ಗತಿಸಿಹೋದ ಭಾರತೀಯ ಕಾಫಿ ಪರಂಪರೆಯ ಜಾಡಿನಲ್ಲಿ

ಶಿಥಿಲಗೊಳ್ಳುತ್ತಿದ್ದ ಮೊಘಲ್ ಸಾಮ್ರಾಜ್ಯದ ಅರಮನೆಗಳು. ಜಾಮಿಯಾ ಮಸೀದಿಯ ಪ್ರೌಢ ಗುಂಬಝಿನ ಆಚೆಗೆ ಮುಳುಗುವ ಸೂರ್ಯನ ಕೆಂಪು ಕಿರಣಗಳು ಹರಡಿದ್ದವು. ಹಳೆ ದೆಹಲಿಯ ಆಕಾಶದಲ್ಲಿ ಸಂಜೆಯ ಪ್ರಾರ್ಥನೆಯ ಕರೆ ಮೊಳಗಿದವು. ತಿರುವು ಮುರುವು ಹಾದಿಗಳಲ್ಲಿ ಹಾರನ್ ಮೊಳಗಿಸುತ್ತ ಸೈಕಲ್ ರಿಕ್ಷಾಗಳ ಶಬ್ದವು ಜನನಿಬಿಡವಾದ ಚಾಂದಿನಿ ಚೌಕಿನುದ್ದಕ್ಕೂ ಶಬ್ದಮಯಗೊಳಿಸುತ್ತಿತ್ತು.

ಸಮೀಪದ ಶಾಜಹನಾಬಾದಿನ ವ್ಯಾಪಾರಗಳು ಸೂರ್ಯಾಸ್ತದೊಂದಿಗೆ ಜೀವ ತುಂಬುತ್ತಿತ್ತು. ಮೊಘಲ್ ದೊರೆ ಶಾಜಹಾನನ ಆಡಳಿತ ಅವಧಿಯಲ್ಲಿ 1648 ರಲ್ಲಿ ನಿರ್ಮಿಸಲ್ಪಟ್ಟ ಗೋಡೆಗಳಿಂದ ಆವೃತವಾದ ಸ್ಥಳವಾಗಿದೆ ಇದು. ಶಬ್ದ ಕೋಲಾಹಲಗಳಿಂದ ಮಗ್ನರಾಗಿರುವ ಜನರ ನೋಟ ಒಲೆಯಿಂದ ಉಬ್ಬಿ ಬರುವ ತಿನಿಸುಗಳ ಸೌಂದರ್ಯಕ್ಕೆ ತಿರುಗುತ್ತಿದೆ. ಇಂಡಿಯನ್ ಮಸಾಲ ಚಹಾದ ಘಮಲು ಮೆಲ್ಲನೆ ದಾರಿಯನ್ನು ಆಕ್ರಮಿಸುತ್ತಿದೆ. ತಮ್ಮ ದಿನದ ಪಾಲಿನ ಕಾಯುವಿಕೆಯಲ್ಲಿರುವ ದೆಹಲಿಗರು ಜೇನುನೊಣಗಳ ಹಿಂಡಿನಂತೆ ಚಹಾದ ಅಂಗಡಿಗಳಿಗೆ ಮುತ್ತಿಕ್ಕುತ್ತಿದ್ದಾರೆ. ಮಾನಸಿಕ ಸ್ವಾಸ್ಥ್ಯಕ್ಕಾಗಿ ದೂರ ದಿಕ್ಕುಗಳಿಂದ ಬರುವವರು ಈ ಗುಂಪಿನಲ್ಲಿದ್ದಾರೆ.

ಭಾರತದಾದ್ಯಂತ ಹರಡಿದ ದೇಶಿಯರ ಹುಚ್ಚಾಗಿದೆ ಚಹಾ. ಭಾರತವೆಂಬ ಪರ್ಯಾಯ ದ್ವೀಪದಲ್ಲಿ ಚಹಾ ಇಷ್ಟೊಂದು ಜನಪ್ರಿಯತೆ ಗಳಿಸಿ ಎರಡು ಶತಮಾನ ಪೂರ್ತಿಗೊಂಡಿಲ್ಲ. ಚಹಾಗೆ ಈ ರೀತಿಯ ಜನಪ್ರಿಯತೆ ಗಳಿಸಿ ಕೊಟ್ಟಿದ್ದು ಬ್ರಿಟಿಷರ ಆಡಳಿತ. ಆದರೆ ಬ್ರಿಟಿಷರ ಆಗಮನಕ್ಕೂ ಅದರ ಮೂಲಕ ರೂಪಿತವಾದ ಚಹಾ ಎಂಬ ಹುಚ್ಚಿಗೂ ಮುಂಚಿತವಾಗಿ ಭಾರತೀಯರಿಗೆ ತುಂಬಾ ಪ್ರಿಯವಾದ ಪಾನೀಯ ಕಾಫಿಯಾಗಿತ್ತು. ಭಾರತೀಯ ಕಾಫಿ ಪರಂಪರೆಗೆ ಕುತೂಹಲಕಾರಿ ಸಾಂಸ್ಕೃತಿಕ ವಿನಿಮಯ ಮತ್ತು ಇತಿಹಾಸವಿದೆ.

ಸೂಫಿಗಳು ಮತ್ತು ವ್ಯಾಪಾರಿಗಳು

ಆಫ್ರಿಕಾದ ಕೊಂಬು (Horn of Africa) ಎಂಬ ಹೆಸರಿನಲ್ಲಿ ಪ್ರಸಿದ್ಧವಾದ ರಾಷ್ಟ್ರಗಳಿಂದ 15ನೇ ಶತಮಾನದಲ್ಲಿ ಕಾಫಿಯು ಯಮನಿಗೆ ತಲುಪಿತು. ನಂತರ ಉತ್ತರದಿಂದ ಪೂರ್ವ ಭಾಗಗಳಿಗೂ ಅಲ್ಲಿಂದ ಹದಿನಾರನೇ ಶತಮಾನದಲ್ಲಿ ಯುರೋಪಿಗೂ ವ್ಯಾಪಿಸಿತು. ಯುರೋಪಿನ ನಂತರ ಪೂರ್ವಕ್ಕೆ ವ್ಯಾಪಿಸಿ ಭಾರತಕ್ಕೂ, ಅಲ್ಲಿ ಪ್ರಭಾವಿಗಳಾಗಿದ್ದ ಮೊಘಲರು ಕಾಫಿಯನ್ನು ತಮ್ಮ ಇಷ್ಟ ಪಾನೀಯವಾಗಿ ಸ್ವೀಕರಿಸಿದರು. ಮೊಘಲ್ ದೊರೆ ಜಹಂಗೀರನಿಗೆ ಶಿರಾಸ್ ಮದ್ಯದೊಂದಿಗೆ ಆಸಕ್ತಿ ಇತ್ತು. ಆದರೆ ಅವನ ಆಸ್ಥಾನದ ಹಿಂದೂ ಮುಸ್ಲಿಂ ಪ್ರಭುಗಳೆಲ್ಲರೂ ಕಾಫಿಯಲ್ಲೇ ಮಗ್ನರಾದರು.

ಜಹಂಗೀರನ ಆಸ್ಥಾನದ ಇಂಗ್ಲಿಷ್ ರಾಯಭಾರದ ಸೈನಿಕ ಪಾದ್ರಿಯಾಗಿದ್ದ ಎಡ್ವರ್ಡ್ ಟೆರ್ರಿ, ನ್ಯಾಯಾಲಯದ ಆಳುಗಳು ಅಂದಿನ ಕಾಫಿಯ ಹೊಸ ಗುಣಗಳಲ್ಲಿ ಆಕರ್ಷಿತರಾಗಿದ್ದರು ಎಂದು ಉಲ್ಲೇಖಿಸಲ್ಪಟ್ಟಿದೆ. ಅದು ಆತ್ಮವನ್ನು ಪ್ರಚೋದಿಸುತ್ತದೆ, ದಹನ ಕ್ರಿಯೆಗೆ ಸಹಾಯಕವಾಗಿದೆ, ರಕ್ತ ಪರಿಚಲನಕ್ಕೆ ನೆರವಾಗುತ್ತದೆ ಎಂದು ಅವರು ನಂಬಿದ್ದರು. ಮೊಘಲ್ ಸಾಮ್ರಾಜ್ಯದೊಂದಿಗೆ ಗಟ್ಟಿಯಾದ ವ್ಯಾಪಾರ ಸಂಬಂಧ ಹೊಂದಿದ್ದ ಅರಬ್, ತುರ್ಕಿ ವ್ಯಾಪಾರಸ್ಥರು ಭಾರತಕ್ಕೆ ಕಾಫಿ ಬೀಜಗಳನ್ನು ಪರಿಚಯಿಸಿದರು. ಅವರು ಕಾಫಿಯಲ್ಲದೆ ರೇಷ್ಮೆ, ಹೊಗೆ ಸೊಪ್ಪು, ಹತ್ತಿ, ಸುಗಂಧದ್ರವ್ಯಗಳು, ವಜ್ರದ ಕಲ್ಲುಗಳು ಮುಂತಾದ ಹಲವು ವಸ್ತುಗಳನ್ನು ಪರ್ಶಿಯಾ, ತುರ್ಕಿ ಮುಂತಾದ ಕಡೆಗಳಿಂದ ಹೊತ್ತು ತಂದರು. ಈ ವಸ್ತುಗಳು ಬಂಗಾಳದ ಪೂರ್ವ ಪ್ರದೇಶ ಸೇರಿದಂತೆ ಭಾರತದ ಮೂಲೆ ಮೂಲೆಗಳಿಗೆ ತಲುಪಿದವು. ಜಹಂಗೀರನ ಮಗ ಶಹಜಾನನ ಆಡಳಿತ ಅವಧಿಯಲ್ಲಿ (1628-1658) ಕಾಫಿಯು ಭಾರತೀಯರ ಪ್ರಿಯ ಪಾನೀಯವಾಗಿ ಬದಲಾಯಿತು.

ಕಾಫಿಯು ಆರೋಗ್ಯಕರ ಪಾನೀಯವಾಗಿಯೂ ಸಾಮಾಜಿಕ ಚಲನೆಯ ಸೂಚಕವಾಗಿಯೂ ದೆಹಲಿಯ ಉನ್ನತ ಮಟ್ಟದ ಸಾಮಾಜಿಕ ಬದುಕಿನ ಅವಿಭಾಜ್ಯ ಘಟಕವಾಗಿಯೂ ಗುರುತಿಸಿಕೊಂಡಿತು. ಟೆರ್ರಿಯಂತೆ ಆ ಕಾಲದಲ್ಲಿ ಭಾರತವನ್ನು ಸಂದರ್ಶಿಸಿದ ಮತ್ತೊಬ್ಬ ಯುರೋಪಿಯನ್ ಜರ್ಮನ್ ಸಾಹಸಿ ಯಾತ್ರಿಕನಾಗಿದ್ದಾನೆ ಜೋಹಾನ್ ಅಲ್ ಬೆಕ್ವಡ್ರಿ ಮಂಡಲ್ ಸ್ಲೇ. ಪೂರ್ವ ಪರ್ಶಿಯಾದಿಂದ ಭಾರತೀಯ ನಗರಗಳಾದ ಸೂರತ್, ಅಹಮದಾಬಾದ್, ಆಗ್ರಾ, ಲಾಹೋರ್ ಮುಂತಾದ ಕಡೆಗಳಲ್ಲಿ ಕೈಗೊಂಡ ಯಾತ್ರೆಗಳ ಕುರಿತು ‘The voyages and travels of J. Albert de Mandelslo’ ಎಂಬ ಶೀರ್ಷಿಕೆಯಡಿಯಲ್ಲಿ ಸ್ಮರಣ ಸಂಚಿಕೆಯನ್ನು ಬರೆದಿದ್ದಾರೆ. ಉಷ್ಣ ಪ್ರತಿರೋಧಕ್ಕಾಗಿ ಮತ್ತು ಸ್ವಯಂ ತಂಪಾಗಿಸಲು ಕಹ್ವಾ (ಕಾಫಿ) ಸೇವಿಸುತ್ತಿದ್ದರು ಎಂದು ಈ ಸ್ಮರಣ ಸಂಚಿಕೆಯಲ್ಲಿ ವಿವರಿಸಿದ್ದಾರೆ. Travels in the mogal empire (1656-1668) ಎಂಬ ಕೃತಿಯಲ್ಲಿ ಫ್ರಾಂಕೋಯಿಸ್ ಬೆರ್ನಿಯರ್ ಎಂಬ ಫ್ರೆಂಚ್ ವೈದ್ಯನು ತುರ್ಕಿಯಿಂದ ಆಮದು ಮಾಡಿದ ಕಾಫಿಯ ಕುರಿತು ಉಲ್ಲೇಖಿಸಿದ್ದಾರೆ.

ಉಷ್ಣ ಪ್ರತಿರೋಧ ಮತ್ತು ಕಾಫಿಯ ಸಾಮಾಜಿಕ ಪ್ರತಿಬಿಂಬದ ಹೊರತಾಗಿಯೂ ಭಾರತದಲ್ಲಿ ಸೂಫಿ ಸಂತರು ಧರ್ಮಾಚರಣೆಯ ಸಲುವಾಗಿ ಕಾಫಿ ಬೀಜವನ್ನು ಉಪಯೋಗಿಸುತ್ತಿದ್ದರು. ಮಿಡ್ಲ್ ಈಸ್ಟ್ ಮತ್ತು ಮಧ್ಯೆಶಿಯಾದ ಸೂಫಿಗಳ ರೀತಿಯಲ್ಲಿ ಭಾರತದ ಸೂಫಿಗಳು ‘ದಿಕ್ರ್’ ಎಂದು ಕರೆಯಲ್ಪಡುವ ತಮ್ಮ ರಾತ್ರಿಯ ದೀರ್ಘ ಸಮಯದ ಭಕ್ತಿಯುತವಾದ ಆಚರಣೆಗಳ ಮುಂಚಿತವಾಗಿ ಕಾಫಿ ಸೇವಿಸುತ್ತಿದ್ದರು. 1670ರಲ್ಲಿ ಮಕ್ಕಾದಿಂದ ಹಿಂದಿರುಗುವ ವೇಳೆ ಬಾಬಾ ಬುಡನ್ ಎಂಬ ಸೂಫಿಯೊಬ್ಬರು ತನ್ನ ವಸ್ತ್ರದ ಮಡಚುಗಳಡೆಯಲ್ಲಿ ಏಳು ಕಾಫಿ ಬೀಜಗಳನ್ನು ತಂದು ಚಿಕ್ಕಮಗಳೂರಿನಲ್ಲಿ ಭಾರತದ ಕಾಫಿ ಕೃಷಿಗೆ ಬೀಜ ಬಿತ್ತಿದರು ಎಂಬ ಐತಿಹ್ಯವಿದೆ. ಈ ಚರಿತ್ರೆ ಕೆಲವೊಮ್ಮೆ ಸರಿ ಎನಿಸಿಕೊಳ್ಳಬಹುದು. ಸರಿ ಏನೇ ಇದ್ದರೂ ಇವತ್ತಿನ ಕರ್ನಾಟಕದಲ್ಲಿ ಬಾಬಾಬುಡನ್ ಗಿರಿ ಎಂಬ ಹೆಸರಿನಲ್ಲಿ ಒಂದು ಪರ್ವತವಿದೆ. ಅದು ಇವತ್ತಿಗೂ ಭಾರತದ ಪ್ರಮುಖ ಕಾಫಿ ಉತ್ಪಾದನಾ ಕೇಂದ್ರವಾಗಿ ಮುಂದುವರಿಯುತ್ತಿದೆ. ಅಲ್ಲಿ ಪ್ರಸ್ತುತ ಸೂಫಿ ಸಂತರಿಗೆ ಅರ್ಪಿಸಲಾದ ಆರಾಧನಾ ಕೇಂದ್ರವನ್ನು ಕಾಣಬಹುದು. ಸರ್ಕಾರದ ಅಧೀನದ ಭಾರತೀಯ ಕಾಫಿ ಬೋರ್ಡ್ ವಿವರಿಸಿದ ಇತಿಹಾಸದ ಮತ್ತೊಂದು ವಿವರಣೆಯಲ್ಲಿ ಅವರು ಯಮನಿನ ‘ಮೋಚ್’ ಎಂಬಲ್ಲಿಗೆ ತೆರಳಿ ಕಾಫಿಯ ಆಮದು ಪ್ರಕ್ರಿಯೆಯಲ್ಲಿ ಕಠಿಣ ನಿಯಮಗಳಿದ್ದುದ್ದರಿಂದ ನಾಜೂಕಾಗಿ ಕಾಫಿ ಬೀಜವನ್ನು ಸಾಗಿಸಿದರು ಎಂದು ಹೇಳಲಾಗುತ್ತದೆ.

ಅನುಭೋಗ ಸಂಸ್ಕೃತಿ

ಹದಿನಾರನೇ ಶತಮಾನದಿಂದ ಪಶ್ಚಿಮದ ಇಸ್ಲಾಮಿಕ್ ಸಾಮ್ರಾಜ್ಯಗಳಲ್ಲಿ, ಪ್ರಮುಖವಾಗಿ ಡಮಸ್ಕಸ್, ಅಲಪ್ಪೋ, ಕೈರೋ, ಇಸ್ತಾಂಬುಲ್ ಮುಂತಾದ ಕಡೆಗಳಲ್ಲಿ ಹುಟ್ಟು ಪಡೆದ ಕೆಫೆ ಕಲ್ಚರ್ (ಲಘು ಭೋಜನ ಶಾಲೆ) ಭಾರತದಲ್ಲಿಯೂ ವ್ಯಾಪಿಸಿತು. ಬೆಳೆದು ಬಂದ ಕೆಫೆ ಸಂಸ್ಕೃತಿಯ ಪ್ರತಿಬಿಂಬಗಳು ಶಜಹನಾಬಾದಿನ ಕಹ್ವಾ ಖಾನ (ಕಾಫಿ ಹೌಸ್) ಗಳಲ್ಲಿ ಪ್ರಕಟವಾಗುತ್ತಿತ್ತು.

ಸ್ಪೆಲ್ಲಿಂಗ್ ದಿ ಬೀನ್ಸ್: ದಿ ಇಸ್ಲಾಮಿಕ್ ಹಿಸ್ಟರಿ ಆಫ್ ಕಾಫಿ ಎಂಬ ತನ್ನ ಪ್ರಬಂಧದಲ್ಲಿ, ಆಹಾರ/ಭಕ್ಷ್ಯ ಇತಿಹಾಸಕಾರ್ತಿಯಾದ ನೇಹ ವೆರ್ಮಾನಿ ದೆಹಲಿಯ ಅರಬ್ ಸೆರಾಯಿ ‘sticky streat coffee ತಯಾರಿಸುವುದರಲ್ಲಿ ಖ್ಯಾತಿ ಪಡೆದಿದ್ದರು’ ಎಂದು ವಿವರಿಸುವುದನ್ನು ಕಾಣಬಹುದು. ಮೊಘಲ್ ರಾಜನಾದ ಹುಮಾಯೂನನ ಪುತ್ರಿ ಹಾಮಿದ್ ಭಾನುರವರ ಮೇಲ್ನೋಟದಲ್ಲಿ 1560ರಲ್ಲಿ ಸೇರಾಯಿ ನಿರ್ಮಾಣ ಕಾಮಗಾರಿ ಪೂರ್ತಿಗೊಂಡಿತು. ಯುನೆಸ್ಕೋ ಪಾರಂಪರಿಕ ತಾಣವಾದ ಹುಮಾಯೂನ್ ಟೊಂಬ್ ಇದರ ವಿಶಾಲವಾದ ಪ್ರಾಂಗಣದ ಒಳಗೆ ಇದು ಇಂದಿಗೂ ನೆಲೆಗೊಂಡಿದೆ. ಮಕ್ಕಾದ ತೀರ್ಥಯಾತ್ರೆಗೆ ರಾಜಮನೆತನ ಅವಲಂಬಿಸಿದ್ದ ಅರಬಿ ಧಾರ್ಮಿಕ ವಿದ್ವಾಂಸರು ಇದನ್ನು ಛತ್ರವಾಗಿ ಉಪಯೋಗಿಸಿದ್ದರೆಂದು, ಮೊಘಲ್ ಮನೆತನಕ್ಕಾಗಿ ಕಾರ್ಯ ಪ್ರವೃತ್ತರಾಗಿದ್ದ ಕರಕೌಶಲ್ಯ ಪರಿಣಿತರು ತಂಗಲು ಇದನ್ನು ಬಳಸಿದ್ದರೆಂದು ಇತಿಹಾಸಕಾರರು ಹೇಳುತ್ತಾರೆ.

ಇತಿಹಾಸಕಾರ ಸ್ಟೀಫನ್ ಬ್ಲೈಕ್ 1991 ರಲ್ಲಿ ಬರೆದ “Shahjahanabad: The sovereign city in mughal india 1639-1673” ಎಂಬ ಗ್ರಂಥದಲ್ಲಿ,ಕಾಫಿ ಹೌಸುಗಳಲ್ಲಿನ ಕವಿಗಳ, ಕಥೆಗಾರರ, ವಾಗ್ಮಿಗಳ, ಆತ್ಮಗೌರವ ತುಂಬಿದವರ ಸಂಗಮ ಭೂಮಿ ಎಂದು ವಿವರಿಸುತ್ತಾರೆ. ಈ ಕಾಫಿ ಹೌಸುಗಳು ಎಷ್ಟರ ಮಟ್ಟಿಗೆ ಶಕ್ತಿಯುತವಾಗಿತ್ತು ಎಂದು ಅಲ್ಲಿ ಚಾಲ್ತಿಯಲ್ಲಿದ್ದ ಕವನ ವಾಚನಗಳು, ಕಥೆ ಹೇಳುವಿಕೆಗಳು, ಸಂವಾದ ಮುಂತಾದವುಗಳ ಕುರಿತು, ಗಂಟೆಘಟ್ಟಲೆ ನಡೆಯುತ್ತಿದ್ದ ಬೋರ್ಡ್ ಗೇಮ್(ಮಣೆ ಆಟ)ಗಳ ಕುರಿತು, ಈ ಚಟುವಟಿಕೆಗಳು ಗೋಡೆಗಳಿಂದ ಆವೃತವಾದ ಈ ನಗರವನ್ನು ಸಾಂಸ್ಕೃತಿಕ ಬದುಕಿನಿಂದ ಹೇಗೆ ಪ್ರಭಾವಿತವಾಗಿತ್ತೆಂದು ಬ್ಲೈಕ್ ವಿವರಿಸುತ್ತಾರೆ.

ಇಸ್ಫಹಾನ್ ಮತ್ತು ಇಸ್ತಾಂಬುಲಿನ ರೀತಿಯಲ್ಲೇ ಶಾಜಹಾನಬಾದಿನಲ್ಲಿಯೂ ಕಾಫಿ ಹೌಸುಗಳು ಅನುಭೋಗ ಸಂಸ್ಕೃತಿಯ ಮತ್ತು ಹೊಸ ಆಹಾರ ಪದ್ಧತಿಯ ಬೆಳವಣಿಗೆಯನ್ನು ತ್ವರಿತ ಗೊಳಿಸಿತು. ಸ್ನಾಕ್ಸ್ ವ್ಯಾಪಾರಿಗಳ ರುಚಿಕರ ತಿನಿಸುಗಳು ಮತ್ತು ನಾಲ್ವಾಯಿಗಳ ರೊಟ್ಟಿಯೂ ಹಾಲ್ವಾಯಿಗಳ ಸಿಹಿ ತಿನಿಸುಗಳ ಲಭ್ಯತೆಯೂ ಇದರೊಂದಿಗೆ ಅನುಕೂಲವಾಯಿತು. ಇದು ಹಳೆ ದೆಹಲಿಯ ಶಹಜನಬಾದಿನಲ್ಲಿ ಇಂದಿಗೂ ಅನುಭವಿಸಲು ಸಾಧ್ಯವಿರುವ ಒಂದು ಪರಂಪರೆಯಾಗಿದೆ.

ಬ್ಲೈಕರ ವಿವರಣೆಯು ಕಾಫಿ ಹೌಸಿನ ಕುರಿತಾದ ಚಿತ್ರವನ್ನು ನೀಡುತ್ತದೆಯಾದರೂ ಅದರ ಇಂಟೀರಿಯಲ್ ದೃಶ್ಯಾವಿಷ್ಕಾರದ ಬಗೆಗೆ ಏನನ್ನು ಹೇಳುವುದಿಲ್ಲ ಅದಲ್ಲದೆ ಓಟೋಮನ್-ಸಫಾವಿಡ್ ಇತಿಹಾಸಗಳಿಗಿಂತ ಭಿನ್ನವಾಗಿ ಅವುಗಳ ರಚನೆ ಹೇಗಿತ್ತು ಎಂಬುದನ್ನು ಚಿತ್ರಿಸುವ ಸಣ್ಣ ಚೀಟಿಗಳು(ಮಿನಿ ವೋಚರ್)ಅಥವಾ ಓರಿಯೆಂಟಲಿಸ್ಟ್ ಕಲಾ ಸೃಷ್ಟಿಗಳನ್ನು ಕಾಣಲು ಸಾಧ್ಯವಿಲ್ಲ.

ಮೊಘಲ್ ಕಾಫಿಯೊಂದಿಗೆ ಹೋಲುವ ಒಂದನ್ನು ಕುಡಿಯುತ್ತಿರುವುದು ಡಚ್ ಚಿತ್ರಗಾರ ರಾಮ್ರಾಂಡಿನ ಚಿತ್ರಗಳಲ್ಲಿ ಕಾಣಬಹುದು. ಆದರೆ ಲೋಟದ ಒಳಗೇನಿತ್ತು ಎಂಬುದನ್ನು ಗುರುತಿಸಲಾಗಲಿಲ್ಲ. ಅಷ್ಟೇ ಅಲ್ಲ ಅವರು ಭಾರತವನ್ನು ಸಂದರ್ಶಿಸಲಿಲ್ಲ. ಆದರೆ ಡಚ್ಚ್ ವ್ಯಾಪಾರಿಗಳು ನೆಡರ್ಲ್ಯಾಂಡಿಗೆ ಕೊಂಡೊಯ್ದ ಚಿತ್ರಗಳಿಂದ ಪ್ರಚೋದನೆಗೆ ಒಳಪಟ್ಟು ಬಿಡಿಸಿದ ಚಿತ್ರಗಳಾಗಿವೆ ಇವು.

ಟರ್ಕಿಷ್ ಕಾಫಿಯ ಮೇಲೆ ಆಣೆ ಮಾಡಿದವ

ಪ್ರಾದೇಶಿಕ ರಾಜರುಗಳು ಶಹಜನಾಬಾದಿನ ವಾತಾವರಣವನ್ನು ತಮ್ಮ ಪ್ರದೇಶಗಳಿಗೆ ನಕಲು ಮಾಡಲು ಶ್ರಮಿಸುತ್ತಿದ್ದರು ಮತ್ತು ಅಲ್ಲಿರುವ ಕೆಫೆ ಸಂಸ್ಕೃತಿಯನ್ನು ಅದೇ ರೀತಿ ಸ್ವೀಕರಿಸಿದ್ದರು. ಅವರಲ್ಲಿ ಬಂಗಾಲದ ನವಾಬನಾಗಿದ್ದ ನಾಜಿಮ್ ಅಲಿ ವರ್ದಿ ಖಾನ್ ಬಹಳ ಪ್ರಾಮುಖ್ಯತೆಯೊಂದಿಗೆ ಸ್ವೀಕರಿಸಿದನು.ಇವರು 1740 ರಿಂದ 1756ರ ಅವಧಿಯಲ್ಲಿ ಬಂಗಾಳವನ್ನಾಳಿದ ಅರಬ್ ತುರ್ಕಿ ವಂಶಸ್ಥನಾಗಿದ್ದಾರೆ. ಉತ್ಸಾಹಿ ಆಡಳಿತಗಾರನಾಗಿ ಪ್ರಸಿದ್ಧಿ ಪಡೆದಿದ್ದ ಆತನಿಗೆ ಬದುಕಿನ ಅತಿ ದೊಡ್ಡ ಎರಡು ಸಂತೋಷ ಕಾಫಿ ಮತ್ತು ಆಹಾರವಾಗಿತ್ತು. ಆ ಕಾಲದ ಪ್ರಮುಖ ಇತಿಹಾಸಕಾರ ಸಯ್ಯಿದ್ ಗುಲಾಂ ಹುಸೈನ್ ಖಾನ್ ಬರೆದ ಸೀರತುಲ್ ಮುತಅಕ್ಕಿರೀನ್ ಅಥವಾ ರಿವ್ಯೂ ಆಫ್ ಮಾಡೆಲ್ ಟೈಮ್ಸ್ ನಲ್ಲಿ ಅದ್ಭುತವಾಗಿ ವಿವರಿಸುತ್ತಾರೆ. ಖಾನ್ ಬರೆಯುತ್ತಾರೆ: ಅವರು ಯಾವಾಗಲೂ ಸೂರ್ಯೋದಯಕ್ಕಿಂತ ಎರಡು ತಾಸು ಮೊದಲು ಎದ್ದೇಳುವರು. ವಿಸರ್ಜನ ಮತ್ತು ಶೌಚ ಕಾರ್ಯದ ಬಳಿಕ ಆರಾಧನೆಗಳಲ್ಲಿ ತೊಡಗುವರು,ಸೂರ್ಯೋದಯದ ವೇಳೆ ತನ್ನ ದೈವೀ ಮಂತ್ರಗಳನ್ನು ಶ್ಲೋಕಗಳನ್ನು ಜಪಿಸುವರು, ನಂತರ ಸ್ನೇಹಿತರೊಂದಿಗೆ ಕಾಫಿ ಸೇವಿಸುವರು, ತದನಂತರ ಒಂದು ತಾಸು ಪೂರ್ಣವಾಗಿ ಸಂವಾದ ನಡೆಸುವರು, ಗದ್ಯಗಳನ್ನು ಆಲಿಸಿ, ಪದ್ಯಗಳನ್ನು ವಾಚಿಸಿ ಸ್ವಾರಸ್ಯಕರ ಕಥೆಗಳನ್ನು ಕಿವಿಗಳಿಸಿಕೊಂಡು ಸ್ವತಃ ಆನಂದಿತರಾಗುವವರು. ಈ ಬೆಳಗಿನ ದಿನಚರಿಯ ನಂತರ ನವಾಬನ ಖಾಸಗಿ ಬಾಣಸಿಗ ತಯಾರಿಸಿದ ಪರ್ಶಿಯಾದ ಭಕ್ಷ್ಯವನ್ನು ಬಡಿಸಲಾಗುವುದು. ಈ ಭಕ್ಷ್ಯಗಳು ನವಾಬನನ್ನು ಉತ್ತಮ ಅಭಿರುಚಿ ಹೊಂದಿರುವ ಆಡಂಬರಗಳನ್ನು ಮೀರಿದ ಮನುಷ್ಯನನ್ನಾಗಿ ವಿವರಿಸುತ್ತದೆ.

ಭಿನ್ನವಾದ ಆಹಾರ, ಮೋಜು ಮಿಶ್ರಿತ ಸಂವಾದ, ಪ್ರೀಮಿಯಂ ಟರ್ಕಿಶ್ ಕಾಫಿ ಮುಂತಾದವುಗಳನ್ನು ಪ್ರೋತ್ಸಾಹಿಸುವ ಖಾನ್, ಉತ್ತಮ ಗುಣಮಟ್ಟದ ಕಾಫಿ ಬೀಜಗಳನ್ನು ಹೊಂದಲು ಅಥವಾ ಸಂಗ್ರಹಿಸಲು ದೂರ ದಿಕ್ಕಿಗೆ ಯಾತ್ರೆ ಹೊರಡುತ್ತಿದ್ದರು. ಓಟೋಮನ್ ಸಾಮ್ರಾಜ್ಯದಿಂದ ಆಮದಿಸಿ ಅವುಗಳನ್ನು ತನ್ನ ರಾಜಧಾನಿಯಾದ ಮುರ್ಷಿದಾಬಾದಿಗೆ ತಂದರು. ತನ್ನ ನ್ಯಾಯಾಲಯದಲ್ಲಿ ಎಲ್ಲದರಲ್ಲೂ ಅತ್ಯುತ್ತಮವಾದುವುದೇ ಇರಬೇಕೆಂಬ ಕಡ್ಡಾಯ ಬುದ್ಧಿ ಅವರಿಗಿತ್ತು. ಕಾಫಿ ಬೀಜಗಳಲ್ಲದೆ, ಅವರ ಬಳಿ ಕಾರ್ಮಿಕರು ಮತ್ತು ಪರ್ಷಿಯ, ತುರ್ಕಿ, ಮಧೇಶ್ಯ ಮುಂತಾದ ಕಡೆಗಳಿಂದ ಹೆಸರಾಂತ ಬಾಣಸಿಗರನ್ನು ಇರಿಸಿಕೊಂಡಿದ್ದರು.

ಕಥೆಗಾರರು, ಚಿತ್ರಗಾರರು, ಕಾಫಿ ತಯಾರಕರು, ಐಸ್ ತಯಾರಕರು, ಹಕೀಮ್ಗಳು (ವೈದ್ಯರು)ಮುಂತಾದ ಭಿನ್ನವಾದ ಪ್ರೊಫೆಷನಲ್ ಗಳನ್ನು ರಾಜಮನೆತನವು ನೇಮಿಸಿತ್ತು.ಖಾನ್ ಖುದ್ದಾಗಿ ಕಹ್ವಾಚಿ ಭಾಷಿಯನ್ನು (ಕಾಫಿ ತಯಾರಿಸುವ ವ್ಯಕ್ತಿ)ಆಯ್ಕೆ ಮಾಡುತ್ತಿದ್ದರು ಮತ್ತು ತಯಾರಿಕಾ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದರು. ಈ ವಿವರಣೆಯು ಅರಮನೆಯ ಸಂಸ್ಕೃತಿ, ಸಮೃದ್ಧಿ, ಕಲೆ, ಕಾರ್ಮಿಕರೊಂದಿಗಿನ ಸಂಬಂಧ ಮುಂತಾದವುಗಳನ್ನು ಸ್ಪಷ್ಟವಾಗಿ ಬಿಡಿಸಿ ತೋರಿಸುತ್ತದೆ.

ಮೊಘಲರ ಕಾಫಿ ಸಂಸ್ಕೃತಿಯು ಕೊಲೋನಿಯಲ್ ಕಾಲಕ್ಕಿಂತಲೂ ಮುಂಚಿತವಾಗಿ ಬಂಗಾಳದಿಂದ ಅಪ್ಪ್ರತ್ಯಕ್ಷವಾದುದು ‘ಯಾವಾಗ’ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ ಸಾಧ್ಯ.ಆದರೆ ಕನಿಷ್ಠ 1757 ರವರೆಗೆ ಅದು ಚಾಲ್ತಿಯಲ್ಲಿತ್ತು. ಖಾನರ ಕಿರಿಯ ಮಗನು ಉತ್ತರಾಧಿಕಾರಿಯೂ ಆದ ಸಿರಾಜುದ್ದೌಲನಿಗೆ ತನ್ನ ತಾತನ ಪರಂಪರೆಯೊಂದಿಗೆ ಬದುಕಲು ಸಾಧ್ಯವಾಗಲಿಲ್ಲ. ಬ್ರಿಟಿಷರ ಬೆದರಿಕೆಗಳನ್ನು ಎದುರಿಸುವಾಗ ಬಂಗಾಳದ ಸಮೃದ್ಧಿಯಂತೆ ಅರಮನೆಯ ಸಂಸ್ಕೃತಿಯು ವೇಗವಾಗಿ ಇಲ್ಲವಾಯಿತು.1757ರಲ್ಲಿ ಫ್ಲಾಸಿ ಕದನದಲ್ಲಿ ಬಂಗಾಳ ಸೋತು ಈಸ್ಟ್ ಇಂಡಿಯಾ ಕಂಪನಿಯು ಈ ಪ್ರದೇಶವನ್ನು ತನ್ನ ತೆಕ್ಕೆಗೆ ಇಳಿಸಿಕೊಳ್ಳುವುದರೊಂದಿಗೆ ಕಾಫಿಯು ಜನಮಾನಸಗಳಿಂದ ಕ್ರಮೇಣ ಮಾಸಿಹೋಯಿತು.

ಚಹಾ ಕೃಷಿ ಸ್ವಾಧೀನಪಡಿಸುವಿಕೆ

ಭಾರತದಲ್ಲಿ ಬ್ರಿಟಿಷ್ ಆಡಳಿತದ ಪ್ರೈಮರಿ ಏಜೆಂಟಾಗಿದ್ದ ಈಸ್ಟ್ ಇಂಡಿಯಾ ಕಂಪನಿಯು ಪರ್ಯಾಯ ದ್ವೀಪವಾದ ಭಾರತದಲ್ಲಿ ಪ್ರಬಲವಾಗಿದ್ದ ಕಾಫಿ ಸಂಸ್ಕೃತಿಗೆ ಅಂತ್ಯ ಹಾಡಿತು. ಬ್ರಿಟಿಷರಿಗೆ ಚಹಾದೊಂದಿಗಿನ ಆಸಕ್ತಿ ಪ್ರಾರಂಭವಾಗುವುದು 17ನೇ ಶತಮಾನದ ಕೊನೆಯಲ್ಲಾಗಿತ್ತು. ಚೀನಾವು ಇದರ ಪ್ರಮುಖ ಪೂರೈಕೆದಾರನಾಗಿತ್ತು.1811 ರಿಂದ 1819 ರ ನಡುವೆ ಚೀನಾದಿಂದ ಒಟ್ಟು 72,168,541 ಪೌಂಡು ಆಮದಿನಲ್ಲಿ 70,426,244 ಪೌಂಡ್ ಚಹಾ ವ್ಯಾಪಾರಕ್ಕೆ ಸಂಬಂಧಿಸಿದ್ದಾಗಿತ್ತು ಎಂದು ಲಿಸಿ ಕೋಲಿಂಗ್ ಹಾಂ ತನ್ನ Curry: A tale of cooks and conquerors ಎಂಬ ಗ್ರಂಥದಲ್ಲಿ ಬರೆದಿದ್ದಾರೆ. ಈ ವಾಸ್ತವಗಳ ಆಧಾರದಲ್ಲಿ, ಬ್ರಿಟನ್ ಚಹಾಕ್ಕೆ ಒಂದು ಉತ್ತಮ ಸ್ಟೇಟಸ್ ನೀಡುವುದಕ್ಕೆ ಉತ್ಸುಕವಾಗಿತ್ತು ಎಂದು ಅವರು ಉಲ್ಲೇಖಿಸುತ್ತಾರೆ. ಫಲವತ್ತಾದ ಭೂಮಿ ಮತ್ತು ಸೂಕ್ತವಾದ ವಾತಾವರಣ ಹೊಂದಿರುವ ಭಾರತವಾಗಿತ್ತು ಅದಕ್ಕೆ ಅತ್ಯಂತ ಸೂಕ್ತವಾದ ಸ್ಥಳ.1834 ಫೆಬ್ರವರಿಯಲ್ಲಿ ಅಂದಿನ ಗವರ್ನರ್ ಜನರಲ್ ವಿಲಿಯಂ ಬೆಂಟಿಕನು ಈಸ್ಟ್ ಇಂಡಿಯಾ ಕಂಪೆನಿ ತನ್ನದೇ ಆದ ಚಹಾ ಉತ್ಪಾದನಾ ಯುನಿಟ್ ಸ್ಥಾಪನೆಗೆ ಭಾರತದಲ್ಲಿರುವ ಸಾಧ್ಯತೆಗಳನ್ನು ಪರಿಶೀಲಿಸಲು ಒಂದು ಆಯೋಗವನ್ನು ನೇಮಿಸಿದನು.

ಸ್ಥಳೀಯರಾದ ಭಾರತೀಯರಿಂದ ಎಲೆಗಳನ್ನು ಕೃಷಿ ಮಾಡಿಸಿ, ಫಸಲು ಕೊಯ್ಯುವ ಕಾರ್ಮಿಕರನ್ನು ಮತ್ತು ಉತ್ಪನ್ನಗಳನ್ನು ಖರೀದಿಸಲಿರುವ ಅನುಭೋಗಿಗಳನ್ನು ಅವರು ಗೊತ್ತುಪಡಿಸಿದರು. ಕಾಫಿ ಉತ್ಪಾದನೆಯನ್ನು ಚಹಾ ಕೃಷಿ ಮುಚ್ಚಿಡುವುದರೊಂದಿಗೆ ಭಾರತೀಯರ ಅಭಿರುಚಿಗಳು ಬದಲಾದವು. ಬ್ರಿಟಿಷರು ಕಾಫಿ ಹೌಸುಗಳನ್ನು ಸಂದರ್ಶಿಸುವುದರಿಂದ ಭಾರತೀಯರಿಗೆ ನಿರ್ಬಂಧ ಹೇರಿದ್ದು ಇಂಡಿಯನ್ ಕೆಫೆ ಸಂಸ್ಕೃತಿಯ ಪತನಕ್ಕೆ ಹೆಚ್ಚಿನ ವೇಗ ನೀಡಿತು. ಈ ನಿರ್ಬಂಧ ಬ್ರಿಟಿಷರಿಗೆ ಅನ್ವಯವಾಗುತ್ತಿರಲಿಲ್ಲ. ಭಾರತದಲ್ಲಿ ಕಾಫಿಯ ಪತನ ಕ್ಷಿಪ್ರಗತಿಯಲ್ಲಾಗಿತ್ತೆಂದು ವರದಿಗಳು ಅಡಿಗೆರೆಹಾಕುತ್ತದೆ.

20ನೇ ಶತಮಾನದ ಆರಂಭದಲ್ಲಿ ಕಾಫಿಯ ಜೊತೆಗಿನ ಪ್ರೀತಿ ಮತ್ತೆ ಹೆಚ್ಚಾಯಿತು. ಭಾರತೀಯ ಇತಿಹಾಸಗಾರರು ಮತ್ತು ಗ್ರಂಥ ರಚನೆಕಾರರಾದ ವೆಂಕಟಚಲಪತಿ 2006ರಲ್ಲಿ In those Days there was no coffee; writings in cultural History ಎಂಬ ಪುಸ್ತಕದಲ್ಲಿ ಬರೆಯುತ್ತಾರೆ. ಕಾಫಿ ಸೇವಿಸುವುದು ಲಘುವಾದ ದಿನಚರಿ ಮಾತ್ರವಾಗಿರಲಿಲ್ಲ. ಅದರಾಚೆಗೆ ರಾಷ್ಟ್ರೀಯ ಪರಿಕಲ್ಪನೆಯ ಹಾಗೆ ಆಧುನಿಕತೆಯ ಸಂಕೇತವಾಗಿತ್ತು. 1890 ರಲ್ಲಿ ದಕ್ಷಿಣ ಭಾರತದಲ್ಲಿದ್ದ ಕಾಫಿಯ ಬಹಿರಂಗ ಮಾತುಗಳನ್ನು ಇದೇ ಗ್ರಂಥ ವಿವರಿಸುತ್ತದೆ. ಆಯಾಸವನ್ನು ನೀಗಿಸುವ ಅಮೃತವಾಗಿದೆ ಕಾಫಿ. ಕಾಫಿಯು ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ.

ಕೊಲೋನಿಯಲ್ ನಗರವಾದ ಕಲ್ಕತ್ತಾದಲ್ಲಾಗಿದೆ ಎರಡನೇ ಘಟ್ಟದ ಕಾಫಿ ವ್ಯಾಪಕತೆಯ ಶಕ್ತಿ ಮತ್ತು ಚೈತನ್ಯ ಪ್ರಥಮವಾಗಿ ಪ್ರತಿಫಲಿಸುವುದು. ಕಲ್ಕತ್ತಾದಲ್ಲಿ 1866 ರಲ್ಲಿ ‘ಇಂಡಿಯನ್ ಕಾಫಿ ಹೌಸ್’ ಎಂಬ ಹೆಸರಿನಲ್ಲಿ ಭಾರತೀಯರ ಕಾಫಿ ಶಾಪ್ ಕಾರ್ಯಾರಂಭಿಸುತ್ತದೆ. ಭಾರತೀಯ ಕಾಫಿ ಹೌಸ್ 189೦ ರಲ್ಲಿ ಒಂದು ಸರಪಳಿಯಾಗಿ ಬದಲಾಯಿತು. ನಂತರದ ಶತಮಾನದ ಮೊದಲಾರ್ಧದೊಂದಿಗೆ 400 ಕಾಫಿ ಹೌಸುಗಳು ಈ ಸರಪಳಿಯ ಭಾಗವಾದವು. ಭಾರತದ ಕಾರ್ಮಿಕರ ಸಹಕಾರ,‌ ಸಂಘಟನೆಗಳ ನಾಯಕತ್ವ ದಲ್ಲಿ ಭಾರತದಲ್ಲಿ ಉತ್ಪಾದಿಸಲ್ಪಟ್ಟ ಕಾಫಿಯನ್ನು ಮಾತ್ರವೇ ಲಭ್ಯವಾಗುವಂತೆ ಮಾಡಿದ್ದರು.

ಜನಾಂಗೀಯ ತಾರತಮ್ಯದ ಸುದ್ದಿಗಳಿಲ್ಲದೆ ಯಾವ ಭಾರತೀಯನೂ ಬಂದು ಸೇರಬಹುದಾದ ‘ಜನರ ಕಾಫೀ ಮನೆಗಳಾಗಿ’ ಅವು ಬದಲಾದವು. ಇವತ್ತು ಭಾರತೀಯ ಕಾಫಿ ಹೌಸ್ ಗಳ ಸುತ್ತಮುತ್ತಲು ಇತಿಹಾಸ ಪ್ರಸಿದ್ಧವಾದ ಶಾಜಹಾನಬಾದಿನ ಕಾಫಿ ಹೌಸಿನ ಪ್ರೌಢಿಯನ್ನು ನೆನಪಿಸುತ್ತದೆ. 1996 ರಲ್ಲಿ ಆರಂಭವಾಗಿ ಇಂದು 500ಕ್ಕಿಂತಲೂ ಅಧಿಕ ಔಟ್ಲೇಟ್ ಗಳಿರುವ ಬೆಂಗಳೂರು ಕೇಂದ್ರವಾಗಿ ಕಾರ್ಯಚರಿಸುವ ‘ಕಾಫಿ ಡೇ ಗ್ಲೋಬಲ್’ಈ ಸರಪಳಿಯ ಭಾಗವಾಗಿದೆ. ಆರು ವರ್ಷಗಳಿಂದೀಚೆಗೆ ಅಮೆರಿಕಾದ ‘ಸ್ಟಾರ್ ಬಕ್ಸ್’ ಭಾರತದ ಬೃಹತ್ತಾದ ನಗರ ಮಾರುಕಟ್ಟೆಗಳಿಗೆ ಪ್ರವೇಶಿಸಿ ಭಾರತದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಿಬಿಟ್ಟಿದೆ.

ಕೃಪೆ; Middle East eye
ಮೂಲ: ನೀಲೋಶ್ರೀ ಬಿಶ್ವಾಸ್
ಅನುವಾದ: ಅಮ್ಮಾರ್ ನೀರಕಟ್ಟೆ

Leave a Reply

*