ಮಧ್ಯಕಾಲೀನ ನಾಗರಿಕತೆಗಳು ರೂಪಿಸಿದ ಭಾರತೀಯ ನಗರಗಳು

ಭಾರತದ ಇತಿಹಾಸ ತಜ್ಞರು ಇಸ್ಲಾಮ್ ಧರ್ಮವು ದೇಶಕ್ಕೆ ಏನನ್ನು ತಂದಿದೆ ಎಂಬುದನ್ನು ಪರಿಶೀಲಿಸುವಾಗ, ಅವರು ಹೆಚ್ಚಾಗಿ ಭಾಷೆ, ಕಾವ್ಯ, ಸಂಗೀತ, ಚಿತ್ರಕಲೆ, ಪಾಕಶಾಲೆಯ ಕಲೆಗಳು ಅಥವಾ ಆಧ್ಯಾತ್ಮಿಕತೆಯಂತಹ ಸಾಂಸ್ಕೃತಿಕ ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾರೆಯೇ ಹೊರತು ನಗರ ವಿನ್ಯಾಸ ಅಥವಾ ನಗರೀಕರಣವನ್ನು  ಪರಿಗಣಿಸುವುದು ತೀರಾ ಅಪರೂಪ.

‘ಮಾರ್ಕೈಸ್’ ಸಹೋದರರು ಎಂದು ಖ್ಯಾತರಾದ ವಿಲಿಯಂ ಮತ್ತು ಜಾರ್ಜ್ಸ್ ಎಂಬ ಇತಿಹಾಸಕಾರರು ‘ಇಸ್ಲಾಮಿಕ್ ನಗರ’ ಎಂದು ಕರೆದ ನಗರ ಸ್ವರೂಪವು ಭಾರತದಾದ್ಯಂತ ಹೇಗೆ ಹರಡಿತು ಎಂಬುದನ್ನು  ಇತಿಹಾಸಕಾರರು ಮತ್ತು ಭೂಗೋಳಶಾಸ್ತ್ರಜ್ಞರು ಪರಿಶೀಲಿಸುತ್ತಾರೆ. ಅವರು ಇದನ್ನು ಮುಖ್ಯವಾಗಿ ಒಂದು ಪರಕೀಯ ಸಂಸ್ಥೆಯಾಗಿ (exogenous institution) ಅಥವಾ ಹೊರಗಿನಿಂದ ಬಂದು ಸಮಾಜದಿಂದ ಪ್ರತ್ಯೇಕವಾಗಿ ನೆಲೆಸಿದ ಗಣ್ಯ ವರ್ಗಕ್ಕೆ ಆಶ್ರಯ ನೀಡುವ ಒಂದು ಪ್ರತ್ಯೇಕ ಪ್ರದೇಶವಾಗಿ (enclave) ಮಾತ್ರ ನೋಡುತ್ತಾರೆ. ಪ್ರತ್ಯುಷ್ ಶಂಕರ್ ಅವರ ಇತ್ತೀಚಿನ ಪುಸ್ತಕವು ಈ ಆಯಾಮವನ್ನು ಒಳಗೊಂಡಿದೆಯಾದರೂ, ಅದಕ್ಕಿಂತಲೂ ಆಳವಾದ ವಿಚಾರಗಳನ್ನು ಮಂಡಿಸುತ್ತದೆ.

42 ಭಾರತೀಯ ನಗರಗಳ ವಿಶ್ಲೇಷಣೆಯನ್ನು ಆಧರಿಸಿದ ಕೃತಿಯಾದ ‘ಹಿಸ್ಟರಿ ಆಫ್ ಅರ್ಬನ್ ಫಾರ್ಮ್ ಆಫ್ ಇಂಡಿಯಾ’ (History of Urban Form of India) ದಲ್ಲಿ, ಲೇಖಕರು ಪ್ರಾಚೀನ ನಗರಗಳು, ಮಧ್ಯಕಾಲೀನ ನಗರಗಳು ಮತ್ತು ಆಧುನಿಕ ರಾಜ್ಯಗಳಿಂದ ನಿರ್ಮಿತವಾದ ನಗರಗಳು ಎಂದು ನಗರಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸುತ್ತಾರೆ.

ಸಿಂಧೂ ನಾಗರಿಕತೆಯ ನಗರಗಳನ್ನು ಹೊರತುಪಡಿಸಿದರೆ, ಪ್ರಾಚೀನ ನಗರಗಳನ್ನು ಮುಖ್ಯವಾಗಿ ದಕ್ಷಿಣ ಭಾರತದ ‘ದೇವಸ್ಥಾನ ನಗರಿ’ಗಳಲ್ಲಿ (Temple cities) ಕಾಣಬಹುದು. ಮಧ್ಯಕಾಲೀನ ನಗರಗಳು ಹಲವಾರು ವಿಭಿನ್ನ ಮಾದರಿಗಳನ್ನು ಅನುಸರಿಸುತ್ತವೆಯಾದರೂ, ಪ್ರತ್ಯುಷ್ ಶಂಕರ್ ಅವರು ಮುಖ್ಯವಾಗಿ ಮೂರು ವಿಧಗಳನ್ನು ಗುರುತಿಸುತ್ತಾರೆ: ಗುಜರಾತ್‌ನ ವಿಶಿಷ್ಟವಾದ ವಾಣಿಜ್ಯ ನಗರಗಳು, ಹಿಮಾಲಯದ ಭೂಪ್ರದೇಶದ ಸ್ವರೂಪಕ್ಕೆ ಅನುಗುಣವಾಗಿ ನಿರ್ಮಿತವಾದ ನಗರಗಳು,  ಡೆಕ್ಕನ್‌ನಲ್ಲಿ ಮುಸ್ಲಿಮರು ನಿರ್ಮಿಸಿದ ನಗರಗಳು.

ಭಾರತೀಯ ನಾಗರಿಕತೆಗೆ ಇಸ್ಲಾಮ್ ನೀಡಿದ ಕೊಡುಗೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಇವುಗಳನ್ನು ಪರಸ್ಪರ ಹೋಲಿಸುವುದು ಬಹಳ ಉಪಯುಕ್ತವಾಗಿದೆ. ಪ್ರತ್ಯುಷ್ ಶಂಕರ್ ಅವರು ಇದನ್ನು ನೇರವಾಗಿ ಪ್ರಯತ್ನಿಸದಿದ್ದರೂ, ನಗರಗಳ ರಚನಾತ್ಮಕ ಸ್ವರೂಪದ (Morphological approach) ಅಧ್ಯಯನದ ಮೂಲಕ ನಮಗೆ ಪರಸ್ಪರ ಹೋಲಿಕೆ ಮಾಡಲು ಸಹಾಯ ಮಾಡುತ್ತಾರೆ. ಅವರಿಗೆ ನಗರದ ಆಡಳಿತ ವಿಧಾನ ಅಥವಾ ರಾಜ್ಯದೊಂದಿಗಿನ ಅದರ ಸಂಬಂಧಕ್ಕಿಂತ ಹೆಚ್ಚಾಗಿ, ನಗರದ ಸ್ವರೂಪ ಅಥವಾ ಆಕಾರದ ಬಗ್ಗೆ ಮಾತ್ರ ಆಸಕ್ತಿ ಇದೆ.
ಎಲ್ಲಾ ಭಾರತೀಯ ನಗರಗಳು ತಮ್ಮ ವಿನ್ಯಾಸ ಅಥವಾ ರಚನೆಯ ಒಂದು ಗಮನಾರ್ಹ ಭಾಗವನ್ನು ಜಾತಿ ವ್ಯವಸ್ಥೆಯಿಂದಲೇ ಪರಂಪರಾಗತವಾಗಿ ಪಡೆದುಕೊಂಡಿವೆ. ಪ್ರತ್ಯುಷ್ ಶಂಕರ್ ಅವರು ಪೀಠಿಕೆಯಲ್ಲಿ ಹೀಗೆ ಬೆಟ್ಟು ಮಾಡುತ್ತಾರೆ:  ‘ಜಾತಿ ವ್ಯವಸ್ಥೆಯು ಒಳಮುಖಿ ನೆರೆಹೊರೆಯ ಸಮೂಹಗಳ  ಸ್ಥಳ ಮತ್ತು ರಚನೆಯನ್ನು ನಿರ್ಧರಿಸುವಲ್ಲಿ ದೊಡ್ಡ ಪ್ರಭಾವ ಬೀರಿತ್ತು (ಜೋಧ್‌ಪುರ ಮತ್ತು ಉದಯಪುರದಂತೆ). ಅಷ್ಟೇ ಅಲ್ಲದೆ, ಪ್ರವೇಶ ದ್ವಾರಗಳನ್ನು ನಿಯಂತ್ರಿಸುವ ಮೂಲಕ ನಗರದ ಸಂಪರ್ಕವನ್ನೇ ಕಡಿತಗೊಳಿಸುವ ವ್ಯವಸ್ಥೆಯನ್ನೂ ಇದು ರೂಪಿಸಿತ್ತು (ಅಹಮದಾಬಾದ್‌ ಪೋಲ್)’

ದೇವಸ್ಥಾನ ನಗರಿಗಳಲ್ಲಿ (temple city) ಜಾತಿ ವ್ಯವಸ್ಥೆಯು ಸಹಜವಾಗಿಯೇ ಕೆಲಸ ಮಾಡುತ್ತಿರುತ್ತದೆ. ದಕ್ಷಿಣ ಭಾರತದಲ್ಲಿ ನಗರಗಳ ಉಗಮಕ್ಕೆ ದೇವಾಲಯದ ಸುತ್ತಲಿನಲ್ಲಿ ವಾಸವಿದ್ದ ಬ್ರಾಹ್ಮಣ ವಸಾಹತುಗಳನ್ನು ಬಳಸಿಕೊಂಡು ಹೆಚ್ಚುವರಿ ಆರ್ಥಿಕತೆಯನ್ನು (surplus economy) ಸೃಷ್ಟಿಸುವ ಆಲೋಚನೆಯೇ ಕೇಂದ್ರಬಿಂದುವಾಗಿತ್ತು. ಇದು ವೈದಿಕ ಮತ್ತು ಪುರಾಣ ಧರ್ಮಗಳ ಮೂಲಕ ವ್ಯಕ್ತವಾದ ‘ಬ್ರಾಹ್ಮಣ- ಕ್ಷತ್ರಿಯ ಒಕ್ಕೂಟ’ದ ಸಿದ್ಧಾಂತದ ಮೂಲಕ ಮಾನ್ಯತೆ ಪಡೆಯಿತು.

ಸಜಹವಾಗಿಯೇ ‘ದೇವಾಲಯ ನಗರಿ’ಯು ಕಾರ್ಯವಿಭಜನೆಯ ಆಧಾರದ ಮೇಲೆ ವಿವಿಧ ವಲಯಗಳಾಗಿ ವಿಂಗಡಿಸಲ್ಪಟ್ಟಿತ್ತು ಮತ್ತು ಇದನ್ನು ವಿವಿಧ ಜಾತಿ ಆಧಾರಿತ ವಸತಿಗಳ ಮೂಲಕ ಗುರುತಿಸಲಾಗುತ್ತಿತ್ತು. ಜಾತಿ ವ್ಯವಸ್ಥೆಯನ್ನು ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು ಮತ್ತು ಈ ನಗರ ಕೇಂದ್ರಗಳ ಯೋಜನೆಯಲ್ಲಿ ಅದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

14ನೇ ಶತಮಾನದಿಂದೀಚೆಗೆ ದಖನ್ ಪ್ರಾಂತ್ಯದಲ್ಲಿ ಮುಸ್ಲಿಮ್ ನಾಯಕರು ನಿರ್ಮಿಸಿದ ನಗರಗಳಿಗೂ ಕೂಡ ಈ ಜಾತಿ ವ್ಯವಸ್ಥೆಯಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಲಿಲ್ಲ. ಏಕೆಂದರೆ ಹಿಂದೂ ಮತ್ತು ಇಸ್ಲಾಮಿಕ್ ನಗರಗಳ ನಡುವೆ ವ್ಯತ್ಯಾಸ ಗುರುತಿಸುವುದು ಒಂದು ‘ಅತಿ ಸರಳವಾದ ದ್ವಂದ್ವ’ (simplistic binary) ಆಗಿರುತ್ತದೆ. ಆದರೆ, ವಾಸ್ತವವು ಅದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ. ಮಧ್ಯಕಾಲೀನ ದಖನ್‌ನ ಈ ನಗರಗಳು ಅಲ್ಲಿಯವರೆಗೆ ದೇಶದಲ್ಲಿದ್ದ ನಗರ ಸ್ವರೂಪಕ್ಕೆ ಹೊಸತೊಂದನ್ನು ಸೇರಿಸಿದವು. ಈ ನಾವೀನ್ಯತೆಯು ನಗರದ ಒಳಗಡೆ ನಡೆಯಲಿಲ್ಲ, ಬದಲಿಗೆ ಹೊರಗಡೆ ನಡೆಯಿತು. ಅದು ನಗರದ ಚಲನಶೀಲತೆಯ ಪ್ರಮುಖ ಅಂಶವಾಗಿತ್ತು. ನಗರದ ಗೋಡೆಗಳಿಂದ ಬಹಳ ದೂರವಲ್ಲದಿದ್ದರೂ, ನಗರದ ವ್ಯಾಪ್ತಿಯ ಹೊರಗೆ ಸೂಫಿ ಸಂತರು  ವ್ಯವಸ್ಥಿತ ರೀತಿಯಲ್ಲಿ ನೆಲೆಸಿದರು. ಭೌತಿಕ ವಸ್ತುಗಳಲ್ಲಿ ತಮಗಿದ್ದ ವೈರಾಗ್ಯವನ್ನು ಪ್ರದರ್ಶಿಸಲು ಮತ್ತು ಶಾಂತಿಯಿಂದ ಬದುಕಲು ಅವರು ಉದ್ದೇಶಪೂರ್ವಕವಾಗಿಯೇ ನಗರದಿಂದ ದೂರವಿದ್ದರು. ಅದೇ ಸಮಯದಲ್ಲಿ, ನಗರದ ನಿವಾಸಿಗಳು ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಜನರು ಒಂದು ದಿನ ಪವಿತ್ರ ಸೂಫಿ ತಾಣಗಳಲ್ಲಿ ಕಳೆಯುವುದಕ್ಕಾಗಿ ನಗರವನ್ನು ಬಿಟ್ಟು ಹೊರಬರುತ್ತಿದ್ದರು ಮತ್ತು ಸಂಜೆಯ ವೇಳೆಗೆ ವಾಪಸ್ಸಾಗುತ್ತಿದ್ದರು.

ಈ ಸಂತರ ಮರಣದ ನಂತರ, ಅವರನ್ನು ಅವರು ವಾಸವಿದ್ದ ಸ್ಥಳದಲ್ಲೇ ಸಮಾಧಿ ಮಾಡಲಾಯಿತು ಮತ್ತು ಅವರ ಸಮಾಧಿಯ ಸುತ್ತಲೂ ‘ದರ್ಗಾ’ ಎಂಬ ಭವ್ಯ ಸ್ಮಾರಕಗಳನ್ನು ನಿರ್ಮಿಸಲಾಯಿತು. ಸಂತರ ಜನಪ್ರಿಯತೆಗೆ ಅನುಗುಣವಾಗಿ ಇವುಗಳ ಗಾತ್ರವಿರುತ್ತಿತ್ತು.
ಪ್ರತ್ಯುಷ್ ಶಂಕರ್ ಅವರು ಹೇಳದ ಒಂದು ವಿಷಯವೇನೆಂದರೆ, ಇಡೀ ಸಮಾಜ ಸೂಫಿ ಸಂತರಿಗೆ ಮರಣಾನಂತರವೂ ಅಪಾರ ಶಕ್ತಿ ಇದೆ ಎಂದು ನಂಬಿತ್ತು. ಸಂತರು ಮರಣ ಹೊಂದಿದ ಶತಮಾನಗಳ ನಂತರವೂ ಅನೇಕ ಭಕ್ತರು ತಮ್ಮ ಆಸೆಗಳನ್ನು (ಮಕ್ಕಳನ್ನು ಪಡೆಯುವುದು, ರೋಗ ಗುಣಪಡಿಸುವುದು ಅಥವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು) ಪೂರೈಸುವಂತೆ ಕೇಳಿಕೊಳ್ಳಲು ದರ್ಗಾಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಹಿಂದೂ,ಕ್ರೈಸ್ತ, ಸಿಖ್ಖರು ಹೀಗೆ ಎಲ್ಲಾ ಧರ್ಮೀಯರೂ ಸೂಫಿ ಸಂತರನ್ನು ಗೌರವಿಸುತ್ತಾರೆ. ಗಣ್ಯರಿಂದ ಹಿಡಿದು ಕೆಳಜಾತಿಯವರೆಗೆ ಎಲ್ಲಾ ವರ್ಗದ ಜನರು ದರ್ಗಾ ಸಂದರ್ಶಿಸುತ್ತಾರೆ ಮತ್ತು ಅತ್ಯಂತ ಪವಿತ್ರವಾದ ಆ ಸ್ಥಳಗಳಲ್ಲೂ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಪ್ರವೇಶವಿರುತ್ತದೆ. ಈ ಕೆಳಗಿನ ತೀರ್ಮಾನಕ್ಕೆ ಬರುವಾಗ ಪ್ರತ್ಯುಷ್ ಶಂಕರ್ ಅವರು ನಾನು ಮೇಲೆ ಹೇಳಿದ ವಿಷಯಗಳನ್ನು ಓದುಗರು ತಿಳಿದಿದ್ದಾರೆಂದೇ ಭಾವಿಸುತ್ತಾರೆ.

ದಖನ್ ನಗರಗಳ ವಿಶಿಷ್ಟ ಕೊಡುಗೆಯೆಂದರೆ ನಗರದ ಒಳಗಿನ ಅಸಾಧಾರಣ ರಚನೆಯಲ್ಲ, ಬದಲಿಗೆ ಸೂಫಿ ಸಂತರು ನೆಲೆಸಿದ್ದ ಜಿಲ್ಲೆ ಮತ್ತು ಉಪನಗರಗಳ ಅಭಿವೃದ್ಧಿ. ಸೂಫಿ ಸಂತರು ಜನಸಾಮಾನ್ಯರಲ್ಲಿ ಜನಪ್ರಿಯರಾಗಿದ್ದರು ಮತ್ತು ಆಡಳಿತ ವ್ಯವಸ್ಥೆಗೆ ಅಗತ್ಯವಾದ ಪರ್ಯಾಯ ಶಕ್ತಿಯಾಗಿ (counterpoint) ಕಾರ್ಯನಿರ್ವಹಿಸಿದರು. ನಗರವು ವ್ಯಾಪಾರ, ವಾಣಿಜ್ಯ ಮತ್ತು ಅಧಿಕಾರದ ಭೌತಿಕ ಪ್ರಪಂಚವನ್ನು ಪ್ರತಿನಿಧಿಸಿದರೆ, ಸೂಫಿ ಸಮಾಧಿಗಳ ಉಪನಗರ ಪ್ರದೇಶಗಳು ಅದಕ್ಕೆ ತದ್ವಿರುದ್ಧವಾಗಿದ್ದವು; ಅವು ಪ್ರಕೃತಿಯ ಮಡಿಲಿನಲ್ಲಿರುವ ಮಿತವ್ಯಯದ ಮೂಲಸೌಕರ್ಯ ಹೊಂದಿದ ಪವಿತ್ರ ಮತ್ತು ಆಧ್ಯಾತ್ಮಿಕ ಸ್ಥಳಗಳಾಗಿದ್ದವು. ಶತಮಾನಗಳು ಉರುಳಿದಂತೆ ಈ ಸ್ಥಳಗಳು ಸಾರ್ವಜನಿಕ ಸ್ಥಳಗಳಾಗಿ ಬದಲಾದವು. ನಗರದ ಕೋಟೆಯ ಗೋಡೆಗಳ ಹೊರಗೆ ಇರುತ್ತಿದ್ದ ಈ ಸ್ಥಳಗಳಿಗೆ ನಗರವಾಸಿಗಳು ಯಾತ್ರಾಸ್ಥಳಗಳಂತೆ ಭೇಟಿ ನೀಡುತ್ತಿದ್ದರು.

ಕ್ರಿ.ಶ. 14ನೇ ಶತಮಾನದಲ್ಲಿ ದಖನ್‌ನಲ್ಲಿ ಮುಸ್ಲಿಮ್ ನಾಯಕರು ನಿರ್ಮಿಸಿದ ನಗರಗಳು ಭಾರತೀಯ ಜಗತ್ತಿಗೆ ‘ಸಾರ್ವಜನಿಕ ಸ್ಥಳ’ದ ಪರಿಕಲ್ಪನೆಯನ್ನು ಪರಿಚಯಿಸಿದವು. ಧರ್ಮ, ಜಾತಿ ಮತ್ತು ಲಿಂಗದ ಆಧಾರದ ಮೇಲೆ ಸಮಾಜವು ತೀವ್ರವಾಗಿ ವಿಭಜನೆಯಾಗಿದ್ದರಿಂದ ಅಲ್ಲಿಯವರೆಗೆ ಭಾರತದಲ್ಲಿ ಇಂತಹ ಪರಿಕಲ್ಪನೆ ಇರಲಿಲ್ಲ. ಇದು ಇಸ್ಲಾಮ್ ಭಾರತಕ್ಕೆ ನೀಡಿದ ಒಂದು ವಿಶಿಷ್ಟವಾದ ಕೊಡುಗೆಯಾಗಿದೆ. ಆದರೆ ಇಸ್ಲಾಮ್ ಭಾರತಕ್ಕೆ ಪ್ರವೇಶಿಸುವ ಮೊದಲು, ಇಂತಹ ಮುಕ್ತ ಸಾರ್ವಜನಿಕ ಸ್ಥಳಗಳು ದೇಶದಲ್ಲಿ ಅಸ್ತಿತ್ವದಲ್ಲಿರಲಿಲ್ಲ. ತಿರುವಣ್ಣಾಮಲೈ ಬೆಟ್ಟದ ಮೇಲಿರುವ ರಮಣ ಮಹರ್ಷಿಗಳ ಗುಹೆಯಂತೆ, ಋಷಿ ಮುನಿಗಳು ನಗರಗಳಿಂದ ಹೊರಗೆ ತಮ್ಮ ಆಶ್ರಮಗಳನ್ನು ಸ್ಥಾಪಿಸಿದ್ದರು. ಆದರೆ ಅವರ ಅನುಯಾಯಿಗಳು ಅಲ್ಲಿ ಅವರಿಗೆ ತೊಂದರೆ ನೀಡುತ್ತಿರಲಿಲ್ಲ, ಮತ್ತು ಒಂದು ವೇಳೆ ಭೇಟಿಯಾದಲ್ಲಿ ಅದು ಕೇವಲ ‘ಗುರು-ಶಿಷ್ಯ ಪರಂಪರೆ’ಯ ರೂಪದಲ್ಲಿರುತ್ತಿತ್ತು. ಆದರೆ ದರ್ಗಾಗಳ ಸುತ್ತಮುತ್ತ ಆಟದ ಮೈದಾನಗಳು ಹಾಗೂ ಪಿಕ್ನಿಕ್ ತಾಣಗಳನ್ನೂ ಕಾಣಬಹುದಾಗಿತ್ತು.

ತಮ್ಮ ಪುಸ್ತಕದಲ್ಲಿ ಪ್ರತ್ಯುಷ್ ಶಂಕರ್ ಅವರು ಈ ಕೊಡುಗೆಯನ್ನು ಕೇವಲ ದಕ್ಷಿಣ ಭಾರತಕ್ಕೆ (ದಖನ್) ಸೀಮಿತಗೊಳಿಸಿದ್ದಾರೆ, ಆದರೆ ಅವರು ಬೆಟ್ಟು ಮಾಡಿರುವ ಈ ನಾವೀನ್ಯತೆಯು ಭಾರತದಾದ್ಯಂತ ಕಂಡುಬರುತ್ತದೆ ಎಂದು ಹೇಳಬಹುದು. ಉತ್ತರ ಭಾರತದಲ್ಲೂ ಸಹ ಸೂಫಿ ಸಂತರು ನಗರಗಳ ಹೊರವಲಯದಲ್ಲೇ ನೆಲೆಸಿದ್ದರು. ನಿಝಾಮುದ್ದೀನ್ ಔಲಿಯಾ ಅವರು ದೆಹಲಿಯಿಂದ ದೂರವಿರಲು ಬಯಸಲಿಲ್ಲವೇ? ಅವರ ಸಮಾಧಿಗಳು ಇಂದಿಗೂ ಎಲ್ಲರಿಗೂ ಮುಕ್ತವಾದ ಸಾರ್ವಜನಿಕ ಸ್ಥಳವಾಗಿ ರೂಪುಗೊಂಡಿದೆ. ಅಹಮದಾಬಾದ್‌ನ ಸರ್ಖೇಜ್ ರೋಜಾ ಅಥವಾ ದೆಹಲಿಯ ಫಿರೋಜ್ ಶಾ ಕೋಟ್ಲಾದಂತಹ ಸ್ಥಳಗಳು ಇಂದು ನಗರದ ಭಾಗವಾಗಿದ್ದರೂ, ಅವುಗಳ ಸುತ್ತಲಿನ ಹಸಿರು ಪರಿಸರವು ಈ ಅಂಶವನ್ನು ಮತ್ತಷ್ಟು ಎದ್ದು ಕಾಣುವಂತೆ ಮಾಡುತ್ತದೆ. ಆನಂದ್ ತನೇಜಾ ಅವರು ಸ್ಪಷ್ಟಪಡಿಸಿರುವಂತೆ, ಇಂದಿಗೂ ಸಮಾಜದ ಎಲ್ಲಾ ವರ್ಗದ ಜನರು ಅಲ್ಲಿ ಜಮಾಯಿಸುತ್ತಾರೆ, ಇದು ಸಾರ್ವಜನಿಕ ಸ್ಥಳಕ್ಕೆ ಇರಬೇಕಾದ ನೈಜ ಲಕ್ಷಣವಾಗಿದೆ.

ಕ್ರಿಸ್ಟೋಫ್ ಜಾಫ್ರೆಲೋ
ಅನು: ಮುಹಮ್ಮದ್ ಶಮೀರ್ ಪೆರುವಾಜೆ


ಕ್ರಿಸ್ಟೋಫ್ ಜಾಫ್ರೆಲೊ

Leave a Reply

*