ಈ ಅಧ್ಯಯನಗಳು ಭೂಮಿಗಿಳಿಯುವುದು ಯಾವಾಗ

Part – 2

ಪ್ರ: ಸಮಾಜ ವಿಜ್ಞಾನಗಳಲ್ಲಿನ ನಿಯಂತ್ರಣಗಳ ಬಗ್ಗೆ ಸಮಾಜದ ಒಟ್ಟು ಸ್ಥಿತಿಯ ಜತೆಜತೆಗೂ ಮಾತಾಡಬಹುದು. ಇಂದಿನ ನಮ್ಮ ಬದುಕಿನ ಪರಿಸ್ಥಿತಿ ತುಂಬಾ ಸ್ಪರ್ಧೆಯಿಂದ ಕೂಡಿದೆ. ಎಲ್ಲರೂ ತಮ್ಮ ಸ್ವಾತಂತ್ರ್ಯ, ಹಕ್ಕುಗಳು, ಸ್ಥಾನಮಾನ ಮತ್ತು ಬೆಂಬಲಕ್ಕಾಗಿ ಪರಸ್ಪರ ಸ್ಪರ್ಧಿಸುತ್ತಿದ್ದಾರೆ. ಪರಸ್ಪರ ಅರ್ಥಮಾಡಿಕೊಳ್ಳಲು, ಇತರರನ್ನು ಒಳಗೊಳ್ಳಲು, ತಾಳ್ಮೆ ತೋರಲು ಅಥವಾ ಕರುಣೆ ತೋರಲು ಇರುವ ಅವಕಾಶಗಳು ಕಡಿಮೆಯಾಗುತ್ತಿವೆ. ಕರುಣೆ ಮತ್ತು ಶಾಂತಿಯ ಭಾಷೆಯೇ ಕಣ್ಮರೆಯಾಗುತ್ತಿರುವಂತೆ ತೋರುತ್ತಿದೆ. ಸಾಮಾಜಿಕ ಸಂವಾದ ಹೆಚ್ಚು ನಿಯಂತ್ರಿತವಾಗುತ್ತಿರುವುದು ಕೂಡಾ ಇದೇ ಕಾರಣಕ್ಕಾಗಿರಬಹುದೇ?

ಸರುಕ್ಕೈ: ಹೌದು, ಪರಸ್ಪರ ಅರ್ಥಮಾಡಿಕೊಳ್ಳದ ಒಂದು ಸಂಕಷ್ಟಕರ ಸ್ಥಿತಿಯಲ್ಲಿ ನಾವಿದ್ದೇವೆ. ಅಧ್ಯಯನ ಶಿಸ್ತುಗಳ (disciplines) ಸ್ವಭಾವ ಇಲ್ಲೊಂದು ಮುಖ್ಯ ಸಮಸ್ಯೆ ಎನಿಸಿದೆ. ಈ ಶಿಸ್ತುಗಳ ಉದ್ದೇಶಿತ ವಸ್ತು ಯಾರು? ಉದಾಹರಣೆಗೆ, ಸಾಮಾಜಿಕ ಶಾಸ್ತ್ರಗಳು ಸಮಾಜದ ಒಂದು ಸಣ್ಣ ವಿಭಾಗವನ್ನೇ ಮುಖ್ಯವಾಗಿ ಅಧ್ಯಯನ ನಡೆಸುತ್ತವೆ. ಇತರ ಜ್ಞಾನ ಶಿಸ್ತುಗಳೊಂದಿಗೆ ಹೋಲಿಸಿದರೆ, ಸಾಮಾನ್ಯ ಜನರಿಗೆ ನೇರವಾಗಿ ಉಪಯೋಗವಾಗುವ ರೀತಿಯಲ್ಲಿ ಜ್ಞಾನವನ್ನು ರೂಪಿಸುವಲ್ಲಿ ಸಾಮಾಜಿಕ ಶಾಸ್ತ್ರಗಳು ಬಹಳಷ್ಟು ಹಿಂದುಳಿದಿವೆ. ಜಾತಿ, ಮತ, ಸಾಮಾಜಿಕ ಸಿದ್ಧಾಂತಗಳು ಮುಂತಾದ ವಿಷಯಗಳ ಬಗ್ಗೆ ಅಕಾಡೆಮಿಕ್ ಲೋಕದಲ್ಲಿ ಅನೇಕ ಬರಹಗಳು ಬಂದಿವೆ. ಆದರೆ, ನಾವು ಕಾಣುತ್ತಿರುವುದು ಸಾಮಾನ್ಯ ಜನರ ನಡುವೆ ಉಂಟಾಗುತ್ತಿರುವ ಸಾಮಾಜಿಕ ಸಂಘರ್ಷಗಳೇ. ಆ ವಿಷಯಗಳ ಅಧ್ಯಯನಗಳು ಬಹಳ ಉನ್ನತ ಮಟ್ಟದಲ್ಲಿ, ಅತೀ ಸಂಕೀರ್ಣವಾದ ಭಾಷೆಯಲ್ಲಿ ಮಾತ್ರ ವಿರಚಿತವಾಗುತ್ತಿವೆ. ಆ ಜ್ಞಾನ ಸಾಮಾನ್ಯ ಜನರಿಗೆ ಹೇಗೆ ತಲುಪುತ್ತದೆ ಎಂಬುದು ಮುಖ್ಯ ಪ್ರಶ್ನೆ. ಅದರ ಪ್ರಾಯೋಗಿಕತೆ ಹಾಗೂ ಹಸ್ತಾಂತರದ ಬಗ್ಗೆ ನೀವು ಪ್ರಶ್ನಿಸಬೇಕು.

ಕರುಣೆ, ಪರಸ್ಪರ ಗೌರವ, ಅಹಿಂಸೆ ಮುಂತಾದ ವಿಚಾರಗಳು ನಮ್ಮ ದೈನಂದಿನ ಜೀವನವನ್ನು ಹೇಗೆ ಪ್ರಭಾವಿಸಬಹುದು? ಸಾಮಾನ್ಯ ಜನರು ಅಂತಹ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವಂತಹ ವಾತಾವರಣ ನಿರ್ಮಿಸಲು ಸಾಮಾಜಿಕ ಶಾಸ್ತ್ರಗಳ ಜ್ಞಾನ ಸಹಾಯ ಮಾಡಬಹುದೇ? ಈ ಆಲೋಚನೆಗಳನ್ನು ಸಮಾಜ ವಿಜ್ಞಾನದ ತರಬೇತಿ ಪಡೆಯದವರಿಗೂ ತಾಂತ್ರಿಕ ಪದಗಳನ್ನು ತಿಳಿಯದವರಿಗೂ ತಲುಪಿಸುವುದು ಅತ್ಯಂತ ಮುಖ್ಯವಾಗಿದೆ. ಸಾಮಾನ್ಯ ಜನರಿಗಾಗಿ ಪ್ರಕಟವಾಗುವ ಮಾಸಪತ್ರಿಕೆಗಳು ಮತ್ತು ಇತರ ವೇದಿಕೆಗಳ ಮಹತ್ವ ಇಲ್ಲಿ ಬಹಳ ಹಿರಿದು. ಈ ವಿಷಯದಲ್ಲಿ ಕೇರಳ ಬಹಳ ಮುಂಚೂಣಿಯಲ್ಲಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲಿನ ಸಾರ್ವಜನಿಕ ಸಂವಾದದ ಗುಣಮಟ್ಟ ಉತ್ತಮವಾಗಿದೆ.

ಸಾಮಾಜಿಕ ಶಾಸ್ತ್ರಗಳಲ್ಲಿ ಹುಟ್ಟುವ ಆಲೋಚನೆಗಳನ್ನು ಸಮಾಜದ ಮಟ್ಟಕ್ಕೆ ಹೇಗೆ ತರುವುದು ಎಂಬುದೇ ದೊಡ್ಡ ಸವಾಲು. ಸಮಾಜವಿಜ್ಞಾನದ ಪ್ರತಿಯೊಂದು ಶಿಸ್ತು ಕೂಡಾ ಮಾನವ ಜೀವನದ ಅನೇಕ ಅಂಶಗಳ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ನಿರ್ಮಿಸಿದೆ. ಮಾನವಶಾಸ್ತ್ರ (Anthropology), ಸಮಾಜವಿಜ್ಞಾನ ಮತ್ತಿತರ ಆಧ್ಯಯನ ಶಿಸ್ತುಗಳು ‘ಇತರರನ್ನು’ ಅರ್ಥಮಾಡಿಕೊಳ್ಳಲು ಬಹಳ ಕಾಲ ಮತ್ತು ಪರಿಶ್ರಮವನ್ನು ವ್ಯಯಿಸಿವೆ. ವಿಭಿನ್ನ ಸಮಾಜಗಳ ನೈತಿಕ ರಚನೆ ಮತ್ತು ಒಳಗಿನ ತರ್ಕವನ್ನು ಅವು ಅಧ್ಯಯನ ಮಾಡುತ್ತವೆ. ಆದರೆ, ಆ ಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ದೊಡ್ಡ ಕೊರತೆ ಇದೆ ಎನ್ನುವುದು ನನ್ನ ಅನಿಸಿಕೆ. ಒಂದು ಸಮಾಜ ಮತ್ತೊಂದು ಸಮಾಜವನ್ನು ಹೆಚ್ಚು ಅರ್ಥಮಾಡಿಕೊಳ್ಳಲು, ಅದರ ಮೂಲಕ ಹೆಚ್ಚಿನ ಸಂವಾದ ಮತ್ತು ಕರುಣೆಗೆ ದಾರಿ ತೆರೆಯಲು ಈ ಜ್ಞಾನ ಸಹಾಯ ಮಾಡಬೇಕು. ಆದರೆ ಅಕಾಡೆಮಿಕ್ ಪುಸ್ತಕಗಳ ಬಹುಪಾಲು ಸಾಮಾನ್ಯ ಜನರ ಕೈಗೆ ತಲುಪುವುದೇ ಇಲ್ಲ.

ಇತಿಹಾಸ, ಮಾನವಶಾಸ್ತ್ರ, ಸಮಾಜವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅತ್ಯಂತ ಆಳವಾದ ಅಧ್ಯಯನಗಳು ನಡೆದಿವೆ. ಅವುಗಳೊಂದಿಗೆ ಜನರನ್ನು ಬೆಸೆಯುವುದು ಹೇಗೆನ್ನುವುದೇ ಪ್ರಶ್ನೆ. ಉದಾಹರಣೆಗೆ, ಲೈಲಾ ಅಬೂ-ಲುಘೋದ್ ಬರೆದಿರುವ ಮುಸ್ಲಿಮರು, ಬರ್ಬರ್ ಸಮುದಾಯಗಳು ಮತ್ತು ಜಾತಿಯ ಕುರಿತ ಪುಸ್ತಕವನ್ನು ಬೇಕಾದರೆ ನನಗೆ ಚರ್ಚಿಸಬಹುದು. ಅದನ್ನು ಓದಿದಾಗ ಸಮಾಜಗಳ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಅಕಾಡೆಮಿಕ್ ವಲಯದ ಹೊರಗಿನ ಜನರಿಗೆ ಇಂತಹ ಅಧ್ಯಯನಗಳು ಸುಲಭವಾಗಿ ಲಭ್ಯವಾಗುವುದಿಲ್ಲ. ಈ ರೀತಿಯ ಸಾಹಿತ್ಯ ಮತ್ತು ಅಧ್ಯಯನಗಳು ಸಮಾಜದ ಮಟ್ಟಕ್ಕೆ ಇಳಿದರೆ, ನಾವು ಪರಸ್ಪರ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯ ಇದೆ. ಮೊದಲನೆಯದಾಗಿ ಬೇಕಾಗಿರುವುದು ಕೂಡಾ ಈ ಅರ್ಥಮಾಡಿಕೊಳ್ಳುವಿಕೆ ಮತ್ತು ಹೊಸ ಆಲೋಚನೆಗಳನ್ನು ಸ್ವೀಕರಿಸುವ ಮನೋಭಾವ. ಹೀಗಾಗಿ, ಅಕಾಡೆಮಿಕ್ ಗ್ರಂಥಗಳಲ್ಲಿನ ಈ ಚಿಂತನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಸಾಧ್ಯವೇ ಎನ್ನುವ ಪ್ರಶ್ನೆ ನಿರ್ಣಾಯಕವಾದದ್ದು.

ನಾನು ಮೊದಲೇ ಹೇಳಿದಂತೆ, ಇತರ ಸಮಾಜಗಳು ಮತ್ತು ಸಮುದಾಯಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಅವರ ವೈವಿಧ್ಯಮಯ ಕಥೆಗಳು ಮತ್ತು ಪ್ರತಿನಿಧಿತ್ವಗಳನ್ನು ನಾವು ತಿಳಿದುಕೊಳ್ಳಬೇಕು. ನೀವು ಉಲ್ಲೇಖಿಸಿದ ಕರುಣೆ ಮತ್ತು ಕಾಳಜಿಯ ಕೊರತೆ ಅನೇಕ ಸಂದರ್ಭಗಳಲ್ಲಿ ಬರುತ್ತಿರುವುದು ಅಜ್ಞತೆಯಿಂದಾಗಿ. ಜನರ ನಡುವೆ ದ್ವೇಷ ಮತ್ತು ವೈಮನಸ್ಸನ್ನು ಬಿತ್ತಲು ಖಂಡಿತವಾಗಿಯೂ ಸಾಧ್ಯವಿದೆ. ಆದರೆ, ದ್ವೇಷ ಇಲ್ಲಿ ವ್ಯಾಪಕಗೊಂಡಿರುವುದು ತಿಳಿವಳಿಕೆಯ ಕೊರತೆಯಿಂದಲೇ. ಉದಾಹರಣೆಗೆ, ನಾನು ಹೇಳಿದಂತೆ ಬೆಂಗಳೂರಿನಲ್ಲಿ ವಿಭಿನ್ನ ಸಮುದಾಯಗಳ ಮಧ್ಯೆ ಅನೇಕ ಪೂರ್ವಗ್ರಹಗಳಿವೆ. ಮುಸ್ಲಿಮ್ ಸಮುದಾಯದ ಬಗ್ಗೆ ವ್ಯಾಪಕವಾದ ತಪ್ಪು ಕಲ್ಪನೆಗಳು ರೂಪುಗೊಂಡಿವೆ. “ನೀವು ಜೀವನದಲ್ಲಿ ಒಬ್ಬ ಮುಸ್ಲಿಮನನ್ನಾದರೂ ನೇರವಾಗಿ ಭೇಟಿ ಮಾಡಿದ್ದೀರಾ? ಅವರ ಮನೆಗೆ ಹೋಗಿದ್ದೀರಾ? ಅವರ ಜೊತೆ ಕೂತು ಮಾತನಾಡಿದ್ದೀರಾ?” ಎಂದೆಲ್ಲಾ ನಾನವರೊಂದಿಗೆ ಕೇಳುತ್ತಿರುತ್ತೇನೆ .ಮುಸ್ಲಿಮರೊಂದಿಗೆ ಅವರು ನೇರವಾಗಿ ಯಾವ ಸಂಪರ್ಕವನ್ನೂ ಹೊಂದಿಲ್ಲ ಎನ್ನುವುದೇ ನಿಜ. ಅವರ ಸಂಪೂರ್ಣ ದೃಷ್ಟಿಕೋನ ರೂಪುಗೊಂಡಿರುವುದು ಶುದ್ಧ ಅಜ್ಞಾನದಿಂದ. ಹಾಗಾಗಿ ಪರಸ್ಪರ ಅನುಸಂಧಾನ ಹಾಗೂ ಕಥಾವಿನಿಮಯಗಳ ಮಹತ್ವವನ್ನು ನಾನಿಲ್ಲಿ ಒತ್ತಿಹೇಳಲು ಬಯಸುತ್ತೇನೆ. ಬೆಂಗಳೂರಿನ ಹಿಂದೂ ಸಮುದಾಯಗಳೊಳಗೆ ಕೂಡಾ ದಲಿತರ ಬಗ್ಗೆ ಅನೇಕ ಕಪೋಲಕಲ್ಪಿತ ಕಲ್ಪನೆಗಳಿವೆ. ಆದರೆ, ಅವರಲ್ಲಿ ಹಲವರಿಗೆ ಒಂದೇ ಒಂದು ದಲಿತ ವ್ಯಕ್ತಿಯೊಂದಿಗೂ ಆಪ್ತ ಪರಿಚಯವಿಲ್ಲ. ಅವರ ಬದುಕು ಹೇಗಿದೆ ಎಂದು ತಿಳಿದಿಲ್ಲ. ಆದ್ದರಿಂದ, ತೆರೆದ ಮನಸ್ಸಿನಿಂದ ಮತ್ತೊಬ್ಬರ ಕಥೆಗಳನ್ನು ಕೇಳಲು ಸಿದ್ಧರಾದರೆ ಮಾತ್ರ ಸಂವಾದದ ದಾರಿ ತೆರೆಯಬಹುದೆನ್ನುವ ನಿರೀಕ್ಷೆ ನನ್ನದು.

ಪ್ರ: ವಿಭಿನ್ನ ಸಮುದಾಯಗಳು ತಮ್ಮನ್ನು ಹೇಗೆ ರೂಪಿಸಿಕೊಳ್ಳುತ್ತವೆ, ಅವರ ನಡೆ- ನುಡಿಗಳ ಹಿಂದಿನ ಪ್ರೇರಕಗಳು ಯಾವುವು ಎಂಬುದರ ಬಗೆಗಿನ ಅಜ್ಞಾನವೇ ಪರಸ್ಪರ ಪೂರ್ವಗ್ರಹಗಳು ರೂಪುಗೊಳ್ಳುವುದಕ್ಕೆ ಮೂಲಭೂತ ಕಾರಣ. ಇಂತಹ ವಿಚಾರಗಳನ್ನು ಇನ್ನಷ್ಟು ಜನರಿಗೆ ವಿನಿಮಯಗೊಳಿಸುವ ಉದ್ದೇಶದಿಂದಲೇ ನೀವು ಫಿಕ್ಷನ್ ಕ್ಷೇತ್ರದತ್ತ ತಿರುಗಿದ್ದೀರಾ?

ಸರುಕ್ಕೈ: ಹೌದು. 2018ರ ಸುಮಾರಿಗೆ ನಾನು National Institute of Advanced Studies (NIAS) ಮಣಿಪಾಲ ಹಾಗೂ ಇತರ ಹಲವು ಸಂಸ್ಥೆಗಳಲ್ಲಿ ಸಂಚರಿಸುತ್ತಿದ್ದೆ. ಆ ಸಂದರ್ಭದಲ್ಲಿ ದೇಶದ ರಾಜಕೀಯ ವಾತಾವರಣ ನನಗೆ ಉಪಟಳ ಎನಿಸಲು ಆರಂಭಿಸಿತ್ತು. ವಿಶೇಷವಾಗಿ, ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ತಪ್ಪು ಕಲ್ಪನೆಗಳು ಜನರಲ್ಲಿ ವೇಗವಾಗಿ ಹರಡುತ್ತಿದ್ದು, ದ್ವೇಷಪೂರ್ಣ ಮಾತುಗಳು ದೈನಂದಿನ ಜೀವನದ ಭಾಗವಾಗಿ ಬಿಟ್ಟಿತ್ತು. ದ್ವೇಷ ಹರಡುವಿಕೆ ಸಾಮಾನ್ಯವಾಗಿಬಿಟ್ಟಿತ್ತು. ಆ ಹೊತ್ತಿನಲ್ಲಿ ನಾನು ನನ್ನ ಗಮನವನ್ನು ಮಕ್ಕಳ ಕಡೆಗೆ ಕೇಂದ್ರೀಕರಿಸಲು ನಿರ್ಧರಿಸಿದೆ. 2018ರಲ್ಲೇ ಅನೌಪಚಾರಿಕವಾಗಿ ‘Barefoot Philosophers’ ಎಂಬ ಪ್ರಯತ್ನವನ್ನು ಆರಂಭಿಸಬೇಕೆಂದು ಯೋಚಿಸಿದೆ. ಮಕ್ಕಳಲ್ಲಿಯೇ ಅದಾಗಲೇ ಕೆಲವು ರೂಢಿಬದ್ಧ ಕಲ್ಪನೆಗಳು ಮತ್ತು ತಪ್ಪು ಧೋರಣೆಗಳು ಬೆಳೆದುಬರುತ್ತಿರುವುದನ್ನು ನಾನು ಗಮನಿಸಿದ್ದೆ. ಹಾಗಾಗಿ, ‘Philosophy for Children’ ಎಂಬ ಒಂದು ಯೋಜನೆ ಆರಂಭಿಸಿದೆ. ಅದು ನನಗೆ ಅದ್ಭುತ ಅನುಭವವನ್ನು ನೀಡಿತು. ಅದರ ಉದ್ದೇಶ ಕೇವಲ ತತ್ತ್ವಚಿಂತನೆ ಅಭ್ಯಾಸ ಮಾಡಿಸುವುದಾಗಿರಲಿಲ್ಲ; ಬದಲಾಗಿ ಲೋಕದ ಬಗ್ಗೆ ಒಂದು ವಿಶೇಷ ರೀತಿಯಲ್ಲಿ ಚಿಂತಿಸಲು ಮಕ್ಕಳನ್ನು ಪ್ರೇರೇಪಿಸುವುದಾಗಿತ್ತು. ಮುಂದುವರಿದು ‘Philosophy for Children’ ಎಂಬ ಪುಸ್ತಕವನ್ನು ಬರೆದೆ. ಆ ಕೃತಿ ಈಗ ಹಲವು ಭಾಷೆಗಳಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ತತ್ತ್ವಚಿಂತನೆಯ ಜಗತ್ತಿಗಾಗಲಿ ಅಥವಾ ಅಕಾಡೆಮಿಕ್ ವಲಯಕ್ಕಾಗಲಿ ಎಂದಿಗೂ ತಲುಪದ ಅನೇಕ ಜನರೊಂದಿಗೆ ಸಂವಹನ ಮಾಡಲು ಆ ಮೂಲಕ ಸಾಧ್ಯವಾಗಿದೆ.
ಮಕ್ಕಳೊಂದಿಗಿನ ಈ ಅನುಸಂಧಾನಗಳು ನಂತರ ‘The Social Life of Democracy’ ಎಂಬ ಪುಸ್ತಕ ರಚನೆಯತ್ತ ನನ್ನನ್ನು ಕರೆದೊಯ್ದವು. ವಿಶೇಷವಾಗಿ ‘ಸಾಮಾಜಿಕ ಪ್ರಜಾಸತ್ತೆ’ ಎಂಬ ಕಲ್ಪನೆ ನನ್ನನ್ನು ಆಕರ್ಷಿಸಿತು. ಸಾಮಾನ್ಯ ಜನರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವ, ಆಲೋಚನೆಗಳನ್ನು ತೆರೆದು ಹಿಡಿಯುವ ಒಂದು ಪುಸ್ತಕವಾಗಿತ್ತದು. ಫಿಕ್ಷನ್ ಬರೆಯಲು, ವಿಶೇಷವಾಗಿ ‘Following a Prayer’ ಎಂಬ ಕಾದಂಬರಿಯನ್ನು ಬರೆಯಲು ಆರಂಭಿಸಿದಾಗ, ನೇರವಾಗಿ ತತ್ತ್ವಶಾಸ್ತ್ರೀಯ ಪ್ರಶ್ನೆಗಳನ್ನು ಕೇಳಬೇಕೆಂಬ ಉದ್ದೇಶ ನನಗಿರಲಿಲ್ಲ. ‘ಪ್ರಾರ್ಥನೆ ಎಂದರೇನು? ಜನರು ಏಕೆ ಪ್ರಾರ್ಥಿಸುತ್ತಾರೆ?’ ನಾನು ಪ್ರಾರ್ಥಿಸುವಾಗ ಕೆಲವು ಪದಗಳನ್ನು ಉಚ್ಚರಿಸುತ್ತೇನೆ; ಆ ಪದಗಳಿಗೆ ಏನಾಗುತ್ತದೆ? ಅವು ಎಲ್ಲಿಗೆ ಹೋಗುತ್ತವೆ? ಎಂಬಂತಹ ಪ್ರಶ್ನೆಗಳು ದೀರ್ಘಕಾಲದಿಂದ ತತ್ತ್ವವಿಜ್ಞಾನ ಹಾಗೂ ಭಾಷಾತತ್ತ್ವದ ನೆಲೆಯಲ್ಲಿ ನನ್ನನ್ನು ಕಾಡುತ್ತಿದ್ದವು. ಮಕ್ಕಳೊಂದಿಗೆ ನಡೆದ ಸಂವಾದಗಳ ನಂತರ ‘Following a Prayer’ ಅನ್ನು ಬರೆಯುವಾಗ, ನಾನು ಈ ಪ್ರಶ್ನೆಯನ್ನು ಒಂದು ಮಗುವಿನ ದೃಷ್ಟಿಕೋನದಿಂದ ಪರಿಶೀಲಿಸಿದೆ.

ಪ್ರ: ಸಮಕಾಲೀನ ಜಾಗತಿಕ ಪರಿಸ್ಥಿತಿಯಲ್ಲಿ ಬಲಪಂಥೀಯ ಜನಪ್ರಿಯ (right- wing populist) ರಾಜಕೀಯದ ಬೆಳವಣಿಗೆ ಅನೇಕ ದೇಶಗಳಿಗೆ ವ್ಯಾಪಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಲ್ಲಿ ರಾಜಕೀಯ ಪ್ರಜಾಸತ್ತೆ ಒಂದರ್ಥದಲ್ಲಿ ದ್ವೇಷವನ್ನು ಪ್ರೋತ್ಸಾಹಿಸುತ್ತಿದೆ ಎಂಬ ಭಾವನೆ ಮೂಡುತ್ತದೆ. ಸಮುದಾಯಗಳ ನಡುವೆ ಹೆಚ್ಚು ದ್ವೇಷ ಹುಟ್ಟುಹಾಕುವವರು ಗೆಲ್ಲುವ ಸಾಧ್ಯತೆ ಹೆಚ್ಚುತ್ತಿದೆ. ರಾಜಕೀಯ ಪ್ರಜಾಸತ್ತೆ ದ್ವೇಷಕ್ಕೆ ಕುಮ್ಮಕ್ಕು ನೀಡುತ್ತದೆ ಎಂದು ಹೇಳಬೇಕಾದ ಪರಿಸ್ಥಿತಿ ಇದೆ. ಹೆಚ್ಚಿನ ದೇಶಗಳು ಕೂಡಾ ಇಂತಹ ನಿರಾಶಾದಾಯಕ ದಿಕ್ಕಿನತ್ತ ಸಾಗುತ್ತಿರುವಂತೆ ಕಾಣುತ್ತದೆ. ಇದಕ್ಕೆ ಪರಿಹಾರವೇನು?

ಸರುಕ್ಕೈ: ನಿಜವಾದ ಸಮಸ್ಯೆ ಇರುವುದು ‘ರಾಜಕೀಯ ಪ್ರಜಾಸತ್ತೆ’ಯಲ್ಲೇ? ಎನ್ನುವುದು ನನ್ನ ಪ್ರಶ್ನೆ. ಭಾರತದ ರಾಜಕೀಯ ಪ್ರಜಾಸತ್ತೆಯನ್ನೇ ಕೈಗೆತ್ತಿಕೊಳ್ಳೋಣ. ಅನೇಕ ರಾಜಕೀಯ ತತ್ತ್ವಚಿಂತಕರು ಸೂಚಿಸಿರುವ ಹಾಗೆ ವರ್ಣಾಶ್ರಮ ವ್ಯವಸ್ಥೆಯಡಿಯಲ್ಲಿ ಜೀವಿಸುತ್ತಿದ್ದ ಜನರಿಗೆ ಪ್ರಜಾಸತ್ತಾತ್ಮಕ ವ್ಯವಸ್ಥೆ ಹಕ್ಕುಗಳನ್ನು ನೀಡಿದೆ. ಆದರೆ ಪ್ರಸ್ತುತ ‘ಮೆಜಾರಿಟೇರಿಯನಿಸಂ’ (majoritarianism) ಎಂಬ ಸಮಸ್ಯೆಯೂ ಅದರೊಳಗೇ ಬೆಳೆಯುತ್ತಿದೆ. ಬಹುಮತ ಪಡೆಯುವುದೇ ಪ್ರಜಾಸತ್ತೆ ಎಂಬ ರೀತಿಯಲ್ಲಿ ಅರ್ಥ ಬದಲಾಗುತ್ತಿದೆ. ಇಲ್ಲಿ ಸಮಸ್ಯೆ ಇರುವುದು ರಾಜಕೀಯ ಪ್ರಜಾಸತ್ತೆಯನ್ನು ‘ಕಾರ್ಯಗತಗೊಳಿಸುವ ವ್ಯವಸ್ಥೆ’ಯಲ್ಲಿ (delivery mechanism). ಈ ವ್ಯವಸ್ಥೆ ಪ್ರಜಾಸತ್ತೆಯ ಮೂಲ ಗುರಿಯೊಂದಿಗೆ ನೇರವಾಗಿ ಹೊಂದಿಕೊಂಡಿರಬೇಕೆಂದಿಲ್ಲ.

ಮತದಾನ ಸೇರಿದಂತೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನೈತಿಕವಾಗಿ ಅಡಕವಾಗಿರುವ ಅಂಶವೇನು? ‘The Social Life of Democracy’ ಎಂಬ ಪುಸ್ತಕವನ್ನು ಬರೆಯುವಾಗ ಆರಂಭದಲ್ಲೇ ನಾನು ಕೇಳಿಕೊಂಡ ಪ್ರಶ್ನೆಯಿದು. ಮತದಾನದ ನೈತಿಕ ಆಯಾಮವೇನು (moral dimension)? ಎಂಬ ಚಿಂತನೆ ನನ್ನನ್ನು ಆ ಪ್ರಶ್ನೆಯತ್ತ ಕೊಂಡೊಯ್ದಿತ್ತು ‘ನಾವು ಏಕೆ ಮತ ಹಾಕುತ್ತೇವೆ? ಯಾರಿಗೆ ಮತ ಹಾಕುತ್ತೇವೆ?’ ಎಂಬ ಪ್ರಶ್ನೆಗಳ ಬಗ್ಗೆ ಬರೆಯಲು ಪ್ರಾರಂಭಿಸಿದ್ದು ಆಮೇಲೆ. ನಾನು ಮುಂದಿಟ್ಟ ವಾದ ಬಹಳ ಸರಳವಾದುದು. ‘ಸಾರ್ವಜನಿಕ’ (public) ಎಂಬ ಪದದ ಅರ್ಥವೇ ಇದು: ಸಾರ್ವಜನಿಕ ವಲಯದಲ್ಲಿ ನಮ್ಮೆಲ್ಲರಿಗೂ ಸಮಾನ ಪಾಲು ಇದೆ. ಅದು ನಮ್ಮೆಲ್ಲರಿಗೂ ಸೇರಿದ ಸಾಮೂಹಿಕ ಸ್ವತ್ತು. ಉದಾಹರಣೆಗೆ, ಐದು ಲಕ್ಷ ಜನರಿರುವ ಒಂದು ಸಮಾಜವನ್ನು ಕಲ್ಪಿಸಿಕೊಳ್ಳಿ. ಅದರಲ್ಲಿ ಒಂದು ಸಾರ್ವಜನಿಕ ಉದ್ಯಾನವನವಿದ್ದರೆ, ಆ ಐದು ಲಕ್ಷ ಜನರಿಗೂ ಆ ಉದ್ಯಾನವನದಲ್ಲಿ ಸಮಾನ ಪಾಲು ಇದೆ. ಆ ಉದ್ಯಾನವನ ನಮ್ಮೆಲ್ಲರಿಗೂ ಸೇರಿದೆ. ಎಲ್ಲರೂ ಒಟ್ಟಾಗಿ ನಿರ್ಧರಿಸದೆ ಅದನ್ನು ವೈಯಕ್ತಿಕವಾಗಿ ಮಾರಲು ಸಾಧ್ಯವಿಲ್ಲ.

ಹಾಗಾದರೆ, ನಾನು ಮತ ಚಲಾಯಿಸುವಾಗ ಮಾಡುತ್ತಿರುವುದಾದರೂ ಏನು? ಸಾರ್ವಜನಿಕ ಸಂಪತ್ತನ್ನು ನಿರ್ವಹಣೆ ಮಾಡಲು ಮತ್ತು ಕಾಪಾಡಲು ಒಬ್ಬರನ್ನು ಆಯ್ಕೆ ಮಾಡುತ್ತಿದ್ದೇನೆ. ಆ ಸಾರ್ವಜನಿಕ ವಲಯ ಅವನಿಗಷ್ಟೇ ಅಲ್ಲ, ನನಗೂ ಸೇರಿದ್ದು; ನಮ್ಮೆಲ್ಲರಿಗೂ ಸೇರಿದ್ದು. ಇಲ್ಲಿಯೇ ಮಹತ್ವದ ನೈತಿಕ ಪ್ರಶ್ನೆ ಉದ್ಭವಿಸುತ್ತದೆ. ಮತ ಚಲಾಯಿಸುವ ಮೂಲಕ ‘ನಮ್ಮೆಲ್ಲರಿಗೂ ಸೇರಿದ ಈ ಸಾರ್ವಜನಿಕ ವಲಯದ ರಕ್ಷಕನಾಗಿ (trustee) ನೀನು ಕಾರ್ಯನಿರ್ವಹಿಸಬೇಕು’ ಎಂದು ನನ್ನ ಅಭ್ಯರ್ಥಿಗೆ ನಾನು ಹೇಳುತ್ತೇನೆ. ಪ್ರಜಾಸತ್ತಾತ್ಮಕತೆಯ ವೈಫಲ್ಯ ಸ್ಪಷ್ಟವಾಗುವುದೇ ಇಲ್ಲಿ. ‘ಸಾರ್ವಜನಿಕ’ ಎಂಬ ಕಲ್ಪನೆ ನಾಶವಾಗುವ ಕ್ಷಣದಲ್ಲಿ ಪ್ರಜಾಸತ್ತೆ ಕುಸಿಯಲು ಆರಂಭಿಸುತ್ತದೆ. ‘ಸಾರ್ವಜನಿಕ’ದ ಸ್ವಭಾವ ಹಾಳಾದರೆ, ಅಲ್ಲಿ ಪ್ರಜಾಸತ್ತಾತ್ಮಕತೆ ವಿಫಲವಾಗಿದೆ ಎಂದರ್ಥ. ‘ಸಾರ್ವಜನಿಕ’ ಎನ್ನುವಾಗ ನಾನು ಉದ್ದೇಶಿಸುತ್ತಿರುವುದು ಕೇವಲ ವೈಯಕ್ತಿಕ ಅಥವ ಸಾಮಾಜಿಕ ಮಟ್ಟದಲ್ಲಿ ಮಾತ್ರವಲ್ಲ. ಎಲ್ಲಾ ಸಂಪನ್ಮೂಲಗಳಲ್ಲಿಯೂ ಸಾರ್ವಜನಿಕತೆ ಎಂದರೆ ನಮ್ಮೆಲ್ಲರಿಗೂ ಸೇರಿದ ಪಾಲು. ನಾವು ಒಟ್ಟಾಗಿ ಅನುಭವಿಸಿ ಕಾಪಾಡಿಕೊಳ್ಳಬೇಕಿರುವ ವಸ್ತು. ಈ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಿದಾಗ, ನೀರು, ಗಾಳಿ, ಭೂಮಿ, ಪ್ರಕೃತಿ ಸಂಪನ್ಮೂಲಗಳು, ನಮ್ಮೆಲ್ಲರಿಗೂ ಸೇರಿದ ಹಕ್ಕುಗಳು ಕಳೆದುಹೋಗುತ್ತವೆ. ಇದನ್ನು ಎಸಗುವವರು ಮುಖ್ಯವಾಗಿ ರಾಜಕೀಯ ನಾಯಕರು. ಏಕೆಂದರೆ, ಸಾರ್ವಜನಿಕ ವಲಯದ ವಿಶ್ವಾಸಾರ್ಹ ರಕ್ಷಕರಾಗಬೇಕಿರುವ ಅವರು ಅದರ ಮಾಲೀಕರಂತೆ ವರ್ತಿಸಲು ಆರಂಭಿಸುತ್ತಾರೆ. ಇದೇ ನಿಜವಾದ ಸಮಸ್ಯೆ.
ಆದ್ದರಿಂದ, ಇದು ಪ್ರಜಾಸತ್ತೆ ಎಂಬ ಕಲ್ಪನೆಯ ವೈಫಲ್ಯವಲ್ಲ ಎಂದು ದಿಟವಾಗಿ ಹೇಳಬಹುದು. ಇದು ಪ್ರಜಾಸತ್ತೆಯನ್ನು ಜಾರಿಗೆ ತರುವ ವ್ಯವಸ್ಥೆಯ ವೈಫಲ್ಯ. ಇಲ್ಲಿ ಹೊಣೆಗಾರಿಕೆಯನ್ನು (accountability) ಖಚಿತಪಡಿಸುವಲ್ಲಿ ದೊಡ್ಡ ಕೊರತೆ ಇದೆ. ಮತದಾನದ ಬಗೆಗಿನ ಜಾಗೃತಿಯ ಕೊರತೆ ಕೂಡಾ ಈ ಜಾರಿಗೊಳಿಸುವಿಕೆಯ ಸಮಸ್ಯೆಯೇ. ಇಲ್ಲಿ ‘ಶಿಕ್ಷಣ’ ಎಂಬ ಪದವನ್ನು ಬಳಸುವುವಾಗ ಸ್ವಲ್ಪ ಸೂಕ್ಷ್ಮವಾಗಿರಬೇಕದೆ. ಶಿಕ್ಷಣ ಎನ್ನುವಾಗ ನಾನು ಮುಂದಿಡುವ ತಾತ್ಪರ್ಯ ಅಕಾಡೆಮಿಕ್ ಪದವಿಗಳು ಅಥವಾ ಪ್ರಮಾಣಪತ್ರಗಳಲ್ಲ. ಬದಲಾಗಿ ಮತದಾರನಲ್ಲಿ ನಾವು ನಿರೀಕ್ಷಿಸಬೇಕಾದ ಕೆಲವು ಗುಣಗಳು. ಅಂದರೆ, ಮಾನವನಾಗಿ ಬದುಕುವುದರ ಅರ್ಥವೇನು ಎಂಬ ಅರಿವು, ‘ನಾನು ಏಕೆ ಮತ ಹಾಕುತ್ತಿದ್ದೇನೆ?’ ಎಂಬ ಸ್ಪಷ್ಟತೆ, ಮತ್ತು ಒಂದು ನೈತಿಕ- ಸಾಮಾಜಿಕ ಜಾಗೃತಿ. ಅಂತಹ ಜಾಗೃತಿ ಸಮಾಜದಲ್ಲಿ ವ್ಯಾಪಕವಾಗಿರಬೇಕಿತ್ತು. ಖಂಡಿತವಾಗಿಯೂ ಕೆಲವರು ಹಣಕ್ಕಾಗಿ ಮತ ಹಾಕಬಹುದು. ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಸಂಪೂರ್ಣ ಸಮಾಜದ ಬಗ್ಗೆ ನಿರಾಶರಾಗುವುದಕ್ಕಿಂತ, ಬಹುಸಂಖ್ಯೆಯ ಜನರು ಸಮಾಜವನ್ನು ಹೇಗೆ ನೋಡುತ್ತಾರೆ ಎಂಬುದೇ ಮುಖ್ಯ ಪ್ರಶ್ನೆ.
ಕೊನೆಯದಾಗಿ ನಾವು ಸಮಾಜವನ್ನು ಹೇಗೆ ನೋಡುತ್ತೇವೆಯೋ ಅದರ ಆಧಾರದ ಮೇಲೆಯೇ ಮತ ಹಾಕುತ್ತೇವೆಂದು ನಾನು ಹೇಳಲು ಬಯಸುತ್ತೇನೆ. ಮತದಾರರು ಅವರ ಅಭ್ಯರ್ಥಿಯನ್ನು ವೈಯಕ್ತಿಕವಾಗಿ ಪ್ರೀತಿಸಬೇಕೆಂದಿಲ್ಲ, ಅಥವಾ ಆರಾಧಿಸಬೇಕೆಂದಿಲ್ಲ. ‘ನನಗವರು ಇಷ್ಟ, ಹಾಗಾಗಿ ನಾನವರಿಗೆ ಮತ ಹಾಕುತ್ತೇನೆ’ ಎಂಬುದೇ ಮುಖ್ಯ ಕಾರಣವಾಗಿರುವುದಿಲ್ಲ. ಬದಲಾಗಿ, ಆ ಅಭ್ಯರ್ಥಿ ಸಮಾಜದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರತಿನಿಧಿಸುತ್ತಾರೆ ಎಂಬ ಕಾರಣಕ್ಕೇ ಮತದಾರರು ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ, ನಿಜವಾಗಿ ಬದಲಾಗಬೇಕಿರುವುದು ರಾಜಕಾರಣಿಗಳಿಗಿಂತ ಹೆಚ್ಚಾಗಿ ಸಮಾಜದ ಕುರಿತ ಮತದಾರರ ದೃಷ್ಟಿಕೋನವೇ ಆಗಿದೆ ಎನ್ನುವುದು ನನ್ನ ಅನಿಸಿಕೆ.

ಪ್ರ: ಸಾಮಾನ್ಯವಾಗಿ ಸಂಘರ್ಷಗಳು ಹುಟ್ಟುತ್ತಿರುವುದು ಕೂಡಾ ‘ಸಾರ್ವಜನಿಕ ವಲಯ’, ‘ಸಾರ್ವಜನಿಕ ಹಿತ’, ‘ನ್ಯಾಯಸಮ್ಮತ ಪಾಲು’ (fair share) ಮುಂತಾದ ವಿಚಾರಗಳ ಬಗ್ಗೆಯೇ. ವಿಭಿನ್ನ ರೂಪಗಳಲ್ಲಿರುವ ಅಲ್ಪಸಂಖ್ಯಾತ ರಾಜಕಾರಣ ‘ನಮಗೆ ನ್ಯಾಯವಾಗಿ ಸಿಗಬೇಕಾದ ಪಾಲು ಸಿಗುತ್ತಿಲ್ಲ’ ಎಂದು ಹೇಳುತ್ತದೆ. ಆ ನಿಟ್ಟಿನಲ್ಲಿ, ವಿಶೇಷವಾಗಿ ದೀರ್ಘಕಾಲದಿಂದ ದಮನಕ್ಕೊಳಗಾದ ಸಮುದಾಯಗಳಿಂದ ಮೂಡಿಬರುವಾಗ, ಅದೊಂದು ವಿಮೋಚನಾತ್ಮಕ (emancipatory) ಸಂವಾದವೂ ಹೌದು. ಆದರೆ ಇದೇ ವಾದವನ್ನು ಬಹುಸಂಖ್ಯಾತ ರಾಜಕಾರಣವೂ ಮುಂದಿಡುತ್ತಿರುವುದು ದೊಡ್ಡ ವಿರೋಧಾಭಾಸ. ಅವರು ಕೂಡಾ ‘ಸಂಪನ್ಮೂಲಗಳು ಪೂರ್ಣವಾಗಿ ನಮಗೇ ಬೇಕು’ ಎಂದು ಹೇಳುವುದಿಲ್ಲ. ಅವರ ವಾದವೂ ‘ನಮಗೆ ಸಿಗಬೇಕಾದುದು ಸಿಗುತ್ತಿಲ್ಲ’ ಎಂದೇ. ಮೇಲ್ನೋಟಕ್ಕೆ ಇದು ಸಂಪೂರ್ಣ ಪ್ರಜಾಸತ್ತಾತ್ಮಕ ವಾದದಂತೆ ಕಾಣುತ್ತದೆ. ಆದರೆ,ಇಂತಹ ಪ್ರಜಾಸತ್ತಾತ್ಮಕ ‘ಹಕ್ಕು’ ಆಧಾರಿತ ವಾದಗಳೇ ನಮ್ಮನ್ನು ಇಂದಿನ ಸಂಕಷ್ಟಕ್ಕೆ ತಳ್ಳಿವೆ. ಹಾಗಾದರೆ, ಈ ಗೊಂದಲದಿಂದ ಹೊರಬರುವ ದಾರಿ ಏನು? ಮತ್ತೊಬ್ಬರಿಗಾಗಿ ತ್ಯಾಗ ಮಾಡಲು ಸಿದ್ಧವಾಗಿರುವ ನೈತಿಕತೆಯ ಮೇಲೆ ಆಧಾರಿತವಾದ ಹೊಸ ರಾಜಕೀಯದ ಅಗತ್ಯವಿಲ್ಲವೇ? ಪ್ರಜಾಸತ್ತಾತ್ಮಕ ಸಂವಾದವೇ ಮೂಲಭೂತವಾಗಿ ವಿಕಲವಾಗಿರುವ ಈ ಹೊತ್ತಿನಲ್ಲಿ ಹೊಸ ನೈತಿಕ ಸಂವಾದಗಳು ತೆರೆಯಬೇಕಾದದು ಅಗತ್ಯವಲ್ಲವೇ?

ಸರುಕ್ಕೈ: ನಿಜ. ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಸಾಮಾಜಿಕ ಪ್ರಜಾಸತ್ತೆ’ (social democracy) ಎಂಬ ಕಲ್ಪನೆ ನನ್ನನ್ನು ಆಕರ್ಷಿಸಿದ್ದು ಇಂತಹ ಪ್ರಶ್ನೆಗಳನ್ನು ಎದುರಿಸಿದಾಗ. ನಾನು ‘The Social Life of Democracy’ ಎಂಬ ಪುಸ್ತಕವನ್ನು ಬರೆಯುವಾಗ ಅದರ ಆರಂಭದಲ್ಲೇ ಒಂದು ವಿಚಾರವನ್ನು ಸೂಚಿಸಿದ್ದೆ. ಅಂಬೇಡ್ಕರ್ ಹೀಗೆ ಹೇಳುತ್ತಾರೆ: ರಾಜಕೀಯ ಪ್ರಜಾಸತ್ತೆ ಅವಶ್ಯಕ. ಆದರೆ, ಸಮಾಜ ಪ್ರಜಾಸತ್ತಾತ್ಮಕವಲ್ಲದಿದ್ದರೆ ರಾಜಕೀಯ ಪ್ರಜಾಸತ್ತೆಗೆ ಅರ್ಥವೇ ಇರುವುದಿಲ್ಲ. ಅಂದರೆ, ನಾವು ಪ್ರಜಾಸತ್ತೆಯ ಆತ್ಮವನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಮತದಾನವೇ ಪ್ರಜಾಸತ್ತೆ ಎಂದುಕೊಳ್ಳುವುದು ತಪ್ಪು. ಸಮಾಜವೇ ಪ್ರಜಾಸತ್ತಾತ್ಮಕವಾಗಿರದಿದ್ದಲ್ಲಿ ಸರ್ಕಾರವನ್ನು ಮಾತ್ರ ‘ಪ್ರಜಾಸತ್ತಾತ್ಮಕ ಸರ್ಕಾರ’ ಎಂದು ಕರೆಯುವುದಕ್ಕೆ ಅರ್ಥವೇನು? ಇದು ‘ಒಂದು ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸಲು ಹೇಗೆ ಸಾಧ್ಯ’ ಎನ್ನುವ ಇನ್ನೊಂದು ಪ್ರಶ್ನೆಯನ್ನು ಹುಟ್ಟು ಹಾಕಿತು. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಕೇವಲ ‘ಯಾರು ಆಡಳಿತ ನಡೆಸುತ್ತಾರೆ?’ ಎಂಬ ಆಯ್ಕೆಯ ಪ್ರಶ್ನೆಗೆ ಸೀಮಿತವಾಗಿಲ್ಲ. ಬದಲಿಗೆ, ಆಡಳಿತ, ಹಂಚಿಕೆ ಮತ್ತು ವಿತರಣೆಯ ಯಾವ ವ್ಯವಸ್ಥೆಗಳು ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸುತ್ತವೆ ಎನ್ನುವುದೇ ಮುಖ್ಯ ಪ್ರಶ್ನೆ.
ಹಾಗಾದರೆ ಸಮಾಜ ಪ್ರಜಾಸತ್ತಾತ್ಮಕವಾಗಿದೆ ಎನ್ನುವುದರ ತಾತ್ಪರ್ಯವೇನು? ಪ್ರಜಾಸತ್ತೆಯನ್ನು ಹುಡುಕಬೇಕಾದದ್ದೆಲ್ಲಿ? ಒಂದು ಮನೆಯೊಳಗೆ ಪ್ರಜಾಸತ್ತೆ ಹೇಗೆ ವ್ಯಕ್ತವಾಗುತ್ತದೆ? ಒಂದು ಮಗು ತನ್ನ ಪೋಷಕರಿಗೆ ‘ನೀವು ನನ್ನೊಂದಿಗೆ ಪ್ರಜಾಸತ್ತಾತ್ಮಕವಾಗಿ ವರ್ತಿಸುತ್ತಿಲ್ಲ; ನನಗೆ ಚಾಕೊಲೇಟ್ ಬೇಕು, ನೀವು ಬಟ್ಟೆ ಮಾತ್ರ ಕೊಡುತ್ತೀರಿ’ ಎಂದು ಹೇಳಬಹುದೇ? ಅದು ಪ್ರಜಾಸತ್ತೆಯಲ್ಲ. ಅದು ಕೇವಲ ಆಯ್ಕೆಯ ಪ್ರಶ್ನೆ. ಹಾಗೆಯೇ, ಸಹಜವಾಗಿಯೇ ಶ್ರೇಣಿಕ್ರಮ (hierarchical) ಇರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ- ವಿದ್ಯಾರ್ಥಿ ಸಂಬಂಧಗಳಲ್ಲಿ ಪ್ರಜಾಸತ್ತೆ ಎಂದರೇನು? ‘ಈ ಪಾಠ ನನಗೆ ಇಷ್ಟವಿಲ್ಲ, ಆದ್ದರಿಂದ ನಾನು ಓದುವುದಿಲ್ಲ’ ಎಂದು ಹೇಳುವ ವಿದ್ಯಾರ್ಥಿಗಳನ್ನು ನಾನು ನೋಡಿದ್ದೇನೆ. ‘ಗಣಿತ ನನಗೆ ಇಷ್ಟವಿಲ್ಲ; ಅದನ್ನು ನನಗೆ ಕಲಿಸಬೇಡಿ’ ಎಂದೂ ಕೆಲವರು ಹೇಳುತ್ತಾರೆ. ಹಾಗಾದರೆ, ‘ನೀನು ಗಣಿತ ಓದಲೇಬೇಕು’ ಎಂದು ಹೇಳುವುದು ಪ್ರಜಾಸತ್ತೆಗೆ ವಿರುದ್ಧವೇ?
ಇಂತಹ ಪ್ರಶ್ನೆಗಳನ್ನು ನಾನು ಆ ಪುಸ್ತಕದಲ್ಲಿ ಪರಿಶೀಲಿಸಿದ್ದೇನೆ. ಮನೆಗಳಿಂದ ಆರಂಭಿಸಿ ಶಾಲೆಗಳು, ಕಾಲೇಜುಗಳು, ಕೆಲಸದ ಸ್ಥಳಗಳು, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಜಾಸತ್ತೆ ಹರಡದೆ ಕೇವಲ ರಾಜಕೀಯ ನಾಯಕರಿಂದ ಮಾತ್ರ ಪ್ರಜಾಸತ್ತಾತ್ಮಕ ವರ್ತನೆಯನ್ನು ನಿರೀಕ್ಷಿಸುವುದು ನ್ಯಾಯವೇ? ಸ್ವಾತಂತ್ರ್ಯ (liberty), ಸಮಾನತೆ (equality), ಮತ್ತು ಸಹೋದರತ್ವ (fraternity) ಪ್ರಜಾಸತ್ತೆಯ ಮೂರು ಮೂಲ ಮೌಲ್ಯಗಳಾಗಿವೆ ಎಂದು ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ಸ್ವಾತಂತ್ರ್ಯ ಮುಖ್ಯವಾಗಿ ವೈಯಕ್ತಿಕ ಹಕ್ಕುಗಳು ಮತ್ತು ಇಚ್ಛೆಯ ಆಯ್ಕೆಗಳಿಗೆ ಸಂಬಂಧಿಸಿದೆ. ಆದರೆ ಕೇವಲ ಸ್ವಾತಂತ್ರ್ಯ ಎನ್ನುವುದು ಸಮಾನತೆಗೆ ವಿರುದ್ಧವಾಗಬಲ್ಲದು. ‘ಮೆರಿಟ್ ವರ್ಸಸ್ ಮೀಸಲಾತಿ’ಯ ಬಗೆಗಿನ ಚರ್ಚೆಗಳು ಇದಕ್ಕೊಂದು ಉತ್ತಮ ಉದಾಹರಣೆ. ಸ್ವಾತಂತ್ರ್ಯವೂ ಬೇಕು, ಸಮಾನತೆಯೂ ಬೇಕು. ಆದರೆ ಅವೆರಡೂ ಪರಸ್ಪರ ಸಂಘರ್ಷಕ್ಕೊಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಅವೆರಡನ್ನೂ ಸಮತೋಲನದಲ್ಲಿಡುವ ಮತ್ತೊಂದು ಮೌಲ್ಯ ಅಗತ್ಯ. ಅದೇ ಅಂಬೇಡ್ಕರ್ ಹೇಳುವ “fraternity” — ಅಂದರೆ ಸಹೋದರತ್ವ. ಈ ಕಲ್ಪನೆಗೆ ಬೌದ್ಧ ಧರ್ಮದ ಮೈತ್ರಿ (maitri) ಪರಿಕಲ್ಪನೆಯಿಂದಲೂ ಅವರಿಗೆ ಪ್ರೇರಣೆ ದೊರಕಿತ್ತು. ಅಂಬೇಡ್ಕರ್ ಅವರ ಅಭಿಪ್ರಾಯದಲ್ಲಿ, ಸಹೋದರತ್ವವೇ ಪ್ರಜಾಸತ್ತೆಯನ್ನು ಜೀವಂತವಾಗಿರಿಸುವ ಅಂಶ.

ಈ ಚಿಂತನೆಗಳು ಅವರ ಸ್ವಂತ ಜೀವನಾನುಭವಗಳಿಂದಲೇ ಉದ್ಭವಿಸಿದ್ದವು. ದಲಿತ ಸಮುದಾಯ ಅನುಭವಿಸಿದ ನೋವು ಮತ್ತು ಅವಮಾನಗಳು ‘ಪ್ರಜಾಸತ್ತೆ ಎಂದರೇನು?’ ಎಂಬ ಪ್ರಶ್ನೆಯನ್ನು ಆಳವಾಗಿ ಸ್ಪರ್ಶಿಸುತ್ತವೆ. ಪ್ರಜಾಸತ್ತೆಯನ್ನು ತಿರಸ್ಕರಿಸದೆ, ಅದನ್ನು ವಿಮರ್ಶಿಸಿ ಪುನರ್ವ್ಯಾಖ್ಯಾನ ಮಾಡುವ ದಾರಿಗಳನ್ನು ತೆರೆಯಬೇಕಿದೆ. ‘ಜನತಂತ್ರಕ್ಕೆ ಪರ್ಯಾಯವೇನು?’ ಎಂಬ ಪ್ರಶ್ನೆಯೇ ಭಯಾನಕ. ಬಹುಸಂಖ್ಯಾತರ ಪ್ರಭುತ್ವ ನಮ್ಮನ್ನು ನೋಯಿಸುತ್ತಿದೆ. ಆದರೆ ಚುನಾವಣಾ ಪ್ರಜಾಸತ್ತೆ ಇಲ್ಲದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತೆಂದು ಕಲ್ಪಿಸುವುದೇ ಕಷ್ಟ. ಇತಿಹಾಸವು ಇಂತಹ ಅನೇಕ ಭೀಕರ ಉದಾಹರಣೆಗಳಿಂದ ತುಂಬಿದೆ. ಇಲ್ಲಿ ಕರುಣೆ, ಕಾಳಜಿ ಮತ್ತು ಸಹೋದರತ್ವ ಎಲ್ಲಿಂದ ಬೆಳೆಯಬೇಕು ಎಂಬ ಪ್ರಶ್ನೆಯತ್ತ ನಾವು ಮರಳಬೇಕಾಗಿ ಬರುತ್ತದೆ. ಅದು ಶಾಲೆಗಳಿಂದಲೇ ಆರಂಭವಾಗಬೇಕು. ಆದರೆ ಇಂದಿನ ಶಾಲಾ ಶಿಕ್ಷಣ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಒಂದು ತರಗತಿಯಲ್ಲಿ ಉಳಿಯಲು ಒಬ್ಬ ಮಗು ಮತ್ತೊಬ್ಬ ಮಗುವನ್ನು ಸೋಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಂತಹ ವಾತಾವರಣದಲ್ಲಿ ಕರುಣೆ, ಪರಿಗಣನೆ ಮತ್ತು ಸಹೋದರತ್ವ ಹೇಗೆ ಬೆಳೆದುಬರಲು ಸಾಧ್ಯ?

ಸಂದರ್ಶನ: ಮಶ್ಕೂರ್ ಖಲೀಲ್
ಕನ್ನಡಕ್ಕೆ: ನಝೀರ್ ಅಬ್ಬಾಸ್


Sundar Sarukkai is one of India’s leading contemporary philosophers and public intellectuals, known for his work in the philosophy of science and interdisciplinary studies. Trained in physics and philosophy, he earned his PhD from Purdue University, USA, and has held key academic positions including at the National Institute of Advanced Studies, Bengaluru, and as Founder-Director of the Manipal Centre for Philosophy and Humanities. He is the author of several influential books, including Translating the World, Philosophy of Symmetry, and What is Science?, and continues to actively promote philosophy through research, writing, and public engagement.

Leave a Reply

*