ಇಸ್ಲಾಮಿಕ್ ನಾಗರಿಕತೆ ಮತ್ತು ಕ್ಯಾಲಿಗ್ರಾಫಿ; ಒಂದು ಇಣುಕು ನೋಟ

ಕ್ಯಾಲಿಗ್ರಾಫಿಯನ್ನು ಕಲಾ ಪ್ರಕಾರವಾಗಿ ಅಭಿವೃದ್ಧಿಪಡಿಸುವುದು ಕೇವಲ ಇಸ್ಲಾಮಿಕ್ ಸಂಸ್ಕೃತಿಗೆ ಸೀಮಿತವಾಗಿರದೆ ಜಗತ್ತಿನಾದ್ಯಂತ ತನ್ನ ಕಬಂಧ ಬಾಹುಗಳನ್ನು ವ್ಯಾಪಿಸಿಕೊಂಡಿದೆ. ಚೈನೀಸ್, ಜಪಾನೀಸ್ ಕ್ಯಾಲಿಗ್ರಾಫಿ ಹಾಗೂ ವಾಯುವ್ಯ ಯುರೋಪಿನ ಕೆಲ್ಸ್‌ ಪುಸ್ತಕಗಳನ್ನು ಒಳಗೊಂಡಿರುವ ಬೈಬಲ್ ಕೂಡ ಕ್ಯಾಲಿಗ್ರಾಫಿ ಶೈಲಿಯಲ್ಲಿ ವಿರಚಿತವಾಗಿದೆ. ಆದಾಗ್ಯೂ, ಇಸ್ಲಾಮಿಕ್ ಜಗತ್ತಿನಲ್ಲಿ ಕ್ಯಾಲಿಗ್ರಾಫಿಯನ್ನು ದೊಡ್ಡ ಪ್ರಮಾಣದಲ್ಲಿ, ಆಶ್ಚರ್ಯಕರವಾಗಿ ವೈವಿಧ್ಯಮಯ ಮತ್ತು ಕಾಲ್ಪನಿಕ ರೀತಿಯಲ್ಲಿ ಬಳಸಲಾಗುತ್ತದೆ. ಇದು ಲಿಖಿತ ಪದವನ್ನು ಲೇಖನಿ ಮತ್ತು ಕಾಗದದ ಮಾಧ್ಯಮದ ಮೂಲಕ ಆಕರ್ಷಕವಾಗಿ ಚಿತ್ರಿಸಿ ಜನರ ಬೆರಗಿಗೆ ನಿಮಿತ್ತವಾಗುತ್ತದೆ. ಆದ್ದರಿಂದ ಕ್ಯಾಲಿಗ್ರಾಫಿ, ಇಸ್ಲಾಮಿಕ್ ಕಲೆಯ ನೈಜ ಮಾದರಿಯಾಗಿದೆ.

ಇಸ್ಲಾಮಿಕ್ ಕ್ಯಾಲಿಗ್ರಾಫಿಯ ಪ್ರತಿಭೆ ಅನಂತ ಸೃಜನಶೀಲತೆ ಮತ್ತು ಕೌಶಲ್ಯದಲ್ಲಿ ಮಾತ್ರವಲ್ಲ, ಪಠ್ಯವನ್ನು ತಲುಪಿಸುವ ಮತ್ತು ಔಪಚಾರಿಕ ಸೌಂದರ್ಯದ ಸಂಕೇತಗಳ ಮೂಲಕ ಅದರ ಅರ್ಥವನ್ನು ವ್ಯಕ್ತಪಡಿಸುವ ಕ್ಯಾಲಿಗ್ರಾಫರ್‍ಗಳ ಪ್ರತಿಭೆಯನ್ನು ಊಹಿಸಲು ಸಾಧ್ಯವಾಗುತ್ತದೆ.

ಅರೇಬಿಕ್ ಭಾಷೆ ಮತ್ತು ಕ್ಯಾಲಿಗ್ರಾಫಿಯ ಕಲೆ ಮುಸ್ಲಿಮರಿಂದ ಹೆಚ್ಚು ಗೌರವಿಸಲ್ಪಟ್ಟಿದೆ. ಏಕೆಂದರೆ ಏಳನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ ﷺ ರಿಗೆ ಬಹಿರಂಗಪಡಿಸಿದ ಖುರ್‍ಆನ್‍ನ ಭಾಷೆ ಅರೆಬಿಕ್ ಆಗಿತ್ತು. ಖುರ್‍ಆನ್‍ನಿನ ವಚನಗಳು ಮುಸ್ಲಿಮರಿಗೆ ಪವಿತ್ರವಾಗಿವೆ. ಇದಲ್ಲದೆ, ಸಾಮಾನ್ಯವಾಗಿ ಪುಸ್ತಕಗಳಿಗಿಂತ ಖುರ್‍ಆನ್‍ನ ಉನ್ನತ ಸ್ಥಾನಮಾನವು ಅದರ ಗೌರವಕ್ಕೆ ಕಾರಣವಾಗಿದೆ. ಆದಾಗ್ಯೂ, ಖುರ್‍ಆನ್‍ನ ಪಾವಿತ್ರ್ಯವು ಕ್ಯಾಲಿಗ್ರಾಫಿಯ ಮಹತ್ವವನ್ನು ಒತ್ತಿ ಹೇಳುತ್ತದೆ. ಆದರೆ ಆಂತರಿಕವಾಗಿ ಪರೀಕ್ಷಿಸಿದಾಗ ಯಾವುದೇ ಅರೇಬಿಕ್ ಕ್ಯಾಲಿಗ್ರಾಫಿ ಧಾರ್ಮಿಕವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ, ಕಲಾಕೃತಿಗಳ ಕ್ಯಾಲಿಗ್ರಾಫಿ ಶಾಸನಗಳು ಈ ಕೆಳಗಿನ ಪಠ್ಯಗಳನ್ನು ಒಳಗೊಂಡಿರುತ್ತವೆ:

  • ಖುರ್‍ಆನ್‍ನ ಮಾತುಗಳು
  • ಧಾರ್ಮಿಕ ವಾಕ್ಯಗಳು
  • ಕವಿತೆಗಳು
  • ಆಡಳಿತಾಧಿಗಾರ ಸ್ತುತಿಗಳು
  • ನಾಣ್ಣುಡಿಗಳು
    ಈ ಅಂಶಗಳನ್ನು ಎಲ್ಲಾ ರೀತಿಯ ಕ್ಯಾಲಿಗ್ರಾಫಿಯಲ್ಲಿ ಕಾಣಬಹುದು.

ಪ್ರವಾದಿ ಮುಹಮ್ಮದ್ ﷺ ರ ಕಾಲದಿಂದಲೂ ಅರೇಬಿಕ್ ಅತ್ಯುತ್ತಮ ವಿಶ್ವ ಭಾಷೆಯಾಗಿ ಮಾರ್ಪಟ್ಟಿದೆ. ಅರೇಬಿಕನ್ನು ಧರ್ಮ, ಸರ್ಕಾರ, ವಾಣಿಜ್ಯ, ಸಾಹಿತ್ಯ ಮತ್ತು ವಿಜ್ಞಾನದ ಭಾಷೆಯಾಗಿ ಬಳಸಲಾಗುತ್ತಿತ್ತು. ಕಾಲಾಂತರದಲ್ಲಿ ಅರೇಬಿಕ್ ಲಿಪಿಯನ್ನು ಕೆಲವು ಹೊಸ ಫಾಂಟ್‍ಗಳಿಗೆ ಸೇರಿಸಲಾಯಿತು ಜೊತೆಗೆ ಪರ್ಷಿಯನ್ ಮತ್ತು ಟರ್ಕಿಶ್‍ನಂತಹ ಇತರ ಭಾಷೆಗಳಲ್ಲಿ ಬರೆಯಲು ಬಳಸಲಾಗುತ್ತಿತ್ತು.

ಲಿಪಿಗಳನ್ನು ಹೇಗೆ ಅಭಿವೃದ್ಧಿಪಡಿಸಲಾಗಿದೆ:

ಅರೇಬಿಕ್‍ನ ಅನೇಕ ಸ್ಥಳೀಯ ಭಾಷೆಗಳು ಇಸ್ಲಾಮಿಕ್ ಪೂರ್ವದಲ್ಲಿ ಮಾತನಾಡುತ್ತಿದ್ದರೂ, ಕೆಲವೇ ಕೆಲವು ಬರೆಯಲ್ಪಟ್ಟವು. ಹೆಚ್ಚಿನ ಸಾಹಿತ್ಯ ಮೌಖಿಕವಾಗಿ ಪ್ರಸಾರವಾಯಿತು. ಪ್ರವಾದಿಯ ಮರಣದ ನಂತರ, ಖುರ್‍ಆನ್ ಬರೆಯುವವರೆಗೂ ಮೌಖಿಕವಾಗಿ ಉಳಿಯಿತು. ಇದಕ್ಕಾಗಿ ಅರೇಬಿಕ್ ಲಿಪಿಯನ್ನು ಆಧುನೀಕರಿಸಬೇಕಾಗಿತ್ತು. ಏಳನೇ ಶತಮಾನದ ಅಂತ್ಯದ ವೇಳೆಗೆ ಅರೇಬಿಕ್ ಲಿಪಿಯ ಮೂಲ ರೂಪವನ್ನು ಬಳಸಲಾಗುತ್ತಿತ್ತು. ಉದಾಹರಣೆಗೆ, ಕ್ರಿ.ಶ 691 ರಲ್ಲಿ ನಿರ್ಮಿಸಲಾದ ‘ಜೆರುಸಲೆಮ್ ಡೋಮ್ ಆಫ್ ದಿ ರಾಕ್’ ಅನ್ನು ತೆಗೆದುಕೊಳ್ಳಿ, ಇದು ಇಸ್ಲಾಮಿಕ್ ವಾಸ್ತುಶಿಲ್ಪದ ಉಳಿದಿರುವ ಮೊದಲ ಸ್ಮಾರಕವಾಗಿದೆ. ಪ್ರವಾದಿಯ ಉತ್ತರಾಧಿಕಾರಿಗಳಾದ ಖಲೀಫರು ಮುದ್ರಿಸಿದ ನಾಣ್ಯಗಳ ಮೇಲೆ ಹೊಸ ಬರವಣಿಗೆ ಕಾಣಿಸಿಕೊಂಡಿತು. ಇಸ್ಲಾಂ ಧರ್ಮದ ಏಕ ದೇವೋಪಾಸನೆಯನ್ನು ಘೋಷಿಸಲು ಖುರ್‍ಆನ್ ಪದ್ಯಗಳನ್ನು ಡೋಮ್ ಆಫ್ ದಿ ರಾಕ್ ಮತ್ತು ಆರಂಭಿಕ ಇಸ್ಲಾಮಿಕ್ ನಾಣ್ಯಗಳಲ್ಲಿ ಬಳಸಲಾಗಿದೆ.

ಮೊದಲ ಅಧಿಕೃತ ಕ್ಯಾಲಿಗ್ರಾಫಿ ಶೈಲಿಯನ್ನು ಇರಾಕ್‍ನ ಕೂಫಾ ನಗರದ ಗೌರವಾರ್ಥವಾಗಿ ‘ಕೂಫಿ ಶೈಲಿ’ ಎಂದು ಕರೆಯಲಾಗುತ್ತದೆ. ಇದನ್ನು ಆರಂಭಿಕ ಖುರ್‍ಆನ್ ಹಸ್ತಪ್ರತಿಗಳು ಮತ್ತು ಡೋಮ್ ಆಫ್ ರಾಕ್ ಸೇರಿದಂತೆ ಕೆತ್ತನೆಗಳಲ್ಲಿ ಬಳಸಲಾಗುತ್ತಿತ್ತು. ಈ ಹೊಸ ಕ್ಯಾಲಿಗ್ರಫಿ ಶೈಲಿಯು ಅನೇಕ ಸುಂದರವಾದ ರೂಪಾಂತರಗಳನ್ನು ಒಳಗೊಂಡಿದೆ, ಉದಾಹರಣೆಗೆ ಎಲೆಗಳಿರುವ ಕೂಫಿಕ್ (ಸುರುಳಿಯಾಕಾರದ ಎಲೆಯ ಆಕಾರದಲ್ಲಿ) ಮತ್ತು ಫ್ಲೋರೈಡೇಟೆಡ್ ಕೂಫಿಕ್ (ಹೂವುಗಳ ಆಕಾರದಲ್ಲಿ). ಈ ಎರಡನೆಯ ಕೂಫಿ ಕ್ಯಾಲಿಗ್ರಫಿ ಶೈಲಿಯನ್ನು ಖುರ್‍ಆನ್ ಹಸ್ತಪ್ರತಿಗಳು, ನಾಣ್ಯಗಳು, ವಾಸ್ತುಶಿಲ್ಪದ ಶಾಸನಗಳು ಮತ್ತು ಕುಂಬಾರಿಕೆಗಳು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಬಳಸಲಾಗುತ್ತದೆ.
ಎರಡನೇ ವಿಧದ ಕೂಫಿ ಕ್ಯಾಲಿಗ್ರಾಫಿ ಮಧ್ಯಪ್ರಾಚ್ಯದಲ್ಲಿ ಅಂದರೆ ಬಾಗ್ದಾದ್‍ನಲ್ಲಿ ಅಭಿವೃದ್ಧಿ ಹೊಂದುತ್ತಿರುವಾಗ, ಮುಸ್ಲಿಂ ಸ್ಪೇನ್ ಅಥವಾ ಮೊರಾಕೊದಲ್ಲಿ ಹೊಸ ಶೈಲಿಯು ಹೊರಹೊಮ್ಮುತ್ತದೆ. ಈ ಪಶ್ಚಿಮ ಪ್ರದೇಶದ ಅರೇಬಿಕ್ ಹೆಸರು ಅಲ್ ಮಗ್ರಿಬ್. ಆದ್ದರಿಂದ ಈ ಹೊಸ ಶೈಲಿಯ ಕ್ಯಾಲಿಗ್ರಫಿಯನ್ನು ‘ಮಗ್ರಿಬಿ’ ಎಂದು ಕರೆಯಲಾಯಿತು. ಈ ಕ್ಯಾಲಿಗ್ರಫಿ ಶೈಲಿಯನ್ನು ಇಂದಿಗೂ ಕೆಲವು ಕ್ಯಾಲಿಗ್ರಾಫಿ ಕಲಾವಿದರು ಬಳಸುತ್ತಾರೆ. ಪೂರ್ವ ಇಸ್ಲಾಮಿಕ್ ಜಗತ್ತಿನಲ್ಲಿ ಹದಿಮೂರನೆಯ ಶತಮಾನದ ಹೊತ್ತಿಗೆ ಕೂಫಿ ಶೈಲಿಗಳು ಹೆಚ್ಚಾಗಿ ಅಳಿದುಹೋಗಿದ್ದವು ಮತ್ತು ಅವುಗಳನ್ನು ಬಳಕೆಯಲ್ಲಿರುವ ಹೆಚ್ಚು ವೃತ್ತಾಕಾರದ ಶೈಲಿಗಳಿಂದ ಬದಲಾಯಿಸಲಾಯಿತು.

ಬಹುಶಃ ಹೊಸ ಶೈಲಿಗಳ ಬೆಳವಣಿಗೆಯಿಂದಾಗಿ ಪೂರ್ವದಲ್ಲಿ ಪ್ರಾಣಿಗಳ ಚರ್ಮಕ್ಕೆ ಬದಲಾಗಿ ಕಾಗದವನ್ನು ಬಳಸಲಾಗುತ್ತಿತ್ತು. ಆದ್ದರಿಂದ ಹಸ್ತಪ್ರತಿಗಳು ಮತ್ತು ದಾಖಲೆಗಳಿಗೆ ಪ್ಯಾಪಿರಸ್ ಮುಖ್ಯ ಮಾಧ್ಯಮವಾಯಿತು. ಕಾಗದದ ಮೇಲ್ಮೈಯನ್ನು (ಪಿಷ್ಟದಿಂದ ಮುಚ್ಚಲಾಗುತ್ತದೆ) ಅದು ತುಂಬಾ ನಯವಾದ ಮತ್ತು ಹೊಳೆಯುವವರೆಗೆ ಕಲ್ಲಿನಿಂದ ಲೇಪಿಸಲಾಗುತ್ತಿತ್ತು. ಇದು ಪೆನ್ನಿನ ಬಳಕೆಯನ್ನು ಹೆಚ್ಚು ಸುಲಭಗೊಳಿಸಿತು. (ಪೂರ್ವದ ಭಾಗಗಳಲ್ಲಿ (ಮಗ್ರಿಬ್) ಪ್ರಾಣಿಗಳ ಚರ್ಮಗಳ ಬಳಕೆ ದೀರ್ಘಕಾಲದವರೆಗೆ ಮುಂದುವರೆಯಿತು).

ಮತ್ತೊಂದು ಗಮನಾರ್ಹ ಅಂಶವೆಂದರೆ ಲೇಖನಿ. ಇದು ಬಿದಿರಿನಿಂದ ಮಾಡಲ್ಪಟ್ಟಿದೆ. ಬಿದಿರಿನ ತುದಿಯನ್ನು ಚಾಕುವಿನಿಂದ ಕತ್ತರಿಸುವ ಮೂಲಕ ಲೇಖನಿಯ ಮೊಳೆಯನ್ನು ತಯಾರಿಸಲಾಗುತ್ತದೆ. ಮೊಳೆ, ವಿಭಿನ್ನ ರೀತಿಯಲ್ಲಿ ಕತ್ತರಿಸುವುದು ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ. ಮೊಳೆಯನ್ನು ಓರೆಯಾದ ಕೋನದಲ್ಲಿ ಕತ್ತರಿಸಿದರೆ ವೃತ್ತದಲ್ಲಿ ಕ್ಯಾಲಿಗ್ರಾಫಿಯನ್ನು ಹೆಣೆಯಬಹುದು. ಈ ರಚನೆ ದಪ್ಪ ಹಾಗೂ ತೆಳ್ಳನೆಯ ಪಟ್ಟೆಗಳನ್ನು ರಚಿಸಲು ಸಹಾಯಕಾರಿ. ಕ್ಯಾಲಿಗ್ರಾಫಿ ಕಲೆಗೆ ವಿಶೇಷ ಸೊಬಗು ಮತ್ತು ವೈವಿಧ್ಯತೆಗೆ ಇದು ಅನುವು ಮಾಡಿಕೊಡುತ್ತದೆ. ಲೇಖನಿಯ ಅಗಲವೂ ಮುಖ್ಯವಾಗಿದೆ. ದೊಡ್ಡ ಅಕ್ಷರಗಳಿಗೆ ವಿಶಾಲವಾದ ಮೊಳೆಗಳು ಬೇಕಾಗುತ್ತವೆ. ಆದ್ದರಿಂದ ಉದ್ದೇಶಿಸಿದ ಸಾಲಿನ ಅಗಲಕ್ಕೆ ಮೊಳೆಯ ಅಗಲವು ಅತ್ಯಗತ್ಯ. ಒಟ್ಟಾರೆ ಒಂದು ನಿರ್ದಿಷ್ಟ ಅನುಪಾತದಲ್ಲಿ ಮುಂದುವರಿಯುತ್ತದೆ.

ಮೊಳೆಯ ಅಗಲವನ್ನು ಆಧರಿಸಿದ ಅನುಪಾತ ವ್ಯವಸ್ಥೆಯು ಪ್ರತ್ಯೇಕ ಅಕ್ಷರಗಳ ಆಕಾರಗಳನ್ನು ಮತ್ತು ಸತತವಾಗಿ ಅಕ್ಷರಗಳ ಸಾಪೇಕ್ಷ ಗಾತ್ರಗಳನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಅಕ್ಷರ ಅಲಿಫ್ ಒಂದೇ ಲಂಬ ರೇಖೆಯನ್ನು ಹೊಂದಿರುತ್ತದೆ. ಒಂದು ಶೈಲಿಯಲ್ಲಿ, ಇದು ಕೇವಲ ಮೂರು ಪಟ್ಟು ಅಗಲವಾಗಿರುತ್ತದೆ. ಮತ್ತೊಂದು ಶೈಲಿಯಲ್ಲಿ ಇದು ಏಳು ಪಟ್ಟು ಹೆಚ್ಚಾಗಿರುತ್ತದೆ. ಆದ್ದರಿಂದ ಎರಡನೇ ಶೈಲಿಯಲ್ಲಿ ಅಲಿಫ್ ಅಕ್ಷರ ಬಹಳ ಮುಖ್ಯವಾಗಿದೆ. ಈ ವ್ಯತ್ಯಾಸಗಳು ಅಕ್ಷರ ಸಂಭವಿಸಬಹುದಾದ ವಿಭಿನ್ನ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಎರಡು ಅಕ್ಷರಗಳ ನಡುವಿನ ಉದ್ದದಲ್ಲಿ ಸಾಮರಸ್ಯ ಇದೆ. ಇದು ಗಮನಾರ್ಹ. ಏಕೆಂದರೆ ಅರೇಬಿಕ್ ಲಿಪಿ ಯಾವಾಗಲೂ ಪರಸ್ಪರ ಸಂಬಂಧ ಹೊಂದಿದೆ. ಅಲ್ಲದೆ, ಅರೆಬಿಕ್ ಲಿಪಿ ಮುದ್ರಿತ ಇಂಗ್ಲಿಷ್‍‌ನಂತೆ ವಿಶೇಷವಲ್ಲ.

ಕ್ಯಾಲಿಗ್ರಫಿ ಶೈಲಿಯ ರಚನೆಯ ಮತ್ತೊಂದು ಮೂಲಭೂತ ಅಂಶವೆಂದರೆ ಬೇಸ್‍ಲೈನ್‍ನ ಸ್ವರೂಪ. ಅನೇಕ ಲಿಪಿಗಳಲ್ಲಿ ಅಕ್ಷರಗಳನ್ನು ಬರೆದ ಕಾಲ್ಪನಿಕ ರೇಖೆಯು ಸಮತಲವಾಗಿತ್ತು. ಪ್ರತಿಯೊಂದು ಹೊಸ ಅಕ್ಷರಗಳು ಬೇಸ್‍ಲೈನ್‍ಗಿಂತ ಮೇಲಕ್ಕೆ ಪ್ರಾರಂಭವಾಗುತ್ತವೆ ಮತ್ತು ನಂತರ ಅದನ್ನು ಪೂರೈಸಲು ಎಡಕ್ಕೆ ಇಳಿಯುತ್ತವೆ. ಅರೇಬಿಕ್ ಲಿಪಿ ಇಂಗ್ಲಿಷ್‍ಗೆ ವಿರುದ್ಧವಾಗಿ ಬಲದಿಂದ ಎಡಕ್ಕೆ ವಿಭಿನ್ನವಾಗಿ ಓದಲಾಗುತ್ತದೆ. ಈ ಸಾಲುಗಳನ್ನು ಮೂಲತಃ ಅಧಿಕೃತ ದಾಖಲೆಗಳಲ್ಲಿ ಭದ್ರತಾ ವೈಶಿಷ್ಟ್ಯವಾಗಿ ಪರಿಚಯಿಸಲಾಯಿತು. ಏಕೆಂದರೆ ಅನಧಿಕೃತ ಸೇರ್ಪಡೆಗಳನ್ನು ತಡೆಗಟ್ಟಲು ಸಾಲುಗಳನ್ನು ಒಟ್ಟಿಗೆ ಜೋಡಿಸಬಹುದು. ಈ ವಿಧಾನವನ್ನು ಪರಿಣಾಮಕಾರಿ ಎಂದು ಪರಿಗಣಿಸಲಾಗಿರುವುದರಿಂದ ಈ ವೈಶಿಷ್ಟ್ಯವನ್ನು ಇತರ ಸಂದರ್ಭಗಳಲ್ಲಿ ಬಳಸಲಾಗುತ್ತದೆ.

ಪರಿಕರಗಳು ಮತ್ತು ಬರೆಯುವ ವಿಧಾನಗಳು:
ವಿವಿಧ ಉಪಕರಣಗಳಿಂದ ಕ್ಯಾಲಿಗ್ರಾಫಿಯನ್ನು ಬಳಸಿ ಡಿಸೈನ್‍ಗಳನ್ನು ತಯಾರಿಸಲಾಗುತ್ತದೆ. ಕಾಗದದ ಮೇಲೆ ಪೆನ್ನಿನೊಂದಿಗೆ ಬರೆಯುವ ತಾಂತ್ರಿಕ ಪರಿಣಾಮಗಳು ಇತರ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ ಕ್ಯಾಲಿಗ್ರಫಿಯನ್ನು ಹೆಚ್ಚಾಗಿ ಬಳಸ ತೊಡಗುತ್ತಾರೆ.
ಉದಾಹರಣೆಗೆ, ದಪ್ಪದಿಂದ ತೆಳುವಾದ ರೇಖೆಯವರೆಗಿನ ಸುಂದರವಾದ ಶ್ರೇಣಿಯನ್ನು ಮತ್ತು ಚೌಕಾಕೃತಿಯಲ್ಲಿ ಮೊಳೆಯೊಂದಿಗೆ ಬರೆಯಲಾದ ಉತ್ತಮ ಹಸ್ತಾಕ್ಷರ ನೀವು ನೋಡಬಹುದು. ಕ್ಯಾಲಿಗ್ರಾಫಿ ಕಲಾವಿದರು ಪ್ರಮಾಣ ಫಲಕ ಅಥವಾ ಮಾದರಿ ತೂತು ತಗಡುಗಳಲ್ಲಿ ಬರೆಯುವ ಮೂಲಕ ಸಾಮಾನ್ಯವಾಗಿ ತಮ್ಮ ವಿನ್ಯಾಸಗಳನ್ನು ರಚಿಸುತ್ತಾರೆ.

ಪ್ರಾಣಿಗಳ ಚರ್ಮದ ಮೇಲೆ ಬರೆಯುವಿಕೆ:
ಕಾಗದದ ಆವಿಷ್ಕಾರದ ಮೊದಲು ಪ್ರಾಣಿಗಳ ಚರ್ಮದಲ್ಲಿ ಅತ್ಯುತ್ತಮ ಬರವಣಿಗೆಯನ್ನು ಲಿಖಿತಗೊಳಿಸಲಾಗುತ್ತಿತ್ತು. ಇದನ್ನು ಬರೆಯಲು ತಯಾರಿಸಿದ ಹಾಗೂ ಶುಚಿಗೊಳಿಸಿದ ಪ್ರಾಣಿಗಳ ಚರ್ಮದಿಂದ ನಿರ್ಮಿಸಲಾಗುತ್ತಿತ್ತು. ಶಾಯಿಯಿಂದ ತುಂಬಿದ ಬಿದಿರಿನ ಮೊಳೆಯನ್ನು ಲೇಖನಿಯಾಗಿ ಬಳಸಿ, ಸ್ವಲ್ಪ ಕೋನದಲ್ಲಿ ಕತ್ತರಿಸಿ ಬರವಣಿಗೆಯಲ್ಲಿ ಬಳಸುತ್ತಿದ್ದರು. ಪ್ರಾಣಿಗಳ ಚರ್ಮದಲ್ಲಿನ ಬರವಣಿಗೆಯಲ್ಲಿ ಅಳಿಸಬಹುದು ಅಥವಾ ಅದನ್ನು ಬದಲಾಯಿಸಬಹುದು ಎಂಬ ವಿಶಿಷ್ಟತೆಯನ್ನು ಮೇಳೈಸಿದೆ.

ಕಾಗದದ ಮೇಲೆ ಬರೆಯುವುದು:
ಕ್ಯಾಲಿಗ್ರಾಫಿಯನ್ನು ಲೇಖನಿ ಮತ್ತು ಶಾಯಿಯಿಂದ ಹೊಳಪು ಕಾಗದದ ಮೇಲೆ ಪಿಷ್ಟ ಮತ್ತು ಪಾಲಿಶ್‍ನೊಂದಿಗೆ ಬರೆಯಬಹುದು. ಇದು ಪಠ್ಯಕ್ಕೆ ಉತ್ತಮವಾದ ಹಾಗೂ ನಯವಾದ ಮೇಲ್ಮೈಯನ್ನು ನೀಡುತ್ತದೆ.

ಪಾತ್ರೆಗಳು:
ಕೆಳಗಿನ ಕ್ಯಾಲಿಗ್ರಾಫಿ ಶಾಸನವನ್ನು (ಸಸ್ಯ ವಿನ್ಯಾಸಗಳು) ಆಳವಾಗಿ ಕೆತ್ತಲಾಗಿದೆ. ಈ ವಿಧಾನವನ್ನು ಮಧ್ಯಪ್ರಾಚ್ಯದಲ್ಲಿ ಕ್ರಿ.ಶ 1350 ರಿಂದ 1600 ರ ಆರಂಭದವರೆಗೆ ಹೃಸ್ವ ಅವಧಿಗೆ ಮಾತ್ರ ಬಳಸಲಾಗುತ್ತಿತ್ತು.

ಮರದ ತುಂಡು:
ಮರದ ತುಂಡಿನ ಮೇಲೆ ಅಕ್ಷರಗಳನ್ನು ಕೆತ್ತಿ ನಂತರ ಬಣ್ಣ ಲೇಪಿಸುತ್ತಾರೆ. ಕೆಳಗಿನ ಚಿತ್ರದಲ್ಲಿ ಈಗ ಅಧಿಕ ಬಣ್ಣಗಳು ಕಾಣೆಯಾಗಿವೆ.
ಆದಾಗ್ಯೂ, ಕೆಲವು ಕುರುಹುಗಳು ಉಳಿದಿವೆ.

ಗ್ಲಾಸ್:
ಕೆಳಗೆ ಚಿತ್ರಿಸಿದ ಕಿಟಕಿಯನ್ನು ವಿವಿಧ ಬಣ್ಣಗಳ ಸಣ್ಣ ತುಂಡು ಗಾಜಿನಿಂದ ನಿರ್ಮಿಸಲಾಗಿದೆ. ಅವುಗಳನ್ನು ಪ್ಲ್ಯಾಸ್ಟರ್ ಮುಂತಾದ ಚೌಕಟ್ಟಿನೊಳಗಿನ ಮಾದರಿಗಳಲ್ಲಿ ಜೋಡಿಸಲಾಗುತ್ತದೆ.

ಬಟ್ಟೆಗಳು:
ಮುಸ್ಲಿಂ ಸ್ಪೇನ್‍ನ ರೇಷ್ಮೆ ನೇಕಾರರು ಅರೇಬಿಕ್ ಭಾಷೆಯಲ್ಲಿ ಬರೆದ ಬರವಣಿಗೆಗಳನ್ನು ನಿಖರವಾಗಿ ಬಟ್ಟೆಗಳಲ್ಲಿ ಲಿಖಿತಗೊಳಿಸುತ್ತಿದ್ದರು. ಈ ವಿನ್ಯಾಸಕ್ಕೆ ಹೆಚ್ಚಿನ ಗಮನ ನೀಡಬೇಕು. ‘ನಮ್ಮ ಸುಲ್ತಾನರ ವೈಭವ’ ಎಂಬ ನುಡಿಗಟ್ಟು ವಿನ್ಯಾಸದ ವಿಶಾಲ ಮುದ್ರೆಯೊಳಗೆ ಇದು ಪುನರಾವರ್ತನೆಯಾಗುತ್ತದೆ.

ಲೇಪಿತ ಗಾಜು:
ಬಿಸಿ ಗಾಜನ್ನು ಆಕಾರಕ್ಕೆ ರೂಪಾಂತರಗೊಳಿಸಿದ ತರುವಾಯ ತಣ್ಣಗಾಗಿಸುವ ಮೂಲಕ ದೀಪವನ್ನು ತಯಾರಿಸಲಾಗುತ್ತದೆ. ನಂತರ ದಂತಕವಚ ಬಣ್ಣಗಳು ಮತ್ತು ಚಿನ್ನದ ಲೇಪನವನ್ನು ಸೇರಿಸಲಾಗುತ್ತದೆ. ದಂತಕವಚವು ಬಣ್ಣ ಮತ್ತು ಗಾಜಿನ ಮಿಶ್ರಣವಾಗಿದೆ. ಅದನ್ನು ಕುಲುಮೆಯಲ್ಲಿ ಬಿಸಿ ಮಾಡಿದಾಗ, ದೀಪ ಕರಗಿ ಹೊಂದಿಕೊಳ್ಳುತ್ತದೆ. ಅಲಂಕೃತ ಗಾಜು ದಂತಕವಚದಿಂದ ಅಲಂಕರಿಸಲ್ಪಟ್ಟಿದೆ ಮತ್ತು ಕುಂಚಗಳಿಂದ ಗಿಲ್ಟ್ ಕೂಡ.

ಲೋಹದ ಕೆಲಸ:
ಲೋಹದ ಕೆಲಸಗಾರರು ಹಿತ್ತಾಳೆಯ ಮೇಲ್ಮೈಯ ಸಣ್ಣ ಭಾಗಗಳನ್ನು ತುಂಡರಿಸಿದ ನಂತರ ಅಲ್ಲಿ ಬೆಳ್ಳಿ ಹಾಗೂ ಚಿನ್ನವನ್ನು ತುಂಬಿಸುತ್ತಾರೆ. ಮೃದುವಾಗಿ ಕೆತ್ತಿದ ಲೋಹದ ಮೇಲ್ಮೈಯನ್ನು ತುಂಬಿಸಲು ಅವರು ಕಪ್ಪು ಫಿಲ್ಲರ್‌ ಅನ್ನು ಜೋಡಿಸುವ ಜೊತೆ ಇತರೆ ಉಪಕರಣಗಳಿಂದ ಸೌಂದರ್ಯವನ್ನು ವೃದ್ಧಿಸುತ್ತಾರೆ.

ಕ್ಯಾಲಿಗ್ರಾಫಿ ಅಲಂಕಾರಗಳು:
ಬಹಳ ಸೊಗಸಾಗಿ ಬರೆಯುವುದರೊಂದಿಗೆ ಕ್ಯಾಲಿಗ್ರಾಫಿಯ ಸೌಂದರ್ಯವನ್ನು ಹೆಚ್ಚಿಸಲು ವಿವಿಧ ಮಾರ್ಗಗಳಿವೆ. ಪ್ರಮುಖ ವಾಕ್ಯಗಳನ್ನು ಹಳದಿ ಬಣ್ಣದಲ್ಲೊ ಅಥವಾ ಕಪ್ಪು ಬಣ್ಣವನ್ನು ಹೊರತುಪಡಿಸಿ ಯಾವುದೇ ಬಣ್ಣದಲ್ಲಿ ಸೌಂದರ್ಯ ಪೂರ್ಣವಾಗಿ ಮಾಡಬಹುದು. ಅಕ್ಷರಗಳು ಹಾಗೂ ಪದಗಳನ್ನು ಬಿಡಿ ಬಿಡಿಯಾಗಿ ನಕಲಿಸಬಹುದು ಅಥವಾ ಜೋಡಿಸಿ ವಿನ್ಯಾಸಗೊಳಿಸಬಹುದು. ಕ್ಯಾಲಿಗ್ರಾಫರ್‍ಗಳು ವಿಭಿನ್ನ ಶೈಲಿಗಳು ಅಥವಾ ಪಠ್ಯದ ವರ್ಗಗಳಿಗೆ ವಿಭಿನ್ನ ಗಾತ್ರಗಳು, ಬಣ್ಣಗಳು ಮತ್ತು ಪಠ್ಯ ಶೈಲಿಗಳನ್ನು ಸಂಯೋಜಿಸುತ್ತಾರೆ. (ಆದರೆ ಅವರು ಯಾವಾಗಲೂ ಕ್ಯಾಲಿಗ್ರಾಫಿ ನಿಯಮಗಳನ್ನು ಅನುಸರಿಸುತ್ತಾರೆ)

ಅಲಂಕರಿಸಿದ ಫ್ರೇಮ್‌‌ಗಳು ಹಾಗೂ ಇನ್ನಿತರ ರೇಖೆಗಳ ಸ್ಪಷ್ಟತೆಗೆ ಅಡ್ಡಿಯಾಗುವುದಿಲ್ಲ. ಪಠ್ಯದ ವಿಷಯದಿಂದ ವಿಮುಖವಾಗುವುದಿಲ್ಲ. ಖುರ್‌ಆನ್ ದೈವೀ ವಾಕ್ಯವಾದ್ದರಿಂದ ಇದನ್ನು ಗಮನಿಸುವುದು ಬಹಳ ಮುಖ್ಯ.

ಕ್ಯಾಲಿಗ್ರಫಿ ಕಲಾವಿದರು:
ಇಸ್ಲಾಮಿಕ್ ಸಮಾಜದಲ್ಲಿ ವ್ಯಾಪಕವಾಗಿ ಗುರುತಿಸಿದ ಕಲಾವಿದರಲ್ಲಿ ಒಂದು ಗುಂಪು ಕ್ಯಾಲಿಗ್ರಾಫರ್‌ಗಳು. ಇಂದಿಗೂ ಇದು ಅನೇಕ ಸ್ಥಳಗಳಲ್ಲಿ ಮುಂದುವರಿದು ಪ್ರಖ್ಯಾತವಾಗಿದೆ. ಇದು ಅವರ ಸ್ಥಾನಮಾನ, ಭೋಧನೆಯ ಉತ್ಕೃಷ್ಟತೆ ಮತ್ತು ಕೆಲಸದ ಶ್ರೇಷ್ಠತೆಯನ್ನು ಆಧರಿಸಿದೆ. ಇದರ ಪರಿಣಾಮವಾಗಿ ಒಂದು ಸಾಹಿತ್ಯಿಕ ಸಂಪ್ರದಾಯವು ಅಭಿವೃದ್ಧಿಗೊಂಡಿತು. ಮಾತ್ರವಲ್ಲದೆ ಕ್ಯಾಲಿಗ್ರಫಿಯ ಇತಿಹಾಸ, ಅಧ್ಯಾಪನೆ, ಹಾಗೂ ಗುರು-ಶಿಷ್ಯರ ನಡುವಿನ ಪ್ರಸರಣ ಜಾಲವಾಗಿ ಕಲ್ಪಿಸಲಾಯಿತು. ಒಬ್ಬ ವಿದ್ಯಾರ್ಥಿಯು ತನ್ನ ಶಿಕ್ಷಕ ಒದಗಿಸಿದ ಮಾದರಿಗಳನ್ನು ನಕಲಿಸಲು, ಅಭ್ಯಾಸ ಮಾಡಲು ವರ್ಷಗಳೇ ತೆಗೆದುಕೊಳ್ಳಬಹುದು. ಅವನು/ಅವಳು ಈ ರೀತಿಯಾಗಿ ತತ್ವಗಳು ಮತ್ತು ನಿಯಮಗಳನ್ನು ಕಲಿತಾಗ ಮಾತ್ರ ಕ್ಯಾಲಿಗ್ರಾಫರ್ ಆಗಬಹುದು. ತರಬೇತಿ ಪಡೆದು ಕ್ಯಾಲಿಗ್ರಾಫಿಯಲ್ಲಿ ನಿಪುಣರಾದ ವ್ಯಕ್ತಿಗಳು ನವನವೀನ ರಚನೆಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ಕ್ಯಾಲಿಗ್ರಾಫಿ ಕಲಿಯುವುದು ಇತರ ಉದ್ಯೋಗಗಳಲ್ಲಿ ಕೌಶಲ್ಯ ಗಳಿಸುವಂತೆಯೇ ಇದೆ..

ಕ್ಯಾಲಿಗ್ರಫಿಯನ್ನು ಅಧ್ಯಯನ ಮಾಡಿದ ಅನೇಕರು ಹಸ್ತಪ್ರತಿಗಳ ಮೂಲಕ ಸಂಪಾದಿಸುವಷ್ಟು ವಯಸ್ಸಾದಾಗ ತಮ್ಮ ತರಬೇತಿಯನ್ನು ನಿಲ್ಲಿಸುತ್ತಾರೆ. ಹದಿನೆಂಟನೇ ಮತ್ತು ಇಪ್ಪತ್ತನೇ ಶತಮಾನಗಳ ನಡುವೆ ಇಸ್ಲಾಮಿಕ್ ಜಗತ್ತಿನಲ್ಲಿ ಮುದ್ರಣಾಲಯ ಕ್ರಮೇಣವಾಗಿ ಪ್ರಾರಂಭವಾದರೂ, ಹೆಚ್ಚಿನ ಪುಸ್ತಕಗಳು ಇಸ್ಲಾಮಿಕ್ ಅವಧಿಯಲ್ಲಿ ಕೈಯಿಂದಲೇ ತಯಾರಿಸಲ್ಪಟ್ಟವು. ಎಲ್ಲಾ ಬರಹಗಾರರು ಕ್ಯಾಲಿಗ್ರಾಫರ್‍ಗಳಾಗಿರಲಿಲ್ಲ. ಇದಲ್ಲದೆ, ಕೆಲವು ಜನರು ನಿಯಮಗಳನ್ನು ಪಾಲಿಸದೆ ಅನೇಕ ಪುಸ್ತಕಗಳನ್ನು ವೈಯಕ್ತಿಕ ಶೈಲಿಯಲ್ಲಿ ನಕಲಿಸಿ ಕ್ಯಾಲಿಗ್ರಾಫಿಗೆ ಕುಂದು ತಂದಿದ್ದಾರೆ. ಇನ್ನೂ ಕೆಲವರು ನಿಯಮ ಪಾಲಿಸಿ, ಉತ್ತಮ ಹಾಗೂ ಸ್ಪಷ್ಟವಾದ ಕೈ ಬರಹದಲ್ಲಿ ನಕಲಿಸಿದ ಪುಸ್ತಕವು ಅಮೂಲ್ಯ ಕೊಡುಗೆಯಾಗಿಸಿದ ಮಹಾತ್ಮರೂ ಇದ್ದಾರೆ. ಇತರರು ಸರ್ಕಾರಿ ಕಚೇರಿಯಲ್ಲಿ ಗುಮಾಸ್ತ ಹುದ್ದೆಯಂತಹ ನಿರ್ದಿಷ್ಟ ಉದ್ಯೋಗಗಳು ಪ್ರಾಪ್ತಿಯಾಗಲು ಕ್ಯಾಲಿಗ್ರಾಫಿಯನ್ನು ಅಧ್ಯಯನ ಮಾಡಿದರು ಹಾಗೂ ಆಡಳಿತಗಾರರ ಅಧಿಕೃತ ದಾಖಲೆಗಳನ್ನು ಕ್ಯಾಲಿಗ್ರಾಫಿಯ ವಿಭಿನ್ನ ಶೈಲಿಗಳನ್ನು ಬಳಸಿ ಅವರ ಮೆಚ್ಚುಗೆಗೆ ಪಾತ್ರರಾದರು. ಅಂತಹ ಕೆಲವು ಉದಾಹರಣೆಗಳು ಬಹಳ ಗಮನಾರ್ಹ. ಬರವಣೆಗೆಯ ಶ್ರೀಮಂತಿಕೆ ಹಾಗೂ ಸಂಕೀರ್ಣತೆ ಕ್ಯಾಲಿಗ್ರಾಫಿಯ ವೈಭವಕ್ಕೆ ಬೆಳಕು ಚೆಲ್ಲುತ್ತದೆ.

ಹೆಚ್ಚು ಪ್ರಾವೀಣ್ಯತೆ ಪಡೆದ ಕ್ಯಾಲಿಗ್ರಾಫರ್‍ಗಳು ಅತ್ಯಂತ ಸುಂದರವಾದ ಹಸ್ತಪ್ರತಿಗಳನ್ನು ತಯಾರಿಸಿದರು. ಅವರ ಬರಹಗಳು ಅಮೂಲ್ಯವಾದವು. ಅವರು ಸಾಮಾನ್ಯವಾಗಿ ಸಮಾಜದ ಶ್ರೀಮಂತ ಜನರಿಗೆ, ವಿಶೇಷವಾಗಿ ಸುಲ್ತಾನರು ಮತ್ತು ಇತರ ಆಡಳಿತಗಾರರಿಗಾಗಿ ಕೆಲಸ ಮಾಡಿದರು. ಆಡಳಿತಗಾರರ ಅರಮನೆಯ ಇಲಾಖೆಯಲ್ಲಿ ಪುಸ್ತಕ ತಯಾರಿಕೆ ಮತ್ತು ಸಂಬಂಧಿತ ಕೆಲಸಗಳಿಗಾಗಿ ಅತ್ಯುತ್ತಮ ಚಿತ್ರವನ್ನು ಹೆಚ್ಚಾಗಿ ಮೀಸಲಿಡಲಾಗಿತ್ತು. ಚಿತ್ರಕಲೆ ಪೂರ್ಣಗೊಂಡ ನಂತರ, ಅಲ್ಲಿ ಕೆಲಸ ಮಾಡಿದ ಇತರ ಕಲಾವಿದರು ಮತ್ತು ಕುಶಲಕರ್ಮಿಗಳು ತಮ್ಮ ಚಿತ್ರಿಸಿದ ಆಭರಣಗಳು ಮತ್ತು ಅತ್ಯುತ್ತಮ ಬೈಂಡಿಂಗ್ ಉಪಯೋಗಿಸಿ ಪುಸ್ತಕವನ್ನು ಸಂಪೂರ್ಣಗೊಳಿಸುತ್ತಿದ್ದರು.

ಇತರ ಮಾಧ್ಯಮಗಳಲ್ಲಿಯೂ ಕೃತಿಗಳನ್ನು ರಚಿಸಲು ತಜ್ಞ ಕ್ಯಾಲಿಗ್ರಾಫರ್‍ಗಳನ್ನು ನೇಮಿಸಲಾಯಿತು. ಹಸ್ತಪ್ರತಿಯಲ್ಲಿ ನಿರಂತರ ಪಠ್ಯವನ್ನು ನಕಲಿಸುವುದರಿಂದ ಇದೊಂದು ವಿಭಿನ್ನ ಕೆಲಸವಾಗಿತ್ತು. ಕ್ಯಾಲಿಗ್ರಾಫರ್‍ಗೆ ಲಭ್ಯವಿರುವ ಸ್ಥಳವು ಮನಸ್ಸಿನಲ್ಲಿ ತೃಪ್ತಿಕರವಾಗಿರಬೇಕು ಮತ್ತು ಆ ಜಾಗವನ್ನು ಸಮತೋಲಿತ ರೀತಿಯಲ್ಲಿ ತುಂಬಲು ವಿವಿಧ ಶೈಲಿಯ ಲಿಪಿ ನಿಯಮಗಳ ಪ್ರಕಾರ ಕೆಲಸ ಮಾಡಲು ಅಕ್ಷರಗಳನ್ನು ವಿನ್ಯಾಸಗೊಳಿಸಬೇಕಾಗಿತ್ತು. ನುರಿತ ಕ್ಯಾಲಿಗ್ರಾಫರ್‍ಗಳು ತಯಾರಿಸಿದ ಈ ವಿನ್ಯಾಸಗಳು ಮತ್ತು ಇತರ ಏಕ ಹಾಳೆಗಳನ್ನು ಸಂರಕ್ಷಿಸಲಾಗಿತ್ತು. ಅವುಗಳು ನಂತರದ ಪೀಳಿಗೆಗೆ ಉಪಯುಕ್ತವಾಯಿತು. ನಂತರದ ಕಾಲದಲ್ಲಿ, ಅವುಗಳನ್ನು ಆಲ್ಬಮ್‍ಗಳಾಗಿ ಸಂಗ್ರಹಿಸಲಾಯಿತು. ಪರಿಣಾಮವಾಗಿ, ಕ್ಯಾಲಿಗ್ರಾಫರ್‍ಗಳು ಆಲ್ಬಮ್‍ಗಳಲ್ಲಿ ಸೇರಿಸಲು ವಿಶೇಷ ಹಾಳೆಗಳನ್ನು ತಯಾರಿಸಲು ಪ್ರಾರಂಭಿಸಿದರು. ಚಿತ್ರಗಳ ಶೈಲಿಯಲ್ಲಿ ಕ್ಯಾಲಿಗ್ರಾಫಿಯನ್ನು ಹೆಚ್ಚಾಗಿ ಮನೆಗಳ ಗೋಡೆಗಳ ಮೇಲೆ ತೂಗಿಸಲಾಗುತ್ತಿತ್ತು. ಬೋಧನಾ ಶುಲ್ಕಗಳು ಮತ್ತು ಬರವಣಿಗೆಯ ಆಯೋಗಗಳು ಕೆಲವು ನುರಿತ ಕ್ಯಾಲಿಗ್ರಾಫರ್‍ಗಳು ಸ್ವತಂತ್ರವಾಗಿರಲು ಎಡೆ ಮಾಡಿಕೊಟ್ಟವು. ಆದ್ದರಿಂದ ಇಂದು, ಕೆಲವು ಕ್ಯಾಲಿಗ್ರಾಫರ್‍ಗಳು ಸಾಮಾನ್ಯವಾಗಿ ಸ್ವತಂತ್ರವಾಗಿ ಇರಲು ಬಯಸುತ್ತಾರೆ.

ಮೂಲ: ಜೋರ್ಡಾನ್ ಸುದರ್ಮನ್
ಅನುವಾದ: ಅಶ್ರಫ್ ನಾವೂರು

ಹೃದಯದ ಔಷಧಿಗಳು; ಇಂಡೋ- ಇಸ್ಲಾಮಿಕ್ ವೈದ್ಯಶಾಸ್ತ್ರ ಪರಂಪರೆ

ಸುಗಂಧ ಹಾಗೂ ಹೃದಯ:

ಸುಗಂಧ ಹಾಗೂ ಹೃದಯ ಸಂವೇದನೆಯ ನಡುವಿನ ಸಂಬಂಧವು ಇಸ್ಲಾಮಿಕ್ ವೈದ್ಯಶಾಸ್ತ್ರ ಸಂರಚನೆಯ ಪ್ರಮುಖ ಚರ್ಚಾ ವಿಷಯ. ಭಾರತದಲ್ಲಿ ಗ್ರೀಕ್- ಅರೇಬಿಕ್ (ಯುನಾನಿ) ವೈದ್ಯಶಾಸ್ತ್ರ ವಿಜ್ಞಾನದಲ್ಲಿ ನಿಪುಣರಾದ ತತ್ವಜ್ಞಾನಿ ಇಬ್ನ್ ಸೀನಾರ ಬರಹಗಳು ಈ ವಿಷಯದಲ್ಲಿ ಸುಪ್ರಸಿದ್ಧ. ಅವರ ‘ದಿ ಮೆಡಿಸಿನ್ ಆಫ್ ದಿ ಹಾರ್ಟ್’ (العدوية العقيبية) ಎಂಬ ಗ್ರಂಥ ಗ್ರೀಕ್- ಅರಬ್ ವೈದ್ಯಕೀಯ ಸಂಪ್ರದಾಯದ ಸಂವೇದನೆಯನ್ನು ಕೇಂದ್ರವಾಗಿಟ್ಟು ಹೃದಯದ ಆರೋಗ್ಯ ಮತ್ತು ಸುಗಂಧದ ನಡುವಿನ ಸಂಬಂಧಗಳ ಕುರಿತು ಚರ್ಚಿಸುತ್ತದೆ.

ಆರೋಗ್ಯ ಸಂರಕ್ಷಣೆ ಗ್ರೀಕ್- ಅರಬ್ ವೈದ್ಯಶಾಸ್ತ್ರದ ಪ್ರಮುಖ ಭಾಗವಾಗಿರುವುದರಿಂದ ‘ಹೃದಯ ಸಂರಕ್ಷಣೆ’ ಮುಸ್ಲಿಂ ಜೀವನದ ಒಂದು ಪ್ರಮುಖ ಭಾಗವಾಗಿ ಬದಲಾಗಿ ಹೃದಯದ ಪೋಷಣೆಯಲ್ಲಿ ಸುಗಂಧ ಮುಖ್ಯ ಪಾತ್ರ ವಹಿಸುತ್ತದೆ. ಭಾರತದ ಪ್ರಸಿದ್ಧ ರಾಜ ಆದಿಲ್ ಷಾ ಆಳ್ವಿಕೆಯಲ್ಲಿ ರಚಿಸಲ್ಪಟ್ಟ Itrya-i Nauras Shahi ಎಂಬ ಗ್ರಂಥ ಸಹಿತ ಹಲವಾರು ಕೃತಿಗಳು ಸುಗಂಧ ದ್ರವ್ಯ ‘ಹೃದಯದ ಪ್ರಧಾನ ಆಹಾರ’ ಎಂದು ಹೇಳುತ್ತದೆ.

ಮಧ್ಯಕಾಲೀನ ಮುಸ್ಲಿಂ ಜಗತ್ತಿನಲ್ಲಿ ಸುಗಂಧ ದ್ರವ್ಯಗಳು ‘ಹೃದಯದ ಔಷಧಿ’ ಎಂದು ಪ್ರಸಿದ್ಧಿ ಗಿಟ್ಟಿಸಿದ್ದವು. ಗ್ರೀಕ್- ಅರೇಬಿಕ್ ವೈದ್ಯಕೀಯ ಪರಂಪರೆಯ ಸುಗಂಧ ದ್ರವ್ಯಗಳ ಕಾರ್ಯಚಟುವಟಿಕೆಯು ಮಾನವನ ದೇಹಕ್ಕೆ ಸ್ವಾಭಾವಿಕವಾಗಿ ಅಗತ್ಯವಿರುವ ಘ್ರಾಣ ಸಾಮರ್ಥ್ಯಕ್ಕೆ ಸಂಬಂಧಿಸಿದ ನಿರ್ದಿಷ್ಟ ವಾಸನೆಯನ್ನು ಅನುಭೋಗಿಸಲು ಮತ್ತು ಸಮನ್ವಯಗೊಳಿಸಲು ಹೃದಯವನ್ನು ಸಜ್ಜುಗೊಳಿಸುತ್ತದೆ. ಈ ಸುಗಂಧ ದ್ರವ್ಯಗಳು ಮತ್ತು ಸುಗಂಧದ ಪ್ರತೀ ಪದಾರ್ಥಗಳು ಹೃದಯವನ್ನು ಪ್ರಚೋದಿಸುತ್ತದೆ (Mufrih) ಎಂದು ಇಬ್ನ್ ಸೀನಾ ನಂಬಿದ್ದರು. ಈ ಪ್ರಚೋದನೆಯು ಅವರ ದೂರದೃಷ್ಟಿಯಲ್ಲಿ ಸುಗಂಧವು ಮನುಷ್ಯನ ನೈಸರ್ಗಿಕ ಸಂವೇದನೆಯ ಪ್ರಜ್ಞೆಗೆ ಹೊಂದಿಕೊಂಡಾಗ ಸಂಭವಿಸುವ ಆತ್ಮದ ರಿಫ್ರೆಶರ್ ಕೂಡಾ ಆಗಿದೆ.

ಇಬ್ನ್ ಸೀನಾರ ಪ್ರಕಾರ ಹೃದಯದೊಂದಿಗಿರುವ ‘ಆತ್ಮ ಚೈತನ್ಯ’ (ಅವರು ಅದನ್ನು ರೂಹ್ ಎಂದು ಕರೆಯುತ್ತಾರೆ, ಅದನ್ನು ಆತ್ಮ ಸತ್ವ ಎಂದು ಅನುವಾದಿಸಲಾಗುತ್ತದೆ) ಸುಗಂಧ ದ್ರವ್ಯಗಳನ್ನು ಆಘ್ರಾಣಿಸುವ ಮೂಲಕ ಹೃದಯದ ಕಾರ್ಯವೈಖರಿಗಳನ್ನು ಸಕ್ರೀಯಗೊಳಿಸುತ್ತದೆ. ಈ ಆತ್ಮೀಯ ಚೈತನ್ಯದ ಗಣನೆ ಸುಖಲೋಲುಪತೆಯ ಅಭಿಲಾಷೆಯನ್ನು ಸ್ವಾಧೀನಿಸಿ ಸಂತೋಷದ ಅತೀ ಸಣ್ಣ ಉದ್ದೀಪನದೊಂದಿಗೂ, ಅವಕಾಶಗಳೊಂದಿಗೂ ಸಹ ಪ್ರತಿಕ್ರಯಿಸಲು ಹೃದಯವನ್ನು ತಯಾರು ಮಾಡುತ್ತದೆ.

ಸುಗಂಧ ದ್ರವ್ಯಗಳನ್ನು ಕ್ರೋಢೀಕರಿಸಿ ಆತ ತಯಾರು ಮಾಡಿಟ್ಟ ಸಂದೂಕದಲ್ಲಿ ಸ್ಥಳ ಗಳಿಸಿದ್ದು ‘ಶುದ್ಧ’, ನಿರ್ಮಲ, ಸಂತುಷ್ಟದಾಯಕ ಪರಿಮಳ ಇರುವ ವಾಸನೆಯಿರುವ ಹೂವುಗಳ ಹೆಸರುಗಳನ್ನಾಗಿತ್ತು.
ಆತ್ಮವನ್ನು ಸಂತೋಷದ ಸಂವೇದನಾ ಅನುಭವಕ್ಕೆ ಹಾಗು ಸೌಂದರ್ಯ ಆಸ್ವಾದನೆಗೆ ಯೋಗ್ಯವಾದ ರೀತಿಯಲ್ಲಿ ಕ್ರಮಿಸಲು ಅವೆಲ್ಲವೂ ಸಹಾಯಕವಾಗುವುದು.

ಸುಗಂಧವು ವಾಸನೆಯ ಪ್ರಜ್ಞೆಯನ್ನು ಬಲಪಡಿಸುತ್ತದೆ ಮತ್ತು ಔನ್ನತ್ಯ ಮಟ್ಟದಲ್ಲಿರುವ ಸಂವೇದನೆಯನ್ನು ಆಸ್ವಾದಿಸಲು ಘ್ರಾಣ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಇಬ್ನ್ ಸೀನಾ ಉಲ್ಲೇಖಿಸಿದ್ದಾರೆ. ಸಂವೇದನಾ ಸಾಮರ್ಥ್ಯ ಬಲಗೊಂಡಾಗ ರುಚಿ ಮೊಗ್ಗುಗಳು (zauq), ಸಿಹಿ ಪದಾರ್ಥ ಹಾಗೂ ಘ್ರಾಣ ಗ್ರಂಥಿಗಳಿಂದ ತೃಪ್ತಿ ಮತ್ತು ಸಂತೋಷದ ಅನುಭೂತಿ ಪ್ರಾಪ್ತಿಯಾಗುತ್ತದೆ..’ ಒಟ್ಟಿನಲ್ಲಿ, ಸುಗಂಧ ಆತ್ಮವನ್ನು ಶುದ್ಧೀಕರಿಸಲ್ಪಡುವ ಇಂದ್ರಿಯದೊಂದಿಗೆ ಸಾಮರಸ್ಯವಿರುವ ಉತ್ಪನ್ನವಾಗಿದೆ. ನೈಸರ್ಗಿಕವಾಗಿ ಸಿಗುವ ಸುಗಂಧ ದ್ರವ್ಯ ಉದ್ಯಾನದಂತಹ ಆಹ್ಲಾದಕರ ವಾತಾವರಣದಿಂದ ಮಾತ್ರ ದೊರಕಬಹುದು. ಇದರ ಅನುಪಸ್ಥಿತಿಯಿದ್ದರೆ ಮೂಗಿಗೆ ಕೊಳೆತ ವಾಸನೆ ಬಡಿದು ಅಂತಹಾ ಸ್ಥಳಗಳಲ್ಲಿ ಸಂವೇದನಾ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಸಂತೋಷವನ್ನು ಸೃಷ್ಟಿಸುವಲ್ಲಿ ವಿಫಲವಾಗುತ್ತದೆ.

ಇಂಡೋ- ಇಸ್ಲಾಮಿಕ್ ಸುಗಂಧ ಪರಂಪರೆ..

ಭಾರತದ ಮುಸ್ಲಿಂ ವೈದ್ಯಕೀಯ ವಿದ್ವಾಂಸರು ಭಾರತದಲ್ಲಿ ಹುಟ್ಟಿದ ಮತ್ತು ಭಾರತೀಯ ಸಂಪ್ರದಾಯದ ಭಾಗವಾಗಿರುವ ಹೂವುಗಳನ್ನು ಸಂಶೋಧಿಸಿದ್ದಾರೆ. ಭಾರತದಲ್ಲಿ ಅನೇಕ ಪರಿಮಳಯುಕ್ತ ಹೂವುಗಳು ಪ್ರಾಣಾಯ, ಕಾಮ ಹಾಗೂ ಮದನಾ ಎಂಬ ದೇವರುಗಳ ಹೆಸರಿಡಲಾಗಿದೆ. ಆ ಹೆಸರುಗಳು ಸುಗಂಧವನ್ನು ಉತ್ತೇಜಿಸುತ್ತದೆ ಎಂದು ಮನದಟ್ಟು ಮಾಡಬಹುದು. ಉದಾಹರಣೆಗೆ ‘ಮದನ್ ಮಾಸ್ಟ್’ ಎಂಬ ಹೆಸರು. ಈ ಪದವು ಲೈಂಗಿಕ ಪ್ರಚೋದನೆಗೆ ಕಾರಣವಾಗುವ ಗೆಡ್ಡೆಯ ವರ್ಗಕ್ಕೆ ಸೇರಿದ ಸಸ್ಯ (Amorphophallus Campanulatus) ಎಂಬ ಅರ್ಥ ನೀಡುತ್ತದೆ. ಇದಲ್ಲದೆ, ಗುರಿಯನ್ನು ಮರೆಮಾಚಿ ಪ್ರಣಯಾಸ್ತ್ರ ಸ್ಪರ್ಶಿಸುವ ಮದನಾ ದೇವರಂತೆ, ಎಲೆಗೊಂಚಲುಗಳಲ್ಲಿ ಅಡಗಿ ಸೇಬಿನಂತೆ ಪರಿಮಳ ಹರಡುವ ‘ಮನೋರಂಜಿತ’ (ಪೊದೆಸಸ್ಯ) ಎಂಬ ಅರ್ಥವೂ ಇದೆ. ಭಾರತೀಯ ಸಂಸ್ಕೃತಿಯಲ್ಲಿ ಪರಿಮಳಯುಕ್ತ ಸಸ್ಯ ಪ್ರಭೇದಗಳನ್ನು ಹೂವುಗಳ ಮಕರಂದವನ್ನು ಸೂಚಿಸಲು ಮಧು (ಜೇನುತುಪ್ಪ) ಎಂಬ ಪದದೊಂದಿಗೆ ಹೆಚ್ಚಾಗಿ ಸಂಯೋಜಿಸಲಾಗುತ್ತದೆ. ಉದ್ದವಾಗಿ ಹಬ್ಬುವ ಹಾಗಲ ಕಾಯಿ ಬಳ್ಳಿಗಿಡದ ಬದಲಾಗಿ ‘ಮಧು ಮಲಾತಿ’ ಎಂಬ ಹೆಸರನ್ನು ಬಳಸಲಾಗುತ್ತದೆ. ‘ಮಾಧವಿ’ ಎಂಬ ಹೆಸರನ್ನು ಇನ್ನೊಂದು ಬಳ್ಳಿಗಿಡವಾದ ‘Sphenodesme paniculata’ ಎಂಬ ಸಸ್ಯವರ್ಗದ ಪರ್ಯಾಯವಾಗಿ, ‘ಮಧುಕ್ಕಾ ಇಂಡಿಕಾ’ ಎಂಬ ಹೆಸರು ‘Madhuca longifolia’ ಎಂಬ ರೂಕ್ಷ ಗಂಧವುಳ್ಳ ಒಂದು ಔಷಧ ಸಸ್ಯದ ಪರ್ಯಾಯವಾಗಿ ಉಪಯೋಗಿಸಲಾಗುತ್ತದೆ. ಇದಲ್ಲದೆ, ಸುಗಂಧ ಸಸ್ಯಗಳಿಗೆ ಸಂಭಂದಪಟ್ಟ
ಇಂಡೋ- ಇಸ್ಲಾಮಿಕ್ ಹಿನ್ನೆಲೆಯಲ್ಲಿ ವಾಸನೆ (aroma) ಮತ್ತು ರುಚಿಗೆ (taste) ಪರಿಮಳಯುಕ್ತ ಹೂವುಗಳ ಹೆಸರುಗಳನ್ನು ಉಲ್ಲೇಖಿಸಿರುವುದನ್ನು ಗಮನಿಸಬಹುದು.

ಭಾರತದಲ್ಲಿ ಸುಗಂಧ ಬಗ್ಗೆ ಬರೆದ ಪ್ರಮುಖ ಪುಸ್ತಕಗಳಲ್ಲಿ ಒಂದು ‘ಇಥರಿಯಾ ನುಸ್ರತ್ ಶಾಹಿ’. ಅನೇಕ ಸುಗಂಧ ದ್ರವ್ಯದ ಮಿಶ್ರಣ ಹಾಗೂ ರುಚಿ ಹೃದಯಕ್ಕೆ ಸಂತೋಷ ನೀಡುವಲ್ಲಿಯೂ, ಮಾನಸಿಕ ಸಮಾಧಾನ‌ ಸಿಗುವುದರಲ್ಲಿಯೂ ಸಂಶಯವಿಲ್ಲ ಎಂದು ಈ ಕೃತಿ ಪ್ರತಿಪಾದಿಸುತ್ತದೆ. ಮೌಲಾನಾ ಹಬೀಬ್ ಷರೀಫ್‌ರ ಪುತ್ರ ಸುಗಂಧ ದ್ರವ್ಯದ ವ್ಯಾಪಾರಿ ನಿಝಾಮುದ್ದೀನ್ ಮಹ್ಮೂದ್‌ರ ವಿವಿಧ ಗ್ರಂಥಗಳನ್ನು ಆಧರಿಸಿ ಈ ಗ್ರಂಥವನ್ನು ರಚಿಸಲಾಗಿದೆ. ‘ಇಥರಿಯಾ ನುಸ್ರತ್ ಶಾಹಿ’ಯ ಹಸ್ತಪ್ರತಿ ಅಂದಿನ ಬಿಜಾಪುರದ ಆಡಳಿತಾಧಿಕಾರಿ ಎರಡನೇ ಇಬ್ರಾಹಿಂ ಆದಿಲ್ ಷಾಗೆ ಉಡುಗೊರೆಯಾಗಿ ನೀಡಿದ್ದರು. ಮೂಲ ಗ್ರಂಥವು ”ನಿನ್ನ ಔದಾರ್ಯವನ್ನು ಹಾತೊರೆಯುವ ಪ್ರತಿಯೊಂದು ಹೃದಯಕ್ಕೆ ನಿನ್ನ ಭವನದ ಸುಗಂಧದಿಂದ ಅಹರ್ನಿಶಿಯಾಗಿ ಅನುಗ್ರಹಿಸಬೇಕು..” ಎಂಬ ದೈವೀ ವಾಕ್ಯದಿಂದ ಪ್ರಾರಂಭವಾಗುತ್ತದೆ. ದುರದೃಷ್ಟವಶಾತ್, ಪುಸ್ತಕದ ಬರವಣಿಗೆಯ ನಿಖರವಾದ ಸಮಯ ಗುರುತಿಸಿದ ಪುಟಗಳು ಕಳೆದುಹೋಗಿವೆ. ಆದಾಗ್ಯೂ, ಎರಡನೇ ಆದಿಲ್ ಷಾಗೆ ಸಮರ್ಪಿತವಾದ ಕೃತಿಯನ್ನು ಹದಿನೇಳನೇ ಶತಮಾನದಲ್ಲಿ ಬರೆಯಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.

ಎರಡು ಶತಮಾನಗಳ ಕಾಲ ಆದಿಲ್ ಷಾ ರಾಜವಂಶವು 1686 ರಲ್ಲಿ ಮೊಘಲ್ ಸಾಮ್ರಾಜ್ಯ ವಶಪಡಿಸಿಕೊಳ್ಳುವವರೆಗೂ ಭಾರತದ ಸಂಪೂರ್ಣ ಪಶ್ಚಿಮ ಭಾಗವನ್ನು ‘ಬಿಜಾಪುರ’ ತನ್ನ ರಾಜಧಾನಿಯಾಗಿ ಮಾಡಿ ಸಮೃದ್ಧವಾಗಿ ಆಳಿದವು. ಇದು ಪೂರ್ವ ಆಧುನಿಕ ಕಾಲದಲ್ಲಿ ಡೆಕ್ಕನ್ ಪ್ರದೇಶದಲ್ಲಿ ಗೋಲ್ಕೊಂಡಾದಂತೆಯೇ ವೈವಿಧ್ಯಮಯ ಮತ್ತು ಬಹುತ್ವವಾದಿ ಸಮಾಜದ ಸೃಷ್ಟಿಗೆ ಹೆಚ್ಚಿನ ಕೊಡುಗೆ ನೀಡಿದ ನಗರವಾಗಿದೆ.

ಎರಡನೇ ಸುಲ್ತಾನ್ ಆದಿಲ್ ಷಾ ನನ್ನು ‘ನವರಸ್ ಷಾ’ (ನವದ್ರವ್ಯಗಳ ರಾಜ) ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದರು. ದಕ್‌ನೀ ಉರ್ದುವಿನಲ್ಲಿ Nauras ಎಂಬ ಪದದ ಅರ್ಥ ಒಂಭತ್ತು ರುಚಿ, ಒಂಭತ್ತು ಭಾವನಾತ್ಮಕ ಶೈಲಿ ಹಾಗೂ ಒಂಭತ್ತು ಕಾವ್ಯಾತ್ಮಕ ಶೈಲಿಯಾಗಿದೆ ಎಂದು ಸುಪ್ರಸಿದ್ಧ. ಈ ಪದ ಭಾರತೀಯ ಸೌಂದರ್ಯ ಶಾಸ್ತ್ರದ ಮೂಲ ಪರಿಕಲ್ಪನೆಯಾದ ‘ರಸ’ ದಿಂದ ಪಡೆಯಲಾಗಿದೆ. ಆದ್ದರಿಂದಲೇ ಈ ಪದ ಸುಲ್ತಾನನಿಗೆ ಭಾರೀ ಅಪ್ಯಾಯಮಾನವಾದ್ಯವು ಎಂದು ಊಹಿಸಬಹುದು. ಕ್ರಿ.ಶ 1603 ರಲ್ಲಿ ಖುದ್ದಾಗಿ ಸುಲ್ತಾನನೇ ನಿರ್ಮಿಸಿದ ಸುಂದರ ನಗರಕ್ಕೆ ‘ನವರಸ್ ಪುರ’ ಎಂದು ನಾಮಕರಣ ಮಾಡಿ, ಸಂಗೀತ ಮಂಟಪಗಳಿಂದ ಅಲಂಕೃತವಾದ ಹೃದ್ಯ ಭಾಗಗಳನ್ನು ‘ನೌರಸ್ ಮಹಲ್’ ಎಂದು ಕರೆದರು. ಈ ಪದವು ಸುಲ್ತಾನನ ‘ಕಿತಾಬೇ ನವರಸ್’ ಎಂಬ ಸ್ತುತಿ ಗೀತೆಗಳ ಶೀರ್ಷಿಕೆಯಲ್ಲೂ ಕಂಡು ಬರುತ್ತದೆ. ದಕ್ಕನೀ ಉರ್ದುವಿನಲ್ಲಿ ರಚಿಸಲ್ಪಟ್ಟ ಈ ಗ್ರಂಥದಲ್ಲಿ ಭಾರತೀಯ ಸಂಗೀತ ಶಾಸ್ತ್ರದ ಒಂಭತ್ತು ಕಾವ್ಯಾತ್ಮಕ ಶೈಲಿಯ ಕುರಿತು ಪರಾಮರ್ಶೆಯಿದೆ. ಈ ಕಾರಣಗಳಿಗಾಗಿ ಸುಗಂಧ ದ್ರವ್ಯಗಳ ಕುರಿತು ಬರೆಯಲ್ಪಟ್ಟ ಈ ಕೃತಿಯ ವಿಷಯಗಳಿಗಾಗಿ ಹೆಚ್ಚು ಅಲೆದಾಡಬೇಕಾಗಿಲ್ಲ.

ಆದಿಲ್ ಷಾರನ್ನು ಕಲೆ ಮತ್ತು ಸಂಗೀತ ಪ್ರೋತ್ಸಾಹಿಸಿದ ವ್ಯಕ್ತಿ ಎಂದು ಇತಿಹಾಸ ಬಣ್ಣಿಸುತ್ತಿದೆ. ಭಾರತೀಯ ಸಂಗೀತದ ಎಲ್ಲಾ 64 ಪ್ರಕಾರಗಳಲ್ಲಿ ಪರಿಣಿತರಾಗಿದ್ದ ಸುಲ್ತಾನ್ ‌ರನ್ನು ಜಗದ್ಗುರು (Universal teacher) ಎಂದು ಹಿಂದೂ ಪ್ರಜೆಗಳು ಸಂಬೋಧಿಸುತ್ತಿದ್ದರು. ಬಹುತೇಕ ಅದೇ ಅರ್ಥ ಬರುವ ‘ಉಸ್ತಾದೇ ಝಮಾನ್’ ಎಂದು ಗ್ರಂಥಕರ್ತ ಮೂಲ ಕೃತಿಯಲ್ಲಿ ದಾಖಲಿಸಿದ್ದಾರೆ.

ಕನ್ನೌಜ್, ಭಾರತದ ಸುಗಂಧ ದ್ರವ್ಯದ ರಾಜಧಾನಿಯೆಂದು ಖ್ಯಾತಿ ಪಡೆದಿದೆ. ಇದು ಉತ್ತರಪ್ರದೇಶದ ಒಂದು ಕುಗ್ರಾಮ.
ಕನ್ನೌಜ್ ಸುಗಂಧ ದ್ರವ್ಯದ ಐತಿಹ್ಯಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಸಾವಿರಾರು ವರ್ಷಗಳಿಂದ ಕನ್ನೌಜ್ ಗ್ರಾಮದಲ್ಲಿ ಸುಗಂಧ ದ್ರವ್ಯ ವ್ಯವಹಾರ ಚಾಲ್ತಿಯಲ್ಲಿದೆ. ‘ಇದು ಸಾವಿರಾರು ವರ್ಷಗಳಿಂದ ದೇಶದ ಪರಿಮಳಯುಕ್ತ ನಗರವಾಗಿದೆ’ ಎಂದು ಇತಿಹಾಸಕಾರರು ಹೇಳುತ್ತಾರೆ.

ಸುಗಂಧ ದ್ರವ್ಯ ಉತ್ಪಾದನಾ ಕೌಶಲ್ಯವನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗುತ್ತದೆ. ಕನ್ನೌಜ್, ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸುಗಂಧ ದ್ರವ್ಯ ಮಾರುಕಟ್ಟೆಯನ್ನು ಹೊಂದಿದೆ.

ಮೂಲ- ಅಲಿ ಅಕ್ಬರ್ ಹುಸೈನ್
ಅನು- ಅಶ್ರಫ್ ನಾವೂರು

ಇಸ್ಲಾಮೀ ಕಲೆಯ ಅಮೂರ್ತ ಆಯಾಮಗಳು-2

ಭಾಗ – 2

ಸ್ನೇಹ, ಸೌಂದರ್ಯ, ಮತ್ತು ಇಸ್ಲಾಮಿಕ್‌ ಕಲೆ

ಖುರ್‌ ಆನಿನಲ್ಲಿ, ಒಟ್ಟಾರೆ ಇಸ್ಲಾಮಿಕ್‌ ಪರಂಪರೆಯಲ್ಲಿ ಮತ್ತು ನಮ್ಮ ನಿತ್ಯ ಬದುಕಿನಲ್ಲಿ ಕೂಡ ಸೌಂದರ್ಯ ಮತ್ತು ಸ್ನೇಹ ಪರಸ್ಪರ ತಳುಕು ಹಾಕಿಕೊಂಡಿರುವಂತದ್ದು. “ದೇವರು ಸೌಂದರ್ಯಪೂರ್ಣನು ಹಾಗೂ ಸೌಂದರ್ಯವನ್ನು ಮೆಚ್ಚುವಂತವನು” ಎಂದು ಹದೀಸ್‌ ಸಾರಿದ್ದರೆ, ಖುರ್‌ ಆನ್‌ ಆಗಾಗ್ಗೆ “ ದೇವರು ಸುಂದರಮಯ ಕಾರ್ಯಗಳನ್ನು ಮಾಡುವವರನ್ನು ಇಷ್ಟಪಡುತ್ತಾನೆ” ಎಂದು ಘೋಷಿಸಿದೆ. ಇಮಾಮ್‌ ಗಝ್ಝಾಲಿ ಮತ್ತು ಇಬ್ನುಸೀನರಂತ ಇಸ್ಲಾಮೀ ಚಿಂತಕರು “ಪ್ರೀತಿ” ಎಂಬ ಪರಿಕಲ್ಪನೆಯನ್ನು “ ಉತ್ತಮ ಹಾಗೂ ಸುಂದರವಾದ ಕಾರ್ಯಗಳೆಡೆಯಿರುವ ಒಂದು ಒಲವು” ಎಂದೇ ವಿಶ್ಲೇಷಿಸಿದ್ದಾರೆ.

ಈ ನಿಟ್ಟಿನಲ್ಲಿ, ಇಸ್ಲಾಮೀ ಕಲೆಯ ಸೌಂದರ್ಯ ಮಾನವಿಕ ಹಾಗೂ ದೈವಿಕ ಪ್ರೇಮವನ್ನು ಬರಸೆಳೆಯುತ್ತದೆ. ಇಸ್ತಂಬೂಲ್‌ ಅಥವಾ ಇಸ್ಫಹಾನಿನ ಮಸೀದಿಯಲ್ಲಿ ನಮಾಜು ಮಾಡುವಾಗ ಅಥವಾ ಸುಮ್ಮನೆ ಸುತ್ತಮುತ್ತ ತಿರುಗಾಡುವಾಗ ಪ್ರೇಮದ ಅನುಭವ ಪಡೆಯುವುದಂತೂ ಖಂಡಿತ. ಸ್ನೇಹ ಮತ್ತು ಸೌಂದರ್ಯದ ಪ್ರಸ್ತುತ ಕೋಮಲ ಸಾನ್ನಿಧ್ಯವು ಸಕೀನತ್‌ ಗೆ –ಪವಿತ್ರ ದೈವಿಕ ಸಾನ್ನಿಧ್ಯದಿಂದ ಉಂಟಾಗುವ ಆಳವಾದ ಶಾಂತಸ್ಥಿತಿ – ಕಾರಣವಾಗುತ್ತದೆ. ಎಲ್ಲಾ ಪುರಾತನ ಮಸೀದಿಗಳ ವಾಸ್ತುಶಿಲ್ಪ ಇದೇ ಗುಣವನ್ನು ಹೊಂದಿದೆ. ಅವುಗಳ ಸಂರಚನೆಯ ಸಾಮರಸ್ಯ ಆ ಸ್ಥಳದ ಬರಕತ್‌ (ಪವಿತ್ರ ಸಾನ್ನಿಧ್ಯ) ನ ಮೂರ್ತ ಅನುಭವವನ್ನು ಒದಗಿಸುತ್ತದೆ, ಆ ಮೂಲಕ ನಮ್ಮ ಆತ್ಮದ ಸಮತೋಲನವನ್ನು ಕಾಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಇನ್ನು ಸಾಹಿತ್ಯ ಕಲಾಕೃತಿಗಳನ್ನು ತಗೆದು ನೋಡೋಣ. ಪ್ರೀತಿಯೊಂದಿಗಿನ ಇಸ್ಲಾಮೀ ನಾಗರಿಕತೆಯ ಸಂಬಂಧ ಎಷ್ಟೊಂದು ಗಾಢವಾಗಿದೆಯೆಂದರೆ, ತತ್ವಜ್ಞಾನ, ಕಾನೂನು, ನ್ಯಾಯಶಾಸ್ತ್ರ, ದೇವಶಾಸ್ತ್ರ ಮತ್ತು ಗಣಿತಶಾಸ್ತ್ರ ಮುಂತಾದ ಸಕಲ ಜ್ಞಾನಶಾಖೆಗಳಲ್ಲಿ ಮುಸ್ಲಿಮರು ರಚಿಸಿದ ಬೃಹದ್ಗ್ರಂಥಗಳು ಪ್ರೇಮದ ಸಾಲುಗಳಿಂದ ತುಂಬಿ ತುಳುಕಿದೆ. ಇತ್ತೀಚಿನ ವರೆಗೂ, ಎಲ್ಲಾ ಸಾಂಪ್ರದಾಯಿಕ ಇಸ್ಲಾಮಿಕ್‌ ಸಾಹಿತ್ಯ ಕಲಾಕೃತಿಗಳನ್ನೂ ಹಾಗೂ ನೈಜತೆಯ ಗ್ರಹಿಕೆಯನ್ನೂ ಪ್ರೀತಿಯ ಸಂಸ್ಕ್ರತಿ ಅಗಾಧವಾಗಿ ಆವರಿಸಿಕೊಂಡಿದೆ. ಇಬ್ನುಸೀನರಂಥ ತತ್ವಜ್ಞಾನಿ ವಿಜ್ಞಾನಿಗಳಿಗೆ ಪ್ರೀತಿ ಪ್ರೇಮವೆಂಬುದು ಕಲ್ಲಿನಿಂದ ಹಿಡಿದು ಮಲಕ್ ಗಳವರೆಗಿನ ಸಕಲ ಸೃಷ್ಟಿಗಳನ್ನು ಕ್ರಿಯಾಶೀಲಗೊಳಿಸುವ ಚೈತನ್ಯವಾಗಿದೆ.

“ಇಹ್ಸಾನ್‌” ಮತ್ತು ಅದರೊಂದಿಗೆ ನಿಕಟ ಸಂಬಂಧ ಹೊಂದಿದ ಇಖ್ಲಾಸ್‌ ಎಂಬೀ ವಿದ್ಯಮಾನಗಳ ಪೋಷಣೆಗೆ ಅತ್ಯಂತ ಅನಿವಾರ್ಯವಾದ ಸಂಗತಿಯಾಗಿದೆ ಪ್ರೇಮವೆಂಬುದು. ಹದೀಸ್‌ ಕಲಿಸುವುದು ಹೀಗೆ: “ ಅಲ್ಲಾಹು ಮತ್ತು ಆತನ ರಸೂಲರು ನಿಮಗೆ ಎಲ್ಲಕ್ಕಿಂತ ಹೆಚ್ಚಾಗಿ ಪ್ರಿಯವಾಗುವ ತನಕ ನಿಮ್ಮಲ್ಲಿ ಯಾರೂ ಪರಿಪೂರ್ಣ ವಿಶ್ವಾಸಿಯಾಗಲಾರರು”. ಪ್ರಸ್ತುತ ನಿಷ್ಕಾಮ ಪ್ರೀತಿ ಇಲ್ಲದಿದ್ದಲ್ಲಿ, ನಮ್ಮ ಕರ್ಮ ಮತ್ತು ಆರಾಧನೆಗಳು ಒಂದೋ ರಿಯಾ (ಡಾಂಭಿಕತೆ) – ಇದನ್ನು ಪ್ರವಾದಿ (ಸ) ಸಣ್ಣ ಅಥವಾ ಗುಪ್ತ ಶಿರ್ಕ್‌ ಎಂದು ಕರೆದಿದ್ದಾರೆ – ಅಥವಾ ಸ್ವಾರ್ಥ ಪ್ರೇರಿತ ಪ್ರತಿಫಲಾಂಕ್ಷೆ ಅಥವಾ ಶಿಕ್ಷೆಯಿಂದ ಪಾರಾಗುವ ಬಯಕೆ ಮುಂತಾದ ನೇತ್ಯಾತ್ಮಕ ಗುಣಗಳಿಂದ ಪ್ರೇರಿತವಾಗಿರುತ್ತದೆ. ಅಲ್ಲಾಹನಿಗಾಗಿಯೇ ಆತನನ್ನು ಪ್ರೀತಿಸುವ ಹಾಗೂ ಆತನಿಗಾಗಿ ಇತರರನ್ನು ಪ್ರೀತಿಸುವ ಮನೋಭಾವ ಇಲ್ಲಿರುವುದಿಲ್ಲ. ಏನೇ ಆದರೂ, ಇದು ನಮ್ಮನ್ನು ನಮ್ಮ ದೇಹೇಚ್ಛೆಗಳಲ್ಲಿ ಹಾಗೂ ಪರಮ ಸ್ವಾರ್ಥಭಾವದಲ್ಲಿ ಬಂಧಿಸುತ್ತದೆ: “ ತನ್ನ ದೇಹೇಚ್ಛೆಯನ್ನೇ ದೇವರನ್ನಾಗಿ ಮಾಡಿದವನನ್ನು ತಾವು ಕಂಡಿಲ್ಲವೇ? ದೇವರು ಅವನನ್ನು ದಾರಿತಪ್ಪಿಸಿದ್ದಾನೆ” (45:23), “ ಆದರೆ, ವಿಶ್ವಾಸಿಗಳು ಅಲ್ಲಾಹನನ್ನು ಗಾಢವಾಗಿ ಪ್ರೀತಿಸುತ್ತಾರೆ”. ಕವಿ ಹಾಫಿಝ್‌ ರವರ ಸಾಲೊಂದು ಹೀಗಿದೆ: “ ಪ್ರೇಮಿಗಳ ಹೊರತಾಗಿ, ನಾನು ಕಾಣುವುದು ಬರೀ ಸ್ವಾರ್ಥಿಗಳಾದ ಡಾಂಭಿಕರನ್ನು ಮಾತ್ರ”. ಪ್ರವಾದಿ (ಸ) ರ ಅನುಕರಣೆಯ ಪ್ರೇರಕ ಸಂಗತಿಯಾಗಿ ಹಾಗೂ ಅದರಿಂದ ದೊರಕುವ ಫಲಿತಾಂಶವಾಗಿ ಖುರಾನ್‌ ಅಲ್ಲಾಹನ ಪ್ರೇಮವನ್ನಾಗಿದೆ ಮುಂದಿಟ್ಟಿರುವುದು: “ ಹೇಳಿರಿ; ದೇವರನ್ನು ನೀವು ಪ್ರೀತಿಸುತ್ತಿದ್ದರೆ, ನನ್ನ ಅನುಸರಣೆ ಮಾಡಿರಿ, ಫಲವಾಗಿ ಅಲ್ಲಾಹನು ನಿಮ್ಮನ್ನು ಪ್ರೀತಿಸುವನು” (3:31).

ಯಾವುದೇ ಕರ್ಮಕ್ಕೆ ಅತ್ಯಂತ ಪ್ರಾಮಾಣಿಕವಾದ ಪ್ರೇರಕವೆಂದರೆ ಅದು ಪ್ರೀತಿ. ಪಥಭ್ರಷ್ಠರಾಗದಂತೆ ಒಂದೇ ದಿಕ್ಕಿಗೆ ನಮ್ಮನ್ನು ನಡೆಸುವ ಶಕ್ತಿಯಿದೆ ಅದಕ್ಕೆ. ಸೌಂದರ್ಯದೊಂದಿಗಿನ ನಂಟಸ್ತಿಕೆಯಿಲ್ಲದೆ ಪ್ರೀತಿಗೆ ಅಸ್ತಿತ್ವವೇ ಇಲ್ಲ. ಮಸೀದಿಗಳು ಮತ್ತು ಕಲಿಕಾ ಕೇಂದ್ರಗಳು ಸೌಂದರ್ಯಪೂರ್ಣವಾಗಿ ಚೇತೋಹಾರಿಯಾಗುವಾಗ, ನಾವು ಅತ್ತ ಸೆಳೆಯುತ್ತೇವೆ. ಮಾತು ಅಂದ ಚಂದವಾಗುವಾಗ, ಅದಕ್ಕೆ ತಲೆದೂಗುತ್ತೇವೆ. ಸೌಂದರ್ಯ ಪ್ರೀತಿಯನ್ನು ಪ್ರಚೋದಿಸುತ್ತದೆ ಹಾಗೂ ಪ್ರೀತಿ ಆತ್ಮವನ್ನು ಪ್ರೇರೇಪಿಸುತ್ತದೆ. ಇಸ್ಲಾಮೀ ಕಲಾಕೃತಿಗಳು ಇಂದ್ರಿಯಾನುಭಕ್ಕೆ ಇಳಿಸಲು ಪ್ರಯತ್ನಿಸುವ ಅತೀಂದ್ರಿಯ ದೈವಿಕ ಸೌಂದರ್ಯದಲ್ಲಿ ಇದೇ ತತ್ವ ಅಡಗಿದೆ. ದೌರ್ಭಾಗ್ಯವಶಾತ್‌, ಶಾಪಿಂಗ್‌ ಮಾಲ್‌ ಹಾಗೂ ಗಗನಚುಂಬಿ ಕಟ್ಟಡಗಳಂಥ ʼದುನ್ಯಾದ ಆಡಂಬರಗಳʼ (ಝೀನತುಲ್‌ ಹಯಾತಿದ್ದುನ್ಯಾ, ಖುರಾನ್‌ 48:46) ಥಳುಕು ಬಳುಕಿನ ಪೋಳ್ಳು ಸೌಂದರ್ಯದ ಹಿಂದೆಯೂ ಮೇಲೆ ವಿವರಿಸಿದ ಆಕರ್ಷಣೆಯ ತತ್ವ ಕಾರ್ಯಾಚರಿಸುತ್ತಿದೆ. ನಿಜದಲ್ಲಿ ದುನ್ಯಾದ ಚೆಲುವು ನೈಜ ಸೌಂದರ್ಯದ ಒಂದು ನೆರಳು ಮಾತ್ರ. ಚಿತ್ತಚಾಂಚಲ್ಯ ಸೃಷ್ಟಿಸುವ ಹಾಗೂ ಸಮ್ಮೋಹನಗೊಳಿಸುವ ದುನ್ಯಾದ ಸೌಂದರ್ಯ ಹಾಗೂ ಆತ್ಮವನ್ನು ಅನಂತ ಸ್ವಾತಂತ್ರ್ಯದೆಡೆಗೆ ಕೊಂಡೊಯ್ಯುವ ಇಸ್ಲಾಮೀ ಕಲೆಗಳ ನಡುವಿನ ವ್ಯತ್ಯಾಸದ ಪ್ರಶ್ನೆ ಇಲ್ಲಿ ಎದ್ದೇಳುತ್ತದೆ. ಇವೆರಡರ ನಡುವೆ ವ್ಯತ್ಯಾಸ ಕಾಣುವುದಾದರೂ ಹೇಗೆ, ಹಾಗೆ ವಿವೇಚಿಸುವುದರ ಅಗತ್ಯ ಏನು?

ಇತರ ಕಲಾರೂಪಗಳಿಂದ ಇಸ್ಲಾಮೀ ಕಲೆಯನ್ನು ಬೇರ್ಪಡಿಸಲು ಮೊಟ್ಟಮೊದಲು ಇಸ್ಲಾಮೀ ಕಲೆಯ ಅರ್ಥವ್ಯಾಪ್ತಿ ಹಾಗೂ ಗುಣಲಕ್ಷಣಗಳನ್ನು ಗುರುತಿಸಬೇಕಾಗಿದೆ. ಪಶ್ಚಿಮ ಆಫ್ರಿಕಾ ಮತ್ತು ಮಧ್ಯ ಏಶಿಯಾ ಮುಂತಾದ ವಿಭಿನ್ನ ಸಾಂಸ್ಕ್ರತಿಕ ಪ್ರದೇಶಗಳಲ್ಲಿ ರೂಪುಗೊಂಡ ಇಸ್ಲಾಮೀ ಕಲಾಕೃತಿಗಳೆನ್ನೆಲ್ಲ ಒಗ್ಗೂಡಿಸುವ ಸಾಮಾನ್ಯ ಲಕ್ಷಣವನ್ನು ಗುರುತಿಸುವಲ್ಲಿ ಪಾಶ್ಚಾತ್ಯ ಕಲಾ ಚಿಂತಕರು ಹಿಂಜರಿದಿರುವುದಂತೂ ನಿಜ. ಆದರೆ, ಸಯ್ಯಿದ್‌ ಹುಸೈನ್‌ ನಸ್ರ್‌ ಹಾಗೂ ಟೈಟಸ್‌ ಬರ್ಕಾಡ್‌ ರಂಥ ವಿದ್ವಾಂಸರು ವಿವಿಧ ಪ್ರಾದೇಶಿಕ ಸಂದರ್ಭಗಳಿಗೆ ಅನುಸಾರ ವಿಭಿನ್ನವಾಗಿ ಅಭಿವ್ಯಕ್ತಗೊಂಡ ಕಲೆಗಳಿಗೆ ಸಾರ್ವತ್ರಿಕವಾದ ಇಸ್ಲಾಮಿಕ್‌ ಅನುಸಂಧಾನ ವಿಧಾನವನ್ನು ರೂಪಿಸಿದ್ದಾರೆ. ಪ್ರಸ್ತುತ ಕೈಂಕರ್ಯದ ಮೂಲಕ ಮುಸ್ಲಿಮರ ಧಾರ್ಮಿಕ ಕಲೆಗಳು ಹಾಗೂ ಮುಸ್ಲಿಮರಿಂದ ರಚಿತವಾದ ಕಲೆಗಳ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಕಂಡುಕೊಂಡಿದ್ದಾರೆ. ಪರಂಪರಾಗತ ಇಸ್ಲಾಮೀ ಕಲೆಗಳ ಸ್ವರೂಪ ಮತ್ತು ಒಳಹೂರಣಗಳು ನೇರವಾಗಿ ಖುರ್‌ ಆನಿನ ದಿವ್ಯ ಭೋದನೆಯಿಂದ ಉಧ್ಭವಿಸಿದೆ ಹಾಗೂ ಅವು ಮುಹಮ್ಮದೀ ಅನುಗ್ರಹವನ್ನು (ಬರಕಃ ಮುಹಮ್ಮದಿಯ್ಯ) ಪಸರಿಸುತ್ತದೆ. ಧರ್ಮದ ನವ ವಿಶ್ವದಷ್ಠಿಕೋನವನ್ನು ಚಿತ್ರಿಸುವ ಕಲೆಗಳಿಗೆ ಜನ್ಮ ನೀಡುವ ಸಲುವಾಗಿ ಇಸ್ಲಾಮೀ ಕಲೆಗಳು ರೋಮನ್‌, ಬೈಝಂಟಿಯನ್‌, ಸಾಸಾನಿದ್‌, ಪಶ್ಚಿಮ ಆಫ್ರಿಕ, ಮಧ್ಯ ಏಶಿಯಾ ಮತ್ತು ಚೀನಾ ಮುಂತಾದ ಅನೇಕ ಪ್ರದೇಶಗಳ ಕಲಾಕಾರರ ತಂತ್ರ ಮತ್ತು ವಿಧಾನಗಳನ್ನು ಸಮಂಜಸವಾಗಿ ಸಂಯೋಜಿಸಿಕೊಂಡಿವೆ. ಇಸ್ಲಾಮೀ ಕಲೆಗಳ ನೈಜ ಸಂಪನ್ಮೂಲ ಇಸ್ಲಾಮೀ ದಿವ್ಯ ಬೋಧನೆಯೇ ಆಗಿದೆ ಹೊರತು ಪೂರ್ವ ಮಾದರಿಗಳೋ , ಐತಿಹಾಸಿಕ ಪ್ರಭಾವಗಳೋ ಅಲ್ಲ.ಇದೇ ಕಾರಣದಿಂದಾಗಿ, ಅವು ಕಾಲ ದೇಶಗಳಿಗತೀತವಾಗಿ ಸಮಾನ ಸ್ವರೂಪವನ್ನು ಹೊಂದಿದೆ.

ಮುಸ್ಲಿಮರು ನಿರ್ಮಿಸಿದ ಅಥವಾ ಮುಸ್ಲಿಂ ಸಮಾಜದಲ್ಲಿ ನಿರ್ಮಿತವಾದ ಎಲ್ಲಾ ಕಲಾಕೃತಿಗಳು ಇಸ್ಲಾಮೀ ಕಲೆಗಳಾಗಬೇಕೆಂದಿಲ್ಲ. ಇರಾಖಿ ಸಂಜಾತ ಬ್ರಿಟಿಷ್‌ ವಾಸ್ತುಶಿಲ್ಪಿ ಝಹಾ ಹದೀದ್‌ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದಾರೆ, ಆದರೆ ಅವುಗಳ ಪೈಕಿ ಯಾವೊಂದೂ ಕೂಡ ಇಸ್ಲಾಮಿ ವಾಸ್ತುಶಿಲ್ಪದ ವ್ಯಾಪ್ತಿಯಲ್ಲಿ ಬರದು. ಇದಕ್ಕೆ ತದ್ವಿರುದ್ದವಾಗಿ, ಲಂಡನಿನಲ್ಲಿರುವ ಪ್ರಿನ್ಸ್‌ ಸ್ಕೂಲ್‌ ಆಫ್‌ ಟ್ರಡಿಶನಲ್‌ ಆರ್ಟ್ಸ್‌ ನ ಎಲ್ಲಾ ಧರ್ಮೀಯರು ಕ್ಯಾಲಿಗ್ರಫಿಯಂಥ ವಿವಿಧ ಇಸ್ಲಾಮೀ ಪರಂಪರಾಗತ ಕಲಾಕೃತಿಗಳನ್ನು ಸೃಷ್ಟಿಸುತ್ತಾರೆ. ಒಟ್ಟಾರೆ, ಇಲ್ಲಿ ವ್ಯಕ್ತಿ ಮುಖ್ಯವಲ್ಲ ಹೊರತು ದಿವ್ಯ ಬೋಧನೆಯಿಂದ ರೂಪಿತವಾದ ಕಲೆಯ ಸ್ವರೂಪವನ್ನು ನೋಡಿಯಾಗಿದೆ ಅದರ ಇಸ್ಲಾಮಿತನವನ್ನು ನಿರ್ಧರಿಸುವುದು.

ಧಾರ್ಮಿಕ ಕಲೆಗಳು ಧರ್ಮ ಪ್ರಧಾನವಾದ ಅಥವ ಧಾರ್ಮಿಕ ಉದ್ದೇಶಗಳಿಗೆ ಉಪಯೋಗಿಸಲಾಗದ ಸಂಗತಿಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಧಾರ್ಮಿಕ ಕಲೆಗಳು ಇಸ್ಲಾಮೀ ಕಲೆಗಳು ಎನ್ನಲಾಗದು. ಸಿರಿಯಾದ ಮರಗಳಿಂದ ಉಂಟುಮಾಡಿದ ಮೇಜುಗಳು ಕೆಲವೊಮ್ಮೆ ಮದ್ಯಪಾನ ಕೇಂದ್ರಗಳಲ್ಲಿ ಬಳಸಬಹುದು, ಆದರೆ ಇಸ್ಲಾಮೀ ತತ್ವಚಿಂತನೆ ಹಾಗೂ ವಿಶ್ವದೃಷ್ಟಿಕೋನವನ್ನು ಬಿಂಬಿಸುವ ರೇಖಾತ್ಮಕ ವಿನ್ಯಾಸಗಳು ಅವುಗಳಲ್ಲಿ ಚಿತ್ರಿತವಾಗಿರುತ್ತದೆ. ವಿಶ್ವದಾದ್ಯಂತ ಉತ್ಪಾದಿಸಲ್ಪಡುವ ಮಕ್ಕಾ ಮದೀನಾದ ಚಿತ್ರಪಟಗಳು ಹಾಗೂ ವಿವಿಧ ವಿನ್ಯಾಸದ ನಮಾಜಿನ ಹಾಸುಗಳು ಧಾರ್ಮಿಕ ಕಲೆಗಳಾಗಿರಬಹುದು, ಆದರೆ ಇಸ್ಲಾಮೀ ಕಲೆಗಳ ವ್ಯಾಪ್ತಿಯೊಳಗೆ ಅವುಗಳನ್ನು ಒಳಪಡಿಸಲಾಗದು. ಇಸ್ಲಾಮಿ ಕಲೆಗಳು ವಸ್ತುಗಳ ಬಾಹ್ಯ ರೂಪಗಳ ಅನುಕರಣೆ ಮಾಡುವುದಿಲ್ಲ, ಹೊರತು ಅವುಗಳ ಆಂತರಿಕ ಮೂಲಸ್ವರೂಪದ ನೈಜ ಚಹರೆಗಳನ್ನು ಹೊರಗೆಡವುತ್ತದೆ. ಈ ಕಾರಣದಿಂದಾಗಿಯೇ, ಕಾಲ/ದೇಶ ಹಾಗೂ ಭಾಷೆ ಎಂಬಿತ್ಯಾದಿ ವಿದ್ಯಮಾನಗಳ ಮೂಲ ಆಧಾರಗಳಾದ ಸಂಖ್ಯೆ (ರೇಖಾಗಣಿತ) ಮತ್ತು ಅಕ್ಷರಗಳಿಗೆ (ಕ್ಯಾಲಿಗ್ರಫಿ) ಹೆಚ್ಚು ಒತ್ತು ನೀಡಲಾಗುತ್ತದೆ.

ಇಸ್ಲಾಮೀ ಕಲಾಕೃತಿಗಳು, ಗಣಿತ, ರೇಖಾಹಣಿತ, ಸಂಗೀತ ಮತ್ತು ವಿಶ್ವವಿಜ್ಞಾನ ಮುಂತಾದ ಪರಸ್ಪರ ತಳುಕು ಹಾಕಿಕೊಂಡಿರುವ ಪವಿತ್ರ ಜ್ಙಾನಶಿಸ್ತುಗಳ ಮೇಲೆ ಆಧಾರಿತಗೊಂಡಿದೆ. “ ವಿಜ್ಞಾನವಿಲ್ಲದ ಕಲೆ ಬರೀ ಶೂನ್ಯ” ಎಂಬ ಕ್ರೈಸ್ತೀಯ ತತ್ವದೊಂದಿಗೆ ಇದು ಸಾಮ್ಯತೆ ಹೊಂದಿದೆ. ಈ ಎಲ್ಲಾ ವಿಜ್ಞಾನಗಳು ಸೃಷ್ಠಿ ಜಗತ್ತಿನ ಬಹುತ್ವವನ್ನು ಸೃಷ್ಠಿಕರ್ತನ ಏಕತ್ವದೊಂದಿಗೆ ಸಂಪರ್ಕ ಏರ್ಪಡಿಸಲು ಸಹಾಯಕವಾಗುತ್ತದೆ. ಅರಿಸ್ಟೋಟಲ್‌ ಪ್ರಕಾರ ಒಟ್ಟಾರೆ ವಿಜ್ಞಾನ ಮೂರು ಭಾಗಗಳಾಗಿ ವಿಂಗಡಿತವಾಗಿದೆ:ಭೌತಶಾಸ್ತ್ರ, ಗಣಿತಶಾಸ್ತ್ರ ಮತ್ತು ಅತಿಭೌತಶಾಸ್ತ್ರ (ಇಲಾಹಿಯ್ಯಾತ್).‌ ಭೌತಜಗತ್ತಿನ ವಿದ್ಯಮಾನಗಳ ಕುರಿತು ಭೌತಶಾಸ್ತ್ರ ತಿಳುವಳಿಕೆ ನೀಡುತ್ತದೆ ಹಾಗೂ ದೇವರನ್ನೊಳಗೊಂಡ ಅತೀಂದ್ರಿಯ ಸಂಗತಿಗಳನ್ನು ಅರಿಯಲು ಇಲಾಹಿಯ್ಯಾತ್‌ ಉಪಯುಕ್ತವಾಗುವುದು. ಆದರೆ, ಗಣಿತಶಾಸ್ತ್ರ (ಮತ್ತು ಅನುಬಂಧಿತವಾದ ರೇಖಾಗಣಿತ ಮತ್ತು ಸಂಗೀತ ಎಂಬೀ ಶಾಸ್ತ್ರಗಳು, ಇವೆರಡೂ ಕಾಲದೇಶಗಳಲ್ಲಿರುವ ಸಂಖ್ಯೆಗಳೊಂದಿಗೆ ಸಂಬಂಧ ಹೊಂದಿದೆ, ಮೊದನೆಯದ್ದು ದೃಶ್ಯ ಜಗತ್ತಿನಲ್ಲಿ ಹಾಗೂ ಎರಡನೆಯದ್ದು ಶಬ್ದ ಜಗತ್ತಿನಲ್ಲಿ) ಇವೆರಡರ ನಡುವಿನ ಮಾಧ್ಯಮಿಕ ಜಗತ್ತಿನಲ್ಲಿ (ಭಾವನಾತ್ಮಕ ಜಗತ್ತು, ದೈವಿಕ ಮತ್ತು ಭೌಮಿಕದ ನಡುವಿನ ಬರ್ಝಖ್‌ ಎಂದೂ ಕರೆಯಬಹುದು) ಇಂದ್ರಿಯ ಮತ್ತು ಅತೀಂದ್ರಿಯಗಳ ನಡುವೆ ಸಂಪರ್ಕವೇರ್ಪಡಿಸುವ ಕೊಂಡಿಯಾಗಿ ಕಾರ್ಯಾಚರಿಸುತ್ತದೆ. ಮಾಧ್ಯಮಿಕ ಲೋಕದ ಈ ವಿಜ್ಞಾನಗಳು, ಇಸ್ಲಾಮೀ ಕಲಾಕೃತಿಗಳಿಗೆ ಐಂದ್ರಿಕ ಲೋಕದಿಂದ ಅತೀಂದ್ರಿಯ ಲೋಕದೆಡೆಗಿನ ಏಣಿಯಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಲಾವಣ್ಯವನ್ನು ಸತ್ಯದಿಂದ ಸೂಸುವ ಕಾಂತಿಯೆಂದು ಪ್ಲಾಟೋ ವಿವರಿಸುತ್ತಾನೆ; ಆದ್ದರಿಂದಲೇ, ಸೌಂದರ್ಯ ಮತ್ತು ಕುರೂಪತೆಯ ನಡುವೆ ವಿವೇಚಿಸಲು ಅಸಮರ್ಥರಾದರೆ, ಸತ್ಯ ಮತ್ತು ಮಿಥ್ಯವನ್ನೂ ಬೇರ್ಪಡಿಸಲು ಅಶಕ್ತರಾಗುತ್ತೇವೆ. ಪೂರ್ಣ ಸಾಮರಸ್ಯ ಹೊಂದಿದ ನೈಜ ಚೆಲುವು ಕಾಲಾತೀತವಾಗಿದೆ ಮತ್ತು ಅದೃಶ್ಯ ಲೋಕದ ಅಂದವನ್ನು ಪ್ರತಿಬಿಂಬಿಸುತ್ತದೆ. ಆ ಮೂಲಕ ಪ್ರಶಾಂತ ಚಿತ್ತತೆ ಮತ್ತು ದೇವಸ್ಮರಣೆಯನ್ನು ಉದ್ದೀಪಿಸುತ್ತದೆ. ಮಿಥ್ಯಾ ಸೌಂದರ್ಯ ಕುರೂಪತೆಯಂತೆಯೇ ಬಹಳ ಕ್ಷಣಿಕವೂ, ಅಸ್ತವ್ಯಸ್ತವೂ ಆಗಿರುವುದರಿಂದ ಕೆಳ ಜಗತ್ತಿನ ಗೊಂದಲಕಾರಿ ಬಹುತ್ವವನ್ನೂ ಅಸ್ತವ್ಯಸ್ತತೆಯನ್ನೂ ಹಾಗೂ ಮನುಷ್ಯ ಮನಸ್ಸಿನ ಕ್ಷುದ್ರ ಮುಖಗಳನ್ನು ಪ್ರತಿಬಿಂಬಿಸುತ್ತದೆ. ಪರಿಣಾಮವಾಗಿ, ಅಸಮತೋಲನತೆ, ಅಸ್ಪಷ್ಟತೆ ಮತ್ತು ನಿರ್ಲಕ್ಷ್ಯತೆ (ಗಫ್ಲತ್) ಗೆ ಕಾರಣವಾಗುತ್ತದೆ. ಅವು ಸೃಷ್ಟಿ ಪ್ರಪಂಚದ ಮಾಯಾ ಮುಖವನ್ನು ತೋರಿಸಿ ದೈವಿಕ ಆಯಾಮಗಳನ್ನು ಬಚ್ಚಿಡುತ್ತದೆ. ಆದರೆ, ನೈಜ ಸೌಂದರ್ಯ ವಸ್ತುಗಳ ಸ್ಪಷ್ಟ ಮತ್ತು ಪಾರದರ್ಶಕ ಆಯಮಗಳನ್ನು ಹೊರಗೆಡವುತ್ತದೆ. ಆ ಮೂಲಕ ದೇವರ ಸುಸ್ಪಷ್ಟ ನಿದರ್ಶನಗಳಾಗಿ ಕಾರ್ಯಾಚರಿಸುವುದು.

ಒಲುಡಾಮಿನಿ ಒಗುನ್ನೈಕೆ

ಕನ್ನಡಕ್ಕೆ: ಎಂ.ಎಂ ಮಸ್ರೂರ್‌ ಸುರೈಜಿ

ಪ್ರಣಯ ನಿರೂಪಣೆಯ ಪೌರಸ್ತ ಮತ್ತು ಪಾಶ್ಚಾತ್ಯ ಮಾದರಿಗಳು

ನಮ್ಮ ಸಾಮಾಜಿಕ ಸಂಬಂಧಗಳು ಮತ್ತು ಅವುಗಳನ್ನು ವ್ಯಾಖ್ಯಾನಿಸುವ ದೃಷ್ಟಿಕೋನವು ಆಧುನೀಕರಣ ಮತ್ತು ಡಿಜಿಟಲೀಕರಣಗಳಿಂದಾಗಿ ಬಹಳ ಬದಲಾವಣೆಗಳೇ ಆಗಿವೆ. ಇದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರ ಮೇಲೂ ಪರಿಣಾಮ ಬೀರಿದೆ. ಅಂತಹ ಭಾವನೆಗಳನ್ನು ನಿಯಂತ್ರಿಸುವುದೇ ಪ್ರೀತಿ. ಆದಾಗ್ಯೂ, ಆಯಾ ಕಾಲದ ನಂಬಿಕೆಗಳು ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಅವಲಂಬಿಸಿ ಪ್ರೀತಿಯ ಅರ್ಥಗಳು ಮತ್ತು ಅದನ್ನು ಹೇಗೆ ವ್ಯಕ್ತಪಡಿಸಬಹುದು ಎಂಬುವುದರಲ್ಲಿ ವ್ಯತ್ಯಾಸಗಳುಂಟಾಗಬಹುದು. ‘ರೋಮಿಯೋ ಆಂಡ್ ಜೂಲಿಯೆಟ್’ ಮತ್ತು ‘ಲೈಲಾ ಮಜ್ನೂನ್’ ಎಂಬೆರಡು ಕೃತಿಗಳು ವಿಶ್ವ ಸಾಹಿತ್ಯದಲ್ಲೇ ಇತಿಹಾಸ ಪ್ರಣಯ ಕಥೆಗಳಾಗಿವೆ. ಇವು ಪರಸ್ಪರ ವೈರುಧ್ಯ ಆಗುವುದರೊಂದಿಗೆಯೇ ಅವುಗಳ ನಡುವಿನ ಸಾಮ್ಯತೆಯನ್ನೂ ನಾವು ನೋಡಬಹುದು. ಪೂರ್ವ ಮತ್ತು ಪಶ್ಚಿಮಗಳಲ್ಲಿನ ಪ್ರಣಯ ಕಥೆಯನ್ನು ಹೇಳುವ ಈ ಎರಡು ಕೃತಿಗಳು ಒಂದೇ ಮೂಲದಿಂದ ಹುಟ್ಟಿ ವಿವಿಧ ದಿಕ್ಕುಗಳಲ್ಲಿ ಹರಿಯುವ ಎರಡು ನದಿಗಳಷ್ಟೇ ವಿಸ್ತಾರವಾಗಿವೆ. ಅವು ವಿಭಿನ್ನ ಸಂಸ್ಕೃತಿ ಮತ್ತು ಭೌಗೋಳಿಕ ಗುಣಲಕ್ಷಣಗಳಿರುವ ಎರಡು ಪ್ರದೇಶಗಳಿಗೆ ಹರಿಯುತ್ತವೆ. ಹೀಗಿದ್ದರೂ ಇವೆರಡರ ನಡುವಿರುವ ಸಾಮ್ಯತೆಗಳು ಸಾಕಷ್ಟು ಗಮನಾರ್ಹವಾಗಿವೆ.

ಈ ಎರಡು ಕಥೆಗಳ ಮೂಲಕ ಲೇಖಕರು ಮಾನವ ಸತ್ಯದ ನೀತಿಯನ್ನು ಹಂಚಿಕೊಳ್ಳುತ್ತಾರೆ. ಈ ಕಥೆಗಳ ನಡುವಿನ ಸಾಮ್ಯತೆ ಅಥವಾ ಪರಸ್ಪರ ಸಂಬಂಧಗಳನ್ನು ಶೋಧಿಸುವಲ್ಲಿ ಇದು ಸಂಶೋಧಕರ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಸಾಹಿತ್ಯ ಇತಿಹಾಸಕಾರ ಅಗಾ ಸರ್ರೆ ಲೆವೆಂಡ್ (Agah Sirri Levend) ‘ಲೈಲಾ ಮತ್ತು ಮಜ್ನೂನ್’ ಎಂಬ ತನ್ನ ಸಂಶೋಧನೆಯಲ್ಲಿ, ಈ ಪೂರ್ವ ಪ್ರಣಯ ಕಥೆಗಳು ಕ್ರುಸೇಡ್ ಸಮಯದಲ್ಲಿ ಪಾಶ್ಚಾತ್ಯ ಸಾಹಿತ್ಯವನ್ನು ಪ್ರವೇಶಿಸಿದವು ಎಂದು ಹೇಳುತ್ತಾನೆ.

ಜಗತ್ಪ್ರಸಿದ್ಧ ಸಾಹಿತ್ಯ ಕೃತಿಗಳಾದ ಅಕಾಸ್ಸಿನ್ ಮತ್ತು ನಿಕೋಲೆಟ್ (Aucassin and Nicolette), ಫ್ರೆಂಚ್ ಸಾಹಿತ್ಯ ಕೃತಿ ಟ್ರಿಸ್ಟಾನ್ ಮತ್ತು ಐಸಲ್ಟ್ (Tristan and Iseult) ಮತ್ತು ಹಂಗೇರಿಯನ್ ಸಾಹಿತ್ಯ ಕೃತಿ ಫ್ಲೋರಿಸ್ ಮತ್ತು ಬ್ಲಾಂಚೆಫ್ಲೋರ್ (Floris and Blancheflour) ಗಳಿಗೆ ಲೈಲಾಳ ಮತ್ತು ಮಜ್ನೂನ್ ನ ಕಥೆಯನ್ನೇ ಆಕರವಾಗಿ ಸ್ವೀಕರಿಸಲಾಗಿದೆ ಎಂದು ಲೆವೆಂಡ್ ವಾದಿಸುತ್ತಾನೆ. ಅಂತೆಯೇ, ಇಂಗ್ಲಿಷ್ ಸಾಹಿತ್ಯದಲ್ಲಿರುವ ರೋಮಿಯೋ ಮತ್ತು ಜೂಲಿಯೆಟ್ ಕೂಡ ಇದೇ ಗಣಕ್ಕೆ ಸೇರುತ್ತದೆ.

ಲೈಲಾ ಮತ್ತು ಮಜ್ನೂನ್ ಕಥೆಯನ್ನು ಆಧರಿಸಿದ ಅಜೆರ್ಬೈಜಾನಿ ಜಾನಪದ ಕಲೆ

ಅರಬ್ಬರು ಹೇಳುತ್ತಿದ್ದ ಅನಾಮಧೇಯ ಜಾನಪದ ಕಥೆಯೇ ‘ಲೈಲಾ ಮತ್ತು ಮಜ್ನೂನ್’. ಈ ಕಥೆಯ ಅತ್ಯಂತ ಹಳೆಯ ಮತ್ತು ಸಮಗ್ರ ಆವೃತ್ತಿಯನ್ನು ಅಜರ್ಬೈಜಾನಿ ಕವಿ ನಿಝಾಮಿ ಪರ್ಷಿಯನ್ ಭಾಷೆಯಲ್ಲಿ ಮುಕ್ತ ಮತ್ತು ಲಯಬದ್ಧವಾಗಿ ಮಸ್ನವಿ ರೂಪದಲ್ಲಿ ಬರೆದಿದ್ದಾನೆ. ಮಸ್ನವಿಯು ಪೌರಾತ್ಯ ಜನರಿಗೆ ಪ್ರೀತಿಯ ಬಗ್ಗೆ ಅವರ ಆಲೋಚನೆ ಮತ್ತು ಭಾವನೆಗಳನ್ನು ವ್ಯಾಖ್ಯಾನಿಸಲು ಬೇಕಾಗುತ್ತಿದ್ದ
ಒಂದು ಸಾಹಿತ್ಯ ಮಾರ್ಗವಾಗಿತ್ತು. ಆ ಕಾಲದ ಪೌರಾತ್ಯ ಕವಿಗಳ ಕೃತಿಗಳಲ್ಲಿ ವಿಷಯ ಮತ್ತು ಸನ್ನಿವೇಶಗಳನ್ನು ಭಿನ್ನ ಭಿನ್ನವಾಗಿರಿಸಲಾಯಿತು. ಅವರು ಪ್ರೀತಿಯ ಬಗ್ಗೆ ಅಸಂಖ್ಯಾತ ಕವಿತೆಗಳನ್ನು ಬರೆದರು. ಅವರು ಕಥೆಯ ಸಾರವನ್ನು ಯಶಸ್ವಿಯಾಗಿ ತಮ್ಮದೇ ಆದ ಹೊಸ ರೂಪ ಕೊಡಲು ಹಾಗೂ ಪ್ರಕಟಿಸಲು ಪರಸ್ಪರ ಸ್ಪರ್ಧಿಸುತ್ತಿದ್ದರು. ಅನೇಕ ಲೈಲಾ ಮಜ್ನೂನ್ ಕಥೆಗಳನ್ನು ಪೌರಾತ್ಯ ಕವಿಗಳು ವಿಶೇಷವಾಗಿ ಅರಬ್, ಪರ್ಷಿಯನ್ ಮತ್ತು ಟರ್ಕಿಶ್ ಕವಿಗಳು ಬರೆದಿದ್ದಾರೆ.

ಅಜರ್ಬೈಜಾನಿ-ಟರ್ಕಿಶ್ ಕವಿಯಾಗಿದ್ದ ಫುಸುಲಿ ಬರೆದ ಕಥೆಯು ಈ ಕಥೆಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ . ನಿಝಾಮಿ ಗಂಜಾವಿಯ ಕಥೆಯನ್ನು ಕವಿ ಫುಸುಲಿಯು ಆಕರವಾಗಿ ಬಳಸುತ್ತಿದ್ದರೂ, ಅವನು ಅದನ್ನು ತನ್ನದೇ ಶೈಲಿಯಲ್ಲಿ ವ್ಯಾಖ್ಯಾನಿಸುತ್ತಾನೆ. ಅದಕ್ಕಾಗಿಯೇ ಟರ್ಕಿಯ ಸಾಹಿತ್ಯದಲ್ಲಿ ಲೈಲಾ ಮತ್ತು ಮಜ್ನೂನ್ ರನ್ನು ಉಲ್ಲೇಖಿಸುವಾಗ ಫುಸುಲಿಯನ್ನು ಪರಿಚಯಿಸಲಾಗುತ್ತದೆ. ವಿಲಿಯಂ ಷೇಕ್ಸ್ ಪಿಯರ್ ‘ರೋಮಿಯೋ ಮತ್ತು ಜೂಲಿಯೆಟ್‌’ಗೆ ಮೊದಲು ಬರೆದ ಇತರ ಕೃತಿಗಳೂ ಇದರಲ್ಲಿ ಸೇರಿವೆ. ಈ ನಾಟಕವು 1562 ರಲ್ಲಿ ಪ್ರಕಟಿಸಲಾದ ಆರ್ಥರ್ ಬ್ರೂಕ್ ಬರೆದ ದಿ ಟ್ರಾಜಿಕ್ ಸ್ಟೋರಿ ಆಫ್ ರೋಮಿಯಸ್ ಆಂಡ್ ಜೂಲಿಯೆಟ್ ಎಂಬ ಕವನವನ್ನು ಆಧರಿಸಿದೆ.

ಇಟಲಿಯ ನವೋದಯದ ಕಾಲಘಟ್ಟದಲ್ಲಿ ಎರಡು ಶ್ರೀಮಂತ ಕುಟುಂಬಗಳ ಯುವ ಪ್ರೇಮಿಗಳ ದುರಂತ ಕಥೆಯನ್ನು ಹೆಚ್ಚು ಹೇಳಲಾಗುತ್ತಿತ್ತು. ಈ ಕಥೆಯನ್ನಾಧರಿಸಿ ಇಟಲಿಯಲ್ಲಿ 15 ಮತ್ತು 16 ನೇ ಶತಮಾನಗಳ ಸಮಯದಲ್ಲಿ ಅನೇಕ ಕವನಗಳು, ಕಥೆಗಳು ಮತ್ತು ನಾಟಕಗಳನ್ನು ಬರೆಯಲಾಯಿತು. ಅವುಗಳಲ್ಲಿ ಕೆಲವು ಇಂಗ್ಲೀಷಿಗೂ ಅನುವಾದಿಸಲ್ಪಟ್ಟವು.

ಒಂದು ನಾಟಕ ರೂಪದಲ್ಲಿ ಪ್ರಸ್ತುತಪಡಿಸಲಾದ ರೋಮಿಯೋ ಆಂಡ್ ಜೂಲಿಯೆಟ್‌ ಎಂಬ ಕಥೆ ಪ್ರೇಕ್ಷಕರ ಕಲ್ಪನೆಯನ್ನು ಸೆರೆಹಿಡಿಯುವುದರೊಂದಿಗೆ ಆ ಕಾಲದ ಭಾವನಾತ್ಮಕ ಸತ್ಯಗಳು ಮತ್ತು ಪಾಶ್ಚಾತ್ಯ ಹಿತಾಸಕ್ತಿಗಳನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ. ಷೇಕ್ಸ್‌ಪಿಯರ್‌ನ ಪ್ರಮುಖ ಕೃತಿಗಳು ದುರಂತಗಳನ್ನು ಕೇಂದ್ರೀಕರಿಸಿರುವಂತದ್ದಾಗಿದೆ. ಅದರಲ್ಲಿ ಅವನು ಐಯಾಂಬಿಕ್ ಪೆಂಟಾಮೀಟರ್‌ (Iambic pentameter) ನಂತಹ ಪ್ರಬಲವಾದ ಕಾವ್ಯಾತ್ಮಕ ಶೈಲಿಗಳನ್ನು ಕಥೆ ಹೇಳುವುದಕ್ಕೆ ಬಳಸುತ್ತಾನೆ.

ತಮ್ಮ ಪರಾಕ್ರಮವನ್ನು ಸಾಬೀತುಪಡಿಸಿದ ಪೂರ್ವಿಕ ಕಲಾವಿದರ ಪ್ರೇರಣೆಯಿಂದ ಶೇಕ್ಸ್‌ಪಿಯರ್ ಹೆಚ್ಚು ಹಿಂಸಾತ್ಮಕ ನಾಟಕಗಳನ್ನು ಬರೆಯುವ ನೈಪುಣ್ಯತೆಯನ್ನು ಪಡೆದುಕೊಳ್ಳುತ್ತಾನೆ. ರಕ್ತಸಿಕ್ತ ದೃಶ್ಯಗಳನ್ನು ಒಳಗೊಂಡ “ಟೈಟಸ್ ಆಂಡ್ರೋನಿಕಸ್” ನ ಹೆಜ್ಜೆಗಳನ್ನು ಅನುಸರಿಸಿ ಅನಿರೀಕ್ಷಿತ ಯಶಸ್ಸನ್ನು ಪಡೆದ ರೋಮಿಯೋ ಮತ್ತು ಜೂಲಿಯೆಟ್‌ಗೆ ಜನ್ಮ ನೀಡುತ್ತಾನೆ.

ಕಥೆಯ ಹಿನ್ನೆಲೆ

ಪರ್ಷಿಯನ್ ಕವಿಯ ಲೈಲಾ ಮತ್ತು ಮಜ್ನೂನ್ ನಿರೂಪಣಾ ಕವಿತೆಯ ಕಿರುಚಿತ್ರ.

‘ಲೈಲಾ ಮಜ್ನೂನ್’ ಮತ್ತು ‘ರೋಮಿಯೋ ಆಂಡ್ ಜೂಲಿಯೆಟ್’ ಪುರುಷ ಪಾತ್ರಗಳ ಜೀವನ ದೃಶ್ಯಗಳೊಂದಿಗೆ ಪ್ರಾರಂಭವಾಗುತ್ತದೆ. ಹುಟ್ಟಿದಾಗಿನಿಂದಲೇ ಮಜ್ನೂನ್‌ನ ಸ್ವಭಾವದ ಬಗ್ಗೆ ನಮಗೆ ಅರಿವಿರುತ್ತದೆ. ಅದೇ ರೀತಿ ರೋಮಿಯೋನನ್ನು ಜೀವನದ ಪ್ರಾರಂಭಿಕ ಹಂತದಲ್ಲೇ ಭೇಟಿಯಾದ ತಕ್ಷಣ ಅವನ ಮಾನಸಿಕ ಸ್ಥಿತಿ ಮತ್ತು ಅನುಭವಗಳನ್ನು ವಿವರಿಸಲಾಗುತ್ತದೆ. ಯಾವುದೇ ಪ್ರೇಮಕಥೆಯ ಪ್ರಮುಖ ತಿರುವು ಪ್ರೇಮಿಗಳು ಮೊದಲು ಭೇಟಿಯಾಗುವ ಕ್ಷಣವಾಗಿರುತ್ತದೆ. ಇಬ್ಬರೂ ಲೇಖಕರು ಈ ಮುಖಾಮುಖಿಯನ್ನು ಬಹಳ ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ. ಪ್ರೇಮಿಗಳು ಪ್ರಥಮ ಸಮ್ಮಿಲನವಾಗುವುದಕ್ಕಿಂತ ಮುಂಚೆಯೇ ಫುಸುಲಿಯು ವಿವರಿಸಿರುವ ಸಾಮಾನ್ಯ ಪ್ರೇಮಿಗಳಲ್ಲ ಎಂಬ ಅಂಶವೇ ಓದುಗನಿಗೆ ಈ ಪ್ರೇಮಿಗಳನ್ನು ಪ್ರಶಂಸಿಸುವಂತೆ ಮಾಡುತ್ತದೆ. ತನ್ನ ತಂದೆಯ ಏಕೈಕ ಪುತ್ರನಾದ ಮಜ್ನೂನ್ ಲೈಲಾಳನ್ನು ತನ್ನ ವಿದ್ಯಾರ್ಥಿ ಜೀವನದ ಆರಂಭದಲ್ಲೇ ಭೇಟಿಯಾಗಿರುತ್ತಾನೆ. ರೋಮಿಯೋ ಮತ್ತು ಜೂಲಿಯೆಟ್ ಮೊದಲ ಬಾರಿಗೆ ಪಾರ್ಟಿಯೊಂದರಲ್ಲಿ ಭೇಟಿಯಾಗುತ್ತಾರೆ. ಅದೂ ಅಲ್ಲದೆ ಅವರಿಬ್ಬರೂ ಮೊದಲ ನೋಟದಲ್ಲೇ ಪ್ರೀತಿಗೂ ಶರಣಾಗುತ್ತಾರೆ.
ಈ ಎರಡು ಕಥೆಗಳನ್ನು ತುಲನಾತ್ಮಕವಾಗಿ ನೋಡುವುದಾದರೆ ಈ ಪ್ರೇಮಿಗಳು ಪ್ರೀತಿಯ ಶುದ್ಧ ಹಾಗೂ ಮುಗ್ಧ ಭಾವನೆಗಳನ್ನು ಮತ್ತು ಸಾಮಾಜಿಕ ಹಾಗೂ ಕೌಟುಂಬಿಕ ಅಡೆತಡೆಗಳನ್ನು ಮೆಟ್ಟಿನಿಲ್ಲುತ್ತಾರೆ ಎಂಬುವುದನ್ನು ಗಮನಿಸಬಹುದು. ಮಜ್ನೂನ್ ನೊಂದಿಗಿನ ಲೈಲಾಳ ಪ್ರೇಮ ಸಂಬಂಧ ಮತ್ತು ಅವರ ಭೇಟಿಯು ವಿವಿಧ ವದಂತಿಗಳಿಗೂ ಕಾರಣವಾಯಿತು. ವದಂತಿಗಳ ಹರಿವು ಅಂತಿಮವಾಗಿ ತಾಯಿಯ ಕಿವಿಗೆ ತಲುಪಿದಾಗ ಅವಳನ್ನು ಗುರುಕುಲದಿಂದ ಹಿಂತೆಗೆದುಕೊಳ್ಳಲಾಯಿತು. ಅಂತೆಯೇ, ರೋಮಿಯೋ ಮತ್ತು ಜೂಲಿಯೆಟ್ ಎರಡು ಸಂಘರ್ಷದ ಕುಟುಂಬಗಳಿಂದ ಬಂದವರಾಗಿದ್ದರಿಂದ ಅವರ ಪ್ರಣಯವನ್ನು ಎರಡೂ ಸಮುದಾಯಗಳು ಸ್ವೀಕರಿಸಲಿಲ್ಲ. ಆದ್ದರಿಂದ ಅವರು ಕುಟುಂಬದ ವಿರುದ್ಧ ಹೋರಾಡಲು ಸನ್ನದ್ಧರಾಗಬೇಕಾಗಿ ಬಂತು. ಲೈಲಾಳೊಂದಿಗೆ ಒಂದುಗೂಡಲಾಗದ ನರಕಾವಸ್ಥೆಯಿಂದ ಮಜ್ನೂನ್ ಪ್ರಜ್ಞಾಹೀನನಾಗುತ್ತಾನೆ. ಪ್ರೇಮಿಗಳು ಮತ್ತೆ ಒಂದಾಗಬಹುದೇ ಎಂದು ಆಲೋಚಿಸಲು ತಂದೆ ಲೈಲಾಳ ಕುಟುಂಬವನ್ನು ಸಂಪರ್ಕಿಸಿದರೂ ಪ್ರಜ್ಞೆ ಮರಳಿ ಬಂದರೆ ಮಾತ್ರ ಮಜ್ನೂನ್ ಮತ್ತೆ ಒಂದಾಗಬಹುದೆಂಬ ನೆಲೆಗೆ ಲೈಲಾಳ ತಂದೆ ಒಪ್ಪಿಗೆ ಸೂಚಿಸಿದನು. ಕೊನೆಗೆ, ಮಜ್ನೂನ್ ಈ ಸ್ಥಿತಿಯಿಂದ ಮರಳಿ ಬರಲು ಸಾಧ್ಯವಾಗದ ಕಾರಣ ಪ್ರೇಮಿಗಳು ಎಂದಿಗೂ ಒಂದುಗೂಡುವುದಿಲ್ಲ. ರೋಮಿಯೋ ಮತ್ತು ಜೂಲಿಯೆಟ್ ಚರ್ಚೊಂದರಲ್ಲಿ ರಹಸ್ಯವಾಗಿ ಭೇಟಿಯಾಗಿ ಮದುವೆಯಾಗುತ್ತಾರೆ. ಆದರೆ ಅವರು ಒಂದು ರಾತ್ರಿಯ ಮಟ್ಟಿಗೆ ಮಾತ್ರ ಸಹಬಾಳ್ವೆ ನಡೆಸಲು ಸಾಧ್ಯವಾಗುತ್ತದೆ. ಎರಡು ಕುಟುಂಬಗಳ ನಡುವಿನ ವೈರಾಗ್ಯವು ದ್ವೇಷವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜೂಲಿಯೆಟ್‌ನ ಸೋದರಸಂಬಂಧಿ ಟೈಬಾಲ್ಟ್‌ (Tybalt)ನನ್ನು ಆಕಸ್ಮಿಕವಾಗಿ ಕೊಂದ ಆರೋಪದಲ್ಲಿ ರೋಮಿಯೋ ಅಪರಾಧಿಯೂ ಆಗಬೇಕಾಗಿ ಬರುತ್ತದೆ.

ಸಾವಿನೊಂದಿಗೆ ಒಂದುಗೂಡುವ ಪ್ರೀತಿ

ಈ ಕಥೆಗಳಲ್ಲಿನ ವಿಯೋಗ ಮತ್ತು ಗಡಿಪಾರು ತೀವ್ರವಾದ ಭಾವನೆ ಮತ್ತು ಕಥಾಪಾತ್ರಗಳ ಆವೇಶ ಭರಿತ ಪ್ರೀತಿಯನ್ನು ಸಂಕೇತಿಸುತ್ತದೆ. ಈ ತೀವ್ರತೆಯು ಬೇರ್ಪಡುವುದರೊಂದಿಗೆ ಕೊನೆಗೊಳ್ಳುವುದು ಅನಿವಾರ್ಯವಾಗಿರುತ್ತದೆ. ಲೈಲಾಳೊಂದಿಗೆ ಮತ್ತೆ ಎಂದಿಗೂ ಒಂದಾಗದಂತೆ
ಗಡಿಪಾರಾಗಿರುವ ಮಜ್ನೂನಿನ ಜೀವನವು ಪ್ರಣಯ ಹತಾಶೆಯಿಂದಾಗಿ ಮರುಭೂಮಿಯಲ್ಲಿ ಕೊನೆಗೊಳ್ಳುತ್ತದೆ. ಅವನ ಪ್ರೀತಿ ದಿನದಿಂದ ದಿನಕ್ಕೆ ನೂರ್ಮಡಿಗೊಳ್ಳತೊಡಗಿತು. ಸರ್ವದಲ್ಲೂ ಆಕೆಯನ್ನೇ ದರ್ಶಿಸುತ್ತಿದ್ದ. ತನ್ನೆದುರಿಗೆ ಬಂದ ಪ್ರಾಣಿಗಳು, ಪರ್ವತಗಳು ಮತ್ತು ಕಣಿವೆಗಳೊಂದಿಗೆ ಅವಳೊಂದಿಗಿದ್ದ ತನ್ನ ಪ್ರೀತಿಯನ್ನು ಗೊಣಗುತ್ತಾ ಅಲೆಮಾರಿಯಾಗಿ ನಡೆದಾಡುತ್ತಿದ್ದ.

ಅಂತೆಯೇ, ತನ್ನ ತಪ್ಪಿಗೆ ಶಿಕ್ಷೆಯಾಗಿ ರೋಮಿಯೋನನ್ನು ಗಡೀಪಾರು ಮಾಡಲಾಗುತ್ತದೆ ಮತ್ತು ಪ್ರೀತಿಯನ್ನು ತ್ಯಜಿಸಲು ಒತ್ತಡ ಹೇರಲಾಗುತ್ತದೆ. ಆದರೆ ಈ ಬಲಾತ್ಕಾರವು ಅವಳ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಆದಾಗ್ಯೂ, ಆತ ಜೂಲಿಯೆಟ್ ಳನ್ನು ತ್ಯಜಿಸಲು ನಿರ್ಬಂಧಿತನಾಗುತ್ತಾನೆ.

ಎರಡೂ ಕಥೆಗಳಲ್ಲೂ ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಂದ ಬೇರ್ಪಟ್ಟು ಅವರು ಅನ್ಯರಿಗೆ ಸೇರುವರು ಎಂಬ ಆಲೋಚನೆಯಿಂದ ವಿಚಲಿತರಾದಂತೆ ಎದುರಾಳಿ ಹೊರಹೊಮ್ಮುತ್ತಾನೆ. ಇಬ್ನ್ ಸಲಾಂ ಮತ್ತು ಪ್ಯಾರಿಸ್ ಕ್ರಮವಾಗಿ ಮಜ್ನುನ್ ಮತ್ತು ರೋಮಿಯೋರ ಪ್ರತಿಸ್ಪರ್ಧಿಗಳಾದರು. ಈ ಕಥೆಗಳಲ್ಲಿನ ಸ್ತ್ರೀ ಪಾತ್ರಗಳು ಪ್ರೀತಿಗೆ ನಿಷ್ಠರಾಗಿರುತ್ತವೆ. ಇತರರು ಅವರನ್ನು ಅನುಸರಿಸುತ್ತಿದ್ದಾಗಲೂ ಅವರು ಯಾವಾಗಲೂ ತಮ್ಮ ಪ್ರಿಯಕರರೊಂದಿಗೆ ಪ್ರಾಮಾಣಿಕವಾಗಿರುತ್ತಾರೆ. ಆದರೆ ಅಂತಿಮ ಫಲಿತಾಂಶವು ಕಥೆಗೆ ಸುಖಾಂತ್ಯವನ್ನು ಹೊಂದಿಲ್ಲ ಎಂಬುವುದಾಗಿದೆ. ಜೋಡಿಗಳಾಗಿ ಜೀವನದಲ್ಲಿ ಒಟ್ಟಿಗೆ ಇರಲು ಸಾಧ್ಯವಾಗದಿದ್ದೆಡೆ ಸಾವಿನಲ್ಲಾದರೂ ಒಟ್ಟಿಗೆ ಇರಬೇಕೆಂದು ಆಶಿಸುತ್ತಾರೆ.

ಸತ್ಯ ಮತ್ತು ತುಲನಾತ್ಮಕತೆ

ಎರಡೂ ಕಥೆಗಳು ಸಾಮಾನ್ಯ ಮತ್ತು ಸಮಾನಾಂತರ ಅಂಶಗಳನ್ನು ಹೊಂದಿದ್ದರೂ ಅವುಗಳ ನಡುವೆ ಸ್ಪಷ್ಟ ವ್ಯತ್ಯಾಸಗಳಿವೆ. ಫುಸುಲಿಯಂತಹ ಪೂರ್ವ ಕವಿಗಳು ಮಾನವ ಪ್ರೀತಿಯನ್ನು ದೈವಿಕ ಪ್ರೇಮವಾಗಿ ಪರಿವರ್ತಿಸಿದರೆ, ಷೇಕ್ಸ್‌ಪಿಯರ್ ಪಾಶ್ಚಾತ್ಯ ದೃಷ್ಟಿಕೋನದ ಮೂಲಕ ದುರಂತಮಯ ಪ್ರಣಯ ಕಥೆಯನ್ನು ಹೇಳುತ್ತಾನೆ. ಲೈಲಾ ಮತ್ತು ಮಜ್ನೂನ್ ಕಥೆಯಲ್ಲಿ ಅನೇಕ ಸೂಫಿ ದೃಷ್ಟಾಂತಗಳು ಮತ್ತು ಚಿಹ್ನೆಗಳನ್ನು ಕಾಣಬಹುದು. ಉದಾಹರಣೆಗೆ ಎದುರಾಳಿಯ ನಡವಳಿಕೆಯು ಓರ್ವ ವ್ಯಕ್ತಿಯನ್ನು ಸೃಷ್ಟಿಕರ್ತನ ಸಂಬಂಧದಿಂದ ಸಾಧ್ಯವಾದಷ್ಟು ದೂರವಿಡಲಾಗುವ ಅಡೆತಡೆಗಳನ್ನು ಪ್ರತಿನಿಧಿಸುತ್ತದೆ. ಒಂದೋ ಅದು ಪೈಶಾಚಿಕ ಕೃತ್ಯ ಅಥವಾ ದುರ್ನಡತೆಗಳನ್ನು ಮತ್ತು ತಪ್ಪುಗಳನ್ನು ಉತ್ತೇಜಿಸುವ ದುಷ್ಟ ಸ್ನೇಹಿತನೋ ಆಗಿರಬಹುದು. ಪ್ರೀತಿಯ ಮೂಲಕ ಲೈಲಾ ಮತ್ತು ಮಜ್ನೂನ್ ತಮ್ಮನ್ನು ತಾವೇ ತ್ಯಜಿಸಿ ಒಂದಾಗುತ್ತಾರೆ. ಎಲ್ಲ ವಿಷಯಗಳಲ್ಲೂ ಮಜ್ನೂನ್ ಲೈಲಾಳನ್ನು ನೋಡುತ್ತಾನೆ ಎಂಬುದರ ಅರ್ಥ ಸೌಂದರ್ಯದ ಮೂಲ ಅವನಲ್ಲಿದೆ ಮತ್ತು ಸುಂದರವಾದ ಎಲ್ಲವೂ ನೈಜ ಸೌಂದರ್ಯದ ಪ್ರತಿಬಿಂಬವಾಗಿದೆ ಎಂದು ಸೂಚಿಸುತ್ತದೆ. ಆ ವಾಸ್ತವವೇ ಇಲಾಹ್.

ಕನ್ನಡಕ್ಕೆ: ಎ.ಕೆ. ಫೈಸಲ್ ಗಾಳಿಮುಖ


Dr. ಅಲಿ ತುಫೆಕ್ಚಿ

Associate professor in Music- interpretation and works as a “Ney” lecturer at the ITU Turkish music state conservatory. He has a book titled Exploring Ney Techniques. History, poetry and music cultures of the regions of Andalusia-North Africa are the fields of his interest.

ಭಾರತೀಯ ಮತ್ತು ಇಸ್ಲಾಮಿಕ್ ದಾರ್ಶನಿಕತೆಯಲ್ಲಿ ಕಸ್ತೂರಿಯ ಸುಗಂಧ

ಕಸ್ತೂರಿ ಸಾಕಷ್ಟು ಪ್ರಸಿದ್ಧಿ ಹೊಂದಿದ್ದರೂ, ಅಪರಿಚಿತವಾಗಿಯೇ ಉಳಿದ ಇದರ ಇನ್ನಷ್ಟು ವಿವರಗಳ ಕುರಿತು ಈ ಲೇಖನವು ತಿಳಿಯಪಡಿಸುತ್ತದೆ. ಪ್ರಾಚೀನ ಮತ್ತು ಆಧುನಿಕ ಸುಗಂಧ ವಸ್ತುಗಳ ಜೊತೆಗೆ ಕಸ್ತೂರಿಯ ಮೂಲ, ಇದರ ಗುಣಲಕ್ಷಣಗಳು, ವಿಭಿನ್ನ ಉಪ ಉತ್ಪನ್ನಗಳು ಹಾಗೂ ಇದರ ವಿವಿಧ ಉಪಯೋಗಗಳ ಕುರಿತು ನಿಮಗೆ ತಿಳಿದಿರಬಹುದು. ಆದರೂ, ಕಸ್ತೂರಿಯ ಇತಿಹಾಸ ಮತ್ತು ಇದಕ್ಕಿರುವ ಆಧ್ಯಾತ್ಮಿಕ ಮಹತ್ವದ ಕುರಿತು ತಿಳಿದುಕೊಳ್ಳುವುದು ಆಸಕ್ತಿದಾಯಕವಾಗಿದೆ. ಧಾರ್ಮಿಕ ಆಯಾಮವನ್ನು ಉಲ್ಲೇಖಿಸದೆ ಕಸ್ತೂರಿಯ ಬಗೆಗಿನ ವಿವರಣೆಯನ್ನು ಮುಗಿಸುವುದೇ ಅಸಾಧ್ಯ. ಮುಖ್ಯವಾಗಿ, ಇಸ್ಲಾಂ ಇಲ್ಲದಿದ್ದರೆ ಕಸ್ತೂರಿ ಇಷ್ಟು ಪ್ರಸಿದ್ಧಿ ಪಡೆಯುತ್ತಿರಲಿಲ್ಲ ಎನ್ನುವುದು ಕಟುವಾಸ್ತವ.

ಕಸ್ತೂರಿಗೆ ಇಸ್ಲಾಮಿಕ್ ಜಗತ್ತಿನಲ್ಲೇ ಉನ್ನತ ಸ್ಥಾನವಿದೆ. ಇಸ್ಲಾಮಿಕ್ ಸಾಂಸ್ಕೃತಿಕ ಲೋಕದಲ್ಲಿ ಕಸ್ತೂರಿಗೆ ಅಷ್ಟೊಂದು ಮಹತ್ವ ನೀಡಲಾಗಿದೆ. ಕಾಳಿದಾಸ ಕೂಡ ತನ್ನ ಋತುಸಂಹಾರದಲ್ಲಿ ಕಸ್ತೂರಿಯ ಕುರಿತು ಪರಾಮರ್ಶೆ ನಡೆಸುತ್ತಾನೆ. ವಾಸ್ತವದಲ್ಲಿ, ಕಸ್ತೂರಿಯ ನೈಸರ್ಗಿಕ ಗಾಢ ಕರಿಬಣ್ಣಕ್ಕಿಂತಲೂ, ಭಾರತ ಎಲ್ಲಾ ಕಾಲದಲ್ಲೂ ಕರ್ಪೂರದ ಪರಿಶುದ್ಧತೆಗೆ ಆದ್ಯತೆ ನೀಡಿದೆ. ಅದನ್ನು ವೇದಕಾಲೀನ ಭಾರತದ ಸುಗಂಧ ದ್ರವ್ಯಗಳ ಬಗ್ಗೆ ನೀವು ಓದಿ ನೋಡಿದಾಗ ಕಾಣಬಹುದು.
ಈಗ ಕೆಲವು ಪ್ರಶ್ನೆಗಳು ಸ್ವತಃ ಉದ್ಭವಿಸಬಹುದು. ಹಾಗಾದರೆ, ಪರ್ಷಿಯನ್ ಕವಿತೆಗಳಲ್ಲಿ ಕಸ್ತೂರಿಯನ್ನು ಯಾಕೆ ಅಷ್ಟೊಂದು ಸೊಗಸಾಗಿ ವರ್ಣಿಸಲಾಗಿದೆ? ಮುಸ್ಲಿಂ ತತ್ವಶಾಸ್ತ್ರಜ್ಞರಿಂದ ಕಸ್ತೂರಿ ಇಷ್ಟೊಂದು ಪ್ರಶಂಸೆ ಪಡೆದುಕೊಂಡಿರುವುದು ಯಾಕೆ? ಸುಗಂಧ ಎಂದರೆ ಕಸ್ತೂರಿಯೇ ಅನ್ನುವಷ್ಟು, ಕಸ್ತೂರಿ ಇಲ್ಲದೆ ಯಾವುದೇ ಮುಸ್ಲಿಂ ಆಚರಣೆಯನ್ನು ಕಲ್ಪಿಸಿಕೊಳ್ಳಲಾಗದಷ್ಟು ಇಸ್ಲಾಮಿನಲ್ಲಿ ಕಸ್ತೂರಿ ಯಾಕಿಷ್ಟು ಅಂತರ್ಗತವಾಗಿ ಲೀನವಾಗಿಬಿಟ್ಟಿದೆ? ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ, ಕಸ್ತೂರಿಯ ಗೂಢ ಇಸ್ಲಾಮಿಕ್ ʼಸತ್ಯʼಗಳ ಕುರಿತು ಪರಿಶೋಧಿಸಬೇಕು.
ಒಟ್ಟಾರೆ ಭಾರತೀಯ ಸಾಹಿತ್ಯದಲ್ಲಿ ಕಸ್ತೂರಿ ವಿರಳವಾಗಿ ಉಲ್ಲೇಖಿಸಲ್ಪಟ್ಟಿದೆ ಎಂಬುದನ್ನು ನಾವು ಮೊದಲು ಗಮನಿಸಬೇಕು. ಹಿಮಾಲಯದ ತಪ್ಪಲಿನ ಬಿಳಿ ಕಸ್ತೂರಿ ಮೃಗಗಳಿಂದ ಉತ್ಪತ್ತಿಗೊಳ್ಳುವ ಕಸ್ತೂರಿಯು ವೇದಗಳು ಮತ್ತು ಎಲ್ಲಾ ಸಂಸ್ಕೃತ ಸಾಹಿತ್ಯಗಳಲ್ಲಿಯೂ ತೀರಾ ವಿರಳವಾಗಿ ಮಾತ್ರ ಉಲ್ಲೇಖಿಸಲಾಗಿದೆ ಎನ್ನುವುದೇ ಆಶ್ಚರ್ಯಕರ. ಇದು ವೇದ ಕಾಲದ ಸಂಪ್ರದಾಯಗಳಲ್ಲಿ, ಕಸ್ತೂರಿಗೆ ಕೇವಲ ಸಾಂಕೇತಿಕ ಮಹತ್ವವನ್ನು ಮಾತ್ರ ನೀಡಲಾಗಿದೆ ಎನ್ನುವುದನ್ನು ತಿಳಿಸುತ್ತದೆ.
ಕಸ್ತೂರಿ ಮೃಗವು ತನ್ನದೇ ಸುವಾಸನೆಗೆ ಮಾರುಹೋಗಿ ಅಥವಾ ಮತ್ತನಾಗಿ ಆ ಮೋಹಕ ಸುವಾಸನೆಯ ಮೂಲ ಹುಡುಕಿ ಹಿಮಾಲಯನ್ ಕಾಡುಗಳನ್ನು ಮತ್ತು ಪರ್ವತಗಳನ್ನು ಹುಡುಕುತ್ತಾ ಅಲೆದಾಡುತ್ತದೆ ಎಂದು ನಂಬಲಾಗಿದೆ. ತನ್ನನ್ನು ಮೋಹಕವಾಗಿ ಮೋಡಿಮಾಡಿದ ಸುಗಂಧವು ತನ್ನೊಳಗೆ ಅಡಗಿದೆ ಎಂಬ ಸತ್ಯವನ್ನು ಅದು ಎಂದಿಗೂ ಅರಿತುಕೊಳ್ಳುವುದಿಲ್ಲ ಎಂಬ ಅಂಶವು ಮನುಷ್ಯನು ಲೌಕಿಕ ಸುಖಗಳನ್ನರಸಿ ಅಲೆದಾಡುವುದನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಸುಪ್ತವಾಗಿ ಮನುಷ್ಯನೊಳಗೆ ಅಡಗಿರುವ ಆತ್ಮದ ಘಮಲೇ ಅತ್ಯುತ್ತಮ ಸುಗಂಧ ಎನ್ನುವುದು ಭಾರತೀಯ ನಂಬುಗೆ. ಓರ್ವ ತನ್ನದೇ ಆತ್ಮವನ್ನು ಅರಸಿ ತನ್ನೊಳಗೆ ನಿಂತು ನೋಡಿಕೊಳ್ಳುವ ಪ್ರಕ್ರಿಯೆ ಅಥವಾ ಈ ಆದ್ಯಾತ್ಮಿಕ ಅನುಭವ ಸಂಪ್ರದಾಯವಾದಿ ಬರಹಗಾರರಿಗೆ ಪ್ರಿಯವಾದುದು. ಇದು ಇಸ್ಲಾಮಿಗೂ ಪರಕೀಯವಲ್ಲ.
ಸಾಂಬ್ರಾಣಿ, ಗುಲಾಬಿ, ಧೂಪ (ಆಲುಮಡ್ಡಿ) ಅಥವಾ ಭಾರತದ ಇನ್ಯಾವುದೇ ಸುಗಂಧ ವಸ್ತುಗಳಿಗಿಂತ ಕಸ್ತೂರಿಯು ಜನಪ್ರಿಯವಾಗಿತ್ತು ಎಂದೇ ಹೇಳಬಹುದು. “ಹಿಮಾಲಯನ್ ಪರ್ವತ ಶಿಖರಗಳು ಕಸ್ತೂರಿ ಪರಿಮಳದಿಂದ ದಟ್ಟವಾಗಿವೆ” ಎಂದಷ್ಟೇ ನಾಲ್ಕನೇ ಶತಮಾನದ ಕವಿ ಕಾಳಿದಾಸ ತನ್ನ ಇಡೀ ʼಮೇಘದೂತʼದಲ್ಲಿ ಕಸ್ತೂರಿಯ ಕುರಿತು ಮಾಡಿರುವ ಉಲ್ಲೇಖ.. ಅದೇ ವೇಳೆ, ಭಾರತದಿಂದ ಮಧ್ಯಪ್ರಾಚ್ಯಕ್ಕೆ ಹೋಗುತ್ತಿದ್ದ ಸರಕು ಸರಂಜಾಮುಗಳಲ್ಲಿ ಕಸ್ತೂರಿ ಕೂಡಾ ಸ್ಥಾನ ಪಡೆದಿದ್ದವು ಎಂದು ಸೋಗ್ಡಿಯನ್ ದಾಖಲೆಗಳು ತೋರಿಸುತ್ತವೆ. ಮಧ್ಯಪ್ರಾಚ್ಯದೊಂದಿಗಿನ ಕಸ್ತೂರಿಯ ಒಡನಾಟವು ಪರ್ಷಿಯನ್ ಕವಿಗಳ ಅಲೌಕಿಕ ಪ್ರೇಮ ಕವಿತೆಗಳಲ್ಲಿ ಧಾರಳವಾಗಿ ಕಾಣ ಸಿಗುವ ಕಸ್ತೂರಿಯ ಉಲ್ಲೇಖದಿಂದಲೂ ನಾವು ಊಹಿಸಬಹುದು. ಅಲೌಕಿಕ ಲೋಕದ ಸೌಂದರ್ಯವನ್ನು ವರ್ಣಿಸಲು, ಮತ್ತು ಅದರೊಂದಿಗಿರುವ ತಮ್ಮ ವಿಪರೀತ ಮೋಹವನ್ನು ವಿವರಿಸಲು ಕಸ್ತೂರಿಯ ಉಪಮೆಯನ್ನು ಬಳಸುವ ಕುರಿತು ಪರ್ಶಿಯನ್ ಕಾವ್ಯ ಓದಿದವರ ಅರಿವಿಗೆ ಬರುತ್ತದೆ.


“ನಿನ್ನ ಮುಖದಲಿ ಹಳ್ಳಿಯ ಎಲ್ಲಾ ಪ್ರಕಾಶವೂ, ನಿನ್ನ ಕೂದಲು ಪೂರಾ ಕಸ್ತೂರಿಯೂ” ಎಂದು ಹತ್ತನೇ ಶತಮಾನದಲ್ಲಿ ಇಮಾಮ್ ತಿರ್ಮಿದಿ ಹೇಳುತ್ತಾರೆ. ಅದೇ, ಒಂದು ಶತಮಾನದ ಬಳಿಕ ಮಸ್ಊದ್ ಸಅದ್ “ನಿನ್ನ ಸುಂದರ ಗಂಧವುಳ್ಳ ಕರಿಕೂದಲಿಗೆ ಖೋತಾನಿನ ಯಾವುದೇ ಕಸ್ತೂರಿಗೂ ತಲುಪಲು ಸಾಧ್ಯವಿಲ್ಲ” ಎನ್ನುತ್ತಾರೆ. ಹದಿಮೂರನೆಯ ಶತಮಾನದಲ್ಲಿ, ಪ್ರಸಿದ್ಧ ಸೂಫಿ ಸಅದಿ ಶಿರಾಝ್ ತನ್ನ ʼಗುಲಿಸ್ತಾನ್ʼ ನಲ್ಲಿ, “ಈ ಮೋಡಿಮಾಡುವ ರಮ್ಯ ಮೋಹಕ ಸುವಾಸನೆ ಕಸ್ತೂರಿಯದ್ದೋ ಅಥವಾ ಅಂಬರ್ ಗ್ರಿಸಿದ್ದೋ (ತಿಮಿಂಗಿಲ ಹೊರಸೂಸುವ ಪರಿಮಳಯುಕ್ತ ವಸ್ತು)” ಎಂದು ಕೇಳುತ್ತಾರೆ.
ಕಸ್ತೂರಿಯ ಸೌಂದರ್ಯವು ಅದರ ಭೌತಿಕ ಕಾಣ್ಕೆಯಲ್ಲಿಲ್ಲ. ಸ್ನಾನಗೃಹದಲ್ಲಿನ ಆವಿಯಲ್ಲಿ, ಮರೆಯಲ್ಲಿ, ಲಘುವಾದ ಗಾಳಿ ಮೊದಲಾದಂತೆ ಎಲ್ಲಿಯೂ ಆಪ್ತವಾಗಿ ಹೊಂದಿಕೊಳ್ಳುವ ಸುಗಂಧ ವಸ್ತು ಕಸ್ತೂರಿ. ಸುಗಂಧ ದ್ರವ್ಯಗಳ ಸಂಪ್ರದಾಯದಲ್ಲಿ ಕಸ್ತೂರಿಯ ಉಪಸ್ಥಿತಿಯು ತೀರಾ ನಗಣ್ಯ ಎಂಬ ಸಂಗತಿಯನ್ನು ಮನದಲ್ಲಿಟ್ಟುಕೊಂಡೇ ಇಸ್ಲಾಮಿಕ್ ಜಗತ್ತಿನಲ್ಲಿ ಇದರ ಉನ್ನತ ಸ್ಥಾನವನ್ನು ತಿಳಿಯಬೇಕು. ಇಸ್ಲಾಮಿಕ್ ಲೋಕದೊಳಗೆ ಕಸ್ತೂರಿಯ ಪ್ರವೇಶವನ್ನು ಅರ್ಥಮಾಡಿಕೊಳ್ಳಲು ಹದೀಸ್ ಮೂಲಕ ಆಳವಾಗಿ ಸಾಗಬೇಕಾಗಿದೆ. “ಮುದ್ರೆಯೊತ್ತಿದ ಶುದ್ಧವಾದ ದ್ರಾಕ್ಷಾರಸದಿಂದ ಅವರಿಗೆ ಕುಡಿಯಲು ನೀಡಲ್ಪಡುವುದು. ಇದರ ಪದಾರ್ಥ ಕಸ್ತೂರಿ ಆಗಿರುವುದು” ಎಂದು ಸೂರಾ: ಮುತ್ವಫೀಫಿನಲ್ಲಿ ಒಂದು ಬಾರಿ ಕಸ್ತೂರಿಯ ಬಗ್ಗೆ ಉಲ್ಲೇಖಿಸಲಾಗಿದೆ. ಭೂಮಿ, ಸ್ವರ್ಗ, ಮಾನವೀಯತೆ ಮತ್ತು ಅಮರತ್ವದ ನಡುವಿನ ವಿಪರಿತಾತ್ಮಕ ಸಂಬಂಧವನ್ನು ಸೂಚಿಸುವ ಸುಂದರವಾದ ಸೂಫಿ ಕವಿತೆಗಳು ಈ ಸೂಕ್ತಿಯಲ್ಲಿನ ಮದ್ಯ ಹಾಗು ಕಸ್ತೂರಿ ನಡುವಿನ ಸಂಪರ್ಕವನ್ನು ಎತ್ತಿ ತೋರಿಸುತ್ತದೆ.
ಶುದ್ಧ ಅಥವಾ ಅಪರೂಪದ ದ್ರಾಕ್ಷಾರಸವನ್ನು ಶುದ್ಧ ದೈವಿಕ ಸತ್ವದ ಸಂಕೇತವಾಗಿ ಬಳಸಲಾಗಿದೆ. ಹಾಗಾಗಿ ಅಲವಿ ಅದನ್ನು “ಆದಮನ ಮುಂಚೆಯೇ ಮುದ್ರೆಯೊತ್ತಲ್ಪಟ್ಟ ದ್ರಾಕ್ಷಾರಸ” ಎಂದು ಪರಾಮರ್ಶಿಸುತ್ತಾರೆ. ಸ್ವರ್ಗದೊಂದಿಗಿನ ಕಸ್ತೂರಿಯ ಸಂಬಂಧವು ಅದರ ಕಾಲ್ಪನಿಕ ಮೌಲ್ಯದ ಮೂಲ ಎನ್ನುವುದು ನಾವು ಈ ಮೂಲಕ ಅರ್ಥ ಮಾಡಿಕೊಳ್ಳಬಹುದು. ಕಿತಾಬುಲ್-ಅಹ್ವಾಲ್ ವಲ್ ಕಿಯಾಮಾ ಹೀಗೆ ಹೇಳುತ್ತದೆ: “ಈಡನ್ ತೋಟದ (ಸ್ವರ್ಗದ ತೋಟ) ಗೋಡೆಗಳು ಚಿನ್ನದಿಂದ ಕೂಡಿವೆ. ಇದನ್ನು ಕಸ್ತೂರಿಯೊಂದಿಗೆ ಬೆಳ್ಳಿಯ ಇಟ್ಟಿಗೆಗಳಿಂದ ಮತ್ತು ಕೇಸರಿ, ಮರಳಿನೊಂದಿಗೆ ನಿರ್ಮಿಸಲಾಗಿದೆ. ಒಂದು ಹದೀಸನ್ನು ಉಲ್ಲೇಖಿಸಿ, ಇಮಾಮ್ ಗಝಾಲಿ, “ಇದರ (ಈಡನ್) ನೆಲ ಕೇಸರಿಯದ್ದೂ ಮತ್ತು ಅದರ ಮಣ್ಣು ಕಸ್ತೂರಿಯೂ ಆಗಿದೆ” ಎಂದು ಹೇಳುತ್ತಾರೆ.
“ಅಲ್ಲಿ‌ ಕಸ್ತೂರಿಯ ದೊಡ್ಡ ಪರ್ವತವಿದೆ, ಅದರಿಂದ ಸಲ್ಸಬೀಲ್ ನದಿ ಹರಿಯುತ್ತದೆ. ಕೇಸರಿ, ಅಂಬರ್, ಕಸ್ತೂರಿ ಮತ್ತು ಕರ್ಪೂರ ಹೂರಿಗಳ ಆಕರ್ಷಕ ಕೂದಲಿನ ಸೌಂದರ್ಯದ ಮುಖ್ಯ ಆಧಾರ” ಎಂದೂ ಇಮಾಮ್ ಬುಖಾರಿ ಹೇಳುತ್ತಾರೆ. ಇತರ ಧರ್ಮಗಳಿಗೆ ಹೋಲಿಸಿದರೆ ಸ್ವರ್ಗ ಮತ್ತು ಸುಗಂಧದ ನಡುವೆ ಅವಿನಾಭಾವ ಸಂಬಂಧವನ್ನು ಇಸ್ಲಾಂ ಧರ್ಮವು ಕಂಡಿದೆ.
ಮಸ್ಊದ್ ಉಲ್ಲೇಖಿಸಿದ ಹದೀಸಿನಲ್ಲಿ “ಅಧಪತನಗೊಂಡ ಆದಮನನ್ನು ಸ್ವರ್ಗದಿಂದ ಹೊರಹಾಕಿದಾಗ ನೇರವಾಗಿ ಭಾರತಕ್ಕೆ ಬಂದು ಬಿದ್ದರಂತೆ. ಬೀಳುವಿಕೆಯ ಜಂಜಾಟದಲ್ಲಿ ಸ್ವರ್ಗದ ಎಲೆಯಿಂದ ಮಾಡಲಾದ ಅವರ ಬಟ್ಟೆ ಚೆದುರಿ ಬಿಟ್ಟಿತಂತೆ. ಹಾಗೆ ಭಾರತೀಯ ಕಾಡುಗಳು ಈಡನ್ (ಸ್ವರ್ಗದ) ಪರಿಮಳಗಳಿಂದ ನಳನಳಿಸತೊಡಗಿತು. ಹೀಗೆ ಈಡನ್ ನಿಂದ ಕಳೆದುಹೋದ ಸುಗಂಧ ಕಸ್ತೂರಿ ಎನ್ನುವುದೇ ಇಸ್ಲಾಮಿನಲ್ಲಿ ಕಸ್ತೂರಿಗೆ ಪರಮೋನ್ನತ ಅಸ್ತಿತ್ವ ಲಭಿಸಲು ಕಾರಣಕರ್ತವಾಗಿರುವುದು. ತನ್ನ ಸೃಷ್ಟಿಕರ್ತನನ್ನು ಮುಖಾಮುಖಿಯಾಗಿ ಎದುರಿಸುವ ʼಆದಮೀಯʼ ಸ್ಥಿತಿಗೆ ಮರಳುವ ಮನುಷ್ಯನ ಸಹಜ ಪವಿತ್ರತೆಯ ಸಂಕೇತವೇ ಕಸ್ತೂರಿ.
ಹುತಾತ್ಮರ ದೇಹಗಳು ಸ್ವರ್ಗದಲ್ಲಿ ಕಸ್ತೂರಿಯಾಗಿ ಬದಲಾಗುತ್ತದೆ ಎಂದು ಇಮಾಮ್ ಮುಸ್ಲಿಂ ತಮ್ಮ ಒಂದು ಹದೀಸ್‌ನಲ್ಲಿ ಹೇಳುತ್ತಾರೆ. ಇನ್ನೊಂದೆಡೆ, ಅನುಗ್ರಹೀತರಾದ ಮನುಷ್ಯರು ಮಲವಿಸರ್ಜನೆ ಮಾಡುವುದಿಲ್ಲ, ಆದರೆ ಅವರ ತ್ಯಾಜ್ಯವನ್ನು ಕಸ್ತೂರಿಗಳಾಗಿ ಪರಿವರ್ತಿಸಿ, ದೇಹದಾದ್ಯಂತ ಸುಗಂಧವನ್ನು ಹರಡಲಾಗುತ್ತದೆ ಎಂದು ಹೇಳಲಾಗಿದೆ.
ಮುಹಮ್ಮದ್ (ಸ) ರ ಬೆವರಿಗೆ ಕಸ್ತೂರಿಯ ಪರಿಮಳವಿದೆ ಎಂಬುದು ಮೇಲಿನ ಹದೀಸನ್ನು ದೃಡೀಕರಿಸುತ್ತದೆ. ಪ್ರವಾದಿ ಮುಹಮ್ಮದ್ (ಸ) ರವರ ಮಲವಿಸರ್ಜನೆ ಭೂಮಿಯನ್ನು ಸ್ಪರ್ಷಿಸುತ್ತಿದ್ದಂತೆಯೇ ಭೂಮಿ ಅದನ್ನು ಸ್ವಾಧೀನಿಸಿ ಆ ಸ್ಥಳದಲ್ಲಿ ಕಸ್ತೂರಿಯ ವಾಸನೆಯು ಹರಡುತ್ತದೆ ಎಂದು ಇಮಾಮ್ ಸುಯೂತಿ ಹೇಳುತ್ತಾರೆ. ಈ ಮರುಭೂಮಿಯಲ್ಲಿ ಆತ್ಮದೊಂದಿಗಿನ ಸರ್ವೋಚ್ಚ ಪರಿಕಲ್ಪನೆಯಾಗಿದೆ ಕಸ್ತೂರಿ. ಮಲವಿಸರ್ಜನೆ ಮತ್ತು ಬೆವರು ಕಸ್ತೂರಿಯಾಗಿ ಪರಿವರ್ತನೆ ಆಗುವುದು ಸಾವು ಮತ್ತು ನಾಶವನ್ನು ಅಮರತ್ವಕ್ಕೇರಿಸುವ ಸೃಷ್ಟಿಕರ್ತನ ಸಾಮರ್ಥ್ಯವನ್ನು ಸೂಚಿಸುತ್ತದೆ. ಪವಿತ್ರತೆಯನ್ನು ಗಳಿಸುವ ಕಸ್ತೂರಿಯನ್ನು ಕಳಂಕಿತ ಮಾನುಷಿಕತೆಯ ದಿವ್ಯ ವಿಮೋಚನೆಯೊಂದಿಗೆ ಸೂಫಿಗಳು ಉಪಮೆಯ ಮೂಲಕ ಹೋಲಿಸುತ್ತಾರೆ. ಕಸ್ತೂರಿ ಮೃಗಗಳ ಕಲುಷಿತ ರಕ್ತವು ಕಸ್ತೂರಿಯಾಗಿ ಬದಲಾಗುವಂತೆ ಮನುಷ್ಯನ ಕೆಟ್ಟ ಕಾರ್ಯಗಳಿಂದ ಒಳ್ಳೆಯ ಕಾರ್ಯಗಳನ್ನು ಬೇರ್ಪಡಿಸಿ ಎತ್ತಬಹದು.
ಅಧಃಪತನಕ್ಕೂ ಮೊದಲಿನ ಮನುಷ್ಯನ ಸತ್ವವನ್ನು ಕಸ್ತೂರಿ ಪ್ರತಿಫಲಿಸುತ್ತದೆ ಎನ್ನುವುದೇ ಇದರ ಒಟ್ಟಾರೆ ಸಾರ. ಮುವಶ್ಶಹಾದ ಕೊನೆಯ ಅಧ್ಯಾಯವು “ಉಪ್ಪು ಮತ್ತು ಸುಗಂಧದ್ರವ್ಯಗಳು ಸಿಹಿ ಮತ್ತು ಕಸ್ತೂರಿಯಾಗಿದೆ” ಎಂದು ಇಬ್ನುಲ್ ಮುಲ್ಕ್ ಹೇಳುತ್ತಾರೆ. ಆ ಮೂಲಕ ಅವರು ಉದ್ಧೇಶಿಸಿರುವುದು ಅದರ ಸತ್ವವನ್ನು. ʼಕಸ್ತೂರಿ ಮೃಗಗಳ ರಕ್ತವೇ ಕಸ್ತೂರಿ” ಎಂದು ಕವಿ ಮುತನಬ್ಬಿ ಹೇಳುತ್ತಾರೆ. ಪೂರ್ವಜರ ಅಸ್ತಿತ್ವವು ಅವರ ವಂಶಸ್ಥರಲ್ಲಿದೆ ಎನ್ನುವುದನ್ನು ಇದು ವಿವರಿಸುತ್ತದೆ. ಅಧಃಪತನದ ನಂತರ ಮಾನವ ಕುಲ ಕಳೆದುಕೊಂಡದ ಸುಂದರ ಸತ್ವವೇ ಶುದ್ಧ ಮತ್ತು ನಿಜವಾದ ಸತ್ವ. ಇದು ರಾಜರದ್ದೋ ಅಥವಾ ವೀರ ನಾಯಕರದ್ದೋ ಸತ್ವವಲ್ಲ. ಅಸಂಖ್ಯಾತ ಒಳ್ಳೆಯ ಕಾರ್ಯಗಳನ್ನು ಮಾಡಿದ ಸಜ್ಜನರೂ, ಪರಿಶುದ್ಧ ಜನರ ಮೂಲಕ ಆದಮರ ನರಗಳಲ್ಲಿ ಹರಿಯುವ ಅದೇ ಸತ್ವವಾಗಿದೆ ಸೂಫಿಗಳು ಮತ್ತು ಸಾತ್ವಿಕರ ಭವ್ಯವಾದ ಸತ್ವ!

ಮೂಲ: ಅಲೆಕ್ಸಾಂಡರ್ ಹೆಲ್ವಾನಿ
ಕನ್ನಡಕ್ಕೆ: ಎ.ಕೆ ರುಕ್ಸಾನ ಗಾಳಿಮುಖ

ದೇವರ ಜಾಡು ಹಿಡಿದು ಹೊರಟ ಮಹಿಳಾ ಯಾತ್ರಿಕರು

ನಾನು ಈ ಯಾತ್ರೆ ಆರಂಭಿಸಿದ್ದು ಧರ್ಮಭ್ರಷ್ಟತೆಯ ಮೂಲಕ. ಆಗ ನನಗೆ 15 ವರ್ಷ ವಯಸ್ಸಿರಬಹುದು. ಶಸ್ತ್ರಚಿಕಿತ್ಸೆಯೊಂದನ್ನ ಮುಗಿಸಿ ನಾನು ಪ್ಯಾರಿಸ್‍ನಲ್ಲಿ ಬೇಸಿಗೆ ದಿನಗಳನ್ನು ಕಳೆಯುತ್ತಿದೆ. ವಾಸ್ತವದಲ್ಲಿ ಈ ಶಸ್ತ್ರಚಿಕಿತ್ಸೆ ನನ್ನ ಆರೋಗ್ಯದ ಜತೆಗೆ ಜೀವನವನ್ನೂ ಬದಲಿಸಿತು. ಈ ಸಂತೋಷದ ದಿನಗಳಿಗಾಗಿ ನಾನು ಆ ಪರಮಾತ್ಮನಿಗೆ ಎಲ್ಲಾ ರೀತಿಯಲ್ಲೂ ಆಭಾರಿಯಾಗಿದ್ದೇನೆ. ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾದ ಪ್ರಾರ್ಥನೆಯನ್ನು ದಿನಕ್ಕೆ ಐದು ಬಾರಿ ನಿಖರವಾಗಿ ನಿರ್ವಹಿಸಿ ಆ ಭಗವಂತನಿಗೆ ಸ್ತುತಿ ಹಾಡುತ್ತಿದ್ದೆ. (ಓರ್ವ ಮುಸಲ್ಮಾನ ತಾನು ಸಂಪೂರ್ಣವಾಗಿ ಮುಸ್ಲಿಮನಾಗಬೇಕಿದ್ದರೆ 5 ನಂಬಿಕೆಗಳಲ್ಲಿ ಗಟ್ಟಿಗೊಂಡಿರಬೇಕು. ಅಲ್ಲಾಹನೊಬ್ಬನೇ, ಮುಹಮ್ಮದ್ ಅವನ ಸಂದೇಶವಾಹಕ ಎಂದು ನಂಬವುದು. ದಿನಕ್ಕೈದು ಬಾರಿ ಪ್ರಾರ್ಥನೆ ಸಲ್ಲಿಸುವುದು. ಝಕಾತ್ (ದಾನ) ನೀಡುವುದು. ಉಪವಾಸ ಮಾಡುವುದು ಹಾಗೂ ಹಜ್ಜ್ ಯಾತ್ರೆ (ಮೆಕ್ಕಾದಲ್ಲಿರುವ ಕಆಬಾ ಸಂದರ್ಶನ) ನಡೆಸುವುದು) ಅದು ಸೆಖೆ ಹೆಚ್ಚಿದ್ದ ದಿನವಾಗಿತ್ತು. ಖಿಬ್ಲಾ ಕಡೆ (ಮೆಕ್ಕಾದ ಕಅಬಾ ಇರುವ ದಿಕ್ಕು) ಮುಖಮಾಡಿ ಕುರುಆನಿನ ವಚನಗಳನ್ನು ಜಪಿಸುತ್ತಾ ಳುಹುರ್ (ಮಧ್ಯಾಹ್ನದ ಪ್ರಾರ್ಥನೆ) ನಮಾಜ್ ನಿರ್ವಹಿಸುವ ವೇಳೆಗೆ ಅದೊಂದು ಯೋಚನೆ ನನ್ನೊಳಗೆ ಅನೂಹ್ಯ ಅಲೆಗಳಂತೆ ಬಂದು ಅಪ್ಪಳಿಸಿತು. ವಾಸ್ತವದಲ್ಲಿ ಆ ಯೋಚನೆ ನನ್ನನ್ನು ಕಸಿವಿಸಿಗೊಳ್ಳುವಂತೆ ಮಾಡಿತು.

ನೀನು ಯಾರನ್ನು ಪೂಜಿಸುತ್ತಿದ್ದೆ..? ನಿನ್ನ ಪ್ರಾರ್ಥನೆ ಯಾರಿಗಾಗಿ..? ಎಂಬ ಯೋಚನೆಗಳವು. ಆದರೆ ಆ ಯೋಚನೆಗಳನ್ನೆಲ್ಲಾ ಗೆಲ್ಲುವ ಪ್ರಯತ್ನ ಮಾಡಿದೆ. ಆದರೆ ನಾನು ನಮಾಜ್ ನಿರ್ವಹಿಸುವಾಗ, ಕುರುಆನ್ ಪಠಿಸುವಾಗ ನನ್ನ ತಲೆಯಲ್ಲಿ ಆ ಪ್ರಶ್ನೆಗಳು ಪುನರಾವರ್ತನೆಗೊಳ್ಳಲು ಶುರುವಾಯ್ತು.

“ನಾನು ದೇವರನ್ನು ಪೂಜಿಸುತ್ತಿದ್ದೇನೆ.!!” ಆದರೆ ಯಾರವನು..? ಅವನೇನು..? ಆ ದೇವರು ಎಲ್ಲಿದ್ದಾನೆ..? ಎಂಬ ಪ್ರಶ್ನೆಗಳು ನನ್ನನ್ನು ಗಾಢವಾಗಿ ಆವರಿಸಿಬಿಟ್ಟಿತು. ನನ್ನೊಳಗೆ ಎಡೆಬಿಡದೆ ಅನೂಹ್ಯ ರೀತಿಯಲ್ಲಿ ಮತ್ತೆ ಮತ್ತೆ ಈ ಯೋಚನೆಗಳು ಪ್ರತಿಧ್ವನಿಸಲು ಆರಂಭವಾಯ್ತು. ನನ್ನ ದೇಹ ಯೋಚನೆಯಿಂದ ಬೇರ್ಪಟ್ಟು, ಇಬ್ಭಾಗವಾಯ್ತು. ದೇಹದ ಒಂದು ಭಾಗವನ್ನು ಯಾವುದೋ ಅಗೋಚರ ಶಕ್ತಿ ನಿಯಂತ್ರಿಸುತ್ತಿರುವಂತೆ ಭಾಸವಾಗಲು ಶುರುವಾಯ್ತು. ಮತ್ತೊಂದೆಡೆ ದೇಹದ ಉಳಿದರ್ದ ಭಾಗದಲ್ಲಿ ಬಿಡಿಸಲಾಗದ ಒಗಟಿನಂತೆ ಈ ಯೋಚನೆಗಳು ಬಳ್ಳಿಗಳಂತೆ ಸುತ್ತಿಕೊಂಡವು. ಆಗಲೂ ನಾನು ಪ್ರಾರ್ಥನೆಯನ್ನು ಕೈ ಬಿಡದೆ, ಆ ಸೃಷ್ಟಿಕರ್ತನ ಧ್ಯಾನದಲ್ಲಿದ್ದೆ. ಅನಗತ್ಯ ಯೋಚನೆಗಳನ್ನು ಒಳಗಿಂದ ತೊಡೆದು ಹಾಕುವ ಸಲುವಾಗಿ ನನ್ನ ಮುಂದಿದ್ದ ಬೀರುವಿನತ್ತ ನನ್ನ ಗಮನವನ್ನು ಹರಿಸಲು ಶುರುವಿಟ್ಟುಕೊಂಡೆ. ಆ ನನ್ನ ಪ್ರಯತ್ನ ಯಶ ಕಂಡಿತು. ನಾನು ಸುಜೂದ್ (ಅಲ್ಲಾಹನ ಮುಂದೆ ತಲೆಬಾಗುವುದು) ಮಾಡುವ ಹೊತ್ತಿಗೆ ನನ್ನೊಳಗಿದ್ದ ಆ ಯೋಚನೆಗಳೆಲ್ಲವೂ ಚದುರಿ ಹೋದವು. ಆದರೆ ಸೂಜೂದ್ ನಿಂದ ತಲೆ ಮೇಲೆಕ್ಕೆತ್ತಿ ನೋಡುವ ಹೊತ್ತು ಕಣ್ಣೆದುರಿದ್ದ ಬೀರು ನನಗೆ ಪ್ರತಿಮೆಯಂತೆ ಗೋಚರಿಸಿತು. ನಾನಿದ್ದ ಕೋಣೆ ದೇವಾಲಯದಂತೆಯೂ ಕಾಣಿಸಿತು. ನಾನು ನನ್ನ ಧರ್ಮಕ್ಕೆ ವಿರುದ್ಧವಾಗಿದ್ದೇನೆ ಎಂಬ ಯೋಚನೆಗಳು ನನ್ನನ್ನು ಅಪ್ಪಿಕೊಂಡವು. ಈ ವೇಳೆ ದಿಢೀರನೆ ನನ್ನ ಕಿವಿಗೆ ಬಿದ್ದ ಆ ಅಗೋಚರ ಶಬ್ಧ ನನ್ನಲ್ಲಿ ಉತ್ತರ ಕಂಡುಕೊಳ್ಳುವಂತೆ ಮಾಡಿತು.

“ನಿನಗೆ ಗೊತ್ತಿಲ್ಲದೆ ಇರುವುದನ್ನು ನೀನು ಪೂಜಿಸಲು ಅಥವಾ ವೈಭವೀಕರಿಸಲು ನಿನ್ನಿಂದ ಸಾಧ್ಯವಿಲ್ಲ” ಎಂಬುವುದು ನನ್ನೊಳಗೆ ಕೊರೆಯಲಾರಂಭಿಸಿತು. ಹೀಗೆ ನನ್ನೊಳಗೆ ಹುಟ್ಟಿಕೊಂಡ ಅಜ್ಞಾತ ಉತ್ತರದ ಕಾರಣಕ್ಕೆ ಪಾರ್ಥನೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ, ಕೂದಲು ಮರೆಸಲು ಉಟ್ಟಿದ್ದ ತಟ್ಟದ (ಶಾಲು) ಜೊತೆಗೆ ನಮಾಜ್ ಬಟ್ಟೆ ಮಡಚಿಟ್ಟು ನಾನು ಕೋಣೆಯಿಂದ ಹೊರನಡೆದೆ. ಆಶ್ಚರ್ಯವೆಂಬಂತೆ ನನ್ನೊಳಗಾದ ಈ ಕ್ರಿಯೆಗಳು ಪಂಜರದಿಂದ ಹೊರಬಿಟ್ಟ ಹಕ್ಕಿಯಂತೆ ನನ್ನನ್ನು ಸ್ವತಂತ್ರಗೊಳಿಸಿದಂತೆ ಅನುಭವವಾಯ್ತು. ಆದರೆ ದೇವರನ್ನು ಹುಡುಕ ಹೊರಟವಳ ಆದಿ ಹೆಜ್ಜೆ ಅದು ಎಂದು ನನಗಾಗ ತಿಳಿದಿರಲಿಲ್ಲ. ಇಷ್ಟು ಆಳ ಮತ್ತು ಗಾಢವಾಗಿ ಒಂದು ಆಲೋಚನೆ ರೂಪುಗೊಳ್ಳುವುದು ಮತ್ತು ಅದರ ವಾಸ್ತವಿಕತೆಯನ್ನು ಹುಡುಕಿ ಹೊರಡುವುದು ಸಾಮಾನ್ಯ ಹದಿಹರೆಯದ ಒಬ್ಬಾಕೆ ಹೆಣ್ಣಿನ ಪಾಲಿಗೆ ಅಸಾಮಾನ್ಯವಾದ ನಡೆಯಾಗಿದೆ. ಈ ಘಟನೆ ನನ್ನೊಳಗೆ ನಡೆಯುತ್ತಿದ್ದ `ಸಾಂಸ್ಕೃತಿಕ ಸಂಘರ್ಷ’ದ ಪ್ರತಿಬಿಂಬವೂ ಆಗಿತ್ತು.

ನಾನು ಸೆನಗಲ್ ಮೂಲದ ಮಹಿಳೆ. (ಸೆನಗಲ್ ಪಶ್ಚಿಮ ಆಫ್ರಿಕಾದಲ್ಲಿರುವ ಒಂದು ರಾಜ್ಯ. ಇಲ್ಲಿ ಬಹುಕಾಲ ಫ್ರೆಂಚ್ ವಸಾಹತುಶಾಹಿ ಆಡಳಿತ ಇದ್ದ ಕಾರಣ, ಇಲ್ಲಿಯ ಅಧಿಕೃತ ಭಾಷೆ ಫ್ರೆಂಚ್). ನಾನು ಹುಟ್ಟಿದ್ದು ಮತ್ತು ಬದುಕಿನ ಆರಂಭದ 14 ವರ್ಷಗಳ ಸವೆಸಿದ್ದು ಸೆನಗಲ್ ಎಂಬ ಒಂದು ಆಫ್ರಿಕನ್ ರಾಜ್ಯದಲ್ಲಿ. ವಾರದ ಮೊದಲ ಐದು ದಿನ ಫ್ರೆಂಚ್ ಶಾಲೆಗಳಿಗೆ ಹಾಗೂ ವಾರಾಂತ್ಯದ ಎರಡು ದಿನಗಳಲ್ಲಿ ಮದರಸ (ಕುರುಆನ್ ಪಾಠಶಾಲೆ) ಶಿಕ್ಷಣ ಪಡೆದು ಬೆಳೆದವಳು ನಾನು. ಫ್ರೆಂಚ್ ಶಾಲೆಯಿಂದ ನೇರವಾಗಿ ವರ್ಣಬೇಧ ಚಳುವಳಿ ರೂಪಿಸುವ ಹೋರಾಟಗಾರರ ಬಳಿ ತೆರಳುತ್ತಿದ್ದೆ. ಅವರಿಂದ ನನ್ನ ಅಸ್ತಿತ್ವದ ಭಾಗವಾದ ಆಫ್ರಿಕಾದ ಜನತೆಯ ಮೂಲ ಮೌಲ್ಯಗಳನ್ನು ಕಲಿತುಕೊಳ್ಳುತ್ತಿದ್ದೆ. ಈ ಮೂಲಕ ಕಪ್ಪು ವರ್ಣೀಯರ ಮೌಲ್ಯಗಳನ್ನು ಕಾಪಾಡಲು ಕಟ್ಟಿದ್ದ ಚಳುವಳಿಯ ಒಂದು ಭಾಗವಾಗಿದ್ದೆ.

ನಾವು ಹಬ್ಬವನ್ನು ಆಚರಿಸುತ್ತಿದ್ದೆವು. ಕ್ರಿಸ್‍ಮಸ್ ಉಡುಗೊರೆಗಳನ್ನು ಪಡೆದುಕೊಳ್ಳುತ್ತಿದ್ದೆವು. ಮಕ್ಕಳು ಮುಹರ್ರಮ್ (ಇಸ್ಲಾಮಿಕ್ ಹೊಸ ವರ್ಷ) ದಿನಗಳಲ್ಲಿ ಹೊಸ ಬಗೆಯ ಬಟ್ಟೆ ಧರಿಸಿ ತಮ್ಮ ವಾರಿಗೆಯಲ್ಲಿದ್ದ ಹಿರಿಯ ಜೀವಗಳ ಬಳಿ ಹಣ ಪಡೆದು ಬೇಸಿಗೆ ರಜೆಯ ದಿನಗಳಲ್ಲಿ ಫೈರ್ ಕ್ಯಾಂಪ್ ನಡೆಸಿದ್ದು ನನ್ನ ಬದುಕಿಗೆ ಸದಾ ವಸಂತ ತುಂಬಿಕೊಡುವ ಮಾಸದ ನೆನಪುಗಳು. ಇಂಥಾ ಫೈರ್ ಕ್ಯಾಂಪ್‍ಗಳಲ್ಲಿ ಹೇಳಲಾಗುತ್ತಿದ್ದ ಕತೆಗಳ ಮೂಲಕ ನನಗೆ ಸರಿ ಮತ್ತು ತಪ್ಪುಗಳನ್ನು ಅರ್ಥ ಮಾಡಿಸಿದ ನನ್ನ `ಸೆನಗಲ್ ಕಥೆ’ಗಳನ್ನು ನಾನು ಮೊದ ಮೊದಲು ಕೇಳಲಾರಂಭಿಸಿದ್ದು. ನನಗೆ 13 ವರ್ಷ ವಯಸ್ಸಿರುವಾಗ ನನ್ನ ತಂದೆಗೆ ಗ್ರೀನ್ ಕಾರ್ಡ್ ಲಾಟರಿ ಅದೃಷ್ಟ ಖುಲಾಯಿಸಿತು. ಇದಾದ ಮುಂದಿನ ವರ್ಷವೇ ನನ್ನ ಕನಸುಗಳಲ್ಲೊಂದಾಗಿದ್ದ ಅಮೆರಿಕಾ ನೋಡುವ ಆಸೆ ಈಡೇರಿತು. ಅಮೆರಿಕಾದ ಸಾಂಸ್ಕೃತಿಕ ವೈವಿಧ್ಯತೆ ನನಗೆ ಬಹಳ ಹಿಡಿಸಿತು. ಅಮೆರಿಕಾ ತಲುಪಿದ ಬಹುಬೇಗನೆ ನಾನು ಇಂಗ್ಲೀಷ್ ಭಾಷೆಯನ್ನೂ ಕರಗತ ಮಾಡಿಕೊಂಡೆ. ಸುಮಾರು ಎರಡು ವರ್ಷಗಳ ಅಮೆರಿಕಾ ವಾಸ್ತವ್ಯದ ಬಳಿಕ ನಾನು ಸೆನಗಲ್‍ಗೆ ವಾಪಾಸ್ ಆದೆ. ತದನಂತರ ಇಂಗ್ಲೀಷ್, ಫ್ರೆಂಚ್ ಉಭಯ ಭಾಷೆಗಳಲ್ಲೂ ಭೋದಿಸುತ್ತಿದ್ದ ಶಿಕ್ಷಣ ಸಂಸ್ಥೆಯೊಂದರಲ್ಲಿ ನಾನು ನನ್ನ ಶಿಕ್ಷಣ ಮುಂದುವರೆಸಿದೆ. ಅಲ್ಲಿ ಅಮೆರಿಕಾ ಮೂಲದ ಪ್ರೊಫೆಸರ್‌ಗಳ ಜೊತೆಗೆ ಫ್ರೆಂಚ್ ಮಾತನಾಡಬಲ್ಲ ಸೆನಗಲ್ ಮೂಲದ ಪ್ರೊಫೆಸರ್‌ಗಳೂ ಇದ್ದರು. ನಾನು 15 ವರ್ಷ ವಯಸ್ಸು ಇರುವಾಗಲೇ ಆಫ್ರಿಕನ್ ಸಂಸ್ಕೃತಿಯ ಜೊತೆಗೆ ಮಧ್ಯ ಏಷ್ಯಾ ಸಂಸ್ಕೃತಿ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗಳು ನನ್ನ ಬದುಕಿನ ಭಾಗವಾಗಿ ಹೋದವು.

ಆಸ್ತಿಕತೆ ಮತ್ತು ನಾಸ್ತಿಕತೆ ಇವರೆಡರ ನಡುವಣ ಸೇತುವಲ್ಲಿಯೇ ನನ್ನ ಬದುಕಿನ ಅಮೂಲ್ಯ ಮೂರು ವಸಂತಗಳು ಕಳೆದು ಹೋದವು. ಅದೊಂದು ದಿನ ಮಧ್ಯಾಹ್ನದ ಹೊತ್ತಿನ ಊಟಕ್ಕಾಗಿ ನನ್ನ ಇಡೀ ಕುಟುಂಬ ತಟ್ಟೆಯ ಸುತ್ತ ಕುಳಿತುಕೊಂಡಿದ್ದೆವು. ಈ ವೇಳೆ ನನ್ನ ಅಣ್ಣ ತಟ್ಟೆಯನ್ನು ನೋಡುತ್ತಾ ಹೇಳಿದನು;

“ಇದು ದೇವರು..
ನೀವು ದೇವರು..
ಅವರು ದೇವರು.. ಇಲ್ಲಿ ಎಲ್ಲರೂ ದೇವರು..”

ಇದ ಕೇಳಿದ ಎಲ್ಲರೂ ಅತೃಪ್ತರಾದರು. ಕೆಲವರು ಕೂತಲ್ಲಿಂದ ತೆರಳಲು ಮೇಲೆದ್ದರು. ಇನ್ನೂ ಕೆಲವರು ಅಣ್ಣನನ್ನು ದೂಷಿಸಿದರು. ಆದರೆ ಅಣ್ಣನ ಆ ಮಾತುಗಳನ್ನು ನಾನು ತಮಾಷೆಯಾಗಿಯೂ, ಗೊಂದಲದಂತೆಯೂ ಕಂಡುಕೊಂಡೆ. ಅಣ್ಣ ಅರ್ಧ ನಿದ್ರೆಯಲ್ಲಿದ್ದರೂ ಆ ಸಾಲುಗಳನ್ನು ಮತ್ತೆ ಮತ್ತೆ ಹೇಳುತ್ತಲೇ ಇದ್ದನು. ಅಣ್ಣ ಪ್ರಜ್ಞಾಹೀನನಾಗಿದ್ದಾನೆ ಎಂದು ನನಗನಿಸಿತು. ಸ್ವಲ್ಪ ಸಮಯದ ಬಳಿಕ ಅವನ ಹುಚ್ಚುವರ್ತನೆಯ ಕುರಿತು ಅಣ್ಣನಲ್ಲಿಯೇ ಕೇಳಿದೆ. ಈ ವೇಳೆ ನನ್ನ ಕಿವಿಗೆ ವಾಲುತ್ತಾ, ನೀನು ಮಂಡಿಯೂರಿ ಪ್ರಾರ್ಥಿಸುವುದು ಯಾರಿಗೆ..? ಏನೇನು ಬೇಡಿಕೊಳ್ಳುತ್ತಿ..? ಯಾರೀ ದೇವರು..? ಆ ದೇವರು ಇರುವುದಾದರು ಎಲ್ಲಿ..? ಎಂದು ಕೇಳಿದ.

ವಾಸ್ತವದಲ್ಲಿ ಆ ದೇವರು ನನ್ನೊಳಗಿದ್ದ ದೈವಿಕ ಸಂಘರ್ಷ'ಗಳನ್ನು ಬಗೆಹರಿಸುತ್ತಿದ್ದನು. ಕಿವಿಗೆ ವಾಲಿ ಪ್ರಶ್ನೆಗಳನ್ನು ಕೇಳಿದ ಅಣ್ಣನಿಗೆ ನಿನಗೆಲ್ಲಿಂದ ಈ ಪ್ರಶ್ನೆಗಳು ಸಿಕ್ಕಿತು..? ಹೇಗೆ ಸಿಕ್ಕಿತು..? ಎಂದು ಮರು ಪ್ರಶ್ನೆ ಹಾಕಿದೆ. ಆಗವನು ನನಗೆ ಸೂಫಿ ಗುಂಪೊಂದರ ಪರಿಚಯವಿತ್ತನು. ಅದು ಫಾಯಿದಾ ತಿಜಾನಿಯಾ’. ಕೊನೆಯಲ್ಲಿ ನಾನು ನನ್ನ ಗುರುವನ್ನು ಭೇಟಿಯಾದೆ. ಅವರು ಮಾಜಿ ಸರ್ಕಾರಿ ಅಧಿಕಾರಿ ಮಹಿಳೆ. ಅವರು ದೇಶ ಸುತ್ತಿ ಕೋಶ ಓದಿದವರಾಗಿದ್ದರು. ಜೊತೆಗೆ ಹೆಸರಾಂತ ಸಾಹಿತಿಯೂ ಆಗಿದ್ದರು. ನನಗೆ ಬೇಕಿದ್ದಿದ್ದೂ ಅದೇ. ನಾಲ್ಕು ಸಂಸ್ಕೃತಿಗಳನ್ನು ಒಗ್ಗೂಡಿಸಿ, ನನ್ನ ಅಲೋಚನೆಗಳನ್ನು ಅರ್ಥೈಸಿಕೊಳ್ಳಬಲ್ಲ ಒಂದು ವೈಚಾರಿಕ ಸಾಂಗತ್ಯ. ಆ ಪಂಡಿತ ಮಹಿಳೆ ಎಂದೂ ನನ್ನ ಯೋಚನೆಯ ಬಗ್ಗೆಯಾಗಲಿ ಚಟುವಟಿಕೆಯ ಬಗ್ಗೆಯಾಗಲಿ ಆಕ್ಷೇಪ ಎತ್ತಿದವರಲ್ಲ. ಸತ್ಯಾನ್ವೇಷಣೆಯ ಕುರಿತು ನಾನು ನನ್ನ ವಾದ ಮಂಡಿಸಿದಾಗ ಆ ಮಹಿಳೆ ಕೇಳಿಕೊಂಡಿದ್ದಿಷ್ಟೇ, ನನ್ನ ಧರ್ಮದ ಭೋದನೆಗಳನ್ನು ಪಾಲಿಸುವುದು ಮತ್ತು ನಾನು ನಂಬಿದ್ದ ಆ ಅಗೋಚರ ಶಕ್ತಿಯ ಬಳಿ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೇಳಿ ತಿಳಿಯಲು ಸೂಚಿಸಿದರು. ಅಲ್ಲದೆ ಆ ಮಹಾನ್ ಶಕ್ತಿಯ ಬಗ್ಗೆ ಇನ್ನಷ್ಟು ತಿಳಿಯಲು ಮತ್ತು ಆ ಶಕ್ತಿಯ ಏಕತೆಯ ಬಗ್ಗೆ ವಿಶಾಲವಾದ ಅಧ್ಯಯನಕ್ಕೆ ತೆರೆದುಕೊಳಲು ನಿರ್ದೇಶಿಸಿದರು.

ಅಂಥಾ ದೈವಿಕ ಸಂಘರ್ಷಕ್ಕೆ ಒಳಗಾಗಿದ್ದ ನಾನು, ಅವರ ಮಾತಿನಿಂದ ಮತ್ತೆ ನನ್ನ ಸಂಪ್ರದಾಯಕ್ಕೆ ಮರಳಿದೆ. ಆ ಸೃಷ್ಟಿಕರ್ತನ ಬಗ್ಗೆ ಮತ್ತು ನನ್ನ ವಾಸ್ತವತೆಯ ಉದ್ದೇಶದ ಕುರಿತಾಗಿ ಆಳವಾದ ಯೋಚನೆಗೆ ಬಿದ್ದೆ. ಇದರ ಕೊನೆಯಲ್ಲಿ ನನ್ನ ಬಳಿ ಇದ್ದ ಅಷ್ಟೂ ಪ್ರಶ್ನೆಗಳಿಗೆ ನನ್ನಲ್ಲಿಯೇ ನಾನು ಉತ್ತರಗಳನ್ನು ಕಂಡುಕೊಳ್ಳಲು ಶುರುಮಾಡಿದೆ. ಈ ಭೂಮಿ ಮೇಲಿನ ಅಷ್ಟೂ ವಸ್ತುಗಳು, ಜೀವಿಗಳು ಸರ್ವ ಜೀವಜಂತುಗಳ ಅಸ್ತಿತ್ವ ಇರುವುದೇ ಒಂದು ದೊಡ್ಡ ಶಕ್ತಿಯ ಕ್ರಿಯೆಯಲ್ಲಿ. ಮತ್ತು ಆ ಶಕ್ತಿಯ ಉದ್ದೇಶವೂ ಆದೇ ಆಗಿರುತ್ತದೆ. ಹೀಗೆ ಗೋಜಲು ಮನಸ್ಥಿತಿಯಿಂದ ಹೊರಬಂದು ನನ್ನ ನಂಬಿಕೆಗಳಿಗೆ ಒಂದು ಗಟ್ಟಿ ಅಡಿಪಾಯ ಹಾಕಿದೆ. ಈ ಮೂಲಕ ಆ ಶಕ್ತಿಯ ಮೇಲೆ ಏಕತೆ (ತೌಹೀದ್) ಸಾಧಿಸಲು ಮುಂದಾದೆ. ಆಧ್ಯಾತ್ಮಿಕ ನೆಲಗಟ್ಟಿನಲ್ಲಿ ಸಂಬಂಧಗಳು ಹೇಗೆ ಒಬ್ಬರಿಂದ ಒಬ್ಬರಿಗೆ ಬೆಸೆದುಕೊಂಡಿದೆ ಮತ್ತು ಇಲ್ಲಿನ ಪ್ರತಿ ಸೃಷ್ಟಿಯೂ ಹೇಗೆ ತನ್ನ ಅಸ್ತಿತ್ವ ರೂಪಿಸಿಕೊಂಡಿದೆ ಎಂಬುವುದನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿದೆ. ಹೀಗೆ ನನ್ನ ದೇವರನ್ನು ನಾನು ಕಂಡುಕೊಂಡ ಮೇಲೆ ಕಳೆದ ಎಂಟು ವರ್ಷಗಳಿಂದ ನನ್ನ ಪ್ರಶ್ನೆಗಳಿಗೆ ಸಿಕ್ಕ ಉತ್ತರಗಳನ್ನು ದೃಢೀಕರಿಸಿಕೊಳ್ಳುತ್ತಿದ್ದೇನೆ.

ಆ ದೇವರು ಎಲ್ಲರನ್ನೂ ಪ್ರೀತಿಸುವವನಾಗಿದ್ದಾನೆ. ನಿಮ್ಮ ಎಲ್ಲಾ ನ್ಯೂನ್ಯತೆಗಳನ್ನೂ ಮೀರಿ ದೇವರು ನಿಮ್ಮನ್ನು ಪ್ರೀತಿಸುತ್ತಾನೆ. ನಿಮ್ಮಂತೆಯೇ ಎಲ್ಲಾ ಜೀವಚರಗಳನ್ನೂ ಅವನು ಪ್ರೀತಿಸುತ್ತಾನೆ. ಹೃದಯ ಬಡಿತದಿಂದ ಹಿಡಿದು ಅದರ ಸ್ಥಬ್ಧತೆವರೆಗೂ, ತಂಗಾಳಿಯಿಂದ ಹಿಡಿದು ಚಂಡಮಾರುತದ ನಿಯಂತ್ರಣದ ಎಲ್ಲಾ ಅಧಿಕಾರವೂ, ಶಕ್ತಿಯೂ ಅವನಿಗಿದೆ. ಈ ವಾಸ್ತವತೆಯನ್ನು ನಾವು ಹೇಗೆ ಮತ್ತು ಯಾವ ದೃಷ್ಟಿಕೋನದಲ್ಲಿ ಅರ್ಥೈಸಿಕೊಳ್ಳುತ್ತೇವೆ ಎಂಬುವುದರ ಮೇಲೆ ಇದರ ಒಳಹುರುಳು ಹುದುಗಿದೆ. ಇಂದು ಪ್ಯಾನ್ ಆಫ್ರಿಕನ್ ಮುಸ್ಲಿಂ ಮಹಿಳೆಯಾಗಿ ನಾನು ನನ್ನನ್ನು ಸಂಬೋಧಿಸುತ್ತೇನೆ. ನನ್ನಲ್ಲಿರುವ, ನನ್ನ ಸುತ್ತಲಿರುವ ಹಾಗೂ ಮುನ್ನೆಲೆಗೆ ಬಾರದೆ ಮಾಸಿಹೋದ ಅಸಂಖ್ಯಾತ ಗೆಲುವಿನ ಮತ್ತು ಸೋಲಿನ ಕತೆಗಳನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಆದರೆ ಆ ಮಹಾನ್ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು ಎಂದರೆ ಈಗಲೂ ಒಂದು ಸಂಕೀರ್ಣವಾದ ವಿಷಯವಾಗಿಯೇ ಉಳಿದಿದೆ. ಆ ಪರಮಾತ್ಮನನ್ನು ಹುಡುಕುವುದು ಎಂದರೆ ಸರಿಯಾದ ಪ್ರಶ್ನೆಗಳನ್ನು ಕೇಳುವುದು. ಹೀಗೆ ಪ್ರಶ್ನೆಗಳು ನಿಮ್ಮೊಳಗೆ ಹುಟ್ಟಿಕೊಳ್ಳುವಾಗ ಉತ್ತರಗಳೂ ನಿಮ್ಮಲ್ಲಿಯೇ ಹುಟ್ಟಿಕೊಳ್ಳುತ್ತದೆ. ಈ ಕ್ರಿಯೆ ನಿಮಗೆ ನೀವೇ ತಂದುಕೊಂಡಿರುವ ಬಂಧನದಿಂದ ಮುಕ್ತಿ ದೊರಕಿಸಿಕೊಡುತ್ತದೆ.

ನನ್ನನ್ನು ಓರ್ವ ಶ್ರದ್ಧೆ ಇರುವ ದೇವದಾಸಿಯಾಗಿಸು (ಇಲ್ಲಿ ದೇವದಾಸಿ ಎಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ಚಾಲ್ತಿಯಲ್ಲಿರುವ ಅನಿಷ್ಟ ಪದ್ಧತಿಯ ಕುರಿತಾಗಿ ಉಲ್ಲೇಖಿಸಿದ್ದಲ್ಲ. ತಪ್ಪು ಗ್ರಹಿಕೆ ಬೇಡ) ಎಂದಷ್ಟೇ ನಾನು ನನ್ನ ಭಗವಂತನಲ್ಲಿ ಬೇಡಿಕೊಳ್ಳುವುದು. ನನ್ನ ಪ್ರಾರ್ಥನೆಯನ್ನು ಒಪ್ಪಿಕೊಳ್ಳುವವನೂ, ಅವನ ಮೇಲೆ ನನಗಿರುವ ಭಕ್ತಿ ಪರಕಾಷ್ಠೆಯ ಆಳ ಅವನಿಗೆ ತಿಳಿಯಲು, ಗೊತ್ತಿದ್ದು, ಗೊತ್ತಿಲ್ಲದೆಯೂ ನಾನು ಮಾಡಿದ ಪ್ರಮಾದಗಳನ್ನು ಮನ್ನಿಸಿಕೊಡುವವನು, ನನ್ನ ಪಾಲಿಗೆ ಏಕೈಕ ಸಂರಕ್ಷಕನೂ ಹೀಗೆ ಆ ಪರಮದಯಾಳು ನನ್ನ ಸರ್ವಸ್ವವೇ ಆಗಲೆಂದು ನಾನು ಬೇಡಿಕೊಂಡೆ. ಈ ರೀತಿ ಅವನೊಂದಿಗಿನ ಆಧ್ಯಾತ್ಮಿಕ ಸಂವಹನದಲ್ಲಿ ನಾನು ನನ್ನನ್ನೇ ಕಳೆದುಕೊಂಡೆ. ಈ ಹಂತದಲ್ಲಿ ನೀನು, ನಾನು, ಅವನು, ಅವಳು, ಅದು ಇದು ಮುಂತಾದ ಸ್ವಾರ್ಥ ಭಾವನೆಗಳನ್ನು ನನ್ನಿಂದ ಬೇರ್ಪಡಿಸಿ ಕಾಣಲು ಸಾಧ್ಯವಾಗಲಿಲ್ಲ. ಕೆಲವರು ಇದನ್ನು ದೈವ ನಿಂದನೆ ಎಂದರು. ಇನ್ನೂ ಕೆಲವರು ಇದನ್ನು ಇಹ್ಸಾನ್ (ಪರಿಪೂರ್ಣತೆ) ಎಂದರು. ಅದೇನೇ ಇರಲಿ. ಸ್ವಚ್ಛಂಧವಾಗಿ ಅರಳಿರುವ ಗುಲಾಬಿ ಅದರ ಸುಗಂಧವನ್ನು ಹರಡದೇ ಇದ್ದೀತೆ..? ಅದು ಅದರ ಮನಮೋಹಕ ಸ್ವಭಾವ. ಸುಗಂಧ ಹರಡದೇ ಇರದು.

ಆಮಿನಾಟ್ಟ ದಿಯೋಫ್
ಅನುವಾದ : ಆಶಿಕ್ ಮುಲ್ಕಿ

ಮುಸ್ಲಿಂ ವಿದ್ವಾಂಸರ ವ್ಯಾಪಾರ ಮತ್ತು ಜ್ಞಾನದ ಪ್ರಸಾರ

ಇಮಾಮ್ ದಹಬಿಯ ಪುಸ್ತಕವಾದ, ‘ಸಿಯರು ಅ’ಲಾಮಿನ್ನುಬಲಾ’ದಲ್ಲಿ ಜೀವನ ಸಾಗಿಸಲು ಬೇಕಾಗಿ ವ್ಯಾಪಾರದಲ್ಲಿ ತೊಡಗಿದ ವಿದ್ವಾಂಸರ ಆಸಕ್ತಿದಾಯಕ ಜೀವನ ಕಥೆಗಳನ್ನು ಕಾಣಬಹುದು. ಜೀವನ ಮುಂದಕ್ಕೆ ಹೋಗುವಷ್ಟು ಮಾತ್ರವಾಗಿರುವ ಸಣ್ಣಮಟ್ಟಿನ ವ್ಯಾಪಾರಗಳಾಗಿರಲಿಲ್ಲ ಅವು. ಬದಲಾಗಿ, ಅವುಗಳಲ್ಲಿ ಹಲವು ವ್ಯಾಪಾರಗಳು ಕೂಡ ದೊಡ್ಡ ಮಟ್ಟದ ಲಾಭ ತರುವಂಥದ್ದಾಗಿತ್ತು. ಅವರಲ್ಲಿ ಕೆಲವರು ಸಮಕಾಲೀನ ವ್ಯಾಪಾರಿಗಳಲ್ಲಿ ಅತ್ಯಂತ ಶ್ರೀಮಂತರಾಗಿದ್ದರು. ಇಮಾಂ ಸಅದ್ ಅಸ್ಸಂಆನಿ ಮರ್ವಝಿ ಅವರ ‘ಅಲ್-ಅನ್ಸಾಬ್’ ಪುಸ್ತಕವು ವ್ಯಾಪಾರ ವಹಿವಾಟಿಗೆ ಹೆಸರುವಾಸಿಯಾದ ವಿದ್ವಾಂಸರ ವಿವರಣೆಯನ್ನು ಒಳಗೊಂಡಿದೆ.
ಸಅದೀ ಹರ್ವಿಯ ‘ಫಿಖ್ಹ್ ಮತ್ತು ಹದೀಸ್ ವಿದ್ವಾಂಸರಲ್ಲಿನ ಕಾರ್ಮಿಕರು’ (ಅಸ್ಸುನ್ನಾಉ ಮಿನಲ್ ಫುಖಹಾಇ ವಲ್ ಮುಹದ್ದಿಸೀನ್), ಅಬ್ದುಲ್ ಬಾಸಿತ್ ಬಿನ್ ಯೂಸುಫ್ ಅಲ್ ಗರೀಬಿಯ 400 ವೃತ್ತಿಗಳು ಹಾಗೂ 1,500 ಕ್ಕೂ ಹೆಚ್ಚು ವಿದ್ವಾಂಸರನ್ನು ಪರಿಚಯಿಸುವ ‘ವಿದ್ವಾಂಸರಿಗೆ ಸಂಬಂಧಿಸಿದ ಕೆಲಸ ಹಾಗೂ ವೃತ್ತಿಗಳು’ ಎಂಬ ಗ್ರಂಥವನ್ನು ಇವುಗಳ ಪೈಕಿ ವಿಶೇಷವಾಗಿ ಉಲ್ಲೇಖಿಸಬೇಕಿದೆ.
ಮುಸ್ಲಿಂ ಜೀವನದಲ್ಲಿನ ವಿಜ್ಞಾನ ಮತ್ತು ವ್ಯಾಪಾರದ ನಡುವಿನ ಸಂಬಂಧವು ಜೀವನಶೈಲಿ ಮತ್ತು ಇಸ್ಲಾಮಿಕ್ ಬೋಧನೆಗಳ ನಡುವಿನ ಆಳವಾದ ಸಂಪರ್ಕವನ್ನು ಸೂಚಿಸುತ್ತದೆ.
ಭೌದ್ಧಿಕ ಪ್ರಯಾಣ ಮತ್ತು ಪ್ರಬೋಧನಾ ಯಾತ್ರೆಯ ಮೂಲಕ ರೂಪುಗೊಂಡ ಅಪಾರ ವ್ಯಾಪಾರ ಅವಕಾಶಗಳ ಪರಿಣಾಮವಾಗಿ ಎಲ್ಲಾ ಪ್ರಬೋಧನಾ ಯಾತ್ರೆಯ ಗುಂಪುಗಳಲ್ಲಿ ಸರಕುಗಳ ಜೊತೆಗೆ ವ್ಯಾಪಾರಿಗಳು, ವಿದ್ವಾಂಸರು, ವಿದ್ಯಾರ್ಥಿಗಳು ಮತ್ತು ಪುಸ್ತಕಗಳು ಸ್ಥಾನಹಿಡಿದಿದ್ದವು.
ಈ ಸಂಬಂಧದ ತತ್ವಶಾಸ್ತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಆತ್ಮ ಮತ್ತು ಭೌತಿಕ ಪ್ರಪಂಚದ ನಡುವೆ ಇಸ್ಲಾಂ ಧರ್ಮವು ಸಾಧ್ಯವಾಗಿಸಿರುವ ಬಲವಾದ ಸಂಪರ್ಕವನ್ನು ನಾವು ಗುರುತಿಸಬೇಕಾಗಿದೆ. ಬೌದ್ಧಿಕ ಆಂದೋಲನವನ್ನು ಪೋಷಿಸುವ ರೀತಿಯಲ್ಲಿ ಸಂಪತ್ತಿನ ಸಮೃದ್ಧಿಯು ವಿದ್ವಾಂಸರ ಸ್ವತಂತ್ರ ದೃಷ್ಟಿಕೋನಗಳ ಭಾಗವಾಗಿತ್ತು.

ಸಿಯರು ಅ’ಲಾಮಿನ್ನುಬಲಾ

ಆದ್ದರಿಂದಲೇ ‘ಆಂದಲೂಸಿಯನ್ನರಲ್ಲಿ* ಅರೇಬಿಕ್ ಮತ್ತು ಇಸ್ಲಾಮಿಕ್ ನಾಗರಿಕತೆ’ ಎಂಬ ಅಧ್ಯಯನದಲ್ಲಿ ಸಂಶೋಧಕ ಒಲೀಕಿಯಾ ರೆಮಿ ಅವರು ನೀಡಿದ ಅಂಕಿ ಅಂಶಗಳು ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. 14,000 ಕ್ಕೂ ಹೆಚ್ಚು ವಿದ್ವಾಂಸರ ಜೀವನಚರಿತ್ರೆಯನ್ನು ನಿರೂಪಿಸುವ ಅಧ್ಯಯನದಲ್ಲಿ 4,200 ಕ್ಕೂ ಹೆಚ್ಚು ವಿದ್ವಾಂಸರ ಉದ್ಯೋಗಗಳನ್ನು ಒತ್ತು ಕೊಟ್ಟು ಪರಾಮರ್ಶೆ ಮಾಡಲಾಗಿದೆ.
ಈ ಪೈಕಿ 22% ನೇಕಾರರು, 13% ಅಡುಗೆಯವರು, 4% ವಜ್ರ ವ್ಯಾಪಾರಿಗಳು, 4% ಸುಗಂಧ ದ್ರವ್ಯ ವ್ಯಾಪಾರಿಗಳು, 4% ಚರ್ಮದ ವ್ಯಾಪಾರಿಗಳು, 4% ಪುಸ್ತಕ ಮಾರಾಟಗಾರರು, 3% ಗಣಿಗಾರರು, 2% ಮರ ಕಡಿಯುವವರು, 9% ಇತರ ವ್ಯಾಪಾರಿಗಳು ಮತ್ತು 9% ಇತರ ಕಾರ್ಮಿಕರು. ಈ ಬೆರಗುಗೊಳಿಸುವ ಅಂಕಿ ಅಂಶಗಳ ವಿವರಣೆಯಾಗಿ ವಿವಿಧ ಕಾಲದ ಮತ್ತು ದೇಶಗಳ ಪ್ರಖ್ಯಾತ ವಿದ್ವಾಂಸರ ಆರ್ಥಿಕ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ.

ಆರಂಭಿಕ ಅನುಭವಗಳು

ವಾಸ್ತವವಾಗಿ ವಿದ್ವಾಂಸರು ಮತ್ತು ವ್ಯಾಪಾರಿಗಳ ನಡುವಿನ ಸಂಬಂಧವು ಹೆಚ್ಚು ಚರ್ಚೆಗೆ ಎಡೆಮಾಡಕೊಡದಿದ್ದರೂ ವ್ಯಾಪಾರಿಗಳು ಅನಾದಿ ಕಾಲದಿಂದಲೂ ಮುಸ್ಲಿಂ ವಿದ್ವಾಂಸರ ಮನಸ್ಸಿನಲ್ಲಿ ಒಂದು ಸ್ಥಾನವನ್ನು ಕಂಡುಕೊಳ್ಳಲು ಸಾಧ್ಯವಾಗಿತ್ತು. ವ್ಯಾಪಾರದಲ್ಲಿ ಮಕ್ಕಾದ ಪ್ರಮುಖರಾದ ಖುರೈಷರಿಗೆ ಮೇಲುಗೈ ಇದ್ದುದರಿಂದ ಇಸ್ಲಾಮಿಕ್ ಸಮುದಾಯವು ಅದರ ಆರಂಭಿಕ ಹಂತಗಳಲ್ಲಿ ಅರೇಬಿಯಾದ ಇತರ ಎಲ್ಲಾ ಬುಡಕಟ್ಟು ಜನಾಂಗಗಳನ್ನು ಮೀರಿಸುವ ರೀತಿಯಲ್ಲಿ ಉಳಿದುಕೊಂಡಿತ್ತು.
ಕುರ್ ಆನ್ ಸ್ವತಃ ಸ್ಪಷ್ಟಪಡಿಸಿದಂತೆ, ಚಳಿಗಾಲದಲ್ಲಿ ಯಮನಿಗೆ ಮತ್ತು ಬೇಸಿಗೆಯಲ್ಲಿ ಗ್ರೇಟರ್ ಸಿರಿಯಾಗೆ (ಶಾಮ್ ) ಅವರು ನಡೆಸುತ್ತಿದ್ದ ವ್ಯಾಪಾರ ಪ್ರಯಾಣಗಳು ಎಲ್ಲರಿಗೂ ತಿಳಿದಿವೆ. ಆದ್ದರಿಂದ, ಪ್ರವಾದಿ (ಸ) ಅವರು ದಿವ್ಯಭೋದನೆ ಬಹಿರಂಗಪಡಿಸುವ ಮೊದಲೇ ಖದೀಜಾ ಬೀವಿಯ ಬಳಿ ವ್ಯಾಪಾರ ವಹಿವಾಟು ಮಾಡಿದ್ದನ್ನು ಕಾಣಬಹುದು.
ಖುರೈಶಿ ವ್ಯಾಪಾರಿಗಳಲ್ಲಿ ಪ್ರಮುಖರಾದ ಖದೀಜಾ ಬೀವಿಯು ಕೂಲಿಗಾಗಿ ನೇಮಕ ಮಾಡಿದವರಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರಿಗೆ ಹೆಚ್ಚು ಹಣ ಪಾವತಿಸಿದ್ದಾಗಿ ‘ರೌದುಲ್ ಉನುಫೀ’ ಯಲ್ಲಿ ಅಬುಲ್ ಖಾಸಿಂ ಸುಹೈಲಿ ಎಂಬವರು ವ್ಯಕ್ತಪಡಿಸಿದ್ದನ್ನು ಕಾಣಬಹುದು. ಖದೀಜಾ ಬೀವಿಯೊಂದಿಗಲ್ಲದೆ, ಪ್ರವಾದಿಯವರು ಇತರರೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ಅನೇಕ ಸಹಚರರು (ಪ್ರವಾದಿಯ ಅನುಯಾಯಿಗಳು) ಇಸ್ಲಾಂಗೆ ಮತಾಂತರಗೊಳ್ಳುವ ಮೊದಲು ಮತ್ತು ನಂತರ ಅದೇ ಮಾರ್ಗವನ್ನು ಅನುಸರಿಸಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಇಸ್ಲಾಂ ಧರ್ಮ ದುಡಿಮೆ ಮತ್ತು ಉದ್ಯೋಗವನ್ನು ತುಂಬಾ ಪ್ರೋತ್ಸಾಹಿಸಿದೆ ಎಂಬುದಕ್ಕೆ ಸಾಕ್ಷಿಯಾಗಿ ಸಹಚರರಲ್ಲಿ ಹೆಚ್ಚಿನ ಸಂಖ್ಯೆಯ ವ್ಯಾಪಾರಿಗಳನ್ನು ಕಾಣಬಹುದು.
ಮೊದಲ ಖಲೀಫ ಅಬೂಬಕರ್ ಸಿದ್ದೀಕ್ (ರ) ಮತ್ತು ಮೂರನೆಯ ಖಲೀಫ ಉಸ್ಮಾನ್(ರ) ಮಕ್ಕಾದಲ್ಲಿ ಪ್ರಮುಖ ವ್ಯಾಪಾರಿಗಳಾಗಿದ್ದರು. ಮಕ್ಕಾದಿಂದ ಮದೀನಾಕ್ಕೆ ವಲಸೆ ಬಂದ ಅಬ್ದುರ್ರಹ್ಮಾನ್ ಇಬ್ನ್ ಔಫ್ ನಂತರ ವ್ಯಾಪಾರವನ್ನು ಜೀವನೋಪಾಯದ ಮಾರ್ಗವಾಗಿ ಅಳವಡಿಸಿಕೊಂಡರು ಮತ್ತು ಇಸ್ಲಾಮಿಕ್ ಇತಿಹಾಸದಲ್ಲಿ ಅತ್ಯಂತ ಶ್ರೀಮಂತ ಪ್ರವಾದಿ ಸಹಚರರ ನಡುವೆ ಉನ್ನತ ಸ್ಥಾನ ಪಡೆದುದಾಗಿ ಕಾಣಬಹುದು.
ಇಮಾಮ್ ದಹಬೀ ಅವರು ‘ಸಿಯರ್’ ನಲ್ಲಿ ಸಂಪತ್ತಿನ ಬಗ್ಗೆ ಏನು ಹೇಳುತ್ತಾರೆಂದು ನೋಡಿ: ‘ಪ್ರವಾದಿ ಅವರ ಕಾಲದಲ್ಲಿ ಅವರು ತನ್ನ ಸಂಪತ್ತಿನ ಅರ್ಧದಷ್ಟು ಅಂದರೆ, ನಾಲ್ಕು ಸಾವಿರ ದಿರ್ಹಮ್ಗಳನ್ನು ದಾನ ಮಾಡಿದರು. ನಂತರ ಅವರು ನಲವತ್ತು ಸಾವಿರ ದೀನಾರ್ ಗಳು, ಐನೂರು ಕುದುರೆಗಳು ಮತ್ತು ಐನೂರು ಒಂಟೆಗಳನ್ನು ದಾನವಾಗಿ ನೀಡಿದರು. ಅವರ ಹೆಚ್ಚಿನ ಉಳಿತಾಯವು ವ್ಯಾಪಾರದಿಂದ ಬಂದಿದೆ’. ಸಅದ್ ಅಲ್-ಖರ್ಲ್ ಎಂಬ ಸಹಚರನ ಅನುಭವವನ್ನು ‘ತಹ್ದೀಬುಲ್ ಅಸ್ಮಾಇ ವಲ್ಲುಗಾತ್’ ನಲ್ಲಿ ನಿರೂಪಿಸಲಾಗಿದೆ. ಯಾವ ವ್ಯಾಪಾರ ಮಾಡಿದರೂ ನಷ್ಟ ಅನುಭವಿಸುತ್ತಿದ್ದ ಅವರು ಖರ್ಲ್ (ಟ್ಯಾನಿಂಗ್ಗೆ ಬಳಸುವ ಒಂದು ರೀತಿಯ ಸಸ್ಯ) ದ ವ್ಯಾಪಾರ ಮಾಡಲಾರಂಭಿಸಿದಾಗ ಲಾಭ ಗಳಿಸಲು ಪ್ರಾರಂಭಿಸಿದರು. ಹಾಗಾಗಿ ಅದನ್ನು ಅವರ ಹೆಸರಿಗೆ ಸೇರಿಸಲಾಯಿತು.

ತಹ್ದೀಬುಲ್ ಅಸ್ಮಾಇ ವಲ್ಲುಗಾತ್

ಪ್ರವಾದಿಯ ಮರಣದ ನಂತರವೂ ಈ ಸಂಪ್ರದಾಯ ಮುಂದುವರೆದಿದೆ.
ಇಬ್ನುಲ್ ಜೌಝಿ ತಮ್ಮ ‘ಸೈದುಲ್ ಖಾತ್ವಿರ್’ ಗ್ರಂಥದಲ್ಲಿ, ತಾಬಿಉಗಳ ನಾಯಕರಾದ ಸಈದುಬ್ನುಲ್ ಮುಸಯ್ಯಬ್ ದೊಡ್ಡಮಟ್ಟಿನ ಸಂಪತ್ತು ಬಾಕಿ ಉಳಿಸಿ ನಿಧನರಾದರು ಎಂದು ಉಲ್ಲೇಖಿಸಿದ್ದಾರೆ.
ಇನ್ನೊಬ್ಬ ಪ್ರಖ್ಯಾತ ವಿದ್ವಾಂಸ ಇಮಾಮ್ ಸುಫ್ಯಾನುಸ್ಸೌರಿ (ರ) ಒಬ್ಬ ವ್ಯಾಪಾರಿಯಾಗಿದ್ದರು. ಅವರ ಶಿಷ್ಯರೊಬ್ಬರು ಅವರ ಕೆಲಸವನ್ನು ದ್ವೇಷಿಸಿದಾಗ, “ಈ ದೀನಾರಿನ ತುಣುಕುಗಳನ್ನು ನಾವು ಹೊಂದಿಲ್ಲದಿದ್ದರೆ, ರಾಜರು ನಮ್ಮನ್ನು ಅಗತ್ಯ ಮುಗಿದಮೇಲೆ ಎಸೆಯುವ ಟವೆಲ್ ಆಗಿ ನೋಡುತ್ತಿದ್ದರು” ಎಂದು ಉತ್ತರಿಸಿದರು ಎಂಬುದಾಗಿ ಅಬೂ ನಈಮುಲ್ ಇಸ್ಫಹಾನಿ ತಮ್ಮ ಗ್ರಂಥವಾದ ‘ಹುಲ್ಯತುಲ್ ಔಲಿಯಾ’ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
ಇಮಾಮ್ ದಹಬೀ ತನ್ನ ‘ಸಿಯರ್’ನಲ್ಲಿ ಇಮಾಮ್ ಅಬ್ದುಲ್ಲಾಹಿಬ್ನುಲ್ ಮುಬಾರಕ್ ಕೂಡ ಒಬ್ಬ ವ್ಯಾಪಾರಿ ಎಂದು ಬರೆಯುತ್ತಾರೆ. “ಲೈತ್ ಇಬ್ನ್ ಸಅದ್ ಇಂದಿನ ಪ್ರಮುಖ ವ್ಯಾಪಾರಿ ವಿದ್ವಾಂಸರಲ್ಲಿ ಒಬ್ಬರು. ಮಿಸ್ರ್ ಪ್ರಾಂತ್ಯಗಳಲ್ಲಿ ಖಾಝಿಗಳು ಮತ್ತು ಮುತವಲ್ಲಿಗಳ ನಾಯಕರಾಗಿರುವ ಅವರ ವಾರ್ಷಿಕ ಆದಾಯವು ಎರಡು ಮಿಲಿಯನ್ ದಿನಾರ್ ಆಗಿತ್ತು!”.

ಜೀವನೋಪಾಯಕ್ಕಾಗಿ ವ್ಯಾಪಾರದತ್ತ ಮುಖಮಾಡಿದ ವಿದ್ವಾಂಸರು

ಕಾಲಾನಂತರ ಇಸ್ಲಾಮಿಕ್ ಪ್ರಪಂಚವು ಅಭಿವೃದ್ಧಿ ಹೊಂದುತ್ತಿದ್ದಂತೆ , ಸಶಸ್ತ್ರ ಪಡೆಗಳಲ್ಲಿ ವಿದ್ವಾಂಸರ ಪ್ರಾತಿನಿಧ್ಯವು ಕ್ಷೀಣಿಸುತ್ತಿದ್ದಂತೆ ಗನೀಮತ್ (ಯುದ್ಧಗಳಲ್ಲಿ ಗೆದ್ದಾಗ ದೊರಕುವ) ಸಂಪತ್ತು ಕೊನೆಯಾಗುತ್ತಾ ಬಂತು. ಅದೂ ಅಲ್ಲದೆ ವಿದ್ವಾಂಸ ಮತ್ತು ದೊರೆಗಳ ನಡುವಿನ ಸಂಬಂಧವು ಅಷ್ಟೇನೂ ಅನುಕೂಲಕರವಾಗದೇ ಇದ್ದುದರಿಂದ ವಿದ್ವಾಂಸರು ಜೀವನೋಪಾಯಕ್ಕಾಗಿ ವ್ಯಾಪಾರದಲ್ಲಿ ತೊಡಗಿದರು.
ಆದ್ದರಿಂದ, ವ್ಯಾಪಾರದಿಂದ ಜೀವನ ಸಾಗಿಸಿದ ಮತ್ತು ಅವರ ವೃತ್ತಿಯಿಂದ ಪ್ರಸಿದ್ಧರಾದ ಅನೇಕ ವಿದ್ವಾಂಸರನ್ನು ಇತಿಹಾಸದುದ್ದಕ್ಕೂ ನಾವು ಕಾಣಬಹುದು. ಈ ಮೂಲಕ ಅನೇಕ ವಿದ್ವಾಂಸರು, ರಾಜರು ಮತ್ತು ಅರಮನೆಗಳಿಂದ ದೂರವಿದ್ದು ಪುಸ್ತಕ ಬರವಣಿಗೆ, ಪುಸ್ತಕ ಸಂಗ್ರಹಣೆ ಮತ್ತು ವಿದ್ವತ್ಪೂರ್ಣ ಪ್ರಯಾಣಕ್ಕಾಗಿ ಹಣವನ್ನು ಸಂಗ್ರಹಿಸಲು ಸಾಧ್ಯವಾಯಿತು.
ಇತಿಹಾಸಕಾರರು ಇದನ್ನು ಎಲ್ಲಾ ಐತಿಹಾಸಿಕ ಗ್ರಂಥಗಳಲ್ಲಿ ಇದು ವಿದ್ವಾಂಸರ ದೊಡ್ಡ ಗುಣಲಕ್ಷಣವೆಂದು ಪರಾಮರ್ಶಿಸಿದ್ದಾರೆ. ಇಮಾಮ್ ಇಬ್ನುಲ್ ಜೌಝಿ ಈ ವಿಷಯವನ್ನು ದೂರದೃಷ್ಟಿಯಿಂದ ಸಮೀಪಿಸಿ ಒಂದು ಮೇಲ್ಪಂಕ್ತಿ ಹಾಕಿಕೊಟ್ಟ ವಿದ್ವಾಂಸ ರಾಗಿದ್ದರು.
ರಾಜರು ಮತ್ತು ಶ್ರೀಮಂತರ ಅಧೀನದಿಂದ ಮುಕ್ತವಾಗಿ ಸ್ವ-ಆದಾಯದ ಆಶಯವನ್ನು ಬಹುಮುಖ್ಯವಾಗಿ ಪರಿಚಯಿಸಿದರು. ಅವರು ಸ್ವೈದುಲ್ ಖಾತ್ವಿರ್ನಲ್ಲಿ ಹೀಗೆ ಹೇಳುತ್ತಾರೆ: ‘ಜನರನ್ನು ಅವಲಂಬಿಸದೆ ಸ್ವತಃ ಹಣ ಸಂಪಾದಿಸುವುದಕ್ಕಿಂತ ದೊಡ್ಡದಾದ ವಿಷಯ ಜಗತ್ತಿನಲ್ಲಿನ ವಿದ್ವಾಂಸರಿಗೆ ಬೇರೇನೂ ಇಲ್ಲ.
ಯಾಕೆಂದರೆ ಜ್ಞಾನದ ಜೊತೆಗೆ ಸಂಪತ್ತು ಇದ್ದರೆ ಒಬ್ಬನು ಪರಿಪೂರ್ಣನಾಗುತ್ತಾನೆ. ಹೆಚ್ಚಿನ ವಿದ್ವಾಂಸರು ಜ್ಞಾನದ ಹಿತದೃಷ್ಟಿಯಿಂದ ಬದುಕುವಾಗ ತಮ್ಮ ಜೀವನೋಪಾಯದ ಬಗ್ಗೆ ಗಮನ ಹರಿಸದ ಕಾರಣ, ನಂತರ ಅನೇಕ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಾಗಿ ಬಂದಿದೆ’. ಅವರು ಮುಂದುವರಿಸುತ್ತಾರೆ: ‘ಜ್ಞಾನಿಗಳು ಸಂಪತ್ತನ್ನು ಸಂಗ್ರಹಿಸುವುದರತ್ತ ಗಮನ ಹರಿಸಬೇಕು’.
ಏಕೆಂದರೆ ದೀನ್ ಮತ್ತು ಜಗತ್ತನ್ನು ಒಟ್ಟಿಗೆ ಸೇರಿಸುವ ಮಾರ್ಗವಾಗಿದೆ ಸಂಪತ್ತು. ದೀನ್ ಮತ್ತು ಝುಹ್ದ್ (ತ್ಯಜಿಸುವಿಕೆ) ವಿಚಾರವಾಗಿ ಬೂಟಾಟಿಕೆ ಹೆಚ್ಚಾಗಿ ಬರುವುದು ಬಡತನದ ನಿಮಿತ್ತ. ಅನೇಕ ಶ್ರೀಮಂತರು ವಿದ್ವಾಂಸರನ್ನು ಶೋಷಿಸುವುದನ್ನು ಕಾಣಬಹುದು. ಝಕಾತಿನ ಭಾಗದಿಂದ ಏನನ್ನಾದರೂ ನೀಡಿ ವಿದ್ವಾಂಸರನ್ನು ಕ್ಷುಲ್ಲಕರನ್ನಾಗಿ ಮಾಡೋದನ್ನು ಕಾಣಬಹುದು.
ಅಂತಹ ವ್ಯಕ್ತಿಗೆ ಯಾವುದೇ ಕಾಯಿಲೆ ಅಥವಾ ಇನ್ನಿತರ ಕಾರ್ಯ ಇದ್ದು ಅವನನ್ನು ವಿದ್ವಾಂಸರು ಪರಿಗಣಿಸದಿದ್ದರೆ ಯಾ ಭೇಟಿ ನೀಡದೇ ಇದ್ದರೆ ಸದ್ರಿ ಶ್ರೀಮಂತರು ವಿದ್ವಾಂಸರ ಆಕ್ಷೇಪ ಸೂಚಕವಾಗಿ ಹೆಸರು ಎಣಿಸುತ್ತಿದ್ದರು. ವಾಸ್ತವವಾಗಿ, ಇದು ವಿದ್ವಾಂಸರ ತಕರಾರು ಎಂದೇ ಹೇಳಬೇಕು.
ಇಮಾಮ್ ಅಹ್ಮದ್ ಇಬ್ನ್ ಹಂಬಲ್ (ರ) ಹದಿಯ/ಉಡುಗೊರೆ ಸ್ವೀಕರಿಸದಿದ್ದಾಗ, ಅವರ ಆತ್ಮಸಂಘರ್ಷ ಕಡಿಮೆಯಾಯಿತು ಮತ್ತು ಅವರ ಖ್ಯಾತಿ ಹೆಚ್ಚಾಯಿತು.

ಸ್ವೈದುಲ್ ಖಾತ್ವಿರ್

ವಿದ್ವಾಂಸರಿಗೆ ಕಾನೂನು ರಕ್ಷಣೆ

ಮತ್ತೊಂದು ವಿಧದಲ್ಲಿ ನೋಡುವುದಾದರೆ, ಜ್ಞಾನಾರ್ಜನೆಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಉದ್ಯೋಗ ಮಾಡಿ ಜೀವಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ, ಇಂತಹ ಉದ್ಯೋಗಗಳು ವಿದ್ವಾಂಸರಿಗೆ ಗ್ರಂಥರಚನೆ, ಶಾಶ್ವತ ಪಠಣ ಮತ್ತು ಜ್ಞಾನ ಸಂಪಾದನೆಗಾಗಿ ಪ್ರಯಾಣಿಸುವುದನ್ನು ತಡೆಯುತ್ತದೆ.
ಹೀಗಾಗಿ, ಜ್ಞಾನಕ್ಕಾಗಿ ತಮ್ಮನ್ನು ಅರ್ಪಿಸಿದ ವಿದ್ವಾಂಸರಿಗೆ ಸಾರ್ವಜನಿಕ ಖಜಾನೆಯಿಂದ ಒಂದು ಪಾಲನ್ನು ನೀಡಬೇಕು ಮತ್ತು ಇಸ್ಲಾಮಿಕ್ ರಾಜಪ್ರಭುತ್ವವು ಈ ಧ್ಯೇಯವನ್ನು ಪೂರೈಸದಿದ್ದರೆ, ಅದು ಸಾರ್ವಜನಿಕ ಬಾಧ್ಯತೆಯಾಗಿ ಪರಿಣಮಿಸುತ್ತದೆ (ಫರ್ಳ್ ಕಿಫಾಯ) ಎಂದು ಕರ್ಮಶಾಸ್ತ್ರ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಖತ್ವೀಬುಲ್ ಬಗ್ದಾದಿ ಅವರು ತಮ್ಮ ‘ಕಿತಾಬುಲ್ ಫಕೀಹಿ ವಲ್ ಮುತಫಕಿಹ್’ ಎಂಬ ಪುಸ್ತಕದಲ್ಲಿ “ವಿದ್ವಾಂಸರಿಗೆ ಆಡಳಿತಗಾರನು ನೀಡಬೇಕಾದ ಸಾರ್ವಜನಿಕ ಹಕ್ಕುಗಳು” ಎಂಬ ಅಧ್ಯಾಯದಲ್ಲಿ ಇದನ್ನು ವಿವರಿಸಿದ್ದಾರೆ.
ಅವರು ಉಲ್ಲೇಖಿಸಿದ ಲೇಖನದ ಪ್ರಕಾರ, ಹಿಮ್ಸ್ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಖಲೀಫಾ ‘ಉಮರ್ ಇಬ್ನ್ ಅಬ್ದುಲ್ ಅಝೀಝ್ (ರ)’ ಹೇಳುತ್ತಾರೆ: ‘ಧಾರ್ಮಿಕ ಅಧ್ಯಯನದಲ್ಲಿ ಬದ್ಧರಾಗಿ ಮಸೀದಿಯಲ್ಲಿರುವವರಿಗೆ ವಿಶೇಷ ಗಮನ ಕೊಡಿ ಮತ್ತು ಪ್ರತಿಯೊಬ್ಬರಿಗೂ ನೂರು ದೀನಾರ್ ಗಳನ್ನು ನೀಡಿʼ.
ಕೆಲವು ವಿದ್ವಾಂಸರು ಫತ್ವಾಗಳನ್ನು ನೀಡುವ ಮೂಲಕ, ದರ್ಗಾಗಳನ್ನು ನಡೆಸುವ ಮೂಲಕ ಮತ್ತು ಇಮಾಮತ್ ಮೂಲಕ ಸಮುದಾಯಕ್ಕೆ ಮಾಡಿದ ಸೇವೆಗಳಿಗೆ ಪ್ರತಿಯಾಗಿ ಸಾರ್ವಜನಿಕ ಖಜಾನೆಯಿಂದ ಇಂತಹ ಮೊತ್ತವನ್ನು ಪಡೆದರೆ, ಕೆಲವರು ಅದನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಸೈನಿಕರಿಗೆ ಹಾಗು ಎಲ್ಲಾ ರಾಷ್ಟ್ರಗಳ ಔದ್ಯೋಗಿಕ ಕ್ಷೇತ್ರದಲ್ಲಿರುವವರಿಗೆ ನೀಡುವ ಹಾಗೆ ವಿದ್ವಾಂಸರಿಗೂ ಉಪಜೀವನ ಮಾರ್ಗವೆಂಬ ಈ ಉಪಾಯವನ್ನು ‘ಉಮರ್ ಇಬ್ನ್ ಅಬ್ದುಲ್ ಅಝೀಝ್ (ರ)’ ಅವರು ಪ್ರಾರಂಭಿಸಿದರು.
ಕಾಲಾನಂತರದಲ್ಲಿ, ಐದನೇ ಶತಮಾನದ ಆರಂಭದ ವೇಳೆಗೆ ವಿದ್ವಾಂಸರು, ರಾಷ್ಟ್ರಗಳು, ರಾಜರು ಮತ್ತು ಶ್ರೀಮಂತರ ಉಡುಗೊರೆಗಳನ್ನು ಹೆಚ್ಚು ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಯಿತು. ಫತ್ವಾ, ಖಳಾ ಮತ್ತು ಇತರ ಧಾರ್ಮಿಕ ಅಧಿಕೃತ ಸ್ಥಾನಗಳು ಅಸ್ತಿತ್ವಕ್ಕೆ ಬಂದವು ಮತ್ತು ಮದ್ ಹಬ್ ಕೇಂದ್ರೀಕರಿಸಿದ ಮದರಸಾಗಳನ್ನು ರಚಿಸಲಾಯಿತು, ಹಾಗು ಜುಮಾ ಮಸೀದಿಗಳಿಗೆ ಉತ್ತರಾಧಿಕಾರದ ಕಾನೂನಿನ ಮೂಲಕ ಅಧಿಕಾರ ಸ್ಥಾನಗಳನ್ನು ನೀಡಲಾದಾಗ ಈ ಪ್ರವೃತ್ತಿ ವಿಶೇಷವಾಗಿ ಪ್ರಚಲಿತದಲ್ಲಿತ್ತು.
ಆದರೆ ಅಧಿಕಾರ ಸ್ಥಾನಗಳಿಗೆ ಹತ್ತಿರ ಬರದ ಮತ್ತು ಸ್ಥಳೀಯ ಫತ್ವಾ ಗುಂಪುಗಳನ್ನು ರಚಿಸಿ ಅಧಿಕಾರಿಗಳ ಮುಂದೆ ತಲೆಬಾಗಲು ನಿರಾಕರಿಸಿದ ವಿದ್ವಾಂಸರು ಹಲವಾರು ಇದ್ದರು.

ಇಮಾಮ್ ಇಬ್ನುಲ್ ಜೌಝಿ (ರ) ಪ್ರಕಾರ, ಸ್ವಾಭಿಮಾನ ರಕ್ಷಿಸಲು ಅಧಿಕಾರಿಗಳ ಔದಾರ್ಯವನ್ನು ಸ್ವೀಕರಿಸದೆ ವ್ಯಾಪಾರ ಮಾಡಿ ಜೀವನ ನಡೆಸಿದ ವಿದ್ವಾಂಸರು ಎಲ್ಲಾ ಕಾಲದಲ್ಲೂ ಇದ್ದರು.
ಪ್ರಯಾಣವನ್ನು ಒಂದೇ ವೇಳೆ ವ್ಯಾಪಾರ, ಜ್ಞಾನ ಮತ್ತು ಕೆಲಸಕ್ಕಾಗಿ ಬಳಸುತ್ತಿದ್ದ ಅವರಲ್ಲಿ ಕಮ್ಮಾರರು, ಬಡಗಿಗಳು, ನೇಕಾರರು, ಸುಗಂಧ ವ್ಯಾಪಾರಿಗಳು ಮತ್ತು ಮಾರಾಟಗಾರರು ಇದ್ದರು. ಇಮಾಂ ಸಂಆನಿಯವರು ‘ಅಲ್-ಅನ್ಸಾಬ್ ‘ ನಲ್ಲಿ ಇಂತಹ ಜನರನ್ನು ವಿವರವಾಗಿ ಪರಿಚಯಿಸುತ್ತಾರೆ.
ವ್ಯಾಪಾರಿ ವಿದ್ವಾಂಸರ ವಿಶಾಲ ಜಗತ್ತನ್ನು ಅರ್ಥಮಾಡಿಕೊಳ್ಳಲು, ಇಮಾಮ್ ದಹಬಿಯವರ ‘ಸಿಯರು ಅಅಲಾಮಿನುಬಲಾಇ’ನಲ್ಲಿ ಉಲ್ಲೇಖಿಸಲಾದ 150 ಕ್ಕಿಂತ ಹೆಚ್ಚು ಪ್ರಖ್ಯಾತ ವಿದ್ವಾಂಸರನ್ನು ಹುಡುಕಿದರೆ ಸಾಕು. ಪ್ರಸಿದ್ಧ ಹದೀಸ್ ವಿದ್ವಾಂಸ ಯೂಸುಫ್ ಇಬ್ನ್ ಸರೀಕ್ ರವರು ವ್ಯಾಪಾರಕ್ಕಾಗಿ ಮಿಸ್ರಿಗೆ ಹೋಗಿ ಅಲ್ಲಿ ನಿಧನರಾದರು ಮತ್ತು ಇಬ್ನ್ ಅಮ್ಮಾರುಲ್ ಮೌಸ್ವಿಲಿ ರವರು ವ್ಯಾಪಾರಕ್ಕಾಗಿ ಬಗ್ದಾದಿಗೆ ಹೋಗಿ ಅಲ್ಲಿ ಹದೀಸ್ ಕಲಿಸಿದರು ಎಂಬುದಾಗಿ ಅವರು ಉಲ್ಲೇಖಿಸಿದ್ದಾರೆ.
ಅಂದಲೂಸಿಯಾದಿಂದ ಚೀನಾಕ್ಕೆ ವಾಣಿಜ್ಯಾರ್ಥವಾಗಿ ಪ್ರಯಾಣಿಸಿದ ಜನರು ಈ ಗುಂಪಿನಲ್ಲಿದ್ದರು ಎಂದು ಅವರು ಹೇಳುತ್ತಾರೆ. ಅಪರೂಪದ ಜ್ಞಾನ ಮತ್ತು ಸಂಪತ್ತಿನಿಂದ ಆಶೀರ್ವದಿಸಲ್ಪಟ್ಟ ಮತ್ತೊಬ್ಬ ವಿದ್ವಾಂಸರಾಗಿದ್ದರು ದಅಲಾಜ್ ಇಬ್ನ್ ಅಹ್ಮದ್ ಸಿಜಿಸ್ತಾನಿ.
ಇಮಾಮ್ ದಹಬಿ ಹೇಳುತ್ತಾರೆ:”ಅವರು ಹದೀಸ್ ಮತ್ತು ಫಿಖ್ಹ್ ಕ್ಷೇತ್ರದಲ್ಲಿ ಪರಿಣತರಾಗಿದ್ದರು ಮತ್ತು ಎರಡು ಹರಮ್ಗಳಲ್ಲಿ, ಇರಾಕ್ ಮತ್ತು ಕುರಾಸಾನಿನಲ್ಲೂ ವ್ಯಾಪಾರ ಮಾಡಿದ್ದರು. ಇಮಾಮ್ ದಾರಕುತ್ನಿ ಈ ಮಹಾನರ ಬಗ್ಗೆ, ದಅಲಜ್ ಅವರಿಗಿಂತ ಹೆಚ್ಚು ದೃಢಜ್ಞಾನವುಳ್ಳ ಯಾರನ್ನೂ ನಮ್ಮ ಶೈಖ್ ಗಳ ಪೈಕಿ ನೋಡಿಲ್ಲ” ಎಂದು ಹೇಳಿದ್ದಾರೆ.
ಅವರ ನಿಧನದ ಸಮಯದಲ್ಲಿ ಅವರ ಉಳಿತಾಯವು ಮೂರು ಲಕ್ಷ ದೀನಾರುಗಳಾಗಿದ್ದವು.

ವ್ಯಾಪಾರಾರ್ಥ ಪ್ರವಾಸಗಳು

‘ಇಬ್ನ್ ಮಸರ್ರ ಅತ್ತುಜೀಬೀ ಅತ್ತುಲಯ್ತುಲಿ’ ಅಂದಲೂಸಿನ ಪ್ರಮುಖ ವ್ಯಾಪಾರಿ ವಿದ್ವಾಂಸರಲ್ಲಿ ಒಬ್ಬರು.
ಕೋರ್ಡೋವಾದಲ್ಲಿ ಸೆಣಬಿನ ವ್ಯಾಪಾರ ಮಾಡುತ್ತಿದ್ದ ಅವರು ಸ್ಥಳೀಯ ವಿದ್ವಾಂಸರಾಗಿದ್ದರು. ಪ್ರಮುಖ ಹದೀಸ್ ವಿದ್ವಾಂಸರಾದ ಇಬ್ನ್ ಜಮೀಉಲ್ ಘಸ್ಸಾವಿ ಅಸ್ಸೈದಾವಿ ಅವರು ವರ್ತಕ ಪ್ರಯಾಣಕ್ಕೆ ಹೆಸರುವಾಸಿಯಾಗಿದ್ದರು ಮತ್ತು ಹದೀಸ್ ಬಗ್ಗೆ ಸಿರಿಯಾದಲ್ಲಿ ಅತ್ಯಂತ ಜ್ಞಾನವುಳ್ಳ ಜನರಲ್ಲಿ ಒಬ್ಬರಾಗಿದ್ದರು.
ಪ್ರಯಾಣದ ಸಮಯದಲ್ಲಿ ಶಾಮ್, ಇರಾಕ್, ಪರ್ಷಿಯಾ, ಹಿಜಾಝ್ ಮತ್ತು ಮಿಸ್ರಿನ ಮೂವತ್ತಕ್ಕೂ ಹೆಚ್ಚು ಹದೀಸ್ ಕೇಂದ್ರಗಳಿಂದ ಅನೇಕ ಪ್ರಖ್ಯಾತ ವಿದ್ವಾಂಸರ ಶಿಷ್ಯತ್ವವನ್ನು ಅವರು ಪಡೆದಿದ್ದರು ಎಂದು ಇಮಾಂ ದಹಬಿ ಉಲ್ಲೇಖಿಸಿದ್ದಾರೆ.
‘ಅತ್ವ್ರಾಫ್ ಸಹೀಹೈನ್’ ಗ್ರಂಥದ ಕರ್ತೃ ಇಮಾಮ್ ಖಲಫ್ ಅಲ್-ವಾಸಿತಿ ಕೂಡ ಓರ್ವ ವರ್ತಕ ಪ್ರಯಾಣಿಕನಾಗಿದ್ದರು ಮತ್ತು ಪ್ರಸಿದ್ಧ ಹದೀಸ್ ಗ್ರಂಥ ‘ಮುಸ್ತದ್ರಕ್’ ನ ಲೇಖಕ ಹಕೀಮ್ ನೈಸಾಬೂರಿ ಕೂಡ ಅವರಿಂದ ಒಂದು ಹದೀಸನ್ನು ವರದಿ ಮಾಡಿದ್ದಾರೆ ಎಂದು ಇಮಾಮ್ ದಹಬಿ ದಾಖಲಿಸಿದ್ದಾರೆ. ಅಂದಲುಸಿನ ಹದೀಸ್ ವಿದ್ವಾಂಸ ಮತ್ತು ನ್ಯಾಯಶಾಸ್ತ್ರಜ್ಞ ಸಅದುಲ್ ಖೈರ್ ಅಲ್-ಅನ್ಸಾರಿ ವ್ಯಾಪಾರ ಮತ್ತು ಬೌದ್ಧಿಕ ಉದ್ದೇಶಗಳಿಗಾಗಿ ಅಂದಲುಸಿನಿಂದ ಚೀನಾಕ್ಕೆ ಪ್ರಯಾಣ ಬೆಳೆಸಿದವರಾದ ಕಾರಣ ಅವರ ಹೆಸರಿಗೆ ಸ್ಪೇನ್ ಮತ್ತು ಚೀನಾವನ್ನು ಸೇರಿಸಿ ಹೇಳುವುದನ್ನು ಕಾಣಬಹುದೆಂದು ಇಮಾಂ ದಹಬಿ ಹೇಳುತ್ತಾರೆ.
ಮತ್ತೊರ್ವ ಹದೀಸ್ ವಿದ್ವಾಂಸ ಅಬು ತಮಾಮ್ ಅಬ್ಬಾಸಿ ಅಲ್-ಬಗ್ದಾದಿ ವ್ಯಾಪಾರಾರ್ಥ ಭಾರತ ಮತ್ತು ಟರ್ಕಿಗೆ ಸಮುದ್ರ ಪ್ರಯಾಣ ನಡೆಸಿದ ವೇಳೆ ನೈಸಾಬೂರ್ ನಲ್ಲಿ ನಿಧನರಾದರು.

ತ್ಯಾಗ, ಏಕಾಂಗಿತನ

ಸ್ವಯಂ-ವ್ಯಾಪಾರದಲ್ಲಿ ಆಸಕ್ತಿ ಹೊಂದಿದ್ದ ವಿದ್ವಾಂಸರ ಜೊತೆಗೆ, ಕುಟುಂಬದ ವ್ಯಾಪಾರ ಸ್ವತ್ತುಗಳನ್ನು ಬಳಸಿಕೊಂಡು ಜ್ಞಾನವನ್ನು ಸಂಪಾದಿಸಲು ಮತ್ತು ಜ್ಞಾನವನ್ನು ಪ್ರಸಾರ ಮಾಡಲು ಗಮನಹರಿಸಿದ ಪ್ರಮುಖ ವ್ಯಾಪಾರಿಗಳ ಮಕ್ಕಳು ಅನೇಕರು ಇದ್ದರು.
ಖತೀಬುಲ್ ಬಗ್ದಾದಿ ‘ತಾರಿಖ್ ಬಗ್ದಾದ್’ ನಲ್ಲಿ ಅಂತಹ ಜನರ ಉದಾಹರಣೆಗಳನ್ನು ನೀಡಿದ್ದಾರೆ. ಅತಿ ಶ್ರೀಮಂತನಾದ ಇಬ್ನುಲ್ ಫರಜಿ ಎಂದೇ ಪ್ರಸಿದ್ಧರಾಗಿದ್ದ ಅಬು ಜಾಫರ್ ಅಸ್ಸೂಫಿ, ಪಿತ್ರಾರ್ಜಿತವಾಗಿ ಲಭಿಸಿದ ತಮ್ಮ ಸಂಪತ್ತನ್ನೆಲ್ಲ ಜ್ಞಾನಕ್ಕಾಗಿ ಖರ್ಚು ಮಾಡಿದರು ಮತ್ತು ಬಡವರಿಗೆ, ಪ್ರಯಾಣಿಕರಿಗೆ ಹಾಗು ಸೂಫಿಗಳಿಗೆ ಸಹಾಯ ಮಾಡಲು ವಿನಿಯೋಗಿಸಿದರು.
ಇಬ್ನುಲ್ ಫರಜಿಗೆ ಇಬ್ನುಲ್ ಮದೀನಿ ಯೊಂದಿಗೆ ಇದ್ದ ಒಡನಾಟದ ಪರಿಣಾಮವಾಗಿ, ಅವರು ಫಿಖ್ಹ್ ಮತ್ತು ಹದೀಸ್ ನಲ್ಲೂ ಪ್ರವೀಣರಾಗಿದ್ದರು. ‘ಸಿಯರ್’ ಹೇಳುವಂತೆ , ಅನೇಕ ಗ್ರಂಥಗಳ ಕರ್ತೃ ಮುಹಮ್ಮದ್ ಇಬ್ನ್ ಅಹ್ಮದ್ ಅಲ್ ಅಸ್ಬಹಾನಿ ‘ಅಸ್ಸಾಲ್’ (ಜೇನುಸಾಕಣೆದಾರ) ಎಂಬ ಹೆಸರಿನಲ್ಲಿ ಪ್ರಸಿದ್ಧರಾದರು. ಮಾತ್ರವಲ್ಲ ಅವರು ವ್ಯಾಪಾರಿ ತಂದೆಯಿಂದ ಅನೇಕ ತೋಟಗಳು, ಮನೆಗಳು ಮತ್ತು ಅಂಗಡಿಗಳನ್ನು ಪಿತ್ರಾರ್ಜಿತವಾಗಿ ಪಡೆದಿದ್ದರು. ಇನ್ನೋರ್ವ ಪ್ರಮುಖ ವ್ಯಾಪಾರಿ ಅಬುಲ್ ಅಲಾಉಲ್ ಹಮ್ದಾನಿ ತಮ್ಮ ಸಂಪತ್ತನ್ನೆಲ್ಲ ಜ್ಞಾನದ ಹಾದಿಯಲ್ಲಿ ಖರ್ಚು ಮಾಡಿದರು ಮತ್ತು ಕಾಲ್ನಡಿಗೆಯಲ್ಲೇ ಬಗ್ದಾದ್ ಮತ್ತು ಅಸ್ಬಹಾನ್ ಗೆ ತಮ್ಮ ಪುಸ್ತಕಗಳನ್ನು ಹೊತ್ತುಕೊಂಡು ನಡೆದ ವ್ಯಕ್ತಿಯಾಗಿದ್ದರು.
ಜ್ಞಾನದ ಹಾದಿಯಲ್ಲಿ ಸಂಪತ್ತನ್ನು ಖರ್ಚು ಮಾಡುವ ಮೂಲಕ ಕೊನೆಗೆ ಬಡತನಕ್ಕೆ ಸಿಲುಕಿದಾಗಲೂ ಅವರು ಅಧಿಕಾರಿಗಳ ಸಂಪತ್ತನ್ನು ಸ್ವೀಕರಿಸಲು ಸಿದ್ಧರಾಗಿರಲಿಲ್ಲ.

ಅಂದಲುಸಿನ ಪ್ರಮುಖ ವ್ಯಾಪಾರ ಕುಟುಂಬದ ಹದೀಸ್ ವಿದ್ವಾಂಸರಾದ ಸಅದುಲ್ ಖೈರುಲ್ ಅನ್ಸಾರಿ ಅವರ ಪುತ್ರಿ ಫಾತಿಮಾ ವ್ಯಾಪಾರಿ ವಿದ್ವಾಂಸೆಯರ ಪೈಕಿ ಖ್ಯಾತನಾಮರು.
ಶಾಫಿ ನ್ಯಾಯಶಾಸ್ತ್ರದ ವಿದ್ವಾಂಸ ಶಿಹಾಬುದ್ದೀನ್ ಅಹ್ಮದ್ ಇಬ್ನ್ ಮುಹಮ್ಮದ್ ಅಲ್-ಅನ್ಸಾರಿ ಯವರು ಕೃಷಿ ಮತ್ತು ನಂತರದ ವ್ಯಾಪಾರದಿಂದ ಗಳಿಸಿದ ದೊಡ್ಡ ಮೊತ್ತದ ಹಣವನ್ನು ಅಲ್-ಅಝ್ಹರ್ ಗೆ ವಕ್ಫ್ ಮಾಡಿದರು. ವ್ಯಾಪಾರಿಗಳು ಮತ್ತು ನಿರ್ಗತಿಕರ ನಡುವೆ ಮಧ್ಯವರ್ತಿಯಾಗಿ ಜೀವಿಸಿದ್ದ ವಿದ್ವಾಂಸರ ಗುಂಪಿನಲ್ಲಿ ಹಜ್ಜಾಜ್ ಬಿನ್ ಮಿನ್ಹಾಲ್ ಅಲ್-ಬಸ್ವರಿಯನ್ನು ಇಮಾಂ ದಹಬಿ ಉಲ್ಲೇಖಿಸಿದ್ದಾರೆ.
ವ್ಯಾಪಾರದಿಂದ ಉಂಟಾಗಬಹುದಾದ ಸ್ವಾಭಾವಿಕ ನಷ್ಟಗಳಿಂದ ವಿದ್ವಾಂಸರೂ ಮುಕ್ತರಾಗಿರಲಿಲ್ಲ. ಮೊದಲೇ ಹೇಳಿದ ಅಬುಲ್ ಫರಜ್ ಬಿನ್ ಕುಲೈಬ್ ಅಲ್-ಹರ್ರಾನಿಯ ಸೇವಕ ಸುಮಾರು ಆರು ಸಾವಿರ ದೀನಾರುಗಳ ಸಂಪತ್ತಿನೊಂದಿಗೆ ಸಮುದ್ರದಲ್ಲಾದ ಅಪಘಾತದಲ್ಲಿ ತೀವ್ರ ಸಂಕಷ್ಟದಲ್ಲಿದ್ದರು ಮತ್ತು ಜೀವನವನ್ನು ಮುನ್ನಡೆಸಲು ಕಷ್ಟಪಡುತ್ತಿದ್ದರು.
ಅದೇ ರೀತಿ, ಕೆಲವು ಸಹಚರರು ಮತ್ತು ಇತರ ವಿದ್ವಾಂಸರು ತಮ್ಮ ಜೀವನದುದ್ದಕ್ಕೂ ವ್ಯಾಪಾರಕ್ಕಾಗಿ ಸಂಪತ್ತನ್ನು ಪಡೆದರೆ ಅಥವಾ ಯಾವುದೇ ನಷ್ಟವನ್ನು ಅನುಭವಿಸಿದರೆ ತಮ್ಮ ಉಳಿದ ಸಮಯವನ್ನು ಆರಾಧನೆ ಮತ್ತು ಜ್ಞಾನದಲ್ಲಿ ಉಳಿದ ಕಾಲ ಕಳೆಯುತ್ತಿದ್ದರು. ಅಬುದ್ದರ್ದಾ (ರ) ಒಂದು ಕಾಲದಲ್ಲಿ ಪ್ರಸಿದ್ಧ ವ್ಯಾಪಾರಿಯಾಗಿದ್ದರೂ, ಇಸ್ಲಾಂ ಧರ್ಮದ ಆಗಮನದೊಂದಿಗೆ, ವ್ಯಾಪಾರ ಮತ್ತು ಆರಾಧನೆಯನ್ನು ಏಕಕಾಲಕ್ಕೆ ನಡೆಸಲು ಸಾಧ್ಯವಾಗದಿದ್ದಾಗ, ವ್ಯಾಪಾರವನ್ನು ತ್ಯಜಿಸಿ ಆರಾಧನೆಯನ್ನು ಆರಿಸಿಕೊಂಡರು.
ಪ್ರಮುಖ ನ್ಯಾಯಶಾಸ್ತ್ರಜ್ಞ ಇಬ್ನ್ ಶಾದ ನೈಸಾಬೂರಿಯ ಬಗ್ಗೆ , ‘ತ್ವಬಕಾತುಲ್ ಫುಕಾಹಾಇ ಶ್ಶಾಫಿಇಯ್ಯ’ ದಲ್ಲಿ ಸದ್ರಿ ಇಮಾಮರು ವ್ಯವಹಾರವನ್ನು ತ್ಯಜಿಸಿ ಮಸೀದಿಯಲ್ಲಿ ವರ್ಷಗಳ ಕಾಲ ಕಳೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ತಾರಿಖ್ ಬಗ್ದಾದ್

ಇಂತಹ ವ್ಯಾಪಾರದ ಫಲಶೃತಿ ಎಂಬಂತೆ , ಇಸ್ಲಾಮಿಕ್ ಪ್ರಪಂಚದ ಎಲ್ಲಾ ಭಾಗಗಳಿಗೆ ಜ್ಞಾನದ ಬೆಳಕನ್ನು ಹರಡುವ ವಿದ್ವಾಂಸರ ಧ್ಯೇಯದ ಸಾಕ್ಷಾತ್ಕಾರ ಮತ್ತು ವಿದ್ವಾಂಸರ ಸ್ವಯಂ ಪರ್ಯಾಪ್ತತೆ ಮತ್ತು ಅತಿಜೀವನ ಸಾಧ್ಯವಾಯಿತು.
ಸಾಮಾನ್ಯವಾಗಿ, ಎಲ್ಲಾ ವ್ಯಾಪಾರಿಗಳು, ವಿಶೇಷವಾಗಿ ಅವರಲ್ಲಿ ವಿದ್ವಾಂಸರು ಮತ್ತು ಪುಸ್ತಕ ಮಾರಾಟಗಾರರು ವಿವಿಧ ದೇಶಗಳಲ್ಲಿ ವಿದ್ವತ್ಪೂರ್ಣ ಪುಸ್ತಕಗಳ ವಿನಿಮಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೇಲೆ ತಿಳಿಸಿದ ಸಂಶೋಧಕ ಒಲಿಖಿಯಾ ರೆಮಿ ಅವರ ಅಧ್ಯಯನವು ಹಿಜ್ರಾ 414 ಮತ್ತು 432 ವರ್ಷದ ನಡುವೆ ಮುಸ್ಲಿಂ ಸ್ಪೇನ್ಗೆ ಬಂದ ವ್ಯಾಪಾರಿ ವಿದ್ವಾಂಸರ ಸ್ಪಷ್ಟ ದಾಖಲೆಯನ್ನು ದೃಢ ಪಡಿಸುತ್ತದೆ. ಅಂದಲೂಸಿನ ಇಬ್ನ್ ಬಷ್ಕುವಾಲ್ ಎಂಬ ವಿದ್ವಾಂಸರು ಅಂತಹ 22 ಜನರ ಹೆಸರನ್ನು ಉಲ್ಲೇಖಿಸಿದ್ದಾರೆ.
ಇಬ್ನ್ ಅಬಿ ಉಸೈಬಿಯಾ, ಪ್ರಸಿದ್ಧ ಅಂದುಲಸ್ ವೈದ್ಯ ಅಬುಲ್ ಅಲಾ ಬಿನ್ ಜುಹ್ರ್ ಅವರನ್ನು ಪರಿಚಯಿಸುತ್ತಾ ಅವರ ಕಾಲದಲ್ಲಾಗಿತ್ತು ಇಬ್ನ್ ಸೀನಾರ ‘ಅಲ್-ಕಾನೂನ್’ ಪಶ್ಚಿಮಕ್ಕೆ ಬಂದದ್ದು ಎಂದು ಹೇಳುತ್ತಾರೆ. ಇರಾಕ್ ನಿಂದ ಅಂದಲುಸ್ ಗೆ ಬಂದ ಒಬ್ಬ ಪ್ರಸಿದ್ಧ ವ್ಯಾಪಾರಿ ಈ ಪುಸ್ತಕದ ಪ್ರತಿಯನ್ನು ತಂದು ಅಬುಲ್ ಅಲಾಇನ್ ಗೆ ಉಡುಗೊರೆಯಾಗಿ ಕೊಟ್ಟಿದ್ದರು.

ಪರ್ಷಿಯಾ ಪ್ರದೇಶದಿಂದ ಮಧ್ಯ ಏಷ್ಯಾಕ್ಕೆ ಅಪರೂಪದ ಪುಸ್ತಕಗಳನ್ನು ತಲುಪಿಸಿದ್ದ ಅನೇಕ ವ್ಯಾಪಾರಿಗಳಿದ್ದರು. ‘ಉಯುನುಲ್ ಅನ್ಬಾ’ ಎಂಬ ಪುಸ್ತಕದಲ್ಲಿ ಹೀಗಿದೆ: ಹಿಜಿರಾ 632 ನೇ ವರ್ಷ, ವಿದೇಶಿ ವ್ಯಾಪಾರಿಯೊಬ್ಬರು ಇಬ್ನ್ ಅಬಿ ಸಾದಿಕ್ ನೈಸಾಬೂರಿ ಅವರು ಜಾಲಿನೂಸ್ ರವರ ‘ದಿ ಬೆನಿಫಿಟ್ಸ್ ಆಫ್ ದಿ ಆರ್ಗನ್ಸ್’ (ಮನಾಫಿಉಲ್ ಅಅಳಾ) ಗ್ರಂಥಕ್ಕೆ ಬರೆದ ವಿವರಣಾ ಗ್ರಂಥವನ್ನು ತೆಗೆದು ಕೊಂಡು ಡೆಮಸ್ಕಸ್ ಗೆ ಬಂದರು. ಅದು ಆ ಪುಸ್ತಕದ ಅಸಲು ಪ್ರತಿ ಎಂಬುದು ಲೇಖಕರ ಕೈಬರಹದಿಂದಲೇ ಸ್ಪಷ್ಟ ಆಗುತ್ತದೆ. ಅದು ಆ ಗ್ರಂಥದ ಪ್ರಥಮ ಸಿರಿಯನ್ ಪ್ರತಿ ಆಗಿತ್ತು. ಪ್ರಯಾಣಿಕರು ಮತ್ತು ವ್ಯಾಪಾರಿಗಳಾದ ವಿದ್ವಾಂಸರು ತಾವು ಪ್ರಯಾಣಿಸುವ ಅಥವಾ ವಾಸಿಸುವ ದೇಶಗಳನ್ನು ಹೆಚ್ಚಾಗಿ ತಮ್ಮ ಹೆಸರಿನೊಂದಿಗೆ ಉಲ್ಲೇಖಿಸುವ ಕಾರಣ ಅವರ ಸ್ವಂತ ದೇಶವು ಅಪ್ರಸ್ತುತವಾಗುತ್ತದೆ. ತನ್ನನ್ನು “ಸ್ವೀನೀ” (ಚೈನೀಸ್) ಎಂದು ಗುರುತಿಸಿಕೊಂಡ ಅಲ್-ಸಅದುಲ್ ಖೈರುಲ್ ಅಂದಲೂಸಿ ಮತ್ತು, ಇರಾನಿನ ಪಶ್ಚಿಮ ಪ್ರದೇಶವಾದ ತುಸ್ತರ್ ಎಂಬಲ್ಲಿ ವ್ಯಾಪಾರ ಮಾಡಿದ ಕಾರಣ ಮಿಸ್ರಿ ಆಗಿಯೂ “ತುಸ್ತರಿ” ಎಂದು ಹೆಸರುವಾಸಿಯಾದ ಅಹ್ಮದ್ ಬಿನ್ ಈಸ ಈ ಗುಂಪಿನಲ್ಲಿ ಸೇರಿದವರು ಎಂದು ಖತೀಬುಲ್ ಬಗ್ದಾದಿಯವರು ತಮ್ಮ’ತಾರೀಖು ಬಗ್ದಾದ್’ ನಲ್ಲಿ ಹೇಳುತ್ತಾರೆ. ಜ್ಞಾನ ಕ್ಷೇತ್ರಕ್ಕೆ ಸಂಬಂಧವಿಲ್ಲದಿದ್ದರೂ, ಜ್ಞಾನವನ್ನು ಮತ್ತು ಅದರ ಸೇವಕರ ರಕ್ಷಣೆಗೆ ಮುಂದೆ ಬಂದ ವ್ಯಾಪಾರಿಗಳನ್ನೂ ಕಾಣಬಹುದು. ಅದು ಆರಾಧನೆಯೆಂದು ತಿಳಿದು ಜ್ಞಾನಕ್ಕಾಗಿ ವಕ್ಫ್ ಸಹಿತ ಹಲವಾರು ಸೇವೆ ನಡೆಸಲು ಅವರು ಸಿದ್ಧರಾಗಿದ್ದರು. ಹೀಗೆ ಪ್ರಸಿದ್ಧನಾದ ಇದ್ರೀಸುಲ್ ಅದ್ಲ್ ಎಂಬ ವ್ಯಾಪಾರಿಯೊಬ್ಬರ ಕುರಿತು ಇಮಾಂ ತ್ವಬ್ರಿ ತಮ್ಮ ಗ್ರಂಥದಲ್ಲಿ ಪರಾಮರ್ಶಿಸಿದ್ದಾರೆ.

ಮೂಲ: ಮುಹಮ್ಮದ್ ಅಲ್ ಸಯ್ಯದ್
ಕನ್ನಡಕ್ಕೆ: ಎ.ಕೆ ರುಕ್ಸಾನ ಗಾಳಿಮುಖ

ನೈಲಾನ್ ಕೊಡೆ

ಪ್ರಿಯ ವೈಕಂ ಚಂದ್ರಶೇಖರ್ ನಾಯರ್,
ತಮ್ಮ ವಾರ ಪತ್ರಿಕೆ ‘ಚಿತ್ರ ಕಾರ್ತಿಕ’ ಸೊಗಸಾಗಿದೆ. ಅದರ ಪುಟಗಳನ್ನು ಅತ್ಯುತ್ಸಾಹದಿಂದಲೇ ತಿರುವಿ ಹಾಕುತ್ತಿದ್ದೇನೆ. ನಿಧಾನಕ್ಕೆ ಜ್ಞಾನಿಯಾಗುತ್ತಿದ್ದೇನೆ. ಸಂತೋಷವಾಗುತ್ತಿದೆ.
ತಮಾಷೆಯೆಂದರೆ, ಚಿತ್ರಕಾರ್ತಿಕ ಎಂಬ ಹೆಸರನ್ನು ಮೊದಲು ಕೇಳಿದಾಗ ಹಿಂದೂಗಳ ಯಾವುದೋ ಪುರಾಣಕ್ಕೆ ಸಂಬಂಧಿಸಿದ ಸಿನಿಮಾವಾಗಿರಬೇಕೆಂದು ಭಾವಿಸಿದ್ದೆ. ಮೊದಲ ಪುಟ ತೆರೆದಾಗಲೇ ಇದರಲ್ಲಿ ಕ್ರಾಂತಿಯಿದೆ ಎಂದು ತಿಳಿಯಿತು. ಹೇಗೆ ಗೊತ್ತಾ? ಕೆ.ಟಿ. ಮುಹಮ್ಮದ್, ಸಿ. ಚೆರಿಯಾನ್, ವೈಕಂ ಚಂದ್ರ ಶೇಖರ್ ನಾಯರ್ ಮೊದಲಾದ ಪತ್ರಕರ್ತರ ಹೆಸರು ಇದ್ದಲ್ಲಿ; ಕ್ರಾಂತಿ ಕಡ್ಡಾಯವಲ್ಲವೇ. ನಮ್ಮಲ್ಲಿ ಕೇವಲ ಕೋಮು ಆಧಾರಿತ ಪತ್ರಿಕೆಗಳಷ್ಟೇ ಇವೆ. ಚಿತ್ರಕಾರ್ತಿಕ ಜನಪರ ಪತ್ರಿಕೆ. ಆದ್ದರಿಂದ ಹಿಂದೂ, ಮುಸ್ಲಿಮ್, ಕ್ರೈಸ್ತರನ್ನು ಒಗ್ಗೂಡಿಸಿ ಮುನ್ನಡೆಯಿರಿ ಎಂದು ಹಾರೈಸುತ್ತೇನೆ.
ಇಷ್ಟನ್ನು ಅತ್ಯುತ್ಸಾಹದಿಂದಲೇ ಬರೆದಿರೋದು ನಿಜ. ಹಾಗಂತ, ಹಿಂದೂಗಳು ಮುಸ್ಲಿಮರನ್ನು ವಂಚಿಸುತ್ತಿರುವುದನ್ನು ಅಲ್ಲಗಳೆಯುವುದು ಸಾಧ್ಯವೇ? ನಮ್ಮನ್ನು ಬಹಳ ಕ್ರೂರವಾಗಿ ನೋಯಿಸುತ್ತಿದ್ದಾರೆ. ಅಯ್ಯೋ ಇದೇನು ಹೇಳುತ್ತಿರುವಿರಿ? ಯಾವ ಮುಸಲ್ಮಾನನಿಗೆ ಹಿಂದುಗಳು ತೊಂದರೆ ಕೊಟ್ಟಿದ್ದಾರೆ? ಎನ್ನುತ್ತೀರಾ. ಹಾಗಾದರೆ ಕೇಳಿಲ್ಲಿ; ವೈಕಂ ಮುಹಮ್ಮದ್ ಬಶೀರ್ ಎಂಬ ನನ್ನನ್ನು ಹಿಂದೂಗಳು ನೋಯಿಸಿದ್ದಾರೆ. ನನ್ನನ್ನು ನೋಯಿಸಿದ ಹಿಂದೂಗಳ ಹೆಸರು ತಮಗೆ ತಿಳಿದಿರಬೇಕಲ್ಲವೆ? ಗೌರವಾನ್ವಿತ ಪ್ರೊಫೆಸರ್ ಸುಕುಮಾರ್ ಅಯಿಕ್ಕೋಡ್, ಪಿ. ಕೇಶವ ದೇವ್, ವೈಕಂ ಚಂದ್ರಶೇಖರ್ ನಾಯರ್ ಇವರೇ ಅವರು. ಈಗ ಮಳೆಗಾಲ ಬೇರೆ. ನಿಮಗೆ ತಿಳಿದಿದೆ; ಮನೆಯೊಳಗೆ ಕುಳಿತುಕೊಳ್ಳುವ ಅಸಾಮಿ ನಾನಲ್ಲ; ಹೊರಗಿಳಿದು ನಡೆಯದಿದ್ದರೆ ನನಗೆ ಆಗೋದೂ ಇಲ್ಲ. ಕೊಡೆಯಿಲ್ಲದ ಕಾರಣ, ನನ್ನ ಬೋಳು ತಲೆಗೆ ಮಳೆನೀರು ಬಿದ್ದು, ಜ್ವರ ಬಾಧಿತನಾಗಿ ಮಲಗಿ ನರಳಿ ನರಳಿ ಸತ್ತರೆ ಅದಕ್ಕೆ ಹೊಣೆ ಯಾರು? ಇಂಥ ಸಂದರ್ಭದಲ್ಲಿ ಮೊದಲೇ ಸೂಚಿಸಿದ ಹಾಗೆ ಪ್ರೊಫೆಸರ್ ಸುಕುಮಾರ್ ಅಯಿಕ್ಕೋಡ್, ಪಿ. ಕೇಶವದೇವ್, ವೈಕಂ ಚಂದ್ರಶೇಖರ್ ನಾಯರ್ ಮುಂತಾದವರ ಹೆಸರು ಹೇಳದಿರಲಾಗುವುದೇ? ಈ ಮೂವರು ಹಿಂದೂಗಳು ಮುಸಲ್ಮಾನನಾದ ನನ್ನ ಮರಣಕ್ಕೆ ಕಾರಣ ಅಲ್ಲವೆಂದು ಹೇಗೆ ಹೇಳಲಿ? ಬಹಳವೇ ಗಂಭೀರವಾದ ವಿಷಯ ಇದು. ಇದನ್ನೊಂದು ದುರಂತ ಕಥೆಯಾಗಿ ಹೇಳುವುದಿದ್ದರೆ ಅದರ ಶೀರ್ಷಿಕೆ; ನನ್ನ ಪ್ರೀತಿಯ ನೈಲಾನ್ ಕೊಡೆ! ಎಂದಲ್ಲದೆ ಬೇರೆ ಶೀರ್ಷಿಕೆ ಕೊಡಲಾದೀತೇ?
ಅಂದಹಾಗೆ, ಕೊಡೆ ಎಲ್ಲಿ ಹೋಯಿತು? ಮೇಲೆ ತಿಳಿಸಿದ ಮೂವರು ಹಿಂದೂಗಳು ಕದ್ದರೆ? ನೋ.. ನೋ.. ಯಾರೂ ಕದ್ದಿಲ್ಲ ಅಂತನೇ ಹೇಳಬಹುದು. ಹಾಗಾದರೆ, ಕೊಡೆ ಎಲ್ಲಿ ಕಣ್ಮರೆಯಾಯಿತು? ದುಃಖಭರಿತವಾದ ಕಥೆಯನ್ನು ಆಮೇಲೆ ಹೇಳುತ್ತೇನೆ. ಅದಕ್ಕೆ ಮೊದಲು ನನ್ನ ಪ್ರೀತಿಯ ನೈಲಾನ್ ಕೊಡೆಯ ಬಗ್ಗೆ ಎರಡು ಮಾತು. ಅದೆಂತಹ ಕೊಡೆ ಎಂದರೆ, ಆ ಜಾತಿಯ ಒಂದೇ ಒಂದು ಕೊಡೆಯಷ್ಟೇ ಈಗ ನಮ್ಮ ದೇಶದಲ್ಲಿ ಬಾಕಿ ಉಳಿದಿದೆ. ಅದು ಕೂಡ ಘನವೆತ್ತ ರಾಷ್ಟ್ರಪತಿಯವರ ಕೈಯಲ್ಲಿ! ನಿಜ ಹೇಳಬೇಕೆಂದರೆ, ಆ ಜಾತಿಯ ಎರಡೇ ಎರಡು ಕೊಡೆಗಳಷ್ಟೇ ಭಾರತಕ್ಕೆ ಬಂದಿರೋದು; ಗೌರವಾನ್ವಿತ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲ್ಲೋ ಆಗಿರುವುದರಿಂದ ಮೊದಲ ಕೊಡೆ ನನಗೆ ಸಿಕ್ಕಿರಬಹುದು ಅಂತ ನೀವು ಭಾವಿಸಿದರೆ ನನ್ನ ಅಭ್ಯಂತರವಿಲ್ಲ. ನನಗೆ ಸಿಕ್ಕಿರುವ ಸುಂದರವಾದ ಆ ಕೊಡೆಯನ್ನು ಪ್ರೊಫೆಸರ್ ಸುಕುಮಾರ್ ನೋಡಿದ್ದಾರೆ. ಕೇಶದೇವ್ ಕೂಡ ಅದನ್ನು ನೋಡಿದ್ದಾರೆ. ವೈಕಂ ಚಂದ್ರಶೇಖರ ರವರೇ, ತಾವು ಕೂಡ ನೋಡಿರಬಹುದು. ಸುಮ್ಮನೆ ನೋಡಿಲ್ಲ; ಅಸೂಯೆ ಪೀಡಿತ ನಯನ ಮನೋಹರ ಕಣ್ಣುಗಳಿಂದ ಎಂದು ಒತ್ತಿ ಹೇಳಲೇಬೇಕು. ತಾವು ಸೇರಿದಂತೆ ಇನ್ನಿಬ್ಬರು ಹಿಂದೂಗಳು ನನ್ನ ಕೊಡೆಯ ಮೇಲೆ ಕಣ್ಣು ಹಾಕಿದ್ದರು ಎಂದು ಸಂಕ್ಷಿಪ್ತವಾಗಿ ಹೇಳಬಹುದು.


ಆಮೇಲೆ ಏನಾಯಿತು? ಹಿಂದೂಗಳು ಏನು ಮಾಡಿದರು? ಮುಂದೆ ನಡೆದ ಆ ಘೋರ ಅತಿ ಘೋರ ಘಟನೆಯನ್ನೇ ಹೇಳಲಿದ್ದೇನೆ.
ಸಮಯ ರಾತ್ರಿಯ ಎರಡನೇ ಯಾಮ. ಈ ಯಾಮ ಎಂದರೇನೆಂದು ದೇವರಾಣೆ ನನಗೆ ತಿಳಿದಿಲ್ಲ. ಗಂಟೆ ಎಂಬ ಅರ್ಥದಲ್ಲಿ ಬಳಸಿದ್ದೇನೆ. ಘಟನೆ ನಡೆದ ಸ್ಥಳವಾದ ಬೇಪೂರು, ಕೇರಳ, ಭಾರತ ಉಪಖಂಡ ಎಲ್ಲವೂ ಘೋರ ಇರುಳಿನಲ್ಲಿ ಬಂಧಿಯಾಗಿದೆ. ಅಂದರೆ, ಕಳ್ಳಕಾಕರು, ದರೋಡೆಕೋರರು, ಖೋಟಾ ನೋಟಿನ ದಂಧೆಯವರನ್ನು ಹೊರತುಪಡಿಸಿ ಉಳಿದವರೆಲ್ಲ ಗಾಢ ನಿದ್ರೆಯಲ್ಲಿದ್ದಾರೆ ಎಂದರ್ಥ. ಕರಿನಾಗರ, ಕಾಳಿಂಗ, ಘಟಸರ್ಪ, ನರಿಗಳು ಆಹಾರ ಹುಡುಕಿ ಅಲೆಯುವ ಸಮಯ. ಈ ಶುಭ ಮುಹೂರ್ತದಲ್ಲಿ ಕೋಳಿಗಳ ಕೊಕ್ಕೊಕ್ಕೋಕೋ ಎಂಬ ಕೂಗಿನ ನಡುವೆ ನಮ್ಮ ಷಾನ್ ಎಂಬ ಹೆಸರಿನ ಮಹಾನ್ ಶ್ವಾನ ವಂಶಸ್ಥನಾದ ನಾಯಿ ಬೊಗಳುವುದು ಕೇಳಿಸಿತು. ಸಪತ್ನಿ ಸಮೇತ ನನಗೆ ಎಚ್ಚರವಾಯಿತು. ಮನೆಯ ಒಳ ಹೊರಗಿನ ಬೆಳಕುಗಳನ್ನು ನನ್ನ ಪತ್ನಿ ಟಪ್ ಟಪ್ಪೆಂದು ಬೆಳಗಿಸಿದಳು. ನಾನು ದೊಣ್ಣೆ, ಕತ್ತಿ, ಕಠಾರಿ, ಮಚ್ಚು ಹಾಗೂ ಒಂದು ಟಾರ್ಚ್ ಕೈಗೆತ್ತಿ ಹೆಂಡತಿಯನ್ನು ಮುಂದೆ ನಡೆಯಲು ಹೇಳಿದೆ. ಯುದ್ಧದಲ್ಲಿ ಮುಂದಿನ ಸಾಲಿನಲ್ಲಿ ನಡೆಯಬೇಕಾದವನು ಪುರುಷನೆಂಬ ಸತ್ಯವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಕೋಳಿಗಳು ನನ್ನ ಹೆಂಡತಿಯ ಸೊತ್ತು. ಅದು ಅವಳ ತವರು ಮನೆಯ ಉಡುಗೊರೆ. ಆದ್ದರಿಂದ ನನಗೆ ಸಮ ಪ್ರಮಾಣದಲ್ಲಿ ಅದರ ಮೊಟ್ಟೆಗಳೂ ಸಿಗುತ್ತಿಲ್ಲ. ನಿಮಗೆ ವಯಸಾಯ್ತು, ಮೊಟ್ಟೆ ತಿಂದರೆ ಜೀರ್ಣವಾಗುವುದಿಲ್ಲ ಎನ್ನುತ್ತಾಳೆ ನನ್ನ ಹೆಂಡತಿ. ಅಂದಮೇಲೆ, ಮುದುಕನಾದ ನಾನು ಮುಂದೆ ನಡೆಯುವುದು ಸರಿಯೇ? ಅದು ಅವಳಿಗೂ ಅವಳ ಕೋಳಿಗೂ, ಅವಳ ಕೋಳಿ ಮೊಟ್ಟೆಗೂ ಮಾಡುವ ಅನ್ಯಾಯವಲ್ಲವೇ? ಆ ಘನಘೋರ ಅನ್ಯಾಯ ಮಾಡಲಾಗದೆ ಹೆಂಡತಿಯನ್ನೇ ಮುಂದೆ ನಡೆಯಲು ಹೇಳಿದೆ. ಬಾಗಿಲು ತೆರೆದು ದಾರಿ ಮಾಡಿಕೊಟ್ಟು ‘ನಡಿ ಮುಂದೆ ಸಖಿ’ ಎಂದು ಟಾರ್ಚ್ ಅನ್ನು ಅವಳ ಕೈಗೆ ಕೊಟ್ಟೆ. ಅವಳು ಆ ಕತ್ತಲಲ್ಲಿ ನಡೆದು ಕೋಳಿಗೂಡಿನ ಸಮೀಪಕ್ಕೆ ಹೋದಳು. ಹಿತ್ತಿಲಿಗೆ ಟಾರ್ಚ್ ಲೈಟು ಬಿಟ್ಟು ನೋಡಿ; ‘ಸ್ಟೇಟಿನವರು!’ ಎಂದು ಕಿರುಚಿದಳು.
ನಾನು ತಿರುವಿತಾಂಕೂರು ಸ್ಟೇಟಿನವನು. ಅವಳು ಮಲಬಾರಿನವಳು. ಸ್ಟೇಟಿನವರ ಬಗ್ಗೆ ಅವಳಿಗೆ ಎಲ್ಲಿಲ್ಲದ ಮರ್ಯಾದೆ. ಸ್ಟೇಟಿನ ಜನರಿಗೆ ಬುದ್ಧಿ ಹೆಚ್ಚೆಂದು!
‘ಒಟ್ಟು ನಾಲ್ಕು ಮಂದಿ ಕಾಮ್ರೇಡರಿದ್ದಾರೆ’
‘ಯಾರವರು?’
‘ಇನ್ಯಾರು? ನರಿಗಳು. ಇಬ್ಬರು ಪಶ್ಚಿಮ ಭಾಗದಲ್ಲಿ ನಿಂತಿದ್ದಾರೆ. ಇನ್ನಿಬ್ಬರು ಪೂರ್ವದಲ್ಲಿರುವ ಗೇಟಿನ ಬಳಿ ನಿಂತು ಹೊಂಚು ಹಾಕುತ್ತಿದ್ದಾರೆ. ನಮ್ಮ ಮಹಾನ್ ಶ್ವಾನ ವಂಶಜ ಪೂರ್ವದಲ್ಲಿರುವವರ ಜೊತೆಗೆ ಯುದ್ಧದಲ್ಲಿ ಮಗ್ನನಾಗಿರಬೇಕಾದರೆ, ಪಶ್ಚಿಮದಲ್ಲಿರುವ ಕಾಮ್ರೇಡರು ಕುಕ್ಕುಟಾಕ್ರಮಣ ನಡೆಸುವ ಸನ್ನಾಹದಲ್ಲಿರುವರು.
‘ಷಾನು ಬಾ ಇಲ್ಲಿ’ ಹೆಂಡತಿ ಕರೆದಳು.
ಷಾನು ಟುಕು ಟುಕು ಟುಕು ಎಂದು ಅವಳ ಕಡೆಗೆ ಓಡಿದ. ಅವನನ್ನು ಅವನ ಸರಪಳಿಯಿಂದ ಎಳೆದೊಯ್ದು, ಕುತ್ತಿಗೆಗೆ ಉದ್ದದ ಹಗ್ಗ ಕಟ್ಟಿ, ಕೋಳಿ ಗೂಡಿನ ಬಳಿ ಬಂಧಿಸಿದಳು.
ಆ ವೇಳೆ ಅಪಶಕುನವೆಂಬಂತೆ ಇರುಳೊಳಗೆ ಅಡಗಿದ್ದ ತೆಂಗಿನ ಮರಗಳ ಸುತ್ತ ವೃತ್ತಾಕಾರಕ್ಕೆ ಬೆಳಕೊಂದು ಚಲಿಸುತ್ತಾ ಹೋಯಿತು.
‘ಎಲ್ಲಿಂದ ಬಂತು ಅದು?’ ಗಾಬರಿಯಾಗಿ ಕೇಳಿದೆ.
‘ಅದು ಸರ್ಕಸ್ಸಿನವರ ಸರ್ಚ್ ಲೈಟಾಗಿರಬಹುದು’ ಎಂದು ನನ್ನ ಹೆಂಡತಿ ಹೇಳಿದಳು. ಸತ್ಯ ತಿಳಿದಿದ್ದ ನನಗೆ ಸಿಟ್ಟು ಬಂತು;
‘ದಡ್ಡಿ, ಅದು ಸರ್ಕಸ್ಸಿನವರ ಲೈಟಲ್ಲ; ಕಾರ್ಪೊರೇಷನ್ ನವರ ಸರ್ಚ್ ಲೈಟ್. ಈಗ ತಿರುವನಂತಪುರಂ, ಕೊಲ್ಲಂ, ಎರ್ನಾಕುಳಂಗಳಲ್ಲಿ ಇಂತಹ ಸರ್ಚ್ ಲೈಟುಗಳು ಸಾಮಾನ್ಯವಾಗಿದೆ; ಅದರ ಉದ್ದೇಶ ಮುನ್ನೆಚ್ಚರಿಕೆ ನೀಡುವುದು; ಪ್ರೊಫೆಸರ್ ಸುಕುಮಾರ್ ಅಯಿಕ್ಕೋಡ್, ಕೇಶವದೇವ್, ವೈಕಂ ಚಂದ್ರಶೇಖರ್ ಮೊದಲಾದ ಕುಖ್ಯಾತ ಪ್ರಖ್ಯಾತರು ಮನೆಯಿಂದ ಹೊರಗೆ ಬಂದಿದ್ದಾರೆ. ಜನರೇ ಜೋಕೆ! ದೂರ ಸರಿಯಿರಿ’
‘ಅವರು ಹೊರಗೆ ಬಂದರೆ ಸರ್ಚ್ ಲೈಟ್ ಯಾಕೆ?’
‘ದಡ್ಡಿ, ಸರ್ಚ್ ಲೈಟ್ ರಾತ್ರಿ ಮಾತ್ರ! ಹಗಲು ಹೊತ್ತು ಭಯಾನಕ ಸೈರನ್ ಮೊಳಗುತ್ತದೆ. ತಿರುವನಂತಪುರದಿಂದ ವೈಕಂ ಚಂದ್ರಶೇಖರ್ ನಾಯರ್ ಅಥವಾ ಕೇಶವದಾಸ್ ಕಾರಿನಲ್ಲಿ ಹೊರಟರೆ ಕಿವಿಗಡಚಿಕ್ಕುವ ಸೈರನ್ ಮೊಳಗುತ್ತದೆ. ಅದು ಹೇಗೆಂದರೆ, ಕೊಲ್ಲಂ, ಕೋಟ್ಟಯಂ, ಆಲಪುಯ, ಎರ್ನಾಕುಲಂ, ತೃಶೂರ್, ಕೋಯಿಕ್ಕೋಡ್, ಕಣ್ಣೂರ್, ಕಾಸರಗೋಡ್ ಹೀಗೆ ಒಂದರ ಹಿಂದೆ ಒಂದರಂತೆ ಮೊಳಗುತ್ತಲೇ ಇರುತ್ತದೆ. ಪ್ರೊಫೆಸರ್ ಸುಕುಮಾರನ್ ಅಯಿಕ್ಕೋಡ್, ಕ್ಯಾಲಿಕಟ್ ಯುನಿವರ್ಸಿಟಿಯಲ್ಲಿ ತನ್ನ ಕಾರು ಹತ್ತಿದರೂ, ಸರ್ಚ್ ಲೈಟ್ ಕಂಡರೂ, ಸೈರನ್ ಕೇಳಿಸಿಕೊಂಡರೂ ಜನರು ಎದ್ದೆವೋ ಬಿದ್ದೆವೋ ಎಂದು ರಸ್ತೆಯಿಂದ ಓಡಿ ತೆಂಗಿನ ಮರ ಹತ್ತುತ್ತಾರೆ. ಇವರನ್ನು ಕಂಡರೆ ಓಡಬೇಕು ಎಂಬುದೇ ಸರಕಾರದ ಕಾನೂನು! ಪ್ರೊಫೆಸರ್ ಸುಕುಮಾರನ್ ಅಯಿಕ್ಕೋಡ್, ಕೇಶವದಾಸ್, ವೈಕಂ ಚಂದ್ರಶೇಖರನ್ ನಾಯರ್ ಇವರಿಗೆಲ್ಲಾ ಜನರು ಹೆದರಬೇಕೇ? ಹೆದರಬೇಕು. ಇವರೆಲ್ಲ ಸಾಹಿತಿಗಳು. ಲಂಗು ಲಗಾಮಿರುವ ವರ್ಗವಲ್ಲ; ಅವರೆಲ್ಲಾ ಕಾರುಗಳಲ್ಲಿ ಓಡಾಡುವವರು. ಕಾರುಗಳಿರುವ ಸಾಹಿತಿಗಳು ಬರುತ್ತಿದ್ದಾರೆ ದಾರಿಬಿಡಿ ಎಂದು ಸೂಚಿಸಲೇ ಈ ಸರ್ಚ್ ಲೈಟ್? ಹೌದು. ಹೇಳಿದೆನಲ್ಲಾ, ಹಗಲು ಹೊತ್ತು ಸೈರನ್ ಮೊಳಗುತ್ತದೆ. ಈ ಪ್ರೊಫೆಸರ್ ಸುಕುಮಾರನ್ ಅಯಿಕ್ಕೋಡ್, ಕೇಶವದಾಸ್, ವೈಕಂ ಚಂದ್ರಶೇಖರ್ ರ ಕಾರುಗಳಿಗೆ ಮಾತ್ರವೇ ಸೈರನ್ ಭಾಗ್ಯ! ಹೌದು. ಅದೇನು ಹಾಗೆ? ಕಾರುಗಳಿರುವ ಸಾಹಿತಿಗಳಿಗೆ ನೀಡಲಾದ ಸೌಲಭ್ಯ ಅದು. ಈಗಿನ ಕೇರಳದ ಕಮ್ಯೂನಿಸ್ಟ್ ಮುಖ್ಯಮಂತ್ರಿ ಒಬ್ಬ ಸಾಹಿತಿ! ಭಾರತವನ್ನು ಆಳುತ್ತಿರುವ ಇಂದಿರಾಗಾಂಧಿ ಸಾಹಿತಿ! ಅವರಿಗೆ ಕಾರುಗಳಿರುವ ಸಾಹಿತಿಗಳೆಂದರೆ ಗೌರವ. ಆದ್ದರಿಂದ ಸರ್ಚ್ ಲೈಟ್, ಸೈರನ್ ಇಟ್ಟುಕೊಳ್ಳಲು ಅನುಮತಿ ನೀಡಿದ್ದಾರೆ. ‘ಜನರೇ, ಬದುಕಿ ಉಳಿಯಬೇಕಾದರೆ ಓಡಿ ಅಡಗಿಕೊಳ್ಳಿ’ ಎಂದು ಕೂಗುವ ಸೈರನ್!


‘ಇಂದಿರಾಗಾಂಧಿ ಸಾಹಿತಿಯೇ? ಅವರು ಪುಸ್ತಕ ಬರೆದಿರುವ ಬಗ್ಗೆ ನಾನು ಕೇಳಿಲ್ಲ. ಮತ್ತೆ ಅವರು ಹೇಗೆ ಸಾಹಿತಿಯಾದರು?’
‘ಹುಚ್ಚಿ, ಇಂದಿರಾಗಾಂಧಿ ಪುಸ್ತಕ ಬರೆದಿದ್ದಾರೆ. ಅಷ್ಟೇ ಅಲ್ಲ; ಇಂದಿರಾಗಾಂಧಿಯ ಅಪ್ಪ ಜವಾಹರಲಾಲ್ ನೆಹರೂ ಕೂಡ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ’ ಎಂದೆ. ಹೆಂಡತಿ ಏನೂ ಮಾತನಾಡಲಿಲ್ಲ.
‘ನೀನು ಸಾರಿ ಸುತ್ತಿಕೊಂಡು ನಿನ್ನ ಗೆಳತಿಯರ ಮನೆಗೆ ಹೋಗುವಾಗ ಸೈರನ್ ಕೇಳಿದರೆ ಆ ಕ್ಷಣವೇ ಹಾರಿ ತೆಂಗಿನ ಮರಕ್ಕೆ ಹತ್ತಿ ಬಚಾವಾಗುವ ದಾರಿ ನೋಡಬೇಕು’ ಎಂದು ನಾನು ಹೇಳಿದೆ.
‘ಮರ ಹತ್ತಲು ನನಗೆ ತಿಳಿಯದು’
‘ಮತ್ತೆ ಸ್ತ್ರೀ ಸ್ವಾತಂತ್ರ‍್ಯಕ್ಕಾಗಿ ಕೂಗುವುದರ ರಹಸ್ಯವೇನು?’
‘ಮರ ಹತ್ತಲಾಗದಿದ್ದರೆ ನೀರಿಗೆ ಹಾರಿ ಜೀವ ರಕ್ಷಿಸಿಕೊಳ್ಳಬೇಕು’
‘ಈಜು ತಿಳಿದಿಲ್ಲ’
‘ಹಾಗಾದರೆ, ನೀನು ಮನೆಯ ಹೊಸ್ತಿಲು ದಾಟಬಾರದು. ರಸ್ತೆ ನಿನಗೆ ನಿಷಿದ್ಧ’
‘ಬಾಗಿಲು ಭದ್ರಪಡಿಸಿ, ಲೈಟ್ ಆಫ್ ಮಾಡಿ ಮಲಗಿದಾಗ ಅಶರೀರವಾಣಿಯಂತೆ ಹೆಂಡತಿ ಹೇಳಿದಳು; ಧೀರನಾದ ಗಂಡ ಮುಂದೆ ನಡೆಯುತ್ತಾನೆಯೇ ವಿನಾ ಉಗ್ರರಾದ ಸ್ಟೇಟ್ ನರಿಗಳ ಮುಂದೆ ಕಳುಹಿಸಿ ಹಿಂದೆ ಅಡಗಿಕೊಳ್ಳುವುದಿಲ್ಲ.
‘ಧೀರರಾಗಬೇಕಾದರೆ ಧಾರಾಳ ಕೋಳಿಮೊಟ್ಟೆ ಸೇವಿಸಬೇಕು’ ಎಂದು ಅಶರೀರವಾಣಿಯಂತೆ ನಾನು ಹೇಳಿದೆ.
‘ಕೋಳಿಮೊಟ್ಟೆ ಮಾರಿ ಸಿಗುವ ಹಣ ಯಾರ ಪಾಕೀಟು ಸೇರುತ್ತದೆ?’
ಇದಕ್ಕೆಲ್ಲಾ ಏನು ಉತ್ತರಿಸುವುದು ಎಂದು ನಾನು ನಿದ್ರೆಗೆ ಜಾರಿದೆ. ಆಗೊಂದು ಭಯಾನಕವಾದ ಕನಸು ಬಿತ್ತು. ಮೂವರು ಹಿಂದೂಗಳು ಘೋರ ಅಟ್ಟಹಾಸದೊಂದಿಗೆ ನನ್ನ ಬೆನ್ನಟ್ಟುತ್ತಿದ್ದಾರೆ! ಮೂರು ಕಾರುಗಳಲ್ಲಿ! ಪ್ರೊಫೆಸರ್ ಸುಕುಮಾರನ್ ಅಯಿಕ್ಕೋಡ್, ವೈಕಂ ಚಂದ್ರಶೇಖರನ್ ನಾಯರ್, ಕೇಶವದೇವ್ ಈ ಮೂವರು ನನ್ನನ್ನು ಬೆನ್ನಟ್ಟಿ ಒಂದು ಮೈದಾನದಲ್ಲಿ ನಿಲ್ಲಿಸಿದ್ದಾರೆ. ಮೂರು ಭಾಗದಲ್ಲಿ ಮೂರು ಕಾರುಗಳು ನಿಂತಿವೆ. ಅವರ
ನಡುವೆ ನೈಲಾನ್ ಕೊಡೆಯೊಂದಿಗೆ ನಾನು ನಿಂತಿದ್ದೇನೆ. ಮೂವರೂ ಬೇಕಾಬಿಟ್ಟಿ ಹಾರ್ನ್ ಹೊಡೆಯುತ್ತಿದ್ದಾರೆ. ಭಯಭೀತರಾದ ಜನರು ಚಕಚಕನೇ ಮರಗಳನ್ನು ಹತ್ತಿ, ಅಂಟಿಕೊಂಡಂತೆ ಕುಳಿತಿದ್ದಾರೆ. ನನ್ನನ್ನು ಸುತ್ತುಹಾಕಿರುವ ಮೂವರೂ ಗಹಗಹಿಸಿ ನಗುತ್ತಿದ್ದಾರೆ. ಕೇಶವದೇವ್ ತೆಂಗಿನಕಾಯಿಯ ಚರಟೆಯನ್ನು ಬಂಡೆಗಲ್ಲಿಗೆ ಉಜ್ಜಿದಂತೆ ನಗುತ್ತಿದ್ದಾರೆ. ಅಷ್ಟರಲ್ಲಿ ನನಗೆ ಎಚ್ಚರವಾಯಿತು. ವಿಶೇಷವೇನಿಲ್ಲ. ಲೋಕ ಎಂದಿನಂತೆಯೇ ಇತ್ತು. ಪ್ರಾತಃ ವಿಧಿಗಳೆಲ್ಲಾ ಮುಗಿಸಿದೆ. ಸ್ನಾನ ಮುಗಿದ ಮೇಲೆ ದೇಹಕ್ಕೆ ಯುಟಿಕ್ಲೇನ್ ಹಚ್ಚಿದೆ. ಪೌಡರ್ ಹಚ್ಚಿ, ಕೂದಲನ್ನು ನೀಟಾಗಿ ಬಾಚಿ, ಬಟ್ಟೆ ಧರಿಸಿದೆ. ಬೇಯಿಸಿದ ಆರು ಮೊಟ್ಟೆ, ಪುಟ್ಟು, ತುಪ್ಪ, ಹಪ್ಪಳ, ಕಡಲೆ ಇತ್ಯಾದಿ ಭಕ್ಷ್ಯ ಭೋಜನದೊಂದಿಗೆ ಒಂದು ಟೀ ಕುಡಿದು ಸಿಗರೇಟ್ ಹಚ್ಚಿ ಆರಾಮ ಕುರ್ಚಿಗೆ ಮೈಪವಡಿಸಿದೆ…!
ಇದರಲ್ಲಿ ಸಿಗರೇಟ್ ಸೇದಿರುವುದು ಮಾತ್ರ ಸತ್ಯ! ಉಳಿದುದೆಲ್ಲಾ ಆಸೆಗಳಷ್ಟೇ. ನನ್ನ ಸಮಸ್ಯೆ; ಬೆಲೆ ಏರಿಕೆ ಹಾಗೂ ದಾರಿದ್ರ‍್ಯ! ಇಂತಿಪ್ಪ ನಾನು ಸ್ನಾನ ಮುಗಿಸಿ ಒಂದು ಸಿಂಗಲ್ ಬ್ಲಾಕ್ ಟಿ ಹಾಗೂ ಸಿಗರೇಟು ಸೇದಲಷ್ಟೇ ಸಾಧ್ಯ. ಕೋಳಿ ಮೊಟ್ಟೆ ಮಾರಿ ಸಂತೆಯಿಂದ ಅಕ್ಕಿ ಖರೀದಿಸಿ ಗಂಜಿ ಬೇಯಿಸಬೇಕು. ಗಂಜಿಯ ಜೊತೆಗೆ ನಂಜಿಕೊಳ್ಳಲು ಏನಾದರು ಬೇಕಲ್ಲವೇ. ಬದನೆಕಾಯಿ ಏನಾದರು ಸಿಗಬಹುದೇ ಎಂದು ನೋಡಲು ಇಂಪಾಲ ಕಾರಿನಲ್ಲಿ ಪ್ರಯಾಣಿಸುವ ಅನುಭೂತಿಯೊಂದಿಗೆ ನನ್ನ ನೈಲಾನ್ ಕೊಡೆಯನ್ನು ಬೆನ್ನಿಗೆ ತೂಗು ಹಾಕಿಕೊಂಡು ಮಾಸ್ತರ್ ಗಿರಿ ಮಾಡುತ್ತಾ ಹೊರಟೆ.
ಮನೆಯಿಂದ ಹೊರಡಬೇಕಾದರೆ ನಾನು ನನ್ನ ಕೇರಳೀಯತೆಯನ್ನು ಪಾಲಿಸಲಿಲ್ಲ. ಮರೆತು ಬಿಟ್ಟೆ. ಅಂದರೆ, ಕೇರಳೀಯ ಪತಿ ಹೊರಗೆ ಹೋಗುವಾಗ ಪತ್ನಿಯೊಂದಿಗೆ ಹೇಳುವುದು ರೂಢಿ. ರಾತ್ರಿಯಾದರೆ ಇವಳೇ, ಸರ್ಚ್ ಲೈಟ್ ನೋಡಿದೆಯಾ? ಹಗಲಾದರೆ ಸೈರನ್ ಕೇಳಿಸಿತಾ? ಈ ರೀತಿಯ ಕುಶಲ ಮಾತುಕತೆಗಳಿಲ್ಲದೆಯೇ ನಾನು ಹೊರಟಿದ್ದೆ.
ರಸ್ತೆಯ ಮೇಲೆ ಒಂದೇ ಒಂದು ವಾಹನವಿಲ್ಲ. ಎಲ್ಲೆಲ್ಲೂ ವಿಚಿತ್ರ ಶೂನ್ಯತೆ ಆವರಿಸಿದೆ. ಅಂಗಡಿಗಳ ಬಾಗಿಲು ಮುಚ್ಚಿ ಬೀದಿಗಳು ಬಿಕೋ ಎನ್ನುತ್ತಿತ್ತು. ಜನರು ತೆಂಗಿನ ಮರವನ್ನು ಅರ್ಧ ಏರಿ ತಟಸ್ಥರಾಗಿ ಕುಳಿತಿದ್ದರು. ಮಹಿಳೆಯರು ನೀರಿಗಿಳಿದು, ಕತ್ತು ಮಾತ್ರ ಹೊರ ಚಾಚಿ ಕೋಳಿಗಳಂತೆ ಇಣುಕುತ್ತಿದ್ದರು. ರಸ್ತೆಯ ಮೇಲೆ ಹಸುಗಳು, ಕೋಳಿಗಳು, ನಾಯಿಗಳು ಓಡಾಡುತ್ತಿತ್ತು. ಅವುಗಳ ನಡುವೆ ಒಬ್ಬನಾಗಿ ನಾನು ಸುಮ್ಮನೆ ನಡೆದೆ.
ತೆಂಗಿನ ಮರವನ್ನು ಅರ್ಧ ಏರಿ ಕುಳಿತಿದ್ದ ಲಕ್ಷ್ಮಿ ಕುಟ್ಟಿ ನನ್ನನ್ನು ನೋಡಿ ಗಾಬರಿಯಿಂದ; ‘ಸಾರ್, ಸೈರನ್ ಕೇಳಿಸಿಲ್ಲವೇ? ಅವರು ಬರುತ್ತಿದ್ದಾರೆ, ಓಡಿ. ಜೀವ ಉಳಿಸಿಕೊಳ್ಳಿ. ಅವರೇ ಅವರು, ಸಾಹಿತಿಗಳು ಬರುತ್ತಿದ್ದಾರೆ. ಓಡಿ ಅಡಗಿಕೊಳ್ಳಿ’ ಎಂದು ಕೂಗಿದಳು.
ನಾನು ಮೇಲೆ ನೋಡಿದಾಗ ಎಲ್ಲಾ ತೆಂಗುಗಳಲ್ಲೂ ಜನರಿದ್ದರು. ನಾನು ಕೊಡೆಯನ್ನು ಒಂದು ತೆಂಗಿಗಾನಿಸಿ ನಿಲ್ಲಿಸಿ, ಲಕ್ಷ್ಮೀ ಕುಟ್ಟಿಗೆ ‘ದೀರ್ಘ ಸುಮಂಗಲೀಭವ!’ ಎಂದು ಆಶಿರ್ವಾದ ಮಾಡಿದೆ. ನಂತರ ತೆಂಗಿನ ಮರಕ್ಕೆ ಚಕಚಕನೇ ಹತ್ತಿ ಕುಳಿತೆ.
‘ಸಾರ್, ನಿಮಗೊಂದು ವಿಷಯ ತಿಳಿದಿದೆಯೇ’? ಎಂದು ಲಕ್ಷ್ಮೀ ಕುಟ್ಟಿ ನನ್ನೊಂದಿಗೆ ಗುಟ್ಟು ಹೇಳುವಂತೆ ಕೇಳಿದಳು.
‘ನನ್ನನ್ನು ಇದುವರೆಗೆ ಯಾರೂ ಮದುವೆಯಾಗಿಲ್ಲ’
‘ಹೌದೇ? ಬಹಳ ಕಷ್ಟ ಆಯಿತು. ಈಗೇನು ಮಾಡುವುದು? ನಾನು ಮದುವೆಯಾಗುತ್ತೇನೆ ಎಂದು ಹೇಳಬಹುದು!
ಆದರೆ, ವಯಸಿಗೇನು ಮಾಡೋಣ. ಜನರು ಮುದುಕ ಅನ್ನುತ್ತಾರೆ. ನನ್ನನ್ನು ಬಿಡಿ. ಊರಿನ ಯುವಕರೆಲ್ಲ ಏನು ಕಿಸಿಯುತ್ತಿದ್ದಾರೆ? ಉದ್ದಕೆ ಕೂದಲು ಬೆಳೆಸಿ, ಥರೇವಾರಿ ಶೈಲಿಯ ಮೀಸೆ ಬಿಟ್ಟು ಸ್ನಾನ ಮಾಡದೆ, ಹಲ್ಲುಜ್ಜದೆ ಓಡಾಡುವ ಬದಲು ಈ ಹುಡುಗಿಯನ್ನು ಮದುವೆಯಾಗಬಾರದೇ? ಓಯ್, ಯಾರಾದರು ಬಂದು ಬೇಗ ನಮ್ಮ ಲಕ್ಷ್ಮಿ ಕುಟ್ಟಿಯನ್ನು ಮದುವೆಯಾಗಿ’ ಎಂಬಿತ್ಯಾದಿಯಾಗಿ ಮನಸಿನಲ್ಲೇ ಮಂಡಿಗೆ ತಿಂದು ‘ಯಾರು ಬರುತ್ತಿರುವುದು?’ ಎಂದು ಲಕ್ಷ್ಮಿ ಕುಟ್ಟಿಯೊಂದಿಗೆ ಕೇಳಿದೆ.
‘ನನಗೆ ತಿಳಿದಿಲ್ಲ ಸರ್’
‘ಸೈರನ್ ರಿಲೇ ಮಾಡಿದ್ದೇ?’
‘ತಿಳಿದಿಲ್ಲ’
ಅಷ್ಟರಲ್ಲಿ ಭಯಾನಕವಾದ ಒಂದು ಹಾರನ್ ಕೇಳಿಸಿತು. ಮೂರು ದನ, ಎರಡು ನಾಯಿ, ಒಂಬತ್ತು ಕೋಳಿ ಇಷ್ಟು ಜೀವಿಗಳನ್ನು ಕೊಂದು ಸುರ್ರೆಂದು ಬಂದ ಒಂದು ಕಾರು ರಸ್ತೆ ಬಿಟ್ಟು ತೆಂಗಿನ ಬುಡಕ್ಕೆ ಗುದ್ದಿ; ನನ್ನ ನೈಲಾನ್ ಕೊಡೆಯನ್ನು ಚಿಂದಿ ಉಡಾಯಿಸಿತು. ಕೊಡೆಯ ದಾರುಣ ಸ್ಥಿತಿಯ ಬಗ್ಗೆ ನಾನು ಯೋಚಿಸುತ್ತಿರಬೇಕಾದರೆ, ‘ಅದು ದೇವ್ ಸಾರ್’ ಎಂದು ಲಕ್ಷ್ಮೀ ಕುಟ್ಟಿ ಹೇಳಿದಳು.
‘ಅಲ್ಲ’ ಪಕ್ಕದ ಮರದಲ್ಲಿ ಕುಳಿತು ನಾಣುಕುಟ್ಟನ್ ಹೇಳಿದ.
‘ಅದು ವೈಕಂ ಚಂದ್ರಶೇಖರನ್ ಸರ್’ ಎಂಬುದು ಅವನ ಅಭಿಪ್ರಾಯ.
‘ಅಲ್ಲ ಅಲ್ಲ. ಅದು ಪ್ರೊಫೆಸರ್ ಸುಕುಮಾರನ್ ಅಯಿಕ್ಕೋಡ್’ ಎಂದು ಮರದಿಂದ ಇಳಿದು ಚೆಲ್ಲಾಪಿಲ್ಲಿಯಾಗಿದ್ದ ಕೊಡೆಯನ್ನು ನೋಡಿ ಮರುಗುತ್ತಾ ಪದ್ಮನಾಭನ್ ಹೇಳಿದ.
‘ಯಾರಾದರೇನು? ಕೊಡೆ ಹೋಯಿತು. ಇನ್ನು ಬೋಳು ತಲೆಗೆ ಮಳೆ ಹನಿಬಿದ್ದು ಜ್ವರ ಬಿದ್ದು ಸಾಯಬೇಕು’ ಎಂದು ಕಳವಳಿಸುವ ಗತಿಗೇಡು ನನ್ನದು.
ಹಿಂದೂಗಳೇ! ನೀವೇಕೆ ಹೀಗೆ ಮಾಡಿದಿರಿ. ಮುಸ್ಲಿಮ್ ಸಮುದಾಯದೊಂದಿಗೆ ನೀವು ತೋರಿಸಿದ ಈ ಮಹಾ ಅನ್ಯಾಯಕ್ಕೆ ಎಲ್ಲಿದೆ ನ್ಯಾಯ! ನೀವು ಮೂವರು ಸೇರಿದರೂ ಈ ಅಮೂಲ್ಯವಾದ ಕೊಡೆಯನ್ನು ಮತ್ತೆ ಮರಳಿಸಲಾರಿರಿ. ಆದ್ದರಿಂದ ನೀವು ಮೂವರು ಸೇರಿ ನನಗೊಂದು ಕಾರು ತೆಗೆದುಕೊಡಿ. ಒಂದು ಜೀಪ್ ತೆಗೆದುಕೊಟ್ಟರೂ ಪರವಾಗಿಲ್ಲ. ಆ ಮೂಲಕ ಹಿಂದೂಗಳ ಮಾನ ಕಾಪಾಡಿ. ಅದು ಸಾಧ್ಯವಿಲ್ಲದಿದ್ದರೆ, ನನಗೆ ಹತ್ತೋ ಐವತ್ತೋ ನೂರೋ ರುಪಾಯಿ ಕಳುಹಿಸಿಕೊಟ್ಟು ಸಹಾಯ ಮಾಡಲು ಜನರಿಗೆ ಮನವಿ ಮಾಡಿ. ನಿಮಗೂ ಚಿತ್ರಕಾರ್ತಿಕಕ್ಕೂ, ಇನ್ನಿತರ ಪತ್ರಕರ್ತರಿಗೂ ಹಾರೈಸುವೆನು. ಸರ್ವ ಜನರಿಗೂ ಶುಭವಾಗಲಿ

ವೈಕಂ ಮುಹಮ್ಮದ್ ಬಶೀರ್
ಕನ್ನಡಕ್ಕೆ: ಸ್ವಾಲಿಹ್ ತೋಡಾರ್

ಶಾಂತಿಯ ಭಂಜಕರು: ಫೆಲಸ್ತೀನಿನ ಕುರಿತು ಫ್ರೆಂಚ್ ದಾರ್ಶನಿಕ ಡೆಲೂಝ್

1978 ಎಪ್ರಿಲ್ 7ರ Le Monde ಎಂಬ ಫ್ರೆಂಚ್ ಪತ್ರಿಕೆಗೆ ಪ್ರಮುಖ ಸಮಕಾಲೀನ ತತ್ವ ಚಿಂತಕ ಗಿಲ್ಸ್ ಡೆಲೂಝ್ ಬರೆದ ಲೇಖನವಿದು. ಅವರ Two Regimes of Madness ಎಂಬ ಪುಸ್ತಕದಲ್ಲೂ ಇದನ್ನು ಸೇರಿಸಲಾಗಿದೆ)

ಸ್ವಂತವಾಗಿ ಒಂದು ರಾಷ್ಟ್ರವಿಲ್ಲದ ಫೇಲಸ್ತೀನಿಯರಿಗೆ ಶಾಂತಿ ಮಾತುಕತೆಗಳಲ್ಲಿ ಶುದ್ಧ ಪಾಲುದಾರಿಕೆ ವಹಿಸಲು ಸಾಧ್ಯವೇ? ಅವರ ರಾಷ್ಟ್ರವನ್ನೇ ಅವರಿಂದ ಕಸಿಯಲಾಗಿರುವಾಗ ಹೇಗೆ ಅವರನ್ನು ಸ್ವಂತ ರಾಷ್ಟ್ರವುಳ್ಳವರಾಗಿ ಪರಿಗಣಿಸಬಹುದು? ಬೇಷರತ್ತಾಗಿ ಶರಣಾಗುವುದಲ್ಲದೆ ಫೆಲಸ್ತೀನಿನ ಮುಂದೆ ಅನ್ಯ ಮಾರ್ಗವಿರಲಿಲ್ಲ. ಮರಣ ಮಾತ್ರವಾಗಿತ್ತು ಅವರ ಮುಂದಿದ್ದ ಏಕೈಕ ಮಾರ್ಗ. ಇಸ್ರೇಲ್-ಫೆಲಸ್ತೀನ್ ಸಂಘರ್ಷದಲ್ಲಿ ಇಸ್ರೇಲ್‌ನ ಆಕ್ರಮಣಗಳು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಕೂಡ ಅದು ನ್ಯಾಯಬದ್ಧ ಪ್ರತ್ಯಾಕ್ರಮಣವಾಗಿ ಮಾತ್ರ ಪರಿಗಣಿಸಲ್ಪಟ್ಟಿದೆ ಮತ್ತು ಫೆಲಸ್ತೀನಿನದ್ದು ನಿಸ್ಸಂದೇಹವಾಗಿ ಭಯೋತ್ಪಾದಕ ಕೃತ್ಯವೆಂದು ಪ್ರಚುರಪಡಿಸಲಾಗಿದೆ. ಒಬ್ಬ ಇಸ್ರೇಲ್ ಪೌರನ ಸಾವಿಗೆ ಸಿಗುವ ಪ್ರಾಮುಖ್ಯತೆ ಮತ್ತು ಸಂತಾಪ ಯಾವುದೇ ಫೆಲಸ್ತೀನಿಯನ ಸಾವಿಗೂ ಲಭಿಸುವುದಿಲ್ಲ.

ದಕ್ಷಿಣ ಲೆಬನಾನಿನಲ್ಲಿ 1969ರಿಂದ ಇಸ್ರೇಲ್ ಸೈನ್ಯವು ನಿರ್ದಯವಾಗಿ ಬಾಂಬ್ ಮಳೆ ಸುರಿಸುತ್ತಿದೆ. ಸಮೀಪ ಕಾಲದಲ್ಲಿ ನಾವು ನಡೆಸಿದ ದಾಳಿ ಟೆಲ್-ಅವೀವ್ ಭಯೋತ್ಪಾದಕ ಆಕ್ರಮಣ ವಿರುದ್ಧದ ಪ್ರತಿದಾಳಿ ಆಗಿರಲಿಲ್ಲವೆಂದು ಸ್ವತಃ ಇಸ್ರೇಲೇ ಒಪ್ಪಿಕೊಂಡಿದೆ. ಅದು ಇಸ್ರೇಲಿ‌ನ ನಿರ್ಣಯಾಧಿಕಾರದ ಉಸ್ತುವಾರಿಯಲ್ಲಿ ವ್ಯವಸ್ಥಿತವಾಗಿ ನಡೆಯುವ ಮಿಲಿಟರಿ ಆಕ್ರಮಣ ಸರಣಿಯ ಪರಾಕಾಷ್ಠೆಯಾಗಿತ್ತು. ಫೆಲಸ್ತೀನ್ ಸಮಸ್ಯೆಗೆ ‘ಅಂತಿಮ ಪರಿಹಾರ’ ಕಂಡುಕೊಳ್ಳಲು ಇತರ ರಾಷ್ಟ್ರಗಳಿಂದ ತಮ್ಮ ಪರವಾಗಿ ಒಕ್ಕೊರಲ ಬೆಂಬಲವನ್ನು ನಿರೀಕ್ಷಿಸಲು ಇಸ್ರೇಲ್‌‌ಗೆ ಸಾಧ್ಯವಿದೆ. ಕಾರಣ ಒಂದು ರಾಷ್ಟ್ರವಾಗಲೀ ಭೂಮಿಯಾಗಲೀ ಏನೂ ಇಲ್ಲದ ಫೆಲಸ್ತೀನಿಯರು ಆ ರಾಷ್ಟ್ರಗಳ ದೃಷ್ಟಿಯಲ್ಲಿ ‘ಶಾಂತಿಯ ಭಂಜಕರು’ (Spoilers of Peace) ಆಗಿದ್ದಾರೆ. ಕೆಲ ದೇಶಗಳಿಂದ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ಸಹಾಯಗಳು ಲಭಿಸಿದ್ದರೂ ಅದೆಲ್ಲವೂ ವ್ಯರ್ಥವಾಗಿತ್ತು. ನಾವು ಏಕಾಂಗಿಗಳೆಂದು ಫೆಲಸ್ತೀನಿಯರು ಹೇಳುವಾಗ ಅವರು ಅದರ ಕುರಿತು ಸ್ಪಷ್ಟವಾದ ನಿಲುವು ಮತ್ತು ಪ್ರಜ್ಞೆಯನ್ನು ಖಂಡಿತವಾಗಿಯೂ ಹೊಂದಿದ್ದಾರೆ.

ಒಂದು ರೀತಿಯಲ್ಲಿ ಸಣ್ಣ ಗೆಲುವನ್ನು ಪಡೆಯಲು ತಮ್ಮಿಂದ ಸಾಧ್ಯವಾಗಿದೆಯೆಂದು ಫೆಲಸ್ತೀನಿಯನ್ ಸಶಸ್ತ್ರ ಹೋರಾಟಗಾರರು ಹೇಳಿಕೊಳ್ಳುತ್ತಿದ್ದಾರೆ. ಇಸ್ರೇಲ್ ಆಕ್ರಮಣವನ್ನು ಮೆಟ್ಟಿ ನಿಂತ ರಕ್ಷಣಾ ಪಡೆಗಳು ಮಾತ್ರವಾಗಿತ್ತು ದಕ್ಷಿಣ ಲೆಬನಾನಿನಲ್ಲಿ ಬಾಕಿಯುಳಿದಿದ್ದು. ಇದ್ದ ಭೂಮಿಯನ್ನೂ ಕಳೆದುಕೊಂಡು ಬದುಕುವ ಫೆಲಸ್ತೀನಿಯನ್ ನಿರಾಶ್ರಿತರನ್ನು ಮತ್ತು ಲೆಬನೀಸ್ ಕೃಷಿಕರನ್ನಾಗಿದೆ ಇಸ್ರೇಲ್ ದಾಳಿ ಭೀಕರವಾಗಿ ಬೇಟೆಯಾಡಿದ್ದು. ಹಳ್ಳಿಗಳು ಮತ್ತು ನಗರಗಳನ್ನು ಧ್ವಂಸಗೈದಿದ್ದು, ಅಮಾಯಕ ನಾಗರಿಕರನ್ನು ಸಾಮೂಹಿಕ ಕಗ್ಗೊಲೆಗೈದಿದ್ದೆಲ್ಲವೂ ಧೃಢೀಕರಿಸಲ್ಪಟ್ಟ ಮಾಹಿತಿಗಳಾಗಿವೆ. ಕ್ಲಸ್ಟರ್ ಬಾಂಬುಗಳು ಪ್ರಯೋಗಿಸಲ್ಪಟ್ಟಿವೆಯೆಂದು ವಿವಿಧ ವರದಿಗಳು ಹೇಳುತ್ತಿದೆ. ಭಯೋತ್ಪಾದಕ ದಾಳಿಗಿಂತ ಯಾವುದೇ ಭಿನ್ನವಲ್ಲದ ಇಸ್ರೇಲ್ ಮಿಲಿಟರಿ ದಾಳಿಯಿಂದಾಗಿ ಗಟ್ಟಿಯಾದ ನೆಲೆಯಿಲ್ಲದೆ ಪದೇ ಪದೇ ಪಲಾಯನಗೈದು ಬದುಕುವ ದಯನೀಯ ಗತಿ ಲೆಬನಾನ್ ಜನತೆಯದ್ದು. ಕೊನೆಯದಾಗಿ ನಡೆದ ಆಕ್ರಮಣದಲ್ಲಿ 2 ಲಕ್ಷಕ್ಕೂ ಮಿಕ್ಕ ಜನರು ತಮ್ಮ ಮನೆ ಕಳೆದುಕೊಂಡು ನಿರಾಶ್ರಿತರಾಗಿ ಬೀದಿಗೆ ಬಂದಿದ್ದಾರೆ. 1948ರಲ್ಲಿ ಗಲೀಲಿಯಾ ಮತ್ತು ಇತರ ಹಲವೆಡೆಗಳಲ್ಲಿ ಫಲಪ್ರದವೆಂದು ಸಾಬೀತಾದ ತಂತ್ರವನ್ನಾಗಿದೆ ದಕ್ಷಿಣ ಲೆಬನಾನಿನಲ್ಲಿ ಇಸ್ರೇಲ್ ಈಗ ಪ್ರಯೋಗಿಸುತ್ತಿರುವುದು. ದಕ್ಷಿಣ ಲೆಬನಾನಿನ ‘ಫೇಲಸ್ತೀನೀಕರಣ’ವೆಂದು ಇದನ್ನು ಹೇಳಬಹುದು.

Gilles Deleuze

ಫೆಲಸ್ತೀನಿಯನ್ ಸಶಸ್ತ್ರ ಹೋರಾಟಗಾರರಲ್ಲಿ ಅಧಿಕವೂ ಈ ನಿರಾಶ್ರಿತರಾದ ಜನರಾಗಿದ್ದಾರೆ. ಗರಿಷ್ಠ ಸಂಖ್ಯೆಯಲ್ಲಿ ಜನರನ್ನು ನಿರಾಶ್ರಿತರನ್ನಾಗಿಸುವುದು ಮತ್ತು ಆ ಮೂಲಕ ಅವರನ್ನು ಭಯೋತ್ಪಾದಕರಾಗಿ ಚಿತ್ರೀಕರಿಸಿ ಪರಾಜಿತಗೊಳಿಸುವುದಾಗಿದೆ ಇಸ್ರೇಲಿನ ಗೂಢ ತಂತ್ರ.

ಬಹಳ ಸಂಕೀರ್ಣವೂ ದುರ್ಬಲವೂ ಆದ ಒಂದು ರಾಷ್ಟ್ರದಲ್ಲಿ ಇಸ್ರೇಲ್ ಸಾಮೂಹಿಕ ನರಮೇಧ ನಡೆಸುತ್ತಿದೆಯೆಂದು ನಾವು ಹೇಳುತ್ತಿರುವುದು ಲೆಬನಾನಿನೊಂದಿಗೆ ನಮಗಿರುವ ಬಾಂಧವ್ಯದ ದೆಸೆಯಿಂದ ಮಾತ್ರವಲ್ಲ. ಅದಕ್ಕೆ ಮತ್ತೊಂದು ಕಾರಣವೂ ಇದೆ. ಯುರೋಪ್ ಸಹಿತ ಮತ್ತಿತರೆಡೆ ಉಗ್ರವಾದದ ಸಮಸ್ಯೆಯನ್ನು ಭವಿಷ್ಯದಲ್ಲಿ ಹೇಗೆ ಎದುರಿಸಬಹುದೆಂಬ ವಿಷಯವನ್ನು ನಿರ್ಧರಿಸುವ ಒಂದು ಮಾದರಿಯಾಗಿದೆ ಇಸ್ರೇಲ್-ಫೆಲಸ್ತೀನ್ ಸಂಘರ್ಷ. ಹೆಚ್ಚೆಚ್ಚು ಜನರನ್ನು ಭಯೋತ್ಪಾದಕರಾಗಿ ಕಾಣುವ ಒಂದು ವರ್ಗೀಕರಣದತ್ತ ಜಗತ್ತಿನಾದ್ಯಂತವಿರುವ ರಾಷ್ಟ್ರಗಳ ಒಕ್ಕೂಟಗಳು ಮತ್ತು ಜಾಗತಿಕ ಪೋಲೀಸ್-ಕ್ರಿಮಿನಲ್ ವಿಚಾರಣಾ ಸಂಸ್ಥೆಗಳು ಸಾಗಬೇಕಾದ ಅನಿವಾರ್ಯತೆ ಕೊನೆಗೆ ಸೃಷ್ಟಿಯಾಗುತ್ತದೆ. ಭಯಾನಕವಾದ ಒಂದು ಭವಿಷ್ಯದ ಪ್ರಯೋಗಾಲಯವಾಗಿ ಸ್ಪೈನನ್ನು ಬದಲಾಯಿಸಿದ ಸ್ಪಾನಿಷ್ ಅಂತರ್ಯುದ್ಧಕ್ಕೆ ಸಮಾನವಾದ ಸನ್ನಿವೇಶವಾಗಿದೆ ಇದು.

ಸದ್ಯ ಇಸ್ರೇಲ್ ಒಂದು ಪ್ರಯೋಗ ನಡೆಸುತ್ತಿದೆ. ಒಮ್ಮೆ ಅದನ್ನು ಯಶಸ್ವಿಯಾಗಿ ಜಾರಿಗೊಳಿಸಿದರೆ ಇತರ ರಾಷ್ಟ್ರಗಳಿಗೂ ಅದರ ಅನುಕರಣೆ ಮಾಡಿ ಲಾಭ ಪಡೆಯಬಹುದು. ಅಂಥ ದಬ್ಬಾಳಿಕೆ ಮಾದರಿಯೊಂದನ್ನು ಇಸ್ರೇಲ್ ಇಂದು ಕಂಡು ಹಿಡಿದಿದೆ . ಇಸ್ರೇಲಿನ ಈ ರಾಜಕೀಯ ತಂತ್ರಕ್ಕೆ ಬಹಳ ಬಾಳಿಕೆ ಇದೆ. ತಮ್ಮನ್ನು ಖಂಡಿಸುವ ವಿಶ್ವಸಂಸ್ಥೆಯ ಠರಾವುಗಳು ವಾಸ್ತವದಲ್ಲಿ ತಮ್ಮ ಬೆನ್ನುತಟ್ಟುತ್ತಿದೆ ಎಂಬ ನಂಬಿಕೆ ಇಸ್ರೇಲಿಗಿದೆ. ಆಕ್ರಮಿತ ಪ್ರದೇಶಗಳನ್ನು ಬಿಟ್ಟು ಹೋಗಲು ನೀಡುವ ಆಹ್ವಾನಗಳನ್ನು ಅಲ್ಲಿ ವಸಾಹತು ಸ್ಥಾಪಿಸುವ ಹಕ್ಕುಗಳನ್ನಾಗಿ ಇಸ್ರೇಲ್ ಪರಿವರ್ತಿಸುತ್ತಿದೆ. ದಕ್ಷಿಣ ಲೆಬನಾನಿಗೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸುವುದನ್ನು ಒಂದು ಉತ್ತಮ ನಿರ್ಧಾರವಾಗಿ ಇಸ್ರೇಲ್ ಪರಿಗಣಿಸುತ್ತದೆ. ಇಸ್ರೇಲ್ ಸೈನ್ಯದ ಸ್ಥಾನದಲ್ಲಿ ಶಾಂತಿಪಾಲನಾ ಪಡೆಯು ಪ್ರಸ್ತುತ ಪ್ರದೇಶವನ್ನು ಪೋಲೀಸ್ ವಲಯ ಅಥವಾ ಭದ್ರತಾ ಮರುಭೂಮಿಯಾಗಿ ಮಾರ್ಪಡಿಸುತ್ತದೆ. ಅವರಿಗೆ ಬಹಳ ಆಸಕ್ತಿದಾಯಕ ದರೋಡೆಯಾಗಿದೆ ಈ ಸಂಘರ್ಷ. ಫೆಲಸ್ತೀನಿಯರನ್ನು ಶಾಂತಿ ಮಾತುಕತೆಗಳಲ್ಲಿ ‘ಶುದ್ಧ ಪಾಲುದಾರ’ ಎಂದು ಒಪ್ಪಿಕೊಳ್ಳಲು ಪ್ರಯತ್ನಿಸದೆ ಇಡೀ ಜಗತ್ತು ಈ ಸಂಘರ್ಷದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಖಂಡಿತವಾಗಿಯೂ ಅವರು ಯುದ್ಧದಲ್ಲಿದ್ದಾರೆ, ಅವರಿಗೂ ಇಷ್ಟವಿಲ್ಲದ ಯುದ್ದದಲ್ಲಿ.

ಅನುವಾದ- ಶಂಸ್ ಗಡಿಯಾರ್

ದಕ್ಷಿಣ ಭಾರತದ ಸೂಫಿ; ಖ್ವಾಜಾ ಬಂದೇ ನವಾಝ್

ಹದಿನೈದನೆಯ ಶತಮಾನದ ಮಹಾನ್ ಸೂಫಿ ಸಂತ, ತತ್ವಜ್ಞಾನಿ, ಕವಿ-ಲೇಖಕ ಬಂದೇ ನವಾಜ್ ಅವರ ಬದುಕು- ಸಾಹಿತ್ಯ ಕುರಿತು ಚರ್ಚಿಸುವ ಗ್ರಂಥವಿದು. ಕನ್ನಡ ಸಾಹಿತ್ಯ ಹಾಗೂ ಸೂಫಿ ಚಿಂತನೆ ಮತ್ತು ಕಾವ್ಯಗಳ ನಡುವಿನ ಸಖ್ಯವು ಅತ್ಯಂತ ಸಂಕೀರ್ಣವು ಶ್ರೀಮಂತವೂ ಆಗಿವೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಂಸ್ಕೃತಿಯೊಳಗೆ ಸೂಫೀ ಚಿಂತನೆಗಳು ನಿಧಾನವಾಗಿ ಒಳನುಸುಳುತ್ತಿವೆ. ವಿಶಿಷ್ಟವಾಗಿ ಸಂತರ ಸಂಸ್ಕೃತಿಯೊಂದು ಕನ್ನಡ ಭಾಷೆಯಲ್ಲಿ ಬೆಳೆಯುತ್ತಾ ಬರುತ್ತಿದೆ. ಸೂಫಿಗಳ ಕುರಿತಿರುವ ಪುಸ್ತಕಗಳು ಕನ್ನಡ ಭಾಷೆಯಲ್ಲಿ ಬೆರಳಣಿಕೆಯಷ್ಟು ಮಾತ್ರ ಕಾಣಲು ಸಾಧ್ಯ. ಇದಕ್ಕೆ ಇನ್ನೊಂದು ಗರಿಯನ್ನು ಸೇರಿಸುವಲ್ಲಿ ಲೇಖಕ ಬೋಡೆ ರಿಯಾಝ್ ಅಹ್ಮದ್ ತಿಮ್ಮಾಪುರಿಯವರು ಸಫಲರಾಗಿದ್ದಾರೆ.
ಲೇಖಕರು ಕೃತಿಯಲ್ಲಿ ಸೂಫಿ ಸಿದ್ಧಾಂತ, ಖಾದ್ರಿಯಾ, ಜುನೈದಿಯಾ, ಜಿಶ್ತಿಯಾ, ಸೂಫಿ ಪರಂಪರೆ, ಬಂದೇ ನವಾಜರ ಬದುಕು, ಬರಹ ಜೀವನ, ಸೂಫಿಗಳ ಆಚರಣೆಗಳು, ಬಹಮನಿ ಸುಲ್ತಾನ ಫಿರೋಜ್ ಷಾ ಮತ್ತು ಬಂದೇನವಾಜರ ಸಂಬಂಧ ಮುಂತಾದ ಮಹತ್ವದ ವಿಷಯಗಳನ್ನು ಚರ್ಚಿಸಿದ್ದಾರೆ. ಕೃತಿಯನ್ನು ವಿಭಾಗಗಳನ್ನಾಗಿಸಿ ಮೊದಲನೇ ಅಧ್ಯಾಯದಲ್ಲಿ ಸೂಫಿ ಅನುಭಾಗಳ ಕುರಿತು ಪರಿಚಯಿಸಿದ್ದಾರೆ. ಸೂಫಿ ಹಾಗೂ ತಸವ್ವುಫ್ ಇದರ ಉಗಮ, ವ್ಯಾಖ್ಯೆ, ಪರಿಭಾಷ ಹಾಗೂ ಸೂಫಿ ಚಿಂತನೆಗಳ ಕುರಿತು ಆಳ ಅಧ್ಯಯನವಿದೆ.

ಸೂಫಿಯನ್ನ ವ್ಯಾಖ್ಯಾನಿಸುತ್ತಾ “ಯಾರನ್ನು ಪ್ರೇಮವು ಪವಿತ್ರಗೊಳಿಸಿದೆ, ಅದು ಸ್ವಚ್ಛತಾ ವಸ್ತ್ರವಾಗಿದೆ. ಹಾಗು ಯಾರನ್ನು ಸಖನು ಪವಿತ್ರಗೊಳಿಸಿದ್ದಾನೆ ಅವನು ಸೂಫಿಯಾಗಿದ್ದಾನೆ.” ಈ ರೀತಿಯಾಗಿ ಪರಮಾತ್ಮನೊಂದಿಗೆ ಸ್ನೇಹ ಬೆಳೆಸಿ ಸಂಬಂಧವನ್ನು ಬೆಳೆಸಿ ಉಪವಾಸ ಕೂತು ನಿಜ ಜೀವನದ ಸಿಹಿಯನ್ನು ಪಡೆಯದೆ ಜೀವಿಸುವವರಾಗಿದ್ದಾರೆ ಸೂಫಿಗಳು ಎಂದು ವ್ಯಾಖ್ಯಾನಿಸುತ್ತಾರೆ. ಮೂಲವಾಗಿ ‘ಸೂಫಿ’ ಪದವು ಎಲ್ಲಿಂದ ಬಂತು ಎಂಬುದಕ್ಕೆ ನಿಖರವಾದ ಪುರಾವೆಗಳಿಲ್ಲ. ಪ್ರಮುಖರು ಹೇಳುವಂತೆ ‘ಸೂಫಿ’ ಎಂಬ ಪದವು ಮಕ್ಕಾ ಪಟ್ಟಣದಲ್ಲಿ ಮಸೀದಿ ಎದುರು ಕುಳಿತಿರುವ ದೈವಭಕ್ತ ಫಕೀರರೆಂದೂ, ಇನ್ನು ಕೆಲವರ ಪ್ರಕಾರ ಸುಫಾ ಅಂದರೆ ಪಂಕ್ತಿ ಅಥವಾ ಸಾಲು ಎಂದರ್ಥವಿದೆ. ಅದಲ್ಲದೆ ಇವರು ಹೊಂದಿದ ಜ್ಞಾನದಿಂದಾಗಿ ಇವರನ್ನು ಸೂಫಿ ಎಂದು ಕರೆಯಲಾಯಿತು ಎಂಬ ಐತಿಹ್ಯ ಕೂಡಾ ಇದೆ. ಹೀಗೆ ಸೂಫಿ ಉಗಮದ ಕುರಿತಿರುವ ಆಳ ಅಧ್ಯಯನವಿದೆ.

ಭಾರತದಲ್ಲಿ ಸೂಫಿ ದಾರ್ಶನಿಕತೆಯ ಆಗಮನ ಹಾಗು ಪ್ರಸಾರವು ಇತಿಹಾಸದ ಪ್ರಮುಖವಾದ ಅಂಶವಾಗಿತ್ತು. 13ನೇ ಶತಮಾನದಲ್ಲಿ ಆರಂಭವಾದ ಸೂಫಿಗಳ ಭಾರತ ಪ್ರವೇಶ ಕೇವಲ ಭೌತಿಕ ಲಾಭಕ್ಕಾಗಿರಲಿಲ್ಲ ಹೊರತು ಜಾತಿ, ಧರ್ಮ, ದೇಶಗಳ ಬೇಧಗಳನ್ನ ಮೀರಿ ಆಧ್ಯಾತ್ಮಿಕತೆಯನ್ನ ಮೈಗೂಡಿಸಿ ಸಾಮಾನ್ಯ ಜನಮನಸ್ಸುಗಳಿಗೆ ಪ್ರಚುರಪಡಿಸುವ ಉದ್ದೇಶದಿಂದಾಗಿತ್ತು. ಹೀಗೆ ಬಂದವರಲ್ಲಿ ಮಧ್ಯ ಏಷಿಯಾದಲ್ಲಿ ಜನಿಸಿದ ಖ್ವಾಜ ಮುಈನುದ್ದೀನ್ ಚಿಸ್ತಿ (1143–1236) ಪ್ರಮುಖರಾಗಿದ್ದರು. ಇವರು 1192 ರಲ್ಲಿ ದೆಹಲಿಗೆ ಆಗಮಿಸಿದಾಗ ಸುಲ್ತಾನ್ ಶಂಷುದ್ದೀನ್ ಅಲ್ತಮಿಷನು ಅಮೂಲ್ಯ ಕಾಣಿಕೆಗಳನ್ನ ನೀಡಿಯೂ ಗೌರವಿಸಿದ್ದರು. ಅದ್ವಿತೀಯ ಲೇಖಕರು ಕವಿಗಳಾಗಿರುವ ಇವರು ಫಾರ್ಸಿ ಭಾಷೆಯಲ್ಲಿ ಹತ್ತು ಸಾವಿರ ಕವನಗಳನ್ನು ರಚಿಸಿ ಕ್ರಿ.ಶ 1236 ರಲ್ಲಿ ನಿಧನ ಹೊಂದಿದರು.

ಆನಂತರ ‘ಸುಲ್ತಾನೆ ಹಿಂದ್’ ಎಂದು ಖ್ಯಾತರಾಗಿದ್ದ ಅಜ್ಮೀರಿನ ಮುಈನುದ್ದೀನ್ ಚಿಶ್ತಿ ದೆಹಲಿಯ ನಿಜಾಮುದ್ದೀನ್ ಔಲಿಯಾರ (1238 – 3 April 1325) ತರುವಾಯ ಅತ್ಯಂತ ಜನಪ್ರಿಯರಾದ ಇನ್ನೋರ್ವ ಸೂಫಿ ಹಜ್ರತ್ ಖಾಜಾ ಬಂದೇ ನವಾಝ್ ಗೇಸುದರಾಜರವರು. ಕ್ರಿ.ಶಕ 1321ನೇ ಇಸವಿಯಲ್ಲಿ ಜನಿಸಿ 1422 ನೇ ಇಸವಿಯಲ್ಲಿ ಮರಣಹೊಂದಿದ ಮಹಾನುಭಾವರಿಗೆ 103 ವರ್ಷದ ತುಂಬು ಪ್ರಾಯ. ಇವರು ಅರಬಿ, ಫಾರ್ಸಿ, ದಖನಿ ಮೂರು ಭಾಷೆಗಳಲ್ಲಿ ಸೇರಿ ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಸಯ್ಯದ್ ಮಹ್ಮದ್ ಹುಸೇನಿ ಗೇಸುದರಾಜ್ ಅವರ ಆಗಮನ ಕೇವಲ ಗುಲ್ಬರ್ಗಾಕೆ ಸೀಮಿತವಾಗಿರದೆ, ಇಡೀ ದಖ್ಖನಿನಲ್ಲಿ ಚಿಸ್ತಿಯಾ ಸೂಫಿ ಪರಂಪರೆಯ ಭದ್ರ ಬುನಾದಿಗೆ ನಾಂದಿಯಾಯಿತು.

ಯಾಕೆಂದರೆ ತಾತ್ವಿಕತೆಯ ಕಾರಣಕ್ಕಾಗಿ ಜಾಗತಿಕ ನಕಾಶೆಯಲ್ಲಿ ತನ್ನದೇ ಛಾಪು ಮೂಡಿಸಿದ ಬಂದೇ ನವಾಜ್ ರು ಕವಿ-ಲೇಖಕರಾಗಿ ಅದೇ ತಾತ್ವಿಕತೆಯನ್ನು ಬರಹದಲ್ಲಿ ತಂದವರು. ಬಂದೇ ನವಾಝರು ‘ಸಮಾ’ ಪ್ರೇಮಿಗಳಾಗಿದ್ದರು.
ದೈವಿಸಾನಿಧ್ಯಕ್ಕೆ ಕೊಂಡುಯ್ಯುವ ಸಮಾ ಗಳ ಕುರಿತು ಕೃತಿ ಪ್ರಸ್ತಾಪಿಸಿದೆ. ತುಘಲಕ್ ನ ಕಾಲದಲ್ಲಿ ಸೂಫಿಗಳು ಹಾಗೂ ಉಲೇಮಾಗಳ ಮಧ್ಯೆ ಸಮಾಗಳ ಕುರಿತು ನಡೆದ ಸಂಪೂರ್ಣ ಚಿತ್ರಣವು ಕೃತಿಯಲ್ಲಿದೆ.
ಸಮಾಗಳೆಂದರೆ ಸೂಫಿಗಳ ಹಾಗೂ ಅವರ ರಚನೆಗಳನ್ನು ಹಾಡುವ ‘ಅನುಭಾವ ಸಂಗೀತ ಗೋಷ್ಠಿ’ ಗಳೆಂದು ಕರೆಯಬಹುದು. ಅದಲ್ಲದೆ ಸಾಮಾನ್ಯ ಜನರಲ್ಲಿ ತಮ್ಮ ಸೂಫಿ ಸಂದೇಶದ ಪ್ರಚಾರಕ್ಕಾಗಿ ದಖ್ಖನಿ ಭಾಷೆ ಪ್ರಥಮವಾಗಿ ಸಾಹಿತ್ಯಿಕವಾಗಿ ಬಳಸಿದ ಕೀರ್ತಿ ಹಜ್ರತ್ ಖ್ವಾಜಾ ಬಂದೇ ನವಾಝರಿಗೆ ಸಲ್ಲುತ್ತದೆ. ಭಾರತೀಯ ಸಂಸ್ಕೃತಿ ಹಾಗೂ ಕಲೆಗೆ ಸಂಬಂಧಿಸಿದಂತೆ ಹಿಂದಿ ಭಾಷೆಯಲ್ಲಿ ಅಮೀರ್ ಖುಸ್ರೊ ಹಲವು ಕೃತಿ ರಚಣೆ ಮಾಡಿದ್ದರು. ಹಿಂದಿ ಭಾಷೆಯ ಬಗ್ಗೆ ಉತ್ತಮ ಹಿಡಿತ ಹೊಂದಿದ್ದ ಬಂದೇ ನವಾಜರು ತಮ್ಮ ಎಂಬತ್ತನೇ ವರ್ಷದಲ್ಲಿ ಗುಜರಾತ್ ಮಹಾರಾಷ್ಟ್ರದ ಮೂಲಕ ಗುಲ್ಬರ್ಗಾ ತಲುಪುವ ದಾರಿಯಲ್ಲಿ ಸಿಗುವ ಜನಸಾಮಾನ್ಯರೊಂದಿಗೆ ಬೆರೆತು ಅವರ ಆಡು ಭಾಷೆಯಾದ ದಖ್ಖನಿ ಉರ್ದು ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿ ಆ ಭಾಷೆಯ ಪ್ರಥಮ ಗದ್ಯ ಲೇಖಕರು ಹಾಗೂ ಕವಿಗಳು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.


ಬಂದೇ ನವಾಝರು ಉರ್ದು ಭಾಷೆಯಲ್ಲಿ ಬಿಡಿಗವನಗಳು, ಗಝಲ್, ರುಬಾಯಿಗಳನ್ನು ಬರೆದಿರುವರು. ಸರಳ ಉಪಮೆಗಳ ಪ್ರಮೇಯದಿಂದ ರುಬಾಯಿಗೆ ರಂಗು ನೀಡಿ ಬರೆದಿರುವುದು ವಿಶೇಷ
“ಪಾನಿ ಮೆ ನಮಕ್ ಡಾಲ್ ಮಜಾ ದೇಖ್ತಾ ದಿಸೇ
ಜಬ್ ಘುಲ್ಗಯಾ ನಮಕ್ ತೋ ನಮಕ್ ಬೋಲ್ನಾ ಕಿಸೇ,
ಯೂಂ ಖೋಯಿ ಖುದಿ ಅಪ್ನಿ ಖುದಾ ಸಾತ್ ಮಹ್ಮದ್,
ಆಬ್ ಘಲ್ ಗಯಿ ಖುದಿ ತೋ ಖುದಾಬನ್ ನಾಕೋಯಿ ದಸೇ.”
ಈ ರುಬಾಯಿಯಲ್ಲಿ ರಹಸ್ಯ ದೈವಿಸತ್ಯವನ್ನು ಹೀಗೆ ವಿವರಿಸುತ್ತಾರೆ
“ನೀರಿನಲ್ಲಿ ಉಪ್ಪನ್ನು ಹಾಕಿ ಅದನ್ನು ನೋಡಿದರೆ, ಉಪ್ಪು ನೀರಿನಲ್ಲಿ ಕರಗುತ್ತದೆ. ಈಗ ಉಪ್ಪಿನ ಅಸ್ತಿತ್ವ ಎಲ್ಲಿ ಹೋಯಿತು. ಅದೇ ರೀತಿ ದೈವಭಕ್ತನು ತನ್ನ ‘ಅಹಂ’ ಅನ್ನು ದೇವರ ಪ್ರಭೆಯಲ್ಲಿ ವಿಲೀನಗೊಳಿಸಿದಾಗ, ನಾವು ಯಾರನ್ನು ದೇವರೆಂದು ಕರೆಯಬೇಕು.”
ಇವುಗಳಲ್ಲದೆ ಪ್ರಸಿದ್ಧವಾದ ‘ಚಕ್ಕಿ ನಾಮ’ಗಳ ತುರ್ಜಮೆಗಳು ಕೂಡಾ ಇವೆ. ಇದರ ಒಂದು ಪ್ರತಿಯು ಹೈದರಾಬಾದಿನಲ್ಲಿ ಇಂದಿಗೂ ಕಾಣಲು ಸಾಧ್ಯ. ಗ್ರಾಮೀಣ ಮಹಿಳೆಯರು ಜೋಳ, ಗೋಧಿಯನ್ನು ಬೀಸುಗಲ್ಲಿನಲ್ಲಿ ಬೀಸುವಾಗ ಹಾಡುವ ಹಾಡುಗಳಾಗಿದೆ ಚಕ್ಕೀನಾಮ.
ದ್ವಿಪದಿಯಲ್ಲಿಯೂ ಸಹ ಹಲವು ಕವಿತಿಗಳನ್ನ ಖ್ವಾಜಾರವರು ಹಣೆದಿರುವರು. ಪ್ರೇಮ ವೃತ್ತಾಂತಗಳ ಕುರಿತು, ಪ್ರೇಮ ಅಸ್ತಿತ್ವಗಳ ಕುರಿತು ಕಟ್ಟಿದ ಕವನಗಳಂತೂ ಅದ್ಭುತ.

ಬಂದೇ ನವಾಝರ ತಾತ್ವಿಕತೆ ಮತ್ತು ಬರವಣಿಗೆಯ ಮಹತ್ವವನ್ನು ವಿವರಿಸುವ ಕನ್ನಡದ ಮೊದಲ ಪ್ರಮುಖ ಗ್ರಂಥ ಇದಾಗಿದೆ. ಅದೇ ಕಾರಣಕ್ಕಾಗಿ ಇದಕ್ಕೊಂದು ಸಾಹಿತ್ಯಕ-ಸಾಂಸ್ಕೃತಿಕ ಮಹತ್ವದ ಜೊತೆಗೆ ಐತಿಹಾಸಿಕ ಪ್ರಾಮುಖ್ಯತೆಯು ಇದೆ. ಕನ್ನಡಿಗರಿಗೆ ಬಂದೇ ನವಾಝರನ್ನು ಪರಿಚಯಿಸಿದ ಲೇಖಕರಿಗೆ ಅನಂತ ಧನ್ಯವಾದಗಳು.

-ಸಲೀಂ ಇರುವಂಬಳ್ಳ


ಬೋಡೆ ರಿಯಾಝ್ ಅಹ್ಮದ್

ಬೋಡೆ ರಿಯಾಝ್ ಅಹ್ಮದ್ ಮೂಲತಃ ಗುಲ್ಬರ್ಗದವರು. ವೃತ್ತಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ-ಕಾವ್ಯ ಪ್ರೇಮಿ. ಇವರು ಬಿ.ಎಸ್ಸಿ ಪದವೀಧರರು. ಸೂಫೀ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿರುವ ಪ್ರಮುಖ ಲೇಖಕರೂ ಹೌದು. ಲೇಖಕರ ತಂದೆಯವರು ಉರ್ದು ಕವಿಗಳಾಗಿದ್ದರು. ಗಿರಿನಾಡು ಸೂಫೀ ಪರಂಪರೆ, ಮನ್-ಲಗನ್, ಪ್ರೇಮ ಸೂಫಿ ಬಂದೇ ನವಾಝ್, ಇಂದ್ರಸಭಾ (ನಾಟಕ) ಪ್ರಕಟಿತ ನಾಲ್ಕು ಪ್ರಮುಖ ಕೃತಿಗಳು. ಅಲ್ಲದೇ ಇಂಗ್ಲೀಷ್, ಪರ್ಷಿಯನ್, ಉರ್ದು ಸಾಹಿತ್ಯದ ಮೇಲೆ ವಿಶೇಷವಾದ ಹಿಡಿತ ಇರುವ ಲೇಖಕರು ಆ ಭಾಷೆಗಳಿಂದ ಹಲವು ಕವಿತೆ, ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ.

1 8 9 10 11 12 16