ಮನಮೋಹಕ ಶಾರ್ಜಾ ಪುಸ್ತಕ ಮೇಳ

ಒಬ್ಬ ಸಾಮಾನ್ಯವ್ಯಕ್ತಿ ಒಂದು ದೇಶದ ಸಾಂಸ್ಕೃತಿಕ ರಾಯಭಾರಿಯಾದ ಕಥೆಯಾಗಿದೆ ಇದು. ಸರಾಸರಿ ವ್ಯಕ್ತಿಯಾಗಿದ್ದುಕೊಂಡು ದೊಡ್ಡ ಕೆಲಸಗಳನ್ನು ಹೇಗೆ ಮಾಡಬೇಕು ಎಂಬುವುದಕ್ಕೆ ಅಸಲಿ ಪುರಾವೆ ಇವರ ಜೀವನ. ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸಂಘಟಕ ಮೋಹನ್ ಕುಮಾರರೊಂದಿಗೆ Thasrak.com ನ ಬರಹಗಾರರಾದ ರಾಜೇಶ್ ಚಿತ್ತಿರ ಮತ್ತು ಜೋಸ್ಲೆಟ್ ಜೋಸೆಫ್ ನಡೆಸಿದ ಸಂದರ್ಶನ.

ಮೂರೂವರೆ ದಶಕದ ಶಾರ್ಜಾ ಪುಸ್ತಕ ಮೇಳದ ಇತಿಹಾಸದೊಂದಿಗೆ ನೀವಿದ್ದೀರಿ. ಈಗ ಅದರ ಯಶಸ್ಸು ಎಲ್ಲಿಯವರೆಗೆ ತಲುಪಿ ನಿಂತಿದೆ?

ವಿಶ್ವದ ಅತಿದೊಡ್ಡ ಮೇಳವನ್ನಾಗಿಸುವುದಾಗಿದೆ ನಮ್ಮ ಗುರಿ. ಬಹುತೇಕ ನಾವು ಅದರ ಅಂಚಿನಲ್ಲಿದ್ದೇವೆ. ಫ್ರಾಂಕ್ ಫುರ್ಟ್ ಮೇಳ ಒಂದನೇ ಸ್ಥಾನದಲ್ಲಿದ್ದರೆ
ನಮ್ಮ ಪುಸ್ತಕ ಮೇಳ ಎರಡನೇ ಸ್ಥಾನದಲ್ಲಿದೆ.
ಆದರೆ ಫ್ರಾಂಕ್ ಫುರ್ಟ್ ಮೇಳವು ಪುಸ್ತಕ ವ್ಯಾಪಾರ ಮೇಳವಾಗಿದೆ. ಸಾರ್ವಜನಿಕ ಓದುಗರಿಗಾಗಿ ನಡೆಸುವ ಮೇಳದಲ್ಲಿ ನಾವೂ ಮುಂಚೂಣಿಯಲ್ಲಿದ್ದೇವೆ ಹಾಗೂ ಹತ್ತು ದಿನಗಳಲ್ಲಿ ಬರೋಬ್ಬರಿ ಎರಡು ಮಿಲಿಯನ್ ಸಾರ್ವಜನಿಕರು ಭೇಟಿ ನೀಡಿದ್ದಾರೆ. ಇಲ್ಲಿ ನಮಗೆ ಪುಸ್ತಕ ವಿತರಣೆ ಮಾಡುವವರಿಗಿಂತ ಪುಸ್ತಕ ಪ್ರಕಾಶಕರು ನೇರವಾಗಿ ಬರುವಂತೆ ಮಾಡಬೇಕಾಗಿದೆ. Oxford ಸೇರಿದಂತೆ ಹಲವಾರು ಪ್ರಕಾಶಕರು ತಮ್ಮ ಪುಸ್ತಕಗಳು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುವ ಫ್ರಾಂಕ್ ಫುರ್ಟ್ ನಂತಹ ಸ್ಥಳಗಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ. ನಾವು ಆ ಭಾವನೆಗಳನ್ನು ಬದಲಾಯಿಸುತ್ತಿದ್ದೇವೆ.

ಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯಗಳಿಗಾಗಿ ಲೋಕದಾದ್ಯಂತ ಯಾತ್ರೆ ಕೈಗೊಳ್ಳುವ ನಿಮಗೆ, ಪುಸ್ತಕಗಳ ಭವಿಷ್ಯದ ಬಗ್ಗೆ ಇರುವ ಅಭಿಪ್ರಾಯವೇನು?

ಪುಸ್ತಕಗಳು ಓದುವ ಹವ್ಯಾಸ ಕುಂಟುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಅದನ್ನು ನಿವಾರಿಸಲಿರುವ ಏಕೈಕ ಮಾರ್ಗ ಜನರನ್ನು ಓದುವಿಕೆಗೆ ಮರುಳಿಸುವುದಾಗಿದೆ. ಶಾರ್ಜಾ ಸುಲ್ತಾನರ ನೇತೃತ್ವದಲ್ಲಿ ಪ್ರಪಂಚದಾದ್ಯಂತ ಓದುವ ಸಂಸ್ಕೃತಿಯನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇವೆ.
ಶಾರ್ಜಾ ಪುಸ್ತಕ ಮೇಳ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶಾಲಾ ಮಕ್ಕಳಿಗಾಗಿ ಮಾತ್ರ ತೆರೆಯಲ್ಪಡುತ್ತಿದ್ದವು. ಅದರಂತೆ ಪ್ರತೀವರ್ಷ ಶಾರ್ಜಾ ಮಕ್ಕಳ ಪುಸ್ತಕ ಮೇಳವು ನಡೆಸಲ್ಪಡುತ್ತದೆ. ಆದರೆ ಬೊಲೋನ (bologna) ದಂತಹ ಮಕ್ಕಳ ಪುಸ್ತಕ ಮೇಳದಲ್ಲಿ ಮಕ್ಕಳಿಗೆ ಪ್ರವೇಶವಿಲ್ಲ ಎಂಬುವುದು ಆಶ್ಚರ್ಯಕರವಾದ ಸಂಗತಿಯಾಗಿದೆ. ಅದು ಕೇವಲ ವ್ಯಾಪಾರ ಮೇಳ.
ಓದುವಿಕೆಯನ್ನು ಪ್ರೋತ್ಸಾಹಿಸಲು ಶಾರ್ಜಾದ ಎಲ್ಲಾ ಸ್ಥಳೀಯ ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ. ಈ ಸಂಸ್ಕೃತಿಯನ್ನು ನೋಡಿ ಬೆಳೆಯುವ ಮಕ್ಕಳು ಓದುವ ಹವ್ಯಾಸ ವನ್ನು ಕೂಡಾ
ಅವರೊಂದಿಗೆ ಬೆಳೆಸುತ್ತಾರೆ ಎಂಬ ನಂಬಿಕೆ. ಪುಸ್ತಕಗಳನ್ನು ಓದುವ ಹವ್ಯಾಸವಿರುವ ಮಕ್ಕಳ ಕುರಿತು ಪೋಷಕರು ಚಿಂತಿಸಬೇಕಾಗಿಲ್ಲ. ಅವರಿಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಿ ಕೊಡುವ ಕೆಲಸ ಮಾತ್ರ ಮಾಡಿದರೆ ಸಾಕಾಗುತ್ತದೆ.

ಪ್ರಪಂಚದಾದ್ಯಂತ ನಡೆಯುವ ಪುಸ್ತಕ ಮೇಳಗಳನ್ನು ಗಮನಿಸಿದರೆ ಫ್ರಾಂಕ್ ಫುರ್ಟ್ ನಲ್ಲಿರುವ ಎಂಟನೇ ಹಾಲ್ ಭದ್ರತಾ ತಪಾಸಣೆಗಳ ಬಳಿಕ ಪ್ರವೇಶಿಸ ಬಹುದಾದ ಏಕೈಕ ಸ್ಥಳವಾಗಿತ್ತು. ಆದರೆ ಈ ವರ್ಷ ಇರಲಿಲ್ಲ. ಅಲ್ಲಿದ್ದವರನ್ನು ಇತರ ಸಭಾಂಗಣ ಗಳಿಗೆ ಸ್ಥಳಾಂತರಿಸಲಾಯಿತು. ಲಂಡನ್ ಮೇಳವನ್ನು ವಿಶಾಲವಾದ ಹಳೆಯ ಜಾಗದಿಂದ ಒಲಿಂಪಿಯಾದ ಸಣ್ಣ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ನಾಲ್ಕು ಸಭಾಂಗಣ ಗಳಲ್ಲಿ ಆಯೋಜಿಸಲ್ಪಡುತ್ತಿದ್ದ ಮಾಸ್ಕೋ ಪುಸ್ತಕ ಮೇಳ ವರ್ಷದಿಂದ ವರ್ಷಕ್ಕೆ ಒಂದೊಂದು ಕಡಿಮೆಯಾಗುತ್ತಾ ಈ ವರ್ಷ ಒಂದಕ್ಕೆ ಕುಗ್ಗಿದೆ. ಇವೆಲ್ಲವೂ ಪುಸ್ತಕ ಮೇಳಗಳ ಮೇಲಿರುವ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂಬುದಕ್ಕೆ ಸೂಚನೆಯಾಗಿದೆ. ಆದರೆ ಶಾರ್ಜಾ ಪುಸ್ತಕ ಮೇಳ ಇದಕ್ಕೆಲ್ಲ ವಿರುದ್ಧವಾಗಿ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದೆ. ಆರು ಸಭಾಂಗಣ ಗಳಲ್ಲಿ ನಡೆಯುತ್ತಿದ್ದ ಮೇಳ ಈ ವರ್ಷ ಏಳನೇ ಸಭಾಂಗಣ ಕ್ಕೆ ವಿಸ್ತಾರವಾಗಿದೆ. ಅಲ್ಲದೆ ೨೦೧೯ ಕ್ಕೆ ಶಾರ್ಜಾ ವಿಶ್ವ ಪುಸ್ತಕಗಳ ರಾಜಧಾನಿ ಆಗಲಿದೆ.

ಹೆಸರಿಗೆ ಪುಸ್ತಕ ಮೇಳವಾದರೂ, ಚಿತ್ರರಂಗದವರು ಸೇರಿದಂತೆ ಅನೇಕ ಸಾರ್ವಜನಿಕರು ಸೇರುವ ದೊಡ್ಡ ಹಬ್ಬವಲ್ಲವೇ ?

ಅದರಲ್ಲಿ ತಪ್ಪೇನಿದೆ?! ೧೦ ಜನರಲ್ಲಿ ಓದುವ ಹವ್ಯಾಸವನ್ನು ರೂಢಿ ಮಾಡಿಕೊಂಡವರು ಎಷ್ಟು ಜನ ಇರುತ್ತಾರೆ? ಕೇವಲ ಮೂರೋ ನಾಲ್ಕೋ ಅಥವಾ ಅದಕ್ಕಿಂತ ಕಡಿಮೆಯಿರುತ್ತಾರೆ. ಆ ೧೦ ಜನಕ್ಕೆ ಚಿತ್ರ ನಟ ಮೋಹನಲಾಲರನ್ನು ಚೆನ್ನಾಗಿ ಪರಿಚಯ ವಿರುತ್ತದೆ. ಆದರೆ ಬರಹಗಾರರಾದ ಎಂ.ಮುಕುಂದನವರನ್ನು ಕೆಲವೇ ಜನರಿಗೆ ಮಾತ್ರ ಪರಿಚಯ ಇರುತ್ತದೆ. ಇದೆಲ್ಲ ನಮ್ಮ ಭಾಷೆಗಳ ಮಿತಿಯನ್ನು ತೋರಿಸುತ್ತಿದೆ. ಅಮಿತಾಭ್ ಬಚ್ಚನ್ ವಿಶ್ವ ಪ್ರಸಿದ್ಧ ಆದರೆ ಮಹಾ ವಿದ್ವಾಂಸ ಮತ್ತು ಕವಿಯಾಗಿದ್ದ ಅವರ ತಂದೆ ಹರಿವಂಶ ರಾಯ್‌ ಬಚ್ಚನ್ ರವರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ?. ವಿಶ್ವದ ಎಲ್ಲೆಡೆ ಇರುವ ಪರಿಸ್ಥಿತಿ ಇದು. ಮಮ್ಮುಟ್ಟಿಯವರನ್ನು ಪುಸ್ತಕ ಮೇಳಕ್ಕೆ ಕರೆತಂದಾಗ ಯಾಕೆ ಎಂದು ಅನೇಕ ಜನರು ಪ್ರಶ್ನಿಸಿದ್ದರು. ಅವರನ್ನು ನೋಡಲು ಮಾತ್ರ ಬಂದವರಲ್ಲಿ ಮಮ್ಮುಟ್ಟಿಯವರು ಓದುವಿಕೆಯ ಬಗ್ಗೆ ಹೇಳುವ ಮಾತುಗಳಲ್ಲಿ ಆಕರ್ಷಿತರಾಗಿ ಓದಲು ಪ್ರಾರಂಭಿಸಿದರೆ ನಾವು ಪಡುವ ಶ್ರಮಕ್ಕೆ ದೊರಕುವ ಪ್ರೋತ್ಸಹವಲ್ಲವೇ?. ಅದೇ ರೀತಿ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ ಹಾಗೆ ನಡೆಯುವ ಒಂದು ದೊಡ್ಡ ವಿಭಾಗವಿದೆ. ನಾನು ಉಸ್ತಾದರಲ್ಲಿ ಪುಸ್ತಕ ಓದುವಿಕೆಯ ಬಗ್ಗೆ ಎರಡು ಮಾತನಾಡಬೇಕೆಂದು ಕೇಳಿಕೊಂಡೆ. ಅವರು ಅದರ ಮಹತ್ವವನ್ನು ಸರಳವಾಗಿ ಸ್ಪಷ್ಟವಾಗಿ ಹೇಳಿ ಬೋಧಿಸಿದರು. ಇವೆಲ್ಲವೂ ಓದುವಿಕೆಯನ್ನು ಪ್ರೋತ್ಸಾಹಿಸುವ ಒಂದೊಂದು ರೀತಿಗಳಾಗಿವೆ.

ಅಷ್ಟೊಂದು ಪುಸ್ತಕಗಳೊಂದಿಗೆ ಬೆರೆತ ನಿಮ್ಮ ಓದುವಿಕೆಯ ಶೈಲಿ ಹೇಗಾಗಿದೆ?

ಆಸಕ್ತಿ ಮತ್ತು ಜವಾಬ್ದಾರಿ ಒಂದುಗೂಡಿದ್ದಾಗಿದೆ ನನ್ನ ಜೀವನ. ಓದುವುದು ನನ್ನ ಕೆಲಸದ ಭಾಗ ಹಾಗೂ ಹವ್ಯಾಸ ಕೂಡ. ನಾನು ಆತ್ಮಚರಿತ್ರೆ, ಸ್ಪೂರ್ತಿದಾಯಕ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೇನೆ. ಕಥೆ ಕಾದಂಬರಿ ಮತ್ತು ಕವಿತೆಗಳನ್ನು ಓದುವುದು ವಿರಳ. ಕಾರಿನಲ್ಲಿ ಹಾಡಿನ ಬದಲಿಗೆ ಸ್ಟೀಫನ್ ಕೋವೆಯ ಸೆವೆನ್ ಹ್ಯಾಬಿಟ್ಸ್ ಪುಸ್ತಕದ ಆಡಿಯೋವನ್ನ ಕೇಳುವೆ. ರಿಚರ್ಡ್ ಟೆಂಪ್ಲರ್ ಇತ್ತೀಚೆಗೆ ಬರೆದ ದಿ ರೂಲ್ಸ್ ಆಫ್ ಲೈಫ್ ಓದಿದೆ. ರೂಲ್ಸ್ ಆಫ್ ಲವ್ ಸಹ ಅತ್ಯುತ್ತಮ ಪುಸ್ತಕವಾಗಿದೆ.

ಉದ್ಯೋಗ ಮತ್ತು ಆಸಕ್ತಿ ಎಂಬ ರೀತಿಯಲ್ಲಿ ಪುಸ್ತಕಗಳೊಂದಿಗೆ ಹೆಚ್ಚಾಗಿ ತೊಡಗಿಸಿಕೊಂಡಿದೀರಿ. ಹಾಗಾದರೆ ಜಗತ್ತಿನಲ್ಲಿ ಈ ಸಾಹಿತ್ಯದ ಅವಶ್ಯಕತೆ ಏನು?

ಅತ್ಯತ್ತಮ ಪುಸ್ತಕಗಳು ನಮಗೆ ಜೀವನದ ಬಗ್ಗೆ ಮತ್ತು ಪ್ರಪಂಚದ ಬಗ್ಗೆ ಸಾಕಷ್ಟು ಜ್ಞಾನವನ್ನು ನೀಡುತ್ತದೆ. ಜ್ಞಾನ ಒಬ್ಬ ವ್ಯಕ್ತಿಯನ್ನು,ವ್ಯಕ್ತಿತ್ವವನ್ನು ರೂಪಿಸುತ್ತದೆ. ಜ್ಞಾನ ಮಾತ್ರವಿದ್ದು ಯಾವ ಪ್ರಯೋಜನವೂ ಇಲ್ಲ. ಆ ಅರ್ಥದಲ್ಲಿ ಸಾಹಿತ್ಯಕೂಡ ನಿಷ್ಪ್ರಯೋಜಕ ಎಂದು ತೋರುತ್ತದೆ. ಆದರೆ ಪುಸ್ತಕಗಳಿಂದ ಮತ್ತು ಜೀವನಾನುಭವದಿಂದ ಪಡೆದ ಜ್ಞಾನ ನಾವು ರೂಢಿಗೆ ತರುವುದಿರಿಂದ ಮಾತ್ರ ಅದರ ಪ್ರಯೋಜನ ಬರುವುದು. ನಮ್ಮ ಜ್ಞಾನ ನಮಗೂ ಇತರರಿಗೂ ಉಪಯುಕ್ತವಾಗಬೇಕು ಹಾಗು ಅದನ್ನು ನೀಡಲು ನಾವು ಸಿದ್ಧರಿರಬೇಕು. ಇದು ನಾನು ಕಲಿತ ತತ್ವ. ಸಣ್ಣ ಪುಟ್ಟ ಕಾರ್ಯಗಳಲ್ಲಿ ಆನಂದವನ್ನು ಗಳಿಸಲು ಸಾಧ್ಯವಾಗಬೇಕು.

ಈ ಪುಸ್ತಕ ಜಗತ್ತಲ್ಲಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ?

ಯಾವ ಅನುಮಾನವಿಲ್ಲದೆ ಶಾರ್ಜಾ ಸುಲ್ತಾನ್ ಡಾ. ಸುಲ್ತಾನ್ ಬಿನ್ ಮೊಹಮ್ಮದ್ ಅಲ್ ಕಾಸಿಮ್ ಎಂದು ಹೇಳುವೆ. ಅವರಿಗೆ ಈಗ ೭೮ ವರ್ಷ ವಯಸ್ಸಾಗಿದೆ. ಆದರೆ ಅವರು ಜಗತ್ತಿನಲ್ಲಿ ನಡೆಯುವ ಎಲ್ಲ ಪುಸ್ತಕ ಮೇಳಗಳಲ್ಲಿ ಭಾಗವಹಿಸುವವರಾಗಿದ್ದಾರೆ. ಅರುವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಆ ಪುಸ್ತಕಗಳು ವಿಶ್ವದ ಎಲ್ಲಾ ಭಾಷೆಗಳಿಗೆ ಭಾಷಾಂತರಿಸಲಾಗಿದೆ. ಶಾರ್ಜಾ ಪುಸ್ತಕ ಮೇಳ ಆ ಒಬ್ಬ ವ್ಯಕ್ತಿಯ ಉತ್ಸಾಹದಿಂದ ಮಾತ್ರ ಹಾಗು ಮಿಲಿಯನ್ ದಿರ್ಹಮ್ ವೆಚ್ಚದಿಂದ
ನಡೆಸಲ್ಪಡುತ್ತಿದೆ. ಅವರ ನಿರ್ದೇಶನದೊಂದಿಗೆ ನಾವು ಕೆಲಸ ನಿರ್ವಹಿಸುತ್ತಿದ್ದೇವೆ.

ನಾನು ದೆಹಲಿಯಲ್ಲಿ ನಡೆದ ಪುಸ್ತಕ ಮೇಳದಲ್ಲಿ ಭಾಗವಹಿಸಿದೆ. ಅಲ್ಲಿ ಗಮನಿಸಿದ ವಿಷಯವೇನೆಂದರೆ ನಮ್ಮ ನಾಯಕರು ಹೊರಗಡೆ ನೆರೆದಿರುವ ನೂರಾರು ಮಾಧ್ಯಮಗಳ ಮುಂದೆ ಉದ್ಘಾಟಿಸಿ ಶೀಘ್ರವೇ ಹೊರಡುತ್ತಾರೆ. ಆದರೆ ಸುಲ್ತಾನ್ ಹಾಗಲ್ಲ! ಎರಡು ದಿನ ಮುಂಚಿತವಾಗಿ ಆಗಮಿಸಿ ಎಲ್ಲ ಸಿದ್ಧತೆಗಳಿಗೆ ನೇತೃತ್ವವನ್ನು ವಹಿಸುತ್ತಾರೆ. ಸ್ವಂತವಾಗಿ ಪ್ರಕಾಶನ ಕೇಂದ್ರವನ್ನು ಹೊಂದಿರುವ ವಿಶ್ವದ ಏಕೈಕ ಆಡಳಿತಗಾರ ಅವರಾಗಿದ್ದಾರೆ.
ಸುಲ್ತಾನ್ ಭಾರತದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಹಿಂದೆ ಅರಬ್ಬರನ್ನು ಕಡಲ್ಗಳ್ಳರೆಂದು ಕೀಳಾಗಿ ಗುರುತಿಸಲಾಗುತ್ತಿತ್ತು. ಈ ಅಪಪ್ರಚಾರವನ್ನು ಇಲ್ಲವಾಗಿಸಲು ಡಾ .ಸುಲ್ತಾನ್ ಚಿಕ್ಕವಯಸ್ಸಿನಲ್ಲೇ ಬಾಂಬೆ ವಿಶ್ವವಿದ್ಯಾಲಯದ ಆರ್ಕ್ಕಿ ವೈಸ್ನನ ದಾಖಲೆಗಳನ್ನು ಕಂಡುಹಿಡಿದು ಪ್ರಕಿಟಿಸಿದರು. ತನ್ನ ಮೊದಲ ಪುಸ್ತಕವಾದ “ದಿ ಮಿಥ್ ಆಫ್ ಅರಬ್ ಪೈರಸಿಯಲ್ಲಿ” ಅರಬರು ಸಮುದ್ರ ಮೂಲಕ ಭಾರತದೊಂದಿಗೆ ಉತ್ತಮ ವ್ಯಾಪಾರ ಸಂಬಂದ ಹೊಂದಿದ್ದರು ಎಂದು ಸಾಬೀತು ಪಡಿಸಿದರು. ಆ ಸಮಯದಲ್ಲಿ ತನಗೆ ಅಗತ್ಯ ನೆರವು ನೀಡಿದ ಬಾಂಬೆ ವಿಶ್ವವಿದ್ಯಾಲಯದ ಉಪಕುಲಪತಿ ಈಗ ಆಡಳಿತಗಾರರ ಕಚೇರಿಯ ಸಲಹೆಗಾರರಲ್ಲಿ ಒಬ್ಬರಾಗಿದ್ದಾರೆ.

ಶಾರ್ಜಾ ಸುಲ್ತಾನರ ಕೇರಳ ಭೇಟಿಯ ಹಿಂದಿನ ರೂವಾರಿ ನೀವಲ್ಲವೇ?

ಅದು ನನ್ನ ಕನಸಾಗಿತ್ತು. ನನಸು ಮಾಡಲು ಪ್ರಯತ್ನಿಸಿದೆ. ಒಬ್ಬ ಆಡಳಿತಗಾರ ಇನ್ನೊಂದು ರಾಷ್ಟ್ರಕ್ಕೆ ಭೇಟಿ ನೀಡುವುದು ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ (diplomatic ) ವಿಷಯವಾಗಿದೆ. ಅದು ಅಷ್ಟು ಸುಲಭದ ಮಾತಲ್ಲ. ನಾನು ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಓದಿದ್ದೇನೆ. ಶಾರ್ಜಾ ಸುಲ್ತಾನರನ್ನು ನನ್ನ ದೇಶಕ್ಕೆ ಕರೆತಂದು ಗೌರವಿಸುವುದು ನನ್ನ ಕನಸಾಗಿತ್ತು. ಅಂತಹ ಒಬ್ಬ ಮಹಾನ್ ವಿದ್ವಾಂಸ ಮತ್ತು ನಿಷ್ಠಾವಂತ ಆಡಳಿತಗಾರನನ್ನು ನಮ್ಮ ದೇಶ ಗೌರವಿಸುವುದರ ಬಗ್ಗೆ ಕನಸು ಕಾಣಬಹುದು. ಆದರೆ ನನ್ನಂತಹ ಸಾಮಾನ್ಯ ವ್ಯಕ್ತಿ ಅದನ್ನು ಕಾರ್ಯಗತಗೊಳಿಸ ಬಹುದೇ?! ಹೌದು ಸಾಧಿಸಬಹುದು!. ದಿಟ್ಟವಾದ ಒಳ್ಳೆಯ ನಿಯತಿನೊಂದಿಗೆ ಕನಸುಕಂಡರೆ ಅದು ನನಸಾಗುವುದಕ್ಕೆ ಎಲ್ಲ ಸಂದರ್ಭಗಳು ಅನುಕೂಲವಾಗ ಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಶಾರ್ಜಾ ಸುಲ್ತಾನರ ಕೇರಳ ಭೇಟಿ. ಸುಲ್ತಾನರನ್ನು ಕರತರಲು ನಾನು ಮೊದಲು ಮಾಡಿದ ಕಾರ್ಯವೇನಂದರೆ ಕ್ಯಾಲಿಕಟ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸಲೀಮರನ್ನು ಶಾರ್ಜಾ ಪುಸ್ತಕಮೇಳದಲ್ಲಿ ಮಾತನಾಡಲು ಆಹ್ವಾನಿಸಿದೆ. ಅವರು ಬಂದಾಗ ಶಾರ್ಜಾ ಸುಲ್ತಾನರ ಬಗ್ಗೆ ನಾನು ಮೊದಲೇ ಬರೆದು ತಯಾರಿಸಿದ ಲೇಖನವನ್ನು ಅವರ ಕೈಯ್ಯಲ್ಲಿ ಕೊಟ್ಟೆ. ಅನೇಕ ಪುಸ್ತಕಗನ್ನು ಬರೆದ ವ್ಯಕ್ತಿ ಅತ್ಯತ್ತಮ ಆಡಳಿತಗಾರ ಮಲಯಾಳಿ ಸೇರಿದಂತೆ ಭಾರತೀಯರಿಗೆ ಎಲ್ಲರೀತಿಯ ಆತಿಥ್ಯವನ್ನು ನೀಡುವ ವ್ಯಕ್ತಿ ಎಂಬ ಎಲ್ಲಾ ಅಂಶಗಳನ್ನು ಪರಿಗಣಿಸಿ ಅವರಿಗೆ ಗೌರವ ಡಿ.ಲಿಟ್ ನೀಡಬೇಕೆಂದು ನಾನು ಅವರಲ್ಲಿ ಒತ್ತಾಯಿಸಿದೆ. ಅವರು ಪ್ರಸ್ತುತ ೧೭ ಡಿ.ಲಿಟ್ ನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಗಣ್ಯ ವ್ಯಕ್ತಿಗಳಿಗೆ ಮಾತ್ರ ಅದು ನೀಡುವುದು. ಅದು ಇಲ್ಲದಿದ್ದರೆ ಇನ್ನಿತರ ವಿಶ್ವವಿದ್ಯಾಲಯಗಳಿಗೆ ನೀಡಲಾಗುವುದು. ಅದು ಇಲ್ಲದಿದ್ದರೆ ಭಾರತದ ಇನ್ನಿತರ ರಾಜ್ಯಗಳಿಂದ ಬಂದವರನ್ನು ಆಯ್ಕೆ ಮಾಡುವುದು ವಾಡಿಕೆ. ಇವೆಲ್ಲವನ್ನೂ ಮೀರಿಸಿ ಒಬ್ಬ ವಿದೇಶಿ ಆಡಳಿತಗಾರನಿಗೆ ಡಿ.ಲಿಟ್ ನೀಡಿ ಗೌರವಿಸಲು ನಮ್ಮ ವಿಶ್ವವಿದ್ಯಾಲಯ ನಿರ್ಧರಿಸಿತು. ಅದಕ್ಕೆ ಸಚಿವರಾಗಿದ್ದ ಡಾ ಎಂ ಕೆ ಮುನೀರ್ ಸಹಾಯನೀಡಿದರು.ಪ್ರಾಂಕ್ ಫರ್ಟ್ ಮೇಳದಲ್ಲಿ ಮುನೀರ್ ವರು ಶಾರ್ಜಾ ಸುಲ್ತಾನರ ಬಳಿ ಅಧಿಕೃತವಾಗಿ ತಂದೆ ತಿಳಿಸಿದರು. ಅದನ್ನು ಸ್ವೀಕರಿಸಲು ಕೇರಳಕ್ಕೆ ಬರುವೆ ಎಂಬ ಭರವಸೆ ಕೊಟ್ಟರು.

ಅಧ್ಯಕ್ಷರಾಗಿದ್ದ ಎಪಿ ಜೆ ಅಬ್ದುಲ್ ಕಲಾಮಾರನ್ನು ಶಾರ್ಜಾಗೆ ತಂದವರು ನೀವಲ್ಲವೇ ?

ಕಲಾಮರಿಗೂ ಶಾರ್ಜಾ ಸುಲ್ತಾನರಿಗೂ ಬಹಳಷ್ಟು ಸಾಮ್ಯತೆಗಳಿವೆ. ಇಬ್ಬರು ಉತ್ತಮ ಬರಹಗಾರರು ಮತ್ತು ಉತ್ತಮ ಆಡಳಿತಗಾರರಾಗಿದ್ದರು. ಆದ್ದರಿಂದ ಅವರಿಬ್ಬರು ಪರಸ್ಪರ ಭೇಟಿಯಾಗಲೆಂದು ನಾನು ಬಯಸಿದ್ದೆ. ಅದರಂತೆ ಅವರನ್ನು ಶಾರ್ಜಾ ಪುಸ್ತಕ ಮೇಳಕ್ಕೆ ಆಹ್ವಾನಿಸಲಾಯಿತು. ಎಲ್ಲ ಅಧಿಕೃತ ಕಾರ್ಯವಿಧಾನಗಳಿಗೆ ಅನುಸಾರವಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ ಕಲಾಮರನ್ನು ಸ್ವೀಕರಿಸಲು ಶಾರ್ಜಾ ಸಿದ್ದವಾಯಿತು. ಪುಸ್ತಕ ಮೇಳದ ಉದ್ಘಾಟನೆಯ ನಂತರ ಸುಲ್ತಾನರಿಗೆ ಆಹ್ವಾನಿಸಲಾದ ಅತಿಥಿಗಳೊಂದಿಗೆ ಔತಣಕೂಟಕ್ಕೆ ಭಾಗವಹಿಸ ಬೇಕಾಗಿತ್ತು. ಅದರಿಂದ ಕಲಾಂರೊಂದಿಗೆ ಅಧಿಕೃತ ಸಭೆ ನಡೆಸಲು ಕೇವಲ ೫ ನಿಮಿಷಗಳ ಕಾಲಾವಕಾಶ ಮಾತ್ರ ಸಿಕ್ಕಿತು. ಇಬ್ಬರು ಮಾತುಕತೆ ಪ್ರಾರಂಭಿಸಿದರು. ಪುಸ್ತಕಗಳು, ಯಾತ್ರೆಗಳು,ಭಾರತ ಮತ್ತು ಅರಬ್ ರಾಷ್ಟ್ರಗಳ ಸಂಬಂಧ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು. ಕೇವಲ ೫ ನಿಮಿಷ ಮಾತ್ರ ನಿಗದಿ ಪಡಿಸಿದ್ದ ವೇಳಾಪಟ್ಟಿ ೧ ಗಂಟೆ ಆದರೂ ಮುಗಿಯಲಿಲ್ಲ. ಈ ಇಬ್ಬರು ಆಡಳಿತಗಾರರು ಸ್ನೇಹಿತರಾಗುವುದಕ್ಕೆ ನಾನು ಸಾಕ್ಷಿಯಾದೆ. ನಂತರ ಅನೇಕ ಸ್ಥಳಗಳಲ್ಲಿ, ವೇದಿಕೆಗಳಲ್ಲಿ ಅಬ್ದುಲ್ ಕಲಾಮರು ಶಾರ್ಜಾ ಹಾಗೂ ಅಲ್ಲಿಯ ಪುಸ್ತಕ ಮೇಳಗಳ ಬಗ್ಗೆ ಮಾತನಾಡುತಿದ್ದರು. ಒಂದೊಂದು ಮನೆಗಳಲ್ಲಿ ಗ್ರಂಥಾಲಯಗಳು ಸ್ಥಾಪನೆ ಆಗ ಬೇಕು ಎಂಬ ನನ್ನ ಕನಸನ್ನು ನೆನಸಾಗಿಸಿದವರು ಶಾರ್ಜಾ ಸುಲ್ತಾನ್ ಎಂದು ಹೇಳುತ್ತಿದ್ದರು. ಆ ಭೇಟಿ ನನ್ನ ಕನಸುಗಳಲ್ಲಿ ಒಂದು ಕನದು ನನಸಾದ ಭೇಟಿಯಾಗಿತ್ತು.

ನಿಮ್ಮ ಮುಂದೆ ಉಳಿದಿರುವ ಕನಸುಗಳೇನು?

ಶಾರ್ಜಾ ಪುಸ್ತಕ ಮೇಳಯನ್ನು ವಿಶ್ವದ ಅತೀದೊಡ್ಡ ಅಂತಾರಾಷ್ಟ್ರೀಯ ಮೇಳವನ್ನಾಗಿಸುವುದು.

ನಿಮ್ಮ ಎಲ್ಲ ಕನಸುಗಳು ಸಾಧನಗಳಾಗಿವೆ, ಇಲ್ಲಿಯವರೆಗೆ ನಿಮ್ಮ ಜೀವನದಲ್ಲಿ ಮಾಡಿದ ದೊಡ್ಡ ಸಾಧನೆ ಯಾವುದು ?

ಸಂತೋಷಕರ ವಾದ ಜೀವನವೇ ದೊಡ್ಡ ಸಾಧನೆಯಾಗಿದೆ. ೬೨ ವರ್ಷ ವಯಸ್ಸಾಯಿತು. ಜೀವನದಲ್ಲಿ ಎಲ್ಲ ರೀತಿಯಲ್ಲೂ ಸಂತೃಪ್ತನಾಗಿದ್ದೇನೆ. ಯಾವುದಕ್ಕೂ ಅತಿಯಾಸೆ ಪಟ್ಟಿಲ್ಲ. ಮುಖದಲ್ಲಿ ಸದಾ ಸಮಯ ಮಂದಹಾಸವನ್ನಿಟ್ಟುಕೊಳ್ಳಲು ಸಾಧ್ಯವಾಗುತ್ತಿದೆ. ಆಫೀಸ್ ಅಲ್ಲಿ ಅರಬರು ಸಹ ಏನಾದರೂ ಖಿನ್ನತೆಗೆ ಅಥವಾ ಉದ್ವೇಗಕ್ಕೆ ಒಳಪಟ್ಟರೆ ನಿಮ್ಮ ಕಚೇರಿಗೆ ಬಂದು ಸ್ವಲ್ಪ ಸಮಯ ಕುಳಿತು ಸಂತೋಷದಿಂದ ಹೊರಡಬಹುದು ಎಂದು ಹೇಳುತ್ತಾರೆ ಇದಕ್ಕಿತ ಮಿಗಿಲಾಗಿ ಏನು ಬೇಕು?. ಶಾರ್ಜಾದ ಅತ್ಯುತ್ತಮ ಸರಕಾರಿ ನೌಕರ ಪ್ರಶಸ್ತಿ ಪಡೆದೆ. ಶ್ರೇಷ್ಠತೆಗಾಗಿ ೨೦೦ ಹೆಚ್ಚು ಮಾನ್ಯತೆಗಳನ್ನು ಪಡದೆ. ಸರಕಾರದ ಪ್ರತಿ ಕಾರ್ಯಕ್ರಮದ ಕೊನೆಗೆ ಉತ್ತಮ ಸಾಧನೆಗನ್ನು ಮಾಡಿದವರಿಗೆ ಸರಕಾರಿ ಗೌರವವನ್ನು ನೀಡಲಾಗುವುದು. ನನ್ನ ಹೆಸರು ಅವರ ಪೂರ್ವಯೋಜಿತ(default)ಪಟ್ಟಿಯಲ್ಲಿದೆ ಎಂದು ಅನಿಸುತ್ತಿದೆ.

ಫ್ಲಾಶ್ ಬ್ಯಾಕ್

೮೦ರ ದಶಕದ ಆರಂಭದಲ್ಲಿ ಮಧ್ಯಪ್ರಾಚ್ಯ ದೇಶಗಳು ಆಧುನಿಕತೆಯತ್ತ ಹೆಜ್ಜೆ ಹಾಕುತ್ತಿದ್ದ ಕಾಲ ಕಂಪ್ಯೂಟರ್ ಬಳಕೆ ಸಾಮಾನ್ಯ ಜನರಲ್ಲಿ ಹರಡಲು ಪ್ರಾರಂಭಿಸಿದ ಕಾಲ. ಸರಿಯಾಗಿ ಹೇಳುವುದಾದರೆ, ಲೆಕ್ಕಹಾಕಲು ಮಾತ್ರ ಉಪಯೋಗಿಸುತ್ತಿದ್ದ ಕಂಪ್ಯೂಟರ್ಗಳಲ್ಲಿ ಗೇಮ್ ಗಳನ್ನು ಸೇರಿಸುತ್ತಿದ್ದ ಕಾಲ. ಶಾರ್ಜಾದಲ್ಲಿ ಕಟ್ಟಡ ನಿರ್ಮಾಣ ಕಂಪನಿಯನ್ನು ನಡೆಸುತ್ತಿದ್ದ ಸಿರಿಯಾ ಮೂಲದ ಅಬ್ದುಲ್ ಸೈಯದ್ ಕಂಪ್ಯೂಟರ್ ಗೇಮಿಂಗ್ ಗಳನ್ನು ಸುಗಮಗೊಳಿಸುವ ಮತ್ತು ಹೊಸ ಉದ್ಯೋಗಗಳನ್ನು ಹುಡಕುವರಿಗೆ ಅದನ್ನು ಕಲಿಸುವ ಒಂದು ಕಂಪ್ಯೂಟರ್ ಸಂಸ್ಥೆಯನ್ನು ಪ್ರಾರಂಭಿಸುವುದರಿಂದ ಜೀವನದ ದಿಕ್ಕು ಬದಲಿಸಬಹುದು ಎಂದು ಕನಸು ಕಾಣುತ್ತಿದ್ದರು. ಅದರಂತೆ ಸೈಯದ್ ತೈವಾನಿಗೆ ಹೋಗಿ ೨೫ ಕಂಪ್ಯೂಟರ್ ಗಳನ್ನೂ ತಂದು ಯುನೆಸ್ಕೋ ಕಂಪ್ಯೂಟರ್ ಕನ್ಸಲ್ಟೆನ್ಸಿ ಎಂದು ಹೆಸರಿಟ್ಟರು. ಇದು UAE ಯಲ್ಲಿ ಮೊದಲ ಸಂಸ್ಥೆಯಾಗಿತ್ತು. ಅದೇ ಸಮಯ ಥಾಮಸ್ ವ್ಯಾನ್ ಪ್ಲೀಟ್ ಎಂಬ ಸ್ವೀಡಿಷ್ ಮೂಲದ ವ್ಯಕ್ತಿ ಇನ್ನೊಂದು ಕನಸಿನ ಹಿಂದೆ ಬಿದ್ದಿದ್ದ. ಕೊಲ್ಲಿ ರಾಷ್ಟ್ರಗಳು ಮನರಂಜನೆ ಮತ್ತು ಪ್ರವಾಸ ತಾಣಗಳ ಕೇಂದ್ರವಾಗುತ್ತಿದ್ದ ಆ ಸಮಯದಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಮೂಲ ಸೌಕರ್ಯಗಳನ್ನು ಹೊಂದಿರುವ ಶಾರ್ಜಾದಲ್ಲಿ ಅನೇಕ ಉದ್ಯೋಗಾವಕಾಶವಿದೆ ಎಂದು ತಿಳಿದುಕೊಂಡ. ಹೆಚ್ಚಿನ ಅನಿವಾಸಿಗಳು ಆಸ್ಟ್ರಿಯ ಮತ್ತು ಜರ್ಮನಿಯಂತಹ ದೇಶಗಳಿಂದ ಬರುವವರು ಆಗಿದ್ದರಿಂದ ಇಂಗ್ಲಿಷ್ ಚೆನ್ನಾಗಿ ತಿಳಿದಿರುವ ಒಬ್ಬ ವ್ಯಕ್ತಿಯನ್ನು ತನ್ನೊಂದಿಗೆ ಸೇರಿಸಿದರೆ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು ಎಂದು ಯೋಚಿಸಿದ. ಶಾರ್ಜಾ ಪ್ರವಾಸೋದ್ಯಮದ ಹಿರಿಯ ಅಧಿಕಾರಿಯಾಗಿದ್ದ ಥಾಮಸ್ ಅನೇಕ ಯೋಜನೆಗಳ ಬಗ್ಗೆ ಕನಸುಕಂಡರು. ಕಣ್ಣಾನೂರಿನ ಪೆರಿಂಗೋಮ್ ಸಹಕರಣ ಬ್ಯಾಂಕ್ ಉದ್ಯೋಗಿಯಾಗಿದ್ದ ತಂದೆಯ ಹೆಜ್ಜೆಗಳನ್ನು ಅನುಕರಿಸುತ್ತಿದ್ದ ಪಯ್ಯನೂರ್ ಕಾಲೇಜಿನಲ್ಲಿ ವಾಣಿಜ್ಯ ಅಧ್ಯಯನ ಮಾಡಿದ ಒಬ್ಬ ಯುವಕ ಇದ್ದರು. ಯುಎಇ ಯಲ್ಲಿ ಕೆಲಸಮಾಡುತ್ತಿದ್ದ ಅವರ ಚಿಕ್ಕಪ್ಪ ಬಾಲಕೃಷ್ಣನ್ ಅಲ್ಲಿಂದ ವೀಸಾ ಕಳುಹಿಸಿದರು. ಎಲ್ಲ ಮಲಯಾಳಿಗಳು ಕನಸುಕಾಣುವಂತೆ ಕೊಲ್ಲಿರಾಷ್ಟ್ರದ ಕನಸಿನೊಂದಿಗೆ ವಿಮಾನ ಹತ್ತಿದ ಮೋಹನ್ ಕುಮಾರ್ ಎಂಬ ಪೆರಿಂಗೋಮಿನ ಆ ಯುವಕ ಅಬ್ದುಲ್ ಸೈಯದ್ ಎಂಬ ಸಿರಿಯನ್ ವ್ಯಕ್ತಿಯನ್ನು, ಚಹಾ ತಯಾರಿಸುವ ಮಾಧವನ್ ಎಂಬವರನ್ನು ಮತ್ತು ಸ್ವೀಡನಿನ ಥಾಮಸ್ ವಾಂಪ್ಲಿಟ್ ಎಂಬ ವ್ಯಕ್ತಿಯೊಂದಿಗೆ ಯುಎಯಿನಲ್ಲಿ ಭೇಟಿಯಾದ ಕಥೆಯಾಗಿದೆ ನನ್ನ ಜೀವನದ ಯಶಸ್ಸಿನ ಸಾಕ್ಷಿ ಪತ್ರ. ಈಗ ಮೋಹನ್ ಕುಮಾರ್ ವಿಶ್ವದ ಅತಿಹೆಚ್ಚು ಜನರು ಒಂದುಗೂಡುವ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕಮೇಳದ ಚುಕ್ಕಾಣಿಹಿಡಿಯುತಿದ್ದಾರೆ ಹಾಗೂ ಶಾರ್ಜಾ ಸುಲ್ತಾನ್ ಮೊಹಮ್ಮದ್ ಅಲ್ ಖಾಸಿಮಿಯಾ ಆಪ್ತ ಮಿತ್ರಕೂಡ ಆಗಿದ್ದಾರೆ.

ಮೂರು ದಶಕಗಳ ಹಿಂದೆ ಯುಎಇಗೆ ಬರುವಾಗ ಅಲ್ಲಿಯ ಪರಿಸ್ಥಿತಿ ಹೇಗಿತ್ತು?

ದೊಡ್ಡ ಕನಸುಗಳನ್ನು ಕಟ್ಟಿ ಹೊಸದಾಗಿ ಬರುವವರನ್ನು ಮೊದಲ ನೋಟದಲ್ಲೇ ಈಗ ಕೊಲ್ಲಿ ರಾಷ್ಟ್ರಕ್ಕೆ ಬರುತ್ತಿದ್ದೀರ ಎಂಬ ಪ್ರಶ್ನೆಗಳೊಂದಿಗೆ ಜನರು ಸ್ವಾಗತಿಸುತ್ತಿದ್ದರು. ಕಟ್ಟಿದ ಕನಸನ್ನು ನನಸು ಮಾಡಲು ದಿಟ್ಟವಾದ ಮನಸ್ಸಿದ್ದರೆ ಸಾಕು .

ನಿಮ್ಮ ಜೀವನವನ್ನು ಇಲ್ಲಿ ಯಾವ ರೀತಿಯಲ್ಲಿ ಪ್ರಾರಂಭಿಸಿದ್ದೀರಿ?

ಯುನೆಸ್ಕೋ ಕನ್ಸಲ್ಟೆನ್ಸಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದೆ. ಕೇವಲ ೧೫ ದಿನ ಮಾತ್ರ ಅಲ್ಲಿ ಕೆಲಸದಲ್ಲಿದ್ದೆ. ಅಷ್ಟರಲ್ಲಿ ಅದರ ಮಾಲೀಕ ಅಬ್ದುಲ್ ಸೈಯದ್ ಕಂಪ್ಯೂಟರ್ ಸಂಸ್ಥೆಯನ್ನು ಪ್ರಾರಂಭಿಸಿದರು. ನನ್ನ ಕೆಲಸದ ವಿಧಾನಗಳನ್ನು ನೋಡಿ ನನ್ನನ್ನು ಅಲ್ಲಿಗೆ ವರ್ಗಾವಣೆ ಮಾಡಿದರು. ನನ್ನೊಂದಿಗೆ ಮ್ಯಾಥ್ಯೂ ಎಂಬ ಮಲಯಾಳಿ ಮತ್ತು ಇನ್ನೊಬ್ಬ ವ್ಯಕ್ತಿ ಇದ್ದ. ನಮಗೆ ತರಬೇತಿ ನೀಡಲು ಇರಾನಿನಿಂದ ಒಬ್ಬರನ್ನು ಕರೆತರಲು ನಿರ್ಧರಿಸಿದರು. ಹೊಸದಾಗಿ ಬಂದ ಪರವಾನಗಿ (licence) ಪಡೆದ ಕಂಪ್ಯೂಟರ್ ಆಟಗಳನ್ನು ವಿಸ್ತರಿಸಲು ವಿವಿಧ ಸ್ಥಳಗಳಿಗೆ ಈಮೈಲ್ ಗಳನ್ನೂ ಕಳುಹಿಸುವ ಕಾರ್ಯವನ್ನು ಕಾರ್ಯದರ್ಶಿಯಾಗಿದ್ದ ಮ್ಯಾಥ್ಯೂ ಅವರಿಗೆ ವಹಿಸಲಾಗಿತ್ತು. ಸೈಯೆದ್ ನೀಡಿದ ಕ್ಯಾಟಲಾಗ್ ಅನ್ನು ನೋಡಿ ಈ-ಮೇಲ್ ರವಾನಿಸಿದರು. ಅದರಲ್ಲಿ ಕೆಲವು ಇಸ್ರೇಲ್ ರಾಷ್ಟ್ರಕ್ಕೂ ರವಾನೆಯಾಯಿತು. ಅಂದು ಪ್ಯಾಲೆಸ್ಟೀನ್ ಇಸ್ರೇಲ್ ರಾಷ್ಟ್ರಗಳ ನಡುವೆ ಸಮಸ್ಯೆಗಳು ನಡೆಯುತ್ತಿದ್ದ ಸಮಯವಾಗಿತ್ತು.ಇಸ್ರೇಲ್ ರಾಷ್ರ್ಟವೊಂದಿಗೆ ಏನೋ ಸಂಬಂಧವಿದೆ ಎಂದು ಹೇಳಿ ಸಂಸ್ಥೆಯನ್ನು ಮುಚ್ಚಲು ಸರ್ಕಾರದ ಆದೇಶ ಬಂತು.


ನಂತರ ಮುಂದಿನ ಉದ್ಯೋಗವನ್ನು ಹುಡುಕಲಿಲ್ಲವೇ?

ಊರಲ್ಲಿ ಜಮೀನು,ಆಸ್ತಿ ಇರುವುದರಿಂದ ಕುಟುಂಬದ ಜವಾಬ್ದಾರಿ ನನ್ನ ಮೇಲೆ ಇರಲಿಲ್ಲ. ಆದರೆ ತನ್ನದೇ ಆದ ಜೀವನವನ್ನು ಕಟ್ಟಬೇಕು ಎಂಬ ಕನಸು ಇರುವುದರಿಂದ ಪಾರ್ಟ್ ಟೈಮಾಗಿ ಅನೇಕ ಸ್ಥಳಗಳಲ್ಲಿ ಅಕೌಂಟೆಂಟ್ ಆಗಿ ಕೆಲಸಮಾಡಿ ಉತ್ತಮ ರೀತಿಯಲ್ಲಿ ಹಣವನ್ನು ಪಡೆಯಲು ಪ್ರಾರಂಭಿಸಿದೆ. ಅಲ್ಲಿ ಲೆಕ್ಕ ಪರಿಶೋಧಕನಾಗಿ ಒಂದು ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಮಾಧವನ್ ಎಂಬವರಿದ್ದರು. ನನಗೆ ಚಹಾ ಮಾಡಿಕೊಡುತ್ತಿದ್ದರು. ಅವರೊಂದಿಗೆ ವಾಸವಿದ್ದ ಮಲಯಾಳಿ ಯುವಕರೊಬ್ಬರು ಶಾರ್ಜಾ ಪ್ರವಾಸೋದ್ಯಮದ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದರು. ಅವರ ಕಚೇರಿಯಲ್ಲಿ ಒಂದು ಉದ್ಯೋಗ ಖಾಲಿಯಿದೆ ಎಂದು ಮಾಧವನ್ ಹೇಳಿದರು. ಓಹ್! ಅದು ಸರಕಾರಿ ಕೆಲಸವಲ್ಲವೇ? ಅರಬರಿಗೆ ಮಾತ್ರವೆಂದು ಭಾವಿಸಿ ಅಲ್ಲಿಗೆ ಹೋಗಲೇ ಇಲ್ಲ. ಆದರೆ ಮಾಧವನ್ ಅವರು ಹಲವಾರು ಬಾರಿ ಒತ್ತಾಯಿಸಿದಾಗ ನಾನು ಅಲ್ಲಿಗೆ ಹೋದೆ. ಆ ಕಚೇರಿಯ ಉಸ್ತುವಾರಿಯಾಗಿದ್ದ ಥಾಮಸ್ ವ್ಯಾನ್ ಪ್ಲೀಟ್ ನನ್ನನ್ನು ಇಂಟರ್ವ್ಯೂ ಮಾಡಿದರು. ಸ್ವಂತ ಕೈಬರಹದಲ್ಲೇ ಬಯೋಡೇಟಾ ಬರೆದು ಕೊಡಬೇಕೆಂದು ಕೇಳಿದರು.ಇಂಗ್ಲಿಷ್ ಪತ್ರಿಕೆಗಳನ್ನು ಓದುವ ರೂಢಿ ಇರುವುದರಿಂದ ಅದು ಸುಲಭದ ಕೆಲಸವಾಗಿತ್ತು. ಟೆಲೆಕ್ಟ್ ಅನ್ನು ನಿರ್ವಹಿಸಲು ತಿಳಿದುಕೊಳ್ಳಬೇಕಾಗಿತ್ತು. ಅಲ್ಪಾವಧಿಯಲ್ಲಿ ಯುನಿಸ್ಕೋದಿಂದ ಕಲಿತಿದ್ದೆ. ನಂತರ ತಿಳಿಸುವೆ ಎಂದು ಹೇಳಿ ವಾಪಾಸ್ ಕಳುಹಿಸಿದರು. ಎರಡು ಮೂರು ದಿನಗಳ ನಂತರ ನನ್ನನ್ನು ಹುಡುಕಿ ಇಲೆಕ್ಟ್ರಾನಿಕ್ ಅಂಗಡಿಗೆ ಫೋನ್ ಬಂತು. ಆ ಕಾಲದಲ್ಲಿ ಮೊಬೈಲ್ ಬಳಕೆಯಲ್ಲಿ ಇಲ್ಲದ ಕಾರಣ ನಾನು ಅಂಗಡಿಯ ದೂರವಾಣಿ ಸಂಖ್ಯೆಯನ್ನು ನೀಡಿದ್ದೆ. ಮರುದಿನವೇ ನಾನು ಪ್ರವಾಸೋದ್ಯಮ ಕಚೇರಿಯಲ್ಲಿ ಹಾಜರಾದೆ. ಅವರು ವಿಷಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ನೇಮಕಾತಿಯ ಆದೇಶವನ್ನು ನೀಡಿದರು. ಅದು ಜೀವನದ ಹೊಸಯುಗದ ಆರಂಭವಾಗಿತ್ತು

ಅಲ್ಲಿ ನಿಮ್ಮ ಜೀವನಹೇಗಿತ್ತು ಮತ್ತು ಕೆಲಸ ಏನಾಗಿತ್ತು?

ಸಂಕ್ಷಿಪ್ತವಾಗಿ ಹೇಳಬೇಕಾದರೆ ಶಾರ್ಜಾ ಪ್ರವಾಸೋದ್ಯಮದ ಪ್ರಚಾರ(promotion). ಸಾಕಷ್ಟು ಜೀವನಾನುಭವ ಹೊಂದಿರುವ ಥೋಮಸ್ ರೊಂದಿಗೆ ಕೆಲಸಮಾಡಲು ಬಹಳ ಉತ್ಸಾಹವಾಗಿತ್ತು. ಒಂದು ವರ್ಷದವರೆಗೆ ಶಾರ್ಜಾ ಪ್ರವಾಸ ತಾಣಗಳ ಬಗ್ಗೆ ಕರಪತ್ರಗಳನ್ನು ತಯಾರುಮಾಡಿ ಅದಕ್ಕಾಗಿ ಚಿತ್ರಗಳನ್ನು ತೆಗೆದುಕೊಳ್ಳುವುದು ಹಾಗೂ ಪ್ರವಾಸಿಗರ ವೀಸಾ ಸಂಬಂಧ ಕಾರ್ಯಗಳನ್ನು ಸರಿಪಡಿಸಿಕೊಡುವುದು ಮತ್ತು ಅವರಿಗೆ ಬೇಕಾದ ವಸತಿಯ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿತ್ತು.

ಇಂದು ಪ್ರವಾಸೋದ್ಯಮದ ಆಕರ್ಷಕ ಕೇಂದ್ರ ದುಬೈ ಅಲ್ಲವೆ?

ಹೌದು. ಹೊರದೇಶಗಳಲ್ಲಿ ಗಲ್ಫ್ ಅಂದರೆ ದುಬೈ ಎಂಬ ಭಾವನೆ.ದುಬೈ ಅಭಿವೃದ್ಧಿ ಹೊಂದುತ್ತಾ ಇದೆ. ಹಿಂದೆ ನಾನು ಇಲ್ಲಿಗೆ ಬಂದ ಕಾಲದಲ್ಲಿ ಶಾರ್ಜಾದಿಂದ ದುಬೈಗೆ ಹೋಗುವ ರಸ್ತೆಗಳು ಮರುಭೂಮಿಗಳಿಂದ ಬೀಸುವ ಗಾಳಿಯ ರಭಸಕ್ಕೆ ಮರುಳುಗಳಿಂದ ಮುಚ್ಚಿರುತ್ತಿತ್ತು. ಕಾರಣ ಇವತ್ತು ನಾವು ಕಾಣುವಂತಹ ಕಟ್ಟಡಗಳು ರಸ್ತೆಗಳ ಎರಡು ಬದಿಗಳಲ್ಲಿ ಇರಲಿಲ್ಲ. ರಸ್ತೆಗಳಲ್ಲಿ ವಾಹನಗಳ ೨ ಚಕ್ರಗಳು ಮಾತ್ರ ಗೋಚರಿಸಿತಿತ್ತು. ಆಗ ಶಾರ್ಜಾ ಉತ್ತಮ ರಸ್ತೆ ಸೇತುವೆಗಳಿಂದ ಅಭಿವೃದ್ಧಿ ಹೊಂದಿತ್ತು. ದುಬೈ ನಿಧಾನವಾಗಿ ಅಭಿವೃದ್ದಿಯ ಹಾದಿ ಹಿಡಿಯಿತು. ಈಗ ವಿಶ್ವದ ಅತಿದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾ ದುಬೈಯಲ್ಲಿದೆ. ದುಬೈ ೨೦-೨೦ ಎಕ್ಸ್ಪೋ ಬರುವಹೊತ್ತಿಗೆ ಅಲ್ಲಿ ಬರುವ ಬದಲಾವಣೆಗಳು ಅನಿರೀಕ್ಷಿತವಾಗಿದೆ. ಅದಲ್ಲದೆ ದುಬೈ ಸೌತ್ ಎಂಬ ಹೊಸಾ ನಗರದ ನಿರ್ಮಾಣ ನಡಯುತ್ತಿದೆ.ಇವೆಲ್ಲವೂ ದೂರದೃಷ್ಟಿಯ ಆಡಳಿತಗಾರನ ಸಾಧನೆಗಳಾಗಿವೆ.
ಆರ್ಟಿಫಿಷಿಯಲ್ ಇಂಟಲಿಜೆಂಟ್ ಎಂಬ ಹೊಸ ತಂತ್ರಜ್ಞಾನಕ್ಕಾಗಿ ದುಬೈ ಸಚಿವರನ್ನು ನೇಮಿಸಿದೆ. ವಿಶ್ವದಲ್ಲಿ ಮೊದಲ ಬಾರಿಗೆ ಜನರ ಕ್ಷೇಮ, ಕುಟುಂಬಕಲ್ಯಾಣಕ್ಕಾಗಿ ಸಚಿವಸಂಪುಟವನ್ನು ರಚಿಸಲಾಗಿದೆ. ಶೈಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ದೇಶದ ಪ್ರತಿಯೊಬ್ಬ ಪ್ರಜೆಗಳ ಸಂತೋಷ ಮತ್ತು ಕ್ಷೇಮವನ್ನು ನೋಡಿಕೊಳ್ಳುವುದು ಒಬ್ಬ ದಿಟ್ಟ ಆಡಳಿತಗಾರನ ಜವಾಬ್ದಾರಿ ಎಂದು ಸಾರಿ ಹೇಳಿದ್ದಾರೆ. ಇತ್ತೀಚೆಗೆ ಅವರು ಬರೆದ ಪುಸ್ತಕ ರಿಫ್ಲೆಕ್ಷನ್ ಆನ್ ಹ್ಯಾಪಿನೆಸ್. ಅದರಲ್ಲಿ ದೇಶ ಹೇಗೆ ಮುನ್ನಡೆಸಬೇಕು ಮತ್ತು ಅಭಿವೃದ್ಧಿಯತ್ತ ಹೇಗೆ ಸಾಗಬೇಕು? ಇತ್ಯಾದಿ ವಿಷಯಗಳನ್ನು ಪ್ರತಿಪಾದಿಸಿದ್ದಾರೆ. ಅದಲ್ಲದೆ ಈ ಪುಸ್ತಕದ ಎಲ್ಲಾ ವಿಷಯಗಳು ಒಬ್ಬ ವ್ಯಕ್ತಿಯ ಯಶಸ್ವಿಗೆ ಅನ್ವಯಿಸಬಹುದಾಗಿದೆ. ಅದನ್ನು ಎಲ್ಲರೂ ಓದಬೇಕೆಂದು ನನ್ನ ಅಭಿಪ್ರಾಯ.

ಪ್ರವಾಸೋದ್ಯಮದಿಂದ ಪುಸ್ತಕ ಮೇಳದತ್ತ ನಿಮ್ಮ ದಿಕ್ಕನ್ನು ಹೇಗೆ ಬದಲಾಯಿಸಿದ್ದೀರಿ?

ಶಾರ್ಜಾದಲ್ಲಿ ಮೊದಲ ಪುಸ್ತಕ ಮೇಳ ಪ್ರಾರಂಭಿಸುವಾಗ ನನ್ನ ಕೆಲಸ ಪ್ರವಾಸೋದ್ಯಮದಲ್ಲಾಗಿತ್ತು. ಪ್ರಾರಂಭದಲ್ಲಿ ಈ ಮೇಳದ ಹೆಸರು ಶಾರ್ಜಾ ಇಸ್ಲಾಮಿಕ್ ಪುಸ್ತಕ ಮೇಳ ಎಂದಾಗಿತ್ತು. ಇದರ ನಿರ್ದೇಶಕ ಮುಹಮ್ಮದ್ ಬಿನ್ ಮೂಸ ಎಂಬವರಾಗಿದ್ದರು. ಪುಸ್ತಕ ಮೇಳ ಎಂಬ ಕಲ್ಪನೆಯನ್ನು ಮೊದಲು ರೂಪಿಸಿದವರು ಅವರೇ ಆಗಿದ್ದರು. ಪ್ಯಾಲೆಸ್ಟೀನಿಯನ್ ಪ್ರಜೆಯಾಗಿದ್ದ ಅವರು ಶಾರ್ಜಾ ಸುಲ್ತಾನರ ಶಾಲಾ ಶಿಕ್ಷಕರಾಗಿದ್ದರು. ಅವರ ಗೌರವ ಸಂಕೇತವಾಗಿ ಇವತ್ತಿಗೂ ಅವರಿಗೆ ಆಡಳಿತ ಕಚೇರಿಯಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ. ನನ್ನನ್ನೊಳಗೊಂಡ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಇಲಾಖೆಯಾಗಿತ್ತು ಪುಸ್ತಕ ಮೇಳವನ್ನು ಆಯೋಜಿಸಿದ್ದು. ಹಾಗಾಗಿ ನನಗೆ ಸಾಕಷ್ಟು ಕೆಲಸಗಳಿದ್ದವು. ನಂತರ ಸುಡಾನ್ ಮೂಲದ ಡಾ.ಯೂಸುಫ್ ಫಾಯದಾವಿ ಪುಸ್ತಕ ಮೇಳದ ಮುಖ್ಯಸ್ಥರಾದರು. ೨೫ ವರ್ಷಗಳ ಕಾಲ ಅವರು ನಿರ್ದೇಶಕರಾಗಿದ್ದರು. ಆ ಕಾಲದಲ್ಲಿ ಅರಬ್ ರಾಷ್ಟ್ರಗಳ ಪುಸ್ತಕಗಳನ್ನು ಮಾತ್ರ ಪ್ರದರ್ಶನಕ್ಕೆ ಇಟ್ಟಿದ್ದರು. ಪ್ರಾರಂಭದಿಂದಲೂ ನನ್ನ ಜವಾಬ್ದಾರಿ UAE ಯ ಹೊರಗಿನ ಅಂತಾರಾಷ್ಟ್ರೀಯ ಪುಸ್ತಕ ವಿಭಾಗದಲ್ಲಾಗಿತ್ತು. ನಂತರ ಪುಸ್ತಕ ಮೇಳದ ಪ್ರಾಧಿಕಾರದ ಅಧ್ಯಕ್ಷರಾಗಿ ಹಣಕಾಸು ನಿಯಂತ್ರಕರಾಗಿದ್ದ ಅಹ್ಮದ್ ಎಂಬ ಅರಬ್ ವ್ಯಕ್ತಿ ಆಯ್ಕೆಯಾದರು. ನಾವು ಒಟ್ಟಿಗೆ ಕೆಲಸ ಮಾಡಿದ್ದೆವು. ಅವರು ಆಯ್ಕೆಯಾದಾಗ ನನ್ನ ಕರ್ತವ್ಯಗಳು ಹೆಚ್ಚಾದವು. ಪುಸ್ತಕ ಮೇಳವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತರಲು ಹಲವು ರೀತಿಯ ಯೋಜನೆಗಳನ್ನು ಮುಂದಿಟ್ಟೆವು. ಹೇರಳವಾಗಿ ಭಾರತೀಯರನ್ನು ಹೊಂದಿರುವ ದೇಶದಲ್ಲಿ ಭಾರತೀಯರಿಗೆ ಪಥ್ಯವಾಗುವ ಹಲವು ವಿಧಾನಗಳನ್ನು ಪ್ರಾಬಲ್ಯಕ್ಕೆ ತಂದ ಕಾರಣ ಪುಸ್ತಕ ಮೇಳ ಯಶಸ್ಸನ್ನು ಕಂಡಿತು.ಇ ದು ೩೬ನೆ ಪುಸ್ತಕ ಮೇಳವಾಗಿತ್ತು . ಈ ಮೇಳದ ಪ್ರಾರಂಭದಿಂದಲೇ ನಾನು ಅದರ ಭಾಗವಾಗಿದ್ದೆ. ಈ ಕ್ರೆಡಿಟ್ ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ. ಶಾರ್ಜಾ ಸುಲ್ತಾನ್ ಮತ್ತು ನಾನು ಇದರ ಪ್ರಾರಂಭದಿಂದಲೇ ಇರುವವರು. ಅಲ್ಲದೆ ಈ ಪ್ರಾಧಿಕಾರ ಸಂಘಟನೆಯಲ್ಲಿ ಅರಬೇತರ ಏಕೈಕ ವ್ಯಕ್ತಿ ನಾನಾಗಿರುವೆನು.

ಈ ಎಲ್ಲ ಯಾತ್ರೆ ಕೆಲಸಗಳ ಮಧ್ಯೆ ನಿಮ್ಮ ಜೀವನ ಹೇಗೆ ಕ್ರಮಪಡಿಸುವಿರಿ ?

ಅನಿವಾಸಿ ಜೀವನವನ್ನು ಪ್ರಾರಂಭಿಸಿ ಈಗ ೩೭ ವರ್ಷಗಳು ಕಳೆದಿದೆ. ಜೀವನದಲ್ಲಿ ದೊಡ್ಡಬದಲಾವಣೆಗಳೇನು ಆಗಲಿಲ್ಲ. ಊರಲ್ಲಿ ಜಮೀನು ಆಸ್ತಿ ಇರುವುದರಿಂದ ಹಣಮಾಡುವ ದುರಾಸೆ ಏನೂ ಇರಲಿಲ್ಲ. ಈ ಉದ್ಯೋಗ ಉತ್ತಮ ಜೀವನ ಪರಿಸ್ಥಿಯನ್ನು ಸೃಷ್ಠಿಸಿದೆ. ಒಬ್ಬಳೇ ಮಗಳು ಅಶ್ವತಿ, ಅವಳ ಮದುವೆಯಾಗಿದೆ. ಅಳಿಯ ವಾಯುಸೇನೆಯಲ್ಲಿ ಕಮಾಂಡರ್ ಆಗಿ ಕೆಲಸಮಾಡುತ್ತಿದ್ದಾರೆ. ಅವರಿಬ್ಬರೂ ಬೆಂಗಳೂರಲ್ಲಿ ನೆಲೆಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಉಪಾಸನ ಮತ್ತು ಉಜ್ವಲ್. ಮಗಳು ಆಟವಾಡಿ ಬೆಳೆದ ಈ ಫ್ಲ್ಯಾಟನ್ನು ತೊರೆಯಲು ಸಾಧ್ಯವಾಗದ ಕಾರಣ ಕಳೆದ ೧೭ ವರ್ಷದಿಂದ ನಾನು ಹೆಂಡತಿ ಇಲ್ಲೇ ವಾಸವಿದ್ದೇವೆ.
ನಾನು ಬೆಳಿಗಿನ ಜಾವಾ ೪.೩೦ಕ್ಕೆ ಎದ್ದೇಳುವೆ. ಯೋಗ ಮತ್ತು ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತೇನೆ. ನಂತರ ಪುಸ್ತಕ ಓದುವೆ. ೧ ಗಂಟೆಗಳ ಕಾಲ ನಡೆಯಲು(walking ) ಹೋಗುವೆನು. ಪ್ರತಿದಿನ ದೀಪವನ್ನು ಹಚ್ಚಿ ೧೦ ನಿಮಿಷಗಳ ಕಾಲ ಪ್ರಾರ್ಥಿಸುವೆ. ಅದು ನನ್ನ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಹಿಂದಿನಿಂದಲೂ ಟಿ ಶರ್ಟ್ ಮತ್ತು ಕ್ರೀಡಾಬೂಟುಗಳನ್ನು ಧರಿಸುವುದು ರೂಡಿ. ದುಬಾರಿ ಕಾರು,ವಾಚುಗಳ ಅಗತ್ಯ ನನಗಿಲ್ಲ. ಸರಳ ಜೀವನವನ್ನು ಇಷ್ಟಪಡುತ್ತೇನೆ. ಮಿತವಾದ ಆಹಾರ. ಉಪ್ಪಿನಕಾಯಿ,ಸಕ್ಕರೆ ಮತ್ತು ಹಪ್ಪಳವನ್ನು ಸೇವಿಸುವುದಿಲ್ಲ. ಕೆಲಸದ ನಂತರ ಹೆಂಡತಿಯೊಂದಿಗೆ ಶಾಂತವಾದ ರಸ್ತೆಯಲ್ಲಿ ಹಾಡು ಕೇಳುತ್ತಾ ಕೆಲವೊಮ್ಮೆ ನಾವೇ ಹಾಡುತ್ತಾ, ಮಗಳ ಮೊಮ್ಮಕ್ಕಳ ಅಥವಾ ಕುಟುಂಬದವರ ಕಾರ್ಯಗಳನ್ನು ಹೇಳಿ ನಗರವನ್ನು ಸುತ್ತಿ ಕಾರನ್ನು ಚಲಾಯಿಸುತ್ತಾ ಮನೆಗೆ ಹಿಂತಿರುಗುತ್ತೇವೆ.


ಮೋಹನ್ ಕುಮಾರ್


ಶಾರ್ಜಾ ಸರಕಾರದ ಸಾಂಸ್ಕೃತಿಕ ಪ್ರತಿನಿಧಿ. ಶಾರ್ಜಾ ಅಂತರಾಷ್ಟ್ರೀಯ ಪುಸ್ತಕ ಮೇಳದ ರೂವಾರಿ. ಶಾರ್ಜಾ ಪುಸ್ತಕ ಪ್ರಾಧಿಕಾರ ಸಮಿತಿಯ ಅರಬ್ಬೇತರ ಏಕೈಕ ಮಲಯಾಳಿ ಸದಸ್ಯ. ಕಣ್ಣಾನೂರಿನ ಪೆರಿಂಗೋಮ್ ನಿವಾಸಿ.

ಅನು: ಎಂ.ಜೆ ಯಾಸೀನ್ ಸಿದ್ದಾಪುರ

ಜಿನ್ನ್ ಗಳ ನಗರ

ನನ್ನ ಜೀವನದಲ್ಲಿ ನಾನು ಮೊದಲ ಬಾರಿಗೆ ಓರ್ವ ಸೂಫಿಯನ್ನು ಭೇಟಿಯಾಗಿದ್ದು ಫಿರೋಝ್ ಶಾ ಕೋಟ್ಲಾದಲ್ಲಿ. ತೀಕ್ಷ್ಣ ಕಣ್ಣುಗಳು ಮತ್ತು ಮೈನಾದ ಗೂಡಿನಂತಿದ್ದ ಗಡ್ಡವನ್ನು ಇಳಿಬಿಟ್ಟಿದ್ದ ಅವರ ಹೆಸರು ಪೀರ್ ಸದ್ರುದ್ದೀನ್. ಅವರು ಕುಡಿಯಲು ಚಹಾ ಕೊಟ್ಟು, ಕಾರ್ಪೆಟ್ ಮೇಲೆ ನನ್ನನ್ನು ಕೂರಲು ಹೇಳಿ ಜಿನ್ನ್ ಗಳ ಬಗ್ಗೆ ಹೇಳಲು ಪ್ರಾರಂಭಿಸಿದರು.
ಹೊಸ ಜಗತ್ತಿನಲ್ಲಿ ಅಲ್ಲಾಹನು ಮಣ್ಣಿನಿಂದ ಮಾನವಕುಲವನ್ನು ಸೃಷ್ಟಿಸಿದಾಗ, ಇನ್ನೊಂದು ವರ್ಗವನ್ನೂ ಸಹ ಸೃಷ್ಟಿಸಿದ. ಎಲ್ಲ ವಿಷಯದಲ್ಲೂ ಮನುಷ್ಯರನ್ನೇ ಹೋಲುವ ಅವರನ್ನು ಬೆಂಕಿಯಿಂದ ಸೃಷ್ಟಿಸಲಾಗಿದೆ. ಜಿನ್ನ್‌ಗಳು ಎಂದರೆ ಆತ್ಮಗಳು. ಬರಿಗಣ್ಣಿಗೆ ಕಾಣದ ಒಂದು ವರ್ಗ. ಅವರನ್ನು ನೋಡಬೇಕಾದರೆ ಪ್ರಾರ್ಥನೆ ಮತ್ತು ವ್ರತಾನುಷ್ಠಾನ ಮಾಡಬೇಕು. ಪೀರ್ ಸದರುದ್ದೀನ್ ಅರೆನಗ್ನನಾಗಿ ಅನ್ನಾಹಾರವಿಲ್ಲದೆ ನಲವತ್ತೊಂದು ದಿನಗಳನ್ನು ಹಿಮಾಲಯದ ತಪ್ಪಲಲ್ಲಿ ಕಳೆದಿದ್ದರಂತೆ! ನಂತರದ ನಲವತ್ತೊಂದು ದಿನಗಳನ್ನು ಯಮುನಾ ನದಿಯಲ್ಲಿ ಕುತ್ತಿಗೆಯವರೆಗಿನ ನೀರಿನಲ್ಲೂ ಕಳೆದಿದ್ದರು.
ಒಂದು ರಾತ್ರಿ ಖಬರಸ್ಥಾನದಲ್ಲಿ ನಿದ್ದೆಗೆ ಜಾರಿದ್ದಾಗ ಅವರನ್ನು ನೋಡಲು ಜಿನ್ನ್ ಗಳ ರಾಜನ ಆಗಮನವಾಯಿತು. ನೋಡಲು ಕಪ್ಪು ಬಣ್ಣ ಹೊಂದಿದ್ದ, ಒಂದು ಮರದ ಎತ್ತರಕ್ಕೆ ಇದ್ದ ಆ ಜಿನ್ನ್ ಗೆ ಹಣೆಯ ಮಧ್ಯದಲ್ಲಿ ಒಂದು ಕಣ್ಣು ಇತ್ತು ಎಂದು ಪೀರ್ ವಿವರಿಸಿದರು. ‘ನಿನ್ನ ಬಯಕೆಗಳೇನು?’ ಎಂದು ಕೇಳಿದ. ಪ್ರತಿ ಬಾರಿಯೂ ನಾನು ನಿರಾಕರಿಸಿದೆ.
ನನಗೆ ಜಿನ್ನನ್ನು ತೋರಿಸುವಿರಾ? ಎಂದು ಅವರಿಗೆ ನಾನು ಕೇಳಿದೆನು.
‘ಖಂಡಿತ,’ ಎಂದು ಪೀರ್ ಉತ್ತರಿಸಿದರು. ‘ಆದರೆ ನೀನು ಓಡುವೆ’ ಎಂದರು.

ಆಗ ನನಗೆ ಕೇವಲ ಹದಿನೇಳು ವರ್ಷವಾಗಿತ್ತು. ಉತ್ತರ ಯಾರ್ಕ್‌ಷೈರ್ ನ ದೂರದ ಕಣಿವೆಯ ಒಂದು ಊರಿನಲ್ಲಿ ಹತ್ತು ವರ್ಷಗಳ ಶಿಕ್ಷಣ ಪಡೆದ ನಂತರ, ಇದ್ದಕ್ಕಿದ್ದಂತೆ ನನ್ನನ್ನು ನಾನು ದೆಹಲಿಯಲ್ಲಿ ಕಂಡುಕೊಂಡೆನು. ಪ್ರಾರಂಭದಲ್ಲಿ ಆ ಬೃಹನ್ನಗರವನ್ನು ಕಂಡು ಮೂಕವಿಸ್ಮಿತನಾಗಿದ್ದೆ. ಹಿಂದೆಂದಿಗೂ ಕಂಡಿದ್ದಕ್ಕಿಂತಲೂ ಸಂಪೂರ್ಣವಾಗಿ ಭಿನ್ನವಾಗಿತ್ತು. ಅಪಾರ ಸಂಪತ್ತು ಮತ್ತು ಅಷ್ಟೇ ಭಯಾನಕತೆಯನ್ನು ಮೈಗೂಡಿಸಿದ್ದ, ಚಕ್ರವ್ಯೂಹದಂತಿದ್ದ, ಅನೇಕ ಅರಮನೆ ಗೋಪುರಗಳಿದ್ದ, ತೆರೆದ ಚರಂಡಿಗಳ ಆಗರವಾಗಿದ್ದ, ತೀವ್ರ ಜನಸಂದಣಿಯ, ಗುಮ್ಮಟಗಳಿಂದ ತುಂಬಿದ್ದ, ಹೊಗೆಯುಕ್ತ ವಾತಾವರಣದ ನಗರವಾಗಿ ದೆಹಲಿಯನ್ನು ಮೊದಲಿಗೆ ನಾನು ಕಂಡೆ.
ಇಷ್ಟು ಮಾತ್ರವಲ್ಲದೇ, ದೆಹಲಿಯ ಇನ್ನೊಂದು ಮುಖವನ್ನು ಕೂಡ ನಾನು ಕಂಡೆ. ತಳಬುಡವಿಲ್ಲದ ಪುರಾವೆ ರಹಿತ ಕಥೆಗಳನ್ನು ದೆಹಲಿ ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿತ್ತು. ಕಥೆಗಳು ವಾಸ್ತವಕ್ಕಿಂತ ಬಲುದೂರ. ಗೆಳೆಯರು ಜನಪಥ್‌ನ ತಲೆಹಿಡುಕರ ಕುರಿತು ಗೋಳಿಡಬಹುದು. ಬೇಡವೇ ಬೇಡ ಎಂದು ಗೋವಾ ತೀರದೆಡೆ ಪ್ರವಾಸ ಹೊರಡಬಹುದು. ಆದರೆ, ನನಗಂತೂ ದೆಹಲಿ ಯಾವಾಗಲೂ ಗಾಢಮೋಹಿನಿಯಂತೆ ಕಾಡುವುದು. ನಾನು ಕಾಲಹರಣ ಮಾಡುತ್ತಿದ್ದ ಸಮಯದಲ್ಲಿಯೇ ನಗರದ ಉತ್ತರ ಭಾಗದಲ್ಲಿದ್ದ ನಿರಾಶ್ರಿತರ ನಿಲಯವೊಂದರಲ್ಲಿ ನನಗೆ ಕೆಲಸ ಸಿಕ್ಕಿತು.
ನಗರದ ಕೊಚ್ಚೆ ಗಳನ್ನೆಲ್ಲಾ ತಳ್ಳುವ ಕೊಳಚೆ ಗುಂಡಿಯಿದ್ದದ್ದು ನೋಡದೆ ಭಗಿನಿಯರು ನನಗೆ ಅದೇ ಕೊಠಡಿಯನ್ನು ಕೊಟ್ಟರು. ಅಲ್ಲಿಂದ ಬೆಳಗ್ಗೆದ್ದು ಹೊರ ನೋಡಿದರೆ ತಗಡಿನ ಆಗಸದ ಕೆಳಗೆ ಪೆಚ್ಚು ಮೋರೆ ಹಾಕಿಕೊಂಡು ಗಬ್ಬು ವಾಸನೆ ಬೀರುವ ಇಕ್ಕೆಲಗಳಲ್ಲಿ ಚಿಂದಿ ಆಯುವ ಮಂದಿಗಳನ್ನು ಕಾಣಬಹುದಿತ್ತು. ಚಿತ್ರದರ್ಶಕದಲ್ಲಿ ಮಿನುಗುವ ಗಾಜಿನ ತುಣುಕುಗಳ ಹಾಗೆ ಇರುವ ವಿನ್ಯಾಸಗಳನ್ನು ರೂಪಿಸುತ್ತಿದ್ದ ಬೇಸಗೆಯ ಬಟ್ಟೆಗಳ ಸುತ್ತ ರಣಹದ್ದುಗಳು ಹಾರುತ್ತಿದ್ದವು. ಅಂಗಣವನ್ನು ಗುಡಿಸಿದ ನಂತರ ಎಲ್ಲರೂ ಸುರಕ್ಷಿತವಾಗಿ ಮಲಗುವ ಮಧ್ಯಾಹ್ನ ಹೊತ್ತಲ್ಲಿ ನಾನು ಹೊರಗಿಳಿಯುತ್ತಿದ್ದೆ. ಹಳೆಯ ನಗರದ ಒಳ ಹೊಕ್ಕು ಸುತ್ತಾಡಲು ರಿಕ್ಷಾ ಹಿಡಿಯುತ್ತಿದ್ದೆ. ಕಿರಿದಾಗುತ್ತಾ ಬರುವ ಲಾಳಿಕೆಯಂತಹ ಗಲ್ಲಿಗಳ, ಕಿರುದಾರಿಗಳ, ಓಣಿಗಳ, ನಿಲುಕೊನೆಗಳ ಮೂಲಕ ಸಂಚರಿಸುವಾಗ ನನ್ನ ಹತ್ತಿರದಿಂದ ಸಾಗುವ ಮನೆಗಳು ನನ್ನನ್ನು ಆವರಿಸುವಂತೆ ಅನುಭವವಾಗುತ್ತಿತ್ತು.

ವಿಲಿಯಂ ಡಾರ್ಲಿಂಪ್ಲ್


ಬೇಸಿಗೆಯಲ್ಲಿ ದಟ್ಟಣೆ ಕಡಿಮೆ ಇರುವ ಲುಟೈನ್ಸ್ ನ ದೆಹಲಿಗೆ ನನ್ನ ಆದ್ಯತೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಗುಲ್ ಮೊಹರ್ ಗಳಿಂದ ತುಂಬಿದ ಬಂಗಲೆಗಳ ಎದುರು ಬೇರೂರಿರುವ ಬೇವು, ಹುಣಸೆ ಮರಗಳ ನೆರಳು ಪಡೆಯುತ್ತಾ ಸಾಗುತ್ತಿದ್ದೆ. ಎರಡೂ ದೆಹಲಿಗಳಲ್ಲು ಹಳೆಯ ಕಾಲದ ಅವಶೇಷಗಳು ನನ್ನನ್ನು ಆಕರ್ಷಿಸಿದವು. ಹೊಸ ಕಾಲೊನಿಗಳ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಲು ಯೋಜಕರು ಎಷ್ಟೇ ಪ್ರಯತ್ನಿಸಿದರೂ, ಮುರಿದು ಬಿದ್ದ ಸಮಾಧಿಗಳು, ಹಳೆಯ ಮಸೀದಿಗಳು, ಹಳೆಯ ಇಸ್ಲಾಮಿಕ್ ಕಾಲೇಜು/ ಮದ್ರಸಾಗಳು ಒಳನುಗ್ಗಿದಂತೆ ಕಾಣುತ್ತಿದ್ದವು. ಗಾಲ್ಫ್ ಕೋರ್ಸ್ ಗಳ ಮನೋಹರವಾದ ದೃಶ್ಯಗಳನ್ನು ಕೂಡ ಅವುಗಳು ಅಸ್ಪಷ್ಟವಾಗಿಸುತ್ತಿದ್ದವು.
ನವದೆಹಲಿಯು ಹೊಸ ನಗರವಲ್ಲ. ಅದರ ವಿಶಾಲವಾದ ರಸ್ತೆಗಳಲ್ಲಿ ಭಯಾನಕವಾದ ಸಮಾಧಿಗಳಿವೆ, ರಾಜವಂಶದ ಸ್ಮಶಾನಗಳೂ ಇವೆ. ದೆಹಲಿಯಲ್ಲಿ ಏಳು ಮೃತನಗರಗಳಿವೆ. ಸದ್ಯ ಇರುವುದು ಎಂಟನೇ ನಗರ ಎಂದು ಕೆಲವರು ಹೇಳುತ್ತಾರೆ. ಹದಿನೈದನೆಯದ್ದು ಎಂದು, ಇಪ್ಪತ್ತನೆಯದ್ದು ಎಂದೂ ಹೇಳುವವರಿದ್ದಾರೆ. ದೆಹಲಿಯು ಹಲವು ಬಾರಿ ಧ್ವಂಸಗೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ದೆಹಲಿಯ ಹಲವು ಕಡೆ ಹರಡಿಕೊಂಡಿರುವ ಮಾನವ ಅವಶೇಷಗಳು ದೆಹಲಿಯನ್ನು ವಿಶಿಷ್ಟವಾಗಿಸಿದೆ. ದೆಹಲಿಯ ಪ್ರತಿಯೊಂದು ಪ್ರದೇಶವೂ ವಿಭಿನ್ನ ಶತಮಾನ- ಸಹಸ್ರಮಾನದ ಅವಶೇಷಗಳನ್ನು ಉಳಿಸಿಕೊಂಡಿವೆ. 1980 ರ ದಶಕದಲ್ಲಿ ಮಾರುತಿ ಕಾರು ಮತ್ತು ಹೊಸ ವಸ್ತುಗಳೊಂದಿಗೆ ದೆಹಲಿಗೆ ವಲಸೆ ಬಂದ ಪಂಜಾಬಿಗರು ನಗರಕ್ಕೆ ಹೊಸ ಸ್ಪರ್ಷ ನೀಡಿದರು. ಲೋಧಿ ಗಾರ್ಡನ್ ನಲ್ಲಿ ಕಾಣಸಿಗುವ ಓರ್ವ ವೃದ್ಧ ಜನರಲ್ ನಿಮ್ಮನ್ನು ಅರ್ಧ ಶತಮಾನದ ಹಿಂದಿನ ದಿನಗಳಿಗೆ ಕೊಂಡೊಯ್ಯಬಲ್ಲ. ಆತನ ದಪ್ಪ ಮೀಸೆ ಮತ್ತುಲಿಂ ಹೀಲಿಂಗ್ ಕಾಮಿಡಿಯಂತಹ ಮಾತಿನ ಶೈಲಿಯನ್ನು ನೋಡಿದರೆ ಆತ ಇನ್ನೂ 1946 ರಲ್ಲಿ ಬದುಕುತ್ತಿದ್ದಾನೆ ಎಂದು ಅನ್ನಿಸಬಹುದು. ಆಸ್ಥಾನದಲ್ಲಿ ಮಾತನಾಡುವಂತಹ ಉರ್ದು ಭಾಷೆಯಲ್ಲಿ ಮಾತನಾಡುವ ಹಳೆಯ ದೆಹಲಿಯ ಖೋಜಾ (Eunuchs) ಗಳಿಗೆ ಹಳೆಯ ದೆಹಲಿಯ ಮೊಘಲ್ ಆಡಳಿತದ ಪ್ರಭಾವವು ಇನ್ನೂ ಆವರಿಸಿಕೊಂಡಿತ್ತು. ನಿಗಂಬೋಧ್ ಘಾಟ್ ನ ಸನ್ಯಾಸಿಗಳನ್ನು ನೋಡುವಾಗ ಪೌರಾಣಿಕ ಇಂದ್ರಪ್ರಸ್ಥದ ಕೆಲವೊಂದು ನೆನಪುಗಳು ಬರುತ್ತಿದ್ದವು.

ಎಲ್ಲಾ ವಯೋಮಾನದ ಜನರನ್ನೂ ದೆಹಲಿ ಜನತೆಯಲ್ಲಿ ಕಾಣಬಹುದು. ಹಲವು ಶತಮಾನಗಳ ಐತಿಹ್ಯಗಳು ಕೂಡ ಅಲ್ಲಿ ಅಸ್ತಿತ್ವದಲ್ಲಿವೆ. ವಿಭಿನ್ನ ಯುಗಗಳ ಮನೋಧರ್ಮಗಳು ಕೂಡ ಅಲ್ಲೇ ಹುಟ್ಟಿ, ಬೆಳೆದು ಮಣ್ಣಾದವು.
ದೆಹಲಿಯು ಪ್ರತಿ ಬಾರಿಯೂ ನಾಶದ ನಂತರ ತಲೆಯೆತ್ತುದ್ದಿದ್ದರ ಹಿಂದಿನ ರಹಸ್ಯವನ್ನು ಪೀರ್ ಸದರುದ್ದೀನರೊಂದಿಗಿನ ಭೇಟಿಯ ಎಷ್ಟೋ ತಿಂಗಳುಗಳ ನಂತರ ನಾನು ಅರ್ಥೈಸಿದೆನು. ದೆಹಲಿಯು ಜಿನ್ನ್’ಗಳ ನಗರ ಎಂದು ಪೀರ್ ಹೇಳುತ್ತಾರೆ. ಆಕ್ರಮಣಕಾರರಿಂದ ಹಲವು ಬಾರಿ ಧ್ವಂಸಗೊಂಡರೂ ದೆಹಲಿಯು ಪುನಃ ತಲೆಯೆತ್ತಿ ನಿಂತಿತು. ಬೆಂಕಿಯಿಂದ ಫೀನಿಕ್ಸ್ ಹಕ್ಕಿಯು ಎದ್ದು ಬರುವಂತೆ ಎದ್ದು ಬಂತು. ಹಿಂದುಗಳ ಪುನರ್ಜನ್ಮದ ನಂಬಿಕೆಯಂತೆ, ಆ ನಗರವು ಪ್ರತಿ ಸಲವೂ ಗತಿಸಿದ ಮೇಲೂ ಪುನರ್ಜನ್ಮ ಹೊಂದುತ್ತಿತ್ತು. ಶತಮಾನಗಳ ನಡುವೆ ಹೊಸ ಹೊಸ ರೂಪ ತಾಳುತ್ತಿತ್ತು. ಇದಕ್ಕೆ ಪ್ರಮುಖ ಕಾರಣ, ಸದರುದ್ದೀನರು ಹೇಳುವಂತೆ, ಇದು ಜಿನ್ನ್’ಗಳ ನಗರವಾಗಿರುವುದು. ಜಿನ್ನ್’ಗಳು ಆ ನಗರವನ್ನು ಇಷ್ಟಪಟ್ಟಿದ್ದರು. ಅದು ನಿರ್ಜನವಾಗಿರುವುದನ್ನು ನೋಡಲು ಅವರಿಗೆ ಸಾಧ್ಯವಾಗಲಿಲ್ಲ. ದೆಹಲಿಯ ಪ್ರತಿಯೊಂದು ಮನೆ, ಗಲ್ಲಿಯೂ ಜಿನ್ನ್’ಗಳ ವಾಸಸ್ಥಾನವಾಗಿದ್ದವು. ಅವುಗಳನ್ನು ನೋಡಲು ನಮಗೆ ಸಾಧ್ಯವಿಲ್ಲ. ಚೆನ್ನಾಗಿ ಗಮನಿಸಿದರೆ, ಏಕಾಗ್ರತೆ ಹೊಂದಿದ್ದರೆ ಅವರ ಸಾನಿಧ್ಯದ ಅನುಭವವುಂಟಾಗುವುದು. ನೀವು ಅದೃಷ್ಟವಂತರಾಗಿದ್ದರೆ ಅವರ ಮಾತುಗಳನ್ನು, ಉಸಿರಿನ ಏರಿಳಿತಗಳನ್ನು ಗ್ರಹಿಸಬಹುದು.

ಮೂಲ: ವಿಲಿಯಂ ಡಾರ್ಲಿಂಪ್ಲ್
ಕನ್ನಡಕ್ಕೆ: ಮುಹಮ್ಮದ್ ಶಮೀರ್, ಪೆರುವಾಜೆ

ಶರೀಅಃದ ಬಹುತ್ವದ ನೆಲೆಗಳು ಮತ್ತು ವಸಾಹುಶಾಹಿಗಳ ಕೋಡಿಫಿಕೇಶನ್

“ಅಬ್ಬಾಸೀ ಸಾಮ್ರಾಜ್ಯದ ಖಲೀಫಾ  ಅಬೂ ಜಅಫರುಲ್ ಮನ್ಸೂರ್ ರವರೊಂದಿಗೆ ಮಂತ್ರಿ ಇಬ್ನ್ ಅಲ್ ಮುಖಫ್ಫಅ ರವರು ಆಡಳಿತದಲ್ಲಿನ ಪಾರದರ್ಶಕತೆಯನ್ನು ಖಚಿತಪಡಿಸಲಿಕ್ಕಾಗಿ ಒಂದು ಸಲಹೆ ಕೊಡುತ್ತಾರೆ. ತಮ್ಮ ಆಡಳಿತದ ಅಡಿಯಲ್ಲಿ ನಡೆಯುವ ಶರೀಅತ್ ವ್ಯವಹಾರಗಳನ್ನು ಏಕರೂಪಗೊಳಿಸಿ ಒಂದು ನಾಗರಿಕ ಕಾನೂನು ಸಂಹಿತೆ ರೂಪೀಕರಿಸಬೇಕು ಎಂದಾಗಿತ್ತು ಮಂತ್ರಿಯ ಸಲಹೆ. ಆಡಳಿತ ಸುಧಾರಣೆಯನ್ನು ಬಯಸಿದ ಖಲೀಫಾ ಈ ಸಲಹೆಯನ್ನು ಗಂಭೀರವಾಗಿ ತೆಗೆದು ಕೊಳ್ಳುತ್ತಾರೆ. ಆ ಕಾಲದಲ್ಲಿ ಕಾನೂನು ವಿಚಾರಗಳನ್ನು  ನಿಖರವಾದ ರೀತಿಯಲ್ಲಿ ಕಲೆ ಹಾಕಲಾದ ಗ್ರಂಥ ಎಂಬ ನೆಲೆಯಲ್ಲಿ ಪ್ರಸಿದ್ಧವಾದ ‘ ಮುವತ್ತ ‘ ಗ್ರಂಥವನ್ನು ಅಧಿಕೃತ ಕಾನೂನು ಗ್ರಂಥವಾಗಿ ನಿರ್ಣಯಿಸಿ ರಾಜಾದೇಶ ಹೊರಡಿಸಲು ಖಲೀಫಾ ಚಿಂತನೆ ನಡೆಸುತ್ತಾರೆ. ಹಜ್ ವೇಳೆಯಲ್ಲಿ ಆ ಗ್ರಂಥದ ಕರ್ತೃ ಆಗಿರುವ ಇಮಾಮ್ ಮಾಲಿಕ್ ರನ್ನು ಭೇಟಿ ಮಾಡಿದ ಖಲೀಫಾ ಅವರ ಸಮಕ್ಷಮ ಸದ್ರಿ ಅಪೇಕ್ಷೆಯನ್ನು ಮುಂದಿಡುತ್ತಾರೆ. “ತಾವು ಬರೆದ ಈ ಗ್ರಂಥದ ನಕಲುಗಳನ್ನು ಎಲ್ಲಾ ನಗರ ಗಳಿಗೆ ಕಳುಹಿಸಿ ಕೊಟ್ಟು ಇನ್ನು ಮುಂದೆ ಈ ಪಠ್ಯವನ್ನು   ಆಧರಿಸಿ ಮಾತ್ರವೆ ಕಾನೂನು ನಿರ್ಣಯ ಕೈಗೊಳ್ಳಬೇಕು ಎಂಬ ಆದೇಶ ಕೊಡಲು ನಾನು ಬಯಸಿದ್ದೇನೆ. ತಾವು ಮದೀನಾದವರು. ಮದೀನಾದ ಜ್ಞಾನ ಅಧಿಕೃತ’. ಆದರೆ ಖಲೀಫಾರ ಈ ಅಪೇಕ್ಷೆಯನ್ನು ತಿರಸ್ಕರಿಸಿದ ಇಮಾಮರು ಈ ರೀತಿ ಪ್ರತಿಕ್ರಿಯಿಸುತ್ತಾರೆ: ”

ಅಮೀರುಲ್ ಮುಅಮಿನೀನ್, ನೀವು ಇದನ್ನು ಜಾರಿ ಮಾಡಬಾರದು. ಪ್ರತಿಯೊಂದು ಊರಿನವರಿಗೆ ವಿಭಿನ್ನ ಅಭಿಪ್ರಾಯಗಳು ದೊರಕಿವೆ. ಬೇರೆ ಬೇರೆ ಹದೀಸುಗಳನ್ನು ಅವರು ಕೇಳಿರುತ್ತಾರೆ. ಪೈಗಂಬರರ ಮತ್ತವರ ಸಂಗಡಿಗರ, ಅವರ ನಂತರದ ತಲೆಮಾರಿನ ವಿದ್ವಾಂಸರ ನಡುವೆ ಚಾಲ್ತಿಯಲ್ಲಿದ್ದ ವಿವಿಧ ರೀತಿಯ ಕಾನೂನು ಅಭಿಪ್ರಾಯಗಳ ಪೈಕಿ ತಮಗೆ ತಲುಪಿದ ಒಂದರಂತೆ ಅವರು ಜೀವಿಸುತ್ತಿದ್ದಾರೆ. ಅವರ ಅಭಿಪ್ರಾಯಗಳನ್ನು ರದ್ದು ಮಾಡುವುದು ತರವಲ್ಲ. ಜನರು ಅವರ ಅಭಿಪ್ರಾಯಗಳ ಪ್ರಕಾರ ಕಾರ್ಯವೆಸಗಲಿ. ಪ್ರತಿಯೊಂದು ಪ್ರದೇಶದವರು ಅವರಿಗೆ ಲಭಿಸಿದ ಕಾನೂನುಗಳನ್ನು ಸ್ವೀಕರಿಸಲಿ. ಅವರನ್ನು ಅವರ ಜಾಡಿಗೆ ಬಿಡುವುದು ಒಳ್ಳೆಯದು.”

(ಸಿಯರು ಅಅಲಾ ಮಿನ್ನುಬಲಾಅ, ಶಂಸುದ್ದೀನ್ ದ್ಸಹಬಿ)

ಇಸ್ಲಾಮಿಕ್ ಶರೀಅಃ ಹಾಗೂ ನಾಗರಿಕ ಸಮೂಹ:

ಇಸ್ಲಾಮಿನ ಶರೀಅಃ ಕಾನೂನು ವ್ಯವಸ್ಥೆಯನ್ನು ಏಕತಾನಗೊಳಿಸಲಿಕ್ಕಾಗಿನ ಆಡಳಿತ ವರ್ಗದ ಹಿತಾಸಕ್ತಿಯನ್ನು ತಡೆಯಬೇಕು. ಪ್ರತಿಯೊಂದು ಸಂದರ್ಭದಲ್ಲಿಯೂ ಕರ್ಮಶಾಸ್ತ್ರೀಯ ಸಮಸ್ಯೆಗಳಿಗೆ ಆಯಾ ಕಾಲದ ವಿದ್ವಾಂಸರು ಪರಿಹಾರಗಳನ್ನು  ನಿರ್ಣಯ ಮಾಡಿದರೆ ಸಾಕು. ಇದು ಇಸ್ಲಾಮಿ ಕಾನೂನು ವ್ಯವಸ್ಥೆಯ ವಿಶೇಷತೆ ಯಾಗಿದ್ದು, ಮುವತ್ತ ಗ್ರಂಥವನ್ನು ಏಕೈಕ ಕಾನೂನು ಗ್ರಂಥವಾಗಿ ಘೋಷಣೆ ಮಾಡಿದರೆ ಶರೀಅಃದ ಈ ವಿಶೇಷತೆಗೆ ಕಂಟಕ ಬರುತ್ತದೆ. ಖಲೀಫಾರವರ ಆದೇಶ ವನ್ನು ನಿರಾಕರಿಸಿದ ಇಮಾಮರ ನಡವಳಿಕೆಯ ಮರ್ಮ ಇದಾಗಿತ್ತು. ಈ ಸಂಭವಾನಂತರ ಹತ್ತೊಂಬತ್ತು ಶತಮಾನದ ವರೆಗೂ ‘ಇಸ್ಲಾಮಿಕ್‌ ಶರೀಅಃʼ ಎಂಬ ಹಸರಿನಲ್ಲಿ ಏಕೀಕೃತ ಕಾನೂನು ಪುಸ್ತಕ ಅಥವಾ ದಂಡಸಂಹಿತೆಯನ್ನು ಸ್ಥಾಪಿಸಲು ಯಾವೊಬ್ಬ ವಿದ್ವಾಂಸನೂ ಮುಂದೆ ಬಂದಿರಲಿಲ್ಲ. ಬದಲಾಗಿ ಶರೀಅಃ ಹಾದು ಬಂದದ್ದು ವಿವಿಧ ಗ್ರಂಥಗಳ ಮೂಲಕ. ಆಯಾ ಕಾಲದ ವಿದ್ವಾಂಸರು ಅದನ್ನು ಸಾಂದರ್ಭಿಕವಾಗಿ ವ್ಯಾಖ್ಯಾನಿಸುತ್ತಾ ಬಂದಿದ್ದರು. ಅಂತಲೇ ಷರಿಯಾ ಬಹಳ ಪ್ರಾಯೋಗಿಕತೆಯನ್ನು ಹೊಂದಿತ್ತು. ಶರೀಅಃ ನಾಗರಿಕ ಸಮಾಜದ ಸೇವೆ ಮಾಡುತ್ತಿದ್ದದ್ದು  ಈ ರೀತಿಯಲ್ಲಿ. 

ಶರೀಅಃದ ಈ ಉಜ್ವಲವಾದ ವೈವಿಧ್ಯತೆ ಹತ್ತೊಂಬತ್ತನೆಯ ಶತಮಾನದ ವಸಾಹತುಶಾಹಿಯ ಅಧಿಕಾರದ ಹಿತಾಸಕ್ತಿಗೆ ಸರಿ ಹೊಂದುತ್ತಿರಲಿಲ್ಲ. ವಸಾಹತುಶಾಹಿ ಆಡಳಿತ ರಚನೆಯ ಶೈಲಿಗೆ ಪೂರಕವಾಗಿ ಶರೀಅಃದ ವೈವಿಧ್ಯತೆ ಕೂಡಿ ಬರುತ್ತಿರಲಿಲ್ಲ ವಿಶೇಷತಃ ತಮ್ಮ ಕೇಂದ್ರೀಕೃತ ಅಧಿಕಾರದ ಅಡಿಯಲ್ಲಿ ಶರೀಅಃವನ್ನು ಹುದುಗಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಜೋಸೆಫ್‌ ಶಾಟ್‌, ಇಗ್ನಾಝ್‌ ಗೋಲ್ಡ್‌ಝಿಯರ್ ಮತ್ತು ಸ್ನೂಕ್‌ ಹಿರ್ಸ್ಟೂನ್‌ ಮುಸ್ಲಿಂ ರಾಜ್ಯಗಳ ವೈಸ್ರಾಯಿಗಳೊಂದಿಗೆ ಸೇರಿ ಇಸ್ಲಾಮಿನ ಶರೀಅಃ ಕರಾರುವಕ್ಕಾಗಿಲ್ಲ ಎಂದು ಹೇಳಿದ್ದು ಶರೀಅತ್ತಿನ ಈ ವಿಶೇಷತೆಯನ್ನು ಮನಗಂಡಿದ್ದರಿಂದ. ಇದೇ ಕಾರಣದಿಂದ ಶರೀಅಃದ ಸುಧಾರಣೆಗಾಗಿ ಅವರು ಕರೆ ಕೊಟ್ಟಿದ್ದರು. ಇತಿಹಾಸದಲ್ಲೆಲ್ಲೂ ಶರೀಅಃ ಆಡಳಿತದ ಅಣತಿಯಂತೆ‌ ನಿಂತದ್ದನ್ನು ಇಲ್ಲವೇ ಅಧಿಕಾರದ ಹಿತಾಸಕ್ತಿಗಳಿಗೆ ಮಣೆ ಹಾಕಿದ್ದನ್ನು ಕಾಣಲು ಸಾಧ್ಯವಿಲ್ಲ.  ಇದು ಶರೀಅಃ ಸುಪ್ರಧಾನವಾದ ವಿಶೇಷತೆ. ಶರೀಅಃ ಕಾನೂನುಗಳನ್ನು ರೂಪಿಸಿದ್ದು ಸ್ವತಂತ್ರವಾಗಿ ಕಾರ್ಯಾಚರಿಸುತ್ತಿದ್ದ ವಿದ್ವಾಂಸರ ಒಕ್ಕೂಟಗಳಾಗಿದ್ದವು. ಆದರೆ ಯುರೋಪಿನ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿತ್ತು. ಅಲ್ಲಿ ಕಾನೂನುಗಳು ಅಧಿಕಾರ ಪ್ರಯೋಗದ ಅಸ್ತ್ರಗಳಾಗಿದ್ದವು. ಆದುದರಿಂದಲೇ ಶಾಸನ ನಿರ್ಮಾಣ ಪ್ರಕ್ರಿಯೆಗಳು ಅಲ್ಲಿನ ಆಡಳಿತ ವ್ಯವಸ್ಥೆಯ ಪ್ರಕಾರ ಅಧಿಕಾರ ರಚನೆಯ ಭಾಗವಾಗಿ ಮಾತ್ರ ನಡೆಯುತ್ತಿತ್ತು.

ವಾಇಲ್‌ ಹಲ್ಲಾಖ್

ಅದೇವೇಳೆ, ಶರೀಅಃ ನಾಗರಿಕ ಸಮುದಾಯದಲ್ಲಿ ವಿಲೀನವಾಗಿತ್ತು. ನಾಗರಿಕ ಜೀವನದ ಪ್ರತಿಯೊಂದು ಮಜಲುಗಳಲ್ಲಿ ಕೂಡಾ ಅದು ಗಾಢ ಪ್ರಭಾವ ಬೀರುತ್ತಿತ್ತು. ಆದುದರಿಂದಲೇ, ನಾಗರಿಕ ಸಮಾಜದೊಂದಿಗೆ ವಿವಿಧ ರೂಪದಲ್ಲಿ ಸಂಬಂಧ ಹೊಂದಿದ್ದ ಶರೀಅಃ ಆಡಳಿತ ವರ್ಗಕ್ಕಿಂತ ಹೆಚ್ಚಾಗಿ ಜನಸಾಮಾನ್ಯರಿಗೆ ಹೆಚ್ಚು ನಿಕಟವಾಗಿತ್ತು. ಕೊಲಂಬಿಯ ಯುನಿವರ್ಸಿಟಿ ಉಪನ್ಯಾಸಕ ವಾಇಲ್‌ ಹಲ್ಲಾಖ್‌ ಇದನ್ನು ಬಹಳ ಮನೋಜ್ಞವಾಗಿ ವಿವರಿಸಿದ್ದಾರೆ:

“ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಮಾತ್ರ ಚಾಲ್ತಿಯಲ್ಲಿದ್ದ ವ್ಯವಸ್ಥೆಯಾಗಿರಲಿಲ್ಲ ಷರಿಯಾ.‌ ಸಮಾಜದ ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ, ಅನುಭಾವಿಕ ಆಯಾಮಗಳಲ್ಲೆಲ್ಲಾ ಅದರ ದಟ್ಟ ಪ್ರಭಾವವಿತ್ತು. ಆಧುನಿಕ ಕಾನೂನು ವ್ಯವಸ್ಥೆಗಿಂತ ಷರಿಯಾ ವಿಭಿನ್ನ ಎನಿಸಿಕೊಳ್ಳುವುದೇ ಇಲ್ಲಿ. ಯಾವ ಸಮಾಜದ ಸೇವೆಯನ್ನು ಮಾಡಲು ಉದ್ದೇಶಿಸಲಾಗಿದೆಯೋ ಆ ಸಮುದಾಯದಲ್ಲೆ ಷರಿಯಾ ರೂಪು ಪಡೆದು‌ ವಿಕಾಸ ಹೊಂದಿತ್ತು. ಎಂತಲೇ, ಸಾಮಾನ್ಯ ಪ್ರಜೆಗಳು ಕಾನೂನುಗಳ ಬಗ್ಗೆ ಪ್ರಜ್ಞಾವಂತರಾಗುತ್ತಿದ್ದರು. ಅವರ ನಿತ್ಯ ಬದುಕಿನ ಹರಿವಿನಲ್ಲಿ ಷರಿಯಾ ಸದಾ ಮಿಳಿತವಾಗಿರುತ್ತಿತ್ತು. ಫುಖಹಾ/ ಮುಫ್ತಿಗಳು ಷರಿಯಾದ ಜ್ಞಾನವನ್ನು ಜನಸಾಮಾನ್ಯರಿಗೆ ನಿರಂತರವಾಗಿ ನೀಡುತ್ತಾ ಬರುತ್ತಿದ್ದರು.”

(ವಾಟ್‌ ಈಸ್‌ ಶರೀಅ? ವಾಇಲ್‌ ಹಲ್ಲಾಖ್)  ‌

ವಸಾಹತೀಕರಣ ಕಾಲದ ಸಂಹಿತೆಗಳು ಮತ್ತು ಮುಕ್ತ ಕಾನೂನು ವ್ಯವಸ್ಥೆ:

ಫ್ರಾನ್ಝ್‌ ಕಾಫ್ಕ ಬರೆದ Before the law ಎಂಬ ಕಿರುಗತೆಯಲ್ಲಿ ಕಾನೂನು ವ್ಯವಸ್ಥೆಯನ್ನು ಜನಸಾಮಾನ್ಯರ ಕೈಗೆಟುಕದ ಅವರಿಂದ ಮಾರುದ್ದ ದೂರ ನಿಲ್ಲುವ ಒಂದು ಸಂಗತಿಯಾಗಿ ಕಥಿಸಲಾಗಿದೆ. ತನ್ನನ್ನು ಯಾವ ತಪ್ಪಿಗೋಸ್ಕರ ಶಿಕ್ಷೆಗೆ ವಿಧೇಯಗೊಳಿಸಲಾಗುತ್ತಿದೆ ಎಂದು ತಿಳಿಯದ ʼದಿ ಟ್ರಯಲ್‌ʼ ನ ಮುಖ್ಯ ಕಥಾಪಾತ್ರ ಮತ್ತು ಕಾನೂನು ಏನೆಂದು ಅರಿಯಲು ಕಾನೂನಿನ ಹೆಬ್ಬಾಗಿಲಿನ ಎದುರು ಮರಣದ ವರೆಗೂ ಕಾಯಬೇಕಾಗಿ ಬಂದ ʼಬಿಫೋರ್‌ ದ ಲಾʼ ದ ಕಥಾಪಾತ್ರ ನಮ್ಮ ಮುಂದಿಡುತ್ತಿರುವುದು ಸಮಾನವಾದ ತಲ್ಲಣವನ್ನೇ. ಈ ಸಮಸ್ಯೆ ತಲೆದೋರುವುದು ಆಧುನಿಕ ಕಾನೂನು ವ್ಯವಸ್ಥೆಗೆ ಜನತೆಗಿರುವ ಅಂತರದ ಕಾರಣದಿಂದ. ಸಮಾಜದೊಂದಿಗೆ ನಿರಂತರ ಬೆಸುಗೆಯಲ್ಲಿರುವ ಷರಿಯಾ ವ್ಯವಸ್ಥೆಯಲ್ಲಿ ಕಾಫ್ಕ ವಿವರಿಸಿದ ಸಾಮಾಜಿಕವಾದ ಅಂತರದ ಪ್ರಶ್ನೆ ಉದ್ಭವಿಸುವುದೇ ಇಲ್ಲ.

ಜನರನ್ನು ಆಳಲು ಮತ್ತು ಅವರ ಮೇಲೆ ನಿಯಂತ್ರಣ ಹೇರಲು ಬಳಸಲಾಗುವ ಅಸ್ತ್ರವಾಗಿ ಷರಿಯಾ ಎಂದೂ ಬಳಸಲ್ಪಟ್ಟಿರಲಿಲ್ಲ.  ಅದನ್ನು ಕಾಣಲಾಗುತ್ತಿದ್ದದ್ದು ಜನರು ಮತ್ತು ಕಾನೂನು ವ್ಯವಸ್ಥೆಯ ನಡುವಿನ ಸಾಮಾಜಿಕ, ವೈಯಕ್ತಿಕ ಸೇತುವೆಯೆಂಬ ನೆಲೆಯಲ್ಲಿ ಆಗಿತ್ತು.  ʼಸಾಮಾಜಿಕ ಅಂಗೀಕಾರವೆ ಕಾನೂನಿಗೆ ಅಧಿಕೃತತೆಯನ್ನು ನೀಡುತ್ತದೆʼ ಎಚ್‌ ಎಲ್‌ ಎ ಹಾರ್ಟ್‌ ರವರ ಕಾನೂನು ಪ್ರತ್ಯಕ್ಷವಾದಕ್ಕೆ ಪೂರಕವಾಗಿದೆ ಷರಿಯಾದ ರೀತಿರಿವಾಜುಗಳು. 

ಖಾಲಿದ್‌ ಅಬುಲ್‌ ಫದಲ್‌ ರವರು ಇದನ್ನೇ ಈ ರೀತಿ ಹೇಳಿದ್ದಾರೆ;

“ಮಾನವೀಯ ಒಳಿತು, ನೀತಿ ಪಾಲನೆ, ಸರಿ ತಪ್ಪುಗಳ ವಿವೇಚನೆಗಳಿಗಾಗಿ ನೆಲೆಗೊಳ್ಳಬೇಕು ಕಾನೂನುಗಳು. ಇದಾಗಿದೆ ಇಸ್ಲಾಮಿಕ್‌ ಕಾನೂನಿನ ತಳಹದಿ. ಸ್ಟೇಟ್ ನಿರ್ಮಿಸುವ ಶಾಸನಗಳ ಪ್ರಕಾರ ಕಾನೂನು ಜಾರಿ ಮಾಡುವ ಆಧುನಿಕ ಸೆಕ್ಯುಲರ್‌ ವ್ವವಸ್ಥೆಗಿಂತ ಭಿನ್ನವಾಗಿ ಇಸ್ಲಾಮಿಕ್‌ ವ್ಯವಸ್ಥೆ ನಡೆಯುತ್ತಿದ್ದದ್ದು ಕಾನೂನು ಪಠ್ಯಗಳಿಗೆ ವಿದ್ವಾಂಸರು ನೀಡುವ (ಸ್ವತಂತ್ರ) ವ್ಯಾಖ್ಯಾನಗಳ ಪ್ರಕಾರವಾಗಿತ್ತು. ಹೀಗೆ ನೀಡಲಾಗುತ್ತಿದ್ದ ಬೇರೆ ಬೇರೆ ಕಾನೂನು ಅಭಿಪ್ರಾಯಗಳು ಎಲ್ಲವೂ ವಿಭಿನ್ನ ರೀತಿಯ ಗ್ರಹಿಕೆಗಳಾಗಿದ್ದು ಏಕಕಾಲದಲ್ಲಿ ಅವೆಲ್ಲವೂ ಸರಿ ಆಗಿರುತ್ತದೆ. ಆದುದರಿಂದಲೇ ಅವುಗಳಲ್ಲಿ ಯಾವ ಅಭಿಪ್ರಾಯನ್ನು ಬೇಕಾದರೆ ಸ್ವೀಕರಿಸಬಹುದು ಎಂದಾಗಿತ್ತು ಅವರ (ಧಾರ್ಮಿಕ ವಿದ್ವಾಂಸರ) ನಿಲುವು. 

 (The Great theft, Khalid Abou al Fadl)

ಪಾಶ್ಚಾತ್ಯ ಕಾನೂನು ವ್ಯವಸ್ಥೆ ಚಾಲ್ತಿಯಲ್ಲಿ ಇದ್ದದ್ದು ಕೋಡ್ ಗಳ ರೂಪದಲ್ಲಿ. ಡಚ್ ನ್ಯಾಷನಲ್ ಕೋಡ್, ಬ್ರಿಟಿಷ್ ಪೆನಲ್ ಕೋಡ್, ನಪೋಲಿಯನ್ ಸಂಹಿತೆ ಇವು ಅಲ್ಲಿನ ಕೆಲವು ಸುಪ್ರಧಾನ ಕಾನೂನು ಸಂಹಿತೆಗಳಾಗಿದ್ದವು. ಈ ಕಾನೂನುಗಳನ್ನು  ನಿಗದಿತ ಪುಸ್ತಕಗಳಲ್ಲಿ ನಿಖರವಾಗಿ ದಾಖಲಿಸಲಾಗಿದ್ದು ಅದನ್ನು ಜಾರಿ ಮಾಡಲು ನಿರ್ದಿಷ್ಟ ಕಟ್ಟಡಗಳನ್ನು ನ್ಯಾಯಾಲಯ ಗಳಾಗಿ ಗೊತ್ತುಪಡಿಸಲಾಗಿತ್ತು. ಆದುದರಿಂದಲೇ ಅದು ಸಮುದಾಯದ ಒಳಗಿಂದ ಗಜ ದೂರ ಅಂತರದಲ್ಲಿ ಇರುತ್ತಿತ್ತು. ಅದೇವೇಳೆ ಇಸ್ಲಾಮಿಕ್ ನಾಗರಿಕತೆಯಲ್ಲಿ ಶರೀಅಃ ಜಾರಿ ಮಾಡಲು, ಸಮಸ್ಯೆ ಗಳನ್ನು ಇತ್ಯರ್ಥ ಪಡಿಸಲು, ಫಿರ್ಯಾದಿ ಗಳನ್ನು ಸಮರ್ಪಿಸಲು ನಿಗದಿತ ಸ್ಥಳಗಳು ಇದ್ದದ್ದಾಗಿ ಚರಿತ್ರೆಯಲ್ಲಿ ದಾಖಲಾಗಿಲ್ಲ. ಅದು ಎಲ್ಲಿ ಬೇಕಾದರೂ ನಡೆಯುತ್ತಿತ್ತು. ವಿದ್ವಾಂಸರ ಮನೆಯಲ್ಲಿ, ಫಿರ್ಯಾದಿದಾರನ ವಸತಿಯಲ್ಲಿ, ರಾಜನ ಸಮ್ಮುಖದಲ್ಲಿ, ಮಸೀದಿಗಳಲ್ಲಿ, ಪೇಟೆ ಗಳಲ್ಲೆಲ್ಲಾ ಶರೀಅಃ ಚರ್ಚೆಗಳು ನಡಯುತ್ತಿದ್ದವು. ಶರೀಅಃ ಕಾನೂನುಗಳು ಇವಿಷ್ಟು ಎಂದು ನಿರ್ದಿಷ್ಟ ವಾಗಿ ಬೊಟ್ಟು ಮಾಡಿ ತೋರಿಸಲು ತಕ್ಕುದಾದ ರೀತಿಯಲ್ಲಿ ಅದು ನಿಯಮಿತ ವಾಗಿರಲಿಲ್ಲ. ಯಾಕೆಂದರೆ, ಶರೀಅಃದಲ್ಲಿ ಪ್ರಧಾನ ವಾದದ್ದು ಕೋಡ್ ಗಳಾಗಿರಲಿಲ್ಲ. ಕಾನೂನು ಸುರಕ್ಷೆ ಗಾಗಿ ಮೊರೆಯಿಡುತ್ತಿರುವ ದೂರುದಾರ ಮತ್ತು ಅವನ ಪಾತಳಿ ಕೂಡಾ ಅಷ್ಟೇ ಪ್ರಧಾನ ವಾಗಿತ್ತು. ಆದುದರಿಂದಲೇ ಶರೀಅಃ ವ್ಯವಸ್ಥೆ ಒಂದು ರೀತಿಯ ಮುಕ್ತ ಕಾನೂನು ವ್ಯವಸ್ಥೆ ಯಾಗಿತ್ತು ಎಂದು ನಮಗೆ ಮನದಟ್ಟಾಗುತ್ತದೆ. ಇದರತ್ತ ಬೊಟ್ಟು ಮಾಡುತ್ತಾ ಅಮೇರಿಕನ್ ನ್ಯಾಯಾಧೀಶ ರೊಬ್ಬರು ಈ ರೀತಿ ಕುಹಕವಾಡಿದ್ದಾರೆ. ” ಬೇಕಾಬಿಟ್ಟಿ ನ್ಯಾಯ ಹೇಳಲು ಮರದಡಿಯಲ್ಲಿ ಕೂತು ಕೈಯಲ್ಲಿರುವ ಪುಸ್ತಕ ವನ್ನು ವ್ಯಾಖ್ಯಾನಿಸಿ ಕಾನೂನು ವಿವೇಚನೆ ಮಾಡುವ ಮುಸ್ಲಿಂ ಖಾಝಿಯಲ್ಲ ನಾನು.”

ಆಧುನಿಕತೆ ಮತ್ತು ಷರಿಯಾ: ಒಟ್ಟೋಮನ್ ಈಜಿಪ್ಟ್ ನಿಂದ ಆಂಗ್ಲೋ – ಮೊಹಮ್ಮದನ್ ಲಾ ತನಕ:

ಶರೀಅಃ ಕಾನೂನುಗಳನ್ನು  ಕೋಡ್ ಗಳಾಗಿ ಸಂಗ್ರಹ ಮಾಡುವ/ಕರೆ ಕೊಡುವ ಮೂಲಕ ಓರಿಯಂಟಲಿಸ್ಟ್ ಗಳು  ಮತ್ತು ಅವರ ವಸಾಹುಶಾಹಿ ಸರದಾರರು ಯುರೋಪಿಯನ್ ವ್ಯವಸ್ಥೆಗಳಿಂದ ಶರೀಅಃ ವ್ಯವಸ್ಥೆಯನ್ನು ಭಿನ್ನ ಗೊಳಿಸುವ ಮೇಲುದ್ಧರಿತ ವಿಶೇಷತೆ ಯನ್ನು ನುಚ್ಚು ನೂರು ಮಾಡುವ ಕೆಲಸ ಮಾಡಿದರು. ಹಲವು ಮುಸ್ಲಿಂ ರಾಷ್ಟ್ರ ಗಳಲ್ಲಿ ಚಾಲ್ತಿಯಲ್ಲಿದ್ದ ಶರೀಅಃ ವ್ಯವಸ್ಥೆ ಗಳನ್ನು ತಮ್ಮದೇ ಪಾಶ್ಚಾತ್ಯ ವ್ಯವಸ್ಥೆ ಯ ಮೂಗಿನ ನೇರಕ್ಕೆ ಪರಿವರ್ತಿಸಿ ಕೊಂಡರು. ಈ ರೀತಿಯಲ್ಲಿ ಶರೀಅಃ ಕಾನೂನಿನ ಕೋಡಿಫಿಕೇಶನ್ ಮೊದಲು ನಡೆದದ್ದು ಭಾರತದ ಬ್ರಿಟಿಷ್ ಶಾಹಿಯ ಆಧಿಪತ್ಯದಲ್ಲಿ. ಗವರ್ನರ್ ವಾರನ್ ಹೋಸ್ಟಿಂಗ್ ನ ಆದೇಶ ಪ್ರಕಾರ ಇಲ್ಲಿ ಒಂದು ಮಿಶ್ರ ಕಾನೂನು ವ್ಯವಸ್ಥೆಗೆ ಅಡಿಪಾಯ ಹಾಕಲಾಯಿತು. ಮುಸ್ಲಿಂ- ಹಿಂದೂ ಕಾನೂನುಗಳನ್ನು ಏಕೀಕೃತ ಕೋಡ್ ಗಳಾಗಿ ಮಾಡುವ ಕ್ರಮ ವನ್ನು ಬ್ರಿಟಿಷ್ ಕಂಪೆನಿ ಆರಂಭಿಸಿದ್ದು ಬ್ರಿಟಿಷ್ ಪೌರಾತ್ಯ ವಿದ್ವಾಂಸ ಸರ್ ವಿಲಿಯಂ ಜಾನ್ಸ್ ರ ಸಲಹೆಯ ಮೇರೆಗೆ. 

1791 ರಲ್ಲಿ ಚಾರ್ಲ್ಸ್ ಹ್ಯಾಮಿಲ್ಟನ್ ರವರು ಹನಫಿ ಮದ್ ಹಬಿನ ಮರ್ಗೀನಾನಿಯವರು ರಚಿಸಿದ ಕರ್ಮ ಶಾಸ್ತ್ರ ಗ್ರಂಥ ಹಿದಾಯ ವನ್ನು ಭಾಷಾಂತರ ಮಾಡಿದರು. 1792 ರಲ್ಲಿ ಪಿತ್ರಾರ್ಜಿತ ಆಸ್ತಿ ವಿಲೇವಾರಿ ಯನ್ನು ವಿವರಿಸುವ ಸಿರಾಜಿಯಾವನ್ನು ಕೂಡಾ ಅನುವಾದ ಮಾಡಲಾಯಿತು. 1865 ರಲ್ಲಿ ಫತಾವ ಆಲಂಗೀರಿಯ್ಯ ವನ್ನು ನೀಲ್ ಬೈಲಿ ಇಂಗ್ಲಿಷ್ ಗೆ ತಂದರು. ಈ ಮೂಲಕ 1860 ರಲ್ಲಿ “ಆಂಗ್ಲೋ ಮೂಹಮ್ಮದನ್ ಲಾ” ಜಾರಿಗೆ ಬಂತು. ಆದರೆ, ಆಂಗ್ಲೋ ಮೊಹಮ್ಮದನ್ ಲಾ ದಲ್ಲಿ ಮೊಹಮ್ಮದನ್ ಲಾ ಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಕಾನೂನು ಮೇಲುಗೈ ಸಾಧಿಸಿತ್ತು. ಆಮೇಲೆ, ಇದೇ ಕೋಡ್ 1937 ರಲ್ಲಿ “ಮುಸ್ಲಿಂ ಪರ್ಸನಲ್ ಲಾ ಅಪ್ಲಿಕೇಶನ್ ಆಕ್ಟ್” ಆಗಿ ವೈಯುಕ್ತಿಕ ಕಾನೂನು ಗಳಿಗೆ ಮಾತ್ರ ಅನ್ವಯ ಆಗುವಂತೆ ಜಾರಿಗೆ ಬಂತು. 

ಹತ್ತೊಂಬತ್ತನೆಯ ಶತಮಾನದ ಆಗಮನ ದೊಂದಿಗೆ ಯುರೋಪಿಯನ್ ಕಾನೂನು ವ್ಯವಸ್ಥೆ ಯ ಹಿಡಿತ ಮುಸ್ಲಿಂ ಜಗತ್ತಿನ ಆರ್ಥಿಕ ವಿನಿಮಯ ಮತ್ತು ದಂಡನಾ ಸಂಬಂಧಿ ಕಾನೂನು ಗಳಲ್ಲಿ ಆವರಿಸಿಯಾಗಿತ್ರು. ವಸಾಹತುಶಾಹಿಯ ಅಧಿಕಾರ ದರ್ಪ ಇದರ ಹಿಂದೆ ಕೆಲಸ ಮಾಡಿತ್ತು. ಹಾಗೇ ಮುಂದುವರಿದು ಶರೀಅಃ ಕಾನೂನು ಗಳನ್ನು ವೈಯುಕ್ತಿಕ ಮಜಲಿನಲ್ಲಿ ಮಾತ್ರ ಸೀಮಿತ ಗೊಳಿಸಲಾಯಿತು. ಈಜಿಪ್ಟ್ ನಲ್ಲಿ ಶರೀಅಃ ವನ್ನು ಕೋಡಿಫೈ ಮಾಡಲು 1880 ರಲ್ಲಿಯೇ ವಸಾಹುಶಾಹಿಗಳು ಆದೇಶ ಹೊರಡಿಸಿದ್ದರು. ಅದರನ್ವಯ ಕೆಲವು ಹನಫಿ ವಿದ್ವಾಂಸರು ಮತ್ತು ಅಲ್ಲಿನ ಅಧಿಕಾರಿಗಳು ಸೇರಿ ಹನಫಿ ಕಾನೂನು ಧಾರೆಯ ವೈಯುಕ್ತಿಕ ನಿಯಮಗಳನ್ನು ಕ್ರೋಡೀಕರಿಸಿ ಕೋಡ್ ಮಾಡಿದರು. ಮೊರೊಕ್ಕೊ ದಲ್ಲಿ ಆಡಳಿತ ನಡೆಸುತ್ತಿದ್ದ ಫ್ರೆಂಚ್ ವಸಾಹತುಶಾಹಿ 1930 ರಲ್ಲಿ ಶರೀಅಃ ಕೋಡ್ ನಿರ್ಮಾಣ ಮಾಡಿತ್ತು. 1873 ರಲ್ಲಿ ಶರೀಅಃ ಕಾನೂನುಗಳು ಮತ್ತು ಸ್ಥಳೀಯ ಆಚಾರಗಳನ್ನು ಸೇರಿಸಿ ರೂಪಿಸಿದ ಶರೀಅಃ ಸಂಹಿತೆ ಹೆಚ್ಚು ಹೋಲುತ್ತಿದ್ದದ್ದು ಡಚ್ ನ್ಯಾಷನಲ್ ಕೋಡ್ ನೊಂದಿಗಾಗಿತ್ತು. 

ವಸಾಹುಶಾಹಿ ಪ್ರಾಯೋಜಿತ ಕ್ರೋಢೀಕರಣ ಯೋಜನೆಗಳು ಶರೀಅಃ ವ್ಯವಸ್ಥೆಯ ರಕ್ತದಲ್ಲಿ ಹಾಸು ಹೊಕ್ಕಾಗಿದ್ದ ಬಹುತ್ವದ ನೆಲೆಗಳಿಗೆ ಅಗಾಧವಾದ ಪೆಟ್ಟು ಕೊಟ್ಟಿತು. ‘ವೈಯಕ್ತಿಕ ಶರೀಅಃ ಲಾ ಗಳು’ ಚಾಲ್ತಿಯಲ್ಲಿದ್ದ ಹಲವಾರು ಅಭಿಪ್ರಾಯ ಗಳ ಪೈಕಿ ಒಂದನ್ನು ಹೆಕ್ಕಿ ಕಾನೂನು ರೀತ್ಯಾ ಜಾರಿ ಮಾಡಿತು. ನಂತರ ಆ ಸಂಗ್ರಹವನ್ನು ಮಾತ್ರ ನೋಡಿ ಕಾನೂನು ತೀರ್ಪು ಕೊಡುವ ಪರಿಪಾಠ ಬೆಳೆಯಿತು. ಅನೇಕಾರು ಗ್ರಂಥಗಳನ್ನು ಪರಾಂಬರಿಸಿ ಸೂಕ್ಷ್ಮ ಅವಲೋಕನ ಮಾಡಿ ನಿರ್ವಹಿಸಲಾಗುತ್ತಿದ್ದ ಇಫ್ತಾ/ಖಳಾ* ಪ್ರಕ್ರಿಯೆಗಳು ಇದರೊಂದಿಗೆ ಒಂದೇ ಪುಸ್ತಕದಲ್ಲಿ ನೋಡಿ ತೀರ್ಮಾನಿಸಿ ಬಿಡುವಷ್ಟು ‘ ಸರಳ ‘ ವಾಯಿತು. ಶರೀಅಃ ನೇರವಾಗಿ ಸ್ಟೇಟಿನ ಕೈಕಳಗೆ  ಬರುವ ಸ್ಥಿತಿಯೂ ಸಂಜಾತ ವಾಯಿತು. ಈ ಪ್ರಕ್ರಿಯೆಗಳು ಶರೀಅಃದ ನೈಜತೆಯನ್ನು ನಿರಾಕರಿಸಿತು. ಅಷ್ಟೇ ಅಲ್ಲದೆ, ಧಾರ್ಮಿಕ, ಸಾಮಾಜಿಕ ಕಾನೂನಾತ್ಮಕ ಬಿಕ್ಕಟ್ಟು ಗಳನ್ನು ಹುಟ್ಟು ಹಾಕಿತು. ಶರೀಅಃ ಬಗ್ಗೆ ವ್ಯಾಪಕವಾದ ತಪ್ಪು ಧೋರಣೆ ಯನ್ನು ಹರಡಿತು. ಕ್ಯಾಲಿಫೋರ್ನಿಯಾ ವಿವಿಯ ಕಾನೂನು ವಿಭಾಗದ ಮುಖ್ಯಸ್ಥ ಮಾರ್ಕ್ ಫಾತಿ ಮಸೂದ್ ರವರ ಅಭಿಪ್ರಾಯ ದಂತೆ ಇಸ್ಲಾಮಿನ ಒಳಗಡೆ ಮೂಲಭೂತವಾದ ಬೆಳೆಯಲು ಮತ್ತು ಷರಿಯಾ ವ್ಯಾಪಕ ದುರುಪಯೋಗಕ್ಕೆ ಈಡಾಗಲು ಕಾರಣ ಈ ಪಾಶ್ಚಾತ್ಯ ಪ್ರಣೀತ ಶರೀಅಃ ವ್ಯವಸ್ಥೆಗಳೆ. ಸ್ಟೇಟಿನ ಆಧಿಪತ್ಯ ದ ಅಡಿಯಲ್ಲಿ ಶರೀಅಃವನ್ನು ತರುವ ಕೆಲಸಗಳನ್ನು ಇರಾನ್, ಸೌದಿ ಅರೇಬಿಯಾ, ಸೊಮಾಲಿಯಾ, ನೈಜೀರಿಯಾ ದಂತ ರಾಷ್ಟ್ರಗಳ ಮೂಲಭೂತ ವಾದಿಗಳು ಮಾಡುತ್ತಿದ್ದು ಇದು ವಸಾಹತುಶಾಹಿ ಹಿತಾಸಕ್ತಿಗಳ ಮತ್ತೊಂದು ಮುಖ ಮತ್ತು ಅದರ ಪರಿಣಾಮ ಕೂಡಾ ಹೌದು, ಮಸೂದ್ ಅಭಿಪ್ರಾಯಿಸುತ್ತಾರೆ. 

ಆಧುನಿಕ ಯುಗಾರಂಭ ಕಾಲದ ಒಟ್ಟೋಮನ್ ಈಜಿಪ್ಟ್ ಮತ್ತು ವಸಾಹತೋತ್ತರ ಈಜಿಪ್ಟ್ ನಲ್ಲಿ ಚಾಲ್ತಿಯಲ್ಲಿದ್ದ ಕಾನೂನು ವ್ಯವಸ್ಥೆಗಳ ನಡುವೆ ತೌಲನಿಕ ಅಧ್ಯಯನ ನಡೆಸಿದ ಆಮಿನ ಝಹ್ರಿ ಝಾಂಬೋಲ್ ವಸಾಹತುಶಾಹಿಗಳು ಕೋಡಿಫೈ ಮಾಡಿದ ಶರೀಅಃ ತಂದಿಟ್ಟ ಸಮಸ್ಯೆಗಳನ್ನು ಅನಾವರಣ ಮಾಡಿದ್ದಾರೆ.  ಒಟ್ಟೋಮನ್ ಈಜಿಪ್ಟ್ ನಲ್ಲಿ ಮಹಿಳೆಯರಿಗೆ ವಿವಾಹ ವಿಚ್ಚೇದನ ಪಡೆಯಲು ಇರುವ ದಾರಿಗಳು ಸುಲಭ ಸಾಧ್ಯವಾಗಿತ್ತು. ಶರೀಅಃದಲ್ಲಿ ಮನ್ನಣೆ ನೀಡಲಾಗಿರುವ ಹಲವಾರು ಅಭಿಪ್ರಾಯಗಳನ್ನು ಮಹಿಳೆಯರ ಒಳಿತನ್ನು ಬಯಸಿ ಜಾರಿ ಮಾಡಲು ಅಲ್ಲಿ ಕಾನೂನಾತ್ಮಕ ಅವಕಾಶ ಗಳಿದ್ದವು. ಅದರೆ ವಸಾಹತೋತ್ತರ ಈಜಿಪ್ಟ್ ನಲ್ಲಿ ವಿವಾಹ ವಿಚ್ಛೇದನ ಪಡೆಯಲು ಕ್ಲಿಷ್ಟಕರವಾದ  ಕಾನೂನು ಹಾದಿ ಹಿಡಿಯಬೇಕಾದ ರೀತಿಯಲ್ಲಿ ಸ್ಥಿತಿ ಬದಲಾವಣೆ ಉಂಟಾಗಿತ್ತು. ವಸಾಹತೋತ್ತರ ಕಾಲದಲ್ಲಿ ವಿಚ್ಛೇದನ ಪಡೆಯಲು ಪ್ರಬಲ ಪುರಾವೆಯನ್ನು ಹಾಜರು ಪಡಿಸ ಬೇಕಿತ್ತು ಯಾ ಸಾಕ್ಷಾತ್ ಪತಿಯೇ ಒಪ್ಪಬೇಕಿತ್ತು ಯಾ ಮಹಿಳೆ ಕಠಿಣವಾದ ದೌರ್ಜನ್ಯಗಳಿಗೆ ಈಡಾಗಿದ್ದಳೆಂದು ಸಾಬೀತು ಮಾಡಬೇಕಿತ್ತು. ಪ್ರಬಲ ಪುರಾವೆಗಳ ಅಭಾವದಲ್ಲಿ ವಿಚ್ಛೇದನ ದೊರಕುತ್ತಿರಲಿಲ್ಲ ಎಂದು ವಿವರಿಸುತ್ತಾರೆ ಝಾಂಬೋಲ್. ಲೈಂಗಿಕ ದೌರಜನ್ಯಗಳಿಗೆ ಈಡಾದ ಮಹಿಳೆಯರು ಒಟ್ಟೋಮನ್ ಈಜಿಪ್ಟ್ ನ ಶರೀಅಃ ವ್ಯವಸ್ಥೆಯಲ್ಲಿ ಪುನರ್ವಸತಿ ಪಡೆಯುತ್ತಿದ್ದರು ಹಾಗೂ ಅವರಿಗೆ ಪರಿಹಾರ ದೊರಕುತ್ತಿತ್ತು. ಅದರೆ, ವಸಾಹತೋತ್ತರ ವ್ಯವಸ್ಥೆಯಲ್ಲಿ ದೌರ್ಜನ್ಯ ಕ್ಕೀಡಾದ ಮಹಿಳೆಯೇ ಶಿಕ್ಷೆಗೆ ವಿಧೇಯ ವಾಗುವ ಇಲ್ಲವೇ ಕುಟುಂಬಿಕರಿಂದ ಹತ್ಯೆ ಗೀಡಾಗುವ ಸ್ಥಿತಿ ಉಂಟಾಗಿತ್ತು. ನ್ಯಾಯಾಲಯಗಳು ಕೂಡಾ ಅವರ ಸಹಾಯಕ್ಕಾಗಿ ಮುಂದೆ ಬರುತ್ತಿರಲಿಲ್ಲ ಎಂದು ಮತ್ತೊಂದು ಸಂಶೋಧಕ ಲಾಮಾ ಅಬೂ ಔದ ಹೇಳುತ್ತಾರೆ. ಅದೇ ರೀತಿ ಒಟ್ಟೋಮನ್ ಕಾಲದ ಈಜಿಪ್ಟ್ ನಲ್ಲಿ ಅಲ್ಪ ಸಂಖ್ಯಾತರ ಹಕ್ಕುಗಳು ಸಂರಕ್ಷಿತವಾಗಿತ್ತು ಆದರೆ ವಸಾಹತೋತ್ತರ ಈಜಿಪ್ತ್ ನಲ್ಲಿ ಅಲ್ಪಸಂಖ್ಯಾತರು ಶೋಷಣೆಗೆ ಈಡಾಗುತ್ತಿದ್ದರು ಎಂದು ‘ ರಿಲೇಜ್ಯಸ್ ಡಿಫರೆನ್ಸ್ ಇನ್ ದ ಸೆಕ್ಯುಲರ್ ಏಜ್’ ಎಂದ ಪುಸ್ತಕದಲ್ಲಿ ಸಬಾ ಮಹಮೂದ್ ವಿವರಿಸಿದ್ದಾ ರೆ.

ಫೂಕಾಲ್ಡಿಯನ್ ‘ ಕಾನೂನಿ’ನಾಚೆಗಿನ ಷರಿಯಾ ಸಾಧ್ಯತೆಗಳು: 

ಮಿಶೆಲ್ ಫೂಕೊರ ವೀಕ್ಷಣೆ ಯಂತೆ ‘ ಕಾನೂನುಗಳು ಅಧಿಕಾರದ ಅಸ್ತ್ರ ‘ ಗಳಾಗಿವೆ. ಕಾನೂನುಗಳು ಅದರ ಎಲ್ಲಾ ಸಂಸ್ಥೆ ಗಳನ್ನು  ಮತ್ತು ಪರಿಕರ ಗಳನ್ನು ಬಳಸಿಕೊಂಡು ಅಧಿಕಾರದ ಬಂಧಗಳನ್ನು ಸ್ಥಿರ ಪಡಿಸುತ್ತದೆ. ಕಾನೂನುಗಳು ಕೇವಲ ತತ್ವಗಳು ಯಾ ಸಲಹೆಗಳು ಮಾತ್ರವಲ್ಲ. ಬದಲಾಗಿ ಅದು ನಿರಂತರ ಬೆಳೆಯುತ್ತಿರುವ ಅಧಿಕಾರ ಪ್ರಯೋಗವಾಗಿದೆ ಎಂದು ವಾದ ಮಾಡುತ್ತಾರೆ ಫ್ರೆಂಚಿನ ಪ್ರಸಿದ್ಧ ತತ್ವಚಿಂತಕ ಫೂಕೋ. ಫೂಕೋ ವಾದಗಳ ಆಧಾರದಲ್ಲಿ ವಸಾಹುಶಾಹಿ ಗಳು ನಡೆಸಿದ ಶರೀಅಃ ಕೋಡಿ ಫಿಕೇಶನನ್ನು ವಿಶ್ಲೇಷಣೆ ಮಾಡುತ್ತಾ ಇಬ್ರಾಹಿಂ ಮೂಸಾ ಈ ರೀತಿ ಬರೆದಿದ್ದಾರೆ:

” ವಸಾಹತುಶಾಹಿ ತನ್ನ ಅಧಿಕಾರವನ್ನು ಜಾರಿ ಮಾಡುತ್ತಿದ್ದದ್ದು ಆರ್ಥಿಕ, ಸೈನಿಕ ಹಾಗೂ ರಾಜಕೀಯ ಶಕ್ತಿಯನ್ನು ಬಳಸಿ ಕೊಂಡು ಮಾತ್ರವಾಗಿರಲಿಲ್ಲ. ಅವರು ತಮ್ಮ ಕಾನೂನು ಜ್ಞಾನವನ್ನು ವಸಾಹತೀಕರಣಕ್ಕೆ ಬಲಿಯಾದ ಜನತೆಯ ಮೇಲೆ ಹೇರುತ್ತಿದ್ದರು. ಅದರ ದುಷ್ಪರಿಣಾಮ ವೆಂಬಂತೆ ಸ್ವಾತಂತ್ರ್ಯನಂತರವೂ ವಸಾಹತಿನ ಜನರು ವಸಾಹತುಶಾಹಿಯ ಕಾನೂನು ವ್ಯವಸ್ಥೆ ಯಲ್ಲೇ ಕಟ್ಟಿ ಹಾಕಲ್ಪಟ್ಟಿದ್ದಾರೆ.”

  • ” Colonialism and Islamic Law ” Ebrahim Moosa
Ebrahim Moosa

ಕೇಂದ್ರೀಕೃತವಾದ ಸ್ವಭಾವ ಇರುವ ಯುರೋಪಿಯನ್ ಕಾನೂನು ವುವಸ್ಥೆಗೆ ವಿಭಿನ್ನವಾಗಿ ಶರೀಅಃ ವ್ಯವಸ್ಥೆ . ಆದುದರಂದಲೇ, ಯೂರೋಪಿಯನ್ ಲೀಗಲ್ ಸಿದ್ಧಾಂತಗಳ ಆಧಾರದಲ್ಲಿ ಶರೀಅಃ ನಿಯಮಗಳನ್ನು ರೂಪಿಸುವುದು ಯಾ ಅರ್ಥೈಸುವುದು ಸಾಧ್ಯವಲ್ಲ. ಜಾಕ್ ದೆರಿದ ತನ್ನ ‘Forces of the law: Foundations of the authority’ ಎಂಬ ಗ್ರಂಥದಲ್ಲಿ ವಾಲ್ಟರ್ ಬೆಂಜಮಿನ್ ರನ್ನು ಉದ್ದರಿಸುತ್ತ ಹೇಳಿದ ಹಾಗೆ ‘ ಯುರೋಪಿಯನ್ ವ್ಯವಸ್ಥೆ ಯಲ್ಲಿ ಕಾನೂನುಗಳು ಲಾಗಾಯ್ತಿನಿಂದಲೂ  ಕಾನೂನು/ಸ್ಟೇಟ್ ನ ಅಸ್ತಿತ್ವಕ್ಕೆ ಬೇಕಾಗಿ ಮಾತ್ರ ಕಾರ್ಯ ವೆಸಗುತ್ತಿದೆ ‘. ತನ್ನ ಅಸ್ತಿತ್ವವೇ ಅದರ ಪ್ರಧಾನ ಉದ್ದೇಶ. ಆದುದರಿಂದಲೇ ಅದರ ದೌತ್ಯ ಸ್ಥಾಪಿತ ಅಧಿಕಾರವನ್ನು ಯಾವುದೇ ತೊಡಕುಗಳಿಲ್ಲದೆ ಕಾಪಿಡುವುದು. ಎಂತಲೇ ಆಧುನಿಕ ಕಾನೂನಿನ ತಳಹದಿ ಯಾವತ್ತೂ ಅಧಿಕಾರವೇ. ಅದರೆ ಇದಕ್ಕೆ ತದ್ವಿರುದ್ದವಾಗಿ ಷರಿಯಾದ ಉದ್ದೇಶ ಪ್ರಜೆಗಳ ಧಾರ್ಮಿಕ ಬೆಳವಣಿಗೆ ಮತ್ತು ಅವರ ಹಕ್ಕುಗಳ ಸಂರಕ್ಷಣೆ. ಅಧಿಕಾರ ವಿಕೇಂದ್ರಿಕರಣ ಎನ್ನುವುದು ಅದರ ಮೂಲಭೂತ ಸ್ವಭಾವ. ಷರಿಯಾ ಒಮ್ಮೆಯೂ ಆಧುನಿಕ ಕಾನೂನು ವ್ಯವಸ್ಥೆಯ ತರ ಬೆಳವಣಿಗೆ ನಿಂತ ಹರಿಯದ ನೀರಲ್ಲ. ಅದು ಹೊರಗಡೆ ಇರುವ ಸಮಾಜ ದೊಂದಿಗೆ ಸತತವಾದ ಕೊಡುಕೊಳೆಯಲ್ಲಿ ಭಾಗಿಯಾಗಿ ನಿರಂತರ ‘ ಆಗುವಿಕೆಗೆ (becoming)’ ಒಳಗಾಗುತ್ತಿರುತ್ತದೆ. ತನ್ನೊಂದಿಗೆ ತನ್ನ ಸಮಾಜವನ್ನು ನವೀಕರಿಸುತ್ತಾ ಸಾಗುತ್ತದೆ.

ಮಲಯಾಳ ಮೂಲ: ಮುಹಮ್ಮದ್‌ ಕೋಮತ್‌

ಕನ್ನಡಕ್ಕೆ: ನಝೀರ್‌ ಅಬ್ಬಾಸ್      

ಇಕ್ಬಾಲ್ ಕಾವ್ಯದ ಗುಂಗಲ್ಲಿ

ನಶಾ ಪಿಲಾ ಕೆ ಗಿರಾನಾ ಸಬ್ಕೊ ಆತಾ ಹೈ
ಮಝಾ ತೊ ತಬ್ ಹೈ ಗಿರ್ತೋಂಕೋ ಥಾಮ್ ಲೆ ಸಾಕಿ !
– ಅಲ್ಲಾಮ ಇಕ್ಬಾಲ್

ಮತ್ತೇರಿಸಿದ ಮೇಲೆ ದೂಡಿ ಹಾಕುವವರೇ ಎಲ್ಲಾ,
ಖುಷಿಯಿರುವುದು ಬಿದ್ದವನ ಎತ್ತಿ
ಗಮ್ಯ ಸೇರಿಸುವುದರಲ್ಲಿ, ಸಾಕಿ!
– ಪುನೀತ್ ಅಪ್ಪು

ಬಹಳಷ್ಟು ದಿನಗಳ ಕಾಲ ಈ ಸಾಲನ್ನು ಗುನುಗಿಕೊಳ್ಳುತ್ತಾ ಓಡಾಡುತ್ತಿದ್ದೆ. ಅದು ಕೊಡುವ ಎನರ್ಜಿಯ ಸುಖ ವಿಚಿತ್ರ. ಈ ಸಾಲಲ್ಲಿ ಅಂತದ್ದೇನಿದೆ ಎನ್ನಬಹುದು. ಸಾರಾಂಶ ಹೇಳುತ್ತಾ ಕೂತರೆ ತೀರಾ ಸಾಮಾನ್ಯ ಅನಿಸಬಹುದು. ಆದರೆ, ಕವಿಯೊಬ್ಬನ ಬದ್ಧತೆ, ಸಾಹಿತ್ಯದ ಶ್ರೇಷ್ಟತೆಯ ದೃಷ್ಟಿಕೋನದಿಂದ ನೋಡಿದಾಗ ಬಹಳ ಅದ್ಭುತ ಸಾಲುಗಳು ಇವು.
ಕವಿ ತೀವ್ರವಾದ ವೈಯಕ್ತಿಕ ಭಾವನೆಗಳನ್ನು ಕವಿತೆಯಾಗಿಸುತ್ತಾನೆ. ಆ ಕವಿತೆ ಶ್ರೇಷ್ಠವಾಗುವುದು ಅದು ವೈಯಕ್ತಿಕತೆಯನ್ನು ಮೀರಿ ಸಾರ್ವತ್ರಿಕ ಗುಣ ಪಡೆದುಕೊಂಡಾಗ. ಅರ್ಥಾತ್ ಎಲ್ಲರ ಅನುಭವವಾದಾಗ. `ಕಾವ್ಯವು ತೀವ್ರವಾದ ಭಾವನೆಗಳ ಸಹಜ ಹರಿವು’ ಎಂದು ಲಿರಿಕಲ್ ಬ್ಯಾಲಡ್ ಗೆ ಮುನ್ನುಡಿ ಬರೆಯುತ್ತಾ  ವಿಲಿಯಮ್ ವರ್ಡ್ಸ್ ವರ್ಥ್ ಹೇಳುತ್ತಾನೆ.
ಮಹಾಕವಿ ಅಲ್ಲಾಮ ಇಕ್ಬಾಲರ ಬಹುತೇಕ ಕವಿತೆಗಳು ಈ ಗುಣವನ್ನು ಪಡೆದುಕೊಂಡಿದೆ. ಈ ಮೇಲಿನ ಸಾಲುಗಳನ್ನೇ ನೋಡಿ, ದೇಶಕಾಲಗಳನ್ನು ಮೀರಿ ಯಾರೂ ಬೇಕಾದರೂ ಇದು ನನ್ನದೇ ಸಾಲು ಅಥವಾ ಅನುಭವ ಎನ್ನವಷ್ಟು ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಗುಣವನ್ನು ಹೊಂದಿದೆ. ಇಕ್ಬಾಲರ ಪ್ರತಿಭೆ ಅದು. ಕವಿಗೆ ವೈಯಕ್ತಿಕವಾಗಿ ಏನೋ ನೋವಿದೆ. ಅದು ಅವರನ್ನು ತೀವ್ರವಾಗಿ ಕಾಡಿರಬೇಕು. ಆದ್ದರಿಂದಲೇ ಅದು burning bright ತರದ ಕವಿತೆಯಾಗಿ ಮೈತಳೆದಿದೆ. ಆದರೆ, ಆ ನೋವು ತನ್ನೊಬ್ಬನದ್ದೇ ಅಲ್ಲ; ಬಹು ಜನರದ್ದು ಎಂಬ ಅರಿವೂ ಕವಿಗಿದೆ. ಆತ ಅದನ್ನು ಶೋಧಿಸಿಕೊಳ್ಳುತ್ತಾನೆ. ಇಲ್ಲಿ ನೋವಿದೆ, ದೂರಿದೆ. ಹೊಯ್ದಾಟವಿದೆ. ಆದರೆ, ಅಷ್ಟಕ್ಕೇ ಮುಗಿದಿದ್ದರೆ ಈ ಸಾಲು ಸಪ್ಪೆ ಎನಿಸಿಬಿಡುತ್ತಿತ್ತು. ತೀರಾ ಸಾಮಾನ್ಯ ಎಂಬ ಷರಾ ಪಡೆದು ಕಸದ ಬುಟ್ಟಿ ಸೇರುತ್ತಿತ್ತು.  ಕವಿ ನೋವನ್ನು ಮೀರುವ, ಆರೋಪವನ್ನು ನೀಗಿಸಿಕೊಳ್ಳುವ ವಿಶೇಷ ಪ್ರಯತ್ನವನ್ನು ಕವಿತೆಯಲ್ಲೇ ಮಾಡುತ್ತಾನೆ. ಬದುಕನ್ನು ಪ್ರೀತಿಸುತ್ತಾನೆ. ಬದುಕುವವರಿಗೆ positive energy ಕೊಡುತ್ತಾನೆ. ಖುಷಿಯ ಮೂಲದ ಹುಡುಕಾಟ ನಡೆಸುತ್ತಾನೆ.
ಎಲ್ಲಿದೆ ಖುಷಿ?
ಅಧಿಕಾರದಲ್ಲಿ? ಶ್ರೀಮಂತಿಕೆಯಲ್ಲಿ? ಖ್ಯಾತಿಯಲ್ಲಿ?  No way. ಖುಷಿಯಿರುವುದು ಬದುಕಿನ ಸಣ್ಣ ಪುಟ್ಟ ಸಂಗತಿಗಳನ್ನು ಆಪ್ತತೆಯಿಂದ ಅನುಭವಿಸುವುದರಲ್ಲಿ. ಬಿದ್ದವನ ಎತ್ತಿ ಗುರಿ ಮುಟ್ಟಿಸುವಂತಹ ಪರೋಪಕಾರಗಳಲ್ಲಿ. ಖಿನ್ನತೆ ಕಾಡಿದಾಗಲೆಲ್ಲಾ ನಾನು ಈ ಈ ಸಾಲನ್ನು ಜೋರಾಗಿ ಓದಿಕೊಳ್ಳುತ್ತೇನೆ. ಅದು ನೀಡುವ ಆನಂದ, ಸಾಂತ್ವನ ಅನುಭವಿಸಿಯೇ ತಿಳಿಯಬೇಕು. ಇಕ್ಬಾಲರ ಕವಿತೆಗಳನ್ನು ಓದಲು ಉರ್ದು ಅರ್ಥವಾಗಲೇಬೇಕಿಲ್ಲ. ಅರ್ಥ ಬೇಕೇ ಬೇಕು ಎಂದೆನಿಸಿದಾಗ ನನ್ನ ಮಟ್ಟಿಗೆ  ಪುನಿತ್ ಅಪ್ಪು ಇದ್ದಾರೆ. ಅವರ ಫೇಸ್ಬುಕ್ ಗೋಡೆಗೆ ಹೋದರೆ ಅಲ್ಲಿ ಇಕ್ಬಾಲರ ಬಹಳಷ್ಟು ಕವಿತೆಗಳು ಸಿಗುತ್ತವೆ.  ಇಕ್ಬಾಲರ, ಗಾಲಿಬರ ಅನೇಕ ಕವಿತೆಗಳನ್ನು ಕನ್ನಡಕ್ಕೆ ತರುವ ಮಹತ್ವದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರ ಅನುವಾದವನ್ನು ಓದುವುದೇ ಒಂದು ಚಂದ. ಈ ಮೇಲೆ ಉಲ್ಲೇಖಿಸಿದ ಸಾಲಿನ ಭಾವಾನುವಾದವೂ ಅವರದ್ದೇ. ಇಕ್ಬಾಲರ ಕವನಗಳನ್ನು ತಮ್ಮದೇ ಸ್ವಂತ ಕವಿತೆ ಎಂಬಷ್ಟು ಆಪ್ತವಾಗಿ ಕನ್ನಡೀಕರಿಸುವ ಛಾತಿ ಅವರಿಗಿದೆ.

ಈ ನಡುವೆ `ಮತ್ತೇರಿಸಿದ ಮೇಲೆ ದೂಡಿ ಹಾಕುವವರೇ ಎಲ್ಲಾ..’ ಎಂದರೇನೆಂದು ಯೋಚಿಸುತ್ತಿದ್ದೆ. ಉರ್ದು, ಪರ್ಷಿಯನ್ ಕವಿತೆಗಳಲ್ಲೇಕೆ `ಶರಾಬು’, ‘ಮತ್ತು’, ‘ಮಧುಪಾತ್ರೆ’ ಮೊದಲಾದ ರೂಪಕಗಳು ಪದೇ ಪದೇ ಬಂದು ಕಾಡುತ್ತವೆ?  `ಮರಣವೆಂಬ ಮಧುಸುರಿಯುವವನಿಂದ ಬೆಳಗಿನ ಮಧು ಕುಡಿಯುವ ಕರ್ಮ!'(ಅನುವಾದ: ಪುನೀತ್ ಅಪ್ಪು) ಎಂಬುದು ಇಕ್ಬಾಲರ ಇನ್ನೊಂದು ಕವಿತೆಯ ಸಾಲು. ಇಲ್ಲಿ ಕವಿಗೆ ಮರಣವೇ ಮಧು!  ಅವರ ‘ಮೋಟಾರು’ ಕವನದಲ್ಲಿ `ಕೆಂಡದೊಳಗಿಂದ ಧಗಧಗವಾಗಿ
ಮಧುಪಾತ್ರೆಯೂ ಸಾಗಿದರು ಕೂಡ/ಮಧುಬಟ್ಟಲಿನಿಂದ ಸುರೆ / ಹರಿಯುತಿರುವ ವೈಖರಿಯೇ ಮೌನ’! ಎಂದು ಮೌನಕ್ಕೂ ಸುರೆಗೂ ತಳುಕು ಹಾಕಲಾಗಿದೆ. ಸೂಫಿಗಳಿಗೆ ಮೌನವೇ ಒಂದು ಸುರೆ ಎಂದು ಯೋಚಿಸುವಾಗ ಏನೇನೋ ಹೊಳೆಯುತ್ತದೆ.  ಆದರೆ, ಇಲ್ಲಿ ಭಾವನೆಗಳಲ್ಲಿ ಕುದಿತವಿದೆ. ಕೆಂಡವಿದೆ. ಧಗಧಗವಿದೆ. ಆನಂತರ ಮಧು ಬಟ್ಟಲಿನಿಂದ ಸುರೆ ಹರಿಯುತ್ತದೆ. ಮೌನ ಒಡಮೂಡುತ್ತದೆ.
ಗಾಲಿಬ್‌ನ ಕವಿತೆಗಳುದ್ದಕ್ಕೂ ಮಧು, ಮಧು ಬಟ್ಟಲು ಕಾಣಿಸಿಕೊಳ್ಳುತ್ತದೆ.  ಅಗಲಬೇಕೆಂಬ ಇರಾದೆಯಿದ್ದೂ, ಅಗಲಲಾರದ ಸಖಿಯ ರೂಪಕವೇ ಮಧು, ಶರಾಬು ಇತ್ಯಾದಿ? ಪ್ರೇಮದ ಆತ್ಯಂತಿಕ ಸ್ಥಿತಿಯನ್ನು ವರ್ಣಿಸಲಾಗದ ಅಸಹಾಯಕತೆಯಲ್ಲಿ ‘ಮತ್ತು’ ಅಂದುಬಿಟ್ಟರೆ ಉರ್ದು ಕವಿಗಳು? ಅಥವಾ ಕುಡುಕನೊಬ್ಬ ಮಧುಬಟ್ಟಲ ಮುಂದೆ ಪ್ರಜ್ಞೆ ಕಳೆದುಕೊಳ್ಳುವಂತೆ ಭಕ್ತಿಯ ನಶೆಯಲ್ಲಿ ತಾನು ದೇವನ ಮುಂದೆ ಪ್ರಜ್ಞಾಹೀನನಾಗಿರುವ ಸ್ಥಿತಿಯನ್ನು ಶರಾಬಿನ ರೂಪಕದ ಮೂಲಕ ಕವಿ ಹೇಳುತ್ತಿದ್ದಾನೆಯೇ?  ಗೊತ್ತಿಲ್ಲ.  ಕವಿತೆಗಳಲ್ಲಿ ಸಾಮಾನ್ಯ ಪದವೂ ವಿಶೇಷ ಅರ್ಥವನ್ನು ಕೊಡಬಲ್ಲುದು. ಹಾಗೆಯೇ, ವಿಶೇಷ ಪದಗಳೂ ಸಾಮಾನ್ಯ ಅರ್ಥವನ್ನು ಕೊಡಬಹುದು. ಕವಿತೆಯೆಂದರೆ, ಬದುಕಿನ ತಿರುಗು ಮುರುಗು ಕನ್ನಡಿ. ಆ ಕನ್ನಡಿಯೊಳಗೆ ಕಾಣುವುದೆಲ್ಲವೂ ಅರ್ಥವಾಗಬೇಕೆಂದಿಲ್ಲ.  ಬದುಕನ್ನೇ ಅರ್ಥ ಮಾಡಿಕೊಳ್ಳುವುದು ಕಷ್ಟವಾದಾಗ ಅದರ ಪ್ರತಿಬಿಂಬವಾದ ಕವಿತೆಯನ್ನು ಅರ್ಥ ಮಾಡಿಕೊಳ್ಳಲೇಬೇಕೆಂಬ ಹಠವೇಕೇ? ತೀವ್ರ ಭಾವನೆಗಳ ಸಹಜ ಹರಿವು ಕವಿತೆಯೆಂದಾಗ, ಅರ್ಥವೂ ಸಹಜವಾಗಿ ದಕ್ಕಬೇಕಲ್ಲ ಎಂದು ನನ್ನ ಕವಿ ಗೆಳೆಯ ಕೇಳುತ್ತಾನೆ. ಅವನ ಮಾತನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಿಲ್ಲ. ಮತ್ತೆ ಮತ್ತೆ ಓದಿಕೊಂಡು ಕವಿತೆಯ ಬಿಲದೊಳಗೆ ಅರ್ಥದ ಇಲಿಯನ್ನು ಹುಡುಕುವುದು ತಪ್ಪೇನಲ್ಲ.
ರೂಮಿಯ ಕವಿತೆಗಳನ್ನು ಓದುವಾಗ ಹೀಗಾಗುತ್ತದೆ. ಅಲ್ಲಿ ಅರ್ಥದ ಹುಡುಕಾಟ ಎಂಬುದು ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’ ಎಂಬ ಇಲಿಗಳ ಜೀವನ್ಮರಣದ ಪ್ರಶ್ನೆಯಷ್ಟೇ ಕಷ್ಟಕರವಾದುದು.
“ಕಳೆದ ರಾತ್ರಿ ಗುರುವಿನೊಡನೆ ಬೇಡಿದೆ,
ಜಗತ್ತಿನ ಆ ಮಹಾರಹಸ್ಯವನ್ನು ಅರುಹು,
ಆತ ಮೆಲ್ಲನೇ, ಅತೀ ಮೆಲ್ಲನೇ ಪಿಸುಗುಟ್ಟಿದ,
ಶ್ಶ್…! ಸುಮ್ಮನಿರು, ಮಹಾರಹಸ್ಯವನ್ನು
ಹೇಳಲಾಗದು, ಅದನ್ನು ಮೌನದಲ್ಲಿ ಸುತ್ತಿಡಲಾಗಿದೆ!”(ರೂಮಿ: ಅನುವಾದ ಪುನೀತ್ ಅಪ್ಪು). ಈ ಸಾಲುಗಳ ಅರ್ಥವೇನೆಂದು ಬಹಳಷ್ಟು ದಿನಗಳಿಂದ ಯೋಚಿಸುತ್ತಿರುವೆ. ಮಹಾರಹಸ್ಯ ಎಂದ ಮೇಲೆ ಅದನ್ನು ಯಾಕೆ ಹೇಳಬೇಕು? ಹೇಳಿದರೆ ಅದು ‘ರಹಸ್ಯ’ವೆಂಬ ತನ್ನ  ಅತ್ಯಮೂಲ್ಯ ಗುಣವನ್ನು ಕಳೆದುಕೊಳ್ಳುವುದಿಲ್ಲವೇ? ಅನ್ನೋದು ಕವಿಯ ಭಾವವಾಗಿರಬಹುದು. ನನಗೆ ರೋಮಾಂಚನವಾಗಿದ್ದು, ‘ಮೌನದಲ್ಲಿ ಸುತ್ತಿಡಲಾಗಿದೆ’ ಎಂಬ ರೂಮಿಯ ಅದ್ಭುತ ರೂಪಕವನ್ನು ಓದಿದಾಗ. ಮಹಾರಹಸ್ಯ ಮತ್ತು ಮೌನ ಎರಡು ಕೂಡ ಭಾಷೆಗೆ ಅತೀತವಾದುದು. ಈ ಸಾಲುಗಳು ಎಷ್ಟು ನಾಟಕೀಯವಾಗಿದೆ ಎಂದರೆ, ಗುರುವಿನ ಉತ್ತರ ನೋಡಿ; ಅಂತಹ ಪ್ರಶ್ನೆಗಳನ್ನು ಕೇಳಕೂಡದು. ಯಾಕೆಂದರೆ, ಅದಕ್ಕೆ ಉತ್ತರವಿಲ್ಲ. ಶಿಷ್ಯನ ಪ್ರಶ್ನೆ ಕೇಳಿ ಗುರು ಆಘಾತಕ್ಕೊಳಗಾಗುತ್ತಾನೆ. ‘ಶ್..ಸುಮ್ಮನಿರು’ ಎಂದು ಗದರಿಸುತ್ತಾನೆ. ಆನಂತರ ಪ್ರೀತಿಪೂರ್ವಕವಾಗಿ ಆತನನ್ನು ತನ್ನ ಸಮೀಪಕ್ಕೆ ಆಹ್ವಾನಿಸಿ, ಗುಟ್ಟು ಹೇಳುವವನಂತೆ, ಪಿಸುಗುಟ್ಟಿ ಒಂದು ಸತ್ಯವನ್ನು ಹೇಳುತ್ತಾನೆ. ಅದನ್ನು ಹೀಗೆ ಹೇಳಬಹುದು; ‘ಮಹಾ ರಹಸ್ಯವನ್ನು ಮಾತಿನಲ್ಲಿ ಹುಡುಕಬೇಡ. ಅದು ಮೌನದ ಗರ್ಭದಲ್ಲಿ ಅಡಗಿದೆ. ಅದನ್ನು ನೀನು ಮೌನದಲ್ಲೇ ಹುಡುಕಬೇಕು. ಧ್ಯಾನ ಮಾಡಬೇಕು. ಸಾಧನೆಗಳಲ್ಲಿ ಮುಳುಗಬೇಕು. ತಪಸ್ವಿಯಾಗಬೇಕು. ಆ ಮಹಾ ರಹಸ್ಯದ ಜೊತೆಗೆ ಮೌನದ ಮೂಲಕ ತಾದಾತ್ಮ ್ಯವನ್ನು ಸಾಧಿಸಿಕೊಳ್ಳಬೇಕು. ಆ ಮಹಾ ರಹಸ್ಯದ ಜೊತೆ ಪ್ರೇಮದಲ್ಲಿ ಒಂದಾಗಬೇಕು’ ಹೀಗೆ ಏನೇನೋ ಹೊಳೆಯುತ್ತದೆ.  ಶ್ರೇಷ್ಠ ಕಾವ್ಯಗಳು ಮಾತ್ರ ಇಂತಹ ಸಂಗತಿಗಳನ್ನು ಹೇಳಬಲ್ಲುದು.


ಹಾಗೆ ನೋಡಿದರೆ, ಅರ್ಥದ ಬೇಲಿಯನ್ನು ದಾಟಿ ಇಶ್ಖನ್ನು ನಶೆಯ ಮಟ್ಟಕ್ಕೆ ಏರಿಸಿದವರು ಸೂಫಿ ಕವಿಗಳು. ಅವರು ಪರಿತ್ಯಕ್ತ, ಭಕ್ತಿಯ, ಪ್ರೇಮದ ನಶೆಯಲ್ಲಿ ಹೇಳಿದ್ದನ್ನು ಓದೋದು ಎಷ್ಟು ಚಂದ! ಆದರೆ, ಅರಗಿಸಿಕೊಳ್ಳೋದು ಎಷ್ಟು ಕಷ್ಟ! ಆದ್ದರಿಂದಲೇ ಕವಿಗಳು ಬದುಕಿನ ಕನ್ನಡಿಯನ್ನು ತಲೆ ಕೆಳಗು ಮಾಡಿ ನೋಡುತ್ತಾರೆ. ಅವರಿಗೆ ಅಲ್ಲಿ ಏನೋ ಕಾಣುತ್ತದೆ. ಏನೋ ಕೇಳಿಸುತ್ತದೆ. ಎಲ್ಲರಿಗೂ ಹೇಳಬೇಕೆಂಬ ತುಡಿತದಲ್ಲಿ ಅಥವಾ ಕಂಡದ್ದರ, ಕೇಳಿದ್ದರ ಭಾರದಿಂದ ಬಿಡುಗಡೆ ಪಡೆಯಲು ಕವಿತೆ ಬರೆಯುತ್ತಾರೆ. ಪ್ರತಿಭೆಯಿದ್ದವನು ಕವಿತೆಯ ಮೂಲಕ ಓದುಗರಿಗೆ ವಿಶಿಷ್ಟ ರಸಾನುಭವವನ್ನು ನೀಡುತ್ತಾನೆ. ಅದೂ ಒಂದು ರೀತಿಯ ‘ಮತ್ತೇ’. ಅತ್ಯುತ್ತಮ ಕವಿತೆ ಓದುತ್ತಾ ರಸಾನುಭವದ ಮಧು ಹೀರುವವರಿದ್ದಾರೆ.  ಕವಿತೆ ಓದುವವನಿಗೆ ಕವಿತೆಯ ಮೇಲೆ ಮಮತೆ ಇರಬೇಕು ಅನ್ನೋದು ಎಷ್ಟು ನಿಜ!
ಮೇಲಿನ ಸಾಲಿನಲ್ಲಿರುವ ‘ಮತ್ತು’  ಶರಾಬಿನದ್ದೇ ಆಗಿರಬೇಕಿಲ್ಲ. ಅಧಿಕಾರದ ಅಮಲಾಗಿರಬಹುದು. ಶ್ರೀಮಂತಿಕೆಯ ದಾಹವಾಗಿರಬಹುದು. ಪ್ರೇಮದ ನಶೆಯಾಗಿರಬಹುದು. ‘ಮತ್ತೇರಿಸಿದ’ ಮೇಲೆ ದೂಡಿ ಹಾಕುವವರ ಸಂಖ್ಯೆ ನಾಯಿಕೊಡೆಯಂತೆ ಬೆಳೆಯುತ್ತಿರುವ ಕಾಲಘಟ್ಟ ಇದು. ಅಧಿಕಾರದ ಮದದ ವಿಮರ್ಶೆ ಇಲ್ಲಿ ಇದೆಯಾ? ಶ್ರೀಮಂತಿಕೆಯ ಹಪಾಹಪಿಯಲ್ಲಿ ಕೆಳಗಿರುವವರ ತುಳಿವ ಜಾಢ್ಯದ ಬಗ್ಗೆ ಕವಿ ಹೇಳುತ್ತಿದ್ದಾರಾ? ಪ್ರೇಮದಲ್ಲಿ ಕುರುಡಾದವನು ಕತ್ತಲಲ್ಲಿ ನಡೆದು ಎಡವಿ ಬೀಳುವುದರ ಬಗ್ಗೆ ಕವಿ ಮಾತನಾಡುತ್ತಿದ್ದಾರಾ?  ಗೊತ್ತಿಲ್ಲ. ಕವಿತೆಯ ಅರ್ಥ ಇದಮಿತ್ಥಂ ಎನ್ನುವಂತಿಲ್ಲ. ಒಬ್ಬೊಬ್ಬ ಓದುಗರಿಗೆ ಅರ್ಥದ ಒಂದೊAದು ದಿಗಂತವನ್ನು ತೆರೆದು ತೋರುವುದೇ ಕವಿತೆ.
ಇಲ್ಲಿ ನಾನು ಕವಿತೆಯ ವಿಮರ್ಶೆ ಮಾಡುತ್ತಿಲ್ಲ. ಕವಿತೆಯ ಒಂದು ಸಾಲು ಅಥವಾ ಒಂದಿಡೀ ಕವಿತೆ ನಮ್ಮನ್ನು ಆವರಿಸಿಕೊಳ್ಳುವ, ಸಂತೈಸುವ, ಹೊಸದೇನನ್ನೋ ಹೊಳೆಯಿಸುವುದರ ಬಗ್ಗೆ ಹೇಳುತ್ತಿದ್ದೇನೆ. ಒಳ್ಳೆಯ ಕವಿತೆಯನ್ನು ಓದಿದ ಮೇಲೆ ಮನಸಿಗೇನೋ ಹುರುಪು, ಖುಷಿ, ಕಂಪು. ಕೆಲವೊಂದು ಕವಿತೆಗಳು ಕಂಗೆಡಿಸುವುದೂ ಇದೆ. ನೆಲಕ್ಕೆ ಬೇರು ಬಿಟ್ಟಂತೆ ಕುಳಿತವರನ್ನು,  ಪರಿಸರ ಮರೆತು ಸುಖ ನಿದ್ರೆಯಲ್ಲಿ ಮುಳುಗಿರುವವರನ್ನು ಎಬ್ಬಿಸಿ, ನಾಗರಿಕ ಕರ್ತವ್ಯ ಪ್ರಜ್ಞೆಯನ್ನು ಬಿತ್ತುವುದಿದೆ.
ಕವಿತೆ ಓದುವುದರ ಉದ್ದೇಶವೂ ಇದೇ ಇರಬಹುದಾ? ಕನಿಷ್ಠ ಪಕ್ಷ ನಮ್ಮ ಮನಸ್ಸನ್ನು ತಟ್ಟದಿದ್ದರೆ ಅದು ಎಂತಹ ಗತಿಗೆಟ್ಟ ಕವಿತೆಯಾಗಿರಬಹುದು? ದುರ್ಬಲನ ನೋವನ್ನು ತನ್ನದಾಗಿಸಿಕೊಳ್ಳದ ಕವಿ ಎಂತಹ ಮಾನಗೆಟ್ಟ ಕವಿ.
‘ಬಿದ್ದವನ ಎತ್ತಿ ಗಮ್ಯ ಸ್ಥಾನಕೆ ಸೇರಿಸದ’ ಬದುಕು ಬದುಕೇ ಅಲ್ಲ, ಅಂತಹ ಬದುಕು ಹುಟ್ಟಿಸಿದ ಕವಿತೆ ಕವಿತೆಯೇ ಅಲ್ಲ.
ಇಕ್ಬಾಲರು ಇಷ್ಟನ್ನು ಹೇಳಿರಬಹುದು ಅಂತ ನಂಬಿಕೊಂಡಿದ್ದೇನೆ.


ಲೇ: ಸ್ವಾಲಿಹ್‌ ತೋಡಾರ್‌

ಕೇಂಬ್ರಿಡ್ಜ್ ಮಸೀದಿಯ ಉದ್ಯಾನವನದ ಆನುಭಾವಿಕ ಒಳನೋಟಗಳು

ಹಸಿರು ಬಣ್ಣ ಇಸ್ಲಾಮಿನೊಂದಿಗೆ ತಳುಕುಹಾಕಿಕೊಂಡದ್ದು ಒಂದು ಕಾಕತಾಳೀಯ ವಿದ್ಯಮಾನವೇನಲ್ಲ.ಪವಿತ್ರ ಖುರ್ಆನಿನಲ್ಲಿ ಸ್ವರ್ಗೀಯ ಉದ್ಯಾನಗಳನ್ನು ಪರಿಚಯಿಸುವಾಗ ಹಸಿರು ಬಣ್ಣವು ಹಲವೆಡೆ ಉಲ್ಲೇಖಿಸಲ್ಪಟ್ಟಿದೆ. ಹಸಿರೆನ್ನುವುದು ಸಸ್ಯ ವರ್ಗಗಳ ಸಾಮಾನ್ಯ ವರ್ಣವೆಂಬುವುದಕ್ಕಿಂತ ಮಿಗಿಲಾಗಿ ಅದು ಬೆಳವಣಿಗೆ, ಭರವಸೆ, ಫಲವತ್ತತೆ ಎಂಬಿತ್ಯಾದಿಗಳನ್ನು ಸೂಚಿಸುತ್ತದೆ.ಉಳಿದ ಯಾವ ಬಣ್ಣಕ್ಕಿಂತಲೂ ಮನೆ,ಮನ ತಂಪಾಗಿಸಲು ಹಸಿರು ಬಣ್ಣಕ್ಕೆ ಸುಲಭ ಸಾಧ್ಯ.ಪ್ರವಾದಿ ಮುಹಮ್ಮದರ ಕಾಲದಲ್ಲಿ,ಅಂದರೆ ಆರನೇ ಶತಮಾನದಲ್ಲಿ ಇಂತಹ ಉದ್ಯಾನವನದ ಪರಿಕಲ್ಪನೆಗಳು ಅರೇಬಿಯಾದಲ್ಲಿರಲಿಲ್ಲ.ಕೇವಲ ಖರ್ಜೂರ ಮರಗಳು ಹಾಗೂ ತೊರೆಗಳಾಗಿತ್ತು ಅಂದಿನ ಉದ್ಯಾನಗಳ ಪ್ರಮುಖ ವಿನ್ಯಾಸಗಳು.ಇಸ್ಲಾಮಿಕ್ ನಾಗರಿಕತೆಯು ಅರೇಬಿಯಾವನ್ನು ದಾಟಿ ಇತರ ರಾಷ್ಟ್ರಗಳತ್ತ ವ್ಯಾಪಿಸುವವರೆಗೂ ಇದಕ್ಕೆ ಪ್ರಾಧಾನ್ಯವಿರಲಿಲ್ಲವೆಂದೇ ಹೇಳಬಹುದು.ಮುಖ್ಯವಾಗಿ, ಇಸ್ಲಾಮಿಕ್ ನಾಗರಿಕತೆಯು ಪರ್ಷಿಯಾ ತಲುಪುವುದರೊಂದಿಗೆ ಇಸ್ಲಾಮಿಕ್ ವಿನ್ಯಾಸದ ಉದ್ಯಾನವನ(Islamic garden) ರೂಪುಗೊಂಡಿತು. ಬಳಿಕ ಪರ್ಷಿಯನ್ ಪರಂಪರೆಯಲ್ಲಿ ಬರುವ ರಾಜಕುಟುಂಬದ ಬೇಟೆ ವಿನೋದಗಳಿಗಾಗಿ ನಿರ್ಮಿಸಲಾಗುತ್ತಿದ್ದ ಕ್ರೀಡಾ-ಉದ್ಯಾನವನಗಳನ್ನು (ಇದನ್ನು ಪರ್ಶಿಯನ್ ಭಾಷೆಯಲ್ಲಿ ‘ಪೈರೀದೇಸ’ ಎನ್ನುತ್ತಾರೆ. ಇಂಗ್ಲೀಷಿನ paradise ಎಂಬ ಪದದ ಮೂಲವೂ ಪ್ರಸ್ತುತ ಪರ್ಶಿಯನ್ ಪದವೇ ಆಗಿದೆ)‌ ಇಸ್ಲಾಂ ತನ್ನದಾಗಿಸಿಕೊಳ್ಳುತ್ತದೆ ಮತ್ತು ಅವುಗಳಿಗೆಲ್ಲಾ ಹೊಸತೊಂದು ಆಧ್ಯಾತ್ಮಿಕ ಆಯಾಮವನ್ನು ನೀಡುತ್ತದೆ. ಪರ್ಶಿಯಾದ ಸಸಾನಿಡ್(sassanid) ಸಾಮ್ರಾಜ್ಯವನ್ನು ಮತ್ತು ಅಕ್ಕೀಮೆನಿಡ್(achaemenid) ನಾಗರಿಕತೆಯನ್ನು ಸೋಲಿಸಿದ ಬಳಿಕ ಅತಿನೂತನವಾದ ನೀರಾವರಿ ವ್ಯವಸ್ಥೆಗಳು ಸ್ಥಾಪಿತವಾದ ಬೆನ್ನಿಗೆ ಇಸ್ಲಾಮಿಕ್ ಉದ್ಯಾನವನವು ಹೆಚ್ಚಿನ ಪ್ರಚಾರವನ್ನು ಪಡೆಯತೊಡಗಿತು.
ನನಗೆ ಉದ್ಯಾನವನಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿದ್ದು ಲಂಡನಿನ ರಾಯಲ್ ಕಾಲೇಜ್ ಆಫ್ ಆರ್ಟ್ಸ್ ನಲ್ಲಿ(RCA)‌ ವಿದ್ಯಾರ್ಥಿಯಾಗಿದ್ದಾಗ. ಕೇಂಬ್ರಿಡ್ಜ್ ಮಸೀದಿಯ ಜ್ಯಾಮಿತಿಯ ವಿನ್ಯಾಸದಲ್ಲಿರುವ(Geometric design)ಅಲಂಕಾರಗಳ ಕಾರ್ಯಯೋಜನೆ ಸಿದ್ಧಡಿಸಿದ ಕೀಥ್ ಕ್ರಿಚ್ಲೋ(keith critchlow)ರ ಗರಡಿಯಲ್ಲಾಗಿತ್ತು ನನ್ನ ಅಧ್ಯಯನ ಪ್ರಾರಂಭಗೊಂಡದ್ದು.ಇಸ್ಲಾಮಿಕ್ ಅಲಂಕಾರ ರೀತಿಗಳ ಮೂಲ ಭಾಷೆಗಳಲ್ಲೊಂದಾಗಿ ಪ್ರಸಿದ್ಧಿ ಪಡೆದ ಜ್ಯಾಮಿತೀಯ ಅಲಂಕಾರ ರೀತಿಯ ಕುರಿತು ಅವರಲ್ಲಿ ಪ್ರಾವೀಣ್ಯತೆ ಇದ್ದಿತು. RCA ಯಲ್ಲಿ ಇಸ್ಲಾಮಿಕ್ ಕಲೆಯ ಅರ್ಥಗಳನ್ನೂ ಅದರ ಆಳವಾದ ಸೌಂದರ್ಯವನ್ನೂ ನನಗೆ ಕಲಿಸಿಕೊಟ್ಟರು.ಇಂತಹ ಇಸ್ಲಾಂ ಕೇಂದ್ರೀಕೃತ ಅಧ್ಯಯನಗಳ ಮೂಲಕ ನಾನೊಬ್ಬ ಮುಸ್ಲಿಮನಾದೆ.ಅದರೊಂದಿಗೆ ಬಾಲ್ಯದಲ್ಲಿ ನನಗಿದ್ದ ಉದ್ಯಾನವನಗಳೊಂದಿಗಿನ ಆಸಕ್ತಿಯನ್ನೂ,ಇಸ್ಲಾಮಿಕ್ ನಾಗರಿಕತೆ ಮತ್ತು ಅಧ್ಯಾತ್ಮಿಕತೆಯೊಂದಿಗಿರುವ ಹೊಸ ಉತ್ಸಾಹವನ್ನೂ ಒಂದೆಡೆ ಕೇಂದ್ರೀಕೃತಗೊಳಿಸಲು ಸಾಧ್ಯವಾಯಿತು ಎನ್ನಬೇಕು.‌ಬಳಿಕ 2011ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ವಿಭಾಗ ಉಪನ್ಯಾಸಕರಾದ ಡಾ.ಅಬ್ದುಲ್ ಹಕೀಂ ಮುರಾದ್ ಕೇಂಬ್ರಿಡ್ಜ್ ಮಸೀದಿಗೊಂದು ಉದ್ಯಾನವನವೆಂಬ ಚಿಂತನೆಯೊಂದಿಗೆ ನನ್ನನ್ನು ಭೇಟಿಮಾಡಿ ಆರ್ಥಿಕ ಸಹಾಯದ ಭರವಸೆಯನ್ನೂ ನೀಡಿದರು. ಇದರೆಡೆಯಲ್ಲೇ, ನನ್ನ ‘the art of islamic garden’ ಎಂಬ ಪುಸ್ತಕವೂ ಬಿಡುಗಡೆಗೊಂಡಿತು.ಆ ಮೂಲಕ ಯೂರೋಪ್ ಮತ್ತು ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಇಸ್ಲಾಮಿಕ್ ಅಲಂಕಾರ ರೀತಿಯಲ್ಲಿರುವ ಹಲವಾರು ಉದ್ಯಾನವನಗಳ ವಿನ್ಯಾಸ ಮಾಡಲು ನನಗೆ ಸಾಧ್ಯವಾಯಿತು.
ಕೇಂಬ್ರಿಜ್‌ ಮಸೀದಿ ಪರಿಸರ ಸ್ನೇಹಿ ಮಾರ್ಗಸೂಚಿಗಳನ್ನು ಅಕ್ಷರಶಃ ಪಾಲಿಸಿ ನಿರ್ಮಿಸಲಾದ ಯೂರೋಪಿನ ಪ್ರಪ್ರಥಮ ಕಟ್ಟಡವೆನಿಸುತ್ತದೆ. ಉದ್ಯಾನವನದ ಚೈತನ್ಯ ವಿನಿಯೋಗದಿಂದ ಹಿಡಿದು ರಚನಾತ್ಮಕ ತಂತ್ರಗಳವರೆಗೂ ಪ್ರತಿಯೊಂದು ವಿಷಯಗಳನ್ನು ಕೂಡಾ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿತ್ತು.ಇಸ್ಲಾಮಿಕ್ ಮಾದರಿಯಲ್ಲಿರುವ ಉದ್ಯಾನವನಗಳೆಲ್ಲವೂ ಶಾಂತ ವಾತಾವರಣವನ್ನು ಸೃಷ್ಟಿಸುವುದರಿಂದ ಕೇಂಬ್ರಿಡ್ಜ್ ನಂತಹ ನಗರ ವಲಯಗಳಿಗೆ ಇಂತಹ ಉದ್ಯಾನವನಗಳು ಸೂಕ್ತವೆನಿಸುತ್ತದೆ. ರಸ್ತೆ ಮತ್ತು ಮಸೀದಿಯ ಒಳಾಂಗಣದ ಮಧ್ಯೆಯಿರುವ ಸೀಮಿತ ಸ್ಥಳವನ್ನು ವಿನ್ಯಾಸಗೊಳಿಸಲು ನನ್ನಲ್ಲಿ ಕೇಳಿಕೊಂಡಿದ್ದರು. ಒಳಗಿನ ಪ್ರಧಾನ ಉದ್ಯಾನವನ ಇಸ್ಲಾಮಿಕ್ ಮಾದರಿಯಲ್ಲಿ ನಿರ್ಮಿಸಲಾಗಿದ್ದು, 30m × 30m ವಿಸ್ತೀರ್ಣ ಹೊಂದಿದೆ.

ಖುರ್ಆನಿನಲ್ಲಿ ಬಣ್ಣಿಸಲಾದ ಫಿರ್ದೌಸಿನ ಉದ್ಯಾನವನಗಳ ಕನಿಷ್ಠ ಅನುಭೂತಿಯನ್ನಾದರೂ ಈ ಉದ್ಯಾನದ ಸಂದರ್ಶಕರಲ್ಲುಂಟುಮಾಡಬೇಕೆಂಬ ಗುರಿ ನನ್ನದಾಗಿತ್ತು. ಲಂಡನ್ ನಗರದ ಸದ್ದು-ಗದ್ದಲಗಳಿಂದೆಲ್ಲಾ ಮುಕ್ತಿ ನೀಡಿ ನೋಡುಗರಿಗೆ ನವ ಹುರುಪನ್ನು ಹುಟ್ಟಿಸುವ ಮಟ್ಟಿಗೆ ಉದ್ಯಾನವನದ ಪ್ರಭಾವವು ಪಸರಿಸಬೇಕೆಂದು ನಾನು ಬಯಸಿದ್ದೆ. ಒಂದೇ ವೇಳೆ ಇಂಗ್ಲಿಷ್‌ ಜನತೆಗೆ ಇಸ್ಲಾಮಿಕ್ ವಿನ್ಯಾಸವನ್ನೂ ಪರಿಚಯಿಸುವ ಮತ್ತು ಇಂಗ್ಲೆಂಡಿನ ನಾಗರಿಕರಿಗೆ ಮುದ ನೀಡುವ ಏನಾದರೂ ನಿರ್ಮಿಸಬೇಕೆಂಬ ಇರಾದೆ ಕೂಡಾ ನಾನು ಭಾಗವಾಗಿರುವ Urquhart and hunt landscape studio ದ ನಿಷ್ಣಾತ ಸದಸ್ಯರಿಗಿತ್ತು. ಏತನ್ಮಧ್ಯೆ, ಇಲ್ಲಿನ ಪಾಶ್ಚಾತ್ಯ ಸಂದರ್ಭದೊಂದಿಗೆ ಪೌರಾತ್ಯ ತೋಟಗಾರಿಕಾ ವಿನ್ಯಾಸವನ್ನು ಸಂಯೋಜಿಸಲು ಸಾಧ್ಯವೆಂದು ಕ್ಯಾಂಬ್ರಿಜ್‌ ನಲ್ಲಿನ ಇತರ ಜನರಿಗೆ ತಿಳಿಸಲು ಈ ಮೂಲಕ ನಮಗೆ ಸಾಧ್ಯವಾಯಿತು

ಉದ್ಯಾನವನದ ಮೂಲಧಾತುಗಳು:
ಇಸ್ಲಾಮಿಕ್ ತೋಟಗಾರಿಕಾ ವಿಧಾನದ ಮೂಲಧಾತುಗಳು ಸಾರ್ವತ್ರಿಕ ಸ್ವಭಾವ ಇರುವಂತದ್ದು. ಈಜಿಪ್ಟಿನ ಕೈರೋದಲ್ಲಿ ಪ್ರಯೋಗಿಸಿದ ವಿಧಾನವನ್ನೆ ಇಂಗ್ಲೆಂಡಿನ ಕೇಂಬ್ರಿಡ್ಜ್‌ನಲ್ಲೂ ಮುಖ್ಯವಾಗಿ ಬಳಸಿದ್ದೆವು. ಇಸ್ಲಾಮಿಕ್ ಉದ್ಯಾನವನಗಳ ಅಂಶಗಳಲ್ಲೊಂದಾದ ಫೋರ್ ಫೋಲ್ಡ್ ಮಾದರಿ(four fold design)ಅಥವಾ ಚಹರ್ ಬಾಗ್ ಮಾದರಿ(ಪರ್ಷಿಯನ್ ಭಾಷೆಯಲ್ಲಿ ನಾಲ್ಕು ಉದ್ಯಾನಗಳು ಎಂದರ್ಥ) ಕ್ಯೇಂಬ್ರಿಡ್ಜ್‌ನಲ್ಲಿ ಮಾತ್ರವಲ್ಲ ವಿಶ್ವದ ವಿವಿಧೆಡೆಗಳಲ್ಲಿ ಹಲವು ರೀತಿಯಲ್ಲಿ ಬಳಸಿದ್ದನ್ನು ಕಾಣಬಹುದು.
ಕೇಂಬ್ರಿಜ್‌ ವಿಶ್ವವಿದ್ಯಾಲಯದ ಕಟ್ಟಡಗಳ ಅಂಗಣಗಳೂ ಪ್ರಸ್ತುತ ಚಹರ್ ಬಾಗ್ ಮಾದರಿಯಲ್ಲೇ ಇದೆ. ಮಧ್ಯಕಾಲೀನ ಯೂರೋಪಿನ ಕ್ರೈಸ್ತ ವಾಸ್ತುಶಿಲ್ಪಗಳಲ್ಲೂ ಈ ಮಾದರಿ ವ್ಯಾಪಕವಾಗಿ ಕಾಣಬಹುದು. ಸಂಪೂರ್ಣವಾಗಿಯೂ ಯೂರೋಪಿಯನ್ ಎಂದು ನಂಬಲಾದ ಕ್ಯೇಂಬ್ರಿಡ್ಜ್‌ನ ಪರಂಪರಾಗತ ವಾಸ್ತುಶಿಲ್ಪದಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ಪ್ರಭಾವ ಕಿರಿದಲ್ಲವೆಂಬುವುದು ಸಾರಾಂಶ. ಇಸ್ಲಾಮಿಕ್ ಉದ್ಯಾನವನದ ಮತ್ತೊಂದು ಪ್ರಮುಖ ಘಟಕವಾಗಿದೆ ಆವರಣ(enclosure).ಇದು ಹೊರಗಿನ ವಿಪರೀತ ಬಿಸಿಲು ಹಾಗೂ ಧೂಳುಗಾಳಿಗಳನ್ನೆಲ್ಲಾ ತಡೆದು ಒಳಾಂಗಣವನ್ನು ಸಂರಕ್ಷಿಸಿ ಬೆಳವಣಿಗೆಗೆ ಅನುಕೂಲವಾದ ಸುರಕ್ಷಿತ ವಲಯ(sanctuary)ವನ್ನುಒದಗಿಸುವುದರಿಂದ enclosure ಎಂಬುವುದು ಆಶಯ ಪ್ರಧಾನ ಎನಿಸಿದೆ. ಕೇಂಬ್ರಿಡ್ಜ್ ನ ವಿಷಯಕ್ಕೆ ಬಂದರೆ ಹೊರಭಾಗವು ಜನನಿಬಿಡತೆ, ಮಾಲಿನ್ಯಗಳಿಂದ ತುಂಬಿದ್ದರೂ ಈ ಆವರಣ(enclosure) ಮೂಲಕ ಒಳಗೆ ಹಚ್ಚ ಹಸಿರಾದ ಉದ್ಯಾನವನವೊಂದರ ಬೆಳವಣಿಗೆ ಸಾಧ್ಯವಾಗುತ್ತದೆ. ಅದರಿಂದಲೇ ಇದನ್ನೊಂದು ಆಂತರಿಕ ಉದ್ಯಾನವೆನ್ನಬಹುದು.
ಆಂತರಿಕ ಉದ್ಯಾನವೆಂಬ ಈ ಪರಿಕಲ್ಪನೆ ಖಂಡಿತವಾಗಿಯೂ ಗಮನಾರ್ಹ. ಸೂಫಿ ಕಾವ್ಯಲೋಕದ ಅಗ್ರಗಣ್ಯ ಜಲಾಲುದ್ದೀನ್ ರೂಮಿ(ರ)ರು ಹೇಳಿದಂತೆ “ನಿಜವಾದ ಉದ್ಯಾನವನದ ಪರಿಣಾಮಗಳೆಲ್ಲವೂ ಮಾನವ ಹೃದಯಗಳಲ್ಲೇ ಅಡಗಿರುವುದು,ಹೊರಗಲ್ಲ”.ಕೊನೆಯಿಲ್ಲದ ನಮ್ಮ ಸೋಮಾರಿ ಚಿಂತನೆಗಳಿಂದ ಸಂತಸಗೊಳಿಸಲು ಆತ್ಮವೆಂಬ ಹೂದೋಟವನ್ನು ಪರಿಪಾಲಿಸಬೇಕಿದೆ. ಇಸ್ಲಾಮಿನಲ್ಲಿ ಇದಕ್ಕಿರುವ ದಾರಿಗಳು ಪ್ರಾರ್ಥನೆ, ಧ್ಯಾನ, ದೈವಿಕ ಚಿಂತನೆ ಎಂಬಿತ್ಯಾದಿಗಳು. ಸೂರಃ ಅರ್ರಹ್ಮಾನಿನಲ್ಲಿ ನಾಲ್ಕು ಸ್ವರ್ಗೀಯ ಆನಂದಗಳ ಕುರಿತು ಪರಾಮರ್ಶೆಯಿದೆ; ಪರಂಪರಾಗತ ಚಹರ್ ಬಾಗ್ ಮಾದರಿಯ ಉತ್ಪತ್ತಿ ಮತ್ತು ಸ್ಪೂರ್ತಿ ಇದರಿಂದಲೇ. ಸ್ಪೇನ್ ನ ಅಲ್ ಹಂರಾದ Geralife gardens,ಭಾರತದ ಮುಘಲ್ ಸ್ಮಾರಕಸೌಧಗಳು, ಇರಾನಿನ ಫಿನ್ ಗಾರ್ಡನ್, ಚಹಲ್ ಸುತುನ್ ಎಂಬಿವುಗಳು ಚಹರ್ ಬಾಗ್ ಮಾದರಿಗೆ ಅತ್ಯುತ್ತಮ ಉದಾಹರಣೆಗಳಾಗಿವೆ.

ಇಸ್ಲಾಮಿಕ್ ತೋಟಗಾರಿಕಾ ವಿಧಾನದ ಇತರ ಪ್ರಮುಖ ಘಟಕಗಳಾಗಿವೆ ನೀರು ಮತ್ತು ನೆರಳು.ನೀರು ಹಾಗೂ ಹರಿಯುವ ನದಿಗಳನ್ನು ಪರಾಮರ್ಶಿಸಿದ ಹಲವಾರು ಖುರ್ಆನ್ ಸೂಕ್ತಗಳಿವೆ.ನೀರಿನ ಪ್ರಾಮುಖ್ಯತೆ ಆಧ್ಯಾತ್ಮಿಕವಾಗಿಯೂ ಭೌತಿಕವಾಗಿಯೂ(physical)ಗ್ರಹಿಸಬಹುದು.ಕಾರಣ, ಶಾಶ್ವತವಾಗಿ ಹರಿಯುವ ನದಿಗಳು ಭೂಮಿಯ ಸಕಲ ಜೀವಜಾಲಗಳ ಉತ್ಪತ್ತಿಯನ್ನು ಪ್ರತಿನಿಧೀಕರಿಸುತ್ತದೆ. ಕೆಲವು ಸಮಯಗಳಲ್ಲಿ ಅವು ಶಾಂತವೂ ಕೆಲ ವೇಳೆಗಳಲ್ಲಿ ಪ್ರಕ್ಷುಬ್ಧವೂ ಆಗಿರುತ್ತದೆ. ಆದುದರಿಂದ ಅದನ್ನು ಮಾನವರ ಆತ್ಮದೊಂದಿಗೆ ಹೋಲಿಸಬಹುದು. ದೇವರ ಇಷ್ಟದಾಸರಿಗೆ ಲಭಿಸುವ ದೈವಿಕ ಜ್ಞಾನದೊಂದಿಗೆ ಶುದ್ಧ ನೀರನ್ನು ಹೋಲಿಸುವ ಪರಿಪಾಠ ಖುರ್ಆನಿನಲ್ಲಿ ಕಾಣಬಹುದು‌.ಖುರ್ಆನ್ ಹೇಳಿದ ಸ್ವರ್ಗೋದ್ಯಾನಗಳಲ್ಲಿ ಪ್ರತಿಯೊಂದರಲ್ಲೂ ಮಧ್ಯಭಾಗದಲ್ಲಿ ಜಲಮೂಲಗಳಿಂದ ನಾಲ್ಕು ನದಿಗಳು ಹರಿಯುತ್ತದೆ.ಆದರೆ ಭೌಮೋದ್ಯಾನವನಗಳ ನೀರಿನ ಅಲಭ್ಯತೆ ಮತ್ತು ಪರಿಪಾಲನಾ ವೆಚ್ಚ ಪರಿಗಣಿಸಿ ನದಿಗಳಿಗೆ ಬದಲಾಗಿ ಇಲ್ಲಿರುವುದು ನಾಲ್ಕು ಕಾಲುದಾರಿಗಳು.ನೀರು,ನೆರಳು ಎಂಬೀ ಅಂಶಗಳು ಕೇಂಬ್ರಿಡ್ಜ್‌ನ ಶೀತಲ ವಾತಾವರಣಕ್ಕೆ ಅನಿವಾರ್ಯವಲ್ಲದಿದ್ದರೂ ಒಟ್ಟಿನಲ್ಲಿ ಉದ್ಯಾನವನದ ದೃಶ್ಯವನ್ನು ರಮಣೀಯವಾಗಿಸುವುದರಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ.

ಉದ್ಯಾನವನದ ರಾಜ ಪ್ರೌಢಿಮೆ:
ಜ್ಯಾಮಿತೀಯ ವಿನ್ಯಾಸಗಳೆಲ್ಲವೂ ಒಂದು ವೃತ್ತಾಕಾರದ ಮಧ್ಯಬಿಂದುವಿನ ಮೂಲಕ ಪ್ರಾರಂಭವಾಗುವುದರಿಂದ ಉದ್ಯಾನವನದ ಮಧ್ಯಭಾಗದಲ್ಲಿ ಒಂದು ಕಾರಂಜಿಯನ್ನು ನಿರ್ಮಿಸಬೇಕಿತ್ತು.ಮಾತ್ರವಲ್ಲದೆ ಇದು ಇಸ್ಲಾಮಿಕ್ ಉದ್ಯಾನವನದ ಪ್ರಧಾನ ಆಕರ್ಷಣೆಯೂ ಹೌದು.ಅದರ ಸಮೀಪದಲ್ಲಿ ನಾವು ಸಣ್ಣ ಚಹರ್ ಬಾಗ್ ಸಿದ್ಧಪಡಿಸಿದ್ದೆವು.ಕೆನೆ ಬಣ್ಣದಲ್ಲಿರುವ ಒಂದು ತರಹದ ಶಿಲೆಯ(York stone)ಮೂಲಕ ಕಾಲುದಾರಿಗಳನ್ನು ನಿರ್ಮಿಸಲಾಗಿತ್ತು.ಹೂದೋಟವನ್ನು ವಿಭಿನ್ನ ಗಿಡಗಳಿಂದ ಅಲಂಕರಿಸಿದ್ದೆವು.ಗುಲಾಬಿ,ಜೆರೇನಿಯಂ,ಐರಿಸ್ ಮುಂತಾದವುಗಳು ಮತ್ತು ಕೆಲವು ಹೂಬಿಡುವ ಪೊದೆಗಳು(flowering shrubs), ನಾಸಿಡಸ್ ಹಾಗೂ ಟುಲಿಪ್ ವರ್ಗಕ್ಕೆ ಸೇರಿದ ಗಿಡಗಳನ್ನಾಗಿತ್ತು ಉದ್ಯಾನವನದಲ್ಲಿ ಮುಖ್ಯವಾಗಿ ನೆಟ್ಟು ಬೆಳೆಸಿದ್ದು. ಪರಿಮಳ ಬೀರುವ ವಾತಾವರಣವೆಂಬುವುದೇ ಇಸ್ಲಾಮಿಕ್ ಗಾರ್ಡನಿಂಗ್ ನ ಪ್ರಧಾನ ಸವಿಶೇಷತೆ. ಕಾರಣ, ಅವುಗಳು ಹೊಸತೆರೆನಾದ ಆನಂದ ನೀಡುವುದಲ್ಲದೆ ನಮ್ಮೊಳಗೆ ಗಾಢವಾಗಿರುವ ಹಲವು ಚಿಂತನೆಗಳನ್ನು ಹೊರತರುವ ಬೃಹತ್ ಶಕ್ತಿಯನ್ನೂ ಹೊಂದಿರುತ್ತದೆ.
ಗಿಡಗಳ ಆಯ್ಕೆ ಉದ್ಯಾನವನದ ಹಚ್ಚ ಹಸಿರನ್ನು ಹೆಚ್ಚಿಸಿ ಸಂದರ್ಶಕರಿಗೆ ರಮಣೀಯ ದೃಶ್ಯವೊದಗಿಸಿ ಅನನ್ಯಾನುಭೂತಿ ನೀಡಲು ಸಹಾಯಕವಾಯಿತು. ಉದ್ಯಾನ ನಿರ್ಮಾಣಕ್ಕಾಗಿ ನಾವು ಆರಿಸಿದ ಗಿಡಗಳು ಹೇರಳವಾಗಿ ತುರ್ಕಿಯಲ್ಲಿ ಕಂಡುಬರುವುದೇ ಆಗಿತ್ತು. ತುರ್ಕಿ ಏಶ್ಯಾದ ದಕ್ಷಿಣ ಪಶ್ಚಿಮ ದಿಕ್ಕಿನಲ್ಲಿ ಯೂರೋಪಿಗೆ ತಾಗಿ ನಿಲ್ಲುವುದರಿಂದ ಬ್ರಿಟನಿನ ವಾತಾವರಣದಲ್ಲೂ ಅವುಗಳು ಚೆಂದ ಎಂದು ನಾವು ಬಗೆದೆವು.ಇವುಗಳೊಂದಿಗೆ ಕೆಲ ಹುಲ್ಲುಗಳನ್ನು ಮತ್ತು ಸಸ್ಯಗಳನ್ನು ಪ್ರಕೃತಿದತ್ತ ರೀತಿಯಲ್ಲಿ ನಾವು ಸಿದ್ಧಪಡಿಸಿದೆವು.ಇದರಿಂದ ಒಂದು ನಗರದಲ್ಲಿ ಪರಿಸರ ಸ್ನೇಹಿಯೂ ಸುಸ್ಥಿರವೂ ಆದ ಉದ್ಯಾನವನ ಹೇಗಿರಬೇಕೆಂಬುವುದಕ್ಕೆ ಆಧುನಿಕ ಮಾದರಿಯಾಗಿ ಕೇಂಬ್ರಿಡ್ಜ್ ಮಸೀದಿಯ ಉದ್ಯಾನವನವನ್ನು ಜನರ ಮುಂದಿಡಳು ನಮಗೆ ಸಾಧ್ಯವಾಯಿತು.
ಉದ್ಯಾನವನಕ್ಕೆ ಅಗತ್ಯವಾದ ಗಿಡಗಳನ್ನು ಹೊರಗಿನಿಂದ ಆಯ್ಕೆಗೊಳಿಸಿರುವ ಹಿಂದೆ ಇಸ್ಲಾಮಿಕ್ ಪ್ಲಾಂಟಿಂಗ್ ಮಾದರಿಯನ್ನು ಬ್ರಿಟಿಷ್ ರೀತಿಯೊಂದಿಗೆ ಸಂಯೋಜಿಸುವ,ಜೀವವೈವಿಧ್ಯತೆಗಳಿಗೆ ಪ್ರೋತ್ಸಾಹ ನೀಡುವ,ವಿದೇಶಿಗಳಾದ ಸಸ್ಯಗಳ ಬಳಕೆ ಎಂಬೀ ಗುರಿಗಳೂ ಇತ್ತು.ಫಲವೃಕ್ಷಗಳು ಸ್ವರ್ಗೀಯೋದ್ಯಾನವನಗಳ ಪ್ರಧಾನ ಘಟಕವಾಗಿರುವುದರಿಂದಲೇ ಗಹನವಾದ ವಿಶ್ಲೇಷಣೆಯ ಬಳಿಕ ನಾವು ಇದಕ್ಕಾಗಿ ಕಾಡು ಅಂಜೂರದ ವೃಕ್ಷಗಳನ್ನು(crab apple tree)ಆರಿಸಿದೆವು. ಬಳಿಕ ಅದನ್ನು ಪ್ರತಿ ಎಂಟು ಶೆಡ್ ಗಳಲ್ಲಿ ವಿನ್ಯಾಸಗೊಳಿಸಿದೆವು. ಇದಕ್ಕೆ ಗುಲಾಬಿ ಬಣ್ಣದ ಎಲೆಗಳು ಮತ್ತು ರಕ್ತ ವರ್ಣದ ಫಲಗಳು ಇರುತ್ತದೆ.ಉದ್ಯಾನವನ ನಿರ್ಮಾಣದ ಬಗ್ಗೆ ಊರ ನಿವಾಸಿಗಳಿಂದ ದೊರೆತ ಅಪಾರ ಮಟ್ಟದ ಸಕಾರಾತ್ಮಕ ಸ್ಪಂದನೆ ಕಂಡು ಪ್ರಮುಖ ಭೂದೃಶ್ಯ ವಿನ್ಯಾಸಕಾರ ಪೆಟ್ರ ಉಲ್ರಿಕ್ ಈ ಯೋಜನೆಯಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದರು.

ಆನಂದದಿ ಲೀನವಾಗುವ ಆತ್ಮಗಳು;
ಒಂದು ವರ್ಷದಲ್ಲೇ ನಾವು ಬಯಸಿದ ರೀತಿಯಲ್ಲಿ ಉದ್ಯಾನವನವು ಬೆಳೆಯಿತು. ಮಸೀದಿಯ ವಿನ್ಯಾಸದೊಂದಿಗೆ ಪೂರ್ಣವಾಗಿಯೂ ಹೊಂದಿಕೊಳ್ಳುವ ಚೈತನ್ಯ ಅದಕ್ಕಿತ್ತು. ಮಸೀದಿಯ ಮುಂದೆ ಗಿಡಮರಗಳಿಂದ ಸುತ್ತಲ್ಪಟ್ಟ ಜಲಧಾರೆಯ ಸಮೀಪ ಸೇರುವಾಗ ಅನನ್ಯವಾದ ನಿರಾಳತೆಯೊಂದು ಸಂದರ್ಶಕರಿಗೆ ಲಭಿಸುತ್ತದೆ. ಲಾಕ್ ಡೌನಿನ ಮುನ್ನ ದೂರ ದೇಶಗಳಿಂದ ಮಸ್ಲಿಮರೂ ಮುಸ್ಲಿಮೇತರರೂ ಧಾರಾಳವಾಗಿ ತಲುಪುತ್ತಿದ್ದರು. ಮಸೀದಿಗೆ ಪ್ರಾರ್ಥನೆಗಾಗಿ ಬರುವ ವಿಶ್ವಾಸಿಗಳ ಹಾಗೂ ಮಸೀದಿಯ ವಿನ್ಯಾಸವನ್ನು ಸವಿಯಲು ಬರುವವರ ನಯನಕ್ಕೆ ಮೊದಲು ಬೀಳುವುದು ನಮ್ಮ ಉದ್ಯಾನವನವಾಗಿದೆ. ಇಲ್ಲಿ ನಡೆದಾಡುವುದು,ಪರಿಸರದ ಸೌಂದರ್ಯ ಸವಿಯುವುದು ಹಾಗೂ ಪರಿಪಾಲಿಸುವುದು ಮನಸ್ಸಿಗೂ ಆತ್ಮಕ್ಕೂ ವಿಶೇಷ ಹುರುಪನ್ನು ನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಚಹರ್ ಬಾಗ್ ಮಾದರಿಯಲ್ಲಿರುವ ಇಸ್ಲಾಮಿಕ್ ಉದ್ಯಾನವನಗಳು ಅತ್ಯಂತ ಸುಂದರ ವಾತಾವರಣ ಹೊಂದಿರುವುದರಿಂದ ಅವುಗಳನ್ನು ಸ್ವರ್ಗೋದ್ಯಾನಗಳೊಂದಿಗೆ ಹೋಲಿಸಬಹುದೇನೋ ಅನಿಸುತ್ತದೆ.
ಈ ಕೋರೋನಾ ಕಾಲದಲ್ಲಿ ನಾವೆಲ್ಲರೂ ಮರಣವನ್ನು ಅತ್ಯಂತ ಗಂಭೀರವಾಗಿ ಕಾಣುವವರಾಗಿದ್ದೇವೆ.ಶಾಶ್ವತವಾದ ಸ್ವರ್ಗ ಸುಖದ ಪ್ರೇರಣೆ ಪಡೆದು ಭೌತಿಕ ಉದ್ಯಾನವನಗಳಲ್ಲಿ ಸಮಯ ಕಳೆಯುವಾಗ ಅವರ್ಣನೀಯ ಶಾಂತಿ ಮತ್ತು ಸಮಾಧಾನವು ನಮಗೆ ಸಿಗುತ್ತದೆ. ನೆನಪಿಡಿ,ಪವಿತ್ರವಾದ ಸ್ವರ್ಗದ ಉದ್ಯಾನವನಗಳಲ್ಲಿ ಸಮಾಧಾನ ಇದ್ದೇ ಇರುತ್ತದೆ.

ಮೂಲ ಲೇಖಕಿ: ಎಮ್ಮಾ ಕ್ಲಾರ್ಕ್‌
ಕನ್ನಡಕ್ಕೆ: ತ್ವಾಹಿರ್‌ ಸಿದ್ದೀಖ್

ರಾವಿ ನದಿಯ ದಂಡೆಯಲ್ಲಿ

ಶಾಂತ ಸಂಜೆಯಲ್ಲಿ ಹರಿಯುತ್ತಿದೆ
ಮಧುರವಾಗಿ ರಾವಿ,
ನನ್ನೆದೆಯ ನೋವನ್ನು ಮಾತ್ರ
ಕೇಳದಿರಿ ಇಲ್ಲಿ

ಸುಜೂದಿನ ಮೇಲುಕೀಳುಗಳ
ಸಂದೇಶ ದೊರೆಯುತ್ತಿದೆಯಿಲ್ಲಿ
ಜಗವೆಲ್ಲವೂ ‘ಹರಂ’ ನ
ಹಿತ್ತಿಲಾಗಿದೆಯಿಲ್ಲಿ!

ರಾವಿಯ ಅನಂತ ಹರಿವಿನ ದಂಡೆಯಲಿ
ನಿಂತಿಹೆನು ನಾನು
ಆದರೂ ತಿಳಿಯದಾಗಿಹೆ
ಎಲ್ಲಿ ನಿಂತಿರುವೆ ನಾನು!

ವೃದ್ಧಗುರು ಮಧುಬಟ್ಟಲನು ಹಿಡಿದು
ನಿಂತಿಹನು ನಡುಗುತಿಹ ಕೈಗಳಲ್ಲಿ
ರಕ್ತವರ್ಣದ ಮದ್ಯ ಚೆಲ್ಲಿದೆ
ಸಂಜೆ ಬಾನಿನ ಸೆರಗಿನಲ್ಲಿ!

ಈ ಕಾರವಾನವೂ ಕೊನೆಯಾಗುತ್ತಲಿದೆ
ದಿನದ ಆವರ್ತನೆಯಂತೆ
ಮುಸ್ಸಂಜೆಯಾಗುತ್ತಿದೆ, ಅಚ್ಚರಿಯೇಕೆ
ಬದುಕು ಸೂರ್ಯಕಾಂತಿ ಹೂವಿನಂತೆ!

ನಿಂತುಕೊಂಡಿವೆ ಒಂಟಿತನವ ಸಾರುತ್ತ
ಎತ್ತರೆತ್ತರದ ಮಿನಾರಗಳು
ಒಂದು ಕಾಲದಲ್ಲಿ ಮೆರೆದಿದ್ದ
ಮೊಘಲ್ ದೊರೆಗಳ ಗೋರಿಗಳು!

ವಿದ್ರೋಹದ ಕಥೆಗಳನು
ಸಾರುತಿಹುದೀ ನೆಲವು
ಅಳಿದು ಹೋದ ಜಗತ್ತಿನ
ತೆರೆದ ಹೊತ್ತಗೆಗಳಾಗಿ!

ಸಾಗುತಿದೆ ನೋಡಿ ಮೌನ ಡಂಗುರ
ಆ ನದಿಯ ದಂಡೆಯಲ್ಲಿ
ಮರಗಿಡಗಳಿಲ್ಲದ ಮೌನ ಮರ್ಮರ
ಗೋಷ್ಠಿಯನ್ನೊಮ್ಮೆ ನೋಡಿ!

ಅಲೆಗಳೆದೆಯನ್ನು ಸೀಳುತ್ತ
ಸಾಗುತಿದೆ ಆ ಹಾಯಿದೋಣಿ
ಅಲೆಗಳೊಂದಿಗೆ ಗುದ್ದಾಡುತಿಹ
ನಾವಿಕನ ನೋಡಿ!

ಕಣ್ಮಿಂಚಿನಂತೆ ಚಿಮ್ಮುತಿದೆ
ಆ ನಾವೆಯು ರಾವಿಯಲ್ಲಿ
ಕಣ್ಮುಚ್ಚಿ ತೆರೆಯುವುದರೊಳಗೆ
ಮಿಂಚಿ ಮಾಯಾವಾಗುತಿದೆಯಲ್ಲಿ!

ಅಸ್ತಿತ್ವದ ಅನಂತ ತೆರೆಗಳ ಮೇಲೆ
ಹುಟ್ಟುತ್ತ ಸಾಯುತ್ತಾ,
ಹೀಗೆಯೇ ಸಾಗುತಿವೆ
ಮನುಷ್ಯರ ಜೀವದೋಣಿಗಳು!

ಧೃತಿಗೆಡದು ಎಂದೆಂದಿಗೂ
ಸೋಲಿನಲೆಗಳೇ ಮೇಲೆ ಹರಿಯೇ
ಕಣ್ಣೋಟದಿಂದ ದೂರವಾಗಿರಬಹುದು
ಆದರೂ, ನಾಶವಾಗದು ಮನುಜ ಯಾತ್ರೆ!

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

ಹಕ್ಕಿಯ ದೂರು

ನೆನಪಾಗುತಿವೆ ಇಂದು
ಕಳೆದುಹೋದ ಆ ದಿನವು
ಹಕ್ಕಿಗಳ ಚಿಲಿಪಿಲಿಯಲ್ಲಿ
ವಸಂತನ ಆಗಮನವು

ಅತ್ತಿತ್ತ ಹಾರಿ ನಲಿದಾಡುತಿದ್ದ
ಬೇಕೆಂದ ಕಡೆಗೆ ಹಾರಾಡುತಿದ್ದ
ಸಂತಸದ ಗುಡಿಯಲಿದ್ದ
ಆ ನನ್ನ ಸ್ವಾತಂತ್ರ್ಯವೆಲ್ಲಿ

ಆ ಕ್ಷಣಗಳ ನೆನಪಿನಲ್ಲಿ
ಎದೆಯೊಡೆಯುತಿಹುದಿಲ್ಲಿ
ಇಬ್ಬನಿಯ ಕಣ್ಣೀರಿನಲ್ಲಿ
ನಗುತಿದ್ದ ಆ ಮೊಗ್ಗೆಗಳೆಲ್ಲಿ

ಯಾವ ಸೌಂದರ್ಯದ ಖನಿಯೋ
ಅದಾವ ಮೋಹಿನಿಯ ಇರವೋ
ಆ ಮೈಮಾಟದಲ್ಲಿ ತುಂಬಿ
ಮುದಗೊಳ್ಳುತಿತ್ತು ಗುಡಿಯು

ಬಂಧನದೊಳಗಿರುವೆ
ಆ ಮಧುರಧ್ವನಿಗಳ ಸದ್ದುಗಳಿಲ್ಲ
ಅಯ್ಯೋ ಆ ಸ್ವಾತಂತ್ರ್ಯವೆಂಬುದೊಂದು
ನನ್ನ ಕೈಯೊಳಗಿರಬೇಕಾಗಿತ್ತು

ಮನೆಸೇರಲು ಚಡಪಡಿಸುತಿರುವೆ
ಹಣೆಬರಹವ ಹಳಿಯುತಿರುವೆ
ಇಲ್ಲಿ ಬಂಧಿಯಾಗಿ ಬಿದ್ದಿರುವೆ
ಒಡನಾಡಿಗಳೆನ್ನ ಕಾಡಿನಲ್ಲಿಹರು!

ವಸಂತನ ಆಗಮನವೇನೋ
ಈ ಮೊಗ್ಗುಗಳು ನಕ್ಕು ನಲಿಯುತಿವೆ ಅಲ್ಲಿ
ಎನ್ನ ವಿಧಿಯ ಹಳಿಯುತಿರುವೆ
ಈ ಕೈದಿನ ಕಗ್ಗತ್ತಲೆಯಲ್ಲಿ

ಈ ಬಂಧನದ ಬಿನ್ನಹವ
ಯಾರ ಬಳಿಗೊಯ್ಯಲಿ ದೊರೆಯೇ
ಬರದಿರಲಿ ನನ್ನ ಸಾವು
ಈ ಬಂಧನದ ನೋವಿನಾ ಬಳಿಯೇ

ದುಸ್ಥಿತಿಗೆ ಇಳಿದಿರುವೆ ನಾನು
ಆ ತೋಟದಿಂದ ಕಳೆದು,
ನೋವುಣ್ಣುತಿದೆ ಎದೆಯು
ಎದೆಯ ನುಂಗುತಿದೆ ನೋವು

ಹಾಡೆಂದು ತಿಳಿದು
ನಗಬೇಡಿ ನೀವು
ದುಃಖತಪ್ತ ಮನದ
ಒಡಲಾಳದ ಕೂಗು

ಮುಕ್ತಗೊಳಿಸೆನ್ನ ಒಮ್ಮೆ
ಓ ಕೈದುಗಾರನೆ ನೀನು
ಮುಕ್ತಿಗೊಳಿಸೀ ಮೂಕ ಕೈದಿಯ
ಧನ್ಯನಾಗುವೆ ನೀನು

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

ನವ ಮಂದಿರ

ಸತ್ಯವೊಂದನು ಹೇಳುವೇ ಓ ಬ್ರಾಹ್ಮಣನೇ,
ತಪ್ಪು ತಿಳಿಯದಿರು ಎನ್ನ
ಹಳತಾಗುತಿವೆ ಗರ್ಭಗುಡಿಯೊಳಿರುವ
ಆ ಮೂರ್ತಿಗಳು ನಿನ್ನ

ನಿನ್ನವರನೇ ದ್ವೇಷಿಸಲು
ಆ ಮೂರ್ತಿಗಳಿಂದ ನೀ ಕಲಿತಿರುವಾಗ
ವೈರತ್ವ ದ್ವೇಷಗಳನ್ನೇ ಕಕ್ಕಲು
ಎನ್ನ ಗುರುವಿಗೂ ಆ ಖುದಾನೇ ಕಲಿಸಿರಬೇಕು

ಅಯ್ಯೋ! ಈ ಮಂದಿರ ಮಸೀದಿಗಳಿಂದಲೇ
ನಾ ಬೇಸತ್ತು ಹೋದೆ
ಗುರುವಿನ ಧರ್ಮವೇ ಕಳೆದುಹೋಗಿದೆ
ನಿನ್ನ ಪುರಾಣಗಳೂ ಕಳೆದುಹೋಗಿವೆ

ಕಲ್ಲಿನಾ ಶಿಲ್ಪಗಳನ್ನು
ನೀ ದೇವರೆಂದು ಬಗೆದಿರುವೆ
ಈ ನಾಡಿನ ಮಣ್ಣ ಕಣಕಣಗಳೂ
ಎನಗೆ ದೇವತೆಗಳಾಗುತಿವೆ

ಬಾ ಇನ್ನೊಮ್ಮೆ ಈ ಪರಕೀಯತೆಯ
ಪರದೆಯನ್ನೊಮ್ಮೆ ಎತ್ತಿಬಿಡೋಣ
ಅಗಲಿದವರನೊಮ್ಮೆ ಒಂದಾಗಿಸೋಣ
ಗಡಿರೇಖೆಗಳ ಕಲೆಯ ಅಳಿಸೋಣ

ಶೂನ್ಯವಾಗಿದೆ ಎದೆಯ ಗೂಡು
ಹಕ್ಕಿಗಳ ಸುಳಿವಿಲ್ಲ
ಬಾ ಈ ನಮ್ಮ ದೇಶದಲ್ಲಿ
ನವ ಮಂದಿರವ ನಿರ್ಮಿಸೋಣ

ಸರ್ವ ತೀರ್ಥಗಳಿಗೆ ಮಿಗಿಲಾದ
ತೀರ್ಥವಿಹುದಿಲ್ಲಿ
ಬಾ ಸಗ್ಗದಾ ನೆತ್ತಿಯ ಮೇಲೆ
ಪ್ರೇಮ ಕಳಶವನಿಡೋಣ

ಆ ಮಧುರಮಂತ್ರಗಳನ್ನು
ದಿನವೆದ್ದು ಹಾಡೋಣ
ಆ ಭಕುತರ ಹೃದಯಕ್ಕೆ
ಪ್ರೇಮಮಧುವ ಸುರಿಯೋಣ

ಶಕ್ತಿ-ಶಾಂತಿಗಳೆರಡೂ ಅಡಗಿಹುದು
ಭಕುತರ ಮಧುರವಾಣಿಯಲ್ಲಿ
ಈ ಭುವಿಯ ಜೀವರಾಶಿಗಳೆಲ್ಲಾ
ಮುಕ್ತಿ ಕಾಣುವವು ಪ್ರೀತಿಯಲ್ಲಿ !

ಉರ್ದು ಮೂಲ : ಅಲ್ಲಾಮಾ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

ಯುರೋಪ್ ಜ್ಞಾನೋದಯ‌ ಮತ್ತು ಪೈಗಂಬರ್ ಮುಹಮ್ಮದ್(ಸ)

ಹದಿನಾರನೇ ಶತಮಾನದಲ್ಲಿ ಯುರೋಪ್‌ನಲ್ಲಿ ಖುರ್‌ಆನ್ ಅನುವಾದಕ್ಕೆ ಮಾರುಕಟ್ಟೆ ಒದಗಿಸುವ ಕೆಲಸವು ನೂರಾರು ತೊಡಕುಗಳನ್ನು ಎದುರಿಸಬೇಕಾದ ಒಂದು ಉದ್ಯಮವೇ ಆಗಿತ್ತು. ಕ್ರಿ.ಶ 1542 ರಲ್ಲಿ ಖುರ್‌ಆನಿನ ಲಾಟಿನ್ ಭಾಷೆಯ ಅನುವಾದವೊಂದನ್ನು ಪ್ರಕಟಿಸಲು ಮುಂದಾದ ಪ್ರಕಾಶಕನೊಬ್ಬನನ್ನು ಬಂಧಿಸಿ ಬೆಯ್‌ಸಲ್ ಪ್ರೊಟಸ್ಟಂಟ್‌ಸಿಟಿ ವಕ್ತಾರರು ಅಭಿಪ್ರಾಯ ಪಟ್ಟಿದ್ದೇನೆಂದರೆ; ಖುರ್‌ಆನ್ ಜನರನ್ನು ಗೊಂದಲಕ್ಕೀಡು ಮಾಡಬಹುದು ಎಂದು. ಕೊನೆಗೆ ತುರ್ಕಿಗಳನ್ನು ಎದುರಿಸಲು ಉತ್ತಮ ದಾರಿ ಖುರ್‌ಆನಿನ ಕೆಲವು ಸುಳ್ಳುಗಳನ್ನು ಬಹಿರಂಗಗೊಳಿಸುವುದು ಎಂದು ಪ್ರೊಟೆಸ್ಟಂಟ್ ಮೇಧಾವಿ ಮಾರ್ಟಿನ್ ಲೂಥರ್ ಘೋಷಿಸುವುದರೊಂದಿಗೆ ಖುರ್‌ಆನ್ ಅನುವಾದ ಪ್ರಕ್ರಿಯೆಯು ಮುಂದುವರಿಯುತ್ತದೆ.


ಮುಂದೆ ಕ್ರಿ.ಶ 1543 ರಲ್ಲಿ ಪ್ರಕಟವಾದ ಈ ಲ್ಯಾಟಿನ್ ಭಾಷೆಯ ಖುರ್‌ಆನ್ ಅನುವಾದವು ಯುರೋಪ್‌ನ ಬೌದ್ಧಿಕ ವಲಯವನ್ನು ತಲುಪಿತು ಮತ್ತು ಆ ಮೂಲಕ ಇಸ್ಲಾಮನ್ನು ಇನ್ನೂ ಹೆಚ್ಚು ಅರಿತುಕೊಂಡು ಪ್ರತಿರೋಧಿಸಲು ಸಾಧ್ಯವಾಯಿತು. ಅದೇವೇಳೆ ಈ ಗ್ರಂಥದ ಅಧ್ಯಯನಕ್ಕಿಳಿದ ಕೆಲವು ಮಂದಿ, ಕ್ರೈಸ್ತ ಧರ್ಮದ ನಂಬಿಕೆ ಮತ್ತು ಸಂಹಿತೆಗಳನ್ನು ಪ್ರಶ್ನಿಸಲು ಖುರ್‌ಆನನ್ನು ಆಧಾರವಾಗಿಟ್ಟುಕೊಂಡರು. ಕಾಟ್ಟೋಲೋನಿಯನ್ ದಾರ್ಶನಿಕನೂ, ದೇವಶಾಸ್ತ್ರಜ್ಞನೂ ಆಗಿದ್ದ ಮಿಶೇಲ್ ಸೆರ್ವಿಟ್ಟಸ್ ಬರೆದ Christianismi Restitutio (1553) ಎಂಬ ತ್ರಿಯೇಕತ್ವವನ್ನು ವಿಮರ್ಶಿಸುವ ಕೃತಿಯಲ್ಲಿ ಆತ ತನ್ನ ವಾದಗಳಿಗೆ ಪೂರಕವಾಗಿ ಖುರ್‌ಆನಿನ ಅನೇಕ ವಚನಗಳನ್ನು ಆಧಾರವಾಗಿ ಉಲ್ಲೇಖಿಸಿದ್ದ. ಮಿಶೇಲ್ ಈ ಪುಸ್ತಕದಲ್ಲಿ ಕ್ರೈಸ್ತ ದೇವಶಾಸ್ತ್ರಜ್ಞರು ಸೃಷ್ಟಿಸಿದ ಅಸಂಬದ್ಧವಾದ ತ್ರಿಯೇಕತ್ವವು ಕಳಂಕಗೊಳಿಸಿದ ದೇವನಂಬಿಕೆಯಿಂದ ಕಳಂಕರಹಿತ ಏಕದೇವೋಪಾಸನೆಯತ್ತ ದಾರಿತೋರಲು ಬಂದ ಸುಧಾರಕರೆಂದು ಪೈಗಂಬರ್ ಮುಹಮ್ಮದ (ಸ) ರನ್ನು ಪರಿಚಯಿಸುತ್ತಾರೆ. ಧರ್ಮವಿರೋಧಿ ವಿಚಾರವನ್ನು ಮಂಡಿಸಿದ ಗ್ರಂಥವನ್ನು ಹೊರತರುವುದರೊಂದಿಗೆ ಸರ್ವಿಟ್ಟಸ್ ವಿರುದ್ಧ ವಿಯೆನ್ನಾದಲ್ಲಿ ನಡೆದ ಕಾಥೋಲಿಕಾ ಇನ್‌ಕ್ವಿಸಿಷನ್‌ನಲ್ಲಿ ಧರ್ಮದ್ರೋಹದ ಆಪಾದನೆಯನ್ನು ಹೊರಿಸಿ ಆತನ ಗ್ರಂಥಗಳೊಂದಿಗೆ ಆತನನ್ನೂ ಅಮಾನುಷವಾಗಿ ಸುಟ್ಟು ಹಾಕಲಾಯಿತು.

Johann Wolfgang von Goethe


ಯುರೋಪ್‌ನ ಜ್ಞಾನೋದಯ ಕಾಲದಲ್ಲಿ ಅನೇಕ ಬರಹಗಾರರು ಇದೇರೀತಿ ಪೈಗಂಬರ್ ಮುಹಮ್ಮದ್ (ಸ)ರನ್ನು ಪೌರೋಹಿತ್ಯ ವಿರೋಧಿ ನಾಯಕನನ್ನಾಗಿ ಪ್ರತಿಪಾದಿಸಿದುದನ್ನು ಗಮನಿಸಬಹುದು. ಕೆಲವರು ಇಸ್ಲಾಮನ್ನು ತಾತ್ವಿಕ ದೈವಸಿದ್ಧಾಂತಕ್ಕೆ (philosophic deism) ಸಮಾನವಾದ ಏಕದೇವ ನಂಬಿಕೆಯಾಗಿ ಮತ್ತು ಖುರ್‌ಆನನ್ನು ಯುಕ್ತಿಪೂರ್ಣ ಗ್ರಂಥವಾಗಿ ಕಂಡರು. ಕ್ರಿ.ಶ 1734 ರಲ್ಲಿ ಜಾರ್ಜ್ ಸೆಯ್‌ಲ್ ಎಂಬಾತ ಖುರ್‌ಆನಿನ ಒಂದು ಹೊಸ ಇಂಗ್ಲೀಷ್ ಅನುವಾದವನ್ನು ಹೊರತಂದನು. ಅದರ ಮುನ್ನುಡಿಯಲ್ಲಿ ಆದ್ಯ ಕಾಲದ ಕ್ರೈಸ್ತರ ಅನಾಚಾರಗಳನ್ನೂ ಮೌಢ್ಯವನ್ನೂ ನಿರ್ಮೂಲನೆ ಮಾಡುವ, ಪೌರೋಹಿತ್ಯದ ವಿರುದ್ಧ ಹೋರಾಡುವ ಸುಧಾರಣಾವಾದಿಯಾಗಿ ಮತ್ತು ಮಾದರಿಯೋಗ್ಯ ಪುರುಷೋತ್ತಮನಂತೆ ಪೈಗಂಬರರನ್ನು ಚಿತ್ರಿಸಲಾಗಿತ್ತು. ಸೇಯ್ಲ್‌ನ ಈ ಖುರ್‌ಆನ್ ಅನುವಾದವು ಇಂಗೆಂಡಿನಾದ್ಯಂತ ವ್ಯಾಪಕ ಪ್ರಮಾಣದ ಓದುಗರನ್ನು ತಲುಪಿತು ಮತ್ತು ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿತು. ಓದುಗರ ಪೈಕಿ ಹೆಚ್ಚಿನವರೂ ಪೈಗಂಬರ್(ಸ)ರನ್ನು ಪೌರೋಹಿತ್ಯ ವಿರೋಧಿ ಮತ್ತು ಪ್ರಜಾಪ್ರಭುತ್ವದ ಪ್ರತೀಕವಾಗಿ ಕಂಡರು. ಇಂಗ್ಲೆಂಡ್ ನ ಹೊರಗೂ ಈ ಕೃತಿಗೆ ದೊಡ್ಡ ಪ್ರಚಾರ ಲಭಿಸಿತು. ಅಮೇರಿಕಾದ ಸ್ಥಾಪಕ ಪಿತಾಮಹ ಥಾಮಸ್ ಜೆಫರ್ಸನ್ 1765 ರಲ್ಲಿ ವಿರ್ಜೀನಿಯಾದ ವಿಲಿಯಂ ಬರ್ಗ್‌ನ ಒಬ್ಬ ಪುಸ್ತಕ ವ್ಯಾಪಾರಿಯಿಂದ ಈ ಅನುವಾದದ ಪ್ರತಿಯೊಂದನ್ನು ಖರೀದಿಸಿದ್ದರು. ದೈವಶಾಸ್ತ್ರದ ಕುರಿತಾದ ತನ್ನ ನಿಲುವುಗಳನ್ನು ಬದಲಿಸಲು ಖುರ್‌ಆನ್ ಅವರಿಗೆ ನೆರವಾಗಿತ್ತು. (ಜೆಫರ್ಸನ್ ರ ಈ ಅನುವಾದದ ಪ್ರತಿಯನ್ನು ಈಗ ಅಮೇರಿಕಾದ ಕಾಂಗ್ರೆಸ್ ಲೈಬ್ರರಿಯಲ್ಲಿ ತೆಗೆದಿರಿಸಲಾಗಿದೆ. ಕಾಂಗ್ರೆಸ್‌ನಿಂದ ಚುನಾಯಿತರಾಗುವ ಮುಸ್ಲಿಂ ಪ್ರತಿನಿಧಿಗಳು ಈ ಕೃತಿಯನ್ನು ಬಳಸಿ ಪ್ರಮಾಣವಚನ ಸ್ವೀಕರಿಸುತ್ತಾರೆ. 2007ರಲ್ಲಿ ಕೇಥ್ ಎಲಿಸನ್ ಎಂಬಾತನು ಈ ಪರಂಪರೆಯನ್ನು ಆರಂಭಿಸಿದ್ದನು.) ಜರ್ಮನಿಯ ರೋಮ್ಯಾಂಟಿಕ್ ಕವಿಯಾಗಿದ್ದ ಗೋಥೆಯು ಸೆಯ್ಲ್‌‌ನ ಅನುವಾದವನ್ನು ಓದುವ ಸಂದರ್ಭವೊದಗಿದ ಕಾರಣದಿಂದ ಪೈಗಂಬರರ ಕುರಿತಾದ ತನ್ನ ಕಲ್ಪನೆಗಳಿಗೆ ಬಣ್ಣತುಂಬಲು ಸಹಾಯಕವಾಗಿದೆ. ಗೋಥೆಯ ಪಾಲಿಗೆ ಪೈಗಂಬರರು ಓರ್ವ ಮಾದರಿ ಕವಿಯೂ, ಪ್ರವಾದಿತ್ವಕ್ಕೆ ಉದಾತ್ತ ರೂಪಕವೂ ಆಗಿದ್ದರು.

W. Montgomery Watt

ಸೆಯ್ಲ್‌‌ನ ಖುರ್‌ಆನ್ ಅನುವಾದವನ್ನು ಅಧ್ಯಯನ ನಡೆಸಿದ ಫ್ರಾನ್ಸ್‌ನ ದಾರ್ಶನಿಕನಾಗಿದ್ದ ವಾಲ್ಟರ್ ತನ್ನ ಜಾಗತಿಕ ಚರಿತ್ರೆಯ ಕುರಿತಾದ ಕೃತಿಯಲ್ಲಿ (Essai sur les mœurs et l’esprit des nations) ಪೈಗಂಬರರನ್ನು ಅತ್ಯಂತ ಗೌರವದಿಂದ ಪರಾಮರ್ಶಿಸುತ್ತಾರೆ. ಕಳಂಕಿತ ಪೌರೋಹಿತ್ಯ ಶಕ್ತಿಗಳನ್ನು ಮಣಿಸಲು, ಮೌಢ್ಯ-ಅನಾಚಾರಗಳನ್ನು ತೊಡೆದು ಹಾಕಲು ಬಂದ ಒಬ್ಬ ಸುಧಾರಣಾವಾದಿಯಾಗಿ ಪೈಗಂಬರರನ್ನು ಬಣ್ಣಿಸುತ್ತಾನೆ. ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಸೆಯ್ಲ್ ಮತ್ತು ವಾಲ್ಟರ್‌ರ ಅನುವಾದವನ್ನು ಅಧ್ಯಯನ ನಡೆಸಿದ ಎಡ್ವರ್ಡ್ ಗಿಬ್ಬನ್ ತನ್ನ The History of the Decline and Fall of the Roman Empire ಎಂಬ ಗ್ರಂಥದಲ್ಲಿ ಪೈಗಂಬರರ ಕುರಿತು ಮನೋಜ್ಞವಾಗಿ ಬರೆಯುವುದು ಹೀಗೆ;
“ಪ್ರವಾದಿ ಮುಹಮ್ಮದರು ಪ್ರತಿಪಾದಿಸಿದ ತತ್ವಗಳು ಅಸ್ಪಷ್ಟತೆಗಳಿಂದ ಮತ್ತು ಸಂದೇಹಗಳಿಂದ ಮುಕ್ತವಾದವುಗಳು. ಅವರಿಗೆ ಅವತೀರ್ಣವಾದ ಖುರ್‌ಆನ್ ಸೃಷ್ಟಿಕರ್ತನು ಏಕತ್ವಕ್ಕಿರುವ ಬಲುದೊಡ್ಡ ಪುರಾವೆಯಾಗಿದೆ. ನಶಿಸುವುದೆಲ್ಲವೂ ಜೀರ್ಣಿಸುತ್ತದೆ, ಜನಿಸುವುದೆಲ್ಲವೂ ಮರಣ ಹೊಂದುತ್ತದೆ, ಉದಿಸುವುದೆಲ್ಲವೂ ಅಸ್ತಮಿಸುತ್ತದೆ ಮುಂತಾದ ಯುಕ್ತಿಬದ್ದ ಪ್ರತಿಪಾದನೆಗಳಿಂದ ವಿಗ್ರಹಗಳಿಗೂ, ಬಹುದೈವಗಳಿಗೂ ಆರಾಧಿಸುತ್ತಿದ್ದ ಮಕ್ಕಾದ ಜನರನ್ನು ತಡೆದರು. ಪ್ರಪಂಚದ ಸೃಷ್ಟಿಕರ್ತನಾದ ದೇವನು ಸ್ಥಳ ಕಾಲಗಳ ಅಗತ್ಯವಿಲ್ಲದ, ಪ್ರತಿಚ್ಛಾಯೆಯೋ ಪ್ರತಿಮೆಗಳೋ ಇಲ್ಲದ, ಅನಶ್ವರವಾದ ಒಂದು ಅಸ್ತಿತ್ವವಾಗಿತ್ತು. ಆ ಅಸ್ತಿತ್ವವು ಸ್ವಯಂ ಅನಿವಾರ್ಯತೆಯಲ್ಲೇ ನೆಲೆನಿಂತಿದೆ. ಆಸ್ತಿಕನಾದ ದಾರ್ಶನಿಕನು ನಮ್ಮ ಕಾಲಕ್ಕೆ ಹೊಂದುವ ಉದಾತ್ತವಾದ ಮುಹಮ್ಮದೀಯ ನಂಬಿಕೆಯನ್ನು ಅಪ್ಪಿಕೊಂಡಿದ್ದರು.”
-The History of the Decline and Fall of the Roman Empire

ಜ್ಞಾನೋದಯ ಕಾಲದ ಇಸ್ಲಾಮಿನ ಕುರಿತಾದ ಪುಸ್ತಕಗಳನ್ನು ಕೇಂದ್ರೀಕರಿಸಿದ ಏಕದೇವ ನಂಬಿಕೆ ಎಂಬ ದೃಷ್ಟಿಕೋನಕ್ಕೆ ಸಮಾನವಾದ, ಅತ್ಯಂತ ಬಾಲಿಶವಾದ ಧೋರಣೆಗಳಷ್ಟೇ ನೆಪೋಲಿಯನ್‌ಗಿದ್ದವು. ಈಜಿಪ್ಟ್‌ನ ಮೇಲಿನ ಆತನ ದಂಡಯಾತ್ರೆಯ ಸೋಲಿಗೆ ಪ್ರಧಾನ ಕಾರಣವೂ ಇಸ್ಲಾಮಿನ ಕುರಿತಾದ ಸೀಮಿತ ಧೋರಣೆಗಳಾಗಿದ್ದವು. ಸ್ವತಃ ನೆಪೋಲಿಯನ್ ಮಾತ್ರವಲ್ಲ ಆತನನ್ನು ಮುಹಮ್ಮದ್ ಎಂದು ಕರೆಸಿಕೊಂಡದ್ದು. ಜರ್ಮನ್ ಕವಿ ಗೋಥೆ ಆತನನ್ನು ಜಗತ್ತಿನ ಮುಹಮ್ಮದ್ (Mahomet der Welt) ಎಂದು ಬಣ್ಣಿಸಿದರೆ, ಫ್ರೆಂಚ್ ಬರಹಗಾರನಾದ ವಿಕ್ಟರ್ ಹ್ಯೂಗೋ ಪಶ್ಚಿಮದ ಮುಹಮ್ಮದ್ (Mahomet d’occident) ಎಂದು ಕರೆದಿದ್ದ.

ಆದರೆ 1783ರಲ್ಲಿ ಕ್ಲೋಡ್ ಎಟಿನೆ ಸಾವರಿ ಬರೆದ ಖುರ್‌ಆನಿನ ಫ್ರೆಂಚ್ ಅನುವಾದವನ್ನು ಓದಿಕೊಂಡ ನೆಪೋಲಿಯನ್ ಬೊನಪಾರ್ಟೆ ಅತ್ಯುತ್ಸಾಹದಿಂದ ಖುರ್‌ಆನ್‌ ನ್ನು ಆವಾಹಿಸಿಕೊಂಡು ಸ್ವಯಂ ತಾನೊಬ್ಬ ಹೊಸ ಪ್ರವಾದಿಯಾಗಿ ರೂಪಾಂತರಗೊಳ್ಳುವ ಸಾಹಸಕ್ಕಿಳಿದಿದ್ದನು. ಅರೇಬಿಕ್ ಸಾಹಿತ್ಯದ ಕಲರವ ತುಂಬಿದ್ದ ಈಜಿಪ್ಟ್‌ನಲ್ಲಿದ್ದುಕೊಂಡು ಖುರ್‌ಆನ್ ಅನುವಾದ ಬರೆದ ಸಾವರಿ ಅರೇಬಿಕ್ ಭಾಷೆಯ ಸಾಹಿತ್ಯ ಸಂಪುಷ್ಟಿಯನ್ನು ತನ್ನ ಬರೆಹದಲ್ಲಿ ಆವಾಹಿಸಿಕೊಳ್ಳಲು ಪ್ರಯತ್ನಿಸಿದ. ಸೆಯ್‌ಲ್‌ನಂತೆಯೇ ತನ್ನ ಕೃತಿಯ ಆರಂಭದಲ್ಲಿ ಸುದೀರ್ಘ ಮುನ್ನುಡಿಯನ್ನು ಬರೆದ ಸಾವರಿ, ಪೈಗಂಬರ್ (ಸ) ರನ್ನು ಒಬ್ಬ ಅಸಾಧಾರಣ ವ್ಯಕ್ತಿಯನ್ನಾಗಿಯೂ, ಯುದ್ಧರಂಗದ ಪ್ರತಿಭಾಶಾಲಿಯಾಗಿಯೂ, ಅನುಯಾಯಿಗಳ ನಡುವೆ ಪ್ರಭಾವ ಬೀರಲು ಸಮರ್ಥನಾದ ಒಬ್ಬ ನಾಯಕನನ್ನಾಗಿಯೂ ಚಿತ್ರಿಸಿದ್ದಾನೆ. 1798 ರಲ್ಲಿ ತನ್ನ ಹಡಗಿನಲ್ಲಿ ಕುಳಿತು ಈ ಅನುವಾದವನ್ನು ಓದುತ್ತಿದ್ದ ನೆಪೋಲಿಯನ್ ಬೊನಪಾರ್ಟೆ ತಕ್ಷಣ ಹಡಗನ್ನು ಈಜಿಪ್ಟ್‌ ನತ್ತ ತಿರುಗಿಸಿದನು. ಸಮರ್ಥನಾದ ಸಮರ ನಾಯಕ, ಕುಶಾಗ್ರನಾದ ನ್ಯಾಯತಜ್ಞ ಮುಂತಾದ ಪೈಗಂಬರರ ಕುರಿತಾದ ಸಾವೆರಿಯ ವರ್ಣನೆಗಳಿಗೆ ಪ್ರಚೋದಿತನಾದ ನೆಪೋಲಿಯನ್, ತನ್ನಲ್ಲೊಬ್ಬ ಹೊಸ ಮುಹಮ್ಮದನನ್ನು ಕಾಣುವ ಹುಚ್ಚು ಧಾವಂತಕ್ಕೆ ಬಿದ್ದ. ಕೈರೋದ ಮುಸ್ಲಿಂ ವಿದ್ವಾಂಸರು ತನ್ನನ್ನು ಅಂಗೀಕರಿಸಬಹುದೆಂದೂ, ಉಸ್ಮಾನಿಗಳ ಆಧಿಪತ್ಯದಿಂದ ಈಜಿಪ್ಟನ್ನು ವಿಮೋಚಿಸಲು ಬಂದ ಇಸ್ಲಾಮಿನ ಹಿಂಬಾಲಕರಂತೆ ತನ್ನ ಸೇನೆಯನ್ನು ಕೈರೋದ ಜನರು ಕಾಣಬಹುದೆಂದೂ ಆತ ಲೆಕ್ಕಹಾಕಿದ. ಈಜಿಪ್ಟ್‌ಗಿರುವ ತನ್ನ ಈ ಆಗಮನವನ್ನು ಖುರ್‌ಆನಿನಲ್ಲಿ ಪರಾಮರ್ಶಿಸಲ್ಪಟ್ಟಿದೆಯೆಂದೂ ಆತ ವಾದಿಸಿದ. ಜ್ಞಾನೋದಯ ಕಾಲದ ಇಸ್ಲಾಮಿನ ಕುರಿತಾದ ಪುಸ್ತಕಗಳನ್ನು ಕೇಂದ್ರೀಕರಿಸಿದ ಏಕದೇವ ನಂಬಿಕೆ ಎಂಬ ದೃಷ್ಟಿಕೋನಕ್ಕೆ ಸಮಾನವಾದ, ಅತ್ಯಂತ ಬಾಲಿಶವಾದ ಧೋರಣೆಗಳಷ್ಟೇ ನೆಪೋಲಿಯನ್‌ಗಿದ್ದವು. ಈಜಿಪ್ಟ್‌ನ ಮೇಲಿನ ಆತನ ದಂಡಯಾತ್ರೆಯ ಸೋಲಿಗೆ ಪ್ರಧಾನ ಕಾರಣವೂ ಇಸ್ಲಾಮಿನ ಕುರಿತಾದ ಸೀಮಿತ ಧೋರಣೆಗಳಾಗಿದ್ದವು. ಸ್ವತಃ ನೆಪೋಲಿಯನ್ ಮಾತ್ರವಲ್ಲ ಆತನನ್ನು ಮುಹಮ್ಮದ್ ಎಂದು ಕರೆಸಿಕೊಂಡದ್ದು. ಜರ್ಮನ್ ಕವಿ ಗೋಥೆ ಆತನನ್ನು ಜಗತ್ತಿನ ಮುಹಮ್ಮದ್ (Mahomet der Welt) ಎಂದು ಬಣ್ಣಿಸಿದರೆ, ಫ್ರೆಂಚ್ ಬರಹಗಾರನಾದ ವಿಕ್ಟರ್ ಹ್ಯೂಗೋ ಪಶ್ಚಿಮದ ಮುಹಮ್ಮದ್ (Mahomet d’occident) ಎಂದು ಕರೆದಿದ್ದ. ಆದರೆ ತನ್ನ ಕೊನೆಗಾಲದಲ್ಲಿ ಸೈಂಟ್ ಹೆಲೆನಾಗೆ ವಲಸೆ ಹೋದ ನೆಪೋಲಿಯನ್ ತನ್ನ ಸೋಲುಗಳನ್ನು ಮೆಲುಕು ಹಾಕುತ್ತ, ಪ್ರವಾದಿಯರನ್ನು ‘ಚರಿತ್ರೆಯ ದಿಕ್ಕು ಬದಲಿಸಿದ ಮಹಾನ್ ವ್ಯಕ್ತಿ’ ಎಂದು ಬರೆದ. ನೆಪೋಲಿಯನ್ನನ ಮನಸ್ಸಿನಲ್ಲಿದ್ದ ಪ್ರವಾದಿಯೆಂದರೆ ಆತನಂತೆಯೇ ಒಬ್ಬ ನಾಯಕನೂ, ನ್ಯಾಯ ಶಾಸ್ತ್ರಜ್ಞನೂ, ಪ್ರಭಾವಿಯೂ ಆಗಿರುವ ವ್ಯಕ್ತಿಯಷ್ಟೇ.

Louis Massignon

ಪ್ರವಾದಿ(ಸ)ಮರ ಕುರಿತು, ಜಗತ್ತಿನ ಅತ್ಯಂತ ಉತ್ಕೃಷ್ಟ ನ್ಯಾಯಾಂಗ ವ್ಯವಸ್ಥೆಯ ನಿರ್ಮಾತೃ ಎಂಬ ನೆಲೆಯಲ್ಲಿನ ಅಭಿಪ್ರಾಯವು 20ನೇ ಶತಮಾನದ ತನಕವೂ ಮುಂದುವರೆಯಿತು. 1935 ರಲ್ಲಿ ಅಡಾಲ್ಫ್ ಎ. ವೆಯಿನ್‌ಮೆನ್ ಎಂಬ ಶಿಲ್ಪಿಯೊಬ್ಬ ಅಮೇರಿಕಾದ ಸುಪ್ರೀಂ ಕೋರ್ಟ್‌ನ ಮುಖ್ಯ ಚೇಂಬರ್‌ನಲ್ಲಿ ಕೆತ್ತಿದ ಶಿಲ್ಪಗಳಲ್ಲಿ 18 ನ್ಯಾಯ ನಿರ್ಮಾತೃಗಳ ಪೈಕಿ ಪ್ರವಾದಿಯವರನ್ನೂ ಸೇರಿಸಿದ್ದ. ಮುಹಮ್ಮದ್ (ಸ) ರನ್ನು ಮುಸ್ಲಿಮರ ಪ್ರವಾದಿ ಎಂಬ ಪದವಿಯನ್ನು ಅಂಗೀಕರಿಸುವ ಸಲುವಾಗಿ ಯೂರೋಪಿನ ವಿವಿಧ ಕಡೆಗಳಲ್ಲಿ ಕ್ರೈಸ್ತರು ಅವರ ಚರ್ಚುಗಳಲ್ಲಿ ಸಭೆ ಸೇರಿದ್ದರೆಂದು ಚರಿತ್ರೆಯಲ್ಲಿ ಉಲ್ಲೇಖವಾಗಿರುವುದನ್ನು ಕಾಣಬಹುದು. ಇಸ್ಲಾಮಿನ ಕುರಿತು ಅಧ್ಯಯನ ನಡೆಸಿದ ಕಾಥೋಲಿಕ್ ವಿದ್ವಾಂಸನಾದ ಲೂಯಿ ಮಸೈನನ್, ಹಾನ್ಸ್ ಕುಂಗ್, ಸ್ಕಾಟಿಷ್ ಪ್ರೊಟೆಸ್ಟಂಟ್ ವಿದ್ವಾಂಸ ವಿಲಿಯಂ ಮೋಂಟ್‌ಗೋಮರಿ ವಾಟ್ಟ್ ಮುಂತಾದವರು, ಇಂಥ ಉಪಕ್ರಮಗಳು ಮುಸ್ಲಿಂ-ಕ್ರೈಸ್ತ ಸಮುದಾಯಗಳ ನಡುವೆ ಶಾಂತಿಯುತ ಸಹಬಾಳ್ವೆ ಮತ್ತು ರಚನಾತ್ಮಕ ಸಂವಾದಗಳು ರೂಪುಗೊಳ್ಳಲು ಅನಿವಾರ್ಯವೆಂದು ವಾದಿಸಿದ್ದಾರೆ.
ಇಂದಿಗೂ ಮುಂದುವರೆಯುತ್ತಿರುವ ಇಂತಹ ಧಾರ್ಮಿಕ ಬಾಂಧವ್ಯಗಳು ಸಂಘರ್ಷದ ಕೋಲಾಹಲದಲ್ಲಿ ಗೋಚರಿಸದೇ ಹೋಗುತ್ತಿದೆ ಎಂಬುದು ವಾಸ್ತವ ಸಂಗತಿ. ಇಂದು ಯುರೋಪ್ ಮತ್ತು ಜಗತ್ತಿನ ಇತರ ಭಾಗದಲ್ಲಿರುವ ಉಗ್ರ ಬಲಬಂಥೀಯ ರಾಷ್ಟ್ರೀಯವಾದಿಗಳು ಮುಸ್ಲಿಂ ವಿರೋಧಿ ತತ್ವವನ್ನು ನ್ಯಾಯೀಕರಿಸಲು ಪೈಗಂಬರರನ್ನು ನಿಕೃಷ್ಟರನ್ನಾಗಿ ಚಿತ್ರೀಕರಿಸುತ್ತಿದ್ದಾರೆ. ರಾಷ್ಟ್ರೀಯವಾದಿಯಾಗಿದ್ದ ಗೀರ್ಟ್ ವಿಲ್‌ಡರ್ಸ್ ಎಂಬಾತ ಪೈಗಂಬರ್ (ಸ) ರನ್ನು ಮನೋರೋಗಿ, ಭಯೋತ್ಪಾದಕ ಮುಂತಾದ ಪದಗಳಿಂದ ಸಂಭೋಧಿಸಿದ್ದ. ಪ್ರವಾದಿಯವರ ಬೋಧನೆಗಳ ಎಲ್ಲ ಬಗೆಯ ಚಾರಿತ್ರಿಕ ಅಧ್ಯಯನವನ್ನೂ ನಿರಾಕರಿಸುವ ಮುಸ್ಲಿಂ ಮೂಲಭೂತವಾದಿಗಳೇ ಪ್ರವಾದಿಯವರ ಕುರಿತು ತಪ್ಪಾದ ಚಿತ್ರಣವನ್ನು ಸೃಷ್ಟಿಸುವುದು ಎಂಬುದು ಇಲ್ಲಿನ ವಿಪರ್ಯಾಸ. ಅದೇವೇಳೆ ಅಕ್ರಮಾಸಕ್ತ ಮೂಲಭೂತವಾದಿಗಳು ಇಸ್ಲಾಮನ್ನೂ ಪ್ರವಾದಿಯವರನ್ನೂ ನಿಂದನೆ ಮತ್ತು ಅಪಹಾಸ್ಯಗಳಿಂದ ಸಂರಕ್ಷಿಸಲು ಭಯೋತ್ಪಾದನೆಯ ಮತ್ತು ಹಿಂಸಾತ್ಮಕ ದಾರಿಯನ್ನು ತುಳಿಯುತ್ತಿದ್ದಾರೆ. ಇತಿಹಾಸಕ್ಕೆ ಇಣುಕಿ ನೋಡಿದರೆ ಪೈಗಂಬರ್ ಮುಹಮ್ಮದ್ (ಸ) ರ ಜೀವನದ ಕುರಿತು ವೈವಿಧ್ಯತೆಯಿಂದ ಕೂಡಿದ, ಅಚ್ಚರಿ ಮೂಡಿಸುವ ವೃತ್ತಾಂತಗಳು ಪಾಶ್ಚಾತ್ಯರ ವಿಶ್ಲೇಷಣೆಗಳಲ್ಲಿ ಕಾಣಬಹುದು.

ಮೂಲ: ಜಾನ್ ಥೋಲಾನ್
ಕನ್ನಡಕ್ಕೆ: ಅನ್ಸಾರ್ ಸ‌ಅದಿ ತಂಬಿನಮಕ್ಕಿ

ಕಾಫಿಯ ಇತಿಹಾಸ: ಐತಿಹ್ಯಗಳಿಂದ ಸೂಫಿಸಂವರೆಗೆ

ಇಥಿಯೋಪಿಯನ್ ಪರ್ವತಶ್ರೇಣಿಗಳೇ ಕಾಫಿಯ ತಾಯ್ನಾಡು. ಕ್ರಿ.ಶ 525 ರಲ್ಲಿ ಯೆಮೆನ್ ಅನ್ನು ವಶಪಡಿಸಿಕೊಂಡ ಸೆಮಿಟಿಕ್- ಭಾಷಿಕರಾದ ಆಕ್ಸಿಮೈಟ್‌ಗಳೇ ಕಾಫಿಯನ್ನು ಅರೇಬಿಯನ್ ಪರ್ಯಾಯ ದ್ವೀಪಕ್ಕೆ ಪರಿಚಯಿಸಿದವರು. ಇಥಿಯೋಪಿಯಾಗೆ ಸಮಾನವಾದ ಭೌಗೋಳಿಕತೆ ಮತ್ತು ಹವಾಮಾನವು ಈ ಪ್ರದೇಶದಲ್ಲಿ ಕಾಫಿ ಉತ್ಪಾದನೆ ಮತ್ತು ಬಳಕೆಯನ್ನು ಸ್ಥಳೀಯ ಸಂಸ್ಕೃತಿಯ ಭಾಗವನ್ನಾಗಿ ಮಾಡಿತು. ಆಕ್ಸಿಮೈಟ್‌ಗಳ ಆಳ್ವಿಕೆಯು ಅತ್ಯಲ್ಪವಾಗಿದ್ದರೂ, ಕಾಫಿ ಸಾಂಸ್ಕೃತಿಕ ಸಂಕೇತವಾಗಿ ಉಳಿದಿದ್ದು ಅದು ಸಮಾಜದ ಮೇಲೆ ಬಹುದೊಡ್ಡ ಪ್ರಭಾವವನ್ನು ಬೀರಿತು. ನಂತರದ ಸಸ್ಸಾನೀಯನ್ ಮತ್ತು ಮುಸ್ಲಿಂ ಕಾಲದಲ್ಲೂ ಈ ಸಂಸ್ಕೃತಿಯು ಉಳಿದುಕೊಂಡಿತು. ಆಧುನಿಕ ಕಾಲದಲ್ಲಿ ಯೆಮೆನ್ ಕಾಫಿಯ ತವರುಮನೆಯಾಗಿ ಮುಂದುವರೆದಿದೆ.

ಕಾಫಿಯ ಮೂಲದ ಬಗ್ಗೆ ಅನೇಕ ಐತಿಹ್ಯಗಳಿವೆ. ಇಥಿಯೋಪಿಯಾದ ಕುರುಬನಾದ ಕಲ್ದಿಯ ಕಥೆಯು ಅವುಗಳಲ್ಲಿ ಮುಖ್ಯವಾಗಿದೆ. ಕಥಾವಸ್ತುವು ಸುಮಾರು ಕ್ರಿ.ಶ 800 ರ ಸುತ್ತ ಸುತ್ತುತ್ತದೆ. ಆಕ್ಸಿಮೈಟ್ಸ್ ಯೆಮೆನ್ ಅನ್ನು ವಶಪಡಿಸಿಕೊಳ್ಳುವುದಕ್ಕಿಂತ 300 ವರ್ಷಗಳಿಗೂ ಮೊದಲು; ತನ್ನ ಕುರಿಗಳಲ್ಲಿ ಕಂಡುಬರುವ ಕಾಫಿ ಬಣ್ಣವು ಒಂದು ನಿರ್ದಿಷ್ಟ ಬಗೆಯ ಬೀಜಗಳಿಂದ ಆಗಿರುವಂತದ್ದು ಎಂದು ಕಂಡುಹಿಡಿದ ಆತ ಸ್ವತಃ ಅದರ ರುಚಿಯನ್ನು ಅನುಭವಿಸಿ ಅದನ್ನು ತನ್ನ ಊರವರಿಗೆ ಪರಿಚಯಿಸಿದನು. ಮತ್ತೊಂದು ದಂತಕಥೆಯ ಪ್ರಕಾರ, ರಾಜನ ಮಗಳನ್ನು ನಿಂದಿಸಿದ್ದಕ್ಕಾಗಿ ಯೆಮೆನ್‌ನಿಂದ ಗಡಿಪಾರು ಮಾಡಲ್ಪಟ್ಟ ಪಾದ್ರಿಯೊಬ್ಬನು ಕಾಫಿಯನ್ನು ಮೊದಲ ಬಾರಿಗೆ ಬಳಸಿದನು. ಮರುಭೂಮಿಯಲ್ಲಿ ಸುದೀರ್ಘ ಕಾಲದ ಅಲೆದಾಟದ ನಂತರ ಮನೆಗೆ ಹಿಂದಿರುಗಿದ ಅವನು ಕಾಫಿಯನ್ನು ಒಂದು ಪವಾಡವೆಂಬಂತೆ ಪ್ರಸ್ತುತಪಡಿಸುತ್ತಾನೆ. ಮುಂದೆ ಆತನು ಮೆಕ್ಕಾಗಿರುವ ತನ್ನ ತೀರ್ಥಯಾತ್ರೆಯಲ್ಲಿ ಮರಣ ಹೊಂದಿದನು ಎಂದು ಹೇಳಲಾಗುತ್ತದೆ. ಯೆಮೆನ್ ಆಧಾರಿತ ಮತ್ತೊಂದು ಪುರಾಣವಿದೆ. ತನ್ನ ಶತ್ರುಗಳಿಂದ ಗಡೀಪಾರು ಮಾಡಲ್ಪಟ್ಟ ದಾರ್ವಿಶ್ ಹಡ್ಜಿ ಉಮರ್ ಎಂಬವರು, ಮರುಭೂಮಿಯಲ್ಲಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪರಿಚಯವಿಲ್ಲದ ಸಸ್ಯವೊಂದರ ಕಾಯಿಯನ್ನು ತಿನ್ನುತ್ತಿದ್ದರು. ನಂತರದ ದಿನಗಳಲ್ಲಿ, ಆರೋಗ್ಯಕರ ಪಾನೀಯವನ್ನು ಅದರಲ್ಲಿ ನೀರನ್ನು ಸೇರಿಸುವ ಮೂಲಕ ತಯಾರಿಸಬಹುದು ಎಂದು ಕಂಡುಹಿಡಿದರು. ಹಿಂದಿರುಗಿದ ನಂತರ ಅವರು ಹೊಸ ಪಾನೀಯವನ್ನು ತಮ್ಮ ಅನುಯಾಯಿಗಳಿಗೆ ಪರಿಚಯಿಸಿದರು.

ಕಾಫಿಗೆ ಧಾರ್ಮಿಕವಾದ ಚರಿತ್ರೆ ಹಿನ್ನೆಲೆಯೂ ಇದೆ. ಜಿಬ್ರೀಲ್ (ಅ) ದೈವಿಕ ಸಂದೇಶದೊಂದಿಗೆ ಪೈಗಂಬರ್ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ರಿಗೆ ಕಾಫಿಯನ್ನು ನೀಡಿದರು ಎಂದು ನಂಬಲಾಗಿದೆ. ಮತ್ತೊಂದು ವಾದದ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಪೈಗಂಬರರಿಗೆ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ರ ಆರೋಗ್ಯ ರಕ್ಷಣೆಗಾಗಿ ನೀಡಲಾಯಿತು. ಪ್ರವಾದಿ ಈಸಾ (ಅ) ಅನ್ನು ಕುರಿತು ಉಲ್ಲೇಖಿಸಲಾಗುವ ಹೊಸ ಒಡಂಬಡಿಕೆಯಲ್ಲಿ ಅಥವಾ ಹಳೆಯ ಒಡಂಬಡಿಕೆಯಲ್ಲಿ ಕಾಫಿಯ ಪರಾಮರ್ಶೆ ಇಲ್ಲ. ಹದಿನೇಳನೇ ಶತಮಾನದ ಪ್ರಸಿದ್ಧ ಸಾಮಾಜಿಕ ವಿಮರ್ಶಕ ಮತ್ತು ಬುದ್ಧಿಜೀವಿ ಖತೀಬ್ ಅಸ್ಸಾಲ್ಬಿ ಕಾಫಿ ಬಳಕೆಯ ಇತಿಹಾಸವನ್ನು ವಿವರಿಸುತ್ತಾರೆ. ಕ್ರಿ.ಶ 1640-50 ರ ನಡುವೆ ಬರೆದ ತನ್ನ ಪುಸ್ತಕ ميزان الحق في اختيار(ಮೀಝಾನುಲ್ ಹಕ್) ನಲ್ಲಿ ಅವರು ಹೀಗೆ ಬರೆಯುತ್ತಾರೆ: ‘ಯೆಮೆನ್ ನ ಪರ್ವತದ ತಪ್ಪಲುಗಳಲ್ಲಿ ತಮ್ಮ ಶಿಷ್ಯರೊಂದಿಗೆ ವಾಸಿಸುತ್ತಿದ್ದ ಸೂಫೀ ಸಂತರು ಕಾಫಿಯ ಬೀಜಗಳನ್ನು ಹುಡಿಮಾಡಿ ಉಪಯೋಗಿಸುತ್ತಿದ್ದರು. ಅವರು ಅದನ್ನು ‘ಖಲ್ಬ್ ವಬುಂ’ ಎಂದು ಕರೆದರು. ಕೆಲವರು ಇದನ್ನು ಪಾನೀಯವಾಗಿಯೂ ಬಳಸುತ್ತಿದ್ದರು. ಶೀತಲವಾಗಿರುವ ಒಣ ಆಹಾರವಿದು. ಪರಿತ್ಯಕ್ತ ಜೀವನಕ್ಕೆ ಮತ್ತು ಲೈಂಗಿಕ ನಿಯಂತ್ರಣಕ್ಕೆ ಕಾಫಿ ಅವಶ್ಯಕ. ಆಧ್ಯಾತ್ಮಿಕ ಅನುಭಾವಿಗಳ ಮೂಲಕ ಸಾಮಾನ್ಯ ಜನರಿಗೂ ಹರಡಿತು. ಈ ಸಂಸ್ಕೃತಿಯು 950/1540 ರಲ್ಲಿ ಏಷ್ಯಾ ಮೈನರ್ ತಲುಪಿದಾಗ, ಅಲ್ಲಿನ ಜನರು ಇದನ್ನು ಒಂದು ಕೆಟ್ಟ ಸಂಸ್ಕೃತಿಯಂತೆ ಕಂಡು ವಿರೋಧಿಸಿದರು”.

ಹತ್ತೊಂಬತ್ತನೇ ಶತಮಾನದ ಭಾರತದ ಹಲವಾರು ಕಾಫಿ ತೋಟಗಳ ಮಾಲೀಕರಾಗಿದ್ದ ಎಡ್ವಿನ್ ಅರ್ನಾಲ್ಡ್ ಲೂಕರ್ ಅವರ ಪ್ರಕಾರ, ಕಾಫಿ ಇಥಿಯೋಪಿಯಾದಲ್ಲಿ ಹುಟ್ಟಿಕೊಂಡಿತು. ಕ್ರಿ.ಶ 875 ರ ಹೊತ್ತಿಗೆ ಇದು ಪರ್ಷಿಯಾದ ಕೆಲವು ಭಾಗಗಳನ್ನು ತಲುಪಿ ಹದಿನಾಲ್ಕನೆಯ ಶತಮಾನದಲ್ಲಿ ಅರೇಬಿಯಾಕ್ಕೆ ಹರಡಿತು. ಪುರಾಣಗಳು ಮತ್ತು ಮೌಖಿಕ ಸಂಪ್ರದಾಯಗಳು ಇತಿಹಾಸದ ವಸ್ತುನಿಷ್ಠತೆಯೊಂದಿಗೆ ಸರಿಸಮನಾಗಿ ನಿಲ್ಲದಿದ್ದರೂ, ಆದರೆ ಅವೆಲ್ಲವೂ ವಸ್ತುಸ್ಥಿತಿಯ ಸೃಜನಶೀಲ ಸಾಧ್ಯತೆಗಳಾಗಿವೆ. ಪುರಾತತ್ತ್ವಜ್ಞರು ಕಾಫಿಯ ಪ್ರಾಚೀನತೆಗೆ ಪುರಾವೆಗಳನ್ನು ಪತ್ತೆ ಮಾಡಿದ್ದಾರೆ. ಖಾದ್ಯ ಸಸ್ಯದ ಆವಿಷ್ಕಾರದಿಂದ ಹಿಡಿದು ಮಾನವ ಸಂಸ್ಕೃತಿಯಲ್ಲಿ ಅದರ ಸಂಯೋಜನೆಯವರೆಗಿನ ವಿಷಯಗಳನ್ನು ದಂತಕಥೆಗಳ ಮೂಲಕ ಅನಾವರಣಗೊಳಿಸಲಾಗುತ್ತಿದೆ. ತಮ್ಮ ಜಾನುವಾರುಗಳಲ್ಲಿನ ಅಸಹಜತೆಗಳ ಕಾರಣವನ್ನು ಹುಡುಕಿ ಹೊರಟವರು ಮೊದಲು ಗಮನಿಸಿದ ವಿಷಯವೆಂದರೆ ಕಾಫಿ. ಪ್ರಾಣಿಗಳು ತಿನ್ನುವ ಕಾಫಿ ಗಿಡದ ಕಾಯಿಯು ಯಾವುದೇ ಹಾನಿಕಾರಕ ಪರಿಣಾಮಗಳನ್ನು ಹೊಂದಿಲ್ಲ ಎಂದರಿತ ಅವರು ಅದನ್ನು ಸ್ವತಃ ರುಚಿಸಿ ನೋಡಿದರು. ಕ್ರಮೇಣ ಹೆಚ್ಚಿನ ಬಳಕೆಯ ಉದ್ದೇಶದಿಂದ ಸಂಸ್ಕರಿಸದ ಕಾಫೀ ಬೀಜವನ್ನು ಬೇಯಿಸಿ ನೀರು ಸೇರಿಸಿ ಪಾನೀಯವಾಗಿಯೂ ಉಪಯೋಗಿಸಲಾಯಿತು.

ಕಲಾದಿಯ ಕಥೆಯ ಪ್ರಕಾರ, ಕಾಫಿಯು ಇಥಿಯೋಪಿಯಾ ಮೂಲದ್ದೆಂದೂ 6 ನೇ ಶತಮಾನದ ಆಕ್ರಮಣಕಾರಿ ಪಡೆಗಳು ಯೆಮೆನ್ ಜನರಿಗೆ ಪರಿಚಯಿಸಿದ್ದೂ ಆಗಿದೆ. ಆದರೆ ಇಮಾಮ್ ಗಝಾಲಿ(ರ) ರ ಪ್ರಕಾರ, ಮಧ್ಯಂತರ ಅವಧಿಯಲ್ಲಿ ಯೆಮೆನ್ ನ ಜನರಿಗೆ ಅಂಟಿಕೊಂಡ ಅಭ್ಯಾಸವಾಗಿತ್ತು. ಸಾಕ್ಷ್ಯಗಳ ಅಸಮರ್ಪಕತೆಯು ಇತಿಹಾಸವನ್ನು ಹೆಚ್ಚು ವೈವಿಧ್ಯಮಯವಾಗಿಸುತ್ತದೆ. ಇಥಿಯೋಪಿಯನ್ ವಸಾಹತುಶಾಹಿ ಇತಿಹಾಸವು ಯೆಮೆನ್‌ಗಳಿಗೆ ಕಿಂಚಿತ್ತೂ ಸ್ವೀಕಾರಾರ್ಹವಲ್ಲ. ಆದ್ದರಿಂದಲೇ ಅವರ ಮೌಖಿಕ ಸಂಪ್ರದಾಯಗಳು ದೇಸಿ ಸೊಗಡಿನ ಕಾಫಿಯನ್ನು ಪರಿಚಯಿಸುತ್ತವೆ. ಹದಿನಾರನೇ ಶತಮಾನದವರೆಗೂ ಇದ್ದ ಕಾಫಿ ರಫ್ತಿನ ಏಕಸ್ವಾಮ್ಯವನ್ನು ಮೌಲ್ಯೀಕರಿಸುವುದಕ್ಕೂ ಇದು ಸೂಕ್ತವಾಗಿದೆ. ಸಮಾಜದಲ್ಲಿನ ಆಹಾರದ ಇತಿಹಾಸವನ್ನು ಗುರುತಿಸಲು ಆತ್ಮಚರಿತ್ರೆಯ ನಿರೂಪಣೆಗಳು ಬಹಳ ಸಹಾಯಕವಾಗಿವೆ. ಆಹಾರಪದ್ಧತಿಯ ಮೂಲ ಮತ್ತು ಅಸ್ತಿತ್ವವು ತಲೆಮಾರುಗಳ ಮೂಲಕ ಸ್ವಾರಸ್ಯಕರ ಕಥೆಗಳಾಗಿ ರವಾನೆಯಾಗಿರುತ್ತದೆ. ಮೇಲಿನ ಕಥೆಗಳಲ್ಲಿ ಕುರುಬ ಮತ್ತು ಸೂಫಿಗಳು ಕಾಫಿಯ ಸಾಮಾಜಿಕ ಮಟ್ಟವನ್ನು ಪ್ರತಿನಿಧಿಸುತ್ತಾರೆ. ಮೌಖಿಕ ಸಂಪ್ರದಾಯ ಮತ್ತು ಪುರಾಣಗಳಲ್ಲಿ ಎಲ್ಲವೂ ಅದರ ಸಾಂಸ್ಕೃತಿಕ ಅಸ್ತಿತ್ವವೇ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ, ಕಾಫಿಯ ಇತಿಹಾಸವು ಪ್ರಸ್ತುತವಾಗಿದೆ.

ಪರ್ಷಿಯನ್ ವೈದ್ಯ ಅಬೂಬಕರ್ ಮುಹಮ್ಮದ್ ಬಿನ್ ಝಕಾರಿಯಾ ರಾಝಿ ಅವರು ತಮ್ಮ ಆರೋಗ್ಯದ ಕುರಿತಾದ ಸಂಶೋಧನಾ ಸಂಗ್ರಹದಲ್ಲಿ (ಕಿತಾಬ್ ಅಲ್ ಹಾವೀ ಫೀ ತ್ವಿಬ್ಬ್ ) ಕಾಫಿಯನ್ನು ಉಲ್ಲೇಖಿಸಿದ್ದಾರೆ. 22 ಸಂಪುಟಗಳಲ್ಲಿ, ಪುಸ್ತಕವು ಹಿಪೊಕ್ರೆಟಿಸ್ ಮತ್ತು ಇತರ ಗ್ರೀಕ್ ವೈದ್ಯರ ಚಿಕಿತ್ಸಾ ವಿಧಾನ ಮತ್ತು ರಾಝೀ ಸ್ವಯಂ ಅಭಿವೃದ್ಧಿಗೊಳಿಸಿದ ಚಿಕಿತ್ಸೆಗಳನ್ನೂ ವಿವರಿಸುತ್ತದೆ. ಕಾಫಿ ಗ್ರೀಕ್ ಔಷಧದ ಭಾಗವಲ್ಲದಿದ್ದೂ ಕೂಡ, ಅದರ ನಾಲ್ಕು ಚಿಕಿತ್ಸಾ ಉಪಯೋಗಗಳನ್ನು ಅವರು ವಿವರಿಸುತ್ತಾರೆ. ಅವರು ಬರೆಯುತ್ತಾರೆ: “ಇದು ಉಷ್ಣ ದೇಹದವರಿಗೆ ಉತ್ತಮ ಆಹಾರವಾಗಿದೆ. ಆದಾಗ್ಯೂ, ಇದು ಲೈಂಗಿಕ ಬಯಕೆಯನ್ನು ಗಣನೀಯವಾಗಿ ಹತೋಟಿಯಲ್ಲಿಡುತ್ತದೆ.” ರಾಝಿ ಆರೋಗ್ಯವಂತ ಜನರ ಪಾನೀಯವೆಂದು ಕಾಫಿಯನ್ನು ಪರಿಚಯಿಸುತ್ತಾರೆ. ದೇಹವು ನಾಲ್ಕು ಅಂಶಗಳ ಸಂಯೋಜನೆಯೆಂದೂ ಅವುಗಳ ಅಸಮತೋಲನವೇ ಅನಾರೋಗ್ಯದ ಕಾರಣವೆಂಬ ಹಿಪೊಕ್ರೆಟಿಸ್ ನ ಚಿಕಿತ್ಸಾ ವಿಧಾನವನ್ನೇ ರಾಝೀ ಕೂಡ ಬಳಸುತ್ತಾರೆ. ಉತ್ತೇಜಕ ಪಾನೀಯವಾಗಿದ್ದೂ ಕೂಡ ಲೈಂಗಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಅಂಶವು ಕುತೂಹಲಕಾರಿಯಾಗಿದೆ.

ಇನ್ನೊಬ್ಬ ಪರ್ಷಿಯನ್ ವಿದ್ವಾಂಸ ಇಬ್ನ್ ಸೀನಾ ಅವರ ಬರಹಗಳಲ್ಲಿಯೂ ಕಾಫಿಯನ್ನು ಉಲ್ಲೇಖಗಳನ್ನು ಕಾಣಬಹುದು. ಅವರ ಕಿತಾಬ್ ಅಲ್-ಶಿಫಾ ಮತ್ತು ಅಲ್-ಖಾನುನ್ ಫಿ ತ್ವಿಬ್ ವೈದ್ಯಕೀಯಶಾಸ್ತ್ರದಲ್ಲಿ ಮೈಲಿಗಲ್ಲುಗಳು. ಕಿತಾಬು ಶಿಫಾ ಕಾಫಿಯನ್ನು ವಾಂತಿಗೆ ಪರಿಹಾರವಾಗಿ ಪರಿಚಯಿಸುತ್ತದೆ. ಮಧ್ಯಕಾಲೀನ ಇಟಾಲಿಯನ್ ಚಿಂತಕ ಪ್ರೊಸ್ಪ್ರೊ ಅಲ್ಪಿನಿ, ಇಬ್ನ್ ಸಿನಾ ಅವರನ್ನು ಉಲ್ಲೇಖಿಸಿದ್ದಾರೆ. ಮಧ್ಯಕಾಲೀನ ಟರ್ಕಿಶ್ ವಿದ್ವಾಂಸ ಕಾತೀಬು ಸೆಲ್ಬಿ ಬರೆಯುತ್ತಾರೆ: “ಖಿನ್ನತೆಯಿಂದ ಬಳಲುವವರಿಗೆ ಕಾಫಿ ಬಹಳ ಪರಿಣಾಮಕಾರಿ. ಆದರೆ ಅದರ ಅತಿಯಾದ ಬಳಕೆಯು ನಿದ್ರಾಹೀನತೆ ಮತ್ತು ತೀವ್ರ ಖಿನ್ನತೆಗೆ ಕಾರಣವಾಗಬಹುದು. ಇದನ್ನು ಸಿಹಿಯೊಂದಿಗೆ ಬಳಸುವುದು ಸೂಕ್ತ. ಸಣ್ಣಪುಟ್ಟ ಪರಿತ್ಯಾಗಿಗಳಿಗೆ ಡಿಕಾಕ್ಷನ್ ಕಾಫಿ ಅತ್ಯುತ್ತಮ ಪಾನೀಯವಾಗಿದೆ ”.

ಇಪ್ಪತ್ತನೇ ಶತಮಾನದ ಮೊದಲ ದಶಕಗಳಲ್ಲಿ ಕಾಫಿಯನ್ನು ಚಿಕಿತ್ಸೆಗಾಗಿ ಪರಿಗಣಿಸಲಾಗಿತ್ತು. ವಿಲಿಯಂ ಯುಕ್ ಅವರ ‘ಟೀ ಎಂಡ್ ಕಾಫಿ ಟ್ರೇಡ್ ಜರ್ನಲ್’ ಇಂತಹ ಸಮಸ್ಯೆಗಳನ್ನು ಬಗೆಹರಿಸಿತ್ತು. ಪ್ರಸ್ತುತ ಜರ್ನಲ್ ನಲ್ಲಿ ಅದನ್ನಿನವರಾದ ಶೇಖ್ ಕಮಾಲುದ್ದೀನ್ ರ ಚರಿತ್ರೆಯನ್ನು ಉಲ್ಲೇಖಿಸಲಾಗಿದೆ. ಅಲ್ ದಬಾನಿ ಎಂದೂ ಕರೆಯಲ್ಪಡುವ ಅದಾನ್ ನ ಮುಫ್ತಿಯಾಗಿದ್ದ ಮುಹಮ್ಮದ್ ಕಮಾಲುದ್ದೀನ್ ಅಬ್ಸೀನಿಯಾಗೆ ಹೋಗುತ್ತಿದ್ದ ಪ್ರಯಾಣ ಮಧ್ಯೆ ದಣಿದು ಬಸವಳಿದ ಒಬ್ಬ ವ್ಯಕ್ತಿಯು ಒಂದು ಕಪ್ ಕಾಫಿ ಕುಡಿದು ಆರೋಗ್ಯವನ್ನು ಮರಳಿ ಪಡೆಯುವುದನ್ನು ನೋಡುತ್ತಾರೆ. ಮನೆಗೆ ಮರಳಿದ ಮೇಲೆ ತನ್ನ ಅನಾರೋಗ್ಯದ ಸಂದರ್ಭದಲ್ಲಿ, ಅವರು ಇದೇ ಪಾನೀಯವನ್ನು ಕುಡಿದು ರೋಗಮುಕ್ತಿ ಪಡೆಯುತ್ತಾರೆ. ನಂತರ, ಕಮಾಲುದ್ದೀನ್ ಈ ಪಾನೀಯವನ್ನು ತನ್ನ ಶಿಷ್ಯರಿಗೆ ಪರಿಚಯಿಸಿದರು. ರಾತ್ರಿಯಿಡೀ ಆರಾಧನೆಯಲ್ಲಿ ಮುಳುಗಿರುವ ದರವೇಶಿಗಳಿಗೆ ಇದು ತುಂಬಾ ಉಪಯುಕ್ತವಾಗಿತ್ತು.

ಕಾಫಿ ಮತ್ತು ಸೂಫಿಗಳು

14 ಮತ್ತು 15 ನೇ ಶತಮಾನಗಳಲ್ಲಿ ಧಾರ್ಮಿಕ ಜಗತ್ತಿನಲ್ಲಿ ಕಾಫಿ ವ್ಯಾಪಕವಾಗಿ ಹರಡಿತು. ಇಸ್ಲಾಮಿಕ್ ಸೂಫಿ ಸಂಪ್ರದಾಯದ ಮೂಲಕ ಈ ಪ್ರಸರಣವು ನಡೆದಿತ್ತು. ಸೂಫಿಸಂ ಎಂಬುದು ದೇವರ ಸನ್ನಿಧಿ ಬಯಸಿ ಮಾಡುವ ನಿರಂತರ ಸಾಧನೆಯಾಗಿದೆ. ಇಸ್ಲಾಂನಲ್ಲಿ ಅಸಂಖ್ಯಾತ ಭಿನ್ನಾಭಿಪ್ರಾಯಗಳು ಮತ್ತು ವಿಭಜನೆಗಳನ್ನು ಮೀರಿದ ಕೆಲವು ಸಾಮಾನ್ಯ ನೆಲೆಯಲ್ಲಿ ಸೂಫಿಸಂ ಅಸ್ತಿತ್ವದಲ್ಲಿದೆ. ನಿರಂತರ ಆರಾಧನೆ/ಬಿನ್ನಹಗಳ ಮೂಲಕ ಸೂಫಿಗಳು ಯಾವಾಗಲೂ ದೈವಿಕ ಪ್ರೀತಿಯಲ್ಲಿರುತ್ತಾರೆ. ಸೂಫಿ ನೃತ್ಯವು ಅವರ ದೈವೀಪ್ರೇಮದ ಭಾಗವಾಗಿದೆ. 13 ನೇ ಶತಮಾನದಲ್ಲಿ ಜಲಾಲುದ್ದೀನ್ ರೂಮಿ ಇದನ್ನು ಪ್ರಾರಂಭಿಸಿದರು ಎಂದು ನಂಬಲಾಗಿದೆ. 14 ನೇ ಶತಮಾನದವರಾದ ಅಲಿ ಇಬ್ನ್ ಉಮರ್ ಅಲ್-ಶಾದುಲಿ (ರ) ಎಂದೂ ಅಭಿಪ್ರಾಯವಿದೆ. ಶಾದುಲಿ (ರ) ಕಾಫಿ ಮತ್ತು ಖತ್ತ್ (ಅರೇಬಿಯಾದಲ್ಲಿ ಕಾಫಿಗೆ ಸಮಾನವಾಗಿ ಬಳಸುವ ಒಂದು ರೀತಿಯ ಸೊಪ್ಪು) ನ್ನು ತನ್ನ ಸೂಫೀ ಸಭೆಗಳಲ್ಲಿ ಬಳಸಿದರು. ರಾತ್ರಿಯಿಡೀ ನಡೆಯುವ ಸೂಫೀ ಆರಾಧನೆಯ ಮೇಲೆ ಕಾಫಿಯ ಪ್ರಭಾವವನ್ನು ಖತೀಬು ಸಲ್ಬಿ ವಿವರಿಸುತ್ತಾರೆ. 15 ಮತ್ತು 16 ನೇ ಶತಮಾನಗಳ ಹೊತ್ತಿಗೆ, ಕಾಫಿ ನೀಡುವ ಚೈತನ್ಯ ಮತ್ತು ಹುರುಪು ಪ್ರಸಿದ್ಧವಾಯಿತು. ಸೂಫಿಗಳ ನಡುವೆ ಕಾಫಿಗಿದ್ದ ಜನಪ್ರಿಯತೆಯು ಜನಸಾಮಾನ್ಯರ ಮೇಲೆ ಪ್ರಭಾವ ಬೀರಿತು. ಇತರ ಸೆಮಿಟಿಕ್ ಧರ್ಮಗಳಾದ ಯಹೂದಿ-ಕ್ರಿಶ್ಚಿಯನ್ ಧರ್ಮಗಳಲ್ಲಿನ ರಾತ್ರಿಯ ಆರಾಧನೆಗಳ ವೇ

15 ನೇ ಶತಮಾನದ ವೇಳೆಗೆ ಕಾಫಿಯು ಇತರ ಮುಸ್ಲಿಂ ದೇಶಗಳಲ್ಲೂ ಜನಜನಿತವಾಯಿತು. ಮುಖ್ಯವಾಗಿ ಮೂರು ವಿಭಾಗದವರು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು.
ಒಂದು, ತೀರ್ಥಯಾತ್ರಿಗಳ ಗುಂಪು. ಮೆಕ್ಕಾ ಮತ್ತು ಇತರ ಪವಿತ್ರ ಸ್ಥಳಗಳಿಗಿರುವ ಮುಸ್ಲಿಮರ ಪ್ರಯಾಣವು ಸಾಂಸ್ಕೃತಿಕ ವಿನಿಮಯಕ್ಕೆ ತಕ್ಕ ಸಂದರ್ಭವಾಗಿತ್ತು. ಪರ್ಷಿಯಾ, ಈಜಿಪ್ಟ್, ಉತ್ತರ ಆಫ್ರಿಕಾ ಮತ್ತು ಟರ್ಕಿಯಂತಹ ಸ್ಥಳಗಳಲ್ಲಿ ಇಂತಹ ಪ್ರಭಾವವು ಪ್ರಬಲವಾಗಿತ್ತು. ಎರಡನೆಯದು, ಅರಬ್ ವ್ಯಾಪಾರಿಗಳು. ಕಾಫಿಯನ್ನು ದೈನಂದಿನ ಅವಶ್ಯಕತೆಯನ್ನಾಗಿ ಮಾಡುವಲ್ಲಿ ಅವರು ಯಶಸ್ವಿಯಾದರು. ಕಾಫಿಯ ಪರಿಚಯವಿಲ್ಲದ ಕಡೆಗಳಲ್ಲೂ ಅದನ್ನು ಅತ್ಯಗತ್ಯ ವಸ್ತುವನ್ನಾಗಿ ಮಾಡುವಂತಹ ವಹಿವಾಟುಗಳನ್ನು ಅವರು ಮಾಡುತ್ತಿದ್ದರು. ಮೂರನೆಯ ವಿಭಾಗ, ಸೂಫಿಗಳು ಮತ್ತು ಧಾರ್ಮಿಕ ನೇತಾರರು. ಮುಸ್ಲಿಮರ ಆರಾಧನಾ ಜೀವನದ ಭಾಗವಾಗಿ ಕಾಫಿಯನ್ನು ಚಿತ್ರಿಸಲು ಈ ವ್ಯಕ್ತಿಗಳ ಪ್ರಭಾವವು ಕಾರಣವಾಯಿತು.

ಮೂಲ: ಜಾನಟ್ ಪ್ರೇಗೂಲ್ಯ
ಕನ್ನಡಕ್ಕೆ: ಜುಬೇರ್ ಅಹಮ್ಮದ್ ಕೊಂಡಂಗೇರಿ

1 10 11 12 13 14 17