ವಿಜ್ಞಾನ, ತತ್ವಜ್ಞಾನ ಹಾಗೂ ಸಾಹಿತ್ಯ: ಭಾಷೆ ರೂಪಿಸುವ ಪ್ರಪಂಚಗಳು

ಸುಂದರ್‌ ಸರುಕ್ಕೈ/ಮಶ್ಕೂರ್‌ ಖಲೀಲ್

ಉ: ಕ್ಯಾಲಿಕಟ್‌ಗೆ ಬರುವುದೆಂದರೆ ನನಗ್ಯಾವತ್ತೂ ಇಷ್ಟ. ಇಲ್ಲಿರುವ ವಿವಿಧ ಗುಂಪುಗಳ ಜೆತಗೆ ಮಾತಾಡುವುದು ಹಾಗೂ ಚಿಂತನೆಗಳನ್ನು ಹಂಚಿಕೊಳ್ಳುವುದು ದೊಡ್ಡದೊಂದು ಅನುಭವ ನೀಡುತ್ತದೆ. ನನ್ನ ಪ್ರಕಾರ, ವಿಜ್ಞಾನದ ವಿಭಾಗಗಳು ಜಗತ್ತನ್ನು ಗ್ರಹಿಸಲು ನಾವೇ ನಿರ್ಮಿಸಿಕೊಂಡಿರುವ ಕೆಲವು ಚೌಕಟ್ಟುಗಳಾಗಿವೆ. ಭೌತವಿಜ್ಞಾನದಲ್ಲಿ ನಾನು ಆಸಕ್ತನಾಗಿದ್ದ ಸಂದರ್ಭದಲ್ಲಿ ಅದು ಜಗತ್ತನ್ನು ಗ್ರಹಿಸುವ ಒಂದು ಮಾರ್ಗ ಎಂದು ಭಾವಿಸಿದ್ದೆ. ಈಗಲೂ ಅಷ್ಟೇ.

ಭೌತವಿಜ್ಞಾನ ಹಾಗೂ ಗಣಿತ ಬಹಳ ನಿಕಟವಾಗಿವೆ. ಅವುಗಳ ಆಸ್ವಾದನೆ ನನಗೆ ಇಷ್ಟ. ಆದರೆ, ಭೌತವಿಜ್ಞಾನದ ವೃತ್ತದೊಳಗೆ ನಿಂತುಕೊಂಡು ಕಂಡುಹಿಡಿಯಲು ಸಾಧ್ಯವಾಗದ ಕೆಲವು ಮೂಲಭೂತ ಪ್ರಶ್ನೆಗಳಿವೆಯೆಂದು ನನಗೆ ಕ್ರಮೇಣ ಅನಿಸತೊಡಗಿತು. ಬಾಲ್ಯದಲ್ಲೆ ಸಾಹಿತ್ಯದಲ್ಲಿ ನನಗೆ ಒಲವಿತ್ತು. ಹಾಗಾಗಿ, ಸಾಹಿತ್ಯ ಹಾಗೂ ತತ್ವಜ್ಞಾನ ಜಗತ್ತಿನ ಬಗ್ಗೆ ಆಲೋಚಿಸಲು ಬೇರೊಂದು ಚಿಂತನಾ ಚೌಕಟ್ಟನ್ನು ಒದಗಿಸಿತು. ತತ್ವಜ್ಞಾನದ ಕಡೆಗಿನ ಪಯಣವನ್ನು ನನ್ನ ಚಿಂತನೆಯ ಸಹಜ ಹಂತವೆಂದೆ ನಾನು ಭಾವಿಸಿದ್ದೇನೆ. ಆದರೆ, ಯಾವ ಕ್ಷೇತ್ರಕ್ಕೆ ಹೋಗುವುದಿದ್ದರೂ ಅದನ್ನು ಸಾಧ್ಯವಾಗಿಸುವ ಕೆಲವು ಸಾಂಸ್ಥಿಕ ಅಂಶಗಳಿವೆ. ಭೌತವಿಜ್ಞಾನದಲ್ಲಿ ಪಿಎಚ್ಡಿ ಮಾಡುವಾಗಲೇ ತತ್ವಚಿಂತನೆ ಕಲಿಯುವ ಅವಕಾಶ ಸಿಕ್ಕಿತ್ತು. ಅದುವೆ ಈ ಪಲ್ಲಟಕ್ಕೆ ನಾಂದಿ ಹಾಡಿತು.

ಉ: ಸ್ವಾರಸ್ಯಕರವಾದ ಪ್ರಶ್ನೆಯಿದು. ಭೌತದಿಂದ ತತ್ವಕ್ಕೆ ಪಲ್ಲಟಗೊಂಡಾಗ ಸ್ವತಂತ್ರವಾದ ಸಮಸ್ಯೆಗಳೊಂದಿಗೆ ನಾನು ಅನುಸಂಧಾನ ನಡೆಸಿದೆ ಎಂದು ಹೇಳುವ ಹಾಗಿಲ್ಲ. ಪ್ರತಿ ವಿಭಾಗಕ್ಕೂ ಅದರದ್ದೇ ಆದ ಸ್ವಾತಂತ್ರ್ಯ ಹಾಗೂ ಮಿತಿಗಳಿವೆ. ಭೌತವಿಜ್ಞಾನದಲ್ಲಿ ಬಹಳ ಸ್ವಾರಸ್ಯಕರ ಪ್ರಶ್ನೆಗಳಿಗೆ ಸಾಧ್ಯತೆ ಇದೆ. ಅದಾಗ್ಯೂ, ಆ ನೆಲೆಗಟ್ಟಿನ ಸಂಶೋಧನೆಗಳು ನನ್ನ ಕುತೂಹಲವವನ್ನು ಪೂರ್ಣವಾಗಿ ತೃಪ್ತಿಪಡಿಸಲಿಲ್ಲ. ಮನುಷ್ಯರು, ಸಂಸ್ಕೃತಿಗಳು ಹಾಗೂ ಸಮಾಜಗಳ ಬಗೆಗಿನ ಅಧ್ಯಯನದಲ್ಲಿ ನನಗೆ ಹೆಚ್ಚಿನ ಒಲವಿತ್ತು. ನಾವು ಬದುಕುವ ಜಗತ್ತಿನ ಸಾಮಾಜಿಕ ಲೋಕ ಹಾಗೂ ವೈಯುಕ್ತಿಕ ಮನೋವಿಜ್ಞಾನವನ್ನು ಅರ್ಥೈಸುವ ಪ್ರಯತ್ನ ಅದಾಗಿತ್ತು. ಆ ಪ್ರಶ್ನೆಗಳು ನನ್ನ ವೈಜ್ಞಾನಿಕ ಅಧ್ಯಯನಗಳ ಮೇಲೂ ಪ್ರಭಾವ ಬೀರಿತು. ವೈಜ್ಞಾನಿಕ ಅಧ್ಯಯನ ಬಹಳ ಕ್ಲಿಷ್ಟಕರವಾದ ಪ್ರವೃತ್ತಿ ಎನ್ನುವುದನ್ನೂ ನಾವಿಲ್ಲಿ ತಿಳಿಯಬೇಕಿದೆ. ಅತಿ ಏಕಾಗ್ರತೆ ಹಾಗೂ ನಿರಂತರ ಪರಿಶ್ರಮ ಅದಕ್ಕೆ ಅವಶ್ಯಕ. ನುರಿತ ವಿಜ್ಞಾನಿಗಳು ಕೂಡಾ ಬಹುತೇಕ ವೇಳೆ ತಮ್ಮ ಆಸಕ್ತಿಕರ ಕ್ಷೇತ್ರಗಳನ್ನು ಕೈಬಿಡಬೇಕಾಗಿ ಬರುತ್ತದೆ. ಒಂದು ಹಂತದಲ್ಲಿ ನನಗೂ ಅದು ಅರ್ಥವಾಯಿತು. ಆ ತ್ಯಾಗಕ್ಕೆ ನಾನು ಸಿದ್ಧನಾದದ್ದು ಭೌತವಿಜ್ಞಾನಕ್ಕಲ್ಲ, ತತ್ವಜ್ಞಾನಕ್ಕಾಗಿ.

ಭೌತವಿಜ್ಞಾನದ ಮಾದರಿಗಳನ್ನು ನಿರ್ಮಿಸಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯವಾದ ಚೈತನ್ಯವನ್ನು ಖರ್ಚು ಮಾಡುವ ಆಸಕ್ತಿ ನನಗಿರಲಿಲ್ಲ. ಆದರೆ, ತತ್ವಜ್ಞಾನ ಕಲಿಯಲು, ಬರೆಯಲು ಹಾಗೂ ಆ ಕ್ಷೇತ್ರದಲ್ಲಿ ಕಠಿಣ ಪರಿಶ್ರಮಪಡಲು ನಾನು ತಯಾರಿದ್ದೆ. ಆ ಕ್ಷೇತ್ರ ನನ್ನನ್ನು ಬಹಳ ಆಕರ್ಷಿಸಿತ್ತು. ಒಂದು ಆಯಾಮದಲ್ಲಿ ವಿಜ್ಞಾನವನ್ನು ಗೌರವಿಸಲು ಹಾಗೂ ಮೌಲ್ಯಯುತವಾಗಿ ಕಾಣಲು ತತ್ವಜ್ಞಾನ ನನಗೆ ಸಹಾಯ ಮಾಡಿದೆ ಎನ್ನಬಹುದು. ಯಾವುದೇ ವಿಷಯದ ಮೌಲಿಕತೆಯನ್ನು ನಾವು ಗ್ರಹಿಸುವುದು ತತ್ವಜ್ಞಾನದ ಮೂಲಕವೇ. ವಿಜ್ಞಾನ ವಿಕಾಸವಾದದ್ದು ಹೇಗೆ, ಅದು ಯಾಕೆ ನಿಗದಿತ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನೆಲ್ಲಾ ಅರ್ಥ ಮಾಡಲು ಆರಂಭಿಸಿದೆ. ವಿಜ್ಞಾನದ ಇತಿಹಾಸ ಹಾಗೂ ತತ್ವಜ್ಞಾನ ಬಹಳ ಆಕರ್ಷಕ ಲೋಕವಾಗಿ ನನ್ನ ಮುಂದೆ ಬಂದು ನಿಂತಿತು.

ಆಮೇಲೆ ʼವಿಜ್ಞಾನದ ಸಮಾಜವಿಜ್ಞಾನʼವನ್ನು ಓದಲು ಆರಂಭಿಸಿದಾಗ ವಿಜ್ಞಾನ ಸೇರಿದಂತೆ ಮನುಷ್ಯನ ಯಾವುದೇ ಕೆಲಸಗಳು ಎಷ್ಟು ಸಂಕೀರ್ಣತೆ ಹಾಗೂ ಸಮೃದ್ಧತೆಯಿಂದ ಕೂಡಿದೆ ಎನ್ನುವ ವಿಚಾರ ಸ್ಪಷ್ಟವಾಯಿತು. ತತ್ವಜ್ಞಾನದಲ್ಲಿನ ಸಂಕೀರ್ಣತೆ ವಿಜ್ಞಾನದಲ್ಲಿರುವುದಕ್ಕಿಂತ ಭಿನ್ನವಾದದ್ದು. ಸಾಹಿತ್ಯರಚನೆ ಎನ್ನುವುದು ಸದಾ ನನ್ನಲ್ಲಿದ್ದ ಆಗ್ರಹ. ತತ್ವಜ್ಞಾನದಲ್ಲಿ ಬರಹದೊಂದಿಗೆ ನಾನು ತೋರುತ್ತಿದ್ದ ಮನೋಭಾವವೇ ಸಾಹಿತ್ಯದ ಕಡೆಗೆ ನನ್ನನ್ನು ಆಕರ್ಷಿಸಿದ್ದು ಎಂದು ನನಗೆ ತೋರುತ್ತದೆ. ಫಿಕ್ಷನ್‌ ಹಾಗೂ ತತ್ವಜ್ಞಾನವನ್ನು ಬರೆಯುವುದು ಸಮಾನವಾದ ಅನುಭವ ನೀಡುವ ಹಾಗೆ ನನಗೆ ಭಾಸವಾಗಿದೆ. ಹಾಗಾಗಿ ಸಾಹಿತ್ಯ ನನಗೆ ಸ್ವಲ್ಪ ಅಧಿಕ ಸ್ವಾತಂತ್ರ್ಯವನ್ನು ನೀಡಿದೆ ಎನ್ನಬಹುದು.
ನಾವು ಮಾತನಾಡಲಿಚ್ಚಿಸಿರುವ ಪುಸ್ತಕದ ಹಿನ್ನೆಲೆಯಲ್ಲಿ ಮಾತಾಡುವುದಾದರೆ , ಒಂದು ದಾರ್ಶನಿಕ ಯಾ ಅಕಾಡೆಮಿಕ್‌ ರಚನೆಯಲ್ಲಿ ಸಾಧ್ಯವಾಗದ ರೀತಿಯಲ್ಲಿ ಧರ್ಮದ ಬಗ್ಗೆ ಬರೆಯುವ ಅವಕಾಶ ನನಗೆ ದೊರಕಿದೆ. ಜತೆಗೆ, ಭಾಷೆಯ ಸುಪ್ರಧಾನ ಕಾರ್ಯದ ಕಡೆಗೆ ಫಿಕ್ಷನ್‌ ನನ್ನನ್ನು ಮರಳಿಸಿದೆ. ಭಾಷೆ ಎನ್ನುವುದು ಕೇವಲ ಸಿದ್ಧಾಂತಗಳು, ಸತ್ಯಗಳು ಹಾಗೂ ಜ್ಞಾನಗಳನ್ನು ವಿನಿಮಯಿಸುವ ಮಾರ್ಗ ವಷ್ಟೇ ಅಲ್ಲ. ಮನುಷ್ಯನೊಳಗೆ ಆಳವಾದ ಅನುಭವಗಳನ್ನು ಸೃಜಿಸುವ ಶಕ್ತಿಯದು. ನನ್ನ ಅನುಭವದಲ್ಲಿ ಫಿಕ್ಷನ್‌ ಎನ್ನುವುದು ಕಥೆ ಹೇಳುವ ಪ್ರಕ್ರಿಯೆಯಾಚೆಗೆ ಭಾಷೆಯಿಂದ ಏನೇನೆಲ್ಲಾ ಸಾಧ್ಯ ಎನ್ನುವ ಪರೀಕ್ಷೆ ಕೂಡಾ ಹೌದು. ಭಾಷೆಯ ಮೂಲಕ ಮಾನವನನ್ನು ಹೇಗೆಲ್ಲಾ ಸ್ಪರ್ಶಿಸಬಹುದು, ಆತನನ್ನು ಹೇಗೆಲ್ಲಾ ಇರವಿನ ಅಂಚಿಗೆ ದೂಡಬಹುದೆನ್ನುವ ಅನ್ವೇಷಣೆ.

ನನ್ನ ಜೀವನದಲ್ಲಿ ವಿವಿಧ ಹಂತಗಳಿತ್ತು ಎನ್ನುವುದು ನಿಜವಾದರೂ ಸಾಹಿತ್ಯ ತತ್ವಜ್ಞಾನದ ನಂತರ ಬಂದದ್ದಲ್ಲ. ಸದಾ ಅದು ನನ್ನಲ್ಲಿತ್ತು. ನಾಟಕಗಳೂ ಸೇರಿದಂತೆ ಆಮೇಲೆ ಪ್ರಕಟಿಸಿದ ಕಥಾ ಸಾಹಿತ್ಯದ ಕೆಲವು ಭಾಗಗಳೆಲ್ಲ ಬಹಳ ಹಿಂದೆಯೇ ಬರೆದದ್ದು. ಅವುಗಳನ್ನು ಪ್ರಕಟಿಸಲು ಪ್ರಕಾಶಕರು ದೊರಕುತ್ತಿದ್ದಾರೆನ್ನೆವುದೇ ಸದ್ಯ ಇರುವ ಬದಲಾವಣೆ. ಅದು ಬಹುಷಃ ಬರಹಕ್ಕಿಂತಲೂ ಮುಖ್ಯವಾದದ್ದು.

ಉ: ವಿಜ್ಞಾನದ ಬಗೆಗಿನ ಮುಖ್ಯವಾದ ಪ್ರಶ್ನೆಯ ಕಡೆಗೆ ತಾವು ಬೊಟ್ಟು ಮಾಡಿದ್ದೀರಿ. ವಿಜ್ಞಾನ ವಿಶಿಷ್ಟವಾದ ಒಂದು ವಿವರಣಾಮಾದರಿಯಲ್ಲಿ ಗಮನ ಕೇಂದ್ರೀಕರಿಸುತ್ತದೆ ಎನ್ನುವುದ ಸರಿಯೇ. ಅದರಲ್ಲೂ ಬಹಳ ಮುಖ್ಯವಾಗಿ ಅಳೆಯುವಿಕೆಯನ್ನು (quantification) ಬಳಸಿಕೊಂಡು ವಿದ್ಯಮಾನಗಳನ್ನು ಅಲ್ಲಿ ವಿವರಿಸಲಾಗುತ್ತದೆ. ಆ ನಿಟ್ಟಿನಲ್ಲಿ ಅವಲೋಕಿಸಿದರೆ ವಿಜ್ಞಾನ ಸ್ಲಲ್ಪ ʼವಸ್ತುನಿಷ್ಠʼವಾದ ಪ್ರಕ್ರಿಯೆ ಎನ್ನಬಹುದು. ಒಂದು ವಿದ್ಯಮಾನವನ್ನು ಅಳೆಯುವ ಮಾಪನವನ್ನು ಬಳಸಲು ಸಾಧ್ಯವಾದಲ್ಲಿ ಆ ಚರ್ಚೆಗೆ ವಿಶೇಷ ಸ್ವಭಾವ ಸಿಗುತ್ತದೆ. ಆದರೆ, ಅದರಿಂದ ಅಸ್ಪಷ್ಟತೆ, ಆರ್ಥಶಂಕೆ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ.

ವಾಸ್ತವದಲ್ಲಿ, ನಾನು ಬರೆದ ಮೊದಲ ತಾತ್ವಿಕ ಪುಸ್ತಕವಾಗಿರುವ “Translating the World Science and Language” ಎಂಬ ಕೃತಿ ಕೂಡಾ ವಿಜ್ಞಾನ ಹಾಗೂ ಗಣಿತದಲ್ಲಿ ಅರ್ಥ ಹೇಗೆ ರೂಪುಗೊಳ್ಳುತ್ತದೆ ಎನ್ನುವುದನ್ನೇ ಚರ್ಚೆಗೆ ಕೈಗೆತ್ತಿಕೊಂಡಿದೆ. ಸಾಹಿತ್ಯದೊಂದಿಗೆ ಮಾತ್ರ ಥಳಕು ಹಾಕಲಾಗುವ ರೂಪಕಾತ್ಮಕ ಭಾವಗಳು ಗಣಿತ ಹಾಗೂ ವಿಜ್ಞಾನದ ಬರಹಗಳ ಅನಿವಾರ್ಯ ಅಂಶವೂ ಹೌದೆಂದು ನಾನು ಅದರಲ್ಲಿ ವಾದಿಸಿದ್ದೇನೆ. ವಿಜ್ಞಾನ ಭಾಷೆಯನ್ನು ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದರ ಬಗೆಗಿನ ಅತ್ಯಂತ ಪ್ರಸಕ್ತವಾದ ಪ್ರಶ್ನೆಯಿದು. ಅಸ್ಪಷ್ಟತೆ (ambiguity) ಎನ್ನುವ ಸಮಸ್ಯೆ ಸಾಹಿತ್ಯ ಹಾಗೂ ತತ್ವಚಿಂತನೆಗೆ ಮಾತ್ರ ಸೀಮಿತವಾದದ್ದಲ್ಲ. ಮೂಲಭೂತವಾಗಿ ಅದು ಭಾಷೆಗೆ ಸಂಬಂಧಪಟ್ಟದ್ದು. ಇಂಗ್ಲಿಷ್‌, ಮಲಯಾಳಂ ಸಹಿತ ಇರುವ ಭಾಷೆಗಳಲ್ಲೆಲ್ಲಾ ಈ ಅರ್ಥಶಂಕೆ ಇದೆ. ಸರಳವಾಗಿ ಹೇಳುವುದಾದರೆ, ಪದಗಳಿಗೆ ಏಕಕಾಲದಲ್ಲಿ ಬೇರೆ ಬೇರೆ ಅರ್ಥಗಳು ಇರಬಹುದು. ಇದು ಭಾಷೆಯ ಬಗೆಗಿನ ತಾತ್ವಿಕವಾದ ಮೌಲಿಕ ಪ್ರಶ್ನೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಒಂದು ಪದಕ್ಕೆ ಸ್ವಯಂ ಸ್ಥಿರವಾದ ಅರ್ಥವಿದೆಯೇ? ಅದಕ್ಕೆ ಅರ್ಥ ಸಿಗುವುದು ಒಂದು ವಾಕ್ಯದಲ್ಲಿ ಯಾ ಒಂದು ಸಂದರ್ಭದಲ್ಲಿ ಮಾತ್ರವೇ? ಇದೊಂದು ಬಹಳ ಮೌಲಿಕ ಪ್ರಶ್ನೆ.

ಉ: ಮೂಲಭೂತವಾದ ಅಂತಹದ್ದೊಂದು ಪ್ರಶ್ನೆಯನ್ನು ನನ್ನ ಕಾದಂಬರಿಗಳಲ್ಲಿ ವಿವಿಧ ರೀತಿಯಲ್ಲಿ ಶೋಧಿಸಿದ್ದೇನೆ. ಆಂಬಿಗ್ಯುಟಿ ಎನ್ನುವ ಪರಿಕಲ್ಪನೆಯ ಸಾರದಲ್ಲಿರುವುದೂ ಇದುವೆ. ಗಣಿತವು ವಿಜ್ಞಾನದ ಭಾಷೆ ಎನ್ನುವ ವಿಜ್ಞಾನಿಗಳ ಮಾತಿನ ತಾತ್ಪರ್ಯ ಅಳತೆಗಳು ಹಾಗೂ ಲೆಕ್ಕಗಳು ಅಸ್ಪಷ್ಟತೆಯನ್ನು ಕಡಿಮೆಗೊಳಿಸುತ್ತದೆ ಎನ್ನುವುದೇ. ಆದರೆ ಇದು ಪೂರ್ಣವಾಗಿ ಸರಿ ಎನ್ನಲಾಗದು. ವಾಸ್ತವಲ್ಲಿ ಒಂದೇ ಚಿಹ್ನೆಗೆ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಅರ್ಥ ಸ್ಫುರಿಸಲು ಸಾಧ್ಯವಾಗುವಲ್ಲಿಯೇ ವೈಜ್ಞಾನಿಕ ಸಿದ್ದಾಂತ ನಿರ್ಮಾಣದ ಶಕ್ತಿ ಅಡಗಿರುವುದು. ವಿಜ್ಞಾನ ಅಷ್ಟೂ ಶಕ್ತಿಯುತ ಹಾಗೂ ಉತ್ಪಾದನಾಶೀಲ ಆಗಿರುವುದು ಇದೆ ಕಾರಣದಿಂದ. ಇದನ್ನು ವಿವಿಧ ರೀತಿಯಲ್ಲಿ ಗ್ರಹಿಸಲು ಸಾಧ್ಯವಿದೆ. ಒಂದು ಪದ ಇಲ್ಲವೇ ಚಿಹ್ನೆಗೆ ಒಂದೇ ಒಂದು ಸ್ಥಿರವಾದ ಅರ್ಥವಿದೆ ಎನ್ನುವುದು ಒಂದನೆಯದ್ದು. ಇಲ್ಲ ಬೇರೆ ಬೇರೆ ಅರ್ಥ ಇದೆ ಎನ್ನವುದು ಎರಡನೆಯದ್ದು. ಮೂರನೆಯದ್ದು, ಚಿಹ್ನೆಯನ್ನು ಶೂನ್ಯವಾಗಿಟ್ಟುಕೊಂಡು ತಮಗೆ ಬೇಕಾದ ಅರ್ಥವನ್ನು ಆರೋಪಿಸುವ ಗಣಿತದ ಪ್ರತಿಮಾತ್ಮಕ ವಿದ್ಯೆ. ವೈಜ್ಞಾನಿಕ ಸಿದ್ಧಾಂತ ನಿರ್ಮಾಣದ ಕಾರ್ಯವಿಧಾನ ಮೂರನೆಯ ತರದ್ದು. ವಿಜ್ಞಾನ ಅಷ್ಟೂ ಸೃಜನಶೀಲ ಹಾಗೂ ಶಕ್ತಿಯುತ ಆಗುವುದು ಇದೇ ಕಾರಣದಿಂದ. ಹಾಗಾಗಿ, ವಿಜ್ಞಾನದಲ್ಲಿ ಕೆಲಸ ಮಾಡುವ ವೇಳೆಯಲ್ಲೂ ಬರಹ ನನಗೆ ಸವಾಲಾಗಿ ಪರಿಣಮಿಸಲಿಲ್ಲ.
ವಿಜ್ಞಾನ ಹಾಗೂ ಇತರ ಕ್ಷೇತ್ರಗಳು ಭಿನ್ನ ಎನ್ನುವ ಪ್ರಜ್ಞೆ ನನಗೆ ಮೊದಲೇ ಇತ್ತು. ವಿಜ್ಞಾನ ಚರ್ಚಿಸುವುದು ಕೆಲವು ಪ್ರತ್ಯೇಕ ವಸ್ತುಗಳನ್ನು ಮಾತ್ರ; ಇಲೆಕ್ಟ್ರೋನ್‌ಗಳ ಕಾರ್ಯನಿರ್ವಹಣೆ, ಪರಮಾಣು ರಚನೆ, ಗುರುತ್ವಾಕರ್ಷಣೆ ಇತ್ಯಾದಿಗಳು. ವಿಜ್ಞಾನದ ವಿಷಯ ವ್ಯಾಪ್ತಿ ಇರುವುದು ಅಷ್ಟೇ. ಆ ವಿಷಯಗಳಲ್ಲಿ ಒಂದು ಪ್ರತ್ಯೇಕ ಮಾದರಿಯನ್ನು ಮಾತ್ರ ಬಳಸಿಕೊಂಡು ಇಲ್ಲವೇ ಬೇರೆ ಮಾದರಿಯನ್ನು ಬಳಸಿಕೊಂಡು ಕೆಲಸ ಮಾಡುವ ಸ್ವಾತಂತ್ರ್ಯ ಇದೆ. “ಗುರುತ್ವಾಕರ್ಷಣೆ ಇನ್ನೊಂದಾಗಿದ್ದಲ್ಲಿ ಏನಾಗುತ್ತಿತ್ತು? ಎಂಬ ಆಲೋಚನೆಯನ್ನು ಆಧಾರವಾಗಿಟ್ಟುಕೊಂಡು ಒಂದು ಮಾದರಿಯನ್ನು ನಿರ್ಮಿಸಿ ಫಲಿತಾಂಶಗಳನ್ನು ಶೋಧಿಸಬಹುದು. ಅದಕ್ಕೆ ಬೇರೆ ಖರ್ಚುಗಳೇನೂ ಬರುವುದಿಲ್ಲ. ಆದರೆ, ನಿಮ್ಮ ಬಗ್ಗೆ, ಮನುಷ್ಯ ಸಮುದಾಯಗಳ ಬಗ್ಗೆ ಮಾತನಾಡಲು ಬಯಸಿದರೆ ಮಾತ್ರ ನನಗಲ್ಲಿ ಸ್ವಾತಂತ್ರ್ಯವಿಲ್ಲ. ಅಲ್ಲಿ ಅರ್ಥಗಳು ಬಹಳ ನಿಯಂತ್ರಿತವಾದುದು. ಒಂದು ಕಲ್ಲಿನ ಬಗ್ಗೆ ನನಗೆ ಏನು ಬೇಕಾದರೂ ಹೇಳಬಹುದು. ಗುರುತ್ವಾಕರ್ಷಣವು ೧/r೨ ಆಗಿದೆ ಎMದು ನ್ಯೂಟನ್‌ ಹೇಳಿದ್ದಕ್ಕೆ ವಿರುದ್ಧವಾಗಿ ಅದು ೧/r೩ ಎಂದೋ ೧/r೨.೦೦೩ ಎಂದೋ ನಾನು ವಾದಿಸುವ ಅವಕಾಶ ಅಲ್ಲಿದೆ. ಆ ವಾದದ ಫಲಿತಾಂಶಗಳನ್ನು ಪರಿಶೋಧಿಸಲು ಒಂದು ಮಾದರಿಯನ್ನೂ ನಿರ್ಮಿಸಬಹುದು. ಅದೇ ವೇಳೆ, ಮನುಷ್ಯರ ಕುರಿತು, ಕಾದಂಬರಿಯೊಂದರ ಪಾತ್ರದ ಕುರಿತು ಅಥವಾ ಸಮಾಜವಿಜ್ಞಾನದಲ್ಲಿ ಒಂದು ಸಮಾಜದ ಕುರಿತು ಬರೆಯುವಾಗ ನನಗೆ ಬಹಳ ಹೆಚ್ಚು ನಿಯಂತ್ರಣಕ್ಕೆ ವಿಧೇಯನಾಗಬೇಕಾಗುತ್ತದೆ.

ಉ: ನನ್ನ ಅಭಿಪ್ರಾಯದಲ್ಲಿ ವಿಜ್ಞಾನ ಹೆಚ್ಚು ಸೃಜಶೀಲತೆ ಹಾಗೂ ಸ್ವಾತಂತ್ರ್ಯವನ್ನು ನೀಡುತ್ತದೆ. ಇದನ್ನು ಸ್ಪಷ್ಟಪಡಿಸಲು ನನ್ನ ವಿದ್ಯಾರ್ಥಿಗಳೊಂದಿಗೆ ನಾನು ಒಂದು ಸರಳವಾದ ಪ್ರಶ್ನೆಯನ್ನು ಕೇಳುತ್ತಿರುತ್ತೇನೆ. “ವಿಜ್ಞಾನ” ಎಂಬ ಪದದ ಮೂಲಾರ್ಥ ಅರಿವು ಎಂದಾದರೂ ಇಂದಿನ ವಿಜ್ಞಾನ ಮುಖ್ಯವಾಗಿ ಸಂಶೋಧನೆಗೆ ಸಂಬಂಧಪಟ್ಟಿದೆ. ಹೊಸ ಅರಿವಿನ ಉತ್ಪಾದನೆಯನ್ನೇ ವಿಜ್ಞಾನ ಎಂದು ಸೂಚಿಸಲಾಗುತ್ತಿದೆ. ಅದು ಕೇವಲ ಜ್ಞಾನ ವಿನಿಮಯವಲ್ಲ. ನೀವು ವಿಜ್ಞಾನಿಯಾಗಿದ್ದಲ್ಲಿ ಪ್ರಕಟಿಸುತ್ತಾ ಇರಬೇಕು. ಹೊಸ ಜ್ಞಾನದ ಉತ್ಪಾದನೆಯನ್ನೇ ಪ್ರಕಟಣೆ ಎನ್ನುವುದು. ಇಂದು ಹೊಸ ಅರಿವಿನ ಉತ್ಪಾದನೆ ಎನ್ನುವುದು ಒಂದು ಕೈಗಾರಿಕೆಯಾಗಿ ಮಾರ್ಪಟ್ಟಿದೆ, ಬೃಹತ್‌ ಕೈಗಾರಿಕೆ. ಪ್ರತಿವರ್ಷವೂ ಹೊರಬರುವ ವೈಜ್ಞಾನಿಕ ಪ್ರಬಂಧಗಳ ಸಂಖ್ಯೆ ಲಕ್ಷ ದಾಟಿದೆ. ಪ್ರತಿ ಪ್ರಬಂಧವೂ ಹೊಸ ಅರಿವಿನ ಒಂದಂಶವನ್ನುಸೇರಿಸುತ್ತಾ ಬರುತ್ತದೆ. ಆದರೆ, ನಾವು ನಿಜವಾಗಿಯೂ ಅಷ್ಟು ಅರಿವನ್ನು ಸೃಜಿಸುತ್ತಿದ್ದೇವೆಯೇ? ಜ್ಞಾನದ ಸೃಷ್ಟಿ ಎನ್ನುವ ಕಡ್ಡಾಯವಾದ ಪ್ರಕ್ರಿಯೆಯ ಮೂಲಕ ನಾವು ಹಾದು ಹೋಗುತ್ತಿದ್ದೇವೆಯೇ? ಇದು ನನ್ನ ಪ್ರಶ್ನೆ. ಯಾಕೆಂದರೆ, ಪ್ರಪಂಚದ ಕುರಿತು ನಿಮಗೆ ಏನು ಬೇಕಾದರೂ ಊಹಿಸಬಹುದು. ಅದನ್ನು ದಾಖಲಿಸುವ ಭಾಷೆ ಹಾಗೂ ಲೆಕ್ಕಾಚಾರದ ನಿಯಮಗಳು ಮಾತ್ರ ನಿಮ್ಮ ಮುಂದಿರುವ ಏಕಮಾತ್ರ ಪರಿಮಿತಿ. ಅದರಾಚೆಗೆ, ಅತ್ಯಂತ ಮೂಲಭೂತವಾದ ವಿಜ್ಞಾನದ ಬಾಗಿಲು ತೆರೆದೇ ಇದೆ. ಐನ್‌ಸ್ಟೈನ್‌ ತನ್ನ ಕಾಲದ ಪ್ರಯೋಗಗಳ ಫಲಿತಾಂಶಗಳನ್ನು ಮತ್ತೊಮ್ಮೆ ಓದಿಕೊಂಡು ದೇಶ-ಕಾಲಗಳ ಅರ್ಥವನ್ನೇ ನವೀಕರಿಸಿದರು. ಇದು ಅತ್ಯಂತ ಧೈರ್ಯಶಾಲಿ ಹಾಗೂ ದಾರ್ಶನಿಕವಾದ ಸಾಹಿತ್ಯಿಕ ವಿದ್ಯಮಾನವೂ ಹೌದು. ವಿಜ್ಞಾನದ ಔಪಚಾರಿಕ ಭಾಷೆ ಹಾಗೂ ವೈಜ್ಞಾನಿಕ ಚೌಕಟ್ಟುಗಳ ಮೂಲಕ ಅದು ನಿಯಂತ್ರಣಕ್ಕೆ ಒಳಗಾದದ್ದು ಆಮೇಲೆ.

ಸಮಾಜವಿಜ್ಞಾನ ಹಾಗೂ ಅದರ ಸಿದ್ಧಾಂತ ನಿರ್ಮಾಣದಲ್ಲಿ ಇಷ್ಟು ಸ್ವಾತಂತ್ರ್ಯ ಲಭ್ಯವಲ್ಲ ಎನ್ನವುದು ನನ್ನ ಅಭಿಪ್ರಾಯ. ಅನೇಕ ಕಾರಣಗಳಿಂದಾಗಿ ಅಲ್ಲಿ ಬಹಳ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾಗುತ್ತದೆ. ಒಂದು ವಸ್ತುವಿನ ವಿಚಾರದಲ್ಲಿ ನಮಗೇನನ್ನೂ ಮಾಡಬಹುದು. ಒಂದು ಕಲ್ಲನ್ನು ತೆಗೆಯಬಹುದು, ಅದನ್ನು ಒಡೆಯಬಹುದು,ಹೊತ್ತಿಸಬಹುದು, ಎರಕಹೊಯ್ಯಬಹುದು. ಆದರೆ, ಮಾನವ ಸಮಾಜ ಹಾಗೂ ಜೀವಜಾಲಗಳ ನಡುವೆ ಅಂತಹ ವಿಧಾನವನ್ನು ಅನ್ವಯಿಸುವುದು ಅಸಾಧ್ಯ. ಸಮಾಜ ವಿಜ್ಞಾನದಲ್ಲಿನ ನಿಯಂತ್ರಣಗಳನ್ನು ನಮಗೆ ಈ ಮೂಲಕ ತಿಳಿಯಬಹುದು. ಹಾಗಾಗಿ, ನಿಯಂತ್ರಿತವಾದವುಗಳೊಳಗೆ ನಿಂತುಕೊಂಡೆ ಅಲ್ಲಿ ಅರ್ಥವಂತಿಕೆ ಇರುವ ಅರಿವನ್ನು ಉತ್ಪಾದಿಸಬೇಕಾಗುತ್ತದೆ. ಅದೇವೇಳೆ, ಸಮಾಜವಿಜ್ಞಾನವೂ ಗಣಿತವನ್ನು ಭಾಷೆಯಾಗಿ ಬಳಸುತ್ತಾ ಇರುವುದರಿಂದ ಅದಕ್ಕೂ ಬಹಳ ಸೃಷ್ಟಿಶೀಲ ಆಯಾಮ ದೊರಕುತ್ತದೆ. ಇಲ್ಲಿ ಗಣಿತವೂ ಕಾವ್ಯದ ಹಾಗೆ ಇರುವುದನ್ನು ನಾವು ಗಮನಿಸಬೇಕಿದೆ. ಭಾರತದಲ್ಲಿ ಇಪ್ಪತ್ತು ಮೂವತ್ತು ವರ್ಷದ ಹಿಂದಿನವರೆಗೂ ಗಣಿತವನ್ನು ಬಿಎ ವಿಷಯವಾಗಿ ಪರಿಗಣಿಸಲಾಗುತ್ತಿತ್ತು. ಅಂದರೆ ಅದು ಮಾನವಿಕ ವಿಭಾಗದಡಿಯಲ್ಲಿ ಬರುತ್ತಿತ್ತು. ಅದರಲ್ಲಿ ಕಾವ್ಯ ಹಾಗೂ ಸೃಜನಭಾವದ ಆತ್ಮವಿದೆ. ಈ ಜಗತ್ತಿನೊಂದಿಗೆ ಹೊಂದಾಣಿಕೆ ಆಗುತ್ತಿದೆಯಾ ಎನ್ನುವ ಆತಂಕವೇ ಇಲ್ಲದೆ ಗಣಿತದಲ್ಲಿ ಊಹೆಗಳನ್ನು ಕೈಗೊಳ್ಳಬಹುದು. ಪಾಶ್ಚಾತ್ಯ ಚಿಂತನೆಯ ಪರಂಪರೆಯಲ್ಲಿ ಗಣಿತ ದೇವವಿದ್ಯೆಯೊಂದಿಗೆ (theology) ನಿಕಟವಿದ್ದುಕೊಂಡೆ ಬೆಳೆದು ಬಂದಿದೆ. ಇಸ್ಲಾಮಿಕ್‌ ಜ್ಞಾನ ಪರಂಪರೆಯಲ್ಲೂ ನಮಗದನ್ನು ಕಾಣಬಹುದು. ಆ ಚಿಂತನಾ ಪರಂಪರೆ ನ್ಯೂಟನ್‌ ಕಾಲದ ವರೆಗೂ ಸಾಗಿ ಬಂದಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಹಾಗೆ ನೋಡಿದರೆ ಅದು ಕೂಡಾ ಒಂದು ರೀತಿಯ ಸೃಜನಶೀಲತೆ ಹಾಗೂ ಸ್ವಾತಂತ್ರ್ಯ ಎನ್ನುವುದು ತಿಳಿದು ಬರುತ್ತದೆ. ಸಮಾಜ ವಿಜ್ಞಾನದಲ್ಲಿ ಬರವಣಿಗೆಗೆ ಇಳಿಯುವಾಗ ಆ ಸ್ವಾತಂತ್ರ್ಯ ಮೊಟಕುಗೊಳ್ಳುತ್ತದೆ.

ತಾತ್ವಿಕ ವ್ಯವಹಾರಗಳು ಕೂಡಾ ಬಹಳ ನಿಯಂತ್ರಿತವಾಗಿವೆ. ಇಂಗ್ಲಿಷ್‌, ಲ್ಯಾಟಿನ್‌, ಸಂಸ್ಕೃತ ಸಹಿತ ಯಾವುದೇ ಕ್ಲಾಸಿಕಲ್‌ ಪಾರಂಪರಿಕ ಭಾಷೆಯಿರಲಿ ಅವುಗಳದ್ದೇ ಆದ ಸ್ವಂತ ದಾರ್ಶನಿಕ ಪರಂಪರೆ ಇದೆ ಎನ್ನುವುದು ಗಮನಾರ್ಹ. ಪ್ರತಿ ಭಾಷೆಯೂ ತನ್ನದ್ದೇ ಆದ ದಾರ್ಶನಿಕತೆಯನ್ನು ಸೃಷ್ಟಿಸಿದೆ. ಆದರೆ, ಆ ದಾರ್ಶನಿಕ ಚಿಂತನೆಗಳು ಆಯಾ ಭಾಷೆಗಳ ಸಂರಚನೆ ಹಾಗ ಅದರಲ್ಲಿ ರೂಪುಗೊಳ್ಳುವ ಸಿದ್ದಾಂತಗಳಗೆ ವಿಧೇಯವಾಗಿವೆ. ಯಾವ ಭಾಷೆಯಲ್ಲಿ ತತ್ವ ಚಿಂತನೆ ಮಾಡಿದರೂ ಆ ಭಾಷೆ ಏರ್ಪಡಿಸುವ ಬೌದ್ಧಿಕ ನಿಯಂತ್ರಣಗಳನ್ನು ಹಾಗೂ ಮಿತಿಗಳನ್ನು ಮೀರಲು ಸಾಧ್ಯವಿಲ್ಲ. ಹಾಗಾಗಿ, ನನ್ನ ವೈಯುಕ್ತಿಕ ಅನುಭವದ ಪ್ರಕಾರ ವಿಜ್ಞಾನ ಅತ್ಯಂತ ಹೆಚ್ಚು ಸಜನಶೀಲ ಉದ್ಯಮ ಎಂದನಿಸಿದೆ.


(ಮುಂದುವರಿಯುವುದು) ‌

ಕನ್ನಡಕ್ಕೆ: ನಝೀರ್‌ ಅಬ್ಬಾಸ್‌


Sundar Sarukkai is one of India’s leading contemporary philosophers and public intellectuals, known for his work in the philosophy of science and interdisciplinary studies. Trained in physics and philosophy, he earned his PhD from Purdue University, USA, and has held key academic positions including at the National Institute of Advanced Studies, Bengaluru, and as Founder-Director of the Manipal Centre for Philosophy and Humanities. He is the author of several influential books, including Translating the World, Philosophy of Symmetry, and What is Science?, and continues to actively promote philosophy through research, writing, and public engagement.

Leave a Reply

*