ಸ್ಪೈನ್ – ಅಂದ್ಯುಲೂಸಿಯಾ

ಉರ್ದು ಕವಿ ಅಲ್ಲಾಮ ಇಕ್ಬಾಲರು 1933 ರಲ್ಲಿ ಸ್ಪೇನಿಗೆ ಬೇಟಿ ನೀಡಿದ್ದರು. ಆ ಸಮಯದಲ್ಲಿ ಬರೆದಿರುವ ಎರಡು ಕವಿತೆಗಳಲ್ಲಿ ಮಸ್ಜಿದೇ ಕುರ್ತುಬಾ ಮತ್ತು ಹಿಸ್ಪಾನಿಯಾ ಪ್ರಸಿದ್ಧ ಕವಿತೆಗಳಾಗಿವೆ. ಇಲ್ಲಿ ಪ್ರಕಟಿಸಲಾದ ಕನ್ನಡ ಭಾವಾನುವಾದವು ಇಕ್ಬಾಲರು ಸ್ಪೈನ್ ದೇಶದಿಂದ ವಾಪಾಸಾಗುವ ಸಂದರ್ಭದಲ್ಲಿ ಬರೆಯಲಾಗಿದ್ದು, ‘ಬಾಲ್ ಏ ಜಿಬ್ರೀಲ್’ (ಗೇಬ್ರಿಯಲ್ಲನ ರೆಕ್ಕೆ) ಸಂಕಲನದಲ್ಲಿ ಪ್ರಕಟವಾಯಿತು.

ಸ್ಪೈನ್ ಹೆಸರುವಾಸಿಯಾಗಿರುವುದು ಇಸ್ಲಾಮಿನ ಜ್ಞಾನನಗರಿ ಎಂದು. ಅಂದ್ಯುಲೂಸಿಯಾ ಅಥವಾ ಅಂದುಲುಸ್ ಎಂದು ಕರೆಯಲ್ಪಡುವ ಈ ನಗರದ ಉಲ್ಲೇಖ ಇಕ್ಬಾಲರ ಹಲವಾರು ಕವಿತೆಗಳಲ್ಲಿ ಬರುತ್ತದೆ. ಇಕ್ಬಾಲರು ಜ್ಞಾನವನ್ನು ದೇವತೆಗಳ ರೆಕ್ಕೆಗಳಿಗೆ ಹೋಲಿಸಿದ್ದಾರೆ. ‘ಇಲ್ಮ್’ ಅಥವಾ ಜ್ಞಾನ ದ ಬಗ್ಗೆ ಇಕ್ಬಾಲರು ಬರೆದಿರುವಷ್ಟು ಬೇರೆ ಯಾವುದೇ ಉರ್ದೂ ಕವಿ ಬರೆದಿರಲು ಸಾಧ್ಯವಿಲ್ಲ. ‘ದೂರ್ ದುನಿಯಾ ಕೆ ಮೇರೆ ದಮ್ ಸೆ ಅಂಧೇರಾ ಹೋಜಾಯೇ’ , ‘ಇಲ್ಮ್ ಕೆ ಶಮ್ಮಸೆ ಹೋ ಮುಜುಕೊ ಮುಹಾಬ್ಬತ್ ಯಾರಬ್’ ಮುಂತಾದ ಕವಿತೆಗಳು ಕವಿ ಇಕ್ಬಾಲರು ಜ್ಞಾನಾರ್ಜನೆಯ ಮಹತ್ವವನ್ನು ಸಾರಿದ ಕವಿತೆಗಳಾಗಿವೆ. ಹಾಗೆಯೇ ಅವರ ಕವಿತೆಗಳಾದ ‘ಜಾವೇದ್ ನಾಮಾ’ , ಸರ್ ಸಯ್ಯದ ರ ಸಮಾಧಿಯ ನುಡಿಗಳು’ ಜ್ಞಾನದ ಮಹತ್ವವನ್ನು ಮತ್ತೆ ಮತ್ತೆ ಸಾರುತ್ತವೆ.


ಓ ಅಂದ್ಯುಲೂಸಿಯಾ, ಮುಸಲ್ಮಾನರ
ರಕ್ತಸಾಕ್ಷಿಯಾಗಿರುವೆ ನೀನು
ಹರಮ್ಮಿನಿಂತೆ ನನಗೆ ಪರಮ
ಪವಿತ್ರವಾಗಿರುವೆ ನೀನು

ನಿನ್ನ ಧೂಳಿನೊಳು ನಮ್ಮ ಸುಜೂದಿನ
ಹಣೆಗುರುತುಗಳು ಹುದುಗಿಹೋಗಿವೆ
ನಿನ್ನ ಮುಂಜಾವಿನ ಕುಳಿರ್ಗಾಳಿಯಲ್ಲಿ
ಮೌನ ಅಝಾನಿನ ಕರೆ ತೇಲಿಬರುತ್ತಿದೆ

ನಕ್ಷತ್ರಗಳು ಹೊಳೆಯುತಿವೆ
ಅವರ ಆಯುಧಗಳ ತುದಿಗಳಲ್ಲಿ
ಆ ಬಿಡಾರಗಳು ಗೋಚರಿಸುತ್ತಿವೆ
ನಿನ್ನ ಗುಡ್ಡ ಬೆಟ್ಟಗಳ ತುದಿಗಳಲ್ಲಿ

ನಿನ್ನ ಸುಂದರಿಯರಿಗಿನ್ನೂ
ಮದರಂಗಿಯ ರಂಗು ಬೇಕೇ ?
ಹರಿಯುತಿಹುದಿನ್ನೂ ನನ್ನ ನರನಾಡಿಗಳಲ್ಲಿ
ಆ ನೆತ್ತರದು ಸಾಕೇ ?

ಈ ಕಂಗಳಿಂದಲೇ ಗ್ರನಾಡವನ್ನೂ
ಅಂದು ನೋಡಿದ್ದೆನಲ್ಲ
ಯಾತ್ರೆ – ವಿಶ್ರಾಂತಿಗಳೆರಡರಲ್ಲಿಯೇ
ಪ್ರವಾಸಿಯ ಸುಖವಿರುವುದಿಲ್ಲ

ನಾನೂ ನೋಡಿರುವೆ, ತೋರಿಸಿರುವೇ
ಹೇಳಿರುವೇ, ಕೇಳಿಸಿರುವೇ,
ಬರಿಯ ದೃಶ್ಯ – ಶ್ರವಣಗಳಿಂದ
ಹೃದಯಕ್ಕೆ ಶಾಂತಿ ಸಿಗುವುದಿಲ್ಲ !

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

Leave a Reply

*