ವಿಚಾರ ಪ್ರಚೋದಕ ಬ್ಯಾರಿ ಕವನಗಳ ಸಂಕಲನ ‘ನಸೀಅತ್’

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ, ಕವಿ ಹೈದರಲಿ ಕಾಟಿಪಳ್ಳ ಅವರ ಬ್ಯಾರಿ ಕವನಗಳ ಸಂಕಲನ ‘ನಸೀಅತ್’. ನಸೀಅತ್ ಗೆ ಉಪದೇಶ ನೀಡುವುದು, ಶುದ್ಧಗೊಳಿಸುವುದು ಮೊದಲಾದ ಅರ್ಥಗಳಿವೆ.‌ ನಸೀಅತ್ ನ ಉದ್ದೇಶ ತಝ್ಕಿಯತ್. ಅಂದರೆ ಹೃದಯದ ಶುದ್ದೀಕರಣ. ದೇಹ, ಮನೆ, ಬಟ್ಟೆಬರೆ ಸ್ವಚ್ಛಗೊಳಿಸುವುದು ಸುಲಭ, ಆದರೆ, ಹೃದಯದ ಶುದ್ದೀಕರಣ ‘ಚೆನ್ನತ್ತರ ಸುಲಭ ಅಲ್ಲ'(ಹೇಳಿದಷ್ಟು ಸುಲಭ ಅಲ್ಲ)’ ಎಂಬುದನ್ನು ಸ್ವತಃ ಕವಿಯೇ ಒಪ್ಪಿಕೊಂಡರೂ, ಅವರು ತಮ್ಮ ಕಾವ್ಯಗಳ ಮೂಲಕ ‘ನಸೀಅತ್’ ಮಾಡುವ ಸಾಹಸಕ್ಕಿಳಿದಿದ್ದಾರೆ.

ಪೈಗಂಬರರಿಂದ ಹಿಡಿದು ಸೂಫಿಗಳವರೆಗಿನ ಎಲ್ಲರ ಜೀವನದಲ್ಲೂ ನಸೀಅತ್ ಹಾಸುಹೊಕ್ಕಾಗಿದೆ.‌ ಇಸ್ಲಾಮ್ ಜಗತ್ತಿನಾದ್ಯಂತ ವ್ಯಾಪಿಸಿರುವುದರ ಹಿಂದೆ ನಸೀಅತ್ ನ ಪಾತ್ರ ದೊಡ್ಡದು. ನನ್ನ ಪ್ರಕಾರ ಮುಸ್ಲಿಮರಷ್ಟು ನಸೀಅತ್ ಗಳನ್ನು ಕೇಳುವ ಜನಾಂಗ, ಸಮುದಾಯ ಇನ್ನೊಂದಿಲ್ಲ. ಹುಟ್ಟಿನಿಂದಲೇ ಅವರು ನಸೀಅತ್ ಕೇಳುತ್ತಾ ಬೆಳೆಯುತ್ತಾರೆ. ಶಾಲೆ, ಮದ್ರಸ ಎರಡು ಕಡೆಗಳಲ್ಲೂ ಮುಸ್ಲಿಮರಿಗೆ ಸಾಕಷ್ಟು ನಸೀಅತ್ ಸಿಗುತ್ತದೆ, ಶುಕ್ರವಾರದ ಖುತ್ಬಾದಲ್ಲಿ, ನಮಾಝಿನ ನಂತರದ ಭಾಷಣದಲ್ಲಿ, ಜೊತೆಗೆ ಮಾಸಿಕ, ವಾರ್ಷಿಕವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಸೀಅತ್ ನ ಮಹಾಪೂರವೇ ಇರುತ್ತದೆ. ಸಮುದಾಯ ಇದರಿಂದ ಪಡೆದಿರುವ ಪ್ರಯೋಜನಗಳೇನು ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ.

ದೀನ್ ಅಥವಾ ಧರ್ಮ‌ ಎಂದರೆ ನಸೀಅ ಎಂದು ಪೈಗಂಬರರು ಹೇಳಿದ್ದಾರೆ. ಸೂಫಿಗಳ ಕಾವ್ಯ, ಪ್ರವಚನಗಳೆಲ್ಲವೂ ನಸೀಅತ್ ನ ವಿವಿಧ ರೂಪಗಳು. ಸೂಫಿಸಂನಲ್ಲಿ ಉಪದೇಶಗಳನ್ನು ನೀಡುವ ಗುರುವಿಗೆ ಅತ್ಯಧಿಕ ಮಹತ್ವವಿದೆ.‌ ಶಿಷ್ಯನಾದವನು ಗುರುವಿನ ಪರಂಪರೆಯನ್ನು ನೆನಪಿಟ್ಟುಕೊಂಡಿರುತ್ತಾನೆ.‌ ಮೌಲಾನ ಜಲಾಲುದ್ದೀನ್ ರೂಮಿಯವರ ಮಹಾಕಾವ್ಯ ಮಸ್ನವಿ, ಗದ್ಯ ಕೃತಿ ‘ಫೀಹಿ ಮಾ ಫೀಹಿ’ ಲೋಕ ಪ್ರಸಿದ್ಧಿ ಪಡೆದಿದೆ, ಪಾಶ್ಚಾತ್ಯ ಲೋಕ ರೂಮಿಯವರ ಈ ಕೃತಿಗಳನ್ನು ಎದೆಗಪ್ಪಿಕೊಂಡು ಸ್ವೀಕರಿಸಿವೆ. ಮಸ್ನವಿ ಸಾರೋಪದೇಶಗಳ ಕಾವ್ಯಾತ್ಮಕ ಅಭಿವ್ಯಕ್ತಿಯಾದರೆ, ಫೀಹಿ ಮಾ ಫೀಹಿ ರೂಮಿಯವರು ತಮ್ಮ ಶಿಷ್ಯಂದಿರಿಗೆ, ಜನರಿಗೆ ನೀಡಿದ ನಸೀಅತ್ ಗಳ ಸಂಗ್ರಹ. ಅವರ ಪುತ್ರ ಸುಲ್ತಾನ್ ವಲದ್ ಈ ಕೃತಿಯನ್ನು ಸಂಗ್ರಹಿಸಿದ್ದಾರೆ.

‘ನಸೀಅ’ ಎಂಬುದು ಅರಬಿ ಭಾಷೆಯ ಪದ. ಧಾರ್ಮಿಕ ಕಾರಣಗಳಿಂದ ಈ ಪದ ಬ್ಯಾರಿ ಭಾಷೆಯಲ್ಲೂ ವ್ಯಾಪಕ ಬಳಕೆಯಲ್ಲಿರುವುದರಿಂದ ತಮ್ಮ ಬ್ಯಾರಿ ಕವನಗಳ ಸಂಕಲನಕ್ಕೆ ಹೈದರಲಿ ಕಾಟಿಪಳ್ಳ ಅವರು ಈ ಹೆಸರಿಟ್ಟಿರುವುದು ಸೂಕ್ತವೆನಿಸುತ್ತದೆ, ಸಂಕಲನದ ಕವಿತೆಗಳೂ ಸಹ ಕೆಲವು ಕಡೆ ನೇರವಾಗಿ ಮತ್ತು ಹಲವು ಕಡೆ ಪರೋಕ್ಷವಾಗಿ ಓದುಗರಿಗೆ ನಸೀಅತ್ ಮಾಡುತ್ತದೆ.

ಪ್ರಶ್ನೆಯೇನೆಂದರೆ, ಕಾವ್ಯಕ್ಕೂ ಉಪದೇಶಕ್ಕೂ ಏನು ಸಂಬಂಧ? ರೋಮನ್ ಕವಿ ಹೋರೇಸ್, ‘ಕಾವ್ಯ ಆನಂದವನ್ನೂ ನೀಡಬೇಕು, ಉಪದೇಶವನ್ನೂ ಮಾಡಬೇಕು’ ಎನ್ನುತ್ತಾನೆ.‌‌ ಕಾವ್ಯ ಒಣ ಉಪದೇಶವಾಗಬಾರದೆಂಬುದು ಆಧುನಿಕ ಕವಿಗಳ, ವಿಮರ್ಶಕರ ಅಭಿಪ್ರಾಯ. ಮುಖ್ಯವಾಗಿ ವರ್ಡ್ಸ್‌ವರ್ತ್ ‘ಕಾವ್ಯವು ಶಕ್ತಿಯುತ ಭಾವನೆಗಳ ಸ್ವಾಭಾವಿಕ ಹರಿವು’ ಎನ್ನುತ್ತಾನೆ.‌ ಆದರೂ, ಆಧುನಿಕ ಕಾಲಘಟ್ಟದ ಅನೇಕ ಉತ್ತಮ ಕಾವ್ಯಗಳಲ್ಲಿ ‘ನಸೀಅತ್’ ಗುಪ್ತಗಾಮಿನಿಯಂತೆ ಹರಿಯುತ್ತಿರುವುದನ್ನು ಕಾಣಬಹುದು.

ಹೈದರಲಿ ಕಾಟಿಪಳ್ಳ ಅವರ ‘ನಸೀಅತ್’ ಸಂಕಲನದ ಕವಿತೆಗಳ ಒಟ್ಟು ಆಶಯ ಪ್ರೀತಿ ಮತ್ತು ಕನಸು.‌ ಈ ಎರಡು ಗುಣಗಳಿಲ್ಲದೆ ಮನುಷ್ಯ ಈ ಲೋಕದಲ್ಲಿ ಬಾಳಲಾರ, ಅಂತಿಮವಾಗಿ ಅವನ ಉದ್ದೇಶವೂ ಈ ಎರಡರ ಮೂಲಕ ಜೀವನವನ್ನು ಸುಂದರಗೊಳಿಸುವುದು, ಸುಖಕರಗೊಳಿಸುವುದು. ಆದರೆ, ಇದಾಗಬೇಕಾದರೆ ಖಲ್ಬ್, ಮನಸು ಶುದ್ಧಿಯಾಗಿರಬೇಕು, ಆದರೆ, ಖಲ್ಬ್ ಶುದ್ದಿ ಮಾಡುವುದೇ ಸಾಹಸದ ಕೆಲಸ. ಶುದ್ಧ ಖಲ್ಬಿನಲ್ಲಿ ನಿಜವಾದ ಪ್ರೀತಿ ಮತ್ತು ಕನಸುಗಳಿದ್ದರೆ ಜೀವನ ಸುಂದರವಾಗುವುದರಲ್ಲಿ ಸಂಶಯವಿಲ್ಲ ಎನ್ನುವುದೇ ಇಲ್ಲಿಯ ಬಹುತೇಕ ಕವನಗಳು ನಮಗೆ ನೀಡುವ ನಸೀಅತ್.

ಈ ಸಂಕಲನದ ಇನ್ನೊಂದು ವಿಶೇಷತೆ, ಕಾಲದ ದೋಷಗಳನ್ನು ವಿಡಂಬನೆಯ ಮೂಲಕ ಹೇಳುವುದು, ಆಧುನಿಕ ಕಾಲದ ಬಹುದೊಡ್ಡ ದೋಷವೆಂದರೆ, ಜನರಲ್ಲಿರುವ ಅತಿಯಾಗಿರುವ ಗುರುತಿಸಿಕೊಳ್ಳುವ ಬಯಕೆ, ಸಮಾಜದಲ್ಲಿ ಮಹಾದಾನಿ, ಒಳ್ಳೆಯವನೆಂದು ಗುರುತಿಸಿಕೊಳ್ಳಬೇಕು, ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಲೈಕ್ ಪಡೆಯುವ ಮೂಲಕ ಗುರುತಿಸಿಕೊಳ್ಳಬೇಕು, ಎಲ್ಲರೂ ಹೊಗಳಬೇಕೆಂಬ ಬಯಕೆಗಳು ಈ ಕಾಲದ ವ್ಯಕ್ತಿತ್ವಗಳ ಮುಖ್ಯ ಗುಣಲಕ್ಷಣವಾಗಿದೆ. ಅವುಗಳನ್ನೇ ಇಲ್ಲಿಯ ಕವಿತೆಗಳು ತಮ್ಮದೇ ಶೈಲಿಯಲ್ಲಿ ವಿಡಂಬಿಸುತ್ತವೆ.‌

ಉದಾಹರಣೆಗೆ ನನಗೆ ಇಷ್ಟವಾದ ಸಾಲು;
ಪಲ್ಲಿಗ್ ಕೊರಿಯ ಪೈಸ ಕೊಡ್ತ
ಸೀಕ್‌ರವುನುಗು ಎಪುಲು ಕೊಡ್ತ
ಪಾವತ್ತವುನುಗು ಕಿಟ್ಸ್ ಕೊಡ್ತ
ಕೊಡ್ತದೆಂದುರೊ ಬಿಸಯ ಅಲ್ಲ
ಕೊಡ್ತದೆಂದಿಗ್ ಬಿಸಯ ಅಲ್ಲ
ನಾ ಕೊಡ್ತದ್ ಎಲ್ಲಾರ್ಗುಂ ಪಿಡಿಯಾವೊನು
ಅದುರೊ ಒರು ಪೊಟ ಬೇನು
ಅದ್ ಕೊರಿಯ ಲೈಕ್ ಬೇನು
(ಮಸೀದಿಗೆ ಅಲ್ಪ ಹಣ ಕೊಟ್ಟ
ರೋಗಿಗೆ ಆಪಲ್ ಕೊಟ್ಟ
ಬಡವನಿಗೆ ಕಿಟ್ ಕೊಟ್ಟ
ಕೊಟ್ಟದ್ದು ದೊಡ್ಡ ವಿಷಯವಲ್ಲ
ನಾನು ಕೊಟ್ಟದ್ದು ಎಲ್ಲರಿಗೂ ತಿಳಿಯಬೇಕು
ಅದರ ಒಂದು ಪೋಟೋ ಬೇಕು
ಅದಕ್ಕೊಂದಿಷ್ಟು ಲೈಕು ಬೇಕು)

ಈ ಸಂಕಲನದಲ್ಲಿರುವ ‘ನಸೀಅತ್’ ಎಂಬ ಹೆಸರಿನ ಕವನವೂ ಸಹ ಈ ಕಾಲದ ಇನ್ನೊಂದು ಮುಖ್ಯ ದೋಷದ ಕುರಿತು ಗಮನಸೆಳೆಯುತ್ತದೆ.

‘ಇನ್ನೊರ್ತಡೊ ಪುಣ್ಣು
ಚೊರಿಯಂಡ ಪುತ್ತೇ
ನಿಂಡೊ ಮುದು ನಿಕ್ ಕಾಂಡಿಲ್ಲೆ’
(ಇನ್ನೊಬ್ಬನ ಹುಣ್ಣು
ತುರಿಸಬೇಡ
ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ)

ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುವ ಒಂದು ರೋಗ, ಇನ್ನೊಬ್ಬನ ಬಗ್ಗೆ ಕೀಳಾಡುವುದು, ವ್ಯಕ್ತಿತ್ವದ ದೋಷಗಳನ್ನು ಬಹಿರಂಗವಾಗಿ ಚರ್ಚಿಸುವುದು, ಆಕ್ಷೇಪಿಸುವುದು, ಕುಹಕವಾಡುವುದು ಇವತ್ತಿನ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಸಾಮಾನ್ಯವಾಗಿದೆ. ಕವಿ ಇದನ್ನೇ ವಿಡಂಬನೆಯ ಮೂಲಕ ಈ ಸಮಸ್ಯೆ ಎಷ್ಟು ಗಂಭೀರವಾದುದು ಎಂಬುದನ್ನು ಕಾವ್ಯಾತ್ಮಕವಾಗಿ ಹೇಳುತ್ತಾರೆ. ‘ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ’ ಎಂಬಲ್ಲಿ ಮನುಷ್ಯನಿಗಿರಬೇಕಾದುದು ಪರದೂಷಣೆ ಅಲ್ಲ, ಸ್ವವಿಮರ್ಶೆ ಎಂಬ ಧ್ವನಿ‌‌ ಇದೆ.
ಕವಿಗೆ ಈ‌ ಕಾಲಕ್ಕಿಂತ ಹಳೆಯ ಕಾಲವೇ ಹೆಚ್ಚು ಆಪ್ತವೆನಿಸುತ್ತದೆ. ಹಿಂದಿನ ಕಾಲದ ಅಜ್ಜಿ ಮತ್ತು ಈ ಕಾಲದ ಅಜ್ಜಿಯರ ನಡುವಿನ ಸಾಮಾನ್ಯ ವ್ಯತ್ಯಾಸವನ್ನು ಕವಿ ಗುರುತಿಸುತ್ತಾರೆ. ಹಿಂದಿನ ಕಾಲದ ಅಜ್ಜಿಯ ಬಾಯಿಯಲ್ಲಿ ಎಂದೆಂದೂ ಮುಗಿಯದ ಕಥೆಗಳಿದ್ದವು, ಈಗಿನ ಕಾಲದ ಅಜ್ಜಿಯ ಕೈಯಲ್ಲಿ ಮೊಬೈಲ್ ಇದೆ ಎಂಬುದು ಕವಿಯ ದೂರು. ಇದು ಕಟು ವಾಸ್ತವವೂ ಹೌದು. ಒಂದು ವೇಳೆ ಆಧುನಿಕ ಅಜ್ಜಿ ಕಥೆ ಹೇಳಿದರೂ ಆ ಕಥೆಯಲ್ಲಿ ಯಾವುದೇ ಸಿಹಿ ಅರ್ಥಾತ್ ರಸವಿರುವುದಿಲ್ಲ ಎಂದು ಕವಿ ಹೇಳುತ್ತಾರೆ. ಅದಕ್ಕೆ ಕವಿ ಹೇಳುವ ಮಾರ್ಮಿಕ ಕಾರಣ ಈಗಿನ ಕಾಲದ ಅಜ್ಜಿಗೆ ಶುಗರ್ ಇದೆ ಎಂಬುದು. ಬಹುಶಃ ಕವಿ ಇಲ್ಲಿ ಹೊಸ ಪೀಳಿಗೆ ದೈಹಿಕ ಶ್ರಮವಿಲ್ಲದೆ ರೋಗಗ್ರಸ್ಥರಾಗುತ್ತಿರುವುದನ್ನು ವಿಷಾದದಿಂದ ಹೇಳುತ್ತಿದ್ದಾರೆ.

‘ನೀನ್ ನಿಂಡೊ ಬೇಜಾರ್ ಚೆನ್ನದ್ ತಪ್ಪಲ್ಲ ಚಂಜಾಯಿ
ಅವೊಂಡೊ ಕಾದ್‌ಲಿನ್ನೊ
ಬ್ಲೂಟೂತ್ ನೋಕಾತದ್ ತಪ್ಪು’
(ನೀನು ನಿನ್ನ ಬೇಸರ ಹೇಳಿಕೊಂಡದ್ದು ತಪ್ಪಲ ಗೆಳೆಯಾ
ಅವನ ಕಿವಿಯಲ್ಲಿರುವ ಬ್ಲೂಟೂತ್ ನೋಡದಿರುವುದು ತಪ್ಪು)
ಪರಸ್ಪರ ಮಾತನಾಡದಿರುವುದು ಆಧುನಿಕ ಕಾಲದ ಇನ್ನೊಂದು ದೋಷ, ಒಬ್ಬನ ನೋವನ್ನು, ಕಷ್ಟವನ್ನು ಕೇಳುವಷ್ಟು ಪುರುಸೊತ್ತಾಗಲಿ, ವ್ಯವಧಾನವಾಗಲಿ ನಮ್ಮಲ್ಲಿ ಕಡಿಮೆಯಾಗುತ್ತಿದೆ. ಆಧುನಿಕ ಸೌಲಭ್ಯಗಳು ಮನುಷ್ಯರು ಪರಸ್ಪರ‌ ನೋವು ನಲಿವುಗಳನ್ನು ಆಲಿಸದಷ್ಟು ದೂರ ಮಾಡಿಬಿಟ್ಟಿವೆ. ಕೇಳಿಸಿಕೊಳ್ಳುವುದು ಅಥವಾ ಆಲಿಸುವುದು ಬಹಳ ದೊಡ್ಡ ಮೌಲ್ಯವಾಗಿದೆ. ಕೇಳಿಸಿಕೊಳ್ಳುವವರು ಅಥವಾ ಶ್ರೋತೃಗಳು ಇಲ್ಲದಿದ್ದರೆ ನಸೀಅತ್ ನಡೆಯುವುದಿಲ್ಲ.‌ ಆದರೆ, ಆಧುನಿಕ ಮನುಷ್ಯನ ಕಿವಿಯಲ್ಲಿ ಯಾವತ್ತು ನೋಡಿದರೂ ಬ್ಲೂಟೂತ್ ಇರುವುದರಿಂದ ಅವನು ನಸೀಅತ್ ಗೆ, ಸಹ ಮನುಷ್ಯರ ಕಷ್ಟಗಳನ್ನು ಆಲಿಸುವುದರಿಂದ ವಿಮುಖನಾಗುತ್ತಿದ್ದಾನೆ.‌ ಈ ಬಗೆಯ ಮೌಲ್ಯಪತನದ ಬಗ್ಗೆ ಕವಿಗೆ ಬೇಸರವಿದೆ. ಆದ್ದರಿಂದ ಅವನು ದುಃಖಿತನಿಗೆ ಸಾಂತ್ವನ ಮಾಡುತ್ತಿದ್ದಾನೆ, ಆದರೆ ಆ ಸಾಂತ್ವನವೇ ವಿಡಂಬನೆಯ ರೂಪದಲ್ಲಿರುವ ಇಲ್ಲಿನ ಸಾಲುಗಳ ವಿಶೇಷತೆ. ಕೇಳಿಸಿಕೊಳ್ಳುವುದಿಲ್ಲ ಎಂದು ತಿಳಿದೂ ಕಷ್ಟ ಹೇಳಲು ಹೋದದ್ದು ನಿನ್ನ ತಪ್ಪು ಅಲ್ಲ, ಅವನೇಕೆ ಕೇಳಿಸಿಕೊಳ್ಳುತ್ತಿಲ್ಲ ಎಂಬುದನ್ನು ನೋಡದಿರುವುದು ನಿನ್ನ ತಪ್ಪು ಎಂದು ಕವಿ ಹೇಳುತ್ತಿರುವುದರ ಹಿಂದೆ ಆಧುನಿಕ ಸೌಲಭ್ಯಗಳ ದಾಸನಾಗುತ್ತಿರುವುದೇ ಮನುಷ್ಯನೊಳಗಿನ ಮೌಲ್ಯಪತನಕ್ಕೆ ಕಾರಣ ಎನ್ನುವ ಧ್ವನಿ ಕೇಳಿಸುತ್ತದೆ.

ಇಂತಹ ಹಲವಾರು ವಿಚಾರ ಪ್ರಚೋದಕ ಕವನಗಳು ಈ ಸಂಕಲನದಲ್ಲಿವೆ.‌ ಒಮ್ಮೆ ಓದಿದರೆ ಮತ್ತೆ ಓದಬೇಕೆನಿಸುವಷ್ಟು ಸರಳ ಸುಂದರವಾಗಿವೆ. ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ಈ ಕವನ ಸಂಕಲನ ಒಂದು ಉತ್ತಮ ಕೊಡುಗೆ ಎನ್ನಬಹುದು.

– ಸ್ವಾಲಿಹ್‌ ತೋಡಾರ್


Leave a Reply

*