ಶ್ರೀಲಂಕಾ: ಶ್ರೀಮಂತ ಇಸ್ಲಾಮಿಕ್ ಪರಂಪರೆಯ ದ್ವೀಪರಾಷ್ಟ್ರ

“ಶ್ರೀಲಂಕಾದ ಮುಸ್ಲಿಂ ಹೆಸರು ‘ಸರಂದೀಬ್’ (Sarandib) ಎಂಬುದು ಅನೇಕರಿಗೆ ತಿಳಿದಿಲ್ಲ – ಈ ಹೆಸರಿನಿಂದಲೇ ಇಂಗ್ಲಿಷ್‌ನ ‘ಸೆರೆಂಡಿಪಿಟಿ’ (Serendipity) ಎಂಬ ಪದವು ಹುಟ್ಟಿಕೊಂಡಿದೆ. ‘ಸೆರೆಂಡಿಪಿಟಿ’ ಎಂದರೆ ಆಕಸ್ಮಿಕವಾಗಿ ಯಾವುದಾದರೂ ಆಸಕ್ತಿದಾಯಕ ಅಥವಾ ಬೆಲೆಬಾಳುವ ವಿಷಯವನ್ನು ಕಂಡುಹಿಡಿಯುವ ಅಥವಾ ಸೃಷ್ಟಿಸುವ ಅನುಭವ ಎಂದರ್ಥ. ಈ ಪದವು ಹಿಂದೂ ಮಹಾಸಾಗರದಲ್ಲಿರುವ ಕಣ್ಣೀರಿನ ಹನಿಯ ಆಕಾರದ ದ್ವೀಪಕ್ಕೆ ಅರಬ್ಬಿ ಮತ್ತು ಪರ್ಷಿಯನ್ನರು ಇಟ್ಟಿದ್ದ ಹಳೆಯ ಹೆಸರಾದ ‘ಸರಂದೀಬ್‌’ನಿಂದ ಬಂದಿದೆ, ಇದನ್ನು ಇಂದು ಶ್ರೀಲಂಕಾ ಎಂದು ಕರೆಯಲಾಗುತ್ತದೆ. ತನ್ನ ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಬೆರಗುಗೊಳಿಸುವ ನೈಸರ್ಗಿಕ ಸೌಂದರ್ಯದಿಂದಾಗಿ ಈ ದ್ವೀಪ ರಾಷ್ಟ್ರವು ಒಂದರ್ಥದಲ್ಲಿ ‘ಸೆರೆಂಡಿಪಿಟಿ’ಯ ನಾಡಾಗಿದೆ.”

ಶತಮಾನಗಳಿಂದಲೂ, ಹಿಂದೂ ಮಹಾಸಾಗರದ ಉದ್ದಗಲಕ್ಕೂ ಸಂಚರಿಸುತ್ತಿದ್ದ ಸಮುದ್ರಯಾನಿಗಳಿಗೆ ವಿಶ್ರಾಂತಿ ಪಡೆಯಲು, ಅಗತ್ಯ ವಸ್ತುಗಳನ್ನು ಮರುಪೂರಣ ಮಾಡಿಕೊಳ್ಳಲು, ವ್ಯಾಪಾರ ಮಾಡಲು ಮತ್ತು ಅನ್ವೇಷಣೆ ನಡೆಸಲು ಇದು ಒಂದು ಪ್ರಮುಖ ತಾಣವಾಗಿದೆ. ಮತ್ತು ಖಂಡಿತವಾಗಿಯೂ, ಸ್ವತಃ ಶ್ರೀಲಂಕನ್ನರು ತಮ್ಮ ದ್ವೀಪದ ಮನೆಯ ಗಡಿಗಳನ್ನು ಮೀರಿ ಬೆಳೆಯುವಂತಹ ಒಂದು ಪರಂಪರೆಯನ್ನು ಉಳಿಸಿ ಹೋಗಲು ಸಹ ಇದು ಸಹಕಾರಿಯಾಗಿದೆ. ಶ್ರೀಲಂಕಾದಲ್ಲಿ ಇಸ್ಲಾಂ ಧರ್ಮದ ಇತಿಹಾಸವು ಈ ಕಥೆಯ ಒಂದು ಪ್ರಮುಖ ಅಧ್ಯಾಯವಾಗಿದೆ. ಇದು ಪ್ರವಾದಿ ಅವರ ನಿಧನದ ಕೆಲವೇ ದಶಕಗಳ ನಂತರ ಪ್ರಾರಂಭವಾಯಿತು. ಮತ್ತು ಶ್ರೀಲಂಕಾದ ಮುಸ್ಲಿಮರು ಇಂದಿಗೂ ಆ ರಾಷ್ಟ್ರದ ಸಾಂಸ್ಕೃತಿಕ ಚೌಕಟ್ಟಿನ ಅವಿಭಾಜ್ಯ ಅಂಗವಾಗಿದ್ದಾರೆ.

ದಾಲ್ಚಿನ್ನಿ (Cinnamon) – ಶ್ರೀಲಂಕಾದ ಗುಪ್ತ ನಿಧಿ

ಶ್ರೀಲಂಕ ಅಲ್ಲಿನ ದಾಲ್ಚಿನ್ನಿಗೆ (Cinnamon) ಅತ್ಯಂತ ಪ್ರಸಿದ್ಧ. ಇಂದು ಪ್ರಪಂಚದಾದ್ಯಂತ ಸಾಮಾನ್ಯವಾಗಿ ಬಳಸಲಾಗುವ ದಾಲ್ಚಿನ್ನಿಯು ‘ಕ್ಯಾಸಿಯಾ’ (Cassia) ಎಂಬ ವಿಧದ್ದಾಗಿದ್ದು, ಇದು ಮುಖ್ಯವಾಗಿ ಇಂಡೋನೇಷ್ಯಾದಲ್ಲಿ ಉತ್ಪಾದನೆಯಾಗುತ್ತದೆ. ಇದು ಶ್ರೀಲಂಕಾದ ವಿಶಿಷ್ಟ ತಳಿಯಾದ ‘ಸಿಲೋನ್ ದಾಲ್ಚಿನ್ನಿ’ ಅಥವಾ ‘ಅಸಲಿ’  ದಾಲ್ಚಿನ್ನಿಗಿಂತ ಹೆಚ್ಚು ಪರಿಮಳ ಮತ್ತು ರುಚಿಯನ್ನು ಹೊಂದಿರುತ್ತದೆ. ಶ್ರೀಲಂಕಾದ ಮುಸ್ಲಿಂ ವ್ಯಾಪಾರಿಗಳು ಈ ದ್ವೀಪದ ದಾಲ್ಚಿನ್ನಿಯನ್ನು ಏಷ್ಯಾ ಮತ್ತು ಆಫ್ರಿಕಾದ ವಿವಿಧ ಭಾಗಗಳಿಗೆ ಹರಡಲು ಸಹಾಯ ಮಾಡಿದರು, ಅಷ್ಟೇ ಅಲ್ಲದೆ ಇದನ್ನು ಯುರೋಪ್‌ಗೂ ಪರಿಚಯಿಸಿದರು.

ವ್ಯಾಪಾರದಲ್ಲಿ ಸ್ಪರ್ಧೆ ಏರ್ಪಡುವುದನ್ನು ತಪ್ಪಿಸಲು ವ್ಯಾಪಾರಿಗಳು ದಾಲ್ಚಿನ್ನಿಯ ಮೂಲವನ್ನು ಬಹಳ ರಹಸ್ಯವಾಗಿ ಇಟ್ಟಿದ್ದರು.  ಆದರೂ ಕೆಲವು ಮಾಹಿತಿಗಳು  ಸೋರಿಕೆಯಾದವು. ಕ್ರಿ.ಶ.  ೧೦ನೇ ಶತಮಾನದ ಪರ್ಷಿಯನ್ ಸಮುದ್ರ ನಾಯಕ ಬುಝುರ್ಗ್ ಬಿನ್ ಶಹರ್ಯಾರ್ ದಾಲ್ಚಿನ್ನಿಯ ಮೂಲ ಶ್ರೀಲಂಕಾ ಎಂದು ಗುರುತಿಸಿದ ಮೊದಲಿಗರಲ್ಲಿ ಒಬ್ಬನಾಗಿದ್ದನು.ಇನ್ನು. 1344 ರಲ್ಲಿ ಶ್ರೀಲಂಕಾದ ಮೂಲಕ ಪ್ರಯಾಣಿಸಿದ ಮೊರಾಕ್ಕೊದ ವಿಶ್ವಸಂಚಾರಿ ಇಬ್ನ್ ಬತೂತ, ‘ದೇಶದ ಸಂಪೂರ್ಣ ಕರಾವಳಿಯು ಪರ್ವತದ ತೊರೆಗಳಿಂದ ಕೊಚ್ಚಿಬಂದ ದಾಲ್ಚಿನ್ನಿ ತುಂಡುಗಳಿಂದ ಆವೃತವಾಗಿದೆ’ ಎಂದು ಬರೆದಿದ್ದರು. ‌

ಕಾಲಾನಂತರದಲ್ಲಿ, ದಾಲ್ಚಿನ್ನಿಯು ಯುರೋಪಿಯನ್ ಅನ್ವೇಷಕರು ಹೊಸ ಮಾರ್ಗಗಳನ್ನು ಹುಡುಕಲು ಹಾತೊರೆಯುತ್ತಿದ್ದ ಅತ್ಯಂತ ಬೇಡಿಕೆಯ ಸಾಂಬಾರ ಪದಾರ್ಥಗಳಲ್ಲಿ ಒಂದಾಯಿತು; ಕ್ರಿಸ್ಟೋಫರ್ ಕೊಲಂಬಸ್ ತಾನು ಅಮೆರಿಕಾದಲ್ಲಿ ದಾಲ್ಚಿನ್ನಿಯನ್ನು ಕಂಡುಹಿಡಿದಿರುವುದಾಗಿ ಪ್ರತಿಪಾದಿಸಿದನು (ವಾಸ್ತವವಾಗಿ, ಅವನು ಅದನ್ನು ಪತ್ತೆಹಚ್ಚಿರಲಿಲ್ಲ), ಮತ್ತು ಗೊಂಜಾಲೊ ಪಿಜಾರೊ ಎಂಬ ಸ್ಪೇನ್ ದೇಶದವನು ‘ದಾಲ್ಚಿನ್ನಿ ನಾಡನ್ನು’  ಹುಡುಕುವ ಪ್ರಯತ್ನದಲ್ಲಿ ಅಮೆಜಾನ್ ಪ್ರದೇಶವನ್ನು ಅನ್ವೇಷಿಸಿದನು. ವಸಾಹತುಶಾಹಿ ಕಾಲದಲ್ಲಿ, ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರು ಶ್ರೀಲಂಕಾದ ದಾಲ್ಚಿನ್ನಿ ವ್ಯಾಪಾರದ ಮೇಲೆ ಹತೋಟಿ ಸಾಧಿಸಲು ಪರಸ್ಪರ ಹೋರಾಡಿದರು.

ಇಂದು ಕೂಡ ಶ್ರೀಲಂಕಾದ ದಾಲ್ಚಿನ್ನಿಯನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ ಮತ್ತು ಮೆಚ್ಚಲಾಗುತ್ತದೆ; ವಿಶ್ವದ ಶೇಕಡಾ 85 ರಷ್ಟು ‘ಅಸಲಿ’ ದಾಲ್ಚಿನ್ನಿಯನ್ನು ಈ ರಾಷ್ಟ್ರವೇ ಪೂರೈಸುತ್ತದೆ ಮತ್ತು ಇದರ ಉತ್ಪಾದನೆಯು 3,50,000 ಜನರಿಗೆ ಉದ್ಯೋಗವನ್ನು ಒದಗಿಸಿದೆ.

ಮುಸ್ಲಿಂ ವ್ಯಾಪಾರಿಗಳ ಜಾಗತಿಕ ಸಂಪರ್ಕ

ಶ್ರೀಲಂಕಾದ ಇಸ್ಲಾಮಿಕ್ ಪರಂಪರೆಯ ಬಗ್ಗೆ ಬೆಳಕು ಚೆಲ್ಲುವ ಒಂದು ಪ್ರಮುಖ ವಸ್ತುವೆಂದರೆ ಅದು ‘ಹಡಗಿನ ಗಂಟೆ’ (Ship’s bell). ಕ್ರಿ.ಶ. 1830ರ ದಶಕದಲ್ಲಿ, ಕಾರ್ನಿಷ್ ಮಿಷನರಿ ವಿಲಿಯಂ ಕೊಲೆನ್ಸೊ ಅವರು ನ್ಯೂಜಿಲೆಂಡ್‌ನಲ್ಲಿ ಮಾವೊರಿ (Maori) ಮಹಿಳೆಯರ ಗುಂಪಿನೊಂದಿಗಿದ್ದರು (ಮಾವೊರಿಗಳು ಅಂದರೆ ನ್ಯೂಜಿಲೆಂಡ್‌ನ ಮೂಲನಿವಾಸಿಗಳು). ಈ ಮಹಿಳೆಯರು ಆಲೂಗಡ್ಡೆಗಳನ್ನು ಕುದಿಸಲು ಬಳಸುತ್ತಿದ್ದ ‘ಪಾತ್ರೆ’ಯ ಮೇಲೆ ಒಂದು ಶಾಸನವಿರುವುದನ್ನು ಅವರು ಗಮನಿಸಿದರು. ನಂತರ ಆ ಶಾಸನವು ತಮಿಳು ಭಾಷೆಯಲ್ಲಿದೆ ಎಂಬುದು ಅವರಿಗೆ ದಿಟವಾಯಿತು.  ಮತ್ತು ಅದರಲ್ಲಿ Muhiud Din Buk’s  ship’s bell ಎಂದು ತಮಿಳಿನಲ್ಲಿ ಬರೆಯಲಾಗಿದೆ ಎಂಬುದನ್ನು ಕಂಡುಕೊಂಡರು. ಇದು  ಒಬ್ಬ ಮುಸ್ಲಿಂ ವ್ಯಕ್ತಿಯ ಹೆಸರು ಎಂಬುದು ಸ್ಪಷ್ಟ. ಇನ್ನೂ ಆಸಕ್ತಿದಾಯಕ ವಿಷಯವೆಂದರೆ, ಅದರಲ್ಲಿ ಬಳಸಲಾದ ತಮಿಳು ಭಾಷೆಯ ಶೈಲಿಯು ಆ ಗಂಟೆಯು ಸುಮಾರು 500 ವರ್ಷಗಳಷ್ಟು ಹಳೆಯದಿರಬಹುದು ಎಂಬುದರ ಮೇಲೆ ಬೆಳಕು ಚೆಲ್ಲಿತು.

​ಈ ಹಡಗಿನ ಗಂಟೆಯು ಶ್ರೀಲಂಕಾ ಮತ್ತು ತಮಿಳುನಾಡಿನ  ತಮಿಳು ಮುಸ್ಲಿಂ ನಾವಿಕರು ಎಷ್ಟು ದೂರದವರೆಗೆ ತಲುಪಿರಬಹುದು ಎಂಬುದಕ್ಕೆ ಒಂದು ಸೂಚನೆಯಾಗಿದೆ. ಶತಮಾನಗಳ ಕಾಲ ಅವರು ಹಿಂದೂ ಮಹಾಸಾಗರದ ಉದ್ದಗಲಕ್ಕೂ ಸರಕುಗಳು, ಜನರು ಹಾಗೂ ಇಸ್ಲಾಂ ಧರ್ಮದ ಸಂದೇಶವನ್ನೂ ಒಳಗೊಂಡ ವಿಚಾರಗಳನ್ನು ಸಾಗಿಸುತ್ತಿದ್ದರು.

ಆಯೆಶಾ ರವೂಫ್: ಲಂಕನ್ ಮುಸ್ಲಿಂ ಹುಡುಗಿಯರ ಪರ ಶಿಕ್ಷಣದ ಪ್ರತಿಪಾದಕಿ

ಆಯೆಶಾ ರವೂಫ್ ಅವರು ಶ್ರೀಲಂಕಾದಲ್ಲಿ ಜನಿಸಿದವರಲ್ಲ, ಆದರೆ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಧ್ವನಿಯೆತ್ತುವ ಮೂಲಕ ಮತ್ತು ರಾಜಕೀಯದಲ್ಲಿ ಮುಸ್ಲಿಂ ಮಹಿಳೆಯರನ್ನು ಪ್ರತಿನಿಧಿಸುವ ಮೂಲಕ ಅವರು ತಮ್ಮ ಪರಂಪರೆಯನ್ನು ಅಲ್ಲಿಯೇ ಸ್ಥಾಪಿಸಿದರು. ಮೂಲತಃ ನೆರೆಯ ಭಾರತದವರಾದ ಆಯೆಶಾ, 1943 ರಲ್ಲಿ ಶ್ರೀಲಂಕಾದ ಉದ್ಯಮಿಯೊಬ್ಬರೊಂದಿಗೆ ವಿವಾಹವಾದ ನಂತರ ಆ ದ್ವೀಪಕ್ಕೆ ಬಂದಿಳಿದರು. ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಅವರ ಸಂಸ್ಕೃತಿಗೆ ಪೂರಕವಾದ ಯಾವುದೇ ಪ್ರೌಢಶಾಲೆ ಇಲ್ಲದಿರುವುದನ್ನು ಗಮನಿಸಿದ ಅವರು, 1946 ರಲ್ಲಿ ಕೊಲಂಬೊದಲ್ಲಿ ‘ಮುಸ್ಲಿಂ ಲೇಡೀಸ್ ಕಾಲೇಜ್’  ಅನ್ನು ಪ್ರಾರಂಭಿಸಿದರು. ಅವರು ಮನೆಮನೆಗೆ ತೆರಳಿ, ಶ್ರೀಲಂಕಾದ ಮುಸ್ಲಿಂ ಕುಟುಂಬಗಳಿಗೆ ತಮ್ಮ ಯೋಜನೆಯನ್ನು ವಿವರಿಸಿದರು ಮತ್ತು ಅವರ ಪುತ್ರಿಯರನ್ನು ಶಾಲೆಗೆ ಕಳುಹಿಸುವಂತೆ ಪ್ರೋತ್ಸಾಹಿಸಿದರು. ಮೊದಲ ವರ್ಷದಲ್ಲೇ ಅವರು 200 ವಿದ್ಯಾರ್ಥಿನಿಯರನ್ನು ಸೇರಿಸುವಲ್ಲಿ ಯಶಸ್ವಿಯಾದರು. ಉಳಿದದ್ದು ಇತಿಹಾಸ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅನೇಕ ಯುವತಿಯರು ಶ್ರೀಲಂಕಾದ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದರು.


​1949 ರಲ್ಲಿ, ಸಂಸದೀಯ ರಾಜಕೀಯಕ್ಕೆ ಸೇರುವ ಭರವಸೆಯ ಮೂಡಿಸಿ ವಿಫಲರಾದ ನಂತರ, ಆಯೆಶಾ ರವೂಫ್ ಅವರು ಕೊಲಂಬೊ ಮಹಾನಗರ ಪಾಲಿಕೆಗೆ ಆಯ್ಕೆಯಾದರು. ಮುಂದಿನ ಹನ್ನೆರಡು ವರ್ಷಗಳ ಕಾಲ ಅವರು ಅಧಿಕಾರದಲ್ಲಿದ್ದರು. ಈ ಅವಧಿಯಲ್ಲಿ ಅವರು ಶ್ರೀಲಂಕಾದ ಅತಿದೊಡ್ಡ ನಗರವಾದ ಕೊಲಂಬೊದ ಉಪಮೇಯರ್ ಆಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು, ರಾಣಿ ಎಲಿಜಬೆತ್ II ಅವರು ನಗರಕ್ಕೆ ಭೇಟಿ ನೀಡಿದಾಗ ಅವರನ್ನು ಭೇಟಿಯಾದರು ಮತ್ತು ನಗರದ ವಸತಿ ಹಾಗೂ ನೈರ್ಮಲ್ಯ ಸವಾಲುಗಳಿಗೆ ಪರಿಹಾರಕ್ಕಾಗಿ ಧ್ವನಿಯೆತ್ತಿದರು. 1961 ರಲ್ಲಿ, ಅವರು ಮತ್ತೆ ‘ಮುಸ್ಲಿಂ ಲೇಡೀಸ್ ಕಾಲೇಜಿನ’ ಪ್ರಾಂಶುಪಾಲರಾಗಿ ಜವಾಬ್ದಾರಿ ವಹಿಸಿಕೊಂಡರು ಮತ್ತು 1970 ರಲ್ಲಿ ನಿವೃತ್ತರಾಗುವವರೆಗೂ ಅಲ್ಲಿಯೇ ಸೇವೆ ಸಲ್ಲಿಸಿದರು. ಆಯೆಶಾ ಅವರು ಜನವರಿ 1992 ರಲ್ಲಿ ತಮ್ಮ 78 ನೇ ವಯಸ್ಸಿನಲ್ಲಿ ಕೊಲಂಬೊದಲ್ಲಿ ನಿಧನರಾದರು. ಸಮುದಾಯದ ಸದಸ್ಯರು ಅವರನ್ನು “ನಿರ್ಭೀತ ಸಾರ್ವಜನಿಕ ಭಾಷಣಗಾರ್ತಿ” ಎಂದು ಮತ್ತು “ಅತ್ಯಂತ ಸೌಮ್ಯ ಸ್ವಭಾವದವರು, ದಯಾಪರರು ಹಾಗೂ ಮಹಿಳೆಯರ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ಸಮುದಾಯದ ಜೀವನವನ್ನು ಉತ್ತಮಗೊಳಿಸುವಲ್ಲಿ ಆಸಕ್ತಿ ಹೊಂದಿದ್ದವರು” ಎಂದು ಬಣ್ಣಿಸಿದ್ದಾರೆ.

ತುವಾನ್ ಬುರ್ಹಾನುದ್ದೀನ್ ಜಯಾ (ಟಿ.ಬಿ. ಜಯಾ): ಶ್ರೀಲಂಕಾದ ರಾಷ್ಟ್ರೀಯ ಹೀರೋ

​ಟಿ. ಬಿ. ಜಯಾ ಅವರನ್ನು ಶ್ರೀಲಂಕಾದ ರಾಷ್ಟ್ರೀಯ ಹೀರೋಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಇವರು ಕ್ರಿ.ಶ‌. 1890ರಲ್ಲಿ ಶ್ರೀಲಂಕಾದ ಮಲಯ್ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದರು. ಬಾಲ್ಯದಿಂದಲೇ ಶಿಕ್ಷಣದಲ್ಲಿ ಅತ್ಯಂತ ಪ್ರತಿಭಾವಂತರಾಗಿದ್ದ ಜಯಾ ಅವರು ಶಿಕ್ಷಕರಾದರು. ಲಂಡನ್ ವಿಶ್ವವಿದ್ಯಾಲಯದಿಂದ ‘ಕ್ಲಾಸಿಕ್ಸ್’ ವಿಷಯದಲ್ಲಿ ಪದವಿ ಪೂರೈಸಿದರು ಮತ್ತು ವಕೀಲರಾಗಬೇಕೆಂದು ಬಯಸಿದ್ದರು. ಆದರೆ, ಅವರಿಗೆ ಝಾಹಿರಾ ಕಾಲೇಜಿನ ಪ್ರಾಂಶುಪಾಲರ ಹುದ್ದೆಯು ಲಭಿಸಿದಾಗ ಅದನ್ನು ಸ್ವೀಕರಿಸಿದರು. ಮುಂದಿನ 27 ವರ್ಷಗಳ ಕಾಲ ಅವರು ಆ ಶಾಲೆಯನ್ನು ಅಭಿವೃದ್ಧಿಪಡಿಸಿದರು. ಶ್ರೀಲಂಕಾದ ವಿವಿಧ ಸಮುದಾಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ದೇಶದ ಅತ್ಯಂತ ಪ್ರಮುಖ ಶಾಲೆಗಳಲ್ಲಿ ಒಂದಾಗಿ ಅದು ಹೊರಹೊಮ್ಮಿತು. ಅವರು ಯಾವಾಗಲೂ ತಮ್ಮ ವಿದ್ಯಾರ್ಥಿಗಳ ಪರವಾಗಿರುತ್ತಿದ್ದರು. ಏಪ್ರಿಲ್ 5, 1942 ರಂದು (ಎರಡನೇ ಮಹಾಯುದ್ಧದ ಸಮಯದಲ್ಲಿ) ಜಪಾನಿನ ಪಡೆಗಳು ಕೊಲಂಬೊ ಮೇಲೆ ಬಾಂಬ್ ದಾಳಿ ಮಾಡಲು ಪ್ರಾರಂಭಿಸಿದಾಗಲೂ, ಜಯಾ ಅವರು ಅಂದು ನಿಗದಿಯಾಗಿದ್ದ ತಮ್ಮ ವಿದ್ಯಾರ್ಥಿಯ ವಿವಾಹಕ್ಕೆ ಹಾಜರಾಗಿ ನವದಂಪತಿಗಳಲ್ಲಿ ಉತ್ಸಾಹ ತುಂಬಿದ್ದರು.


​ಜಯಾ ಅವರು ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರು ಮತ್ತು ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಕ್ರಿ.ಶ. 1944ರಲ್ಲಿ ಅವರು ನೀಡಿದ ಪ್ರಸಿದ್ಧ ಭಾಷಣದಲ್ಲಿ, ಶ್ರೀಲಂಕಾದ ಮುಸ್ಲಿಮರು ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸುತ್ತಾರೆ ಎಂದು ಘೋಷಿಸಿದರು. ಧಾರ್ಮಿಕ ಅಥವಾ ಜನಾಂಗೀಯ ಭೇದಗಳನ್ನು ಬಳಸಿಕೊಂಡು ‘ಒಡೆದು ಆಳುವ’ ಬ್ರಿಟಿಷ್ ಸಾಮ್ರಾಜ್ಯದ ಕುತಂತ್ರ ಇಲ್ಲಿ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದು ಕ್ರಿ.ಶ. 1948ರ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಟ್ಟಿತು ಮತ್ತು ಅವರು ಸ್ವತಂತ್ರ ಶ್ರೀಲಂಕಾದ ಮೊದಲ ಮುಸ್ಲಿಂ ಸಂಪುಟ ಸಚಿವರಾದರು. ನಂತರ ಅವರು ಪಾಕಿಸ್ತಾನಕ್ಕೆ ಶ್ರೀಲಂಕಾದ ಮೊದಲ ಹೈಕಮಿಷನರ್ ಆಗಿ ನೇಮಕಗೊಂಡು ಒಂಬತ್ತು ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. ಪಾಕಿಸ್ತಾನದಲ್ಲಿ ಅನೇಕರ ಗೌರವ ಮತ್ತು ಪ್ರೀತಿಯನ್ನು ಗಳಿಸಿದ ಅವರು, ಉಭಯ ದೇಶಗಳ ನಡುವೆ ಬಲವಾದ ಮತ್ತು ಶಾಶ್ವತವಾದ ಸಂಬಂಧವನ್ನು ಸ್ಥಾಪಿಸಿದರು. ಕ್ರಿ.ಶ. 1960ರಲ್ಲಿ ಜಯಾ ಅವರು ಮದೀನಾದಲ್ಲಿದ್ದಾಗ ಶ್ರೀಲಂಕಾದ ಯಾತ್ರಿಕರಿಗಾಗಿ ಸೇವೆಗಳನ್ನು ಸ್ಥಾಪಿಸಲು ಶ್ರಮಿಸುತ್ತಿದ್ದರು; ಅಲ್ಲಿಯೇ ಅವರು ನಿಧನರಾದರು ಮತ್ತು ಪ್ರವಾದಿ ಅವರ ಮಸೀದಿಯ ಪಕ್ಕದಲ್ಲಿರುವ ಪ್ರಸಿದ್ಧ ಜನ್ನತ್ ಅಲ್-ಬಖಿಯಲ್ಲಿ ಅವರನ್ನು ದಫನ ಮಾಡಲಾಯಿತು.

ಮೂಲ : ಹಸ್ಸಾಂ ಮುನೀರ್
ಅನು: ಮುಹಮ್ಮದ್ ಶಮೀರ್, ಪೆರುವಾಜೆ

Leave a Reply

*