ವಂಶಾವಳಿಯ ಜಾಡು ಹುಡುಕುತ್ತಾ ಗೀಲಾನ್ ಗ್ರಾಮದ ಸಂದರ್ಶನ

ಈ ಕಥೆಯು ಕ್ರಿ.ಶ. 1095 ರಲ್ಲಿ ಪ್ರಾರಂಭವಾಗುತ್ತದೆ. ಅಂದು ಶ್ರೇಷ್ಠ ವಿದ್ವಾಂಸ, ಶಿಕ್ಷಕ, ಸಂತರೂ ಆದ ಶೈಖ್ ಅಬ್ದುಲ್ ಖಾದಿರ್ ಅಲ್ ಗೀಲಾನಿ (ಜೀಲಾನಿ) ಅವರು ಪರ್ಷಿಯಾದ ಗೀಲಾನ್ ಪ್ರಾಂತ್ಯದ ತಮ್ಮ ತವರೂರನ್ನು ತೊರೆದು ವಿದ್ಯಾರ್ಜನೆಗಾಗಿ ಬಗ್ದಾದ್ ಪಟ್ಟಣಕ್ಕೆ ತೆರಳಿದ್ದರು.

ಶೈಖ್ ಗೀಲಾನಿ ಅವರು ‘ಜಂಗಿದೋಸ್ತ್’ ಎಂದು ನಾಮಾಂಕಿತರಾಗಿದ್ದ ಅಬೂ ಸ್ವಾಲಿಹ್ ಮೂಸ ಅಲ್ ಹಸನಿ ಎಂಬ ಸಾತ್ವಿಕ ವ್ಯಕ್ತಿಯ ಪುತ್ರ. ಗೀಲಾನಿ ಅವರ ತಾಯಿ ಬೀಬಿ ನಿಸಾ/ ಉಮ್ಮುಲ್ ಖೈರ್ ಫಾತಿಮ ಅವರು ಪ್ರವಾದಿ ಪರಂಪರೆಯಲ್ಲಿ ಜನಿಸಿದ ಸಾತ್ವಿಕ ವ್ಯಕ್ತಿಯಾಗಿದ್ದರು. ಸೆಲ್ಜುಕ್ ಸುಲ್ತಾನರ ಆಡಳಿತದ ಅವಧಿಯಲ್ಲಿ ಜ್ಞಾನದ ನಗರವಾಗಿದ್ದ ಬಗ್ದಾದ್ ಪಟ್ಟಣದಲ್ಲಿ ಶೈಖ್ ಗೀಲಾನಿ ಅವರು ತಂಗುತ್ತಾರೆ. ಅವರು ‘ಖಾದಿರಿ’ ಸೂಫಿ ತ್ವರೀಖತಿನ ಸ್ಥಾಪಕರು. ಇಂದಿಗೂ ಲಕ್ಷಾಂತರ ಮುಸ್ಲಿಮರು ಅವರನ್ನು ಸ್ಮರಿಸುತ್ತಲೇ ಇದ್ದಾರೆ.

ಶೈಖ್ ಗೀಲಾನಿ ಅವರಿಗೆ ಅನೇಕ ಗಂಡು ಮಕ್ಕಳಿದ್ದರು. ಅವರು ತಮ್ಮ ಜ್ಞಾನವನ್ನು ಪಸರಿಸಲು ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದರು. ಹೋದಲ್ಲೆಲ್ಲ ಅವರು ಗೌರವಾನ್ವಿತ ಹಾಗೂ ಪ್ರಭಾವಿ ವ್ಯಕ್ತಿಗಳಾಗಿ‌ ಗುರುತಿಸಲ್ಪಟ್ಟರು.

ನನ್ನ ಪೂರ್ವಿಕರಾದ ಮೂಸಾ ಪಾಕ್ ಶಹೀದ್ ಅವರು ಗೀಲಾನಿ ಅವರ ಮಗನ ವಂಶ ಪರಂಪರೆಯವರು. ಸಿರಿಯಾ, ಇರಾನ್, ಆಫ್ಘಾನ್ ಮೂಲಕ ದೀರ್ಘ ಪ್ರಯಾಣ ನಡೆಸಿ ಷಹಜಹಾನರ ಕಾಲದಲ್ಲಿ ಅವರು ಅಖಂಡ ಭಾರತದ ಮುಲ್ತಾನ್ ತಲುಪುತ್ತಾರೆ. ನನ್ನ ತಂದೆಯವರ ಕುಟುಂಬವು ಇಂದಿಗೂ ಇಂದಿನ ಪಾಕಿಸ್ತಾನದಲ್ಲಿ ನೆಲೆಸಿದೆ. ಮಧ್ಯ ಪ್ರಾಚ್ಯ ಮತ್ತು ಪರ್ಷಿಯಕ್ಕೆ ಇರುವ ನಮ್ಮ ಕುಟುಂಬದ ಕೊಂಡಿ ಎಲ್ಲೋ ಕಳಚಿ ಹೋಗಿತ್ತು.

ಈ ಮುರಿದು ಹೋದ ವಂಶಾವಳಿಯ ಜಾಡನ್ನು ಅರಸುತ್ತಾ ನಾನು ಪ್ರಯಾಣ ಬೆಳೆಸಿದೆ. ನನ್ನ ಗಂಡ ಅಬ್ದುಲ್ ಹಾದಿ ಅವರೊಂದಿಗೆ ನಾನು ಇರಾನ್‌ಗೆ ತೆರಳಿದೆನು. ಶೈಖ್ ಗೀಲಾನಿ ಅವರ ತಾಯಂದಿರ ಸಮಾಧಿ ದರ್ಶನಕ್ಕಾಗಿ ನಾವು ನಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟೆವು.

ಗೀಲಾನ್ ಎಂಬುದು ವಾಯುವ್ಯ ಇರಾನಿನ ಒಂದು ಗ್ರಾಮ. ಉತ್ತರ ದಿಕ್ಕಿನಲ್ಲಿ ಕ್ಯಾಸ್ಪಿಯನ್ ಸಮುದ್ರವಿದೆ. ಅದು ವಿಭಿನ್ನವಾದ ಪಾಕ ಪದ್ಧತಿ, ಸಂಸ್ಕೃತಿ, ಮಳೆ ಮತ್ತು ಆಶ್ಚರ್ಯಕರವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಗ್ರಾಮ. ಗೀಲಾನಿನ ಭೂಮಿಯು ಸೊಂಪಾಗಿ ಹಸುರಾಗಿ ಭಾರಿ ಫಲವತ್ತತೆಯಿಂದ ಕೂಡಿದ ಭೂಮಿ. ಪರ್ವತಗಳಿಂದ ಆವೃತವಾದ ಈ ಪ್ರದೇಶವು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ನಮ್ಮ ಗೈಡ್ ಆಗಿದ್ದ ನಕ್ಷಬಂದಿ ಅವರು ಆಸ್ಟ್ರೇಲಿಯನ್ ವಿವಿಯಲ್ಲಿದ್ದ ನನ್ನ ಸಹಪಾಠಿಯ ತಂದೆ. ಕಾಕತಾಳೀಯ ಎಂಬಂತೆ ಅವರು ಕೂಡ ನಮ್ಮಂತೆಯೇ ರಜಾದಿನಗಳನ್ನು ಕಳೆಯಲು ಅಲ್ಲಿಗೆ ಬಂದಿದ್ದರು. ನಮ್ಮ ಪ್ರಯಾಣದ ಉದ್ದಕ್ಕೂ ಅವರು ನಮ್ಮ ಜೊತೆಗಿದ್ದರು. ನಾವು ಮುಂಜಾನೆ ಬೇಗನೇ ಎದ್ದೆವು. ನಕ್ಷಬಂದಿ ಅವರು ನಾವು ತಂಗಿದ್ದ ಹೋಟೆಲ್ ಬಳಿ ಬಂದರು. ಗೀಲಾನ್ ಸಮೀಪದ ಮೌಸೂಲ ಎಂಬ ಪ್ರದೇಶಕ್ಕೆ ನಮ್ಮ ಮೊದಲ ಭೇಟಿ ನೀಡಲು ಹೊರಟೆವು.

ನಗರದಿಂದ ಹೊರಹೋಗುತ್ತಿದ್ದಂತೆ ಪ್ರಾಚೀನವಾದ ನೈಸರ್ಗಿಕ ಸೌಂದರ್ಯದಿಂದ ಕೂಡಿದ ದಾರಿಯಲ್ಲಿ ನಾವು ಹೊರಟೆವು. ನಮ್ಮ ಜೀವನದಲ್ಲಿ ನಾವು ನೋಡಿದ ಸ್ವರ್ಗೀಯ ಭೂಮಿ ಎಂದು ನನ್ನ ಹಾಗೆ ಅಬ್ದುಲ್ ಹಾದಿ ಅವರಿಗೂ ಅನ್ನಿಸಿತು. ನೀಲಾಕಾಶವು ಸುತ್ತುವರಿದು, ಹಚ್ಚಹಸುರಿನಿಂದ ಹೊದ್ದ ರಸ್ತೆಯ ಇಕ್ಕೆಲಗಳು ಕಂಗೊಳಿಸುತ್ತಿದ್ದವು. ಗಗನಚುಂಬಿ ಬೆಟ್ಟಗಳು, ಅದರ ಮೇಲಿದ್ದ ಮಂಜಿನ ಹನಿಗಳು ನೋಡುಗರನ್ನು ಬೆರಗುಗೊಳಿಸುವಂತಿತ್ತು.

ಗಿರಿ ಶಿಖರಗಳಿಂದಾವೃತವಾದ ಸುಮಾರು 1000 ವರ್ಷಗಳ ಇತಿಹಾಸವಿರುವ ಮೌಸೂಲ ನಗರವು ಅಸಾಮಾನ್ಯ ರೀತಿಯ ಕಟ್ಟಡ ನಿರ್ಮಾಣದಿಂದ ಬಹು ಸುಂದರವಾಗಿ ಕಣ್ಣಿಗೆ ಕಾಣುತ್ತಿತ್ತು. ಅಷ್ಟೇ ಆಕರ್ಷಣೀಯ ಕೂಡ ಹೌದು. ಒಂದು ಮನೆಯ ಮೇಲೆ ಇನ್ನೊಂದು ಮನೆ ಇದೆ. ಒಂದು ಮನೆಯ ಅಂಗಳವು ಇನ್ನೊಂದು ಮನೆಯ ಛಾವಣಿಯಾಗಿದೆ. ಬಣ್ಣಬಣ್ಣದ ಮತ್ತು ಗುಮ್ಮಟಗಳಿಂದ ನಿರ್ಮಿಸಲ್ಪಟ್ಟ ಮಸೀದಿಯು ಕೂಡ ಕಣ್ಣುಗಳನ್ನು ಆಕರ್ಷಿಸುತ್ತಿದ್ದವು.

ನಾವು ನಗರದ ಹಾದಿ ಬೀದಿಗಳಲ್ಲಿ ನಡೆದೆವು. ಯಾತ್ರಿಕರಿಂದ ತುಂಬಿದ್ದ‌ ಚಹಾದಂಗಡಿ, ಕೆಫೆಗಳನ್ನು ದಾಟುತ್ತಾ ನಡೆದೆವು. ಅಲ್ಲಿ ಯಾತ್ರಿಕರು ಕುಳಿತು ಹುಕ್ಕ (qalian) ಸೇದುತ್ತಾ ಚಹಾದ ರುಚಿಯನ್ನು ಸವಿಯುತ್ತಿದ್ದರು.

ನಕ್ಷಬಂದಿ ಅವರು ಆ ನಗರದ‌ ಕುರಿತು ವಿವರಿಸಿದರು. ಅವರು ಬೆಳೆದ ಇರಾನಿನ ಗ್ರಾಮದ ಬಗ್ಗೆ ಮಾಹಿತಿ ಹಂಚಿದರು. ಇರಾನ್- ಇರಾಕ್ ಯುದ್ಧದ ಬಗ್ಗೆಯೂ ಮಾತನಾಡಿದರು. ಸೂಫಿ ತ್ವರೀಖತ್ ಗಳ ಬಗ್ಗೆ ಅವರಿಗೆ ತಿಳಿದಿರುವ ಮಾಹಿತಿಯನ್ನು ನೀಡಿದರು. ನನ್ನ ಪತಿ ಅಬ್ದುಲ್ ಹಾದಿ ಅವರು ಕೂಡ ಅವರ ತ್ವರೀಖತ್‌ನ ಹಿಂಬಾಲಕರಾಗಿದ್ದಿದು ವಿಶೇಷವಾಗಿತ್ತು. ಅಬ್ದುಲ್ ಹಾದಿಯವರಿಗೆ ನಕ್ಷಬಂದಿ ಅವರ ಮಾವ ಶೈಖ್ ಉಸ್ಮಾನ್ ಸಿರಾಜುದ್ದೀನ್ ಅವರು ಪರಿಚಿತರು. ಅವರ ಕುಲೀನ ಮನೆತನದ ಚರಿತ್ರೆ, ನಕ್ಷಬಂದಿ ಅವರ ಬಾಲ್ಯ, ತ್ವರೀಖತ್‌‌ ದೀಕ್ಷೆ, ಹಾಗೂ ಅಗಲಿದ ಅವರ ತಾಯಿಯ ಸ್ಪೂರ್ತಿದಾಯಕ ಚರಿತ್ರೆಗಳನ್ನು ಕೇಳುವ ಭಾಗ್ಯ ನಮ್ಮದಾಯಿತು.

ಹಳ್ಳಿಗಳ ಮೂಲಕ ಮೆಲ್ಲನೆ ಸಾಗುತ್ತಾ ತೋಟಗಳು, ಕೆಂಪು ಛಾವಣಿಯ ಮನೆಗಳನ್ನು ಹಾದು ಶೈಖ್ ಅಬ್ದುಲ್ ಖಾದಿರ್ ಗೀಲಾನಿ ಅವರ ತಾಯಿ ಬೀಬಿ ನಿಸಾ ಅವರು ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಸೌಮ್- ಎ- ಸರಾವನ್ನು ತಲುಪಿದೆವು. ಸ್ಥಳೀಯ ನಿವಾಸಿಗಳ ಬಳಿ ದಾರಿ ಅನ್ವೇಷಿಸಿ ಅಲ್ಲಿಗೆ ತಲುಪಿದೆವು.

ನಾನು ಮಾಡುತ್ತಿದ್ದ ಕೆಲಸದ ಮಹತ್ವವು ನನಗ ತಕ್ಷಣ ಅರಿವಾಗಲಿಲ್ಲ. ಮಖಾಮಿನ ವೈಢೂರ್ಯ ಖಚಿತ ಗೇಟ್ ಮೂಲಕ ಒಳ ಹೊಕ್ಕೆವು. ಗ್ರಾಮದ ಇತರ ಮನೆಗಳಂತೆ ಇರುವ ಒಂದು ಮನೆ. ಅದರ ಒಂದು ಕೋಣೆಯಲ್ಲಿ ಸಮಾಧಿ ಇದೆ. ಸಮಾಧಿಯ ಸುತ್ತಲೂ ಹಿರಿಯ ಹೆಂಗಸರು ಕುಳಿತಿದ್ದರು. ನಾನು ಒಳ ಪ್ರವೇಶಿಸುತ್ತಿದ್ದಂತೆ ಅವರು ಉಚ್ಛರಿಸುತ್ತಿದ್ದ ದ್ಸಿಕ್ರ್‌ನ ದನಿ ಏರಿತು. ಈ ಆಗಂತುಕರು ಯಾರೆಂಬ ನಿಟ್ಟಿನಲ್ಲಿ ಅವರು ದಿಟ್ಟಿಸಿ ನೋಡುತ್ತಿದ್ದ ಕಾರಣ ನಾನು ಸ್ವಲ್ಪ ವಿಚಲಿತಳಾದೆ. ಇಂತಹ ಒಂದುಗೂಡುವಿಕೆ ಅವರ ಮಖಾಮಿನಲ್ಲಿ ಸಾಮಾನ್ಯವಾಗಿತ್ತು.

ಅದಾಗ್ಯೂ ಆ ಮಹಿಳೆಯರು ಏನು ಹಾಡುತ್ತಿದ್ದರು ಎಂದು ನನಗೆ ಅರ್ಥವಾಗಲಿಲ್ಲ. ಆದರೂ ನಾನು ನನ್ನ ಹೃದಯಾಂತರಾಳದಿಂದ ಪ್ರಾರ್ಥಿಸಿದೆನು.ಪುರುಷರು ಹೊರಗಡೆ ನಿಂತಿದ್ದರು. ಮಹಿಳೆಯರು ಹಾಡುವುದನ್ನು ನಿಲ್ಲಿಸಿದಾಗ ಪುರುಷರು ಝಿಯಾರತ್‌ಗೆ ಒಳ ಬಂದರು.

ಬೀಬಿ ನಿಸಾ ಅವರ ಸಮಾಧಿಯ ಸ್ವರ್ಣ ಕವಾಟದ ಒಳ ಪ್ರವೇಶಿಸುತ್ತಿದ್ದಂತೆ ಆ ಸ್ಥಳದಲ್ಲಿ ಅವರಿಗೆ ಆದ ಬದಲಾವಣೆ ಬಗ್ಗೆ ಆಲೋಚಿಸಿದೆ. ಕೆಲ ಶತಮಾನಗಳ ಹಿಂದೆ ಆ ಸಮಾಧಿ ಇರುವ ಪ್ರದೇಶ ಹೇಗಿತ್ತೇನೋ? ಅವರು ಯಾವ ರೀತಿಯ ವ್ಯಕ್ತಿಯಾಗಿದ್ದರು? ಪರಿಚಿತರಲ್ಲದ ಕುಟುಂಬಿಕರು ಆಕೆಯನ್ನು ಸಂದರ್ಶಿಸಿದರೆ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಹೀಗೆಲ್ಲಾ ಯೋಚಿಸುತ್ತಲೇ ಇದ್ದೆ.

ಕೊಂಡಿ ಕಳಚಿದ ನನ್ನ ವಂಶಾವಳಿಯ ಭಾಗ ನನಗೆ ಮರಳಿ ದೊರೆತಂತೆ ಭಾಸವಾಯಿತು. ಪ್ರಪಂಚದಲ್ಲಿ ಯಾವುದೇ ತಾಯಿಯು ಮಗಳನ್ನು ಕಂಡಾಗ ಸ್ವೀಕರಿಸುವಂತೆ ನಿಶ್ಶರ್ತವಾಗಿ ಅವರು ನನ್ನನ್ನು ಸ್ವೀಕರಿಸಬಹುದು ಎಂಬುದು ನನ್ನ ಆಶಾವಾದ.

ಬೀಬಿ ನಿಸಾ ಅವರು ಭಕ್ತೆಯಾಗಿದ್ದರು. ಇಳಿವಯಸ್ಸಿನಲ್ಲೂ ಅವರು ತಮ್ಮ ಪುತ್ರ ಗೀಲಾನಿ ಅವರಿಗೆ ವಿದ್ಯಾರ್ಜನೆಗೈಯ್ಯಲು ಬಾಗ್ದಾದ್‌ಗೆ ತೆರಳಲು ಅನುಮತಿ ನೀಡಿದ್ದರು. ಮುಂದಿನ ದಿನಗಳಲ್ಲಿ ತನ್ನ ಮಗನನ್ನು ಕಾಣಲು ಸಾಧ್ಯವಾಗದು ಎಂದು ಖಚಿತವಾಗಿದ್ದರಿಂದ ತಮ್ಮ ಮಗನನ್ನು ಬಳಿಗೆ ಕರೆದು “ಮಗನೇ, ನಾನು ನಿನಗೊಂದು ಸಲಹೆ ನೀಡುವೆ. ಜೀವನದಲ್ಲಿ ಒಮ್ಮೆಯೂ ಸುಳ್ಳು ಹೇಳಬಾರದು” ಎಂದು ಬುದ್ಧಿ ಹೇಳುತ್ತಾರೆ. ಬಾಲಕ ಗೀಲಾನಿ ಅವರು “ಅಮ್ಮ, ನಿಮ್ಮ ಸಲಹೆಗೆ ವಿರುದ್ಧವಾಗಿ ಯಾವತ್ತೂ ನಡೆಯಲಾರೆ” ಎಂದು ಮಾತು ಕೊಟ್ಟರು. ಬೀಬಿ ನಿಸಾ ಅವರು ಮಗನನ್ನು ತಬ್ಬಿ ಹಿಡಿದು “ಅಲ್ಲಾಹನ ರಕ್ಷೆ ಸದಾ ನಿನ್ನ‌ ಮೇಲಿರಲಿ” ಎಂದು ಪ್ರಾರ್ಥಿಸಿ ಬೀಳ್ಕೊಟ್ಟರು.

ಬೀಬಿ ನಿಸಾ ಅವರ ಸಮಾಧಿಯಿಂದ ನಾವು ಹೊರಟು, ನಕ್ಷಬಂದಿ ಅವರ ಸಂಬಂಧಿಕರ ಮನೆಗೆ ಊಟಕ್ಕೆಂದು ಹೋದೆವು. ಊಟದ ನಂತರ ಶೈಖ್ ಗೀಲಾನಿ ಅವರ ತಂದೆ ಶೈಖ್ ಅಬೂಸ್ವಾಲಿಹ್ ಅವರ ಸಮಾಧಿಗೆ ಭೇಟಿ ನೀಡುವ ಬಗ್ಗೆ ಆಲೋಚಿಸಿದೆವು. ಅಲ್ಲಿಗೆ ಹೋಗಬೇಕಾದ ದಾರಿ ದುರ್ಗಮವಾಗಿದೆ , ಬೆಟ್ಟ ಗುಡ್ಡಗಳನ್ನು ದಾಟಿ ಕೆಟ್ಟ ಬೆಳಕಿನ ಮೂಲಕ‌ ಸಾಗಬೇಕಾದ ಪರಿಸ್ಥಿತಿ ಇದೆ ಎಂದು ಆ ಮನೆಯವರು ಹೇಳಿದರು. ಅಲ್ಲಿಗೆ ಭೇಟಿ ನೀಡುವುದು ಕಷ್ಟ ಸಾಧ್ಯವಾಗಿದ್ದರಿಂದ ನಾವು ಮರಳಿ ‘ರಶ್ಟ್ (Rasht)ನ‌ ನಮ್ಮ ರೂಮ್‌ಗೆ ಮರಳಿದೆವು.

ನಮಗೆ ನಿರಾಶೆಯಾಗಿತ್ತು. ನಕ್ಷಬಂದಿ ಅವರಿಗೆ ಪ್ರಯಾಣ ಮಾಡುವುದು ಕಷ್ಟವಾಗುತ್ತದೆ ಎಂದು ಭಾವಿಸಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗದಿರಲು ತೀರ್ಮಾನಿಸಿದೆವು. ಗೀಲಾನ್ ಗ್ರಾಮದ ಯಾತ್ರೆಯಲ್ಲಿ ನಮ್ಮ ಪ್ರಧಾನ ಗಮ್ಯ ಸ್ಥಾನದ ಸಂದರ್ಶನ ಸಾಧ್ಯವಾಗಲಿಲ್ಲ ಎಂಬ ಒಂದು ಬೇಸರ ಇತ್ತು. ಎಲ್ಲವೂ ಅಲ್ಲಾಹನ ವಿಧಿ ಎಂದು ಭಾವಿಸಿ ಹಿಂತಿರುಗಬೇಕಾಯಿತು. ಮನಸ್ಸಿನಲ್ಲಿ ಹಲವಾರು ಚಿಂತನೆಗಳನ್ನು ಹೊತ್ತು ಸಾಗುತ್ತಿರಬೇಕಾದರೆ “ಸೈಯದ್ ಅಬೂಸ್ವಾಲಿಹ್ ಮಖಾಮ್‌ಗೆ ದಾರಿ” ಎಂದು ಬರೆಯಲಾದ ಒಂದು ಫಲಕ ಕಣ್ಣಿಗೆ ಬಿತ್ತು.

ನಕ್ಷಬಂದಿ ಅವರು ಇದನ್ನು ನಮ್ಮ ಗಮನಕ್ಕೆ ತಂದರು. ಫೋಟೋ ತೆಗೆಯುವ ಸಲುವಾಗಿ ಗಾಡಿ ನಿಲ್ಲಿಸಿದೆವು. ಸ್ಥಳೀಯ ನಿವಾಸಿಗಳೊಂದಿಗೆ ಸ್ವಲ್ಪ ಹೊತ್ತು ಹರಟೆ ನಡೆಸಿದೆವು. ಅಲ್ಲಿಯವರೆಗೆ ತಲುಪಿದೆವಲ್ಲಾ ಎಂದು ಒಳಗೊಳಗೆ ಖುಷಿಪಟ್ಟೆನು. ಬೇಗನೆ ಹೋಟೆಲ್ ಮುಟ್ಟುವ ಅಂದಾಜು ಹಾಕಿಕೊಂಡಿದ್ದ ನಮ್ಮೆಡೆಗೆ ನಕ್ಷಬಂದಿ ಅವರು ತಿರುಗಿ ನಿಂತು ” ಈ ಝಿಯಾರತ್ ಪೂರ್ತಿಗೊಳಿಸಲು ಬಯಸುವಿರೇನು?” ಎಂದು ಕೇಳಿದರು. ಕತ್ತಲೆಯಲ್ಲಿ ಪ್ರಯಾಣ ಕಷ್ಟಸಾಧ್ಯ ಎಂದಾಗ “ಇನ್‌ಶಾ ಅಲ್ಲಾಹ್, ಎಲ್ಲವೂ ಸರಿ ಹೋಗಲಿದೆ” ಎಂದು ಧೈರ್ಯ ತುಂಬಿದರು.

ನನಗೆ ಯಾವುದೇ ಖಾತರಿ ಇರಲಿಲ್ಲ. ಅಬ್ದುಲ್ ಹಾದಿ ಅವರು ಆತ್ಮವಿಶ್ವಾಸ ಹೊಂದಿದ್ದಂತೆ ಕಾಣಿಸುತ್ತಿದ್ದರು. ಬಹುಶಃ ಇನ್ನೊಮ್ಮೆ ಇಂತಹ ಅವಕಾಶ ಸಿಗದು ಎಂದು ಅಂತರಾಳ ಮಂತ್ರಿಸುತ್ತಿತ್ತು. ಮುಸ್ಸಂಜೆ ಸಮಯದಲ್ಲಿ ಸೆಡಾನ್ ಕಾರಿನಲ್ಲಿ ಫೂಮಾನ್ ನಗರದಲ್ಲಿ ಇರುವ ಅಬೂಸ್ವಾಲಿಹ್ ಅವರ ಮಖಾಮ್‌ಗೆ ತಲುಪಿದೆವು. ಸೂರ್ಯನ ಕೊನೆಯ ರಶ್ಮಿಗಳು ಭೂಮಿ ಮೇಲೆ ಬೀಳುತ್ತಿದ್ದ ಆ ಸಮಯದಲ್ಲಿ ಕಾರಿನ ಗ್ಲಾಸ್ ಸರಿಸಿ ಪ್ರಕೃತಿಯ ಸೊಬಗನ್ನು ಸವಿಯತೊಡಗಿದೆವು. ಶೈಖ್ ಅಬೂಸ್ವಾಲಿಹ್ ಅವರ ವಿಶ್ರಾಂತಿ ಧಾಮಕ್ಕೆ ಸಾಕ್ಷಾತ್ ಪ್ರಕೃತಿಯೇ ನಮ್ಮನ್ನು ಸ್ವಾಗತಿಸಿದಂತೆ ತೋರಿತು. ಈ ಕಲಹಪೀಡಿತ ಯುಗದಲ್ಲಿ ಶಾಂತಿಯುತ ವಿಶ್ರಾಂತಿ ಧಾಮ ಅವರಿಗೆ ದೊರೆತಿದ್ದು ಅಲ್ಲಾಹನು ಅವರಿಗೆ ನೀಡಿದ ಗೌರವವೆಂದೇ ಭಾವಿಸಿದೆನು.

ಈ ಎಲ್ಲಾ ಆಲೋಚನೆಗಳ ನಡುವೆ ನಾನು ನಕ್ಷಬಂದಿ ಅವರೊಂದಿಗೆ ಕೇಳಿಯೇ ಬಿಟ್ಟೆನು: “ಪತ್ನಿ ಬೀಬಿ ನಿಸಾ ಇರುವ ಸ್ಥಳದಿಂದ ದೂರದಲ್ಲಿ ಅಬೂಸ್ವಾಲಿಹ್ ಅವರನ್ನು ಯಾಕೆ ದಫನ ಮಾಡಲಾಗಿದೆ?”. ” ಸೂಫಿಗಳು ಲೌಕಿಕ ಜಂಜಾಟಗಳಿಂದ ದೂರವಿರಲು ಜನಸಾಂದ್ರತೆ ಇರುವ ಸ್ಥಳಗಳಿಗೆ ವಿದಾಯ ಹೇಳಿ ಇಂತಹ ಕುಗ್ರಾಮಗಳನ್ನು ಅರಸುತ್ತಾರೆ” ಎಂದು ಅವರು ಉತ್ತರಿಸಿದರು. ನಾವು ಏರಿದ್ದ ಆ ಬೆಟ್ಟವು ಅಕ್ಷರಶಃ ಹಾಗೆಯೇ ಇತ್ತು. ಲೌಕಿಕ ಜಂಜಾಟ, ಅಕ್ರಮಗಳು ಸೋಕದಂತಹ ಒಂದು ಲೋಕವಾಗಿತ್ತು ಅದು.

ಬೆಟ್ಟದ ದಾರಿಯಲ್ಲಿ ಅಲ್ಲಲ್ಲಿ ಜನಜೀವನದ ಕುರುಹುಗಳು ಕಾಣಿಸುತ್ತಿದ್ದವು. ಸಾಧಾರಣ ಮನೆಗಳು, ಮೇಯುತ್ತಿದ್ದ ದನಕರುಗಳ ನಡುವೆ ನಮ್ಮ ಕಾರು ಚಲಿಸಿತು. ಇಂತಹ ದಾರಿಯಲ್ಲಿ ಸಾಗುವ ಇವರಿಗೇನು ಹುಚ್ಚೇ?! ಎಂದು ಒಂದುವೇಳೆ ಅಲ್ಲಿನ ನಿವಾಸಿಗಳಿಗೆ ಅನಿಸಿರಬೇಕು. ಮೇಲೆ ಹತ್ತುತ್ತಿದ್ದಂತೆ ಇರುಳು ಗಾಢವಾಯಿತು. ದಾರಿಯಲ್ಲಿ ದೊಡ್ಡ ಪ್ರಮಾಣದ ಕಲ್ಲುಗಳು ಎದುರಾಗುತ್ತಿದ್ದರೂ ನನ್ನ ಉತ್ಸಾಹ ಕುತೂಹಲ ಹೆಚ್ಚುತ್ತಲೇ ಇತ್ತು. ಪ್ರಯಾಣದಲ್ಲಿ ಉತ್ಸಾಹಿಯಂತೆ ಕಂಡ ನಕ್ಷಬಂದಿ ಅವರಿಗೆ ನಮ್ಮಿಂದಾಗಿ ತೊಂದರೆಯಾಗಿರಬಹುದೇನೋ ಎಂದು ಒಂದು ಕ್ಷಣ ಸಂದೇಹಿಸಿದೆ.

ಕೊನೆಗೂ ದೂರದಿಂದ ಒಂದು ಹಸಿರು ಬಣ್ಣದ ಬೆಳಕು ಕಾಣತೊಡಗಿತು. ಅದು ಮಗ್ರಿಬ್ ನಮಾಝ್‌ನ ಹೊತ್ತಾಗಿದ್ದರಿಂದ ಮಖಾಮಿನ ಬಾಗಿಲು ಮುಚ್ಚಲಾಗಿತ್ತು. ನಮಗೆ ಒಳಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ನನಗೆ ಯಾವುದೇ ತಕರಾರು ಇರಲಿಲ್ಲ. ಅದಾಗಲೇ ಮನೆಗೆ ಹೊರಡಲು ನಿಂತಿದ್ದ ಅಲ್ಲಿನ ಸಿಬ್ಬಂದಿಗಳಿಗೆ ತೊಂದರೆ ಕೊಡುವುದೂ ನಮಗೆ ಇಷ್ಟವಿರಲಿಲ್ಲ.

ಶೈಖ್ ಅಬ್ದುಲ್ ಖಾದಿರ್ ಅವರು ಸಣ್ಣ ಮಗುವಾಗಿದ್ದಾಗ ಶೈಖ್ ಅಬೂಸ್ವಾಲಿಹ್ ಅವರು ಇಹಲೋಕ ತ್ಯಜಿಸಿದ್ದರು. ಒಂದು ವರದಿ ಹೀಗಿದೆ: ಒಂದು ರಾತ್ರಿ ಅಬೂಸ್ವಾಲಿಹ್ ಅವರು ಕನಸಿನಲ್ಲಿ ತಮ್ಮ ಮುತ್ತಾತ ಪ್ರವಾದಿ ಮುಹಮ್ಮದ್ ಅವರು ಬಂದು, “ಮಗನೇ! ಅಲ್ಲಾಹನು ನಿನಗೆ ಮಗುವನ್ನು ದಯಪಾಲಿಸುವನು. ಆ ಮಗು ನನಗೂ ಪ್ರೀತಿಪಾತ್ರನಾಗುವನು. ಮಾತ್ರವಲ್ಲದೆ ಇಡೀ ಔಲಿಯಾಗಳ ಪೈಕಿ ಆತ ಶ್ರೇಷ್ಠನು” ಎಂದು ಸಿಹಿಸುದ್ದಿ ನೀಡುವರು.

ನಾವು ಬಾಗಿಲಿನ ಬಳಿ ಹೋಗಿ ಅಲ್ಲಿಂದಲೇ ಸಲಾಂ ಹೇಳಿ ಪ್ರಾರ್ಥಿಸಿದೆವು. ಒಂದು ಹೃಸ್ವ ಸಮಯದಲ್ಲಿ ಪ್ರಾರ್ಥನೆ ನಡೆಸಿದೆವು. ನಾವು ಬೇಗ ಕಾರು ಹತ್ತಿ ಬೆಟ್ಟ ಇಳಿದೆವು.

“ಝಿಯಾರ ಖಬೂಲ್! ಇನ್ಶಾ ಅಲ್ಲಾಹ್!” ಎಂದು ಹೇಳುತ್ತಾ ನಕ್ಷಬಂದಿ ಅವರು ನಿರಾಳರಾದರು. ಮಹಾತ್ಮರ ಖಬರ್ ಸಂದರ್ಶನವು ಒಂದು ಮಹತ್ಕಾರ್ಯ. ನನ್ನ ಪರಂಪರೆಯನ್ನು ಹುಡುಕಿ ಹೋಗಿದ್ದು ನನ್ನ ಪಾಲಿಗೆ ಅದ್ಭುತ ಅನುಭವ. ನಾನು ತುಂಬಾ ಸಂತುಷ್ಟಳಾಗಿದ್ದೆ. ವರ್ಷಗಳ ಹಿಂದೆ ನಮ್ಮೊಂದಿಗೆ ವಿವಿಯಲ್ಲಿ ಓದಿದ ಸಹಪಾಠಿಯ ತಂದೆ ನಮ್ಮ ಗೈಡ್ ಆಗಿ ಸಿಕ್ಕಿದ್ದು ನಮ್ಮ ಭಾಗ್ಯವಾಗಿತ್ತು. ಅವರಿಲ್ಲದೇ ಹೋಗಿದ್ದರೆ ಪ್ರಯಾಣ ಇಷ್ಟು ಯಶಸ್ವಿಯಾಗಿ ನಡೆಯುತ್ತಿರಲಿಲ್ಲ. ಅವರಿಂದ ನಾವು ಹಲವಾರು ವಿಷಯಗಳನ್ನು ಕಲಿಯಲು ಸಾಧ್ಯವಾಯಿತು.

ಪ್ರಯಾಣ ಆರಂಭಿಸಿದ ರಶ್ಟ್ ಎಂಬಲ್ಲಿಗೆ ನಕ್ಷಬಂದಿ ಅವರು ನಮ್ಮನ್ನು ತಲುಪಿಸಿದರು. ಗೈಡ್ ಆಗಿ ನಮ್ಮನ್ನು ಯಶಸ್ವಿಯಾಗಿ ಮುನ್ನಡೆಸಿದ ಅವರಿಗೆ ಕೃತಜ್ಞತೆ ಸಲ್ಲಿಸಿದೆವು. ಮುಂದಿನ ದಿನಗಳಲ್ಲಿ ಭೇಟಿಯಾಗೋಣ ಎಂದು ಹೇಳಿ ಅಲ್ಲಿ ವಿದಾಯ ಹೇಳಿದೆವು. ಭೇಟಿ ನೀಡಬೇಕಾದ ಹಲವಾರು ಪ್ರದೇಶಗಳು ಇನ್ನೂ ಇರಾನಿನಲ್ಲಿ ಇವೆ ಎಂದು ನನಗೆ ತಿಳಿಯಿತು.

ಮೂಲ: ಸನಾ ಗೀಲಾನಿ
ಅನುವಾದ: ಮುಹಮ್ಮದ್ ಶಮೀರ್ ಪೆರುವಾಜೆ

Leave a Reply

*