ಬ್ಯಾರಿಗಳ ಬದುಕಿನ ಜಾಡು ಹಿಡಿದು

ಸಹಸ್ರಾರು ವರುಷಗಳ ಇತಿಹಾಸವನ್ನೂ ಪರಂಪರೆಯನ್ನೂ ಹೊಂದಿರುವ ದಕ್ಷಿಣ ಕನ್ನಡದ ಬ್ಯಾರಿ ಮುಸ್ಲಿಮರ ಚರಿತ್ರೆಯನ್ನು ಹುಡುಕಿಕೊಂಡು ಮಂಗಳೂರಿಗೆ ತಲುಪಿದ್ದೆ. ಮುಂಜಾನೆ ರೈಲಿನಿಂದಿಳಿದು ಪೈಗಂಬರರ ಕಾಲದಷ್ಟು ಪ್ರಾಚೀನತೆಯುಳ್ಳ ಬಂದರಿನ ಝೀನತ್ ಬಕ್ಷ್ ಮಸೀದಿ ಹುಡುಕುತ್ತಾ ನಡೆದೆ. ಬೆಳಗಾಗುವ ಮುನ್ನವೇ ವ್ಯಾಪಾರಿಗಳಿಂದಲೂ ಸರಕು ಗಾಡಿಗಳಿಂದಲೂ ಗಿಜಿಗುಡುತ್ತಿದ್ದ ಬಂದರ್ ಸಾಮ್ರಾಜ್ಯದ ಚಲನವಲನಗಳು ಆ ಪ್ರದೇಶದ ವರ್ಣಮಯವಾದ ಚರಿತ್ರೆಯೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಹೆಂಚು ಹಾಕಿದ ಅರಿಶಿಣ ಹಚ್ಚಿದ ಗೋಡೆಗಳು ತುಂಬಿತುಳುಕುತ್ತಿರುವ ಗೋದಾಮುಗಳು, ಒಡೆದು ಬೀಳುವುದೋ ಎಂದು ತೋರುವ ಕಟ್ಟಡಗಳು, ಕಿರಿದಾದ ರಸ್ತೆಯ ಎರಡೂ ಬದಿಯಲ್ಲಿ ನಿಲ್ಲಿಸಿರುವ ಸರಕು ವಾಹನಗಳು, ತುಂಬಿದ ಬಂದರಿನ ದಾರಿಹೋಕರಾದ ಅರಬಿಗಳು, ಬ್ಯಾರಿಗಳು ವ್ಯಾಪಾರಿಗಳ ಕಾಲದ ನೆನಪುಗಳು ಮೂಡಿ ಬರುತ್ತವೆ.
ಕೆತ್ತನೆಗಳಿಂದ ಅಲಂಕೃತವಾದ ಝೀನತ್ ಬಕ್ಷ್ ಮಸೀದಿ ನಿರ್ಮಾಣಗೊಂಡದ್ದು ಹಿಜರಿ 22 ರಲ್ಲಿ. ಇಸ್ಲಾಂ ಸಂದೇಶದೊಂದಿಗೆ ಕೇರಳಕ್ಕೆ ಕಾಲಿಟ್ಟ ಮಾಲಿಕ್ ದೀನಾರ್ ಸಂತಾನಪರಂಪರೆಯ ‘ಹಬೀಬ್ ಇಬ್ನ್ ಮಾಲಿಕ್’ ಎಂಬುವವರು ದೀನಾರ್ ಎಂಬ ನಾಮದಿಂದ ಕರೆಯಲ್ಪಟ್ಟವರು. ಅವರು ಝೀನತ್ ಬಕ್ಷ್ ನ್ನು ನಿರ್ಮಿಸಿದರು ಎಂದು ಹೇಳಲಾಗುತ್ತಿದೆ.

ಮಾಲಿಕ್ ದೀನಾರ್ ಸಂಘದಿಂದ ನಿರ್ಮಿಸಲ್ಪಟ್ಟ ಮೊದಲನೇ ಹತ್ತು ಮಸೀದಿಗಳಲ್ಲೊಂದು ಎಂದು ಕರೆಯಲ್ಪಡುವ ಈ ಮಸೀದಿಯಲ್ಲಿ ಪ್ರಥಮ ಖಾಝೀಯಾಗಿ ಆಯ್ಕೆಗೊಂಡದ್ದು ಮೂಸಾ ಇಬ್ನ್ ಮಾಲಿಕ್ ರವರಾಗಿದ್ದಾರೆ. ‘ಬ್ಯಾರಿ’ ಎಂಬುದು ಸಾಮಾನ್ಯವಾಗಿ ದಕ್ಷಿಣಕನ್ನಡ ಹಾಗೂ ತುಳುನಾಡಿನ ಮುಸಲ್ಮಾನರನ್ನು ಕರೆಯುವ ಪದ. ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿರುವ ಬ್ಯಾರಿಗಳು ಪುರಾತನ ಕಾಲದಿಂದಲೂ ವ್ಯಾಪಾರಿಗಳಾಗಿದ್ದರು. ಬ್ಯಾರಿ ಎಂಬುದು ‘ವ್ಯಾಪಾರ’ ಎಂಬರ್ಥವನ್ನು ನೀಡುವ ‘ಬ್ಯಾರ’ ಎಂಬ ತುಳು ಪದದಿಂದ ರೂಪುಗೊಂಡಿದೆ ಎನ್ನಲಾಗುತ್ತದೆ. ತುಳುನಾಡಿನ ಮುಸ್ಲಿಮರ ಚರಿತ್ರೆಯನ್ನು ಉಲ್ಲೇಖಿಸಿದ ಅಹ್ಮದ್ ನೂರಿ ಮತ್ತು ಪ್ರೊ. ಇಚ್ಚಿಲಂಗೋಡು ರವರ ಅಭಿಪ್ರಾಯದ ಪ್ರಕಾರ, ‘ಕಡಲ ವ್ಯಾಪಾರಿಗಳಾದ್ದರಿಂದ ‘ಬಹಾರಿ’ ಎಂಬ ಅರಬ್ಬೀ ಪದದಿಂದಾಗಿರಬಹುದು ಎಂದೂ, ಮಲಬಾರಿನೊಂದಿಗೆ ವಿಶೇಷ ಬಂಧ ಸ್ಥಾಪಿಸಿದ್ದರಿಂದ ಮಲಬಾರಿನ ಬಾರಿಯಿಂದ ರೂಪು ತಾಳಿತೆಂಬ ನಿಲುವುಗಳೂ ಕಾಣಸಿಗುತ್ತವೆ. ಇವರ ಪ್ರಧಾನ ಕೇಂದ್ರವು ಹಳೆಯ ವಿಜಯನಗರ ಸಾಮ್ರಾಜ್ಯದ ಬಾರಕೂರ್, ಮಂಗಳೂರು, ಕಾಸರಗೋಡು ಒಳಗೊಂಡಿರುವ ದಕ್ಷಿಣಕನ್ನಡ ಪ್ರದೇಶ. ಬ್ಯಾರಿ ಭಾಷೆಯ ಅಭಿವೃದ್ಧಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಾಸರಗೋಡಿನ ಚಂದ್ರಗಿರಿಯಿಂದ ಕರ್ನಾಟಕದ ಉಡುಪಿಯವರೆಗೆ ವಿಸ್ತಾರಗೊಂಡಿರುವ ಪ್ರದೇಶ. ಕಾಲಕ್ರಮೇಣ ರಾಜ್ಯ ಮತ್ತು ತೀರಪ್ರದೇಶದ ನಡುವಿನ ಸಂಬಂಧ ಕಡಿಮೆಯಾಗುವಾಗ ಬ್ಯಾರಿಗಳು ಇತರ ರಾಜ್ಯಗಳಿಗೆ ವಲಸೆ ಹೋಗಲು ಪ್ರಾರಂಭಿಸಿದರು. ಹಾಗಾಗಿ, ‘ಮೈಕಾಲ’ ಎಂಬ ಹೆಸರಿನಿಂದ ಕರೆಯಲ್ಪಡುವ ಮಂಗಳೂರು ಪ್ರದೇಶದ ಬಂದರನ್ನು ಕೇಂದ್ರೀಕರಿಸಿ ಈ ಒಂದು ಸಮೂಹವು ಕಸುಬಾಧಾರಿತ, ಸಂಪತ್ಭರಿತವಾದ ಪರಂಪರೆಯನ್ನು ರೂಪಿಸಿಕೊಂಡಿತು. ಪ್ರಾಚೀನ ಕಾಲದಿಂದಲೇ ಭಾರತದ ಭೂಪಟದಲ್ಲಿ ಗುರುತಿಸಲ್ಪಟ್ಟ ಇಲ್ಲಿನ ಕಡಲ ವ್ಯಾಪಾರಿಗಳಾದ ಅರಬ್ಬೀಗಳು ಮತ್ತು ಪರ್ಶಿಯನ್ನರನ್ನೊಳಗೊಂಡ ಅನೇಕ ವ್ಯಾಪಾರ ಸಂಘಗಳ ತಾಣವಾಗಿತ್ತು ಮಲಬಾರಿಗೆ ಸೇರಿನಿಂತಿರುವ ಈ ದಕ್ಷಿಣ ಕನ್ನಡ. ಈ ವ್ಯಾಪಾರಕ್ಕೆ ನೆಲೆಯೊದಗಿಸಿದ ಪ್ರಮುಖ ಅಂಶವು ಭಾರತದ ಸರಕುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿದ್ದ ಅತಿಯಾದ ಬೇಡಿಕೆಯಾಗಿದೆ. ವ್ಯಾಪಾರಕ್ಷೇತ್ರದಲ್ಲಿ ಮುದ್ರೆಯೊತ್ತಲು ಬ್ಯಾರಿಗಳಿಗೆ ಸಹಾಯಕವಾದದ್ದು ತಮ್ಮ ರಾಜ್ಯಕ್ಕೆ ಬರುವ ಅರಬ್ಬೀಗಳೊಂದಿಗೂ ಪರ್ಶಿಯನ್ನರೊಂದಿಗೂ ಇರಿಸಿಕೊಂಡ ಅತ್ಯುನ್ನತ ಸಂಭಂಧದ ಕಾರಣದಿಂದ ಎನ್ನಬಹುದು.

ಬ್ಯಾರಿಗಳ ಪರಂಪರೆಗೆ ರೂಪವನ್ನು ನೀಡಿದ್ದು ಅರಬ್ಬೀಗಳ ಹಾಗೂ ಮತ್ತಿತರರ ಜೊತೆಗಿದ್ದ ಈ ವ್ಯಾಪಾರದ ಸಂಬಂಧ ಎಂದೇ ಹೇಳಬಹುದು. ಅತೀಕಡಿಮೆ ಕಾಲಾವಧಿಯಲ್ಲಿ ತುಳುನಾಡಿನ ವ್ಯಾಪಾರದ ಮೇಧಾವಿತ್ವವನ್ನು ಕರಗತ ಮಾಡಿಕೊಳ್ಳುವ ಮಟ್ಟಕ್ಕೆ ಬ್ಯಾರಿಗಳು ಬೆಳೆದರು. ಕ್ರಿ.ಶ 1891 ರ ಬ್ರಿಟೀಷ್ ಈಸ್ಟ್ ಇಂಡಿಯಾ ಜನಗಣತಿಯ ಪ್ರಕಾರ ತುಳುನಾಡಿನ ತೊಂಬತೈದು ಸಾವಿರ ವ್ಯಾಪಾರಿಗಳಲ್ಲಿ ತೊಂಬತ್ಮೂರು ಸಾವಿರದಷ್ಟು ಬ್ಯಾರಿಗಳು, ಎರಡು ಸಾವಿರದಷ್ಟು ಮತ್ತಿತರ ವಿಭಾಗದವರಾಗಿದ್ದರು. ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಸಮನಾದ ಪಾಲುದಾರರಾದ ಬ್ಯಾರಿಗಳಿಗೆ ಕೆಳದಿ ನಾಯಕರು, ವಿಜಯನಗರ, ಬಿಜಾಪುರ, ಮೈಸೂರು ರಾಜರಿಂದ ವ್ಯಾಪಾರಕ್ಕೆ ಸಂಪೂರ್ಣವಾದ ಸ್ವಾತಂತ್ರ್ಯವು ದೊರಕಿತ್ತು. ನೇತ್ರಾವತಿ ನದಿಯಲ್ಲಿ ಬ್ಯಾರಿಗಳ ವಸ್ತುಗಳು ಮಾತ್ರ ಸಾಗುತ್ತಿದ್ದ ಕಾಲವಿತ್ತು. ಅವರ ವ್ಯಾಪಾರಸಂಘ ‘ಹಜ್ಜಮಾನ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅರಬ್ಬೀಗಳ ಜೊತೆಗಿನ ಸಂಬಂಧ, ಸೂಫಿಗಳು, ಜಾತ್ಯಾತೀತತೆ ಹೀಗೆ ತುಳುನಾಡಿನ ಇಸ್ಲಾಂ ವ್ಯಾಪಕತೆಗೆ ಅನೇಕ ಕಾರಣಗಳಿವೆ. ‘ಏಳನೇ ಶತಮಾನದವರೆಗೆ ಅರಬ್ಬೀಗಳು ಇಲ್ಲಿ ನೆಲೆಯೂರಿದ್ದರಿಂದ, ಅವರು ಇಲ್ಲಿನ ಸ್ಥಳೀಯ ಮಹಿಳೆಯರನ್ನು ಮದುವೆ ಮಾಡಿಕೊಂಡಿದ್ದರು’ ಎಂದು ರೌಲತ್ ಸೇನ್ ತರ್ಕಿಸುತ್ತಾರೆ. ಬಾರ್ಕೂರನ್ನು ಸಂದರ್ಶಿಸಿದ್ದ ಇಬ್ನುಬತೂತ, ‘ಯೆಮನ್’ ನಿಂದಲೂ ಪರ್ಷಿಯಾದಿಂದಲೂ ಬಂದ ಮುಸ್ಲಿಮರನ್ನು ತಾನು ಕಂಡದ್ದಾಗಿ ಉಲ್ಲೇಖಿಸಿದ್ದಾರೆ. ತುಳುನಾಡಿನ ಇಸ್ಲಾಮಿನ ಸೂಫಿ ಪಥಿಕರಾದ ಬಾಬಾ ಫಕ್ರುದ್ದಿನ್ ಪೆನುಕೊಂಡ, ಫರೀದ್ ಮಸೂದ್ ಗಂಜಶಕರ, ಮಹಮದ್ ಶರೀಫುಲ್ ಮದನಿ, ಶೇಖ್ ಯೂಸುಫ್ ಅಡಯಾರ್, ಶಾಹ್ ಮೀರ್ ಮುಂತಾದವರಿಂದಲೂ ಇಸ್ಲಾಂ ಪ್ರಚಾರಗೊಂಡಿತು. ಬ್ರಾಹ್ಮಣಶಾಹಿ/ವೈದಿಕತೆಯು ತುಳುನಾಡಿಗೆ ಬಂದಾಗಿನಿಂದ ಸ್ವರಾಜ್ಯದವರಾದ ಕೀಳು ಜಾತಿಯವರೆಂದು ಗುರುತಿಸಲ್ಪಟ್ಟ ಕೋರಗಾಸರು, ಮಾನ್ಸಾಸರು, ಮೀನುಗಾರರಾದ ಭೂಪಾಲಕರು ಹಾಗೂ ಮೊಗವೀರರೂ ಜಾತಿ ಹಿಂಸೆಯಿಂದ ಬೇಸತ್ತು, ಅಭಯವನ್ನು ಹುಡುಕಿ ಇಸ್ಲಾಮಿನಲ್ಲಿ ಆಶ್ರಯವನ್ನು ಕಂಡುಕೊಂಡರು. ಪಶ್ಚಿಮ ತೀರದಲ್ಲಿರುವ ಮುಸ್ಲಿಮರು ಜಾತಿಹಿಂಸೆಯಿಂದ ಅಭಯವನ್ನು ಹುಡುಕಿ ಬಂದು ಮತಾಂತರವಾದರು ಎಂಬುದನ್ನು ‘ವಿಲಿಯಮ್ ಲೋಗನ್’ ರವರು ದಾಖಲಿಸಿದ್ದಾರೆ. (ಮಲಬಾರ್ ಮ್ಯಾನ್ಯುವಲ್)

ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಡಲ ವ್ಯಾಪಾರಕ್ಕೆ ತಿರುಗೇಟು ಬೀಳುವುದು ಪೋರ್ಚುಗೀಸರ ಆಗಮನದ ನಂತರ. ಅಕ್ಕಿ, ಸಕ್ಕರೆ, ಕರಿಮೆಣಸು, ಸುಗಂಧ ದ್ರವ್ಯಗಳು, ಮರದ ದಿನ್ನೆಗಳು, ಶ್ರೀಗಂಧ, ಅಡಿಕೆ, ಹೆಂಚು ಮುಂತಾದ ವಸ್ತುಗಳನ್ನು ಸಾಗಿಸುತಿದ್ದ ತೀರವು ಪೋರ್ಚುಗೀಸರ ವಸಾಹತೀಕರಣದಿಂದಾಗಿ ಕರಿಮೆಣಸು ಮತ್ತು ಅಕ್ಕಿಗೆ ಮಾತ್ರ ಸೀಮಿತಗೊಂಡಿತು. ಕೆಲವರು ವ್ಯಾಪಾರವನ್ನು ಕಡೆಗಣಿಸಿ ಒಳಪ್ರದೇಶಗಳಿಗೆ ವಲಸೆ ಹೋಗಿ ವಸಾಹತುಗಾರರ ಎದುರಾಳಿಗಳೊಂದಿಗೆ ಕೈಜೋಡಿಸಿ ನಿಲ್ಲಲು ಪ್ರಾರಂಭಿಸಿದರು. ಮುಸ್ಲಿಮರಿಗೆ ಸಹಾಯವನ್ನು ನೀಡುತ್ತಿದ್ದ ವಿಜಯನಗರದ ಸಾಮ್ರಾಜ್ಯದ ಕುಸಿತವು ಬ್ಯಾರಿಗಳಿಗೆ ಬಲವಾದ ಹೊಡೆತ ನೀಡಿತು. ಬಿಜಾಪುರದ ಸುಲ್ತಾನರು, ಮಲಬಾರಿನ ಸಾಮೂದಿರಿಗಳು ಮತ್ತು ಕಣ್ಣೂರಿನ ಅಲೀ ರಾಜರುಗಳು ಸೇರಿ ಪರಂಗಿಗಳ ಎದುರು ನಡೆಸಿದ ಹೋರಾಟವು ವಿಫಲಗೊಂಡಿತು. ರಾಣಿ ಅಬ್ಬಕ್ಕದೇವಿಯ ಮುಂದಾಳತ್ವದಲ್ಲಿ ಮುಸ್ಲಿಮರು ನಡೆಸಿದ ಹೋರಾಟದಲ್ಲಿ ಮೈಕಾಲವನ್ನು ಮರುವಶಪಡಿಸಿಕೊಂಡರು.
ಬ್ರಿಟೀಷರ ಆಗಮನದಿಂದ ಪೋರ್ಚುಗೀಸರು ಹಿಂತಿರುಗಿದರೂ ಬ್ಯಾರಿಗಳ ವ್ಯಾಪಾರವು ಹದಗೆಟ್ಟಿತ್ತು. ನಂತರ ಮೈಸೂರಿನ ಆಡಳಿತಾವಧಿಯಲ್ಲಿ ಬ್ಯಾರಿಗಳು ಹಳೆಯ ಪ್ರಭಾವವನ್ನು ಹಿಂಪಡೆದರು. ದಕ್ಷಿಣ ಕನ್ನಡಕ್ಕೆ ಟಿಪ್ಪು ನೇತೃತ್ವದಲ್ಲಿ ನಡೆದ ಆಂಗ್ಲೋ-ಮಂಗಳೂರು ಯುದ್ಧದ ಕಾಲದಲ್ಲಿ ಝೀನತ್ ಬಕ್ಷ್ ಮಸೀದಿ ಪುನರ್ ನಿರ್ಮಾಣಗೊಂಡಿತು. ಈ ಪ್ರದೇಶಗಳಲ್ಲಿ ಟಿಪ್ಪುವು ಅಧಿಕವಾಗಿ ಮಸೀದಿಗಳನ್ನು ನಿರ್ಮಿಸುತ್ತಲೂ, ಸೂಫಿಗಳ ದರ್ಗಾ ನಿರ್ಮಿಸುತ್ತಲೂ ಮಸೀದಿಗಳಿಗೆ ಬೃಹತಾದ ತಸ್ದೀರ್ ಸಂಪ್ರದಾಯವನ್ನು ಚಾಲ್ತಿಗೆ ತರಲಾಯಿತು. ವಿವಿಧ ರಾಜರುಗಳ ಅಧೀನದಲ್ಲಿ ಸೈನಿಕರಾಗಿಯೂ ಸೇನಾಧಿಪತಿಗಳಾಗಿಯೂ ಬ್ಯಾರಿಗಳು ಕೆಲಸ ಮಾಡುತ್ತಿದ್ದರು. ಟಿಪ್ಪು ಸುಲ್ತಾನರ ಸಹಾಯದೊಂದಿಗೆ ಬ್ರಿಟಿಷರಿಗೆದುರಾಗಿ ಬ್ಯಾರಿಗಳು ಒಗ್ಗೂಡಿದ್ದು ಪ್ರಸಿದ್ಧವಾಗಿದೆ. ಬ್ರಿಟಿಷರ ಸಹಾಯವನ್ನು ಪಡೆದುಕೊಂಡಿದ್ದ ಕೊಡಗಿನ ರಾಜನೆದುರು ಬ್ಯಾರಿಗಳು ರಂಗಕ್ಕಿಳಿದರು. ಬಡತನದಲ್ಲಿದ್ದ ಸಾಮಾನ್ಯ ಮುಸ್ಲಿಮರು ಸ್ವಾತಂತ್ರ್ಯ ಸಂಗ್ರಾಮ ಮಾಡಿದ್ದಕ್ಕೋ, ರಾಷ್ಟೀಯ ಮಟ್ಟದ ಅವಕಾಶ ಸಿಗಲಾರದ್ದಕ್ಕೋ ಹೆಚ್ಚಿನ ಪ್ರತಿಫಲ ಲಭಿಸಲಿಲ್ಲ. ಕ್ರಿ.ಶ 1914 ರಲ್ಲಿ ಕಾಂಗ್ರೆಸ್ ಪಕ್ಷ ಮಂಗಳೂರಿಗೆ ತಲುಪಿದಾಗ ಹಲವರು ಪಕ್ಷದ ಭಾಗವಾದರೂ, ಪಕ್ಷದ ಹೋರಾಟಕ್ಕೆ ಹೆಚ್ಚಾಗಿ ಪ್ರತಿಕ್ರಿಯೆ ಇರಲಿಲ್ಲ. ಬ್ಯಾರಿಗಳಲ್ಲಿ ಬೆಳೆದು ಬಂದ ನೇತಾರರಾದ ಶೆಂರೂಲ್ ಮುಹಮ್ಮದ್ ಶಂನಾದ್ ಹಾಗೂ ಇತರ ನೇತಾರರು ಜನರಿಗೆ ರಾಜಕೀಯದ ಅವಶ್ಯಕತೆಯ ಕುರಿತು ಮಾಹಿತಿ ನೀಡಿದ ಮೇಲೂ ದೊಡ್ಡಮಟ್ಟದ ವಿಜಯ ಸಾಧ್ಯವಾಗಲಿಲ್ಲ. ಕ್ರಿ.ಶ 1930 ರಲ್ಲಿ ಮುಸ್ಲಿಂ ಲೀಗ್ ಬಂದರೂ ಪ್ರಾದೇಶಿಕ ಮಟ್ಟದಲ್ಲಿ ಕಾಂಗ್ರೆಸ್ ಗೆ ಲಭಿಸಿದ ಅಂಗೀಕಾರವು ಕೂಡ ಅದಕ್ಕೆ ಸಿಗಲಿಲ್ಲ.
ಆರ್ಥಿಕವಾಗಿ ಬೆಳೆದು ನಿಂತಿದ್ದ ಬ್ಯಾರಿಗಳು ಕರಾವಳಿ ಪ್ರದೇಶದಲ್ಲಿ ಸೌಹಾರ್ದತೆಯಿಂದ ನಡೆದುಕೊಂಡಿದ್ದರು. ಬ್ಯಾರಿ ಸಾಮುದಾಯಿಕ ಸೌಹಾರ್ದತೆಯ ಪ್ರತೀಕವಾಗಿರುವವರು ಬಪ್ಪ ಬ್ಯಾರಿ. ಶಾಂಭವಿ ನದಿಯ ತೀರದಲ್ಲಿ ಅವರು ಪುನರ್ ನಿರ್ಮಿಸಿಕೊಟ್ಟ ಬಪ್ಪನಾಡ್ ದುರ್ಗಾ ಪರಮೇಶ್ವರಿ ಕ್ಷೇತ್ರವು ಧಾರ್ಮಿಕ ಸೌಹಾರ್ದತೆಯ ಗುರುತಾಗಿದೆ. ಕ್ಷೇತ್ರದ ಹೆಸರೇ ಬಪ್ಪ ಬ್ಯಾರಿಯವರಿಂದ ಬಂದಿರುವಂತದ್ದು. ಎಂಟುನೂರು ವರ್ಷಗಳಷ್ಟು ಹಳೆಯದಾದ ಈ ಕ್ಷೇತ್ರದ ಉತ್ಸವದ ಮೊದಲ ಪ್ರಸಾದ ಇಂದಿಗೂ ಕೂಡ ಸನ್ಮಾನ ರೂಪದಲ್ಲಿ ಸಿಗುವುದು ಒಂದು ಬ್ಯಾರಿ ಕುಟುಂಬಕ್ಕೆ. ಹಲವು ಮತಗಳು, ಭಾಷೆಗಳು ಇರುವ ದಕ್ಷಿಣಕನ್ನಡದಲ್ಲಿ ತಮ್ಮದೇ ಆದ ಒಂದು ಭಾಷೆಯನ್ನು ತಂದಿದ್ದು ಬ್ಯಾರಿಗಳ ನಿರ್ಮಾಣ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿ. ಬ್ಯಾರಿಯು ತುಳುನಾಡಿನ ಮುಸ್ಲಿಮರಲ್ಲಿ ಇಂದಿಗೂ ಮೌಖಿಕವಾಗಿ ಬೇರೂರಿದ ಭಾಷೆಯಾಗಿದೆ. ‘ನಕ್ಕ್ ನಿಕ್ಕ್’ ಎಂದೂ ಕರೆಯಲ್ಪಡುವ ಬ್ಯಾರಿ ಭಾಷೆಯು ಮಲೆಯಾಳಂ ಭಾಷೆಗೆ ಹೆಚ್ಚು ಹೋಲಿಕೆ ಇರುವ ಭಾಷೆಯಾಗಿದೆ. ನಕ್ನಿಕ್ ಅಂದರೆ ಸ್ವಂತ ಲಿಪಿ ಇಲ್ಲದ್ದು (ಈ ಲೇಖನವು ಮೂಲಭಾಷೆಯಲ್ಲಿ ಬರೆಯಲ್ಪಡುವಾಗ ಬ್ಯಾರಿ ಲಿಪಿ ಪ್ರಕಟವಾಗಿರಲಿಲ್ಲ- ಸಂಪಾದಕ). ಅರಬ್ಬೀ, ತಮಿಳು, ತುಳು, ಕನ್ನಡ ಭಾಷೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಗುಣ ಕೂಡ ಬ್ಯಾರಿಗೆ ಇದೆ. ಮೊದಮೊದಲು ‘ಮಾಪಿಳ’ ಮಲಯಾಳಂ ಎಂಬ ನಾಮದಿಂದ ಇದು ಪ್ರಚಾರಕ್ಕೆ ಬಂದಿತ್ತು.

ಸಂಸ್ಕೃತಿಯಲ್ಲಿ ಮಲಬಾರಿನ ಮುಸ್ಲಿಮರೊಂದಿಗೆ ಸಾದೃಶ್ಯ ಹೊಂದಿರುವ ಬ್ಯಾರಿಗಳು ಮಾಪಿಳ್ಳ ಸಮೂಹದ ಭಾಗವೆಂದು, ಬ್ಯಾರಿ ಭಾಷೆ ಮಲಯಾಳಂ ದಿಂದ ಹುಟ್ಟಿದ್ದು ಎಂದು ಕೆಲವು ಅನ್ವೇಷಣೆಗಳು ತಿಳಿಸುತ್ತದೆ. ಪ್ರೊಫೆಸರ್ ಇಚ್ಚಿಲಂಗೋಡು ಅವರ ಪ್ರಕಾರ, ಬ್ಯಾರಿಗಳು ಆಚರಣೆಗಳಿಂದಲೂ ಭಾಷೆಯಿಂದಲೂ ಸ್ವಂತ ಅಸ್ಮಿತೆಯನ್ನು ಹೊಂದಿರುವುದರಿಂದ ಅವರು ಮಾಪಿಳ ಸಮೂಹದ ಭಾಗವಲ್ಲ. ಮಾಪ್ಪಿಳ ಹಾಡುಗಳ ಥರಹದ್ದೇ ಬ್ಯಾರಿ ಭಾಷೆಯಲ್ಲಿಯೂ ಹಾಡುಗಳು ಇದ್ದಿತೆಂದು ಅವರು ಹೇಳುತ್ತಾರೆ.
‘ಓಲು ನಡನ್ನ ಬಿಸಯತ್ತೆ ಚೆನ್ನಾಲ್
ಆಂಙಲಮಾರ್ ಪೆಂಞಾಯಿಮಾರೆ ಬುಟ್ಟುಟ್ಟು ಓಲಟ್ಟಿಗೆ ಕೇಟ್ಟಾರ್’
ಈ ಹಾಡು ಬ್ಯಾರಿ ಭಾಷೆಯಲ್ಲಿ ರಚಿತವಾಗಿದೆ. ಬ್ಯಾರಿ ಮದುವೆಗಳಲ್ಲಿಯೂ ಮತ್ತಿತರ ಸಂಭ್ರಮಗಳಲ್ಲಿಯೂ ಮಾಪ್ಪಿಳ ಹಾಡುಗಳು ಅಧಿಕವಾಗಿ ರೂಢಿಯಲ್ಲಿತ್ತು .ಬ್ಯಾರಿಗಳು ತಮ್ಮದೇ ಆದ ಸಾಂಸ್ಕೃತಿಕ ಪಾರಂಪರ್ಯವನ್ನು ಪ್ರತಿಪಾದಿಸುತ್ತಾರೆ. ಹಲವು ಸಂದರ್ಭದಲ್ಲಿ ಮಾಪ್ಪಿಳ ಸಂಸ್ಕೃತಿಯ ಜೊತೆಗೆ ಹೊಂದಿಕೊಳ್ಳುವ ಗುಣ ಬ್ಯಾರಿಗಳಲ್ಲಿ ಕಾಣಸಿಗುತ್ತದೆ. ಬ್ಯಾರಿಗಳ ಅಭಿವ್ಯಕ್ತಿ, ಜೀವನಕ್ರಮವು ಅರಬ್ಬೀ, ತುಳು, ಮಾಪ್ಪಿಳ ಸಂಸ್ಕೃತಿಗಳ ಸಮ್ಮಿಶ್ರಣವಾಗಿದೆ. ತುಳುನಾಡಿನ ಮುಸ್ಲಿಮರು ಸಾಧಾರಣವಾಗಿ ಮಾತನಾಡುವ ಬ್ಯಾರಿಯಲ್ಲೂ ಈ ಸಮ್ಮಿಶ್ರಣ ಪ್ರಕಟವಾಗುತ್ತದೆ. ಬ್ಯಾರಿಗಳ ಮದುವೆ ಮಂಟಪಗಳಲ್ಲಿ ಆಲಾಪಿಸುತ್ತಿದ್ದುದು ಮಾಪ್ಪಿಳ ಹಾಡುಗಳಾಗಿದ್ದವು. ಕಿಸ್ಸಪಾಟ್, ಮಾಲಪಾಟ್, ಒಪ್ಪನಪಾಟ್, ಮೊಯಿಲಾಂಜಿಪಾಟ್, ಅಮ್ಮಾಯಿಪಾಟ್, ತಾಲೇಲಪಾಟ್ ಮುಂತಾದ ವೈವಿಧ್ಯಮಯ ಆವಿಷ್ಕಾರಗಳು ಕೂಡ ಬ್ಯಾರಿಗಳಲ್ಲಿದ್ದವು. ಬಾಪ್ಪು ಕುಂಞಿ ಮುಸ್ಲಿಯಾರ್, ಸಾಹುಕಾರ್ ಕುಂಞಿಪ್ಪಕ್ಕಿ , ಕುಂಞಾಮು ಮುಸ್ಲಿಯಾರ್ ಮುಂತಾದವರು ಬ್ಯಾರಿ ಹಾಡುಗಳನ್ನು ಬರೆದವರಲ್ಲಿ ಪ್ರಮುಖರು. ಹಲವು ದಿನಗಳವರೆಗೆ ನಡೆಯುವ ಮದುವೆ ಸಮಾರಂಭ ಬ್ಯಾರಿಗಳ ಮತ್ತೊಂದು ವಿಶೇಷತೆಯಾಗಿದೆ. ಅವರ ಮದುವೆ ಸಮಾರಂಭಗಳು ಮೂರು ದಿನದಿಂದ ಹಿಡಿದು ವಾರಗಟ್ಟಲೆ ನಡೆಯುವಂತಹದ್ದಾಗಿದೆ. ಮೊಯಿಲಾಂಜಿ(ಮೆಹಂದಿ), ಮದುವೆ, ದಫ್ ಹಾಗು ಕೈಕೊಟ್ಟು ಪಾಟ್ಟು (ಚಪ್ಪಾಳೆ ಹಾಡು) ,ವಾದ್ಯ ಮೇಳಗಳು, ಕೋಲಾಟ ಮುಂತಾದವುಗಳಿಂದ ವಿವಾಹ ಸಂದರ್ಭವು ಅಲಂಕೃತವಾಗಿರುತ್ತಿತ್ತು. ಮಾಪ್ಪಿಳಗಳಲ್ಲಿ ವ್ಯಾಪಕವಾಗಿದ್ದ ‘ಮಕ್ಕತ್ತಾಯ’ ಎಂಬ ಸಂಪ್ರದಾಯವನ್ನು ಬ್ಯಾರಿಗಳು ನಡೆಸಿಕೊಂಡು ಬರುತ್ತಿದ್ದಾರೆ. ಸಾಕಷ್ಟು ವಿಧದ ಊಟೋಪಚಾರಗಳು ಇರುವ ವ್ಯವಸ್ಥೆ ಇದು. ಮದುವೆ ಸಮಾರಂಭ……………………………… ಮುಂತಾದೆಡೆ ಬ್ಯಾರಿಗಳಲ್ಲಿ ಮಾತ್ರ ಪ್ರಸಿದ್ದವಾಗಿರುವ ಭೋಜನಗಳು ಇರುತ್ತವೆ. ಬ್ಯಾರಿ ಬಿರಿಯಾನಿ ಸವಿಶೇಷತೆಯುಳ್ಳದ್ದಾಗಿದೆ.


ದರ್ಸ್, ಮದರಸಗಳಿಂದ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ನಂತರ ವಿದ್ಯಾಭ್ಯಾಸವನ್ನು ಬಿಟ್ಟು ಕೆಲಸದ ಮಾರ್ಗದತ್ತ ಜೀವನ ಸಾಗಿಸುವುದು ಅವರೆಡೆಯಲ್ಲಿ ಕಂಡುಬರುತ್ತಿದೆ. ಮಲಬಾರಿನಿಂದ ಬಂದ ವಿದ್ವಾಂಸರು ಮತಧರ್ಮದ ವಿದ್ಯಾಭ್ಯಾಸ ನೀಡಿದುದರಿಂದ ಹೆಚ್ಚಿನವರು ಶಾಫಿಈ ಕರ್ಮಶಾಸ್ತ್ರ(ಇಸ್ಲಾಂ ಅನುಷ್ಠಾನ ಮಾರ್ಗಗಳಲ್ಲಿ ಒಂದು) ವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಬ್ರಿಟೀಷರೊಂದಿಗಿನ ದ್ವೇಷವೇ ಒಂದು ಕಾಲದಲ್ಲಿ ಬ್ಯಾರಿಗಳು ಭೌತಿಕ ವಿದ್ಯಾಭ್ಯಾಸವನ್ನು ನಿಷೇಧಿಸಲು ಪ್ರೇರಣೆ ನೀಡಿದ್ದು ಎನ್ನಲಾಗುತ್ತದೆ. ಕ್ರಿ.ಶ 1871 ರಲ್ಲಿ ಬ್ರಿಟಿಷರು ಸರ್ಕಾರಿ ಶಾಲೆ ಪ್ರಾರಂಭಿಸಿದರೂ ಬ್ಯಾರಿಗಳು ಸಹಕಾರ ನೀಡಲಿಲ್ಲ.

ಇಂದು ಮಂಗಳೂರಿನ ಪ್ರಧಾನ ಕಾಯಕ ಮೀನುಗಾರಿಕೆಯಾಗಿದೆ. ಬೆಳೆದು ಬರುತ್ತಿರುವ ಮಂಗಳೂರಿನ ಪ್ರಾಂತ್ಯ ಪ್ರದೇಶಗಳಲ್ಲಿ ಬ್ಯಾರಿ ಸಮೂಹದ ಪಳೆಯುವಳಿಕೆಗಳು ಈಗಲೂ ಕಾಣಸಿಗುತ್ತಗವೆ. ಪೋರ್ಚುಗೀಸ್, ಬ್ರಿಟೀಷ್ ಅವಧಿಯ ನಂತರ ನಶಿಸಿಹೋದ ಬ್ಯಾರಿಗಳ ಆರ್ಥಿಕತೆ ಈಗೀಗ ಮತ್ತೆ ಚಿಗುರೊಡೆದಿದೆ. ದಶಕಗಳ ಹಿಂದೆ ಅನುಭವಿಸಿದ ಸಾಂಸ್ಕೃತಿಕ, ಆರ್ಥಿಕ ಸಂಕಷ್ಟಗಳಿಂದ ಹೊಸ ದಾರಿ ಕಂಡು ಹಿಡಿಯುವ ರೂಢಿ ಬೆಳೆದು, ಬ್ಯಾರಿಗಳ ಸಂಘಟನೆಗಳು ಶಕ್ತಿಯುತವಾದ ಸ್ವಾಧೀನತೆಯನ್ನು ಪಡೆದುಕೊಂಡವು. ಆಸ್ಪತ್ರೆಗಳು, ವಿದ್ಯಾಭ್ಯಾಸ, ಸಾಂಸ್ಕೃತಿಕ ಕೇಂದ್ರಗಳು, ಸಮೂಹ ಮಾಧ್ಯಮಗಳು, ಪತ್ರಿಕೆಗಳು, ರಿಲೀಫ್ ಸಂಘಟನೆಗಳು ಮುಂತಾದ ಅನೇಕ ರೀತಿಗಳಲ್ಲಿ ಬ್ಯಾರಿಗಳು ತುಂಬಿ ನಿಂತಿದ್ದಾರೆ. ಕಾಸರಗೋಡಿನ ಕಡೆ ಬ್ಯಾರಿಗೆ ಸ್ವಲ್ಪ ತೊಂದರೆಯ ವಾತಾವರಣವಿದ್ದರೂ ಮಂಗಳೂರಿನ ಪ್ರದೇಶಗಳಲ್ಲಿ ಅವರ ಅಸ್ಮಿತೆಯು ಪ್ರಕಾಶಮಾನವಾಗಿದೆ. ಇಂದು ಬ್ಯಾರಿಗಳೆಡೆಯಲ್ಲಿ ಸಾಂಸ್ಕೃತಿಕ ಜೀವನಕ್ರಮ ಜೀವಂತವಾಗಿದೆ. ಬ್ಯಾರಿ ಸಾಹಿತ್ಯ ಭಾಷೆಯ ಮರುನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದೆ. ಅಕಾಡೆಮಿಯು ಬ್ಯಾರಿ ಭಾಷೆ ಮತ್ತು ಬ್ಯಾರಿ ಸಂಸ್ಕೃತಿಯ ಮರುನಿರ್ಮಾಣದ ಉದ್ದೇಶದಿಂದ ಜನರ ನಡುವೆ ಹೊಸದಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಮೂಲ: ಅಮೀರುದ್ದೀನ್ ತೂವಕ್ಕಾಡ್, ಫಝಲ್ ಕೆ
ಅನುವಾದ: ಶೌಕತ್ ಅಲಿ ಕಿಕ್ಕರೆ
ಕೃಪೆ: ತೆಳಿಚ್ಚಂ ಮ್ಯಾಗಝಿನ್

1 Comment

  1. ಬ್ಯಾರಿ ಭಾಷೆಯ ಮತ್ತು ಸಂಸ್ಕೃತಿ ಕುರಿತ ಸಂಶೋಧನೆಗೆ ಬಹುದೊಡ್ಡ ಕೊಡುಗೆ ನೀಡಿರುವ ಇಬ್ಬರ ಹೆಸರು ನಮೂದಾಗಿಲ್ಲ. ಒಬ್ಬರು ಡಾ. ಸುಶೀಲಾ ಉಪಾಧ್ಯಾಯ, ಇನ್ನೊಬ್ಬರು ಡಾ.ವಹಾಬ್ ದೊಡ್ಡಮನೆ. ಸುಶೀಲಾ ಮೇಡಂ ಅವರು ಕ್ಷೇತ್ರಕಾರ್ಯ ಮತ್ತು ಸಂಶೋಧನೆ ನಡೆಸಿ ಸಂಗ್ರಹಿಸಿದ ಬ್ಯಾರಿ ಜಾನಪದ ಕಥೆಗಳು ಮತ್ತು ಆ ಕುರಿತ ಮಹಾಪ್ರಬಂಧಕ್ಕೆ ೧೯೬೧ರಲ್ಲಿ ಪೂನಾ ವಿವಿ ಯಿಂದ ಡಾಕ್ಟರೇಟ್ ಪಡೆದರು. ವೃತ್ತಿಯಿಂದ ವೈದ್ಯರಾಗಿದ್ದ (ಎಂಬಿಬಿಎಸ್ ಅಲ್ಲ) ವಹಾಬ್ ಅವರು ಬರೆದು ಪ್ರಕಟಿಸಿದ ಬ್ಯಾರೀಸ್ ಇನ್ ದಕ್ಷಿಣ ಕನ್ನಡ (ಕನ್ನಡದಲ್ಲೂ ಪ್ರಕಟವಾಗಿದೆ) ಬ್ಯಾರಿಗಳ ಕುರಿತು ಸಾಕಷ್ಟು ಮಸಹಿತಿಗಳನ್ನು ಒಳಗೊಂಡಿದೆ. ಅಹ್ಮದ್ ನೂರೀ ಅವರ “ಮೈಕಾಲ” ಕೃತಿಯನ್ನು ನಾನೇ (ಬೆಂಗಳೂರು ಬ್ಯಾರೀಸ್ ವೆಲ್ ಫೇರ್ ಅಸೋಸಿಯೇಶನ್ ವತಿಯಿಂದ) ಮರು ಪ್ರಕಟಿಸಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಾನು ತಯಾರಿಸಿದ ಬ್ಯಾರಿ ಭಾಷೆ ಮತ್ತು ಸಂಸ್ಕೃತಿ ಕುರಿತ ಎರಡು ಸಾಕ್ಷ್ಯಚಿತ್ರಗಳನ್ನು ಗಮನಿಸಬಹುದು.

Leave a Reply

*