ಅದು 1987ನೇ ಇಸವಿಯ ಏಪ್ರಿಲ್ ತಿಂಗಳು ದೆಹಲಿಯಲ್ಲಿ ನಡೆಯುತ್ತಿದ್ದ ಮುಶಾಇರವೊಂದರಲ್ಲಿ ಕವಿಯೊಬ್ಬ ಸೌಹಾರ್ದತೆ ಮತ್ತೆ ಸಹೋದರತ್ವದ ಕುರಿತಾದ ಸುಂದರವಾದ ಹಾಗೂ ಎಂದಿನಂತೆಯೇ ಮೊನಚು ಮತ್ತು ತಿಳಿ ಹಾಸ್ಯದಿಂದ ಕೂಡಿದಂತಹ ಗಝಲಿನ ರದೀಫ್ಗಳನ್ನು ಒತ್ತಿ ಒತ್ತಿ ಹೇಳುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಿದ್ದ.
ಅದೇ ಹೊತ್ತಿನಲ್ಲಿ ಕವಿಯ ಹುಟ್ಟೂರಾದ ಮೀರತಿನಲ್ಲಿ ಕೋಮು ಗಲಭೆಯೊಂದು ದಿಢೀರನೆ ಸ್ಫೋಟಗೊಂಡಿತ್ತು. ಹಿಂದೂ ಮುಸ್ಲಿಮರಿಬ್ಬರು ಸೇರಿ ಹಲವಾರು ಮನೆಗಳನ್ನು ಸುಟ್ಟುಹಾಕಿದ್ದರು. ಅದರಲ್ಲಿ ಒಂದು ಮನೆ ಆ ಕವಿಯದಾಗಿತ್ತು. ಕೇವಲ ಕವಿಮನೆ ಮಾತ್ರವಲ್ಲ ಆ ಕವಿಯ ಗ್ರಂಥಾಲಯ, ಹಲವಾರು ಕವನ ಸಂಕಲನಗಳ ಹಸ್ತಪ್ರತಿಗಳು ಸುಟ್ಟುಕರಕಲಾಗಿದ್ದವು. ಮನೆಮಂದಿಯೆಲ್ಲ ಕೂದಲೆಳೆಯಲ್ಲಿ ಬದುಕುಳಿದಿದ್ದರು. ಆ ಕವಿ ಆತ ಬೇರಾರೂ ಅಲ್ಲ, ಗಝಲ್ ಸಾಮ್ರಾಟ ಬಷೀರ್ ಬದ್ರ್.
ಮರುದಿನ ಬೆಳಗಿನ ರೈಲಿಗೆ ಮೀರತಿಗೆ ಬಂದಿಳಿದ ಕವಿ ತಾನು ಗೆಳೆಯರೊಂದಿಗೆ ನಕ್ಕುನಲಿದಿದ್ದ ಗಲ್ಲಿಗಳಲ್ಲಿ ದ್ವೇಷದ ಹೆಬ್ಬಾವುಗಳು ಬುಸುಗುಟ್ಟುವುದನ್ನು ನೋಡಿದ. ತನ್ನವರೆನಿಸಿಕೊಂಡವರೇ ಬೆವರುಸುರಿಸಿ ಕಟ್ಟಿದ ತನ್ನ ಮನೆಗೆ, ರಕ್ತ ಹರಿಸಿ ಬರೆದಿದ್ದ ತನ್ನ ಕವಿತೆಗಳಿಗೆ, ಜೀವಮಾನದಲ್ಲಿ ಕಾಪಿಟ್ಟ ಪುಸ್ತಕಗಳಿಗೆ ಬೆಂಕಿಯಿಟ್ಟದ್ದನ್ನು ನೋಡಿ ಕಣ್ಣೀರು ಹರಿಸಿದ.
ಸಂತೋಷದಿಂದ ನನ್ನ ಮನೆಯನ್ನು ಸುಟ್ಟುಹಾಕು ನಿನಗೆ ಯಾವ ಕಳಂಕವೂ ತಟ್ಟದಿರಲೀ ಎಂದು ಉದ್ಗರಿಸಿದ.
ಸುಟ್ಟು ಕರಕಲಾದ ಮನೆಯ ಗೋಡೆಯ ಕೆಳಗೆ ಕುಳಿತು ಪುಸ್ತಕಗಳ ಬೀದಿಯನ್ನು ನೋಡುತ್ತಾ ಕವಿ ಯೋಚಿಸುತ್ತಿದ್ದ, ಸುಟ್ಟು ಹೋದ ಮನೆಗಳನ್ನು ಮತ್ತೆ ಕಟ್ಟಬಹುದು, ದ್ವಂಸಗೊಂಡ ಊರು ಮತ್ತೆ ಸರಿಯಾಗಬಹುದು, ಮುರಿದ ಸೇತುವೆ ರಿಪೇರಿಯಾಗಬಹುದು ಆದರೆ… ಒಡೆದು ಹೋದ ಮನಸ್ಸುಗಳು! ಹತ್ತಿ ಉರಿಯುವ ಬೆಂಕಿಯನ್ನು ನೀರಿನಿಂದ ನಂದಿಸಬಹುದು ಆದರೆ ಎದೆಯಲ್ಲಿ ಧಗಧಗಿಸುತ್ತಿರುವ ಕೋಮು ದಳ್ಳುರಿಯನ್ನು ನಂದಿಸುವ ನೀರನ್ನು ಎಲ್ಲಿಂದ ತರಲಿ?? ಈ ಪಾರಿವಾಳಗಳ ಗೂಡಿನಲ್ಲಿ ವಿಷ ಸರ್ಪಗಳನ್ನು ಇಟ್ಟವರಾರು? ಕವಿ ದುಃಖದಿಂದ ಬಡಬಡಿಸಿದ
ಸೋತುಹೋಗುವರು ಒಂದು ಮನೆ ಕಟ್ಟುವಷ್ಟರಲ್ಲೇ ಜನರು ದಣಿಯಲಿಲ್ಲವಲ್ಲೋ ನೀನು ಇಡೀ ಊರನ್ನೇ ಸುಟ್ಟರೂ !
ಪಾರಿವಾಳಗಳ ಅಸಹಾಯಕತೆಯಿದು ಇದನ್ನೂ ಹೇಳಲಾರವು ಯಾರು ಇರಿಸುತ್ತಿರುವರು ಸರ್ಪಗಳನ್ನು ತಮ್ಮ ಗೂಡಿನಲ್ಲಿ !
ಸದ್ದು ಮಾಡುವ ಕಲ್ಲುಗಳನ್ನು ಎದೆಯೆಂದು ತಿಳಿಯುವರು ಜನರು ಜನುಮವೇ ಕಳೆದು ಹೋಗುವುದು ಎದೆಯನ್ನು ಹೃದಯವನ್ನಾಗಿಸುವುದರಲ್ಲಿ !
ಜೀವಮಾನದ ಸಂಪಾದನೆಯ ಜೊತೆಗೆ ಹಲವಾರು ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿಗಳನ್ನೂ ಕಳೆದುಕೊಂಡಿದ್ದ ಬಷೀರ್ ಬದ್ರ್ ತೀವ್ರ ಆಘಾತ ಮತ್ತು ಖಿನ್ನತೆಗೆ ಒಳಗಾಗಿದ್ದರು. ಸ್ವಲ್ಪ ಕಾಲದವರೆಗೆ ಅವರ ಕುಟುಂಬ ಚಲನಚಿತ್ರ ಮತ್ತು ಸಂಗೀತ ನಿರ್ದೇಶಕ ವಿಶಾಲ್ ಭಾರಧ್ವಾಜ್ ಮನೆಯಲ್ಲಿ ಆಶ್ರಯಪಡೆಯಿತು. ಬಷೀರ್ ಬದ್ರ್ ಕವಿಯ ಅಪ್ಪಟ ಅಭಿಮಾನಿಯಾಗಿದ್ದ ವಿಶಾಲ್ ಭಾರಧ್ವಾಜ್ ಗೆ ಬಷೀರ್ ವೈಯ್ಯಕ್ತಿಕವಾಗಿ ಭೇಟಿಯಾಗುತ್ತಿದ್ದಾಗ ವಾಚಿಸುತ್ತಿದ್ದ ಅಸಂಖ್ಯಾತ ಗಝಲ್ ಗಳ ಮತ್ಲಾಗಳು , ತಖಲ್ಲುಸ್ ಗಳು ನೆನೆಪಿದ್ದವು. ಆ ನೆನಪೇ ಬಷೀರ್ ಬದ್ರ್ ಶೇಕಡಾ ಅರುವತ್ತರಷ್ಟು ಗಝಲ್ ಗಳನ್ನು ಮತ್ತೆ ಕಟ್ಟಲು ಸಾಧ್ಯವಾಯಿತು. ಮಾನಸಿಕವಾಗಿ ನೊಂದುಹೋಗಿದ್ದ ಕವಿ ಮೀರತ್ನಿಂದ ಭೋಪಾಲ್ಗೆ ತಮ್ಮ ನೆಲೆಯನ್ನು ಬದಲಾಯಿಸಿದರು.
ಭಾರತದ ರಾಜಕೀಯ ನಾಯಕರು (ಪ್ರಧಾನಿ ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮುಂತಾದವರು) ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ರ್ಯಾಲಿಗಳಲ್ಲಿ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸಲು ಬಷೀರ್ ಬದ್ರ್ ಕವಿತೆಗಳನ್ನು ಬಳಸಿಕೊಂಡರು. 2016 ರಲ್ಲಿ ರಾಹುಲ್ ಗಾಂಧಿ ಅವರು ನೋಟು ಅಮಾನ್ಯೀಕರಣದ (Demonetisation) ವಿರುದ್ಧ ಇದೇ “ಲೋಗ್ ಟೂಟ್ ಜಾತೇ ಹೈ…” ಗಝಲಿನ ಸಾಲುಗಳನ್ನು ಬಳಸಿದ್ದರು.
ಬಶೀರ್ ಬದ್ರ್ ಅವರು ಸಾಂಪ್ರದಾಯಿಕ ಉರ್ದು ಗಝಲ್ಗಳಿಗೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳವಾದ ಆದರೆ ಆಳವಾದ ಉರ್ದು ಮತ್ತು ಹಿಂದಿ ಮಿಶ್ರಿತ ಭಾಷೆಯನ್ನು ಅವರು ಬಳಸುತ್ತಿದ್ದರು. ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಅವರಿಗೆ ಪ್ರತಿಷ್ಠಿತ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಕೂಡ ಲಭಿಸಿತ್ತು .
ಇನ್ನು ಬದುಕು ಸಾಕು ಎನಿಸಿತ್ತೋ ಏನೋ ಒಂದು ದಿನ ಬಷೀರ್ ಸಾಬ್ ಹೀಗೆ ಬರೆದರು,
ವಿಲಕ್ಷಣ ಹಣತೆ ನಾನು ಹಗಲಿರುಳೆನ್ನದೆ ಉರಿಯುತ್ತಲಿರುವೆ ಆ ಗಾಳಿಗೆ ಆರಿಸಲು ಹೇಳಿ ದಣಿದುಹೋಗಿರುವೆ ನಾನು !
ಧೂಳು ಮಾತ್ರವಲ್ಲ ಆದಿಮಕಾಲದ ಹಳೆಯದಾರಿಯಾಗಿರುವೆ ನಾನು ನಿನ್ನೆಯಷ್ಟೇ ಇಲ್ಲಿಂದ ಹಾದುಹೋಗಿದೆ ಒಂದು ಕಾರವಾನು
ನಿದ್ದೆಗೆ ಜಾರಿದಾಗ ನಿಮ್ಮ ಕೈಗಳಿಂದ ಮುಚ್ಚಿಬಿಡಿ ನನ್ನ ಕಣ್ಣುಗಳನ್ನು ಓದುತ್ತಲೇ ನಿದ್ದೆಗೆ ಜಾರಿಬಿಡುವಂತಹಾ ಒಂದು ಕಥೆಯಷ್ಟೆ ನಾನು !
ಕೋಮುದಳ್ಳುರಿಯಲ್ಲಿ ತನ್ನ ಬದುಕನ್ನೇ ಸುಟ್ಟುಕೊಂಡರೂ ಸದಾ ಸೌಹಾರ್ದ ಭಾರತದ ಕನಸನ್ನು ಬಡಬಡಿಸುತ್ತಿದ್ದ ಕವಿ ತಮ್ಮ ಬದುಕಿನ ಸಂದ್ಯಾಕಾಲದಲ್ಲಿ ಡಿಮೆಂಶಿಯಾ ಎಂಬ ಸ್ಮರಣರೋಗಕ್ಕೆ ತುತ್ತಾದರು ಮತ್ತು 2026 ಮೇ ತಿಂಗಳಿನ 28 ರ ಬಕ್ರೀದಿನ ಹಬ್ಬದ ಪವಿತ್ರ ಬಲಿದಾನದ ದಿನ ತಮ್ಮ 91 ನೇ ವಯಸ್ಸಿನಲ್ಲಿ ಭಾವಪ್ರಪಂಚಕ್ಕೆ ಕಾವ್ಯ ಬಲಿಯನ್ನು ನೀಡಿ ಹಸಿದಿರುವ ಸಹೃದಯರ ಹೃದಯೋದರಕ್ಕೆ ತಂಪನೆರೆದಿದ್ದ ಕವಿ ಶಾಶ್ವತ ನಿದ್ದೆಗೆ ಜಾರಿದರು.
ಕವಿ ಬಷೀರ್ ಬದ್ರ್ ಬಕ್ರೀದಿನ ಪವಿತ್ರ ಬಲಿದಾನದ ದಿನವೇ ಬದುಕಿನ ಯಾತ್ರೆ ಮುಗಿಸಿದರು. ದೊರೆ ನಮ್ರೂದನು ಇಬ್ರಾಹಿಂರನ್ನು ಬೆಂಕಿಯಲ್ಲಿ ದೂಡಿ ಪರೀಕ್ಷಿಸಿದಂತೆ ಕವಿ ಬಷೀರ್ ಬರ್ದ್ ರನ್ನು ಕೂಡಾ ಭಾರತದ ಕೋಮು ದಳ್ಳುರಿಯು ಪರೀಕ್ಷಿಸಿತ್ತು. ಆದರೆ ಬಷೀರ್ ಬದ್ರ್ ಕೊನೆಯವರೆಗೂ ಕೋಮುವಾದದ ವಿರುದ್ಧ ಬರೆದರೇ ಹೊರತು ಕೋಮುವಾದಿಯಾಗಲಿಲ್ಲ. ಬದಲಿಗೆ ಕೋಮುದಳ್ಳುರಿಯಲ್ಲಿ ಉರಿದು ಪುಟಗೊಂಡ ಅಗ್ನಿದಿವ್ಯದಂತೆ ಹೊರಹೊಮ್ಮಿದರು.
‘ಉಜಾಲೇ ಅಪನೀ ಯಾದೋಂ ಕೇ ಹಮಾರೇ ಸಾಥ್ ರಹನೇ ದೋ ನ ಜಾನೇ ಕಿಸ್ ಗಲೀ ಮೇ ಜಿಂದಗೀ ಕೀ ಶಾಮ್ ಹೋ ಜಾಯೇ…’ ನನ್ನ ನೆನಪುಗಳ ಹಣತೆಯೊಂದು ನನ್ನ ಕೈಯ್ಯಲ್ಲಿ ಸದಾ ಇರಲಿ ಯಾವ ತಿರುವಿನಲ್ಲಿ ಬದುಕಿನ ಮುಸಂಜೆಯಾಗುವುದೋ ಯಾರು ಬಲ್ಲರು….. ತಮ್ಮ ನೆನಪುಗಳ ಹಣತೆಯೊಂದನ್ನು ಹಿಡಿದುಕೊಂಡು ಬಷೀರ್ ಸಾಬ್ ಹೊರಟೇಹೋದರು.
ಕವಿಗೆ ಸಾವಿಲ್ಲ ಆತನ ಕವಿತೆಗಳಲ್ಲಿ ಉಸಿರಾಡುತ್ತಾನೆ ಎಂಬುದು ಲೋಕೋಕ್ತಿಯಾಗಿರಬಹುದು ಆದರೆ ಕವಿಯ ಅಂತಿಮ ಯಾತ್ರೆಗೆ ಕೇವಲ ಇಪ್ಪತ್ತು ಜನರು ಮಾತ್ರ ಸೇರಿದ್ದರು ಎಂಬುದು ಕವಿತೆಗಳೇ ಶಾಶ್ವತ, ಎಲ್ಲಾ ಮನ್ನಣೆಗಳೂ ಕವಿತೆಗಳಿಗೆ ಮಾತ್ರ, ಕವಿಯು ನಿಮಿತ್ತ ಮಾತ್ರ ಎಂಬ ಸುಡುವಾಸ್ತವವನ್ನು ಮತ್ತೆ ನೆನಪಿಸಿತು.
‘ ನನಗೆ ಯಾವದೇ ಸಮಾಧಿಯ ಅವಶ್ಯಕತೆಯಿಲ್ಲ, ಸಜ್ಜನರ ಹೃದಯವೇ ನನ್ನ ಸಮಾಧಿ ‘ ಎಂಬ ರೂಮಿಯ ವಾಕ್ಯದಂತೆ ಬಷೀರ್ ಬದ್ರರ ಗಝಲ್ಗಳು ಸಹೃದಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಲಿವೆ.
-ಪುನೀತ್ ಅಪ್ಪು (ಲೇಖನದಲ್ಲಿ ಉಲ್ಲೇಖಿಸಲಾದ ಎಲ್ಲಾ ಕವಿತೆಗಳ ಕನ್ನಡ ಅನುವಾದಗಳು ಲೇಖಕರದ್ದು)
ಐದೂವರೆ ಕೋಟಿ ರೂಪಾಯಿ ವಿದ್ಯಾರ್ಥಿವೇತನದೊಂದಿಗೆ ಅಮೇರಿಕದಲ್ಲಿ ಪಿಎಚ್ಡಿ ಸಂಶೋಧನೆ ಮಾಡಲು ದಾಖಲಾತಿ ಪಡೆದಿರುವ ಅಬ್ದುಲ್ ಫತ್ತಾಹ್ ನೂರಾನಿ ತಮ್ಮ ವಿದ್ಯಾರ್ಥಿಜೀವನದ ಅನುಭವವನ್ನು ಹಂಚಿಕೊಳ್ಳುತ್ತಾರೆ.
ಉನ್ನತ ವ್ಯಾಸಂಗಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾನಿಲಯದತ್ತ
ಪೂನೂರ್ ಜಾಮಿಯಾ ಮದೀನತುನ್ನೂರ್ ವಿದ್ಯಾರ್ಥಿ ಜೀವನದಲ್ಲಿ ಹ್ಯುಮಾನಿಟೀಸ್ ವಿಷಯಗಳಲ್ಲಿನ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಸಾಧ್ಯತೆಗಳ ಕುರಿತು ತಿಳಿದು ಅಚ್ಚರಿಗೊಂಡಿದ್ದೆ. ಭಾರತ ಮತ್ತು ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಿಂದ ಉನ್ನತ ವ್ಯಾಸಂಗ ಮಾಡಿಕೊಳ್ಳುವುದರ ಜೊತೆಗೆ, ಕಾನ್ಫರೆನ್ಸ್ ಪೇಪರ್ ಸಮ್ಮಿಟ್ಗಳಲ್ಲಿ ನಿರಂತರ ತಮ್ಮ ಅಧ್ಯಯನ ವಿಷಯಗಳನ್ನು ಮಂಡಿಸುವ ಮದೀನತುನ್ನೂರ್ ವಿದ್ಯಾರ್ಥಿಗಳ ಒಡನಾಟ ಮತ್ತು ಸಂಸ್ಥೆಯ ಅಕಾಡೆಮಿಕ್ ವಾತಾವರಣ ನನ್ನ ಕನಸುಗಳಿಗೆ ಹೊಸ ರೂಪು ನೀಡಿತು. ರಾಜಕೀಯ ಶಾಸ್ತ್ರದಲ್ಲಿ ಪಿ.ಜಿ. ಮಾಡುವ ನಿಮಿತ್ತ ಹೈದರಾಬಾದ್ ವಿಶ್ವವಿದ್ಯಾನಿಲಯಕ್ಕೆ ತಲುಪಿದಾಗ ಆ ಕನಸಿಗೆ ಇನ್ನಷ್ಟು ಹುರುಪು ತುಂಬಿತು. ಮಾಸ್ಟರ್ಸ್ ಡಿಗ್ರಿಯ ಮಧ್ಯೆ ಕೊಲಂಬಿಯಾ ಯೂನಿವರ್ಸಿಟಿ ಮತ್ತು ಲಂಡನಿನ ಎಕೆಯುಐಎಸ್ಎಮ್ ಸೇರಿ ನೀಡುವ ‘ಮಾಸ್ಟರ್ಸ್ ಇನ್ ಇಸ್ಲಾಮಿಕ್ ಸ್ಟಡೀಸ್ ಆಂಡ್ ಮುಸ್ಲಿಮ್ ಕಲ್ಚರ್ಸ್’ಗಾಗಿ ಅರ್ಜಿ ಸಲ್ಲಿಸಿದೆ. ಸಾಮಾನ್ಯವಾಗಿ ಉನ್ನತ ವ್ಯಾಸಂಗಕ್ಕಾಗಿ ಅಪರೂಪಕ್ಕೆ ವಿದ್ಯಾರ್ಥಿ ವೇತನ ಅಮೆರಿಕಾದಲ್ಲಿ, ಒಬ್ಬ ವಿದ್ಯಾರ್ಥಿಯ ಸಂಪೂರ್ಣ ವೆಚ್ಚ ಭರಿಸುವುದು ಈ ಸ್ಕಾಲರ್ಶಿಪ್ನ ವಿಶೇಷತೆ. ಸದ್ಯ ಈ ವಿಷಯದ ಮೇಲೆ ವ್ಯಾಸಂಗ ಮಾಡುತ್ತಿರುವ ನೂರಾನಿ ಮಿತ್ರರ ಸಹಾಯ ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದ ಡೀನ್ ಆಫ್ ಸೋಶಿಯಲ್ ಸೈನ್ಸಿನ ಸಹಾಯದಿಂದ ಈ ಸಾಧನೆ ಸಾಧ್ಯವಾಯಿತು. ಎರಡನೆಯ ಡಿಗ್ರಿಯ ಅವಶ್ಯಕತೆ ಏನಿದೆ ಎಂಬ ಸಂದೇಹದ ಮಧ್ಯೆಯೂ ಕೊಲಂಬಿಯಾದಂತಹ ಐವಿ ಲೀಗ್ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನಕ್ಕಿರುವ ಅವಕಾಶವನ್ನು ತೊರೆಯಲು ಮನಸ್ಸೊಪ್ಪಲಿಲ್ಲ. ಅಲ್ಲಿನ ಅಧ್ಯಯನಾಸಕ್ತ ವಿದ್ಯಾರ್ಥಿಗಳ ಚಿಂತನೆ ಮತ್ತು ಒಡನಾಟ ಮುಂದಿನ ಅಕಾಡೆಮಿಕ್ ಜರ್ನಿಯಲ್ಲಿ ಹೊಸ ಜಗತ್ತು ತೆರೆಯಲ್ಪಡುವುದು ಖಚಿತ ಎಂಬ ನಿಟ್ಟಿನಲ್ಲಿ ಹೊರಟು ನಿಂತೆ. ನಿರಂತರ ಹೊಸದೊಂದನ್ನು ಅರಿಯುವ ಜಿಜ್ಞಾಸೆ ಅಧ್ಯಯನಶೀಲ ವಿದ್ಯಾರ್ಥಿಗೆ ಎಷ್ಟು ಮುಖ್ಯವೋ, ಅಧ್ಯನಾಸಕ್ತ ವಿದ್ಯಾರ್ಥಿಗಳೊಂದಿಗಿನ ಜಾಗತಿಕ ಒಡನಾಟವೂ ಅಷ್ಟೇ ಮುಖ್ಯ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.
ಧಾರ್ಮಿಕ ಅಧ್ಯಯನದ ಜೊತೆಗೆ ವಿದೇಶಿ ವಿವಿಗಳಲ್ಲಿ ಉನ್ನತ ಶಿಕ್ಷಣದ ಸಾಧ್ಯತೆ ಮತ್ತು ಸವಾಲುಗಳು
ಸಾಮಾನ್ಯವಾಗಿ ಧಾರ್ಮಿಕ ಅಧ್ಯಯನದ ಜೊತೆಗೆ ಲೌಕಿಕ ಅಧ್ಯಯನದ ಸಾಧ್ಯತೆಗಳು ವಿಶೇಷವಾಗಿ ಸಮನ್ವಯ ಶಿಕ್ಷಣ ಪಡೆಯುವ ನನ್ನಂತಹ ವಿದ್ಯಾರ್ಥಿಗಳ ಪೈಕಿ ಬಹುತೇಕರಿಗೆ ತಿಳಿದಿಲ್ಲ. ಮದೀನತುನ್ನೂರ್ ವಿದ್ಯಾಸಂಸ್ಥೆ ನಿರಂತರ ನೀಡಿದ ಪ್ರೋತ್ಸಾಹದಿಂದಾಗಿ ಈ ದಾರಿ ಸುಗಮಗೊಂಡಿತು. ನಮ್ಮ ಇಂಟರ್ಗ್ರೇಟೆಡ್ ಕಾಲೇಜುಗಳಲ್ಲಿ ಸಿಗುವ ಬಿರುದುಗಳು ಯುಜಿಸಿ ಅಂಗೀಕೃತವಲ್ಲದಿದ್ದರೂ ಅದರ ಸಿಲಬಸ್ ಸಾಮ್ಯತೆ ಹೊಂದಿರುತ್ತದೆ. ನಾವು ಅಭ್ಯಸಿಸುವ ವಿಷಯಗಳು ಹಾಗೂ ಅರಬಿ ಭಾಷೆಯ ಆಳ ಅಧ್ಯಯನ ವಿದೇಶಿ ಯೂನಿವರ್ಸಿಟಿ ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಮಾನವಾಗಿರುತ್ತದೆ. ಆ ಕಾರಣದಿಂದಲೇ ಇಂಟರ್ವೀವರ್ಗಳು ಹಲವು ಬಾರಿ ನನ್ನ ಅಧ್ಯಯನ ವಿಷಯಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಿದೆ.
ಪಿ. ಎಚ್. ಡಿ ಅಧ್ಯಯನಕ್ಕೆ ಲಭಿಸುವ ಸ್ಕಾಲರ್ಶಿಫ್
ಐದರಿಂದ ಎಂಟು ವರ್ಷಗಳ ದೀರ್ಘ ಯೋಜನೆಯಾಗಿರುತ್ತದೆ ಪಿಎಚ್ಡಿ ಸಂಶೋಧನಾ ಪ್ರಶ್ನೆಗಳು. ಅಧ್ಯಯನಕ್ಕಾಗಿ ತಮ್ಮ ಸಂಪೂರ್ಣ ಸಮಯ ಮೀಸಲಿಡುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದಲೇ, ಹಣಕಾಸು ಭದ್ರತೆ ಅವಶ್ಯಕ. ಹೈದರಾಬಾದಿನ ಪಿ.ಜಿ.ಯ ವೇಳೆ ನೆಟ್ ಎಕ್ಸಾಮ್ ಬರೆದು ಜೆ.ಆರ್.ಎಫ್. ಗಿಟ್ಟಿಸಿಕೊಂಡ ಉದ್ದೇಶ ಇದಾಗಿತ್ತು. ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ಭಾರತ ಸರಕಾರದ ಅಧ್ಯಯನ ಫಂಡ್ ಅತಿ ಕಡಿಮೆ. ಅಮೇರಿಕನ್/ ನಾರ್ತ್ ಅಮೇರಿಕನ್ ವಿಶ್ವವಿದ್ಯಾನಿಲಯಗಳಲ್ಲಿ ಅತಿ ಹೆಚ್ಚು ಮೊತ್ತವೂ ದೊರಕುತ್ತದೆ. ನನಗೆ ದಾಖಲಾತಿ ದೊರಕಿರುವ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್. ಡಿ. ಅಧ್ಯಯನಕ್ಕಾಗಿ ಮ್ಯಾಕ್ ಕ್ರಾಕನ್ ಫೆಲೋಶಿಪ್ ನೀಡಲ್ಪಡುತ್ತದೆ. ಇದರ ಹೊರತಾಗಿ ಡೀನ್ಸ್ ಡಾಕ್ಟರಲ್ ಫೆಲೋಶಿಪ್, ಡೀನ್ಸ್ ಹ್ಯುಮಾನಿಟೀಸ್ ಸ್ಕಾಲರ್ಸ್ ಪ್ರೋಗ್ರಾಮ್ ಫೆಲೋಶಿಪ್ಗಳು ನನಗೆ ದೊರೆತಿದೆ. ಅಧ್ಯಯನ ಪ್ರಶ್ನೆಗಳು ಹಾಗೂ ರೈಟಿಂಗ್ ಸ್ಯಾಂಪಲ್ಗಳು ಉತ್ತಮವಾಗಿದ್ದರೆ ಫೆಲೋಶಿಪ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತೆಯೇ ಇದರ ಹೊರತಾಗಿ ಇತರ ವಿಶ್ವವಿದ್ಯಾನಿಲಯಗಳಿಂದ ಅಡ್ಮಿಶನ್ ಲಭಿಸಿರುವುದು ಕೂಡಾ ಸ್ಕಾಲರ್ಶಿಪ್ ಮೇಲೆ ಪರಿಣಾಮ ಬೀರುತ್ತದೆ. ಟೊರೆಂಟೋ, ವಾಂಡರ್ಬಿಲ್ಟ್ ಹಾಗೂ ಪೆನ್ಸಿಲ್ವೇನಿಯಾ ಯೂನಿವರ್ಸಿಟಿಗಳಿಂದ ನನಗೆ ದೊರಕಿದ ಪ್ರವೇಶಾತಿ ಸ್ಕಾಲರ್ಶಿಪ್ ದೊರಕುವಲ್ಲಿ ಸಹಾಯಕವಾದವು.
ಯೂನಿವರ್ಸಿಟಿ ಅಧ್ಯಯನ ಅವಧಿಯಲ್ಲಿ ನೆರವಾದ ಧಾರ್ಮಿಕ ಸಂಸ್ಥೆಗಳ ವಿದ್ಯಾರ್ಥಿ ಜೀವನ
ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ವಿಶೇಷವಾಗಿ ಅಮೇರಿಕದ ಅಧ್ಯಯನ ಅವಧಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುವುದಿದೆ. ನಿರಂತರ ಸಂಶೋಧನೆ, ಅಧ್ಯಯನ ನಿಮಿತ್ತ ಪ್ರತಿ ವಾರದಲ್ಲಿ ಸಾವಿರಕ್ಕೂ ಮಿಕ್ಕ ಪೇಜ್ ಓದು ಇವೆಲ್ಲವೂ ಅದಕ್ಕಿರುವ ಕಾರಣ. ಆದರೆ, ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಬೆಳೆದು ಬಂದ ನನಗೆ ಇದು ಸಾಮಾನ್ಯವೆಂಬಂತೆ ತೋರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ನಾವು ಅಳವಡಿಸಿಕೊಂಡು ಬಂದ ಆ ಜೀವನಶೈಲಿ ಇಲ್ಲಿ ನನಗೆ ಬಹಳ ಉಪಯುಕ್ತವೆನಿಸಿದೆ. ನಮ್ಮ ಸಂಸ್ಥೆಯಲ್ಲಿ ಕರಗತ ಮಾಡಿಕೊಂಡ ಭಾಷಾನೈಪುಣ್ಯತೆಯೂ ಅಧ್ಯಯನಕ್ಕೆ ಬಹಳ ಸಹಕಾರಿಯಾಗಿದೆ. ಅಮೇರಿಕನ್ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನದ ಮೊದಲ ಎರಡು – ಮೂರು ವರ್ಷಗಳ ಅವಧಿಯನ್ನು ಕೇವಲ ಭಾಷಾ ಅಧ್ಯಯನಕ್ಕಾಗಿ ಮಾತ್ರ ಮೀಸಲಿಡುತ್ತಾರೆ ಎಂಬುದು ಇಲ್ಲಿ ಗಮನಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಗಳು ಬಹಳ ಉತ್ತಮ ಅವಕಾಶಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ, ಕವಿ ಹೈದರಲಿ ಕಾಟಿಪಳ್ಳ ಅವರ ಬ್ಯಾರಿ ಕವನಗಳ ಸಂಕಲನ ‘ನಸೀಅತ್’. ನಸೀಅತ್ ಗೆ ಉಪದೇಶ ನೀಡುವುದು, ಶುದ್ಧಗೊಳಿಸುವುದು ಮೊದಲಾದ ಅರ್ಥಗಳಿವೆ. ನಸೀಅತ್ ನ ಉದ್ದೇಶ ತಝ್ಕಿಯತ್. ಅಂದರೆ ಹೃದಯದ ಶುದ್ದೀಕರಣ. ದೇಹ, ಮನೆ, ಬಟ್ಟೆಬರೆ ಸ್ವಚ್ಛಗೊಳಿಸುವುದು ಸುಲಭ, ಆದರೆ, ಹೃದಯದ ಶುದ್ದೀಕರಣ ‘ಚೆನ್ನತ್ತರ ಸುಲಭ ಅಲ್ಲ'(ಹೇಳಿದಷ್ಟು ಸುಲಭ ಅಲ್ಲ)’ ಎಂಬುದನ್ನು ಸ್ವತಃ ಕವಿಯೇ ಒಪ್ಪಿಕೊಂಡರೂ, ಅವರು ತಮ್ಮ ಕಾವ್ಯಗಳ ಮೂಲಕ ‘ನಸೀಅತ್’ ಮಾಡುವ ಸಾಹಸಕ್ಕಿಳಿದಿದ್ದಾರೆ.
ಪೈಗಂಬರರಿಂದ ಹಿಡಿದು ಸೂಫಿಗಳವರೆಗಿನ ಎಲ್ಲರ ಜೀವನದಲ್ಲೂ ನಸೀಅತ್ ಹಾಸುಹೊಕ್ಕಾಗಿದೆ. ಇಸ್ಲಾಮ್ ಜಗತ್ತಿನಾದ್ಯಂತ ವ್ಯಾಪಿಸಿರುವುದರ ಹಿಂದೆ ನಸೀಅತ್ ನ ಪಾತ್ರ ದೊಡ್ಡದು. ನನ್ನ ಪ್ರಕಾರ ಮುಸ್ಲಿಮರಷ್ಟು ನಸೀಅತ್ ಗಳನ್ನು ಕೇಳುವ ಜನಾಂಗ, ಸಮುದಾಯ ಇನ್ನೊಂದಿಲ್ಲ. ಹುಟ್ಟಿನಿಂದಲೇ ಅವರು ನಸೀಅತ್ ಕೇಳುತ್ತಾ ಬೆಳೆಯುತ್ತಾರೆ. ಶಾಲೆ, ಮದ್ರಸ ಎರಡು ಕಡೆಗಳಲ್ಲೂ ಮುಸ್ಲಿಮರಿಗೆ ಸಾಕಷ್ಟು ನಸೀಅತ್ ಸಿಗುತ್ತದೆ, ಶುಕ್ರವಾರದ ಖುತ್ಬಾದಲ್ಲಿ, ನಮಾಝಿನ ನಂತರದ ಭಾಷಣದಲ್ಲಿ, ಜೊತೆಗೆ ಮಾಸಿಕ, ವಾರ್ಷಿಕವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಸೀಅತ್ ನ ಮಹಾಪೂರವೇ ಇರುತ್ತದೆ. ಸಮುದಾಯ ಇದರಿಂದ ಪಡೆದಿರುವ ಪ್ರಯೋಜನಗಳೇನು ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ.
ದೀನ್ ಅಥವಾ ಧರ್ಮ ಎಂದರೆ ನಸೀಅ ಎಂದು ಪೈಗಂಬರರು ಹೇಳಿದ್ದಾರೆ. ಸೂಫಿಗಳ ಕಾವ್ಯ, ಪ್ರವಚನಗಳೆಲ್ಲವೂ ನಸೀಅತ್ ನ ವಿವಿಧ ರೂಪಗಳು. ಸೂಫಿಸಂನಲ್ಲಿ ಉಪದೇಶಗಳನ್ನು ನೀಡುವ ಗುರುವಿಗೆ ಅತ್ಯಧಿಕ ಮಹತ್ವವಿದೆ. ಶಿಷ್ಯನಾದವನು ಗುರುವಿನ ಪರಂಪರೆಯನ್ನು ನೆನಪಿಟ್ಟುಕೊಂಡಿರುತ್ತಾನೆ. ಮೌಲಾನ ಜಲಾಲುದ್ದೀನ್ ರೂಮಿಯವರ ಮಹಾಕಾವ್ಯ ಮಸ್ನವಿ, ಗದ್ಯ ಕೃತಿ ‘ಫೀಹಿ ಮಾ ಫೀಹಿ’ ಲೋಕ ಪ್ರಸಿದ್ಧಿ ಪಡೆದಿದೆ, ಪಾಶ್ಚಾತ್ಯ ಲೋಕ ರೂಮಿಯವರ ಈ ಕೃತಿಗಳನ್ನು ಎದೆಗಪ್ಪಿಕೊಂಡು ಸ್ವೀಕರಿಸಿವೆ. ಮಸ್ನವಿ ಸಾರೋಪದೇಶಗಳ ಕಾವ್ಯಾತ್ಮಕ ಅಭಿವ್ಯಕ್ತಿಯಾದರೆ, ಫೀಹಿ ಮಾ ಫೀಹಿ ರೂಮಿಯವರು ತಮ್ಮ ಶಿಷ್ಯಂದಿರಿಗೆ, ಜನರಿಗೆ ನೀಡಿದ ನಸೀಅತ್ ಗಳ ಸಂಗ್ರಹ. ಅವರ ಪುತ್ರ ಸುಲ್ತಾನ್ ವಲದ್ ಈ ಕೃತಿಯನ್ನು ಸಂಗ್ರಹಿಸಿದ್ದಾರೆ.
‘ನಸೀಅ’ ಎಂಬುದು ಅರಬಿ ಭಾಷೆಯ ಪದ. ಧಾರ್ಮಿಕ ಕಾರಣಗಳಿಂದ ಈ ಪದ ಬ್ಯಾರಿ ಭಾಷೆಯಲ್ಲೂ ವ್ಯಾಪಕ ಬಳಕೆಯಲ್ಲಿರುವುದರಿಂದ ತಮ್ಮ ಬ್ಯಾರಿ ಕವನಗಳ ಸಂಕಲನಕ್ಕೆ ಹೈದರಲಿ ಕಾಟಿಪಳ್ಳ ಅವರು ಈ ಹೆಸರಿಟ್ಟಿರುವುದು ಸೂಕ್ತವೆನಿಸುತ್ತದೆ, ಸಂಕಲನದ ಕವಿತೆಗಳೂ ಸಹ ಕೆಲವು ಕಡೆ ನೇರವಾಗಿ ಮತ್ತು ಹಲವು ಕಡೆ ಪರೋಕ್ಷವಾಗಿ ಓದುಗರಿಗೆ ನಸೀಅತ್ ಮಾಡುತ್ತದೆ.
ಪ್ರಶ್ನೆಯೇನೆಂದರೆ, ಕಾವ್ಯಕ್ಕೂ ಉಪದೇಶಕ್ಕೂ ಏನು ಸಂಬಂಧ? ರೋಮನ್ ಕವಿ ಹೋರೇಸ್, ‘ಕಾವ್ಯ ಆನಂದವನ್ನೂ ನೀಡಬೇಕು, ಉಪದೇಶವನ್ನೂ ಮಾಡಬೇಕು’ ಎನ್ನುತ್ತಾನೆ. ಕಾವ್ಯ ಒಣ ಉಪದೇಶವಾಗಬಾರದೆಂಬುದು ಆಧುನಿಕ ಕವಿಗಳ, ವಿಮರ್ಶಕರ ಅಭಿಪ್ರಾಯ. ಮುಖ್ಯವಾಗಿ ವರ್ಡ್ಸ್ವರ್ತ್ ‘ಕಾವ್ಯವು ಶಕ್ತಿಯುತ ಭಾವನೆಗಳ ಸ್ವಾಭಾವಿಕ ಹರಿವು’ ಎನ್ನುತ್ತಾನೆ. ಆದರೂ, ಆಧುನಿಕ ಕಾಲಘಟ್ಟದ ಅನೇಕ ಉತ್ತಮ ಕಾವ್ಯಗಳಲ್ಲಿ ‘ನಸೀಅತ್’ ಗುಪ್ತಗಾಮಿನಿಯಂತೆ ಹರಿಯುತ್ತಿರುವುದನ್ನು ಕಾಣಬಹುದು.
ಹೈದರಲಿ ಕಾಟಿಪಳ್ಳ ಅವರ ‘ನಸೀಅತ್’ ಸಂಕಲನದ ಕವಿತೆಗಳ ಒಟ್ಟು ಆಶಯ ಪ್ರೀತಿ ಮತ್ತು ಕನಸು. ಈ ಎರಡು ಗುಣಗಳಿಲ್ಲದೆ ಮನುಷ್ಯ ಈ ಲೋಕದಲ್ಲಿ ಬಾಳಲಾರ, ಅಂತಿಮವಾಗಿ ಅವನ ಉದ್ದೇಶವೂ ಈ ಎರಡರ ಮೂಲಕ ಜೀವನವನ್ನು ಸುಂದರಗೊಳಿಸುವುದು, ಸುಖಕರಗೊಳಿಸುವುದು. ಆದರೆ, ಇದಾಗಬೇಕಾದರೆ ಖಲ್ಬ್, ಮನಸು ಶುದ್ಧಿಯಾಗಿರಬೇಕು, ಆದರೆ, ಖಲ್ಬ್ ಶುದ್ದಿ ಮಾಡುವುದೇ ಸಾಹಸದ ಕೆಲಸ. ಶುದ್ಧ ಖಲ್ಬಿನಲ್ಲಿ ನಿಜವಾದ ಪ್ರೀತಿ ಮತ್ತು ಕನಸುಗಳಿದ್ದರೆ ಜೀವನ ಸುಂದರವಾಗುವುದರಲ್ಲಿ ಸಂಶಯವಿಲ್ಲ ಎನ್ನುವುದೇ ಇಲ್ಲಿಯ ಬಹುತೇಕ ಕವನಗಳು ನಮಗೆ ನೀಡುವ ನಸೀಅತ್.
ಈ ಸಂಕಲನದ ಇನ್ನೊಂದು ವಿಶೇಷತೆ, ಕಾಲದ ದೋಷಗಳನ್ನು ವಿಡಂಬನೆಯ ಮೂಲಕ ಹೇಳುವುದು, ಆಧುನಿಕ ಕಾಲದ ಬಹುದೊಡ್ಡ ದೋಷವೆಂದರೆ, ಜನರಲ್ಲಿರುವ ಅತಿಯಾಗಿರುವ ಗುರುತಿಸಿಕೊಳ್ಳುವ ಬಯಕೆ, ಸಮಾಜದಲ್ಲಿ ಮಹಾದಾನಿ, ಒಳ್ಳೆಯವನೆಂದು ಗುರುತಿಸಿಕೊಳ್ಳಬೇಕು, ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಲೈಕ್ ಪಡೆಯುವ ಮೂಲಕ ಗುರುತಿಸಿಕೊಳ್ಳಬೇಕು, ಎಲ್ಲರೂ ಹೊಗಳಬೇಕೆಂಬ ಬಯಕೆಗಳು ಈ ಕಾಲದ ವ್ಯಕ್ತಿತ್ವಗಳ ಮುಖ್ಯ ಗುಣಲಕ್ಷಣವಾಗಿದೆ. ಅವುಗಳನ್ನೇ ಇಲ್ಲಿಯ ಕವಿತೆಗಳು ತಮ್ಮದೇ ಶೈಲಿಯಲ್ಲಿ ವಿಡಂಬಿಸುತ್ತವೆ.
ಉದಾಹರಣೆಗೆ ನನಗೆ ಇಷ್ಟವಾದ ಸಾಲು; ಪಲ್ಲಿಗ್ ಕೊರಿಯ ಪೈಸ ಕೊಡ್ತ ಸೀಕ್ರವುನುಗು ಎಪುಲು ಕೊಡ್ತ ಪಾವತ್ತವುನುಗು ಕಿಟ್ಸ್ ಕೊಡ್ತ ಕೊಡ್ತದೆಂದುರೊ ಬಿಸಯ ಅಲ್ಲ ಕೊಡ್ತದೆಂದಿಗ್ ಬಿಸಯ ಅಲ್ಲ ನಾ ಕೊಡ್ತದ್ ಎಲ್ಲಾರ್ಗುಂ ಪಿಡಿಯಾವೊನು ಅದುರೊ ಒರು ಪೊಟ ಬೇನು ಅದ್ ಕೊರಿಯ ಲೈಕ್ ಬೇನು (ಮಸೀದಿಗೆ ಅಲ್ಪ ಹಣ ಕೊಟ್ಟ ರೋಗಿಗೆ ಆಪಲ್ ಕೊಟ್ಟ ಬಡವನಿಗೆ ಕಿಟ್ ಕೊಟ್ಟ ಕೊಟ್ಟದ್ದು ದೊಡ್ಡ ವಿಷಯವಲ್ಲ ನಾನು ಕೊಟ್ಟದ್ದು ಎಲ್ಲರಿಗೂ ತಿಳಿಯಬೇಕು ಅದರ ಒಂದು ಪೋಟೋ ಬೇಕು ಅದಕ್ಕೊಂದಿಷ್ಟು ಲೈಕು ಬೇಕು)
ಈ ಸಂಕಲನದಲ್ಲಿರುವ ‘ನಸೀಅತ್’ ಎಂಬ ಹೆಸರಿನ ಕವನವೂ ಸಹ ಈ ಕಾಲದ ಇನ್ನೊಂದು ಮುಖ್ಯ ದೋಷದ ಕುರಿತು ಗಮನಸೆಳೆಯುತ್ತದೆ.
‘ಇನ್ನೊರ್ತಡೊ ಪುಣ್ಣು ಚೊರಿಯಂಡ ಪುತ್ತೇ ನಿಂಡೊ ಮುದು ನಿಕ್ ಕಾಂಡಿಲ್ಲೆ’ (ಇನ್ನೊಬ್ಬನ ಹುಣ್ಣು ತುರಿಸಬೇಡ ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ)
ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುವ ಒಂದು ರೋಗ, ಇನ್ನೊಬ್ಬನ ಬಗ್ಗೆ ಕೀಳಾಡುವುದು, ವ್ಯಕ್ತಿತ್ವದ ದೋಷಗಳನ್ನು ಬಹಿರಂಗವಾಗಿ ಚರ್ಚಿಸುವುದು, ಆಕ್ಷೇಪಿಸುವುದು, ಕುಹಕವಾಡುವುದು ಇವತ್ತಿನ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಸಾಮಾನ್ಯವಾಗಿದೆ. ಕವಿ ಇದನ್ನೇ ವಿಡಂಬನೆಯ ಮೂಲಕ ಈ ಸಮಸ್ಯೆ ಎಷ್ಟು ಗಂಭೀರವಾದುದು ಎಂಬುದನ್ನು ಕಾವ್ಯಾತ್ಮಕವಾಗಿ ಹೇಳುತ್ತಾರೆ. ‘ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ’ ಎಂಬಲ್ಲಿ ಮನುಷ್ಯನಿಗಿರಬೇಕಾದುದು ಪರದೂಷಣೆ ಅಲ್ಲ, ಸ್ವವಿಮರ್ಶೆ ಎಂಬ ಧ್ವನಿ ಇದೆ. ಕವಿಗೆ ಈ ಕಾಲಕ್ಕಿಂತ ಹಳೆಯ ಕಾಲವೇ ಹೆಚ್ಚು ಆಪ್ತವೆನಿಸುತ್ತದೆ. ಹಿಂದಿನ ಕಾಲದ ಅಜ್ಜಿ ಮತ್ತು ಈ ಕಾಲದ ಅಜ್ಜಿಯರ ನಡುವಿನ ಸಾಮಾನ್ಯ ವ್ಯತ್ಯಾಸವನ್ನು ಕವಿ ಗುರುತಿಸುತ್ತಾರೆ. ಹಿಂದಿನ ಕಾಲದ ಅಜ್ಜಿಯ ಬಾಯಿಯಲ್ಲಿ ಎಂದೆಂದೂ ಮುಗಿಯದ ಕಥೆಗಳಿದ್ದವು, ಈಗಿನ ಕಾಲದ ಅಜ್ಜಿಯ ಕೈಯಲ್ಲಿ ಮೊಬೈಲ್ ಇದೆ ಎಂಬುದು ಕವಿಯ ದೂರು. ಇದು ಕಟು ವಾಸ್ತವವೂ ಹೌದು. ಒಂದು ವೇಳೆ ಆಧುನಿಕ ಅಜ್ಜಿ ಕಥೆ ಹೇಳಿದರೂ ಆ ಕಥೆಯಲ್ಲಿ ಯಾವುದೇ ಸಿಹಿ ಅರ್ಥಾತ್ ರಸವಿರುವುದಿಲ್ಲ ಎಂದು ಕವಿ ಹೇಳುತ್ತಾರೆ. ಅದಕ್ಕೆ ಕವಿ ಹೇಳುವ ಮಾರ್ಮಿಕ ಕಾರಣ ಈಗಿನ ಕಾಲದ ಅಜ್ಜಿಗೆ ಶುಗರ್ ಇದೆ ಎಂಬುದು. ಬಹುಶಃ ಕವಿ ಇಲ್ಲಿ ಹೊಸ ಪೀಳಿಗೆ ದೈಹಿಕ ಶ್ರಮವಿಲ್ಲದೆ ರೋಗಗ್ರಸ್ಥರಾಗುತ್ತಿರುವುದನ್ನು ವಿಷಾದದಿಂದ ಹೇಳುತ್ತಿದ್ದಾರೆ.
‘ನೀನ್ ನಿಂಡೊ ಬೇಜಾರ್ ಚೆನ್ನದ್ ತಪ್ಪಲ್ಲ ಚಂಜಾಯಿ ಅವೊಂಡೊ ಕಾದ್ಲಿನ್ನೊ ಬ್ಲೂಟೂತ್ ನೋಕಾತದ್ ತಪ್ಪು’ (ನೀನು ನಿನ್ನ ಬೇಸರ ಹೇಳಿಕೊಂಡದ್ದು ತಪ್ಪಲ ಗೆಳೆಯಾ ಅವನ ಕಿವಿಯಲ್ಲಿರುವ ಬ್ಲೂಟೂತ್ ನೋಡದಿರುವುದು ತಪ್ಪು) ಪರಸ್ಪರ ಮಾತನಾಡದಿರುವುದು ಆಧುನಿಕ ಕಾಲದ ಇನ್ನೊಂದು ದೋಷ, ಒಬ್ಬನ ನೋವನ್ನು, ಕಷ್ಟವನ್ನು ಕೇಳುವಷ್ಟು ಪುರುಸೊತ್ತಾಗಲಿ, ವ್ಯವಧಾನವಾಗಲಿ ನಮ್ಮಲ್ಲಿ ಕಡಿಮೆಯಾಗುತ್ತಿದೆ. ಆಧುನಿಕ ಸೌಲಭ್ಯಗಳು ಮನುಷ್ಯರು ಪರಸ್ಪರ ನೋವು ನಲಿವುಗಳನ್ನು ಆಲಿಸದಷ್ಟು ದೂರ ಮಾಡಿಬಿಟ್ಟಿವೆ. ಕೇಳಿಸಿಕೊಳ್ಳುವುದು ಅಥವಾ ಆಲಿಸುವುದು ಬಹಳ ದೊಡ್ಡ ಮೌಲ್ಯವಾಗಿದೆ. ಕೇಳಿಸಿಕೊಳ್ಳುವವರು ಅಥವಾ ಶ್ರೋತೃಗಳು ಇಲ್ಲದಿದ್ದರೆ ನಸೀಅತ್ ನಡೆಯುವುದಿಲ್ಲ. ಆದರೆ, ಆಧುನಿಕ ಮನುಷ್ಯನ ಕಿವಿಯಲ್ಲಿ ಯಾವತ್ತು ನೋಡಿದರೂ ಬ್ಲೂಟೂತ್ ಇರುವುದರಿಂದ ಅವನು ನಸೀಅತ್ ಗೆ, ಸಹ ಮನುಷ್ಯರ ಕಷ್ಟಗಳನ್ನು ಆಲಿಸುವುದರಿಂದ ವಿಮುಖನಾಗುತ್ತಿದ್ದಾನೆ. ಈ ಬಗೆಯ ಮೌಲ್ಯಪತನದ ಬಗ್ಗೆ ಕವಿಗೆ ಬೇಸರವಿದೆ. ಆದ್ದರಿಂದ ಅವನು ದುಃಖಿತನಿಗೆ ಸಾಂತ್ವನ ಮಾಡುತ್ತಿದ್ದಾನೆ, ಆದರೆ ಆ ಸಾಂತ್ವನವೇ ವಿಡಂಬನೆಯ ರೂಪದಲ್ಲಿರುವ ಇಲ್ಲಿನ ಸಾಲುಗಳ ವಿಶೇಷತೆ. ಕೇಳಿಸಿಕೊಳ್ಳುವುದಿಲ್ಲ ಎಂದು ತಿಳಿದೂ ಕಷ್ಟ ಹೇಳಲು ಹೋದದ್ದು ನಿನ್ನ ತಪ್ಪು ಅಲ್ಲ, ಅವನೇಕೆ ಕೇಳಿಸಿಕೊಳ್ಳುತ್ತಿಲ್ಲ ಎಂಬುದನ್ನು ನೋಡದಿರುವುದು ನಿನ್ನ ತಪ್ಪು ಎಂದು ಕವಿ ಹೇಳುತ್ತಿರುವುದರ ಹಿಂದೆ ಆಧುನಿಕ ಸೌಲಭ್ಯಗಳ ದಾಸನಾಗುತ್ತಿರುವುದೇ ಮನುಷ್ಯನೊಳಗಿನ ಮೌಲ್ಯಪತನಕ್ಕೆ ಕಾರಣ ಎನ್ನುವ ಧ್ವನಿ ಕೇಳಿಸುತ್ತದೆ.
ಇಂತಹ ಹಲವಾರು ವಿಚಾರ ಪ್ರಚೋದಕ ಕವನಗಳು ಈ ಸಂಕಲನದಲ್ಲಿವೆ. ಒಮ್ಮೆ ಓದಿದರೆ ಮತ್ತೆ ಓದಬೇಕೆನಿಸುವಷ್ಟು ಸರಳ ಸುಂದರವಾಗಿವೆ. ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ಈ ಕವನ ಸಂಕಲನ ಒಂದು ಉತ್ತಮ ಕೊಡುಗೆ ಎನ್ನಬಹುದು.
– ಸ್ವಾಲಿಹ್ ತೋಡಾರ್
ಸ್ವಾಲಿಹ್ ತೋಡಾರ್ ಅವರು ಕನ್ನಡದ ಲೇಖಕ, ಅನುವಾದಕ ಮತ್ತು ಕವಿ. ‘ಇಶಾರ’ ಪಾಕ್ಷಿಕ ಮತ್ತು ವಾರ್ತಾಭಾರತಿ ಪತ್ರಿಕೆಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅರುವತ್ತಕ್ಕೂ ಮಿಕ್ಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾರ್ಟಿನ್ ಲಿಂಗ್ಸ್ ಅವರ ವಿಶ್ವಪ್ರಸಿದ್ಧ ಕೃತಿ Muhammad: His Life Based on the Earliest Sources, ಡಾ. ಹುಸೈನ್ ರಂಡತ್ತಾನಿ ಅವರ ‘ಅರಿಯಪ್ಪೆಡಾತ ಇಂಡಿಯಾ’ ಮೊದಲಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಅವರದು. ‘ರೂಮಿ ಕತೆಗಳು’ ಅವರ ಇತ್ತೀಚೆಗೆ ಪ್ರಕಟವಾದ ಕೃತಿ.
ಪ್ರ: ತಾವು ವಿಜ್ಞಾನ, ತತ್ವಜ್ಞಾನ, ಸಾಹಿತ್ಯ ಸೇರಿದಂತೆ ವೈವಿಧ್ಯತೆಯಿಂದ ಕೂಡಿದ ಹಾದಿಯಲ್ಲಿ ಸಾಗಿರುವ ವ್ಯಕ್ತಿಗಳು. ಭೌತವಿಜ್ಞಾನದಿಂದ ತೊಡಗಿ ಸಾಹಿತ್ಯದವರೆಗೆ ತಲುಪಿರುವ ತಮ್ಮ ಬೌದ್ಧಿಕ ಪಯಣದ ಹಾಗೂ ಈ ಪಲ್ಲಟಗಳಿಗೆ ಪ್ರೇರಕವಾದ ಅಂಶಗಳ ಬಗ್ಗೆ ಮಾತಾಡಿಕೊಂಡು ಆರಂಭಿಸೋಣ.
ಉ: ಕ್ಯಾಲಿಕಟ್ಗೆ ಬರುವುದೆಂದರೆ ನನಗ್ಯಾವತ್ತೂ ಇಷ್ಟ. ಇಲ್ಲಿರುವ ವಿವಿಧ ಗುಂಪುಗಳ ಜೆತಗೆ ಮಾತಾಡುವುದು ಹಾಗೂ ಚಿಂತನೆಗಳನ್ನು ಹಂಚಿಕೊಳ್ಳುವುದು ದೊಡ್ಡದೊಂದು ಅನುಭವ ನೀಡುತ್ತದೆ. ನನ್ನ ಪ್ರಕಾರ, ವಿಜ್ಞಾನದ ವಿಭಾಗಗಳು ಜಗತ್ತನ್ನು ಗ್ರಹಿಸಲು ನಾವೇ ನಿರ್ಮಿಸಿಕೊಂಡಿರುವ ಕೆಲವು ಚೌಕಟ್ಟುಗಳಾಗಿವೆ. ಭೌತವಿಜ್ಞಾನದಲ್ಲಿ ನಾನು ಆಸಕ್ತನಾಗಿದ್ದ ಸಂದರ್ಭದಲ್ಲಿ ಅದು ಜಗತ್ತನ್ನು ಗ್ರಹಿಸುವ ಒಂದು ಮಾರ್ಗ ಎಂದು ಭಾವಿಸಿದ್ದೆ. ಈಗಲೂ ಅಷ್ಟೇ.
ಭೌತವಿಜ್ಞಾನ ಹಾಗೂ ಗಣಿತ ಬಹಳ ನಿಕಟವಾಗಿವೆ. ಅವುಗಳ ಆಸ್ವಾದನೆ ನನಗೆ ಇಷ್ಟ. ಆದರೆ, ಭೌತವಿಜ್ಞಾನದ ವೃತ್ತದೊಳಗೆ ನಿಂತುಕೊಂಡು ಕಂಡುಹಿಡಿಯಲು ಸಾಧ್ಯವಾಗದ ಕೆಲವು ಮೂಲಭೂತ ಪ್ರಶ್ನೆಗಳಿವೆಯೆಂದು ನನಗೆ ಕ್ರಮೇಣ ಅನಿಸತೊಡಗಿತು. ಬಾಲ್ಯದಲ್ಲೆ ಸಾಹಿತ್ಯದಲ್ಲಿ ನನಗೆ ಒಲವಿತ್ತು. ಹಾಗಾಗಿ, ಸಾಹಿತ್ಯ ಹಾಗೂ ತತ್ವಜ್ಞಾನ ಜಗತ್ತಿನ ಬಗ್ಗೆ ಆಲೋಚಿಸಲು ಬೇರೊಂದು ಚಿಂತನಾ ಚೌಕಟ್ಟನ್ನು ಒದಗಿಸಿತು. ತತ್ವಜ್ಞಾನದ ಕಡೆಗಿನ ಪಯಣವನ್ನು ನನ್ನ ಚಿಂತನೆಯ ಸಹಜ ಹಂತವೆಂದೆ ನಾನು ಭಾವಿಸಿದ್ದೇನೆ. ಆದರೆ, ಯಾವ ಕ್ಷೇತ್ರಕ್ಕೆ ಹೋಗುವುದಿದ್ದರೂ ಅದನ್ನು ಸಾಧ್ಯವಾಗಿಸುವ ಕೆಲವು ಸಾಂಸ್ಥಿಕ ಅಂಶಗಳಿವೆ. ಭೌತವಿಜ್ಞಾನದಲ್ಲಿ ಪಿಎಚ್ಡಿ ಮಾಡುವಾಗಲೇ ತತ್ವಚಿಂತನೆ ಕಲಿಯುವ ಅವಕಾಶ ಸಿಕ್ಕಿತ್ತು. ಅದುವೆ ಈ ಪಲ್ಲಟಕ್ಕೆ ನಾಂದಿ ಹಾಡಿತು.
ಪ್ರ: ವಿಜ್ಞಾನದಿಂದ ತತ್ವಚಿಂತನೆಗೆ ಮತ್ತೆ ಅಲ್ಲಿಂದ ಸಾಹಿತ್ಯದ ಕಡೆಗಿನ ಈ ಪಲ್ಲಟ ಚಿಂತನಾ ಸ್ವಾತಂತ್ರ್ಯವನ್ನು ಹೆಚ್ಚಿಸಿದೆ ಎಂದು ತೋರಿದೆಯೇ? ವಿಜ್ಞಾನದ ಕೆಲವು ಮಿತಿಗಳಿಂದ ಹೊರಬರುವ ದಾರಿ ಎಂದು ಈ ಪಲ್ಲಟವನ್ನು ಅರ್ಥೈಸಬಹುದೇ? ತತ್ವಜ್ಞಾನ ಅಧಿಕ ಸಾಧ್ಯತೆಗಳನ್ನು ನೀಡುತ್ತಿದ್ದು ಸಾಹಿತ್ಯ ಇನ್ನಷ್ಟು “ಕಾಲ್ಪನಿಕʼ ಸ್ವಾತಂತ್ರ್ಯ ನೀಡುತ್ತದೆ ಎನ್ನುವ ನೆಲೆಗಟ್ಟಿನಲ್ಲಿ….
ಉ: ಸ್ವಾರಸ್ಯಕರವಾದ ಪ್ರಶ್ನೆಯಿದು. ಭೌತದಿಂದ ತತ್ವಕ್ಕೆ ಪಲ್ಲಟಗೊಂಡಾಗ ಸ್ವತಂತ್ರವಾದ ಸಮಸ್ಯೆಗಳೊಂದಿಗೆ ನಾನು ಅನುಸಂಧಾನ ನಡೆಸಿದೆ ಎಂದು ಹೇಳುವ ಹಾಗಿಲ್ಲ. ಪ್ರತಿ ವಿಭಾಗಕ್ಕೂ ಅದರದ್ದೇ ಆದ ಸ್ವಾತಂತ್ರ್ಯ ಹಾಗೂ ಮಿತಿಗಳಿವೆ. ಭೌತವಿಜ್ಞಾನದಲ್ಲಿ ಬಹಳ ಸ್ವಾರಸ್ಯಕರ ಪ್ರಶ್ನೆಗಳಿಗೆ ಸಾಧ್ಯತೆ ಇದೆ. ಅದಾಗ್ಯೂ, ಆ ನೆಲೆಗಟ್ಟಿನ ಸಂಶೋಧನೆಗಳು ನನ್ನ ಕುತೂಹಲವವನ್ನು ಪೂರ್ಣವಾಗಿ ತೃಪ್ತಿಪಡಿಸಲಿಲ್ಲ. ಮನುಷ್ಯರು, ಸಂಸ್ಕೃತಿಗಳು ಹಾಗೂ ಸಮಾಜಗಳ ಬಗೆಗಿನ ಅಧ್ಯಯನದಲ್ಲಿ ನನಗೆ ಹೆಚ್ಚಿನ ಒಲವಿತ್ತು. ನಾವು ಬದುಕುವ ಜಗತ್ತಿನ ಸಾಮಾಜಿಕ ಲೋಕ ಹಾಗೂ ವೈಯುಕ್ತಿಕ ಮನೋವಿಜ್ಞಾನವನ್ನು ಅರ್ಥೈಸುವ ಪ್ರಯತ್ನ ಅದಾಗಿತ್ತು. ಆ ಪ್ರಶ್ನೆಗಳು ನನ್ನ ವೈಜ್ಞಾನಿಕ ಅಧ್ಯಯನಗಳ ಮೇಲೂ ಪ್ರಭಾವ ಬೀರಿತು. ವೈಜ್ಞಾನಿಕ ಅಧ್ಯಯನ ಬಹಳ ಕ್ಲಿಷ್ಟಕರವಾದ ಪ್ರವೃತ್ತಿ ಎನ್ನುವುದನ್ನೂ ನಾವಿಲ್ಲಿ ತಿಳಿಯಬೇಕಿದೆ. ಅತಿ ಏಕಾಗ್ರತೆ ಹಾಗೂ ನಿರಂತರ ಪರಿಶ್ರಮ ಅದಕ್ಕೆ ಅವಶ್ಯಕ. ನುರಿತ ವಿಜ್ಞಾನಿಗಳು ಕೂಡಾ ಬಹುತೇಕ ವೇಳೆ ತಮ್ಮ ಆಸಕ್ತಿಕರ ಕ್ಷೇತ್ರಗಳನ್ನು ಕೈಬಿಡಬೇಕಾಗಿ ಬರುತ್ತದೆ. ಒಂದು ಹಂತದಲ್ಲಿ ನನಗೂ ಅದು ಅರ್ಥವಾಯಿತು. ಆ ತ್ಯಾಗಕ್ಕೆ ನಾನು ಸಿದ್ಧನಾದದ್ದು ಭೌತವಿಜ್ಞಾನಕ್ಕಲ್ಲ, ತತ್ವಜ್ಞಾನಕ್ಕಾಗಿ.
ಭೌತವಿಜ್ಞಾನದ ಮಾದರಿಗಳನ್ನು ನಿರ್ಮಿಸಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯವಾದ ಚೈತನ್ಯವನ್ನು ಖರ್ಚು ಮಾಡುವ ಆಸಕ್ತಿ ನನಗಿರಲಿಲ್ಲ. ಆದರೆ, ತತ್ವಜ್ಞಾನ ಕಲಿಯಲು, ಬರೆಯಲು ಹಾಗೂ ಆ ಕ್ಷೇತ್ರದಲ್ಲಿ ಕಠಿಣ ಪರಿಶ್ರಮಪಡಲು ನಾನು ತಯಾರಿದ್ದೆ. ಆ ಕ್ಷೇತ್ರ ನನ್ನನ್ನು ಬಹಳ ಆಕರ್ಷಿಸಿತ್ತು. ಒಂದು ಆಯಾಮದಲ್ಲಿ ವಿಜ್ಞಾನವನ್ನು ಗೌರವಿಸಲು ಹಾಗೂ ಮೌಲ್ಯಯುತವಾಗಿ ಕಾಣಲು ತತ್ವಜ್ಞಾನ ನನಗೆ ಸಹಾಯ ಮಾಡಿದೆ ಎನ್ನಬಹುದು. ಯಾವುದೇ ವಿಷಯದ ಮೌಲಿಕತೆಯನ್ನು ನಾವು ಗ್ರಹಿಸುವುದು ತತ್ವಜ್ಞಾನದ ಮೂಲಕವೇ. ವಿಜ್ಞಾನ ವಿಕಾಸವಾದದ್ದು ಹೇಗೆ, ಅದು ಯಾಕೆ ನಿಗದಿತ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನೆಲ್ಲಾ ಅರ್ಥ ಮಾಡಲು ಆರಂಭಿಸಿದೆ. ವಿಜ್ಞಾನದ ಇತಿಹಾಸ ಹಾಗೂ ತತ್ವಜ್ಞಾನ ಬಹಳ ಆಕರ್ಷಕ ಲೋಕವಾಗಿ ನನ್ನ ಮುಂದೆ ಬಂದು ನಿಂತಿತು.
ಆಮೇಲೆ ʼವಿಜ್ಞಾನದ ಸಮಾಜವಿಜ್ಞಾನʼವನ್ನು ಓದಲು ಆರಂಭಿಸಿದಾಗ ವಿಜ್ಞಾನ ಸೇರಿದಂತೆ ಮನುಷ್ಯನ ಯಾವುದೇ ಕೆಲಸಗಳು ಎಷ್ಟು ಸಂಕೀರ್ಣತೆ ಹಾಗೂ ಸಮೃದ್ಧತೆಯಿಂದ ಕೂಡಿದೆ ಎನ್ನುವ ವಿಚಾರ ಸ್ಪಷ್ಟವಾಯಿತು. ತತ್ವಜ್ಞಾನದಲ್ಲಿನ ಸಂಕೀರ್ಣತೆ ವಿಜ್ಞಾನದಲ್ಲಿರುವುದಕ್ಕಿಂತ ಭಿನ್ನವಾದದ್ದು. ಸಾಹಿತ್ಯರಚನೆ ಎನ್ನುವುದು ಸದಾ ನನ್ನಲ್ಲಿದ್ದ ಆಗ್ರಹ. ತತ್ವಜ್ಞಾನದಲ್ಲಿ ಬರಹದೊಂದಿಗೆ ನಾನು ತೋರುತ್ತಿದ್ದ ಮನೋಭಾವವೇ ಸಾಹಿತ್ಯದ ಕಡೆಗೆ ನನ್ನನ್ನು ಆಕರ್ಷಿಸಿದ್ದು ಎಂದು ನನಗೆ ತೋರುತ್ತದೆ. ಫಿಕ್ಷನ್ ಹಾಗೂ ತತ್ವಜ್ಞಾನವನ್ನು ಬರೆಯುವುದು ಸಮಾನವಾದ ಅನುಭವ ನೀಡುವ ಹಾಗೆ ನನಗೆ ಭಾಸವಾಗಿದೆ. ಹಾಗಾಗಿ ಸಾಹಿತ್ಯ ನನಗೆ ಸ್ವಲ್ಪ ಅಧಿಕ ಸ್ವಾತಂತ್ರ್ಯವನ್ನು ನೀಡಿದೆ ಎನ್ನಬಹುದು. ನಾವು ಮಾತನಾಡಲಿಚ್ಚಿಸಿರುವ ಪುಸ್ತಕದ ಹಿನ್ನೆಲೆಯಲ್ಲಿ ಮಾತಾಡುವುದಾದರೆ , ಒಂದು ದಾರ್ಶನಿಕ ಯಾ ಅಕಾಡೆಮಿಕ್ ರಚನೆಯಲ್ಲಿ ಸಾಧ್ಯವಾಗದ ರೀತಿಯಲ್ಲಿ ಧರ್ಮದ ಬಗ್ಗೆ ಬರೆಯುವ ಅವಕಾಶ ನನಗೆ ದೊರಕಿದೆ. ಜತೆಗೆ, ಭಾಷೆಯ ಸುಪ್ರಧಾನ ಕಾರ್ಯದ ಕಡೆಗೆ ಫಿಕ್ಷನ್ ನನ್ನನ್ನು ಮರಳಿಸಿದೆ. ಭಾಷೆ ಎನ್ನುವುದು ಕೇವಲ ಸಿದ್ಧಾಂತಗಳು, ಸತ್ಯಗಳು ಹಾಗೂ ಜ್ಞಾನಗಳನ್ನು ವಿನಿಮಯಿಸುವ ಮಾರ್ಗ ವಷ್ಟೇ ಅಲ್ಲ. ಮನುಷ್ಯನೊಳಗೆ ಆಳವಾದ ಅನುಭವಗಳನ್ನು ಸೃಜಿಸುವ ಶಕ್ತಿಯದು. ನನ್ನ ಅನುಭವದಲ್ಲಿ ಫಿಕ್ಷನ್ ಎನ್ನುವುದು ಕಥೆ ಹೇಳುವ ಪ್ರಕ್ರಿಯೆಯಾಚೆಗೆ ಭಾಷೆಯಿಂದ ಏನೇನೆಲ್ಲಾ ಸಾಧ್ಯ ಎನ್ನುವ ಪರೀಕ್ಷೆ ಕೂಡಾ ಹೌದು. ಭಾಷೆಯ ಮೂಲಕ ಮಾನವನನ್ನು ಹೇಗೆಲ್ಲಾ ಸ್ಪರ್ಶಿಸಬಹುದು, ಆತನನ್ನು ಹೇಗೆಲ್ಲಾ ಇರವಿನ ಅಂಚಿಗೆ ದೂಡಬಹುದೆನ್ನುವ ಅನ್ವೇಷಣೆ.
ನನ್ನ ಜೀವನದಲ್ಲಿ ವಿವಿಧ ಹಂತಗಳಿತ್ತು ಎನ್ನುವುದು ನಿಜವಾದರೂ ಸಾಹಿತ್ಯ ತತ್ವಜ್ಞಾನದ ನಂತರ ಬಂದದ್ದಲ್ಲ. ಸದಾ ಅದು ನನ್ನಲ್ಲಿತ್ತು. ನಾಟಕಗಳೂ ಸೇರಿದಂತೆ ಆಮೇಲೆ ಪ್ರಕಟಿಸಿದ ಕಥಾ ಸಾಹಿತ್ಯದ ಕೆಲವು ಭಾಗಗಳೆಲ್ಲ ಬಹಳ ಹಿಂದೆಯೇ ಬರೆದದ್ದು. ಅವುಗಳನ್ನು ಪ್ರಕಟಿಸಲು ಪ್ರಕಾಶಕರು ದೊರಕುತ್ತಿದ್ದಾರೆನ್ನೆವುದೇ ಸದ್ಯ ಇರುವ ಬದಲಾವಣೆ. ಅದು ಬಹುಷಃ ಬರಹಕ್ಕಿಂತಲೂ ಮುಖ್ಯವಾದದ್ದು.
ಪ್ರ: ವಿಜ್ಞಾನ ಸಾಮಾನ್ಯವಾಗಿ ಅಸ್ಪಷ್ಟತೆಗಳನ್ನು ಹೋಗಲಾಡಿಸಲು ಹಾಗೂ ವಿಷಯಗಳನ್ನು ಅಳೆದೂ ತೂಗಿ ನಿಖರವಾದ ವ್ಯಾಖ್ಯೆ ನೀಡುವಲ್ಲಿ ಹೆಚ್ಚು ಗಮನ ಕೇಂದ್ರೀಕರಿಸುತ್ತದೆ ಎಂದನಿಸಿದೆ. ಅನಿಶ್ಚಿತತೆ ಹಾಗೂ ಗೊಂದಲಗಳನು ನಿವಾರಿಸುವುದೆ ಅದರ ಗುರಿ. ಆದರೆ, ಸಾಹಿತ್ಯದ ಸ್ವಭಾವವೇ ಬೇರೆ. ತಮ್ಮ ಕಾದಂಬರಿ ಕೂಡಾ ವ್ಯಾಖ್ಯಾನಗಳಿಗೆ ಅವಕಾಶ ನೀಡುತ್ತಾ open ended ಆಗಿ ಕೊನೆಗೊಂಡದ್ದು ಕಾಣಬಹುದು. ಮತ್ತೇನಾಯಿತು- ಮಕ್ಕಳು ಮರಳಿ ಬಂದರೇ, ಅವರ ಅವಸ್ಥೆ ಹೇಗಿದೆ- ಎಂಬ ಪ್ರಶ್ನೆಗಳನ್ನು ತಾವು ಓದುಗರ ಚಿಂತನೆಯ ಲೋಕಕ್ಕೆ ಬಿಟ್ಟಿರುವುದರಿಂದ ಅಸ್ಪಷ್ಟವಾದ ಲೋಕವೊಂದು ಅಲ್ಲಿ ತೆರೆ ಕಂಡಿದೆ. ಸಾಹಿತ್ಯ ಇಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಿದೆ ಎಂದು ಹೇಳಬಹುದೇ? ವೈಜ್ಞಾನಿಕ ಸಂಶೋಧನೆಗಳ ಜತೆಜತೆಗೆ ಸಾಹಿತ್ಯದಲ್ಲೂ ಕೈಯಾಡಿಸುತ್ತಿದ್ದೀರೆಂದು ಹೇಳಿದ್ದೀರಿ. ಈಯೆರಡು ವಿಭಿನ್ನ ಆಯಾಮಗಳನ್ನು- ವಿಜ್ಞಾನದ ನಿಖರತೆ, ಮಾಪಕತೆ ಹಾಗೂ ಸ್ಪಷ್ಟತೆ ಒಂದೆಡೆಯಾದರೆ ಸಾಹಿತ್ಯದ ಅಸ್ಪಷ್ಟತೆ ಹಾಗೂ ಅರ್ಥಸಾಧ್ಯತೆ ಮತ್ತೊಂದೆಡೆ- ಒಟ್ಟಾಗಿ ಬೆಸೆದ ಬಗೆ ಹೇಗೆ?
ಉ: ವಿಜ್ಞಾನದ ಬಗೆಗಿನ ಮುಖ್ಯವಾದ ಪ್ರಶ್ನೆಯ ಕಡೆಗೆ ತಾವು ಬೊಟ್ಟು ಮಾಡಿದ್ದೀರಿ. ವಿಜ್ಞಾನ ವಿಶಿಷ್ಟವಾದ ಒಂದು ವಿವರಣಾಮಾದರಿಯಲ್ಲಿ ಗಮನ ಕೇಂದ್ರೀಕರಿಸುತ್ತದೆ ಎನ್ನುವುದ ಸರಿಯೇ. ಅದರಲ್ಲೂ ಬಹಳ ಮುಖ್ಯವಾಗಿ ಅಳೆಯುವಿಕೆಯನ್ನು (quantification) ಬಳಸಿಕೊಂಡು ವಿದ್ಯಮಾನಗಳನ್ನು ಅಲ್ಲಿ ವಿವರಿಸಲಾಗುತ್ತದೆ. ಆ ನಿಟ್ಟಿನಲ್ಲಿ ಅವಲೋಕಿಸಿದರೆ ವಿಜ್ಞಾನ ಸ್ಲಲ್ಪ ʼವಸ್ತುನಿಷ್ಠʼವಾದ ಪ್ರಕ್ರಿಯೆ ಎನ್ನಬಹುದು. ಒಂದು ವಿದ್ಯಮಾನವನ್ನು ಅಳೆಯುವ ಮಾಪನವನ್ನು ಬಳಸಲು ಸಾಧ್ಯವಾದಲ್ಲಿ ಆ ಚರ್ಚೆಗೆ ವಿಶೇಷ ಸ್ವಭಾವ ಸಿಗುತ್ತದೆ. ಆದರೆ, ಅದರಿಂದ ಅಸ್ಪಷ್ಟತೆ, ಆರ್ಥಶಂಕೆ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ.
ವಾಸ್ತವದಲ್ಲಿ, ನಾನು ಬರೆದ ಮೊದಲ ತಾತ್ವಿಕ ಪುಸ್ತಕವಾಗಿರುವ “Translating the World Science and Language” ಎಂಬ ಕೃತಿ ಕೂಡಾ ವಿಜ್ಞಾನ ಹಾಗೂ ಗಣಿತದಲ್ಲಿ ಅರ್ಥ ಹೇಗೆ ರೂಪುಗೊಳ್ಳುತ್ತದೆ ಎನ್ನುವುದನ್ನೇ ಚರ್ಚೆಗೆ ಕೈಗೆತ್ತಿಕೊಂಡಿದೆ. ಸಾಹಿತ್ಯದೊಂದಿಗೆ ಮಾತ್ರ ಥಳಕು ಹಾಕಲಾಗುವ ರೂಪಕಾತ್ಮಕ ಭಾವಗಳು ಗಣಿತ ಹಾಗೂ ವಿಜ್ಞಾನದ ಬರಹಗಳ ಅನಿವಾರ್ಯ ಅಂಶವೂ ಹೌದೆಂದು ನಾನು ಅದರಲ್ಲಿ ವಾದಿಸಿದ್ದೇನೆ. ವಿಜ್ಞಾನ ಭಾಷೆಯನ್ನು ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದರ ಬಗೆಗಿನ ಅತ್ಯಂತ ಪ್ರಸಕ್ತವಾದ ಪ್ರಶ್ನೆಯಿದು. ಅಸ್ಪಷ್ಟತೆ (ambiguity) ಎನ್ನುವ ಸಮಸ್ಯೆ ಸಾಹಿತ್ಯ ಹಾಗೂ ತತ್ವಚಿಂತನೆಗೆ ಮಾತ್ರ ಸೀಮಿತವಾದದ್ದಲ್ಲ. ಮೂಲಭೂತವಾಗಿ ಅದು ಭಾಷೆಗೆ ಸಂಬಂಧಪಟ್ಟದ್ದು. ಇಂಗ್ಲಿಷ್, ಮಲಯಾಳಂ ಸಹಿತ ಇರುವ ಭಾಷೆಗಳಲ್ಲೆಲ್ಲಾ ಈ ಅರ್ಥಶಂಕೆ ಇದೆ. ಸರಳವಾಗಿ ಹೇಳುವುದಾದರೆ, ಪದಗಳಿಗೆ ಏಕಕಾಲದಲ್ಲಿ ಬೇರೆ ಬೇರೆ ಅರ್ಥಗಳು ಇರಬಹುದು. ಇದು ಭಾಷೆಯ ಬಗೆಗಿನ ತಾತ್ವಿಕವಾದ ಮೌಲಿಕ ಪ್ರಶ್ನೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಒಂದು ಪದಕ್ಕೆ ಸ್ವಯಂ ಸ್ಥಿರವಾದ ಅರ್ಥವಿದೆಯೇ? ಅದಕ್ಕೆ ಅರ್ಥ ಸಿಗುವುದು ಒಂದು ವಾಕ್ಯದಲ್ಲಿ ಯಾ ಒಂದು ಸಂದರ್ಭದಲ್ಲಿ ಮಾತ್ರವೇ? ಇದೊಂದು ಬಹಳ ಮೌಲಿಕ ಪ್ರಶ್ನೆ.
ಪ್ರ: ಅಥವಾ ಭಾಷೆಯನ್ನೇ ಸಾರಸಗಟಾಗಿ ಒಂದು “ಸುಳ್ಳು” ಎನ್ನಬಹುದೇ?
ಉ: ಮೂಲಭೂತವಾದ ಅಂತಹದ್ದೊಂದು ಪ್ರಶ್ನೆಯನ್ನು ನನ್ನ ಕಾದಂಬರಿಗಳಲ್ಲಿ ವಿವಿಧ ರೀತಿಯಲ್ಲಿ ಶೋಧಿಸಿದ್ದೇನೆ. ಆಂಬಿಗ್ಯುಟಿ ಎನ್ನುವ ಪರಿಕಲ್ಪನೆಯ ಸಾರದಲ್ಲಿರುವುದೂ ಇದುವೆ. ಗಣಿತವು ವಿಜ್ಞಾನದ ಭಾಷೆ ಎನ್ನುವ ವಿಜ್ಞಾನಿಗಳ ಮಾತಿನ ತಾತ್ಪರ್ಯ ಅಳತೆಗಳು ಹಾಗೂ ಲೆಕ್ಕಗಳು ಅಸ್ಪಷ್ಟತೆಯನ್ನು ಕಡಿಮೆಗೊಳಿಸುತ್ತದೆ ಎನ್ನುವುದೇ. ಆದರೆ ಇದು ಪೂರ್ಣವಾಗಿ ಸರಿ ಎನ್ನಲಾಗದು. ವಾಸ್ತವಲ್ಲಿ ಒಂದೇ ಚಿಹ್ನೆಗೆ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಅರ್ಥ ಸ್ಫುರಿಸಲು ಸಾಧ್ಯವಾಗುವಲ್ಲಿಯೇ ವೈಜ್ಞಾನಿಕ ಸಿದ್ದಾಂತ ನಿರ್ಮಾಣದ ಶಕ್ತಿ ಅಡಗಿರುವುದು. ವಿಜ್ಞಾನ ಅಷ್ಟೂ ಶಕ್ತಿಯುತ ಹಾಗೂ ಉತ್ಪಾದನಾಶೀಲ ಆಗಿರುವುದು ಇದೆ ಕಾರಣದಿಂದ. ಇದನ್ನು ವಿವಿಧ ರೀತಿಯಲ್ಲಿ ಗ್ರಹಿಸಲು ಸಾಧ್ಯವಿದೆ. ಒಂದು ಪದ ಇಲ್ಲವೇ ಚಿಹ್ನೆಗೆ ಒಂದೇ ಒಂದು ಸ್ಥಿರವಾದ ಅರ್ಥವಿದೆ ಎನ್ನುವುದು ಒಂದನೆಯದ್ದು. ಇಲ್ಲ ಬೇರೆ ಬೇರೆ ಅರ್ಥ ಇದೆ ಎನ್ನವುದು ಎರಡನೆಯದ್ದು. ಮೂರನೆಯದ್ದು, ಚಿಹ್ನೆಯನ್ನು ಶೂನ್ಯವಾಗಿಟ್ಟುಕೊಂಡು ತಮಗೆ ಬೇಕಾದ ಅರ್ಥವನ್ನು ಆರೋಪಿಸುವ ಗಣಿತದ ಪ್ರತಿಮಾತ್ಮಕ ವಿದ್ಯೆ. ವೈಜ್ಞಾನಿಕ ಸಿದ್ಧಾಂತ ನಿರ್ಮಾಣದ ಕಾರ್ಯವಿಧಾನ ಮೂರನೆಯ ತರದ್ದು. ವಿಜ್ಞಾನ ಅಷ್ಟೂ ಸೃಜನಶೀಲ ಹಾಗೂ ಶಕ್ತಿಯುತ ಆಗುವುದು ಇದೇ ಕಾರಣದಿಂದ. ಹಾಗಾಗಿ, ವಿಜ್ಞಾನದಲ್ಲಿ ಕೆಲಸ ಮಾಡುವ ವೇಳೆಯಲ್ಲೂ ಬರಹ ನನಗೆ ಸವಾಲಾಗಿ ಪರಿಣಮಿಸಲಿಲ್ಲ. ವಿಜ್ಞಾನ ಹಾಗೂ ಇತರ ಕ್ಷೇತ್ರಗಳು ಭಿನ್ನ ಎನ್ನುವ ಪ್ರಜ್ಞೆ ನನಗೆ ಮೊದಲೇ ಇತ್ತು. ವಿಜ್ಞಾನ ಚರ್ಚಿಸುವುದು ಕೆಲವು ಪ್ರತ್ಯೇಕ ವಸ್ತುಗಳನ್ನು ಮಾತ್ರ; ಇಲೆಕ್ಟ್ರೋನ್ಗಳ ಕಾರ್ಯನಿರ್ವಹಣೆ, ಪರಮಾಣು ರಚನೆ, ಗುರುತ್ವಾಕರ್ಷಣೆ ಇತ್ಯಾದಿಗಳು. ವಿಜ್ಞಾನದ ವಿಷಯ ವ್ಯಾಪ್ತಿ ಇರುವುದು ಅಷ್ಟೇ. ಆ ವಿಷಯಗಳಲ್ಲಿ ಒಂದು ಪ್ರತ್ಯೇಕ ಮಾದರಿಯನ್ನು ಮಾತ್ರ ಬಳಸಿಕೊಂಡು ಇಲ್ಲವೇ ಬೇರೆ ಮಾದರಿಯನ್ನು ಬಳಸಿಕೊಂಡು ಕೆಲಸ ಮಾಡುವ ಸ್ವಾತಂತ್ರ್ಯ ಇದೆ. “ಗುರುತ್ವಾಕರ್ಷಣೆ ಇನ್ನೊಂದಾಗಿದ್ದಲ್ಲಿ ಏನಾಗುತ್ತಿತ್ತು? ಎಂಬ ಆಲೋಚನೆಯನ್ನು ಆಧಾರವಾಗಿಟ್ಟುಕೊಂಡು ಒಂದು ಮಾದರಿಯನ್ನು ನಿರ್ಮಿಸಿ ಫಲಿತಾಂಶಗಳನ್ನು ಶೋಧಿಸಬಹುದು. ಅದಕ್ಕೆ ಬೇರೆ ಖರ್ಚುಗಳೇನೂ ಬರುವುದಿಲ್ಲ. ಆದರೆ, ನಿಮ್ಮ ಬಗ್ಗೆ, ಮನುಷ್ಯ ಸಮುದಾಯಗಳ ಬಗ್ಗೆ ಮಾತನಾಡಲು ಬಯಸಿದರೆ ಮಾತ್ರ ನನಗಲ್ಲಿ ಸ್ವಾತಂತ್ರ್ಯವಿಲ್ಲ. ಅಲ್ಲಿ ಅರ್ಥಗಳು ಬಹಳ ನಿಯಂತ್ರಿತವಾದುದು. ಒಂದು ಕಲ್ಲಿನ ಬಗ್ಗೆ ನನಗೆ ಏನು ಬೇಕಾದರೂ ಹೇಳಬಹುದು. ಗುರುತ್ವಾಕರ್ಷಣವು ೧/r೨ ಆಗಿದೆ ಎMದು ನ್ಯೂಟನ್ ಹೇಳಿದ್ದಕ್ಕೆ ವಿರುದ್ಧವಾಗಿ ಅದು ೧/r೩ ಎಂದೋ ೧/r೨.೦೦೩ ಎಂದೋ ನಾನು ವಾದಿಸುವ ಅವಕಾಶ ಅಲ್ಲಿದೆ. ಆ ವಾದದ ಫಲಿತಾಂಶಗಳನ್ನು ಪರಿಶೋಧಿಸಲು ಒಂದು ಮಾದರಿಯನ್ನೂ ನಿರ್ಮಿಸಬಹುದು. ಅದೇ ವೇಳೆ, ಮನುಷ್ಯರ ಕುರಿತು, ಕಾದಂಬರಿಯೊಂದರ ಪಾತ್ರದ ಕುರಿತು ಅಥವಾ ಸಮಾಜವಿಜ್ಞಾನದಲ್ಲಿ ಒಂದು ಸಮಾಜದ ಕುರಿತು ಬರೆಯುವಾಗ ನನಗೆ ಬಹಳ ಹೆಚ್ಚು ನಿಯಂತ್ರಣಕ್ಕೆ ವಿಧೇಯನಾಗಬೇಕಾಗುತ್ತದೆ.
ಪ್ರ: ಬಹಳ ಗಮನಾರ್ಹವಾದ ವೀಕ್ಷಣೆ. ಸಾಮಾನ್ಯ ಗ್ರಹಿಕೆ ಇದಕ್ಕೆ ವ್ಯತಿರಿಕ್ತವಾಗಿದೆ. ಅದರ ಪ್ರಕಾರ ನಿಯಂತ್ರಣ ಹೆಚ್ಚಿರುವುದು ವಿಜ್ಞಾನದಲ್ಲಿ. ಸಮಾಜವಿಜ್ಞಾನ ಹಾಗೂ ಸಾಹಿತ್ಯದಲ್ಲಿ ಹೆಚ್ಚು ಸ್ವಾತಂತ್ರ್ಯ ಇದೆ ಎನ್ನುವುದು ಅವರ ಅಂಬೋಣ.
ಉ: ನನ್ನ ಅಭಿಪ್ರಾಯದಲ್ಲಿ ವಿಜ್ಞಾನ ಹೆಚ್ಚು ಸೃಜಶೀಲತೆ ಹಾಗೂ ಸ್ವಾತಂತ್ರ್ಯವನ್ನು ನೀಡುತ್ತದೆ. ಇದನ್ನು ಸ್ಪಷ್ಟಪಡಿಸಲು ನನ್ನ ವಿದ್ಯಾರ್ಥಿಗಳೊಂದಿಗೆ ನಾನು ಒಂದು ಸರಳವಾದ ಪ್ರಶ್ನೆಯನ್ನು ಕೇಳುತ್ತಿರುತ್ತೇನೆ. “ವಿಜ್ಞಾನ” ಎಂಬ ಪದದ ಮೂಲಾರ್ಥ ಅರಿವು ಎಂದಾದರೂ ಇಂದಿನ ವಿಜ್ಞಾನ ಮುಖ್ಯವಾಗಿ ಸಂಶೋಧನೆಗೆ ಸಂಬಂಧಪಟ್ಟಿದೆ. ಹೊಸ ಅರಿವಿನ ಉತ್ಪಾದನೆಯನ್ನೇ ವಿಜ್ಞಾನ ಎಂದು ಸೂಚಿಸಲಾಗುತ್ತಿದೆ. ಅದು ಕೇವಲ ಜ್ಞಾನ ವಿನಿಮಯವಲ್ಲ. ನೀವು ವಿಜ್ಞಾನಿಯಾಗಿದ್ದಲ್ಲಿ ಪ್ರಕಟಿಸುತ್ತಾ ಇರಬೇಕು. ಹೊಸ ಜ್ಞಾನದ ಉತ್ಪಾದನೆಯನ್ನೇ ಪ್ರಕಟಣೆ ಎನ್ನುವುದು. ಇಂದು ಹೊಸ ಅರಿವಿನ ಉತ್ಪಾದನೆ ಎನ್ನುವುದು ಒಂದು ಕೈಗಾರಿಕೆಯಾಗಿ ಮಾರ್ಪಟ್ಟಿದೆ, ಬೃಹತ್ ಕೈಗಾರಿಕೆ. ಪ್ರತಿವರ್ಷವೂ ಹೊರಬರುವ ವೈಜ್ಞಾನಿಕ ಪ್ರಬಂಧಗಳ ಸಂಖ್ಯೆ ಲಕ್ಷ ದಾಟಿದೆ. ಪ್ರತಿ ಪ್ರಬಂಧವೂ ಹೊಸ ಅರಿವಿನ ಒಂದಂಶವನ್ನುಸೇರಿಸುತ್ತಾ ಬರುತ್ತದೆ. ಆದರೆ, ನಾವು ನಿಜವಾಗಿಯೂ ಅಷ್ಟು ಅರಿವನ್ನು ಸೃಜಿಸುತ್ತಿದ್ದೇವೆಯೇ? ಜ್ಞಾನದ ಸೃಷ್ಟಿ ಎನ್ನುವ ಕಡ್ಡಾಯವಾದ ಪ್ರಕ್ರಿಯೆಯ ಮೂಲಕ ನಾವು ಹಾದು ಹೋಗುತ್ತಿದ್ದೇವೆಯೇ? ಇದು ನನ್ನ ಪ್ರಶ್ನೆ. ಯಾಕೆಂದರೆ, ಪ್ರಪಂಚದ ಕುರಿತು ನಿಮಗೆ ಏನು ಬೇಕಾದರೂ ಊಹಿಸಬಹುದು. ಅದನ್ನು ದಾಖಲಿಸುವ ಭಾಷೆ ಹಾಗೂ ಲೆಕ್ಕಾಚಾರದ ನಿಯಮಗಳು ಮಾತ್ರ ನಿಮ್ಮ ಮುಂದಿರುವ ಏಕಮಾತ್ರ ಪರಿಮಿತಿ. ಅದರಾಚೆಗೆ, ಅತ್ಯಂತ ಮೂಲಭೂತವಾದ ವಿಜ್ಞಾನದ ಬಾಗಿಲು ತೆರೆದೇ ಇದೆ. ಐನ್ಸ್ಟೈನ್ ತನ್ನ ಕಾಲದ ಪ್ರಯೋಗಗಳ ಫಲಿತಾಂಶಗಳನ್ನು ಮತ್ತೊಮ್ಮೆ ಓದಿಕೊಂಡು ದೇಶ-ಕಾಲಗಳ ಅರ್ಥವನ್ನೇ ನವೀಕರಿಸಿದರು. ಇದು ಅತ್ಯಂತ ಧೈರ್ಯಶಾಲಿ ಹಾಗೂ ದಾರ್ಶನಿಕವಾದ ಸಾಹಿತ್ಯಿಕ ವಿದ್ಯಮಾನವೂ ಹೌದು. ವಿಜ್ಞಾನದ ಔಪಚಾರಿಕ ಭಾಷೆ ಹಾಗೂ ವೈಜ್ಞಾನಿಕ ಚೌಕಟ್ಟುಗಳ ಮೂಲಕ ಅದು ನಿಯಂತ್ರಣಕ್ಕೆ ಒಳಗಾದದ್ದು ಆಮೇಲೆ.
ಸಮಾಜವಿಜ್ಞಾನ ಹಾಗೂ ಅದರ ಸಿದ್ಧಾಂತ ನಿರ್ಮಾಣದಲ್ಲಿ ಇಷ್ಟು ಸ್ವಾತಂತ್ರ್ಯ ಲಭ್ಯವಲ್ಲ ಎನ್ನವುದು ನನ್ನ ಅಭಿಪ್ರಾಯ. ಅನೇಕ ಕಾರಣಗಳಿಂದಾಗಿ ಅಲ್ಲಿ ಬಹಳ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾಗುತ್ತದೆ. ಒಂದು ವಸ್ತುವಿನ ವಿಚಾರದಲ್ಲಿ ನಮಗೇನನ್ನೂ ಮಾಡಬಹುದು. ಒಂದು ಕಲ್ಲನ್ನು ತೆಗೆಯಬಹುದು, ಅದನ್ನು ಒಡೆಯಬಹುದು,ಹೊತ್ತಿಸಬಹುದು, ಎರಕಹೊಯ್ಯಬಹುದು. ಆದರೆ, ಮಾನವ ಸಮಾಜ ಹಾಗೂ ಜೀವಜಾಲಗಳ ನಡುವೆ ಅಂತಹ ವಿಧಾನವನ್ನು ಅನ್ವಯಿಸುವುದು ಅಸಾಧ್ಯ. ಸಮಾಜ ವಿಜ್ಞಾನದಲ್ಲಿನ ನಿಯಂತ್ರಣಗಳನ್ನು ನಮಗೆ ಈ ಮೂಲಕ ತಿಳಿಯಬಹುದು. ಹಾಗಾಗಿ, ನಿಯಂತ್ರಿತವಾದವುಗಳೊಳಗೆ ನಿಂತುಕೊಂಡೆ ಅಲ್ಲಿ ಅರ್ಥವಂತಿಕೆ ಇರುವ ಅರಿವನ್ನು ಉತ್ಪಾದಿಸಬೇಕಾಗುತ್ತದೆ. ಅದೇವೇಳೆ, ಸಮಾಜವಿಜ್ಞಾನವೂ ಗಣಿತವನ್ನು ಭಾಷೆಯಾಗಿ ಬಳಸುತ್ತಾ ಇರುವುದರಿಂದ ಅದಕ್ಕೂ ಬಹಳ ಸೃಷ್ಟಿಶೀಲ ಆಯಾಮ ದೊರಕುತ್ತದೆ. ಇಲ್ಲಿ ಗಣಿತವೂ ಕಾವ್ಯದ ಹಾಗೆ ಇರುವುದನ್ನು ನಾವು ಗಮನಿಸಬೇಕಿದೆ. ಭಾರತದಲ್ಲಿ ಇಪ್ಪತ್ತು ಮೂವತ್ತು ವರ್ಷದ ಹಿಂದಿನವರೆಗೂ ಗಣಿತವನ್ನು ಬಿಎ ವಿಷಯವಾಗಿ ಪರಿಗಣಿಸಲಾಗುತ್ತಿತ್ತು. ಅಂದರೆ ಅದು ಮಾನವಿಕ ವಿಭಾಗದಡಿಯಲ್ಲಿ ಬರುತ್ತಿತ್ತು. ಅದರಲ್ಲಿ ಕಾವ್ಯ ಹಾಗೂ ಸೃಜನಭಾವದ ಆತ್ಮವಿದೆ. ಈ ಜಗತ್ತಿನೊಂದಿಗೆ ಹೊಂದಾಣಿಕೆ ಆಗುತ್ತಿದೆಯಾ ಎನ್ನುವ ಆತಂಕವೇ ಇಲ್ಲದೆ ಗಣಿತದಲ್ಲಿ ಊಹೆಗಳನ್ನು ಕೈಗೊಳ್ಳಬಹುದು. ಪಾಶ್ಚಾತ್ಯ ಚಿಂತನೆಯ ಪರಂಪರೆಯಲ್ಲಿ ಗಣಿತ ದೇವವಿದ್ಯೆಯೊಂದಿಗೆ (theology) ನಿಕಟವಿದ್ದುಕೊಂಡೆ ಬೆಳೆದು ಬಂದಿದೆ. ಇಸ್ಲಾಮಿಕ್ ಜ್ಞಾನ ಪರಂಪರೆಯಲ್ಲೂ ನಮಗದನ್ನು ಕಾಣಬಹುದು. ಆ ಚಿಂತನಾ ಪರಂಪರೆ ನ್ಯೂಟನ್ ಕಾಲದ ವರೆಗೂ ಸಾಗಿ ಬಂದಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಹಾಗೆ ನೋಡಿದರೆ ಅದು ಕೂಡಾ ಒಂದು ರೀತಿಯ ಸೃಜನಶೀಲತೆ ಹಾಗೂ ಸ್ವಾತಂತ್ರ್ಯ ಎನ್ನುವುದು ತಿಳಿದು ಬರುತ್ತದೆ. ಸಮಾಜ ವಿಜ್ಞಾನದಲ್ಲಿ ಬರವಣಿಗೆಗೆ ಇಳಿಯುವಾಗ ಆ ಸ್ವಾತಂತ್ರ್ಯ ಮೊಟಕುಗೊಳ್ಳುತ್ತದೆ.
ತಾತ್ವಿಕ ವ್ಯವಹಾರಗಳು ಕೂಡಾ ಬಹಳ ನಿಯಂತ್ರಿತವಾಗಿವೆ. ಇಂಗ್ಲಿಷ್, ಲ್ಯಾಟಿನ್, ಸಂಸ್ಕೃತ ಸಹಿತ ಯಾವುದೇ ಕ್ಲಾಸಿಕಲ್ ಪಾರಂಪರಿಕ ಭಾಷೆಯಿರಲಿ ಅವುಗಳದ್ದೇ ಆದ ಸ್ವಂತ ದಾರ್ಶನಿಕ ಪರಂಪರೆ ಇದೆ ಎನ್ನುವುದು ಗಮನಾರ್ಹ. ಪ್ರತಿ ಭಾಷೆಯೂ ತನ್ನದ್ದೇ ಆದ ದಾರ್ಶನಿಕತೆಯನ್ನು ಸೃಷ್ಟಿಸಿದೆ. ಆದರೆ, ಆ ದಾರ್ಶನಿಕ ಚಿಂತನೆಗಳು ಆಯಾ ಭಾಷೆಗಳ ಸಂರಚನೆ ಹಾಗ ಅದರಲ್ಲಿ ರೂಪುಗೊಳ್ಳುವ ಸಿದ್ದಾಂತಗಳಗೆ ವಿಧೇಯವಾಗಿವೆ. ಯಾವ ಭಾಷೆಯಲ್ಲಿ ತತ್ವ ಚಿಂತನೆ ಮಾಡಿದರೂ ಆ ಭಾಷೆ ಏರ್ಪಡಿಸುವ ಬೌದ್ಧಿಕ ನಿಯಂತ್ರಣಗಳನ್ನು ಹಾಗೂ ಮಿತಿಗಳನ್ನು ಮೀರಲು ಸಾಧ್ಯವಿಲ್ಲ. ಹಾಗಾಗಿ, ನನ್ನ ವೈಯುಕ್ತಿಕ ಅನುಭವದ ಪ್ರಕಾರ ವಿಜ್ಞಾನ ಅತ್ಯಂತ ಹೆಚ್ಚು ಸಜನಶೀಲ ಉದ್ಯಮ ಎಂದನಿಸಿದೆ.
(ಮುಂದುವರಿಯುವುದು)
ಕನ್ನಡಕ್ಕೆ: ನಝೀರ್ ಅಬ್ಬಾಸ್
Sundar Sarukkai is one of India’s leading contemporary philosophers and public intellectuals, known for his work in the philosophy of science and interdisciplinary studies. Trained in physics and philosophy, he earned his PhD from Purdue University, USA, and has held key academic positions including at the National Institute of Advanced Studies, Bengaluru, and as Founder-Director of the Manipal Centre for Philosophy and Humanities. He is the author of several influential books, including Translating the World, Philosophy of Symmetry, and What is Science?, and continues to actively promote philosophy through research, writing, and public engagement.
“ಶ್ರೀಲಂಕಾದ ಮುಸ್ಲಿಂ ಹೆಸರು ‘ಸರಂದೀಬ್’ (Sarandib) ಎಂಬುದು ಅನೇಕರಿಗೆ ತಿಳಿದಿಲ್ಲ – ಈ ಹೆಸರಿನಿಂದಲೇ ಇಂಗ್ಲಿಷ್ನ ‘ಸೆರೆಂಡಿಪಿಟಿ’ (Serendipity) ಎಂಬ ಪದವು ಹುಟ್ಟಿಕೊಂಡಿದೆ. ‘ಸೆರೆಂಡಿಪಿಟಿ’ ಎಂದರೆ ಆಕಸ್ಮಿಕವಾಗಿ ಯಾವುದಾದರೂ ಆಸಕ್ತಿದಾಯಕ ಅಥವಾ ಬೆಲೆಬಾಳುವ ವಿಷಯವನ್ನು ಕಂಡುಹಿಡಿಯುವ ಅಥವಾ ಸೃಷ್ಟಿಸುವ ಅನುಭವ ಎಂದರ್ಥ. ಈ ಪದವು ಹಿಂದೂ ಮಹಾಸಾಗರದಲ್ಲಿರುವ ಕಣ್ಣೀರಿನ ಹನಿಯ ಆಕಾರದ ದ್ವೀಪಕ್ಕೆ ಅರಬ್ಬಿ ಮತ್ತು ಪರ್ಷಿಯನ್ನರು ಇಟ್ಟಿದ್ದ ಹಳೆಯ ಹೆಸರಾದ ‘ಸರಂದೀಬ್’ನಿಂದ ಬಂದಿದೆ, ಇದನ್ನು ಇಂದು ಶ್ರೀಲಂಕಾ ಎಂದು ಕರೆಯಲಾಗುತ್ತದೆ. ತನ್ನ ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಬೆರಗುಗೊಳಿಸುವ ನೈಸರ್ಗಿಕ ಸೌಂದರ್ಯದಿಂದಾಗಿ ಈ ದ್ವೀಪ ರಾಷ್ಟ್ರವು ಒಂದರ್ಥದಲ್ಲಿ ‘ಸೆರೆಂಡಿಪಿಟಿ’ಯ ನಾಡಾಗಿದೆ.”
ಶತಮಾನಗಳಿಂದಲೂ, ಹಿಂದೂ ಮಹಾಸಾಗರದ ಉದ್ದಗಲಕ್ಕೂ ಸಂಚರಿಸುತ್ತಿದ್ದ ಸಮುದ್ರಯಾನಿಗಳಿಗೆ ವಿಶ್ರಾಂತಿ ಪಡೆಯಲು, ಅಗತ್ಯ ವಸ್ತುಗಳನ್ನು ಮರುಪೂರಣ ಮಾಡಿಕೊಳ್ಳಲು, ವ್ಯಾಪಾರ ಮಾಡಲು ಮತ್ತು ಅನ್ವೇಷಣೆ ನಡೆಸಲು ಇದು ಒಂದು ಪ್ರಮುಖ ತಾಣವಾಗಿದೆ. ಮತ್ತು ಖಂಡಿತವಾಗಿಯೂ, ಸ್ವತಃ ಶ್ರೀಲಂಕನ್ನರು ತಮ್ಮ ದ್ವೀಪದ ಮನೆಯ ಗಡಿಗಳನ್ನು ಮೀರಿ ಬೆಳೆಯುವಂತಹ ಒಂದು ಪರಂಪರೆಯನ್ನು ಉಳಿಸಿ ಹೋಗಲು ಸಹ ಇದು ಸಹಕಾರಿಯಾಗಿದೆ. ಶ್ರೀಲಂಕಾದಲ್ಲಿ ಇಸ್ಲಾಂ ಧರ್ಮದ ಇತಿಹಾಸವು ಈ ಕಥೆಯ ಒಂದು ಪ್ರಮುಖ ಅಧ್ಯಾಯವಾಗಿದೆ. ಇದು ಪ್ರವಾದಿ ಅವರ ನಿಧನದ ಕೆಲವೇ ದಶಕಗಳ ನಂತರ ಪ್ರಾರಂಭವಾಯಿತು. ಮತ್ತು ಶ್ರೀಲಂಕಾದ ಮುಸ್ಲಿಮರು ಇಂದಿಗೂ ಆ ರಾಷ್ಟ್ರದ ಸಾಂಸ್ಕೃತಿಕ ಚೌಕಟ್ಟಿನ ಅವಿಭಾಜ್ಯ ಅಂಗವಾಗಿದ್ದಾರೆ.
ದಾಲ್ಚಿನ್ನಿ (Cinnamon) – ಶ್ರೀಲಂಕಾದ ಗುಪ್ತ ನಿಧಿ
ಶ್ರೀಲಂಕ ಅಲ್ಲಿನ ದಾಲ್ಚಿನ್ನಿಗೆ (Cinnamon) ಅತ್ಯಂತ ಪ್ರಸಿದ್ಧ. ಇಂದು ಪ್ರಪಂಚದಾದ್ಯಂತ ಸಾಮಾನ್ಯವಾಗಿ ಬಳಸಲಾಗುವ ದಾಲ್ಚಿನ್ನಿಯು ‘ಕ್ಯಾಸಿಯಾ’ (Cassia) ಎಂಬ ವಿಧದ್ದಾಗಿದ್ದು, ಇದು ಮುಖ್ಯವಾಗಿ ಇಂಡೋನೇಷ್ಯಾದಲ್ಲಿ ಉತ್ಪಾದನೆಯಾಗುತ್ತದೆ. ಇದು ಶ್ರೀಲಂಕಾದ ವಿಶಿಷ್ಟ ತಳಿಯಾದ ‘ಸಿಲೋನ್ ದಾಲ್ಚಿನ್ನಿ’ ಅಥವಾ ‘ಅಸಲಿ’ ದಾಲ್ಚಿನ್ನಿಗಿಂತ ಹೆಚ್ಚು ಪರಿಮಳ ಮತ್ತು ರುಚಿಯನ್ನು ಹೊಂದಿರುತ್ತದೆ. ಶ್ರೀಲಂಕಾದ ಮುಸ್ಲಿಂ ವ್ಯಾಪಾರಿಗಳು ಈ ದ್ವೀಪದ ದಾಲ್ಚಿನ್ನಿಯನ್ನು ಏಷ್ಯಾ ಮತ್ತು ಆಫ್ರಿಕಾದ ವಿವಿಧ ಭಾಗಗಳಿಗೆ ಹರಡಲು ಸಹಾಯ ಮಾಡಿದರು, ಅಷ್ಟೇ ಅಲ್ಲದೆ ಇದನ್ನು ಯುರೋಪ್ಗೂ ಪರಿಚಯಿಸಿದರು.
ವ್ಯಾಪಾರದಲ್ಲಿ ಸ್ಪರ್ಧೆ ಏರ್ಪಡುವುದನ್ನು ತಪ್ಪಿಸಲು ವ್ಯಾಪಾರಿಗಳು ದಾಲ್ಚಿನ್ನಿಯ ಮೂಲವನ್ನು ಬಹಳ ರಹಸ್ಯವಾಗಿ ಇಟ್ಟಿದ್ದರು. ಆದರೂ ಕೆಲವು ಮಾಹಿತಿಗಳು ಸೋರಿಕೆಯಾದವು. ಕ್ರಿ.ಶ. ೧೦ನೇ ಶತಮಾನದ ಪರ್ಷಿಯನ್ ಸಮುದ್ರ ನಾಯಕ ಬುಝುರ್ಗ್ ಬಿನ್ ಶಹರ್ಯಾರ್ ದಾಲ್ಚಿನ್ನಿಯ ಮೂಲ ಶ್ರೀಲಂಕಾ ಎಂದು ಗುರುತಿಸಿದ ಮೊದಲಿಗರಲ್ಲಿ ಒಬ್ಬನಾಗಿದ್ದನು.ಇನ್ನು. 1344 ರಲ್ಲಿ ಶ್ರೀಲಂಕಾದ ಮೂಲಕ ಪ್ರಯಾಣಿಸಿದ ಮೊರಾಕ್ಕೊದ ವಿಶ್ವಸಂಚಾರಿ ಇಬ್ನ್ ಬತೂತ, ‘ದೇಶದ ಸಂಪೂರ್ಣ ಕರಾವಳಿಯು ಪರ್ವತದ ತೊರೆಗಳಿಂದ ಕೊಚ್ಚಿಬಂದ ದಾಲ್ಚಿನ್ನಿ ತುಂಡುಗಳಿಂದ ಆವೃತವಾಗಿದೆ’ ಎಂದು ಬರೆದಿದ್ದರು.
ಕಾಲಾನಂತರದಲ್ಲಿ, ದಾಲ್ಚಿನ್ನಿಯು ಯುರೋಪಿಯನ್ ಅನ್ವೇಷಕರು ಹೊಸ ಮಾರ್ಗಗಳನ್ನು ಹುಡುಕಲು ಹಾತೊರೆಯುತ್ತಿದ್ದ ಅತ್ಯಂತ ಬೇಡಿಕೆಯ ಸಾಂಬಾರ ಪದಾರ್ಥಗಳಲ್ಲಿ ಒಂದಾಯಿತು; ಕ್ರಿಸ್ಟೋಫರ್ ಕೊಲಂಬಸ್ ತಾನು ಅಮೆರಿಕಾದಲ್ಲಿ ದಾಲ್ಚಿನ್ನಿಯನ್ನು ಕಂಡುಹಿಡಿದಿರುವುದಾಗಿ ಪ್ರತಿಪಾದಿಸಿದನು (ವಾಸ್ತವವಾಗಿ, ಅವನು ಅದನ್ನು ಪತ್ತೆಹಚ್ಚಿರಲಿಲ್ಲ), ಮತ್ತು ಗೊಂಜಾಲೊ ಪಿಜಾರೊ ಎಂಬ ಸ್ಪೇನ್ ದೇಶದವನು ‘ದಾಲ್ಚಿನ್ನಿ ನಾಡನ್ನು’ ಹುಡುಕುವ ಪ್ರಯತ್ನದಲ್ಲಿ ಅಮೆಜಾನ್ ಪ್ರದೇಶವನ್ನು ಅನ್ವೇಷಿಸಿದನು. ವಸಾಹತುಶಾಹಿ ಕಾಲದಲ್ಲಿ, ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರು ಶ್ರೀಲಂಕಾದ ದಾಲ್ಚಿನ್ನಿ ವ್ಯಾಪಾರದ ಮೇಲೆ ಹತೋಟಿ ಸಾಧಿಸಲು ಪರಸ್ಪರ ಹೋರಾಡಿದರು.
ಇಂದು ಕೂಡ ಶ್ರೀಲಂಕಾದ ದಾಲ್ಚಿನ್ನಿಯನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ ಮತ್ತು ಮೆಚ್ಚಲಾಗುತ್ತದೆ; ವಿಶ್ವದ ಶೇಕಡಾ 85 ರಷ್ಟು ‘ಅಸಲಿ’ ದಾಲ್ಚಿನ್ನಿಯನ್ನು ಈ ರಾಷ್ಟ್ರವೇ ಪೂರೈಸುತ್ತದೆ ಮತ್ತು ಇದರ ಉತ್ಪಾದನೆಯು 3,50,000 ಜನರಿಗೆ ಉದ್ಯೋಗವನ್ನು ಒದಗಿಸಿದೆ.
ಮುಸ್ಲಿಂ ವ್ಯಾಪಾರಿಗಳ ಜಾಗತಿಕ ಸಂಪರ್ಕ
ಶ್ರೀಲಂಕಾದ ಇಸ್ಲಾಮಿಕ್ ಪರಂಪರೆಯ ಬಗ್ಗೆ ಬೆಳಕು ಚೆಲ್ಲುವ ಒಂದು ಪ್ರಮುಖ ವಸ್ತುವೆಂದರೆ ಅದು ‘ಹಡಗಿನ ಗಂಟೆ’ (Ship’s bell). ಕ್ರಿ.ಶ. 1830ರ ದಶಕದಲ್ಲಿ, ಕಾರ್ನಿಷ್ ಮಿಷನರಿ ವಿಲಿಯಂ ಕೊಲೆನ್ಸೊ ಅವರು ನ್ಯೂಜಿಲೆಂಡ್ನಲ್ಲಿ ಮಾವೊರಿ (Maori) ಮಹಿಳೆಯರ ಗುಂಪಿನೊಂದಿಗಿದ್ದರು (ಮಾವೊರಿಗಳು ಅಂದರೆ ನ್ಯೂಜಿಲೆಂಡ್ನ ಮೂಲನಿವಾಸಿಗಳು). ಈ ಮಹಿಳೆಯರು ಆಲೂಗಡ್ಡೆಗಳನ್ನು ಕುದಿಸಲು ಬಳಸುತ್ತಿದ್ದ ‘ಪಾತ್ರೆ’ಯ ಮೇಲೆ ಒಂದು ಶಾಸನವಿರುವುದನ್ನು ಅವರು ಗಮನಿಸಿದರು. ನಂತರ ಆ ಶಾಸನವು ತಮಿಳು ಭಾಷೆಯಲ್ಲಿದೆ ಎಂಬುದು ಅವರಿಗೆ ದಿಟವಾಯಿತು. ಮತ್ತು ಅದರಲ್ಲಿ Muhiud Din Buk’s ship’s bell ಎಂದು ತಮಿಳಿನಲ್ಲಿ ಬರೆಯಲಾಗಿದೆ ಎಂಬುದನ್ನು ಕಂಡುಕೊಂಡರು. ಇದು ಒಬ್ಬ ಮುಸ್ಲಿಂ ವ್ಯಕ್ತಿಯ ಹೆಸರು ಎಂಬುದು ಸ್ಪಷ್ಟ. ಇನ್ನೂ ಆಸಕ್ತಿದಾಯಕ ವಿಷಯವೆಂದರೆ, ಅದರಲ್ಲಿ ಬಳಸಲಾದ ತಮಿಳು ಭಾಷೆಯ ಶೈಲಿಯು ಆ ಗಂಟೆಯು ಸುಮಾರು 500 ವರ್ಷಗಳಷ್ಟು ಹಳೆಯದಿರಬಹುದು ಎಂಬುದರ ಮೇಲೆ ಬೆಳಕು ಚೆಲ್ಲಿತು.
ಈ ಹಡಗಿನ ಗಂಟೆಯು ಶ್ರೀಲಂಕಾ ಮತ್ತು ತಮಿಳುನಾಡಿನ ತಮಿಳು ಮುಸ್ಲಿಂ ನಾವಿಕರು ಎಷ್ಟು ದೂರದವರೆಗೆ ತಲುಪಿರಬಹುದು ಎಂಬುದಕ್ಕೆ ಒಂದು ಸೂಚನೆಯಾಗಿದೆ. ಶತಮಾನಗಳ ಕಾಲ ಅವರು ಹಿಂದೂ ಮಹಾಸಾಗರದ ಉದ್ದಗಲಕ್ಕೂ ಸರಕುಗಳು, ಜನರು ಹಾಗೂ ಇಸ್ಲಾಂ ಧರ್ಮದ ಸಂದೇಶವನ್ನೂ ಒಳಗೊಂಡ ವಿಚಾರಗಳನ್ನು ಸಾಗಿಸುತ್ತಿದ್ದರು.
ಆಯೆಶಾ ರವೂಫ್: ಲಂಕನ್ ಮುಸ್ಲಿಂ ಹುಡುಗಿಯರ ಪರ ಶಿಕ್ಷಣದ ಪ್ರತಿಪಾದಕಿ
ಆಯೆಶಾ ರವೂಫ್ ಅವರು ಶ್ರೀಲಂಕಾದಲ್ಲಿ ಜನಿಸಿದವರಲ್ಲ, ಆದರೆ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಧ್ವನಿಯೆತ್ತುವ ಮೂಲಕ ಮತ್ತು ರಾಜಕೀಯದಲ್ಲಿ ಮುಸ್ಲಿಂ ಮಹಿಳೆಯರನ್ನು ಪ್ರತಿನಿಧಿಸುವ ಮೂಲಕ ಅವರು ತಮ್ಮ ಪರಂಪರೆಯನ್ನು ಅಲ್ಲಿಯೇ ಸ್ಥಾಪಿಸಿದರು. ಮೂಲತಃ ನೆರೆಯ ಭಾರತದವರಾದ ಆಯೆಶಾ, 1943 ರಲ್ಲಿ ಶ್ರೀಲಂಕಾದ ಉದ್ಯಮಿಯೊಬ್ಬರೊಂದಿಗೆ ವಿವಾಹವಾದ ನಂತರ ಆ ದ್ವೀಪಕ್ಕೆ ಬಂದಿಳಿದರು. ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಅವರ ಸಂಸ್ಕೃತಿಗೆ ಪೂರಕವಾದ ಯಾವುದೇ ಪ್ರೌಢಶಾಲೆ ಇಲ್ಲದಿರುವುದನ್ನು ಗಮನಿಸಿದ ಅವರು, 1946 ರಲ್ಲಿ ಕೊಲಂಬೊದಲ್ಲಿ ‘ಮುಸ್ಲಿಂ ಲೇಡೀಸ್ ಕಾಲೇಜ್’ ಅನ್ನು ಪ್ರಾರಂಭಿಸಿದರು. ಅವರು ಮನೆಮನೆಗೆ ತೆರಳಿ, ಶ್ರೀಲಂಕಾದ ಮುಸ್ಲಿಂ ಕುಟುಂಬಗಳಿಗೆ ತಮ್ಮ ಯೋಜನೆಯನ್ನು ವಿವರಿಸಿದರು ಮತ್ತು ಅವರ ಪುತ್ರಿಯರನ್ನು ಶಾಲೆಗೆ ಕಳುಹಿಸುವಂತೆ ಪ್ರೋತ್ಸಾಹಿಸಿದರು. ಮೊದಲ ವರ್ಷದಲ್ಲೇ ಅವರು 200 ವಿದ್ಯಾರ್ಥಿನಿಯರನ್ನು ಸೇರಿಸುವಲ್ಲಿ ಯಶಸ್ವಿಯಾದರು. ಉಳಿದದ್ದು ಇತಿಹಾಸ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅನೇಕ ಯುವತಿಯರು ಶ್ರೀಲಂಕಾದ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದರು.
1949 ರಲ್ಲಿ, ಸಂಸದೀಯ ರಾಜಕೀಯಕ್ಕೆ ಸೇರುವ ಭರವಸೆಯ ಮೂಡಿಸಿ ವಿಫಲರಾದ ನಂತರ, ಆಯೆಶಾ ರವೂಫ್ ಅವರು ಕೊಲಂಬೊ ಮಹಾನಗರ ಪಾಲಿಕೆಗೆ ಆಯ್ಕೆಯಾದರು. ಮುಂದಿನ ಹನ್ನೆರಡು ವರ್ಷಗಳ ಕಾಲ ಅವರು ಅಧಿಕಾರದಲ್ಲಿದ್ದರು. ಈ ಅವಧಿಯಲ್ಲಿ ಅವರು ಶ್ರೀಲಂಕಾದ ಅತಿದೊಡ್ಡ ನಗರವಾದ ಕೊಲಂಬೊದ ಉಪಮೇಯರ್ ಆಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು, ರಾಣಿ ಎಲಿಜಬೆತ್ II ಅವರು ನಗರಕ್ಕೆ ಭೇಟಿ ನೀಡಿದಾಗ ಅವರನ್ನು ಭೇಟಿಯಾದರು ಮತ್ತು ನಗರದ ವಸತಿ ಹಾಗೂ ನೈರ್ಮಲ್ಯ ಸವಾಲುಗಳಿಗೆ ಪರಿಹಾರಕ್ಕಾಗಿ ಧ್ವನಿಯೆತ್ತಿದರು. 1961 ರಲ್ಲಿ, ಅವರು ಮತ್ತೆ ‘ಮುಸ್ಲಿಂ ಲೇಡೀಸ್ ಕಾಲೇಜಿನ’ ಪ್ರಾಂಶುಪಾಲರಾಗಿ ಜವಾಬ್ದಾರಿ ವಹಿಸಿಕೊಂಡರು ಮತ್ತು 1970 ರಲ್ಲಿ ನಿವೃತ್ತರಾಗುವವರೆಗೂ ಅಲ್ಲಿಯೇ ಸೇವೆ ಸಲ್ಲಿಸಿದರು. ಆಯೆಶಾ ಅವರು ಜನವರಿ 1992 ರಲ್ಲಿ ತಮ್ಮ 78 ನೇ ವಯಸ್ಸಿನಲ್ಲಿ ಕೊಲಂಬೊದಲ್ಲಿ ನಿಧನರಾದರು. ಸಮುದಾಯದ ಸದಸ್ಯರು ಅವರನ್ನು “ನಿರ್ಭೀತ ಸಾರ್ವಜನಿಕ ಭಾಷಣಗಾರ್ತಿ” ಎಂದು ಮತ್ತು “ಅತ್ಯಂತ ಸೌಮ್ಯ ಸ್ವಭಾವದವರು, ದಯಾಪರರು ಹಾಗೂ ಮಹಿಳೆಯರ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ಸಮುದಾಯದ ಜೀವನವನ್ನು ಉತ್ತಮಗೊಳಿಸುವಲ್ಲಿ ಆಸಕ್ತಿ ಹೊಂದಿದ್ದವರು” ಎಂದು ಬಣ್ಣಿಸಿದ್ದಾರೆ.
ತುವಾನ್ ಬುರ್ಹಾನುದ್ದೀನ್ ಜಯಾ (ಟಿ.ಬಿ. ಜಯಾ): ಶ್ರೀಲಂಕಾದ ರಾಷ್ಟ್ರೀಯ ಹೀರೋ
ಟಿ. ಬಿ. ಜಯಾ ಅವರನ್ನು ಶ್ರೀಲಂಕಾದ ರಾಷ್ಟ್ರೀಯ ಹೀರೋಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಇವರು ಕ್ರಿ.ಶ. 1890ರಲ್ಲಿ ಶ್ರೀಲಂಕಾದ ಮಲಯ್ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದರು. ಬಾಲ್ಯದಿಂದಲೇ ಶಿಕ್ಷಣದಲ್ಲಿ ಅತ್ಯಂತ ಪ್ರತಿಭಾವಂತರಾಗಿದ್ದ ಜಯಾ ಅವರು ಶಿಕ್ಷಕರಾದರು. ಲಂಡನ್ ವಿಶ್ವವಿದ್ಯಾಲಯದಿಂದ ‘ಕ್ಲಾಸಿಕ್ಸ್’ ವಿಷಯದಲ್ಲಿ ಪದವಿ ಪೂರೈಸಿದರು ಮತ್ತು ವಕೀಲರಾಗಬೇಕೆಂದು ಬಯಸಿದ್ದರು. ಆದರೆ, ಅವರಿಗೆ ಝಾಹಿರಾ ಕಾಲೇಜಿನ ಪ್ರಾಂಶುಪಾಲರ ಹುದ್ದೆಯು ಲಭಿಸಿದಾಗ ಅದನ್ನು ಸ್ವೀಕರಿಸಿದರು. ಮುಂದಿನ 27 ವರ್ಷಗಳ ಕಾಲ ಅವರು ಆ ಶಾಲೆಯನ್ನು ಅಭಿವೃದ್ಧಿಪಡಿಸಿದರು. ಶ್ರೀಲಂಕಾದ ವಿವಿಧ ಸಮುದಾಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ದೇಶದ ಅತ್ಯಂತ ಪ್ರಮುಖ ಶಾಲೆಗಳಲ್ಲಿ ಒಂದಾಗಿ ಅದು ಹೊರಹೊಮ್ಮಿತು. ಅವರು ಯಾವಾಗಲೂ ತಮ್ಮ ವಿದ್ಯಾರ್ಥಿಗಳ ಪರವಾಗಿರುತ್ತಿದ್ದರು. ಏಪ್ರಿಲ್ 5, 1942 ರಂದು (ಎರಡನೇ ಮಹಾಯುದ್ಧದ ಸಮಯದಲ್ಲಿ) ಜಪಾನಿನ ಪಡೆಗಳು ಕೊಲಂಬೊ ಮೇಲೆ ಬಾಂಬ್ ದಾಳಿ ಮಾಡಲು ಪ್ರಾರಂಭಿಸಿದಾಗಲೂ, ಜಯಾ ಅವರು ಅಂದು ನಿಗದಿಯಾಗಿದ್ದ ತಮ್ಮ ವಿದ್ಯಾರ್ಥಿಯ ವಿವಾಹಕ್ಕೆ ಹಾಜರಾಗಿ ನವದಂಪತಿಗಳಲ್ಲಿ ಉತ್ಸಾಹ ತುಂಬಿದ್ದರು.
ಜಯಾ ಅವರು ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರು ಮತ್ತು ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಕ್ರಿ.ಶ. 1944ರಲ್ಲಿ ಅವರು ನೀಡಿದ ಪ್ರಸಿದ್ಧ ಭಾಷಣದಲ್ಲಿ, ಶ್ರೀಲಂಕಾದ ಮುಸ್ಲಿಮರು ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸುತ್ತಾರೆ ಎಂದು ಘೋಷಿಸಿದರು. ಧಾರ್ಮಿಕ ಅಥವಾ ಜನಾಂಗೀಯ ಭೇದಗಳನ್ನು ಬಳಸಿಕೊಂಡು ‘ಒಡೆದು ಆಳುವ’ ಬ್ರಿಟಿಷ್ ಸಾಮ್ರಾಜ್ಯದ ಕುತಂತ್ರ ಇಲ್ಲಿ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದು ಕ್ರಿ.ಶ. 1948ರ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಟ್ಟಿತು ಮತ್ತು ಅವರು ಸ್ವತಂತ್ರ ಶ್ರೀಲಂಕಾದ ಮೊದಲ ಮುಸ್ಲಿಂ ಸಂಪುಟ ಸಚಿವರಾದರು. ನಂತರ ಅವರು ಪಾಕಿಸ್ತಾನಕ್ಕೆ ಶ್ರೀಲಂಕಾದ ಮೊದಲ ಹೈಕಮಿಷನರ್ ಆಗಿ ನೇಮಕಗೊಂಡು ಒಂಬತ್ತು ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. ಪಾಕಿಸ್ತಾನದಲ್ಲಿ ಅನೇಕರ ಗೌರವ ಮತ್ತು ಪ್ರೀತಿಯನ್ನು ಗಳಿಸಿದ ಅವರು, ಉಭಯ ದೇಶಗಳ ನಡುವೆ ಬಲವಾದ ಮತ್ತು ಶಾಶ್ವತವಾದ ಸಂಬಂಧವನ್ನು ಸ್ಥಾಪಿಸಿದರು. ಕ್ರಿ.ಶ. 1960ರಲ್ಲಿ ಜಯಾ ಅವರು ಮದೀನಾದಲ್ಲಿದ್ದಾಗ ಶ್ರೀಲಂಕಾದ ಯಾತ್ರಿಕರಿಗಾಗಿ ಸೇವೆಗಳನ್ನು ಸ್ಥಾಪಿಸಲು ಶ್ರಮಿಸುತ್ತಿದ್ದರು; ಅಲ್ಲಿಯೇ ಅವರು ನಿಧನರಾದರು ಮತ್ತು ಪ್ರವಾದಿ ಅವರ ಮಸೀದಿಯ ಪಕ್ಕದಲ್ಲಿರುವ ಪ್ರಸಿದ್ಧ ಜನ್ನತ್ ಅಲ್-ಬಖಿಯಲ್ಲಿ ಅವರನ್ನು ದಫನ ಮಾಡಲಾಯಿತು.
ಭಾರತದ ಇತಿಹಾಸ ತಜ್ಞರು ಇಸ್ಲಾಮ್ ಧರ್ಮವು ದೇಶಕ್ಕೆ ಏನನ್ನು ತಂದಿದೆ ಎಂಬುದನ್ನು ಪರಿಶೀಲಿಸುವಾಗ, ಅವರು ಹೆಚ್ಚಾಗಿ ಭಾಷೆ, ಕಾವ್ಯ, ಸಂಗೀತ, ಚಿತ್ರಕಲೆ, ಪಾಕಶಾಲೆಯ ಕಲೆಗಳು ಅಥವಾ ಆಧ್ಯಾತ್ಮಿಕತೆಯಂತಹ ಸಾಂಸ್ಕೃತಿಕ ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾರೆಯೇ ಹೊರತು ನಗರ ವಿನ್ಯಾಸ ಅಥವಾ ನಗರೀಕರಣವನ್ನು ಪರಿಗಣಿಸುವುದು ತೀರಾ ಅಪರೂಪ.
‘ಮಾರ್ಕೈಸ್’ ಸಹೋದರರು ಎಂದು ಖ್ಯಾತರಾದ ವಿಲಿಯಂ ಮತ್ತು ಜಾರ್ಜ್ಸ್ ಎಂಬ ಇತಿಹಾಸಕಾರರು ‘ಇಸ್ಲಾಮಿಕ್ ನಗರ’ ಎಂದು ಕರೆದ ನಗರ ಸ್ವರೂಪವು ಭಾರತದಾದ್ಯಂತ ಹೇಗೆ ಹರಡಿತು ಎಂಬುದನ್ನು ಇತಿಹಾಸಕಾರರು ಮತ್ತು ಭೂಗೋಳಶಾಸ್ತ್ರಜ್ಞರು ಪರಿಶೀಲಿಸುತ್ತಾರೆ. ಅವರು ಇದನ್ನು ಮುಖ್ಯವಾಗಿ ಒಂದು ಪರಕೀಯ ಸಂಸ್ಥೆಯಾಗಿ (exogenous institution) ಅಥವಾ ಹೊರಗಿನಿಂದ ಬಂದು ಸಮಾಜದಿಂದ ಪ್ರತ್ಯೇಕವಾಗಿ ನೆಲೆಸಿದ ಗಣ್ಯ ವರ್ಗಕ್ಕೆ ಆಶ್ರಯ ನೀಡುವ ಒಂದು ಪ್ರತ್ಯೇಕ ಪ್ರದೇಶವಾಗಿ (enclave) ಮಾತ್ರ ನೋಡುತ್ತಾರೆ. ಪ್ರತ್ಯುಷ್ ಶಂಕರ್ ಅವರ ಇತ್ತೀಚಿನ ಪುಸ್ತಕವು ಈ ಆಯಾಮವನ್ನು ಒಳಗೊಂಡಿದೆಯಾದರೂ, ಅದಕ್ಕಿಂತಲೂ ಆಳವಾದ ವಿಚಾರಗಳನ್ನು ಮಂಡಿಸುತ್ತದೆ.
42 ಭಾರತೀಯ ನಗರಗಳ ವಿಶ್ಲೇಷಣೆಯನ್ನು ಆಧರಿಸಿದ ಕೃತಿಯಾದ ‘ಹಿಸ್ಟರಿ ಆಫ್ ಅರ್ಬನ್ ಫಾರ್ಮ್ ಆಫ್ ಇಂಡಿಯಾ’ (History of Urban Form of India) ದಲ್ಲಿ, ಲೇಖಕರು ಪ್ರಾಚೀನ ನಗರಗಳು, ಮಧ್ಯಕಾಲೀನ ನಗರಗಳು ಮತ್ತು ಆಧುನಿಕ ರಾಜ್ಯಗಳಿಂದ ನಿರ್ಮಿತವಾದ ನಗರಗಳು ಎಂದು ನಗರಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸುತ್ತಾರೆ.
ಸಿಂಧೂ ನಾಗರಿಕತೆಯ ನಗರಗಳನ್ನು ಹೊರತುಪಡಿಸಿದರೆ, ಪ್ರಾಚೀನ ನಗರಗಳನ್ನು ಮುಖ್ಯವಾಗಿ ದಕ್ಷಿಣ ಭಾರತದ ‘ದೇವಸ್ಥಾನ ನಗರಿ’ಗಳಲ್ಲಿ (Temple cities) ಕಾಣಬಹುದು. ಮಧ್ಯಕಾಲೀನ ನಗರಗಳು ಹಲವಾರು ವಿಭಿನ್ನ ಮಾದರಿಗಳನ್ನು ಅನುಸರಿಸುತ್ತವೆಯಾದರೂ, ಪ್ರತ್ಯುಷ್ ಶಂಕರ್ ಅವರು ಮುಖ್ಯವಾಗಿ ಮೂರು ವಿಧಗಳನ್ನು ಗುರುತಿಸುತ್ತಾರೆ: ಗುಜರಾತ್ನ ವಿಶಿಷ್ಟವಾದ ವಾಣಿಜ್ಯ ನಗರಗಳು, ಹಿಮಾಲಯದ ಭೂಪ್ರದೇಶದ ಸ್ವರೂಪಕ್ಕೆ ಅನುಗುಣವಾಗಿ ನಿರ್ಮಿತವಾದ ನಗರಗಳು, ಡೆಕ್ಕನ್ನಲ್ಲಿ ಮುಸ್ಲಿಮರು ನಿರ್ಮಿಸಿದ ನಗರಗಳು.
ಭಾರತೀಯ ನಾಗರಿಕತೆಗೆ ಇಸ್ಲಾಮ್ ನೀಡಿದ ಕೊಡುಗೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಇವುಗಳನ್ನು ಪರಸ್ಪರ ಹೋಲಿಸುವುದು ಬಹಳ ಉಪಯುಕ್ತವಾಗಿದೆ. ಪ್ರತ್ಯುಷ್ ಶಂಕರ್ ಅವರು ಇದನ್ನು ನೇರವಾಗಿ ಪ್ರಯತ್ನಿಸದಿದ್ದರೂ, ನಗರಗಳ ರಚನಾತ್ಮಕ ಸ್ವರೂಪದ (Morphological approach) ಅಧ್ಯಯನದ ಮೂಲಕ ನಮಗೆ ಪರಸ್ಪರ ಹೋಲಿಕೆ ಮಾಡಲು ಸಹಾಯ ಮಾಡುತ್ತಾರೆ. ಅವರಿಗೆ ನಗರದ ಆಡಳಿತ ವಿಧಾನ ಅಥವಾ ರಾಜ್ಯದೊಂದಿಗಿನ ಅದರ ಸಂಬಂಧಕ್ಕಿಂತ ಹೆಚ್ಚಾಗಿ, ನಗರದ ಸ್ವರೂಪ ಅಥವಾ ಆಕಾರದ ಬಗ್ಗೆ ಮಾತ್ರ ಆಸಕ್ತಿ ಇದೆ. ಎಲ್ಲಾ ಭಾರತೀಯ ನಗರಗಳು ತಮ್ಮ ವಿನ್ಯಾಸ ಅಥವಾ ರಚನೆಯ ಒಂದು ಗಮನಾರ್ಹ ಭಾಗವನ್ನು ಜಾತಿ ವ್ಯವಸ್ಥೆಯಿಂದಲೇ ಪರಂಪರಾಗತವಾಗಿ ಪಡೆದುಕೊಂಡಿವೆ. ಪ್ರತ್ಯುಷ್ ಶಂಕರ್ ಅವರು ಪೀಠಿಕೆಯಲ್ಲಿ ಹೀಗೆ ಬೆಟ್ಟು ಮಾಡುತ್ತಾರೆ: ‘ಜಾತಿ ವ್ಯವಸ್ಥೆಯು ಒಳಮುಖಿ ನೆರೆಹೊರೆಯ ಸಮೂಹಗಳ ಸ್ಥಳ ಮತ್ತು ರಚನೆಯನ್ನು ನಿರ್ಧರಿಸುವಲ್ಲಿ ದೊಡ್ಡ ಪ್ರಭಾವ ಬೀರಿತ್ತು (ಜೋಧ್ಪುರ ಮತ್ತು ಉದಯಪುರದಂತೆ). ಅಷ್ಟೇ ಅಲ್ಲದೆ, ಪ್ರವೇಶ ದ್ವಾರಗಳನ್ನು ನಿಯಂತ್ರಿಸುವ ಮೂಲಕ ನಗರದ ಸಂಪರ್ಕವನ್ನೇ ಕಡಿತಗೊಳಿಸುವ ವ್ಯವಸ್ಥೆಯನ್ನೂ ಇದು ರೂಪಿಸಿತ್ತು (ಅಹಮದಾಬಾದ್ ಪೋಲ್)’
ದೇವಸ್ಥಾನ ನಗರಿಗಳಲ್ಲಿ (temple city) ಜಾತಿ ವ್ಯವಸ್ಥೆಯು ಸಹಜವಾಗಿಯೇ ಕೆಲಸ ಮಾಡುತ್ತಿರುತ್ತದೆ. ದಕ್ಷಿಣ ಭಾರತದಲ್ಲಿ ನಗರಗಳ ಉಗಮಕ್ಕೆ ದೇವಾಲಯದ ಸುತ್ತಲಿನಲ್ಲಿ ವಾಸವಿದ್ದ ಬ್ರಾಹ್ಮಣ ವಸಾಹತುಗಳನ್ನು ಬಳಸಿಕೊಂಡು ಹೆಚ್ಚುವರಿ ಆರ್ಥಿಕತೆಯನ್ನು (surplus economy) ಸೃಷ್ಟಿಸುವ ಆಲೋಚನೆಯೇ ಕೇಂದ್ರಬಿಂದುವಾಗಿತ್ತು. ಇದು ವೈದಿಕ ಮತ್ತು ಪುರಾಣ ಧರ್ಮಗಳ ಮೂಲಕ ವ್ಯಕ್ತವಾದ ‘ಬ್ರಾಹ್ಮಣ- ಕ್ಷತ್ರಿಯ ಒಕ್ಕೂಟ’ದ ಸಿದ್ಧಾಂತದ ಮೂಲಕ ಮಾನ್ಯತೆ ಪಡೆಯಿತು.
ಸಜಹವಾಗಿಯೇ ‘ದೇವಾಲಯ ನಗರಿ’ಯು ಕಾರ್ಯವಿಭಜನೆಯ ಆಧಾರದ ಮೇಲೆ ವಿವಿಧ ವಲಯಗಳಾಗಿ ವಿಂಗಡಿಸಲ್ಪಟ್ಟಿತ್ತು ಮತ್ತು ಇದನ್ನು ವಿವಿಧ ಜಾತಿ ಆಧಾರಿತ ವಸತಿಗಳ ಮೂಲಕ ಗುರುತಿಸಲಾಗುತ್ತಿತ್ತು. ಜಾತಿ ವ್ಯವಸ್ಥೆಯನ್ನು ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು ಮತ್ತು ಈ ನಗರ ಕೇಂದ್ರಗಳ ಯೋಜನೆಯಲ್ಲಿ ಅದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
14ನೇ ಶತಮಾನದಿಂದೀಚೆಗೆ ದಖನ್ ಪ್ರಾಂತ್ಯದಲ್ಲಿ ಮುಸ್ಲಿಮ್ ನಾಯಕರು ನಿರ್ಮಿಸಿದ ನಗರಗಳಿಗೂ ಕೂಡ ಈ ಜಾತಿ ವ್ಯವಸ್ಥೆಯಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಲಿಲ್ಲ. ಏಕೆಂದರೆ ಹಿಂದೂ ಮತ್ತು ಇಸ್ಲಾಮಿಕ್ ನಗರಗಳ ನಡುವೆ ವ್ಯತ್ಯಾಸ ಗುರುತಿಸುವುದು ಒಂದು ‘ಅತಿ ಸರಳವಾದ ದ್ವಂದ್ವ’ (simplistic binary) ಆಗಿರುತ್ತದೆ. ಆದರೆ, ವಾಸ್ತವವು ಅದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ. ಮಧ್ಯಕಾಲೀನ ದಖನ್ನ ಈ ನಗರಗಳು ಅಲ್ಲಿಯವರೆಗೆ ದೇಶದಲ್ಲಿದ್ದ ನಗರ ಸ್ವರೂಪಕ್ಕೆ ಹೊಸತೊಂದನ್ನು ಸೇರಿಸಿದವು. ಈ ನಾವೀನ್ಯತೆಯು ನಗರದ ಒಳಗಡೆ ನಡೆಯಲಿಲ್ಲ, ಬದಲಿಗೆ ಹೊರಗಡೆ ನಡೆಯಿತು. ಅದು ನಗರದ ಚಲನಶೀಲತೆಯ ಪ್ರಮುಖ ಅಂಶವಾಗಿತ್ತು. ನಗರದ ಗೋಡೆಗಳಿಂದ ಬಹಳ ದೂರವಲ್ಲದಿದ್ದರೂ, ನಗರದ ವ್ಯಾಪ್ತಿಯ ಹೊರಗೆ ಸೂಫಿ ಸಂತರು ವ್ಯವಸ್ಥಿತ ರೀತಿಯಲ್ಲಿ ನೆಲೆಸಿದರು. ಭೌತಿಕ ವಸ್ತುಗಳಲ್ಲಿ ತಮಗಿದ್ದ ವೈರಾಗ್ಯವನ್ನು ಪ್ರದರ್ಶಿಸಲು ಮತ್ತು ಶಾಂತಿಯಿಂದ ಬದುಕಲು ಅವರು ಉದ್ದೇಶಪೂರ್ವಕವಾಗಿಯೇ ನಗರದಿಂದ ದೂರವಿದ್ದರು. ಅದೇ ಸಮಯದಲ್ಲಿ, ನಗರದ ನಿವಾಸಿಗಳು ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಜನರು ಒಂದು ದಿನ ಪವಿತ್ರ ಸೂಫಿ ತಾಣಗಳಲ್ಲಿ ಕಳೆಯುವುದಕ್ಕಾಗಿ ನಗರವನ್ನು ಬಿಟ್ಟು ಹೊರಬರುತ್ತಿದ್ದರು ಮತ್ತು ಸಂಜೆಯ ವೇಳೆಗೆ ವಾಪಸ್ಸಾಗುತ್ತಿದ್ದರು.
ಈ ಸಂತರ ಮರಣದ ನಂತರ, ಅವರನ್ನು ಅವರು ವಾಸವಿದ್ದ ಸ್ಥಳದಲ್ಲೇ ಸಮಾಧಿ ಮಾಡಲಾಯಿತು ಮತ್ತು ಅವರ ಸಮಾಧಿಯ ಸುತ್ತಲೂ ‘ದರ್ಗಾ’ ಎಂಬ ಭವ್ಯ ಸ್ಮಾರಕಗಳನ್ನು ನಿರ್ಮಿಸಲಾಯಿತು. ಸಂತರ ಜನಪ್ರಿಯತೆಗೆ ಅನುಗುಣವಾಗಿ ಇವುಗಳ ಗಾತ್ರವಿರುತ್ತಿತ್ತು. ಪ್ರತ್ಯುಷ್ ಶಂಕರ್ ಅವರು ಹೇಳದ ಒಂದು ವಿಷಯವೇನೆಂದರೆ, ಇಡೀ ಸಮಾಜ ಸೂಫಿ ಸಂತರಿಗೆ ಮರಣಾನಂತರವೂ ಅಪಾರ ಶಕ್ತಿ ಇದೆ ಎಂದು ನಂಬಿತ್ತು. ಸಂತರು ಮರಣ ಹೊಂದಿದ ಶತಮಾನಗಳ ನಂತರವೂ ಅನೇಕ ಭಕ್ತರು ತಮ್ಮ ಆಸೆಗಳನ್ನು (ಮಕ್ಕಳನ್ನು ಪಡೆಯುವುದು, ರೋಗ ಗುಣಪಡಿಸುವುದು ಅಥವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು) ಪೂರೈಸುವಂತೆ ಕೇಳಿಕೊಳ್ಳಲು ದರ್ಗಾಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಹಿಂದೂ,ಕ್ರೈಸ್ತ, ಸಿಖ್ಖರು ಹೀಗೆ ಎಲ್ಲಾ ಧರ್ಮೀಯರೂ ಸೂಫಿ ಸಂತರನ್ನು ಗೌರವಿಸುತ್ತಾರೆ. ಗಣ್ಯರಿಂದ ಹಿಡಿದು ಕೆಳಜಾತಿಯವರೆಗೆ ಎಲ್ಲಾ ವರ್ಗದ ಜನರು ದರ್ಗಾ ಸಂದರ್ಶಿಸುತ್ತಾರೆ ಮತ್ತು ಅತ್ಯಂತ ಪವಿತ್ರವಾದ ಆ ಸ್ಥಳಗಳಲ್ಲೂ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಪ್ರವೇಶವಿರುತ್ತದೆ. ಈ ಕೆಳಗಿನ ತೀರ್ಮಾನಕ್ಕೆ ಬರುವಾಗ ಪ್ರತ್ಯುಷ್ ಶಂಕರ್ ಅವರು ನಾನು ಮೇಲೆ ಹೇಳಿದ ವಿಷಯಗಳನ್ನು ಓದುಗರು ತಿಳಿದಿದ್ದಾರೆಂದೇ ಭಾವಿಸುತ್ತಾರೆ.
ದಖನ್ ನಗರಗಳ ವಿಶಿಷ್ಟ ಕೊಡುಗೆಯೆಂದರೆ ನಗರದ ಒಳಗಿನ ಅಸಾಧಾರಣ ರಚನೆಯಲ್ಲ, ಬದಲಿಗೆ ಸೂಫಿ ಸಂತರು ನೆಲೆಸಿದ್ದ ಜಿಲ್ಲೆ ಮತ್ತು ಉಪನಗರಗಳ ಅಭಿವೃದ್ಧಿ. ಸೂಫಿ ಸಂತರು ಜನಸಾಮಾನ್ಯರಲ್ಲಿ ಜನಪ್ರಿಯರಾಗಿದ್ದರು ಮತ್ತು ಆಡಳಿತ ವ್ಯವಸ್ಥೆಗೆ ಅಗತ್ಯವಾದ ಪರ್ಯಾಯ ಶಕ್ತಿಯಾಗಿ (counterpoint) ಕಾರ್ಯನಿರ್ವಹಿಸಿದರು. ನಗರವು ವ್ಯಾಪಾರ, ವಾಣಿಜ್ಯ ಮತ್ತು ಅಧಿಕಾರದ ಭೌತಿಕ ಪ್ರಪಂಚವನ್ನು ಪ್ರತಿನಿಧಿಸಿದರೆ, ಸೂಫಿ ಸಮಾಧಿಗಳ ಉಪನಗರ ಪ್ರದೇಶಗಳು ಅದಕ್ಕೆ ತದ್ವಿರುದ್ಧವಾಗಿದ್ದವು; ಅವು ಪ್ರಕೃತಿಯ ಮಡಿಲಿನಲ್ಲಿರುವ ಮಿತವ್ಯಯದ ಮೂಲಸೌಕರ್ಯ ಹೊಂದಿದ ಪವಿತ್ರ ಮತ್ತು ಆಧ್ಯಾತ್ಮಿಕ ಸ್ಥಳಗಳಾಗಿದ್ದವು. ಶತಮಾನಗಳು ಉರುಳಿದಂತೆ ಈ ಸ್ಥಳಗಳು ಸಾರ್ವಜನಿಕ ಸ್ಥಳಗಳಾಗಿ ಬದಲಾದವು. ನಗರದ ಕೋಟೆಯ ಗೋಡೆಗಳ ಹೊರಗೆ ಇರುತ್ತಿದ್ದ ಈ ಸ್ಥಳಗಳಿಗೆ ನಗರವಾಸಿಗಳು ಯಾತ್ರಾಸ್ಥಳಗಳಂತೆ ಭೇಟಿ ನೀಡುತ್ತಿದ್ದರು.
ಕ್ರಿ.ಶ. 14ನೇ ಶತಮಾನದಲ್ಲಿ ದಖನ್ನಲ್ಲಿ ಮುಸ್ಲಿಮ್ ನಾಯಕರು ನಿರ್ಮಿಸಿದ ನಗರಗಳು ಭಾರತೀಯ ಜಗತ್ತಿಗೆ ‘ಸಾರ್ವಜನಿಕ ಸ್ಥಳ’ದ ಪರಿಕಲ್ಪನೆಯನ್ನು ಪರಿಚಯಿಸಿದವು. ಧರ್ಮ, ಜಾತಿ ಮತ್ತು ಲಿಂಗದ ಆಧಾರದ ಮೇಲೆ ಸಮಾಜವು ತೀವ್ರವಾಗಿ ವಿಭಜನೆಯಾಗಿದ್ದರಿಂದ ಅಲ್ಲಿಯವರೆಗೆ ಭಾರತದಲ್ಲಿ ಇಂತಹ ಪರಿಕಲ್ಪನೆ ಇರಲಿಲ್ಲ. ಇದು ಇಸ್ಲಾಮ್ ಭಾರತಕ್ಕೆ ನೀಡಿದ ಒಂದು ವಿಶಿಷ್ಟವಾದ ಕೊಡುಗೆಯಾಗಿದೆ. ಆದರೆ ಇಸ್ಲಾಮ್ ಭಾರತಕ್ಕೆ ಪ್ರವೇಶಿಸುವ ಮೊದಲು, ಇಂತಹ ಮುಕ್ತ ಸಾರ್ವಜನಿಕ ಸ್ಥಳಗಳು ದೇಶದಲ್ಲಿ ಅಸ್ತಿತ್ವದಲ್ಲಿರಲಿಲ್ಲ. ತಿರುವಣ್ಣಾಮಲೈ ಬೆಟ್ಟದ ಮೇಲಿರುವ ರಮಣ ಮಹರ್ಷಿಗಳ ಗುಹೆಯಂತೆ, ಋಷಿ ಮುನಿಗಳು ನಗರಗಳಿಂದ ಹೊರಗೆ ತಮ್ಮ ಆಶ್ರಮಗಳನ್ನು ಸ್ಥಾಪಿಸಿದ್ದರು. ಆದರೆ ಅವರ ಅನುಯಾಯಿಗಳು ಅಲ್ಲಿ ಅವರಿಗೆ ತೊಂದರೆ ನೀಡುತ್ತಿರಲಿಲ್ಲ, ಮತ್ತು ಒಂದು ವೇಳೆ ಭೇಟಿಯಾದಲ್ಲಿ ಅದು ಕೇವಲ ‘ಗುರು-ಶಿಷ್ಯ ಪರಂಪರೆ’ಯ ರೂಪದಲ್ಲಿರುತ್ತಿತ್ತು. ಆದರೆ ದರ್ಗಾಗಳ ಸುತ್ತಮುತ್ತ ಆಟದ ಮೈದಾನಗಳು ಹಾಗೂ ಪಿಕ್ನಿಕ್ ತಾಣಗಳನ್ನೂ ಕಾಣಬಹುದಾಗಿತ್ತು.
ತಮ್ಮ ಪುಸ್ತಕದಲ್ಲಿ ಪ್ರತ್ಯುಷ್ ಶಂಕರ್ ಅವರು ಈ ಕೊಡುಗೆಯನ್ನು ಕೇವಲ ದಕ್ಷಿಣ ಭಾರತಕ್ಕೆ (ದಖನ್) ಸೀಮಿತಗೊಳಿಸಿದ್ದಾರೆ, ಆದರೆ ಅವರು ಬೆಟ್ಟು ಮಾಡಿರುವ ಈ ನಾವೀನ್ಯತೆಯು ಭಾರತದಾದ್ಯಂತ ಕಂಡುಬರುತ್ತದೆ ಎಂದು ಹೇಳಬಹುದು. ಉತ್ತರ ಭಾರತದಲ್ಲೂ ಸಹ ಸೂಫಿ ಸಂತರು ನಗರಗಳ ಹೊರವಲಯದಲ್ಲೇ ನೆಲೆಸಿದ್ದರು. ನಿಝಾಮುದ್ದೀನ್ ಔಲಿಯಾ ಅವರು ದೆಹಲಿಯಿಂದ ದೂರವಿರಲು ಬಯಸಲಿಲ್ಲವೇ? ಅವರ ಸಮಾಧಿಗಳು ಇಂದಿಗೂ ಎಲ್ಲರಿಗೂ ಮುಕ್ತವಾದ ಸಾರ್ವಜನಿಕ ಸ್ಥಳವಾಗಿ ರೂಪುಗೊಂಡಿದೆ. ಅಹಮದಾಬಾದ್ನ ಸರ್ಖೇಜ್ ರೋಜಾ ಅಥವಾ ದೆಹಲಿಯ ಫಿರೋಜ್ ಶಾ ಕೋಟ್ಲಾದಂತಹ ಸ್ಥಳಗಳು ಇಂದು ನಗರದ ಭಾಗವಾಗಿದ್ದರೂ, ಅವುಗಳ ಸುತ್ತಲಿನ ಹಸಿರು ಪರಿಸರವು ಈ ಅಂಶವನ್ನು ಮತ್ತಷ್ಟು ಎದ್ದು ಕಾಣುವಂತೆ ಮಾಡುತ್ತದೆ. ಆನಂದ್ ತನೇಜಾ ಅವರು ಸ್ಪಷ್ಟಪಡಿಸಿರುವಂತೆ, ಇಂದಿಗೂ ಸಮಾಜದ ಎಲ್ಲಾ ವರ್ಗದ ಜನರು ಅಲ್ಲಿ ಜಮಾಯಿಸುತ್ತಾರೆ, ಇದು ಸಾರ್ವಜನಿಕ ಸ್ಥಳಕ್ಕೆ ಇರಬೇಕಾದ ನೈಜ ಲಕ್ಷಣವಾಗಿದೆ.
ಕ್ರಿಸ್ಟೋಫ್ ಜಾಫ್ರೆಲೋ ಅನು: ಮುಹಮ್ಮದ್ ಶಮೀರ್ ಪೆರುವಾಜೆ
ಕ್ರಿಸ್ಟೋಫ್ ಜಾಫ್ರೆಲೊ
ಕ್ರಿಸ್ಟೋಫ್ ಜಾಫ್ರೆಲೊ ಅವರು ಪ್ಯಾರಿಸ್ನ CERI-Sciences Po/CNRS ನಲ್ಲಿ ಹಿರಿಯ ಸಹಾಯಕ ಸಂಶೋಧಕರು (Senior Research Fellow). ಲಂಡನ್ನ ಕಿಂಗ್ಸ್ ಕಾಲೇಜಿನಲ್ಲಿ ಭಾರತೀಯ ರಾಜಕೀಯ ಮತ್ತು ಸಮಾಜಶಾಸ್ತ್ರದ ಪ್ರಾಧ್ಯಾಪಕರು. ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ನಲ್ಲಿ ಅನಿವಾಸಿ ವಿದ್ವಾಂಸರು (Non-resident Scholar) ಮತ್ತು ಬ್ರಿಟಿಷ್ ಅಸೋಸಿಯೇಷನ್ ಫಾರ್ ಸೌತ್ ಏಷ್ಯನ್ ಸ್ಟಡೀಸ್ನ ಅಧ್ಯಕ್ಷರು.
ಎರಡೂ ಮಹಾಯುದ್ಧಗಳ ನಂತರ ಪ್ರಕ್ಷುಬ್ಧಗೊಂಡ ಯುರೋಪಿನ ಸಮಾಜದಲ್ಲಿ ಮನುಷ್ಯನ ವಿಕ್ಷಿಪ್ತ ಮನಸ್ಥಿತಿಯನ್ನು ದಾಖಲಿಸುವುದರಲ್ಲಿ ಜರ್ಮನಿಯ ಫ್ರಾಂಜ್ ಕಾಫ್ಕಾ, ಫ್ರಾನ್ಸಿನ ಜಿನ್ ಪಾಲ್ ಸಾರ್ತ್ರೆ ಮತ್ತು ಆಲ್ಬರ್ಟ್ ಕಾಮು ಹೆಸರಾದವರು. ಸಾರ್ತ್ರೆ ತಾರ್ಕಿಕ ಅಸ್ತಿತ್ವವಾದಿ. ಒಬ್ಬ ಚಿಂತಕ. ಕಾಫ್ಕಾ ಹಾಗೂ ಕಾಮು ಅಸಾಧಾರಣ ಮಾನವಿಕ ಪ್ರಜ್ಞೆಯುಳ್ಳ ಸೃಜನಶೀಲ ಕಲೆಗಾರರು. ಆಲ್ಬರ್ಟ್ ಕಾಮು ಬರೆದ ‘ದಿ ಔಟ್ ಸೈಡರ್’ ಜಗತ್ತಿನ ಅತ್ಯುತ್ತಮ ಕಾದಂಬರಿಗಳಲ್ಲಿ ಪ್ರಮುಖವಾದದ್ದು. ಈ ಕಾದಂಬರಿ 1942ರಲ್ಲಿ ಮೊದಲು L’ETRANGER ಎಂಬ ಶೀರ್ಷಿಕೆಯಿಂದ ಫ್ರೆಂಚ್ ಭಾಷೆಯಲ್ಲಿ ಪ್ರಕಟವಾಯಿತು. 1946ರಲ್ಲಿ ಅಮೆರಿಕದ ಹ್ಯಾಮಿಶ್ ಹ್ಯಾಮಿಲ್ಟನ್ ಅವರು ‘ದಿ ಸ್ಟ್ರೇಂಜರ್’ ಪದದ ಅರ್ಥಕ್ಕೆ ಸಂವಾದಿಯಾಗಿ ‘ದಿ ಔಟ್ಸೈಡರ್’ ಎನ್ನುವ ಟೈಟಲ್ನಿಂದ ಮೊದಲು ಇಂಗ್ಲೀಷಿಗೆ ಅನುವಾದಿಸಿದರು. ನಂತರ ಈ ಕೃತಿ ಜಗತ್ಪ್ರಸಿದ್ಧಿಯನ್ನು ಪಡೆಯಿತು. ಪಾಶ್ಚಾತ್ಯರಲ್ಲಿ ಅಸಂಗತ (ಅಬ್ಸರ್ಡ್) ದೃಷ್ಟಿಕೋನದಿಂದ ಬಂದ ಈ ಬಗೆಯ ಸಾಹಿತ್ಯ ಒಂದು ದೊಡ್ಡ ವೈಚಾರಿಕ ಕ್ರಾಂತಿಯನ್ನೇ ಉಂಟುಮಾಡಿತು. ಕಾಮು ‘ಮಿಥ್ ಆಫ್ ಸಿಸಿಯಫಸ್’(1942), ‘ದಿ ರೆಬೆಲ್’ (1957) ಕೃತಿಗಳ ಮೂಲಕ ಪಾಶ್ಚಾತ್ಯ ಚಿಂತನೆಯಲ್ಲಿ ಸಮರ್ಥವಾದ ಬರಹಗಾರನಾದಂತೆಯೇ ‘ದಿ ಔಟ್ಸೈಡರ್’ (1942), ‘ದಿ ಪ್ಲೇಗ್’ (1947) , ‘ದಿ ಪಾಲ್’ (1956) ಕಾದಂಬರಿಗಳು ಮತ್ತು ‘ಕ್ಯಾಲಿಗುಲ’ (1942), ‘ಕ್ರಾಸ್ ಪರ್ಪಸ್’ (1944) ಎಂಬ ನಾಟಕಗಳು, ಸಣ್ಣಕತೆಯ ಸಂಗ್ರಹವಾದ ‘ಎಕ್ಸೈಲ್ ಅಂಡ್ ದಿ ಕಿಂಗ್ಡಮ್’ (1957) ಕೃತಿಗಳ ಮೂಲಕ ತನ್ನ ಅಗಾಧವಾದ ಸೃಜನಶೀಲ ಸ್ವಭಾವವನ್ನು ದಾಖಲಿಸಿದ. ಈ ಕೃತಿಗಳು ತನ್ನ ಪ್ರಸ್ತುತತೆಯನ್ನು ಇವತ್ತಿನವರೆಗೂ ಕಿಂಚಿತ್ತೂ ಕಳೆದುಕೊಳ್ಳದೆ ಇರುವುದು ಮನುಷ್ಯ ಸ್ವಭಾವದ ಸೂಕ್ಷ್ಮ ಮತ್ತು ತೀವ್ರವಾದ ಕ್ಷಣಗಳನ್ನು ಅಪೂರ್ವ ಒಳನೋಟಗಳಲ್ಲಿ ತೆರೆದಿಡುತ್ತವೆ ಎಂಬ ಕಾರಣದಿಂದ. ಡಿ.ಎ. ಶಂಕರ್ ಅವರು 1971ರಲ್ಲಿ ಇಂಗ್ಲೀಷಿನ ‘ದಿ ಔಟ್ಸೈಡರ್’ ಕಾದಂಬರಿಯನ್ನು ಕನ್ನಡಕ್ಕೆ ‘ಅನ್ಯ’ ಎಂಬ ಹೆಸರಿನಿಂದ ಅನುವಾದ ಮಾಡುತ್ತಾರೆ. ಯಶವಂತ ಚಿತ್ತಾಲರ ಶಿಕಾರಿಯನ್ನು ಕಾಫ್ಕನ ‘ದಿ ಟ್ರಯಲ್’ ಕಾದಂಬರಿಯ ಚೌಕಟ್ಟಿನಲ್ಲಿಟ್ಟು ಚರ್ಚಿಸಿದಂತೆ ಕನ್ನಡದ ಸಾಹಿತ್ಯ ಪರಂಪರೆಯಲ್ಲಿಯೇ ಅನೇಕ ಪಠ್ಯಗಳನ್ನು ಕಾಮು, ಕಾಫ್ಕ, ಸಾರ್ತ್ರೆ ಮತ್ತು ರಷ್ಯಾದ ದಾಸ್ತೋವೆಸ್ಕಿ ಬರಹಗಳ ಪ್ರಭಾವಗಳಿಂದ ನೋಡುವ ಪ್ರಯತ್ನಗಳನ್ನು ಮಾಡಲಾಗಿದೆ. ಈ ಬರಹಗಾರರು ‘ಕನ್ನಡ ಸಾಹಿತ್ಯದ ಮೇಲೆ ದಾಳಿ ಮಾಡಲು ಬಂದ ದಾಳಿಕೋರರು’ ಎಂದು ಇವರನ್ನು ತಿರಸ್ಕರಿಸುವ ವರ್ಗವೊಂದಿದೆ. ಆದರೆ ಇವರ ಲೋಕಗ್ರಹಿಕೆಯಿಂದ ಪ್ರೇರಣೆಗೊಂಡು ಕನ್ನಡಕ್ಕೆ ಅಗಾಧವಾದದ್ದನ್ನು ನೀಡಿದವರಿದ್ದಾರೆ. ಕಾಮುವಿನ ‘ಕ್ಯಾಲಿಗುಲ’ದ ಐಡಿಯಾ ‘ತುಘಲಕ್’ನಲ್ಲಿ, ‘ದಿ ಪ್ಲೇಗ್’ ಹಾಗೂ ‘ದಿ ಔಟ್ಸೈಡರ್’ ಕೃತಿಗಳ ಐಡಿಯಾ ‘ಸಂಸ್ಕಾರ’ದಲ್ಲಿ, ಸಾರ್ತ್ರೆಯ ಅಸ್ತಿತ್ವವಾದದ ಐಡಿಯಾ ಹಾಗೂ ಕಾಮುವಿನ ‘ದಿ ಫಾಲ್’ ಕಾದಂಬರಿಯ ತಾಂತ್ರಿಕ ಐಡಿಯಾ ‘ಸ್ವರೂಪ’ದಲ್ಲಿ, ದಾಸ್ತೋವೆಸ್ಕಿಯ ‘ದಿ ಚರ್ಚ್’ ಎಂಬ ರಶಿಯನ್ ಕಾದಂಬರಿಯ ಐಡಿಯಾ ‘ಭಾರತೀಪುರ’ದಲ್ಲಿ, ಲಂಕೇಶರ ನಾಟಕಗಳಲ್ಲಿ ಪಾಶ್ಚಾತ್ಯ ಸಾಹಿತ್ಯದಲ್ಲಿನ ‘ಅಂಗರ್ ಥಿಯೇಟರ್’ ಹಾಗೂ ‘ಅಬ್ಬರ್ಡ್ ಥಿಯೇಟರ್’ಗಳಲ್ಲಿನ ಐಡಿಯಾಗಳಿರುವುದನ್ನು ಗುರುತಿಸುತ್ತೇವೆ. ಕಾಲಕಾಲಕ್ಕೆ ಈ ಬಗೆಯ ಬರಹಗಳು ಕನ್ನಡದಲ್ಲಿ ಅನುವಾದಗೊಂಡಿವೆ. ಕಾಮುನ ‘ದಿ ಔಟ್ಸೈಡರ್’ ಕಾದಂಬರಿ ‘ಅನ್ಯ’ ಮತ್ತು ‘ಕ್ಯಾಲಿಗುಲ ಅಂಡ್ ಕ್ರಾಸ್ ಪರ್ಪಸ್’ ನಾಟಗಳನ್ನು ‘ಕಾಲಿಗುಲ ಮತ್ತು ತಪ್ಪಿದ ಎಳೆ’, ಎಂದು ಡಿ.ಎ. ಶಂಕರ್, ‘ದಿ ಪ್ಲೇಗ್’ ಕಾದಂಬರಿಯನ್ನು ಎಚ್.ಎಸ್. ರಾಘವೇಂದ್ರರಾವ್ ಅನುವಾದ ಮಾಡಿದ್ದಾರೆ. ಡಾ. ಪ್ರಭಾ ಖೇತಾನ್ ಅವರ ಹಿಂದಿ ಮೂಲದ ‘ಆಲ್ಬರ್ಟ್ ಕಾಮೂ’ ಪುಸ್ತಕವನ್ನು ಪ್ರಭಾಕರ ಮಳಿಯೆ ಕನ್ನಡಕ್ಕೆ ತಂದಿದ್ದಾರೆ. ಕೆ. ಸತ್ಯನಾರಾಯಣಸ್ವಾಮಿ ಮತ್ತು ಗೋವರ್ಧನ ನವಿಲೇಹಾಳ್ ಸಂಪಾದಿಸಿದ ‘ಆಲ್ಬರ್ಟ್ ಕಾಮೂ ನೂರರ ನೆನಪು’, ಕೇಶವ ಮಳಗಿ ಅವರ ‘ಆಲ್ಬರ್ಟ್ ಕಾಮು ತರುಣ ವಾಚಿಕೆ’ ಪುಸ್ತಕವನ್ನೊಳಗೊಂಡು ಕಾಮು ಬರಹಗಳು ಕನ್ನಡದಲ್ಲಿ ಲಭ್ಯವಿವೆ. ಡಿ.ಎ. ಶಂಕರ್ ಅವರು ‘ದಿ ಔಟ್ಸೈಡರ್’ ಕಾದಂಬರಿಯನ್ನು ಅನುವಾದ ಮಾಡುವ ಮುಂಚೆಯೇ ಕನ್ನಡ ಓದುಗರು ಇದನ್ನಾಗಲೇ ಓದಿದ್ದರು. ನನಗೆ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ‘ವ್ಯಾಖ್ಯಾನ’ ಕಾರ್ಯಕ್ರಮಕ್ಕೆ ಮಾತಾಡಬೇಕಾದ ಕಾರಣಕ್ಕಾಗಿ ಈ ಕಾದಂಬರಿ ಓದುವ ಅವಕಾಶ ಮತ್ತು ಹೊಣೆಗಾರಿಕೆ ಒದಗಿತು.
ನಾಗರಿಕ ಸಮಾಜದ ನಿಯಮಗಳು ‘ಅಪರಾಧ ಮತ್ತು ಶಿಕ್ಷೆ’ಯ ಅನುಕ್ರಮಣಿಕೆಯಲ್ಲಿ ರೂಪಗೊಂಡಿವೆ. ಯಾರು ಅಪರಾಧ ಮಾಡುತ್ತಾರೋ ಅದಕ್ಕೆ ತಕ್ಕ ಶಿಕ್ಷೆಯಿರುತ್ತದೆ. ಆದರೆ ಈ ನಿಯಮವೇ ತಲೆಕೆಳಗಾದರೆ ಹೇಗೆ? ಶಿಕ್ಷೆ ವಿಧಿಸುವುದಕ್ಕೆ ಕಾರಣವಾದ ಅಪರಾಧ ಯಾವುದು ಎಂಬುದೇ ಸ್ಪಷ್ಟಗೊಳ್ಳದಿದ್ದಾಗ, ಅಪರಾಧವನ್ನು ಮುಖ್ಯ ಮಾಡದೆ ಸಮಾಜದ ರೂಢಿಗತ ನಂಬಿಕೆಗಳನ್ನೇ ಸಾಕ್ಷಿಯಾಗಿ ವ್ಯಕ್ತಿಯ ಚಾರಿತ್ರ್ಯದಿಂದ ಶಿಕ್ಷೆಯನ್ನು ನಿರ್ಧರಿಸುವ ಅಪಾಯಗಳನ್ನು ಈ ಲೋಕ ತೆರೆದಿಡುತ್ತದೆ. ಅಪರಾಧ ಮತ್ತು ಶಿಕ್ಷೆ ಏನು ಎಂದು ಅದನ್ನು ಕೊಡುವವರಿಗಾದರೂ ಗೊತ್ತಿರಬೇಕು. ಶಿಕ್ಷೆಗೆ ಒಳಪಡುವವನಿಗಾದರೂ ಗೊತ್ತಿರಬೇಕು. ಇಬ್ಬರಿಗೂ ಗೊತ್ತಿಲ್ಲದಿರುವ ಸ್ಥಿತಿಯಲ್ಲಿ ಶಿಕ್ಷೆಯನ್ನು ಮಾತ್ರ ಅನುಭವಿಸಲೇಬೇಕಾದ ಹೊಣೆಗಾರಿಕೆ ಬರುತ್ತದೆ. ಇಂತಹ ತಲೆಕೆಳಗಾದ ಲೋಕವನ್ನು, ತಲೆಕೆಳಗಾದ ಲೋಕಗ್ರಹಿಕೆಯನ್ನು ಕಾಮು ‘ದಿ ಔಟ್ಸೈಡರ್’ನಲ್ಲಿ ತೆರೆದಿಡುತ್ತಾನೆ. ‘ಅಪರಾಧ ಮತ್ತು ಶಿಕ್ಷೆ’ಗಳ ನಡುವಿನ ಈ ಜಗತ್ತು ಕನ್ನಡಕ್ಕೆ ಹೊಸಬಗೆಯ ಆಲೋಚನಾ ಕ್ರಮಗಳನ್ನು ಈ ಮೂಲಕ ನೀಡಿದೆ. ‘ಅನ್ಯ’ ಕಾದಂಬರಿ ನಮಗೆ ಮುಖ್ಯವಾಗುವುದು ಎರಡು ಕಾರಣಗಳಿಗಾಗಿ. ಯುರೋಪಿನ ದೇಶಗಳ ಸಂಪ್ರದಾಯಸ್ಥ ಪರಂಪರೆಗಳ ವಿರುದ್ಧದ ಬಂಡಾಯದ ದನಿ ಎಂಬ ಕಾರಣಕ್ಕೆ, ಇನ್ನೊಂದು ಆಧುನಿಕ ಜಗತ್ತಿನ ವಿಷಕ್ಕೆ ಮದ್ದು ಎಂಬ ಕಾರಣಕ್ಕೆ. ಈ ಕಾದಂಬರಿ ಪರಂಪರೆ ಮತ್ತು ಆಧುನಿಕತೆಗಳ ವಿಕಾರಗಳನ್ನು ನಮ್ಮೆದುರು ತೆರೆದಿಡುತ್ತದೆ. ಇದರ ಕಥಾನಾಯಕ ಮಾರ್ಸೊ ಸಾಲ್ಟ್. ಈ ಕಥೆ ಆಫ್ರಿಕಾ ಖಂಡದ ಉತ್ತರ ಭಾಗ ಮತ್ತು ಮೆಡಿಟೆರೇನಿಯನ್ ಸಮುದ್ರದ ದಕ್ಷಿಣಕ್ಕೆ ಇರುವ 1830ರಿಂದ 1962ರವರೆಗೆ ಫ್ರಾನ್ಸಿನ ವಸಾಹತು ಆಗಿದ್ದ ಆಲ್ಜೀರಿಯಾದ ರಾಜ್ಯಧಾನಿ ಅಲ್ಜೀರ್ಸ್ ನಲ್ಲಿ ನಡೆಯುತ್ತದೆ. ಮಾರ್ಸೊ ತನ್ನ ಬದುಕಿನ ಅನಿರೀಕ್ಷಿತ ಗಳಿಗೆಯಲ್ಲಿ ಅರಬ್ ಒಬ್ಬನನ್ನು ಕೊಂದು ಕೊಲೆ ಕೇಸ್ನಲ್ಲಿ ಆಪಾದಿತನಾಗುತ್ತಾನೆ. ಈ ಕಾದಂಬರಿ ಎರಡು ಭಾಗದಲ್ಲಿದೆ. ಮೊದಲ ಭಾಗ ಮಾರ್ಸೋ ತನ್ನಿಚ್ಛೆಯಂತೆ ಬದುಕಲು ಪ್ರಯತ್ನಿಸುವುದನ್ನು ಮತ್ತು ಎರಡನೇ ಭಾಗ ತನ್ನ ಇಚ್ಛೆಯಂತೆ ಬದುಕಲು ಹೋಗಿ ಕಾನೂನಿನ ವಿಚಿತ್ರ ಸನ್ನಿವೇಶಗಳಲ್ಲಿ ಸಿಲುಕಿ ಸಂಕಟ ಪಡುವುದನ್ನು ಚಿತ್ರಿಸುತ್ತದೆ. ತನ್ನ ತಾಯಿ ವೃದ್ಧರ ವಿಶ್ರಾಂತಿಧಾಮದಲ್ಲಿ ತೀರಿಹೋದ ಸಂದೇಶವನ್ನು ಪಡೆದು ಅವಳ ಅಂತ್ಯಸಂಸ್ಕಾರಕ್ಕೆ ಹೋಗುವ ಪ್ರಸಂಗದಿಂದ ಈ ಕಾದಂಬರಿ ಪ್ರಾರಂಭವಾಗುತ್ತದೆ. ಅಲ್ಜೀರ್ಸ್ ನಿಂದ ಸುಮಾರು 50 ಮೈಲು ದೂರದ ಮಾರೆಂಗೊದ ವಿಶ್ರಾಂತಿಧಾಮಕ್ಕೆ ಬಂದಾಗ ವಾರ್ಡನ್ ಮಾರ್ಸೋನನ್ನು ಬರಮಾಡಿಕೊಂಡು ಯಾವುದೇ ವೃದ್ಧರು ತೀರಿಕೊಂಡಾಗ ಮಾಡಬಹುದಾದ ಫಾರ್ಮಾಲಿಟಿಸ್ಗಳನ್ನು ಮನವರಿಕೆ ಮಾಡಿಕೊಡುತ್ತಾನೆ. ತನ್ನ ತಾಯಿಯನ್ನು ನೋಡಲು ಹೋದಾಗ ಗುಂಪಾಗಿ ನಿಂತ ವೃದ್ಧರು ಮಾತಾಡಿಕೊಳ್ಳುವುದು, ಇವರು ಬಂದ ತಕ್ಷಣ ಮೌನವಾಗಿ ಇವರ ಬೆನ್ನು ಕಾಣುತ್ತಿದ್ದಂತೆ ಮತ್ತೇ ಮಾತಾಡಿಕೊಳ್ಳುವುದು, ಮಾರ್ಸೋಗೆ ಆ ಕ್ಷಣ ಪಂಜರದಲ್ಲಿನ ಗಿಳಿಗಳ ಧ್ವನಿಯನ್ನು ನೆನಪಿಸುತ್ತದೆ. ನಿರ್ಲಿಪ್ತನಾಗಿ ನಿರ್ಭಾವುಕನಾಗಿ ತನ್ನ ತಾಯಿಯ ಸಾವನ್ನು ಎದುರಾಗುವ ಅವನನ್ನು ಕಂಡ ವಾರ್ಡನ್ಗೆ ಅಚ್ಚರಿಯಾಗುತ್ತದೆ. ಅಂತ್ಯಸಂಸ್ಕಾರ ನಡೆಯುವ ಹಿಂದಿನ ರಾತ್ರಿ ಮಾರ್ಸೋ ಸಹಜವಾಗಿ ಕಾಫಿ ಕುಡಿದು ಸಿಗರೇಟ್ ಸೇದಿ ತನ್ನ ಇಚ್ಛೆಯಂತೆ ವರ್ತಿಸಿದ್ದನ್ನು ಕಂಡವರಿಗೆ ಅವನೊಬ್ಬ ತಾಯಿಯ ಬಗ್ಗೆ ಕಾಳಜಿ ಇಲ್ಲದ ಪಶುವಿನಂತೆ ಕಾಣುತ್ತಾನೆ.
ಆದರೆ, ಮಾರ್ಸೋಗೆ ವಾಸ್ತವವನ್ನು ಮುಕ್ತವಾಗಿ ನೋಡುವ ಮನಸ್ಥಿತಿ ಇದೆ. ಅಂತ್ಯಸಂಸ್ಕಾರದ ನಂತರ ತನ್ನ ಮೇಲಧಿಕಾರಿಯಿಂದ ಎರಡು ದಿನ ರಜೆ ಪಡೆಯುತ್ತಾನೆ. ತನ್ನ ಗೆಳತಿ ಮಾರಿ ಕಾರ್ಡೊನಾಳೊಂದಿಗೆ ಈಜುಕೊಳದಲ್ಲಿ ಈಜಾಡಿದ ಮೇಲೆ ಆ ಸಂಜೆ ಸಿನಿಮಾಕ್ಕೆ ಅವಳನ್ನು ಕರೆಯುತ್ತಾನೆ. ಅವಳು ಫರ್ನಾಂಡೆಲ್ಲನ ಹಾಸ್ಯ ಚಿತ್ರಕ್ಕೆ ಆದರೆ ಮಾತ್ರ ಬರುತ್ತೇನೆ ಎನ್ನುತ್ತಾಳೆ. ನಂತರ ಅವನನ್ನು ದುಃಖದಲ್ಲಿ ಇದ್ದೀಯ ಎಂದು ಕೇಳಿದ್ದು, ಅಮ್ಮ ತೀರಿ ಹೋದಳು ಎಂದು ಅವನು ಉತ್ತರಿಸಿದ್ದು, ಅದಕ್ಕೆ ಅವಳು ಅವನನ್ನು ಕಂಡು ಹೇಸಿದ್ದು, ಇಬ್ಬರು ಸಿನಿಮಾ ನೋಡುವಾಗ ರೋಮಾಂಚಿತರಾಗಿದ್ದು ಈ ಎಲ್ಲ ವಿವರಗಳನ್ನು ಕಾದಂಬರಿ ಯಾವುದೇ ಸ್ಮೃತಿಭಾರವಿಲ್ಲದೆ ತೆರೆದಿಡುತ್ತದೆ. ಅವನ ಬಾಡಿಗೆ ಮನೆ, ಸುತ್ತಲಿನ ಜನ, ಹೆಂಡತಿಯನ್ನು ಕಳೆದುಕೊಂಡಾಗ ನಾಯಿಯೊಂದನ್ನು ಸಾಕಿ ಯಾವಾಗಲೂ ಅದರೊಂದಿಗೆ ವಾಕಿಂಗ್ ಮಾಡುತ್ತಿದ್ದ ವೃದ್ಧ ಸಾಲಮಾನೊ ಮತ್ತು ಅವನ ವಿಚಿತ್ರ ವರ್ತನೆಗಳು, ನಾಯಿ ಸತ್ತಾಗ ಅವನು ಸಂಕಟದಿಂದ ಅಳುವ ರೀತಿ, ವ್ಯಭಿಚಾರಿಗಳನ್ನು ಸಪ್ಲೈ ಮಾಡುವ ಸ್ನೇಹಿತ ರೆಮೋನ್ ಮತ್ತು ಅವನ ಗೆಳತಿ, ಅವರ ಜಗಳ, ಮಾರ್ಸೋ ಕೊನೆಗೆ ಅವಳಿಗೆ ಬೈಯಲು ಬರೆಸಿದ ಪತ್ರ, ಅದಕ್ಕಾಗಿ ಅವಳ ಅಣ್ಣ ಮತ್ತು ಅವರ ಸ್ನೇಹಿತರು ಆಗಾಗ ಮಾರ್ಸೋ ಮತ್ತು ರೆಮೋನ್ ಇಬ್ಬರನ್ನೂ ಹಿಂಬಾಲಿಸಿದ್ದು, ಅವರ ಜೊತೆ ಮಾರಾಮಾರಿ ನಡೆದದ್ದು, ಇವೆಲ್ಲಾ ಸಂಗತಿಗಳಲ್ಲಿ ಒಂದು ಪಾತ್ರದಂತೆ ಇದ್ದ ಪ್ರಕಾಶಮಾನವಾದ ಬಿಸಿಲು ಇತ್ಯಾದಿ ವಿವರಗಳಿಂದ ಕಾದಂಬರಿ ಸಾಗುತ್ತದೆ. ಒಂದು ಜಗಳದಲ್ಲಿ ರೇಮೊನ್ಗೆ ಚಾಕುವಿನಿಂದ ಚುಚ್ಚಿದ ಅವನ ಗೆಳತಿಯ ಅರಬ್ ಅಣ್ಣ ಮತ್ತು ಅವನ ಸ್ನೇಹಿತರು ಸಮುದ್ರದ ಬಳಿ ವಾಕಿಂಗ್ ಬಂದ ರೆಮೋನ್ ಮಾರ್ಸೋ ಮತ್ತು ಇನ್ನೊಬ್ಬ ಸ್ನೇಹಿತ ಮೇಸ್ಞೋರನ್ನು ಎದುರಾಗುತ್ತಾರೆ. ಆಗ ರೇಮೊನ್ ಕೈಲಿದ್ದ ರಿವಾಲ್ವರ್ ಮಾರ್ಸೋ ಕೈಗೆ ಶಿಫ್ಟ್ ಆಗುತ್ತದೆ. ಇದನ್ನು ಕಂಡು ಅರಬ್ಬರು ಓಡಿ ಹೋಗುತ್ತಾರೆ. ನಂತರ ಅಲ್ಲಿಂದ ವಾಪಾಸಾಗಿ ಮಾರ್ಸೋ ಅಲ್ಲಿನ ಬಿಸಿಲು ತಾಳದೆ ನಿಂತರೂ ನಡೆದರೂ ಒಂದೇ ಎಂದು ಭಾವಿಸಿ ಗಾಯಗೊಂಡ ರೇಮೊನ್ ಮತ್ತು ಸ್ನೇಹಿತನನ್ನು ಬಿಟ್ಟು ಒಬ್ಬನೇ ಬಿಸಿಲಲ್ಲಿ ಮರಳ ತೀರದೆಡೆಗೆ ನಡೆಯುತ್ತಾನೆ. ಆಗ ರೇಮೊನ್ನ ಅರಬ್ಬ ಅಲ್ಲೇ ಮಲಗಿದ್ದು ಇವನತ್ತ ನೋಡಿ, ಎದ್ದುನಿಂತು ಕೈ ಜೇಬಿಗಿಳಿಸುತ್ತಾನೆ. ಆಗ ಮಾರ್ಸೊ ತೀವ್ರವಾದ ಬಿಸಿಲಿನಲ್ಲಿ ಸಮುದ್ರದಿಂದ ಬೀಸುತ್ತಿದ್ದ ಬಿಸಿಗಾಳಿಯಲ್ಲಿ ಬೆಂಕಿಯುಗುಳುತ್ತಿದ್ದ ಸೂರ್ಯ ಮತ್ತು ಮರಳಿನ ನಡುವೆ ತನ್ನ ಹಣೆಯಮೇಲಿನ ಬೆವರಹನಿಗಳ ಹಿಂಸೆಯಲ್ಲಿ ಅರಬ್ನ ಕಡೆ ರಿವಾಲ್ವರ್ ಹಿಡಿದು ಕುದುರೆ ಒತ್ತುತ್ತಾನೆ. ಕ್ಷಣ ಹೊತ್ತು ನಿಂತು ಸತ್ತು ಬಿದ್ದವನ ಕಡೆ ನೋಡುತ್ತ ಮತ್ತೇ ನಾಲ್ಕು ಗುಂಡು ಹಾರಿಸುವಲ್ಲಿಗೆ ಕಾದಂಬರಿಯ ಮೊದಲ ಭಾಗ ಮುಗಿಯುತ್ತದೆ.
ಎರಡನೆಯ ಭಾಗ ಮಾರ್ಸೊ ಬಂದೀಖಾನೆಯಲ್ಲಿ ವಿಚಾರಣೆಗೆ ಒಳಗಾಗುವ ಪ್ರಸಂಗದಿಂದ ಪ್ರಾರಂಭವಾಗುತ್ತದೆ. ವಕೀಲರು ಕೇಳುವ ಪ್ರಶ್ನೆಗಳು ನೇರವಾಗಿ ಕೊಲೆಗೆ ಸಂಬಂಧಿಸಿರದೆ ಮಾರ್ಸೋನ ಖಾಸಗಿ ಜೀವನದ ಬಗ್ಗೆ, ಅವನ ಚಾರಿತ್ರ್ಯದ ಬಗ್ಗೆ, ಅವನ ದಿನಚರಿ ಮತ್ತು ಆಸಕ್ತಿಗಳ ಬಗ್ಗೆ, ತನ್ನ ತಾಯಿ ತೀರಿ ಹೋದಾಗಿನ ಅವನ ವರ್ತನೆಗಳ ಬಗ್ಗೆ, ಗುಂಡು ಯಾಕೆ ಹೊಡೆದೆ ಎನ್ನುವುದಕ್ಕಿಂತ ಹೇಗೆ ಹೊಡೆದೆ ಎಲ್ಲಿ ಹೊಡೆದೆ ಎಷ್ಟು ಸಮಯದಲ್ಲಿ ಹೊಡೆದೆ ಎನ್ನುವುದರಿಂದ ತುಂಬಿಹೋಗಿರುತ್ತವೆ. ಸರ್ಕಾರಿ ವಕೀಲರು ಬಂದು ಕೇಳುವ ಪ್ರಶ್ನೆಗಳು ಸಹ ಮಾರ್ಸೋ ಎಂತಹ ವ್ಯಕ್ತಿ ಎನ್ನುವುದನ್ನೇ ದಾಖಲಿಸಲು ಪ್ರಯತ್ನಿಸುತ್ತವೆ. ವಿಚಾರಣಾ ನ್ಯಾಯಾಧೀಶರು ಪ್ರಶ್ನಿಸುತ್ತಾ ಹತ್ತು ಮಾತಾಡಿದರೆ ಒಂದು ಮಾತಾಡುವ ಕೇವಲ ಸ್ವಹಿತಾಸಕ್ತಿಯ ಮನುಷ್ಯನೆಂದು, ನಿನ್ನ ಕೃತ್ಯ ನನ್ನನ್ನು ಅನೇಕ ರೀತಿಯಲ್ಲಿ ಅಚ್ಚರಗೊಳಿಸಿದೆ, ಕೊಲೆಯ ಕೃತ್ಯದ ಬಗ್ಗೆ ವರದಿ ಕೇಳಿದ ನಂತರವೂ ಅದನ್ನು ಮುಖ್ಯವಾಗಿ ಗಮನಿಸದೆ ದೇವರ ದಯೆ ಇದ್ದರೆ ನಿನಗೆ ಸಹಾಯ ಮಾಡುವೆ ಎಂದು, ತಾಯಿ ತೀರಿಕೊಂಡಾಗ ಮಾರ್ಸೊ ವರ್ತನೆಗಳ ಬಗ್ಗೆ, ಐದು ಗುಂಡು ಯಾಕೆ ಹೊಡೆದೆ, ಎರಡನೇ ಗುಂಡು ಹೊಡೆಯಲು ಯಾಕೆ ತಡೆದೆ ಎಂಬ ಮತ್ತೆ ಮತ್ತೆ ಅದೇ ಪ್ರಶ್ನೆಗಳ ದಾಳಿಯಲ್ಲಿ ಮಾರ್ಸೊ ಸುಮ್ಮನಿದ್ದದ್ದನ್ನು ಕಂಡು ಬೆಳ್ಳಿ ಶಿಲುಬೆಯ ಹಿಡಿದು ಭಾವೋದ್ವೇಗದಲ್ಲಿ ದೇವರಿಂದ ಕ್ಷಮಾಭಿಕ್ಷೆ ನಿನಗಿದೆ ಎನ್ನುತ್ತಾರೆ. ದೇವರನ್ನು ನಂಬಿಸಲು ಹೆಣಗಾಡಿ ನನ್ನ ಅನುಭವದಲ್ಲಿ ಇದುವರೆಗೆ ನಿನ್ನಂಥ ಕಠಿಣ ಹೃದಯವನ್ನು ನೋಡಿರಲಿಲ್ಲ. ‘ನನ್ನೆದುರಿಗೆ ಇದುವರೆಗೆ ಬಂದ ಎಲ್ಲ ಅಪರಾಧಿಗಳು ಪ್ರಭು ನಮಗಾಗಿ ಭರಿಸಿದ ಸಂಕಟದ ಈ ಶಿಲುಬೆಯನ್ನು ನೋಡಿ ಕಣ್ಣೀರಿಡುತ್ತಿದ್ದರು’ ಎಂದು ಹೇಳಿ ಎದ್ದು ನಿಂತು ಇದರ ಬಗ್ಗೆ ನಿನಗೆ ಪಶ್ಚಾತ್ತಾಪವಿದೆಯೇ ಎಂದಾಗ ಪಶ್ಚಾತ್ತಾಪವೇನಿಲ್ಲ ಆದರೆ ಒಂದು ರೀತಿಯ ಚಿಂತೆ ಅಷ್ಟೇ ಎಂದದ್ದು ಕೇಳಿ ವಿಚಾರಣಾ ನ್ಯಾಯಾಧೀಶ ನಿರ್ಗಮಿಸಿದ. ನಂತರ ಅನೇಕ ಸಾರಿ ನ್ಯಾಯಾಧೀಶನ ಮುಂದೆ ಹಾಜರಾದಾಗ ಮಾರ್ಸೋ ವ್ಯಕ್ತಿತ್ವದ ಬಗ್ಗೆ ನಡೆದ ವಿಚಾರಣೆಯೇ ಅವನ ಕೊಲೆಯ ವಿಚಾರಣೆ ಎಂಬಂತೆ ಸಾಗಿ ಬಂದಿತು. ಬಂದೀಖಾನೆಯಲ್ಲಿ ಹೊಂದಿಕೊಳ್ಳಲು ಮಾಡುವ ಪ್ರಯತ್ನ, ನಿರೀಕ್ಷಣಾ ಕೊಠಡಿ, ವಿಚಾರಣಾ ಕಟಕಟೆ, ನ್ಯಾಯಾಧೀಶರು ಕೇಳುವ ಪ್ರಶ್ನೆಗಳು, ವಕೀಲರು ನಡೆಸುವ ವಾದಗಳು, ವಿಶ್ರಾಂತಿಧಾಮದ ವಾರ್ಡನ್ನೊಳಗೊಂಡ ಸಾಕ್ಷಿದಾರರು, ಪ್ಯಾರಿಸ್ ಪತ್ರಿಕೆಯ ವರದಿಗಾರರು, ಮಾರ್ಸೋ ಫ್ರಾನ್ಸಿನವನು ಎಂಬ ಕಾರಣಕ್ಕೆ ಅಲ್ಲಿನ ನ್ಯಾಯ ತೀರ್ಮಾನಗಳು, ಶಿಕ್ಷೆಯನ್ನು ತಪ್ಪಿಸಲಾಗದೆ ಕಡಿಮೆ ಮಾಡಿಸಲು ಪ್ರಯತ್ನಿಸಿದ ಮಾರ್ಸೋ ಪರ ವಕೀಲ, ನ್ಯಾಯಾಲಯದಲ್ಲಿ ಇತರೆ ವಕೀಲರು ವರ್ತಿಸುವ ರೀತಿ, ಅಲ್ಲಿನ ಕೈದಿಗಳು, ಮಾರ್ಸೋ ಹೇಳಬೇಕೆಂದುಕೊಳ್ಳುವುದು, ಹೇಳದೇ ಹೋದದ್ದು, ಇವುಗಳ ನಡುವೆ ಹಿಂಸಿಸುವ ಬಿಸಿಲು, ವಿಚಿತ್ರವಾದ ಶೆಕೆ ಹೀಗೆ ವಿಭಿನ್ನ ವಿವರಗಳಲ್ಲಿ ಕಾದಂಬರಿ ಮಾರ್ಸೊನ ಒಟ್ಟು ವ್ಯಕ್ತಿ ಚಿತ್ರಣ ಮತ್ತು ಕಾನೂನು ವ್ಯವಸ್ಥೆಯ ವಸ್ತುಸ್ಥಿತಿಯನ್ನು ಬಿಚ್ಚಿಡುತ್ತ ಸಾಗುತ್ತದೆ.
ಮಾರ್ಸೊ ನ್ಯಾಯಾಲಯದಲ್ಲಿ ತನ್ನ ಕೃತ್ಯದ ಕುರಿತು ಹೇಳುತ್ತಿದ್ದುದೆಲ್ಲಾ ವಸ್ತುನಿಷ್ಠವಾಗಿದ್ದರೂ ಮತ್ತು ಸ್ಪಷ್ಟವಾಗಿದ್ದರೂ ನ್ಯಾಯ ತೀರ್ಮಾನ ಮಾಡಬೇಕಾದರೆ ಅದು ಸಮಂಜಸವಾಗಿ ನ್ಯಾಯಾಧೀಶರಿಗೆ ಕಾಣಲಿಲ್ಲ. ಅಷ್ಟಕ್ಕೂ ಅಲ್ಲಿನವರೇ ರೂಪಿಸಿಕೊಂಡ ಅವನ ಬಗೆಗಿನ ಕಲ್ಪನೆಗಳು, ಅವನ ನಿರ್ಭಾವುಕತೆ, ತನ್ನ ಕೃತ್ಯದ ಕುರಿತು ಅನ್ಯಮನಸ್ಕನಾಗಿ ಯೋಚಿಸುತ್ತಾನೆ ಅತ್ಯಂತ ಕಠಿಣ ಹೃದಯಿ ಎಂಬ ನಂಬಿಕೆಗಳು, ಮಾರ್ಸೋನ ನಿಜ ವರ್ತನೆಗಳಲ್ಲದಿದ್ದರೂ ಅವನು ಹಾಗೆಯೇ ನಿರೂಪಣೆಗೊಳ್ಳುತ್ತಿದ್ದ. ಸರ್ಕಾರಿ ವಕೀಲ ಇರುವ ವಿವರಗಳನ್ನೇ ಇಟ್ಟುಕೊಂಡು ಅದಕ್ಕೆ ಹೊಸ ರೀತಿಯ ಕಥೆಯನ್ನೇ ಕಟ್ಟಿ ಮಾರ್ಸೋನನ್ನು ಕೊಲೆಪಾತಕ ಎಂದು ಸಾಬೀತುಪಡಿಸುವ ಜಾಣತನವನ್ನು ಎಲ್ಲರೂ ಮೆಚ್ಚುವಂತೆ ವಾದಿಸಿದ. ವಕೀಲ ವಿಚಿತ್ರ ಧಾಟಿಯಲ್ಲಿ ಸಾಮಾನ್ಯ ಮನುಷ್ಯನಲ್ಲಿರುವ ಯಾವ ನೈತಿಕ ಗುಣಗಳೂ ಇಲ್ಲದ, ಅದನ್ನು ಪಡೆದುಕೊಳ್ಳುವ ಯೋಗ್ಯತೆ ಇಲ್ಲದವನಲ್ಲಿ ಆ ಗುಣಗಳಿಲ್ಲ ಎಂದು ದೂಷಿಸುವುದು ನ್ಯಾಯವಲ್ಲ ಆದರೆ ಕ್ರಿಮಿನಲ್ ಕೃತ್ಯ ಎಸಗಿದ ಈತ ವಿದ್ಯಾವಂತ. ಈತನಲ್ಲಿ ಒಳ್ಳೆಯ ಗುಣವೊಂದೂ ಇಲ್ಲ. ಈತ ಸಮಾಜಕಂಟಕ ಎಂದು ದೊಡ್ಡ ದೊಡ್ಡ ಮಾತುಗಳನ್ನಾಡಿ, ಅಭಿನಯಿಸಿ, ಕೆಲವು ದೀರ್ಘ ತೀವ್ರಟೀಕೆಗಳನ್ನು ಮಾಡಿ ಮಾರ್ಸೋನ ಕೃತ್ಯ ಪೂರ್ವಯೋಚಿತ ಎಂದು ಸಾಧಿಸುತ್ತ, ಈತ ಕೊಲೆಗಡುಕ, ಮಾನವತ್ವದ ಕಿರುಗಿರಣವೂ ಇಲ್ಲದ ಈ ಪಾತಕಿ ಕಂಡು ನನಗಾದ ಸಹಜ, ಧರ್ಮಶೀಲ ಕೋಪವೇ ಶಿಕ್ಷೆಯಾಗುವಂತೆ ಮಾಡುವುದು ನನ್ನ ಅಂತರ್ವಾಣಿಯ ಪವಿತ್ರ ಕರ್ತವ್ಯ ಎನಿಸುತ್ತದೆ ಎಂದು ವಾದಿಸುತ್ತಾನೆ. ಮಾರ್ಸೊ ಪರ ವಕೀಲ “ಜೂರಿಗಳೆ, ಈತ ಸಾಚಾ. ಕಷ್ಟಪಟ್ಟು ದುಡಿಯುವವನು. ಎಳೆಯ ವಯಸ್ಸಿನವನು. ನೀವು ಇಂಥವನನ್ನು ಸಾವಿನ ದವಡೆಗೆ ಖಂಡಿತ ನೂಕಲಾರಿರಿ. ಜೀವಮಾನ ಇಡೀ ಅವನು ಪಡುವ ಪಶ್ಚಾತಾಪವೇ ಅವನಿಗೆ ಸಾಕಷ್ಟು ಶಿಕ್ಷೆಯಲ್ಲವೇ?” (ಪು.೧೦೬) ಎಂದು ಶಿಕ್ಷೆಯನ್ನು ಕಡಿಮೆಮಾಡಲು ಏನೇ ವಾದಿಸಿದರೂ ಕೊನೆಗೆ ಮುಖ್ಯ ನ್ಯಾಯಾಧೀಶ ‘ಫ್ರೆಂಚ್ ಜನತೆಯ ಹೆಸರಿನಲ್ಲಿ’ ಯಾವುದೋ ‘ಬಹಿರಂಗ ಸ್ಥಳದಲ್ಲಿ’ ಮಾರ್ಸೊನ ವಧೆಗೆ ಅನುಜ್ಞೆ ಮಾಡಿದ.
ನಿರ್ದಯನೆಂದು ಸಾಬೀತು ಮಾಡಿದ ನಂತರ ಶಿಕ್ಷೆಗೆ ಗುರಿಯಾದ ಮಾರ್ಸೊನನ್ನು ಮೂರನೇ ಬಾರಿ ಭೇಟಿಯಾಗಲು ಬಂದ ಜೈಲಿನ ಪಾದ್ರಿಯನ್ನು ನೋಡಲು ನಿರಾಕರಿಸಿ ಗಿಲೋಟಿನ್ ನಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾವುದು ಅನಿವಾರ್ಯವೋ ಅದರಲ್ಲೂ ಬಿರುಕು ಹುಡುಕಿ, ನಿವಾರಣೆ ಸಾಧ್ಯವೋ? ಎನ್ನುವ ಪ್ರಶ್ನೆಗಳಲ್ಲಿ ಮಾರ್ಸೊ ಮುಳುಗುತ್ತಾನೆ. ಬಹಿರಂಗ ವಧೆಗಳಲ್ಲಿ ಗಿಲೋಟಿನ್ನಿಂದ ತಪ್ಪಿಸಿಕೊಂಡ ಪ್ರಕರಣಗಳನ್ನು ನೆನೆಯುತ್ತಾನೆ. ಇಷ್ಟು ದಿನ ಅದರ ಕಡೆ ಗಮನ ಕೊಡದಿದ್ದಕ್ಕೆ ತನ್ನನ್ನೇ ತಾನು ಹಳಿದುಕೊಳ್ಳುತ್ತಾನೆ. ಕಾದಂಬರಿಯ ಕೊನೆಯ ಭಾಗದಲ್ಲಿ ಅಂತರ್ಮುಖಿಯಾಗಿ ಬಹಳ ತೀವ್ರವಾಗಿ ತನ್ನ ಕೃತ್ಯವನ್ನು, ಬಹಿರಂಗ ವಧೆಗಳ ಬಗ್ಗೆ ಮನುಷ್ಯನ ಹುಚ್ಚು ಪ್ರಯತ್ನಗಳನ್ನು, ಕಾನೂನು ವ್ಯವಸ್ಥೆ, ವೃತ್ತ ಪತ್ರಿಕೆಗಳು, ಬರೆದ ಪುಸ್ತಕಗಳು ದಾಖಲಿಸದೆ ಇರುವ ಮನುಷ್ಯನ ನಂಬಿಕೆಗಳ ಸಾಧ್ಯತೆಗಳನ್ನು ಮಾರ್ಸೊ ಯೋಚಿಸುತ್ತಾನೆ. “ಎಷ್ಟು ಪ್ರಯತ್ನಿಸಿದರೂ ಈ ಕ್ರೂರ ನಂಬಿಕೆಯನ್ನು ಸಹಿಸಿಕೊಳ್ಳಲಾಗಲಿಲ್ಲ. ನಿಜವಾಗಿಯೂ ಸ್ವಲ್ಪ ಯೋಚಿಸಿದರೆ ಯಾವುದೋ ಆಧಾರದ ಮೇಲೆ ಕೊಟ್ಟಿದ್ದ ತೀರ್ಮಾನ, ಅದನ್ನು ಕೊಟ್ಟ ಶುರುವಾದ, ಬದಲಿಸಲಾಗದ ಘಟನಾವಳಿಗಳ ನಡುವೆ ತುಂಬ ಅಂತರವಿತ್ತು. ಐದು ಗಂಟೆಗೆ ಬದಲು ತೀರ್ಪನ್ನು ಎಂಟು ಗಂಟೆಗೆ ಓದಿದ್ದು, ಅದು ಬೇರೆಯೇ ಆಗಬಹುದಾದ ಸಾಧ್ಯತೆಯಿದ್ದುದು ಒಳಚಡ್ಡಿ ಬದಲಾಯಿಸುವವರು ಅದನ್ನು ನಿರ್ಣಯಿಸದ್ದು, ತೀರ್ಪನ್ನು ತೀರಾ ಅಸ್ಪಷ್ಟವಾದ ‘ಫ್ರೆಂಚ್’ ಜನತೆಯ ಹೆಸರಲ್ಲಿ ನಡೆಸಿದ್ದು, ಅದೇಕೆ, ಚೀನಾ, ಜರ್ಮನ್ ದೇಶದ ಜನರ ಹೆಸರಲ್ಲಿ ಆಗಕೂಡದು – ಇದೆಲ್ಲ ನ್ಯಾಯಾಲಯದ ತೀರ್ಪಿನ ಗುರುತ್ವವನ್ನು ತುಂಬ ಕಳೆಯಿತು. ಆದರೆ ತೀರ್ಪು ಕೊಟ್ಟ ಗಳಿಗೆಯಿಂದ ಅದರ ಪ್ರಭಾವ ನಾನು ಬೆನ್ನು ಒರಗಿಸಿ ಮಲಗಿರುವ ಈ ಕೋಣೆಯ ಗೋಡೆಯಷ್ಟೇ ಬಲವತ್ತಾಗಿದೆ, ಸ್ಫುಟವಾಗಿದೆ ಅನ್ನುವುದು ನನಗೆ ಖಾತ್ರಿಯಾಯಿತು. ಇಂಥ ಯೋಚನೆಗಳು ನನ್ನ ತಲೆಯಲ್ಲಿ ಹಾದು ಹೋದಾಗ, ನಮ್ಮಮ್ಮ ಅಪ್ಪನ ಬಗ್ಗೆ ಹೇಳಿದ ಕಥೆಯ ನೆನಪಾಯಿತು. ನಾನು ಅವನನ್ನು ನೋಡಿಯೇ ಇಲ್ಲ. ಅಮ್ಮ ಹೇಳಿರುವುದನ್ನು ಬಿಟ್ಟರೆ ನನಗೆ ಅವನ ಬಗ್ಗೆ ಯಾವ ತಿಳಿವೂ ಇಲ್ಲ. ಒಂದು ಸಾರಿ ಅವನು ಬಹಿರಂಗವಧೆಯನ್ನು ನೋಡಹೋಗಿದ್ದನಂತೆ. ಅದನ್ನು ನೆನೆಸಿಕೊಂಡರೆ ಅವನಿಗೆ ಹೊಟ್ಟೆ ತೊಳಸಿಬರುವಹಾಗಾಗುತ್ತಿತ್ತು. ಆದರೂ ಅದನ್ನು ನೋಡಿದ. ಮನೆಗೆ ಬಂದಾಗ, ವಾಂತಿಯಾಗಿ, ಕಕ್ಕಿಕೊಂಡದ್ದೇ ಕಕ್ಕಿಕೊಂಡದ್ದು. ಆಗ ನಮ್ಮಪ್ಪನ ನಡತೆ ನನಗೆ ತುಂಬಾ ಅಸಹ್ಯವಾಗಿ ಕಂಡಿತು. ಆದರೆ ಈಗ ನನಗೆ ಅರ್ಥವಾಗುತ್ತೆ. ಅವನು ತೀರ ಸಹಜವಾಗಿ ನಡೆದುಕೊಂಡಿದ್ದ. ಫಾಸೀ ಶಿಕ್ಷೆಗಿಂತ ಮಹತ್ವವಾದದ್ದು ಬೇರೇನು ಇಲ್ಲ, ಅಂತ ನನಗೇಕೆ ಹೊಳೆಯಲಿಲ್ಲವೋ? ಒಂದು ನಿಲುವಿಂದ ಅದೊಂದೇ ಮನುಷ್ಯನ ಆಸಕ್ತಿಯನ್ನು ಸೆರೆಹಿಡಿಯುವಂಥದು. ನಾನೇನಾದರೂ ಸೆರೆಯಿಂದ ತಪ್ಪಿಸಿಕೊಂಡರೆ ಪ್ರತಿಯೊಂದು ವಧೆಯನ್ನೂ ನೋಡುತ್ತೇನೆ ಅಂತ ನಿರ್ಧರಿಸಿದೆ. ಈ ಸಾಧ್ಯತೆಯನ್ನು ಕುರಿತು ಯೋಚಿಸಿದ್ದು ನನ್ನ ಜಾಣತನವನ್ನೇನೂ ತೋರಿಸುವುದಿಲ್ಲ. ಈ ಕ್ಷಣಕ್ಕೆ ಮಾತ್ರ ನಾನು ಸ್ವತಂತ್ರ ಅಂತ ಮನಸ್ಸಿನಲ್ಲಿ ಚಿತ್ರಿಸಿಕೊಂಡೆ. ಎರಡು ಪೊಲೀಸರ ದಳಗಳ ಬೆನ್ನಲ್ಲಿ, ಅಂದರೆ, ಹೊರಗಡೆಯವನಾಗಿ, ನೋಟ ನೋಡ ಬಂದಿರುವ ಬರಿಯ ಪ್ರೇಕ್ಷಕನಾಗಿ ನಿಂತು ಮನೆಗೆ ಹೋಗಿ ಕಕ್ಕಿಕೊಳ್ಳುವ ಯೋಚನೆ ನನ್ನನ್ನು ಹುಚ್ಚು, ವಿಸಂಗತ ಉತ್ಸಾಹದಿಂದ ತುಂಬಿತು. ಕಲ್ಪನೆಯನ್ನು ಹಾಗೆ ಹರಿಯಗೊಟ್ಟುದು ಶುದ್ಧ ಮುಠ್ಠಾಳತನ. ಒಂದು ಕ್ಷಣ ಕಳೆದ ಮೇಲೆ ಭಯಂಕರ ನಡುಕ ಹತ್ತಿ, ಕಂಬಳಿಯಲ್ಲಿ ಮೈ ಸುತ್ತಿಕೊಳ್ಳಬೇಕಾಯಿತು. ನನ್ನ ಹಲ್ಲುಗಳು ಕಟಕಟಿಸುತ್ತಿದ್ದವು. ಏನು ಮಾಡಿದರು ಅದನ್ನು ತಡೆಯಲಾಗಲಿಲ್ಲ. ಆದರೆ ಮನುಷ್ಯ ಯಾವಾಗಲೂ ವಿವೇಕಿಯಾಗಿರುವುದು ಸಾಧ್ಯವೇ? ಇನ್ನೊಂದು ಹುಚ್ಚು ಕಲ್ಪನೆಯಲ್ಲಿ ನಾನು ಹೊಸ ಶಾಸನಗಳನ್ನು ಮಾಡಿ, ಶಿಕ್ಷೆಯನ್ನು ಬದಲಾಯಿಸುತ್ತಿದ್ದೆ. ನನ್ನ ಬುದ್ಧಿಗೆ ಅನಿಸಿದ್ದು: ಅಪರಾಧಿಗೆ ಒಂದು ಅವಕಾಶ ಕೊಡಬೇಕು. ಸಾವಿರದಲ್ಲಿ ಒಂದು. ಸಾವಿರದಲ್ಲಿ ಒಂಬೈನೂರ ತೊಂಬೋತ್ತೊಂಬತ್ತು ಬಾರಿ ರೋಗಿಯನ್ನು (ಅವನನ್ನು ನಾನು ‘ರೋಗಿ’ ಅಂತ ಈಗ ಭಾವಿಸಿದೆ) ಕೊಲ್ಲುವ ಯಾವುದಾದರೂ ಔಷದ ಇರಬೇಕು. ಅಥವಾ ಅಂಥ ಔಷಧಗಳ ಮಿಶ್ರಣ. ಇದು ಅವನಿಗೆ ತಿಳಿದಿರಲೇಬೇಕು ಅಂತ ಹೇಳುವ ಅಗತ್ಯವಿದೆಯೇ? ಶಾಂತವಾಗಿ, ಗಾಢವಾಗಿ ಯೋಚನೆ ಮಾಡಿದ ಮೇಲೆ ಅಪರಾಧಿ ತಪ್ಪಿಸಿಕೊಳ್ಳುವ ಅವಕಾಶ ಚೂರೂ ಇಲ್ಲದೆ ಇರುವುದೇ ಗಿಲೋಟಿನ್ನ ಕುಂದು ಅನ್ನುವ ನಿರ್ಣಯಕ್ಕೆ ಬಂದೆ. ರೋಗಿ ಸಾಯಬೇಕೆಂಬ ಆಜ್ಞೆ ತಡೆಯಿಲ್ಲದೆ ನಡೆದುಹೋಗುತ್ತೆ. ಅದು ಮೊದಲಿಗೇ ಬಂದ ನಿರ್ಧಾರ. ಅಕಸ್ಮಾತ್ತಾಗಿ ಯಂತ್ರ ತನ್ನ ಕೆಲಸ ಮಾಡದಿದ್ದರೆ, ಅದನ್ನು ಮತ್ತೆ ಕೆಲಸಕ್ಕೆ ಹಚ್ಚುತ್ತಿದ್ದರು. ಇದರಿಂದ ಆದದ್ದೇನು? ದಂಡನೆಗೆ ಗುರಿಯಾದವ ಉಪಕರಣ ಕೆಲಸ ಮಾಡುವ ಸ್ಥಿತಿಯಲ್ಲಿ ಇರಲಿ ಅನ್ನುವ ಭರವಸೆ ಇಡಬೇಕಾಯಿತು? ನ್ಯಾಯಾಂಗದಲ್ಲಿ ಇದೊಂದು ದೋಷ ಅಂತ ಯೋಚಿಸಿದೆ. ಮೇಲ್ನೋಟಕ್ಕೆ ನನ್ನ ವಾದ ಸರಿಯಾಗಿ ಇತ್ತು. ಇನ್ನೊಂದು ದೃಷ್ಟಿಯಿಂದ ನೋಡಿದರೆ ಈ ಪದ್ಧತಿ ತುಂಬಾ ದಕ್ಷವಾಗಿ ನಡೆಯುತ್ತದೆ ಅನ್ನಿಸಿತು. ಒಟ್ಟಿನಲ್ಲಿ ಇಷ್ಟು: ಶಿಕ್ಷೆಗೊಳಗಾದವನು ಮಾನಸಿಕವಾಗಿ ಅದರ ಜೊತೆ ಸಹಕರಿಸಬೇಕು, ಏನೂ ಅಡೆತಡೆಯಿಲ್ಲದೆ ಕೆಲಸ ನಡೆಯಲಿ ಅಂತ ಕೋರಬೇಕು, ಅವನ ಒಳ್ಳೆಯದಕ್ಕೆ.”(ಪು.110,111) ಹೀಗೆಲ್ಲಾ ಯೋಚಿಸುತ್ತಾ ಮಾರ್ಸೋ ಮರಣದಂಡನೆಗೆ ಒಳಗಾದ ಅಪರಾಧಿಯನ್ನು ರೋಗಿ ಎನ್ನುತ್ತ ತನ್ನ ಯೋಚನೆಯ ನಂತರದ ಕ್ಷಣದಲ್ಲಿಯೇ ಮತ್ತೊಂದು ಯೋಚನೆಗೆ, ಮನಸ್ಥಿತಿಗೆ ತಲುಪುತ್ತಿದ್ದ. ಕೆಲವೊಮ್ಮೆ ತಾನು ನಂಬಿಕೊಂಡದನ್ನೇ ನಿರಾಕರಿಸಿ ಮತ್ತೊಂದನ್ನು ಸರಿಯೆಂದು ಭಾವಿಸುತ್ತಿದ್ದ. 1789ರ ರಕ್ತಕ್ರಾಂತಿಯ ಭಾಗವಾದ ಗಿಲೋಟಿನ್ ಬಗೆಗೆ ತೀವ್ರವಾಗಿ ಯೋಚಿಸಿದ. ಪ್ರತಿ ಗಳಿಗೆಯಲ್ಲಿಯೂ ಅವನು ಯೋಚಿಸುತ್ತಿದ್ದುದೇ ಅವನ ಜೀವಂತಿಕೆಯಾಗಿತ್ತು. ನಿಜ ಅರ್ಥದಲ್ಲಿ ಅವನ ಸ್ವಾತಂತ್ರ್ಯವಾಗಿತ್ತು.
ಈ ಸಮಯದಲ್ಲಿ ಒಬ್ಬ ಪಾದ್ರಿ ಮಾರ್ಸೋನನ್ನು ಇಟ್ಟಿರುವ ಚಿಕ್ಕ ಕೊಠಡಿಗೆ ಸದ್ದಿಲ್ಲದೇ ಬರುತ್ತಾನೆ. ಜೀವನದ ಕೊನೆಯ ಗಳಿಗೆಯಲ್ಲಿ ಪ್ರಾರ್ಥನಾಪತ್ರವನ್ನೂ ತಿರಸ್ಕರಿಸಿ ತನ್ನದೇ ಯೋಚನೆಗಳ ಸುಖದಲ್ಲಿ ಇರುವವನ್ನು ಎದುರಾದಾಗಲೂ ಪಾದ್ರಿ ಈ ಖಂಡಿತವಾದಿಗೆ ದೇವರು ನಿನಗೆ ಸಹಾಯ ಮಾಡುತ್ತಾನೆ ಮರ್ತ್ಯನ್ಯಾಯಕ್ಕೆ ಬೆಲೆಯಿಲ್ಲ, ದೇವಾನ್ಯಾಯ ಗಣನೀಯವಾದದ್ದು ಎನ್ನುತ್ತಾನೆ. ಈ ಗೋಡೆಯಲ್ಲಿ ದೇವಪುತ್ರನ ಮುಖ ಕಾಣಬಹುದು ಎಂದು ದೇವರ ಬಗ್ಗೆ ಉದ್ದುದ್ದ ಕೊರೆಯುತ್ತಾನೆ. ಮಾರ್ಸೋನ ತೀರ್ಮಾನ ಒಂದೇ- ತನಗೆ ಉಳಿದಿರುವ ಸಮಯ ತೀರಾ ಕಡಿಮೆ, ಅದನ್ನು ದೇವರ ಮೇಲೆ ದಂಡಮಾಡಲು ಅವನಿಗಿಷ್ಟವಿಲ್ಲ. ಪಾದ್ರಿಯನ್ನು ಉದ್ದೇಶಿಸುತ್ತಾ ಮಾರ್ಸೋನ ಕೊನೆಯ ಸ್ವಗತ ಹೀಗಿದೆ: “ಇತರರ ಸಾವು, ಅಮ್ಮನ ಪ್ರೀತಿ, ಅವನ ದೇವರು, ಇದರಿಂದ ನನಗಾಗುತ್ತಿದ್ದದ್ದೇನು? ಅಥವಾ ಒಬ್ಬ ತನ್ನ ಬಾಳನ್ನು ಬದುಕುವ ರೀತಿಯನ್ನು ಆಯ್ದುಕೊಂಡರೆ, ತನ್ನ ಗತಿಯನ್ನು ತಾನು ನಿರ್ಧರಿಸಿಕೊಳ್ಳಹೋದರೆ, ಅದರಿಂದಾದುದೇನು? ಒಂದೇ ‘ಗತಿ’ ನನ್ನೊಬ್ಬನನ್ನೇ ಅಲ್ಲ ನನ್ನ ಅಣ್ಣ ತಮ್ಮಂದಿರೆಂದುಕೊಳ್ಳುವ ಇತರ ಲಕ್ಷಾಂತರ ಜನಗಳನ್ನು ಅದೇ ಆವರಿಸಿಕೊಳ್ಳುತ್ತಿದ್ದಾಗ? ಖಂಡಿತವಾಗಿ, ನಿಶ್ಚಯವಾಗಿ ಇದವನಿಗೆ ಗೊತ್ತಿರಬೇಕು? ಬದುಕಿರುವ ಪ್ರತಿ ಜೀವವೂ ಭಾಗ್ಯವಂತ ಜೀವ. ಇರುವುದು ಒಂದೇ ವರ್ಗ- ಭಾಗ್ಯವಂತ ವರ್ಗ. ಎಲ್ಲರೂ ಒಂದು ದಿನ ಸಾವಿನ ಶಿಕ್ಷೆಗೆ ಗುರಿಯಾಗಲೇಬೇಕು: ಇತರರ ಸರದಿಯಂತೆ ಅವನದೂ ಬರುತ್ತದೆ. ಕೊಲೆ ಆಪಾದನೆ ಹೊರಿಸಿ, ಅಮ್ಮ ಸತ್ತಾಗ ಅಳಲಿಲ್ಲ ಅಂದು ಗಿಲೋಟಿನ್ಗೆ ತಲೆ ಒಡ್ಡಿಸಿದರೆ, ಆದ ವ್ಯತ್ಯಾಸವೇನು? ಎಲ್ಲ ಮುಗಿಯುವುದು ಹೀಗೇ. ಸಾಲಮಾನೊ ಹೆಂಡತಿಯೂ ಹೀಗೇ. ಅವನ ನಾಯಿಯೂ ಹೀಗೇ. ಆ ಕೀಲು ಗೊಂಬೆ, ಮೇಸ್ಞೋನನು ಮದುವೆಯಾಗಿದ್ದ, ಪ್ಯಾರಿಸ್ಸಿನವರಂತೆ ಮಾತಾಡುತ್ತಿದ್ದ ಹುಡುಗಿ ನನ್ನನ್ನು ಮದುವೆಯಾಗಬಯಸಿದ್ದ ಮಾರಿಯಷ್ಟೇ ‘ತಪ್ಪಿತಸ್ಥರು’ ಸೆಲೆಸ್ತ್ ರೇಮೊನ್ಗಿಂತ ತುಂಬ ಒಳ್ಳೆಯ ಮನುಷ್ಯ. ಆದರೆ ರೇಮೊನ್ ನನಗೆ ಅವನಷ್ಟೇ ಬೇಕಾಗಿದ್ದರೆ ತಾನೆ ಏನು? ಈ ಗಳಿಗೆಯಲ್ಲಿ ಮಾರೀ ತನ್ನ ಹೊಸ ಪ್ರಣಯಿಯನ್ನು ಮುತ್ತಿಡುತ್ತಿದ್ದರೆ ತಪ್ಪೇನು?”(ಪು.121) ಎನ್ನುತ್ತ ಉಸಿರೆಳೆಯುತ್ತಾ ಪಾದ್ರಿಯನ್ನು ಗಟ್ಟಿಯಾಗಿ ಹಿಡಿದಿದ್ದನ್ನು ವಾರ್ಡನ್ ಬಿಡಿಸಿದರು. ಮಾರ್ಸೋ ಮತ್ತೇ ಸ್ವಗತಕ್ಕಿಳಿದು ಮಾತಾಡುತ್ತಾ ಕೊನೆಗೆ – “ಸಾವು ಅಷ್ಟು ಸನಿಹದಲ್ಲಿದ್ದಾಗ, ಅಮ್ಮನಿಗೆ ಸ್ವಾತಂತ್ರ್ಯದ ಹೊಸಲಲ್ಲಿ ನಿಂತು, ಜೀವನವನ್ನು ಮತ್ತೆ ಆರಂಭಿಸಲಿರುವವನ ಹಾಗೆ ಅನ್ನಿಸಿರಬೇಕು. ಈ ಪ್ರಪಂಚದಲ್ಲಿ ಅವಳಿಗಾಗಿ ಅಳುವ ಹಕ್ಕು ಯಾರೊಬ್ಬರಿಗೂ ಇರಲಿಲ್ಲ. ನಾನು ಬಾಳನ್ನು ಮತ್ತೆ ಬದುಕುವ ಹವಣಿಕೆಯಲ್ಲಿದ್ದೆ. ಕೋಪದ ಹೊಳೆ ನನ್ನನ್ನು ತೊಳೆದು, ಸ್ವಚ್ಛ ಮಾಡಿ, ಆಸೆ-ಭರವಸೆಗಳನ್ನೆಲ್ಲ ಪೂರ್ಣ ಹೊರಹಾಕಿತ್ತು. ಕಪ್ಪು ಆಗಸದಲ್ಲಿ ತುಂಬಿ ಮಿನುಗುತ್ತಿದ್ದ ತಾರೆಗಳತ್ತ ನೋಡುತ್ತ ಮೊದಲ ಬಾರಿಗೆ, ಮೊತ್ತ ಮೊದಲ ಬಾರಿಗೆ ಪ್ರಕೃತಿಯ ಪ್ರಸನ್ನ ಔದಾಸೀನ್ಯಕ್ಕೆ ಹೃದಯವನ್ನು ಬಿಚ್ಚಿ ಒಡ್ಡಿದೆ. ಅದು ನನ್ನ ಹಾಗೆ, ನಿಜವಾಗಿ ನನ್ನ ಸೋದರನಂತೆ ಇದ್ದದ್ದು ನೋಡಿ ನಾನು ಸುಖಿಯಾಗಿದ್ದೆ, ಈಗಲೂ ಸುಖಿಯಾಗಿದ್ದೇನೆ ಅನ್ನುವ ಅರಿವು ಹೊಳೆಯಿತು. ಇದೆಲ್ಲದರ ಮುಗಿತಾಯಕ್ಕೆ, ನನ್ನ ಒಂಟಿತನ ಕಮ್ಮಿಯಾಗಿಸುವುದಕ್ಕೆ ನನ್ನ ಒಂದು ಬಯಕೆ ಉಳಿದಿತ್ತು. ನನ್ನ ಬಹಿರಂಗ ವಧೆಯ ದಿನ ಭಾರಿ ಪ್ರೇಕ್ಷಕರ ಗುಂಪು ಘೇರಾಯಿಸಿ, ಅಸಹ್ಯ, ಅವಾಚ್ಯ ಘೋಷಣೆ, ಹಿಡಿಶಾಪಗಳಿಂದ ನನ್ನನ್ನು ಸ್ವಾಗತಿಸಬೇಕು.”(ಪು.122) ಎಂಬ ವಾಕ್ಯದೊಂದಿಗೆ ಕಾದಂಬರಿ ಕೊನೆಯಾಗುತ್ತದೆ.
ಕಾದಂಬರಿಯ ಮೊದಲ ಭಾಗದಲ್ಲಿ ಮಾರ್ಸೋ ಈ ಮನುಷ್ಯನ ವರ್ತನೆಗಳ ಬಗ್ಗೆ ಆಲೋಚಿಸುತ್ತಾ ‘ದೀರ್ಘಾವಧಿಯಲ್ಲಿ ಮನುಷ್ಯ ಎಲ್ಲದರೊಂದಿಗೆ ಹೊಂದಿಕೊಳ್ಳುತ್ತಾನೆ’ ಎನ್ನುತ್ತಾನೆ. ಹಾಗೆ ರೂಢಿಗೊಂಡ ವರ್ತನಾ ಪ್ರಪಂಚದಿಂದ ಭಿನ್ನವಾಗುತ್ತಾ ಬದುಕಿನ ನಿಜ ಅರ್ಥಗಳನ್ನು ಶೋಧಿಸುತ್ತಾನೆ. ಅವನು ಕೊಲೆ ಪ್ರಕರಣದಲ್ಲಿ ಆಪಾದಿತನಾಗಿ ಶಿಕ್ಷೆಗೆ ಒಳಗಾದಾಗ ಕಾದಂಬರಿಯ ಕೊನೆಯ ಭಾಗದಲ್ಲಿ ‘ಕಾಲಕ್ರಮೇಣ ಮನುಷ್ಯ ಎಲ್ಲವನ್ನೂ ಒಪ್ಪಿಕೊಳ್ಳುತ್ತಾನೆ’ ಎನ್ನುವ ಮೂಲಕ ತನ್ನ ಇರುವಿಕೆಯೇ ತನ್ನ ಸಂತೋಷವೆಂಬುದನ್ನು ಕಾಣಿಸುತ್ತಾನೆ. ಪ್ರಪಂಚದ ಅತ್ಯುತ್ತಮ ಕಾದಂಬರಿಗಳ ಪಟ್ಟಿಯಲ್ಲಿ ಒಂದಾದ ‘ದಿ ಔಟ್ಸೈಡರ್’ ಬರೆದ ಆಲ್ಬರ್ಟ್ ಕಾಮು ಮನುಷ್ಯನಲ್ಲಿ ಭ್ರಮಾತ್ಮಕ ಮನಸ್ಸು, ಪ್ರಾಮಾಣಿಕ ಮನಸ್ಸು ಮತ್ತು ಪ್ರತಿಭಟನೆಯ ಮನಸ್ಸನ್ನು ಗುರುತಿಸುತ್ತಾನೆ. ಕಾಮು ತನ್ನ ಗುರು ಜೀನ್ ಗ್ರೆನಿಯರ್ 1935ಲ್ಲಿ ಬರೆದ ಪ್ರಬಂಧ ಸಂಕಲನದಲ್ಲಿನ “ಈ ದೃಶ್ಯ ಪ್ರಪಂಚ ಎಷ್ಟು ಅದ್ಭುತ, ಯೌವ್ವನದ ಸುಖ ಎಂಥ ತೀವ್ರ ಬಗೆಯದು, ನಿಜ; ಆದರೆ ಈ ಜಗತ್ತಿನಲ್ಲಿ ದಾರ್ಷ್ಟ್ಯ ಅನ್ಯಾಯಗಳು ತುಂಬಿವೆ; ಮನುಷ್ಯನ ಒಳಿತಿನ ಬಗ್ಗೆ ಪ್ರಕೃತಿ ಭಾವ-ಹೀನವಾಗಿ, ಘೋರ ನಿರ್ಲಕ್ಷವನ್ನು ಮೆರೆದು ನಿರ್ಘೃಣವಾಗಿದೆ” ಎಂಬ ವಿಚಾರ ಸರಣಿಯಿಂದ ಪ್ರಭಾವಿತನಾಗಿ ತನ್ನ ಬರವಣಿಗೆಯಲ್ಲಿ ಅಸಂಗತವಾದವನ್ನು ದಟ್ಟವಾಗಿ ಪ್ರತಿಪಾದಿಸುತ್ತಾನೆ. ಈತ ಬದುಕಿದ್ದ ಕಾಲದಲ್ಲಿ ಯುರೋಪಿನಲ್ಲಿ ಕ್ರಾಂತಿಗಳು ಸಂಭವಿಸಿದ್ದನ್ನು ಹತ್ತಿರದಿಂದ ಕಂಡು “ಕ್ರಾಂತಿಗಳು ಸರ್ವಾಧಿಕಾರಿಯನ್ನು ಪಟ್ಟಕ್ಕೆ ತರುತ್ತವೆ. ಇಲ್ಲಿ ವ್ಯಕ್ತಿ ಗುಲಾಮನಾಗುತ್ತಾನೆ” ಎನ್ನುವ ಕಾಮು ವ್ಯಕ್ತಿವಾದಿಯಾಗಿದ್ದ. ಕ್ರಾಂತಿಯ ನಂತರದ ಆಧುನಿಕ ಜಗತ್ತಿನ ಅವನತಿಯ ಬಗ್ಗೆ, ಭವಿಷ್ಯದ ಬಗ್ಗೆ ಸ್ಪಷ್ಟ ಗ್ರಹಿಕೆಯಿದ್ದ ಕಾಮು ನಂತರ ‘ನಾನು ಆಧುನಿಕನಲ್ಲ’ ಎಂದು ಘೋಷಿಸುತ್ತಾನೆ. ‘ದಿ ಔಟ್ಸೈಡರ್’ ಕಾಮುವಿನ ಮೊದಲ ಕಾದಂಬರಿಯಾದ್ದರಿಂದ ಸಹಜವಾಗಿ ಇದು ಅವನ ವಿಚಾರದ ಪೂರ್ವಘಟ್ಟವನ್ನು ದಾಖಲಿಸುತ್ತದೆ.
ಈ ಕಾದಂಬರಿಯ ನಾಯಕ ಮಾತಿನ ಮಿತಿ ಬಲ್ಲವನು. ಹಾಗೆಯೇ ಬುದ್ಧಿಯ ಶಕ್ತಿಯನ್ನು ಬಲ್ಲವನು. ಅವನು ‘ಇದಂಮಿತ್ತಂ’ ಎಂದು, ‘ಹೌದು-ಅಲ್ಲ’ ಎಂದು ಉತ್ತರ ಕೊಡುವ ದೃಷ್ಟಿವಾದಿ ಅಲ್ಲ. ಸತ್ಯ, ವಾಸ್ತವಗಳಿಂದ ಭೀಕರ ಗೊಂದಲಕ್ಕೆ ಒಳಗಾಗದೆ ತನ್ನ ಹಳೆಯ ಪ್ರತಿಮೆಗಳನ್ನು ಕಳಚಿಕೊಳ್ಳಲು ಪ್ರಯತ್ನಿಸುತ್ತಾನೆ. ಹೊಸ ಕಾಲದ ಆಧುನಿಕ ಜಗತ್ತಿನಲ್ಲಿ ಕೂಡ ಎಲ್ಲವೂ ಚದುರಿ ಛಿದ್ರವಾಗಿ ಹೋಗಿರುವುದನ್ನು ಮತ್ತು ಅದರಿಂದ ತನ್ನ ಮನಸ್ಸು ಅಪಾರವಾದ ದಿಗ್ಭ್ರಮೆಗೆ ಒಳಗಾಗಿ ತನ್ನ ಸಾವಿನ ಕೊನೆಯ ಕ್ಷಣಗಳನ್ನು ಬದುಕುವುದರ ಕಡೆಗೆ ಹೆಚ್ಚು ಆಸಕ್ತನಾಗುತ್ತಾನೆ. ತನ್ನ ಅಸ್ತಿತ್ವದ ಸ್ವಾತಂತ್ರ್ಯವನ್ನು ಬಯಸುತ್ತಾನೆ. ‘ಆಲ್ಬರ್ಟ್ ಕಾಮು ಮತ್ತು ಅಸಂಗತವಾದ’ ಲೇಖನದಲ್ಲಿ ಟಿ. ಪಿ. ಅಶೋಕ ಅವರು “ಅಸಂಗತತೆಯು ಭವಿಷ್ಯ ಇಲ್ಲ ಎನ್ನುತ್ತದೆ. ಆದರೆ, ಇದು ನನ್ನ ಆಂತರಿಕ ಸ್ವಾತಂತ್ರ್ಯಕ್ಕೆ ಕಾರಣವಾಗುತ್ತದೆ. ಎಂದು ಕಾಮು ಹೇಳುತ್ತಾನೆ. ಎಲ್ಲವೂ ಸಾವಿನಲ್ಲಿ ಕೊನೆಗೊಳ್ಳುವುದರಿಂದ, ಯಾರೂ ಶಾಶ್ವತರಲ್ಲದ್ದರಿಂದ ಮೇಲಿನ ಶಕ್ತಿಯೊಂದು ನಮ್ಮ ಸ್ವಾತಂತ್ರ್ಯ ನಿರ್ಧರಿಸುತ್ತದೆ ಎಂಬುದನ್ನು ಒಪ್ಪಿಕೊಳ್ಳದಿದ್ದಾಗ ಮನುಷ್ಯ ಸ್ವತಂತ್ರನಾಗುತ್ತಾನೆ. ಅಸಂಗತ ಸ್ಥಿತಿ ಮುಟ್ಟಿದ ಮನುಷ್ಯನಿಗೆ ಮಾತ್ರ ಇಂಥ ವಿಮೋಚನೆ ಸಾಧ್ಯ. ಏಕೆಂದರೆ, ತನ್ನ ಕ್ರಿಯೆಗೆ ಬಾಹ್ಯ ಶಕ್ತಿಯೊಂದು ಕಾರಣವಾಗಿದೆ. ತನ್ನ ಕ್ರಿಯೆಗಳಿಗೆ ವ್ಯಕ್ತಿ ತಾನೇ ಜವಾಬ್ದಾರನಾಗಬೇಕಾಗುತ್ತದೆ. ದೈನಂದಿನ ನಿದ್ರೆಯಿಂದ ಎಚ್ಚೆತ್ತು ಪ್ರಜ್ಞಾವಂತನಾಗುತ್ತಿರುವ ಈ ಸ್ಥಿತಿ ಇಂಥ ಸ್ವಾತಂತ್ರ್ಯದ ಪ್ರಥಮ ಹೆಜ್ಜೆಯಾಗುತ್ತದೆ….. ಪ್ರಶ್ನೆ: ಇಂಥ ವಿಶ್ವದಲ್ಲಿ ಬದುಕಿನ ಅರ್ಥವೇನು? ಈ ಕ್ಷಣದಲ್ಲಿ ಏನೂ ಇಲ್ಲ. ಭವಿಷ್ಯದ ಬಗ್ಗೆ ಅಲಕ್ಷ್ಯ; ಕೊಟ್ಟಿರುವುದನ್ನೆಲ್ಲ ಉಪಯೋಗಿಸಿಕೊಳ್ಳವುದು. ಬದುಕಿನ ಅರ್ಥದಲ್ಲಿ ನಂಬಿಕೆ ಇಟ್ಟರೆ ಮೌಲ್ಯಗಳ, ಆಯ್ಕೆಯ, ತುಲನೆಗಳ ಅಳತೆಪಟ್ಟಿ ಬೇಕೇಬೇಕು. ಆಸಂಗತೆಯನ್ನು ಒಪ್ಪಿಕೊಂಡಾಗ ಈ ಸಮಸ್ಯೆ ಉದ್ಭವಿಸದು. ಮೊರೆಯಿಲ್ಲದ ಬದುಕು ಸಾಧ್ಯವೇ ಎಂಬುದನ್ನು ಅರಿಯಲು ನಾನು ತುಂಬ ಉತ್ಸುಕನಾಗಿರುವೆನೆಂದು ಕಾಮು ತಿಳಿಸುತ್ತಾನೆ” (ಪು. 14, ಸಾಧನೆ, ಸಂಪುಟ 8, ಸಂಚಿಕೆ 3, 1979) 19ನೇ ಶತಮಾನದ ಮಾನವತಾವಾದದಲ್ಲಿ, ಧಾರ್ಮಿಕ ಮೌಲ್ಯಗಳಲ್ಲಿ ನಂಬಿಕೆ ಕಳೆದುಕೊಂಡ ಪಾಶ್ಚಾತ್ಯ ಸಾಹಿತಿಗಳು ಅಸ್ತಿತ್ವವಾದವನ್ನು ತಮ್ಮ ಕೃತಿಗಳಲ್ಲಿ ಬದುಕಿನ ಕ್ರಮವಾಗಿ ದಾಖಲಿಸಿದರು. ಅಸ್ತಿತ್ವವಾದಿಗಳಲ್ಲಿ ಜಾಸ್ಟರ್ಸ್ ಮತ್ತು ಗ್ಯಾಬ್ರಿಯಲ್ ಮಾರ್ಸಲ್ ಅವರನ್ನೊಳಗೊಂಡ ಕ್ರಿಶ್ಚಿಯನ್ನರ ಗುಂಪು ಮತ್ತು ಸಾರ್ತ್ರ ಮತ್ತು ಹೈಡೆಗರ್ ಅವರ ನಿರೀಶ್ವರ ಗುಂಪು ಎಂಬ ಎರಡು ಪಂಗಡಗಳಿದ್ದರೂ ಎರಡಕ್ಕೂ ಒಂದು ಸಾಮಾನ್ಯವಾದ ನಂಬಿಕೆಯಿದೆ: ‘ಸ್ಥಿತಿ’ ಮೊದಲು ‘ತತ್ವ’ ಆಮೇಲೆ; ನೀನು ಮೊದಲು ‘ಇರುತ್ತಿ’ ಆಮೇಲೆ ‘ಆಗುತ್ತಿ’. ಈ ಕಾದಂಬರಿಯ ನಾಯಕ ದೇವರು ಇಲ್ಲ ಆದ್ದರಿಂದ ಮನುಷ್ಯ ತನ್ನನ್ನು ತಾನು ಕಂಡುಕೊಳ್ಳುವ ಸ್ಥಿತಿಗೆ ಪೂರ್ವಭಾವಿಯಾದ ಯಾವುದೇ ಬಗೆಯ ತತ್ವವನ್ನು ಅನುಸರಿಸಬೇಕಾಗಿಲ್ಲ ಎಂದು ಬದುಕುತ್ತಾನೆ. ಮನುಷ್ಯ ಹುಟ್ಟಿದ ನಂತರ ಏನನ್ನೂ ಪಡೆದು ಬಂದಿರುವುದಿಲ್ಲ; ಜೀವನದಲ್ಲಿ ಎದುರಾಗುವ ಕ್ಷಣಗಳಲ್ಲಿ ಬಂದದ್ದನ್ನು ಕಂಡುಕೊಂಡು ಆಗಬೇಕೆಂದಿರುವುದನ್ನು ಮಾಡಿಕೊಳ್ಳಬೇಕು; ಮಾನವ ಜೀವನದಲ್ಲಿ ತನ್ನ ಮನುಷ್ಯತ್ವವನ್ನು ತಾನೇ ಸೃಷ್ಟಿಸಿಕೊಳ್ಳಬೇಕು. ಅಂದರೆ ತನ್ನ ಗುಣ ಸ್ವಭಾವಕ್ಕೆ ಸಂಪೂರ್ಣ ತಾನೇ ಹೊಣೆಯಾಗಬೇಕು. ತನ್ನ ಕ್ಷಣಗಳಿಗೆ ತಾನೇ ಜವಾಬ್ದಾರನಾಗಬೇಕು. ಮನುಷ್ಯ ತನ್ನ ಇರುವಿಕೆಯನ್ನು ಗ್ರಹಿಸಿದ ಮೇಲೆ ತಾನು ಏನಾಗಬೇಕೆಂಬುದನ್ನು ನಿಶ್ಚಯಿಸುವ ಹೊಣೆ, ಸ್ವಾತಂತ್ರ್ಯ ಅವನ ಮೇಲೆ ಇರುತ್ತದೆ. ಅವನ ಗುಣದೋಷಗಳು ಮತ್ತು ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವ ಮೌಲ್ಯಗಳು ಸಾರ್ವತ್ರಿಕ ಪೂರ್ವ ಸಿದ್ಧ ಎಂದು ಭಾವಿಸಿ ಮನುಷ್ಯನೆಂದರೆ ಹೀಗೆ ಎಂಬ ಖಚಿತವಾದ ತೀರ್ಮಾನಗಳನ್ನು ನಿರಾಕರಿಸಿ ಪೂರ್ವಸಿದ್ಧ ಸತ್ಯಗಳ ಸತ್ವಗಳ ಉದ್ದೇಶಪೂರ್ವಕವಾದ ನಿಶ್ಚಯಗಳಿಂದ ಬಿಡುಗಡೆಗೊಳ್ಳುವ ಪ್ರಯತ್ನಗಳನ್ನು ಈ ಕಾದಂಬರಿಯ ನಾಯಕ ಮಾರ್ಸೋ ಮಾಡುತ್ತಾನೆ.
ಬದುಕೇ ಹೀಗೆ. ಯಾವಾಗಲೂ ಅನಿರೀಕ್ಷಿತ ಅಸಂಗತಗಳಲ್ಲಿ ಅಚ್ಚರಿ ಮತ್ತು ದಿಗ್ಭ್ರಮೆಗಳನ್ನು ಹುಟ್ಟಿಸುತ್ತದೆ. ಅನುಭವಗಳು ಎದುರಾದಂತೆ ಮುಂಚಿನ ನಂಬಿಕೆಗಳು ಹುಸಿಹೋಗುತ್ತವೆ. ಊಹಿಸಿದ್ದು ಯಾವುದೇ ಆಗಲಿ ಊಹಿಸಿದಂತೆ ಇರುವುದಿಲ್ಲ. ಇರುವಿಕೆಯಲ್ಲಿಯೇ ಜೀವನದ ಭೂತ-ಭವಿಷ್ಯಗಳು ನಿರ್ಧರಿತವಾಗುತ್ತವೆ. ಕುಗ್ಗುವ ಮೊದಲು ಹಿಗ್ಗಿದ, ಬೀಳುವ ಮೊದಲು ನಿಂತ, ಕುಂದುವ ಮೊದಲು ಬಲಪಡಿಸಿದ, ಹೋಗುವ ಮೊದಲು ಬಂದ ಅನುಭವಗಳಿಲ್ಲದೆ ಹೋದಾಗ ಅವುಗಳ ನಿಜ ಅರ್ಥಗಳೂ ಸಿಕ್ಕದೇ ಹೋಗಿಬಿಡುತ್ತವೆ. ಹಾಗೇ ನೋಡಿದರೆ ಕ್ಷಣ ಕ್ಷಣದ ಹುಟ್ಟು ಎನ್ನುವುದು ಸಹ ಕ್ಷಣ ಕ್ಷಣದ ಸಾವೂ ಆಗಿರುತ್ತದೆ. ಹೀಗೆ ಮನುಷ್ಯ ತನ್ನ ಇರುವಿಕೆಯಲ್ಲಿಯೇ ತಾನು ಆಗಬೇಕಾದದ್ದನ್ನು ರೂಪಿಸಿಕೊಳ್ಳುತ್ತಾನೆ. ಇರುವಿಕೆಯಲ್ಲಿ ಮನುಷ್ಯ ತನ್ನ ವರ್ತನೆಗಳಿಗೆ ತಾನೇ ಹೊಣೆಗಾರನಾಗುತ್ತಾನೆ. ತನ್ನ ಆಗುವಿಕೆಯಲ್ಲಿ ತಾನೇ ಸಂಪೂರ್ಣ ಜವಾಬ್ದಾರನಾಗುತ್ತಾನೆ. ಅಷ್ಟೇ ಅಲ್ಲ ಮನುಷ್ಯ ನಿರಂತರ ಆಗುವಿಕೆಯಲ್ಲಿ ಮಾತ್ರ ಜೀವಂತ. ಮನುಷ್ಯನಾಗುವ ಪ್ರಕ್ರಿಯೆಯನ್ನು ತನ್ನ ಇರುವಿಕೆಯಲ್ಲಿಯೇ ಕಾಣಬೇಕು. ಅದಕ್ಕೆ ತೊಡಕಾಗುವ ಸಂಗತಿಗಳನ್ನು ಮನುಷ್ಯ ಹೇಗೆ ನಿವಾರಿಸಿಕೊಳ್ಳುತ್ತಾನೆ ಎನ್ನುವುದನ್ನು ಅಸ್ತಿತ್ವವಾದಿಗಳು ತೀವ್ರವಾಗಿ ಹುಡುಕಾಡುತ್ತಾರೆ. ತಮ್ಮ ಅನುಭವಕ್ಕೆ ಅಸಂಗತ ಎನ್ನಿಸುವ ಸಂಗತಿಗಳನ್ನು ಶೋಧಿಸುತ್ತಾರೆ. ಹಾಗೆ ರೂಪಗೊಂಡ ಆಲ್ಬರ್ಟ್ ಕಾಮು ಬರೆದ ದಿ ಔಟ್ ಸೈಡರ್ ಕಾದಂಬರಿ ಅನುಭವ ಲೋಕದ ಭಿನ್ನ ಆಖ್ಯಾನಗಳ ವ್ಯಾಖ್ಯಾನವಾಗಿದೆ.
ಡಿ.ಎ. ಶಂಕರ್ ಅವರ ಅನುವಾದ ‘ಅನ್ಯ’ ಕಾದಂಬರಿ ಚಿಕ್ಕ ವ್ಯಾಖ್ಯಗಳಿಂದ ಅರ್ಥಪೂರ್ಣವಾಗಿದೆ. ಇಡೀ ಕಾದಂಬರಿ ಉತ್ತಮ ಪುರುಷದಲ್ಲಿ ನಿರೂಪಣೆಗೊಂಡು ಓದುಗನ ತೀವ್ರತೆಯನ್ನು ಹೆಚ್ಚಿಸಿದೆ. ಕಾಮುನ ‘ಕ್ಯಾಲಿಗುಲ ಅಂಡ್ ಕ್ರಾಸ್ ಪರ್ಪಸ್’ ನಾಟಗಳನ್ನು ಸಹ ‘ಕಾಲಿಗುಲ ಮತ್ತು ತಪ್ಪಿದ ಎಳೆ’, ಮುಲ್ಕರಾಜ್ ಆನಂದರ ಅನ್ಟಚಬಲ್ ‘ಅಸ್ಪೃಷ್ಯರು’, ಫ್ರೆಂಚ್ ಲೇಖಕ ವಾಲ್ಟೇರ್ನ ‘ಕ್ಯಾಂಡೀಡ್’,ಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಷ್ಟೇ ಅಲ್ಲದೆ ತೇಜಸ್ವಿಯವರ ‘ಕರ್ವಾಲೊ’, ‘ಕುಬಿ ಮತ್ತು ಇಯಾಲ’, ಅನಂತಮೂರ್ತಿಯವರ ‘ಆಕಾಶ ಮತ್ತು ಬೆಕ್ಕು’, ‘ಕ್ಲಿಪ್ ಜಾಯಿಂಟ್’, ಭೈರಪ್ಪ ಅವರ ‘ಸಾಕ್ಷಿ’, ಚದುರಂಗರ ‘ವೈಶಾಖ’, ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’, ಕನಕದಾಸರ ‘ರಾಮಧಾನ್ಯ ಚರಿತೆ’, ‘ಕೀರ್ತನೆಗಳು’, ‘ನಳಚರಿತೆ’ಗಳನ್ನೊಳಗೊಂಡ ‘ಗೋಲ್ಡನ್ ಫ್ಲಾಶ್’, ಅಕ್ಕಮಹಾದೇವಿಯ ವಚನಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಅವರ ಭಾಷಾಂತರ ಸಮರ್ಥವಾದದ್ದು ಎಂದು ಹೆಸರುವಾಸಿಯಾಗಿದೆ. ‘ಅನ್ಯ’ದ ಅನುವಾದದಲ್ಲಿ ಅವರ ಸೃಜನಶೀಲ ಪ್ರತಿಭೆ ಸ್ಪಷ್ಟವಾಗಿದ್ದರೂ ಕಾಲಕಾಲಕ್ಕೆ ಭಾಷಾಂತರಗಳು ತಮ್ಮ ಸಮಕಾಲೀನ ಅಗತ್ಯಗಳನ್ನು ಮೀರುತ್ತವೆ. ಅವರು ಅನುವಾದದಲ್ಲಿ ಬಳಸಿದ ‘ಅನುತಾಪ’, ‘ಬಾತ್ಮೀದಾರ’ದಂತಹ ಪ್ರಮಾಣೀಕೃತ ಪದಗಳು ವರ್ಜ್ಯವೆನಿಸುತ್ತವೆ. ಅದರ ಹೊರತಾಗಿಯೂ ಕನ್ನಡದಲ್ಲಿ ಮತ್ತೊಂದು ಅನುವಾದ ಇದುವರೆಗೂ ಹುಟ್ಟಿಕೊಳ್ಳದಷ್ಟು ಸಮರ್ಥವಾಗಿದೆ ಎಂಬುದು ಮಾತ್ರ ನಿರ್ವಿವಾದ.
~ ಮಂಜುನಾಥ ಬಾದಾಮಿ
ಮಂಜುನಾಥ ಬಾದಾಮಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ. ‘ಕನ್ನಡ ಕಥಾಸಾಹಿತ್ಯ ಕುರಿತ ವಿಮರ್ಶೆಗಳ ತಾತ್ವಿಕ ಅಧ್ಯಯನ’ ವಿಷಯದಲ್ಲಿ ಇತ್ತೀಚೆಗೆ ಪಿಎಚ್. ಡಿ. ಪ್ರಬಂಧ ಸಲ್ಲಿಸಿದ್ದಾರೆ. ಸಾಹಿತ್ಯದ ಗಂಭೀರ ಓದು, ಕತೆ, ಕವನ ಮತ್ತು ವಿಮರ್ಶೆ ಬರವಣಿಗೆಯಲ್ಲಿ ಆಸಕ್ತರು. ಸುಗಮ ಸಂಗೀತ ಗಾಯನದ ಹವ್ಯಾಸಿ ಕಲಾವಿದ. ಚಾರಣ ಇವರ ಇಷ್ಟದ ಸಂಗತಿ.
ಕನ್ನಡದ ಹಿರಿಯ ಕಥೆಗಾರ, ಕಾದಂಬರಿಕಾರರಾದ ಫಕೀರ್ ಮುಹಮ್ಮದ್ ಕಟ್ಪಾಡಿಯವರ ಕಚ್ಚಾದ ಕಾದಂಬರಿ ಸುಧಾ ವಾರಪತ್ರಿಕೆಯಲ್ಲಿ ಮೊದಲು ಧಾರಾವಾಹಿಯಾಗಿ ಕನ್ನಡ ಓದುಗರ ಮನೆಮನ ತಲುಪಿ, ನಂತರ ಪುಸ್ತಕದಲ್ಲಿ ಪ್ರಕಟವಾಗಿ 28 ವರ್ಷಗಳು ಕಳೆದಿವೆ. ಬಂಡಾಯ ಚಳವಳಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬರೆದಿರಬಹುದಾದ ಈ ಕಾದಂಬರಿಯ ಕಥೆ ಉಡುಪಿ ಜಿಲ್ಲೆಯ ಒಂದು ಕುಗ್ರಾಮದಲ್ಲಿ ನಡೆಯುವಂತದ್ದು. ಈ ಕಾದಂಬರಿ ಬ್ಯಾರಿ ಸಮುದಾಯದ ಸ್ವಾಭಿಮಾನಿ ವ್ಯಕ್ತಿತ್ವದ, ಕಷ್ಟಕೋಟಲೆಗಳ ನಡುವೆಯೂ ಕೆಚ್ಚೆದೆಯ ಮನೋಭಾವದಿಂದ ಬದುಕನ್ನು ಸ್ವೀಕರಿಸುವ ಕಚ್ಚಾದ ಎಂಬ ದಿಟ್ಟ ಮಹಿಳೆಯ ಬದುಕನ್ನು ಸೃಜನಶೀಲ ವಿವರಗಳೊಂದಿಗೆ ಕಲಾತ್ಮಕ ಚೌಕಟ್ಟಿನೊಳಗೆ ಹಿಡಿದಿಡಲು ಪ್ರಯತ್ನಿಸುತ್ತದೆ. ಅದೇ ಬ್ಯಾರಿ ಸಮುದಾಯಕ್ಕೆ ಸೇರಿದ ನಾನು ಮಹಾನಗರ ಬೆಂಗಳೂರಿನಲ್ಲಿ ಕುಳಿತು ಕಾದಂಬರಿ ಪ್ರಕಟವಾದ ಇಪ್ಪತ್ತೆಂಟು ವರ್ಷಗಳ ನಂತರ ಓದಿದೆ. ಎರಡೂವರೆ ದಶಕದ ನಂತರವೂ ಈ ಕಾದಂಬರಿ ನನ್ನ ಮನಸಿನಾಳಕ್ಕೆ ಇಳಿದು, ಕಾಡುತ್ತಿರುವ ಅಚ್ಚರಿಯ ಕುರಿತು ಈಗಲೂ ಆಲೋಚಿಸುತ್ತಿರುವೆ.
ಹಾಗೆ ನೋಡಿದರೆ ಈ ಕಾದಂಬರಿಯಲ್ಲಿ ಚಿತ್ರಿತವಾಗಿರುವ ಪರಿಸರ ಈಗ ಬದಲಾಗಿದೆ. ಗಲ್ಫ್ ವಲಸೆ ಮತ್ತು ಇಂಗ್ಲಿಷಿನ ಪ್ರಭಾವದಿಂದ ಭಾಷೆಯೂ ಬದಲಾಗಿದೆ. ಈ ಪರಿಸರ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹುಟ್ಟಿದವನು ನಾನು. ಬಹುಶಃ ಕಚ್ಚಾದಳ ಮೊಮ್ಮಗನೋ ಮರಿಮೊಮ್ಮಗನೋ ಆಗಬೇಕಾದವನು. ಆದ್ದರಿಂದ ನನ್ನ ಸೀಮಿತ ದೃಷ್ಟಿಯಲ್ಲಿ ಕಚ್ಚಾದ ಕಾದಂಬರಿ ಯಾಕೆ ಮುಖ್ಯ ಅನ್ನುವುದನ್ನು ಹೇಳುವ ಪ್ರಯತ್ನ ಮಾಡುವೆ.
ಕಚ್ಚಾದ ಇತಿಹಾಸವೂ ಹೌದು, ಬದುಕಿನ ಮೌಲ್ಯಗಳ ಹುಡುಕಾಟವೂ ಹೌದು. ನನ್ನ ಬಾಲ್ಯದಲ್ಲಿ ನಾನು ಕಂಡು ಮರೆತ ಹಲವು ಸಂಗತಿ, ವ್ಯಕ್ತಿತ್ವಗಳನ್ನು ಕಚ್ಚಾದ ಮತ್ತೆ ನೆನಪಿಸಿದಳು. ನೆನಪಿನ ಕೋಶದಲ್ಲೆಲ್ಲೋ ನಿದ್ರಿಸುತ್ತಿದ್ದ ಹಲವು ಸಂಗತಿಗಳನ್ನು ಎಬ್ಬಿಸಿ, ಅವುಗಳ ಪುನರ್ ಭೇಟಿ ಮಾಡಲು ಒಂದು ನಿಮಿತ್ತವಾದಳು ಎನ್ನಬಹುದು. ನಾನು ಹುಟ್ಟಿ ಬೆಳೆಯುವಷ್ಟಕ್ಕೆ ನಮ್ಮ ಪರಿಸರದ ಗದ್ದೆಗಳೆಲ್ಲಾ ಮಾಯವಾಗಲು ಆರಂಭಿಸಿದ್ದವು. ಅಲ್ಲಿ ಇಲ್ಲಿ ಕೆಲವೊಂದು ಗದ್ದೆಗಳು ನೋಡಿಕೊಳ್ಳುವವರಿಲ್ಲದೆ ನಶಿಸುತ್ತಿರುವ ಕೃಷಿ ಸಂಸ್ಕೃತಿಯ ಪ್ರೇತವೆಂಬಂತೆ ಇದ್ದವು ಬಿಟ್ಟರೆ ಅವುಗಳಲ್ಲಿ ಯಾವ ಜೀವಂತಿಕೆಯೂ ಇರಲಿಲ್ಲ. ಕೆಲವೊಂದು ಗದ್ದೆಗಳು ಕ್ರಿಕೆಟ್ ಮೈದಾನ, ಮಳೆಗಾಲದಲ್ಲಿ ಮಕ್ಕಳಿಗೆ ಈಜು ಕಲಿಯುವ ಕೊಳ, ತೆಂಗು, ಕಂಗುಗಳ ತೋಟ ಮೊದಲಾಗಿ ಕಾಲಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿತ್ತು. ಭತ್ತ ಬೆಳೆದವರಿಗೆ ಕೂಲಿಯಾಗಿ ಭತ್ತ ಕೊಡುವ ಸಿಸ್ಟಮ್ ಹೋಗಿ ಹಣದ ವ್ಯವಸ್ಥೆ ಮೇಲುಗೈ ಪಡೆದಿತ್ತು. ಏನು ಕೆಲಸ ಮಾಡಿದರೂ ಕೂಲಿ ರೂಪದಲ್ಲಿ ಹಣ ಕೊಡುವ ಮನಿ ಸಿಸ್ಟಮ್ ವ್ಯಾಪಕವಾಗಿತ್ತು. ಆದ್ದರಿಂದ ಕಚ್ಚಾದ ನನ್ನ ಮಟ್ಟಿಗೆ ನಾನು ಅರೆಬರೆಯಾಗಿ ಕಂಡ ಅಥವಾ ನಾನು ಹುಟ್ಟುವಾಗ ಅವಸಾನದ ಅಂಚಿಗೆ ಸರಿಯುತ್ತಿದ್ದ(ಕನಿಷ್ಟಪಕ್ಷ ನನ್ನ ಪರಿಸರದಲ್ಲಿ) ಸಂಸ್ಕೃತಿಯ ಜೀವಂತಿಕೆಯೆಡೆಗಿನ ರಿವಿಸಿಟ್. ಅಂತಹ ವಿಶೇಷವಾದ ಅವಕಾಶವನ್ನು ಈ ಕಾದಂಬರಿ ನನಗೆ ನೀಡುವುದರಲ್ಲಿ ಯಶಸ್ವಿಯಾಗಿದೆ.
ಕಚ್ಚಾದಳಂತಹ ರೆಬೆಲ್ ವ್ಯಕ್ತಿತ್ವದ ಲೇಡಿಗಳು ಈಗಲೂ ಇದ್ದಾರೆ. ಅಂತಹ ವ್ಯಕ್ತಿತ್ವಗಳ ಕುರಿತು ಬರೆಯುವವರು ಕಡಿಮೆಯಾಗಿದ್ದಾರೆ ವಿನಾ ಕಚ್ಚಾದ ಯಾವತ್ತೂ ಸಮಾಜದಲ್ಲಿ ಮತ್ತೆ ಮತ್ತೆ ಹುಟ್ಟಿ ಬರುವ ವ್ಯಕ್ತಿತ್ವ. ಕಾದಂಬರಿಯ ಮೊದಲ ಅಧ್ಯಾಯದಲ್ಲೇ ಕಚ್ಚಾದಳ ವ್ಯಕ್ತಿತ್ವದ ಅನಾವರಣವಾಗುತ್ತದೆ. ಈ ಕಚ್ಚಾದ ಅನ್ಯಾಯವನ್ನು ಸಹಿಸುವವಳಲ್ಲ. ದಡ್ಡು ಭತ್ತ ಕೊಟ್ಟು ತನ್ನನ್ನು ವಂಚಿಸಿದ ಸಾವುಕಾರ ಹಾಜಿಯ ನೀರಿಳಿಸಿ ಬಿಡುತ್ತಾಳೆ. ಧನಬಲ, ತೋಳ್ಬಲ, ರಾಜಕೀಯ ಪ್ರಭಾವ ಇದ್ದೂ ಸಾಹುಕಾರ್ ಹಾಜಿ ಯಕಃಶ್ಚಿತ್ ಹಳ್ಳಿ ಮಹಿಳೆ ಕಚ್ಚಾದಳ ಮುಂದೆ ಸೋತು ಬೆಪ್ಪಾಗುತ್ತಾನೆ. ಕಚ್ಚಾದಳಂತಹವರ ಆಯುಧವೇ ಅವರ ಬಾಯಿ. ಆ ಬಾಯಿಂದ ಉದುರುವ ಆಣಿಮುತ್ತುಗಳನ್ನು ಎದುರಿಸಲಾಗದೆ ಸಾಹುಕಾರ್ ಹಾಜಿ ಪತರಗುಟ್ಟುವ ಸಂದರ್ಭ ರೋಚಕವಾಗಿ ಚಿತ್ರತವಾಗಿದೆ.
ಇಂತಹ ರೆಬೆಲ್ ಕ್ಯಾರೆಕ್ಟರಿನ ಕಚ್ಚಾದಳ ಬದುಕು ಮುಂದಿನ ಅಧ್ಯಾಯಗಳಲ್ಲಿ ತಣ್ಣಗೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಆರಂಭದ ಅಧ್ಯಾಯ ಓದುವಾಗ ಆಗುವ ರೋಮಾಂಚನ ಎರಡನೇ ಅಧ್ಯಾಯದಲ್ಲಿ ಕೊಂಚ ಇಳಿದರೂ ಮುಂದಿನ ಅಧ್ಯಾಯಗಳು ಕುತೂಹಲ ಹುಟ್ಟಿಸಿ ಕಚ್ಚಾದಳ ಸಮಸ್ಯಾತ್ಮಕ ಬದುಕಿನೊಳಗೆ ನಮ್ಮನ್ನು ಇಳಿಸಿಕೊಳ್ಳುತ್ತಾ ಹೋಗುತ್ತವೆ. ನಡುಮಧ್ಯಕ್ಕೆ ಬರುವ ಹೊತ್ತಿಗೆ ಸಂಪೂರ್ಣವಾಗಿ ಕಚ್ಚಾದ ನಮ್ಮನ್ನು ಆವರಿಸಿಕೊಂಡುಬಿಟ್ಟಿರುತ್ತಾಳೆ. ನಮ್ಮ ಕಣ್ಣ ಮುಂದೆಯೇ ಓಡಾಡುತ್ತಿದ್ದಾಳೇನೋ ಎಂದು ಭಾಸವಾಗುವಂತೆ ವಿವರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಕಟ್ಪಾಡಿಯವರ ಸಂಯಮದ ಬರವಣಿಗೆಯ ಶಕ್ತಿ ಇದು.
ಮೊದಲ ಅಧ್ಯಾಯದಲ್ಲಿ ಕಚ್ಚಾದ ಲಂಕೇಶರ ಮುಸ್ಸಂಜೆಯ ಕಥಾಪ್ರಸಂಗದಲ್ಲಿನ ರಂಗವ್ವಳನ್ನು ನೆನಪಿಸಿದರೆ, ಶ್ರಮಕ್ಕೆ ತಕ್ಕಂತೆ ಕೂಲಿ ಕೊಡಲು ನಿರಾಕರಿಸುವ ಧಣಿಗಳ ವಿರುದ್ಧ ಇಸ್ಟ್ರೈಕ್ ಮಾಡುವವರಿಗೆ ಬೆಂಬಲವಾಗಿ ನಿಲ್ಲುವ ಸಂದರ್ಭದಲ್ಲಿ ಮ್ಯಾಕ್ಸಿಂ ಗಾರ್ಕಿಯ ‘ತಾಯಿ’ ಆಗಿಯೂ, ಕುಟುಂಬಕ್ಕಾಗಿ ಏದುವಾಗ ಲಂಕೇಶರ ‘ಅವ್ವ’ ಹಾಗೂ ದೇವನೂರು ಮಹಾದೇವರ ಒಡಲಾಳದ ಸಾಕವ್ವನನ್ನು ಕಚ್ಚಾದ ನೆನಪಿಸುತ್ತಾಳೆ. ಈ ಎಲ್ಲರನ್ನು ನೆನಪಿಸುತ್ತಲೇ ಅವೆಲ್ಲವನ್ನು ಮೀರಿ ಕಚ್ಚಾದ ಕಾದಂಬರಿಯುದ್ದಕ್ಕೂ ತನ್ನದೇ ಆದ ‘ಬ್ಯಾರ್ದಿ’ಯ ವ್ಯಕ್ತಿತ್ವವನ್ನು ಪಡೆದು ಅರಳಿ ನಿಲ್ಲುತ್ತಾಳೆ.
ಲಂಕೇಶ್ ಅವರ ಅವ್ವ ಕವನದ ಒಂದು ಸಾಲು ಇಲ್ಲಿ ನೆನಪಾಗುತ್ತದೆ.
“ಬನದ ಕರಡಿಯ ಹಾಗೆ ಚಿಕ್ಕಮಕ್ಕಳ ಹೊತ್ತು ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು. ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು; ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ: ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ. ಈಕೆ ಉರಿದೆದ್ದಾಳು ಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ.”
ಕಚ್ಚಾದಳೂ ಹೀಗೆಯೇ; ಎಂದೂ ತನಗಾಗಿ ಬದುಕದೆ ಬನದ ಕರಡಿಯಂತೆ ಮಗನನ್ನು ಪ್ರೀತಿಸಿದವಳು. ಹಳೆಯ ಟ್ರಂಕಿನ ಡಬ್ಬಿಯಲಿ ಕಾಸು ಗಂಟಿಕ್ಕಿದಳು. ಊರೂರು ಸುತ್ತಿ, ಒಬ್ಬ ಮಗನ ಸಾವಿಗೆ ಕಾರಣನಾಗಿ, ವೇಶ್ಯೆಯರ ಸಹವಾಸ ಮಾಡಿ, ಕೊನೆಗಾಲದಲ್ಲಿ ರೋಗ ಹತ್ತಿಸಿಕೊಂಡು ಮನೆಗೆ ಬಂದ ಗಂಡನ್ನ ಪಿರಿಪಿರಿ ಮಾಡುತ್ತಲೇ ಸಾಕಿದಳು. ಬೈದಳು, ಗುದ್ದಾಡಿದಳು, ಪ್ರೀತಿಸಿದಳು; ಆದರೆ ಈ ಎಲ್ಲವನ್ನು ಮಗನಿಗೋಸ್ಕರ ಮಾಡಿದಳು ಎಂಬುದು ಕಚ್ಚಾದಳ ತಾಯ್ತನದ ಬದ್ಧತೆಗೆ ದ್ಯೋತಕವಾಗಿದೆ. ಬಹುಶಃ ಬೇಜವಾಬ್ದಾರಿ ಗಂಡನ ದೆಸೆಯಿಂದ ಪ್ರತಿನಿತ್ಯವೂ ದುಡಿದರೆ ಮಾತ್ರ ಗಂಜಿ ಎನ್ನುವ ಅನಿವಾರ್ಯತೆಯಲ್ಲಿ ಕುಟುಂಬದ ನೊಗ ಹೊತ್ತು ಏಗುವ ಎಲ್ಲಾ ಗ್ರಾಮೀಣ ತಾಯಂದಿರೂ ಹೀಗೆಯೇ ಇರುತ್ತಾರೆ. ಬಿಡಿ ಬಿಡಿಯಾಗಿ ನೋಡಿದಾಗ ಪಿರಿಪಿರಿಯ ಜಗಳಗಂಟಿಯರಂತೆ ಕಾಣುವ ಅವರು ಇಡಿಯಾಗಿ ನೋಡಿದಾಗ ಕುಟುಂಬಕ್ಕಾಗಿ ತಮ್ಮ ಬದುಕು, ಆಸೆ- ಆಕಾಂಕ್ಷೆಗಳನ್ನು, ಕನಸುಗಳನ್ನು ಪಣಕ್ಕಿಡುವ ಮಹಾತಾಯಿಯರಂತೆ ಕಾಣಿಸುತ್ತಾರೆ.
ಆದರೆ, ಕಚ್ಚಾದಳಂತಹ ಅನ್ಯಾಯದ ವಿರುದ್ಧ ವೀರೋಚಿತವಾಗಿ ಹೋರಾಡುವ ವ್ಯಕ್ತಿತ್ವವೂ ಸಹ ಸಮಾಜದ ಕೆಲವೊಂದು ಅನಿಷ್ಠಗಳನ್ನು ಮೀರುವುದು ಸಾಧ್ಯವಾಗುವುದಿಲ್ಲ ಎಂಬುದು ನಮ್ಮ ಸಮಾಜದ ಕುಚೋದ್ಯವೂ ಹೌದು. ಉದಾಹರಣೆಗೆ ಆ ಕಾಲದಲ್ಲಿ ವ್ಯಾಪಕವಾಗಿದ್ದ ‘ಕಾಶಿ- ಬಂಗಾರ್’ ಎಂಬ ವರದಕ್ಷಿಣೆ ಪಿಡುಗಿನ ವಿಷಯದಲ್ಲಿ ಕಚ್ಚಾದ ವ್ಯವಸ್ಥೆಯ ಪರವಿರುವಂತೆ ತೋರುತ್ತಾಳೆ. ಇದು ಒಂದು ರೀತಿಯಲ್ಲಿ ಒಂದು ಕಡೆ ವ್ಯವಸ್ಥೆಯ ಅನಿಷ್ಠಗಳ ವಿರುದ್ಧ ಹೋರಾಡುವವರೇ ಇನ್ನೊಂದು ಕಡೆ ಆ ವ್ಯವಸ್ಥೆಯ ಇನ್ನೊಂದು ಬಗೆಯ ಅನಿಷ್ಠದ ಪೋಷಕರಾಗುವ ವೈರುಧ್ಯದ ಚಿತ್ರಣ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಕಟ್ಪಾಡಿಯವರು ಎಲ್ಲೂ ಕಚ್ಚಾದಳನ್ನು ವೈಭವೀಕರಿಸದೆ, ಸಮಾಜದಿಂದ ಬೇರ್ಪಡಿಸಿ ಅವಳನ್ನೊಂದು ಕೇವಲ ಆದರ್ಶವಾಗಿಸದೆ ಎಲ್ಲಾ ಓರೆಕೋರೆಗಳೊಂದಿಗೆ ಜೀವಂತ ಪಾತ್ರವಾಗಿ ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಚ್ಚಾದಳಂತಹ ಕಚ್ಚಾದಳೂ ಸಹ ಬದಲಾಗುತ್ತಾಳೆ. ಗರ್ಭಿಣಿ ಸೊಸೆಯನ್ನು ಅವಳು ಸ್ವೀಕರಿಸುವ ರೀತಿ ಅದ್ಭುತವಾಗಿದೆ. ಜೀವನಪರ್ಯಂತ ದುಡಿದು ಗಂಟಿಕ್ಕಿದ ಹಣವನ್ನು ಅವಳು ತನಗಾಗಿ ಖರ್ಚು ಮಾಡದೆ ಆಗಷ್ಟೇ ಹುಟ್ಟಿದ ಹೆಣ್ಣು ಮಗುವಿಗೆ ಚಿನ್ನದ ಸರ ಮಾಡಿಕೊಡುವ ಅವಳ ನಿರ್ಧಾರದಲ್ಲಿ ಮುಂದಿನ ಪೀಳಿಗೆ ನೆಮ್ಮದಿಯ, ಸಮೃದ್ಧಿಯ ಬದುಕನ್ನು ಪಡೆಯಲಿ ಎಂಬ ಹಾರೈಕೆ ಢಾಳಾಗಿ ಗೋಚರಿಸುತ್ತದೆ. ತನ್ನವರಿಗೆ ಯಾರಿಗೂ ಅರ್ಥವಾಗದ ಕಚ್ಚಾದ ಕೊರಗಪ್ಪ ಮತ್ತು ಪದ್ಮಳಿಗೆ ಅರ್ಥವಾಗುತ್ತಾರೆ. ಕಚ್ಚಾದ ಮಗುವಿಗೆ ಚಿನ್ನ ಕೊಡುವ ಸಂದರ್ಭದಲ್ಲಿ ಪದ್ಮಳ ಪ್ರತಿಕ್ರಿಯೆ ಕಚ್ಚಾದ ಮತ್ತು ಆಕೆಯ ನಡುವಿನ ಆತ್ಮೀಯತೆಗೆ ಹಿಡಿದ ಕೈಗನ್ನಡಿ. ನಿಮಗಾರಿಗೂ ಅರ್ಥವಾಗದ ಕಚ್ಚಾದ ನನಗೆ ಅರ್ಥವಾಗಿದ್ದಾಳೆ ಎಂಬ ಭಾವವೂ ಅವಳ ನಗೆಯಲ್ಲಿದೆ.
ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಕಚ್ಚಾದ ಕಾದಂಬರಿ ಬ್ಯಾರಿ ಪರಿಸರ ಮತ್ತು ಸಂಸ್ಕೃತಿಯ ಸಂಕ್ಷಿಪ್ತ ದಾಖಲೀಕರಣವೂ ಹೌದು. ಬ್ಯಾರಿ ಸಂಸ್ಕೃತಿ ನಿಂತ ನೀರಲ್ಲ, ಅನ್ಯಾಯದ ವಿರುದ್ಧ ಅದು ಕೈಕಟ್ಟಿ ಕೂರುವ ಜನಾಂಗವೂ ಅಲ್ಲ. ಇತರ ಎಲ್ಲರಿಗೂ ಇರುವಂತೆ ಆ ಜನಾಂಗಕ್ಕೆ ಅದರದ್ದೇ ಆದ ಇತಿ ಮಿತಿಗಳಿವೆ. ಬ್ಯಾರಿ ಜನಾಂಗದ ನಿಜವಾದ ಶಕ್ತಿ ಅವರ ದುಡಿತದಲ್ಲಿದೆ. ಬದುಕಿನ ದುರಂತಗಳನ್ನು ಕೆಚ್ಚೆದೆಯಲ್ಲಿ ಸ್ವೀಕರಿಸುವುದರಲ್ಲಿದೆ. ನೋವು ನಲಿವುಗಳನ್ನು ದರ್ಗಾದ ವಲಿಯ್ಯ್ ಅವರ ಮುಂದೆ ಹೇಳಿಕೊಂಡು ಬರ್ಕತ್ ಪಡೆಯುವ ಸೂಫಿ ಸಂಸ್ಕೃತಿಯ ಬೇರು ಬ್ಯಾರಿ ಸಮುದಾಯದಲ್ಲಿ ಆಳವಾಗಿ ಬೇರು ಬಿಟ್ಟಿದೆ. ಸೂಫಿಗಳು ಶ್ರಮ ಸಂಸ್ಕೃತಿಯ ಪೋಷಕರಾಗಿದ್ದರು. ಆದ್ದರಿಂದಲೇ ಬ್ಯಾರಿ ಸಂಸ್ಕೃತಿ ಸೂಫಿಗಳಿಂದ ಹೆಚ್ಚು ಪ್ರಭಾವಿತಗೊಂಡಿದೆ. ಬ್ಯಾರಿ ಎಂಬ ಪದವೇ ಬ್ಯಾರೆ ಎಂಬ ವ್ಯಾಪಾರವನ್ನು ಸೂಚಿಸುವ ತುಳು ಪದದಿಂದ ಹುಟ್ಟಿಕೊಂಡಿದೆ ಎಂಬ ವಾದವೂ ಈ ಹಿನ್ನೆಲೆಯಲ್ಲಿ ಮುಖ್ಯವಾಗಿದೆ.
ಇದು ಕೇವಲ ಬ್ಯಾರಿ ಸಮಾಜಕ್ಕೆ ಮಾತ್ರ ಸೀಮಿತವಾದ ವಿಶೇಷತೆಯಲ್ಲ, ಎಲ್ಲಾ ಸಮಾಜವೂ ಈ ರೀತಿಯ ಗುಣಗಳನ್ನು ಸಹಜವಾಗಿಯೇ ಹೊಂದಿರುತ್ತದೆ. ಮೇಲ್ವರ್ಗದ ಜನಗಳಿಗೆ ಹೋಲಿಸಿದರೆ ಕೆಳವರ್ಗದ ಜನರಲ್ಲಿ ಶ್ರಮ ಸಂಸ್ಕೃತಿ ಆಳವಾಗಿ ಬೇರೂರಿರುವುದು ಕಾಣಬಹುದು. ಕಚ್ಚಾದ ಕಾದಂಬರಿ ಬ್ಯಾರಿಗಳು ತಮ್ಮಂತೆಯೇ ಕೆಳವರ್ಗಕ್ಕೆ ಸೇರಿದ ಇತರ ಸಮುದಾಯಗಳ ಜನರೊಂದಿಗೆ ಎಷ್ಟು ಸಹಜವಾಗಿ, ತಮ್ಮದೇ ಒಡಹುಟ್ಟಿದವರು ಎಂಬಂತೆ ಬೆರೆಯುತ್ತಿದ್ದರು ಎಂಬುದರ ದಾಖಲೆಯೂ ಹೌದು. ವರ್ಗ ಸಂಘರ್ಷದ ಹಿನ್ನೆಲೆಯಲ್ಲೂ ಕಚ್ಚಾದವನ್ನು ನೋಡಬಹುದು. ತಮ್ಮ ಬುಡಕ್ಕೆ ಬಂದಾಗ ಧಣಿಗಳು ಜಾತಿ, ಧರ್ಮ ಮರೆತು ಒಂದಾಗುತ್ತಾರೆ ಎಂಬುದು ಐತಿಹಾಸಿಕ ಸತ್ಯ. ಅಲ್ಲಿ ಅವರಿಗೆ ಜಾತಿ, ಧರ್ಮಕ್ಕಿಂತ ತಮ್ಮ ಹಿತಾಸಕ್ತಿಯ ರಕ್ಷಣೆಯೇ ಮುಖ್ಯವಾಗಿರುತ್ತದೆ. ಆದರೆ, ಅದೇ ಧಣಿಗಳು ಅಗತ್ಯವಿದ್ದಾಗಲೆಲ್ಲಾ ಜಾತಿ, ಧರ್ಮ ಎಂದು ತಮ್ಮ ಕೂಲಿಯಾಳುಗಳ ನಡುವೆ ಬಿರುಕು ಉಂಟು ಮಾಡುವ ಕೆಲಸವನ್ನೂ ಮಾಡುತ್ತಿರುತ್ತಾರೆ. ಕಚ್ಚಾದ ಕಾದಂಬರಿಯಲ್ಲಿ ಇದು ಅಸ್ಪಷ್ಟವಾಗಿ ಬಂದು ಹೋಗುತ್ತದೆ. ಧಣಿಗಳಲ್ಲಿರುವ ಅಸ್ಪೃಶ್ಯ ಮನೋಭಾವ ಕೂಲಿಯಾಳುಗಳಲ್ಲಿರುವುದಿಲ್ಲ. ಕಚ್ಚಾದಳಂತಹ ಸ್ವಾಭಿಮಾನಿಗಳಿಗೆ ಈ ಧಣಿಗಳು, ಅವರ ಆಡಂಬರ ಕಾಲಕಸಕ್ಕಿಂತ ಕಡಿಮೆ. ಅನಿವಾರ್ಯ ಸಂದರ್ಭದಲ್ಲಿ ಹಾಜಿಯಾರರ ಅಳಿಯನಿಗೆ ಬಿರಿಯಾನಿ ಮಾಡಿಕೊಡಲು ಹೋಗಬೇಕಾಗಿ ಬಂದರೂ ಕಚ್ಚಾದ ತನ್ನ ಸ್ವಾಭಿಮಾನವನ್ನು ಬಿಟ್ಟುಕೊಡುವುದಿಲ್ಲ. ಹಾಜಿಯಾರರ ಅಡುಗೆಮನೆಯನ್ನು ತನ್ನ ಸುಪರ್ದಿಗೆ ಪಡೆಯುವ ಅವಳ ಗತ್ತು ನಿಜಕ್ಕೂ ಬೆರಗುಗೊಳಿಸುವಂತದ್ದು. ಆ ಒಂದು ದಿನ ಹಾಜಿಯಾರರ ಮನೆಯಲ್ಲಿ ಅವಳು ಮನೆಗೆಲಸದವಳಂತಿರುವುದಿಲ್ಲ. ಮನೆಯೊಡತಿಯಂತಿರುತ್ತಾಳೆ. ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳುವ ಕಚ್ಚಾದಳ ಜಾಣ್ಮೆ ಹಾಜಿಯಾರರು, ಅವರ ಪತ್ನಿ ಸೇರಿದಂತೆ ಆ ಮನೆಯ ಎಲ್ಲರನ್ನು ತನ್ನ ಆಣತಿಯಂತೆ ನಡೆಸಿಕೊಳ್ಳುವುದರಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಅವಳು ಬ್ಯಾಂಕ್ ಮ್ಯಾನೇಜರ್ ಮುಂದೆ ಚೇರ್ ಎಳೆದು ಕುಳಿತುಕೊಂಡು ಮಾತನಾಡುವಾಗಲೂ ಅವಳ ದಿಟ್ಟತನ, ಸ್ವಾಭಿಮಾನದ ನಡವಳಿಕೆ ಎದ್ದು ಕಾಣಿಸುತ್ತದೆ. ಕಚ್ಚಾದ ನಿಜಕ್ಕೂ ಇಷ್ಟವಾಗುವುದು ಇಂತಹ ಸಂದರ್ಭಗಳಲ್ಲಿ.
ಕೂಡಿ ಬಾಳುವ ಸಂಸ್ಕೃತಿ ಗ್ರಾಮ ವಿಶಿಷ್ಟವಾದುದು. ಮನುಷ್ಯರು ಸುಖಕ್ಕಿಂತ ದುಃಖಗಳಲ್ಲಿ ಜಾತಿ, ಧರ್ಮಗಳ ಬೇಧ ಮರೆತು ಒಂದಾಗುತ್ತಾರೆ, ಬೆರೆಯುತ್ತಾರೆ ಎಂಬುದಕ್ಕೆ ಕಚ್ಚಾದ ಜೀವಂತ ಸಾಕ್ಷಿ. ಕಚ್ಚಾದ ತನ್ನೆಲ್ಲಾ ನೋವು ನಲಿವುಗಳನ್ನು ನೆರೆಮನೆಯ ಕೊರಗಪ್ಪ ಮತ್ತು ಪದ್ಮಳ ಜೊತೆಗೆ ಹಂಚಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಳು. ಕೊರಗಪ್ಪ ಮತ್ತು ಪದ್ಮ ಒಂದು ದಿನ ಕಾಣಿಸದಿದ್ದರೆ ಅವಳು ಚಡಪಡಿಸುತ್ತಿದ್ದಳು. ಇದು ಬ್ಯಾರಿ ಸಂಸ್ಕೃತಿಯ ಸಹಜ ಮೌಲ್ಯವೂ ಹೌದು. ಕಚ್ಚಾದಳ ಕಾಲದ ಎಲ್ಲಾ ಬ್ಯಾರಿ, ಬ್ಯಾರ್ದಿಯವರ ಬದುಕಿನಲ್ಲಿ ಒಬ್ಬ ಕೊರಗಪ್ಪ, ಪದ್ಮ ಇರುವುದು ಕಾಣಬಹುದು. ಸೂರ್ಯ ಮೂಡುತ್ತಿದ್ದಂತೆ ನನ್ನಮ್ಮನನ್ನು ಹುಡುಕಿಕೊಂಡು ಬರುತ್ತುದ್ದ ಹೊನ್ನಮಕ್ಕ, ರಾಧಕ್ಕ ನೆನಪಾಗುತ್ತಾರೆ. ಅವರ ತಂದುಕೊಡುತ್ತಿದ್ದ ಹಲಸಿನ ಹಣ್ಣು, ಮಾವಿನ ಹಣ್ಣಿನ ಸಿಹಿ ಈಗಲೂ ಈ ನಾಲಗೆಯಿಂದ ಬಿಟ್ಟು ಹೋಗಿಲ್ಲ. ಇವತ್ತು ಈ ಜನರ ನಡುವೆಯೂ ಬಿರುಕುಗಳುಂಟು ಮಾಡುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿರುವುದರಿಂದ ಮತ್ತು ಅಂತಹ ಪ್ರಯತ್ನಗಳ ಹಿಂದೆ ಎಲ್ಲಾ ಸಮುದಾಯಗಳ ಮೇಲ್ವರ್ಗದ ಕುಳಗಳ ಪಾಲು ಹೆಚ್ಚಿರುವುದರಿಂದ ಕಚ್ಚಾದ ಕಾದಂಬರಿ ಚಿತ್ರಿಸುವ ಶ್ರಮಿಕ ವರ್ಗದ ಈ ಸಹಜ ಬೆರೆಯುವಿಕೆ ನನಗೆ ಮುಖ್ಯವಾಗಿ ಕಾಣಿಸುತ್ತದೆ.
– ಸ್ವಾಲಿಹ್ ತೋಡಾರ್
ಸ್ವಾಲಿಹ್ ತೋಡಾರ್ ಅವರು ಕನ್ನಡದ ಲೇಖಕ, ಅನುವಾದಕ ಮತ್ತು ಕವಿ. ‘ಇಶಾರ’ ಪಾಕ್ಷಿಕ ಮತ್ತು ವಾರ್ತಾಭಾರತಿ ಪತ್ರಿಕೆಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅರುವತ್ತಕ್ಕೂ ಮಿಕ್ಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾರ್ಟಿನ್ ಲಿಂಗ್ಸ್ ಅವರ ವಿಶ್ವಪ್ರಸಿದ್ಧ ಕೃತಿ Muhammad: His Life Based on the Earliest Sources, ಡಾ. ಹುಸೈನ್ ರಂಡತ್ತಾನಿ ಅವರ ‘ಅರಿಯಪ್ಪೆಡಾತ ಇಂಡಿಯಾ’ ಮೊದಲಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಅವರದು. ‘ರೂಮಿ ಕತೆಗಳು’ ಅವರ ಇತ್ತೀಚೆಗೆ ಪ್ರಕಟವಾದ ಕೃತಿ.