ಅನಲ್‌ ಹಖ್

ಅನಲ್ ಹಖ್ ಎಂದು ಸಾಧಾರಣವಾಗಿ ಹೇಳುತ್ತಾ ಓಡಾಡುತ್ತಿದ್ದ ಮನ್ಸೂರ್ ಅಲ್ ಹಲ್ಲಾಜ್ ರನ್ನು ಸರ್ಕಾರ, ಸರ್ಕಾರಕ್ಕೆ ಸೇರಿದ್ದ ಮತ ಪಂಡಿತರು ಕೊಂದು ಕತ್ತು ಸೀಳಿ ನಜ್ಜುಗುಜ್ಜು ಮಾಡಿ ದಹಿಸಿ ಯೂಫ್ರಟಿಸ್‌ ನದಿಗೆಸೆದಾಗ ಕ್ಷೋಭೆಗೊಳಗಾದ ಮಹಾ ಸಮುದ್ರದಂತೆ ಯೂಫ್ರಟಿಸ್‌ ಅನಲ್ ಹಖ್! ಅನಲ್ ಹಖ್! ಎಂದು ಅತಿ ಗಂಭೀರತೆಯಿಂದ ಘರ್ಜಿಸಿತು ಎಂಬುದು ಐತಿಹ್ಯ. ಆ ಗರ್ಜನೆಯ ವಿಚಾರ ಅತಿಶಯೋಕ್ತಿಯಿಂದ ಕೂಡಿದ್ದಾದರೂ ಮನ್ಸೂರ್ ರ ಜೀವನ ಚರಿತ್ರೆ ಕ್ರೋಧ ಹುಟ್ಟಿಸುವಂತದ್ದೆ. ಇಂತಹ ಅನೇಕ ಘಟನೆಗಳು ಪ್ರತಿಯೊಂದು ಧರ್ಮದ ಹೆಸರಲ್ಲಿ ಲೋಕ ಚರಿತ್ರೆಯಲ್ಲಿದೆ. ಇದರಲ್ಲಿ ಮನ್ಸೂರರ ತಪ್ಪು ಏನು ಎಂದು ನೋಡಿದರೆ ಅವರು ಅನಲ್ ಹಖ್! ಅನಲ್ ಹಖ್! ಎಂದು ಹೇಳುತ್ತಿದ್ದರಂತೆ! ಅನಲ್ ಹಖ್ ಎಂಬುದರ ಅರ್ಥ ‘ನಾನು ಸತ್ಯ!’ ಎಂದಾಗಿದೆ. ಅಹಂ ಬ್ರಹ್ಮಾಸ್ಮಿ ಎಂದು. ದೇವರ ಪರ್ಯಾಯಗಳಲ್ಲಿ ಒಂದು. ಸಂಕ್ಷಿಪ್ತವಾಗಿ ಮನ್ಸೂರ್ ಹೇಳಿದರು; ಮನ್ಸೂರ್ ದೇವರೆಂದು.‌ ಹಾಗೆ ಸ್ಪಷ್ಟವಾಗಿ ಹೇಳಿದರೋ ಏನೋ. ಹೇಳಿದರೂ ಅದರಲ್ಲೇನಿದೆ ತಪ್ಪು? ಒಬ್ಬ ಹುಚ್ಚನ ವಚನಗಳು ಎಂದು ಬಿಟ್ಟು ಬಿಡಬಹುದಿತ್ತು.‌ ಆದರೆ, ಮನ್ಸೂರ್ ಹುಚ್ಚನಾಗಿರಲಿಲ್ಲ. ಆಧ್ಯಾತ್ಮಿಕವಾದಿಯಾದ ಓರ್ವ ಸೂಫಿ. ಮಹಾ ಸಮುದ್ರದ ಒಂದು ಹನಿ, “ನಾನು ಮಹಾ ಸಮುದ್ರ!” ಎಂದು ಹೇಳುವಂತೆಯೋ, ಮಹಾಶಿಲೆಯ ಒಂದು ಕಣ; ‘ನಾನು ಮಹಾಶಿಲೆ’ ಎಂದು ಹೇಳುವಂತೆಯೋ ಆಗಿರಬಹುದು ಮನ್ಸೂರ್ ಹೇಳಿದ್ದು. ಎಲ್ಲವೂ ಈಶ್ವರನ ಅಂಶವಾದುದರಿಂದ…
ಅದೇನಿದ್ದರೂ ರಕ್ತಸಿಕ್ತವಾದ ಆ ಘಟನೆ ಹೀಗಿದೆ…
ವಿಚಾರಗಳ ಬೆಳವಣಿಗೆಯಲ್ಲಿ ಕೋಪೋದ್ರಿಕ್ತರಾಗುವ ಕಾಲಘಟ್ಟ: ಹಿಜ್ರದ ನಂತರದ ನಾಲ್ಕನೇ ಶತಮಾನದ ಆರಂಭ. ಜ್ಞಾನಿಗಳು, ಮುನಿ ಪುಂಗವರು, ಕವಿಗಳು, ಕಲಾವಿದರು ಸ್ವೇಚ್ಛಾಧಿಪತ್ಯದ ಮುಂದೆ ವಿನೀತರಾಗಿ ನಿಂತಿದ್ದರು. ಕೇವಲ ಹೊಗಳುಭಟರು! ಪರ್ಷಿಯಾ ರಾಷ್ಟ್ರ ದ್ರಾಕ್ಷಾ ರಸದ ಮಾಧುರ್ಯದಲ್ಲೂ, ಪನ್ನೀರು ಸುಮಗಳ ಸೌರಭ್ಯದಲ್ಲೂ, ಸುಂದರಿಗಳ ಆಲಿಂಗನದಲ್ಲೂ ಮುಳುಗಿ ಹೋಗಿತ್ತು. ಆಗ ಮನ್ಸೂರ್ ಹಲ್ಲಾಜ್ ಸಂಜಾತರಾಗುತ್ತಾರೆ. ಅಂತಃಸತ್ವವಿಲ್ಲದ ಆರ್ಭಟಗಳಲ್ಲಿ ಲಯಿಸಿ ಹೋಗಿದ್ದ ರಾಜಧಾನಿಯಿಂದ ಬಹುದೂರವಿದ್ದ ಪುಟ್ಟ ಗ್ರಾಮವಾದ ‘ಬೈಸಾ’ದಲ್ಲಿ, ಅದರ ಪ್ರಶಾಂತತೆಯಲ್ಲಿ ಮನ್ಸೂರ್ ಹಲ್ಲಾಜ್ ಬೆಳೆದರು.
ಮನ್ಸೂರ್ ಹಲ್ಲಾಜ್…ವಿಚಾರಶೀಲನಾಗಿದ್ದ ಆ ಬಾಲಕ ಯುವತ್ವದ ಗಾಂಭೀರ್ಯವನ್ನು ತಲುಪಿದರು. ಸಮೀಪದ ಪಟ್ಟಣವಾದ ‘ತುಷ್ತಾರಿ’ಯದ ಮಹಾವಿದ್ಯಾಲಯ ಸೇರಿದರು. ಆಧ್ಯಾತ್ಮಿಕ, ಧರ್ಮ, ಸಮಾಜ, ಸಾಹಿತ್ಯ ಹೀಗೆ ಎಲ್ಲಾ ಕೋನಗಳಲ್ಲೂ ಅತ್ಯಮೂಲ್ಯ ಪಾಂಡಿತ್ಯ ಪಡೆದರು. ವಿದ್ವಾಂಸರಾದ ಮನ್ಸೂರ್ ಅಸಂತೃಪ್ತಿಯೊಂದಿಗೆ ಹೊರಗೆ ಬಂದರು.‌ ಅಜ್ಞಾತವಾದ ಒಂದು ತೊಳಲಾಟ, ಅರಿತದ್ದ್ಯಾವುದೂ ಅರಿಯಬೇಕಾದದ್ದಲ್ಲ; ತೀರದ ಆತ್ಮದಾಹ; ಅರಿಯುವ, ಹತ್ತಿರವಾಗುವ ತೀವ್ರ ವಾಂಛೆ. ದಾರಿ ನಿಶ್ಚಯವಿಲ್ಲದ ಇರುಳಲ್ಲಿ ಅಲೆದಾಟ. ದಿಗ್ಭ್ರಾಂತರಾಗಿ ಮನ್ಸೂರ್ ಶೋಧಿಸಿದರು; ಬೆಳಕಿನ ಒಂದು ಕಿರಣ, ಅದಕ್ಕಾಗಿ ಅಂಡಲೆದರು.‌ ಓರ್ವ ಫಕೀರನಂತೆ ವಿಷಾದದೊಂದಿಗೆ ಓಡಾಡಿದರು. ಹೀಗಿರಲು ಒಮ್ಮೆ ‘ಉಮರ್ ಇಬ್ನ್ ಉಸ್ಮಾನ್ ರನ್ನು ಭೇಟಿಯಾದರು. ಅವರ ಆಶ್ರಮ ಮರುಭೂಮಿಯ ಹರಿತ ಪ್ರದೇಶವೆಂದು ಮನ್ಸೂರ್ ಗೆ ತೋರಿತು.‌ ಗುರು ನವ್ಯಪಥವೊಂದನ್ನು ತೋರಿಸಿಕೊಟ್ಟರು: ಸೂಫಿಸಂ.
ಆಧ್ಯಾತ್ಮಿಕ ವಿಜ್ಞಾನದ ಉಜ್ವಲ ಪ್ರಭಾವ! ಅದರತ್ತ ಮನ್ಸೂರ್ ನಾಗಾಲೋಟವಿಟ್ಟರು. ಯುಗಗಳ ಉತ್ಕಂಠದೊಂದಿಗೆ, ಬಿರುಗಾಳಿಯ ಆವೇಗದಲ್ಲಿ, ಭೌತಿಕತೆಯ ಗಡಿ ದಾಟಿದರು.‌ ಅಕ್ಷಯವೂ, ಅನಶ್ವರೂ ಆದ ಮಹಾ ಬೆಳಕಿನಲ್ಲಿ ಮೇಘ ಬಿಂದುವಿನಂತೆ ಮನ್ಸೂರ್ ವಿಸ್ಮೃತರಾದರು. ಧ್ಯಾನ ಮಗ್ನರಾಗಿದ್ದ ಮನ್ಸೂರ್ ಆವೇಶ ಭರಿತರಾಗಿ ಕೂಗಿದರು: ‘ಅನಲ್ ಹಖ್! ಅನಲ್ ಹಖ್!
ಅನಶ್ವರವಾದ ಸತ್ಯ, ಸೃಷ್ಟಿಯೂ ಸೃಷ್ಟಿಕರ್ತನೂ ನಾನೇ! ನಾನೇ…
ಅನಶ್ವರವಾದ ಸತ್ಯ! ಆಶ್ರಮ ಒಂದು ಕ್ಷಣ ನಡುಗಿತು. ಗುರು ಶಿಷ್ಯರು ಬೆಚ್ಚಿದರು. ಎಂಥಾ ಘಟನೆ! ಶತಮಾನಗಳ ಮನುಷ್ಯ ವಿಶ್ವಾಸ. ಅದರ ಮೇಲ್ಛಾವಣಿಯನ್ನೇ ಧ್ವಂಸಗೊಳಿಸುವ ಭಯಂಕರ ಘೋಷಣೆ; ಅನಲ್ ಹಖ್…ಮನ್ಸೂರ್ ವಿಸ್ಮೃತ ಎಂದು ಅವರು ಸಮಾಧಾನಪಟ್ಟುಕೊಂಡರು. ಆದರೂ, ಕೊನೆಗೆ ಮಹಾಗುರು ಉಪದೇಶಿಸಿದರು:
“ಮನ್ಸೂರ್, ಇದು ಸರಿಯಲ್ಲ; ಏಕಭಾವದಲ್ಲಿ ಸೃಷ್ಟಿಯನ್ನು ಹಾಗೂ ಸೃಷ್ಟಿಕರ್ತನನ್ನು ಭಾವಿಸುವುದು ಸರಿಯಲ್ಲ. ಇದು ಸಾಮೂಹಿಕ ನಿಯಮಕ್ಕೆ ವಿರುದ್ಧವಾಗಿದೆ. ಶರೀಅತ್ ಉಲ್ಲಂಘಿಸಿದರೆ ಮರಣ ದಂಡನೆ ಎಂಬುದು ನಿಮಗೆ ತಿಳಿದಿದೆ ತಾನೇ?”
ಮರಣ ದಂಡನೆ!
ಮನ್ಸೂರ್ ಅವೆಲ್ಲವನ್ನು ಮರೆತು ಮತ್ತೆ ಮತ್ತೆ ಆವೇಶಭರಿತರಾಗುವುದು ವಾಡಿಕೆಯಾಯಿತು. ಸಾಮೂಹಿಕ ನಿಯಮ ಆಶ್ರಮವನ್ನು ನಾಶ ಮಾಡುತ್ತದೆ! ಭೀತಿಯಿಂದ ಗುರು ಮನ್ಸೂರರನ್ನು ಹೊರ ತಳ್ಳಿದರು. ಜನರು ಕುಹಕವಾಡಿದರು. ಸಾಂಕ್ರಾಮಿಕ ರೋಗ ಬಾಧಿತನೆನ್ನುವಂತೆ ಮನ್ಸೂರರನ್ನು ಕಲ್ಲೆಸೆದು ಓಡಿಸಿದರು. ಬಸರಿನಲ್ಲಿ ನಿಲ್ಲಲಾಗದ ಸ್ಥಿತಿ ಉದ್ಭವಿಸಿತು.‌ ಎಲ್ಲೂ ಆಶ್ರಯ ಸಿಗದೆ ಮನ್ಸೂರ್ ಮತ್ತೆ ಅಲೆಮಾರಿಯಾದರು. ಹಲವು ಯತಿ ವರ್ಯರ ಆಶ್ರಮಗಳನ್ನು ಹತ್ತಿಳಿದರು. ಕೊನೆಗೆ ಬಾಗ್ದಾದ್ ತಲುಪಿದರು. ಸುಪ್ರಸಿದ್ಧ ಸೂಫಿ, ಮಹಾ ವಿದ್ವಾಂಸರಾದ ಹಝ್ರತ್ ಜುನೈದ್ ಮಂದಸ್ಮಿತರಾಗಿ ಬಹಿಷ್ಕೃತರಾಗಿದ್ದ ಮನ್ಸೂರ್ ಗೆ ಅಭಯ ನೀಡಿದರು. ಆದರೆ, ಅಭಿಪ್ರಾಯಗಳನ್ನು ಒಳಗೆ ಇಟ್ಟುಕೊಳ್ಳಬೇಕೆಂಬ ಉಪದೇಶವನ್ನೂ ನೀಡಿದರು.
‘ಸ್ವಾತಂತ್ರ್ಯದ ಶುದ್ಧವಾಯು ಉಸಿರಾಡುವ ಒಂದಿಂಚು ಸ್ಥಳವೂ ಭೂಮಿಯಲ್ಲಿಲ್ಲವೇ?’ ಎಂದು ಮನ್ಸೂರ್ ಚಕಿತರಾದರು.‌ ಆದರೂ, ಅಲ್ಲಿಯೇ ವಾಸ ಹೂಡಿದರು. ಅಲ್ಲೂ ಅವರು ಆವೇಶಭರಿತರಾಗುವುದು ಸಾಮಾನ್ಯವಾಯಿತು. ಹಝ್ರತ್ ಜುನೈದ್ ನೋವಿನಿಂದ ಮತ್ತೊಂದು ಉಪದೇಶ ನೀಡಿದರು:
“ಮನ್ಸೂರ್! ಎಚ್ಚರಿಕೆಯಿಂದಿರಿ. ದುರಿತ ದಿನವೊಂದು ಹತ್ತಿರವಾಗುತ್ತಿದೆ. ನಿಮ್ಮ ಬಿಸಿರಕ್ತದಿಂದ ಯೂಫ್ರಟಿಸ್‌ ನದಿ ತೀರದ ಬಿಳಿ ಮರಳು ಕುಂಕುಮದಿಂದ ಅಲಂಕರಿಸಲ್ಪಡುವ ಅಂತಿಮ ದಿನ.‌ ಎಚ್ಚರವಾಗಿರಿ…”
“ಆ ಅಂತಿಮ ದಿನ!” ಮನ್ಸೂರ್ ಹೇಳಿದರು: ‘ಅದರಲ್ಲಿ‌ ನನಗೆ ಭಯವಿಲ್ಲ. ಆದರೆ, ಅಂದು ನೀವು ಈ ಮಹೋನ್ನತ ಪದವಿಯಿಂದ ಕೆಳಗಿಳಿಯುವಿರಿ. ಈ ಸನ್ಯಾಸಿ ಧಿರಿಸನ್ನು ಕಿತ್ತೆಸೆದು ತಾವು ಕೇವಲ ನ್ಯಾಯಾಧೀಶರಾಗುವಿರಿ. ತಾವು ಎಚ್ಚರವಾಗಿರಿ.‌ ಅನಲ್ ಹಖ್!”
ಚರಿತ್ರೆ ಹೀಗೆ ಮುಂದುವರಿಯುತ್ತದೆ.
ಘಟನಾತ್ಮಕವಾದ ಕಾಲದ ಪುಟಗಳು ಮತ್ತೆ ಮಗುಚಿದವು. ಮನ್ಸೂರ್ ಹೊರಗೆ ಬಂದರು.‌
ದೇವಾಲಯಗಳು, ಪೇಟೆ, ಮೈದಾನಗಳು ಮನ್ಸೂರರ ಆವೇಶಭರಿತ ಪ್ರಭಾಷಣಗಳಿಂದ ಪ್ರಸನ್ನಗೊಂಡಿತು. ನವೀನ ಆದರ್ಶ ಜನರನ್ನು ಹಠಾತ್ ಆಕರ್ಷಿಸಿತು. ಚಿಂತನಾ ಲೋಕದಲ್ಲಿ ಬಿರುಗಾಳಿ ಎದ್ದಿತು. ಅದರಲ್ಲಿ ಕ್ರಾಂತಿಯ ನಗಾರಿ ಶಬ್ಧ ಕೇಳಿಸಿತು. ಪಂಡಿತ ವರ್ಗ ದಿಗ್ಮೂಢರಾದರು. ಪ್ರಸಿದ್ಧಿಯ ತುತ್ತತುದಿಗೇರಿದ ಮನ್ಸೂರರ ಸುತ್ತ ಗೂಢಾಲೋಚನೆಯ ಕುಣಿಕೆಗಳು ಬಿಗಿದವು. ಧರ್ಮದ್ರೋಹಿ, ನಾಸ್ತಿಕ ಮೊದಲಾದ ವದಂತಿಗಳು ಹರಡಿದವು. ಮನ್ಸೂರರನ್ನು ವಧಿಸುವ ನಿಗೂಢ ಪ್ರಯತ್ನಗಳು ನಡೆದವು.‌ ಆ ಕಾಲದಲ್ಲಿ ಮನ್ಸೂರ್ ಪರ್ಯಟನೆ ಮಾಡಿದರು, ಗ್ರಂಥಗಳನ್ನು ಬರೆದರು. ಹಲವು ಸಂಕಟಗಳನ್ನು ಎದುರಿಸಿ ಐದು ವರ್ಷಗಳಲ್ಲಿ ನಲ್ವತ್ತೇಳು ಗ್ರಂಥಗಳನ್ನು ರಚಿಸಿದರು. ಆದರೆ, ಗ್ರಂಥಗಳ ಪ್ರಸರಣವನ್ನು ಸರಕಾರ ನಿಷೇಧಿಸಿದ ಕಾರಣ ಸಾರ್ವತ್ರಿಕ ಪ್ರಚಾರವೂ ಲಭಿಸಿತು.‌ ಕೆಲವು ಕವಿಗಳು, ಚಿಂತಕರು ಮನ್ಸೂರರನ್ನು ಹೊಗಳದಿರಲಿಲ್ಲ. ಮಹಾಕವಿ, ಅತುಲ್ಯ ತತ್ವಜ್ಞಾನಿ ಹೀಗೆ ಮನ್ಸೂರರ ಕೀರ್ತಿ ದೇಶವ್ಯಾಪಿಯಾಗಿ ಹರಡಿತು.‌ ಸುಲ್ತಾನನ ಬಲಹೀನ ಸರ್ಕಾರ ಇದರಿಂದ ಭೀತಿಗೊಂಡಿತು. ಜತೆಗೆ ಪುರೋಹಿತರ ವಿರೋಧವೂ ಬಲವಾಯಿತು.‌ ಹೀಗೆ ಅಧಿಕಾರ ಮತ್ತು ಆಚಾರ ಮನ್ಸೂರರ ವೈರಿಗಳಾಗಿ ಬದಲಾಯಿತು. ಅವರು ಮನ್ಸೂರರಿಗೆ ಸ್ಥಾನಮಾನಗಳ ವಾಗ್ದಾನ ಮಾಡಿದರು. ಪಂಡಿತ ವರ್ಗ ತಂತ್ರಪೂರ್ವಕ ಮನ್ಸೂರರಿಗೆ ವಾದ ಪ್ರತಿವಾದಕ್ಕೆ ಆಹ್ವಾನ ನೀಡಿತು.‌ ಬಾಗ್ದಾದಿನ ಪಂಡಿತ ವರ್ಗವನ್ನು ಅಭಿಸಂಭೋದನೆ ಮಾಡಿ ಮನ್ಸೂರ್ ಹೇಳಿದರು:
“ಮನ್ಸೂರನ ವಿಚಾರವನ್ನು ಕೋಟೆಯಲ್ಲಿ ಬಂಧಿಸಲು ಸಾಧ್ಯವಿಲ್ಲ.‌ ಅದು ವಿಶ್ವವ್ಯಾಪಿಯಾಗಿ, ಆಕಾಶವನ್ನು ಬೇಧಿಸಿ, ಲೋಕ ಲೋಕಗಳನ್ನು ದಾಟಿ ಹಾರಿ ಹೋಗುತ್ತದೆ. ನನ್ನ ಆದರ್ಶಗಳು, ನನ್ನ ವಿಶ್ವಾಸಗಳು ಯಾವುದೂ ನಿಮ್ಮ ಆಜ್ಞಾಪಾಲನೆಗೆ ನಿಲ್ಲುವಂತದ್ದಲ್ಲ.‌ ನನ್ನನ್ನು ನಿಮ್ಮ ಕೂಟಕ್ಕೆ ಸೇರಿಸಬೇಕೆಂದೇನಿಲ್ಲ”
ಸಾವಿರಾರು ಪಂಡಿತರ ರುಧಿರ ನಯನಗಳು ಮನ್ಸೂರರ ಕಡೆಗೆ ತಿರುಗಿದವು.‌ ಅದುಮಿಡಲಾಗದ ಸಿಟ್ಟಿನಿಂದ ಪಂಡಿತವರ್ಯರೊಬ್ಬರು ಸಭೆಯಲ್ಲಿ ಎದ್ದು ನಿಂತರು.‌ ಮನ್ಸೂರರನ್ನು ಕೆಳಗೆಳೆದು ಅತಿ ಕಠಿಣ ಪ್ರಹಾರ ನಡೆಸಿದರು. ಪ್ರಜ್ಞೆ ತಪ್ಪಿ ಬಿದ್ದಿದ್ದ ಮನ್ಸೂರರನ್ನು ಹದ್ದುಗಳಂತೆ ಸುತ್ತುವರಿದರು.‌ ಆಗಲೇ ಮತ ಪಂಡಿತರು ಒಕ್ಕೊರಲ ಅಭಿಪ್ರಾಯವಾಗಿ ಫತ್ವಾವೊಂದನ್ನು ಸಿದ್ಧಪಡಿಸಿದರು.‌
“ಮನ್ಸೂರ್, ಶರೀಅತ್ ಉಲ್ಲಂಘಿಸಿದ ಕಾಫರ್ ಆಗಿರುವರು. ತನ್ಮೂಲ ಮರಣ ದಂಡನೆಗೆ ಅರ್ಹರಾಗಿದ್ದಾರೆ…”
ಸಾವಿರಾರು ಪಂಡಿತರು ಯಾವುದೇ ವಿರೋಧವಿಲ್ಲದೆ ಅದರಲ್ಲಿ ಸಹಿ ಹಾಕಿದರು. ಬಾಗ್ದಾದಿನ ಮಂತ್ರಿಯಾಗಿದ್ದ ಹಮೀದ್ ಇಬ್ನ್ ಅಬ್ಬಾಸ್ ಆರೋಪಪಟ್ಟಿಗೆ ಸಹಮತ ವ್ಯಕ್ತಪಡಿಸಿದರು.‌ ಸುಲ್ತಾನ್ ಮುಖ್ತದಿರ್ ಬಿಲ್ಲಾ ಮಾತ್ರ ಅದಕ್ಕೆ ಸಹಿ ಹಾಕಲಿಲ್ಲ.‌ ಹಝ್ರತ್ ಜುನೈದ್ ಸಹಿ ಹಾಕದ ಪತ್ರಕ್ಕೆ ತಾನು ಸಹಿ ಹಾಕುವುದಿಲ್ಲವೆಂದು ಸುಲ್ತಾನ್ ಹಠ ಹಿಡಿದರು. ಹೀಗೆ ಪಂಡಿತರ ನಿಯೋಗ ಹಝ್ರತ್ ಜುನೈದ್ ರ ಆಶ್ರಮಕ್ಕೆ ಹೋಯಿತು.‌ ಆರು ಬಾರಿ ಅವರು ನಿರಾಶೆಯಿಂದ ಮರಳಿದರು. ಹೌದು ಅಥವಾ ಇಲ್ಲ ಎಂಬ ಖಚಿತವಾದ ಅಭಿಪ್ರಾಯ ಹೇಳುವಂತೆ ಖಲೀಫ ಆಗ್ರಹಿಸಿದರು. ಕ್ಲೇಶಭರಿತರಾದ ಅವರು ದರ್ವೇಶಿ ವೇಷಭೂಷಣಗಳನ್ನು ಕಿತ್ತೆಸೆದರು.‌ ನ್ಯಾಯಾಧೀಶನ ವೇಷ ತೊಟ್ಟರು. ಫತ್ವಾ ಪತ್ರಕ್ಕೆ ಸಹಿ ಹಾಕಿದರು.‌ ಅವರ ಕಣ್ಣುಗಳಲ್ಲಿ ಬಾಷ್ಪ ತುಂಬಿತು. ನಡುಗುವ ಕೈಗಳೊಂದಿಗೆ ಹಝ್ರತ್ ಜುನೈದ್ ಅದರಲ್ಲಿ ಬರೆದರು;
“ಸಾಮೂಹಿಕ ನಿಯಮದ ಅನುಸಾರ ಮನ್ಸೂರ್ ವಧೆ ಶಿಕ್ಷೆಗೆ ಅರ್ಹರು. ಆದರೆ, ಸತ್ಯವನ್ನು ಆಧಾರವಾಗಿಟ್ಟುಕೊಂಡರೆ ಎಲ್ಲವನ್ನು ಅರಿಯುವವನು ಲೋಕ ನಿಯಂತ್ರಕ ಮಾತ್ರ”
ಸಾಮೂಹಿಕ ನಿಯಮವಲ್ಲವೇ ಪ್ರಬಲ!
ಮನ್ಸೂರರ ಕೈಗೆ ಕೋಳ ಹಾಕಿ, ಭಟರ ಬೆಂಗಾವಲಿನಲ್ಲಿ ಯೂಫ್ರಟಿಸ್‌ ನದಿ ತೀರಕ್ಕೆ ಕರೆದೊಯ್ದರು. ಮರದ ಕುರ್ಚಿಯೊಂದಕ್ಕೆ ಅವರನ್ನು ಕಟ್ಟಿ ಹಾಕಿ ನಾನಾ ವಿಧದಲ್ಲಿ ಪೀಡಿಸಿದರು.‌ ಕೊನೆಗೆ ಅವರನ್ನು ಜೈಲಿಗಟ್ಟಿದರು. ಕಂಬಿಗಳ ಹಿಂದೆ ನಿಂತು ಮನ್ಸೂರ್ ಭಾಷಣ ಮಾಡುತ್ತಿದ್ದರು. ದಿನಗಳು ಕಳೆದಂತೆ ಜೈಲಿನ ಮುಂದೆ ಜನಸಾಗರವೇ ನೆರೆಯಲಾರಂಭಿಸಿತು. ಮನ್ಸೂರ್ ನಿರ್ದೋಷಿ ಎಂಬ ಕೆಲವು ಪ್ರಸ್ತಾವನೆಗಳು ಎಲ್ಲೆಲ್ಲೂ ಹರಿದಾಡಿತು. ಉಲಮಾಗಳು ಜೈಲಿಗೆ ಭೇಟಿ ನೀಡಿದರು. ಸುದ್ದಿ ತಿಳಿದ ಸುಲ್ತಾನ್ ಆಜ್ಞೆ ಹೊರಬಿತ್ತು:
“ಮನ್ಸೂರರನ್ನು ಇನ್ನು ಮುಂದೆಯೂ ಜೈಲಿನಲ್ಲಿಟ್ಟಿಕೊಂಡರೆ ರಾಷ್ಟ್ರದಲ್ಲಿ ಕ್ಷೋಭೆ ಉಂಟಾಗಬಹುದು. ಜನ ಕ್ಷೇಮಕ್ಕಾಗಿ ಅವರನ್ನು ವಧಿಸುವುದು ಅನಿವಾರ್ಯ. ಅನಲ್ ಹಖ್ ಎಂದು ಗದ್ದಲ ಎಬ್ಬಿಸಿದರೆ ಬೆನ್ನಿಗೆ ಛಡಿಯೇಟು ನೀಡಿರಿ. ಈ ದಿನವೇ ಅವರನ್ನು ವಧಿಸಬೇಕು…”
ಹಿಜ್ರ 304 ದ್ಸುಲ್ ಖಅದ್ 29…ಚರಿತ್ರೆ ಮಹಾಕಂಪನದೊಂದಿಗೆ ನೆನೆಯುವ ದಿನ.
ಅಂದು ಮನ್ಸೂರರನ್ನು ಹೊರಗೆ ಕರೆದುಕೊಂಡು ಬಂದರು.‌ ಕಿಕ್ಕಿರಿದು ನೆರೆದ ಜನಸಂದಣಿಯ ಮುಂದೆ ಮರಣ ಶಾಸನ ಓದಲಾಯಿತು. ಮನ್ಸೂರ್ ಮುಗುಳ್ನಕ್ಕರು. ಆಹ್ಲಾದಭರಿತರಾಗಿ ಅವರು ಕೂಗಿ ಹೇಳಿದರು:
‘ಅನಲ್ ಹಖ್! ಅನಲ್ ಹಖ್!’
ತಕ್ಷಣವೇ ಮುನ್ನೂರಕ್ಕೂ ಹೆಚ್ಚು ಛಡಿಯೇಟುಗಳು ಅವರ ಬೆನ್ನಿಗೆ ಬಿದ್ದವು. ಸುಡು ಬಿಸಿಲಲ್ಲಿ ಅವರನ್ನು ನಗ್ನಗೊಳಿಸಿ ನಿಲ್ಲಿಸಲಾಯಿತು. ಬೆನ್ನು ಇಂಚಿಂಚಾಗಿ ಊದಿಕೊಂಡು ಒಡೆದು ರಕ್ತ ಹರಿಯತೊಡಗಿತು. ಜನರ ಹೇಷಾರವ ಮುಗಿಲು ಮುಟ್ಟಿತು. ಮನ್ಸೂರರನ್ನು ಗಲ್ಲುಕಂಬದತ್ತ ಕರೆದೊಯ್ದರು.
“ಧೀರರಿಗೆ ಪಾಲಿಗೆ ಗಲ್ಲುಕಂಬದತ್ತ ಕರೆದೊಯ್ಯುವುದೆಂದರೆ ಸ್ವರ್ಗದ ಕವಾಟವನ್ನು ತೆರೆಯುವುದೆಂದರ್ಥ” ಮನ್ಸೂರ್ ಗಲ್ಲುಕಂಬವನ್ನು ಎದೆಗೆ ಅವುಚಿಕೊಂಡರು. ಕೊನೆಯ ಪ್ರಾರ್ಥನೆ ನಿರ್ವಹಿಸಿದರು. ಅಷ್ಟರಲ್ಲಿ ಕಲ್ಲುಗಳು ಬೀಸಿ ಬಂದು ಅವರ ದೇಹವನ್ನು ಹೊಕ್ಕವು. ಮನ್ಸೂರ್ ಮಂದಹಾಸ ಬೀರಿದರಷ್ಟೇ.‌
ಮತಾಂಧ ಜನರು ಗೊಣಗಿದರು:
“ಅವನ ಅಂಗಾಂಗಗಳನ್ನು ಛೇದಿಸಬೇಕು”
ಕೊಲೆಗಾರರು ಆಜ್ಞೆ ಅನುಸರಿಸಿದರು.
“ಭೌತಿಕವಾದ ನನ್ನ ಕೈಗಳನ್ನು ತುಂಡರಿಸುವುದು ಬಹಳ ಸುಲಭ” ಮನ್ಸೂರ್ ನುಡಿದರು.
ನಂತರ ಅವರ ಕಾಲುಗಳನ್ನು ಕತ್ತರಿಸಲಾಯಿತು. ನೆಲದ ಮೇಲೆ ನಿಂತಿದ್ದ ರಕ್ತಕ್ಕೆ ಮುಖ ಕೆಳಗಾಗಿ ಬಿದ್ದರು. ಹಂತಕರು ಅವರನ್ನು ಹಿಡಿದು‌ ನಿಲ್ಲಿಸಿದರು.
“ಬಿಳುಚಿದ ನನ್ನ ಮುಖವನ್ನು ಲೋಕ ನೋಡದಿರಲಿ.”
ನಿರ್ಭಯವಾದ ಆ ಎರಡು ಕಣ್ಣುಗಳು ಉಜ್ವಲವಾಗಿ ಪ್ರಕಾಶಿಸಿದವು. ತಕ್ಷಣವೇ ಆ ಕಣ್ಣುಗಳನ್ನು ಕೀಳಲಾಯಿತು.‌
ಜನಸ್ತೋಮ ಕೂಗಿತು:
“ಆ ಭ್ರಷ್ಟನ ನಾಲಗೆ ಕತ್ತರಿಸಿ!”
“ಅಲ್ಪ ಸಹನೆಯಿರಲಿ” ಮನ್ಸೂರ್ ಬೇಡಿದರು.
“ಕೊನೆಯದಾಗಿ ನನಗೆ ಹೇಳಲಿಕ್ಕಿದೆ…”
ಇಲ್ಲದ ಕಣ್ಣುಗಳಲ್ಲಿ ಆಕಾಶದ ಕಡೆಗೆ ನೋಡಿದರು. ಮನ್ಸೂರ್ ಕೊನೆಯದಾಗಿ ಪ್ರಾರ್ಥಿಸಿದರು.
“ನನ್ನ ಆಶೆಯ ಪರಮ ಲಕ್ಷ್ಯವೇ, ನನ್ನ ಹಿಂಸಿಸಿರುವವರ ಆನಂದ ಸೌಭಾಗ್ಯಗಳನ್ನು ಹಿಂಪಡೆಯದಿರು! ಅನಲ್ ಹಖ್”
ಅಷ್ಟರಲ್ಲಿ ಓರ್ವ ವೃದ್ಧ ಮಹಿಳೆ ಮುಂದೆ ಬಂದು; ಮನ್ಸೂರರ ನಾಲಗೆ ಹಿಡಿದು ಎಳೆದು ಕ್ಯಾಕರಿಸಿ ಮುಖಕ್ಕೆ ಉಗಿದರು. ನಂತರ ನಾಲಗೆ ಕತ್ತರಿಸಿದರು.
ಅಂತಿಮವಾಗಿ ಮನ್ಸೂರರ ಗಂಭೀರವಾದ ಶಿರಸ್ಸು ದೇಹದಿಂದ ಬೇರ್ಪಟ್ಟು, ರಕ್ತ ಮಿಶ್ರಿತ ಮಣ್ಣಿನ ಮೇಲೆ ಉರುಳಿಬಿತ್ತು. ಆದರೂ ಜನಸಾಮಾನ್ಯರ ಕ್ರೋಧ ಶಮನವಾಗಲಿಲ್ಲ.
ಐತಿಹ್ಯ ಹೀಗೆ ದಾಖಲಿಸುತ್ತದೆ:
“…ಅವರು ಮನ್‌ಸೂರನ್ನು ಸಾವಿರಾರು ತುಂಡುಗಳಾಗಿ ಕತ್ತರಿಸಿದರು. ಒಂದು ದೊಡ್ಡ ಚಿತೆಯನ್ನು ರಚಿಸಿ, ಎಲ್ಲವನ್ನೂ ಅದರಲ್ಲಿ ಎಸೆದು ಸುಟ್ಟುಹಾಕಿದರು. ಆ ಅಗ್ನಿಜ್ವಾಲೆಯನ್ನು ನೋಡುತ್ತ ಅವರು ಅಟ್ಟಹಾಸಗೈದರು. ಕೊನೆಗೆ ಆ ಭಸ್ಮವನ್ನು ನದಿಯಲ್ಲಿ ಚೆಲ್ಲಿದರು. ಹೀಗೆ ತಮ್ಮ ಮಹಾಕ್ರೋಧವನ್ನು ತಣಿಸಿಕೊಂಡರು.”
“ಆದರೆ!
ಅಷ್ಟರವರೆಗೆ ಶಾಂತವಾಗಿ ಹರಿಯುತ್ತಿದ್ದ ಯೂಫ್ರಟೀಸ್ ನದಿ ಏಕಾಏಕಿ ಅಶಾಂತಗೊಂಡು ರಕ್ತಮಯವಾಯಿತು. ಪ್ರಕೃತಿ ನಿಶ್ಚಲಗೊಂಡಿತು. ಅಷ್ಟರಲ್ಲಿ ಗರ್ಜನೆಯೊಂದಿಗೆ ಪರ್ವತಾಕಾರದ ಅಲೆಗಳು ಎದ್ದವು. ತೀವ್ರ ಕೋಪದಿಂದ ಉಕ್ಕಿದ ಮಹಾಸಮುದ್ರದಂತೆ, ಸಮಸ್ತ ಬ್ರಹ್ಮಾಂಡವನ್ನೇ ನಡುಗಿಸುವಷ್ಟು ಭಯಂಕರವಾಗಿ, ಅತ್ಯುದ್ರಿಕ್ತವಾಗಿ, ಅತ್ಯಂತ ಗಂಭೀರವಾಗಿ ಯೂಫ್ರಟೀಸ್ ಗರ್ಜಿಸಿತು:
“ಅನಲ್‌ ಹಖ್! ಅನಲ್‌ ಹಖ್!”

— ವೈಕಂ ಮುಹಮ್ಮದ್ ಬಶೀರ್
ಕನ್ನಡ : ಸ್ವಾಲಿಹ್ ತೋಡಾರ್


Leave a Reply

*