ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿ

ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿಯ ಬಗ್ಗೆ, ಅದರ ಇತಿಹಾಸದ ಬಗ್ಗೆ ಮಿತ್ರರಾದ ಪುನೀತ್ ಅಪ್ಪು ಅವರು ಬಹಳಷ್ಟು ಬಾರಿ ಹೇಳಿದ್ದರು. ಮಲಬಾರ್ ಇತಿಹಾಸದ ಬಗ್ಗೆ ಅವರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಅವರ ಮಾತುಗಳನ್ನು ಕೇಳಿದಾಗಲೆಲ್ಲ ಒಮ್ಮೆ ಈ ಮಸೀದಿಗೆ ಭೇಟಿ ನೀಡಬೇಕೆಂದು ಅನಿಸುತ್ತಿತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಮೊನ್ನೆ ಕೋಯಿಕ್ಕೋಡ್ ಭೇಟಿಯ ಸಂದರ್ಭದಲ್ಲಿ ಪುನೀತ್ ಅಪ್ಪು ಹಾಗೂ ಇನ್ನಿತರ ಗೆಳೆಯರೊಂದಿಗೆ ಮಿಶ್ಕಾಲ್ ಮಸೀದಿಗೆ ಹೋಗಲು ಸಾಧ್ಯವಾಯಿತು.

ಮಸೀದಿಗಿಂತ ಮೊದಲು ನಾವು ನೋಡಿದ್ದು ಮಸೀದಿಯ ಮುಂಭಾಗದಲ್ಲಿರುವ ಕುಟ್ಟಿಚ್ಚಿರ ಕೆರೆಯನ್ನು. ಮಿಶ್ಕಾಲ್ ಮಸೀದಿ ನಿರ್ಮಾಣಕ್ಕೆ ಮಣ್ಣು ತೆಗೆದಾಗ ಅಲ್ಲೊಂದು ಸುಂದರವಾದ ಕೆರೆ ನಿರ್ಮಾಣವಾಗಿತ್ತು. ಅದುವೇ ಪ್ರಸಿದ್ಧ ಕುಟ್ಟಿಚ್ಚಿರ ಕೆರೆ. ನಾವು ಹೋದಾಗ ಅಲ್ಲಿ ವಿಪರೀತ ಉರಿ ಬಿಸಿಲಿತ್ತು. ಮಳೆಯ ನಿರೀಕ್ಷೆಯಲ್ಲಿದ್ದ ಗೆಳೆಯರಿಗೆ ನಿರಾಶೆಯಾಗಿತ್ತು.

ಕುಟ್ಟಿಚ್ಚಿರ ಕೆರೆ ವಿಶಾಲವಾಗಿತ್ತು. ಕೆರೆಯಲ್ಲಿ ಕೆಲವರು ಸ್ನಾನ ಮಾಡುತ್ತಿದ್ದರು. ಮಕ್ಕಳು ಈಜುತ್ತಾ, ಇತರರ ಮೇಲೆ ನೀರೆರೆಚುತ್ತಾ ಆಟವಾಡುತ್ತಿದ್ದರು. ಆದರೆ, ಕೆರೆಯ ನೀರು ಎಷ್ಟು ಕೊಳಕಾಗಿತ್ತು ಎಂದರೆ ನೀರಿಗೆ ಇಳಿಯಲು ನಮ್ಮಲ್ಲಿ ಯಾರಿಗೂ ಮನಸ್ಸಾಗಲಿಲ್ಲ. ಮೆಟ್ಟಿಲ ಮೇಲೆ ಕುಳಿತು ಕೆರೆಯ ನೀರಿಗೆ ಕಾಲುಗಳನ್ನು ಇಳಿಬಿಟ್ಟು ‘ಫಿಶ್ ಥೆರಪಿ’ ಮಾಡಿಸಿಕೊಳ್ಳುವ ಆಸೆಯಿದ್ದರೂ ನೀರನ್ನು ನೋಡಿದಾಗ ಯಾಕೋ ಬೇಡವೆನಿಸಿತು. ದಟ್ಟ ವಾಸನೆಗೆ ಮೂಗು ಮುಚ್ಚಿ ನಡೆಯಬೇಕಾದ ಪರಿಸ್ಥಿತಿಯಿತ್ತು. ಮೀನುಗಳು‌ ಸತ್ತು ಮೂಲೆಯಲ್ಲಿ ರಾಶಿಬಿದ್ದಿದ್ದವು.

ಜೊತೆಗಿದ್ದ ಗೆಳೆಯ ಮುನವ್ವರ್ ಜೋಗಿಬೆಟ್ಟು ಕೆರೆಯನ್ನು ನೋಡುತ್ತಾ ಆಳವಾದ ಯೋಚನೆಗೆ ಬಿದ್ದಿದ್ದರು. ಬಹುಶಃ ಕೆರೆಯ ಪರಿಸರವನ್ನಿಟ್ಟುಕೊಂಡು ಹೊಸ ಕಥೆ ಬರೆಯುವ ಕುರಿತು ಯೋಚಿಸುತ್ತಿದ್ದರೇನೋ? ಮಿತ್ರರಾದ ಯಂಶ ಬೇಂಗಿಲ ಮತ್ತು ಸಿನಾನ್ ಇಂದಬೆಟ್ಟು ಅವರು ಪುನೀತ್ ಅಪ್ಪುರವರನ್ನು ತಮ್ಮ ಶಾಶ್ವತ ಗೈಡ್ ಮಾಡಿಕೊಂಡಿದ್ದರು.‌ ನನಗಂತೂ ಸತ್ತ‌ ಮೀನುಗಳ ದಟ್ಟ ವಾಸನೆಯಿಂದ ಕೂಡಿದ್ದ ಆ ಕೆರೆಯನ್ನು ನೋಡುವುದೇ ಹಿಂಸೆಯೆನಿಸುತ್ತಿತ್ತು. ಭ್ರಷ್ಟಾಚಾರದಿಂದ ಕೊಳೆತು ಹೋಗಿರುವ ಇಂದಿನ ವ್ಯವಸ್ಥೆಗೆ ಆ ಕೆರೆ ರೂಪಕದಂತಿತ್ತು.‌

ಕೆರೆಯ ಸುತ್ತಲಿನ ಆವರಣದಲ್ಲಿ ಸಾಮೂದಿರಿ ರಾಜರ ಕಾಲದ ಮಲಬಾರ್ ಇತಿಹಾಸವನ್ನು ಕೆತ್ತಲಾಗಿದೆ. ಅರಬ್ ವ್ಯಾಪಾರಿಗಳ ಕೇರಳ ಪ್ರವೇಶ, ಪೋರ್ಚುಗೀಸ್ ನಾವಿಕರು, ಸಾಮೂದಿರಿ ರಾಜರು ಹಾಗೂ ಕುಂಞಾಲಿ ಮರಕ್ಕಾರ್ ಮೊದಲಾದವರ ಇತಿಹಾಸ, ಸುನ್ನತಿ, ಒಪ್ಪನಪ್ಪಾಟ್ಟ್ ಮೊದಲಾದ ಮಲಬಾರಿನ ಇಸ್ಲಾಮಿಕ್ ಸಂಸ್ಕೃತಿಯನ್ನು ಗೋಡೆಯ ಮೇಲಿನ ಕಲಾಕೃತಿಗಳಲ್ಲಿ ಸುಂದರವಾಗಿ ಕೆತ್ತಲಾಗಿದೆ. ಪುನೀತ್ ಅಪ್ಪು ಅವರು ಆ ಇತಿಹಾಸಗಳನ್ನು ವಿವರಿಸುತ್ತಲೇ ತಮ್ಮ ಮೊಬೈಲ್ ನಿಂದ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಇತಿಹಾಸ ಜ್ಞಾನ ಬೆರಗು ಹುಟ್ಟಿಸುತ್ತಿತ್ತು. ಅವರು ಜೊತೆಯಲ್ಲಿದ್ದುದರಿಂದ ನಮಗೆ ಪ್ರತ್ಯೇಕ ಗೈಡ್‌ನ ಅವಶ್ಯಕತೆ ಬೀಳಲಿಲ್ಲ. ವಕೀಲಿ ವೃತ್ತಿಯಲ್ಲಿರುವುದರಿಂದಲೋ ಏನೋ, ಮಾತುಗಾರಿಕೆ ಅವರಿಗೆ ಚೆನ್ನಾಗಿ ಒಲಿದಿದೆ.

ಬಿಸಿಲಿನ ಝಳ ಹೆಚ್ಚಾಗುತ್ತಲೇ ಹೋದಾಗ ನಾವು ಕೆರೆಯನ್ನು ಅದರ ಪಾಡಿಗೆ ಬಿಟ್ಟು ನೇರವಾಗಿ ಮಿಶ್ಕಾಲ್ ಮಸೀದಿಯ ಕಡೆಗೆ ಹೊರಟೆವು.

ಆಕಾಶಕ್ಕೆ ಕಲಶವಿಟ್ಟಂತಿದ್ದ ಮಿಶ್ಕಾಲ್ ಮಸೀದಿ ನಿರ್ಮಲವಾಗಿ ಕಾಣಿಸಿತು. ಮಸೀದಿಯ ಸುತ್ತಲೂ ಆವರಿಸಿದ್ದ ಮೌನ, ಅದರ ಪುರಾತನ ಸೌಂದರ್ಯ ನಮ್ಮಲ್ಲಿ ವಿಶಿಷ್ಟ ಭಾವನೆಗಳನ್ನು ಉದ್ದೀಪಿಸುತ್ತಿತ್ತು. ಮಸೀದಿಯಿಂದ ಕಣ್ಣು ಕೀಳುವುದೇ ಸಾಧ್ಯವಾಗುತ್ತಿರಲಿಲ್ಲ. ಅದರ ಸಹಜ ಸೌಂದರ್ಯಕ್ಕೆ‌ ನನ್ನ ಮನಸು ಮಾರು ಹೋಗಿತ್ತು.‌

ಮಸೀದಿಯ ಮುಖ್ಯದ್ವಾರದ ಮೂಲಕವೇ ನಾವು ಆವರಣಕ್ಕೆ ಪ್ರವೇಶಿಸಿದೆವು. ಸಾಲಾಗಿ ನಿಂತಿರುವ ನೀಲಿ ಬಣ್ಣದ ಹತ್ತಾರು ಕಮಾನುಗಳು ತಕ್ಷಣವೇ ನಮ್ಮ ಗಮನ ಸೆಳೆದವು. ಹಿಂದೂ–ಮುಸ್ಲಿಂ ವಾಸ್ತುಶಿಲ್ಪ ಶೈಲಿಗಳ ಸಂಗಮದಲ್ಲಿ ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.‌ ಈ ಮಸೀದಿಯನ್ನು ಕ್ರಿ.ಶ. 1340ರ ಸುಮಾರಿಗೆ ನಿರ್ಮಿಸಲಾಯಿತು. ಒಮ್ಮೆ ಸುಮಾರು ನಲವತ್ತು ಹಡಗುಗಳ ಮಾಲೀಕರಾಗಿದ್ದ ಯೆಮನ್ ಮೂಲದ ವ್ಯಾಪಾರಿ ನೆಖೂದ ಮಿಶ್ಕಾಲ್, ವ್ಯಾಪಾರಕ್ಕಾಗಿ ಪ್ರಸಿದ್ಧವಾಗಿದ್ದ ಕೋಯಿಕ್ಕೋಡಿಗೆ ಬಂದರು. ಅವರಿಗೆ ಅಲ್ಲಿ ದೂರದೂರಿನಿಂದ ಬರುವ ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಸೂಕ್ತ ತಾಣವೊಂದರ ಕೊರತೆ ಕಂಡುಬಂತು. ಕೂಡಲೇ ಅವರು ಪ್ರಯಾಣಿಕರು ತಂಗಲು ಹಾಗೂ ಆರಾಧನೆ ನಡೆಸಲು ಒಂದು ಕೇಂದ್ರವನ್ನು ನಿರ್ಮಿಸುವ ಸಂಕಲ್ಪ ಮಾಡಿದರು. ಅದಕ್ಕಾಗಿ ಸಾಮೂದಿರಿ ರಾಜರ ಬಳಿ ತೆರಳಿ ಜಾಗವನ್ನು ಕೋರಿದರು. ಮಾಪಿಳ್ಳ ಸಮುದಾಯದ ಮುಖಂಡರು ಹಾಗೂ ತೆಕ್ಕೆಪ್ಪುರದ ಕೋಯಮಾರರೊಂದಿಗೆ ಸಮಾಲೋಚನೆ ನಡೆಸಿದ ಸಾಮೂದಿರಿ ರಾಜರು ಕುಟ್ಟಿಚ್ಚಿರದಲ್ಲಿ ಜಾಗವನ್ನು ನೀಡಿದರು. ನೆಖೂದ ಮಿಶ್ಕಾಲ್ ಅಲ್ಲಿ ಮಸೀದಿಯನ್ನು ನಿರ್ಮಿಸಿದರು. ಅದುವೇ ಇಂದಿನ ಮಿಶ್ಕಾಲ್ ಮಸೀದಿ.

ಮಿಶ್ಕಾಲ್ ಮಸೀದಿ ಕೇರಳದ ಅತ್ಯಂತ ಪ್ರಾಚೀನ ಮತ್ತು ಐತಿಹಾಸಿಕ ಮಸೀದಿಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಮಸೀದಿಗಳಲ್ಲಿ ಕಾಣುವ ಎತ್ತರದ ಮಿನಾರಗಳು ಇಲ್ಲದಿರುವುದು ಇದರ ವಿಶೇಷತೆ. ಕೇರಳದ ಸಾಂಪ್ರದಾಯಿಕ ದೇವಾಲಯಗಳ ವಾಸ್ತುಶಿಲ್ಪದ ಪ್ರಭಾವ ಇದರ ನಿರ್ಮಾಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮರದ ಕೆತ್ತನೆಗಳು, ಇಳಿಜಾರು ಛಾವಣಿ ಮತ್ತು ಬಹುಮಹಡಿ ವಿನ್ಯಾಸವು ಇದನ್ನು ಭಾರತದ ಇಸ್ಲಾಮಿಕ್ ವಾಸ್ತುಶಿಲ್ಪದ ವಿಶಿಷ್ಟ ಮಾದರಿಯನ್ನಾಗಿ ಮಾಡಿದೆ.

ಮಸೀದಿಯ ಒಳಭಾಗದ ವಿನ್ಯಾಸವಂತೂ ಅದ್ಭುತವಾಗಿತ್ತು.‌ ನಾವು ಮಸೀದಿಯನ್ನು ನೋಡುತ್ತಿರಬೇಕಾದರೆ ಮುಕ್ರಿಕಾ ನಮ್ಮ‌ ಹಿಂದೆಯೇ ಬಂದರು.‌ ನಾವು ಅಲ್ಲಲ್ಲಿ‌ ನಿಂತು ಪೋಟೋ ತೆಗೆಸಿಕೊಳ್ಳುತ್ತಿದ್ದೆವು. ಪುನೀತ್ ಅಪ್ಪು ಅವರು ಗೈಡ್ ಸ್ಥಾನದಿಂದ‌ ಫೋಟೋಗ್ರಫಿಗೆ ಧುಮುಕಿದ್ದರು. ಛಾಯಾಗ್ರಹಣದ ಬಗ್ಗೆ ಅವರಿಗೆ ಅವರದೇ ಆದ ವಿಶಿಷ್ಟ ಜ್ಞಾನ ಹಾಗೂ ಕಲ್ಪನೆಗಳಿದ್ದವು.‌ ಯಂಶ ಬೇಂಗಿಲರಿಗೆ ಈಗಲೂ ಉಳಿದಿರುವ ಮಸೀದಿಯ ಸುಟ್ಟ ಭಾಗವನ್ನು ನೋಡುವ ತವಕ.‌ ಮುಕ್ರಿಕಾ ಗೈಡ್ ಆಗಿ ನಮ್ಮ ಜೊತೆಗೆ ನಿಂತರು.‌ ಪೋರ್ಚುಗೀಸರ ಕ್ರೌರ್ಯದ ಕುರುಹಾಗಿ ಆ ಸುಟ್ಟ ಬೀಮ್ ಇಂದಿಗೂ ಅಲ್ಲಿಯೇ ಉಳಿದಿದೆ.

ಅದರ ಇತಿಹಾಸ ಹೀಗಿದೆ; 1498ರ ಮೇ 20ರಂದು ಪೋರ್ಚುಗೀಸ್ ನಾವಿಕ ವಾಸ್ಕೋಡ ಗಾಮ ಕೋಯಿಕ್ಕೋಡ್ ಸಮೀಪದ ಕಾಪ್ಪಾಡ್ ಕರಾವಳಿಗೆ ತಲುಪಿದನು. ಯುರೋಪಿನಿಂದ ಭಾರತಕ್ಕೆ ಸಮುದ್ರಮಾರ್ಗವನ್ನು ಕಂಡುಹಿಡಿಯುವುದು ಅವನ ಪ್ರಮುಖ ಉದ್ದೇಶವಾಗಿತ್ತು. ಜೊತೆಗೆ ಅರಬ್ ವ್ಯಾಪಾರಿಗಳ ನಿಯಂತ್ರಣದಲ್ಲಿದ್ದ ಮಸಾಲೆ ವ್ಯಾಪಾರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಮತ್ತು ಹಿಂದೂ ಮಹಾಸಾಗರದಲ್ಲಿ ಪೋರ್ಚುಗೀಸ್ ಪ್ರಭುತ್ವ ಸ್ಥಾಪಿಸುವ ಉದ್ದೇಶವೂ ಅವರಿಗಿತ್ತು. ಆರಂಭದಲ್ಲಿ ಸಾಮೂದಿರಿಯೊಂದಿಗೆ ವ್ಯಾಪಾರ ಸಂಬಂಧ ಬೆಳೆಸಲು ಪ್ರಯತ್ನಿಸಿದರೂ, ನಂತರ ವ್ಯಾಪಾರ ಹಿತಾಸಕ್ತಿಗಳ ಸಂಘರ್ಷದಿಂದ ಪೋರ್ಚುಗೀಸರು ಮತ್ತು ಮಲಬಾರಿನ ಸ್ಥಳೀಯ ಶಕ್ತಿಗಳ ನಡುವೆ ಘರ್ಷಣೆಗಳು ಆರಂಭವಾದವು.

ಮಲಬಾರ್ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದ ಇತಿಹಾಸಕಾರ ಸೆಬಾಸ್ಟಿಯನ್ ಆರ್. ಪೆರಂಜೆ ಅವರ ಅಭಿಪ್ರಾಯದಂತೆ, ಮಲಬಾರಿನಲ್ಲಿ ಪೋರ್ಚುಗೀಸರ ಹೋರಾಟವು ಕೇವಲ ಧಾರ್ಮಿಕ ಸಂಘರ್ಷವಾಗಿರಲಿಲ್ಲ; ಅದು ಹಿಂದೂ ಮಹಾಸಾಗರದ ವ್ಯಾಪಾರ ಮಾರ್ಗಗಳು ಮತ್ತು ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣಕ್ಕಾಗಿ ನಡೆದ ರಾಜಕೀಯ ಹಾಗೂ ಆರ್ಥಿಕ ಪೈಪೋಟಿಯ ಭಾಗವಾಗಿತ್ತು. ಇದೇ ಕಾರಣದಿಂದ ಕೋಯಿಕ್ಕೋಡಿನ ಸಾಮೂದಿರಿಯೂ, ಅರಬ್–ಮಾಪಿಳ್ಳ ವ್ಯಾಪಾರಿಗಳೂ ಪೋರ್ಚುಗೀಸರ ಪ್ರಮುಖ ಎದುರಾಳಿಗಳಾಗಿ ಮಾರ್ಪಟ್ಟರು.

ಮಲಬಾರಿನ ಅರಬ್–ಮಾಪಿಳ್ಳ ವ್ಯಾಪಾರ ಜಾಲವನ್ನು ದುರ್ಬಲಗೊಳಿಸಿ, ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣವನ್ನು ತಮ್ಮ ಕೈಗೆ ಪಡೆಯುವುದು ಪೋರ್ಚುಗೀಸರ ಪ್ರಮುಖ ಗುರಿಯಾಗಿತ್ತು. ಇದರಿಂದ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳೊಂದಿಗೆ ಹಾಗೂ ಸಾಮೂದಿರಿಯ ಆಡಳಿತದೊಂದಿಗೆ ಸಂಘರ್ಷಗಳು ತೀವ್ರಗೊಂಡವು.

ಈ ಸಂಘರ್ಷಗಳ ನಡುವೆಯೇ, 1510ರ ಜನವರಿ 3ರಂದು (ರಂಝಾನ್ 22) ಅಫೊನ್ಸೊ ಡಿ ಅಲ್ಬುಕರ್ಕ್ ನೇತೃತ್ವದಲ್ಲಿ ಪೋರ್ಚುಗೀಸರು ಕುಟ್ಟಿಚ್ಚಿರದ ಮೇಲೆ ದಾಳಿ ನಡೆಸಿದರು. ಮಾಪಿಳ್ಳ ಸಮುದಾಯದ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದ ಮಿಶ್ಕಾಲ್ ಮಸೀದಿಯನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಿದರು. ಇದು ಕೇವಲ ಒಂದು ಕಟ್ಟಡದ ಮೇಲಿನ ದಾಳಿಯಾಗಿರಲಿಲ್ಲ; ಕೋಯಿಕ್ಕೋಡಿನ ಮುಸ್ಲಿಂ ವ್ಯಾಪಾರಿ ಸಮುದಾಯದ ಪ್ರಭಾವವನ್ನು ಕುಗ್ಗಿಸುವ ಮತ್ತು ಸ್ಥಳೀಯ ಜನರಲ್ಲಿ ಭಯ ಹುಟ್ಟಿಸುವ ರಾಜಕೀಯ ಸಂದೇಶವೂ ಅದರ ಹಿಂದೆ ಅಡಗಿತ್ತು ಎಂದು ಇತಿಹಾಸಕಾರರು ಸೂಚಿಸುತ್ತಾರೆ.

ಸಾಮೂದಿರಿಯ ಅಧೀನದಲ್ಲಿದ್ದ ಮುಸ್ಲಿಮರು ಮತ್ತು ನಾಯರ್‌ಗಳನ್ನು ಒಳಗೊಂಡ ಸೇನೆ ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸಿತು. ಹಿಂದೂಗಳಾಗಿದ್ದ ಸಾಮೂದಿರಿಗಳು ಮುಸ್ಲಿಮರ ಮಸೀದಿಯ ರಕ್ಷಣೆಗೆ ಸರ್ವ ಪ್ರಯತ್ನಗಳನ್ನು ಮಾಡಿದರು. ಆದರೆ, ಮಸೀದಿಯ ಹಲವು ಭಾಗಗಳು ಸುಟ್ಟು ಹೋದವು.‌

 ಕುಟ್ಟಿಚ್ಚಿರದ ಜನರಿಗೆ ಮರೆಯಲಾಗದ ಆ ಉಪವಾಸದ ದಿನಗಳ ಕರಾಳ ನೆನಪಿನ ಗುರುತುಗಳು ಇಂದಿಗೂ ಮಸೀದಿಯ ಮೇಲ್ಮಹಡಿಯ ಸ್ತಂಭಗಳಲ್ಲಿ ಕಾಣಿಸುತ್ತವೆ.

ವಸಾಹತುಶಾಹಿಯ ವಿರುದ್ಧ ಮಲಬಾರಿನ ಎರಡು ಪ್ರಬಲ ಸಮುದಾಯಗಳು ಒಂದಾಗಿ ಹೋರಾಡಿದ ಪರಿಣಾಮವಾಗಿಯೇ 1571ರಲ್ಲಿ ಚಾಲಿಯಂ ಕೋಟೆ ಸಾಮೂದಿರಿಯ ವಶಕ್ಕೆ ಬಂದಿತು. ಹಾನಿಗೊಂಡಿದ್ದ  ಮಿಶ್ಕಾಲ್ ಮಸೀದಿಯನ್ನು ಚಾಲಿಯಂ ಕೋಟೆಯ ಮರದ ಸಾಮಗ್ರಿಗಳಿಂದ ಸಾಮೂದಿರಿಗಳು ಪುನರ್‌ನಿರ್ಮಿಸಿ‌ಕೊಟ್ಟರು. ಹಿಂದೂ ಮುಸ್ಲಿಮರ ನಡುವೆ ಬಿರುಕು ಮೂಡಿಸಿ, ಹಿಂದೂ ಮಹಾಸಾಗರದ ವ್ಯಾಪಾರ ಮಾರ್ಗಗಳು ಮತ್ತು ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣವನ್ನು ಸುಲಭವಾಗಿ ಪಡೆದುಕೊಳ್ಳುವ ಪೋರ್ಚುಗೀಸರ ಹುನ್ನಾರಕ್ಕೆ ಸಾಮೂದಿರಿ ರಾಜರು ಹಾಗೂ ಕುಂಞಾಲಿ ಮರಕ್ಕಾರ್ ಯೋಧರು ಅಡ್ಡಿಯಾದರು. ಇವರಿಬ್ಬರ ನಡುವಿನ ಬಾಂಧವ್ಯ ಪೋರ್ಚುಗೀಸರ ಪಾಲಿಗೆ ದುಃಸ್ವಪ್ನವಾಗಿತ್ತು.

ವಿಶಾಲವಾದ ತೆರೆದ ಪ್ರದೇಶದಲ್ಲಿ ಎತ್ತರವಾಗಿ ನಿಂತಿರುವ ಮಿಶ್ಕಾಲ್ ಮಸೀದಿಯ ಅಡಿಪಾಯವನ್ನು ಚೌಕಾಕಾರದ ಕಲ್ಲುಗಳಿಂದ ನಿರ್ಮಿಸಲಾಗಿದೆ. ನಾಲ್ಕು ದಿಕ್ಕುಗಳಲ್ಲೂ ವರಾಂಡ ಹೊಂದಿರುವ ಅಪರೂಪದ ಮಸೀದಿಗಳಲ್ಲಿ ಇದೂ ಒಂದು. ನಾಲ್ಕು ಬದಿಗಳಲ್ಲೂ ಅರ್ಧವೃತ್ತಾಕಾರದ ಬಾಗಿಲುಗಳಿವೆ. ಸುತ್ತುಗೋಡೆಗಳು ಮತ್ತು ಮರದ ಕಂಬಗಳು ಮೇಲ್ಛಾವಣಿಯನ್ನು ತೂಗಿ ನಿಲ್ಲಿಸುತ್ತವೆ.

ನಾವು ಮಸೀದಿಯ ಪ್ರಾಂಗಣದಲ್ಲಿದ್ದ ಕೊಳದ ಹತ್ತಿರ ಹೋದೆವು.‌ ಕೊಳದ ನೀರು ತಣ್ಣಗಿತ್ತು. ಬಿಸಿಲಲ್ಲಿ ಬೆಂದು ಹೋಗಿದ್ದ ಮುಖಕ್ಕೆ ತಣ್ಣೀರು ಚಿಮುಕಿಸಿದಾಗ ಹೊಸ ಉತ್ಸಾಹ ಮೂಡಿತು.‌ ಕೊಳದ ಮೇಲೆ ಕಾಂಕ್ರೀಟ್ ದೋಣಿಯನ್ನು ನಿಲ್ಲಿಸಿದ್ದರು. ಅದರೊಳಗೆ ಕೋಲಿನ ಪ್ಲಾಸ್ಟಿಕ್ ಮಗ್ ಗಳನ್ನು ಕಟ್ಟಿಟ್ಟಿದ್ದರು. ಅದರಿಂದ ನೀರು ಬಾಚಿ ಕಾಲು ತೊಳೆದು,‌ ಮೆಟ್ಟಿಲು ಹತ್ತಿ ಮೇಲ್ಭಾಗಕ್ಕೆ ಹೋದೆವು. ಕೆಳಗಿನ ಅಂತಸ್ತು ಬಿಟ್ಟರೆ, ಮೇಲಿನ ಮೂರು ಅಂತಸ್ತನ್ನೂ ಸಂಪೂರ್ಣವಾಗಿ ಮರದಿಂದಲೇ ನಿರ್ಮಿಸಲಾಗಿತ್ತು.

ವಿಶಿಷ್ಟ ವಾಸ್ತುಶಿಲ್ಪವೇ ಮಿಶ್ಕಾಲ್ ಮಸೀದಿಯ ಸೌಂದರ್ಯವನ್ನು ಹೆಚ್ಚಿಸಿದೆ. ಗೋಡೆಗಳನ್ನು ದಪ್ಪದ ಕೆಂಪು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಸುಣ್ಣದ ಮಿಶ್ರಣವನ್ನು ಕಲ್ಲಿನ ಕೆಲಸಕ್ಕೂ ಲೇಪನಕ್ಕೂ ಬಳಸಲಾಗಿದೆ. ಇಳಿಜಾರು ಛಾವಣಿ ಮತ್ತೊಂದು ವಿಶೇಷತೆ. ಮರದ ಕಂಬಗಳನ್ನು ವಿಶೇಷ ರೀತಿಯಲ್ಲಿ ಜೋಡಿಸಿ, ಅದರ ಮೇಲೆ ಹಲಗೆಗಳನ್ನು ಅಳವಡಿಸಿ ಮಂಗಳೂರು ಹೆಂಚುಗಳನ್ನು ಹಾಸಲಾಗಿದೆ. ಈ ಹೆಂಚುಗಳನ್ನು ಸೂಕ್ಷ್ಮವಾಗಿ ಗಮನಿಸಿ ಪೋಟೋಗಳನ್ನು ತೆಗೆಯುತ್ತಿದ್ದ ಪುನೀತ್ ಅಪ್ಪು ಅವರು ಅದರ ಮೇಲಿದ್ದ ಇಸವಿ ಹಾಗೂ ಕಂಪನಿಯ ಹೆಸರುಗಳನ್ನು ನಮಗೆ ತೋರಿಸಿದರು.‌‌

ಮಸೀದಿಯ ಮೇಲಿನ ಮೂರು ಮಹಡಿಗಳನ್ನು ಸಂಪೂರ್ಣವಾಗಿ ಮರದಿಂದ ನಿರ್ಮಿಸಲಾಗಿದೆ. ಮಸೀದಿಯ ಒಳಗೆ ಮೇಲ್ಮಹಡಿಗಳನ್ನು ಸಂಪರ್ಕಿಸುವ ಎರಡು ತೇಗದ ಕಂಬಗಳಿವೆ. ಚೌಕಾಕಾರ ಮತ್ತು ಅಷ್ಟಕೋನಾಕಾರದ ವಿನ್ಯಾಸಗಳಲ್ಲಿ ಪರ್ಯಾಯವಾಗಿ ರೂಪುಗೊಂಡಿರುವ ಈ ಕಂಬಗಳಲ್ಲಿ ಕೆಳಗಿನಿಂದ ಮೇಲಿನವರೆಗೆ ಸುಂದರ ಕೆತ್ತನೆಗಳಿವೆ.

ಮೇಲ್ಮಡಿಯನ್ನು ನೋಡಿ ಕೆಳಗಿಳಿದ ನಮಗೆ ಮುಕ್ರಿಕಾ ಪಲ್ಲಕ್ಕಿಯನ್ನು ತೋರಿಸಿದರು.‌ ಹಿಂದೆ ಖಾಝಿಗಳು ಸಂಚರಿಸಲು ಬಳಸುತ್ತಿದ್ದ ಪಲ್ಲಕ್ಕಿಯದು. ಆ ಪಲ್ಲಕ್ಕಿಯನ್ನು ಹೊರಲು ಮೂವರು ಕೆಲಸಗಾರರು ಇರುತ್ತಿದ್ದರು. ಇಬ್ಬರು ಪಲ್ಲಕ್ಕಿಯನ್ನು ಹೊತ್ತುಕೊಂಡು ನಡೆಯುವಾಗ ಇನ್ನೊಬ್ಬ ಅವರಿಗೆ ಬದಲಿಯಾಗಿ ಅವರೊಂದಿಗೆ ನಡೆಯುತ್ತಿದ್ದನು ಎಂದು ಮುಕ್ರಿಕಾ‌ ಹೇಳಿದರು. ಪಲ್ಲಕ್ಕಿಯ ಮೇಲೆ‌ ಸುಂದರವಾದ ಚಿತ್ರಗಳನ್ನು ಬಿಡಿಸಿದ್ದರು.‌ ಅದರಲ್ಲೊಂದು ಚಿತ್ರ ನನ್ನ ಗಮನ ಸೆಳೆಯಿತು. ಅದೊಂದು ಹೂದಾ‌ನಿಯ ಚಿತ್ರ.‌‌ ಹೂದಾನಿಯಿಂದ ಮೂರು ಹೂವುಗಳು ಮತ್ತು ಸುರುಳಿ ಆಕಾರದ ಎಲೆಗಳು ಮೇಲಕ್ಕೆ ಚಾಚಿಕೊಂಡಿವೆ.

ಹೂದಾನಿಯ ಮಧ್ಯಭಾಗದಲ್ಲಿ ವೃತ್ತಾಕಾರದ ವಿನ್ಯಾಸ ಇದೆ.‌ ನಾಲ್ಕು ಮೂಲೆಗಳಲ್ಲೂ ಅರ್ಧ ಸೂರ್ಯ ಅಥವಾ ಕಮಲದ ದಳಗಳಂತಿರುವ ಆಲಂಕಾರಿಕ ಚಿತ್ತಾರವನ್ನು ಬಿಡಿಸಲಾಗಿದೆ.‌ ಚಿತ್ರವನ್ನು ಗಾಢ ಕಂದು ಬಣ್ಣದ ಮರದ ಫಲಕದ ಮೇಲೆ ಹಳದಿ, ಹಸಿರು ಮತ್ತು ಗುಲಾಬಿ ಬಣ್ಣಗಳಿಂದ ಚಿತ್ರಿಸಲಾಗಿದೆ. ನಾನು ಅದರ ಪೋಟೋಗಳನ್ನು‌ ಕ್ಲಿಕ್ಕಿಸಿದೆ.‌

 ಮುಅಝಿನ್ ನಮ್ಮನ್ನು ಮಸೀದಿಯ ಇನ್ನೊಂದು ಭಾಗಕ್ಕೆ ಕರೆದೊಯ್ದರು. ಅಲ್ಲಿ ಅನೇಕ ಐತಿಹಾಸಿಕ ವಸ್ತುಗಳು ಇದ್ದವು. ಕತ್ತಲಲ್ಲಿ ಹಳೆಯ ಅಲಮಾರವಿತ್ತು. ಅದರಲ್ಲಿ 600 ವರ್ಷಗಳಷ್ಟು ಹಳೆಯ ಗ್ರಂಥಗಳಿದ್ದವು. ಅಲಮಾರದಿಂದ ಒಂದು ಗ್ರಂಥವನ್ನು ತೆಗೆದು ಮುಕ್ರಿಕಾ ಇದು 600 ವರ್ಷಗಳಷ್ಟು ಹಳೆಯ, ಕೈಯಲ್ಲಿ ಬರೆದ ಗ್ರಂಥವೆಂದು ತೋರಿಸಿದರು.‌ ಯಾಕೋ ನಮಗೆ ನಂಬುವುದು ಕಷ್ಟವಾಯಿತು. ಮುನವ್ವರ್ ಅದರ ಮೇಲೆ ಮೊಬೈಲ್ ಟಾರ್ಚ್ ಲೈಟ್ ಹಾಕಿ ನೋಡಿ, ‘ಇಮಾಮ್ ಗಝ್ಝಾಲಿಯವರು ಬರೆದಿರುವ ‘ಇಹ್ಯಾ ಉಲೂಮುದ್ದೀನ್’ ಎಂದರು. 

ನಮ್ಮ ಮುಂದಿದ್ದ ಮೇಜಿನ ಮೇಲೆ ಒಂದು ತೆಂಗಿನ ಕಾಯಿಯನ್ನು ಇಟ್ಟಿದ್ದರು.‌ ಅದು ಸುಮಾರು ಇನ್ನೂರು ವರ್ಷಗಳಷ್ಟು ಹಳೆಯದ್ದೆಂದು ಮುಕ್ರಿಕಾ ಹೇಳಿದರು. ಅದನ್ನೂ ನಂಬಲು ನಮ್ಮಿಂದ ಸಾಧ್ಯವಾಗಲಿಲ್ಲ.‌ ಅಲ್ಲೇ ಕೆಳಗೆ ಬೆಂಚಿನ ಮೇಲೆ ಚಪ್ಪಲಿಗಳಿದ್ದವು. ಅವು ಯಾರದ್ದೆಂದು ಕೇಳಿದಾಗ ಸಾಮೂದಿರಿ ರಾಜರ ಕಾಲದದ್ದೆಂದು ಉತ್ತರ ಬಂತು.‌

ಕೋಣೆಯ ಒಂದು ಮೂಲೆಯಲ್ಲಿದ್ದ ನಗಾರಿಯೊಂದು ನಮ್ಮ ಗಮನ ಸೆಳೆಯಿತು. ಸ್ಥಳೀಯರು ಇದನ್ನು ‘ತಾಂಬಾರ್’ ಎನ್ನುತ್ತಾರಂತೆ. ಮೊದಲ ನೋಟಕ್ಕೆ ಅದೊಂದು ಬೃಹತ್ ಡೋಲಿನಂತೆ ಕಂಡರೂ, ಅದರ ಹಿಂದೆ ಒಂದು ಕಾಲಘಟ್ಟದ ಸಾಮಾಜಿಕ ಇತಿಹಾಸವೇ ಅಡಗಿದೆ ಎನಿಸಿತು. ವಿಶೇಷ ಸಂದರ್ಭಗಳಲ್ಲಿ ಚಂದ್ರ ದರ್ಶನವಾದ ಸುದ್ದಿ ಹಾಗೂ ಈದ್ ಹಬ್ಬದ ಘೋಷಣೆಯನ್ನು ಊರಿಗೆ ತಿಳಿಸಲು ಈ ತಾಂಬಾರ್ ಬಡಿಯುತ್ತಿದ್ದರು. ಆಧುನಿಕ ಸಂವಹನ ವ್ಯವಸ್ಥೆಗಳೇ ಇಲ್ಲದ ಕಾಲದಲ್ಲಿ ತಾಂಬಾರಿನ ಧ್ವನಿಯೇ ಕುಟ್ಟಿಚ್ಚಿರದ ಜನರಿಗೆ ಅಧಿಕೃತ ಸುದ್ದಿಯಾಗಿತ್ತು. ರಂಝಾನಿನ ಆರಂಭದ ಸಂತೋಷವೂ, ಈದ್ ಹಬ್ಬದ ಉಲ್ಲಾಸವೂ, ಅನೇಕ ಧಾರ್ಮಿಕ ಕಾರ್ಯಕ್ರಮಗಳ ಘೋಷಣೆಯೂ ಈ ತಾಂಬಾರದ ನಾದದೊಂದಿಗೆ ಜನರ ಬದುಕಿಗೆ ಪ್ರವೇಶಿಸುತ್ತಿದ್ದವು. ಆ ತಾಂಬಾರ್  ನಮ್ಮ ಮುಂದೆ ಮೌನವಾಗಿ ನಿಂತಿದ್ದರೂ, ಅದರ ಚರ್ಮದ ಮೇಲೆ ಮೂಡಿರುವ ಕಾಲದ ಗುರುತುಗಳು ಶತಮಾನಗಳ ಇತಿಹಾಸವನ್ನು ಹೇಳುತ್ತಿದ್ದವು. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಇಂದಿಗೂ ತಾಂಬಾರ್ ಬಡಿಯುವುದಾಗಿ ಮುಕ್ರಿಕಾ ಹೇಳಿ, ಅದಕ್ಕೆ ಬಡಿಯುವ ಕೋಲು ತೋರಿಸಿದರು. ಒಂದೆರೆಕ್ಷಣ ನಾವೂ ಬಡಿದು ಇತಿಹಾಸದ ಕೊಂಡಿಯನ್ನು ಸೇರಿಕೊಂಡೆವು.‌

ಆ ಕೋಣೆಯ ಇನ್ನೊಂದು ಕಡೆ ಒಂದು ಕನ್ನಡಿಯಿತ್ತು. ವೆಳಿಯಂಗೋಡು ಉಮರ್ ಖಾಝಿಯವರು ಆ ಕನ್ನಡಿ ಬಳಸುತ್ತಿದ್ದರಂತೆ.‌‌ ಅವರ ಕವಿತೆಯ ಸಾಲುಗಳನ್ನು ಬರೆದಿದ್ದ ಗೋಡೆಯ ಭಾಗವನ್ನು ವಿಶೇಷವಾಗಿ ಗುರುತಿಸಲಾಗಿದೆ. ಆ ಸಾಲುಗಳನ್ನು ಆನಂತರ ಬರೆಯಲಾಗಿದೆ ಎಂದು ಮುಕ್ರಿಕಾ ತಿಳಿಸಿದರು.‌

ನಂತರ ನಾವು ಕೆಳಗಿಳಿದು ಮಿಂಬರ್ ನೋಡಲು ಹೋದೆವು. ಇಡೀ ಮಸೀದಿ ಮೌನದಲ್ಲಿ ಅದ್ದಿ ತೆಗೆದಂತಿತ್ತು.‌ ಅಲ್ಲಲ್ಲಿ ಒಂದಿಬ್ಬರು ಹಿರಿಯರು ಬಿಟ್ಟರೆ ಮಸೀದಿಯಲ್ಲಿ ಯಾರೂ ಇರಲಿಲ್ಲ. ಆ ನಿಗೂಢ ಶಾಂತಿಯ ಆವರಣದೊಳಗೆ ಒಂದರೆಕ್ಷಣ ಹಾಗೆಯೇ ಇದ್ದು ಬಿಡೋಣ ಅನಿಸಿತು.‌

ಮಿಂಬರ್ ಗೆ ಆನಿಸಿ ಇಟ್ಟಿದ್ದ ಶುಕ್ರವಾರದ ಜುಮಾ ಖುತ್ಬಾ ಸಮಯದಲ್ಲಿ ಬಳಸುವ ಕತ್ತಿ ನಮ್ಮ‌ ಗಮನ ಸೆಳೆಯಿತು. ಟಿಪ್ಪು ಸುಲ್ತಾನ್ ಕಾಲದ ಹಿಡಿಯಿದ್ದ ಕತ್ತಿಯಾಗಿತ್ತು ಅದು. ಆದರೆ, ಆ ಕಾಲದ ಕತ್ತಿ ಈಗ ಅಲ್ಲಿಲ್ಲ, ಹಿಡಿ‌ ಮಾತ್ರ ಉಳಿದಿದೆ. ಹಳೆಯ ಹಿಡಿಗೆ ಈಗ ಹೊಸ ಕತ್ತಿ ಸೇರಿಕೊಂಡಿದೆ.

ಮಸೀದಿಯ ಒಳಗೆ ಹೋಗುವಾಗ ಕಾಲು ತೊಳೆದುಕೊಂಡೇ ಹೋಗಿದ್ದರೂ ಮೇಲ್ಭಾಗ ಸುತ್ತಾಡಿ ಬಂದಿದ್ದರಿಂದ ಪಾದಗಳಿಗೆ ಧೂಳು ಮೆತ್ತಿಕೊಂಡಿತ್ತು. ಅದೇ ಕಾಲಿನಲ್ಲಿ‌ ಮಿಂಬರ್ ತನಕ ಹೋಗಿದ್ದಕ್ಕೆ ಹಿರಿಯರೊಬ್ಬರಿಂದ ಸಹಸ್ರನಾಮಾರ್ಚನೆಯಾಯಿತು.‌ ಇನ್ನೊಂದಿಷ್ಟು ಹೊತ್ತು ಮಸೀದಿಯ ನಿರ್ಮಲ ವಾತಾವರಣದಲ್ಲಿ ಇದ್ದು ಬಿಡೋಣ ಅನಿಸಿದರೂ ಹಿರಿಯರ ವರ್ತನೆಯಿಂದ ಮನಸುಗೆಟ್ಟು ಹೊರಟು ಬಂದೆವು.‌ ಹಿಂದಿರುಗುವಾಗ ಗೇಟಿನ ಬಳಿ ಒಂದಿಷ್ಟು ಹೊತ್ತು ಮತ್ತೆ ಮಸೀದಿಯೆಡೆಗೆ ದೃಷ್ಟಿ ಹಾಯಿಸಿದೆವು. ಹದಿನಾಲ್ಕನೇ ಶತಮಾನ, ಸಾಮೂದಿರಿ ರಾಜರು,‌ ನಾಯರುಗಳು, ಅವರ ಜೊತೆಗೆ ಗಟ್ಟಿಯಾಗಿ ನಿಂತ ಮುಸ್ಲಿಮರು, ಅವರ ಸಾಂಸ್ಕೃತಿಕ ಬದುಕು, ಮರಕ್ಕಾರ್ ಗಳ ವೀರ ಪರಾಕ್ರಮ, ಕಡಲಾಳದ ವ್ಯಾಪಾರ ವಹಿವಾಟು, ಪೋರ್ಚುಗೀಸರ ವ್ಯಾಪಾರಿ ಕುಶಾಗ್ರತೆ, ಯುದ್ಧ ನೈಪುಣ್ಯ, ಕ್ರೌರ್ಯ, ಸಾಮೂದಿರಿ ರಾಜರ ಧಾರ್ಮಿಕ ಸಹಿಷ್ಣುತೆ ಮೊದಲಾದವುಗಳಿಗೆ ಪ್ರತೀಕವಾಗಿ ಕುಟ್ಟಿಚ್ಚಿರ ಮಸೀದಿ ತನ್ನ ಪುರಾತನ ಸೊಬಗನ್ನು ಪ್ರದರ್ಶಿಸುತ್ತಾ ಬಾನೆತ್ತರಕ್ಕೆ ತಲೆಯೆತ್ತಿ ನಿಂತಿತ್ತು. ಮಸೀದಿಯ ಮುಂದೆ ಗೆಳೆಯರೆಲ್ಲ ಒಟ್ಟಿಗೆ ನಿಂತು ಪೋಟೋ ತೆಗೆಸಿಕೊಂಡೆವು.‌ ಸೆಲ್ಫಿಗಳ ಮೇಲಾಟ ಜೋರಾಗಿತ್ತು.‌ ಆಕಾಶ ನೋಡಿದರೆ ಮಳೆ ಬರುವ ಸೂಚನೆಯಿತ್ತು.

ಮಸೀದಿಯ ಆವರಣದಿಂದ ಹೊರಗೆ ಬರುತ್ತಾ ಕುಟ್ಟಿಚ್ಚಿರ ಎಂಬ ಪುಟ್ಟ ಲೋಕವು ಮನಪಟಲದಲ್ಲಿ ಬಿಚ್ಚಿಕೊಳ್ಳಲಾರಂಭಿಸಿತು. ಕುಟ್ಟಿಚ್ಚಿರವು ಕೋಯಿಕ್ಕೋಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಈ ನೆಲವು ಕೇವಲ ಒಂದು ಪ್ರದೇಶವಲ್ಲ; ಅದು ಮಲಬಾರಿನ ಬಹುಸಂಸ್ಕೃತಿಯ ಪರಂಪರೆ, ಸಮುದಾಯಗಳ ಸಹಬಾಳ್ವೆ ಮತ್ತು ವಸಾಹತುಶಾಹಿಯ ವಿರುದ್ಧದ ಪ್ರತಿರೋಧದ ಜೀವಂತ ಸ್ಮಾರಕವಾಗಿದೆ. ಪ್ರಸ್ತುತ ಭಾರತದ ರಾಜಕಾರಣಕ್ಕೆ ಸಾಮೂದಿರಿ ದೊರೆಗಳು ಬಹುದೊಡ್ಡ ಸೌಹಾರ್ದ ಮಾದರಿಯನ್ನು ಬಿಟ್ಟು ಹೋಗಿದ್ದಾರೆನಿಸಿತು.‌

ಕೆರೆ ಮತ್ತು ಮಸೀದಿಯಲ್ಲಿ ಸುತ್ತಾಡಿ ಸುಸ್ತಾಗಿದ್ದ ನಾವು ಟೀ ಕುಡಿಯಲೆಂದು ಹೋಟೆಲ್ ಹುಡುಕುತ್ತಾ ಮತ್ತೆ ಕೆರೆಯ ದಾರಿಯಾಗಿ ನಡೆದೆವು.‌ ಕೆರೆಯ ಪಕ್ಕದ ಬಸ್ ನಿಲ್ದಾಣದಲ್ಲಿ ವಯಸ್ಸಾದವರು ಕೂತು ಹರಟೆ ಹೊಡೆಯುತ್ತಿದ್ದರು. ಆ ಕೆರೆ ಅವರ ದಿನಚರಿಯ ಭಾಗವಾಗಿರುವುದು ಅವರ ಹಾವಭಾವಗಳಿಂದಲೇ ತಿಳಿಯುತ್ತಿತ್ತು.‌ ಒಬ್ಬರು ಹರಟೆ ಹೊಡೆಯುತ್ತಲೇ ಸಣ್ಣಪುಟ್ಟ ತಿನಿಸುಗಳ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ ಎಂಬುದು ಕೋಯಿಕ್ಕೋಡಿನ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವುದಕ್ಕೆ ಸಾಕ್ಷಿ ಎಂಬಂತೆ ಅವರು ಕಂಡರು.‌ ಮತ್ತೆ ಕೆರೆಯ ಕಡೆಗೆ ನೋಡಿದರೆ ನೀರು ಹಕ್ಕಿಗಳು ಮೀನುಗಳನ್ನು ಹುಡುಕುತ್ತಾ ನೀರಿನಲ್ಲಿ ಮುಳುಗೇಳುತ್ತಿದ್ದವು. ಅವುಗಳ ಚಲನವಲನಗಳನ್ನು ಸೆರೆ ಹಿಡಿಯಲು ಹಲವು ಕ್ಯಾಮೆರಾಗಳು ಪ್ರಯತ್ನಿಸುತ್ತಿದ್ದವು. ಆದರೆ, ಜನರು ಕ್ಯಾಮೆರಾ ಹೊರ ತೆಗೆದರೆ‌ ಸಾಕು ಅವುಗಳು ಸರಕ್ಕಂತ ನೀರಿನಾಳಕ್ಕೆ ಮರೆಯಾಗಿ ಆಟವಾಡಿಸುತ್ತಿದ್ದವು.

ಕುಟ್ಟಿಚ್ಚಿದರಿಂದ ನಾವು ಕೋಯಿಕ್ಕೋಡ್ ನತ್ತ ಹೊರಟು ಬರುವಾಗ ನಮ್ಮ ಮನಸ್ಸುಗಳೂ ಆ ಹಕ್ಕಿಗಳಂತೆ ಇತಿಹಾಸ ಮತ್ತು ವರ್ತಮಾನದ ನಡುವೆ ಜೀಕಾಡುತ್ತಾ, ಹರಟೆ ಮತ್ತು ಹಾಸ್ಯಗಳ ಅಲೆಯಲ್ಲಿ ತೇಲುತ್ತಿದ್ದವು.

– ಸ್ವಾಲಿಹ್‌ ತೋಡಾರ್


Leave a Reply

*