ರಾಜಕೀಯ ಪ್ರಕ್ಷುಬ್ಧತೆ ಮತ್ತು ಮುಸ್ಲಿಂ ಜಗತ್ತು

ಮುಸ್ಲಿಂ ಜಗತ್ತು ಪ್ರಕ್ಷುಬ್ಧ ವಾತಾವರಣವನ್ನು ಎದುರಿಸುತ್ತಿದೆ. ನೀತಿ-ನ್ಯಾಯ ರಹಿತ ಜಾಗತಿಕ ಕ್ರಮ, ನೆರಳು ಯುದ್ಧಗಳು, ಆಂತರಿಕ ಸಂಘರ್ಷಗಳು, ಪಂಥೀಯತೆ, ಸಾಮಾಜಿಕ ಬದಲಾವಣೆ, ಆರ್ಥಿಕ ಸಮಸ್ಯೆಗಳು ರಾಜಕೀಯ ಬಿಕ್ಕಟ್ಟುಗಳನ್ನು ತಂದಿಟ್ಟಿದ್ದೇ ಅಲ್ಲದೆ ಮುಸ್ಲಿಂ ಜಗತ್ತಿನ ಬೌದ್ಧಿಕ ಹಾಗೂ ಆಧ್ಯಾತ್ಮಿಕ ವಿಕಾಸದ ಮೇಲೂ ವಿಪರೀತ ಪರಿಣಾಮವನ್ನು ಬೀರಿದೆ. ಪರಿಣಾಮವಾಗಿ ಮುಸ್ಲಿಂ ವಿದ್ವಾಂಸರು, ವಿಜ್ಞಾನಿಗಳು ಹಾಗೂ ಕಲಾವಿದರೆಲ್ಲರೂ ಜಾಗತಿಕ ಗುಣಮಟ್ಟತೆಯ ಪಾತಳಿಯಿಂದ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಜಗತ್ತಿನ ಮುಂದೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಸಾಬೀತುಪಡಿಸುತ್ತಲೇ ಇರಬೇಕಾದ ಅನಿವಾರ್ಯತೆ ಅವರಿಗೆ ಬಂದೊದಗಿದೆ. ಈ ಸಂಕುಚಿತ ಸನ್ನಿವೇಶದಲ್ಲಿ ಬೌದ್ಧಿಕ ಹಾಗೂ ಸಾಂಸ್ಕೃತಿಕ ಉತ್ತುಂಗತೆಯನ್ನು ಮರಳಿ ಪಡೆಯುವುದು ಸಾಧ್ಯವೇ? ಮುಸ್ಲಿಂ ಜಗತ್ತು ಮತ್ತು ಅದು ಕಂಡಿರುವ ರಾಜಕೀಯ ಏಳಿಬೀಳುಗಳ ಇತಿಹಾಸವನ್ನು ಅವಲೋಕಿಸುವಾಗ ಅದು ಸಾಧ್ಯ ಎನ್ನುವ ಉತ್ತರ ನಮಗೆ ದೊರೆಯುತ್ತದೆ ಮತ್ತು ವಿಸ್ತೃತ ಸಾಧ್ಯತೆಗಳನ್ನು ಅದು ತೆರೆದಿಡುತ್ತಿದೆ.

ಇಸ್ಲಾಮಿನ ಬೌದ್ಧಿಕ ಪರಂಪರೆಯ ಬಹುತೇಕ ವಿದ್ವಾಂಸರು ಸವಿಶೇಷವಾದ ರಾಜಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿರುವವರು. ಇಸ್ಲಾಮಿನ ಪ್ರಾಥಮಿಕ ಹಂತದ ನ್ಯಾಯಶಾಸ್ತ್ರಜ್ಞರು ಮತ್ತು ದೇವತಾ ಶಾಸ್ತ್ರಜ್ಞರು ಭಾರಿ ಪ್ರಮಾಣದ ಸಾಮಾಜಿಕ, ರಾಜಕೀಯ ಮತ್ತು ವಿಶ್ವಾಸ ಪರಿವರ್ತನೆಗಳನ್ನು ಕಾಣಬೇಕಾಯಿತು. ಹಿಜರಿ 632 ಪ್ರವಾದಿವರ್ಯರ ವಿಯೋಗಾನಂತರ ದೇವತಾ ಶಾಸ್ತ್ರದ ಪ್ರಧಾನ ಚರ್ಚೆಗಳು ರಾಷ್ಟ್ರ ಸ್ಥಾನಾರೋಹನ ವಿಷಯಗಳ ಕುರಿತಾಗಿತ್ತು. ಮಿಹ್ನಾ, ಅಥವಾ ಖಿಲಾಫತ್ ರಾಜಾಡಳಿತಕ್ಕೆ ಸರಿದಾಗ ಉಂಟಾದ ನೇತ್ಯಾತ್ಮಕ ರಾಜಕೀಯ ಉತ್ಪಾತಗಳನ್ನು ಬಗೆಹರಿಸುತ್ತಾ ವಿದ್ವಾಂಸರು ಜ್ಞಾನ ಪ್ರಸಾರಕ್ಕೆ ಒತ್ತು ನೀಡಿದರು.

ಇಸ್ಲಾಮಿನ ಆರಂಭಿಕ ಕಾಲದ ದಾರ್ಶನಿಕ ಹಾಗೂ ವೈಜ್ಞಾನಿಕ ಪರಂಪರೆ ಮೊಳಕೆಯೊಡೆದದ್ದು ಮುಸ್ಲಿಂ ರಾಜವಂಶಗಳ ಸಂಸ್ಥಾಪನೆಯ ಹಿನ್ನೆಲೆಯಲ್ಲಿ ರೂಪುಗೊಂಡ ಉದ್ವಿಗ್ನವಾದ ರಾಜಕೀಯ ವಾತಾವರಣದಲ್ಲಾಗಿತ್ತು . ಕಾಲಾಂತರದಲ್ಲಿ ಉಮವಿಯ್ಯಾದಿಂದ ಅಬ್ಬಾಸಿಯ್ಯಾ ಆಡಳಿತದ ಕಡೆಗಿನ ಪಲ್ಲಟಗಳು ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಹೊಸತಾಗಿ ಚಾಲ್ತಿಗೆ ಬಂದ ಎಮಿರೇಟ್‌ಗಳ ಉದಯ ಮುಂತಾದ ಯಾವುದೇ ರಾಜಕೀಯ ಬದಲಾವಣೆಗಳು ಮುಸ್ಲಿಂ ವಿದ್ವಾಂಸರ ಜ್ಞಾನ ಸಂಪಾದನೆಗೆ ಅಡಚಣೆಯಾಗಲಿಲ್ಲ. ಜ್ಞಾನ ಮತ್ತು ಸತ್ಯದೊಂದಿಗಿನ ಮುಸ್ಲಿಂ ವಿದ್ವಾಂಸರ ಅರ್ಪಣಾಮನೋಭಾವವು ಇಸ್ಲಾಮಿಕ್ ನಾಗರಿಕತೆಯು ಮಧ್ಯೇಷ್ಯಾದಿಂದ ಏಷ್ಯಾ ಮೈನರ್, ಮೆಸೇಪಟೋಮಿಯ, ಉತ್ತರ ಆಫ್ರಿಕಾ, ಅಂದಲೂಸ್ ಆದಿಯಾಗಿ ಜಗತ್ತಿನಾದ್ಯಂತ ವ್ಯಾಪಿಸಲು ಹೇತುವಾಯಿತು.

ಅಲ್ ಕಿಂದಿ, ಫಾರಾಬಿ, ಇಬ್ನ್ ಸೀನಾ ಮುಂತಾದ ಪ್ರಸಿದ್ಧ ತತ್ವಜ್ಞಾನಿಗಳು ತತ್ತ್ವಜ್ಞಾನ, ತರ್ಕವಿಜ್ಞಾನ, ವೈದ್ಯಕೀಯ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅಂದಿನ ರಾಜಕೀಯ ಅನಿಶ್ಚಿತತೆ, ಸೈನಿಕ ಸಿದ್ಧತೆಗಳು ಮುಂತಾದ ಬಿಕ್ಕಟ್ಟುಗಳನ್ನು ಲೆಕ್ಕಿಸದೆ ಗ್ರಂಥ ರಚನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 12ನೇ ಶತಮಾನದಿಂದ 14ನೇ ಶತಮಾನದವರೆಗೆ ಮುಸ್ಲಿಂ ಭೂಪ್ರದೇಶಗಳು ಪಶ್ಚಿಮದಿಂದ ಮತ್ತು ಪೂರ್ವದಿಂದ ಅನುಕ್ರಮವಾಗಿ ಶಿಲುಬೆಗಾರರ ಮತ್ತು ಮಂಗೋಲಿಯನ್ನರ ನಿರಂತರ ಆಕ್ರಮಣಕ್ಕೆ ಗುರಿಯಾಯಿತು. ಪರಿಣಾಮವಾಗಿ ನಾಗರಿಕರು ಸಹಿಸಿದ ಯಾತನೆಗಳ ಸಾಕ್ಷಿಗಳು ಇತಿಹಾಸ ಪುಟಗಳಲ್ಲಿ ಇಂದಿಗೂ ಓದಿ ನೋಡಬಹದು. ಅದಾಗ್ಯೂ ಈ ಕಾಲದಲ್ಲಿ ಇಸ್ಲಾಮಿನ ಸಂಸ್ಕೃತಿ ಹಾಗೂ ನಾಗರಿಕತೆಗಳ ಕುರಿತಾದ ಅಮೂಲ್ಯ ಗ್ರಂಥಗಳು ಬೆಳಕು ಕಂಡವು.1187ರಲ್ಲಿ ಶಿಲುಬೆಗಾರರಿಂದ ಜೆರುಸಲೇಮನ್ನು ಹಿಂಪಡೆದ ಸ್ವಲಾಹುದ್ದೀನ್ ಅಯೂಬಿಯ ಸಮಕಾಲೀನನಾದ ಉಸಾಮ ಬಿನ್ ಮುಂಕಿಸ್ ಅಂದಿನ ರಾಜಕೀಯ ಸಂದಿಗ್ಧತೆಗಳಿಗೆ ಧೃತಿಗೆಡದೆ ಸರ್ವ ಸಂಭವಗಳನ್ನು ಸವಿಸ್ತಾರವಾಗಿ ತನ್ನ ಕಿತಾಬ್ ಎತ್ತಿಬಾರ್ ನಲ್ಲಿ ಉಲ್ಲೇಖಿಸಿದ್ದಾರೆ. ಶಿಲುಬೆಗಾರರ ಮತ್ತು ಮಂಗೋಲಿಯನ್ನರ ಮಿತಿ ಮೀರಿದ ಕ್ರೂರತೆಗಳು ಇಬ್ನ್ ಅರಬಿ ಮತ್ತು ಮೌಲಾನಾ ಜಲಾಲುದ್ದೀನ್ ರೂಮಿಯಂತಹ ಚಿಂತಕರನ್ನು ಗ್ರಂಥ ರಚನೆಯಿಂದ ಹಿಮ್ಮೆಟ್ಟಿಸಲಿಲ್ಲ.

ಇಬ್ನ್ ಅರಬಿ ಅಂದಲೂಸಿಯನ್ ಮುಸ್ಲಿಮರು ಅನುಭವಿಸಿದ ನೋವುಗಳಿಗೆ, ಯಾತನೆಗಳಿಗೆ ಕಣ್ಣಾದರು. ಮೌಲಾನಾ ರೂಮಿ ಮಂಗೋಲಿಯನ್ನರ ಉಪಟಳವನ್ನು ತಾಳಲಾರದೆ ಕೊನ್ಯಾದತ್ತ ಗುಳೆ ಹೊರಟರು. ಕೊನೆಗೆ ರೂಮಿಯವರ ಕೊನ್ಯಾದಲ್ಲೆ ಕೊನೆಯ ವಿಶ್ರಮ ಪಡೆದರು. ಜ್ಞಾನ ಸಂಪಾದಿಸುವ ಉತ್ಸಾಹದಿಂದ ಇಮಾಂ ಗಝಾಲಿ, ಸುಹ್ರವರ್ದಿ, ನಾಸಿರುದ್ದೀನ್ ತೂಸಿ, ಫಖ್ರುದ್ದೀನ್ ರಾಝಿ, ಮುಲ್ಲಾ ಸದ್ರ್, ಇಬ್ನು ಕಮಾಲ್, ತಖಿಯುದ್ದೀನ್, ಇಮಾಂ ರಬ್ಬಾನಿ, ಶಾಹ್ ವಲಿಯುಲ್ಲಾಹಿ ದ್ದಹ್ಲವಿ ಮುಂತಾದ ಮುಸ್ಲಿಂ ಜಗತ್ತಿನ ಸರ್ವ ವಿದ್ವಾಂಸರು, ತತ್ವಜ್ಞಾನಿಗಳು, ವಿಜ್ಞಾನಿಗಳು, ಕಲಾವಿದರೆಲ್ಲರೂ ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ತಲ್ಲೀನರಾದರು. ಪ್ರಖ್ಯಾತ ವಾಸ್ತುಶಿಲ್ಪಿ ಮಿಮರ್ ಸಿನಾನ್ ರಾಜಕೀಯ ಬಿಕ್ಕಟ್ಟುಗಳಿಂದ ವಿಚಲಿತನಾಗದೆ ತನ್ನ ಯತ್ನವನ್ನು ಮುಂದುವರಿಸಿ ಉತ್ತುಂಗಕ್ಕೇರಿದರು. ಶಾಜಹಾನ್ ತಾಜ್ ಮಹಲನ್ನು ನಿರ್ಮಿಸಿದ್ದು, ಇಸ್ಲಾಮಿಕ್ ಕ್ಯಾಲಿಗ್ರಫಿ, ಮಿನಿಯೇಚರ್ (ಕಿರುಚಿತ್ರ ) ಮಾರ್ಬಿಲಿಂಗಿನ ಅಭೂತಪೂರ್ವ ಕಲಾಕೃತಿಗಳು ಜಗತ್ತಿಗೆ ಪರಿಚಯವಾದುದು, ಮುಸ್ಲಿಂ ಜಗತ್ತಿನಲ್ಲಿ ರಾಜಕೀಯ ಸಮಸ್ಯೆಗಳು ತಾರಕಕ್ಕೇರಿದ್ದ 17ನೇ ಶತಮಾನದಲ್ಲಾಗಿತ್ತು.

ಸಾಮಾಜಿಕ, ರಾಜಕೀಯ ಆರ್ಥಿಕ ವಿದ್ವಾಂಸರ ಜೀವನದಲ್ಲಿ ಅಡ್ಡ ಪರಿಣಾಮವನ್ನುಂಟು ಮಾಡಿರಬಹುದು. ಆದರೆ ಜ್ಞಾನಕ್ಕಾಗಿ ಆಧ್ಯಾತ್ಮಿಕತೆಗಾಗಿ ತನ್ನೆಲ್ಲವನ್ನೂ ಮುಡಿಪಾಗಿಟ್ಟವರಿಗೆ ಲೌಕಿಕ ಜಗತ್ತಿನ ಜಟಿಲ ಸಮಸ್ಯೆಗಳೆಲ್ಲವೂ ನಗಣ್ಯವಾಗಿದ್ದವು. ಎಲ್ಲಾ ರೀತಿಯ ಅನನುಕೂಲ ವಾತಾವರಣದಲ್ಲೂ ಜ್ಞಾನರ್ಜನೆಗಾಗಿ, ಜ್ಞಾನ ಪ್ರಸಾರಕ್ಕಾಗಿ ವಿದ್ವಾಂಸರು ಸಮಾಜಕ್ಕೆ ನೀಡಿದ ಕೊಡುಗೆಗಳು ಇಂದಿಗೂ ಅಮರವಾಗಿದೆ.

ಆಧುನಿಕ ಮುಸ್ಲಿಂ ಜಗತ್ತು ಚರಿತ್ರೆ ಪುಟಗಳಿಂದ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ಮೊದಲನೆಯದಾಗಿ, ರಾಜಕೀಯ ಸಮಸ್ಯೆಗಳಿಗಿರುವ ಪರಿಹಾರ ಕೇವಲ ರಾಜಕೀಯ ಮಾರ್ಗಗಳ ಮುಖಾಂತರವಲ್ಲದೆ, ಬೌದ್ಧಿಕ ಹಾಗೂ ಶೈಕ್ಷಣಿಕ ಪರಿಶ್ರಮಗಳು ಮತ್ತು ಅರ್ಪಣಾ ಮನೋಭಾವಗಳಿಂದಲೂ ಕಂಡುಕೊಳ್ಳಬಹುದಾಗಿದೆ. ಶೈಕ್ಷಣಿಕ ಹಾಗೂ ಬೌದ್ಧಿಕ ರಂಗಗಳಲ್ಲಿನ ಕಾರ್ಯ ಸಾಧನೆಗೆ ರಾಜಕೀಯ ಸಮಸ್ಯೆಗಳ ಪರಿಹಾರಕ್ಕಾಗಿ ಕಾಯುವುದು ಮೂರ್ಖತನವೆನ್ನಬಹುದು. ಅಂತೆಯೇ ವೈಜ್ಞಾನಿಕ ಹಾಗೂ ಬೌದ್ಧಿಕ ಕಾರ್ಯಾಚರಣೆಗಳಿಗೆ ಆಡಳಿತಗಾರರ ಮತ್ತು ವಿದ್ಯಾವಂತ ಸಮಾಜದ ಬೆಂಬಲ ಅತ್ಯಗತ್ಯವಾಗಿದೆ.

ಎರಡನೆಯದಾಗಿ ರಾಜಕೀಯ ಕಲಹಗಳು ವ್ಯಕ್ತಿ ಮತ್ತು ಸಮಾಜದ ಬೌದ್ಧಿಕ ಜೀವನಕ್ಕೆ ಕುತ್ತು ತರುವಂತೆಯೇ ಹುರುಪು ಮತ್ತು ಹುಮ್ಮಸ್ಸನ್ನು ನೀಡಬಲ್ಲದು. ಆದ್ದರಿಂದಲೇ ಜಿಜ್ಞಾಸುಗಳಿಗೆ ಸಂಧಿಗ್ಧತೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿರುವ ಪ್ರಯತ್ನಗಳು ತ್ರಾಸದಾಯಕವಾದರೂ ಆಶಾದಾಯಕವೆನ್ನಬಹುದು.

ಮೂರನೆಯದಾಗಿ ಆಧುನಿಕ ಮುಸ್ಲಿಮರು ತಮ್ಮ ಉತ್ಕೃಷ್ಟವಾದ ಮುಸ್ಲಿಂ ಬೌದ್ಧಿಕ ಪರಂಪರೆಯನ್ನು ಇನ್ನೂ ಸರಿಯಾಗಿ ತಲುಪಿಲ್ಲ. ಪೂರ್ವಜರಾದ ಮುಸ್ಲಿಂ ವಿದ್ವಾಂಸರ ಸಹಸ್ರಾರು ವರ್ಷಗಳ ತಪಸ್ಸಿನ ಮೂಲಕ ಕಟ್ಟಿಕೊಟ್ಟ ವೈಜ್ಞಾನಿಕ, ಶೈಕ್ಷಣಿಕ ಮತ್ತು ಕಲಾವೈಭವದ ಕೊಡುಗೆಗಳ ಪೈಕಿ ಇಂದು ಬೆಳಕಿಗೆ ಬಂದಿರುವುದು ನೂರರಲ್ಲೊಂದರಷ್ಟು ಮಾತ್ರ. ನೂರಾರು ಸಂಗತಿಗಳು ಇಂದಿಗೂ ವಿಸ್ಮೃತಿಯಲ್ಲಡಗಿದೆ. ಆಧುನಿಕ ಯುಗದ ವಾಸ್ತವಿಕತೆಗೆ ಒಗ್ಗಿಕೊಂಡ ನೂತನ ಪಠ್ಯಕ್ರಮ ರೂಪಿಸುವುದು ಇವುಗಳನ್ನು ವಿಸ್ಮೃತಿಯಿಂದ ಹೊರತರಲು ಸಹಾಯ ಮಾಡಬಲ್ಲದು. ಇಂದು ಪರಂಪರೆಯ ಪಹರೆಯಲ್ಲಿ ಉಳಿದುಕೊಂಡು ಜಗತ್ತಿನ ಕುರಿತಾದ ಅಭಿಪ್ರಾಯಗಳನ್ನು ರೂಪಿಸಬೇಕಾದ ಅನಿವಾರ್ಯತೆಯಿದೆ. ಸದ್ಯ ಮುಸ್ಲಿಂ ರಾಷ್ಟ್ರಗಳು ಎದುರಿಸುತ್ತಿರುವ ರಾಜಕೀಯ ಮತ್ತು ಆರ್ಥಿಕ ಸವಾಲುಗಳನ್ನು ಕಡೆಗಣಿಸದೆ ಮುಸ್ಲಿಂ ಜಗತ್ತಿನಲ್ಲಿ ಸುದೀರ್ಘವಾದ ಬೌದ್ಧಿಕ ಹಾಗೂ ಕಲಾಸಾಧನೆಗಳು ಮರುಕಳಿಸಬೇಕಿದೆ.

ಮೂಲ: ಡಾ. ಇಬ್ರಾಹಿಂ ಕಾಲಿನ್
ಅನು: ಆಶಿಕ್ ಅಲಿ ಕೈಕಂಬ

ಡಾ. ಇಬ್ರಾಹಿಂ ಕಾಲಿನ್

Deputy Head of the Security and Foreign Policy Council of the Turkish Presidency. Graduate of Istanbul University, he received his PhD from George Washington University. His books include; Islam and The West, Mulla Sadra, Reason and Virtue: Turkey’s Social Imagination, Self, Other and Beyond: Introduction to the History of Islam-West Relations, Barbar Modern Civilized, The Veil and The Meaning.

+ posts

Nazeer Abbas is currently working as a lecturer of philosophy at a college in Mangaluru. He has pursued his Post Graduation in philosophy and psychology. He is well trained in classical Arabic and Urdu languages and has acquired proficiency in English, Kannada, Tulu, Beary and Malayalam. He has presented about ten academic papers at seminars and conferences across India and abroad. He frequently writes in Kannada and English and has authored and edited many translations. Currently he works as the editor of Thijori and as a freelance content provider for many firms.

Leave a Reply

*

error: Content is copyright protected !!