ಗುಲಾಮರ ಬಗ್ಗೆ ಇದ್ದ ತಥಾಕಥಿತ ಧೋರಣೆಯನ್ನು ಬದಲಾಯಿಸಿದ ಆಫ್ರಿಕನ್ ಮುಸ್ಲಿಂ ಹಸ್ತಪ್ರತಿಗಳು

ಯುರೋಪಿಯನ್ ಗುಲಾಮ ವ್ಯಾಪಾರಿಗಳು ಪಶ್ಚಿಮ ಆಫ್ರಿಕಾದೊಂದಿಗೆ ಸಂಪರ್ಕ ಸಾಧಿಸುವ ಮೊದಲು ಹಾಗೂ ಸಾವಿರಾರು ಆಫ್ರಿಕನ್ನರನ್ನು ತಾಯ್ನಾಡಿನಿಂದ ಅಪಹರಿಸಿ ಅಮೆರಿಕಾಗೆ ಸಾಗಿಸುವ ಮೊದಲು ಒಂದು ಜಗತ್ತು ಇತ್ತು.
ಒಮರ್ ಬಿನ್ ಸೈದ್ ರಂಥಹ ಪಂಡಿತರು, ಇಬ್ರಾಹಿಂ ಸೋರಿ ಅವರಂತಹ ರಾಜಕುಮಾರರು ತಮ್ಮ ವಿಚಾರಗಳನ್ನು ತಮ್ಮದೇ ಭಾಷೆಗಳಲ್ಲಿ ಬರೆದು ತಮ್ಮ ಇತಿಹಾಸಗಳನ್ನು ಜಗತ್ತಿನ ಮುಂದೆ ಇರಿಸಿದ್ದರು. ಹನ್ನೊಂದನೇ ಶತಮಾನದ್ದು ಎಂದು ಹೇಳಲಾಗುವ ಅಂತಹ 40,000 ಕ್ಕೂ ಹೆಚ್ಚು ಬರುವ ಟಿಂಬಕ್ಟು ಆಫ್ರಿಕನ್ ಹಸ್ತಪ್ರತಿಗಳನ್ನು ಸಾರ್ವಜನಿಕ ಡಿಜಿಟಲ್ ಪ್ರದರ್ಶನದ ಮೂಲಕ ಮೊದಲ ಬಾರಿಗೆ ಹೊರತರಲಾಯಿತು. ಕಪ್ಪು ಜನಾಂಗೀಯ ಮುಸ್ಲಿಂ ಪಾರಂಪರಿಕ ಆರ್ಕೈವ್ ಗಳಿಗೋಸ್ಕರ ದುಡಿಯುವ ನನ್ನಂತಹ ಕಲಾವಿದೆಗೆ ಇದೊಂದು ರೋಮಾಂಚನಕಾರಿ ಅನುಭವವಾಗಿದೆ.

ಅಮೆರಿಕದಲ್ಲಿ ಗುಲಾಮರಾಗಿದ್ದ ಒಮರ್ ಬಿನ್ ಸೈದ್ ಮತ್ತು ಇಬ್ರಾಹಿಂ ಸೋರಿ ಬರೆದ ಟಿಂಬಕ್ಟು ಹಸ್ತಪ್ರತಿಗಳು ನನ್ನ ಕಲಾ ಚಟುವಟಿಕೆಗೆ ಹೇಗೆ ಪ್ರಧಾನವಾಗಿದೆ ಹಾಗೂ ಕಪ್ಪು ಜನಾಂಗೀಯ ಮುಸ್ಲಿಮರ ಬಗ್ಗೆ ತಿಳಿಯಲು ಹೇಗೆ ಸಹಕಾರಿಯಾಗಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಬೆಳಕು ಚೆಲ್ಲಲು ಬಯಸುತ್ತೇನೆ.

ಒಂದು ಅಂದಾಜಿನ ಪ್ರಕಾರ, ಅಮೆರಿಕದಲ್ಲಿ ಗುಲಾಮಗಿರಿಗೆ ತಳ್ಳಲ್ಪಟ್ಟ ಕಪ್ಪು ಜನಾಂಗೀಯರ ಪೈಕಿ 30% ಜನರು ಮುಸ್ಲಿಮರಾಗಿದ್ದರು. ಕ್ರಿ.ಶ. 1770 ರಲ್ಲಿ ಸೆನೆಗಲ್ ನದಿಯ ದಂಡೆಯ ಫುಟಾಟೊರೊ (Futa Toro)ನ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಒಮರ್ ಬಿನ್ ಸೈದ್ ಅವರು ಕುರ್‌ಆನ್ ಮತ್ತು ಇಸ್ಲಾಮಿಕ್ ಧರ್ಮಶಾಸ್ತ್ರದ ಪಾರಂಗತರಾಗಿದ್ದರು. 40 ನೇ ವರ್ಷ ವಯಸ್ಸಿನಲ್ಲಿ ಅಪಹರಣಕ್ಕೊಳಗಾಗಿ ಅಮೆರಿಕ ಸೇರುವ ಮೊದಲು ಗೃಹಸ್ಥರಾಗಿದ್ದರು, ಮಕ್ಕ ತೀರ್ಥಯಾತ್ರೆಗೂ ತೆರಳಿದ್ದರು. ‘ಸರ್ವೆಂಟ್ ಆಫ್ ಅಲ್ಲಾಹ್’ ಗ್ರಂಥದ ಕರ್ತೃ ಸಿಲ್ವೈನ್ ಡಿಯೋಫ್ (Sylvaine Diouf) ಪ್ರಕಾರ “ಗುಲಾಮನಾಗಿ ಜೀತಕ್ಕಿದ್ದು ಆತ್ಮಕಥೆ ಬರೆದ ಏಕೈಕ ವ್ಯಕ್ತಿ ಎಂದರೆ ಅದು ಒಮರ್ ಬಿನ್ ಸೈದ್ ಆಗಿದ್ದಾರೆ”. ಅವರ ಆತ್ಮಕಥೆಯು ಅರೆಬಿಕ್ ಭಾಷೆಯಲ್ಲಿ ಬರೆಯಲ್ಪಟ್ಟ ಅಮೇರಿಕಾದ ಗುಲಾಮನ‌ ಏಕೈಕ ಗ್ರಂಥವಾಗಿದೆ.

ಪಶ್ಚಿಮ ಆಫ್ರಿಕಾದ ಗಿನಿಯ ಫೂಟ ಜಲೋನ್ (Fouta Djallon) ಪ್ರಾಂತ್ಯದಲ್ಲಿ ಅಮೀರರಾಗಿದ್ದ ಇಬ್ರಾಹಿಂ ಸೋರಿ ಅವರು ಅಲ್ಲಿನ ಅಶ್ವದಳದ ಮುಂದಾಳುವೂ ಆಗಿದ್ದರು. ಕ್ರಿ.ಶ 1788ರಲ್ಲಿ ಅನಿರೀಕ್ಷಿತವಾಗಿ ಸೋಲುವುದಕ್ಕೂ ಮುನ್ನ ಅವರು ಗೃಹಸ್ಥರಾಗಿದ್ದರು. 26ನೇ ವಯಸ್ಸಿನಲ್ಲಿ ಬಂಧಿಸಲ್ಪಟ್ಟು ಅಮೆರಿಕಾಗೆ ತಲುಪಿದ ಅವರು 40 ವರ್ಷಗಳ ಕಾಲ ಗುಲಾಮರಾಗಿದ್ದರು. ಅವರು ಗುಲಾಮನಾಗಿದ್ದರೂ ಕೂಡ ಅವರ ಧಣಿ ಅವರನ್ನು ‘ಪ್ರಿನ್ಸ್’ ಎಂದೇ ಕರೆಯುತ್ತಿದ್ದರು. ಬಹುಶಃ ಆತನಿಗೆ ಸೋರಿಯವರು ನೈಜ ಆಫ್ರಿಕನ್ ಎಂದು ತಿಳಿದಿರಲಿಲ್ಲವೇನೋ?. ರಾಜಕುಮಾರ ಇಬ್ರಾಹಿಂ ಸೋರಿ ಅವರು ತಾಳ್ಮೆ, ವಿನಯವಂತಿಕೆ, ಉತ್ತಮ ನಿಲುವುಗಳಿಗೆ ಖ್ಯಾತಿವೆತ್ತ ವ್ಯಕ್ತಿಯಾಗಿದ್ದರು. ಸೋರಿಯವರು 40 ವರ್ಷಗಳ ಬಳಿಕ ಗುಲಾಮಗಿರಿಯಿಂದ ಬಿಡುಗಡೆಗೊಂಡರು. ಅವರು ಆಫ್ರಿಕನ್ ರಾಜಕುಮಾರ ಎಂದು ತಿಳಿದ ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು. ಒಮರ್ ಬಿನ್ ಸೈದ್ ಪ್ರಕಾರ, ಇಬ್ರಾಹಿಂ ಸೋರಿ ಅವರು ಓರ್ವ ಭಕ್ತನೂ, ಇಂಗ್ಲಿಷ್ ಮತ್ತು ಅರೆಬಿಕ್ ಭಾಷೆಯಲ್ಲಿ ನಿಪುಣರೂ ಆಗಿದ್ದರು.

ಮೇಲೆ ಕಾಣುತ್ತಿರುವ ಚಿತ್ರವು 2010 ರಲ್ಲಿ ರಚಿಸಿದ ಒಂದು ಆರ್ಟ್ ವರ್ಕ್ ಆಗಿದೆ. ‘ಲಾರ್ಡ್ಸ್ ಪ್ರೇಯರ್, ಟೇಕ್ ಮೈ ವರ್ಡ್ ಫಾರ್ ಇಟ್’ ಎಂಬ ಹೆಸರಿರುವ ಈ ಆರ್ಟ್ ವರ್ಕ್, ಒಮರ್ ಮತ್ತು ಇಬ್ರಾಹಿಂ ಸೋರಿ ಅವರ ಬರಹಗಳ ಮೇಲೆ ಮಾಡಿದ್ದೇನೆ. ಎಡಭಾಗದಲ್ಲಿ ಇರುವುದು ಒಮರ್ ಬಿನ್ ಸೈದ್ ಅವರು ತಮ್ಮ ಧಣಿಗೆ ಬರೆದ ಪತ್ರಗಳು, ಅವು ‘ಲಾರ್ಡ್ಸ್ ಪ್ರೇಯರ್’ ಎಂಬ ಹೆಸರಿನಲ್ಲಿದೆ. ಒಮರ್ ಹಾಗೂ ಅವರ ಸಾಕ್ಷಿಯ ಸಹಿ ಅದರಲ್ಲಿದೆ. ಬಲಭಾಗದಲ್ಲಿ ಇರುವುದು ಇಬ್ರಾಹಿಂ ಸೋರಿ ಅವರು ಬಿಡುಗಡೆಯಾದ ನಂತರ ಬರೆದ ಸೂರ ಅಲ್ ಫಾತಿಹದ ಪ್ರತಿಯಾಗಿದೆ. ಅದರಲ್ಲಿ ಸಾಕ್ಷಿಯಾಗಿ ಸಹಿ ಮಾಡಿದವರು ಒಮರ್ ಬಿನ್ ಸೈದ್ ಆಗಿದ್ದಾರೆ. ವಿಭಿನ್ನ ಸಮಯದಲ್ಲಿ, ಬೇರೆಬೇರೆ ಸಂದರ್ಭದಲ್ಲಿ ಲಾರ್ಡ್ಸ್ ಪ್ರೇಯರ್ ಎಂಬ ಹೆಸರಿನಲ್ಲಿ ಈ ಎರಡು ಡಾಕ್ಯುಮೆಂಟ್ ಗಳು ಬಂದಿವೆ. ಹಾಗೂ ಇದು ಒಂದಕ್ಕೊಂದು ಹೆಣೆದುಕೊಂಡಿವೆ. ಇದನ್ನು ಕಾಣುವವರಿಗೆ ಇಲ್ಲೊಂದು ಪ್ರಶ್ನೆ ಕಾಡುತ್ತದೆ. ಅದೇನೆಂದರೆ, ಆ ಬರೆಯಲಾದ ಭಾಷೆಯನ್ನು ಅಮೆರಿಕನ್ನರು ಅರ್ಥೈಸುತ್ತಿದ್ದರೇ?. ಗುಲಾಮರ ಸಾಕ್ಷಿಯನ್ನು ಆಂಟೆಬೆಲ್ಲಮ್ ಅಮೆರಿಕ ಸ್ವೀಕರಿಸುತ್ತಿತ್ತೇ? ಎಂಬುದು.

ಆಫ್ರಿಕನ್ನರು, ಮುಸ್ಲಿಮರು, ಕಪ್ಪು ಜನಾಂಗೀಯರು ಹಾಗೂ ಅಮೆರಿಕನ್ನರು ಮತ್ತು ಬಿಳಿಯರ ಬಗ್ಗೆಯೂ ಸಾಂಸ್ಕೃತಿಕ ಸ್ಟೀರಿಯೋಟೈಪ್ ಗಳಿವೆ. ಆಂಟೆಬೆಲ್ಲಮ್ ಅಮೆರಿಕದಲ್ಲಿರುವ ಆಫ್ರಿಕನ್ ಕಪ್ಪು ಜನಾಂಗೀಯ ಸ್ವತಂತ್ರ- ಗುಲಾಮರ ವೈವಿಧ್ಯತೆ ಬಗ್ಗೆ ಮಾತನಾಡುವಾಗ ಅದು ಸಂಘರ್ಷವನ್ನು ಸೃಷ್ಟಿಸುತ್ತದೆ. ಒಮರ್ ಬಿನ್ ಸೈದ್ ಅವರ ಆತ್ಮಕಥೆಯನ್ನು ಓದುವಾಗ ಪಶ್ಚಿಮ ಆಫ್ರಿಕಾದ ಶ್ರೀಮಂತ ಇಸ್ಲಾಮಿಕ್ ಸಂಸ್ಕೃತಿ, ಶಿಕ್ಷಣ ವ್ಯವಸ್ಥೆ, ಅವರನ್ನು ಗುಲಾಮಗಿರಿಗೆ ತಳ್ಳಿದ ರಾಜಕೀಯ ವ್ಯವಸ್ಥೆ, ಇಸ್ಲಾಮಿನ ಬಗ್ಗೆ ನಡೆಸಿದ ಅಧ್ಯಯನದ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ‌. ದಶಕಗಳ ಗುಲಾಮಗಿರಿಯ ಹೊರತಾಗಿಯೂ ಆಫ್ರಿಕನ್ ಮುಸ್ಲಿಮರು ಇಸ್ಲಾಮಿಕ್ ಚಿಹ್ನೆಗಳು ಮತ್ತು ಧಾರ್ಮಿಕ ಜ್ಞಾನದ ಅಂಶಗಳನ್ನು ಬರಹಗಳ ಮೂಲಕ ಸಂರಕ್ಷಿಸುವಲ್ಲಿ ಹಾಗೂ ರವಾನಿಸುವಲ್ಲಿ ಯಶಸ್ವಿಯಾಗಿದ್ದರು ಎಂಬುದನ್ನು ಇಬ್ರಾಹಿಂ ಸೋರಿ ಅವರ ಸೂರ ಅಲ್ ಫಾತಿಹ ಬರಹವು ಸಾದರಪಡಿಸುತ್ತದೆ.

ಧಣಿಗಳಿಗೆ ತೀರಾ ಅರ್ಥವಾಗದ ಅರೆಬಿಕ್ ನಲ್ಲಿ ಓರ್ವ ಆಫ್ರಿಕನ್ ಬರೆದ ಬರಹ ಎಂಬ ನಿಟ್ಟಿನಲ್ಲಿ ಒಮರ್ ಬಿನ್ ಸೈದ್ ಅವರ ಬರಹವು ಬಹಳ ಪ್ರಧಾನವೆನಿಸುತ್ತದೆ. ಯಾಕೆಂದರೆ ಧಣಿಗಳಿಗೂ, ಗುಲಾಮಗಿರಿಯ ಪ್ರತಿಪಾದಕರಿಗೂ, ಅದರ ನಿರ್ಮೂಲನೆಗೆ ಪಣ ತೊಟ್ಟವರಿಗೂ ಅರ್ಥವಾಗದ ಅರೆಬಿಕ್ ಭಾಷೆಯಲ್ಲಿ ಬರೆಯಲಾದ ಈ ಬರಹಗಳನ್ನು ತಮ್ಮ ಅಜೆಂಡಾಗಳಿಗೆ ವಿರುದ್ಧವಾಗಿದೆ ಎಂದು ಯಾರೂ ತಿದ್ದಲಿಲ್ಲ ಎನ್ನುವುದಂತೂ ದಿಟ.

ನಾನು ಸೇರಿದಂತೆ ನಮ್ಮ ತಲೆಮಾರಿನ ವಿದ್ಯಾರ್ಥಿಗಳು ಗುಲಾಮರ ಬಗ್ಗೆ ಅವರು ನಿರಕ್ಷರ ಕುಕ್ಷಿಗಳು ಎಂದು ತಿಳಿದುಕೊಂಡಿದ್ದೆವು. ಈ ಒಂದು ಧೋರಣೆಯನ್ನು ಆಫ್ರಿಕನ್ ಮುಸ್ಲಿಂ ಗುಲಾಮರ ಈ ಬರವಣಿಗೆಗಳು ಬದಲಾಯಿಸಿದವು ಎಂದರೆ ತಪ್ಪಾಗಲಾರದು. ಆಫ್ರಿಕನ್ನರು ಬರವಣಿಗೆಗೆ ಒಗ್ಗದೆ ಮೌಖಿಕ ಸಂಸ್ಕೃತಿಯನ್ನು ಪಾಲಿಸುತ್ತಿದ್ದರು ಎಂದು ನಮಗೆ ಕಲಿಸಲಾಗಿತ್ತು. ಆದರೆ ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸಿದಾಗ ಗುಲಾಮರಾಗಿದ್ದ ಆಫ್ರಿಕನ್ನರು ತಮ್ಮ ಆತ್ಮಕಥೆ ಗಳನ್ನು ಸ್ವಂತ ಭಾಷೆಯಲ್ಲಿ ಬರೆದಿದ್ದರು ಎಂದು ತಿಳಿಯುತ್ತದೆ. ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿರುವ ಪ್ರಸಿದ್ಧ ನಗರವಾಗಿದೆ ಟಿಂಬಕ್ಟು. ಕ್ರಿ.ಶ 13 & 14 ನೇ ಶತಮಾನದಲ್ಲಿ ಅತ್ಯಂತ ಪ್ರಮುಖ ಗ್ರಂಥಾಲಯಗಳನ್ನು ಹೊಂದಿದ್ದು, ವಿವಿಧ ಕಡೆಗಳಿಂದ ಜನರು ವಾಚನಕ್ಕಾಗಿ ಅಲ್ಲಿಗೆ ಬರುತ್ತಿದ್ದರು!. ಕ್ರಿ.ಶ 15ನೇ ಶತಮಾನದಲ್ಲಿ ಟಿಂಬಕ್ಟುವಿನ ಸಂಕೋರ್ (Sankore) ವಿವಿಯಲ್ಲಿ ಖಗೋಳಶಾಸ್ತ್ರ, ಗಣಿತ, ಇಸ್ಲಾಂ, ಸಾಹಿತ್ಯ ಹಾಗೂ ಜೀವಶಾಸ್ತ್ರದಂತಹ ವಿವಿಧ ವಿಷಯಗಳನ್ನು ಅಧ್ಯಯನ ಮಾಡಲು ಸುಮಾರು 25,000 ವಿದ್ಯಾರ್ಥಿಗಳ ದಾಖಲಾತಿ ಇತ್ತು!. ಅಲ್ಲಿ 400 ಮಿಲಿಯನ್‌ಗೂ ಮಿಕ್ಕ ಟಿಂಬಕ್ಟು ಹಸ್ತಪ್ರತಿಗಳಿವೆ. ಅವುಗಳಲ್ಲಿ ಅತಿ ಹಳೆಯದು ಕ್ರಿ‌‌.ಶ 11ನೇ ಶತಮಾನದಲ್ಲಿ ಬರೆಯಲ್ಪಟ್ಟಿದೆ.

ಟಿಂಬಕ್ಟುವಿನ ಹಸ್ತಪ್ರತಿಗಳ ಪೈಕಿ ಬಹುತೇಕ ಪ್ರತಿಗಳು ಸ್ಥಳೀಯ ನಿವಾಸಿಗಳ ಮನೆಯಲ್ಲಿ ಸಂರಕ್ಷಿಸಲಾಗಿತ್ತು. ಆದ್ದರಿಂದ ಅವುಗಳ ತರ್ಜುಮೆಯಾಗಲಿ, ಅಕಾಡೆಮಿಕ್ ಪ್ರದರ್ಶನವಾಗಲೀ ಸಾಧ್ಯವಾಗಲಿಲ್ಲ. ಅಮೆರಿಕದಲ್ಲಿ ಗುಲಾಮರಾಗಿದ್ದ ಕಪ್ಪು ಜನಾಂಗೀಯ ಮುಸ್ಲಿಮರ ಅರೆಬಿಕ್ ಬರಹಗಳ ಮೇಲೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ವಿದ್ವಾಂಸರ ಬಗ್ಗೆ ನನಗೆ ಗೊತ್ತು. ಒಂದು ವೇಳೆ ಅವರು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳದಿದ್ದರೆ ಕಪ್ಪು ಜನಾಂಗ ಗುಲಾಮ ಹಣೆಪಟ್ಟಿಯನ್ನು ಹೊಂದಿರುತ್ತಿದ್ದರು. ಆದರೆ ಹಲವಾರು ವರ್ಷಗಳಿಂದ ನಾನು ತಿಳಿದಿರುವ ಒಂದು ಸಂಗತಿ ಇದೆ. ಅದೇನೆಂದರೆ, ಕಪ್ಪು ಜನಾಂಗೀಯರು, ಅವರ ಸಂಪ್ರದಾಯ, ಅವರ ಜ್ಞಾನದ ಸಂಪನ್ಮೂಲ, ಅವರ ನಡುವೆ ಇದ್ದ ಬುದ್ಧಿಜೀವಿಗಳ ಬಗ್ಗೆ ಇರುವ ಧೋರಣೆಯನ್ನು ಇತ್ತೀಚೆಗೆ ಲಭ್ಯವಾದ ಟಿಂಬಕ್ಟು ಹಸ್ತಪ್ರತಿಗಳು, ಒಮರ್ ಬಿನ್ ಸೈದ್ ಮತ್ತು ಇಬ್ರಾಹಿಂ ಸೋರಿ ಯವರ ಬರಹಗಳು ಬದಲಾಯಿಸಿವೆ ಎಂಬುದು.

ಟಿಂಬಕ್ಟು ಪ್ರಾಂತ್ಯದವರಲ್ಲದಿದ್ದರೂ ಇಬ್ರಾಹಿಂ ಸೋರಿ ಹಾಗೂ ಒಮರ್ ಬಿನ್ ಸೈದ್ ಅವರು ಕೂಡ ಸಾಕ್ಷರ ಆಫ್ರಿಕನ್ ಸಮುದಾಯದಿಂದ ಬಂದವರಾಗಿದ್ದು, ಉನ್ನತ ಶಿಕ್ಷಣವನ್ನೂ ಪಡೆದಿದ್ದರು. ಲಿಯೋ ಆಫ್ರಿಕನ್ ಎಂದು ಪ್ರಸಿದ್ಧರಾಗಿರುವ
ಹಸ್ಸಾನ್ ಅಲ್ ವಝ್ಝಾನ್ ( Hassan al-Wazzan) ಅವರು ಪ್ರಸಿದ್ಧ ಟಿಂಬಕ್ಟುವಿನ ಬುಕ್ ವ್ಯಾಪಾರದ ಬಗ್ಗೆ ಹೇಳುತ್ತಾ “ನಾವು ಉತ್ತರ ಆಫ್ರಿಕನ್ ದೇಶಗಳಿಂದ ಪುಸ್ತಕಗಳನ್ನು ತರಿಸುವೆವು. ಎಲ್ಲಾ ವ್ಯಾಪಾರಗಳಿಗಿಂತ ಹೆಚ್ಚು ಲಾಭವನ್ನು ಪುಸ್ತಕ ವ್ಯಾಪಾರ ತಂದು ಕೊಡುತ್ತಿತ್ತು” ಎಂದಿದ್ದಾರೆ. ಇಂತಹ ಹಸ್ತಪ್ರತಿಗಳ ಮುದ್ರಣಕ್ಕೆ ಒಳ್ಳೆಯ ತಾಂತ್ರಿಕ ಜ್ಞಾನ, ನೈಪುಣ್ಯತೆ ಅಗತ್ಯವಿದೆ.

ಕ್ರಿ.ಶ 11ನೇ ಶತಮಾನದಿಂದ ಟಿಂಬಕ್ಟುವಿನ ಜನರು ಜ್ಞಾನಾರ್ಜನೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇಂದಿಗೂ ಅವರು ಆಫ್ರಿಕನ್ ಬೌದ್ಧಿಕ ಆಸ್ತಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಡಾ. ಆದಿಲ್ ಹದೆರ ಖದೆರ ಅವರಂತಹ ಗ್ರಂಥಪಾಲಕರು ವಿಧ್ವಂಸಕರಿಂದ ತಪ್ಪಿಸಿಕೊಳ್ಳಲು ಪುಸ್ತಕಗಳು ಮತ್ತು ಹಸ್ತಪ್ರತಿಗಳ ಕಳ್ಳಸಾಗಣೆಗಾಗಿ ಜೀವ ಪಣಕ್ಕಿಟ್ಟಿದ್ದರು. ಟಿಂಬಕ್ಟುವಿನ ಜನರು ಪುಸ್ತಕಗಳಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಪುಸ್ತಕದ ಮೂಲಕ ಕೇವಲ ಜ್ಞಾನಾರ್ಜನೆ ಮಾಡದೆ , ವ್ಯಾಪಾರಕ್ಕೂ ಕೈ ಹಾಕಿ ಕೈ ತುಂಬಾ ಲಾಭ ಗಳಿಸಿದ್ದಾರೆ. ಅವರು ಪುಸ್ತಕಗಳಿಗೆ ನೀಡಿದ ಮಹತ್ವವನ್ನು ಅಲ್ಲಗಳೆಯಲಾಗದು. ಈ ಟಿಂಬಕ್ಟು ಹಸ್ತಪ್ರತಿಗಳು ಜ್ಞಾನದ ಲಿಖಿತ ರೂಪ ಮತ್ತು ಆಫ್ರಿಕಾದ ಉತ್ಕೃಷ್ಟ ಶಿಕ್ಷಣದ ಪ್ರತಿನಿಧಿಯಾಗಿದೆ ಎಂದು ಟಿಂಬಕ್ಟು ಗ್ರಂಥಪಾಲಕರಾದ ಡಾ. ಅಬ್ದುಲ್ ಖಾದಿರ್ ಹೈದರ ಅವರು ಹೇಳುತ್ತಾರೆ.

ಕಪ್ಪು ಜ‌ನಾಂಗೀಯರು ತಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ವ್ಯಕ್ತಪಡಿಸುವಾಗ ಬಹಳ ಜಾಗರೂಕರಾಗಿದ್ದರು. “ಒಮರ್ ಬಿನ್ ಸೈದ್ ಅವರ ಆತ್ಮಕಥೆ ಓದುವಾಗ, ಅವರು ಪ್ರತಿಯೊಂದು ಪದ ಪ್ರಯೋಗವನ್ನು ಬಹಳ ಜಾಗರೂಕತೆಯಿಂದ ಮಾಡಿದ್ದಾರೆ ಎಂದು ನನಗೆ ತಿಳಿಯಿತು” ಎಂದು ‘ಒಮರ್’ ನಾಟಕದ ಕರ್ತೃ ಮಿಖಾಯಿಲ್ ಆಬೆಲ್ಸ್ ಹೇಳುತ್ತಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳನ್ನು ವ್ಯಕ್ತಪಡಿಸುವಾಗ ಇತರರ ಮಂದೆ ‘ಅನ್ಯ’ನಾಗದಿರಲು, ವಿಲಕ್ಷಣವಾಗಿ ಕಾಣದಿರಲು, ಕಿರುಕುಳಕ್ಕೆ ಒಳಗಾಗದಿರಲು ಜಾಗ್ರತೆ ವಹಿಸಬೇಕು ಎಂದು ನಮ್ಮಲ್ಲಿ ಹಲವರು ಭಾವಿಸಿದ್ದಾರೆ.

ಕಪ್ಪು ಜನಾಂಗದಲ್ಲಿ ನನ್ನಂತೆಯೇ ಓದು- ಬರಹದ ಮೇಲೆ ಒಲವು ಇರುವ ಅನೇಕರು ಇತರರ ಮುಂದೆ ಉತ್ತಮರು ಎಂಬ ಭಾವನೆ ಬಾರದಿರಲು ತಮ್ಮ ವಿಚಾರಗಳನ್ನು ಮುಚ್ಚಿಡುತ್ತಾರೆ. ಸ್ವಂತ ಭಾಷೆಯಲ್ಲಿ ಮಾತನಾಡಲಾಗದೆ, ಇನ್ನೊಂದು ಭಾಷೆಯಲ್ಲಿ ಮಾತನಾಡಬೇಕಾದ ಬಲವಂತದ ಪರಿಸ್ಥಿತಿ ಇದ್ದರೂ, ಹೊಸ ಭಾಷೆಯಲ್ಲಿ ಬರೆಯಲು ಸಾಧ್ಯವಾಗದೆ, ಸ್ವಂತ ಭಾಷೆಯಲ್ಲಿ ಬರೆದಿದ್ದನ್ನು ಓದುವ ಜನರಿಲ್ಲದಿದ್ದರೂ ತಮ್ಮದೇ ಭಾಷೆಯಲ್ಲಿ ವಿಚಾರಗಳನ್ನು ಬರೆದಿಟ್ಟ ಒಮರ್ ಬಿನ್ ಸೈದ್, ಇಬ್ರಾಹಿಂ ಸೋರಿಯಂತಹ ಜನರ ಬಗ್ಗೆ ಒಂದು ಕ್ಷಣ ಚಿಂತಿಸಿ ನೋಡಿ. ಅಲ್ಲಿ ಪವಿತ್ರ ಗ್ರಂಥವನ್ನು ಓದುವವರು ಯಾರೂ ಇಲ್ಲದಿದ್ದರೂ ಅದನ್ನು ಹೃದಯದಲ್ಲಿ ಇಟ್ಟುಕೊಂಡಿದ್ದರು!.

ಮೇಲೆ ಕಾಣುವ ಚಿತ್ರವು 2009 ರಲ್ಲಿ ನಾನು ಮಾಡಿದ ಒಂದು ಪೇಂಟಿಂಗ್ ಆರ್ಟ್ ವರ್ಕ್ ಆಗಿದೆ. ಅದರಲ್ಲಿ ಇಬ್ರಾಹಿಂ ಸೋರಿ ಅವರ ಆತ್ಮಕಥೆಯ ಒಂದು ಪುಟವನ್ನು ಲಗತ್ತಿಸಿದ್ದೇನೆ. ಅದೇ ರೀತಿ ಅವರು ಅಪಹರಿಸಲ್ಪಟ್ಟು ಅಮೆರಿಕ ತಲುಪಿ, ಅಲ್ಲಿ ಗುಲಾಮನಾಗಿ ಬದುಕಿ ಕೊನೆಗೆ ಸ್ವತಂತ್ರಗೊಂಡ ಅನುಭವಗಳನ್ನು ಬರೆದ ಡಾಕ್ಯುಮೆಂಟ್ ಕೂಡ ಹೆಣೆದಿದ್ದೇನೆ. ಇಬ್ರಾಹಿಂ ಸೋರಿ ಅವರ ಕೈ ಬರೆಹದಲ್ಲಿ ಇರುವ ‘ನನ್ನನ್ನು ಅವರು ಕರೆದೊಯ್ದರು’ ಎಂಬ ವಾಕ್ಯವನ್ನು ನಾನು ಗುರ್ತಿಸಿದ್ದೇನೆ. ಅವರ ಜೀವನ ಚರಿತ್ರೆ ಓದುವಾಗಲೆಲ್ಲಾ ಆಫ್ರಿಕಾದಿಂದ ಅಪಹರಿಸಲ್ಪಟ್ಟು ಅಮೆರಿಕದಲ್ಲಿ ಗುಲಾಮರಾಗಿ ಬಾಳಿ, ಸ್ವಂತ ಜನ-ಸಮಾಜದಿಂದ ದೂರ ತಳ್ಳಲ್ಪಟ್ಟು ಯೌವನವನ್ನೆಲ್ಲಾ ದಾಸ್ಯದಲ್ಲೇ ಕಳೆದ ನನ್ನ ಪೂರ್ವಜರನ್ನು ನೆನೆಯುತ್ತೇನೆ.

ನಾನು ಕಪ್ಪು ಜನಾಂಗೀಯರಿಗೆ ಸಂಬಂಧಿಸಿದ ಆರ್ಕೈವ್ ಗಳನ್ನು ಸಂಶೋಧಿಸುವಾಗ ಕಪ್ಪು ಜನಾಂಗೀಯರು ಹಾಗೂ ಮುಸ್ಲಿಮರ ವಿರುದ್ಧ ಹೆಣೆಯಲಾದ ಕೆಲ ತಥಾಕಥಿತ ಪೂರ್ವಗ್ರಹ ನಿರೂಪಣೆಗಳಿಗೆ ವಿರುದ್ಧವಾದ ಸಾಕ್ಷ್ಯಗಳನ್ನು ಕಂಡೆನು. ನಮ್ಮ ವಿರುದ್ಧ ಇರುವ ಪೂರ್ವಗ್ರಹಗಳನ್ನು ಹುಸಿಗೊಳಿಸುವ ಟಿಂಬಕ್ಟು ಆಫ್ರಿಕನ್ ಹಸ್ತಪ್ರತಿಗಳಂತಹ ಯಾವುದೇ ದಾಖಲೆಗಳನ್ನು ಕಂಡರೂ ಅವುಗಳನ್ನು ನಾನು ನನ್ನ ಲೇಖನಗಳಲ್ಲಿ, ಸಂಭಾಷಣೆಗಳಲ್ಲಿ, ಪ್ರಬಂಧಗಳಲ್ಲಿ ವಿಶೇಷವಾಗಿ ನನ್ನ ಕಲಾಕೃತಿಗಳಲ್ಲಿ ಬಳಸುತ್ತೇನೆ. ನಮ್ಮ ಸಾಮೂಹಿಕ ಕಲ್ಪನೆಗಳನ್ನು ವಿಸ್ತರಿಸುವ ಹೊಸ ಹೊಸ ರಚನೆಗಳನ್ನು ನಾವೆಲ್ಲರೂ ಒಟ್ಟಾಗಿ ರಚಿಸಬೇಕು ಎಂಬುದು ನನ್ನ ಅಭಿಮತ.

ಸುಮಾರು ಒಂಭತ್ತು ಶತಮಾನಗಳ ಕಾಲ ಪಶ್ಚಿಮ ಆಫ್ರಿಕಾದ ಇಸ್ಲಾಮಿಕ್ ಜ್ಞಾನ ಭಂಡಾರವು ಜಾಗತಿಕ ಇಸ್ಲಾಮಿಕ್ ಸಂವಾದಗಳಿಂದ ಹೇಗೆ ದೂರವುಳಿದವು ಎಂದು ನಾವು ಆಲೋಚಿಸಬೇಕಿದೆ. ಟಿಂಬಕ್ಟು ಆಫ್ರಿಕನ್ ಹಸ್ತಪ್ರತಿಗಳು ಆ ಪ್ರದೇಶದ ಬೌದ್ಧಿಕ, ಧಾರ್ಮಿಕ, ಆರ್ಥಿಕ, ವೈಜ್ಞಾನಿಕ ಅಂಶಗಳನ್ನು ಪ್ರತಿಬಿಂಬಿಸುತ್ತವೆ. ಧರ್ಮದ ವಿಷಯದಲ್ಲಿ ಆ ಪ್ರದೇಶದ ಜನರು ಶಾಂತಿಯುತ, ಮುಕ್ತದೃಷ್ಟಿಯ, ಮಧ್ಯಮ ರೀತಿಯ ಇಸ್ಲಾಂ ಧರ್ಮವನ್ನು ಜಾಹೀರುಗೊಳಿಸುತ್ತಾರೆ. ಇತರ ಕ್ಷೇತ್ರಗಳಲ್ಲೂ ಅವರು ತಮ್ಮ ಕುರುಹುಗಳನ್ನು ಉಳಿಸಿದ್ದಾರೆ. ಅವರು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇದ್ದರು. ಮುಸ್ಲಿಂ ಜಗತ್ತು ಪ್ರಕ್ಷುಬ್ಧ ಪರಿಸ್ಥಿತಿ ಮತ್ತು ಭಯೋತ್ಪಾದನೆಯ ಕರಿನೆರಳಿನಲ್ಲಿ ಇರುವಾಗ, ಟಿಂಬಕ್ಟು ಆಫ್ರಿಕನ್ ಮುಸ್ಲಿಂ ಹಸ್ತಪ್ರತಿಗಳು ಅಪಾರವಾದ ಜ್ಞಾನದ ಸಂಪನ್ಮೂಲ ಹಾಗೂ ಸಮಸ್ಯೆಗಳ ಪರಿಹಾರವನ್ನೂ ತೋರಿಸುತ್ತವೆ.

ಓರ್ವ ಕಲಾವಿದೆಯಾಗಿ, ಆಫ್ರಿಕನ್ ಮುಸ್ಲಿಂ ಹಸ್ತಪ್ರತಿಗಳ ನಿರಂತರ ಸಂಶೋಧನೆ ಮೂಲಕ ಅಮೆರಿಕದಲ್ಲಿ ಗುಲಾಮರಾಗಿದ್ದ ನಮ್ಮ ಪೂರ್ವಜರ ಬೌದ್ಧಿಕ ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ಸತ್ಯ ತಿಳಿಯದೆ, ಪರಾಂಬರಿಸದೆ ಜಗತ್ತನ್ನು ನೋಡುವ ಪರಿಪಾಠ ನಮ್ಮದು. ಇತಿಹಾಸ ಎಂಬುದು ನನ್ನ ಪಾಲಿಗೆ ಅಮೂರ್ತವಾದುದು. ಈ ಹಸ್ತಪ್ರತಿಗಳು ನಮಗೆ ದೊರಕುವಾಗ ನಾವು ನಮ್ಮ ಬಗ್ಗೆ, ನಮ್ಮ ಸುತ್ತಮುತ್ತಲಿನವರ ಬಗ್ಗೆ ನಮಗೆ ತಿಳಿದಿರುವ ವಿಚಾರಗಳನ್ನು ಮರು ಮೌಲ್ಯಮಾಪನ ಮಾಡಲು ಪರಾಮರ್ಶಿಸಲು ಅವಕಾಶ ದೊರಕುತ್ತದೆ. ಮತ್ತು ಈ ಸಂಪನ್ಮೂಲಗಳಿಂದ ಮೌಲ್ಯಗಳನ್ನು ಹೆಕ್ಕಿ ಹಂಚುವುದು ಕೂಡ ಒಂದು ಘನಕಾರ್ಯವಾಗಿದೆ.

ನೈಜ ಶಿಕ್ಷಣವು ಪುಸ್ತಕ ಮತ್ತು ಕಲೆಗಳಲ್ಲಿ ಅಡಕವಾಗಿದೆ. ಖಂಡಿತವಾಗಿಯೂ ಹಸ್ತಪ್ರತಿಗಳು ಮತ್ತು ಟಿಂಬಕ್ಟು ಪುಸ್ತಕಗಳು ಒಂದು ಕಲಾಕೃತಿಗಳಾಗಿವೆ. ವರ್ಷಗಳ ಗುಲಾಮಗಿರಿಯ ಹೊರತಾಗಿಯೂ ಇಬ್ರಾಹಿಂ ಸೋರಿ ಹಾಗೂ ಒಮರ್ ಬಿನ್ ಸೈದ್ ರಿಗೆ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದ್ದರೆ, ಆ. ಅಬ್ದುಲ್ ಖಾದಿರ್ ಹೈದರ ಹಾಗೂ ಟಿಂಬಕ್ಟು ಜನರಿಗೆ ಯುದ್ಧ ಮತ್ತು ಭಯೋತ್ಪಾದಕರ ದಾಳಿ ನಡುವೆ 1200 ವರ್ಷಗಳ ಇತಿಹಾಸ ಇರುವ ಹಸ್ತಪ್ರತಿಗಳ ಸಂರಕ್ಷಣೆ ಸಾಧ್ಯವಾಗಿದ್ದರೆ, ನಮ್ಮ ಮುಂದಿನ ಪೀಳಿಗೆಗೆ ಮೌಲ್ಯಗಳ ಪ್ರಾಧಾನ್ಯತೆಯನ್ನು ಹಸ್ತಾಂತರಿಸುವ ಏನನ್ನು ನಾವು ಸಾಧಿಸಿದ್ದೇವೆ ಎಂದು ಆಲೋಚಿಸಬೇಕಾಗಿದೆ.

ಮೂಲ: ನ್ಸೆಂಗ ನೈಟ್
ಅನು: ಮುಹಮ್ಮದ್ ಶಮೀರ್ ಪೆರುವಾಜೆ

Leave a Reply

*