ನನ್ನ ನೆನಪಿನ ಮದೀನಾ ಯಾತ್ರೆ

ಮನೆಮಂದಿಯೆಲ್ಲರೂ ಮದೀನಾಕ್ಕೆ ತೆರಳಿದ ದಿನ ನಾನು ಯೂಟ್ಯೂಬ್ ತೆರೆದು ಮೊದಲೇ ಡೌನ್ಲೋಡ್ ಮಾಡಿಟ್ಟ ಹಾಡು ಕೇಳುತ್ತಿದ್ದಂತೆ ಅಚಾನಕ್ಕಾಗಿ ಅಶ್ರಫ್ ತೈನೇರಿ ಹಾಗೂ ರೆಹೆನಾ ಜೊತೆಗೂಡಿ ಹಾಡಿದ
‘ಮಕ್ಕಾ ಮದೀನಾ ಞಾನ್ ಓರ್ತು ಪೋಯಿ
ಹಕ್ ರಸೂಲಿಂಡೆ ನಿನವಿಲಾಯಿ’
ಎಂಬ ಹಾಡು ಕಿವಿಗಪ್ಪಳಿಸಿತ್ತು.
ಮಕ್ಕಾ-ಮದೀನಾದ ಚಿತ್ರಣವನ್ನು ಬರೆದ ಗೆರೆಗಳವು.
‘ಕಅಬಾವನ್ನು ಗುರಿಯಿಟ್ಟು ಬರುವ ಪಕ್ಷಿಗಳ ಪೈಕಿ ಒಂದು ಪಕ್ಷಿ ನಾನಾಗಿರುತ್ತಿದ್ದರೆ’ ಎಂದು ಅರ್ಥ ಸಾರುವ ಭಾವಸಾಂದ್ರರನ್ನಾಗಿಸುವ ಹಾಡು ಕೇಳುತ್ತಿದ್ದಂತೆ ಅಣ್ಣ ಮದೀನಾದಿಂದ ಕರೆ ಮಾಡಿದ. ‘ನಾವು ಮದೀನಾಕ್ಕೆ ತಲುಪಿದ್ದೇವೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮಲಗಿರುವ ಮದೀನಾದ ಅಂಗಳದಿಂದ ಮಾತನಾಡುತ್ತಿದ್ದೇನೆ’ ಎಂದರು.

ಅದು ರಮಳಾನ್ ತಿಂಗಳು. ಮದೀನಾ ತಲುಪಿ ವಾಹನ ಇಳಿದಾಗ ಮಕ್ಕಳೆಲ್ಲರೂ ಸುತ್ತುಗಟ್ಟಿ ‘ಉಪವಾಸ ನಮ್ಮೊಂದಿಗೆ ತೊರೆಯಿರಿ’ ಎಂದು ತೋಳನ್ನು ಹಿಡಿದು ಎಳೆಯುತ್ತಿದ್ದರು. ಯಾರೊಂದಿಗೆ ಹೋಗಬೇಕೆಂದು ತಿಳಿಯದೇ ನಿಂತಿರುವಾಗ ಅಮೀರ್ (ಯಾತ್ರಾ ಸಂಘದ ನಾಯಕ) ಅಶ್ರಫ್ ವಯನಾಡ್ ಹೇಳಿದರು; “ನಮ್ಮ ಕೈಯ್ಯನ್ನು ಮೊದಲು ಯಾರು ಹಿಡಿದರೋ ಅವರೊಂದಿಗೆ ಹೊರಡೋಣ” ಇದನ್ನು ಕೇಳಿದ ಅರಬೀ ವ್ಯಕ್ತಿಯ ಮುಖದಲ್ಲಿ ಕಿರುನಗೆ ಅರಳಿತು.

ಅರವತ್ತರಷ್ಟು ಜನರಿರುವ ಸಂಘವನ್ನು ಆ ಮದೀನಾದ ಯುವಕ ಒಬ್ಬ ರಾಜನಂತೆ ಮುನ್ನಡೆಸುವ ದೃಶ್ಯವನ್ನು ನನ್ನ ಅಣ್ಣ ಹಬೀಬ್ ವಿವರಿಸಿಕೊಟ್ಟಾಗ, ಮದೀನಾದ ಅತಿಥಿ ಸತ್ಕಾರದ ಕುರಿತು ಕೇಳಿದ್ದ ಕಥೆಯನ್ನು ಮತ್ತೊಮ್ಮೆ ನೆನಪಿಸಿಕೊಂಡೆ.
ಫೋನ್ ತೆಗೆದು ಅಮ್ಮ ಕೇಳಿದಳು
‘ಮಗನೇ, ಇಡೀ ಜಗತ್ತನ್ನು ಸುತ್ತಿದ ನಿನಗೆ ಮಕ್ಕಾ-ಮದೀನಾ ತಲುಪಲು ಯಾಕೆ ಸಾಧ್ಯವಾಗಲಿಲ್ಲ?’
ನಿಜ ಹೇಳಬೇಕೆಂದರೆ, ಅಮ್ಮನ ಈ ಮಾತುಗಳನ್ನು ಕೇಳಿದ ನಂತರವೇ ನಾನು ಆ ಕುರಿತು ಯೋಚನೆ ಮಾಡತೊಡಗಿದೆ.

ಇತರ ಯಾತ್ರೆಗಳ ನಡುವೆ ನಾನು ಆರೇಬಿಯಾದ ಆಕಾಶದಲ್ಲಿ ಹಲವು ಬಾರಿ ಸಂಚರಿಸಿದ್ದೆ. ಒಮ್ಮೆ ಪ್ರಯತ್ನಿಸಿದ್ದರೆ ಜಿದ್ದಾದಲ್ಲಿ ಇಳಿಯಲು ಅವಕಾಶವಿರುವ ಯಾತ್ರೆಯೂ ಸಹ ಇತ್ತಲ್ಲವೇ? ಹಾಗಿದ್ದೂ ನನಗ್ಯಾಕೆ ಅದು ಸಾಧ್ಯವಾಗದೇ ಹೋಯಿತು? ಸಣ್ಣ ಒಂದು ಪ್ರಯತ್ನವನ್ನಾದರೂ ಮಾಡಬಹುದಿತ್ತಲ್ಲವೇ? ಅಂತಹ ಒಂದು ಯೋಚನೆಯೂ ಉದ್ಭವಿಸದೆ ಹೋದದ್ದಾರೂ ಹೇಗೆ? ನಾನು ಅವರೊಂದಿಗಿಲ್ಲದ ಬೇಸರ ಮಾತ್ರವಲ್ಲದೆ ಮಕ್ಕಾ-ಮದೀನಾ ಕಾಣಲು ಸಾಧ್ಯವಾಗದೇ ಹೋದ ದೌರ್ಭಾಗ್ಯವನ್ನೂ ಸಹ ಅಮ್ಮ ನೆನಪಿಸಿದರು.

ಯಾತ್ರಾಮಧ್ಯೆ ನನ್ನ ಪ್ರಾಯವಿರುವ ವ್ಯಕ್ತಿಗಳನ್ನು ಕಂಡರೆ ಅಮ್ಮ ನನ್ನನ್ನು ನೆನಪು ಮಾಡುತ್ತಿದ್ದರಂತೆ. ಅಷ್ಟಕ್ಕೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ನಗರಕ್ಕಿರುವ ಸೌಂದರ್ಯವಾದರೂ ಏನು!? ತಾನು ಕಾಣುವ ಜೊತೆಗೆ ಇತರರೂ ಕಣ್ತುಂಬಿಕೊಳ್ಳಬೇಕೆಂಬ ತೀರ್ಮಾನಕ್ಕೆ ನಮ್ಮನ್ನು ದೂಡುವ ಆ ಮದೀನಾದ ಮಣ್ಣು ಯಾವ ಸೌಂದರ್ಯವನ್ನು ತನ್ನ ಉದರದಲ್ಲಿ ಅಡಗಿಸಿಕೊಂಡಿದೆ? ಸಂದರ್ಶಕರಲ್ಲಿ ಆಹ್ಲಾದ ಹುಟ್ಟಿಸುವ ಯಾವ ಮಾಂತ್ರಿಕ ಶಕ್ತಿ ಈ ನಗರಕ್ಕಿರಬಹುದು? ಕೂಡಲೇ ನಾನು ಮಕ್ಕಾ-ಮದೀನಾ ಸಂದರ್ಶಿಸಬೇಕೆಂದು ತೀರ್ಮಾನಿಸಿಬಿಟ್ಟೆ.
“ನೀನು ಬರುವೆ, ನಿನ್ನನ್ನು ಇಲ್ಲಿಗೆ ತಲುಪಿಸಬೇಕೆಂಬ ಬಯಕೆಯಿಂದ ನಾನು ಕಣ್ಣೀರಿಟ್ಟು ಪ್ರಾರ್ಥಿಸಿದ್ದೇನೆ” ಎಂದು ಹೇಳುತ್ತ ಅಮ್ಮ ಗದ್ಗದಿತಳಾಗಿದ್ದಳು.

ನನ್ನ ಏಕಾಂತಗಳಿಗೆ ಸಹವರ್ತಿಯಾಗಿ ಒಂದು ಹಾಡು ಇತ್ತು. ವೈಯಕ್ತಿಕ ಕಾರಣದಿಂದ ನನಗದು ಆತ್ಮೀಯವಾಗಿತ್ತು. ವರ್ಷಗಳ ಹಿಂದೆ ನಡೆದ ಜಿಲ್ಲಾ ಮಟ್ಟದ ಮದ್ರಸಾ ಕಲಾ ಕಾರ್ಯಕ್ರಮದಲ್ಲಿ ಸಂಘಗೀತೆಯ ಸಹಸ್ಪರ್ಧಿಯಾಗಿದ್ದೆ. ನನ್ನ ಗೆಳೆಯನೂ, ಊರಿನವನೂ ಆದ ಜುನೈದ್ ಕೋವಿ, ಹಾಶಿಮ್ ಇವರಿಬ್ಬರೂ ನನ್ನೊಂದಿಗೆ ಧ್ವನಿಗೂಡಿಸಿದ್ದರು. ನಾವು ಹಾಡಿದ ಹಾಡನ್ನು ಎರಡನೇ ಸ್ಥಾನಿಯಾಗಿಸಿದ ಕಾರಣಕ್ಕಾಗಿತ್ತು ನಾನು ಹಾಡನ್ನು ಇಷ್ಟಪಟ್ಟದ್ದು ಹಾಗೂ ಹಾಡಿ ನೋಡಿದ್ದು. ನಂತರ ಸುಮ್ಮನೆ ಕುಳಿತುಕೊಳ್ಳುವಾಗೆಲ್ಲ ನಾನರಿಯದೆ ಗುನುಗುವ ಹಾಡಾಗಿ ಅದು ಬದಲಾವಣೆಯಾಯಿತು.

ಇವತ್ತಿಗೂ ಕೂಡ ಆ ಹಾಡು ಜೀವಂತವಾಗಿದೆ. ಸ್ಪರ್ಧೆಯಲ್ಲಿ ನಮ್ಮನ್ನು ಸೋಲಿಸಿದ ಕಾರಣದಿಂದ ಉಂಟಾದ ದ್ವೇಷವೋ, ಸಿಟ್ಟೋ ಯಾವಾಗಲೋ ಮಾಯವಾಗಿ ಹೋಗಿತ್ತು. ‘ಹಿಜ್ರಯಿಲ್ ನಬಿಯುಮ್ ಪಿನ್ ಸ್ವಹಾಬರುಮಾಯಿ ಚೇರ್ನು ಮದೀನಾ
ಅಣಯುವಾನ್ ಅಡುತ್ತಿಡುಂಬೋಲ್ ತಿರುನಬಿ ಕರಂಞಿಡುನ್ನೇ’
ಎಂದು ಪ್ರಾರಂಭವಾಗುವ ಈ ಹಾಡು, ನನ್ನನ್ನು ಕೇವಲ ಸಂಘಹಾಡು ಸ್ಪರ್ಧೆಯಲ್ಲಿ ಮಾತ್ರವಲ್ಲ ಸೋಲಿಸಿದ್ದು ಎಂದು ಮನವರಿಕೆಯಾದದ್ದು ನಾನು ವರ್ಷಗಳ ನಂತರ ಮದೀನಾಕೆ ಭೇಟಿಕೊಟ್ಟ ಸಂದರ್ಭದಲ್ಲಾಗಿತ್ತು. ಆ ಪುಣ್ಯ ಮದೀನಾವನ್ನು ದೂರದಿಂದ ನೋಡುವಾಗಲೇ ಯಾವೊಬ್ಬನ ಕಣ್ಣಾಲಿಗಳೂ ತುಂಬದಿರದು. ಮದೀನಾದೊಂದಿಗಿರುವ ಸ್ನೇಹ, ಪ್ರೀತಿಯು ನಮ್ಮ ಮನಸ್ಸುಗಳನ್ನು ಆರ್ದ್ರಗೊಳಿಸುವುದಂತೂ ಸತ್ಯ.

ಮದೀನಾದಿಂದ ಹಿಂದಿರುಗಿದ ಕೂಡಲೇ ಅಣ್ಣ ಹಬೀಬ್ ನನ್ನನ್ನು ಉಮ್ರಾ ಹಾಗೂ ಮದೀನಾಕ್ಕೆ ಕಳುಹಿಸುವ ತಯಾರಿಗಳನ್ನು ಮಾಡತೊಡಗಿದ. ಖತ್ತರಿನ ಐ.ಸಿ.ಎಫ್ ಆಫೀಸಿನಲ್ಲಿ ಹಜ್ಜ್ ಕೇಂದ್ರದಲ್ಲಿ ಹೆಸರು ಹಾಗೂ ವಿಳಾಸವನ್ನು ರಿಜಿಸ್ಟರ್ ಮಾಡಿಸಿಕೊಂಡ. ಮಲೇಷಿಯಾದಲ್ಲಿ ಕೆಲಸ ಮಾಡುತ್ತಿದ್ದ ನಾನು ಖತ್ತರಿಗೆ ಹೋಗುವೆನೋ, ನನಗದು ಒದಗಿ ಬರಬಹುದೋ ಎಂಬ ಖಚಿತತೆಯಿಂದಲ್ಲ ಅವನು ಇಷ್ಟೆಲ್ಲಾ ಮಾಡಿದ್ದು. ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪುಣ್ಯ ಊರಲ್ಲಿ ಅನುಭವಿಸಿದ ಆನಂದಮಯ ಕ್ಷಣಗಳನ್ನು ಅವನ ತಮ್ಮ ತಿಳಿಯದೇ, ಅನುಭವಿಸದೇ ಹೋಗುವನೋ ಎಂಬ ಕಕ್ಕುಲಾತಿಯಿಂದ ಮಾತ್ರವಾಗಿತ್ತು.

ಮನೆಯವರ ನಿರೀಕ್ಷೆಗಳು ಹುಸಿಯಾಗಲಿಲ್ಲ. ಉದ್ದೇಶಿತ ಸಮಯಕ್ಕೆ ಖತ್ತರಿಗೆ ಹೋಗಿ ಮದೀನಾಕ್ಕೆ ಹೊರಟೇ ಬಿಟ್ಟೆ. ಖತ್ತರ್ ಐ.ಸಿ.ಎಫ್ ನ ಜನರಲ್ ಸೆಕ್ರಟರಿ ‘ಕರೀಮ್ ಹಾಜಿ ಮೆಮಂಡಾ’ ನಮ್ಮ ಯಾತ್ರಾ ಸಂಘದ ಅಮೀರ್ (ನಾಯಕ) ಆಗಿದ್ದರು. ಯಾತ್ರೆಯ ಪೂರ್ವತಯಾರಿಯಾಗಿ ನಡೆದ ಪಿ.ಕೆ ಅಹ್ಮದ್ ಫೈಝೀಯವರ ಅಧ್ಯಯನ ಶಿಬಿರವು ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ನಗರಕ್ಕೆ ಬೇಗನೇ ತಲುಪಿಬಿಡಬೇಕೆಂದು ಆಸೆ ಹುಟ್ಟಿಸಿಬಿಟ್ಟಿತ್ತು. ಆಳ ಅರಿವು ಹಾಗೂ ಉತ್ತಮ ಅನುಭವವನ್ನು ಹೊಂದಿದ್ದ ಕರೀಮ್ ಹಾಜಿಯವರ ಚರಿತ್ರೆಯನ್ನು ಮೆಲುಕು ಹಾಕುವ ವಿವರಣೆ, ಅಲ್ಲಿನ ಸೌಂದರ್ಯ, ತಂಪೆರೆಯುವ ಗಾಳಿ ನನ್ನನ್ನು ವಿಚಿತ್ರ ಅನುಭವ ಲೋಕದಲ್ಲಿ ತೇಲಾಡಿಸಿತು.

ಮಕ್ಕಾದಲ್ಲಿ ತಂಗಿದ್ದಾಗ ನಮ್ಮ ಕೋಣೆಯಲ್ಲಿದ್ದ, ಹಿಂದೆ ಮಕ್ಕಾ-ಮದೀನಾಕ್ಕೆ ಬಂದು ಹೋಗುತ್ತಿದ್ದ ಮೂಸಾ ಅವರೊಂದಿಗೆ ಕೇಳಿದೆ,
“ಈ ಎರಡು ನಗರದಿಂದ ತಾವು ಕಂಡರಿತ ವಿಶೇಷತೆಯಾದರೂ ಏನು?”
ಮೂಸಾರವರ ಪ್ರತಿಕ್ರಿಯೆ ಅದ್ಭುತವಾಗಿತ್ತು;
“ಮಕ್ಕಾದ ಕಡೆ ಬರುವಾಗೆಲ್ಲ ನನಗೆ ಒಂದು ಕಾರ್ಯಕ್ರಮಕ್ಕೆ ಬರುವ ಅನುಭೂತಿಯಾಗುತ್ತದೆ. ‘ಬಾ’ ಎಂದು ಕರೆದ ಮನೆಯವರು ಮನೆಯಲ್ಲಿಲ್ಲದೇ ಕಾರ್ಯಕ್ರಮಕ್ಕೆ ಹೋದುದರ ಕೊರತೆಯಂತೆ ನನಗೆ ಭಾಸವಾಗುತ್ತಿತ್ತು. ಆದರೆ ಮದೀನಾಕ್ಕೆ ಹೋದಾಗ ಈ ಕೊರತೆ ಪರಿಹಾರವಾಗುವುದು”

ಒಂದು ಬುಧವಾರ ಬೆಳಗ್ಗಿನ ಜಾವ ಮಕ್ಕಾಗೆ ವಿದಾಯ ಹೇಳಿ ನಾವು ಮದೀನಾದ ಕಡೆಗೆ ಹೊರಟೆವು.
“ಖಿಬ್ಲಾದ ನಗರವಾಗಿದೆ ಮಕ್ಕಾ. ಮಕ್ಕಾದ ಖಿಬ್ಲಾವೇ ಮದೀನಾ. ಮಕ್ಕಾ ಅದರ ಮುಖವನ್ನು ತಿರುಗಿಸಿರುವುದು ಆ ನಗರದಿಂದ ಹೊರಟು ಹೋದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಊರಾದ ಮದೀನಾದ ಕಡೆಗೆ” ಎಂದರ್ಥ ಬರುವ ಅಹ್ಮದ್ ರಝಾಖಾನ್ ಬರೇಲ್ವಿಯವರ ಕವಿತೆಯನ್ನು ಕರೀಮ್ ಹಾಜಿಯವರು ನೆನಪಿಸಿಕೊಟ್ಟರು.

ಮಕ್ಕಾ ಪರ್ವತಗಳ ನಗರ. ಕ‌ಅಬಾದ ಕಾವಲುಗಾರರು ತಲೆಯೆತ್ತಿ ನಿಂತಿರುವಂತೆ ಕಾಣುವ ಪರ್ವತಗಳನ್ನು ದಾಟಿ ನಾವು ಮದೀನಾದೆಡೆಗೆ ಮುನ್ನಡೆದೆವು. ನನ್ನ ಬಳಿ ಕುಳಿತಿದ್ದ ಕಕ್ಕಾಡ್ ಪ್ರದೇಶದ ನಿಯಾಝ್ ಮತ್ತು ಮಜೀದ್ ಬುಖಾರಿ ಸೇರಿ ಅರಬಿ ಹಾಗೂ ಮಲಯಾಳಂ ಭಾಷೆಯಲ್ಲಿರುವ ಪ್ರವಾದಿ ಕಾವ್ಯವನ್ನು ತುಂಬಾ ಚೆನ್ನಾಗಿ, ಭಕ್ತಿಭಾವದಿಂದ ಹಾಡಿದರು. ಮನವು ಹಸಿರುಮಯವಾಗಲು ಯಾಕೋ ಈ ಯಾತ್ರೆ ಸಾಕ್ಷಿಯಾಗುವಂತಿದೆ ಎಂಬ ಅನುಭವವಾಗತೊಡಗಿತು. ಹೊರಗೂ ಕೂಡ ಅದೇ ಭಾವ. ಮರುಭೂಮಿ, ಪರ್ವತಗಳನ್ನು ಹಿಂದಿಕ್ಕಿ ಚಕ್ರಗಳು ಉರುಳುತ್ತಿರುವಂತೆ ಧಾನ್ಯಗಳನ್ನು ಬಿತ್ತನೆ ಮಾಡಲು ಸೂಕ್ತವಾದ ಮಣ್ಣು ಕಾಣತೊಡಗಿತು. ಕುಳಿತಲ್ಲಿಂದಲೇ ಮನಸ್ಸು ಏನೇನೋ ಯೋಚಿಸಿತೊಡಗಿತು. ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಾಗೂ ಅನುಚರರ ಸಂಘವು ಹೇಗೆ ಶತಮಾನಗಳ ಹಿಂದೆ ಈ ಮರುಭೂಮಿಯಲ್ಲಿ ಹೆಜ್ಜೆ ಹಾಕಿರಬಹುದು? ಅಷ್ಟಕ್ಕೂ ನೋವನ್ನುಂಡು ನಡೆಯುವಾಗ ಅವರೊಂದಿಗೆ ಕೈ ಜೋಡಿಸಿದ್ದು ಯಾರಿರಬಹುದು? ಎಲ್ಲಿ ಪ್ರಿಯ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಾಗೂ ಅನುಚರರು ದಾಹ ನೀಗಿಸಿದ್ದಿರಬಹುದು? ಯಾವ ಮರದಡಿಯಲ್ಲಿ ವಿಶ್ರಾಂತಿಗಾಗಿ ಕುಳಿತಿದ್ದಿರಬಹುದು? ದಾರಿಯುದ್ದಕ್ಕೂ ಚಕ್ರವೊಮ್ಮೆ ಕೆಲಕಾಲದ ಹಿಂದಕ್ಕೋಡಿತು.

‘ಹಿಜ್‌ರಾ’ (ವಲಸೆ) ದ ನೋವಿನ ಆಳವನ್ನರಿಯಲು ಮಕ್ಕಾ ಮದೀನದ ದಾರಿಯಾಗಿ ಯಾತ್ರೆ ಹೊರಡಬೇಕು. ಟಾರು ಹಾಕಿದ ರಸ್ತೆಯಲ್ಲಿ ಎ.ಸಿ ಹಾಕಿದ ಬಸ್ಸಿನ ಒಳಗೆ ಕುಳಿತು ಮೆಲ್ಲಗೆ ಗ್ಲಾಸ್ ಸರಿಸಿ ಹೊರಗೊಮ್ಮೆ ಕಣ್ಣು ಹಾಯಿಸಿದೆ. ಮತ್ತೊಂದು ಕಾರಿನ ಆವಿಯ ಬಿಸಿಯು ಮುಖಕ್ಕೆ ಅಪ್ಪಳಿಸುವಾಗ ಯಾವೊಬ್ಬನ ಕಣ್ಣೂ ಮುಚ್ಚಲೇಬೇಕು. ಇಂತಹ ಶಕ್ತವಾದ ಬಿಸಿಗಾಳಿಯನ್ನೆದುರಿಸಿ ನಮ್ಮ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ಸಮೂಹದ ಪುನರುತ್ಥಾನಕ್ಕೆ ಬೇಕಾಗಿ ಕಣ್ತೆರೆದು ನಡೆದದ್ದನ್ನು ನೆನೆಯುವಾಗ ಮನ ಭಾರವೆನಿಸುವುದು ಖಂಡಿತ.

ಸಹಯಾತ್ರಿಕ ನಿಯಾಝ್ ಒಂದು ಹದೀಸನ್ನು ಹೇಳಿಕೊಟ್ಟರು. ಹಜ್ಜ್ ನಿರ್ವಹಿಸಲೆಂದು ಬಂದ ಒಂದು ಸಂಘ ವಿದ್ವಾಂಸರು ಮಕ್ಕಾದಿಂದ ಮದೀನಾಕ್ಕೆ ಏಳು ಬಾರಿ ಯಾತ್ರೆಗೈದ ಒಂದು ಕಾಲದ ಹದೀಸಿನ ಕುರಿತು ಅವರು ವಿವರಿಸುತ್ತಿದ್ದರು. ಕ್ರಿ.ಶ ಆರುನೂರರ ಆರಂಭದಲ್ಲಿ ವಾರಗಳ ಕಾಲ ಮರಳುಗಾಡು ಮತ್ತು ಪರ್ವತಾವಳಿಗಳನ್ನು ದಾಟಿ, ಮರುಭೂಮಿಯ ಬಿಸಿಗಾಳಿಯನ್ನು ಅನುಭವಿಸಿ, ಹಸಿವು-ದಾಹವನ್ನು ಬೆನ್ನಟ್ಟಿದ ಆ ಕಾಲದಲ್ಲಿ! ಈ ವಿಷಯವನ್ನು ಕೇಳಿದ ಸ್ವಹಾಬಿಗಳು ಯಾರೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಮರುಮಾತಾಡಿರಲಿಲ್ಲ. ಕಾರಣ ಅಷ್ಟಕ್ಕೂ ಅವರು ಹಬೀಬರೊಂದಿಗೆ ವಿಶ್ವಾಸವಿರಿಸಿದ್ದರು.

ಹಬೀಬ್ ಸ್ವಲಲ್ಲಾಹು ಅಲೈಹಿವಸಲ್ಲಮರು ನಮಾಝ್ ಮಾಡಿದ ಮಸೀದಿ, ಹಜ್ಜಿಗಾಗಿ ಇಹ್ರಾಮ್ ಕಟ್ಟಿದ ಸ್ಥಳಗಳನ್ನೆಲ್ಲ ಗೈಡ್ ತೋರಿಸಿಕೊಟ್ಟರು. ಬದ್‌ರ್ ಯುದ್ಧ ಭೂಮಿಗೆ ಹೋಗಬೇಕೆಂಬ ಬಯಕೆಯಿಂದ ಬದ್ರ್ ಭೂಮಿಗೆ ಕರೆದುಕೊಂಡು ಹೋಗುವರೇ ಎಂದು ಚಾಲಕನ ಬಳಿ ಕೇಳಿದರೂ ಅಲ್ಲಿ ಅಪಾಯ ಹೆಚ್ಚಾಗಿರುವುದರಿಂದ ಹೋಗಿ ಬರಲು ಅಸಾಧ್ಯ ಎಂದರು. ನಾವು ಅಲ್ಲಿಂದ ನೇರ ಮದೀನಾದತ್ತ ಯಾತ್ರೆಯಾದೆವು.

ಬದ್ರ್ ಭೂಮಿ

ಪ್ರಯಾಣ ಮುಂದುವರಿಯಿತು.
ಮದೀನಾದ ಹತ್ತಿರ ತಲುಪುವ ಸೂಚನೆಗಳು ಕಾಣತೊಡಗಿದವು. ದೂರವನ್ನು ಸೂಚಿಸುವ ಮೈಲಿಗಲ್ಲು ಕಂಡಾಗ ಮದೀನಾ ಹತ್ತಿರವಾಗುತ್ತ ಬರುತ್ತಿದೆ ಎಂದು ತಿಳಿಯಿತು. ಬಸ್ಸು ಚಲಿಸುತ್ತಿದ್ದಂತೆ ಮದೀನಾದ ದೂರ ಕಡಿಮೆಯಾಗುತ್ತಾ ನಾನೂ ಮದೀನಾದತ್ತ ಹತ್ತಿರವಾಗತೊಡಗಿದೆ.
“ಹೋ.. ಮದೀನಾ ತಲುಪಿತು”
ಈ ಹಿಂದೆ ಯಾತ್ರೆಗೈದು ಅನುಭವವಿದ್ದ ಹಿರಿಯ ವ್ಯಕ್ತಿಯೊಬ್ಬರು ಕೂಗಿ ಹೇಳಿದರು. ಪುಣ್ಯ ನಗರಿ ತಲುಪಿದ್ದೇ ತಡ ಹೃದಯದಲ್ಲಿ ಯಾರೋ ಬಂದು ಬಾಗಿಲು ಬಡಿದಂತೆ ಅನುಭವವಾಯಿತು.

ಒಮ್ಮೆ ಕಣ್ಣು ಹಾಯಿಸಿದರೆ ಕಾಣುವಷ್ಟು ಹತ್ತಿರದಲ್ಲಿತ್ತು ಈಗ ಮದೀನ. ಹೃದಯ ಬಡಿತ ಇನ್ನೂ ಹೆಚ್ಚಾಗತೊಡಗಿತು.
ಹಬೀಬರು ಎಲ್ಲವನ್ನೂ ತ್ಯಜಿಸಿ ನಡೆದ ಪುಣ್ಯ ನಗರವೊಂದು ನನ್ನನ್ನು ಕೈಬೀಸಿ ಕರೆಯುತ್ತಿದೆ. ನೈಜ ಮುಸ್ಲಿಮನಿಗೆ ಇದಕ್ಕೂ ಮಿಗಿಲಾದ ಬೇರೆ ಸಂತೋಷವಿದೆಯೇ! ನಾನು ಈಗ ಮದೀನಾದ ಮುಂದೆ ಹಾಯಾಗಿ ನಿಂತು ಹಸಿರು ಗುಂಬದ್ ನೋಡಿ ಉಸಿರೆಳೆದುಕೊಂಡೆ.

ಮದೀನಾದ ಹಸಿರು ಗುಂಬದ್ ಪ್ರೀತಿ ಮತ್ತು ಸುಗಂಧವನ್ನು ಸಂಕೇತಿಸುತ್ತದೆ. ಹಸಿರಿಗಿಂತ ಹರಿತವಾದ ಬೇರೆ ಬಣ್ಣವಿದೆಯೇ?
“ಬನ್ನಿ.. ನನ್ನ ನೆರಳಲ್ಲಿ ಕುಳಿತುಕೊಳ್ಳಿರಿ” ಎಂದು ಯಾವೊಬ್ಬನನ್ನೂ ಆ ಹಸಿರು ಗುಂಬದ್ ಕರೆದುಬಿಡುತ್ತದೆ. ನೋಡುತ್ತಿದ್ದಂತೆ ಪ್ರೀತಿಯಲ್ಲಿ ಪರವಶನಾಗಿಸುತ್ತದೆ ಆ ಹಸಿರ ಗುಂಬದ್. ಅದಕ್ಕೂ ಒಂದು ಮಾಂತ್ರಿಕ ಶಕ್ತಿಯಿದೆ. ಕಾರಣ ಆ ಗುಂಬದಿನ ಕೆಳಗೆ ಮಲಗಿರುವುದು ಪ್ರಿಯ ಹಬೀಬರಲ್ಲವೇ? ಗುಂಬದಿನ ಕಡೆಗಿರುವ ನೋಟ ಹೃದಯವನ್ನು ಆರ್ದ್ರವಾಗಿಸಿ ಸ್ತಬ್ಧವಾಗಿಸುತ್ತದೆ. ಆಕಾಶ ಭೂಮಿಗಳ ಒಡೆಯ ಭೂಮಿಯಲ್ಲಿ ತನ್ನ ಹಕ್ಕನ್ನು ಹೇಗೆ ಸ್ವಾಧೀನಗೊಳಿಸಿದ್ದಾನೋ ಹಾಗೆಯೇ ಹಸಿರು ಗುಂಬದ್ ಹಬೀಬರ ಸಾನಿಧ್ಯವನ್ನು ಎತ್ತಿ ತೋರಿಸುತ್ತದೆ.

ಮದೀನಾ ನಗರಿಗೆ ನೋವುಗಳನ್ನು ನಂದಿಸಿ, ಶಮನಗೊಳಿಸುವ ಶಕ್ತಿ ಇದೆ. ಒಬ್ಬನಿಗೆ ಮದೀನಾ ತಲುಪಿಯೂ ಮನಸು ತಿಳಿಯಾಗದಿದ್ದರೆ ಹಸಿರುಮಯವಾಗದಿದ್ದರೆ ಇನ್ನೆಲ್ಲಿ ಆತ ಬದಲಾವಣೆಯ ಅನುಭವ ಪಡೆಯುವುದು? ಮತ್ತೆಲ್ಲಿಗೆ ಬದಲಾವಣೆಗಾಗಿ ಹೊರಡುವುದು. ಒಬ್ಬ ಸಾಮಾನ್ಯ ಮನುಷ್ಯನನ್ನು ಸರಿದಾರಿಯತ್ತ ಕೊಂಡೊಯ್ಯುವ ಗಾಂಭೀರ್ಯತೆಯು ಮದೀನಾ ಭೂಮಿಗಿದೆ ಎಂದು ಪ್ರಥಮ ನೋಟದಲ್ಲೇ ತಿಳಿಯುತ್ತದೆ. ಮದೀನಾದ ವಾತಾವರಣದಲ್ಲೇ ಬದಲಾವಣೆಯ ತೇವಾಂಶವಿದೆ. ಫಲವತ್ತತೆಯ ಮಣ್ಣ ಮೇಲೆ ನಡೆದಾಡುವವನಿಗೆ ಬದಲಾವಣೆಯನ್ನು ಆ ಮಣ್ಣೇ ನೀಡುತ್ತದೆ.

ಕಾಯ್ದಿರಿಸಿದ ಕೊಠಡಿಗೆ ತಲುಪಿದ ಅಮೀರ್ ಊಟಕ್ಕಾಗಿ ಆಜ್ಞೆ ಮಾಡಿದ. ಹಸಿವನ್ನು ಹೋಗಲಾಡಿಸುವ ಯಾವುದೋ ಕೂಗು ಒಳಗಿನಿಂದ ಚುರುಗುಟ್ಟುತ್ತಿತ್ತು. ಮದೀನಾದಲ್ಲಿರುವ ಹಸಿವು ಹೊಟ್ಟೆಗೆ ಸೀಮಿತವಾದದ್ದು ಅಲ್ಲ ಅಲ್ಲವೆ!
“ನಾವು ಮಸೀದಿಗೆ ಹೋಗೋಣ”
ಎಲ್ಲರೂ ಊಟ ಬಿಟ್ಟು ಗುಂಬದಿನತ್ತ ನಡೆದೆವು. ಈ ಮೊದಲು ಮದೀನಾಕ್ಕೆ ಹಲವು ಬಾರಿ ಭೇಟಿ ನೀಡಿದ್ದ ನಿಯಾಝನಿಗೆ ಮದೀನಾ ಬೀದಿಗಳ ಪರಿಚಯವಿತ್ತು. ಮಸೀದಿಯ ಕಡೆಗೆ ನಾವು ಅಕ್ಷರಶಃ ಓಡುತ್ತಿದ್ದೆವು. ಯಾರನ್ನೂ ತನ್ನ ಕೈಯೊಳಗಾಗಿಸುವ ಶಕ್ತಿ ಮದೀನಾಕ್ಕೆ ಇರುವುದಂತೂ ಖಚಿತ. ಅಲ್ಲದೆ ಇದೇನು ಈ ರೀತಿಯ ಒಂದು ಓಟ! ರಸ್ತೆ ಮಧ್ಯೆಯಿರುವ ಸಿಗ್ನಲ್‌ಗಳನ್ನು ನೋಡುವುದನ್ನೂ ಮರೆತುಬಿಟ್ಟು ಓಡುತ್ತಿದ್ದೆವು.
ನಾವೀಗ ಹೂವಿನ ಉದ್ಯಾನದಂತಿರುವ ಮದೀನಾದ ಅಂಗಳಕ್ಕೆ ತಲುಪಿದೆವು. ಹಸಿರು ಗುಂಬದ್ ಕಂಡದ್ದೇ ತಡ ಕಾಲುಗಳು ನಿಶ್ಚಲವಾದವು. ವುಝೂ (ಅಂಗಶುದ್ಧಿ) ಮಾಡಿ ನಮಾಝ್ ಮುಗಿಸಿ ‘ರೌಝಾ ಶರೀಫ್’ (ಪುಣ್ಯ ಸಮಾಧಿ) ನತ್ತ ಹೆಜ್ಜೆಯಿಟ್ಟೆ. ಸ್ವರ್ಗದ ಭಾಗವೆಂದು ವಿಶೇಷಿಸಲ್ಪಟ್ಟ ಏಕೈಕ ಸ್ಥಳ!
ಸೊಗಸಾಗಿ ಅಲಂಕರಿಸಿದ ಸಾಲುಗಳ ಮೂಲಕ ಹೊರಬಂದು ‘ಹುಜ್ಜತುಶ್ಶರೀಫ’ ಎದುರುಗಡೆ ಬಂದು ತಲುಪಿದೆವು. ನನ್ನ ಮರಣದ ನಂತರ ನನ್ನನ್ನು ನೋಡಲು ಬರುವವರು ನನ್ನ ಜೀವಿತಾವಧಿಯಲ್ಲಿ ನನ್ನ ಬಳಿ ಬಂದವರಂತೆ ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದರಲ್ಲವೆ; ಮೊದಲ ಬಾರಿ ಹಬೀಬರೊಂದಿಗೆ ಮುಖಾಮುಖಿಯಾಗಿ ಸಂಭಾಷಣೆ ನಡೆಸುವಾಗಿನ ಅನುಭೂತಿ ಅನನ್ಯವಾದುದು. ನನ್ನನ್ನು ಭೇಟಿಯಾದ ನಿನಗೆ ಅಲ್ಲಾಹನ ರಕ್ಷೆ ಇರಲಿ ಎಂದು ಪ್ರಾರ್ಥಿಸಿರಬಹುದಲ್ಲವೇ? ಪ್ರಾರ್ಥನೆಗಿಂತ ಮಿಗಿಲಾದ ವಸ್ತು ವಿಶ್ವಾಸಿಯ ಪಾಲಿಗೆ ಬೇರೇನಿದೆ?
ಜೀವನದ ಮೇಲೆ ನಿರೀಕ್ಷೆಗಳು ಹಾಗೂ ಸ್ವರ್ಗ ಪ್ರವೇಶಿಸಬೇಕೆಂಬ ಆಸಕ್ತಿಗಳನ್ನು ಕೈಬಿಡಲು ಸಾಧ್ಯವಾಗುವುದು ಹೇಗೆ? ನಿರೀಕ್ಷೆಗಳ ನಗರವೆಂದು ಮದೀನಾವನ್ನು ಕರೆಯುವುದು ಬರೀ ಆಲಂಕಾರಿಕ ಪ್ರಯೋಗದಿಂದಲ್ಲ. ಮಕ್ಕಾದಿಂದ ಪ್ರವಾದಿಯರನ್ನು ಹಾಗೂ ಸ್ವಹಾಬಿಗಳನ್ನು ಓಡಿಸಿದಾಗ ಅವರಿಗೆ ಅಭಯ ನೀಡಿದ ನಗರಕ್ಕೆ ಬೆನ್ನು ತೋರಿಸಿ ನಿಲ್ಲಲು ಸಾಧ್ಯವಾಗುವುದಾದರೂ ಹೇಗೆ? ಮದೀನಾದ ಮೇಲಿರುವ ನಿರೀಕ್ಷೆಗಳು ಸುಳ್ಳಾಗದು. ನಿರೀಕ್ಷೆಗೆ ತಕ್ಕ ಫಲವುಣ್ಣುವುದು ಖಂಡಿತ.

ಮಗ್ರಿಬ್ ನಮಾಝಿನ ನಂತರ ಹೊರಬಂದು ಹಬೀಬರ ಮಸೀದಿಯನ್ನು ನೋಡಿ ಕಣ್ಣು ತುಂಬಿಕೊಂಡೆ. ಹೊರಗೆ ಬರುವಾಗೆಲ್ಲಾ ಒಳಗೆ ಹೋಗಬೇಕೆಂಬ ಭಾವನೆ. ಚಹಾ ಕುಡಿದು ಹೊರಬಂದು ರೌಝಾದ ಬಳಿ ಕುಳಿತುಕೊಂಡೆ. ಜಗತ್ತಿನ ನಾನಾ ಭಾಗದಿಂದ ಬಂದ ಜನರು ರೌಝಾದ ಸುತ್ತಲೂ ಕುಳಿತುಕೊಂಡಿದ್ದರು. ಅವರಿಗೆಲ್ಲರಿಗೂ ಒಂದೇ ಭಾವ. ಅವರ ಕಣ್ಣಂಚಲಿ ತೂಗಾಡುವ ನಿರೀಕ್ಷೆಗಳಿಗೆ ಉತ್ತರ ಕೊಡಲು ಮದೀನಾ ನಗರಿಗಲ್ಲದೆ ಬೇರೆಯಾವ ನಗರಿಗೂ ಸಾಧ್ಯವಾಗದು. ನಾನು ಬೆಳಗಿನವರೆಗೂ ಮದೀನಾದ ಬಳಿ ಕುಳಿತೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನಮಾಜು ಮಾಡಿದ ಮಿಹ್ರಾಬ್, ಖುತುಬಾ ನಿರ್ವಹಿಸಿದ ಮಿಂಬರ್, ನಮಾಝಿನ ಬಳಿಕ ಕುಳಿತುಕೊಳ್ಳುತ್ತಿದ್ದ ಸ್ಥಳ, ಬೇರೆಯಾರೂ ಅಭಯವಿಲ್ಲದ ಸಮಯದಲ್ಲಿ ಹಬೀಬರು ಅಭಯ ನೀಡಿದ ‘ಸುಫ್ಫಾ’; ಇವೆಲ್ಲವನ್ನೂ ಹತ್ತಿರದಿಂದ ನೋಡಿ ಕಣ್ತುಂಬಿಕೊಂಡೆ.
‘ರೌಝಾ ಶರೀಫ್’ ಕಂಡಾಗ ಹಬೀಬರ ಕಾಲದಲ್ಲಿನ ಮದೀನಾ ಮಸೀದಿಯ ಚಿತ್ರಣವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ ನೋಡಿದೆ. ಮನೋ ಚಿತ್ರ ಬಿಡಿಸಿದರೂ ಅದು ಪೂರ್ತಿಯಾಗದೆ ಒಂದು ಅಪೂರ್ಣ ಚಿತ್ರವಾಗಿ ಇಂದಿಗೂ ನನ್ನ ಮನಸ್ಸಲ್ಲಿ ಉಳಿದುಬಿಟ್ಟಿದೆ.

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಅವತೀರ್ಣವಾದ ಗ್ರಂಥ ಖುರ್-ಆನ್. ಅಮ್ಮ ಹಬೀಬರ ಸನ್ನಿಧಿಯಲ್ಲಿ ಕುಳಿತು ಖುರ್-ಆನ್ ಪೂರ್ತಿ ಓದಿ ಮುಗಿಸಬೇಕೆಂದು ವಸಿಯ್ಯತ್ (ನಿರ್ದೇಶನ) ಮಾಡಿದ್ದರು. ಅಮ್ಮ ಹೇಳಿದುದರ ಗಂಭೀರತೆ ಅರಿವಾದದ್ದು ರೌಝಾ ಶರೀಫಿನ ಮಿಹ್‌ರಾಬ್ ಬಳಿ ಒರಗಿ ಕೂತು ಓದುವ ಸಂದರ್ಭದಲ್ಲಾಗಿತ್ತು. ಕಾರಣ, ಜಿಬ್ರೀಲ್ (ಅಲೈಹಿಸ್ಸಲಾಮ್) ಖುರ್-ಆನ್ ಓದಿ ಕೊಟ್ಟದ್ದು ಇದೇ ಪವಿತ್ರ ಜಾಗದಲ್ಲಿ ಅಲ್ಲವೆ? ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಖುರ್-ಆನ್ ಓದಿದ ಶಬ್ದವು ಇಂದಿಗೂ ಅಂತರಿಕ್ಷದಲ್ಲಿ ಹಸಿರಾಗಿರಬಹುದಲ್ಲವೇ?

ಗುರುವಾರ ಅಸರ್ ನಮಾಝಿನ ಬಳಿಕ ರೌಝಾ ಶರೀಫಿನ ಬಳಿ ನಾವೆಲ್ಲರೂ ಕುಳಿತುಕೊಂಡಿದ್ದೆವು. ಮದೀನಾ ನಿವಾಸಿಗಳಾದ ಅರಬಿಗಳು ಸುತ್ತಲೂ ಕುಳಿತಿದ್ದರು. ಸೆಕ್ಯುರಿಟಿ ಹಾಗೂ ಪೋಲೀಸರ ಹಾವ-ಭಾವವನ್ನು ಕಂಡು ಅವರು ಅರಬಿಗಳೆಂದು ತಿಳಿಯಿತು. ದೊಡ್ಡ ಪಾತ್ರೆಯಲ್ಲಿ ಚಹಾ ಹಾಗೂ ಖರ್ಜೂರ ನೀಡಲಾಯಿತು. ಉಪಹಾರದ ವ್ಯವಸ್ಥೆಯನ್ನು ಮಾಡಿಕೊಟ್ಟರು. ಬಕ್ತುರ್ ಎಂಬ ವ್ಯಕ್ತಿ ಇವೆಲ್ಲದರ ನೇತೃತ್ವ ವಹಿಸಿ ನಿರ್ವಹಣೆ ಮಾಡುತ್ತಿದ್ದ. ಎಲ್ಲರಿಗೂ ಉಪಹಾರ ತಲುಪುವಂತೆ ನೋಡಿಕೊಳ್ಳುತ್ತಿದ್ದ. ರೊಟ್ಟಿ ಹಾಗೂ ಸ್ಯಾಂಡ್‌ವಿಚ್ ವಿತರಿಸಿದರು. ಮದೀನಾದ ಅರಬಿಗಳು ಅನ್ಸಾರಿಗಳ ಆತಿಥ್ಯದ ಮರ್ಯಾದೆಯನ್ನು ನೆನಪಿಸಿಕೊಟ್ಟರು.

ಇಶಾ (ರಾತ್ರಿಯ) ನಮಾಝಿನ ನಂತರ ಮಸೀದಿಯ ಸುತ್ತ ನಡೆದಾಡಿದೆ. ಹಲವು ಕಡೆಗಳಲ್ಲಿ ಸಣ್ಣಸಣ್ಣ ಗುಂಪುಗಳಾಗಿ ತಸ್ಬೀಹ್ ಹೇಳುವವರು, ದುಆ ಮಾಡುವವರು, ದರ್ಸ್ (ಅಧ್ಯಾಪನೆ) ನಡೆಸಿಕೊಡುವವರನ್ನು ಕಂಡೆವು. ನಡೆದಾಡುವಾಗ ಯುವಕರ ಒಂದು ಸಂಘವು ಕುಳಿತುಕೊಂಡು ಸ್ವಲಾತ್ ಹೇಳುವುದನ್ನು ಕೇಳಿಸಿ ನಾವು ಅವರೊಂದಿಗೆ ಮಾತಿಗಿಳಿದೆವು. ಸ್ವಲಾತ್ ಹೇಳುವುದರ ಮಧ್ಯೆ ನಮಗಾಗಿ ನೀರು ಹಾಗೂ ಖರ್ಜೂರವನ್ನು ತಿನ್ನಲು ಕೊಟ್ಟರು. ಅವರೊಂದಿಗೆ ಕುಳಿತುಕೊಳ್ಳುವಂತೆ ಹೇಳಿ ವೃತ್ತವನ್ನು ದೊಡ್ಡದಾಗಿಸಿದರು. ನಂತರ ಒಂದು ದೀರ್ಘ ಪ್ರಾರ್ಥನೆ. ಎಲ್ಲರ ಕಣ್ಣಿನಂಚಲ್ಲಿ ಕಣ್ಣೀರು ಹರಿದು ನೆಲವನ್ನು ಒದ್ದೆಮಾಡುತ್ತಿತ್ತು. ಅವರು ತುರ್ಕಿಯಿಂದ ಜರ್ಮನಿಗೆ ವಲಸೆ ಹೋದ ನಖ್ಷಬಂದೀ ತ್ವರೀಖತಿನ (ಒಂದು ಸೂಫೀ ಪಂಥ) ವ್ಯಕ್ತಿಗಳೆಂದು ಅವರೊಂದಿಗಿನ ಮಾತುಕತೆಯಿಂದ ತಿಳಿದುಕೊಂಡೆ.

ಮರುದಿನ ಶುಕ್ರವಾರ. ಮದೀನಾಗೆ ವಿದಾಯ ಹೇಳಿ ಹೋಗಬೇಕಾದ ಕೊನೆಯ ದಿನ. ಸುಬಹ್ (ಪ್ರಭಾತ) ನಮಾಝಿಗೆ ‘ಸುಫ್ಫ’ದ ಬಳಿಯಲ್ಲಿ (ಪ್ರವಾದಿಗಳ ಕಾಲದಲ್ಲಿ ವಿದ್ಯಾರ್ಜನೆಯ ಉದ್ದೇಶದಿಂದ ಮಾತ್ರ ವಿದ್ಯಾದಾಹಿಗಳು ತಂಗುತ್ತಿದ್ದ ಸ್ಥಳ) ಸುಜೂದ್ ಬೀಳಲು ಸ್ಥಳವಕಾಶ ಸಿಕ್ಕಿತು.
ಹಗಲುರಾತ್ರಿ ಎನ್ನದೆ ಹಬೀಬರು ಮನೆಯಿಂದ ಹೊರಡುವುದನ್ನು ಸುಫ್ಫಾದಲ್ಲಿ ಕುಳಿತು ಕಾಯುತ್ತಿದ್ದ ಅನುಯಾಯಿಗಳ ಚಿತ್ರಣವನ್ನು ಮನಸ್ಸಿಗೆ ತಂದುಕೊಂಡೆ. ಅದು ಕೇವಲ ಒಂದು ಸ್ಥಳವಲ್ಲ; ಒಂದು ಸಮುದಾಯದ ಜತೆ, ಕಾಲದ ಜೊತೆ ಸಂಭಾಷಣೆಗೈದ ಸ್ಥಳವಾಗಿತ್ತು.

ಶುಕ್ರವಾರದ ಜುಮುಆ ನಮಾಝಿನ ನಂತರ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಸಲಾಂ ಹೇಳಿ ರೂಮಿಗೆ ಹಿಂದಿರುಗಬೇಕು ಎಂದು ಗೈಡ್ ಸೂಚನೆ ನೀಡಿದರು. ‘ಇದನ್ನು ಮದೀನಾದ ಕೊನೆಯ ಯಾತ್ರೆಯಾಗಿ ಮಾಡಬೇಡ’ ಎಂದೇ ಎಲ್ಲರೂ ಮನದಾಳದಿಂದ ಪ್ರಾರ್ಥನೆ ಮಾಡುವ ಸಮಯವದು. ಪ್ರಾರ್ಥನೆಯ ನಂತರ, ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಸಲಾಮು ಹೇಳಲು ರೌಝಾದ ಕಡೆ ಮುಖ ಮಾಡಿದೆವು. ಶುಕ್ರವಾರ ಬಿಡುವಿಲ್ಲದ ದಿನ. ಓರ್ವ ಸತ್ಯ ವಿಶ್ವಾಸಿ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಹೇಗೆ ವಿದಾಯ ಹೇಳುವುದು!? ‘ಉಮ್ಮತ್’ಗಾಗಿ ಸದಾ ಸಮಯವು ನೋಡುತ್ತಿರುವ ಪ್ರವಾದಿಯ ಹೊರತಾಗಿ ಸತ್ಯವಿಶ್ವಾಸಿಗೆ ಬೇರೆ ನಂಬಿಕೆಯುಳ್ಳ ವ್ಯಕ್ತಿಗಳಿದ್ದಾರೆಯೆ!?

ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಸಲಾಮ್ ಹೇಳಿ ಹೊರಬಂದೆವು. ಮತ್ತೊಮ್ಮೆ ಹಸಿರು ಗುಂಬದನ್ನು ಸಂದರ್ಶಿಸಿ ಕಣ್ಣು ತುಂಬಿಕೊಂಡೆವು. ಪುನಃ ಬರದೇ ಇರಬೇಡಿ ಎಂದು ಅದು ಮಂದಸ್ಮಿತವಾಗಿ ನಮ್ಮೊಂದಿಗೆ ಹೇಳತ್ತಲೇ ಇತ್ತು. ತನ್ನನ್ನು ನೋಡಲು ಬರುವ ವಿಶ್ವಾಸಿಗಳನ್ನು ಸ್ವೀಕರಿಸಿದಾಗ ಮದೀನಾದ ಮನಸ್ಸು ಸಂತೋಷದಿಂದ ತುಂಬಿತುಳುಕುತ್ತದೆ. ಓರ್ವ ಸತ್ಯವಿಶ್ವಾಸಿಯು ಮದೀನಾಗೆ ವಿದಾಯ ಹೇಳುವಾಗ ಮದೀನಾದ‌ ಮನಸ್ಸು ಕೂಡ ಕಣ್ಣೀರಿಡುತ್ತದೆ. ಮದೀನಾದಲ್ಲಿ ಕಷ್ಟ-ಕಾರ್ಪಣ್ಯಗಳನ್ನು ಓರ್ವ ಸತ್ಯ ವಿಶ್ವಾಸಿ ತೋರಿಕೊಂಡರೆ ಹಬೀಬ್ ﷺರು ಆತನಿಗೆ ಕ್ಷಮಿಸುವ ಭರವಸೆಯನ್ನಿಡುತ್ತಾರೆ. ಸತ್ಯ ವಿಶ್ವಾಸಿಯ ಹೃದಯವು ಮದೀನಾಕ್ಕೆ ಮರಳುತ್ತದೆಯೆಂದು ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ವರುಷಗಳ ಹಿಂದೆಯೇ ಸೂಚನೆಯನ್ನು ನೀಡಿದ್ದಾರೆ. ತಿರುಗಿ ಬರದ ಒಂದು ಯಾತ್ರೆಯನ್ನು ಒಡೆಯನು ಯಾವಾಗ ಕರುಣಿಸುವನೋ?

ಮದೀನಾ.. ವಿಶ್ವದ ಇತರೆ ಭಾಗದಲ್ಲಿದ್ದರೆ ಎಂದು ಸೋಜಿಗವೆನಿಸುತ್ತದೆ. ಮದೀನಾ ಎಲ್ಲಿಯಾದರೂ ಇರಬಹುದಾದ ನಗರವೇನು!? ಹಸಿರಿನ ಆಳ ಅಗಲವನ್ನು ಮನವರಿಕೆ ಮಾಡಲು ಮರುಭೂಮಿಯನ್ನು ತಲುಪಲು ಬೇರೆ ಏನಾದರೂ ಇದೆಯೇ.. ಮದೀನಾದ ಮೃದುಲತೆ ಮತ್ತು ಭಾವಪರವಶತೆ ಎಷ್ಟು ಆಳವಾಗಿದೆ ಎಂಬುವುದನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ನೀವು ಮದೀನಾದಿಂದ ಹೊರಬರಬೇಕು. ಆಗ ಬೇರೆ ಯಾವ ನಗರವೂ ​​ಮದೀನಾ ಆಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಪವಿತ್ರ ಪ್ರವಾದಿಯ ನಗರವನ್ನು ತೊರೆದು ಬರುವಾಗಿನ ನೋವು, ವೇದನೆ ದಾರಿಯುದ್ದಕ್ಕೂ ಕಾಡುತ್ತಿತ್ತು.


(ಡಾ. ನುಐಮಾನ್’ರವರು ಪ್ರಸ್ತುತ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಜರ್ಮನಿಯ ಫ್ರೈಬರ್ಗ್ ಯುನಿವರ್ಸಿಟಿಯಲ್ಲಿ ಸಂಶೋಧಕರಾಗಿದ್ದರು.ಮಲೇಷ್ಯಾದ ಕರ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆಸಲ್ಲಿಸಿದ್ದರು.ಯುವ ಚಿಂತಕರು, ಸಂಶೋಧನೆಗಾಗಿ ಹಲವು ರಾಷ್ಟ್ರಗಳಿಗೆ ಭೇಟಿನೀಡಿದ ಅನುಭವವೂ ಇವರಿಗಿದೆ.)

ಮಲಯಾಳಂ ಮೂಲ: ಡಾ. ನುಐಮಾನ್
ಭಾವಾನುವಾದ: ಸಲೀಂ ಇರುವಂಬಳ್ಳ

2 Comments

  1. Al hamdulillah…
    While i am reading this article…mentally i went to madeena.i saw the hujrathushareefa..very authentic article….and the translater saleem iruvamballa followed the originality of story and every words

Leave a Reply

*