ಈಜಿಪ್ಟಿನ ರಂಝಾನ್ ಡೈರಿ

ಜಗತ್ಪ್ರಸಿದ್ಧ ಈಜಿಪ್ಟ್ ಬರಹಗಾರ, ಸಾಹಿತ್ಯ ನೋಬೆಲ್ ಪ್ರಶಸ್ತಿ ಪಡೆದ ನಜೀಬ್ ಮಹ್ಫೂಝ್ ಕೈರೋ ನಗರದ ರಂಝಾನ್ ತಿಂಗಳ ಬಗ್ಗೆ ಈ ರೀತಿ ಬರೆಯುತ್ತಾರೆ:
“ರಂಝಾನಿನ ಹಗಲು ಹೊತ್ತು ಶಾಂತ ವಾತಾವರಣನ್ನು ಈಜಿಪ್ಟಿನಲ್ಲಿ ನನಗೆ ಕಾಣಲು ಸಾಧ್ಯವಾಯಿತು. ಚಹಾ ಅಂಗಡಿಗಳು,‌‌ ದಿನವೂ ಜನ ನಿಬಿಡವಾಗಿರುತ್ತಿದ್ದ ಪ್ರದೇಶಗಳು ನಿರ್ಜನವಾಗಿತ್ತು. ರಂಝಾನ್ ತಿಂಗಳ ಆಚರಣೆ ಈ ರೀತಿಯ ವಾತಾವರಣವನ್ನು ಕಾಣಬಹುದು. ಆದರೆ ರಾತ್ರಿಯ ವಾತಾವರಣ ಬೇರೆಯೇ. ಬೆಳಗ್ಗಿನ ತನಕ ಜನರು ನಿದ್ದೆ ಬಿಟ್ಟಿರುವರು. ಬೀದಿಬದಿ ಪಾನಿಸ್ ಬೆಳಕನ್ನು ಕೈಯಲ್ಲಿರಿಸಿದ ಮಕ್ಕಳನ್ನು ಕಾಣಬಹುದು. ಎಲ್ಲಾ ಕಡೆಯಲ್ಲೂ ಆ ಬೆಳಕು ಕಾಣಬಹುದು. ರಾತ್ರಿ ಏನೋ ಸಂಭ್ರಮದ ಹಾಗೆ ಪರಿಸರ ಬದಲಾಗಿರುತ್ತೆ. ಹಬ್ಬ ಬಂದರೆ ಮಕ್ಕಳು, ವಯಸ್ಕರು ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸುವರು. ಪ್ರತಿ ವರ್ಷದ ರಂಝಾನ್ ತಿಂಗಳನ್ನು ನಾವು ಕಾತುರದಿಂದ ಕಾಯ್ತಾ ಇರುತ್ತೇವೆ.”

ಈಜಿಪ್ಟ್ ಜೀವನದ ಮಾಧುರ್ಯ ಎಲ್ಲೆಲ್ಲೂ ಕೇಳಿಬರುವ ಕುರ್ಆನಿನ ಧ್ವನಿ. ಫೆಬ್ರವರಿ 20 ರಂದು ಈಜಿಪ್ಟ್ ನೆಲಕ್ಕೆ ಬಂದಿಳಿದ ಅಂದಿದಿನಿಂದ ಕುರ್ಆನ್ ಪಾರಾಯಣದ ಲಯಬದ್ಧ ಶಬ್ದಗಳನ್ನು ಅನುಭವಿಸುತ್ತಿದ್ದೇವೆ. ಬಸ್ ಅಥವಾ ಖಾಸಗಿ ವಾಹನದಲ್ಲಿ ಪ್ರಯಾಣಿಸುವಾಗ, ಅವರು ಕುರ್ಆನ್ ಒಂದು ನಿಮಿತ್ತದಂತೆ ಅತ್ಯುತ್ತಮ ಶ್ರೇಷ್ಠ ಖಾರಿಉಗಳ ಅತ್ಯಂತ ಸುಂದರವಾದ ಪಠಣ ಶೈಲಿಯನ್ನು ಹಾಕುತ್ತಾರೆ. ಆ ಸ್ವರಕ್ಕೆ ನಾವು ಉಡುಗೆ ಮತ್ತು ನಡವಳಿಕೆಯಲ್ಲಿ ಅತ್ಯಂತ ಆಧುನಿಕರೆಂದು ಪರಿಗಣಿಸುವ ಜನರು ಕೈಯಲ್ಲಿರುವ ಮೊಬೈಲ್ ಫೋನ್‌ಗಳಿಂದ ಕೇಳುತ್ತಾರೆ. ಅವರ ತುಟಿಗಳು ಕುರಾನ್ ಧ್ವನಿಯೊಂದಿಗೆ ಚಲಿಸುತ್ತವೆ. ವಿಶ್ವಾಸಿಗಳಿಗೆ ಸಂತೋಷದ ಸುದ್ದಿ ಹೇಳಿದಾಗ ಅವರ ಮುಖದಲ್ಲಿ ಮುಗುಳ್ನಗು ಬೀರುತ್ತದೆ. ಜೀವನದ ಅರ್ಥ ಸೂಸುವ ಸೂಕ್ತಗಳು ಬರುವಾಗ ಆಲೋಚನೆಗಳು ದಟ್ಟವಾಗುತ್ತದೆ. ಸೂರತ್ ಯೂಸುಫ್‌ನ ಸೂಕ್ತಗಳು ಈಜಿಪ್ಟಿನವರಿಗೆ ಅತ್ಯಂತ ಪ್ರಿಯವಾದುದು. ಯೂಸುಫ್ ಸೂರತ್ ಪ್ಲೇ ಆದರೆ ಅವರ ಮುಖಗಳು ಹೆಮ್ಮೆಯಿಂದ ಅರಳುತ್ತವೆ.

ರಂಜಾನ್ ಸಮೀಪಿಸುತ್ತಿದ್ದಂತೆ ಈಜಿಪ್ಟಿನವರಿಗೆ ಕುರ್ಆನ್ ಮೇಲಿನ ಪ್ರೀತಿ ಹೆಚ್ಚಾದದ್ದು ಕಂಡುಬಂತು. ಬಸ್ ನಿಲ್ದಾಣದಲ್ಲಿ ನಾವು ವಾಹನಕ್ಕಾಗಿ ಕಾಯುತ್ತಿರುವಾಗ ಪಕ್ಕದಲ್ಲಿದ್ದ ಯುವಕ ತನ್ನ ಮೊಬೈಲ್ ತೆರೆದು ಕುರ್ಆನ್ ಪಾರಾಯಣ ಮಾಡುತ್ತಿದ್ದ. ಅಮೆರಿಕಾದ ವಿಶ್ವವಿದ್ಯಾನಿಲಯದಲ್ಲಿ ಕೋರ್ಸ್‌ಗೆ ಪಾವತಿಸಲು ಬ್ಯಾಂಕ್‌ಗೆ ಹೋಗಿ ಅದರ ರಸೀದಿಯನ್ನು ಪಡೆಯಲು ಹೊರಗಿನ ಸಂದರ್ಶಕರ ಸೀಟಲ್ಲಿ ಹದಿನೈದು ನಿಮಿಷ ಕಾಯಬೇಕಾಯಿತು. ಪಕ್ಕದಲ್ಲಿದ್ದ ಇಪ್ಪತ್ತರ ಹರೆಯದವಳಂತೆಯಿದ್ದ ಹುಡುಗಿ ಮೊಬೈಲ್ ತೆರೆದು ಕುರ್ಆನ್ ನಲ್ಲಿ ಮಗ್ನಳಾಗಿ ಉಳಿದೆಲ್ಲವನ್ನೂ ಮರೆತುಬಿಟ್ಟಿದ್ದಾಳೆ. ಖುರ್ಆನ್ ಈಜಿಪ್ಟಿನವರಿಗೆ ಎಲ್ಲಾ ದುಃಖಗಳಿಗೆ ಆಶ್ವಾಸವನ್ನು ತುಂಬುತ್ತದೆ.

ಈಜಿಪ್ಟಿನ ಭೂಶಾಸ್ತ್ರಪರವಾದ ನೆಲೆಯು, ಭಾರೀ ಸಂಘರ್ಷದ ಈ ಆಧುನಿಕ ಕಾಲದಲ್ಲಿ ಬಹಳ ಮುಖ್ಯವಾದ ಭಾಗದಲ್ಲಾಗಿದೆ. ನಾಲ್ಕು ಭಾಗಗಳಲ್ಲಿಯೂ ಅಸಂತುಷ್ಟಿಯ ಸುದ್ದಿಗಳಾಗಿವೆ. ಪಶ್ಚಿಮಕ್ಕೆ ಲಿಬಿಯಾ, ಪೂರ್ವಕ್ಕೆ ಪ್ಯಾಲೆಸ್ತೀನ್ ಮತ್ತು ದಕ್ಷಿಣಕ್ಕೆ ಸುಡಾನ್. ಅನೇಕ ಆರ್ಥಿಕ ಸವಾಲುಗಳ ಹೊರತಾಗಿಯೂ, ಈಜಿಪ್ಟಿನವರು ಇನ್ನೂ ಅತ್ಯಂತ ಶಾಂತಿಯುತ ಜೀವನವನ್ನು ನಡೆಸುತ್ತಿದ್ದಾರೆ. ಪವಿತ್ರ ಕುರ್ಆನಿನ ಪ್ರಸಿದ್ಧ ಶ್ಲೋಕ, ‘ನಾನು ಇಲ್ಲಿಗೆ ಪ್ರಯಾಣಿಸಿದಾಗ, ನನ್ನ ಹೃದಯವು ಸಂತೋಷದಿಂದ ತುಂಬಿತ್ತು.’ ‘ಉದುಖುಲೂ ಮಿಸ್ರ ಇನ್ಶಾಅಲ್ಲಾಹು ಆಮಿನೀನ್’ – ನೀವು ಸುರಕ್ಷಿತವಾಗಿ ಈಜಿಪ್ಟಿಗೆ ಪ್ರವೇಶಿಸಿರಿ. ಆ ಸುರಕ್ಷತೆಯನ್ನು ಈ ನೆಲದ ಎಲ್ಲೆಡೆ ಅನುಭವಿಸಬಹುದು. ಅನೇಕ ಗೋಡೆಗಳ ಮೇಲೆ ಈ ಶ್ಲೋಕವನ್ನು ಕೆತ್ತಿರುವುದನ್ನು ನೋಡಿದೆ. ಬಂದವರಿಗೆಲ್ಲ ಇಂತಹ ಭದ್ರತೆ ಕೊಡಲು ಇಲ್ಲಿನ ಸರಕಾರವೂ ಗಮನ ಹರಿಸುತ್ತಿದೆ ಅಂತ ತೋಚಿತು.

ಶಅಬಾನ್ ತಿಂಗಳ ಎರಡನೇ ವಾರದಲ್ಲಾಗಿದೆ ನಾನು ಈಜಿಪ್ಟ್ ತಲುಪುವುದು. ಎರಡನೆಯ ದಿನ, ವೀಸಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಬ್ಬಾಸಿಯಾಗೆ ಹೋಗಬೇಕಾಗಿ ಬಂತು.
ಅದು ಪೂರ್ಣಗೊಳಿಸಿ, ನಾನು ಕೈರೋ ಡೌನ್‌ಟೌನ್‌ಗೆ ಇರುವ ರಸ್ತೆಯಲ್ಲಿ ನಡೆದೆ. ಪಾನಿಸ್ ದೀಪದ ಅಂಗಡಿಗಳ ಸಾಲು ಸಾಲುಗಳು ಕಾಣುತ್ತಿದ್ದವು. ಆ ಕ್ಷಣ ಹನ್ನೆರಡು ವರ್ಷಗಳ ಹಿಂದೆ ರಿಸಾಲ ವಾರಪತ್ರಿಕೆಯಲ್ಲಿ ಬರೆದ ರಮಝಾನ್ ಲೇಖನದ ಬಗ್ಗೆ ನೆನಪಿಸಿಕೊಂಡೆ. ಈಜಿಪ್ಟಿನ ಸಂಶೋಧಕ ನಿರ್ವಾಣ ಸಾದ್ ಅವರ ಕೈರೋದಲ್ಲಿ ರಂಜಾನ್ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಸಂಶೋಧನಾ ಪುಸ್ತಕವನ್ನು ಓದಿದ ಅನುಭವಗಳ ಆಧಾರಿತವಾಗಿತ್ತು ಆ ಲೇಖನ. ಅದರಲ್ಲಿ ಮುಖ್ಯವಾಗಿ ಉಲ್ಲೇಖಿಸಿದ್ದು; ಪಾನೀಸ್ ದೀಪಗಳನ್ನು ಹೊತ್ತಿಸಿ ಮನೆ ಬೀದಿ ಮಸೀದಿಗಳನ್ನು ಅಲಂಕಾರಗೊಳಿಸುವ ಈಜಿಪ್ತಿಯನ್ನರ ಕುರಿತಾಗಿತ್ತು. ಪಾನೀಸ್ ದೀಪಗಳ ವೈವಿಧ್ಯತೆಯನ್ನು ಕಂಡು ಆಶ್ಚರ್ಯಚಕಿತನಾದೆ. ಪ್ರತಿಯೊಂದು ಅಂಗಡಿಗಳು ಸಾವಿರ ಚದರ ಅಡಿ ಮತ್ತು ಅದಕ್ಕಿಂತಲೂ ಹೆಚ್ಚಿನವುಗಳನ್ನು ಕಾಣಬಹುದು. ಇವೆಲ್ಲವುಗಳಲ್ಲಿ ವಿವಿಧ ಬಣ್ಣ ಮತ್ತು ಆಕಾರದ ಸಣ್ಣ ಮತ್ತು ದೊಡ್ಡ ಪ್ಯಾನಿಸ್ ದೀಪಗಳನ್ನು ಮಾರಾಟಕ್ಕೆ ಇಡಲಾಗಿದೆ. ಈಜಿಪ್ಟಿನವರು ಬಹಳ ಕುತೂಹಲದೊಂದಿಗೆ ಅಂಗಡಿಗಳನ್ನು ಪ್ರವೇಶಿಸುತ್ತಾರೆ. ತುಂಬಾ ಹೊತ್ತು ಪಾನಿಸ್ ದೀಪಗಳ ಚಂದ ಮತ್ತು ಮಹಿಮೆಯನ್ನು ನೋಡುತ್ತಾರೆ. ಬಹಳ ಇಷ್ಟವಾದ ಒಂದು ಅಥವಾ ಎರಡು ದೀಪಗಳನ್ನು ಮನೆಯ ಮುಂದೆ ಅಥವಾ ಸ್ವಾಗತ ರೂಮಿನಲ್ಲಿ ಇಡಲು ಬೇಕಾಗಿ ಖರೀದಿಸುತ್ತಾರೆ. ಇಪ್ಪತ್ತೋ ಅಥವಾ ಮೂವತ್ತು ರೂಪಗಳಲ್ಲಿ ಸಣ್ಣ ಕಂದಮ್ಮಗಳ ಕೈಗಳಲ್ಲಿಯೂ ಹೊಂದಿಕೊಳ್ಳುವಂತಹ ಪಾನೀಸ್ ಗಳು ಇವೆ. ಹತ್ತು ಈಜಿಪ್ಟ್ ಪೌಂಡ್‌ಗಳಿಂದ (ಭಾರತೀಯ ರೂಪಾಯಿ ಹದಿನೆಂಟು) ಸಣ್ಣ ಮಕ್ಕಳಿಗಿರುವುದನ್ನು ಖರೀದಿಸಬಹುದು. ಈಜಿಪ್ಟಿನವರು ಎಲ್ಲಿಗೆ ಹೋಗಲಿ, ಕುಟುಂಬವು ಅವರೊಂದಿಗೆ ಇರುತ್ತದೆ. ವಿಶೇಷವಾಗಿ ಶಾಪಿಂಗ್‌ಗೆ ಹೋಗುವಾಗ ಅದನ್ನು ಕಾಣಬಹುದು. ಸಣ್ಣ ಮಕ್ಕಳಿಗಿರುವ ಪಾನಿಸ್ ಗಳ ಭಾಗದಲ್ಲಿಯೂ ತುಂಬಾ ಜನಜಂಗುಳಿಗಳಿರುತ್ತವೆ. ಮಕ್ಕಳ ಇಷ್ಟಾನುಸಾರ ಪೋಷಕರು ಒಂದೋ, ಎರಡೋ ಪಾನಿಸ್ ಗಳನ್ನು ಖರೀದಿಸಿ ಕೊಡುತ್ತಾರೆ. ಸಣ್ಣ ಬ್ಯಾಟರಿ ಚಾಲಿತ ಎಲ್.ಇಡಿ ದೀಪಗಳನ್ನು ಈ ಸಣ್ಣ ಪಾನೀಸ್ ಗಳು ಹೊಂದಿರುತ್ತವೆ. ಅವುಗಳು ಉರಿಯುವಾಗ ಕಂದಮ್ಮಗಳ ಮುಖ ಅರಳುವುದನ್ನು ಕಾಣಬಹುದು.

ಸಣ್ಣ ವಾದ್ಯಗಳನ್ನು ಕೂಡ ಮಕ್ಕಳಿಗಾಗಿ ಮಾಡಲಾಗಿದೆ. ಈ ಆಟಿಕೆ ಸಾಮಾನು ರಂಝಾನ್ ಸಿದ್ಧತೆಗೆ ಬಹುಮುಖ್ಯ ಪಾತ್ರವಾಗಲು ಒಂದು ಕಾರಣವಿದೆ. ಕೈರೋದ ಹಲವು ಪ್ರದೇಶಗಳಲ್ಲಿ ಸಹರಿಯ ಸಮಯವನ್ನು ತಿಳಿಸಿಕೊಡಲು, ಚರ್ಮದಿಂದ ತಯಾರಿಸಿದ, ದೊಡ್ಡ ದಫ್ ತರ ಇರುವ ವಸ್ತುಗಳಿಗೆ ಬಾರಿಸುತ್ತಾ, ಅರಬಿ ಹಾಡು ಹಾಡಿ,‌ ಯುವಕರು ಪ್ರತಿಯೊಂದು ಮಸೀದಿಗೆ ತೆರಳಿ ಜನರನ್ನು ಎಬ್ಬಿಸುವ ಪರಿಪಾಠವಿದೆ. ಶತಮಾನದಿಂದಲೂ ಇದು ಚಾಲ್ತಿಯಲ್ಲಿದೆ. ನಜೀಬ್ ಮಹ್ಫೂಝ್ ಹೇಳಿದ ಹಾಗೆ‌ ಕೈರೋ ನಗರದ ಜನರು ರಾತ್ರಿ ಹೊತ್ತು ನಿದ್ರಿಸುವುದು ಕಡಿಮೆ. ಆದರೂ‌ ಉಪವಾಸಕ್ಕೆ ಬೇಕಾಗಿ ಅವರನ್ನು ಎಬ್ಬಿಸುವ ಈ ವಸ್ತುಗಳ ಮೇಲೆ ಅವರಿಗೆ ಒಂಥರಾ ಇಷ್ಟ. ಈ ಆಚರಣೆಗೆ ಒಟ್ಟೋಮನ್ ಕಾಲದವರೆಗಿನ ಹಳೆತನವಿದೆ. ಅವತ್ತು ಸಮಯ ನಿಗದಿಪಡಿಸಿ‌, ಮಲಗಿ ಎದ್ದೇಳಲು ಉಪಕರಣಗಳು ವ್ಯಾಪಕವಾಗಿರಲಿಲ್ಲ. ಆದರೆ ಈಗ ಎಲ್ಲರಿಗೂ ಅಲಾರಾಂ ಇಡಲು ಉಪಕರಣಗಳು ಇದ್ದು ಕೂಡ ರಂಝಾನಿನ ಪರಂಪರಾಗತವಾಗಿ ಆಚರಿಸಿಕೊಂಡು ಬಂದಿರುವ ನೆನಪುಗಳನ್ನು ಮಿಸ್ರಿಗಳು‌ ಕೈಬಿಟ್ಟಿಲ್ಲ. ಅವರಿಗೆ ಸಣ್ಣ ಹಾಗೂ ದೊಡ್ಡ ಮಟ್ಟಿನ ಸಹಾಯವನ್ನು ಮಾಡುವ ಮೂಲಕ ಆ ದಿನವನ್ನು ಆರಂಭಿಸಲು ಹಲವರು ಶ್ರಮಿಸುತ್ತಾರೆ.

ಈಜಿಪ್ಟಿಯನ್ನರಿಗೆ ನಗರದ ಮಧ್ಯಭಾಗದಲ್ಲಿ ಪಿರಂಗಿ ಮುಖಾಂತರ ಆಕಾಶಕ್ಕೆ ಬೆಂಕಿ ಹಾರಿಸಿ, ಅದರ ಶಬ್ದ ಹಾಗು ಬೆಳಕನ್ನು ತೋರಿಸುತ್ತಾ ರೋಜಾ ಆಯಿತೆಂದು ತಿಳಿಸಿಕೊಡುವ ರೂಢಿಯಿದೆ. ಸರ್ಕಾರಿ ಉದ್ಯೋಗಿಗಳ ಮೇಲುಸ್ತುವಾರಿಯಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಅದನ್ನು ನೋಡಲು, ಫೋಟೋ ಶೂಟ್ ಮಾಡಲು, ಮಾಧ್ಯಮದಲ್ಲಿ ಪ್ರಚಾರ ಮಾಡಲು ಜನ‌ ಬಂದು ಸೇರುವುದಿದೆ. ಶತಮಾನಗಳಿಂದ ಚಾಲ್ತಿಯಲ್ಲಿರುವ ಈ ಕ್ರಮ ಮನಮೋಹಕವೆಂದೂ, ಅದನ್ನು ಆಚರಿಸುವುದು‌ ಸೌಂದರ್ಯದಾಯಕವೆಂದೂ‌ ಈಜಿಪ್ಟ್ ಜನರು ನಂಬುತ್ತಾರೆ. ಮುಸ್ಲಿಂ ಬ್ರದರ್ ಹುಡ್’ಗೆ ಸಮರ್ಥ ನಿಯಂತ್ರಣ ಸರ್ಕಾರದ ಭಾಗದಿಂದ ಇರುವುದರಿಂದ, ಈ ಊರನ್ನು ಇಷ್ಟಪಟ್ಟು ಕೆಲವು ದಿನಗಳು ಇಲ್ಲಿ ಕಲಿಯಲೂ, ವಾಸಿಸಲೂ ತಲುಸಿದ ನಮಗೆಲ್ಲರಿಗೂ ಸುಖ ನೀಡುತ್ತದೆ.

ರಂಝಾನ್ ತಿಂಗಳ ಮೊದಲ ದಿನ ಕೈರೋ ನಗರದ ಮಧ್ಯೆ ನಾನು ನಡೆಯುತ್ತಿದ್ದೆ. ಚರಿತ್ರೆ
ಯೊಂದಿಗಿನ‌ ಹೆಜ್ಜೆಯಾಗಿತ್ತದು. ಹಳೆಯ ಕಟ್ಟಡಗಳನ್ನೆಲ್ಲಾ ಹಾಗೆಯೇ ಇಡಲಾಗಿದೆ. ಪುಣ್ಯ ತಿಂಗಳನ್ನು ಸ್ವಾಗತಿಸಲು ಸಜ್ಜಾಗಿರುವ ಮಿಸ್ರಿಗಳು‌ ಎಲ್ಲೆಡೆ ಇದ್ದಾರೆ. ಎಲ್ಲಾ ಅಂಗಡಿಗಳ ಎದುರು ಭಾಗದಲ್ಲಿ ಪಾನಿಸ್ ಬೆಳಕನ್ನು ಉರಿಸಲಾಗಿದೆ. ಗಗನಚುಂಬಿ ಕಟ್ಟಡಗಳ ಬೀದಿಗಳಲ್ಲಿ, ಒಳ ದಾರಿಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಮಕ್ಕಳು ಸಣ್ಣ ಪಟಾಕಿಗಳನ್ನು ಸಿಡಿಸುತ್ತಿದ್ದಾರೆ. ನಮ್ಮೂರಲ್ಲಿ ಕಾಣುವ ದೊಡ್ಡ ಮಟ್ಟಿಗೆ ಶಬ್ದ ಕೋಲಾಹಲ ಸೃಷ್ಟಿಸುವ ಪಟಾಕಿಗಳನ್ನು ಇಲ್ಲಿ ಕಾಣಲು ಅಸಾಧ್ಯ. ಬೀದಿ ಬದಿಯನ್ನು ಶುಚಿಯಾಗಿಸುವ ದೃಶ್ಯ ಕಂಡಾಗ ಮನಸ್ಸು ಶಾಂತವಾಯಿತು. ಹೆಜ್ಜೆ ಮುಗಿಯದಿರಲಿ ಅಂತ‌ ಭಾವಿಸಿಕೊಂಡೆ. ಕಿಲೋಮೀಟರ್ ಕ್ರಮಿಸಿದರೂ‌ ಇದೇ ದೃಶ್ಯ ಕಾಣಬಹುದು.

ಮಸೀದಿಗೆ‌ ಯಾವಾಗ ಬಂದಾಗಲೂ ಖುರ್ಆನ್ ಪಾರಾಯಣ,‌ ಝಿಕ್ರ್ ಮೂಲಕ ಸಮಯ ವ್ಯಯಿಸುವವರನ್ನು ಕಾಣಬಹುದು. ಗ್ರಾಹಕರು ಬರದ ಸಮಯಗಳಲ್ಲಿ ಅಂಗಡಿ ಮಾಲಿಕರು ಖುರ್ಆನ್ ಪಾರಾಯಣದಲ್ಲಿ ತೊಡಗಿಕೊಳ್ಳುವರು. ರಂಝಾನಿನ ಮೊದಲನೇ ದಿನ ಒಂದು ಅನುಭವ ಉಂಟಾಯಿತು. ನನಗೆ ಐದು ಕಿಲೋಮೀಟರ್ ದೂರಕ್ಕೆ ಬಸ್ ಮೂಲಕ ಹೋಗಬೇಕಿತ್ತು. ದಾರಿ ಮಧ್ಯೆ ಮಧ್ಯವಯಸ್ಕರಾದ ಒಬ್ಬರು ಬಸ್ ಹತ್ತಿದರು. ‘ಸ್ವಲ್ಲೂ ಅಲಾ ನಬಿಯ್ಯ್’ ಎಂದು ಆರಂಭಿಸಿ, ಸ್ವಲಾತಿನ‌ ಮಹತ್ವವನ್ನು ಹೇಳುವ ಸೂಕ್ತವನ್ನು, ಹದೀಸನ್ನು ಹೇಳಲು ಆರಂಭಿಸಿದರು. ನಾನು ಕಂಡಾಕ್ಷಣ ಭಿಕ್ಷುಕನೆಂದು ಭಾವಿಸಿಕೊಂಡೆ. ಆದರೆ ಯಾರಿಂದಲೂ ಹಣ ಸ್ವೀಕರಿಸುವುದಾಗಿ ಕಾಣಲಿಲ್ಲ. ಹತ್ತು ನಿಮಿಷಗಳ ಕಾಲ ಬಸ್ನಲ್ಲಿ ಹಿಂದೆ ಮುಂದೆ ಹೆಜ್ಜೆಯಿಟ್ಟು ಸ್ವಲಾತ್ ಹೇಳುವಂತೆ ಪ್ರೇರೇಪಿಸುತ್ತಾ ಬಸ್ ಇಳಿದು ಬೇರೆ ಬಸ್ ಏರುವುದನ್ನು ಕಂಡೆ. ರಂಝಾನ್ ತಿಂಗಳಲ್ಲಿ ಆ ವ್ಯಕ್ತಿ ಮಾಡುವ ವ್ಯತಿರಿಕ್ತವಾದ ಆ ಪುಣ್ಯಗೆಲಸವನ್ನು ನೆನಪಿಸುತ್ತಾ ಅದರಲ್ಲೇ ಮಗ್ನನಾದೆ.

ಇಫ್ತಾರ್ ವೇಳೆ ಅಂಗಡಿಗಳು ಜನನಿಬಿಡವಾಗುತ್ತೆ. ಚರಿತ್ರೆ ಪುಟಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಸೀದಿಗಳಲ್ಲಿ ದಿನವೂ ಇಫ್ತಾರ್ ಕೂಟ ಏರ್ಪಡಿಸಲಾಗಿರುತ್ತೆ.‌ ಅದಲ್ಲದೆ ರಸ್ತೆ ಬದಿಗಳಲ್ಲಿ ನಲ್ವತ್ತರಿಂದ ಐವತ್ತು ಜನರಿಗಾಗುವಷ್ಟು ಇಫ್ತಾರಿನ ಸೌಕರ್ಯಗಳು ಮಾಡಿಟ್ಟಿದ್ದು ಕಾಣಬಹುದು. ಮಗ್ರಿಬ್ ಅಝಾನ್ ಕರೆಯುವ ಅರ್ಧ ಘಂಟೆ ಮೊದಲೇ ಜನರು ಬಂದು ಇಫ್ತಾರಿಗಾಗಿ ಕಾಯುವ ಸುಂದರ ದೃಶ್ಯ ಸಾಮಾನ್ಯ. ಪುರುಷರಿಗೂ ಮಹಿಳೆಯರಿಗೂ ಪ್ರತ್ಯೇಕ ಸ್ಥಳವನ್ನು ಕಾಣಲು ಸಾಧ್ಯವಾಯಿತು. ಬಸ್ ಮೂಲಕ ಸಂಚರಿಸುವ ಜನರಿಗೆ ಖರ್ಜೂರ, ನೀರು, ಆಹಾರಗಳನ್ನು ಪ್ರತ್ಯೇಕ ಕವರ್ ಮೂಲಕ ನೀಡುತ್ತಾರೆ. ಹೀಗೆ ಈಜಿಪ್ಟಿನಲ್ಲಿ ಪರಸ್ಪರ ಸ್ನೇಹ ಕೊಂಡುಕೊಳ್ಳುವಿಕೆಯ, ಸ್ವದಖಾ ನೀಡಿ ಪುಣ್ಯ ಕಟ್ಟಿಕೊಳ್ಳುವ ದೃಶ್ಯಗಳು ಯಥೇಚ್ಛವಾಗಿ ನೋಡಬಹುದು.

ತರಾವೀಹ್ ಬಹಳ ಸಂತೋಷದಾಯಕ ಕರ್ಮ. ಮಸೀದಿಗಳಲ್ಲಿ ಕುರ್ಆನ್ ಸುಶ್ರಾವ್ಯವಾಗಿ ಪಾರಾಯಣ ಮಾಡುವ ಖಾರಿಉಗಳಿರುತ್ತಾರೆ. ಸಾಮಾನ್ಯವಾಗಿ ಸೂರಾಗಳು ಧೀರ್ಘವಾಗುತ್ತದೆ. ಆದರೆ ಈಜಿಪ್ಟಿನವರು ತಮ್ಮ ಆರಾಧನೆಯಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ ಅವರು ಆ ಮಧುರವಾದ ಧ್ವನಿಯಲ್ಲಿ ಮಗ್ನರಾಗಿ ಎಷ್ಟು ಕೇಳಿದರೂ ಅದು ಕೊನೆಗೊಳ್ಳದಿರಲಿ ಎಂದು ಬಯಸುತ್ತಾರೆ. ಅಝ್ಹರ್ ಮಸೀದಿ ಮತ್ತು ಹಸನ್ ಮಸೀದಿಯಲ್ಲಿ ಎಲ್ಲಾ ನಮಾಜುಗಳಿಗೆ ಹೆಚ್ಚಿನ ಜನರು ಸೇರುತ್ತಾರೆ. ಮೊದಲ ತರಾವೀಹ್‌ಗೆ, ಈಜಿಪ್ಟ್‌ನ ಅಝ್ಹರ್ ನಲ್ಲಿ ಪ್ರಸಿದ್ಧ ಕುರ್ಆನ್ ಪಾರಾಯಣ ಮಾಡುವ ಶೇಖ್ ನಆನಾಯಿನ್ ಅವರ ಪಾರಾಯಣವಿತ್ತು.

ಈಜಿಪ್ಟಿನವರು ಆರೋಗ್ಯಕರ ಆಹಾರವನ್ನು ತಿನ್ನುವವರು. ರಂಜಾನಿನಲ್ಲೂ ಆ ಹವ್ಯಾಸಕ್ಕೆ ಬದಲಾವಣೆ ಇಲ್ಲ. ಐಶ್ ರೊಟ್ಟಿ ಮತ್ತು ಅಲಸಂಡೆ ಸಾರು ಮಾರಾಟ ಮಾಡುವ ಅಂಗಡಿಗಳು ತುಂಬಾ ಕಾರ್ಯನಿರತವಾಗಿವೆ. ಅವುಗಳನ್ನು ತಿಂದರೆ ಹೊಟ್ಟೆ ತುಂಬುತ್ತದೆ. ಸ್ವಲ್ಪವೂ ಭಾರ ಅನಿಸುವುದಿಲ್ಲ. ಕುನಾಫಾದಂತಹ ರಂಜಾನ್ ವಿಶೇಷ ಸಿಹಿತಿಂಡಿಗಳು ಬೀದಿಗಳಲ್ಲಿ ಹೇರಳವಾಗಿ ಲಭ್ಯವಿವೆ. ಈಜಿಪ್ಟ್‌ನಲ್ಲಿ ರಂಝಾನನ್ನು ಒಮ್ಮೆಯಾದರೂ ಅನುಭವಿಸಲೇಬೇಕು. ಹಾಗಾದರೆ ಕುರ್ಆನನ್ನು ಅನುಭವಿಸಲು ಕೂಡ ಸಾಧ್ಯವಾಗುತ್ತದೆ.

ಮೂಲ : ಎಂ. ಲುಖ್ಮಾನ್
ಅನುವಾದ : ಸಲೀಂ ಇರುವಂಬಳ್ಳ

ಅರ್ವಿ : ಅರಬ್ -ತಮಿಳರ ಅಳಿದು ಹೋದ ಭಾಷೆ

2008 ಇಸವಿಯ ಬೇಸಿಗೆ ಕಾಲದ ಸಂಜೆ ಹೊತ್ತು, ದಕ್ಷಿಣ ಭಾರತದ ವೆಲ್ಲೂರಿನ ಅರಬಿ ಕಾಲೇಜಿನ ವಿದ್ಯಾರ್ಥಿ,26ರ ಹರೆಯದ ಮೊಹಮ್ಮದ್ ಸುಲ್ತಾನ್ ಬಾಖವಿ ಗಮನಾರ್ಹವಾದ ಸಂಗತಿಯೊಂದನ್ನು ಕಂಡುಹಿಡಿದನು. ಪೂರ್ವಜರಾದ ಆಧ್ಯಾತ್ಮಿಕ ಗುರುಗಳು ಅಂತ್ಯ ವಿಶ್ರಮ ಪಡೆಯುತ್ತಿರುವ ವೆಲ್ಲೂರಿನ ಲಬಾಬೀನ್ ಖಬರ್ಸ್ಥಾನ್ ಮಸೀದಿಯಲ್ಲಿ ನಮಾಜ್ ಮುಗಿಸಿದ ಬಳಿಕ ಆತ, ಒಬ್ಬ ವ್ಯಕ್ತಿ ಮಸೀದಿಯ ಅಂಗಳ ಗುಡಿಸುವುದನ್ನು ಕಂಡನು. ಕಸಗುಡಿಸುವಾತ ಕಸವನ್ನು ಸುಡುವ ಸಲುವಾಗಿ ಮಸೀದಿಯ ಪ್ರವೇಶ ದ್ವಾರದ ಪಕ್ಕದಲ್ಲಿರುವ ಬಾವಿಯ ಬಳಿ ಕಸವನ್ನು ಕೂಡಿಹಾಕಿದ್ದ. ಕಸದ ರಾಶಿಯಲ್ಲಿ ಎಲೆಗಳು, ಕಲ್ಲು ಮಣ್ಣುಗಳು ಮತ್ತು ಕಾಗದದ ತುಣುಕುಗಳೂ ಇದ್ದವು. ನಮಾಜ್ ಮುಗಿಸಿ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಜೋರಾಗಿ ಬೀಸಿದ ಗಾಳಿಗೆ ಪುಸ್ತಕದ ಹಾಳೆಯೊಂದು ಬಾಖವಿಯ ಮುಖದ ಮೇಲೆ ಬಿತ್ತು. ಆ ಪುಟವನ್ನು ತೆಗೆದು ನೋಡಿದ ಬಾಖವಿಗೆ ಅಚ್ಚರಿ ಕಾದಿತ್ತು. ಅಪರೂಪದ ಪುರಾತನ ಹಸ್ತ ಪ್ರತಿಗಳ ಸಂಗ್ರಹಕ್ಕಾಗಿ ಮಸೀದಿಗಳಲ್ಲಿರುವ ಬತ್ತಿಹೋದ ಬಾವಿಗಳನ್ನು ಬಳಸಲಾಗುತ್ತದೆಯೆಂದೂ, ಅವುಗಳ ಪುಟಗಳು ಮಸೀದಿ ಅಂಗಳಗಳಲ್ಲಿ ಬಿದ್ದಿರುತ್ತವೆಯೆಂದೂ ಬಾಖವಿ ತಿಳಿದಿದ್ದನು. ಅಂತೆಯೇ ಈ ಹಾಳೆಯು ಅವುಗಳಲ್ಲಿ ಒಂದಾಗಿರಬಹುದೇ ಎಂದು ಬಾಖವಿ ಆಶ್ಚರ್ಯಪಟ್ಟನು. ಬೆಂಕಿಗಾಹುತಿಯಾಗುತ್ತಿದ್ದ ಕಸದ ರಾಶಿಯನ್ನು ದಿಟ್ಟಿಸಿ ನೋಡಿದಾಗ ಪುಸ್ತಕವೊಂದನ್ನು ಕಂಡು ಕೈಗೆತ್ತಿಕೊಂಡನು. ಅದು ಅಳಿದು ಹೋದ ಅರ್ವಿ ಭಾಷೆಯಲ್ಲಿ ಬರೆದ ಪುಸ್ತಕ ಎಂಬುದನ್ನು ಆತ ಗುರುತಿಸಿದ. ಸದ್ಯ ದಕ್ಷಿಣ ಭಾರತದ ಕೇರಳದಲ್ಲಿರುವ ಜಾಮಿಯಾ ಅನ್ವರಿಯ್ಯಾ ಅರಬಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿರುವ ಬಾಖವಿ 4ನೇ ಹರೆಯದಿಂದಲೇ ಅರ್ವಿ ಭಾಷೆ ಕಲಿತವನು. ಇಂದು ಅರಬಿ ಭಾಷೆ ಬಲ್ಲ ಮುಸ್ಲಿಮರೆಡೆಯಲ್ಲಿಯೇ ಅರ್ವಿ ಭಾಷೆಯ ಪರಿಚಯವಿರುವವರು ಬಹಳ ವಿರಳವೆನ್ನಬಹುದು.

ಮಹ್ಮೂದ್ ಕೂರಿಯಾ

ಮಧ್ಯಕಾಲದಲ್ಲಿ ಯಾತ್ರೆ ಮತ್ತು ವ್ಯಾಪಾರಗಳು ಭಾಷೆಗಳ ಮಿಲನಕ್ಕೆ ಹೇತುವಾದವು. ಪ್ರಸ್ತುತ ಯಾತ್ರೆ ಮತ್ತು ವ್ಯಾಪಾರಗಳಿಂದಾಗಿ ಕ್ರಿ. ಶ. 8ನೇ ಶತಮಾನದಲ್ಲಿ ಅರ್ವಿ ಭಾಷೆಯು ಹುಟ್ಟಿಕೊಂಡಿತು. ಕ್ರಿಸ್ತಶಕ 12ನೇ ಶತಮಾನದಲ್ಲಿ ಮುಸ್ಲಿಂ ಅರಬ್ ವ್ಯಾಪಾರಿಗಳು ಅಧಿಕ ಸಂಖ್ಯೆಯಲ್ಲಿ ವ್ಯಾಪಾರ ನಿಮಿತ್ತ ತಮಿಳುನಾಡಿಗೆ ಭೇಟಿ ನೀಡಿದರು. ಇದರ ಪರಿಣಾಮವಾಗಿ ಅರ್ವಿ ಭಾಷೆಯು ಈ ವೇಳೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ವಿವಿಧ ತೆರನಾದ ವಸ್ತ್ರಗಳು, ಮಿರ್ರಿನಂತಹ ಜವಳಿ ಮತ್ತು ಸುಗಂಧದ ದ್ರವ್ಯಗಳೊಂದಿಗೆ ದಕ್ಷಿಣ ಭಾರತ ತಲುಪಿದ ಅರಬ್ ವ್ಯಾಪಾರಿಗಳು, ಭಾಷಾ ವೈವಿಧ್ಯತೆಯನ್ನು ಮರೆತು, ಧಾರ್ಮಿಕ ನಂಬಿಕೆಯಲ್ಲಿರುವ ಸಮಾನತೆಯನ್ನು ಪರಿಗಣಿಸಿ ಸ್ಥಳೀಯರಾದ ತಮಿಳರೊಂದಿಗೆ ಸಂಬಂಧ ಬೆಸೆಯಲು ಉತ್ಸುಕರಾಗಿದ್ದರು.ವ್ಯಾಪಾರಿಗಳ ಅರಬಿ ಮತ್ತು ಸ್ಥಳೀಯರ ತಮಿಳು ಭಾಷೆಗಳು ಬೆರೆತು ಅರಬು ತಮಿಳ್ ಅಥವಾ ಅರ್ವಿ ಭಾಷೆಯು ರೂಪುಗೊಂಡಿತು. ಅರಬಿಕ್ ವರ್ಣಮಾಲೆಯ ಅಕ್ಷರಗಳನ್ನು ಎರವಲು ಪಡೆದ ಅರ್ವಿ ಭಾಷೆಯ ಪದಗಳ ಅರ್ಥ ಸ್ಥಳೀಯ ತಮಿಳು ಭಾಷೆಯದ್ದೇ ಆಗಿದೆ. ” ಅರಬಿ ಲಿಪಿಯನ್ನು ಎರವಲು ಪಡೆದ ಹಲವಾರು ಭಾಷೆಗಳಲ್ಲಿ ಒಂದಾಗಿದೆ ಅರಬಿಕ್ ತಮಿಳು. ಅರಬಿಗಳು ಮತ್ತು ಪರ್ಷಿಯನ್ನರು, ಯುರೋಪಿನವರಿಗಿಂತಲೂ ಮುಂಚಿತವಾಗಿ ಹಿಂದೂ ಮಹಾ ಸಾಗರ ಮಾರ್ಗವಾಗಿ ಭಾರತೀಯರೊಂದಿಗೆ ವ್ಯಾಪಾರದಲ್ಲಿ ಸಂಪರ್ಕ ಬೆಳೆಸಿದ್ದರು. ಈ ಯಾತ್ರೆ ಮತ್ತು ವ್ಯಾಪಾರಗಳು ಇಂತಹ ಹಲವಾರು ಭಾಷೆಗಳ ಉಗಮಕ್ಕೆ ಕಾರಣವಾಯಿತು.” ಎಂದು ‘1750ರ ಪೂರ್ವದ ಹಿಂದೂ ಮಹಾಸಾಗರದ ಇತಿಹಾಸ ‘ ಎಂಬ ವಿಷಯದಲ್ಲಿ ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮಹ್ಮೂದ್ ಕೂರಿಯಾ ಅಭಿಪ್ರಾಯಪಡುತ್ತಾರೆ.

ತಮಿಳು ಭಾಷೆಯಲ್ಲಿ ಮಾತನಾಡುವ ಪಕ್ಕದ ಶ್ರೀಲಂಕಾಗೂ ಅರ್ವಿ ಭಾಷೆ ವ್ಯಾಪಿಸಿತು. 18ನೇ ಶತಮಾನದಲ್ಲಿ ವಸಾಹತುಶಾಹಿಗಳ ಆಗಮನ ಮತ್ತು ಅರ್ವಿ ಭಾಷೆ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯವಾದ ಇಳಿಕೆಯುಂಟಾದ ಕಾರಣದಿಂದ ಅಳಿವಿನಂಚಿನಲ್ಲಿದ್ದ ಅರ್ವಿ ಭಾಷೆಯು, ಅಚ್ಚರಿಯ ಬೆಳವಣಿಗೆಯನ್ನು ಕಂಡು ಪುನರುಜ್ಜೀವನಗೊಂಡಿದೆ. ಈ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅರ್ವಿ ಭಾಷೆಯ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳ ಮತ್ತು ಕರಾವಳಿ ಪ್ರದೇಶದ ಮುಸ್ಲಿಂ ಮಹಿಳೆಯರ ಕೊಡುಗೆ ಅಪಾರವಾದುದು. ಇಲ್ಲಿನ ಮುಸ್ಲಿಂ ಮಹಿಳೆಯರು ಅರ್ವಿ ಭಾಷೆಯ ಹಾಡುಗಳನ್ನು ಹಾಡುವುದರಲ್ಲಿ ಹೆಮ್ಮೆಪಟ್ಟುಕೊಳ್ಳುವವರಾಗಿದ್ದಾರೆ.” ಬಹುತೇಕರಿಗೆ ಈ ಭಾಷೆಯ ಮಹತ್ವ ತಿಳಿದಿಲ್ಲ. ತನ್ನ ತಾಯ್ನಾಡಾದ ಕಾಯಲ್ಪಟ್ಟಣ ನಿವಾಸಿಗಳು ತಮ್ಮ ಬೇರುಗಳನ್ನು ಕೂಡಿಸುವ ಪವಿತ್ರ ಕೊಂಡಿಯಾಗಿ ಅರ್ವಿ ಭಾಷೆಯನ್ನು ಪರಿಗಣಿಸುತ್ತಾರೆ.” ಎಂದು ಬಾಖವಿ ತಿಳಿಸಿದನು.

ಅರ್ವಿ ಭಾಷೆಯ ಹುಟ್ಟು ಮತ್ತು ಬೆಳವಣಿಗೆಗಳ ಬಗ್ಗೆ ಹೆಚ್ಚಾಗಿ ತಿಳಿಯಲು ದಕ್ಷಿಣ ಭಾರತದಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಕರಾವಳಿ ಪ್ರದೇಶಗಳಿಗೆ ತೆರಳಬೇಕಾಗುತ್ತದೆ. ತಮಿಳುನಾಡಿನ ರಾಜಧಾನಿ ಚೆನ್ನೈಯಿಂದ ಸುಮಾರು 530 ಕಿ. ಮೀ ದೂರದ ಕೀಳಕ್ಕರೆ ಇಂತಹ ಗ್ರಾಮಗಳಲ್ಲೊಂದಾಗಿದೆ. ಬಂಗಾಳಕೊಲ್ಲಿಯ ದಡದಲ್ಲಿರುವ ಕೀಳಕೆರೆಯಲ್ಲಿ 38,000 ದಷ್ಟು ಜನರಿದ್ದಾರೆ. ಕ್ರಿ. ಶ 628ರಲ್ಲಿ ನಿರ್ಮಿಸಲಾದ ಪುರಾತನ ಜುಮಾಪಳ್ಳಿ ಮಸೀದಿಯೂ ಇಲ್ಲಿದೆ. ಈ ಮಸೀದಿಯನ್ನು ನಿರ್ಮಿಸಿದವರು ಯಮನ್ ಮೂಲದ ಅರಬ್ ವ್ಯಾಪಾರಿಗಳೆಂದು ಹೇಳಲಾಗುತ್ತದೆ. ಮಸೀದಿಯ ಹಸಿರು ಮಿನಾರಗಳ ಮತ್ತು ಅಲಂಕೃತ ಕಂಬಗಳ ಪಕ್ಕದಲ್ಲಿ ಇಬ್ಬರು ಸೂಫಿ ಸಂತರ ಗೋರಿಗಳೂ ಇವೆ. ಮಸೀದಿಯ ಕಂಬಗಳಲ್ಲಿ ಅರಬಿ ಹಾಗೂ ತಮಿಳು ಭಾಷೆಗಳಲ್ಲಿರುವ ಕೆತ್ತನೆಗಳನ್ನು ಕಾಣಬಹುದು. ಕೆಲ ಇತಿಹಾಸ ತಜ್ಞರ ಪ್ರಕಾರ, ನಾವಿಕರ ಮತ್ತು ಸ್ಥಳೀಯ ತಮಿಳರೆಡೆಯಲ್ಲಿನ ವೈವಾಹಿಕ ಸಂಬಂಧಗಳಿಂದಾಗಿ ಅರ್ವಿ ಭಾಷೆ 17 ನೇ ಶತಮಾನದ ಹೊತ್ತಿಗೆ ಉತ್ತುಂಗತೆಯನ್ನು ತಲುಪಿತು. ಈ ವೈವಾಹಿಕ ಸಂಬಂಧಗಳು ವ್ಯಾಪಾರ ವಹಿವಾಟುಗಳಿಗೆ ಸಹಕಾರಿಯಾದವು. ಕ್ಲಿಷ್ಟಕರವಾದ ತಮಿಳು ಭಾಷೆಯನ್ನು ತಮ್ಮ ಅರಬಿ ಭಾಷೆಯ ಲಿಪಿಯನ್ನುಪಯೋಗಿಸಿ ಸುಲಭವಾಗಿ ಕಲಿಯಲು ಅರಬಿಗಳಿಗೆ ಸಾಧ್ಯವಾಯಿತು.
” ತಮಿಳು ಭಾಷೆಯಲ್ಲಿ 247 ಅಕ್ಷರಗಳಿದ್ದವು. ಆದರೆ ಅರ್ವಿ ಭಾಷೆಯ ಅಕ್ಷರಗಳ ಸಂಖ್ಯೆ ಕೇವಲ 40 ಮಾತ್ರ. ಆದ್ದರಿಂದಲೇ ಕಡಲು ಮಾರ್ಗ ವ್ಯಾಪಾರಕ್ಕೆ ಬಂದ ಅರಬಿಗಳಿಗೆ ಇಲ್ಲಿ ಬದುಕು ಕಟ್ಟಿಕೊಳ್ಳುವುದು ಬಹಳ ಸುಲಭವಾಗಿತ್ತು. ಉತ್ತರ ಭಾರತಕ್ಕಿಂತ ಭಿನ್ನವಾಗಿ ಇಲ್ಲಿ ಸಹಿಷ್ಣುತೆಯ ವಾತಾವರಣವಿತ್ತು. ವ್ಯಾಪಾರಗಳು ಆರ್ಥಿಕ ಸಬಲೀಕರಣಕ್ಕೆ ಹೇತುವಾಗಬಹುದೆಂದು ಮನಗಂಡ ಇಲ್ಲಿನ ಜನರು ವ್ಯಾಪಾರಿಗಳನ್ನು ಯಾವುದೇ ಸಂಕೋಚವಿಲ್ಲದೆ ಬರಮಾಡಿಕೊಂಡರು. ಕೆಲವೊಂದು ಮಾಹಿತಿಗಳನ್ನು ಬ್ರಿಟಿಷರಿಂದ ರಹಸ್ಯವಾಗಿಡಲು ಅರ್ವಿ ಭಾಷೆಯನ್ನು ಬಳಸುತ್ತಿದ್ದರು ಎಂಬ ವರದಿಗಳಿವೆ.” ಎಂದು ಚೆನ್ನೈ ಕಾಲೇಜಿನಲ್ಲಿ ಅರ್ವಿ ಭಾಷಾ ಅಧ್ಯಾಪಕರಾದ ಕೆ. ಎಂ.ಎ ಅಹ್ಮದ್ ಝುಬೈರ್ ತಿಳಿಸಿದರು.


ಅರಬಿ ತಮಿಳಿಗೆ ಹೊರತಾಗಿ ನೆರೆ ರಾಜ್ಯ ಕೇರಳದಲ್ಲಿ ಮಲಯಾಳಂ ನೊಂದಿಗೆ ಅರಬಿ ಬೆರತು ಅರಬಿ ಮಲಯಾಳಂ ಅಥವಾ ಮಾಪ್ಪಿಳ ಮಲಯಾಳಂ ಎಂಬ ಉಪಭಾಷೆ ರೂಪುಗೊಂಡಿದೆ. ಭಾರತದ ಇನ್ನಿತರ ಪ್ರಾದೇಶಿಕ ಭಾಷೆಗಳಾದ ಗುಜರಾತಿ, ಬೆಂಗಾಳಿ, ಪಂಜಾಬಿ ಮತ್ತು ಸಿಂಧಿ ಭಾಷೆಗಳಲ್ಲೂ ಅರಬಿ ಲಿಪಿಯ ಈ ಸಮ್ಮಿಶ್ರ ಭಾಷೆಯು ಹುಟ್ಟಿಕೊಂಡಿದೆ. ಪ್ರತಿಯೊಂದು ಭಾಷೆಗಳಿಗೂ ತನ್ನದೇ ಆದ ವೈಶಿಷ್ಟತೆಗಳಿವೆ. ಆದರೆ ಉಳಿದ ಭಾಷೆಗಳಿಗಿಂತ ವಿಭಿನ್ನವಾಗಿ ಅರ್ವಿಯು ಅರಬರ ನಿರ್ಗಮನದ ಬಳಿಕವೂ ಪ್ರಗತಿ ಕಂಡಿತು. ವಿದೇಶಗಳಲ್ಲಿರುವ ತಮಿಳು ಭಾಷಿಕರ ಜನಸಂಖ್ಯೆ ಇದಕ್ಕೆ ಪ್ರಧಾನ ಕಾರಣವೆನ್ನುತ್ತಾರೆ ಝಬೈರ್. ಚರಿತ್ರೆ ದಾಖಲೆಗಳ ಪ್ರಕಾರ, ಅರ್ವಿಯು ಶ್ರೀಲಂಕಾ, ಸುಮಾತ್ರ, ಮಲೇಶಿಯಾ, ಸಿಂಗಾಪುರ ಮತ್ತು ಪೂರ್ವ ಹಾಗೂ ದಕ್ಷಿಣ ಆಫ್ರಿಕಾಗಳಿಗೂ ವ್ಯಾಪಿಸಿದೆ.

ಸಾಹಿತ್ಯ ಮತ್ತು ಮೌಖಿಕ ಸಂಪ್ರದಾಯದ ಶ್ರೀಮಂತಿಕೆಯ ಕಾರಣದಿಂದ ಅರಬಿಕ್ ತಮಿಳು ಮತ್ತು ಅರಬಿಕ್ ಮಲೆಯಾಳಂ ಬಹಳ ಜನಪ್ರಿಯವಾದವು. ಈತನಕ ಭಾರತ ಮತ್ತು ಶ್ರೀಲಂಕಾಗಳಿಂದ 2000 ದಷ್ಟು ಅರಬಿಕ್ ತಮಿಳು ಪುಸ್ತಕಗಳನ್ನು ಪತ್ತೆಹಚ್ಚಲಾಗಿದೆ. ಕೇರಳದ ಸಂಶೋಧಕರು ಅರಬಿ ಮಲಯಾಳಂ ಹಸ್ತಪ್ರತಿಗಳ ಸಂರಕ್ಷಣೆಯ ಪಣತೊಟ್ಟು ಈ ದಿಕ್ಕಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ.
ಈ ಪುರಾತನ ಹಸ್ತ ಪ್ರತಿಗಳ ರಕ್ಷಣೆಗೂ ಮುಂಚಿತವಾಗಿ ಅವುಗಳನ್ನು ಹುಡುಕಬೇಕಾದ ಜರೂರತ್ತಿದೆ. ಇದು ಬಹಳ ಶ್ರಮದಾಯಕವಾದ ಕೆಲಸ. ಭಾರತ ಮತ್ತು ಏಷ್ಯಾದ ಇನ್ನಿತರ ದೇಶಗಳಿಂದ ಒಟ್ಟು 300 ಕ್ಕೂ ಅಧಿಕ ಅರ್ವಿ ಹಾಗೂ ಅರಬಿಕ್ ಮಲಯಾಳಂನ ಗ್ರಂಥಗಳು ಬಾಖವಿಯ ಸುಪರ್ದಿಯಲ್ಲಿದೆ. ” ಈ ಗ್ರಂಥಗಳು ನಾನು ಬತ್ತಿ ಹೋದ ಬಾವಿಗಳಿಂದ, ಗೋರಿಗಳ ಪಕ್ಕದಿಂದ ಮತ್ತು ಹಳೆಯ ಜನವಾಸವಿಲ್ಲದ ಮನೆಗಳ ಅಟ್ಟಗಳಿಂದಲೂ ಹುಡುಕಿ ಸಂಗ್ರಹಿಸಿದವುಗಳಾಗಿವೆ. ಇನ್ನು ಖಾಸಗಿ ಒಡೆತನದ ಕೆಲವು ದಾಖಲೆಗಳನ್ನು ಡಿಜಿಟಲೀಕರಿಸಿ ಮಾಪಿಳ ಹೆರಿಟೇಜ್ ಲೈಬ್ರರಿಯ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.” ಎಂದು ಬಾಖವಿ ತಿಳಿಸಿದನು. ವಸಾಹತುಶಾಹಿಗಳ ಆಡಳಿತಕಾಲದಲ್ಲಿ ಕೆಲವೊಂದು ಪ್ರತಿಗಳು ಲಂಡನಿನ ಬ್ರಿಟೀಷ್ ಲೈಬ್ರರಿಯನ್ನು ಸೇರಿಕೊಂಡಿವೆ. ಅರಬಿಕ್ ಮಲಯಾಳಂ ಪರಿಜ್ಞಾನವುಳ್ಳ ಮಹ್ಮೂದ್ ಕೂರಿಯಾ ಕಳೆದ 4 ವರ್ಷಗಳಿಂದ ಈ ಪುಸ್ತಕಗಳನ್ನು ಪಟ್ಟಿ ಮಾಡಲು ಬ್ರಿಟೀಷ್ ಲೈಬ್ರರಿಗೆ ಸಹಾಯ ಮಾಡುತ್ತಿದ್ದಾರೆ. ” ಇತಿಹಾಸ, ಧರ್ಮ, ವೈದ್ಯ ಮತ್ತು ಸಂಸ್ಕೃತಿ ಹೀಗೆ ಹತ್ತು ಹಲವಾರು ವಿಚಾರಗಳನ್ನು ಒಳಗೊಂಡ ಗ್ರಂಥಗಳನ್ನು ಕಂಡು ನಾನು ಚಕಿತನಾದೆನು. ಇವುಗಳ ಪೈಕಿ ಬಹುತೇಕ ಗ್ರಂಥಗಳು ಮಹಿಳೆಯರು ಬರೆದವುಗಳಾಗಿವೆ.” ಎಂದು ಕೂರಿಯಾ ತಿಳಿಸಿದರು. ” ಶಿಶು ಪಾಲನೆ, ಲೈಂಗಿಕತೆ, ಗೃಹ ವಿಚಾರಗಳು, ಆಹಾರ ಪದ್ಧತಿಗಳು ಮತ್ತು ಸಂಸ್ಕೃತಿ ವಿಚಾರಗಳನ್ನು ಚರ್ಚೆ ಮಾಡುವ ಈ ಗ್ರಂಥಗಳು ಇತರ ಮಹಿಳೆಯರಿಗಾಗಿ ಮಹಿಳೆಯರೇ ಬರೆದವುಗಳಾಗಿವೆ. ಈ ಗ್ರಂಥಗಳ ಅಂದಿನ ಸಮಾಜದಲ್ಲಿ ಸ್ತ್ರೀಯರಿಗಿದ್ದ ಸ್ಥಾನಮಾನ, ಗೌರವ ಮತ್ತು ಪ್ರಾಧಾನ್ಯತೆಯನ್ನು ಸೂಚಿಸುತ್ತದೆ.” ಎಂದು ದಕ್ಷಿಣ ಏಷ್ಯಾದ ಧರ್ಮಗಳ ಕುರಿತು ಗ್ಲಾಸ್ಗೋವಿಶ್ವವಿದ್ಯಾಲಯದಲ್ಲಿ ಆಧ್ಯಾಪನ ನಡೆಸುವ ಓಫಿರಾ ಗಾಮ್ಲೆಲ್ ಅಭಿಪ್ರಾಯಪಟ್ಟರು.


ಈ ಉಪಭಾಷೆಗಳು ದಿನನಿತ್ಯ ಬಳಕೆಯಲ್ಲಿ ಇಲ್ಲದಿದ್ದರೂ ಗ್ರಂಥಗಳು ಮತ್ತು ಸಂಗೀತಗಳು ಇವುಗಳನ್ನು ಇಂದಿಗೂ ಜೀವಂತವಾಗಿಟ್ಟಿವೆ. ತಮ್ಮ ಪೂರ್ವಜರ ಇತಿಹಾಸವನ್ನು ಮೆಲುಕು ಹಾಕುತ್ತಾ ಕಾಯಲ್ ಪಟ್ಟಣ ನಿವಾಸಿಗಳು ಅರ್ವಿ ಹಾಗೂ ಅರಬಿ ಮಲಯಾಳಂನಲ್ಲಿ ವಿರಚಿತವಾದ ಲಾವಣಿಗಳನ್ನು ಹಾಡುತ್ತಿದ್ದಾರೆ. ” ಊರಿನ ಮಹಿಳೆಯರು ಒಂದುಗೂಡಿ ಲಾವಣಿ ಹಾಡುವ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ. ಅವುಗಳು ಮಹಿಳೆಯರ ಕ್ಲಬ್ ಗಳನ್ನು ಹೋಲುತ್ತವೆ.” ಎಂದು ಹೇಳುತ್ತಾ ನಸುನಕ್ಕಳು ಖಿಜ್ರ್ ಮಗ್ಫಿರಾ. ” ಪ್ರತಿಯೊಂದು ಮನೆಯಲ್ಲೂ ಅರ್ವಿ ಭಾಷೆಯನ್ನು ಚೆನ್ನಾಗಿ ಬಲ್ಲ ಒಬ್ಬನಾದರೂ ಇರುವನು. ಹಬ್ಬ ಹರಿದಿನಗಳಂದು, ವಿಶೇಷವಾಗಿ ಪ್ರವಾದಿ ಪೈಗಂಬರರ ಜನ್ಮ ದಿನಾಚರಣೆಯನ್ನು ಕೊಂಡಾಡುವ ರಬೀಉಲ್ ಅವ್ವಲ್ ತಿಂಗಳಲ್ಲಿ ಊರವರೆಲ್ಲರೂ ಒಟ್ಟು ಸೇರಿ ಅರ್ವಿ ಭಾಷೆಯ ಹಾಡುಗಳನ್ನು ಹಾಡುವ ವಾಡಿಕೆಯಿದೆ. ಹಾಡುವಾಗ ಅವರು ಭಾವಪರವಶರಾಗುವುದನ್ನು ನೋಡಿದರೆ ಈ ಭಾಷೆಯೊಂದಿಗಿನ ಅವರ ಸಂಬಂಧವನ್ನು ಮನದಟ್ಟು ಮಾಡಿಕೊಳ್ಳಬಹುದು.” ಎನ್ನುತ್ತಾಳೆ ಖಿಜ್ರ್. ಕಾಯಲ್ ಪಟ್ಟಣದ ಡಿಗ್ರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 18 ರ ಹರೆಯದ ಖಿಜ್ರ್ ಮಗ್ಫಿರಾ ಹಿರಿಯವರಿಂದ ಪ್ರೇರಿತಳಾಗಿ ಅರ್ವಿಭಾಷೆ ಕಲಿಕೆಗೆ ಶುರುಹಚ್ಚಿದ್ದಾಳೆ. ತಮಿಳು ಭಾಷೆ ಚೆನ್ನಾಗಿ ಬಲ್ಲ ಆಕೆ, ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ಅರಬಿಯನ್ನು ಕಲಿಯಲು ಪ್ರಾರಂಭಿಸುವುದರಿಂದ ಅರ್ವಿ ಕಲಿಕೆಯು ಸುಲಭ ತುತ್ತಾಗಬಹುದು. ಕಾಯಲ್ ಪಟ್ಟಣದ ಕೆಲವು ಯುವಕರು ಮೊಬೈಲ್ ಗಳಲ್ಲಿ ಬಳಸಬಹುದಾದ ಅರ್ವಿ ಭಾಷೆಯ ಕೀಬೋರ್ಡ್ ತಯಾರಿಸುವ ಶ್ರಮದಲ್ಲಿ ತೊಡಗಿರುವರು.

” ಕಾಯಲ್ಪಟ್ಟಣದಲ್ಲಿ ಹೊಸ ತಲೆಮಾರಿನ ಮಕ್ಕಳನ್ನು ಅರ್ವಿಭಾಷೆಯ ಕಲಿಕೆಯನ್ನು ಪ್ರೋತ್ಸಾಹಿಸಲು ಹಣ ನೀಡುವವರಿದ್ದಾರೆ. ಇದು ಈ ಊರಿನ ಸಂಪ್ರದಾಯ.” ಎನ್ನುತ್ತಾರೆ ಮಗ್ಫಿರಾಳ ಸಂಬಂಧಿ ಖಿಜ್ರ್ ಫಾತಿಮಾ. ಇತ್ತೀಚೆಗೆ ಸುಂದರವಾದ ಕೈಬರಹವಿರುವ ಒಬ್ಬಾಕೆಗೆ ತಾನು 500 ರೂಪಾಯಿ ನೀಡಿದ್ದನ್ನು ಫಾತಿಮಾ ನೆನಪಿಸಿಕೊಂಡಳು. ಈ ಭಾಷೆಯ ಆಧ್ಯಾತ್ಮಿಕ ಮತ್ತು ಸಾಹಿತ್ಯ ಸೌಂದರ್ಯವನ್ನು ನಾವು ಮನಗಾಣಬೇಕಾಗಿದೆ ಎಂದು ಫಾತಿಮಾ ಅಭಿಪ್ರಾಯಪಟ್ಟಳು.

ಇಂಗ್ಲೀಷ್ ಮೂಲ : ಕಮಲಾ ತ್ಯಾಗರಾಜನ್
ಕನ್ನಡಕ್ಕೆ : ಆಶಿಕ್ ಅಲಿ ಕೈಕಂಬ

ಕೃಪೆ : ಬಿಬಿಸಿ

ದಕ್ಷಿಣೇಷ್ಯಾ ಇತಿಹಾಸದ ಒಳಸುಳಿಗಳು: ನೈಲ್‌ ಗ್ರೀನ್‌ ಸಂದರ್ಶನ

ವಿಖ್ಯಾತ ಇತಿಹಾಸಜ್ಞರಾದ ನೈಲ್‌ ಗ್ರೀನ್‌ ಸದ್ಯ ಯುನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ, ಲಾಸ್‌ ಏಂಜಲಿಸ್‌ನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇಸ್ಲಾಮ್‌, ಸೂಫಿಸಂ ಹಾಗೂ ವ್ಯಾಪಾರ ಇವರ ವಿಷಯಗಳಾಗಿದ್ದು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಸೂಫಿಸಂ: ಎ ಗ್ಲೋಬಲ್‌ ಹಿಸ್ಟರಿ, ಬಾಂಬೆ ಇಸ್ಲಾಂ, ಇಂಡಿಯನ್‌ ಸೂಫಿಸಂ: ಸಿನ್ಸ್‌ ಸೆವೆಂಟೀಂತ್‌ ಸೆಂಚುರಿ ಅವರ ಪ್ರಮುಖ ಕೃತಿಗಳು. ಝಿಯಾದ್ ಅಬೂ ರೀಶ್‌ರಿಗೆ ಇವರು ನೀಡಿರುವ ಸಂದರ್ಶನವನ್ನು “ತಿಜೋರಿ” ಓದುಗರಿಗಾಗಿ ಕನ್ನಡಕ್ಕೆ ತಂದಿದ್ದೇವೆ.

ಉ: ದಕ್ಷಿಣೇಷ್ಯಾದ ಮುಸಲ್ಮಾನರ ಮತ್ತು ವಿಶಾಲವಾದ ಪರ್ಶಿಯನ್‌ ಪ್ರಭಾವಿತ ಜಗತ್ತಿನ ಇತಿಹಾಸಜ್ಞನಾಗಿ ನನ್ನನ್ನು ನಾನು ಗುರುತಿಸಲು ಇಷ್ಟಪಡುತ್ತೇನೆ. ಸಾಮಾಜಿಕ ಮತ್ತು ರಾಜಕೀಯ ಇತಿಹಾಸದ ಜತೆಜತೆಗೆ ಧಾರ್ಮಿಕ ಇತಿಹಾಸದಲ್ಲೂ ನನಗೆ ಆಸಕ್ತಿ ಇದೆ. ನನ್ನ ಬಹುತೇಕ ಅಧ್ಯಯನಗಳು ಒಂದು ಇತಿಹಾಸಜ್ಞ ಎಂಬ ನೆಲೆಯಲ್ಲಿ ಆಧುನಿಕ ಪೂರ್ವ ಜಗತ್ತಿನ ಧರ್ಮಗಳೊಂದಿಗೆ ನಾವು ಹೇಗೆ ಅನುಸಂಧಾನ ನಡೆಸುತ್ತಿದ್ದೇವೆ ಎನ್ನುವುದರ ಕುರಿತಾಗಿ ಮೂಡಿ ಬಂದಿದೆ.

ಉ: ಅಧ್ಯಯನದ ಪ್ರಶ್ನೆಗಳನ್ನು ರೂಪಿಸುವಲ್ಲಿ ಮತ್ತು ಇತಿಹಾಸದ ಮೂಲಗಳ ಆಯ್ಕೆಯ ವಿಚಾರದಲ್ಲಿ ಭಾರತೀಯ ರಾಷ್ಟ್ರ-ರಾಜ್ಯ ಕಲ್ಪನೆಗೆ ಸಿಗುತ್ತಿರುವ ಪ್ರಾಬಲ್ಯ ದಕ್ಷಿಣೇಷ್ಯಾ ಇತಿಹಾಸದ ಕ್ಷೇತ್ರ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳಲ್ಲೊಂದು. ಭಾರತೀಯ ರಾಷ್ಟ್ರ-ರಾಜ್ಯ ಸ್ವರೂಪದ ಪ್ರಬಲ ಸಂಕಥನದೊಂದಿಗೆ ತಾಳೆಯಾಗುತ್ತಿಲ್ಲ ಎನ್ನುವ  ಏಕೈಕ ಕಾರಣಕ್ಕೋಸ್ಕರ ಹಲವಾರು ಭಾಷಿಕ ಮತ್ತು ಸಾಮಾಜಿಕ ಗುಂಪುಗಳು ಇಲ್ಲಿ ಮೂಲೆಗುಂಪಾಗುತ್ತಿವೆ. ಸಾಮಾನ್ಯವಾಗಿ, ಮಧ್ಯ ಪ್ರಾಚ್ಯಕ್ಕೆ ಸಂಬಂಧಿಸಿದ ಅಧ್ಯಯನ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನರೊಂದಿಗೆ ನಾನು ಮಾತನಾಡುವುದಿದೆ. ಭಾರತದ ಬಗ್ಗೆ ಅಧ್ಯಯನ ಮಾಡುತ್ತಿರುವ ಹಲವಾರು ವಿದ್ವಾಂಸರು ಇಸ್ಲಾಮಿನ ಬಗ್ಗೆ ಬಹಳ ಸಣ್ಣ ಪ್ರಮಾಣದ ಅಧ್ಯಯನವನ್ನು ಮಾತ್ರವೇ ಮಾಡಿದ್ದು, ಅರೇಬಿಕ್‌ ಮತ್ತು ಪರ್ಶಿಯನ್‌ ಬಗ್ಗೆ ಯಾವುದೇ ಅಧ್ಯಯನ ನಡೆಯುತ್ತಿಲ್ಲ. “ಭಾರತೀಯ ಧರ್ಮಗಳು” ಎಂದು ಕೆಲವರು ಕರೆಯುವ ಪದ ಇಸ್ಲಾಮ್‌ ಮತ್ತು ಮುಸ್ಲಿಮರ ಬಗ್ಗೆ ಚರ್ಚಿಸಲು ಯಾವುದೇ ಅವಕಾಶ ನೀಡುತ್ತಿಲ್ಲ ಎನ್ನುವುದು ಈ ಸಮಸ್ಯೆಯ ಒಂದು ಪರಿಣಾಮ. ದಕ್ಷಿಣೇಷ್ಯಾ  ಇತಿಹಾಸದ ಕಲಿಕೆಗೆ ಒತ್ತು ಕೊಡುವ ಹಲವು ವಿವಿ ವಿಭಾಗಗಳು ಹಿಂದೂ ಮತ್ತು ಬೌದ್ಧ ಧರ್ಮಗಳೇ ದಕ್ಷಿಣೇಷ್ಯಾದ ಸಂಸ್ಕೃತಿಗೆ ರೂಪುಕೊಟ್ಟಿರುವ  ʼಭಾರತೀಯ ಧರ್ಮಗಳುʼ ಎಂಬ ಪೂರ್ವಗ್ರಹವನ್ನು ಹೊಂದಿವೆ. ಇಸ್ಲಾಮಿನ ಪ್ರಭಾವ, ಮುಸ್ಲಿಮರ ಉಪಸ್ಥಿತಿ, ಮತ್ತು ಮುಘಲರ ಐತಿಹಾಸಿಕ ಬಳುವಳಿಗಳನ್ನು ಮುಂದಿಟ್ಟು ನೋಡುವಾಗ ಈ ಗ್ರಹಿಕೆಯಲ್ಲಿ ಹಲವಾರು ಸಮಸ್ಯೆಗಳಿರುವುದನ್ನು ಕಾಣಬಹುದು.  ಇಪ್ಪತ್ತನೆಯ ಶತಮಾನದ ಭಾರತೀಯ ಇತಿಹಾಸ ಶಾಸ್ತ್ರದಲ್ಲಿ ಇದು ಸಹಜವಾಗಿ ಮೂಡಿ ಬಂದಿದೆ. ಈಸ್ಟ್‌ ಇಂಡಿಯಾ ಕಾಲೇಜಿನ ಪತ್ರಾಗಾರದಲ್ಲಿ ಕಳೆದಿದ್ದ ವೇಳೆ ಇದರ ಉತ್ತಮ ನಿದರ್ಶನ ನನ್ನ ಮುಂದೆ ಪ್ರತ್ಯಕ್ಷವಾಯಿತು. 1830 ಮತ್ತು 1840 ರ ಇತಿಹಾಸದ ಪ್ರಶ್ನೆ ಪತ್ರಿಕೆಗಳನ್ನು ತಿರುವಿ ಹಾಕಿದಾಗ ಭಾರತದ ಇತಿಹಾಸವನ್ನು ಆಗಿನ ಬ್ರಿಟಿಷರು ಗ್ರಹಿಸಿರುವ ಶೈಲಿ ನೋಡಿ ಆಶ್ಚರ್ಯವಾಯಿತು. ಪ್ರಶ್ನೆ ಪತ್ರಿಕೆಗಳೆಲ್ಲವೂ ಇಸ್ಲಾಮಿನ ಹಾಗೂ ಮುಘಲರ ಕುರಿತಾಗಿತ್ತು. ಇಸ್ಲಾಮ್ ಆನುಷಂಗಿಕ ಎನಿಸಿರುವ ಯಾ ಪೂರ್ಣವಾಗಿ ನೆನೆಗುದಿಗೆ ಬಿದ್ದಿರುವ ಭಾರತೀಯ ಇತಿಹಾಸದ ಇಂದಿನ ಪ್ರಬಲ ಗ್ರಹಿಕೆಗಿಂತ ಇದು ಸಂಪೂರ್ಣವಾಗಿ ಭಿನ್ನವಾಗಿದೆ. ಸದ್ಯ ಚಾಲ್ತಿಯಲ್ಲಿರುವ ಭೌಗೋಳಿಕ ವರ್ಗೀಕರಣಗಳನ್ನು ಆಧರಿಸಿದ ಅಧ್ಯಯನ ಕ್ಷೇತ್ರವನ್ನು ಮೀರುವ ಕೆಲಸಗಳನ್ನು ಪ್ರೋತ್ಸಾಹಿಸಲು ನಾನು ಬಯಸುತ್ತೇನೆ.  ಯಾರೂ ಮುಟ್ಟಿ ನೋಡಿಲ್ಲದ ಇಂಡೋ-ಅರೇಬಿಕ್‌ ಹಾಗೂ ಇಂಡೋ-ಪರ್ಶಿಯನ್‌ ಇತಿಹಾಸದ ಮೂಲಗಳು ಸಾಕಷ್ಟು ಇದ್ದು ನಮ್ಮ ಅಧ್ಯಯನ ಅತ್ತ ಕಡೆ ಸಾಗಿ ರಾಷ್ಟ್ರ-ರಾಜ್ಯ ಕೇಂದ್ರಿತವಾಗಿ ಮೂಡಿಬಂದಿರುವ ಕ್ಷೇತ್ರಗಳು ಹಾಕಿರುವ ಸೀಮೆಗಳನ್ನು ಮೀರಬೇಕು.

ನೈಲ್‌ ಗ್ರೀನ್‌

ಉ: ದಕ್ಷಿಣೇಷ್ಯಾದ ಇತಿಹಾಸಜ್ಞರು ಇಸ್ಲಾಮನ್ನು ಮಧ್ಯಪ್ರಾಚ್ಯದ ಇತಿಹಾಸಜ್ಞರ ವಿಷಯವಾಗಿ ಮಾತ್ರ ಕಾಣುವುದನ್ನು ನಿಲ್ಲಿಸಬೇಕು. ಬ್ರಿಟಿಷರು ಗ್ರಹಿಸಿರುವಂತೆ ವಸಾಹತುಪೂರ್ವದ ಭಾರತವನ್ನಾದರೂ ಇಸ್ಲಾಮಿಕ್‌ ವಿಭಾಗದ  ಒಂದು ಭಾಗವನ್ನಾಗಿ ಕಾಣುವ ಅಧ್ಯಯನಗಳನ್ನು ಪ್ರೋತ್ಸಾಹಿಸಬೇಕು. ರಾಷ್ಟ್ರ ಮತ್ತು ವಸಾಹತಿನ ಇತಿಹಾಸಗಳ ಆಚೆಗೆ ಸಾಗಿ ಆಧುನಿಕ ಪೂರ್ವದ ಇಸ್ಲಾಮಿಕ್‌ ಜಾಗತಿಕ ವ್ಯವಸ್ಥೆಯ ನಡುವಿನ ದಕ್ಷಿಣೇಷ್ಯಾವನ್ನು ಕಾಣಲು ಸಾಧ್ಯವಾಗಬೇಕು. ಸಮಕಾಲೀನ ಇರಾನ್‌ ಮತ್ತು ಭಾರತದ ಗಡಿಗಳನ್ನು ಮೀರುವ ಕೆಲವು ವಿಶಿಷ್ಟ ಚರಿತ್ರೆಯ ಕೊಂಡಿಗಳನ್ನು ಪರೀಕ್ಷಿಸಿರುವ ನಾನು ಇಂತಹ ಕೆಲಸಗಳನ್ನೇ ಮಾಡುತ್ತಿದ್ದೇನೆ. ಭಾಷಿಕ ವಲಯಗಳ ಆಧಾರದಲ್ಲಿ ರೂಪಿಸಲಾದ ಅಧ್ಯಯನ ಕ್ಷೇತ್ರಗಳು ಇಂತಹ ಗುರಿಗಳ ಕಡೆಗೆ ತಲುಪಲು ಒಂದು ದಾರಿ ಎನ್ನಬಹುದು. ಭೌಗೋಳಿಕ ವಲಯಗಳ ಆಧಾರದಲ್ಲಿ ರೂಪಿಸಲಾದ ಇತಿಹಾಸದ ವಿಭಾಗಗಳಲ್ಲಿ ಕಂಡುಬರುವಷ್ಟು ಬಲೆಗಳು ಇದರಲ್ಲಿಲ್ಲ. ವಿದ್ವಾಂಸರು ಅವರಿಗೆ ಓದಲು ಸಾಧ್ಯವಾಗುವ ಭಾಷಿಕ ವಲಯಗಳನ್ನು ಹಿಂಬಾಲಿಸಬೇಕು. ಉದಾಹರಣೆಗೆ, ಅರೇಬಿಕ್‌ ಗೊತ್ತಿರುವ ವಿದ್ವಾಂಸರು ಆ ಭಾಷೆಯನ್ನು ಹಿಂಬಾಲಿಸುತ್ತಾ, ಗುಜರಾತ್‌ ಯಾ ಹೈದರಾಬಾದ್ ಇರಲಿ, ಅದು ಎಲ್ಲೆಲ್ಲಿಗೆ ತಲುಪುತ್ತದೆಯೋ ಅಲ್ಲಿಗೆ ಹೋಗಬೇಕು.  ಭಾಷಿಕ ವಲಯಗಳು ನಿಜಕ್ಕೂ ಬಹುತ್ವದ ವಲಯಗಳಾಗಿವೆ. ನಾವು ಕೆಲಸ ಮಾಡಬೇಕಿರುವ ಸ್ಥಳಗಳನ್ನು ಗುರುತಿಸಿ ಸುಮ್ಮನಾಗುವಂತೆಯೂ ಇಲ್ಲ, ಆಧುನಿಕ ರಾಷ್ಟ್ರ-ರಾಜ್ಯಗಳ ಸರಹದ್ದುಗಳನ್ನು ಮೀರಿ ಅವುಗಳ ಕಾಲಕ್ಕಿಂತಲೂ ಹಿಂದಕ್ಕೆ ತೆರಳಿ ಹೊಸ ಹೊಸ ವಲಯಗಳನ್ನು ಗುರುತಿಸುವ ಕೆಲಸ ನಡೆಯಬೇಕು.

ಉ: ಕೆಲವು ವಿದ್ವಾಂಸರು ಸೂಫಿಸಂ ಅಥವಾ ಸಂಪ್ರದಾಯ ಆಧಾರಿತ ಇಸ್ಲಾಂ (customary Islam) ಎಂದು ವರ್ಗೀಕರಿಸುತ್ತಿರುವ ಸಂಗತಿಗಳು ಆಧುನಿಕ ಪೂರ್ವದಲ್ಲಿ ಪ್ರಮಾಣಾಧಾರಿತ ಇಸ್ಲಾಮಿನ (normative Islam)  ಭಾಗವೇ ಆಗಿತ್ತು ಎನ್ನುವುದನ್ನು ಮೊದಲು ಗ್ರಹಿಸಬೇಕಿದೆ. ಆ ವರ್ಗೀಕರಣವನ್ನು ನಿರ್ಮೂಲನೆ ಮಾಡುವುದು ಒಬ್ಬ ಅಧ್ಯಾಪಕ ಮತ್ತು ವಿದ್ವಾಂಸ ಎಂಬ ನೆಲೆಯಲ್ಲಿ ನನಗಿರುವ ವಿಸ್ತೃತವಾದ ಗುರಿಗಳಲ್ಲೊಂದು.   ಆಧುನಿಕ ಪೂರ್ವದಲ್ಲಿ ಅಥವಾ ಸುಧಾರಣಾವಾದ ಬರುವ ಮುನ್ನ ಮುಸ್ಲಿಂ ಎಂದೆನಿಸಿಕೊಳ್ಳಲು ಏನು ಬೇಕಿತ್ತು ಎನ್ನುವುದನ್ನು ಇದು ತಿಳಿಸಿಕೊಡುತ್ತದೆ. ಸಂತರು, ಸಮಾಧಿಗಳು ಮತ್ತು ಪವಾಡಗಳ ಸಮೇತ ಪವಿತ್ರ ಪುರುಷರು ಮತ್ತು ಮೂರ್ತರೂಪದ ಧಾರ್ಮಿಕ ಪ್ರಾಧಿಕಾರಗಳು ಅಂದಿನ ಪ್ರಮಾಣಾಧಾರಿತ ಇಸ್ಲಾಮಿನಲ್ಲಿ ಮಿಳಿತವಾಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಆರಂಭವಾಗಿ ಈಗಲೂ ಮುಂದುವರಿಯುತ್ತಿರುವ ಇಸ್ಲಾಮಿಕ್‌ ಸುಧಾರಣಾವಾದದ ತರುವಾಯ ಹುಟ್ಟಿಕೊಂಡ ವರ್ಗೀಕರಣಗಳ ಪ್ರಾಬಲ್ಯವನ್ನು ನಾವು ಪ್ರಶ್ನಿಸಬೇಕಿದೆ. ತಡವಾಗಿ ಬಂದ ಇಂತಹ ವರ್ಗೀಕರಣಗಳ ಮೂಲಕ ಇಸ್ಲಾಮಿನ ಇತಿಹಾಸವನ್ನು ವೀಕ್ಷಿಸುವ ಪರಿಪಾಠ ನಾವು ಬೆಳೆಸಿಕೊಂಡಿದ್ದು ಸೂಫಿಸಮನ್ನು ಇಸ್ಲಾಮಿನಿಂದ ಬೇರ್ಪಡಿಸಲು ಸಾಧ್ಯ ಎಂದು ಅಸೂಕ್ಷ್ಮವಾಗಿ ನಂಬಿದ್ದೇವೆ. ಆದರೆ, ಆಧುನಿಕ ಪೂರ್ವದ ಇಸ್ಲಾಮ್‌ ಸಂಪೂರ್ಣವಾಗಿ ಸಂತ‌ ಪುರುಷರು, ಸಮಾಧಿಗಳು ಮತ್ತು ಪವಾಡಗಳಿಂದ ತುಂಬಿದ್ದು ಮೇಲಿನ ಗ್ರಹಿಕೆ ತಪ್ಪು. ನನ್ನ ವಿದ್ಯಾರ್ಥಿಗಳಿಗೆ ನಾನು ಸಾಗಿಸಲು ಬಯಸುತ್ತಿರುವುದು ಇದೇ ಆಶಯವನ್ನು. ಆ ಕಾಲದ ಒಳಸುಳಿಗಳನ್ನು ಮನಗಾಣುವಲ್ಲಿ ವಿಫಲವಾದ ಸೂಫಿ-ಉಲಮಾ ದ್ವಂದ್ವವನ್ನು ಮುಂದಿಡುವ ಒಂದು ಪರ್ಯಾಯ ಮಾತ್ರ ಇದಕ್ಕಿದ್ದು ದುರದೃಷ್ಟವಶಾತ್‌ ಸಮಕಾಲೀನ ಇಸ್ಲಾಂ ಮತ್ತು ದಕ್ಷಿಣೇಷ್ಯಾ ಇತಿಹಾಸದ ಕ್ಷೇತ್ರವನ್ನು ಈ ಸಿದ್ಧಾಂತ ಆಳುತ್ತಿದೆ.

ಉ: ಧರ್ಮ ಎನ್ನುವ ವರ್ಗೀಕರಣದ ಸಮಸ್ಯೆಯನ್ನು ಇತಿಹಾಸಜ್ಞರು ಸರಿಯಾಗಿ ಇದಿರುಗೊಳ್ಳಬೇಕಿದೆ. ಇತಿಹಾಸಜ್ಞರು ಧರ್ಮದೊಂದಿಗೆ ಸರಿಯಾಗಿ ಅನುಸಂಧಾನ ನಡೆಸುತ್ತಿಲ್ಲ. ಒಂದು ಅಧ್ಯಯನ ಕ್ಷೇತ್ರ ಎಂಬ ನೆಲೆಯಲ್ಲಿ ಇತಿಹಾಸ ವಿಭಾಗದಲ್ಲಿ ಉಂಟಾಗಿರುವ ಬೆಳವಣಿಗೆಗಳೇ ಇದಕ್ಕೆ ಕಾರಣ. ಸಾಮಾಜಿಕ ಇತಿಹಾಸಜ್ಞರು ಭೌತಿಕ ಉತ್ಪಾದಕತೆಗೆ ಒತ್ತು ಕೊಟ್ಟು ಧರ್ಮವನ್ನು ಅವಗಣಿಸುತ್ತಾರೆ. ಸಾಂಸ್ಕೃತಿಕ ಇತಿಹಾಸಜ್ಞರು ಒಂದೋ ಧರ್ಮವನ್ನು ಪರಿಗಣಿಸುವುದೇ ಇಲ್ಲ, ಇಲ್ಲವೇ ಸಂಸ್ಕೃತಿಯ ಒಳಗಡೆಗೆ ಸೇರಿಸಿಬಿಡುತ್ತಾರೆ. ಇಸ್ಲಾಮಿನ ವಿಷಯಕ್ಕೆ ಬರುವುದಾದರೆ ಇಸ್ಲಾಮಿನ ಇತಿಹಾಸವನ್ನು ಇಸ್ಲಾಮಿಕ್‌ ಅಧ್ಯಯನದ ವಿಧಾನಗಳಿಗೆ ಬಿಟ್ಟು ಕೊಡಲಾಗಿದೆ. ಆದರೆ, ಇತಿಹಾಸಜ್ಞರಿಗೂ ಇದರಲ್ಲಿ ಕೆಲಸ ಇದೆ ಎನ್ನುವುದು ನನ್ನ ಗ್ರಹಿಕೆ. ಇಸ್ಲಾಮ್‌ ಅಥವಾ ಧರ್ಮವನ್ನು ಒಂದು ಇತಿಹಾಸದ ವರ್ಗೀಕರಣವಾಗಿ ಕಾಣುವಲ್ಲಿ ವಿಫಲವಾಗಿರುವುದರಿಂದ ಇಸ್ಲಾಮ್‌ ಅಧ್ಯಯನದಲ್ಲಿ ಇತಿಹಾಜ್ಞರು ವಹಿಸಬಹುದಾಗಿದ್ದ ಯಾ ವಹಿಸಬೇಕಿದ್ದ ಪಾತ್ರಗಳು ಸಿಗದಾಗಿವೆ.  ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳ ವ್ಯಾಪ್ತಿಯೊಳಗೆ ಧರ್ಮದ ಬಗೆಗಿನ ಅಧ್ಯಯನವನ್ನು ತರಬೇಕಾದ ಅಗತ್ಯವಿದೆ ಎನ್ನುವುದು ನನ್ನ ನಂಬಿಕೆ. ಸೂಫಿಸಂ ಬಗೆಗಿನ ಚರ್ಚೆಗಳನ್ನು (ಉದಾಹರಣೆಗೆ) ಇಸ್ಲಾಮಿಕ್‌ ವಿಧಾನಗಳಿಂದ ಹೊರತಂದು ಇತಿಹಾಸದ ವಿಧಾನಗಳ ಮಧ್ಯಕ್ಕೆ ತರುವುದು ಇದಕ್ಕೊಂದು ದಾರಿ ಎನ್ನಬಹುದು. ಆಧುನಿಕ ಪೂರ್ವ ಯುಗದಲ್ಲಿ ಸದರಿ ಸೂಫಿಗಳು ಅಧಿಕಾರದ ಮಧ್ಯವರ್ತಿಗಳು ಕೂಡಾ ಆಗಿದ್ದರು ಎನ್ನುವುದನ್ನು ನಾವು ಗಮನಿಸಬೇಕಿದೆ.

ಉ: ಈ ಪ್ರಶ್ನೆ ಸ್ಕಾಲರ್ಶಿಪ್ಪುಗಳ ನಿರ್ವಹಣೆಗೆ ಸಂಬಂಧಿಸಿದೆ. ಈ ಹಂತದಲ್ಲಿ ಭೌಗೋಳಿಕ ವಲಯಗಳ ಮೇಲಿನ ಒತ್ತನ್ನು ಪರಿಗಣಿಸಬೇಕಾಗಿ ಬರುತ್ತದೆ. ಹೀಗೆ ಪದವಿ ಅಧ್ಯಯನ ಆರಂಭಿಸುವುದರೊಂದಿಗೆ ಈ ಕ್ಷೇತ್ರದ ಸಾಹಿತ್ಯಗಳ ಅರಿವು ದೊರಕುತ್ತದೆ. ಮತ್ತೊಂದು ಆಯಾಮದಲ್ಲಿ ನೋಡಿದರೆ ಅಲ್ಲಿನ ವ್ಯಾಖ್ಯಾನಗಳ ವರ್ತುಲದಲ್ಲಿ ತನ್ನನ್ನು ತಾನೆ ಕೂಡಿ ಹಾಕಿಕೊಳ್ಳುವ ಅಪಾಯವೂ ಇದೆ. ಪ್ರಯಾಣ, ಪತ್ರಾಗಾರಗಳ ಅಧ್ಯಯನ, ಮತ್ತು ವಿಶೇಷವಾಗಿ ಖಾಸಗಿ ಆರ್ಕೈವ್‌ಗಳ ಸಂದರ್ಶನದ ಮೂಲಕ ಈ ವ್ಯಾಖ್ಯಾನಗಳ ವರ್ತುಲದಿಂದ ಹೊರಬರಬೇಕಾದುದು ಅತ್ಯಗತ್ಯ. ನನ್ನ ಅನುಭವಗಳ ಆಧಾರದಲ್ಲಿ ಇದನ್ನು ವಿವರಿಸಿದರೆ ಮತ್ತಷ್ಟು ಸ್ಪಷ್ಟತೆ ಸಿಗಬಹುದು. ನನ್ನ ಪ್ರಯಾಣಗಳ ಮಧ್ಯೆ ಒಂದು ಸಾಮ್ರಾಜ್ಯದ ರಾಜಧಾನಿಯಾಗಿದ್ದ ಭಾರತದ ನಗರವೊಂದರಲ್ಲಿ ಕೆಲವು ಖಾಸಗಿ ಆರ್ಕೈವ್‌ಗಳನ್ನು ಕಂಡಿದ್ದೆ. ಈ ನಗರದ ಬಗ್ಗೆ ಇತಿಹಾಸದ ಸಾಹಿತ್ಯಗಳಲ್ಲಿ ಬಹಳ ಸ್ವಲ್ಪ ಉಲ್ಲೇಖಗಳು ಮಾತ್ರವೇ ಇರುವುದರಿಂದ ಇದರ ಪ್ರಾಧಾನ್ಯತೆ ನನಗೆ ಅಷ್ಟು ಬೇಗ ಹೊಳೆದಿರಲಿಲ್ಲ. ಪದವಿ ವಿದ್ಯಾರ್ಥಿಗಳು ಮುಕ್ತ ಚಿಂತನೆಯನ್ನು ಮತ್ತು ಧೈರ್ಯವಂತಿಕೆಯನ್ನು ಬೆಳೆಸಿಕೊಳ್ಳಬೇಕಿದೆ.  “ಪವಾಡಮಯ ಸಾಹಿತ್ಯ” ಎಂದು ನಾನು  ಕರೆಯುವ ಸಾಹಿತ್ಯವನ್ನು ಹಿಂಬಾಲಿಸುವುದು ನನಗೆ ಆಸಕ್ತಿದಾಯಕ ಎನಿಸಿದೆ. ಇದು ಕನಸಿನ ಬಗೆಗಿನ ಸಾಹಿತ್ಯದೊಂದಿಗೆ ಸಂಬಂಧವನ್ನು ಹೊಂದಿದೆ. ಇತಿಹಾಸ ಸಾಂಪ್ರದಾಯಿಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ವಿಭಿನ್ನ ಜ್ಞಾನಶಾಸ್ತ್ರಗಳೊಂದಿಗೆ ಈ ಸಮಸ್ಯೆಗೆ ಸಂಬಂಧ ಇದೆ. ಹ್ಯೂಮ್‌ ನಂತರದ ಇತಿಹಾಸದ ಜಗತ್ತಿನಲ್ಲಿ ನಾವು ಬಿದ್ದಿರುವ ಪರಿಣಾಮವಿದು. ಈ ಜಗತ್ತಿನಲ್ಲಿ ವಾಸ್ತವಿಕ ಜಗತ್ತಿನ ಬಗ್ಗೆ ಅಧ್ಯಯನ ಮಾಡುವವರು ಕನಸಿನ ಸಾಹಿತ್ಯದ ಬಗ್ಗೆ ಮಾತಾಡುವಂತಿಲ್ಲ. ಜ್ಞಾನಶಾಸ್ತ್ರದ ಮತ್ತು ವ್ಯಾಖ್ಯಾನ ವಿಜ್ಞಾನದ ಈ ತಡೆಗೋಡೆಗಳನ್ನು ಮೀರಲು ನಮ್ಮನ್ನು ಪಕ್ವಗೊಳಿಸುವ ಧೈರ್ಯ ಮತ್ತು ಮುಕ್ತ ಚಿಂತನೆ ಬಹಳ ಮುಖ್ಯ.

ಕೃಪೆ: ಜದಲಿಯ್ಯಾ ಜಾಲತಾಣ
ಕನ್ನಡಕ್ಕೆ: ನಝೀರ್‌ ಅಬ್ಬಾಸ್

ಮೌನದ ಅನಂತ ಧ್ವನಿಗಳು

‘ದೇವರ ಮೌನ’ ಎಂಬ ಪ್ರಯೋಗದೊಂದಿಗೆ ಮುಸ್ಲಿಮ್ ವಿದ್ವಾಂಸ ಪರಂಪರೆ ಹೇಗೆ ಅನುಸಂಧಾನ ನಡೆಸಿದೆ ಎಂದು ನಾನು ಆಗಾಗ್ಗೆ ಚಿಂತಾಮಗ್ನನಾಗುತ್ತೇನೆ. “ಕನಿಷ್ಠ ಒಂದು ಬಾರಿಯಾದರೂ ಅದನ್ನು ಆಲಿಸಲು ಪ್ರಯತ್ನಿಸು” ಎಂದವರು ಉತ್ತರಿಸಬಹುದು. ಇಲ್ಲದಿದ್ದರೆ “ಅವರಿಗೆ ಹೃದಯಗಳಿವೆ, ಆದರೆ ಅವರು ಗ್ರಹಿಸುವುದಿಲ್ಲ; ಅವರಿಗೆ ಕಣ್ಣುಗಳಿವೆ, ಆದರೆ ಅವರು ಕಂಡರಿಯುವುದಿಲ್ಲ ; ಅವರಿಗೆ ಕಿವಿಗಳಿವೆ, ಅದರ ಮೂಲಕ ಅವರು ಕೇಳಿ ಅರ್ಥೈಸಿಕೊಳ್ಳುವುದಿಲ್ಲ. (ಖುರ್‌ಆನ್ 7:179) ಎಂಬ ದೇವವಚನವನ್ನು ಹೇಳಿಕೊಡಬಹುದು.
ಮೌನ (ಅರೇಬಿಕ್ ನಲ್ಲಿ ಸ್ವಮ್ತ್) ಎಂಬ ಪದವು ಮಾತಿನ (ಕಲಾಮ್) ವಿರುದ್ಧಪದ. ಮುಸ್ಲಿಮ್ ದೇವತಾಶಾಸ್ತ್ರಜ್ಞರು ಮತ್ತು ದಾರ್ಶನಿಕರು ದೈವಿಕ ನುಡಿಯನ್ನು (ಕಲಾಮ್) ದೈವಿಕ ವಾಸ್ತವತೆಯ ಅತ್ಯಗತ್ಯ ಗುಣಲಕ್ಷಣವಾಗಿ ನೋಡುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಯಾರು ಕೇಳಿದರೂ, ಕೇಳದಿದ್ದರೂ ದೇವನು ನಿರಂತರವಾಗಿ ಮತ್ತು ಶಾಶ್ವತವಾಗಿ ಮಾತನಾಡುತ್ತಿದ್ದಾನೆ. ದೇವರು ಎಂಬ ಅಸ್ತಿತ್ವದ ಮೂಲಭೂತ ಗುಣಲಕ್ಷಣಗಳಲ್ಲಿ ಜೀವಂತವಾಗಿರುವವನಾಗಬೇಕು, ತಿಳುವಳಿಕೆಯುಳ್ಳವನಾಗಬೇಕು, ಶಕ್ತಿವಂತನಾಗಬೇಕು, ದೃಷ್ಟಿ ಮತ್ತು ಶ್ರವಣ ಶಕ್ತಿ ಹೊಂದಿರಬೇಕು ಎಂಬಂತೆಯೇ ಮಾತು ಕೂಡಾ ಒಂದು. ಸಂಕ್ಷಿಪ್ತವಾಗಿ, ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ದೇವರ ಮೌನದ ಬಗ್ಗೆ ಮಾತನಾಡುವುದು ಎಂದರೆ, ಅವನ ಮರಣ ಅಥವಾ ಅವನ ಮೂರ್ಖತನ ಅಥವಾ ಅವನ ಶಕ್ತಿಹೀನತೆಯ ಬಗ್ಗೆ ಮಾತನಾಡುವುದಕ್ಕೆ ಸಂವಾದಿ. ಆಧುನಿಕ ಅಕಾಡೆಮಿಕ್ ಜಗತ್ತಿನಲ್ಲಿ ಇಂತಹ ಚರ್ಚೆಗಳಿಗೆ ಪ್ರಸ್ತುತತೆ ಇರಬಹುದಾದರೂ ಮುಸ್ಲಿಮ್ ಬೌದ್ಧಿಕ ವಲಯದಲ್ಲಿ ಅವು ಅಸಂಬದ್ಧ ಎನಿಸಿಕೊಳ್ಳುತ್ತದೆ.

ಪರಮಾತ್ಮನ ಮಾತು ಅವನ ಅಸ್ತಿತ್ವದ ಅನಿವಾರ್ಯ ಉತ್ಪನ್ನ ಆಗಿರುವುದರಿಂದಲೇ ಅದು ಕಾಲಾತೀತವಾದ ಶಾಶ್ವತತೆಯನ್ನು ಪಡೆದುಕೊಳ್ಳುತ್ತದೆ. ಅವನ ಶಾಶ್ವತ ಆಜ್ಞೆಯಾದ ‘ಆಗು’ (ಕುನ್) ಎಂಬ ಕ್ರಿಯೋತ್ತೇಜಕ ಪದದ ಫಲಿತಾಂಶವಾಗಿದೆ ಬೀಯಿಂಗ್ (ಕೌನ್ ಅರ್ಥಾತ್ ಇರವು) ಅಥವಾ ವಿಶ್ವ (ಆಲಂ). ಒಂದು ವಸ್ತುವು ಉಗಮವಾದರೆ, ಅದು ಖಂಡಿತವಾಗಿಯೂ ಅಂತ್ಯವನ್ನು ಹೊಂದುತ್ತದೆ. ನೈಜ ಅಸ್ತಿತ್ವವಾದ ದೇವನನ್ನು ಹೊರತುಪಡಿಸಿದರೆ ಬೇರೆ ಯಾವುದಕ್ಕೂ ನಿಜವಾದ ಅಸ್ತಿತ್ವ (ವುಜೂದ್) ಇಲ್ಲ. ಇಮಾಮ್ ಗಝಾಲಿ (ರ.) ಹೇಳುತ್ತಾರೆ: “ವಾಸ್ತವದಲ್ಲಿ ದೇವರನ್ನು ಹೊರತುಪಡಿಸಿ ಬೇರೇನೂ ಅಸ್ತಿತ್ವದಲ್ಲಿಲ್ಲ”. ಖುರ್ ಆನಿನ ಭಾಷೆಯಲ್ಲಿ, “ಅಲ್ಲಾಹನ ಮುಖವಲ್ಲದ ಎಲ್ಲವೂ ನಾಶವಾಗುತ್ತವೆ” (ಖುರ್‌ಆನ್ 18:88) ‘ಅರಬ್ಬರು ಹಾಡಿರುವ ಅತೀ ಸತ್ಯವಾದ ಗೆರೆ’ ಎಂದು ಪೈಗಂಬರರು ಬಣ್ಣಿಸಿದ ಕವಿ ಲಬೀದ್ ಅವರ ಕವಿತೆ ಈ ವಿಷಯವನ್ನು ಚೆನ್ನಾಗಿ ತಿಳಿಸಿಕೊಡುತ್ತದೆ.

“ದೇವರಲ್ಲದ ಎಲ್ಲವೂ ಅವಾಸ್ತವವಲ್ಲವೇ..
ಎಲ್ಲಾ ಸಂತೋಷಗಳು ಕ್ಷಣಿಕ ಕ್ಷಣಗಳಲ್ಲವೇ?”

ಖುರ್ ಆನ್ ಹಕ್ (ವಾಸ್ತವ)ಗೆ ವಿರುದ್ಧಪದವಾಗಿ ಬಾತಿಲ್ (ಅವಾಸ್ತವತೆ) ಅನ್ನು ಬಳಸುತ್ತದೆ. (ಬಾತಿಲ್ ಎಂದರೆ ತಪ್ಪು, ಅಸತ್ಯ, ಶೂನ್ಯ). ಆದ್ದರಿಂದ, ದೇವರಲ್ಲದ ಎಲ್ಲವೂ ಸ್ವತಃ ಬಾತಿಲ್ (ಅವಾಸ್ತವ). ಖುರ್ ಆನಿನಲ್ಲಿ ಉಲ್ಲೇಖಿಸಲಾದ ‘ಅಲ್- ಹಕ್’ ಎಂಬ ದೇವನಾಮ ಸತ್ಯ, ವಾಸ್ತವ ಮತ್ತು ವಾಸ್ತವಿಕತೆ ಎಂಬ ಅರ್ಥವನ್ನು ಸ್ಫುರಿಸುತ್ತದೆ. ತತ್ವಜ್ಞಾನಿ ಇಬ್ನ್ ಸೀನಾ ಕಿತಾಬು ಶಿಫಾದಲ್ಲಿ ಬರೆಯುತ್ತಾರೆ: ‘ಹಕ್’ ಪದವು ವಸ್ತುಗಳ ಸ್ವರೂಪದ ಬಗ್ಗೆ ಮಾತನಾಡುವಾಗ ‘ವಾಸ್ತವ’ ಎಂಬರ್ಥವನ್ನೂ ಹೇಳಿಕೆಗಳ ಬಗ್ಗೆ ಮಾತನಾಡುವಾಗ ‘ಸರಿ’ ಎಂಬರ್ಥವನ್ನೂ ಕೊಡುತ್ತದೆ. ಮೊದಲ ಅರ್ಥಕ್ಕೆ ಸಂಬಂಧಿಸಿದಂತೆ, ಅವರು ಬರೆಯುತ್ತಾರೆ: “ತಾನು ತಾನಾಗಲು ಅಸ್ತಿತ್ವ ಅನಿವಾರ್ಯವಾಗಿರುವ ವಸ್ತು ಮಾತ್ರ ನಿತ್ಯ ವಾಸ್ತವವಾಗಿದ್ದು ಆ ಅನಿವಾರ್ಯ ಅಸ್ತಿತ್ವದ ಹೊರತಾದ ಬೇರೆಲ್ಲವೂ ಮೂಲಭೂತವಾಗಿ ಅವಾಸ್ತವ ಎನಿಸಿಕೊಳ್ಳುತ್ತದೆ.” ಹಕ್ ಎಂಬ ದೇವನಾಮವನ್ನು ವಿವರಿಸುತ್ತಾ ಇಮಾಮ್ ಗಝಾಲಿ (ರ.) ಇದನ್ನು ಮತ್ತಷ್ಟು ವಿವರಿಸಿದ್ದಾರೆ. ದೇವನು ನೀಡಿರುವ ಅಸ್ತಿತ್ವದಿಂದ ವಾಸ್ತವತೆಯನ್ನು ಪಡೆದಿರುವ ವಸ್ತುಗಳ ಇರವು (being)ಸಾಲರೂಪದ್ದೇ ವಿನಃ ನಿಜವಾದದ್ದಲ್ಲ ಎಂದು ಅವರು ಸ್ಪಷ್ಟಪಡಿಸಿರುವುದು ನೋಡಿ:

“ವಿವರಣೆಗೆ ತೆರೆದುಕೊಳ್ಳುವ ಯಾವುದೇ ಸಂಗತಿಗಳು ಮೂರು ರೂಪದಲ್ಲಿ ಇರುತ್ತವೆ. ಸಂಪೂರ್ಣ ವಾಸ್ತವ ಆಗಿರುವುದು, ಸಂಪೂರ್ಣ ಅವಾಸ್ತವ ಆಗಿರುವುದು ಮತ್ತು ಒಂದು ಆಯಾಮದಲ್ಲಿ ಮಾತ್ರ ವಾಸ್ತವ ಹಾಗೂ ಮತ್ತೊಂದು ಆಯಾಮದಲ್ಲಿ ಅವಾಸ್ತವ ಆಗಿರುವುದು. ಒಂದು ವಸ್ತುವಿಗೆ ಅದರ ಮೂಲಭೂತ ಸ್ವಭಾವದಲ್ಲೇ (ಅದು ಆದಾಗಲು) ಇರವು ಅನಿವಾರ್ಯವಾಗಿದ್ದರೆ ಅದು ಸಂಪೂರ್ಣವಾದ ಸತ್ಯವಾಗಿದ್ದು ಇರವಿನ ಅಭಾವ ಅನಿವಾರ್ಯವಾಗಿದ್ದರೆ ಅದು ಸಂಪೂರ್ಣ ಅವಾಸ್ತವ ಆಗಿರುತ್ತದೆ. ಇವೆರಡಕ್ಕಿಂದ ಭಿನ್ನವಾಗಿ ಮೂಲಭೂತ ಸ್ವಭಾವದಲ್ಲಿ ಸಂಭಾವ್ಯತೆ ಇದ್ದರೆ ಮಾತ್ರ ಸಾಕಾದರೆ ಅದು ಒಂದು ಆಯಾಮದಲ್ಲಿ ವಾಸ್ತವ ಹಾಗೂ ಮತ್ತೊಂದು ಆಯಾಮದಲ್ಲಿ ಅವಾಸ್ತವ ಎನಿಸಿಕೊಳ್ಳುತ್ತದೆ. ಇದರಿಂದ ಸಂಪೂರ್ಣ ವಾಸ್ತವಿಕತೆಯನ್ನು ಹೊಂದಿರುವಂತಹ ವಸ್ತುಗಳು ಮಾತ್ರ ಮೂಲಭೂತವಾಗಿ ನಿಜವಾದ ಅಸ್ತಿತ್ವವನ್ನು ಹೊಂದಿದೆ ಎಂದೂ ಇತರೆಲ್ಲಾ ವಸ್ತುಗಳು ತಮ್ಮ ವಾಸ್ತವಿಕತೆಯನ್ನು ಪಡೆಯುವುದು ಈ ಅಸ್ತಿತ್ವದಿಂದಲೇ ಎಂದೂ ತಿಳಿಯಬಹುದು.”

(ಅಲ್ ಮಖಾಸಿದುಲ್ ಅಸ್ನಾ)

ಮಾತನಾಡುವುದು ಎಂದರೆ ಅರಿವು ವ್ಯಕ್ತಪಡಿಸುವುದು ಎಂದರ್ಥ. ದೇವರ ಮಾತು ಎಲ್ಲದರ ಬಗೆಗಿನ ಆತನ ಶಾಶ್ವತ ಜ್ಞಾನದ ಅಭಿವ್ಯಕ್ತಿಯಾಗಿದೆ. ದೇವರ ಮಾತು ನಿಜ, ಸತ್ಯ ಮತ್ತು ಅಧಿಕೃತ. ಇತರರ ಎಲ್ಲಾ ಮಾತುಗಳು ಮೌಲಿಕ ದೃಷ್ಟಿಯಲ್ಲಿ ಅವಾಸ್ತವ, ಅಸತ್ಯ ಮತ್ತು ಅವಲಂಬನೆಗೆ ಅರ್ಹವಲ್ಲ. ಇತರ ವಸ್ತುಗಳ ಮಾತುಗಳು ನೈಜ ವಾಸ್ತವದ ಬಳಿ ದೊರಕುವಷ್ಟೇ ಇರಬಲ್ಲದು.

ಖುರ್ ಆನ್ ಸಾಮಾನ್ಯವಾಗಿ ದೈವಿಕ ನುಡಿಯನ್ನು ಆಜ್ಞೆ (ಅಲ್ ಅಮ್ರ್) ಎಂದು ಉಲ್ಲೇಖಿಸುತ್ತದೆ. ಮೇಲೆ ಹೇಳಲಾದ ದೇವರ ಮೌನದ ಬಗ್ಗೆ ಮಾತನಾಡುವವರು ‘ಧಾರ್ಮಿಕ ಆಜ್ಞೆ’ (ಅಲ್ ಅಮ್ರ್ ಅದ್ದೀನಿಯ್ಯ್) ಯಾ ನಿರ್ದೇಶಾತ್ಮಕ ಆದೇಶ (ಅಲ್ ಅಮ್ರ್ ಅತ್ತಕ್ಲೀಫಿಯ್ಯ್) ಎಂದು ದೇವಶಾಸ್ತ್ರಜ್ಞರು ಕರೆದಿರುವ ದೇವನುಡಿಯನ್ನು ಮನಸ್ಸಲ್ಲಿ ಉದ್ದೇಶಿಸಿರುವ ಹಾಗಿದೆ. ದೇವರು ನಿರ್ದೇಶನಾತ್ಮಕ ಆಜ್ಞೆಯನ್ನು ಹೊರಡಿಸುವುದು ಎಂದರೆ ತನ್ನ ಸೂಚನೆಗಳನ್ನು ನುಡಿಯ ರೂಪದಲ್ಲಿ ತನ್ನ ಮಾನವ ದಾಸರಿಗೆ ತಲುಪಿಸುವುದು ಎಂದರ್ಥ. ಪ್ರವಾದಿಗಳ ಸಂದೇಶಗಳಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು. ಕರ್ಮ ಶಾಸ್ತ್ರ ವಿದ್ವಾಂಸರಿಗೆ ಸಿಗುತ್ತಿರುವ ಎಷ್ಟೇ ಸಣ್ಣ ಅಧಿಕಾರ ಇರಲಿ ಅದು ಈ ದೇವಾಜ್ಞೆಯನ್ನು ಆಧರಿಸಿದೆ.

ಸೃಜನಾತ್ಮಕ ಆಜ್ಞೆ (ಅಲ್ ಅಮ್ರ್ ಅಲ್ಖಲ್ಕಿಯ್ಯ್) ಅಲ್ಲಾಹನ ಎರಡನೆಯ ತರದ ಆಜ್ಞೆ. ಇದನ್ನು ಅಲ್ ಅಮ್ರ್ ಅತ್ತಕ್ವೀನಿಯ್ಯ್ ಅಥವಾ ಇರವನ್ನು (ಕೌನ್ ಅಥವಾ being) ನೀಡುವ ಆಜ್ಞೆ ಎಂದೂ ಕರೆಯಲಾಗುತ್ತದೆ. ಖುರ್ ಆನಿನಲ್ಲಿರುವ “ಅವನು ಒಂದು ವಸ್ತು ಉಂಟಾಗಬೇಕೆಂದು ಬಯಸಿದರೆ, ಅದು ಆಗಲಿ ಎಂದು ಹೇಳುವನು ಮತ್ತು ಅದು ಉಂಟಾಗಿ ಬಿಡುತ್ತದೆ” ಎಂಬ ವಾಕ್ಯ ಇದಕ್ಕೊಂದು ಉದಾಹರಣೆ. ದಾರ್ಶನಿಕರು, ದೇವತಾಶಾಸ್ತ್ರಜ್ಞರು ಮತ್ತು ಸೂಫಿ ಗುರುಗಳು ಇಂತಹ ಮಾತುಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಿದ್ದಾರೆ. ಅವರ ಎಲ್ಲಾ ವಿವರಣೆಗಳು ಅನಿವಾರ್ಯವಾದ ಇರವಿನ ಮೂಲಭೂತ ಸಾರ ಮತ್ತು ವಿಶೇಷಣಗಳ ಮೇಲೆ ಕೇಂದ್ರೀಕೃತವಾಗಿವೆ. ಅಖಿಲ ವಿಶ್ವ ಇಡಿಯಾಗಿ ದೇವರ ಮಾತುಗಳಾಗಿವೆ ಎಂದವರು ಹೇಳುತ್ತಾರೆ. ಇದಕ್ಕೆ ಬೆಂಬಲವಾಗಿ ಅವರು ಖುರ್‌ಆನ್ ಸೂಕ್ತಗಳನ್ನು ಉಲ್ಲೇಖಿಸುತ್ತಾರೆ. ಉದಾಹರಣೆಗೆ, ಖುರ್ ಆನ್ ತನ್ನ ಸೂಕ್ತಗಳನ್ನು ಮತ್ತು ಪ್ರಾಪಂಚಿಕ ಸೃಷ್ಟಿಗಳನ್ನು ಉಲ್ಲೇಖಿಸಲು ಆಯತ್ (ಚಿಹ್ನೆ) ಎನ್ನುವ ಒಂದೇ ಪದವನ್ನು ಬಳಸಿದೆ. ವಿಶ್ವದಲ್ಲಿರುವ ವಸ್ತುಗಳನ್ನು ಭಗವಂತನಿಗೆ ಅಪೇಕ್ಷಿಸಿ ನೋಡಿದರೆ ಅವುಗಳು ಹಾಗೂ ಅವುಗಳ ದೇವರ ಮಾತುಗಳು ಸಮಾನ ನೆಲೆಯನ್ನು ಹೊಂದಿದೆ ಎಂದು ಇದರಿಂದ ತಿಳಿಯಬಹುದು. ದೇವಗ್ರಂಥದಲ್ಲಿರುವ ಆಯತ್ ಗಳು (ಸೂಕ್ತಗಳು) ಅವನ ಪದಗಳಾಗಿರುವಂತೆ ಅವನು ಸೃಷ್ಟಿಸಿದ ವಸ್ತುಗಳು ಕೂಡಾ ಅವನ ಪದಗಳೆ. ಸೂಕ್ತಗಳಿಗೆ ಅರ್ಥವಿರುವ ಹಾಗೆ ಸೃಷ್ಟಿಸಲ್ಪಟ್ಟ ವಸ್ತುಗಳಿಗೆ ಮರ್ಮವೂ ಇದೆ.

ಇಸ್ಲಾಮಿಕ್ ಸಾಹಿತ್ಯಗಳಲ್ಲಿ ಅರ್ಥ (ಮಅನಾ) ವನ್ನು ಎರಡು ರೀತಿಯಲ್ಲಿ ಬಳಸಲಾಗುತ್ತದೆ: ಪದಾರ್ಥ (word) ಮತ್ತು ರೂಪಾರ್ಥ (form). ಪದಗಳಿಗೆ ಅರ್ಥವಿರುವಂತೆಯೇ ಆಕಾರಗಳಿಗೂ ಅರ್ಥವಿದೆ. “ಅಲ್ಲಾಹನಾಗಿದ್ದಾನೆ ರೂಪವನ್ನು ನೀಡುವವನು”, “ಅವನು ನಿನಗೆ ರೂಪವನ್ನು ಕೊಟ್ಟನು ಮತ್ತು ನಿನ್ನ ರೂಪವನ್ನು ಸುಂದರಗೊಳಿಸಿದನು.” (ಖುರ್‌ ಆನ್ 49:64). ದಿವ್ಯ ಗ್ರಂಥದ ಪದಗಳನ್ನು ನುಡಿಯುವ ಮೂಲಕ ಮತ್ತು ಇರವಿನ (being) ಲೋಕಕ್ಕೆ ರೂಪ ಕೊಡುವ ರೂಪಗಳಿಗೆ ಧ್ವನಿ ನೀಡುವ ಮೂಲಕ ಅಲ್ಲಾಹನು ಅರ್ಥಗಳನ್ನು ಅಭಿವ್ಯಕ್ತಿಸುತ್ತಾನೆ. ಈ ಪದಗಳು ಮತ್ತು ರೂಪಗಳ ಅರ್ಥಗಳು ಅನಂತವಾಗಿವೆ ಎಂದು ಕೆಳಗಿನ ಸೂಕ್ತವನ್ನು ವ್ಯಾಖ್ಯಾನಿಸುತ್ತಾ ಖುರ್ ಆನ್ ವಿದ್ವಾಂಸರು ವಿವರಿಸಿದ್ದಾರೆ.
“ಭೂಮಿಯ ಮೇಲಿನ ಎಲ್ಲಾ ಮರಗಳು ಲೇಖನಿಗಳಾದರೆ ಮತ್ತು ಈ ಸಮುದ್ರ ಹಾಗೂ ಜತೆಗೆ ಏಳು ಬೇರೆ ಸಮುದ್ರಗಳನ್ನೂ ಸೇರಿಸಿ ಶಾಯಿಯಾಗಿ ಮಾಡಿದರೂ, ಅಲ್ಲಾಹನ ಮಾತುಗಳು ಬರೆದು ಮುಗಿಸಲಾಗದು. ಖಂಡಿತವಾಗಿಯೂ ಅಲ್ಲಾಹನು ಮಹಿಮಾನ್ವಿತನೂ ವಿವೇಕಿಯೂ ಆಗಿದ್ದಾನೆ‌.” (ಖುರ್ಆನ್ 31:27).

ಸಂಕ್ಷಿಪ್ತವಾಗಿ, ವಿಶ್ವದ ಅಸ್ತಿತ್ವಕ್ಕೆ ಮತ್ತು ಅದರಲ್ಲಿರುವ ಎಲ್ಲದಕ್ಕೂ ರೂಪು ಕೊಡುವ ದೇವರ ಮಾತಾಗಿದೆ ಸೃಜನಾತ್ಮಕ ಆಜ್ಞೆ (creative command) ಎಂದು ಅರ್ಥೈಸಬಹುದು. ಅದೇ ವೇಳೆ ಪ್ರವಾದಿಗಳು ಮತ್ತು ದೈವಿಕ ಗ್ರಂಥಗಳ ಮೂಲಕ ಮನುಷ್ಯನನ್ನು ಉದ್ದೇಶಿಸಿಕೊಂಡು ಹೊರಡಿಸಲಾದ ದೈವಿಕ ನುಡಿಗಳಾಗಿವೆ ನಿರ್ದೇಶನಾತ್ಮಕ ಆಜ್ಞೆ (prescriptive command)ಗಳು ಎಂದೂ ತಿಳಿಯಬಹುದು. ಎರಡನೆಯ ರೀತಿಯ ಆಜ್ಞೆಗಳನ್ನು ಮೀರಲು ಮನುಷ್ಯನಿಗೆ ಸಾಧ್ಯವಿದೆ. ಆದರೆ ಅಲ್ಲಾಹನ ‘ಸೃಜನಾತ್ಮಕ ಕ್ರಮ’ವನ್ನು ಮೀರಲು ಮನುಷ್ಯನಿಗೆ ಸಾಧ್ಯವಾಗದು. ಅದರ ವಿರುದ್ಧ ವರ್ತಿಸಲು ಅಥವಾ ಪ್ರತಿಕ್ರಿಯಿಸಲು ಸಹ ಸಾಧ್ಯವಿಲ್ಲ. ಏಕೆಂದರೆ ಆ ಆದೇಶವೇ ಅವರಿಗೆ ವರ್ತಿಸಲು, ಯೋಚಿಸಲು ಮತ್ತು ಕ್ರಿಯೆ ಎಸಗಲು ಅನುವಾಗುವ ಇರವನ್ನು (being) ನೀಡಿರುವುದು.

ವಿಶ್ವಾಸಶಾಸ್ತ್ರದ ವಿದ್ವಾಂಸರು ದೇವರಿಗೆ ಎರಡು ರೀತಿಯ ಆಜ್ಞೆಗಳಿವೆ ಎನ್ನುವ ವರ್ಗೀಕರಣವನ್ನು ಯಾಕಾಗಿ ಮಾಡುತ್ತಾ ಇದ್ದಾರೆನ್ನುವ ಪ್ರಶ್ನೆ ಇಲ್ಲಿ ಬರಬಹುದು. ಖುರ್ ಆನ್ ಕೂಡಾ “ನಮ್ಮ ಆಜ್ಞೆಯು ಕಣ್ಣು ಮಿಟುಕಿಸುವಂತೆ ಒಂದೇ ಘೋಷಣೆಯಾಗಿದೆ.” (ಕುರಾನ್ 54:50) ಎಂದು ಹೇಳಿದೆ. ದೇವರಿಗೆ ಒಂದೇ ಒಂದು ಆಜ್ಞೆಯಿದೆ ಎಂದು ಈ ಶ್ಲೋಕ ಸೂಚಿಸುವುದಿಲ್ಲವೇ? ವಾಸ್ತವವಾಗಿ, ನಿರ್ದೇಶನಾತ್ಮಕ ಆಜ್ಞೆಯು ಸೃಜನಾತ್ಮಕ ಆಜ್ಞೆಯನ್ನು ಒಳಗೊಂಡಿದೆ ಮತ್ತು ಅನುಸರಿಸುತ್ತದೆ. ಎಲ್ಲಾ ಸೃಷ್ಟಿಗಳು ತಮ್ಮ ಇರವಿನೊಂದಿಗೆ ಸೃಜನಾತ್ಮಕ ಆಜ್ಞೆಗೆ ವಿಧೇಯರಾಗುವರು. ಆದರೆ ಮನುಷ್ಯ ತನ್ನ ಅಸ್ತಿತ್ವವನ್ನು ಪ್ರಶ್ನಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದಾನೆ. ಅವನಿಗೆ ಈ ಸಾಮರ್ಥ್ಯ ಬರಲು ಕಾರಣ ಅವನ ಸ್ವಪ್ರಜ್ಞೆಯೇ. ಈ ಸ್ವೋಪಜ್ಞತೆ ಅವರಿಗೆ ದೊರಕಿರುವುದು ಅನಂತವಾದ ಸ್ವಪ್ರಜ್ಞೆಯ ಕೆಲವು ವಿಶೇಷತೆಗಳು ಅವರ ಸೃಷ್ಟಿಯಲ್ಲಿ ಇರುವುದರಿಂದ. ದೇವನು ಕಡ್ಡಾಯವಾಗಿ ಹೊಂದಿರಬೇಕಾದ ಏಳು ಗುಣಲಕ್ಷಣಗಳು ಮನುಷ್ಯರಿಗೂ ಇದೆ ನೋಡಿ. ಜೀವ, ಜ್ಞಾನ, ಶಕ್ತಿ, ಇಚ್ಛೆ, ಮಾತು, ಶ್ರವಣ ಮತ್ತು ದೃಷ್ಟಿ. ಆದರೆ, ಇದಾವುದೂ ದೇವರಿಗೆ ಸಮಾನವಾಗಿರುವ ಪ್ರಮಾಣದಲ್ಲಿ ಮತ್ತು ಗುಣಮಟ್ಟದಲ್ಲಿಲ್ಲ. ಇಷ್ಟೇ ಅಲ್ಲದೆ, ದೇವರ ಇತರ 99 ಹೆಸರುಗಳಲ್ಲಿ (ಅಸ್ಮಾಉಲ್ ಹುಸ್ನಾ) ಒಳಗೊಂಡಿರುವ ಇತರ ವಿಶೇಷತೆಗಳನ್ನು ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ಕೂಡಾ ಅವರಿಗಿದೆ.

ಮೇಲೆ ಹೇಳಲಾದ ಏಳು ಮೂಲಭೂತ ಗುಣಲಕ್ಷಣಗಳ ಪೈಕಿ ನೋಡುವಿಕೆ ಮತ್ತು ಶ್ರವಣದ ಬದಲಿಗೆ ಉದಾರತೆ ಮತ್ತು ನ್ಯಾಯವನ್ನು ಎಣಿಸಿದವರು ಇದ್ದಾರೆ. ಬಹುತೇಕ ದೇವತಾಶಾಸ್ತ್ರಜ್ಞರು ವಿಶ್ವದಾದ್ಯಂತ ಮಾರ್ದನಿಸುತ್ತಿರುವ ಪರಸ್ಪರ ಪೂರಕವಾದ ದೈವಿಕ ಗುಣವಿಶೇಷತೆಗಳ ಎರಡು ಗುಂಪುಗಳನ್ನು ಇವೆರಡು ಪ್ರತಿನಿಧಿಸುತ್ತವೆ ಎಂದಿದ್ದಾರೆ. ಈ ಎರಡು ದಿವ್ಯ ಗುಣಗಳು ಇತರ ದೈವಿಕ ಗುಣಗಳಾದ ಮೃದುತ್ವ ಮತ್ತು ಕಾಠಿಣ್ಯ, ಕರುಣೆ ಮತ್ತು ಕೋಪ ಹಾಗೂ ಸೌಂದರ್ಯ ಮತ್ತು ಗಾಂಭೀರ್ಯವನ್ನು ಹೋಲುತ್ತವೆ. ದೇವರು ಮನುಷ್ಯನನ್ನು ಸೃಷ್ಟಿಸಿದಾಗ ಪರಸ್ಪರ ವಿರುದ್ಧವಾಗಿರುವ ಈ ದ್ವಂದ್ವಗಳನ್ನು ಅವನಲ್ಲಿ ತುಂಬಿದನು. ಅಲ್ಲಾಹನ ಕರುಣಾಮಯಿ ಗುಣಗಳು ನಮ್ಮನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತವೆ. ಅದೇ ವೇಳೆ, ಅವನ ಕೋಪದ ವಿಶೇಷಣಗಳು ನಮ್ಮನ್ನು ನರಕಕ್ಕೆ ಕರೆದೊಯ್ಯುತ್ತವೆ. ಪೈಗಂಬರ್ ಮುಹಮ್ಮದ್ (ಸ.) ಹೇಳಿದರು: “ಅಲ್ಲಾಹನ ಕರುಣೆಯು ಅವನ ಕೋಪಕ್ಕಿಂತ ದೊಡ್ಡದಾಗಿದೆ.” ಮನುಷ್ಯನ ಒಳಗೆ ಮತ್ತು ಹೊರಗೆ ಕಂಡುಬರುವ ಈ ವಿಶೇಷಣಗಳು ಮಾನವನ ನೈತಿಕತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಜತೆಗೆ ದೇವರ ಸಾಮೀಪ್ಯ ಪಡೆಯಲಿಕ್ಕೂ ಇದು ದಾರಿ ಮಾಡುತ್ತಿದ್ದು ಅದುವೇ ಧರ್ಮದ ಅಂತಿಮ ಗುರಿ.

ಧಾರ್ಮಿಕ ಆಜ್ಞೆಯು ಮಾನವನಿಗೆ ಇರುವ ಇಚ್ಛಾಶಕ್ತಿಯನ್ನು ಉದ್ದೇಶಿಸಿದೆ. ತನ್ನ ಮುಂದಿರುವ ಆಯ್ಕೆಗಳ ಪೈಕಿ ಯಾವುದನ್ನು ಬೇಕಾದರೂ ಆಯ್ದುಕೊಳ್ಳುವ ಶಕ್ತಿ ಮನುಷ್ಯನಿಗೆ ಇದೆ. ಆದರೆ, ಆಯ್ಕೆ ಉತ್ತಮವಾಗಿರಬೇಕು. ನಿರ್ದೇಶನಾತ್ಮಕ ಆಜ್ಞೆಗಳ ಮುಖ್ಯ ಕೆಲಸ ಸರಿ ತಪ್ಪುಗಳನ್ನು ಬೇರ್ಪಡಿಸಲು ಬೇಕಾದ ಮಾನದಂಡವನ್ನು ನೀಡುವುದೇ ಆಗಿರುತ್ತದೆ. ಜತೆಗೆ ಸತ್ಯ ಮತ್ತು ಸೂಕ್ತವಾದುದನ್ನು ಮಿಥ್ಯೆ ಹಾಗೂ ಸಮರ್ಪಕವಲ್ಲದ್ದರಿಂದ ಬೇರ್ಪಡಿಸಲು ಕೂಡಾ ಸಹಾಯ ಮಾಡುತ್ತದೆ.

ಮೊದಲ ನೋಟದಲ್ಲಿ, ಜನರಿಗೆ ಸತ್ಯದೊಂದಿಗೆ ನೇರ ಸಂಪರ್ಕ ಇಲ್ಲದ್ದರಿಂದ ಹಾಗೂ ಉತ್ತಮ ಜೀವನ ಸವೆಸಲು ದೈವಿಕ ಮಾರ್ಗದರ್ಶನ ಅಗತ್ಯ ಇರುವ ಕಾರಣದಿಂದ ನಿರ್ದೇಶನಾತ್ಮಕ ಆಜ್ಞೆ ಅಸ್ತಿತ್ವದಲ್ಲಿದೆ ಎಂದು ತೋರಬಹುದು. ಅದೇ ವೇಳೆ, ಆಳವಾದ ದೃಷ್ಟಿಯಲ್ಲಿ ದೇವರು ಸರಿಯಾದ ಮಾತು, ಕ್ರಿಯೆ ಮತ್ತು ಉದ್ದೇಶದ ಬಗ್ಗೆ ಸೂಚನೆಗಳನ್ನು ನೀಡಿರುವುದರಿಂದ ಮನುಷ್ಯನಿಗೆ ಸತ್ಯ, ಸರಿ ಮತ್ತು ವಾಸ್ತವವನ್ನು ಆರಿಸುವ ಹೊಣೆಗಾರಿಕೆಯನ್ನು ಕೂಡಾ ವಹಿಸಿದ್ದಾನೆ ಎಂದು ತಿಳಿಯಬಹುದು. ಈ ಜವಾಬ್ದಾರಿಯ ಆಧಾರದ ಮೇಲೆ, ಅವರು ಅವಾಸ್ತವಿಕತೆಯನ್ನು ದೂರ ಮಾಡಿದ್ದಕ್ಕಾಗಿ ಮತ್ತು ಸತ್ಯದೊಂದಿಗೆ ಸೇರಿದ್ದಕ್ಕಾಗಿ ಸ್ವರ್ಗ ಯಾ ನರಕಕ್ಕೆ ಅರ್ಹರಾಗುತ್ತಾರೆ. ದೈವಿಕ ನ್ಯಾಯದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಮಾತುಗಳು ಮತ್ತು ಕಾರ್ಯಗಳಿಗೆ ಸಂಪೂರ್ಣ ಜವಾಬ್ದಾರನಾಗಿದ್ದರೆ ಮಾತ್ರ ಪ್ರತಿಫಲ ಮತ್ತು ಶಿಕ್ಷೆ ನೀಡಬಹುದು. ಸೃಷ್ಟಿಗಳ ಪೈಕಿ ಮಾನವರಿಗೆ ಮಾತ್ರ ಜವಾಬ್ದಾರಿ ವಹಿಸಿಕೊಡಲಾಗಿರುದರಿಂದ ವಿವಿಧ ಮಟ್ಟಗಳು ಮತ್ತು ವಲಯಗಳಿರುವ ಸ್ವರ್ಗ ಮತ್ತು ನರಕಗಳ ಅಸ್ತಿತ್ವ ಮನುಷ್ಯರ ಅಸ್ತಿತ್ವದ ಮೇಲೆ ನೆಲೆಗೊಂಡಿದೆ. ಒಟ್ಟಾರೆ, ಮಾನವನಿಗೆ ಮುಕ್ತ ಆಯ್ಕೆಯು ಇಲ್ಲದಿದ್ದಲ್ಲಿ ಅರ್ಥಹೀನ ಎನಿಸುತ್ತಿದ್ದ ಮರಣೋತ್ತರ ಲೋಕಗಳ ಅಗಣಿತ ಸಾಧ್ಯತೆಗಳ ಇರವಿಗೆ ಕಾರಣವಾಗುವ ಮೂಲಕ ನಿರ್ದೇಶನಾತ್ಮಕ ಆಜ್ಞೆಗಳು ಸೃಜನಾತ್ಮಕ ಆಜ್ಞೆಗಳನ್ನು ಪೂರ್ಣಗೊಳಿಸುವ ಕೆಲಸವನ್ನು ಕೂಡಾ ಮಾಡುತ್ತದೆ ಎನ್ನಬಹುದು.

ದೇವರು ವಾಸ್ತವ ಎಂದು ಹೇಳಿದರೆ ದೇವರು ಮಾತ್ರ ವಾಸ್ತವ ಹಾಗೂ ಬಾಕಿರುವುದೆಲ್ಲಾ ಅವಾಸ್ತವ ಎಂದರ್ಥ. ದೇವರು ಮಾತನಾಡುತ್ತಾನೆ ಎಂದು ಹೇಳಿದರೆ ದೇವರು ಮಾತ್ರ ಮಾತನಾಡುತ್ತಾನೆ ಮತ್ತು ಉಳಿದವರೆಲ್ಲಾ ಮೌನವಾಗಿದ್ದಾರೆ ಎಂದರ್ಥ. ನಿಜವಾದ ಇರವು ಎನಿಸಿರುವ ದೇವರಿಂದ ನಿಗದಿತ ವಾಸ್ತವಿಕತೆಯನ್ನು ವಸ್ತುಗಳು ಪಡೆದಿದೆ ಎನ್ನುವುದಾದರೆ ಅವುಗಳು ನಿಗದಿತ ಮಾತನ್ನು ಕೂಡಾ ನಿಜವಾದ ಮಾತುಗಾರನಿಂದ ಪಡೆದಿವೆ ಎಂದು ಮನಗಾಣಲು ಸಾಧ್ಯವಿದೆ. ಇಬ್ನ್ ಅರಬಿಯವರು ವಿವರಿಸಿದಂತೆ ದೇವರ ನುಡಿ ಆಗಿರುತ್ತದೆ ಎಲ್ಲವನ್ನೂ ಅಸ್ತಿತ್ವಕ್ಕೆ ತಂದಿರುವುದು. “ನಾವು ಅವನ ಮಾತಿನಿಂದಾಗಿ ಅಸ್ತಿತ್ವಕ್ಕೆ ಬಂದಿದ್ದೇವೆ. ʼಆಗುʼ ಎನ್ನುವ ಅವನ ಆಜ್ಞೆಯ ಪರಿಣಾಮದಿಂದ ನಾವು ಉಂಟಾದೆವು. ಅಸ್ತಿತ್ವದಲ್ಲಿರುವುದೆಲ್ಲವೂ ದೇವರ ಮಾತುಗಳೇ ಆಗಿರುವುದರಿಂದ “ವಿಶ್ವದಲ್ಲಿ ಮೌನವಿಲ್ಲ. ಮೌನ ಏನೂ ಇಲ್ಲದಿರುವುದಕ್ಕೆ ಸಮಾನ. ಆದುದರಿಂದಲೇ ಮಾತು ಶಾಶ್ವತ.”

ಸಂಕ್ಷಿಪ್ತವಾಗಿ ಹೇಳುವುದಾದರೆ, ದೇವರಲ್ಲದ ಎಲ್ಲವೂ ದೇವರ ಮಾತುಗಳ ಕಾರಣದಿಂದ ವಾಸ್ತವ ಎನಿಸಿಕೊಂಡಿವೆ. ಅದೇ ವೇಳೆ, ಅವುಗಳ ಮೂಲಭೂತ ಸ್ವಭಾವಗಳ ಪ್ರಕಾರ ಅವು ಅವಾಸ್ತವ ಮತ್ತು ಮೌನ ಆಗಿವೆ. ಎಲ್ಲಾ ಸೃಷ್ಟಿಗಳು ದೇವರ ನುಡಿಗಳೆ. ಅವರಾಡುವ ಮಾತುಗಳು ಅವರಾಡಿದ್ದಲ್ಲ, ಅವರ ಮೂಲಕ ಆಡಲಾದದ್ದು. ಆದುದರಿಂದಲೇ ಎಲ್ಲಾ ಮಾತುಗಳು ಮತ್ತು ರೂಪಗಳು ದೈವಿಕ ಆಜ್ಞೆಗಳ ಸಾಕ್ಷಾತ್ಕಾರಗಳಷ್ಟೇ.

ಕೃಪೆ: Renovatio
ಲೇ: ವಿಲ್ಯಂ ಚಿಟಿಕ್
ಕನ್ನಡಕ್ಕೆ : ಸ್ವಾದಿಖ್ ಬೆಳಾಲ್


William Chittick

ಕನಸಿನಲ್ಲಿ ನಡೆದ ವಿಧಿ

ಕನಸುಗಳಿಗೆ ನಮ್ಮ ಜೀವನದ ಬಗ್ಗೆ ಮುನ್ಸೂಚನೆ ನೀಡುವ ಮತ್ತು ಅಜ್ಞಾತ ಹಾಗೂ ಅಂತರ್ಗತವಾಗಿರುವುದನ್ನೂ ಬಹಿರಂಗಪಡಿಸುವ ಸಾಮರ್ಥ್ಯ ಇದೆ. ಅವು ಭವಿಷ್ಯವನ್ನು ನೋಡುವ ನಮ್ಮ ಮನಸ್ಸಿನ ನಿಗೂಢ ಶಕ್ತಿಯನ್ನು ಪ್ರತಿನಿಧಿಸುತ್ತವೆ. ನಾವು ಕನಸಿನಲ್ಲಿ ಕಂಡ ಘಟನೆಗಳು ನೀಡುವ ಸೂಚನೆಗಳು ನಮ್ಮ ಜೀವನದಲ್ಲಿ ಬೀರುವ ಪರಿಣಾಮಗಳಿಂದಾಗಿ ಕನಸುಗಳು ಭವಿಷ್ಯದ ಕೈಪಿಡಿಯಂತೆ ಕೆಲಸ ಮಾಡುತ್ತವೆ, ಭವಿಷ್ಯದ ಘಟನೆಗಳ ಸಂಕೇತವನ್ನು ಮೊದಲೇ ನೀಡುವ ವೇದಿಕೆಯಂತೆ ವರ್ತಿಸುತ್ತವೆ ಎಂದು ಹೇಳುತ್ತೇವೆ.

ಎರಡೂ ಲೋಕಗಳನ್ನು ಸಂಯೋಜಿಸಿದರೆ, ಕನಸಿನ ಲೋಕವು ಎಚ್ಚರದ ಲೋಕಕ್ಕಿಂತ ಮೊದಲು ಇರುತ್ತದೆ ಎಂಬ ಸಾಮಾನ್ಯ ಪ್ರಮೇಯ ಸ್ವಪ್ನ ವ್ಯಾಖ್ಯಾನ ಶಾಸ್ತ್ರದಲ್ಲಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಕನಸುಗಳು ನಿಜಜೀವನವನ್ನು ಮೀರುವ ಮತ್ತು ಕಾಲಗಣನೆಯನ್ನು ತಲೆಕೆಳಗಾಗಿಸುವ ಉದಾಹರಣೆಯೊಂದು 12ನೇ ಶತಮಾನದ ಸೂಫಿವರ್ಯರಾದ ಅಬ್ದುಲ್‌ ಖಾದಿರ್ ಜೀಲಾನಿಯವರ ‘ಬಹ್ಜತುಲ್ ಅಸ್ರಾರ್’ನಲ್ಲಿ ಉಲ್ಲೇಖಗೊಂಡಿದೆ.

ಒಮ್ಮೆ,  ಅಬೂ ಮುಜಾಫರ್ ಎಂಬ ವ್ಯಾಪಾರಿಯು ತನ್ನ ವರ್ತಕ ಸಂಘದೊಂದಿಗೆ ಸಿರಿಯಾಕ್ಕೆ ಭೇಟಿ ನೀಡಲು ಯೋಜಿಸಿದ್ದರು.  ಪ್ರಯಾಣದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡ ಬಳಿಕ, ಅವರು ತಮ್ಮ ಸ್ನೇಹಿತ ಶೇಖ್ ಹಮ್ಮಾದ್ ರವರನ್ನು ಭೇಟಿಯಾಗಿ ತಮ್ಮ ಯೋಜನೆಗಳನ್ನು ತಿಳಿಸಿ,  ಸುರಕ್ಷಿತವಾಗಿ ಹಿಂದಿರುಗಲು ಶೇಖ್‌ರೊಂದಿಗೆ ಪ್ರಾರ್ಥಿಸುವಂತೆ ಕೋರಿದರು. ಇತರ ಸಂದರ್ಶಕರು ಶೇಖ್ ಹಮ್ಮಾದ್‌‌ರ ಬಳಿ ಇದ್ದಿದ್ದರಿಂದ ಅವರು ಹೊರಡುವವರೆಗೆ ಕಾಯಲು ಅಬು ಮುಜಾಫರ್ ಗೆ ಸೂಚಿಸುತ್ತಾರೆ. ಎಲ್ಲರೂ ಹೋದ ಬಳಿಕ ಕೇವಲ ಇಬ್ಬರು ಮಾತ್ರ ಇದ್ದಾಗ ಶೇಖ್ ಹಮ್ಮಾದ್‌ರವರು ಪ್ರಯಾಣವನ್ನು ಮುಂದೂಡಲು ಅಬೂ ಮುಜಾಫರ್‌ಗರ ಸಲಹೆಯನ್ನು ನೀಡುತ್ತಾರೆ.

“ಆದರೆ, ಸರಕುಗಳಿಗೆ ಬಂಡವಾಳ ಹೂಡಿಯಾಗಿದೆ, ಈ ಪ್ರಯಾಣಕ್ಕಾಗಿ ಸಕಲ ಸಜ್ಜು ನಡೆದಿದೆ. ಅಲ್ಲದೆ, ಈ ಯಾತ್ರೆಯು ಹಲವು ಶ್ರೀಮಂತ ವರ್ತಕರನ್ನು ಪರಿಚಯಿಸಲಿದೆ. ಹಾಗಾಗಿ, ದಿನ ಬಿಟ್ಟು ಒಂದು ಘಳಿಗೆಯನ್ನೂ ತಡ ಮಾಡುವಂತಿಲ್ಲ.” ಎಂದು ವರ್ತಕರಾದ ಅಬೂ ಮುಜಾಫರ್ ತಮ್ಮ ಆತಂಕವನ್ನು ಭಿನ್ನವಿಸುತ್ತಾರೆ.

ಪ್ರಯಾಣವನ್ನು ರದ್ದುಗೊಳಿಸಲೇಬೇಕು ಎಂದು ಹೇಳಿದ ಶೇಖ್ ಹಮ್ಮಾದ್ ಅವರು, ಈ ಯಾತ್ರೆಯಿಂದ ಅಬೂ ಮುಜಾಫರ್‌ ಎದುರಿಸಬಹುದಾದ ಘೋರ ಪರಿಣಾಮವನ್ನು ಎಚ್ಚರಿಸುತ್ತಾರೆ. ಪ್ರಯಾಣದ ಸಮಯದಲ್ಲಿ ಡಕಾಯಿತರಿಂದ ದರೋಡೆಗೊಳಗಾಗಿ ಅಬೂ ಮುಜಾಫರ್ ಕೊಲ್ಲಲ್ಪಡುತ್ತಾರೆ ಎಂದು ಹೇಳುತ್ತಾರೆ. ಅದು ತಮ್ಮ ರಹಸ್ಯ ಶಕ್ತಿಗಳ ಮೂಲಕ ಶೇಖ್ ಹಮ್ಮಾದ್ ಅವರಿಗೆ ಬಹಿರಂಗವಾದ ಭವಿಷ್ಯವಾಗಿತ್ತು.

ವ್ಯಾಪಾರಿ ಅಬು ಮುಜಾಫರ್ ಅವರು ಅಲ್ಲಿಂದ ಗೊಂದಲದ ಮನಸ್ಸಿನಿಂದ ಹಿಂದಿರುಗುತ್ತಿದ್ದಾಗ, ದಾರಿಯಲ್ಲಿ ಅಬ್ದುಲ್ ಖಾದಿರ್ ಜೀಲಾನಿಯವರು ಎದುರಾಗುತ್ತಾರೆ. ವರ್ತಕನ ಮುಖದ ಮೇಲಿನ ಆತಂಕವನ್ನು ಕಂಡು ಜೀಲಾನಿ ಅದಕ್ಕೆ ಕಾರಣವನ್ನು ಕೇಳುತ್ತಾರೆ.  ಶೇಖ್ ಹಮ್ಮಾದ್ ಅವರ ಭವಿಷ್ಯವಾಣಿಯ ಬಗ್ಗೆ ಅಬೂ ಮುಜಾಫರ್ ಅವರು ಜೀಲಾನಿ ಗುರುವಿಗೆ ತಿಳಿಸುತ್ತಾರೆ‌. ಜೊತೆಗೆ  ತನ್ನ ಯಾತ್ರೆಗೆ ಇರುವ ನಿಷೇಧವನ್ನೂ ವಿವರಿಸುತ್ತಾರೆ. ಇದನ್ನೆಲ್ಲಾ ಕೇಳಿದ ಜೀಲಾನಿ, ಏನನ್ನೂ ಚಿಂತಿಸದೆ, ನಿರಾಳ ಮನಸ್ಸಿನಿಂದ ಪ್ರಯಾಣಕ್ಕೆ ಹೊರಡಲು ಹೇಳಿ, ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆಯನ್ನು ಸಹ ನೀಡುತ್ತಾರೆ.

ವರ್ತಕ ಜೀಲಾನಿಯ ಸಲಹೆಯನ್ನು ಅನುಸರಿಸಿ, ಅವರು ಮೊದಲೇ ಯೋಜಿಸಿದಂತೆ ಸಿರಿಯಾಕ್ಕೆ ಹೊರಡುತ್ತಾರೆ.  ಪ್ರಯಾಣದ ಸಮಯದಲ್ಲಿ ವ್ಯಾಪಾರಿ ತನ್ನ ವ್ಯಾಪಾರಕ್ಕಾಗಿ ಉಪಯುಕ್ತ ಸಂಪರ್ಕಗಳನ್ನು ಮಾಡಿ, ತಮ್ಮ ಸರಕುಗಳ ಖರೀದಿದಾರರನ್ನು ಕಂಡುಕೊಂಡು ಉತ್ತಮ ಲಾಭವನ್ನು ಗಳಿಸುತ್ತಾರೆ. ಅಂತಿಮವಾಗಿ, ವರ್ತಕರ ಸಂಘವು ತನ್ನ ಹಿಂದಿರುಗುವ ಪ್ರಯಾಣವನ್ನು ಪ್ರಾರಂಭಿಸಿತ್ತು.  ಅದು ಅಲೆಪ್ಪೊವನ್ನು ತಲುಪುತ್ತಿದ್ದಂತೆ, ಅಬು ಮುಜಾಫರ್ ತನ್ನ ಚಿನ್ನದ ನಾಣ್ಯಗಳ ಚೀಲ ಇಟ್ಟ ಸ್ಥಳ ತಿಳಿಯದಂತಾಯಿತು. ಎಷ್ಟೇ ಹುಡುಕಿದರೂ ಪರ್ಸ್ ಸಿಗಲಿಲ್ಲ, ಮಾತ್ರವಲ್ಲ  ಸಿಡಿಮಿಡಿ  ಮನಸ್ಸಿನಿಂದಲೇ ನಿದ್ದೆ ಹೋಗುತ್ತಾರೆ.

ಆದರೆ, ತಮ್ಮ ವರ್ತಕ ಸಂಘವನ್ನು ದರೋಡೆಕೋರರು ದಾಳಿ ಮಾಡಿ ದೋಚುವ ಕನಸು ಅವರಿಗೆ ಬೀಳುತ್ತದೆ. ಕನಸಿನಲ್ಲಿ ಬಂದ ದರೋಡೆಕೋರರು ಕ್ಯಾರವಾನ್‌ ಬಳಿಯಿದ್ದ ಶಸ್ತ್ರಸಜ್ಜಿತ ಕಾವಲುಗಾರರನ್ನು ಬಂಧಿಸಿದ್ದರು‌.  ಅಬೂ ಮುಜಾಫರ್ ಮತ್ತು ಇತರ ಕೆಲವು ವ್ಯಾಪಾರಿಗಳು ವೀರಾವೇಶದಿಂದ ಹೋರಾಡಿದರಾದರೂ, ದರೋಡೆಕೋರರು ದೊಡ್ಡ ಸಂಖ್ಯೆಯಲ್ಲಿದ್ದರು.

ಡಕಾಯಿತರಲ್ಲಿ ಒಬ್ಬ ತನ್ನ ಕತ್ತಿಗೆ ಇರಿಯುತ್ತಿರುವಂತೆ ಭಯಭೀತಗೊಂಡ ಅಬೂ ಮುಜಾಫರ್ ದುಃಸ್ವಪ್ನದಿಂದ ಎಚ್ಚರಗೊಳ್ಳುತ್ತಾರೆ. ತಾವು ಜೀವಂತವಾಗಿ ಮತ್ತು ಸುರಕ್ಷಿತವಾಗಿದ್ದಂತೆ, ಚಿನ್ನದ ನಾಣ್ಯಗಳಿರುವ  ಪರ್ಸ್ ಎಲ್ಲಿಟ್ಟಿದ್ದೆ ಎಂಬುದು ಕೂಡಾ ಅವರ ನೆನಪಿಗೆ ಬರುತ್ತದೆ. ನಂತರ ಶೇಖ್ ಹಮ್ಮಾದ್ ಅವರು ವಿವರಿಸಿದ ಘಟನೆಯನ್ನು ನೆನಪಿಸಿ ಅಚ್ಚರಿಗೊಂಡ ಅಬೂ ಮುಜಾಫರ್, ಅದರ ಮಹತ್ವವನ್ನು ನೆನಪಿಸಿಕೊಳ್ಳುತ್ತಾರೆ.

ಅವರು ತಮ್ಮ ನಗರಕ್ಕೆ ಹಿಂದಿರುಗಿದಾಗ ಮೊದಲು ಶೇಖ್ ಹಮ್ಮಾದ್ ಅವರನ್ನು ಭೇಟಿಯಾಗಬೇಕೆ ಅಥವಾ ಅಬ್ದುಲ್ ಖಾದಿರ್ ಜೀಲಾನಿ ಅವರನ್ನು ಭೇಟಿಯಾಗಬೇಕೆ ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಹೆಚ್ಚಿಗೆ ಏನನ್ನೂ ಯೋಚಿಸದೆ ಅಬೂ ಮುಜಾಫರ್ ಬಜಾರ್‌ನಲ್ಲಿರುವ ಹಮ್ಮಾದ್ ಅವರ ಬಳಿಗೆ ಓಡಿ ಬರುತ್ತಾರೆ. ಆದರೆ, ಕನಿಷ್ಠ ಆಶ್ಚರ್ಯವನ್ನು ಕೂಡಾ ತೋರಿಸದ ಶೇಖ್ ಹಮ್ಮದ್ ಅವರು ಮುಜಾಫರ್ ರನ್ನು ಸ್ವಾಗತಿಸುತ್ತಾರೆ. 

ಭವಿಷ್ಯವಾಣಿಯ ಬಗ್ಗೆ ಮುಜಾಫರ್ ಅವರು ಕೇಳಿದಾಗ, ಅಬೂ ಮುಜಾಫರ್‌ಗೆ ಉದ್ದೇಶಿಸಿರುವುದನ್ನು ತಾನು ಕಂಡಿದ್ದೆ, ಹಾಗಾಗಿ ಅದು ಸಂಭವಿಸುತ್ತದೆ ಎಂದು ಹೇಳಿರುವುದಾಗಿ ಅವರು ತಿಳಿಸುತ್ತಾರೆ. ಆದರೆ ನಿಮಗೆ 70 ಬಾರಿ ಪ್ರಾರ್ಥಿಸುವ ಮೂಲಕ ಆ ದುರಂತವನ್ನು ಎಚ್ಚರದ ಪ್ರಪಂಚದಿಂದ ಕನಸುಗಳ ಜಗತ್ತಿಗೆ ಶೇಖ್ ಜೀಲಾನಿ ಅವರು ವರ್ಗಾಯಿಸಿ ಸುರಕ್ಷೆ ನೀಡಿದ್ದಾರೆ. ಹಾಗಾಗಿ, ಜೀಲಾನಿಯನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲು ವ್ಯಾಪಾರಿಗೆ ಶೇಖ್ ಹಮ್ಮಾದ್‌ ಅವರು ಸೂಚಿಸುತ್ತಾರೆ.

ಕನಸಿನ ಲೋಕದ ಮೇಲೆ ಎಚ್ಚರದಲ್ಲಿರುವಾಗಿನ ಜಗತ್ತು ಹೇಗೆ ತನ್ನ ಪ್ರಭಾವವನ್ನು ಬೀರುತ್ತದೆ ಮತ್ತು ಒಬ್ಬ ವ್ಯಕ್ತಿಯ ಕನಸಿನ ವ್ಯಾಪ್ತಿ ಇನ್ನೊಬ್ಬನ ಪ್ರಭಾವಕ್ಕೆ ಹೇಗೆ ತೆರೆದುಕೊಳ್ಳುತ್ತದೆ ಎಂಬ ಪ್ರಶ್ನೆಗಳು ಈ ದಂತಕತೆಯಲ್ಲಿನ ಜಿಜ್ಞಾಸೆ. ಕನಸಿನ ಜಗತ್ತು ಅಶುಭಕರ ವಿಧಿಯನ್ನು ಕೂಡಿ ಹಾಕಲು ಮತ್ತು ಅದನ್ನು ಪೂರ್ಣವಾಗಿ ಅನುಭವಿಸಲು ಸಾಧ್ಯವಾಗುವ ಸುರಕ್ಷಿತ ವಲಯ ಕೂಡಾ ಆಗಿದ್ದು ಬಹಳ ಆಸಕ್ತಿದಾಯಕವಾಗಿದೆ.

ಟಿಪ್ಪಣಿ:

  • 10-11 ಶತಮಾನದ ವಿದ್ವಾಂಸರಾಗಿರುವ ಶೇಖ್ ಅಬ್ದುಲ್ ಖಾದಿರ್ ಜೀಲಾನಿ ಅವರು ಜಾಗತಿಕವಾಗಿ ಜನಪ್ರೀತಿ ಪಡೆದ ಸೂಫಿವರ್ಯರೂ ಹೌದು. ಸ್ವರಚಿತ ಗ್ರಂಥಗಳಿಂದ ಅಕಾಡೆಮಿಕ್ ವಲಯದಲ್ಲೂ ಪರಿಣಾಮಕಾರಿ ಗುರುತು ಮೂಡಿಸಿರುವ ಶೇಖ್ ಜೀಲಾನಿಯವರ ಬಗ್ಗೆ ಹಲವಾರು ಸಾಹಿತ್ಯಗಳು ರೂಪುಗೊಂಡಿವೆ. ಅರಬ್ಬೀ ಮಲಯಾಳಂ ನಲ್ಲಿ ರಚನೆಯಾದ ‘ಮುಹಿಯುದ್ದೀನ್ ಮಾಲಾ’ ಶೇಖ್ ಜೀಲಾನಿಯವರ ಬಗ್ಗೆ ಬರೆದ ಕಾವ್ಯಕಥನವಾಗಿದ್ದು, ಈ ಗ್ರಂಥವು ಕರ್ನಾಟಕದ ಬ್ಯಾರಿ ಸಮುದಾಯದಲ್ಲೂ ಪವಿತ್ರ ಕೃತಿಯಂತೆ ಪರಿಗಣಿಸಲ್ಪಟ್ಟಿದೆ. ಕೇರಳದಲ್ಲಿ ಹಾಗೂ ಅರಬ್ಬಿ ಮಲಯಾಳಂ ಭಾಷೆಯಲ್ಲಿ ರಚನೆಯಾದ ಅತ್ಯಂತ ಹಳೆಯ ಕೃತಿ ಎಂಬ ಹೆಗ್ಗಳಿಕೆಯೂ ‘ಮುಹಿಯುದ್ದೀನ್ ಮಾಲಾ’ಗಿದೆ.
  • ಬಹ್ಜತುಲ್ ಅಸ್ರಾರ್ ಮತ್ತು ತಕ್ಮೀಲ್ ಶೈಖ್ ಜೀಲಾನಿಯವರ ಜೀವನ ಮತ್ತು ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ಬಂದಿರುವ ಗ್ರಂಥ. “ಅವರ್ ಚೊನ್ನಾ‌ ಬೈತಿನ್ನುಂ ಬಹ್ಜಾ ಕಿತಾಬಿನ್ನುಂ ಅಂಙೇನಾ ತಕ್ಮೀಲಾ ತನ್ನಿನ್ನುಂ ಕಂಡೋವರ್…” ಮುಹ್ಯಿದ್ದೀನ್ ಮಾಲಾ

ಲೇ: ಮುಶರ್ರಫ್‌ ಅಲಿ ಫಾರೂಖಿ
ಕನ್ನಡಕ್ಕೆ: ಫೈಝ್‌ ವಿಟ್ಲ
ಕೃಪೆ: ಲೈವ್‌ ಮಿಂಟ್


ಮುಶರ್ರಫ್‌ ಅಲಿ ಫಾರೂಖಿ

ಮಿಥ್ಯೆಗಳಿಂದ ತುಂಬಿದ ಲಕ್ಷದ್ವೀಪ ಇತಿಹಾಸ ಮತ್ತು ಸಾಹಿತ್ಯ

ಇತ್ತೀಚೆಗೆ ಲಕ್ಷದೀಪ ಚರಿತ್ರೆಯಾಧಾರಿತ ಕಾದಂಬರಿಯೊಂದನ್ನು ಓದಿದೆನು. ಲಕ್ಷದ್ವೀಪ ಇತಿಹಾಸದ ಭಾಗವಾದ ಬೀ ಕುಂಞೆ ಬೀಯವರ ಜೀವನಾಧಾರಿತ ಆ ಕಾದಂಬರಿಯು ಇನ್ನೇನು ಹೊರತರಬೇಕಿತ್ತಷ್ಟೆ. ಕಣ್ಣೂರು ಅರಕ್ಕಲ್ ರಾಜ್ಯಭಾರದ ಕ್ರೂರತೆಯನ್ನು ಕಟ್ಟಿಕೊಡುವ ಘಟನೆಯೊಂದನ್ನು ಕಾದಂಬರಿಯಲ್ಲಿ ವಿವರಿಸಲಾಗಿದೆ. ಅರಕ್ಕಲ್ ರಾಜನು ದ್ವೀಪ ನಿವಾಸಿಗಳಿಗೆ ಮಿತಿಮೀರಿದ ತೆರಿಗೆಯನ್ನು ಹೊರಿಸಿದ್ದನು. ಅಗತ್ತಿ ದ್ವೀಪದ ಮುಖ್ಯಸ್ಥ ಕುಂಞಹ್ಮದ್ ಇದನ್ನು ವಿರೋಧಿಸಿದರು. ತರುವಾಯ ಆದಾಯ ತೆರಿಗೆ ಸಂಗ್ರಹಕ್ಕಾಗಿ ಅರಕ್ಕಲ್ ಸೇನೆಯು ದ್ವೀಪಿಗೆ ಬಂದಿಳಿಯಿತು. ಮುಖ್ಯಸ್ಥನ ತೀರ್ಮಾಣವನ್ನು ಬದಲಾಯಿಸಲು ಪ್ರಯತ್ನಿಸಿದ ಸೇನೆಯು ವಿಫಲವಾಯಿತು. ಖಾಝಿಯಾಗಿದ್ದ ಕುಂಞಹ್ಮದ್ ಮುಸ್ಲಿಯಾರರು ತನ್ನ ನಿಲುವಿನಲ್ಲಿ ಅಚಲವಾಗಿ ನಿಂತರು. ದ್ವೀಪದ ಜನರ ಬವಣೆಗಳು ಅವರ ಮನದಾಳದಲ್ಲಿ ಆಳವಾಗಿ ಬೇರೂರಿದ್ದವು. ಇದನ್ನು ಸಹಿಸದ ಸೇನೆಯು ರಕ್ತದೋಕುಳಿಯನ್ನು ಹರಿಸಿತು. ಕುಂಞಹ್ಮದ್ ಅಮೀನ್ ಹಾಗೂ ಅವರ ಬಲಿಯ ಇಲ್ಲಮ್ ಮನೆ ಮಂದಿಯನ್ನು ವಧಿಸಲಾಯಿತು. ಇವೆಲ್ಲವನ್ನೂ ಕಂಡ ಬೀಕುಂಞೆ ಬೀ ಅಲ್ಲಿಂದ ಪಾರಾಗಿ ಪೂವತ್ತಿಯೋಡ್ ಎಂಬಲ್ಲಿ ಆಶ್ರಯ ಪಡೆದರು. ಪೂವತ್ತಿಯೋಡಿನ ಆಳು ಬೀಕುಂಞೆ ಬೀ ಇಲ್ಲಿರುವುದು ಸುರಕ್ಷಿತವಲ್ಲ ಎಂದರಿತು ಅವರನ್ನು ತೆಕ್ಕುಂತಾಲಿಯ ಗುಹೆಯನ್ನು ಹೋಲುವ ಕಂದಕವೊಂದರಲ್ಲಿ ಅಡಗಿಸಿದರು. ರಾತ್ರಿ ದೋಣಿಯೊಂದರಲ್ಲಿ ಅಮಿನಿ ದ್ವೀಪಿಗೆ ಕರೆತಂದು ಕಡ್ಕಯಂ ಎಂಬ ಮನೆಯಲ್ಲಿ ವಸತಿ ಸೌಕರ್ಯ ಒದಗಿಸಿದರು ಮತ್ತು ಅಲ್ಲಿನ ಒಬ್ಬರನ್ನು ಲಗ್ನವಾದರು ಎಂದಾಗಿದೆ ಚರಿತ್ರೆ. ಬರಹಗಾರನು ತನ್ನ ಭಾವನೆಗೆ ಅನುಸಾರವಾಗಿ ಕಾದಂಬರಿಯನ್ನು ಮುಂದುವರಿಸಿದ್ದಾರೆ. ಕಾದಂಬರಿಯು ಭಾವನೆ, ಚರಿತ್ರೆ, ಬರಹಗಾರನ ಆಶಯಗಳು ಜೊತೆಗೂಡಿ ಒಂದು ಆಸ್ವಾದ್ಯಕರ ಪುಸ್ತಕವಾಗಿ ಬಿಡುಗಡೆಯಾಗುತ್ತದೆ.

ಅಮಿನಿ ದ್ವೀಪಿನ ಪುರಕೋಟ್ ಓಮನಪೂವರ ಇದೇ ರೀತಿಯ ಮತ್ತೊಂದು ಚರಿತ್ರೆಯಿದೆ. ಓಮನಪೂವ್ ಊರಿನ ಹಿರಿಯ ಮುಖ್ಯಸ್ಥನಾದ ತನ್ನ ಪತಿ ಕುಟ್ಟಿತ್ತರವಾಡರೊಂದಿಗೆ ಸಂತುಷ್ಟ ಜೀವನ ನಡೆಸುತ್ತಿದ್ದರು. ಆ ವೇಳೆಗೆ ಅರಕ್ಕಲ್ ಆಲಿ ರಾಜರ ಪತ್ನಿಯು ತೀರಿಕೊಳ್ಳುತ್ತಾರೆ. ಪತ್ನಿಯೊಬ್ಬಳಿಗಾಗಿ ಹುಡುಕಾಟದಲ್ಲಿದ್ದ ಆಲಿ ರಾಜರಿಗೆ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಅತಿ ಸುಂದರಿಯಾದ ಹೆಣ್ಣೋರ್ವಳು ಇರುವುದಾಗಿ ತಿಳಿದುಬರುತ್ತದೆ. ರಾಜರ ಇಂಗಿತಕ್ಕೆ ಓಮನಪೂವ್ ವಿಸಮ್ಮತಿ ಸೂಚಿಸುತ್ತಾರೆ. ಕೊನೆಗೆ ಅರಕ್ಕಲ್ ಸೇನೆಯು ಧಾವಿಸಿ ಓಮನ ಪೂವನ್ನು ಕಣ್ಣೂರಿನ ಅರಮನೆಗೆ ಕೊಂಡೊಯ್ಯುತ್ತದೆ. ಓಮನಪೂವಿನೊಂದಿಗೆ ಅರಮನೆಗೆ ತೆರಳಿದ್ದ ಪತಿ ಕುಟ್ಟಿತ್ತರವಾಡ ಅರಮನೆಯಲ್ಲಿ ವಿವಾಹವನ್ನು ವಿಚ್ಚೇದಿಸಿದ ಬಳಿಕ ರಾಜನು ಓಮನಪೂವನ್ನು ವಿವಾಹವಾಗುತ್ತಾನೆ. ಈ ಘಟನೆಗೆ ಯಾವುದೇ ಪುರಾವೆಗಳೂ ಇಲ್ಲ ಎಂದು ಅರಕ್ಕಲ್ ಮನೆತನವು ಇದನ್ನು ಅಲ್ಲಗಳೆದಿದೆ.

ಕಲ್ಪೇನಿ ದ್ವೀಪಿನ ಸಾಣಂಕದಿಯಾ ಎಂಬ ಸುಂದರಿಯನ್ನು ಕಡಲ್ಗಳ್ಳನು ಅಪಹರಿಸಿದನು ಎಂಬ ಕಥೆಯು ಪ್ರಚಾರದಲ್ಲಿದ್ದರೂ ದಾಖಲೆಗಳಿಲ್ಲ. ಅಮಿನಿಯಲ್ಲಿ ಕ್ರೂರತೆಯನ್ನು ಮೆರೆದ ಬ್ರಿಟೀಷ್ ಸೇನೆಗೆ ತಂತ್ರಪೂರ್ವಕವಾಗಿ ವಿಷವುಣಿಸಿದ ಘಟನೆ, ಚೆತ್ತ್ಲಾತ್ತ್ ದ್ವೀಪಿನ ಆಶಿ ಆಲಿ ಅಹ್ಮದ್ ಶುಹದಾ ಹೋರಾಟಗಳು, ಆಕ್ರಮಿಸಲು ಬಂದ ಅರಕ್ಕಲ್ ಸೇನೆಯನ್ನು ಕಟ್ಟಿಹಾಕಿ ಶ್ರೀರಂಗಪಟ್ಟಣದ ಟಿಪ್ಪುವಿಗೆ ಒಪ್ಪಿಸಿ ಅರಕ್ಕಲ್ ರಾಜರಿಂದ ಮುಕ್ತಿಯನ್ನು ದೊರಕಿಸಬೇಕೆಂದು ಬೇಡಿದ ಅಮಿನಿಯ ಯೋಧರ ಸಾಹಸ ಇತ್ಯಾದಿ ಹೋರಾಟಗಳು ಮತ್ತು ಚಳುವಳಿಗಳು ಸ್ಪಷ್ಟವಾದ ದಾಖಲೆಗಳಿಲ್ಲದ ಕಾರಣ ಹೊಸ ತಲೆಮಾರಿಗೆ ಚರಿತ್ರೆಗಳು ಐತಿಹ್ಯವೆಂಬಂತಾಗಿದೆ.

ದ್ವೀಪಿನ ಜನಜೀವನ ಮತ್ತು ಚರಿತ್ರೆಗಳೆಲ್ಲವೂ ಜಾನಪದ ಸಾಹಿತ್ಯಗಳಲ್ಲಿ ಬಹಳ ಅಚ್ಚುಕಟ್ಟಾಗಿ ದಾಖಲಿಸಲಾಗಿವೆ. ಬಾಯಿ ಮಾತು ಮುಖಾಂತರ ಪ್ರಚಾರದಲ್ಲಿರುವ ಚರಿತ್ರೆ ಹಾಡುಗಳು ಶೇಖರಿಸಲ್ಪಟ್ಟಿದ್ದರೂ ಇನ್ನೂ ಹಲವಾರು ಜಾನಪದ ಹಾಡುಗಳು ಮತ್ತು ಸಾಹಿತ್ಯ ರಚನೆಗಳು ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವೈಯುಕ್ತಿಕವಾದ ಪ್ರಯತ್ನಗಳು ನಡೆದಿದೆಯಷ್ಟೆ. ಸರ್ಕಾರಗಳು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಗೇಕಿದೆ.

ಇಸ್ಲಾಮ್ ಧರ್ಮ ಸ್ವೀಕಾರದ ಕುರಿತಾದ ಚರಿತ್ರೆಯೂ ಇದಕ್ಕೆ ಹೊರತಾಗಿಲ್ಲ. ದ್ವೀಪಿನಲ್ಲಿ ಇಸ್ಲಾಮ್ ಧರ್ಮ ಪ್ರಚಾರಪಡಿಸಿದ್ದು ಪ್ರಥಮ ಖಲೀಫಾ ಅಬೂಬಕರ್ ಸಿದ್ದೀಖರ ಪೌತ್ರ ಉಬೈದುಲ್ಲಾರಾಗಿದ್ದಾರೆ ಎಂದಾಗಿದೆ ಅಲ್ಲಿನ ಬಹುತೇಕರ ನಂಬಿಕೆ.ಆಂದ್ರೋತ್ ಮಸೀದಿಯಲ್ಲಿ ಅವರ ಹೆಸರಿನಲ್ಲಿರುವ ಗೋರಿ ಮತ್ತು ಅವರು ಕಟ್ಟಿಸಿದ ಮಸೀದಿ ಹಾಗೂ ಮನೆಯಿದೆ. ಇಲ್ಲಿನ ಶೇಕಡಾ ನೂರರಷ್ಟು ಜನರು ಮುಸ್ಲಿಮರೆಂಬುವುದು ಗಮನಾರ್ಹ ಸಂಗತಿ. ಈ ವಿಷಯಗಳಲ್ಲಿ ಅಧ್ಯಯನ ನಡೆಸಬೇಕಾದ ಅನಿವಾರ್ಯತೆಯಿದೆ.

ದಮನಿತರು ಸಾಹಿತ್ಯದ ಮುಖಾಂತರ ಪ್ರತಿರೋಧ ಒಡ್ದುವುದನ್ನು ಕೂಡಾ ನಮಗೆ ಕಾಣಬಹುದು. ಓಮನಪೂವರ ಜಾನಪದ ಹಾಡಿನಲ್ಲಿ ಆಲಿ ರಾಜನು ಓಮನ ಪೂವಿನೊಂದಿಗೆ ಕೇಳುತ್ತಾನೆ “ಞಾನ್ ನನ್ನೋ ಕುಟ್ಟಿತ್ತನವಾ ನನ್ನೋ ಪೂವೇ? ಪೊನ್ನುಂ ಫಂಡುಂ ಎಲ್ಲಾಂ ಉಳ್ಳೋನಾನೆಂಗಿಲುಂ ಕುಟ್ಟಿತ್ತರವಾ ಅಝಗಿನು ಪೋರಾ” ಎಂದು ಓಮನ ಪೂವ್ ಜವಾಬಿತ್ತರು. ಹೀಗೆ ರಾಜನ ಪ್ರಶ್ನೆಗಳಿಗೆ ಓಮನ ಪೂವರ ಪ್ರತಿಕ್ರಿಯೆ ಒಂದು ರೀತಿಯ ಪ್ರತಿರೋಧವಾಗಿತ್ತು. “ನಾಂ ನನ್ನೋ ಕುಟ್ಟಿತ್ತರವಾ ನನ್ನೋ ಪೂವೇ? ಆದಿಲಾಯವಿನ ಕೆಟ್ಟುಂ ಮಾಳಿಗಯುಂ ಕುಟ್ಟಿತ್ತರವಾ ಚೆಟ್ಟಕ್ಕುಂ ಪೋರಾ. ನಾಂ ನನ್ನೋ ಕುಟ್ಟಿತ್ತರವಾ ನನ್ನೋ ಪೂವೇ? ಆದಿಲಾಯಾವಿನೆ ಆನಯ ಕೂಟಂ ಕುಟ್ಟಿತ್ತರವಾ ಕೋಳಿಕ್ಕುಂ ಪೋರಾ. ನಾಂ ನನ್ನೋ ಕುಟ್ಟಿತ್ತರವಾ ನನ್ನೋ ಪೂವೇ? ಆದಿಲಾಯವಿನ ಕುತ್ತಿಚ್ಚೇರ್ ಕುಟ್ಟಿತ್ತರವಾ ಚಾಯಕ್ಕುಂ ಪೋರಾ.”

ಅಂದು ಓಮನಪೂವ್ ಏಕಾಧಿಪತ್ಯಕ್ಕೆ ವಿರುದ್ಧವಾಗಿ ನೀಡಿದ ಹೇಳಿಕೆಗಳು ಇಂದಿಗೂ ಅಧಿಕಾರಿಗಳ ವಿರುದ್ಧ ದ್ವೀಪ ನಿವಾಸಿಗಳು ಪುನರುಚ್ಚಿಸುತ್ತಿರು ವರು. ಬೀಕುಂಞೆ ಬೀಯನ್ನು ಬಚ್ಚಿಟ್ಟು ಕಾಪಾಡಿದ ಬೀಕುಂಞೆ ಪಾರ ಮತ್ತು ಅವರ ಕುಟುಂಬದ ಹತ್ಯೆಗೈದು ಬಲಿಯ ಇಲ್ಲಿತ್ತಿಲಾವಳಿ ಕಡಲಿಗೆ ಹರಿಸಿದ ರಕ್ತವು ಇಂದಿಗೂ ದ್ವೀಪಿನ ಚರಿತ್ರೆ ಸ್ಮರಣೆಯಾಗಿ ಉಳಿದಿದೆ.

ಅರಕ್ಕಲ್ ಸೇನೆಯನ್ನು ಕಟ್ಟಿಹಾಕಿ ಟಿಪ್ಪುವಿನ ಮುಂದೆ ಹಾಜರುಪಡಿಸಿದ ಧೀರ ಯೋಧರ ಚರಿತ್ರೆಯ ಕುರುಹೆಂಬಂತೆ ದ್ವೀಪಿನ ಉತ್ತರ ಭಾಗದ ಉತ್ತರಾಧಿಕಾರ ಮತ್ತು ಆಡಳಿತ ವಿಷಯಗಳಲ್ಲಿ ಮೈಸೂರು ಆಡಳಿತದ ಅವಶೇಷಗಳನ್ನು ಕಾಣಬಹುದಾಗಿದೆ. ದ್ವೀಪಿನ ಜಾನಪದ ಸಾಹಿತ್ಯದಲ್ಲಿ ಉತ್ತರದ ಹಾಡುಗಳ ಸ್ವಾಧೀನವು ಕಂಡುಬರುತ್ತಿದೆ. ಆದರೆ ಭೌಗೋಳಿಕವಾದ ಒಂಟಿತನ ಮತ್ತು ದ್ವೀಪಿನ ಪ್ರಾದೇಶಿಕ ಭಾಷೆಯ ಪ್ರಭಾವದಿಂದಾಗಿ ಅಲ್ಲಿನ ಸಾಹಿತ್ಯ ವಿನ್ಯಾಸಗಳು ವ್ಯತಿರಿಕ್ತವಾದ ಅನುಭವವನ್ನು ನೀಡುತ್ತದೆ.

“ಅನ್ನಬಿಡ್ ಇನ್ನಬಿಡ್ ಏಗುಣಿಸಾ
ಕರೈ ನಿನ್ನವನೋಡ್ ಪರೈಗುಣಿಸಾ”
ಎಂದು ಪ್ರಾರಂಭವಾಗುವ ಹಾಡು ದ್ವೀಪಿನ ಬಹಳ ಸ್ವಾರಸ್ಯಕರವಾದ ಹಾಡುಗಳಲ್ಲೊಂದಾಗಿದೆ. ಮೀನು ಮತ್ತು ಮೀನಿನ ಗಾಳದ ನಡುವಿನ ಸಂಭಾಷಣೆಯಾಗಿದೆ ಈ ಹಾಡಿನ ಹೂರಣ.

ಮೀನು ನನ್ನನ್ನು ಬಿಟ್ಟು ಬಿಡಬೇಕೆಂದು ಗಾಳದೊಂದಿಗೆ ಭಿನ್ನವಿಸುತ್ತದೆ. ಪ್ರತ್ಯುತ್ತರವಾಗಿ ಗಾಳವು ” ನನ್ನೊಂದಿಗೆ ಕೇಳಿಕೊಳ್ಳುವುದರಲ್ಲಿ ಪ್ರಯೋಜನವಿಲ್ಲ, ದಡದಲ್ಲಿರುವ ವ್ಯಕ್ತಿಯೊಂದಿಗೆ ಕೇಳಿಕೋ” ಎಂದಿತು. ಮೀನು ಮತ್ತು ಮೀನುಗಾರರ ನಡುವಿನ ಮಾತುಕತೆಗಳು, ಕಡಲಿನೊಂದಿಗಿರುವ ಸಂಬಂಧ ಇವೆಲ್ಲವೂ ಇನ್ನಿತರ ಪ್ರದೇಶಗಳ ಮೀನುಗಾರರಿಗಿಂತಲೂ ಬಹಳ ಗಾಢವಾಗಿದೆ. ದ್ವೀಪಿನ ಮೀನುಗಾರರು ತಮ್ಮ ಸ್ನೇಹಿತರನ್ನು ಏಕ ವಚನದಲ್ಲಿ ಸಂಭೋಧಿಸುವಂತೆ ಕಡಲು ಹಾಗೂ ಮೀನುಗಳೊಂದಿಗೆ ಮಾತಿಗಿಳಿಯುತ್ತಾರೆ. ಅಷ್ಟಪಾದಿ (octopus) ನೀರಾ ಕುಡಿಯಲು ಬರುವುದನ್ನು ವಾಸ್ತವಿಕತೆಗೆ ಸಮೀಕರಿಸಿ ವಿವರಿಸಲಾಗಿದೆ. ಜಾನಪದ ಹಾಡುಗಳಲ್ಲಿ ಚರಿತ್ರೆಯಾಧಾರಿತ ವಿಷಯಗಳನ್ನೂ ಕಾಣಬಹುದು. ಕಿಲ್ತಾನ್ ದ್ವೀಪಿನ ವಲಸೆಯ ಕುರಿತಾದ ವಿವರಣೆಗಳು ಈ ರೀತಿಯಾಗಿ ಜಾನಪದ ಹಾಡಿನಿಂದ ಲಭಿಸಿದ್ದಾಗಿದೆ. “ಎಲ್ಲಾವರುಂ ಕಾಟ್ಟಿಂಡಿಂಡಿಡುಂ ತೋಟಿಂಡಿಂ ಬನ್ನ ಪೋಕರ್ಕದಿಯಾ ಮುರಟ್ಟಿಂಡುಂ ಬನ್ನ” ಎಂದಾಗಿದೆ ಆ ಗೆರೆಗಳು. ಪೋಕರ್ ಕದಿಯಾ ಎಂಬ ಮಹಿಳೆ ಕಿಲ್ತಾನ್ ದ್ವೀಪಿನ ಮೂಲ ನಿವಾಸಿಯೂ, ಉಳಿದೆಲ್ಲರೂ ವಲಸಿಗರಾಗಿ ಬಂದವರು ಎಂದಾಗಿದೆ ಸಾರಾಂಶ.

ದ್ವೀಪ ನಿವಾಸಿಗಳ ಜೀವನದಲ್ಲೆಂಬಂತೆ ಸಾಹಿತ್ಯದಲ್ಲೂ ಸೂಫಿಗಳ ಪ್ರಭಾವವಿದೆ. ಸಾಹಿತ್ಯ ಕೃತಿಗಳು ‘ಕಲ್ವೈರ ಮಾಲೆ’ ಮತ್ತು ‘ಕೋಲ ಸಿರಿಮಾಲೆ ‘ ಯಾಗಿದೆ ಲಭ್ಯವಿರುವ ಅತೀ ಪುರಾತನವಾದ ಎರಡು ಸಾಹಿತ್ಯ ಕೃತಿಗಳು. ಸುಮಾರು 300 ವರ್ಷಗಳ ಇತಿಹಾಸವಿರುವ ಈ ಎರಡು ಕೃತಿಗಳು ಆಧ್ಯಾತ್ಮಿಕತೆಯ ವಿಷಯಗಳನ್ನೊಳಗೊಂಡಿವೆ. ಈ ಎರಡು ಕೃತಿಗಳ ಕರ್ತೃಗಳಾದ ಬಲಿಯ ಇಲ್ಲಂ ಪಳ್ಳಿಕೋ ಎಂಬ ಅಹ್ಮದ್ ಮುಸ್ಲಿಯಾರ್ ಹಾಗೂ ಅಹ್ಮದ್ ನಖ್ಶಬಂದಿ ಎಂದು ಖ್ಯಾತರಾದ ಕಿಳುತ್ತನ್ ತಂಗಳ್ ಇಬ್ಬರೂ ಕೂಡಾ ಸೂಫಿಗಳಾಗಿದ್ದರು. ಪಳ್ಳಿಕೋ ಮಕ್ಕಾಗೆ ತೆರಳಿ ಚೀರ್ವನಿ ತ್ವರೀಖತಿಗೆ ಸೇರಿ ಅಲ್ಲಿಯೇ ಮರಣಹೊಂದಿದರು. ಅಹ್ಮದ್ ನಖ್ಶಬಂದಿ ನಖ್ಶಬಂದಿ ತ್ವರೀಖತ್ ಸ್ವೀಕರಿಸಿ ಅಮಿನಿ ದ್ವೀಪಿನಲ್ಲಿ ಇಹಲೋಕ ತ್ಯಜಿಸಿದರು.

ಒಬ್ಬನಿಗೆ ಪ್ರೀತಿಸಲು ಇಬ್ಬರು ಸುಂದರಿಗಳಿರುವರು. ಬೇಲತ್ತಿ ಹಾಗೂ ಬಾಲತ್ತಿ. ಬೇಲತ್ತಿ ಎಂದರೆ ಕೆಲಸದಾಳು. ಬಾಲತ್ತಿ ಸುಂದರಿಯಾದ ತರುಣಿ. ಆತ್ಮವನ್ನು ಸುಂದರಿಯಾದ ಪ್ರೇಯಸಿಗೆ ಮತ್ತು ಶರೀರ ವಾಂಛೆಗಳನ್ನು ಬಡ್ಕತಿ ಕಸರ್ಮಂಡಕದಲ್ಲಿರುವ ಸುಂದರಿಯ ಕೆಲಸದಾಳಾಗಿಯೂ ಕೋಲಸಿರಿಮಾಲೆಯಲ್ಲಿ ಹೋಲಿಸಲಾಗಿದೆ. ” ಹೈರಾಯ ಬೀವಿನೆ ಪಿಡಿಚೋರೆಲ್ಲಾಮ್ ಖೇದಿಚ್ಚ್ ಕೈ ಕಡಿಚ್ಚಾನ್ಡ್ ಪೋವುಮ್ ” ಎಂಬ ಗೆರೆಗಳ ಮೂಲಕ ಕೆಲಸದಾಳುವಿನ ಹಿಂದೆ ಹೋದವರೆಲ್ಲರೂ ಅಪಾಯಕ್ಕೆ ಸಿಲುಕಿ ಮೃತರಾಗುವರು ಎಂದು ತಿಳಿಸಲಾಗಿದೆ. ಕೋಲ ಸಿರಿಮಾಲೆಯ ವಿಶೇಷತೆ ಬಾಯಿಮಾತಿನಿಂದ ಪ್ರಚಲಿತದಲ್ಲಿರುವ ವಿಷಯಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಬಹಳ ಸೊಗಸಾಗಿ ವಿವರಿಸಲಾಗಿದೆ. ದ್ವೀಪಿನ ಜಾನಪದ ಹಾಡುಗಳಲ್ಲಿ ಕೂಡಾ ಈ ರೀತಿಯ ಪ್ರಾದೇಶಿಕ ಭಾಷೆಯ ಬಳಕೆ ಕಾಣಲಸಾಧ್ಯ.

ನಾನು ನನ್ನ ಊರಿನ ಸಾಹಿತ್ಯ ಪರಂಪರೆಯ ಕುರಿತು ಅಧ್ಯಯನ ನಡೆಸಿದಾಗ ದೊರಕಿದ ಸಾಕ್ಷ್ಯಾಧಾರಗಳ ಪ್ರಕಾರ ಬಲಿಯ ಇಲ್ಲಂ ಪಳ್ಳಿಕೋಯ ಮತ್ತು ಅಹ್ಮದ್ ನಖ್ಶಬಂದಿಯವರ ಕಾಲದ ಬಳಿಕ ಎಲ್ಲಾ ತಲೆಮಾರುಗಳಲ್ಲಿಯೂ ಸುಮಾರು 10ರಷ್ಟು ಬರಹಗಾರರಿದ್ದರು. ಕೇವಲ ಎರಡು ಕಿ. ಮೀ ವಿಸ್ತೀರ್ಣವಿರುವ ಪ್ರದೇಶದಲ್ಲಿ ಇದೊಂದು ಆಶ್ಚರ್ಯಕರ ಸಂಗತಿಯಾಗಿದೆ. ಇವರೆಲ್ಲರೂ ತನ್ನದೇ ಆದ ಕ್ಷೇತ್ರಗಳಲ್ಲಿ ಗ್ರಂಥ ರಚನೆ ನಡೆಸಿದವರಾಗಿದ್ದಾರೆ. ಬಹುತೇಕ ಕೃತಿಗಳು ಮೂಲ ಕೃತಿಯ ಕೈ ಬರಹಗಳಲ್ಲಿಯೇ ಇಂದಿಗೂ ಲಭ್ಯವಿದೆ.
ಕಪ್ಪಲ್ ಪಾಟ್ ಎಂಬ ಗ್ರಂಥವೊಂದಿದೆ.ಅಮೇರಿಕಾದಿಂದ ಹಡಗು ನಿರ್ಮಿಸಿ ಕಿಲ್ತಾನ್ ದ್ವೀಪದ ಬಂಡೆಯೊಂದಕ್ಕೆ ಡಿಕ್ಕಿ ಹೊಡೆದು ನುಚ್ಚು ನೂರಾಗುವ ಘಟನೆಯನ್ನು ವಿವರಿಸುವ ಒಂದು ಸುದೀರ್ಘ ಕಾವ್ಯವಾಗಿದೆ. ಪೋಕರ್ಚಿಯೋಡ್ ಕಾಕ ಎಂದು ಖ್ಯಾತರಾದ ಕುಂಞಿ ಅಹ್ಮದ್ ಮುಸ್ಲಿಯಾರರು ಇದರ ಕರ್ತೃ. ಪರವಮಾಲ ಎಂದು ಪ್ರಚಾರದಲ್ಲಿರುವುದು ಇದರ ಒಂದು ಭಾಗ ಮಾತ್ರವಾಗಿದೆ.” ಕೊತ್ತಲ್ಲಿ ಕೊತ್ತಲ್ಲಿ ಪುಳ್ಳಿ ಪರವೇ ಕೊತ್ತಿ ಕೂಡಿಯನ್ನಾಂಡಾಮಾಲ್ ಪರವೇ” ಎಂದು ಕೇಳುವಾಗ ಮಲಯಾಳಿಗಳು ಆಕಾಶದಲ್ಲಿ ಹಾರಾಡುವ ಪಕ್ಷಿಗಳ ಕುರಿತು ಚಿಂತಿಸುವುದು ಸಹಜ. ಆದರೆ ಕಡಲ ಮೇಲೆ ರೆಕ್ಕೆ ಬಿಡಿಸಿ ಹಾರಾಡುವ ಪರವ ಎಂಬ ಮೀನಾಗಿದೆ ಇಲ್ಲಿನ ಕಥಾಪಾತ್ರ . ಹಡಗು ಧ್ವಂಸವಾದ ಘಟನೆಯ ಮೂಲಕ ದ್ವೀಪದ ಜೀವನವನ್ನು ಕಾಕ ಬಹಳ ಮನೋಹರವಾಗಿ ವಿವರಿಸುತ್ತಾರೆ.

ಮಹರಂಗೀಸ್ ರಾಣಿಯ ಜೀವನವನ್ನು ಕಟ್ಟಿಕೊಡುವ ಒಂದು ಕಾದಂಬರಿಯಾಗಿದೆ ಮಹರಟೀಸ್ ಮಾಲೆ. ಬಿಯ್ಯಾಪುರ ಅಬ್ದುರ್ರಹ್ಮಾನ್ ಎಂಬ ಕವಿ ಇದನ್ನು ರಚಿಸಿರುವರು. ರಾಣಿಯು, ತನ್ನನ್ನು ವರಿಸಲು ಬರುವ ರಾಜಕುಮಾರರೊಂದಿಗೆ ಕುಲ್ ಸನೋವನೊಂದಿಗೆ ಏನು ತಪ್ಪು ಮಾಡಿದೆ? ಎಂದು ಪ್ರಶ್ನಿಸುತ್ತಾಳೆ. ಉತ್ತರವಿಲ್ಲದಿದ್ದರೆ ವಧಿಸಲಾಗುತ್ತಿತ್ತು. ಅರಬಿ ಕಥೆ ಪ್ರೇರಿತ ಈ ಕಥಾಗಾನವು ಕಾವ್ಯ ಭಂಗಿಯಲ್ಲಿ ಬಹಳ ಮುಂಚೂಣಿಯಲ್ಲಿದೆ. ಪ್ರವಾದಿವರ್ಯರು ಮೊಲೆ ಹಾಲು ಕುಡಿಯುವುದನ್ನು ಪ್ರಮೇಯವಾಗಿಟ್ಟುಕೊಂಡು ಬಿರಿಯಂ ತೆತ್ತಿಯೋಡ್ ಮೂಸಾನ್ ಕುಟ್ಟಿ ಮುಸ್ಲಿಯಾರರು ರಚಿಸಿರುವ ಮುಲಕುಡಿ ಮಾಲೆ ಬಹಳ ಪ್ರಸಿದ್ಧವಾಗಿದೆ. ಪ್ರವಾದಿವರ್ಯರ ಜೀವನ, ಪರಿಸರ ಮತ್ತು ಅಂದಿನ ಆಚಾರಗಳಿಗೆ ಈ ಗ್ರಂಥವು ಬೆಳಕು ಚೆಲ್ಲುತ್ತದೆ.
ಯೂಸುಫ್ ಖಿಸ್ಸಾವನ್ನು ಐಶ್ವರ್ಯೋಡ ಮುತ್ತುಕೋಯ ತಂಗಳ್ ಆಂದ್ರೋತ್, ಪುರಾಡಂ ಕುಂಞಿಕೋಯ ತಂಗಳ್ ಆಂದ್ರೋತ್, ಅಹ್ಮದ್ ನಖಶಬಂದಿ ತಂಗಳ್ ಕಿಲ್ತಾನ್ ಎಂಬೀ ಮೂವರು ರಚಿಸಿದ್ದಾರೆ. ಇವುಗಳ ಪೈಕಿ ಪ್ರಥಮವಾಗಿ ರಚಿಸಲ್ಪಟ್ಟದ್ದು ಕಿಲ್ತಾನ್ ತಂಗಳರ ಕೃತಿಯಾಗಿದ್ದರೆ, ಪ್ರಸಿದ್ಧಿ ಪಡೆದಿರುವುದು ಐಶ್ವರ್ಯೋಡ ಮುತ್ತುಕೋಯ ತಂಗಳರ ರಚನೆಯಾಗಿದೆ.

ದ್ವೀಪ ಸಾಹಿತ್ಯವು ಇಂದು ಸಣ್ಣಕತೆ, ಕವನ, ಕಾದಂಬರಿ ಎಂಬಿತ್ಯಾದಿ ಸಾಹಿತ್ಯ ರಚನೆಗಳಿಗೂ ವಿಸ್ತರಿಸಿವೆ. ಇವುಗಳ ಪೈಕಿ ಯುಸಿಕೆ ತಂಗಳ್ ಹಾಗೂ ಅಬೂ ಸಾಲಾ ಕೋಯಾ ಮಂಡಲಿಯವರ ಕಥೆಗಳು ಬಹಳ ಮುಖ್ಯವಾಗಿದೆ. ಹಳೆ ತಲೆಮಾರಿನ ಜನ ಜೀವನಕ್ಕೆ ಬೆಳಕು ಚೆಲ್ಲುವ ಯುಸಿಕೆ ಕೃತಿಯಲ್ಲಿ ವಿಡಂಬನೆ ಮತ್ತು ಕಥಾ ಸೌಂದರ್ಯವನ್ನು ರರ್ಶಿಸಬಹುದು. ತಂಗಳರ ಕಡಲಿನ ಕಥೆಗಳಲ್ಲಿ ಪ್ರಣಯ ಹಾಗೂ ಕಡಲು ಜೊತೆಯಾಗುವ ಅಪೂರ್ವವಾದ ಭಂಗಿಯಿದೆ.ಅಬೂ ಸಾಲಾ ಕೋಯಾ ಮಂಡಲಿ ಕಥೆಗಳಲ್ಲಿರುವ ಹಾಸ್ಯಭಂಗಿಯು ಓದುಗರ ಮನ ಮುಟ್ಟುವಂತಿದೆ. ಇದುವರೆಗೂ ನಾಲ್ಕು ಕಾದಂಬರಿಗಳು ಪ್ರಕಟಗೊಂಡಿವೆ. ಅವುಗಳಲ್ಲಿ ‘ಎಂಡೆ ಕೋಲೋಡ’, ತಖಿಯುದ್ದೀನ್ ಅಲಿ ಸಿ.ಎಚ್ ಬರೆದಿರುವ ‘ಪಡಪುರಪ್ಪಾಡ್’ ಮತ್ತು ಅಸದ್ ಮುತ್ತೂಸರ ‘ಚೆಗುತ್ತಾನ್ ಕ್ವಾಟೇರ್ಸ್’ ಎಂಬೀ ಮೂರು ಕಾದಂಬರಿಗಳು ಕಿಲ್ತಾನ್ ನಿವಾಸಿಗಳದ್ದಾಗಿದ್ದರೆ, ಉಳಿದೊಂದು ಕಾದಂಬರಿಯು ಹಂಸು ಶಾ ಅಗತ್ತಿಯವರ ‘ಸ್ನೇಹ ಬಂಧ’ ಆಗಿದೆ. ಇಲ್ಲಿನ ಪೂರ್ವಜರು ತಮ್ಮ ಐತಿಹ್ಯ ಕಥೆಗಳಲ್ಲಿ ದ್ವೀಪಿನ ಉತ್ಪತ್ತಿ, ವಲಸೆ, ಮತಾಂತರ ಹಾಗೂ ಇನ್ನಿತರ ಚಾರಿತ್ರಿಕ ಘಟನಾವಳಿಗಳನ್ನು ಪ್ರತಿಪಾದಿಸಿದ್ದಾರೆ.ಇಲ್ಲಿನ ಜಾನಪದ ಹಾಡುಗಳು, ಮಾಲೆ ಹಾಡುಗಳು, ಬಾಯಿಮಾತಿನ ಮೂಲಕ ಚಾಲ್ತಿಯಲ್ಲಿರುವ ಹಾಡುಗಳೆಲ್ಲವೂ ಇಲ್ಲಿನ ಭಾಷೆ ಮತ್ತು ಜನಜೀವನವನ್ನು ವಿವರಿಸಿದೆ. ಪ್ರಕೃತಿ ವಿಕೋಪಗಳಿಂದ ನಷ್ಟವಾಗಿರುವ ಲಿಖಿತ ಪರಂಪರೆಗಳನ್ನು ಲಭ್ಯವಿರುವ ಗ್ರಂಥಗಳಿಂದಲೂ ಹಾಡುಗಳಿಂದಲೂ ನಾವು ಸಂಶೋಧನೆ ನಡೆಸಬೇಕಾಗಿದೆ. ಮುಹ್ಯಿದ್ದೀನ್ ಮಾಲೆಗಿಂತಲೂ ಪುರಾತನವಾದ ಬರಹಗಳು ಇರುವುದಾಗಿ ಅರಬಿ ಲಿಪಿಯಲ್ಲಿ ದ್ವೀಪಿನ ಪ್ರಾದೇಶಿಕ ಭಾಷೆಯಲ್ಲಿ ಗುರುತಿಸಲಾಗಿದೆ. ಆಳವಾದ ಸಾಹಿತ್ಯ ಸಂಶೋಧನೆಗಳು ದ್ವೀಪದ ಭಾಷಾ ಪರಂಪರೆ, ವಲಸೆ, ಕುರಿತಾದ ಇನ್ನಷ್ಟು ಮಾಹಿತಿಗಳನ್ನು ನಮಗೆ ನೀಡಬಹುದೆಂದಾಗಿದೆ ನನ್ನ ನಂಬಿಕೆ.

ಮೂಲ : ಇಸ್ಮತ್ ಹುಸೈನ್
ಕನ್ನಡಕ್ಕೆ : ಆಶಿಕ್ ಅಲಿ ಕೈಕಂಬ

ಮಲಾಯ್ ದ್ವೀಪಗಳಲ್ಲಿ ಹರಡಿದ ಮಲಬಾರಿ ಬೇರು

ಆಧುನಿಕ ಮಲೇಷ್ಯಾದ ರಾಜಧಾನಿ ನಗರ ಕೌಲಾಲಂಪುರ್‌ನಿಂದ ಸ್ವಲ್ಪ ದೂರದಲ್ಲಿ ‘ದಾರು ತರೀಂ’ ಸಂಸ್ಥೆ ಇದೆ. ವಿಶ್ವಪ್ರಸಿದ್ಧ ಸುನ್ನಿ ವಿದ್ವಾಂಸ ಯೆಮನಿನ ಹಬೀಬ್ ಉಮರ್ ಬಿನ್ ಹಾಫಿಝ್‌ ರ ಪ್ರಮುಖ ಶಿಷ್ಯರಾದ ಹಬೀಬ್ ಮಹದಿ ಅಬೂಬಕರ್ ಹಮ್ದಿಯವರ ಈ ಸಂಸ್ಥೆಯಲ್ಲಿ ಪವಿತ್ರ ಕುರ್ಆನ್ ಕಲಿಯುವ ವಿದ್ಯಾರ್ಥಿಗಳಿದ್ದಾರೆ. ಅಂದು ಸಂಸ್ಥೆಯ ಮಕ್ಕಳನ್ನು ಭೇಟಿ ಮಾಡಲು ಕೇರಳದ ಸೈಯದ್ ಇಬ್ರಾಹಿಂ ಖಲೀಲುಲ್ ಬುಖಾರಿ ಆಗಮಿಸುತ್ತಿರುವುದರಿಂದ ಅದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತಿತ್ತು. ಸಂಸ್ಥೆಯ ಆಡಳಿತಾಧಿಕಾರಿಗಳಲ್ಲಿ ಕೇರಳದ ಅಧ್ಯಾಪಕರೂ ಇದ್ದರು. ಅರೇಬಿಕ್ ಭಾಷೆಯಲ್ಲಿ ಮಾತನಾಡುವ ಅತಿಥಿಗಳ ಉಪನ್ಯಾಸಗಳನ್ನು ಮಲಾಯಿ ಭಾಷೆಗೆ ತರ್ಜುಮೆ ಮಾಡಲಾಗುತಿತ್ತು. ಸ್ವತಃ ಮಲೇಷಿಯ ಸ್ವದೇಶಿಯಾಗಿರುವ, ಪ್ರಮುಖ ಸುನ್ನಿ ವಿದ್ವಾಂಸ ಬಶೀರ್ ಅಝ್‌ಹರಿ ಅರೇಬಿಕ್ ಭಾಷೆಯಿಂದ ಮಲಾಯಿ ಭಾಷೆಗೆ ತರ್ಜುಮೆ ಮಾಡುತಿದ್ದರು.

ಮುಸ್ಲಿಮರ ವಿಶೇಷ ದಿನಗಳಲ್ಲಿ, ಅಲ್ಲಿನ ಮಾಧ್ಯಮಗಳಲ್ಲಿ ಬಶೀರ್ ಅಝ್‌ಹರಿ ಅವರ ಮಲಾಯಿ ಭಾಷೆಯಲ್ಲಿನ ಭಾಷಣವಿರುತ್ತದೆ. ಕಾರ್ಯಕ್ರಮದ ನಂತರ ಒಂದು ಸಂದರ್ಭದಲ್ಲಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು. ತಂದೆ ತಾಯಿಯರು ಮಲಪ್ಪುರಂ ಜಿಲ್ಲೆಯವರು. ಅವರಲ್ಲಿ ಕೆಲವರು ಮಲೇಷ್ಯಾಕ್ಕೆ ಬಂದು ಇಲ್ಲಿ ನೆಲೆಸಿದರು. ಬಶೀರ್ ಅಝ್ಅರಿ ಮಲಾಯ್ ಭಾಷೆ ಮಿಶ್ರಿತ ಆಗುತ್ತಿದ್ದರೂ ಮಲಯಾಳಂ ಭಾಷೆಯೇ ಆಗಿತ್ತು ಅವರು ಮಾತನಾಡುತ್ತಿದ್ದದ್ದು. ಅವರು ಮಲೇಷಿಯಾ ಮತ್ತು ಸಿಂಗಾಪುರದಾದ್ಯಂತ ಹರಡಿರುವ ‘ಮಲಬಾರಿ’ ಸಮುದಾಯದ ಇವರೂ ಕೂಡಾ ಓರ್ವ ಸದಸ್ಯ. ಕೇರಳದಿಂದ ಮಲಾಯ್ ದ್ವೀಪಗಳಲ್ಲಿ ಶಾಶ್ವತವಾಗಿ ವಾಸಿಸುವ ನಿವಾಸಿ ಮತ್ತು ಮಲಾಯ್ ಪೌರತ್ವವಿರುವ ಮಲಯಾಳಿ ಪ್ರಜೆಗಳನ್ನು ಹಾಗೂ ವಿಶೇಷವಾಗಿ ಮಧ್ಯ ಕೇರಳದಿಂದ ವಲಸೆ ಹೋದವರನ್ನು ‘ಮಲಬಾರಿಗಳು’ ಎಂದೇ ಇಲ್ಲಿ ಕರೆಯಲಾಗುತ್ತದೆ.

1920 ರ ದಶಕದಲ್ಲಿಯೇ ಕೇರಳದಿಂದ ಮಲಾಯ್ ದ್ವೀಪಗಳಿಗಿರುವ ವಲಸೆ ಪ್ರಾರಂಭವಾಗಿತ್ತು.

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ವ್ಯವಹಾರಗಳಿಂದ ಹಿಡಿದು ತಾಳೆಕೃಷಿ ಕೆಲಸ ಮಾಡುವ ಜನರು ಕೂಡ ಕೇರಳದಿಂದ ಇಲ್ಲಿಗೆ ಬರುತ್ತಿದ್ದರು. ನಂತರದ ಮಲಬಾರಿಗಳು ಉನ್ನತ ಸರ್ಕಾರಿ ಉದ್ಯೋಗಗಳು ಮತ್ತು ಇತರ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಗಳನ್ನು ಹುಡುಕಿಕೊಂಡು ಮಲಾಯ್ ದ್ವೀಪಗಳಿಗೆ ಪ್ರಯಾಣ ಬೆಳಸುತಿದ್ದರು. ಈ ಪ್ರದೇಶದ ಜನರು ಇಂದಿನ ಮ್ಯಾನ್ಮಾರ್‌ನ (ಹಳೆಯ ಬರ್ಮಾ ರಾಜಧಾನಿ) ರಂಗೂನಿಗೆ ಕೂಡ ಹೋಗುತಿದ್ದರು. ಒಟ್ಟಿನಲ್ಲಿ ಮಲೇಷ್ಯಾ ಒಳಗೊಂಡ ಮಲಾಯ್ ದ್ವೀಪಗಳಲ್ಲಿನ ಪ್ರಮುಖ ಜನಸಮೂಹವಾಗಿ ಮಲಬಾರಿಗಳು ಬದಲಾದರು. ವ್ಯವಸಾಯ, ಕೃಷಿ, ಉದ್ಯೋಗ, ರಾಜಕೀಯ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಮಲಬಾರಿಗಳು ಸಕ್ರಿಯರಾಗಿದ್ದಾರೆ.

ಹಾಜಿ ಪಿ.ಕೆ. ಕೋಯ ಅವರು ಏಳು ದಶಕಗಳ ಹಿಂದೆ ಸಿಂಗಾಪುರಕ್ಕೆ ಬಂದವರು. ಅವರು ಮೂಲತಃ ಕಣ್ಣೂರಿನವರು. ವಯಸ್ಸು ತೊಂಬತ್ತು ದಾಟಿದೆ. ಪ್ರಸ್ತುತ ಕೌಲಾಲಂಪುರದಿಂದ ಸ್ವಲ್ಪ ದೂರದಲ್ಲಿರುವ ಪೆತಿಲಿಂಗ್ಜಯಾ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ಸಿಂಗಾಪುರದಲ್ಲಿ ಕೆಲಕಾಲ ಕೆಲಸ ಮಾಡಿದ ನಂತರ ಮಲೇಷ್ಯಾಕ್ಕೆ ಬಂದರು. ಅಲ್ಲಿನ ಪೌರತ್ವ ಪಡೆದರು. ಅವರು ಸ್ವದೇಶದಿಂದ ಮದುವೆಯಾಗಿ ಇಲ್ಲಿಗೆ ಬಂದವರು. ಅವರು ತನ್ನ ಮಕ್ಕಳು ಮತ್ತು ಕುಟುಂಬದೊಂದಿಗೆ ಇಲ್ಲಿಯೇ ನೆಲೆಸಿದ್ದಾರೆ. ಈ ಮಧ್ಯೆ, ಅವರು ಇಂಗ್ಲಿಷ್ ಮತ್ತು ಇತರ ಭಾಷೆಗಳನ್ನು ಕಲಿತರು. ಮಾತ್ರವಲ್ಲ, ನ್ಯಾಷನಲ್ ಬ್ಯಾಂಕ್ ಆಫ್ ಮಲೇಷ್ಯಾದಲ್ಲಿ ಕೆಲಸ ಪಡೆದರು. ಮುಖ್ಯ ಲೆಕ್ಕಾಧಿಕಾರಿಯಾಗಿ ನಿವೃತ್ತಿಯಾದ ನಂತರ, ಇಸ್ಲಾಮಿಕ್ ಬುಕ್ ಟ್ರಸ್ಟನ್ನು ಪ್ರಾರಂಭಿಸಿದರು. ಈಗ ಅದಕ್ಕೆ ನಲವತ್ತು ವರ್ಷಗಳು ಕಳೆದಿವೆ. ಇಸ್ಲಾಮಿಕ್ ಇತಿಹಾಸ, ವಿಜ್ಞಾನ ಮತ್ತು ತತ್ತ್ವಶಾಸ್ತ್ರದ ಕ್ಷೇತ್ರಗಳಲ್ಲಿ ಇಂಗ್ಲಿಷ್‌ನಲ್ಲಿ 400 ಕ್ಕೂ ಹೆಚ್ಚು ಗಮನಾರ್ಹ ಪುಸ್ತಕಗಳನ್ನು ಇವರ ʼಇಸ್ಲಾಮಿಕ್ ಬುಕ್ ಟ್ರಸ್ಟ್ʼ ಪ್ರಕಟಿಸಿದೆ.

ಅಧ್ಯಯನದ ಅವಧಿಯಲ್ಲಿ, ಇಸ್ಲಾಮಿಕ್ ಬುಕ್ ಟ್ರಸ್ಟ್ ಪ್ರಕಟಿಸಿದ ಪುಸ್ತಕಗಳು ಅನೇಕ ಜನರ ಕೈಯಿಂದ ಮತ್ತು ಗ್ರಂಥಾಲಯದಿಂದ ನನ್ನ ಕೈ ಸೇರಿತ್ತು, ಅದನ್ನು ಬರೆದದ್ದು ಮಲಯಾಳಿ ಎಂಬುದು ಊಹಿಸಲೂ ಕೂಡ ಸಾಧ್ಯವಾಗಿಲ್ಲ. ಅಷ್ಟು ಸ್ಪಷ್ಟ ಇಂಗ್ಲಿಷ್ ಮತ್ತು ಗಂಭೀರ ವಿಷಯವಾಗಿತ್ತು ಅದು.

ಇಸ್ಲಾಮಿಕ್ ಬುಕ್ ಟ್ರಸ್ಟ್ ಮಲೇಷ್ಯಾದ ಮುಸ್ಲಿಂ ಧಾರ್ಮಿಕ ವ್ಯವಹಾರಗಳ ಮೇಲೆ ಪ್ರಮುಖ ಪ್ರಭಾವ ಬೀರಿದೆ. ಜೀವನ, ಭಾಷೆ ಮತ್ತು ಸಂಸ್ಕೃತಿಯನ್ನು ಹೊಸದೊಂದು ಊರಿಗೆ ಸ್ಥಳಾಂತರಿಸಿದ ದಶಕಗಳ ನಂತರವೂ, ಹಳೆಯ ಮಲಬಾರಿ ಸಂಪ್ರದಾಯಗಳು ಈಗಲೂ ಕೂಡ ಅನೇಕ ಮಲಬಾರಿ ಕುಟುಂಬಗಳಲ್ಲಿ ಉಳಿದಿವೆ. ಕೋಯ ಸಾಹಿಬ್ ಅವರ ಮನೆಯಲ್ಲಿ ಏರ್ಪಡಿಸಿದ ಚಹಾಕೂಟದ ಸಮಯದಲ್ಲಿ, ಅವರು ಮಲಯಾಳಂ ಮಾತಿನಲ್ಲಿ, ಮಲಬಾರಿನ ಪ್ರಸಿದ್ಧ ತಿಂಡಿ ತಿನಿಸುಗಳನ್ನು ತಿನ್ನುವಾಗ ಕಣ್ಣೂರಿನ ಭಾಷೆ ಇನ್ನೂ ಉಳಿದುಕೊಂಡಿರುವುದನ್ನು ಗಮನಿಸಿದೆ. ಕೋಯಾ ಸಾಹಿಬ್ ಅವರ ಮಗಳು ಸಕಿಯಾ ಕೋಯ ಮಲೇಷ್ಯಾದ ಭ್ರಷ್ಟಾಚಾರ ನಿಗ್ರಹ ದಳದ ಮಾಜಿ ಕಮಿಷನರ್. ವಲಸೆಗಳು ಎಲ್ಲ ರೀತಿಯಲ್ಲೂ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದರೆ, ಜನರು ತಾವು ವಲಸೆ ಬಂದ ಸ್ಥಳಗಳೊಂದಿಗೆ ತಮ್ಮ ಸಂಬಂಧವನ್ನು ಅನೇಕ ರೀತಿಯಲ್ಲಿ ಉಳಿಸಿಕೊಳ್ಳುತ್ತಾರೆ. ಕೆಲವರು ಹಿಂತಿರುಗಲು ಬಯಸಿದರೂ, ಅದು ಸಾಮಾನ್ಯವಾಗಿ ಅಸಾಧ್ಯವಾಗುತ್ತದೆ. ಹಿಂತಿರುಗಿ ಹೋಗದಿದ್ದರೂ, ಹಿಂತಿರುಗುವ ಬಯಕೆಯಿಲ್ಲದಿದ್ದರೂ, ಅವರು ಆಗಾಗ ತಮ್ಮ ತಂದೆ ಮತ್ತು ತಾಯಿಯ ಭೂಮಿಯೊಂದಿಗೆ ಸಂಪ್ರದಾಯದ ಮೂಲಕ ತಮ್ಮ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ. ಮಲಬಾರಿಯ ಮಲೇಷ್ಯಾ ಆರ್ಥೋ ವಿಭಾಗದ ವೈದ್ಯ ಡಾ.ಹಿಶಾಮಿನ ಕುರಿತು ತಿಳಿಯಿತು. ಅವರು ರಚಿಸಿದ ಇ-ಮಲಬಾರಿ ಎಂಬ ವೆಬ್ ಪೋರ್ಟಲ್ ಮಲೇಷ್ಯಾದ ಮಲಬಾರಿಗಳ ಇತಿಹಾಸಕ್ಕೆ ಪ್ರಮುಖ ಮೂಲವಾಗಿದೆ.

ಹಿಶಾಮ್ ಅವರು ಅರೇಬಿಕ್-ಮಲಯಾಳಂ ಭಾಷೆಗೆ ಡಿಜಿಟಲ್ ಫಾಂಟ್ ಅನ್ನು ರಚಿಸಿದ್ದಾರೆಂದು ತಿಳಿಯಿತು. ಕೇರಳದ ಮಲಬಾರಿಗಳು ತಮ್ಮ ಬೇರುಗಳ ಬಗ್ಗೆ ಸಕ್ರಿಯವಾಗಿ ಕಲಿಯದಿರುವ ಸಂದರ್ಭದಲ್ಲಿ, ಅರೇಬಿಕ್ ಮಲಯಾಳಂನ ಮಾಪಿಲ ಸಂಪ್ರದಾಯವನ್ನು ಅಷ್ಟಾಗಿ ಯಾರು ಪರಿಗಣಿಸದ ಸಮಯದಲ್ಲಿ, ತಮ್ಮದೇ ಆದ ಪರಂಪರೆಯನ್ನು ಮತ್ತು ಅದರ ಭಾಷೆಯನ್ನು ವಿಭಿನ್ನ ನೆಲ, ಸಮಾಜ ಮತ್ತು ಸಂಸ್ಕೃತಿಯ ಜನರೆಡೆಯಲ್ಲಿ ಮಲಬಾರಿಗಳು ಪರಿಗಣಿಸುವ ರೀತಿ ಶ್ಲಾಘನೀಯವಾಗಿದೆ. ಮಲೇಷ್ಯಾದಲ್ಲಿರುವ ಮಲಬಾರಿಗಳು ನಮ್ಮಲ್ಲಿನ ಮನೆಯಲ್ಲಿನಂತೆಯೇ ವಿಶೇಷ ಸಂದರ್ಭಗಳಲ್ಲಿ ಶೇಖ್ ಝೈನುದ್ದೀನ್ ಮಖ್ದೂಮ್ ಅವರಿಂದ ಮಂಖುಸ್ ಮೌಲಿದ್ ಪಠಿಸುತ್ತಾರೆ. ಸೀರಣಿ ಸಹ ವಿತರಿಸಲಾಗುತ್ತದೆ.

ಸುರೌ ಮಲಬಾರ್ ಎಂಬುದು ಮಲಬಾರಿಗಳು ನಿರ್ಮಿಸಿದ ಪ್ರಾರ್ಥನಾ ಮಸೀದಿ. ಸಿಂಗಾಪುರದ ಮಲಬಾರ್ ಮಸೀದಿಯಂತೆ ಈ ಮಸೀದಿಯೂ ಮಲೇಷ್ಯಾದ ಮಲಬಾರಿಗಳ ಕೇಂದ್ರವಾಗಿದೆ. ಅದು ಮಾತ್ರವಲ್ಲದೆ ವಿವಿಧ ಪ್ರದೇಶಗಳಲ್ಲಿನ ಮಲಬಾರಿಗಳಿಗೆ ವಿಭಿನ್ನ ಸಂಘಟನೆಗಳಿವೆ.

ಶಿಕ್ಷಣ, ವಸತಿ, ಆರೋಗ್ಯ ಇತ್ಯಾದಿಗಳಿಗೆ ಸಾಮೂಹಿಕ ನೆರವು ನೀಡುವಲ್ಲಿ ಅವರೆಲ್ಲರೂ ಮುಂಚೂಣಿಯಲ್ಲಿದ್ದಾರೆ.

ಮಲಬಾರಿಗಳಂತೆ, ತಮಿಳು ಮಲಾಯ್ ವಂಶಜರು ಮಲೇಷ್ಯಾದಲ್ಲಿನ ಪ್ರಮುಖ ದಕ್ಷಿಣ ಏಷ್ಯಾದ ವಲಸಿಗರು.

ಅವರು ಸಂಖ್ಯೆಯಲ್ಲಿ ಮತ್ತು ಪ್ರಭಾವದಲ್ಲಿ ಮಲಬಾರಿಗಳನ್ನು ಮೀರಿಸಬಹುದು. 20 ನೇ ಶತಮಾನದ ಆರಂಭದಲ್ಲಿ, ಅವರು ಹಿಂದೂ ಮಹಾಸಾಗರವನ್ನು ದಾಟಿ ಮಲಾಯ್ ದ್ವೀಪಗಳಿಗೆ ಲಗ್ಗೆಯಿತ್ತರು. ದಿ ಹಿಂದೂ ಪತ್ರಿಕೆಯ ವರದಿಗಾರ ಮತ್ತು ತಮಿಳು ಮುಸ್ಲಿಂ ಸಂಶೋಧಕ ಕೊಂಬಾಯಿ ಅನ್ವರ್ ಒಮ್ಮೆ ಸೌಹಾರ್ದ ಭಾಷಣದಲ್ಲಿ ʼತಮಿಳುʼ ಮತ್ತು ʼಮಲಯಾಳಂ ಹಳೆಯ ತಮಿಳುʼ ಎಂಬ ದೊಡ್ಡ ವ್ಯವಸ್ಥೆಯ ಎರಡು ಮುಖಗಳು ಎಂದು ಹೇಳಿದ್ದರು. ಮಲಬಾರಿ ಜನರಂತೆ ಅಥವಾ ಅದಕ್ಕಿಂತ ಹೆಚ್ಚು ವಲಸೆ ಬಂದ ನೆಲ ಮತ್ತು ಜನರೊಂದಿಗೆ ತಮಿಳಿಗೆ ಸಂಬಂಧವಿದೆ. ಕೌಲಾಲಂಪುರದ ಹೆಚ್ಚಿನ ಬೀದಿಗಳಲ್ಲಿ ಮಲಬಾರಿಯ ಹೋಟೆಲನ್ನು ಕಾಣಬಹುದು.

ಆದರೆ ಆಹಾರವು ಒಂದು ರಾಷ್ಟ್ರ ಮತ್ತು ಸಂಸ್ಕೃತಿಯೊಂದಿಗೆ ಬೇರೆಯಾಗಿ ನಿಲ್ಲುವುದಕ್ಕೆ ತಮಿಳು ತಿನಿಸುಗಳು ಸಾಕ್ಷಿಯಾಗಿವೆ. ಒಂದು ನೆಲವನ್ನು ಸಂಸ್ಕೃತಿಯಾಗಿ ಪರಿವರ್ತಿಸುವಲ್ಲಿ ಮಲಬಾರ್ ಮತ್ತು ಮಲಬಾರಿ ಜನರು ಪ್ರಮುಖ ಉದಾಹರಣೆಗಳಾಗಿದ್ದಾರೆ. ಜಗತ್ತಿನ ಎಲ್ಲೆಲ್ಲಾ, ಮಲಬಾರಿಗಳು ಹೋಗಿದ್ದಾರೋ ಅಲ್ಲೆಲ್ಲಾ ಇಂತಹ ಮಲಬಾರಿನ ಗ್ರಾಮಗಳು ಕಾಣಸಿಗುತ್ತವೆ. ಮಲೇಷ್ಯಾದ ಮಲಬಾರಿಗಳು ಅವುಗಳಲ್ಲಿ ಅತ್ಯಂತ ಗಮನಾರ್ಹವಾದದ್ದು.

ಮೂಲ : ನೂರುದ್ದೀನ್ ಮುಸ್ತಫಾ
ಅನು : ಎಂ. ನೌಶಾದ್ ಹಸನ್ ನಗರ
ಕೃಪೆ : ರಿಸಾಲ ಅಪ್ಡೇಟ್

ಮದ್‌ಹಬೇ ಇಷ್ಕ್: ಗಾಢ ಪ್ರೇಮದ ಸೂಫೀ ಹಾದಿ..

ಮಹಾನ್ ಸೂಫಿ ತತ್ವಜ್ಞಾನಿ ಫರೀದುದ್ದೀನ್ ಅತ್ತಾರ್ ರವರು ಪರಿತ್ಯಾಗಿಯೋರ್ವನ ಕನಸನ್ನು ಹೀಗೆ ವಿವರಿಸುತ್ತಾರೆ. ಇದುವರೆಗೆ ಹುಟ್ಟಿರುವ ಮತ್ತು ಇನ್ನೂ ಹುಟ್ಟಲಿರುವ ಎಲ್ಲಾ ಮಾನವರು ಸೃಷ್ಟಿಕರ್ತನ ಮುಂದೆ ಒಟ್ಟುಗೂಡುತ್ತಾರೆ. ಸೃಷ್ಟಿಕರ್ತನು ಅನೇಕ ವಾಗ್ದಾನಗಳನ್ನು ಮಾಡುತ್ತಾನೆ, ಜನರು ತಮಗೆ ಬೇಕಾದುದನ್ನು ಆರಿಸಿಕೊಳ್ಳುವ ಅವಕಾಶವನ್ನೂ ನೀಡುತ್ತಾನೆ.

ಸೃಷ್ಟಿಕರ್ತನು ಕೇಳುತ್ತಾನೆ: “ನಿಮ್ಮಲ್ಲಿ ಯಾರಿಗೆ ಎಲ್ಲಾ ಲೌಕಿಕ ಆಸೆಗಳನ್ನು ಪೂರೈಸಬೇಕು..?” ಹಾಜರಿದ್ದವರಲ್ಲಿ ಶೇಕಡ ತೊಂಬತ್ತು ಮಂದಿ ಅದನ್ನು ಆರಿಸಿಕೊಂಡರು. ಅವರನ್ನು ಹಿಂದಿರುಗಲು ಹೇಳಿದ ನಂತರ, ದೇವನು ಎರಡನೇ ಬಾರಿಗೆ ಕೇಳಿದನು: “ನರಕದ ಶಿಕ್ಷೆಯಿಂದ ಯಾರಿಗೆ ಮೋಕ್ಷ ಬೇಕು..?” ಉಳಿದವರಲ್ಲಿ ತೊಂಬತ್ತರಷ್ಟು ಜನ ಅದನ್ನೇ ಆರಿಸಿಕೊಂಡರು. ಉಳಿದವರೊಂದಿಗೆ ಯಾರಿಗೆಲ್ಲ ಸ್ವರ್ಗ ಬೇಕೆಂದು ಕೇಳಿ, ಮುಂದೆ ಬಂದವರಿಗೆ ದೇವನು ಸ್ವರ್ಗವನ್ನೂ ಕೊಟ್ಟನು.

ಎಲ್ಲವೂ ಮುಗಿದು, ಅಲ್ಲಿ ಕೆಲವೇ ಮಂದಿ ಉಳಿದರು. ಅವರು ಭೌತಿಕ ಆಸೆಗಳು, ನರಕಾಗ್ನಿ ಅಥವಾ ಸ್ವರ್ಗೀಯ ಸಂತೋಷಗಳಿಂದ ಪ್ರಲೋಭನೆಗೆ ಒಳಗಾಗಲಿಲ್ಲ. ಈ ಬಾರಿ ಗುಡುಗಿನಂತೆ ಪ್ರಶ್ನೆ ಬಂದಿತು: “ನಾನು ನಿಮಗೆ ನರಕದಿಂದ ಮೋಕ್ಷವನ್ನು ವಾಗ್ದಾನ ಮಾಡಿದೆ, ನಿಮಗೆ ಅದು ಬೇಡ. ನಾನು ಆನಂದಮಯವಾದ ಸ್ವರ್ಗವನ್ನು ನಿಮ್ಮೆದುರು ಇಟ್ಟೆ. ನೀವು ಅದನ್ನೂ ತಿರಸ್ಕರಿಸಿದ್ದೀರಿ. ಮತ್ತು ನಿಮಗೇನು ಬೇಕು..?

ಅವರು ನಮ್ರತೆಯಿಂದ ತಲೆಬಾಗಿ ಹೇಳಿದರು: “ನೀನು. ನಾವು ಯಾರನ್ನು ಬಯಸುತ್ತೇವೆಂದು ನಿನಗೆ ಮಾತ್ರ ತಿಳಿದಿದೆ”.

ಸೂಫಿಗಳು ಎಲ್ಲಕ್ಕಿಂತಲೂ ಮಿಗಿಲಾಗಿ, ನರಕ ಮತ್ತು ಎಲ್ಲಾ ಸ್ವರ್ಗೀಯ ಸಂತೋಷಗಳಿಗಿಂತ ಹೆಚ್ಚಾಗಿ ದೇವನನ್ನು ಹುಡುಕುತ್ತಾರೆ. ಉತ್ಕಟ ಪ್ರೀತಿಯಿಂದ ಭಕ್ತಿಪೂರ್ವಕ ಪ್ರಾರ್ಥನೆ ನಡೆಸಿ, ಮುನಾಜಾತ್ ಎಂಬ ಖಾಸಗಿ ಸಂಭಾಷಣೆಗಳ ಮೂಲಕ ಅವನೊಂದಿಗೆ ಸಂಭಾಷಿಸಿದರು. ಮದ್ಹಬೇ ಇಷ್ಕ್‌ನ ವಿಷಯಗಳು ಎಲ್ಲಕ್ಕಿಂತ ಹೆಚ್ಚಾಗಿ ದೇವನನ್ನು ಹುಡುಕುವ ಮತ್ತು ದೇವನಿಂದ ಸೃಷ್ಟಿಗೆ ಹರಿಯುವ ಪ್ರೀತಿಯ ಹಾದಿಯಲ್ಲಿ ನಡೆಯುವ ಕೆಲವರ ಪ್ರೀತಿಯ ಮಂತ್ರಗಳಾಗಿವೆ.

ಪರಲೋಕದಲ್ಲಿ ನಾವು ದೇವನನ್ನು ಮುಖಾಮುಖಿ ಕಾಣುತ್ತೇವೆ ಎಂದು ಹೇಳುತ್ತೇವೆ. ಆದರೆ ಈ ಸೂಫಿಗಳಿಗೆ ಅಷ್ಟೆಲ್ಲಾ ಕಾಯುವ ಸಹನೆಯಿಲ್ಲ. ಇಹಲೋಕದಲ್ಲಿಯೇ ದೇವನನ್ನು ಕಾಣಬೇಕೆಂದು ತೀವ್ರವಾಗಿ ಬಯಸುವರು.

ಈ ಉತ್ಕಟ ಪ್ರೇಮದ, ಇಷ್ಕ್‌ನ ಹಾದಿಯಲ್ಲಿ ಪಯಣಿಸಿದ ಸೂಫಿಗಳ, ಕವಿಗಳ, ಪ್ರೇಮಿಗಳ ಕವಿತೆಗಳು ಮತ್ತು ಬೋಧನೆಗಳು ಅಥವಾ ಈ ಜಗತ್ತಿನಲ್ಲಿ ಸೃಷ್ಟಿಕರ್ತನನ್ನು ನೋಡುವ ಅತಿಯಾದ ಬಯಕೆಗಳ ಆಧ್ಯಾತ್ಮಿಕ ಉನ್ನತಿಯ ತಿರುಳನ್ನು ಮದ್ಹಬೇ ಇಷ್ಖಿನಲ್ಲಿ ಕಾಣಬಹುದು. ಮುಸ್ಲಿಂ ಚಿಂತನೆಯ ಅಡಿಪಾಯದಿಂದ ರೂಪುಗೊಂಡ ಮತ್ತು ಕಾವ್ಯಾತ್ಮಕ ಭಾಷೆಯ ಮೂಲಕ ದೇವರನ್ನು ಕಾಣಲಿರುವ ಆಧ್ಯಾತ್ಮಿಕ ಹಾದಿಯನ್ನು ಮದ್ಹಬೇ ಇಷ್ಖ್ (ಅರೇಬಿಕ್: ಮದ್ಹಬ್ ಅಲ್-ಇಷ್ಕ್) ಎಂದು ಕರೆಯಲಾಗುತ್ತದೆ. ನಾವದನ್ನು ಪ್ರೀತಿಯ ಮಾರ್ಗವೆಂದು ವ್ಯಾಖ್ಯಾನಿಸಬಹುದು. ಆದರೆ ವಾಸ್ತವದಲ್ಲಿ ಈ ಅನುವಾದ ಅಸಮರ್ಪಕವಾಗಿದೆ. ಏಕೆಂದರೆ ಪ್ರೀತಿ ಎಂಬ ಪದವು ತುಂಬಾ ನೀರಸ ಮತ್ತು ಸಾರ್ವತ್ರಿಕವಾಗಿದ್ದು, ಅದು ಪ್ರೀತಿಯ ದೈವಿಕ ಗುಣಗಳಿಗೆ ನ್ಯಾಯವನ್ನು ನೀಡುವುದಿಲ್ಲ. ಹಾಗಾಗಿ ಸೂಫಿಗಳು ಪ್ರೀತಿಯ ಬಗ್ಗೆ ಹೇಳುವುದೇ ಇಷ್ಕ್.

ಇದು ಸ್ವಲ್ಪ ಪ್ರಕಾಶಮಾನವಾಗಿದೆ. ಅವರಿಂದಲೇ ಹುಟ್ಟಿ ಹಲವೆಡೆ ಹರಿಯುವ ಪ್ರೇಮದ ಚಿರಂತನ. ಯಾವ ಪಾತ್ರೆಯಲ್ಲಿ ಅಳೆದರೂ ಆ ಪ್ರೀತಿ ಉಕ್ಕಿ ಹರಿಯುತ್ತದೆ. ಅದಕ್ಕಾಗಿಯೇ ‘ನಾನು ಈ ಚಳುವಳಿಯನ್ನು ರಾಡಿಕಲ್ ಲವ್ ಎಂದು ಕರೆಯುತ್ತೇನೆ. ಇದು ಅತ್ಯುನ್ನತ ಪ್ರೀತಿಯ ಮಾರ್ಗ’ ಎಂದು ಪ್ರಸಿದ್ಧ ಜಾಝ್ ಸಂಗೀತಗಾರ ಜಾನ್ ಕಾರ್ಟ್ರೇನ್ ಹೇಳಿದ್ದಾರೆ. ಅನೇಕ ಜಾಝ್ ಸಂಗೀತಗಾರರಂತೆ, ಕೋಲ್ ಟ್ರೈನ್ ಇಸ್ಲಾಂನಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದರು. ಅವರ ಪ್ರಸಿದ್ಧ ಹಾಡು ಎ ಲವ್ ಸುಪ್ರೀಮ್ (A love Supreme) ಅನ್ನು ಅಲ್ಲಾ ಸರ್ವೋಚ್ಚ (Allah Supreme) ಎಂದು ನಾನು ಆಗಾಗ್ಗೆ ಭಾವಿಸುತ್ತೇನೆ.

ಸೂಫಿಗಳು ಹೇಳುವ ಈ ಪ್ರಖರ ಪ್ರೀತಿಯ ಮಾರ್ಗವು ‘ಮದ್ಹಬೇ ಖುದಾ’ ಅಥವಾ ದೇವನ ಮಾರ್ಗವಾಗಿದೆ. ಮನ್ಸೂರ್ ಅಲ್ ಹಲ್ಲಾಜ್ ಮತ್ತು ಐನುಲ್ ಖುಲಾತ್ ಇದನ್ನು ಸ್ಪಷ್ಟಪಡಿಸಿದ್ದಾರೆ. ಅಥವಾ ಈ ತೀವ್ರವಾದ ಪ್ರೀತಿಯ ಹಾದಿಯು ದೇವನೆಡೆಗೆ, ದೇವನ ಸಾಮೀಪ್ಯಕ್ಕೆ ಕಾರಣವಾಗುತ್ತದೆ. ಇಮಾಮ್ ಶಾಫಿಯವರ ಶಾಫಿ ಮದ್ಹಬ್ ಮತ್ತು ಇಮಾಮ್ ಅಬು ಹನೀಫಾ ರವರ ಹನಫಿ ಮದ್ಹಬ್ ಎಂದು ಕರೆಯುವಂತೆ, ಇಸ್ಲಾಮಿಕ್ ಕಾನೂನಿನ ಎಲ್ಲಾ ನಿಯಮಗಳು (ಶರೀಅ) ಅವುಗಳ ವಿಧಾನವನ್ನು ರೂಪಿಸಿದ ಮಹಾನ್ ವಿದ್ವಾಂಸರ ನಾಮಗಳಡಿಯಲ್ಲಿ ನೆಲೆಗೊಳ್ಳುತ್ತದೆ. ಆದರೆ, ಮದ್ಹಬೇ ಇಷ್ಕ್ ಎಂಬ ಪ್ರೀತಿಯ ಮಾರ್ಗವು ಯಾವುದೇ ಸೂಫಿ ಅಥವಾ ವಿದ್ವಾಂಸರ ಹೆಸರಿನಲ್ಲಿಲ್ಲ. ಅದರಾಚೆಗೆ ಇದನ್ನು ಸೃಷ್ಟಿಕರ್ತನ ಮಾರ್ಗ ಎಂದು ಕರೆಯಲಾಗುತ್ತದೆ. ಇಲ್ಲಿ ಮಾತ್ರ ಕೇವಲ ಸೂಚನೆಗಳಿಂದಲೇ ಪ್ರೇಮವು ವಿಕಸನಗೊಂಡು ದೈವತ್ವದ ಸಾರವಾಗಿ ರೂಪಾಂತರಗೊಳ್ಳುತ್ತದೆ.

ಒಂದು ವಸ್ತುವು ಎಷ್ಟರವರೆಗೆ ಅಮೂಲ್ಯವಾಗಿರುತ್ತದೋ, ಅಷ್ಟರ ತನಕ ಆ ವಸ್ತುವು ಅಪಮೌಲ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಪ್ರಾಪಂಚಿಕ ಪ್ರೇಮವು ದೈವಿಕ ಪ್ರೇಮದ ಶಕ್ತಿಯನ್ನು ಬಹಳ ಚಿಕ್ಕ ಜಾಗಕ್ಕೆ ಪರಿಮಿತಗೊಳಿಸಿದೆ. ಇಂದು ನಾವು ಪ್ರೀತಿಯ ಬಗ್ಗೆ ಮಾತನಾಡುವಾಗೆಲ್ಲಾ ಅದೊಂದು ರೀತಿಯ ರೊಮ್ಯಾಂಟಿಕ್‌ ಪ್ರೀತಿಯನ್ನು ನೆನಪಿಸುತ್ತದೆ. ಸೂಫಿಗಳಿಗೆ ಪ್ರೀತಿ ಎಂದರೆ ಪ್ರಕಾಶ. ಅದು ಸಾವಿರಾರು ಬಣ್ಣಗಳು ಮತ್ತು ಆಕಾರಗಳಲ್ಲಿ ಉಕ್ಕಿ ಹರಿದು, ಒಂದಾಗಿ ವಿಲೀನಗೊಳ್ಳುತ್ತದೆ.

ಸಾವಿರಾರು ಆಕಾರಗಳಲ್ಲಿ, ಬಣ್ಣಗಳಲ್ಲಿ ಹರಿದು ಏಕತ್ವಕ್ಕೆ ಸೇರಲು ಹರಿಯುವುದೇ ಅವರ ಪ್ರೇಮ. ಪ್ರೀತಿಯಲ್ಲಿ ಹಲವಾರು ವಿಧಗಳಿವೆ. ಗೆಳೆಯರೊಂದಿಗೆ, ಜೊತೆಗಾರರೊಂದಿಗೆ, ಮಕ್ಕಳು, ಪೋಷಕರು, ಪ್ರೇಯಸಿ, ಸ್ವಪ್ರೀತಿ, ಪ್ರಕೃತಿ, ಕಾಣುವುದರೊಂದಿಗ ಮತ್ತು ಕಾಣದೆ ಇರುವುದರೊಂದಿಗಿನ ಪ್ರೀತಿ ಇತ್ಯಾದಿ. ಆದರೆ ಸೂಫಿಗಳಿಗೆ ಪ್ರೀತಿ ಎಂದರೆ ಬೆಂಕಿ. ಕೋಪ, ಅಹಂಕಾರ, ಸ್ವಾರ್ಥ ಮೊದಲಾದವುಗಳನ್ನೆಲ್ಲಾ ಸುಟ್ಟು ಹಾಕಿ ಮತ್ತು ಆತ್ಮವನ್ನು ಶುದ್ಧೀಕರಿಸಿ ನಮ್ಮಲ್ಲಿ ದೇವನನ್ನು ಹೊರತುಪಡಿಸಿ ಇನ್ನೇನನ್ನೂ ಉಳಿಸದ ಬೆಂಕಿ.

ಈ ಸೂಫಿಗಳಿಗೆ, ತನ್ನನ್ನು ತಾನು ಅರಿಯಬೇಕಾದರೆ ಸೃಷ್ಟಿಕರ್ತನನ್ನು ಅರಿಯಬೇಕು. ಸೃಷ್ಟಿಕರ್ತನನ್ನು ತಿಳಿದುಕೊಳ್ಳಲು ನಾವು ನಮ್ಮ ಅಸ್ತಿತ್ವದ ರಹಸ್ಯಗಳನ್ನು ತಿಳಿದುಕೊಳ್ಳಬೇಕು. ಈ ರಹಸ್ಯವನ್ನು ಪ್ರವಾದಿ ಪೈಗಂಬರರು ಹದೀಸ್ ಖುದ್ಸಿ ಮೂಲಕ ವಿವರಿಸಿದ್ದಾರೆ. ಸೃಷ್ಟಿಕರ್ತ ಗುಪ್ತ ನಿಧಿ ಎಂದು ವಿವರಿಸುವ ಈ ಹದೀಸ್ ಸೂಫಿ ಸಂಪ್ರದಾಯದ ಮೂಲ ಸಿದ್ಧಾಂತ.

“ಅಜ್ಞಾತ ನಿಧಿಯಾಗಿದ್ದ ನಾನು
ಅರಿಯಲ್ಪಡಲು ಬಯಸಿದೆ.
ಹಾಗಾಗಿ, ಸೃಷ್ಟಿಕಾರ್ಯ ನಡೆಸಿದೆ
ಅವರಿಗೆ ನನ್ನ ಕುರಿತ ಜ್ಞಾನ ನೀಡಿದೆ,
ಆ ಮೂಲಕ ನನ್ನನ್ನು ಆಳವಾಗಿ ಅರಿಯುವ ತಿಳಿವು ನೀಡಿದೆ”‌.

ಇಲ್ಲಿ ಪ್ರೀತಿಯನ್ನು ಕಾಮವೋ ಅಥವಾ ಕಲ್ಪನೆಯೋ ಎಂಬಂತೆ ಪರಿಚಯಿಸಲಾಗಿಲ್ಲ. (ಇಂತಹ ಎಲ್ಲಾ ಅಂಶಗಳು ಅದರಲ್ಲಿ ಹೇರಳವಾಗಿದ್ದರೂ). ಬದಲಾಗಿ, ಪ್ರೀತಿಯು ಸುಪ್ತಾವಸ್ಥೆಯ ಸ್ಥಿತಿಯಲ್ಲಿ ದೇವರನ್ನು ತಲುಪುವ ಮುಕ್ತತೆಯಾಗಿದೆ. ಅವನು ಪ್ರೀತಿಯ ಮೂಲಕ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾನೆ. ಈ ಪ್ರೀತಿಯ ಮೂಲಕವೇ ನಾವು ಅಸ್ತಿತ್ವದಲ್ಲಿದ್ದೇವೆ. ನಾವು ವಿಶ್ವದಲ್ಲಿ ಪ್ರೀತಿಯ ಹರಿವಿನೊಂದಿಗೆ ವಿಲೀನಗೊಂಡಾಗ, ನಾವು ಮತ್ತೆ ಸೃಷ್ಟಿಕರ್ತನನ್ನು ಸೇರುತ್ತೇವೆ.

ಈ ಹದೀಸ್‌ನಲ್ಲಿ ಸೃಷ್ಟಿಕರ್ತನು ಅತ್ಯಂತ ಸ್ನೇಹಪರ ಧ್ವನಿಯಲ್ಲಿ ಮಾತನಾಡುತ್ತಾನೆ. ಶ್ರೇಷ್ಠತೆಯ ಸರ್ವನಾಮವನ್ನು ಧ್ವನಿಸುವ ಹುವಾ (ಅಂದರೆ ಅವನು) ಗಾಂಭೀರ್ಯವನ್ನು ಧ್ವನಿಸುವ ನಹ್ನು (ಅಂದರೆ ನಾವು) ಮೊದಲಾದವುಗಳನ್ನು ಬಳಸದೆ ಬದಲಿಗೆ ಇಲ್ಲಿ ಆಪ್ತವಾಗಿ ತಾಕುವಂತೆ ಅನಾ (ನಾನು) ಎಂದು ಬಳಸಿದ್ದಾನೆ.
“ನಾನು ಅಜ್ಞಾತ ನಿಧಿಯಾಗಿದ್ದೆ”
“ನಾನು ಅಗಾಧವಾಗಿ ಪ್ರೇಮಿಸಲ್ಪಡಲು, ಅರಿಯಲ್ಪಡಲು ಉತ್ಕಟವಾಗಿ ಬಯಸಿದೆ”

ಕೆಲವು ಸೂಫಿಗಳ ಅಭಿಪ್ರಾಯದಲ್ಲಿ ʼನಾನು ಅರಿಯಲ್ಪಡಲು, ಪ್ರೇಮಿಸಲ್ಪಡಲು ದೇವನಿಗೆ ಇರುವ ಅಭಿಲಾಷೆಯನ್ನು ಸೂಚಿಸುವ ʼಅಹ್ಬಬ್ತುʼ ಎಂಬ ಪದವು ʼಗುಳ್ಳೆʼ ಎಂಬ ಅರ್ಥ ಬರುವ ಹುಬಾಬು ಎಂಬ ಪದದಿಂದ ಉದ್ಭವಿಸಿದೆ. ಅಥವಾ ಪ್ರೇಮಿಸಲ್ಪಡಬೇಕು ಎನ್ನುವ ದೇವನ ಆಗ್ರಹವು ಅವನಲ್ಲಿ ತುಂಬಿ ಉಕ್ಕಿತು ಅನ್ನುವ ಹಾಗೆ. ಹೀಗೆ ಪ್ರೇಮದಿಂದ ಉಬ್ಬಿದ ಗುಳ್ಳೆಯು ಒಡೆಯುವುದರೊಂದಿಗೆ ಸೃಷ್ಟಿ ಕಾರ್ಯವು ಆರಂಭವಾಗುತ್ತದೆ. ಅರಿಯಲ್ಪಡಬೇಕು ಎಂಬ ಆಗ್ರಹದ ಒಂದು ಮಹತ್ತರ ಪ್ರಣಯದ ವಿಸ್ಪೋಟ ಎನ್ನಬಹುದು.

ಅರೇಬಿಕ್ ಭಾಷೆಯಲ್ಲಿ ‘ತಿಳಿದುಕೊಳ್ಳು’ ಎಂಬುವುದಕ್ಕೆ ಹಲವು ಪದಗಳಿವೆ. ಆದರೆ ಈ ಹದೀಸ್ ನಲ್ಲಿ ‘ಉಅರಿಫಾ’ ಎಂಬ ಪದವನ್ನು ಬಳಸಲಾಗಿದೆ. ಈ ಪದದ ಅರ್ಥ ಆಳವಾಗಿ ತಿಳಿಯುವುದು ಎಂದಾಗಿದೆ. ನಮ್ಮ ಅಸ್ಥಿಗೆ ಅಂಟಿಕೊಂಡಿರುವ ಅನಂತ ಪ್ರೀತಿಯನ್ನಲ್ಲದೆ, ವ್ಯವಹಾರಿಕ ಅಥವಾ ಬೌದ್ಧಿಕವಾದ ಮೇಲ್ಮಟ್ಟದ ಅರಿವನ್ನು ಅವನು ಎಂದಿಗೂ ಬಯಸುವುದಿಲ್ಲ.

ಸೃಷ್ಟಿಕರ್ತನು ಮನುಷ್ಯನಲ್ಲಿ ಪಿಸುಗುಟ್ಟುತ್ತಾನೆ:
“ನಾನು ರುಚಿಸಲ್ಪಡಬೇಕೆಂದು ಬಯಸುತ್ತೇನೆ”

ಇಲ್ಲಿ ಹೇಳುವ ಜ್ಞಾನವು ಸ್ವಲ್ಪ ಆಳವಾಗಿದೆ ಮತ್ತು ಗಾಢವಾಗಿದೆ. ಈ ಜ್ಞಾನವು ನಮ್ಮನ್ನು ಹೃದಯಾಂತರಾಳದಲ್ಲಿ ಮನುಷ್ಯರನ್ನಾಗಿ ಮಾಡುವ ಎಲ್ಲವನ್ನೂ ಪೂರ್ಣಗೊಳಿಸುತ್ತದೆ.

ಇಸ್ಲಾಮಿನ ಆರಂಭಿಕ ಶತಮಾನಗಳಲ್ಲಿ, ಸೂಫಿಗಳು ಪ್ರೇಮವನ್ನು ಎರಡು ವರ್ಗಗಳಾಗಿ ವಿಂಗಡಿಸಿದ್ದರು. ‘ಇಷ್ಕೆ ಹಖೀಖೀ’ (ನೈಜ ಪ್ರೀತಿ) ಅಥವಾ ದೇವರಿಗೆ ಮಾತ್ರ ಸಮರ್ಪಿತವಾದ ಪ್ರೇಮ ಮತ್ತು ‘ಇಷ್ಕೆ ಮಜಾಝೀ’ (ರೂಪಕ ಪ್ರೀತಿ) ಅಥವಾ ಮಾನವರ ನಡುವಿನ ಪ್ರೇಮ ಎಂದು ಕರೆದರು. ಸೃಷ್ಟಿಕರ್ತನೊಂದಿಗಿನ ಪ್ರೇಮದ ಜತೆಗೆ ಹೋಲಿಸಿದರೆ ಮನುಷ್ಯರೊಂದಿಗಿನ ಪ್ರೇಮವು (ಮಾನುಷಿಕ ಪ್ರೇಮ) ಕೇವಲ ಪ್ರೇಮದ ರೂಪಕ (metaphorical) ಮಾತ್ರ. ದೈವಿಕ ಪ್ರೇಮದ ಕಾವ್ಯವನ್ನು ಅನುಭವಿಸುವ ಮುನ್ನ ಮಾನುಷಿಕ ಪ್ರೇಮದ ಮೂಲಕ ದೈವಿಕ ಪ್ರೇಮದ ವ್ಯಾಕರಣವನ್ನು ಪರಿಚಯಿಸಿಕೊಳ್ಳಬೇಕು. ಆದರೆ ಗಾಢ ಪ್ರೇಮದ ವಕ್ತಾರರಾದ ಸೂಫಿಗಳ ಹಾದಿಯ ಪ್ರತ್ಯಕ್ಷವಾದ ಬಳಿಕ ಇದೆಲ್ಲವೂ ಬದಲಾಯಿತು. ಆತ್ಯಂತಿಕವಾಗಿ ಒಂದೇ ಒಂದು ಪ್ರೀತಿ ಇದೆ ಅನ್ನುವುದು.
ಸೃಷ್ಟಿಕರ್ತ ಮತ್ತು ಮನುಷ್ಯರ ನಡುವೆ, ಮನುಷ್ಯ ಮತ್ತು ಮನುಷ್ಯರ ನಡುವೆ ಅಂದು, ಇಂದು, ಎಂದೆಂದಿಗೂ ಉಕ್ಕಿ ಹರಿಯುವ ಪ್ರೇಮವನ್ನು ಮೌಲಾನ ರೂಮಿ ಸುಂದರವಾದ ಕವಿತೆಯ ಮೂಲಕ ಚಿತ್ರಿಸಿದ್ದಾರೆ.

“ನೋಡು…
ಪ್ರೀತಿ ಪ್ರೇಮಿಗಳನ್ನು ಹೇಗೆ ಒಟ್ಟುಗೂಡಿಸುತ್ತೆ
ನೋಡು..
ಆತ್ಮವು ದೇಹವನ್ನು ಸೇರಿಕೊಳ್ಳುತ್ತದೆ
ಎಷ್ಟು ಕಾಲ
ನೀನು ಈ ಜೀವನವನ್ನು
‘ಅದು’ ‘ಇದು’
‘ಒಳ್ಳೆಯದು’ ಮತ್ತು ‘ಕೆಟ್ಟದು’
ಎಂದು
ವಿಭಜಿಸಿ ನೋಡುವೆ
‘ಅದು’,’ಇದು’ ಎಲ್ಲವೂ
ಹೇಗೆ ಒಂದಾಗಿ ನಿಲ್ಲುವುದು ಎಂಬುದನ್ನು ನೋಡು.”

ಮೂಲ: ಒಮೀದ್ ಸಾಫಿ
ಅನುವಾದ : ಸ್ವಾದಿಖ್ ಮುಈನಿ, ಬೆಳಾಲು

ಹಿಂದೂ ಮಹಾಸಾಗರದ ನಾವಿಕರು ಮತ್ತು ಸಮುದ್ರದ ಸಂತರು

ಬರಲಿರುವ ಚಂಡಮಾರುತವನ್ನು ಎದುರಿಸಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಕ್ಯಾಪ್ಟನ್ ಇರ್ಫಾನ್ ಅವರು ಮಾಡಿದ್ದರು. ಕಳೆದ ಒಂದು ವಾರದಿಂದ ಒಮಾನಿನ ಸಲಾಲಾದಲ್ಲಿರುವ ಜೆಟ್ಟಿಯಲ್ಲಿ ಹವಾಮಾನ ವರದಿಗಳ ಆಧಾರದ ಮೇಲೆ ಮರದ ಹಡಗು ಒಂದನ್ನು ಲಂಗರು ಹಾಕಿದ್ದರು. ಕಾರ್ಮಿಕರೆಲ್ಲರೂ ಹಡಗಿನಲ್ಲಿದ್ದಾರೆ. ಸರಕುಗಳನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಗಾಳಿಯನ್ನು ಎದುರಿಸಲು ಸರ್ವಸನ್ನದ್ಧರಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ, ಅಂದರೆ ಮೇ 23,‌ 2018 ರಂದು ಯಮನ್‌ನ ತೀರ ಪ್ರದೇಶ ಸೊಕಾಟ್ರದಲ್ಲಿ (socotra) ಮೆಕುನು ಚಂಡಮಾರುತ ಸೃಷ್ಟಿಸಿದ ಅವಾಂತರದ ಬಗ್ಗೆ ಅವರು ತಿಳಿದಿದ್ದರು. 120ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಮತ್ತು 5 ಭಾರತೀಯ ಸಣ್ಣ ಹಡಗುಗಳು ಮುಳುಗಿದ್ದವು. ಚಂಡಮಾರುತವು ಭಾರಿ ವೇಗದಲ್ಲಿ ಮುನ್ನುಗ್ಗುತ್ತಿತ್ತು. ಮುಳುಗುವಿಕೆಯಿಂದ ಕಾಪಾಡಲು ಸರಕುಗಳನ್ನೆಲ್ಲ ಲೋಡ್ ಮಾಡಲಾಗಿತ್ತು. ಹಡಗನ್ನು ಸುರಕ್ಷಿತವಾಗಿ ಲಂಗರು ಹಾಕಿದ್ದರು. ಎಲ್ಲಾ ಸಿಬ್ಬಂದಿಗಳು ಹಡಗಿನಲ್ಲಿದ್ದರು. ಗಾಳಿಯು ಗಂಟೆಗೆ 185 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿತ್ತು. ಅಂತೂ ಚಂಡಮಾರುತ ಬಂದೇಬಿಟ್ಟಿತು!.

ಭಾರತದ ಮಾಂಡವಿಯಲ್ಲಿ ತಯಾರಿಸಲ್ಪಡುವ ವಾಹನ

ಸುರಕ್ಷಿತವಾಗಿ ನಿಲ್ಲಿಸಲಾಗಿದ್ದ ಹಡಗಿನಲ್ಲಿ ಕ್ಯಾ. ಇರ್ಫಾನ್ ಅವರು ಸಣ್ಣ ಹಸಿರು ಧ್ವಜವನ್ನು ಕ್ಯಾಬಿನ್ ಬಳಿಯ ಬಾನಿಸ್ಟರ್‌ಗೆ ಕಟ್ಟುತ್ತಾ ತಮ್ಮ ಇಡೀ ಸಿಬ್ಬಂದಿಯೊಂದಿಗೆ ‘ಯಾ ಗೌಸ್’ ಎಂದು ಕೂಗಿದರು. ಅವರು ಖಾದಿರಿ ತರೀಖತ್‌ನ ಸಂಸ್ಥಾಪಕ, ಸೂಫಿ ಸಂತ ಅಬ್ದುಲ್ ಖಾದರ್ ಜೀಲಾನಿ ಅವರ ಹೆಸರನ್ನು ರಕ್ಷಣೆ ಗೋಸ್ಕರ ಕರೆಯುತ್ತಿದ್ದರು. ಕಟ್ಟಲಾಗಿದ್ದ ಆ ಧ್ವಜವು ಇನ್ನೋರ್ವ ಸೂಫಿ ಸಂತ ಪಶ್ಚಿಮ ಭಾರತದ ಮುಂಡ್ರಾದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಶಾಹ್ ಮುರಾದ್‌ ಬುಖಾರಿ ಅವರಿಗೆ ಸಂಬಂಧಿಸಿದಾಗಿತ್ತು. ನಾವಿಕರ ರಕ್ಷಕನೆಂದೇ ಖ್ಯಾತಿವೆತ್ತ ಶಾಹ್ ಮುರಾದ್ ಬುಖಾರಿ ಅವರ ಸಮಾಧಿ ಮೇಲೆ ಹಾಸಲಾದ ಹಸಿರು ಚಾದರದಿಂದ ಕತ್ತರಿಸಿ ತೆಗೆಯಲಾಗಿತ್ತು. ಅವರ ಅನುಗ್ರಹ ಆ ಬಟ್ಟೆಯಲ್ಲಿ ಇದೆ ಎಂದು ಅವರು ನಂಬಿದ್ದರು.

ಚಂಡಮಾರುತವು ಇನ್ನೇನು ಬೀಸುವ ಹಂತದಲ್ಲಿ ನಾವಿಕರ ಕುಟುಂಬದವರು, ಪ್ರೀತಿ ಪಾತ್ರರು ಅವರ ಸುರಕ್ಷತೆಗಾಗಿ ಪ್ರಾರ್ಥಿಸಲು ಸೂಫಿ ಕೇಂದ್ರಗಳಿಗೆ ಧಾವಿಸಿದರು. ಅರೇಬಿಯನ್ ಕೊಲ್ಲಿಯಲ್ಲಿ ಅಪಾರ ನಾಶ ನಷ್ಟ ಉಂಟು ಮಾಡಿದ ಮೆಕುನು ಚಂಡಮಾರುತವು ಯಮನ್ ಮತ್ತು ಒಮಾನ್ ನಿಂದ ಭಾರತದ ಕಡೆ ನುಗ್ಗುತ್ತಿತ್ತು. ಸಲಾಲಾ ಬಂದರಿನ ಬಳಿ ಚಂಡಮಾರುತದ ಹೊಡೆತಕ್ಕೆ ಏಳು ಅರಬ್ ದೋಣಿಗಳು ಮುಳುಗಿದ್ದರೂ ಇರ್ಫಾನ್ ಮತ್ತು ಅವರ ಸಿಬ್ಬಂದಿಗಳು ಸುರಕ್ಷಿತರಾಗಿದ್ದರು.

ಕಡಲು ಶಾಂತವಾದಾಗ ಇರ್ಫಾನ್ ಮತ್ತು ಅವರ ಸಿಬ್ಬಂದಿಗಳು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಶಾರ್ಜಾದಿಂದ ಯಮನಿನ ನಿಶ್ಟೂನ್‌ಗೆ ಸಾಗಿಸಲು ಸಮುದ್ರಯಾನ ಪುನರಾರಂಭಿಸಿದರು. ಯಾನ ಮುಗಿದ ಮೇಲೆ ಕ್ಯಾಪ್ಟನ್ ಇರ್ಫಾನ್ ಅವರು ಜಾಮ್ ಸಲಾಯದಲ್ಲಿರುವ ಶಾಹ್ ಮುರಾದ್ ಬುಖಾರಿ ಅವರ ದರ್ಗಾಕ್ಕೆ ಭೇಟಿ ನೀಡುತ್ತಾರೆ.

ಹಸಿರು ಧ್ವಜ ಕಟ್ಟಿದ ಭಾರತೀಯ ವಾಹನ

ಯುರೋಪಿಯನ್ನರ ಆಗಮನ ಮುನ್ನವೇ ಅರಬ್ ಹಡಗು (Dhow) ಹಿಂದೂ ಮಹಾಸಾಗರದಾದ್ಯಂತ ಕ್ರಮಿಸಿತ್ತು. ಲ್ಯಾಟಿನ್ ದೋಣಿಗಳ ಮೂಲಕ ಮಾನ್ಸೂನ್‌ನ ವಿರುದ್ಧ ದಿಕ್ಕುಗಳಿಗೆ ಸರಕು ಸರಂಜಾಮುಗಳನ್ನು, ಜನರನ್ನು ಸಾಗಿಸಲಾಗುತ್ತಿತ್ತು .ಇಂದು ಪಶ್ಚಿಮ ಭಾರತದ ಕಛ್‌ನಿಂದ ಅರಬ್ ದೋಣಿಗಳು ಸಮುದ್ರ ಮಾರ್ಗದ ಮೂಲಕ ಸಾಗುತ್ತಿದೆ. ಕಚ್ಚಿ ವಾಹನ್ ಎಂದು ಕರೆಯಲ್ಪಡುವ ಈ ದೋಣಿಗಳು ಗಾಳಿಯ ಸಹಾಯದಿಂದ ಚಲಿಸುವುದಿಲ್ಲ. ಬದಲಾಗಿ ಡೀಸಲ್ ಇಂಜಿನ್ ಗಳನ್ನು ಹೊಂದಿದೆ. ಕಂಟೇನರ್ ಹಡಗುಗಳು ಹೋಗಲು ಸಾಧ್ಯವಾಗದ ಪ್ರದೇಶಗಳಿಗೆ ಈ ಯಾಂತ್ರಿಕೃತ ಮರದ ಹಡಗುಗಳು ಹೋಗುತ್ತವೆ. ಆಹಾರ ಪದಾರ್ಥಗಳು, ಡೀಸೆಲ್, ಇದ್ದಿಲು, ಒಣ ಮೀನುಗಳು, ಜಾನುವಾರುಗಳು ಹಾಗೂ ಕಾರುಗಳನ್ನು ಇವುಗಳ ಮೂಲಕ ಸಾಗಿಸಲಾಗುತ್ತದೆ. ಬದಲಾಗುವ ಸರಕಾರದ ನೀತಿಗಳು ಹಾಗೂ ಜಾಗತಿಕ ಮಾರುಕಟ್ಟೆ ವ್ಯವಸ್ಥೆಗೆ ಅನುಗುಣವಾಗಿ ಉಂಟಾಗುವ ಬದಲಾವಣೆಗೆ ಈ ಅರಬ್ ಹಡಗುಗಳು ಹೊಂದಿಕೊಳ್ಳುತ್ತವೆ.

ಯುದ್ದ-ಕಲಹದ ಸಂದರ್ಭದಲ್ಲಿ ಕಂಟೇನರ್ ಹಡಗುಗಳು ಸಾಗದಂತಹ ಪ್ರದೇಶಗಳಿಗೆ ಸಣ್ಣ ಬಂದರುಗಳ ಮೂಲಕ ಸೇವೆ ಸಲ್ಲಿಸಲು ಇವುಗಳನ್ನು ಬಳಸಲಾಗುತ್ತದೆ. ೧೯೯೧ರಲ್ಲಿ ಸೊಮಾಲಿಯ ಸರಕಾರ ಪತನವಾದಾಗ ಕಿಸ್ಮಯೊ ಎಂಬ ಸಣ್ಣ ಬಂದರಿಗೂ ಅವು ತಲುಪಿದವು. ಈಗ ಸೊಮಾಲಿಯಾದ ಹೆಚ್ಚಿನ ಭಾಗಗಳಿಗೂ ಕಂಟೇನರ್ ಹಡಗುಗಳ ಸೇವೆ ಲಭ್ಯ. ಇತ್ತೀಚೆಗೆ ಯಮನ್ ಆಂತರಿಕ ಸಂಘರ್ಷದ ಸಂದರ್ಭದಲ್ಲಿ ಶಿಹರ್ ಮತ್ತು ನಿಶ್ಟೂನ್ ಸಣ್ಣ ಬಂದರು ಗಳಿಗೂ ಈ ಅರಬ್ ಹಡಗುಗಳ ಸೇವೆ ಒದಗಿಸಲಾಗಿತ್ತು. ಹಡಗುಗಳು ಸಾಗದ ಕಡೆ ಸಂಚರಿಸುವುದು ಮಾತ್ರವಲ್ಲದೆ ಸಮಯ, ಸಂದರ್ಭ , ಪರಿಸ್ಥಿತಿ ಅಪಾಯ ಮತ್ತು ರಕ್ಷಣೆಯ ಬಗ್ಗೆ ತಿಳಿದು ಹಿಂದೂ ಮಹಾಸಾಗರದಾದ್ಯಂತ ಸಂಚರಿಸುತ್ತವೆ. ಶಿಪ್ಪಿಂಗ್ ಜಗತ್ತಿನಲ್ಲಿ ಧರ್ಮ, ಸಮಾಜ , ಆರ್ಥಿಕತೆ, ಜೀವ -ನಿರ್ಜೀವ ವಸ್ತುಗಳ ನಡುವಿನ ಕೊಂಡಿಯಾಗಿ ಈ ಅರಬ್ ಹಡಗುಗಳು ರೂಪಗೊಂಡಿವೆ. ತೋರಿಕೆಯಲ್ಲಿ ಪ್ರಾಚೀನ ಯುಗದ ವಸ್ತುವಂತೆ ಕಂಡರು ಬಂಡವಾಳ ಶಾಹಿ ಯುಗದಲ್ಲೂ ಇವುಗಳ ಪ್ರಭಾವ ವ್ಯಾಪಿಸಿದೆ.

ಈ ವಾಹನ ಎಂಬುದು ಒಂದು ವಿಭಿನ್ನ ಪರಿಸರ (Heterotopic space). ಇದು ನಿರಂತರ ಚಲನೆಯಲ್ಲಿರುತ್ತದೆ, ವಿಭಿನ್ನ ಸ್ಥಳಗಳು ಬಂದರುಗಳ ನಡುವಿನ ಸಂಪರ್ಕ ಸಾಧನ ಮಾತ್ರವಲ್ಲದೆ ಅದುವೇ ಒಂದು ಪ್ರಪಂಚವಾಗಿದೆ. ಅವುಗಳಲ್ಲಿ ದುಡಿಯುವ ನಾವಿಕರು ವರ್ಷದ ಒಂಭತ್ತು ತಿಂಗಳುಗಳು ಅದರಲ್ಲೇ ಇರುತ್ತಾರೆ. ದಿನವನ್ನು ಆರು ಗಂಟೆಗಳ ಪಾಳಿಗಳಾಗಿ ವಿಂಗಡಿಸಿ ಕೆಲಸ ಮಾಡುವ ನಾವಿಕರ ಪಾಲಿಗೆ ಇದೊಂದು ಸ್ಥಳೀಯ ಮನೆ (Domestic space) ಕೂಡ ಆಗಿದೆ. ಲಂಗರು ಹಾಕಿದ್ದರೂ ನಾವಿಕರು ಅದರಲ್ಲಿ ಉಳಿಯುತ್ತಾರೆ. ಹಡಗು ಎಂಬುದು ಭೂತ- ವರ್ತಮಾನ- ಭವಿಷ್ಯವನ್ನು ಒಡಲಲ್ಲಿಟ್ಟುಕೊಂಡಿರುವ ಒಂದು ಹೆಟರೊಕ್ರೊನಿ (Heterochrony) ಆಗಿದೆ. ನಾವಿಕರು ಯಾತ್ರೆ ಆರಂಭಿಸುವಾಗ ಆ ಪ್ರದೇಶದಲ್ಲಿ ಸಂಚರಿಸಿದ್ದ ತಮ್ಮ ಪೂರ್ವಜರು ಹಾಗೂ ಸೂಫಿ ಸಂತರನ್ನು ಸ್ಮರಿಸುತ್ತಾರೆ.

ಘೋಸ್ (Ghos) ಎಂಬ ಸಾಧನವನ್ನು ಬಳಸಿ ಈ ಸಣ್ಣ ಹಡಗಿನ ನಾವಿಕರು ತಮ್ಮ ಪ್ರಯಾಣ ಸಮಯ ಗಮ್ಯಸ್ಥಳವನ್ನು ಲೆಕ್ಕ ಹಾಕುತ್ತಾರೆ. ಘೋಸ್ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಚಲನೆಯನ್ನು ಸೂಚಿಸುತ್ತದೆ. ಸೈಟ್ ಗಳ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ . ಭಾರತದಿಂದ ಮಧ್ಯ ಪ್ರಾಚ್ಯ ಮತ್ತು ಪೂರ್ವ ಆಫ್ರಿಕಾದ ಕಡೆ ಪ್ರಯಾಣಿಸುವಾಗ ನಾವಿಕರು ಬಂದರು ನಗರಗಳಾದ ಭಾರತದ ಮುಂದ್ರಾ, ಎಮಿರೇಟ್‌ನ ದುಬಾಯಿ ಮತ್ತು ಶಾರ್ಜಾ , ಸೋಮಾಲಿಯಾದ ಕಿಸ್ಮಯೊ ಮತ್ತ ಬರ್ಬೆರ, ಕೆನ್ಯಾದ ಮೊಂಬಸ ನಡುವೆ ಸಂಪರ್ಕ ಕಲ್ಪಿಸುತ್ತಾರೆ. ಅವರು ಈ ಸೈಟುಗಳನ್ನು ಪರಸ್ಪರ ಲಿಂಕ್ ಮಾಡುತ್ತಾರೆ. ಭೂಪಟದ ಮೇಲಿರುವ ರಾಷ್ಟ್ರೀಯ ಗಡಿಗಳನ್ನು ನಿರಾಕರಿಸಿ ತಮ್ಮದೇ ಒಂದು ಪ್ರಾದೇಶಿಕತೆಯನ್ನು ಸೃಷ್ಟಿಸುತ್ತಾರೆ.

ಆದರೂ ಅರಬ್ ಹಡಗಿನ ವಹಿವಾಟು ಈ ರಾಷ್ಟ್ರೀಯ ಗಡಿಗಳಿಂದ ಉಂಟಾಗುವ ಅಸಮತೋಲನವನ್ನು ಅವಲಂಬಿಸಿರುತ್ತದೆ. ಇವುಗಳು ಆರ್ಥಿಕತೆಯ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಒಂದು ಪ್ರದೇಶದಲ್ಲಿ ಹೇರಳವಾಗಿ ಕಂಡುಬರುವ ಸರಕುಗಳನ್ನು ಅವುಗಳು ಕಡಿಮೆ ಇರುವ ಪ್ರದೇಶಕ್ಕೆ ತಲುಪಿಸುತ್ತವೆ‌. ದೂರದ ಮಾರುಕಟ್ಟೆಗಳಲ್ಲಿ ಸರಕುಗಳ ನಡುವಿನ ಬೆಲೆ ವ್ಯತ್ಯಾಸದ ಕಾರಣ ವ್ಯಾಪಾರಕ್ಕೆ ಒಂದು ಮೌಲ್ಯ ಸಿಗುತ್ತದೆ. ಬೆಲೆ ವ್ಯತ್ಯಾಸಗಳಿರುವ ಸಂದರ್ಭಗಳಲ್ಲಿ ಒಂದು ಮಧ್ಯಸ್ಥಿಕೆಯನ್ನು ತರುತ್ತದೆ.‌ ಇದು ಲಾಭವನ್ನು ಗಳಿಸುವ ಒಂದು ಸಾಧನ ಮತ್ತು ಚಲನೆಯಾಗಿದೆ.

ಘೋಸ್‌ನಲ್ಲಿ ಚಿತ್ರಿಸಲಾದ ಭೂಪಟ ಮತ್ತು ನಾಟಿಕಲ್ ಚಾರ್ಟನ್ನು ಅವಲಂಬಿಸಿ ನಾವಿಕರು ಬದುಕುತ್ತಾರೆ. ಇತಿಹಾಸಕಾರ ಜೋಹಾನ್ ಮ್ಯಾಥ್ಯೂ ಹೇಳುವ ಪ್ರಕಾರ ನಕ್ಷೆಗಳಲ್ಲಿ ಭೂಮಿ ಮತ್ತು ಸಮುದ್ರಗಳನ್ನು ಗ್ರಿಡ್ (grid) ರೂಪದಲ್ಲಿ ಬಿಡಿಸಲಾಗಿಲ್ಲ. ಬದಲಾಗಿ ಹಡಗಿನ ಮೇಲಂತಸ್ತಿನಿಂದ (Deck) ಕಾಣುವ ರೂಪದಲ್ಲಿ ಬಿಡಿಸಲಾಗಿದೆ. ಅನಿರೀಕ್ಷಿತ ಬಂಡೆ ಕಲ್ಲು, ಆಳವಿಲ್ಲದ ಮರಳಿನ ದಂಡೆಗಳು ಮತ್ತು ಅಪಾಯಕಾರಿ ಸುಂಟರಗಾಳಿಗಳ ಬಗ್ಗೆ ನಿಖರ ಲಭಿಸುವ ಹಾಗೆ ಕರಾವಳಿ ತೀರವನ್ನು ವಿವರವಾಗಿ ಚಿತ್ರಿಸಲಾಗಿದೆ.

ಯುರೋಪಿಯನ್ ನಕ್ಷೆಗಳಂತೆ ದೂರಗಳನ್ನು ನಿಖರವಾಗಿ ಅಳೆಯಲಾಗುವುದಿಲ್ಲ ಮತ್ತು ಚಿತ್ರಿಸಲಾಗಿಲ್ಲ. ಆದರೂ ಘೋಸ್ ಅನ್ನು ಜಲೀಯ ಸ್ಥಳಾಕೃತಿಗೆ ತಕ್ಕಂತೆ ಕತ್ತರಿಸಲಾಗಿದೆ. ಎಷ್ಟೇ ನಿಪುಣ ಕ್ಯಾಪ್ಟನ್ ಆದರೂ ಜಿಪಿಎಸ್ ಅನ್ನು ನ್ಯಾವಿಗೇಶನ್ ಗೆ ಬಳಸುತ್ತಾರೆ. ಸ್ಥಳಗಳ ಹೆಸರುಗಳು ಪರದೆಯ ಮೇಲೆ ಚುಕ್ಕೆಗಳಾಗಿ ಕಾಣುತ್ತದೆ. ಮತ್ತು ಗಮ್ಯಸ್ಥಳಕ್ಕೆ ಮಾರ್ಗದರ್ಶನ ನೀಡುತ್ತದೆ.

ನಾವಿಕರು ಲಾಗ್‌ಬುಕ್‌ಗಳಲ್ಲಿ ಪ್ರಯಾಣದ ಬಗ್ಗೆ ಬರೆದಿಡುತ್ತಾರೆ. ಮಾನ್ವಿಯ ಅರಬ್ ಹಡಗಿನ ಕ್ಯಾಪ್ಟನ್ ಆಗಿರುವ ಅಬ್ದುಲ್ ಇತ್ತೀಚೆಗೆ ಒಂದು ಲಾಗ್ ಬುಕ್ ಒಂದನ್ನು ನನ್ನೊಂದಿಗೆ ಹಂಚಿದ್ದರು. ಆ ಪುಸ್ತಕದಲ್ಲಿ ಅಬ್ದುಲ್ ಪ್ರಯಾಣಿಸಿದ ಸ್ಥಳ ಮತ್ತು ಸಮಯವನ್ನು ಸ್ಪಷ್ಟವಾಗಿ ಗುಜರಾತಿ ಭಾಷೆಯಲ್ಲಿ ಬರೆದಿಟ್ಟಿದ್ದರು. ಉದಾಹರಣೆಗೆ 1998 ಮಾರ್ಚ್ 26ರಂದು ಅವರು ಇರಾನ್ ಗೆ ತೆರಳಿದ್ದನ್ನು ನಮೂದಿಸಿದ್ದಾರೆ. ಲಾಗ್‌ಬುಕ್‌ನಲ್ಲಿ ಅನೇಕ ಕಡೆ ಕೂಡ ಭಾಷೆಗಳಲ್ಲಿ ಬರೆಯಲಾಗಿದೆ. ನಾನು ಅವುಗಳನ್ನು ಓದುವಾಗ ಅಬ್ದುಲ್ ನನ್ನನ್ನು ನೋಡಿ ಮುಗುಳ್ನಕ್ಕು “ನಾನು ಪ್ರತಿ ಘೋಸ್ಅನ್ನು ರೆಕಾರ್ಡ್ ಮಾಡಿದ್ದರು ಅದರಲ್ಲಿರುವ ಸ್ಥಳಗಳ ಹೆಸರು ಅಷ್ಟು ನಿಖರವಾಗಿಲ್ಲ. ಇರಾನ್ ಬದಲಾಗಿ ಇರಾಕ್ ಎಂದು ನಮೂದಿಸಿದ್ದೂ ಇದೆ”.

ಗಲ್ಪ್ ಯುದ್ದದ ಸಂದರ್ಭದಲ್ಲಿ ವ್ಯಾಪಾರದ ವಿರುದ್ಧ ಅಂತರಾಷ್ಟ್ರೀಯ ನಿರ್ಬಂಧ ವಿತ್ತು. ಅಂದು ಸರಕುಗಳ ಕಳ್ಳ ಸಾಗಣೆ ಮೂಲಕ ಅಬ್ದುಲ್ ಅವರು ತಮ್ಮ ಮಾಲೀಕನಿಗೆ ಲಾಭಗಳಿಸಿ ಕೊಟ್ಟಿದ್ದರು. ನನ್ನಂತಹ ನಾವಿಕನಿಗೆ ಸ್ಥಳದ ಹೆಸರು ಮುಖ್ಯವಲ್ಲ. ಒಂದು ಋತುವಿನಲ್ಲಿ ನಾನು ಬಿಡಿಸಿದ ಘೋಸ್ ಗಳ ಲೆಕ್ಕ ಮಾತ್ರ ಮುಖ್ಯ ಎಂದು ಅಬ್ದುಲ್ ಹೇಳುತ್ತಾರೆ. ಕಳ್ಳ ಸಾಗಾಣಿಕೆಗಾರರು ತಮ್ಮ ನಡುವಿನ ಸಂಬಂಧವನ್ನು ಮರೆಮಾಚಲು ಸ್ಥಳಗಳ ಹೆಸರುಗಳನ್ನು ಬದಲಿಸುವುದುಂಟು.

ಘೋಸ್‌ಗಳ ಚಲನೆ ನೌಕಾಯಾನದ ಅವಧಿಯಾಗಿದೆ.
ಒಬ್ಬ ನಾವಿಕನು ತನ್ನ ಜೀವನೋಪಾಯವು ಅದರ ಮೇಲೆ ಅವಲಂಬಿತವಾಗಿರುವುದರಿಂದ ಒಂದು ಋತುವಿನಲ್ಲಿ ಗರಿಷ್ಠ ಸಂಖ್ಯೆಯ ಘೋಸ್ ಗಳನ್ನು ಮಾಡಲು ಬಯಸುತ್ತಾನೆ. ಮಾಲಿಕ ಆದಾಯ ಮತ್ತು ನಾವಿಕನ ವೇತನವನ್ನು ಕೂಡಾ ಘೋಸ್‌ಗಳ ಮೇಲೆ ಆಧಾರಿತವಾಗಿತ್ತದೆ. ವರ್ಷಕ್ಕೆ ಕನಿಷ್ಠ ಏಳು ಘೋಸ್ ಗಳನ್ನು ನಾವಿಕ ನಿರೀಕ್ಷಿಸುತ್ತಾನೆ.

ಒಂದು ಕಾಲದಲ್ಲಿ ಘೋಸ್ ಎಂಬುದು ಹವಾಮಾನಕ್ಕೆ ತಕ್ಕಂತೆ ಮಾನ್ಸೂನ್ ಗೆ ತಕ್ಕಂತೆ ನಡೆಯುತ್ತಿತ್ತು. ಲ್ಯಾಟಿನ್ ಹಾಯ್ ದೋಣಿಗಳು ಗಾಳಿಯ ದಿಕ್ಕಿಗೆ ಸಂಚರಿಸುತ್ತಿದ್ದವು. ಮಳೆಗಾಲದಲ್ಲಿ ನೈರುತ್ಯ, ಅಕ್ಟೋಬರ್ ನಲ್ಲಿ ಈಶಾನ್ಯಕ್ಕೆ ಚಲಿಸುತ್ತವೆ. ಕಚ್ಚಿ ಸಮುದ್ರಯಾನ ಮಾಡುವವರಿಗೆ ನೈರುತ್ಯ ಮಾನ್ಸೂನ್ ಪ್ರಾರಂಭವಾದಾಗ ‘ಆಖರ್’ ಹಾಗೂ ಗಾಳಿ ಬದಲಾದಾಗ ‘ಮೌಸಂ’ ಎಂದು ವಿಂಗಡಿಸಲಾಗಿದೆ. ಆಖರ್ ಮಳೆಯ ಅವಧಿಯಾಗಿದ್ದು, ಈ ಸಮಯದಲ್ಲಿ ಹೆಚ್ಚಿನ ನಾವಿಕರು ಮನೆಗೆ ಮರಳುತ್ತಾರೆ. 9 ತಿಂಗಳುಗಳು ನಾವಿಕರು ಸಮುದ್ರದಲ್ಲೇ ಕಳೆಯುತ್ತಾರೆ. ಈ ದಿನಗಳಲ್ಲಿ ಹಡಗುಗಳು ಡೀಸೆಲ್ ಇಂಜಿನ್ ನಲ್ಲಿ ಚಲಿಸುತ್ತವೆ. ಆದರೆ ನಾವಿಕರು ಕಾಲೋಚಿತವಾಗಿ ಬದುಕುವುದನ್ನು ಮುಂದುವರಿಸುತ್ತಾರೆ.

ಪ್ರತಿ ಘೋಸ್‌ಗಳನ್ನು ಅನಿರೀಕ್ಷಿತ ಹವಾಮಾನ ಮತ್ತು ಸಮುದ್ರದ ಪ್ರತಿಕೂಲತೆಗೆ ತಕ್ಕಂತೆ ಹಣೆಯಲಾಗುತ್ತದೆ. ಅಲೆಗಳು, ಗಾಳಿ ಮತ್ತು ಪ್ರವಾಹಗಳು ಎದುರಾಗುತ್ತದೆ. ವಿಶೇಷವಾಗಿ ಹಿಂದೂ ಮಹಾಸಾಗರ ಹವಾಮಾನ ವೈಪರೀತ್ಯ ವನ್ನು ಎದುರಿಸುತ್ತದೆ. ಗಾಳಿಗಳು , ಉಷ್ಣ ಬಿರುಗಾಳಿಗಳು ಚಂಡಮಾರುತಗಳು ಅಪಾರ ಹಾನಿಯನ್ನು ಉಂಟುಮಾಡುತ್ತವೆ. ಈ ಅಪಾಯವು ಘೋಸ್ ಅನ್ನು ಲಾಭದಾಯಕ ಘಟಕವನ್ನಾಗಿ ಮಾಡುತ್ತದೆ.

ಅದಾಗಿಯೂ ಘೋಸ್ ಕೇವಲ ಆರ್ಥಿಕ ಘಟಕವಲ್ಲ. ಧಾರ್ಮಿಕ ವಿಶ್ವಾಸ ಮತ್ತು ಸಮಯ ಪ್ರಜ್ಞೆಯೊಂದಿಗೆ ಸಂಬಂಧಿಸಿದೆ. ಕೇವಲ ಸವಲತ್ತು, ಸಿಬ್ಬಂದಿ, ಒಳ್ಳೆಯ ಹವಾಮಾನ, ಲಾಭದಾಯಕ ಕಾರ್ಗೋಗಳ ಮೂಲಕ ಯಶಸ್ವಿ ಘೋಸ್ ಎನಿಸಲು ಸಾಧ್ಯವಿಲ್ಲ. ಕಡಲಿನ ಸಂತರ ಅನುಗ್ರಹವು ಇರಬೇಕು‌. ಅನಿರೀಕ್ಷಿತ ಹವಾಮಾನ ವ್ಯತ್ಯಾಸದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂತರ ಮಧ್ಯಸ್ಥಿಕೆಯು ಆ ಪ್ರದೇಶದ ವಿಮೆಯಾಗಿ ಕಾರ್ಯಚರಿಸುತ್ತದೆ. ಅವು ಸಮುದ್ರದ ಅಪಾಯಗಳಿಂದ ಅವರನ್ನು ರಕ್ಷಿಸುವ ಸಾಧನವಾಗಿವೆ. ಚಂಡಮಾರುತದ ಸಂದರ್ಭ ಮನುಷ್ಯ ಕೇವಲ ನಿಮಿತ್ತ ಮಾತ್ರ. ಅಂತಹ ಸಂದರ್ಭಗಳಲ್ಲಿ ಪವಾಡಗಳ ಮೂಲಕ ಕಡಲಿನ ಸಂತರು ಆ ಪ್ರದೇಶಗಳ ರಕ್ಷಕರಾಗುತ್ತಾರೆ.

ಕಡಲಿನಲ್ಲಿ ಇಂದಿಗೂ ಆತ್ಮಗಳ ಸಂಚಾರವಿದೆ. ಕಚ್ಚಿ ನಾವಿಕರ ಪಾಲಿಗೆ ಓರ್ವ ಝಿಂದಾ ಪೀರ್ (ಜೀವಂತ ಸಂತ), ದರಿಯ ಪೀರ್ (ಕಡಲಿನ ಸಂತ) ಅಂತ ಇರುತ್ತಾರೆ. ಆ ಸಂತರುಗಳೇ ನಾವಿಕರ ಸರ್ವಸ್ವ. ಪ್ರತಿ ಸಮುದ್ರಯಾನದ ಮುನ್ನ ದರಿಯಾಪೀರ್ ಅವರನ್ನು ಆದರಿಸಲಾಗುತ್ತದೆ. ಹೊಸ ಋತು ಪ್ರಾರಂಭದಲ್ಲಿ ಹಡಗಿನಲ್ಲಿ ಇರಿಸುವ ಹಸಿರು ಧ್ವಜವು ಆ ಯಾನವನ್ನು ಮುನ್ನಡೆಸುತ್ತದೆ. ತೀರದಲ್ಲಿರುವ ನಾವಿಕರ ಸಂಬಂಧಿಕರಿಗೂ ಅದೊಂದು ಭರವಸೆ. ಪ್ರತಿ ಸಂಚಾರದ ಮುನ್ನ ನಾವಿಕರು ಮತ್ತು ಕುಟುಂಬಿಕರು ಯಾನವು ಕಡಲಿನ ಸಂತರ ಸ್ವಾಧೀನದಲ್ಲಿ ಸಿಗಲು ಅವರ ಖಬರ್ ಸಂದರ್ಶನ ಮಾಡುತ್ತಾರೆ. ಭಾರತದಲ್ಲಿ ಸೂಫಿ ಸಂತರು ಹಡಗುಗಳ ರಕ್ಷಕರಾಗಿ ಗುರುತಿಸಲ್ಪಡುತ್ತಾರೆ. ಹಸಿರು ಧ್ವಜವು ಸಂತರ ಆಶೀರ್ವಾದದ ಪ್ರತೀಕ. ಪ್ರತಿ ಘೋಸ್ ತಯಾರಿಸುವ ಮುನ್ನ ನಾವಿಕರು ಸೂಫಿಗಳ ಸಮಾಧಿಗೆ ಭೇಟಿ ನೀಡುತ್ತಾರೆ. ಅವರ ಕುಟುಂಬಿಕರು ಕೂಡ ಭೇಟಿ ನೀಡಿ ಹಡಗು ಅವರ ಸ್ವಾಧೀನದಲ್ಲಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.

ಕ್ಯಾಪ್ಟನ್ ಇರ್ಫಾನ್ ಅವರು ಸಂದರ್ಶಿಸಿದ ಶಾಹ್ ಮುರಾದ್ ಬುಖಾರಿ ಅವರು ಸಮುದ್ರದ ಎರಡನೇ ಸಂತ ಎಂದು ಕರೆಯಲ್ಪಡುತ್ತಾರೆ. ಕ್ರಿ.ಶ. 1060ರಲ್ಲಿ ಬುಖಾರದಿಂದ ಮುಂದ್ರಾಗೆ ಬಂದಿಳಿದ ಅವರು ಸಮುದ್ರಯಾನದುದ್ದಕ್ಕೂ ನಾವಿಕರ ಒಡನಾಡಿಯಾಗಿದ್ದಾರೆ. ಅವರ ವಫಾತ್ ಬಳಿಕ ಮಹಿಳೆಯರು ಪುರುಷರು ಮಕ್ಕಳನ್ನದೆ ಪ್ರತಿಯೊಬ್ಬರೂ ಅವರ ಸಮಾಧಿ ಬಳಿ ಬರಲು ಪ್ರಾರಂಭಿಸುತ್ತಾರೆ. ಅವರ ಸಮಾಧಿಯ ಬಳಿ ಸಣ್ಣ ರೂಮ್ ಇದೆ. ಆ ರೂಮಿನ ಒಂದು ಕಿಟಕಿ ಮೂಲಕ ಕಡಲಿಗೆ ಸಣ್ಣ ದಾರಿ ಇದೆ. ಸಮುದ್ರಯಾನದಲ್ಲಿರುವ ನಾವಿಕರ ಸುದ್ದಿಗಳನ್ನು ಸಂಬಂಧಿಕರಿಗೆ ಅಲ್ಲಿ ಶೇಖ್‌ರವರು ಸೂಚನೆ ಕೊಡುತ್ತಾರೆ.

ಈಗ ಆ ಕಿಟಕಿಯನ್ನು ಮುಚ್ಚಲಾಗಿದೆ. ಸಂತರು ಮೌನಿಯಾಗಿದ್ದಾರೆ. ವಾಟ್ಸಪ್ ಮೂಲಕ ಕುಟುಂಬಿಕರು ಮಾಹಿತಿ ಪಡೆದುಕೊಳ್ಳುತ್ತಾರೆ. ಈ ದಿನಗಳಲ್ಲಿ ಸೋಮಾಲಿಯ, ಒಮಾನ್,ಯಮನ್ ಮತ್ತು ಯುಎಇ ಹೋಗುವ ಹಡಗುಗಳನ್ನು ರಕ್ಷಿಸಲು ಹರಕೆಯಾಗಿ ವಾಹನಗಳ ಮಾದರಿಗಳನ್ನೇ ಸಂತರ ಸಮಾಧಿ ಮುಂದೆ ಇಡಲಾಗುತ್ತದೆ. ನೌಕಾಯಾನ ಮಾಡುವಾಗ ಅವರು ಸಂತರ ಆಶೀರ್ವಾದವನ್ನು ತಮ್ಮೊಂದಿಗೆ ಒಯ್ಯುತ್ತಾರೆ. ಪ್ರತಿ ಘೋಸ್‌ನಲ್ಲಿ ಈ ಸಂತರು ಚಲನಶೀಲತೆಯನ್ನು ಚುರುಕುಗೊಳಿಸುತ್ತಾರೆ. ಕಡಲಿಗೆ ಒಂದು ಇತಿಹಾಸ ಇದ್ದರೆ, ಅದು ಭೂತವನ್ನು ವರ್ತಮಾನ ಮಾಡುವ, ಪ್ರಕ್ಷುಬ್ಧ ಸಮುದ್ರದ ಮಧ್ಯೆ ಅದೃಶ್ಯ ಶಕ್ತಿಗಳ ಸಹಾಯ ಸಿಗುವ ಘೋಸ್‌ಗಳ ಇತಿಹಾಸ ಮಾತ್ರ ಎಂದು Derrek Walcott ಹೇಳುತ್ತಾರೆ.

ಮೂಲ: ನಿಧಿ ಮಹಾಜನ್
ಅನು: ಮುಹಮ್ಮದ್ ಶಮೀರ್ ಪೆರುವಾಜೆ

1 2 3 14