ಅಲ್- ಫಿಜಿರೀ : ಪರ್ಶಿಯನ್ ಕೊಲ್ಲಿಯ ಸಮುದ್ರ ಸಂಗೀತ

1930ನೇ ದಶಕದ ವಿಶಾಲವಾದ ತೈಲ ನಿಕ್ಷೇಪಗಳ ಆವಿಷ್ಕಾರಕ್ಕಿಂತಲೂ ಪೂರ್ವ ಕಾಲದಲ್ಲಿ ಪರ್ಶಿಯನ್ ಕೊಲ್ಲಿಯಲ್ಲಿನ ಜನಜೀವನ ವಿಧಾನ ಇಂದಿನ ಸ್ಥಿತಿಗತಿಗಳಿಗಿಂತ ಬಹಳ ಭಿನ್ನಾವಸ್ಥೆಯಲ್ಲಿತ್ತು. ಆಧುನಿಕ ಬಹ್ರೇನ್, ಕತಾರ್, ಕುವೈತ್ ಮತ್ತು ಸಮೀಪ ಪ್ರದೇಶದಲ್ಲಿನ ಪುರುಷರು ಆ ಕಾಲದಲ್ಲಿ ಹೆಚ್ಚಾಗಿ ಮೀನುಗಾರಿಕೆ, ಹಡಗು ನಿರ್ಮಾಣ, ನೌಕಾ ಕೆಲಸ, ಸಾಗರದಾಳದಿಂದ ಮುತ್ತುಗಳ ಸಂಗ್ರಹ ಇತ್ಯಾದಿ ಸಮುದ್ರಕ್ಕೆ ಸಂಬಂಧಿಸಿದ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮುತ್ತು ಸಂಗ್ರಹಣಾ ಉದ್ಯಮ ಇತರ ಉದ್ಯೋಗಗಳಿಗಿಂತ ವಿಭಿನ್ನವಾಗಿದ್ದರೂ ವಿದೇಶಿ ವಹಿವಾಟುಗಳಲ್ಲಿ ಇತರ ಉದ್ಯಮಗಳಿಗಿಂತ ಹೆಚ್ಚು ಲಾಭದಾಯಕವಾಗಿತ್ತು. ವಿಶೇಷವಾಗಿ ಇತರ ದೇಶಗಳಿಗೆ ಮುತ್ತುಗಳನ್ನು ಮಾರಾಟ ಮಾಡುವ ಅಂದಿನ ನೌಕಾ ನಾಯಕರುಗಳ ಮತ್ತು ವ್ಯಾಪಾರಿಗಳ ಪ್ರಮುಖ ವ್ಯಾಪಾರವಾಗಿತ್ತು. ಆದರೆ, ಪೂರ್ವ ಆಫ್ರಿಕಾದ ಅನೇಕ ಗುಲಾಮರನ್ನು ಒಳಗೊಂಡ ಸಾಮಾನ್ಯ ಮುಳುಗು ತಜ್ಞರ ಪಾಲಿಗೆ ಈ ಉದ್ಯೋಗ ಆಶಾದಾಯಕವಾಗಿದ್ದರೂ,, ತುಂಬಾ ಕಷ್ಟಕರ ಮತ್ತು ಅಪಾಯಕಾರಿಯಾತ್ತು. ನಾಲ್ಕೈದು ತಿಂಗಳುಗಳ ಕಾಲ ಮುಂದುವರೆಯುತ್ತಿತ್ತು ಮತ್ತು ಶೋಧನೆಯ ಸಂಧರ್ಭ ಸಾಕಷ್ಟು ಮುಳುಗು ತಜ್ಞರು ಅಪೌಷ್ಟಿಕತೆ, ರಕ್ತ ಹೀನತೆ, ಶೀತ, ಕೋಮಾ ಇತ್ಯಾದಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತಿತ್ತು. ಕೆಲವರು ಟೈಲ್, ಶಾರ್ಕ್ ಇತ್ಯಾದಿ ಮತ್ಸ್ಯದಾಕ್ರಮಣದಿಂದ ಸಾವಿಗೀಡಾಗುವ ಸಂದರ್ಭವೂ ಬರುತ್ತಿತ್ತು.. ‘ಕತಾರಿ’ಗಳ ಮೊದಲ ನಾಯಕರಾದ ‘ಮಹಮ್ಮದ್ ಬಿನ್ ಅಸ್ಸಾನಿ’ ಯವರ ಪ್ರಸಿದ್ಧ ಮಾತುಗಳು ಈ ರೀತಿಯಾಗಿದೆ.
“ಮೇಲ್ದರ್ಜೆಯಿಂದ ಕೆಳದರ್ಜೆಯವರೆಗಿನ ನಾವೆಲ್ಲರೂ ‘ಮುತ್ತು’ ಎಂಬ ಯಜಮಾನನ ಅಡಿಯಾಳುಗಳಾಗಿದ್ದೇವೆ”.

ಅಂತಹ ವಿಶಿಷ್ಟ ಉದ್ಯೋಗದ ಸುತ್ತ ಅಸಂಖ್ಯಾತ ಜಾನಪದ ಗಾಯನ ಶೈಲಿಗಳು ರೂಪು ಪಡೆಯಿತು. ಸಾಮಾನ್ಯವಾಗಿ ಆ ವಿಧಾನಗಳನ್ನು ‘ಫಿಜಿರೀ’ ( الفجري ) ಎಂದು ಕರೆಯಲಾಗುತ್ತದೆಯಾದರೂ, ‘ಸಾಗರ ಕಲೆ’ (فن البحري) ಯೆಂಬ ವಿಶಾಲ ಕ್ಯಾಟಗರಿಯ ಒಂದು ಭಾಗವಾಗಿ ಅವು ಪರಿಗಣಿಸಲ್ಪಡುತ್ತಿದೆ.

ಮುತ್ತು ಸಂಗ್ರಹಣಾ ಉದ್ಯಮದಂತೆಯೇ, ಅದರೊಂದಿಗೆ ಸಂಬಂಧಿಸಿದ ಸಂಗೀತ ಸಂಪ್ರದಾಯ ಫಿಜಿರಿಯೂ ಸಾಮಾನ್ಯ ಜನರೆಡೆಯಲ್ಲಿ ಅಸಾಧ್ಯವೂ, ಅಪಾಯಕಾರಿಯೂ ಆದ ಕಲೆಯಾಗಿಯೇ ಉಳಿಯಿತು. ಫಿಜಿರೀ ಸಂಗೀತ ಕಲೆಯ ಪ್ರಾರಂಭ ಅಮಾನುಷಿಕವಾದದ್ದೆಂಬ ವಿಶ್ವಾಸ, ಪ್ರಸ್ತುತ ಮನೋಭಾವವನ್ನು ಅವರಲ್ಲಿ ದೃಢಪಡಿಸಿತು. ಒಂದು ದಂತಕಥೆಯನುಸಾರ ಒಂದು ಸುದೀರ್ಘ ಪ್ರಯಾಣದ ಮಧ್ಯೆ ‘ದಿಲ್ಮೂನ್ ‘ (DILMUN) ಪ್ರದೇಶದ ಮೂರು ಅಲೆಮಾರಿಗಳು ನಿಗೂಢವಾದ ಒಂದು ಚರ್ಚ್ ಬಳಿಗೆ ತಲುಪಿದರು. ಅಲ್ಲಿ ಅವರು ಪ್ರಾಚೀನ ಜೀವಿಗಳಾದ ‘ಜಿನ್ನ್ ‘ ವರ್ಗದವರನ್ನು ಭೇಟಿಯಾಗುವರು. ಮಾನವ ರೂಪ ಮತ್ತು ಕತ್ತೆ ರೂಪ ಸಮ್ಮಿಶ್ರಣಗೊಂಡ ಪತ್ತೆ ಹಚ್ಚಲಸಾಧ್ಯ ವಿಶಿಷ್ಟ ಆಕೃತಿಯೊಂದಿಗೆ ಪ್ರತ್ಯಕ್ಷಗೊಂಡ ಅವರು ಯಾತ್ರಿಕರಿಗೆ ತಾವೆಂದೂ ಕೇಳಿತಿಳಿದಿರದ ಅಪರಿಚಿತ ಕಾವ್ಯಗಳನ್ನು ಕಲಿಸಿದರು. ಆದರೆ ತಮ್ಮ ಅಂತಿಮ ಕ್ಷಣದವರೆಗೂ ತಾವು ಸಂಧಿಸಿದ ಆ ವಿಚಿತ್ರ ಅನುಭವವನ್ನು ಇತರರೊಂದಿಗೆ ಹಂಚಲು ಯಾತ್ರಿಕರು ನಿರಾಕರಿಸಿದರು. ನಂತರ ಆ ಯಾತ್ರಿಕರಲ್ಲೊಬ್ಬ ಮರಣ ಶೈಯೆಯಲ್ಲಿರುವ ಅಂತಿಮ ಕ್ಷಣದಲ್ಲಿ ತನ್ನ ಬಂಧುಗಳೊಂದಿಗೆ ಆ ರಹಸ್ಯ ಬೇಧಿಸಿ ಫಿಜಿರಿಯ ಜ್ಞಾನವನ್ನು ಅವರಿಗೆ ತಲುಪಿಸುವಲ್ಲಿ ಸಫಲನೂ ಆದನು. ಈ ರೀತಿಯಾಗಿ ಫಿಜಿರೀ ಗಾಯನ ಶೈಲಿ ಅರಬ್ ಸಂಗೀತ ಜಗತ್ತಿಗೆ ಮತ್ತೊಂದು ಮೈಲುಗಲ್ಲಾಗಿ ಸೇರ್ಪಡೆಯಾಯಿತು. ಪ್ರಯಾಣದ ಮಧ್ಯೆಯಿರುವ ಸಾಪ್ತಾಹಿಕ ಸಭೆಗಳಲ್ಲಾಗಿತ್ತು ಹಡಗಿನ ಸಿಬ್ಬಂದಿಗಳು ಹೆಚ್ಚು ಫಿಜಿರೀ ಸಂಗೀತಗಳನ್ನು ಪ್ರದರ್ಶಿಸುತ್ತಿದ್ದುದು. ಕೆಲ ಸಂದರ್ಭಗಳಲ್ಲಿ ‘ದಾರ್ ‘(Dar) ಎಂಬ ವಿಶೇಷ ಕಟ್ಟಡದಲ್ಲೂ ಫಿಜಿರಿಗಾಗಿ ಅವರ ಸಮ್ಮಿಲನ ನಡೆಯುತ್ತಿತ್ತು. ಕೆಲವೊಮ್ಮೆ ನೌಕಾ ನಾಯಕನ ಮನೆಯಲ್ಲಿಯೂ ಪ್ರಯಾಣಿಕರು ಸಂಗೀತಕ್ಕಾಗಿ ಒಟ್ಟುಗೂಡುತ್ತಿದ್ದರು. ಸುಮಾರು ನಲ್ವತ್ತಕ್ಕಿಂತಲೂ ಮಿಕ್ಕ ಪುರುಷರು ಒಂದು ಫಿಜಿರೀ ಸಂಗಮದಲ್ಲಿ ಭಾಗವಹಿಸಲು ಅವಕಾಶವಿತ್ತು. ಸಂಗೀತ ಸಭೆಯ ವಿರಾಮದ ವೇಳೆ ಪಾನೀಯ ಕುಡಿದು, ಸುವಿಶಾಲ ಸಾಗರದಲ್ಲಿನ ನೌಕಾಯಾನದ ವಿಶಿಷ್ಟ ಅನುಭವಗಳನ್ನು ಮೆಲುಕು ಹಾಕುತ್ತಾ ಮುಂಜಾವಿನವರೆಗೂ (فجر) ನೃತ್ಯದೊಳು ತಲ್ಲೀನರಾಗಿ, ತಮ್ಮನ್ನು ತಾವೇ ಕಳೆದುಕೊಳ್ಳುವರು. ಆ ಸುಪ್ರಭಾತ ಪ್ರಾರ್ಥನೆ (فجر) ಯಿಂದಲೇ ಫಿಜಿರೀ ಕಲಾ ಸಂಗೀತಕ್ಕೆ ಆ ಹೆಸರು ಬಂದಿದೆಯೆಂಬ ಐತಿಹ್ಯವೂ ಇದೆ.

ಇದಲ್ಲದೆ, ‘ಅಹಾಸಿಜ್’ (Ahasij) ಅಥವಾ ‘ನಿಹ್ಮಾ’ (Nihma) ಎಂಬಿತ್ಯಾದಿ ಹಡಗಿನ ವಿವಿಧ ಉದ್ಯೋಗಗಳಿಗೆ ಸಂಬಂಧಿಸಿದ ಕೆಲವೊಂದು ಹಾಡುಗಳು ಫಿಜಿರಿಯ ಆಂತರ್ಯದಲ್ಲಿ ಜೀವ ತಳೆದು ಅದರದ್ದೇ ಆದ ರೂಪುರೇಷೆಗಳನ್ನು ಹೆಣೆದುಕೊಂಡಿದೆ. ಉದಾಹರಣೆಗೆ, ‘ಮೈದಾಫ್’ (Mydaf) ಹಡಗಿನ ರೋಯಿಂಗ್ ಸಮಯದಲ್ಲಿ ಹಾಡುವ ಸಂಗೀತವಾಗಿ ಪ್ರಚಲಿತದಲ್ಲಿತ್ತು. ಚುಟುಕು ಯಾತ್ರೆಗಳಲ್ಲಿ ಹಾಡುವ ಸಂಗೀತಗಳಿಗೆ ‘ಬಾಸ್ಸ’ (Basseh) ಎಂದೂ, ದೀರ್ಘ ಪ್ರಯಾಣದಲ್ಲಿನ ಹಾಡುಗಳಿಗೆ ‘ಖೈಲಾಮಿ ‘(Qaylami) ಎಂದೂ ಕರೆಯುತ್ತಿದ್ದರು. ಅದೇರೀತಿ, ‘ಖ್ರಾಬ್ ‘(Khrab) ಎಂಬ ನಾಮಧೇಯದಲ್ಲಿ ಹಡಗಿನ ಆಂಕರ್ ಕಳಚಲು ಹಗ್ಗವನ್ನು ಎಳೆಯುವಾಗ ಹಾಡುವ ಪದ್ಧತಿಯೂ ಅವರೆಡೆಯಲ್ಲಿದ್ದವು. ಆ ಕಾರಣದಿಂದಲೇ ಉದ್ಯೋಗ ವಿಧಾನಗಳ ಪ್ರಭಾವವನ್ನು ಆ ಹಾಡುಗಳ ಸಂಯೋಜನೆ ಮತ್ತು ಗಾಯನದಲ್ಲಿ ಕಾಣಲು ಸಾಧ್ಯವಾಗುವುದು.

ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಉದ್ಯಮ ಸಂಗೀತಗಳಲ್ಲಿ ಕಂಡುಬರುವ “ಕರೆ ಮತ್ತು ಉತ್ತರ “(Call and response) ಎಂಬ ಸಾಮಾನ್ಯ ರಚನೆಯ ಸರಣಿ ಇಲ್ಲಿಯೂ ಮುಂದುವರೆದು ಫಿಜಿರೀ ಸಂಗೀತದ ಪರಿಪೂರ್ಣತೆಯೆಡೆಗಿನ ಕಾಲುದಾರಿಯಾಗಿ ಪರಿಣಮಿಸುತ್ತದೆ. ‘ನಹ್ಹಾಂ ‘(Soloist) ಎಂಬ ಒಬ್ಬಂಟಿ ಹಾಡುಗಾರನನ್ನು ಫಿಜಿರೀಯ ನಾಯಕತ್ವ ನಿರ್ವಹಿಸುವುದಕ್ಕಾಗಿ ನಿಯೋಜಿಸಲಾಗುತ್ತದೆ. ಪ್ರಯಾಣದ ವೇಳೆ ನಾವಿಕರ ಉತ್ಸಾಹವನ್ನು ಉತ್ಕಟಿಸಿ ಹಾಡುವುದನ್ನು ಹೊರತುಪಡಿಸಿ ಬೇರೆ ಕೆಲಸವಿಲ್ಲದ ವ್ಯಕ್ತಿಯಾಗಿರುತ್ತಾನೆ ಆತ. ಉತ್ತಮ ಧ್ವನಿ ಮಾಧುರ್ಯದೊಂದಿಗೆ ಉನ್ನತ ಸಂಗೀತ ಸ್ವರದೊಳು ನಹ್ಹಾಂ ಕಾವ್ಯಾತ್ಮಕ ಪದ್ಯಗಳನ್ನು ಹಾಡಲು ಪ್ರಾರಂಭಿಸುವನು. ತತ್ಸಮಯ, ನಾವಿಕರ ಒಂದು ತಂಡ ಆತನ ಗಾಯನ ಶೈಲಿಗೆ ಅನುಗುಣವಾಗಿ ಆವೇಶಭರಿತರಾಗಿ ಮತ್ತು ಉತ್ಸಾಹಪೂರ್ಣರಾಗಿ ಕೂಗು ಹಾಕುತ್ತಾ, ತಮ್ಮ ಶಬ್ಧೋಪಯೋಗದ ಮೂಲಕ ಮೆಲೋಡಿಕ್ ವಿಧಾನಗಳನ್ನು ರೂಪಿಸಲು ಪ್ರಯತ್ನಿಸುವರು. ಅವರ ಸುಮಧುರ ಶಬ್ಧಗಳು ನಹ್ಹಾಮಿನ ಸಂಗೀತ ಶ್ರಾವ್ಯಕ್ಕಿಂತ ಸ್ವಲ್ಪ ಆಕ್ಟೇವ್ಸ್ (ಸಂಗೀತದಲ್ಲಿನ ಒಂದು ಧ್ವನಿ ವಿಧಾನ) ಕಡಿಮೆಯಿರುತ್ತದೆ. ಅರಬ್ ಸಂಗೀತ ಕಲೆಯ ಮತ್ಯಾವ ರೂಪದಲ್ಲಿಯೂ ಕಾಣಸಿಗದ ಆ ಅಸಾಮಾನ್ಯ ವಿಧಾನ ಸಾಗರದಾಳಕ್ಕೆ ಚಲಿಸುವಾಗ ಮುಳುಗು ತಜ್ಞರನುಭವಿಸುವ ಸಮುದ್ರ ರೋಧನವನ್ನು ಅನುಕರಿಸುವಂತಿರುತ್ತದೆ.

ಮುಳುಗು ತಜ್ಞರ ಕಠಿಣ ಜೀವನ, ಸಮುದ್ರಯಾನ ಮತ್ತು ಸಾಗರ ತಳದಲ್ಲಿ ದಾರಿ ನೋಡುತ್ತಿರುವ ಅಪಾಯಗಳು, ಕುಟುಂಬಗಳೊಂದಿಗಿನ ಪುನರ್ಮಿಲನಾ ಸಂಭ್ರಮ ಎಂಬಿತ್ಯಾದಿ ವಸ್ತುಗಳನ್ನಿಟ್ಟುಕೊಂಡು ಫಿಜಿರೀ ಸಾಲುಗಳ ಧಾಟಿ ಮುಂದುವರೆಯುತ್ತದೆ. ಬರವಣಿಗೆಯ ಸಾಲುಗಳು ಸಾಮಾನ್ಯವಾಗಿ ಅವುಗಳನ್ನು ರಹಸ್ಯ ನಿರ್ಣಯಗಳಾಗಿಯೇ ಕಟ್ಟಿಕೊಡುವಲ್ಲಿ ತಮ್ಮ ಪಾತ್ರ ಭದ್ರಪಡಿಸಿಕೊಂಡಿದೆ. ಗಾಯಗಳು, ತೀರ್ಪು, ಸಮುದ್ರದ ಅತಿಯಾದ ಶಕ್ತಿ ಎಂಬಿತ್ಯಾದಿ ಉಲ್ಲೇಖಗಳಲ್ಲಿರುವ ಭೌತಿಕ ಸಂಕಷ್ಟಗಳು ಮಾನವನ ಸಹಜ ಸಂಕಲ್ಪಕ್ಕಿಂತಲೂ ವ್ಯತಿರಿಕ್ತವಾಗಿದೆ.

‘ಮುರ್ಶಿದ್ ಬಿನ್ ಸಅದ್ ಅಲ್- ಬಿತಾಲಿ’ ಯ ಫಿಜಿರೀ ಕಾವ್ಯಕ್ಕೆ ಸಂಶೋಧಕ ‘ನಾಸರ್ ಅಲ್- ತಾಯ್’ ನೀಡುವ ಭಾವಾನುವಾದ ಈ ರೀತಿಯಾಗಿದೆ,
“ಕಿರುನಗುವಿನೊಳೂ ಸಾವಿನೊಂದಿಗೂ ಅದರ ಸರ್ವ ಅಂಶಗಳೊಂದಿಗೂ ಹೋರಾಡುತಿಹರು ಅವರು..”

‘ಓ ಮಾತೃ ಹೀನರಾದ ಮುಳುಗು ತಜ್ಞರಿಗೆ ಸಾಕ್ಷಿಯಾಗಿ ಈ ದೀರ್ಘ ರಾತ್ರಿಗಳೊಲು ನಾ ಹೇಗೆ ಬಳಲುತಿಹೆನು ಒಂದು ತಿಂಗಳು ಕಳೆದು ಕಣ್ಮರೆಯಾಗುತ್ತಿದ್ದಂತೆಲ್ಲ ಇನ್ನೊಂದು ತಿಂಗಳು ಅನುಸರಿಸುತಿಹುದು ಕಣ್ಣುಗಳೊಲು ಮಂಜು ಹತ್ತುವವರೆಗೂ…’

ಮೆಲೊಡಿಕಲ್ ರಚಿಸುವ ಸಂಗೀತೋಪಕರಣಗಳಿಲ್ಲದೆ ಫಿಜಿರೀ ಸಂಗೀತ ಕಲೆಯು ಪ್ರದರ್ಶಿಸಲ್ಪಡುವುದು ಚಪ್ಪಾಳೆ ಸ್ವರದ ತಾಳಕ್ಕೆ ಅನುಗುಣವಾಗಿಯಾಗಿದೆ. ಆದರೆ, ಅನೇಕ ತಾಳವಾದ್ಯಗಳನ್ನು ದಾರ್ ಸಂಗೀತ ಕಚೇರಿಗಳಲ್ಲಿ ಬಳಸಲಾಗುತ್ತದೆ. ತಬಲ,ಮಿರ್ವಾಸ್ ಎಂಬೀ ಎರಡು ರೀತಿಯ ಡಬಲ್ ಹೆಡ್ ಸಿಲಿಂಡರ್ ಡ್ರಮ್ಮುಗಳು, ‘ತಾರ್ ‘ ಎಂಬ ಒನ್ ಸೈಡ್ ಡ್ರಮ್ಮು ಸೆಟ್ಟು. ‘ತೂಸ್ ‘ ಎಂಬ ಒಂದು ಸಣ್ಣ ಪಾತ್ರೆ. ನೀರಿಗಾಗಿ ಉಪಯೋಗಿಸುವ ‘ಜಹ್ಲಾ ‘ ಎಂಬ ಮಣ್ಣಿನ ಮಡಕೆಗಳು ಇತ್ಯಾದಿ ಅವುಗಳಲ್ಲಿ ಪ್ರಮುಖವಾದವುಗಳು. ಇತರ ಅರೇಬಿಕ್ ನೃತ್ಯ ಕಲೆಗಳಲ್ಲಿ ಕಾಣಸಿಗದ ನಿಧಾನಗತಿಯ ದೇಹಚಲನೆಯಿಂದ ಫಿಜಿರೀ ಸಂಗೀತ ಕಲೆಯು ಅನುಕರಿಸಲ್ಪಟ್ಟಿದೆ. ನರ್ತಕರು ತನ್ಮಧ್ಯೆ ತೋಳನ್ನು ಮೇಲಕ್ಕೆತ್ತಿ – ಕೆಳಗಿಳಿಸಿ, ಪರಸ್ಪರ ಸ್ಪರ್ಶಿಸುವುದೂ – ಸವರುವುದೂ ಮಾಡುವರು. ಸಂಗೀತದೊಳಗಿನ ಈ ಕ್ರಿಯೆಯು ಆರೋಗ್ಯ ಸ್ವಾಸ್ಥ್ಯದೆಡೆಗಿನ ಹೆಜ್ಜೆಯನ್ನಾಗಿದೆ ಸಂಕೇತಿಸುವುದು. ಈ ನಿಧಾನಗತಿಯ ಗೋಡೆಗಳ ಮಧ್ಯೆಯಿರುವ ಮುಳುಗು ತಜ್ಞರ ನೀರಿನೆಡೆಗಿನ ಜಿಗಿತಗಳನ್ನು ಸೂಚಿಸುವ ತ್ವರಿತ ಹೊರಚಿಮ್ಮುವಿಕೆಯು, ಕಾಲಕಾಲಕ್ಕೆ ಫಿಜಿರೀ ಕಲೆಯ ಹರಿವಿಗೆ ಅಡಚಣೆಯಾದಂತಿರುತ್ತದೆ.

ಜಪಾನಿನ ಮುತ್ತು ಸಂಸ್ಕರಣಾ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಕೊಲ್ಲಿ ರಾಷ್ಟ್ರಗಳ ತೈಲ ಆವಿಷ್ಕಾರದ ಸಂಶೋಧನೆಯೋತ್ತರ ಸಂದರ್ಭ, ಮುತ್ತು ಸಂಗ್ರಹಣಾ ಸಂಸ್ಕೃತಿ ನಿಧಾನವಾಗಿ ಮಾಯವಾಗಲಾರಂಭಿಸಿತು. 1960 ರಲ್ಲಿ ಬ್ರಿಟೀಷ್ ಎಥ್ನೋಮ್ಯೂಸಿಕಾಲಜಿಸ್ಟ್ ‘ಡೇವಿಡ್ ಫಾನಶಾವೇ ‘(David Fanshawe) ಮುಳುಗು ತಜ್ಞರ ಸಂಗೀತ ಶ್ರಾವ್ಯ ಆಲಿಸಲು ಮತ್ತು ಅವುಗಳನ್ನು ರೆಕಾರ್ಡ್ ಮಾಡುವ ಮೂಲಕ ಮುಂಬರುವ ತಲೆಮಾರುಗಳೆಡೆಯಲ್ಲಿಯೂ ಅದರ ಜೀವಂತಿಕೆಯನ್ನು ಉದ್ದೇಶಿಸಿ ಬಹ್ರೇನಿಗೆ ತಲುಪಿದಾಗ ಅಂತಹ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಕೇವಲ ನಾಲ್ಕು ಹಡಗುಗಳು ಮಾತ್ರವೇ ಉಳಿದು ಫಿಜಿರೀ ಸಂಗೀತ ಪರಂಪರೆಯೇ ಅಳಿವಿನಂಚಿನಲ್ಲಿತ್ತು. ದುರಾದೃಷ್ಟವಶಾತ್ ಅವುಗಳೂ ಮೀನುಗಾರಿಕೆಗೆ ತೆರಳಿಯಾಗಿತ್ತು. ಆದ್ದರಿಂದ, ಆಂಕರ್ ಮೇಲೆತ್ತುವಾಗ ಪ್ರದರ್ಶಿಸುವ ಹಾಡುಗಳನ್ನು ದಾಖಲಿಸಲು ಅವರಿಗೆ ವಿಶೇಷ ತಂತ್ರಗಳನ್ನು ಅಳವಡಿಸಬೇಕಾದ ಅನಿವಾರ್ಯತೆ ಎದುರಾಯಿತು. ದಡದಲ್ಲಿ ಹಡಗಿನ ಹಗ್ಗದ ಬದಲು ಬಸ್ ಟೈರಿನ ಸುತ್ತ ಸುತ್ತಿರುವ ಒಂದು ಹಳೆಯ ಹಗ್ಗವನ್ನು ಎಳೆದುಕೊಂಡು ನಾವಿಕರು ‘ಖ್ರಾಬ್ ‘ ಸಂಗೀತವನ್ನು ಪ್ರದರ್ಶಿಸಲು ಶ್ರಮಿಸಿದರು.

1970 ರ ದಶಕ, ಫಿಜಿರೀ ಸಂಗೀತ ಸಂಪ್ರದಾಯ ಮತ್ತೊಮ್ಮೆ ಗುರುತಿಸಲ್ಪಟ್ಟಿತು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಪ್ರಜ್ಞಾಪೂರ್ವಕ ಜಾಗೃತ ಕ್ರಿಯೆಯ ಭಾಗವಾಗಿ ಸೇರ್ಪಡೆಯಾಯಿತು. ಮುತ್ತು ಸಂಗ್ರಹಣಾ ಸಂಸ್ಕೃತಿಯ ವಾಣಿಜ್ಯ ಮೌಲ್ಯವು ಕ್ರಮೇಣ ಕಣ್ಮರೆಯಾದ್ದರಿಂದ, ನೌಕಾ ಉದ್ಯೋಗ ಪ್ರಕ್ರಿಯೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಮೂಲಕ ಯಥೇಷ್ಚ ಹಾಡುಗಳನ್ನು ಪ್ರದರ್ಶಿಸುವುದು ಅಸಾಧ್ಯವಾಯಿತು. ಆದಾಗ್ಯೂ, ವಿಶೇಷ ದಾರ್ ಬಂಗಲೆಗಳಲ್ಲಿ ಫಿಜಿರೀ ಸಂಗೀತ ಕಲೆಗಳನ್ನು ಪ್ರದರ್ಶಿಸುವಲ್ಲಿಯೂ, ಮುಂದಿನ ಪೀಳಿಗೆಗೆ ಅದನ್ನು ತಲುಪಿಸುವಲ್ಲಿಯೂ ರಾಷ್ಟ್ರವು ಅವರಿಗೆ ಸಂಪೂರ್ಣ ಬೆಂಬಲ ನೀಡುವಲ್ಲಿ ಯಶಸ್ವಿಯಾಗಿದೆ ಎಂಬುದು ತೃಪ್ತಿಕರ. ಇಂದು ಶಾಪಿಂಗ್ ಮಾಲುಗಳು ಮತ್ತು ಸಂಗೀತ ಹಾಲುಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಪರ್ಶಿಯನ್ ಕೊಲ್ಲಿಯ ಗತ ಕಾಲದ ವೈಭವದ ಪ್ರತೀಕವಾಗಿ ಫಿಜಿರೀಯ ಅಮೂರ್ತ ಆಯಾಮಗಳನ್ನು ಕಣ್ತುಂಬಿಕೊಳ್ಳಬಹುದು. ಆದರೆ, ಅದು ಫಿಜಿರೀಯ ಸಂಗೀತ ಸಂಸ್ಕೃತಿಯ ಕ್ಲಾಸಿಕಲ್ ಅಂಶಗಳೊಂದಿಗೆ ‘ಪಾಶ್ಚಾತ್ಯ ಸ್ವರಮೇಳ ಸಂಗೀತ ‘(Symphonic music) ದ ಸಂಯೋಜಿತ ಪ್ರದರ್ಶನವಾಗಿ ಮಾತ್ರ. ಸಮಕಾಲೀನ ಇಲೆಕ್ಟ್ರಾನಿಕ್ ಸಂಗೀತಗಾರರು ಮತ್ತು ಅರಬ್ ವಂಶಜರಾದ ಮಲ್ಟಿಮೀಡಿಯಾ ಕಲಾವಿದರು ಚರಿತ್ರೆಯ ಪುಟಗಳಲ್ಲಿ ನೇಪಥ್ಯಕ್ಕೆ ಸರಿದ ಫಿಜಿರೀ ಸಂಸ್ಕೃತಿಯನ್ನು ಪುನರ್ವ್ಯಾಖ್ಯಾನಿಸುವ ಪ್ರಯತ್ನದಲ್ಲಿದ್ದಾರೆ. ಆದಾಗ್ಯೂ, ಇಂತಹ ಪ್ರಯೋಗಗಳು ಇನ್ನೂ ಬಹಳಷ್ಟು ವಿರಳವಾಗಿಯೇ ಮುಂದುವರೆಯುತ್ತಿದೆ ಎಂಬುದು ಮಾತ್ರ ಖೇದಕರ.

ಮೂಲ: ಆಂಡ್ರೇಯ್ ಸಾಯಿಲರ್
ಅನುವಾದ: ಅಬ್ದುಸ್ಸಲಾಂ ಮಿತ್ತರಾಜೆ ಸಾಲೆತ್ತೂರು

‘ಎ ಸ್ಮಾಲ್ ಡೆತ್’ – ‘ಇಬ್ನ್-ಅರಬಿ’ಯೆಡೆಗೊಂದು ಪಯಣ

"ಸೃಷ್ಟಿಕರ್ತನೇ... 
ನಿನ್ನ ಮೇಲಿನ ಪ್ರೀತಿ 
ನನ್ನೊಳು ಮಾತ್ರವಲ್ಲ
ಆದರೆ, ನನ್ನೊಳಿರುವ
ಪ್ರೀತಿ ನಿನ್ನೊಳು ಮಾತ್ರ...
                    -ಇಬ್ನ್- ಅರಬಿ

ಹದಿನೇಳನೆಯ ಶತಮಾನದ ಹೊತ್ತಿಗೆ ಅರಬ್ ಪ್ರಪಂಚದಲ್ಲಿ ಕಾದಂಬರಿ ಸಾಹಿತ್ಯವು ಸಣ್ಣ ಪ್ರಮಾಣದಲ್ಲಿ ಪರಿಚಿತವಾಗಿದ್ದರೂ, ಆರಂಭಿಕ ದಿನಗಳಲ್ಲಿ ಇವು ಕೇವಲ ಅನುವಾದಿತ ಕೃತಿಗಳು ಮಾತ್ರವಾಗಿತ್ತು. ಇಸ್ಲಾಮಿಕ್ ಜೀವನ ಶೈಲಿಯೆಡೆಗಿನ ಸಾಹಿತ್ಯದ ನವ್ಯ ರೂಪದ ಅಭಿವ್ಯಕ್ತಿಯ ಪ್ರಾರಂಭ ಅವರ ಕೃತಿಗಳಲ್ಲಿ ಸ್ಪಷ್ಟವಾದ ಪ್ರಭಾವ ಬೀರಿತು. ಜಾರ್ಜ್ ಸೈದಾನ್, ನಜೀಬ್ ಕಯ್ಲಾನಿ, ಮಅರೂಫ್ ಅರ್ನಾತ್ವ್ ಮುಂತಾದವರ ಲೇಖನಿಯು ಅರಬ್ ಸಾಹಿತ್ಯವೆಂಬ ವಿಶಾಲ ಜಗತ್ತಿಗೆ ಇಸ್ಲಾಮಿಕ್ ಇತಿಹಾಸ ಕಾದಂಬರಿಗಳ ಪ್ರವೇಶಕ್ಕೆ ಪ್ರಮುಖ ಪಾತ್ರ ವಹಿಸಿವೆ. ಜಾರ್ಜ್ ಸೈದಾನನ ಕಾದಂಬರಿಗಳಲ್ಲಿ ಮುಸ್ಲಿಂ ವಿದ್ವಾಂಸರು ಕೀಳು ಮಟ್ಟದಲ್ಲಿ ಚಿತ್ರಿಸಲ್ಪಡತೊಡಗಿದಾಗ ನಜೀಬ್ ಕೈಲಾನಿ ಈ ಬಗ್ಗೆ ಪ್ರಾಮಾಣಿಕತೆ ವ್ಯಕ್ತಪಡಿಸಲಾರಂಭಿಸಿದರು. ವ್ಯಕ್ತಿಗತ ಇತಿಹಾಸದ ಜೊತೆಗೆ ಅಂದಿನ ಸಾಮಾಜಿಕ ವ್ಯವಸ್ಥೆಯನ್ನು ಪರಿಚಯಿಸುವ ಮತ್ತು ಇಸ್ಲಾಂ ಧರ್ಮದ ಆಚಾರಗಳನ್ನು ಜನರೆಡೆಯಲ್ಲಿ ಬಿತ್ತರಿಸುವ ಸಾಧ್ಯತೆಗಳನ್ನು ಅವರು ತಮ್ಮ ಬರಹಗಳ ಮೂಲಕ ಸಾಫಲ್ಯಗೊಳಿಸಲು ಶ್ರಮಿಸಿದರು.

ಮುಹಮ್ಮದ್ ಹಸನ್ ಅಲ್- ವಾನ್

ಕೆಲವೊಮ್ಮೆ ವೈಯಕ್ತಿಕ ಇತಿಹಾಸಗಳು ಸಾಮಾಜಿಕ ಇತಿಹಾಸವನ್ನು ಉತ್ಕೃಷ್ಟಗೊಳಿಸುತ್ತವೆ. ವಿದ್ವಾಂಸರು ಮತ್ತು ಆತ್ಮಜ್ಞಾನಿಗಳ ಪುಣ್ಯ ಸ್ಮರಣೆಗಳು ಮುಸ್ಲಿಂ ದೈನಂದಿನ ಜೀವನದ ಒಂದು ಪ್ರಮುಖ ಭಾಗವಾಗಿಯೂ ಕಾಣಬಹುದು. ಆಧ್ಯಾತ್ಮಿಕ ವಾತಾವರಣವನ್ನು ರಚಿಸುವಲ್ಲಿ ಧಾರ್ಮಿಕ ಪಂಡಿತರ ಜೀವನ ಚರಿತ್ರೆಯ ಕಥೆಗಳು ಮತ್ತು ಕಾವ್ಯಗಳು ಸೇರಿದಂತೆ ವಿಭಿನ್ನ ರೀತಿಯ ಕಥನಗಳನ್ನು ಬಳಸಲಾಗುತ್ತದೆ. ರೂಮಿ ಮತ್ತು ತಿಬ್ರೀಸಿಯನ್ನು ಕಾದಂಬರಿ ಸಾಹಿತ್ಯದಲ್ಲಿ ಓದಿ ಪಡೆದ ಆಧುನಿಕ ಜಗತ್ತಿನ ಮುಂದೆ ಇಬ್ನ್- ಅರಬಿಯ ಜೀವನ ಪಯಣಗಳು ಮತ್ತು ದೈವಿಕ ಸ್ನೇಹದ ಆಳವನ್ನು ಅಕ್ಷರ ರೂಪಕ್ಕಿಳಿಸುವ ಮೂಲಕ ಕಳೆದ ವರ್ಷದ ಅರೇಬಿಕ್ ಬುಕರ್ ಪ್ರಶಸ್ತಿ ವಿಜೇತ ಕೃತಿ ಮುಹಮ್ಮದ್ ಹಸನ್ ಅಲ್- ವಾನ್ ವಿರಚಿತ ‘ಎ ಸ್ಮಾಲ್ ಡೆತ್ ‘(موت الصغير ) ತನ್ನ ಸ್ವ- ಭಾವನೆಗಳ ಸಾಗರದಲ್ಲಿ ಮಿಂದು ದಡ ಸೇರುವಲ್ಲಿ ಯಶಸ್ವಿಯಾಗಿದೆ. ದೈವಿಕ ಪ್ರೀತಿಯ ಅವಿಸ್ಮರಣೀಯ ಬ್ರಹ್ಮಾಂಡದೊಳು ತೀರ್ಥಯಾತ್ರೆ ಹೊರಟ ಆಧ್ಯಾತ್ಮಿಕ ಜ್ಞಾನಿಗಳಲ್ಲಿ ಪ್ರಮುಖರಾಗಿದ್ದಾರೆ ಇಬ್ನ್- ಅರಬಿ. ಅಪವಿತ್ರ ಮನಸ್ಸಿನಲ್ಲಿ ಶಾಂತಿ ನೆಲೆಸಲು ಮತ್ತು ಏಕಾಂತ ಪ್ರಯಾಣದ ಮೂಲಕ ದೈವಿಕ ಪ್ರೀತಿಯ ದಾಹ ನೀಗಿಸಲು ದಿವ್ಯ ಜ್ಞಾನಿಗಳೆಂದೂ ಅಲೆದಾಡುತ್ತಿರುವರು. ತನ್ನ ಮನಶ್ಶಾಂತಿಗಾಗಿ ದೈವಿಕ ಪ್ರೇಮದ ಆಳವನ್ನರಸುತ್ತಾ ನಾಲ್ಕು ಆಧ್ಯಾತ್ಮಿಕ ಸಾಧಕರನ್ನು ಹುಡುಕುವ ಪ್ರಯಾಣವಾಗಿದೆ ಈ ಕಾದಂಬರಿಯ ಹೂರಣ. ಅರೇಬಿಕ್ ಬುಕರ್ ಪ್ರಶಸ್ತಿ ಕಿರುಪಟ್ಟಿಯಲ್ಲಿ ಸ್ಥಾನ ಪಡೆದ ‘ಅಲ್- ಖುನ್ದುಸ್ ‘(2013) ಸೇರಿದಂತೆ ಸುಮಾರು ಐದು ಕಾದಂಬರಿಗಳನ್ನು ರಚಿಸಿದ ಹಸನ್ ಅಲ್- ವಾನ್ ಈ ಹಿಂದೆಂದಿಗಿಂತಲೂ ಬಹಳ ಭಿನ್ನವಾಗಿ ಕಲ್ಪನಾಮಯ ಅವಾಸ್ತವಿಕ ಬರವಣಿಗೆಯ ತೊಡೆದು ವಾಸ್ತವಾಧಾರಿತ ಕಾದಂಬರಿಯೆಡೆಗಿನ ಬದಲಾವಣೆಯನ್ನಾಗಿದೆ ಈ ಕೃತಿಯ ಮೂಲಕ ಸಾಕ್ಷಾತ್ಕಾರಗೊಳಿಸುವುದು.

ಮೌಲ್ಯಗಳ, ವ್ಯಕ್ತಿಗಳ, ಘಟನಾ ಸಂದರ್ಭಗಳ ಈ ರಚನೆಗೆ ಸಾಹಿತ್ಯಿಕವಾದದ್ದೇ ಅಲ್ಲದೆ ಸಾಮಾಜಿಕವಾದ ಹಾಗೂ ಒಮ್ಮೊಮ್ಮೆ ದಾರ್ಶನಿಕವಾದ ಆಯಾಮವೂ ಉಂಟು. ಇಸ್ಲಾಮಿಕ್ ಸೂಫೀ- ಬೌದ್ಧಿಕ ಸಂಕಥನದಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಟ್ಟ ಇಬ್ನ್- ಅರಬಿಯ ಕಲ್ಪನಾ ಜಗತ್ತನ್ನು ಅನಾವರಣಗೊಳಿಸುವ ಮೂಲಕವಾಗಿದೆ ಕಾದಂಬರಿಯ ಪ್ರತಿಯೊಂದು ಸಾಲುಗಳು ಮುಂದುವರಿಯುವುದು. ಇಬ್ನ್- ಅರಬಿಯೊಂದಿಗಿನ ಕೆಲವೊಂದು ಸೈದ್ಧಾಂತಿಕ ಚರ್ಚೆಗಳು ನಡೆಯುತ್ತಿದ್ದರೂ, ಅವರ ಯಾವುದೇ ಜೀವನ ಚರಿತ್ರೆಗಳು ಪ್ರಕಟಿಸಲ್ಪಟ್ಟಿಲ್ಲ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡಲ್ಲಿ ಈ ಕಾದಂಬರಿಯು ಸಾಹಿತ್ಯ ವಲಯದಲ್ಲಿ ಹೊಸ ಮೈಲಿಗಲ್ಲಾಗುತ್ತದೆ. ಅದೇ ಸಂದರ್ಭ, ಅತ್ಯಂತ ಪ್ರಸಿದ್ಧ ಅರೇಬಿಕ್ ತತ್ವಜ್ಞಾನಿ (Arabic philosopher) ಎಂಬ ನಿಟ್ಟಿನಲ್ಲಿ ಕಾದಂಬರಿಯು ಇಬ್ನ್- ಅರಬಿಯ ಜೀವನ ಮತ್ತು ವಿಚಾರಗಳನ್ನು ಪ್ರಸ್ತುತಪಡಿಸುವಲ್ಲಿ ತನ್ನದೇ ಆದ ಇತಿ- ಮಿತಿಗಳನ್ನು ಎದುರಿಸುತ್ತಿದೆ. ಇಪ್ಪತ್ತೊಂದನೆಯ ಶತಮಾನದ ಅಕಾಡಮಿಕ್ ವಲಯದಲ್ಲಿ ಹೆಚ್ಚು ಚರ್ಚಿಸಲ್ಪಡುತ್ತಿರುವ ವ್ಯಕ್ತಿಗಳಲ್ಲಿ ಇಬ್ನ್- ಅರಬಿಯ ಹೆಸರೂ ಸ್ಥಳಹಿಡಿದಿದೆ.

ಧಾರ್ಮಿಕ ಜ್ಞಾನದಲ್ಲಿ ಪರಿಣಿತರಾದ ಇಬ್ನ್- ಅರಬಿಯನ್ನು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸುವ ಮೂಲಕ ಸಾಹಿತ್ಯ ವಲಯದಲ್ಲಿ ಆ ಹೆಸರು ಚರ್ಚಾವಿಷಯವಾಗಿ ಮಾರ್ಪಡುವ ಸಾಧ್ಯತೆಯಿಲ್ಲದಿದ್ದರೂ, ಹಸನ್ ಅಲ್- ವಾನ್ ಉಪಯೋಗಿಸಿದ ಈ ವಿಧಾನವು ಅಂತಹ ಒಂದು ಸಾಧ್ಯತೆಯನ್ನು ಮುಂದಿಡುವ ಪ್ರಯತ್ನ ಮಾಡಿದೆ. ಇಬ್ನ್- ಅರಬಿಯ ಜೀವನವನ್ನು ಸಂಪೂರ್ಣ ನಿಖರವಾಗಿ ದಾಖಲಿಸಲಾಗಿಲ್ಲವಾದರೂ, ತನ್ನ ಸ್ವ- ರಚನೆಯಾದ ಪ್ರಸಿದ್ಧ ಕೃತಿ ‘ಫುತೂಹಾತುಲ್ ಮಕ್ಕಿಯ್ಯಾ’ ದಲ್ಲಿ ಸ್ವಯಂ ದಾಖಲಿಸಿದ ಜೀವನದ ಭಾಗಗಳನ್ನು ಅದರ ನೈತಿಕತೆ ನಷ್ಟ ಹೊಂದದ ರೀತಿ ತನ್ನ ಬರವಣಿಗೆಯಲ್ಲಿ ಸ್ವೀಕರಿಸಿದ್ದಾರೆ. ನೀರಸ ಓದುವಿಕೆಯ ಅಪಾಯದಿಂದ ಪಾರಾದ ಈ ಕೃತಿಯ ಭಾಷಾ ತೇಜಸ್ಸು, ಇಬ್ನ್- ಅರಬಿಯ ಸ್ವಂತ ಭಾಷಾ ಪ್ರಾವೀಣ್ಯತೆಯ ಸಂಯೋಗದೊಂದಿಗೆ ಕಾದಂಬರಿಯ ಹಾದಿ ಹಿಡಿಯುತ್ತದೆ.

ವಿಧಿಗಳಿಂದ ಮಾರ್ಗದರ್ಶಿಸಲ್ಪಟ್ಟ ಜೀವನ…

ಯಾವುದೇ ಒಬ್ಬ ವ್ಯಕ್ತಿಯನ್ನು ಮತ್ತು ಆತ ಬೆಳೆದು ಬಂದ ಸಾಮಾಜಿಕ- ಸಾಂಸ್ಕೃತಿಕ ವ್ಯವಸ್ಥೆಯನ್ನು ಇತಿಹಾಸ ಪುಸ್ತಕಗಳಿಗಿಂತ ಹೆಚ್ಚು ಹೃದಯಸ್ಪರ್ಶಿಯಾಗಿ ಕಣ್ಣಿಗೆ ಕಟ್ಟುವಂತೆ ಕಾದಂಬರಿಗಳು ಹೆಣೆದು ಕೊಡುತ್ತವೆ. ಕಾದಂಬರಿಕಾರ ಇಲ್ಲಿ ಇಬ್ನ್- ಅರಬಿಯನ್ನು ಆತ್ಮ ಚರಿತ್ರೆಯ ರೂಪದಲ್ಲಿ ಪರಿಚಯಿಸುವ ಮೂಲಕ ಈ ಅನುಭವಗಳನ್ನು ಅನುವಾದಿಸಲು ಪ್ರಯತ್ನಿಸತ್ತಾರೆ. ತಾಯಿಯ ಗರ್ಭದಿಂದ ತನ್ನ ಜೀವನದ ಕೊನೆಯ ಉಸಿರಿನವರೆಗೂ, ಅದರೆಡೆಯಲ್ಲಿ ಸವೆಸಿದ ಅನಂತ ಹಾದಿಗಳು ಮೂಡಿಸಿದ ಹೆಜ್ಜೆ ಗುರುತುಗಳನ್ನೂ ಹನ್ನೊಂದು ಅಧ್ಯಾಯಗಳನ್ನಾಗಿಸಿ ತಮ್ಮ ಕೃತಿಯಲ್ಲಿ ವಿವರಿಸಹೊರಟಿದ್ದಾರೆ. ಇಬ್ನ್- ಅರಬಿಯ ಕೃತಿ ಸಂಗ್ರಹಗಳು ಮತ್ತು ಜೀವನ ಚರಿತ್ರೆಯು ಹಸ್ತಾಂತರಿಸಲ್ಪಟ್ಟ ಹಿ. 610 ರಿಂದ ಹಿ. 1433 ( ಕ್ರಿ.ಶ 1212 – ಕ್ರಿ.ಶ 2012 ) ರವರೆಗಿನ ತೀವ್ರವಾದ ಇತಿಹಾಸವನ್ನು ವಿವರಿಸುವ ಭಾಗವೂ ಈ ಹನ್ನೊಂದು ಅಧ್ಯಾಯಗಳೆಡೆಯಲ್ಲಿ ಕಾದಂಬರಿಯ ಒಂದು ಭಾಗವಾಗಿ ಪರಿಚಯಿಸಲ್ಪಟ್ಟಿದೆ.

“ಜನನ ಪೂರ್ವ ಮತ್ತು ಮರಣೋತ್ತರವಾಗಿ ಸೃಷ್ಟಿಕರ್ತನು ನನಗೆ ಎರಡು ಅಲೌಕಿಕ ಜೀವನವನ್ನು ಅನುಭವಿಸುವ ಅವಕಾಶ ನೀಡಿದ. ಮೊದಲನೆಯದಾಗಿ, ತಾಯಿ ನನಗೆ ಜನ್ಮ ನೀಡುವುದು ಮತ್ತು ಎರಡನೇಯದು, ನನ್ನ ಮಗ ನನ್ನನ್ನು ದಫನ್ ಮಾಡುವುದಾಗಿಯೂ ನಾನು ಕಂಡೆನು” ತಾಯಿಯ ಗರ್ಭಾಶಯದಿಂದ ಇಬ್ನ್- ಅರಬಿಯ ಆಗಮನದಿಂದಾಗಿದೆ ಕಾದಂಬರಿಯ ಪ್ರಾರಂಭ. ತನ್ನ ತಂದೆ ಮಹಾನ್ ವಿದ್ವಾಂಸರು ಮತ್ತು ಅಂದಿನ ಆಡಳಿತಗಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯಾಗಿದ್ದರು. ಇಬ್ನ್- ಅರಬಿ ಧಾರ್ಮಿಕ ವಾತಾವರಣದಲ್ಲಿ ಬೆಳೆಯುವುದರ ಜೊತೆಗೆ ಧಾರ್ಮಿಕ ವಿಷಯಗಳಲ್ಲಿ ಜಾಗರೂಕತೆಯನ್ನು ಪಾಲಿಸ ತೊಡಗಿದರು. ದೈವಿಕ ಮಾರ್ಗಸೂಚಿಗಳನ್ನನುಸರಿಸಿ ಜೀವನದ ಹಾದಿಯನ್ನು ದಾಟಿದರು. ರಾತ್ರಿಯ ಏಕಾಂತತೆಯಲ್ಲಿ ದೈವಿಕ ಗ್ರಂಥದ ಪಾರಾಯಣದೊಳು ತೊಡಗಿ, ದೈವೀಸ್ಮರಣೆಯೊಳು ಜಪಮಣಿಯ ಎಣಿಸುತ್ತಾ ನಿರ್ಲಿಪ್ತ ಮನಸ್ಸಿನೊಡನೆ ಗಾಢ ಕತ್ತಲನ್ನೂ ಭೇದಿಸುವ ದಿವ್ಯ ದೀಪ್ತಿಯನ್ನು ಬೆಳಗಿಸಿದರು. ಆಧ್ಯಾತ್ಮಿಕತೆಯ ಔನ್ನತ್ಯಕ್ಕೆ ತಲುಪಿದಾಗ ರಾತ್ರಿ ವೇಳೆಗಳಲ್ಲಿ ದೈವಿಕ ಗ್ರಂಥದ ಪಾರಾಯಣಕ್ಕಾಗಿ ಸಮಾಧಿ ಸ್ಥಳಗಳ ಇರುಳಿನ ಏಕಾಂತತೆಯನ್ನರಸುತ್ತಾ ಹೊರಟ ಇಬ್ನ್- ಅರಬಿಯ ಆರಂಭಿಕ ದಿನಗಳನ್ನಾಗಿದೆ ಕಾದಂಬರಿಯ ಪ್ರಾರಂಭಿಕ ಹಂತದಲ್ಲಿ ವಿವರಿಸುವುದು.

ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳನ್ನು ತಡೆಯುವ ಮತ್ತು ಧರ್ಮ ಪ್ರಚಾರದಲ್ಲಿ ತಮ್ಮನ್ನು ಸಕ್ರಿಯಗೊಳಿಸಿದ್ದ, ಇಮಾಂ ಗಝಾಲಿಯ ಶಿಷ್ಯನೂ ಆದ ಇಬ್ನ್- ತೂಮರ್ ಆರಂಭಿಸಿದ ‘ಅಲ್- ಮುವಹ್ಹಿದೀನ್ ‘ ಆಡಳಿತದ ಕೊನೆಯ ದಿನಗಳಲ್ಲಿ ಅಂದರೆ, ಹಿ. 560 ರಲ್ಲಾಗಿತ್ತು ಇಬ್ನ್- ಅರಬಿಯ ಜನನ. ಧಾರ್ಮಿಕ ವಿದ್ವಾಂಸರು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಗೌರವಿಸಿದ ಇವರಿಗೆ ಅತಿ ದೊಡ್ಡ ಬೆದರಿಕೆ ಫ್ರೆಂಚ್ ಆಕ್ರಮಣವಾಗಿತ್ತು. ಮುವಹ್ಹಿದೀನ್ ಆಡಳಿತಗಾರರ ಉಳಿವಿಗೆ ಅಡ್ಡಿಪಡಿಸುವ ಶಕ್ತಿಗಳನ್ನು ಎದುರಿಸುವುದು ಅವರಿಗೆ ಬೆದರಿಕೆಯಾಗಿ ಮಾರ್ಪಟ್ಟಿತು. ಹಿ. 567 ರಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಂತೆ ಇಬ್ನ್- ಅರಬಿಯ ಕುಟುಂಬ ಮುರ್ಸಿಯ್ಯಾದಿಂದ ಇಶ್ಬೆಲಿಯ್ಯಾ (ಸೆವಿಯ್ಯಾ) ಪ್ರದೇಶದತ್ತ ವಲಸೆ ಹೋಗಬೇಕಾಯಿತು. ತನ್ನದೆಲ್ಲವ ಬಿಟ್ಟು ತನ್ನದಲ್ಲದೂರಿಗೆ ಹೊರಡುವ ಈ ನೋವು ಕಾದಂಬರಿಯುದ್ದಕ್ಕೂ ಇಬ್ನ್- ಅರಬಿಯ ಅಂತಃಕರಣದೊಳು ತನ್ಮಯವಾಗಿ ನರ್ತಿಸುವ ನರ್ತನೆಯ ಕಾಣಬಹುದು.

ಆತ್ಮೀಯ ಚೈತನ್ಯ ಮತ್ತು ಸಂರಕ್ಷಣೆಯನ್ನು ಒದಗಿಸುವ ನಾಲ್ಕು ಆಧ್ಯಾತ್ಮಿಕ ಗುರುಗಳ ಅನ್ವೇಷಣೆಯಲ್ಲಾಗಿದೆ ಇನ್ನು ಮುಂದಕ್ಕೆ ಕಾದಂಬರಿಯ ಪ್ರಯಾಣ ಮುಂದುವರೆಯುವುದು. ಬದಲಾವಣೆಯಾಗುವ ವಿಶ್ವಾಸಿಯ ಜೀವನ ಕ್ರಮಗಳು ಮತ್ತು ಜೀವನದ ಜಂಜಾಟದೊಳು ಎದುರಾಗುವ ತೊಂದರೆಗಳು, ಈ ಯಾತ್ರೆಯ ಉದ್ದಗಲಕ್ಕೂ ಇಬ್ನ್- ಅರಬಿಯೆಂಬ ದೈವಿಕ ಸಂಪ್ರೀತಿಯೆಡೆಗಿನ ದಾರಿಹೋಕನೊಂದಿಗಿದೆ. ಈಜಿಪ್ಟ್, ಹಿಜಾಸ್, ಶಾಮ್, ಇರಾಕ್ ಮತ್ತು ತುರ್ಕೀ ಮೊದಲಾದ ದೇಶಗಳ ಮೇಲೆ ಹಾದು ತನ್ನ ಯಾತ್ರೆ ಡಮಾಸ್ಕಸಿನಲ್ಲಿ ಅಂತ್ಯಗೊಳ್ಳುತ್ತದೆ. ಈ ಒಂದು ದೀರ್ಘ ಪ್ರಯಾಣದ ಮಧ್ಯೆ ತನ್ನೆಲ್ಲಾ ಸಂತೋಷಗಳು ಮತ್ತು ಕಷ್ಟಗಳಲ್ಲಿ ಭಾಗಿಯಾದ ಸಹ ಪ್ರಯಾಣಿಕರಾಗಿದ್ದರು ತನ್ನ ಶಿಷ್ಯಂದಿರಲ್ಲೊಬ್ಬರಾದ ‘ಬದ್ರುಲ್ ಹಬ್ಶೀ’. ಯಾತ್ರೆಯ ಅಂತ್ಯದವರೆಗೂ ಜೊತೆಗಿದ್ದ ಅವರು ಕೊನೆಯ ಸಮಯದಲ್ಲಿ ಕುಷ್ಠರೋಗ ಬಾಧಿತರಾಗಿ ಇಬ್ನ್- ಅರಬಿಯಿಂದ ಅಗಲಬೇಕಾಯಿತು. ಸುಧಾರಿಸಿಕೊಳ್ಳಲಾಗದ ಬೇಸರದೊಂದಿಗಾಗಿತ್ತು ತನ್ನ ಶಿಷ್ಯನನ್ನು ತೊರೆದು ಯಾತ್ರೆ ಮುಂದುವರೆಸುವುದು.

ಜೀವನದ ಕೊನೆಯವರೆಗೂ ನೆಲೆನಿಲ್ಲುವ ಪ್ರೀತಿಯ ವಿಭಿನ್ನ ಮುಖಗಳು ಕಾದಂಬರಿಯುದ್ದಕ್ಕೂ ವ್ಯಕ್ತವಾಗಿದೆ. ಜನ್ಮ ನೀಡಿದ ತಾಯಿ – ತಂದೆಯ ಪ್ರೀತಿ ಅವರೊಂದಿಗಿನ ಪ್ರತ್ಯೇಕಗೊಳ್ಳುವಿಕೆಯಲ್ಲಿಯೂ, ಹುಟ್ಟಿ ಬೆಳೆದು ಬಾಲ್ಯವನ್ನು ರೂಪಿಸಿದ ತಾಯ್ನಾಡು ಮುರ್ಸಿಯ್ಯಾದೊಂದಿಗಿನ ಪ್ರೀತಿ ಅದರೊಂದಿಗಿನ ಅಗಲುವಿಕೆಯಲ್ಲಿಯೂ, ಗುರು – ಶಿಷ್ಯ ಪ್ರೀತಿಯ ಪ್ರಾಮಾಣಿಕ ಮುಖಗಳು ಯಾತ್ರೆಗಳಾಗಿಯೂ, ಜ್ಞಾನಾನುಭವಗಳಾಗಿಯೂ ಕಾದಂಬರಿಯೊಳು ಚಿತ್ರೀಕರಿಸಲ್ಪಟ್ಟಿದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಇಲ್ಲಿನ ಕಾದಂಬರಿ ರೂಪುಗೊಳ್ಳುವುದೇ, ವಿಶಾಲ ಮರುಭೂಮಿಯೊಳು ದಿಕ್ಕುತಪ್ಪಿ ಓಯಸಿಸ್ ಹುಡುಕಿ ನಡೆವ ಅಲೆಮಾರಿಗಳಂತೆಯೇ ದೈವಿಕ ಪ್ರೀತಿಯ ದಾಹ ತಣಿಸುವಿಕೆಗಾಗಿ ಕೈಗೊಳ್ಳುವ ಯಾತ್ರೆಗಳ ಮೂಲಕವಾಗಿದೆ.

ಪರಿಕಲ್ಪನಾ ಜಗತ್ತು ಮತ್ತು ವಿಭಿನ್ನ ಸಾಂಸ್ಕೃತಿಕ ಚಿತ್ರಗಳು…

ಸಮರ್ಪಕವಾದ ಒಂದು ಜೀವನ ಚರಿತ್ರೆ ಎಂಬ ನಿಟ್ಟಿನಿಂದ ಹೊರತಾಗಿ ಹಾಗೂ ಕಾದಂಬರಿಯೆಂಬ ಸಂಕೀರ್ಣತೆಯಿಂದ ಸ್ವತಂತ್ರರಾಗಿಯಾಗಿದೆ ಇಬ್ನ್- ಅರಬಿಯ ಪರಿಕಲ್ಪನಾ ಜಗತ್ತನ್ನು ಅಕ್ಷರಲೋಕದಿಂದ ಓದಬೇಕಾಗಿರುವುದು. ಆಧ್ಯಾತ್ಮಿಕತೆ ಒಂದು ಲಕ್ಷಣವೆಂದೂ, ಆ ಲಕ್ಷಣ ದೂರ ಸರಿದಾಗ ಆಧ್ಯಾತ್ಮಿಕತೆ ಆತನಿಂದ ದೂರವಾಗುತ್ತದೆಯೆಂಬ ಇಬ್ನ್- ಅರಬಿಯ ಈ ಮಾತುಗಳನ್ನೂ ಓದಬೇಕಾಗಿರುವುದು ಕಾದಂಬರಿಯ ಸೀಮೆಯ ಹೊರ ನಿಂತುಕೊಂಡಾಗಿದೆ. ಕಾರಣ, ಕಾದಂಬರಿಯ ಒಳಗಿರುವ ಇಬ್ನ್- ಅರಬಿ ಆಪ್ತರಾಗುವುದು ಪ್ರಯಾಣಗಳ ಮೂಲಕವೇ ಹೊರತು ತಮ್ಮ ಪರಿಕಲ್ಪನಾ ಜಗತ್ತಿನ ಮೂಲಕವಲ್ಲ.

ಜನನಿಬಿಡತೆಯಿಂದ ದೂರ ಸರಿದು ಆರಾಧನಾ ಲೋಕದಲ್ಲಿ ವಿಹರಿಸುವುದಕ್ಕೆ ಭಿನ್ನವಾಗಿ ಜ್ಞಾನಾರ್ಜನೆ ಮತ್ತು ಜ್ಞಾನ ಪ್ರಸಾರದಲ್ಲಿ ಸಾಗುವ ಆಧ್ಯಾತ್ಮಿಕ ಜೀವನವಾಗಿತ್ತು ಅವರ ಆಯ್ಕೆ. ಆದ್ದರಿಂದಲೇ, ಅವರ ಆತ್ಮೀಯ ಸಭೆಗಳಲ್ಲಿ ಪಾಲ್ಗೊಂಡ ಸಾಮಾನ್ಯ ಜನರಿಗೆ ತಮ್ಮ ಸಂಪೂರ್ಣ ಆಲೋಚನೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಒಮ್ಮೆ ಕೈರೋ ನಗರದಲ್ಲಿ ನೆರೆದ ಜನಸ್ತೋಮಕ್ಕೆ ಆಧ್ಯಾತ್ಮಿಕ ಹಿತೋಪದೇಶ ನೀಡುತ್ತಿರುವಾಗ ಸಭೆಯಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಎದ್ದು ನಿಂತು ಟೀಕಿಸಲು ಪ್ರಾರಂಭಿಸಿದ. ವಹ್ದತುಲ್ ವುಜೂದ್ ಎಂಬ ಪರಿಕಲ್ಪನೆ ಏಕಾದೈವಾರಾಧನೆಯನ್ನು ನಿರಾಕರಿಸುತ್ತದೆಯೆಂದೂ, ತಾವು ಅವಿಶ್ವಾಸಿ ಎಂದೂ ಆಗಿತ್ತು ಅವನ ವಾದ. ಈ ವಿಚಾರ ನ್ಯಾಯಾಧೀಶರ ಬಳಿ ತಲುಪಿ ಇಬ್ನ್- ಅರಬಿಯ ತರಗತಿಗಳು ಸ್ಥಗಿತಗೊಳಿಸಿ ಅವರನ್ನು ಬಂಧಿಸುವ ಮಟ್ಟಿಗೆ ವಿಷಯ ತಾರಕ್ಕೇರಿತು. ಇನ್ನೊಂದೆಡೆ ಆ ಊರಿನ ನ್ಯಾಯಾಧೀಶರಾಗಿದ್ದ ಇಬ್ನ್- ಸಕಿಯ್ಯ್ ಇಬ್ನ್- ಅರಬಿಯ ಆಧ್ಯಾತ್ಮಿಕ ಪ್ರವಚದಲ್ಲಿ ಭಾಗವಹಿಸಿದರು. ತರಗತಿಯ ನಂತರ ಊಟದ ಮಧ್ಯೆ ನ್ಯಾಯಾಧೀಶರು, ಪ್ರವಾದಿ ಮಹಮ್ಮದರ ಆರಂಭಿಕ ಉತ್ತರಾಧಿಕಾರಿಯಾಗಿ ತಮ್ಮ ಅಳಿಯನಾದ ಅಲೀಯವರು ನಿಯುಕ್ತರಾಗಬೇಕಿತ್ತೆಂದೂ, ಖಿಲಾಫತ್ ನೀಡುವಿಕೆಯಲ್ಲಿ ಒಳಸಂಚು ನಡೆದಿದೆಯೆಂದೂ ಶಿಯಾ ಪಂಗಡದವರು ಸಮರ್ಥಿಸುತ್ತಾರಲ್ಲ ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನೆಂದು ಕೇಳಿ ಪ್ರಶ್ನಾರ್ಥಕವಾಗಿ ಮುಖ ನೋಡಿದರು. “ಪ್ರತಿಯೊಂದು ಕ್ಷಣವೂ ದೈವ ಇಚ್ಛೆಗೆ ಅನುಗುಣವಾಗಿಯಾಗಿದೆ ಹಾದುಹೋಗುವುದು. ಒಂದನೇ ಉತ್ತರಾಧಿಕಾರಿಯಾದ ಅಬೂಬಕ್ಕರ್ ಅವರ ಮರಣಾವಧಿಯನ್ನಾಗಿದೆ ಸೃಷ್ಟಿಕರ್ತನು ಮೊದಲು ನಿಶ್ಚಯಿಸಿದ್ದು. ನಂತರ ಉಮರ್, ಉಸ್ಮಾನ್, ಅಲೀ ಈ ರೀತಿಯಾಗಿ ಅವರಿಗೆ ನೀಡಿದ ಅಧಿಕಾರ ಕಾಲಾವಧಿಯನುಸರಿಸಿಯಾಗಿದೆ ಅವರ ಮರಣ ಸಂಭವಿಸುವುದು.” ಈ ರೀತಿಯಾಗಿ ಇತರರಿಗಿಂತ ಭಿನ್ನ ರೂಪದಲ್ಲಿ ತಮ್ಮ ಕೃತಿಗಳಲ್ಲಿ ಆಧ್ಯಾತ್ಮಿಕ ಭಾಷೆಯನ್ನು ವಿವರಿಸಿದ ಇಬ್ನ್- ಅರಬಿಯ ವಚನಗಳನ್ನು ಯುಗಗಳಿಂದ ಇಸ್ಲಾಮ್ ಎದುರಿಸುತ್ತಿರುವ ಶಿಯಾ ವಾದಗಳಿಗಿರುವ ಪ್ರತ್ಯುಕ್ತಿಗಳಾಗಿ ಎತ್ತಿಹಿಡಿಯುತ್ತಲಿದ್ದೇವೆ. ಅಕ್ಷರದ ಆಳಕ್ಕಿಳಿಯುವಾಗ ಹಸನ್ ಅಲ್- ವಾನಿನ ರಾಜಕೀಯ ನಿಲುವುಗಳನ್ನೂ ಕಾದಂಬರಿಯ ಈ ಭಾಗ ವಿವರಿಸುವುದು ಗೋಚರಿಸುತ್ತದೆ.

ಕಾದಂಬರಿಯಲ್ಲಿ ಆ ಕಾಲಾವಧಿಯ ನಾಗರಿಕತೆ, ಸಾಂಸ್ಕೃತಿಕ ಚಿತ್ರಣಗಳು, ಉಡುಪು ಶೈಲಿಗಳು ಮತ್ತು ಆಹಾರ ವಿಧಾನಗಳನ್ನು ನಿಖರವಾಗಿ ಚಿತ್ರಿಸುವಲ್ಲಿನ ಪ್ರಯತ್ನ ಅಪೂರ್ಣವಾದರೂ, ಸಾಫಲ್ಯತೆಯೆಡೆಗಿನ ದಾರಿ ಹಿಡಿದಿದೆ. ಅಸಾಸಿನುಗಳಿಗೆ (ಶಿಯಾ ಪಂಗಡದ ಇಸ್ಮಾಯೀಲೀ ವಿಭಾಗದಲ್ಲಿರುವ ರಹಸ್ಯ ಹೋರಾಟಗಾರರು) ಹೆದರಿ ಮುಸಲ್ಮಾನರ ಪೋಷಾಕು ಧರಿಸಿ ಪ್ರಯಾಣ ಬೆಳೆಸುವ ಕ್ರೈಸ್ತರನ್ನು ಮತ್ತು ಮದರಸಾಗಳನ್ನು ನಿರ್ಮಿಸಿ ವಿದ್ವಾಂಸರಿಗೆ ಒಪ್ಪಿಸುವ ಅಧಿಕಾರಿಗಳನ್ನು ಹಸನ್ ಅಲ್- ವಾನ್ ವಿವರಿಸುವುದು ಅಂದಿನ ರಾಜಕೀಯ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಪೂರ್ವ ಕಾಲಗಳಲ್ಲಿ ಸರ್ಕಾರ ಮತ್ತು ರಾಜಕೀಯದೊಂದಿಗೆ ವಿದ್ವತ್ ಸಮುದಾಯಕ್ಕೆ ನೇರ ಸಂಬಂಧಗಳಿದ್ದವು. ಕಾರಣ, ಅಂದು ಇಸ್ಲಾಮಿಕ್ ಸ್ಟೇಟ್ ಅಸ್ತಿತ್ವದಲ್ಲಿದ್ದುದ್ದರಿಂದ ಧಾರ್ಮಿಕ ತೀರ್ಪುಗಳನ್ನು ಹೊರಡಿಸಲು ರಾಜಕೀಯ ನಾಯಕತ್ವವು ಅವರೊಂದಿಗೆ ವ್ಯವಹರಿಸಬೇಕಾದ ಅನಿವಾರ್ಯತೆಯಿತ್ತು. ಇಬ್ನ್- ಅರಬಿಯ ಕಾಲಾವಧಿಯಲ್ಲಿ ಮುವಹ್ಹಿದೀನ್ ಆಡಳಿತವು ಕಟ್ಟು ನಿಟ್ಟಿನ ಧಾರ್ಮಿಕ ತೀರ್ಪುಗಳನ್ನು ವಿಧಿಸಿತು ಮತ್ತು ವಿದ್ವಾಂಸರಿಗೆ ರಾಜ ಮನೆತನದಲ್ಲಿ ಪ್ರಮುಖ ಸ್ಥಾನಗಳನ್ನು ನೀಡುವಲ್ಲಿಯೂ ಯಶಸ್ವಿಯಾಯಿತು. ಜನರ ಧಾರ್ಮಿಕ ನಂಬಿಕೆಯಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆಯೆಂಬ ಕಾರಣ ನೀಡಿ ಅನೇಕ ಕೃತಿಗಳ ಮಾರಾಟದ ಹಕ್ಕನ್ನು ಹತ್ತಿಕ್ಕಲು ಪ್ರಾರಂಭಿಸಿದರು. ಈ ಸಂದರ್ಭ ಇಬ್ನ್- ರುಶ್ದ್ ಅವರ ಬರಹಗಳನ್ನು ನಿಷೇಧಿಸುವ ಮೂಲಕ ಅವರನ್ನು ಬಂಧನಕ್ಕೊಳಪಡಿಸಿದ ಘಟನೆಯ ಪರಿಣಾಮ ಇಬ್ನ್- ಅರಬಿಯ ದುಃಖ ಮತ್ತು ನೋವು ಕಾದಂಬರಿಯಲ್ಲಿ ಅಕ್ಷರಗಳ ನಾಡಿಮಿಡಿತಗಳನ್ನು ಆಲಿಸುವಂತಿದೆ. ನಾಲ್ಕು ಆಧ್ಯಾತ್ಮಿಕ ಗುರುಗಳನ್ನರಸುತ್ತಾ ಹೊರಟ ಯಾತ್ರೆಯ ಮಧ್ಯೆ ತಮ್ಮ ಯಾತ್ರೆಯ ದಿಕ್ಕನ್ನು ಮಕ್ಕಾದೆಡೆಗೆ ಬದಲಿಸಿ ಮುಂದುವರೆಸಬೇಕಾದ ಅನಿವಾರ್ಯತೆ ಎದುರಾಯಿತು. ಮಕ್ಕಾದಲ್ಲಿರಲು ಅಲ್ಲಿನ ನ್ಯಾಯಾಧೀಶರಾಗಿದ್ದ ಅಸ್ಫಹಾನಿಯ ಸನ್ನಿಧಿಗೆ ಜ್ಞಾನಾರ್ಜನೆಗೆ ತೆರಳುತ್ತಿದ್ದರು ಮತ್ತು ಅವರ ಮಗಳಾದ ನಳಾಮಿಯ ಬಳಿ ಜ್ಞಾನ ಸಂಪಾದನೆಯನ್ನೂ ನಡೆಸಿದ್ದರು. ‘ನಳಾಮ್ ‘ ಎಂಬ ಈ ಮಹಿಳಾ ಮಣಿಯೊಂದಿಗಿನ ಆಧ್ಯಾತ್ಮಿಕ ಸಂಬಂಧವನ್ನು ‘ತರ್ಜುಮಾನುಲ್ ಅಶ್ವಾಖ್ ‘ ಎಂಬ ಕೃತಿಯ ಮೂಲಕ ಇಬ್ನ್- ಅರಬಿ ವಿವರಿಸಿದ್ದರೂ ವಾಸ್ತವವಾಗಿ ಇದು ದೈವಿಕ ಸ್ನೇಹದ ಪ್ರತೀಕವಾಗಿತ್ತು. ಇಬ್ನ್- ಅರಬಿಯ ವಹ್ದತುಲ್ ವುಜೂದ್ ಎಂಬ ಪರಿಕಲ್ಪನೆಯ ಮಟ್ಟವನ್ನು ಈ ಘಟನೆಯೊಂದಿಗೆ ತಾಳೆ ಹಾಕಿ ನೋಡದಿದ್ದರೆ ಸತ್ಯವನ್ನು ಅರಿಯುವಲ್ಲಿ ನಾವು ವಿಫಲರಾಗುತ್ತೇವೆ. ತರ್ಜುಮಾನುಲ್ ಅಶ್ವಾಖಿನ ಪ್ರಕಟನೆಯೊಂದಿಗೆ ಇಬ್ನ್- ಅರಬಿಯನ್ನು ಜನರು ತಪ್ಪಾಗಿ ಅರ್ಥೈಸಿಕೊಂಡರು. ‘ಫುತೂಹಾತುಲ್ ಮಕ್ಕಿಯ್ಯಾ ‘ಎಂಬ ಕೃತಿ ರಚನೆಯು ಅನಿಷ್ಟ ಭ್ರಮೆಗಳ ಕಾರಣದಿಂದ ಪೂರ್ತಿ ಮಾಡಲಾಗದ ಸ್ಥಿತಿ ಎದುರಿಸಬೇಕಾಯಿತು. ಅವರು ಮಕ್ಕಾ ತೊರೆದು ಡಮಾಸ್ಕಸ್ ಬಳಿ ಯಾತ್ರೆ ಹೊರಟರು. ನಳಾಮ್ ತನ್ನ ಆಧ್ಯಾತ್ಮಿಕ ಗುರುಗಳ ಪೈಕಿ ಮೂರನೆಯವರೆಂದು ಡಮಾಸ್ಕಸಿನಲ್ಲಿ ಇಬ್ನ್- ಅರಬಿ ಗುರುತಿಸುವರು. ಡಮಾಸ್ಕಸಿನ ಮಸೀದಿಯಲ್ಲಿರಲು ನಳಾಮಿಯ ತಂದೆ ಅಸ್ಫಹಾನಿಯ ನಿಧನದ ಸುದ್ದಿಯೊಂದಿಗೆ ಬಂದು ತಲುಪಿದ ಶಿಷ್ಯ ಬದರ್, ಅವರ ಮರಣೋತ್ತರ ಕರ್ಮಗಳಲ್ಲಿ ಭಾಗವಹಿಸಿದ್ದರು. ಸುಮಾರು ಮೂರು ವರ್ಷಗಳ ಕಾಲ ನಳಾಮ್ ತನ್ನ ಬಳಿಯಲ್ಲಿಯೇ ಇದ್ದರು ಎಂಬ ವಾಸ್ತವಿಕತೆಯನ್ನು ಅರಿತ ಇಬ್ನ್- ಅರಬಿಯ ಮನಸ್ಥಿತಿ ಓದುಗನನ್ನು ಭಾವನಾತ್ಮಕವಾಗಿ ಆವರಿಸತೊಡಗುತ್ತದೆ. ಡಮಾಸ್ಕಸಿನಲ್ಲಿಯೇ ತಮ್ಮ ಅಂತಿಮ ಗುರುಗಳನ್ನು ಸಂಧಿಸುವುದರೊಂದಿಗೆ ಆಧ್ಯಾತ್ಮಿಕ ಶ್ರೇಣಿಯೊಳು ತನ್ನ ಗುರುವೃಂದದ ಆಶೀರ್ವಾದವು ಪೂರ್ಣಗೊಳ್ಳುತ್ತದೆ. ದೈವಿಕ ಸಂಪ್ರೀತಿಯೆಡೆಗಿನ ತನ್ನ ಯಾತ್ರೆಯು ಸಫಲತೆಯನ್ನು ಕಂಡ ನಂತರ ಉಳಿದ ತನ್ನ ಜೀವಿತಾವಧಿಯನ್ನು ಕುಟುಂಬದೊಂದಿಗೆ ವ್ಯಯಿಸಲು ಕೃಷಿ ಉದ್ಯೋಗದಲ್ಲೇರ್ಪಡಲು ತೀರ್ಮಾನಿಸಿದರು.

ಸಮಗ್ರವಲ್ಲದಿದ್ದರೂ, ಸಾಹಿತ್ಯ ಜಗತ್ತಿಗೆ ಅನ್ಯವಾಗಿದ್ದ ಇಬ್ನ್- ಅರಬಿಯ ಜೀವನವನ್ನು ಪರಿಚಯಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಇಬ್ನ್- ಅರಬಿಯ ಚಿಂತನೆಯ ಆಳ ಮತ್ತು ಅದರ ಕುರಿತಾದ ಚರ್ಚೆಗಳಲ್ಲಿ ವಿದ್ವಾಂಸರು ಪಾಲಿಸಿದ ವಿವೇಕತೆಗಳು, ಈ ಎರಡೂ ಗೊಡವೆಗಳನ್ನು ಹಾಸುಹೊಕ್ಕಾಗಿ ಮೈತುಂಬಿಸಿಕೊಂಡ ಈ ಕಾದಂಬರಿ ಸೃಷ್ಟ್ಯಾತ್ಮಕ ಬರಹಗಾರನೊಬ್ಬ ಕಂಡ ಆಳವಾದ ಒಂದು ಜೀವನದ ಸಮಗ್ರ ಪರಿಚಯದ ಅಸಲುಚಿತ್ರವಾಗಿ ಅತ್ಯಂತ ಅರ್ಥಪೂರ್ಣ ಮತ್ತು ಒಂದು ಮೋಹಕವಾದ ಕಥೆಯನ್ನು ನೇಯುತ್ತದೆ.

ಬಿಶ್ರ್ ಇಸ್ಮಾಯೀಲ್
ಅನುವಾದ:ಅಬ್ದುಸ್ಸಲಾಂ ಮಿತ್ತರಾಜೆ ಸಾಲೆತ್ತೂರು.

ವಿಶ್ವ ಸಂಚಾರಿ ಕಬಾಬಿನ ಕಥೆ

ಬಹುಶಃ ನಿಮಗೆ ‘ಶೀಶ್ ಕಬಾಬ್’ ಅಂದರೆ ಏನೆಂದು ಗೊತ್ತಿರಬಹುದು. ಆದರೆ ಹೆಚ್ಚಿನ ಜನರಿಗೆ ಅದರ ಅರ್ಥವೇನೆಂದು ಗೊತ್ತಿರುವ ಸಂಭಾವ್ಯ ಕಡಿಮೆ. ತುರ್ಕಿ ಭಾಷೆಯಲ್ಲಿ ‘ಸೀಸ್’ ಅಂದರೆ ಖಡ್ಗ ಎಂದೂ, ಕಬಾಬ್ ಅಂದರೆ ಮಾಂಸ (ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಆಡಿನ ಮಾಂಸ ಮತ್ತು ಕುರಿಯ ಮಾಂಸ) ಎಂಬ ಅರ್ಥವನ್ನು ನೀಡುತ್ತದೆ. ನಾವು ಅರಿತ ಮಟ್ಟಿಗೆ ಕಬಾಬ್ ಅಂದರೆ ಮೇಡಿಟರೀಯನ್ ರಾಷ್ಟ್ರದಿಂದ ಮಿಡಲ್ ಈಸ್ಟ್, ಉತ್ತರ ಆಫ್ರಿಕಾ, ಗ್ರೀಸ್ ದೇಶದವರೆಗೆ ಮಾಂಸದ ಆಮದು-ರಫ್ತು ನಡೆಸಿದ್ದ ತುರ್ಕಿ ಆಟಮನ್ ಸಾಮ್ರಾಜ್ಯದಲ್ಲಿ (1301-1922) ಆದಿಯಿಂದಲೂ ಇದ್ದ ಪ್ರಕ್ರಿಯೆ.

ಇದು ಆರಂಭವಾದದ್ದು ಪೇರ್ಷ್ಯನ್ (ಈಗಿನ ಇರಾನ್) ದೇಶದಿಂದ ಎಂಬುವುದು ಕೆಲವರ ಅಭಿಪ್ರಾಯ. ಮಧ್ಯಕಾಲದಲ್ಲಿ ಜನರು ಒಂದು ಲೋಟ ವೈನಿನೊಂದಿಗೆ ಸಣ್ಣ ಮಾಂಸ ತುಂಡನ್ನು ಸಿಕ್ಕಿಸುವ ‘ಲೋಹದ ಕಂಬಿ’ಗೆ(Skewer) ಸಮಾನವಾದ ಪದವನ್ನು ಬಳಕೆ ಮಾಡಿದ್ದಾಗಿ ಚರಿತ್ರೆಗಳಲ್ಲಿ ಕಾಣಬಹುದು. ಯಾಕೆ ಮಾಂಸವನ್ನು ಇಷ್ಟು ಸಣ್ಣದಾಗಿ ಕತ್ತರಿಸಿಡುತ್ತಾರೆ ಎಂದರೆ ಬೆರಳುಗಳೆಡೆಯಲಿ ಹಿಡಿಯಲು ಸುಲಭ ಸಾಧ್ಯ ಕೆಲಸವಿದು. ಅಲ್ಲದೆ ಮಾಂಸ ಸೇವಿಸುವಾಗ ಕೈಬೆರಳುಗಳ ಮಧ್ಯೆ ಹಾಗೂ ವೈನ್ ಕುಡಿಯುವಾಗ ಭಕ್ಷ್ಯದ ಅವಶಿಷ್ಟ ಗ್ಲಾಸಿನಲ್ಲಿ ಬಾಕಿಯುಳಿದರೆ ಶುಚಿಯಾಗಿಸಲು ಸ್ವಸ್ಥವೂ ಹೌದು. ಅಲ್ಲದೆ, ಕಡಿಮೆ ವನ ಪ್ರದೇಶಗಳುಳ್ಳ ದೇಶಗಳಲ್ಲಿ ಸಣ್ಣ ಮಾಂಸ ತುಂಡನ್ನು ಪಾಕ ಮಾಡಲು ಅಲ್ಪ ಸಮಯ ಮತ್ತು ಕಡಿಮೆ ಪ್ರಮಾಣದ ಇಂಧನವೂ ಸಾಕು.

ಒಟ್ಟಿನಲ್ಲಿ ಕಬಾಬ್ ಬಾಣಸಿಗರಿಗೆ ಪಾಕಕ್ರಾಂತಿಯಲ್ಲಿ ಇಷ್ಟ ಪ್ರಿಯ ವಸ್ತು. ತುರ್ಕಿಯನ್ನರ ಮೂಲಕ ಕಬಾಬ್ ಗ್ರೀಕ್ ತಲುಪಿದಾಗ ಹಲವು ಬದಲಾವಣೆಗಳಾಯಿತು. ಮಾಂಸದ ಗಾತ್ರ ಸಣ್ಣದಾಗಿದ್ದರೂ ಅದರ ನಡುವೆ ಟೊಮ್ಯಾಟೊ, ನೀರುಳ್ಳಿ, ಹಸಿರು ಮೆಣಸನ್ನು ಸೇರಿಸಿ, ಮಾಂಸವನ್ನು ಸಲಾಡ್ ರೂಪವಾಗಿಸಿಡುವ ಶೈಲಿ ಹೊಸತಾಗಿ ಆರಂಭವಾಯಿತು.


ಈ ಪಾಕ ಶೈಲಿಯಲ್ಲಿರುವ ಕಬಾಬ್ ನಂತರ ಅಮೇರಿಕಾದಲ್ಲಿ ಪ್ರಸಿಧ್ಧಿ ಪಡೆಯಲಾರಂಭಿಸಿತು. ಆಡಿನ ಮಾಂಸದ ಬದಲಿಗೆ ಅಮೇರಿಕನ್ನರು ಬೀಫ್ ಮತ್ತು ಕೋಳಿಯನ್ನು ಉಪಯೋಗಿಸ ತೊಡಗಿದರು. ಅಮೇರಿಕನ್ನರು ಉಪಯೋಗಿಸುವ ಮಾಂಸದ ಗಾತ್ರ ದೊಡ್ಡದಾದ ಕಾರಣ ಬಾಣಸಿಗರಿಗೆ ಹೆಚ್ಚು ಸಮಯ, ಕಠಿಣ ಶ್ರಮ ವ್ಯಯಿಸಬೇಕಾಯಿತು. ಮನೆಯ ಹಿಂಭಾಗದಲ್ಲಿ ಕೆಂಡವನ್ನು ರಾಶಿ ಹಾಕಿ ಅಡುಗೆ ಮಾಡುತ್ತಿದ್ದರು. ಮಾಂಸಖಂಡದ ಒಂದು ಭಾಗ ಬೆಂದು ಪಕ್ವವಾದರೆ ಅದನ್ನು ತಿರುಗಿಸುತ್ತಾ, ಪೂರ್ತಿ ಬೇಯುವವರೆಗೂ ಉರಿವ ಬೆಂಕಿಯ ಮೇಲಿಟ್ಟು ‘ಬೇಯುವಿಕೆಯ ಪ್ರಕ್ರಿಯೆ’ಯನ್ನು ಕೊನೆಗೊಳಿಸುತ್ತಿದ್ದರು. 1960ರ ಕಾಲಾವಧಿಯಲ್ಲಿ ಗ್ರೀಕ್ ಸಿನಿಮಾಗಳಲ್ಲಿ ಕಬಾಬ್ ಅಚ್ಚಳಿಯದೇ ಅವಶೇಷವಾಗಿ ಉಳಿಯಿತು. ತರುವಾಯ ಕಬಾಬ್ ಪಾಕ ಮಾಡುವ ಸ್ಥಳಗಳು ಅಮೇರಿಕನ್ ವಿದೇಶಿಗರ ನಿರಂತರ ಸಂಚಾರಿ ಕೇಂದ್ರವಾಯಿತು. ಕಬಾಬ್ ಇತರ ದೇಶಗಳಲ್ಲಿಯೂ ಸಂಚಾರ ಆರಂಭಿಸಿತು. ಸಿಲ್ಕ್ ರೋಡಿನಲ್ಲಿ ಪಶ್ಚಿಮಕ್ಕೆ ಸಂಚರಿಸುವ ವ್ಯಾಪಾರಸ್ಥರು, ಕೋಲಿಗೆ(Stick) ಮಾಂಸ ತುಂಡನ್ನು ತುರುಕಿಸಿ ಕಡಿಮೆ ಸಮಯ ಮತ್ತು ಸುಲಭವಾಗಿ ಪಾಕ ಮಾಡುವ ವಿಧಾನವನ್ನು ಕಂಡ ವ್ಯಾಪಾರಸ್ಥರು ತಮ್ಮ ಊರಿಗೆ ಕೊಂಡೊಯ್ದರು. ಕೋಕಸ್ ಪರ್ವತದಲ್ಲಿರುವ ಜೋರ್ಜಿಯಾ ರಾಷ್ಟ್ರದಲ್ಲೂ ಕಬಾಬ್ ನಿತ್ಯ ಉಪಯೋಗಿಕ ಆಹಾರ ವಸ್ತುವಾಯಿತು. ಇಲ್ಲಿ ಕಬಾಬನ್ನು ಷೇಷ್’ಲಿಸ್ ಎಂಬ ಹೆಸರಿನಿಂದ ಕರೆಯುತ್ತಾರೆ. ಅಲ್ಲಿಂದ ರಷ್ಯಾ, ಸೋವಿಯತ್ ರಿಪಬ್ಲಿಕಿನ ಪ್ರಧಾನ ಭಕ್ಷ್ಯ ವಸ್ತುವಾಗಿ ಕಬಾಬ್ ಗಮನ ಸೆಳೆಯಿತು.

ಭಾರತ, ಪಾಕಿಸ್ತಾನ ದೇಶದಲ್ಲಿ ಮಾಂಸ ಬೆರೆಸುವ ಸಾಮಗ್ರಿಗಳ ಪ್ರಕಿಯೆಯಲ್ಲಿ ಹಲವು ಬದಲಾವಣೆಗಳು ಕಂಡು ಬಂತು. ಆಡು, ಕೋಳಿ ಮಾಂಸವನ್ನು ಈ ಎರಡು ದೇಶಗಳಲ್ಲಿ ಉಪಯೋಗಿಸಲಾಯಿತು. ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿಯೂ ಇದೇ ಶೈಲಿಯನ್ನು ಸ್ವೀಕರಿಸಿದರು. ಕೆಲವೊಮ್ಮೆ ಕಡ್ಡಿಯ ಸಹಾಯವಿಲ್ಲದೆ ಪಾತ್ರದಲ್ಲಿಯೋ, ಆವಿಯಲ್ಲೋ ಬೇಯಿಸಿ ಚೆನ್ನಾಗಿ ಬಿಸುಪು ಮಾಡಿ ಕಾಯಿಸಿ ತಿನ್ನುತ್ತಿದ್ದರು. ಜನರು ಕಬಾಬನ್ನು ಸತಾಯ್(sataay) ಎಂಬ ಹೆಸರಿನಿಂದ ಗುರುತಿಸುವರು. ಚಿಕನ್ ಅಥವಾ ಬೀಫ್ ಉಪಯೋಗಿಸಿ ತಯಾರಿಸಿದ ನಂತರ ಸುತ್ತಲೂ ಇರುವ ನೆಲಗಡಲೆ ಸೋಸಿನೊಂದಿಗೆ(Peanut Sauce) ಬಡಿಸಿ ತಿನ್ನುವುದು ಅವರ ಶೈಲಿ.

ಇಂದು ಕಬಾಬ್ ಜಪಾನ್ ರಾಷ್ಟ್ರದವರೆಗೂ ವ್ಯಾಪಿಸಿದೆ. ಅದಕ್ಕಾಗಿ ಯಕಿಟೋರಿ ಮಾದರಿಯ ಪಾಕ ಶೈಲಿಯನ್ನು ಉಪಯೋಗಿಸಿ, ಮಾಂಸ ತುಂಡಿನೊಂದಿಗೆ ತರಕಾರಿಯನ್ನೂ ಕೋಲಿಗೆ ಸಿಕ್ಕಿಸಿ ತಿನ್ನುವುದನ್ನೂ ಶುರುವಿಟ್ಟಿದ್ದಾರೆ. ಸದ್ಯ ಎಲ್ಲರೂ ಸಣ್ಣ ಕೋಲಿನ ಕಡ್ಡಿಯಲ್ಲಿ ಮಾಂಸವನ್ನು ಸಿಕ್ಕಿಸಿ ತಿನ್ನುವುದು ಮಾಮೂಲಿ ದೃಶ್ಯ. ಕಬಾಬ್ ಬಹುತೇಕ ರಾಷ್ಟ್ರಗಳ ಬೀದಿಬದಿಯ ತಿನಿಸಾಗಿ(Street food) ಮಾರ್ಪಾಡಾಗಿದೆ. ನ್ಯೂಯಾರ್ಕ್ ಸಿಟಿಯಯಲ್ಲಿ ಕಬಾಬ್ ಪ್ರತಿದಿನದ ವ್ಯಾಪಾರ ವಸ್ತು. ಯೂನಿಯನ್ ಉತ್ತರ ಭಾಗದಲ್ಲಿ ಕೆಂಡವನ್ನು ಬಳಸಿ ಅಡುಗೆ ಮಾಡುವ ತಳ್ಳುಗಾಡಿ ಇಂದಿಗೂ ಕಾಣಲು ಸಾಧ್ಯ.

ಮೂಲ: ಮುಹಮ್ಮದ್ ನಿನ್ಸಿಲ್ ನಾಸಿರ್
ಭಾವಾನುವಾದ: ಸಲೀಂ ಇರುವಂಬಳ್ಳ

ರೂಮಿಯಿಂದ ಶಮ್ಸ್ ತಬ್ರೇಝರ ಮಡಿಲಿಗೆ

ಭಾಗ ಎರಡು

ರೂಮಿಯನ್ನು ಕಣ್ತುಂಬಿಕೊಂಡ ನಾವು ಶಮ್ಸ್ ತಬ್ರೇಝರನ್ನು ಅರಸುತ್ತಾ ಮುಂದೆ ನಡೆದೆವು.ವಾಸ್ತವದಲ್ಲಿ ನಾನು ಮೊದಲಾಗಿ ತಬ್ರೇಝರನ್ನು ಕೇಳಿದ್ದೇ ರೂಮಿಯೆಂಬ ಸೇತುವೆಯ ಮುಖಾಂತರವಾಗಿತ್ತು.ತುರ್ಕಿಗೆ ವೀಸಾ ಮಂಜೂರಾದ ಬಳಿಕ ವಿಲಿಯಂ ಚಿಟ್ಟಿಕ್ ಇಂಗ್ಲಿಷ್‌ಗೆ ಅನುವಾದಿಸಿದ ಶಮ್ಸ್ ತಬ್ರೇಝರ ಆತ್ಮಚರಿತ್ರೆ, ‘ಮಿ ಆಂಡ್ ರೂಮಿ’ ಕೃತಿಯನ್ನು ಕುತೂಹಲದಿಂದ ಓದಿ ಮುಗಿಸಿದ್ದೆ.
ಆ ಕೃತಿಯ ಮುನ್ನುಡಿಯಲ್ಲಿ ರೂಮಿ ಮತ್ತು ತಬ್ರೇಝರ ಒಡನಾಟದ ಬಗ್ಗೆ ಆನ್ ಮೇರಿ ಶಿಮ್ಮೆಲ್ ಬರೆದ ಒಂದಿಷ್ಟು ಸಾಲುಗಳು ರೂಮಿ ಮತ್ತು ತಬ್ರೇಝರ ನಡುವಿನ ಆತ್ಮಬಂಧವನ್ನು ಬಹಳಷ್ಟು ಸೊಗಸಾಗಿಯೇ ತೆರೆದಿಡುತ್ತಿದ್ದವು.

ತನ್ನ ಮೂವತ್ತೆಂಟನೆಯ ವಯಸ್ಸಿನಲ್ಲಾಗಿತ್ತು ರೂಮಿಯ ಬದುಕಿನಲ್ಲಿ ಶಮ್ಸ್ ಎಂಬ ನೇಸರನ ಉದಯವಾಗುವುದು.ಮುಂದಕ್ಕೆ ರೂಮಿಯ ಚಿಂತನೆಗಳಿಗೆ ರೆಕ್ಕೆಗಳು ಜೋಡಿಸಿಕೊಟ್ಟದ್ದು ಶಮ್ಸ್ ಎಂಬ ಆ ‘ನೂರ್’ ಆಗಿತ್ತೆಂಬುವುದು ಮತ್ತೊಂದು ವಿಶೇಷ.ಅವರ ಮೊದಲ ಭೇಟಿಯ ಕುರಿತಾದಂತೆ ಹಲವಾರು ಕಥೆಗಳು ಚಾಲ್ತಿಯಲ್ಲಿರುವುದು ಕಾಣಬಹುದು.ಒಮ್ಮೆ ರೂಮಿಯವರ ತರಗತಿಗೆ ಶಮ್ಸ್ ತಬ್ರೇಝರು ಒಬ್ಬ ದಾರಿಹೋಕನಂತೆ ಬರುತ್ತಾರೆ.ಸುತ್ತಲೂ ಜೋಡಿಸಿರುವ ಗ್ರಂಥಗಳತ್ತ ಬೊಟ್ಟುಮಾಡಿ ಈ ಪುಸ್ತಕಗಳಲ್ಲಿ ಏನಿದೆ ಎಂದು ರೂಮಿಯರ ಬಳಿ ಕೇಳಿದಾಗ,
ಅವೆಲ್ಲಾ ನಿಮಗೆ ಅರ್ಥವಾಗದು ಎಂದು ರೂಮಿ ಉತ್ತರಿಸುತ್ತಾರೆ.ಇದನ್ನು ಕೇಳಿದ ತಬ್ರೇಝರು ಆ ಗ್ರಂಥಗಳನ್ನೆಲ್ಲ ಹತ್ತಿರವಿದ್ದ ಕೊಳಕ್ಕೆ ಎತ್ತಿ ಎಸೆದುಬಿಡುತ್ತಾರೆ. ಅರೆಕ್ಷಣ ಎಲ್ಲವೂ ಸ್ತಬ್ಧವಾದಂತೆ…ಇದನ್ನು ಕಂಡ ರೂಮಿ ವಿಚಲಿತಗೊಳ್ಳುತ್ತಾರೆ .ಶಮ್ಸ್ ತಬ್ರೇಝರು ತಕ್ಷಣವೇ ಕೊಳದಲ್ಲಿದ್ದ ಅಷ್ಟೂ ಗ್ರಂಥಗಳನ್ನು ಎತ್ತಿ ರೂಮಿಯವರ ಕೈಗಿಡುತ್ತಾರೆ. ಆದರೆ ಏನಾಶ್ಚರ್ಯ!.ಒಂದೇ ಒಂದು ಪುಸ್ತಕವೂ ನೆನೆಯದೇ ಇರುವುದನ್ನು ಗಮನಿಸಿದ ರೂಮಿಯವರು ಕುತೂಹಲಭರಿತರಾಗಿ ಕೇಳುತ್ತಾರೆ. ಅರೆ…ಇದೆಲ್ಲ ಹೇಗೆ ಸಾಧ್ಯ,? ಇದರ ರಹಸ್ಯವಾದರೂ ಏನು?ತಬ್ರೇಝರು ತೆಳು ನಗೆಯೊಂದಿಗೆ ಹೀಗನ್ನುತ್ತಾರೆ ‘ ಅವೆಲ್ಲಾ ನಿಮಗೆ ಅರ್ಥವಾಗಲಾರದು’.!

ಈ ಘಟನೆಯ ಬಳಿಕ,ರೂಮಿ ಶಮ್ಸ್‌ರನ್ನು ಹುಡುಕುತ್ತಾ ಅಲೆದಾಡತೊಡಗಿದರು. ಸುಜ್ಞಾನದ ಸಾಗರವೇ ಆಗಿದ್ದ ಶಮ್ಸ್ ತಬ್ರೇಝರಿಂದ ಅರಿವಿನ ಅಮೃತವನ್ನು ಸಾಕಷ್ಟು ಎದೆಗಿಳಿಸಿಕೊಂಡರು. ಇದರೊಂದಿಗೆ ರೂಮಿಯ ಬದುಕಿನಲ್ಲಿ ಬದಲಾವಣೆಯ ಮಂದ ಮಾರುತವೊಂದು ಮೆಲ್ಲನೆ ಬೀಸತೊಡಗಿತು. ಆಧ್ಯಾತ್ಮಿಕತೆಯ ಬಗೆಗಿನ ತನ್ನ ಅರಿವು, ಜಿಜ್ಞಾಸೆ, ವಿಚಾರಗಳನ್ನು ರೂಮಿ, ಶಮ್ಸ್ ತಬ್ರೇಝರ ಸಮ್ಮುಖದಲ್ಲಿ ಹಂಚಿಕೊಂಡರು. ಅಲ್ಲೊಂದು ಶ್ರೇಷ್ಠ ಮಟ್ಟದ ವಿಚಾರ ಮಂಥನವೇ ನಡೆಯಿತು. ಇವುಗಳು ನಂತರ ಅದ್ಭುತ ಕಥೆಗಳಾದವು,ಎಂದಿಗೂ ಓದಿ ಮುಗಿಸಲಾಗದ ಕವನಗಳಾದವು.! ನಾನಾರ್ಥಗಳು ಸ್ಪುರಿಸುವ ಮಹಾ ಕಾವ್ಯಗಳಾದವು..! ಸುಮಾರು ಆರು ತಿಂಗಳುಗಳ ಕಾಲ ಇಬ್ಬರೂ ಅಗುಣಿಹಾಕಿದ ಕೋಣೆಯಲ್ಲಿ ತಪಸ್ಸಿಗೆ ಕುಳಿತವರಂತೆ ಆಧ್ಯಾತ್ಮಿಕತೆಯ ಬಗೆಗಿನ ಚರ್ವಿತ ಚರ್ವಣನದಲ್ಲಿ ತಲ್ಲೀನಗೊಂಡರು.

ಆ ಬಳಿಕ ಶಮ್ಸ್ ತಬ್ರೇಝರ ಅನಿರೀಕ್ಷಿತ ಅದೃಶ್ಯವಾಗುವಿಕೆ ರೂಮಿಯನ್ನು ಬಹಳವಾಗಿ ಕಾಡತೊಡಗಿತ್ತು. ಆ ಏಕಾಂತದ ಫಲವಾಗಿಯೇ ರೂಮಿ ‘ದಿವಾನೇ ಶಮ್ಸ್ ತಬ್ರೇಝ್’ ಎಂಬ ನಲವತ್ತು ಸಾವಿರ ಕವಿತೆಗಳುಳ್ಳ ಬೃಹತ್ ಕಾವ್ಯವನ್ನು ರಚಿಸಿದರು. “ಶಮ್ಸರ ನೆನಪಿನಲ್ಲಿ ನಾನು ಸುರಿಸಿದ ಕಂಬನಿಗಳು ಯಾವ ಸಾಗರದಲ್ಲಿ ಲೀನವಾದವೋ” ಎಂದು ರೂಮಿ ಒಬ್ಬ ಅಪ್ಪಟ ವಿರಹಿಯಂತೆ ಹಾಡುತ್ತಿದ್ದರು.

ತಬ್ರೇಝರ ಮಖ್‌ಬರದ ಕಡೆಗೆ ಚಲಿಸುತ್ತಿದ್ದ ನಾವು ಅಲ್ಲೊಂದು ಕಪ್ಪುಎಲೆಯಾಕಾರದ ಆಕೃತಿಯನ್ನು ನೋಡಿದೆವು.ಅದರ ಹಿಂಭಾಗದಲ್ಲಿ ಸಣ್ಣ ಬೋರ್ಡ್‌ನಲ್ಲಿ ಈ ರೀತಿಯಾಗಿ ಬರೆಯಲಾಗಿದೆ. ಈ ಸ್ಥಳವನ್ನು ‘ಮಜ್ಮೌಲ್ ಬಹ್ರೇನ್’ ಅಥವಾ ‘ಎರಡು ಸಾಗರಗಳ ಸಮಾಗಮ’ ಎಂದು ಕರೆಯಲಾಗುತ್ತದೆ.1244 ರ ನವೆಂಬರ್ 30 ರಂದು ರೂಮಿ ಮತ್ತು ಶಮ್ಸ್ ತಬ್ರೇಝರು ಭೇಟಿಯಾದ ಸ್ಥಾನವಾಗಿದೆ .’ಇದು ಎರಡು ಮಹಾಸಾಗರಗಳ ಸಂಗಮ ಭೂಮಿಯಾಗಿದೆ’ ಎಂದು ಇಂಗ್ಲಿಷ್ ಮತ್ತು ಟರ್ಕಿಶ್ ಭಾಷೆಯಲ್ಲಿ ಬರೆದಿರುವುದನ್ನು ನೋಡಿದೆವು.ನಿಜಕ್ಕೂ ಆ ಸಂಗಮ ಭೂಮಿಯಲ್ಲಿ ಒಂದು ತೆರನಾದ ಆಧ್ಯಾತ್ಮಿಕ ಅನುಭೂತಿ ಅನುಭವೇದ್ಯವೂ ಹೌದು.

ನಾವು ‘ಮಜ್ಮೌಲ್ ಬಹ್ರೇನ್’ ಅನ್ನು ದಾಟಿ ಅಲ್ಲಿಯೇ ಅನತಿ ದೂರದಲ್ಲಿರುವ ಸಣ್ಣ ಪಾಕೆಟ್ ರಸ್ತೆಯೊಂದರಲ್ಲಿ ಮುಂದಕ್ಕೆ ಚಲಿಸಿದರೆ ಅಲ್ಲೊಂದು ಚಂದದ ವಿನ್ಯಾಸದ ಮಿನಾರ ದರ್ಶನವಾಗುತ್ತದೆ.ಮುಕುಟವಿಲ್ಲದ ಮಹಾರಾಜ,ಜ್ಞಾನ ಲೋಕದ ವಿದ್ವತ್‌ ಪ್ರತಿಭೆ ತಬ್ರೇಝರು ಚಿರ ವಿಶ್ರಾಂತಿ ಪಡೆಯುತ್ತಿರುವುದು ಅಲ್ಲಿಯೇ.ಶಮ್ಸ್ ಸಮಾಧಿಗೆ ಸಂಬಂಧಿಸಿದಂತೆ ಇತಿಹಾಸಕಾರರೆಡೆಯಲ್ಲಿ ಹತ್ತು ಹಲವು ಭಿನ್ನವಾದ ಅಭಿಪ್ರಾಯಗಳಿವೆ.
ಶಮ್ಸರ ಸಮಾಧಿ ಇರಾನ್‌ನಲ್ಲಿದೆಯೆಂದೂ,ಪಾಕಿಸ್ತಾನದಲ್ಲಿರುವ ಎರಡು ಸಮಾಧಿಗಳನ್ನು ಶಮ್ಸರದೆಂಬ ನಂಬಿಕೆಯಿಂದ ಜನರು ಸಂದರ್ಶಿಸುತ್ತರೆಂದೂ ಹೇಳಲಾಗುತ್ತದೆ.ಆದರೂ ಕೊನ್ಯಾದಲ್ಲಿನ ಶಮ್ಸ್ ತಬ್ರೇಝರ ಸಮಾಧಿ ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿರುವುದಂತೂ ನಿಜ.ಈ ಮಕ್‌ಬರದಲ್ಲಿ ನಡೆಯುವ ಪ್ರಾರ್ಥನೆಯ ಮುಖಾಂತರವೇ ರೂಮಿಯ ಉರುಸ್ ಅಧಿಕೃತವಾಗಿ ಪ್ರಾರಂಭಗೊಳ್ಳುವುದೆಂಬ ಮಾಹಿತಿಯನ್ನು ಸ್ಥಳೀಯರು ನಮ್ಮೊಂದಿಗೆ ಹಂಚಿಕೊಂಡರು.

ಕೊನ್ಯಾದ ಆಧ್ಯಾತ್ಮಿಕ ಪರಂಪರೆ ರೂಮಿಗೆ ಮಾತ್ರ ಸೀಮಿತವಾಗಿಲ್ಲ.ತತ್ವಜ್ಞಾನಿ ಮತ್ತು ಇಬ್ನ್ ಅರಬಿ ಚಿಂತನೆಯ ವಕ್ತಾರ ‘ಸದ್ರುದ್ದೀನ್ ಕೂನವಿ’ ಕೊನ್ಯಾ ಮೂಲದವರು.ರೂಮಿ ತನ್ನ ಮೇಲಿನ ಮಯ್ಯತ್ ನಮಾಝ್ (ಅಂತ್ಯಕ್ರಿಯೆಯ ಪ್ರಾರ್ಥನೆ)ಮುನ್ನಡೆಸುವಂತೆ ಸದ್ರುದ್ದೀನ್ ಕೂನವಿಯವರಲ್ಲಿ ವಿನಂತಿಸಿಕೊಂಡಿದ್ದರಂತೆ.

ನಾವು ಶಮ್ಸ್ ತಬ್ರೇಝರ ಸಮಾಧಿಯನ್ನು ದಾಟಿ ಸಿರಿಯನ್ ನಿರಾಶ್ರಿತರ ಕಾಲೋನಿಗಳ ಮೂಲಕ ನಡೆಯತೊಡಗಿದೆವು.ಉರ್ದುಗನ್ ಒಬ್ಬ ಜಾಗತಿಕ ಮುಸ್ಲಿಮರ ನಾಯಕ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕಾಲೋನಿಗಳ ಮೂಲಕ ಒಂದಿಷ್ಟು ನಡೆದರೆ ಸಾಕಾಗಬಹುದೇನೋ.ಸಿರಿಯನ್ ನಿರಾಶ್ರಿತರಿಗೆ ಸುಂದರವಾದ ಸುಮಾರು ಮೈಲುಗಳಷ್ಟು ದೂರದ ವಿಶಾಲ ಪ್ರದೇಶಗಳನ್ನು ನಿಗದಿಪಡಿಸಿ ನೀಡಲಾಗಿತ್ತು.ಅವರುಗಳು ಅಲ್ಲಿ ಮತ್ತೆ ಬದುಕು ಕಟ್ಟಿಕೊಂಡು ನಿರಾಳರಾಗಿರುವುದನ್ನು ನಾವಲ್ಲಿ ಕಂಡೆವು.

ಹೃದಯಗಳ ನಗರ ಎಂದೇ ಕರೆಯಲ್ಪಡುವ ಕೊನ್ಯಾದ ಆ ಬೀದಿಗಳಲ್ಲಿ,ಅರೇಬಿಯನ್ ಹೋಟೆಲ್‌ಗಳು,ಅರೇಬಿಯನ್ ದೇಶಗಳಲ್ಲಿ ಕಾಣಸಿಗುವ ಪೀಠೋಪಕರಣಗಳು,ಆಟಿಕೆಗಳು ಮತ್ತು ಬಟ್ಟೆಗಳನ್ನು ಹರವಿಕೊಂಡು ಕುಳಿತುಕೊಂಡಿರುವ ವ್ಯಾಪಾರಿಗಳು ಅಲ್ಲಿದ್ದರು.

ಒಡಲ ತುಂಬೆಲ್ಲಾ ಒಲುಮೆ ತುಂಬಿಕೊಂಡಿರುವ,ಪ್ರೀತಿಸಲು ಮಾತ್ರವೇ ಗೊತ್ತಿರುವ ಕೋನ್ಯಾದ ಜನತೆಗೆ ಸಿರಿಯನ್ ನಿರಾಶ್ರಿತರ ಬಗ್ಗೆ ತಮ್ಮದೇ ತಕರಾರುಗಳಿವೆ.ಸಿರಿಯನ್ ಜನರ ವಲಸೆಯ ಬಳಿಕವಷ್ಟೇ ಕೋನ್ಯಾದಲ್ಲಿ ಕಳ್ಳತನ,ದರೋಡೆ,ಕಗ್ಗೊಲೆಗಳು ಹುಟ್ಟಿಕೊಂಡವೆನ್ನುವ ಹಲವರನ್ನು ನಾವಲ್ಲಿ ಮಾತನಾಡಿಸಿದೆವು.ಶಾಂತವಾಗಿದ್ದ ಊರಿನಲ್ಲಿ ಭೀತಿಯ ವಾತಾವರಣ ಹುಟ್ಟಿಸಿದ ಬಗೆಗೆ ಅಸಮಾಧಾನ ಇರುವುದು ಅವರ ಮಾತಿನಲ್ಲಿ ಡಾಳಾಗಿ ಕಾಣುತ್ತಿದ್ದವು.

ತಣ್ಣಗಿನ ಗಾಳಿಯಲ್ಲಿ ಹಿತವಾಗಿ ಮೈಯೊಡ್ಡಿ ಜೊತೆಗೆ ಮಳೆರಾಯನ ಮಿದುವಾದ ಸುಖಸ್ಪರ್ಶವನ್ನು ಎದೆಗಿಳಿಸಿಕೊಂಡ ನಾವು ವಿಶ್ರಾಂತಿಗೆಂದು ಕೋಣೆಯ ಕಡೆಗೆ ನಡೆದೆವು.ನನ್ನ ಮನಸ್ಸಿಡೀ ಶನಿವಾರ ಪ್ರದರ್ಶನಗೊಳ್ಳಲಿರುವ ‘ಸೆಮಾ’ ನೃತ್ಯದ ಬಗೆಗಿನ ಕಲ್ಪನಾ ಲೋಕದಲ್ಲಿಯೇ ತೇಲಾಡುತ್ತಿತ್ತು.ಸೆಮಾ ನೃತ್ಯ ನಡೆಯುವ ಆ ಎರಡು ದಿನಗಳೆಂದರೆ ರೂಮಿ ಮತ್ತು ತಬ್ರೇಝರ ಅಧಮ್ಯ ಪ್ರೇಮಿಗಳಿಗೆ ಹಬ್ಬದ ದಿನವಿದ್ದಂತೆ.ಒಬ್ಬೊಬ್ಬರ ಎದೆಬಡಿತವೂ ಮತ್ತೊಬ್ಬನಿಗೆ ಅನುಭವಿಸಲಾಗುವ ಆಶಿಕುಗಳು ಒಂದೆಡೆ ಸೇರುವುದೆಂದರೆ ಅದೊಂದು ಹಬ್ಬವಾಗದೆ ಇರುವುದಾದರೂ ಹೇಗೆ…!

ಮರುದಿನ ಸೆಮಾ ನೃತ್ಯವನ್ನು ವೀಕ್ಷಿಸಲೆಂದು ಹೋದೆವು. ಈ ಸೆಮಾ ನೃತ್ಯವೂ ಸೂಫಿ ಪರಂಪರೆಯ ಮುಖ ಮುದ್ರೆಯಂತೆ ಜನಜನಿತವಾಗಿದೆ.ಇದು ಹುಟ್ಟಿಕೊಂಡ ಬಗೆಗೆ ಭಿನ್ನ ಕಥೆಗಳಿವೆ.
ಒಂದು ದಿನ ಮುಂಜಾನೆ ರೂಮಿ ನಗರವೊಂದರ ಮೂಲಕ ಸಾಗುವಾಗ ಅಕ್ಕಸಾಲಿಗನಾದ ಸದ್ರುದ್ದೀನ್ ಕೂನವಿಯ ಸುತ್ತಿಗೆಯ ಲಯಬದ್ಧವಾದ ಬಡಿತದ ಸದ್ದು ಕಿವಿಗೆ ಬಿಳುತ್ತದೆ.ಆ ಬಡಿತದ ಸದ್ದು ‘ಅಲ್ಲಾಹ್ ಅಲ್ಲಾಹ್’ ಎಂಬ ದ್ಸಿಕ್ರ್ ಸ್ತುತಿಯಂತೆ ಕೇಳಿಬರುತ್ತದೆ.ಆನಂದಮತ್ತನಾದ ರೂಮಿ ತನ್ನೆರಡೂ ತೋಳುಗಳನ್ನು ಚಾಚಿ ವೃತ್ತಾಕಾರವಾಗಿ ತಿರುಗಲಾರಂಭಿಸುತ್ತಾರೆ‌.ಹೀಗೆ ಸೆಮಾ ನೃತ್ಯ ಹುಟ್ಟಿಕೊಂಡಿತು ಎನ್ನಲಾಗುತ್ತದೆ.ಮೌಲಾನರ ತ್ವರೀಕತಿನ ಮುರೀದರು(ಹಿಂಬಾಲಕರು) ಈಗಲೂ ಸೆಮಾ ನೃತ್ಯವನ್ನು ಪರಿಶೀಲಿಸುವುದು, ಸೆಮಾ ಪ್ರದರ್ಶನಗಳನ್ನು ಆಯೋಜಿಸುವುದು ಕಾಣಬಹುದು.

ತುರ್ಕಿಯಲ್ಲಿ ಅತ್ತಾತುರ್ಕ್ ಆಳ್ವಿಕೆಯ ಅವಧಿಯಲ್ಲಿ ಸೆಮಾ ಪ್ರದರ್ಶನವನ್ನು ನಿಷೇದಿಸಲ್ಪಟ್ಟಿದ್ದರೂ ತದನಂತರ ಮೌಲಾನರ ಅನುಯಾಯಿಗಳು ಮತ್ತೆ ಸೆಮಾ ನೃತ್ಯವನ್ನು ಚಾಲ್ತಿಯಲ್ಲಿರುವಂತೆ ನೋಡಿಕೊಂಡು ಆ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಈ ಸೆಮಾ ನೃತ್ಯವು ಅಲ್ಲಿರುವ ಹಿರಿಯ ಶೈಖರೋರ್ವರ ಮುಂದಾಳತ್ವದಲ್ಲಿ ನಡೆಯುತ್ತದೆ.ಆ ಶೈಖರ ಸನ್ನಿಧಿಯಲ್ಲಿ ದರ್ವೇಶುಗಳು ಸಾಲಾಗಿ ಬಂದು ನಮಿಸಿ ಆಶಿರ್ವಾದವನ್ನು ಪಡೆಯುತ್ತಾರೆ.ಬಳಿಕ ಅಧಿಕೃತವಾಗಿ ನೃತ್ಯವು ಪ್ರಾರಂಭಗೊಳ್ಳುತ್ತದೆ‌.ಒಂದು ಕೈಯನ್ನು ಆಕಾಶಕೆತ್ತಿಯೂ ಮತ್ತೊಂದು ಕೈಯನ್ನು ಭೂಮಿಯೆಡೆಗೆ ತೋರುತ್ತಾ ವರ್ತುಲಾಕಾರವಾಗಿ ಸುತ್ತು ಹಾಕುತ್ತಾ ಚಲಿಸಲಾಗುತ್ತದೆ.ಇದರ ಒಂದೊಂದು ಚಲನೆಗಳಿಗೂ ಹಲವಾರು ಒಳಾರ್ಥಗಳಿವೆ.ದರ್ವೇಶರು ಧರಿಸುವ ಆ ಉಡುಪುಗಳ ಕುರಿತೇ ಹಲವಾರು ಕೃತಿಗಳಿದೆಯೆಂಬುದು ಈ ನೃತ್ಯದ ಆಳ ಅಗಲವನ್ನು ಪ್ರತಿಬಿಂಬಿಸುತ್ತದೆ.

ಆ ದಿನ ಎಲ್ಲವೂ ಮುಗಿಸಿದ ಬಳಿಕ ನಮ್ಮ ವಿಶ್ರಾಂತಿ ಕೋಣೆಗೆ ತಲುಪಿದೆವು.ಆಕಾಂಕ್ಷೆಯಿಂದ ವೀಕ್ಷಿಸಿದ ಸೆಮಾ ನೃತ್ಯದ ಬಗೆಗೆ ಕೋನ್ಯಾದ ಜನರೆಡೆಯಲ್ಲಿಯೇ ಹಲವಾರು ಅಭಿಪ್ರಾಯಗಳಿರುವುದು ನಮ್ಮ ಗಮನಕ್ಕೆ ಅದಾಗಲೇ ಬಂದಿತ್ತು‌.ಆ ಕುರಿತು ಒಂದಿಷ್ಟು ಮಾತನಾಡುತ್ತಾ ನಿದ್ರೆಗೆ ಜಾರಿದೆವು.ಒಂದು ಅವಿಸ್ಮರಣೀಯ ಘಳಿಗೆಯಾಗಿ,ಮರೆಯಲಾಗದ ದಿನವಾಗಿ ನನ್ನ ಬದುಕಿನಲ್ಲಿ ಆ ದಿನ ಅಚ್ಚಳಿಯದೆ ಉಳಿದುಬಿಟ್ಟಿತು.

ನಾಳೆ ಹೊರಡಬೇಕಿರುವ ಖೋಜಾರ ನಗರಕ್ಕೆ ಬಸ್ ಟಿಕೆಟ್ ಬುಕ್ ಮಾಡುವ ಕೆಲಸವೂ ಆ ಮೊದಲೇ ಶ್ರದ್ಧೆಯಿಂದ ಗೆಳೆಯರು ಮಾಡಿದ್ದರು.ಇನ್ನು ನಾಳೆ ಖೋಜಾರ ದರ್ಬಾರಿನತ್ತ ಪಯಣ…

ಮೂಲ : ಫಾಝಿಲ್ ಫಿರೋಝ್
ಅನು : ಝುಬೈರ್ ಹಿಮಮಿ ಪರಪ್ಪು

ಮನುಷ್ಯರ ನಡುವಿನ ಪ್ರೇಮ ಹಾಗೂ ಇಬ್ನ್ ಹಸ್ಮ್ ರ ಚಿಂತನೆಗಳು


ಪ್ರಾಚೀನ ಕಾಲದ ವಿದ್ವಾಂಸರು ಧರ್ಮಶಾಸ್ತ್ರದ ಜತೆಗೆ ದೈವ ಶಾಸ್ತ್ರ, ವೈದ್ಯಶಾಸ್ತ್ರ, ಮನೋವೈಜ್ಞಾನಿಕ ಶಾಸ್ತ್ರ ಹಾಗೂ ಇತರ ಶಾಸ್ತ್ರಗಳ ವಿವಿಧ ಮಜಲುಗಳನ್ನು ಆಳವಾದ ಅಧ್ಯಯನ ನಡೆಸಿ ಹಾಗೂ ಚಿಂತಿಸಿ ಬರಹ ರೂಪಕ್ಕೆ ತಂದಿದ್ದಾರೆ. ಅದರಲ್ಲಿ ಪ್ರೇಮದ ಕುರಿತೂ ಸೈದ್ಧಾಂತಿಕವಾಗಿಯೂ, ವೈದ್ಯಕೀಯವಾಗಿಯೂ ಬರೆಯಲಾಗಿದೆ. ಪ್ರೇಮದ ಬಗ್ಗೆ ಲೈಂಗಿಕ ದೃಷ್ಟಿಕೋನದಿಂದಲೂ ಬರೆದಿದ್ದಾರೆಯೆಂಬುದೇ ಆಶ್ಚರ್ಯಕರವಾದ ಸಂಗತಿ. 15 ನೇ ಶತಮಾನದಲ್ಲಿ ಜೀವಿಸಿದ್ದ ಶೈಖ್ ಮುಹಮ್ಮದ್ ಅಲ್ ನಫ್ಸವಿ ಬರೆದ ಅರಬ್ ಲೈಂಗಿಕ ಕೈಪಿಡಿ ಎಂದೇ ಪ್ರಸಿದ್ಧವಾದ ‘ಅರ್ರೌಳುಲ್ ಆತ್ವಿರ್ ಫೀ ನುಸ್ಹತುಲ್ ಖಾತ್ವಿರ್’ (ಆಂಗ್ಲಾನುವಾದ: The perfumed garden of sensual delight) ಎಂಬ ಗ್ರಂಥ ಇದಕ್ಕೆ ಉದಾಹರಣೆ. ಈ ಗ್ರಂಥದಲ್ಲಿ ಪ್ರೇಮದ ಕುರಿತು ಬರೆದಿದ್ದಾರೆ. ಪ್ರಸಿದ್ಧ ವಿದ್ವಾಂಸರಾದ ಇಬ್ನ್ ಹಸ್ಮ್ ಪ್ರೀತಿಯ ಬಗ್ಗೆ ಗಣನೀಯವಾದ ಬರಹಗಳನ್ನು ಬರೆದಿದ್ದಾರೆ. ಇವರ ಬರಹಗಳನ್ನು ಸಂಗ್ರಹಿಸಿ ‘ತೌಖುಲ್ ಹಮಾಮ’ ಎಂಬ ಕೃತಿಯನ್ನು ರಚಿಸಲಾಗಿದೆ.

ಇಸ್ಲಾಂ ಆಡಳಿತ ಸ್ಥಾಪಿಸಿ 3 ಶತಮಾನಗಳ ಬಳಿಕ ದಕ್ಷಿಣ ಸ್ಪೇನಿನ ಕೊರಡೋವ ಎಂಬಲ್ಲಿ ಇಬ್ನ್ ಹಸ್ಮ್ (994-1064) ಜನಿಸಿದರು. ಅವರು ವಿದ್ವಾಂಸರು, ಕವಿ, ಸರ್ವಜ್ಞ ಹಾಗೂ ಕರ್ಮಶಾಸ್ತ್ರ ಪಂಡಿತರು ಮಾತ್ರವಲ್ಲ ‘ಝಾಹಿರಿ’ ಚಿಂತನೆಯ ಅಗ್ರಗಣ್ಯ ದಾರ್ಶನಿಕರಾಗಿದ್ದರು. (ಇದು ಒಂಬತ್ತನೆಯ ಶತಮಾನದಲ್ಲಿ ದಾವೂದ್ ಅಲ್ ಝಾಹಿರಿ ಎಂಬವರು ಸ್ಥಾಪಿಸಿದ ಮದ್ಸ್ಹಬ್ ಆಗಿದೆ. ಸುನ್ನಿ ಆಶಯವಾದ ಝಾಹಿರಿಸಂಗೆ ಮಧ್ಯಯುಗದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ.) ಉಮವೀ ಆಡಳಿತದ ಪತನ ಹಾಗೂ ಐಬೀರಿಯನ್ ಆಡಳಿತ ಪತನಗೊಂಡು ಸಣ್ಣ ಪುಟ್ಟ ರಾಜ್ಯಗಳಾದ ನಂತರ ಬಾರ್ಬೇರಿಯನ್ನರು ಪ್ರಾಬಲ್ಯ ಹೊಂದಿದ್ದ ಸಂಕೀರ್ಣ ರಾಜಕೀಯ ಸನ್ನಿವೇಶದಲ್ಲಿ ಇಬ್ನ್ ಹಸ್ಮ್ ಬದುಕು ಸವೆದರು. ಇಂತಹ ಪ್ರಕ್ಷುಬ್ಧ ಸಂದರ್ಭದಲ್ಲೇ ಸಾಹಿತ್ಯದ ಬೆಳವಣಿಗೆ ಹಾಗೂ ವಿಕಾಸಕ್ಕೂ ಜಗತ್ತು ಸಾಕ್ಷಿಯಾಯಿತು. ‘ಮಹಿಳೆಯರಿಂದ ತುಂಬಿದ ಮನೆಯಲ್ಲಿ ನಾನು ಬೆಳೆದೆ’ ಎಂದು ಇಬ್ನ್ ಹಸ್ಮ್ ಹೇಳುತ್ತಾರೆ. “ಅವರ ಮಡಿಲಲ್ಲೇ ನಾನು ಬೆಳೆದೆ ಹಾಗೂ ಬದುಕಿದೆ. ಇತರ ಸಮಾಜದ ಬಗ್ಗೆ ನನಗೆ ತಿಳಿವಳಿಕೆಯಿರಲಿಲ್ಲ. ಯುವಕನಾಗಿ ಗಡ್ಡ ಮೀಸೆ ಬರುವವರೆಗೂ ನಾನು ಯಾವುದೇ ಪುರುಷರ ಕೂಟದಲ್ಲಿ ಕುಳಿತುಕೊಂಡಿರಲಿಲ್ಲ” ಎಂದು ಇಬ್ನ್ ಹಸ್ಮ್ ಹೇಳುತ್ತಾರೆ.
ಅವರು ಸಣ್ಣ ಪ್ರಾಯದಲ್ಲೇ ನಾಮಾನ್ ಎಂಬ ಯುವತಿಯನ್ನು ಮದುವೆಯಾದರು. ಅವಳನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದರು. ದಾಂಪತ್ಯದ ಮಾಧುರ್ಯ ಅನುಭವಿಸುವ ಮೊದಲೇ ಅವಳು ಮರಣ ಹೊಂದಿದಳು. ದುಃಖತಪ್ತರಾದ ಇಬ್ನ್ ಹಸ್ಮ್ ತಿಂಗಳುಗಟ್ಟಲೆ ಮನೆಯಿಂದ ಹೊರಗೆ ಬರಲೇ ಇಲ್ಲ. ಇನ್ನೊಂದು ಮದುವೆ ಆಗುವುದಿಲ್ಲವೆಂಬ ನಿರ್ಧಾರಕ್ಕೆ ಬಂದರು.

ಪ್ರೀತಿ ತುಂಬಿ ತುಳುಕುವ ಗದ್ಯ

ಇಬ್ನ್ ಹಸ್ಮ್ ಅವರ ಕೃತಿಗಳ ಇಂಗ್ಲಿಷ್ ಭಾವಾನುವಾದದಲ್ಲಿ The Necklace Of The Dove, The Ring Of the Dove ಎಂದು ಹೆಸರಿನ ಪ್ರೇಮಕ್ಕೆ ಸಂಬಂಧಿಸಿದ ಪ್ರಬಂಧಗಳನ್ನು ಮಧ್ಯಕಾಲೀನ ಅರೇಬಿಕ್ ಗದ್ಯಗಳಲ್ಲಿಯೇ ಅತ್ಯುತ್ತಮವಾದದ್ದು ಎಂದು ಪರಿಗಣಿಸಲ್ಪಟ್ಟಿದೆ. ಈ ಪ್ರಬಂಧವು ಇತರರ ಪ್ರಬಂಧಕ್ಕಿಂತ ಭಿನ್ನವಾದದ್ದು. ಕಾರಣ ಈ ಪ್ರಬಂಧದ ಮೂಲಭೂತ ಶೈಲಿ, ರೂಪ ಮತ್ತು ಅಂದಲೂಸಿಯಾದಲ್ಲಿನ ಪರಿಸ್ಥಿತಿಯಾಗಿದೆ.

ಇನ್ನು ಇದರ ವಿವಿಧ ಹಂತಗಳನ್ನು ನೋಡೋಣ.
ಮೊದಲ ನೋಟದಲ್ಲಿ ಅಕ್ಷರಶಃ ನೋಡಿದಾಗ ಇಬ್ನ್ ಹಸ್ಮ್ ಗದ್ಯ ಮತ್ತು ಕಾವ್ಯದ ಸಮೃದ್ಧ ಬರಹಗಾರರಾಗಿದ್ದರು ಎಂದು ಮನದಟ್ಟಾಗುತ್ತದೆ. ಅವರ ಪ್ರಬಂಧಗಳು ಹಾಗೂ ಬರಹಗಳು ಮೂಲತಃ ಅರಬಿ ಭಾಷೆಯಲ್ಲಿ ಓದಲು ಸರಳವಾಗಿ ಮನೋಹರವಾಗಿರುತ್ತದೆ. ಅವರ ಪ್ರಬಂಧಗಳನ್ನು ಆಳವಾಗಿ ನೋಡಿದಾಗ ಅವರ ಪ್ರೀತಿ ನಿಜ ಜೀವನದಲ್ಲಿ ಅನುಭವಿಸಿದ ಅನುಭವಗಳ ಹಿನ್ನೆಲೆಯಲ್ಲಿ ಪ್ರೀತಿಯನ್ನು ಒಂದು ಸಾಮಾಜಿಕ ವಿದ್ಯಮಾನವಾಗಿ ನೋಡುತ್ತಾರೆ. ಇಬ್ನ್ ಹಸ್ಮ್ ರ ಪ್ರಕಾರ ‘ಪ್ರೀತಿಯು ಮಾನವ ಜೀವನದ ನೈಸರ್ಗಿಕ ಪ್ರಕ್ರಿಯೆಗಳ ಒಂದು ಭಾಗವಾಗಿದೆ’. ಪ್ರೀತಿಯ ವಿವಿಧ ಮಜಲುಗಳನ್ನು ಇಬ್ನ್ ಹಸ್ಮ್ ರವರು ಶೋಧಿಸಿ ವಿಶ್ಲೇಷಣೆ ಮಾಡಿದ್ದಾರೆ. ಇಲ್ಲಿ ಪ್ರಧಾನವಾಗಿ ಇಬ್ನ್ ಹಸ್ಮ್ ರವರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಏನೆಂದರೆ, ಮನುಷ್ಯನು ಪ್ರೀತಿಯ ಬಲೆಗೆ ಬೀಳುವುದು ಹೇಗೆ? ಅದು ಹೇಗೆ ಘಟಿಸುತ್ತದೆ? ಅದಕ್ಕೆ ಪ್ರೇರಣೆ ಏನು (ಉದಾಹರಣೆಗೆ, ಪ್ರೇಮಿಗಳ ನಡುವೆ ಸಂದೇಶಗಳನ್ನು ರವಾನಿಸಲು ಸಹಾಯ ಮಾಡುವ ಆಪ್ತ ಸ್ನೇಹಿತ) ಅದಕ್ಕೆ ಅಡ್ಡಿ ಉಂಟು ಮಾಡುವ ವಸ್ತು ಯಾವುದು? (ಮೂರನೇ ವ್ಯಕ್ತಿಯ ಹಸ್ತಕ್ಷೇಪ. ಇದು ಅಸೂಯೆ ಅಥವಾ ಇನ್ಯಾವುದೇ ಕಾರಣದಿಂದಾಗಿರಬಹುದು. ಹಾಗೆಯೇ ಪ್ರೇಮಿಗಳಲ್ಲಿ ಒಬ್ಬರ ಸಾವು). ತನ್ನ ಪ್ರಬಂಧಗಳಲ್ಲಿ ಇಂತಹ ಪ್ರಶ್ನೆಗಳನ್ನು ಇಬ್ನ್ ಹಸ್ಮ್ ಮುಖಾಮುಖಿಯಾಗಿಸುತ್ತಾರೆ.

ಪ್ರೀತಿಯನ್ನು ಸಾರ್ವತ್ರಿಕವಾಗಿ ಅಥವಾ ವಸ್ತು ನಿಷ್ಠವಾಗಿ ಗಮನಿಸಿದ ಆ ಕಾಲದ ವಿದ್ವಾಂಸರಿಗಿಂತ ಭಿನ್ನವಾಗಿ ಇಬ್ನ್ ಹಸ್ಮ್ ಪ್ರೀತಿಯ ಮಜಲುಗಳ ಸೂಕ್ಷ್ಮತೆಗಳನ್ನು ಪರಿಶೀಲಿಸಿದ್ದಾರೆ. ಒಬ್ಬ ಪ್ರೇಮಿಯ ಜೀವನದಲ್ಲಿ ಏನು ಸಂಭವಿಸುತ್ತದೆ ಹಾಗೂ ಸಮಕಾಲೀನರ ಜೀವನಾನುಭವಗಳನ್ನು ಇಬ್ನ್ ಹಸ್ಮ್ ರವರು ವಿವರಿಸಿದ್ದಾರೆ. ಇಲ್ಲಿ ಒಂದೇ ಸಮಯದಲ್ಲಿ ಮಹಿಳಾ ಅಭಿಮಾನಿ ಹಾಗೂ ಮಹಿಳೆಯರ ಮೇಲೆ ಸಂದೇಹವಿರುವ ಲೇಖಕರ ಅನಿರ್ದಿಷ್ಟ ವ್ಯಕ್ತಿತ್ವವನ್ನು ಕಾಣಬಹುದು. ಏನೇ ಆದರೂ ಅವರು ಒಬ್ಬ ಮನುಷ್ಯರಲ್ಲವೆ.

ಎಲ್ಲಾ ಕಾಲದ ಸಾರ್ವತ್ರಿಕ ಓದುಗರನ್ನು ಪ್ರಭಾವಿಸುವ ಈ ಪ್ರೇಮ ಪ್ರತಿಪಾದನೆಯ ಮೂಲಕ ಹಾಗೂ ಲೌಕಿಕ ಸನ್ನಿವೇಶಗಳ ಮೂಲಕ ಮಧ್ಯಕಾಲೀನ ಸ್ಪೇನ್ ನಿವಾಸಿಗಳ ಜೀವನದ ಕೆಲವು ಅಂಶಗಳನ್ನು ಹಾಗೂ ಸಂಸ್ಕೃತಿಯನ್ನು ಸಣ್ಣ ಪ್ರಮಾಣದಲ್ಲಾದರೂ ಅರಿತುಕೊಳ್ಳಲು ನಮಗೆ ಸಾಧ್ಯವಾಗುತ್ತದೆ. ಮನೆಯೊಳಗೆ ಪರದೆಯ ಹಿಂದೆ ನಿಂತುಕೊಂಡು ಮನೆಯ ಆಡಳಿತದ ಚುಕ್ಕಾಣಿ ಹಿಡಿದುಕೊಂಡ ಮಹಿಳೆಯರ ವಿಶೇಷ ಸ್ಥಾನಮಾನವನ್ನು ಇದರಿಂದ ತಿಳಿದುಕೊಳ್ಳಬಹುದು. ಬಹುಶಃ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇತರ ಕಾಲಗಳಲ್ಲಿ ಕಾಣಲು ಸಾಧ್ಯವಾಗುವುದಕ್ಕಿಂತಲೂ ಹೆಚ್ಚು ಆ ಕಾಲದ ಮಹಿಳೆಯರು  ಅಧಿಕಾರವನ್ನು ಹೊಂದಿದ್ದರು.

ಇಬ್ನ್ ಹಸ್ಮ್ ತನ್ನ ಹೃದಯದ ನೋವನ್ನು ಪತ್ರದ ಮೂಲಕ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ರೂಪದಲ್ಲಿ ಪ್ರಬಂಧಗಳನ್ನು ಬರೆಯುತ್ತಿದ್ದರು. A Falling in love at first sight (ಮೊದಲ ನೋಟದಲ್ಲಿ ಪ್ರೀತಿಯಲ್ಲಿ ಬೀಳುವುದು), Of Hitting With Eyes (ಕಣ್ಣು ಹೊಡೆಯುವುದು), Of concealing the secret (ಪ್ರೇಮ ರಹಸ್ಯ ಮರೆಮಾಚುವುದು) ಇತ್ಯಾದಿ ಪ್ರೇಮ ಪ್ರಗತಿ ಪ್ರಸಂಗಗಳಾದರೆ, of the slanderer (ಅಪಪ್ರಚಾರ ಮಾಡುವುದು), Of The betrayal (ವಂಚಿಸುವುದು/ ಪ್ರೇಮಭಗ್ನತೆ) ಇಂತಹ ಶೀರ್ಷಿಕೆಗಳನ್ನು ಒಳಗೊಂಡಿರುವ ಇಪ್ಪತ್ತೊಂಭತ್ತು ಅಧ್ಯಾಯಗಳಿವೆ ಅವರ ಕೃತಿಯಲ್ಲಿ. ಒಂದೊಂದು ಅಧ್ಯಾಯಗಳಲ್ಲೂ ಪವಿತ್ರ ಕುರ್ಆನಿನ ಸೂಕ್ತಗಳು, ಪೈಗಂಬರ್ ಮಹಮ್ಮದರ ವಚನಗಳು ಹಾಗೂ ಇಬ್ನ್ ಹಸ್ಮ್ ಸ್ವತಃ ತಾವೇ ಬರೆದ ಕವಿತೆಗಳು, ಪ್ರೀತಿಯ ಸಾಕ್ಷಾತ್ಕಾರದ ದೈನಂದಿನ ಉದಾಹರಣೆಗಳನ್ನು ಸೇರಿಸಿ ಅವರು ತಮ್ಮ ಅಭಿಪ್ರಾಯಗಳನ್ನು ಹಾಗೂ ಆಲೋಚನೆಗಳನ್ನು ಉಪಯೋಗಿಸಿ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ.

ಆ ಕಾಲದ ವಿದ್ವಾಂಸರ ನಡುವೆ ವ್ಯಾಪಕವಾಗಿ ಅಂಗೀಕೃತವಾದ ತತ್ವಶಾಸ್ತ್ರದ ಭಾಗ ‘ನಿಯೋ ಪ್ಲಾಟೋನಿಸ್ಟ್’ ಪ್ರವೃತ್ತಿಗಳ ಕುರಿತು ತನ್ನ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಸಿದ್ಧಾಂತದ ಪ್ರಕಾರ, ಈ ಜಗತ್ತನ್ನು ಆತ್ಮಗಳ ಕಾಲ್ಪನಿಕ ಕ್ಷೇತ್ರದಿಂದ ನಿರ್ಮಾಣ ಮಾಡಲಾಗಿದೆ ಎಂದಾಗುತ್ತದೆ. ಪರಿಪೂರ್ಣತೆಯೇ ಅಸ್ಥಿತ್ವದಲ್ಲಿರುವುದು ಹಾಗೂ ಅದನ್ನೇ ಆತ್ಮವೂ ಬಯಸುವುದು. ಅದೇ ಸಮಯದಲ್ಲಿ ಭೌತಿಕ ಲೋಕವು ಅಪೂರ್ಣ ಅಸ್ತಿತ್ವದಲ್ಲಿರುತ್ತದೆ ಎಂದು ಚಿಂತನಾಧಾರೆ ವಾದಿಸುತ್ತದೆ. ಇದೇ ಕಾರಣಕ್ಕೆ ಇಬ್ನ್ ಹಸ್ಮ್ ಈ ರೀತಿ ಹೇಳಿಕೆ ನೀಡಿದ್ದಾರೆ, ”ನನ್ನ ಅಭಿಪ್ರಾಯದಲ್ಲಿ ಪ್ರೀತಿಯು ಲೌಕಿಕ ಜಗತ್ತಿನ ಚದುರಿದ ಆತ್ಮಗಳ ನಡುವಿನ ಒಕ್ಕೂಟವಾಗಿದೆ. ಅದು ಭೌತಿಕ ಜಗತ್ತಿನಲ್ಲಿ ವಿಂಗಡಣೆ ಮಾಡಲಾಗದ ಆತ್ಮಗಳಾಗಿವೆ ಅಥವಾ ಒಂದು ವಸ್ತುವಿನ ವಿಶಿಷ್ಟವಾದ ಕಣಗಳ ಸಂಯೋಜನೆಯಾಗಿದೆ.”

ಇಬ್ನ್ ಹಸ್ಮ್ ಅವರ ಪ್ರಕಾರ, ಪ್ರೇಮಿಗಳು ನಿಯಂತ್ರಣವನ್ನು ಮೀರಿ ತನ್ನ ಉಳಿದ ಅರ್ಧದೊಂದಿಗೆ ಮತ್ತೆ ಒಂದಾಗಬೇಕೆಂದು ಆಗ್ರಹಿಸುತ್ತಾರೆ. ಅವರ ಆತ್ಮ ಮುಕ್ತವಾಗಿ ಇರುತ್ತದೆ ಎಂಬುದು ವಾಸ್ತವ. ಅವಳು ಅಥವಾ ಅವನು ತನ್ನ ಅಂತರಂಗದಲ್ಲಿ ನೆಲೆಸಿದ್ದಾರೆ ಎಂದು ಅವರು ತಿಳಿದಿರುತ್ತಾರೆ. ಅವನು ತನ್ನ ಅರ್ಧವನ್ನು ಪಡೆದುಕೊಳ್ಳುವುದಕ್ಕೆ ಅವಳ ಹಿಂದೆ ಅಲೆದಾಡುತ್ತಾನೆ ಮತ್ತು ಪ್ರಯತ್ನ ನಡೆಸುತ್ತಿರುತ್ತಾನೆ. ಎಲ್ಲಾ ಸಮಯದಲ್ಲೂ ನೋಡುತ್ತಿರಲು ಆತ್ಯಂತಿಕವಾಗಿ ಬಯಸುತ್ತಾನೆ. ಅಯಸ್ಕಾಂತವು ಕಬ್ಬಿಣವನ್ನು ಆಕರ್ಷಿಸುವಂತೆ ಅವನು ಅವಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾನೆ.

ಮಧ್ಯಕಾಲೀನ ಸ್ಪಾನಿಷ್ ಮುಸ್ಲಿಂ ಜನಜೀವನವು ಎಷ್ಟು ರಸವತ್ತಾದುದು ಎಂದು ಕುತೂಹಲಕಾರಿಯಾಗಿ ಚಿತ್ರಿಸುವ The Sign of Love ಎಂಬ ಮೊದಲ ಅಧ್ಯಾಯದ ಪ್ರಿಯಕರ-ಪ್ರೇಯಸಿಯರ ವರ್ಣನೆಯೊಂದಿಗೆ ಶೃಂಗಾರಾತ್ಮಕವಾದ ಪ್ರಸ್ತುತ ಕೃತಿಯ ಕುರಿತಾದ ಈ ಟಿಪ್ಪಣಿಯನ್ನು ಕೊನೆಗೊಳಿಸಬಹುದು.
“ಅವರು ಪರಸ್ಪರ ಅತಿಯಾಗಿ ಪ್ರೀತಿಸಿ ಅವರ ಅನ್ಯೋನ್ಯ ಸಂಬಂಧವು ಅತ್ಯಂತ ನಾಜೂಕಾಗಿ ಬದಲಾದಾಗ ಇಬ್ಬರೂ ಕೂಡ ನ್ಯಾಯಯುತವಾದ ಯಾವುದೇ ಕಾರಣವಿಲ್ಲದೆ ಇನ್ನೊಬ್ಬರ ವಿರುದ್ಧ ತಿರುಗಿ ಬೀಳುತ್ತಾರೆ. ಒಬ್ಬರು ಹೇಳುವುದನ್ನು ಮನಃಪೂರ್ವಕವಾಗಿ ಇನ್ನೊಬ್ಬ ವಿರೋಧಿಸುತ್ತಾನೆ. ಇಬ್ಬರೂ ಪರಸ್ಪರ ಇಷ್ಟವಿಲ್ಲದ ವಿಷಯಗಳನ್ನೇ ಮಾತಾಡುತ್ತಿರಬಹುದು. ಕ್ಷುಲ್ಲಕ ವಿಷಯಗಳನ್ನು ಮುಂದಿಟ್ಟು ಅವರು ಆಕ್ರಮಣಕಾರಿಯಾಗಿ ಜಗಳಾಡಬಹುದು. ಅವರಲ್ಲೊಬ್ಬ ಹೇಳುವ ಪ್ರತಿ ವಾಕ್ಯವನ್ನೂ ಇನ್ನೋರ್ವ ಬೇಕುಬೇಕೆಂದೇ ದುರ್ವ್ಯಾಖ್ಯಾನ ಮಾಡಬಹುದು. ಈ ಎಲ್ಲಾ ಉಪಾಯಗಳು ಪ್ರತಿಯೊಬ್ಬ ಪ್ರೇಮಿಯೂ ತನ್ನ ಅರ್ಧದಿಂದ ಏನನ್ನು ಬಯಸುತ್ತಾನೆ ಎಂದು ಸೂಕ್ಷ್ಮವಾಗಿ ಅವಲೋಕಿಸಲು ಮತ್ತು ಸಾಬೀತುಪಡಿಸಲು ಸಾಧ್ಯವಾಗುತ್ತದೆ.”

ಕನ್ನಡಕ್ಕೆ : ಅಸ್ಲಂ ಮುಈನಿ, ಬೆಳಾಲು

ಇಬ್ನು ಅರಬಿ ಸೂಫಿ ದರ್ಶನದಲ್ಲಿ ಮುಹಮ್ಮದೀ ಮೂಲಸ್ವರೂಪ

ಶ್ರೇಷ್ಠ ಸೂಫಿ ದಾರ್ಶನಿಕ ಇಬ್ನು ಅರಬಿ ರವರ ಫುಸೂಸುಲ್ ಹಿಕಮ್ ನಲ್ಲಿ ಪ್ರವಾದಿ ಮುಹಮ್ಮದ್ (ಸ) ರ ಕುರಿತು ಬರೆದ ಅಧ್ಯಾಯವೊಂದರ ಮೇಲೆ ದಾವೂದ್ ಅಲ್ ಖೈಸರಿ ನೀಡಿದ ವ್ಯಾಖ್ಯಾನದ ಆಧಾರದಲ್ಲಿ ಪ್ರಸ್ತುತ ಪ್ರಬಂಧ ಬರೆಯಲಾಗಿದೆ.ವಿಶ್ವವಿಜ್ಞಾನದಲ್ಲಿ ಮುಹಮ್ಮದೀ ಮೂಲ ಸ್ವರೂಪವೆಂಬ ತತ್ವ ಮೀಮಾಂಸಕ ಪರಿಕಲ್ಪನೆಯ ಮಹತ್ವವನ್ನಾಗಿದೆ ವ್ಯಾಖ್ಯಾನಕಾರರು ಚರ್ಚೆ ಮಾಡಿರುವುದು. ಪ್ರವಾದಿ (ಸ) ಅಸ್ತಿತ್ವದಲ್ಲಿ ಅತ್ಯಂತ ಪರಿಪೂರ್ಣ ವ್ಯಕ್ತಿಯೆಂಬ ನಿಟ್ಟಿನಲ್ಲಿ ಏಕತ್ವದ ಚೈತನ್ಯ ಹೊಂದಿದ್ದಾರೆ ಎಂಬ ವಿವರಣೆಯೊಂದಿಗೆ ಇಬ್ನು ಅರಬಿ ತನ್ನ ಅಧ್ಯಾಯವನ್ನು ಆರಂಭಿಸಿದ್ದಾರೆ. ಸೃಷ್ಠಿ ಕ್ರಿಯೆಯ ಆರಂಭ ಮತ್ತು ಕೊನೆ ಎರಡೂ ಪ್ರವಾದಿವರ್ಯರ ಮೂಲಕವೇ ಆಗಿದೆ. ಆದಂ (ಅ) ಮಣ್ಣು ಮತ್ತು ನೀರಿನ ನಡುವಿನ ಅವಸ್ಥೆಯಲ್ಲಿದ್ದಾಗಲೆ ನಾನು ಪ್ರವಾದಿಯಾಗಿದ್ದೆ ಎಂಬ ಹದೀಸ್ ಇಲ್ಲಿ ಸ್ಮರಣೀಯವಾಗಿದೆ.

“ಇಡೀ ಮನುಷ್ಯ ಸಂಕುಲದ ಪೈಕಿ ಅತ್ಯಂತ ಪರಿಪೂರ್ಣತೆ ಹೊಂದಿರುವ ಅಸ್ತಿತ್ವವಾಗಿರುವುದರಿಂದ ಪ್ರವಾದಿ (ಸ) ಏಕತ್ವದ ಅನುಪಮ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಸೃಷ್ಟಿ ಪ್ರಕ್ರಿಯೆ ಅವರಿಂದಲೇ ಆರಂಭವಾಗುತ್ತದೆ ಹಾಗೂ ಅವರಲ್ಲೇ ಕೊನೆಗೊಳ್ಳುತ್ತದೆ. ಕಾರಣ, ಆದಮ್ (ಅ) ಮಣ್ಣು ಮತ್ತು ನೀರಿನ ನಡುವಣ ಸ್ಥಿತಿಯಲ್ಲಿದ್ದಾಗಲೇ ಪುಣ್ಯರು ಪ್ರವಾದಿಯಾಗಿದ್ದರು. ತರುವಾಯ ಭೌತಲೋಕಕ್ಕಿಳಿದಾಗ ಪ್ರವಾದಿ ಸರಣಿಯ ಮುದ್ರೆಯಾಗಿ ಆಗತರಾದರು.”

ಖೈಸರಿಯವರ ವ್ಯಾಖ್ಯಾನ ಇಲ್ಲಿ ಮುಖ್ಯವಾಗುತ್ತದೆ. ಏಕತ್ವದ ಅನುಪಮ ಪದವಿಯನ್ನು ನೆಬಿಯವರು ಪಡೆಯಲು ಕಾರಣವೇನೆಂಬ ಕುತೂಹಲ ತಣಿಸಲು ವಿವರಣೆಯೊಂದನ್ನು ನೀಡುತ್ತಾರೆ:

” ‘ದೈವಿಕ ಸಮಗ್ರತೆ’ (ಅಲ್ ಜಾಮಿಇಯ್ಯ ಇಲಾಹಿಯ್ಯ) ಎಂಬ ಆಧ್ಯಾತ್ಮಿಕ ಸ್ಥಾನಕ್ಕೆ ಪ್ರವೇಶ ಸಿಕ್ಕ ಏಕಮಾತ್ರ ವ್ಯಕ್ತಿ ಪ್ರವಾದಿ ಯಾಗಿರುವುದರಿಂದಲೇ ಅವರಿಗೆ ಅನನ್ಯ ಏಕತ್ವದ ಗುಣ ದೊರಕಿದೆ. ಪ್ರಸ್ತುತ ಸ್ಥಾನದ ಮೇಲೆ ‘ಅದ್ಸಾತುಲ್ ಅಹದಿಯ್ಯ’ ಎಂಬ ದರ್ಜೆ ಮಾತ್ರ ಉಳಿದಿರುವುದು. ಅಲ್ಲಾಹನ ಗುಣ ಮತ್ತು ನಾಮಗಳ ಪೈಕಿ ಅತ್ಯಂತ ಶ್ರೇಷ್ಠ ಹಾಗೂ ಸಮಗ್ರತೆ ಹೊಂದಿರುವ ‘ಅಲ್ಲಾಹ್’ ಎಂಬ ನಾಮವು ಅಭಿವ್ಯಕ್ತಗೊಳ್ಳುವ ಕೇಂದ್ರವಾಗಿದೆ ‘ದೈವಿಕ ಸಮಗ್ರತೆ’ ಎಂಬ ಪದವಿ “

ದೇವರ ಸರ್ವ ನಾಮಗಳನ್ನು ಒಗ್ಗೂಡಿಸುವ ಅಲ್ಲಾಹ್‌ ಎಂಬ ನಾಮವನ್ನು ಪ್ರವಾದಿ (ಸ) ಸ್ವೀಕರಿಸುವ ಕಾರಣದಿಂದಾಗಿಯೇ, “ದೈವಿಕ ಸಮಗ್ರತೆ” ಎಂಬ ಪದವಿಯಲ್ಲಿ ಪ್ರವಾದಿ (ಸ) ದೇವರ ಸರ್ವ ನಾಮಗಳನ್ನು ಸ್ವೀಕರಿಸುವ ಬಟ್ಟಲಾಗಿ ನೆಲೆನಿಲ್ಲುತ್ತಾರೆ. ಹಾಗೆ, ಏಕತ್ವದ ಗುಣ ಹೊಂದಿದ ಏಕಮಾತ್ರ ಸೃಷ್ಟಿಯಾಗಿ ಪರಿಗಣಿಸಲ್ಪಡುತ್ತಾರೆ. ಕಾರಣ, ಅಲ್ಲಾಹ್‌ ಎಂಬ ನಾಮವನ್ನು – ಇದು ಸರ್ವ ಸಮಗ್ರವಾದ ನಾಮ ಹಾಗೂ ಅನನ್ಯ ನಾಮವೂ ಕೂಡ (ಅಲ್‌ ಇಸ್ಮುಲ್‌ ಮುಫ್ರದ್)‌ – ಸಮರ್ಪಕವಾಗಿ ಮೂರ್ತೀಕರಿಸಿದ, ಅಭಿವ್ಯಕ್ತಗೊಳಿಸಿದ ಸಾಟಿಯಿಲ್ಲದ ಸೃಷ್ಟಿಯಾಗಿದ್ದಾರೆ. ಜಗತ್ತಿನಲ್ಲಿರುವ ಅಸ್ತಿತ್ವಗಳೆಲ್ಲ ಉಂಟಾದದ್ದು ದೇವರ ಸ್ವಯಂ ಅಭಿವ್ಯಕ್ತಿಗಳ ಮೂಲಕ. ಅಂದರೆ, ದೇವರ ಗುಣ ನಾಮಗಳ ಪ್ರಕಟ ರೂಪವಾಗಿದೆ ಸೃಷ್ಟಿ ಪ್ರಪಂಚ. ಈ ಸೃಷ್ಟಿ ಪ್ರಪಂಚದಲ್ಲಿ ಪ್ರವಾದಿವರ್ಯರ ಸ್ಥಾನ ಅತ್ಯಂತ ಉನ್ನತ ಮಟ್ಟದಲ್ಲಾಗಿದೆ. ಆದ್ದರಿಂದ, ದೇವರ ಸ್ವಾಭಿವ್ಯಕ್ತಗಳ ಶ್ರೇಣಿಯಲ್ಲಿ ಪ್ರಥಮ ಸ್ಥಾನ ಪಡೆದಿರುವುದರಿಂದ ಅವರಲ್ಲಿ ಅಲ್ಲಾಹನ ಸರ್ವ ಗುಣ ನಾಮಗಳು ಪ್ರಕಟಗೊಂಡಿದೆಯೆಂದು ಮನಗಾಣಬಹುದು. ಇಬ್ನು ಅರಬಿಯವರ ಪ್ರಸ್ತುತ ವಿವರಣೆಯನ್ನು ಸ್ಪಷ್ಟಪಡಿಸಲು ಖೈಸರಿಯವರು “ ಮೊಟ್ಟ ಮೊದಲು ಅಲ್ಲಾಹು ಸೃಷ್ಟಿಸಿದ್ದು ನನ್ನ ಪ್ರಕಾಶವಾಗಿದೆ “ ಎಂಬ ಪ್ರಸಿದ್ದ ಹದೀಸನ್ನು ತರುತ್ತಾರೆ:

“ ವಸ್ತುಗಳ ಪೈಕಿ ಮೊಟ್ಟ ಮೊದಲಾಗಿ ಅಲ್ಲಾಹನ ಪವಿತ್ರ ಪ್ರಸರಣದಿಂದ ಹೊರಬಂದದ್ದು ಪ್ರವಾದಿವರ್ಯರ ಮೂಲಸ್ವರೂಪವಾಗಿದೆ. “ ಅಲ್ಲಾಹು ಸೃಷ್ಟಿಸಿದ ಮೊದಲ ವಸ್ತು ನನ್ನ ಪ್ರಕಾಶವಾಗಿತ್ತು “ ಎಂಬ ಹದೀಸ್‌ ಇದರೆಡೆಗೇ ಬೊಟ್ಟು ಮಾಡುತ್ತದೆ.”

ಪ್ರಸ್ತುತ ಪ್ರಕಾಶವನ್ನೇ ಆಗಿದೆ, ಇಬ್ನು ಅರಬಿ ಸೇರಿದಂತೆ ಸೂಫಿಗಳಾದಿ “ ಮುಹಮ್ಮದೀ ಮೂಲಸ್ವರೂಪ (ಹಕೀಕತ್‌ ಮುಹಮ್ಮದಿಯ್ಯ)” ಎಂದು ಕರೆದಿರುವುದು. ಅಲ್ಲಾಹನ ಸಕಲ ಅಭಿವ್ಯಕ್ತಿಗಳ ಕೇಂದ್ರವಾಗಿದೆ ಇದು. ಸೃಷ್ಟಿ ಪ್ರಪಂಚದ ಆರಂಭವೂ ಕೊನೆಯೂ ಇಲ್ಲೇ ಆಗಿದೆ. ಖೈಸರಿ ಪ್ರಕಾರ, ನೂರ್‌ ಮುಹಮ್ಮದೀ ಅನ್ನು “ ಪ್ರಥಮ ವಿವೇಕ “ (ಅಲ್‌ ಅಖ್ಲ್‌ ಅವ್ವಲ್)‌ ಎಂದೂ ಸಂಬೋಧಿಸಲಾಗಿದೆ. ಇಬ್ನು ಅರಬಿ ಮತ್ತು ಪೂರ್ವ ವಿದ್ವಾಂಸನೇಕರು ಮುಹಮ್ಮದೀ ಮೂಲಸ್ವರೂಪವನ್ನು “ ಪ್ರಥಮ ವಿವೇಕ “ ( First Intellect) ದೊಂದಿಗೆ ಸಮೀಕರಿಸಿದ್ದು ಬಹಳ ಕುತೂಹಲಕಾರಿಯಾಗಿದೆ. ಕಾರಣ, ಪುರಾತನ ಗ್ರೀಕ್‌ ಹಾಗೂ ನಿಯೋಪ್ಲಾಟೋನಿಕ್‌ ಮುಸ್ಲಿಂ ತತ್ವಜ್ಞಾನ ಪರಂಪರೆಯಲ್ಲಿ ಢಾಳಾಗಿ ಚರ್ಚೆಗೀಡಾದ ಪರಿಭಾವನೆಯಾಗಿದೆ ಪ್ರಥಮ ವಿವೇಕ ಎಂಬುವುದು. ಫಾರಾಬಿ ಮತ್ತು ಇಬ್ನುಸೀನ ಮುಂತಾದ ಗ್ರೀಕ್‌ ಪ್ರಭಾವಿತ ಮುಸ್ಲಿಂ ತತ್ವಜ್ಞರ ವಿಶ್ಲೇಷಣೆ ಪ್ರಕಾರ, ದೈವೇಚ್ಛೆಯಿಂದ ಪ್ರಪ್ರಥವಾಗಿ ಅಸ್ತಿತ್ವಕ್ಕೆ ಬಂದ ವಸ್ತುವಾಗಿದೆ ಪ್ರಥಮ ವಿವೇಕ ಎಂಬುದು. ಆ ಮೂಲಕ ಬಹುತ್ವದ ಲೋಕ ಇರವನ್ನು ಪಡೆಯಲು ಅನುವು ಮಾಡಿಕೊಡಲಾಯಿತು. ಖೈಸರಿ ಪ್ರಸ್ತುತ ನಿಯೋಪ್ಲಾಟೋನಿಕ್‌ ವಿಚಾರಗಳನ್ನು ಪೂರ್ತಿಯಾಗಿ ಒಪ್ಪದಿದ್ದರೂ, “ಪ್ರಥಮ ವಿವೇಕ” ಪ್ರವಾದಿಯಲ್ಲದೆ ಬೇರೇನೂ ಅಲ್ಲ ಎಂಬ ನಿಲುವಲ್ಲಿ ದೃಢರಾಗಿದ್ದಾರೆ.

ಇಸ್ಲಾಮೀ ಆಧ್ಯಾತ್ಮ ತತ್ವಗಳ ಪೈಕಿ ಅತ್ಯಂತ ಮಹತ್ವಪೂರ್ಣವಾದದ್ದಾಗಿದೆ ಮುಹಮ್ಮದೀ ಮೂಲಸ್ವರೂಪ (ಹಕೀಕತ್ ಮುಹಮ್ಮದಿಯ್ಯ) ಎನ್ನುವುದು. ಮೊಟ್ಟ ಮೊದಲು ಸೃಷ್ಟಿಯಾದದ್ದು ನೆಬಿಯವರ ಬೆಳಕಾಗಿತ್ತು ಎಂಬುವುದು ಇದರ ತಾತ್ಪರ್ಯ. ಖುರಾನ್ ಮತ್ತು ಹದೀಸುಗಳ ಆಧಾರದಲ್ಲಿ ಸೂಫಿಗಳು ಪ್ರಸ್ತುತ ಪರಿಕಲ್ಪನೆಯನ್ನು ಬೆಳೆಸಿದ್ದಾರೆ. ಅಲ್ಲಾಹನು ಖುರಾನಿನಲ್ಲಿ ಹಲವು ಕಡೆ ಪ್ರವಾದಿ (ಸ) ರನ್ನು ಬೆಳಕು ಎಂಬುದಾಗಿ ಸಂಬೋಧಿಸಿದ್ದಾನೆ. ಹಾಗೂ “ ಸರ್ವ ಲೋಕಕ್ಕೂ ಕರುಣಾಮಯಿಯಾಗಿ ತಮ್ಮನ್ನು ನೇಮಕಗೊಳಿಸಲಾಗಿದೆ” ಎನ್ನುವ ಪ್ರಸಿದ್ದ ಸೂಕ್ತವೂ ಕೂಡ ಪ್ರಸ್ತುತ ಸಿದ್ದಾಂತಕ್ಕೆ ಪುಷ್ಟಿ ನೀಡುತ್ತದೆ. ಕಾರಣ, ಪ್ರಪಂಚದ ಪ್ರತಿಯೊಂದು ವಸ್ತುವಿಗೂ ನೆಬಿ (ಸ) ಅನುಗ್ರಹ ದಾಯಕರು ಎನ್ನಲಾಗಿದೆ. ಯಾವುದೇ ವಸ್ತುವಿಗೆ ಮೊಟ್ಟ ಮೊದಲು ಸಿಗುವ ಅನುಗ್ರಹ ಅದರ ಅಸ್ತಿತ್ವವೇ ಆಗಿದೆ. ಹಾಗಿರುವಾಗ ಪ್ರತಿಯೊಂದರ ಅಸ್ತಿತ್ವದ ಪೂರ್ವದಲ್ಲಿ ಪ್ರಸ್ತುತ ಅನುಗ್ರಹ ನೀಡುವ ನೆಬಿ (ಸ) ಅಸ್ತಿತ್ವದಲ್ಲಿರಬೇಕು. ಆದ್ದರಿಂದ ಎಲ್ಲಕ್ಕಿಂತ ಮುನ್ನ ಅವರು ಇರಬೇಕು. ಇದನ್ನೇ ನೂರ್ ಮುಹಮ್ಮದೀ ಅಂತ ಕರೆದಿರುವುದು.

ಇಲ್ಲಿ ಗಮನೀಯ ಅಂಶವೇನೆಂದರೆ, ನೂರ್ ಮುಹಮ್ಮದಿಯ್ಯದಲ್ಲಿರುವ ನೂರ್ ಎಂಬುವುದು ನೆಬಿಯವರ ಹಕೀಕತಿಗೆ ಇರುವ ನಾಮವಾಗಿದೆಯೇ ಹೊರತು ಸಾಮಾನ್ಯ ನಾವು ಅರ್ಥೈಸುವ ಬೆಳಕು ಎಂಬ ಅರ್ಥವನ್ನು ಹೊಂದಿಲ್ಲ. ಹಕೀಕತ್ ಮುಹಮ್ಮದಿಯ್ಯಗೆ “ಬೆಳಕು” ಎಂಬ ಹೆಸರು ಸಿಗಲು ಕಾರಣ, ಎಲ್ಲ ವಸ್ತುಗಳು ಇರದಿರುವಿಕೆಯೆಂಬ ಕತ್ತಲಿನಿಂದ ಇರವು ಎಂಬ ಬೆಳಕಿಗೆ ಬರುವುದು ಮುಹಮ್ಮದೀ ನೈಜಸ್ವರೂಪದ ಮೂಲಕ. ಅಲ್ಲಾಹನ ದ್ಸಾತ್(ಸತ್ತು ಅಥವ ಅಸ್ತಿತ್ವದ ಯಥಾರ್ಥತೆ) ಅರಿಯುವುದು ಹೇಗೆ ಅಸಾಧ್ಯವೋ ಹಾಗೇ ನೆಬಿಯವರ ಮೂಲಸ್ವರೂಪವನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ನಮ್ಮ ಸಾಮರ್ಥ್ಯಕ್ಕೆ ನಿಲುಕದಂತದ್ದು. ಎಂದಲೇ ಇದನ್ನು ಸೂಫಿಗಳು ಅತೀಂದ್ರಿಯ ಲೋಕದ ಅತ್ಯಂತ ನಿಗೂಢ ವಿಚಾರವೆಂದು ಬಣ್ಣಿಸಿದ್ದಾರೆ. ಆದರೆ, ಅದರ ಕೆಲವೊಂದು ಗುಣಲಕ್ಷಣಗಳ ಕುರಿತು ವಿಶದವಾಗಿ ಮಾತನಾಡಿದ್ದಾರೆ.

ಮುಖ್ಯವಾಗಿ, ನೂರ್ ಮುಹಮ್ಮದೀ ಪ್ರಪಂಚದ ಎಲ್ಲ ವಸ್ತುಗಳ ಮೂಲಸತ್ವವಾಗಿದೆ. ಗ್ರೀಕ್ ದಾರ್ಶನಿಕ ಅರಿಸ್ಟಾಟಲನ ತತ್ವ ಮೀಮಾಂಸೆಯಲ್ಲಿ ಬರುವ ಹೈಲ್ (ಹಯೂಲ ಎಂದು ಅರಬಿಕ್ ರೂಪಾಂತರ) ಪರಿಕಲ್ಪನೆಯೊಂದಿದೆ. ವಸ್ತುಗಳೆಲ್ಲ ಮೂಲದ್ರವ್ಯ ಮತ್ತು ರೂಪಗಳ ಸಂಯೋಜನೆಯೆಂದೂ ಹಾಗೂ ಹೈಲ್ ಎಂದು ಹೆಸರಿಸಲಾದ ಮೂಲದ್ರವ್ಯವು ಎಲ್ಲದರಲ್ಲಿ ಸಮಾನವಾಗಿರುತ್ತದೆಯೆಂಬುದು ಆತನ ಸಿದ್ದಾಂತ. ಇದರ ಪ್ರಕಾರ ಎಲ್ಲ ವಸ್ತುಗಳ ಮೂಲ ಸತ್ವವೊಂದೇ.ರೂಪಗಳನ್ನು ಪಡೆಯುವಾಗ ಅವು ಭಿನ್ನವಾಗುತ್ತದೆ. ಪ್ರಸ್ತುತ ವಿಚಾರವನ್ನು ಸುಸಮಂಜಸವಾಗಿ ಸೂಫಿಗಳು ತಮ್ಮ ಮೆಟಾಫಿಸಿಕ್ಸ್ನಲ್ಲಿ ಸಂಯೋಜಿಸಿದ್ದು ವಿಶೇಷ. ಈ ನಿಟ್ಟಿನಲ್ಲಿ ಸೂಫಿಗಳು ಮುಹಮ್ಮದೀಯ ಮೂಲಸ್ವರೂಪವನ್ನು ಪ್ರಪ್ರಥಮ ಸತ್ವವೆಂದೂ, ಎಲ್ಲದರ ಹಯೂಲ ಎಂದು ಕರೆದಿದ್ದಾರೆ ಹಾಗೂ ಅದು ಎಲ್ಲ ವಸ್ತುಗಳಲ್ಲೂ ಅಡಕಗೊಂಡಿದೆ ಎಂದು ಸಿದ್ದಾಂತಿಸುತ್ತಾರೆ (ಅದ್ವೈತಾದಿ ಸಿದ್ದಾಂತಗಳು ಸಾರುವ ದೇವರ ಸರ್ವವ್ಯಾಪಕತೆಯನ್ನು ಪ್ರಸ್ತುತ ಚಿಂತನೆಯ ಆಧಾರದಲ್ಲಿ ಅರ್ಥೈಸಬಹುದೆಂದು ತೋರುತ್ತದೆ. ಅಂದರೆ ನಿಜವಾಗಿ ದೇವರಲ್ಲ ಸರ್ವವ್ಯಾಪಿಯಾದವನು.ಹೊರತು ಆತನ ಅಭಿವ್ಯಕ್ತ ರೂಪೀ ಬೆಳಕಾದ ನೂರ್ ಮುಹಮ್ಮದೀ ಆಗಿದೆ ಸರ್ವಾಂತಾರ್ಯಾಮಿಯಾಗಿರುವುದು). ಅತೀಂದ್ರಿಯ ಲೋಕದ ಅನಿಶ್ಚಿತ ಸ್ಥಿತಿಯಿಂದ ಮೊದಲು ನಿಶ್ಚಿತಗೊಂಡ ಅಸ್ತಿತ್ವ ಹಾಗೂ ಸೃಷ್ಠಿವೃತ್ತದ ಕೇಂದ್ರ ಎಂಬಿತ್ಯಾದಿ ರೂಪದಲ್ಲೂ ಅದು ಬಣ್ಣಿಸಲ್ಪಟ್ಟಿದೆ.

ಮುಹಮ್ಮದೀ ಹಕೀಕತ್ತಿನ ಮತ್ತೊಂದು ಮುಖ್ಯ ವರ್ಣನೆ ಏನೆಂದರೆ, ಅದು ಸಮಸ್ತ ಸೃಷ್ಟಿಯ ಕನ್ನಡಿಯಾಗಿದೆ ಎಂಬುದು. ಆಕೃತಿಗಳು ಪೂರ್ಣವಾಗಿ ಆವರಿಸಿ ಪ್ರತಿಬಿಂಬಿತಗೊಳ್ಳುವಾಗ ಕನ್ನಡಿ ಹೇಗೆ ಅವ್ಯಕ್ತಗೊಳ್ಳುವುದೋ ಹಾಗೆಯೇ ಸಕಲ ಸೃಷ್ಠಿಗಳು ಪ್ರತಿಬಿಂಬಿತಗೊಂಡು ಹಕೀಕತ್ ಮುಹಮ್ಮದಿಯ್ಯ ಸಂಪೂರ್ಣ ಅವ್ಯಕ್ತವಾಗಿದೆ. ಅನಿವಾರ್ಯ ಅಸ್ತಿತ್ವವನ್ನು ಹೊಂದಿದ ಅಲ್ಲಾಹು ಹಾಗೂ ಸಾಪೇಕ್ಷ ಅಸ್ತಿತ್ವ ಹೊಂದಿದ ಸೃಷ್ಟಿಗಳು ಹೀಗೆ ಪರಸ್ಪರ ಸಂಪೂರ್ಣ ಭಿನ್ನವಾದ ಉಭಯ ಪ್ರಪಂಚಗಳೆರೆಡರ ಸ್ವಭಾವ ವೈಶಿಷ್ಟ್ಯತೆಗಳನ್ನು ಮೇಳೈಸಿದೆ ಎಂಬ ನಿಟ್ಟಿನಲ್ಲಿ ಮುಹಮ್ಮದಿಯ್ಯ ಮೂಲಸತ್ತುವನ್ನು ಪ್ರಪಂಚದ್ವಯಗಳ ಕನ್ನಡಿಯೆಂದೂ ಸಮುದ್ರದ್ವಯಗಳ (ಮೂಲಭೂತ ಅಸ್ತಿತ್ವ ಮತ್ತು ಸಾಪೇಕ್ಷ ಅಸ್ತಿತ್ವ ಎಂಬೀ ಎರಡು ಸಮುದ್ರಗಳು) ಸಂಗಮವೆಂದೂ ಕರೆಯಲಾಗಿದೆ. ಜತೆಗೆ, ಅದು ಅನಿವಾರ್ಯ ಅಸ್ತಿತ್ವ (necessary existence) ಹಾಗೂ ಸಾಧ್ಯತಾ ಅಸ್ತಿತ್ವ (contingent existence ಅಂದರೆ ಇರುವಿಕೆ ಮತ್ತು ಇಲ್ಲದಿರುವಿಕೆ ಎರಡರ ಅಗತ್ಯತೆ ಇಲ್ಲದ ಅಸ್ತಿತ್ವಗಳು) ಗಳ ನಡುವಿನ ಮಾಧ್ಯಮಿಕ (ಬರ್ಝಖ್) ಲೋಕವಾಗಿದೆ. ಆದ್ದರಿಂದ, ಅಂತ ಮತ್ತು ಅನಂತವನ್ನು(finite and infinite) ಅದು ಜೋಡಿಸುತ್ತದೆ. ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವಿನ ಮುಖ್ಯ ಪರದೆ ( ಹಿಜಾಬ್) ಎಂಬ ನಿಟ್ಟಿನಲ್ಲಿ ಸೃಷ್ಟಿಗಳ ಪೈಕಿ ಯಾರಿಗಾದರೂ ಅಲ್ಲಾಹುವನ್ನು ಸೇರಬೇಕಿದ್ದರೆ ನೆಬಿ (ಸ) ಯವರ ಮುಖಾಂತರ ಮಾತ್ರ ಸಾಧ್ಯ. ಹದೀಸೊಂದರಲ್ಲಿ ಹೀಗಿದೆ: “ಅಲ್ಲಾಹುವಿನ ಪರದೆ ಪ್ರಕಾಶವಾಗಿದೆ. ಅದನ್ನು ಸರಿಸಿದರೆ ಆತನ ಪ್ರಖರ ಕಿರಣಗಳು ನೋಡುವವರನ್ನು ಸುಟ್ಟು ಕರಕಲ ಮಾಡಿಬಿಡುವುದು”. ಈ ಹದೀಸಿನಲ್ಲಿ ಬಂದ ಪ್ರಕಾಶವೆಂಬ ಪರದೆಯನ್ನು ಮುಹಮ್ಮದೀ ಮೂಲರೂಪವೆಂದು ವ್ಯಾಖ್ಯಾನಿಸಲಾಗಿದೆ.

ಜಡಜಗತ್ತಿಗೆ ಬರುವಾಗ ಇದ್ದ ಅದೇ ಆಕೃತಿಯಲ್ಲೇ ಆಗಿತ್ತು ನೆಬಿಯವರ ಚೈತನ್ಯ ರೂಪಿಯಾದ ಮುಹಮ್ಮದೀ ಪ್ರಭೆಯನ್ನು ಅಲ್ಲಾಹನು ಸೃಷ್ಟಿ ಮಾಡಿದ್ದು. ದೇಶಕಾಲಾತೀತವಾಗಿ ಎಲ್ಲಾ ತರದ ಪ್ರಪಂಚಗಳಾಚೆಯಾಗಿದೆ ಅದರ ಸ್ಥಾನವಿರುವುದು. ಅಲ್ಲಾಹುವನ್ನು ಮುಹಮಮ್ಮದೀ ಹಕೀತತ್ತಿನಿಂದಲೇ ತಿಳಿಯಬೇಕು ಎಂದಿರುವಾಗ, ಅಧ್ಯಾತ್ಮದ ಹಾದಿಯಲ್ಲಿ ಸಾಗುವ ಸಾಧಕರ ಆತ್ಯಂತಿಕ ಗುರಿಯೂ ಅದೇ ಆಗಿರುತ್ತದೆ. ಸೂಫಿಗಳ ಅನುಭಾವಿಕ ಗಾನಗಳಲ್ಲಿ ಬರುವ ಸುರಪಾನ,ಲೈಲಾ, ಸ್ವರ್ಗೋದ್ಯಾನ ಎಂಬಿತ್ಯಾದಿ ಪದಗುಚ್ಛಗಳು ಅದರೆಡೆಗೇ ಬೊಟ್ಟುಮಾಡುವುದು.

ದೇವರ ಪವಿತ್ರ ಅಸ್ತಿತ್ವ ಖಂಡಿತವಾಗಿಯೂ ಬಹುತ್ವ ತುಂಬಿದ ಸೃಷ್ಟಿಗಳಾದ್ಯಂತ ನೇರವಾಗಿ ಅಭಿವ್ಯಕ್ತಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ ಒಂದು ಮಾಧ್ಯಮ ಅನಿವಾರ್ಯವಾಗುತ್ತದೆ. ಪ್ರವಾದಿವರ್ಯರೇ ಆಗಿದ್ದಾರೆ ಆ ಮಾಧ್ಯಮ. ಒಟ್ಟಾರೆ, ಪ್ರವಾದಿ (ಸ) ಉತ್ತರರದಾಯಿತ್ವ ಅತ್ಯಂತ ಮಹತ್ವಕಾರಿಯಾದದ್ದು. ದೇವರ ಸರ್ವ ನಾಮಗಳನ್ನು ತನ್ನ ಸ್ವರೂಪ ಹಾಗೂ ಕರ್ಮಗಳ ಮೂಲಕ ಪ್ರಕಟಪಡಿಸುತ್ತಾರೆ ಹಾಗೂ ಜಗತ್ತಿನಾದ್ಯಂತ ದೈವಿಕ ನಾಮಗಳನ್ನು ಪಸರಿಸುವ ಮಾಧ್ಯಮವಾಗಿಯೂ ಕಾರ್ಯಾಚರಿಸುತ್ತಾರೆ. ಪ್ರಸ್ತುತ ವಿಶ್ಲೇಷಣೆಯ ಆಧಾರದಲ್ಲೇ, “ ನೀವು ಇಲ್ಲದಿದ್ದರೆ, ಜಗತ್ತನ್ನೇ ನಾನು ಸೃಷ್ಟಿಸುತ್ತಿರಲಿಲ್ಲ “ ಎಂಬ ಹದೀಸ್‌ ಖುದ್ಸಿಯನ್ನು ಅರ್ಥ ಮಾಡಬೇಕಾಗಿದೆ.

ಮುಂದೆ ಖೈಸರಿಯವರು “ದೈವಿಕ ದರ್ಜೆಗಳು” (ಅದ್ದರಜಾತುಲ್‌ ಇಲಾಹಿಯ್ಯ) ಎಂಬ ವಿಶ್ವವೈಜ್ಞಾನಿಕ ಪರಿಕಲ್ಪನೆಯನ್ನು ಚರ್ಚೆಗೆ ಎಳೆಯುತ್ತಾರೆ.ಇಬ್ನು ಅರಬಿಯವರ ಕೆಳಗಿನ ಪ್ರಸ್ತಾವನೆಯ ಸಂದರ್ಭವಾಗಿದೆ ಈ ಚರ್ಚೆಯ ಹಿನ್ನಲೆ:

“ ಖುರ್‌ ಆನಿನಲ್ಲಿ ಅಲ್ಲಾಹು ತನ್ನನ್ನು ʼದರ್ಜೆಗಳನ್ನು ಏರಿಸುವವನು ಹಾಗೂ ಸಿಂಹಾಸನದ ಮಾಲಿಕ ʼ ಎಂದು ವಿಶೇಷಿಸಿದ್ದಾನೆ. ಅರ್ಶಿನ ಮೇಲೆ ತನ್ನ ಪರಿಪೂರ್ಣ ಕರುಣಾಮಯಿ (ಅರ್ರಹ್ಮಾನ್)‌ ಎಂಬ ನಾಮದೊಂದಿಗೆ ಆಸೀನನಾಗಿದ್ದಾನೆ. ಆದ್ದರಿಂದಲೇ, ʼ ನನ್ನ ಕರುಣೆ ಸಕಲ ವಸ್ತುಗಳನ್ನು ಆಚ್ಛಾದಿಸಿದೆʼ ಎಂದು ಅಲ್ಲಾಹು ಹೇಳಿದಂತೆಯೇ ಅರ್ಶ್‌ ಅಥವಾ ಸಿಂಹಾಸನದ ಕೆಳಗೆ ಆತನ ಕರುಣೆಯನ್ನು ಪಡೆಯದ ಯಾವ ವಸ್ತುವೂ ಇರಲಾರದು. ಪ್ರಸ್ತುತ ಅರ್ಶಿನ ಮೂಲಕ ಲೋಕವಿಡೀ ಕರುಣೆಯ ಪ್ರಸರಣವನ್ನು (ಸರಯಾನು ರ್ರಹ್ಮ) ಸ್ವೀಕರಿಸುತ್ತದೆ”

ಖೈಸರಿ ಪ್ರಕಾರ, ದೈವಿಕತೆಯ ಈ ದರ್ಜೆಗಳಿಂದ ʼಪ್ರಥಮ ವಿವೇಕʼ ಅಸ್ತಿತ್ವಕ್ಕೆ ಬಂತು ಹಾಗೂ ಅದರಿಂದ ʼವಿಶ್ವಾತ್ಮ ʼ ಇರವನ್ನು ಪಡೆಯಿತು. ಪ್ರಸ್ತುತ ವಿಶ್ವಾತ್ಮ ದಿಂದ ಎಲ್ಲಾ ಬಗೆಯ ವೈಚಾರಿಕ ಆತ್ಮಗಳು, ಭೌತ ವಸ್ತುಗಳು ಹಾಗೂ ಒಟ್ಟಾರೆ ಜಗತ್ತು ಅಸ್ತಿತ್ವವನ್ನು ಕಂಡಿತು. ಆಕಾಶ ಮತ್ತು ಭೂಮಿಯ ಮೂಲ ಪದಾರ್ಥಗಳಿಂದ ʼಕುರ್ಸ್‌ʼ ಕೂಡ ಸೃಷ್ಟಿಸಲ್ಪಟ್ಟಿತು. ಸೃಷ್ಟಿಯ ಈ ಪ್ರಕ್ರಿಯೆಯ ವಿವರಣೆ, ಮಾಧ್ಯಮಿಕ ಜಗತ್ತು ಯಾ ಭಾವನಾತ್ಮಕ ಜಗತ್ತು (ಮಲಕೂತ್‌) ಮತ್ತು ಇಂದ್ರಿಯಗೋಚರ (ಮುಲ್ಕ್)‌ ಜಗತ್ತಿನ ಕುರಿತು ಹೆಚ್ಚು ಸ್ಪಷ್ಟತೆಯನ್ನು ನೀಡುತ್ತದೆ. ಇಬ್ನು ಅರಬಿಯವರ ಅರ್ಶಿನಿಂದ ಸಕಲ ಸೃಷ್ಟಿಗಳಿಗೆ ಕರುಣೆಯ ವಿತರಣೆಯಾಗುತ್ತದೆ ಎಂಬ ವಿಶ್ಲೇಷಣೆಯ ಆಧಾರದಲ್ಲಿ ಖೈಸರಿಯವರು ನೀಡುವ ವ್ಯಾಖ್ಯಾನ ಆಸಕ್ತಿದಾಯಕವಾಗಿದೆ. ಅವರ ಅಭಿಪ್ರಾಯದಲ್ಲಿ, ಎರಡು ಬಗೆಯ ಅರ್ಶ್‌ ಇದೆ; ಆಧ್ಯಾತ್ಮಿಕ ಮತ್ತು ಭೌತಿಕ. ಇವೆರಡರ ಪೈಕಿ, ಆಧ್ಯಾತ್ಮಿಕ ಅರ್ಶನ್ನು ಮುಹಮ್ಮದೀ ಮೂಲಸ್ವರೂಪದೊಂದಿಗೆ ಸಮೀಕರಿಸುತ್ತಾರೆ. ʼಸಂಪೂರ್ಣ ದಯಾಮಯಿʼ ಎಂಬ ನಾಮ ಅರ್ಶಿನ ಮೇಲೆ ನೆಲೆನಿಂತಿದೆ ಎಂಬುವುದು ಇಬ್ನು ಅರಬಿಯವರ ಅಂಬೋಣ. ಹಾಗಾದರೆ, ಪ್ರಸ್ತುತ ನಾಮಕ್ಕೂ ಮುಹಮ್ಮದೀ ನೈಜಸ್ವರೂಪಕ್ಕೂ ಏನು ಸಂಬಂಧ?. ಈ ಪ್ರಶ್ನೆಗೂ ಸುಸಂಬದ್ದ ಉತ್ತರವನ್ನಾಗಿದೆ ಖೈಸರಿ ನೀಡುವುದು:

“ ವಸ್ತು ಪ್ರಪಂಚಕ್ಕೆ ಇಳಿಯುವ ಮೂಲಕವಾಗಿದೆ ಕರುಣೆಯ ಸೂಕ್ತ ವಿತರಣೆ ಸಾಧ್ಯವಾಗುವುದು. ಆದ್ದರಿಂದ, ದೇವರ ಸರ್ವ ಅಭಿವ್ಯಕ್ತಿಗಳ ಕೇಂದ್ರವಾಗಿರುವ ಮುಹಮ್ಮದೀ ಮೂಲಸ್ವರೂಪವು ಅರ್ಶಿನ ಮೇಲೆ ಸ್ಥಾಪಿತವಾಗಿದೆ. ಆ ಮೂಲಕ ಅದರ ಕರುಣೆ ಜಗದಗಲ ವ್ಯಾಪಿಸುತ್ತದೆ ಮತ್ತು ಸೃಷ್ಟಿ ಪ್ರಪಂಚನ್ನಿಡೀ ಆವರಿಸುತ್ತದೆ. ಇದನ್ನೇ ಅಲ್ಲಾಹು ಹೇಳಿದ್ದು; ನಿಮ್ಮನ್ನು ಇಡೀ ಜಗತ್ತಿಗೆ ನಾವು ಕರುಣೆಯಾಗಿ ನೇಮಕಗೊಳಿಸಿದ್ದೇವೆ”

ಸ್ಪಷ್ಟವಾಗಿ ಹೇಳುವುದಾದರೆ, ಮುಹಮ್ಮದೀ ಚೈತನ್ಯವು (ಹಕೀಕತ್‌ ಮುಹಮ್ಮದಿಯ್ಯ) ದೈವಿಕ ಮೂಲದಿಂದ ಮೊಟ್ಟ ಮೊದಲನೆಯದಾಗಿ ಉದಯಗೊಂಡ ಅಸ್ತಿತ್ವ ಎಂಬ ನಿಟ್ಟಿನಲ್ಲಿ, ಅಲ್ಲಾಹನ ಎಲ್ಲಾ ನಾಮಗಳನ್ನು ಸ್ವೀಕರಿಸುವ ಹಾಗೂ ಪ್ರಕಟಪಡಿಸುವ ಸೃಷ್ಟಿಯಾಗಿದೆ. ಅರ್ರಹ್ಮಾನ್‌ ಎಮಬುವುದೂ ಕೂಡ ಅಲ್ಲಾಹನ ನಾಮವೇ. ಪರಮ ಕರುಣಾಮಯಿ ಎಂಬ ನಾಮದ ಸ್ವೀಕಾರ ಕೇಂದ್ರವೆಂಬ ನೆಲೆಯಲ್ಲಿ, ಆಧ್ಯಾತ್ಮಿಕ ಅರ್ಶ್‌ ಅಥವಾ ಮುಹಮ್ಮದೀ ಮೂಲಸ್ವರೂಪ ಭೌತಿಕ ಅರ್ಶಿನ ಮೇಲೆ ಆಸೀನನಾಗಿ ಜಗದಗಲ ಕರುಣೆಯ ಪ್ರಸರಣವನ್ನು ಮಾಡುತ್ತಿದೆ. ಒಟ್ಟಾರೆ, ವಿಶ್ವ ವಿಜ್ಞಾನದಲ್ಲಿ ಮುಹಮ್ಮದೀ ಸ್ವರೂಪದ ಸ್ಥಾನವನ್ನು ಇಬ್ನು ಅರಬಿಯವರ ಒಳನೋಟದ ಆಧಾರದಲ್ಲಿ ದಾವೂದುಲ್ ಖೈಸರಿಯವರು ಹಲವು ಬಗೆಯಲ್ಲಿ ವಿವರಿಸಿದ್ದಾರೆ.

ಮುಹಮ್ಮದ್ ರುಸ್ತುಂ
ಅನು : ಎಂ.ಎಂ. ಸುರೈಜಿ

ಹಳದಿ ಬಣ್ಣವುಳ್ಳ ಸೌತ್ ಆಫ್ರಿಕಾದ ಗ್ರಂಥಗಳು

ಡಚ್ಚರು ವರ್ಣಭೇದ ನೀತಿಯ ಅಂಗವಾಗಿ ‘ಕರಿಯರು’ ಎಂದು ಮುದ್ರೆಯೊತ್ತಿ ಹದಿನೇಳು, ಹದಿನೆಂಟನೇ ಶತಮಾನದಲ್ಲಿ ಮುಸ್ಲಿಮರನ್ನು ಆಗ್ನೇಯ ಏಷ್ಯಾ ಹಾಗೂ ಆಫ್ರಿಕಾದ ವಿವಿಧ ಭಾಗಗಳಿಂದ ಗುಲಾಮರಾಗಿಯೂ ರಾಜಕೀಯ ಖೈದಿಗಳಾಗಿಯೂ ಕೇಪ್‌‌ ಪಟ್ಟಣಕ್ಕೆ ಕರೆತಂದರು. ‘ಕೇಪ್ ಮಲಾಯ್’ ಮುಸ್ಲಿಮರು ಸಾಂಪ್ರದಾಯಿಕ ಸೊತ್ತಾಗಿ ಧಾರ್ಮಿಕ ಗ್ರಂಥಗಳಿಗೆ ಕಣ್ಣಾಡಿಸುವುದು ವಾಡಿಕೆ. ಹತ್ತೊಂಬತ್ತನೆ ಶತಮಾನದ ಪೂರ್ವಾರ್ಧದಲ್ಲಿ ಭಾರತದಿಂದಲೂ ಬೆರಳೆಣಿಕೆಯಷ್ಟು ಮುಸ್ಲಿಂ ವ್ಯಾಪಾರಿಗಳು ಕೇಪ್‌ಗೆ ಹೋಗಿದ್ದರು. 2014 ರ ಜನಗಣತಿ ಪ್ರಕಾರ ಅವರ ಜನಸಂಖ್ಯೆಯು ಪಶ್ಚಿಮ ಕೇಪ್‌ನ ಒಟ್ಟು ಜನಸಂಖ್ಯೆಯ ಕೇವಲ 7.5%ರಷ್ಟು ಮಾತ್ರ. 1838 ರಲ್ಲಿ ಗುಲಾಮಗಿರಿ ಅಧಿಕೃತವಾಗಿ ಕೊನೆಗೊಂಡರೂ ಜನರನ್ನು ಜನಾಂಗಿಯವಾಗಿ ಬೇರ್ಪಡಿಸುವ 1948 ರ ವರ್ಣಭೇದ ನೀತಿಯು ಬಂದ ಮೇಲೆ ಬಿಳಿಯರ ಅಧೀನದಲ್ಲಿ ಕೇಪ್ ಮುಸ್ಲಿಮರು ಜೀವಿಸಬೇಕು ಎಂಬ ನಿಯಮವೊಂದಿತ್ತು. ಧರ್ಮವು ಆ ಜನರನ್ನು ಪರಸ್ಪರ ಕೊಂಡಿಯಾಗಿ ಬೆಸೆಯಿತು ಅನ್ನಬಹುದು. ಫ್ಯಾಮಿಲಿ ಮೀಟ್‌ಗಳಲ್ಲಿಯೂ ಇತರ ಕೂಟಗಳಲ್ಲಿಯೂ ಧಾರ್ಮಿಕ ಅಧ್ಯಾಪಕರೋ ಕುಟುಂಬದ ಹಿರಿಯ ಸದಸ್ಯರೋ ಗ್ರಂಥಗಳ ಕೆಲ ಭಾಗಗಳನ್ನು ಬರೆದು, ಆ ಭಾಗವನ್ನು ಓದಿ ಕೇಳಿಸುತ್ತಿದ್ದರು. ಅವರು ಮಂಡಿಸುತ್ತಿರುವ ವಿಷಯ ಖುರ್‌ಆನಿನ ಅಧ್ಯಾಯಗಳು ಹಾಗೂ ಸುವಿಶೇಷ ವಾರ್ತೆಗಳಾಗಿತ್ತು.

ವರ್ಣಭೇದ ನೀತಿಯ ಅಂತ್ಯದ ತರುವಾಯ ಕೇಪ್ ಮುಸ್ಲಿಮರು ಇತಿಹಾಸ ಸವಿಯಲು, ಬರೆಯಲು ಮುಹೂರ್ತವಿಟ್ಟರು. ಈ ಕರಾಳ ದಿನಗಳ ಬಳಿಕ ಗ್ರಂಥಗಳ ಒಡನಾಟ ದಿನೇ ಹೆಚ್ಚುತ್ತಾ ಹೋದವು. “ನನ್ನೊಂದಿಗೆ ಅನೇಕ ಕಿತಾಬುಗಳು, ಮಣ್ಣಿನ ಪಾತ್ರೆಗಳಿವೆ..” ಎಂದು ಸಾಂಪ್ರದಾಯಿಕವಾಗಿ ಕಿತಾಬುಗಳನ್ನು ಸಂರಕ್ಷಿಸುವ ಅಬ್‌ದಿಯ್ಯ ನಮ್ಮೊಂದಿಗೆ ಹಂಚಿಕೊಂಡರು. ಕಳೆದ ಅಕ್ಟೋಬರ್ ತಿಂಗಳು ‘ಐತಿಹಾಸಿಕ ದಿನ’ವಾದ್ದರಿಂದ ಅಬ್‌ದಿಯ್ಯಾರ ಮನೆಯ ಸುತ್ತ-ಮುತ್ತಲೂ ಜನ ಸೇರಿದ್ದರು. “ನಾನು ಈ ಮನೆಯಲ್ಲಿ ಜನಿಸಿದೆ, ಇದೇ ಮನೆಯಲ್ಲಿ ಮರಣ ಹೊಂದುವೆನು, ಇನ್ಶಾ ಅಲ್ಲಾಹ್” ಕಿತಾಬುಗಳ ಕುರಿತು ಕೇಳುವ ಮೊದಲೇ ಅಬ್‌ದಿಯ್ಯಾ ಮುಂದುವರಿಸಿದರು! ವಾಸ್ತವದಲ್ಲಿ ಈ ಮನೆಯ ಐತಿಹ್ಯಗಳಿಗೆ ಅಬ್‌ದಿಯ್ಯಾಕ್ಕಿಂತಲೂ ಪ್ರಾಯವಿದೆ. ಕಿತಾಬುಗಳೊಂದಿಗೆ ನಿಕಟ ಸಂಪರ್ಕವೂ ಇದೆ. ಅವರ ತಂದೆ ಇಮಾಂ ಶೈಖ್ ಮುಹಮ್ಮದ್ ಖೈರ್ ಇಸ್ಹಾಖ್ ಖುರ್‌ಆನ್ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮನೆಯ ಅಂಗಳದಲ್ಲಿ ಮದ್ರಸಾ ಪ್ರಾರಂಭಿಸಿದ್ದರು. ಅವರು ಹುಡುಗರಿಗೂ, ಅಬ್‌ದಿಯ್ಯಾರ ತಾಯಿ ಹುಡುಗಿಯರಿಗೂ ಕಲಿಸುತ್ತಿದ್ದರು. ನಂತರ ಅಬ್‌ದಿಯ್ಯಾರ ಪತಿ ಸುಲೈಮಾನ್ ಕೂಡಾ ಮದ್ರಸಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅಬ್‌ದಿಯ್ಯಾರ ಸಹೋದರಿಯರ ಪೈಕಿ ಮದ್ರಸಾದ ಅಧ್ಯಾಪಕಿಯಾಗಿ ಅವಳು ಮಾತ್ರ ಇದ್ದಳು.

ಅಬ್‌ದಿಯ್ಯಾರ ಚಿಂತನೆಗಳು ಜನನಿಬಿಡವಾದ ಆ ಪೌರಾಣಿಕ ಕಾಲದ ನೆನಪುಗಳಿಗೆ ಹೊತ್ತೊಯ್ದವು. ಪ್ರಾತಃಕಾಲದ ತರಗತಿಗಳು ಶಿಶುವಿಹಾರದ ಬಗ್ಗೆ ಕನವರಿಸಿಸುತ್ತಿದ್ದವು. ಆ ಸಮಯದಲ್ಲಿ ಅರಬಿ ಅಕ್ಷರ ಹಾಗೂ ಕೆಲ ಮೂಲಪದವನ್ನು ಪರಿಚಯಿಸಲಾಗುತ್ತಿತ್ತು. ಮಧ್ಯಾಹ್ನದ ತರಗತಿ, ಪಾರಾಯಣಕ್ಕೆ ಸಂಬಂಧಿಸಿದ ನಿಯಮಾವಳಿಗಳ ಪಠಣಕ್ಕಾಗಿ ಶೆಡ್ಯೂಲ್ ಮಾಡಿದ್ದರು. ಸಂಧ್ಯಾ ವೇಳೆ ಯುವಕ ಯುವತಿಯರ ಆಳ- ಗಂಭೀರ ಚರ್ಚೆಗಳನ್ನು ಏರ್ಪಾಡು ಮಾಡಲಾಗುತ್ತಿತ್ತು. “ಒಟ್ಟಿಗೆ ಅಧ್ಯಯನ ನಡೆಸುವುದರಿಂದ ಗಹನವಾದ ವಿಷಯಗಳು ವೇದ್ಯವಾಗುತ್ತಿತ್ತು..” ಎಂಬುದು ಅವರ ಅನಿಸಿಕೆ. ಎಲ್ಲಾ ವಿದ್ಯಾರ್ಥಿಗಳ ಬಳಿ ಪಠ್ಯ ಬರೆದಿಟ್ಟು ಸಂರಕ್ಷಿಸಲು ಕಿತಾಬುಗಳಿದ್ದವು. ಪಠ್ಯ ಭಾಗಗಳನ್ನು ನಕಲಿಸಿ ಬರೆಯಲು ಉಪಯೋಗಿಸುವ ಪುಸ್ತಕಗಳಿಗೂ ‘ಕಿತಾಬ್’ ಎಂದು ವಿಶೇಷವಾಗಿ ಕರೆಯುತ್ತಿದ್ದರು. ಇಂದೂ ಕೂಡ ಅಬ್‌ದಿಯ್ಯಾ ಖುರ್‌ಆನ್ ಮನಮೋಹಕರವಾಗಿ ಪಠಿಸುತ್ತಾರೆ. ನಮ್ಮ ಒತ್ತಾಯದ ಮೇರೆಗೆ ಅಬ್‌ದಿಯ್ಯಾ ಕಿತಾಬುಗಳು ಸಂರಕ್ಷಿಸಿದ ಮನೆಯ ಒಳಭಾಗಕ್ಕೆ ಕರೆದೊಯ್ದರು. ಹಳೆ ಕಾಲದ ಮೂಲ ಬಣ್ಣ ಮರೆಯಾದ, ಅವರ ತಂದೆಯ ಎರಡು ಕೈಬರಹದ ಪ್ರತಿ ಜೋಡಿಸಿಟ್ಟಿದ್ದರು. ಧಾರ್ಮಿಕ ಅಧ್ಯಾಪಕರ ಅಕ್ಷರಗಳಲ್ಲಿ ಪಡಿಮೂಡಿದ ಆ ಕಿತಾಬುಗಳು ಕೇವಲ ನಕಲಿಸಿ ಬರೆದ ಪ್ರತಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಅದರಲ್ಲೊಂದು ಕಿತಾಬ್ ‘ಜಾವಿ’ (ಅರೇಬಿಕ್ ಲಿಪಿ ಉಪಯೋಗಿಸುವ ಮೊದಲು ಆಗ್ನೇಯ ಏಷ್ಯ ಭಾಷೆ) ಭಾಷೆಯಲ್ಲಿ ವಿರಚಿತವಾಗಿದ್ದವು. ಎರಡನೇ ಕಿತಾಬ್ ಆಫ್ರಿಕನ್ ಅರೇಬಿಕ್ ಭಾಷೆಯಲ್ಲಿತ್ತು. ‘ವರ್ಷ-1871’ ಎಂದು ಲಗತ್ತಿಸಿದ/ಸೂಚನೆಯಿರುವ ಅಪೂರ್ವ ಸಂಗ್ರಹವಾದ ಈ ಕಿತಾಬ್‌ಗಳು ನೋಡುಗರನ್ನು ಆಕರ್ಷಿಸುವುದಂತೂ ಗ್ಯಾರಂಟಿ.

ಡಚ್‌ನಿಂದ ದಕ್ಷಿಣ ಆಫ್ರಿಕಾದ 11 ಅಧಿಕೃತ ಭಾಷೆಗಳಲ್ಲಿ ಒಂದಾದ ‘ಆಫ್ರಿಕಾನ್ಸ್’ ರೂಪ ತಾಳಿದವು. 1814 ರಲ್ಲಿ ಡಚ್ಚರು ಕೇಪ್‌ಟೌನ್ (Cape Town) ಅನ್ನು ಬ್ರಿಟಿಷರಿಗೆ ಬಿಟ್ಟು ಕೊಡುವ ಮುಂಚೆ Dutch East India Company ಅಲ್ಲಿ ವಸಾಹತು ಆಳ್ವಿಕೆ ನಡೆಸುತ್ತಿದ್ದವು. ಇದಲ್ಲದೆ ಮಲಾಯ್, ಇಂಗ್ಲೀಷ್, ಪೋರ್ಚುಗೀಸ್ ಮತ್ತು ಸ್ಥಳೀಯ ಖೋಯಿ ಭಾಷೆಗಳೂ ಆಫ್ರಿಕನ್ಸ್‌ರನ್ನು ಸ್ವಾಧೀನಿಸಿತು. 1820 ರಲ್ಲಿ ಆಫ್ರಿಕನ್ಸ್‌ನಲ್ಲಿ ಬರಹ ಪ್ರಾರಂಭಿಸಿದರು ಎಂದು ಉಲ್ಲೇಖಿಸಲಾಗಿದೆ. ಕಿತಾಬಿನ ಪ್ರಧಾನ ಭಾಗಗಳನ್ನು ಬರೆದು ಸಂರಕ್ಷಿಸಿಡಲು ಅರೇಬಿಕ್ ಲಿಪಿ ಉಪಯೋಗಿಸಿ ಕಾರ್ಯ ಪ್ರವೃತ್ತರಾದರು. 1950 ರ ದಶಕದಲ್ಲಿ ಅರೆಬಿಕ್ ಲಿಪಿ ಬಳಸಿ ಬರೆಯಲ್ಪಟ್ಟ ಆಫ್ರಿಕನ್ ಮಾತುಗಳೊಂದಿಗೆ ಲಿಖಿತ ಪದಗಳನ್ನು ಕಂಡುಹಿಡಿದ ಡಚ್ ಭಾಷಾ ಶಾಸ್ತ್ರಜ್ಞ ಆಡ್ರಿಯನ್ಸ್ ವ್ಯಾನ್ ಸೆಲ್ಮಾಸನ್ ‘ಆಫ್ರಿಕನ್ ಅರೇಬಿಕ್’ ಎಂಬ ಪದ ಮೊದಲನೆಯದಾಗಿ ಪ್ರಯೋಗಿಸಿದರು. ಖ್ಯಾತ ವಿದ್ವಾಂಸ ಅಬೂಬಕರ್ ಎಫಂದೀರವರ ಆಫ್ರಿಕನ್ ಅರೇಬಿಕ್‌ ಭಾಷೆಯ ಅತ್ಯಂತ ಹಳೆಯ ಕೃತಿ ‘ಧಾರ್ಮಿಕ ವ್ಯಾಖ್ಯಾನ’ (Beyan al-Din) ಎಂದು ಪರಿಗಣಿಸಲಾಗಿದೆ. ಹಲವಾರು ಆಫ್ರಿಕನ್-ಅರೇಬಿಕ್ ಗ್ರಂಥಗಳಿದ್ದರೂ ಆಫ್ರಿಕನ್ ಅರೇಬಿಕ್‌ನ ಪರಿಣಾಮಕಾರಿ ಬಳಕೆಯು ಗ್ರಾಮಾಂತರದಲ್ಲಿ ವಿರಚಿತವಾದ ಕಿತಾಬ್‌ಗಳಲ್ಲಿ ಕಂಡುಬರುತ್ತದೆ ಎಂದು ಭಾಷಾಶಾಸ್ತ್ರಜ್ಞರ ನಿಲುವು. ಹೊರತಾಗಿ ಅಧಿಕೃತ ಭಾಷೆಯಾಗಿ ಸ್ಥಾನಮಾನ ನೀಡದ ಕಾರಣ 1925 ರವರೆಗೆ ಅಲ್ಲಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗಲಿಲ್ಲ. ಕೆಲ ಅಪೂರ್ವ ಚರ್ಚೆಗಳ ಬಳಿಕ ಅಬ್‌ದಿಯ್ಯಾ ನಮಗೆ ಆಫ್ರಿಕನ್ ಅರೇಬಿಕ್ ಭಾಷೆಯ ಕಿತಾಬ್ ಓದಿ ಕೇಳಿಸುವೆ ಎಂದು ತಿಳಿಸಿ, ಕನ್ನಡಕ ಧರಿಸಿ ಓದಲು ಶುರುವಿಟ್ಟಾಗ ಭಾವನಾತ್ಮಕವಾಗಿ ಸೂಚಿಸಿದರು. “ಇಲ್ಲ, ನನಗದು ಸಾಧ್ಯವಿಲ್ಲ. ಓದಿ ಬಹಳ ಸಮಯವಾಯಿತು. ಎಲ್ಲವೂ ಕಳೆದುಹೋಗಿವೆ..!” ಇದೊಂದು ಧೃಢವಿಶ್ವಾಸವೆಂದು ನಾವು ಭಾವಿಸಿದೆವು. ತನ್ನ ಪತಿಯ ಸ್ಮರಣಾರ್ಥ ಅವರು ರಚಿಸಿದ ಒಂದು ಕವಿತೆ ಹೇಳಿಕೊಡುವ ಮೂಲಕ ನಮ್ಮ ದಾಹ ತೀರಿಸುವ ಸಲುವಾಗಿ ನೀರುಣಿಸಿ ಶ್ರಮಪಟ್ಟರು.

ಅಬ್‌ದಿಯ್ಯಾರ ಕುಟುಂಬ ಪರಂಪರೆ ಇಂಡೋನೇಷ್ಯಾದ ದ್ವೀಪ ಸಮೂಹದಲ್ಲಿರುವ ಸುಗಂಧ ದ್ರವ್ಯದ ‘ವ್ಯಾಪಾರ ಕೇಂದ್ರ’ ಟಿಡೋರ್‌ನ (Tidore) ಇಮಾಂ ಅಬ್ದುಲ್ಲಾಹ್ ಖಾದ್‌ರಿಯ್ಯ್‌ಗೆ ಮುಟ್ಟುತ್ತದೆ. ಬ್ರಿಟಿಷರಿಗೆ ಸಹಾಯ ಮಾಡಿದ ಎಂಬ ನೆಪವೊಡ್ಡಿ 1780 ರಲ್ಲಿ ಡಚ್ಚರು ಖೈದಿಯಾಗಿ ಕೇಪ್ ಟೌನ್‌ಗೆ ಕರೆದೊಯ್ದರು. ನೆಲ್ಸನ್ ಮಂಡೇಲಾ ಹದಿನೆಂಟು ವರ್ಷ ಜೈಲು ಶಿಕ್ಷೆ ಅನುಭವಿಸಿದ ರೋಬನ್ ದ್ವೀಪದ (Robben Island) ಜೈಲಿನಲ್ಲಿ ಅವರಿಗೆ ಹತ್ತು ವರ್ಷದ ಶಿಕ್ಷೆ ವಿಧಿಸಲಾಯಿತು. ಅಲ್ಲಿ ಖುರ್‌ಆನಿನ ಅನೇಕ ಕೈಬರಹದ ಪ್ರತಿ ಅವರು ಬರೆದರು. ಜೈಲಿನಿಂದ ಬಿಡುಗಡೆಯಾದ ಕೂಡಲೇ ಆಫ್ರಿಕಾದ ಮೊದಲ ಮಸೀದಿ ‘ಅವ್ವಲ್ ಮೋಸ್ಕ್’ಗೆ ಶಿಲಾನ್ಯಾಸ ನೆರವೇರಿಸಿದರು.

ಅಬ್‌ದಿಯ್ಯಾರೊಂದಿಗಿನ ಸಂಭಾಷಣೆಯ ಬಳಿಕ ಅವರ ಅಕ್ಕ-ಪಕ್ಕದವರೊಂದಿಗೆ ನಾನು ಸಂವಾದಿಸಿದೆ. ಕಿತಾಬಿನ ಕುರಿತು ಕೇಳಿದಾಗಲೆಲ್ಲ ಅವರ ನೀಡಿದ ಮಾಹಿತಿಯಿಂದ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ವೇದ್ಯವಾಯಿತು. ಅದರಲ್ಲಿ ಒಂದು ಕುಟುಂಬ ಪ್ರಸಿದ್ಧ ಪಂಡಿತ ಅಶ್‌ಮಾತ್ ಡೇವಿಡ್‌ರ ಮನೆಗೆ ಕರೆದುಕೊಂಡು ಹೋದರು. ಅವರು ತನ್ನ ಜೀವನದ ಸಿಂಹಭಾಗ ಆಫ್ರಿಕನ್ ಅರೇಬಿಕ್ ಪಠಿಸಲು ಮೀಸಲಿಟ್ಟವರು. 1998 ರಲ್ಲಿ ತನ್ನ 59 ನೇ ವಯಸ್ಸಿನಲ್ಲಿ ನಿಧನರಾದಾಗ ಕಿತಾಬುಗಳ ನಿಗೂಢ ರಹಸ್ಯ ವರ್ಧಿಸಿದವು. ಅವರು ವಾಸಿಸುತ್ತಿದ್ದ ಮನೆ ಇಂದು ವಿದೇಶಿ ವಿದ್ಯಾರ್ಥಿಯರು ಬಾಡಿಗೆ ಪಡೆದಿದ್ದಾರೆ. ಅವರು ಯಾರು! ಅವರ ಕಿತಾಬುಗಳು ಎಲ್ಲಿವೆ..!? ಎಂದು ಯಾರಿಗೂ ಖಂಡಿತಾ ತಿಳಿದಿಲ್ಲ. ಕೆಲವರು ಅವರ ಸಹೋದರಿಯನ್ನೂ ಇನ್ನು ಕೆಲವರು ಎರಡನೇ ಪತ್ನಿಯನ್ನು ಸಂಪರ್ಕಿಸಲು ಸೂಚಿಸಿದರು. ದುರದೃಷ್ಟವಶಾತ್ ಎಲ್ಲವೂ ವಿಫಲವಾಯಿತು. ಅಬ್‌ದಿಯ್ಯಾರ ಪರಂಪರೆಯ ಉಳಿದ ಭಾಗಗಳಿರುವಂತೆ ಆಫ್ರಿಕನ್ ಅರೇಬಿಕ್ ಭಾಷೆಯ ಪರಿಜ್ಞಾನ ಹೊಂದಿರುವವರು ಭಾರೀ ವಿರಳ!

ಮೂಲ- ಆಲಿಯಾ ಯೂನಿಸ್
ಅನು- ಅಶ್ರಫ್ ನಾವೂರು

ವಿಜ್ಞಾನದ ಮೂಲಕ ಸತ್ಯವನ್ನರಿಯಲು ಸಾಧ್ಯವೆ?

ಆಶಯ, ಸಿದ್ಧಾಂತ, ವಿಚಾರ, ವಿಧಾನಗಳನ್ನು ಅಳೆಯುವ ಮೀಟುಗೋಲಾಗಿ ಇಂದು ‘ವೈಜ್ಞಾನಿಕತೆ’ ಮಾರ್ಪಟ್ಟಿದೆ. ವೈಜ್ಞಾನಿಕ ಎಂಬ ವಿಶೇಷಣ ಇಂದು ಯಥೇಚ್ಛವಾಗಿ ಈ ನಿಟ್ಟಿನಲ್ಲಿ ಚಾಲ್ತಿಯಲ್ಲಿದೆ. ಅವೈಜ್ಞಾನಿಕವೆಂಬ ಹಣೆಪಟ್ಟಿಯಿಂದ ಹೊರಬರಲು ವಿಜ್ಞಾನದ ವಿಷಯಗಳಿಗೆ ಕಿಂಚಿತ್ ಸಂಬಂಧವಿಲ್ಲದ ಸಂಗತಿಗಳನ್ನೂ‘ವೈಜ್ಞಾನಿಕ’ಗೊಳಿಸಲು ತಿಪ್ಪರಲಾಗ ಹಾಕುತ್ತಿದ್ದಾರೆ. ಒಂದು ಆಶಯವನ್ನು ಗೇಲಿ ಮಾಡಲು ಸುಲಭವಾಗಿ ಪ್ರಯೋಗಿಸಬಹುದಾದ ನುಡಿಗಟ್ಟಾಗಿ ಇಂದು ಈ ಅರಿಮೆಪದ ಬಳಕೆಯಲ್ಲಿದೆ. ವಿಜ್ಞಾನದ ವೃತ್ತದಿಂದ ಹೊರಗಿರುವ, ವಿಜ್ಞಾನದ ಬೌಂಡರಿ ಕೊನೆಗೊಳ್ಳುವಲ್ಲಿ ಆರಂಭವಾಗುವ ಧಾರ್ಮಿಕ ವಿಚಾರಗಳು ಹಾಗೂ ಅತಿಭೌತಶಾಸ್ತ್ರೀಯ (metaphysical) ಸಂಗತಿಗಳಲ್ಲಿ ಕೂಡಾ ವೈಜ್ಞಾನಿಕ-ಅವೈಜ್ಞಾನಿಕ ವಿಂಗಡನೆ ತಂದು ಹಂಸ ಕ್ಷೀರ ನ್ಯಾಯ ಜಾರಿ ಮಾಡುತ್ತಿರುವುದಂತೂ ಸೋಜಿಗವೇ. ಖುರ್‌ಆನಿನಲ್ಲಿ ʼಬಿಗ್‌ ಬ್ಯಾಂಗ್‌ ಥಿಯರಿʼ ಯನ್ನು ತೋರಿಸಿಕೊಡಲು ಕೆಲವು ಪ್ರಬುದ್ಧರು ಈಗಲೂ ಕೂಡಾ ಮುಂದೆ ಬರುತ್ತಿರುವುದು ಈ ‘ವೈಜ್ಞಾನಿಕ ಪ್ರಜ್ಞೆ’ಯೊಳಗೆ ಬಂಧಿಯಾದುದರಿಂದಲೇ. ಹಿಂದೂ, ಕ್ರಿಶ್ಚಿಯನ್‌ ವೇದಗ್ರಂಥಗಳಲ್ಲಿ ಕೂಡಾ ಈ ರೀತಿಯ ಹುಡುಕಾಟ ನಡೆದಿದೆ. ವೈಜ್ಞಾನಿಕ ವಿಧಾನದಿಂದ ಎಲ್ಲಾ ತರದ ಅರಿವುಗಳನ್ನು ಪಡೆಯಲು ಸಾಧ್ಯ ಎಂದು ಎಲ್ಲರೂ ನಂಬಿದ್ದಾರೆ. ನಾವು ಧರ್ಮಭೀರು ಆದರೆ ವೈಜ್ಞಾನಿಕ ನಿಕಷಕ್ಕೊಡ್ಡಿ ಮಾತ್ರವೇ ಅದರ ನಂಬಿಕೆ ಆಚಾರಗಳನ್ನು ಸ್ವೀಕರಿಸಬಲ್ಲೆವು ಅನ್ನುವುದು ಒಂಥರಾ ಕೀಳರಿಮೆ, ಹಿಪಾಕ್ರಸಿಯ ದ್ಯೋತಕ. ಮಿಕ್ಕ ಜನರೂ ಬಹಳ ಕ್ಯಾಷ್ಯುವಲ್ ಆಗಿ ಇಂತಹ ವಿಚಿತ್ರ ವಿಂಗಡನೆಗಳನ್ನು ಮಾಡುತ್ತಿರುವುದು, ತೀರ್ಪುಗಳನ್ನು ನೀಡುತ್ತಿರುವುದು ಯುಗದ ಟ್ರೆಂಡ್‍ಗಳಿಗೆ ಜೋತುಬಿದ್ದೆ ಹೊರತು ಸುಚಿಂತಿತವಾದ ಆಲೋಚನೆಗಳ, ಸಮಗ್ರವಾದ ಅಧ್ಯಯನಗಳ ಫಲಶೃತಿಯಲ್ಲ.

ಧರ್ಮದ ವಿಚಾರಧಾರೆಗಳು ವಿಜ್ಞಾನದ ಆವಿಷ್ಕಾರ, ಕಂಡುಹಿಡಿತಗಳಿಗೆ ಅನುಗುಣವಾಗಿ ಮೂಡಿಬರಬೇಕು, ವೈಜ್ಞಾನಿಕ ತಥ್ಯಗಳಿಗೆ ‘ವಿರುದ್ಧ’ವಾಗಿ ಧರ್ಮದಲ್ಲಿ ಏನಾದರೂ ಇದ್ದರೆ ಅದನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಕೆಲವರು ವಾದಿಸುತ್ತಾರೆ. ಅಂತಹ ಸಾಧ್ಯತೆಗಳು ಇಲ್ಲದ ಧಾರ್ಮಿಕ ನಿಲುವುಗಳನ್ನು ತಳ್ಳಿ ಹಾಕಬೇಕು ಎಂಬುದು ಅವರ ಅಂಬೋಣ. ಹೀಗೆ ವಾದಿಸುವವರು ತಮ್ಮ ವಾದಕ್ಕೆ ತಳಹದಿಯಾಗಿ ‘ಸತ್ಯ ಅಸತ್ಯಗಳನ್ನು ಪ್ರತ್ಯೇಕಿಸಲು ವಿಜ್ಞಾನವೊಂದೆ ಮಾರ್ಗ’ ಎಂಬ ತಪ್ಪಾದ ಪ್ರಿಮೈಸನ್ನು ಅರಿತೋ ಅರಿಯದೆಯೋ ಇಟ್ಟು ಕೊಂಡಿರುತ್ತಾರೆ. ವಿಜ್ಞಾನಿಗಳ ಮಾತ್ರವಲ್ಲ ಧರ್ಮ ವಿಶ್ವಾಸಿಗಳ ಕಡೆಯಿಂದ ಕೂಡಾ ಈ ಪ್ರಮಾದ ಉಂಟಾಗುತ್ತಿದ್ದು ಸದ್ರಿ ಸುಪ್ತ ಪ್ರಿಮೈಸ್ ವಿಜ್ಞಾನದ ತಳಹದಿಯಾದ ‘ವೈಜ್ಞಾನಿಕ ವಿಧಾನ’ದ ಸ್ವೀಕಾರಾರ್ಹತೆಗೂ ಸವಾಲೊಡ್ಡುತ್ತದೆ ಎಂಬುದನ್ನು ಅವರು ಅರ್ಥ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಜ್ಞಾನ, ವೈಜ್ಞಾನಿಕತೆ ಮುಂತಾದ ಅರಿಮೆಪದಗಳ ವ್ಯಾಖ್ಯೆ, ಅದರ ತಾತ್ವಿಕ ಆಯಾಮಗಳು ಹಾಗೂ ಇತಿಮಿತಿಗಳು ಮುಂತಾದ ವಿಷಯಗಳ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ.

ಅಕಾಡೆಮಿಕ್ ಪ್ರೆಸ್ ಪ್ರಕಟಿಸಿದ Science and Technology Dictionary ಯ ಪ್ರಕಾರ ವಿಜ್ಞಾನಕ್ಕೆ ಎರಡು ಅರ್ಥವಿದೆ. ಒಂದನೆಯ ಅರ್ಥದ ಪ್ರಕಾರ ವಿಜ್ಞಾನ ಭೌತಿಕ ವಿದ್ಯಮಾನಗಳನ್ನು ವ್ಯವಸ್ಥಿತವಾದ ವೀಕ್ಷಣೆ ಪರೀಕ್ಷಣೆಗಳಿಗೆ ಒಳಪಡಿಸಿ ಅದರ ವಾಸ್ತವಗಳನ್ನು ಹೊರಗೆಡಹಿ ಅವುಗಳ ತಳಹದಿಯಲ್ಲಿ ನೈಸರ್ಗಿಕ ನಿಯಮಗಳನ್ನು ಮತ್ತು ತತ್ವಗಳನ್ನು ರೂಪಿಸುವ ಪ್ರಕ್ರಿಯೆಯಾದರೆ ಮತ್ತೊಂದು ವಿವರಣೆಯ ಪ್ರಕಾರ ಈ ಪ್ರಕ್ರಿಯೆಯ ಫಲಶೃತಿಯಾದ ತಿಳಿವುಗಳ ಸಮಾಹಾರ. ಎರಡು ನಿರ್ವಚನದ ಪ್ರಕಾರವೂ ವಿಜ್ಞಾನದ ಚರ್ಚಾವಸ್ತು ವಾಸ್ತವ ಜಗತ್ತಿನ ಗೋಚರ ಆಯಾಮಗಳು ಮಾತ್ರವೆಂಬುದು ಸ್ಪಷ್ಟ. ಗೋಚರ ಜಗತ್ತಿನ ಚಮತ್ಕಾರಗಳು ಹುಲು ಮಾನವನ ಬೆರಗಿಗೆ ಹಬ್ಬ ನೀಡಿ ಅವನ ಜಿಜ್ಞಾಸೆಯನ್ನು ಬಡಿದೆಬ್ಬಿಸಿದೆ. ಜಗತ್ತಿನ ರಹಸ್ಯಗಳನ್ನು ಬೇಧಿಸಿ ಅದನ್ನು ತನ್ನ ಅಭೀಪ್ಸೆಯಂತೆ ಪುನರ್ರಚಿಸಲು ಮಾನವ ಶತಾಯಗತಾಯ ಪ್ರಯತ್ನ ಮಾಡಿದ್ದಾನೆ. ಈ ಪ್ರಯತ್ನದಲ್ಲಿ ಹಲವಾರು ಕಡೆ ವಿಜಯದ ನಗೆ ಬೀರಿದ್ದರೂ ಕೆಲವೆಡೆ ಎಲ್ಲೆ ಮೀರಿ ಎಡವಿ ಬಿದ್ದಿದ್ದಾನೆ. ಅದಾಗ್ಯೂ, ವಿಜ್ಞಾನ ನಮ್ಮ ಜೀವನದಲ್ಲಿ ಹಲವಾರು ಸೌಕರ್ಯ ಸವಲತ್ತನ್ನು ಒದಗಿಸಿತ್ತಿರುವ ಮಹತ್ವಪೂರ್ಣ ಅನುಗ್ರಹವೇ ಎಂಬುದನ್ನು ಅಲ್ಲಗೆಳೆಯುವುದಿಲ್ಲ.

ಆಧುನಿಕ ವಿಜ್ಞಾನ ಎನ್ನುವುದು ಇತ್ತೀಚೆಗಿನ ವಿದ್ಯಮಾನ. ಪ್ರಪಂಚದ ಕುರಿತು ಹಿಂದಿನಿಂದಲೇ ಅಧ್ಯಯನಗಳು ನಡೆಯುತ್ತಿತ್ತು. ಆದರೆ ಅದನ್ನು ಇಂದಿನ ವಿಜ್ಞಾನದ ನೆಲೆಯಲ್ಲಿ ಗ್ರಹಿಸಲು ಸಾಧ್ಯವಲ್ಲ. ಇಂದಿನ ಪರಿಭಾಷೆಯಲ್ಲಿ ಫಿಝಿಕ್ಸ್‌ ಅಥವಾ ಭೌತವಿಜ್ಞಾನ ಎನ್ನುವುದು ಭೌತಿಕ ಯಾ ನಿರ್ಜೀವ ವಸ್ತುಗಳ ಕುರಿತ ಅಧ್ಯಯನವನ್ನು. ಜೀವವಿರುವ ವಸ್ತುಗಳ ಕುರಿತ ಶಿಸ್ತನ್ನು ಬಯೋಲಜಿ ಎಂದು ಕರೆಯಲಾಗುತ್ತದೆ. ಈ ವಿಂಗಡನೆಯನ್ನು ಸಾರ್ವತ್ರಿಕ ಮತ್ತು ಸ್ವೀಕಾರಯೋಗ್ಯ ಎನ್ನಲು ಬರದು. ಇಸ್ಲಾಮಿನಲ್ಲಂತೂ ಈ ವಿಭಜನೆ ಅಪೂರ್ಣ. ಒಂಟೆಗಳನ್ನು ಮತ್ತು ಆಕಾಶ ಭೂಮಿಗಳನ್ನು ಒಂದೇ ವಿವರಣೆಯೊಳಗೆ ತಂದಿರುವುದನ್ನು ನಮಗೆ ಖುರ್‌ಆನಿನಲ್ಲಿ ಕಾಣಲು ಸಾಧ್ಯ. ಅಲ್ಲಾಹನು ಹಯ್ಯುಲ್‌ ಖಯ್ಯೂಮ್‌ ಅಥವಾ ಎಂದೆಂದಿಗೂ ಜೀವಿಸುವವನಾಗಿದ್ದಾನೆ ಎಂದಿದೆ ಖುರ್‌ಆನ್.‌ ಆದರೆ ಅವನನ್ನು ಬಯೋಲಜಿಕಲ್‌ ಎಂದೆನ್ನಲು ಸಾಧ್ಯವೇ? ಜೀವದ ಬಯೋಲಜಿಕಲ್‌ ವ್ಯಾಖ್ಯೆ ಹೊಸತು ಆಗಿದ್ದು ಅದು ಆಧುನಿಕ ವಿಜ್ಞಾನದ ತಳಹದಿ ಕೂಡಾ ಹೌದು. ನಮಗೆ ಅದರಾಚೆಗೆ ಚಿಂತಿಸಬೇಕಾದ ಅಗತ್ಯ ಬರುತ್ತದೆ. ಅದೇ ವೇಳೆ, ಫಿಝಿಕ್ಸಿನ(ಇಲ್ಮ್ ಅಲ್ ತ್ವಬೀಇಯ್ಯ್) ಸಾಂಪ್ರದಾಯಿಕ ವ್ಯಾಖ್ಯೆಯಲ್ಲಿ ಬಯೋಲಜಿ, ಕೆಮಿಸ್ಟ್ರಿ, ಫಿಝಿಕ್ಸ್‌ ಎಲ್ಲವೂ ಒಳಪಡುತ್ತದೆ. ಸೃಷ್ಟಿಗಳ ಲಕ್ಷಣಗಳ ಬಗ್ಗೆ ಕಲಿಯುವ ವಿಜ್ಞಾನ ಎಂಬ ಮನಗಾಣಿಕೆ ಅದರ ಹಿಂದಿದೆ. ಒಟ್ಟಾರೆಯಾಗಿ ಸಮಕಾಲೀನ ವಿಜ್ಞಾನದ ಪಂಚಾಂಗ ಆಗಿರುವ ಹೊಸ ವಿಂಗಡನೆ ಈಗ್ಗೆ ಚಾಲ್ತಿಗೆ ಬಂದದ್ದು ಎಂದು ತಿಳಿಯಬಹುದು.

ವಿಜ್ಞಾನ ಅರಿವುಗಳನ್ನು ಉತ್ಪಾದಿಸುವುದು ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು. ಒಂದು ನಿಶ್ಚಿತ ಗುಂಪಿನ ಕೆಲವು ಸದಸ್ಯರನ್ನು ಸ್ಯಾಂಪ್ಲಿಂಗ್ ನಿಯಮಗಳ ಪ್ರಕಾರ ಆಯ್ದು ಅವುಗಳ ವರ್ತನೆಗಳನ್ನು ಅವಲೋಕಿಸಿ, ಕಾರಣಗಳನ್ನು ಹುಡುಕಿ, ತಾಳೆ ಮಾಡಿ ಒಂದು ನಿಗಮನಕ್ಕೆ ಬರಲಾಗುತ್ತದೆ. ಹೀಗೆ ಕೆಲವೇ ಕೆಲವು ಸದಸ್ಯರಲ್ಲಿ ಪ್ರಯೋಗ ಮಾಡಿದಾಗ ದೊರೆಯುವ ನಿಗಮನವನ್ನು ಇಡೀ ಗುಂಪಿಗೇ ಅನ್ವಯಿಸಲಾಗುತ್ತದೆ. ಇದಾಗಿದೆ ವೈಜ್ಞಾನಿಕ ವಿಧಾನದ ಯಕಃಶ್ಚಿತ್ ಚಿತ್ರಣ. ಕುದಿಯಲು ಇಟ್ಟ ಅಕ್ಕಿಯಿಂದ ಅಲ್ಪವನ್ನು ತೆಗೆದು ಪರಿಶೋಧಿಸಿ ಪಾತ್ರೆಯಲ್ಲಿನ ಎಲ್ಲ ಅಕ್ಕಿ ಅನ್ನವಾಗಿದೆಯೆಂದು ಸಾಧಾರಣ ನಾವು ನಿರ್ಣಯಿಸುತ್ತೇವಲ್ಲಾ, ವೈಜ್ಞಾನಿಕ ವಿಧಾನವೂ ಹಾಗೇನೆ. ಇಂತಹ ತೀರ್ಪುಗಳು ಬಹ್ವಂಶ ಸರಿಯಾಗಬಹುದಾದರೂ ತಪ್ಪಾಗುವ ಸಾಧ್ಯತೆಗಳು ಇಲ್ಲದಿಲ್ಲ.

ವೈಜ್ಞಾನಿಕ ವಿಧಾನಕ್ಕೆ ಆತ್ಯಂತಿಕವಾಗಿ ನಾಲ್ಕು ವಿಶೇಷತೆಗಳಿವೆ. ಒಂದನೆಯದಾಗಿ ಅದು ಗೋಚರ ಪ್ರಾಕೃತಿಕ ವಿಷಯಗಳಲ್ಲಿ ಮಾತ್ರ ಗಮನ ಕೇಂದ್ರೀಕರಿಸುತ್ತದೆ. ಆದುದರಿಂದಲೇ ಈ ಜೀವನದ ಉದ್ದೇಶವೇನು ಅದರ ಅರ್ಥವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಅದಕ್ಕೆ ಉತ್ತರಿಸಲು ಸಾಧ್ಯವಿಲ್ಲ. ಎರಡನೆಯದಾಗಿ, ಭೌತಿಕ ಜಗತ್ತನ್ನು ವಿವರಿಸುವುದು ಮಾತ್ರವೆ ಅದರ ಗುರಿ. ಮೂರನೆಯದಾಗಿ, ಪರೀಕ್ಷಣಾಯೋಗ್ಯವಾದ ಆಶಯಗಳನ್ನು ಮಾತ್ರವೇ ಅದು ಸ್ವೀಕರಿಸುವುದು. ನಾಲ್ಕನೆಯದಾಗಿ, ಪರೀಕ್ಷಣಾಯೋಗ್ಯವಾದವುಗಳನ್ನು ಪರೀಕ್ಷಿಸಿ ದೊರೆಯುವ ಆಶಯಗಳೆ ಅದರ ಪುರಾವೆಗಳು.

ಜ್ಞಾನಶಾಸ್ತ್ರಜ್ಞರು (epistemologists) ಇಂತಹ ಸಂಶೋಧನೆಗಳನ್ನು ಅನುಗಮನ (induction)ವಿಭಾಗದಲ್ಲಿ ಒಳಪಡಿಸಿದ್ದಾರೆ. ಗುಂಪಿನ ಸರ್ವರಿಗೂ ಅನ್ವಯವಾಗುವ ಸಾರ್ವತ್ರಿಕ ನಿಯಮಗಳನ್ನು ಅದರ ಸದಸ್ಯರಿಗೂ ಅನ್ವಯಗೊಳಿಸುವ ನಿಗಮನ (deduction) ವಿಧಾನಕ್ಕೆ ವಿಭಿನ್ನವಾಗಿ ವೈಜ್ಞಾನಿಕ ವಿಧಾನ ಅಥವಾ ಸೈಂಟಿಫಿಕ್ ಮೆಥಡ್ ಕೇವಲ ಅನುಮಾನವನ್ನಷ್ಟೇ(inference) ಉತ್ಪಾದಿಸಬಲ್ಲುದು, ಖಚಿತತೆಯನ್ನಲ್ಲ(certainty). ಆದುದರಿಂದಲೇ 18 ನೆಯ ಶತಮಾನದ ಪ್ರಮುಖ ತತ್ವಜ್ಞಾನಿ ಡೇವಿಡ್ ಹ್ಯೂಂ ತನ್ನ ಸುಪ್ರಸಿದ್ಧ ಗ್ರಂಥ “An Enquiry concerning Human Understanding”” ನಲ್ಲಿ “ಒಂದು ವರ್ಗದ ನಿಗದಿತ ಸದಸ್ಯರನ್ನು ವೀಕ್ಷಿಸಿ ನಾವು ವೀಕ್ಷಿಸದೆ ಇರುವ ಅಸಂಖ್ಯ ಇತರ ಸದಸ್ಯರ ಕುರಿತು ತೀರ್ಪು ಹೊರಡಿಸುವುದು ನಮ್ಮ ಜ್ಞಾನೇಂದ್ರಿಯಗಳ ಅನುಭವದಿಂದ ಮತ್ತು ಜ್ಞಾಪಕಶಕ್ತಿಯ ದಾಖಲೆಗಳಿಂದ ಸರಿ ಎನ್ನಲು ಬರದು ಎಂದಿದ್ದಾರೆ”.

ಸರ್ವ ಜ್ಞಾನಗಳ ಅಳತೆಗೋಲಾಗಿ ಅನರ್ಹ ಪ್ರಚಾರ ಪಡೆದಿರುವ ವೈಜ್ಞಾನಿಕ ಅರಿವುಗಳ ಉತ್ಪತ್ತಿ ಎಲ್ಲಿಂದ ಎಂದು ಈ ಕಿರು ವಿವರಣೆಯಿಂದ ಅರ್ಥೈಸಿರಬಹುದು. ವೈಜ್ಞಾನಿಕ ವಿಧಾನದಿಂದ ವರ್ತಮಾನದ ಅವಸ್ಥೆಯನ್ನು ಅವಲೋಕಿಸಿ ಭವಿಷ್ಯದ ಬಗ್ಗೆ ಅನುಮಾನಿಸಲು ಸಾಧ್ಯವಿದ್ದು ಚರಿತ್ರೆಯ ಕುರಿತು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ವಿಕಾಸವಾದವನ್ನೆ ಅಂತಿಮಗೊಳಿಸಿ ಇತರ ಗ್ರಹಿಕೆಗಳನ್ನೆಲ್ಲಾ ಸಾರಸಗಟಾಗಿ ತಿರಸ್ಕರಿಸುವವರು ಇಂತಹ ಜ್ಞಾನಶಾಸ್ತ್ರೀಯ ಸೂಕ್ಷ್ಮಗಳ ಕುರಿತು ಆಲೋಚಿಸುವುದೇ ಇಲ್ಲ. ಎಲ್ಲವೂ ವೈಜ್ಞಾನಿಕವಾಗಿರಬೇಕೆಂಬ ವಾದ ವಿಜ್ಞಾನಕ್ಕಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಆ ವಾದ ಸಯನ್ಸ್ ಅಲ್ಲ, ಅಬೌದ್ಧಿಕ ಮತ್ತು ಅವೈಜ್ಞಾನಿಕ ತಳಹದಿಯಲ್ಲಿ ಮೊಳೆತ ಸಯಂಟಿಸಂ. ಗೋಚರ ಜಗತ್ತಿನಾಚೆಗೆ ಏನೂ ಇಲ್ಲ ಸಾರಿ ಬಿಡುವ ಭಂಡ ಧೈರ್ಯವದು. ಸೃಷ್ಟಿಕರ್ತನ ಇರುವಿಕೆಯನ್ನು ಜಾಣ್ಮೆಯಿಂದ ಅಲ್ಲಗೆಳೆಯಲು ಬಳಸಲಾಗುತ್ತಿರುವ ಅಸ್ತ್ರ. ಇದರಲ್ಲಿ ವೈಚಾರಿಕತೆಯ ಒಂದಂಶವೂ ಇಲ್ಲ. ಅದರದ್ದು ಒಂಥರಾ ಸ್ವಯಂ ಸೋಲಿಸುವ ಪ್ರಕ್ರಿಯೆ. ಸತ್ಯ ಶೋಧನೆಗೆ ವಿಜ್ಞಾನವೊಂದೆ ದಾರಿ ಎಂಬ ಸಯಂಟಿಸಂನ ಮೂಲಭೂತ ತತ್ವ ತಿರುಗಿ ಅದರ ಸತ್ಯತೆಯನ್ನೇ ಪ್ರಶ್ನಿಸುತ್ತದೆ. ಯಾಕೆಂದರೆ, ‘ವೈಜ್ಞಾನಿಕ ವಿಧಾನದಿಂದ ಮಾತ್ರ ಸತ್ಯ ದೊರೆಯುತ್ತದೆ’ ಎಂಬ ಸಯಂಟಿಸಂನ ಮೂಲಭೂತ ವಾದವನ್ನು ಕೂಡಾ ವೈಜ್ಞಾನಿಕವಾಗಿ ಸಾಬೀತು ಮಾಡಬೇಡವೇ? ಆದರೆ ಅದು ಸಾಧ್ಯವಿಲ್ಲ ಎಂಬುದು ಸರ್ವಾಂಗೀಕೃತ. ಆದುದರಿಂದಲೇ, ವಿಜ್ಞಾನ ಕೂಡಾ ಒಂದರ್ಥದಲ್ಲಿ ‘ಅವೈಜ್ಞಾನಿಕ’ ಎನ್ನಬೇಕಾಗುತ್ತದೆ. ಸಯಂಟಿಸಂ ಒಂಥರಾ ‘ವೈಜ್ಞಾನಿಕ ಮೂಲಭೂತವಾದ’ದ ಇಲ್ಲವೇ ‘ವಿಜ್ಞಾನಾಂಧತೆ’ಯ ರೀತಿ ವರ್ತಿಸುತ್ತದೆ ಎಂಬುದು ಅನುಭವವೇದ್ಯ. ಜ್ಞಾನದ ಇತರ ಮಜಲುಗಳನ್ನೆಲ್ಲಾ ಅದು ಅಲ್ಲಗೆಳೆಯುತ್ತದೆ. ಅದರ ಪ್ರಕಾರ ಗಣಿತದ ಸತ್ಯಗಳು, ತರ್ಕಗಳು, ಸೌಂದರ್ಯ ಮೀಮಾಂಸೆ ಇದ್ಯಾವುದರಲ್ಲಿಯೂ ಹುರುಳಿಲ್ಲ.

ವೈಜ್ಞಾನಿಕ ವಿಧಾನದ ಸಿಂಧುತ್ವದ ನಿರ್ಣಯ ಮಾಡಲು ವಿಜ್ಞಾನಕ್ಕೆ ಸಾಧ್ಯವಲ್ಲ; ಅದು ವಿಜ್ಞಾನಕ್ಕಿಂತಲೂ ಆಚೆಗಿನ ತತ್ವಜ್ಞಾನದ ಚರ್ಚಾವಸ್ತು. ಹಲವಾರು ವಿಜ್ಞಾನದ ತತ್ವಜ್ಞಾನಿಗಳು ಈ ಕುರಿತು ಚರ್ಚೆ ಮಾಡಿದ್ದಾರೆ. ವೈಜ್ಞಾನಿಕ ವಿಧಾನದ ಪರಿಮಿತಿಗಳತ್ತ ಬೆಳಕು ಚೆಲ್ಲಿದ್ದಾರೆ. ಕಾರ್ಲ್ ಪಾಪರ್, ಥೋಮಸ್ ಕುನ್, ಫೆಯರಾಬಾಂಡ್ ಈ ನಿಟ್ಟಿನಲ್ಲಿ ಪ್ರಮುಖರು. ಒಂದೇ ರೇಖೆಯಲ್ಲಿ ನಿರಂತರವಾಗಿ ಪ್ರಗತಿ ಹೊಂದುತ್ತಿರುವ ಜ್ಞಾನದ ಶಿಸ್ತು ಎಂಬ ಪರಿಪ್ರೇಕ್ಷ್ಯದಲ್ಲಿ ವಿಜ್ಞಾನವನ್ನು ನೋಡಲಾಗದು ಎಂದಿದ್ದಾರೆ ಥೋಮಸ್‌ ಕುನ್.‌ ಪ್ರಾಚೀನ ಈಜಿಪ್ತ್‌, ಗ್ರೀಕ್‌ ವಿಜ್ಞಾನದಿಂದ ಆರಂಭವಾಗಿ ರೇಖಾತ್ಮಕವಾಗಿ ಮುಂದುವರಿದು ಇಂದಿನ ಉಚ್ಪ್ರಾಯಕ್ಕೆ ತಲುಪಿತು ಎಂಬ ವಾದವನ್ನು ಅವರು ಪ್ರಶ್ನೆಗೊಳಪಡಿಸಿದ್ದಾರೆ. ವಿಜ್ಞಾನ ಎಂಬುದು ಇತಿಹಾಸ, ಭೌಗೋಳಿಕತೆ ಮತ್ತು ದಾರ್ಶನಿಕತೆಗೆ ಅತೀತವಾದ ಪೂರ್ಣ ಸ್ವತಂತ್ರ ಶಿಸ್ತು ಎಂದು ಹಲವರು ಭಾವಿಸಿರುವುದು ಸರಿಯಲ್ಲ. ವಿಜ್ಞಾನದ ಚಾರಿತ್ರಿಕ ಹರಿವನ್ನು ಪ್ಯಾರಡೈಮ್‌ಗಳ (paradigm) ನೆಲೆಗಟ್ಟಿನಲ್ಲಿ ಅವರು ಅರ್ಥೈಸಿದ್ದಾರೆ. ವಿಜ್ಞಾನದ ಮೂಲಭೂತ ನಿಲುವುಗಳಲ್ಲೆ ಪಲ್ಲಟ ಉಂಟಾದದ್ದು ನಮಗೆ ಕಾಣಬಹುದು. ಟಾಲೆಮಿ ಮತ್ತು ಅರಿಸ್ಟೋಟಲ್‌ರಂಥ ಪುರಾತನ ವಿಜ್ಞಾನಿಗಳ ಪ್ರಕಾರ ಈ ಪ್ರಪಂಚ ಭೂಕೇಂದ್ರಿತವಾಗಿತ್ತು. ಇದರ ಅನುರಣನೆಗಳನ್ನು ಅಂದಿನ ಕಲೆ ಮತ್ತು ತತ್ವಜ್ಞಾನದಲ್ಲಿ ಕಾಣಬಹುದಿತ್ತು. ನಂತರ ಬಂದ ಕೋಪರ್ನಿಕಸ್‌ ಮತ್ತು ಕೆಪ್ಲರ್‌ ಪ್ರಪಂಚವನ್ನು ಸೂರ್ಯಕೇಂದ್ರಿತ ಎಂದು ಸಾರಿ ಒಂದು ಪ್ಯಾರಡೈಮ್‌ ಪಲ್ಲಟವನ್ನು (paradigm shift) ತಂದರು. ಈಗ್ಗೆ ಎರಡು ಶತಮಾನಗಳ ಮುಂಚಿನವರೆಗೂ ether ಅಥವಾ ಈಥರನ್ನು ಒಂದು ವೈಜ್ಞಾನಿಕ ಪರಿಕಲ್ಪನೆಯಾಗಿ ಗಣಿಸಲಾಗಿತ್ತು. ಅದರ ತಳಹದಿಯಲ್ಲಿ ತಂತ್ರಜ್ಞಾನಗಳನ್ನು,ಸಿದ್ಧಾಂತಗಳನ್ನು ರೂಪಿಸಲಾಗುತ್ತಿತ್ತು. ಆದರೆ ಈವತ್ತು ಅದನ್ನು ವೈಜ್ಞಾನಿಕ ಎನ್ನಲು ಯಾರೂ ಮುಂದೆ ಬರಲಾರರು. ಕುನ್‌ ಈ ವಿಮರ್ಶೆಗಳನ್ನೆಲ್ಲಾ ನಡೆಸಿದ್ದು ಯೂರೋಕೇಂದ್ರಿತ ಲೋಕನೋಟದ ಒಳಗಡೆ ನಿಂತುಕೊಂಡೆ ಆಗಿತ್ತು ಎಂಬುದನ್ನು ಗಮನಿಸಲೇಬೇಕು. ಆಧುನಿಕ ವಿಜ್ಞಾನವನ್ನು ಸಂಪೂರ್ಣವಾಗಿ ಸ್ವೀಕರಿಸಿಕೊಂಡು ಕೂನ್ ಮಾಡಿದ ಅವಲೋಕನದ ಪ್ರಕಾರ ಕೂಡಾ ವಿಜ್ಞಾನ ಸಾರ್ವಲೌಕಿಕ ಮತ್ತು ಸಾರ್ವಕಾಲಿಕವಾಗಿದೆ ಎಂಬ ದೃಷಿಕೋನ ಹೊರಹೊಮ್ಮುತ್ತಿಲ್ಲ . ಮಾತ್ರವಲ್ಲ, ಅದರೊಳಗೆ ನಡೆಯುತ್ತಿರುವ ಮೂಲಭೂತ ಪಲ್ಲಟಗಳ ಕಡೆಗೆ ಕೂಡಾ ಅವು ಬೊಟ್ಟು ಮಾಡಿದೆ. ವಿಜ್ಞಾನದ ಎಲ್ಲಾ ಪ್ರಯೋಗಗಳು ಮತ್ತು ವೀಕ್ಷಣೆಗಳು ಪ್ರಚಲಿತವಾದ ಒಂದು ಥಿಯರಿಗೆ ಅನುಗುಣವಾಗಿ ಬೆಳೆಸಲಾಗುತ್ತಿದ್ದು ವಸ್ತುನಿಷ್ಠ ನೋಟ ಅವುಗಳಿಗೆ ಇರುವುದಿಲ್ಲ. ವಿಜ್ಞಾನಿಯ ಪೂರ್ವಗ್ರಹ, ಪೂರ್ವಾನುಭವ ಎಲ್ಲವೂ ವೀಕ್ಷಣೆಯ ರಿಸಲ್ಟ್ ನಲ್ಲಿ ಅದರದ್ದೇ ಆದ ಪ್ರಭಾವ ಬೀರುತ್ತದೆ. ಹೊಸ ಥಿಯರಿಯ ನಿರ್ಮಾಣ ಪ್ರಕ್ರಿಯೆಯಲ್ಲೂ ಈ ಕಪ್ಪು ರಂಧ್ರಗಳನ್ನು ಕಾಣಬಹುದು. ಆದುದರಿಂದಲೇ ವಿಜ್ಞಾನ ವ್ಯಕ್ತಿನಿಷ್ಠ ಎನ್ನುವುದೇ ಸೂಕ್ತ ಎಂದು ಕೂನ್ ರೊಂದಿಗೆ ದನಿಗೂಡಿಸಿದ್ದಾರೆ ಫೆಯರಾಬಾಂಡ್.

ಟ್ರೂತ್ ಹೇಗೆ ಕಂಡುಹಿಡಿಯಬಹುದು ಎಂಬುದಾಗಿದೆ ಮೂಲಭೂತ ಪ್ರಶ್ನೆ. ಆದರೆ, ವಿಜ್ಞಾನಕ್ಕೆ ಸತ್ಯ ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಸಾಕ್ಷಾತ್‌ ವಿಜ್ಞಾನಿಗಳೆ ಹೇಳುತ್ತಿದ್ದಾರೆ. ವಿಜ್ಞಾನಕ್ಕೆ ಟ್ರೂತ್‌ ವ್ಯಾಲ್ಯೂ ಇಲ್ಲ ಎಂದು ಅವರು ವಿವರಿಸುತ್ತಾರೆ. ಒಂದು ಪರಿಕಲ್ಪನೆ ವೈಜ್ಞಾನಿಕ ಎನಿಸಿಕೊಳ್ಳಬೇಕಾದರೆ ಅದಕ್ಕೆ ಫಾಲ್ಸಿಫಯೆಬಿಲಿಟಿ (falsifiability) ಇರಬೇಕು ಎಂದು ಹೇಳಿದ್ದಾರೆ ಕಾರ್ಲ್‌ ಪಾಪರ್‌. ಅಂದರೆ ಆ ಥಿಯರಿ ತಪ್ಪೆಂದು ಸಾಬೀತು ಮಾಡುವ ಸಂಭಾವ್ಯತೆ ಇರಬೇಕು. ಇದೇ ನೆಲೆಗಟ್ಟಿನಲ್ಲಿ ಮಾರ್ಕ್ಸಿಸಂ ಮತ್ತು ಫ್ರಾಯ್ಡಿನ ಸೈಕೋ ಅನಾಲಿಸಿಸ್‌ ವೈಜ್ಞಾನಿಕವಲ್ಲ ಎಂದು ತೀರ್ಪಿತ್ತಿದ್ದಾರೆ ಪಾಪರ್. ಆದರೆ ಒಂದು ಪರಿಕಲ್ಪನೆ ಫಾಲ್ಸಿಫಯೇಬಲ್‌ ಎನಿಸಿಕೊಂಡ ಕಾರಣ ಅದು ಸತ್ಯ ಆಗಲಾರದು ಎನ್ನುವುದು ಇಲ್ಲಿ ಗಮನಾರ್ಹ. ಆದುದರಿಂದಲೇ ವಿಜ್ಞಾನಕ್ಕೆ ಯಾವುದೇ ಥಿಯರಿಗಳನ್ನು ಸಾಬೀತು ಮಾಡಲು ಸಾಧ್ಯವಿಲ್ಲ, ಫಾಲ್ಸಿಫಯೇಬಲ್ ಥಿಯರಿಗಳನ್ನು ಪ್ರಶ್ನಿಸಲು ಮಾತ್ರವೇ ಅದರಿಂದ ಸಾಧ್ಯ. ಪ್ರಾಬ್ಲಂ ಆಫ್ ಇಂಡಕ್ಷನ್ ಒಮ್ಮೆಯೂ ಇತ್ಯರ್ಥಪಡಿಸಲು ಸಾಧ್ಯವಿಲ್ಲವೆಂದೂ ಅದು ಯಾವತ್ತೂ ವೈಜ್ಞಾನಿಕ ವಿಧಾನಕ್ಕೆ ಸವಾಲಾಗಿ ನಿಲ್ಲಲಿದೆಯೆಂದು ಪಾಪರ್ ಸಮರ್ಥಿಸಿದ್ದಾರೆ.

ಅಮೇರಿಕದ ಜೀವವಿಜ್ಞಾನಿ ರಾಬರ್ಟ್ ಶೆಲ್ಡ್ರೇಕ್ ಈ ಅಭಿಪ್ರಾಯಗಳನ್ನು ತನ್ನ ಅನುಭವದ ಆಧಾರದಲ್ಲಿ ಅನುಮೋದಿಸಿರುವುದು ನೋಡಿ,
“ವೈಜ್ಞಾನಿಕ ಅನ್ವೇಷಣೆ ನಡೆಸಿದ ಪ್ರತಿಯೊಬ್ಬನೂ ದೊರೆತ ದತ್ತಾಂಶಗಳು ಖಚಿತವಲ್ಲವೆಂದು ತಿಳಿದಿರುತ್ತಾನೆ. ವ್ಯಕ್ತಿಯ ವ್ಯಾಖ್ಯಾನಗಳು ಅದರ ಫಲಿತಾಂಶಗಳಲ್ಲಿ ಎಷ್ಟು ಪ್ರಭಾವ ಬೀರಿದೆ ಎಂಬುದನ್ನೂ, ರೀತಿವಿಜ್ಞಾನದ ಪರಿಮಿತಿಯನ್ನೂ ಅವನು ಅರಿತು ಬಿಟ್ಟಿರುತ್ತಾನೆ.”

ಒಟ್ಟಾರೆಯಾಗಿ ವಿಜ್ಞಾನ ಉತ್ಪಾದಿಸುವ ಎಲ್ಲಾ ಜ್ಞಾನಗಳು ನೂರು ಶೇಖಡಾ ಖಚಿತವೆಂದು ಕಣ್ಣುಮುಚ್ಚಿ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಮನಗಾಣಬಹುದು. ಅದಾಗ್ಯೂ, ಹಲವಾರು ಸಂಶೋಧನೆಗಳು, ವಿವಿಧ ಆಯಾಮಗಳಿಂದ ನಡೆಸಿ ದಿಟವಾದ ಕೆಲವು ಕಂಡುಹಿಡಿತಗಳು ಖಚಿತತೆಯನ್ನು ನೀಡಬಹುದಾದ ಸಾಧ್ಯತೆಯನ್ನು ಇದ್ಯಾವುದೂ ಅಲ್ಲಗೆಳೆಯುವುದಿಲ್ಲ.

ಆದರೆ, ಧರ್ಮದ ನಂಬಿಕೆ, ಆಚಾರ ವಿಚಾರಗಳು ತ್ರಿಕಾಲಜ್ಞಾನಿಯಿಂದ ದತ್ತವಾದದ್ದು/ಆಗಬೇಕಾದದ್ದು. ಅದು ತಪ್ಪಾಗಲು ಒಂದಿನಿತೂ ಸಾಧ್ಯತೆಗಳಿಲ್ಲ. ಧರ್ಮ ದೇವದತ್ತವಾದದ್ದು ಎಂದು ನಂಬುವವರಿಗೆ ಅದು ನೀಡುವ ಖಚಿತತೆಯನ್ನು ಅಲ್ಲಾಡಿಸಲು ಕೇವಲ ಅನುಮಾನಗಳ ಸಮಾಹಾರವಾದ ವಿಜ್ಞಾನದ ಆವಿಷ್ಕಾರಗಳಿಗೆ ಸಾಧ್ಯ ಆಗುವುದು ಹೇಗೆ?. ವಿಜ್ಞಾನ ಯಾವತ್ತೂ ಒಂದು ತೀರ್ಮಾನವನ್ನು ಕೊಡದು. ಅದರ ಬೆಳವಣಿಗೆಯ ರಹಸ್ಯ ಅಡಗಿರುವುದು ಹಳೆಯ ವಿಜ್ಞಾನವನ್ನು ಪ್ರಶ್ನಿಸುವುದರಲ್ಲಿಯೇ. ಅದು ನಿಂತ ನೀರಲ್ಲ, ಪರಿವರ್ತನೆಗೊಳ್ಳುತ್ತಲೆ ಇರುತ್ತದೆ. ಆದರೆ ದೇವವಚನಗಳು ಬದಲಾಗದು, ಅದು ಯಾವತ್ತೂ ಹಾಗೆಯೇ ಉಳಿಯುತ್ತದೆ. ಆಯಾ ಕಾಲದ ಜನರು ತಮಗೆ ದೊರಕಿದ ಜ್ಞಾನದಂತೆ ದೇವವಚನಗಳಲ್ಲಿನ ಭೌತಿಕ ಸತ್ಯಗಳನ್ನು ಅರ್ಥೈಸಲು/ವ್ಯಾಖ್ಯಾನಿಸಲು ಪ್ರಯತ್ನಿಸಬಹುದು. ಆದರೆ ಅದುವೆ ಅಂತಿಮವಲ್ಲ.

ವೈಜ್ಞಾನಿಕ ಅನ್ವೇಷಣೆಗಳನ್ನು ಮಾಡಲು ಖುರ್ಆನ್ ವಿವಿಧೆಡೆ ಆಹ್ವಾನ ನೀಡಿದೆ. ಪ್ರಪಂಚದ ಕಾರ್ಯನಿರ್ವಹಣೆಯ ರಹಸ್ಯಗಳನ್ನು ಬೇಧಿಸಲು ಬೋಧಿಸಿದೆ. ಆದುದರಿಂದಲೇ ಮುಸಲ್ಮಾನರು ವಿಜ್ಞಾನಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಲು ಪ್ರಯತ್ನಿಸಿದ್ದಾರೆ. ವಿಜ್ಞಾನದ ಬೆಳವಣಿಗೆಯಲ್ಲಿ ಮುಸ್ಲಿಮರ ಪಾತ್ರ ಅಭೂತಪೂರ್ವವಾದದ್ದು. ಪೂರ್ವ-ಪಶ್ಚಿಮಗಳ ಸಕಲ ವಿದ್ವಾಂಸರೂ ಅದನ್ನು ಅಂಗೀಕರಿಸಿದ್ದಾರೆ. ವಿಜ್ಞಾನದ ಇತಿಹಾಸಕಾರರ ಪ್ರಕಾರ ಮುಸ್ಲಿಮರಾಗಿದ್ದಾರೆ ವೈಜ್ಞಾನಿಕ ವಿಧಾನವನ್ನು ಬಳಸಿದ ಮೊದಲಿಗರು. ಇಬ್ನುಲ್ ಹೈತಂ ತಮ್ಮ ಬುಕ್ ಆಫ್ ಆಪ್ಟಿಕ್ಸ್ ನಲ್ಲಿ ದಾಖಲಿಸಿದ ಅರಿವುಗಳನ್ನು ಉತ್ಪಾದಿಸಿದ್ದು ಪ್ರಯೋಗಗಳನ್ನು ಮಾಡುವ ಮೂಲಕವಾಗಿತ್ತು. ವೈಜ್ಞಾನಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡವರಲ್ಲಿ ಧಾರ್ಮಿಕ ವಿದ್ವಾಂಸರು ಕೂಡಾ ಯಥೇಚ್ಛವಾಗಿದ್ದರು. ಲ್ಯಾಟಿನ್ ಭಾಷೆಯಲ್ಲಿ ‘ಅವೆರೋಸ್’ ಎಂದು ಕರೆಯಲ್ಪಡುವ ಇಬ್ನು ರುಶ್ದ್ ಎಂಬ ವಿಜ್ಞಾನಿ ಮಾಲಿಕಿ ಕರ್ಮಶಾಸ್ತ್ರಜ್ಞ ಕೂಡಾ ಆಗಿದ್ದರು. ಯುರೋಪಿಯನ್ ನವೋತ್ಥಾನಕ್ಕೆ ನಾಂದಿ ಹಾಡಿದ್ದು ಮುಸ್ಲಿಂ ಸ್ಪೈನ್ ಮಾಡಿದ ಸಾಧನೆಗಳಾಗಿವೆ ಎಂದು ಸಮರ್ಥಿಸಿದ್ದಾರೆ ಥೋಮಸ್ ಅರ್ನಾಲ್ಡ್ ತಮ್ಮ ‘ದ ಪ್ರೀಚಿಂಗ್ ಆಫ್ ಇಸ್ಲಾಂ’ ಕೃತಿಯಲ್ಲಿ:

“ಮುಸ್ಲಿಮ್ ಸ್ಪೈನ್ ಮಧ್ಯಕಾಲದ ಯುರೋಪಿನ ಚರಿತ್ರೆಯಲ್ಲಿ ಸುವರ್ಣ ಪುಟಗಳನ್ನು ಬರೆದಿದೆ. ಸ್ಪೈನಿನ ಪ್ರಾಂತ್ಯಗಳ ಮೂಲಕ ಹಾದು ಹೋಗಿ ಅದು ಇತರ ಯುರೋಪಿಯನ್ ರಾಷ್ಟ್ರಗಳಿಗೂ ಹರಿದಿದೆ. ಅಲ್ಲೆಲ್ಲಾ ನವ ಕಾವ್ಯಾತ್ಮಕತೆ ಮತ್ತು ಹೊಸ ಸಂಸ್ಕೃತಿಗಳು ಜನ್ಮ ತಾಳಿವೆ. ಕ್ರೈಸ್ತ ವಿದ್ವಾಂಸರಿಗೆ ಗ್ರೀಕ್ ತತ್ವಚಿಂತನೆ ದೊರಕಿದ್ದು ಇವರ ಮೂಲಕವಾಗಿತ್ತು. ಸ್ಪೈನಿನ ಪ್ರಚೋದನೆಯಾಗಿದೆ ‘ರಿನೈಸೆನ್ಸ್’ ಗೆ ಕಾರಣೀಭೂತವಾದದ್ದು.”

ಇಪ್ಪತ್ತೊಂದನೆಯ ಶತಮಾನದ ಕೆಲವು ವೈಜ್ಞಾನಿಕ ಆವಿಷ್ಕಾರಗಳು ಇಷ್ಟರವರೆಗೆ ಜತನದಿಂದ ಪಾಲಿಸಿಕೊಂಡು ಬಂದ ವೈಜ್ಞಾನಿಕ ಶಿಸ್ತನ್ನು ಮರು ನಿರ್ಮಾಣ ಮಾಡುವತ್ತ ವಿಜ್ಞಾನಿಗಳನ್ನು ಸಾಗಿಸುತ್ತಿದೆ. ಶತಮಾನಗಳಿಂದೀಚೆಗೆ ವಿಜ್ಞಾನ ಉತ್ತರ ಕಂಡುಕೊಳ್ಳಲು ಶ್ರಮಿಸುತ್ತಿರುವ ‘ಬಿಗ್ ಕ್ವಶ್ಚನ್’ಗಳು ಈಗಲೂ ಸವಾಲಾಗಿಯೇ ಉಳಿದಿದ್ದು ಕೆಲವರನ್ನಾದರೂ ಮರುಚಿಂತನೆಗೆ ಪ್ರೇರೇಪಿಸಿದೆ. ವಿಜ್ಞಾನವನ್ನು ಅರಿವಿನ ದೊಡ್ಡ ಪ್ರಾಧಿಕಾರವಾಗಿ ಉಳಿಸಲು ಬಯಸುವವರು ಮುಖ್ಯವಾಹಿನಿಯನ್ನು ಆಳುತ್ತಿರುವುದರಿಂದ ಇಂತಹ ಬ್ಲೈಂಡ್ ಸ್ಪಾಟ್‍ಗಳು ಚರ್ಚೆಯಾಗುತ್ತಿಲ್ಲ. ಅದಾಗ್ಯೂ ಕೆಲವು ನಿರಂಕುಶಮತಿ ವಿಜ್ಞಾನಿಗಳು ಇದರತ್ತ ಬೊಟ್ಟು ಮಾಡಿದ್ದಾರೆ. ರಾಬರ್ಟ್ ಶೆಲ್ಡ್ರಾಕ್ ಹೇಳುವುದು ನೋಡಿ:

“ವಿಜ್ಞಾನ ಮತ್ತು ತಂತ್ರಜ್ಞಾನ ಅಧಿಕಾರದ ತುತ್ತತುದಿಯಲ್ಲಿ ಕೂತಿರುವ, ಅದರ ದಿಗ್ವಿಜಯ ಪ್ರಶ್ನಾತೀತವಾಗಿ ಮುಂದುವರಿಯುತ್ತಿರುವ ಇಪ್ಪತ್ತೊಂದನೆಯ ಶತಮಾನದ ಎರಡನೆಯ ದಶಕದಲ್ಲಿ ಕೆಲವು ಅನಿರೀಕ್ಷಿತ ಸಮಸ್ಯೆಗಳು ವಿಜ್ಞಾನವನ್ನು ಒಳಗಿನಿಂದ ಕಾಡುತ್ತಿದೆ. ಹಲವಾರು ವಿಜ್ಞಾನಿಗಳು ಈ ಸಮಸ್ಯೆಗಳನ್ನು ಸಾಂಪ್ರದಾಯಿಕ ರೀತಿಯಲ್ಲೆ ಸಂಶೋಧಿಸಿ ಕೊನೆಗೊಂದು ದಿನ ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ, ನನ್ನಂತಹ ಕೆಲವು ಮಂದಿಯ ಪ್ರಕಾರ ಇದು ದೊಡ್ಡದೊಂದು ಬಿಕ್ಕಟ್ಟಿನ ಲಕ್ಷಣಗಳಾಗಿವೆ……….. ವಿಜ್ಞಾನವನ್ನು ಶತಮಾನಗಳಷ್ಟು ಹಳೆಯದಾದ ಪೂರ್ವಗ್ರಹಗಳು ಆಳುತ್ತಿದ್ದು ಅವು ಅದರ ಒಣಸಿದ್ಧಾಂತಗಳನ್ನು ಕಠಿಣಗೊಳಿಸಿದೆ”. (ದ ಸಯನ್ಸ್ ಡಿಲ್ಯೂಷನ್)

ಒಟ್ಟಾರೆಯಾಗಿ ಹೇಳುವುದಾದರೆ ಧರ್ಮ ಮತ್ತು ತತ್ವಗಳ ಕ್ಷೇತ್ರ ಯಾವುದು ವಿಜ್ಞಾನದ ಕ್ಷೇತ್ರ ಯಾವುದು ಎಂಬುದನ್ನು ಸರಿಯಾಗಿ ಅರ್ಥೈಸಿದರೆ ವೈಜ್ಞಾನಿಕ-ಧಾರ್ಮಿಕ ದ್ವಂದ್ವಗಳನ್ನು ಬಗೆಹರಿಸಿಕೊಳ್ಳಬಹುದು. ಅಲ್ಲದಿದ್ದರೆ ಸಮಕಾಲೀನ ಸಾರಸ್ವತ ಲೋಕದಲ್ಲಿ ನಾವಿಂದು ಅನುಭವಿಸುತ್ತಿರುವ ತಲ್ಲಣಗಳು ಹಾಗೆಯೇ ಮುಂದುವರಿಯಬಹುದು. ವೈಜ್ಞಾನಿಕ ಎನಿಸಿಕೊಳ್ಳಲು ವಿಶ್ವಾಸಿಗಳು ತಮ್ಮ ಖಚಿತವಾದ ಅತಿಭೌತಶಾಸ್ತ್ರೀಯ (metaphysical) ನಂಬಿಕೆಗಳನ್ನು ಹೊರಗೆಸೆಯುವ ಮುನ್ನ ಎರಡು ಬಾರಿ ಆಲೋಚಿಸುವುದು ಒಳಿತು.

ಪ್ರೊ: ತಫಸುಲ್‌ ಇಜಾಝ್‌, ನಝೀರ್‌ ಅಬ್ಬಾಸ್

ಶೂನ್ಯತೆಯ ಸುಗಂಧ: ಮರುಭೂಮಿಯ ಪರಿಮಳ ಹಾಗೂ ಸೂಫಿಗಳು

ಆಂಡ್ರ್ಯೂ ಹಾರ್ವಿ ತನ್ನ ‘ಪೆರ್ಫ್ಯೂಮ್ ಓಫ್ ದಿ ಡೆಸೆರ್ಟ್’ [ Perfume Of the desert] ಎಂಬ ಪುಸ್ತಕದಲ್ಲಿ ಒಂದು ಸೂಫೀ ಕಥೆಯನ್ನು ಬರೆಯುತ್ತಾರೆ. ಕಥೆ ಹೀಗಿದೆ…

ಒಂದು ಸಂಘ ಅರಬಿಗಳು ತನ್ನ ಅನುಯಾಯಿಗಳೊಂದಿಗೆ ಸವಾರಿ ಮಾಡುತ್ತಿದ್ದರು. ಗುರು ಧರ್ಮ ವಿಶ್ವಾಸಿಯೂ, ಮಹಾನ್ ವ್ಯಕ್ತಿಯೂ ಆಗಿದ್ದರು. ಅವರ ದೀರ್ಘ ಪ್ರಯಾಣವು ನಿರ್ಜನವಾದ ಹಳೇಯ ಕೋಟೆಯ ಬಳಿ ತಲುಪಿ, ಅಲ್ಲೇ ಠಿಕಾಣಿ ಹೂಡಿದರು.

ಕೋಟೆಯ ನಿರ್ಜನವಾದ ಕೋಣೆಗಳಿಗೆ ಹತ್ತಿ ಇಳಿದ ಯುವಕರು ಕಟ್ಟಡದ ನಿರ್ಮಾಣ ಸಂಯೋಜನೆಯ ಕುರಿತು ಅರಿಯಲು ಇಟ್ಟಿಗೆಗಳನ್ನು ತುಂಡರಿಸಿ ವಾಸನೆಯನ್ನು ನೋಡಿದರು. ಅವರಲ್ಲೊಬ್ಬ ವ್ಯಕ್ತಿ ಕರೆದು ಹೇಳಿದ; “ಈ ಮಣ್ಣಿನಲ್ಲಿ ಗುಲಾಬಿಯ ಹಾಗು ಕಿತ್ತಳೆಯ ಹೂವಿನ ಎಣ್ಣೆಯನ್ನು ಮಿಶ್ರಣ ಮಾಡಲಾಗಿದೆ”. ಮತ್ತೊಬ್ಬ ವ್ಯಕ್ತಿ ಉದ್ಗಾರದಿಂದ ಕರೆದು ಹೇಳಿದ; ನಾನಿಲ್ಲಿ ಜಾಸ್ಮೀನಿನ ಸುಗಂಧವನ್ನು ಘಮಿಸುತ್ತಿದ್ದೇನೆ. ಎಷ್ಟು ಸುಂದರವಿದು..!

ಗುರು ಏನೂ ಪ್ರತ್ಯುತ್ತರಿಸದೆ ದೂರದಿಂದ ಘಟನೆಯನ್ನು ಗಮನಿಸುತ್ತಿದ್ದರು. ಸಂಘದಿಂದ ಯುವಕನೊಬ್ಬ ಗುರುವಿನ ಬಳಿ ಬಂದು “ಪ್ರಿಯ ಗುರುವೇ…ತಮ್ಮ ಆಪ್ತ ಸುಗಂಧ ಯಾವುದು..?” ಎಂದು ಪ್ರಶ್ನಿಸಿದ. ಅವರು ಕಿರುನಗೆಯ ಬೀರಿ ನೇರ ಕೋಟೆಯ ಬಳಿ ತೆರಳಿ, ಮುರಿದು ಬಿದ್ದ ಒಂದು ಕಿಟಕಿಯ ಮೂಲಕ ಶೂನ್ಯ ಮರುಭೂಮಿಯ ಗಾಳಿಯಲ್ಲಿ ಕೈಯ್ಯ ತೇಲಾಡಿಸಿ, ಒಂದು ಹಿಡಿ ಗಾಳಿಯ ಕೈಯ್ಯಲ್ಲಾಗಿಸಿ ಮುಷ್ಟಿಹಿಡಿದರು.
ನಂತರ ಗುರುವು ತನ್ನ ಬಳಿ ಇದ್ದ ಯುವಕನೊಂದಿಗೆ ಹೇಳಿದರು; “ಇದರ ವಾಸನೆಯ ಘಮಿಸಿನೋಡು. ಜಗತ್ತಿನ ಅತೀ ಶ್ರೇಷ್ಠ ಕಂಪು ಮರುಭೂಮಿಯದ್ದು. ಕಾರಣ ಅದಕ್ಕೆ ವಾಸನೆಗಳಿಲ್ಲ, ಶೂನ್ಯತೆಯ ಸುಗಂಧವಾಗಿದೆ ಮರುಭೂಮಿಗಿರುವುದು”

ನಿಗೂಢತೆ ಹಾಗೂ ಸಂವೇದನೆಯ ಪರಿಮಳ

ವರ್ಷಗಳು ಹಲವು ಸವೆದ ನಂತರ ‘ಆಂಡ್ರ್ಯೂ ಹಾರ್ವಿ’ ತನ್ನ ಹಳೇಯ ಸೂಫೀ ಸ್ನೇಹಿತನ ಬಳಿ ಈ ಕಥೆಯ ಉದ್ದೇಶದ ಕುರಿತು ಕೇಳಿದರು. ಅವರು ಹೀಗೆ ವಿವರಿಸಿಕೊಟ್ಟರು; “ನನ್ನ ಪ್ರಕಾರ, ಸೂಫಿಗಳು, ಸೂಫಿಸಂತರ ಕುರಿತು ಚಿಂತಿಸುವಾಗೆಲ್ಲ ನಾನು ಮರುಭೂಮಿಯ ಕುರಿತು ಚಿಂತಿಸುವುದಿದೆ. ಅದರ ಸೌಂದರ್ಯ, ಭಯಾನಕತೆ, ಏಕಾಂತತೆ, ನಿಶ್ಯಬ್ಧತೆ ಇವೆಲ್ಲವೂ ನನ್ನ ಮನಸ್ಸಿಗೆ ಓಡೋಡಿ ಬರುತ್ತೆ. ಮರುಭೂಮಿಯಲ್ಲಿ ಹೇಗೆ ನಾವು ಸಂಪೂರ್ಣವಾಗಿ ಉನ್ಮೂಲನೆ ಮಾಡುವುದು, ನಮ್ಮ ಮೇಲ್ಭಾಗ ಹಾಗೂ ಸುತ್ತಮುತ್ತಲೂ ಇರುವ ವಸ್ತುಗಳ ಒಂದು ಭಾಗವಾಗುವುದು ಹೇಗೆ ಎಂದು ಚಿಂತಿಸುವುದಿದೆ. ನೀವು ಚಕ್ರವಾಳದ ಒಂದು ಭಾಗದಲ್ಲಿ ನಿಂತು ಶೂನ್ಯ, ನಿಶ್ಚಲವಾಗಿ ನಿಂತಿರುವ ಮರಳಿನ ಹಾಗೂ ಆಕಾಶದ ಭಾಗವಾಗಿ ಪ್ರತ್ಯೇಕವಾಗುವಂತಹ ಒಂದು ಅನುಭವವಿದು.”

“ಅಲ್ಲಾಹನ ಅಸ್ತಿತ್ವ ಹೊರತು ಎಲ್ಲವೂ ನಶಿಸುವುದು” ಎಂಬ ಖುರ್-ಆನಿನ ಸೂಕ್ತದ ಕುರಿತು ನಾನು ಆಲೋಚಿಸುವುದಿದೆ. ಈ ಮರುಭೂಮಿ ಅಲ್ಲಾಹನ ಅಸ್ತಿತ್ವದ ಪ್ರತೀಕ. ಮನುಷ್ಯ ಅವನ ಶೂನ್ಯತೆಯನ್ನು, ದೇವರ ಸಂಪೂರ್ಣವಾದ ಶೋಭೆಯನ್ನು ದರ್ಶಿಸುವ ಕನ್ನಡಿಯದು. ಮರುಭೂಮಿಯ ಕನ್ನಡಿಗೆ ಕಣ್ಣುನೆಟ್ಟು ಜೀವನವನ್ನು ಕಳೆಯುವವರು ಸೂಫಿಗಳು, ಅಲ್ಲದೆ ಈ ಮರುಭೂಮಿಯ ಮಹತ್ವ, ಪರಿಶುದ್ಧತೆಯನ್ನು ಸ್ವ-ಜೀವನದಲ್ಲಿ ಆವಾಹಿಸಿಕೊಂಡವರೇ ಸೂಫಿಗಳು.

ಶ್ರೇಷ್ಠ ಸೂಫೀ ತತ್ವಚಿಂತಕರಲ್ಲಿ ಹಾಗೂ ಕವಿಗಳಲ್ಲಿ, ‘ಜಗತ್ತಿನ ಅತೀ ಶ್ರೇಷ್ಠ ಸುಗಂಧ’ ಎಂದು ಕಥೆಯಲ್ಲಿ ಗುರು ಹೇಳಿದ ಸುಗಂಧವನ್ನು ನಮಗೆ ಅನುಭವಿಸಲು ಸಾಧ್ಯ. ಮರುಭೂಮಿಯ ಸುಗಂಧ, ಶೂನ್ಯತೆಯ ಸುಗಂಧ, ಶ್ರೇಷ್ಟ ಸಾನಿಧ್ಯದ ಉಲ್ಲಾಸಕರವಾದ ಗಂಧ, ನಿತ್ಯವೂ ಶೂನ್ಯತೆಯ, ಉನ್ಮಾದದ ವಾತಾವರಣ ಈ ಮರುಭೂಮಿಯದು.

ಆಂಡ್ರ್ಯೂ ಹಾರ್ವಿ

ಕಥೆಯಲ್ಲಿ ಬರುವ ಮುರಿದ ಕಟ್ಟಡ ಈ ಜಗತ್ತನ್ನು ಸೂಚಿಸುತ್ತದೆ. ಅದರಲ್ಲಿರುವ ಎಲ್ಲಾ ವಿನೋದ, ಬಯಕೆ, ಸಂಪ್ರದಾಯಗಳೆಲ್ಲವೂ ಸುರಭಿಯಾದ ಇಚ್ಛೆಗಳಿಂದಾಗಿದೆ ನಿರ್ಮಿಸಲ್ಪಟ್ಟಿರುವುದು.

ಟಿ.ಎಸ್ ಏಲಿಯಟ್ ಅವರ ಒಂದು ಗೆರೆ ನೆನಪಿಗೆ ಬರುತ್ತಿದೆ; ಒಬ್ಬ ವೃದ್ಧನ ಅಂಗಿಯ ಕೈಯ್ಯಲ್ಲಿರುವ ಬೂದಿ, ಒಣಗಿದ ಗುಲಾಬಿ ಹೂವಿನ ಬೂದಿಯಾಗಿದೆ.

ಜಗತ್ತಿನ ಎಲ್ಲಾ ಸಂತೋಷಗಳು ಎಷ್ಟು ಚಂದವಾದರೂ ಅವುಗಳು ಕಳೆದುಹೋಗುವಂತದ್ದು. ದೀರ್ಘ ಕಾಲ ಅದಕ್ಕೆ ನೆಲೆನಿಲ್ಲಲು ಸಾಧ್ಯವಿಲ್ಲ. ಆದರೆ ಅನಂತವಾದ ಗಂಧವು ಶೂನ್ಯತೆ ಹಾಗೂ ದೇವರದ್ದಾಗಿದೆ. ಆ ಸುಗಂಧವನ್ನು, ನಿಗೂಢತೆ, ಉಲ್ಲಾಸ, ಪರಮಾವಧಿಯ ಸಂತೋಷವನ್ನು ಅನುಭವಿಸುವುದಾಗಿದೆ ಸೂಫಿಗಳ ಲಕ್ಷ್ಯ. ಆ ಗಂಧ ತಮ್ಮ ಪ್ರಿಯನಲ್ಲಿ ಉನ್ಮಾದವುಂಟಾಗಿಸಿ, ಅವನಲ್ಲಿ ಲೀನವಾಗಿಸಲು ಅವರಿಗೆ ಅರಿವಿದೆ.

ಒಮ್ಮೆ ನೀವು ಆ ಸುಗಂಧವ ಅನುಭವಿಸಿದರೆ, ನಿಮ್ಮ ಜೀವನ ನಾಶವಾಗಿ ಹೋಗುವುದಂತೂ ಸತ್ಯ. ಅದರೊಂದಿಗೆ ನಿನಗೆ ಇನ್ನೆಂದೂ ಸುಗಂಧವ ಅನುಭವಿಸದೇ ಇರದಂತಾಗುವುದು. ನಿಮ್ಮ ಬಳಿ ಇರುವ ಉದ್ವೇಗ-ಉಮ್ಮಳಗಳು ಆ ವಾಸನೆಗೆ ಅಚಲವಾದ ಬಯಕೆಯಾಗಿ ಬಾಕಿಯಾಗುವುದು.

ಅಪೂರ್ವ ಸುಗಂಧ, ಮಧುರವಾದ ಲಹರಿ

ನಾನು ಮಳೆಯ ಕನಸು ಕಾಣುವೆ
ಮರುಭೂಮಿಯ ಮರಳಲ್ಲಿನ ಹೂದೋಟದ ಕುರಿತು
ಕನಸು ಕಾಣುವೆ

ನಾನು ಸುಮ್ಮನೆ ಎದ್ದು
ಸಮಯವು ನನ್ನ ಮುಂದೆಯೇ ಸಾಗುವಾಗ
ನಾನು ಪ್ರೀತಿಯ ಕುರಿತು ಕನಸು ಕಾಣುವೆ

ನಾನು ಅಗ್ನಿಜ್ವಾಲೆಯ ಕನಸು ಕಾಣುವೆ
ಆ ಕಣಸು ಒಮ್ಮೆಯೂ ಬಳಲದ
ಕುದುರೆಯೊಂದಿಗೆ ಬೇಡಿ ಹಾಕಿಸಿಕೊಂಡಿದೆ

ಆ ಅಗ್ನಿಜ್ವಾಲೆಯಲ್ಲಿ
ಅವರು ನೆರಳುಗಳು ಪುರುಷನ
ಮೋಹದ ಆಕೃತಿಯಂತೆ ನರ್ತಿಸುತ್ತಿದೆ

ಈ ಮರುಭೂಮಿಯ ಗುಲಾಬಿ ಹೂವು,
ಇಷ್ಟೂ ಮಧುರವುಳ್ಳ ಸುಗಂಧ ದ್ರವ್ಯಗಳೊಂದೂ
ನನ್ನ ಆಕರ್ಷಿಸಲಿಲ್ಲ

ನಾನು ಮಳೆಯ ಕನಸು ಕಾಣುವೆ
ನಿರ್ಜನ ಆಕಾಶಕ್ಕೆ ನಾನು
ನನ್ನ ಕಣ್ಣ ನೆಗೆಯಿಸುವೆ

ನಾನು ಕಣ್ಣ ಮುಚ್ಚುತ್ತಿರುವೆ
ಈ ಅಪೂರ್ವ ಸುಗಂಧ ದ್ರವ್ಯವೇ
ಅವರ ಪ್ರಣಯದ ಉನ್ಮಾದ

ಸುಂದರ ಮರುಭೂಮಿಯ ಗುಲಾಬಿ ಹೂ
ಈ ತೋಟದಲ್ಲಿನ ನೆನಪುಗಳು
ನಮ್ಮ ಭೇಟೆಯಾಡುತಿದೆ

ಈ ಮರುಭೂಮಿಯ ಕುಸುಮ
ಈ ಅಪೂರ್ವ ಸುಗಂಧವು ಪತನದ
ಸಿಹಿಯೇರುವ ಲಹರಿ.

ಮೂಲ: ಸ್ವಾದಿಖ್
ಭಾವಾನುವಾದ: ಸಲೀಂ ಇರುವಂಬಳ್ಳ

ದುಃಖಿತ ಕಿತ್ತಳೆ ಹಣ್ಣುಗಳ ನಾಡು

ಕಥೆ

ಜಾಫಾದಿಂದ ಅಕಾದ ಕಡೆಗೆ ಹೊರಟಾಗ ನನಗೇನೂ ಬೇಸರವಾಗಿರಲಿಲ್ಲ. ರಜಾ ದಿನಗಳಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗುತ್ತೇವಲ್ಲ; ಹಾಗೆಯೇ ಇದು ಕೂಡ ಎಂದು ಅನಿಸಿತ್ತು. ಆ ದಿನಗಳಲ್ಲಿ ಅಹಿತಕರ ಘಟನೆಗಳೇನೂ ಜರುಗಿರಲಿಲ್ಲ. ನಿಜ ಹೇಳಬೇಕೆಂದರೆ, ಇನ್ನು ಶಾಲೆಗೆ ಹೋಗಬೇಕಿಲ್ಲ ಎಂದೇ ನಾನು ಸಂತೋಷಪಟ್ಟಿದ್ದೆ. ಆದರೆ, ಈ ಎಲ್ಲಾ ಸಂತೋಷಕ್ಕೆ ಒಂದು ಕೆಟ್ಟ ಕೊನೆ ಎದುರಾಯಿತು. ಅಕಾ ಆಕ್ರಮಣಕ್ಕೊಳಗಾಗುತ್ತಿದ್ದಂತೆ ನಮ್ಮ ಬದುಕಿನ ದೆಸೆ ಬದಲಾಯಿತು. ಆ ರಾತ್ರಿ ನನಗೆ ಮತ್ತು ನಿನಗೆ ಬಹಳ ಕಠಿಣವಾಗಿತ್ತು. ಸ್ತ್ರೀಯರು ದೀರ್ಘ ಹೊತ್ತಿನವರೆಗೆ ಪ್ರಾರ್ಥಿಸುತ್ತಿದ್ದರು. ಪುರುಷರು ಸುದೀರ್ಘವಾದ ನಿಟ್ಟುಸಿರಿನೊಂದಿಗೆ ಆಳವಾದ ಮೌನಕ್ಕೆ ಜಾರಿದ್ದರು. ನನಗೆ, ನಿನಗೆ ಹಾಗೂ ನಮ್ಮ ವಯೋಮಾನದ ಮಕ್ಕಳಿಗೆ ಏನು ನಡೆಯುತ್ತಿದೆ ಎಂದೇ ಅರ್ಥವಾಗುತ್ತಿರಲಿಲ್ಲ. ಆ ರಾತ್ರಿ ನಾವು ನಮ್ಮದೇ ಆದ ಕಥೆಗಳನ್ನು ಹೆಣೆಯಲು ಆರಂಭಿಸಿದೆವು.


ನಮ್ಮನ್ನು ಬೆದರಿಸಿ, ಶಪಿಸಿ ಇಸ್ರೇಲ್ ಸೈನಿಕರು ಹೊರಟು ಹೋದರು. ಅವರ ಹಿಂದೆಯೇ ಒಂದು ದೊಡ್ಡ ವ್ಯಾನ್ ಬಂದು ನಿಂತಿತು. ಹಾಸಿಗೆ, ಕಂಬಳಿ, ತಲೆದಿಂಬುಗಳನ್ನು ಆ ವ್ಯಾನ್‌ಗೆ ತುಂಬಿಸಿದರು. ನಾನು ಹಳೆಯ ಆ ಮನೆಯ ಗೋಡೆಗೆ ಒರಗಿ ನಿಂತಿದ್ದೆ. ನಿನ್ನ ತಾಯಿಯನ್ನು ಆ ವ್ಯಾನ್‌ಗೆ ಹತ್ತಿಸುವುದನ್ನು ಕಂಡೆ. ಅವರ ಹಿಂದೆಯೇ ನಿನ್ನ ಚಿಕ್ಕಮ್ಮ, ಅವರ ನಂತರ ಮಕ್ಕಳು ಹೀಗೆ ಒಬ್ಬೊಬ್ಬರೇ ವ್ಯಾನ್ ಹತ್ತಿದರು. ನಿನ್ನ ತಂದೆ ನಿನ್ನನ್ನು ವ್ಯಾನ್‌ನಲ್ಲಿದ್ದ ಫರ್ನಿಚರ್‌ಗಳ ಮೇಲೆ ಎಸೆದರು. ನನ್ನನ್ನು ಎರಡು ಕೈಗಳಿಂದ ತಲೆಗೂ ಮೇಲೆ ಎತ್ತಿ ದೈತ್ಯಾಕಾರದ ಕಬ್ಬಿಣದ ಪೆಟ್ಟೆಗೆಯ ಮೇಲೆ ಎಸೆದರು. ವ್ಯಾನಿನೊಳಗೆ ನನ್ನ ಸಹೋದರ ರಿಯಾದ್ ನಿಶ್ಶಬ್ಧನಾಗಿ ಕುಳಿತಿದ್ದ. ನಾನು ಇನ್ನೇನು ಸರಿಯಾಗಿ ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ ವ್ಯಾನ್ ಮುಂದಕ್ಕೆ ಚಲಿಸಿತು.

ಅಕಾದ ದೃಶ್ಯಗಳು ಕಣ್ಮರೆಯಾದವು. ವ್ಯಾನ್ ರಅಸ್ ಅಲ್ ನಖುರ(ಲೆಬನಾನ್)ದ ಕಡೆಗೆ ದೌಡಾಯಿಸಿತು. ಆಕಾಶದಲ್ಲಿ ಕರಿಮೋಡಗಳು ಠಳಾಯಿಸಿದ್ದವು. ನನಗೆ ಜ್ವರದ ಅನುಭವವಾಗುತ್ತಿತ್ತು. ರಿಯಾದ್ ಕಾಲುಗಳನ್ನು ಮಡಚಿ, ಪೆಟ್ಟಿಗೆಯ ಮೇಲೆ ಶಾಂತವಾಗಿ ಕುಳಿತಿದ್ದ. ನಡು ನಡುವೆ ಆಕಾಶ ನೋಡುವ ಪ್ರಯತ್ನ ಮಾಡುತ್ತಿದ್ದ. ನಾನು ಮೌನವಾಗಿ ಕುಳಿತು ದಾರಿಯುದ್ದಕ್ಕೂ ನಮ್ಮನ್ನು ಎದುರುಗೊಳ್ಳುತ್ತಿದ್ದ ಕಿತ್ತಳೆ ಹಣ್ಣಿನ ತೋಟಗಳನ್ನು ನೋಡುತ್ತಿದ್ದೆ. ಎಲ್ಲರೂ ಭಯ, ನಿರೀಕ್ಷೆಗಳ ಸರಪಳಿಯಲ್ಲಿ ಬಂಧಿಯಾಗಿ ಒದ್ದಾಡುತ್ತಿದ್ದರು. ಕೆಸರುಗದ್ದೆಯಂತಿದ್ದ ರಸ್ತೆಯ ಮೇಲೆ ವ್ಯಾನ್ ಜಾರುತ್ತಾ ಓಡುತ್ತಿತ್ತು. ಗಳಿಗೆಗೊಮ್ಮೆ ಗುಂಡುಗಳ ಮೊರೆತ ಕಿವಿಗಪ್ಪಳಿಸುತ್ತಿತ್ತು; ನಮ್ಮನ್ನು ಬೀಳ್ಕೊಡುವಂತೆ! ರಅಸ್ ಅಲ್ ನಖೂರ ಕಣ್ಣಿಗೆ ಬಿದ್ದೊಡನೇ ಚಾಲಕ ವ್ಯಾನ್‌ ನಿಲ್ಲಿಸಿದ. ಸ್ತ್ರೀಯರು ತಮ್ಮ ಕೈಯಲ್ಲಿದ್ದ ವಸ್ತುಗಳೊಂದಿಗೆ ಕೆಳಗಿಳಿದರು. ಸ್ವಲ್ಪ ದೂರದಲ್ಲಿ ರೈತನೊಬ್ಬ ಬುಟ್ಟಿ ತುಂಬಾ ಕಿತ್ತಳೆ ಹಣ್ಣುಗಳನ್ನು ಹೇರಿಕೊಂಡು ಮಾರುತ್ತಿದ್ದ. ಅವನನ್ನು ಮುತ್ತಿಕೊಂಡ ಮಹಿಳಾಮಣಿಗಳು ತಮಗೆ ಬೇಕಾದಷ್ಟು ಹಣ್ಣುಗಳನ್ನು ಖರೀದಿಸಿದರು. ಆ ರೈತನು ಸ್ತ್ರೀ ಯರೊಂದಿಗೆ ಉದಾರವಾಗಿ ರ‍್ತಿಸುತ್ತಿದ್ದನು. ಆ ಕ್ಷಣದಲ್ಲಿ ಕಿತ್ತಳೆ ಹಣ್ಣುಗಳು ಎಷ್ಟು ಅಮೂಲ್ಯವೆಂದು ನನಗೆ ರ‍್ಥವಾಯಿತು. ದೊಡ್ಡದಾದ ಸುಂದರವಾದ ಆ ಕಿತ್ತಳೆ ಹಣ್ಣುಗಳು ನಮ್ಮ ಹೃದಯದೊಂದಿಗೆ ಸಂವಾದಿಸುತ್ತಿರುವಂತೆ ಭಾಸವಾಯಿತು. ಸ್ತ್ರೀಯರು ಕಿತ್ತಳೆ ಹಣ್ಣುಗಳೊಂದಿಗೆ ವ್ಯಾನ್‌ಗೆ ಮರಳಿದರು. ನಿನ್ನ ತಂದೆ ಚಾಲಕನ ಪಕ್ಕದಲ್ಲಿ ಕುಳಿತು, ಕೈಚಾಚಿದರು. ಯಾರೋ ಅವರಿಗೆ ಕಿತ್ತಳೆ ಹಣ್ಣು ಕೊಟ್ಟರು. ಸ್ವಲ್ಪ ಹೊತ್ತು ಅವರು ಅ ಹಣ್ಣನ್ನೇ ನೋಡಿದರು. ನಂತರ ಪುಟ್ಟ ಮಗುವಿನಂತೆ ಅಳತೊಡಗಿದರು. ವ್ಯಾನ್ ಅನ್ನು ರಅಸ್ ಅಲ್ ನಖೂರದಲ್ಲಿ ಇತರ ವಾಹನಗಳ ನಡುವೆ ನಿಲ್ಲಿಸಿದ್ದರು. ಪುರುಷರು ತಮ್ಮ ಬಳಿಯಿದ್ದ ಬಂದೂಕುಗಳನ್ನು ಪೊಲೀಸರಿಗೆ ನೀಡಿದರು. ಪೊಲೀಸರು ಬಂದೂಕುಗಳನ್ನು ಪಡೆದುಕೊಳ್ಳಲೆಂದೇ ಅಲ್ಲಿ ನಿಂತಿದ್ದರು. ನಮ್ಮ ಸರದಿ ಸಮೀಪಿಸುತ್ತಿದ್ದಂತೆ ಪೊಲೀಸರ ಮುಂದಿದ್ದ ಮೇಜು ಗನ್ನು, ಆಟೋಮ್ಯಾಟಿಕ್ ಗನ್ನುಗಳಿಂದ ತುಂಬಿ ಹೋಗಿತ್ತು. ಆ ಹೊತ್ತು ಲೆಬನಾನ್‌ಗೆ ಹೋಗಲು ಕಾದು ನಿಂತಿದ್ದ ವಾಹನಗಳು ಸಾಲಾಗಿ ನಿಂತಿರುವುದನ್ನು ನಾನು ಕಂಡೆ. ಕಿತ್ತಳೆ ಹಣ್ಣುಗಳ ಊರನ್ನು ತೊರೆದು ನಾವು ಇನ್ನೊಂದು ಊರಿಗೆ ಹೊರಟಿದ್ದೆವು.

ನಾನು ಜೋರಾಗಿ ಅತ್ತು ಗದ್ದಲ ಎಬ್ಬಿಸಿದೆ. ನಿನ್ನ ತಾಯಿ ಮೌನವಾಗಿ ಕುಳಿತು ಕಿತ್ತಳೆ ಹಣ್ಣುಗಳನ್ನು ನೋಡುತ್ತಿದ್ದರು. ನಿನ್ನ ತಂದೆಯ ಕಣ್ಣುಗಳಲ್ಲಿ ಇಸ್ರೇಲಿಗರಿಗಾಗಿ ತ್ಯಜಿಸಿ ಬಂದ ಕಿತ್ತಳೆ ಹಣ್ಣಿನ ತೋಟ ಪ್ರಕಾಶವಾಗಿ ಜ್ವಲಿಸುತ್ತಿತ್ತು. ತನ್ನ ಪ್ರತೀ ಮರಗಳೆಡೆಗಿನ ಬದ್ಧತೆ ಮತ್ತು ಪ್ರೀತಿ ಆ ಮುಖದ ಹೊಳಪಿನಲ್ಲಿ ಕಾಣಬಹುದಿತ್ತು. ತಪಾಸಣೆ ನಡೆಯುತ್ತಿದ್ದ ಸ್ಥಳದಲ್ಲಿ ಮುಖ್ಯ ಪೊಲೀಸ್ ಅಧಿಕಾರಿಯವರನ್ನು ಎದುರಿಸುವಾಗಲೂ ನಿನ್ನ ತಂದೆಗೆ ತನ್ನ ಕಣ್ಣಿಂದ ಹರಿಯುತ್ತಿದ್ದ ನೀರನ್ನು ತಡೆಯಲಾಗಲಿಲ್ಲ. ನಾವು ಝೈದಾ ತಲುಪಿದಾಗ ಮಧ್ಯಾಹ್ನವಾಗಿತ್ತು. ಅಲ್ಲಿಂದ ಮುಂದಕ್ಕೆ ನಾವು ನಿರಾಶ್ರಿತರಾಗಿ ಬದಲಾದೆವು. ಹಲವು ವ್ಯಕ್ತಿಗಳ ಹಾಗೂ ವಸ್ತುಗಳ ಭಾರ ಹೊತ್ತು ಪಳಗಿದ್ದ ಆ ರಸ್ತೆ ನಮ್ಮನ್ನೂ ಹೊತ್ತುಕೊಂಡಿತ್ತು. ನಿಜ ಹೇಳಬೇಕೆಂದರೆ, ಆ ಕ್ಷಣದಲ್ಲಿ ನಿನ್ನ ತಂದೆ ವಯಸ್ಸಾದವರಂತೆ ಕಾಣುತ್ತಿದ್ದರು. ಬಹುಶಃ ಅದು ಬಹಳ ದಿನಗಳಿಂದ ನಿದ್ರೆ ಮಾಡದ ಪರಿಣಾಮವಾಗಿರಬಹುದು. ವ್ಯಾನ್ ನಿಂದ ಇಳಿಸಿ ರಸ್ತೆಯ ಮೇಲಿಟ್ಟ ವಸ್ತುಗಳ ನಡುವೆ ಅವರು ಕ್ರುದ್ಧರಾಗಿ ನಿಂತಿದ್ದರು. ನಾನೇನಾದರು ಹೇಳಿದರೆ ನಿನ್ನ ತಂದೆ,ನಿನ್ನ ಅಪ್ಪ’ ಎಂದು ಬೊಬ್ಬೆ ಹೊಡೆಯುತ್ತಿದ್ದರೆಂದು ನನಗೆ ಖಚಿತವಾಗಿ ತಿಳಿದಿತ್ತು. ಅವರ ಮುಖದಲ್ಲಿ ಆ ಶಾಪವಾಕ್ಕುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ನಿರಾಶ್ರಿತರಾದ ನಾವು ರಸ್ತೆಯ ಮೇಲೆ ಸಾಮಾನುಗಳನ್ನು ಹೊತ್ತುಕೊಂಡು ಕುಳಿತಿದ್ದೆವು. ನಿರಾಶ್ರಿತರ ಸಮಸ್ಯೆಗಳನ್ನು ಪರಿಹರಿಸಲು ಯಾರೂ ಬರುವುದಿಲ್ಲ. ತಲೆಯ ಮೇಲಿನ ಸೂರನ್ನೊಳಗೊಂಡಂತೆ ಅವರು ತಮ್ಮ ಎಲ್ಲಾ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಬೇಕಷ್ಟೇ. ನೋವು ತಾಳಲಾಗದೆ ನನ್ನ ತಲೆ ಸಿಡಿಯತೊಡಗಿತು.
ಆ ರಾತ್ರಿ ಭಯಾನಕವಾಗಿತ್ತು. ಕಣ್ಣ ಮುಂದೆಯೇ ಇರುಳು ರಾತ್ರಿಯ ಛದ್ಮವೇಷ ತೊಟ್ಟು ಕುಣಿಯತೊಡಗಿತು. ನನ್ನ ಎದೆ ಬಡಿತವೋ ದ್ವಿಗುಣಗೊಳ್ಳುತ್ತಲೇ ಹೋಯಿತು. ರಾತ್ರಿಯಿಡೀ ರಸ್ತೆಯಲ್ಲೇ ಬಿದ್ದುಕೊಂಡಿರಬೇಕೆಂದು ನನಗಾಗಲೇ ಖಚಿತವಾಗಿತ್ತು. ನನ್ನೊಳಗೆ ದುಃಸ್ವಪ್ನಗಳು ತುಂಬಿಕೊಳ್ಳತೊಡಗಿದವು. ನನಗೆ ಸಮಾಧಾನ ಹೇಳುವವರು ಅಲ್ಲಿ ಯಾರೂ ಇರಲಿಲ್ಲ. ನಿನ್ನ ತಂದೆಯ ಉಕ್ಕಿನ ಮೌನ ನನ್ನನ್ನು ಭೀತಿಯ ಕೂಪಕ್ಕೆ ತಳ್ಳಿತು. ನಿನ್ನ ತಾಯಿಯ ಕೈಯಲ್ಲಿದ್ದ ಕಿತ್ತಳೆ ಹಣ್ಣು ನನ್ನ ಎದೆಯ ಬೆಂಕಿಗೆ ತುಪ್ಪ ಸುರಿಯಿತು. ಎಲ್ಲರೂ ನಿಶ್ಶಬ್ಧದ ಜೇಡರ ಬಲೆಯಲ್ಲಿ ಸಿಲುಕಿದ್ದರು. ನಿರೀಕ್ಷೆಯ ಕಣ್ಣುಗಳು ರಸ್ತೆಯನ್ನು ನೋಡುತ್ತಿದ್ದವು; ಯಾರಾದರು ಬರಬಹುದು, ತಮ್ಮ ಸಮಸ್ಯೆಯನ್ನು ಪರಿಹರಿಸಬಹುದು, ಸೂರು ಕೊಟ್ಟು ರಕ್ಷಿಸಬಹುದು ಎಂದು ಯೋಚಿಸುತ್ತಿದ್ದವು.
ಅಷ್ಟರಲ್ಲಿ ನಮ್ಮ ವಿಧಿಯೊಂದಿಗೆ ಒಬ್ಬರು ಅಲ್ಲಿಗೆ ಬಂದರು. ನಿನ್ನ ಚಿಕ್ಕಪ್ಪ. ಅವರು ಎರಡು ದಿನಗಳ ಮೊದಲೇ ಇಲ್ಲಿಗೆ ಬಂದಿದ್ದರು. ನಮ್ಮ ಹಣೆಬರಹ ಅವರ ಕೈಯಲ್ಲಿತ್ತು.


ನಿನ್ನ ಚಿಕ್ಕಪ್ಪ ಅಷ್ಟೇನೂ ದಯಾಳುವಾಗಿರಲಿಲ್ಲ. ರಸ್ತೆಯಲ್ಲಿ ಕಂಡಾಗಲೇ ಅವರ ದುಷ್ಟತನ ಅರಿವಿಗೆ ಬಂದಿತ್ತು. ಅವರು ಒಬ್ಬ ಯಹೂದಿಯ ಮನೆಗೆ ಹೋಗಿ, ಅಟ್ಟಹಾಸಗೈದರು; ತೊಲಗಿ ಇಲ್ಲಿಂದ, ನಿಮ್ಮ ವಸ್ತುಗಳನ್ನು ತೆಗೆದುಕೊಂಡ ಫೆಲೆಸ್ತೀನ್‌ಗೆ ಹೋಗಿ’. ಆದರೆ, ಅವರು ಫೆಲೆಸ್ತೀನ್‌ಗೆ ಹೋಗುವುದಿಲ್ಲವೆಂದು ಆತನಿಗೂ ತಿಳಿದಿತ್ತು. ನಿನ್ನ ಚಿಕ್ಕಪ್ಪನಿಗೆ ಅವರ ಮುಂದೆ ತನ್ನ ಸಿಟ್ಟು ಹಾಗೂ ಕ್ರೋಧವನ್ನು ತೋರಿಸುವ ಇರಾದೆಯಿತ್ತೆಂದು ತೋರುತ್ತದೆ. ಆ ಕುಟುಂಬ ತಮ್ಮ ಒಂದು ಕೋಣೆಯನ್ನು ನಮಗಾಗಿ ಬಿಟ್ಟು ಕೊಡಲು ಸಿದ್ಧವಾಯಿತು. ಬಳಿಕ ನಿನ್ನ ಚಿಕ್ಕಪ್ಪ ನಮ್ಮನ್ನು ಅಲ್ಲಿಗೆ ಕರೆದೊಯ್ದರು. ಅಲ್ಲಿ ನಿನ್ನ ಚಿಕ್ಕಪ್ಪನ ಕುಟುಂಬವೂ ಇತ್ತು. ನಾವು ಆ ಕೋಣೆಯ ನೆಲದ ಮೇಲೆ ಮಲಗಿದೆವು. ಸೈದಾದಿಂದ ನಾವು ಕೂಡಲೇ ಹೊರಡಬೇಕಾಯಿತು. ಕಾರಣ, ನಿನ್ನ ಚಿಕ್ಕಪ್ಪನ ಕೋಣೆಯಲ್ಲಿ ನಮ್ಮಲ್ಲಿ ರ‍್ಧದಷ್ಟು ಮಂದಿಗೆ ಕೂಡ ಇರಲು ಜಾಗವಿರಲಿಲ್ಲ. ಹೇಗೋ ಕಷ್ಟಪಟ್ಟು ನಾವಲ್ಲಿ ಮೂರು ದಿವಸವಿದ್ದೆವು. ನಿನ್ನ ತಾಯಿ ನಿನ್ನ ತಂದೆಯೊಂದಿಗೆ ಏನಾದರು ಕೆಲಸ ಹುಡುಕುವಂತೆ ಹೇಳಿದರು. ಇಲ್ಲದಿದ್ದರೆ ಕಿತ್ತಳೆ ಹಣ್ಣುಗಳನ್ನು ವಾಪಾಸು ಕೊಡುವಂತೆ ಹೇಳಿದರು. ಅದನ್ನು ಕೇಳಿ ನಿನ್ನ ತಂದೆಯ ಸ್ಥಿಮಿತ ತಪ್ಪಿತು. ಸಿಟ್ಟಿನಿಂದ ಅವರ ಧ್ವನಿ ನಡುಗುತ್ತಿತ್ತು. ಅಲ್ಲಿಗೆ ಒಂದು ಕೌಟುಂಬಿಕ ಸಮಸ್ಯೆಗೆ ನಾವು ಸಾಕ್ಷಿಯಾಗಬೇಕಾಯಿತು. ಕಿತ್ತಳೆಯ ನಾಡಿನಲ್ಲಿ ಹುತಾತ್ಮರ ಸಮಾಧಿಗಳ ನಡುವೆ ಪ್ರೀತಿ ವಿಶ್ವಾಸದಿಂದ ಕಳೆದಿದ್ದ ಕುಟುಂಬವೊಂದರಲ್ಲಿ ಸಮಸ್ಯೆಯ ಬೀಜ ಮೊಳಕೆಯೊಡೆಯಿತು. ನಿನ್ನ ತಂದೆ ಹಣ ಹೇಗೆ ಶೇಖರಿಸಿದರೋ ನನಗೆ ತಿಳಿದಿಲ್ಲ. ಆದರೆ, ನಿನ್ನ ತಾಯಿಯ ಆಭರಣಗಳನ್ನು ಮಾರಾಟ ಮಾಡಿರುವುದು ತಿಳಿದಿತ್ತು. ನಿನ್ನ ತಾಯಿ ಹೆಮ್ಮೆಯಿಂದ ತಲೆಯೆತ್ತಿ ತಿರುಗಲು ಅವರ ಆಭರಣಗಳನ್ನು ತೆಗೆದುಕೊಟ್ಟಿದ್ದರು. ಆದರೆ, ಆ ಆಭರಣದಿಂದ ಅಷ್ಟೊಂದು ಹಣ ಸಿಗಲು ಸಾಧ್ಯವಿಲ್ಲ. ಸಾಲವೇನಾದರು ಮಾಡಿರಬಹುದೇ? ನಮಗೆ ತಿಳಿಯದಂತೆ ಆಸ್ತಿ ಮಾರಿಬಿಟ್ಟರೆ? ಎಲ್ಲವೂ ನಿಗೂಢವಾಗಿತ್ತು. ಸೈದಾದ ಹೊರವಲಯದಲ್ಲಿ ಬಂಡೆಗಲ್ಲೊಂದರ ಮೇಲೆ ಕುಳಿತು ನಿನ್ನ ತಂದೆ ಮೊದಲ ಬಾರಿಗೆ ನಗುವುದನ್ನು ನಾನು ಕಂಡೆ. ಅವರು ಮೇ ೧೫ಕ್ಕೆ ಸೇನೆ ವಿಜಯೋತ್ಸವದೊಂದಿಗೆ ಹಿಂದಿರುಗುವುದನ್ನು ಕಾಯುತ್ತಿದ್ದರು. ಕಠೋರವಾದ ಕೆಲವು ದಿವಸಗಳ ನಂತರ ಮೇ ೧೫ ಬಂತು. ರಾತ್ರಿ ೧೨ಗಂಟೆಯ ಸುಮಾರಿಗೆ ಗಾಢ ನಿದ್ರೆಯಲ್ಲಿದ್ದ ನನ್ನನ್ನು ನಿನ್ನ ತಂದೆ ಒದ್ದು ಎಬ್ಬಿಸಿದರು. “ಏಳು, ಕಣ್ಣು ತೆರೆ. ಅರಬ್ ಸೈನ್ಯ ಫೆಲೆಸ್ತೀನ್‌ಗೆ ನುಗ್ಗುವುದನ್ನು ನೋಡು’ ಎಂದು ಅವರು ನನ್ನೊಂದಿಗೆ ಹೇಳಿದರು. ಅವರ ಧ್ವನಿ ಇತರರಲ್ಲಿ ನಿರೀಕ್ಷೆಯ ಹೊಂಗಿರಣಗಳನ್ನು ಮೂಡಿಸುವಂತಿತ್ತು. ಆ ಕಾಳ ರಾತ್ರಿಯಲ್ಲಿ ನಾವು ಹೊರಗಿಳಿದು ಕತ್ತಲ ಕೂಪದಲ್ಲಿ ಕಣ್ಮರೆಯಾಗಿದ್ದ ರ‍್ವತಗಳ ನಡುವೆ ಓಡತೊಡಗಿದೆವು. ರಸ್ತೆಗೆ ತಲುಪುವರೆಗೂ ಓಡಿದೆವು. ನಾವಿದ್ದ ಹಳ್ಳಿಯಿಂದ ರಸ್ತೆ ಬಹಳ ದೂರದಲ್ಲಿತ್ತು. ಮಕ್ಕಳು, ಯುವಕರು, ವಯಸ್ಕರು ಎಲ್ಲರೂ ಮರ‍್ಖರಂತೆ ರಸ್ತೆಗೆ ಓಡಿದೆವು. ವ್ಯಾನ್ ರಅï‌ಸ್ ಅಲ್ ನಖುರದ ಕಡೆಗೆ ಬಂತು. ದೂರದಿಂದ ಕಾರು, ಶಸ್ತ್ರಸಜ್ಜಿತ ವಾಹನಗಳು ಬರುತ್ತಿರುವುದು ಕಾಣುತ್ತಿತ್ತು. ಪ್ರಮುಖ ರಸ್ತೆಗೆ ಮುಟ್ಟುವಷ್ಟರಲ್ಲಿ ನಾವು ಚಳಿಯಿಂದ ನಡುಗುತ್ತಿದ್ದೆವು. ಹಲ್ಲುಗಳು ಕಟಕಟ ಕಡಿಯತೊಡಗಿತ್ತು. ಆದರೆ, ನಿನ್ನ ತಂದೆಯ ಸಂಭ್ರಮದ ಕೂಗು ನಮಗೆ ಎಲ್ಲವನ್ನೂ ಮರೆಯುವಂತೆ ಮಾಡಿದ್ದವು. ಅವರು ಸೈನಿಕರ ಕಾರುಗಳ ಕಡೆಗೆ ಪುಟ್ಟ ಮಗುವಿನಂತೆ ಓಡಿ; ಗಗ್ಗರ ಧ್ವನಿಯಲ್ಲಿ ಕೂಗಿ ಕರೆಯುತ್ತಿದ್ದರು. ನಾವು ಅವರನ್ನೇ ಅನುಸರಿಸಿದೆವು. ಮೆಚ್ಚುಗೆಗೆ ರ‍್ಹರಾಗಿದ್ದ ಕೆಲವು ಸೈನಿಕರು ನಮ್ಮನ್ನೇ ನೋಡುತ್ತಿದ್ದರು. ನಾವು ಏದುಸಿರು ಬಿಡುತ್ತಾ ಓಡುತ್ತಿದ್ದೆವು. ಆದರೆ, ನಿನ್ನ ತಂದೆ ತನಗೆ ೫೦ ರ‍್ಷ ಪ್ರಾಯವೆಂಬುದನ್ನು ಮರೆತು ಸೈನಿಕರ ಕಡೆಗೆ ಸಿಗರೇಟು ಎಸೆಯುತ್ತಾ ಓಡುತ್ತಿದ್ದರು. ಕುರಿಮರಿಗಳಂತೆ ನಾವು ನಿನ್ನ ತಂದೆಯನ್ನು ಹಿಂಬಾಲಿಸಿದೆವು. ಕಾರುಗಳ, ಶಸ್ತ್ರಸಜ್ಜಿತ ವಾಹನಗಳ ವಿಜಯ ಯಾತ್ರೆ ಬಹಳ ಬೇಗನೇ ಕೊನೆಗೊಂಡಿತು. ನಾವು ದಣಿದು ಮನೆಗೆ ಮರಳಿದೆವು. ನಿನ್ನ ತಂದೆ ಮೌನವಾಗಿದ್ದರು. ನಿಗೂಢ ಮೌನ. ಕಾರೊಂದರ ಹೆಡ್‌ಲೈಟ್ ಅವರ ಮುಖಕ್ಕೆ ಬಿದ್ದಾಗ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿರುವುದು ಕಾಣಿಸಿತು. ಆ ದಿನಗಳ ಬಳಿಕ ಬದುಕು ಹೇಗೋ ಸಾಗಿತು. ಘೋಷಣೆಗಳಿಂದ ನಾವು ಮರ‍್ಖರಾಗಿದ್ದೆವು. ಕ್ರೂರ ಸತ್ಯಗಳ ಮುಂದೆ ನಾವು ಸ್ತಬ್ಧರಾಗಿದ್ದೆವು. ಮುಖಗಳಿಗೆ ಕಾವಳ ಕವಿಯಿತು. ಮತ್ತೆಂದೂ ನಿನ್ನ ತಂದೆ ಫೆಲೆಸ್ತೀನ್ ಕುರಿತು ಮಾತನಾಡಲಿಲ್ಲ. ಕಿತ್ತಳೆ ಹಣ್ಣಿನ ತೋಟಗಳ ನಡುವೆ ಸಂತೋಷದಿಂದ ಕಳೆದ ದಿನಗಳನ್ನು ಅವರು ಮತ್ತೆ ನೆನಪಿಸಲೇ ಇಲ್ಲ. ತಮ್ಮ ಮನೆಯ ಬಗ್ಗೆಯೂ ಅವರು ಮಾತನಾಡಲಿಲ್ಲ. ನಾವು ಆ ದುರಂತದ ಕನ್ನಡಿಯಾಗಿ ಬದಲಾಗಿದ್ದೆವು. ಮುಂಜಾನೆ ನಮ್ಮನೆಲ್ಲಾ ಎಬ್ಬಿಸಿ ಅವರು ಕೂಗಿದರು;ಬೆಟ್ಟದ ಮೇಲೆ ಹೋಗಿರಿ, ಮಧ್ಯಾಹ್ನದ ಮೊದಲು ಯಾರೂ ಮರಳಬಾರದು’ ಬೆಳಿಗ್ಗಿನ ಉಪಹಾರ ಕೇಳದಿರಲು ಅವರು ಈ ಉಪಾಯ ಹೂಡಿದ್ದರು.

ಗಝಾನ್ ಕನಾಫಾನಿ


ದಿನದಿಂದ ದಿನಕ್ಕೆ ನಿನ್ನ ತಂದೆ ಕ್ರುದ್ಧರಾಗುತ್ತಾ ಹೋದರು. ಕ್ಷುಲ್ಲಕ ಸಂಗತಿಗಳಿಗೆ ಅಳತೆಮೀರಿ ಸಿಟ್ಟಿಗೇಳತೊಡಗಿದರು. ನನಗೀಗಲೂ ನೆನಪಿದೆ; ಮಕ್ಕಳಲ್ಲೊಬ್ಬರು ಏನೋ ಕೇಳಿದಾಗ ಆಘಾತಕ್ಕೊಳಗಾದವರಂತೆ, ಜಿಗಿದು ಎದ್ದರು. ನಂತರ ನಮ್ಮನ್ನು ದುರುಗುಟ್ಟಿ ನೋಡತೊಡಗಿದರು. ತಕ್ಷಣ ಅವರ ಮನಸಿಗೆ ಏನೋ ಹೊಳೆಯಿತು. ಮನಸಿನ ಗೊಂದಲಕ್ಕೆ ಪರಿಹಾರ ಲಭಿಸಿದಂತಿತ್ತು ಅವರ ಮುಖಭಾವ. ಸಮಸ್ಯೆಗಳು ಕೊನೆಗೊಂಡಂತೆ, ಅಂತಿಮ ತರ‍್ಪು ಪಡೆದಂತೆ, ಆಕಾಶ ಕರ‍್ಮೋಡಗಳಿಂದ ರಕ್ಷಣೆ ಹೊಂದಿ ತಿಳಿಯಾದಂತೆ ಅಸಂಬದ್ಧ ಮಾತುಗಳನ್ನಾಡತೊಡಗಿದರು. ನಂತರ ಏನನ್ನೋ ಹುಡುಕಲಾರಂಭಿಸಿದರು. ತಕ್ಷಣವೇ ನಾವು ಅಕಾದಿಂದ ತಂದಿದ್ದ ಪೆಟ್ಟಿಗೆಯೊಂದರ ಮೇಲೆ ಹಾರಿ ಕುಳಿತರು. ಅಪಸ್ಮಾರ ಬಾಧಿಸಿದವರಂತೆ ರ‍್ತಿಸಿ ಪೆಟ್ಟಿಗೆಯೊಳಗಿದ್ದ ವಸ್ತುಗಳನ್ನು ತೆಗೆದು ಹೊರಗೆಸೆಯತೊಡಗಿದರು. ನಿನ್ನ ತಂದೆ ಮುಂದೇನು ಮಾಡಲಿರುವರೆಂದು ನಿನ್ನ ತಾಯಿಗೆ ಮೊದಲೇ ತಿಳಿದಿತ್ತೋ ಏನೋ ಅವರು ಮಕ್ಕಳೊಂದಿಗೆ ಬೆಟ್ಟದ ಕಡೆಗೆ ಓಡಿ ಹೋಗುವಂತೆ ಹೇಳಿದರು. ಆದರೆ, ನಾವು ಮನೆಯ ಹೊರಗೆ ಕಿಟಕಿಯ ಬಳಿ ನಿಂತೆವು. ಕಿವಿಯನ್ನು ಗೋಡೆಗೆ ಆನಿಸಿ ಇಟ್ಟೆವು. ನಿನ್ನ ತಂದೆ ಪಿಶಾಚಿ ಬಾಧೆಗೆ ಒಳಗಾದವರಂತೆ; `ನಾನವರನ್ನು ಕೊಂದು ಹಾಕುತ್ತೇನೆ. ನನ್ನನ್ನೂ ಸಾಯಿಸುತ್ತೇನೆ. ಅವರನ್ನು ನನಗೆ ಕೊಲ್ಲಬೇಕು. ನಾನವರನ್ನು ಕೊಂದು ಹಾಕುತ್ತೇನೆ…’ ಎಂದು ಕಿರುಚುತ್ತಿದ್ದರು. ಬಾಗಿಲ ಸಂಧುಗಳಿಂದ ನಾವು ನೋಡುತ್ತಿದ್ದೆವು. ನಿನ್ನ ತಂದೆ ಗೋಡೆಗೆ ತಲೆ ಚಚ್ಚತೊಡಗಿದರು. ದರ‍್ಘ ಶ್ವಾಸವನ್ನು ಒಳಗೆಳೆಯುತ್ತಿದ್ದರು. ಕಟ ಕಟ ಹಲ್ಲು ಕಡಿಯುತ್ತಿದ್ದರು. ನಿನ್ನ ತಾಯಿ ಅಲ್ಪ ದೂರದಲ್ಲಿ ಭಯ ವಿಹ್ವಲರಾಗಿ ನಿಂತು ನೋಡುತ್ತಿದ್ದರು. ಏನು ನಡೆಯುತ್ತಿದೆ ಎಂದು ಮೊದಲು ನನಗೆ ರ‍್ಥವಾಗಲಿಲ್ಲ. ಅವರ ಪಕ್ಕದಲ್ಲಿ ಕಪ್ಪು ಪಿಸ್ತೂಲ್ ಬಿದ್ದಿರುವುದು ಕಂಡು ನನ್ನ ಮೆದುಳಿಗೆ ಭೀತಿಯ ಸಂದೇಶ ರವಾನೆಯಾಯಿತು. ನಾನು ಬೆಟ್ಟದ ಕಡೆಗೆ ಓಡಿದೆ. ಮನೆಯಿಂದ ರಕ್ಷಣೆ ಹೊಂದಲು ನಾನು ಬೆಟ್ಟದ ಕಡೆಗೆ ಓಡಿದ್ದೆ. ಮನೆಯಿಂದ ಎಷ್ಟು ದೂರ ಹೋಗುತ್ತೇನೋ ಬಾಲ್ಯದಿಂದ ಅಷ್ಟು ದೂರ ಹೋಗುವುದಾಗಿ ನನಗೆ ಅನಿಸುತ್ತಿತ್ತು. ಜೀವನ ಇನ್ನು ಮುಂದೆ ಈ ಹಿಂದಿನಂತಿರುವುದಿಲ್ಲ ಎಂದು ನನಗೆ ಖಚಿತವಾಗಿತ್ತು. ಮಾತ್ರವಲ್ಲದೆ, ಹಿಂದಿನಷ್ಟು ಸರಳವಾಗಿರುವುದಿಲ್ಲ, ಜೀವನ ಈಗಾಗಲೇ ನಿರೀಕ್ಷೆಯಿಂದ ಕಾಯುವ ಒಂದಾಗಿ ಉಳಿದಿಲ್ಲ. ತಲೆಗೆ ಬಂದೂಕು ಗುರಿಯಿಟ್ಟ ಸ್ಥಿತಿಗೆ ಬದುಕು ತಲುಪಿತ್ತು. ತಂದೆಯೊಬ್ಬನಿಗೆ ಮಕ್ಕಳಿಗೆ ಕೊಡಲೇನೂ ಇಲ್ಲದ ಅವಸ್ಥೆ. ಅಂದರೆ, ಇನ್ನು ಮುಂದೆ ನಮ್ಮ ಹಾದಿಯನ್ನು ನಾವೇ ಹುಡುಕಿಕೊಳ್ಳಬೇಕು. ನಮ್ಮ ರ‍್ತನೆ ಹೇಗಿರಬೇಕೆಂದು ಇನ್ನು ಯಾರೂ ಹೇಳಿಕೊಡುವುದಿಲ್ಲ. ಅಪ್ಪ, ಸಮಸ್ಯೆಗಳ ಬಗ್ಗೆ ಮಾತನಾಡುವಾಗ ಮೌನವಾಗಿ ಕುಳಿತುಕೊಳ್ಳಬೇಕು. ಎಷ್ಟೇ ಹಸಿವಾದರೂ ಆಹಾರ ಕೇಳಬಾರದು.ಬೆಟ್ಟದ ಕಡೆಗೆ ಓಡಿ, ಮಧ್ಯಾಹ್ನವಾಗದೆ ಹಿಂದಿರಗಬೇಡಿ’ ಎಂದರೆ ಅನುಸರಿಸಲೇಬೇಕು.
ಸಂಜೆ ಮನೆಯೊಳಗೆ ಇರುಳು ಆವರಿಸಿಕೊಳ್ಳುವಾಗ ನಿನ್ನ ತಂದೆ ಜ್ವರದಿಂದ ನಡುಗುತ್ತಾ ಮಲಗಿದ್ದರು. ನಿನ್ನ ಅಮ್ಮ ಕಣ್ಣೀರು ಹಾಕುತ್ತಾ ಅವರ ಪಕ್ಕದಲ್ಲಿ ಕುಳಿತಿದ್ದರು. ನಮ್ಮ ಕಣ್ಣುಗಳು ರಾತ್ರಿ ಬೆಕ್ಕಿನ ಕಣ್ಣುಗಳು ಹೊಳೆಯುವಂತೆ ಹೊಳೆಯುತ್ತಿತ್ತು. ನಮ್ಮ ತುಟಿಗಳು ಮೊಹರು ಬಿದ್ದು ಮುಚ್ಚಿದಂತಿತ್ತು. ಹಳೆಯ ಗಾಯಗಳ ಮೇಲಿನ ಹೊಲಿಗೆಯಂತೆ ಕಾಣಿಸುತ್ತಿತ್ತು.
ನಾವಿಲ್ಲಿ ತಟಸ್ಥರಾಗಿ ಬಾಲ್ಯದಿಂದ ಸಂಪರ‍್ಣವಾಗಿ ಕಳಚಿಕೊಂಡು, ಕಿತ್ತಳೆ ಹಣ್ಣುಗಳ ನೆಲದಿಂದ ದೂರವಾದೆವು. ಅಪರಿಚಿತರು ನೀರು ಹಾಕಿದರೆ ಕಿತ್ತಳೆ ಹಣ್ಣಿನ ಗಿಡಗಳು ಸಾಯುತ್ತವೆ ಎಂದು ವೃದ್ಧ ರೈತನೊಬ್ಬ ಹೇಳುತ್ತಿದ್ದ.
ನಿನ್ನ ತಂದೆ ಈಗಲೂ ರೋಗಗ್ರಸ್ತರಾಗಿ ಮಲಗಿದ್ದಾರೆ. ನಿನ್ನ ತಾಯಿಯ ಕಣ್ಣೀರು ಅಂದಿನಿಂದ ಬತ್ತಿಲ್ಲ. ನಾನು ಕೆಲವೊಮ್ಮೆ ಬಹಿಷ್ಕೃತನಂತೆ ಆ ಕೋಣೆಗೆ ಹೋಗುವುದಿತ್ತು. ಆಗ ನಿನ್ನ ತಂದೆಯ ಮುಖ ಸಿಟ್ಟಿನಿಂದ ವಿರ‍್ಣಗೊಳ್ಳುತ್ತಿತ್ತು. ಈಗಲೂ ಆ ಕಪ್ಪು ಪಿಸ್ತೂಲ್ ಮೇಜಿನ ಕೆಳಗಿನ ಡ್ರಾವರ್‌ನಲ್ಲಿದೆ. ಅದರ ಪಕ್ಕದಲ್ಲಿ ಒಂದು ಕಿತ್ತಳೆ ಹಣ್ಣು; ಸುಕ್ಕುಗಟ್ಟಿದ, ಒಣಗಿ ಸುರುಟಿದ ಕಿತ್ತಳೆ ಹಣ್ಣು.

ಅರಬಿಕ್ ಮೂಲ: ಗಝಾನ್ ಕನಾಫಾನಿ
ಕನ್ನಡಕ್ಕೆ: ಸ್ವಾಲಿಹ್ ತೋಡಾರ್

1 7 8 9 10 11 17