ನಡುವೆ ನಮಗೊಂದು ಮನೆಯಿತ್ತು.”

“ಇಂದು ಆ ಗ್ರಾಮ ಇಸ್ರೇಲಿಗೆ ಒಳಪಟ್ಟಿದೆ. ಇಂತಹ ಸಂಜೆಗಳಲ್ಲಿ ಅಂಗಳದಲ್ಲಿ‌ ಅಗ್ಗಿಷ್ಟಿಕೆ ಉರಿಯುತಿತ್ತು. ಅದರ ಮುಂದೆ ಒಂಟೆಯ ಚರ್ಮ ಹಾಸುತ್ತಿದ್ದರು. ಧೂಮಪಾನಕ್ಕಾಗಿ ಹುಕ್ಕಾ ಇರುತಿತ್ತು. ಹುಡುಗಿಯರು ಹುಕ್ಕಾ ತುಂಬುತ್ತಿದ್ದರು.”

ಆಕೆಯ ಮಾತು ಯಾವುದೋ ಲೋಕದಿಂದ ತೇಲಿ ಬರುತ್ತಿದ್ದ ಶಬ್ಧಗಳಂತೆ ಕೇಳಿಸುತ್ತಿದ್ದವು. ತಂಬಾಕಿನ ಹೊಗೆಯಿಂದ ಆಹ್ಲಾದವಾಗುತ್ತಿದ್ದ ಕಾಲಾತೀತ ಘಳಿಗೆಗಳಾಗಿತ್ತದು. ಆಕೆಯ ಮನಸ್ಸು ಸ್ವೇಚ್ಛೆಯಿಂದ ರೆಕ್ಕೆ ಬಿಚ್ಚಿ ಹಾರಾಡುತ್ತಿರುವುದು ನನಗೆ ಕಾಣುತ್ತಿತ್ತು. ಸಂಜೆಯ ಮಂದ ಬೆಳಕಿನಲ್ಲಿ ನಾವು ತಿನ್ನುತ್ತಿದ್ದೆವು. ಮಹಿಳೆಯರು ಬಿಸಿ ಬಿಸಿ ಜೋಳದ ರೊಟ್ಟಿಗಳನ್ನು ಕಾಯಿಸಿ ತೆಗೆದು ಬೋಗುಣಿಗೆ ಹಾಕುತ್ತಿದ್ದರು. ಜೋಳದ ರೊಟ್ಟಿಯೊಂದಿಗೆ ಗಿಣ್ಣು, ಒಲಿವ್ ಹಣ್ಣುಗಳು ಮತ್ತು ಖರ್ಜೂರ ಇರುತ್ತಿತ್ತು. ನನಗೊಮ್ಮೆಯೂ ಅದನ್ನು ಅನುಭವಿಸಲಾಗಿರಲಿಲ್ಲ. ಆದರೂ ‌ಆ ಕ್ಷಣವನ್ನು ನೆನಪಿನ ಸಂಚಿಯಲ್ಲಿ ಭದ್ರವಾಗಿರಿಸಿದ್ದೇನೆ.

ಉಪಹಾರದತ್ತ ಆಕೆ ತಲ್ಲೀನಳಾಗಿದ್ದಳು. ಪ್ರವಾಸಿಗಳಿಗೆ ಉಪಹಾರದ ನೆನಪುಗಳು ಜೀವನ ಪರ್ಯಂತ ಉಳಿಯುವಂತವು. ಅವರು ನಾಲಗೆಯಿಂದ ಸವಿಯಲಾರರು ಹೊರತು ಹೃದಯದಿಂದ ಸವಿಯುವರು. ಜೋಳ ರೊಟ್ಟಿ ಮುರಿಯುವ ಸದ್ದಿಗೆ ನಾನೂ ತಲ್ಲೀನನಾದೆ. ಮುರಿದ ಜೋಳ ರೊಟ್ಟಿಯ ಘಮಲು ಇಡೀ ಅಲ್ ಹುಸ್ಸ ಗ್ರಾಮವನ್ನು ಪಸರಿಸಿದ ಸಂಜೆಗಳು ನನಗೆ ನೆನಪಿವೆ. ಆಕೆ ಟೇಬಲ್ಲಿನ ಮೇಲಿದ್ದ ಕಾಗದ ಕಟ್ಟಿಗೆ ಮತ್ತೆ ಕೈಯಾಡಿಸಿದಳು. ನನ್ನ ಕಣ್ಣುಗಳಿಗೆ ಕುತೂಹಲ ಕೆರಳಿತು. ಅವಳು ಕಾಗದದ ಕಟ್ಟನ್ನು ಬಿಡಿಸಿ ನನ್ನ ಮುಖ ನೋಡಿದಳು. ಅದೊಂದು ಭಿತ್ತಿಪತ್ರವಾಗಿತ್ತು.

“ಅಲ್- ನಖ್ಬಾ” 60 ವರ್ಷಗಳಿಂದ ಬಲ ಪ್ರಯೋಗಿಸಿ ಗಡಿಪಾರು ಮಾಡಲ್ಪಟ್ಟ ಪ್ಯಾಲಸ್ತೀನಿಯರ ಇನ್ನೂ ಜೀವಂತವಾಗಿರುವ ಆತ್ಮವಿಶ್ವಾಸವನ್ನು ಪ್ರತಿನಿಧಿಸುವ ಪ್ರಣಾಳಿಕೆ. ನಾನು ಕೌತುಕದಿಂದ ಆ ಭಿತ್ತಿಪತ್ರಗಳನ್ನು ನೋಡುತ್ತಿದ್ದೆ‌. ನನಗೆ ಏನೊಂದೂ ಅರ್ಥವಾಗಲಿಲ್ಲ. ನೂರಾರು ಸಂಖ್ಯೆಯ ಪ್ಯಾರಚೂಟ್‌ಗಳು ಹಾರುತ್ತಿರುವ ಚಿತ್ರ ಕಂಡಿತು. ಪ್ರತೀ ಪ್ಯಾರಚೂಟಿನ ಮೇಲೆ ಅರಬಿಗಳ ಆಸ್ಮಿತೆಯನ್ನು ಸಾರುವ ಏನೋ ಒಂದು ಇದ್ದವು. ಮೊದಲು ಅದೇನೆಂದು ಅರ್ಥವಾಗಲಿಲ್ಲ. ನಂತರ ತಕ್ಷಣ ಅರಿವಾಯಿತು. ಈ ಪ್ಯಾರಾಚೂಟ್ ಅರಬಿಗಳ ಶಿರವಸ್ತ್ರ ‘ಕುಫಿಯಾ’ಗಳಾಗಿತ್ತು. ಕಪ್ಪು, ಬಿಳುಪಿನ ಚೌಕಗಳಿರುವ ಫೆಲೆಸ್ತೀನ್ ಕುಫಿಯಾಗಳು. ಕುಫಿಯಾಗಳನ್ನೇ ಪ್ಯಾರಾಚೂಟ್‌ಗಳನ್ನಾಗಿ ಹಾರಿಸಿ ಅದರೊಳಗೆ ಮನುಷ್ಯರ ಬದಲು ಕೀಲಿಕೈಗಳನ್ನು ಇಟ್ಟಿದ್ದರು. ಕೀಲಿಕೈಗಳು ನೂರಾರು ಸಂಖ್ಯೆಯಲ್ಲಿ ಆಕಾಶದಿಂದ ಜೇರುಸಲೆಮಿಗೆ ಇಳಿದುಬರುತಿತ್ತು. ನಗರ ಮತ್ತು ಹಳ್ಳಿಗಳಲ್ಲಿ ಅಲ್ಲಲ್ಲಿ ಬಿದ್ದಿದ್ದ ಅವಶೇಷಗಳ ಮೇಲೆ ಏನನ್ನೋ ಬರೆಯಲಾಗಿತ್ತು.

“ಅದು 1948 ರ ರಲ್ಲಿ ಇಸ್ರೇಲ್ ಆಕ್ರಮಣದ ಸಮಯದಲ್ಲಿ ನೆಲಸಮವಾಗಿದ್ದ ನಗರ ಮತ್ತು ಗ್ರಾಮಗಳ ಹೆಸರುಗಳು. ಅವುಗಳಲ್ಲಿ ನಮ್ಮ ಪೂರ್ವಜರ ಗ್ರಾಮವೂ ಇದೆ. ಅದರಲ್ಲಿ ಒಂದು ಕೀಲಿಕೈ ನನ್ನದು”. ಆಕೆ ಬ್ಯಾಗಿನೊಳಗಿಂದ ಒಂದು ತುಕ್ಕು ಹಿಡಿದಿದ್ದ ಕೀಲಿಕೈಯನ್ನು ಹೊರತೆಗೆದಳು. ಕೆಂಪು ರೇಷ್ಮೆಯ ಬಟ್ಟೆಯಿಂದ ಮಾಡಿದ್ದ ಸಣ್ಣ ಚೀಲದೊಳಗೆ ಕೀಲಿ ಕೈ ಮುದುಡಿ ಮಲಗಿತ್ತು. ಈ ಭಿತ್ತಿಪತ್ರಕ್ಕೆ ಸಂಘರ್ಷ ಭರಿತ ಪ್ರಣಯ ಕತೆಯ ಹಿನ್ನೆಲೆಯಿದೆ. ಈ ಚಿತ್ರವನ್ನು ಬರೆದದ್ದು ಅರಬಿಯಾಗಿರಲಿಲ್ಲ. ಹೊರತು, ಇಲ್ಡಿಕೊ ಥಾಟ್ ಎಂಬ ಹಂಗೇರಿಯನ್ ಮಹಿಳೆಯಾಗಿದ್ದಳು. ಆಕೆ ಹಂಗೇರಿಯಾದಿಂದ ಅಮೇರಿಕಾಗೆ ವಲಸೆ ಬಂದಿದ್ದಳು. ೩೪ ಪ್ರಾಯದ ಆಕೆ ಸಮೀರ್ ಎಂಬ ಫೆಲೆಸ್ತೀನ್- ಅಮೇರಿಕನ್ ಹುಡುಗಗನ್ನು ಅಂತರ್ಜಾಲದಲ್ಲಿ ಪರಿಚಯವಾಗಿ ಪ್ರೀತಿಸಿದಳು. ಆತ ನನ್ನ ಹಾಗೆಯೇ ಪ್ಯಾಲೆಸ್ಟೈನ್‌-ಅಮೆರಿಕನ್ ವಿಧ್ಯಾರ್ಥಿ. ಕಳೆದ ವರ್ಷದ ಮೇ ತಿಂಗಳ ಮೊದಲಲ್ಲಿ ಈಜಿಪ್ಟಿನ ಕೈರೋದಲ್ಲಿ ಅವರು ಮದುವೆಯಾದರು. ನೈಲ್ ನದಿಯಲ್ಲಿ ನೌಕಾ ಗೃಹದಲ್ಲಿ ಮಧುಚಂದ್ರ ಮುಗಿಸಿದರು. ನಂತರ ಹಂಗೇರಿಯಾದಲ್ಲಿ ಕೌಟುಂಬಿಕ ಬದುಕು ನಡೆಯಿತು. ಅವರು ಮತ್ತೆ ಒಂದಾಗುವುದಕ್ಕಾಗಿ ಎರಡು ದಾರಿಯಲ್ಲಿ ವಿರಮಿಸಿದರು. ಥಾಟ್ ಅಮೇರಿಕೆಗೆ, ಸಮೀರ್ ಫೆಲೆಸ್ತೀನಿಗೆ ತೆರಳಿದರು. ಸಮೀರ್‌ ಹೆತ್ತವರನ್ನು ಸಂದರ್ಶಿಸಿವುದಕ್ಕೆ ಹೋಗಿದ್ದ. ಆದರೆ ಸಮೀರ್‌ನಿಗೆ ಮತ್ತೆ ಅಮೇರಿಕೆಗೆ ಹಿಂದಿರುಗಲು ಆಗುವುದಿಲ್ಲ. ಅಮೇರಿಕೆಯ ಹೊಸ ಭಯೋತ್ಪಾದಕ ನಿಯಮಗಳು ಸಮೀರ್‌ನ ‘ನಖ್ಬಾ’ ಆಗಿ ಪರಿಣಮಿಸಿತು. ಇತ್ತ ಥಾಟ್‌ನ ‘ನಖ್ಬಾ’ ಆಗಿಯೂ ಪರಿಣಮಿಸಿತು. ಉರಿಯುವ ವಿರಹದ ಧಗೆಯಲ್ಲಿ ಥಾಟ್ ಈ ಚಿತ್ರ ಬರೆದಳು.

1948 ಮೇ 14 ರಂದು ಇಸ್ರೇಲ್ ರಾಷ್ಟ್ರವನ್ನು ರಚಿಸಲಾಯಿತು. ಪ್ಯಾಲೆಸ್ಟೈನ್‌‌ಗಳು ತಮ್ಮ ತಾಯಿ ನೆಲವನ್ನು ಕಳೆದುಕೊಂಡರು. ಝಿಯೋನಿಸ್ಟ್‌ಗಳು ಮೇ 2008 ರಲ್ಲಿ 60 ನೇ ” ಪುರಾತನ ಕನಸಿನ ಸಾಕ್ಷಾತ್ಕಾರ ” ಎಂಬ ಹೆಸರಿನಲ್ಲಿ ಆಚರಣೆ ನಡೆಸಿದ್ದರು. ಇದರ ವಿರುಧ್ದದ ಪ್ಯಾರಚ್ಯೂಟ್ ಆಕ್ರಮಣವಾಗಿತ್ತು ಥಾಟ್‌ಳ ಈ ಪೋಸ್ಟರ್.

ಇತಿಹಾಸದ ನಿಕೃಷ್ಟ ವಂಚನೆಗಳಲ್ಲಿ ಫೆಲೆಸ್ತೀನ್ ಇತಿಹಾಸವೂ ಒಂದು. ಬೈಬಲ್ ಪ್ರಕಾರ ಫೆಲೆಸ್ತೀನ್ ಪದದ ಅರ್ಥ ‘ಅಪರಿಚಿತರ ಮನೆ’ ಎಂದಾಗಿದೆ. ಒಂದು ಕಾಲದಲ್ಲಿ ಇದು ಅಪರಿಚಿತರ ದೇಶವಾಗಲಿದೆಯೆಂಬ ಭವಿಷ್ಯ ಬೈಬಲಿಗೆ ತಿಳಿದಿತ್ತೆನೋ. ಈ ಘೋರ ಅಪರಾಧದ ಹೊಣೆಗಾರಿಕೆಯಿಂದ ಕೈ ತೊಳೆದುಕೊಳ್ಳಲು ಅರಬಿಗಳಿಗೆ ಸಾಧ್ಯವಿಲ್ಲ. ಅದು ಅಸಹಾಯಕತೆಯಿಂದ ನಡೆದದ್ದು ಎಂದರೂ ಅದೊಂದು ಯೋಗ್ಯ ಸಮರ್ಥನೆಯಾಗುವುದಿಲ್ಲ.

1948 ರ ಮೇ ತಿಂಗಳು ಪ್ಯಾಲಸ್ತೀನಿಯರಿಗೆ ಎಂದಿಗೂ ಮರೆಯಲಾಗುವುದಿಲ್ಲ. ವಸತಿಗಳನ್ನು ಕಳೆದುಕೊಂಡು ಬರೀ ಕೀಲಿ ಕೈಗಳು ಮಾತ್ರ ಉಳಿದಿದ್ದ ಕ್ರೂರ ಮೇ ತಿಂಗಳು. ಇಸ್ರೇಲ್ ರಾಷ್ಟ್ರ ನಿರ್ಮಾಣದ ವಿರುಧ್ಧ ‘ಅರಬ್ ವಿಮೋಚನಾ ಸೇನೆ’ ಶಕ್ತವಾಗಿ ಹೋರಾಟ ನಡೆಸಿತ್ತು. ವಿಮೋಚನಾ ಸೇನೆ ಫೆಲೆಸ್ತೀನ್ ಗ್ರಾಮಸ್ಥರೊಂದಿಗೆ ಲೆಬನಾನ್, ಜೋರ್ಡಾನ್, ಸಿರಿಯಾದಲ್ಲಿ ನಿರ್ಮಿಸಲಾದ ನಿರಾಶ್ರಿತರ ಕೇಂದ್ರಗಳಿಗೆ ತೆರಳುವಂತೆ ಒತ್ತಾಯಿಸಿತು. ಪ್ಯಾಲಸ್ತೀನಿಯರನ್ನು ಝಿಯೋನಿಸ್ಟ್‌ಗಳು ಕೊಲ್ಲುವುದರಿಂದ ತಪ್ಪಿಸಿಕೊಳ್ಳುವುದಕ್ಕೆಂದು ಈ ಉಪಾಯ ಮಾಡಿದ್ದರು. ಅದು ಎರಡು ಮೂರು ವಾರಗಳ ನಂತರ ಮತ್ತೆ ಹಿಂದಿರುಗುವ ಪಲಾಯನವಾಗಿತ್ತು. ಮೋಸೆಸ್ ಮತ್ತು ಮೋಸೆಸ್‌ನ ಅನುಯಾಯಿಗಳು ಎಂದಿಗೂ ಹಿಂದಿರುಗದ ಯಾತ್ರೆಗೆ ಸಿದ್ಧರಾಗಿ ಹೊರಟಿದ್ದರು. ಒಂದು ಸಾವಿರ ವರ್ಷಗಳ ನಂತರ ಪ್ಯಾಲಸ್ತೀನಿಯರು ಹಿಂದಿರುಗುತ್ತಾರೆಂಬ ನಿರೀಕ್ಷೆಯಲ್ಲಿ ನಾಡು ತ್ಯಜಿಸಿದರು. ಅಗತ್ಯದ ಸಣ್ಣ ವಸ್ತುಗಳನ್ನು ಗಂಟು ಕಟ್ಟಿ ಸುರಕ್ಷಿತವಾಗಿ ಮನೆಗೆ ಬೀಗ ಜಡಿದು ಒಂದು ಇಡೀ ಜನತೆ ಕೀಲಿ ಕೈಗಳೊಂದಿಗೆ ಫೆಲೆಸ್ತೀನಿನ ಸೀಮೆ ದಾಟಿತು. ಅವರು ಎಂದೆಂದಿಗೂ ಮರಳಿ ಬಾರದ ಯಾತ್ರೆಗೆ ಹೊರಟ್ಟಿದ್ದೇವೆಂದು ಭಾವಿಸಿರಲಿಲ್ಲ. ವಿಮೋಚನಾ ಸೇನೆಯ ಕೋರಿಕೆಯನ್ನು ನಡೆಸಿಕೊಟ್ಟು ಪ್ಯಾಲಸ್ತೀನಿಯರು ಇತಿಹಾಸದ ಅತಿ ಮೂರ್ತಖನವನ್ನು ತೋರಿಸಿದ್ದರು.

ಕೆಲವು ದಿನಗಳ ದೇಶಾಂತರ 60 ವರ್ಷಗಳನ್ನು ದಾಟಿ ಇಂದಿಗೂ ಮುಂದುವರಿಯುತ್ತಲಿದೆ‌. ಗೊತ್ತು ಪರಿಚಯವಿಲ್ಲದ ದೇಶದಲ್ಲಿರುವ ತಾತ್ಕಾಲಿಕ ವಸತಿಗಳನ್ನು ಬಿಟ್ಟು ತಮ್ಮ ತಾಯಿನೆಲಕ್ಕೆ ಮರಳಲು ಕಾತರಿಸಿ ಎಷ್ಟೊ ಆಯಸ್ಸುಗಳು ಮುಗಿದಿವೆ. ಬಹುಶ ಇದು ಒಮ್ಮೆಯೂ ಮುಗಿಯದ ಕಾಯುವಿಕೆ.

ಪ್ಯಾಲಸ್ತೀನಿಯರು 60 ವರ್ಷಗಳ ನಂತರವೂ ಆ ಕೀಲಿ ಕೈಗಳನ್ನು ಜತನದಿಂದ ಕಾಪಾಡಿಕೊಳ್ಳುತ್ತಿದ್ದಾರೆ. ಮರಳಿಬರುವುದಕ್ಕೆಂದು ಸುರಕ್ಷಿತವಾಗಿ ಬೀಗ ಜಡಿದಿದ್ದ ಅದೇ ಕೀಲಿ ಕೈಗಳು. ಒಂದು ಶಿಬಿರದಿಂದ ಮತ್ತೊಂದು ಶಿಬಿರಕ್ಕೆ ಸ್ಥಳಾಂತರವಾಗುವಾಗಲೂ ಆ ಕೀಲಿ ಕೈಗಳನ್ನು ಒಯ್ಯುತ್ತಾರೆ. ಇನ್ನೆಂದಿಗೂ ಆ ಪುರಾತನ ಮನೆಗಳನ್ನು ತೆರೆಯಲಾಗುವುದಿಲ್ಲವೆಂಬ ವಾಸ್ತವ ತಿಳಿದಿದ್ದರೂ ಆ ಕೀಲಿ ಕೈಗಳು ಮಾತ್ರ ಅವರಲ್ಲಿ ಜೋಪಾನವಾಗಿವೆ.

ಭರವಸೆ ಮತ್ತು ಅದರ ಉಲ್ಲಂಘನೆಯ ಸ್ಮಾರಕಗಳಂತೆ ನನಗೆ ಆ ಕೀಲಿ ಕೈಗಳು ಕಂಡವು. ಸಫಿಯಾಳನ್ನು ಭೇಟಿಯಾಗುವ ಮೊದಲು ಕೀಲಿ ಕೈಗಳು ಅಧಿಕಾರದ ಚಿಹ್ನೆಯೆಂದುಕೊಂಡಿದ್ದೆ. ಆದರೆ ಇಲ್ಲಿ ಕೀಲಿ ಕೈಗಳು ಹೋರಾಟದ ಸಂಕೇತಗಳಾಗಿ ಮಾರ್ಪಾಡಾಗಿದ್ದವು. ಒಂದು ಚಿಹ್ನೆ ವಿಭಿನ್ನ ಸಂಧರ್ಭದಲ್ಲಿ ರೂಪಾಂತರಗೊಳ್ಳುವ ಬಗೆಯನ್ನು ನಾನು ಅರಿತೆ. ವಿಲೋಮಗಳಾಗಿ ಕಾಣುವ ವಸ್ತುಗಳು ಕೆಲವೊಮ್ಮೆ ಹೋರಾಟದ ಆಯುಧಗಳಾಗಿಯೂ ಬದಲಾಗಬಹುದು. ಕೀಲಿ ಕೈಗಳಾಗಿತ್ತು ಥಾಟ್ ಬರೆದ ಚಿತ್ರವಾಗಿ ಕುಫಿಯಾದಲ್ಲಿ ಹಾರಾಡುತ್ತಿದ್ದುದು.

ಉಪಹಾರ ಮುಗಿಸಿ ಪರಸ್ಪರ ಬೀಳ್ಕೊಡುವಾಗ ಸಫಿಯಾ ಕೆಂಪು ಬಟ್ಟೆಯ ಚೀಲದೊಳಗಿಂದ ಕೀಲಿ ಕೈಯನ್ನು ತೆಗೆದು ನನ್ನ ಕೈಗಿತ್ತಳು. ನನ್ನ ಅಂಗೈಯಲ್ಲಿ ಆ ಕೀಲಿ ಕೈ ಹೊತ್ತಿ ಉರಿಯುತ್ತಿರುವಂತೆ ಭಾಸವಾಯಿತು. ಆ ಕೀಲಿ ಕೈಯಲ್ಲಿ ಮಾನವ ಚರಿತ್ರೆಯ ಭಾರ ಹುದುಗಿತ್ತು. ಆಕೆ ಬೆರಳುಗಳಿಂದ ನನ್ನ ಕೈಯಲ್ಲಿದ್ದ ಕೀಲಿ ಕೈಯನ್ನು ತೆಗೆದು ಮತ್ತೆ ಕೆಂಪು ಚೀಲದೊಳಗಿಟ್ಟಳು. ನಂತರ ವಿಷಣ್ಣ ನಗು ಬೀರಿ ಕತ್ತಲಾವರಿಸಿದ್ದ ಬೀದಿಗೆ ಇಳಿದಳು. ಆಕೆ ಹಿಂದಿರುಗಿ ನೋಡದೇ ಸರಸರನೆ ನಡೆದು ಮಾಯವಾದಳು. ಕಳೆದು ಹೋಗಿದ್ದ ಕೀಲಿ ಕೈಗಳು ನನ್ನನ್ನು ಕಾಡಿದ್ದವು. ಆದರೆ ಇದೇ ಮೊದಲ ಬಾರಿ ಕಳೆದುಹೋಗದೇ ಉಳಿದಿದ್ದ ಕೀಲಿ ಕೈ ಕಾಡತೊಡಗಿದ್ದವು.

ಬಾಬು ಭಾರದ್ವಾಜ್
ಅನುವಾದ : ಮುಹಮ್ಮದ್ ಝೈನುದ್ದೀನ್ ಇನೋಳಿ


ಬಾಬು ಭಾರದ್ವಾಜ್ (1948-2016)

ಇವರು ಮಲಯಾಳಂ ಸಾಹಿತಿ ಮತ್ತು ಪತ್ರಕರ್ತರು. ಸಿವಿಲ್ ಇಂಜಿನಿಯರ್, ಲೇಖಕ, ಪತ್ರಕರ್ತ, ನಿರ್ಮಾಪಕ, ದೂರದರ್ಶನ ಮುಖ್ಯಸ್ಥ ಹೀಗೆ ಅನೇಕ ವೃತಿಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು. ಪ್ರವಾಸಿಯುಡೆ ಕುರಿಪ್ಪುಕಲ್, ಕಲಾಪಂಗಲ್ಕೊರು ಗ್ರಿಹಪದಂ ಪ್ರಮುಖ ಕೃತಿಗಳು. ಇವರಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಬುಧಾಬಿ ಶಕ್ತಿ ಪ್ರಶಸ್ತಿ ಲಭಿಸಿವೆ.

ಬದುಕಿನ ನಾಡಿಮಿಡಿತದಲ್ಲಿ ಕಾವ್ಯದ ಎದೆಬಡಿತ ಆಲಿಸಿದ ಕವಿ: ಮಹಮೂದ್ ದರ್ವೇಶ್

ಮಹಮೂದ್ ದರ್ವೇಶ್!
ಇತ್ತೀಚಿನ ದಿನಗಳಲ್ಲಿ ನನಗೆ ಓದಿನ ಸುಖ ದಯಪಾಲಿಸಿದ ಫೆಲೆಸ್ತೀನಿನ ಶಕ್ತಿಶಾಲಿ ಕವಿ. ಪತ್ರಿಕಾ ಕೆಲಸಗಳಲ್ಲಿ ಜಡ್ಡುಗಟ್ಟಿ, ದಿನ ನಿತ್ಯದ ಹೊರೆಯಿಂದ ಸಂವೇದನಾ ಶಕ್ತಿಯನ್ನೇ ಕಳೆದುಕೊಳ್ಳುವ ಹಂತಕ್ಕೆ ಮುಟ್ಟಿದ್ದ ನನ್ನನ್ನು ಹೃದಯ ಹಿಂಡಿ ಎಬ್ಬಿಸಿದ ಕವಿ ಮಹಮೂದ್ ದರ್ವೇಶ್. ನನ್ನ ಬದುಕಿನ ಯೋಗ್ಯತೆ ಇರುವುದು ನಾನು ಸಾಯುವಾಗ ನನ್ನ ತಾಯಿಯ ಕಣ್ಣಲ್ಲಿ ಸುರಿಯುವ ಕಣ್ಣೀರಿನಲ್ಲಿ’’ ಎನ್ನುವಂತಹ ಸಾಲುಗಳು ಯಾವ ಸತ್ತ ಹೃದಯವನ್ನು ತಾನೆ ಬಡಿದೆಬ್ಬಿಸಲಾರದು ಹೇಳಿ? ಇಲ್ಲಿ ತಾಯಿ ಎಂದರೆ ಮಾತೃಭೂಮಿ ಫೆಲೆಸ್ತೀನ್. ತನ್ನ ದೇಶವಾಸಿಗಳ ನಡುವೆ ತಾನೊಬ್ಬ ಯೋಗ್ಯ ವ್ಯಕ್ತಿಯಾಗಿ ಬಾಳಿಬದುಕಬೇಕೆಂಬ ಪ್ರಬಲ ಇಚ್ಛೆ ಈ ಕವಿಗಿದ್ದಿರಬೇಕು. ಅದಕ್ಕಾಗಿ ಆತ ತನ್ನ ತಾಯಿನಾಡನ್ನು ಶಕ್ತಿಮೀರಿ ಪ್ರೀತಿಸಿದ. ತಾಯಿನಾಡಿಗಾಗಿ ವಿಧವಿಧದ ಶಿಕ್ಷೆಗೊಳಗಾದ. ಹಲವಾರು ವರ್ಷ ಗೃಹಬಂಧನದಲ್ಲಿ ಕಳೆದ. ವರ್ಷಗಟ್ಟಲೆ ತಾನು ಪ್ರೀತಿಸುತ್ತಿದ್ದ ತನ್ನ ತಾಯಿನಾಡನ್ನು ಬಿಟ್ಟು ಯಾವುದೋ ಪರದೇಶದಲ್ಲಿ ಅಬ್ಬೇಪಾರಿಯಂತೆ ಬದುಕುವ ಕ್ರೂರಶಿಕ್ಷೆಗೊಳಗಾದಾಗಲೂ ಈ ಕವಿ ತನ್ನ ಜನರನ್ನು, ಅವರನ್ನೆಲ್ಲಾ ಹೊತ್ತುಕೊಂಡು ಪೋಷಿಸುತ್ತಿದ್ದ ತಾಯಿನಾಡನ್ನು ಎಂದೂ ಮರೆಯಲಿಲ್ಲ. ಅದು ಆತನ ಕಾವ್ಯದಲ್ಲಿ ಜೀವಂತವಾಗಿತ್ತು. ತನ್ನೊಳಗೆ ಯಾವುದು ಜೀವಂತವಾಗಿರುತ್ತೋ ಅದು ಕಾವ್ಯದಲ್ಲೂ ಜೀವಂತವಾಗಿರುತ್ತದೆ. ಹಾಗಿದ್ದಲ್ಲಿ ಮಾತ್ರ ಕಾವ್ಯವೊಂದು ಕಾವ್ಯಾಸಕ್ತರನ್ನು ಮುಟ್ಟಬಲ್ಲುದು.

ದರ್ವೇಶ್ ಕವಿಯ ಕಾವ್ಯದ ಎದೆಬಡಿತವೂ ಆತನ ಬದುಕಿನ ನಾಡಿಮಿಡಿತದಲ್ಲಿತ್ತು ಎಂದರೆ ಅತಿಶಯೋಕ್ತಿಯೇನಲ್ಲ. ಹಾಗೆ ನೋಡಿದರೆ ಈ ಕವಿಯ ಕಾವ್ಯದ ಜೀವಾಳ ಫೆಲೆಸ್ತೀನ್ ಎಂಬ ಹೋರಾಟ ಭೂಮಿ ಎನ್ನಬೇಕು. ತನ್ನ ಮಾತೃಭೂಮಿಯ ಸಮಸ್ತ ಚರಿತ್ರೆಯನ್ನೂ, ನೋವು ನಲಿವನ್ನು ಕೆಲವೇ ಪದಗಳಲ್ಲಿ ಹಿಡಿದು ಕಾವ್ಯಾಸ್ತಕರಿಗೆ ಅಷ್ಟೇ ತೀವ್ರತೆಯಿಂದ ದಾಟಿಸುವ ಸಾಮರ್ಥ್ಯ ಈ ಕವಿಗಿತ್ತು. ಈತನ ಯಾವ ಕವಿತೆಯೂ ಕಾವ್ಯಾಸಕ್ತರಿಂದ ತಿರಸ್ಕೃತವಾಗಿಲ್ಲ. ಓದುಗರನ್ನು ತಲ್ಲಣಿಸದ, ಅವರ ಸಂವೇದನಾ ಶಕ್ತಿಯನ್ನು ಎಚ್ಚರಿಸದ ಒಂದೇ ಒಂದು ತುಣುಕನ್ನೂ ಈ ಕವಿ ಬರೆದಿಲ್ಲ. ಈತ ಏನೇ ಬರೆದರೂ ಅದು ತನ್ನ ಮಾತೃಭೂಮಿಯ ಕುರಿತೇ ಆಗಿರುತ್ತದೆ. ಈತ ಕವಿಯಾಗಿ ಹುಟ್ಟಿರುವುದೇ ತನ್ನ ಮಾತೃಭೂಮಿಯ ಯಾತನೆಯ ಕೊರಳಿಗೆ ಧ್ವನಿಯಾಗಳೆಂದೇ ಇರಬೇಕು. ಆ ಧ್ವನಿ ಫೆಲೆಸ್ತೀನ್ ಎಂಬ ಹೋರಾಟ ಭೂಮಿಯ ನೋವನ್ನೂ, ಆ ನೋವೊಳಗೂ ಅದು ತನ್ನಷ್ಟಕ್ಕೆ ತಾನೇ ಉದ್ದೀಪಿಸುತ್ತಿದ್ದ ಅಪರಿಮಿತ ಶಕ್ತಿ ಸಂಚಯವನ್ನೂ ಜಗತ್ತಿಗೆ ಸಾರಿತು. ಕವಿಯ ಕಣ್ಣಿನಲ್ಲಿ ಫೆಲೆಸ್ತೀನ್ ಸ್ವಾತಂತ್ರ್ಯದ ಅಂತಿಮ ಭೂಮಿಯಾಗಿತ್ತು. ಅಂತಿಮ ಆವಾಸ ಸ್ಥಾನವಾಗಿತ್ತು. ಅಂತಿಮ ಮನೆಯಾಗಿತ್ತು. ಅದಿಲ್ಲದಿದ್ದರೆ ಈ ನಶ್ವರ ಜಗತ್ತಿನಲ್ಲಿ ತನಗೆ ಇನ್ನೊಂದಿಲ್ಲ ಎಂಬಂತೆ ಆರ್ತವಾಗಿ ಈ ಜಗತ್ತಿನ ಮುಂದೆ ಕವಿ ಹಾಡಿದ.

ಆದ್ದರಿಂದ ಈ ಕವಿ ಒಂದು ತುಂಡು ಬ್ರೆಡ್ಡಿನ ಕುರಿತು ಬರೆದರೂ ಅದು ಅಂತಿಮವಾಗಿ ತನ್ನ ಮಾತೃಭೂಮಿಯ ವಿವಿಧ ಹಸಿವನ್ನು (ಹೊಟ್ಟೆ ಹಸಿವು, ಸ್ವಾತಂತ್ರ್ಯದ ಹಸಿವು ಇತ್ಯಾದಿ) ಧ್ವನಿಸುತ್ತಿದ್ದುದು ಅಸಹಜವೇನಾಗಿರಲಿಲ್ಲ. ಆ ಹಸಿವು ಎಂದಾದರೂ ಒಮ್ಮೆ ತನ್ನ ಜನರಿಗೆ ದಕ್ಕುವ ವಾಸ್ತವ ಎಂಬ ಅರಿವು ಮತ್ತು ಭರವಸೆ ಈ ಕವಿಯದ್ದಾಗಿತ್ತು. ದರ್ವೇಶ್ ಕವಿ ಮೂಲತಃ ಜನಸಾಮಾನ್ಯರ ಕವಿ. ಜನಸಾಮಾನ್ಯರಿಗೆ ಅರ್ಥವಾಗದ ಒಂದೇ ಒಂದು ತುಣುಕನ್ನೂ ಈ ಕವಿ ರಚಿಸಿಲ್ಲ. ಜನರ ಭಾಷೆಯಲ್ಲಿ, ಅವರ ದಿನನಿತ್ಯ ಬಳಕೆಯ ವಸ್ತುಗಳನ್ನೇ ರೂಪಕವಾಗಿಟ್ಟುಕೊಂಡು ಬರೆವ ಈ ಕವಿ ಸಾಧಾರಣವಾದುದರಲ್ಲಿ ಅಸಾಧಾರಣತ್ವವನ್ನು ಕಂಡುಕೊಳ್ಳುತ್ತಿದ್ದ ಅಥವಾ ಸೃಷ್ಟಿಸುತ್ತಿದ್ದ ಪರಿ ಬೆರಗಿನದ್ದು. ಬ್ರೆಡ್ಡು, ಬೆಂಕಿ, ಕಾಫಿ, ಬಾಲ್ಯಕಾಲದ ನೆನಪುಗಳು ಇತ್ಯಾದಿ ಜನಸಾಮಾನ್ಯರ ಸಾಮಾನ್ಯ ಸಂಗತಿಗಳನ್ನು ರೂಪಕವಾಗಿಟ್ಟುಕೊಂಡು ರಚಿತವಾಗಿರುವ ದರ್ವೇಶ್ ಕಾವ್ಯಗಳು ಫೆಲೆಸ್ತೀನ್ ಎಂಬ ಪುಟ್ಟ ಲೋಕವನ್ನು ಅದರೆಲ್ಲಾ ಚೆಲುವಿನೊಂದಿಗೆ ಕಟ್ಟಿಕೊಡುತ್ತವೆ. ಮಿಸೆಲ್, ರಾಕೆಟ್, ಯುದ್ಧ ಟ್ಯಾಂಕ್‌ಗಳ ದುಸ್ವಪ್ನ ಜೊತೆಗೆ ದಿನಗಳನ್ನು ಎಣಿಸುವ ಅಲ್ಲಿಯ ನಾಗರಿಕರ ದಿನನಿತ್ಯದ ತಲ್ಲಣಗಳ ಬಗೆಗೆ ಅದ್ಭುತ ಒಳನೋಟ ಬೀರುತ್ತವೆ. ದರ್ವೇಶ್ ಕಾವ್ಯವನ್ನು ಅಭ್ಯಾಸ ಮಾಡುವ ಯಾರೇ ಆದರೂ ಫೆಲೆಸ್ತೀನಿನ ಸಂಕ್ಷಿಪ್ತ ಇತಿಹಾಸವನ್ನಾದರೂ ಅರಿತಿರಲೇಬೇಕು. ಇಲ್ಲದಿದ್ದರೆ ಆತನ ಕಾವ್ಯ ಅರ್ಥವಾಗುವುದು ಕಷ್ಟ.

ಆಧುನಿಕ ಫೆಲೆಸ್ತೀನಿನ ಪ್ರತಿಯೊಂದು ಎಪಿಸೋಡನ್ನೂ ಜೀವಂತವಾಗಿ ಬದುಕಿದ ದರ್ವೇಶ್ ಹುಟ್ಟಿದ್ದು, 1942ರಲ್ಲಿ ಪಶ್ಚಿಮ ಗಲಿಲಿಯದ ಅಲ್-ಬರ‍್ವೆ ಎಂಬಲ್ಲಿ. ಭೂಮಾಲಿಕ ಕುಟುಂಬದ ಸಲೀಮ್ ಮತ್ತು ಹೌರಿಯಾ ದರ್ವೇಶ್ ದಂಪತಿಗಳ ದ್ವಿತೀಯ ಪುತ್ರ ರಾಗಿರುವ ಮಹಮೂದ್ ದರ್ವೇಶ್ ಬಾಲ್ಯದಲ್ಲಿ ಅಜ್ಜನೊಂದಿಗೆ ಸೇರಿ ಬರವಣಿಗೆಯನ್ನು ಅಭ್ಯಾಸ ಮಾಡಿದರು. 1948ರಲ್ಲಿ ಜೂನ್ ತಿಂಗಳಲ್ಲಿ ಇಸ್ರೇಲ್ ಪಡೆಗಳು ಅಲ್ ಬರ‍್ವಾ ಪಟ್ಟಣದ ಮೇಲೆ ದಾಳಿ ನಡೆಸಿ, ಹಲವಾರು ನಾಗರಿಕರು ನಿರಾಶ್ರಿತರಾಗಿ ಲೆಬನಾನಿನ ಶಿಬಿರವೊಂದರಲ್ಲಿ ಆಶ್ರಯ ಪಡೆದರು. ಆ ನಿರಾಶ್ರಿತರಲ್ಲಿ ದರ್ವೇಶ್ ಕುಟುಂಬವೂ ಒಂದಾಗಿತ್ತು. ಮುಂದೆ 1949 ಇಸ್ರೇಲ್ ಲೆಬನಾನಿನ ಮೇಲೆ ಆಕ್ರಮಣಗೈದಾಗ ದರ್ವೇಶ್ ಕುಟುಂಬ ತಾಯಿ ನಾಡಿಗೆ ಮರಳಿತು. ಹಲವಾರು ವರ್ಷಗಳ ಕಾಲ ತನ್ನ ಯೌವ್ವನವನ್ನು ಇಸ್ರೇಲ್‌ನ ಕಪಿಮುಷ್ಠಿಯಲ್ಲಿದ್ದ ಫೆಲೆಸ್ತೀನಿನ ಅಕ್ರಾದಲ್ಲಿ ಕಳೆದ ಕವಿ ದರ್ವೇಶ್ ಹೈಸ್ಕೂಲ್ ಶಿಕ್ಷಣವನ್ನು ಕಫ್ರ್ ಯಾಸಿಫ್ ಎಂಬಲ್ಲಿ ಪೂರೈಸಿದರು. ನಂತರ ಹೈಫಾ ಪ್ರದೇಶಕ್ಕೆ ಸ್ಥಳಾಂತರಗೊಂಡರು. ನಿರಂತರವಾಗಿ ಅಲೆಮಾರಿ ಜೀವನವನ್ನು ನಡೆಸಿದ ಈ ಕವಿ ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲಿ ಪ್ರಥಮ ಕವನ ಸಂಕಲನ `ಅಸಫಿರ್ ಬಿಲ ಅಜ್ನಿಹಾ ಅಥವಾ `ರೆಕ್ಕೆಯಿಲ್ಲದ ಹಕ್ಕಿ’ಯನ್ನು ಪ್ರಕಟಿಸಿದರು. ಇವರ ಆರಂಭದ ಕವನಗಳು ಇಸ್ರೇಲ್ ಕಮ್ಯುನಿಸ್ಟ್ ಪಾರ್ಟಿಯ ನಿಯತಕಾಲಿಕ ಅಲ್ ಜದೀದ್‌ನಲ್ಲಿ ಪ್ರಕಟವಾಯಿತು. ನಂತರ ಅಲ್ ಜದೀದ್ ನಿಯತಕಾಲಿಕದ ಸಂಪಾದಕರಾದ ಇವರು, ಮುಂದೆ ಅಲ್ ಫಜಿರ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. 1965ರ ಮೇ ತಿಂಗಳಲ್ಲಿ ನಜರತ್ ಮೂವಿ ಹೌಸಲ್ಲಿ ದರ್ವೇಶ್ ವಾಚಿಸಿದಬಿತಾಕತ್ ಹುವಿಯ್ಯಾ’’ (ಐಡೆಂಟಿಟಿ ಕಾರ್ಡ್) ಕವನ ರಿಗೆ ಅರಬ್ ಜಗತ್ತಿನಾದ್ಯಂತ ಪ್ರಸಿದ್ಧಿ ತಂದುಕೊಟ್ಟಿತು. ಈ ಕವನದಲ್ಲಿ ಇಸ್ರೇಲ್ ಸೈನಿಕರ ಮುಂದೆ ತನ್ನ ಐಡೆಂಟಿಟಿಯನ್ನು ಹೇಳುತ್ತಾ ಹೋಗುವ ಕವಿ ಕವನವನ್ನು ಆರಂಭಿಸುವುದು, ಬರೆಯಿರಿ, ನಾನೊಬ್ಬ ಅರಬ್, ನನ್ನ ಐಡೆಂಟಿಟಿ ಕಾರ್ಡ್ ನಂಬರ್ ಐವತ್ತು ಸಾವಿರ, ನನಗೆ ಎಂಟು ಮಂದಿ ಮಕ್ಕಳಿದ್ದಾರೆ. ಈ ಬೇಸಿಗೆಯ ನಂತರ ಒಂಬತ್ತನೇ ಮಗನೂ ಹುಟ್ಟಬಹುದು, ನಿಮಗೆ ಸಿಟ್ಟೇ?’’ ಎಂದು ಕೇಳುತ್ತಾನೆ. ಕವನದುದ್ದಕ್ಕೂ ಕವಿ ತನ್ನ ಮೂಲಕ ತನ್ನ ಜನತೆಯನ್ನು ಪರಿಚಯಿಸುತ್ತಾ ಹೋಗುತ್ತಾನೆ.ಬಿಕ್ಷೆಗಾಗಿ ನಿಮ್ಮ ಬಾಗಿಲ ಮುಂದೆ ನಿಂತು ದೇಹಿ’’ ಎನ್ನದ ತನ್ನ ಜನರನ್ನು ಆತ್ಮಾಭಿಮಾನದಿಂದ ಪರಿಚಯಿಸುತ್ತಾನೆ.

ಯಾವುದೇ ಟೈಟಲ್‌ಗಳಿಲ್ಲದ ಒಬ್ಬ ಸಾಮಾನ್ಯ ಅರಬ್ ಪ್ರಜೆ ತಾನು ಎಂದು ಹೇಳುವ ಕವಿ, ತನ್ನ ಪೂರ್ವಜರ ಕಥೆ ಹೇಳುವ ಮೂಲಕ ಫೆಲೆಸ್ತೀನ್ ಎಂಬ ರಾಷ್ಟ್ರದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಾನೆ. ಹುಟ್ಟಾ ಅಸುಖಿಯೂ, ಬಡವನೂ ಆಗಿರುವ ತನ್ನ ಅಜ್ಜ ಓರ್ವ ರೈತನಾಗಿದ್ದು, ತನಗೆ ಹೇಗೆ ಓದುವುದು ಎಂಬುದನ್ನು ಕಲಿಸುವ ಮೊದಲೇ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿದ್ದಾನೆ ಎನ್ನುತ್ತಾನೆ. ತನ್ನ ಪೂವರ್ಜರ ಅಪೂರ್ವ ಸಂಪತ್ತನ್ನೂ, ಭೂಮಿಯನ್ನೂ, ತನ್ನ ಮಕ್ಕಳನ್ನು ಕಸಿದುಕೊಂಡಿರುವ ನೀವು ಈ ಕಲ್ಲುಗಳ ಹೊರತಾಗಿ ಬೇರೇನನ್ನೂ ಉಳಿಸಿಲ್ಲ’’ ಎಂದು ಹೇಳಿಕೊಳ್ಳುವ ಕವಿ ಆ ಕಲ್ಲುಗಳನ್ನೇ ಸ್ವಾತಂತ್ರ್ಯ ಹೋರಾಟದುದ್ದಕ್ಕೂ ತಮ್ಮ ಆಯುಧವನ್ನಾಗಿ ಬಳಸಿಕೊಂಡಿರುವ ಫೆಲೆಸ್ತೀನ್ ಪ್ರಜೆಗಳ ಯಶೋಗಾಥೆಯನ್ನು ಪರೋಕ್ಷವಾಗಿ ವಿವರಿಸುತ್ತಾನೆ. ಕವಿ ತನ್ನ ಐಡೆಂಟಿಟಿಯನ್ನು ಹೇಳುತ್ತಾ ಕವನವನ್ನು ಹೀಗೆ ಕೊನೆಗೊಳಿಸುತ್ತಾರೆ,ಆದ್ದರಿಂದ, ಮೊದಲ ಪುಟದ ಆರಂಭದಲ್ಲೇ ಬರೆಯಿರಿ, ನಾನು ಜನರನ್ನು ಧ್ವೇಷಿಸಲಾರೆ. ಅತಿಕ್ರಮಣ ಮಾಡಲಾರೆ. ಆದರೆ, ನಾನು ಹಸಿವಿನಿಂದ ನರಳಿದರೆ, ಆಕ್ರಮಣಕಾರರ ಮಾಂಸ ನನ್ನ ಆಹಾರವಾಗಬಹುದು, ಎಚ್ಚರವಿರಲಿ ಎಚ್ಚರವಿರಲಿ, ನನ್ನ ಹಸಿವು, ಸಿಟ್ಟಿನ ಬಗ್ಗೆ’’ ವಸಾಹತುಶಾಹಿ ಪ್ರಭೃತಿಗಳಿಗೆ ಇದು ತನ್ನ ಜನರ ಪರವಾಗಿ ಕವಿ ನೀಡುವ ಎಚ್ಚರಿಕೆ.


ದರ್ವೇಶ್ ಯುರೋಪಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಫೆಲೆಸ್ತೀನ್ ನಿರಾಶ್ರಿತರ ಜೊತೆಗೂಡಿ 1970ರಲ್ಲಿ ಹೆಚ್ಚಿನ ಓದಿಗಾಗಿ ಸೋವಿಯತ್ ರಷ್ಯಾದೆಡೆಗೆ ಪ್ರಯಾಣ ಬೆಳೆಸಿದರು. ತನ್ನ ಗುಪ್ತ ರಾಜಕೀಯ ಚಟುವಟಿಕೆಗಳಿಂದಾಗಿ ಇಸ್ರೇಲ್ ನೀಡಿದ್ದ ಎರಡನೇ ದರ್ಜೆಯ ಪೌರತ್ವವನ್ನೂ ಕಳೆದುಕೊಂಡು ಫೆಲೆಸ್ತೀನ್ ನಿರಾಶ್ರಿತರ ಬೆನ್ನು ಹಿಡಿದು ಈಜಿಪ್ಟ್, ಲೆಬನಾನ್, ಜೋರ್ಡನ್ ಇತ್ಯಾದಿ ಅರಬ್ ಜಗತ್ತನ್ನು ಅಂಡಲೆಯುತ್ತಾ ಅಪಾರ ಅನುಭವ ಕರಗತ ಮಾಡಿಕೊಂಡರು. ಸ್ವಂತ ಮನೆಯಿಂದ ಹೊರಹಾಕಲ್ಪಟ್ಟ ನಿರಾಶ್ರಿತ ಫೆಲೆಸ್ತೀನ್ ನಾಗರಿಕರ ಯಾತನೆಯನ್ನು ನೇರವಾಗಿ ಕಂಡುಕೊಂಡ ದರ್ವೇಶ್, ಕಾವ್ಯವನ್ನೇ ಖಡ್ಗವಾಗಿಸಿ ಫೆಲೆಸ್ತೀನಿನ ವಾಸ್ತವನ್ನು ಜಗತ್ತಿನ ಮುಂದಿಟ್ಟರು. 1973ರಲ್ಲಿ ಪಿಎಲ್‌ಒ ಸೇರಿದ ಇವರು ನೇರವಾಗಿಯೇ ಹೋರಾಟಕ್ಕೆ ಧುಮುಕಿ ಇಸ್ರೇಲ್‌ನ ಕೆಂಗಣ್ಣಿಗೆ ಗುರಿಯಾದರು. ಇದರ ಪರಿಣಾಮ ಫೆಲೆಸ್ತೀನ್ ಪ್ರವೇಶಿಸದಂತೆ ಇವರಿಗೆ ನಿರ್ಬಂಧ ವಿಧಿಸಲಾಯಿತು.
ದರ್ವೆಶ್ ಮೂವತ್ತಕ್ಕೂ ಹೆಚ್ಚು ಕವನ ಸಂಕಲನ ಮತ್ತು ಎಂಟು ಗದ್ಯ ಸಂಕಲಗಳನ್ನು ಪ್ರಕಟಿಸಿದ್ದಾರೆ.

1982ರ ಲೆಬನಾನಿನ ಮೇಲಿನ ಅಮಾನುಷ ದಾಳಿಯನ್ನು ದರ್ವೇಶ್ ನೇರವಾಗಿ ಕಂಡಿದ್ದರು. ಈ ಘಟನೆ ಅವರ ಜೀವನದ, ಕಾವ್ಯದ ಗತಿಯನ್ನೇ ಬದಲಾಯಿಸಿತ್ತು. ಲೆಬನಾನಿನ ಮೇಲೆ ಇಸ್ರೇಲ್ ನಡೆಸಿದ ಈ ಅಮಾನುಷ ದಾಳಿಯನ್ನು ಇತಿಹಾಸದ ಅತ್ಯಂತ ಪ್ರಮುಖ ಘಟನೆಯಾಗಿ ಇತಿಹಾಸಕಾರರು ಇಂದಿಗೂ ಗುರುತಿಸುತ್ತಾರೆ. ಆ ನಂತರ ಫೆಲೆಸ್ತೀನ್ ಪ್ರತಿರೋಧ ಪಡೆಯೊಂದಿಗೆ ಟ್ಯೂನಿಶೀಯಾಕ್ಕೆ ಪ್ರಯಾಣ ಬೆಳೆಸಿದ ದರ್ವೇಶ್ ಅಕ್ಷರಶಃ ಹೋರಾಟಗಾರನಂತೆಯೇ ಬದುಕಿದರು. ಗೊತ್ತು ಗುರಿ ಇಲ್ಲದಂತೆ ಜಗತ್ತಿನಾದ್ಯಂತ ಅಲೆದರು. ದರ್ವೇಶರ ಅತ್ಯುತ್ತಮ ಕಾವ್ಯಗಳೆಲ್ಲವೂ ಅವರು ತಾಯಿನಾಡಿನಿಂದ ಹೊರಗಡೆ ಗೊತ್ತುಗುರಿಯಿಲ್ಲದೆ ಅಲೆಯುತ್ತಿದ್ದಾಗಲೇ ಹುಟ್ಟಿಕೊಂಡಿರುವುದು ವಿಶೇಷ ಮತ್ತು ಆ ಕಾವ್ಯಗಳೆಲ್ಲವೂ ತನ್ನ ತಾಯಿನಾಡಿನ ಕುರಿತೇ ಇರುವುದು ಮತ್ತೊಂದು ವಿಶೇಷ. 1995ರಲ್ಲಿ ಫೆಲೆಸ್ತೀನ್ ಲಿಬರೇಷನ್ ಆರ್ಗನೈಶೇಷನ್ ಓಸ್ಲೋ ಒಪ್ಪಂದಕ್ಕೆ ಸಹಿ ಹಾಕಿದಾಗ ದರ್ವೇಶ್ ತಾಯಿ ನಾಡಿಗೆ ಹಿಂದಿರುಗಿದರು. ಮಾತೃಭೂಮಿಯಲ್ಲಿ ಸಹಜ ಜೀವನವನ್ನು ನಡೆಸುವ ಯತ್ನ ಮಾಡಿದರು. ಆದರೆ, ಇಸ್ರೇಲ್ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. 2002ರಲ್ಲಿ ರಾಮಲಲ್ಲಾದಲ್ಲಿ ಇಸ್ರೇಲ್ ನಡೆಸಿದ ಮಾನವ ಇತಿಹಾಸದ ಮತ್ತೊಂದು ಮಹಾ ದುರಂತಕ್ಕೆ ಅವರು ಸಾಕ್ಷಿಯಾದರು. ಈ ಘಟನೆ ಅವರ ಪ್ರಸಿದ್ಧ ಹಾಲತ್ ಹಿಶಾರ್’ ಕಾವ್ಯಸಂಕಲನದ ಉದಯಕ್ಕೆ ಕಾರಣವಾಯಿತು.

ಮಹಾ ಮಾನವತಾವಾದಿಯಾಗಿದ್ದ ದರ್ವೇಶ್ ಶತ್ರುಗಳನ್ನೂ ಸಹಾನುಭೂತಿಯಿಂದ ಕಾಣಬಲ್ಲವರಾಗಿದ್ದರು. ತನ್ನ ಮಾತೃಭೂಮಿಯ ದುರವಸ್ಥೆಗೆ ಕಾರಣಕರ್ತರಾಗಿದ್ದ ಇಸ್ರೇಲ್ ಎಂಬ ಪುಟ್ಟ ರಾಷ್ಟ್ರದ ನಾಗರಿಕರಾದ ಸಾಮಾನ್ಯ ಯಹೂದಿ ಗಳನ್ನು ಅವರೆಂದೂ ಧ್ವೇಷಿಸುತ್ತಿರಲಿಲ್ಲ. ಅವರ ವಿರೋಧವೇನಿದ್ದರೂ ವಸಾಹತುಶಾಹಿ ಶಕ್ತಿಗಳ ಪರದೆಯ ಹಿಂದೆ ನಿಂತು ಇಸ್ರೇಲ್ ಹೇರುತ್ತಿದ್ದ ನಿಯಮಗಳಿಗೆ, ಝಿಯೋನಿಸ್ಟ್ ಪಿತೂರಿಗಳಿಗೆದುರಾ ಗಿತ್ತು. ಎಷ್ಟೋ ಮಂದಿ ಯಹೂದಿಗಳೂ ಫೆಲೆಸ್ತೀನ್ ಪ್ರಜೆಗಳ ಕುರಿತು ಸಹಾನುಭೂತಿ ಹೊಂದಿರುವುದನ್ನು ಅವರು ಕಂಡುಕೊಂಡಿದ್ದರು. ಫೆಲೆಸ್ತೀನ್ ಎಂಬ ಸ್ವತಂತ್ರ ರಾಷ್ಟ್ರಕ್ಕಾಗಿ ಧ್ವನಿ ಎತ್ತುತ್ತಿದ್ದ ಯಹೂದಿಗಳೂ ಇದ್ದರೆಂಬುದನ್ನು ಅವರು ಅರಿತಿದ್ದರು. 1998ರಲ್ಲಿ ಹಾರ್ಟ್ ಸರ್ಜರಿಗೊಳಗಾದ ದರ್ವೇಶ್, ಅದೇ ಅನುಭವನ್ನಿಟ್ಟುಕೊಂಡುಜಿದಾರಿಯ್ಯಾ’ ಎಂಬ ಅದ್ಭುತ ಕಾವ್ಯ ಸಂಕಲನವನ್ನೇ ಹೊರತಂದರು.
2008ರಲ್ಲಿ ಮತ್ತೆ ಹೃದಯಾಘಾತಕ್ಕೊಳಗಾದ ಅವರು ಶಾಶ್ವತವಾಗಿ ಭೂಲೋಕಕ್ಕೆ ವಿದಾಯ ಹೇಳಿದರು.

ಸ್ವಾಲಿಹ್ ತೋಡಾರ್

ಫೆಲಸ್ತೀನ್, ಲೆಬನಾನ್: ನಿಜ ಬದುಕಿನ ಅನಾವರಣ

ಇಸ್ರೇಲ್ ದೇಶವು ಫೆಲಸ್ತೀನರ ಮೇಲೆ ನಡೆಸುವ ಕ್ರೂರತೆಯನ್ನು ಕಂಡಿಲ್ಲವೆಂದು ನಟಿಸುವುದೋ, ಅಡಗಿಸಿಡುವುದೋ ಮಾಡುವವರಿಗೆ ನೇರ ಸೂಚಕಾ ವಸ್ತುವೇ ಡಾ. ಆಂಗ್ ಸ್ವೀ ಛಾಯ್ ಅವರು ಬರೆದ ‘From Beirut to Jerusalem’. ಈ ಪುಸ್ತಕವನ್ನು ‘ಬೈರೂತಿನಿಂದ ಜೆರುಸಲಂಗೆ’ ಎಂಬ ಹೆಸರಿನಲ್ಲಿ ಫಕೀರ್ ಮುಹಮ್ಮದ್ ಕಟ್ಪಾಡಿಯವರು ಬಹಳ ಚಂದವಾಗಿ ಕನ್ನಡೀಕರಿಸಿದ್ದಾರೆ.
ಫೆಲಸ್ತೀನ್ ಕುರಿತ ಓದುವಿಕೆಯಲ್ಲಿ ಪ್ರಮುಖವಾದ ಗ್ರಂಥವಿದು. ತಿರಸ್ಕ್ರತವಾದ ಒಂದು ಜನತೆ ಅಸಾಹಯಕತೆಯ ನಡುವೆ ಸಿಲುಕಿ ಅನುಭವಿಸುವ ‘ನೋವಿನ ಅನುಭವ’ಗಳನ್ನು ಸಾಕ್ಷಿಯಾರಿಸಿ ಬರೆದ ಗ್ರಂಥವಿದು. ಪ್ರತಿಯೊಂದು ಗೆರೆಯಲ್ಲೂ ಫೆಲಸ್ತೀನಿನ ನೋವು ಎಷ್ಟು ತೀವ್ರತೆಯನ್ನು ನೀಡುತ್ತದೆಯೆಂದು ಓದುಗನಿಗೆ ಓದುತ್ತಾ ಹೋದಂತೆ ಮನದಟ್ಟಾಗುತ್ತದೆ.

“ಫೆಲಸ್ತೀನಿಯರಿಗೆ, ಫೆಲಸ್ತೀನನ್ನು ಪ್ರೀತಿಸುವವರಿಗೆ” ಎಂಬ ಮುನ್ನುಡಿಯೊಂದಿಗೆ ಪುಸ್ತಕದ ಆರಂಭ. ಮುನ್ನುಡಿಯಲ್ಲೇ ತಾನು ಯಾರೆಂದು ಸೂಚಿಸುತ್ತಾರೆ ಡಾ. ಆಂಗ್ ಸ್ವೀ ಛಾಯ್. ಅವರೊಬ್ಬ ವಿದ್ಯೆ ಕರಗತಗೊಳಿಸಲು ಹೋರಾಡಿದ ಒಂದು ತಾಯಿಯ ಮಗ. ಅಪ್ಪ ಹಾಗೂ ಅಮ್ಮನ ಜೀವನ ಸಾಹಸಿಕ ಹಾಗು ನೀತಿಯ ಸಲುವಾಗಿತ್ತು. ಜೈಲಿನಲ್ಲಾಗಿತ್ತು ಅವರು ವಿವಾಹಿತರಾಗುವುದು. ಬಾಲ್ಯದಲ್ಲೇ ಉತ್ಸಾಹ, ಹುರುಪಿನಿಂದ ಕಲಿತು ವೈದ್ಯಕೀಯ ಕೆಲಸಕ್ಕೆ ಸೇರಿಕೊಂಡರು. ವೈದ್ಯರಾದ ಬಳಿಕ ಛಾಯ್ ‘ಈ ವೃತ್ತಿ ನನಗೆ ಹಣ ಗಳಿಸುವುದರ ಬದಲು ಬಡ-ನಿರ್ಗತಿಕರನ್ನು ರಕ್ಷಿಸಲು ಇರುವುದೆಂದು ತೀರ್ಮಾನಿಸಿ, ಪುಸ್ತಕ ಅಧ್ಯಯನದತ್ತ ಕಾಲಿಟ್ಟರು.

1982 ಇಸವಿಯಲ್ಲಿ ಲಂಡನ್ನಿನ ವೈದ್ಯರಾಗಿ ಸೇವೆ ಸಲ್ಲಿಸುವಾಗ, ನಿರಂತರ ಯುದ್ಧ ನಡೆಯುವ ಲೆಬನಾನಿಗೆ ‘ಪರಿಣಿತ ವೈದ್ಯರು ಬೇಕೆಂಬ’ ಜಾಹಿರಾತು ಕಾಣುತ್ತದೆ. ಬಾಲ್ಯ ಕಾಲದಲ್ಲಿ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಉತ್ಸಾಹಿಯಾಗಿದ್ದರು ಛಾಯ್. ಛಾಯ್ ಬಿ.ಬಿ.ಸಿಯಲ್ಲಿ ವಾರ್ತೆ ಕೇಳುವಾಗ ಅಚ್ಚರಿಪಟ್ಟರು, ‘ಇಸ್ರೇಲರು ಸಾಮೂಹಿಕ ಕೋಲೆ ನಡೆಸುತ್ತಿರುವುದೋ..?’ ಎಂದು ಚಿಂತಿಸಿಯಾಗಿತ್ತು ಆಶ್ಚರ್ಯಚಕಿತರಾದದ್ದು. ಕಾರಣ ಇಸ್ರೇಲರ ಕುರಿತು ಕೇಳಿದ ಸ್ಪಷ್ಟೀಕರಣ ಹಾಗೆ ಆಗಿರಲಿಲ್ಲವಲ್ಲಾ ಎಂಬುವುದಾಗಿತ್ತು. ಆದರೂ ಹಾಸ್ಪಿಟಲ್ ಕೆಲಸ ಕೊನೆಗೊಳಿಸಿ ಬೈರೂತಿನತ್ತ ಹೊರಟುನಿಂತರು. ಜಗತ್ತಿನಲ್ಲಿನ ಹಲವು ಭಾಗಗಳಿಂದಿರುವ ನೂರರಷ್ಟು ಬರುವ ವೈದ್ಯರೊಂದಿಗೆಯಾಗಿತ್ತು ಯಾತ್ರೆ.

ಈ ಪುಸ್ತಕ ಐದು ಪ್ರಮುಖ ಅಧ್ಯಯನದ ಕ್ರಮೀಕರಣದೊಂದಿಗಿದೆ. ಹೃದಯ ಉದ್ವೇಗಗೊಳ್ಳುವ ನೋವಿನ ಅನುಭವವನ್ನು ಪ್ರತೀ ಅಧ್ಯಯನದಲ್ಲಿ ಕಾಣಲು ಸಾಧ್ಯ. ಬೈರೂತಿನ ಪ್ರಾಥಮಿಕ ಯಾತ್ರೆಯ ಅನುಭವವನ್ನು ಒಳಗೊಂಡ ಮೊದಲ ಅಧ್ಯಾಯವನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಯುದ್ಧದ ಭಯಾನಕತೆಯನ್ನು ವಿಭಿನ್ನವಾಗಿ ವಿವರಿಸುತ್ತಾರೆ; “ನಾವು ತಲುಪುವ ಹೊತ್ತಿಗೆ ವೈಮಾನಿಕ ಯುದ್ಧದ ತುಂಬ ಶೋಚನೀಯವಾದ ಹಂತವು ಮುಗಿದಿತ್ತು. ಬಾಂಬ್, ಶೆಲ್ಲ್’ಗಳು ಬಂದು ಬೀಳುವುದಿಲ್ಲವೆಂಬ ಸಂತೈಕೆಯಿದ್ದರೂ, ನಗರದಲ್ಲಿ ಕಂಡ ದೃಶ್ಯವು ಅದನ್ನ ಮರತು ಹೋಗುವಂತಾಗಿಸಿತು. ಬಾಂಬ್ ಮೂಲಕ ನೆಲಸಮವಾದ ಕಟ್ಟಡ, ಅವಶೇಷಗಳ ರಾಶಿ, ಬಿದ್ದು ನೇತಾಡುತಿರುವ ಕಟ್ಟಡ ಗೋಡೆಗಳು ನೋಡುವಾಗ ತಲೆಕೆಳಗಾಗಿದ ಅಡ್ಡ ಬಿದ್ದಂತೆ ಕಾಣುತ್ತಿತ್ತು. ನಾಶದ ಕೈಗಳಿಗೆ ಸಿಗದ ಬೈರೂತ್ ಇಂದೂ ಸುಂದರವಾಗಿದೆ.” ಎಂದು ಯುದ್ಧದ ಭಯಾನಕತೆಯ ಕುರಿತು ವಿವರಿಸುತ್ತಾರೆ. ವಿಶೇಷವಾದ ಪರಿಭಾಷಾ ಪ್ರಯೋಗದೊಂದಿಗೆ ಒಂದೊಂದೇ ಸ್ವಾನುಭವವನ್ನು ವಿವರಿಸುತ್ತಾ ಹೋಗುತ್ತದೆ ಈ ಪುಸ್ತಕ.

ಎಲ್ಲಾ ಆಸ್ಪತ್ರೆಗಳು ಇಸ್ರಾಯೀಲರ ಬಾಂಬ್ ದಾಳಿಯಿಂದ ಉರುಳಿ ಬಿದ್ದಿದೆ. ಔಷಧಿ, ಅತ್ಯವಶ್ಯಕ ವಸ್ತುಗಳೇನೂ ಇಲ್ಲ. ಅದರ ಮಧ್ಯೆ ಮಕ್ಕಳನ್ನು ಸಹ ಹೊರಗಡೆ ಕೊಂದು ಹಾಕುತ್ತಿದ್ದಾರೆ. ಈ ಖಿನ್ನತೆಯ ಮಧ್ಯೆ ನಿಲ್ಲುವಾಗಲೂ ಅಸ್ತಮಿಸದ ಕಿರಣಗಳನ್ನು ಅವರು ಮುಖದಲ್ಲಿ ಬಿರಿಯುವುದನ್ನು ಕಾಣುವುದೆಂದು ಲೇಖಕ ಛಾಯ್ ವಿವರಿಸುತ್ತಾರೆ. ಅದರೊಂದಿಗೆ ಮನುಷ್ಯತ್ವದ ಸರ್ವ ಮಜಲುಗಳನ್ನು ಲಂಘಿಸಿ ನಡೆಸುವ ಅಧಿಕಾರದ ಕುರಿತು ಪ್ರತಿಯೊಂದು ಅಧ್ಯಾಯವು ಚರ್ಚಿಸುತ್ತದೆ.

ಹೇಗೆ ಸ್ವಾತಂತ್ರಕ್ಕೆ ಬೇಕಿರುವ ಆವೇಶವನ್ನು ಪಡೆಯುವುದೆಂದು, ಇಸ್ರೇಲರ ಮಧ್ಯೆ ಜೀವಿಸುವ ಫೆಲಸ್ತೀನಿನ ಸಣ್ಣ ಮಕ್ಕಳು ನಿರಂತರವಾಗಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ ಎಂದು ಈಸಾ ಎಂಬ ಪುಟ್ಟ ಮಗುವಿನ ಅನುಭವದ ಮೂಲಕ ವಿವರಿಸಿಕೊಡುತ್ತಾರೆ. ಫೆಲಸ್ತೀನ್ ಕ್ರಿಶ್ಚಿಯನ್ ಬಂಧನದಲ್ಲಿದ್ದ ಮಗುವೇ ಈಸ. ತನ್ನ ಕಾಲು ನಷ್ಟಹೊಂದಿದಾಗಲೂ ಮಾತುಗಾರಿಕೆ ಫೆಲಸ್ತೀನಿನ ಸ್ವಾತಂತ್ರದ ಕುರಿತಾಗಿತ್ತು. ಆದರೆ ನಡೆದಾಡಲು ಸಾಧ್ಯವಿಲ್ಲದ ಈ ಮಗುವಿನ ಕುರಿತು ಮನಃವೇದನೆಗೊಳ್ಳುತ್ತಾರೆ. ಮಕ್ಕಳನ್ನು ಹೇಗೆ ಇಷ್ಟು ಭೀಕರತೆಯಿಂದ ಸಾಮೂಹಿಕವಾಗಿ ಕೊಲ್ಲುವುದು…? ಎಂದು ಆಂಗ್ ಖೇದಕರವಾಗಿ ಕೇಳುತ್ತಾರೆ.

ಒಂದು ಡೈರಿಯ ರೀತಿಯಲ್ಲಿ ಆಂಗ್ ತಾನು ಕಂಡ ಅನುಭವವನ್ನು ಈ ರೀತಿಯಾಗಿ ಪ್ರತಿಯೊಂದು ಅನುಭವ ಘಟನೆಯನ್ನು ವಿವರಿಸುತ್ತಾರೆ. ಇದು ಪ್ರತಿಯೊಬ್ಬನೂ ಓದಲೇಬೇಕಾದ ಕೃತಿ. ನಮ್ಮ ಕಾಲದ ಅಕ್ರಮ, ದುರಂತಗಳು ನಾವು ಅರಿಯದೇ ಹೋಗಬಾರದು. ಇಸ್ರಾಯೀಲರ ವಿರುದ್ಧ ಮಾನಸಿಕವಾಗಿ ಬೆಂಬಲ ನೀಡಲು ಈ ಕೃತಿ ಖಂಡಿತ ಪ್ರೇರಕವಾಗುವುದು.
ಅದಲ್ಲದೆ ಈಗಲೂ ಹಿಟ್ಲರ್ ಯಹೂದರೊಂದಿಗೆ ಮಾಡಿದ ಕ್ರೂರತೆ ಕುರಿತ ಅನುಭವಗಳು ಹಾಗೂ ಕಾದಂಬರಿಗಳು ಇಂಗ್ಲಿಷ್ ಸಾಹಿತ್ಯದಲ್ಲಿ ಮನಃಪೂರ್ವಕವಾಗಿ ಬಿಡಲಾಗುತ್ತಿದೆ. ಅದರೊಂದಿಗೆ ಯಹೂದರೊಂದಿಗಿರುವ ಸಹಾನುಭೂತಿ ಶಕ್ತವಾಗುತ್ತಿದೆ. ಹೀಗೆ ಲಭಿಸುವ ಬಲದಿಂದ ಅವರು ಅಂದು ಹಿಟ್ಲರ್ ಮಾಡಿದ ನೂರುಪಟ್ಟು ಅನೀತಿಯನ್ನು ಫೆಲಸ್ತೀನರೊಂದಿಗೆ ಮಾಡುತ್ತಿದ್ದಾರೆ…
ಹೀಗೆ ಲೇಖಕರು ಫೆಲಸ್ತೀನಿನ ಅನುಭವವನ್ನು ಪುಸ್ತಕದಂತ್ಯದವರೆಗೂ ವಿವರಿಸುತ್ತಾರೆ.
ಈ ವಿಷಯದಲ್ಲಿ ಹಲವು ಪುಸ್ತಕಗಳು ವಿಶ್ವದಾದ್ಯಂತ ರಚಿಸಲ್ಪಟ್ಟಿದೆ. ಅದು ಕನ್ನಡ ಭಾಷೆಗೆ ಬರಬೇಕಾದ ಅನಿವಾರ್ಯತೆಯಿದೆ.

ಈ ಪುಸ್ತಕವನ್ನು ಕೇರಳದ ‘Other Books’ ಪ್ರಕಾಶನ ಹೊರತಂದಿದೆ. ಅಲ್ಲದೆ ಸೂಫಿಸಂ, ಇತಿಹಾಸ, ದಲಿತ ಅಧ್ಯಯನ ಸೇರಿದಂತೆ ಹಲವು ವಿಷಯಗಳಲ್ಲಿ ಕನ್ನಡ, ಇಂಗ್ಲಿಷ್, ಮಲಯಾಳಂ ಭಾಷೆಯಲ್ಲಿ ಹಲವು ಉಪಯುಕ್ತ ಪುಸ್ತಕಗಳನ್ನ ಪ್ರಕಾಶನ ಮಾಡಿದ ಪ್ರಕಾಶನವಿದು.
~
ಫಕೀರ ಮುಹಮ್ಮದ್ ಕಟ್ಪಾಡಿಯವರು ತಮ್ಮ ಕನ್ನಡ ‍ಸಾಹಿತ್ಯದಲ್ಲಿ ವಿಶೇಷವಾಗಿ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯದ ಸಂಪ್ರದಾಯಗಳನ್ನು ಹಾಗು ನೋವು ನಲಿವುಗಳನ್ನು ನೈಜವಾಗಿ ವ್ಯಕ್ತಪಡಿಸಿದವರು. ಇವರ ಕಥೆಗಳು ಭಾರತ‍ದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಸೂಫೀ ಸಾಹಿತ್ಯದ ಮೂರು ಕೃತಿ; ಸೂಫಿ ಸಂತರು, ಸೂಫಿ ಮಹಿಳೆಯರು,ಉತ್ತರ ಕರ್ನಾಟಕದ ಸೂಫಿಸಂತರು. ಅಲ್ಲದೆ ಹಲವು ಕಥಾ ಸಂಕಲನಗಳನ್ನೂ ಅವರು ಪ್ರಕಟಿಸಿದ್ದಾರೆ.

-ಸಲೀಂ ಇರುವಂಬಳ್ಳ.

ಹೊಸ ಯುಗದ ರೂಮಿ ಓದು : ಕೋಲ್ಮನ್ ಬಾರ್ಕ್ಸ್ ಮತ್ತು ಜನಪ್ರಿಯ ಅನುವಾದದ ಸಮಸ್ಯೆಗಳು.

ತಿಂಗಳುಗಳ ಹಿಂದೆ ‘Boise public library’ಯು ಆಯೋಜಿಸಿದ್ದ ‘ರೂಮಿ ನೈಟ್’ ಎಂಬ ಕಾರ್ಯಕ್ರಮದ ಬಗ್ಗೆ ನಾವು ಮಾತನಾಡುತ್ತಿದ್ದೆವು. ನಾನು ಆ ಕಾರ್ಯಕ್ರಮಕ್ಕೆ ಹಾಜರಾಗದ ಬಗ್ಗೆ ನನ್ನಲ್ಲಿ ಗೆಳೆಯನ ತಾಯಿ ತನ್ನ ಅಸಮಾಧಾನವನ್ನು ತೋಡಿಕೊಂಡರು. ರೂಮಿಯ ಬಗ್ಗೆ ಮಾತನಾಡುತ್ತಾ ಆ ತಾಯಿ ಮತ್ತಷ್ಟು ಉಲ್ಲಸಿತರಾಗುತ್ತಿರುವುದನ್ನು ನಾನು ಗಮನಿಸಿದೆ.ಮೂಲತಃ ಇರಾನಿನವರಾಗಿದ್ದ ಆ ಕುಟುಂಬ ಇತ್ತೀಚಿಗೆ ಇದಾಹೋ ಪಟ್ಟಣದಲ್ಲಿ ವಾಸವಾಗಿದ್ದರು. ನಮ್ಮ ಚರ್ಚೆ ಮುಂದುವರಿಯುತ್ತಿರಬೇಕಾದರೆ ಯುವಕನೊಬ್ಬ ನಮ್ಮತ್ತ ನಡೆದುಬರುತ್ತಿರುವುದು ಕಾಣಿಸಿತು. ಆ ಯುವಕನನ್ನು ಕಂಡದ್ದೇ ಗೆಳೆಯನ ತಾಯಿ ಆತ ‘ರೂಮಿ ನೈಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವರ್ತಮಾನವನ್ನು ನಮ್ಮೊಂದಿಗೆ ಹಂಚಿಕೊಂಡರು. ಈ ಹೊಸತಲೆಮಾರಿನ ಯುವಕರೆಲ್ಲ ರೂಮಿಯನ್ನು ಓದಬಹುದೆಂದು ಅವರು ಊಹಿಸಿಯೂ ಇರಲಿಲ್ಲವೆನಿಸುತ್ತದೆ. ಆಕೆ ಮಾತು ಮುಂದುವರಿಸಿದರು.

“ಅವನ ಸೊಂಟದಲ್ಲಿ ಅಮೇರಿಕಾದ ‘Cow Boy’ಗಳ ಸೊಂಟಪಟ್ಟಿಯಂತಹ ದೊಡ್ಡದಾದ ಬೆಲ್ಟ್ ಇರುತ್ತಿತ್ತು. ರೂಮಿಯನ್ನು ಓದಲು ಪ್ರಾರಂಭಿಸಿದ ಬಳಿಕವಷ್ಟೇ ಅವರ ಬದುಕಿನಲ್ಲಿ ಬದಲಾವಣೆಗಳು ಪ್ರಾರಂಭಗೊಂಡದ್ದು”. ಆ ತಾಯಿಯ ಮಾತುಗಳು ನಮ್ಮ ಗಹನವಾದ ಚರ್ಚೆಯಿಂದ ಸರಿದು ಆ ಯುವಕನ ಬಗೆಗೆ ಮಾತ್ರ ಸೀಮಿತವಾಗತೊಡಗಿತ್ತು. ಒಬ್ಬ ಅತೀ ಸಾಮಾನ್ಯ ಯುವಕ ಅದರಲ್ಲೂ ಅಮೇರಿಕ್ಕನ್ನರು ರೂಮಿಯನ್ನು ಓದಲು ತೊಡಗಿದರೇ ..!ಅನ್ನುವ ಅಚ್ಚರಿಯಿಂದ ಮೆಲ್ಲಗೆ ಆ ತಾಯಿ ಹೊರಬರತೊಡಗಿದ್ದಳಷ್ಟೇ.

ಪಾಶ್ಚಿಮಾತ್ಯರೆಡೆಯಲ್ಲಿ ‘ರೂಮಿ’ ಎಂದೇ ಜನಪ್ರಿಯರಾದ ಮೌಲಾನ ಜಲಾಲುದ್ದೀನ್ ಬಲ್ಕಿಯವರನ್ನು ಅಮೇರಿಕನ್ನರು ಓದಬೇಕಾದರೆ ಅದೊಂದು ಅನುವಾದವಾಗಿರಬೇಕು ಮತ್ತು ಅದು ಕೋಲ್ಮನ್ ಬಾರ್ಕ್ಸ್ ಅವರದ್ದಾಗಿರುವ ಸಾಧ್ಯತೆಯೇ ಹೆಚ್ಚು. ಸಾಹಿತ್ಯ ಪುಸ್ತಕಗಳ ಭಾಷಾಂತರ ಕೃಷಿ ದೊಡ್ಡ ಪ್ರಮಾಣದಲ್ಲಿ ಇತ್ತೀಚೆಗೆ ನಡೆಯುತ್ತಿದೆಯಾದರೂ ಕೋಲ್ಮನ್ ಬಾರ್ಕ್ಸ್ ರವರಿಗೆ ದೊರೆತ ಮನ್ನಣೆ ಮತ್ತು ಸ್ವಾಗತ ಯಾರಿಗೂ ದೊರೆತಿಲ್ಲವೆಂದೇ ಹೇಳಬೇಕು. ಇದರ ಪರಿಣಾಮವೆಂಬಂತೆ ಹಲವಾರು ಗೋಷ್ಠಿಗಳು, ವಿಭಿನ್ನ ಕಾರ್ಯಕ್ರಮಗಳು ,ಇರಾನ್ ಮತ್ತು ಅಫ್ಘಾನ್ ದೇಶಗಳಿಗೆ ಔಪಚಾರಿಕವಾಗಿ ಭೇಟಿ ನೀಡುವ ಸೌಭಾಗ್ಯವೂ ಬಾರ್ಕ್ಸಿಗೆ ಒದಗಿಬಂತು. ವಿಶೇಷವಾಗಿ ಟೆಹ್ರಾನ್ ವಿಶ್ವವಿದ್ಯಾಲಯದಿಂದ ರೂಮಿ ಕವಿತೆಗಳ ಮೂವತ್ತು ವರ್ಷದ ಅಧ್ಯಯನಕ್ಕಾಗಿ ಗೌರವ ಡಾಕ್ಟರೇಟ್ ಪದವಿಯು ಮುಡಿಗೇರಿತು. ಜಾರ್ಜಿಯಾ ವಿಶ್ವವಿದ್ಯಾಲಯದ ಕುಲಪತಿಗಳಾದ ಬಾರ್ಕ್ಸರ ಜನಪ್ರಿಯತೆ ರೂಮಿಯ ತರ್ಜುಮೆಯಿಂದ ರಾತ್ರಿಬೆಳಗಾಗುವುದರಲ್ಲಿ ಜಗತ್ತಿನಾದ್ಯಂತ ವ್ಯಾಪಿಸಿತು.

ದೊಡ್ಡ ಮಟ್ಟದಲ್ಲಿ ಜನರೆಡೆಯಲ್ಲಿ ಒಪ್ಪಿಗೆಯನ್ನು ಪಡೆದ ಕೋಲ್ಮನ್ ಬಾರ್ಕ್ಸ್‌ರ ಕೃತಿಗಳು ಸಾಮಾನ್ಯ ಓದುಗರನ್ನು ಮೀರಿ ಅದಾಗಲೇ ಸಾಹಿತಿಗಳನ್ನೂ ತಲುಪತೊಡಗಿದ್ದವು. ಈ ಕಾರಣಕ್ಕಾಗಿಯೇ ಹತ್ತು ಸಾವಿರ ಪ್ರತಿಗಳೂ ಮಾರಟವಾಗದೆ ಮೂಲೆಸೇರುತ್ತಿದ್ದ ಇತರ ತರ್ಜುಮೆಗಳೆಡೆಯಲ್ಲಿ ಕೋಲ್ಮನ್ ಬಾರ್ಕ್ಸ್‌ರ ಕೃತಿಯು ಐದು ಲಕ್ಷ ಪ್ರತಿಗಳು ಮುದ್ರಣಗೊಂಡು, ಅದೇ ವೇಗದಲ್ಲಿ ಮಾರಾಟವೂ ಆಗಿ ಹೊಸ ಇತಿಹಾಸವನ್ನೇ ಬರೆಯಿತು. ಮಾತ್ರವಲ್ಲದೆ ರೂಮಿಯದ್ದೆಂದು ಹೇಳಲಾಗುವ ಅನೇಕ ‘ಸಾಲುಗಳು'(quotes) ಜಾಲತಾಣಗಳಲ್ಲಿ ಎಗ್ಗಿಲ್ಲದೆ ಹರಿದಾಡತೊಡಗಿದವು.

ಹೊಸ ತಲೆಮಾರಿನ ಓದುಗರ ಅಭಿರುಚಿಯನ್ನು ಪೂರೈಸುವ ರೀತಿಯ ತರ್ಜುಮೆಗಳಾಗಿದ್ದರೂ ರೂಮಿಯ ಮೂಲ ಕಾವ್ಯದ ಸತ್ವವು ನಷ್ಟಹೊಂದದ ತರ್ಜುಮೆಗಳಾಗಿದೆ ನನ್ನದು ಎಂದು ಕೋಲ್ಮನ್ ಬಾರ್ಕ್ಸ್ ಅಭಿಪ್ರಾಯ ಪಡುತ್ತಾರೆ. ಅದಾಗ್ಯೂ ಈ ಹೊಸತನ ಎಷ್ಟರಮಟ್ಟಿಗೆ ಮೌಲಾನ ರೂಮಿಯವರದ್ದು ಅನ್ನುವ ಅನುಮಾನದ ಕಿಡಿಯೊಂದು ಹಾಗೆಯೇ ಬಾಕಿಯಾಗುತ್ತದೆ.

1990ದಶಕ ಅಮೇರಿಕಾದಲ್ಲಿ ಅತೀ ಹೆಚ್ಚು ಓದಲ್ಪಡುವ ಕವಿಯಾಗಿ ರೂಮಿಯವರ ಕೃತಿಗಳು ಮುನ್ನಲೆಗೆ ಬಂದವು.ವಾಸ್ತವದಲ್ಲಿ ರೂಮಿಯವರ ಮೂಲ ಕವಿತೆಗಳ ಉದ್ದೇಶ,ಆಶಯ, ಒಳಾರ್ಥ ಇವುಗಳೊಂದಿಗೆ ಈ ತರ್ಜುಮೆಗಳಿಗೆ ಯಾವ ಸಂಬಂಧವೂ ಇರುತ್ತಿರಲಿಲ್ಲ. ಮುಖ್ಯವಾಹಿನಿಯ ಓದುಗರನ್ನು ಸೆಳೆಯಲೋಸುಗ ಮೂಲ ಕವಿತೆಗಳ ಆಶಯಗಳಿಗೆ ಧಕ್ಕೆ ಉಂಟುಮಾಡುವ ನಿರೂಪಣೆಗಳು ಧಾರಾಳವಾಗಿ ಅನುವಾದಗಳಲ್ಲಿ ನುಸುಳಿಕೊಂಡಿದ್ದವು. ನಿಖರವಾದ ಅನುವಾದಗಳಿಗೆ ಒತ್ತು ನೀಡುವುದನ್ನು ಕೋಲ್ಮನ್ ಬಾರ್ಕ್ಸ್‌ರು ಮರೆತೇ ಬಿಟ್ಟಿದ್ದರು.

ಅಮೆರಿಕಾದ ಸಾರ್ವಜನಿಕ ಪ್ರಜ್ಞೆಯು ಈ ಹಿನ್ನೆಲೆಯ ಅನುವಾದಗಳನ್ನೇ ಬಯಸಿದ್ದವು. ಇದು ನಿರಂತರ ಪ್ರಯತ್ನದ ಫಲಶ್ರುತಿಯಾದ ಆಧ್ಯಾತ್ಮಿಕತೆಯನ್ನು ಮೀರಿ ತಕ್ಷಣದ ಆಧ್ಯಾತ್ಮಿಕ ಸಮಾಧಾನವನ್ನು ಓದುಗರಿಗೆ ನೀಡತೊಡಗಿತ್ತು. ಬಾರ್ಕ್ಸ್‌ನ ಅನುವಾದಗಳು ಅಮೆರಿಕದ “ಆಧ್ಯಾತ್ಮಿಕ ಹಸಿವಿಗೆ” ತ್ವರಿತ ಆಧ್ಯಾತ್ಮಿಕ ಪರಿಹಾರವನ್ನು ನೀಡಿತ್ತು.ಆ ಕಾರಣಕ್ಕಾಗಿಯೇ ಅಮೇರಿಕಾದ ಜನತೆ ಈ ಸುಧಾರಿತ ಆಧ್ಯಾತ್ಮಿಕತೆಗೆ ಮಾರುಹೋದರು.ರೂಮಿಯ ಸಾಲುಗಳಲ್ಲಿ ಧಾರಾಳವಾಗಿದ್ದ ದೈವ ಭಕ್ತಿ ಮತ್ತು ಪರ್ಶಿಯನ್ ಸಾಹಿತ್ಯದ ಸೌಂದರ್ಯವು ಈ ಅನುವಾದಗಳಿಗೆ ಅನ್ಯವಾಗಿಯೇ ಉಳಿದುಬಿಟ್ಟವು.
2010 ರಲ್ಲಿ ಬಾರ್ಕ್ಸ್‌ರ ಅನುವಾದಗಳ ಬಗ್ಗೆ ವಿಮರ್ಶೆ ಬರೆದ ಅಬು ಅಲ್-ಫಝಲ್ ಹೊರ್ರಿ, ನಾವು ಬಾರ್ಕ್ಸ್‌ನ ಅನುವಾದಗಳನ್ನು “ರೂಪಾಂತರಗಳು” ಎಂದು ಮಾತ್ರವೇ ಕರೆಯಬೇಕೆಂದು ಸೂಚಿಸಿದರು.

ಶೈಕ್ಷಣಿಕ ಮಾನದಂಡಗಳನ್ನು ಆಧರಿಸಿ ನನ್ನ ಅನುವಾದಗಳನ್ನು ವಿಶ್ಲೇಷಣೆ ಮಾಡಬಾರದೆಂದು ಹೇಳಿಕೊಂಡ ಬಾರ್ಕ್ಸ್‌ರ ಬರಹಗಳನ್ನು ಶೈಕ್ಷಣಿಕವಾಗಿ ಎಷ್ಟು ಮಹತ್ವದ್ದು ಅನ್ನುವ ನಿಟ್ಟಿನಲ್ಲಿ ಟೀಕಿಸುವುದು ವ್ಯರ್ಥವಾಗುತ್ತದೆ.ಮಾತ್ರವಲ್ಲದೆ ‘Rumi: bridge to the soul’ ಎಂಬ ತನ್ನ ಕೃತಿಯ ಮುನ್ನುಡಿಯಲ್ಲಿ, ನನ್ನ ಅನುವಾದಗಳು ಶೈಕ್ಷಣಿಕ ಉದ್ದೇಶಗಳಿಗೆ ಬರೆಯಲ್ಪಟ್ಟದಲ್ಲ ಮತ್ತು ಅದು ಶೈಕ್ಷಣಿಕವಾಗಿ ಮೂಡಿಬಂದ ನಿರೂಪಣೆಗಳೂ ಅಲ್ಲ,ಬದಲಾಗಿ ಇವು ಅದನ್ನೆಲ್ಲಾ ಮೀರಿದ ಸ್ವತಂತ್ರ ನಿರೂಪಣೆಗಳಾಗಿದೆ ಎಂದರು.ಅದಾಗ್ಯೂ ಬಾರ್ಕ್ಸ್, ತನ್ನನ್ನು ಪುಸ್ತಕದ ಹೊರ ಕವಚದಲ್ಲಿ ‘ರೂಮಿಯನ್ನು ಅಮೇರಿಕಾಕ್ಕೆ ಪರಿಚಯಿಸಿದ ವ್ಯಕ್ತಿ’ ಎಂದು ಸ್ವತಃ ತಾನೇ ಪರಿಚಯಿಸಿಕೊಳ್ಳುವುದರ ಹಿಂದಿನ ಮರ್ಮವೇನೆಂದು ಅರ್ಥವಾಗುವುದಿಲ್ಲ.

ಹಲವು ಅನುವಾದಕರು ತಮ್ಮ ಕೃತಿಗಳ ಮುನ್ನುಡಿಯಲ್ಲಿ ಕೋಲ್ಮನ್ ಬಾರ್ಕ್ಸ್‌ರ ಬಗ್ಗೆ ಅಸಂತೃಪ್ತಿಯ ಹೇಳಿಕೆಗಳನ್ನು ‌ನೀಡಿದರಾದರೂ ಅದು ಚರ್ಚೆಗೆ ಗ್ರಾಸವಾಗಲೇ ಇಲ್ಲ.ಬಾರ್ಕ್ಸ್‌ರ ಕೃತಿಗಳು ತಲುಪಿದಂತೆ ಈ ವಿಮರ್ಶೆಗಳು, ಟೀಕೆಗಳು ಓದುಗರನ್ನು ತಲುಪುವಲ್ಲಿ ವಿಫಲಗೊಂಡಿತು.ಬೆರಳೆಣಿಕೆಯ ಒಂದಿಷ್ಟು ವಿಮರ್ಶೆಗಳು ಬಿಟ್ಟರೆ ಉಳಿದವುಗಳು ಸದ್ದಿಲ್ಲದೆ ಮಾಯವಾದವು.

ರೂಮಿಯ ಮೂಲ ಕವಿತೆಯ ಸಾಲುಗಳನ್ನು ಯಥಾವತ್ತಾಗಿ ಬಾರ್ಕ್ಸ್ ಅನುವಾದಿಸಲೇ ಇಲ್ಲ.ಆದರೂ ಈ ಹಿಂದೆ ಜನಪ್ರಿಯತೆ ಗಳಿಸಿದ್ದ ಹಾಫಿಝ್,ಉಮರ್ ಖಯ್ಯಾಮ್ ರಂತಹಾ ಶಾಸ್ತ್ರೀಯ ಪರ್ಶಿಯನ್ ಕಾವ್ಯಗಳ ಅನುವಾದಗಳಿಗೆ ಹೋಲಿಕೆ ಮಾಡಿದರೆ ಬಾರ್ಕ್ಸ್‌ರ ಅನುವಾದದಲ್ಲಿ ಕಂಡುಬಂದ ವಿಶೇಷ ಗುಣವೆಂದರೆ ಅದರ ಸರಳತೆ.ಸರಾಗವಾಗಿ ಓದಿಸಿಕೊಳ್ಳುವ ನವಿರಾದ ಭಾಷೆಯ ಸೊಬಗು.ಇತರ ಅನುವಾದಕರು ವೈಭವೀಕರಿಸಿ ಹೇಳ ಹೊರಟ ವಿಷಯಗಳನ್ನು ಬಾರ್ಕ್ಸ್ ಬಹಳ ಲಾಲಿತ್ಯದೊಂದಿಗೆ ತೆರೆದಿಟ್ಟರು.ಆದಾಗ್ಯೂ ಇದನ್ನೊಂದು ಉತೃಷ್ಟವಾದ ಅನುವಾದವೆನ್ನಲೂ ಆಗದ ಅನುವಾದದ ಅನುವಾದವೆಂದು ಮಾತ್ರವೇ ಕರೆಯಬಹುದು. ಪರ್ಶಿಯನ್ ಭಾಷೆ ಗೊತ್ತಿಲ್ಲದ ಬಾರ್ಕ್ಸ್ ಇಂಗ್ಲೀಷ್ ಭಾಷೆಗಳಲ್ಲಿ ಅದಾಗಲೇ ಪ್ರಕಟಗೊಂಡಿದ್ದ ಕವಿತೆಗಳಿಗೆ ತನ್ನತನವನ್ನು ಬೆರೆಸಿ ಓದುಗರ ಮುಂದಿಟ್ಟರು ಎನ್ನುವುದಾಗಿದೆ ಸತ್ಯ.

ಅಕಾಡೆಮಿಕ್ ಅನುವಾದಗಳ ಆಚೆಗೆ ಈ ರೀತಿ ಅನುವಾದಗಳ ಮೂಲಕ ಓದುಗರನ್ನು ತಲುಪುವುದು ಉತ್ತಮವೆಂದು ಕೊಲೊಮನ್ ಬಾರ್ಕ್ಸ್‌ ಅಭಿಪ್ರಯಿಸುತ್ತಾರೆ.ಜೊತೆಗೆ, ನಿಗೂಢಾರ್ಥವಿರುವ ಸಾಲುಗಳನ್ನು ಕೈ ಬಿಡುವುದು ಒಂದರ್ಥದಲ್ಲಿ ಜಾಣತನವೆನ್ನುವ ಬಾರ್ಕ್ಸ್ ಈ ಎಲ್ಲಾ ಸಮಸ್ಯಾತ್ಮಕ ಬರಹಗಳ ಹೊರತಾಗಿಯೂ,ರೂಮಿಯ ಹೆಸರಿನ ಲಾಭವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮುಂದುವರಿಸುತ್ತಾರೆ.

1976 ರ ಆಸುಪಾಸಿನಲ್ಲಾಗಿದೆ ಬಾರ್ಕ್ಸ್ ರೂಮಿಯ ಕಾವ್ಯಗಳೊಂದಿಗೆ ಆಪ್ತವಾಗಿ ವ್ಯವಹರಿಸಲು ಪ್ರಾರಂಭಿಸುವುದು.ರಾಬರ್ಟ್ ಬ್ಲೈ ಎಂಬ ಕವಿ ಮಿತ್ರರಾಗಿದ್ದಾರೆ ಬಾರ್ಕ್ಸ್‌ರವರಿಗೆ ರೂಮಿಯ ಕೃತಿಗಳ ಬಗ್ಗೆ ಪರಿಚಯಿಸುವುದು.ಆರ್ಥರ್ ಜಾನ್ ಆರ್ಬೆರ್ರಿಯ ಒಂದು ರೂಮಿ ಕವಿತೆಗಳ ತರ್ಜುಮೆಯನ್ನು ಹಸ್ತಾಂತರಿಸಿ, ‘ಈ ಕವಿತೆಗಳನ್ನು’ ಕಾರಾಗೃಹದಿಂದ ಬಿಡುಗಡೆಗೊಳಿಸಬೇಕೆಂದು’ ಬಾರ್ಕ್ಸ್‌ರವರಲ್ಲಿ ಅವರು ಕೇಳಿಕೊಳ್ಳುವುದು.ತೀರಾ ರೂಮಿಯ ಹೆಸರನ್ನೇ ಕೇಳಿರದ ಬಾರ್ಕ್ಸ್‌ರ ಮುಂದೆ ಹೊಸ ಅವಕಾಶಗಳ ದಾರಿಗಳನ್ನು ರಾಬರ್ಟ್ ಬ್ಲೈ ತೆರೆದಿಟ್ಟರು.ತನ್ನ ಎಂದಿನ ತರಗತಿಗಳ ಬಳಿಕ ಬಿಡುವು ಮಾಡಿಕೊಂಡ ಬಾರ್ಕ್ಸ್ ಆರ್ಬೇರ್ರಿಯ ತರ್ಜುಮೆಗಳನ್ನು ಶೃಂಗರಿಸಿ ಸೃಜನಶೀಲ ಭಾಷೆಗೆ ಅನುವಾದಿಸಲು ಅಂದಿನಿಂದಲೇ ಪ್ರಾರಂಭಿಸಿದರು.

ಬಾರ್ಕ್ಸ್ ವಿವರಿಸುವಂತೆ ಈ ಸಂದರ್ಭದಲ್ಲಾಗಿತ್ತು ಅವರ ಕನಸಿನಲ್ಲಿ ಸೂಫಿ ಸಂತರೋರ್ವರು ಪ್ರತ್ಯಕ್ಷಗೊಂಡು ತಾನು ಕೈಗೆತ್ತಿಕೊಂಡ ಈ ಅನುವಾದ ಯೋಜನೆಯನ್ನು ಶೀಘ್ರದಲ್ಲೇ ಪೂರ್ತಿಗೊಳಿಸಬೇಕಾಗಿ ವಿನಂತಿಸಿಕೊಳ್ಳುವುದು‌.ಸುಮಾರು ಎರಡು ವರ್ಷದ ಬಳಿಕ ತಾನು ಕನಸಿನಲ್ಲಿ ದರ್ಶಿಸಿದ ಅದೇ ಸೂಫಿವರ್ಯರನ್ನು ಬಾರ್ಕ್ಸ್ ಮುಖತಃ ಭೇಟಿಯಾದರು.ಫಿಲಡೆಲ್ಫಿಯಾದಲ್ಲಿ ವಾಸಿಸುತ್ತಿದ್ದ ಮೂಲತಃ ಶ್ರೀಲಂಕಾ ನಿವಾಸಿಯಾದ ಬಾವಾ ಮುಹಿಯದ್ದೀನ್ ಎಂಬವರಾಗಿದ್ದರು ಅವರು.ತನಗೆ ಸೂಫಿ ಅನುವಾದಗಳಿಗೆ ಸ್ಪೂರ್ತಿ ನೀಡಿದ ಬಹುಮುಖ್ಯ ವಿಷಯವಾಗಿತ್ತು ಇದೆಂದು ಸ್ವತಃ ಬಾರ್ಕ್ಸ್ ಹಂಚಿಕೊಂಡಿದ್ದಾರೆ.ಆ ಭೇಟಿಯ ನಂತರ, ಅವರು 1986 ರಿಂದ ಬಾವಾ ಮುಹಿಯದ್ದೀನ್ ಅವರ ಮರಣದ ವರೆಗೆ ವರ್ಷಕ್ಕೆ ಕನಿಷ್ಠ ಮೂರು ಅಥವಾ ನಾಲ್ಕು ಬಾರಿ ಭೇಟಿಯಾಗುತ್ತಿದ್ದರು. ಬಾರ್ಕ್ಸ್ ಮತ್ತು ಮುಹಿಯದ್ದೀನ್ ನಡುವೆ ಬೆಳೆದ ಈ ಸ್ನೇಹವನ್ನು ರೂಮಿ ಮತ್ತು ಶಮ್ಸ್ ತಬ್ರೇಝರ ಆತ್ಮೀಯ ಒಡನಾಟದೊಂದಿಗೆ ಸಮೀಕರಿಸುವ ಪ್ರಯತ್ನವನ್ನು ಕೆಲವರು ಮಾಡಿರುವುದು ಖೇದಕರ.

ನಂತರ ಅವರು ನ್ಯೂಯಾರ್ಕ್ ನಗರ ವಿಶ್ವವಿದ್ಯಾಲಯದ ಭಾಷಾ ವಿಭಾಗದ ಮುಖ್ಯಸ್ಥ ಜಾನ್ ಮೊಯ್ನ್ ಅವರೊಂದಿಗೆ ಕೆಲಕಾಲ ಕೆಲಸ ಮಾಡಿದರು.ಮೊಯ್ನ್ ಅವರ ಕೆಲವೊಂದು ಅಪ್ರಕಟಿತ ರೂಮಿ ಕವಿತೆಗಳನ್ನು ತನ್ನದೇ ಭಾಷೆಗೆ ಅನುವಾದಿಸುವುದು ಬಾರ್ಕ್ಸ್‌ರ ಪ್ರಧಾನ ಉದ್ದೇಶವಾಗಿತ್ತು.

ಲೇಗ್ ಎರಿಕ್ ಶ್ಮಿಡ್ ತನ್ನ ಅಮೇರಿಕಾದ ಆಧ್ಯಾತ್ಮಿಕ ಚರಿತ್ರೆಯನ್ನು ಹೇಳುವ ‘ರೆಸ್ಟ್ಲೆಸ್ ಸೋಲ್ಸ್’ ಕೃತಿಯಲ್ಲಿ ಬಾರ್ಕ್ಸ್‌ರ ನಿರೂಪಣೆಗಳನ್ನು ಪ್ರೊಟೆಸ್ಟಂಟ್ ಮತ್ತು ಅತೀಂದ್ರಿಯವಾದಿಗಳ ರೀತಿಯದ್ದಾಗಿದೆಯೆಂದು ಪರಿಚಯಿಸಿದ್ದು ಕಾಣಬಹುದು.
ಹತ್ತೊಂಬತ್ತನೆಯ ಶತಮಾನದ ಯಾವುದೇ ಕವಿಗಳಿಗಿಂತ ಹೆಚ್ಚು ಓದುಗರು ರೂಮಿಗೆ ಒಲಿದು ಬಂದಿರುವುದು ಬಾರ್ಕ್ಸ್‌ರ ತರ್ಜುಮೆಗಳಿಂದ ಮತ್ತು ನಿರೂಪಣೆಯಿಂದ ಮಾತ್ರವಾಗಿತ್ತೆಂದು ಎರಿಕ್ ಉಲ್ಲೇಖಿಸಿದ್ದು ಇಲ್ಲಿ ಗಮನಾರ್ಹ.

ಬಾರ್ಕ್ಸ್‌ರು ಹಲವು ಕವಿತೆಗಳನ್ನು ಗಮನಿಸಿದರೆ ಮೂಲ ಕವಿತೆಗಳಲ್ಲಿ ಹೇಳಲಾದ ಬಹುಮುಖ್ಯ ರೂಪಕಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟದ್ದು ಮನದಟ್ಟಾಗುತ್ತದೆ.ನಿರೂಪಣೆಯ ಶೈಲಿಯೂ ಪ್ರಮುಖ ಬದಲಾವಣೆಗಳಿಗೆ ಒಳಗಾಗಿರುವುದು ಗಮನಿಸಬಹುದು.ಇದಲ್ಲದೆ,ರೂಮಿಯ ಕವಿತೆಗಳಲ್ಲಿನ ಸಾಲುಗಳಿಗಿಂತ ಬಾರ್ಕ್ಸ್‌ರ ಸಾಲುಗಳು ಚಿಕ್ಕದಾಗಿಯೂ ಇದೆ.ಒಂದು ಸಣ್ಣ ಉದಾಹರಣೆಯನ್ನು ಗಮನಿಸಿ.

ರೂಮಿಯ ಹದಿನಾಲ್ಕು ಸಾಲುಗಳ ‘ಮಿಸ್ರಾಸ್‌’ನಲ್ಲಿ (ಕಾವ್ಯದ ಒಂದು ತುಣುಕು),ದೇವರ ಪರಿಕಲ್ಪನೆಯ ಮೂಲತತ್ವವನ್ನು ಪ್ರಶ್ನಿಸುವ ‘Howlessness’ ಎಂಬ ಸೂಕ್ತ ಪದದ ಬದಲಿಗೆ ‘How are you’ಎಂಬ ಸಾಮಾನ್ಯ ಪದವಾಗಿ ಸಂಪೂರ್ಣವಾಗಿ ಬದಲಿಸುವ ಮೂಲಕ ದೇವರ ಪರಿಕಲ್ಪನೆಯ ಮೂಲತತ್ವವನ್ನು ಪ್ರಶ್ನಿಸಿ,ಸೃಷ್ಟಿಕರ್ತನ ಗುಣಲಕ್ಷಣಗಳ ಶಾಶ್ವತತೆಗೆ ಸವಾಲೆಸೆಯುವ ಪ್ರಯತ್ನವನ್ನು ಬಾರ್ಕ್ಸ್ ಮಾಡುತ್ತಾರೆ.

ಮೇಲಿನವು ಋಣಾತ್ಮಕ ಅನುವಾದದ ಒಂದು ಸಣ್ಣ ರೂಪವಾಗಿದ್ದು,ಇದು ರೂಮಿಯ ಅನುವಾದಗಳಲ್ಲಿ, ನಿರೂಪಣೆಗಳಲ್ಲಿ ಪಾಶ್ಚಿಮಾತ್ಯರು ಸಾಮಾನ್ಯವಾಗಿ ಸ್ವೀಕರಿಸುವ ರೀತಿಯಾಗಿದೆ.ಹೀಗೆ ಬಾರ್ಕ್ಸ್‌ನಂತವರ ನಿರೂಪಣೆಗಳು ರೂಮಿ ಪ್ರತಿನಿಧಿಸುವ ಇಸ್ಲಾಮಿಕ್ ಚಿಂತನೆಯಿಂದ ರೂಮಿಯನ್ನು ನಿಧಾನವಾಗಿ ಹೊರಹಾಕುವ ಮತ್ತು ರೂಮಿಗೆ ಮಾತ್ರ ಇರಬಹುದಾದ ನಿರೂಪಣೆಯ ಸೌಂದರ್ಯವನ್ನು ನಾಶಪಡಿಸುವತ್ತ ತಲುಪಿಸಿಬಿಡುತ್ತದೆ.

ರೂಮಿ ಅವರ ನಿರೂಪಣೆಗಳನ್ನು ಶೈಕ್ಷಣಿಕ ದೃಷ್ಟಿಕೋನದಿಂದ ನೋಡಿದ್ದಕ್ಕಾಗಿ ಫ್ರಾಂಕ್ಲಿನ್ ಲೆವಿಸ್  ಅವರನ್ನು ವ್ಯಾಪಕವಾಗಿ ಟೀಕಿಸಲಾಗಿತ್ತು.ಆದಾಗ್ಯೂ, ಅವರು ತಮ್ಮ ‘,Swallowing the Sun’ ಎಂಬ ಕವಿತೆಯಲ್ಲಿ ಹೆಚ್ಚು ಸರಳವಾದ ಅನುವಾದಕ್ಕೆ ಮುಂದಾಗುತ್ತಾರೆ.ಈ ಅರ್ಥದಲ್ಲಿ,ಲೆವಿಸ್ ಕೆಲವೊಮ್ಮೆ ಬಾರ್ಕ್ಸ್‌ರ ಹೆಜ್ಜೆಗಳನ್ನು ಅನುಸರಿಸುತ್ತಿದ್ದರು.ಆದರೆ ಬಾರ್ಕ್ಸ್‌ ಮತ್ತು ಲೆವಿಸರ ನಡುವಿನ ಪ್ರಮುಖ ವ್ಯತ್ಯಾಸವೊಂದಿದೆ.ರೂಮಿಯ ಸಾಲುಗಳಿಗೆ ಅನುಗುಣವಾಗಿ ನಿಖರವಾದ ಅನುವಾದಗಳಿಗೆ ಅವರು ಹೆಚ್ಚಿನ ಆದ್ಯತೆಯನ್ನು ನೀಡಿದ್ದರು.ಅತ್ಯಂತ ಶ್ರೀಮಂತ ಮತ್ತು ಸ್ಪಷ್ಟವಾದ ಭಾಷೆ,ಹಾಗೆಯೇ ಅನೇಕ ಸಾಲುಗಳ ಅಡಿಟಿಪ್ಪಣಿಗಳು ಮತ್ತು ಅವುಗಳಲ್ಲಿನ ಕುರಾನಿನ ವಚನಗಳ ಉಲ್ಲೇಖ ಆ ಕವಿತೆಗಳ ಇಸ್ಲಾಮಿಕ್ ಮಹತ್ವವನ್ನು ಪರಿಗಣಿಸಿವೆ ಎಂಬುದನ್ನು ಸಾಬೀತುಪಡಿಸುತ್ತದೆ,ಆದರೆ ಬಾರ್ಕ್ಸ್‌ ಅವರ ಅನುವಾದಗಳು ಅಕ್ಷರಶಃ ಮೂಲತತ್ವವನ್ನು ಕಡೆಗಣಿಸಿ ಮಾಡಿದ್ದಾಗಿದ್ದವು.

ರೂಮಿ ಅನುವಾದಕರ ಅಥವಾ ಅನುವಾದಗಳ ಬಗ್ಗೆ ಇಲ್ಲಿ ವಿಶ್ಲೇಷಿಸುತ್ತಿರುವ ಉದ್ದೇಶ ಇದುವರೆಗೆ ನಡೆಸಲಾದ ತರ್ಜುಮೆಗಳನ್ನು ಸಾರಾಸಗಟಾಗಿ ಅಲ್ಲಗಳೆಯುವ ಉದ್ದೇಶಲ್ಲ.ಇದುವರೆಗೆ ಪ್ರಕಟಗೊಂಡ ಅನುವಾದಗಳಲ್ಲಿ ಯಾವುದೂ ಉತೃಷ್ಟವಾದ ನಿರೂಪಣೆಗಳೇ ಅಲ್ಲವೆಂದು ಸಾಬೀತು ಪಡಿಸುವುದೂ ಅಲ್ಲ.ಬದಲಾಗಿ,ಇದಾಹೊದಲ್ಲಿರುವ ನನ್ನ ಸ್ನೇಹಿತನ ತಾಯಿ ಹೇಳಿದಂತೆ,ಎರಡು ಭಾಷೆಗಳೂ ಚೆನ್ನಾಗಿ ಬಲ್ಲವರಿಗೆ ಉಂಟಾಗುವ ದ್ವಂದ್ವಗಳು ಹೇಗಿರಬಹುದು ಅನ್ನುವ ವಿವರಣೆಯಾಗಿದೆ.ಪರ್ಶಿಯನ್ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದಿರುವ,ಇಂಗ್ಲಿಷ್‌ನಲ್ಲಿ ಬರೆಯುವ ಒಬ್ಬ ಒಳ್ಳೆಯ ಕವಿ ಕೇವಲ ಸಾಲುಗಳನ್ನು ಶೃಂಗರಿಸುವುದನ್ನು ಮೀರಿ ರೂಮಿಯ ವಿಚಾರಗಳನ್ನು ಘಾಸಿಗೊಳಿಸದೆ ಕವಿತೆಗಳನ್ನು ಬರೆಯಬೇಕೆಂಬ ಬಯಕೆಯಿಂದ ಇವೆಲ್ಲವನ್ನೂ ಹೇಳಬೇಕಾಯಿತು.

ಇತರ ಅನುವಾದಕರಂತೆ,ಬಾರ್ಕ್ಸರೂ ಸರಳ ಅನುವಾದವನ್ನು ಮಾಡಿದರು,ಅದು ಅಮೆರಿಕದ ಮುಖ್ಯವಾಹಿನಿಯ ಓದುಗರಿಗೆ ಅರ್ಥವಾಗುವಂತಹದ್ದಾಗಿತ್ತು.ಕಾವ್ಯಾತ್ಮಕ ಅಭಿವ್ಯಕ್ತಿಯ ಶಕ್ತಿ ಯಾವತ್ತಿಗೂ ಎರಡು ಪಟ್ಟು ಹೆಚ್ಚು.ಹೊಸ ಚಿಂತನೆಯ ಬೆಳಕಿಂಡಿಗಳನ್ನು ತೆರೆಯಲು ಮತ್ತು ನಮ್ಮೆಲ್ಲರಲ್ಲೂ ಇರುವುದನ್ನು,ನಾವು ಗುರುತಿಸದ ಯಾವುದನ್ನಾದರೂ ನಮ್ಮ ಮುಂದೆ ತೆರೆದಿಡಲು ಕಾವ್ಯಗಳಿಗೆ ವಿಶೇಷವಾದ ಸಾಮರ್ಥ್ಯವಿದೆ ಎನ್ನುವುದು ಇಲ್ಲಿ ಮತ್ತೆಮತ್ತೆ ಸಾಬೀತಾಗುತ್ತದೆ.ಕಾವ್ಯಗಳ ಅನುವಾದಗಳು ತನ್ನ ಇತಿಮಿತಿಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡೇ ಹುಟ್ಟುತ್ತದೆ ಎನ್ನುವುದು ಸಾರ್ವಕಾಲಿಕ ಸತ್ಯವಾಗಿ ಉಳಿದುಬಿಡುತ್ತದೆ.

ಕನ್ನಡಕ್ಕೆ : ಝುಬೈರ್ ಹಿಮಮಿ ಪರಪ್ಪು

ಮೂಲ : ಕೇಟ್ ಥೋರ್ಟನ್
Masters candidate in Journalism and Near Eastern Studies at NYU focusing on 19th and 20th-century Persian poetry.

ವಿಶ್ವಾಸಿಗಳ ಮಹಾ ತಾಯಿಯೊಬ್ಬಳ ಕಥೆ

ಶಿಂಖೀತ್ ನಾಡು, ಅಥವಾ ಆಂಗ್ಲ ಭಾಷಿಕರು ಸಾಮಾನ್ಯವಾಗಿ ಕರೆಯುವ ಮೌರಿತಾನಿಯ ಎಂಬ ಊರು ಸಾತ್ವಿಕ ವಿದ್ವಾಂಸರ, ಸಚ್ಚರಿತ ಸೂಫಿಗಳ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಪಳಗಿದ ಅನೇಕ ಮಹಿಳಾಮಣಿಗಳ ಸಂಗಮ ಭೂಮಿ. ವಿದ್ವಾಂಸರ ಪ್ರಕಾರ, ಮೌರಿತಾನಿಯಾದ ಮಹಿಳೆಯರೂ ಕೂಡಾ ಅನೇಕ ಸಾಹಿತ್ಯ ಕೃತಿಗಳನ್ನು ಕಂಠಪಾಠ ಮಾಡುತ್ತಾರೆ. ಪದ್ಯ, ಗದ್ಯ, ಪ್ರವಾಸ ಕಥನ ಮುಂತಾದ ಪರಂಪರಾಗತ ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಮೌರಿತಾನಿಯಾದ ಮಹಿಳೆಯರು ಅಗಾಧ ಪಾಂಡಿತ್ಯವುಳ್ಳವರಾಗಿದ್ದಾರೆ.
ಮರ್ಯಂ ಬಿಂತ್ ಬ್ವೈಬಾ ಎಂಬವರು ಅವರಲ್ಲೊಬ್ಬರು. ಈಗ ನಾನು ಹೇಳ ಹೊರಟಿರುವುದು ಆ ತಾಯಿಯ ಬಗ್ಗೆ. ಪರಿಶುದ್ಧ ಖುರ್ ಆನ್ ಮತ್ತು ಮಾಲಿಕೀ ಕರ್ಮಶಾಸ್ತ್ರ ಧಾರೆಯ ಕೆಲವು ಪ್ರಧಾನ ಕೃತಿಗಳನ್ನು ಅವರು ಪೂರ್ತಿ ಕಂಠಪಾಠ ಮಾಡಿದ್ದಾರೆ.

ಶ್ರೇಷ್ಟ ವಿದ್ವಾಂಸರಾದ ಶೈಖ್ ಮುರಾಬಿತ್ ಅಲ್ ಹಾಜ್ಜರ ಧರ್ಮಪತ್ನಿಯಾದ ಇವರು ಅತಿಥಿಗಳನ್ನು ಅತ್ಯಂತ ಪ್ರೀತಿಪೂರ್ವಕವಾಗಿ ಬರಮಾಡುವ ಸ್ವಭಾವದವರು. ಸರಿಸುಮಾರು 35 ವರುಷಗಳ ಹಿಂದೆ ಮೌರಿತಾನಿಯಾದ ತುವಾಮಿರಃ ಸಮುದಾಯದ ಒಂದು ಸಣ್ಣ ಗುಡಿಸಲಿನಲ್ಲಾಗಿತ್ತು ಇವರೀರ್ವರನ್ನು ನಾನು ಮೊತ್ತ ಮೊದಲಾಗಿ ಭೇಟಿಯಾದದ್ದು.
ಈ ಭೇಟಿಗೆ ಕಾರಣವಾದ ಘಟನೆ ನಡೆದದ್ದು 1980ರಲ್ಲಿ. ಅದು ಅಬುದಾಬಿಯ ಒಂದು ಪುಸ್ತಕದಂಗಡಿಯಲ್ಲಿ ತಾಜಕಾನತ್ ಎಂಬ ಗೋತ್ರದ ಶೈಖ್ ಅಬ್ದುಲ್ಲಾ ಊದ್ ಸಿದ್ದೀಖ್ ರೊಂದಿಗಿನ ಭೇಟಿಯಾಗಿತ್ತು. ದಿರಃ ಎಂಬ ಸವಿಶೇಷವಾದ ಪಶ್ಚಿಮ ಆಫ್ರಿಕಾದ ದಿರಿಸನ್ನು ಧರಿಸಿ, ತಲೆಗೆ ಮುಂಡಾಸು ಹಾಕಿದ್ದರಿಂದ ಒಂದೇ ನೋಟಕ್ಕೆ ಇವರು ಆಫ್ರಿಕಾದವರೆಂದು ಸುಲಭದಲ್ಲಿ ಮನದಟ್ಟಾಯಿತು. ಅಂದಿನ ಕಾಲದಲ್ಲಿ ಗಲ್ಫ್ ನಾಡುಗಳಲ್ಲಿ ಆ ವೇಷವಿಧಾನ ಬಹಳ ಅಪರೂಪವಾಗಿತ್ತು. ಎರಡು ವರುಷಗಳ ಹಿಂದೆ ಮಾಲಿಯಲ್ಲಿ ತಂಗಿದ್ದ ವೇಳೆ ಆಫ್ರಿಕಾದ ವಿದ್ವಾಂಸರನ್ನು ಭೇಟಿ ಮಾಡಿದ್ದಂದೇ ಅವರೊಂದಿಗೆ ಸೇರಿ ಜ್ಞಾನಾರ್ಜನೆಗೈಯಬೇಕೆಂಬ ಮಹದಾಸೆ ನನ್ನೊಳಗೆ ಚಿಗುರೊಡೆದಿತ್ತು. ಆದ್ದರಿಂದ ನಾನು ಶೈಖ್ ಅವರ ಬಳಿ ಮಾಲಿಕೀ ಕರ್ಮಶಾಸ್ತ್ರ ಧಾರೆಯ ಕ್ಲಾಸಿಕಲ್ ಗ್ರಂಥಗಳನ್ನು ಪರಂಪರಾಗತ ಶೈಲಿಯಲ್ಲಿ ಪಾಠ ಹೇಳಿಕೊಡುವ ಯಾರನ್ನಾದರೂ ಪರಿಚಯವಿದೆಯೇ ಎಂದು ಕೆದಕಿದಾಗ, ಶೈಖ್ ಅವರು ತಾವೇ ಖುದ್ದಾಗಿ ಪಾಠ ಹೇಳಿಕೊಡುತ್ತಿರುವುದಾಗಿಯೂ, ದರ್ಸ್ ಕಲಿಯಲು ತಮ್ಮ ಮನೆಗೆ ಹೋಗುವುದಾದರೆ ನನಗೆ ಮುಕ್ತ ಅವಕಾಶವಿದೆಯೆಂದೂ ಹೇಳಿದರು. ಅಂದಿನಿಂದ ಅಧಿಕೃತವಾಗಿ ನನ್ನ ಧಾರ್ಮಿಕ ವಿಧ್ಯಾಭ್ಯಾಸದ ಪರ್ಯಟನೆ ಪ್ರಾರಂಭವಾಯಿತು ಎಂದು ಹೇಳಬಹುದು.

ಅಲ್ ಐನಿನ ಇಸ್ಲಾಮಿಕ್ ಇನ್ಸ್ಟಿಟ್ಯೂಟಿನ ಅಧ್ಯಯನದೊಂದಿಗೆ ಇತ್ತ ಶೈಖ್ ಅಬ್ದುಲ್ಲಾ ಊದ್ ಸಿದ್ದೀಖರ ದರ್ಸಿನಲ್ಲೂ ಜ್ಞಾನಾರ್ಜನೆ ಭರಪೂರವಾಗಿ ಸಾಗಿತು. ಮೌರಿತಾನಿಯಾದ ಗುರುಗಳಂತೆ ಪಾಠ ಭಾಗಗಳನ್ನು ಕಂಠಪಾಠ ಮಾಡಲು ಮತ್ತು ‘ಲೌಹ್’ ಎಂದು ಕರೆಯಲ್ಪಡುವ ಮರದ ಹಲಗೆಯಲ್ಲಿ ಬರೆಯಲು ಅವರು ಒತ್ತಡ ಹೇರುತ್ತಲಿರಲಿಲ್ಲ. ಆದುದರಿಂದ ನಾನು ಕಿತಾಬುಗಳನ್ನು ನೋಡಿಯೇ ಅಭ್ಯಸಿಸುತ್ತಿದ್ದೆ. ಹೀಗೆ ಕೆಲವು ವರ್ಷಗಳ ಕಾಲ ಶೈಖ್ ಅಬ್ದುಲ್ಲಾ ಊದ್ ಹಾಗೂ ಮತ್ತಿಬ್ಬರು ಮಾಲಿಕೀ ಕರ್ಮಶಾಸ್ತ್ರ ವಿದ್ವಾಂಸರಾದ ಶೈಖ್ ಶೈಬಾನಿ, ಶೈಖ್ ಬಯ್ಯಾಹ್ ಊದ್ ಸಾಲಿಕ್ ಎಂಬವರ ಗರಡಿಯಲ್ಲಿ ಪಳಗುತ್ತಿದ್ದ ಸಮಯ ನನ್ನ ವಿದ್ಯಾರ್ಥಿ ಜೀವನದಲ್ಲಿ ಮಹಾ ತಿರುವೊಂದು ಸಂಭವಿಸಿತು. ಮಸ್ತೂಮ ಗೋತ್ರದ ಇಲೆಕ್ಟ್ರಿಷ್ಯನ್ ಯಹ್ಯಾ ಉದ್ಘಾತಿಯ ಭೇಟಿಯಾಗಿತ್ತು ಅದಕ್ಕೆ ಮೂಲ ಕಾರಣ. ಅವರು ನನ್ನನ್ನು ಮೌರಿತಾನಿಯಾದ ನಿರ್ಜನವಾದ, ಹೊರಪ್ರಪಂಚದೊಂದಿಗೆ ಸಂಪರ್ಕವಿಲ್ಲದ ಕುಗ್ರಾಮವೊಂದರಲ್ಲಿ ವಾಸಿಸುತ್ತಿದ್ದ ಶ್ರೇಷ್ಟ ವಿದ್ವಾಂಸರಾದ ಮುರಾಬಿತ್ ಅಲ್ ಹಾಜ್ಜ್ ಅವರ ಬಳಿಗೆ ಕರೆದೊಯ್ದರು. ಅವರ ಸುಪುತ್ರ ಶೈಖ್ ಅಬ್ದುಲ್ ರಹಿಮಾನ್ ಈಗ ಎಮಿರೇಟ್ಸಿನಲ್ಲಿದ್ದಾರೆಂದು ಯಹ್ಯಾ ನನಗೆ ಮಾಹಿತಿ ಕೊಟ್ಟರು.
ತದನಂತರ, ಮಸ್ತೂಮ ಗೋತ್ರದ ನಾಯಕರಾದ ಶೈಖ್ ಬಯ್ಯಾಹ್ ರ ಮನೆಯಲ್ಲಿ ಶೈಖ್ ಅಬ್ದುಲ್ ರಹಿಮಾನ್ ರವರನ್ನು ಭೇಟಿ ಮಾಡಲು ಸಾಧ್ಯವಾಯಿತು. ಐಹಿಕ ಜೀವನದೊಂದಿಗಿನ ಜಿಗುಪ್ಸೆ ಅವರ ಮುಖದಲ್ಲಿ ಪ್ರಕಟವಾಗುತಿತ್ತು. ಈ ಐಹಿಕ ಬದುಕಿನ ಗೊಡವೆಯಿಂದ ದೂರವಾಗುವುದು ಮೌರಿತಾನಿಯಾದ ವಿದ್ವಾಂಸರ ವೈಶಿಷ್ಟತೆಗಳಲ್ಲೊಂದು. ಅವರ ಆಪ್ತಮಿತ್ರ ಶೈಖ್ ಹಾಮಿದ್ ರವರ ದರ್ಸಿನಲ್ಲಾಗಿತ್ತು ನನ್ನ ಮುಂದಿನ ವ್ಯಾಸಂಗ.
ಶೈಖ್ ಹಾಮಿದರು ಕಂಠಪಾಠ ಮಾಡುವುದರ ಪ್ರಾಧಾನ್ಯತೆಯ ಬಗ್ಗೆ ನನಗೆ ಮನವರಿಕೆ ಮಾಡಿಕೊಟ್ಟರು. ಕಂಠಪಾಠ ಮಾಡುವುದಲ್ಲದೆ ವಿದ್ಯೆ ಕರಗತವಾಗಲು ಬೇರೆ ದಾರಿಯಿಲ್ಲ ಎಂದು ಅವರು ಬಲವಾಗಿ ನಂಬಿದ್ದರು. ಮೌರಿತಾನಿಯನ್ನರು ವಿದ್ವಾಂಸರನ್ನು ‘ಹಗಲು ವಿದ್ವಾಂಸರು’ ಹಾಗೂ ‘ರಾತ್ರಿ ವಿದ್ವಾಂಸರೆಂ’ದು ವರ್ಗೀಕರಿಸುವ ಬಗ್ಗೆಯೂ ಹೇಳಿಕೊಟ್ಟರು. ಹಗಲು ವಿದ್ವಾಂಸರಿಗೆ ರಾತ್ರಿ ಹೊತ್ತು ಜ್ಞಾನಾರ್ಜನೆಗೈಯಲು ಪುಸ್ತಕ ಮತ್ತು ಬೆಳಕು ಅನಿವಾರ್ಯವಾಗಿತ್ತು. ಆದರೆ ‘ರಾತ್ರಿ ವಿದ್ವಾಂಸರಿಗೆ’ ರಾತ್ರಿ ಹೊತ್ತು ಬೆಳಕಿನ ಅಭಾವದಲ್ಲೂ ತಮ್ಮ ನೆನಪಿನ ಶಕ್ತಿಯಿಂದ ಜ್ಞಾನಾರ್ಜನೆ ಸಾಧ್ಯವಾಗುತಿತ್ತು. ಈ ರೀತಿ ಎಲ್ಲಾ ಕಿತಾಬುಗಳನ್ನು ಬಾಯಿಪಾಠ ಮಾಡುವ ಪರಿಪಾಠ ರೂಢಿಸಬೇಕೆಂದು ನನ್ನಲ್ಲಿ ಶೈಖರು ನಿರ್ದೇಶಿಸಿದರು.
ಆ ದಿನಗಳಲ್ಲಿ ಇಬ್ನು ಆಶಿರ್, ಅಲ್ ರಿಸಾಲ, ಅಖ್ರಾಬ್ ಅಲ್ ಮಸಾಲಿಕ್ ಮುಂತಾದ ಗ್ರಂಥಗಳನ್ನೆಲ್ಲಾ ನಾನು ಓದಿದ್ದೆ. ಅದಲ್ಲದೆ ಇನ್ಸ್ಟಿಟ್ಯೂಟಿನಲ್ಲಿ ‘ಅಲ್ ಫಿಖ್ಹ್ ಅಲ್ ಮಾಲಿಕೀ ಫೀ ತೌಬಹೀ ಅಲ್ ಜದೀದಿ’ನ ಮೊದಲ ಆವೃತ್ತಿಗಳನ್ನೂ ಓದಿದ್ದೆ. ಸುಡಾನಿನ ಪ್ರಮುಖ ಹದೀಸ್ ವಿದ್ವಾಂಸರಾದ ಶೈಖ್ ಅಹ್ಮದ್ ಬದವಿಯರಿಂದ ಹದೀಸ್ ಗ್ರಂಥಗಳನ್ನು ಕಲಿತಿದ್ದೆ. ಆದರೆ ಅಂದೆಂದೂ ನಾನು ಕಂಠಪಾಠ ಮಾಡುತ್ತಿರಲಿಲ್ಲ. ಇದನ್ನರಿತ ಶೈಖರು ಪ್ರಧಾನವಾದ ಕೆಲವು ಕಿತಾಬುಗಳನ್ನು ಪುನಃ ಓದಿಕೊಟ್ಟು ಕಂಠಪಾಠ ಮಾಡಲು ನಿರ್ದೇಶಿಸಿದರು.

ನಂತರ ಅಲ್ಲಿನ ಸ್ಥಳೀಯ ಮಸೀದಿಯೊಂದರಲ್ಲಿ ಇಮಾಂ ಆಗಿ ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಯಿತು. ಮಸೀದಿಗೆ ಬರುವವರ ಪೈಕಿ ಸಿಂಹಪಾಲು ಜನರು ಅಫ್ಘಾನಿಸ್ಥಾನದ ಕಾರ್ಮಿಕರಾಗಿದ್ದರು.
1984 ರಲ್ಲಾಗಿತ್ತು ಎಮಿರೇಟ್ಸ್ ನಿಂದ ಅಲ್ಜೀರಿಯಾದ ಮೂಲಕ ಮಾರಿತಾನಿಯಾಗೆ ನನ್ನ ಪ್ರಯಾಣ. ಪವಿತ್ರ ಖುರ್ ಆನ್ ಪೂರ್ತಿ ಕಂಠಪಾಠ ಮಾಡಬೇಕೆಂಬ ಅದಮ್ಯ ಬಯಕೆಯಾಗಿತ್ತು ಯಾತ್ರೆಯ ಪ್ರಧಾನ ಧ್ಯೇಯ. ಮಾರಿತಾನಿಯದಲ್ಲಿ ಬರಗಾಲವಿದೆಯೆಂದೂ ಅಲ್ಲಿನ ಬದುಕು ಸಹಿಸಲಸಾಧ್ಯವೆಂದೂ ನನ್ನ ಸ್ನೇಹಿತರು ಮುನ್ನೆಚ್ಚರಿಕೆ ಕೊಟ್ಟರೂ ನನ್ನ ದೃಡ ಸಂಕಲ್ಪ ಚಂಚಲಗೊಳ್ಳಲೇ ಇಲ್ಲ.
ಅಲ್ಜೀರಿಯಾದ ಸೀದಿ ವೋ ಝೈದರ ಮದ್ರಸಾದಲ್ಲಿ ಕೆಲವು ತಿಂಗಳುಗಳ ಕಾಲ ತಂಗಿದ ಬಳಿಕ ಅಲ್ಲಿಂದ ಟುನೀಷ್ಯಾಗೆ ತೆರಳಿ ಮಾರಿತಾನಿಯಾಗಿರುವ ವೀಸಾ ಗಿಟ್ಟಿಸಿಕೊಂಡು ವಿಮಾನ ಯಾನದ ಮೂಲಕ ನೇರವಾಗಿ ರಾಜಧಾನಿ ನಾಕ್ಚೋಟಿಗೆ ಬಂದಿಳಿದೆ.

ಮುರಾಬಿತುಲ್ ಹಾಜರನ್ನು ಭೇಟಿ ಮಾಡುವುದಾಗಿತ್ತು ಮುಂದಿನ ಗುರಿ. ನಾಕ್ಚೋಟ್ ಮರ‍್ಕೆಟಿನ ಒಂದು ಪುಟ್ಟ ಅಂಗಡಿಯಲ್ಲಿ ಮಸ್ತೂಮ ಗೋತ್ರದ ಅಬ್ದುಲ್ ಸಾಲಿಮರನ್ನು ಭೇಟಿ ಮಾಡಿದೆ. ಮುರಾಬಿತುಲ್ ಹಾಜರನ್ನು ಭೇಟಿ ಮಾಡಬೇಕೆಂಬ ಬಯಕೆಯನ್ನು ಅವರೊಂದಿಗೆ ಹಂಚಿದಾಗ ಅವರು ನನ್ನನ್ನು ಮುಖ್ತಾರುಲ್ ಹಬೀಬ್ ಎಂಬ ಮಸ್ತೂಮ ಗೋತ್ರದ ವಿದ್ವಾಂಸರ ಬಳಿಗೆ ಕರೆದೊಯ್ದರು. ತದನಂತರ ಮೌಲಾಯ್ ಅಲ್ ಮಖರಿ ಅಲ್ ಮಸ್ತೂಮರವರ ಮನೆಯಲ್ಲಾಗಿತ್ತು ನನ್ನ ವಾಸ್ತವ್ಯ. ಅತಿಥಿಗಳನ್ನು ಅತ್ಯಂತ ಪ್ರೀತಿಯಿಂದ ಸತ್ಕರಿಸುವ, ಎಲ್ಲರಿಂದಲೂ ಪ್ರೀತಿಗೆ ಭಾಜನರಾದ ವ್ಯಕ್ತಿತ್ವವಾಗಿತ್ತು ಅವರದ್ದು.

ಆ ಸಂದರ್ಭಕ್ಕೆ ಸರಿಯಾಗಿಯೇ ತನ್ನ ತಂದೆ ತಾಯಿಯನ್ನು ಭೇಟಿ ಮಾಡಲು ಶೈಖ್ ಅಬ್ದುಲ್ ರಹಿಮಾನ್ ಎಮಿರೇಟ್ಸಿನಿಂದ ಊರಿಗೆ ಬಂದಿದ್ದರು. ಅವರು ಮೌಲಾಯ್ ಅಲ್ ಮಖರಿಯನ್ನು ಭೇಟಿಯಾಗಲು ಬಂದರು. ನಂತರ ತುವಾಮಿರತ್ ನಲ್ಲಿರುವ ಅವರ ಕುಟುಂಬದವರ ಶಾಲೆಯನ್ನು ಸಂದರ್ಶಿಸಲು ತೀರ್ಮಾನಿಸಿ ಅದಕ್ಕೆ ಬೇಕಾಗಿರುವ ತಯಾರಿಯಲ್ಲಿ ತೊಡಗಿದೆವು. ಒಂಟೆಗಳು ಸಿಗದಿದ್ದರಿಂದ ಒಂದು ಟ್ರಕ್ಕಿನಲ್ಲಾಗಿತ್ತು ನಮ್ಮ ಪ್ರಯಾಣ.
ಎರಡು ದಿನಗಳ ದೀರ್ಘ ಪ್ರಯಾಣದ ನಂತರ ಗೆರು ಎಂಬ ನಗರಕ್ಕೆ ನಾವು ತಲುಪಿದೆವು. ಆ ಕಾಲಕ್ಕೆ ಅಲ್ಲಿ ಟೆಕ್ನಾಲಜಿಯ ಗಂಧಗಾಳಿ ಇನ್ನೂ ಸೋಕಿರಲಿಲ್ಲ. ಅಲ್ಲಿನ ಕಟ್ಟಡಗಳು ಸುಂದರವಾಗಿ ಮನಸೊರೆಗೈಯುವಂತಿತ್ತು. ಮಹ್ದ್ಸರ ಎಂದು ಕರೆಯಲ್ಪಡುವ ಏಳು ಮದರಸಗಳಲ್ಲಿ ಸರಿಸುಮಾರು ನೂರರಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಅಲ್ಲಿ ರಾತ್ರಿಯಾದರೆ ಕ್ಯಾಂಡಲ್ ಮತ್ತು ದೀಪಗಳ ಮೊರೆ ಹೋಗಬೇಕಾಗಿತ್ತು. ಖುರ್ ಆನ್ ಮತ್ತು ಇತರ ಗ್ರಂಥಗಳನ್ನು ಓದುವ ಸುಶ್ರಾವ್ಯ ಧ್ವನಿಯು ಅಲ್ಲೆಲ್ಲಾ ಮಾರ್ದನಿಸುತ್ತಿತ್ತು.
ಅಲ್ ಹಾಜರ ಸಂಬಂಧಿಯಾದ ಶೈಖ್ ಖಾತ್ರಿಯವರ ಮನೆಯಲ್ಲಾಗಿತ್ತು ನಮ್ಮ ವಾಸ್ತವ್ಯ. ಅಲ್ಲಿ ಸೀದಿ ಮನ್ನ ಎಂಬ ಸಾತ್ವಿಕ ಸೂಫಿ ವಿದ್ವಾಂಸರೊಬ್ಬರನ್ನು ಪರಿಚಯ ಮಾಡಿಕೊಂಡೆ. ಇಮಾಂ ಅಲ್ ಜಝರಿಯವರ ‘ಹಿಸ್ನ್ ಅಲ್ ಹಾಸಿನ್’ ಎಂಬ ಗ್ರಂಥವನ್ನು ಪೂರ್ತಿಯಾಗಿ ಅವರು ಕಂಠಪಾಠ ಮಾಡಿಕೊಂಡಿದ್ದರು. ತಮ್ಮ ಎಲ್ಲಾ ಪ್ರಾರ್ಥನೆಗಳಲ್ಲೂ ಸಮುದಾಯದ ಎಲ್ಲಾ ಜನರಿಗೂ ಬೇಕಾಗಿ ದುಆ ಮಾಡುತ್ತಿದ್ದರು. ಒಂದು ದಿನ ಸಂಜೆ ನಾವೆಲ್ಲರೂ ಹರಟೆ ಹೊಡೆಯುತ್ತಿದ್ದಾಗ ಅವರು ತನ್ನ ಅಂಗೈಯಲ್ಲಿ ಒಂದು ಹಿಡಿ ಮಣ್ಣನ್ನೆತ್ತಿ ಹೇಳಿದರು, “ಭೂಮಿಯಿಂದ ಎಂದೂ ದೂರ ಹೋಗಬಾರದು. ಕಾರಣ ಇದು ನಮ್ಮ ತಾಯಿಯಾಗಿದೆ. ಜೀವನದಲ್ಲಿ ನಾನೆಂದೂ ಯಾವುದರ ಬಗ್ಗೆಯೂ ವ್ಯಥೆ ಪಟ್ಟಿಲ್ಲ. ನನ್ನಲ್ಲಿಲ್ಲದ್ದನ್ನು ನಾನು ಆಗ್ರಹಿಸಿಯೂ ಇಲ್ಲ. ಆದರೆ ನಾನೊಬ್ಬ ಯುವಕನಾಗಬೇಕೆಂದು ಈಗ ಆಸೆಯಾಗುತ್ತಿದೆ. ಯಾಕೆಂದರೆ ಅಲ್ಲಾಹನ ಮಾರ್ಗದಲ್ಲಿ ವಿದ್ಯೆಯನ್ನರಸಿ ನಿಮ್ಮೊಂದಿಗಿನ ಪಯಣದಲ್ಲಿ ನನಗೂ ಸೇರಬಹುದು”. ಅರಿವಿನ ಬಗೆಗೆ ಅವರಿಗಿದ್ದ ದಾಹ ನನ್ನನ್ನು ಅಚ್ಚರಿಗೊಳಿಸಿತ್ತು.

ಕೆಲವು ದಿನಗಳ ನಂತರ ನಾವು ಕಾಮೂರಿಗೆ ಹೊರಟೆವು. ಮಧ್ಯರಾತ್ರಿಯಾದಾಗ ಗಲಗ ಎಂಬ ಕಣಿವೆ ಪ್ರದೇಶಕ್ಕೆ ಬಂದು ತಲುಪಿದೆವು. ಮರುದಿನ ಬೆಳ್ಳಂಬೆಳಗ್ಗೆ ತಿಂಡಿ ತಿಂದು ಮುರಾಬಿತುಲ್ ಹಾಜ್ ಹಾಗೂ ಅವರ ಸಂಗಡಿಗರು ವಾಸಿಸುವ ತುವಾಮಿರತ್ ಗೆ ಹೊರಟು ನಿಂತೆವು. ಹಾಗೆ ಪ್ರಕೃತಿ ರಮಣೀಯವಾದ ತುವಾಮಿರತ್ ಗೆ ಬಂದು ತಲುಪಿದೆವು. ಮುರಾಬಿತುಲ್ ಹಾಜರನ್ನು ಮುಖಃತ ಭೇಟಿ ಮಾಡಬೇಕೆಂಬ ಬಹುದಿನಗಳ ಕನಸು ಅಂದು ಸಾಕ್ಷಾತ್ಕಾರವಾಯಿತು.

ನನ್ನ ಜೀವನದಲ್ಲಿ ಅಷ್ಟೊಂದು ತೇಜಸ್ಸು ಭರಿತ ಮುಖವನ್ನು ನಾನು ನೋಡಿಯೇ ಇರಲಿಲ್ಲ. ಅವರು ನನ್ನನ್ನು ಒಳಗೆ ಆಹ್ವಾನಿಸಿ ತೋಳಲ್ಲಿ ಕೈಯಿಟ್ಟು ಹೃದ್ಯವಾಗಿ ಸ್ವೀಕರಿಸಿದರು. ನಂತರ ಅವರು ತಮ್ಮ ದರ್ಸ್ ಬೋಧನೆಯಲ್ಲಿ ತೊಡಗಿಕೊಂಡರು. ವಿದ್ಯಾರ್ಥಿಗಳಲ್ಲೊಬ್ಬರು ನನಗೆ ಕುಡಿಯಲು ನೀರು ತಂದುಕೊಟ್ಟರು.
ಮುರಾಬಿತುಲ್ ಹಾಜರು ಕೆಲವು ದಿನಗಳ ಕಾಲ ತಂಗಲು ನನ್ನನ್ನು ಅವರ ಮನೆಗೆ ಆಹ್ವಾನಿಸಿದರು. ನಾನಲ್ಲಿ ಅವರ ಧರ್ಮಪತ್ನಿ ಮರ್ಯಂ ಬಿನ್ತ್ ಬ್ವೈಬಾರನ್ನು ಪರಿಚಯ ಮಾಡಿಕೊಂಡೆ. ಅವರು ನನಗೆ ಬೇಕಾದ ಸಕಲ ಸೌಕರ್ಯಗಳನ್ನು ಮಾಡಿಕೊಟ್ಟರು. ನನ್ನ ಜೀವನದಲ್ಲಿ ಅವರಷ್ಟು ನಿಸ್ವಾರ್ಥ ಮಹಿಳೆಯನ್ನು ನಾನು ನೋಡಿಯೇ ಇರಲಿಲ್ಲ. ಮಿಕ್ಕ ದಿನಗಳಲ್ಲೂ ಬೆಳ್ಳಂಬೆಳಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಸಂದರ್ಶಕರಿಗೆ ಅವರು ಹಾಲು ಕಾಯಿಸಿ ಕೊಡುತ್ತಿದ್ದರು. ಚಿಕ್ಕಂದಿನಲ್ಲೇ ಅವರ ಜೊತೆಗಿದ್ದ ಖಬೂಲಃ ಎಂಬ ಮನೆಗೆಲಸದಾಕೆ ಅವರನ್ನು ಸಹಾಯ ಮಾಡುತ್ತಿದ್ದರು
ಮರ್ಯಮರ ಆತಿಥೇಯತ್ವವು ನನ್ನನ್ನು ವಿಸ್ಮಯಗೊಳಿಸಿತು. ಎಲ್ಲರೊಂದಿಗೆ ಮುಗುಳ್ನಗೆಯೊಂದಿಗೆಯಾಗಿತ್ತು ಅವರ ಒಡನಾಟ. ಒಮ್ಮೆ ಮೌರಿತಾನಿಯದೆಲ್ಲೆಡೆ ಹರಡಿದ ಮಲೇರಿಯಾ ಜ್ವರಕ್ಕೆ ತುತ್ತಾಗಿ ನಾನು ಹಾಸಿಗೆ ಹಿಡಿದಾಗ ಅವರು ಬಹಳ ಶ್ರದ್ಧೆ ಮತ್ತು ವಾತ್ಸಲ್ಯದಿಂದ ನನ್ನನ್ನು ಶುಶ್ರೂಷೆ ಮಾಡಿದರು. ಒಬ್ಬ ಮಗನೊಂದಿಗೆ ತೋರುವ ಪ್ರೀತಿಯಾಗಿತ್ತು ಅವರು ನನ್ನಲ್ಲಿ ತೋರಿದ್ದು. ನಾನು ತರಕಾರಿ ಮಾತ್ರ ತಿನ್ನುವವನು ಎಂದು ತಿಳಿಸಿದಾಗ ಎಲ್ಲಾ ದಿನ ಆಹಾರದ ಮೊದಲು ನನಗೆ ವಿಶೇಷವಾಗಿ ಕ್ಯಾರೆಟ್ ಮತ್ತು ಖರ್ಜೂರವನ್ನು ತಂದುಕೊಡುತ್ತಿದ್ದರು.
ಸದಾ ಸಮಯ ಏಕದೇವನ ಸ್ಮರಣೆಯಲ್ಲೇ ತನ್ಮಯರಾಗುವುದು ಅವರ ಪರಿಪಾಠವಾಗಿತ್ತು. ಅವರ ಪೂರ್ಣನಾಮ ಮರ್ಯಂ ಬಿಂತ್ ಮುಹಮ್ಮದ್ ಅಲ್ ಅಮೀನ್ ಉದ್ ಮುಹಮ್ಮದ್ ಅಹಮದ್ ಬ್ವಯ್ಬಾ. ಎಳೆಯ ವಯಸ್ಸಿನಲ್ಲೇ ಮುರಾಬಿತುಲ್ ಹಾಜರೊಂದಿಗೆ ಅವರ ವಿವಾಹ ನಡೆದಿತ್ತು. ತುವಾಮಿರತಿನ ಇಸ್ಲಾಮಿಕ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಅವರು ಸಲ್ಲಿಸಿದ ಸೇವೆ ಅನಿರ್ವಚನೀಯ. ಕಡುಬಡತನದಲ್ಲಾಗಿತ್ತು ಮರ್ಯಮರು ಬೆಳೆದು ಬಂದದ್ದು. ಅವರ ಬಾಲ್ಯಕಾಲದಲ್ಲಿ ಮೈಮುಚ್ಚಲು ತೆಳುವಾದ ಒಂದೇ ಒಂದು ಬಟ್ಟೆ ಮಾತ್ರ ಹೊಂದಿದ್ದರಂತೆ. ಅವರ ತಂದೆ ಮುಹಮ್ಮದ್ ಅಲ್ ಅಮೀನ್ ಲಮಾನ ಎಂಬ ಹೆಸರಿನಲ್ಲಿ ಪ್ರಸಿದ್ಧರಾಗಿದ್ದರು. ಮಹಾ ಜ್ಞಾನಿಯಾಗಿದ್ದ ಅವರ ಬಗ್ಗೆ ಮರ್ಯಮರು ಯಾವಾಗಲೂ ತುಂಬು ಮಾತುಗಳಲ್ಲಿ ಕೊಂಡಾಡುತ್ತಿದ್ದರು.
ಮರ್ಯಮರೊಂದಿಗಿನ ವಿವಾಹವಾದ ಬಳಿಕ ಮುರಾಬಿತುಲ್ ಹಾಜರ ತಂದೆ ಮರ್ಯಮರೊಂದಿಗೆ ಹೀಗೆ ಹೇಳಿದರು. “ನಿಮ್ಮ ಉಪಜೀವನ ಮಾರ್ಗಕ್ಕಾಗಿ ಒಳ್ಳೆಯ ಸಂಪಾದನೆ ಸಿಗುವ ಕೆಲಸದ ಬಗ್ಗೆ ಇನ್ನು ನೀನು ಚಿಂತಿಸಬೇಕಾಗಿದೆ”. ಇದಕ್ಕೆ ಅವರು ಕೊಟ್ಟ ಉತ್ತರ ಹೀಗಿದೆ. “ಜೀವನೋಪಾಯಕ್ಕಾಗಿ ಕೆಲಸ ಮಾಡಬೇಕಾದರೆ ನನ್ನ ಮುಂದೆ ಅಸಂಖ್ಯಾತ ಅವಕಾಶಗಳಿವೆ. ಆದರೆ ಅವುಗಳ ಬೆನ್ನಟ್ಟಿ ನಾನು ನನ್ನ ಆತ್ಮವನ್ನು ಮಲಿನಗೊಳಿಸಲು ಇಚ್ಛಿಸುವುದಿಲ್ಲ.
ಮುರಾಬಿತುಲ್ ಹಾಜರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ ಪ್ರಾರಂಭದ ದಿನಗಳಿಂದಲೇ ಮರ್ಯಮರು ಮುರಾಬಿತುಲ್ ಹಾಜರಿಂದ ಕಿತಾಬುಗಳನ್ನು ಅಭ್ಯಸಿಸತೊಡಗಿದರು. ಮಾಲಿಕೀ ಕರ್ಮಶಾಸ್ತ್ರದ ಪ್ರಧಾನ ಕಿತಾಬುಗಳೊಂದಿಗೆ ಪವಿತ್ರ ಖುರ್ ಆನ್ ನನ್ನೂ ಪೂರ್ತಿಯಾಗಿ ಕಂಠಪಾಠ ಮಾಡಿದರು. ಅದಲ್ಲದೆ ಇಮಾಂ ಅನ್ನವವಿಯವರ ಪ್ರಾರ್ಥನೆಗಳ ಕುರಿತು ಬರೆದ ‘ಅಲ್ ಅದ್ಸ್ ಕಾರ್’ ಎಂಬ ಪ್ರಸಿದ್ಧ ಗ್ರಂಥವನ್ನೂ ಕಂಠಪಾಠ ಮಾಡಿದರು. ಹೊಸದಾಗಿ ಬರುವ ವಿಧ್ಯಾರ್ಥಿಗಳೊಂದಿಗೆ ಮರ್ಯಮರು ಅವರ ಮನೆಯವರ ಬಗ್ಗೆ ಕುಶಲೋಪರಿ ಮಾಡುವುದನ್ನು ರೂಢಿಸಿಕೊಂಡಿದ್ದರು. ಮೌರಿತಾನಿಯದಲ್ಲಿ ವ್ಯಾಸಂಗ ಮಾಡಿದ ಎಲ್ಲರೂ ಅವರ ನೆನಪಿನಂಗಳದಲ್ಲಿ ಹಚ್ಚ ಹಸಿರಾಗಿದ್ದರು. ಸುಮಾರು ವರುಷಗಳ ನಂತರ ಭೇಟಿ ಮಾಡುವವರ ಹೆಸರನ್ನೂ ಸುಲಭವಾಗಿ ಗುರುತಿಸುತ್ತಿದ್ದರು. ನಾನು ಮೊದಲು ಅವರನ್ನು ಭೇಟಿ ಮಾಡಿದಾಗ ನನ್ನ ಕುಟುಂಬದ ಎಲ್ಲಾ ಸದಸ್ಯರ ಹೆಸರನ್ನು ಕೇಳಿ ಅರಿತಿದ್ದರು. ತದನಂತರ ಸುಮಾರು ವರ್ಷಗಳ ಬಳಿಕ ಮತ್ತೆ ಭೇಟಿ ನೀಡಿದಾಗ ಅವರ ಹೆಸರುಗಳನ್ನು ನೆನೆದು ಅವರ ಕುಶಲೋಪರಿ ಮಾಡಿದರು. ಕೇವಲ ಒಂದೇ ಬಾರಿ ಅವರ ಹೆಸರುಗಳನ್ನು ಹೇಳಿಕೊಟ್ಟಿದ್ದ ನಾನು ಮರ್ಯಮರ ಅಪಾರ ನೆನಪಿನ ಶಕ್ತಿಯನ್ನು ಕಂಡು ಸ್ಥಬ್ಧನಾಗಿ ಬಿಟ್ಟಿದ್ದೆ.


ಮರ್ಯಮರನ್ನು ಮುಖಃತವಾಗಿ ಭೇಟಿ ಮಾಡುವ ಒಂದು ವರುಷದ ಮುಂಚೆ 1983 ರಲ್ಲಿ ನಾನು ಅವರನ್ನು ಕನಸಿನಲ್ಲಿ ಕಂಡಿದ್ದೆ. ಮುರಾಬಿತುಲ್ ಹಾಜರೊಂದಿಗೆ ಅವರ ಬಿಡಾರದಲ್ಲಿ ಕುಳಿತು ಮಾತನಾಡುವ ವೇಳೆಯಲ್ಲಾಗಿತ್ತು ನಾನು ಅವರನ್ನು ಮೊತ್ತ ಮೊದಲ ಬಾರಿ ಕಂಡದ್ದು. ಕನಸಿನಲ್ಲಿ ಕಂಡ ಮಹಾತಾಯಿ ಇವರೇ ಎಂದು ಆಗ ನನಗೆ ಮನದಟ್ಟಾಯಿತು. ಪರಂಪರಾಗತ ವೇಷವಿಧಾನವನ್ನು ರೂಢಿಸಿದ್ದ ಅವರು, ತಮ್ಮ ಬದುಕಿನುದ್ದಕ್ಕೂ ಹಲವಾರು ಸಂಕಷ್ಟಗಳ ಒಡನಾಡಿಯಾಗಿದ್ದರೂ ಕೂಡಾ ಅರಳಿದ ಮೊಗದೊಂದಿಗೆ ಸದಾ ಉತ್ಸುಕರಾಗಿ ಇರುತ್ತಿದ್ದರು.
ಒಂದು ಬಾರಿಯಾದರೂ ಹಜ್ಜ್ ಯಾತ್ರೆ ನಿರ್ವಹಿಸಬೇಕೆಂಬ ಅದಮ್ಯ ಬಯಕೆ ಅವರಿಗಿತ್ತು. ಆದರೆ ತನ್ನ ಕುಟುಂಬದ ಮತ್ತು ವಿದ್ಯಾರ್ಥಿಗಳ ಜವಾಬ್ದಾರಿಯಲ್ಲಿ ಕಿಂಚಿತ್ತೂ ಚ್ಯುತಿ ಬರಬಾರದೆಂಬ ಬದ್ಧತೆಯು ಅವರಿಗಿತ್ತು. ಮುರಾಬಿತುಲ್ ಹಾಜರನ್ನು ಸಂದರ್ಶಿಸಲು ಬರುತ್ತಿದ್ದ ಅತಿಥಿಗಳೆಲ್ಲರನ್ನೂ ಹೃದ್ಯವಾಗಿ ಸತ್ಕರಿಸುತ್ತಿದ್ದರು. ಒಮ್ಮೆ ಮುರಾಬಿತುಲ್ ಹಾಜರನ್ನು ಕಾಣಲು ಬಂದ ವಿದ್ಯಾರ್ಥಿಗಳು ಅವರಲ್ಲಿ ದುಆ ಮಾಡಲು ಅಪೇಕ್ಷಿಸಿದಾಗ, “ನೀವು ಮರ್ಯರೊಂದಿಗೆ ಕೂಡಾ ಅಪೇಕ್ಷಿಸಿರಿ” ಎಂದು ವಿದ್ಯಾರ್ಥಿಗಳನ್ನು ಕೇಳಿಕೊಂಡರು. ಮರ್ಯಮರ ಪ್ರಾರ್ಥನೆಗೆ ಅಲ್ಲಾಹನ ಉತ್ತರವಿದೆಯೆಂದಾಗಿತ್ತು ಅವರ ಅಂಬೋಣ.
ಮರ್ಯಮರ ಮಗನು ಒಮ್ಮೆ ನನ್ನ ಬಳಿ ಹೇಳಿದ್ದು, “ಮರ್ಯಮರು ಅಪಾರ ಜ್ಞಾನವುಳ್ಳ ಎಲೆಮರೆಕಾಯಿ” ಎಂದಾಗಿತ್ತು. ಮರ್ಯಮರ ಸಹೋದರರೊಬ್ಬರ ಒಮ್ಮೆ ಹೀಗೆ ಹೇಳಿದರು “ಅವರು ನನಗೆ ತಾಯಿ ಸಮಾನ.ಅವರು ಎಲ್ಲಾ ಸತ್ಯ ವಿಶ್ವಾಸಿಗಳ ಮಹಾ ಮಾತೆ”

ಮೂಲ: ಶೈಖ್ ಹಂಝ ಯೂಸುಫ್
ಭಾಷಾಂತರ: ಹಸನ್ ಮುಈನುದ್ದೀನ್ ನೂರಾನಿ

ಜನಪ್ರಿಯತೆಯ ತೆವಲು : ಹೊಸತಲೆಮಾರಿಗೆ ಅಂಟಿಕೊಂಡ ಸೋಂಕು

ನಾವು ಈ ಸಾಲಿನ ಪವಿತ್ರ ರಂಝಾನ್ ತಿಂಗಳಿನಲ್ಲಿದ್ದೇವೆ. ಈ ರಂಝಾನ್ ನಮಗೆ ಆತ್ಮ ನಿಯಂತ್ರಣ ಹಾಗೂ ಕ್ಷಮೆಯ ಕುರಿತಾಗಿ ಹಲವು ರೀತಿಯಲ್ಲಿ ಬೋಧಿಸುತ್ತಿದೆ. ಹೀಗಾಗಿ ರಂಝಾನ್ ಎಂಬುವುದು ಕೇವಲ ಆಹಾರವನ್ನು ಬಿಟ್ಟು ಕೂರುವುದು ಮಾತ್ರವಲ್ಲದೆ ಒಂದು ರೀತಿಯ ಆತ್ಮಾವಲೋಕನ ಹಾಗೂ ಧ್ಯಾನವಾಗಿದೆ. ಸತ್ಯ ವಿಶ್ವಾಸಿಗಳನ್ನು ಆಂತರಿಕವಾಗಿ ಬಲಹೀನಗೊಳಿಸುವುದರ ಜೊತೆಗೆ ಬಾಹ್ಯ ಪ್ರಚೋದನೆಗಳಿಗೂ ಈ ಪವಿತ್ರ ಮಾಸ ತಡೆಯೊಡ್ಡಲಿದೆ. ಅಂದರೆ, ಈ ಮಾಹೆಯಲ್ಲಿ ಕೆಡುಕುಗಳು ಇಲಾಹನ ಬಂಧನದಲ್ಲಿರಲಿದೆ. ಇದು ಮನುಷ್ಯ ತನ್ನ ಯೋಚನೆಯನ್ನು ಸರಿ ದಾರಿಗೆ ಎಳೆಯಲು ಸೂಕ್ತ ಸಮಯವಾಗಿರಲಿದೆ.

ಜನರು ಇತರರಿಂದ ಹೊಗಳಿಸಿಕೊಳ್ಳಲು ಹಪಹಪಿಸುತ್ತಿರುವುದು ನನ್ನ ಪ್ರಕಾರ ಈ ತಲೆಮಾರಿಗೆ ಅಂಟಿಕೊಂಡಿರುವ ಮಾರಕ ಕಾಯಿಲೆಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಯನ್ನು ನಾವು ಹೆಚ್ಚೆಚ್ಚು ಕಾಣುತ್ತಿದ್ದೇವೆ. ತಮ್ಮೆಲ್ಲಾ ಯೋಚನೆಗಳನ್ನು ಈ ಒಂದಕ್ಕೇ ಕೇಂದ್ರೀಕರಿಸಿಕೊಂಡು, ಸಮಾಜದಲ್ಲಿ ತಾನೊಬ್ಬ ದೈವಿಕ ಶಕ್ತಿಯುಳ್ಳವನೆಂಬುವುದನ್ನು ಸಾಬೀತು ಪಡಿಸಲು ಇವರು ಹೆಣಗಾಡುತ್ತಿದ್ದಾರೆ. ಇಂಥವರು ಹೊಗಳಿಕೆಯಲ್ಲೇ ಆತ್ಮಸಂತೃಪ್ತಿ ಕಂಡುಕೊಳ್ಳುತ್ತಾರೆ. ಇದು ಬಹಳ ಅಪಾಯಕಾರಿ ಬೆಳವಣಿಗೆ.

ನಮ್ಮ ನಡುವೆ ವಿವಿಧ ರೀತಿಯ ಜನರಿದ್ದಾರೆ. ಮನುಷ್ಯ ಸಂಕುಲದ ವೈವಿಧ್ಯತೆಯನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ನಾವು ನಮ್ಮ ಗುಣನಡೆತೆಯನ್ನು ರೂಪಿಸಿಕೊಳ್ಳಬೇಕು. ಹೀಗಾಗಿ ನಾವು ನಮ್ಮ ಮಿತಿಯನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಹೊಗಳಿಕೆಯ ದಾಸರಾಗಬಾರದು. ಇಂಥಹ ವಿಷಯಗಳ ಕುರಿತು ಪ್ರಸ್ತಾಪಿಸುತ್ತಾ ಮೊಹಮ್ಮದ್ ﷺ ಅವರು ಹೇಳಿದ್ದು ಹೀಗೆ. “ನಾನು ಜನರ ಸ್ಥಿತಿಗತಿ ನೋಡಿಕೊಂಡು ಅವರೊಡನೆ ವ್ಯವಹರಿಸಲು ಆಜ್ಞಾಪಿಸಲ್ಪಟ್ಟವನಾಗಿದ್ದೇನೆ.” ಹೀಗಾಗಿ ಓರ್ವ ಸಾಮಾನ್ಯನ ಜೊತೆಗೆ ಹಾಗೂ ವಿದ್ವಾಂಸನ ಜೊತೆಗೆ ಸಮಾಲೋಚಿಸುವಾಗ ಅವರಿಬ್ಬರ ಜ್ಞಾನದ ನೆಲಗಟ್ಟಿನಲ್ಲಿ ಇಬ್ಬರಿಗೂ ಅನುಗುಣವಾಗುವಂತೆ ನಾವು ನಡೆದುಕೊಳ್ಳಬೇಕು. ತಮ್ಮೊಳಗಿನ ಪಾಂಡಿತ್ಯದ ತೋರಿಕೆಗಾಗಿ ಎಲ್ಲವನ್ನು ಎಲ್ಲರ ಮುಂದೆಯೂ ಉರು ಹೊಡೆಯಬಾರದು. ಇದು ಪ್ರಾಯೋಗಿಕವಾಗಿ ಓರ್ವನಿಗೆ ಇರಬೇಕಾದ ಸಾಮಾನ್ಯ ಜ್ಞಾನ. ಇದೆಲ್ಲವನ್ನು ಮರೆತು ಹೊಗಳಿಕೆಗಾಗಿ ನಾವು ಮಾಡುವ ಅರ್ಥಹೀನ ಕೆಲಸಗಳು ಒಳಿತನ ಮೌಲ್ಯಕ್ಕೆ ವಿರುದ್ಧವಾದಂತದ್ದು.

ಈ ಸಮೂಹ ನಮ್ಮ ಬಗ್ಗೆ ಏನು ಹೇಳುತ್ತಿದೆ, ನಮ್ಮ ಕುರಿತಾಗಿ ಏನು ಮಾತನಾಡುತ್ತಿದೆ ಎಂಬುವುದನ್ನೆಲ್ಲಾ ತಿಳಿದುಕೊಳ್ಳಲು ಹುಟ್ಟುವ ಉತ್ಸುಕತೆ ಈ ಆಧುನಿಕ ಜಗತ್ತಿನಲ್ಲಿ ಕಾಣಸಿಗುವ ಮಾರಕ ಕಾಯಿಲೆಗಳ ಪೈಕಿ ಇರುವಂತವು. ಇತ್ತೀಚಿನ ದಿನಗಳಲ್ಲಿ ನೀವೂ ಗಮನಿಸರಬಹುದು. ಲೈಕು, ಕಮೆಂಟುಗಳ ರಾಶಿಗಾಗಿ ಹದಿಹರೆಯದ ಯುವಕರು ಯೂಟ್ಯೂಬ್‍ಗಳಲ್ಲಿ ನಡೆಸುವ ಹೆಣಗಾಟವನ್ನು, ಅಲ್ಲಿ ಅವರಿಗೆ ಬರುವ ಲೈಕು ಕಮೆಂಟುಗಳೇ ಅವರು ಮನುಷ್ಯರಾಗಿ ಬದುಕುತ್ತಿದ್ದಾರೆ ಎಂಬುವುದಕ್ಕಿರುವ ಮಾನದಂಡ ಎಂದು ಅವರು ಭಾವಿಸಿದ್ದಾರೆ. ಒಂದು ಹಂತದ ಬಳಿಕ ಅಂಥಾ ಪ್ರಶಂಸೆಗಳು, ಹೊಗಳಿಕೆಗಳು ಅವರಿಗೆ ಸಿಗದೆ ಹೋದರೆ ಅವರು ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಇಂಥಾ ಬೆಳವಣಿಗೆಗಳು ಜೀವನ ಪ್ರೀತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಇಂಥಾ ವಿಷಯಗಳ ಕುರಿತು ಇಸ್ಲಾಂ ತಾಳ್ಮೆ ಮತ್ತು ನಮ್ರತೆಯನ್ನು ಕಾಯ್ದುಕೊಳ್ಳಲು ಹೇಳುತ್ತದೆ. ಇವುಗಳ ಕುರಿತು ಪೈಗಂಬರರು ಹೇಳುತ್ತಾರೆ “ಎಲ್ಲಾ ಧರ್ಮಗಳಿಗೂ ಅದರದ್ದೇ ಆದ ಗುಣ ವಿಶೇಷಗಳಿವೆ. ಆದರೆ ಇಸ್ಲಾಂ ಮುಂದಿಡುವ ಮೌಲ್ಯ ಲಜ್ಜೆ ಮತ್ತು ನಮ್ರತೆಯಾಗಿದೆ. ಸದ್ಯ ಯುವ ಸಮೂಹ ಅನುಸರಿಸಿಕೊಂಡು ಬರುತ್ತಿರುವ ಲೌಕಿಕ ಮೌಲ್ಯ ಹಾಗೂ ಮಹತ್ವಾಕಾಂಕ್ಷೆಗಳನ್ನು ಪ್ರವಾದಿಗಳು ಹದೀಸ್ ಮೂಲಕ ತೀವ್ರವಾಗಿ ಖಂಡಿಸಿದ್ದಾರೆ. “ತೋರಿಕೆ ಹಾಗೂ ಮಹತ್ವಾಕಾಂಕ್ಷೆಗಳ ಕುರಿತಾಗಿ ನನ್ನ ಸಮುದಾಯ ತಾಳಬಹುದಾದ ನಿಲುವುಗಳ ಬಗ್ಗೆ ನನ್ನಲ್ಲಿ ಭಯವಿದೆ” ಎಂದು ಇಬ್ನುಮಾಜ (ರ) ಅವರು ವರದಿ ಮಾಡಿದ ಹದೀಸ್‍ವೊಂದರಲ್ಲಿ ಪೈಗಂಬರರು ಹೇಳುತ್ತಾರೆ. ಈ ತೋರಿಕೆ ಎಂಬುವುದು ದೈವನಿಂದನೆ ಎಂದು ಪ್ರವಾದಿಗಳು ಬೋಧಿಸುತ್ತಾರೆ. ಯಾಕೆಂದರೆ, ಅವರು ಸರ್ವಶಕ್ತನಾದ ಅಲ್ಲಾಹನಿಂದ ಸಿಗಬೇಕಾದ ಮಾನ್ಯತೆಯನ್ನು ಅವನದ್ದೇ ಸೃಷ್ಟಿಗಳಿಂದ ಎದುರು ನೋಡುವವರಾಗಿದ್ದಾರೆ.

ಯಕಶ್ಚಿತ್,ನಮ್ಮ ಪೂರ್ವಜರೆಲ್ಲರೂ ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದರಿಂದ ಹಿಂದೆ ಸರಿಯುತ್ತಿದ್ದವರು. ಹೀಗಿದ್ದ ಪಂಡಿತರಲ್ಲೊಬ್ಬರಾಗಿದ್ದರು ಖಾಲಿದ್ ಬಿನ್ ಮಹ್ದಾನ್ (ರ). ಮುಹಮ್ಮದ್ ﷺ ಅವರ ಸುನ್ನತ್ತ್ ಅನ್ನು ಕಾಪಾಡುವ ನಿಟ್ಟಿನಲ್ಲಿ ಅದ್‍ಹಾಂ ಎಂಬ ಹದೀಸ್ ಪಂಡಿತ, ತನ್ನ ಪಾಂಡಿತ್ಯದಿಂದ ತನಗೆಲ್ಲಿ ಪ್ರಸಿದ್ಧಿ ಬಂದು ಬಿಡುತ್ತದೋ ಎಂಬ ಭಯದಿಂದ ಹದೀಸ್ ಕೂಟದಿಂದಲೇ ಎದ್ದು ನಡೆಯುತ್ತಿದ್ದರು.

ಇದೇ ವಿಷಯದ ಕುರಿತು ಮತ್ತೊಂದು ಘಟನೆ ನೆನಪಿಸಿಕೊಳ್ಳುವುದಾದರೆ, ಉಬಯ್ ಬಿನ್ ಕಅಬ್ (ರ) ಅವರು ಹೀಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಅಬ್ (ರ) ಅವರ ಅನುಯಾಯಿಗಳು ಅವರನ್ನು ಹಿಂಬಾಲಿಸುತ್ತಿದ್ದರು. ಇದನ್ನು ನೋಡಿದ ಉಮರ್ (ರ) ತನ್ನ ಕೈಯಲ್ಲಿದ್ದ ಕೋಲು ಉಬಯ್ ಬಿನ್ ಕಅಬ್ (ರ) ಅವರ ನೇರಕ್ಕೆ ಹಿಡಿದು ನಿಂತು ಬಿಟ್ಟರು. ತಮ್ಮ ನೇರಕ್ಕೆ ಕೋಲು ಹಿಡಿದು ನಿಂತಿರುವ ಉಮರ್ (ರ) ಅವರ ಬಳಿ ಏನಾಯ್ತು ತಂಙಳೇ ಎಂದು ಕಅಬ್ (ರ)ರವರು ಕೇಳಿದರು. ಇದಕ್ಕೆ ಉತ್ತರಿಸಿದ ಉಮರ್ (ರ), ಈ ರೀತಿಯ ನಡಿಗೆ ಅನುಯಾಯಿಗಳಿಗೆ ನ್ಯೂನ್ಯತೆಯೂ ಹಾಗೂ ಅದನ್ನು ನಾಯಕರಿಗೆ ಅಪಾಯವೂ ಆಗಿದೆ ಎಂದರು.

ನಮ್ಮ ಪೂರ್ವಜರು ಈ ರೀತಿಯಾದ ಶ್ರದ್ಧೆ ಮತ್ತು ಭಕ್ತಿಯಿಂದ, ತೋರಿಕೆ ಹಾಗೂ ಖ್ಯಾತಿಯ ಪೊರೆಯನ್ನು ಕಳಚಿ ಬಿಟ್ಟವರು ಎಂದು ನಾವುಗಳು ಅರ್ಥೈಸಿಕೊಳ್ಳಬೇಕು. ಯಾಕೆಂದರೆ, ಇಂಥಾ ಜನಪ್ರಿಯತೆಯ ತೆವಲು ಅವರನ್ನು ದೈವನಿಂದನೆಯೆಡೆಗೆ ಕೊಂಡೊಯ್ಯಲಿದೆ ಎಂದು ಅವರು ಭಾವಿಸಿದ್ದರು. ಹೀಗೆ ಮಾಡಿದವರಲ್ಲಿ ಕೆಲವರು ತಮ್ಮ ಪಾಂಡಿತ್ಯ ತೋರದಿರಲು ಹಲವು ದಾರಿಗಳನ್ನು ಕಂಡುಕೊಂಡಿದ್ದರು. ಎಲ್ಲಿಯವರೆಗೆ ಎಂದರೆ ನೀರಿಗೆ ಮದ್ಯಕ್ಕೆ ಹೋಲುವ ಕಲಬೆರಕೆಯನ್ನು ಮಿಶ್ರಣ ಮಾಡಿ ಜನರ ಮುಂದೆ ಕೂತು ಕುಡಿಯುತ್ತಿದ್ದರು. ಇದರಿಂದ ತಮ್ಮ ಮೇಲೆ ಜನರಿಗೆ ಅಭಿಮಾನ ಮೂಡದಿರಲಿ ಹಾಗೂ ಖ್ಯಾತಿ ದಕ್ಕದಿರಲಿ ಎಂದು ಈ ರೀತಿ ನಡೆದುಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಅವರು ತೋರಿಕೆ ಮತ್ತು ಪ್ರಸಿದ್ಧಿಯನ್ನು ವಿರೋಧಿಸುತ್ತಿದ್ದರು. ಆದರೆ ವಿದ್ವಾಂಸರ ಪ್ರಕಾರ, ಈ ರೀತಿಯಲ್ಲೂ ಖ್ಯಾತಿಯನ್ನು ತಿರಸ್ಕರಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪಂಡಿತರ ಈ ರೀತಿಯ ಗುಣ ನಡೆತೆಗಳು ಅನುಯಾಯಿಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ತಮ್ಮ ನಂಬಿಕೆಗಳು ಅನುಯಾಯಿಗಳ ಮೇಲೆ ನಕಾರಾತ್ಮಕ ರೀತಿಯಲ್ಲಿ ಪ್ರಭಾವ ಬೀರುವುದಿಲ್ಲವೆಂದಾದರೆ ಮಾತ್ರ ಇಂಥಾ ಕಠಿಣ ಆಚರಣೆಗಳಿಗೆ ಇಸ್ಲಾಂ ಸಮ್ಮತಿಸುತ್ತದೆ.

ಇದೇ ಮಾದರಿಯ ಮತ್ತೊಂದು ಘಟನೆಯನ್ನು ತಾರೀಖ್‍ನಿಂದ (ಇತಿಹಾಸದಿಂದ) ನೆನಪಿಸಿಕೊಳ್ಳುವುದಾದರೆ, ಒಟೋಮನ್ ಸಾಮ್ರಾಜ್ಯದ ಆದಿ ರಾಜಧಾನಿಯಾಗಿದ್ದ ಬುರ್ಸ ಎಂಬಲ್ಲಿನ ಮುಖ್ಯ ಮುಫ್ತಿ ಹಾಗೂ ಒಟೋಮನ್ ರಾಜರ ಆಡಳಿತ ಸಲಹೆಗಾರ ಮತ್ತು ಪ್ರಮುಖ ವ್ಯಕ್ತಿಗಳಲ್ಲೊಬ್ಬನಾಗಿದ್ದ ಅಝೀಜ್ ಮುಹಮ್ಮದ್ ಹುದೈ, ಆಧ್ಯಾತ್ಮಿಕವಾಗಿ ಓರ್ವ ಶೈಖ್ (ಹಿಂದಿನ ಅರಬ್ ಬುಡಕಟ್ಟು ಜನಾಂಗದ ನಾಯಕರನ್ನು ಶೈಖ್ ಎಂದು ಕರೆಯಲಾಗುತ್ತಿತ್ತು. ಈಗಲೂ ಅದೇ ಪದ ಚಾಲ್ತಿಯಲ್ಲಿದೆ. ಆದರೆ ಬುಡಕಟ್ಟು ಎಂಬ ಪ್ರಾತಿನಿಧ್ಯ ಆ ಪದ ಸದ್ಯಕ್ಕೆ ತೋರುವುದಿಲ್ಲ. ಆದರೆ ಇಲ್ಲಿ ಅಝೀಜ್ ಮುಹಮ್ಮದ್ ಹುದೈ ಹಿಂಬಾಲಿಸಿದ್ದು ಬುಡಕಟ್ಟು ಜನಾಂಗದ ನಾಯಕನ್ನು) ಅವರನ್ನು ಹಿಂಬಾಲಿಸಲು ತೀರ್ಮಾನಿಸುತ್ತಾನೆ. ಇದನ್ನು ಅರಿತ ಶೈಖ್, ತಲೆಗೆ ದೊಡ್ಡದಾದ ಪೇಟ, ವಿಶೇಷ ಬಟ್ಟೆಯನ್ನು ಧರಿಸಿ ರಾಜರೊಡನೆ ಅಹಂಕಾರದೊಂದಿಗೆ ತಿರುಗುತ್ತಿದ್ದ ಮುಫ್ತಿಯನ್ನು ಪರೀಕ್ಷಿಸಲು ತೀರ್ಮಾನಿಸಿದರು. ಮರುಕ್ಷಣವೇ ಮುಫ್ತಿಯನ್ನು ಕರೆದು, ನೀನು ನನ್ನ ಶಿಷ್ಯನಾಗ ಬಯಸುವೆಯಾದರೆ ನೀನು ಧರಿಸಿರುವ ಇದೇ ಬಟ್ಟೆಯಲ್ಲಿ ಮಾರುಕಟ್ಟೆಗೆ ತೆರಳಿ ಕರುಳು (ಮಾಂಸ ಎಂದು ಅರ್ಥೈಸಿಕೊಳ್ಳಬಹುದು) ವ್ಯಾಪಾರ ಮಾಡಬೇಕು ಎಂದು ಶೈಖ್ ಸವಾಲೊಡ್ಡಿದರು. ಅಷ್ಟೇ ಅಲ್ಲದೆ ಮಾಂಸ ಮಾರಟಗಾರ. ಮಾಂಸ ಮಾರಾಟಗಾರ ಎಂದು ಜೋರಾಗಿ ಕೂಗಿ ಹೇಳಬೇಕು ಎಂದರು. ಇದು ಕೇಳುತ್ತಿದ್ದಂತೆ ಮುಫ್ತಿ ಹೌಹಾರಿ ಹೋದರು. ಮುಫ್ತಿಯ ಅಹಂಕಾರ ಇಳಿಸಲು ಶೈಖ್ ನೀಡಿದ ಮೊದಲ ಪಾಠವಾಗಿತ್ತದು. ಇಷ್ಟಾದರೂ ಶೈಖ್ ಅವರ ಸವಾಲನ್ನು ಸ್ವೀಕರಿಸಿ ಹೇಳಿದಂತೆಯೇ ಮುಫ್ತಿ ಮಾಡಿದರು. ಈ ಘಟನೆ ಬಳಿಕ ಶೈಖ್ ಮುಫ್ತಿಯನ್ನು ಶಿಷ್ಯನೆಂದು ಮನಸಾರೆ ಒಪ್ಪಿಕೊಂಡರು. ಮುಫ್ತಿ ಶೈಖ್ ರಿಂದ ತಾಳ್ಮೆ ಮತ್ತು ಸಹಾನುಭೂತಿಯ ಪಾಠವನ್ನು ಕಲಿತುಕೊಂಡರು. ತದನಂತರದ ದಿನಗಳಲ್ಲಿ ಒಟೋಮನ್ ಸಾಮ್ರಾಜ್ಯದ ಪ್ರಧಾನಿಯಾಗಿದ್ದ ಅಝೀಜ್ ಮುಹಮ್ಮದ್ ಹುದೈ ಮುಫ್ತಿ ಜನರ ನಡುವೆ ಹೆಚ್ಚು ಸ್ವೀಕೃತಗೊಂಡ ವ್ಯಕ್ತಿತ್ವವಾಗಿ ರೂಪುಗೊಂಡರು.

ನಾವು ಮಾಡುವ ಕೆಲಸಗಳಿಂದ ನಾವು ಅಹಂಕಾರ ಪಟ್ಟುಕೊಳ್ಳಬಾರದು, ಗರ್ವ ಪಟ್ಟುಕೊಳ್ಳಬಾರದು. ಮುಹಮ್ಮದ್ ﷺ ಹೇಳುತ್ತಾರೆ, “ಯಾರಾದರು ಒಬ್ಬರು ನಿಮ್ಮೆಡೆಗೆ ಬೆರಳು ತೋರಿದರೆ ಸಾಕು ಅದೇ ನಿಮ್ಮಲ್ಲಿರುವ ದುಷ್ಟತನಕ್ಕಿರುವ ಸಾಕ್ಷ್ಯ.” ಹೀಗಾಗಿ ಈ ಪವಿತ್ರ ತಿಂಗಳಲ್ಲಿ ನಮ್ಮನ್ನು ಎಲ್ಲಾ ರೀತಿಯಾದ ಬಾಹ್ಯ ಪ್ರಚೋದನೆಗಳಿಂದ ಆ ಸೃಷ್ಟಿಕರ್ತನು ಕಾಪಾಡಲಿ. ನಮ್ಮ ಯೋಚನೆಗಳು ಹಾಗೂ ಹೃದಯಗಳು ಈ ಮೂಲಕ ಶುದ್ಧೀಕರಣಗೊಳ್ಳಲಿ.

(ಇದು ಶೈಖ್ ಅಬ್ದುಲ್ ಹಕೀಂ ಮುರಾದ್ ನಡೆಸಿಕೊಡುವ Ramdhan moment ಎಂಬ ಸರಣಿಯಲ್ಲಿ Seeking status ಎಂಬ ಒಕ್ಕಣೆಯಲ್ಲಿ ಮಾಡಿದ ಭಾಷಣದ ಲಿಖಿತ ರೂಪ)

ಕನ್ನಡಕ್ಕೆ : ಆಶಿಕ್ ಮುಲ್ಕಿ


SHYKH ABDUL HAKIM MURAD

Dean of Cambridge Muslim College in the United Kingdom, was educated at Cambridge, Al Azhar, and the Free University of Amsterdam. He is currently University Lecturer in Islamic Studies in the Faculty of Divinity at Cambridge University.

ಸವಾನಿಹ್ ಮತ್ತು ಇಂಡೋ ಪರ್ಷಿಯನ್‌ ಸೂಫಿಸಂ

ಸೂಫಿಸಂ ಕುರಿತ ಅತ್ಯಂತ ಹಳೆಯ ಪರ್ಷಿಯನ್‌ ರಚನೆಗಳಲ್ಲಿ ಅಹ್ಮದ್ ಅಲ್ ಗಝ್ಝಾಲಿಯವರ ‘ಸವಾನಿಹ್’ ಗ್ರಂಥವೂ ಒಂದು. ಇಸ್ಮಾಯೀಲ್ ಬಿನ್ ಮುಹಮ್ಮದ್ ಅಲ್ ಮುಸ್ತಂಲಿಯವರ ‘ಶರಹು ತಅರ್ರುಫ್ ಲಿ ಮದ್ಸ್ಹಬಿ ತಸವ್ವುಫ್’, ಅಲಿಯ್ಯ್ ಬಿನ್ ಉಸ್ಮಾನ್ ಅಲ್ ಹುಜ್‌ವೀರಿ ಯವರ ‘ಕಶ್ಫುಲ್ ಮಹ್ಜೂಬ್’ ನಂತಹ ಕೆಲವೇ ಕೆಲವು ಗ್ರಂಥಗಳಷ್ಟೇ ಆ ವಿಷಯದಲ್ಲಿ ಸವಾನಿಹ್ ಗೂ ಮುನ್ನ ವಿರಚಿತವಾದ ಗ್ರಂಥಗಳು. ಆದರೆ, ಈ ಗ್ರಂಥಗಳಿಗೂ ಮೊದಲೇ ಪರ್ಷಿಯನ್‌ ಭಾಷೆಯಲ್ಲಿ ಸೂಫಿಸಂ ವ್ಯಾಪಕವಾಗಿ ಚರ್ಚೆಗೊಳಪಟ್ಟಿತ್ತು ಎನ್ನುವುದಕ್ಕೆ ದಾಖಲೆಗಳಿವೆ. ಅಬೂ ಅಬ್ದುರ್ರಹ್ಮಾನ್ ಅಸ್ಸುಲಮೀ, ಅಬೂ ಸಈದ್ ಬಿನ್ ಅಬಿಲ್ ಖೈರ್, ಅಬುಲ್ ಖಾಸಿಂ ಅಲ್ ಖುಶೈರಿ ಮೊದಲಾದವರು ಅಹ್ಮದ್ ಅಲ್ ಗಝ್ಝಾಲಿಯವರಿಗೂ ಮೊದಲೇ ಅಪಾರ ಪ್ರಭಾವ ಬೀರಿದ್ದ ಪರ್ಷಿಯನ್ ಸೂಫೀ ವಿದ್ವಾಂಸರಾಗಿದ್ದರು. ಇಸ್ಲಾಮಿಕ್ ಕಾನೂನು, ದೇವತಾಶಾಸ್ತ್ರಗಳಂತೆಯೇ ಪ್ರಾರಂಭ ಕಾಲದಲ್ಲಿ ಸೂಫಿಸಂ ಕುರಿತ ರಚನೆಗಳೂ ಮುಖ್ಯವಾಗಿ ಅರಬಿ ಭಾಷೆಯಲ್ಲೇ ರಚಿತವಾಗುತ್ತಿದ್ದವು. ನಂತರದ ದಿನಗಳಲ್ಲಿ ಇಸ್ಲಾಮಿನ ಸೂಫೀ ಚಿಂತನೆಗಳ ನೈಸರ್ಗಿಕವಾದ ಕಾವ್ಯಶೈಲಿ ಮೂಲಕ ಬಳಿಕ ಪರ್ಷಿಯನ್‌ ಭಾಷೆಯಲ್ಲಿ ಇಂತಹ ಸಾಹಿತ್ಯ ಪ್ರಕಾರಗಳು ಅಧಿಕಾರ ಹಿಡಿದವು.

ಹಿಜರಿ ಆರನೇ ಶತಮಾನದ ಮೊದಲ ದಶಕದಲ್ಲಿ ರಚನೆಗೊಂಡ ಸವಾನಿಹ್ ಗ್ರಂಥವು ಪ್ರೇಮದ ಅತೀಂದ್ರಿಯ ಮಗ್ಗುಲುಗಳನ್ನು ಬಹು ವಿಸ್ತೃತವಾಗಿ ಚರ್ಚೆ ಮಾಡುವ; ಒಂದರ್ಥದಲ್ಲಿ ಇಸ್ಲಾಮಿಕ್ ಇತಿಹಾಸದಲ್ಲೇ ಪ್ರಥಮ ದಾಖಲೆಯೆನ್ನಬಹುದು. ಪ್ರೇಮವನ್ನು ಸರ್ವಸ್ವವೂ ಉದ್ಭವಿಸುವ ಆತ್ಯಂತಿಕ ಸತ್ಯ ಎಂದು ಸವಾನಿಹ್ ಬಣ್ಣಿಸುತ್ತದೆ. ಎಲ್ಲವೂ ಅಸ್ತಿತ್ವ ಸಿದ್ಧಿಸುವುದು ಪ್ರೇಮದಲ್ಲಿ ಬಂಧಿತರಾದವರೊಳಗಿನ ಸಂಕೀರ್ಣವಾದ ಸಂಬಂಧದ ಮೂಲಕವೆಂದೂ, ಪ್ರೇಮಿಗಳ ಆತ್ಮಗಳು ಪರಸ್ಪರ ಭೇಟಿಯಾಗುತ್ತವೆ ಎಂದೂ ಸವಾನಿಹ್ ಸ್ಪಷ್ಟಪಡಿಸುತ್ತದೆ.

ಈ ಕಾರಣದಿಂದಲೇ ಲಿಯೊನಾರ್ಡ್ ಲೆವಿಸನ್ ಸವಾನಿಹ್ ಅನ್ನು ‘ಸ್ಕೂಲ್ ಆಫ್ ಲವ್’ ನ ಪ್ರಥಮ ಗ್ರಂಥವಾಗಿ ಮತ್ತು ಪರ್ಷಿಯನ್ ಪ್ರೇಮಕಾವ್ಯ ಪರಂಪರೆಯ ಮೂಲವೆಂದೂ ಗುರುತಿಸುತ್ತಾರೆ. ಆದ್ದರಿಂದಲೇ, ಲಭ್ಯವಾದ ದಾಖಲೆಗಳ ಪ್ರಕಾರ ಅಹ್ಮದ್ ಅಲ್ ಗಝಾಲಿಯವರೇ ಪರ್ಷಿಯನ್ ಸೂಫಿ ಸಾಹಿತ್ಯದ ಮೂಲಪುರುಷ ಎನ್ನಬಹುದು.
ಸಾಹಿತ್ಯ ಕ್ಷೇತ್ರದ ಅಗಾಧ ಪಾಂಡಿತ್ಯದ ಜೊತೆಗೆ ಅಹ್ಮದ್ ಗಝ್ಝಾಲಿಯವರಿಗೆ ಅನೇಕ ಪ್ರಸಿದ್ಧ ಶಿಷ್ಯಂದಿರಿದ್ದರು. ಇರಾಕ್ ಮತ್ತು ಪಶ್ಚಿಮ ಪರ್ಷಿಯಾವನ್ನು ಆಳಿದ ಸಲ್ಜೂಖ್ ಚಕ್ರವರ್ತಿ ಮುಗೀಸುದ್ದೀನ್ ಮಹ್ಮೂದ್ ಮತ್ತು ಖುರಾಸಾನ್, ಉತ್ತರ ಪರ್ಷಿಯಾದ ಆಡಳಿತಗಾರ ಅವರ ಸಹೋದರ ಅಹ್ಮದ್ ಸಂಜರ್ ಮೊದಲಾದ ಪ್ರಮುಖ ವ್ಯಕ್ತಿತ್ವಗಳೂ ಸಹ ಅಹ್ಮದ್ ಗಝ್ಝಾಲಿಯವರ ಶಿಷ್ಯಂದಿರೇ ಆಗಿದ್ದಾರೆ. ಸೂಫೀ ಪರಂಪರೆಯಲ್ಲಿ ಬರುವ ‘ಶೈಖ್’ ಎಂಬ ಅವರ ಪದವಿಯೂ ಪ್ರಮುಖವಾದುದು. ಸೂಫೀ ಪರಂಪರೆಯ ಶ್ರೇಣಿಯಾಧಾರಿತ ಅಧ್ಯಯನದ ಪ್ರಕಾರ ಅಹ್ಮದ್ ಗಝ್ಝಾಲಿಯವರ ಪ್ರಮುಖ ಶಿಷ್ಯರಾಗಿದ್ದಾರೆ ಶೈಖ್ ದಿಯಾವುದ್ಧೀನ್ ಅಬೂ ನಜೀಬ್ ಅಸ್ಸುಹ್ರವರ್ದಿ. ಅವರೊಳಗಿನ ಒಡನಾಟವು ಎಷ್ಟರಮಟ್ಟಿಗೆ ಇತ್ತೆಂಬುದು ಸ್ಪಷ್ಟವಾಗಿಲ್ಲವಾದರೂ ಗಝಾಲಿ ಯವರು ಅವರನ್ನು ಪ್ರಶಂಸಿಸಿ ಇಸ್ಫಹಾನಿನಲ್ಲಿ ಜೊತೆಯಾಗಿ ಇದ್ದ ಸಮಯದಲ್ಲಿ ಅವರನ್ನು ಖಲೀಫರಾಗಿ ನೇಮಕ ಮಾಡಿದ್ದಕ್ಕೆ ಸಾಕ್ಷ್ಯಗಳಿವೆ

ಅಬೂ ನಜೀಬ್ ಸುಹ್ರವರ್ದಿಯವರ ಪ್ರಸಿದ್ಧ ಶಿಷ್ಯರೂ ಸುಹ್ರವರ್ದಿ ಸೂಫೀ ಪಂಥದ ಸ್ಥಾಪಕರೂ ‘ಅವಾರಿಫುಲ್ ಮಾರಿಫ್’ ಎಂಬ ಪ್ರಸಿದ್ಧ ಕೃತಿಯ ಗ್ರಂಥಕರ್ತರೂ ಆದ ಅಬೂ ಹಫ್ಸ್ ಉಮರ್ ಸುಹ್ರವರ್ದಿ ಯವರಿಂದ ಸ್ಥಾಪಿತಗೊಂಡು ಒಟ್ಟೋಮನ್ ಸಾಮ್ರಾಜ್ಯದಲ್ಲಿ ಹಬ್ಬಿ ಇಂದಿಗೂ ತುರ್ಕಿಯಲ್ಲಿ ಚಾಲ್ತಿಯಲ್ಲಿರುವ ಸೂಫಿ ಪಂಥವೇ ಝೈನಿಯ್ಯಾ ತ್ವರೀಕತ್. ಚಿಶ್ತಿಯ್ಯಾ, ನಕ್ಷ್ ಬಂದಿಯ್ಯಾ , ಖಾದಿರಿಯ್ಯಾ ಮುಂತಾದ ಸೂಫೀ ಪಂಥಗಳಂತೆಯೇ ಭಾರತ ಮತ್ತು ಪಾಕಿಸ್ತಾನದ ಚರಿತ್ರೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪಂಥವಾಗಿದೆ ಸುಹ್ರವರ್ದೀ ಪಂಥ. ಅರಬ್ ರಾಷ್ರ್ಟಗಳಲ್ಲಿ ಈ ಪಂಥವು ಸ್ವಾಭಾವಿಕವೆಂಬಂತೆ ನೇಪಥ್ಯಕ್ಕೆ ಸರಿದಿದೆಯಾದರೂ ಇರಾಕ್, ಸಿರಿಯಾ ದೇಶಗಳಲ್ಲಿ ಇಂದಿಗೂ ಜೀವಂತವಾಗಿದೆ. ಸೂಫೀ ಪರಂಪರೆಗಳ ಇತಿಹಾಸದಲ್ಲಿ ಪ್ರಸಿದ್ಧವಾದ ಮತ್ತೊಂದು ಹೆಸರೇ ಅಹ್ಮದ್ ಅಲ್ ಗಝ್ಝಾಲಿಯವರ ಮತ್ತೋರ್ವ ಶಿಷ್ಯರಾದ ಅಬುಲ್ ಫಳ್ ಲ್ ಅಲ್ ಬಗ್ದಾದಿ. ಶಾಹ್ ನಿ ಅಮತುಲ್ಲಾಹ್ ವಲಿ ಸ್ಥಾಪಿಸಿದ ನಿಅಮತುಲ್ಲಾಹಿ ಪಂಥದ ಒಂದು ವಿಭಾಗವು ಏಳು ಶಾಖೆಗಳಾಗಿ ಅಲ್ ಬಗ್ದಾದಿಯವರ ಮೂಲಕ ಹಾದು ಬರುತ್ತದೆ. ಆ ಶಾಖೆಯು ತುರ್ಕಿಯಲ್ಲಿ ಪ್ರಚಾರ ಪಡೆದು ಹತ್ತೊಂಬತ್ತನೆಯ ಮತ್ತು ಇಪ್ಪತ್ತನೆಯ ಶತಮಾನಗಳಲ್ಲಿ ಅಮೇರಿಕಾ, ಯುರೋಪ್ ಗಳಲ್ಲಿ ವ್ಯಾಪಿಸಿದ ಮುಸ್ಲಿಂ ಸಮೂಹದಲ್ಲಿ ವಿಶೇಷ ಮನ್ನಣೆ ಗಳಿಸಿದೆ. ಪರ್ಷಿಯನ್‌ ಸೂಫೀ ಗುರು ಜಲಾಲುದ್ದೀನ್ ರೂಮಿ ಅವರ ಮೌಲವಿ ಪಂಥಕ್ಕೆ ಶಂಸುದ್ದೀನ್ ಅಫ್ ಲಾಕ್ ತಮ್ಮ ‘ಮನಾಖಿಬುಲ್ ಆರಿಫೀನ್’ ಗ್ರಂಥದಲ್ಲಿ ಕೊಟ್ಟಿರುವ ಪರಂಪರೆಯಲ್ಲಿ ಅಹ್ಮದ್ ಅಲ್ ಗಝ್ಝಾಲಿಯವರನ್ನು ಅಹ್ಮದ್ ಖಾತಿಬಿ ಅಲ್ ಬಲ್ಕಿಯವರ ಗುರು ಎಂದು ಪ್ರಸ್ತಾಪಿಸಲಾಗಿದೆ. ತದನಂತರ ಮೌಲವಿ ಪಂಥದಲ್ಲಿ ಬಂದ ಅನುಯಾಯಿ ಸಮೂಹವು ಮೌಲಾನಾ ಜಲಾಲುದ್ದೀನ್ ರೂಮಿಯದ್ದೆಂದು ಹೇಳಲಾಗುವ ಉಕ್ತಿಯೊಂದರಿಂದ ಅಹ್ಮದ್ ಅಲ್ ಗಝಾಲಿಯವರ ಆಧ್ಯಾತ್ಮಿಕ ಲೋಕದ ಅಧಿಕೃತತೆಯನ್ನು ನಿರೂಪಿಸುತ್ತಾರೆ.

ಅಬ್ದುಲ್ಲಾ ಅನ್ಸಾರಿ, ಅಹ್ಮದ್ ಅಲ್ ಗಝಾಲಿ, ಅಹ್ಮದ್ ಸಮ್ಆನೀ, ಹಕೀಮ್ ಸನಾಈ, ಮಯ್ಬುದೀ, ಮೊದಲಾದವರು ಆ ಚಳುವಳಿಯ ವಕ್ತಾರರಲ್ಲಿ ಮೊದಲಿಗರು. ಇಂದಿಗೂ ಲಭ್ಯವಿರುವ ಸವಾನಿಹ್ ನ ಹಸ್ತಪ್ರತಿಗಳು ಭಾರತದಲ್ಲಿ ಸವಾನಿಹ್ ನ ಪರ್ಷಿಯನ್‌ ಭಾಷೆಯಲ್ಲಿರುವ ವ್ಯಾಖ್ಯಾನಗಳು ಅಹ್ಮದ್ ಅಲ್ ಗಝಾಲಿಯವರ ಸಾಹಿತ್ಯಿಕ ಪ್ರಭಾವವನ್ನು ಸ್ಪಷ್ಟಪಡಿಸುತ್ತದೆ. ‘ಪ್ರೇಮ ಮತ್ತು ಪ್ರೇಮಿಗಳ ನಡುವಿನ ಮಿಲನವೇ ಆಧ್ಯಾತ್ಮಿಕ ಯಾತ್ರೆಯ ಎಲ್ಲಾ ಹಂತಗಳೂ’ ಎಂಬ ಅವರ ಸಿದ್ಧಾಂತವು ನಂತರದ ಪರ್ಷಿಯನ್‌ ಸೂಫಿಸಂನ ಕೇಂದ್ರಬಿಂದುವಾಯಿತು. ಜೊತೆಗೆ, ಗದ್ಯ-ಪದ್ಯ ಸಮ್ಮಿಶ್ರ ಸುಂದರವಾಗಿ ಸಮನ್ವಯಗೊಳಿಸುವ ಆಖ್ಯಾನ ಶೈಲಿಯು ಮುಂದೆ ಬರೆಯಲ್ಪಟ್ಟ ಅನೇಕ ಸೂಫಿ ರಚನೆಗಳಲ್ಲಿ ಅನುಕರಣೀಯವಾಯಿತು. ನಂತರದ ಸೂಫಿ ರಚನೆಗಳಲ್ಲಿ ಅಲ್ ಗಝಾಲಿಯವರ ಶೈಲಿ ಮತ್ತು ಬೋಧನೆಗಳು ಬೀರಿದ ಪ್ರಭಾವಗಳನ್ನು ಲೆಕ್ಕಹಾಕುವಾಗ ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂಬುದು ಮನದಟ್ಟಾಗುತ್ತದೆ. ಪರ್ಷಿಯನ್‌ ಸೂಫಿ ಪರಂಪರೆಯ ಅಷ್ಟೂ ರಚನೆಗಳನ್ನು ಒಟ್ಟು ಮಾಡಿ ವಿಶ್ಲೇಷಣೆಗೊಳಪಡಿಸಿದರೆ ಮಾತ್ರವೇ ಅಂತಹ ಒಂದು ಅಧ್ಯಯನವು ಪೂರ್ಣಾರ್ಥದಲ್ಲಿ ಸಾಧ್ಯವಾಗಬಹುದಷ್ಟೆ.

ಅಹ್ಮದ್ ಅಲ್ ಗಝಾಲಿಯವರ ‘ರಿಸಾಲತುತ್ವೈರ್’ ಎಂಬ ರಚನೆಯೇ ಫರೀದುದ್ದೀನ್ ಅತ್ತಾರರ ಪ್ರಸಿದ್ಧ ಕೃತಿ ‘ಮಂತಿಖು ತ್ವೈರ್’ (ಪಕ್ಷಿ ಸಂಭಾಷಣೆ) ಗೆ ನೀಲನಕ್ಷೆ ಒದಗಿಸಿರುವುದು. ಪಕ್ಷಿಗಳ ಸಂಗಮದಿಂದ ಎರಡೂ ರಚನೆಗಳೂ ಶುರುವಾಗುತ್ತವೆ. ಅವರ ನಡುವೆ ಭಿನ್ನಾಭಿಪ್ರಾಯಗಳು ಇರುವಾಗಲೇ ಒಬ್ಬ ನಾಯಕನ ಅನಿವಾರ್ಯತೆಗೆ ಬಿದ್ದ ಅವರು ಒಗ್ಗಟ್ಟಾಗಿ ಅಂತಹ ಓರ್ವ ನೇತಾರನನನ್ನು ಹುಡುಕಿ ಹೊರಟುಬಿಡುತ್ತಾರೆ. ಕಾರಣ, ‘ರಿಸಾಲತುತ್ತೈರ್’ ನ ಪಕ್ಷಿಗಳ ಅಭಿಪ್ರಾಯದ ಪ್ರಕಾರ, ‘ಪರಾಕ್ರಮಿಯಾದ ಒಬ್ಬ ರಾಜನ ನೆರಳು ನಮ್ಮ ಮೇಲೆ ಇಲ್ಲದಿದ್ದರೆ ಶತ್ರುಗಳಿಂದ ನಾವು ಸುರಕ್ಷಿತರಾಗಿರಲಾರೆವು”. ಅನೇಕ ಸಮಸ್ಯೆಗಳನ್ನು ಎದುರಿಸಿದ ಆ ಪಯಣದ ಕೊನೆಯಲ್ಲಿ ಪಕ್ಷಿಗಳು ತಮ್ಮ ದೊರೆ ಸೀಮುರ್ಗ್ ನ್ನು ಭೇಟಿಯಾಗುವುದನ್ನೇ ಎರಡೂ ಕೃತಿಗಳೂ ವಿವರಿಸುತ್ತವೆಯಾದರೂ ಆಧ್ಯಾತ್ಮಿಕ ಪಯಣವೆನ್ನುವ ಹೊಳಹನ್ನು ಅತ್ತಾರರ ‘ಮಂತಿಖುತ್ತುಯೂರ್’ ಹೆಚ್ಚು ವಿಶದವಾಗಿ ಪ್ರಸ್ತುತಪಡಿಸುತ್ತದೆ.

ಸಯ್ಯಿದ್ ಹುಸೈನ್ ನಸ್ರ್ ಬರೆಯುತ್ತಾರೆ: “ಹಕ್ಕಿಗಳು ಕೊನೆಗೆ ರಾಜಸನ್ನಿಧಿಯಲ್ಲಿ ಪ್ರವೇಶಿಸಲು ಅರ್ಹತೆ ಗಿಟ್ಟಿಸುವ ಕ್ಲೇಶಗಳು ಎಂಬ ಗಝಾಲಿಯನ್ ಕಥಾವಸ್ತುವನ್ನೇ ಅವರು (ಅತ್ತಾರ್) ಉಪಯೋಗಿಸಿರುತ್ತಾರೆ. ಆದರೆ, ಅವರು ಉನ್ನತವಾದ ಹಂತಗಳ ಮೂಲಕ ಆ ಹಂತವನ್ನೂ ದಾಟಿ ಹೋಗುತ್ತಾರೆ. ಅಲ್ಲಿ ಅಹಂ ಶೂನ್ಯವಾಗಿ ಪರಮ ಅಸ್ತಿತ್ವವು ಎದ್ದೇಳುವ ಮೂಲಕ ಪ್ರತಿಯೊಂದು ಪಕ್ಷಿಗಳೂ ಸ್ವಯಂ ಗುರುತಿಸುವ ಹಂತಕ್ಕೆ ತಲುಪುತ್ತವೆ. ಇದನ್ನೇ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮಾತುಗಳಲ್ಲಿ ಹೇಳುವುದಾದರೆ, “ಸ್ವಂತವನ್ನು ಗುರುತಿಸಿದವನು ಅವನ ಪರಿಪಾಲಕನಾದ ದೇವನನ್ನೂ ಅರಿತನು”. ಸೀಮುರ್ಗ್ ನ್ನು ಹುಡುಕಿ ಹೊರಟ ಪ್ರಯಾಣದಲ್ಲಿ ಪಕ್ಷಿಗಳು ಅವಳ ಉಪಸ್ಥಿತಿಯ ಸೌಂದರ್ಯವನ್ನು ಮಾತ್ರವಲ್ಲ ಗುರುತಿಸಿರುವುದು. ಹೊರತು, ಸರ್ವ ಅಸ್ತಿತ್ವಗಳ ಸರ್ವಸ್ವವಾದ ಪರಮಸತ್ತೆಯಲ್ಲಿ ಸಂಪೂರ್ಣವಾಗಿ ಲೀನವಾಗಿ ಸ್ವಯಂ ಪ್ರತಿಬಿಂಬವನ್ನೇ ಅವರು ಕಂಡುಕೊಂಡರು.

ಜೋಸೆಫ್ ಲಂಬಾಡ್೯

ವಸಾಹತುಶಾಹಿ ಕಾಲದಲ್ಲೂ ಭಾರತದ ಅನಕ್ಷರಸ್ಥರಾದ ಮುಸ್ಲಿಮರ ವ್ಯವಹಾರ ಭಾಷೆಯು ಪರ್ಷಿಯನ್‌ ಆಗಿದ್ದ ಕಾರಣ ಪ್ರೇಮದ ಪರ್ಷಿಯನ್‌ ಪ್ರಭಾವಗಳ ವರ್ಚಸ್ಸನ್ನು ಭಾರತೀಯ ಉಪಖಂಡದಲ್ಲಿ ಆಳದಲ್ಲಿ ದರ್ಶಿಸಬಹುದು.
ಶೈಖ್ ನಿಝಾಮುದ್ದೀನ್ ಔಲಿಯಾ, ನಾಸಿರುದ್ದೀನ್ ಚಿರಾಗಿ ದೆಹಲಿ, ಬುರ್‌ಹಾನುದ್ದೀನ್ ಗರೀಬ್, ರುಕ್ನುದ್ದೀನ್ ಕಾಶಾನಿ, ಗೇಸೂದರಾಝ್ ಎಂಬವರು ಅಹ್ಮದ್ ಅಲ್ ಗಝಾಲಿಯವರೊಡನೆ ಮತ್ತು ಐನುಲ್ ಖುಳಾತ್ ರೊಡನೆ ಋಣಿಯಾಗಿದ್ದಾರೆ. ಗೇಸೂದರಾಝ್ ಅವರು ‘ಸವಾನಿಹ್’ ನ ಅಧ್ಯಾಪನೆ ನಡೆಸಿದ್ದಾಗಿ ಮತ್ತು ಅವರ ಕೃತಿ ‘ಹಾಸಾಇರುಲ್ ಖುದ್‌ಸ್’ ನಲ್ಲಿ ಸವಾನಿಹ್ ಜೊತೆಗಿನ ತುಲನಾತ್ಮಕ ಅಧ್ಯಯನ ನಡೆಸಿದ್ದಾಗಿಯೂ ದಾಖಲಾಗಿದೆ. ವಿದ್ವಾಂಸ, ಅನುಭಾವಿ ಕವಿ ಹಾಗೂ ಸಂಗೀತಜ್ಞರಾಗಿದ್ದ ಅಮೀರ್ ಖುಸ್ರೋರವರು ತಮ್ಮ ಕಾಲದ ಒಂಭತ್ತು ಸಾಹಿತ್ಯ ಶೈಲಿಗಳನ್ನು ಕ್ಯಾಟಲಾಗ್ ಮಾಡಿದಾಗ ಪ್ರಥಮ ಸ್ಥಾನ ನೀಡಿರುವುದು ಸೂಫಿ ಶೈಲಿಗಾಗಿತ್ತು. ಸೂಫಿ ಶೈಲಿಯನ್ನು ಅವರು ಎರಡು ವಿಭಿನ್ನ ರೀತಿಗಳೆಂದು ವಿಭಾಗಿಸಿದ್ದಾರೆ. ಒಂದನೆಯದು, ಬೇರೆಬೇರೆ ಸ್ಥಾನಗಳಲ್ಲಿರುವ ಸೂಫಿಗಳದ್ದು. ಎರಡನೆಯದು, ವಿಭಿನ್ನ ಅವಸ್ಥೆಯಲ್ಲಿರುವವರದ್ದು. ಉದಾಹರಣೆಯಾಗಿ ಅವರು ಮುಂದಿರಿಸುವುದು, ಅಲ್ ಗಝಾಲಿಯವರ ಮತ್ತು ಐನುಲ್ ಖುಳಾತ್ ಹಮದಾನಿ ಯವರ ರಚನೆಗಳನ್ನು. ಇವುಗಳಲ್ಲದೆ, ಮೊಘಲ್ ರಾಜನಾಗಿದ್ದ ದಾರಾಶಿಕೋ ತನ್ನ ಕೃತಿಯಾದ ‘ಹಖ್ ನುಮಾ’ ದ ಹೂರಣವು ‘ಸವಾನಿಹ್’, ಇಬ್ನ್ ಅರಬಿಯವರ ‘ಫುಸೂಸುಲ್ ಹಿಕಂ’, ‘ಫುತೂಹಾತುಲ್ ಮಕ್ಕಿಯ್ಯ’, ಇರಾಖಿಯವರ ‘ಲಮ‌ಆತ್’, ಜಾಮಿಯವರ ‘ಲವಾಮಿಅ್’, ‘ಲವಾಇಹ್’ ಎಂಬೀ ಗ್ರಂಥಗಳಿಂದ ಎಂದು ಪ್ರಸ್ತಾಪಿಸುತ್ತಾರೆ. ಅಂತಹ ರೆಫರೆನ್ಸ್ ಗಳು ಭಾರತೀಯ ಉಪಖಂಡದಲ್ಲಿ ಸವಾನಿಹ್ ನ ಉಪಸ್ಥಿತಿ ಮತ್ತು ಪ್ರಭಾವವನ್ನು ತೆರೆದು ತೋರಿಸುತ್ತದೆ. ಇನ್ನು ‘ಸವಾನಿಹ್’ ಗ್ರಂಥವು ಪರಿಗಣಿತವಾಗಿರುವಾಗಲೇ, ಭಾರತೀಯ ಸೂಫಿಸಂನ ವಿಚಾರಧಾರೆಗಳಲ್ಲಿ ಐನುಲ್ ಖುಳಾತ್ ರ ‘ತಂಹೀದಾತ್’ ಕೃತಿಯು ಹೆಚ್ಚು ಪ್ರಭಾವ ಬೀರಿದ್ದನ್ನೂ ಕಾಣಬಹುದಾಗಿದೆ.

ಮೂಲ : ಜೋಸೆಫ್ ಲಂಬಾಡ್೯
ಅನುವಾದ: ಅಬ್ದುರ್ರಹ್ಮಾನ್ ಮುಈನಿ ಕಕ್ಯಪದವು

ಕೋಮುವಾದಕ್ಕೆ ಸಾತ್ವಿಕ ಧರ್ಮ ಅಸ್ತ್ರವಾಗಲಿ: ಅನಂತಮೂರ್ತಿ


ಡಾ. ಯು. ಆರ್ ಅನಂತಮೂರ್ತಿ ಅವರು 2003 ರಲ್ಲಿ ಮಲಯಾಳಂನ ಪಾಠಭೇದಂ ಎಂಬ ಪತ್ರಿಕೆಗೆ ನೀಡಿದ ಸಂದರ್ಶನ


ಧರ್ಮವನ್ನು ನಾವು ಕೋಮುವಾದವನ್ನು ಸೋಲಿಸಲು ಬಳಸಿಕೊಳ್ಳಬೇಕು. ಯಾಕೆಂದರೆ, ಎಲ್ಲಾ ಧರ್ಮಗಳಲ್ಲೂ ಮನುಷ್ಯನನ್ನು ಪ್ರೀತಿಸುವ ಮಂತ್ರಗಳಿವೆ‌. ದೇವರನ್ನು ಪ್ರೀತಿಸುವ‌ ಮೂಲಕ ಮನುಷ್ಯರಿಗೆ ಪ್ರೀತಿಯ ಪ್ರಾಯೋಗಿಕ ತರಬೇತಿ ಸಿಗುತ್ತದೆ. ಈ ತರಬೇತಿಯನ್ನು ತನ್ನದಲ್ಲದ ಧರ್ಮದ ಅನುಯಾಯಿಯನ್ನು‌ ಪ್ರೀತಿಸಲು ಬಳಸಿಕೊಳ್ಳಲು ಸಾಧ್ಯವಾಗಬೇಕು. ಆದರೆ, ಸೆಕ್ಯೂಲರಿಸಂ ಧರ್ಮದ ಈ ಸಾಧ್ಯತೆಯನ್ನು ಪರಿಗಣಿಸಿದಂತೆ ಕಾಣುವುದಿಲ್ಲ. ಧರ್ಮವನ್ನು ನಿರಾಕರಿಸದೆಯೇ ಸ್ನೇಹವನ್ನು ಹಂಚುವ ಸಾಧ್ಯತೆಯನ್ನು ಜಾತ್ಯತೀತತೆಯು‌ ನಿರಾಕರಿಸುತ್ತದೆ.
ವಿವಿಧ ಧರ್ಮಗಳ‌ ಆಚಾರ ವಿಚಾರಗಳ ಕೊಡುಕೊಳೆಯ ಮೂಲಕ ಆರೋಗ್ಯಕರವಾದ ಧರ್ಮ ಚಿಂತನೆ ಹಾಗೂ ವಿಶ್ವ ಚಿಂತನೆ ನಡೆದಿರುವುದನ್ನು ಎಲ್ಲಾ ಪ್ರದೇಶಗಳಲ್ಲೂ ಕಾಣಬಹುದು. ಕರ್ನಾಟಕದಲ್ಲಿ‌ ಶಿಶುನಾಳ ಷರೀಫ ಎಂಬ ಒಬ್ಬ ಸಂತ ಕವಿಯಿದ್ದಾರೆ. ಷರೀಫ್ ಗೋವಿಂಧ ಭಟ್ಟ ಎಂಬ ಹಿಂದೂ ಗುರುವಿನ ಶಿಷ್ಯರಾಗಿದ್ದರು. ಕನ್ನಡ ಸಾಹಿತ್ಯದಲ್ಲಿ ಧರ್ಮ ಸಮನ್ವಯತೆಯ ಧಾರೆ ಹರಿಯಲು ಷರೀಫರ ಕವಿತೆಗಳು ಬಹಳ ದೊಡ್ಡ ಪಾತ್ರ ವಹಿಸಿದೆ. ಹಾಗೆಯೇ, ಬಿಜಾಪುರ/ ಬೀದರ್ ಗಳಲ್ಲಿ ಹಿಂದೂ ಮುಸ್ಲಿಮರ ನಡುವಿನ ಸಾಮರಸ್ಯ ಪ್ರಜ್ಞೆ ಹತ್ತೊಂಬತ್ತನೇ ಶತಮಾನದ ಕನ್ನಡ ಕವಿತೆಗಳ ನವೋದಯಕ್ಕೆ ಸಹಾಯಕವಾಯಿತು. ಅಲ್ಲಿ ಇಸ್ಲಾಮ್ ಹಾಗೂ ಶೈವ ಚಿಂತನಾ ಧಾರೆಗಳ ಸಂಕರದಿಂದ ಖಾದರ್ ಲಿಂಗ ಎಂಬ ಹೊಸ ಧಾರ್ಮಿಕ ಪಂಥವೇ ಹುಟ್ಟಿಕೊಂಡಿತು. ಹಿಂದೂ ಮುಸ್ಲಿಮ್ ಇಬ್ಬರಿಗೂ ಈ ಎರಡು ಧರ್ಮಗಳ ಸಂಕರ ಸ್ಥಿತಿಯನ್ನು ಒಳಗೊಳ್ಳಲು ಸಾಧ್ಯವಾಗಿತ್ತೆಂಬುದು ಬಹಳ ವಿಶೇಷವಾದ ಸಂಗತಿ.

ಆದರೆ, ಇನ್ನೊಂದು ದೇವರು ಎಂಬ ಚಿಂತನೆಯನ್ನು ಇಸ್ಲಾಮ್, ಕ್ರೈಸ್ತ ಹಾಗೂ ಯಹೂದಿಯರ ಸೆಮೆಟಿಕ್ ಧರ್ಮಗಳಿಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಧರ್ಮಗಳು ಏಕದೇವಾ ಸಿದ್ಧಾಂತವನ್ನು ನಂಬಿಕೊಂಡಂತಹವುಗಳು. ವೈಷ್ಣವರ ದೇವರು ಸಾಕಾರ, ಸಗುಣನಾದರೆ, ಇಸ್ಲಾಮ್, ಕ್ರೈಸ್ತರ ದೇವರು ನಿರಾಕಾರ ಹಾಗೂ ಸಗುಣ. ಭಾರತೀಯ ತತ್ವಶಾಸ್ತ್ರದಲ್ಲಿ‌ ನಿರಾಕಾರವೂ ನಿರ್ಗುಣವೂ ಆದ ದೇವರಿಗೆ ಸ್ಥಾನವಿದೆ. ಅದ್ವೈತ ಬಹುಮಟ್ಟಿಗೆ ಇದನ್ನೇ ಹೇಳುತ್ತದೆ. ಅಬುಲ್ ಕಲಾಂ ಆಝಾದರ ದೇವರ ಮೇಲಿನ ಚಿಂತನೆಯು ಅದ್ವೈತ ಕ್ಕೆ ಸಮೀಪದಲ್ಲಿದೆ. ಭಾರತೀಯ ಮನಸ್ಥಿತಿಯ ಜೊತೆಗೆ ಅರಬ್ ಮನಸ್ಥಿತಿಯನ್ನು ಜೋಡಿಸುವ ಕೆಲಸವನ್ನು ಆಝಾದ್ ಮಾಡಲು ಪ್ರಯತ್ನಿಸಿದರು. ಈ ಎರಡು ಸಾಮಾಜಿಕ‌ ವ್ಯವಸ್ಥೆಯಲ್ಲೂ ದೈವಿಕ ಪ್ರೇಮವೆಂಬುದು‌ ಬಹಳ‌ ಮುಖ್ಯ.
ಧರ್ಮದಿಂದ ಮಾತ್ರ ಮತೀಯತೆಯನ್ನು ಎದುರಿಸಬಹುದು ಎನ್ನಲು ಕಾರಣ ಅದರ ಸ್ನೇಹದ ಶಕ್ತಿ(potential)ಯ ಬಗೆಗಿನ ಅರಿವು. ಒಬ್ಬರ ದೈವಿಕ ಪ್ರೇಮ ಪ್ರಕಟಗೊಳ್ಳುವುದು ಇತರರ ಹಕ್ಕುಗಳನ್ನು ನಿರಾಕರಿಸುವ ಮೂಲಕವೇ? ಎಂಬ ಪ್ರಶ್ನೆ ಏಳಬಹುದು. ನನ್ನ ದೇವರು ನನ್ನ ಶತ್ರುಗಳ ರಕ್ತದಿಂದ‌ಲೇ ಸಂತೃಪ್ತನಾಗುವವನೇ? ಸೀರಿಯಲ್ ಕಿಲ್ಲರ್ ರಾಮನ್‌ ರಾಘವನ್ ದೇವರ ಹೆಸರಿನಲ್ಲಿ ಸರಣಿ‌ ಕೊಲೆಗಳನ್ನು‌ ನಡೆಸಿದನು. ಇಲ್ಲಿ ದೈವ ತೃಪ್ತಿ‌ ಅನ್ನೋದು‌ ವಿಕೃತವಾದ ಪರಿವೇಷವನ್ನು ಪಡೆದುಕೊಂಡಿದೆ. ಶಾಂತಿ ಸೌಹಾರ್ಧತೆಗೆ ಅವಕಾಶ ನೀಡದ ದೇವರ ಪ್ರೀತಿಯು ಮನುಷ್ಯರ ನಡುವಿನ ಸ್ನೇಹವನ್ನು‌ ನಿರಾಕರಿಸುತ್ತದೆ. ಆದ್ದರಿಂದ ಧರ್ಮ ಯುದ್ಧಗಳು‌ ಧರ್ಮದ‌ ರಾಜಕೀಯವನ್ನು ಬಹಳ ಬೇಗನೇ ಬಯಲು ಮಾಡಿಬಿಡುತ್ತದೆ. ಮುಹಮ್ಮದ್ ಪೈಗಂಬರರು ಜಿಹಾದ್‌ ಎಂಬ ಪರಿಕಲ್ಪನೆಯನ್ನು ಅನೇಕ‌ ಸತ್ವಶಾಲಿ ನಿಯಮಗಳ ಜೊತೆಗೆ ರೂಪಿಸಿಕೊಟ್ಟಿದ್ದಾರೆ. ಅದು‌ ವಿವಿಧ ಧರ್ಮಗಳ ನಡುವಿನ ಶಾಂತಿ‌ ಸೌಹಾರ್ಧತೆಗೆ ಸಂಬಂಧಿಸಿದಂತೆ ಈಗಲೂ ಪ್ರಸ್ತುತವಾದ ರಾಜಕೀಯ ಸಿದ್ಧಾಂತ. ಆದರೆ, ನಂತರದ ಕಾಲಘಟ್ಟದಲ್ಲಿ‌ ಬಂದ ಮುಸ್ಲಿಮ್ ರಾಜರುಗಳಿಗೆ ಪೈಗಂಬರರ ಒಳನೋಟ ಇರಲಿಲ್ಲ. ಇದು ತಾತ್ವಿಕತೆ ಮತ್ತು ಪ್ರಾಯೋಗಿಕತೆಯ ನಡುವಿನ‌ ವೈರುಧ್ಯ. ಆದ್ದರಿಂದ ಮುಸ್ಲಿಮರ ಪ್ರಮಾದಗಳನ್ನು ಪವಿತ್ರ ಕುರ್ ಆನಿನ ಮೂಲಕ ವಿಮರ್ಶೆಗೆ ಒಳಪಡಿಸಬಹುದು. ಬೈಬಲ್ ಮೂಲಕ ಕ್ರೈಸ್ತರನ್ನೂ, ಭಗವದ್ಗೀತೆ ಯ ಮೂಲಕ ಹಿಂದೂಗಳನ್ನೂ ವಿಮರ್ಶಿಸಬಹುದು. ಧರ್ಮಗ್ರಂಥಗಳು ಆಧ್ಯಾತ್ಮಿಕ ಉಪಾಸನೆಯ ಮಾರ್ಗವಷ್ಟೇ. ಅರವಿಂದ, ಜಿ.ಕೃಷ್ಣ, ಪರಮಹಂಸ, ರಮಣ ಮಹರ್ಷಿ ಮೊದಲಾದ ಗುರುಗಳು ಈ ಮಾರ್ಗದಲ್ಲಿ ಸಂಚರಿಸಿ ಆಧ್ಯಾತ್ಮಿಕ ಸಾಧನೆ ಮಾಡಿದವರು.

ಧರ್ಮದ ಆಧ್ಯಾತ್ಮಿಕ ಶೋಧನೆಯು ರಾಜಕೀಯ ಶೋಧನೆಯಾದಾಗ ಅದು ಶಿಥಿಲಗೊಳ್ಳುತ್ತದೆ. ತೊಗಾಡಿಯಗಳು ಸೃಷ್ಟಿಯಾಗೋದು ಹೀಗೆ. ಬಕೀಂ ಚಂದ್ರ ಚಟರ್ಜಿ ಕೃಷ್ಣನ ದ್ವಿ ವ್ಯಕ್ತಿತ್ವದ ಕುರಿತು ಮಾತನಾಡುತ್ತಾರೆ. ಒಂದು ಪ್ರೇಮದ ಉಪಾಸನೆಯಲ್ಲಿ ನಿರತನಾಗಿರುವ ಕೃಷ್ಣ, ಇನ್ನೊಂದು ಅಪ್ಪಟ ರಾಜಕಾರಣಿ ಕೃಷ್ಣ. ಎರಡನೇ ಕೃಷ್ಣ ಯುದ್ಧವನ್ನು ಗೆಲ್ಲಲು ಸರ್ವ ತಂತ್ರಗಳನ್ನು ಮಾಡುತ್ತಾನೆ. ಅಧರ್ಮ ಅವನಿಗೆ ತಪ್ಪೆನಿಸುವುದಿಲ್ಲ. ಕ್ಷತ್ರಿಯನ ಪರಮ ಧರ್ಮ ಯುದ್ಧವೆಂಬ ಮೌಲ್ಯದ ಹಿಂದೆ ಅಡಗಿ ಆತ ಇದೆಲ್ಲವನ್ನು ಮಾಡುತ್ತಾನೆ. ಆ ಮೂಲಕ ಕೃಷ್ಣ ತನ್ನ ದೈವಿಕ ಪ್ರತೀಕವನ್ನು ಕಳೆದುಕೊಂಡು ರಾಜಕಾರಣಿ ಕೃಷ್ಣನಾಗುತ್ತಾನೆ. ಬಾಲಗಂಗಾಧರ್ ತಿಲಕ್, ಮದನ್ ಮೋಹನ್ ಮೊದಲಾದವರು ಕೃಷ್ಣನಿಂದ ಈ ರಾಜಕೀಯ ಮೌಲ್ಯವನ್ನು ಕಲಿತವರು. ತೊಗಾಡಿಯ ಈ ರಾಜಕೀಯ ಮೌಲ್ಯದ ಅತ್ಯಂತ ಶಿಥಿಲಾವಸ್ಥೆ.
ಬಹುಶಃ ಮಹಾತ್ಮ ಗಾಂಧೀಜಿಯವರು ಈ ರಾಜಕೀಯದ ಅಪಾಯವನ್ನು ಅರಿತರೆಂದು ತೋರುತ್ತದೆ. ಆದ್ದರಿಂದ ತಿಲಕರ ಪ್ರಭಾವಕ್ಕೆ ಒಳಗಾಗುವುದನ್ನು ಗಾಂಧಿ ತಪ್ಪಿಸಿಕೊಂಡರು. ಅದರ ಜೊತೆಗೆ ಏಗುವ ಶಕ್ತಿ ತನಗಿಲ್ಲ ಎಂದು ಗಾಂಧೀಜಿಯವರು ನಂಬಿಕೊಂಡಿದ್ದರು. ಅವರು ಉದ್ದೇಶಪೂರ್ವಕವಾಗಿಯೇ ತಿಲಕರ ಅಂತರ ಕಾಯ್ದುಕೊಂಡಿದ್ದರು. ಮಾತ್ರವಲ್ಲದೆ, ಕೃಷ್ಣನನ್ನು ಒಳಗೊಳ್ಳಲು ಅವರು ಅವನ ಇನ್ನಿತರ ಸಾಧ್ಯತೆಗಳನ್ನು ಹುಡುಕಿಕೊಂಡರು. ಹಿಂದೂ ಧರ್ಮದ ವಿಶೇಷತೆ ಇದು. ಅಲ್ಲಿ ಒಂದಲ್ಲದಿದ್ದರೆ ಇನ್ನೊಂದು ದಾರಿ(option) ಯಿರುತ್ತದೆ. ಗಾಂಧಿ ಇದನ್ನು ತೋರಿಸಿಕೊಟ್ಟರು.


ಜಾಗತಿಕ ಸಂದರ್ಭದಲ್ಲಿ ಮುಸ್ಲಿಮರು ಅಮೆರಿಕದ ಸಾಮ್ರಾಜ್ಯಶಾಹಿತ್ವದ ವಿರುದ್ಧ ಹೋರಾಡುತ್ತಿದ್ದಾರೆ. ಈ ಹೋರಾಟಕ್ಕೆ ಧಾರ್ಮಿಕ ಆಯಾಮವೂ ಇದೆ. ಆದ್ದರಿಂದಲೇ ಅದು ಧರ್ಮ ಯುದ್ಧಗಳಾಗಿ‌ ಬಿಂಬಿಸಲ್ಪಡುತ್ತಿದೆ. ಒಂದು ಹಂತದವರೆಗೆ ಮುಸ್ಲಿಮರ ಈ ಹೋರಾಟ ನ್ಯಾಯಯುತವಾದುದೇ. ಮುಸ್ಲಿಮ್ ಉಮ್ಮತ್ ಎಂಬ ಸಾಮುದಾಯಿಕ ಪ್ರಜ್ಞೆಯು ಅವರಲ್ಲಿ ಒಗ್ಗಟ್ಟು ಮೂಡಿಸುತ್ತಿದೆ ಎನ್ನಬಹುದು. ಆದರೆ, ಭಾರತದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರು. ಆದ್ದರಿಂದ ಮುಸ್ಲಿಮ್ ಕೋಮುವಾದವನ್ನು ಹಿಂದೂ ಕೋಮುವಾದದಂತೆಯೇ ಅಪಾಯಕಾರಿ ಎಂಬ ರೀತಿಯಲ್ಲಿ ನೋಡಬೇಕಿಲ್ಲ. ಬಹುಸಂಖ್ಯಾತ ವರ್ಗಗಳು ಅವರೊಂದಿಗೆ ಸಹೃದಯತೆಯಿಂದ ವರ್ತಿಸಬೇಕು. ಮೀಸಲಾತಿ ಮೊದಲಾದ ಅವಕಾಶಗಳನ್ನು ಅವರಿಗೆ ನೀಡಿ, ಅವರನ್ನು ಮುಖ್ಯವಾಹಿನಿಗೆ ಕರೆ ತರಬೇಕು. ದೌರ್ಭಾಗ್ಯವಶಾತ್, ಹಲವು ಹಿಂದೂಗಳಿಗೆ ಈ ಯೋಚನೆಯಿಲ್ಲ. ನನ್ನ ಮಿತ್ರನೊಬ್ಬ ಹೇಳುತ್ತಿದ್ದ; ಬಾಬರೀ ಮಸೀದಿ ಧ್ವಂಸದ ಬಳಿಕ ಮುಸ್ಲಿಮರು ಶರಣಾಗತ ಮನಸ್ಥಿತಿಯಲ್ಲಿದ್ದಾರೆ. ಹಿಂದೂಗಳ ನಿರ್ದೇಶನಗಳನ್ನು ಪಾಲಿಸಿ ಜೀವನ ನಡೆಸಲು ಅವರು ಸಿದ್ಧರಿದ್ದಾರೆ. ಆದರೆ, ನೀವು ಜಾತ್ಯತೀತರು ಅವರಿಗೆ ಅತಿಯಾದ ಸಲುಗೆ ನೀಡಿ ಬೆಳೆಸುತ್ತಿದ್ದೀರಿ. ಆದರೆ, ನನ್ನ ಉತ್ತರ, ಹಿಂದುಗಳು ಮುಸ್ಲಿಮರಿಗೆ ಮುಖ್ಯವಾಹಿನಿಯಲ್ಲಿ ಹೆಚ್ಚಿನ ಸ್ಥಳಾವಕಾಶ ನೀಡಬೇಕು. ಮುಸ್ಲಿಮರು ಕೂಡ ಈ ಮನಸ್ಥಿತಿಯನ್ನು ಒಳಗೊಳ್ಳಬೇಕು. ಹಿಂದೂ ಕೋಮುವಾದಿಗಳು ತಮ್ಮ ವಿರುದ್ಧ ಧ್ವನಿಯೆತ್ತಲಾಗದ ರೀತಿಯಲ್ಲಿ ದೇಶಪ್ರೇಮವನ್ನು ಪ್ರಕಟಿಸಬೇಕು.


ದೇಶಪ್ರೇಮ ಮತ್ತು ರಾಷ್ಟ್ರೀಯತೆ ಎರಡು ಒಂದೇ ಅಲ್ಲ. ಅವೆರಡು ಬೇರೆ ಬೇರೆ. ದೌರ್ಭಾಗ್ಯವಶಾತ್, ಮುಸ್ಲಿಮರು ಕೇವಲ ದೇಶ ಪ್ರೇಮಿಗಳಾದರೆ ಸಾಲದು, ಅವರು ಹಿಂದೂ ರಾಷ್ಟ್ರೀಯತೆಯ ಭಾಗವಾಗಬೇಕು ಎಂದು ಹಿಂದುತ್ವವಾದಿಗಳು ಒತ್ತಾಯಿಸುತ್ತಿದ್ದಾರೆ. ಇನ್ನೊಂದು ಕಡೆ, ಸೆಕ್ಯೂಲಿಸ್ಟರು ಧರ್ಮದ ವಿವಿಧ ಸಾಧ್ಯತೆಗಳನ್ನು ಕಂಡುಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ರಾಜಕೀಯ ಹಿಂದುತ್ವ ಹಾಗೂ ರಾಜಕೀಯ ಇಸ್ಲಾಮ್ ಕೂಡ ಧರ್ಮದ ಈ ಸಾಧ್ಯತೆಗಳನ್ನು ನಿರಾಕರಿಸುತ್ತವೆ. ಪಾಶ್ಚಾತ್ಯ ಪರಿಕಲ್ಪನೆಯ ಜಾತ್ಯತೀತೆಯೂ ಸಹ ಇದನ್ನೇ ಮಾಡುತ್ತಿದೆ. ಧಾರ್ಮಿಕ ಸೌಹಾರ್ಧತೆ ಸ್ಥಾಪಿಸುವ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಹಿಂದೂ ಧರ್ಮದ ವಿವಿಧ ಸಾಧ್ಯತೆಗಳನ್ನು ಅನ್ವೇಷಿಸಿದರು.
ಗಾಂಧಿ ಒಂದು ನಿಯಮವಲ್ಲ; ಅಪವಾದ. ಪ್ರತಿಯೊಬ್ಬ ಹಿಂದುವು ಕೂಡ ಈ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹಿಂದೂ ಕೋಮುವಾದಿಗಳಿಗೆ ಆಧುನಿಕತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಅವರು ಆಧುನಿಕತೆಯ ಆಯುಧಗಳೊಂದಿಗೆ ಮುಸ್ಲಿಮ್ ಮೂಲಭೂತವಾದಿಗಳನ್ನು ಎದುರಿಸುತ್ತಿದ್ದಾರೆ. ಕ್ರೈಸ್ತ ಪ್ಯಾಸಿಷ್ಟರೂ ಕೂಡ ಇದನ್ನೇ ಮಾಡುತ್ತಿದ್ದಾರೆ. ಹಣ, ತಂತ್ರಜ್ಞಾನ ಎಲ್ಲವನ್ನೂ ಈ ಇಬ್ಬರೂ ಸಾದ್ಯಂತ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಬಡಪಾಯಿ ಮುಸ್ಲಿಮರ ಬಳಿ ಏನೂ ಇಲ್ಲ. ಮಧ್ಯಕಾಲದ ಮೌಲ್ಯಗಳು ಬಿಟ್ಟರೆ ಅವರ ಜೊತೆಗೆ‌‌ ಇನ್ನೇನೂ ಇಲ್ಲ. ಈ ಆಯುಧಗಳೊಂದಿಗೆ ಹೋರಾಡುತ್ತಿರುವ ಮುಸ್ಲಿಮ್ ಮೂಲಭೂತವಾದದ ದಯನೀಯ ಸ್ಥಿತಿಯನ್ನು ಇಂದು ನಾವು ಕಾಣುತ್ತಿದ್ದೇವೆ. ಈ ಮೂಲಭೂತವಾದವನ್ನು ಎದುರಿಸಲು ಹಿಂದೂ ಹೆಚ್ಚು ಆಧುನಿಕವೂ, ಪಾಶ್ಚಾತ್ಯವೂ ಆಗುತ್ತಿದ್ದಾನೆ.
ವಾಸ್ತವದಲ್ಲಿ ಜಾತ್ಯತೀತರು ಧರ್ಮದ ಶಕ್ತಿ ಮತ್ತು ಸಾಧ್ಯತೆಗಳನ್ನು ಅರಿಯುತ್ತಿಲ್ಲ. ಕರ್ನಾಟಕದಲ್ಲಿ ಕೋಮುಗಲಭೆಯಲ್ಲಿ‌ ಹಿಂದೂ‌ ಕೊಲೆಯಾದರೆ ಮುಂದಿನ ಚುನಾವಣೆಯಲ್ಲಿ‌ ಬಿಜೆಪಿಗೆ ಲಾಭವಾಗುತ್ತದೆ. ಮುಸ್ಲಿಮ್‌ ಕೊಲೆಯಾದರೆ ಕಾಂಗ್ರೆಸ್ ಗೆ ಲಾಭವಾಗುತ್ತದೆ. ಆದ್ದರಿಂದ ಹಿಂದೂಗಳ ಪಾರ್ಟಿಯಾದ ಬಿಜೆಪಿಗೆ ಬೇಕಿರುವುದು‌ ಹಿಂದೂಗಳ ಕೊಲೆ. ಜಾತ್ಯತೀತ ಪಕ್ಷಗಳಿಗೆ ಅಲ್ಪಸಂಖ್ಯಾತರ ಕೊಲೆ ಬೇಕಾಗಿದೆ. ಆ ಮೂಲಕ ತಮ್ಮದೇ ಆದ ವೋಟ್ ಬ್ಯಾಂಕ್ ಅನ್ನು ಅವರು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಇದನ್ನು ನಿಲ್ಲಿಸಬೇಕಾದರೆ ಧರ್ಮದ ತಾತ್ವಿಕತೆಯನ್ನು ಬಳಸಿಕೊಂಡು, ಕೋಮುವಾದವನ್ನು‌ ಎದುರಿಸಬೇಕು. ಮುಸ್ಲಿಮರ ನಿರಾಕರಣೆಗೆ ಒಳಗಾದ‌ ಜಾತ್ಯತೀತ‌ ಮುಸ್ಲಿಮ್ ಮುಖಂಡನಿಗೆ ಮುಸ್ಲಿಮರ ನಡುವೆ ಸೌಹಾರ್ಧತೆಯ ಸಂದೇಶವನ್ನು‌ ಬಿತ್ತಲು ಸಾಧ್ಯವಾಗುವುದಿಲ್ಲ. ಕರ್ನಾಟಕದಲ್ಲಿ ಇಬ್ಬರು ಜಾತ್ಯತೀತ ಮುಸ್ಲಿಮ್ ಮುಖಂಡರಿದ್ದರು. ಒಬ್ಬರು ಅಝೀಝ್ ಸೇಠ್, ಇನ್ನೊಬ್ಬರು ಅಬ್ದುಲ್ ನಝೀರ್ ಸಾಬ್. ಎರಡನೇಯವರು ಧರ್ಮದ‌ ಆಚಾರ‌ ವಿಚಾರಗಳಿಂದ ಅಂತರ ಕಾಯ್ದುಕೊಂಡಿದ್ದರು. ಪರಿಣಾಮ ಪ್ರಾಮಾಣಿಕ‌ ಜನ ಸೇವಕರಾದ‌ ನಝೀರ್ ಸಾಬ್ ರನ್ನು ಮುಸ್ಲಿಮರು‌ ಒಪ್ಪಿಕೊಳ್ಳಲಿಲ್ಲ. ಪಾಕಿಸ್ತಾನದ ಪರವಾಗಿದ್ದರೆಂಬ ಆರೋಪ ಹೊತ್ತು ಜೈಲಿಗೆ ಹೋಗಿ‌ ಬಂದಿದ್ದ ಅಝೀಝ್ ಸೇಠ್ ಮುಸ್ಲಿಮರ ಸಹಾನುಭೂತಿಗೆ ಪಾತ್ರರಾದರು. ಮುಸ್ಲಿಮರನ್ನು ಮುಖ್ಯವಾಹಿನಿಯ ಸಮೀಪಕ್ಕೆ ಕರೆ ತರಲು‌ ಇದು ಸಹಾಯಕವಾಯಿತು.
ಆದರೆ, ದೌರ್ಭಾಗ್ಯವಶಾತ್ ಮಾಧ್ಯಮಗಳು ಇದನ್ನೆಲ್ಲಾ ಗಮನಿಸುವುದಿಲ್ಲ. ಸಮಾಜದ ಶಾಂತಿ, ಒಳಿತುಗಳು ವರದಿಯಾಗುವುದಿಲ್ಲ. ಧರ್ಮದ ಪಾಸಿಟಿವ್ ಗುಣವನ್ನು ಬುದ್ಧಿಜೀವಿಗಳು ಹಾಗೂ ಮಾಧ್ಯಮ ಕಾಣುವುದಿಲ್ಲ ಎಂಬುದು ದುಃಖದ ಸಂಗತಿ. ಈ ವಿಚಾರಗಳನ್ನು ಅರಿತು ಹಿಂದೂ ಹಾಗೂ ಮುಸ್ಲಿಮರು ಪರಸ್ಪರ ಸಂವಾದಿಸಬೇಕು.‌ ಹಿಂದೂ ಮುಸ್ಲಿಮರು ಪರಸ್ಪರ ವೈಚಾರಿಕ ಸಂಘರ್ಷವಿಟ್ಟುಕೊಂಡೇ ಸ್ನೇಹಭಾವಗಳನ್ನು ಪ್ರಕಟಿಸಲು ಸಾಧ್ಯವಾಗಬೇಕು. ಈ ರೀತಿಯ ಒಗ್ಗಟ್ಟಿನ ಮೂಲಕ ಕೋಮುವಾದದ ವಿರುದ್ಧ ಹೋರಾಟ ಮಾಡಬೇಕೆಂಬುದು ನನ್ನ ಕನಸು.


ಸಂದರ್ಶನ ನಡೆಸಿದವರು: ಎಂ. ಗಂಗಾಧರನ್, ಸೆಬಾಸ್ಟಿಯನ್ ವಟ್ಟಮಟ್ಟಂ, ಕೆ.ಎಂ ನರೇಂದ್ರನ್, ಎಪಿ ಕುಂಞಾಮು. ಸ್ವಾಲಿಹ್ ತೋಡಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ.


ಎಂ. ಗಂಗಾಧರನ್

ಕೇರಳದ ಪ್ರಮುಖ ಇತಿಹಾಸ ತಜ್ಞರೂ ಸಾಂಸ್ಕೃತಿಕ ವಿಮರ್ಶಕರೂ ಗ್ರಂಥಕರ್ತರೂ ಆಗಿದ್ದಾರೆ. ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಮಲಬಾರ್ ದಂಗೆಯ ಬಗ್ಗೆ ಗಮನಾರ್ಹವಾದ ಅಧ್ಯಯನಗಳನ್ನು ನಡೆಸಿದ್ದಾರೆ.


ಸೆಬಾಸ್ಟಿಯನ್ ವಟ್ಟಮಟ್ಟಂ

ಕ್ಯಾಲಿಕಟ್ ವಿವಿಯ ಚಂಙನಾಶ್ಶೇರಿಯ ಎಸ್.ಬಿ ಕಾಲೇಜಿನಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸೆಬಾಸ್ಟಿಯನ್ ಅವರು
ವಿಮೋಚನಾ ದೇವತಾಶಾಸ್ತ್ರದ ಚಿಂತಕರೂ ಕವಿಯೂ ಆಗಿದ್ದಾರೆ. ಸಾಂಸ್ಕೃತಿಕ ಚರಿತ್ರೆ, ಭಾಷಾಶಾಸ್ತ್ರ, ಗಣಿತಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಲ್ಲಿ ಹಲವಾರು ಪುಸ್ತಕಗಳನ್ನು ರಚಿಸಿ, ಸಂಪಾದಿಸಿದ್ದಾರೆ. ಎಟ್ಟುಮಾನೂರು ಕಾವ್ಯ ವೇದಿಯ ಸಂಚಾಲಕರೂ, ಋತಂ ಮಾಸಿಕದ ಸಂಪಾದಕರೂ ಆಗಿದ್ದಾರೆ.


ಕೆ.ಎಂ. ನರೇಂದ್ರನ್

ಕೆ.ಎಂ. ನರೇಂದ್ರನ್ ನಿರೂಪಕರಾಗಿಯೂ ಕ್ರೀಡಾ ಬರಹಗಾರರಾಗಿಯೂ ಕೇರಳದಲ್ಲಿ ಪ್ರಸಿದ್ಧರು. ಆಲ್ ಇಂಡಿಯಾ ರೇಡಿಯೋದ ಪ್ರಸಾರ ಭಾರತಿಯ ಮುಖ್ಯಸ್ಥ ರು. ಸಾಹಿತ್ಯ ನಿರೂಪಣೆ, ಮಾಧ್ಯಮ ವಿಮರ್ಶೆ, ಸ್ಪೋರ್ಟ್ಸ್ ಜರ್ನಲಿಸಂ ಮೊದಲಾದ ಕ್ಷೇತ್ರಗಳಲ್ಲಿ ಖ್ಯಾತರು. ಹಲವು ಪುಸ್ತಕಗಳನ್ನು ರಚಿಸಿದ್ದಾರೆ.


ಎಪಿ ಕುಂಞಾಮು


ಬರಹಗಾರರು ಮತ್ತು ಅನುವಾದಕರು. ಕೆನರಾ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಭಗವಾನ್ ಗಿದ್ವಾನಿಯವರ The sword of Tippu Sulthan, ಕರೆನ್ ಆರ್ಮ್ ಸ್ಟ್ರಾಂಗ್ ಅವರ Muhammad: biography of prophet, ಅಸ್ಗರ್ ಅಲಿ ಇಂಜಿನಿಯರ್ ಅವರ Islam in contemporary world ಕೃತಿಗಳ ಮಲಯಾಳಂ ಅನುವಾದವು ಇವರ ಪ್ರಮುಖ ಕೊಡುಗೆ. ಮೂಲತಃ ಕೋಯಿಕ್ಕೋಡ್ ಜಿಲ್ಲೆಯವರು.

1 9 10 11 12 13 17