ಹುಟ್ಟುಹಬ್ಬ

ಮಕರ ೮ನೇ ದಿನ, ಇಂದು ನನ್ನ ಜನ್ಮ ದಿನ. ಮಾಮೂಲಿಗೆ ವಿರುದ್ಧವಾಗಿ ಬೆಳ್ಳಂಬೆಳಗ್ಗೆ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿದೆ. ಇವತ್ತಿಗಾಗಿಯೇ ತೆಗೆದಿಟ್ಟಿದ್ದ ಖಾದಿ ಶರ್ಟ್, ಬಿಳಿ ಬಣ್ಣದ ಖಾದಿ ಲುಂಗಿ, ಬಿಳಿಯ ಕ್ಯಾನ್ವಾಸ್ ಶೂಸ್ ಧರಿಸಿ ಕೋಣೆಯಲ್ಲಿ, ಭಗ್ನ ಹೃದಯದೊಂದಿಗೆ ನನ್ನ ಆರಾಮ ಕುರ್ಚಿಯಲ್ಲಿ ಅಂಗಾತ ಮಲಗಿದ್ದೆ. ಬೆಳ್ಳಂಬೆಳಗ್ಗೆಯೇ ನನ್ನನ್ನು ಕಂಡು ನನ್ನ ಕೋಣೆಯ ಸಮೀಪದಲ್ಲಿ ಉಳಕೊಂಡಿರುವ ಬಿ.ಎ. ವಿದ್ಯಾರ್ಥಿ ಮ್ಯಾಥ್ಯೂ ಚಕಿತರಾದರು. ಅವರು ಮುಗುಳ್ನಗೆ ಬೀರಿ ಪ್ರಭಾತ ವಂದನೆ ಸಲ್ಲಿಸಿದರು;
ಹಲೋ, ಗುಡ್ ಮಾರ್ನಿಂಗ್’ ಯಸ್ ಗುಡ್ ಮಾರ್ನಿಂಗ್’ ನಾನು ಉತ್ತರಿಸಿದೆ.
ಏನು ಅಪರೂಪಕ್ಕೆ ಬೆಳ್ಳಂಬೆಳಗ್ಗೆ? ಎಲ್ಲಿಗಾದರೂ ಹೋಗಲಿಕ್ಕಿತ್ತೇ?’ ಅವರು ಕೇಳಿದರು. ಹೇ.. ಏನೂ ಇಲ್ಲ. ಇಂದು ನನ್ನ ಹುಟ್ಟುಹಬ್ಬ’ ನಾನು ಹೇಳಿದೆ.
ಯುವರ್ ಬರ್ತ್ಡೇ?!’ ಯಸ್’
ಓ.. ಹೇ, ವಿಷ್ ಯು ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದ ಡೇ’ ಥಾಂಕ್ಯೂ’
ಮ್ಯಾಥ್ಯೂ ಕೈಯಲ್ಲಿದ್ದ ಬ್ರಶ್ಶನ್ನು ಕಚ್ಚಿ ಹಿಡಿದು ಸ್ನಾನಗೃಹಕ್ಕೆ ಹೋದರು. ವಿದ್ಯಾರ್ಥಿಗಳು ಹಾಗೂ ಕ್ಲರ್ಕ್ ಗಳ ಕಡೆಯಿಂದ; ಅತ್ತಿತ್ತ ಚೀರಾಟ, ಗದ್ದಲ, ನಡುನಡುವೆ ಶೃಂಗಾರ ಗಾನಗಳು. ಯಾರಿಗೇನು ಬೇಸರ. ಜೀವನ ಉಲ್ಲಾಸಕರ. ನಾನು ಒಂದು ಗುಟುಕು ಚಹಾ ಕುಡಿಯಲು ದಾರಿಯೇನಾದರೂ ಇದೆಯೇ ಎಂದು ಯೋಚಿಸುತ್ತಿದ್ದೆ. ಮಧ್ಯಾಹ್ನದ ಊಟದ ಭಯವಿಲ್ಲ. ನಿನ್ನೆ ನಾನು ಬಝಾರಿನಲ್ಲಿ ನಡೆಯುತ್ತಿರುವಾಗ ಹಮೀದ್ ನನ್ನನ್ನು ಊಟಕ್ಕೆ ಆಹ್ವಾನಿಸಿದ್ದರು. ಅವರೊಬ್ಬ ಪುಟ್ಟ ಕವಿ, ದೊಡ್ಡ ಧನಿಕ. ಅದೇನಿದ್ದರೂ ಮಧ್ಯಾಹ್ನದವರೆಗೆ ಚಹಾದ್ದೇ ಸಮಸ್ಯೆ. ಬಿಸಿ ಬಿಸಿ ಚಹಾ ಸಿಗಲೇನು ದಾರಿ? ಮ್ಯಾಥ್ಯುವಿನ ಕೆಲಸದಾಳು ಮ್ಯಾಥ್ಯುವಿಗೆ ಚಹಾ ಸಿದ್ಧಪಡಿಸುವುದರಲ್ಲಿ ಬ್ಯುಝಿಯಾಗಿರುವುದಾಗಿ ನಾನು ನನ್ನ ಕೋಣೆಯಲ್ಲಿ ಕುಳಿತು ಊಹಿಸಿಕೊಂಡೆ. ಅದಕ್ಕೊಂದು ಕಾರಣವಿದೆ. ನನ್ನ ಕೋಣೆ ಮ್ಯಾಥ್ಯುವಿನ ಅಡುಗೆ ಮನೆಯ ಸ್ಟೋರ್ ರೂಮ್. ತಿಂಗಳಿಗೆ ಎಂಟಾಣೆ(ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಸಂದರ್ಭದ ನಾಣ್ಯ – ಅರ್ಧ ರುಪಾಯಿ)ಗೆ ಮನೆಯ ಯಜಮಾನ ನನಗದನ್ನು ಬಾಡಿಗೆಗೆ ಕೊಟ್ಟಿದ್ದರು. ಕಟ್ಟಡದಲ್ಲೇ ಅತ್ಯಂತ ಸಣ್ಣ ಹಾಗೂ ಕೆಟ್ಟ ಕೋಣೆ. ಅಲ್ಲಿ ನನ್ನ ಆರಾಮ ಕುರ್ಚಿ, ಮೇಜು, ಶೆಲ್ಪ್, ಹಾಸಿಗೆ- ಇಷ್ಟು ತುಂಬಿದ ಬಳಿಕ ಮತ್ತೆ ಅಲ್ಲಿ ಶ್ವಾಸ ಬಿಡಲೂ ಜಾಗವಿಲ್ಲ. ದೈತ್ಯ ಗೋಡೆಯ ಒಳಗಿರುವ ಮೂರು ಕಟ್ಟಡಗಳ ಮೇಲೆ ಕೆಳಗಿರುವ ಕೋಣೆಗಳಲ್ಲಿ ವಿದ್ಯಾರ್ಥಿಗಳು, ಕ್ಲರ್ಕ್ ಗಳು ತುಂಬಿಹೋಗಿದ್ದರು. ಮನೆಯ ಒಡೆಯನಿಗೆ ಬೇಡದ ಏಕೈಕ ವ್ಯಕ್ತಿ ನಾನು ಮಾತ್ರ. ಅದಕ್ಕೆ ಕಾರಣ ಬೇರೇನೂ ಅಲ್ಲ; ಸರಿಯಾಗಿ ಬಾಡಿಗೆ ನೀಡುವುದಿಲ್ಲವೆಂಬುದಷ್ಟೇ. ನನ್ನನ್ನು ಇಷ್ಟಪಡದ ಇನ್ನಿಬ್ಬರೆಂದರೆ, ಹೋಟೆಲ್‌ನವನು ಮತ್ತು ಗವರ್ನ್ಮೆಂಟ್. ಹೋಟೆಲ್‌ನವನಿಗಾದರೋ ನಾನು ಸ್ವಲ್ಪ ಹಣ ಕೊಡುವುದಿದೆ; ಸರಕಾರಕ್ಕೆ ನಾನು ಕೊಡಬೇಕಾದುದೇನೂ ಇಲ್ಲ. ಆದರೂ, ಅವರಿಗೆ ನನ್ನನ್ನು ಕಂಡರೆ ಆಗದು.
ಇಲ್ಲಿಯವರೆಗೆ ವಸತಿ, ಆಹಾರ, ಊರು- ಈ ಮೂರು ಸಂಗತಿಗಳ ಬಗ್ಗೆ ಹೇಳಿದೆ. ಇನ್ನು ನನ್ನ ವಸ್ತ್ರ, ಬೂಟು, ಲ್ಯಾಂಪಿನ ವಿಷಯ ಹೇಳಬೇಕಿದೆ(ಈ ಎಲ್ಲಾ ಸಂಗತಿಗಳನ್ನು ಬರೆಯುವ ಮೊದಲು ಒಂದು ವಿಷಯವನ್ನು ಸ್ಪಷ್ಟಪಡಿಸಬೇಕಿದೆ. ಈಗ ಅರ್ಧರಾತ್ರಿ ಕಳೆದಿದೆ. ಕಾಗದ ಲೇಖನಿಯೊಂದಿಗೆ ನನ್ನ ಕೋಣೆಯಿಂದ ಹೊರಗಿಳಿದು ಬಹಳ ಹೊತ್ತಿನಿಂದ ಈ ಪಟ್ಟಣದಲ್ಲಿ ಅಲೆದಾಡುತ್ತಿದ್ದೇನೆ. ಬೇರೆ ವಿಶೇಷವಾಗಿ ಏನೂ ಇಲ್ಲ. ಈ ದಿನದ ಡೈರಿಯನ್ನು ಆರಂಭದಿಂದ ಕೊನೆಯವರೆಗೂ ಬರೆಯಬೇಕು. ಉತ್ತಮ ಸಣ್ಣಕತೆಯ ಸಾಧ್ಯತೆ ಇದರಲ್ಲಿದೆ. ಆದರೆ, ನನ್ನ ಕೋಣೆಯಲ್ಲಿರುವ ಲ್ಯಾಂಪಿನಲ್ಲಿ ಎಣ್ಣೆಯಿಲ್ಲ. ಬರೆಯಲು ಬಹಳಷ್ಟಿದೆ. ಆ ಕಾರಣದಿಂದ ಮಲಗಿದ್ದವನು ಎದ್ದು ಕಡಲ ಕಿನಾರೆಯ ಏಕಾಂತಮಯವಾದ ಬೀದಿದೀಪದಡಿಯಲ್ಲಿ ಕುಳಿತು ವಿಷಯಗಳ ತೀವ್ರತೆ ಕಡಿಮೆಯಾಗುವ ಮೊದಲೇ ಬರೆಯಬೇಕು). ಇನ್ನೇನು ಸುರಿಯಲಿರುವ ಕಾರ್ಮೋಡಗಳ ಹಾಗೆ ಈ ದಿನದ ಘಟನೆಗಳೆಲ್ಲಾ ನನ್ನ ಅಂತರಂಗವು ಒಡೆದು ಹೋಗುವಂತೆ ಒತ್ತೊತ್ತಿ ನಿಂತಿದೆ. ಅಸಾಧಾರಣವಾದುದೇನೂ ಇಲ್ಲ, ನನ್ನ ಜನ್ಮದಿನವನ್ನು ಹೊರತುಪಡಿಸಿ. ನಾನಾದರೋ, ಹುಟ್ಟಿದ ಊರಿನಿಂದ ಬಹಳ ದೂರದಲ್ಲಿರುವ ಅನ್ಯ ಊರಿನಲ್ಲಿದ್ದೇನೆ. ಕೈಯಲ್ಲಿ ಬಿಡಿಗಾಸಿಲ್ಲ; ಸಾಲ ಸಿಗುವ ಸಾಧ್ಯತೆಯೂ ಇಲ್ಲ. ಧರಿಸಿರುವ ವಸ್ತ್ರ ಗೆಳೆಯರ ಕೊಡುಗೆ. ನನ್ನದೆಂದು ಹೇಳಲಾಗುವ ಒಂದೂ ಇಲ್ಲ. ಇಂತಹ ಜನ್ಮದಿನ ಮತ್ತೆ ಮತ್ತೆ ಆಗಮಿಸಲಿ ಎಂದು ಮ್ಯಾಥ್ಯೂ ಶುಭಾಶಯ ಕೋರಿದಾಗ ನನ್ನ ಹೃದಯಕ್ಕೆ ಒಂದು ಚೂರು ನೋವಿನ ಅನುಭವವಾಯಿತು.
ನೆನೆನಪಿಸಿಕೊಳ್ಳುತ್ತ ಹೋದೆ.

ಗಂಟೆ ಏಳು. ನಾನು ಆರಾಮ ಕುರ್ಚಿಯಲ್ಲಿ ಮಲಗಿರುತ್ತ ಈ ದಿನವನ್ನಾದರೂ ಕಳಂಕರಹಿತ ದಿನವನ್ನಾಗಿ ಉಳಿಸಿಕೊಳ್ಳಬೇಕೆಂದು ಯೋಚಿಸುತ್ತಿದ್ದೆ. ಇಂದು ಯಾರೊಂದಿಗೂ ಸಾಲ ಕೇಳಬಾರದು. ಯಾವ ತೊಂದರೆಯೂ ಆಗಬಾರದು. ಈ ದಿನ ಮಂಗಳಕರವಾಗಿಯೇ ಕೊನೆಗೊಳ್ಳಬೇಕು. ಕಳೆದು ಹೋದ ಹಗಲುರಾತ್ರಿಗಳ ಕಪ್ಪುಬಿಳುಪು ಸಂಕೋಲೆಯಲ್ಲಿ ನಾನು ಕಾಣುವ ಆ ನೂರು ನೂರು ‘ನಾನು’ ಆಗಿರಬಾರದು. ಇಂದು ನನಗೆ ಎಷ್ಟು ವಯಸಾಗಿರಬಹುದು? ಕಳೆದ ವರ್ಷಕ್ಕಿಂತ ಒಂದು ಹೆಚ್ಚಿದೆ. ಕಳೆದ ವರ್ಷದಲ್ಲಿ?.. ಇಪ್ಪತ್ತಾರು. ಅಲ್ಲ. ಮೂವತ್ತೆರಡು; ಅಥವಾ ನಲ್ವತ್ತ ಏಳೋ?
ಮನಸಿಗೆ ವಿಪರೀತ ನೋವು. ಎದ್ದು ಕನ್ನಡಿ ನೋಡಿದೆ. ಮುಖ ಪರವಾಗಿಲ್ಲ, ಚೆನ್ನಾಗಿದೆ. ವಿಶಾಲವಾದ ಹಣೆ; ನಿಶ್ಚಲ ಕಣ್ಣುಗಳು; ಬಾಗಿದ ಬಾಕುವಿನಂತಹ ಕಿರು ಮೀಸೆ. ಒಟ್ಟಿನಲ್ಲಿ ಪರವಾಗಿಲ್ಲ- ಎಂದೆಲ್ಲಾ ಯೋಚಿಸುತ್ತಿರಬೇಕಾದರೆ ಆ ದೃಶ್ಯ ಕಂಡು ನನ್ನ ಎದೆ ಧಸಕ್ಕೆಂದಿತು.
ನೆರೆತ ಕೂದಲು!
ನನ್ನ ಕಿವಿಯ ಮೇಲ್ಭಾಗದಲ್ಲಿ ಕಪ್ಪು ಕೂದಲಿನ ನಡುವೆ ಬೆಳ್ಳಿ ರೇಖೆ! ನಾನದನ್ನು ಬಹಳ ಕಷ್ಟಪಟ್ಟು ಕಿತ್ತೆಸೆದೆ. ಬಳಿಕ ತಲೆ ಸವರಿಕೊಳ್ಳಲಾರಂಭಿಸಿದೆ. ಹಿಂಭಾಗದಲ್ಲಿ ತಲೆ ಹೊಳೆಯುತ್ತಿತ್ತು. ಬೊಕ್ಕ ತಲೆ. ನಾನದನ್ನು ಸವರುತ್ತಿರಬೇಕಾದರೆ ತಲೆ ನೋವಿನ ಸಣ್ಣ ಅನುಭವ. ಬಿಸಿ ಬಿಸಿ ಚಹಾ ಕುಡಿಯದೆ ಹೀಗಾಗಿರಬಹುದೇ?
ಗಂಟೆ ಒಂಬತ್ತು. ನನ್ನನ್ನು ಕಂಡೊಡನೇ ಹೋಟೆಲಿನ ಯಜಮಾನ ಸಿಟ್ಟಿನಿಂದ ಮುಖ ತಿರುಗಿಸಿದನು. ಚಹಾ ಮಾಡುವ ಆ ದುಷ್ಟ ಹುಡುಗ ಬಾಕಿ ಕೊಡುವಂತೆ ಆಗ್ರಹಿಸಿದನು.
ಓ.. ಅದನ್ನು ನಾಳೆ ಕೊಡುತ್ತೇನೆ’ ನಾನು ಹೇಳಿದೆ. ಅವನಿಗೆ ನಂಬಿಕೆ ಬರಲಿಲ್ಲ; ನಿನ್ನೆಯೂ ಹೀಗೆಯೇ ಹೇಳಿದಿರಿ’
ಇವತ್ತು ಸಿಗುತ್ತದೆಂದು ಭಾವಿಸಿದ್ದೆ’ ಹಳೇ ಬಾಕಿ ಸಿಗದೆ ನಿಮಗೆ ಚಹಾ ಕೊಡಬೇಡವೆಂದು ಹೇಳಿದ್ದಾರೆ’
ಓ.. ’ ಅಪನಂಬಿಕೆ ಸ್ಫುರಿಸುವ ಪುಟ್ಟ ಮುಖ! ಅಂತರಂಗ ತಿಳಿಯಲಾಗದ ಮುಗ್ಧ ಹೃದಯ! ಈ ವೇಷಭೂಷಣವೂ, ಆರಾಮ ಕುರ್ಚಿಯಲ್ಲಿನ ನನ್ನ ನಿದ್ರೆಯೂ! ನಾನೊಬ್ಬಸಾರ್’ ಅಂತೆ! ಆರಾಮ ಕುರ್ಚಿ, ಶರ್ಟ್, ಲುಂಗಿ, ಬೂಟು ಯಾವುದೂ ನನ್ನದಲ್ಲ ಮಕ್ಕಳೇ! ಈ ಲೋಕದಲ್ಲಿ ಸ್ವಂತವೆಂದು ಹೇಳಿಕೊಳ್ಳಲು ನನ್ನ ಬಳಿ ಏನೂ ಇಲ್ಲ. ನಗ್ನನಾದ ಈ ನಾನು’ ನನಗೆ ಸೇರಿದ್ದೇ? ಭಾರತದ ಪ್ರತೀ ಪಟ್ಟಣಗಳಲ್ಲೂ ಎಷ್ಟೊಂದು ವರ್ಷಗಳ ಕಾಲ ಅಲೆದಾಡಿದೆ. ಎಷ್ಟೊಂದು ಜಾತಿಗಳ ನಡುವೆ ನೆಲೆಸಿದೆ. ಯಾರ‍್ಯಾರದೋ ಆಹಾರ. ನಾನು! ನನ್ನ ರಕ್ತ, ನನ್ನ ಮಾಂಸ, ನನ್ನ ಅಸ್ತಿ ಭಾರತಕ್ಕೆ ಸೇರಿದ್ದು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಕರಾಚಿ(ಆಗಿನ್ನೂ ಭಾರತದಲ್ಲಿತ್ತು)ಯಿಂದ ಕಲ್ಕತ್ತದವರೆಗೆ; ಹೀಗೆ ಭಾರತದ ಹೆಚ್ಚಿನೆಲ್ಲಾ ಭಾಗಗಳಲ್ಲಿ ನನಗೆ ಸ್ನೇಹಿತರಿದ್ದಾರೆ. ಹೆಣ್ಣು ಗಂಡೆಂಬ ವ್ಯತ್ಯಾಸವಿಲ್ಲದೆ ಪ್ರತೀ ಸ್ನೇಹಿತರನ್ನೂ ನಾನಿಂದು ಸ್ಮರಿಸುತ್ತೇನೆ. ಸ್ಮರಣೆ! ಪ್ರತಿಯೋರ್ವರನ್ನೂ ಹುಡುಕಿ ನನ್ನ ಸ್ನೇಹವನ್ನು ಹೇಗೆ ಹೇಳಲಿ?ಭಾರತವನ್ನು ಕವಿದು.. ಭೂಗೋಳವನ್ನು ಕವಿದು.. ಸುಗಂಧದಲ್ಲಿ ಮುಳುಗಿರುವ ಸ್ಪುರದ್ರುಪಿ ಚಂದ್ರನ ಬೆಳಕಿನಂತೆ ನನ್ನ ಸ್ನೇಹ ಹರಡಲಿ. ಸ್ನೇಹ! ನನ್ನನ್ನು ಅರಿತು ಪ್ರೀತಿಸುವವರು ಯಾರಾದರು ಇದ್ದಾರೆಯೇ? ಅರಿವು; ನನ್ನ ಪ್ರಕಾರ ಅರಿವೆಂದರೆ ನಿಗೂಢತೆಯತಡೆ’ಯನ್ನು ನೀಗಿಸುವುದು. ಕೊರತೆ, ದೌರ್ಬಲ್ಯಗಳನ್ನು ಕಳೆದರೆ ಉಳಿಯುವುದೇನು? ಪ್ರೀತಿಸಲು, ಪ್ರೀತಿಸಲ್ಪಡಲು ಆಕರ್ಷಕವಾದ ಏನಾದರೂ ಬೇಕು. ಅಬ್ಬಾ! ಕಾಲ ಅದೆಷ್ಟು ತ್ವರಿತವಾಗಿ ಸಾಗುತ್ತಿದೆ! ಅಪ್ಪನ ತೋರುಬೆರಳಿನಲ್ಲಿ ಆಟವಾಡುತ್ತಿದ್ದ ನಾನು; ಹಸಿವಾಗುತ್ತಿದೆ’ ಎಂದು ಅಮ್ಮನ ಸೀರೆಯ ಚುಂಗು ಹಿಡಿದು ಅಳುತ್ತಿದ್ದ ನಾನು; ಇಂದು! ಅಬ್ಬಾ, ಕಾಲದ ನಾಗಾಲೋಟವೇ! ಆದರ್ಶದ ಅದೆಷ್ಟು ಬಾಂಬುಗಳು ನನ್ನ ಅಂತರಂಗಕ್ಕೆ ಬಿದ್ದು ಸಿಡಿದಿವೆ. ನನ್ನ ಹೃದಯವೋ ಭೀಕರ ಯುದ್ಧಭೂಮಿ! ಇಂದು ನಾನು ಯಾರು? ಕ್ರಾಂತಿಕಾರಿ, ದೇಶದ್ರೋಹಿ, ಧರ್ಮದ್ರೋಹಿ, ಕಮ್ಯೂನಿಸ್ಟ್--ಇನ್ನು ಏನೇನೋ ಈ ನಾನು. ವಾಸ್ತವದಲ್ಲಿ ನಾನು ಇವೆಲ್ಲ ಆಗಿದ್ದೆನೇ? ಅಬ್ಬಾ! ಎಂತಹ ಅಸ್ವಸ್ಥತೆ. ದೇವರೇ! ತಲೆಯೊಳಗೆ ಹೊತ್ತಿ ಉರಿಯುತ್ತಿದೆ. ಚಹಾ ಕುಡಿಯದ ಪರಿಣಾಮವೋ? ತಲೆ ನೆಟ್ಟಗೆ ನಿಲ್ಲುವುದಿಲ್ಲ. ಆದದ್ದಾಗಲೀ, ಹೋಗಿ ಊಟ ಮಾಡೋಣ. ಆದರೆ, ತಲೆನೋವಿನೊಂದಿಗೆ ಒಂದು ಮೈಲಿ ನಡೆಯಬೇಕು. ಆದರೂ, ಇಂದು ಹೊಟ್ಟೆ ತುಂಬಾ ಊಟ ಮಾಡಬೇಕಲ್ಲವೇ. ಗಂಟೆ ಹನ್ನೊಂದು: ಹಮೀದ್ ಅಂಗಡಿಯಲ್ಲಿಲ್ಲ! ಮನೆಯಲ್ಲಿರಬಹುದೇ? ನನ್ನನ್ನೂ ಜೊತೆಗೆ ಕರೆದೊಯ್ಯಬಹುದಿತ್ತು. ಬಹುಶಃ ಅವನು ಮರೆತು ಹೋಗಿರಬಹುದೇ? ನೇರವಾಗಿ ಮನೆಗೆ ಹೋದರೆ ಸರಿ. ಗಂಟೆ ಹನ್ನೊಂದುವರೆ. ಹಮೀದ್‌ನ ಮಾಳಿಗೆ ಮನೆಯ ತಗಡಿನ ಬಾಗಿಲು ಮುಚ್ಚಿತ್ತು. ನಾನು ಬಾಗಿಲು ತಟ್ಟಿದೆ: ಏಯ್ ಮಿಸ್ಟರ್ ಹಮೀದ್’
ಉತ್ತರವಿಲ್ಲ.
ಹಲೋ, ಮಿಸ್ಟರ್ ಹಮೀ...ದ್’ ಒಬ್ಬ ಮಹಿಳೆಯಿಂದ ಕೋಪಿಷ್ಠ ಶಬ್ದದಲ್ಲಿ ಘರ್ಜನೆ;ಇಲ್ಲಿಲ್ಲ’
ಎಲ್ಲಿಗೆ ಹೋದ?’ ನಿರುತ್ತರ. ನಾನು ಮತ್ತೆ ಬಾಗಿಲು ಬಡಿದೆ. ಮನಸು ವಿಪರೀತವಾಗಿ ದಣಿದಿತ್ತು. ಹಿಂದಿರುಗಿ ನಡೆಯಲಾರಂಭಿಸಿದೆ. ಹಿಂದಿನಿಂದ ಯಾರದೋ ಹೆಜ್ಜೆ ಸಪ್ಪಳ ಕೇಳಿಸಿತು; ಜೊತೆಗೆ ಬಳೆಯ ಕಿಂಕಿಣಿ. ಯುವತಿಯೊಬ್ಬಳು ಬಾಗಿಲನ್ನು ಅಲ್ಪ ತೆರೆದಳು. ಹಮೀದ್ ಎಲ್ಲಿಗೆ ಹೋದ?’ ನಾನು ಕೇಳಿದೆ.
ಏನೋ ಅಗತ್ಯಕ್ಕೆ ಒಂದು ಕಡೆಗೆ ಹೋದರು’ ಮೃದು ದನಿಯಲ್ಲಿ ಆಕೆ ಹೇಳಿದಳು. ಯಾವಾಗ ಬರುತ್ತಾನೆ?’
ಸಂಜೆಯ ಬಳಿಕ’ ಸಂಜೆಯ ಬಳಿಕ! ಬರುವಾಗ ನಾನು ಬಂದು ಹೋದೆ ಅಂತ ಹೇಳಬೇಕು’
ನೀವು ಯಾರು?’ ನಾನು ಯಾರು? ನಾನು.. ನಾ.. ಯಾರೂ ಅಲ್ಲ. ಏನೂ ಹೇಳಬೇಕಾಗಿಲ್ಲ’
ಅಲ್ಲಿಂದ ಹಿಂದಿರುಗಿದೆ. ಸುಡು ಬಿಸಿಲ ಧಗೆಗೆ ಕರಗಿದ ಸಕ್ಕರೆ ಮಣ್ಣು; ಅದನ್ನು ದಾಟಿದ ಬಳಿಕ ಕನ್ನಡಿಯ ಚೂರುಗಳಂತೆ ಹೊಳೆಯುವ ಕಡಲ ಕಿನಾರೆ. ಕಣ್ಣು, ತಲೆಯೊಳಗೆ ಕತ್ತಲೆ ಕವಿಯಿತು! ಅಸಾಧ್ಯ ನೋವು. ಎಲುಬುಗಳು ಬೇಯುತ್ತಿವೆ! ನೀರಡಿಕೆ! ಹಸಿವು! ದುರಾಸೆ! ಲೋಕವನ್ನೇ ನುಂಗುವ ಅತ್ಯಾಗ್ರಹ! ಹಸಿವು ನೀಗಿಸಲು ದಾರಿಯಿಲ್ಲ ಎಂಬ ಯೋಚನೆಯೇ ಈ ತೀವ್ರತೆಗೆ ಕಾರಣ. ಇಂತಹ ಎಷ್ಟೊಂದು ಹಗಲು ರಾತ್ರಿಗಳು ಕಳೆದು ಹೋಗಿವೆ! ನಾನೀಗ ಕುಸಿದು ಬೀಳುವೆನೇ? ಇಲ್ಲ. ಬೀಳಬಾರದು. ನಡೆ ಮುಂದೆ ನಡೆ!
ಗಂಟೆ ಹನ್ನೆರಡುವರೆ; ಪರಿಚಿತರು ನೋಡಿಯೂ ನೋಡದಂತೆ ದಾಟಿ ಹೋಗುತ್ತಿದ್ದಾರೆ. ಸಂಗಾತಿಗಳೇ, ಇಂದು ನನ್ನ ಜನ್ಮದಿನ; ಶುಭಾಶಯ ಕೋರಿ ಮುಂದೆ ನಡೆಯಿರಿ’ ಎಂದು ನನ್ನ ಹೃದಯ ಮಂತ್ರಿಸಿತು. ನೆರಳ ಗುರುತುಗಳು ನನ್ನನ್ನು ದಾಟಿ ಹೋದವು.ಸ್ನೇಹಿತರೇ, ಯಾಕೆ ನನ್ನನ್ನು ಕಂಡು ಮಾತನಾಡದೆ ಹೋಗುತ್ತಿರುವಿರಿ’
ಓಹೋ.. ಹಾಗೋ ವಿಷಯ.
ನನ್ನ ಹಿಂದೆ ಒಬ್ಬ ಸಿ.ಒ.ಡಿ!
ಗಂಟೆ ಒಂದು. ಮಾಜಿ ಪತ್ರಕರ್ತರೂ, ಆಗಿನ ವ್ಯಾಪಾರಿಯೂ ಆಗಿದ್ದ ಮಿಸ್ಟರ್ ‘ಪಿ’ ಯ ಬಳಿ ನಾನು ಹೋದೆ. ಕಣ್ಣು ಕಾಣುತ್ತಿಲ್ಲ. ಮುಜುಗರ.
ಕ್ರಾಂತಿ ಎಲ್ಲಿಯವರೆಗೆ ಬಂತು’ ಪಿ. ಕೇಳಿದರು. ಹತ್ತಿರ ಹತ್ತಿರ ಆಯಿತು’
ಎಲ್ಲಿಂದ ಬರುತ್ತಿರುವಿರಿ! ನೋಡಿ ತುಂಬಾ ಸಮಯವಾಯಿತಲ್ಲವೇ’ ಮ್ಞ್’
ಏನು ವಿಶೇಷ?’ ಏನು ಇಲ್ಲ ಸುಮ್ಮನೆ ಬಂದೆ’
ನಾನು ಅವರ ಸಮೀಪದಲ್ಲಿದ್ದ ಕುರ್ಚಿಯಲ್ಲಿ ಕುಳಿತೆ. ನನ್ನ ಅನೇಕ ಲೇಖನಗಳು ಅವರ ಹೆಸರಲ್ಲಿ ಪ್ರಕಟಗೊಂಡಿದ್ದವು. ಅಂದಿನ ತನ್ನ ಮಹತ್ವವನ್ನು ನೆನಪಿಸಲು ಹಳೆಯ ಪತ್ರಗಳನ್ನೆಲ್ಲಾ ಬೈಂಡ್ ಮಾಡಿ ಇಟ್ಟಿದ್ದರು. ನಾನು ಅದನ್ನೆತ್ತಿ ಸಿಡಿಯುತ್ತಿದ್ದ ತಲೆಯೊಂದಿಗೆ ನೋಡುತ್ತಿದ್ದೆ. ನನಗೊಂದು ಚಹಾ ಬೇಕು. ಬಹಳ ನಿತ್ರಾಣಗೊಂಡಿರುವೆ’ ಎಂದು ನನ್ನ ಹೃದಯ ಅತಿವೇಗದಲ್ಲಿ ಬಡಿದುಕೊಳ್ಳುತಿತ್ತು. ಪಿ. ಯಾಕೆ ನನ್ನೊಂದಿಗೆ ಏನನ್ನೂ ಕೇಳುತ್ತಿಲ್ಲ? ಅವರಿಗೆ ನನ್ನ ದಣಿವು ಕಾಣುತ್ತಿಲ್ಲವೇ? ಅವರು ಹಣದ ಪೆಟ್ಟಿಗೆಯ ಬಳಿ ಗಾಂಭೀರ‍್ಯತೆಯಲ್ಲಿ ಕುಳಿತಿದ್ದಾರೆ. ನಾನು ಮೂಗನಂತೆ ಬೀದಿಯತ್ತ ನೋಡಿದೆ. ಖಾನದಲ್ಲಿ ಬಿದ್ದಿದ್ದ ತುಂಡು ದೋಸೆಗಾಗಿ ತುಂಟ ಮಕ್ಕಳಿಬ್ಬರು ಜಗಳವಾಡುತ್ತಿದ್ದರು.ಒಂದು ಬಿಸಿ ಚಹಾ’ ಎಂದು ನನ್ನ ಸರ್ವವೂ ಮೂಕ ಮರ್ಮರಗೈದಿತು. ಪಿ. ಪೆಟ್ಟಿಗೆ ತೆರೆದರು. ರುಪಾಯಿಗಳು ಹಾಗೂ ಚಿಲ್ಲರೆಗಳ ನಡುವೆ ಒಂದು ಆಣೆ ತೆಗೆದು ಒಬ್ಬ ಹುಡುಗನ ಕೈಗಿತ್ತು; ಹೋಗಿ ಚಹಾ ತಾ’ ಎಂದರು. ಹುಡುಗ ಓಡಿದ. ನನ್ನ ಹೃದಯ ತಣಿಯಿತು. ಎಷ್ಟು ಒಳ್ಳೆಯ ಮನುಷ್ಯ! ಹುಡುಗ ತಂದ ಚಹಾ ಕೈಗೆತ್ತಿ ಪಿ. ನನ್ನ ಕಡೆಗೆ ತಿರುಗಿದರು; ನಿಮಗೆ ಚಹಾ ಬೇಕೆ?’
ಬೇಡ’ ಎಂದು ಹೇಳಿ ನಾನು ಷೂಸ್‌ನ ಲೇಸ್ ಕಟ್ಟುವವನಂತೆ ನಟಿಸಿ ಬಗ್ಗಿದೆ. ನನ್ನ ಮುಖ ಅವರು ಕಾಣುತ್ತಾರೆ; ನನ್ನ ಮನಸಿನ ಕ್ಷೋಭೆಯನ್ನು ಅರಿಯುತ್ತಾರೆ! ನಿಮ್ಮ ಪುಸ್ತಕಗಳ್ಯಾವುದನ್ನೂ ನನಗೆ ಕೊಡಲಿಲ್ಲವಲ್ಲ’ ಪಿ. ಬೇಸರ ವ್ಯಕ್ತಪಡಿಸಿದರು.
ಕೊಡುತ್ತೇನೆ’ ನಾನು ಹೇಳಿದೆ. ಅವುಗಳ ಕುರಿತು ಪತ್ರಿಕೆಗಳಲ್ಲಿ ಬರುತ್ತಿರುವ ಅಭಿಪ್ರಾಯಗಳನ್ನು ನಾನು ಓದುತ್ತಿದ್ದೇನೆ’
ಒಳ್ಳೆಯದು’ ಎಂದು ಮಂದಹಾಸ ಬೀರಲು ಯತ್ನಿಸಿದೆ. ಆದರೆ, ಹೃದಯದಲ್ಲಿ ಬೆಳಕಿಲ್ಲದೆ ಮುಖ ಹೇಗೆ ಮಂದಹಾಸ ಬೀರಲು ಸಾಧ್ಯ? ನಾನು ಗುಡ್ ಬೈ ಹೇಳಿ ಎದ್ದು ಬೀದಿಗಿಳಿದು ನಡೆದೆ. ನನ್ನ ಹಿಂದೆ ಆ ಸಿ.ಒ.ಡಿ! ಗಂಟೆ ಎರಡು. ನಾನು ದಣಿದು ಹೈರಾಣಾಗಿ ಆರಾಮ ಕುರ್ಚಿಯಲ್ಲಿ ಮಲಗಿದ್ದೆ. ಉತ್ತಮ ಬಟ್ಟೆಗಳನ್ನು ಧರಿಸಿದ ಸುವಾಸಿತಳಾದ ಅಪರಿಚಿತ ಹೆಣ್ಣೊಬ್ಬಳು ನನ್ನ ಕೋಣೆಯ ಬಾಗಿಲ ಬಳಿ ಬಂದಳು. ದೂರದೂರಿನವಳು. ಪ್ರವಾಹ ಬಂದು ಊರು ಸರ್ವನಾಶವಾಗಿದೆ. ಏನಾದರೂ ಸಹಾಯ ಮಾಡಬೇಕು! ಮಂದಹಾಸ ಬೀರುತ್ತಾ ಅವಳು ನನ್ನೆಡೆಗೆ ಮಾದಕ ನೋಟ ಬೀರಿದಳು. ನನ್ನ ಹೃದಯದಲ್ಲಿ ಜ್ವಾಲೆಯೆದ್ದು, ಭಾವನೆಯೊಂದು ಮೊಳೆಯಿತು. ಅದು ಹೊತ್ತಿ ಉರಿದು ಇಡೀ ನರನಾಡಿಗಳನ್ನು ವ್ಯಾಪಿಸಿತು. ನನ್ನ ಹೃದಯ ಬಡಿತ ನನಗೇ ಕೇಳಿಸುವ ಅನುಮಾನ ಮೂಡಿತು. ಅಬ್ಬಾ.. ಅದೊಂದು ಭಯಾನಕ ನಿಮಿಷ. ಸಹೋದರಿ ನನ್ನ ಬಳಿ ಏನೂ ಇಲ್ಲ; ನೀವು ಬೇರೆ ಯಾರ ಬಳಿಯಾದರೂ ಹೋಗಿ ಕೇಳಿ’
ಏನೂ ಇಲ್ಲವೇ?’ ಇಲ್ಲ’
ಆದರೂ ಅವಳು ಹೋಗಲಿಲ್ಲ.
ಹೋಗು. ನನ್ನ ಬಳಿ ಏನೂ ಇಲ್ಲ’ ದನಿ ಎತ್ತರಿಸಿ ಹೇಳಿದೆ. ಓ..’ ಅವಳು ನೋವಿನಿಂದ ಕುಲುಕುತ್ತ ನಡೆದಳು. ಆದರೂ, ಅವಳ ದೇಹದಿಂದ ಹೊರಹೊಮ್ಮುತ್ತಿದ್ದ ಪರಿಮಳ ಅದ್ಭುತ!
ಗಂಟೆ ಮೂರು. ಯಾರೊಂದಿಗಾದರೂ ಸಾಲ ಕೇಳಿದರೆ ಹೇಗೆ? ಭಯಾನಕ ದಣಿವು. ಅಸಹಾಯಕ ಸ್ಥಿತಿ. ಯಾರೊಂದಿಗೆ ಕೇಳಲಿ? ಅನೇಕ ಹೆಸರುಗಳು ಸ್ಮೃತಿಪಟಲದಲ್ಲಿ ತೇಲಿ ಬಂದವು. ಆದರೆ, ಸಾಲವು ಸ್ನೇಹ ಆದರವನ್ನು ಕಡಿಮೆಗೊಳಿಸುವ ಸಂಗತಿ. ಸತ್ತರೆ ಹೇಗೆ.. ಎಂದು ನಾನು ಯೋಚಿಸಿದೆ.
ಆದರೆ, ಹೇಗೆ ಸಾಯುವುದು?
ಗಂಟೆ ಮೂರುವರೆ. ನಾಲಗೆ ಕುಸಿದು ಹೋಗುತ್ತಿದೆ. ತೀರಾ ಅಸೌಖ್ಯ. ತಣ್ಣೀರಿನಲ್ಲಿ ಮುಳುಗೆದ್ದರೆ ಹೇಗೆ? ದೇಹದ ಬಿಸಿ ತಣಿದರೆ! ಹೀಗೆ ಮಲಗಿರಬೇಕಾದರೆ ಕೆಲವು ಸಂಪಾದಕರುಗಳ ಕಾಗದ ಬಂತು. ಕಥೆಗಳನ್ನು ಆದಷ್ಟು ಬೇಗ ಕಳುಹಿಸಿಕೊಡಬೇಕು. ಕಾಗದಗಳನ್ನು ಅಲ್ಲಿಯೇ ಬಿಟ್ಟು ನಾನು ದಣಿದು ಮಲಗಿದೆ. ಬ್ಯಾಂಕ್ ಕ್ಲರ್ಕ್ ಕೃಷ್ಣ ಪಿಳ್ಳೆಯ ಆಳು ಬೆಂಕಿಕಡ್ಡಿ ಕೇಳಿ ಬಂದನು. ಅವನಿಂದ ಒಂದು ಗ್ಲಾಸ್ ನೀರು ತರಿಸಿ ಕುಡಿದೆ.
ಸಾರ್‌ಗೆ ಅಸೌಖ್ಯವೇ?’ ಹನ್ನೊಂದು ವಯಸಿನ ಆ ಹುಡುಗನ ಪ್ರಶ್ನೆ. ಅಸೌಖ್ಯವೇನೂ ಇಲ್ಲ’ ನಾನು ಹೇಳಿದೆ.
ಮತ್ತೆ...ಸಾರ್ ಊಟ ಮಾಡಲಿಲ್ಲವೇ?’ ಇಲ್ಲ’
ಅಯ್ಯೋ ಅದೇಕೆ ಸಾರ್ ಊಟ ಮಾಡಲಿಲ್ಲ’ ಆ ಪುಟ್ಟ ಮುಖ, ಕಪ್ಪು ಕಣ್ಣುಗಳು, ಇದ್ದಿಲು ಮೆತ್ತಿದ ಟವಲ್. ಅವನು ಕುತೂಹಲದಿಂದ ನಿಂತಿದ್ದಾನೆ. ನಾನು ಕಣ್ಣು ಮುಚ್ಚಿದೆ. ಸಾರ್’ ಮೆಲುದನಿಯಲ್ಲಿ ಅವನು ಕರೆದನು.
ಮ್ಞ್...’ ನನ್ನ ಬಳಿ ಎರಡಾಣೆ ಇದೆ’
ಅದಕ್ಕೇನು?’ ನಾನು ಮುಂದಿನ ತಿಂಗಳು ಮನೆಗೆ ಹೋಗುತ್ತಿದ್ದೇನೆ. ಆಗ ಕೊಟ್ಟರೆ ಸಾಕು’
ನನ್ನ ಹೃದಯ ಬಿಕ್ಕಿತು. ಯಾ ಅಲ್ಲಾಹ್! ಕೊಡು’ ನನ್ನ ಮಾತು ಕೇಳಿದ್ದೇ ತಡ. ಅವನು ಓಡಿದನು. ಅಷ್ಟು ಹೊತ್ತಿಗೆ ಗೆಳೆಯ ಗಂಗಾಧರನ್ ಬಂದ. ಬಿಳಿಯ ಖಾದಿ ಲುಂಗಿ, ಬಿಳಿಯ ಖಾದಿ ಜುಬ್ಬ. ಅದರ ಮೇಲೆ ಹೊದಿಸಿದ ನೀಲಿ ಶಾಲು. ಕರ‍್ರಗಿನ ಉದ್ದದ ಮುಖ, ಗಂಭೀರ ಮುಖಭಾವ.
ಆರಾಮ ಕುರ್ಚಿಯಲ್ಲಿ ನಾನು ಗತ್ತಿನಿಂದ ಮಲಗಿರುವುದು ಕಂಡು ಆ ನಾಯಕ; ಅಬ್ಬಬ್ಬಾ! ನೀನು ದೊಡ್ಡ ಬೂರ್ಜ್ವಾ (bourgeois) ಆಗಿಬಿಟ್ಟೆಯಲ್ಲಾ?’ ಎಂದನು. ಅಸಾಧ್ಯ ತಲೆನೋವಿನ ನಡುವೆಯೂ ನನಗೆ ನಗು ಬಂತು. ಆ ಪುಡಾರಿಗಳು ಧರಿಸಿರುವ ವಸ್ತ್ರದ ಒಡೆತನದ ಹಕ್ಕು ಯಾರದ್ದೆಂದು ನಾನು ಯೋಚಿಸಿದೆ. ನನಗೆ ಪರಿಚಯವಿರುವ ಪ್ರತಿಯೊಬ್ಬ ರಾಜಕೀಯ ನೇತಾರನ ಚಿತ್ರ ಮನಃಪಟಲದಲ್ಲಿ ಮೂಡಿತು. ಏನು ಪ್ರಯೋಜನ? ಯಾಕೋ ನಗ್ತಿದ್ದೀಯಾ?’ ಗಂಗಾಧರನ್ ಕೇಳಿದ.
`ಏನಿಲ್ಲ ಕಣೋ, ನಮ್ಮ ಈ ವೇಷಭೂಷಣವನ್ನು ನೋಡಿ ನಗು ಬಂತು’ ತಮಾಷೆ ಬಿಟ್ಟು ಇಲ್ಲಿ ಕೇಳು. ದೊಡ್ಡ ಸಮಸ್ಯೆಯಾಗಿದೆ. ಸದ್ಯದಲ್ಲೇ ಲಾಠಿ ಚಾರ್ಜ್, ಟಿಯರ್ ಗ್ಯಾಸ್, ಗುಂಡು ಹಾರಾಟ ಶುರುವಾಗಬಹುದು. ಹದಿಮೂರು ಸಾವಿರ ಕಾರ್ಮಿಕರು ಮುಷ್ಕರ ಆರಂಭಿಸಿದ್ದಾರೆ. ಒಂದೂವರೆ ವಾರದಿಂದ ಅವರು ಅರೆ ಹೊಟ್ಟೆಯಲ್ಲಿದ್ದಾರೆ. ದೊಡ್ಡ ಗಲಾಟೆ ನಡೆಯಬಹುದು. ಮನುಷ್ಯ ಹಸಿವಿನಲ್ಲಿರುವಾಗ ಏನು ಬೇಕಾದರೂ ಸಂಭವಿಸಬಹುದು’
ಈ ವಿಷಯಗಳ್ಯಾವುದೂ ಪತ್ರಿಕೆಯಲ್ಲಿ ಕಾಣಲಿಲ್ಲವಲ್ಲಾ’ ಪತ್ರಿಕೆಗಳಿಗೆ ಸುದ್ದಿ ಮಾಡದಂತೆ ತಾಕೀತಿದೆ’
ಓ..ಹೋ ಹಾಗೋ ವಿಷಯ. ಅದಿರಲಿ. ನಾನೇನು ಮಾಡಲಿ?’ ಕಾರ್ಮಿಕರ ಒಂದು ಮೀಟಿಂಗ್ ಇದೆ. ಅದರ ಅಧ್ಯಕ್ಷ ನಾನೇ. ಅಲ್ಲಿಗೆ ಹೋಗಬೇಕಾದರೆ ಬೋಟ್‌ನವನಿಗೆ ಕೊಡಲು ಒಂದಾಣೆ ಬೇಕು. ಮತ್ತೆ ನಾನು ಇಂದು ಏನೂ ತಿಂದಿಲ್ಲ. ನೀನು ನನ್ನ ಜೊತೆಗೆ ಬರಬೇಕು’
ವಿಷಯ ಒಳ್ಳೆಯದೇ ಮಗಾ, ಆದರೆ, ನನ್ನ ಬಳಿ ನಯಾಪೈಸೆ ಇಲ್ಲ. ನಾನು ಸರಿಯಾಗಿ ಹೊಟ್ಟೆ ತುಂಬಿಸಿಯೇ ಬಹಳ ದಿನಗಳಾದವು. ಸೂರ್ಯೋದಯವಾಗಿ ಇದುವರೆಗೆ ನಾನೂ ಕೂಡಾ ಏನೂ ತಿಂದಿಲ್ಲ. ಸಾಲದ್ದಕ್ಕೆ ಇವತ್ತು ನನ್ನ ಜನ್ಮದಿನ ಬೇರೆ.' ಜನ್ಮದಿನ? ನಮ್ಮಂಥವರಿಗೆಲ್ಲಾ ಏನು ಜನ್ಮದಿನ?’
ಪ್ರಪಂಚದಲ್ಲಿರುವ ಎಲ್ಲದಕ್ಕೂ ಜನ್ಮದಿನಾಂತ ಒಂದು ಇದೆಯಲ್ಲವೇ’ ಹೀಗೆ ಮಾತು ವಿವಿಧ ದಿಕ್ಕು ಹಿಡಿದು ಸಾಗಿತು. ಗಂಗಾಧರನ್ ಕಾರ್ಮಿಕರ ಬಗ್ಗೆ, ರಾಜಕೀಯದ ಬಗ್ಗೆ, ಗವರ್ನ್ಮೆಂಟಿನ ಬಗ್ಗೆ ಮಾತನಾಡಿದನು. ನಾನು ಜೀವನದ ಬಗ್ಗೆ, ಸಂಪಾದಕರುಗಳ ಬಗ್ಗೆ, ಸಾಹಿತಿಗಳ ಬಗ್ಗೆ ಮಾತನಾಡಿದೆ. ಅದರ ನಡುವೆ ಆ ಹುಡುಗ ಬಂದನು. ಒಂದಾಣೆಯನ್ನು ನಾನು ತೆಗೆದುಕೊಂಡೆ. ಉಳಿದ ಒಂದಾಣೆಗೆ ಚಹಾ, ಬೀಡಿ, ದೋಸೆ ತರುವಂತೆ ಹೇಳಿದೆ. ಕಾಲಾಣೆ ಚಹಾಕ್ಕೆ, ಅರೆ ಆಣೆ ದೋಸೆಗೆ, ಕಾಲಾಣೆ ಬೀಡಿಗೆ. ದೋಸೆ ಮುಚ್ಚಿ ತಂದ ಅಮೆರಿಕನ್ ಪತ್ರಿಕೆಯ ತುಂಡಿನಲ್ಲಿ ಒಂದು ಚಿತ್ರವಿತ್ತು. ಅದು ನನ್ನನ್ನು ಆಕರ್ಷಿಸಿತು. ಗಂಗಾಧರನ್‌ನ ಜೊತೆ ಸೇರಿ ದೋಸೆ ತಿಂದೆ. ಒಂದೊಂದು ಗ್ಲಾಸ್‌ನಂತೆ ನೀರು ಕುಡಿದೆವು. ಜೊತೆಗೆ ಅಲ್ಪ ಚಹಾ ಹೀರಿಕೊಂಡೆವು. ಆ ಬಳಿಕ ಒಂದು ಬೀಡಿ ಹೊತ್ತಿಸಿ ಹೊಗೆ ಬಿಟ್ಟು ಗಂಗಾಧರನ್‌ಗೆ ಒಂದು ಕೊಟ್ಟೆ. ಹೊರಡುವ ಸಂದರ್ಭದಲ್ಲಿ ಗಂಗಾಧರನ್ ತಮಾಷೆಗೆ ಒಂದು ಮಾತು ಕೇಳಿದ; ಇಂದು ನಿನ್ನ ಜನ್ಮದಿನವಲ್ಲವೇ. ಜಗತ್ತಿಗೆ ಏನಾದರು ಸಂದೇಶ ಕೊಡುವುದಕ್ಕಿದೆಯೇ?’
ಇದೆ ಕಣೋ, ಕ್ರಾಂತಿಗೆ ಸಂಬಂಧಿಸಿದ್ದು ಒಂದು..’ ಎಲ್ಲಿ, ಹೇಳು ನೋಡೋಣ’
ಕ್ರಾಂತಿಯ ಅಗ್ನಿ ಜ್ವಾಲೆಗಳು ಸದಾ ಪ್ರಜ್ವಲಿಸುತ್ತಿರಲಿ. ಇಂದಿನ ಸಾಮಾಜಿಕ ಘಟಕಗಳೆಲ್ಲಾ ದಹಿಸಿ ಹೋಗಲಿ. ಸುಖ ಸಂಪೂರ್ಣವಾದ, ಸಮಸಮಾಜ ಹುಟ್ಟಿಕೊಳ್ಳಲಿ’ ಭೇಷ್! ನಾನಿದನ್ನು ಇಂದಿನ ಕಾರ್ಮಿಕರ ಸಭೆಯಲ್ಲಿ ಹೇಳುತ್ತೇನೆ’ ಎಂದು ಹೇಳಿ ಗಂಗಾಧರನ್ ಅವಸರವಸರವಾಗಿ ಹೊರಟು ಹೋದನು. ನಾನು ಪ್ರತಿಯೋರ್ವ ರಾಜಕೀಯ ಕಾರ್ಯಕರ್ತರ ಕುರಿತು ಯೋಚಿಸತೊಡಗಿದೆ. ಬರಹಗಾರರ ಕುರಿತು ಯೋಚಿಸಿದೆ. ಪ್ರತೀ ಸ್ತ್ರೀ-ಪುರುಷರ ಬಗ್ಗೆ. ಅವರೆಲ್ಲಾ ಹೇಗೆ ಜೀವಿಸುತ್ತಾರೆ? ಹೀಗೆ ಯೋಚಿಸುತ್ತಾ ನಾನು ಆ ದೋಸೆ ಕಟ್ಟಿ ತಂದ ಪತ್ರಿಕೆಯ ತುಂಡನ್ನು ಕೈಗೆತ್ತಿಕೊಂಡೆ. ಆಗ ಮೆಟ್ಟಿಲು ದಾಟಿ ಮನೆಯ ಯಜಮಾನ ಮುಖ ಗಂಟಿಕ್ಕಿ ಬರುತ್ತಿರುವುದು ಕಂಡಿತು. ಅವರೊಂದಿಗೆ ಇನ್ನೆಷ್ಟು ದಿನದ ಸಮಯಾವಕಾಶ ಕೋರಲಿ ಎಂದು ಯೋಚಿಸಿ ಚಿತ್ರದತ್ತ ನೋಡಿದೆ; ಗಗನಚುಂಬಿ ಕಟ್ಟಡಗಳಿಂದ ತುಂಬಿರುವ ಮಹಾನಗರ. ಅದರ ನಡುವೆ ತಲೆಯೆತ್ತಿ ನಿಂತಿರುವ ಒಬ್ಬ ಮನುಷ್ಯ. ಆತನನ್ನು ಕಬ್ಬಿಣದ ಸಂಕೋಲೆಗಳಿಂದ ಭೂಮಿಗಾನಿಸಿ ಬಂಧಿಸಲಾಗಿತ್ತು. ಆದರೂ, ಆತನ ನೋಟ ತನ್ನ ಬಂಧನದ ಮೇಲೋ, ಭೂಮಿಯ ಮೇಲೋ ಆಗಿರಲಿಲ್ಲ. ದೂರದ, ಸೌರವ್ಯೂಹಗಳಿಗೂ ಆಚೆಗಿನ, ಅನಂತ ದೂರದಲ್ಲಿ ಪ್ರಕಾಶಗಳನ್ನು ಚೆಲ್ಲುವ ಆ ಮಹಾ ತೇಜೋಪುಂಜದಲ್ಲಿ! ಆತನ ಕಾಲುಗಳ ಬಳಿ ತೆರೆದ ಪುಸ್ತಕ! ಅದರ ಎರಡು ಪುಟಗಳಲ್ಲೂ ಆತನ ಮಾತ್ರವಲ್ಲ, ಸರ್ವ ಮಾನವರ ಚರಿತ್ರೆ. ಅದು ಹೀಗಿದೆ;
ಸಂಕೋಲೆಯಲ್ಲಿ ಬಂಧಿಸಲ್ಪಟ್ಟಂತೆ ಮಣ್ಣಿನೊಂದಿಗೆ ಬಂಧಿಸಲ್ಪಟ್ಟಿದ್ದರೂ, ಸಮಯ ಕಾಲವನ್ನು ಮೀರಿ ಅವನು ಮನಮೋಹಕ ನಾಳೆಯತ್ತ ನೋಡುತ್ತಿದ್ದಾನೆ.
ಎಲ್ಲಿದೆ ಆ ಮನಮೋಹಕ‌ ನಾಳೆ?
‘ಏನ್ರೀ ಮಿಸ್ಟರ್!’ ಮನೆಯ ಯಜಮಾನನ ತಣ್ಣಗಿನ ಪ್ರಶ್ನೆ.
‘ಇಂದಾದರೂ ಕೊಡುತ್ತೀರೇನ್ರೀ?’
‘ಹಣ ಇನ್ನೂ ಸಿಕ್ಕಿಲ್ಲ. ನಾಳೆಯೋ ನಾಳಿದ್ದೋ ಕೊಡಬಲ್ಲೆ’ ಎಂದೆ.
ಆದರೆ, ಆತ ಬಿಡುವಂತೆ ತೋರುತ್ತಿಲ್ಲ.
‘ಇದೂ ಒಂದು ಬದುಕೇ?’ ಆತನ ಪ್ರಶ್ನೆ. ಪಾರಮಾರ್ಥಿಕ ಪ್ರಶ್ನೆ. ಹೀಗೆ ಏಕೆ ಬದುಕಬೇಕು? ನಾನು ಈ ಕಟ್ಟಡಕ್ಕೆ ಬಂದು ಮೂರು ವರ್ಷವಾಗುತ್ತ ಬಂತು. ಮೂರು ಕೋಣೆಗಳ ಮೌಲ್ಯವನ್ನು ಹೆಚ್ಚಿಸಿದ್ದೇನೆ. ಈಗ ಅದಕ್ಕೆಲ್ಲಾ ಒಳ್ಳೆಯ ಬಾಡಿಗೆ ಸಿಗುತ್ತಿದೆ. ಇದೀಗ ಈ ಸ್ಟೋರ್ ರೂಮನ್ನೂ ಮನುಷ್ಯ ವಾಸಕ್ಕೆ ಅರ್ಹವನ್ನಾಗಿ ಮಾಡಿದಾಗ, ಹೆಚ್ಚು ಬಾಡಿಗೆ ಕೊಡುವ ಬೇರೆ ಜನರಿದ್ದಾರಂತೆ! ಹೆಚ್ಚು ಬಾಡಿಗೆ ನಾನೇ ಕೊಡುತ್ತೇನೆ ಎಂದು ಹೇಳಿದರೆ ಸಾಲದು; ಜಾಗ ಖಾಲಿ ಮಾಡಬೇಕಂತೆ! ‘ಇಲ್ಲ! ಅದು ನನ್ನಿಂದ ಸಾಧ್ಯವಿಲ್ಲ. ಸದ್ಯಕ್ಕೆ ಜಾಗ ಖಾಲಿ ಮಾಡುವ ಯೋಚನೆಯೂ ಇಲ್ಲ. ಏನು ಮಾಡಲಿ?’
ಗಂಟೆ ನಾಲ್ಕು. ಈ ಊರು ಸಾಕಾಯ್ತು. ನನ್ನನ್ನು ಸೆಳೆಯುವಂತದ್ದೇನಿದೆ ಈ ಊರಿನಲ್ಲಿ? ಅದೇ ರಸ್ತೆಗಳು, ಅದೇ ಅಂಗಡಿಗಳು, ಅದೇ ಮುಖಗಳು! ನೋಡಿದ್ದನ್ನೇ ನೋಡಿ, ಕೇಳಿದ್ದನ್ನೇ ಕೇಳಿ ಮನಸು ಜಡ್ಡುಗಟ್ಟಿದೆ. ಬರೆಯಲು ಸಾಧ್ಯವಾಗುತ್ತಿಲ್ಲ. ಬರೆಯಲು ಏನಾದರು ಉಳಿದಿದ್ದರೆ ತಾನೇ?
ಗಂಟೆ ಆರು. ಪ್ರಸನ್ನ ಸಂಜೆ. ರಕ್ತವರ್ಣದಲ್ಲಿ ಪ್ರಜ್ವಲಿಸುತ್ತಿರುವ ಸಂಧ್ಯಾ ಸೂರ್ಯ. ಚಿನ್ನದ ಬಣ್ಣದ ಮೋಡಗಳಿಂದ ತುಂಬಿದ ಪಶ್ಚಿಮ ದಿಗಂತ. ಅಕ್ಕರೆಯಿಲ್ಲದ ಸಮುದ್ರ! ಅಲೆಗಳ ಜೊತೆ ಓಲಾಡುತ್ತಿರುವ ದಂಡೆ. ಸಿಗರೇಟು ಸೇದುತ್ತಾ ಹೊಸ ಬಟ್ಟೆಯಲಿ ವಿಹರಿಸುತ್ತಿರುವ ಯುವಕರು. ಕಿನಾರೆಯಲಿ ಪ್ರಚ್ಛನ್ನ ಶಾಂತಿ. ವರ್ಣರಂಜಿತ ಸೀರೆಗಳಲಿ ಮಂದಸ್ಮಿತರಾಗಿ ಓಡಾಡುತ್ತಿರುವ ಯುವತಿಯರು; ಅವರ ಕಣ್ಣುಗಳಲ್ಲಿ ಅದೇನೋ ಕಾಂತಿ. ಪ್ರೇಮ ನಾಟಕಗಳ ಹಿನ್ನೆಲೆ ಗೀತೆಯಂತೆ, ಪಾರ್ಕ್ ನ ಕಡೆಯಿಂದ ತೇಲಿ ಬರುತ್ತಿದೆ ಹೃದಯಕ್ಕೆ ತಂಪೆರೆಯುವ ರೇಡಿಯೋ ಗಾನ. ನಡುನಡುವೆ ಹೂವುಗಳನ್ನು ಸ್ಪರ್ಶಿಸಿ ಬೀಸಿಬರುವ ಸುವಾಸಿತ ತಂಗಾಳಿ.
ಆದರೆ, ನಾನು ಕುಸಿದುಬೀಳುವ ಸ್ಥಿತಿಯಲ್ಲಿದ್ದೇನೆ.
ಗಂಟೆ ಏಳು. ಇಂದು ಸಹ ಒಬ್ಬ ಪೊಲೀಸ್ ಪೇದೆ ನನ್ನ ರೂಮಿಗೆ ಬಂದು ನನ್ನನ್ನು ಕರೆದೊಯ್ದನು. ಕಣ್ಣು ಕೋರೈಸುವ ‘ಪೆಟ್ರೋಮ್ಯಾಕ್ಸ್’ ಬೆಳಕಿನ ಮುಂದೆ ಕುಳಿತುಕೊಳ್ಳುವಂತೆ ಹೇಳಿದನು. ವಿಚಾರಣೆಯ ವೇಳೆ ನನ್ನ ಮುಖದಲ್ಲಾಗುತ್ತಿದ್ದ ಭಾವ ವ್ಯತ್ಯಾಸಗಳನ್ನು ಗಮನಿಸುತ್ತಾ ಪೊಲೀಸ್ ಡೆಪ್ಯೂಟಿ ಕಮಿಷನರ್ ನನ್ನ ಬೆನ್ನ ಹಿಂದೆ ಕೈಕಟ್ಟಿ ಅತ್ತಿತ್ತ ನಡೆಯುತ್ತಿದ್ದನು. ಅವನ ಗಮನವಿಡೀ ನನ್ನ ಮುಖದ ಮೇಲೆ! ಅದೇನು ಭಾವ! ಅದೇನು ನೋಟ! ನಾನೋರ್ವ ಮಹಾ ಅಪರಾಧಿಯೆಂಬಂತೆ! ಒಂದು ತಾಸಿನ ವಿಚಾರಣೆ. ನಿನ್ನ ಸ್ನೇಹಿತರು ಯಾರು? ಎಲ್ಲಿಂದೆಲ್ಲ ನಿನಗೆ ಪತ್ರಗಳು ಬರುತ್ತವೆ? ಸರಕಾರವನ್ನು ಉರುಳಿಸಲು ಕೆಲಸ ಮಾಡುತ್ತಿರುವ ರಹಸ್ಯ ಗುಂಪಿನ ಸದಸ್ಯನಲ್ಲವೇ ನೀನು? ಹೊಸದಾಗಿ ಏನು ಬರೆಯುತ್ತಿರುವೆ? ಎಲ್ಲಾ ಸತ್ಯಗಳನ್ನು ಹೇಳಬೇಕು? ಮತ್ತೆ ನಿಮಗೆ ತಿಳಿದಿರಬೇಕು; ಇಲ್ಲಿಂದ ನಿಮ್ಮನ್ನು ಗಡಿಪಾರು ಮಾಡುವ ಅಧಿಕಾರ ನನಗಿದೆ’
‘ತಿಳಿದಿದೆ ಸಾರ್ ನನ್ನ ಅಸಹಾಯಕತೆ. ಕೇವಲ ಒಬ್ಬ ಪೊಲೀಸ್ ಮನಸು ಮಾಡಿದರೆ ಸಾಕು, ನನ್ನನ್ನು ಬಂಧಿಸಿ, ಲಾಕಪ್ಪಿಗೆ ಹಾಕಿ..’
ಗಂಟೆ ಏಳೂವರೆ. ರೂಮಿಗೆ ಹಿಂದಿರುಗಿ ಕತ್ತಲಲ್ಲಿ ಕೂತೆ. ಮೈ ತುಂಬಾ ಬೆವರು. ಜನ್ಮದಿನ! ಇಂದು ನನ್ನ ರೂಮಿನಲ್ಲಿ ಕತ್ತಲೆ! ಸೀಮೆಎಣ್ಣೆ ಎಲ್ಲಿಂದ ತರಲಿ? ಹಸಿವು ನೀಗಿಸಲು ಏನಾದರು ತಿನ್ನಲೇಬೇಕು. ದೇವರೇ, ಯಾರು ಕೊಡುತ್ತಾರೆ? ಯಾರೊಂದಿಗೂ ಸಾಲ ಕೇಳಲು ಸಾಧ್ಯವಿಲ್ಲ. ಮ್ಯಾಥ್ಯುನೊಂದಿಗೆ ಕೇಳಿದರೆ ಹೇಗೆ? ಬೇಡ. ಪಕ್ಕದ ಬಿಲ್ಡಿಂಗ್ ನಲ್ಲಿರುವ ಕನ್ನಡಕಧಾರಿ ವಿದ್ಯಾರ್ಥಿಯೊಂದಿಗೆ ಒಂದು ರುಪಾಯಿ ಕೇಳೋಣ. ಆತ ಏನೋ ಭಯಂಕರ ಕಾಯಿಲೆಗೆ ತುತ್ತಾಗಿ ಅದರಿಂದ ಗುಣಮುಖನಾಗಲು ಸಾಕಷ್ಟು ಹಣ ಖರ್ಚು ಮಾಡಿದ್ದ. ಕೊನೆಗೆ ನನ್ನ ನಾಲ್ಕಾಣೆಯ ಔಷಧದಿಂದ ಅವನ ಕಾಯಿಲೆ ವಾಸಿಯಾಗಿತ್ತು. ಅದಕ್ಕೆ ಪ್ರತ್ಯುಪಕಾರ ಎಂಬಂತೆ ನನ್ನನ್ನೊಮ್ಮೆ ಸಿನಿಮಾ ತೋರಿಸಲು ಕರೆದೊಯ್ದಿದ್ದ. ಈಗ ಹೋಗಿ ಒಂದು ರೂಪಾಯಿ ಕೇಳಿದರೆ ಕೊಡದಿರಬಹುದೇ?
ಗಂಟೆ ಎಂಟು ಮುಕ್ಕಾಲು. ದಾರಿಯಲ್ಲಿ ಮ್ಯಾಥ್ಯುವಿನ ಬಗ್ಗೆ ವಿಚಾರಿಸಿದೆ. ಆತ ಸಿನಿಮಾ ನೋಡಲು ಹೋಗಿದ್ದ. ಮಾತು, ಗಹಗಹಿಕೆಗಳಿಂದ ಗದ್ದಲದ ಗೂಡಾಗಿದ್ದ ಪಕ್ಕದ ಬಿಲ್ಡಿಂಗಿನ ಮೇಲ್ಭಾಗಕ್ಕೆ ಹತ್ತಿ ಹೋದೆ. ಗಮ್ಮೆನ್ನುತ್ತಿರುವ ಸಿಗರೇಟಿನ ವಾಸನೆ. ಮೇಜಿನ ಮೇಲಿರುವ ಕಂದೀಲಿನ ಬೆಳಕಿನಲ್ಲಿ ಹೊಳೆಯುತ್ತಿರುವ ಹಲ್ಲುಗಳು, ರಿಸ್ಟ್ ವಾಚ್ ಗಳು, ಚಿನ್ನದ ಗುಂಡಿಗಳು. ಅಸಹಾಯಕತೆಯ ಉಚ್ಛ್ರಾಯ ಸ್ಥಿತಿಯಲ್ಲಿ ನಾನು ಕುರ್ಚಿಯಲ್ಲಿ ಕುಳಿತೆ. ಅವರು ಮಾತನಾಡಲು ಆರಂಭಿಸಿದರು. ರಾಜಕೀಯ, ಸಿನಿಮಾ, ಕಾಲೇಜು ವಿದ್ಯಾರ್ಥಿನಿಯರ ಅಂಗವರ್ಣನೆ, ದಿನಕ್ಕೆರಡು ಬಾರಿ ಸೀರೆ ಬದಲಾಯಿಸುವ ವಿದ್ಯಾರ್ಥಿನಿಯರ ಹೆಸರುಗಳು ಹೀಗೆ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದರು. ಎಲ್ಲದಕ್ಕೂ ನಾನು ನನ್ನ ಅಭಿಪ್ರಾಯ ಮಂಡಿಸಿದೆ. ನಡುವೆ ನಾನೊಂದು ಕಾಗದದ ತುಂಡಿನಲ್ಲಿ ಹೀಗೆ ಬರೆದೆ; ‘ಒಂದು ರುಪಾಯಿ ಬೇಕಿತ್ತು. ಬಹಳ ಅಗತ್ಯವಿದೆ. ಎರಡು ಮೂರು ದಿನದಲ್ಲಿ ಹಿಂದಿರುಗಿಸುತ್ತೇನೆ’
ಕನ್ನಡಕಧಾರಿ ನನ್ನ ನೋಡಿ ನಕ್ಕನು. ‘ಸಣ್ಣಕತೆಗೆ ಟಿಪ್ಪಣಿ ಮಾಡುತ್ತಿದ್ದೀರಾ?’
‘ಹಾಗೇನೂ ಇಲ್ಲ’ ನಾನು ಹೇಳಿದೆ.
ಅನಂತರ ಸಣ್ಣಕತೆಯ ಬಗ್ಗೆ ಸಂಭಾಷಣೆ ನಡೆಯಿತು.
‘ನಮ್ಮ ಭಾಷೆಯಲ್ಲಿ ಉತ್ತಮ ಸಣ್ಣಕತೆಗಳೇ ಇಲ್ಲ’
‘ಅಷ್ಟಕ್ಕೂ ನಮ್ಮ ಭಾಷೆಯಲ್ಲಿ, ಊರಿನಲ್ಲಿ ಉತ್ತಮವಾದುದೇನಾದರು ಇದೆಯೇ? ಒಳ್ಳೆಯ ಗಂಡಸರು ಹೆಂಗಸರೆಲ್ಲ ಸಮುದ್ರದಾಚೆಗಿದ್ದಾರೆ’
‘ಯಾರ ಸಣ್ಣಕತೆಗಳನ್ನೆಲ್ಲಾ ಓದಿರುವಿರಿ?’ ಎಂದು ಕೇಳಿದೆ.
ಹೆಚ್ಚೇನೂ ಓದಿಲ್ಲ. ಮೊದಲನೇಯದಾಗಿ ಮಾತೃಭಾಷೆಯಲ್ಲಿ ಏನಾದರು ಓದುವುದೆಂದರೇನೇ ಘನತೆಗೆ ಕುಂದು. ನಾನು ಅನೇಕ ಸಣ್ಣಕತೆಗಾರರ ಹೆಸರು ಹೇಳಿದೆ. ಅವರಲ್ಲಿ ಅನೇಕ ಮಂದಿಯ ಹೆಸರನ್ನೂ ಅವರು ಕೇಳಿಲ್ಲ.
‘ಇಂಗ್ಲೀಷ್ ಮಾತ್ರವಲ್ಲ; ಲೋಕದ ಎಲ್ಲಾ ಭಾಷೆಯ ಸಣ್ಣಕತೆಗಳೊಂದಿಗೆ ಸ್ಪರ್ಧಿಸಬಲ್ಲ ಉತ್ತಮ ಕತೆಗಳು ಇಂದು ನಮ್ಮ ಭಾಷೆಯಲ್ಲಿದೆ. ನೀವು ಯಾಕೆ ಅವನ್ನೆಲ್ಲ ಓದುತ್ತಿಲ್ಲ’
‘ಹಾ…ಕೆಲವೊಂದನ್ನು ನಾವೂ ಓದಿದ್ದೇವೆ. ಹೆಚ್ಚಿನವುಗಳು ಬಡತನವನ್ನು ಹೇಳುವ ಕಥೆಗಳು. ಅವುಗಳನ್ನೆಲ್ಲ ಯಾಕೆ ಬರೆಯಬೇಕೋ?’
ನಾನು ಮಾತನಾಡಲಿಲ್ಲ.
‘ನಿಮ್ಮ ಕತೆಗಳನ್ನೆಲ್ಲ ಓದಿದರೆ..’ ಚಿನ್ನದ ಕನ್ನಡಕಧಾರಿ ತೀರ್ಪು ನೀಡಿದ.
‘..ಇಡೀ ಜಗತ್ತಿಗೆ ಏನೋ ದೊಡ್ಡ ಸಮಸ್ಯೆ ಇದೆ ಅನ್ನಿಸುತ್ತದೆ’
ಲೋಕಕ್ಕೆ ಏನು ಸಮಸ್ಯೆ? ಅಪ್ಪ ಅಮ್ಮ ಮೈಮುರಿದು ದುಡಿದು ಹಣ ಕಳುಹಿಸುತ್ತಾರೆ. ಅದನ್ನು ಖರ್ಚು ಮಾಡಿ ಶಿಕ್ಷಣ ಪಡೆಯುತ್ತಾರೆ. ಸಿಗರೇಟು, ಚಹಾ, ಕಾಫಿ, ಐಸ್ ಕ್ರೀಮ್, ಸಿನಿಮಾ, ಕುಟ್ಟಿಕುರ ಪೌಡರ್, ವಾಸ್ ಲೆಯಿನ್, ಸ್ಪ್ರೇ, ದುಬಾರಿ ಬಟ್ಟೆಬರೆಗಳು, ದುಬಾರಿ ಆಹಾರ, ಮದ್ಯ, ಮಾದಕ ದ್ರವ್ಯ, ಸಿಫಿಲಿಸ್, ಗುನೋರಿಯ- ಹೀಗೆ ಇನ್ನೂ ಹಲವು.
ಭವಿಷ್ಯದ ಪ್ರಜೆಗಳು! ಊರು ಆಳಬೇಕಾದವರು, ಕಾನೂನು ಜಾರಿಗೊಳಿಸಬೇಕಾದವರು, ಬುದ್ಧಿಜೀವಿಗಳು, ಸಾಂಸ್ಕೃತಿಕ ನಾಯಕರುಗಳು, ಧಾರ್ಮಿಕ ನೇತಾರರು, ರಾಜಕೀಯ ನೇತಾರರು, ದಾರ್ಶನಿಕರು!
ಲೋಕಕ್ಕೇನು ಸಮಸ್ಯೆ?
ನನಗೆ ಭೀಷಣ ಭಾಷಣವೊಂದನ್ನು ಮಾಡಬೇಕನಿಸಿತು.
‘ಇಂದಿನ ಲೋಕ..’ ಆರಂಭಿಸಿದೆ.
ಅಷ್ಟರಲ್ಲಿ ಕೆಳಗಿನಿಂದ ಕ್ಷೀಣ ದನಿ ಕೇಳಿಸಿತು;
‘ಮೆಟ್ಟು ಬೇಕೆ ಮೆಟ್ಟು’
‘ತಗೊಂಡು ಬಾ’ ಕನ್ನಡಕಧಾರಿ ನಗುತ್ತಾ ಆಜ್ಞಾಪಿಸಿದನು. ಅಲ್ಲಿಗೆ ವಿಷಯಾಂತರವಾಯಿತು. ನಾನು ಬೆಳಗ್ಗೆ ನೋಡಿದ ಪುಟ್ಟ ಮಕ್ಕಳು ಮೇಲೆ ಹತ್ತಿ ಬಂದರು! ಅವರು ಏದುಸಿರುಬಿಡುತ್ತಿದ್ದರು. ಅವರ ಕಣ್ಣುಗಳು ಬತ್ತಿ ಹೋಗಿದ್ದವು. ಮುಖಗಳು ಬಾಡಿದ್ದವು. ತುಟಿಗಳು ಸುರುಟಿ ಒಣಗಿದ್ದವು.
ವಿಷಾದಭಾವದಿಂದ ಹಿರಿಯವನು ಹೇಳಿದನು; ‘ಸಾರ್, ನಿಮಗೆ ಬೇಕಿದ್ದರೆ ಎರಡುವರೆ ಆಣೆಗೆ ಕೊಡುತ್ತೇನೆ’
ಬೆಳಿಗ್ಗೆ ಮೂರಾಣೆಯಾಗಿತ್ತು.
‘ಎರಡುವರೆ ಆಣೆಯೇ?’ ಅನುಮಾನದಿಂದ ಕನ್ನಡಕಧಾರಿ ತಿರುಗಿಸಿ ಮರುಗಿಸಿ ನೋಡಿದನು.
ಮೆಟ್ಟು ಅಲ್ವಲ್ಲಾ' ಸರ್, ಇದು ಮೆಟ್ಟು’
‘ನಿಮ್ಮ ಮನೆಯೆಲ್ಲಿ ಮಕ್ಕಳೇ’ ನನ್ನ ಪ್ರಶ್ನೆಗೆ ದೊಡ್ಡ ಹುಡುಗ ಉತ್ತರಿಸಿದ,
‘ಇಲ್ಲಿಂದ ಮೂರು ಮೈಲಿ ದೂರದಲ್ಲಿ ನಮ್ಮ ಮನೆ’
‘ಎರಡಾಣೆ ಕೊಡುತ್ತೇ‌ನೆ’ ಚಿನ್ನದ ಕನ್ನಡಕಧಾರಿ ಹೇಳಿದ.
‘ಸಾರ್, ಎರಡು ಕಾಲಾಣೆ ಕೊಡಿ’
‘ಬೇಡ’
‘ಬೇಡ್ವೇ?’ ಬೇಸರದಿಂದ ಆ ಮಕ್ಕಳು ಹೊರಟರು.
ಕನ್ನಡಕಧಾರಿ ಮತ್ತೆ ಅವರನ್ನು ಕರೆದನು.
‘ತಗೊಂಡು ಬಾರೋ’
ಅವರು ಮತ್ತೆ ಬಂದರು. ಇದ್ದುದರಲ್ಲಿ ಒಳ್ಳೆಯ ಎರಡು ಜೋಡಿ ಆಯ್ದು ತೆಗೆದು ಹತ್ತು ರುಪಾಯಿಯ ನೋಟು ತೋರಿಸಿದನು. ಮಕ್ಕಳ ಬಳಿ ನಯಾಪೈಸೆಯೂ ಇರಲಿಲ್ಲ. ಬೆಳಗ್ಗಿನಿಂದ ಅವರು ತಿರುಗಾಡಿದ್ದೇ ಬಂತು. ಯಾರೂ ಖರೀದಿಸಿರಲಿಲ್ಲ. ಮೂರು ಮೈಲಿ ದೂರದಲ್ಲಿ ಯಾವುದೋ ಒಂದು ಗುಡಿಸಲಿನಲ್ಲಿ ಒಲೆಯ ಮೇಲೆ ನೀರಿಟ್ಟು ಮಕ್ಕಳ ಆಗಮನಕ್ಕಾಗಿ ಕಾಯುತ್ತಿರುವ ತಂದೆತಾಯಿಗಳ ಚಿತ್ರ ನನ್ನ ಕಲ್ಪನೆಯಲ್ಲಿ ಮೂಡಿತು.
ಕನ್ನಡಕಧಾರಿ ಎಲ್ಲಿಂದಲೋ ಎರಡಾಣೆ ಹುಡುಕಿ ತಂದುಕೊಟ್ಟನು.
‘ಸರ್, ಕಾಲಾಣೆ’
‘ಇಷ್ಟೇ ಇರುವುದು; ಇಲ್ಲದಿದ್ದರೆ ಬೇಡ ತಗೋ ಈ ಮೆಟ್ಟು’
ಮಕ್ಕಳು ಪರಸ್ಪರರ ಮುಖ ನೋಡಿ ಮರುಮಾತನಾಡದೆ ಹೊರಟು ಹೋದರು.
ಇಲೆಕ್ಟ್ರಿಟ್ ಬೆಳಕಿನ ಕೆಳಗಿನ ರಸ್ತೆಯಲ್ಲಿ ಆ ಪುಟ್ಟ ಮಕ್ಕಳು ನಡೆದು ಹೋಗುತ್ತಿರುವುದನ್ನು ನೋಡುತ್ತಾ ಸ್ವರ್ಣ ಕನ್ನಡಕಧಾರಿ ನಕ್ಕನು;
‘ಮೂರ್ಖರು! ನಾನು ಕೊಟ್ಟ ಎರಡಾಣೆಯಲ್ಲಿ ಒಂದು ನಕಲಿ’
‘ಹ್ಹಹ್ಹಹ್ಹ’ ಎಲ್ಲರೂ ಗಹಗಹಿಸಿದರು. ವಿದ್ಯಾರ್ಥಿಗಳಲ್ಲವೇ. ಏನು ಮಾಡಲಿಕ್ಕಾಗುತ್ತದೆ. ಬಡತನದ ಬೇಗುದಿ ಏನೆಂದು ತಿಳಿದಿಲ್ಲ ಎಂದು ಯೋಚಿಸಿದೆ. ಚೀಟಿಯಲ್ಲಿ ಬರೆದಿದ್ದನ್ನು ಯಾರಿಗೂ ಕಾಣಿಸದೆ ಕನ್ನಡಕಧಾರಿಯ ಕೈಗಿತ್ತೆ. ಆತ ಅದನ್ನು ಓದುತ್ತಿರಬೇಕಾದರೆ ನನ್ನ ಮನಸು ಹೋಟೆಲ್ ನ ಒಳಗಡೆಯಿತ್ತು. ಬಿಸಿ ಹಬೆಯಾಡುವ ಊಟದ ಮುಂದೆ ನಾನು ಕೂತಿದ್ದೇನೆ! ಅಷ್ಟರಲ್ಲಿ ಚೀಟಿ ಓದಿ ಕನ್ನಡಕಧಾರಿ ಎಲ್ಲರಿಗೂ ಕೇಳಿಸುವಂತೆ ಬೊಬ್ಬಿಟ್ಟನು.
‘ಸಾರಿ, ಚೇಂಜ್ ಇಲ್ಲ’
ಆತನ ಮಾತು ಕೇಳುತ್ತಿದ್ದಂತೆ ನನಗೆ ನನ್ನ ದೇಹದಿಂದ ಬಿಸಿಗಾಳಿ ಎದ್ದು ಹೋದಂತೆ ಭಾಸವಾಯಿತು. ಬೆವರೊರೆಸಿಕೊಳ್ಳುತ್ತಾ ನಾನು ಕೆಳಗಿಳಿದು ರೂಮಿನತ್ತ ನಡೆದೆ.
ಗಂಟೆ ಒಂಬತ್ತು. ಚಾಪೆ ಹಾಸಿ ಮಲಗಿದೆ. ಆದರೆ, ನಿದ್ರೆ ಹತ್ತುತ್ತಿಲ್ಲ. ತಲೆ ಗುಂಯ್ ಎನ್ನುತ್ತಿತ್ತು. ಆದರೂ, ಮಲಗಿದೆ; ಈ ಲೋಕದ ಅಸಹಾಯಕರ ಕುರಿತು ಯೋಚಿಸುತ್ತಾ! ಎಷ್ಟು ಕೋಟಿ ಸ್ತ್ರೀಪುರುಷರು ಈ ಸುಂದರವಾದ ಭೂಮಿಯ ಮೇಲೆ ಹಸಿವಿನಿಂದ ಮಲಗಿರಬಹುದು! ಅವರ ನಡುವೆ ನಾನೂ ಒಬ್ಬ! ನನಗೇನಿದೆ ವಿಶೇಷತೆ? ನಾನೊಬ್ಬ ಬಡವ! ಅಷ್ಟೇ. ಹೀಗೆ ಯೋಚಿಸುತ್ತಾ ಮಲಗಿರಬೇಕಾದರೆ ನನ್ನ ಬಾಯಿಯಲ್ಲಿ ಲಾಲಾರಸ ತುಂಬಿತು. ಮ್ಯಾಥ್ಯುವಿನ ಅಡುಗೆ ಮನೆಯಿಂದ ಒಗ್ಗರಣೆಯ ಶಬ್ಧ! ಬೆಂದ ಅನ್ನದ ಪರಿಮಳ!
ಗಂಟೆ ಒಂಬತ್ತುವರೆ. ಮತ್ತೆ ಹೊರಗಿಳಿದು ನಡೆದೆ. ಹೃದಯ ಒಡೆದು ಹೋಗುವಷ್ಟು ಜೋರಾಗಿ ಎದೆ ಬಡಿದುಕೊಳ್ಳುತ್ತಿತ್ತು. ಯಾರಾದರೂ ನೋಡಿದರೆ!? ಮೈ ವಿಪರೀತವಾಗಿ ಬೆವರತೊಡಗಿತು! ಹಿತ್ತಲಲ್ಲಿ ಅಡಗಿ ನಿಂತು ನೋಡಿದೆ. ಅದೃಷ್ಟ ಅನ್ನಬೇಕು; ವೃದ್ಧ ವ್ಯಕ್ತಿ ದೊಂದಿ ಮತ್ತು ಕೊಡೆಯೊಂದಿಗೆ ಹೊರಗೆ ಬಂದನು. ಅಡುಗೆ ಮನೆಯ ಬಾಗಿಲು ನಿಧಾನಕ್ಕೆ ಮುಚ್ಚಿ ಪೈಪ್ ನ ಬಳಿ ಹೋದೆ. ಕಡಿಮೆಯೆಂದರೆ ಹತ್ತು ಮಿನಿಟು ಬೇಕು. ಶಬ್ಧ ಬರದಂತೆ ಎಚ್ಚರಿಕೆಯಿಂದ ನಡೆದು ಹೃದಯ ಬಡಿತವನ್ನು ತಡೆ ಹಿಡಿಯಲಾಗದೆ ಮೆಲ್ಲನೆ ಅಡುಗೆ ಮನೆಯ ಒಳಗೆ ನುಗ್ಗಿದೆನು.
ಹತ್ತು ಗಂಟೆ. ಹೊಟ್ಟೆ ತುಂಬಿದ ಸಂತೃಪ್ತಿಯೊಂದಿಗೆ ಬೆವರಿನಲ್ಲಿ ಸ್ನಾನ ಮಾಡಿ ಹೊರಗಿಳಿದೆ. ವೃದ್ಧ ಹಿಂದಿರುಗಿ ಬಂದಾಗ ನಾನು ನಳ್ಳಿಯಿಂದ ನೀರು ಕುಡಿದು, ಕೈಕಾಲು ಮುಖ ತೊಳೆದು ನನ್ನ ರೂಮಿಗೆ ಹಿಂದಿರುಗಿ, ಬೀಡಿ ಹೊತ್ತಿಸಿದೆ. ಒಟ್ಟಿನಲ್ಲಿ ಅದೇನೋ ಸಂತೃಪ್ತ ಭಾವ! ಆದರೂ, ಏನೋ ಬಳಲಿಕೆ. ದಣಿವು. ಮಲಗಿದೆ. ನಿದ್ರೆ ಹತ್ತುವ ಮೊದಲು ಮತ್ತೆ ಆಲೋಚನೆ ಶುರುವಾಯಿತು; ಆ ವೃದ್ಧನಿಗೆ ತಿಳಿದಿರಬಹುದೇ? ಹಾಗಾದರೆ ಆತ ಮ್ಯಾಥ್ಯುಗೆ ಹೇಳುತ್ತಾನೆ. ಇತರ ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೂ ವಿಷಯ ಗೊತ್ತಾಗುತ್ತದೆ. ಮಾನಗೆಡುತ್ತದೆ. ಏನಾದರೂ ಆಗಲಿ; ಬರುವುದೆಲ್ಲ ಬರಲಿ. ಜನ್ಮದಿನವಲ್ಲವೇ ಸುಖ ನಿದ್ರೆ ಮಾಡೋಣ!
ಎಲ್ಲರ ಎಲ್ಲಾ ಜನ್ಮದಿನಗಳು.. ಮನುಷ್ಯ.. ಬಡಪಾಯಿ.. ನನಗೆ ನಿದ್ರೆಯ ಮಂಪರು ಕವಿಯಿತು.
ಅಷ್ಟರಲ್ಲಿ ನನ್ನ ರೂಮ್ ಕಡೆಗೆ ಯಾರೋ ಬರುತ್ತಿರುವ ಶಬ್ಧ.
‘ಹಲೋ ಮಿಸ್ಟರ್!’ ಮ್ಯಾಥ್ಯು ಕರೆಯುತ್ತಿದ್ದಾನೆ. ನಾನು ಬೆವರತೊಡಗಿದೆ. ನಿದ್ರೆ ಹಾರಿಹೋಯಿತು. ತಿಂದದ್ದೆಲ್ಲ ಜರ್ರನೆ ಇಳಿದ ಹಾಗಾಯಿತು. ಮ್ಯಾಥ್ಯುಗೆ ಎಲ್ಲ ತಿಳಿಯಿತು. ಮುದುಕ ಎಲ್ಲ ಹೇಳಿದ್ದಾನೆ.
ಬಾಗಿಲು ತೆರೆದೆ.
ಕತ್ತಲ ಗರ್ಭದಿಂದ ಎದ್ದು ಬಂದಂತೆ ತೀಕ್ಷ್ಣ ಬೆಳಕೊಂದು ಗಾಳಿಯ ವೇಗದಲ್ಲಿ ಬಂದು ಮುಖಕ್ಕೆ ರಾಚಿತು!
ಅದು ಟಾರ್ಚ್ ಲೈಟ್!
ನಾನು ಅದರ ಬೆಳಕಿನಲ್ಲಿ ಸಿಲುಕಿಕೊಂಡಿದ್ದೆ.
‘ಮ್ಯಾಥ್ಯು ಏನು ಹೇಳಬಹುದು!?’ ಭ್ರಾಂತ ಸ್ಥಿತಿಯಲ್ಲಿ ನಿಂತು ಯೋಚಿಸಿದೆ.
‘ಐಸ ಸಿನಿಮಕ್ಕೆ ಹೋಗಿದ್ದಳು. ವಿಕ್ಟರ್ ಹ್ಯೂಗೊ ನ ‘ಬಡಪಾಯಿಗಳು’. ನೀವು ನೋಡಲೇಬೇಕಾದ ಚಿತ್ರ. ಅದ್ಭುತ ಚಿತ್ರ’
‘ಹಾ…’
‘ನಿಮ್ಮ ಊಟ ಆಯಿತೇ? ನನಗೆ ಹಸಿವಿಲ್ಲ. ಅನ್ನ ವೇಸ್ಟ್ ಆಗಬಾರದಲ್ಲವೇ. ಬನ್ನಿ ಊಟ ಮಾಡೋಣ. ದಾರಿಮಧ್ಯೆ ನಾವು ಮೋಡಲ್ ಹೋಟೆಲ್ ಗೆ ಹೋಗಿ ಬಂದೆವು’
‘ಥ್ಯಾಂಕ್ಸ್. ನನ್ನ ಊಟ ಆಯಿತು’
‘ಓಹೋ.. ಹಾಗಾದರೆ ಮಲಗಿ. ಗುಡ್ ನೈಟ್’
‘ಯಸ್, ಗುಡ್ ನೈಟ್!’


ಮಲಯಾಳಂ ಮೂಲ: ವೈಕಂ ಮುಹಮ್ಮದ್ ಬಶೀರ್
ಕನ್ನಡಕ್ಕೆ‌: ಸ್ವಾಲಿಹ್ ತೋಡಾರ್

Leave a Reply

*