ವಸಾಹತು ಕಾಲದ ಹಜ್ಜಾನುಭವ: ಪವಿತ್ರ ಯಾತ್ರೆ ಮತ್ತು ಜಾಗತಿಕ ಕೊಡುಕೊಳೆಗಳು

ಜೋಸೆಫ್ ಕೊನ್ರಾಡ್‌ರವರ ‘ಲಾರ್ಡ್ ಜಿಮ್’ ಕಾದಂಬರಿಯು, ಎನ್. ಎಸ್ ಪಡ್ನಾ ಎಂಬ ಕಾಲ್ಪನಿಕ ಹಡಗು ನಿರ್ಜನ ದ್ವೀಪವೊಂದರಲ್ಲಿ ಯಾತ್ರಿಕರನ್ನು ತೊರೆದು ಹೋಗುವುದರ ಕುರಿತೂ, ಪವಿತ್ರ ಮಕ್ಕಾ ತಲುಪಬೇಕೆಂಬ ಅವರ ಅತೀವ ಹಂಬಲದ ಸುತ್ತಲೂ ಬಹಳ ಮನೋಜ್ಞವಾಗಿ ಕಥೆ ಹೆಣೆದಿದೆ. ಇತರ ಪವಿತ್ರ ಯಾತ್ರಾರ್ಥಿಗಳ ಜೊತೆ ಸೇರಬೇಕೆಂಬ ಅವರ ಬಯಕೆ, ವಿಶಾಲ ಸಮುದ್ರವನ್ನು ದಾಟುವಲ್ಲಿನ ಅವರ ಅನುಭವಗಳು ಮತ್ತು ಅಪರಿಚಿತರೊಂದಿಗಿನ ಅವರ ಮುಖಾಮುಖಿಗಳು ಕಾದಂಬರಿಯೊಳಗೆ ನುಸುಳಿ ಬರುತ್ತದೆ.

ದಕ್ಷಿಣೇಷ್ಯಾದಲ್ಲಿ ಆಧುನಿಕ ಆಡಂಬರ ಸೌಲಭ್ಯಗಳಿರುವ ಹಡಗು ಸಂಚಾರ ಆರಂಭವಾಗುವುಕ್ಕಿಂತಲೂ ಮೊದಲೇ ಅಲ್ಲಿನ ಮುಸಲ್ಮಾನರು ಹಜ್ಜ್ ಯಾತ್ರೆ ಕೈಗೊಳ್ಳುತ್ತಿದ್ದರು. ಜಗತ್ತಿನಾದ್ಯಂತವಿರುವ ಮುಸಲ್ಮಾನರ ವಾರ್ಷಿಕ ಒಕ್ಕೂಟ ಹಾಗೂ ಶಾರೀರಿಕವಾಗಿ ಮತ್ತು ಆರ್ಥಿಕವಾಗಿ ದೃಢತೆಯಿರುವ ವಿಶ್ವಾಸಿಗಳ ಧಾರ್ಮಿಕ ಬಾಧ್ಯತೆಯಾಗಿದೆ ಹಜ್ಜ್. ದಕ್ಷಿಣೇಷ್ಯಾದ ಧಾರ್ಮಿಕ ಯಾತ್ರೆಯ ವಿಕಾಸ ಇಲ್ಲಿನ ಜನರಿಗೆ ‘ಸೃಷ್ಟಿಕರ್ತನ ಅತಿಥಿಗಳಾಗಿ’ ಮಕ್ಕಾದೆಡೆಗೆ ಹಜ್ಜ್ ಯಾತ್ರೆ ಹೋಗಲು ತುಂಬಾ ಹುರುಪು ನೀಡಿತು. ಆಧುನಿಕ ವಿಮಾನಗಳ ಆಗಮನಕ್ಕಿಂತಲೂ ಮೊದಲು ತಮ್ಮ ಗಮ್ಯದೆಡೆಗೆ ತಲುಪಲು ವಿಭಿನ್ನ ಪ್ರಯಾಣ ಮಾಧ್ಯಮಗಳನ್ನು ಅವರು ಉಪಯೋಗಿಸಲಾರಂಭಿಸಿದರು. ನಿರ್ಜನ ಗುಡ್ಡಗಾಡುಗಳ ಮೂಲಕ ಹೆಜ್ಜೆ ಮೂಡಿದಲ್ಲೆಲ್ಲಾ ದಾರಿ ಸವೆಸಿ ಹೊರಡುವುದರಿಂದ ಹಿಡಿದು, ಹಡಗು, ತೀರ್ಥಯಾತ್ರೆಗಿರುವ ವಿಶೇಷ ಹಾಯಿ ಹಡಗುಗಳನ್ನೆಲ್ಲಾ ಉಪಯೋಗಿಸಿ ಅವರು ಯಾತ್ರೆ ಮುಂದುವರೆಸಿದರು.

ವಸಾಹತು ಕಾಲದ ಕೊನೆಯ ಘಟ್ಟದಲ್ಲಿ ಹಜ್ಜ್ ಯಾತ್ರೆಯ ಸ್ವತಂತ್ರ ಸಂಚಾರಕ್ಕೆ ನಿಯಂತ್ರಣ ತರುವ ನಿಟ್ಟಿನಲ್ಲಿ  ಪಾಸ್ಪೋರ್ಟ್, ಕಡ್ಡಾಯ ಆರೋಗ್ಯ ತಪಾಸಣಾ ಚೀಟಿಗಳನ್ನು ಸರಕಾರದ ನಿಯಮಾವಳಿಗಳ ಪಟ್ಟಿಯಲ್ಲಿ ಬ್ರಿಟಿಷ್ ಆಡಳಿತ ವ್ಯವಸ್ಥೆ ಜಾರಿಗೊಳಿಸಿತು. ಸ್ವಾತಂತ್ರ್ಯೋತ್ತರ ದಕ್ಷಿಣೇಷ್ಯಾದ ರಾಷ್ಟ್ರಗಳಲ್ಲಿ ಇಂತಹಾ ಹಲವು ನಿಯಮಾವಳಿಗಳು ತಮ್ಮ ಹೊಸ ಆಡಳಿತ ನೀತಿಯ ಮೂಲಕ ಮುಂದುವರಿಯಿತು. ಹಜ್ಜ್ ನಿಯಮಗಳಲ್ಲಿನ ಈ ರೀತಿಯ ಪರಿವರ್ತನೆಗಳು ಒಂದು ಹಂತದವರೆಗೆ ಹಿಂದೂ ಮಹಾ ಸಾಗರದಲ್ಲಿನ ಸುರಕ್ಷಿತ ಯಾತ್ರೆಗೆ ಸಹಾಯಕವಾಯಿತು. ಹತ್ತೊಂಬತ್ತನೆಯ ಶತಮಾನದ ಕೊನೆ ಮತ್ತು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಸಮುದ್ರವ್ಯಾಪಾರ ಲಾಬದಾಯಕವಾಗಿ ಮಾರ್ಪಟ್ಟದ್ದು ಹಜ್ಜ್ ಯಾತ್ರೆಗಳು ಸುಲಲಿತಗೊಳ್ಳಲು ಕಾರಣವಾಯಿತು. ಅದೇ ವೇಳೆ, ಅಂತಹ ವ್ಯಾಪಾರ – ವಹಿವಾಟುಗಳು ಹಡಗು ಏಜಂಟರಿಗೆ ಅವಕಾಶವನ್ನೂ ನೀಡಿತು. ಯಾತ್ರಿಕರನ್ನು ಅತ್ಯಧಿಕ ಸಂಖ್ಯೆಯಲ್ಲಿ ಆಕರ್ಷಿಸಿ ಲಾಭ ಗಿಟ್ಟಿಸಲು ಅಲ್ಲಿನ ಪ್ರಾದೇಶಿಕ ಪತ್ರಿಕೆಗಳಲ್ಲಿ ಅವರು ಜಾಹೀರಾತು ನೀಡಲಾರಂಭಿಸಿದರು.

ಒಂದು ಕಡೆ ಹಜ್ಜ್ ಯಾತ್ರೆ ಮತ್ತು ಸಮುದ್ರ ವ್ಯಾಪಾರಗಳು ಹೇರಳವಾದಾಗ ಅದೇ ಯಾತ್ರಿಕರು ಹಿಜಾಝಿನ ಏಜಂಟರುಗಳೊಂದಿಗೆ ಸಂಬಂಧ ಬೆಳೆಸಲು ಆರಂಭಿಸಿದರು. ಪವಿತ್ರ ಸ್ಥಳಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಸಲುವಾಗಿ ನೌಕರಿ ಅರಸಿ ಹೊರಡುವ ಪಯಣಗಳ ಸಾಧ್ಯತೆಗಳನ್ನು ಹಜ್ಜ್ ಯಾತ್ರೆಗಳು ಹೆಚ್ಚಿಸಿದವು. ಈ ನಿಟ್ಟಿನಲ್ಲಿ ಮಧ್ಯಯುಗದ ಸಮುದ್ರ ಯಾತ್ರೆಗಳಿಗೆ ಅತೀ ಹೆಚ್ಚಿನ ಪ್ರೇರಣೆ ಧಾರ್ಮಿಕ ಗುರಿಗಳಾಗಿದ್ದವು ಎಂದು ಮೈಕಲ್ ಪಿಯೋಝಿಸ್ ಆಭಿಪ್ರಾಯಪಡುತ್ತಾರೆ.

ವಾಣಿಜ್ಯ ನಿಮಿತ್ತದ ಯಾತ್ರೆಗಳ ಜೊತೆಗೆ ಜಗತ್ತಿನ ವಿವಿಧ ಕಡೆಗಳಲ್ಲಿ ಹಂಚಿ ಹೋಗಿರುವ ಮುಸ್ಲಿಮರನ್ನು ಏಕದೇವೋಪಾಸನೆಯ ಸಂಕಲ್ಪದಡಿಯಲ್ಲಿ ಒಂದುಗೂಡಿಸಿ ಒಗ್ಗಟ್ಟನ್ನು ಬಲಪಡಿಸುವಲ್ಲಿಯೂ ಮಧ್ಯಕಾಲೀನ ಭಾರತ ಮತ್ತು ಮಕ್ಕಾದ ನಡುವಿನ ಮಹಾಸಾಗರದಲ್ಲಿನ ನೌಕಾಯಾನಗಳಿಗೆ ಮಹತ್ತರ ಪಾತ್ರ ಇದೆ. ಆದರೆ ಬೆರ್ಬೆರಾ ಮೆಟ್ಕಾಫ’ ವ್ಯಕ್ತಪಡಿಸಿರುವಂತೆ, ಐಕ್ಯಭಾವವನ್ನು ಪ್ರತಿಬಿಂಬಿಸುವ ಇಂತಹಾ ಯಾತ್ರೆಗಳು ವಸಾಹತುಶಾಹಿಗೆ ತೊಂದರೆಯುಂಟು ಮಾಡುವುದೆಂದು ಬಿಂಬಿಸಿದ ಅಧಿಕಾರಿಗಳು ಜಿಹಾದ್, ಧರ್ಮಾಂಧತೆ ಮುಂತಾದ ಸುಳ್ಳಾರೋಪಗಳನ್ನು ಹೊರಿಸುವ ಮೂಲಕ ಹಜ್ಜ್ ಯಾತ್ರೆಗಳನ್ನು ನಿಯಂತ್ರಿಸಲು ಮುಂದಾದರು. ಅವರು ರೂಪಿಸಿದ ಹೊಸ ನಿಯಮಗಳು ಅವರ ಸಿದ್ಧಾಂತದ ಪ್ರಚಾರಕ್ಕೆ ಹೆಚ್ಚಿನ ವೇಗ ನೀಡಿತು.

ca. 1910: Camel caravan of pilgrims to Mecca. Photo: US Library of Congress / G. Eric and Edith Matson Photograph Collection.

ವಾಪಾಸ್ ಟಿಕೆಟಿನ ಕಡ್ಡಾಯಗೊಳಿಸುವಿಕೆ ಸೇರಿದಂತೆ ಸಮುದ್ರಯಾನ ಕ್ಷೇತ್ರದಲ್ಲಿ ವಸಾಹತುಶಾಹಿ ಆಡಳಿತ ವ್ಯವಸ್ಥೆ ಅಂದು ಚಾಲ್ತಿಗೆ ತಂದಿದ್ದ ಕಾನೂನುಗಳನ್ನಾಗಿತ್ತು ಸ್ವಾತಂತ್ರ್ಯೋತ್ತರ ಭಾರತದ ಸರಕಾರಗಳು ಮುಂದುವರೆಸಿದ್ದು. ಹಜ್ಜ್ ಪೂರ್ತಿಗೊಳಿಸಿದ ಯಾತ್ರಿಕರನ್ನು, ವಿಶೇಷವಾಗಿ ಬಡವರನ್ನು ವಾಪಾಸ್‌ ಕಳುಹಿಸಬೇಕಾದ ಅನಿವಾರ್ಯತೆಯ ಕುರಿತು ಆ ಕಾಲದ ಅಧಿಕಾರಿಗಳೆಡೆಯಲ್ಲಿ ಚರ್ಚೆ ನಡೆದಿತ್ತು. ವಸಾಹತು ಕಾಲದಲ್ಲಿ ‘ಹೌಸ್ ಆಫ್ ಇಂಡಿಯನ್ ಲೆಜಿಶ್ಲೇಷನ್’ನಲ್ಲೂ ನಂತರ ಭಾರತದ ‘ಬ್ಯೂರೋಕ್ರಾಟಿಕ್ ಅಫಯೆರ್ಸ್’ನಲ್ಲೂ ಇಂತಹ ಚರ್ಚೆಗಳು ಜರುಗುತ್ತಿತ್ತು. ಇಂತಹ ನಿಯಂತ್ರಣಗಳಿಂದ ತಮ್ಮ ಆಧ್ಯಾತ್ಮಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದ ಪ್ರಯಾಣಿಕರು ಇದರ ವಿರುದ್ಧ ತೀವ್ರ ಪ್ರತಿರೋಧಗಳನ್ನು ಒಡ್ಡಿದ್ದರು. ಇವುಗಳ ವಾಪಸಾತಿಗಾಗಿ ಪತ್ರಗಳನ್ನು ಬರೆದರು. ಅದೇ ವೇಳೆ,  ಮಕ್ಕಾದಲ್ಲಿ ತೊಂದರೆಗೆ ಸಿಲುಕಿರುವ ಯಾತ್ರಿಕರಿಗೆ ನೆರವಾಗಲು, ಅವರಿಗೆ ಉಚಿತ ಹಡಗು ಸೇವೆಗಳನ್ನು ಒದಗಿಸಿ ತಮ್ಮ ತಾಯ್ನಾಡಿಗೆ ವಾಪಸ್ ತಲುಪಿಸಲು  ‘ಕೌನ್ಸಿಲರ್ ಏಜೆನ್ಸಿ’ಗಳು ಮತ್ತು ದತ್ತಿ ಆಧಾರಿತ ಧಾರ್ಮಿಕ ಸಂಸ್ಥೆಗಳು ಶ್ರಮಿಸುತ್ತಿದ್ದವು.

ಕೆಂಪು ಸಮುದ್ರದ ದ್ವೀಪಗಳ ಕ್ವಾರಂಟೈನ್ ಕೇಂದ್ರಗಳಲ್ಲಿನ ವೈದ್ಯಕೀಯ ತಪಾಸಣೆಗಳು, ವ್ಯಾಕ್ಸಿನೇಷನ್ ಮುಂತಾದ ಆಡಳಿತಾತ್ಮಕ ನಿಯಮಗಳು ಸಮುದ್ರ ಮುಖಾಂತರ ಹಜ್ಜ್ ಬಗೆಗಿನ ಐತಿಹಾಸಿಕ ಬರಹಗಳಲ್ಲಿ ಹೆಚ್ಚು ಮಹತ್ವ ಪಡೆದಿತ್ತು. ಹಜ್ಜ್ ಸಂಬಂಧಿತ ಇಂತಹ ಅಭಿವ್ಯಕ್ತಿಗಳ ಬಗೆಗಿನ ಹೊಸ ಸಂಶೋಧನೆಗಳು ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿದೆ. ಆದರೆ, ಕ್ಲಿಷ್ಟಕರ ಸನ್ನಿವೇಶಗಳನ್ನು ಯಾತ್ರಿಕರು ಎದುರಿಸುತ್ತಿದ್ದದ್ದು ಹೇಗೆ? ಆಧುನಿಕ ಐಷಾರಾಮಿ ಹಡಗುಗಳಿಲ್ಲದ ಆ ಕಾಲದಲ್ಲಿ ಅವರ ಸಮುದ್ರಯಾನ ಯಾವ ತೆರನಾಗಿತ್ತು? ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವ ಅಧ್ಯಯನಗಳು ಹಿಂದೂ ಮಹಾ ಸಾಗರ ಅಧ್ಯಯನ ಕ್ಷೇತ್ರದಲ್ಲಿ ಬಂದಿರುವುದು ಬಹಳ ಅಪರೂಪ.

 ಸಾಗರ ಮಾಧ್ಯಮದ ಹಜ್ಜ್ ಯಾತ್ರೆಗಳು ಇಪ್ಪತ್ತನೆಯ ಶತಮಾನದ ಕೊನೆಯವರೆಗೆ ಮುಂದುವರೆದಿತ್ತು. ಮುಂಬಯಿ ಬಂದರಿನ ಮುಖಾಂತರ ಚಾಲ್ತಿಯಲ್ಲಿದ್ದ ಜಲಮಾರ್ಗದ ಹಜ್ಜ್ ಯಾತ್ರೆಗಳನ್ನು ಭಾರತ ಸರಕಾರ ಸ್ಥಗಿತಗೊಳಿಸಿದ್ದು 1995 ರಲ್ಲಾಗಿತ್ತು. ಹಜ್ಜ್ ಸಂಬಂಧಿತ ಸಮುದ್ರಯಾನದ ಹಲವಾರು ಬರಹಗಳು ರೂಪು ಪಡೆದಿದ್ದು ಆವರೆಗಿನ ಯಾತ್ರೆಗಳಿಂದ. ದಕ್ಷಿಣೇಷ್ಯಾ ಸಂಬಂಧಿತ ಸಮುದ್ರಯಾನದ ಬಹುತೇಕ ಕಥೆಗಳು ಹಾಯಿ ದೋಣಿಯ ಸಹಾಯದಿಂದ ‘ಹಿಜಾಝಿ’ಗೆ ಹೊರಟ ಯಾತ್ರೆಗಳದ್ದೇ ಆಗಿದ್ದವು. ‘ರಾಷ್ಟ್ರ’ ಎಂಬ ಪರಿಕಲ್ಪನೆಗೂ ಮೀರಿ ಇತಿಹಾಸವನ್ನು ಒಂದು ದೀರ್ಘಾವಧಿಯ ( Longue dureé) ಹಿನ್ನೆಲೆಯಲ್ಲಿ ಅರ್ಥೈಸಲು ಮಾಡಲು ಸಹಾಯ ಮಾಡುವ ಅಧ್ಯಯನವಾಗಿದೆ ‘ಸಮುದ್ರ’ ಎಂಬ ‘ಸೆಬಾಸ್ಟಿಯನ್ ಪ್ರಾಂಗೆ’ಯ ಸಂಶೋಧನೆ. ಸಮುದ್ರಯಾನಗಳ ಕುರಿತಾಗಿ ಅಭ್ಯಸಿಸಲು ರಾಷ್ಟ್ರಕ್ಕಿಂತಲೂ ಧರ್ಮ ಎಂಬ ಪರಿಕಲ್ಪನೆಯೇ ಹೆಚ್ಚು ಸೂಕ್ತವಾದುದು ಎಂದು ಸುಗತ್ ಬೋಸ್ ಅಭಿಪ್ರಾಯಪಡುತ್ತಾರೆ. ಇಂತಹ ವಾದಗಳನ್ನು ಮುಂದಿಟ್ಟು ಹಜ್ಜ್ ಯಾವ ರೀತಿ ಸಮುದ್ರಯಾನ ಸಂಶೋಧನೆಗೆ ನಿಮಿತ್ತವಾಯಿತು ಎಂಬುದರ ಮೇಲೆ ಈ ಅಧ್ಯಯನ ಬೆಳಕು ಚೆಲ್ಲುತ್ತದೆ.

ಹಜ್ಜಾನುಭವಗಳು : ಜಾಗತಿಕ ಮುಸ್ಲಿಂ ಪವಿತ್ರಯಾತ್ರೆಗಳು ಮತ್ತು ರಾಜಕೀಯ ವಿದ್ಯಮಾನಗಳು.

ಭಾರತ ಉಪಖಂಡ ಸೇರಿದಂತೆ ಜಗತ್ತಿನಾದ್ಯಂತವಿರುವ ಮುಸಲ್ಮಾನರು ಅವರ ಯಾತ್ರಾ ವೇಳೆಯಲ್ಲಿ ಸಾಮಾನ್ಯವಾಗಿ ಉಂಟಾಗಬಹುದಾದ ತೊಂದರೆಗಳನ್ನು ತಡೆಯುವ ಸಲುವಾಗಿ ಆಯ್ಕೆ ಮಾಡಿದ ಯಾತ್ರಾಮಾಧ್ಯಮವಾಗಿತ್ತು ಸಮುದ್ರಯಾನ. ಅದರ ಹೊರತಾಗಿಯೂ ಕಡಲುಯಾನ ಕಂಪೆನಿಗಳಿಗೆ ನಿವಾರಿಸಲು ಸಾಧ್ಯವಿಲ್ಲದ ಇಂತಹ ಹಲವಾರು ತೊಂದರೆಗಳನ್ನು ಯಾತ್ರಾರ್ಥಿಗಳು ಅನಿವಾರ್ಯವಾಗಿ ಅನುಭವಿಸಬೇಕಿತ್ತು. ಇದು ಒಂದು ಹಂತದಲ್ಲಿ ಯಾತ್ರಿಕರು ಆಡಳಿತ ವ್ಯವಸ್ಥೆಯನ್ನು ಸಂಶಯಾಸ್ಪದವಾಗಿ ಕಾಣುವ ಹಂತಕ್ಕೂ ತಲುಪಿತ್ತು. ಅಂತಹ ಸಂದರ್ಭಗಳಲ್ಲಿ ಐಕ್ಯತೆ ಮತ್ತು ಸಾಮಾಜಿಕ – ಸಾಂಸ್ಕೃತಿಕ ಸಂಯೋಜನೆಯ ಸಾಧ್ಯತೆಗಳ ಬಾಗಿಲು ತೆರೆಯುವ ಒಂದು ಕೇಂದ್ರವಾಗಿ ‘ಸೀ ಸ್ಕೇಪ್’ (ಸಾಗರ ಕ್ಷೇತ್ರ)ಗಳು ಕಾರ್ಯಾಚರಿಸಿದವು. ಅಂತಹ ಕೇಂದ್ರಗಳು ಹಜ್ಜ್ ಯಾತ್ರಾ ಸಂಘಗಳಿಗೆ ವಿದೇಶಿ ಯಾತ್ರಿಕರೊಂದಿಗಿನ ವಿಚಾರ ವಿನಿಮಯಕ್ಕೆ ಮತ್ತು ಹೊಸ ಸಿದ್ಧಾಂತಗಳನ್ನು ಅಭಿವೃದ್ಧಿ ಪಡಿಸುವ ಪ್ರಾಯೋಗಿಕ ಮಾಧ್ಯಮದ ಉನ್ನತೀಕರಣಕ್ಕೆ ಅನುವು ಮಾಡಿಕೊಟ್ಟವು.

ಸಮುದ್ರಯಾನದ ಅನುಭವಗಳನ್ನು ಅಧ್ಯಯನ ಮಾಡುವಾಗ ಈ ವಿದ್ಯಮಾನಕ್ಕೆ ಸಂಬಂಧಿಸಿದ ರಾಜಕೀಯ ಮತ್ತು ಸಾಮಾಜಿಕ ನಿರೂಪಣೆಗಳನ್ನು ನಾವು ಒಟ್ಟಾಗಿ ಇಟ್ಟುಕೊಂಡು ಮನನ ಮಾಡಬೇಕಿದೆ. ಐತಿಹಾಸಿಕ ಉಲ್ಲೇಖಗಳ ಮೇಲೆ ನೋಟ ಹರಿಸಿದರೆ ಸಮುದ್ರ ಒಂದು ರಾಜಕೀಯ ಕೊಡುಕೊಳ್ಳುವಿಕೆಯ ಕೇಂದ್ರವಾಗಿಯೂ, ಅದೇ ಸಂದರ್ಭ ಒಬ್ಬ ವಿಶ್ವಾಸಿಯು ಆತ್ಮೀಯ ಗಮ್ಯದೆಡೆಗೆ ತಲುಪಲಿರುವ ಮಾಧ್ಯಮವಾಗಿಯೂ ಉಲ್ಲೇಖಗೊಂಡಿದೆ.

ca. 1910. Camels and tents of pilgrims, Mecca. Photo: US Library of Congress / G. Eric and Edith Matson Photograph Collection.

ಮಕ್ಕಾದೊಂದಿಗಿನ ಅಧ್ಯಾತ್ಮಿಕ ಸಂಬಂಧದ ಜೊತೆಗೆ, ಅದಕ್ಕೆ ಸಂಬಂಧಪಟ್ಟ ವಿವಿಧ ಸನ್ನಿವೇಶಗಳ ರಾಜಕೀಯ ಉದ್ದೇಶಗಳನ್ನೂ ಪರಿಗಣಿಸಬೇಕಾಗುತ್ತದೆ. ಪ್ರಕ್ಷುಬ್ಧ ರಾಜಕೀಯ ವಾತಾವರಣದಲ್ಲಿ ವಸಾಹತುಶಾಹಿ ಅಧಿಕಾರಿಗಳು ಹಜ್ಜ್ ಯಾತ್ರಿಕರೆಡೆಯಲ್ಲಿ ಪ್ಯಾನ್- ಇಸ್ಲಾಮಿಕ್  ಮತ್ತು ರಾಷ್ಟ್ರೀಯತಾ ವಿರೋಧಿ ಭಾವನೆಗಳ ಇರುವಿಕೆಯ ಅಂಶವನ್ನು ಪತ್ತೆಹಚ್ಚಲು ಮತ್ತು ಅವುಗಳ ಹರಡುವಿಕೆಯನ್ನು ತಡೆಯಲು ಶ್ರಮಿಸುತ್ತಿದ್ದರು. ಮುಸ್ಲಿಂ ಸಾಗರೋತ್ತರ ಯಾತ್ರೆಗಳು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಚಟುವಟಿಕೆಗಳ ಸ್ವೀಕೃತಿಯನ್ನು ಹೆಚ್ಚಿಸಿತು. ವಿಶೇಷವಾಗಿ ಹಿಜಾಝ್ ಪ್ರದೇಶಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದ ಒಟ್ಟೋಮನ್ನರ ಪ್ರಯತ್ನವೂ ಗಾಢ ಪರಿಣಾಮ ಬೀರಿತು. ಹಜ್ಜ್ ನಲ್ಲಿನ ಮಕ್ಕಾದ ವಾರ್ಷಿಕ ಮಹಾ ಸಂಗಮ ಜಾಗತಿಕ ಸಂಘಟನೆಗಳನ್ನು ಬೆಳೆಸಲು ಉತ್ತಮ ಅವಕಾಶಗಳಾಯಿತು. ವಸಾಹತುಶಾಹಿ ಶಕ್ತಿಯ ವಿರುದ್ಧದ ಈ ಭಾವನಾತ್ಮಕ ಹೋರಾಟವು ನೌಕಾಯಾನದ ಮೂಲಕ ಪ್ರಾರಂಭವಾಗುತ್ತದೆ. ಮಲಬಾರ್ ಮೂಲದ ಒಬ್ಬ ಹಜ್ಜ್ ಯಾತ್ರಿಕ ತನ್ನ ಪ್ರವಾಸ ಕಥನದಲ್ಲಿ ” ಹಜ್ಜ್ ಯಾತ್ರಿಕರನ್ನು ಸಾಗಿಸುವ ಹಡಗು ಮುಸ್ಲಿಂ ಜಗತ್ತಿನ ಲಘು ಚಿತ್ರಣವಾಗಿ ತೋಚುತ್ತದೆ ” ಎಂದು ಬರೆಯುತ್ತಾನೆ.

ca. 1910. Bird’s-eye view of uncrowded Kaaba. Photo: US Library of Congress/G. Eric and Edith Matson Photograph Collection.

  ಇಸ್ಲಾಂ ಧರ್ಮದ ಐದನೇ ಕರ್ಮ ಸ್ತಂಭವಾದ ಹಜ್ಜ್ ನೆರವೇರಿಸಲು ಒಟ್ಟುಗೂಡಿದ ವಿಶ್ವಾಸಿಗಳಿಗೆ ತಮ್ಮ ಧಾರ್ಮಿಕ ಕರ್ತವ್ಯದಲ್ಲಿ ಜೊತೆಯಾದ ವೈವಿಧ್ಯಮಯ ಮೂಲದ ಜಾಗತಿಕ ಜನರ ಭೇಟಿ ಹೊಸ ಅನುಭವಗಳು ಮತ್ತು ವಿಭಿನ್ನ ಆಲೋಚನೆಗಳಿಗೆ ದಾರಿ ಮಾಡಿ ಕೊಟ್ಟಿತು ” ಎಂದು ಕ್ರಿಸ್ ಅಲೆಕ್ಸಾಂಡರ್ ಅಭಿಪ್ರಾಯ ಪಡುತ್ತಾರೆ. ಯೂರೋಪಿನ ವಸಾಹತು ಆಳ್ವಿಕೆಯಿಂದ ಮುಕ್ತಿ ಹೊಂದಿದವರು ಮತ್ತು ವಸಾಹತು ಶಕ್ತಿಗಳ ವಿರುದ್ಧ ರಾಷ್ಟ್ರೀಯ ಹೋರಾಟಗಳಲ್ಲಿ ಸಕ್ರಿಯರಾಗಿರುವವರು ಸೇರಿದಂತೆ ವಿವಿಧ ಭೌಗೋಳಿಕ, ಜನಾಂಗೀಯ ಮತ್ತು ಆರ್ಥಿಕ ಹಿನ್ನೆಲೆಯಿರುವ ಸಾವಿರಾರು ಯಾತ್ರಿಕರು ಮಧ್ಯ ಏಷ್ಯಾದಲ್ಲಿ ಒಂದುಗೂಡುತ್ತಿದ್ದರು.  ಅಲ್ಲಿನ ಈ ಮುಖಾಮುಖಿಗಳು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದೆಡೆಗೆ ಮುನ್ನುಗ್ಗುವ ಆವೇಶವನ್ನು ತೀವ್ರಗೊಳಿಸುತ್ತಿದ್ದವು. ಅಲ್ಲದೆ, ಹಡಗುಗಳಲ್ಲಿರುತ್ತಿದ್ದ ಎಲ್ಲಾ ಪ್ರಯಾಣಿಕರು ಒಂದೇ ನಂಬಿಕೆಯ ಮೇಲೆ ಭದ್ರವಾಗಿದ್ದ ಕಾರಣ ಒಂದೇ ಕುಟುಂಬ ಮತ್ತು ಒಂದೇ ಮನೆ ಎಂಬಂತಹ ವಾತಾವರಣ ನಿರ್ಮಾಣ ಆಗುತ್ತಿತ್ತು. ಹಜ್ಜ್ ಪಯಣ ಸಂಬಂಧಿತ ಕಥೆಗಳಲ್ಲಿ ಹಡಗುಗಳು ಒಗ್ಗಟ್ಟು ಮತ್ತು ಏಕತೆಯ ಪ್ರತೀಕವಾಗುವುದರೊಂದಿಗೆ, ಭಾರತೀಯ ಬಂದರುಗಳು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಂಬಂಧಗಳ ಹೆಬ್ಬಾಗಿಲಾಗಿಯೂ ಬಿಂಬಿಸಲ್ಪಟ್ಟಿತು. ಹಿಂದೂ ಮಹಾ ಸಾಗರದ ಪಯಣಗಳ ಕುರಿತಾಗಿ ವಿಶ್ಲೇಷಿಸುವಾಗ ಸುಗತ ಬೋಸ್ ಮುಂದಿಡುವ ಒಳನೋಟಗಳಿಗೆ ತುಂಬಾ ಮಹತ್ವ ಇದೆ. ” ಹಜ್ಜ್ ಯಾತ್ರೆ ಕೈಗೊಂಡ ವಸಾಹತುಶಾಹಿಯ ಮುಸ್ಲಿಂ ಪ್ರಜೆಗಳನ್ನು ಸಂಪೂರ್ಣವಾಗಿ ರಾಷ್ಟ್ರದ ಚೌಕಟ್ಟಿನ ಅಡಿಯಲ್ಲಿ ನಿಲ್ಲಿಸಿ ವಿಶ್ಲೇಷಿಸಲಾಗದು. ರಾಷ್ಟ್ರದ ಗಡಿರೇಖೆಗಳನ್ನೂ ಮೀರುವ ವಸಾಹತುಶಾಹಿ ವಿರೋಧಿ ಪ್ರವಾಹ ಎಂಬ ನೆಲೆಯಲ್ಲಿ ಹಜ್ಜ್ ಯಾತ್ರೆ ಹಿಂದೂ ಮಹಾ ಸಾಗರದ ಬಹಳ ನಿರ್ಣಾಯಕವಾದ ಚಟುವಟಿಕೆಯಾಗಿ ದಾಖಲಾಗಿದೆ.” ಇನ್ನೂ ನಿಖರವಾಗಿ ಹೇಳುವುದಾದರೆ ಬಂದರು ನಗರಗಳಿಂದ ಹಿಡಿದು ಹಾಯಿ ದೋಣಿಯವರೆಗಿನ ಇಂತಹಾ ಸ್ಥಳಗಳು ಸಾಮುದಾಯಿಕ ಒಗ್ಗಟ್ಟಿನ ಕೇಂದ್ರಗಳಾಗಿ ಚಟುವಟಿಕಾ ನಿರತವಾಗಿತ್ತು.

  ವಸಾಹತು ಕಾಲದ ಈ ಎಲ್ಲಾ ಚಟುವಟಿಕೆಗಳ ಒಟ್ಟು ಧ್ವನಿ ಹಜ್ಜ್ ಕೇವಲ ಧಾರ್ಮಿಕ ಆಚರಣೆಯಾಗಿ ಮಾತ್ರವಲ್ಲದೆ, ವಿಭಿನ್ನ ರಾಜಕೀಯ ಮತ್ತು ಸಾಮಾಜಿಕ ಪರಿಕಲ್ಪನೆಗಳ ಬೆಳವಣಿಗೆಯಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಾ ಬಂದಿದೆ ಎನ್ನುವುದು. ಹಜ್ಜ್ ವೇಳೆಯಲ್ಲಿನ ವಿಶಿಷ್ಟ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆಯಿರುವ ಜನರೊಂದಿಗಿನ ಭೇಟಿ ಜಾಗತಿಕ ವಿದ್ಯಮಾನಗಳ ಕೊಡುಕೊಳ್ಳುವಿಕೆಗಳು ಅಕ್ಷರ ರೂಪದಲ್ಲಿ ಯಾತ್ರಿಕನ ಅನುಭವಕಥನಗಳಲ್ಲಿ ಸ್ಥಳ ಹಿಡಿಯಲು ಕಾರಣವಾಯಿತು. ಅಂತಹಾ ಹಜ್ಜ್ ಯಾತ್ರಾ ವಿವರಣೆಗಳ ಗಾಢ ಓದು, ಹಜ್ಜ್ ಸಂಬಂಧಿತ ರಾಜಕೀಯ ಮತ್ತು ಸಾಮಾಜಿಕ ವಿನಿಮಯದ ಒಳನೋಟಗಳ ಅಧ್ಯಯನಗಳಿಗೆ ಪೂರಕ ಪೀಠಿಕೆಯಾಗಿ ಸಹಾಯ ಮಾಡುತ್ತದೆ.

ಮೂಲ: ಮಹಮ್ಮದ್ ರಿಯಾಸ್
ಅನು: ಅಬ್ದುಸ್ಸಲಾಂ ಮಿತ್ತರಾಜೆ

Cover Image : Between 1900 – 1920. To Sinai via the Red Sea, Tor, and Wady Hebran. Mecca pilgrims on deck a ship. Photo: US Library of Congress / G. Eric and Edith Matson Photograph Collection.


Muhammed Riyaz

Muhammed Riyaz has completed his PhD thesis at the Department of English, Indian Institute of Technology, Delhi. His thesis is titled “Sailing to the Hijaz: Narrativization of Hajj in the Literary Indian Ocean.”

ತವಕ್ಕಲ್ ಮಸ್ತಾನ್: ಮಹಾ ನಗರದಲ್ಲಿನ ಅಭಯ

ನಗರಗಳು ಅನೇಕ ವೈವಿಧ್ಯತೆಗಳನ್ನು ಒಡಲಲ್ಲಿಟ್ಟು ಬೇರೆ ಯಾವುದರ ಕುರಿತೂ ಚಿಂತಿಸದೆ ನಿರಂತರ ಚಲಿಸುತ್ತಿರುತ್ತವೆ. ಸ್ಥಳಗಳಾಗಲಿ ವ್ಯಕ್ತಿಗಳಾಗಲಿ ವಸ್ತುಗಳಾಗಲಿ ಅವುಗಳಿಗೆ ಭಾವನಾತ್ಮಕವಾಗಿ ಅಂಟಿಕೊಳ್ಳಲು ನಗರಗಳು ನಮ್ಮನ್ನು ಅನುಮತಿಸಬೇಕೆಂದಿಲ್ಲ. ಮಾನಸಿಕವಾಗಿ ಹತ್ತಿರವಾಗಲು ಪ್ರಾರಂಭಿಸುವಾಗ ನಗರಗಳು ಅದನ್ನು ಅಳಿಸಿ ಹಾಕಿ ಹೊಸ ದೃಶ್ಯಗಳನ್ನು ನಮ್ಮೆದುರಿಗೆ ತಂದಿಡುತ್ತದೆ. ವಾಹನಗಳನ್ನು ಮತ್ತು ಪ್ರೀತಿಯನ್ನು ಎಡೆಯಿಲ್ಲದೆ ಹರಿಸುತ್ತಿರುವ ಈ ರೀತಿಯ ಮಹಾ ನಗರಗಳನ್ನು ‘ನಿತ್ಯಪ್ರವಾಹ’ ಎಂದು ಕರೆಯಬೇಕೆನಿಸುತ್ತದೆ.

ಹೈದರಾಬಾದಿನಿಂದ ಹಿಂದಿರುಗುವ ಯಾತ್ರಾಮಧ್ಯೆ ಅನಿರೀಕ್ಷಿತವಾಗಿ ಬೆಂಗಳೂರು ನಗರಕ್ಕೆ ತಲುಪಿದೆ. ಬೆಂಗಳೂರು ಸುತ್ತಾಟವನ್ನು ತವಕ್ಕಲ್ ಮಸ್ತಾನ್ ದರ್ಗಾದಿಂದ ಶುರುಮಾಡಬೇಕೆಂದು ಆತಿಥೇಯ ಸ್ನೇಹಿತರು ಸಲಹೆ ನೀಡಿದ್ದರು. ಈ ಸಲಹೆ ಸರಿಯಾದುದೆಂದು ತೋಚಿತು. ನಗರಗಳ ಜೀವಂತಿಕೆಯಿರುವುದೇ ಅಲ್ಲಿನ ದರ್ಗಾ, ಗಲ್ಲಿ- ಓಣಿಗಳಲ್ಲಿ. ದರ್ಗಾ ಮತ್ತು ಅಲ್ಲಿನ ಸಂಸ್ಕೃತಿ- ಸಂಪ್ರದಾಯಗಳನ್ನು ಕಾಣುವಾಗ ಒಂದು ಬಗೆಯ ಅನುಭೂತಿ ಹುಟ್ಟುತ್ತದೆ.

ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಮೂವತ್ತರಷ್ಟು ದರ್ಗಾಗಳಿವೆ. ಇಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಮಹಾತ್ಮರು ಬಾಗ್ದಾದ್, ಅರೆಬಿಯನ್ ಪರ್ಯಾಯ ದ್ವೀಪ, ಪರ್ಶಿಯ, ಸಿಂಧ್ ಮೊದಲಾದ ಕಡೆಗಳಿಂದ ಬಿಜಾಪುರವನ್ನು ತಲಪಿದವರು. ದಕ್ಷಿಣ ಭಾರತೆಡೆಗೆ ಸೂಫಿಗಳ ಆಗಮನದ ಕುರಿತು ರಿಚರ್ಡ್ ಮ್ಯಾಕ್ಸ್ವೆಲ್ ಈಟನ್ ತನ್ನ ‘ಸೂಫಿಸ್ ಆಫ್ ಬಿಜಾಪುರ’ ಎಂಬ ಕೃತಿಯಲ್ಲಿ ಬರೆದಿರುವುದು ನೆನಪಿಗೆ ಬರುತ್ತದೆ. ಇಲ್ಲಿರುವ ದರ್ಗಾಗಳಲ್ಲಿ ಹೆಚ್ಚಿನವು ಹುತಾತ್ಮರದ್ದು. ಉದಾಹರಣೆಗೆ: ಜೆ.ಸಿ. ರೋಡ್ ಎಂಬಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಹಾಮಿದ್ ಶಾ, ಬಮುಹೀಬ್ ಶಾ, ಶರಫುದ್ದೀನ್ ಶಾ ಮೊದಲಾದವರು 1791ರ ಮಾರ್ಚ್‌ನಲ್ಲಿ ನಡೆದ ಮೂರನೇ ಆಂಗ್ಲೋ- ಮೈಸೂರು ಯುದ್ಧದಲ್ಲಿ ಮಡಿದವರು. ಅಂದು ಯುದ್ಧದಲ್ಲಿ ಹುತಾತ್ಮರಾದ ಸಾವಿರಕ್ಕೂ ಮಿಕ್ಕ ಸೈನಿಕರನ್ನು ಹಾಮಿದ್ ಶಾರ ದರ್ಗಾದ ಸನಿಹ ದಫನ ಮಾಡಲಾಯಿತೆಂದು ಹೇಳಲಾಗುತ್ತದೆ. ಶರಫುದ್ದೀನ್ ಶಾರ ದರ್ಗಾದ ಪ್ರವೇಶ ದ್ವಾರದಲ್ಲಿರುವ ಫಿರಂಗಿ ಗುಂಡುಗಳು ಟಿಪ್ಪು ಸುಲ್ತಾನರು ಯುದ್ಧದ ಸಂದರ್ಭದಲ್ಲಿ ಬಳಸಲ್ಪಟ್ಟದ್ದೆಂಬ ಅಭಿಪ್ರಾಯವಿದೆ. ಸುಲ್ತಾನರ ತಾಯಿಯ ತಂದೆ ಇಬ್ರಾಹಿಂ ಖಾನ್ ಶತ್ತಾರಿಯ ಸಮಾಧಿಯು ನಾಗರಾಜಪೇಟೆಯ ಧರ್ಮರಾಯ ಸ್ವಾಮಿ ಕ್ಷೇತ್ರದ ಹಿಂಬದಿಯ ಗಲ್ಲಿಯಲ್ಲಿದೆ. ಕೆಕ್ಕೇರಿ ಗೇಟ್ ಪೊಲೀಸ್ ಸ್ಟೇಷನ್ ಪಕ್ಕದಲ್ಲಿರುವ ಹಝ್ರತ್ ಲಕಬ್ ಶಾರ ದರ್ಗಾ ಬೆಂಗಳೂರಿನ ಅತ್ಯಂತ ಹಳೆಯ ದರ್ಗಾ. ಅಭಿವೃದ್ಧಿಯ ಕಬಂಧ ಬಾಹುಗಳಿಂದ ಬಂಧಿಯಾಗಿರುವ ನಿಬಿಡ ಮಾರುಕಟ್ಟೆಗಳು ಮತ್ತು ವಸತಿಗಳ ನಡುವೆ ಬೆಂಗಳೂರಿನ ದರ್ಗಾಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಲಾಗುತ್ತಿಲ್ಲ ಎಂಬ ವಾಸ್ತವವನ್ನು ಈ ಹಿಂದೆ ‘ದಿ ಎಕನಾಮಿಕ್ಸ್ ಟೈಮ್ಸ್’ ಎತ್ತಿ ಹಿಡಿದಿತ್ತು.

ಗುಲಾಬಿ ದಳಗಳ, ಸುಗಂಧಗಳ, ಊದುಬತ್ತಿಗಳ ವಿಶಿಷ್ಟ ಸುವಾಸನೆಗಳಿಂದ ತುಂಬಿದ ದಾರಿಗಳು ದರ್ಗಾಕ್ಕಿರುವ ದೂರ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ. ಸಮೂಸ ಮತ್ತು ಇತರ ಪದಾರ್ಥಗಳ ಪಾಕದ ಗಂಧವು ಇಡೀ ವಾತಾವರಣವನ್ನು ಆವರಿಸುತ್ತಿರುತ್ತದೆ. ಅನುಭವಗಳನ್ನು ರೂಪಿಸುವಲ್ಲಿ ಮತ್ತು ಗತವನ್ನು ನೆನಪಿಸುವುದರಲ್ಲಿ ಈ ಪರಿಮಳ ಮಹತ್ತರ ಪಾತ್ರ ವಹಿಸುತ್ತದೆ.

ದೂರದಿಂದಲೇ ಮಸೀದಿಯ ಮಿನಾರವನ್ನು ಕಾಣಬಹುದು. ಈ ಮಸೀದಿಯ ನಿರ್ಮಾಣದ ಹಿಂದೆ ಸಾಮಾನ್ಯವಾಗಿ ಕೇಳಿಬರುವ ಕೆಲವು ಘಟನೆಗಳನ್ನು ಹೀಗೆ ಸಂಗ್ರಹಿಸಬಹುದು: ತವಕ್ಕಲ್ ಮಸ್ತಾನ್ ಎಂದು ಪ್ರಸಿದ್ಧರಾದ ವ್ಯಕ್ತಿ ಮಿರ್ಝಾ ಬೇಗ್ ಎಂಬ ಹೆಸರಿನ ಪರ್ಶಿಯನ್ ಕುದುರೆ ವ್ಯಾಪಾರಿ. ಅವರು ಬೆಂಗಳೂರಿಗೆ ಬಂದು ಐಹಿಕ ಸುಖಗಳನ್ನು ತ್ಯಜಿಸಿ ಆರಾಧನೆಗಳಲ್ಲಿ ತಲ್ಲೀನರಾದರು ಮತ್ತು ನಿರ್ಗತಿಕರ ಸೇವೆ ಮಾಡುವುದಕ್ಕಾಗಿಯೇ ಸಮಯವನ್ನು ಮೀಸಲಿಟ್ಟಿದ್ದರು.

ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಕೆಂಪೇಗೌಡ 1537ರಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ಬೆಂಗಳೂರು ಕೋಟೆ (ಕಲಾಸಿ ಪಾಳ್ಯ ಕೋಟೆ)ಯನ್ನು ಕಲ್ಲಿನಿಂದ ಪುನರ್ ನಿರ್ಮಿಸಲು 1761ರಲ್ಲಿ ಮೈಸೂರು ಆಡಳಿತಾಧಿಕಾರಿಯಾಗಿದ್ದ ಹೈದರಾಲಿ ತೀರ್ಮಾನಿಸಿದರು. ಕೋಟೆ ನಿರ್ಮಾಣದಲ್ಲಿ ಭಾಗವಹಿಸಿದ್ದ ಮೂವರು ವೇತನ ಪಡೆಯಲು ತಿರಸ್ಕರಿಸಿದಾಗ ಅವರ ಕುರಿತು ಅನ್ವೇಷಿಸುವಂತೆ ಕಿಲಾದರ್ ಇಬ್ರಾಹಿಂ ಖಾನನಿಗೆ ಹೈದರಾಲಿ ಆದೇಶಿಸಿದರು. ಹಗಲು ಪೂರ್ತಿ ಕಾರ್ಮಿಕರಾಗಿ ದುಡಿದು ರಾತ್ರಿ ಕುಂಬಾರ್ ಪೇಟೆ ಮಸೀದಿಯಲ್ಲಿ ತಂಗಿ ಆರಾಧನೆಗಳಲ್ಲಿ ತಲ್ಲೀಣರಾಗುವ ತವಕ್ಕಲ್ ಮಸ್ತಾನ್, ಟಿಪ್ಪು ಮಸ್ತಾನ್, ಮನ್ನಿಕ್ಕ್ ಮಸ್ತಾನ್ ಎಂಬವರಾಗಿದ್ದರು ಆ ಮೂವರು. ಇವರು ಸಹೋದರರಾಗಿದ್ದರು ಮತ್ತು ಪೀರ್ ಭಾಯಿ ಅಥವಾ ಆಧ್ಯಾತ್ಮಿಕ ಸೂಫಿಯೊಬ್ಬರ ಶಿಷ್ಯಂದಿರಾಗಿದ್ದರು.

ಹೈದರಾಲಿಯ ಆದೇಶದ ಪ್ರಕಾರ, ಕಿಲಾದರ್ ಇಬ್ರಾಹಿಂ ಖಾನನು ಅವರನ್ನು ಹಿಂಬಾಲಿಸಿದರು. ಆ ಮೂವರು ಹಗಲಿನ ದುಡಿಮೆಯ ಬಳಿಕ ಕುಂಬಾರ್ ಪೇಟೆಯ ಮಸೀದಿಯನ್ನು ಪ್ರವೇಶಿಸುವುದಾಗಿ ಕಂಡನು. ಆದರೆ, ಆತ ಮಸೀದಿಯ ಒಳಹೊಕ್ಕು ನೋಡಿದಾಗ ಎರಡು ನಾಯಿಗಳು ಕಾವಲು ನಿಂತಿರುವ ಒಂದು ಮನುಷ್ಯ ಶರೀರದ ಮೂರು ಭಾಗಗಳನ್ನು ಮಾತ್ರವೇ ಕಾಣಲು ಸಾಧ್ಯವಾಯಿತು. ಇಬ್ರಾಹಿಂ ಖಾನನು ಕೋಟೆಗೆ ಮರಳಿ ನವಾಬರೊಂದಿಗೆ ಈ ಘಟನೆಯನ್ನು ವಿವರಿಸಿದನು. ನಂತರ ನವಾಬ್ ಹೈದರಾಲಿ ಅಲ್ಲಿಗೆ ತಲುಪಿದಾಗ ಅವರು ಮೂವರು ವಿಶ್ರಾಂತಿಯಲ್ಲಿರುವುದನ್ನು ಕಂಡರು. ಈ ಘಟನೆಯಿಂದ ಮತ್ತು ಕೋಟೆಯ ನಿರ್ಮಾಣ ಅವಧಿಯಲ್ಲಿ ಇವರ ಜೊತೆಗಿದ್ದವರ ಕೆಲವು ಅನುಭವಗಳಿಂದ ಇವರು ಸಾಮಾನ್ಯರಲ್ಲ ಎಂದು ತಿಳಿದ ಹೈದರಾಲಿ ಇವರ ಮೇಲೆ ವಿಶೇಷ ಆಸ್ಥೆ ವಹಿಸಿದ್ದರು.

ನಂತರ ಮನ್ನಿಕ್ಕ್ ಮಸ್ತಾನ್ ಬೆಂಗಳೂರಿನ ಈಗಿನ ಅವೆನ್ಯೂ ರೋಡಿನ ಪ್ರದೇಶಕ್ಕೂ ಟಿಪ್ಪು ಮಸ್ತಾನ್ ತಮಿಳು ನಾಡಿನ ಆರ್ಕೋಟಿಗೂ ತೆರಳಿದಾಗ ತವಕ್ಕಲ್ ಮಸ್ತಾನ್ ಮಾತ್ರ ಮೆಜೆಸ್ಟಿಕ್ ಸಮೀಪದ ಕಾಟನ್ ಪೇಟೆಯಲ್ಲಿಯೇ ವಾಸ್ತವ್ಯ ಹೂಡಿದರು. ಅಂದು ಈ ಪ್ರದೇಶ ಮುಳ್ಳಿನಿಂದ ಕೂಡಿದ ಕುರುಚಲು ಸಸ್ಯಗಳಿರುವ ಪಾಳು ಭೂಮಿಯಾಗಿತ್ತು. ನವಾಬ್ ಹೈದರಾಲಿಯು ಈ ಪ್ರದೇಶವನ್ನು ಸಂದರ್ಶಿಸಿ, ತವಕ್ಕಲ್ ಮಸ್ತಾನರಿಗೆ ಕಾಣಿಕೆಗಳನ್ನು ನೀಡಲು ಮುಂದಾದರು. ಆದರೆ ಮಸ್ತಾನರು ಅದನ್ನು ವಿನಯಪೂರ್ವಕ ತಿರಸ್ಕರಿಸಿದರು. ಬದಲಾಗಿ ಅಲ್ಲೊಂದು ಮಸೀದಿ ನಿರ್ಮಿಸಿಕೊಡುವಂತೆ ಕೇಳಿಕೊಂಡರು. ಆ ವಿನಂತಿಯನ್ನು ಗಣಗೆಗೆ ತೆಗೆದು 1777ರಲ್ಲಿ ಹೈದರಾಲಿ ಆರಂಭಿಸಿದ ಮಸೀದಿ ನಿರ್ಮಾಣ 1783ರಲ್ಲಿ ಅವರ ಕಾಲದ ನಂತರ ಮಗ ಟಿಪ್ಪು ಸುಲ್ತಾನ್ ಪೂರ್ತಿಗೊಳಿಸಿದರು.

ಆರ್ಕೋಟಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಟಿಪ್ಪು ಮಸ್ತಾನರೊಂದಿಗಿನ ಗೌರವದ ಸೂಚಕವಾಗಿ ತನ್ನ ಮಗನಿಗೆ ಹೈದರಾಲಿಯು ಫತ್ಹೆ ಅಲಿ ಎಂಬ ಹೆಸರಿನ ಹೊರತಾಗಿಯೂ ಟಿಪ್ಪು ಎಂದು ನಾಮಕರಣ ಮಾಡಿದ್ದರು ಎಂಬ ಅಭಿಪ್ರಾಯವಿದೆ. ಆದರೆ ಟಿಪ್ಪು ಸುಲ್ತಾನ್ ಜನಿಸಿದ್ದು 1751ರಲ್ಲಿ ಮತ್ತು ಮೇಲೆ ವಿವರಿಸಲಾದ ಘಟನೆ ನಡೆದಿರುವುದು 1761ರಲ್ಲಾಗಿದೆ ಎಂದು ಹೇಳಲಾಗುತ್ತದೆ. ಟಿಪ್ಪು ಎಂಬ ಹೆಸರಿನ ಹಿಂದಿರುವ ಹಲವು ಕಥೆಗಳು ಈ ಮೊದಲು ಓದಿದ್ದು ನೆನಪಿಗೆ ಬರತೊಡಗಿದವು. ಬಾಯ್ಮಾತಿನ ಆಚೆಗೆ ಮೇಲೆ ವಿವರಿಸಲಾದ ಘಟನೆಗಳ ಕಾಲ ಗಣನೆ ಮತ್ತು ಇತರ ಅಂಶಗಳನ್ನು ಸಂಶೋಧಿಸಬೇಕಾಗಿದೆ.

ಒಟ್ಟಿನಲ್ಲಿ ಈ ಮಸೀದಿಯನ್ನು ನವೀಕರಿಸಲಾಗಿದೆ ಎಂಬುವುದು ಮೊದಲ ನೋಟಕ್ಕೆ ತಿಳಿಯುತ್ತದೆ. ಎರಡೂವರೆ ಶತಮಾನದ ಇತಿಹಾಸವಿರುವ ಈ ಮಸೀದಿಯನ್ನು ದುರಸ್ತಿ ಮಾಡಿ ಎರಡು ದಶಕದ ಕೆಳಗೆ ವಿಶಾಲಗೊಳಿಸಲಾಗಿದೆ. ಸಮಾಧಿಯ ಒಂದು ಶಿಲಾಲಿಪಿಯಲ್ಲಿ ತವಕ್ಕಲ್ ಮಸ್ತಾನರ ವಫಾತ್ 1777ರಲ್ಲಿ ಎಂದು ಕೆತ್ತಿರುವುದನ್ನು ಕಾಣಬಹುದು. ತವಕ್ಕಲ್ ಮಸ್ತಾನರು ಪೆನೆಗೊಂಡದ ಪ್ರಸಿದ್ಧ ಸೂಫಿವರ್ಯರಾದ ಬಾವ ಫಕ್ರುದ್ದೀನ್ ಸುಹ್ರವರ್ದಿಯವರ ತ್ವರೀಕತ್ ಸ್ವೀಕರಿಸಿದ್ದರೆಂದು ಪ್ರಸಿದ್ಧ ಪರ್ಶಿಯನ್ ಚರಿತ್ರೆಕಾರರಾದ ಕಿರ್ಮಾನಿ ಹಝ್ರತ್ ಉಲ್ಲೇಖಿಸುತ್ತಾರೆ.

ಗೂಗಲ್ ಮಾಡಿದಾಗ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಮಧ್ಯೆ ರಾಹುಲ್ ಗಾಂಧಿ ದರ್ಗಾ ಸಂದರ್ಶಿಸಿದ ಫೋಟೊ ಒಂದನ್ನು ಕಂಡೆ. ಈ ಹಿಂದೆ ಅಮಿತಾಬ್ ಬಚ್ಚನ್, ಕನ್ನಡ ಚಲನಚಿತ್ರ ನಟ ರಾಜ್ ಕುಮಾರ್ ಮತ್ತು ಕುಟುಂಬ, ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್ ಮೊದಲಾದವರು ಸಂದರ್ಶಿಸಿದ್ದಾರೆಂದು ತಿಳಿಯಲು ಸಾಧ್ಯವಾಯಿತು.

ದರ್ಗಾಗಳು ‘ಅಭಯ’ ಎಂಬ ಪರಿಕಲ್ಪನೆಯನ್ನು ಹೇಗೆ ಜೀವಂತವಾಗಿರಿಸುತ್ತದೆ ಎಂಬುವುದನ್ನು ದೆಹಲಿಯ ಫಿರೋಝ್ ಶಾಹ್ ಕೋಟೆಯಲ್ಲಿನ ಸೂಫಿ ದರ್ಗಾಗಳ ಕುರಿತಾದ ವಿವೇಕ್ ತಾನೇಜ್ ತನ್ನ ಅಧ್ಯಯನದಲ್ಲಿ ( Jinnealogy Time, Islam, and Ecological Thought in the medieval Ruins of Delhi) ವಿವರಿಸುವುದನ್ನು ಕಾಣಬಹುದಾಗಿದೆ. ನಮಾಝ್ ಮುಗಿಸಿ ಬರುವ ಇಸ್ಲಾಮ್ ಧರ್ಮೀಯರ ಆಶೀರ್ವಾದವು ತನ್ನ ಮಗುವಿಗೆ ಲಭಿಸಬೇಕೆಂದು ಕಾದು ನಿಂತಿದ್ದ ಅಮ್ಮಂದಿರನ್ನು ಕಂಡಾಗ ಅದನ್ನೇ ಚಿಂತಿಸತೊಡಗಿದೆ. ಬೆಂಗಳೂರಿನ ಸ್ಥಳೀಯ ಉತ್ಸವವಾದ ಕರಗ ಹಬ್ಬಕ್ಕೆ ಸಂಬಂಧಿಸಿದಂತೆ ತವಕ್ಕಲ್ ಮಸ್ತಾನ್ ದರ್ಗಾಕ್ಕೆ ಪ್ರಮುಖ ಪಾತ್ರವಿದೆ ಎಂಬುದನ್ನು ಇದರೊಂದಿಗೆ ಸೇರಿಸಿ ಓದಬೇಕೆಂದೆನಿಸುತ್ತದೆ. ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ದರ್ಗಾ ದಾರಿಯ ಇಕ್ಕೆಲಗಳಲ್ಲಿ ಲೋಹದ ಬೀಗಗಳನ್ನು ನೇತು ಹಾಕುವ ಸಂಪ್ರದಾಯವಿದೆ.

ಬೆಂಗಳೂರು ಮಹಾನಗರದ ಮಧ್ಯ ಭಾಗದಲಿದ್ದು, ಮೆಜೆಸ್ಟಿಕಿಗೆ ಹತ್ತಿರವಿದ್ದರೂ ತವಕ್ಕಲ್ ಮಸ್ತಾನ್ ದರ್ಗಾ ಪರಿಸರದಲ್ಲಿರುವ ಗಾಢ ಮೌನ, ಶಾಂತ ಪರಿಸರ ಆಕರ್ಷಕವಾಗಿದೆ. ಶುಕ್ರವಾರ ದಿನಗಳಲ್ಲಿ ಇಲ್ಲಿ ಕವ್ವಾಲಿ ನಡೆಯುತ್ತದೆ. ಗಾಢ ಮೌನ ಮತ್ತು ಸಂಗೀತಾತ್ಮಕ ಶಬ್ದದ ಹಿನ್ನೆಲೆ, ಭಕ್ತಿ ತುಂಬಿದ ವಾತಾವರಣ, ಇಸ್ಲಾಮೀ ಬದುಕಿನ ಸೌಂದರ್ಯವನ್ನು ಕಾಣಿಸುವ ಸ್ಥಳ ಎಂಬ ನೆಲೆಯಲ್ಲಿ ಈ ರೀತಿಯ ದರ್ಗಾಗಳು ಮಹತ್ವ ಪಡೆಯುತ್ತದೆ. ’ಹೃದಯದಿಂದ ಆಲಿಸಿ’ ಎಂದು ಚಾಲ್ಸ್ ಹಿಸ್ಕಿಂದ್ ವರ್ಣಿಸಿದ ಶ್ರವಣಾನುಭವಗಳನ್ನಾಗಿದೆ ಈ ದರ್ಗಾಗಳ ಕವ್ವಾಲಿಗಳು, ಕೀರ್ತನೆಗಳು, ಭಕ್ತಿ ಗೀತೆಗಳು ಶ್ರುತಪಡಿಸುತ್ತಿರುವುದು.

ತಮ್ಮ ಬದುಕನ್ನು ನಿಯಂತ್ರಿಸುವ ಅಗೋಚರ ಕೈಗಳನ್ನು ಹುಡುಕಿ ಜನರು ದರ್ಗಾಗಳಿಗೆ ಹರಿದು ಬರುತ್ತಾರೆ. ಆಧುನಿಕತೆಯ ಮುಸುಕುಗಳಿಗೆ ಮುಚ್ಚಿಡಲು ಅಸಾಧ್ಯವೆಂಬತೆ ದರ್ಗಾಗಳು ನಿರ್ವಹಿಸುತ್ತಿರುವ ಈ ಅಧ್ಯಾತ್ಮದ ವಾತಾವರಣವಾಗಿದೆ ಜನರ ಹರಿವಿಗೆ ಮುಖ್ಯ ಸಬೂಬು. ಅಲ್ಲಿ ವಿಶ್ವಾಸಿಗಳ ಆತಂಕ, ಒಳಗುದಿಗಳೆಲ್ಲ ಮಾಯವಾಗುತ್ತದೆ. ಅಧ್ಯಾತ್ಮ ಶಕ್ತಿಯು ಆಶ್ವಾಸ ನೀಡುತ್ತದೆ. ಸ್ತ್ರೀ-ಪುರುಷ ತಾರತಮ್ಯವಿಲ್ಲದೆ ಜನರು ಭಕ್ತಿಯಲ್ಲಿ ಮುಳುಗುತ್ತಾರೆ. ಎಲ್ಲರೂ ತಮ್ಮ ಅಹಂಗಳನ್ನು ಮರೆತು, ತುಂಬಿದ ಕಣ್ಣುಗಳಲ್ಲಿ ಔಲಿಯಾಗಳ ಸಮಾಧಿಗಳಿಗೆ ಬಯಕೆಗಳನ್ನು ಸಲ್ಲಿಸುತ್ತಾರೆ. ಬಿಜು ಇಬ್ರಾಹಿಂ ಬರೆದಂತೆ ಆಂತರಿಕ ಬೆಳಕಿನಿಂದ ತುಂಬುವ ಸ್ಥಳಗಳಾಗಿ ದರ್ಗಾಗಳು ಕಾರ್ಯನಿರ್ವಹಿಸುತ್ತಲೇ ಇದೆ.

ಮೂಲ: ಮುಹಮ್ಮದ್ ಸಿರಾಜ್ ರಹ್ಮಾನ್
ಅನುವಾದ: ಅಮ್ಮಾರ್ ನೀರಕಟ್ಟೆ

ಶವರ್ಮ: ಗಡಿದಾಟಿದ ಸಂಸ್ಕೃತಿ ಮತ್ತು ಆಹಾರ ಪದ್ಧತಿ

ಸುರುಟುವುದು ಎಂಬರ್ಥವನ್ನು ನೀಡುವ ‘ಜಿವಿರ್ಮ’ (Civirme) ಎಂಬ ತುರ್ಕಿ ಪದದಿಂದ ಶವರ್ಮ ಎಂಬ ಪದ ಹುಟ್ಟು ಪಡೆಯುತ್ತದೆ. ಲೆಬನಾನ್, ಸಿರಿಯಾ, ಪ್ಯಾಲೆಸ್ಟೈನ್, ಜೋರ್ಡಾನ್ ಸೇರಿದ ರಾಷ್ಟ್ರಗಳಲ್ಲಿ ಸೌಟನ್ನು ಉಪಯೋಗಿಸಿ ಮಾಂಸವನ್ನು ಗ್ರಿಲ್ ಮಾಡಿ ತೆಗೆಯುವುದರೊಂದಿಗೆ ಶವರ್ಮ ತಯ್ಯಾರಾಗುತ್ತದೆ. ಫೆಲಸ್ತೀನ್ ರಾಷ್ಟ್ರದಲ್ಲಿ ಶವರ್ಮ ಅಂಗಡಿಗಳಲ್ಲಿ ವೈವಿಧ್ಯಮಯ ಟೆಚ್ಚಿಂಗ್ಸ್’ಗಳು (ಶವರ್ಮಾದ ಮೇಲ್ಗಡೆ ಸುರಿಯುವ ಸಾರು ಅಥವಾ ಸೂಪ್) ಕಾಣಬಹುದು. ಗಟ್ಟಿಯಾದ ತಾಹಿನಿ, ವಾಝ್ಸಲಿ ಭಕ್ದುಲ್ಸಿಯಾ, ಗಾಝಾದಿಂದಿರುವ ಅರೆದ ಕರುಮ, ಬೆಳ್ಳುಳ್ಳಿ, ಕ್ಯಾಬೇಜ್, ಸಲಾಡ್ ಅವುಗಳ ಪೈಕಿ ಕೆಲವು. ಆ ಪೈಕಿ ಕೈಬಿಡಲಾಗದ್ದು ಮಾವಿನಕಾಯಿ ಉಪಯೋಗಿಸಿಕೊಂಡು ಮಾಡುವ ‘ಅಂಬ’. ಅಂಬ ಪ್ಯಾಲೆಸ್ಟೈನ್ ನಿಂದ ಇಲ್ಲಿಗೆ ತಲುಪಿದ ಇತಿಹಾಸದ ಹಿಂದೆ ದೇಶೀಯ ಸಾಂಸ್ಕೃತಿಕ ವಿನಿಮಯದ ಚರಿತ್ರೆಯಿದೆ. ದಕ್ಷಿಣೇಷ್ಯಾದ ಉಪ್ಪಿನಕಾಯಿ ಅರೆದು ಮಾಡಿದ ಮಸಾಲೆಯಿಂದ ಸಪೋಟ-ದಾಳಿಂಬೆ ಬಣ್ಣವುಳ್ಳ ಅಂಬ ತಯ್ಯಾರು ಮಾಡಲಾಗುತ್ತದೆ. ಮೊದಲ ಹಂತ, ಮಾವಿನ ಕಾಯಿಗಳನ್ನ ಸಣ್ಣ ತುಂಡುಮಾಡಿ ಉಪ್ಪಲ್ಲಿ ನೆನೆದುಹಾಕಿ, ನಂತರ ಮೆಣಸಿನ ಪುಡಿ, ವಿನಿಗರ್, ಸಾಸಿವೆ, ಅರಿಶಿನ ಹಾಕಿ ಅಂಬ ತಯಾರು ಮಾಡುತ್ತಾರೆ. ಇದು ಮಾವಿನಕಾಯಿಯ ಚಟ್ನಿಗಿಂತ ಹುಳಿಯಾಗಿ ಹೆಚ್ಚು ರಸವತ್ತಾಗಿರುತ್ತೆ. ದಕ್ಷಿಣ ಭಾರತದಿಂದ ಹಲವು ಶತಮಾನಗಳು ಕಳೆದಾಗಿತ್ತು ಪ್ಯಾಲೆಸ್ಟೈನ್ ಗೆ ‘ಅಂಬ’ ಕಾಲಿರಿಸುವುದು. ಮಾವು ಎಂದರ್ಥ ಬರುವ ‘ಆಂ’ ಎಂಬ ಮರಾಠಿ ಭಾಷೆಯಿಂದ ಉದ್ಭವ ಪಡೆದದ್ದೇ ಈ ಅಂಬ. ಅದನ್ನು ಇರಾಖಿಗೆ ಪರಿಚಯಿಸಿ, ದೇಶೀಯ ಆಹಾರವಾಗಿ ಬದಲಾಯಿಸಿದ್ದು ಬಗ್ದಾದೀ ಯಹೂದಿಯರು ಮತ್ತು ಭಾರತೀಯರಾಗಿದ್ದರು. ಇರಾಖಿಯನ್ನರು ಅದನ್ನು ಪ್ಯಾಲೆಸ್ಟೈನಿಯನ್ನರಿಗೆ ಪರಿಚಯಿಸಿಕೊಟ್ಟರು.

ಹಾಗಾದರೆ ಈ ಭಾರತೀಯ ಮಾವಿನಕಾಯಿ ಉಪ್ಪಿನಕಾಯಿ ಪ್ಯಾಲೆಸ್ಟೈನಿನ ಶವರ್ಮಾ ಸ್ಯಾಂಡ್‌ವಿಚ್ ಅಂಗಡಿಗಳನ್ನು ಹೇಗೆ ತಲುಪಿತು? ಇದು ಬ್ರಿಟಿಷ್ ವಸಾಹತುಶಾಹಿಯ ಇತಿಹಾಸದೊಂದಿಗೆ ಎರಡು ವಿಭಿನ್ನ ರೀತಿಯಲ್ಲಿ ಬೇರ್ಪಡಿಸಲಾಗದಂತಹ ಸಂಬಂಧ ಹೊಂದಿರುವ ಸುದೀರ್ಘ ಕಥೆಯಾಗಿದೆ: 19 ನೇ ಶತಮಾನದಲ್ಲಿ ಹಿಂದೂ ಮಹಾಸಾಗರದ ವ್ಯಾಪಾರ ಜಾಲಗಳ ರೂಪಾಂತರವು ಬ್ರಿಟಿಷ್ ನಿಯಂತ್ರಣಕ್ಕೆ ಬಂದಿತು ಮತ್ತು 20 ನೇ ಶತಮಾನದಲ್ಲಿ ಝಿಯಾನಿಸ್ಟ್ ಪಡೆಗಳಿಂದ ಬ್ರಿಟಿಷ್ ಮ್ಯಾಂಡೇಟ್ ಪ್ಯಾಲೆಸ್ಟೈನ್ ವಸಾಹತುಶಾಹಿಗಳ ಪಾಲಾಯಿತು. ಈಗ ನಾವು ಆ ಇತಿಹಾಸಕ್ಕೆ ಮರಳೋಣ

ಹಿಂದೂ ಮಹಾಸಮುದ್ರದಲ್ಲಿನ ವಾಣಿಜ್ಯ

ಹಲವಾರು ವರ್ಷಗಳಿಂದ ಸಮುದ್ರ ಗಡಿದಾಟಿ ಕೊಡು-ಕೊಳ್ಳುವಿಕೆ ನಡೆಸಿದ ವ್ಯಾಪಾರಿಗಳ ಚರಿತ್ರೆಯು ಈ ಮಹಾಸಮುದ್ರದಲ್ಲಿ ನಡೆದ ವಾಣಿಜ್ಯೀಕರಣವನ್ನು ಪರಿಚಯಿಸುತ್ತದೆ. ಪೂರ್ವ ಪಶ್ಚಿಮ-ಆಫ್ರಿಕಾದಿಂದ ದಕ್ಷಿಣ ಯೂರೋಪ್ ತನಕವೂ ಅಲ್ಲಿಂದ ಪಶ್ಚಿಮೇಷಿಯಾ, ಅಲ್ಲಿಂದ ಪರ್ಶಿಯನ್ ಒಳಗಡಲ ಮಾರ್ಗವಾಗಿಯೂ ಅರಬಿ ಕಡಲ ದಾರಿಯಾಗಿ ಅದು ಭಾರತ, ಇಂಡೋನೇಷಿಯಾ, ಚೈನಾವರೆಗೂ ವ್ಯಾಪಿಸಿತು. ಆದರೆ ಶತಮಾನಗಳಿಂದ ವಿಶ್ವ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದರೂ, ಪಶ್ಚಿಮ-ಮಧ್ಯ ಏಷ್ಯಾದ ಭೂಮಾರ್ಗದ ಮೂಲಕ ಯುರೋಪ್ ಮತ್ತು ಚೀನಾವನ್ನು ಸಂಪರ್ಕಿಸುವ ಸಿಲ್ಕ್ ರಸ್ತೆಯಂತೆ ಈ ಸಮುದ್ರ ಮಾರ್ಗವು ನೆನಪಿಸಲ್ಪಟ್ಟಿಲ್ಲ ಎಂಬುದು ವಾಸ್ತವ. ಕ್ರಿ.ಶ. 1600 ರ ಹೊತ್ತಿಗೆ ಈ ವ್ಯಾಪಾರ ಮಾರ್ಗವು ಅಭಿವೃದ್ಧಿ ಪಡೆದಿದ್ದಲ್ಲದೆ ಶತಮಾನಗಳಿಂದ ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿರುವ ವ್ಯಾಪಾರಿಗಳಿಗೆ ತಲುಪಿ ಅವರ ನಡುವೆ ಒಂದು ಕೊಂಡಿ ಸೃಷ್ಟಿಸಿತು. ಯಮನ್‌ನಿಂದ ಬಂದ ಹಳ್‌ರಮಿಗಳು ಭಾರತದ ಪಶ್ಚಿಮ ಕರಾವಳಿಯಲ್ಲಿ ನೆಲೆಸಿ, ಸಿಂಗಾಪುರ ಮತ್ತು ಹಾಂಗ್-ಕಾಂಗ್‌ನಲ್ಲಿ ತಮ್ಮದೇ ಆದ ವಾಸಸ್ಥಾನಗಳನ್ನು ಕಂಡುಕೊಂಡರು.
ಗುಜರಾತಿ ವ್ಯಾಪಾರಿಗಳು ಒಮಾನ್, ಪರ್ಷಿಯನ್ ಗಲ್ಫ್ ರಾಷ್ಟ್ರಗಳಿಗೂ ಝಾಂಝಿಬರ್ (Zanzibar) -ಏಡೆನ್ ಎಂಬಲ್ಲಿಗೂ ಮತ್ತು ಪರ್ಷಿಯನ್ನರು ಚೀನಾಕ್ಕೆ ಪ್ರಯಾಣ ಬೆಳೆಸಿದರು. ಹಿಂದೂ ಮಹಾಸಾಗರದಾದ್ಯಂತ ಅನೇಕ ನಗರಗಳಲ್ಲಿ ನೆಲೆಗಳನ್ನು ಹೊಂದುವ ಮೂಲಕ, ಈ ಸಮುದಾಯಗಳು ಸಾವಿರಾರು ಮೈಲುಗಳಷ್ಟು ದೂರದ ಪಟ್ಟಣಗಳನ್ನು ಪರಸ್ಪರ ಜೋಡಿಸುವ ಬಹುರಾಷ್ಟ್ರೀಯ ವ್ಯಾಪಾರ ಜಾಲಗಳಾದವು. ಯುರೋಪಿಯನ್ ವ್ಯಾಪಾರಿಗಳು ತಮ್ಮ ವಸಾಹತುಶಾಹಿ ವಿಸ್ತರಣೆಯ ಭಾಗವಾಗಿ ಕ್ರಿ.ಶ.1600 ರ ದಶಕದಲ್ಲಿ ಹಿಂದೂ ಮಹಾಸಾಗರವನ್ನು ಪ್ರವೇಶಿಸಿದಾಗ, ಅವರು ಈ ವ್ಯಾಪಾರ ಜಾಲಗಳನ್ನು ಸೇರದೆ ವಸಾಹತು ಆಗಿ ವಶಪಡಿಸಿಕೊಳ್ಳಲು ನೋಡಿದರು.

ಬಗ್ದಾದಿ ಯಹೂದಿ ಸಂಪರ್ಕಗಳು

ಕೆಲವು ಹಿಂದೂ ಮಹಾಸಾಗರದ ವ್ಯಾಪಾರ ಸಮುದಾಯಗಳು ಈ ಪ್ರಕ್ರಿಯೆಯಲ್ಲಿ ಬದುಕುಳಿಯುವಲ್ಲಿ ಯಶಸ್ವಿಯಾದವು, ಆದಾಗ್ಯೂ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಕೆಲವು ವೈಶಿಷ್ಟ್ಯಗಳ ಲಾಭವನ್ನು ಪಡೆದುಕೊಂಡವು. ಬಗ್ದಾದಿ ಯಹೂದಿ ಸಮುದಾಯಗಳು ಇವುಗಳಲ್ಲಿ ಒಂದಾಗಿದ್ದವು. ಕ್ರಿ.ಶ. 17 ನೇ ಶತಮಾನದ ಆರಂಭದಲ್ಲಿ, ಬಾಗ್ದಾದ್‌ನಿಂದ ಇರಾಕಿನ ಯಹೂದಿ ವ್ಯಾಪಾರಿಗಳ ಗುಂಪುಗಳು ಪರ್ಷಿಯನ್ ಗಲ್ಫ್ ಬಂದರು ಬಸ್ರಾ ಮತ್ತು ಅಲ್ಲಿಂದ ಮುಂದೆ ಮೊಘಲ್ ಇಂಡಿಯಾಕ್ಕೆ ಸ್ಥಳಾಂತರಗೊಂಡರು, ಅಲ್ಲಿ ಅವರು ಬಾಂಬೆ, ಪುಣೆ ಮತ್ತು ಕಲ್ಕತ್ತಾದಂತಹ ಪಟ್ಟಣಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿದರು. ಕಾಲಾನಂತರದಲ್ಲಿ, ಅಲೆಪ್ಪೊ ಮತ್ತು ಯೆಮೆನ್‌ನ ಇತರ ಯಹೂದಿ ಅರಬ್ಬರು ಸಹ ಈ ಸಮುದಾಯಗಳಿಗೆ ಸೇರುತ್ತಾರೆ. ಕ್ರಿ.ಶ. 18 ಮತ್ತು 19ನೇ ಶತಮಾನಗಳಲ್ಲಿ ವ್ಯವಸಾಯೀಕರಣದ ಕಾರಣದಿಂದ ಯಾತ್ರೆ-ವಿನಿಮಯ ಮಾರ್ಗಗಳು ತ್ವರಿತವಾಗಿ ಬಳಸಿ ಒಂದೆಡೆ ಯಾಂಗೋನ್, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಶಾಂಘೈಗೆ ಮುಂತಾದ ನಗರಗಳಿಗೆ ಇದು ವ್ಯಾಪಿಸಿತು. ಇನ್ನೊಂದೆಡೆ ಲಂಡನ್ ಮತ್ತು ಮ್ಯಾಂಚೆಸ್ಟರ್ ನಗರಗಳಿಗೂ ಹರಡಿತು. ಹಿಂದೂ ಮಹಾಸಾಗರದ ತೀರದಲ್ಲಿ ವ್ಯಾಪಿಸಿರುವ ಸಮಗ್ರ ವ್ಯಾಪಾರ ಸರಪಳಿಗೆ ಮತ್ತು ಅಂತರಾಷ್ಟ್ರೀಯ ಅರಬ್-ಯಹೂದಿ ಸಂಸ್ಕೃತಿಗೆ ಇದು ಜನ್ಮ ನೀಡಿತು. ಈ ವಾಣಿಜ್ಯ ಸರಪಳಿಯು ಬಾಗ್ದಾದಿ ಯಹೂದಿ ಪಾಕಪದ್ಧತಿಯಲ್ಲಿ ಪ್ರತಿಫಲವುಂಟುಮಾಡಿತು. ಅಂಬಾದಂತೆ ಬಿರಿಯಾನಿ, ಕೋಳಿ ಸಾರು ಮತ್ತು ಪರೋಟ, ಬಾಗ್ದಾದಿ ಯಹೂದಿಗಳ ನೆಚ್ಚಿನ ಭಕ್ಷ್ಯ ವಸ್ತುವಾಯಿತು. ಇನ್ನು ಕೆಲವು ಸಮುದಾಯವು ಅವರವರ ಊರಿನ ಭೋಜನಾ ಸಂಸ್ಕೃತಿಯನ್ನು ಸ್ವೀಕರಿಸಿದವು. ಕ್ರಿ.ಶ. 20ನೇ ಶತಮಾನದ ಉತ್ತರಾರ್ಧದಲ್ಲಿ ಯಮನ್‌ನ ಹಳ್ರಮಿಗಳು ಆಗ್ನೇಯ ಏಷ್ಯಾದ ಪಾಕಪದ್ಧತಿಯನ್ನು ಸೇವಿಸುತ್ತಿದ್ದರು ಎಂದು ಎಂಗ್‌ಸಂಗ್ ಹೋ ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. 20 ನೇ ಶತಮಾನದ ವೇಳೆಗೆ ಮಧ್ಯ ಏಷ್ಯಾ, ಭಾರತ ಮತ್ತು ಆಗ್ನೇಯ ಏಷ್ಯಾದ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡ ಬ್ರಿಟಿಷ್ ಸಾಮ್ರಾಜ್ಯವು ಬಾಗ್ದಾದಿ ಯಹೂದಿಗಳಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿತಲ್ಲದೆ ಅಂತರಾಷ್ಟ್ರೀಯ ಸಂಸ್ಕೃತಿಗೆ ಹೆಚ್ಚು ಒಲವನ್ನು ನೀಡಲು ಆರಂಭಿಸಿದರು. ಮೊದಲ ಮಹಾಯುದ್ಧದ ಸಮಯದಲ್ಲಿ ಇರಾಕನ್ನು ಆಕ್ರಮಿಸಿಕೊಂಡ ಬ್ರಿಟಿಷ್ ಸೈನ್ಯವು ಹೆಚ್ಚಿನ ಸಂಖ್ಯೆಯ ಭಾರತೀಯ ಸೈನಿಕರನ್ನು ಹೊಂದಿತ್ತು. ಯುದ್ಧದ ನಂತರ ಅವರು ತಮ್ಮ ತಾಯ್ನಾಡಿಗೆ ಮರಳದೆ ಇರಾಖ್‌ನಲ್ಲೇ ನೆಲೆಸಿದರು. ಐಷಾರಾಮಿ ವಸ್ತುಗಳು ರಫ್ತಾಗುವಂತೆ ಶವರ್ಮಾ ಮತ್ತು ಅಂಬಾ ಸಂಬಾರುಗಳಂತಹ ಆಹಾರ ಪದಾರ್ಥಗಳು ಸಹ ಭಾರತದಿಂದ ಇರಾಕ್‌ಗೆ ರಫ್ತು ಮಾಡಲಾಯಿತು. ಸಿಹಿ, ಹುಳಿ, ಮಸಾಲೆಯುಕ್ತ ಈ ರುಚಿಕರವಾದ ಮಾವಿನ ರಸವು ಇರಾಖ್ ರಾಷ್ಟ್ರದಾದ್ಯಂತ ಜನಪ್ರಿಯವಾಯಿತು. ಇರಾಕಿ-ಯಹೂದಿ ಕಾದಂಬರಿಗಾರ ಸೊಮೆವ್ ಸಾಸೂನ್ ಬಾಗ್ದಾದಿನ ಬೀದಿಗಳಲ್ಲಿ ಅಂಬಾದೊಂದಿಗಿನ ಅವರ ಬಾಲ್ಯವನ್ನು ತಮ್ಮ ಆತ್ಮಚರಿತ್ರೆಯಲ್ಲಿ ನೆನಪಿಸುತ್ತಾರೆ.

ಫೆಲಸ್ತೀನ್; ಆಹಾರ ಸಂಸ್ಕೃತಿ

ಮೊದಲನೆಯ ಮಹಾಯುದ್ಧದ ನಂತರ, ಆಟ್ಟೋಮನ್ ಸಾಮ್ರಾಜ್ಯವನ್ನು ಬ್ರಿಟಿಷರು ಮತ್ತು ಫ್ರೆಂಚರು ನಾಶಪಡಿಸಿದರು. ಸಿರಿಯಾ ಮತ್ತು ಲೆಬನಾನನ್ನು ಫ್ರೆಂಚರು ವಶಪಡಿಸಿಕೊಂಡಾಗ ಪ್ಯಾಲೆಸ್ಟೈನ್  ಮತ್ತು ಜೋರ್ಡಾನ್ ಬ್ರಿಟಿಷರ ವಶವಾಯಿತು. ಅದೇ ಸಮಯದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೂದಿಗಳೊಂದಿಗೆ ವಾಸಿಸುವ ಪ್ಯಾಲೆಸ್ಟೈನ್ ನಲ್ಲಿ ಒಂದು ಯಹೂದಿ ರಾಷ್ಟ್ರವನ್ನು ನಿರ್ಮಿಸಲು ಪಣತೊಟ್ಟ ಝಿಯೋನಿಸ್ಟ್ ರಾಷ್ಟ್ರೀಯ ಚಳುವಳಿಗೆ ಕೆಲವು ಯೂರೋಪಿಯನ್ ಯಹೂದಿಯರು ಆಕರ್ಷಿತರಾಗಿದ್ದರು. ಝಿಯೋನಿಸ್ಟರ ವಲಸೆಯು ವೇಗಗೊಂಡಾಗ ಯಹೂದಿಯರಿಗೆ ಮಾತ್ರವಿದ್ದ ನಗರಗಳು ಮತ್ತು ಸಂಸ್ಥೆಗಳು ಹುಟ್ಟಿಕೊಂಡವು. ಸ್ಥಳೀಯ ಜನರನ್ನು ಹೊರಗಿಡುವುದು ಅವರ ದೀರ್ಘಾವಧಿಯ ಉದ್ದೇಶವೆಂದು ಅರ್ಥವಾಯಿತು. ಇದನ್ನು ವಿರೋಧಿಸಿ ಪ್ರತಿಭಟಿಸಿದ ಪ್ಯಾಲೆಸ್ಟೈನ್ ಜನರನ್ನು ಬ್ರಿಟಿಷ್ ಸರ್ಕಾರ ಹತ್ತಿಕ್ಕಿತು ಹಾಗೂ ಝಿಯೋನಿಸ್ಟ್ ಪ್ರಣೀತ ದೇಶವನ್ನು ಸೃಷ್ಟಿಸಲಾಯಿತು. ಕ್ರಿ.ಶ. 1948 ರಲ್ಲೇ ಇಸ್ರೇಲ್ ಇಡೀ ಪ್ಯಾಲೆಸ್ಟೈನ್ ಜನರನ್ನು ನಿರ್ನಾಮ ಮಾಡಿ, ಉಳಿದ ಪ್ಯಾಲೆಸ್ಟೀನಿಯನ್ನರು ಇಸ್ರೇಲಿ ಸೈನ್ಯದ ನಿಯಂತ್ರಣದಲ್ಲಿಟ್ಟಿತು. ಝಿಯೋನಿಸಂನ ಈ ಬೆಳವಣಿಗೆಯು ಅರಬ್ ಜಗತ್ತಿನಲ್ಲಿ ಅರಬ್-ಯಹೂದಿ ಸಮುದಾಯಗಳನ್ನು ಗುರಿಯಾಗಿಸಿ ಆಕ್ರಮಣ ಮತ್ತು ದಂಗೆಗಳಿಗೆ ಕಾರಣವಾಯಿತು. ಹೆಚ್ಚಿನ ಅರಬ್ ಯಹೂದಿಗಳು ರಾಜಕೀಯ ಸಂಘವಾದ ಝಿಯೋನಿಸಂನಲ್ಲಿ ಆಸಕ್ತಿ ಹೊಂದಿದವರಾಗಿರಲಿಲ್ಲ.

ಈ ಸನ್ನಿವೇಶದಲ್ಲಿ, ಅನೇಕ ಯಹೂದಿಗಳು ಇಸ್ರೇಲ್‌ಗೆ ವಲಸೆ ಹೋದರು. ಮೊರಾಕೊ ಮತ್ತು ಯೆಮೆನ್‌ನಂತಹ ದೇಶಗಳಲ್ಲಿದ್ದ ಲಕ್ಷಾಂತರ ಯಹೂದಿಗಳು ಮುಕ್ತವಾಗಿ ತೊರೆದರು, ಆಗಾಗ್ಗೆ ಝಿಯಾನಿಸ್ಟ್ ಪ್ರಚಾರದ ಪ್ರಭಾವದ ಅಡಿಯಲ್ಲಿ ಇಸ್ರೇಲ್ ಅನ್ನು ಭರವಸೆಯ ಭೂಮಿ ಎಂದು ಚಿತ್ರಿಸಲಾಯಿತು. ಈಜಿಪ್ಟ್, ಇರಾಖ್ ಮು ರಾಷ್ಟ್ರಗಳಲ್ಲಿ ಯಹೂದಿಯರನ್ನ ಗುರಿಯಾಗಿಸಿ ಸರಕಾರ ತಂದ ನಿಯಮ ಹಾಗು ಕಿರುಕುಳವು ಸಾಮೂಹಿಕ ವಲಸೆಗೆ ಕಾರಣವಾಯಿತು.

ಇಸ್ರೇಲ್ ಮುಖ್ಯವಾಹಿನಿ ಸಂಸ್ಕೃತಿಯಿಂದ ತಮ್ಮ ಸಂಸ್ಕಾರ ಹಾಗು ಸಂಗೀತ ಹೊರಹಾಕಲ್ಪಟ್ಟಾಗ ಅರಬ್-ಯಹೂದಿ ಸಂಸ್ಕೃತಿಯನ್ನು ಜೀವಂತವಾಗಿಡಲು ಅವರು ಕಂಡುಕೊಂಡ ಕ್ಷೇತ್ರಗಳಲ್ಲಿ ಒಂದಾಗಿದೆ ಆಹಾರ ಸಂಸ್ಕೃತಿ. ಇಸ್ರೇಲ್‌ಗೆ ತಲುಪಿದ ಅವರು ಕೂಡಲೇ ಭಾರತೀಯ ಅಂಬಾವನ್ನು ಮಾರಾಟ ಮಾಡುವ ಸಣ್ಣ ಕಾರ್ಖಾನೆಗಳನ್ನು ಸ್ಥಾಪಿಸಿದರು. ಅರಬ್ ಯಹೂದಿಗಳು ಇಸ್ರೇಲ್‌ಗೆ ಅನೇಕ ಭಕ್ಷ್ಯಗಳನ್ನು ತಂದಿದ್ದಾರೆ, ಉದಾಹರಣೆಗೆ ಯೆಮೆನ್ ಸಾಸ್ ‘ಸ್ಕೋಕ್’, ಇರಾಕಿನ ‘ಖುಬ್ಬಹ್’ ಮತ್ತು ಮಗ್ರಿಬ್ ‘ಶಕ್ಷುಕಾ’.

ಪ್ಯಾಲೆಸ್ಟೈನಿಯನ್ನರು ಅಂಬಾವನ್ನು ತಿಳಿಯುವುದು ಇಸ್ರೇಲಿಗರೊಂದಿಗಿನ ವೃತ್ತಿ ಜೀವನದ ವೇಳೆಯಲ್ಲಾಗಿತ್ತು. ಕ್ರಿ.ಶ‌ 20 ನೇ ಶತಮಾನದ ಉತ್ತರಾರ್ಧದಲ್ಲಿ ಪ್ಯಾಲೆಸ್ಟೈನ್ ನ ಶವರ್ಮಾ ಅಂಗಡಿಗಳಿಗೆ ‘ಅಂಬಾ’ದ ಪ್ರಯಾಣವು ಐತಿಹಾಸಿಕ ಮತ್ತು ಕುತೂಹಲಕರವಾಗಿತ್ತು. ಇದು ಹಿಂದೂ ಮಹಾಸಾಗರದ ವ್ಯಾಪಾರ ಮತ್ತು ಬ್ರಿಟಿಷ್ ವಸಾಹತುಶಾಹಿಯೊಂದಿಗೆ ನಿಕಟ ಸಂಬಂಧ ಹೊಂದಲು ಸಾಧ್ಯವಾಯಿತು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯು ಹಳೆಯ ವ್ಯಾಪಾರ ಮಾರ್ಗಗಳು ಮುಚ್ಚಿತು. ಅಂಬಾವನ್ನು ಇರಾಕ್‌ಗೆ ಕರೆತಂದ ಬಾಗ್ದಾದಿ ಯಹೂದಿಗಳು ವಸಾಹತುಶಾಹಿ ಆಡಳಿತದ ಲಾಭವನ್ನು ಪಡೆದುಕೊಂಡರು. ಅದು ಹಳೆಯ ವ್ಯಾಪಾರ ಮಾರ್ಗಗಳನ್ನು ಮುಚ್ಚಿ ಹೊಸ ಮಾರ್ಗಗಳನ್ನು ತೆರೆಯಿತು. ಪ್ಯಾಲೆಸ್ಟೈನ್‌ನಲ್ಲಿ   ಬ್ರಿಟಿಷ್ ಆಳ್ವಿಕೆಯು ಝಿಯೋನಿಸ್ಟ್ ಆಡಳಿತಕ್ಕೆ ನಾಂದಿಯಾದರೂ, ಇರಾಕಿನ ಆಹಾರ ಸಂಸ್ಕೃತಿಯನ್ನು ಉಳಿದ  ಪ್ಯಾಲೆಸ್ಟೈನಿಯನ್ನರಿಗೆ ಪರಿಚಯಿಸಿತು. ಆಹಾರವನ್ನು ಅದರ ಐತಿಹಾಸಿಕ ಹಿನ್ನೆಲೆಯಿಂದ ಪ್ರತ್ಯೇಕಿಸಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಂಬಾ ನಮಗೆ ನೆನಪಿಸುತ್ತದೆ.

ಮೂಲ: ಅಲೆಕ್ಸ್ ಶಂಸ್
ಅನುವಾದ: ಸಲೀಂ ಮುಈನಿ, ಇರುವಂಬಳ್ಳ

ಈಜಿಪ್ಟಿನ ರಂಝಾನ್ ಡೈರಿ

ಜಗತ್ಪ್ರಸಿದ್ಧ ಈಜಿಪ್ಟ್ ಬರಹಗಾರ, ಸಾಹಿತ್ಯ ನೋಬೆಲ್ ಪ್ರಶಸ್ತಿ ಪಡೆದ ನಜೀಬ್ ಮಹ್ಫೂಝ್ ಕೈರೋ ನಗರದ ರಂಝಾನ್ ತಿಂಗಳ ಬಗ್ಗೆ ಈ ರೀತಿ ಬರೆಯುತ್ತಾರೆ:
“ರಂಝಾನಿನ ಹಗಲು ಹೊತ್ತು ಶಾಂತ ವಾತಾವರಣನ್ನು ಈಜಿಪ್ಟಿನಲ್ಲಿ ನನಗೆ ಕಾಣಲು ಸಾಧ್ಯವಾಯಿತು. ಚಹಾ ಅಂಗಡಿಗಳು,‌‌ ದಿನವೂ ಜನ ನಿಬಿಡವಾಗಿರುತ್ತಿದ್ದ ಪ್ರದೇಶಗಳು ನಿರ್ಜನವಾಗಿತ್ತು. ರಂಝಾನ್ ತಿಂಗಳ ಆಚರಣೆ ಈ ರೀತಿಯ ವಾತಾವರಣವನ್ನು ಕಾಣಬಹುದು. ಆದರೆ ರಾತ್ರಿಯ ವಾತಾವರಣ ಬೇರೆಯೇ. ಬೆಳಗ್ಗಿನ ತನಕ ಜನರು ನಿದ್ದೆ ಬಿಟ್ಟಿರುವರು. ಬೀದಿಬದಿ ಪಾನಿಸ್ ಬೆಳಕನ್ನು ಕೈಯಲ್ಲಿರಿಸಿದ ಮಕ್ಕಳನ್ನು ಕಾಣಬಹುದು. ಎಲ್ಲಾ ಕಡೆಯಲ್ಲೂ ಆ ಬೆಳಕು ಕಾಣಬಹುದು. ರಾತ್ರಿ ಏನೋ ಸಂಭ್ರಮದ ಹಾಗೆ ಪರಿಸರ ಬದಲಾಗಿರುತ್ತೆ. ಹಬ್ಬ ಬಂದರೆ ಮಕ್ಕಳು, ವಯಸ್ಕರು ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸುವರು. ಪ್ರತಿ ವರ್ಷದ ರಂಝಾನ್ ತಿಂಗಳನ್ನು ನಾವು ಕಾತುರದಿಂದ ಕಾಯ್ತಾ ಇರುತ್ತೇವೆ.”

ಈಜಿಪ್ಟ್ ಜೀವನದ ಮಾಧುರ್ಯ ಎಲ್ಲೆಲ್ಲೂ ಕೇಳಿಬರುವ ಕುರ್ಆನಿನ ಧ್ವನಿ. ಫೆಬ್ರವರಿ 20 ರಂದು ಈಜಿಪ್ಟ್ ನೆಲಕ್ಕೆ ಬಂದಿಳಿದ ಅಂದಿದಿನಿಂದ ಕುರ್ಆನ್ ಪಾರಾಯಣದ ಲಯಬದ್ಧ ಶಬ್ದಗಳನ್ನು ಅನುಭವಿಸುತ್ತಿದ್ದೇವೆ. ಬಸ್ ಅಥವಾ ಖಾಸಗಿ ವಾಹನದಲ್ಲಿ ಪ್ರಯಾಣಿಸುವಾಗ, ಅವರು ಕುರ್ಆನ್ ಒಂದು ನಿಮಿತ್ತದಂತೆ ಅತ್ಯುತ್ತಮ ಶ್ರೇಷ್ಠ ಖಾರಿಉಗಳ ಅತ್ಯಂತ ಸುಂದರವಾದ ಪಠಣ ಶೈಲಿಯನ್ನು ಹಾಕುತ್ತಾರೆ. ಆ ಸ್ವರಕ್ಕೆ ನಾವು ಉಡುಗೆ ಮತ್ತು ನಡವಳಿಕೆಯಲ್ಲಿ ಅತ್ಯಂತ ಆಧುನಿಕರೆಂದು ಪರಿಗಣಿಸುವ ಜನರು ಕೈಯಲ್ಲಿರುವ ಮೊಬೈಲ್ ಫೋನ್‌ಗಳಿಂದ ಕೇಳುತ್ತಾರೆ. ಅವರ ತುಟಿಗಳು ಕುರಾನ್ ಧ್ವನಿಯೊಂದಿಗೆ ಚಲಿಸುತ್ತವೆ. ವಿಶ್ವಾಸಿಗಳಿಗೆ ಸಂತೋಷದ ಸುದ್ದಿ ಹೇಳಿದಾಗ ಅವರ ಮುಖದಲ್ಲಿ ಮುಗುಳ್ನಗು ಬೀರುತ್ತದೆ. ಜೀವನದ ಅರ್ಥ ಸೂಸುವ ಸೂಕ್ತಗಳು ಬರುವಾಗ ಆಲೋಚನೆಗಳು ದಟ್ಟವಾಗುತ್ತದೆ. ಸೂರತ್ ಯೂಸುಫ್‌ನ ಸೂಕ್ತಗಳು ಈಜಿಪ್ಟಿನವರಿಗೆ ಅತ್ಯಂತ ಪ್ರಿಯವಾದುದು. ಯೂಸುಫ್ ಸೂರತ್ ಪ್ಲೇ ಆದರೆ ಅವರ ಮುಖಗಳು ಹೆಮ್ಮೆಯಿಂದ ಅರಳುತ್ತವೆ.

ರಂಜಾನ್ ಸಮೀಪಿಸುತ್ತಿದ್ದಂತೆ ಈಜಿಪ್ಟಿನವರಿಗೆ ಕುರ್ಆನ್ ಮೇಲಿನ ಪ್ರೀತಿ ಹೆಚ್ಚಾದದ್ದು ಕಂಡುಬಂತು. ಬಸ್ ನಿಲ್ದಾಣದಲ್ಲಿ ನಾವು ವಾಹನಕ್ಕಾಗಿ ಕಾಯುತ್ತಿರುವಾಗ ಪಕ್ಕದಲ್ಲಿದ್ದ ಯುವಕ ತನ್ನ ಮೊಬೈಲ್ ತೆರೆದು ಕುರ್ಆನ್ ಪಾರಾಯಣ ಮಾಡುತ್ತಿದ್ದ. ಅಮೆರಿಕಾದ ವಿಶ್ವವಿದ್ಯಾನಿಲಯದಲ್ಲಿ ಕೋರ್ಸ್‌ಗೆ ಪಾವತಿಸಲು ಬ್ಯಾಂಕ್‌ಗೆ ಹೋಗಿ ಅದರ ರಸೀದಿಯನ್ನು ಪಡೆಯಲು ಹೊರಗಿನ ಸಂದರ್ಶಕರ ಸೀಟಲ್ಲಿ ಹದಿನೈದು ನಿಮಿಷ ಕಾಯಬೇಕಾಯಿತು. ಪಕ್ಕದಲ್ಲಿದ್ದ ಇಪ್ಪತ್ತರ ಹರೆಯದವಳಂತೆಯಿದ್ದ ಹುಡುಗಿ ಮೊಬೈಲ್ ತೆರೆದು ಕುರ್ಆನ್ ನಲ್ಲಿ ಮಗ್ನಳಾಗಿ ಉಳಿದೆಲ್ಲವನ್ನೂ ಮರೆತುಬಿಟ್ಟಿದ್ದಾಳೆ. ಖುರ್ಆನ್ ಈಜಿಪ್ಟಿನವರಿಗೆ ಎಲ್ಲಾ ದುಃಖಗಳಿಗೆ ಆಶ್ವಾಸವನ್ನು ತುಂಬುತ್ತದೆ.

ಈಜಿಪ್ಟಿನ ಭೂಶಾಸ್ತ್ರಪರವಾದ ನೆಲೆಯು, ಭಾರೀ ಸಂಘರ್ಷದ ಈ ಆಧುನಿಕ ಕಾಲದಲ್ಲಿ ಬಹಳ ಮುಖ್ಯವಾದ ಭಾಗದಲ್ಲಾಗಿದೆ. ನಾಲ್ಕು ಭಾಗಗಳಲ್ಲಿಯೂ ಅಸಂತುಷ್ಟಿಯ ಸುದ್ದಿಗಳಾಗಿವೆ. ಪಶ್ಚಿಮಕ್ಕೆ ಲಿಬಿಯಾ, ಪೂರ್ವಕ್ಕೆ ಪ್ಯಾಲೆಸ್ತೀನ್ ಮತ್ತು ದಕ್ಷಿಣಕ್ಕೆ ಸುಡಾನ್. ಅನೇಕ ಆರ್ಥಿಕ ಸವಾಲುಗಳ ಹೊರತಾಗಿಯೂ, ಈಜಿಪ್ಟಿನವರು ಇನ್ನೂ ಅತ್ಯಂತ ಶಾಂತಿಯುತ ಜೀವನವನ್ನು ನಡೆಸುತ್ತಿದ್ದಾರೆ. ಪವಿತ್ರ ಕುರ್ಆನಿನ ಪ್ರಸಿದ್ಧ ಶ್ಲೋಕ, ‘ನಾನು ಇಲ್ಲಿಗೆ ಪ್ರಯಾಣಿಸಿದಾಗ, ನನ್ನ ಹೃದಯವು ಸಂತೋಷದಿಂದ ತುಂಬಿತ್ತು.’ ‘ಉದುಖುಲೂ ಮಿಸ್ರ ಇನ್ಶಾಅಲ್ಲಾಹು ಆಮಿನೀನ್’ – ನೀವು ಸುರಕ್ಷಿತವಾಗಿ ಈಜಿಪ್ಟಿಗೆ ಪ್ರವೇಶಿಸಿರಿ. ಆ ಸುರಕ್ಷತೆಯನ್ನು ಈ ನೆಲದ ಎಲ್ಲೆಡೆ ಅನುಭವಿಸಬಹುದು. ಅನೇಕ ಗೋಡೆಗಳ ಮೇಲೆ ಈ ಶ್ಲೋಕವನ್ನು ಕೆತ್ತಿರುವುದನ್ನು ನೋಡಿದೆ. ಬಂದವರಿಗೆಲ್ಲ ಇಂತಹ ಭದ್ರತೆ ಕೊಡಲು ಇಲ್ಲಿನ ಸರಕಾರವೂ ಗಮನ ಹರಿಸುತ್ತಿದೆ ಅಂತ ತೋಚಿತು.

ಶಅಬಾನ್ ತಿಂಗಳ ಎರಡನೇ ವಾರದಲ್ಲಾಗಿದೆ ನಾನು ಈಜಿಪ್ಟ್ ತಲುಪುವುದು. ಎರಡನೆಯ ದಿನ, ವೀಸಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಬ್ಬಾಸಿಯಾಗೆ ಹೋಗಬೇಕಾಗಿ ಬಂತು.
ಅದು ಪೂರ್ಣಗೊಳಿಸಿ, ನಾನು ಕೈರೋ ಡೌನ್‌ಟೌನ್‌ಗೆ ಇರುವ ರಸ್ತೆಯಲ್ಲಿ ನಡೆದೆ. ಪಾನಿಸ್ ದೀಪದ ಅಂಗಡಿಗಳ ಸಾಲು ಸಾಲುಗಳು ಕಾಣುತ್ತಿದ್ದವು. ಆ ಕ್ಷಣ ಹನ್ನೆರಡು ವರ್ಷಗಳ ಹಿಂದೆ ರಿಸಾಲ ವಾರಪತ್ರಿಕೆಯಲ್ಲಿ ಬರೆದ ರಮಝಾನ್ ಲೇಖನದ ಬಗ್ಗೆ ನೆನಪಿಸಿಕೊಂಡೆ. ಈಜಿಪ್ಟಿನ ಸಂಶೋಧಕ ನಿರ್ವಾಣ ಸಾದ್ ಅವರ ಕೈರೋದಲ್ಲಿ ರಂಜಾನ್ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಸಂಶೋಧನಾ ಪುಸ್ತಕವನ್ನು ಓದಿದ ಅನುಭವಗಳ ಆಧಾರಿತವಾಗಿತ್ತು ಆ ಲೇಖನ. ಅದರಲ್ಲಿ ಮುಖ್ಯವಾಗಿ ಉಲ್ಲೇಖಿಸಿದ್ದು; ಪಾನೀಸ್ ದೀಪಗಳನ್ನು ಹೊತ್ತಿಸಿ ಮನೆ ಬೀದಿ ಮಸೀದಿಗಳನ್ನು ಅಲಂಕಾರಗೊಳಿಸುವ ಈಜಿಪ್ತಿಯನ್ನರ ಕುರಿತಾಗಿತ್ತು. ಪಾನೀಸ್ ದೀಪಗಳ ವೈವಿಧ್ಯತೆಯನ್ನು ಕಂಡು ಆಶ್ಚರ್ಯಚಕಿತನಾದೆ. ಪ್ರತಿಯೊಂದು ಅಂಗಡಿಗಳು ಸಾವಿರ ಚದರ ಅಡಿ ಮತ್ತು ಅದಕ್ಕಿಂತಲೂ ಹೆಚ್ಚಿನವುಗಳನ್ನು ಕಾಣಬಹುದು. ಇವೆಲ್ಲವುಗಳಲ್ಲಿ ವಿವಿಧ ಬಣ್ಣ ಮತ್ತು ಆಕಾರದ ಸಣ್ಣ ಮತ್ತು ದೊಡ್ಡ ಪ್ಯಾನಿಸ್ ದೀಪಗಳನ್ನು ಮಾರಾಟಕ್ಕೆ ಇಡಲಾಗಿದೆ. ಈಜಿಪ್ಟಿನವರು ಬಹಳ ಕುತೂಹಲದೊಂದಿಗೆ ಅಂಗಡಿಗಳನ್ನು ಪ್ರವೇಶಿಸುತ್ತಾರೆ. ತುಂಬಾ ಹೊತ್ತು ಪಾನಿಸ್ ದೀಪಗಳ ಚಂದ ಮತ್ತು ಮಹಿಮೆಯನ್ನು ನೋಡುತ್ತಾರೆ. ಬಹಳ ಇಷ್ಟವಾದ ಒಂದು ಅಥವಾ ಎರಡು ದೀಪಗಳನ್ನು ಮನೆಯ ಮುಂದೆ ಅಥವಾ ಸ್ವಾಗತ ರೂಮಿನಲ್ಲಿ ಇಡಲು ಬೇಕಾಗಿ ಖರೀದಿಸುತ್ತಾರೆ. ಇಪ್ಪತ್ತೋ ಅಥವಾ ಮೂವತ್ತು ರೂಪಗಳಲ್ಲಿ ಸಣ್ಣ ಕಂದಮ್ಮಗಳ ಕೈಗಳಲ್ಲಿಯೂ ಹೊಂದಿಕೊಳ್ಳುವಂತಹ ಪಾನೀಸ್ ಗಳು ಇವೆ. ಹತ್ತು ಈಜಿಪ್ಟ್ ಪೌಂಡ್‌ಗಳಿಂದ (ಭಾರತೀಯ ರೂಪಾಯಿ ಹದಿನೆಂಟು) ಸಣ್ಣ ಮಕ್ಕಳಿಗಿರುವುದನ್ನು ಖರೀದಿಸಬಹುದು. ಈಜಿಪ್ಟಿನವರು ಎಲ್ಲಿಗೆ ಹೋಗಲಿ, ಕುಟುಂಬವು ಅವರೊಂದಿಗೆ ಇರುತ್ತದೆ. ವಿಶೇಷವಾಗಿ ಶಾಪಿಂಗ್‌ಗೆ ಹೋಗುವಾಗ ಅದನ್ನು ಕಾಣಬಹುದು. ಸಣ್ಣ ಮಕ್ಕಳಿಗಿರುವ ಪಾನಿಸ್ ಗಳ ಭಾಗದಲ್ಲಿಯೂ ತುಂಬಾ ಜನಜಂಗುಳಿಗಳಿರುತ್ತವೆ. ಮಕ್ಕಳ ಇಷ್ಟಾನುಸಾರ ಪೋಷಕರು ಒಂದೋ, ಎರಡೋ ಪಾನಿಸ್ ಗಳನ್ನು ಖರೀದಿಸಿ ಕೊಡುತ್ತಾರೆ. ಸಣ್ಣ ಬ್ಯಾಟರಿ ಚಾಲಿತ ಎಲ್.ಇಡಿ ದೀಪಗಳನ್ನು ಈ ಸಣ್ಣ ಪಾನೀಸ್ ಗಳು ಹೊಂದಿರುತ್ತವೆ. ಅವುಗಳು ಉರಿಯುವಾಗ ಕಂದಮ್ಮಗಳ ಮುಖ ಅರಳುವುದನ್ನು ಕಾಣಬಹುದು.

ಸಣ್ಣ ವಾದ್ಯಗಳನ್ನು ಕೂಡ ಮಕ್ಕಳಿಗಾಗಿ ಮಾಡಲಾಗಿದೆ. ಈ ಆಟಿಕೆ ಸಾಮಾನು ರಂಝಾನ್ ಸಿದ್ಧತೆಗೆ ಬಹುಮುಖ್ಯ ಪಾತ್ರವಾಗಲು ಒಂದು ಕಾರಣವಿದೆ. ಕೈರೋದ ಹಲವು ಪ್ರದೇಶಗಳಲ್ಲಿ ಸಹರಿಯ ಸಮಯವನ್ನು ತಿಳಿಸಿಕೊಡಲು, ಚರ್ಮದಿಂದ ತಯಾರಿಸಿದ, ದೊಡ್ಡ ದಫ್ ತರ ಇರುವ ವಸ್ತುಗಳಿಗೆ ಬಾರಿಸುತ್ತಾ, ಅರಬಿ ಹಾಡು ಹಾಡಿ,‌ ಯುವಕರು ಪ್ರತಿಯೊಂದು ಮಸೀದಿಗೆ ತೆರಳಿ ಜನರನ್ನು ಎಬ್ಬಿಸುವ ಪರಿಪಾಠವಿದೆ. ಶತಮಾನದಿಂದಲೂ ಇದು ಚಾಲ್ತಿಯಲ್ಲಿದೆ. ನಜೀಬ್ ಮಹ್ಫೂಝ್ ಹೇಳಿದ ಹಾಗೆ‌ ಕೈರೋ ನಗರದ ಜನರು ರಾತ್ರಿ ಹೊತ್ತು ನಿದ್ರಿಸುವುದು ಕಡಿಮೆ. ಆದರೂ‌ ಉಪವಾಸಕ್ಕೆ ಬೇಕಾಗಿ ಅವರನ್ನು ಎಬ್ಬಿಸುವ ಈ ವಸ್ತುಗಳ ಮೇಲೆ ಅವರಿಗೆ ಒಂಥರಾ ಇಷ್ಟ. ಈ ಆಚರಣೆಗೆ ಒಟ್ಟೋಮನ್ ಕಾಲದವರೆಗಿನ ಹಳೆತನವಿದೆ. ಅವತ್ತು ಸಮಯ ನಿಗದಿಪಡಿಸಿ‌, ಮಲಗಿ ಎದ್ದೇಳಲು ಉಪಕರಣಗಳು ವ್ಯಾಪಕವಾಗಿರಲಿಲ್ಲ. ಆದರೆ ಈಗ ಎಲ್ಲರಿಗೂ ಅಲಾರಾಂ ಇಡಲು ಉಪಕರಣಗಳು ಇದ್ದು ಕೂಡ ರಂಝಾನಿನ ಪರಂಪರಾಗತವಾಗಿ ಆಚರಿಸಿಕೊಂಡು ಬಂದಿರುವ ನೆನಪುಗಳನ್ನು ಮಿಸ್ರಿಗಳು‌ ಕೈಬಿಟ್ಟಿಲ್ಲ. ಅವರಿಗೆ ಸಣ್ಣ ಹಾಗೂ ದೊಡ್ಡ ಮಟ್ಟಿನ ಸಹಾಯವನ್ನು ಮಾಡುವ ಮೂಲಕ ಆ ದಿನವನ್ನು ಆರಂಭಿಸಲು ಹಲವರು ಶ್ರಮಿಸುತ್ತಾರೆ.

ಈಜಿಪ್ಟಿಯನ್ನರಿಗೆ ನಗರದ ಮಧ್ಯಭಾಗದಲ್ಲಿ ಪಿರಂಗಿ ಮುಖಾಂತರ ಆಕಾಶಕ್ಕೆ ಬೆಂಕಿ ಹಾರಿಸಿ, ಅದರ ಶಬ್ದ ಹಾಗು ಬೆಳಕನ್ನು ತೋರಿಸುತ್ತಾ ರೋಜಾ ಆಯಿತೆಂದು ತಿಳಿಸಿಕೊಡುವ ರೂಢಿಯಿದೆ. ಸರ್ಕಾರಿ ಉದ್ಯೋಗಿಗಳ ಮೇಲುಸ್ತುವಾರಿಯಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಅದನ್ನು ನೋಡಲು, ಫೋಟೋ ಶೂಟ್ ಮಾಡಲು, ಮಾಧ್ಯಮದಲ್ಲಿ ಪ್ರಚಾರ ಮಾಡಲು ಜನ‌ ಬಂದು ಸೇರುವುದಿದೆ. ಶತಮಾನಗಳಿಂದ ಚಾಲ್ತಿಯಲ್ಲಿರುವ ಈ ಕ್ರಮ ಮನಮೋಹಕವೆಂದೂ, ಅದನ್ನು ಆಚರಿಸುವುದು‌ ಸೌಂದರ್ಯದಾಯಕವೆಂದೂ‌ ಈಜಿಪ್ಟ್ ಜನರು ನಂಬುತ್ತಾರೆ. ಮುಸ್ಲಿಂ ಬ್ರದರ್ ಹುಡ್’ಗೆ ಸಮರ್ಥ ನಿಯಂತ್ರಣ ಸರ್ಕಾರದ ಭಾಗದಿಂದ ಇರುವುದರಿಂದ, ಈ ಊರನ್ನು ಇಷ್ಟಪಟ್ಟು ಕೆಲವು ದಿನಗಳು ಇಲ್ಲಿ ಕಲಿಯಲೂ, ವಾಸಿಸಲೂ ತಲುಸಿದ ನಮಗೆಲ್ಲರಿಗೂ ಸುಖ ನೀಡುತ್ತದೆ.

ರಂಝಾನ್ ತಿಂಗಳ ಮೊದಲ ದಿನ ಕೈರೋ ನಗರದ ಮಧ್ಯೆ ನಾನು ನಡೆಯುತ್ತಿದ್ದೆ. ಚರಿತ್ರೆ
ಯೊಂದಿಗಿನ‌ ಹೆಜ್ಜೆಯಾಗಿತ್ತದು. ಹಳೆಯ ಕಟ್ಟಡಗಳನ್ನೆಲ್ಲಾ ಹಾಗೆಯೇ ಇಡಲಾಗಿದೆ. ಪುಣ್ಯ ತಿಂಗಳನ್ನು ಸ್ವಾಗತಿಸಲು ಸಜ್ಜಾಗಿರುವ ಮಿಸ್ರಿಗಳು‌ ಎಲ್ಲೆಡೆ ಇದ್ದಾರೆ. ಎಲ್ಲಾ ಅಂಗಡಿಗಳ ಎದುರು ಭಾಗದಲ್ಲಿ ಪಾನಿಸ್ ಬೆಳಕನ್ನು ಉರಿಸಲಾಗಿದೆ. ಗಗನಚುಂಬಿ ಕಟ್ಟಡಗಳ ಬೀದಿಗಳಲ್ಲಿ, ಒಳ ದಾರಿಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಮಕ್ಕಳು ಸಣ್ಣ ಪಟಾಕಿಗಳನ್ನು ಸಿಡಿಸುತ್ತಿದ್ದಾರೆ. ನಮ್ಮೂರಲ್ಲಿ ಕಾಣುವ ದೊಡ್ಡ ಮಟ್ಟಿಗೆ ಶಬ್ದ ಕೋಲಾಹಲ ಸೃಷ್ಟಿಸುವ ಪಟಾಕಿಗಳನ್ನು ಇಲ್ಲಿ ಕಾಣಲು ಅಸಾಧ್ಯ. ಬೀದಿ ಬದಿಯನ್ನು ಶುಚಿಯಾಗಿಸುವ ದೃಶ್ಯ ಕಂಡಾಗ ಮನಸ್ಸು ಶಾಂತವಾಯಿತು. ಹೆಜ್ಜೆ ಮುಗಿಯದಿರಲಿ ಅಂತ‌ ಭಾವಿಸಿಕೊಂಡೆ. ಕಿಲೋಮೀಟರ್ ಕ್ರಮಿಸಿದರೂ‌ ಇದೇ ದೃಶ್ಯ ಕಾಣಬಹುದು.

ಮಸೀದಿಗೆ‌ ಯಾವಾಗ ಬಂದಾಗಲೂ ಖುರ್ಆನ್ ಪಾರಾಯಣ,‌ ಝಿಕ್ರ್ ಮೂಲಕ ಸಮಯ ವ್ಯಯಿಸುವವರನ್ನು ಕಾಣಬಹುದು. ಗ್ರಾಹಕರು ಬರದ ಸಮಯಗಳಲ್ಲಿ ಅಂಗಡಿ ಮಾಲಿಕರು ಖುರ್ಆನ್ ಪಾರಾಯಣದಲ್ಲಿ ತೊಡಗಿಕೊಳ್ಳುವರು. ರಂಝಾನಿನ ಮೊದಲನೇ ದಿನ ಒಂದು ಅನುಭವ ಉಂಟಾಯಿತು. ನನಗೆ ಐದು ಕಿಲೋಮೀಟರ್ ದೂರಕ್ಕೆ ಬಸ್ ಮೂಲಕ ಹೋಗಬೇಕಿತ್ತು. ದಾರಿ ಮಧ್ಯೆ ಮಧ್ಯವಯಸ್ಕರಾದ ಒಬ್ಬರು ಬಸ್ ಹತ್ತಿದರು. ‘ಸ್ವಲ್ಲೂ ಅಲಾ ನಬಿಯ್ಯ್’ ಎಂದು ಆರಂಭಿಸಿ, ಸ್ವಲಾತಿನ‌ ಮಹತ್ವವನ್ನು ಹೇಳುವ ಸೂಕ್ತವನ್ನು, ಹದೀಸನ್ನು ಹೇಳಲು ಆರಂಭಿಸಿದರು. ನಾನು ಕಂಡಾಕ್ಷಣ ಭಿಕ್ಷುಕನೆಂದು ಭಾವಿಸಿಕೊಂಡೆ. ಆದರೆ ಯಾರಿಂದಲೂ ಹಣ ಸ್ವೀಕರಿಸುವುದಾಗಿ ಕಾಣಲಿಲ್ಲ. ಹತ್ತು ನಿಮಿಷಗಳ ಕಾಲ ಬಸ್ನಲ್ಲಿ ಹಿಂದೆ ಮುಂದೆ ಹೆಜ್ಜೆಯಿಟ್ಟು ಸ್ವಲಾತ್ ಹೇಳುವಂತೆ ಪ್ರೇರೇಪಿಸುತ್ತಾ ಬಸ್ ಇಳಿದು ಬೇರೆ ಬಸ್ ಏರುವುದನ್ನು ಕಂಡೆ. ರಂಝಾನ್ ತಿಂಗಳಲ್ಲಿ ಆ ವ್ಯಕ್ತಿ ಮಾಡುವ ವ್ಯತಿರಿಕ್ತವಾದ ಆ ಪುಣ್ಯಗೆಲಸವನ್ನು ನೆನಪಿಸುತ್ತಾ ಅದರಲ್ಲೇ ಮಗ್ನನಾದೆ.

ಇಫ್ತಾರ್ ವೇಳೆ ಅಂಗಡಿಗಳು ಜನನಿಬಿಡವಾಗುತ್ತೆ. ಚರಿತ್ರೆ ಪುಟಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಸೀದಿಗಳಲ್ಲಿ ದಿನವೂ ಇಫ್ತಾರ್ ಕೂಟ ಏರ್ಪಡಿಸಲಾಗಿರುತ್ತೆ.‌ ಅದಲ್ಲದೆ ರಸ್ತೆ ಬದಿಗಳಲ್ಲಿ ನಲ್ವತ್ತರಿಂದ ಐವತ್ತು ಜನರಿಗಾಗುವಷ್ಟು ಇಫ್ತಾರಿನ ಸೌಕರ್ಯಗಳು ಮಾಡಿಟ್ಟಿದ್ದು ಕಾಣಬಹುದು. ಮಗ್ರಿಬ್ ಅಝಾನ್ ಕರೆಯುವ ಅರ್ಧ ಘಂಟೆ ಮೊದಲೇ ಜನರು ಬಂದು ಇಫ್ತಾರಿಗಾಗಿ ಕಾಯುವ ಸುಂದರ ದೃಶ್ಯ ಸಾಮಾನ್ಯ. ಪುರುಷರಿಗೂ ಮಹಿಳೆಯರಿಗೂ ಪ್ರತ್ಯೇಕ ಸ್ಥಳವನ್ನು ಕಾಣಲು ಸಾಧ್ಯವಾಯಿತು. ಬಸ್ ಮೂಲಕ ಸಂಚರಿಸುವ ಜನರಿಗೆ ಖರ್ಜೂರ, ನೀರು, ಆಹಾರಗಳನ್ನು ಪ್ರತ್ಯೇಕ ಕವರ್ ಮೂಲಕ ನೀಡುತ್ತಾರೆ. ಹೀಗೆ ಈಜಿಪ್ಟಿನಲ್ಲಿ ಪರಸ್ಪರ ಸ್ನೇಹ ಕೊಂಡುಕೊಳ್ಳುವಿಕೆಯ, ಸ್ವದಖಾ ನೀಡಿ ಪುಣ್ಯ ಕಟ್ಟಿಕೊಳ್ಳುವ ದೃಶ್ಯಗಳು ಯಥೇಚ್ಛವಾಗಿ ನೋಡಬಹುದು.

ತರಾವೀಹ್ ಬಹಳ ಸಂತೋಷದಾಯಕ ಕರ್ಮ. ಮಸೀದಿಗಳಲ್ಲಿ ಕುರ್ಆನ್ ಸುಶ್ರಾವ್ಯವಾಗಿ ಪಾರಾಯಣ ಮಾಡುವ ಖಾರಿಉಗಳಿರುತ್ತಾರೆ. ಸಾಮಾನ್ಯವಾಗಿ ಸೂರಾಗಳು ಧೀರ್ಘವಾಗುತ್ತದೆ. ಆದರೆ ಈಜಿಪ್ಟಿನವರು ತಮ್ಮ ಆರಾಧನೆಯಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ ಅವರು ಆ ಮಧುರವಾದ ಧ್ವನಿಯಲ್ಲಿ ಮಗ್ನರಾಗಿ ಎಷ್ಟು ಕೇಳಿದರೂ ಅದು ಕೊನೆಗೊಳ್ಳದಿರಲಿ ಎಂದು ಬಯಸುತ್ತಾರೆ. ಅಝ್ಹರ್ ಮಸೀದಿ ಮತ್ತು ಹಸನ್ ಮಸೀದಿಯಲ್ಲಿ ಎಲ್ಲಾ ನಮಾಜುಗಳಿಗೆ ಹೆಚ್ಚಿನ ಜನರು ಸೇರುತ್ತಾರೆ. ಮೊದಲ ತರಾವೀಹ್‌ಗೆ, ಈಜಿಪ್ಟ್‌ನ ಅಝ್ಹರ್ ನಲ್ಲಿ ಪ್ರಸಿದ್ಧ ಕುರ್ಆನ್ ಪಾರಾಯಣ ಮಾಡುವ ಶೇಖ್ ನಆನಾಯಿನ್ ಅವರ ಪಾರಾಯಣವಿತ್ತು.

ಈಜಿಪ್ಟಿನವರು ಆರೋಗ್ಯಕರ ಆಹಾರವನ್ನು ತಿನ್ನುವವರು. ರಂಜಾನಿನಲ್ಲೂ ಆ ಹವ್ಯಾಸಕ್ಕೆ ಬದಲಾವಣೆ ಇಲ್ಲ. ಐಶ್ ರೊಟ್ಟಿ ಮತ್ತು ಅಲಸಂಡೆ ಸಾರು ಮಾರಾಟ ಮಾಡುವ ಅಂಗಡಿಗಳು ತುಂಬಾ ಕಾರ್ಯನಿರತವಾಗಿವೆ. ಅವುಗಳನ್ನು ತಿಂದರೆ ಹೊಟ್ಟೆ ತುಂಬುತ್ತದೆ. ಸ್ವಲ್ಪವೂ ಭಾರ ಅನಿಸುವುದಿಲ್ಲ. ಕುನಾಫಾದಂತಹ ರಂಜಾನ್ ವಿಶೇಷ ಸಿಹಿತಿಂಡಿಗಳು ಬೀದಿಗಳಲ್ಲಿ ಹೇರಳವಾಗಿ ಲಭ್ಯವಿವೆ. ಈಜಿಪ್ಟ್‌ನಲ್ಲಿ ರಂಝಾನನ್ನು ಒಮ್ಮೆಯಾದರೂ ಅನುಭವಿಸಲೇಬೇಕು. ಹಾಗಾದರೆ ಕುರ್ಆನನ್ನು ಅನುಭವಿಸಲು ಕೂಡ ಸಾಧ್ಯವಾಗುತ್ತದೆ.

ಮೂಲ : ಎಂ. ಲುಖ್ಮಾನ್
ಅನುವಾದ : ಸಲೀಂ ಇರುವಂಬಳ್ಳ

ಅರ್ವಿ : ಅರಬ್ -ತಮಿಳರ ಅಳಿದು ಹೋದ ಭಾಷೆ

2008 ಇಸವಿಯ ಬೇಸಿಗೆ ಕಾಲದ ಸಂಜೆ ಹೊತ್ತು, ದಕ್ಷಿಣ ಭಾರತದ ವೆಲ್ಲೂರಿನ ಅರಬಿ ಕಾಲೇಜಿನ ವಿದ್ಯಾರ್ಥಿ,26ರ ಹರೆಯದ ಮೊಹಮ್ಮದ್ ಸುಲ್ತಾನ್ ಬಾಖವಿ ಗಮನಾರ್ಹವಾದ ಸಂಗತಿಯೊಂದನ್ನು ಕಂಡುಹಿಡಿದನು. ಪೂರ್ವಜರಾದ ಆಧ್ಯಾತ್ಮಿಕ ಗುರುಗಳು ಅಂತ್ಯ ವಿಶ್ರಮ ಪಡೆಯುತ್ತಿರುವ ವೆಲ್ಲೂರಿನ ಲಬಾಬೀನ್ ಖಬರ್ಸ್ಥಾನ್ ಮಸೀದಿಯಲ್ಲಿ ನಮಾಜ್ ಮುಗಿಸಿದ ಬಳಿಕ ಆತ, ಒಬ್ಬ ವ್ಯಕ್ತಿ ಮಸೀದಿಯ ಅಂಗಳ ಗುಡಿಸುವುದನ್ನು ಕಂಡನು. ಕಸಗುಡಿಸುವಾತ ಕಸವನ್ನು ಸುಡುವ ಸಲುವಾಗಿ ಮಸೀದಿಯ ಪ್ರವೇಶ ದ್ವಾರದ ಪಕ್ಕದಲ್ಲಿರುವ ಬಾವಿಯ ಬಳಿ ಕಸವನ್ನು ಕೂಡಿಹಾಕಿದ್ದ. ಕಸದ ರಾಶಿಯಲ್ಲಿ ಎಲೆಗಳು, ಕಲ್ಲು ಮಣ್ಣುಗಳು ಮತ್ತು ಕಾಗದದ ತುಣುಕುಗಳೂ ಇದ್ದವು. ನಮಾಜ್ ಮುಗಿಸಿ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಜೋರಾಗಿ ಬೀಸಿದ ಗಾಳಿಗೆ ಪುಸ್ತಕದ ಹಾಳೆಯೊಂದು ಬಾಖವಿಯ ಮುಖದ ಮೇಲೆ ಬಿತ್ತು. ಆ ಪುಟವನ್ನು ತೆಗೆದು ನೋಡಿದ ಬಾಖವಿಗೆ ಅಚ್ಚರಿ ಕಾದಿತ್ತು. ಅಪರೂಪದ ಪುರಾತನ ಹಸ್ತ ಪ್ರತಿಗಳ ಸಂಗ್ರಹಕ್ಕಾಗಿ ಮಸೀದಿಗಳಲ್ಲಿರುವ ಬತ್ತಿಹೋದ ಬಾವಿಗಳನ್ನು ಬಳಸಲಾಗುತ್ತದೆಯೆಂದೂ, ಅವುಗಳ ಪುಟಗಳು ಮಸೀದಿ ಅಂಗಳಗಳಲ್ಲಿ ಬಿದ್ದಿರುತ್ತವೆಯೆಂದೂ ಬಾಖವಿ ತಿಳಿದಿದ್ದನು. ಅಂತೆಯೇ ಈ ಹಾಳೆಯು ಅವುಗಳಲ್ಲಿ ಒಂದಾಗಿರಬಹುದೇ ಎಂದು ಬಾಖವಿ ಆಶ್ಚರ್ಯಪಟ್ಟನು. ಬೆಂಕಿಗಾಹುತಿಯಾಗುತ್ತಿದ್ದ ಕಸದ ರಾಶಿಯನ್ನು ದಿಟ್ಟಿಸಿ ನೋಡಿದಾಗ ಪುಸ್ತಕವೊಂದನ್ನು ಕಂಡು ಕೈಗೆತ್ತಿಕೊಂಡನು. ಅದು ಅಳಿದು ಹೋದ ಅರ್ವಿ ಭಾಷೆಯಲ್ಲಿ ಬರೆದ ಪುಸ್ತಕ ಎಂಬುದನ್ನು ಆತ ಗುರುತಿಸಿದ. ಸದ್ಯ ದಕ್ಷಿಣ ಭಾರತದ ಕೇರಳದಲ್ಲಿರುವ ಜಾಮಿಯಾ ಅನ್ವರಿಯ್ಯಾ ಅರಬಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿರುವ ಬಾಖವಿ 4ನೇ ಹರೆಯದಿಂದಲೇ ಅರ್ವಿ ಭಾಷೆ ಕಲಿತವನು. ಇಂದು ಅರಬಿ ಭಾಷೆ ಬಲ್ಲ ಮುಸ್ಲಿಮರೆಡೆಯಲ್ಲಿಯೇ ಅರ್ವಿ ಭಾಷೆಯ ಪರಿಚಯವಿರುವವರು ಬಹಳ ವಿರಳವೆನ್ನಬಹುದು.

ಮಹ್ಮೂದ್ ಕೂರಿಯಾ

ಮಧ್ಯಕಾಲದಲ್ಲಿ ಯಾತ್ರೆ ಮತ್ತು ವ್ಯಾಪಾರಗಳು ಭಾಷೆಗಳ ಮಿಲನಕ್ಕೆ ಹೇತುವಾದವು. ಪ್ರಸ್ತುತ ಯಾತ್ರೆ ಮತ್ತು ವ್ಯಾಪಾರಗಳಿಂದಾಗಿ ಕ್ರಿ. ಶ. 8ನೇ ಶತಮಾನದಲ್ಲಿ ಅರ್ವಿ ಭಾಷೆಯು ಹುಟ್ಟಿಕೊಂಡಿತು. ಕ್ರಿಸ್ತಶಕ 12ನೇ ಶತಮಾನದಲ್ಲಿ ಮುಸ್ಲಿಂ ಅರಬ್ ವ್ಯಾಪಾರಿಗಳು ಅಧಿಕ ಸಂಖ್ಯೆಯಲ್ಲಿ ವ್ಯಾಪಾರ ನಿಮಿತ್ತ ತಮಿಳುನಾಡಿಗೆ ಭೇಟಿ ನೀಡಿದರು. ಇದರ ಪರಿಣಾಮವಾಗಿ ಅರ್ವಿ ಭಾಷೆಯು ಈ ವೇಳೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ವಿವಿಧ ತೆರನಾದ ವಸ್ತ್ರಗಳು, ಮಿರ್ರಿನಂತಹ ಜವಳಿ ಮತ್ತು ಸುಗಂಧದ ದ್ರವ್ಯಗಳೊಂದಿಗೆ ದಕ್ಷಿಣ ಭಾರತ ತಲುಪಿದ ಅರಬ್ ವ್ಯಾಪಾರಿಗಳು, ಭಾಷಾ ವೈವಿಧ್ಯತೆಯನ್ನು ಮರೆತು, ಧಾರ್ಮಿಕ ನಂಬಿಕೆಯಲ್ಲಿರುವ ಸಮಾನತೆಯನ್ನು ಪರಿಗಣಿಸಿ ಸ್ಥಳೀಯರಾದ ತಮಿಳರೊಂದಿಗೆ ಸಂಬಂಧ ಬೆಸೆಯಲು ಉತ್ಸುಕರಾಗಿದ್ದರು.ವ್ಯಾಪಾರಿಗಳ ಅರಬಿ ಮತ್ತು ಸ್ಥಳೀಯರ ತಮಿಳು ಭಾಷೆಗಳು ಬೆರೆತು ಅರಬು ತಮಿಳ್ ಅಥವಾ ಅರ್ವಿ ಭಾಷೆಯು ರೂಪುಗೊಂಡಿತು. ಅರಬಿಕ್ ವರ್ಣಮಾಲೆಯ ಅಕ್ಷರಗಳನ್ನು ಎರವಲು ಪಡೆದ ಅರ್ವಿ ಭಾಷೆಯ ಪದಗಳ ಅರ್ಥ ಸ್ಥಳೀಯ ತಮಿಳು ಭಾಷೆಯದ್ದೇ ಆಗಿದೆ. ” ಅರಬಿ ಲಿಪಿಯನ್ನು ಎರವಲು ಪಡೆದ ಹಲವಾರು ಭಾಷೆಗಳಲ್ಲಿ ಒಂದಾಗಿದೆ ಅರಬಿಕ್ ತಮಿಳು. ಅರಬಿಗಳು ಮತ್ತು ಪರ್ಷಿಯನ್ನರು, ಯುರೋಪಿನವರಿಗಿಂತಲೂ ಮುಂಚಿತವಾಗಿ ಹಿಂದೂ ಮಹಾ ಸಾಗರ ಮಾರ್ಗವಾಗಿ ಭಾರತೀಯರೊಂದಿಗೆ ವ್ಯಾಪಾರದಲ್ಲಿ ಸಂಪರ್ಕ ಬೆಳೆಸಿದ್ದರು. ಈ ಯಾತ್ರೆ ಮತ್ತು ವ್ಯಾಪಾರಗಳು ಇಂತಹ ಹಲವಾರು ಭಾಷೆಗಳ ಉಗಮಕ್ಕೆ ಕಾರಣವಾಯಿತು.” ಎಂದು ‘1750ರ ಪೂರ್ವದ ಹಿಂದೂ ಮಹಾಸಾಗರದ ಇತಿಹಾಸ ‘ ಎಂಬ ವಿಷಯದಲ್ಲಿ ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮಹ್ಮೂದ್ ಕೂರಿಯಾ ಅಭಿಪ್ರಾಯಪಡುತ್ತಾರೆ.

ತಮಿಳು ಭಾಷೆಯಲ್ಲಿ ಮಾತನಾಡುವ ಪಕ್ಕದ ಶ್ರೀಲಂಕಾಗೂ ಅರ್ವಿ ಭಾಷೆ ವ್ಯಾಪಿಸಿತು. 18ನೇ ಶತಮಾನದಲ್ಲಿ ವಸಾಹತುಶಾಹಿಗಳ ಆಗಮನ ಮತ್ತು ಅರ್ವಿ ಭಾಷೆ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯವಾದ ಇಳಿಕೆಯುಂಟಾದ ಕಾರಣದಿಂದ ಅಳಿವಿನಂಚಿನಲ್ಲಿದ್ದ ಅರ್ವಿ ಭಾಷೆಯು, ಅಚ್ಚರಿಯ ಬೆಳವಣಿಗೆಯನ್ನು ಕಂಡು ಪುನರುಜ್ಜೀವನಗೊಂಡಿದೆ. ಈ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅರ್ವಿ ಭಾಷೆಯ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳ ಮತ್ತು ಕರಾವಳಿ ಪ್ರದೇಶದ ಮುಸ್ಲಿಂ ಮಹಿಳೆಯರ ಕೊಡುಗೆ ಅಪಾರವಾದುದು. ಇಲ್ಲಿನ ಮುಸ್ಲಿಂ ಮಹಿಳೆಯರು ಅರ್ವಿ ಭಾಷೆಯ ಹಾಡುಗಳನ್ನು ಹಾಡುವುದರಲ್ಲಿ ಹೆಮ್ಮೆಪಟ್ಟುಕೊಳ್ಳುವವರಾಗಿದ್ದಾರೆ.” ಬಹುತೇಕರಿಗೆ ಈ ಭಾಷೆಯ ಮಹತ್ವ ತಿಳಿದಿಲ್ಲ. ತನ್ನ ತಾಯ್ನಾಡಾದ ಕಾಯಲ್ಪಟ್ಟಣ ನಿವಾಸಿಗಳು ತಮ್ಮ ಬೇರುಗಳನ್ನು ಕೂಡಿಸುವ ಪವಿತ್ರ ಕೊಂಡಿಯಾಗಿ ಅರ್ವಿ ಭಾಷೆಯನ್ನು ಪರಿಗಣಿಸುತ್ತಾರೆ.” ಎಂದು ಬಾಖವಿ ತಿಳಿಸಿದನು.

ಅರ್ವಿ ಭಾಷೆಯ ಹುಟ್ಟು ಮತ್ತು ಬೆಳವಣಿಗೆಗಳ ಬಗ್ಗೆ ಹೆಚ್ಚಾಗಿ ತಿಳಿಯಲು ದಕ್ಷಿಣ ಭಾರತದಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಕರಾವಳಿ ಪ್ರದೇಶಗಳಿಗೆ ತೆರಳಬೇಕಾಗುತ್ತದೆ. ತಮಿಳುನಾಡಿನ ರಾಜಧಾನಿ ಚೆನ್ನೈಯಿಂದ ಸುಮಾರು 530 ಕಿ. ಮೀ ದೂರದ ಕೀಳಕ್ಕರೆ ಇಂತಹ ಗ್ರಾಮಗಳಲ್ಲೊಂದಾಗಿದೆ. ಬಂಗಾಳಕೊಲ್ಲಿಯ ದಡದಲ್ಲಿರುವ ಕೀಳಕೆರೆಯಲ್ಲಿ 38,000 ದಷ್ಟು ಜನರಿದ್ದಾರೆ. ಕ್ರಿ. ಶ 628ರಲ್ಲಿ ನಿರ್ಮಿಸಲಾದ ಪುರಾತನ ಜುಮಾಪಳ್ಳಿ ಮಸೀದಿಯೂ ಇಲ್ಲಿದೆ. ಈ ಮಸೀದಿಯನ್ನು ನಿರ್ಮಿಸಿದವರು ಯಮನ್ ಮೂಲದ ಅರಬ್ ವ್ಯಾಪಾರಿಗಳೆಂದು ಹೇಳಲಾಗುತ್ತದೆ. ಮಸೀದಿಯ ಹಸಿರು ಮಿನಾರಗಳ ಮತ್ತು ಅಲಂಕೃತ ಕಂಬಗಳ ಪಕ್ಕದಲ್ಲಿ ಇಬ್ಬರು ಸೂಫಿ ಸಂತರ ಗೋರಿಗಳೂ ಇವೆ. ಮಸೀದಿಯ ಕಂಬಗಳಲ್ಲಿ ಅರಬಿ ಹಾಗೂ ತಮಿಳು ಭಾಷೆಗಳಲ್ಲಿರುವ ಕೆತ್ತನೆಗಳನ್ನು ಕಾಣಬಹುದು. ಕೆಲ ಇತಿಹಾಸ ತಜ್ಞರ ಪ್ರಕಾರ, ನಾವಿಕರ ಮತ್ತು ಸ್ಥಳೀಯ ತಮಿಳರೆಡೆಯಲ್ಲಿನ ವೈವಾಹಿಕ ಸಂಬಂಧಗಳಿಂದಾಗಿ ಅರ್ವಿ ಭಾಷೆ 17 ನೇ ಶತಮಾನದ ಹೊತ್ತಿಗೆ ಉತ್ತುಂಗತೆಯನ್ನು ತಲುಪಿತು. ಈ ವೈವಾಹಿಕ ಸಂಬಂಧಗಳು ವ್ಯಾಪಾರ ವಹಿವಾಟುಗಳಿಗೆ ಸಹಕಾರಿಯಾದವು. ಕ್ಲಿಷ್ಟಕರವಾದ ತಮಿಳು ಭಾಷೆಯನ್ನು ತಮ್ಮ ಅರಬಿ ಭಾಷೆಯ ಲಿಪಿಯನ್ನುಪಯೋಗಿಸಿ ಸುಲಭವಾಗಿ ಕಲಿಯಲು ಅರಬಿಗಳಿಗೆ ಸಾಧ್ಯವಾಯಿತು.
” ತಮಿಳು ಭಾಷೆಯಲ್ಲಿ 247 ಅಕ್ಷರಗಳಿದ್ದವು. ಆದರೆ ಅರ್ವಿ ಭಾಷೆಯ ಅಕ್ಷರಗಳ ಸಂಖ್ಯೆ ಕೇವಲ 40 ಮಾತ್ರ. ಆದ್ದರಿಂದಲೇ ಕಡಲು ಮಾರ್ಗ ವ್ಯಾಪಾರಕ್ಕೆ ಬಂದ ಅರಬಿಗಳಿಗೆ ಇಲ್ಲಿ ಬದುಕು ಕಟ್ಟಿಕೊಳ್ಳುವುದು ಬಹಳ ಸುಲಭವಾಗಿತ್ತು. ಉತ್ತರ ಭಾರತಕ್ಕಿಂತ ಭಿನ್ನವಾಗಿ ಇಲ್ಲಿ ಸಹಿಷ್ಣುತೆಯ ವಾತಾವರಣವಿತ್ತು. ವ್ಯಾಪಾರಗಳು ಆರ್ಥಿಕ ಸಬಲೀಕರಣಕ್ಕೆ ಹೇತುವಾಗಬಹುದೆಂದು ಮನಗಂಡ ಇಲ್ಲಿನ ಜನರು ವ್ಯಾಪಾರಿಗಳನ್ನು ಯಾವುದೇ ಸಂಕೋಚವಿಲ್ಲದೆ ಬರಮಾಡಿಕೊಂಡರು. ಕೆಲವೊಂದು ಮಾಹಿತಿಗಳನ್ನು ಬ್ರಿಟಿಷರಿಂದ ರಹಸ್ಯವಾಗಿಡಲು ಅರ್ವಿ ಭಾಷೆಯನ್ನು ಬಳಸುತ್ತಿದ್ದರು ಎಂಬ ವರದಿಗಳಿವೆ.” ಎಂದು ಚೆನ್ನೈ ಕಾಲೇಜಿನಲ್ಲಿ ಅರ್ವಿ ಭಾಷಾ ಅಧ್ಯಾಪಕರಾದ ಕೆ. ಎಂ.ಎ ಅಹ್ಮದ್ ಝುಬೈರ್ ತಿಳಿಸಿದರು.


ಅರಬಿ ತಮಿಳಿಗೆ ಹೊರತಾಗಿ ನೆರೆ ರಾಜ್ಯ ಕೇರಳದಲ್ಲಿ ಮಲಯಾಳಂ ನೊಂದಿಗೆ ಅರಬಿ ಬೆರತು ಅರಬಿ ಮಲಯಾಳಂ ಅಥವಾ ಮಾಪ್ಪಿಳ ಮಲಯಾಳಂ ಎಂಬ ಉಪಭಾಷೆ ರೂಪುಗೊಂಡಿದೆ. ಭಾರತದ ಇನ್ನಿತರ ಪ್ರಾದೇಶಿಕ ಭಾಷೆಗಳಾದ ಗುಜರಾತಿ, ಬೆಂಗಾಳಿ, ಪಂಜಾಬಿ ಮತ್ತು ಸಿಂಧಿ ಭಾಷೆಗಳಲ್ಲೂ ಅರಬಿ ಲಿಪಿಯ ಈ ಸಮ್ಮಿಶ್ರ ಭಾಷೆಯು ಹುಟ್ಟಿಕೊಂಡಿದೆ. ಪ್ರತಿಯೊಂದು ಭಾಷೆಗಳಿಗೂ ತನ್ನದೇ ಆದ ವೈಶಿಷ್ಟತೆಗಳಿವೆ. ಆದರೆ ಉಳಿದ ಭಾಷೆಗಳಿಗಿಂತ ವಿಭಿನ್ನವಾಗಿ ಅರ್ವಿಯು ಅರಬರ ನಿರ್ಗಮನದ ಬಳಿಕವೂ ಪ್ರಗತಿ ಕಂಡಿತು. ವಿದೇಶಗಳಲ್ಲಿರುವ ತಮಿಳು ಭಾಷಿಕರ ಜನಸಂಖ್ಯೆ ಇದಕ್ಕೆ ಪ್ರಧಾನ ಕಾರಣವೆನ್ನುತ್ತಾರೆ ಝಬೈರ್. ಚರಿತ್ರೆ ದಾಖಲೆಗಳ ಪ್ರಕಾರ, ಅರ್ವಿಯು ಶ್ರೀಲಂಕಾ, ಸುಮಾತ್ರ, ಮಲೇಶಿಯಾ, ಸಿಂಗಾಪುರ ಮತ್ತು ಪೂರ್ವ ಹಾಗೂ ದಕ್ಷಿಣ ಆಫ್ರಿಕಾಗಳಿಗೂ ವ್ಯಾಪಿಸಿದೆ.

ಸಾಹಿತ್ಯ ಮತ್ತು ಮೌಖಿಕ ಸಂಪ್ರದಾಯದ ಶ್ರೀಮಂತಿಕೆಯ ಕಾರಣದಿಂದ ಅರಬಿಕ್ ತಮಿಳು ಮತ್ತು ಅರಬಿಕ್ ಮಲೆಯಾಳಂ ಬಹಳ ಜನಪ್ರಿಯವಾದವು. ಈತನಕ ಭಾರತ ಮತ್ತು ಶ್ರೀಲಂಕಾಗಳಿಂದ 2000 ದಷ್ಟು ಅರಬಿಕ್ ತಮಿಳು ಪುಸ್ತಕಗಳನ್ನು ಪತ್ತೆಹಚ್ಚಲಾಗಿದೆ. ಕೇರಳದ ಸಂಶೋಧಕರು ಅರಬಿ ಮಲಯಾಳಂ ಹಸ್ತಪ್ರತಿಗಳ ಸಂರಕ್ಷಣೆಯ ಪಣತೊಟ್ಟು ಈ ದಿಕ್ಕಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ.
ಈ ಪುರಾತನ ಹಸ್ತ ಪ್ರತಿಗಳ ರಕ್ಷಣೆಗೂ ಮುಂಚಿತವಾಗಿ ಅವುಗಳನ್ನು ಹುಡುಕಬೇಕಾದ ಜರೂರತ್ತಿದೆ. ಇದು ಬಹಳ ಶ್ರಮದಾಯಕವಾದ ಕೆಲಸ. ಭಾರತ ಮತ್ತು ಏಷ್ಯಾದ ಇನ್ನಿತರ ದೇಶಗಳಿಂದ ಒಟ್ಟು 300 ಕ್ಕೂ ಅಧಿಕ ಅರ್ವಿ ಹಾಗೂ ಅರಬಿಕ್ ಮಲಯಾಳಂನ ಗ್ರಂಥಗಳು ಬಾಖವಿಯ ಸುಪರ್ದಿಯಲ್ಲಿದೆ. ” ಈ ಗ್ರಂಥಗಳು ನಾನು ಬತ್ತಿ ಹೋದ ಬಾವಿಗಳಿಂದ, ಗೋರಿಗಳ ಪಕ್ಕದಿಂದ ಮತ್ತು ಹಳೆಯ ಜನವಾಸವಿಲ್ಲದ ಮನೆಗಳ ಅಟ್ಟಗಳಿಂದಲೂ ಹುಡುಕಿ ಸಂಗ್ರಹಿಸಿದವುಗಳಾಗಿವೆ. ಇನ್ನು ಖಾಸಗಿ ಒಡೆತನದ ಕೆಲವು ದಾಖಲೆಗಳನ್ನು ಡಿಜಿಟಲೀಕರಿಸಿ ಮಾಪಿಳ ಹೆರಿಟೇಜ್ ಲೈಬ್ರರಿಯ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.” ಎಂದು ಬಾಖವಿ ತಿಳಿಸಿದನು. ವಸಾಹತುಶಾಹಿಗಳ ಆಡಳಿತಕಾಲದಲ್ಲಿ ಕೆಲವೊಂದು ಪ್ರತಿಗಳು ಲಂಡನಿನ ಬ್ರಿಟೀಷ್ ಲೈಬ್ರರಿಯನ್ನು ಸೇರಿಕೊಂಡಿವೆ. ಅರಬಿಕ್ ಮಲಯಾಳಂ ಪರಿಜ್ಞಾನವುಳ್ಳ ಮಹ್ಮೂದ್ ಕೂರಿಯಾ ಕಳೆದ 4 ವರ್ಷಗಳಿಂದ ಈ ಪುಸ್ತಕಗಳನ್ನು ಪಟ್ಟಿ ಮಾಡಲು ಬ್ರಿಟೀಷ್ ಲೈಬ್ರರಿಗೆ ಸಹಾಯ ಮಾಡುತ್ತಿದ್ದಾರೆ. ” ಇತಿಹಾಸ, ಧರ್ಮ, ವೈದ್ಯ ಮತ್ತು ಸಂಸ್ಕೃತಿ ಹೀಗೆ ಹತ್ತು ಹಲವಾರು ವಿಚಾರಗಳನ್ನು ಒಳಗೊಂಡ ಗ್ರಂಥಗಳನ್ನು ಕಂಡು ನಾನು ಚಕಿತನಾದೆನು. ಇವುಗಳ ಪೈಕಿ ಬಹುತೇಕ ಗ್ರಂಥಗಳು ಮಹಿಳೆಯರು ಬರೆದವುಗಳಾಗಿವೆ.” ಎಂದು ಕೂರಿಯಾ ತಿಳಿಸಿದರು. ” ಶಿಶು ಪಾಲನೆ, ಲೈಂಗಿಕತೆ, ಗೃಹ ವಿಚಾರಗಳು, ಆಹಾರ ಪದ್ಧತಿಗಳು ಮತ್ತು ಸಂಸ್ಕೃತಿ ವಿಚಾರಗಳನ್ನು ಚರ್ಚೆ ಮಾಡುವ ಈ ಗ್ರಂಥಗಳು ಇತರ ಮಹಿಳೆಯರಿಗಾಗಿ ಮಹಿಳೆಯರೇ ಬರೆದವುಗಳಾಗಿವೆ. ಈ ಗ್ರಂಥಗಳ ಅಂದಿನ ಸಮಾಜದಲ್ಲಿ ಸ್ತ್ರೀಯರಿಗಿದ್ದ ಸ್ಥಾನಮಾನ, ಗೌರವ ಮತ್ತು ಪ್ರಾಧಾನ್ಯತೆಯನ್ನು ಸೂಚಿಸುತ್ತದೆ.” ಎಂದು ದಕ್ಷಿಣ ಏಷ್ಯಾದ ಧರ್ಮಗಳ ಕುರಿತು ಗ್ಲಾಸ್ಗೋವಿಶ್ವವಿದ್ಯಾಲಯದಲ್ಲಿ ಆಧ್ಯಾಪನ ನಡೆಸುವ ಓಫಿರಾ ಗಾಮ್ಲೆಲ್ ಅಭಿಪ್ರಾಯಪಟ್ಟರು.


ಈ ಉಪಭಾಷೆಗಳು ದಿನನಿತ್ಯ ಬಳಕೆಯಲ್ಲಿ ಇಲ್ಲದಿದ್ದರೂ ಗ್ರಂಥಗಳು ಮತ್ತು ಸಂಗೀತಗಳು ಇವುಗಳನ್ನು ಇಂದಿಗೂ ಜೀವಂತವಾಗಿಟ್ಟಿವೆ. ತಮ್ಮ ಪೂರ್ವಜರ ಇತಿಹಾಸವನ್ನು ಮೆಲುಕು ಹಾಕುತ್ತಾ ಕಾಯಲ್ ಪಟ್ಟಣ ನಿವಾಸಿಗಳು ಅರ್ವಿ ಹಾಗೂ ಅರಬಿ ಮಲಯಾಳಂನಲ್ಲಿ ವಿರಚಿತವಾದ ಲಾವಣಿಗಳನ್ನು ಹಾಡುತ್ತಿದ್ದಾರೆ. ” ಊರಿನ ಮಹಿಳೆಯರು ಒಂದುಗೂಡಿ ಲಾವಣಿ ಹಾಡುವ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ. ಅವುಗಳು ಮಹಿಳೆಯರ ಕ್ಲಬ್ ಗಳನ್ನು ಹೋಲುತ್ತವೆ.” ಎಂದು ಹೇಳುತ್ತಾ ನಸುನಕ್ಕಳು ಖಿಜ್ರ್ ಮಗ್ಫಿರಾ. ” ಪ್ರತಿಯೊಂದು ಮನೆಯಲ್ಲೂ ಅರ್ವಿ ಭಾಷೆಯನ್ನು ಚೆನ್ನಾಗಿ ಬಲ್ಲ ಒಬ್ಬನಾದರೂ ಇರುವನು. ಹಬ್ಬ ಹರಿದಿನಗಳಂದು, ವಿಶೇಷವಾಗಿ ಪ್ರವಾದಿ ಪೈಗಂಬರರ ಜನ್ಮ ದಿನಾಚರಣೆಯನ್ನು ಕೊಂಡಾಡುವ ರಬೀಉಲ್ ಅವ್ವಲ್ ತಿಂಗಳಲ್ಲಿ ಊರವರೆಲ್ಲರೂ ಒಟ್ಟು ಸೇರಿ ಅರ್ವಿ ಭಾಷೆಯ ಹಾಡುಗಳನ್ನು ಹಾಡುವ ವಾಡಿಕೆಯಿದೆ. ಹಾಡುವಾಗ ಅವರು ಭಾವಪರವಶರಾಗುವುದನ್ನು ನೋಡಿದರೆ ಈ ಭಾಷೆಯೊಂದಿಗಿನ ಅವರ ಸಂಬಂಧವನ್ನು ಮನದಟ್ಟು ಮಾಡಿಕೊಳ್ಳಬಹುದು.” ಎನ್ನುತ್ತಾಳೆ ಖಿಜ್ರ್. ಕಾಯಲ್ ಪಟ್ಟಣದ ಡಿಗ್ರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 18 ರ ಹರೆಯದ ಖಿಜ್ರ್ ಮಗ್ಫಿರಾ ಹಿರಿಯವರಿಂದ ಪ್ರೇರಿತಳಾಗಿ ಅರ್ವಿಭಾಷೆ ಕಲಿಕೆಗೆ ಶುರುಹಚ್ಚಿದ್ದಾಳೆ. ತಮಿಳು ಭಾಷೆ ಚೆನ್ನಾಗಿ ಬಲ್ಲ ಆಕೆ, ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ಅರಬಿಯನ್ನು ಕಲಿಯಲು ಪ್ರಾರಂಭಿಸುವುದರಿಂದ ಅರ್ವಿ ಕಲಿಕೆಯು ಸುಲಭ ತುತ್ತಾಗಬಹುದು. ಕಾಯಲ್ ಪಟ್ಟಣದ ಕೆಲವು ಯುವಕರು ಮೊಬೈಲ್ ಗಳಲ್ಲಿ ಬಳಸಬಹುದಾದ ಅರ್ವಿ ಭಾಷೆಯ ಕೀಬೋರ್ಡ್ ತಯಾರಿಸುವ ಶ್ರಮದಲ್ಲಿ ತೊಡಗಿರುವರು.

” ಕಾಯಲ್ಪಟ್ಟಣದಲ್ಲಿ ಹೊಸ ತಲೆಮಾರಿನ ಮಕ್ಕಳನ್ನು ಅರ್ವಿಭಾಷೆಯ ಕಲಿಕೆಯನ್ನು ಪ್ರೋತ್ಸಾಹಿಸಲು ಹಣ ನೀಡುವವರಿದ್ದಾರೆ. ಇದು ಈ ಊರಿನ ಸಂಪ್ರದಾಯ.” ಎನ್ನುತ್ತಾರೆ ಮಗ್ಫಿರಾಳ ಸಂಬಂಧಿ ಖಿಜ್ರ್ ಫಾತಿಮಾ. ಇತ್ತೀಚೆಗೆ ಸುಂದರವಾದ ಕೈಬರಹವಿರುವ ಒಬ್ಬಾಕೆಗೆ ತಾನು 500 ರೂಪಾಯಿ ನೀಡಿದ್ದನ್ನು ಫಾತಿಮಾ ನೆನಪಿಸಿಕೊಂಡಳು. ಈ ಭಾಷೆಯ ಆಧ್ಯಾತ್ಮಿಕ ಮತ್ತು ಸಾಹಿತ್ಯ ಸೌಂದರ್ಯವನ್ನು ನಾವು ಮನಗಾಣಬೇಕಾಗಿದೆ ಎಂದು ಫಾತಿಮಾ ಅಭಿಪ್ರಾಯಪಟ್ಟಳು.

ಇಂಗ್ಲೀಷ್ ಮೂಲ : ಕಮಲಾ ತ್ಯಾಗರಾಜನ್
ಕನ್ನಡಕ್ಕೆ : ಆಶಿಕ್ ಅಲಿ ಕೈಕಂಬ

ಕೃಪೆ : ಬಿಬಿಸಿ

ದಕ್ಷಿಣೇಷ್ಯಾ ಇತಿಹಾಸದ ಒಳಸುಳಿಗಳು: ನೈಲ್‌ ಗ್ರೀನ್‌ ಸಂದರ್ಶನ

ವಿಖ್ಯಾತ ಇತಿಹಾಸಜ್ಞರಾದ ನೈಲ್‌ ಗ್ರೀನ್‌ ಸದ್ಯ ಯುನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ, ಲಾಸ್‌ ಏಂಜಲಿಸ್‌ನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇಸ್ಲಾಮ್‌, ಸೂಫಿಸಂ ಹಾಗೂ ವ್ಯಾಪಾರ ಇವರ ವಿಷಯಗಳಾಗಿದ್ದು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಸೂಫಿಸಂ: ಎ ಗ್ಲೋಬಲ್‌ ಹಿಸ್ಟರಿ, ಬಾಂಬೆ ಇಸ್ಲಾಂ, ಇಂಡಿಯನ್‌ ಸೂಫಿಸಂ: ಸಿನ್ಸ್‌ ಸೆವೆಂಟೀಂತ್‌ ಸೆಂಚುರಿ ಅವರ ಪ್ರಮುಖ ಕೃತಿಗಳು. ಝಿಯಾದ್ ಅಬೂ ರೀಶ್‌ರಿಗೆ ಇವರು ನೀಡಿರುವ ಸಂದರ್ಶನವನ್ನು “ತಿಜೋರಿ” ಓದುಗರಿಗಾಗಿ ಕನ್ನಡಕ್ಕೆ ತಂದಿದ್ದೇವೆ.

ಉ: ದಕ್ಷಿಣೇಷ್ಯಾದ ಮುಸಲ್ಮಾನರ ಮತ್ತು ವಿಶಾಲವಾದ ಪರ್ಶಿಯನ್‌ ಪ್ರಭಾವಿತ ಜಗತ್ತಿನ ಇತಿಹಾಸಜ್ಞನಾಗಿ ನನ್ನನ್ನು ನಾನು ಗುರುತಿಸಲು ಇಷ್ಟಪಡುತ್ತೇನೆ. ಸಾಮಾಜಿಕ ಮತ್ತು ರಾಜಕೀಯ ಇತಿಹಾಸದ ಜತೆಜತೆಗೆ ಧಾರ್ಮಿಕ ಇತಿಹಾಸದಲ್ಲೂ ನನಗೆ ಆಸಕ್ತಿ ಇದೆ. ನನ್ನ ಬಹುತೇಕ ಅಧ್ಯಯನಗಳು ಒಂದು ಇತಿಹಾಸಜ್ಞ ಎಂಬ ನೆಲೆಯಲ್ಲಿ ಆಧುನಿಕ ಪೂರ್ವ ಜಗತ್ತಿನ ಧರ್ಮಗಳೊಂದಿಗೆ ನಾವು ಹೇಗೆ ಅನುಸಂಧಾನ ನಡೆಸುತ್ತಿದ್ದೇವೆ ಎನ್ನುವುದರ ಕುರಿತಾಗಿ ಮೂಡಿ ಬಂದಿದೆ.

ಉ: ಅಧ್ಯಯನದ ಪ್ರಶ್ನೆಗಳನ್ನು ರೂಪಿಸುವಲ್ಲಿ ಮತ್ತು ಇತಿಹಾಸದ ಮೂಲಗಳ ಆಯ್ಕೆಯ ವಿಚಾರದಲ್ಲಿ ಭಾರತೀಯ ರಾಷ್ಟ್ರ-ರಾಜ್ಯ ಕಲ್ಪನೆಗೆ ಸಿಗುತ್ತಿರುವ ಪ್ರಾಬಲ್ಯ ದಕ್ಷಿಣೇಷ್ಯಾ ಇತಿಹಾಸದ ಕ್ಷೇತ್ರ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳಲ್ಲೊಂದು. ಭಾರತೀಯ ರಾಷ್ಟ್ರ-ರಾಜ್ಯ ಸ್ವರೂಪದ ಪ್ರಬಲ ಸಂಕಥನದೊಂದಿಗೆ ತಾಳೆಯಾಗುತ್ತಿಲ್ಲ ಎನ್ನುವ  ಏಕೈಕ ಕಾರಣಕ್ಕೋಸ್ಕರ ಹಲವಾರು ಭಾಷಿಕ ಮತ್ತು ಸಾಮಾಜಿಕ ಗುಂಪುಗಳು ಇಲ್ಲಿ ಮೂಲೆಗುಂಪಾಗುತ್ತಿವೆ. ಸಾಮಾನ್ಯವಾಗಿ, ಮಧ್ಯ ಪ್ರಾಚ್ಯಕ್ಕೆ ಸಂಬಂಧಿಸಿದ ಅಧ್ಯಯನ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನರೊಂದಿಗೆ ನಾನು ಮಾತನಾಡುವುದಿದೆ. ಭಾರತದ ಬಗ್ಗೆ ಅಧ್ಯಯನ ಮಾಡುತ್ತಿರುವ ಹಲವಾರು ವಿದ್ವಾಂಸರು ಇಸ್ಲಾಮಿನ ಬಗ್ಗೆ ಬಹಳ ಸಣ್ಣ ಪ್ರಮಾಣದ ಅಧ್ಯಯನವನ್ನು ಮಾತ್ರವೇ ಮಾಡಿದ್ದು, ಅರೇಬಿಕ್‌ ಮತ್ತು ಪರ್ಶಿಯನ್‌ ಬಗ್ಗೆ ಯಾವುದೇ ಅಧ್ಯಯನ ನಡೆಯುತ್ತಿಲ್ಲ. “ಭಾರತೀಯ ಧರ್ಮಗಳು” ಎಂದು ಕೆಲವರು ಕರೆಯುವ ಪದ ಇಸ್ಲಾಮ್‌ ಮತ್ತು ಮುಸ್ಲಿಮರ ಬಗ್ಗೆ ಚರ್ಚಿಸಲು ಯಾವುದೇ ಅವಕಾಶ ನೀಡುತ್ತಿಲ್ಲ ಎನ್ನುವುದು ಈ ಸಮಸ್ಯೆಯ ಒಂದು ಪರಿಣಾಮ. ದಕ್ಷಿಣೇಷ್ಯಾ  ಇತಿಹಾಸದ ಕಲಿಕೆಗೆ ಒತ್ತು ಕೊಡುವ ಹಲವು ವಿವಿ ವಿಭಾಗಗಳು ಹಿಂದೂ ಮತ್ತು ಬೌದ್ಧ ಧರ್ಮಗಳೇ ದಕ್ಷಿಣೇಷ್ಯಾದ ಸಂಸ್ಕೃತಿಗೆ ರೂಪುಕೊಟ್ಟಿರುವ  ʼಭಾರತೀಯ ಧರ್ಮಗಳುʼ ಎಂಬ ಪೂರ್ವಗ್ರಹವನ್ನು ಹೊಂದಿವೆ. ಇಸ್ಲಾಮಿನ ಪ್ರಭಾವ, ಮುಸ್ಲಿಮರ ಉಪಸ್ಥಿತಿ, ಮತ್ತು ಮುಘಲರ ಐತಿಹಾಸಿಕ ಬಳುವಳಿಗಳನ್ನು ಮುಂದಿಟ್ಟು ನೋಡುವಾಗ ಈ ಗ್ರಹಿಕೆಯಲ್ಲಿ ಹಲವಾರು ಸಮಸ್ಯೆಗಳಿರುವುದನ್ನು ಕಾಣಬಹುದು.  ಇಪ್ಪತ್ತನೆಯ ಶತಮಾನದ ಭಾರತೀಯ ಇತಿಹಾಸ ಶಾಸ್ತ್ರದಲ್ಲಿ ಇದು ಸಹಜವಾಗಿ ಮೂಡಿ ಬಂದಿದೆ. ಈಸ್ಟ್‌ ಇಂಡಿಯಾ ಕಾಲೇಜಿನ ಪತ್ರಾಗಾರದಲ್ಲಿ ಕಳೆದಿದ್ದ ವೇಳೆ ಇದರ ಉತ್ತಮ ನಿದರ್ಶನ ನನ್ನ ಮುಂದೆ ಪ್ರತ್ಯಕ್ಷವಾಯಿತು. 1830 ಮತ್ತು 1840 ರ ಇತಿಹಾಸದ ಪ್ರಶ್ನೆ ಪತ್ರಿಕೆಗಳನ್ನು ತಿರುವಿ ಹಾಕಿದಾಗ ಭಾರತದ ಇತಿಹಾಸವನ್ನು ಆಗಿನ ಬ್ರಿಟಿಷರು ಗ್ರಹಿಸಿರುವ ಶೈಲಿ ನೋಡಿ ಆಶ್ಚರ್ಯವಾಯಿತು. ಪ್ರಶ್ನೆ ಪತ್ರಿಕೆಗಳೆಲ್ಲವೂ ಇಸ್ಲಾಮಿನ ಹಾಗೂ ಮುಘಲರ ಕುರಿತಾಗಿತ್ತು. ಇಸ್ಲಾಮ್ ಆನುಷಂಗಿಕ ಎನಿಸಿರುವ ಯಾ ಪೂರ್ಣವಾಗಿ ನೆನೆಗುದಿಗೆ ಬಿದ್ದಿರುವ ಭಾರತೀಯ ಇತಿಹಾಸದ ಇಂದಿನ ಪ್ರಬಲ ಗ್ರಹಿಕೆಗಿಂತ ಇದು ಸಂಪೂರ್ಣವಾಗಿ ಭಿನ್ನವಾಗಿದೆ. ಸದ್ಯ ಚಾಲ್ತಿಯಲ್ಲಿರುವ ಭೌಗೋಳಿಕ ವರ್ಗೀಕರಣಗಳನ್ನು ಆಧರಿಸಿದ ಅಧ್ಯಯನ ಕ್ಷೇತ್ರವನ್ನು ಮೀರುವ ಕೆಲಸಗಳನ್ನು ಪ್ರೋತ್ಸಾಹಿಸಲು ನಾನು ಬಯಸುತ್ತೇನೆ.  ಯಾರೂ ಮುಟ್ಟಿ ನೋಡಿಲ್ಲದ ಇಂಡೋ-ಅರೇಬಿಕ್‌ ಹಾಗೂ ಇಂಡೋ-ಪರ್ಶಿಯನ್‌ ಇತಿಹಾಸದ ಮೂಲಗಳು ಸಾಕಷ್ಟು ಇದ್ದು ನಮ್ಮ ಅಧ್ಯಯನ ಅತ್ತ ಕಡೆ ಸಾಗಿ ರಾಷ್ಟ್ರ-ರಾಜ್ಯ ಕೇಂದ್ರಿತವಾಗಿ ಮೂಡಿಬಂದಿರುವ ಕ್ಷೇತ್ರಗಳು ಹಾಕಿರುವ ಸೀಮೆಗಳನ್ನು ಮೀರಬೇಕು.

ನೈಲ್‌ ಗ್ರೀನ್‌

ಉ: ದಕ್ಷಿಣೇಷ್ಯಾದ ಇತಿಹಾಸಜ್ಞರು ಇಸ್ಲಾಮನ್ನು ಮಧ್ಯಪ್ರಾಚ್ಯದ ಇತಿಹಾಸಜ್ಞರ ವಿಷಯವಾಗಿ ಮಾತ್ರ ಕಾಣುವುದನ್ನು ನಿಲ್ಲಿಸಬೇಕು. ಬ್ರಿಟಿಷರು ಗ್ರಹಿಸಿರುವಂತೆ ವಸಾಹತುಪೂರ್ವದ ಭಾರತವನ್ನಾದರೂ ಇಸ್ಲಾಮಿಕ್‌ ವಿಭಾಗದ  ಒಂದು ಭಾಗವನ್ನಾಗಿ ಕಾಣುವ ಅಧ್ಯಯನಗಳನ್ನು ಪ್ರೋತ್ಸಾಹಿಸಬೇಕು. ರಾಷ್ಟ್ರ ಮತ್ತು ವಸಾಹತಿನ ಇತಿಹಾಸಗಳ ಆಚೆಗೆ ಸಾಗಿ ಆಧುನಿಕ ಪೂರ್ವದ ಇಸ್ಲಾಮಿಕ್‌ ಜಾಗತಿಕ ವ್ಯವಸ್ಥೆಯ ನಡುವಿನ ದಕ್ಷಿಣೇಷ್ಯಾವನ್ನು ಕಾಣಲು ಸಾಧ್ಯವಾಗಬೇಕು. ಸಮಕಾಲೀನ ಇರಾನ್‌ ಮತ್ತು ಭಾರತದ ಗಡಿಗಳನ್ನು ಮೀರುವ ಕೆಲವು ವಿಶಿಷ್ಟ ಚರಿತ್ರೆಯ ಕೊಂಡಿಗಳನ್ನು ಪರೀಕ್ಷಿಸಿರುವ ನಾನು ಇಂತಹ ಕೆಲಸಗಳನ್ನೇ ಮಾಡುತ್ತಿದ್ದೇನೆ. ಭಾಷಿಕ ವಲಯಗಳ ಆಧಾರದಲ್ಲಿ ರೂಪಿಸಲಾದ ಅಧ್ಯಯನ ಕ್ಷೇತ್ರಗಳು ಇಂತಹ ಗುರಿಗಳ ಕಡೆಗೆ ತಲುಪಲು ಒಂದು ದಾರಿ ಎನ್ನಬಹುದು. ಭೌಗೋಳಿಕ ವಲಯಗಳ ಆಧಾರದಲ್ಲಿ ರೂಪಿಸಲಾದ ಇತಿಹಾಸದ ವಿಭಾಗಗಳಲ್ಲಿ ಕಂಡುಬರುವಷ್ಟು ಬಲೆಗಳು ಇದರಲ್ಲಿಲ್ಲ. ವಿದ್ವಾಂಸರು ಅವರಿಗೆ ಓದಲು ಸಾಧ್ಯವಾಗುವ ಭಾಷಿಕ ವಲಯಗಳನ್ನು ಹಿಂಬಾಲಿಸಬೇಕು. ಉದಾಹರಣೆಗೆ, ಅರೇಬಿಕ್‌ ಗೊತ್ತಿರುವ ವಿದ್ವಾಂಸರು ಆ ಭಾಷೆಯನ್ನು ಹಿಂಬಾಲಿಸುತ್ತಾ, ಗುಜರಾತ್‌ ಯಾ ಹೈದರಾಬಾದ್ ಇರಲಿ, ಅದು ಎಲ್ಲೆಲ್ಲಿಗೆ ತಲುಪುತ್ತದೆಯೋ ಅಲ್ಲಿಗೆ ಹೋಗಬೇಕು.  ಭಾಷಿಕ ವಲಯಗಳು ನಿಜಕ್ಕೂ ಬಹುತ್ವದ ವಲಯಗಳಾಗಿವೆ. ನಾವು ಕೆಲಸ ಮಾಡಬೇಕಿರುವ ಸ್ಥಳಗಳನ್ನು ಗುರುತಿಸಿ ಸುಮ್ಮನಾಗುವಂತೆಯೂ ಇಲ್ಲ, ಆಧುನಿಕ ರಾಷ್ಟ್ರ-ರಾಜ್ಯಗಳ ಸರಹದ್ದುಗಳನ್ನು ಮೀರಿ ಅವುಗಳ ಕಾಲಕ್ಕಿಂತಲೂ ಹಿಂದಕ್ಕೆ ತೆರಳಿ ಹೊಸ ಹೊಸ ವಲಯಗಳನ್ನು ಗುರುತಿಸುವ ಕೆಲಸ ನಡೆಯಬೇಕು.

ಉ: ಕೆಲವು ವಿದ್ವಾಂಸರು ಸೂಫಿಸಂ ಅಥವಾ ಸಂಪ್ರದಾಯ ಆಧಾರಿತ ಇಸ್ಲಾಂ (customary Islam) ಎಂದು ವರ್ಗೀಕರಿಸುತ್ತಿರುವ ಸಂಗತಿಗಳು ಆಧುನಿಕ ಪೂರ್ವದಲ್ಲಿ ಪ್ರಮಾಣಾಧಾರಿತ ಇಸ್ಲಾಮಿನ (normative Islam)  ಭಾಗವೇ ಆಗಿತ್ತು ಎನ್ನುವುದನ್ನು ಮೊದಲು ಗ್ರಹಿಸಬೇಕಿದೆ. ಆ ವರ್ಗೀಕರಣವನ್ನು ನಿರ್ಮೂಲನೆ ಮಾಡುವುದು ಒಬ್ಬ ಅಧ್ಯಾಪಕ ಮತ್ತು ವಿದ್ವಾಂಸ ಎಂಬ ನೆಲೆಯಲ್ಲಿ ನನಗಿರುವ ವಿಸ್ತೃತವಾದ ಗುರಿಗಳಲ್ಲೊಂದು.   ಆಧುನಿಕ ಪೂರ್ವದಲ್ಲಿ ಅಥವಾ ಸುಧಾರಣಾವಾದ ಬರುವ ಮುನ್ನ ಮುಸ್ಲಿಂ ಎಂದೆನಿಸಿಕೊಳ್ಳಲು ಏನು ಬೇಕಿತ್ತು ಎನ್ನುವುದನ್ನು ಇದು ತಿಳಿಸಿಕೊಡುತ್ತದೆ. ಸಂತರು, ಸಮಾಧಿಗಳು ಮತ್ತು ಪವಾಡಗಳ ಸಮೇತ ಪವಿತ್ರ ಪುರುಷರು ಮತ್ತು ಮೂರ್ತರೂಪದ ಧಾರ್ಮಿಕ ಪ್ರಾಧಿಕಾರಗಳು ಅಂದಿನ ಪ್ರಮಾಣಾಧಾರಿತ ಇಸ್ಲಾಮಿನಲ್ಲಿ ಮಿಳಿತವಾಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಆರಂಭವಾಗಿ ಈಗಲೂ ಮುಂದುವರಿಯುತ್ತಿರುವ ಇಸ್ಲಾಮಿಕ್‌ ಸುಧಾರಣಾವಾದದ ತರುವಾಯ ಹುಟ್ಟಿಕೊಂಡ ವರ್ಗೀಕರಣಗಳ ಪ್ರಾಬಲ್ಯವನ್ನು ನಾವು ಪ್ರಶ್ನಿಸಬೇಕಿದೆ. ತಡವಾಗಿ ಬಂದ ಇಂತಹ ವರ್ಗೀಕರಣಗಳ ಮೂಲಕ ಇಸ್ಲಾಮಿನ ಇತಿಹಾಸವನ್ನು ವೀಕ್ಷಿಸುವ ಪರಿಪಾಠ ನಾವು ಬೆಳೆಸಿಕೊಂಡಿದ್ದು ಸೂಫಿಸಮನ್ನು ಇಸ್ಲಾಮಿನಿಂದ ಬೇರ್ಪಡಿಸಲು ಸಾಧ್ಯ ಎಂದು ಅಸೂಕ್ಷ್ಮವಾಗಿ ನಂಬಿದ್ದೇವೆ. ಆದರೆ, ಆಧುನಿಕ ಪೂರ್ವದ ಇಸ್ಲಾಮ್‌ ಸಂಪೂರ್ಣವಾಗಿ ಸಂತ‌ ಪುರುಷರು, ಸಮಾಧಿಗಳು ಮತ್ತು ಪವಾಡಗಳಿಂದ ತುಂಬಿದ್ದು ಮೇಲಿನ ಗ್ರಹಿಕೆ ತಪ್ಪು. ನನ್ನ ವಿದ್ಯಾರ್ಥಿಗಳಿಗೆ ನಾನು ಸಾಗಿಸಲು ಬಯಸುತ್ತಿರುವುದು ಇದೇ ಆಶಯವನ್ನು. ಆ ಕಾಲದ ಒಳಸುಳಿಗಳನ್ನು ಮನಗಾಣುವಲ್ಲಿ ವಿಫಲವಾದ ಸೂಫಿ-ಉಲಮಾ ದ್ವಂದ್ವವನ್ನು ಮುಂದಿಡುವ ಒಂದು ಪರ್ಯಾಯ ಮಾತ್ರ ಇದಕ್ಕಿದ್ದು ದುರದೃಷ್ಟವಶಾತ್‌ ಸಮಕಾಲೀನ ಇಸ್ಲಾಂ ಮತ್ತು ದಕ್ಷಿಣೇಷ್ಯಾ ಇತಿಹಾಸದ ಕ್ಷೇತ್ರವನ್ನು ಈ ಸಿದ್ಧಾಂತ ಆಳುತ್ತಿದೆ.

ಉ: ಧರ್ಮ ಎನ್ನುವ ವರ್ಗೀಕರಣದ ಸಮಸ್ಯೆಯನ್ನು ಇತಿಹಾಸಜ್ಞರು ಸರಿಯಾಗಿ ಇದಿರುಗೊಳ್ಳಬೇಕಿದೆ. ಇತಿಹಾಸಜ್ಞರು ಧರ್ಮದೊಂದಿಗೆ ಸರಿಯಾಗಿ ಅನುಸಂಧಾನ ನಡೆಸುತ್ತಿಲ್ಲ. ಒಂದು ಅಧ್ಯಯನ ಕ್ಷೇತ್ರ ಎಂಬ ನೆಲೆಯಲ್ಲಿ ಇತಿಹಾಸ ವಿಭಾಗದಲ್ಲಿ ಉಂಟಾಗಿರುವ ಬೆಳವಣಿಗೆಗಳೇ ಇದಕ್ಕೆ ಕಾರಣ. ಸಾಮಾಜಿಕ ಇತಿಹಾಸಜ್ಞರು ಭೌತಿಕ ಉತ್ಪಾದಕತೆಗೆ ಒತ್ತು ಕೊಟ್ಟು ಧರ್ಮವನ್ನು ಅವಗಣಿಸುತ್ತಾರೆ. ಸಾಂಸ್ಕೃತಿಕ ಇತಿಹಾಸಜ್ಞರು ಒಂದೋ ಧರ್ಮವನ್ನು ಪರಿಗಣಿಸುವುದೇ ಇಲ್ಲ, ಇಲ್ಲವೇ ಸಂಸ್ಕೃತಿಯ ಒಳಗಡೆಗೆ ಸೇರಿಸಿಬಿಡುತ್ತಾರೆ. ಇಸ್ಲಾಮಿನ ವಿಷಯಕ್ಕೆ ಬರುವುದಾದರೆ ಇಸ್ಲಾಮಿನ ಇತಿಹಾಸವನ್ನು ಇಸ್ಲಾಮಿಕ್‌ ಅಧ್ಯಯನದ ವಿಧಾನಗಳಿಗೆ ಬಿಟ್ಟು ಕೊಡಲಾಗಿದೆ. ಆದರೆ, ಇತಿಹಾಸಜ್ಞರಿಗೂ ಇದರಲ್ಲಿ ಕೆಲಸ ಇದೆ ಎನ್ನುವುದು ನನ್ನ ಗ್ರಹಿಕೆ. ಇಸ್ಲಾಮ್‌ ಅಥವಾ ಧರ್ಮವನ್ನು ಒಂದು ಇತಿಹಾಸದ ವರ್ಗೀಕರಣವಾಗಿ ಕಾಣುವಲ್ಲಿ ವಿಫಲವಾಗಿರುವುದರಿಂದ ಇಸ್ಲಾಮ್‌ ಅಧ್ಯಯನದಲ್ಲಿ ಇತಿಹಾಜ್ಞರು ವಹಿಸಬಹುದಾಗಿದ್ದ ಯಾ ವಹಿಸಬೇಕಿದ್ದ ಪಾತ್ರಗಳು ಸಿಗದಾಗಿವೆ.  ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳ ವ್ಯಾಪ್ತಿಯೊಳಗೆ ಧರ್ಮದ ಬಗೆಗಿನ ಅಧ್ಯಯನವನ್ನು ತರಬೇಕಾದ ಅಗತ್ಯವಿದೆ ಎನ್ನುವುದು ನನ್ನ ನಂಬಿಕೆ. ಸೂಫಿಸಂ ಬಗೆಗಿನ ಚರ್ಚೆಗಳನ್ನು (ಉದಾಹರಣೆಗೆ) ಇಸ್ಲಾಮಿಕ್‌ ವಿಧಾನಗಳಿಂದ ಹೊರತಂದು ಇತಿಹಾಸದ ವಿಧಾನಗಳ ಮಧ್ಯಕ್ಕೆ ತರುವುದು ಇದಕ್ಕೊಂದು ದಾರಿ ಎನ್ನಬಹುದು. ಆಧುನಿಕ ಪೂರ್ವ ಯುಗದಲ್ಲಿ ಸದರಿ ಸೂಫಿಗಳು ಅಧಿಕಾರದ ಮಧ್ಯವರ್ತಿಗಳು ಕೂಡಾ ಆಗಿದ್ದರು ಎನ್ನುವುದನ್ನು ನಾವು ಗಮನಿಸಬೇಕಿದೆ.

ಉ: ಈ ಪ್ರಶ್ನೆ ಸ್ಕಾಲರ್ಶಿಪ್ಪುಗಳ ನಿರ್ವಹಣೆಗೆ ಸಂಬಂಧಿಸಿದೆ. ಈ ಹಂತದಲ್ಲಿ ಭೌಗೋಳಿಕ ವಲಯಗಳ ಮೇಲಿನ ಒತ್ತನ್ನು ಪರಿಗಣಿಸಬೇಕಾಗಿ ಬರುತ್ತದೆ. ಹೀಗೆ ಪದವಿ ಅಧ್ಯಯನ ಆರಂಭಿಸುವುದರೊಂದಿಗೆ ಈ ಕ್ಷೇತ್ರದ ಸಾಹಿತ್ಯಗಳ ಅರಿವು ದೊರಕುತ್ತದೆ. ಮತ್ತೊಂದು ಆಯಾಮದಲ್ಲಿ ನೋಡಿದರೆ ಅಲ್ಲಿನ ವ್ಯಾಖ್ಯಾನಗಳ ವರ್ತುಲದಲ್ಲಿ ತನ್ನನ್ನು ತಾನೆ ಕೂಡಿ ಹಾಕಿಕೊಳ್ಳುವ ಅಪಾಯವೂ ಇದೆ. ಪ್ರಯಾಣ, ಪತ್ರಾಗಾರಗಳ ಅಧ್ಯಯನ, ಮತ್ತು ವಿಶೇಷವಾಗಿ ಖಾಸಗಿ ಆರ್ಕೈವ್‌ಗಳ ಸಂದರ್ಶನದ ಮೂಲಕ ಈ ವ್ಯಾಖ್ಯಾನಗಳ ವರ್ತುಲದಿಂದ ಹೊರಬರಬೇಕಾದುದು ಅತ್ಯಗತ್ಯ. ನನ್ನ ಅನುಭವಗಳ ಆಧಾರದಲ್ಲಿ ಇದನ್ನು ವಿವರಿಸಿದರೆ ಮತ್ತಷ್ಟು ಸ್ಪಷ್ಟತೆ ಸಿಗಬಹುದು. ನನ್ನ ಪ್ರಯಾಣಗಳ ಮಧ್ಯೆ ಒಂದು ಸಾಮ್ರಾಜ್ಯದ ರಾಜಧಾನಿಯಾಗಿದ್ದ ಭಾರತದ ನಗರವೊಂದರಲ್ಲಿ ಕೆಲವು ಖಾಸಗಿ ಆರ್ಕೈವ್‌ಗಳನ್ನು ಕಂಡಿದ್ದೆ. ಈ ನಗರದ ಬಗ್ಗೆ ಇತಿಹಾಸದ ಸಾಹಿತ್ಯಗಳಲ್ಲಿ ಬಹಳ ಸ್ವಲ್ಪ ಉಲ್ಲೇಖಗಳು ಮಾತ್ರವೇ ಇರುವುದರಿಂದ ಇದರ ಪ್ರಾಧಾನ್ಯತೆ ನನಗೆ ಅಷ್ಟು ಬೇಗ ಹೊಳೆದಿರಲಿಲ್ಲ. ಪದವಿ ವಿದ್ಯಾರ್ಥಿಗಳು ಮುಕ್ತ ಚಿಂತನೆಯನ್ನು ಮತ್ತು ಧೈರ್ಯವಂತಿಕೆಯನ್ನು ಬೆಳೆಸಿಕೊಳ್ಳಬೇಕಿದೆ.  “ಪವಾಡಮಯ ಸಾಹಿತ್ಯ” ಎಂದು ನಾನು  ಕರೆಯುವ ಸಾಹಿತ್ಯವನ್ನು ಹಿಂಬಾಲಿಸುವುದು ನನಗೆ ಆಸಕ್ತಿದಾಯಕ ಎನಿಸಿದೆ. ಇದು ಕನಸಿನ ಬಗೆಗಿನ ಸಾಹಿತ್ಯದೊಂದಿಗೆ ಸಂಬಂಧವನ್ನು ಹೊಂದಿದೆ. ಇತಿಹಾಸ ಸಾಂಪ್ರದಾಯಿಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ವಿಭಿನ್ನ ಜ್ಞಾನಶಾಸ್ತ್ರಗಳೊಂದಿಗೆ ಈ ಸಮಸ್ಯೆಗೆ ಸಂಬಂಧ ಇದೆ. ಹ್ಯೂಮ್‌ ನಂತರದ ಇತಿಹಾಸದ ಜಗತ್ತಿನಲ್ಲಿ ನಾವು ಬಿದ್ದಿರುವ ಪರಿಣಾಮವಿದು. ಈ ಜಗತ್ತಿನಲ್ಲಿ ವಾಸ್ತವಿಕ ಜಗತ್ತಿನ ಬಗ್ಗೆ ಅಧ್ಯಯನ ಮಾಡುವವರು ಕನಸಿನ ಸಾಹಿತ್ಯದ ಬಗ್ಗೆ ಮಾತಾಡುವಂತಿಲ್ಲ. ಜ್ಞಾನಶಾಸ್ತ್ರದ ಮತ್ತು ವ್ಯಾಖ್ಯಾನ ವಿಜ್ಞಾನದ ಈ ತಡೆಗೋಡೆಗಳನ್ನು ಮೀರಲು ನಮ್ಮನ್ನು ಪಕ್ವಗೊಳಿಸುವ ಧೈರ್ಯ ಮತ್ತು ಮುಕ್ತ ಚಿಂತನೆ ಬಹಳ ಮುಖ್ಯ.

ಕೃಪೆ: ಜದಲಿಯ್ಯಾ ಜಾಲತಾಣ
ಕನ್ನಡಕ್ಕೆ: ನಝೀರ್‌ ಅಬ್ಬಾಸ್

ಮೌನದ ಅನಂತ ಧ್ವನಿಗಳು

‘ದೇವರ ಮೌನ’ ಎಂಬ ಪ್ರಯೋಗದೊಂದಿಗೆ ಮುಸ್ಲಿಮ್ ವಿದ್ವಾಂಸ ಪರಂಪರೆ ಹೇಗೆ ಅನುಸಂಧಾನ ನಡೆಸಿದೆ ಎಂದು ನಾನು ಆಗಾಗ್ಗೆ ಚಿಂತಾಮಗ್ನನಾಗುತ್ತೇನೆ. “ಕನಿಷ್ಠ ಒಂದು ಬಾರಿಯಾದರೂ ಅದನ್ನು ಆಲಿಸಲು ಪ್ರಯತ್ನಿಸು” ಎಂದವರು ಉತ್ತರಿಸಬಹುದು. ಇಲ್ಲದಿದ್ದರೆ “ಅವರಿಗೆ ಹೃದಯಗಳಿವೆ, ಆದರೆ ಅವರು ಗ್ರಹಿಸುವುದಿಲ್ಲ; ಅವರಿಗೆ ಕಣ್ಣುಗಳಿವೆ, ಆದರೆ ಅವರು ಕಂಡರಿಯುವುದಿಲ್ಲ ; ಅವರಿಗೆ ಕಿವಿಗಳಿವೆ, ಅದರ ಮೂಲಕ ಅವರು ಕೇಳಿ ಅರ್ಥೈಸಿಕೊಳ್ಳುವುದಿಲ್ಲ. (ಖುರ್‌ಆನ್ 7:179) ಎಂಬ ದೇವವಚನವನ್ನು ಹೇಳಿಕೊಡಬಹುದು.
ಮೌನ (ಅರೇಬಿಕ್ ನಲ್ಲಿ ಸ್ವಮ್ತ್) ಎಂಬ ಪದವು ಮಾತಿನ (ಕಲಾಮ್) ವಿರುದ್ಧಪದ. ಮುಸ್ಲಿಮ್ ದೇವತಾಶಾಸ್ತ್ರಜ್ಞರು ಮತ್ತು ದಾರ್ಶನಿಕರು ದೈವಿಕ ನುಡಿಯನ್ನು (ಕಲಾಮ್) ದೈವಿಕ ವಾಸ್ತವತೆಯ ಅತ್ಯಗತ್ಯ ಗುಣಲಕ್ಷಣವಾಗಿ ನೋಡುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಯಾರು ಕೇಳಿದರೂ, ಕೇಳದಿದ್ದರೂ ದೇವನು ನಿರಂತರವಾಗಿ ಮತ್ತು ಶಾಶ್ವತವಾಗಿ ಮಾತನಾಡುತ್ತಿದ್ದಾನೆ. ದೇವರು ಎಂಬ ಅಸ್ತಿತ್ವದ ಮೂಲಭೂತ ಗುಣಲಕ್ಷಣಗಳಲ್ಲಿ ಜೀವಂತವಾಗಿರುವವನಾಗಬೇಕು, ತಿಳುವಳಿಕೆಯುಳ್ಳವನಾಗಬೇಕು, ಶಕ್ತಿವಂತನಾಗಬೇಕು, ದೃಷ್ಟಿ ಮತ್ತು ಶ್ರವಣ ಶಕ್ತಿ ಹೊಂದಿರಬೇಕು ಎಂಬಂತೆಯೇ ಮಾತು ಕೂಡಾ ಒಂದು. ಸಂಕ್ಷಿಪ್ತವಾಗಿ, ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ದೇವರ ಮೌನದ ಬಗ್ಗೆ ಮಾತನಾಡುವುದು ಎಂದರೆ, ಅವನ ಮರಣ ಅಥವಾ ಅವನ ಮೂರ್ಖತನ ಅಥವಾ ಅವನ ಶಕ್ತಿಹೀನತೆಯ ಬಗ್ಗೆ ಮಾತನಾಡುವುದಕ್ಕೆ ಸಂವಾದಿ. ಆಧುನಿಕ ಅಕಾಡೆಮಿಕ್ ಜಗತ್ತಿನಲ್ಲಿ ಇಂತಹ ಚರ್ಚೆಗಳಿಗೆ ಪ್ರಸ್ತುತತೆ ಇರಬಹುದಾದರೂ ಮುಸ್ಲಿಮ್ ಬೌದ್ಧಿಕ ವಲಯದಲ್ಲಿ ಅವು ಅಸಂಬದ್ಧ ಎನಿಸಿಕೊಳ್ಳುತ್ತದೆ.

ಪರಮಾತ್ಮನ ಮಾತು ಅವನ ಅಸ್ತಿತ್ವದ ಅನಿವಾರ್ಯ ಉತ್ಪನ್ನ ಆಗಿರುವುದರಿಂದಲೇ ಅದು ಕಾಲಾತೀತವಾದ ಶಾಶ್ವತತೆಯನ್ನು ಪಡೆದುಕೊಳ್ಳುತ್ತದೆ. ಅವನ ಶಾಶ್ವತ ಆಜ್ಞೆಯಾದ ‘ಆಗು’ (ಕುನ್) ಎಂಬ ಕ್ರಿಯೋತ್ತೇಜಕ ಪದದ ಫಲಿತಾಂಶವಾಗಿದೆ ಬೀಯಿಂಗ್ (ಕೌನ್ ಅರ್ಥಾತ್ ಇರವು) ಅಥವಾ ವಿಶ್ವ (ಆಲಂ). ಒಂದು ವಸ್ತುವು ಉಗಮವಾದರೆ, ಅದು ಖಂಡಿತವಾಗಿಯೂ ಅಂತ್ಯವನ್ನು ಹೊಂದುತ್ತದೆ. ನೈಜ ಅಸ್ತಿತ್ವವಾದ ದೇವನನ್ನು ಹೊರತುಪಡಿಸಿದರೆ ಬೇರೆ ಯಾವುದಕ್ಕೂ ನಿಜವಾದ ಅಸ್ತಿತ್ವ (ವುಜೂದ್) ಇಲ್ಲ. ಇಮಾಮ್ ಗಝಾಲಿ (ರ.) ಹೇಳುತ್ತಾರೆ: “ವಾಸ್ತವದಲ್ಲಿ ದೇವರನ್ನು ಹೊರತುಪಡಿಸಿ ಬೇರೇನೂ ಅಸ್ತಿತ್ವದಲ್ಲಿಲ್ಲ”. ಖುರ್ ಆನಿನ ಭಾಷೆಯಲ್ಲಿ, “ಅಲ್ಲಾಹನ ಮುಖವಲ್ಲದ ಎಲ್ಲವೂ ನಾಶವಾಗುತ್ತವೆ” (ಖುರ್‌ಆನ್ 18:88) ‘ಅರಬ್ಬರು ಹಾಡಿರುವ ಅತೀ ಸತ್ಯವಾದ ಗೆರೆ’ ಎಂದು ಪೈಗಂಬರರು ಬಣ್ಣಿಸಿದ ಕವಿ ಲಬೀದ್ ಅವರ ಕವಿತೆ ಈ ವಿಷಯವನ್ನು ಚೆನ್ನಾಗಿ ತಿಳಿಸಿಕೊಡುತ್ತದೆ.

“ದೇವರಲ್ಲದ ಎಲ್ಲವೂ ಅವಾಸ್ತವವಲ್ಲವೇ..
ಎಲ್ಲಾ ಸಂತೋಷಗಳು ಕ್ಷಣಿಕ ಕ್ಷಣಗಳಲ್ಲವೇ?”

ಖುರ್ ಆನ್ ಹಕ್ (ವಾಸ್ತವ)ಗೆ ವಿರುದ್ಧಪದವಾಗಿ ಬಾತಿಲ್ (ಅವಾಸ್ತವತೆ) ಅನ್ನು ಬಳಸುತ್ತದೆ. (ಬಾತಿಲ್ ಎಂದರೆ ತಪ್ಪು, ಅಸತ್ಯ, ಶೂನ್ಯ). ಆದ್ದರಿಂದ, ದೇವರಲ್ಲದ ಎಲ್ಲವೂ ಸ್ವತಃ ಬಾತಿಲ್ (ಅವಾಸ್ತವ). ಖುರ್ ಆನಿನಲ್ಲಿ ಉಲ್ಲೇಖಿಸಲಾದ ‘ಅಲ್- ಹಕ್’ ಎಂಬ ದೇವನಾಮ ಸತ್ಯ, ವಾಸ್ತವ ಮತ್ತು ವಾಸ್ತವಿಕತೆ ಎಂಬ ಅರ್ಥವನ್ನು ಸ್ಫುರಿಸುತ್ತದೆ. ತತ್ವಜ್ಞಾನಿ ಇಬ್ನ್ ಸೀನಾ ಕಿತಾಬು ಶಿಫಾದಲ್ಲಿ ಬರೆಯುತ್ತಾರೆ: ‘ಹಕ್’ ಪದವು ವಸ್ತುಗಳ ಸ್ವರೂಪದ ಬಗ್ಗೆ ಮಾತನಾಡುವಾಗ ‘ವಾಸ್ತವ’ ಎಂಬರ್ಥವನ್ನೂ ಹೇಳಿಕೆಗಳ ಬಗ್ಗೆ ಮಾತನಾಡುವಾಗ ‘ಸರಿ’ ಎಂಬರ್ಥವನ್ನೂ ಕೊಡುತ್ತದೆ. ಮೊದಲ ಅರ್ಥಕ್ಕೆ ಸಂಬಂಧಿಸಿದಂತೆ, ಅವರು ಬರೆಯುತ್ತಾರೆ: “ತಾನು ತಾನಾಗಲು ಅಸ್ತಿತ್ವ ಅನಿವಾರ್ಯವಾಗಿರುವ ವಸ್ತು ಮಾತ್ರ ನಿತ್ಯ ವಾಸ್ತವವಾಗಿದ್ದು ಆ ಅನಿವಾರ್ಯ ಅಸ್ತಿತ್ವದ ಹೊರತಾದ ಬೇರೆಲ್ಲವೂ ಮೂಲಭೂತವಾಗಿ ಅವಾಸ್ತವ ಎನಿಸಿಕೊಳ್ಳುತ್ತದೆ.” ಹಕ್ ಎಂಬ ದೇವನಾಮವನ್ನು ವಿವರಿಸುತ್ತಾ ಇಮಾಮ್ ಗಝಾಲಿ (ರ.) ಇದನ್ನು ಮತ್ತಷ್ಟು ವಿವರಿಸಿದ್ದಾರೆ. ದೇವನು ನೀಡಿರುವ ಅಸ್ತಿತ್ವದಿಂದ ವಾಸ್ತವತೆಯನ್ನು ಪಡೆದಿರುವ ವಸ್ತುಗಳ ಇರವು (being)ಸಾಲರೂಪದ್ದೇ ವಿನಃ ನಿಜವಾದದ್ದಲ್ಲ ಎಂದು ಅವರು ಸ್ಪಷ್ಟಪಡಿಸಿರುವುದು ನೋಡಿ:

“ವಿವರಣೆಗೆ ತೆರೆದುಕೊಳ್ಳುವ ಯಾವುದೇ ಸಂಗತಿಗಳು ಮೂರು ರೂಪದಲ್ಲಿ ಇರುತ್ತವೆ. ಸಂಪೂರ್ಣ ವಾಸ್ತವ ಆಗಿರುವುದು, ಸಂಪೂರ್ಣ ಅವಾಸ್ತವ ಆಗಿರುವುದು ಮತ್ತು ಒಂದು ಆಯಾಮದಲ್ಲಿ ಮಾತ್ರ ವಾಸ್ತವ ಹಾಗೂ ಮತ್ತೊಂದು ಆಯಾಮದಲ್ಲಿ ಅವಾಸ್ತವ ಆಗಿರುವುದು. ಒಂದು ವಸ್ತುವಿಗೆ ಅದರ ಮೂಲಭೂತ ಸ್ವಭಾವದಲ್ಲೇ (ಅದು ಆದಾಗಲು) ಇರವು ಅನಿವಾರ್ಯವಾಗಿದ್ದರೆ ಅದು ಸಂಪೂರ್ಣವಾದ ಸತ್ಯವಾಗಿದ್ದು ಇರವಿನ ಅಭಾವ ಅನಿವಾರ್ಯವಾಗಿದ್ದರೆ ಅದು ಸಂಪೂರ್ಣ ಅವಾಸ್ತವ ಆಗಿರುತ್ತದೆ. ಇವೆರಡಕ್ಕಿಂದ ಭಿನ್ನವಾಗಿ ಮೂಲಭೂತ ಸ್ವಭಾವದಲ್ಲಿ ಸಂಭಾವ್ಯತೆ ಇದ್ದರೆ ಮಾತ್ರ ಸಾಕಾದರೆ ಅದು ಒಂದು ಆಯಾಮದಲ್ಲಿ ವಾಸ್ತವ ಹಾಗೂ ಮತ್ತೊಂದು ಆಯಾಮದಲ್ಲಿ ಅವಾಸ್ತವ ಎನಿಸಿಕೊಳ್ಳುತ್ತದೆ. ಇದರಿಂದ ಸಂಪೂರ್ಣ ವಾಸ್ತವಿಕತೆಯನ್ನು ಹೊಂದಿರುವಂತಹ ವಸ್ತುಗಳು ಮಾತ್ರ ಮೂಲಭೂತವಾಗಿ ನಿಜವಾದ ಅಸ್ತಿತ್ವವನ್ನು ಹೊಂದಿದೆ ಎಂದೂ ಇತರೆಲ್ಲಾ ವಸ್ತುಗಳು ತಮ್ಮ ವಾಸ್ತವಿಕತೆಯನ್ನು ಪಡೆಯುವುದು ಈ ಅಸ್ತಿತ್ವದಿಂದಲೇ ಎಂದೂ ತಿಳಿಯಬಹುದು.”

(ಅಲ್ ಮಖಾಸಿದುಲ್ ಅಸ್ನಾ)

ಮಾತನಾಡುವುದು ಎಂದರೆ ಅರಿವು ವ್ಯಕ್ತಪಡಿಸುವುದು ಎಂದರ್ಥ. ದೇವರ ಮಾತು ಎಲ್ಲದರ ಬಗೆಗಿನ ಆತನ ಶಾಶ್ವತ ಜ್ಞಾನದ ಅಭಿವ್ಯಕ್ತಿಯಾಗಿದೆ. ದೇವರ ಮಾತು ನಿಜ, ಸತ್ಯ ಮತ್ತು ಅಧಿಕೃತ. ಇತರರ ಎಲ್ಲಾ ಮಾತುಗಳು ಮೌಲಿಕ ದೃಷ್ಟಿಯಲ್ಲಿ ಅವಾಸ್ತವ, ಅಸತ್ಯ ಮತ್ತು ಅವಲಂಬನೆಗೆ ಅರ್ಹವಲ್ಲ. ಇತರ ವಸ್ತುಗಳ ಮಾತುಗಳು ನೈಜ ವಾಸ್ತವದ ಬಳಿ ದೊರಕುವಷ್ಟೇ ಇರಬಲ್ಲದು.

ಖುರ್ ಆನ್ ಸಾಮಾನ್ಯವಾಗಿ ದೈವಿಕ ನುಡಿಯನ್ನು ಆಜ್ಞೆ (ಅಲ್ ಅಮ್ರ್) ಎಂದು ಉಲ್ಲೇಖಿಸುತ್ತದೆ. ಮೇಲೆ ಹೇಳಲಾದ ದೇವರ ಮೌನದ ಬಗ್ಗೆ ಮಾತನಾಡುವವರು ‘ಧಾರ್ಮಿಕ ಆಜ್ಞೆ’ (ಅಲ್ ಅಮ್ರ್ ಅದ್ದೀನಿಯ್ಯ್) ಯಾ ನಿರ್ದೇಶಾತ್ಮಕ ಆದೇಶ (ಅಲ್ ಅಮ್ರ್ ಅತ್ತಕ್ಲೀಫಿಯ್ಯ್) ಎಂದು ದೇವಶಾಸ್ತ್ರಜ್ಞರು ಕರೆದಿರುವ ದೇವನುಡಿಯನ್ನು ಮನಸ್ಸಲ್ಲಿ ಉದ್ದೇಶಿಸಿರುವ ಹಾಗಿದೆ. ದೇವರು ನಿರ್ದೇಶನಾತ್ಮಕ ಆಜ್ಞೆಯನ್ನು ಹೊರಡಿಸುವುದು ಎಂದರೆ ತನ್ನ ಸೂಚನೆಗಳನ್ನು ನುಡಿಯ ರೂಪದಲ್ಲಿ ತನ್ನ ಮಾನವ ದಾಸರಿಗೆ ತಲುಪಿಸುವುದು ಎಂದರ್ಥ. ಪ್ರವಾದಿಗಳ ಸಂದೇಶಗಳಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು. ಕರ್ಮ ಶಾಸ್ತ್ರ ವಿದ್ವಾಂಸರಿಗೆ ಸಿಗುತ್ತಿರುವ ಎಷ್ಟೇ ಸಣ್ಣ ಅಧಿಕಾರ ಇರಲಿ ಅದು ಈ ದೇವಾಜ್ಞೆಯನ್ನು ಆಧರಿಸಿದೆ.

ಸೃಜನಾತ್ಮಕ ಆಜ್ಞೆ (ಅಲ್ ಅಮ್ರ್ ಅಲ್ಖಲ್ಕಿಯ್ಯ್) ಅಲ್ಲಾಹನ ಎರಡನೆಯ ತರದ ಆಜ್ಞೆ. ಇದನ್ನು ಅಲ್ ಅಮ್ರ್ ಅತ್ತಕ್ವೀನಿಯ್ಯ್ ಅಥವಾ ಇರವನ್ನು (ಕೌನ್ ಅಥವಾ being) ನೀಡುವ ಆಜ್ಞೆ ಎಂದೂ ಕರೆಯಲಾಗುತ್ತದೆ. ಖುರ್ ಆನಿನಲ್ಲಿರುವ “ಅವನು ಒಂದು ವಸ್ತು ಉಂಟಾಗಬೇಕೆಂದು ಬಯಸಿದರೆ, ಅದು ಆಗಲಿ ಎಂದು ಹೇಳುವನು ಮತ್ತು ಅದು ಉಂಟಾಗಿ ಬಿಡುತ್ತದೆ” ಎಂಬ ವಾಕ್ಯ ಇದಕ್ಕೊಂದು ಉದಾಹರಣೆ. ದಾರ್ಶನಿಕರು, ದೇವತಾಶಾಸ್ತ್ರಜ್ಞರು ಮತ್ತು ಸೂಫಿ ಗುರುಗಳು ಇಂತಹ ಮಾತುಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಿದ್ದಾರೆ. ಅವರ ಎಲ್ಲಾ ವಿವರಣೆಗಳು ಅನಿವಾರ್ಯವಾದ ಇರವಿನ ಮೂಲಭೂತ ಸಾರ ಮತ್ತು ವಿಶೇಷಣಗಳ ಮೇಲೆ ಕೇಂದ್ರೀಕೃತವಾಗಿವೆ. ಅಖಿಲ ವಿಶ್ವ ಇಡಿಯಾಗಿ ದೇವರ ಮಾತುಗಳಾಗಿವೆ ಎಂದವರು ಹೇಳುತ್ತಾರೆ. ಇದಕ್ಕೆ ಬೆಂಬಲವಾಗಿ ಅವರು ಖುರ್‌ಆನ್ ಸೂಕ್ತಗಳನ್ನು ಉಲ್ಲೇಖಿಸುತ್ತಾರೆ. ಉದಾಹರಣೆಗೆ, ಖುರ್ ಆನ್ ತನ್ನ ಸೂಕ್ತಗಳನ್ನು ಮತ್ತು ಪ್ರಾಪಂಚಿಕ ಸೃಷ್ಟಿಗಳನ್ನು ಉಲ್ಲೇಖಿಸಲು ಆಯತ್ (ಚಿಹ್ನೆ) ಎನ್ನುವ ಒಂದೇ ಪದವನ್ನು ಬಳಸಿದೆ. ವಿಶ್ವದಲ್ಲಿರುವ ವಸ್ತುಗಳನ್ನು ಭಗವಂತನಿಗೆ ಅಪೇಕ್ಷಿಸಿ ನೋಡಿದರೆ ಅವುಗಳು ಹಾಗೂ ಅವುಗಳ ದೇವರ ಮಾತುಗಳು ಸಮಾನ ನೆಲೆಯನ್ನು ಹೊಂದಿದೆ ಎಂದು ಇದರಿಂದ ತಿಳಿಯಬಹುದು. ದೇವಗ್ರಂಥದಲ್ಲಿರುವ ಆಯತ್ ಗಳು (ಸೂಕ್ತಗಳು) ಅವನ ಪದಗಳಾಗಿರುವಂತೆ ಅವನು ಸೃಷ್ಟಿಸಿದ ವಸ್ತುಗಳು ಕೂಡಾ ಅವನ ಪದಗಳೆ. ಸೂಕ್ತಗಳಿಗೆ ಅರ್ಥವಿರುವ ಹಾಗೆ ಸೃಷ್ಟಿಸಲ್ಪಟ್ಟ ವಸ್ತುಗಳಿಗೆ ಮರ್ಮವೂ ಇದೆ.

ಇಸ್ಲಾಮಿಕ್ ಸಾಹಿತ್ಯಗಳಲ್ಲಿ ಅರ್ಥ (ಮಅನಾ) ವನ್ನು ಎರಡು ರೀತಿಯಲ್ಲಿ ಬಳಸಲಾಗುತ್ತದೆ: ಪದಾರ್ಥ (word) ಮತ್ತು ರೂಪಾರ್ಥ (form). ಪದಗಳಿಗೆ ಅರ್ಥವಿರುವಂತೆಯೇ ಆಕಾರಗಳಿಗೂ ಅರ್ಥವಿದೆ. “ಅಲ್ಲಾಹನಾಗಿದ್ದಾನೆ ರೂಪವನ್ನು ನೀಡುವವನು”, “ಅವನು ನಿನಗೆ ರೂಪವನ್ನು ಕೊಟ್ಟನು ಮತ್ತು ನಿನ್ನ ರೂಪವನ್ನು ಸುಂದರಗೊಳಿಸಿದನು.” (ಖುರ್‌ ಆನ್ 49:64). ದಿವ್ಯ ಗ್ರಂಥದ ಪದಗಳನ್ನು ನುಡಿಯುವ ಮೂಲಕ ಮತ್ತು ಇರವಿನ (being) ಲೋಕಕ್ಕೆ ರೂಪ ಕೊಡುವ ರೂಪಗಳಿಗೆ ಧ್ವನಿ ನೀಡುವ ಮೂಲಕ ಅಲ್ಲಾಹನು ಅರ್ಥಗಳನ್ನು ಅಭಿವ್ಯಕ್ತಿಸುತ್ತಾನೆ. ಈ ಪದಗಳು ಮತ್ತು ರೂಪಗಳ ಅರ್ಥಗಳು ಅನಂತವಾಗಿವೆ ಎಂದು ಕೆಳಗಿನ ಸೂಕ್ತವನ್ನು ವ್ಯಾಖ್ಯಾನಿಸುತ್ತಾ ಖುರ್ ಆನ್ ವಿದ್ವಾಂಸರು ವಿವರಿಸಿದ್ದಾರೆ.
“ಭೂಮಿಯ ಮೇಲಿನ ಎಲ್ಲಾ ಮರಗಳು ಲೇಖನಿಗಳಾದರೆ ಮತ್ತು ಈ ಸಮುದ್ರ ಹಾಗೂ ಜತೆಗೆ ಏಳು ಬೇರೆ ಸಮುದ್ರಗಳನ್ನೂ ಸೇರಿಸಿ ಶಾಯಿಯಾಗಿ ಮಾಡಿದರೂ, ಅಲ್ಲಾಹನ ಮಾತುಗಳು ಬರೆದು ಮುಗಿಸಲಾಗದು. ಖಂಡಿತವಾಗಿಯೂ ಅಲ್ಲಾಹನು ಮಹಿಮಾನ್ವಿತನೂ ವಿವೇಕಿಯೂ ಆಗಿದ್ದಾನೆ‌.” (ಖುರ್ಆನ್ 31:27).

ಸಂಕ್ಷಿಪ್ತವಾಗಿ, ವಿಶ್ವದ ಅಸ್ತಿತ್ವಕ್ಕೆ ಮತ್ತು ಅದರಲ್ಲಿರುವ ಎಲ್ಲದಕ್ಕೂ ರೂಪು ಕೊಡುವ ದೇವರ ಮಾತಾಗಿದೆ ಸೃಜನಾತ್ಮಕ ಆಜ್ಞೆ (creative command) ಎಂದು ಅರ್ಥೈಸಬಹುದು. ಅದೇ ವೇಳೆ ಪ್ರವಾದಿಗಳು ಮತ್ತು ದೈವಿಕ ಗ್ರಂಥಗಳ ಮೂಲಕ ಮನುಷ್ಯನನ್ನು ಉದ್ದೇಶಿಸಿಕೊಂಡು ಹೊರಡಿಸಲಾದ ದೈವಿಕ ನುಡಿಗಳಾಗಿವೆ ನಿರ್ದೇಶನಾತ್ಮಕ ಆಜ್ಞೆ (prescriptive command)ಗಳು ಎಂದೂ ತಿಳಿಯಬಹುದು. ಎರಡನೆಯ ರೀತಿಯ ಆಜ್ಞೆಗಳನ್ನು ಮೀರಲು ಮನುಷ್ಯನಿಗೆ ಸಾಧ್ಯವಿದೆ. ಆದರೆ ಅಲ್ಲಾಹನ ‘ಸೃಜನಾತ್ಮಕ ಕ್ರಮ’ವನ್ನು ಮೀರಲು ಮನುಷ್ಯನಿಗೆ ಸಾಧ್ಯವಾಗದು. ಅದರ ವಿರುದ್ಧ ವರ್ತಿಸಲು ಅಥವಾ ಪ್ರತಿಕ್ರಿಯಿಸಲು ಸಹ ಸಾಧ್ಯವಿಲ್ಲ. ಏಕೆಂದರೆ ಆ ಆದೇಶವೇ ಅವರಿಗೆ ವರ್ತಿಸಲು, ಯೋಚಿಸಲು ಮತ್ತು ಕ್ರಿಯೆ ಎಸಗಲು ಅನುವಾಗುವ ಇರವನ್ನು (being) ನೀಡಿರುವುದು.

ವಿಶ್ವಾಸಶಾಸ್ತ್ರದ ವಿದ್ವಾಂಸರು ದೇವರಿಗೆ ಎರಡು ರೀತಿಯ ಆಜ್ಞೆಗಳಿವೆ ಎನ್ನುವ ವರ್ಗೀಕರಣವನ್ನು ಯಾಕಾಗಿ ಮಾಡುತ್ತಾ ಇದ್ದಾರೆನ್ನುವ ಪ್ರಶ್ನೆ ಇಲ್ಲಿ ಬರಬಹುದು. ಖುರ್ ಆನ್ ಕೂಡಾ “ನಮ್ಮ ಆಜ್ಞೆಯು ಕಣ್ಣು ಮಿಟುಕಿಸುವಂತೆ ಒಂದೇ ಘೋಷಣೆಯಾಗಿದೆ.” (ಕುರಾನ್ 54:50) ಎಂದು ಹೇಳಿದೆ. ದೇವರಿಗೆ ಒಂದೇ ಒಂದು ಆಜ್ಞೆಯಿದೆ ಎಂದು ಈ ಶ್ಲೋಕ ಸೂಚಿಸುವುದಿಲ್ಲವೇ? ವಾಸ್ತವವಾಗಿ, ನಿರ್ದೇಶನಾತ್ಮಕ ಆಜ್ಞೆಯು ಸೃಜನಾತ್ಮಕ ಆಜ್ಞೆಯನ್ನು ಒಳಗೊಂಡಿದೆ ಮತ್ತು ಅನುಸರಿಸುತ್ತದೆ. ಎಲ್ಲಾ ಸೃಷ್ಟಿಗಳು ತಮ್ಮ ಇರವಿನೊಂದಿಗೆ ಸೃಜನಾತ್ಮಕ ಆಜ್ಞೆಗೆ ವಿಧೇಯರಾಗುವರು. ಆದರೆ ಮನುಷ್ಯ ತನ್ನ ಅಸ್ತಿತ್ವವನ್ನು ಪ್ರಶ್ನಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದಾನೆ. ಅವನಿಗೆ ಈ ಸಾಮರ್ಥ್ಯ ಬರಲು ಕಾರಣ ಅವನ ಸ್ವಪ್ರಜ್ಞೆಯೇ. ಈ ಸ್ವೋಪಜ್ಞತೆ ಅವರಿಗೆ ದೊರಕಿರುವುದು ಅನಂತವಾದ ಸ್ವಪ್ರಜ್ಞೆಯ ಕೆಲವು ವಿಶೇಷತೆಗಳು ಅವರ ಸೃಷ್ಟಿಯಲ್ಲಿ ಇರುವುದರಿಂದ. ದೇವನು ಕಡ್ಡಾಯವಾಗಿ ಹೊಂದಿರಬೇಕಾದ ಏಳು ಗುಣಲಕ್ಷಣಗಳು ಮನುಷ್ಯರಿಗೂ ಇದೆ ನೋಡಿ. ಜೀವ, ಜ್ಞಾನ, ಶಕ್ತಿ, ಇಚ್ಛೆ, ಮಾತು, ಶ್ರವಣ ಮತ್ತು ದೃಷ್ಟಿ. ಆದರೆ, ಇದಾವುದೂ ದೇವರಿಗೆ ಸಮಾನವಾಗಿರುವ ಪ್ರಮಾಣದಲ್ಲಿ ಮತ್ತು ಗುಣಮಟ್ಟದಲ್ಲಿಲ್ಲ. ಇಷ್ಟೇ ಅಲ್ಲದೆ, ದೇವರ ಇತರ 99 ಹೆಸರುಗಳಲ್ಲಿ (ಅಸ್ಮಾಉಲ್ ಹುಸ್ನಾ) ಒಳಗೊಂಡಿರುವ ಇತರ ವಿಶೇಷತೆಗಳನ್ನು ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ಕೂಡಾ ಅವರಿಗಿದೆ.

ಮೇಲೆ ಹೇಳಲಾದ ಏಳು ಮೂಲಭೂತ ಗುಣಲಕ್ಷಣಗಳ ಪೈಕಿ ನೋಡುವಿಕೆ ಮತ್ತು ಶ್ರವಣದ ಬದಲಿಗೆ ಉದಾರತೆ ಮತ್ತು ನ್ಯಾಯವನ್ನು ಎಣಿಸಿದವರು ಇದ್ದಾರೆ. ಬಹುತೇಕ ದೇವತಾಶಾಸ್ತ್ರಜ್ಞರು ವಿಶ್ವದಾದ್ಯಂತ ಮಾರ್ದನಿಸುತ್ತಿರುವ ಪರಸ್ಪರ ಪೂರಕವಾದ ದೈವಿಕ ಗುಣವಿಶೇಷತೆಗಳ ಎರಡು ಗುಂಪುಗಳನ್ನು ಇವೆರಡು ಪ್ರತಿನಿಧಿಸುತ್ತವೆ ಎಂದಿದ್ದಾರೆ. ಈ ಎರಡು ದಿವ್ಯ ಗುಣಗಳು ಇತರ ದೈವಿಕ ಗುಣಗಳಾದ ಮೃದುತ್ವ ಮತ್ತು ಕಾಠಿಣ್ಯ, ಕರುಣೆ ಮತ್ತು ಕೋಪ ಹಾಗೂ ಸೌಂದರ್ಯ ಮತ್ತು ಗಾಂಭೀರ್ಯವನ್ನು ಹೋಲುತ್ತವೆ. ದೇವರು ಮನುಷ್ಯನನ್ನು ಸೃಷ್ಟಿಸಿದಾಗ ಪರಸ್ಪರ ವಿರುದ್ಧವಾಗಿರುವ ಈ ದ್ವಂದ್ವಗಳನ್ನು ಅವನಲ್ಲಿ ತುಂಬಿದನು. ಅಲ್ಲಾಹನ ಕರುಣಾಮಯಿ ಗುಣಗಳು ನಮ್ಮನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತವೆ. ಅದೇ ವೇಳೆ, ಅವನ ಕೋಪದ ವಿಶೇಷಣಗಳು ನಮ್ಮನ್ನು ನರಕಕ್ಕೆ ಕರೆದೊಯ್ಯುತ್ತವೆ. ಪೈಗಂಬರ್ ಮುಹಮ್ಮದ್ (ಸ.) ಹೇಳಿದರು: “ಅಲ್ಲಾಹನ ಕರುಣೆಯು ಅವನ ಕೋಪಕ್ಕಿಂತ ದೊಡ್ಡದಾಗಿದೆ.” ಮನುಷ್ಯನ ಒಳಗೆ ಮತ್ತು ಹೊರಗೆ ಕಂಡುಬರುವ ಈ ವಿಶೇಷಣಗಳು ಮಾನವನ ನೈತಿಕತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಜತೆಗೆ ದೇವರ ಸಾಮೀಪ್ಯ ಪಡೆಯಲಿಕ್ಕೂ ಇದು ದಾರಿ ಮಾಡುತ್ತಿದ್ದು ಅದುವೇ ಧರ್ಮದ ಅಂತಿಮ ಗುರಿ.

ಧಾರ್ಮಿಕ ಆಜ್ಞೆಯು ಮಾನವನಿಗೆ ಇರುವ ಇಚ್ಛಾಶಕ್ತಿಯನ್ನು ಉದ್ದೇಶಿಸಿದೆ. ತನ್ನ ಮುಂದಿರುವ ಆಯ್ಕೆಗಳ ಪೈಕಿ ಯಾವುದನ್ನು ಬೇಕಾದರೂ ಆಯ್ದುಕೊಳ್ಳುವ ಶಕ್ತಿ ಮನುಷ್ಯನಿಗೆ ಇದೆ. ಆದರೆ, ಆಯ್ಕೆ ಉತ್ತಮವಾಗಿರಬೇಕು. ನಿರ್ದೇಶನಾತ್ಮಕ ಆಜ್ಞೆಗಳ ಮುಖ್ಯ ಕೆಲಸ ಸರಿ ತಪ್ಪುಗಳನ್ನು ಬೇರ್ಪಡಿಸಲು ಬೇಕಾದ ಮಾನದಂಡವನ್ನು ನೀಡುವುದೇ ಆಗಿರುತ್ತದೆ. ಜತೆಗೆ ಸತ್ಯ ಮತ್ತು ಸೂಕ್ತವಾದುದನ್ನು ಮಿಥ್ಯೆ ಹಾಗೂ ಸಮರ್ಪಕವಲ್ಲದ್ದರಿಂದ ಬೇರ್ಪಡಿಸಲು ಕೂಡಾ ಸಹಾಯ ಮಾಡುತ್ತದೆ.

ಮೊದಲ ನೋಟದಲ್ಲಿ, ಜನರಿಗೆ ಸತ್ಯದೊಂದಿಗೆ ನೇರ ಸಂಪರ್ಕ ಇಲ್ಲದ್ದರಿಂದ ಹಾಗೂ ಉತ್ತಮ ಜೀವನ ಸವೆಸಲು ದೈವಿಕ ಮಾರ್ಗದರ್ಶನ ಅಗತ್ಯ ಇರುವ ಕಾರಣದಿಂದ ನಿರ್ದೇಶನಾತ್ಮಕ ಆಜ್ಞೆ ಅಸ್ತಿತ್ವದಲ್ಲಿದೆ ಎಂದು ತೋರಬಹುದು. ಅದೇ ವೇಳೆ, ಆಳವಾದ ದೃಷ್ಟಿಯಲ್ಲಿ ದೇವರು ಸರಿಯಾದ ಮಾತು, ಕ್ರಿಯೆ ಮತ್ತು ಉದ್ದೇಶದ ಬಗ್ಗೆ ಸೂಚನೆಗಳನ್ನು ನೀಡಿರುವುದರಿಂದ ಮನುಷ್ಯನಿಗೆ ಸತ್ಯ, ಸರಿ ಮತ್ತು ವಾಸ್ತವವನ್ನು ಆರಿಸುವ ಹೊಣೆಗಾರಿಕೆಯನ್ನು ಕೂಡಾ ವಹಿಸಿದ್ದಾನೆ ಎಂದು ತಿಳಿಯಬಹುದು. ಈ ಜವಾಬ್ದಾರಿಯ ಆಧಾರದ ಮೇಲೆ, ಅವರು ಅವಾಸ್ತವಿಕತೆಯನ್ನು ದೂರ ಮಾಡಿದ್ದಕ್ಕಾಗಿ ಮತ್ತು ಸತ್ಯದೊಂದಿಗೆ ಸೇರಿದ್ದಕ್ಕಾಗಿ ಸ್ವರ್ಗ ಯಾ ನರಕಕ್ಕೆ ಅರ್ಹರಾಗುತ್ತಾರೆ. ದೈವಿಕ ನ್ಯಾಯದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಮಾತುಗಳು ಮತ್ತು ಕಾರ್ಯಗಳಿಗೆ ಸಂಪೂರ್ಣ ಜವಾಬ್ದಾರನಾಗಿದ್ದರೆ ಮಾತ್ರ ಪ್ರತಿಫಲ ಮತ್ತು ಶಿಕ್ಷೆ ನೀಡಬಹುದು. ಸೃಷ್ಟಿಗಳ ಪೈಕಿ ಮಾನವರಿಗೆ ಮಾತ್ರ ಜವಾಬ್ದಾರಿ ವಹಿಸಿಕೊಡಲಾಗಿರುದರಿಂದ ವಿವಿಧ ಮಟ್ಟಗಳು ಮತ್ತು ವಲಯಗಳಿರುವ ಸ್ವರ್ಗ ಮತ್ತು ನರಕಗಳ ಅಸ್ತಿತ್ವ ಮನುಷ್ಯರ ಅಸ್ತಿತ್ವದ ಮೇಲೆ ನೆಲೆಗೊಂಡಿದೆ. ಒಟ್ಟಾರೆ, ಮಾನವನಿಗೆ ಮುಕ್ತ ಆಯ್ಕೆಯು ಇಲ್ಲದಿದ್ದಲ್ಲಿ ಅರ್ಥಹೀನ ಎನಿಸುತ್ತಿದ್ದ ಮರಣೋತ್ತರ ಲೋಕಗಳ ಅಗಣಿತ ಸಾಧ್ಯತೆಗಳ ಇರವಿಗೆ ಕಾರಣವಾಗುವ ಮೂಲಕ ನಿರ್ದೇಶನಾತ್ಮಕ ಆಜ್ಞೆಗಳು ಸೃಜನಾತ್ಮಕ ಆಜ್ಞೆಗಳನ್ನು ಪೂರ್ಣಗೊಳಿಸುವ ಕೆಲಸವನ್ನು ಕೂಡಾ ಮಾಡುತ್ತದೆ ಎನ್ನಬಹುದು.

ದೇವರು ವಾಸ್ತವ ಎಂದು ಹೇಳಿದರೆ ದೇವರು ಮಾತ್ರ ವಾಸ್ತವ ಹಾಗೂ ಬಾಕಿರುವುದೆಲ್ಲಾ ಅವಾಸ್ತವ ಎಂದರ್ಥ. ದೇವರು ಮಾತನಾಡುತ್ತಾನೆ ಎಂದು ಹೇಳಿದರೆ ದೇವರು ಮಾತ್ರ ಮಾತನಾಡುತ್ತಾನೆ ಮತ್ತು ಉಳಿದವರೆಲ್ಲಾ ಮೌನವಾಗಿದ್ದಾರೆ ಎಂದರ್ಥ. ನಿಜವಾದ ಇರವು ಎನಿಸಿರುವ ದೇವರಿಂದ ನಿಗದಿತ ವಾಸ್ತವಿಕತೆಯನ್ನು ವಸ್ತುಗಳು ಪಡೆದಿದೆ ಎನ್ನುವುದಾದರೆ ಅವುಗಳು ನಿಗದಿತ ಮಾತನ್ನು ಕೂಡಾ ನಿಜವಾದ ಮಾತುಗಾರನಿಂದ ಪಡೆದಿವೆ ಎಂದು ಮನಗಾಣಲು ಸಾಧ್ಯವಿದೆ. ಇಬ್ನ್ ಅರಬಿಯವರು ವಿವರಿಸಿದಂತೆ ದೇವರ ನುಡಿ ಆಗಿರುತ್ತದೆ ಎಲ್ಲವನ್ನೂ ಅಸ್ತಿತ್ವಕ್ಕೆ ತಂದಿರುವುದು. “ನಾವು ಅವನ ಮಾತಿನಿಂದಾಗಿ ಅಸ್ತಿತ್ವಕ್ಕೆ ಬಂದಿದ್ದೇವೆ. ʼಆಗುʼ ಎನ್ನುವ ಅವನ ಆಜ್ಞೆಯ ಪರಿಣಾಮದಿಂದ ನಾವು ಉಂಟಾದೆವು. ಅಸ್ತಿತ್ವದಲ್ಲಿರುವುದೆಲ್ಲವೂ ದೇವರ ಮಾತುಗಳೇ ಆಗಿರುವುದರಿಂದ “ವಿಶ್ವದಲ್ಲಿ ಮೌನವಿಲ್ಲ. ಮೌನ ಏನೂ ಇಲ್ಲದಿರುವುದಕ್ಕೆ ಸಮಾನ. ಆದುದರಿಂದಲೇ ಮಾತು ಶಾಶ್ವತ.”

ಸಂಕ್ಷಿಪ್ತವಾಗಿ ಹೇಳುವುದಾದರೆ, ದೇವರಲ್ಲದ ಎಲ್ಲವೂ ದೇವರ ಮಾತುಗಳ ಕಾರಣದಿಂದ ವಾಸ್ತವ ಎನಿಸಿಕೊಂಡಿವೆ. ಅದೇ ವೇಳೆ, ಅವುಗಳ ಮೂಲಭೂತ ಸ್ವಭಾವಗಳ ಪ್ರಕಾರ ಅವು ಅವಾಸ್ತವ ಮತ್ತು ಮೌನ ಆಗಿವೆ. ಎಲ್ಲಾ ಸೃಷ್ಟಿಗಳು ದೇವರ ನುಡಿಗಳೆ. ಅವರಾಡುವ ಮಾತುಗಳು ಅವರಾಡಿದ್ದಲ್ಲ, ಅವರ ಮೂಲಕ ಆಡಲಾದದ್ದು. ಆದುದರಿಂದಲೇ ಎಲ್ಲಾ ಮಾತುಗಳು ಮತ್ತು ರೂಪಗಳು ದೈವಿಕ ಆಜ್ಞೆಗಳ ಸಾಕ್ಷಾತ್ಕಾರಗಳಷ್ಟೇ.

ಕೃಪೆ: Renovatio
ಲೇ: ವಿಲ್ಯಂ ಚಿಟಿಕ್
ಕನ್ನಡಕ್ಕೆ : ಸ್ವಾದಿಖ್ ಬೆಳಾಲ್


William Chittick

ಕನಸಿನಲ್ಲಿ ನಡೆದ ವಿಧಿ

ಕನಸುಗಳಿಗೆ ನಮ್ಮ ಜೀವನದ ಬಗ್ಗೆ ಮುನ್ಸೂಚನೆ ನೀಡುವ ಮತ್ತು ಅಜ್ಞಾತ ಹಾಗೂ ಅಂತರ್ಗತವಾಗಿರುವುದನ್ನೂ ಬಹಿರಂಗಪಡಿಸುವ ಸಾಮರ್ಥ್ಯ ಇದೆ. ಅವು ಭವಿಷ್ಯವನ್ನು ನೋಡುವ ನಮ್ಮ ಮನಸ್ಸಿನ ನಿಗೂಢ ಶಕ್ತಿಯನ್ನು ಪ್ರತಿನಿಧಿಸುತ್ತವೆ. ನಾವು ಕನಸಿನಲ್ಲಿ ಕಂಡ ಘಟನೆಗಳು ನೀಡುವ ಸೂಚನೆಗಳು ನಮ್ಮ ಜೀವನದಲ್ಲಿ ಬೀರುವ ಪರಿಣಾಮಗಳಿಂದಾಗಿ ಕನಸುಗಳು ಭವಿಷ್ಯದ ಕೈಪಿಡಿಯಂತೆ ಕೆಲಸ ಮಾಡುತ್ತವೆ, ಭವಿಷ್ಯದ ಘಟನೆಗಳ ಸಂಕೇತವನ್ನು ಮೊದಲೇ ನೀಡುವ ವೇದಿಕೆಯಂತೆ ವರ್ತಿಸುತ್ತವೆ ಎಂದು ಹೇಳುತ್ತೇವೆ.

ಎರಡೂ ಲೋಕಗಳನ್ನು ಸಂಯೋಜಿಸಿದರೆ, ಕನಸಿನ ಲೋಕವು ಎಚ್ಚರದ ಲೋಕಕ್ಕಿಂತ ಮೊದಲು ಇರುತ್ತದೆ ಎಂಬ ಸಾಮಾನ್ಯ ಪ್ರಮೇಯ ಸ್ವಪ್ನ ವ್ಯಾಖ್ಯಾನ ಶಾಸ್ತ್ರದಲ್ಲಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಕನಸುಗಳು ನಿಜಜೀವನವನ್ನು ಮೀರುವ ಮತ್ತು ಕಾಲಗಣನೆಯನ್ನು ತಲೆಕೆಳಗಾಗಿಸುವ ಉದಾಹರಣೆಯೊಂದು 12ನೇ ಶತಮಾನದ ಸೂಫಿವರ್ಯರಾದ ಅಬ್ದುಲ್‌ ಖಾದಿರ್ ಜೀಲಾನಿಯವರ ‘ಬಹ್ಜತುಲ್ ಅಸ್ರಾರ್’ನಲ್ಲಿ ಉಲ್ಲೇಖಗೊಂಡಿದೆ.

ಒಮ್ಮೆ,  ಅಬೂ ಮುಜಾಫರ್ ಎಂಬ ವ್ಯಾಪಾರಿಯು ತನ್ನ ವರ್ತಕ ಸಂಘದೊಂದಿಗೆ ಸಿರಿಯಾಕ್ಕೆ ಭೇಟಿ ನೀಡಲು ಯೋಜಿಸಿದ್ದರು.  ಪ್ರಯಾಣದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡ ಬಳಿಕ, ಅವರು ತಮ್ಮ ಸ್ನೇಹಿತ ಶೇಖ್ ಹಮ್ಮಾದ್ ರವರನ್ನು ಭೇಟಿಯಾಗಿ ತಮ್ಮ ಯೋಜನೆಗಳನ್ನು ತಿಳಿಸಿ,  ಸುರಕ್ಷಿತವಾಗಿ ಹಿಂದಿರುಗಲು ಶೇಖ್‌ರೊಂದಿಗೆ ಪ್ರಾರ್ಥಿಸುವಂತೆ ಕೋರಿದರು. ಇತರ ಸಂದರ್ಶಕರು ಶೇಖ್ ಹಮ್ಮಾದ್‌‌ರ ಬಳಿ ಇದ್ದಿದ್ದರಿಂದ ಅವರು ಹೊರಡುವವರೆಗೆ ಕಾಯಲು ಅಬು ಮುಜಾಫರ್ ಗೆ ಸೂಚಿಸುತ್ತಾರೆ. ಎಲ್ಲರೂ ಹೋದ ಬಳಿಕ ಕೇವಲ ಇಬ್ಬರು ಮಾತ್ರ ಇದ್ದಾಗ ಶೇಖ್ ಹಮ್ಮಾದ್‌ರವರು ಪ್ರಯಾಣವನ್ನು ಮುಂದೂಡಲು ಅಬೂ ಮುಜಾಫರ್‌ಗರ ಸಲಹೆಯನ್ನು ನೀಡುತ್ತಾರೆ.

“ಆದರೆ, ಸರಕುಗಳಿಗೆ ಬಂಡವಾಳ ಹೂಡಿಯಾಗಿದೆ, ಈ ಪ್ರಯಾಣಕ್ಕಾಗಿ ಸಕಲ ಸಜ್ಜು ನಡೆದಿದೆ. ಅಲ್ಲದೆ, ಈ ಯಾತ್ರೆಯು ಹಲವು ಶ್ರೀಮಂತ ವರ್ತಕರನ್ನು ಪರಿಚಯಿಸಲಿದೆ. ಹಾಗಾಗಿ, ದಿನ ಬಿಟ್ಟು ಒಂದು ಘಳಿಗೆಯನ್ನೂ ತಡ ಮಾಡುವಂತಿಲ್ಲ.” ಎಂದು ವರ್ತಕರಾದ ಅಬೂ ಮುಜಾಫರ್ ತಮ್ಮ ಆತಂಕವನ್ನು ಭಿನ್ನವಿಸುತ್ತಾರೆ.

ಪ್ರಯಾಣವನ್ನು ರದ್ದುಗೊಳಿಸಲೇಬೇಕು ಎಂದು ಹೇಳಿದ ಶೇಖ್ ಹಮ್ಮಾದ್ ಅವರು, ಈ ಯಾತ್ರೆಯಿಂದ ಅಬೂ ಮುಜಾಫರ್‌ ಎದುರಿಸಬಹುದಾದ ಘೋರ ಪರಿಣಾಮವನ್ನು ಎಚ್ಚರಿಸುತ್ತಾರೆ. ಪ್ರಯಾಣದ ಸಮಯದಲ್ಲಿ ಡಕಾಯಿತರಿಂದ ದರೋಡೆಗೊಳಗಾಗಿ ಅಬೂ ಮುಜಾಫರ್ ಕೊಲ್ಲಲ್ಪಡುತ್ತಾರೆ ಎಂದು ಹೇಳುತ್ತಾರೆ. ಅದು ತಮ್ಮ ರಹಸ್ಯ ಶಕ್ತಿಗಳ ಮೂಲಕ ಶೇಖ್ ಹಮ್ಮಾದ್ ಅವರಿಗೆ ಬಹಿರಂಗವಾದ ಭವಿಷ್ಯವಾಗಿತ್ತು.

ವ್ಯಾಪಾರಿ ಅಬು ಮುಜಾಫರ್ ಅವರು ಅಲ್ಲಿಂದ ಗೊಂದಲದ ಮನಸ್ಸಿನಿಂದ ಹಿಂದಿರುಗುತ್ತಿದ್ದಾಗ, ದಾರಿಯಲ್ಲಿ ಅಬ್ದುಲ್ ಖಾದಿರ್ ಜೀಲಾನಿಯವರು ಎದುರಾಗುತ್ತಾರೆ. ವರ್ತಕನ ಮುಖದ ಮೇಲಿನ ಆತಂಕವನ್ನು ಕಂಡು ಜೀಲಾನಿ ಅದಕ್ಕೆ ಕಾರಣವನ್ನು ಕೇಳುತ್ತಾರೆ.  ಶೇಖ್ ಹಮ್ಮಾದ್ ಅವರ ಭವಿಷ್ಯವಾಣಿಯ ಬಗ್ಗೆ ಅಬೂ ಮುಜಾಫರ್ ಅವರು ಜೀಲಾನಿ ಗುರುವಿಗೆ ತಿಳಿಸುತ್ತಾರೆ‌. ಜೊತೆಗೆ  ತನ್ನ ಯಾತ್ರೆಗೆ ಇರುವ ನಿಷೇಧವನ್ನೂ ವಿವರಿಸುತ್ತಾರೆ. ಇದನ್ನೆಲ್ಲಾ ಕೇಳಿದ ಜೀಲಾನಿ, ಏನನ್ನೂ ಚಿಂತಿಸದೆ, ನಿರಾಳ ಮನಸ್ಸಿನಿಂದ ಪ್ರಯಾಣಕ್ಕೆ ಹೊರಡಲು ಹೇಳಿ, ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆಯನ್ನು ಸಹ ನೀಡುತ್ತಾರೆ.

ವರ್ತಕ ಜೀಲಾನಿಯ ಸಲಹೆಯನ್ನು ಅನುಸರಿಸಿ, ಅವರು ಮೊದಲೇ ಯೋಜಿಸಿದಂತೆ ಸಿರಿಯಾಕ್ಕೆ ಹೊರಡುತ್ತಾರೆ.  ಪ್ರಯಾಣದ ಸಮಯದಲ್ಲಿ ವ್ಯಾಪಾರಿ ತನ್ನ ವ್ಯಾಪಾರಕ್ಕಾಗಿ ಉಪಯುಕ್ತ ಸಂಪರ್ಕಗಳನ್ನು ಮಾಡಿ, ತಮ್ಮ ಸರಕುಗಳ ಖರೀದಿದಾರರನ್ನು ಕಂಡುಕೊಂಡು ಉತ್ತಮ ಲಾಭವನ್ನು ಗಳಿಸುತ್ತಾರೆ. ಅಂತಿಮವಾಗಿ, ವರ್ತಕರ ಸಂಘವು ತನ್ನ ಹಿಂದಿರುಗುವ ಪ್ರಯಾಣವನ್ನು ಪ್ರಾರಂಭಿಸಿತ್ತು.  ಅದು ಅಲೆಪ್ಪೊವನ್ನು ತಲುಪುತ್ತಿದ್ದಂತೆ, ಅಬು ಮುಜಾಫರ್ ತನ್ನ ಚಿನ್ನದ ನಾಣ್ಯಗಳ ಚೀಲ ಇಟ್ಟ ಸ್ಥಳ ತಿಳಿಯದಂತಾಯಿತು. ಎಷ್ಟೇ ಹುಡುಕಿದರೂ ಪರ್ಸ್ ಸಿಗಲಿಲ್ಲ, ಮಾತ್ರವಲ್ಲ  ಸಿಡಿಮಿಡಿ  ಮನಸ್ಸಿನಿಂದಲೇ ನಿದ್ದೆ ಹೋಗುತ್ತಾರೆ.

ಆದರೆ, ತಮ್ಮ ವರ್ತಕ ಸಂಘವನ್ನು ದರೋಡೆಕೋರರು ದಾಳಿ ಮಾಡಿ ದೋಚುವ ಕನಸು ಅವರಿಗೆ ಬೀಳುತ್ತದೆ. ಕನಸಿನಲ್ಲಿ ಬಂದ ದರೋಡೆಕೋರರು ಕ್ಯಾರವಾನ್‌ ಬಳಿಯಿದ್ದ ಶಸ್ತ್ರಸಜ್ಜಿತ ಕಾವಲುಗಾರರನ್ನು ಬಂಧಿಸಿದ್ದರು‌.  ಅಬೂ ಮುಜಾಫರ್ ಮತ್ತು ಇತರ ಕೆಲವು ವ್ಯಾಪಾರಿಗಳು ವೀರಾವೇಶದಿಂದ ಹೋರಾಡಿದರಾದರೂ, ದರೋಡೆಕೋರರು ದೊಡ್ಡ ಸಂಖ್ಯೆಯಲ್ಲಿದ್ದರು.

ಡಕಾಯಿತರಲ್ಲಿ ಒಬ್ಬ ತನ್ನ ಕತ್ತಿಗೆ ಇರಿಯುತ್ತಿರುವಂತೆ ಭಯಭೀತಗೊಂಡ ಅಬೂ ಮುಜಾಫರ್ ದುಃಸ್ವಪ್ನದಿಂದ ಎಚ್ಚರಗೊಳ್ಳುತ್ತಾರೆ. ತಾವು ಜೀವಂತವಾಗಿ ಮತ್ತು ಸುರಕ್ಷಿತವಾಗಿದ್ದಂತೆ, ಚಿನ್ನದ ನಾಣ್ಯಗಳಿರುವ  ಪರ್ಸ್ ಎಲ್ಲಿಟ್ಟಿದ್ದೆ ಎಂಬುದು ಕೂಡಾ ಅವರ ನೆನಪಿಗೆ ಬರುತ್ತದೆ. ನಂತರ ಶೇಖ್ ಹಮ್ಮಾದ್ ಅವರು ವಿವರಿಸಿದ ಘಟನೆಯನ್ನು ನೆನಪಿಸಿ ಅಚ್ಚರಿಗೊಂಡ ಅಬೂ ಮುಜಾಫರ್, ಅದರ ಮಹತ್ವವನ್ನು ನೆನಪಿಸಿಕೊಳ್ಳುತ್ತಾರೆ.

ಅವರು ತಮ್ಮ ನಗರಕ್ಕೆ ಹಿಂದಿರುಗಿದಾಗ ಮೊದಲು ಶೇಖ್ ಹಮ್ಮಾದ್ ಅವರನ್ನು ಭೇಟಿಯಾಗಬೇಕೆ ಅಥವಾ ಅಬ್ದುಲ್ ಖಾದಿರ್ ಜೀಲಾನಿ ಅವರನ್ನು ಭೇಟಿಯಾಗಬೇಕೆ ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಹೆಚ್ಚಿಗೆ ಏನನ್ನೂ ಯೋಚಿಸದೆ ಅಬೂ ಮುಜಾಫರ್ ಬಜಾರ್‌ನಲ್ಲಿರುವ ಹಮ್ಮಾದ್ ಅವರ ಬಳಿಗೆ ಓಡಿ ಬರುತ್ತಾರೆ. ಆದರೆ, ಕನಿಷ್ಠ ಆಶ್ಚರ್ಯವನ್ನು ಕೂಡಾ ತೋರಿಸದ ಶೇಖ್ ಹಮ್ಮದ್ ಅವರು ಮುಜಾಫರ್ ರನ್ನು ಸ್ವಾಗತಿಸುತ್ತಾರೆ. 

ಭವಿಷ್ಯವಾಣಿಯ ಬಗ್ಗೆ ಮುಜಾಫರ್ ಅವರು ಕೇಳಿದಾಗ, ಅಬೂ ಮುಜಾಫರ್‌ಗೆ ಉದ್ದೇಶಿಸಿರುವುದನ್ನು ತಾನು ಕಂಡಿದ್ದೆ, ಹಾಗಾಗಿ ಅದು ಸಂಭವಿಸುತ್ತದೆ ಎಂದು ಹೇಳಿರುವುದಾಗಿ ಅವರು ತಿಳಿಸುತ್ತಾರೆ. ಆದರೆ ನಿಮಗೆ 70 ಬಾರಿ ಪ್ರಾರ್ಥಿಸುವ ಮೂಲಕ ಆ ದುರಂತವನ್ನು ಎಚ್ಚರದ ಪ್ರಪಂಚದಿಂದ ಕನಸುಗಳ ಜಗತ್ತಿಗೆ ಶೇಖ್ ಜೀಲಾನಿ ಅವರು ವರ್ಗಾಯಿಸಿ ಸುರಕ್ಷೆ ನೀಡಿದ್ದಾರೆ. ಹಾಗಾಗಿ, ಜೀಲಾನಿಯನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲು ವ್ಯಾಪಾರಿಗೆ ಶೇಖ್ ಹಮ್ಮಾದ್‌ ಅವರು ಸೂಚಿಸುತ್ತಾರೆ.

ಕನಸಿನ ಲೋಕದ ಮೇಲೆ ಎಚ್ಚರದಲ್ಲಿರುವಾಗಿನ ಜಗತ್ತು ಹೇಗೆ ತನ್ನ ಪ್ರಭಾವವನ್ನು ಬೀರುತ್ತದೆ ಮತ್ತು ಒಬ್ಬ ವ್ಯಕ್ತಿಯ ಕನಸಿನ ವ್ಯಾಪ್ತಿ ಇನ್ನೊಬ್ಬನ ಪ್ರಭಾವಕ್ಕೆ ಹೇಗೆ ತೆರೆದುಕೊಳ್ಳುತ್ತದೆ ಎಂಬ ಪ್ರಶ್ನೆಗಳು ಈ ದಂತಕತೆಯಲ್ಲಿನ ಜಿಜ್ಞಾಸೆ. ಕನಸಿನ ಜಗತ್ತು ಅಶುಭಕರ ವಿಧಿಯನ್ನು ಕೂಡಿ ಹಾಕಲು ಮತ್ತು ಅದನ್ನು ಪೂರ್ಣವಾಗಿ ಅನುಭವಿಸಲು ಸಾಧ್ಯವಾಗುವ ಸುರಕ್ಷಿತ ವಲಯ ಕೂಡಾ ಆಗಿದ್ದು ಬಹಳ ಆಸಕ್ತಿದಾಯಕವಾಗಿದೆ.

ಟಿಪ್ಪಣಿ:

  • 10-11 ಶತಮಾನದ ವಿದ್ವಾಂಸರಾಗಿರುವ ಶೇಖ್ ಅಬ್ದುಲ್ ಖಾದಿರ್ ಜೀಲಾನಿ ಅವರು ಜಾಗತಿಕವಾಗಿ ಜನಪ್ರೀತಿ ಪಡೆದ ಸೂಫಿವರ್ಯರೂ ಹೌದು. ಸ್ವರಚಿತ ಗ್ರಂಥಗಳಿಂದ ಅಕಾಡೆಮಿಕ್ ವಲಯದಲ್ಲೂ ಪರಿಣಾಮಕಾರಿ ಗುರುತು ಮೂಡಿಸಿರುವ ಶೇಖ್ ಜೀಲಾನಿಯವರ ಬಗ್ಗೆ ಹಲವಾರು ಸಾಹಿತ್ಯಗಳು ರೂಪುಗೊಂಡಿವೆ. ಅರಬ್ಬೀ ಮಲಯಾಳಂ ನಲ್ಲಿ ರಚನೆಯಾದ ‘ಮುಹಿಯುದ್ದೀನ್ ಮಾಲಾ’ ಶೇಖ್ ಜೀಲಾನಿಯವರ ಬಗ್ಗೆ ಬರೆದ ಕಾವ್ಯಕಥನವಾಗಿದ್ದು, ಈ ಗ್ರಂಥವು ಕರ್ನಾಟಕದ ಬ್ಯಾರಿ ಸಮುದಾಯದಲ್ಲೂ ಪವಿತ್ರ ಕೃತಿಯಂತೆ ಪರಿಗಣಿಸಲ್ಪಟ್ಟಿದೆ. ಕೇರಳದಲ್ಲಿ ಹಾಗೂ ಅರಬ್ಬಿ ಮಲಯಾಳಂ ಭಾಷೆಯಲ್ಲಿ ರಚನೆಯಾದ ಅತ್ಯಂತ ಹಳೆಯ ಕೃತಿ ಎಂಬ ಹೆಗ್ಗಳಿಕೆಯೂ ‘ಮುಹಿಯುದ್ದೀನ್ ಮಾಲಾ’ಗಿದೆ.
  • ಬಹ್ಜತುಲ್ ಅಸ್ರಾರ್ ಮತ್ತು ತಕ್ಮೀಲ್ ಶೈಖ್ ಜೀಲಾನಿಯವರ ಜೀವನ ಮತ್ತು ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ಬಂದಿರುವ ಗ್ರಂಥ. “ಅವರ್ ಚೊನ್ನಾ‌ ಬೈತಿನ್ನುಂ ಬಹ್ಜಾ ಕಿತಾಬಿನ್ನುಂ ಅಂಙೇನಾ ತಕ್ಮೀಲಾ ತನ್ನಿನ್ನುಂ ಕಂಡೋವರ್…” ಮುಹ್ಯಿದ್ದೀನ್ ಮಾಲಾ

ಲೇ: ಮುಶರ್ರಫ್‌ ಅಲಿ ಫಾರೂಖಿ
ಕನ್ನಡಕ್ಕೆ: ಫೈಝ್‌ ವಿಟ್ಲ
ಕೃಪೆ: ಲೈವ್‌ ಮಿಂಟ್


ಮುಶರ್ರಫ್‌ ಅಲಿ ಫಾರೂಖಿ

ಮಿಥ್ಯೆಗಳಿಂದ ತುಂಬಿದ ಲಕ್ಷದ್ವೀಪ ಇತಿಹಾಸ ಮತ್ತು ಸಾಹಿತ್ಯ

ಇತ್ತೀಚೆಗೆ ಲಕ್ಷದೀಪ ಚರಿತ್ರೆಯಾಧಾರಿತ ಕಾದಂಬರಿಯೊಂದನ್ನು ಓದಿದೆನು. ಲಕ್ಷದ್ವೀಪ ಇತಿಹಾಸದ ಭಾಗವಾದ ಬೀ ಕುಂಞೆ ಬೀಯವರ ಜೀವನಾಧಾರಿತ ಆ ಕಾದಂಬರಿಯು ಇನ್ನೇನು ಹೊರತರಬೇಕಿತ್ತಷ್ಟೆ. ಕಣ್ಣೂರು ಅರಕ್ಕಲ್ ರಾಜ್ಯಭಾರದ ಕ್ರೂರತೆಯನ್ನು ಕಟ್ಟಿಕೊಡುವ ಘಟನೆಯೊಂದನ್ನು ಕಾದಂಬರಿಯಲ್ಲಿ ವಿವರಿಸಲಾಗಿದೆ. ಅರಕ್ಕಲ್ ರಾಜನು ದ್ವೀಪ ನಿವಾಸಿಗಳಿಗೆ ಮಿತಿಮೀರಿದ ತೆರಿಗೆಯನ್ನು ಹೊರಿಸಿದ್ದನು. ಅಗತ್ತಿ ದ್ವೀಪದ ಮುಖ್ಯಸ್ಥ ಕುಂಞಹ್ಮದ್ ಇದನ್ನು ವಿರೋಧಿಸಿದರು. ತರುವಾಯ ಆದಾಯ ತೆರಿಗೆ ಸಂಗ್ರಹಕ್ಕಾಗಿ ಅರಕ್ಕಲ್ ಸೇನೆಯು ದ್ವೀಪಿಗೆ ಬಂದಿಳಿಯಿತು. ಮುಖ್ಯಸ್ಥನ ತೀರ್ಮಾಣವನ್ನು ಬದಲಾಯಿಸಲು ಪ್ರಯತ್ನಿಸಿದ ಸೇನೆಯು ವಿಫಲವಾಯಿತು. ಖಾಝಿಯಾಗಿದ್ದ ಕುಂಞಹ್ಮದ್ ಮುಸ್ಲಿಯಾರರು ತನ್ನ ನಿಲುವಿನಲ್ಲಿ ಅಚಲವಾಗಿ ನಿಂತರು. ದ್ವೀಪದ ಜನರ ಬವಣೆಗಳು ಅವರ ಮನದಾಳದಲ್ಲಿ ಆಳವಾಗಿ ಬೇರೂರಿದ್ದವು. ಇದನ್ನು ಸಹಿಸದ ಸೇನೆಯು ರಕ್ತದೋಕುಳಿಯನ್ನು ಹರಿಸಿತು. ಕುಂಞಹ್ಮದ್ ಅಮೀನ್ ಹಾಗೂ ಅವರ ಬಲಿಯ ಇಲ್ಲಮ್ ಮನೆ ಮಂದಿಯನ್ನು ವಧಿಸಲಾಯಿತು. ಇವೆಲ್ಲವನ್ನೂ ಕಂಡ ಬೀಕುಂಞೆ ಬೀ ಅಲ್ಲಿಂದ ಪಾರಾಗಿ ಪೂವತ್ತಿಯೋಡ್ ಎಂಬಲ್ಲಿ ಆಶ್ರಯ ಪಡೆದರು. ಪೂವತ್ತಿಯೋಡಿನ ಆಳು ಬೀಕುಂಞೆ ಬೀ ಇಲ್ಲಿರುವುದು ಸುರಕ್ಷಿತವಲ್ಲ ಎಂದರಿತು ಅವರನ್ನು ತೆಕ್ಕುಂತಾಲಿಯ ಗುಹೆಯನ್ನು ಹೋಲುವ ಕಂದಕವೊಂದರಲ್ಲಿ ಅಡಗಿಸಿದರು. ರಾತ್ರಿ ದೋಣಿಯೊಂದರಲ್ಲಿ ಅಮಿನಿ ದ್ವೀಪಿಗೆ ಕರೆತಂದು ಕಡ್ಕಯಂ ಎಂಬ ಮನೆಯಲ್ಲಿ ವಸತಿ ಸೌಕರ್ಯ ಒದಗಿಸಿದರು ಮತ್ತು ಅಲ್ಲಿನ ಒಬ್ಬರನ್ನು ಲಗ್ನವಾದರು ಎಂದಾಗಿದೆ ಚರಿತ್ರೆ. ಬರಹಗಾರನು ತನ್ನ ಭಾವನೆಗೆ ಅನುಸಾರವಾಗಿ ಕಾದಂಬರಿಯನ್ನು ಮುಂದುವರಿಸಿದ್ದಾರೆ. ಕಾದಂಬರಿಯು ಭಾವನೆ, ಚರಿತ್ರೆ, ಬರಹಗಾರನ ಆಶಯಗಳು ಜೊತೆಗೂಡಿ ಒಂದು ಆಸ್ವಾದ್ಯಕರ ಪುಸ್ತಕವಾಗಿ ಬಿಡುಗಡೆಯಾಗುತ್ತದೆ.

ಅಮಿನಿ ದ್ವೀಪಿನ ಪುರಕೋಟ್ ಓಮನಪೂವರ ಇದೇ ರೀತಿಯ ಮತ್ತೊಂದು ಚರಿತ್ರೆಯಿದೆ. ಓಮನಪೂವ್ ಊರಿನ ಹಿರಿಯ ಮುಖ್ಯಸ್ಥನಾದ ತನ್ನ ಪತಿ ಕುಟ್ಟಿತ್ತರವಾಡರೊಂದಿಗೆ ಸಂತುಷ್ಟ ಜೀವನ ನಡೆಸುತ್ತಿದ್ದರು. ಆ ವೇಳೆಗೆ ಅರಕ್ಕಲ್ ಆಲಿ ರಾಜರ ಪತ್ನಿಯು ತೀರಿಕೊಳ್ಳುತ್ತಾರೆ. ಪತ್ನಿಯೊಬ್ಬಳಿಗಾಗಿ ಹುಡುಕಾಟದಲ್ಲಿದ್ದ ಆಲಿ ರಾಜರಿಗೆ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಅತಿ ಸುಂದರಿಯಾದ ಹೆಣ್ಣೋರ್ವಳು ಇರುವುದಾಗಿ ತಿಳಿದುಬರುತ್ತದೆ. ರಾಜರ ಇಂಗಿತಕ್ಕೆ ಓಮನಪೂವ್ ವಿಸಮ್ಮತಿ ಸೂಚಿಸುತ್ತಾರೆ. ಕೊನೆಗೆ ಅರಕ್ಕಲ್ ಸೇನೆಯು ಧಾವಿಸಿ ಓಮನ ಪೂವನ್ನು ಕಣ್ಣೂರಿನ ಅರಮನೆಗೆ ಕೊಂಡೊಯ್ಯುತ್ತದೆ. ಓಮನಪೂವಿನೊಂದಿಗೆ ಅರಮನೆಗೆ ತೆರಳಿದ್ದ ಪತಿ ಕುಟ್ಟಿತ್ತರವಾಡ ಅರಮನೆಯಲ್ಲಿ ವಿವಾಹವನ್ನು ವಿಚ್ಚೇದಿಸಿದ ಬಳಿಕ ರಾಜನು ಓಮನಪೂವನ್ನು ವಿವಾಹವಾಗುತ್ತಾನೆ. ಈ ಘಟನೆಗೆ ಯಾವುದೇ ಪುರಾವೆಗಳೂ ಇಲ್ಲ ಎಂದು ಅರಕ್ಕಲ್ ಮನೆತನವು ಇದನ್ನು ಅಲ್ಲಗಳೆದಿದೆ.

ಕಲ್ಪೇನಿ ದ್ವೀಪಿನ ಸಾಣಂಕದಿಯಾ ಎಂಬ ಸುಂದರಿಯನ್ನು ಕಡಲ್ಗಳ್ಳನು ಅಪಹರಿಸಿದನು ಎಂಬ ಕಥೆಯು ಪ್ರಚಾರದಲ್ಲಿದ್ದರೂ ದಾಖಲೆಗಳಿಲ್ಲ. ಅಮಿನಿಯಲ್ಲಿ ಕ್ರೂರತೆಯನ್ನು ಮೆರೆದ ಬ್ರಿಟೀಷ್ ಸೇನೆಗೆ ತಂತ್ರಪೂರ್ವಕವಾಗಿ ವಿಷವುಣಿಸಿದ ಘಟನೆ, ಚೆತ್ತ್ಲಾತ್ತ್ ದ್ವೀಪಿನ ಆಶಿ ಆಲಿ ಅಹ್ಮದ್ ಶುಹದಾ ಹೋರಾಟಗಳು, ಆಕ್ರಮಿಸಲು ಬಂದ ಅರಕ್ಕಲ್ ಸೇನೆಯನ್ನು ಕಟ್ಟಿಹಾಕಿ ಶ್ರೀರಂಗಪಟ್ಟಣದ ಟಿಪ್ಪುವಿಗೆ ಒಪ್ಪಿಸಿ ಅರಕ್ಕಲ್ ರಾಜರಿಂದ ಮುಕ್ತಿಯನ್ನು ದೊರಕಿಸಬೇಕೆಂದು ಬೇಡಿದ ಅಮಿನಿಯ ಯೋಧರ ಸಾಹಸ ಇತ್ಯಾದಿ ಹೋರಾಟಗಳು ಮತ್ತು ಚಳುವಳಿಗಳು ಸ್ಪಷ್ಟವಾದ ದಾಖಲೆಗಳಿಲ್ಲದ ಕಾರಣ ಹೊಸ ತಲೆಮಾರಿಗೆ ಚರಿತ್ರೆಗಳು ಐತಿಹ್ಯವೆಂಬಂತಾಗಿದೆ.

ದ್ವೀಪಿನ ಜನಜೀವನ ಮತ್ತು ಚರಿತ್ರೆಗಳೆಲ್ಲವೂ ಜಾನಪದ ಸಾಹಿತ್ಯಗಳಲ್ಲಿ ಬಹಳ ಅಚ್ಚುಕಟ್ಟಾಗಿ ದಾಖಲಿಸಲಾಗಿವೆ. ಬಾಯಿ ಮಾತು ಮುಖಾಂತರ ಪ್ರಚಾರದಲ್ಲಿರುವ ಚರಿತ್ರೆ ಹಾಡುಗಳು ಶೇಖರಿಸಲ್ಪಟ್ಟಿದ್ದರೂ ಇನ್ನೂ ಹಲವಾರು ಜಾನಪದ ಹಾಡುಗಳು ಮತ್ತು ಸಾಹಿತ್ಯ ರಚನೆಗಳು ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವೈಯುಕ್ತಿಕವಾದ ಪ್ರಯತ್ನಗಳು ನಡೆದಿದೆಯಷ್ಟೆ. ಸರ್ಕಾರಗಳು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಗೇಕಿದೆ.

ಇಸ್ಲಾಮ್ ಧರ್ಮ ಸ್ವೀಕಾರದ ಕುರಿತಾದ ಚರಿತ್ರೆಯೂ ಇದಕ್ಕೆ ಹೊರತಾಗಿಲ್ಲ. ದ್ವೀಪಿನಲ್ಲಿ ಇಸ್ಲಾಮ್ ಧರ್ಮ ಪ್ರಚಾರಪಡಿಸಿದ್ದು ಪ್ರಥಮ ಖಲೀಫಾ ಅಬೂಬಕರ್ ಸಿದ್ದೀಖರ ಪೌತ್ರ ಉಬೈದುಲ್ಲಾರಾಗಿದ್ದಾರೆ ಎಂದಾಗಿದೆ ಅಲ್ಲಿನ ಬಹುತೇಕರ ನಂಬಿಕೆ.ಆಂದ್ರೋತ್ ಮಸೀದಿಯಲ್ಲಿ ಅವರ ಹೆಸರಿನಲ್ಲಿರುವ ಗೋರಿ ಮತ್ತು ಅವರು ಕಟ್ಟಿಸಿದ ಮಸೀದಿ ಹಾಗೂ ಮನೆಯಿದೆ. ಇಲ್ಲಿನ ಶೇಕಡಾ ನೂರರಷ್ಟು ಜನರು ಮುಸ್ಲಿಮರೆಂಬುವುದು ಗಮನಾರ್ಹ ಸಂಗತಿ. ಈ ವಿಷಯಗಳಲ್ಲಿ ಅಧ್ಯಯನ ನಡೆಸಬೇಕಾದ ಅನಿವಾರ್ಯತೆಯಿದೆ.

ದಮನಿತರು ಸಾಹಿತ್ಯದ ಮುಖಾಂತರ ಪ್ರತಿರೋಧ ಒಡ್ದುವುದನ್ನು ಕೂಡಾ ನಮಗೆ ಕಾಣಬಹುದು. ಓಮನಪೂವರ ಜಾನಪದ ಹಾಡಿನಲ್ಲಿ ಆಲಿ ರಾಜನು ಓಮನ ಪೂವಿನೊಂದಿಗೆ ಕೇಳುತ್ತಾನೆ “ಞಾನ್ ನನ್ನೋ ಕುಟ್ಟಿತ್ತನವಾ ನನ್ನೋ ಪೂವೇ? ಪೊನ್ನುಂ ಫಂಡುಂ ಎಲ್ಲಾಂ ಉಳ್ಳೋನಾನೆಂಗಿಲುಂ ಕುಟ್ಟಿತ್ತರವಾ ಅಝಗಿನು ಪೋರಾ” ಎಂದು ಓಮನ ಪೂವ್ ಜವಾಬಿತ್ತರು. ಹೀಗೆ ರಾಜನ ಪ್ರಶ್ನೆಗಳಿಗೆ ಓಮನ ಪೂವರ ಪ್ರತಿಕ್ರಿಯೆ ಒಂದು ರೀತಿಯ ಪ್ರತಿರೋಧವಾಗಿತ್ತು. “ನಾಂ ನನ್ನೋ ಕುಟ್ಟಿತ್ತರವಾ ನನ್ನೋ ಪೂವೇ? ಆದಿಲಾಯವಿನ ಕೆಟ್ಟುಂ ಮಾಳಿಗಯುಂ ಕುಟ್ಟಿತ್ತರವಾ ಚೆಟ್ಟಕ್ಕುಂ ಪೋರಾ. ನಾಂ ನನ್ನೋ ಕುಟ್ಟಿತ್ತರವಾ ನನ್ನೋ ಪೂವೇ? ಆದಿಲಾಯಾವಿನೆ ಆನಯ ಕೂಟಂ ಕುಟ್ಟಿತ್ತರವಾ ಕೋಳಿಕ್ಕುಂ ಪೋರಾ. ನಾಂ ನನ್ನೋ ಕುಟ್ಟಿತ್ತರವಾ ನನ್ನೋ ಪೂವೇ? ಆದಿಲಾಯವಿನ ಕುತ್ತಿಚ್ಚೇರ್ ಕುಟ್ಟಿತ್ತರವಾ ಚಾಯಕ್ಕುಂ ಪೋರಾ.”

ಅಂದು ಓಮನಪೂವ್ ಏಕಾಧಿಪತ್ಯಕ್ಕೆ ವಿರುದ್ಧವಾಗಿ ನೀಡಿದ ಹೇಳಿಕೆಗಳು ಇಂದಿಗೂ ಅಧಿಕಾರಿಗಳ ವಿರುದ್ಧ ದ್ವೀಪ ನಿವಾಸಿಗಳು ಪುನರುಚ್ಚಿಸುತ್ತಿರು ವರು. ಬೀಕುಂಞೆ ಬೀಯನ್ನು ಬಚ್ಚಿಟ್ಟು ಕಾಪಾಡಿದ ಬೀಕುಂಞೆ ಪಾರ ಮತ್ತು ಅವರ ಕುಟುಂಬದ ಹತ್ಯೆಗೈದು ಬಲಿಯ ಇಲ್ಲಿತ್ತಿಲಾವಳಿ ಕಡಲಿಗೆ ಹರಿಸಿದ ರಕ್ತವು ಇಂದಿಗೂ ದ್ವೀಪಿನ ಚರಿತ್ರೆ ಸ್ಮರಣೆಯಾಗಿ ಉಳಿದಿದೆ.

ಅರಕ್ಕಲ್ ಸೇನೆಯನ್ನು ಕಟ್ಟಿಹಾಕಿ ಟಿಪ್ಪುವಿನ ಮುಂದೆ ಹಾಜರುಪಡಿಸಿದ ಧೀರ ಯೋಧರ ಚರಿತ್ರೆಯ ಕುರುಹೆಂಬಂತೆ ದ್ವೀಪಿನ ಉತ್ತರ ಭಾಗದ ಉತ್ತರಾಧಿಕಾರ ಮತ್ತು ಆಡಳಿತ ವಿಷಯಗಳಲ್ಲಿ ಮೈಸೂರು ಆಡಳಿತದ ಅವಶೇಷಗಳನ್ನು ಕಾಣಬಹುದಾಗಿದೆ. ದ್ವೀಪಿನ ಜಾನಪದ ಸಾಹಿತ್ಯದಲ್ಲಿ ಉತ್ತರದ ಹಾಡುಗಳ ಸ್ವಾಧೀನವು ಕಂಡುಬರುತ್ತಿದೆ. ಆದರೆ ಭೌಗೋಳಿಕವಾದ ಒಂಟಿತನ ಮತ್ತು ದ್ವೀಪಿನ ಪ್ರಾದೇಶಿಕ ಭಾಷೆಯ ಪ್ರಭಾವದಿಂದಾಗಿ ಅಲ್ಲಿನ ಸಾಹಿತ್ಯ ವಿನ್ಯಾಸಗಳು ವ್ಯತಿರಿಕ್ತವಾದ ಅನುಭವವನ್ನು ನೀಡುತ್ತದೆ.

“ಅನ್ನಬಿಡ್ ಇನ್ನಬಿಡ್ ಏಗುಣಿಸಾ
ಕರೈ ನಿನ್ನವನೋಡ್ ಪರೈಗುಣಿಸಾ”
ಎಂದು ಪ್ರಾರಂಭವಾಗುವ ಹಾಡು ದ್ವೀಪಿನ ಬಹಳ ಸ್ವಾರಸ್ಯಕರವಾದ ಹಾಡುಗಳಲ್ಲೊಂದಾಗಿದೆ. ಮೀನು ಮತ್ತು ಮೀನಿನ ಗಾಳದ ನಡುವಿನ ಸಂಭಾಷಣೆಯಾಗಿದೆ ಈ ಹಾಡಿನ ಹೂರಣ.

ಮೀನು ನನ್ನನ್ನು ಬಿಟ್ಟು ಬಿಡಬೇಕೆಂದು ಗಾಳದೊಂದಿಗೆ ಭಿನ್ನವಿಸುತ್ತದೆ. ಪ್ರತ್ಯುತ್ತರವಾಗಿ ಗಾಳವು ” ನನ್ನೊಂದಿಗೆ ಕೇಳಿಕೊಳ್ಳುವುದರಲ್ಲಿ ಪ್ರಯೋಜನವಿಲ್ಲ, ದಡದಲ್ಲಿರುವ ವ್ಯಕ್ತಿಯೊಂದಿಗೆ ಕೇಳಿಕೋ” ಎಂದಿತು. ಮೀನು ಮತ್ತು ಮೀನುಗಾರರ ನಡುವಿನ ಮಾತುಕತೆಗಳು, ಕಡಲಿನೊಂದಿಗಿರುವ ಸಂಬಂಧ ಇವೆಲ್ಲವೂ ಇನ್ನಿತರ ಪ್ರದೇಶಗಳ ಮೀನುಗಾರರಿಗಿಂತಲೂ ಬಹಳ ಗಾಢವಾಗಿದೆ. ದ್ವೀಪಿನ ಮೀನುಗಾರರು ತಮ್ಮ ಸ್ನೇಹಿತರನ್ನು ಏಕ ವಚನದಲ್ಲಿ ಸಂಭೋಧಿಸುವಂತೆ ಕಡಲು ಹಾಗೂ ಮೀನುಗಳೊಂದಿಗೆ ಮಾತಿಗಿಳಿಯುತ್ತಾರೆ. ಅಷ್ಟಪಾದಿ (octopus) ನೀರಾ ಕುಡಿಯಲು ಬರುವುದನ್ನು ವಾಸ್ತವಿಕತೆಗೆ ಸಮೀಕರಿಸಿ ವಿವರಿಸಲಾಗಿದೆ. ಜಾನಪದ ಹಾಡುಗಳಲ್ಲಿ ಚರಿತ್ರೆಯಾಧಾರಿತ ವಿಷಯಗಳನ್ನೂ ಕಾಣಬಹುದು. ಕಿಲ್ತಾನ್ ದ್ವೀಪಿನ ವಲಸೆಯ ಕುರಿತಾದ ವಿವರಣೆಗಳು ಈ ರೀತಿಯಾಗಿ ಜಾನಪದ ಹಾಡಿನಿಂದ ಲಭಿಸಿದ್ದಾಗಿದೆ. “ಎಲ್ಲಾವರುಂ ಕಾಟ್ಟಿಂಡಿಂಡಿಡುಂ ತೋಟಿಂಡಿಂ ಬನ್ನ ಪೋಕರ್ಕದಿಯಾ ಮುರಟ್ಟಿಂಡುಂ ಬನ್ನ” ಎಂದಾಗಿದೆ ಆ ಗೆರೆಗಳು. ಪೋಕರ್ ಕದಿಯಾ ಎಂಬ ಮಹಿಳೆ ಕಿಲ್ತಾನ್ ದ್ವೀಪಿನ ಮೂಲ ನಿವಾಸಿಯೂ, ಉಳಿದೆಲ್ಲರೂ ವಲಸಿಗರಾಗಿ ಬಂದವರು ಎಂದಾಗಿದೆ ಸಾರಾಂಶ.

ದ್ವೀಪ ನಿವಾಸಿಗಳ ಜೀವನದಲ್ಲೆಂಬಂತೆ ಸಾಹಿತ್ಯದಲ್ಲೂ ಸೂಫಿಗಳ ಪ್ರಭಾವವಿದೆ. ಸಾಹಿತ್ಯ ಕೃತಿಗಳು ‘ಕಲ್ವೈರ ಮಾಲೆ’ ಮತ್ತು ‘ಕೋಲ ಸಿರಿಮಾಲೆ ‘ ಯಾಗಿದೆ ಲಭ್ಯವಿರುವ ಅತೀ ಪುರಾತನವಾದ ಎರಡು ಸಾಹಿತ್ಯ ಕೃತಿಗಳು. ಸುಮಾರು 300 ವರ್ಷಗಳ ಇತಿಹಾಸವಿರುವ ಈ ಎರಡು ಕೃತಿಗಳು ಆಧ್ಯಾತ್ಮಿಕತೆಯ ವಿಷಯಗಳನ್ನೊಳಗೊಂಡಿವೆ. ಈ ಎರಡು ಕೃತಿಗಳ ಕರ್ತೃಗಳಾದ ಬಲಿಯ ಇಲ್ಲಂ ಪಳ್ಳಿಕೋ ಎಂಬ ಅಹ್ಮದ್ ಮುಸ್ಲಿಯಾರ್ ಹಾಗೂ ಅಹ್ಮದ್ ನಖ್ಶಬಂದಿ ಎಂದು ಖ್ಯಾತರಾದ ಕಿಳುತ್ತನ್ ತಂಗಳ್ ಇಬ್ಬರೂ ಕೂಡಾ ಸೂಫಿಗಳಾಗಿದ್ದರು. ಪಳ್ಳಿಕೋ ಮಕ್ಕಾಗೆ ತೆರಳಿ ಚೀರ್ವನಿ ತ್ವರೀಖತಿಗೆ ಸೇರಿ ಅಲ್ಲಿಯೇ ಮರಣಹೊಂದಿದರು. ಅಹ್ಮದ್ ನಖ್ಶಬಂದಿ ನಖ್ಶಬಂದಿ ತ್ವರೀಖತ್ ಸ್ವೀಕರಿಸಿ ಅಮಿನಿ ದ್ವೀಪಿನಲ್ಲಿ ಇಹಲೋಕ ತ್ಯಜಿಸಿದರು.

ಒಬ್ಬನಿಗೆ ಪ್ರೀತಿಸಲು ಇಬ್ಬರು ಸುಂದರಿಗಳಿರುವರು. ಬೇಲತ್ತಿ ಹಾಗೂ ಬಾಲತ್ತಿ. ಬೇಲತ್ತಿ ಎಂದರೆ ಕೆಲಸದಾಳು. ಬಾಲತ್ತಿ ಸುಂದರಿಯಾದ ತರುಣಿ. ಆತ್ಮವನ್ನು ಸುಂದರಿಯಾದ ಪ್ರೇಯಸಿಗೆ ಮತ್ತು ಶರೀರ ವಾಂಛೆಗಳನ್ನು ಬಡ್ಕತಿ ಕಸರ್ಮಂಡಕದಲ್ಲಿರುವ ಸುಂದರಿಯ ಕೆಲಸದಾಳಾಗಿಯೂ ಕೋಲಸಿರಿಮಾಲೆಯಲ್ಲಿ ಹೋಲಿಸಲಾಗಿದೆ. ” ಹೈರಾಯ ಬೀವಿನೆ ಪಿಡಿಚೋರೆಲ್ಲಾಮ್ ಖೇದಿಚ್ಚ್ ಕೈ ಕಡಿಚ್ಚಾನ್ಡ್ ಪೋವುಮ್ ” ಎಂಬ ಗೆರೆಗಳ ಮೂಲಕ ಕೆಲಸದಾಳುವಿನ ಹಿಂದೆ ಹೋದವರೆಲ್ಲರೂ ಅಪಾಯಕ್ಕೆ ಸಿಲುಕಿ ಮೃತರಾಗುವರು ಎಂದು ತಿಳಿಸಲಾಗಿದೆ. ಕೋಲ ಸಿರಿಮಾಲೆಯ ವಿಶೇಷತೆ ಬಾಯಿಮಾತಿನಿಂದ ಪ್ರಚಲಿತದಲ್ಲಿರುವ ವಿಷಯಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಬಹಳ ಸೊಗಸಾಗಿ ವಿವರಿಸಲಾಗಿದೆ. ದ್ವೀಪಿನ ಜಾನಪದ ಹಾಡುಗಳಲ್ಲಿ ಕೂಡಾ ಈ ರೀತಿಯ ಪ್ರಾದೇಶಿಕ ಭಾಷೆಯ ಬಳಕೆ ಕಾಣಲಸಾಧ್ಯ.

ನಾನು ನನ್ನ ಊರಿನ ಸಾಹಿತ್ಯ ಪರಂಪರೆಯ ಕುರಿತು ಅಧ್ಯಯನ ನಡೆಸಿದಾಗ ದೊರಕಿದ ಸಾಕ್ಷ್ಯಾಧಾರಗಳ ಪ್ರಕಾರ ಬಲಿಯ ಇಲ್ಲಂ ಪಳ್ಳಿಕೋಯ ಮತ್ತು ಅಹ್ಮದ್ ನಖ್ಶಬಂದಿಯವರ ಕಾಲದ ಬಳಿಕ ಎಲ್ಲಾ ತಲೆಮಾರುಗಳಲ್ಲಿಯೂ ಸುಮಾರು 10ರಷ್ಟು ಬರಹಗಾರರಿದ್ದರು. ಕೇವಲ ಎರಡು ಕಿ. ಮೀ ವಿಸ್ತೀರ್ಣವಿರುವ ಪ್ರದೇಶದಲ್ಲಿ ಇದೊಂದು ಆಶ್ಚರ್ಯಕರ ಸಂಗತಿಯಾಗಿದೆ. ಇವರೆಲ್ಲರೂ ತನ್ನದೇ ಆದ ಕ್ಷೇತ್ರಗಳಲ್ಲಿ ಗ್ರಂಥ ರಚನೆ ನಡೆಸಿದವರಾಗಿದ್ದಾರೆ. ಬಹುತೇಕ ಕೃತಿಗಳು ಮೂಲ ಕೃತಿಯ ಕೈ ಬರಹಗಳಲ್ಲಿಯೇ ಇಂದಿಗೂ ಲಭ್ಯವಿದೆ.
ಕಪ್ಪಲ್ ಪಾಟ್ ಎಂಬ ಗ್ರಂಥವೊಂದಿದೆ.ಅಮೇರಿಕಾದಿಂದ ಹಡಗು ನಿರ್ಮಿಸಿ ಕಿಲ್ತಾನ್ ದ್ವೀಪದ ಬಂಡೆಯೊಂದಕ್ಕೆ ಡಿಕ್ಕಿ ಹೊಡೆದು ನುಚ್ಚು ನೂರಾಗುವ ಘಟನೆಯನ್ನು ವಿವರಿಸುವ ಒಂದು ಸುದೀರ್ಘ ಕಾವ್ಯವಾಗಿದೆ. ಪೋಕರ್ಚಿಯೋಡ್ ಕಾಕ ಎಂದು ಖ್ಯಾತರಾದ ಕುಂಞಿ ಅಹ್ಮದ್ ಮುಸ್ಲಿಯಾರರು ಇದರ ಕರ್ತೃ. ಪರವಮಾಲ ಎಂದು ಪ್ರಚಾರದಲ್ಲಿರುವುದು ಇದರ ಒಂದು ಭಾಗ ಮಾತ್ರವಾಗಿದೆ.” ಕೊತ್ತಲ್ಲಿ ಕೊತ್ತಲ್ಲಿ ಪುಳ್ಳಿ ಪರವೇ ಕೊತ್ತಿ ಕೂಡಿಯನ್ನಾಂಡಾಮಾಲ್ ಪರವೇ” ಎಂದು ಕೇಳುವಾಗ ಮಲಯಾಳಿಗಳು ಆಕಾಶದಲ್ಲಿ ಹಾರಾಡುವ ಪಕ್ಷಿಗಳ ಕುರಿತು ಚಿಂತಿಸುವುದು ಸಹಜ. ಆದರೆ ಕಡಲ ಮೇಲೆ ರೆಕ್ಕೆ ಬಿಡಿಸಿ ಹಾರಾಡುವ ಪರವ ಎಂಬ ಮೀನಾಗಿದೆ ಇಲ್ಲಿನ ಕಥಾಪಾತ್ರ . ಹಡಗು ಧ್ವಂಸವಾದ ಘಟನೆಯ ಮೂಲಕ ದ್ವೀಪದ ಜೀವನವನ್ನು ಕಾಕ ಬಹಳ ಮನೋಹರವಾಗಿ ವಿವರಿಸುತ್ತಾರೆ.

ಮಹರಂಗೀಸ್ ರಾಣಿಯ ಜೀವನವನ್ನು ಕಟ್ಟಿಕೊಡುವ ಒಂದು ಕಾದಂಬರಿಯಾಗಿದೆ ಮಹರಟೀಸ್ ಮಾಲೆ. ಬಿಯ್ಯಾಪುರ ಅಬ್ದುರ್ರಹ್ಮಾನ್ ಎಂಬ ಕವಿ ಇದನ್ನು ರಚಿಸಿರುವರು. ರಾಣಿಯು, ತನ್ನನ್ನು ವರಿಸಲು ಬರುವ ರಾಜಕುಮಾರರೊಂದಿಗೆ ಕುಲ್ ಸನೋವನೊಂದಿಗೆ ಏನು ತಪ್ಪು ಮಾಡಿದೆ? ಎಂದು ಪ್ರಶ್ನಿಸುತ್ತಾಳೆ. ಉತ್ತರವಿಲ್ಲದಿದ್ದರೆ ವಧಿಸಲಾಗುತ್ತಿತ್ತು. ಅರಬಿ ಕಥೆ ಪ್ರೇರಿತ ಈ ಕಥಾಗಾನವು ಕಾವ್ಯ ಭಂಗಿಯಲ್ಲಿ ಬಹಳ ಮುಂಚೂಣಿಯಲ್ಲಿದೆ. ಪ್ರವಾದಿವರ್ಯರು ಮೊಲೆ ಹಾಲು ಕುಡಿಯುವುದನ್ನು ಪ್ರಮೇಯವಾಗಿಟ್ಟುಕೊಂಡು ಬಿರಿಯಂ ತೆತ್ತಿಯೋಡ್ ಮೂಸಾನ್ ಕುಟ್ಟಿ ಮುಸ್ಲಿಯಾರರು ರಚಿಸಿರುವ ಮುಲಕುಡಿ ಮಾಲೆ ಬಹಳ ಪ್ರಸಿದ್ಧವಾಗಿದೆ. ಪ್ರವಾದಿವರ್ಯರ ಜೀವನ, ಪರಿಸರ ಮತ್ತು ಅಂದಿನ ಆಚಾರಗಳಿಗೆ ಈ ಗ್ರಂಥವು ಬೆಳಕು ಚೆಲ್ಲುತ್ತದೆ.
ಯೂಸುಫ್ ಖಿಸ್ಸಾವನ್ನು ಐಶ್ವರ್ಯೋಡ ಮುತ್ತುಕೋಯ ತಂಗಳ್ ಆಂದ್ರೋತ್, ಪುರಾಡಂ ಕುಂಞಿಕೋಯ ತಂಗಳ್ ಆಂದ್ರೋತ್, ಅಹ್ಮದ್ ನಖಶಬಂದಿ ತಂಗಳ್ ಕಿಲ್ತಾನ್ ಎಂಬೀ ಮೂವರು ರಚಿಸಿದ್ದಾರೆ. ಇವುಗಳ ಪೈಕಿ ಪ್ರಥಮವಾಗಿ ರಚಿಸಲ್ಪಟ್ಟದ್ದು ಕಿಲ್ತಾನ್ ತಂಗಳರ ಕೃತಿಯಾಗಿದ್ದರೆ, ಪ್ರಸಿದ್ಧಿ ಪಡೆದಿರುವುದು ಐಶ್ವರ್ಯೋಡ ಮುತ್ತುಕೋಯ ತಂಗಳರ ರಚನೆಯಾಗಿದೆ.

ದ್ವೀಪ ಸಾಹಿತ್ಯವು ಇಂದು ಸಣ್ಣಕತೆ, ಕವನ, ಕಾದಂಬರಿ ಎಂಬಿತ್ಯಾದಿ ಸಾಹಿತ್ಯ ರಚನೆಗಳಿಗೂ ವಿಸ್ತರಿಸಿವೆ. ಇವುಗಳ ಪೈಕಿ ಯುಸಿಕೆ ತಂಗಳ್ ಹಾಗೂ ಅಬೂ ಸಾಲಾ ಕೋಯಾ ಮಂಡಲಿಯವರ ಕಥೆಗಳು ಬಹಳ ಮುಖ್ಯವಾಗಿದೆ. ಹಳೆ ತಲೆಮಾರಿನ ಜನ ಜೀವನಕ್ಕೆ ಬೆಳಕು ಚೆಲ್ಲುವ ಯುಸಿಕೆ ಕೃತಿಯಲ್ಲಿ ವಿಡಂಬನೆ ಮತ್ತು ಕಥಾ ಸೌಂದರ್ಯವನ್ನು ರರ್ಶಿಸಬಹುದು. ತಂಗಳರ ಕಡಲಿನ ಕಥೆಗಳಲ್ಲಿ ಪ್ರಣಯ ಹಾಗೂ ಕಡಲು ಜೊತೆಯಾಗುವ ಅಪೂರ್ವವಾದ ಭಂಗಿಯಿದೆ.ಅಬೂ ಸಾಲಾ ಕೋಯಾ ಮಂಡಲಿ ಕಥೆಗಳಲ್ಲಿರುವ ಹಾಸ್ಯಭಂಗಿಯು ಓದುಗರ ಮನ ಮುಟ್ಟುವಂತಿದೆ. ಇದುವರೆಗೂ ನಾಲ್ಕು ಕಾದಂಬರಿಗಳು ಪ್ರಕಟಗೊಂಡಿವೆ. ಅವುಗಳಲ್ಲಿ ‘ಎಂಡೆ ಕೋಲೋಡ’, ತಖಿಯುದ್ದೀನ್ ಅಲಿ ಸಿ.ಎಚ್ ಬರೆದಿರುವ ‘ಪಡಪುರಪ್ಪಾಡ್’ ಮತ್ತು ಅಸದ್ ಮುತ್ತೂಸರ ‘ಚೆಗುತ್ತಾನ್ ಕ್ವಾಟೇರ್ಸ್’ ಎಂಬೀ ಮೂರು ಕಾದಂಬರಿಗಳು ಕಿಲ್ತಾನ್ ನಿವಾಸಿಗಳದ್ದಾಗಿದ್ದರೆ, ಉಳಿದೊಂದು ಕಾದಂಬರಿಯು ಹಂಸು ಶಾ ಅಗತ್ತಿಯವರ ‘ಸ್ನೇಹ ಬಂಧ’ ಆಗಿದೆ. ಇಲ್ಲಿನ ಪೂರ್ವಜರು ತಮ್ಮ ಐತಿಹ್ಯ ಕಥೆಗಳಲ್ಲಿ ದ್ವೀಪಿನ ಉತ್ಪತ್ತಿ, ವಲಸೆ, ಮತಾಂತರ ಹಾಗೂ ಇನ್ನಿತರ ಚಾರಿತ್ರಿಕ ಘಟನಾವಳಿಗಳನ್ನು ಪ್ರತಿಪಾದಿಸಿದ್ದಾರೆ.ಇಲ್ಲಿನ ಜಾನಪದ ಹಾಡುಗಳು, ಮಾಲೆ ಹಾಡುಗಳು, ಬಾಯಿಮಾತಿನ ಮೂಲಕ ಚಾಲ್ತಿಯಲ್ಲಿರುವ ಹಾಡುಗಳೆಲ್ಲವೂ ಇಲ್ಲಿನ ಭಾಷೆ ಮತ್ತು ಜನಜೀವನವನ್ನು ವಿವರಿಸಿದೆ. ಪ್ರಕೃತಿ ವಿಕೋಪಗಳಿಂದ ನಷ್ಟವಾಗಿರುವ ಲಿಖಿತ ಪರಂಪರೆಗಳನ್ನು ಲಭ್ಯವಿರುವ ಗ್ರಂಥಗಳಿಂದಲೂ ಹಾಡುಗಳಿಂದಲೂ ನಾವು ಸಂಶೋಧನೆ ನಡೆಸಬೇಕಾಗಿದೆ. ಮುಹ್ಯಿದ್ದೀನ್ ಮಾಲೆಗಿಂತಲೂ ಪುರಾತನವಾದ ಬರಹಗಳು ಇರುವುದಾಗಿ ಅರಬಿ ಲಿಪಿಯಲ್ಲಿ ದ್ವೀಪಿನ ಪ್ರಾದೇಶಿಕ ಭಾಷೆಯಲ್ಲಿ ಗುರುತಿಸಲಾಗಿದೆ. ಆಳವಾದ ಸಾಹಿತ್ಯ ಸಂಶೋಧನೆಗಳು ದ್ವೀಪದ ಭಾಷಾ ಪರಂಪರೆ, ವಲಸೆ, ಕುರಿತಾದ ಇನ್ನಷ್ಟು ಮಾಹಿತಿಗಳನ್ನು ನಮಗೆ ನೀಡಬಹುದೆಂದಾಗಿದೆ ನನ್ನ ನಂಬಿಕೆ.

ಮೂಲ : ಇಸ್ಮತ್ ಹುಸೈನ್
ಕನ್ನಡಕ್ಕೆ : ಆಶಿಕ್ ಅಲಿ ಕೈಕಂಬ

1 2 3 4 5 17