ಭಾರತೀಯ ಆಂಗ್ಲ ಸಾಹಿತ್ಯದಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಮತ್ತು ಅಜ್ಮಲ್ ಖಾನ್‌‌ ಕವಿತೆಗಳು

ಬಿಡುಗಡೆಗೊಂಡು ಒಂದು ವಾರ ಪೂರ್ತಿಯಾಗುವುದರೊಳಗೆ ಆಮೆಝಾನ್‌ ಇ-ಪುಸ್ತಕ ಮಳಿಗೆಯ ಇಂಡಿಯನ್‌ ಮತ್ತು ಏಷ್ಯನ್‌ ಸಾಹಿತ್ಯ ವಿಭಾಗದ ಹಾಟ್ ನ್ಯೂ ರಿಲೀಸ್‌ ಪಟ್ಟಿಗೆ ಸೇರ್ಪಡೆಗೊಂಡಿರುವ The Mappila Verses ಎಂಬ ಇಂಗ್ಲಿಷ್‌ ಕವಿತಾ ಸಂಕಲನದ ಕರ್ತೃ ಹಾಗೂ ಅಶೋಕ ಯೂನಿವರ್ಸಿಟಿಯ ಪ್ರೊಫೆಸರ್ ಕೂಡಾ ಆಗಿರುವ ಅಜ್‌ಮಲ್‌ ಖಾನ್‌ ʼತಿಜೋರಿʼಯೊಂದಿಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮಶ್‌ಕೂರ್ ಖಲೀಲ್ ತಿಜೋರಿಗಾಗಿ ಸಂದರ್ಶನ ನಡೆಸಿಕೊಟ್ಟಿದ್ದಾರೆ.

ಮಶ್‌ಕೂರ್ ಖಲೀಲ್: ಶೈಕ್ಷಣಿಕ ಹಿನ್ನೆಲೆಯಿಂದ ಆರಂಭಿಸೋಣ. ಕೇರಳದ ಮಲಪ್ಪುರದಿಂದ ಹಿಡಿದು ಮುಂಬೈ ಟಾಟಾ ಇನ್ಶ್ಟಿಟ್ಯೂಟ್‌ ನಲ್ಲಿ ಡಾಕ್ಟರೇಟ್‌ ಮುಗಿಸುವ ತನಕ ಸವೆಸಿದ ಹಾದಿ ಹೇಗಿತ್ತು? ಸವಾಲುಗಳಿಂದ ತುಂಬಿತ್ತೇ?

ಅಜ್‌ಮಲ್ ಖಾನ್:‌ ಮಂಬಾಡ್‌ ಎಂಇಎಸ್ ನಲ್ಲಿ‌ ನಾನು ಇಂಗ್ಲಿಷ್‌ ಭಾಷೆ ಕಲಿಯಲು ಆರಂಭಿಸುವಾಗ ನನ್ನ ಸಾಮಾಜಿಕ ವಾತಾವರಣದಲ್ಲಿ ಇಂಗ್ಲಿಷ್‌ ಭಾಷೆಗೆ ಅಷ್ಟು ಮನ್ನಣೆ ಸಿಗುತ್ತಿರಲಿಲ್ಲ. ಆ ದಿನಗಳಲ್ಲಿ ಮಲಯಾಳಂ ಭಾಷೆಯಲ್ಲಿ ಕವನ ರಚಿಸುತ್ತಿದ್ದೆ. ಇಂಗ್ಲಿಷ್‌ ನಲ್ಲಿ ಕವನ ರಚಿಸುವ ಆಲೋಚನೆಯೇ ನನ್ನಲ್ಲಿ ಹೊಳೆದಿರಲಿಲ್ಲ. ನಾನು ಮತ್ತು ನನ್ನ ತಲೆಮಾರಿನ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ದೂರದ ಕೇಂದ್ರಗಳಿಗೆ ತಲುಪಿದ್ದು ಮಲಬಾರ್ ಮುಸ್ಲಿಮರ ನಡುವೆ ಉಂಟಾದ ಶೈಕ್ಷಣಿಕ ಜಾಗೃತಿಯ ಪರಿಣಾಮ. ಬಹುಶಃ ಕೇರಳದಿಂದ ಟಾಟಾ ಇನ್ಶಟಿಟ್ಯೂಟ್‌ ತಲುಪಿದ ಪ್ರಥಮ ಮುಸ್ಲಿಂ ವಿದ್ಯಾರ್ಥಿ ನಾನೇ ಇರಬೇಕು.
ಮಲಬಾರಿನಲ್ಲಿ ಘಟಿಸಿದ ಸಾಮಾಜಿಕ ಪಲ್ಲಟದ ಪ್ರಥಮ ಪೀಳಿಗೆಯಲ್ಲಿ ಹಲವರು ಸ್ನಾತಕೋತ್ತರ ಶಿಕ್ಷಣವನ್ನು ಅರಸಿ ದೆಹಲಿ, ಚೆನ್ನೈ, ಮುಂಬೈ ಮುಂತಾದ ನಗರಗಳಿಗೆ ತಲುಪಿದ್ದಾರೆ. ಕೇಂದ್ರೀಯ ವಿವಿಗಳಲ್ಲಿ ಕಾಣುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗಳ ಅಭಾವ ಆ ವೇಳೆಯಲ್ಲಿ ಕಡಿಮೆಯಾಗಲು ಆರಂಭಿಸಿತ್ತು. ನಾನೂ ಮಂಬೈ ತಲುಪಿದ್ದು ಅಂತಹಾ ಶೈಕ್ಷಣಿಕ ವಲಸೆಯ ಪರಿಣಾಮವಾಗಿಯೇ. ಮುಸ್ಲಿಂ ನಾಮದೊಂದಿಗೆ ಮುಂಬೈಯಂತಹ ಶಹರದಲ್ಲಿ ಟಾಟಾ ಇನ್ಶ್ಟಿಟ್ಯೂಟ್ನಂಥಾ ಸಂಸ್ಥೆಯಲ್ಲಿ ಕಲಿಯುವುವಾಗ ಉಂಟಾದ ಪ್ರಯಾಸಗಳೇ ಆ ಕಾಲದಲ್ಲಿ ಎದುರಿಸಿದ ಸವಾಲುಗಳು ಆಗಿದ್ದವು. ದಲಿತ, ಮುಸ್ಲಿಂ, ಬುಡಕಟ್ಟು ಜನಾಂಗದ ರಾಜಕೀಯ ಸಮಸ್ಯೆಗಳನ್ನು ತಲೆಗೇರಿಸಿಕೊಂಡು ಮುಸ್ಲಿಂ ಹೆಸರಿನಲ್ಲೇ ಪ್ರಗತಿಪರ ರಾಜಕೀಯದ ಭಾಗವಾಗುವುದು ಬಹಳ ತ್ರಾಸದಾಯಕವಾದ ಸಂಗತಿಯಾಗಿತ್ತು. ಅದೇವೇಳೆ, ಇಂತಹ ಅನುಭವಗಳು ಬರವಣಿಗೆಯನ್ನು ಮುಂದುವರಿಸಲು ಸಾಕಷ್ಟು ಸಹಾಯ ಮಾಡಿತು ಎಂಬುವುದು ಸುಳ್ಳಲ್ಲ.

Ajmal Khan

ಮಶ್ ಕೂರ್ ಖಲೀಲ್: ಕಾವ್ಯ ರಚನೆಗೆ ಇಳಿಯಲು ಪ್ರೇರಣೆ?

ಅಜ್ ಮಲ್ ಖಾನ್: ಮಹ್ಮೂದ್‌ ದರ್ವೇಶ್‌, ಆಕಾ ಶಾಹಿದ್‌ ಅಲಿ, ಖಲೀಲ್‌ ಗಿಬ್ರಾನ್‌, ಅಡೋನಿಸ್ ಮುಂತಾದವರ ಕಾವ್ಯಗಳನ್ನು ಓದುವ ಹವ್ಯಾಸ ಮೊದಲೇ ಇತ್ತು. ನಂತರ ಪದವಿ, ಸ್ನಾತಕೋತ್ತರ ಅಧ್ಯಯನಕ್ಕಾಗಿ ಮುಂಬೈ ತಲುಪಿದಾಗ ದಲಿತ, ಉಗ್ರ ಎಡಪಂಥೀಯ ಚಳುವಳಿಗಾರರ ಓರಗೆಯಲ್ಲಿ ಸರಿಸುಮಾರು ಒಂದು ದಶಕಗಳ ಕಾಲ ಜೀವಿಸುವ ಅವಕಾಶ ಸಿಕ್ಕಿತ್ತು. ಆ ಕಾಲದ ಜೀವನ ನನ್ನ ಲೋಕದೃಷ್ಟಿಯನ್ನು ಬದಲಿಸಿತು ಮತ್ತು ಕಾವ್ಯ ಬರವಣಿಗೆಯ ಕಡೆಗೆ ಸೆಳೆಯಿತು. ಅಂಬೇಡ್ಕರ್‌ ಬರಹಗಳು, ಅವರು ಹಾಕಿಕೊಟ್ಟ ವೈಚಾರಿಕ ತಳಹದಿಯಲ್ಲಿ ಜನ್ಮ ತಾಳಿದ ದಲಿತ ಚಳುವಳಿಗಳ ಪರಿಣಾಮವಾಗಿ ಬೆಳೆದಿರುವ ಮಹಾರಾಷ್ಟ್ರದ ವಿಶೇಷ ಸಾಮಾಜಿಕ ವಾತಾವರಣವು ನನ್ನ ಬರವಣಿಗೆ ಮತ್ತು ರಾಜಕೀಯ ನಿಲುವುಗಳನ್ನು ಪ್ರಭಾವಿಸಿದೆ. ಅಣ್ಣಾ ಬಾವು ಸಾಥೆ, ವಿಲಾಸ್‌ ಗೋಖರೆ, ನಾಂ ದೇವ್‌ ದಸಾಲ್‌ ನನ್ನನ್ನು ಪ್ರಭಾವಿಸಿದ ಪ್ರಮುಖ ಸಾಹಿತಿಗಳು.
ಮುಂಬೈಯಲ್ಲಿ ಕಲಿಯುವ ಕಾಲದಲ್ಲಾಗಲೇ ಸಮಕಾಲೀನ ಅಮೇರಿಕನ್‌ ಕಪ್ಪು ವರ್ಗದವರ ಸಾಹಿತ್ಯ ಮತ್ತು ಬರವಣಿಗೆಯ ಶೈಲಿಗಳ ಪರಿಚಯವಾಗಿತ್ತು. ತರುವಾಯ ಅಮೇರಿಕಾ ಹಾಗೂ ಯುಕೆಯಲ್ಲಿ ವಾಸಿಸುತ್ತಿರುವ ವಲಸಿಗ ಕವಿಗಳ ಕಾವ್ಯಗಳನ್ನು ಓದುವ ಅವಕಾಶ ದೊರಕಿತು. ಅದರೊಂದಿಗೆ ದರ್ವೇಶ್‌, ಜೇಮ್ಸ್‌ ಬೋಲ್ಡ್ ವಿನ್‌, ಮಿಲನ್‌ ಕಂದೇರ, ಆಖಾ ಶಾಹಿದಲಿ ಮೊದಲಾದ ಬರಹಗಾರರ ವಿಚಾರಗಳು ಹಾಗೂ ದಲಿತ ಮತ್ತು ಕಪ್ಪುವರ್ಗದ ಕವಿಗಳು ವಿವರಿಸುವ ರಾಜಕೀಯ ಸಂದರ್ಭಗಳಿಗೆ ಹೋಲುವ ವಿಶೇಷ ಸ್ಥಿತಿಯನ್ನು ಭಾರತೀಯ ಮುಸಲ್ಮಾನರು ಕೂಡಾ ಎದುರಿಸುತ್ತಿದ್ದಾರೆನ್ನುವುದು ಮನವರಿಕೆಯಾಯಿತು. ಈ ಪ್ರಜ್ಞೆ ನನ್ನನ್ನು ಕಾವ್ಯರಚನೆಗೆ ಇಳಿಯಲು ಪ್ರಚೋದನೆ ನೀಡಿತು. ಮಲಪ್ಪುರಂ ಜಿಲ್ಲೆಯ ಪುಟ್ಟ ಗ್ರಾಮದಿಂದ ಬರುವ ವ್ಯಕ್ತಿ ಎಂಬ ನೆಲೆಯಲ್ಲಿ ನಮ್ಮ ಗ್ರಾಮೀಣ ಬದುಕು, ಕಲೆ, ಆಹಾರಕ್ರಮ, ಭೂವಿಜ್ಞಾನ, ಸಾಹಿತ್ಯ ಮುಂತಾದವೆಲ್ಲಾ ಮಾಪಿಳ ಕಲೆ ಮತ್ತು ಸಾಹಿತ್ಯದಲ್ಲಿ ಪ್ರತಿಫಲಿಸಿದೆ. ಅವುಗಳು ಹೊಸತರಲ್ಲಿ ಅರಬಿ ಮಲಯಾಳದಲ್ಲೂ ನಂತರ ಮಲಯಾಳಂ ನಲ್ಲೂ ಅಭಿವ್ಯಕ್ತಗೊಂಡಿದೆ. ನನ್ನ ಕಾವ್ಯ ಸಂಕಲನ ಇಂಗ್ಲಿಷ್‌ ಭಾಷೆಯ ಮಾಪಿಳ ಸಾಹಿತ್ಯದ ಪ್ರಥಮ ಕೊಡುಗೆಯಾಗಿರಬಹುದು. ಕಥೆಗಳಾಗಲಿ ಅಥವಾ ಕಾವ್ಯಗಳಾಗಲಿ ಇಂಗ್ಲಿಷ್‌ ಭಾಷೆಯಲ್ಲಿ ಮಾಪಿಳ ಬರಹಗಳು ಬಂದಿಲ್ಲ ಎಂಬುವುದು ನಿಜ. ಈ ಕೊರತೆಯನ್ನು ನೀಗಿಸಲು ಹೆಚ್ಚು ಜನರು ಮುಂದೆ ಬರಬೇಕಿದೆ.

ಮಶ್‌ಕೂರ್ ಖಲೀಲ್: ಭಾರತೀಯ ಇಂಗ್ಲಿಷ್‌ ಸಾಹಿತ್ಯದಲ್ಲಿ ಮುಸ್ಲಿಂ ಸದ್ದುಗಳ ಕೊರತೆಯಿಂದ ಉಂಟಾದ ಶೂನ್ಯತೆಯನ್ನು ತುಂಬಲು ಅಜ್‌ಮಲ್‌ ಖಾನ್‌ ಕವಿತೆಗಳು ಸಹಾಯಕವಾದೀತು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ‌ ಸಿ ಚಂದ್ರಮೋಹನ್.‌ ಮಾಪಿಳ ವರ್ಸಸ್‌ ಕೃತಿಯ ಬ್ಲರ್ಬ್‌ ನಲ್ಲಿ ಹೀಗಂದಿರುವ ಅವರು ಕವಿತೆಗಳು ವಿವಿಧ ಧ್ವನಿಗಳನ್ನು ಹೊರಡಿಸುವ ನವಯುಗವನ್ನು ಪ್ರಸ್ತುತ ಕಾವ್ಯ ಸಂಕಲನ ಯಶಸ್ವಿಯಾಗಿ ಪ್ರತಿನಿಧಿಸುತ್ತಿದೆಯೆಂದು ಅಭಿಪ್ರಾಯಿಸಿದ್ದಾರೆ. ಮಾಪಿಳ ಜೀವನವನ್ನು ಅಭಿವ್ಯಕ್ತಿಸುವ ಕಾವ್ಯವೊಂದು ಭಾರತದ ಒಟ್ಟು ಜನಸಂಖ್ಯೆಯ ಅತ್ಯಂತ ಸಣ್ಣ ಗುಂಪು ಮಾತ್ರ ಕೈಯಾಡಿಸುತ್ತಿದ್ದ ಭಾರತೀಯ ಇಂಗ್ಲಿಷ್‌ ಕಾವ್ಯ ಸಾಹಿತ್ಯ ಕ್ಷೇತ್ರಕ್ಕೆ ಸಾಗಿ ಬಂದಿದೆ. ಇಂಗ್ಲಿಷ್‌ ಕಾವ್ಯ ಸಾಹಿತ್ಯ ಮತ್ತು ಮಲಬಾರಿನ ಮುಸ್ಲಿಮರ ಸಾಂಸ್ಕೃತಿಕ ಬದುಕಿನಲ್ಲಿ ಏಕಕಾಲದಲ್ಲಿ ಘಟಿಸುತ್ತಿರುವ ಹೊಸ ಪಲ್ಲಟಗಳ ಕುರಿತು ತಮ್ಮ ಕವಿತೆಗಳು ಯಾವ ನೆಲೆಯಲ್ಲಿ ಪ್ರತಿಪಾದಿಸುತ್ತಿದೆ?

ಅಜ್ ಮಲ್ ಖಾನ್: ಭಾರತೀಯ ಇಂಗ್ಲಿಷ್‌ ಸಾಹಿತ್ಯ ಒಂದು ಕಾಲದಲ್ಲಿ ಮುಂಬೈ, ಕಲ್ಕತ್ತಾ, ದೆಹಲಿ, ಬೆಂಗಳೂರಿನಂತಹ ನಗರದಲ್ಲಿ ವಾಸ್ತವ್ಯ ಮಾಡುವ ಸವರ್ಣೀಯರಿಗೆ ಮಾತ್ರ ಮೀಸಲಾಗಿತ್ತು. ನಗರ ಕೇಂದ್ರಿತವಾದ ರೀತಿಯಲ್ಲಿ ಜಾತಿ ವರ್ಗ ವಿಭಜನೆಗಳಿಗೆ ವಿಧೇಯವಾಗಿ ಮುಂದುವರಿಯುತ್ತಿದ್ದ ಬಾರತೀಯ ಇಂಗ್ಲಿಷ್‌ ಸಾಹಿತ್ಯ ಕ್ಷೇತ್ರ ಹತ್ತು ವರ್ಷಗಳಿಂದೀಚೆಗೆ ಪ್ರಜಾಸತ್ತಾತ್ಮಕ ಹಾದಿಗೆ ಕಾಲಿಟ್ಟಂತೆ ಭಾಸವಾಗುತ್ತಿದೆ. ಜಾರ್ಖಂಡಿನ ಸಾಂತಾಲ್‌ ಪರ್ಗಾನದ ಪಾಂಗೂರಿನಲ್ಲಿ ಕೂತು ಬರೆಯುವ ಹಸ್ಸ ಝುವಾನ್‌ ಶೇಖರ್‌ ಎಂಬ ಆದಿವಾಸಿ ಕವಿಗೆ ಇಂದು ಇಂಗ್ಲಿಷ್‌ ಸಾಹಿತ್ಯದಲ್ಲಿ ಖ್ಯಾತನಾಮ ಎನಿಸಿಕೊಳ್ಳಲು ಸಾಧ್ಯವಾಗಿದೆ. ಕೇರಳದ ಚಂದ್ರಮೋಹನ್‌ ಸತ್ಯಾನಂದ ದಲಿತ ಕವಿಯಾಗಿ ಮೂಡಿ ಬಂದಿದ್ದಾರೆ. ಮಹಾರಾಷ್ಟ್ರದಲ್ಲೂ ಈ ರೀತಿ ಮುನ್ನೆಲೆಗೆ ಬಂದವರಿದ್ದಾರೆ. ಭಾರತೀಯ ಇಂಗ್ಲಿಷ್‌ ಸಾಹಿತ್ಯದಲ್ಲಿ ಘಟಿಸುತ್ತಿರುವ ಸದ್ರಿ ಪರಿವರ್ತನೆಯ ಕಾರಣದಿಂದಲೇ ಇರಬೇಕು ಮಾಪಿಳ ಕವಿ ಎಂಬ ನೆಲೆಗಟ್ಟಿನಲ್ಲಿ ನನ್ನ ಬರಹವೂ ಸ್ವೀಕೃತವಾಗುತ್ತಿದೆ. ಭಾರತೀಯ ಇಂಗ್ಲಿಷ್‌ ಸಾಹಿತ್ಯದ ವಸ್ತುಗಳು ದಲಿತ, ಮುಸ್ಲಿಂ, ಆದಿವಾಸಿ ಬದುಕಿನ ತಲ್ಲಣಗಳ ಕಥನ ಮಾಡುತ್ತಿರಲಿಲ್ಲ. ಈ ನಿಟ್ಟಿನಲ್ಲೂ ಒಂದು ಬದಲಾವಣೆ ನಾವು ಕಾಣುತ್ತಿದ್ದೇವೆ.
ಭಾರತೀಯ ಇಂಗ್ಲಿಷ್‌ ಕಾವ್ಯ ಕ್ಷೇತ್ರದಲ್ಲಿನ ಈ ಪಲ್ಲಟಗಳು ಪ್ರಾಯಶಃ ಭಾರತದ ಹೊರಗಿನ ಅದರಲ್ಲೂ ವಿಶೇಷವಾಗಿ ಅಮೇರಿಕನ್‌ ಕವಿತೆಗಳಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದ ಸ್ಫೂರ್ತಿಗೊಂಡಿದೆ ಎಂದು ತೋರುತ್ತದೆ. ಅಮೇರಿಕಾ ಮತ್ತು ಯುಕೆಯ ಕಡೆಗೆ ವಾಸ ಬದಲಾಯಿಸಿದ ವಲಸಿಗ ಸಮುದಾಯದ ಎರಡನೆಯ ಮತ್ತು ಮೂರನೆಯ ತಲೆಮಾರು ತಾವು ಅನುಭವಿಸುತ್ತಿರುವ ಅನ್ಯತಾಭಾವನೆ ಹಾಗೂ ತಾತ್ಸಾರವನ್ನು ಧ್ವನಿಪೂರ್ಣವಾಗಿ ಬಹಿರಂಗ ಮಾಡಲೋಸುಗ ಬರೆದ ಕೃತಿಗಳು ಇಂದು ಇಂಗ್ಲಿಷ್‌ ಸಾಹಿತ್ಯದ ಪ್ರಧಾನ ಭಾಗವಾಗಿ ಮಾರ್ಪಡುತ್ತಿದೆ. ಈ ಕಾರಣದಿಂದಲೇ ಇರಬೇಕು ಭಾರತೀಯ ಸಾಹಿತ್ಯದಲ್ಲಿ ತತ್ಸಮಾನ ಬೆಳವಣಿಗೆ ಉಂಟಾಗುತ್ತಿರುವುದು. ಈ ಬದಲಾವಣೆ ಮುಸ್ಲಿಮರ ಅಭಾವದಿಂದ ಸದ್ಯ ಭಾರತೀಯ ಇಂಗ್ಲಿಷ್‌ ಸಾಹಿತ್ಯದಲ್ಲಿ ಉಂಟಾಗಿರುವ ಗುರುತಿನ ಬಿಕ್ಕಟ್ಟನ್ನು ಕೂಡಾ ಪರಿಹರಿಸಲು ಶಕ್ತವಾಗಿದೆ. ಮಲಯಾಳಂ ಸಿನಿಮಾ ರಂಗದಲ್ಲಿ ವ್ಯಾಪಕವಾಗಿದ್ದ ಇಸ್ಲಾಮೋಫೋಬಿಯಾಗೆ ಸೆಡ್ಡು ಹೊಡೆಯಲು ಮುಸ್ಲಿಂ ಸಿನಿಮಾ ಪ್ರಾತಿನಿಧ್ಯದ ವರ್ಧನೆಯಿಂದ ಸಾಧ್ಯವಾಗಿದೆ ಎನ್ನವುದು ಒಂದು ಸತ್ಯ. ಅಂತಹಾ ಒಂದು ಪಲ್ಲಟ ಭಾರತೀಯ ಇಂಗ್ಲಿಷ್‌ ಸಾಹಿತ್ಯ ರಂಗದಲ್ಲೂ ನಡೆಯಬೇಕಿದೆ.
ಕೇರಳೀಯ ಮುಸಲ್ಮಾನರು ಸಾಂಸ್ಕೃತಿಕ ರಂಗದಲ್ಲಿ ಹಲವಾರು ಮುನ್ನಡೆಗಳನ್ನು ಸಾಧಿಸಿದ್ದಾರೆ. ಅದೇ ವೇಳೆ ಅವರ ಕೊಡುಗೆಗಳೇನಿದ್ದರೂ ಅರಬಿ-ಮಲಯಾಳಂ, ಅರಬಿ, ಮಲಯಾಳಂ ಭಾಷೆಗಳಾಚೆಗೆ ಹೋಗುತ್ತಿಲ್ಲ ಎನ್ನುವುದು ನಿಜ. ಕೇರಳದಿಂದ ಮೂಡಿ ಬಂದ ಆರುಂಧತಿ ರಾಯ್‌ ರಂತಹ ಒಂದು ವ್ಯಕ್ತಿ ಮುಸ್ಲಿಂ ವಿಭಾಗದಿಂದ ಮೂಡಿ ಬರುತ್ತಿಲ್ಲ. “ನಾನು ಓದಿದ ಕಥೆಗಳಲ್ಲಿ ಮುಸ್ಲಿಂ ಪಾತ್ರಗಳು ಪ್ರತ್ಯಕ್ಷವಾಗುತ್ತಿದ್ದದ್ದು ಕಳ್ಳಕಾಕರ, ಗೂಂಡಾಗಳ ರೂಪದಲ್ಲಾಗಿತ್ತು. ಆದರೆ, ಅಂಥಾ ವ್ಯಕ್ತಿಗಳನ್ನು ನಾನೆಲ್ಲೂ ನೋಡಿಲ್ಲ. ಈ ಕಾರಣದಿಂದಲೇ ನಾನು ಬರವಣಿಗೆ ಆರಂಭಿಸಿದೆ” ಎಂದು ವೈಕಂ ಬಷೀರ್‌ ಒಂದೆಡೆ ಹೇಳಿದ್ದಾರೆ. ಅನೀಸ್‌ ಸಲೀಂ ಬರೆದ “ದ ಸ್ಮಾಲ್‌ ಟೌನ್‌ ಸೀ” ಈ ನಿಟ್ಟಿನಲ್ಲಿ ಗಮನಾರ್ಹ. ಅವರು ವಾಪ್ಪ, ವಲಿಯುಮ್ಮ, ವಾಪ್ಪುಮ್ಮ ಮುಂತಾದ ಮಾಪಿಳ ಮುಸ್ಲಿಮರ ಕಡೆಯಿಂದ ಕೇಳಿ ಬರುವ ಪದಗಳನ್ನು ಓದುಗರಿಗೆ ಪರಿಚಯಿಸಿದ್ದಾರೆ. ಇಂತಹ ಕವಿತೆಗಳ ಗುಂಪಿನಲ್ಲೆ ಇರಬೇಕು ನನ್ನ ಕವಿತೆಗಳಿಗೆ ಕೂಡಾ ಈ ಅನುಮೋದನೆ ದೊರಕಿದ್ದು.

Mashkoor Khaleel

ಮಶ್ ಕೂರ್ ಖಲೀಲ್: ಇಂಗ್ಲಿಷ್‌ ಸಾಹಿತ್ಯದಲ್ಲಿ ಮಾಪಿಳ ಮುಸ್ಲಿಂ ಕಥನಗಳ ಉಪಸ್ಥಿತಿಯನ್ನು ಖಚಿತಪಡಿಸಿದ್ದೇ ಅಲ್ಲದೆ ಮಾಪಿಳಗಳ ವಿಶೇಷ ಸಾಹಿತ್ಯ ಅಭಿವ್ಯಕ್ತಿಗಳಾದ ಮಾಲೆಪಾಟ್ಟುಗಳು ಕೂಡಾ ಈ ಕೃತಿಯ ಮೂಲಕ ವಿಸ್ತೃತ ಓದುಗ ವೃಂದಕ್ಕೆ ನಿಮ್ಮ ಸಂಕಲನ ತಲುಪಿಸಿ ಕೊಡುತ್ತಿದೆ. ಅದು ಕೂಡಾ ಸಮಕಾಲೀನ ರಾಜಕೀಯ ಪರಿಸ್ಥಿತಿಯ ತಲೆ ನೇವರಿಸುವ ಕ್ಷಮಾಪಣೆಯ ಸ್ವರದಲ್ಲಲ್ಲ ಎಂಬುದು ಗಮನಾರ್ಹ. ತಮ್ಮ ಸಂಕಲನದ ಕವಿತೆಗಳ ಮೇಲೆ ಪ್ರಭಾವ ಬೀರಿರುವ ಅಂಶಗಳು ಯಾವೆಲ್ಲಾ?

ಅಜ್ ಮಲ್ ಖಾನ್: ಸಂಕಲನದಲ್ಲಿನ ಮಿಕ್ಕ ಕವಿತೆಗಳು ಮಾಪಿಳ ಇತಿಹಾಸದ ಸುತ್ತಮುತ್ತ ಗಿರಕಿ ಹೊಡೆಯುತ್ತದೆ. ವಾರಿಯಂ ಕುನ್ನತ್‌ ರವರ ಜೀವನ ಮಾಲೆಪ್ಪಾಟ್ಟಿನ ರೂಪದಲ್ಲಿ ಕವಿತೆಯಾಗಿ ಮೂಡಿ ಬಂದಿದೆ. ವಾರಿಯಂ ಕುನ್ನತ್‌ ರವರ ಚರಿತ್ರೆ ವಿವಾದಕ್ಕೀಡಾಗಿರುವ ಕಾಲಸಂಧಿಯಬಲ್ಲಿ ಇಂತಹ ಕವಿತೆ ಬರುತ್ತಿದೆ ಎನ್ನುವುದನ್ನು ಗಮನಿಸಬೇಕು. ವಾರಿಯಂ ಕುನ್ನತ್‌ ರವರು ನಡೆಸಿದ ವಸಾಹತೀಕರಣ ವಿರುದ್ಧ ಹೋರಾಟಕ್ಕೆ ಜಾಗತಿಕ ಇತಿಹಾಸದಲ್ಲಿ ಸಮಾನ ಉದಾಹರಣೆಗಳೇ ಇಲ್ಲ. ಆ ಚರಿತ್ರೆಯನ್ನು ಮಾಪಿಳ ಸಾಹಿತ್ಯ, ಇತಿಹಾಸ ಅಥವಾ ರಾಜಕೀಯವು ಸಮರ್ಪಕವಾದ ರೀತಿಯಲ್ಲಿ ಗುರುತಿಸಿಲ್ಲ ಎಂಬುದು ನಿಜ. ಆ ಶೂನ್ಯತೆಯನ್ನು ತುಂಬುವ ಇರಾದೆಯಿಂದ ವಾರಿಯಂ ಕುನ್ನತ್‌ ರನ್ನು ನನ್ನ ಕವಿತೆಯಲ್ಲಿ ವಸ್ತುವಾಗಿಸಿದ್ದೇನೆ.
ಮಾಪಿಳ ರಾಮಾಯಣ, ಪೌರತ್ವ ಮಸೂದೆಯ ತರುವಾಯ ಉಂಟಾದ ವಿಶೇಷ ಅವಸ್ಥೆ, ವಾರಿಯಂ ಕುನ್ನತ್‌ ಚರಿತ್ರೆ, “The first step in liquidating a people is to erase its memory. Destroy its books, its culture, its history. Then have someone write new books, manufacture a new culture, invent a new history. Before long the nation will begin to forget what it is and what it was” ಎಂಬ ಮಿಲನ್‌ ಕಂದೇರ ರವರ ಸುಪ್ರಸಿದ್ಧ ಸಾಲುಗಳ ಜಾಡು ಹಿಡಿದು ಮಾಪಿಳ ಚರಿತ್ರೆಯ ಬಗೆಗಿನ ಕವಿತೆಗಳು ಈ ಸಂಕಲನದ ಮುಖ್ಯ ಭಾಗ. ಅದರೊಂದಿಗೆ ‘Write Me Down’ ಕವಿತೆ, ಬಾಬರಿ ಮಸೀದಿಯ ಕುರಿತು ಬರೆದ “ಅದು ಬರಿ ಮಸೀದಿಯಲ್ಲವೆ, ಬಿಟ್ಟು ಬಿಡಿ” ಎಂಬ ಪುಕ್ಕಟೆ ಸಲಹೆಗಳನ್ನು ಸಂಬೋಧಿಸುವ ಕವಿತೆ, ಹಲವು ರೀತಿಯಲ್ಲಿ ಅವಕಾಶ ವಂಚಿತರಾಗಿ ಮರಳಿ ಮನೆಗೆ ಹೋಗಬೇಕಾಗಿ ಬರುವ ಅದರಲ್ಲೂ ಕೆಲವೊಮ್ಮೆ ಜೀವನವನ್ನೇ ಮರಳಿಸಬೇಕಾಗಿ ಬರುವ ದಲಿತ, ಮುಸ್ಲಿಂ, ಆದಿವಾಸಿ ವಿದ್ಯಾರ್ಥಿಗಳ ದುಸ್ಥಿತಿಯ ಬಗೆಗಿನ ‘On The Way Back’ ಎಂಬ ಕವಿತೆಯೂ ಈ ಪುಸ್ತಕದಲ್ಲಿದೆ. ಜೇಮ್ಸ್‌ ಬಾಲ್ಡ್ ವಿನ್‌ ರ “ನಾನು ನಿಮ್ಮ ನೀಗ್ರೋ ಅಲ್ಲ” ಎಂಬ ಘೋಷಣೆಯಿಂದ ಪ್ರಚೋದಿತವಾಗಿ ಭಾರತದಲ್ಲಿ ನಡೆದ ಕೋಮು ದಳ್ಳುರಿಗಳ ಕುರಿತು ಬರೆದ ‘Not your mia’ ಕವಿತೆ ಕೂಡಾ ಇದರಲ್ಲಿದೆ. “Where should we go after the last frontiers? Where should the birds fly after the last sky ? Where should the plants sleep after the last breath of air?” ಮಹ್ಮೂದ್‌ ದರ್ವೇಶ್‌ ಒಂದೆಡೆ ಈ ರೀತಿಯಾಗಿ ಪ್ರಶ್ನಿಸಿದ್ದಾರೆ. ಸಿಎಎ ವಿರುದ್ಧ ಹೋರಾಟ ನಡೆಯುತ್ತಿದ್ದ ದಿನಗಳಲ್ಲಿ ಒಮ್ಮೆ, ʼನಮ್ಮ ಹೆಸರು ಪಟ್ಟಿಯಲ್ಲಿ ಬರದಿದ್ದಲ್ಲಿ ನಾವು ಹೋಗುವುದಾದರೂ ಎಲ್ಲಿಗೆ?ʼ ಎಂದು ಪ್ರಶ್ನಿಸಿದ್ದರು ನನ್ನ ಉಮ್ಮಾ. ಆ ಪ್ರಶ್ನೆಯ ತರುವಾಯ ನಡೆದ ಸಂಭಾಷಣೆ ‘Where should we go if our names are not in the list’ ಎಂಬ ಕವಿತೆಯಾಗಿ ಮಾರ್ಪಟ್ಟಿತು. ʼಪೋರ್ಟ್ರೈಟ್‌ ಆಫ್‌ ದ ಬಸ್ಟಾರ್ಡ್‌ʼ ಎಂಬ ಕವಿತೆಯಲ್ಲಿ ಮಾಪಿಳ ಮುಸ್ಲಿಮರ ಬೇರುಗಳ ಬಗ್ಗೆ ಮಾತಾಡಿದ್ದೇನೆ. ಬಿರಿಯಾಣಿ, ರಿಜೆಕ್ಟೆಡ್‌ ಪೋಯಂ, ಗುಲ್ಬರ್ಗ್‌ ಸೊಸೈಟಿ, ಪೀಸ್‌ ಬಿ ಅಪಾನ್‌ ಯೂ ಇನ್‌ ಡೆಲ್ಲಿ ಮೆಟ್ರೊ, ಮೈ ರೈಡ್‌ ಟು ಬಾಂದ್ರ ಕವಿತೆಗಳು ಭಾರತೀಯ ಮುಸಲ್ಮಾನರು ಎದುರಿಸುತ್ತಿರುವ ಅಭದ್ರತೆಯನ್ನು ಚಿತ್ರಿಸುತ್ತದೆ.

ಮಶ್ ಕೂರ್ ಖಲೀಲ್: ವಾರಿಯಂ ಕುನ್ನತ್‌ ಕುಂಞಹ್ಮದ್‌ ಹಾಜಿಯ ಕುರಿತು ಬರೆದ ಕವಿತೆಯಲ್ಲಿ ʼಮಾಪಿಳ ದಂಗೆʼ ಮತ್ತು ʼವ್ಯಾಗನ್ ಟ್ರಾಜೆಡಿʼ ಎಂಬ ಪ್ರಯೋಗಗಳ ಬದಲು ಅನುಕ್ರಮವಾಗಿ ʼಆಂಗ್ಲೋ-ಮಾಪಿಳ ಯುದ್ಧʼ ಮತ್ತು ʼವ್ಯಾಗನ್ ನರಹತ್ಯೆʼ ಎಂದು ಬಳಸಿದ್ದೀರಿ. ಇಂಥಾ ʼತಿದ್ದುಪಡಿʼಗಳಿಗೆ ಇರುವ ಪ್ರಾಧಾನ್ಯವೇನು?

ಅಜ್ ಮಲ್ ಖಾನ್: ಮಾಪಿಳ ದಂಗೆ ಎನ್ನುವುದು ಬ್ರಿಟಿಷ್‌ ದಾಖಲೆಗಳಲ್ಲಿ ಬಳಸಲಾದ ಹೆಸರು. ಮಲಬಾರಿನಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರು ಇಟ್ಟ ಹೆಸರಾಗಿದೆ ʼಮಲಬಾರ್/ಮೋಪ್ಲ ರೆಬೆಲಿಯನ್‌ʼ ಎನ್ನುವುದು. ನಾವು ಈವತ್ತಿಗೂ ಅದನ್ನು ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯದೆ ದಂಗೆ ಎಂದೇ ಕರೆಯುತ್ತಿದ್ದೇವೆ. ಆ ಸಂಗ್ರಾಮದಲ್ಲಿ ಮುಸ್ಲಿಮರು, ಹಿಂದುಗಳು, ದಲಿತರು ಎಲ್ಲರೂ ಭಾಗವಹಿಸಿದ್ದರು. ಆ ಕ್ರಾಂತಿಯನ್ನು ಮಾಪಿಳಗಳಿಗೆ ಮಾತ್ರ ಸೀಮಿತಗೊಳಿಸಿ ‘ಮಾಪಿಳ ದಂಗೆ’ ಎಂದು ಕರೆಯುವುದರಲ್ಲೇ ಸಮಸ್ಯೆಯಿದೆ ಎನ್ನುವುದು ನನ್ನ ಅನಿಸಿಕೆ. ಮಾಪಿಳಗಳನ್ನು ʼಮತಾಂಧರು, ದಂಗೆಕೋರರುʼ ಮೊದಲಾದ ಆರೋಪಗಳಿಂದ ಮುಕ್ತಿ ಪಡೆಯಲು ಮಾಡಿದ ಒಂದು ಪ್ರಯತ್ನವಿದು. ಹಾಗಾಗಿಯೇ ʼಮಾಪಿಳ‌ ದಂಗೆʼ ಎಂಬ ಪದದ ಬದಲು ʼಮಲಬಾರ್‌ ಕ್ರಾಂತಿʼ ಎಂದು ಕರೆಯುವುದು ನನಗಿಷ್ಟ. ಅದೇ ರೀತಿ ವ್ಯಾಗನ್ ಟ್ರ್ಯಾಜಡಿ ಅನ್ನುವುದು ಕೇವಲ ಒಂದು ʼಟ್ರ್ಯಾಜಡಿʼಯಾಗಿರಲಿಲ್ಲ, ಬದಲಾಗಿ ಅದೊಂದು ಸಾಮೂಹಿಕ ನರಹತ್ಯೆಯಾಗಿತ್ತು. ಇತಿಹಾಸದ ಪುನರಾವಲೋಕನ ವನ್ನು ಉದ್ದೇಶಿಸಿ ಈ ಪದಗಳನ್ನು ನಾನು ಬಳಸಿದ್ದೇನೆ. ಈ ರಾಷ್ಟ್ರದ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿರುವ ಒಂದು ಸಮುದಾಯವನ್ನು ಬ್ರಿಟಿಷ್‌ ದಾಖಲೆಗಳಲ್ಲಿ ಕೂಡಿ ಹಾಕುವ ಪ್ರವೃತ್ತಿಯಿಂದ ಹೊರಬರಲು ಮಾಡಿದ ಪ್ರಯತ್ನವಿದು.

ಮಶ್ ಕೂರ್ ಖಲೀಲ್: ಸಮಕಾಲೀನ ಭಾರತೀಯ ಸಂದರ್ಭದಲ್ಲಿ ಮುಸ್ಲಿಮರು ಎದುರಿಸುತ್ತಿರುವ ಭಾಷಾ ಸಮಸ್ಯೆಯೇ ಅಜ್‌ಮಲ್‌ ಕವಿತೆಗಳಿಗೂ ಎಡತಾಕಿದೆ ಎಂದು ನನಗನಿಸುತ್ತಿದೆ. ಅಮೀರ್‌ ಅಝೀಝ್‌ ರವರ ʼಸಬ್‌ ಯಾದ್‌ ರಖಾ ಜಾಯೇಗಾʼ ಎಂಬ ಕವಿತೆಯಲ್ಲಿ ಮತ್ತು ಅಜ್‌ಮಲ್‌ ರವರ ಬಹುತೇಕ ಕವಿತೆಗಳಲ್ಲಿ ವಿಶೇಷತಃ ʼWrite me down’ ಕವಿತೆಯಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ. ಅಂದರೆ ಜಾತ್ಯತೀತ ರಾಜಕಾರಣದ ಅವನತಿಯೊಂದಿಗೆ ಭಾರತದಲ್ಲಿನ ವೈವಿಧ್ಯತೆ ತುಂಬಿದ ಸಮುದಾಯಗಳು ಪರಸ್ಪರ ಸಂಭಾಷಣೆ ಮಾಡಲು, ತಮ್ಮ ವಾದಗಳನ್ನು ಹಾಗೂ ಹಕ್ಕುಗಳನ್ನು ಮುಂದಿಡಲು ಬಳಸುತ್ತಿದ್ದ ಭಾಷೆಯೂ ನಶಿಸುತ್ತಿದೆ ಎನಿಸುತ್ತದೆ. ಈ ಭಾಷಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿಂತುಕೊಂಡು ಒಂದು ಸಮುದಾಯ ಎಂಬ ನೆಲೆಗಟ್ಟಿನಲ್ಲಿ ಆಧಿಪತ್ಯದೊಂದಿಗೆ ನೇರವಾಗಿ ಮಾತಾಡಲು, ಒಂದು ಹೊಸ ಸಂವೇದನಾ ಮಾರ್ಗವನ್ನು ಬೆಳೆಸಲು ಮುಸಲ್ಮಾನರು ಕವಿತೆಯ ಮಾರ್ಗವನ್ನು ಬಳಸುತ್ತಿದ್ದಾರೆಯೇ?

ಅಜ್ ಮಲ್ ಖಾನ್: ನಾವಿಂದು ಎದುರಿಸುತ್ತಿರುವ ಮುಸ್ಲಿಂ ಸಮಸ್ಯೆಗಳು ಈ ಸಂಕಲನದ ಎಲ್ಲಾ ಕವಿತೆಗಳಲ್ಲಿ ಹಾದು ಹೋಗುವ ಸಮಾನತೆಯ ಅಂಶ. ಮುಸ್ಲಿಮರ ಆಳವಾದ ರಾಷ್ಟ್ರ ಬದ್ಧತೆಯ ಬಗ್ಗೆ ಸಂಶಯವನ್ನು ಎತ್ತುತ್ತಿರುವುದು ಭಾರತ ಎಂಬ ಸಂಕಲ್ಪದೊಂದಿಗೆ ಆಳವಾದ ಸಂಬಂಧವಿಲ್ಲದ, ರಾಷ್ಟ್ರದ ವೈವಿಧ್ಯಮಯ ಸಂಸ್ಕೃತಿಯಲ್ಲಿ ಯಾವುದೇ ನಂಬಿಕೆಯಿಲ್ಲದ ಸಂಘ ಪರಿವಾರದ ರಾಜಕಾರಣವಲ್ಲವೇ? ಈ ಸಂದರ್ಭದಲ್ಲಿ ಮುಸ್ಲಿಮರು ಬಳಸುತ್ತಿರುವ ಸಶಕ್ತ ಭಾಷಾಪರವಾದ ಮಾರ್ಗವಾಗಿದೆ ಕವಿತೆಗಳು. ಇಂತಹ ಪ್ರಯತ್ನಗಳು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಅಮೀರ್‌ ಅಝೀಝ್ ರವರ ಹಾದಿ ಹಿಡಿದು ಹಿಂದುಸ್ಥಾನಿ ಮುಸಲ್ಮಾನ್‌ ಎಂಬ ಕವಿತೆ ಬರೆದ ಹುಸೈನ್‌ ಹೈದರಿ, ಅಸ್ಸಾಮಿನ ಮಿಯಾ ಕವಿಗಳು ಈ ಕ್ಷೇತ್ರದಲ್ಲಿ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ದಲಿತ ದೌರ್ಜನ್ಯ ನಡೆದಾಗ ಅದರ ವಿರುದ್ಧ ಪ್ರಮುಖವಾಗಿ ದನಿಯೆತ್ತಿದವರು ದಲಿತ ಕವಿಗಳು. ನಾ ದೇವ್‌ ದಾಸಾಲ್‌ ರವರ ಗೋಲ್‌ಪಿಟ್ಟ ಎಂಬ ಕಾವ್ಯ ಸಂಕಲನದ ಪ್ರಧಾನ ಕವಿತೆಗಳಲ್ಲೊಂದು ‘Man, You Should Explode’. ಅಂತಹ ಶಕ್ತಿಯುತ ಬಂಡಾಯ ಕಾವ್ಯಗಳ ಜಾಡು ಹಿಡಿದು ಹೊಸ ಕಾಲದ ತಲ್ಲಣಗಳನ್ನು ಎದುರಿಸುವ ಕವಿತೆಗಳು ಹಾಗೂ ವಿಶೇಷವಾದ ಭಾಷೆ ರೂಪು ತಳೆದಿದೆ ಎನ್ನಬಹುದು. ಸಿಎಎ ಬರುವ ಮೊದಲೇ ಜನಸಂಖ್ಯಾ ಅನುಪಾತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದಾರೆ ಅರ್ಥಾತ್ ಅಭದ್ರತೆಯ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಆದರೆ ಬದಲಾದ ರಾಜಕೀಯ, ಸಾಮಾಜಿಕ ಸನ್ನಿವೇಶದಲ್ಲಿ ಸಂವಾದ ಸಂಭಾಷಣೆಗಳು ಅಸಾಧ್ಯವೆನಿಸಿದೆ ಮತ್ತು ನಮ್ಮ ಅಸ್ತಿತ್ವವೇ ಪ್ರಶ್ನಾರ್ಥಕವಾಗಿದೆ. ತಮ್ಮ ಬೇರುಗಳನ್ನು ಮತ್ತು ಬದ್ಧತೆಗಳನ್ನು ಕಾನೂನಾತ್ಮಕವಾಗಿ ಸಾಬೀತು ಮಾಡಬೇಕಾದ ಜರೂರತ್ತುನ್ನು ಅವರ ಮೇಲೆ ಹೇರಲಾಗುತ್ತಿದೆ. ಪ್ರಸ್ತುತ ಅಭದ್ರತಾ ಭಾವನೆಯ ಸುತ್ತಮುತ್ತ ಈ ಕಾವ್ಯ ಸಂಕಲನವನ್ನು ಹೆಣೆಯಲಾಗಿದೆ. ಕೇರಳೀಯ ಮುಸಲ್ಮಾನರಿಗೆ ತಮ್ಮ ನಾಡಿನೊಂದಿಗೆ ಇರುವ ಚಾರಿತ್ರಿಕ ಕೊಂಡಿ ಇಂಥಾ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡಲಿದೆ.

ಮಶ್ ಕೂರ್ ಖಲೀಲ್: ಮಲಬಾರಿನ ಮುಸಲ್ಮಾನರ ಬೇರುಗಳನ್ನು ಹುಡುಕಿಕೊಂಡು ನೀವು ಮಾಡುತ್ತಿರುವ ಪ್ರಯಾಣ ಏಕಕಾಲದಲ್ಲಿ ಮುಸ್ಲಿಮರ ಚರಿತ್ರೆಯನ್ನು ಮತ್ತು ವರ್ತಮಾನವನ್ನು ಸ್ಪರ್ಶಿಸುತ್ತಿದೆ. ಪೋರ್ಟ್ರೈಟ್‌ ಓಫ್‌ ಬಸ್ಟಾರ್ಡ್‌ ನಲ್ಲಿ ಮಾಪಿಳಗಳ ಪ್ರಾದೇಶಿಕ ಬೇರುಗಳು ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳು ಚರ್ಚೆಗೆ ಗ್ರಾಸವಾಗಿದೆ. ಮಾಪಿಳಗಳ ಅಸ್ಮಿತೆಯ ರೂಪೀಕರಣದಲ್ಲಿ ಮಲಬಾರಿನ ಮಣ್ಣು ಮತ್ತು ಅರೇಬಿಯಾದ ಮರಳು ಏಕಕಾಲದಲ್ಲಿ ಪ್ರಧಾನವೆನಿಸುವುದು ಹೇಗೆ?

ಅಜ್ ಮಲ್ ಖಾನ್: ಮಣ್ಣಿನ ವಾಸನೆಯೇ ಮಾಪಿಳಗಳ ಅಸ್ಮಿತೆಯನ್ನು ನಿರ್ಧರಿಸಿದೆ. ನಮ್ಮ ಪೂರ್ವಜರು ಬದುಕು ಕಟ್ಟಿಕೊಂಡದ್ದು ಮಣ್ಣಿನಲ್ಲಿ ಕೆಲಸ ಮಾಡಿಕೊಂಡಾಗಿತ್ತು. ತರುವಾಯ ನಾವು ಬದುಕನ್ನು ಹುಡುಕಿಕೊಂಡು ಹೊರಟದ್ದು ಕೊಲ್ಲಿ ರಾಷ್ಟ್ರಕ್ಕೆ. ಈ ಚರಿತ್ರೆಗೆ ನಮ್ಮಲ್ಲಿ ಸಮಾನ ಪ್ರಾಧಾನ್ಯತೆ ಇರುವುದರಿಂದ ಕವಿತೆಯಲ್ಲಿ ಎರಡು ಚಿತ್ರಣಗಳೂ ಮೂಡಿಬಂದಿದೆ. ಮಾಪಿಳ ಮುಸಲ್ಮಾನರ ಚರಿತ್ರಾನ್ವೇಷಣೆಯ ಸಂದರ್ಭ ಗಮನಕೊಡಬೇಕಾದ ಒಂದು ಪ್ರಧಾನ ವಿಚಾರ ಜಾತಿಗೆ ಸಂಬಂಧಿಸಿದ್ದು. ಮಾಪಿಳ ಮುಸ್ಲಿಮರು ಸಾಮಾನ್ಯವಾಗಿ ಕೀಳುಜಾತಿಯಿಂದ ಮತಾಂತರ ಗೊಂಡು ಬಂದವರಾಗಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ನನ್ನ ಪೂರ್ವಜರು ಇಸ್ಲಾಮಿಗೆ ಬಂದದ್ದು ಮನುವಿಗೆ ಕಪಾಳಮೋಕ್ಷ ಮಾಡಿಕೊಂಡಾಗಿತ್ತು ಎಂದು ‘write me down’ ಕವಿತೆಯಲ್ಲಿ ಬರುತ್ತದೆ. ಜಾತಿಯ ಹಿನ್ನೆಲೆಯ ಬಗ್ಗೆ ಇಂಥಾ ಬಹಿರಂಗ ಘೋಷಣೆಗಳು ಮುಸ್ಲಿಮರ ಕಡೆಯಿಂದ ಅಷ್ಟೇನೂ ಮೂಡಿಬಂದಿಲ್ಲ. ಮುಸ್ಲಿಂ ಪಾತಳಿಯಲ್ಲಿ ನಿಂತುಕೊಂಡು ಕೀಳು ಜಾತಿಯ ಹಿನ್ನಲೆಯಲ್ಲಿ ಗುರುತಿಸುವ ಪ್ರಥಮ ಸಾಹಿತ್ಯ ತೆಲುಗು ಬಾಷೆಯಲ್ಲಿ ಬಂದ ಸ್ಕೈ ಬಾಬರ ಕಿರುಗತೆಗಳು ಇರಬಹುದು ಎಂದು ನನಗನಿಸುತ್ತಿದೆ. ಆದರೆ, ಮುಸ್ಲಿಂ ಇಂಗ್ಲಿಷ್‌ ಕವಿತೆಗಳಲ್ಲಿ ಅಂಥಾ ಪ್ರಯೋಗಗಳು ಈ ಹಿಂದೆ ಉಂಟಾಗಿಲ್ಲ.
ಅಸ್ಸಾಮಿನಲ್ಲಿ ರಚಿತವಾದ ಮಿಯಾ ಕವಿತೆಗಳಲ್ಲಿ ಬಾಂಗ್ಲಾದೇಶದಿಂದ ನಡೆಸಿದ ವಲಸೆಯ ಅನುಭವಕ್ಕೆ ಸಂಬಂಧಿಸಿ ಜಾತಿ, ವರ್ಗಗಳು ಕಂಡುಬರುತ್ತಿದ್ದು ಆದಾಗ್ಯೂ ಅಲ್ಲಿ ಜಾತಿಯೇ ಮುಖ್ಯ ಪ್ರಮೇಯವಲ್ಲ. ಮುಂಬೈ, ದೆಹಲಿಯಂತ ನಗರ ಪ್ರದೇಶಗಳ ಮೂಲಗಳಿಂದ ಬರುವ ಇಂಗ್ಲಿಷ್‌ ಮುಸ್ಲಿಂ ಕವಿಗಳು ಇಂತಹ ವಿಷಯಗಳನ್ನು ಸ್ಪರ್ಶಿಸುವುದಿಲ್ಲ. ಜಾತಿಯ ಅನುಭವ ಅವರಿಗೆ ಉಂಟಾಗದಿರುವುದು ಈ ಪ್ರವೃತ್ತಿಗೆ ಕಾರಣ ಎಂದು ನಾನು ಭಾವಿಸುತ್ತೇನೆ. ಭಾರತದ ಜಾತಿ ವಿರುದ್ಧ ಹೋರಾಟಗಳಲ್ಲಿ ಬಾಗವಹಿಸುವ ವ್ಯಕ್ತಿ ಎಂಬ ನೆಲೆಯಲ್ಲಿ ಜಾತಿಯ ರಾಜಕೀಯವನ್ನು ಮುಸ್ಲಿಂ ಸಾಮಾಜಿಕ ಜೀವನಕ್ಕೆ ಅನ್ವಯಿಸುವ ಪ್ರಯತ್ನದ ಭಾಗವಾಗಿ ಕೂಡಾ ಜಾತಿ ನನ್ನ ಕವಿತೆಗಳಲ್ಲಿ ಸದ್ದು ಮಾಡಿದೆ. ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಇಸ್ಲಾಮೋಫೋಬಿಯ ಮತ್ತು ಫ್ಯಾಸಿಸಂ ವಿರುದ್ಧ ಆಕ್ರಮಣ ಮಾಡುವ ವೇಳೆ ಜಾತಿಯೂ ಮೂಡಿ ಬರುವ ಮೂಲಕ ನಮ್ಮ ಪ್ರಜ್ಞೆಗಳು ಪ್ರಬುದ್ಧವಾಗಬೇಕು ಎಂಬುದು ನನ್ನ ಗ್ರಹೀತ.

The Mappila Verses ನಲ್ಲಿ ಬಂದ ಒಂದು ಕವಿತೆ:
Where Do We Go?
Where should we go after the last frontiers?
Where should the birds fly after the last sky?
Where should the plants sleep after the last breath of air?
– Mahmoud Darwish

After the Isha Namaz
Chanting prayers sitting in her Musalla Keeping her copy of Quran aside with the Thasbeeh, she asks
Where do we go if our names are not in the list?

Where do coconut trees go
when their roots are declared illegal?
How does Hibiscus flower if you ask them
go back where they come from?
Can you ask Tapioca to go back to Brazil?
Do you ask tea and coffee to go back where they come from?
Where do Great Pied Hornbills go
when you tell monsoons are illegal to them?
Where do Mackerels and Sardines go
when you inform them, they are illegal in the water
………
Where do we go?
The sword breaks my silence, she asks again
Where?
I reminded
“For your father,
Adam was created with dirt from the surface of the earth.
You also will be returned to
the earth”
We came from soil
We go to soil, until then

We live here.

Write Me Down, I Am An Indian ಎಂಬ ಅಜ್‌ಮಲ್‌ ಖಾನ್‌ ಕವಿತೆಯನ್ನು ಪ್ರಮುಖ ಹಿಂದಿ ಚಿತ್ರ ಕಥೆಗಾರ ವರುಣ್‌ ಗ್ರೋವರ್‌ ಹಿಂದಿಗೆ ಅನುವಾದಿಸಿದ್ದು ಕಾರವಾನ್ ಎ ಮೊಹಬ್ಬತ್‌ ಅದನ್ನು ವೀಡಿಯೋ ಮಾಡಿ ಬಿಡುಗಡೆಗೊಳಿಸಿತ್ತು.

ಎಲ್ಲಿ ಹೋಗುವುದು ನಾವು ?

(ಎಲ್ಲಿ ಹೋಗಬೇಕು ನಾವು,
ಗಡಿಗಳ ಕಟ್ಟ ಕಡೆಯ ರೇಖೆಗಳ ತಲುಪಿದ ಬಳಿಕ?
ಎಲ್ಲಿ ಹಾರಬೇಕು ಹಕ್ಕಿಗಳು,
ಆಕಾಶದ ಕಟ್ಟ ಕಡೆಯ ಮುಟ್ಟಿದ ಬಳಿಕ?
ಎಲ್ಲಿ ಮಲಗಬೇಕು ಮರಗಳು
ಗಾಳಿಯ ಕೊನೆಯ ಉಸಿರು ಮುಗಿದ ಬಳಿಕ? – ಮಹ್ಮೂದ್ ದರ್ವೇಶ್)

ರಾತ್ರಿಯ ಕಡೆಯ ನಮಾಝಿನ ಬಳಿಕ,
ಜಪಮಣಿಗಳು ಕುರ್’ಆನನ್ನು ಪಕ್ಕದಲ್ಲಿಟ್ಟುಕೊಂಡು,
ಮುಸಲ್ಲಾದಲ್ಲಿ ಕುಳಿತ ಅವಳು ಕೇಳುತ್ತಾಳೆ,
ಎಲ್ಲಿ ಹೋಗಬೇಕು ನಾವು ?
ನಮ್ಮ ಹೆಸರುಗಳನೇದಾರೂ
ಪಟ್ಟಿಯಲ್ಲಿ ಇಲ್ಲದೇ ಹೋದರೆ ?

ಎಲ್ಲಿ ಹೋಗುವುದು ತೆಂಗಿನ ಮರಗಳು,
ಅವುಗಳ ಬೇರುಗಳೇ
ಅಕ್ರಮವೆಂದು ಘೋಷಿಸಲ್ಪಟ್ಟರೆ?
ಹೇಗೆ ಅರಳುವುದು ಪಾರಿಜಾತ
ನೀವು ಅವುಗಳನ್ನು ಬಂದಲ್ಲಿಗೇ
ಹಿಂತಿರುಗಿರಿ ಎಂದುಬಿಟ್ಟರೆ?

ಕೇಳಬಹುದೇ ನೀವು
ಮರಗೆಣಸನ್ನು ಮರಳಿ ಹೋಗಲು
ಬ್ರೆಝಿಲ್ಲಿನ ಕಡೆಗೆ ?
ನಿಮ್ಮ ಕಾಫಿ ಚಹಾದ ಗಿಡಗಳನ್ನೆಂದಾದರೂ
ಕೇಳಿಕೊಳ್ಳುತ್ತೀರೋ
ಬಂದಲ್ಲಿಗೇ ಹಿಂತಿರುಗಲು?

ಎಲ್ಲಿ ಹೋಗಬೇಕು ಮಂಗಟ್ಟೆ ಹಕ್ಕಿಗಳು
ನೀವು ಅವುಗಳಿಗೆ ಮುಂಗಾರನ್ನೇ
ಅಕ್ರಮವೆಂದು ಘೋಷಿಸಿದರೆ?
ಎಲ್ಲಿ ಹೋಗುಬೇಕು ಬಂಗುಡೆ ಬೂತಾಯಿಗಳು,
ಕಡಲಿನಲ್ಲಿ ನಿಮ್ಮ ವಾಸವೇ
ಅಕ್ರಮವೆಂದು ಹೇಳಿಬಿಟ್ಟರೆ ?

“ಎಲ್ಲಿ ಹೋಗುವುದು ನಾವು “?

ಅವಳ ಪ್ರಶ್ನೆಯ ಖಡ್ಗ ನನ್ನ ಮೌನವನ್ನು ಸೀಳುತ್ತಿರುವಾಗಲೇ,
ಅವಳು ಮತ್ತೆ ಮತ್ತೆ ಕೇಳುತ್ತಾಳೆ,
ಎಲ್ಲಿಗೆ? ಎಲ್ಲಿಗೆ??

ನಾನು ನೆನಪಿಸುತ್ತೇನೆ,

ಭುವಿಯ ಮೇಲಿನ ಮಣ್ಣಿನಿಂದ
ಸೃಷ್ಟಿಸಲ್ಪಟ್ಟ
ನಿನ್ನ ತಂದೆ ಆದಮರ ಬಳಿಗೆ

ನಾವು ಮಣ್ಣಿನಿಂದ ಬಂದವರು!
ನಾವು ಮಣ್ಣಿನಿಂದ ಬಂದವರು!
ಅಲ್ಲಿಗೇ ಮರಳುವೆವು.
ಅಲ್ಲಿಯವರೆಗೆ,
ನಾವಿಲ್ಲಿಯೇ ಬದುಕುವೆವು!!

ಇಂಗ್ಲೀಷ್‌ ಮೂಲ:ಅಜ್ಮಲ್ ಖಾನ್
ಭಾವಾನುವಾದ: ತಿಜೋರಿ

Leave a Reply

*