ಮರುಯಾತ್ರೆಗಿರುವ ಗಂಟುಮೂಟೆಗಳು : ಫರೀದುದ್ದೀನ್ ಅತ್ತಾರರ ಸೂಫೀ ಕಾವ್ಯ ಲೋಕ

ಫರೀದುದ್ದೀನ್ ಆತ್ತಾರ್ (ರ) ರ ಜನನ ಕ್ರಿ. ಶ 1150, ನಿಷಾಪೂರಿನ ಹತ್ತಿರ ಪ್ರದೇಶವಾದ ಕಟಕಿಲ್ ಎಂಬ ಗ್ರಾಮದಲ್ಲಾಗಿತ್ತು. ಖುರಾಸಾನ್ ಹಾಗೂ ನಿಷಾಪೂರ್ ಗಳೆರಡೂ ಆ ಕಾಲಘಟ್ಪದ ಸೂಫಿಗಳ ಕೇಂದ್ರವೆಂದು ಪ್ರಸಿದ್ಧಗೊಂಡ ಸ್ಥಳಗಳಾಗಿದ್ದವು. ಅಬೂ ಝೈದ್, ಅಬುಲ್ ಖೈರ್, ಅಲ್ ಗಝ್ಝಾಲೀ ಯಂತಹ ಹಲವು ಪ್ರಮುಖ ಸೂಫಿಗಳು ಈ ಪ್ರದೇಶದವರೇ. ‘ಅತ್ತಾರ್’ ಎಂದರೆ ಸುಗಂಧ ದ್ರವ್ಯ ಎಂದರ್ಥ. ಸೂಫಿವರ್ಯರಾದ ಫರೀದುದ್ದೀನ್ ಆತ್ತಾರ್ (ರ) ರವರ ತಂದೆ ಸುಗಂಧ ವ್ಯಾಪಾರಿಯಾಗಿದ್ದರು. ತದನಂತರ ಮಗನೂ ತಂದೆಯ ವೃತ್ತಿಯನ್ನೇ ಹಿಡಿದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದರಿಂದ ಬದುಕಿನ ಸಿಂಹಪಾಲನ್ನು ಅವರು ತಾಯಿಯ ಜೊತೆಯಲ್ಲಿ ಕಳೆದರು. ತಾಯಿಯ ಜೊತೆಗಿದ್ದ ಸಮಯದ ಸಂತೋಷ, ಸಂತೃಪ್ತಿಯನ್ನು ನಂತರದ ತಮ್ಮ ಬರವಣಿಗೆಯಲ್ಲಿ ಅವರು ಉಲ್ಲೇಖಿಸಿದ್ದಾರೆ. ಅಧ್ಯಾತ್ಮದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ತಾಯಿಯಿಂದ ಆಧ್ಯಾತ್ಮಿಕತೆಯ ಪ್ರಭೆಯನ್ನು ಪಡೆದರು.
ಸುಗಂಧ ದ್ರವ್ಯದ ವ್ಯಾಪಾರದ ಜೊತೆಗೆ ರೋಗಿಗಳನ್ನು ಶುಶ್ರೂಷೆ ಮಾಡಿ ಔಷಧಿಗಳನ್ನು ನೀಡುತ್ತಾ ಬದುಕು ಸಾಗಿಸಿದರು. ತಮ್ಮ ಅಂಗಡಿಯಿಂದಲೇ ಅರ್ಥಗರ್ಭಿತವಾದ ಸೂಫಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಸುಗಂಧ ವ್ಯಾಪಾರದಲ್ಲಿ ಹೆಚ್ಚು ನಿರತರಾದ ಸಂದರ್ಭದಲ್ಲಾಗಿತ್ತು ತನ್ನ ಜೀವನದ ಅತಿ ಮಹತ್ವದ ಫಟನೆಯೊಂದು ನಡೆಯುವುದು. ಒಮ್ಮೆ ‘ದರ್ವೀಶ್ ಅಕ್ತಾರ್’ ಎಂಬವರು ಅವರ ಅಂಗಡಿಯ ಮುಂದೆ ಬಂದು ನಿಂತು ಅಲ್ಲಿದ್ದ ವಸ್ತುಗಳಿಗೆ ದಿಟ್ಟಿಸಿ ನೋಡುತ್ತಾ ಚಕಿತನಾಗಿ ನಿಂತರು. ತನ್ನ ಅಂಗಡಿಯ ಮುಂದೆ ನಿಂತು ಗ್ರಾಹಕರಿಗೆ ತೊಂದರೆಯಾಗುವುದನ್ನು ಅರಿತ ಅತ್ತಾರ್ ರವರು ಅವರೊಂದಿಗೆ ಅಲ್ಲಿಂದ ಹೊರಡಲು ಹೇಳಿದರು. ಅದಕ್ಕೆ ಉತ್ತರವಾಗಿ ದರ್ವೀಷ್,
“ಹೋಗಲು ನನಗೆ ಅಭ್ಯಂತರವೇನೂ ಇಲ್ಲ. ನನ್ನ ಮಾಲು ಅತೀ ವಿರಳವಾಗಿದೆ. ಈ ಚಿಂದಿ ಬಟ್ಟೆಯನ್ನಲ್ಲದೆ ಇನ್ನೇನನ್ನೂ ನನಗೆ ಒಯ್ಯಲಿಕ್ಕಿಲ್ಲ. ಆದರೆ ಇಷ್ಟೊಂದು ಭಾರೀ ಪ್ರಮಾಣದ ವಸ್ತುಗಳ ಒಡೆಯರಾದ ತಾವು, ತಮ್ಮ ಅಂತ್ಯದಲ್ಲಿ ಅವನ್ನೆಲ್ಲ ಹೇಗೆ ಒಯ್ಯುವಿರಿ? ನಾನಾದರೆ, ಈ ನಶ್ವರ ಲೋಕದ ಸಂತೆಯಿಂದ ಬಹಳ ಬೇಗನೇ ಹೋಗಬಲ್ಲವನಾಗಿದ್ದೇನೆ. ನೀವಾದರೆ ನಿಮ್ಮ ಮಾಲನ್ನು ಕಟ್ಟುವುದರಲ್ಲೇ ನಿರತರಾಗಬೇಕಾಗಬಹುದು. ಆದ್ದರಿಂದ ನಿಮ್ಮ ಅಂತ್ಯದ ಬಗ್ಗೆ ಸ್ವಲ್ಪ ಧ್ಯಾನಿಸುವುದು ಒಳಿತೆನಿಸುತ್ತದೆ”.
ಇಷ್ಟು ಹೇಳಿ ಅವರು ಅಲ್ಲಿಯೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದರು. ಈ ಫಟನೆ ಅತ್ತಾರರ ಮನವನ್ನು ಗಟ್ಟಿಯಾಗಿ ಕುಲುಕಿತು. ಅಲ್ಲಿಂದ ಅತ್ತಾರರು ತನ್ನೆಲ್ಲಾ ವ್ಯಾಪಾರ ವಹಿವಾಟನ್ನು ತ್ಯಜಿಸಿ ಸೂಫೀ ಲೋಕಕ್ಕೆ ಪ್ರವೇಶಿಸಿದರು.
ವಂದ್ಯ ಗುರು ರುಕ್ನುದ್ದೀನ್ ಅಕ್ಕಲರ ಶಿಕ್ಷಣದೊಂದಿಗೆ ಫರೀದುದ್ದೀನ್ ಅತ್ತಾರರು ಧ್ಯಾನ ನಿರತರಾದರು. ಜೀವನದ ದೃಷ್ಟಿಕೋನವನ್ನು ಬದಲಿಸಲು ಅವರಿಗದು ನೆರವಾಯಿತು. ತನ್ನ ಗುರುವರ್ಯರ ಇತರ ಶಿಷ್ಯಂದಿರೊಂದಿಗೆ ಕೆಲವು ಕಾಲ ಕಳೆದ ಅವರಿಗೆ ಪವಿತ್ರ ಮಕ್ಕಾಗೆ ತೆರಳುವ ಅವಕಾಶ ಒದಗಿ ಬಂತು. ಒಂದೇ ಸ್ಥಳದಲ್ಲಿ ಕೂತು ಬರೆಯುವ ಮತ್ತು ಕಲಿಸುವ ಮುನ್ನ ಹಲವು ಯಾತ್ರೆಗಳನ್ನು ಸೂಫಿಗಳು ಕೈಗೊಳ್ಳುತ್ತಾರೆ. ಅತ್ತಾರರೂ ಇದಕ್ಕೆ ಭಿನ್ನರಾಗಿರಲಿಲ್ಲ. ನಿಷಾಪೂರಿನಲ್ಲಿ ನೆಲೆಸುವುದಕ್ಕೂ ಮುನ್ನ ರಯ್ಯ್, ಕೂಫಾ, ಡಮಸ್ಕಾಸ್, ಈಜಿಪ್ತ್, ಭಾರತ, ತುರ್ಕಿಸ್ತಾನ ಮುಂತಾದ ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಏಕಾಂತ ವಾಸವನ್ನು ಅವರೇ ತಮ್ಮ ಬರವಣಿಗೆಯಲ್ಲಿ ತಿಳಿದ್ದಾರೆ: “ಹೃದಯ ದುಃಖದಿಂದ ನಾನು ಕರಗಿದೆ. ನನ್ನ ಅಕ್ಕಪಕ್ಕದವರು ನನ್ನನ್ನು ಪರಿಗಣಿಸಲಿಲ್ಲ. ನಾನು ಒಂಟಿಯಾಗಿ ದುಃಖಿತನಾದೆ. ಧಾರಾಕಾರವಾಗಿ ಕಣ್ಣೀರು ಹರಿಯಿತು. ಹಲವು ಬಾರಿ ನನ್ನ ಅತಿಥಿಯಾಗಿ ಜಿಬ್ರೀಲ್ (ಅ)ಬಂದಿದ್ದರು. ಅಲ್ಲಾಹನು ನನ್ನ ಬಳಿ ಇರುವಾಗ ಕ್ಷುಲ್ಲಕನಾದ ಇನ್ನೊಬ್ಬನೊಂದಿಗೆ ನಾನು ಯಾಕೆ ರೊಟ್ಟಿ ಹಂಚಿಕೊಳ್ಳಲಿ? ಈ ರೊಟ್ಟಿಯೇ ನನ್ನ ಪೋಷಕಾಹಾರ. ತೃಪ್ತಿಗೊಂಡ ಹೃದಯ ಆತ್ಮಕ್ಕೆ ಹೊಸ ಜೀವನವನ್ನೇ ಕೊಡುತ್ತಿದೆ. ನೀಚನಾದ ಒಬ್ಬನೊಂದಿಗೆ ನಾನೇಕೆ ಗುಲಾಮನಾಗಿರಲಿ? ಅಲ್ಲದಿದ್ದರೆ ನನ್ನ ಹೃದಯ ಅಧೀನಪಡಿಸಲು ಅವನನ್ನೇಕೆ ಸಂಪರ್ಕಿಸಲಿ? ನಾನು ಒಮ್ಮೆಯೂ ಒಬ್ಬ ಸರ್ವಾಧಿಕಾರಿಯ ಆಹಾರ ಉಂಡವನಲ್ಲ. ಅಂತಹ ಒಬ್ಬನಿಗೂ ನನ್ನ ಅಭಿಮಾನವನ್ನು ಮಾರಿದವನಲ್ಲ. ಆತ್ಮದ ಬಲವೇ ನನ್ನ ಶರೀರವನ್ನು ಉಳಿಸಿಕೊಳ್ಳುವುದು.”

ಅತ್ತಾರವರು ತನ್ನ ಪ್ರಯಾಣದ ಮಧ್ಯೆ ಆನೇಕ ಸೂಫಿ ಸಂತರನ್ನು ಕಂಡರು. 39 ವರ್ಷಗಳ ಕಾಲ ಸೂಫಿಗಳ ಮಾತು, ಕಾವ್ಯ ಸಂಗ್ರಹ, ಅವರ ಜೀವನ, ಆಚಾರ ವಿಚಾರಗಳ ಮಾಹಿತಿ ಸಂಗ್ರಹದಲ್ಲಿ ಸಮಯ ವ್ಯಯಿಸಿದರು. ಇದೇ ಕಾರಣದಿಂದ ಆ ಕಾಲಘಟ್ಟದ ಇತರ ಸೂಫಿಗಳಿಗಿಂತ, ಸೂಫೀ ಬರಹಗಾರರಿಗಿಂತ ಅವರ ತಾತ್ವಿಕ ಚಿಂತನೆಯು ಅತ್ಯದ್ಭುತವಾಗಿ ಮೂಡಿಬಂತು. ತಮ್ಮ ಜೀವನದ ಕೊನೆಯ ಕಾಲವನ್ನು ಏಕಾಂತದಿಂದ ಕಳೆಯಲಾರಂಭಿಸಿದರು. ಯಾರಿಗಾಗಿಯೂ ಬಾಗಿಲನ್ನು ತೆರೆದುಕೊಡುತ್ತಿರಲಿಲ್ಲ. ಆದರೆ, ಆಧ್ಯಾತ್ಮಿಕ ಸಲಹೆಯನ್ನು ಅರಸಿ ಬಂದವರನ್ನು ಬರಿಗೈಯ್ಯಲ್ಲಿ ಕಳುಹಿಸುತ್ತಿರಲಿಲ್ಲ.
ತಮ್ಮ ಏಕಾಂತದಲ್ಲಿ ಅಲ್ಲಾಹನ ಅಸ್ತಿತ್ವದ ಆಲೋಚನೆಯಲ್ಲಿ ಮುಳುಗಲಾರಂಭಿಸಿದರು.
ಅತ್ತಾರರ ಅಂತಿಮಯಾತ್ರೆಯು ಕ್ರಿ. ಶ 1229 -30 ರಲ್ಲಿ ನಿಷಾಪೂರಿನಲ್ಲಿ ನಡೆದ ಮಂಗೋಲಿಯನ್ನರ ಆಕ್ರಮಣದ ವೇಳೆಯಲ್ಲೆಂದು ಇತಿಹಾಸಕಾರರ ಅಭಿಪ್ರಾಯ. ಒಬ್ಬ ಮಂಗೋಲಿಯನ್ನನು ಅವರನ್ನು ಬಂಧಿಸಿ ಕೊಲ್ಲಲಣಿಯಾದಾಗ ಮತ್ತೊಬ್ಬ ಮಂಗೋಲಿಯನು ಅವರನ್ನು ಬಿಡುಗಡೆ ಮಾಡಿದರೆ 1000 ಬೆಳ್ಳಿನಾಣ್ಯ ಕೊಡುವೆನೆಂದು ಘೋಷಿಸಿದನು. ಆ ಘೋಷಣೆಯನ್ನು ಕೇಳಿ ಬೇರೆ ಯಾರಾದರು ಅದಕ್ಕಿಂತ ಹೆಚ್ಚು ಕೂಗಬಹುದೆಂದು ಬಿಟ್ಟು ಕೊಡದೆ ಅವನನ್ನು ಅಲ್ಲಿಂದ ಅಟ್ಟಿದನು. ಹಾಗೆ ಅವನು ಅಲ್ಲಿಂದ ಮರಳಿದನು. ಮತ್ತೊಮ್ಮೆ ಕೊಲ್ಲಲು ಮುಂದಾದಾಗ ದಾರಿಹೋಕನೊಬ್ಬ ಘೋಷಣೆ ಕೂಗಿದ. ಆದರೆ ಈ ಬಾರಿಯ ಘೋಷಣೆ ಒಂದು ಚೀಲ ಒಣಹುಲ್ಲು ಮಾತ್ರವಾಗಿತ್ತು. ‘ಅವರ ಘೋಷಣೆಯನ್ನು ಸ್ವೀಕರಿಸಿರಿ ಇದುವೇ ನನ್ನ ನೈಜ ಬೆಲೆ’ ಎಂದು ಅತ್ತಾರರು ಅವರನ್ನು ಬೇಡಿಕೊಂಡರು. ಕುಪಿತನಾದ ಮಂಗೋಲಿಯನ್ ಅವರನ್ನು ಕೊಂದೇ ಬಿಟ್ಟನು. ಶಾದ್ ಬಾಕ್ಕಿನ ಗೇಟಿನ ಹೊರಗೆ ಫರೀದುದ್ಧೀನ್ ಅತ್ತಾರರ ಸಮಾಧಿ ಇದೆ. ಕಾಲಾಂತರದಲ್ಲಿ ಅವರ ಸಮಾಧಿ ಧ್ವಂಸಗೊಳಿಸಲ್ಪಟ್ಟಿತ್ತು. ಆಮಿರ್ ಶಾಹ್ ಅದನ್ನು ಪುನರ್ ನಿರ್ಮಿಸಿ, ಮನೋಹರವಾದ ಒಂದು ಸ್ಮಾರಕವನ್ನು ಅಲ್ಲಿ ಕಟ್ಟಿದನು. ಅತ್ತಾರರ ಜೀವನದ ಸಿಂಹಪಾಲು ಸಾಹಿತ್ಯ ರಚನೆಗೆ ಮೀಸಲಾಗಿತ್ತು. 30ರಷ್ಟು ಮಹಾ ಸಾಹಿತ್ಯ ಕೃತಿಗಳನ್ನು ಅವರು ರಚಿಸಿದರು. ಅದರಲ್ಲಿ ‘ತದ್ಕಿರತುಲ್ ಔಲಿಯಾ’ ಮಾತ್ರವಾಗಿದೆ ಗದ್ಯವಾಗಿ ಕಾಣಸಿಗುವುದು. ಹಲವಾರು ಸಣ್ಣ ಪುಟ್ಟ ಕವಿತೆಗಳನ್ನೂ ಅವರು ರಚಿಸಿದ್ದಾರೆ. ಕವಿಯಾಗಿದ್ದರೂ, ತತ್ವಜ್ಞಾನದಲ್ಲೂ ಅಧ್ಯಾತ್ಮ ಚಿಂತನೆಗಳಲ್ಲೂ ಖ್ಯಾತಿಪಡೆದರು. “ತದ್ಕಿರತುಲ್ ಔಲಿಯಾ’ ಗ್ರಂಥವು, ಸೂಫಿಗಳ ಜೀವನ ಮತ್ತು ಅವರ ಅಧ್ಯಾಪನೆಗಳ ಕುರಿತು ಅಮೂಲ್ಯವಾದ ಜ್ಞಾನವನ್ನು ವಿವರಿಸುತ್ತದೆ. ಅತ್ತಾರ್ (ರ) ಕವಿತೆಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಕವಿತೆ “ಮಂತಿಕುತ್ತುಯೂರ್” ಆಗಿದೆ.

ಮಂತಿಕುತ್ತುಯೂರ್ (ಪಕ್ಷಿಗಳ ಸಂಭಾಷಣೆ):
ಸೃಷ್ಟಿಕರ್ತನೆಡೆಗಿನ ತೊಡಕುಗಳು ತುಂಬಿದ ಮಾರ್ಗದಲ್ಲಿ ಸೂಫಿಯೊಬ್ಬನ ಕ್ಷಮಾಪೂರ್ಣ ಪ್ರಯಾಣದ ಅಭಿವ್ಯಕ್ತಿಯಾಗಿದೆ “ಪಕ್ಷಿ ಸಂಭಾಷಣೆ” ಎಂಬ ಕವಿತೆಯಲ್ಲಿ ಮೂಡಿರುವುದು. ದೇವಸನ್ನಿಧಿಗೆ ತಲುಪುವಾಗ ದೊರಕುವ ಆಧ್ಯಾತ್ಮಿಕ ವಿಜಯವನ್ನೂ ಕವಿತೆ ಪ್ರತಿಪಾದಿಸುತ್ತಿದೆ. ಸೃಷ್ಟಿ ಕರ್ತನ ಸಾನಿಧ್ಯವಿರುವ ಆ ಸಂಗಮದಲ್ಲಿ ಆವರು ಅನಶ್ವರತೆಯನ್ನು ಪಡೆಯುತ್ತಾರೆ. ಸೂಫಿಸಂ ಸಂಬಂಧಿತ ಹಲವು ಸ್ವತಂತ್ರ ಕತೆಗಳು ಈ ಯಾತ್ರಾ ವಿವರಣೆಯಲ್ಲಿ ಕಾಣಬಹುದು.

ಪಕ್ಷಿಗಳ ಒಂದು ಗುಂಪು ಒಟ್ಟುಗೂಡಿ ಹೊಸ ರಾಜನ ಆಯ್ಕೆ ಮಾಡುವ ವೇಳೆಯನ್ನು ವಿವರಿಸುತ್ತ ‘ಪಕ್ಷಿ ಸಂಭಾಷಣೆ’ ಎಂಬ ಕಾವ್ಯವನ್ನು ಆರಂಭಿಸಲಾಗುತ್ತದೆ. ಹುದ್ ಹುದ್ (Hoopoe) ಅವರಲ್ಲಿ ಹೆಸರುವಾಸಿಯಾದ ಪಕ್ಷಿಯಾಗಿತ್ತು. ಪ್ರವಾದಿ ಸುಲೈಮಾನ್ ನಬಿಯವರು ಸಂದೇಶ ದೂತನಾಗಿ ಆಯ್ಕೆಮಾಡಿದ ಪಕ್ಷಿಯಾಗಿದೆ ಹುದ್ ಹುದ್. ಅದರ ತಲೆಯಲ್ಲಿ ವೈಭವದ ಸಂಕೇತವಾದ ಕಿರೀಟವಿತ್ತು. ನಮಗೊಂದು ನಾಯಕನಿದ್ದಾನೆಂದು ಹಾಗೂ ನಾವೆಲ್ಲರೂ ಅವನಿಗೆ ಸೇರಿದವರೆಂದು ಹುದ್ ಹುದ್ ಅವರೊಂದಿಗೆ ಹೇಳಿತು. ‘ಸಿಮುರ್ಗ್’ ಎಂದು ಅದರ ಹೆಸರು. ಆ
ಎಲ್ಲಾ ಪಕ್ಷಿಗಳ ರಾಜನಾದ ಸಿಮುರ್ಗ್ ಅವರ ಹತ್ತಿರವಿದ್ದರೂ ಅವರು ಅವನಿಂದ ದೂರದಲ್ಲಿದ್ದರು. ಅವನು ಎಲ್ಲಾ ವಿವರಣೆಗಳ ಜ್ಞಾನಿ, ಅವನಿಲ್ಲದೆ ಬದುಕಲು ಸಾಧ್ಯವಿಲ್ಲ. ನಾವು ಅವನನ್ನು ಕಾಣಲು ಬಲುದೂರ ಪ್ರಯಾಣಿಸಬೇಕು. ಅವನನ್ನು ಕಾಣಲು ಸಾಧ್ಯವಿಲ್ಲ ಎಂದರೆ ನಮ್ನ ಜೀವನ ಅಷ್ಟಕ್ಕಷ್ಟೇ. ಆ ಪ್ರಯಾಣವನ್ನು ಪೂರ್ಣಗೊಳಿಸಲು ಅತೀದೊಡ್ಡ ಪ್ರಮಾಣದ ಧೈರ್ಯ ಪರಿತ್ಯಾಗಗಳ ಅವಶ್ಯಕತೆ ಇದೆ. ಅಪಫಾತಗಳಿಂದ ಕೂಡಿದ ಕಣಿವೆಗಳನ್ನು ದಾಟಬೇಕಿದೆ. ಇದನ್ನು ಕೇಳಿದ ಪಕ್ಷಿಗಳು ದೂರದ ‘ಕಾಫ್’ ಪರ್ವತದಲ್ಲಿ ವಾಸಿಸುವ ಸಿಮುರ್ಗನ್ನು ಹುಡುಕಿ ಹೊರಡುವ ಆಸಕ್ತಿಯನ್ನು ತೋರಿದವು. ಅಲ್ಲಿಗೆ ತೆರಳಿ ಆ ಪಕ್ಷಿಗೆ ವಂದಿಸಲು ತೀಮಾ೯ನಿಸಿದವು. ದೇವರ ಮಾರ್ಗದಲ್ಲಿ ಜ್ಞಾನಿಯೂ, ವಿವೇಕಿಯೂ ಆದ ಹುದ್ ಹುದ್ ನನ್ನು ಯಾತ್ರಾ ನಾಯಕನಾಗಿ ಆಯ್ಕೆಮಾಡಿದರು. ಆದರೆ ಯಾತ್ರಾ ಮಧ್ಯೆ ಸಹಿಸಬೇಕಾದ ಆಯಾಸವನ್ನು, ಅಪಾಯಗಳನ್ನು ಹುದ್ ಹುದ್ ವಿವರಿಸಿದಾಗ ಮೆಲ್ಲ ಮೆಲ್ಲನೆ ಒಂದೊಂದೆ ಪಕ್ಷಿಗಳು ನೆಪ ಹೂಡಿ ಹಿಂದೆ ಸರಿಯತೊಡಗಿದವು. ನೈಟಿಂಗೇಲ್ ಪಕ್ಷಿಯು, “ಗುಲಾಬಿಯನ್ನು ಅತಿಯಾಗಿ ಪ್ರೀತಿಸುವೆನೆಂದೂ ಅದನ್ನು ಬಿಟ್ಟುಬರಲು ಸಾಧ್ಯವಿಲ್ಲ” ವೆಂದೂ ತಿಳಿಸಿತು. ನಶ್ವರವಾದ ಸೌಂದರ್ಯದಲ್ಲಿ ಆಕರ್ಷಣೆಗೊಳ್ಳದೆ ಅನಂತವಾದ ಸೌಂದರ್ಯವನ್ನು ಇಷ್ಣಪಡಲು ಹುದ್ ಹುದ್ ಅವರನ್ನು ಉಪದೇಶಿಸಿತು. ತಾನು ಪಂಜರದಲ್ಲಿ ಬಂಧಿಸಲ್ಪಟ್ಟಿದ್ದೇನೆಂದೂ ನನಗೆ ಹೊರಬರುವ ಸ್ವಾತಂತ್ರ್ಯ ಇಲ್ಲವೆಂದು ಗಿಳಿ ಹೇಳಿತು. ಅಷ್ಟು ದೊಡ್ದ ಹುಡುಕಾಟದ ಅಗತ್ಯವೇನಿದೆ ಎಂದು ನವಿಲು ವಾದಿಸಿತು. ಜಲವಿದ್ದರೆ ಮಾತ್ರ ನನಗೆ ಸಂತೋಷವೆಂದು ಬಾತುಕೋಳಿ ಹೇಳಿದರೆ, ನನಗೆ ಬೆಟ್ಟಗುಡ್ಡಗಳಿರಬೇಕೆಂದು ಗಿಳಿಯು ಹೇಳಿತು. ಕೊಕ್ಕರೆಯು ತಾನು ಬಳುಕುತ್ತ ನಡೆಯಲು ಕಲಿತ ಕೆರೆಯು ಬೇಕೆಂದು ಹೇಳಿತು. ಗೂಬೆಗೆ ತಾನು ನೆಲೆಸಿರುವ ನಿರ್ಜನ ಮನೆಗಳು ಬೇಕಿತ್ತು. ರಾಜನ ಜೊತೆಗೆ ಬೇಟೆಯಾಡುವಾಗ ಸಿಗುವ ಪ್ರತಾಪವನ್ನು ಕೈಚೆಲ್ಲಲು ಫಾಲ್ಕನ್ ತಯಾರಿರಲಿಲ್ಲ. ಈ ಎಲ್ಲಾ ಸಾಮರ್ಥ್ಯ, ಅಸಾಮರ್ಥ್ಯಗಳು ಸೃಷ್ಟಿಕರ್ತನ ಅನುಸರಣೆ ಮಾಡಬೇಕಾದ ಮನುಷ್ಯನ ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ. ಇಂತಹ ಕಾರ್ಯಕ್ಕೆ ಸಮಯ ಕಳೆಯುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ಹಲವು ಕತೆಗಳ ಮೂಲಕ ಹುದ್ ಹುದ್ ಅವರಿಗೆ ಮನದಟ್ಟುಮಾಡಿಕೊಟ್ಟಿತು.
ಹುದ್ ಹುದಿನ ಮಾರ್ಮಿಕ ಮಾತಿಗೆ ಅವರೆಲ್ಲರೂ ತಲೆದೂಗಿದರು. ತದನಂತರ ಸಿಮುರ್ಗ್ ನೊಂದಿಗಿನ ನಮ್ಮ ನೈಜ ಸಂಬಂಧವೇನೆಂದು ಅವರು ಕೇಳಿದರು. “ಒಮ್ಮೆ ಸಿಮುರ್ಗ್ ಗೆ ತನ್ನ ಮುಖದಲ್ಲಿ ಮರೆಯನ್ನು ತೆರೆಯುವ ಅವಕಾಶ ಬಂತು. ಆ ಸಮಯದಲ್ಲಿ ಮುಖದಿಂದ ಹೊರಚಿಮ್ಮಿದ ಪ್ರಕಾಶ ಕಿರಣಗಳು ನಂತರ ಪಕ್ಷಿಗಳಾಗಿ ಬದಲಾದವು” ಎಂದು ಹುದ್ ಹುದ್ ಹೇಳಿತು. ಆದ್ದರಿಂದಲೇ ನಾವೆಲ್ಲರೂ ಮೂಲಭೂತವಾಗಿ ಅವನಿಗೆ ಸೇರಿದವರು ಎಂದಿತು.

7 ಕಣಿವೆಯಲ್ಲಿ ಮೊದಲನೆಯದು ಹುಡುಕಾಟದ ಕಣಿವೆಯಾಗಿದೆ. ಆ ಹಂತದಲ್ಲಿ ನಿರಂತರ ಕಷ್ಟ ನಷ್ಟಗಳನ್ನು ಎದುರಿಸಬೇಕಾಗಬಹುದು. ಅಲ್ಲದೆ ಈ ಹಂತದಲ್ಲಿ ಭೌತಿಕವಾದ ಎಲ್ಲವನ್ನೂ ತ್ಯಜಿಸಬೇಕಾಗಬಹುದು. ಲೌಕಿಕವಾದ ಎಲ್ಲದರಿಂದಲೂ ಮುಕ್ತಿ ಪಡೆಯಬೇಕು. ಹಾಗೆಯೇ ಸಕಲ ಲೌಕಿಕತೆಯಿಂದಲೂ ಮುಕ್ತಿ ಹೊಂದುವಾಗ, ಪೂರ್ಣವಾಗಿ ಸ್ವಂತಿಕೆ ನಶಿಸಿ ಹೋಗುವಾಗ ದಿವ್ಯ ಪ್ರಕಾಶದಿಂದ ಪ್ರಬುದ್ಧತೆ ಹೊಂದಬಹುದು. ಕೇವಲ ಒಂದಲ್ಲ ಸಾವಿರ ಪಟ್ಟು ಅನ್ವೇಷಣಾ ಗುಣಗಳು ತನ್ನಲ್ಲಿರಬೇಕೆಂದು ಅರಿಯುವನು. ಆದರೆ ಅನಶ್ವರತೆಯ ಒಡೆಯನು ಅವನಿಗೆ ಮರೆವಿನ ಪಾನೀಯ ನೀಡುವನು. ಹಾಗೆ ಅವನು ಬರುವ ಕಂಟಕವನ್ನು ನೆನೆಯದೆ ಮುಂದೆ ಸಾಗುವನು. ಎರಡನೆಯದು ಪ್ರೀತಿಯ ಕಣಿವೆಯಾಗಿದೆ. ಈ ಘಟ್ಟದಲ್ಲಿ ಪ್ರಯಾಣಿಕನ ಆತ್ಮವು ತನ್ನ ಪ್ರಿಯತಮೆಯನ್ನು ಕಾಣುವ ಅತಿಯಾದ ಮೋ‌ಹದಲ್ಲಿ ಸ್ವಯಂ ಇಲ್ಲದೇ ಆಗುವನು. ಅದರಿಂದ ಒಂದುವೇಳೆ ಅವನು ಶೂನ್ಯತೆಯನ್ನು ಎದುರಿಸಬೇಕಾಗುತ್ತದೆ. ಅವನು ಒಳಿತು ಕೆಡುಕು ಎಂಬುದೇನೆಂದು ಬಲ್ಲವನಲ್ಲ. ಇಲ್ಲಿ ಅವನ ವೈಚಾರಿಕ ಚಿಂತನೆ ನಷ್ಟ ಹೊಂದುವುದು. ಬೆಂಕಿಗೆ ಹೊಗೆ ಇದ್ದ ಹಾಗೆ ಸ್ನೇಹಕ್ಕೆ ವಿಚಾರ ಎಂಬುದು. ಅನಶ್ವರವಾದವನೊಂದಿಗಿನ ಪ್ರೀತಿ ಕಾರಣದಿಂದ, ಅಲ್ಲಿಯವರೆಗೆ ಅವನು ಅನುಭವಿಸಿದ ಸಾವಿರ ಪಟ್ಟು ಜೀವನಸುಖವನ್ನು ಕಿತ್ತೆಸೆಯುವ ಒತ್ತಡಕ್ಕೊಳಗಾಗುವನು.
ಮೂರನೇ ಕಣಿವೆ ಜ್ಞಾನದ ಕಣಿವೆ. ಅದಕ್ಕೆ ಪ್ರಾರಂಭವೋ ಅಂತ್ಯವೋ ಇಲ್ಲ. ಇಲ್ಲಿ ತತ್ವಜ್ಞಾನದ ಸೂರ್ಯ ಪ್ರಕಾಶಭರಿತವಾಗಿ ನಿಲ್ಲುವನು. ಆ ಪ್ರಕಾಶವನ್ನು ಸ್ವೀಕರಿಸಲು ಪ್ರಯಾಣಿಕನು ಆತ್ಮೀಯ ಜ್ಞಾನದ ಅನುಸಾರವಾಗಿ ಪ್ರಬುದ್ಧತೆ ಪಡೆಯುವನು. ಅಲ್ಲಿ ಎಲ್ಲಾ ರಹಸ್ಯಗಳು ಬೆಳಕು ಕಾಣುವುದು.
ನಿಗೂಢತೆಗಳ ಮರೆ ಸರಿಯುತ್ತದೆ. ಚಿಂತಾಮಗ್ನರಾದ ಅದೆಷ್ಟೋ ಜನರು ಎಲ್ಲಿಯೂ ನೆಲೆಯೂರದೆ ನಷ್ಟ ಹೊಂದುವುದೂ ಇಲ್ಲೇ ಆಗಿದೆ. ಪೂರ್ಣವಾಗಿ ಅರ್ಥವಾದವರಿಗೆ ಸ್ವಂತದ ಬಗ್ಗೆ ಚಿಂತೆಯಿಲ್ಲ. ಅವನು ಪ್ರಣಯವನ್ನಲ್ಲದೆ ಬೇರೇನೂ ಕಾಣನು. ಎತ್ತ ನೋಡಿದರೂ ಅವನು ಸೃಷ್ಟಿಕರ್ತನ ಮುಖವನ್ನೇ ಕಾಣುವನು.
ನಾಲ್ಕನೆಯದು ಅಗಲಿಕೆಯ ಕಣಿವೆಯಾಗಿದೆ. ಇಲ್ಲಿ ಯಾತ್ರಿಕನು ಸಕಲ ಸಂಬಂಧಗಳಿಂದ ಮುಕ್ತನಾಗುವನು. ದಿವ್ಯ ನಿಗೂಢತೆಯನ್ನು ತಿಳಿಯಲಿರುವ ಅಭಿಲಾಷೆಯನ್ನು ಕೂಡಾ ಅವನು ಉಪೇಕ್ಷಿಸುವನು. ಹಾಗೆ ಅವನು ದೈವಿಕ ಅನಂತತೆಯನ್ನು ತಿಳಿಯುವನು. ಎಲ್ಲವನ್ನೂ ಆವರಿಸುವ ದೈವಿಕ ಪ್ರಕಾಶವಮ್ನ ತಿಳಿದು ಅದರೊಂದಿಗೆ ಹೋಲಿಸುವಾಗ ಇತರ ಸಂಗತಿಗಳು ಏನೂ ಅಲ್ಲ ಎಂಬ ಪರಿಜ್ಞಾನ ಪಡೆದು ಮನಪರಿವರ್ತನೆಗೊಳ್ಳುವನು.

ಐದನೆಯದು ಏಕೀಕರಣದ ಕಣಿವೆ. ಅಲ್ಲಿಂದ ಎಲ್ಲವೂ ಒಂದಾಗಿ ಏಕತೆ ಪೂರ್ಣಗೂಳ್ಳುತ್ತದೆ. ನಂತರದ ಲೆಕ್ಕಕ್ಕೊ ವಿಶೇಷತೆಗೋ ಅಲ್ಲಿ ಬೆಲೆಯಿಲ್ಲ. ಜೀವನ ಮರಣ ಎಂಬೀ ವ್ಯತ್ಯಾಸವಿಲ್ಲ. ಕಾಲ, ಅನಶ್ವರತೆಗಳೆರಡೂ ಒಂದಾಗುತ್ತವೆ. ಇಲ್ಲಿ ನೈಜ ಅಸ್ತಿತ್ವ ಪ್ರಕಟಗೊಳ್ಳುತ್ತದೆ. ಸಕಲವನ್ನೂ ಆವರಿಸಿದ, ಪ್ರಾರಂಭವೋ ಕೊನೆಯೋ ಇಲ್ಲದ ಅವನು ಎಂದೆಂದಿಗೂ ಅನಶ್ವರನೂ, ನೆಲೆಯಿರುವವನೂ ಆಗಿದ್ದಾನೆ. ಎಲ್ಲವೂ ಒಂದಾಗಿ ಕೊನೆಗೊಳ್ಳುವಾಗ ಮತ್ತೊಂದರ ಕುರಿತ ಮಾತೇ ಬರದು. ಅಲ್ಲಿ ನಾನು ನೀನು ಎಂಬ ಭಾವವೇ ಇಲ್ಲ.
ಆರನೇಯದು ಸಂಭ್ರಮದ ಕಣಿವೆ. ಪರಿಪೂರ್ಣ ಏಕಾಂತವನ್ನು ಒಳಗೊಂಡ ಪ್ರಯಾಣಿಕನು ತನ್ನ ಕುರಿತ ಪ್ರಜ್ಞೆ ಇಲ್ಲದಾಗ ಸ್ವಂತಿಕೆ ಪೂರ್ಣವಾಗಿ ನಷ್ಟಹೊಂದುತ್ತದೆ. ಯಾರಾದರು ಅವರೊಂದಿಗೆ ನೀವು ನೆಲಗೂಳ್ಳುವರೋ ? ನೀವು ಒಳಗೋ ಹೊರಗೋ ? ನೀವು ಪ್ರತ್ಯಕ್ಷರೋ, ಪರೋಕ್ಷರೋ? ನೀವು ಜೀವಿಸುವವರೋ, ನಶಿಸುವವರೋ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರೆ ನನಗೆ ಏನೂ ತಿಳಿಯದು. ಯಾವುದರ ಕುರಿತೂ ತಿಳಿಯದು. ನನಗದು ಗೊತ್ತೋ ಇಲ್ಲವೋ ಎಂಬುವುದೂ ನನಗರಿಯದೆಂದು ಉತ್ತರಿಸುವರು. ಅವನು ಪ್ರೀತಿಸುತ್ತಿದ್ದಾನೋ ಇಲ್ಲವೋ ಎಂಬುದನು ಅವನು ಅರಿಯನು. ಒಂದೇ ಸಮಯಕ್ಕೆ ಅವನ ಹೃದಯವು ಪ್ರೀತಿಪೂರ್ಣವೂ, ಪ್ರೀತಿ ಶೂನ್ಯವೂ ಆಗಿ ಬದಲಾಗುವುದು.
ಏಳನೇ ಕಣಿವೆ ಎಲ್ಲಾ ರೀತಿಯ ವಿವರಣೆಗಳಾಚೆಗಿನ ನಿರ್ಮೂಲನೆಯದಾಗಿದೆ. ಅದು ಮರೆವು, ಕುರುಡುತನ, ಮೂಕತೆ, ಶ್ರವಣ ಶೂನ್ಯತೆ, ಪ್ರಜ್ಞಾಹೀನತೆಯನ್ನು ಸೂಚಿಸುತ್ತದೆ. ಅನಂತತೆಯ ಮಹಾಸಾಗರದಲ್ಲಿ ಈಜಾಡುವನು. ಸ್ವತಃ ನಿರ್ಮೂಲನೆಗೊಂಡು ಲೀನವಾಗಿ
ಶಾಂತಚಿತ್ತನಾಗುವನು. ಪ್ರಶಾಂತತೆಯ ನೀರವತೆಯಲ್ಲಿ ಅವನು ಶೂನ್ಯತೆ, ವಿಸ್ಮೃತಿಯನ್ನು ಕಂಡುಕೊಳ್ಳುವನು. ಆ ಮಹಾಸಾಗರದಲ್ಲಿ ಮುಳುಗುವವನು ಸ್ವಯಂ ಅಸ್ತಿತ್ವವನ್ನು ತೋರ್ಪಡಿಸುವುದಿಲ್ಲ. ಅವನಿದ್ದಾನೆ ಅಂದರೆ ಅವನಿಲ್ಲ.
ಸಿಮುರ್ಗನ್ನು ಹುಡುಕಿ ಹೊರಟ ಯಾತ್ರೆಯ ಕೊನೆಗೆ ಮೂವತ್ತು ಪಕ್ಷಿಗಳು ಮಾತ್ರ ಬಾಕಿ ಉಳಿದವು. ಅತೀ ಯಾತನೆ ತುಂಬಿದ ಯಾತ್ರಾಂತ್ಯದಲ್ಲಿ ಸಹಿಲಸಾಧ್ಯವಾದ ಗಾಯದಿಂದಲೂ, ಆಯಾಸದಿಂದಲೂ, ಹೃದಯನೋವಿನಿಂದಲೂ ರಾಜನ ಆಸ್ಧಾನಕ್ಕೆ ತಲುಪಿದರು. ಅರಮನೆಯ ಹತ್ತಿರ ಸಮೀಪಿಸಿದಾಗ, ನಾವು ಎಣ್ಣೆದೀಪದ ಸುತ್ತ ಹಾರುವ ಕ್ರಿಮಿ ಕೀಟಗಳೆಂದು ತಮ್ಮನ್ನು ಭಾವಿಸಿದರು. ಸಾಮಿಪ್ಯಕ್ಕನುಸಾರವಾಗಿ ಪ್ರಣಯದಿಂದ ಅವರು ಸ್ವತಃ ಇಲ್ಲದಾಗುವರು. ಕೊನೆಗೆ ತಾವು ಹುಡುಕಿ ಹೊರಟ ಸಿಮುರ್ಗ್ ತಾವು ಎಂದೇ ಅವುಗಳಿಗೆ ಅರಿವಾಗುತ್ತದೆ. “ಸಿ” ಎಂದರೆ ಮೂವತ್ತು ಹಾಗೂ “ಮುರ್ಗ್” ಎಂದರೆ ಪಕ್ಷಿಯೆಂದು ಅರ್ಥ. ಅವರು ಸ್ವಯಂ ಇಲ್ಲವಾಗಿ ಎಲ್ಲರೂ ಹುಡುಕಿ ಹೊರಟ ಸಿಮುರ್ಗ್ ಆಗಿ ಬಿಟ್ಟರು. ಸೃಷ್ಟಿಕರ್ತನೆಡೆಗೆ ಸಾಗುವ ಸೂಫಿ ಬರಲಿರುವ ದುರ್ಬಲ, ಕಠಿಣ ದಾರಿಯಲ್ಲಿ ಸ್ವಂತಿಕೆಯನ್ನು ನಿರ್ಮೂಲನೆ ಮಾಡಿ ದೇವರಲ್ಲಿ ಲೀನವಾಗಿ ಸಕಲದರ ಭಾಗವಾಗಿ ಮಾರ್ಪಾಡುವರು. ಕೊನೆಗೆ ಅವನು ಏನೂ ಅಲ್ಲದ ಎಲ್ಲವೂ ಆಗಿ ಬಿಡುವನು.

ಮೂಲ : ನವಾಲ್ ಅಬ್ದುಲ್ಲಾ
ಅನುವಾದ : ಅಕ್ಮಲುದ್ದೀನ್, ಮರ್ಕಝುಲ್ ಹಿದಾಯ ಕೊಟ್ಟಮುಡಿ, ಕೊಡಗು

Leave a Reply

*