ಸದಾ – ಏ – ದರ್ದ್

ದ್ವೇಷ ಬೇಗೆಯಲಿ ದಹಿಸುತಿರುವೆ
ಬರಿದಾಗಿದೆ ಬದುಕುವಾಸೆಯಿಲ್ಲಿ,
ಮುಳುಗಿಸಿಬಿಡು ಓ ಗಂಗಾ ನದಿಯೆ
ಆ ನಿನ್ನ ಪ್ರಕ್ಷುಬ್ದ ತರಂಗಗಳಲ್ಲಿ!

ರಣರಂಗವಾಗಿಹುದು
ಜನ್ಮ ಭೂಮಿಯಿಲ್ಲಿ
ಅದೆಂತಹಾ ಬಾಂಧವ್ಯ!
ವಿರಹ ಬಂದು ಕುಳಿತಿಹುದು
ಪ್ರೇಮದಂಗಳದಲ್ಲಿ!

ಪ್ರೀತಿಯೇ ಸಿಡಿದೆದ್ದಿಹುದು
ದ್ವೇಷಕ್ಕೆ ಎದುರಾಗಿ
ಒಂದೇ ಹೊಲದೊಳಗೆ
ಫಸಲುಗಳು ಕಾದಾಡುತಿಹವು

ಸ್ನೇಹ ತಂಗಾಳಿ ಬೀಸಲಿಲ್ಲವೆಂದೂ
ಆ ಹೂದೋಟದಲ್ಲಿ
ಮೈನಾ ಹಕ್ಕಿಯ ಹಾಡೂ
ಕೇಳಿ ಬರುವುದೆಂತು ಈ ನಾಡಿನಲ್ಲಿ

ಸನಿಹ ಸುಖದಿ ಮಿಂದೇಳುವವನು
ನನ್ನೊಳಗೆ ಕಳೆದು ಹೋಗುತಿಹೆನು,
ಭೊರ್ಗರೆವ ಅಲೆಗಳೊಳಗೆ
ಕಳೆದು ಹೋಗುತಿರುವ ಕಿನಾರೆಯಲಿ
ಭಯಭೀತನಾಗಿಹೆನು

ಕವಿ ಹೃದಯವರಳುವುದು
ಫಸಲುದಿಸುವಂತೆ ಹೊಲದಲ್ಲಿ
ಕಳೆದು ಹೋಗುತಿದೆ ನೆಲವು
ಫಸಲೊಡೆಯುವ ತಾಣವೆಲ್ಲಿ

ಮುಕ್ತ ಸೌಂದರ್ಯದ ರತಿಯ ಕೇಳುವವರಾರು
ಮಿಲನ ಕಾತರದ ಮನ್ಮಥನೆ ಇರದಲ್ಲಿ,
ಎಷ್ಟು ಬೆಳಗಿದರೇನು ಈ ದೀಪ
ಸಂಭ್ರಮಿಸುವ ಜನರಿಲ್ಲದ ಊರಿನಲ್ಲಿ

ಮಾತುಗಳೆಲ್ಲವೂ ಮೌನವಾಗಿ
ಬದಲಾಗುತ್ತಿಲ್ಲವೇಕೆ,
ಈ ಹೆಮ್ಮೆಯೊಂದು ಕನ್ನಡಿಯೊಳಗಿಂದ
ಮರೆಯಾಗುವುದಿಲ್ಲವೇಕೆ?

ಅದೋ! ದಗ್ಧವಾಗುತಿವೆ ಹೂದೋಟ
ರಣರಂಗದ ಬೆಂಕಿಯಲ್ಲಿ
ಭಸ್ಮವಾಗುತಿವೆ ಕವಿತೆಗಳು
ನನ್ನ ಹೃದಯದಲ್ಲಿ !

ಉರ್ದು ಮೂಲ: ಅಲ್ಲಾಮಾ ಇಕ್ಬಾಲ್
ಅನುವಾದ: ಪುನೀತ್ ಅಪ್ಪು

1 Comment

  1. ಅತ್ಯಂತ ಸುಂದರವಾದ ಸೊಗಸಾದ ಅರ್ಥಪೂರ್ಣ ಕವಿತೆ

Leave a Reply to Prakash Konapur Cancel reply

*