ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿ

ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿಯ ಬಗ್ಗೆ, ಅದರ ಇತಿಹಾಸದ ಬಗ್ಗೆ ಮಿತ್ರರಾದ ಪುನೀತ್ ಅಪ್ಪು ಅವರು ಬಹಳಷ್ಟು ಬಾರಿ ಹೇಳಿದ್ದರು. ಮಲಬಾರ್ ಇತಿಹಾಸದ ಬಗ್ಗೆ ಅವರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಅವರ ಮಾತುಗಳನ್ನು ಕೇಳಿದಾಗಲೆಲ್ಲ ಒಮ್ಮೆ ಈ ಮಸೀದಿಗೆ ಭೇಟಿ ನೀಡಬೇಕೆಂದು ಅನಿಸುತ್ತಿತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಮೊನ್ನೆ ಕೋಯಿಕ್ಕೋಡ್ ಭೇಟಿಯ ಸಂದರ್ಭದಲ್ಲಿ ಪುನೀತ್ ಅಪ್ಪು ಹಾಗೂ ಇನ್ನಿತರ ಗೆಳೆಯರೊಂದಿಗೆ ಮಿಶ್ಕಾಲ್ ಮಸೀದಿಗೆ ಹೋಗಲು ಸಾಧ್ಯವಾಯಿತು.

ಮಸೀದಿಗಿಂತ ಮೊದಲು ನಾವು ನೋಡಿದ್ದು ಮಸೀದಿಯ ಮುಂಭಾಗದಲ್ಲಿರುವ ಕುಟ್ಟಿಚ್ಚಿರ ಕೆರೆಯನ್ನು. ಮಿಶ್ಕಾಲ್ ಮಸೀದಿ ನಿರ್ಮಾಣಕ್ಕೆ ಮಣ್ಣು ತೆಗೆದಾಗ ಅಲ್ಲೊಂದು ಸುಂದರವಾದ ಕೆರೆ ನಿರ್ಮಾಣವಾಗಿತ್ತು. ಅದುವೇ ಪ್ರಸಿದ್ಧ ಕುಟ್ಟಿಚ್ಚಿರ ಕೆರೆ. ನಾವು ಹೋದಾಗ ಅಲ್ಲಿ ವಿಪರೀತ ಉರಿ ಬಿಸಿಲಿತ್ತು. ಮಳೆಯ ನಿರೀಕ್ಷೆಯಲ್ಲಿದ್ದ ಗೆಳೆಯರಿಗೆ ನಿರಾಶೆಯಾಗಿತ್ತು.

ಕುಟ್ಟಿಚ್ಚಿರ ಕೆರೆ ವಿಶಾಲವಾಗಿತ್ತು. ಕೆರೆಯಲ್ಲಿ ಕೆಲವರು ಸ್ನಾನ ಮಾಡುತ್ತಿದ್ದರು. ಮಕ್ಕಳು ಈಜುತ್ತಾ, ಇತರರ ಮೇಲೆ ನೀರೆರೆಚುತ್ತಾ ಆಟವಾಡುತ್ತಿದ್ದರು. ಆದರೆ, ಕೆರೆಯ ನೀರು ಎಷ್ಟು ಕೊಳಕಾಗಿತ್ತು ಎಂದರೆ ನೀರಿಗೆ ಇಳಿಯಲು ನಮ್ಮಲ್ಲಿ ಯಾರಿಗೂ ಮನಸ್ಸಾಗಲಿಲ್ಲ. ಮೆಟ್ಟಿಲ ಮೇಲೆ ಕುಳಿತು ಕೆರೆಯ ನೀರಿಗೆ ಕಾಲುಗಳನ್ನು ಇಳಿಬಿಟ್ಟು ‘ಫಿಶ್ ಥೆರಪಿ’ ಮಾಡಿಸಿಕೊಳ್ಳುವ ಆಸೆಯಿದ್ದರೂ ನೀರನ್ನು ನೋಡಿದಾಗ ಯಾಕೋ ಬೇಡವೆನಿಸಿತು. ದಟ್ಟ ವಾಸನೆಗೆ ಮೂಗು ಮುಚ್ಚಿ ನಡೆಯಬೇಕಾದ ಪರಿಸ್ಥಿತಿಯಿತ್ತು. ಮೀನುಗಳು‌ ಸತ್ತು ಮೂಲೆಯಲ್ಲಿ ರಾಶಿಬಿದ್ದಿದ್ದವು.

ಜೊತೆಗಿದ್ದ ಗೆಳೆಯ ಮುನವ್ವರ್ ಜೋಗಿಬೆಟ್ಟು ಕೆರೆಯನ್ನು ನೋಡುತ್ತಾ ಆಳವಾದ ಯೋಚನೆಗೆ ಬಿದ್ದಿದ್ದರು. ಬಹುಶಃ ಕೆರೆಯ ಪರಿಸರವನ್ನಿಟ್ಟುಕೊಂಡು ಹೊಸ ಕಥೆ ಬರೆಯುವ ಕುರಿತು ಯೋಚಿಸುತ್ತಿದ್ದರೇನೋ? ಮಿತ್ರರಾದ ಯಂಶ ಬೇಂಗಿಲ ಮತ್ತು ಸಿನಾನ್ ಇಂದಬೆಟ್ಟು ಅವರು ಪುನೀತ್ ಅಪ್ಪುರವರನ್ನು ತಮ್ಮ ಶಾಶ್ವತ ಗೈಡ್ ಮಾಡಿಕೊಂಡಿದ್ದರು.‌ ನನಗಂತೂ ಸತ್ತ‌ ಮೀನುಗಳ ದಟ್ಟ ವಾಸನೆಯಿಂದ ಕೂಡಿದ್ದ ಆ ಕೆರೆಯನ್ನು ನೋಡುವುದೇ ಹಿಂಸೆಯೆನಿಸುತ್ತಿತ್ತು. ಭ್ರಷ್ಟಾಚಾರದಿಂದ ಕೊಳೆತು ಹೋಗಿರುವ ಇಂದಿನ ವ್ಯವಸ್ಥೆಗೆ ಆ ಕೆರೆ ರೂಪಕದಂತಿತ್ತು.‌

ಕೆರೆಯ ಸುತ್ತಲಿನ ಆವರಣದಲ್ಲಿ ಸಾಮೂದಿರಿ ರಾಜರ ಕಾಲದ ಮಲಬಾರ್ ಇತಿಹಾಸವನ್ನು ಕೆತ್ತಲಾಗಿದೆ. ಅರಬ್ ವ್ಯಾಪಾರಿಗಳ ಕೇರಳ ಪ್ರವೇಶ, ಪೋರ್ಚುಗೀಸ್ ನಾವಿಕರು, ಸಾಮೂದಿರಿ ರಾಜರು ಹಾಗೂ ಕುಂಞಾಲಿ ಮರಕ್ಕಾರ್ ಮೊದಲಾದವರ ಇತಿಹಾಸ, ಸುನ್ನತಿ, ಒಪ್ಪನಪ್ಪಾಟ್ಟ್ ಮೊದಲಾದ ಮಲಬಾರಿನ ಇಸ್ಲಾಮಿಕ್ ಸಂಸ್ಕೃತಿಯನ್ನು ಗೋಡೆಯ ಮೇಲಿನ ಕಲಾಕೃತಿಗಳಲ್ಲಿ ಸುಂದರವಾಗಿ ಕೆತ್ತಲಾಗಿದೆ. ಪುನೀತ್ ಅಪ್ಪು ಅವರು ಆ ಇತಿಹಾಸಗಳನ್ನು ವಿವರಿಸುತ್ತಲೇ ತಮ್ಮ ಮೊಬೈಲ್ ನಿಂದ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಇತಿಹಾಸ ಜ್ಞಾನ ಬೆರಗು ಹುಟ್ಟಿಸುತ್ತಿತ್ತು. ಅವರು ಜೊತೆಯಲ್ಲಿದ್ದುದರಿಂದ ನಮಗೆ ಪ್ರತ್ಯೇಕ ಗೈಡ್‌ನ ಅವಶ್ಯಕತೆ ಬೀಳಲಿಲ್ಲ. ವಕೀಲಿ ವೃತ್ತಿಯಲ್ಲಿರುವುದರಿಂದಲೋ ಏನೋ, ಮಾತುಗಾರಿಕೆ ಅವರಿಗೆ ಚೆನ್ನಾಗಿ ಒಲಿದಿದೆ.

ಬಿಸಿಲಿನ ಝಳ ಹೆಚ್ಚಾಗುತ್ತಲೇ ಹೋದಾಗ ನಾವು ಕೆರೆಯನ್ನು ಅದರ ಪಾಡಿಗೆ ಬಿಟ್ಟು ನೇರವಾಗಿ ಮಿಶ್ಕಾಲ್ ಮಸೀದಿಯ ಕಡೆಗೆ ಹೊರಟೆವು.

ಆಕಾಶಕ್ಕೆ ಕಲಶವಿಟ್ಟಂತಿದ್ದ ಮಿಶ್ಕಾಲ್ ಮಸೀದಿ ನಿರ್ಮಲವಾಗಿ ಕಾಣಿಸಿತು. ಮಸೀದಿಯ ಸುತ್ತಲೂ ಆವರಿಸಿದ್ದ ಮೌನ, ಅದರ ಪುರಾತನ ಸೌಂದರ್ಯ ನಮ್ಮಲ್ಲಿ ವಿಶಿಷ್ಟ ಭಾವನೆಗಳನ್ನು ಉದ್ದೀಪಿಸುತ್ತಿತ್ತು. ಮಸೀದಿಯಿಂದ ಕಣ್ಣು ಕೀಳುವುದೇ ಸಾಧ್ಯವಾಗುತ್ತಿರಲಿಲ್ಲ. ಅದರ ಸಹಜ ಸೌಂದರ್ಯಕ್ಕೆ‌ ನನ್ನ ಮನಸು ಮಾರು ಹೋಗಿತ್ತು.‌

ಮಸೀದಿಯ ಮುಖ್ಯದ್ವಾರದ ಮೂಲಕವೇ ನಾವು ಆವರಣಕ್ಕೆ ಪ್ರವೇಶಿಸಿದೆವು. ಸಾಲಾಗಿ ನಿಂತಿರುವ ನೀಲಿ ಬಣ್ಣದ ಹತ್ತಾರು ಕಮಾನುಗಳು ತಕ್ಷಣವೇ ನಮ್ಮ ಗಮನ ಸೆಳೆದವು. ಹಿಂದೂ–ಮುಸ್ಲಿಂ ವಾಸ್ತುಶಿಲ್ಪ ಶೈಲಿಗಳ ಸಂಗಮದಲ್ಲಿ ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.‌ ಈ ಮಸೀದಿಯನ್ನು ಕ್ರಿ.ಶ. 1340ರ ಸುಮಾರಿಗೆ ನಿರ್ಮಿಸಲಾಯಿತು. ಒಮ್ಮೆ ಸುಮಾರು ನಲವತ್ತು ಹಡಗುಗಳ ಮಾಲೀಕರಾಗಿದ್ದ ಯೆಮನ್ ಮೂಲದ ವ್ಯಾಪಾರಿ ನೆಖೂದ ಮಿಶ್ಕಾಲ್, ವ್ಯಾಪಾರಕ್ಕಾಗಿ ಪ್ರಸಿದ್ಧವಾಗಿದ್ದ ಕೋಯಿಕ್ಕೋಡಿಗೆ ಬಂದರು. ಅವರಿಗೆ ಅಲ್ಲಿ ದೂರದೂರಿನಿಂದ ಬರುವ ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಸೂಕ್ತ ತಾಣವೊಂದರ ಕೊರತೆ ಕಂಡುಬಂತು. ಕೂಡಲೇ ಅವರು ಪ್ರಯಾಣಿಕರು ತಂಗಲು ಹಾಗೂ ಆರಾಧನೆ ನಡೆಸಲು ಒಂದು ಕೇಂದ್ರವನ್ನು ನಿರ್ಮಿಸುವ ಸಂಕಲ್ಪ ಮಾಡಿದರು. ಅದಕ್ಕಾಗಿ ಸಾಮೂದಿರಿ ರಾಜರ ಬಳಿ ತೆರಳಿ ಜಾಗವನ್ನು ಕೋರಿದರು. ಮಾಪಿಳ್ಳ ಸಮುದಾಯದ ಮುಖಂಡರು ಹಾಗೂ ತೆಕ್ಕೆಪ್ಪುರದ ಕೋಯಮಾರರೊಂದಿಗೆ ಸಮಾಲೋಚನೆ ನಡೆಸಿದ ಸಾಮೂದಿರಿ ರಾಜರು ಕುಟ್ಟಿಚ್ಚಿರದಲ್ಲಿ ಜಾಗವನ್ನು ನೀಡಿದರು. ನೆಖೂದ ಮಿಶ್ಕಾಲ್ ಅಲ್ಲಿ ಮಸೀದಿಯನ್ನು ನಿರ್ಮಿಸಿದರು. ಅದುವೇ ಇಂದಿನ ಮಿಶ್ಕಾಲ್ ಮಸೀದಿ.

ಮಿಶ್ಕಾಲ್ ಮಸೀದಿ ಕೇರಳದ ಅತ್ಯಂತ ಪ್ರಾಚೀನ ಮತ್ತು ಐತಿಹಾಸಿಕ ಮಸೀದಿಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಮಸೀದಿಗಳಲ್ಲಿ ಕಾಣುವ ಎತ್ತರದ ಮಿನಾರಗಳು ಇಲ್ಲದಿರುವುದು ಇದರ ವಿಶೇಷತೆ. ಕೇರಳದ ಸಾಂಪ್ರದಾಯಿಕ ದೇವಾಲಯಗಳ ವಾಸ್ತುಶಿಲ್ಪದ ಪ್ರಭಾವ ಇದರ ನಿರ್ಮಾಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮರದ ಕೆತ್ತನೆಗಳು, ಇಳಿಜಾರು ಛಾವಣಿ ಮತ್ತು ಬಹುಮಹಡಿ ವಿನ್ಯಾಸವು ಇದನ್ನು ಭಾರತದ ಇಸ್ಲಾಮಿಕ್ ವಾಸ್ತುಶಿಲ್ಪದ ವಿಶಿಷ್ಟ ಮಾದರಿಯನ್ನಾಗಿ ಮಾಡಿದೆ.

ಮಸೀದಿಯ ಒಳಭಾಗದ ವಿನ್ಯಾಸವಂತೂ ಅದ್ಭುತವಾಗಿತ್ತು.‌ ನಾವು ಮಸೀದಿಯನ್ನು ನೋಡುತ್ತಿರಬೇಕಾದರೆ ಮುಕ್ರಿಕಾ ನಮ್ಮ‌ ಹಿಂದೆಯೇ ಬಂದರು.‌ ನಾವು ಅಲ್ಲಲ್ಲಿ‌ ನಿಂತು ಪೋಟೋ ತೆಗೆಸಿಕೊಳ್ಳುತ್ತಿದ್ದೆವು. ಪುನೀತ್ ಅಪ್ಪು ಅವರು ಗೈಡ್ ಸ್ಥಾನದಿಂದ‌ ಫೋಟೋಗ್ರಫಿಗೆ ಧುಮುಕಿದ್ದರು. ಛಾಯಾಗ್ರಹಣದ ಬಗ್ಗೆ ಅವರಿಗೆ ಅವರದೇ ಆದ ವಿಶಿಷ್ಟ ಜ್ಞಾನ ಹಾಗೂ ಕಲ್ಪನೆಗಳಿದ್ದವು.‌ ಯಂಶ ಬೇಂಗಿಲರಿಗೆ ಈಗಲೂ ಉಳಿದಿರುವ ಮಸೀದಿಯ ಸುಟ್ಟ ಭಾಗವನ್ನು ನೋಡುವ ತವಕ.‌ ಮುಕ್ರಿಕಾ ಗೈಡ್ ಆಗಿ ನಮ್ಮ ಜೊತೆಗೆ ನಿಂತರು.‌ ಪೋರ್ಚುಗೀಸರ ಕ್ರೌರ್ಯದ ಕುರುಹಾಗಿ ಆ ಸುಟ್ಟ ಬೀಮ್ ಇಂದಿಗೂ ಅಲ್ಲಿಯೇ ಉಳಿದಿದೆ.

ಅದರ ಇತಿಹಾಸ ಹೀಗಿದೆ; 1498ರ ಮೇ 20ರಂದು ಪೋರ್ಚುಗೀಸ್ ನಾವಿಕ ವಾಸ್ಕೋಡ ಗಾಮ ಕೋಯಿಕ್ಕೋಡ್ ಸಮೀಪದ ಕಾಪ್ಪಾಡ್ ಕರಾವಳಿಗೆ ತಲುಪಿದನು. ಯುರೋಪಿನಿಂದ ಭಾರತಕ್ಕೆ ಸಮುದ್ರಮಾರ್ಗವನ್ನು ಕಂಡುಹಿಡಿಯುವುದು ಅವನ ಪ್ರಮುಖ ಉದ್ದೇಶವಾಗಿತ್ತು. ಜೊತೆಗೆ ಅರಬ್ ವ್ಯಾಪಾರಿಗಳ ನಿಯಂತ್ರಣದಲ್ಲಿದ್ದ ಮಸಾಲೆ ವ್ಯಾಪಾರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಮತ್ತು ಹಿಂದೂ ಮಹಾಸಾಗರದಲ್ಲಿ ಪೋರ್ಚುಗೀಸ್ ಪ್ರಭುತ್ವ ಸ್ಥಾಪಿಸುವ ಉದ್ದೇಶವೂ ಅವರಿಗಿತ್ತು. ಆರಂಭದಲ್ಲಿ ಸಾಮೂದಿರಿಯೊಂದಿಗೆ ವ್ಯಾಪಾರ ಸಂಬಂಧ ಬೆಳೆಸಲು ಪ್ರಯತ್ನಿಸಿದರೂ, ನಂತರ ವ್ಯಾಪಾರ ಹಿತಾಸಕ್ತಿಗಳ ಸಂಘರ್ಷದಿಂದ ಪೋರ್ಚುಗೀಸರು ಮತ್ತು ಮಲಬಾರಿನ ಸ್ಥಳೀಯ ಶಕ್ತಿಗಳ ನಡುವೆ ಘರ್ಷಣೆಗಳು ಆರಂಭವಾದವು.

ಮಲಬಾರ್ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದ ಇತಿಹಾಸಕಾರ ಸೆಬಾಸ್ಟಿಯನ್ ಆರ್. ಪೆರಂಜೆ ಅವರ ಅಭಿಪ್ರಾಯದಂತೆ, ಮಲಬಾರಿನಲ್ಲಿ ಪೋರ್ಚುಗೀಸರ ಹೋರಾಟವು ಕೇವಲ ಧಾರ್ಮಿಕ ಸಂಘರ್ಷವಾಗಿರಲಿಲ್ಲ; ಅದು ಹಿಂದೂ ಮಹಾಸಾಗರದ ವ್ಯಾಪಾರ ಮಾರ್ಗಗಳು ಮತ್ತು ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣಕ್ಕಾಗಿ ನಡೆದ ರಾಜಕೀಯ ಹಾಗೂ ಆರ್ಥಿಕ ಪೈಪೋಟಿಯ ಭಾಗವಾಗಿತ್ತು. ಇದೇ ಕಾರಣದಿಂದ ಕೋಯಿಕ್ಕೋಡಿನ ಸಾಮೂದಿರಿಯೂ, ಅರಬ್–ಮಾಪಿಳ್ಳ ವ್ಯಾಪಾರಿಗಳೂ ಪೋರ್ಚುಗೀಸರ ಪ್ರಮುಖ ಎದುರಾಳಿಗಳಾಗಿ ಮಾರ್ಪಟ್ಟರು.

ಮಲಬಾರಿನ ಅರಬ್–ಮಾಪಿಳ್ಳ ವ್ಯಾಪಾರ ಜಾಲವನ್ನು ದುರ್ಬಲಗೊಳಿಸಿ, ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣವನ್ನು ತಮ್ಮ ಕೈಗೆ ಪಡೆಯುವುದು ಪೋರ್ಚುಗೀಸರ ಪ್ರಮುಖ ಗುರಿಯಾಗಿತ್ತು. ಇದರಿಂದ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳೊಂದಿಗೆ ಹಾಗೂ ಸಾಮೂದಿರಿಯ ಆಡಳಿತದೊಂದಿಗೆ ಸಂಘರ್ಷಗಳು ತೀವ್ರಗೊಂಡವು.

ಈ ಸಂಘರ್ಷಗಳ ನಡುವೆಯೇ, 1510ರ ಜನವರಿ 3ರಂದು (ರಂಝಾನ್ 22) ಅಫೊನ್ಸೊ ಡಿ ಅಲ್ಬುಕರ್ಕ್ ನೇತೃತ್ವದಲ್ಲಿ ಪೋರ್ಚುಗೀಸರು ಕುಟ್ಟಿಚ್ಚಿರದ ಮೇಲೆ ದಾಳಿ ನಡೆಸಿದರು. ಮಾಪಿಳ್ಳ ಸಮುದಾಯದ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದ ಮಿಶ್ಕಾಲ್ ಮಸೀದಿಯನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಿದರು. ಇದು ಕೇವಲ ಒಂದು ಕಟ್ಟಡದ ಮೇಲಿನ ದಾಳಿಯಾಗಿರಲಿಲ್ಲ; ಕೋಯಿಕ್ಕೋಡಿನ ಮುಸ್ಲಿಂ ವ್ಯಾಪಾರಿ ಸಮುದಾಯದ ಪ್ರಭಾವವನ್ನು ಕುಗ್ಗಿಸುವ ಮತ್ತು ಸ್ಥಳೀಯ ಜನರಲ್ಲಿ ಭಯ ಹುಟ್ಟಿಸುವ ರಾಜಕೀಯ ಸಂದೇಶವೂ ಅದರ ಹಿಂದೆ ಅಡಗಿತ್ತು ಎಂದು ಇತಿಹಾಸಕಾರರು ಸೂಚಿಸುತ್ತಾರೆ.

ಸಾಮೂದಿರಿಯ ಅಧೀನದಲ್ಲಿದ್ದ ಮುಸ್ಲಿಮರು ಮತ್ತು ನಾಯರ್‌ಗಳನ್ನು ಒಳಗೊಂಡ ಸೇನೆ ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸಿತು. ಹಿಂದೂಗಳಾಗಿದ್ದ ಸಾಮೂದಿರಿಗಳು ಮುಸ್ಲಿಮರ ಮಸೀದಿಯ ರಕ್ಷಣೆಗೆ ಸರ್ವ ಪ್ರಯತ್ನಗಳನ್ನು ಮಾಡಿದರು. ಆದರೆ, ಮಸೀದಿಯ ಹಲವು ಭಾಗಗಳು ಸುಟ್ಟು ಹೋದವು.‌

 ಕುಟ್ಟಿಚ್ಚಿರದ ಜನರಿಗೆ ಮರೆಯಲಾಗದ ಆ ಉಪವಾಸದ ದಿನಗಳ ಕರಾಳ ನೆನಪಿನ ಗುರುತುಗಳು ಇಂದಿಗೂ ಮಸೀದಿಯ ಮೇಲ್ಮಹಡಿಯ ಸ್ತಂಭಗಳಲ್ಲಿ ಕಾಣಿಸುತ್ತವೆ.

ವಸಾಹತುಶಾಹಿಯ ವಿರುದ್ಧ ಮಲಬಾರಿನ ಎರಡು ಪ್ರಬಲ ಸಮುದಾಯಗಳು ಒಂದಾಗಿ ಹೋರಾಡಿದ ಪರಿಣಾಮವಾಗಿಯೇ 1571ರಲ್ಲಿ ಚಾಲಿಯಂ ಕೋಟೆ ಸಾಮೂದಿರಿಯ ವಶಕ್ಕೆ ಬಂದಿತು. ಹಾನಿಗೊಂಡಿದ್ದ  ಮಿಶ್ಕಾಲ್ ಮಸೀದಿಯನ್ನು ಚಾಲಿಯಂ ಕೋಟೆಯ ಮರದ ಸಾಮಗ್ರಿಗಳಿಂದ ಸಾಮೂದಿರಿಗಳು ಪುನರ್‌ನಿರ್ಮಿಸಿ‌ಕೊಟ್ಟರು. ಹಿಂದೂ ಮುಸ್ಲಿಮರ ನಡುವೆ ಬಿರುಕು ಮೂಡಿಸಿ, ಹಿಂದೂ ಮಹಾಸಾಗರದ ವ್ಯಾಪಾರ ಮಾರ್ಗಗಳು ಮತ್ತು ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣವನ್ನು ಸುಲಭವಾಗಿ ಪಡೆದುಕೊಳ್ಳುವ ಪೋರ್ಚುಗೀಸರ ಹುನ್ನಾರಕ್ಕೆ ಸಾಮೂದಿರಿ ರಾಜರು ಹಾಗೂ ಕುಂಞಾಲಿ ಮರಕ್ಕಾರ್ ಯೋಧರು ಅಡ್ಡಿಯಾದರು. ಇವರಿಬ್ಬರ ನಡುವಿನ ಬಾಂಧವ್ಯ ಪೋರ್ಚುಗೀಸರ ಪಾಲಿಗೆ ದುಃಸ್ವಪ್ನವಾಗಿತ್ತು.

ವಿಶಾಲವಾದ ತೆರೆದ ಪ್ರದೇಶದಲ್ಲಿ ಎತ್ತರವಾಗಿ ನಿಂತಿರುವ ಮಿಶ್ಕಾಲ್ ಮಸೀದಿಯ ಅಡಿಪಾಯವನ್ನು ಚೌಕಾಕಾರದ ಕಲ್ಲುಗಳಿಂದ ನಿರ್ಮಿಸಲಾಗಿದೆ. ನಾಲ್ಕು ದಿಕ್ಕುಗಳಲ್ಲೂ ವರಾಂಡ ಹೊಂದಿರುವ ಅಪರೂಪದ ಮಸೀದಿಗಳಲ್ಲಿ ಇದೂ ಒಂದು. ನಾಲ್ಕು ಬದಿಗಳಲ್ಲೂ ಅರ್ಧವೃತ್ತಾಕಾರದ ಬಾಗಿಲುಗಳಿವೆ. ಸುತ್ತುಗೋಡೆಗಳು ಮತ್ತು ಮರದ ಕಂಬಗಳು ಮೇಲ್ಛಾವಣಿಯನ್ನು ತೂಗಿ ನಿಲ್ಲಿಸುತ್ತವೆ.

ನಾವು ಮಸೀದಿಯ ಪ್ರಾಂಗಣದಲ್ಲಿದ್ದ ಕೊಳದ ಹತ್ತಿರ ಹೋದೆವು.‌ ಕೊಳದ ನೀರು ತಣ್ಣಗಿತ್ತು. ಬಿಸಿಲಲ್ಲಿ ಬೆಂದು ಹೋಗಿದ್ದ ಮುಖಕ್ಕೆ ತಣ್ಣೀರು ಚಿಮುಕಿಸಿದಾಗ ಹೊಸ ಉತ್ಸಾಹ ಮೂಡಿತು.‌ ಕೊಳದ ಮೇಲೆ ಕಾಂಕ್ರೀಟ್ ದೋಣಿಯನ್ನು ನಿಲ್ಲಿಸಿದ್ದರು. ಅದರೊಳಗೆ ಕೋಲಿನ ಪ್ಲಾಸ್ಟಿಕ್ ಮಗ್ ಗಳನ್ನು ಕಟ್ಟಿಟ್ಟಿದ್ದರು. ಅದರಿಂದ ನೀರು ಬಾಚಿ ಕಾಲು ತೊಳೆದು,‌ ಮೆಟ್ಟಿಲು ಹತ್ತಿ ಮೇಲ್ಭಾಗಕ್ಕೆ ಹೋದೆವು. ಕೆಳಗಿನ ಅಂತಸ್ತು ಬಿಟ್ಟರೆ, ಮೇಲಿನ ಮೂರು ಅಂತಸ್ತನ್ನೂ ಸಂಪೂರ್ಣವಾಗಿ ಮರದಿಂದಲೇ ನಿರ್ಮಿಸಲಾಗಿತ್ತು.

ವಿಶಿಷ್ಟ ವಾಸ್ತುಶಿಲ್ಪವೇ ಮಿಶ್ಕಾಲ್ ಮಸೀದಿಯ ಸೌಂದರ್ಯವನ್ನು ಹೆಚ್ಚಿಸಿದೆ. ಗೋಡೆಗಳನ್ನು ದಪ್ಪದ ಕೆಂಪು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಸುಣ್ಣದ ಮಿಶ್ರಣವನ್ನು ಕಲ್ಲಿನ ಕೆಲಸಕ್ಕೂ ಲೇಪನಕ್ಕೂ ಬಳಸಲಾಗಿದೆ. ಇಳಿಜಾರು ಛಾವಣಿ ಮತ್ತೊಂದು ವಿಶೇಷತೆ. ಮರದ ಕಂಬಗಳನ್ನು ವಿಶೇಷ ರೀತಿಯಲ್ಲಿ ಜೋಡಿಸಿ, ಅದರ ಮೇಲೆ ಹಲಗೆಗಳನ್ನು ಅಳವಡಿಸಿ ಮಂಗಳೂರು ಹೆಂಚುಗಳನ್ನು ಹಾಸಲಾಗಿದೆ. ಈ ಹೆಂಚುಗಳನ್ನು ಸೂಕ್ಷ್ಮವಾಗಿ ಗಮನಿಸಿ ಪೋಟೋಗಳನ್ನು ತೆಗೆಯುತ್ತಿದ್ದ ಪುನೀತ್ ಅಪ್ಪು ಅವರು ಅದರ ಮೇಲಿದ್ದ ಇಸವಿ ಹಾಗೂ ಕಂಪನಿಯ ಹೆಸರುಗಳನ್ನು ನಮಗೆ ತೋರಿಸಿದರು.‌‌

ಮಸೀದಿಯ ಮೇಲಿನ ಮೂರು ಮಹಡಿಗಳನ್ನು ಸಂಪೂರ್ಣವಾಗಿ ಮರದಿಂದ ನಿರ್ಮಿಸಲಾಗಿದೆ. ಮಸೀದಿಯ ಒಳಗೆ ಮೇಲ್ಮಹಡಿಗಳನ್ನು ಸಂಪರ್ಕಿಸುವ ಎರಡು ತೇಗದ ಕಂಬಗಳಿವೆ. ಚೌಕಾಕಾರ ಮತ್ತು ಅಷ್ಟಕೋನಾಕಾರದ ವಿನ್ಯಾಸಗಳಲ್ಲಿ ಪರ್ಯಾಯವಾಗಿ ರೂಪುಗೊಂಡಿರುವ ಈ ಕಂಬಗಳಲ್ಲಿ ಕೆಳಗಿನಿಂದ ಮೇಲಿನವರೆಗೆ ಸುಂದರ ಕೆತ್ತನೆಗಳಿವೆ.

ಮೇಲ್ಮಡಿಯನ್ನು ನೋಡಿ ಕೆಳಗಿಳಿದ ನಮಗೆ ಮುಕ್ರಿಕಾ ಪಲ್ಲಕ್ಕಿಯನ್ನು ತೋರಿಸಿದರು.‌ ಹಿಂದೆ ಖಾಝಿಗಳು ಸಂಚರಿಸಲು ಬಳಸುತ್ತಿದ್ದ ಪಲ್ಲಕ್ಕಿಯದು. ಆ ಪಲ್ಲಕ್ಕಿಯನ್ನು ಹೊರಲು ಮೂವರು ಕೆಲಸಗಾರರು ಇರುತ್ತಿದ್ದರು. ಇಬ್ಬರು ಪಲ್ಲಕ್ಕಿಯನ್ನು ಹೊತ್ತುಕೊಂಡು ನಡೆಯುವಾಗ ಇನ್ನೊಬ್ಬ ಅವರಿಗೆ ಬದಲಿಯಾಗಿ ಅವರೊಂದಿಗೆ ನಡೆಯುತ್ತಿದ್ದನು ಎಂದು ಮುಕ್ರಿಕಾ‌ ಹೇಳಿದರು. ಪಲ್ಲಕ್ಕಿಯ ಮೇಲೆ‌ ಸುಂದರವಾದ ಚಿತ್ರಗಳನ್ನು ಬಿಡಿಸಿದ್ದರು.‌ ಅದರಲ್ಲೊಂದು ಚಿತ್ರ ನನ್ನ ಗಮನ ಸೆಳೆಯಿತು. ಅದೊಂದು ಹೂದಾ‌ನಿಯ ಚಿತ್ರ.‌‌ ಹೂದಾನಿಯಿಂದ ಮೂರು ಹೂವುಗಳು ಮತ್ತು ಸುರುಳಿ ಆಕಾರದ ಎಲೆಗಳು ಮೇಲಕ್ಕೆ ಚಾಚಿಕೊಂಡಿವೆ.

ಹೂದಾನಿಯ ಮಧ್ಯಭಾಗದಲ್ಲಿ ವೃತ್ತಾಕಾರದ ವಿನ್ಯಾಸ ಇದೆ.‌ ನಾಲ್ಕು ಮೂಲೆಗಳಲ್ಲೂ ಅರ್ಧ ಸೂರ್ಯ ಅಥವಾ ಕಮಲದ ದಳಗಳಂತಿರುವ ಆಲಂಕಾರಿಕ ಚಿತ್ತಾರವನ್ನು ಬಿಡಿಸಲಾಗಿದೆ.‌ ಚಿತ್ರವನ್ನು ಗಾಢ ಕಂದು ಬಣ್ಣದ ಮರದ ಫಲಕದ ಮೇಲೆ ಹಳದಿ, ಹಸಿರು ಮತ್ತು ಗುಲಾಬಿ ಬಣ್ಣಗಳಿಂದ ಚಿತ್ರಿಸಲಾಗಿದೆ. ನಾನು ಅದರ ಪೋಟೋಗಳನ್ನು‌ ಕ್ಲಿಕ್ಕಿಸಿದೆ.‌

 ಮುಅಝಿನ್ ನಮ್ಮನ್ನು ಮಸೀದಿಯ ಇನ್ನೊಂದು ಭಾಗಕ್ಕೆ ಕರೆದೊಯ್ದರು. ಅಲ್ಲಿ ಅನೇಕ ಐತಿಹಾಸಿಕ ವಸ್ತುಗಳು ಇದ್ದವು. ಕತ್ತಲಲ್ಲಿ ಹಳೆಯ ಅಲಮಾರವಿತ್ತು. ಅದರಲ್ಲಿ 600 ವರ್ಷಗಳಷ್ಟು ಹಳೆಯ ಗ್ರಂಥಗಳಿದ್ದವು. ಅಲಮಾರದಿಂದ ಒಂದು ಗ್ರಂಥವನ್ನು ತೆಗೆದು ಮುಕ್ರಿಕಾ ಇದು 600 ವರ್ಷಗಳಷ್ಟು ಹಳೆಯ, ಕೈಯಲ್ಲಿ ಬರೆದ ಗ್ರಂಥವೆಂದು ತೋರಿಸಿದರು.‌ ಯಾಕೋ ನಮಗೆ ನಂಬುವುದು ಕಷ್ಟವಾಯಿತು. ಮುನವ್ವರ್ ಅದರ ಮೇಲೆ ಮೊಬೈಲ್ ಟಾರ್ಚ್ ಲೈಟ್ ಹಾಕಿ ನೋಡಿ, ‘ಇಮಾಮ್ ಗಝ್ಝಾಲಿಯವರು ಬರೆದಿರುವ ‘ಇಹ್ಯಾ ಉಲೂಮುದ್ದೀನ್’ ಎಂದರು. 

ನಮ್ಮ ಮುಂದಿದ್ದ ಮೇಜಿನ ಮೇಲೆ ಒಂದು ತೆಂಗಿನ ಕಾಯಿಯನ್ನು ಇಟ್ಟಿದ್ದರು.‌ ಅದು ಸುಮಾರು ಇನ್ನೂರು ವರ್ಷಗಳಷ್ಟು ಹಳೆಯದ್ದೆಂದು ಮುಕ್ರಿಕಾ ಹೇಳಿದರು. ಅದನ್ನೂ ನಂಬಲು ನಮ್ಮಿಂದ ಸಾಧ್ಯವಾಗಲಿಲ್ಲ.‌ ಅಲ್ಲೇ ಕೆಳಗೆ ಬೆಂಚಿನ ಮೇಲೆ ಚಪ್ಪಲಿಗಳಿದ್ದವು. ಅವು ಯಾರದ್ದೆಂದು ಕೇಳಿದಾಗ ಸಾಮೂದಿರಿ ರಾಜರ ಕಾಲದದ್ದೆಂದು ಉತ್ತರ ಬಂತು.‌

ಕೋಣೆಯ ಒಂದು ಮೂಲೆಯಲ್ಲಿದ್ದ ನಗಾರಿಯೊಂದು ನಮ್ಮ ಗಮನ ಸೆಳೆಯಿತು. ಸ್ಥಳೀಯರು ಇದನ್ನು ‘ತಾಂಬಾರ್’ ಎನ್ನುತ್ತಾರಂತೆ. ಮೊದಲ ನೋಟಕ್ಕೆ ಅದೊಂದು ಬೃಹತ್ ಡೋಲಿನಂತೆ ಕಂಡರೂ, ಅದರ ಹಿಂದೆ ಒಂದು ಕಾಲಘಟ್ಟದ ಸಾಮಾಜಿಕ ಇತಿಹಾಸವೇ ಅಡಗಿದೆ ಎನಿಸಿತು. ವಿಶೇಷ ಸಂದರ್ಭಗಳಲ್ಲಿ ಚಂದ್ರ ದರ್ಶನವಾದ ಸುದ್ದಿ ಹಾಗೂ ಈದ್ ಹಬ್ಬದ ಘೋಷಣೆಯನ್ನು ಊರಿಗೆ ತಿಳಿಸಲು ಈ ತಾಂಬಾರ್ ಬಡಿಯುತ್ತಿದ್ದರು. ಆಧುನಿಕ ಸಂವಹನ ವ್ಯವಸ್ಥೆಗಳೇ ಇಲ್ಲದ ಕಾಲದಲ್ಲಿ ತಾಂಬಾರಿನ ಧ್ವನಿಯೇ ಕುಟ್ಟಿಚ್ಚಿರದ ಜನರಿಗೆ ಅಧಿಕೃತ ಸುದ್ದಿಯಾಗಿತ್ತು. ರಂಝಾನಿನ ಆರಂಭದ ಸಂತೋಷವೂ, ಈದ್ ಹಬ್ಬದ ಉಲ್ಲಾಸವೂ, ಅನೇಕ ಧಾರ್ಮಿಕ ಕಾರ್ಯಕ್ರಮಗಳ ಘೋಷಣೆಯೂ ಈ ತಾಂಬಾರದ ನಾದದೊಂದಿಗೆ ಜನರ ಬದುಕಿಗೆ ಪ್ರವೇಶಿಸುತ್ತಿದ್ದವು. ಆ ತಾಂಬಾರ್  ನಮ್ಮ ಮುಂದೆ ಮೌನವಾಗಿ ನಿಂತಿದ್ದರೂ, ಅದರ ಚರ್ಮದ ಮೇಲೆ ಮೂಡಿರುವ ಕಾಲದ ಗುರುತುಗಳು ಶತಮಾನಗಳ ಇತಿಹಾಸವನ್ನು ಹೇಳುತ್ತಿದ್ದವು. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಇಂದಿಗೂ ತಾಂಬಾರ್ ಬಡಿಯುವುದಾಗಿ ಮುಕ್ರಿಕಾ ಹೇಳಿ, ಅದಕ್ಕೆ ಬಡಿಯುವ ಕೋಲು ತೋರಿಸಿದರು. ಒಂದೆರೆಕ್ಷಣ ನಾವೂ ಬಡಿದು ಇತಿಹಾಸದ ಕೊಂಡಿಯನ್ನು ಸೇರಿಕೊಂಡೆವು.‌

ಆ ಕೋಣೆಯ ಇನ್ನೊಂದು ಕಡೆ ಒಂದು ಕನ್ನಡಿಯಿತ್ತು. ವೆಳಿಯಂಗೋಡು ಉಮರ್ ಖಾಝಿಯವರು ಆ ಕನ್ನಡಿ ಬಳಸುತ್ತಿದ್ದರಂತೆ.‌‌ ಅವರ ಕವಿತೆಯ ಸಾಲುಗಳನ್ನು ಬರೆದಿದ್ದ ಗೋಡೆಯ ಭಾಗವನ್ನು ವಿಶೇಷವಾಗಿ ಗುರುತಿಸಲಾಗಿದೆ. ಆ ಸಾಲುಗಳನ್ನು ಆನಂತರ ಬರೆಯಲಾಗಿದೆ ಎಂದು ಮುಕ್ರಿಕಾ ತಿಳಿಸಿದರು.‌

ನಂತರ ನಾವು ಕೆಳಗಿಳಿದು ಮಿಂಬರ್ ನೋಡಲು ಹೋದೆವು. ಇಡೀ ಮಸೀದಿ ಮೌನದಲ್ಲಿ ಅದ್ದಿ ತೆಗೆದಂತಿತ್ತು.‌ ಅಲ್ಲಲ್ಲಿ ಒಂದಿಬ್ಬರು ಹಿರಿಯರು ಬಿಟ್ಟರೆ ಮಸೀದಿಯಲ್ಲಿ ಯಾರೂ ಇರಲಿಲ್ಲ. ಆ ನಿಗೂಢ ಶಾಂತಿಯ ಆವರಣದೊಳಗೆ ಒಂದರೆಕ್ಷಣ ಹಾಗೆಯೇ ಇದ್ದು ಬಿಡೋಣ ಅನಿಸಿತು.‌

ಮಿಂಬರ್ ಗೆ ಆನಿಸಿ ಇಟ್ಟಿದ್ದ ಶುಕ್ರವಾರದ ಜುಮಾ ಖುತ್ಬಾ ಸಮಯದಲ್ಲಿ ಬಳಸುವ ಕತ್ತಿ ನಮ್ಮ‌ ಗಮನ ಸೆಳೆಯಿತು. ಟಿಪ್ಪು ಸುಲ್ತಾನ್ ಕಾಲದ ಹಿಡಿಯಿದ್ದ ಕತ್ತಿಯಾಗಿತ್ತು ಅದು. ಆದರೆ, ಆ ಕಾಲದ ಕತ್ತಿ ಈಗ ಅಲ್ಲಿಲ್ಲ, ಹಿಡಿ‌ ಮಾತ್ರ ಉಳಿದಿದೆ. ಹಳೆಯ ಹಿಡಿಗೆ ಈಗ ಹೊಸ ಕತ್ತಿ ಸೇರಿಕೊಂಡಿದೆ.

ಮಸೀದಿಯ ಒಳಗೆ ಹೋಗುವಾಗ ಕಾಲು ತೊಳೆದುಕೊಂಡೇ ಹೋಗಿದ್ದರೂ ಮೇಲ್ಭಾಗ ಸುತ್ತಾಡಿ ಬಂದಿದ್ದರಿಂದ ಪಾದಗಳಿಗೆ ಧೂಳು ಮೆತ್ತಿಕೊಂಡಿತ್ತು. ಅದೇ ಕಾಲಿನಲ್ಲಿ‌ ಮಿಂಬರ್ ತನಕ ಹೋಗಿದ್ದಕ್ಕೆ ಹಿರಿಯರೊಬ್ಬರಿಂದ ಸಹಸ್ರನಾಮಾರ್ಚನೆಯಾಯಿತು.‌ ಇನ್ನೊಂದಿಷ್ಟು ಹೊತ್ತು ಮಸೀದಿಯ ನಿರ್ಮಲ ವಾತಾವರಣದಲ್ಲಿ ಇದ್ದು ಬಿಡೋಣ ಅನಿಸಿದರೂ ಹಿರಿಯರ ವರ್ತನೆಯಿಂದ ಮನಸುಗೆಟ್ಟು ಹೊರಟು ಬಂದೆವು.‌ ಹಿಂದಿರುಗುವಾಗ ಗೇಟಿನ ಬಳಿ ಒಂದಿಷ್ಟು ಹೊತ್ತು ಮತ್ತೆ ಮಸೀದಿಯೆಡೆಗೆ ದೃಷ್ಟಿ ಹಾಯಿಸಿದೆವು. ಹದಿನಾಲ್ಕನೇ ಶತಮಾನ, ಸಾಮೂದಿರಿ ರಾಜರು,‌ ನಾಯರುಗಳು, ಅವರ ಜೊತೆಗೆ ಗಟ್ಟಿಯಾಗಿ ನಿಂತ ಮುಸ್ಲಿಮರು, ಅವರ ಸಾಂಸ್ಕೃತಿಕ ಬದುಕು, ಮರಕ್ಕಾರ್ ಗಳ ವೀರ ಪರಾಕ್ರಮ, ಕಡಲಾಳದ ವ್ಯಾಪಾರ ವಹಿವಾಟು, ಪೋರ್ಚುಗೀಸರ ವ್ಯಾಪಾರಿ ಕುಶಾಗ್ರತೆ, ಯುದ್ಧ ನೈಪುಣ್ಯ, ಕ್ರೌರ್ಯ, ಸಾಮೂದಿರಿ ರಾಜರ ಧಾರ್ಮಿಕ ಸಹಿಷ್ಣುತೆ ಮೊದಲಾದವುಗಳಿಗೆ ಪ್ರತೀಕವಾಗಿ ಕುಟ್ಟಿಚ್ಚಿರ ಮಸೀದಿ ತನ್ನ ಪುರಾತನ ಸೊಬಗನ್ನು ಪ್ರದರ್ಶಿಸುತ್ತಾ ಬಾನೆತ್ತರಕ್ಕೆ ತಲೆಯೆತ್ತಿ ನಿಂತಿತ್ತು. ಮಸೀದಿಯ ಮುಂದೆ ಗೆಳೆಯರೆಲ್ಲ ಒಟ್ಟಿಗೆ ನಿಂತು ಪೋಟೋ ತೆಗೆಸಿಕೊಂಡೆವು.‌ ಸೆಲ್ಫಿಗಳ ಮೇಲಾಟ ಜೋರಾಗಿತ್ತು.‌ ಆಕಾಶ ನೋಡಿದರೆ ಮಳೆ ಬರುವ ಸೂಚನೆಯಿತ್ತು.

ಮಸೀದಿಯ ಆವರಣದಿಂದ ಹೊರಗೆ ಬರುತ್ತಾ ಕುಟ್ಟಿಚ್ಚಿರ ಎಂಬ ಪುಟ್ಟ ಲೋಕವು ಮನಪಟಲದಲ್ಲಿ ಬಿಚ್ಚಿಕೊಳ್ಳಲಾರಂಭಿಸಿತು. ಕುಟ್ಟಿಚ್ಚಿರವು ಕೋಯಿಕ್ಕೋಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಈ ನೆಲವು ಕೇವಲ ಒಂದು ಪ್ರದೇಶವಲ್ಲ; ಅದು ಮಲಬಾರಿನ ಬಹುಸಂಸ್ಕೃತಿಯ ಪರಂಪರೆ, ಸಮುದಾಯಗಳ ಸಹಬಾಳ್ವೆ ಮತ್ತು ವಸಾಹತುಶಾಹಿಯ ವಿರುದ್ಧದ ಪ್ರತಿರೋಧದ ಜೀವಂತ ಸ್ಮಾರಕವಾಗಿದೆ. ಪ್ರಸ್ತುತ ಭಾರತದ ರಾಜಕಾರಣಕ್ಕೆ ಸಾಮೂದಿರಿ ದೊರೆಗಳು ಬಹುದೊಡ್ಡ ಸೌಹಾರ್ದ ಮಾದರಿಯನ್ನು ಬಿಟ್ಟು ಹೋಗಿದ್ದಾರೆನಿಸಿತು.‌

ಕೆರೆ ಮತ್ತು ಮಸೀದಿಯಲ್ಲಿ ಸುತ್ತಾಡಿ ಸುಸ್ತಾಗಿದ್ದ ನಾವು ಟೀ ಕುಡಿಯಲೆಂದು ಹೋಟೆಲ್ ಹುಡುಕುತ್ತಾ ಮತ್ತೆ ಕೆರೆಯ ದಾರಿಯಾಗಿ ನಡೆದೆವು.‌ ಕೆರೆಯ ಪಕ್ಕದ ಬಸ್ ನಿಲ್ದಾಣದಲ್ಲಿ ವಯಸ್ಸಾದವರು ಕೂತು ಹರಟೆ ಹೊಡೆಯುತ್ತಿದ್ದರು. ಆ ಕೆರೆ ಅವರ ದಿನಚರಿಯ ಭಾಗವಾಗಿರುವುದು ಅವರ ಹಾವಭಾವಗಳಿಂದಲೇ ತಿಳಿಯುತ್ತಿತ್ತು.‌ ಒಬ್ಬರು ಹರಟೆ ಹೊಡೆಯುತ್ತಲೇ ಸಣ್ಣಪುಟ್ಟ ತಿನಿಸುಗಳ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ ಎಂಬುದು ಕೋಯಿಕ್ಕೋಡಿನ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವುದಕ್ಕೆ ಸಾಕ್ಷಿ ಎಂಬಂತೆ ಅವರು ಕಂಡರು.‌ ಮತ್ತೆ ಕೆರೆಯ ಕಡೆಗೆ ನೋಡಿದರೆ ನೀರು ಹಕ್ಕಿಗಳು ಮೀನುಗಳನ್ನು ಹುಡುಕುತ್ತಾ ನೀರಿನಲ್ಲಿ ಮುಳುಗೇಳುತ್ತಿದ್ದವು. ಅವುಗಳ ಚಲನವಲನಗಳನ್ನು ಸೆರೆ ಹಿಡಿಯಲು ಹಲವು ಕ್ಯಾಮೆರಾಗಳು ಪ್ರಯತ್ನಿಸುತ್ತಿದ್ದವು. ಆದರೆ, ಜನರು ಕ್ಯಾಮೆರಾ ಹೊರ ತೆಗೆದರೆ‌ ಸಾಕು ಅವುಗಳು ಸರಕ್ಕಂತ ನೀರಿನಾಳಕ್ಕೆ ಮರೆಯಾಗಿ ಆಟವಾಡಿಸುತ್ತಿದ್ದವು.

ಕುಟ್ಟಿಚ್ಚಿದರಿಂದ ನಾವು ಕೋಯಿಕ್ಕೋಡ್ ನತ್ತ ಹೊರಟು ಬರುವಾಗ ನಮ್ಮ ಮನಸ್ಸುಗಳೂ ಆ ಹಕ್ಕಿಗಳಂತೆ ಇತಿಹಾಸ ಮತ್ತು ವರ್ತಮಾನದ ನಡುವೆ ಜೀಕಾಡುತ್ತಾ, ಹರಟೆ ಮತ್ತು ಹಾಸ್ಯಗಳ ಅಲೆಯಲ್ಲಿ ತೇಲುತ್ತಿದ್ದವು.

– ಸ್ವಾಲಿಹ್‌ ತೋಡಾರ್


ಈ ಅಧ್ಯಯನಗಳು ಭೂಮಿಗಿಳಿಯುವುದು ಯಾವಾಗ

Part – 2

ಪ್ರ: ಸಮಾಜ ವಿಜ್ಞಾನಗಳಲ್ಲಿನ ನಿಯಂತ್ರಣಗಳ ಬಗ್ಗೆ ಸಮಾಜದ ಒಟ್ಟು ಸ್ಥಿತಿಯ ಜತೆಜತೆಗೂ ಮಾತಾಡಬಹುದು. ಇಂದಿನ ನಮ್ಮ ಬದುಕಿನ ಪರಿಸ್ಥಿತಿ ತುಂಬಾ ಸ್ಪರ್ಧೆಯಿಂದ ಕೂಡಿದೆ. ಎಲ್ಲರೂ ತಮ್ಮ ಸ್ವಾತಂತ್ರ್ಯ, ಹಕ್ಕುಗಳು, ಸ್ಥಾನಮಾನ ಮತ್ತು ಬೆಂಬಲಕ್ಕಾಗಿ ಪರಸ್ಪರ ಸ್ಪರ್ಧಿಸುತ್ತಿದ್ದಾರೆ. ಪರಸ್ಪರ ಅರ್ಥಮಾಡಿಕೊಳ್ಳಲು, ಇತರರನ್ನು ಒಳಗೊಳ್ಳಲು, ತಾಳ್ಮೆ ತೋರಲು ಅಥವಾ ಕರುಣೆ ತೋರಲು ಇರುವ ಅವಕಾಶಗಳು ಕಡಿಮೆಯಾಗುತ್ತಿವೆ. ಕರುಣೆ ಮತ್ತು ಶಾಂತಿಯ ಭಾಷೆಯೇ ಕಣ್ಮರೆಯಾಗುತ್ತಿರುವಂತೆ ತೋರುತ್ತಿದೆ. ಸಾಮಾಜಿಕ ಸಂವಾದ ಹೆಚ್ಚು ನಿಯಂತ್ರಿತವಾಗುತ್ತಿರುವುದು ಕೂಡಾ ಇದೇ ಕಾರಣಕ್ಕಾಗಿರಬಹುದೇ?

ಸರುಕ್ಕೈ: ಹೌದು, ಪರಸ್ಪರ ಅರ್ಥಮಾಡಿಕೊಳ್ಳದ ಒಂದು ಸಂಕಷ್ಟಕರ ಸ್ಥಿತಿಯಲ್ಲಿ ನಾವಿದ್ದೇವೆ. ಅಧ್ಯಯನ ಶಿಸ್ತುಗಳ (disciplines) ಸ್ವಭಾವ ಇಲ್ಲೊಂದು ಮುಖ್ಯ ಸಮಸ್ಯೆ ಎನಿಸಿದೆ. ಈ ಶಿಸ್ತುಗಳ ಉದ್ದೇಶಿತ ವಸ್ತು ಯಾರು? ಉದಾಹರಣೆಗೆ, ಸಾಮಾಜಿಕ ಶಾಸ್ತ್ರಗಳು ಸಮಾಜದ ಒಂದು ಸಣ್ಣ ವಿಭಾಗವನ್ನೇ ಮುಖ್ಯವಾಗಿ ಅಧ್ಯಯನ ನಡೆಸುತ್ತವೆ. ಇತರ ಜ್ಞಾನ ಶಿಸ್ತುಗಳೊಂದಿಗೆ ಹೋಲಿಸಿದರೆ, ಸಾಮಾನ್ಯ ಜನರಿಗೆ ನೇರವಾಗಿ ಉಪಯೋಗವಾಗುವ ರೀತಿಯಲ್ಲಿ ಜ್ಞಾನವನ್ನು ರೂಪಿಸುವಲ್ಲಿ ಸಾಮಾಜಿಕ ಶಾಸ್ತ್ರಗಳು ಬಹಳಷ್ಟು ಹಿಂದುಳಿದಿವೆ. ಜಾತಿ, ಮತ, ಸಾಮಾಜಿಕ ಸಿದ್ಧಾಂತಗಳು ಮುಂತಾದ ವಿಷಯಗಳ ಬಗ್ಗೆ ಅಕಾಡೆಮಿಕ್ ಲೋಕದಲ್ಲಿ ಅನೇಕ ಬರಹಗಳು ಬಂದಿವೆ. ಆದರೆ, ನಾವು ಕಾಣುತ್ತಿರುವುದು ಸಾಮಾನ್ಯ ಜನರ ನಡುವೆ ಉಂಟಾಗುತ್ತಿರುವ ಸಾಮಾಜಿಕ ಸಂಘರ್ಷಗಳೇ. ಆ ವಿಷಯಗಳ ಅಧ್ಯಯನಗಳು ಬಹಳ ಉನ್ನತ ಮಟ್ಟದಲ್ಲಿ, ಅತೀ ಸಂಕೀರ್ಣವಾದ ಭಾಷೆಯಲ್ಲಿ ಮಾತ್ರ ವಿರಚಿತವಾಗುತ್ತಿವೆ. ಆ ಜ್ಞಾನ ಸಾಮಾನ್ಯ ಜನರಿಗೆ ಹೇಗೆ ತಲುಪುತ್ತದೆ ಎಂಬುದು ಮುಖ್ಯ ಪ್ರಶ್ನೆ. ಅದರ ಪ್ರಾಯೋಗಿಕತೆ ಹಾಗೂ ಹಸ್ತಾಂತರದ ಬಗ್ಗೆ ನೀವು ಪ್ರಶ್ನಿಸಬೇಕು.

ಕರುಣೆ, ಪರಸ್ಪರ ಗೌರವ, ಅಹಿಂಸೆ ಮುಂತಾದ ವಿಚಾರಗಳು ನಮ್ಮ ದೈನಂದಿನ ಜೀವನವನ್ನು ಹೇಗೆ ಪ್ರಭಾವಿಸಬಹುದು? ಸಾಮಾನ್ಯ ಜನರು ಅಂತಹ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವಂತಹ ವಾತಾವರಣ ನಿರ್ಮಿಸಲು ಸಾಮಾಜಿಕ ಶಾಸ್ತ್ರಗಳ ಜ್ಞಾನ ಸಹಾಯ ಮಾಡಬಹುದೇ? ಈ ಆಲೋಚನೆಗಳನ್ನು ಸಮಾಜ ವಿಜ್ಞಾನದ ತರಬೇತಿ ಪಡೆಯದವರಿಗೂ ತಾಂತ್ರಿಕ ಪದಗಳನ್ನು ತಿಳಿಯದವರಿಗೂ ತಲುಪಿಸುವುದು ಅತ್ಯಂತ ಮುಖ್ಯವಾಗಿದೆ. ಸಾಮಾನ್ಯ ಜನರಿಗಾಗಿ ಪ್ರಕಟವಾಗುವ ಮಾಸಪತ್ರಿಕೆಗಳು ಮತ್ತು ಇತರ ವೇದಿಕೆಗಳ ಮಹತ್ವ ಇಲ್ಲಿ ಬಹಳ ಹಿರಿದು. ಈ ವಿಷಯದಲ್ಲಿ ಕೇರಳ ಬಹಳ ಮುಂಚೂಣಿಯಲ್ಲಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲಿನ ಸಾರ್ವಜನಿಕ ಸಂವಾದದ ಗುಣಮಟ್ಟ ಉತ್ತಮವಾಗಿದೆ.

ಸಾಮಾಜಿಕ ಶಾಸ್ತ್ರಗಳಲ್ಲಿ ಹುಟ್ಟುವ ಆಲೋಚನೆಗಳನ್ನು ಸಮಾಜದ ಮಟ್ಟಕ್ಕೆ ಹೇಗೆ ತರುವುದು ಎಂಬುದೇ ದೊಡ್ಡ ಸವಾಲು. ಸಮಾಜವಿಜ್ಞಾನದ ಪ್ರತಿಯೊಂದು ಶಿಸ್ತು ಕೂಡಾ ಮಾನವ ಜೀವನದ ಅನೇಕ ಅಂಶಗಳ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ನಿರ್ಮಿಸಿದೆ. ಮಾನವಶಾಸ್ತ್ರ (Anthropology), ಸಮಾಜವಿಜ್ಞಾನ ಮತ್ತಿತರ ಆಧ್ಯಯನ ಶಿಸ್ತುಗಳು ‘ಇತರರನ್ನು’ ಅರ್ಥಮಾಡಿಕೊಳ್ಳಲು ಬಹಳ ಕಾಲ ಮತ್ತು ಪರಿಶ್ರಮವನ್ನು ವ್ಯಯಿಸಿವೆ. ವಿಭಿನ್ನ ಸಮಾಜಗಳ ನೈತಿಕ ರಚನೆ ಮತ್ತು ಒಳಗಿನ ತರ್ಕವನ್ನು ಅವು ಅಧ್ಯಯನ ಮಾಡುತ್ತವೆ. ಆದರೆ, ಆ ಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ದೊಡ್ಡ ಕೊರತೆ ಇದೆ ಎನ್ನುವುದು ನನ್ನ ಅನಿಸಿಕೆ. ಒಂದು ಸಮಾಜ ಮತ್ತೊಂದು ಸಮಾಜವನ್ನು ಹೆಚ್ಚು ಅರ್ಥಮಾಡಿಕೊಳ್ಳಲು, ಅದರ ಮೂಲಕ ಹೆಚ್ಚಿನ ಸಂವಾದ ಮತ್ತು ಕರುಣೆಗೆ ದಾರಿ ತೆರೆಯಲು ಈ ಜ್ಞಾನ ಸಹಾಯ ಮಾಡಬೇಕು. ಆದರೆ ಅಕಾಡೆಮಿಕ್ ಪುಸ್ತಕಗಳ ಬಹುಪಾಲು ಸಾಮಾನ್ಯ ಜನರ ಕೈಗೆ ತಲುಪುವುದೇ ಇಲ್ಲ.

ಇತಿಹಾಸ, ಮಾನವಶಾಸ್ತ್ರ, ಸಮಾಜವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅತ್ಯಂತ ಆಳವಾದ ಅಧ್ಯಯನಗಳು ನಡೆದಿವೆ. ಅವುಗಳೊಂದಿಗೆ ಜನರನ್ನು ಬೆಸೆಯುವುದು ಹೇಗೆನ್ನುವುದೇ ಪ್ರಶ್ನೆ. ಉದಾಹರಣೆಗೆ, ಲೈಲಾ ಅಬೂ-ಲುಘೋದ್ ಬರೆದಿರುವ ಮುಸ್ಲಿಮರು, ಬರ್ಬರ್ ಸಮುದಾಯಗಳು ಮತ್ತು ಜಾತಿಯ ಕುರಿತ ಪುಸ್ತಕವನ್ನು ಬೇಕಾದರೆ ನನಗೆ ಚರ್ಚಿಸಬಹುದು. ಅದನ್ನು ಓದಿದಾಗ ಸಮಾಜಗಳ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಅಕಾಡೆಮಿಕ್ ವಲಯದ ಹೊರಗಿನ ಜನರಿಗೆ ಇಂತಹ ಅಧ್ಯಯನಗಳು ಸುಲಭವಾಗಿ ಲಭ್ಯವಾಗುವುದಿಲ್ಲ. ಈ ರೀತಿಯ ಸಾಹಿತ್ಯ ಮತ್ತು ಅಧ್ಯಯನಗಳು ಸಮಾಜದ ಮಟ್ಟಕ್ಕೆ ಇಳಿದರೆ, ನಾವು ಪರಸ್ಪರ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯ ಇದೆ. ಮೊದಲನೆಯದಾಗಿ ಬೇಕಾಗಿರುವುದು ಕೂಡಾ ಈ ಅರ್ಥಮಾಡಿಕೊಳ್ಳುವಿಕೆ ಮತ್ತು ಹೊಸ ಆಲೋಚನೆಗಳನ್ನು ಸ್ವೀಕರಿಸುವ ಮನೋಭಾವ. ಹೀಗಾಗಿ, ಅಕಾಡೆಮಿಕ್ ಗ್ರಂಥಗಳಲ್ಲಿನ ಈ ಚಿಂತನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಸಾಧ್ಯವೇ ಎನ್ನುವ ಪ್ರಶ್ನೆ ನಿರ್ಣಾಯಕವಾದದ್ದು.

ನಾನು ಮೊದಲೇ ಹೇಳಿದಂತೆ, ಇತರ ಸಮಾಜಗಳು ಮತ್ತು ಸಮುದಾಯಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಅವರ ವೈವಿಧ್ಯಮಯ ಕಥೆಗಳು ಮತ್ತು ಪ್ರತಿನಿಧಿತ್ವಗಳನ್ನು ನಾವು ತಿಳಿದುಕೊಳ್ಳಬೇಕು. ನೀವು ಉಲ್ಲೇಖಿಸಿದ ಕರುಣೆ ಮತ್ತು ಕಾಳಜಿಯ ಕೊರತೆ ಅನೇಕ ಸಂದರ್ಭಗಳಲ್ಲಿ ಬರುತ್ತಿರುವುದು ಅಜ್ಞತೆಯಿಂದಾಗಿ. ಜನರ ನಡುವೆ ದ್ವೇಷ ಮತ್ತು ವೈಮನಸ್ಸನ್ನು ಬಿತ್ತಲು ಖಂಡಿತವಾಗಿಯೂ ಸಾಧ್ಯವಿದೆ. ಆದರೆ, ದ್ವೇಷ ಇಲ್ಲಿ ವ್ಯಾಪಕಗೊಂಡಿರುವುದು ತಿಳಿವಳಿಕೆಯ ಕೊರತೆಯಿಂದಲೇ. ಉದಾಹರಣೆಗೆ, ನಾನು ಹೇಳಿದಂತೆ ಬೆಂಗಳೂರಿನಲ್ಲಿ ವಿಭಿನ್ನ ಸಮುದಾಯಗಳ ಮಧ್ಯೆ ಅನೇಕ ಪೂರ್ವಗ್ರಹಗಳಿವೆ. ಮುಸ್ಲಿಮ್ ಸಮುದಾಯದ ಬಗ್ಗೆ ವ್ಯಾಪಕವಾದ ತಪ್ಪು ಕಲ್ಪನೆಗಳು ರೂಪುಗೊಂಡಿವೆ. “ನೀವು ಜೀವನದಲ್ಲಿ ಒಬ್ಬ ಮುಸ್ಲಿಮನನ್ನಾದರೂ ನೇರವಾಗಿ ಭೇಟಿ ಮಾಡಿದ್ದೀರಾ? ಅವರ ಮನೆಗೆ ಹೋಗಿದ್ದೀರಾ? ಅವರ ಜೊತೆ ಕೂತು ಮಾತನಾಡಿದ್ದೀರಾ?” ಎಂದೆಲ್ಲಾ ನಾನವರೊಂದಿಗೆ ಕೇಳುತ್ತಿರುತ್ತೇನೆ .ಮುಸ್ಲಿಮರೊಂದಿಗೆ ಅವರು ನೇರವಾಗಿ ಯಾವ ಸಂಪರ್ಕವನ್ನೂ ಹೊಂದಿಲ್ಲ ಎನ್ನುವುದೇ ನಿಜ. ಅವರ ಸಂಪೂರ್ಣ ದೃಷ್ಟಿಕೋನ ರೂಪುಗೊಂಡಿರುವುದು ಶುದ್ಧ ಅಜ್ಞಾನದಿಂದ. ಹಾಗಾಗಿ ಪರಸ್ಪರ ಅನುಸಂಧಾನ ಹಾಗೂ ಕಥಾವಿನಿಮಯಗಳ ಮಹತ್ವವನ್ನು ನಾನಿಲ್ಲಿ ಒತ್ತಿಹೇಳಲು ಬಯಸುತ್ತೇನೆ. ಬೆಂಗಳೂರಿನ ಹಿಂದೂ ಸಮುದಾಯಗಳೊಳಗೆ ಕೂಡಾ ದಲಿತರ ಬಗ್ಗೆ ಅನೇಕ ಕಪೋಲಕಲ್ಪಿತ ಕಲ್ಪನೆಗಳಿವೆ. ಆದರೆ, ಅವರಲ್ಲಿ ಹಲವರಿಗೆ ಒಂದೇ ಒಂದು ದಲಿತ ವ್ಯಕ್ತಿಯೊಂದಿಗೂ ಆಪ್ತ ಪರಿಚಯವಿಲ್ಲ. ಅವರ ಬದುಕು ಹೇಗಿದೆ ಎಂದು ತಿಳಿದಿಲ್ಲ. ಆದ್ದರಿಂದ, ತೆರೆದ ಮನಸ್ಸಿನಿಂದ ಮತ್ತೊಬ್ಬರ ಕಥೆಗಳನ್ನು ಕೇಳಲು ಸಿದ್ಧರಾದರೆ ಮಾತ್ರ ಸಂವಾದದ ದಾರಿ ತೆರೆಯಬಹುದೆನ್ನುವ ನಿರೀಕ್ಷೆ ನನ್ನದು.

ಪ್ರ: ವಿಭಿನ್ನ ಸಮುದಾಯಗಳು ತಮ್ಮನ್ನು ಹೇಗೆ ರೂಪಿಸಿಕೊಳ್ಳುತ್ತವೆ, ಅವರ ನಡೆ- ನುಡಿಗಳ ಹಿಂದಿನ ಪ್ರೇರಕಗಳು ಯಾವುವು ಎಂಬುದರ ಬಗೆಗಿನ ಅಜ್ಞಾನವೇ ಪರಸ್ಪರ ಪೂರ್ವಗ್ರಹಗಳು ರೂಪುಗೊಳ್ಳುವುದಕ್ಕೆ ಮೂಲಭೂತ ಕಾರಣ. ಇಂತಹ ವಿಚಾರಗಳನ್ನು ಇನ್ನಷ್ಟು ಜನರಿಗೆ ವಿನಿಮಯಗೊಳಿಸುವ ಉದ್ದೇಶದಿಂದಲೇ ನೀವು ಫಿಕ್ಷನ್ ಕ್ಷೇತ್ರದತ್ತ ತಿರುಗಿದ್ದೀರಾ?

ಸರುಕ್ಕೈ: ಹೌದು. 2018ರ ಸುಮಾರಿಗೆ ನಾನು National Institute of Advanced Studies (NIAS) ಮಣಿಪಾಲ ಹಾಗೂ ಇತರ ಹಲವು ಸಂಸ್ಥೆಗಳಲ್ಲಿ ಸಂಚರಿಸುತ್ತಿದ್ದೆ. ಆ ಸಂದರ್ಭದಲ್ಲಿ ದೇಶದ ರಾಜಕೀಯ ವಾತಾವರಣ ನನಗೆ ಉಪಟಳ ಎನಿಸಲು ಆರಂಭಿಸಿತ್ತು. ವಿಶೇಷವಾಗಿ, ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ತಪ್ಪು ಕಲ್ಪನೆಗಳು ಜನರಲ್ಲಿ ವೇಗವಾಗಿ ಹರಡುತ್ತಿದ್ದು, ದ್ವೇಷಪೂರ್ಣ ಮಾತುಗಳು ದೈನಂದಿನ ಜೀವನದ ಭಾಗವಾಗಿ ಬಿಟ್ಟಿತ್ತು. ದ್ವೇಷ ಹರಡುವಿಕೆ ಸಾಮಾನ್ಯವಾಗಿಬಿಟ್ಟಿತ್ತು. ಆ ಹೊತ್ತಿನಲ್ಲಿ ನಾನು ನನ್ನ ಗಮನವನ್ನು ಮಕ್ಕಳ ಕಡೆಗೆ ಕೇಂದ್ರೀಕರಿಸಲು ನಿರ್ಧರಿಸಿದೆ. 2018ರಲ್ಲೇ ಅನೌಪಚಾರಿಕವಾಗಿ ‘Barefoot Philosophers’ ಎಂಬ ಪ್ರಯತ್ನವನ್ನು ಆರಂಭಿಸಬೇಕೆಂದು ಯೋಚಿಸಿದೆ. ಮಕ್ಕಳಲ್ಲಿಯೇ ಅದಾಗಲೇ ಕೆಲವು ರೂಢಿಬದ್ಧ ಕಲ್ಪನೆಗಳು ಮತ್ತು ತಪ್ಪು ಧೋರಣೆಗಳು ಬೆಳೆದುಬರುತ್ತಿರುವುದನ್ನು ನಾನು ಗಮನಿಸಿದ್ದೆ. ಹಾಗಾಗಿ, ‘Philosophy for Children’ ಎಂಬ ಒಂದು ಯೋಜನೆ ಆರಂಭಿಸಿದೆ. ಅದು ನನಗೆ ಅದ್ಭುತ ಅನುಭವವನ್ನು ನೀಡಿತು. ಅದರ ಉದ್ದೇಶ ಕೇವಲ ತತ್ತ್ವಚಿಂತನೆ ಅಭ್ಯಾಸ ಮಾಡಿಸುವುದಾಗಿರಲಿಲ್ಲ; ಬದಲಾಗಿ ಲೋಕದ ಬಗ್ಗೆ ಒಂದು ವಿಶೇಷ ರೀತಿಯಲ್ಲಿ ಚಿಂತಿಸಲು ಮಕ್ಕಳನ್ನು ಪ್ರೇರೇಪಿಸುವುದಾಗಿತ್ತು. ಮುಂದುವರಿದು ‘Philosophy for Children’ ಎಂಬ ಪುಸ್ತಕವನ್ನು ಬರೆದೆ. ಆ ಕೃತಿ ಈಗ ಹಲವು ಭಾಷೆಗಳಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ತತ್ತ್ವಚಿಂತನೆಯ ಜಗತ್ತಿಗಾಗಲಿ ಅಥವಾ ಅಕಾಡೆಮಿಕ್ ವಲಯಕ್ಕಾಗಲಿ ಎಂದಿಗೂ ತಲುಪದ ಅನೇಕ ಜನರೊಂದಿಗೆ ಸಂವಹನ ಮಾಡಲು ಆ ಮೂಲಕ ಸಾಧ್ಯವಾಗಿದೆ.
ಮಕ್ಕಳೊಂದಿಗಿನ ಈ ಅನುಸಂಧಾನಗಳು ನಂತರ ‘The Social Life of Democracy’ ಎಂಬ ಪುಸ್ತಕ ರಚನೆಯತ್ತ ನನ್ನನ್ನು ಕರೆದೊಯ್ದವು. ವಿಶೇಷವಾಗಿ ‘ಸಾಮಾಜಿಕ ಪ್ರಜಾಸತ್ತೆ’ ಎಂಬ ಕಲ್ಪನೆ ನನ್ನನ್ನು ಆಕರ್ಷಿಸಿತು. ಸಾಮಾನ್ಯ ಜನರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವ, ಆಲೋಚನೆಗಳನ್ನು ತೆರೆದು ಹಿಡಿಯುವ ಒಂದು ಪುಸ್ತಕವಾಗಿತ್ತದು. ಫಿಕ್ಷನ್ ಬರೆಯಲು, ವಿಶೇಷವಾಗಿ ‘Following a Prayer’ ಎಂಬ ಕಾದಂಬರಿಯನ್ನು ಬರೆಯಲು ಆರಂಭಿಸಿದಾಗ, ನೇರವಾಗಿ ತತ್ತ್ವಶಾಸ್ತ್ರೀಯ ಪ್ರಶ್ನೆಗಳನ್ನು ಕೇಳಬೇಕೆಂಬ ಉದ್ದೇಶ ನನಗಿರಲಿಲ್ಲ. ‘ಪ್ರಾರ್ಥನೆ ಎಂದರೇನು? ಜನರು ಏಕೆ ಪ್ರಾರ್ಥಿಸುತ್ತಾರೆ?’ ನಾನು ಪ್ರಾರ್ಥಿಸುವಾಗ ಕೆಲವು ಪದಗಳನ್ನು ಉಚ್ಚರಿಸುತ್ತೇನೆ; ಆ ಪದಗಳಿಗೆ ಏನಾಗುತ್ತದೆ? ಅವು ಎಲ್ಲಿಗೆ ಹೋಗುತ್ತವೆ? ಎಂಬಂತಹ ಪ್ರಶ್ನೆಗಳು ದೀರ್ಘಕಾಲದಿಂದ ತತ್ತ್ವವಿಜ್ಞಾನ ಹಾಗೂ ಭಾಷಾತತ್ತ್ವದ ನೆಲೆಯಲ್ಲಿ ನನ್ನನ್ನು ಕಾಡುತ್ತಿದ್ದವು. ಮಕ್ಕಳೊಂದಿಗೆ ನಡೆದ ಸಂವಾದಗಳ ನಂತರ ‘Following a Prayer’ ಅನ್ನು ಬರೆಯುವಾಗ, ನಾನು ಈ ಪ್ರಶ್ನೆಯನ್ನು ಒಂದು ಮಗುವಿನ ದೃಷ್ಟಿಕೋನದಿಂದ ಪರಿಶೀಲಿಸಿದೆ.

ಪ್ರ: ಸಮಕಾಲೀನ ಜಾಗತಿಕ ಪರಿಸ್ಥಿತಿಯಲ್ಲಿ ಬಲಪಂಥೀಯ ಜನಪ್ರಿಯ (right- wing populist) ರಾಜಕೀಯದ ಬೆಳವಣಿಗೆ ಅನೇಕ ದೇಶಗಳಿಗೆ ವ್ಯಾಪಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಲ್ಲಿ ರಾಜಕೀಯ ಪ್ರಜಾಸತ್ತೆ ಒಂದರ್ಥದಲ್ಲಿ ದ್ವೇಷವನ್ನು ಪ್ರೋತ್ಸಾಹಿಸುತ್ತಿದೆ ಎಂಬ ಭಾವನೆ ಮೂಡುತ್ತದೆ. ಸಮುದಾಯಗಳ ನಡುವೆ ಹೆಚ್ಚು ದ್ವೇಷ ಹುಟ್ಟುಹಾಕುವವರು ಗೆಲ್ಲುವ ಸಾಧ್ಯತೆ ಹೆಚ್ಚುತ್ತಿದೆ. ರಾಜಕೀಯ ಪ್ರಜಾಸತ್ತೆ ದ್ವೇಷಕ್ಕೆ ಕುಮ್ಮಕ್ಕು ನೀಡುತ್ತದೆ ಎಂದು ಹೇಳಬೇಕಾದ ಪರಿಸ್ಥಿತಿ ಇದೆ. ಹೆಚ್ಚಿನ ದೇಶಗಳು ಕೂಡಾ ಇಂತಹ ನಿರಾಶಾದಾಯಕ ದಿಕ್ಕಿನತ್ತ ಸಾಗುತ್ತಿರುವಂತೆ ಕಾಣುತ್ತದೆ. ಇದಕ್ಕೆ ಪರಿಹಾರವೇನು?

ಸರುಕ್ಕೈ: ನಿಜವಾದ ಸಮಸ್ಯೆ ಇರುವುದು ‘ರಾಜಕೀಯ ಪ್ರಜಾಸತ್ತೆ’ಯಲ್ಲೇ? ಎನ್ನುವುದು ನನ್ನ ಪ್ರಶ್ನೆ. ಭಾರತದ ರಾಜಕೀಯ ಪ್ರಜಾಸತ್ತೆಯನ್ನೇ ಕೈಗೆತ್ತಿಕೊಳ್ಳೋಣ. ಅನೇಕ ರಾಜಕೀಯ ತತ್ತ್ವಚಿಂತಕರು ಸೂಚಿಸಿರುವ ಹಾಗೆ ವರ್ಣಾಶ್ರಮ ವ್ಯವಸ್ಥೆಯಡಿಯಲ್ಲಿ ಜೀವಿಸುತ್ತಿದ್ದ ಜನರಿಗೆ ಪ್ರಜಾಸತ್ತಾತ್ಮಕ ವ್ಯವಸ್ಥೆ ಹಕ್ಕುಗಳನ್ನು ನೀಡಿದೆ. ಆದರೆ ಪ್ರಸ್ತುತ ‘ಮೆಜಾರಿಟೇರಿಯನಿಸಂ’ (majoritarianism) ಎಂಬ ಸಮಸ್ಯೆಯೂ ಅದರೊಳಗೇ ಬೆಳೆಯುತ್ತಿದೆ. ಬಹುಮತ ಪಡೆಯುವುದೇ ಪ್ರಜಾಸತ್ತೆ ಎಂಬ ರೀತಿಯಲ್ಲಿ ಅರ್ಥ ಬದಲಾಗುತ್ತಿದೆ. ಇಲ್ಲಿ ಸಮಸ್ಯೆ ಇರುವುದು ರಾಜಕೀಯ ಪ್ರಜಾಸತ್ತೆಯನ್ನು ‘ಕಾರ್ಯಗತಗೊಳಿಸುವ ವ್ಯವಸ್ಥೆ’ಯಲ್ಲಿ (delivery mechanism). ಈ ವ್ಯವಸ್ಥೆ ಪ್ರಜಾಸತ್ತೆಯ ಮೂಲ ಗುರಿಯೊಂದಿಗೆ ನೇರವಾಗಿ ಹೊಂದಿಕೊಂಡಿರಬೇಕೆಂದಿಲ್ಲ.

ಮತದಾನ ಸೇರಿದಂತೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನೈತಿಕವಾಗಿ ಅಡಕವಾಗಿರುವ ಅಂಶವೇನು? ‘The Social Life of Democracy’ ಎಂಬ ಪುಸ್ತಕವನ್ನು ಬರೆಯುವಾಗ ಆರಂಭದಲ್ಲೇ ನಾನು ಕೇಳಿಕೊಂಡ ಪ್ರಶ್ನೆಯಿದು. ಮತದಾನದ ನೈತಿಕ ಆಯಾಮವೇನು (moral dimension)? ಎಂಬ ಚಿಂತನೆ ನನ್ನನ್ನು ಆ ಪ್ರಶ್ನೆಯತ್ತ ಕೊಂಡೊಯ್ದಿತ್ತು ‘ನಾವು ಏಕೆ ಮತ ಹಾಕುತ್ತೇವೆ? ಯಾರಿಗೆ ಮತ ಹಾಕುತ್ತೇವೆ?’ ಎಂಬ ಪ್ರಶ್ನೆಗಳ ಬಗ್ಗೆ ಬರೆಯಲು ಪ್ರಾರಂಭಿಸಿದ್ದು ಆಮೇಲೆ. ನಾನು ಮುಂದಿಟ್ಟ ವಾದ ಬಹಳ ಸರಳವಾದುದು. ‘ಸಾರ್ವಜನಿಕ’ (public) ಎಂಬ ಪದದ ಅರ್ಥವೇ ಇದು: ಸಾರ್ವಜನಿಕ ವಲಯದಲ್ಲಿ ನಮ್ಮೆಲ್ಲರಿಗೂ ಸಮಾನ ಪಾಲು ಇದೆ. ಅದು ನಮ್ಮೆಲ್ಲರಿಗೂ ಸೇರಿದ ಸಾಮೂಹಿಕ ಸ್ವತ್ತು. ಉದಾಹರಣೆಗೆ, ಐದು ಲಕ್ಷ ಜನರಿರುವ ಒಂದು ಸಮಾಜವನ್ನು ಕಲ್ಪಿಸಿಕೊಳ್ಳಿ. ಅದರಲ್ಲಿ ಒಂದು ಸಾರ್ವಜನಿಕ ಉದ್ಯಾನವನವಿದ್ದರೆ, ಆ ಐದು ಲಕ್ಷ ಜನರಿಗೂ ಆ ಉದ್ಯಾನವನದಲ್ಲಿ ಸಮಾನ ಪಾಲು ಇದೆ. ಆ ಉದ್ಯಾನವನ ನಮ್ಮೆಲ್ಲರಿಗೂ ಸೇರಿದೆ. ಎಲ್ಲರೂ ಒಟ್ಟಾಗಿ ನಿರ್ಧರಿಸದೆ ಅದನ್ನು ವೈಯಕ್ತಿಕವಾಗಿ ಮಾರಲು ಸಾಧ್ಯವಿಲ್ಲ.

ಹಾಗಾದರೆ, ನಾನು ಮತ ಚಲಾಯಿಸುವಾಗ ಮಾಡುತ್ತಿರುವುದಾದರೂ ಏನು? ಸಾರ್ವಜನಿಕ ಸಂಪತ್ತನ್ನು ನಿರ್ವಹಣೆ ಮಾಡಲು ಮತ್ತು ಕಾಪಾಡಲು ಒಬ್ಬರನ್ನು ಆಯ್ಕೆ ಮಾಡುತ್ತಿದ್ದೇನೆ. ಆ ಸಾರ್ವಜನಿಕ ವಲಯ ಅವನಿಗಷ್ಟೇ ಅಲ್ಲ, ನನಗೂ ಸೇರಿದ್ದು; ನಮ್ಮೆಲ್ಲರಿಗೂ ಸೇರಿದ್ದು. ಇಲ್ಲಿಯೇ ಮಹತ್ವದ ನೈತಿಕ ಪ್ರಶ್ನೆ ಉದ್ಭವಿಸುತ್ತದೆ. ಮತ ಚಲಾಯಿಸುವ ಮೂಲಕ ‘ನಮ್ಮೆಲ್ಲರಿಗೂ ಸೇರಿದ ಈ ಸಾರ್ವಜನಿಕ ವಲಯದ ರಕ್ಷಕನಾಗಿ (trustee) ನೀನು ಕಾರ್ಯನಿರ್ವಹಿಸಬೇಕು’ ಎಂದು ನನ್ನ ಅಭ್ಯರ್ಥಿಗೆ ನಾನು ಹೇಳುತ್ತೇನೆ. ಪ್ರಜಾಸತ್ತಾತ್ಮಕತೆಯ ವೈಫಲ್ಯ ಸ್ಪಷ್ಟವಾಗುವುದೇ ಇಲ್ಲಿ. ‘ಸಾರ್ವಜನಿಕ’ ಎಂಬ ಕಲ್ಪನೆ ನಾಶವಾಗುವ ಕ್ಷಣದಲ್ಲಿ ಪ್ರಜಾಸತ್ತೆ ಕುಸಿಯಲು ಆರಂಭಿಸುತ್ತದೆ. ‘ಸಾರ್ವಜನಿಕ’ದ ಸ್ವಭಾವ ಹಾಳಾದರೆ, ಅಲ್ಲಿ ಪ್ರಜಾಸತ್ತಾತ್ಮಕತೆ ವಿಫಲವಾಗಿದೆ ಎಂದರ್ಥ. ‘ಸಾರ್ವಜನಿಕ’ ಎನ್ನುವಾಗ ನಾನು ಉದ್ದೇಶಿಸುತ್ತಿರುವುದು ಕೇವಲ ವೈಯಕ್ತಿಕ ಅಥವ ಸಾಮಾಜಿಕ ಮಟ್ಟದಲ್ಲಿ ಮಾತ್ರವಲ್ಲ. ಎಲ್ಲಾ ಸಂಪನ್ಮೂಲಗಳಲ್ಲಿಯೂ ಸಾರ್ವಜನಿಕತೆ ಎಂದರೆ ನಮ್ಮೆಲ್ಲರಿಗೂ ಸೇರಿದ ಪಾಲು. ನಾವು ಒಟ್ಟಾಗಿ ಅನುಭವಿಸಿ ಕಾಪಾಡಿಕೊಳ್ಳಬೇಕಿರುವ ವಸ್ತು. ಈ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಿದಾಗ, ನೀರು, ಗಾಳಿ, ಭೂಮಿ, ಪ್ರಕೃತಿ ಸಂಪನ್ಮೂಲಗಳು, ನಮ್ಮೆಲ್ಲರಿಗೂ ಸೇರಿದ ಹಕ್ಕುಗಳು ಕಳೆದುಹೋಗುತ್ತವೆ. ಇದನ್ನು ಎಸಗುವವರು ಮುಖ್ಯವಾಗಿ ರಾಜಕೀಯ ನಾಯಕರು. ಏಕೆಂದರೆ, ಸಾರ್ವಜನಿಕ ವಲಯದ ವಿಶ್ವಾಸಾರ್ಹ ರಕ್ಷಕರಾಗಬೇಕಿರುವ ಅವರು ಅದರ ಮಾಲೀಕರಂತೆ ವರ್ತಿಸಲು ಆರಂಭಿಸುತ್ತಾರೆ. ಇದೇ ನಿಜವಾದ ಸಮಸ್ಯೆ.
ಆದ್ದರಿಂದ, ಇದು ಪ್ರಜಾಸತ್ತೆ ಎಂಬ ಕಲ್ಪನೆಯ ವೈಫಲ್ಯವಲ್ಲ ಎಂದು ದಿಟವಾಗಿ ಹೇಳಬಹುದು. ಇದು ಪ್ರಜಾಸತ್ತೆಯನ್ನು ಜಾರಿಗೆ ತರುವ ವ್ಯವಸ್ಥೆಯ ವೈಫಲ್ಯ. ಇಲ್ಲಿ ಹೊಣೆಗಾರಿಕೆಯನ್ನು (accountability) ಖಚಿತಪಡಿಸುವಲ್ಲಿ ದೊಡ್ಡ ಕೊರತೆ ಇದೆ. ಮತದಾನದ ಬಗೆಗಿನ ಜಾಗೃತಿಯ ಕೊರತೆ ಕೂಡಾ ಈ ಜಾರಿಗೊಳಿಸುವಿಕೆಯ ಸಮಸ್ಯೆಯೇ. ಇಲ್ಲಿ ‘ಶಿಕ್ಷಣ’ ಎಂಬ ಪದವನ್ನು ಬಳಸುವುವಾಗ ಸ್ವಲ್ಪ ಸೂಕ್ಷ್ಮವಾಗಿರಬೇಕದೆ. ಶಿಕ್ಷಣ ಎನ್ನುವಾಗ ನಾನು ಮುಂದಿಡುವ ತಾತ್ಪರ್ಯ ಅಕಾಡೆಮಿಕ್ ಪದವಿಗಳು ಅಥವಾ ಪ್ರಮಾಣಪತ್ರಗಳಲ್ಲ. ಬದಲಾಗಿ ಮತದಾರನಲ್ಲಿ ನಾವು ನಿರೀಕ್ಷಿಸಬೇಕಾದ ಕೆಲವು ಗುಣಗಳು. ಅಂದರೆ, ಮಾನವನಾಗಿ ಬದುಕುವುದರ ಅರ್ಥವೇನು ಎಂಬ ಅರಿವು, ‘ನಾನು ಏಕೆ ಮತ ಹಾಕುತ್ತಿದ್ದೇನೆ?’ ಎಂಬ ಸ್ಪಷ್ಟತೆ, ಮತ್ತು ಒಂದು ನೈತಿಕ- ಸಾಮಾಜಿಕ ಜಾಗೃತಿ. ಅಂತಹ ಜಾಗೃತಿ ಸಮಾಜದಲ್ಲಿ ವ್ಯಾಪಕವಾಗಿರಬೇಕಿತ್ತು. ಖಂಡಿತವಾಗಿಯೂ ಕೆಲವರು ಹಣಕ್ಕಾಗಿ ಮತ ಹಾಕಬಹುದು. ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಸಂಪೂರ್ಣ ಸಮಾಜದ ಬಗ್ಗೆ ನಿರಾಶರಾಗುವುದಕ್ಕಿಂತ, ಬಹುಸಂಖ್ಯೆಯ ಜನರು ಸಮಾಜವನ್ನು ಹೇಗೆ ನೋಡುತ್ತಾರೆ ಎಂಬುದೇ ಮುಖ್ಯ ಪ್ರಶ್ನೆ.
ಕೊನೆಯದಾಗಿ ನಾವು ಸಮಾಜವನ್ನು ಹೇಗೆ ನೋಡುತ್ತೇವೆಯೋ ಅದರ ಆಧಾರದ ಮೇಲೆಯೇ ಮತ ಹಾಕುತ್ತೇವೆಂದು ನಾನು ಹೇಳಲು ಬಯಸುತ್ತೇನೆ. ಮತದಾರರು ಅವರ ಅಭ್ಯರ್ಥಿಯನ್ನು ವೈಯಕ್ತಿಕವಾಗಿ ಪ್ರೀತಿಸಬೇಕೆಂದಿಲ್ಲ, ಅಥವಾ ಆರಾಧಿಸಬೇಕೆಂದಿಲ್ಲ. ‘ನನಗವರು ಇಷ್ಟ, ಹಾಗಾಗಿ ನಾನವರಿಗೆ ಮತ ಹಾಕುತ್ತೇನೆ’ ಎಂಬುದೇ ಮುಖ್ಯ ಕಾರಣವಾಗಿರುವುದಿಲ್ಲ. ಬದಲಾಗಿ, ಆ ಅಭ್ಯರ್ಥಿ ಸಮಾಜದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರತಿನಿಧಿಸುತ್ತಾರೆ ಎಂಬ ಕಾರಣಕ್ಕೇ ಮತದಾರರು ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ, ನಿಜವಾಗಿ ಬದಲಾಗಬೇಕಿರುವುದು ರಾಜಕಾರಣಿಗಳಿಗಿಂತ ಹೆಚ್ಚಾಗಿ ಸಮಾಜದ ಕುರಿತ ಮತದಾರರ ದೃಷ್ಟಿಕೋನವೇ ಆಗಿದೆ ಎನ್ನುವುದು ನನ್ನ ಅನಿಸಿಕೆ.

ಪ್ರ: ಸಾಮಾನ್ಯವಾಗಿ ಸಂಘರ್ಷಗಳು ಹುಟ್ಟುತ್ತಿರುವುದು ಕೂಡಾ ‘ಸಾರ್ವಜನಿಕ ವಲಯ’, ‘ಸಾರ್ವಜನಿಕ ಹಿತ’, ‘ನ್ಯಾಯಸಮ್ಮತ ಪಾಲು’ (fair share) ಮುಂತಾದ ವಿಚಾರಗಳ ಬಗ್ಗೆಯೇ. ವಿಭಿನ್ನ ರೂಪಗಳಲ್ಲಿರುವ ಅಲ್ಪಸಂಖ್ಯಾತ ರಾಜಕಾರಣ ‘ನಮಗೆ ನ್ಯಾಯವಾಗಿ ಸಿಗಬೇಕಾದ ಪಾಲು ಸಿಗುತ್ತಿಲ್ಲ’ ಎಂದು ಹೇಳುತ್ತದೆ. ಆ ನಿಟ್ಟಿನಲ್ಲಿ, ವಿಶೇಷವಾಗಿ ದೀರ್ಘಕಾಲದಿಂದ ದಮನಕ್ಕೊಳಗಾದ ಸಮುದಾಯಗಳಿಂದ ಮೂಡಿಬರುವಾಗ, ಅದೊಂದು ವಿಮೋಚನಾತ್ಮಕ (emancipatory) ಸಂವಾದವೂ ಹೌದು. ಆದರೆ ಇದೇ ವಾದವನ್ನು ಬಹುಸಂಖ್ಯಾತ ರಾಜಕಾರಣವೂ ಮುಂದಿಡುತ್ತಿರುವುದು ದೊಡ್ಡ ವಿರೋಧಾಭಾಸ. ಅವರು ಕೂಡಾ ‘ಸಂಪನ್ಮೂಲಗಳು ಪೂರ್ಣವಾಗಿ ನಮಗೇ ಬೇಕು’ ಎಂದು ಹೇಳುವುದಿಲ್ಲ. ಅವರ ವಾದವೂ ‘ನಮಗೆ ಸಿಗಬೇಕಾದುದು ಸಿಗುತ್ತಿಲ್ಲ’ ಎಂದೇ. ಮೇಲ್ನೋಟಕ್ಕೆ ಇದು ಸಂಪೂರ್ಣ ಪ್ರಜಾಸತ್ತಾತ್ಮಕ ವಾದದಂತೆ ಕಾಣುತ್ತದೆ. ಆದರೆ,ಇಂತಹ ಪ್ರಜಾಸತ್ತಾತ್ಮಕ ‘ಹಕ್ಕು’ ಆಧಾರಿತ ವಾದಗಳೇ ನಮ್ಮನ್ನು ಇಂದಿನ ಸಂಕಷ್ಟಕ್ಕೆ ತಳ್ಳಿವೆ. ಹಾಗಾದರೆ, ಈ ಗೊಂದಲದಿಂದ ಹೊರಬರುವ ದಾರಿ ಏನು? ಮತ್ತೊಬ್ಬರಿಗಾಗಿ ತ್ಯಾಗ ಮಾಡಲು ಸಿದ್ಧವಾಗಿರುವ ನೈತಿಕತೆಯ ಮೇಲೆ ಆಧಾರಿತವಾದ ಹೊಸ ರಾಜಕೀಯದ ಅಗತ್ಯವಿಲ್ಲವೇ? ಪ್ರಜಾಸತ್ತಾತ್ಮಕ ಸಂವಾದವೇ ಮೂಲಭೂತವಾಗಿ ವಿಕಲವಾಗಿರುವ ಈ ಹೊತ್ತಿನಲ್ಲಿ ಹೊಸ ನೈತಿಕ ಸಂವಾದಗಳು ತೆರೆಯಬೇಕಾದದು ಅಗತ್ಯವಲ್ಲವೇ?

ಸರುಕ್ಕೈ: ನಿಜ. ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಸಾಮಾಜಿಕ ಪ್ರಜಾಸತ್ತೆ’ (social democracy) ಎಂಬ ಕಲ್ಪನೆ ನನ್ನನ್ನು ಆಕರ್ಷಿಸಿದ್ದು ಇಂತಹ ಪ್ರಶ್ನೆಗಳನ್ನು ಎದುರಿಸಿದಾಗ. ನಾನು ‘The Social Life of Democracy’ ಎಂಬ ಪುಸ್ತಕವನ್ನು ಬರೆಯುವಾಗ ಅದರ ಆರಂಭದಲ್ಲೇ ಒಂದು ವಿಚಾರವನ್ನು ಸೂಚಿಸಿದ್ದೆ. ಅಂಬೇಡ್ಕರ್ ಹೀಗೆ ಹೇಳುತ್ತಾರೆ: ರಾಜಕೀಯ ಪ್ರಜಾಸತ್ತೆ ಅವಶ್ಯಕ. ಆದರೆ, ಸಮಾಜ ಪ್ರಜಾಸತ್ತಾತ್ಮಕವಲ್ಲದಿದ್ದರೆ ರಾಜಕೀಯ ಪ್ರಜಾಸತ್ತೆಗೆ ಅರ್ಥವೇ ಇರುವುದಿಲ್ಲ. ಅಂದರೆ, ನಾವು ಪ್ರಜಾಸತ್ತೆಯ ಆತ್ಮವನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಮತದಾನವೇ ಪ್ರಜಾಸತ್ತೆ ಎಂದುಕೊಳ್ಳುವುದು ತಪ್ಪು. ಸಮಾಜವೇ ಪ್ರಜಾಸತ್ತಾತ್ಮಕವಾಗಿರದಿದ್ದಲ್ಲಿ ಸರ್ಕಾರವನ್ನು ಮಾತ್ರ ‘ಪ್ರಜಾಸತ್ತಾತ್ಮಕ ಸರ್ಕಾರ’ ಎಂದು ಕರೆಯುವುದಕ್ಕೆ ಅರ್ಥವೇನು? ಇದು ‘ಒಂದು ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸಲು ಹೇಗೆ ಸಾಧ್ಯ’ ಎನ್ನುವ ಇನ್ನೊಂದು ಪ್ರಶ್ನೆಯನ್ನು ಹುಟ್ಟು ಹಾಕಿತು. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಕೇವಲ ‘ಯಾರು ಆಡಳಿತ ನಡೆಸುತ್ತಾರೆ?’ ಎಂಬ ಆಯ್ಕೆಯ ಪ್ರಶ್ನೆಗೆ ಸೀಮಿತವಾಗಿಲ್ಲ. ಬದಲಿಗೆ, ಆಡಳಿತ, ಹಂಚಿಕೆ ಮತ್ತು ವಿತರಣೆಯ ಯಾವ ವ್ಯವಸ್ಥೆಗಳು ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸುತ್ತವೆ ಎನ್ನುವುದೇ ಮುಖ್ಯ ಪ್ರಶ್ನೆ.
ಹಾಗಾದರೆ ಸಮಾಜ ಪ್ರಜಾಸತ್ತಾತ್ಮಕವಾಗಿದೆ ಎನ್ನುವುದರ ತಾತ್ಪರ್ಯವೇನು? ಪ್ರಜಾಸತ್ತೆಯನ್ನು ಹುಡುಕಬೇಕಾದದ್ದೆಲ್ಲಿ? ಒಂದು ಮನೆಯೊಳಗೆ ಪ್ರಜಾಸತ್ತೆ ಹೇಗೆ ವ್ಯಕ್ತವಾಗುತ್ತದೆ? ಒಂದು ಮಗು ತನ್ನ ಪೋಷಕರಿಗೆ ‘ನೀವು ನನ್ನೊಂದಿಗೆ ಪ್ರಜಾಸತ್ತಾತ್ಮಕವಾಗಿ ವರ್ತಿಸುತ್ತಿಲ್ಲ; ನನಗೆ ಚಾಕೊಲೇಟ್ ಬೇಕು, ನೀವು ಬಟ್ಟೆ ಮಾತ್ರ ಕೊಡುತ್ತೀರಿ’ ಎಂದು ಹೇಳಬಹುದೇ? ಅದು ಪ್ರಜಾಸತ್ತೆಯಲ್ಲ. ಅದು ಕೇವಲ ಆಯ್ಕೆಯ ಪ್ರಶ್ನೆ. ಹಾಗೆಯೇ, ಸಹಜವಾಗಿಯೇ ಶ್ರೇಣಿಕ್ರಮ (hierarchical) ಇರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ- ವಿದ್ಯಾರ್ಥಿ ಸಂಬಂಧಗಳಲ್ಲಿ ಪ್ರಜಾಸತ್ತೆ ಎಂದರೇನು? ‘ಈ ಪಾಠ ನನಗೆ ಇಷ್ಟವಿಲ್ಲ, ಆದ್ದರಿಂದ ನಾನು ಓದುವುದಿಲ್ಲ’ ಎಂದು ಹೇಳುವ ವಿದ್ಯಾರ್ಥಿಗಳನ್ನು ನಾನು ನೋಡಿದ್ದೇನೆ. ‘ಗಣಿತ ನನಗೆ ಇಷ್ಟವಿಲ್ಲ; ಅದನ್ನು ನನಗೆ ಕಲಿಸಬೇಡಿ’ ಎಂದೂ ಕೆಲವರು ಹೇಳುತ್ತಾರೆ. ಹಾಗಾದರೆ, ‘ನೀನು ಗಣಿತ ಓದಲೇಬೇಕು’ ಎಂದು ಹೇಳುವುದು ಪ್ರಜಾಸತ್ತೆಗೆ ವಿರುದ್ಧವೇ?
ಇಂತಹ ಪ್ರಶ್ನೆಗಳನ್ನು ನಾನು ಆ ಪುಸ್ತಕದಲ್ಲಿ ಪರಿಶೀಲಿಸಿದ್ದೇನೆ. ಮನೆಗಳಿಂದ ಆರಂಭಿಸಿ ಶಾಲೆಗಳು, ಕಾಲೇಜುಗಳು, ಕೆಲಸದ ಸ್ಥಳಗಳು, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಜಾಸತ್ತೆ ಹರಡದೆ ಕೇವಲ ರಾಜಕೀಯ ನಾಯಕರಿಂದ ಮಾತ್ರ ಪ್ರಜಾಸತ್ತಾತ್ಮಕ ವರ್ತನೆಯನ್ನು ನಿರೀಕ್ಷಿಸುವುದು ನ್ಯಾಯವೇ? ಸ್ವಾತಂತ್ರ್ಯ (liberty), ಸಮಾನತೆ (equality), ಮತ್ತು ಸಹೋದರತ್ವ (fraternity) ಪ್ರಜಾಸತ್ತೆಯ ಮೂರು ಮೂಲ ಮೌಲ್ಯಗಳಾಗಿವೆ ಎಂದು ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ಸ್ವಾತಂತ್ರ್ಯ ಮುಖ್ಯವಾಗಿ ವೈಯಕ್ತಿಕ ಹಕ್ಕುಗಳು ಮತ್ತು ಇಚ್ಛೆಯ ಆಯ್ಕೆಗಳಿಗೆ ಸಂಬಂಧಿಸಿದೆ. ಆದರೆ ಕೇವಲ ಸ್ವಾತಂತ್ರ್ಯ ಎನ್ನುವುದು ಸಮಾನತೆಗೆ ವಿರುದ್ಧವಾಗಬಲ್ಲದು. ‘ಮೆರಿಟ್ ವರ್ಸಸ್ ಮೀಸಲಾತಿ’ಯ ಬಗೆಗಿನ ಚರ್ಚೆಗಳು ಇದಕ್ಕೊಂದು ಉತ್ತಮ ಉದಾಹರಣೆ. ಸ್ವಾತಂತ್ರ್ಯವೂ ಬೇಕು, ಸಮಾನತೆಯೂ ಬೇಕು. ಆದರೆ ಅವೆರಡೂ ಪರಸ್ಪರ ಸಂಘರ್ಷಕ್ಕೊಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಅವೆರಡನ್ನೂ ಸಮತೋಲನದಲ್ಲಿಡುವ ಮತ್ತೊಂದು ಮೌಲ್ಯ ಅಗತ್ಯ. ಅದೇ ಅಂಬೇಡ್ಕರ್ ಹೇಳುವ “fraternity” — ಅಂದರೆ ಸಹೋದರತ್ವ. ಈ ಕಲ್ಪನೆಗೆ ಬೌದ್ಧ ಧರ್ಮದ ಮೈತ್ರಿ (maitri) ಪರಿಕಲ್ಪನೆಯಿಂದಲೂ ಅವರಿಗೆ ಪ್ರೇರಣೆ ದೊರಕಿತ್ತು. ಅಂಬೇಡ್ಕರ್ ಅವರ ಅಭಿಪ್ರಾಯದಲ್ಲಿ, ಸಹೋದರತ್ವವೇ ಪ್ರಜಾಸತ್ತೆಯನ್ನು ಜೀವಂತವಾಗಿರಿಸುವ ಅಂಶ.

ಈ ಚಿಂತನೆಗಳು ಅವರ ಸ್ವಂತ ಜೀವನಾನುಭವಗಳಿಂದಲೇ ಉದ್ಭವಿಸಿದ್ದವು. ದಲಿತ ಸಮುದಾಯ ಅನುಭವಿಸಿದ ನೋವು ಮತ್ತು ಅವಮಾನಗಳು ‘ಪ್ರಜಾಸತ್ತೆ ಎಂದರೇನು?’ ಎಂಬ ಪ್ರಶ್ನೆಯನ್ನು ಆಳವಾಗಿ ಸ್ಪರ್ಶಿಸುತ್ತವೆ. ಪ್ರಜಾಸತ್ತೆಯನ್ನು ತಿರಸ್ಕರಿಸದೆ, ಅದನ್ನು ವಿಮರ್ಶಿಸಿ ಪುನರ್ವ್ಯಾಖ್ಯಾನ ಮಾಡುವ ದಾರಿಗಳನ್ನು ತೆರೆಯಬೇಕಿದೆ. ‘ಜನತಂತ್ರಕ್ಕೆ ಪರ್ಯಾಯವೇನು?’ ಎಂಬ ಪ್ರಶ್ನೆಯೇ ಭಯಾನಕ. ಬಹುಸಂಖ್ಯಾತರ ಪ್ರಭುತ್ವ ನಮ್ಮನ್ನು ನೋಯಿಸುತ್ತಿದೆ. ಆದರೆ ಚುನಾವಣಾ ಪ್ರಜಾಸತ್ತೆ ಇಲ್ಲದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತೆಂದು ಕಲ್ಪಿಸುವುದೇ ಕಷ್ಟ. ಇತಿಹಾಸವು ಇಂತಹ ಅನೇಕ ಭೀಕರ ಉದಾಹರಣೆಗಳಿಂದ ತುಂಬಿದೆ. ಇಲ್ಲಿ ಕರುಣೆ, ಕಾಳಜಿ ಮತ್ತು ಸಹೋದರತ್ವ ಎಲ್ಲಿಂದ ಬೆಳೆಯಬೇಕು ಎಂಬ ಪ್ರಶ್ನೆಯತ್ತ ನಾವು ಮರಳಬೇಕಾಗಿ ಬರುತ್ತದೆ. ಅದು ಶಾಲೆಗಳಿಂದಲೇ ಆರಂಭವಾಗಬೇಕು. ಆದರೆ ಇಂದಿನ ಶಾಲಾ ಶಿಕ್ಷಣ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಒಂದು ತರಗತಿಯಲ್ಲಿ ಉಳಿಯಲು ಒಬ್ಬ ಮಗು ಮತ್ತೊಬ್ಬ ಮಗುವನ್ನು ಸೋಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಂತಹ ವಾತಾವರಣದಲ್ಲಿ ಕರುಣೆ, ಪರಿಗಣನೆ ಮತ್ತು ಸಹೋದರತ್ವ ಹೇಗೆ ಬೆಳೆದುಬರಲು ಸಾಧ್ಯ?

ಸಂದರ್ಶನ: ಮಶ್ಕೂರ್ ಖಲೀಲ್
ಕನ್ನಡಕ್ಕೆ: ನಝೀರ್ ಅಬ್ಬಾಸ್


Sundar Sarukkai is one of India’s leading contemporary philosophers and public intellectuals, known for his work in the philosophy of science and interdisciplinary studies. Trained in physics and philosophy, he earned his PhD from Purdue University, USA, and has held key academic positions including at the National Institute of Advanced Studies, Bengaluru, and as Founder-Director of the Manipal Centre for Philosophy and Humanities. He is the author of several influential books, including Translating the World, Philosophy of Symmetry, and What is Science?, and continues to actively promote philosophy through research, writing, and public engagement.

ಅನ್ನಾ ಮೇರಿ ಶಿಮ್ಮೆಲ್

ನನ್ನ ದಾಹವನ್ನು ತಣಿಸದಿರು ಪ್ರಿಯಾ
ದಾಹದಲ್ಲಿಯೇ ಬದುಕಗೊಡು

ಅದಮ್ಯವಾಗಿ ಪ್ರೀತಿಸಲು ಬಿಡು
ನಿದ್ದೆಯೇ ಬಾಗಿಲಿನಿಂದ ಓಡಿಹೋಗುವಂತೆ

ಓಡಿ ಹೋಗಲಿ ನಿದ್ದೆ
ನನ್ನ ಉರಿವ ಕಣ್ಣಾಲಿಗಳ ನೋಡಿ,

ಮುಳುಗಿಹೋಗುವೆ ನೀನು,
ಬಳಿ ಬಂದರೆ
ಕಣ್ಣೀರ ಸಾಗರವ ದಾಟಲೆಂದು,

ಉನ್ಮತ್ತನಾಗುವೆ ಅದರಿಂದ
ಗುಟುಕನೆತ್ತಿಕೊಂಡರೆ ಕುಡಿಯಲೆಂದು,

ಅಂದು ನೀ ನನ್ನ ಕಂಗಳಿಗೆ ಸುರಿದಿದ್ದ
ಆ ಅಮೃತ ಸುರಾಹಿಯಿಂದ,

ಒಂದೊಮ್ಮೆ ನಿನ್ನ ಭವ್ಯ ಸೌಂದರ್ಯವನ್ನು
ಕಣ್ದುಂಬಿಕೊಂಡಿದ್ದ ಕಂಗಳವು
ನಿನ್ನನ್ನೇ ಕನ್ನಡಿಯಂತೆ ಪ್ರತಿಫಲಿಸಿದ್ದ
ಕಣ್ಣೀರಿನ ಹನಿಗಳವು

ನನ್ನನ್ನು ದಾಹದಲ್ಲಿರಲು ಬಿಡು ಪ್ರಿಯಾ
ಪ್ರಾಂಜಲವ ದಯಪಾಲಿಸದಿರು ನನಗೆ
ನಾನು ದಾಹದಲ್ಲಿರುವುದೇ
ನೀನು ದಾಹದಲ್ಲಿರುವುದಕ್ಕೆ ಸಾಕ್ಷಿಯೆಂದು

ಅನ್ನಾ ಮೇರಿ ಶಿಮ್ಮೆಲ್
ಅನುವಾದ : ಪುನೀತ್ ಅಪ್ಪು

ಕಲೆಗಾರಿಕೆಯನ್ನು ವಿಸ್ತರಿಸಿದ ಕತೆಗಾರರು

ಕಥನ ಕಲೆಗಾರಿಕೆಯ ತಾತ್ವಿಕ ಸಾಧ್ಯತೆಗಳನ್ನು ವಿಸ್ತರಿಸಿದ ಅಮರೇಶ ನುಗಡೋಣಿ ಕನ್ನಡದ ಮಹತ್ವದ ಕತೆಗಾರರು. ಅವರ ಕಥನ ಮಾದರಿ ಕನ್ನಡದಲ್ಲಿಯೇ ವಿಶಿಷ್ಟವೆಂಬಂತೆ ರೂಪತಾಳಿದೆ. ಸಾಹಿತ್ಯ ಚಳುವಳಿಗಳು ಸ್ಥಗಿತಗೊಂಡ ಕಾಲದಲ್ಲಿ ಬದುಕನ್ನು ಭಿನ್ನ ನೋಟಗಳಿಂದ, ವಿಭಿನ್ನ ಆಶಯಗಳಿಂದ ವಿಸ್ತರಿಸಿದ ನುಗಡೋಣಿ ಅವರು ಕಥೆಗಳಲ್ಲಿ ತಿಳಿಯ ಹೇಳುವ ಕ್ರಮವೇ ವಿಶಿಷ್ಟ ತಮ್ಮ ಸೀಮೆಯ ಬದುಕಿನ ಅನುಭವಗಳನ್ನು ತೋರುಗಾಣಿಸುವ ರೀತಿಯೇ ಹೊಸದು. ಅವರ ಯಾವುದೇ ಪಾತ್ರಗಳು ಅಗಾಧವಾದ ಬದುಕಿನ ಹಿನ್ನೆಲೆಯಿಂದ ಕೂಡಿವೆ. ಕಥೆಗಳಲ್ಲಿ ಅಧಿಕಾರ ಮತ್ತು ಅಧೀನತೆಯ ನೆಲೆಗಳನ್ನು, ಜೀವನ ಕ್ರಮದಲ್ಲಾದ ಪಲ್ಲಟಗಳನ್ನು, ಹೊಸ ಕಾಲದ ಸ್ಥಿತ್ಯಂತರಗಳನ್ನು ದಾಖಲಿಸುವಲ್ಲಿ ಜನಪ್ರಿಯ ಮಾದರಿಯ ಕ್ರಮಗಳನ್ನು ಮೀರಿದ ಕಂಪನವಿಸ್ತಾರವಿದೆ.

ಈ ನೆಲದ ಅನುಭಾವ, ಬಾಳಿನ ಹಿರಿತನ, ಕರುಣೆ ಅಂತಃಕರಣಗಳನ್ನು ಜನಸಮುದಾಯಗಳ ನಿತ್ಯಬದುಕಿನ ಲಯಗಳಲ್ಲಿ ಅವರು ಕಾಣುತ್ತಾರೆ. ಸಾಮುದಾಯಿಕ ಅನುಭವಗಳ ಆದ್ರ್ರವಾದ ಚಹರೆಗಳನ್ನು ಸ್ಥಳೀಯ ಅನನ್ಯತೆಯಲ್ಲಿ ಗುರುತಿಸುತ್ತಾರೆ. ಅದಕ್ಕೆ ತಕ್ಕಹಾಗೆ ಭಾಷೆಯನ್ನು ಹದಗೊಳಿಸಿದ್ದಾರೆ. ಈ ಕಾರಣಕ್ಕೆ ಅವರ ಕಥೆಗಳಿಗೆ ಸೂಕ್ತತೆ ಮತ್ತು ಅಗಾಧತೆಯ ಛಾಯೆ ಇದೆ. ಅವರ ಗದ್ಯ ಕುವೆಂಪು ಅವರ ಗದ್ಯವನ್ನು ನೆನಪಿಸುತ್ತದೆ. ಕನ್ನಡ ಕಥಾಪರಂಪರೆಯ ಸಮಗ್ರ ತಿಳುವಳಿಕೆ ಅವರನ್ನು ಸಾಕಷ್ಟು ಮುಂದೆ ನಡೆಸಿದೆ. ಅವರ ‘ದಡ ಸೇರಿಸು ತಂದೆ’ ಸಂಕಲನದ ಕತೆಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಹೊತ್ತಿನಲ್ಲಿ ಅವರು ‘ಪ್ರಶಸ್ತಿಯು ಇಡೀ ಕನ್ನಡ ಕಥಾ ಸಾಹಿತ್ಯಕ್ಕೆ ಸಂದ ಗೌರವ’ ಎಂದಿರುವುದು ವಿಶೇಷವಾಗಿದೆ.

ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಪಾಠಗಳ ಮಧ್ಯೆಯೇ ನಲವತ್ತು ವರ್ಷಗಳಲ್ಲಿ ಅರವತ್ತಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದಾರೆ. ಅಧ್ಯಾಪಕರಾಗಿ ನಿವೃತ್ತಿ ಹೊಂದಿದ ನುಗಡೋಣಿ ಅವರು ಕಥನವನ್ನು ಬಹುದೀರ್ಘ ಕಾಲದವರೆಗೆ ಧ್ಯಾನಿಸಿದವರು. ಅವರು ಮನಸ್ಸಿನಲ್ಲಿ ವರ್ಷಾನುಗಟ್ಟಲೆ ಕಥೆಗಳನ್ನು ಬೆಳೆಸುತ್ತಾರೆ. ಸಾಕಷ್ಟು ಕಾಯ್ದು ಬರೆಯುತ್ತಾರೆ. ಅವರ ಮೊದಲ ಕಥಾ ಸಂಕಲನ ‘ಮಣ್ಣು ಸೇರಿತು ಬೀಜ’ ಪ್ರಕಟವಾದದ್ದು ೧೯೯೧ರಲ್ಲಿ. ನಂತರ ‘ತಮಂಧದ ಕೇಡು’ (೨೦೦೭), ‘ಸವಾರಿ’ (೨೦೦೭), ‘ಓಡಲ ಹಂಗು’ (೨೦೧೪), ‘ಚುಕ್ಕಿ ಮದುವೆ ಪ್ರಸಂಗ’ (೨೦೧೭), ‘ದಡ ಸೇರಿಸು ತಂದೆ’ (೨೦೧೯), ಸೇರಿ ಇದುವರೆಗೆ ಒಟ್ಟು ಆರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಬುತ್ತಿ’ (೨೦೧೭) ಎಂಬ ಬಾಲ್ಯದ ಅನುಭವ ಕಥನವನ್ನು, ‘ದಂದುಗ’ (೨೦೨೦), ‘ಗೌರಿಯರು’ (೨೦೨೨) ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ಈ ಬರಹಗಳಲ್ಲಿ ಮನುಷ್ಯನ ವಿಕಾಸ ಮತ್ತು ಅವನತಿಯ ಹಂತಗಳನ್ನು ಬದುಕಿನ ಸಮಗ್ರ ವ್ಯಾಪಾರದಿಂದ ಕಾಣುವ ಪ್ರಯತ್ನಗಳನ್ನು ಮಾಡುತ್ತಾರೆ. ಹೈದ್ರಾಬಾದ್ ಕರ್ನಾಟಕದ ಜನಬದುಕು ಇಲ್ಲಿನ ಕೊರತೆಗಳನ್ನೂ ಮೀರಿ ಜೀವನಪ್ರವಾಹದಲ್ಲಿ ಕೊಚ್ಚಿಹೋಗದೆ ಹೇಗೆ ದೃಢವಾಗಿ ನಿಂತಿದೆ ಎಂದು ದಾಖಲಿಸುತ್ತಾರೆ. ದಂದುಗ ಕಾದಂಬರಿಯು ಕೊರೋನಾ ಕಾಲದ ಅನುಭವಗಳನ್ನು ಚಿತ್ರಿಸಿದರೆ ಗೌರಿಯರು ಕಾದಂಬರಿ ಹೊಸಕಾಲದ ಮಹಿಳೆಯರ ಬದುಕು ಮತ್ತು ಸಾಧ್ಯತೆಗಳನ್ನು ಸ್ತ್ರೀವಾದಿ ನೆಲೆಯಿಂದ ತೀವ್ರವಾಗಿ ಮತ್ತು ಸೂಕ್ಷ್ಮವಾಗಿ ಚಿತ್ರಿಸುತ್ತದೆ.

ಅಮರೇಶ ನುಗಡೋಣಿ ಅವರು ಸಂಶೋಧಕರಾಗಿಯೂ ನಾಡಿನಾದ್ಯಂತ ಹೆಸರಾದವರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕನ್ನಡ ಸಂವೇದನೆಯನ್ನು ರೂಪಿಸಿದವರು. ತತ್ವಪದಗಳ ಸಾಂಸ್ಕೃತಿಕ ಅಧ್ಯಯನವಾದ ‘ನುಡಿವ ಬೆಡಗು’ (೧೯೯೯). ‘ತತ್ವಪದ ಸಾಹಿತ್ಯ ಅಧ್ಯಯನ’ (೨೦೧೪), ಸಾಹಿತ್ಯ ವಿಮರ್ಶೆಯ – ‘ಶ್ರೀಕೃಷ್ಣ ಆಲನಹಳ್ಳಿ’ (೧೯೯೫), ‘ನುಡಿವ ಪಾಡು’ (೨೦೧೧), ‘ನುಡಿ ದಂದುಗ’ (೨೦೧೪), ಹಾಗೆಯೇ ‘ರಾಯಚೂರು ಜಿಲ್ಲೆಯಲ್ಲಿ ಹೈ. ಕ. ವಿಮೋಚನಾ ಚಳುವಳಿ’ (೨೦೦೦), ‘ಹೈದ್ರಾಬಾದು ಕರ್ನಾಟಕ ಹಾಡು ಪಾಡು’ (೨೦೦೩), ‘ಸಣ್ಣಕತೆ : ಸಾಮಾಜಿಕ ವಾಸ್ತವ’ (೨೦೧೬), ಭಾರತೀಯ ಸಾಹಿತ್ಯ ನಿರ್ಮಾಪಕರ ಮಾಲೆಯಲ್ಲಿ ‘ಜೇಡರ ದಾಸಿಮಯ್ಯ’ (೨೦೧೮). ‘ವಚನಗಳ ಅನುಸಂಧಾನ’ (೨೦೨೧), ‘ಮಧ್ಯಕಾಲೀನ ಸಾಹಿತ್ಯ ಸಂಸ್ಕೃತಿ’ (೨೦೨೨) ಎನ್ನುವ ಪುಸ್ತಕಗಳು ಸಂಶೋಧನೆ ಮತ್ತು ವಿಮರ್ಶೆಯ ಭಾಗವಾಗಿ ಬೆಳಕು ಚೆಲ್ಲಿದ ವಿಶಿಷ್ಟ ಬರಹಗಳು.

೧೯೯೫ರಲ್ಲಿ ಹೈದರಾಬಾದ್ ಕರ್ನಾಟಕದ ಪ್ರಾತಿನಿಧಿಕ ಕಥಾಸಂಕಲನವಾದ ‘ಬಿಸಿಲ ಹನಿಗಳು’, ಕನ್ನಡ ಸಾಹಿತ್ಯ ಅಕಾಡೆಮಿಗೆ ‘ಸಣ್ಣಕತೆ:೧೯೯೭’, ಮಹಾಂತೇಶ ಮಸ್ಕಿ ಅವರೊಂದಿಗೆ ಜಂಬಣ್ಣ ಅಮರಚಿಂತ ಅವರ ಗೌರವ ಗ್ರಂಥವಾದ ‘ಅಮರಚಿಂತ’, ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಪುಟವಾದ ‘ಕಲ್ಯಾಣ ಕರ್ನಾಟಕ’, ಎಚ್.ಎಸ್. ರಾಘವೇಂದ್ರರಾವ್ ಅವರ ಸಾಹಿತ್ಯದ ಕುರಿತ ವಿಮರ್ಶಾ ಕೃತಿಯಾದ ‘ನುಡಿ ಬಾಗಿನ’ ದಂಡೆ ನಂದೀಶ್ವರ ಅವರೊಂದಿಗೆ ‘ಬಸವಣ್ಣ’ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ. ಹಾಗೆಯೇ ವಿವಿಧ ವಿಚಾರ ಸಂಕಿರಣಗಳನ್ನು ಏರ್ಪಡಿಸಿದ ನಿಮಿತ್ತ ಶೂನ್ಯಸಂಪಾದನೆಗಳು, ಬಸವಣ್ಣನ ವಚನಗಳು, ಅಲ್ಲಮಪ್ರಭು ವಚನಗಳು, ಹರಿಚಂದ್ರ ಚಾರಿತ್ಯ, ಜೈಮಿನಿ ಭಾರತ, ಗ್ರಾಮಾಯಣ ಕುರಿತ ‘ಸಾಂಸ್ಕೃತಿಕ ಮುಖಾಮುಖಿ’ಗಳ ಸಂಪಾದನೆಗಳನ್ನು ಅಷ್ಟೇ ಅಲ್ಲದೆ ‘ನಾನೇಕೆ ಬರೆಯುತ್ತೇನೆ?’, ‘ಕಥೆ ಹುಟ್ಟುವ ಪರಿ’. ‘ಪುರಂದರದಾಸರ ಸಾಹಿತ್ಯ ಅಧ್ಯಯನಗಳು’, ‘ದಿನಕರ ದೇಸಾಯಿ -೧೦೦. ‘ಸರ್ವಜ್ಞನ ತ್ರಿಪದಿಗಳು : ಅನುಸಂಧಾನದ ನೆಲೆಗಳು’, ಸಂಶೋಧನಾ ವೈಧಾನಿಕತೆಯ ಕುರಿತ ‘ಕನ್ನಡ ಸಂಶೋಧನೆಯ ವೈಧಾನಿಕತೆಗಳು’ ಪುಸ್ತಕಗಳನ್ನು ವಿಚಾರಸಂಕಿರಣಗಳಿಂದ ಸಂಪಾದಿಸಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗದಿಂದ ಪ್ರಕಟಿಸಿದ್ದಾರೆ.

ಅಷ್ಟೇ ಅಲ್ಲದೆ ನುಗಡೋಣಿ ಅವರ ಅನೇಕ ಕತೆಗಳು ರಂಗ ಪಠ್ಯಗಳಾಗಿ, ನಾಟಕಗಳಾಗಿ ಮತ್ತು ಸಿನಿಮಾಗಳಾಗಿ ರೂಪಾಂತರಗೊಂಡಿವೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕನಸೆಂಬೋ ಕುದುರೆಯನೇರಿ’ ‘ಸವಾರಿ’ ಕತೆಯನ್ನು ಆಧರಿಸಿದೆ. ಹಾಗೆಯೇ ‘ನೀರು ತಂದವರು’ (ನೀರು ತಂದವರು ಕತೆ), ‘ಆಲಿಂಡಿಯಾ ರೇಡಿಯೋ’ (ದೈವಕ್ಕೆ ಮೊದಲು ಶರಣೆಂಬೆವು ಕತೆ), ‘ವಾಘಚಿಪಾಣಿ’ (ಧರೆ ಉರಿದರೆ ಕತೆ) ಆಸಿಫ್ ಕ್ಷತ್ರಿಯ, ರಂಗಸ್ವಾಮಿ ಮತ್ತು ನಟೇಶ್ ಹೆಗಡೆ ಅವರ ನಿರ್ದೇಶನದಲ್ಲಿ ಸಿನಿಮಾಗಳಾಗಿ ಪ್ರಶಸ್ತಿಗಳನ್ನೂ ಪಡೆದಿವೆ.

ಮಮತೆ ವಾತ್ಸಲ್ಯಗಳಿಂದ ಒಡನಾಡುವ ಅಮರೇಶ ನುಗಡೋಣಿ ಅವರದು ಯಾವಾಗಲೂ ಬೆಳೆಯುವ ಜೀವನ್ಮುಖಿ ವ್ಯಕ್ತಿತ್ವ, ಬದುಕಿನ ಬಗೆಗೆ ಅವರಿಗಿರುವ ಜೀವನಾಸಕ್ತಿ ತೀವ್ರವಾದದ್ದು. ಜೊತೆಗೆ ಇದ್ದಷ್ಟು ಅಪ್ತವಾದ ಸೃಜನಶೀಲ ವಾತಾವರಣವನ್ನು ನಿರ್ಮಿಸುವವರು. ಮುಗ್ಧವಾಗಿಯೇ ತಮ್ಮಲ್ಲಿನ ಪ್ರಬುದ್ಧತೆಯನ್ನು ಕಾಪಿಟ್ಟುಕೊಂಡು ತಮ್ಮ ಸಾತ್ವಿಕ ಗುಣದಿಂದ ನಮ್ಮಲ್ಲಿ ಜೀವನಾಸಕ್ತಿಯನ್ನು ಎಚ್ಚರಿಸುವಂತೆ ಬೆರೆಯುತ್ತಾರೆ. ಅವರ ಬದುಕಿನ ವಿಸ್ತರಣೆಯಾಗಿ ಅವರ ಕತೆಗಳಿವೆ. ಅವರು ನಂಬಿದ ಮೌಲ್ಯಗಳು ಜೀವಪರ, ಅವರ ಬದುಕು ಮತ್ತು ಬರಹಗಳಲ್ಲಿ ವಚನ ಸಾಹಿತ್ಯ ಚಳವಳಿಯ ದಟ್ಟವಾದ ಪ್ರಭಾವವಿದೆ. ಅವರ ಮನಸ್ಸು ದಡಗಳಲ್ಲಿ ಬೆಳೆದು ನಿಂತ ಗಿಡಬಳ್ಳಿಗಳಿಗೆ ಸದಾ ನೀರೂಡುತ್ತ ಚಲಿಸುವ ನದಿಯ ಹಾಗೆ. ಹರಿಯುವ ನದಿಗೆ ಕತೆಗಳು ಹೆಚ್ಚು.

‘ತಮಂಧದ ಕೇಡು’, ‘ಸವಾರಿ’, ‘ಏ ದಿಲ್ ಮಾಂಗೆ ಮೋರ್’, ‘ಪರಿಣಾಮಿ’, ‘ಧರೆ ಉರಿದರೆ’, ‘ಧೈವಕ್ಕೆ ಮೊದಲು ಶರಣೆಂಬೆವು’, ಮೊದಲಾದ ಕತೆಗಳಿಂದ ಕನ್ನಡ ಕಥಾಜಗತ್ತಿನಲ್ಲಿ ಮಹತ್ವದ ಲೇಖಕನಾಗಿ ಉಳಿಯುವ ಅಮರೇಶ ನುಗಡೋಣಿ ಅವರು ಮಾಸ್ತಿ. ಅನಂತಮೂರ್ತಿ, ಯಶವಂತ ಚಿತ್ತಾಲ, ಲಂಕೇಶ್, ತೇಜಸ್ವಿ ಅವರ ಸ್ಥಾನವನ್ನು ತುಂಬಬಲ್ಲ ಶಕ್ತಿಶಾಲಿ ಕತೆಗಾರರಾಗಿ ನಿಲ್ಲುತ್ತಾರೆ. ಪ್ರಶಸ್ತಿ ಸಂಭ್ರಮದಲ್ಲಿ ಇರುವ ಕತೆಗಾರರಿಗೆ ಇದೊಂದು ಸಣ್ಣ ನುಡಿಗೌರವ. ಹೇಳಬೇಕಾದದ್ದು ಇನ್ನೂ ಉಳಿದಿದೆ.

-ಮಂಜುನಾಥ ಬಾದಾಮಿ


ಅಗ್ನಿದಿವ್ಯದ ಕವಿ ಬಶೀರ್ ಬದ್ರ್ !

ಅದು 1987ನೇ ಇಸವಿಯ ಏಪ್ರಿಲ್ ತಿಂಗಳು
ದೆಹಲಿಯಲ್ಲಿ ನಡೆಯುತ್ತಿದ್ದ ಮುಶಾಇರವೊಂದರಲ್ಲಿ ಕವಿ‌ಯೊಬ್ಬ ಸೌಹಾರ್ದತೆ ಮತ್ತೆ ಸಹೋದರತ್ವದ ಕುರಿತಾದ ಸುಂದರವಾದ ಹಾಗೂ ಎಂದಿನಂತೆಯೇ ಮೊನಚು ಮತ್ತು ತಿಳಿ ಹಾಸ್ಯದಿಂದ ಕೂಡಿದಂತಹ ಗಝಲಿನ ರದೀಫ್‌ಗಳನ್ನು ಒತ್ತಿ ಒತ್ತಿ ಹೇಳುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಿದ್ದ.

ಅದೇ ಹೊತ್ತಿನಲ್ಲಿ ಕವಿಯ ಹುಟ್ಟೂರಾದ ಮೀರತಿನಲ್ಲಿ ಕೋಮು ಗಲಭೆಯೊಂದು ದಿಢೀರನೆ ಸ್ಫೋಟಗೊಂಡಿತ್ತು. ಹಿಂದೂ ಮುಸ್ಲಿಮರಿಬ್ಬರು ಸೇರಿ ಹಲವಾರು ಮನೆಗಳನ್ನು ಸುಟ್ಟುಹಾಕಿದ್ದರು. ಅದರಲ್ಲಿ ಒಂದು ಮನೆ ಆ ಕವಿಯದಾಗಿತ್ತು. ಕೇವಲ ಕವಿಮನೆ ಮಾತ್ರವಲ್ಲ ಆ ಕವಿಯ ಗ್ರಂಥಾಲಯ, ಹಲವಾರು ಕವನ ಸಂಕಲನಗಳ ಹಸ್ತಪ್ರತಿಗಳು ಸುಟ್ಟುಕರಕಲಾಗಿದ್ದವು. ಮನೆಮಂದಿಯೆಲ್ಲ ಕೂದಲೆಳೆಯಲ್ಲಿ ಬದುಕುಳಿದಿದ್ದರು. ಆ ಕವಿ ಆತ ಬೇರಾರೂ ಅಲ್ಲ, ಗಝಲ್ ಸಾಮ್ರಾಟ ಬಷೀರ್ ಬದ್ರ್.

ಮರುದಿನ ಬೆಳಗಿನ ರೈಲಿಗೆ ಮೀರತಿಗೆ ಬಂದಿಳಿದ ಕವಿ ತಾನು ಗೆಳೆಯರೊಂದಿಗೆ ನಕ್ಕುನಲಿದಿದ್ದ ಗಲ್ಲಿಗಳಲ್ಲಿ ದ್ವೇಷದ ಹೆಬ್ಬಾವುಗಳು ಬುಸುಗುಟ್ಟುವುದನ್ನು ನೋಡಿದ. ತನ್ನವರೆನಿಸಿಕೊಂಡವರೇ ಬೆವರುಸುರಿಸಿ ಕಟ್ಟಿದ ತನ್ನ ಮನೆಗೆ, ರಕ್ತ ಹರಿಸಿ ಬರೆದಿದ್ದ ತನ್ನ ಕವಿತೆಗಳಿಗೆ, ಜೀವಮಾನದಲ್ಲಿ‌ ಕಾಪಿಟ್ಟ ಪುಸ್ತಕಗಳಿಗೆ ಬೆಂಕಿಯಿಟ್ಟದ್ದನ್ನು ನೋಡಿ ಕಣ್ಣೀರು ಹರಿಸಿದ.

ಬಡೇ ಶೌಕ್ ಸೇ ಮೇರಾ ಘರ್ ಜಲಾ
ಕೋಯೀ ಆಂಚ್ ತುಜ್ ಪೇ ನಾ ಆಯೇಗೀ..

ಸಂತೋಷದಿಂದ ನನ್ನ ಮನೆಯನ್ನು ಸುಟ್ಟುಹಾಕು
ನಿನಗೆ ಯಾವ ಕಳಂಕವೂ ತಟ್ಟದಿರಲೀ ಎಂದು ಉದ್ಗರಿಸಿದ.

ಸುಟ್ಟು ಕರಕಲಾದ ಮನೆಯ ಗೋಡೆಯ ಕೆಳಗೆ ಕುಳಿತು ಪುಸ್ತಕಗಳ ಬೀದಿಯನ್ನು ನೋಡುತ್ತಾ ಕವಿ ಯೋಚಿಸುತ್ತಿದ್ದ,
ಸುಟ್ಟು ಹೋದ ಮನೆಗಳನ್ನು ಮತ್ತೆ ಕಟ್ಟಬಹುದು, ದ್ವಂಸಗೊಂಡ ಊರು ಮತ್ತೆ ಸರಿಯಾಗಬಹುದು, ಮುರಿದ ಸೇತುವೆ ರಿಪೇರಿಯಾಗಬಹುದು ಆದರೆ… ಒಡೆದು ಹೋದ‌ ಮನಸ್ಸುಗಳು! ಹತ್ತಿ ಉರಿಯುವ ಬೆಂಕಿಯನ್ನು ನೀರಿನಿಂದ‌ ನಂದಿಸಬಹುದು ಆದರೆ ಎದೆಯಲ್ಲಿ ಧಗಧಗಿಸುತ್ತಿರುವ ಕೋಮು ದಳ್ಳುರಿಯನ್ನು ನಂದಿಸುವ ನೀರನ್ನು ಎಲ್ಲಿಂದ ತರಲಿ?? ಈ ಪಾರಿವಾಳಗಳ ಗೂಡಿನಲ್ಲಿ ವಿಷ ಸರ್ಪಗಳನ್ನು ಇಟ್ಟವರಾರು? ಕವಿ ದುಃಖದಿಂದ ಬಡಬಡಿಸಿದ

ಲೋಗ್ ಟೂಟ್ ಜಾತೇ ಹೈಂ
ಏಕ್ ಘರ್ ಬನಾನೆ ಮೆ
ತುಮ್ ತರಸ್ ನಹೀ ಕಾತೆ
ಬಸ್ತಿಯ ಜಲಾನೆ ಮೆ…

ಸೋತುಹೋಗುವರು ಒಂದು
ಮನೆ ಕಟ್ಟುವಷ್ಟರಲ್ಲೇ ಜನರು
ದಣಿಯಲಿಲ್ಲವಲ್ಲೋ ನೀನು
ಇಡೀ ಊರನ್ನೇ ಸುಟ್ಟರೂ !

ಪಾರಿವಾಳಗಳ ಅಸಹಾಯಕತೆಯಿದು
ಇದನ್ನೂ ಹೇಳಲಾರವು
ಯಾರು ಇರಿಸುತ್ತಿರುವರು ಸರ್ಪಗಳನ್ನು
ತಮ್ಮ ಗೂಡಿನಲ್ಲಿ !

ಸದ್ದು ಮಾಡುವ ಕಲ್ಲುಗಳನ್ನು
ಎದೆಯೆಂದು ತಿಳಿಯುವರು ಜನರು
ಜನುಮವೇ ಕಳೆದು ಹೋಗುವುದು
ಎದೆಯನ್ನು ಹೃದಯವನ್ನಾಗಿಸುವುದರಲ್ಲಿ !

ಜೀವಮಾನದ‌ ಸಂಪಾದನೆಯ ಜೊತೆಗೆ ಹಲವಾರು ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿಗಳನ್ನೂ ಕಳೆದುಕೊಂಡಿದ್ದ ಬಷೀರ್ ಬದ್ರ್ ತೀವ್ರ ಆಘಾತ‌ ಮತ್ತು ಖಿನ್ನತೆಗೆ ಒಳಗಾಗಿದ್ದರು. ಸ್ವಲ್ಪ ಕಾಲದವರೆಗೆ ಅವರ ಕುಟುಂಬ ಚಲನಚಿತ್ರ ಮತ್ತು ಸಂಗೀತ ನಿರ್ದೇಶಕ ವಿಶಾಲ್ ಭಾರಧ್ವಾಜ್ ಮನೆಯಲ್ಲಿ ಆಶ್ರಯಪಡೆಯಿತು. ಬಷೀರ್ ಬದ್ರ್ ಕವಿಯ ಅಪ್ಪಟ ಅಭಿಮಾನಿಯಾಗಿದ್ದ ವಿಶಾಲ್ ಭಾರಧ್ವಾಜ್ ಗೆ ಬಷೀರ್ ವೈಯ್ಯಕ್ತಿಕವಾಗಿ ಭೇಟಿಯಾಗುತ್ತಿದ್ದಾಗ ವಾಚಿಸುತ್ತಿದ್ದ ಅಸಂಖ್ಯಾತ ಗಝಲ್ ಗಳ ಮತ್ಲಾಗಳು , ತಖಲ್ಲುಸ್ ಗಳು ನೆನೆಪಿದ್ದವು. ಆ‌ ನೆನಪೇ ಬಷೀರ್ ಬದ್ರ್ ಶೇಕಡಾ ಅರುವತ್ತರಷ್ಟು ಗಝಲ್ ಗಳನ್ನು ಮತ್ತೆ ಕಟ್ಟಲು ಸಾಧ್ಯವಾಯಿತು. ಮಾನಸಿಕವಾಗಿ ನೊಂದುಹೋಗಿದ್ದ ಕವಿ ಮೀರತ್‌ನಿಂದ ಭೋಪಾಲ್‌ಗೆ ತಮ್ಮ ನೆಲೆಯನ್ನು ಬದಲಾಯಿಸಿದರು.‌

ಭಾರತದ ರಾಜಕೀಯ ನಾಯಕರು (ಪ್ರಧಾನಿ ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮುಂತಾದವರು) ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ರ‍್ಯಾಲಿಗಳಲ್ಲಿ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸಲು ಬಷೀರ್ ಬದ್ರ್ ಕವಿತೆಗಳನ್ನು ಬಳಸಿಕೊಂಡರು.‌ 2016 ರಲ್ಲಿ ರಾಹುಲ್ ಗಾಂಧಿ ಅವರು ನೋಟು ಅಮಾನ್ಯೀಕರಣದ (Demonetisation) ವಿರುದ್ಧ ಇದೇ “ಲೋಗ್ ಟೂಟ್ ಜಾತೇ ಹೈ…” ಗಝಲಿನ ಸಾಲುಗಳನ್ನು ಬಳಸಿದ್ದರು.

ಬಶೀರ್ ಬದ್ರ್ ಅವರು ಸಾಂಪ್ರದಾಯಿಕ ಉರ್ದು ಗಝಲ್‌ಗಳಿಗೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳವಾದ ಆದರೆ ಆಳವಾದ ಉರ್ದು ಮತ್ತು ಹಿಂದಿ ಮಿಶ್ರಿತ ಭಾಷೆಯನ್ನು ಅವರು ಬಳಸುತ್ತಿದ್ದರು. ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಅವರಿಗೆ ಪ್ರತಿಷ್ಠಿತ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಕೂಡ ಲಭಿಸಿತ್ತು .

ಇನ್ನು ಬದುಕು ಸಾಕು ಎನಿಸಿತ್ತೋ ಏನೋ ಒಂದು ದಿನ ಬಷೀರ್ ಸಾಬ್ ಹೀಗೆ ಬರೆದರು,

ವಿಲಕ್ಷಣ ಹಣತೆ ನಾನು
ಹಗಲಿರುಳೆನ್ನದೆ ಉರಿಯುತ್ತಲಿರುವೆ
ಆ ಗಾಳಿಗೆ ಆರಿಸಲು ಹೇಳಿ
ದಣಿದುಹೋಗಿರುವೆ ನಾನು !

ಧೂಳು ಮಾತ್ರವಲ್ಲ ಆದಿಮಕಾಲದ
ಹಳೆಯದಾರಿಯಾಗಿರುವೆ ನಾನು
ನಿನ್ನೆಯಷ್ಟೇ ಇಲ್ಲಿಂದ ಹಾದುಹೋಗಿದೆ
ಒಂದು ಕಾರವಾನು

ನಿದ್ದೆಗೆ ಜಾರಿದಾಗ ನಿಮ್ಮ ಕೈಗಳಿಂದ
ಮುಚ್ಚಿಬಿಡಿ ನನ್ನ ಕಣ್ಣುಗಳನ್ನು
ಓದುತ್ತಲೇ ನಿದ್ದೆಗೆ ಜಾರಿಬಿಡುವಂತಹಾ
ಒಂದು ಕಥೆಯಷ್ಟೆ ನಾನು !

ಕೋಮುದಳ್ಳುರಿಯಲ್ಲಿ ತನ್ನ ಬದುಕನ್ನೇ ಸುಟ್ಟುಕೊಂಡರೂ ಸದಾ ಸೌಹಾರ್ದ ಭಾರತದ ಕನಸನ್ನು ಬಡಬಡಿಸುತ್ತಿದ್ದ ಕವಿ ತಮ್ಮ ಬದುಕಿನ ಸಂದ್ಯಾಕಾಲದಲ್ಲಿ ಡಿಮೆಂಶಿಯಾ ಎಂಬ ಸ್ಮರಣರೋಗಕ್ಕೆ ತುತ್ತಾದರು ಮತ್ತು 2026 ಮೇ ತಿಂಗಳಿನ 28 ರ ಬಕ್ರೀದಿನ ಹಬ್ಬದ ಪವಿತ್ರ ಬಲಿದಾನದ ದಿನ ತಮ್ಮ 91 ನೇ ವಯಸ್ಸಿನಲ್ಲಿ ಭಾವಪ್ರಪಂಚಕ್ಕೆ ಕಾವ್ಯ ಬಲಿಯನ್ನು ನೀಡಿ ಹಸಿದಿರುವ ಸಹೃದಯರ ಹೃದಯೋದರಕ್ಕೆ ತಂಪನೆರೆದಿದ್ದ ಕವಿ ಶಾಶ್ವತ ನಿದ್ದೆಗೆ ಜಾರಿದರು.

ಕವಿ ಬಷೀರ್ ಬದ್ರ್ ಬಕ್ರೀದಿನ ಪವಿತ್ರ ಬಲಿದಾನದ ದಿನವೇ ಬದುಕಿನ‌ ಯಾತ್ರೆ ಮುಗಿಸಿದರು. ದೊರೆ ನಮ್ರೂದನು ಇಬ್ರಾಹಿಂರನ್ನು ಬೆಂಕಿಯಲ್ಲಿ ದೂಡಿ ಪರೀಕ್ಷಿಸಿದಂತೆ ಕವಿ ಬಷೀರ್ ಬರ್ದ್ ರನ್ನು ಕೂಡಾ ಭಾರತದ ಕೋಮು ದಳ್ಳುರಿಯು ಪರೀಕ್ಷಿಸಿತ್ತು. ಆದರೆ ಬಷೀರ್ ಬದ್ರ್ ಕೊನೆಯವರೆಗೂ ಕೋಮುವಾದದ ವಿರುದ್ಧ ಬರೆದರೇ ಹೊರತು ಕೋಮುವಾದಿಯಾಗಲಿಲ್ಲ. ಬದಲಿಗೆ ಕೋಮುದಳ್ಳುರಿಯಲ್ಲಿ ಉರಿದು‌ ಪುಟಗೊಂಡ ಅಗ್ನಿದಿವ್ಯದಂತೆ ಹೊರಹೊಮ್ಮಿದರು.

‘ಉಜಾಲೇ ಅಪನೀ ಯಾದೋಂ ಕೇ ಹಮಾರೇ ಸಾಥ್ ರಹನೇ ದೋ
ನ ಜಾನೇ ಕಿಸ್ ಗಲೀ ಮೇ ಜಿಂದಗೀ ಕೀ ಶಾಮ್ ಹೋ ಜಾಯೇ…’

ನನ್ನ ನೆನಪುಗಳ ಹಣತೆಯೊಂದು ನನ್ನ ಕೈಯ್ಯಲ್ಲಿ ಸದಾ ಇರಲಿ ಯಾವ ತಿರುವಿನಲ್ಲಿ ಬದುಕಿನ ಮುಸಂಜೆಯಾಗುವುದೋ ಯಾರು ಬಲ್ಲರು….. ತಮ್ಮ ನೆನಪುಗಳ ಹಣತೆಯೊಂದನ್ನು ಹಿಡಿದುಕೊಂಡು ಬಷೀರ್ ಸಾಬ್ ಹೊರಟೇಹೋದರು.‌

ಕವಿಗೆ ಸಾವಿಲ್ಲ ಆತನ ಕವಿತೆಗಳಲ್ಲಿ ಉಸಿರಾಡುತ್ತಾನೆ ಎಂಬುದು ಲೋಕೋಕ್ತಿಯಾಗಿರಬಹುದು ಆದರೆ ಕವಿಯ ಅಂತಿಮ ಯಾತ್ರೆಗೆ ಕೇವಲ ಇಪ್ಪತ್ತು ಜನರು ಮಾತ್ರ ಸೇರಿದ್ದರು ಎಂಬುದು ಕವಿತೆಗಳೇ ಶಾಶ್ವತ, ಎಲ್ಲಾ ಮನ್ನಣೆಗಳೂ ಕವಿತೆಗಳಿಗೆ ಮಾತ್ರ, ಕವಿಯು ನಿಮಿತ್ತ‌ ಮಾತ್ರ ಎಂಬ ಸುಡುವಾಸ್ತವವನ್ನು ಮತ್ತೆ ನೆನಪಿಸಿತು.


ನನಗೆ ಯಾವದೇ ಸಮಾಧಿಯ‌ ಅವಶ್ಯಕತೆಯಿಲ್ಲ, ಸಜ್ಜನರ ಹೃದಯವೇ ನನ್ನ ಸಮಾಧಿ ‘ ಎಂಬ ರೂಮಿಯ ವಾಕ್ಯದಂತೆ ಬಷೀರ್ ಬದ್ರರ ಗಝಲ್ಗಳು ಸಹೃದಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಲಿವೆ.‌

-ಪುನೀತ್ ಅಪ್ಪು
(ಲೇಖನದಲ್ಲಿ ಉಲ್ಲೇಖಿಸಲಾದ ಎಲ್ಲಾ ಕವಿತೆಗಳ ಕನ್ನಡ ಅನುವಾದಗಳು ಲೇಖಕರದ್ದು)

ಬಶೀರ್ ಬದ್ರ್ ಕವಿತೆಗಳು

ಸೋತುಹೋಗುವರು ಒಂದು
ಮನೆ ಕಟ್ಟುವಷ್ಟರಲ್ಲೇ ಜನರು
ದಣಿಯಲಿಲ್ಲವಲ್ಲೋ ನೀನು
ಇಡೀ ಊರನ್ನೇ ಸುಟ್ಟರೂ !

ಪಾರಿವಾಳಗಳ ಅಸಹಾಯಕತೆಯಿದು
ಇದನ್ನೂ ಹೇಳಲಾರವು
ಯಾರು ಇರಿಸುತ್ತಿರುವರು ಸರ್ಪಗಳನ್ನು
ತಮ್ಮ ಗೂಡಿನಲ್ಲಿ !

ಸದ್ದು ಮಾಡುವ ಕಲ್ಲುಗಳನ್ನು
ಎದೆಯೆಂದು ತಿಳಿಯುವರು ಜನರು
ಜನುಮವೇ ಕಳೆದು ಹೋಗುವುದು
ಎದೆಯನ್ನು ಹೃದಯವನ್ನಾಗಿಸುವುದರಲ್ಲಿ !


ವಿಲಕ್ಷಣ ಹಣತೆ ನಾನು
ಹಗಲಿರುಳೆನ್ನದೆ ಉರಿಯುತ್ತಲಿರುವೆ
ಆ ಗಾಳಿಗೆ ಆರಿಸಲು ಹೇಳಿ
ದಣಿದುಹೋಗಿರುವೆ ನಾನು

ಧೂಳು ಮಾತ್ರವಲ್ಲ ಆದಿಮಕಾಲದ ಹಳೆಯದಾರಿಯಾಗಿರುವೆ ನಾನು
ನಿನ್ನೆಯಷ್ಟೇ ಇಲ್ಲಿಂದ ಹಾದುಹೋಗಿದೆ
ಒಂದು ಕಾರವಾನು

ನಿದ್ದೆಗೆ ಜಾರಿದಾಗ ನಿಮ್ಮ ಕೈಗಳಿಂದ ಮುಚ್ಚಿಬಿಡಿ ನನ್ನ ಕಣ್ಣುಗಳನ್ನು
ಓದುತ್ತಲೇ ನಿದ್ದೆಗೆ ಜಾರಿಬಿಡುವಂತಹಾ
ಒಂದು ಕಥೆಯಷ್ಟೆ ನಾನು

ಉರ್ದು ಮೂಲ: ಬಶೀರ್ ಬದ್ರ್
ಕನ್ನಡಕ್ಕೆ ಪುನೀತ್ ಅಪ್ಪು




ಬನೀ ಆದಮ್

ಒಂದೇ ಜೀವರತ್ನದಿಂದ ಉದಿಸಿದವರು
ಒಂದು ದೇಹದ ಅಂಗಾಂಗಳಂತೆ
ಆದಮನ ಸಂತತಿ ನಾವು ಮನುಷ್ಯರೆಲ್ಲಾ

ಕಾಲಚಕ್ರದ ಹೊಡೆತಕ್ಕೆ ಸಿಲುಕಿ
ಒಂದು ಅಂಗವು ನರಳಿದಾಗಲೆಲ್ಲಾ
ಉಳಿದ ಅಂಗಗಳೂ ಸುಖದಿಂದಿರಲು ಸಾಧ್ಯವಿಲ್ಲ

ಪರರ ದುಃಖಕ್ಕೆ ನಿನ್ನ ಮನಸ್ಸು ಕರಗದಿದ್ದರೆ
ಮನುಷ್ಯ(ಆದಮಿ)ನೆಂದುಕೊಳ್ಳಲು ನಿನಗೆ ಯೋಗ್ಯತೆಯಿಲ್ಲ

– ಸಾದಿ ಶಿರಾಝಿ
ಅನುವಾದ : ಪುನೀತ್ ಅಪ್ಪು


ಇರಾನ್ ದೇಶ ಯುನೈಟೆಡ್ ನೇಷನ್ಸ್ ಗೆ ನೀಡಿದ ಕಾರ್ಪೆಟ್‌ನ ಜೊತೆಗೆ ಶಾದಿ ಶಿರಾಝಿಯ ವಿಶ್ವಮಾನವತೆಯನ್ನು ಸಾರುವ ಈ ‘ಬನೀ ಆದಮ್’ ಕವಿತೆಯ ಫಲಕವನ್ನೂ ಸ್ಥಾಪಿಸಲಾಗಿದೆ.

ಧಾರ್ಮಿಕ ಅಧ್ಯಯನಗಳು, ಮಾನವಿಕ ವಿಷಯ: ಸಂಶೋಧನಾ ಸಾಧ್ಯತೆಗಳು

ಉನ್ನತ ವ್ಯಾಸಂಗಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾನಿಲಯದತ್ತ

ಪೂನೂರ್ ಜಾಮಿಯಾ ಮದೀನತುನ್ನೂರ್ ವಿದ್ಯಾರ್ಥಿ ಜೀವನದಲ್ಲಿ ಹ್ಯುಮಾನಿಟೀಸ್ ವಿಷಯಗಳಲ್ಲಿನ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಸಾಧ್ಯತೆಗಳ ಕುರಿತು ತಿಳಿದು ಅಚ್ಚರಿಗೊಂಡಿದ್ದೆ. ಭಾರತ ಮತ್ತು ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಿಂದ ಉನ್ನತ ವ್ಯಾಸಂಗ ಮಾಡಿಕೊಳ್ಳುವುದರ ಜೊತೆಗೆ, ಕಾನ್ಫರೆನ್ಸ್ ಪೇಪರ್ ಸಮ್ಮಿಟ್‌ಗಳಲ್ಲಿ ನಿರಂತರ ತಮ್ಮ ಅಧ್ಯಯನ ವಿಷಯಗಳನ್ನು ಮಂಡಿಸುವ ಮದೀನತುನ್ನೂರ್ ವಿದ್ಯಾರ್ಥಿಗಳ ಒಡನಾಟ ಮತ್ತು ಸಂಸ್ಥೆಯ ಅಕಾಡೆಮಿಕ್ ವಾತಾವರಣ ನನ್ನ ಕನಸುಗಳಿಗೆ ಹೊಸ ರೂಪು ನೀಡಿತು. ರಾಜಕೀಯ ಶಾಸ್ತ್ರದಲ್ಲಿ ಪಿ.ಜಿ. ಮಾಡುವ ನಿಮಿತ್ತ ಹೈದರಾಬಾದ್ ವಿಶ್ವವಿದ್ಯಾನಿಲಯಕ್ಕೆ ತಲುಪಿದಾಗ ಆ ಕನಸಿಗೆ ಇನ್ನಷ್ಟು ಹುರುಪು ತುಂಬಿತು. ಮಾಸ್ಟರ್ಸ್ ಡಿಗ್ರಿಯ ಮಧ್ಯೆ ಕೊಲಂಬಿಯಾ ಯೂನಿವರ್ಸಿಟಿ ಮತ್ತು ಲಂಡನಿನ ಎಕೆಯುಐಎಸ್ಎಮ್ ಸೇರಿ ನೀಡುವ ‘ಮಾಸ್ಟರ್ಸ್ ಇನ್ ಇಸ್ಲಾಮಿಕ್ ಸ್ಟಡೀಸ್ ಆಂಡ್ ಮುಸ್ಲಿಮ್ ಕಲ್ಚರ್ಸ್’ಗಾಗಿ ಅರ್ಜಿ ಸಲ್ಲಿಸಿದೆ. ಸಾಮಾನ್ಯವಾಗಿ ಉನ್ನತ ವ್ಯಾಸಂಗಕ್ಕಾಗಿ ಅಪರೂಪಕ್ಕೆ ವಿದ್ಯಾರ್ಥಿ ವೇತನ ಅಮೆರಿಕಾದಲ್ಲಿ, ಒಬ್ಬ ವಿದ್ಯಾರ್ಥಿಯ ಸಂಪೂರ್ಣ ವೆಚ್ಚ ಭರಿಸುವುದು ಈ ಸ್ಕಾಲರ್‌ಶಿಪ್‌ನ ವಿಶೇಷತೆ. ಸದ್ಯ ಈ ವಿಷಯದ ಮೇಲೆ ವ್ಯಾಸಂಗ ಮಾಡುತ್ತಿರುವ ನೂರಾನಿ ಮಿತ್ರರ ಸಹಾಯ ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದ ಡೀನ್ ಆಫ್ ಸೋಶಿಯಲ್ ಸೈನ್ಸಿನ ಸಹಾಯದಿಂದ ಈ ಸಾಧನೆ ಸಾಧ್ಯವಾಯಿತು. ಎರಡನೆಯ ಡಿಗ್ರಿಯ ಅವಶ್ಯಕತೆ ಏನಿದೆ ಎಂಬ ಸಂದೇಹದ ಮಧ್ಯೆಯೂ ಕೊಲಂಬಿಯಾದಂತಹ ಐವಿ ಲೀಗ್ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನಕ್ಕಿರುವ ಅವಕಾಶವನ್ನು ತೊರೆಯಲು ಮನಸ್ಸೊಪ್ಪಲಿಲ್ಲ. ಅಲ್ಲಿನ ಅಧ್ಯಯನಾಸಕ್ತ ವಿದ್ಯಾರ್ಥಿಗಳ ಚಿಂತನೆ ಮತ್ತು ಒಡನಾಟ ಮುಂದಿನ ಅಕಾಡೆಮಿಕ್ ಜರ್ನಿಯಲ್ಲಿ ಹೊಸ ಜಗತ್ತು ತೆರೆಯಲ್ಪಡುವುದು ಖಚಿತ ಎಂಬ ನಿಟ್ಟಿನಲ್ಲಿ ಹೊರಟು ನಿಂತೆ. ನಿರಂತರ ಹೊಸದೊಂದನ್ನು ಅರಿಯುವ ಜಿಜ್ಞಾಸೆ ಅಧ್ಯಯನಶೀಲ ವಿದ್ಯಾರ್ಥಿಗೆ ಎಷ್ಟು ಮುಖ್ಯವೋ, ಅಧ್ಯನಾಸಕ್ತ ವಿದ್ಯಾರ್ಥಿಗಳೊಂದಿಗಿನ ಜಾಗತಿಕ ಒಡನಾಟವೂ ಅಷ್ಟೇ ಮುಖ್ಯ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.

ಧಾರ್ಮಿಕ ಅಧ್ಯಯನದ ಜೊತೆಗೆ ವಿದೇಶಿ ವಿವಿಗಳಲ್ಲಿ ಉನ್ನತ ಶಿಕ್ಷಣದ ಸಾಧ್ಯತೆ ಮತ್ತು ಸವಾಲುಗಳು

ಸಾಮಾನ್ಯವಾಗಿ ಧಾರ್ಮಿಕ ಅಧ್ಯಯನದ ಜೊತೆಗೆ ಲೌಕಿಕ ಅಧ್ಯಯನದ ಸಾಧ್ಯತೆಗಳು ವಿಶೇಷವಾಗಿ ಸಮನ್ವಯ ಶಿಕ್ಷಣ ಪಡೆಯುವ ನನ್ನಂತಹ ವಿದ್ಯಾರ್ಥಿಗಳ ಪೈಕಿ ಬಹುತೇಕರಿಗೆ ತಿಳಿದಿಲ್ಲ. ಮದೀನತುನ್ನೂರ್ ವಿದ್ಯಾಸಂಸ್ಥೆ ನಿರಂತರ ನೀಡಿದ ಪ್ರೋತ್ಸಾಹದಿಂದಾಗಿ ಈ ದಾರಿ ಸುಗಮಗೊಂಡಿತು. ನಮ್ಮ ಇಂಟರ್‌ಗ್ರೇಟೆಡ್ ಕಾಲೇಜುಗಳಲ್ಲಿ ಸಿಗುವ ಬಿರುದುಗಳು ಯುಜಿಸಿ ಅಂಗೀಕೃತವಲ್ಲದಿದ್ದರೂ ಅದರ ಸಿಲಬಸ್ ಸಾಮ್ಯತೆ ಹೊಂದಿರುತ್ತದೆ. ನಾವು ಅಭ್ಯಸಿಸುವ ವಿಷಯಗಳು ಹಾಗೂ ಅರಬಿ ಭಾಷೆಯ ಆಳ ಅಧ್ಯಯನ ವಿದೇಶಿ ಯೂನಿವರ್ಸಿಟಿ ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಮಾನವಾಗಿರುತ್ತದೆ. ಆ ಕಾರಣದಿಂದಲೇ ಇಂಟರ್ವೀವರ್‌ಗಳು ಹಲವು ಬಾರಿ ನನ್ನ ಅಧ್ಯಯನ ವಿಷಯಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಿದೆ.

ಪಿ. ಎಚ್. ಡಿ ಅಧ್ಯಯನಕ್ಕೆ ಲಭಿಸುವ ಸ್ಕಾಲರ್‌ಶಿಫ್

ಐದರಿಂದ ಎಂಟು ವರ್ಷಗಳ ದೀರ್ಘ ಯೋಜನೆಯಾಗಿರುತ್ತದೆ ಪಿಎಚ್‌ಡಿ ಸಂಶೋಧನಾ ಪ್ರಶ್ನೆಗಳು. ಅಧ್ಯಯನಕ್ಕಾಗಿ ತಮ್ಮ ಸಂಪೂರ್ಣ ಸಮಯ ಮೀಸಲಿಡುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದಲೇ, ಹಣಕಾಸು ಭದ್ರತೆ ಅವಶ್ಯಕ. ಹೈದರಾಬಾದಿನ ಪಿ.ಜಿ.ಯ ವೇಳೆ ನೆಟ್ ಎಕ್ಸಾಮ್ ಬರೆದು ಜೆ.ಆರ್.ಎಫ್. ಗಿಟ್ಟಿಸಿಕೊಂಡ ಉದ್ದೇಶ ಇದಾಗಿತ್ತು. ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ಭಾರತ ಸರಕಾರದ ಅಧ್ಯಯನ ಫಂಡ್ ಅತಿ ಕಡಿಮೆ. ಅಮೇರಿಕನ್/ ನಾರ್ತ್ ಅಮೇರಿಕನ್ ವಿಶ್ವವಿದ್ಯಾನಿಲಯಗಳಲ್ಲಿ ಅತಿ ಹೆಚ್ಚು ಮೊತ್ತವೂ ದೊರಕುತ್ತದೆ. ನನಗೆ ದಾಖಲಾತಿ ದೊರಕಿರುವ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್. ಡಿ. ಅಧ್ಯಯನಕ್ಕಾಗಿ ಮ್ಯಾಕ್ ಕ್ರಾಕನ್ ಫೆಲೋಶಿಪ್ ನೀಡಲ್ಪಡುತ್ತದೆ. ಇದರ ಹೊರತಾಗಿ ಡೀನ್ಸ್ ಡಾಕ್ಟರಲ್ ಫೆಲೋಶಿಪ್, ಡೀನ್ಸ್ ಹ್ಯುಮಾನಿಟೀಸ್ ಸ್ಕಾಲರ್ಸ್ ಪ್ರೋಗ್ರಾಮ್ ಫೆಲೋಶಿಪ್‌ಗಳು ನನಗೆ ದೊರೆತಿದೆ. ಅಧ್ಯಯನ ಪ್ರಶ್ನೆಗಳು ಹಾಗೂ ರೈಟಿಂಗ್ ಸ್ಯಾಂಪಲ್‌ಗಳು ಉತ್ತಮವಾಗಿದ್ದರೆ ಫೆಲೋಶಿಪ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತೆಯೇ ಇದರ ಹೊರತಾಗಿ ಇತರ ವಿಶ್ವವಿದ್ಯಾನಿಲಯಗಳಿಂದ ಅಡ್ಮಿಶನ್ ಲಭಿಸಿರುವುದು ಕೂಡಾ ಸ್ಕಾಲರ್‌ಶಿಪ್ ಮೇಲೆ ಪರಿಣಾಮ ಬೀರುತ್ತದೆ. ಟೊರೆಂಟೋ, ವಾಂಡರ್ಬಿಲ್ಟ್ ಹಾಗೂ ಪೆನ್ಸಿಲ್ವೇನಿಯಾ ಯೂನಿವರ್ಸಿಟಿಗಳಿಂದ ನನಗೆ ದೊರಕಿದ ಪ್ರವೇಶಾತಿ ಸ್ಕಾಲರ್‌ಶಿಪ್ ದೊರಕುವಲ್ಲಿ ಸಹಾಯಕವಾದವು.

ಯೂನಿವರ್ಸಿಟಿ ಅಧ್ಯಯನ ಅವಧಿಯಲ್ಲಿ ನೆರವಾದ ಧಾರ್ಮಿಕ ಸಂಸ್ಥೆಗಳ ವಿದ್ಯಾರ್ಥಿ ಜೀವನ

ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ‌ ವಿಶೇಷವಾಗಿ ಅಮೇರಿಕದ ಅಧ್ಯಯನ ಅವಧಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುವುದಿದೆ. ನಿರಂತರ ಸಂಶೋಧನೆ, ಅಧ್ಯಯನ ನಿಮಿತ್ತ ಪ್ರತಿ ವಾರದಲ್ಲಿ ಸಾವಿರಕ್ಕೂ ಮಿಕ್ಕ ಪೇಜ್ ಓದು ಇವೆಲ್ಲವೂ ಅದಕ್ಕಿರುವ ಕಾರಣ. ಆದರೆ, ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಬೆಳೆದು ಬಂದ ನನಗೆ ಇದು ಸಾಮಾನ್ಯವೆಂಬಂತೆ ತೋರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ನಾವು ಅಳವಡಿಸಿಕೊಂಡು ಬಂದ ಆ ಜೀವನಶೈಲಿ ಇಲ್ಲಿ ನನಗೆ ಬಹಳ ಉಪಯುಕ್ತವೆನಿಸಿದೆ. ನಮ್ಮ ಸಂಸ್ಥೆಯಲ್ಲಿ ಕರಗತ ಮಾಡಿಕೊಂಡ ಭಾಷಾನೈಪುಣ್ಯತೆಯೂ ಅಧ್ಯಯನಕ್ಕೆ ಬಹಳ ಸಹಕಾರಿಯಾಗಿದೆ. ಅಮೇರಿಕನ್ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನದ ಮೊದಲ ಎರಡು – ಮೂರು ವರ್ಷಗಳ ಅವಧಿಯನ್ನು ಕೇವಲ ಭಾಷಾ ಅಧ್ಯಯನಕ್ಕಾಗಿ ಮಾತ್ರ ಮೀಸಲಿಡುತ್ತಾರೆ ಎಂಬುದು ಇಲ್ಲಿ ಗಮನಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಗಳು ಬಹಳ ಉತ್ತಮ ಅವಕಾಶಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.

~ ಅಬ್ದುಲ್ ಫತ್ತಾಹ್ ನೂರಾನಿ
ಅನುವಾದ: ಅಬ್ದುಸ್ಸಲಾಮ್ ಮುಈನಿ ಮಿತ್ತರಾಜೆ

ವಿಚಾರ ಪ್ರಚೋದಕ ಬ್ಯಾರಿ ಕವನಗಳ ಸಂಕಲನ ‘ನಸೀಅತ್’

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ, ಕವಿ ಹೈದರಲಿ ಕಾಟಿಪಳ್ಳ ಅವರ ಬ್ಯಾರಿ ಕವನಗಳ ಸಂಕಲನ ‘ನಸೀಅತ್’. ನಸೀಅತ್ ಗೆ ಉಪದೇಶ ನೀಡುವುದು, ಶುದ್ಧಗೊಳಿಸುವುದು ಮೊದಲಾದ ಅರ್ಥಗಳಿವೆ.‌ ನಸೀಅತ್ ನ ಉದ್ದೇಶ ತಝ್ಕಿಯತ್. ಅಂದರೆ ಹೃದಯದ ಶುದ್ದೀಕರಣ. ದೇಹ, ಮನೆ, ಬಟ್ಟೆಬರೆ ಸ್ವಚ್ಛಗೊಳಿಸುವುದು ಸುಲಭ, ಆದರೆ, ಹೃದಯದ ಶುದ್ದೀಕರಣ ‘ಚೆನ್ನತ್ತರ ಸುಲಭ ಅಲ್ಲ'(ಹೇಳಿದಷ್ಟು ಸುಲಭ ಅಲ್ಲ)’ ಎಂಬುದನ್ನು ಸ್ವತಃ ಕವಿಯೇ ಒಪ್ಪಿಕೊಂಡರೂ, ಅವರು ತಮ್ಮ ಕಾವ್ಯಗಳ ಮೂಲಕ ‘ನಸೀಅತ್’ ಮಾಡುವ ಸಾಹಸಕ್ಕಿಳಿದಿದ್ದಾರೆ.

ಪೈಗಂಬರರಿಂದ ಹಿಡಿದು ಸೂಫಿಗಳವರೆಗಿನ ಎಲ್ಲರ ಜೀವನದಲ್ಲೂ ನಸೀಅತ್ ಹಾಸುಹೊಕ್ಕಾಗಿದೆ.‌ ಇಸ್ಲಾಮ್ ಜಗತ್ತಿನಾದ್ಯಂತ ವ್ಯಾಪಿಸಿರುವುದರ ಹಿಂದೆ ನಸೀಅತ್ ನ ಪಾತ್ರ ದೊಡ್ಡದು. ನನ್ನ ಪ್ರಕಾರ ಮುಸ್ಲಿಮರಷ್ಟು ನಸೀಅತ್ ಗಳನ್ನು ಕೇಳುವ ಜನಾಂಗ, ಸಮುದಾಯ ಇನ್ನೊಂದಿಲ್ಲ. ಹುಟ್ಟಿನಿಂದಲೇ ಅವರು ನಸೀಅತ್ ಕೇಳುತ್ತಾ ಬೆಳೆಯುತ್ತಾರೆ. ಶಾಲೆ, ಮದ್ರಸ ಎರಡು ಕಡೆಗಳಲ್ಲೂ ಮುಸ್ಲಿಮರಿಗೆ ಸಾಕಷ್ಟು ನಸೀಅತ್ ಸಿಗುತ್ತದೆ, ಶುಕ್ರವಾರದ ಖುತ್ಬಾದಲ್ಲಿ, ನಮಾಝಿನ ನಂತರದ ಭಾಷಣದಲ್ಲಿ, ಜೊತೆಗೆ ಮಾಸಿಕ, ವಾರ್ಷಿಕವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಸೀಅತ್ ನ ಮಹಾಪೂರವೇ ಇರುತ್ತದೆ. ಸಮುದಾಯ ಇದರಿಂದ ಪಡೆದಿರುವ ಪ್ರಯೋಜನಗಳೇನು ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ.

ದೀನ್ ಅಥವಾ ಧರ್ಮ‌ ಎಂದರೆ ನಸೀಅ ಎಂದು ಪೈಗಂಬರರು ಹೇಳಿದ್ದಾರೆ. ಸೂಫಿಗಳ ಕಾವ್ಯ, ಪ್ರವಚನಗಳೆಲ್ಲವೂ ನಸೀಅತ್ ನ ವಿವಿಧ ರೂಪಗಳು. ಸೂಫಿಸಂನಲ್ಲಿ ಉಪದೇಶಗಳನ್ನು ನೀಡುವ ಗುರುವಿಗೆ ಅತ್ಯಧಿಕ ಮಹತ್ವವಿದೆ.‌ ಶಿಷ್ಯನಾದವನು ಗುರುವಿನ ಪರಂಪರೆಯನ್ನು ನೆನಪಿಟ್ಟುಕೊಂಡಿರುತ್ತಾನೆ.‌ ಮೌಲಾನ ಜಲಾಲುದ್ದೀನ್ ರೂಮಿಯವರ ಮಹಾಕಾವ್ಯ ಮಸ್ನವಿ, ಗದ್ಯ ಕೃತಿ ‘ಫೀಹಿ ಮಾ ಫೀಹಿ’ ಲೋಕ ಪ್ರಸಿದ್ಧಿ ಪಡೆದಿದೆ, ಪಾಶ್ಚಾತ್ಯ ಲೋಕ ರೂಮಿಯವರ ಈ ಕೃತಿಗಳನ್ನು ಎದೆಗಪ್ಪಿಕೊಂಡು ಸ್ವೀಕರಿಸಿವೆ. ಮಸ್ನವಿ ಸಾರೋಪದೇಶಗಳ ಕಾವ್ಯಾತ್ಮಕ ಅಭಿವ್ಯಕ್ತಿಯಾದರೆ, ಫೀಹಿ ಮಾ ಫೀಹಿ ರೂಮಿಯವರು ತಮ್ಮ ಶಿಷ್ಯಂದಿರಿಗೆ, ಜನರಿಗೆ ನೀಡಿದ ನಸೀಅತ್ ಗಳ ಸಂಗ್ರಹ. ಅವರ ಪುತ್ರ ಸುಲ್ತಾನ್ ವಲದ್ ಈ ಕೃತಿಯನ್ನು ಸಂಗ್ರಹಿಸಿದ್ದಾರೆ.

‘ನಸೀಅ’ ಎಂಬುದು ಅರಬಿ ಭಾಷೆಯ ಪದ. ಧಾರ್ಮಿಕ ಕಾರಣಗಳಿಂದ ಈ ಪದ ಬ್ಯಾರಿ ಭಾಷೆಯಲ್ಲೂ ವ್ಯಾಪಕ ಬಳಕೆಯಲ್ಲಿರುವುದರಿಂದ ತಮ್ಮ ಬ್ಯಾರಿ ಕವನಗಳ ಸಂಕಲನಕ್ಕೆ ಹೈದರಲಿ ಕಾಟಿಪಳ್ಳ ಅವರು ಈ ಹೆಸರಿಟ್ಟಿರುವುದು ಸೂಕ್ತವೆನಿಸುತ್ತದೆ, ಸಂಕಲನದ ಕವಿತೆಗಳೂ ಸಹ ಕೆಲವು ಕಡೆ ನೇರವಾಗಿ ಮತ್ತು ಹಲವು ಕಡೆ ಪರೋಕ್ಷವಾಗಿ ಓದುಗರಿಗೆ ನಸೀಅತ್ ಮಾಡುತ್ತದೆ.

ಪ್ರಶ್ನೆಯೇನೆಂದರೆ, ಕಾವ್ಯಕ್ಕೂ ಉಪದೇಶಕ್ಕೂ ಏನು ಸಂಬಂಧ? ರೋಮನ್ ಕವಿ ಹೋರೇಸ್, ‘ಕಾವ್ಯ ಆನಂದವನ್ನೂ ನೀಡಬೇಕು, ಉಪದೇಶವನ್ನೂ ಮಾಡಬೇಕು’ ಎನ್ನುತ್ತಾನೆ.‌‌ ಕಾವ್ಯ ಒಣ ಉಪದೇಶವಾಗಬಾರದೆಂಬುದು ಆಧುನಿಕ ಕವಿಗಳ, ವಿಮರ್ಶಕರ ಅಭಿಪ್ರಾಯ. ಮುಖ್ಯವಾಗಿ ವರ್ಡ್ಸ್‌ವರ್ತ್ ‘ಕಾವ್ಯವು ಶಕ್ತಿಯುತ ಭಾವನೆಗಳ ಸ್ವಾಭಾವಿಕ ಹರಿವು’ ಎನ್ನುತ್ತಾನೆ.‌ ಆದರೂ, ಆಧುನಿಕ ಕಾಲಘಟ್ಟದ ಅನೇಕ ಉತ್ತಮ ಕಾವ್ಯಗಳಲ್ಲಿ ‘ನಸೀಅತ್’ ಗುಪ್ತಗಾಮಿನಿಯಂತೆ ಹರಿಯುತ್ತಿರುವುದನ್ನು ಕಾಣಬಹುದು.

ಹೈದರಲಿ ಕಾಟಿಪಳ್ಳ ಅವರ ‘ನಸೀಅತ್’ ಸಂಕಲನದ ಕವಿತೆಗಳ ಒಟ್ಟು ಆಶಯ ಪ್ರೀತಿ ಮತ್ತು ಕನಸು.‌ ಈ ಎರಡು ಗುಣಗಳಿಲ್ಲದೆ ಮನುಷ್ಯ ಈ ಲೋಕದಲ್ಲಿ ಬಾಳಲಾರ, ಅಂತಿಮವಾಗಿ ಅವನ ಉದ್ದೇಶವೂ ಈ ಎರಡರ ಮೂಲಕ ಜೀವನವನ್ನು ಸುಂದರಗೊಳಿಸುವುದು, ಸುಖಕರಗೊಳಿಸುವುದು. ಆದರೆ, ಇದಾಗಬೇಕಾದರೆ ಖಲ್ಬ್, ಮನಸು ಶುದ್ಧಿಯಾಗಿರಬೇಕು, ಆದರೆ, ಖಲ್ಬ್ ಶುದ್ದಿ ಮಾಡುವುದೇ ಸಾಹಸದ ಕೆಲಸ. ಶುದ್ಧ ಖಲ್ಬಿನಲ್ಲಿ ನಿಜವಾದ ಪ್ರೀತಿ ಮತ್ತು ಕನಸುಗಳಿದ್ದರೆ ಜೀವನ ಸುಂದರವಾಗುವುದರಲ್ಲಿ ಸಂಶಯವಿಲ್ಲ ಎನ್ನುವುದೇ ಇಲ್ಲಿಯ ಬಹುತೇಕ ಕವನಗಳು ನಮಗೆ ನೀಡುವ ನಸೀಅತ್.

ಈ ಸಂಕಲನದ ಇನ್ನೊಂದು ವಿಶೇಷತೆ, ಕಾಲದ ದೋಷಗಳನ್ನು ವಿಡಂಬನೆಯ ಮೂಲಕ ಹೇಳುವುದು, ಆಧುನಿಕ ಕಾಲದ ಬಹುದೊಡ್ಡ ದೋಷವೆಂದರೆ, ಜನರಲ್ಲಿರುವ ಅತಿಯಾಗಿರುವ ಗುರುತಿಸಿಕೊಳ್ಳುವ ಬಯಕೆ, ಸಮಾಜದಲ್ಲಿ ಮಹಾದಾನಿ, ಒಳ್ಳೆಯವನೆಂದು ಗುರುತಿಸಿಕೊಳ್ಳಬೇಕು, ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಲೈಕ್ ಪಡೆಯುವ ಮೂಲಕ ಗುರುತಿಸಿಕೊಳ್ಳಬೇಕು, ಎಲ್ಲರೂ ಹೊಗಳಬೇಕೆಂಬ ಬಯಕೆಗಳು ಈ ಕಾಲದ ವ್ಯಕ್ತಿತ್ವಗಳ ಮುಖ್ಯ ಗುಣಲಕ್ಷಣವಾಗಿದೆ. ಅವುಗಳನ್ನೇ ಇಲ್ಲಿಯ ಕವಿತೆಗಳು ತಮ್ಮದೇ ಶೈಲಿಯಲ್ಲಿ ವಿಡಂಬಿಸುತ್ತವೆ.‌

ಉದಾಹರಣೆಗೆ ನನಗೆ ಇಷ್ಟವಾದ ಸಾಲು;
ಪಲ್ಲಿಗ್ ಕೊರಿಯ ಪೈಸ ಕೊಡ್ತ
ಸೀಕ್‌ರವುನುಗು ಎಪುಲು ಕೊಡ್ತ
ಪಾವತ್ತವುನುಗು ಕಿಟ್ಸ್ ಕೊಡ್ತ
ಕೊಡ್ತದೆಂದುರೊ ಬಿಸಯ ಅಲ್ಲ
ಕೊಡ್ತದೆಂದಿಗ್ ಬಿಸಯ ಅಲ್ಲ
ನಾ ಕೊಡ್ತದ್ ಎಲ್ಲಾರ್ಗುಂ ಪಿಡಿಯಾವೊನು
ಅದುರೊ ಒರು ಪೊಟ ಬೇನು
ಅದ್ ಕೊರಿಯ ಲೈಕ್ ಬೇನು
(ಮಸೀದಿಗೆ ಅಲ್ಪ ಹಣ ಕೊಟ್ಟ
ರೋಗಿಗೆ ಆಪಲ್ ಕೊಟ್ಟ
ಬಡವನಿಗೆ ಕಿಟ್ ಕೊಟ್ಟ
ಕೊಟ್ಟದ್ದು ದೊಡ್ಡ ವಿಷಯವಲ್ಲ
ನಾನು ಕೊಟ್ಟದ್ದು ಎಲ್ಲರಿಗೂ ತಿಳಿಯಬೇಕು
ಅದರ ಒಂದು ಪೋಟೋ ಬೇಕು
ಅದಕ್ಕೊಂದಿಷ್ಟು ಲೈಕು ಬೇಕು)

ಈ ಸಂಕಲನದಲ್ಲಿರುವ ‘ನಸೀಅತ್’ ಎಂಬ ಹೆಸರಿನ ಕವನವೂ ಸಹ ಈ ಕಾಲದ ಇನ್ನೊಂದು ಮುಖ್ಯ ದೋಷದ ಕುರಿತು ಗಮನಸೆಳೆಯುತ್ತದೆ.

‘ಇನ್ನೊರ್ತಡೊ ಪುಣ್ಣು
ಚೊರಿಯಂಡ ಪುತ್ತೇ
ನಿಂಡೊ ಮುದು ನಿಕ್ ಕಾಂಡಿಲ್ಲೆ’
(ಇನ್ನೊಬ್ಬನ ಹುಣ್ಣು
ತುರಿಸಬೇಡ
ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ)

ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುವ ಒಂದು ರೋಗ, ಇನ್ನೊಬ್ಬನ ಬಗ್ಗೆ ಕೀಳಾಡುವುದು, ವ್ಯಕ್ತಿತ್ವದ ದೋಷಗಳನ್ನು ಬಹಿರಂಗವಾಗಿ ಚರ್ಚಿಸುವುದು, ಆಕ್ಷೇಪಿಸುವುದು, ಕುಹಕವಾಡುವುದು ಇವತ್ತಿನ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಸಾಮಾನ್ಯವಾಗಿದೆ. ಕವಿ ಇದನ್ನೇ ವಿಡಂಬನೆಯ ಮೂಲಕ ಈ ಸಮಸ್ಯೆ ಎಷ್ಟು ಗಂಭೀರವಾದುದು ಎಂಬುದನ್ನು ಕಾವ್ಯಾತ್ಮಕವಾಗಿ ಹೇಳುತ್ತಾರೆ. ‘ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ’ ಎಂಬಲ್ಲಿ ಮನುಷ್ಯನಿಗಿರಬೇಕಾದುದು ಪರದೂಷಣೆ ಅಲ್ಲ, ಸ್ವವಿಮರ್ಶೆ ಎಂಬ ಧ್ವನಿ‌‌ ಇದೆ.
ಕವಿಗೆ ಈ‌ ಕಾಲಕ್ಕಿಂತ ಹಳೆಯ ಕಾಲವೇ ಹೆಚ್ಚು ಆಪ್ತವೆನಿಸುತ್ತದೆ. ಹಿಂದಿನ ಕಾಲದ ಅಜ್ಜಿ ಮತ್ತು ಈ ಕಾಲದ ಅಜ್ಜಿಯರ ನಡುವಿನ ಸಾಮಾನ್ಯ ವ್ಯತ್ಯಾಸವನ್ನು ಕವಿ ಗುರುತಿಸುತ್ತಾರೆ. ಹಿಂದಿನ ಕಾಲದ ಅಜ್ಜಿಯ ಬಾಯಿಯಲ್ಲಿ ಎಂದೆಂದೂ ಮುಗಿಯದ ಕಥೆಗಳಿದ್ದವು, ಈಗಿನ ಕಾಲದ ಅಜ್ಜಿಯ ಕೈಯಲ್ಲಿ ಮೊಬೈಲ್ ಇದೆ ಎಂಬುದು ಕವಿಯ ದೂರು. ಇದು ಕಟು ವಾಸ್ತವವೂ ಹೌದು. ಒಂದು ವೇಳೆ ಆಧುನಿಕ ಅಜ್ಜಿ ಕಥೆ ಹೇಳಿದರೂ ಆ ಕಥೆಯಲ್ಲಿ ಯಾವುದೇ ಸಿಹಿ ಅರ್ಥಾತ್ ರಸವಿರುವುದಿಲ್ಲ ಎಂದು ಕವಿ ಹೇಳುತ್ತಾರೆ. ಅದಕ್ಕೆ ಕವಿ ಹೇಳುವ ಮಾರ್ಮಿಕ ಕಾರಣ ಈಗಿನ ಕಾಲದ ಅಜ್ಜಿಗೆ ಶುಗರ್ ಇದೆ ಎಂಬುದು. ಬಹುಶಃ ಕವಿ ಇಲ್ಲಿ ಹೊಸ ಪೀಳಿಗೆ ದೈಹಿಕ ಶ್ರಮವಿಲ್ಲದೆ ರೋಗಗ್ರಸ್ಥರಾಗುತ್ತಿರುವುದನ್ನು ವಿಷಾದದಿಂದ ಹೇಳುತ್ತಿದ್ದಾರೆ.

‘ನೀನ್ ನಿಂಡೊ ಬೇಜಾರ್ ಚೆನ್ನದ್ ತಪ್ಪಲ್ಲ ಚಂಜಾಯಿ
ಅವೊಂಡೊ ಕಾದ್‌ಲಿನ್ನೊ
ಬ್ಲೂಟೂತ್ ನೋಕಾತದ್ ತಪ್ಪು’
(ನೀನು ನಿನ್ನ ಬೇಸರ ಹೇಳಿಕೊಂಡದ್ದು ತಪ್ಪಲ ಗೆಳೆಯಾ
ಅವನ ಕಿವಿಯಲ್ಲಿರುವ ಬ್ಲೂಟೂತ್ ನೋಡದಿರುವುದು ತಪ್ಪು)
ಪರಸ್ಪರ ಮಾತನಾಡದಿರುವುದು ಆಧುನಿಕ ಕಾಲದ ಇನ್ನೊಂದು ದೋಷ, ಒಬ್ಬನ ನೋವನ್ನು, ಕಷ್ಟವನ್ನು ಕೇಳುವಷ್ಟು ಪುರುಸೊತ್ತಾಗಲಿ, ವ್ಯವಧಾನವಾಗಲಿ ನಮ್ಮಲ್ಲಿ ಕಡಿಮೆಯಾಗುತ್ತಿದೆ. ಆಧುನಿಕ ಸೌಲಭ್ಯಗಳು ಮನುಷ್ಯರು ಪರಸ್ಪರ‌ ನೋವು ನಲಿವುಗಳನ್ನು ಆಲಿಸದಷ್ಟು ದೂರ ಮಾಡಿಬಿಟ್ಟಿವೆ. ಕೇಳಿಸಿಕೊಳ್ಳುವುದು ಅಥವಾ ಆಲಿಸುವುದು ಬಹಳ ದೊಡ್ಡ ಮೌಲ್ಯವಾಗಿದೆ. ಕೇಳಿಸಿಕೊಳ್ಳುವವರು ಅಥವಾ ಶ್ರೋತೃಗಳು ಇಲ್ಲದಿದ್ದರೆ ನಸೀಅತ್ ನಡೆಯುವುದಿಲ್ಲ.‌ ಆದರೆ, ಆಧುನಿಕ ಮನುಷ್ಯನ ಕಿವಿಯಲ್ಲಿ ಯಾವತ್ತು ನೋಡಿದರೂ ಬ್ಲೂಟೂತ್ ಇರುವುದರಿಂದ ಅವನು ನಸೀಅತ್ ಗೆ, ಸಹ ಮನುಷ್ಯರ ಕಷ್ಟಗಳನ್ನು ಆಲಿಸುವುದರಿಂದ ವಿಮುಖನಾಗುತ್ತಿದ್ದಾನೆ.‌ ಈ ಬಗೆಯ ಮೌಲ್ಯಪತನದ ಬಗ್ಗೆ ಕವಿಗೆ ಬೇಸರವಿದೆ. ಆದ್ದರಿಂದ ಅವನು ದುಃಖಿತನಿಗೆ ಸಾಂತ್ವನ ಮಾಡುತ್ತಿದ್ದಾನೆ, ಆದರೆ ಆ ಸಾಂತ್ವನವೇ ವಿಡಂಬನೆಯ ರೂಪದಲ್ಲಿರುವ ಇಲ್ಲಿನ ಸಾಲುಗಳ ವಿಶೇಷತೆ. ಕೇಳಿಸಿಕೊಳ್ಳುವುದಿಲ್ಲ ಎಂದು ತಿಳಿದೂ ಕಷ್ಟ ಹೇಳಲು ಹೋದದ್ದು ನಿನ್ನ ತಪ್ಪು ಅಲ್ಲ, ಅವನೇಕೆ ಕೇಳಿಸಿಕೊಳ್ಳುತ್ತಿಲ್ಲ ಎಂಬುದನ್ನು ನೋಡದಿರುವುದು ನಿನ್ನ ತಪ್ಪು ಎಂದು ಕವಿ ಹೇಳುತ್ತಿರುವುದರ ಹಿಂದೆ ಆಧುನಿಕ ಸೌಲಭ್ಯಗಳ ದಾಸನಾಗುತ್ತಿರುವುದೇ ಮನುಷ್ಯನೊಳಗಿನ ಮೌಲ್ಯಪತನಕ್ಕೆ ಕಾರಣ ಎನ್ನುವ ಧ್ವನಿ ಕೇಳಿಸುತ್ತದೆ.

ಇಂತಹ ಹಲವಾರು ವಿಚಾರ ಪ್ರಚೋದಕ ಕವನಗಳು ಈ ಸಂಕಲನದಲ್ಲಿವೆ.‌ ಒಮ್ಮೆ ಓದಿದರೆ ಮತ್ತೆ ಓದಬೇಕೆನಿಸುವಷ್ಟು ಸರಳ ಸುಂದರವಾಗಿವೆ. ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ಈ ಕವನ ಸಂಕಲನ ಒಂದು ಉತ್ತಮ ಕೊಡುಗೆ ಎನ್ನಬಹುದು.

– ಸ್ವಾಲಿಹ್‌ ತೋಡಾರ್


ವಿಜ್ಞಾನ, ತತ್ವಜ್ಞಾನ ಹಾಗೂ ಸಾಹಿತ್ಯ: ಭಾಷೆ ರೂಪಿಸುವ ಪ್ರಪಂಚಗಳು

ಸುಂದರ್‌ ಸರುಕ್ಕೈ/ಮಶ್ಕೂರ್‌ ಖಲೀಲ್

ಉ: ಕ್ಯಾಲಿಕಟ್‌ಗೆ ಬರುವುದೆಂದರೆ ನನಗ್ಯಾವತ್ತೂ ಇಷ್ಟ. ಇಲ್ಲಿರುವ ವಿವಿಧ ಗುಂಪುಗಳ ಜೆತಗೆ ಮಾತಾಡುವುದು ಹಾಗೂ ಚಿಂತನೆಗಳನ್ನು ಹಂಚಿಕೊಳ್ಳುವುದು ದೊಡ್ಡದೊಂದು ಅನುಭವ ನೀಡುತ್ತದೆ. ನನ್ನ ಪ್ರಕಾರ, ವಿಜ್ಞಾನದ ವಿಭಾಗಗಳು ಜಗತ್ತನ್ನು ಗ್ರಹಿಸಲು ನಾವೇ ನಿರ್ಮಿಸಿಕೊಂಡಿರುವ ಕೆಲವು ಚೌಕಟ್ಟುಗಳಾಗಿವೆ. ಭೌತವಿಜ್ಞಾನದಲ್ಲಿ ನಾನು ಆಸಕ್ತನಾಗಿದ್ದ ಸಂದರ್ಭದಲ್ಲಿ ಅದು ಜಗತ್ತನ್ನು ಗ್ರಹಿಸುವ ಒಂದು ಮಾರ್ಗ ಎಂದು ಭಾವಿಸಿದ್ದೆ. ಈಗಲೂ ಅಷ್ಟೇ.

ಭೌತವಿಜ್ಞಾನ ಹಾಗೂ ಗಣಿತ ಬಹಳ ನಿಕಟವಾಗಿವೆ. ಅವುಗಳ ಆಸ್ವಾದನೆ ನನಗೆ ಇಷ್ಟ. ಆದರೆ, ಭೌತವಿಜ್ಞಾನದ ವೃತ್ತದೊಳಗೆ ನಿಂತುಕೊಂಡು ಕಂಡುಹಿಡಿಯಲು ಸಾಧ್ಯವಾಗದ ಕೆಲವು ಮೂಲಭೂತ ಪ್ರಶ್ನೆಗಳಿವೆಯೆಂದು ನನಗೆ ಕ್ರಮೇಣ ಅನಿಸತೊಡಗಿತು. ಬಾಲ್ಯದಲ್ಲೆ ಸಾಹಿತ್ಯದಲ್ಲಿ ನನಗೆ ಒಲವಿತ್ತು. ಹಾಗಾಗಿ, ಸಾಹಿತ್ಯ ಹಾಗೂ ತತ್ವಜ್ಞಾನ ಜಗತ್ತಿನ ಬಗ್ಗೆ ಆಲೋಚಿಸಲು ಬೇರೊಂದು ಚಿಂತನಾ ಚೌಕಟ್ಟನ್ನು ಒದಗಿಸಿತು. ತತ್ವಜ್ಞಾನದ ಕಡೆಗಿನ ಪಯಣವನ್ನು ನನ್ನ ಚಿಂತನೆಯ ಸಹಜ ಹಂತವೆಂದೆ ನಾನು ಭಾವಿಸಿದ್ದೇನೆ. ಆದರೆ, ಯಾವ ಕ್ಷೇತ್ರಕ್ಕೆ ಹೋಗುವುದಿದ್ದರೂ ಅದನ್ನು ಸಾಧ್ಯವಾಗಿಸುವ ಕೆಲವು ಸಾಂಸ್ಥಿಕ ಅಂಶಗಳಿವೆ. ಭೌತವಿಜ್ಞಾನದಲ್ಲಿ ಪಿಎಚ್ಡಿ ಮಾಡುವಾಗಲೇ ತತ್ವಚಿಂತನೆ ಕಲಿಯುವ ಅವಕಾಶ ಸಿಕ್ಕಿತ್ತು. ಅದುವೆ ಈ ಪಲ್ಲಟಕ್ಕೆ ನಾಂದಿ ಹಾಡಿತು.

ಉ: ಸ್ವಾರಸ್ಯಕರವಾದ ಪ್ರಶ್ನೆಯಿದು. ಭೌತದಿಂದ ತತ್ವಕ್ಕೆ ಪಲ್ಲಟಗೊಂಡಾಗ ಸ್ವತಂತ್ರವಾದ ಸಮಸ್ಯೆಗಳೊಂದಿಗೆ ನಾನು ಅನುಸಂಧಾನ ನಡೆಸಿದೆ ಎಂದು ಹೇಳುವ ಹಾಗಿಲ್ಲ. ಪ್ರತಿ ವಿಭಾಗಕ್ಕೂ ಅದರದ್ದೇ ಆದ ಸ್ವಾತಂತ್ರ್ಯ ಹಾಗೂ ಮಿತಿಗಳಿವೆ. ಭೌತವಿಜ್ಞಾನದಲ್ಲಿ ಬಹಳ ಸ್ವಾರಸ್ಯಕರ ಪ್ರಶ್ನೆಗಳಿಗೆ ಸಾಧ್ಯತೆ ಇದೆ. ಅದಾಗ್ಯೂ, ಆ ನೆಲೆಗಟ್ಟಿನ ಸಂಶೋಧನೆಗಳು ನನ್ನ ಕುತೂಹಲವವನ್ನು ಪೂರ್ಣವಾಗಿ ತೃಪ್ತಿಪಡಿಸಲಿಲ್ಲ. ಮನುಷ್ಯರು, ಸಂಸ್ಕೃತಿಗಳು ಹಾಗೂ ಸಮಾಜಗಳ ಬಗೆಗಿನ ಅಧ್ಯಯನದಲ್ಲಿ ನನಗೆ ಹೆಚ್ಚಿನ ಒಲವಿತ್ತು. ನಾವು ಬದುಕುವ ಜಗತ್ತಿನ ಸಾಮಾಜಿಕ ಲೋಕ ಹಾಗೂ ವೈಯುಕ್ತಿಕ ಮನೋವಿಜ್ಞಾನವನ್ನು ಅರ್ಥೈಸುವ ಪ್ರಯತ್ನ ಅದಾಗಿತ್ತು. ಆ ಪ್ರಶ್ನೆಗಳು ನನ್ನ ವೈಜ್ಞಾನಿಕ ಅಧ್ಯಯನಗಳ ಮೇಲೂ ಪ್ರಭಾವ ಬೀರಿತು. ವೈಜ್ಞಾನಿಕ ಅಧ್ಯಯನ ಬಹಳ ಕ್ಲಿಷ್ಟಕರವಾದ ಪ್ರವೃತ್ತಿ ಎನ್ನುವುದನ್ನೂ ನಾವಿಲ್ಲಿ ತಿಳಿಯಬೇಕಿದೆ. ಅತಿ ಏಕಾಗ್ರತೆ ಹಾಗೂ ನಿರಂತರ ಪರಿಶ್ರಮ ಅದಕ್ಕೆ ಅವಶ್ಯಕ. ನುರಿತ ವಿಜ್ಞಾನಿಗಳು ಕೂಡಾ ಬಹುತೇಕ ವೇಳೆ ತಮ್ಮ ಆಸಕ್ತಿಕರ ಕ್ಷೇತ್ರಗಳನ್ನು ಕೈಬಿಡಬೇಕಾಗಿ ಬರುತ್ತದೆ. ಒಂದು ಹಂತದಲ್ಲಿ ನನಗೂ ಅದು ಅರ್ಥವಾಯಿತು. ಆ ತ್ಯಾಗಕ್ಕೆ ನಾನು ಸಿದ್ಧನಾದದ್ದು ಭೌತವಿಜ್ಞಾನಕ್ಕಲ್ಲ, ತತ್ವಜ್ಞಾನಕ್ಕಾಗಿ.

ಭೌತವಿಜ್ಞಾನದ ಮಾದರಿಗಳನ್ನು ನಿರ್ಮಿಸಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯವಾದ ಚೈತನ್ಯವನ್ನು ಖರ್ಚು ಮಾಡುವ ಆಸಕ್ತಿ ನನಗಿರಲಿಲ್ಲ. ಆದರೆ, ತತ್ವಜ್ಞಾನ ಕಲಿಯಲು, ಬರೆಯಲು ಹಾಗೂ ಆ ಕ್ಷೇತ್ರದಲ್ಲಿ ಕಠಿಣ ಪರಿಶ್ರಮಪಡಲು ನಾನು ತಯಾರಿದ್ದೆ. ಆ ಕ್ಷೇತ್ರ ನನ್ನನ್ನು ಬಹಳ ಆಕರ್ಷಿಸಿತ್ತು. ಒಂದು ಆಯಾಮದಲ್ಲಿ ವಿಜ್ಞಾನವನ್ನು ಗೌರವಿಸಲು ಹಾಗೂ ಮೌಲ್ಯಯುತವಾಗಿ ಕಾಣಲು ತತ್ವಜ್ಞಾನ ನನಗೆ ಸಹಾಯ ಮಾಡಿದೆ ಎನ್ನಬಹುದು. ಯಾವುದೇ ವಿಷಯದ ಮೌಲಿಕತೆಯನ್ನು ನಾವು ಗ್ರಹಿಸುವುದು ತತ್ವಜ್ಞಾನದ ಮೂಲಕವೇ. ವಿಜ್ಞಾನ ವಿಕಾಸವಾದದ್ದು ಹೇಗೆ, ಅದು ಯಾಕೆ ನಿಗದಿತ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನೆಲ್ಲಾ ಅರ್ಥ ಮಾಡಲು ಆರಂಭಿಸಿದೆ. ವಿಜ್ಞಾನದ ಇತಿಹಾಸ ಹಾಗೂ ತತ್ವಜ್ಞಾನ ಬಹಳ ಆಕರ್ಷಕ ಲೋಕವಾಗಿ ನನ್ನ ಮುಂದೆ ಬಂದು ನಿಂತಿತು.

ಆಮೇಲೆ ʼವಿಜ್ಞಾನದ ಸಮಾಜವಿಜ್ಞಾನʼವನ್ನು ಓದಲು ಆರಂಭಿಸಿದಾಗ ವಿಜ್ಞಾನ ಸೇರಿದಂತೆ ಮನುಷ್ಯನ ಯಾವುದೇ ಕೆಲಸಗಳು ಎಷ್ಟು ಸಂಕೀರ್ಣತೆ ಹಾಗೂ ಸಮೃದ್ಧತೆಯಿಂದ ಕೂಡಿದೆ ಎನ್ನುವ ವಿಚಾರ ಸ್ಪಷ್ಟವಾಯಿತು. ತತ್ವಜ್ಞಾನದಲ್ಲಿನ ಸಂಕೀರ್ಣತೆ ವಿಜ್ಞಾನದಲ್ಲಿರುವುದಕ್ಕಿಂತ ಭಿನ್ನವಾದದ್ದು. ಸಾಹಿತ್ಯರಚನೆ ಎನ್ನುವುದು ಸದಾ ನನ್ನಲ್ಲಿದ್ದ ಆಗ್ರಹ. ತತ್ವಜ್ಞಾನದಲ್ಲಿ ಬರಹದೊಂದಿಗೆ ನಾನು ತೋರುತ್ತಿದ್ದ ಮನೋಭಾವವೇ ಸಾಹಿತ್ಯದ ಕಡೆಗೆ ನನ್ನನ್ನು ಆಕರ್ಷಿಸಿದ್ದು ಎಂದು ನನಗೆ ತೋರುತ್ತದೆ. ಫಿಕ್ಷನ್‌ ಹಾಗೂ ತತ್ವಜ್ಞಾನವನ್ನು ಬರೆಯುವುದು ಸಮಾನವಾದ ಅನುಭವ ನೀಡುವ ಹಾಗೆ ನನಗೆ ಭಾಸವಾಗಿದೆ. ಹಾಗಾಗಿ ಸಾಹಿತ್ಯ ನನಗೆ ಸ್ವಲ್ಪ ಅಧಿಕ ಸ್ವಾತಂತ್ರ್ಯವನ್ನು ನೀಡಿದೆ ಎನ್ನಬಹುದು.
ನಾವು ಮಾತನಾಡಲಿಚ್ಚಿಸಿರುವ ಪುಸ್ತಕದ ಹಿನ್ನೆಲೆಯಲ್ಲಿ ಮಾತಾಡುವುದಾದರೆ , ಒಂದು ದಾರ್ಶನಿಕ ಯಾ ಅಕಾಡೆಮಿಕ್‌ ರಚನೆಯಲ್ಲಿ ಸಾಧ್ಯವಾಗದ ರೀತಿಯಲ್ಲಿ ಧರ್ಮದ ಬಗ್ಗೆ ಬರೆಯುವ ಅವಕಾಶ ನನಗೆ ದೊರಕಿದೆ. ಜತೆಗೆ, ಭಾಷೆಯ ಸುಪ್ರಧಾನ ಕಾರ್ಯದ ಕಡೆಗೆ ಫಿಕ್ಷನ್‌ ನನ್ನನ್ನು ಮರಳಿಸಿದೆ. ಭಾಷೆ ಎನ್ನುವುದು ಕೇವಲ ಸಿದ್ಧಾಂತಗಳು, ಸತ್ಯಗಳು ಹಾಗೂ ಜ್ಞಾನಗಳನ್ನು ವಿನಿಮಯಿಸುವ ಮಾರ್ಗ ವಷ್ಟೇ ಅಲ್ಲ. ಮನುಷ್ಯನೊಳಗೆ ಆಳವಾದ ಅನುಭವಗಳನ್ನು ಸೃಜಿಸುವ ಶಕ್ತಿಯದು. ನನ್ನ ಅನುಭವದಲ್ಲಿ ಫಿಕ್ಷನ್‌ ಎನ್ನುವುದು ಕಥೆ ಹೇಳುವ ಪ್ರಕ್ರಿಯೆಯಾಚೆಗೆ ಭಾಷೆಯಿಂದ ಏನೇನೆಲ್ಲಾ ಸಾಧ್ಯ ಎನ್ನುವ ಪರೀಕ್ಷೆ ಕೂಡಾ ಹೌದು. ಭಾಷೆಯ ಮೂಲಕ ಮಾನವನನ್ನು ಹೇಗೆಲ್ಲಾ ಸ್ಪರ್ಶಿಸಬಹುದು, ಆತನನ್ನು ಹೇಗೆಲ್ಲಾ ಇರವಿನ ಅಂಚಿಗೆ ದೂಡಬಹುದೆನ್ನುವ ಅನ್ವೇಷಣೆ.

ನನ್ನ ಜೀವನದಲ್ಲಿ ವಿವಿಧ ಹಂತಗಳಿತ್ತು ಎನ್ನುವುದು ನಿಜವಾದರೂ ಸಾಹಿತ್ಯ ತತ್ವಜ್ಞಾನದ ನಂತರ ಬಂದದ್ದಲ್ಲ. ಸದಾ ಅದು ನನ್ನಲ್ಲಿತ್ತು. ನಾಟಕಗಳೂ ಸೇರಿದಂತೆ ಆಮೇಲೆ ಪ್ರಕಟಿಸಿದ ಕಥಾ ಸಾಹಿತ್ಯದ ಕೆಲವು ಭಾಗಗಳೆಲ್ಲ ಬಹಳ ಹಿಂದೆಯೇ ಬರೆದದ್ದು. ಅವುಗಳನ್ನು ಪ್ರಕಟಿಸಲು ಪ್ರಕಾಶಕರು ದೊರಕುತ್ತಿದ್ದಾರೆನ್ನೆವುದೇ ಸದ್ಯ ಇರುವ ಬದಲಾವಣೆ. ಅದು ಬಹುಷಃ ಬರಹಕ್ಕಿಂತಲೂ ಮುಖ್ಯವಾದದ್ದು.

ಉ: ವಿಜ್ಞಾನದ ಬಗೆಗಿನ ಮುಖ್ಯವಾದ ಪ್ರಶ್ನೆಯ ಕಡೆಗೆ ತಾವು ಬೊಟ್ಟು ಮಾಡಿದ್ದೀರಿ. ವಿಜ್ಞಾನ ವಿಶಿಷ್ಟವಾದ ಒಂದು ವಿವರಣಾಮಾದರಿಯಲ್ಲಿ ಗಮನ ಕೇಂದ್ರೀಕರಿಸುತ್ತದೆ ಎನ್ನುವುದ ಸರಿಯೇ. ಅದರಲ್ಲೂ ಬಹಳ ಮುಖ್ಯವಾಗಿ ಅಳೆಯುವಿಕೆಯನ್ನು (quantification) ಬಳಸಿಕೊಂಡು ವಿದ್ಯಮಾನಗಳನ್ನು ಅಲ್ಲಿ ವಿವರಿಸಲಾಗುತ್ತದೆ. ಆ ನಿಟ್ಟಿನಲ್ಲಿ ಅವಲೋಕಿಸಿದರೆ ವಿಜ್ಞಾನ ಸ್ಲಲ್ಪ ʼವಸ್ತುನಿಷ್ಠʼವಾದ ಪ್ರಕ್ರಿಯೆ ಎನ್ನಬಹುದು. ಒಂದು ವಿದ್ಯಮಾನವನ್ನು ಅಳೆಯುವ ಮಾಪನವನ್ನು ಬಳಸಲು ಸಾಧ್ಯವಾದಲ್ಲಿ ಆ ಚರ್ಚೆಗೆ ವಿಶೇಷ ಸ್ವಭಾವ ಸಿಗುತ್ತದೆ. ಆದರೆ, ಅದರಿಂದ ಅಸ್ಪಷ್ಟತೆ, ಆರ್ಥಶಂಕೆ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ.

ವಾಸ್ತವದಲ್ಲಿ, ನಾನು ಬರೆದ ಮೊದಲ ತಾತ್ವಿಕ ಪುಸ್ತಕವಾಗಿರುವ “Translating the World Science and Language” ಎಂಬ ಕೃತಿ ಕೂಡಾ ವಿಜ್ಞಾನ ಹಾಗೂ ಗಣಿತದಲ್ಲಿ ಅರ್ಥ ಹೇಗೆ ರೂಪುಗೊಳ್ಳುತ್ತದೆ ಎನ್ನುವುದನ್ನೇ ಚರ್ಚೆಗೆ ಕೈಗೆತ್ತಿಕೊಂಡಿದೆ. ಸಾಹಿತ್ಯದೊಂದಿಗೆ ಮಾತ್ರ ಥಳಕು ಹಾಕಲಾಗುವ ರೂಪಕಾತ್ಮಕ ಭಾವಗಳು ಗಣಿತ ಹಾಗೂ ವಿಜ್ಞಾನದ ಬರಹಗಳ ಅನಿವಾರ್ಯ ಅಂಶವೂ ಹೌದೆಂದು ನಾನು ಅದರಲ್ಲಿ ವಾದಿಸಿದ್ದೇನೆ. ವಿಜ್ಞಾನ ಭಾಷೆಯನ್ನು ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದರ ಬಗೆಗಿನ ಅತ್ಯಂತ ಪ್ರಸಕ್ತವಾದ ಪ್ರಶ್ನೆಯಿದು. ಅಸ್ಪಷ್ಟತೆ (ambiguity) ಎನ್ನುವ ಸಮಸ್ಯೆ ಸಾಹಿತ್ಯ ಹಾಗೂ ತತ್ವಚಿಂತನೆಗೆ ಮಾತ್ರ ಸೀಮಿತವಾದದ್ದಲ್ಲ. ಮೂಲಭೂತವಾಗಿ ಅದು ಭಾಷೆಗೆ ಸಂಬಂಧಪಟ್ಟದ್ದು. ಇಂಗ್ಲಿಷ್‌, ಮಲಯಾಳಂ ಸಹಿತ ಇರುವ ಭಾಷೆಗಳಲ್ಲೆಲ್ಲಾ ಈ ಅರ್ಥಶಂಕೆ ಇದೆ. ಸರಳವಾಗಿ ಹೇಳುವುದಾದರೆ, ಪದಗಳಿಗೆ ಏಕಕಾಲದಲ್ಲಿ ಬೇರೆ ಬೇರೆ ಅರ್ಥಗಳು ಇರಬಹುದು. ಇದು ಭಾಷೆಯ ಬಗೆಗಿನ ತಾತ್ವಿಕವಾದ ಮೌಲಿಕ ಪ್ರಶ್ನೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಒಂದು ಪದಕ್ಕೆ ಸ್ವಯಂ ಸ್ಥಿರವಾದ ಅರ್ಥವಿದೆಯೇ? ಅದಕ್ಕೆ ಅರ್ಥ ಸಿಗುವುದು ಒಂದು ವಾಕ್ಯದಲ್ಲಿ ಯಾ ಒಂದು ಸಂದರ್ಭದಲ್ಲಿ ಮಾತ್ರವೇ? ಇದೊಂದು ಬಹಳ ಮೌಲಿಕ ಪ್ರಶ್ನೆ.

ಉ: ಮೂಲಭೂತವಾದ ಅಂತಹದ್ದೊಂದು ಪ್ರಶ್ನೆಯನ್ನು ನನ್ನ ಕಾದಂಬರಿಗಳಲ್ಲಿ ವಿವಿಧ ರೀತಿಯಲ್ಲಿ ಶೋಧಿಸಿದ್ದೇನೆ. ಆಂಬಿಗ್ಯುಟಿ ಎನ್ನುವ ಪರಿಕಲ್ಪನೆಯ ಸಾರದಲ್ಲಿರುವುದೂ ಇದುವೆ. ಗಣಿತವು ವಿಜ್ಞಾನದ ಭಾಷೆ ಎನ್ನುವ ವಿಜ್ಞಾನಿಗಳ ಮಾತಿನ ತಾತ್ಪರ್ಯ ಅಳತೆಗಳು ಹಾಗೂ ಲೆಕ್ಕಗಳು ಅಸ್ಪಷ್ಟತೆಯನ್ನು ಕಡಿಮೆಗೊಳಿಸುತ್ತದೆ ಎನ್ನುವುದೇ. ಆದರೆ ಇದು ಪೂರ್ಣವಾಗಿ ಸರಿ ಎನ್ನಲಾಗದು. ವಾಸ್ತವಲ್ಲಿ ಒಂದೇ ಚಿಹ್ನೆಗೆ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಅರ್ಥ ಸ್ಫುರಿಸಲು ಸಾಧ್ಯವಾಗುವಲ್ಲಿಯೇ ವೈಜ್ಞಾನಿಕ ಸಿದ್ದಾಂತ ನಿರ್ಮಾಣದ ಶಕ್ತಿ ಅಡಗಿರುವುದು. ವಿಜ್ಞಾನ ಅಷ್ಟೂ ಶಕ್ತಿಯುತ ಹಾಗೂ ಉತ್ಪಾದನಾಶೀಲ ಆಗಿರುವುದು ಇದೆ ಕಾರಣದಿಂದ. ಇದನ್ನು ವಿವಿಧ ರೀತಿಯಲ್ಲಿ ಗ್ರಹಿಸಲು ಸಾಧ್ಯವಿದೆ. ಒಂದು ಪದ ಇಲ್ಲವೇ ಚಿಹ್ನೆಗೆ ಒಂದೇ ಒಂದು ಸ್ಥಿರವಾದ ಅರ್ಥವಿದೆ ಎನ್ನುವುದು ಒಂದನೆಯದ್ದು. ಇಲ್ಲ ಬೇರೆ ಬೇರೆ ಅರ್ಥ ಇದೆ ಎನ್ನವುದು ಎರಡನೆಯದ್ದು. ಮೂರನೆಯದ್ದು, ಚಿಹ್ನೆಯನ್ನು ಶೂನ್ಯವಾಗಿಟ್ಟುಕೊಂಡು ತಮಗೆ ಬೇಕಾದ ಅರ್ಥವನ್ನು ಆರೋಪಿಸುವ ಗಣಿತದ ಪ್ರತಿಮಾತ್ಮಕ ವಿದ್ಯೆ. ವೈಜ್ಞಾನಿಕ ಸಿದ್ಧಾಂತ ನಿರ್ಮಾಣದ ಕಾರ್ಯವಿಧಾನ ಮೂರನೆಯ ತರದ್ದು. ವಿಜ್ಞಾನ ಅಷ್ಟೂ ಸೃಜನಶೀಲ ಹಾಗೂ ಶಕ್ತಿಯುತ ಆಗುವುದು ಇದೇ ಕಾರಣದಿಂದ. ಹಾಗಾಗಿ, ವಿಜ್ಞಾನದಲ್ಲಿ ಕೆಲಸ ಮಾಡುವ ವೇಳೆಯಲ್ಲೂ ಬರಹ ನನಗೆ ಸವಾಲಾಗಿ ಪರಿಣಮಿಸಲಿಲ್ಲ.
ವಿಜ್ಞಾನ ಹಾಗೂ ಇತರ ಕ್ಷೇತ್ರಗಳು ಭಿನ್ನ ಎನ್ನುವ ಪ್ರಜ್ಞೆ ನನಗೆ ಮೊದಲೇ ಇತ್ತು. ವಿಜ್ಞಾನ ಚರ್ಚಿಸುವುದು ಕೆಲವು ಪ್ರತ್ಯೇಕ ವಸ್ತುಗಳನ್ನು ಮಾತ್ರ; ಇಲೆಕ್ಟ್ರೋನ್‌ಗಳ ಕಾರ್ಯನಿರ್ವಹಣೆ, ಪರಮಾಣು ರಚನೆ, ಗುರುತ್ವಾಕರ್ಷಣೆ ಇತ್ಯಾದಿಗಳು. ವಿಜ್ಞಾನದ ವಿಷಯ ವ್ಯಾಪ್ತಿ ಇರುವುದು ಅಷ್ಟೇ. ಆ ವಿಷಯಗಳಲ್ಲಿ ಒಂದು ಪ್ರತ್ಯೇಕ ಮಾದರಿಯನ್ನು ಮಾತ್ರ ಬಳಸಿಕೊಂಡು ಇಲ್ಲವೇ ಬೇರೆ ಮಾದರಿಯನ್ನು ಬಳಸಿಕೊಂಡು ಕೆಲಸ ಮಾಡುವ ಸ್ವಾತಂತ್ರ್ಯ ಇದೆ. “ಗುರುತ್ವಾಕರ್ಷಣೆ ಇನ್ನೊಂದಾಗಿದ್ದಲ್ಲಿ ಏನಾಗುತ್ತಿತ್ತು? ಎಂಬ ಆಲೋಚನೆಯನ್ನು ಆಧಾರವಾಗಿಟ್ಟುಕೊಂಡು ಒಂದು ಮಾದರಿಯನ್ನು ನಿರ್ಮಿಸಿ ಫಲಿತಾಂಶಗಳನ್ನು ಶೋಧಿಸಬಹುದು. ಅದಕ್ಕೆ ಬೇರೆ ಖರ್ಚುಗಳೇನೂ ಬರುವುದಿಲ್ಲ. ಆದರೆ, ನಿಮ್ಮ ಬಗ್ಗೆ, ಮನುಷ್ಯ ಸಮುದಾಯಗಳ ಬಗ್ಗೆ ಮಾತನಾಡಲು ಬಯಸಿದರೆ ಮಾತ್ರ ನನಗಲ್ಲಿ ಸ್ವಾತಂತ್ರ್ಯವಿಲ್ಲ. ಅಲ್ಲಿ ಅರ್ಥಗಳು ಬಹಳ ನಿಯಂತ್ರಿತವಾದುದು. ಒಂದು ಕಲ್ಲಿನ ಬಗ್ಗೆ ನನಗೆ ಏನು ಬೇಕಾದರೂ ಹೇಳಬಹುದು. ಗುರುತ್ವಾಕರ್ಷಣವು ೧/r೨ ಆಗಿದೆ ಎMದು ನ್ಯೂಟನ್‌ ಹೇಳಿದ್ದಕ್ಕೆ ವಿರುದ್ಧವಾಗಿ ಅದು ೧/r೩ ಎಂದೋ ೧/r೨.೦೦೩ ಎಂದೋ ನಾನು ವಾದಿಸುವ ಅವಕಾಶ ಅಲ್ಲಿದೆ. ಆ ವಾದದ ಫಲಿತಾಂಶಗಳನ್ನು ಪರಿಶೋಧಿಸಲು ಒಂದು ಮಾದರಿಯನ್ನೂ ನಿರ್ಮಿಸಬಹುದು. ಅದೇ ವೇಳೆ, ಮನುಷ್ಯರ ಕುರಿತು, ಕಾದಂಬರಿಯೊಂದರ ಪಾತ್ರದ ಕುರಿತು ಅಥವಾ ಸಮಾಜವಿಜ್ಞಾನದಲ್ಲಿ ಒಂದು ಸಮಾಜದ ಕುರಿತು ಬರೆಯುವಾಗ ನನಗೆ ಬಹಳ ಹೆಚ್ಚು ನಿಯಂತ್ರಣಕ್ಕೆ ವಿಧೇಯನಾಗಬೇಕಾಗುತ್ತದೆ.

ಉ: ನನ್ನ ಅಭಿಪ್ರಾಯದಲ್ಲಿ ವಿಜ್ಞಾನ ಹೆಚ್ಚು ಸೃಜಶೀಲತೆ ಹಾಗೂ ಸ್ವಾತಂತ್ರ್ಯವನ್ನು ನೀಡುತ್ತದೆ. ಇದನ್ನು ಸ್ಪಷ್ಟಪಡಿಸಲು ನನ್ನ ವಿದ್ಯಾರ್ಥಿಗಳೊಂದಿಗೆ ನಾನು ಒಂದು ಸರಳವಾದ ಪ್ರಶ್ನೆಯನ್ನು ಕೇಳುತ್ತಿರುತ್ತೇನೆ. “ವಿಜ್ಞಾನ” ಎಂಬ ಪದದ ಮೂಲಾರ್ಥ ಅರಿವು ಎಂದಾದರೂ ಇಂದಿನ ವಿಜ್ಞಾನ ಮುಖ್ಯವಾಗಿ ಸಂಶೋಧನೆಗೆ ಸಂಬಂಧಪಟ್ಟಿದೆ. ಹೊಸ ಅರಿವಿನ ಉತ್ಪಾದನೆಯನ್ನೇ ವಿಜ್ಞಾನ ಎಂದು ಸೂಚಿಸಲಾಗುತ್ತಿದೆ. ಅದು ಕೇವಲ ಜ್ಞಾನ ವಿನಿಮಯವಲ್ಲ. ನೀವು ವಿಜ್ಞಾನಿಯಾಗಿದ್ದಲ್ಲಿ ಪ್ರಕಟಿಸುತ್ತಾ ಇರಬೇಕು. ಹೊಸ ಜ್ಞಾನದ ಉತ್ಪಾದನೆಯನ್ನೇ ಪ್ರಕಟಣೆ ಎನ್ನುವುದು. ಇಂದು ಹೊಸ ಅರಿವಿನ ಉತ್ಪಾದನೆ ಎನ್ನುವುದು ಒಂದು ಕೈಗಾರಿಕೆಯಾಗಿ ಮಾರ್ಪಟ್ಟಿದೆ, ಬೃಹತ್‌ ಕೈಗಾರಿಕೆ. ಪ್ರತಿವರ್ಷವೂ ಹೊರಬರುವ ವೈಜ್ಞಾನಿಕ ಪ್ರಬಂಧಗಳ ಸಂಖ್ಯೆ ಲಕ್ಷ ದಾಟಿದೆ. ಪ್ರತಿ ಪ್ರಬಂಧವೂ ಹೊಸ ಅರಿವಿನ ಒಂದಂಶವನ್ನುಸೇರಿಸುತ್ತಾ ಬರುತ್ತದೆ. ಆದರೆ, ನಾವು ನಿಜವಾಗಿಯೂ ಅಷ್ಟು ಅರಿವನ್ನು ಸೃಜಿಸುತ್ತಿದ್ದೇವೆಯೇ? ಜ್ಞಾನದ ಸೃಷ್ಟಿ ಎನ್ನುವ ಕಡ್ಡಾಯವಾದ ಪ್ರಕ್ರಿಯೆಯ ಮೂಲಕ ನಾವು ಹಾದು ಹೋಗುತ್ತಿದ್ದೇವೆಯೇ? ಇದು ನನ್ನ ಪ್ರಶ್ನೆ. ಯಾಕೆಂದರೆ, ಪ್ರಪಂಚದ ಕುರಿತು ನಿಮಗೆ ಏನು ಬೇಕಾದರೂ ಊಹಿಸಬಹುದು. ಅದನ್ನು ದಾಖಲಿಸುವ ಭಾಷೆ ಹಾಗೂ ಲೆಕ್ಕಾಚಾರದ ನಿಯಮಗಳು ಮಾತ್ರ ನಿಮ್ಮ ಮುಂದಿರುವ ಏಕಮಾತ್ರ ಪರಿಮಿತಿ. ಅದರಾಚೆಗೆ, ಅತ್ಯಂತ ಮೂಲಭೂತವಾದ ವಿಜ್ಞಾನದ ಬಾಗಿಲು ತೆರೆದೇ ಇದೆ. ಐನ್‌ಸ್ಟೈನ್‌ ತನ್ನ ಕಾಲದ ಪ್ರಯೋಗಗಳ ಫಲಿತಾಂಶಗಳನ್ನು ಮತ್ತೊಮ್ಮೆ ಓದಿಕೊಂಡು ದೇಶ-ಕಾಲಗಳ ಅರ್ಥವನ್ನೇ ನವೀಕರಿಸಿದರು. ಇದು ಅತ್ಯಂತ ಧೈರ್ಯಶಾಲಿ ಹಾಗೂ ದಾರ್ಶನಿಕವಾದ ಸಾಹಿತ್ಯಿಕ ವಿದ್ಯಮಾನವೂ ಹೌದು. ವಿಜ್ಞಾನದ ಔಪಚಾರಿಕ ಭಾಷೆ ಹಾಗೂ ವೈಜ್ಞಾನಿಕ ಚೌಕಟ್ಟುಗಳ ಮೂಲಕ ಅದು ನಿಯಂತ್ರಣಕ್ಕೆ ಒಳಗಾದದ್ದು ಆಮೇಲೆ.

ಸಮಾಜವಿಜ್ಞಾನ ಹಾಗೂ ಅದರ ಸಿದ್ಧಾಂತ ನಿರ್ಮಾಣದಲ್ಲಿ ಇಷ್ಟು ಸ್ವಾತಂತ್ರ್ಯ ಲಭ್ಯವಲ್ಲ ಎನ್ನವುದು ನನ್ನ ಅಭಿಪ್ರಾಯ. ಅನೇಕ ಕಾರಣಗಳಿಂದಾಗಿ ಅಲ್ಲಿ ಬಹಳ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾಗುತ್ತದೆ. ಒಂದು ವಸ್ತುವಿನ ವಿಚಾರದಲ್ಲಿ ನಮಗೇನನ್ನೂ ಮಾಡಬಹುದು. ಒಂದು ಕಲ್ಲನ್ನು ತೆಗೆಯಬಹುದು, ಅದನ್ನು ಒಡೆಯಬಹುದು,ಹೊತ್ತಿಸಬಹುದು, ಎರಕಹೊಯ್ಯಬಹುದು. ಆದರೆ, ಮಾನವ ಸಮಾಜ ಹಾಗೂ ಜೀವಜಾಲಗಳ ನಡುವೆ ಅಂತಹ ವಿಧಾನವನ್ನು ಅನ್ವಯಿಸುವುದು ಅಸಾಧ್ಯ. ಸಮಾಜ ವಿಜ್ಞಾನದಲ್ಲಿನ ನಿಯಂತ್ರಣಗಳನ್ನು ನಮಗೆ ಈ ಮೂಲಕ ತಿಳಿಯಬಹುದು. ಹಾಗಾಗಿ, ನಿಯಂತ್ರಿತವಾದವುಗಳೊಳಗೆ ನಿಂತುಕೊಂಡೆ ಅಲ್ಲಿ ಅರ್ಥವಂತಿಕೆ ಇರುವ ಅರಿವನ್ನು ಉತ್ಪಾದಿಸಬೇಕಾಗುತ್ತದೆ. ಅದೇವೇಳೆ, ಸಮಾಜವಿಜ್ಞಾನವೂ ಗಣಿತವನ್ನು ಭಾಷೆಯಾಗಿ ಬಳಸುತ್ತಾ ಇರುವುದರಿಂದ ಅದಕ್ಕೂ ಬಹಳ ಸೃಷ್ಟಿಶೀಲ ಆಯಾಮ ದೊರಕುತ್ತದೆ. ಇಲ್ಲಿ ಗಣಿತವೂ ಕಾವ್ಯದ ಹಾಗೆ ಇರುವುದನ್ನು ನಾವು ಗಮನಿಸಬೇಕಿದೆ. ಭಾರತದಲ್ಲಿ ಇಪ್ಪತ್ತು ಮೂವತ್ತು ವರ್ಷದ ಹಿಂದಿನವರೆಗೂ ಗಣಿತವನ್ನು ಬಿಎ ವಿಷಯವಾಗಿ ಪರಿಗಣಿಸಲಾಗುತ್ತಿತ್ತು. ಅಂದರೆ ಅದು ಮಾನವಿಕ ವಿಭಾಗದಡಿಯಲ್ಲಿ ಬರುತ್ತಿತ್ತು. ಅದರಲ್ಲಿ ಕಾವ್ಯ ಹಾಗೂ ಸೃಜನಭಾವದ ಆತ್ಮವಿದೆ. ಈ ಜಗತ್ತಿನೊಂದಿಗೆ ಹೊಂದಾಣಿಕೆ ಆಗುತ್ತಿದೆಯಾ ಎನ್ನುವ ಆತಂಕವೇ ಇಲ್ಲದೆ ಗಣಿತದಲ್ಲಿ ಊಹೆಗಳನ್ನು ಕೈಗೊಳ್ಳಬಹುದು. ಪಾಶ್ಚಾತ್ಯ ಚಿಂತನೆಯ ಪರಂಪರೆಯಲ್ಲಿ ಗಣಿತ ದೇವವಿದ್ಯೆಯೊಂದಿಗೆ (theology) ನಿಕಟವಿದ್ದುಕೊಂಡೆ ಬೆಳೆದು ಬಂದಿದೆ. ಇಸ್ಲಾಮಿಕ್‌ ಜ್ಞಾನ ಪರಂಪರೆಯಲ್ಲೂ ನಮಗದನ್ನು ಕಾಣಬಹುದು. ಆ ಚಿಂತನಾ ಪರಂಪರೆ ನ್ಯೂಟನ್‌ ಕಾಲದ ವರೆಗೂ ಸಾಗಿ ಬಂದಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಹಾಗೆ ನೋಡಿದರೆ ಅದು ಕೂಡಾ ಒಂದು ರೀತಿಯ ಸೃಜನಶೀಲತೆ ಹಾಗೂ ಸ್ವಾತಂತ್ರ್ಯ ಎನ್ನುವುದು ತಿಳಿದು ಬರುತ್ತದೆ. ಸಮಾಜ ವಿಜ್ಞಾನದಲ್ಲಿ ಬರವಣಿಗೆಗೆ ಇಳಿಯುವಾಗ ಆ ಸ್ವಾತಂತ್ರ್ಯ ಮೊಟಕುಗೊಳ್ಳುತ್ತದೆ.

ತಾತ್ವಿಕ ವ್ಯವಹಾರಗಳು ಕೂಡಾ ಬಹಳ ನಿಯಂತ್ರಿತವಾಗಿವೆ. ಇಂಗ್ಲಿಷ್‌, ಲ್ಯಾಟಿನ್‌, ಸಂಸ್ಕೃತ ಸಹಿತ ಯಾವುದೇ ಕ್ಲಾಸಿಕಲ್‌ ಪಾರಂಪರಿಕ ಭಾಷೆಯಿರಲಿ ಅವುಗಳದ್ದೇ ಆದ ಸ್ವಂತ ದಾರ್ಶನಿಕ ಪರಂಪರೆ ಇದೆ ಎನ್ನುವುದು ಗಮನಾರ್ಹ. ಪ್ರತಿ ಭಾಷೆಯೂ ತನ್ನದ್ದೇ ಆದ ದಾರ್ಶನಿಕತೆಯನ್ನು ಸೃಷ್ಟಿಸಿದೆ. ಆದರೆ, ಆ ದಾರ್ಶನಿಕ ಚಿಂತನೆಗಳು ಆಯಾ ಭಾಷೆಗಳ ಸಂರಚನೆ ಹಾಗ ಅದರಲ್ಲಿ ರೂಪುಗೊಳ್ಳುವ ಸಿದ್ದಾಂತಗಳಗೆ ವಿಧೇಯವಾಗಿವೆ. ಯಾವ ಭಾಷೆಯಲ್ಲಿ ತತ್ವ ಚಿಂತನೆ ಮಾಡಿದರೂ ಆ ಭಾಷೆ ಏರ್ಪಡಿಸುವ ಬೌದ್ಧಿಕ ನಿಯಂತ್ರಣಗಳನ್ನು ಹಾಗೂ ಮಿತಿಗಳನ್ನು ಮೀರಲು ಸಾಧ್ಯವಿಲ್ಲ. ಹಾಗಾಗಿ, ನನ್ನ ವೈಯುಕ್ತಿಕ ಅನುಭವದ ಪ್ರಕಾರ ವಿಜ್ಞಾನ ಅತ್ಯಂತ ಹೆಚ್ಚು ಸಜನಶೀಲ ಉದ್ಯಮ ಎಂದನಿಸಿದೆ.


(ಮುಂದುವರಿಯುವುದು) ‌

ಕನ್ನಡಕ್ಕೆ: ನಝೀರ್‌ ಅಬ್ಬಾಸ್‌


Sundar Sarukkai is one of India’s leading contemporary philosophers and public intellectuals, known for his work in the philosophy of science and interdisciplinary studies. Trained in physics and philosophy, he earned his PhD from Purdue University, USA, and has held key academic positions including at the National Institute of Advanced Studies, Bengaluru, and as Founder-Director of the Manipal Centre for Philosophy and Humanities. He is the author of several influential books, including Translating the World, Philosophy of Symmetry, and What is Science?, and continues to actively promote philosophy through research, writing, and public engagement.

1 2 3 18