ಜಾವೆದ್ ನಾಮಾ

ನಿನ್ನ ಹೃದಯದೊಳಗೊಂದು
ಸ್ವಜ್ಞಾನದ ದೃಷ್ಟಿ ತೆರೆದಿದೆಯೆಂದರೆ
ಆ ಹೂವುಗಳ ಮೌನಗಳಿಗೆ ಮಾತಾಗು
ಪ್ರೀತಿಯ ಒಂದಿಷ್ಟು ಪದಗಳಾಗು

ಈ ಪ್ರೀತಿಯೆಂಬ ಜಗದಲ್ಲಿ
ಪುಟ್ಟ ತಾವು ಹುಡುಕು
ಈ ನವ್ಯ ಯುಗದಲ್ಲಿ
ರಮ್ಯ ಹಗಲಿರುಳ ಹುಡುಕು

ಪಶ್ಚಿಮದ ಕಲೆಗಾರರ
ಮನೆಯ ಪರಿಚಾರಕನಾಗಬೇಡ
ಭಾರತದ ನೆಲದಲ್ಲಿ
ಮಧುಶಾಲೆಯ ಸುಧೆಯ ಹರಿಸು

ಸಾಹಿತ್ಯವೃಕ್ಷದ ರೆಂಬೆಕೊಂಬೆಯಾಗಿರುವೆ
ಕವಿತಾಸಾರ ಹರಿಯುತಿದೆ ನಿನ್ನ ನರನರಗಳಲ್ಲಿ
ಆ ಸತ್ತ್ವ ಸಾರದಿಂದಲೇ
ನವ ಮಧುವ ತಯಾರಿಸು!

ನಿನ್ನ ಲಕ್ಷ್ಯ ಸಿರಿವಂತಿಕೆಯಲ್ಲ,
ಬಡತನದ ಕಡೆಗಿರಲಿ,
ಸ್ವಾಭಿಮಾನವ ಬಿಕರಿಗಿಡದೆ
ಬಡವರೊಳು ಅಭಿಮಾನಿಯಾಗು!

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಕನ್ನಡಕ್ಕೆ : ಪುನೀತ್ ಅಪ್ಪು
(ತನ್ನ ಮಗ ಜಾವೇದ್ ರವರ ಜನ್ಮದಿನದಂದು ಇಕ್ಬಾಲರು ಬರೆದ ಪತ್ರದಲ್ಲಿ)

ಅಲ್ಲಾಮ ಇಕ್ಬಾಲರು ಇಂಗ್ಲೇಂಡಿನಲ್ಲಿರುವಾಗ ಅವರ ಮಗ ಜಾವೇದ್ ತಮ್ಮ ತಂದೆಯವರಿಗೆ ಪತ್ರ ಬರೆದು ಇಂಗ್ಲೇಂಡಿನಿಂದ ಭಾರತಕ್ಕೆ ಬರುವಾಗ ತನಗೊಂದು ‘ಗ್ರಾಮಾಫೋನ್'( ಹಿಸ್ ಮಾಸ್ಟರ್ಸ್ ವಾಯ್ಸ್ ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ಪ್ರಸಿದ್ಧ ಗ್ರಾಮಾಫೋನ್) ತರುವಂತೆ ಕೇಳಿಕೊಂಡಿದ್ದರು. ಆದರೆ ಅಲ್ಲಾಮ ಇಕ್ಬಾಲರು ಈ ಸಂದರ್ಭವನ್ನು ತಮ್ಮ ಮಗನಿಗೆ ಭವಿಷ್ಯದ ಕನಸನ್ನು ರೂಪಿಸುವ ಉದಾಹರಣೆಯನ್ನಾಗಿ ಬಳಸಿಕೊಂಡು ಒಂದು ಸುಂದರವಾದ ಕವಿತೆಯನ್ನು ಬರೆಯುತ್ತಾರೆ. ಅದೇ ‘ಜಾವೇದ್ ಕೆ ನಾಮ್’ ಅದರಲ್ಲಿ ಬರುವ ಕೊನೆಯ ಸಾಲುಗಳು ” ಮೇರಾ ತರೀಖ್ ಅಮೀರೀ ನಹೀ ಫಕೀರೀ ಹೈ
ಖುದೀ ನ ಬೇಜ್ ಗರೀಬೀ ಮೇ ನಾಮ್ ಫೈದಾ ಕರ್ ” ಇವತ್ತಿಗೂ ಮನುಷ್ಯನ ಬದುಕಿನ ಉದ್ದೇಶವೇನು ಎಂಬುದನ್ನು ನೆನಪಿಸುತ್ತವೆ.
ಕವಿ ಇಕ್ಬಾಲರು ಕೂಡಾ ಕೊನೆಯವರೆಗೂ ಅವರ ಮಾತಿನಂತೆ ಬಡತನದಲ್ಲಿಯೇ ಬದುಕಿದರು.

Leave a Reply

*